ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಅಹಿಂಸಾ ಪರಮೋಧರ್ಮ, ಬದುಕು-ಬದುಕಲು ಬಿಡು ಎಂಬ ಸತ್ಯ ಸಂದೇಶವನ್ನು ಜಗತ್ತಿಗೆ ನೀಡಿದ ಭಗವಾನ್ ಮಹಾವೀರರ ಜಯಂತ್ಯುತ್ಸವದ ಅಂಗವಾಗಿ ಭಾನುವಾರ ಪಟ್ಟಣದಲ್ಲಿ ಭಗವಾನ್ ಮಹಾವೀರ ಜಯಂತಿಯನ್ನು ಜೈನ ಧರ್ಮೀಯರು ಶೃದ್ಧಾ ಭಕ್ತಿಯಿಂದ ಆಚರಿಸಿದರು.
ಪಟ್ಟಣದ ಅನಂತನಾಥ ಬಸದಿಯಿಂದ ಭಗವಾನ್ ಮಹಾವೀರ ಭಾವಚಿತ್ರ ಮೆರವಣಿಗೆ ಹೊರಟು ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಶಂಖ ಬಸದಿಗೆ ತಲುಪಿತು. ಈ ಸಂದರ್ಭದಲ್ಲಿ ಮಹಿಳೆಯರು, ಮಕ್ಕಳು, ಪುರುಷರು ಭಕ್ತಿಯಿಂದ ಮಹಾವೀರರ ಕುರಿತ ಹಾಡು ಹೇಳುತ್ತ, ಕುಣಿಯುತ್ತ ಸಾಗಿದರು. ಬೆಳಿಗ್ಗೆ ಭಗವಾನ್ ಮಹಾವೀರ ಸ್ವಾಮಿಯ ತೊಟ್ಟಿಲೋತ್ಸವ ಮತ್ತು 24 ತೀರ್ಥಂಕರರ ನಾಮಗಳನ್ನು ಸ್ತುತಿಸಲಾಯಿತು.
ಮೆರವಣಿಗೆ ಬಳಿಕ ಬಸದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಜೈನ ಸಮಾಜದ ಅಧ್ಯಕ್ಷ ಭರತರಾಜ ಬರಿಗಾಲಿ, ಭಗವಾನ್ ಮಹಾವೀರರು ಜಗತ್ತಿನ ಜೀವರಾಶಿಗಳಿಗೆ ಸತ್ಯ, ಅಹಿಂಸೆ, ಪವಿತ್ರತೆ, ಅನುಬಂಧಗಳಿಂದ ಕೂಡಿದ ಧರ್ಮ ಮಾರ್ಗಗಳನ್ನು ಅರುಹಿ ಜೀವನ್ಮುಕ್ತಿ ಮಾರ್ಗ ತೋರಿದ್ದಾರೆ. ಅವರು ಮಾನವ ಕುಲಕೋಟಿಯ ಉದ್ಧಾರಕ್ಕಾಗಿ ತೋರಿದ ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ನೆಮ್ಮದಿಯ ಬದುಕನ್ನು ನಮ್ಮೆಲ್ಲರದಾಗಿಸಿಕೊಳ್ಳೋಣ ಎಂದರು.
ಈ ಸಂದರ್ಭದಲ್ಲಿ ಸಂತೋಷ ಗೋಗಿ, ಮಹಾವೀರ ಬರಿಗಾಲಿ, ವೈಭವ ಗೋಗಿ, ಜಯಣ್ಣ ಗೋಗಿ, ನಂದಕುಮಾರ್ ಪಾಟೀಲ, ಪದ್ಮಕಿರಣ ಬರಿಗಾಲಿ, ಆದಿನಾಥ ಬರಿಗಾಲಿ, ಭರತ್ ಪಾಟೀಲ, ಮಹಾವೀರ ಪಂಡಿತ, ಸನ್ಮತಿ ಗೋಗಿ, ವಿರೇಂದ್ರ ಘೋಂಗಡಿ, ಆಕಾಶ ಗೋಗಿ ಸೇರಿದಂತೆ ಜೈನ ಸಮಾಜ ಬಾಂಧವರು ಪಾಲ್ಗೊಂಡಿದ್ದರು.