ವಿಜಯಸಾಕ್ಷಿ ಸುದ್ದಿ, ಗದಗ : ಶ್ರೀ ವೀರೇಶ್ವರ ಪುಣ್ಯಾಶ್ರಮದ ಸಂಗೀತ ವಿದ್ಯಾಲಯದಿಂದ ಈ ಭೂಮಿ ಪುಣ್ಯ ಭೂಮಿಯಾಗಿದೆ ಎಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ಪೂಜ್ಯಶ್ರೀ ಜ.ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು ಹೇಳಿದರು.
ಅವರು ನಗರದ ವಿರೇಶ್ವರ ಪುಣ್ಯಾಶ್ರಮದಲ್ಲಿ ಪರಮಪೂಜ್ಯ ಗಾನಯೋಗಿ ಶಿವಯೋಗಿ ಲಿಂ. ಪಂಚಾಕ್ಷರ ಗವಾಯಿಗಳವರ 80ನೇ ಪುಣ್ಯ ಸ್ಮರಣೋತ್ಸವ ಹಾಗೂ ಪದ್ಮಭೂಷಣ ಲಿಂ.ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 14ನೇ ಪುಣ್ಯಸ್ಮರಣೋತ್ಸವ, ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ವಿಶೇಷ ಧರ್ಮೋತ್ತೇಜಕ ಮಹಾಸಭೆಯ ಸಾನಿಧ್ಯವಹಿಸಿ ಮಾತನಾಡಿದರು.
ವ್ಯಕ್ತಿಯು ಪರಿಪೂರ್ಣವಾಗಿ ಬೆಳೆಯಲು ಗುರು ಬೇಕು. ಅದರಂತೆ ತ್ರಿಕಾಲ ಜ್ಞಾನಿ ಶ್ರೀಗುರು ಹಾನಗಲ್ ಕುಮಾರೇಶ್ವರರು ಬಾಲಕನಾಗಿದ್ದ ಪಂ. ಪಂಚಾಕ್ಷರಿ ಗವಾಯಿಗಳವರನ್ನು ಕಂಡಾಗ ಈ ಮಗು ಮುಂದೆ ಸಾಧನೆ ಮಾಡುತ್ತಾನೆ ಎಂದು ಗುರುತಿಸಿ ವಿದ್ಯೆ ನೀಡಿದರಲ್ಲದೆ, ವಿದ್ಯೆ ವಯಕ್ತಿಕವಾಗಬಾರದು. ಅದು ಪರಿಪೂರ್ಣವಾಗಬೇಕಾದರೆ ಅಂಧರಿಗೆ, ಅನಾಥರಿಗೆ, ದೀನರಿಗೆ ವಿದ್ಯೆ ಕಲಿಸಬೇಕೆಂದು ಆಶೀರ್ವದಿಸಿದರು.
ಅದರಂತೆ ಇಂದು ದೇಶ-ವಿದೇಶಗಳಲ್ಲಿ ಪುಣ್ಯಾಶ್ರಮದ ಭಕ್ತರು ಸಂಗೀತ ಸಾಧನೆ ಮಾಡಿದ್ದಾರೆ ಎಂದರೆ ಅದು ಪಂ. ಪಂಚಾಕ್ಷರಿ ಗವಾಯಿಗಳವರ ಕೊಡುಗೆಯಾಗಿದೆ ಎಂದು ಹೇಳಿದರು.
ಪಂ. ಪಂಚಾಕ್ಷರಿ ಗವಾಯಿಗಳವರು ಆಚಾರ ನಿಷ್ಠೆ ಶಿವಪೂಜೆ ಮಾಡುತ್ತಿದ್ದರು. ಅವರ ಆರೋಗ್ಯ ಕ್ಷಿಣಿಸಿದಾಗ ಆಚಾರಕ್ಕೆ ದಕ್ಕೆ ಬರುತ್ತದೆ ಎಂದು ಆಂಗ್ಲ ಔಷಧಿಗಳನ್ನು ತಿರಸ್ಕೃರಿಸಿ ದೇಹ ತ್ಯಾಗ ಮಾಡಿ ಮೌಲ್ಯಯುತವಾದ ಬದುಕನ್ನು ಬದುಕಿದರು. ಅಂತಹ ಮಹಾನಭಾವರು ಪುಣ್ಯಾಶ್ರಮ ಕಟ್ಟಿ ಸಾಕಷ್ಟು ಜನರಿಗೆ ಆಶ್ರಯ ನೀಡಿದ್ದಾರೆ ಎಂದು ಹೇಳಿದರು.
ವೇದಿಕೆ ಮೇಲೆ ಗಂಗಾವತಿ ಕಲ್ಮಠದ ಕೊಟ್ಟೂರೇಶ್ವರ ಮಹಾಸ್ವಾಮಿಗಳು, ಬಳಗಾನೂರಿನ ಪೂಜ್ಯಶ್ರೀ ಶಿವಶಾಂತವೀರ ಶರಣರು, ಮುದ್ದೇಬಿಹಾಳದ ಪೂಜ್ಯಶ್ರೀ ಡಾ. ಲಾಲಲಿಂಗೇಶ್ವರ ಶರಣರು, ಹಿರೇಗುಳವಾಳದ ಪೂಜ್ಯಶ್ರೀ ಹನುಮಂತಪ್ಪ ಯಾಳವಾರ ಅವರು ಸಮ್ಮುಖ ವಹಿಸಿದ್ದರು. ನಂದೀಕೇಶ್ವರದ ಮುಚಖಂಡಯ್ಯನವರು, ಡಾ. ಜೆ.ಎಂ. ಚೆಂದುನವರ, ಬಳ್ಳಾರಿಯ ಪುರುಷೋತ್ತಮಗೌಡ್ರ, ಪಂಚಾಕ್ಷರಯ್ಯ ಹಿಡ್ಕಿಮಠ, ಕಲ್ಲೂರಿನ ಕಳಕಪ್ಪಗೌಡ್ರ ಜಮ್ಮಾಪೂರ, ಜೇವರ್ಗಿಯ ನಾಡಗೌಡ್ರ ಅಪ್ಪಸಾಬಗೌಡ್ರ, ಬದಾಮಿಯ ನಾಗರಾಜ ಕಾಚಟ್ಟಿ, ಎಸ್.ಬಿ. ಅವರಾದಿ, ರಾಚಣ್ಣ ಪಟ್ಟಣದ ಮುಂತಾದವರು ಉಪಸ್ಥಿತರಿದ್ದರು.
ಪಂ. ಪಂಚಾಕ್ಷರಿ ಗವಾಯಿಗಳವರ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿವಲಿಂಗಯ್ಯಶಾಸ್ತ್ರೀಗಳು ಹಿರೇಮಠ ಸಿದ್ದಾಪೂರ ಸ್ವಾಗತಿಸಿದರು. ಅಡ್ನೂರಿನ ಕಲ್ಲಿನಾಥ ಶಾಸ್ತ್ರೀಗಳು ಸಭಾ ನಿರೂಪಣೆ ಮಾಡಿದರು. ಪೂಜ್ಯಶ್ರೀ ಕಲ್ಲಯ್ಯಜ್ಜನವರು ಅಭಾರ ಮನ್ನಣೆ ಮಾಡಿದರು.
ಇದೇ ಸಂದರ್ಭದಲ್ಲಿ ಮದರಿಯ ರಾಚಯ್ಯ ಶಾಸ್ತ್ರೀ ಹಿರೇಮಠ-ಪ್ರವಚನ ಕ್ಷೇತ್ರ, ನಾಗಾವಿಯ ಲಕ್ಷ್ಮಣ ತಳವಾರ-ಗಾಯನ ಕ್ಷೇತ್ರ ಹಾಗೂ ಡಾ.ಹನುಮಂತ ಕೊಡಗಾನೂರ ಅವರಿಗೆ `ಕುಮಾರಶ್ರೀ’ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಮಣ್ಣ ಮಲ್ಲಿಗವಾಡ ಅವರಿಗೆ ಪದ್ಮಭೂಷಣ ಪಂ. ಪುಟ್ಟರಾಜ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಜಗದ್ಗುರು ಮಹಾಸನ್ನಿಧಿಯವರಿಂದ ಪದ್ಮಭೂಷಣ ಡಾ. ಪಂ. ಪುಟ್ಟರಾಜ ಕವಿಗವಾಯಿಗಳವರ `ಅಷ್ಟೋತ್ತರ ಶತನಾಮಾವಳಿ’, `ಅಷ್ಟಾವರಣ ಕಥಾ ಕೀರ್ತನ ಮಾಲಿಕೆ’ ಹಾಗೂ `ಶ್ರೀಗುರು ಪುಟ್ಟರಾಜ ಚರಿತಂ(ಪುರಾಣ)’ ಲೋಕಾರ್ಪಣೆಗೊಂಡವು. ನಂತರ ಅಹೋರಾತ್ರಿ ಸ್ವರಸಮಾರಾಧನೆ ನಡೆಯಯಿತು.