ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.1ರಲ್ಲಿ ಶಾಲಾ ಶಿಕ್ಷಣ ಇಲಾಖೆ, ರಾಜ್ಯ ಸರಕಾರ ಅಕ್ಷರ ದಾಸೋಹ ಮದ್ಯಾಹ್ನದ ಉಪಹಾರ ಯೋಜನೆಯಡಿ, ಅಜೀಂ ಪ್ರೇಮಜಿ ಫೌಂಡೇಷನ್ ಇವರ ಸಹಭಾಗಿತ್ವದಲ್ಲಿ ಶಾಲಾ ಮಕ್ಕಳ ಪೌಷ್ಟಿಕತೆ ವೃದ್ಧಿಸಲು 2024-25ನೇ ಸಾಲಿನಲ್ಲಿ ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ವಾರದ 6 ದಿನಗಳಲ್ಲಿ ಪೂರಕ ಆಹಾರಗಳಾದ ಮೊಟ್ಟೆ, ಶೇಂಗಾ ಚಿಕ್ಕಿ, ಬಾಳೆ ಹಣ್ಣು ವಿತರಿಸುವ ಕಾರ್ಯಕ್ರಮಕ್ಕೆ ಶಾಸಕ ಡಾ.ಚಂದ್ರು ಲಮಾಣಿ ಶನಿವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪೌಷ್ಟಿಕ ಆಹಾರ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಶಾಲೆಗಳಲ್ಲಿ ಪ್ರಾರಂಭಿಸಲಾಗಿರುವ ಪೋಷಣ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎನ್. ನಾಯಕ್ ಮಾತನಾಡಿ, ಮಕ್ಕಳು ಸರ್ಕಾರ ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮವಾಗಿ ವಿದ್ಯಾಭ್ಯಾಸ ಮಾಡಬೇಕೆಂದು ತಿಳಿಸಿದರು. ಪುರಸಭೆ ಸದಸ್ಯರಾದ ಪೂರ್ಣಿಮಾ ಪಾಟೀಲ್ ಮಾತನಾಡಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಚ್.ಎಸ್. ರಾಮನಗೌಡ್ರ ಪ್ರಾಸ್ತಾವಿಕ ನುಡಿದರು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಬಸವರಾಜ್ ಗೋಡಿ, ಬಿ.ಎಮ್. ಕುಂಬಾರ, ಡಿ.ಎನ್. ದೊಡ್ಡಮನಿ, ಸಿಆರ್ಪಿ ಸತೀಶ್ ಬೋಮಲೆ, ಎನ್.ಎ. ಮುಲ್ಲಾ, ಎಸ್.ಎಸ್. ಮುಳಗುಂದ, ಎಸ್.ಎಸ್. ಮಹಾಲಿಂಗಶೆಟ್ಟರ, ಇ.ಎಚ್. ಪೀಟರ್, ಸವಿತಾ ಬೋಮಲೆ, ಚೈತನ್ಯ ಮುದುಗಲ್, ಎಮ್.ಎನ್. ಭರಮಗೌಡ್ರ, ಎನ್.ಎನ್. ಶಿಗ್ಲಿ ಉಪಸ್ಥಿತರಿದ್ದರು. ಸಿಆರ್ಪಿ ಉಮೇಶ ನೇಕಾರ ಸ್ವಾಗತಿಸಿದರು, ಆರ್.ಬಿ. ಅಡರಕಟ್ಟಿ ನಿರೂಪಿಸಿದರು, ಡಿ.ಎನ್. ದೊಡ್ಮನಿ ವಂದಿಸಿದರು.