ವಿಜಯಸಾಕ್ಷಿ ಸುದ್ದಿ, ಗದಗ : ನಾವೆಲ್ಲ ಹಿಂದೂ-ಮುಸ್ಲಿಂ ಸಮುದಾಯದವರು ಒಂದೇ ಎಂಬ ಸಹೋದರತ್ವ ಭಾವನೆ, ಸೌಹಾರ್ದತೆ ಸರ್ವರಲ್ಲಿ ಸದಾವಕಾಲ ಮೂಡಿ ಬರಬೇಕು ಎಂದು ಶ್ರೀ ಮದ್ರಿಕೇಶ್ವರ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಸದಾಶಿವಯ್ಯ ಮದರಿಮಠ ಅಭಿಪ್ರಾಯಪಟ್ಟರು.
ಅವರು ಗದಗ ನಗರದ ಅಲಬೂರ ಗಲ್ಲಿಯ ಶ್ರೀ ಮದ್ರಿಕೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯಿಂದ ಕೈಗೊಂಡಿದ್ದ ಸಾರ್ವಜನಿಕ ಗಜಾನನೋತ್ಸವದ ಅಂಗವಾಗಿ ಮಹಾಅನ್ನಸಂತರ್ಪಣೆ, ಸಾಧಕ ಮಹನೀಯರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಲಬೂರ ಗಲ್ಲಿಯಲ್ಲಿ ಸರ್ವ ಜನಾಂಗದವರೂ ಪರಸ್ಪರ ಸಹಕಾರ, ಸದ್ಭಾವನೆಯಿಂದ ಜೀವನ ಸಾಗಿಸುತ್ತಿರುವದು ಹೆಮ್ಮೆ ಮತ್ತು ಅಭಿಮಾನದ ಸಂಗತಿಯಾಗಿದೆ. ಪ್ರತಿ ವರ್ಷ ಸಾರ್ವಜನಿಕ ಗಜಾನನೋತ್ಸವವನ್ನು ಸರ್ವರೂ ಒಗ್ಗಟ್ಟಿನಿಂದ ಯಶಸ್ವಿಗೊಳಿಸುತ್ತ ಬಂದಿರುವದು ಅಭಿನಂದನೀಯ ಎಂದರು.
ಇದೇ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಗದಗ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಶರಣಬಸಪ್ಪ ಗುಡಿಮನಿ, ಗದಗ ತಾಲೂಕಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ರಾಮನಗೌಡ ದಾನಪ್ಪಗೌಡ್ರ, ಕೆ.ಎಸ್.ಆರ್.ಟಿ.ಸಿಯ ನಿವೃತ್ತ ನೌಕರ ಶಾಂತಪ್ಪ ಮುಳವಾಡ, ನಿವೃತ್ತ ಪ್ರಧಾನ ಗುರುಗಳಾದ ಎಸ್.ಪಿ. ಆದಪ್ಪನವರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯ ಮೇಲೆ ಈಶಣ್ಣ ಖಟವಟೆ, ತೋಂಟೇಶ ಕುರಡಗಿ, ಈಶ್ವರ ಕೋಟಿ, ಅಲಬೂರ ಗಲ್ಲಿಯ ಹಿರಿಯರು ಉಪಸ್ಥಿತರಿದ್ದರು. ಚಂದ್ರು ಬಾಳಿಹಳ್ಳಿಮಠ ನಿರೂಪಿಸಿ ವಂದಿಸಿದರು.
Advertisement