ವಿಜಯಸಾಕ್ಷಿ ಸುದ್ದಿ, ಗದಗ: ಐತಿಹಾಸಿಕ ಸ್ಥಳ, ಪರಂಪರೆಯ ಪರಿಚಯಕ್ಕೆ ಶಾಶ್ವತ ಚಿತ್ರಾತ್ಮಕ ಮುದ್ರೆ ಹಾಗೂ ಚಿತ್ರ ಅಂಚೆ ಪತ್ರ ಲೋಕಾರ್ಪಣೆ ನಾಡಿನ ಜನರಿಗೆ ತಲುಪಿಸಿಲು ಸಹಕಾರಿಯಾಗಿದೆ ಎಂದು ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರಕುಮಾರ್ ಹೇಳಿದರು.
ತಾಲೂಕಿನ ಲಕ್ಕುಂಡಿ ಗದಗ ವಿಭಾಗೀಯ ಅಂಚೆ ಕಚೇರಿ ಹಾಗೂ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಅನ್ನದಾನೀಶ್ವರ ಮಠದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಬ್ರಹ್ಮ ಜಿನಾಲಯ ದೇವಸ್ಥಾನದ ಶಾಶ್ವತ ಚಿತ್ರಾತ್ಮಕ ಮುದ್ರೆ ಹಾಗೂ ಚಿತ್ರ ಅಂಚೆ ಪತ್ರವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಲಕ್ಕುಂಡಿಯ ದೇವಸ್ಥಾನದ ಕಲ್ಲಿನ ಕರಕುಶಲ ವಾಸ್ತುಶಿಲ್ಪ ಜಾಗತಿಕ ಮಟ್ಟದಲ್ಲಿ ಹೆಸರು, ಪ್ರಖ್ಯಾತಿ ಪಡೆದಿದೆ. ಇಂತಹ ಐತಿಹಾಸಿಕ ಹಿನ್ನೆಲೆ ಮತ್ತು ಆ ಕಾಲಘಟ್ಟದ ಸಂಶೋಧನೆಗಳ ಬಗೆಗೆ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಈ ನಾಡಿನ ಸಂಸ್ಕೃತಿ, ಐತಿಹಾಸಿಕ ಕೊಡುಗೆ, ವೈವಿಧ್ಯಮಯ ಪರಿಸರ ಮತ್ತು ಪರಂಪರೆಯ ಮಾಹಿತಿಯನ್ನು ಜನಸಾಮಾನ್ಯರಿಗೆ ತಲುಪಿಸಲು ಅಂಚೆ ಇಲಾಖೆ ಬ್ರಹ್ಮ ಜಿನಾಲಯ ದೇವಸ್ಥಾನದ ಶಾಶ್ವತ ಚಿತ್ರಾತ್ಮಕ ಮುದ್ರೆ ಹಾಗೂ ಚಿತ್ರ ಅಂಚೆ ಪತ್ರವನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಸುಶೀಲ್ ಕುಮಾರ ಮಾತನಾಡಿ, ಈಗಾಗಲೇ ಭಾರತೀಯ ಅಂಚೆ ಇಲಾಖೆ ಹೊಸ ತಂತ್ರಜ್ಞಾನದ ಜೊತೆಗೆ ವಿವಿಧ ಸೇವೆಗಳು ಸಮಾಜ ಕಡೆಯ ವ್ಯಕ್ತಿಗೂ ಲಭಿಸಲು ವಿನೂತನ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿದೆ. ಹಾಗಾಗಿ ಜನರು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ದಾನಚಿಂತಾಮಣಿ ಅತ್ತಿಮಬ್ಬೆ ಹಾಗೂ ಲಕ್ಕುಂಡಿಯ ಐತಿಹಾಸಿಕ ಹಿನ್ನೆಲೆ ಕುರಿತು ಗದಗ ವಿಭಾಗೀಯ ಅಂಚೆ ಅಧೀಕ್ಷಕರಾದ ಜಯದೇವ ಕಡಗಿ ಪ್ರಾಸ್ತವಿಕವಾಗಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಚಪ್ಪ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಅಂಚೆ ಸಂಗ್ರಾಹಕರ ಜೈನ ರಾಷ್ಟ್ರೀಯ ಉಪಾಧ್ಯಕ್ಷ ಮಹಾವೀರ ಕುಂದೂರು, ಲಕ್ಕುಂಡಿ ಉಪ ಅಂಚೆ ಪಾಲಕರಾದ ರವಿ ವರ್ಣೇಕರ, ಅನಿತಾ ಕುರಿ, ಬಸವರಾಜ ಸೇಡದ, ವಿವಿಧ ಜಿಲ್ಲೆಯ ಅಂಚೆ ಸಂಗ್ರಹಾಕರು ಪಾಲ್ಗೊಂಡಿದ್ದರು. ಅಂಚೆ ಇಲಾಖೆಯ ಜಿಲ್ಲಾ ತರಬೇತಿದಾರ ನಿಂಗಪ್ಪ ಹೂಗಾರ ಪ್ರಾರ್ಥಿಸಿ, ನಿರೂಪಿಸಿದರು.
ಲಕ್ಕುಂಡಿಯ ವಾಸ್ತುಶಿಲ್ಪ ಜಾಗತಿಕ ಮಟ್ಟದಲ್ಲಿ ಹೆಸರು ಪಡೆದುಕೊಂಡಿದೆ. ನಾಡಿನ ಪ್ರಖ್ಯಾತ ಪ್ರವಾಸಿ ತಾಣಗಳನ್ನು ಪರಿಚಯಿಸಲು ಮತ್ತು ಗ್ರಾಹಕರಿಗೆ ತಮ್ಮ ನೆಚ್ಚಿನ ಚಿತ್ರ ಕಳುಹಿಸಲು ಉಪಯೋಗಿಸಬಹುದಾಗಿದೆ. ಇತಂಹ ಮಹತ್ವದ ಅಂಚೆ ಚೀಟಿಯಿಂದಾಗಿ ದೇಶದ ಎಲ್ಲೆಡೆ ನಮ್ಮ ನಾಡಿನ ಹೆಮ್ಮೆಯ ಸಾಧಕರ, ಐತಿಹಾಸಿಕ ಮಹತ್ವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ, ಪ್ರಸಿದ್ಧಿಗಳನ್ನು ಪ್ರಚುರಪಡಿಸಲು ಸಾಧ್ಯವಾಗಲಿದೆ ಎಂದು ಕರ್ನಲ್ ಸುಶೀಲ್ ಕುಮಾರ ಹೇಳಿದರು.