ವಿಜಯಸಾಕ್ಷಿ ಸುದ್ದಿ, ಮುಂಡರಗಿ : ತಾಲೂಕಿನ ಹಳ್ಳಿಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಹಾಗೂ ಮಹಾಸರಸ್ವತಿ ಪೂಜಾ ಸಮಾರಂಭ ಜರುಗಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಮಖಂಡಿಯ ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕ /ಉಪನಿರ್ದೇಶಕ ಡಿ.ಐ. ಅಸುಂಡಿ ಮಾತನಾಡಿ, ವಿದ್ಯಾರ್ಥಿ ಜೀವನ ಬಹಳ ಅಮೂಲ್ಯವಾದುದು. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಪರಿಶ್ರಮದಿಂದ ಅಧ್ಯಯನ ಮಾಡಿ ವಿಶೇಷ ಸಾಧನೆ ಸಾಧಿಸುವುದು ಅಗತ್ಯವಿದೆ.
ಇಂದಿನ ಸ್ಪರ್ಧಾ ಜಗತ್ತಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗಳಾಗುತ್ತಿದ್ದು, ಅವುಗಳಿಗೆ ಸ್ಪಂದಿಸಿ ನಿರಂತರವಾಗಿ ಓದುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಎಸ್ಡಿಎಂಸಿ ಅಧ್ಯಕ್ಷೆ ರೇಣುಕಾ ಪ್ರಶಾಂತ ಚನ್ನವೀರಗೌಡ್ರ ಮಾತನಾಡಿ, ವಿದ್ಯಾರ್ಥಿನಿಯರು ಉತ್ತಮ ಅಭ್ಯಾಸ ರೂಢಿಸಿಕೊಂಡು ಸತ್ಪçಜೆಗಳಾಗಿ ಶಾಲೆಗೆ, ಗ್ರಾಮಕ್ಕೆ ಕೀರ್ತಿ ತರುವಂತರಾಗಬೇಕೆಂದರು.
ಎಸ್ಡಿಎಂಸಿ ಸದಸ್ಯ ಸಿದ್ದಪ್ಪ ನಾಯ್ಕರ ಉಪಸ್ಥಿತರಿದ್ದರು. ಕೆ.ಬಿ. ನದಾಫ, ಜೆ.ಸಿ. ಕುರಹಟ್ಟಿ, ಯು.ಎ. ಹಂಚಿನಾಳ ಅನಿಸಿಕೆ ವ್ಯಕ್ತಪಡಿಸಿದರು.
ಎಸ್.ಜಿ. ಶೀಲಭದ್ರ ಸ್ವಾಗತಿಸಿದರು. ಬಿ.ವಾಯ್. ಡೊಳ್ಳಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಡಿ. ಬೆಂತೂರ ಕಾರ್ಯಕ್ರಮ ನಿರೂಪಿಸಿದರು. ವ್ಹಿ.ವ್ಹಿ. ಕೂಬಳ್ಳಿ ವಂದಿಸಿದರು.