ವಿಜಯಸಾಕ್ಷಿ ಸುದ್ದಿ, ಗದಗ: ಮುಸ್ಲಿಂ ಸಮುದಾಯದವರು ಭೂಮಿಗಾಗಿ ಅರ್ಜಿ ಸಲ್ಲಿಸಿದರೆ ಆ ಅರ್ಜಿಯನ್ನು ಪುರಸ್ಕರಿಸಿ ಅವರಿಗೆ ಭೂಮಿಯನ್ನು ನೀಡಿದ್ದೇ ಆದರೆ ಅಂತಹ ಅಧಿಕಾರಿಗಳನ್ನು ನಾನು ಗಲ್ಲಿಗೇರಿಸುತ್ತೇನೆ ಎಂದು ಶ್ರೀರಂಗಪಟ್ಟಣದ ಶಾಸಕ ರಮೇಶ್ ಬಂಡಿ ಸಿದ್ದೇಗೌಡ ಬಹಿರಂಗವಾಗಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾದ ರಾಜ್ಯಾಧ್ಯಕ್ಷ ಮಹ್ಮದಶಫಿ ನಾಗರಕಟ್ಟಿ ಹೇಳಿದರು.
ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಅವರೊಬ್ಬ ಜನಪ್ರತಿನಿಧಿಯಾಗಿರಲು ಅರ್ಹತೆಯನ್ನು ಕಳೆದುಕೊಂಡಿದ್ದಾರೆ. ಸರ್ಕಾರಿ ಅಧಿಕಾರಿಗಳಿಗೆ ಜೀವ ಬೆದರಿಕೆ ನೀಡುವುದು, ಅವರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಕ್ರಿಮಿನಲ್ ಸಂಗತಿ ಆಗಿರುತ್ತದೆ. ಸರ್ಕಾರಿ ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ ಯೋಗ್ಯವಾಗಿರುವ ವ್ಯಕ್ತಿಗಳಿಗೆ ಸೌಲಭ್ಯಗಳು ನೀಡುತ್ತಾರೆ. ಸರ್ಕಾರಿ ಅಧಿಕಾರಿಗಳನ್ನು ತುಚ್ಛವಾಗಿ ಕಾಣುವುದು ಮತ್ತು ಅವರಿಗೆ ಜೀವ ಬೆದರಿಕೆ ಹಾಕುವುದು ಒಬ್ಬ ಜನ ಪ್ರತಿನಿಧಿಗೆ ಶೋಭೆ ತರುವ ಕಾರ್ಯವಲ್ಲ ಎಂದರು.
ಒAದು ಸಮುದಾಯದವರಿಗೆ ಸರ್ಕಾರದ ಸೌಲಭ್ಯಗಳು ದೊರಕಬಾರದೆಂದು ಹೇಳಿಕೆ ನೀಡುವುದು ಸಂವಿಧಾನ ವಿರೋಧಿ ನಡೆಯಾಗಿರುತ್ತದೆ. ಒಬ್ಬ ಜನ ಪ್ರತಿನಿಧಿಯಾಗಿ ಸಮಸ್ತ ಜನರ ಏಳಿಗೆಯನ್ನು ಬಯಸುವವನೇ ನಿಜವಾದ ಜನಪ್ರತಿನಿಧಿಯಾಗಿರುತ್ತಾನೆ. ಎಲ್ಲ ಹಿಂದುಳಿದ ಬಡ ಸಮುದಾಯಗಳು ಅಭಿವೃದ್ಧಿ ಹೊಂದಿದರೆ ನಮ್ಮ ಭಾರತವು ಒಂದು ಬಲಾಢ್ಯ ರಾಷ್ಟ್ರವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಧಾರವಾಡ ಮತ್ತು ಗದಗ ಜಿಲ್ಲಾ ಉಸ್ತುವಾರಿಗಳಾದ ಜಾಫರ್ ಡಾಲಾಯತ್, ಎಸ್.ಎಸ್. ಖಾದ್ರಿ, ಮುಜಮಿಲ್ ಬಳ್ಳಾರಿ, ಇಲಿಯಾಸ್ ಶಿರಹಟ್ಟಿ, ಇಸಾಕ್ ಇರಕಲ್, ಮುನ್ನಾ ಕಲ್ಮನಿ, ಹನೀಫ್ ಇರಕಲ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾಂಗ್ರೆಸ್ ಪಕ್ಷದ ಮತ್ತು ಮುಖ್ಯಮಂತ್ರಿಗಳ ಹೆಸರನ್ನು ಕೆಡಿಸಲು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇವರ ರಾಜೀನಾಮೆ ಪಡೆಯದಿದ್ದರೆ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಾನಿಯಾಗುವ ಸಂಭವವಿದೆ. ತಕ್ಷಣ ಇವರಿಂದ ರಾಜೀನಾಮೆ ಪಡೆಯಬೇಕು ಇಲ್ಲವಾದಲ್ಲಿ ಬಹಿರಂಗ ಕ್ಷಮೆ ಕೇಳಬೇಕು ಎಂದು ಮಹ್ಮದಶಫಿ ನಾಗರಕಟ್ಟಿ ಆಗ್ರಹಿಸಿದರು.