ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ನಮ್ಮ ಭವಿಷ್ಯದ ರೂವಾರಿಗಳು ನಾವೇ ಆಗಿದ್ದು, ಉನ್ನತ ಗುರಿ, ಪರಿಶ್ರಮ, ಸತತ ಅಭ್ಯಾಸ, ಶ್ರದ್ಧೆ, ಪ್ರಾಮಾಣಿಕತೆಯಿಂದ ಸಾಗಿದಾಗ ಯಶಸ್ಸು ಸಾಧ್ಯವಾಗುತ್ತದೆ ಎಂದು ಹುಬ್ಬಳ್ಳಿಯ ಸೇಫ್ ಹ್ಯಾಂಡ್ಸ್ ಕಂಪನಿಯ ಸಂಸ್ಥಾಪಕಿ ಶ್ರಾವಣಿ ಪವಾರ ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಪಟ್ಟಣದ ಶ್ರೀಮತಿ ಕಮಲಾ ವೆಂಕಪ್ಪ ಎಂ.ಅಗಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜರುಗುತ್ತಿರುವ ಮಿಲಾಂಜೆ-2024ರ ರಾಷ್ಟ್ರೀಯ ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಂತ್ರಜ್ಞಾನ ಬದಲಾವಣೆಯಾದಂತೆ ಇಂದಿನ ವಿದ್ಯಾರ್ಥಿಗಳು ಅದಕ್ಕೆ ಹೊಂದಿಕೊಂಡು ಸಾಗಬೇಕು. ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಆಯ್ದುಕೊಂಡ ಕ್ಷೇತ್ರದಲ್ಲಿ ಶ್ರೇಷ್ಠವಾದುದನ್ನು ಸಾಧಿಸಿಲು ಸ್ವತಂತ್ರ ಮನೋಭಾವ, ಕ್ರಿಯಾತ್ಮಕತೆ, ಏಕಾಗ್ರತೆ ರೂಢಿಸಿಕೊಳ್ಳಬೇಕು. ಉನ್ನತ ಶಿಕ್ಷಣ, ಜ್ಞಾನ ಮತ್ತು ನಾಯಕತ್ವದ ಗುಣ ಬೆಳೆಸಿಕೊಂಡು ಸಮಾಜಮುಖಿಯಾಗಿ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ, ಹೊಸ ಅವಿಷ್ಕಾರಗಳ ಕಲ್ಪನೆ ಮತ್ತು ಇಂಗ್ಲೀಷ್ ಭಾಷೆಯ ಜ್ಞಾನ ಅಗತ್ಯವಾಗಿದ್ದು, ಪರಸ್ಪರ ಭಾಷಾ ಸಂವಹನದ ಮೂಲಕ ಭಾಷೆಯ ಜ್ಞಾನ ಹೊಂದಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪರಶುರಾಮ ಬಾರ್ಕಿ ವಹಿಸಿದ್ದರು. ಕೋಡ್ ಬಜ್, ಟಗ್ ಆಫ್ ವಾರ್, ಬ್ಲೆಂಡ್ ಕೋಡಿಂಗ್, ಆರ್ಟ್ ಮೇನಿಯಾ, ರೋಬೋ ರೇಸ್ ಸ್ಪರ್ಧೆಗಳು ನಡೆದವು. ಕಾಲೇಜಿನ ವಿದ್ಯಾರ್ಥಿಗಳು ತಂತ್ರಜ್ಞಾನ ಆಧಾರಿತ ವಿಷಯಗಳ ಬಗ್ಗೆ ಪ್ರಬಂಧ ಮಂಡನೆ ಮಾಡಿದರು. ವೇದಿಕೆಯಲ್ಲಿ ಡಾ. ಸುಭಾಷ ಮೇಟಿ, ಡಾ. ಗಿರೀಶ ಯತ್ತಿನಹಳ್ಳಿ ಮತ್ತಿತರಿದ್ದರು. ಪ್ರೊ ರಾಜೇಶ್ವರಿ ಗಾಮನಗಟ್ಟಿ, ರಕ್ಷಿತಾ ಕುಂದಗೋಳ, ಪ್ರಿಯಾಂಕ ಪಾಟೀಲ, ಪ್ರೊ ರಾಜೇಂದ್ರ ಶೆಟ್ಟರ ನಿರೂಪಿಸಿದರು.