ವಿಜಯಸಾಕ್ಷಿ ಸುದ್ದಿ, ಗದಗ: ಒಂದು ಕಾಲದಲ್ಲಿ ಕುಡಿತದ ಚಟ ಬಿಡಿಸಲು ನಿಮ್ಹಾನ್ಸ್ಗೆ ಹೋಗುತ್ತಿದ್ದವರು, ಇಂದು ಮೊಬೈಲ್ ಚಟ ಬಿಡಿಸಲು ಅಲ್ಲಿಗೆ ಹೋಗುವ ಸ್ಥಿತಿ ಬಂದಿದೆ. ಮಕ್ಕಳ ಕೈಗಳು ನಡುಗುತ್ತಿದ್ದು, ನಿದ್ರೆಯಲ್ಲೂ ಮೊಬೈಲ್ ಹುಡುಕುವಂತಾಗಿದೆ. ಇದು ಮುಂದಿನ ಪೀಳಿಗೆಯನ್ನೇ ನುಂಗುವ ಮಾನಸಿಕ ಅಸ್ವಸ್ಥತೆಯ ಸಾಧನವಾಗುತ್ತಿದೆ ಎಂದು ನರೇಗಲ್ ಹಿರೇಮಠದ ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಕಳವಳ ವ್ಯಕ್ತಪಡಿಸಿದರು.
ಗದಗಿನ ವಿವೇಕಾನಂದ ನಗರದ ಕಾಶೀ ವಿಶ್ವನಾಥ ದೇವಸ್ಥಾನದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿ ಶುಕ್ರವಾರ ಆಯೋಜಿಸಿದ್ದ ‘ಜೀವನ ದರ್ಶನ’ 62ನೇ ಮಾಲಿಕೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮೊಬೈಲ್ ಬಳಕೆಯಿಂದ ಗಂಡ-ಹೆಂಡತಿ, ತಂದೆ-ತಾಯಿ ಮತ್ತು ಮಕ್ಕಳ ನಡುವೆ ಮಾತುಕತೆ, ಚರ್ಚೆ ಕಡಿಮೆಯಾಗಿದೆ. ಪರಸ್ಪರ ಪ್ರೀತಿ, ವಿಶ್ವಾಸದ ಬದಲು ದ್ವೇಷ, ಅಸೂಯೆ, ಮತ್ಸರ ಹೆಚ್ಚುತ್ತಿದೆ. ಆದ್ದರಿಂದ ವಾರದಲ್ಲಿ ಒಂದು ದಿನ ಮೊಬೈಲ್ ಮುಟ್ಟದೇ ಕುಟುಂಬದೊಂದಿಗೆ ಸಮಯ ಕಳೆಯಬೇಕು. ಮೊಬೈಲ್ ಹಿತಮಿತ ಬಳಕೆಯಾಗಬೇಕು ಎಂದರು.
ಶ್ರಾವಣ ಮಾಸದ ಮಹತ್ವ ವಿವರಿಸಿದ ಅವರು, ಆಸೆ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ಅಹಂಕಾರದಂತಹ ದುರ್ಗುಣಗಳಿಂದ ದೂರವಿದ್ದು ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು. ದುರ್ಗುಣಗಳಿದ್ದರೆ ಜೀವನ ನರಕ, ಸದ್ಗುಣಗಳಿದ್ದರೆ ಜೀವನವೇ ಸ್ವರ್ಗ. ಇದೇ ನಿಜವಾದ ಜೀವನ ದರ್ಶನ ಎಂದರು.
ನಿವೃತ್ತ ಪ್ರಾಚಾರ್ಯ ಡಾ. ಎಫ್.ಸಿ. ಹೊಸೂರು ಮಾತನಾಡಿ, ಪಾಲಕರು ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಹಾಗೂ ಸತ್ಯದ ಹಾದಿಯ ತಿಳುವಳಿಕೆ ನೀಡಬೇಕು. ಮಕ್ಕಳ ಕೈಗೆ ಸ್ಮಾರ್ಟ್ಫೋನ್ ಬದಲು ಉತ್ತಮ ಪುಸ್ತಕ ನೀಡಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಎ.ಟಿ. ನರೇಗಲ್ ಸಮಿತಿಯ ಕಾರ್ಯಚಟುವಟಿಕೆ ವಿವರಿಸಿದರು. ಗಣ್ಯರಾದ ಡಾ. ಎಫ್.ಸಿ. ಹೊಸೂರು, ಬಸವರಾಜ ಕಮ್ಮಾರ, ಈರಣ್ಣ ಕಾಂಬಳೆ ಅವರನ್ನು ಸನ್ಮಾನಿಸಲಾಯಿತು. ಆರ್.ಆರ್. ಕಾಶಪ್ಪನವರ, ಸುದರ್ಶನ ಹಾನಗಲ್ಲ, ಎಸ್.ಎಸ್. ಪಾಳೇಗಾರ, ಆರ್.ಬಿ. ಅಂದಪ್ಪನವರ, ವ್ಹಿ.ಆರ್. ಗೊಬ್ಬರಗುಂಪಿ, ಸಾಗರ ಬಿಂಗಿ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಮುನ್ನ ಕಾಶೀ ವಿಶ್ವನಾಥನ ಪಾಲಕಿ ಸೇವೆ ಶ್ರದ್ಧಾಭಕ್ತಿಯಿಂದ ನಡೆಯಿತು.
ಮೊಬೈಲ್ ನಮ್ಮ ಬದುಕನ್ನು ಸುಲಭಗೊಳಿಸಬೇಕೇ ಹೊರತು, ಬದುಕನ್ನೇ ಮೊಬೈಲ್ಗೆ ಒಪ್ಪಿಸುವಂತಾಗಬಾರದು. ಮಕ್ಕಳ ಭವಿಷ್ಯಕ್ಕಾಗಿ ಪಾಲಕರು ಮೊಬೈಲ್ ಬಳಕೆಗೆ ಮಿತಿ ಹಾಕಲೇಬೇಕು.
— ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು



