ವಿಜಯಸಾಕ್ಷಿ ಸುದ್ದಿ, ಗದಗ: ಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅದೆಷ್ಟೇ ಕಷ್ಟ ಬಂದರೂ ಧೃತಿಗೆಡದೇ ಕಠೋರ ತಪಸ್ಸು ಮಾಡುವ ಮೂಲಕ ಶಿವನೊಲುಮೆಯನ್ನು ಪಡೆದು ಸಮಾಜದ ಉದ್ಧಾರಕ್ಕಾಗಿ ಬಾಳಿ ಬದುಕಿ ಇಡೀ ಮಾನವ ಕುಲಕ್ಕೆ ಮತ್ತು ಸರ್ವ ಸಮಾಜದ ಮಹಿಳೆಯರಿಗೆ ಮಾದರಿಯಾಗಿದ್ದಾಳೆ ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೃಷ್ಣಗೌಡ ಎಚ್.ಪಾಟೀಲ ಅಭಿಪ್ರಾಯಪಟ್ಟರು.
ಅವರು ಸೋಮವಾರ ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಗದಗ ಜಿಲ್ಲಾ ಶಿವಶರಣೆ ಹೇಮರಡ್ಡಿ ಮಲ್ಲಮ್ಮ-ಶ್ರೀ ಮಹಾಯೋಗಿ ವೇಮನ ರಡ್ಡಿ ಸಮಾಜ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ತಿಕ ಮಾಸದ ದೀಪೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಮಹಾಯೋಗಿ ವೇಮನ ಅವರು ತ್ಯಾಗ ಜೀವನ ನಡೆಸುವ ಮೂಲಕ ಹಾಗೂ ವಚನ ಸಾಹಿತ್ಯಕ್ಕೆ ಬಹು ದೊಡ್ಡ ಆದರ್ಶದ ಕೊಡುಗೆಯನ್ನು ನೀಡುವ ಮೂಲಕ ಸಮಾಜದ ಸನ್ಮಾರ್ಗಕ್ಕೆ ಕಾರಣರಾಗಿದ್ದಾರೆ ಎಂದು ಬಣ್ಣಿಸಿದರು.
ಗದಗ ಜಿಲ್ಲಾ ಶಿವಶರಣೆ ಹೇಮರಡ್ಡಿ ಮಲ್ಲಮ್ಮ, ಶ್ರೀ ಮಹಾಯೋಗಿ ವೇಮನ ರಡ್ಡಿ ಸಂಘ ಸಮಾಜಮುಖಿ, ಜನಮುಖಿಯಾಗಿ ಒಳ್ಳೆಯ ಕಾರ್ಯ ಮಾಡುತ್ತಿದೆ ಎಂದರಲ್ಲದೆ, ಸಮಾಜದ ಮುಂಚೂಣಿಯಲ್ಲಿರುವ ಹಿರಿಯರು, ಮಹಿಳೆಯರು, ಯುವಕರು ಸಮಾಜದ ಬಲವರ್ಧನೆಗೆ ಶ್ರಮಿಸುತ್ತಿರುವದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಸಮಾಜದ ಪ್ರಮುಖರಾದ ರವೀಂದ್ರನಾಥ ಮೂಲಿಮನಿ, ಎಸ್.ಆರ್. ಹಳ್ಳೂರ, ಎಸ್.ಪಿ. ಪಾಟೀಲ, ಶಂಕರ ಮುದರಡ್ಡಿ, ಬಿ.ಎಚ್. ಮಂಕಣಿ, ವ್ಹಿ.ಕೆ. ಚೂರಿ, ರವೀಂದ್ರನಾಥ ಕುಲಕರ್ಣಿ, ಎಸ್.ಡಿ. ಗಡಾದ, ಬಿ.ಎಸ್. ಗಿರಡ್ಡಿ, ಬಿ.ಎಂ. ಅವರಡ್ಡಿ, ಮಲ್ಲನಗೌಡ ಕಲಾದಗಿ, ವ್ಹಿ.ವ್ಹಿ. ಚೇಗರಡ್ಡಿ, ಬಾಬು ಮಲ್ಲನಗೌಡರ, ರಾಘು ಹೊಸಮನಿ, ಎಸ್.ಎಸ್. ರಡ್ಡೇರ, ಪ್ರಕಾಶ ಬಸರಿಗಿಡದ, ವ್ಹಿ.ಆರ್. ಬಾಣಾಪೂರ, ಎ.ಎಸ್. ರಡ್ಡೇರ, ದೇವರಡ್ಡಿ ತಿರ್ಲಾಪೂರ, ಜಗದೀಶ ಪ್ಯಾಟಿ, ಎಂ.ಎಸ್. ಕಲಾದಗಿ, ಕೆ.ಬಿ. ಕೊಣ್ಣೂರ, ಪ್ರೇಮಾ ಮೇಟಿ, ಲಕ್ಷ್ಮೀ ಹಳ್ಳೂರ, ಭಾಗ್ಯ ಶಿರೋಳ, ಸರೋಜಾ ಪೈಲ್, ಪುಷ್ಪಾ ಅಬ್ಬಿಗೇರಿ, ಲೀಲಾ ಮುದರಡ್ಡಿ, ಮಂಜುಳಾ ಚಿಂಚಲಿ, ಮಧು ಪಾಟೀಲ, ಶೋಭಾ ಮೇಟಿ, ರಾಜೇಶ್ವರಿ ಶಿರೋಳ ಮುಂತಾದವರು ಪಾಲ್ಗೊಂಡಿದ್ದರು.
ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ತತ್ವಾದರ್ಶಗಳು ಸಾರ್ವಕಾಲಿಕ ಶ್ರೇಷ್ಠವಾಗಿವೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ. ಮಲ್ಲಮ್ಮನವರು ತಾಳ್ಮೆಯ ಪ್ರತಿರೂಪ. ಸ್ತ್ರೀಯರು ತಾಳ್ಮೆಯಿಂದ ಇದ್ದರೆ ಸಾಧನೆ ಮಾಡಬಹದು ಎನ್ನುವುದಕ್ಕೆ ಹೇಮರೆಡ್ಡಿ ಮಲ್ಲಮ್ಮ ಸಾಕ್ಷಿ ಎಂದು ಕೃಷ್ಣಗೌಡ ಪಾಟೀಲ ತಿಳಿಸಿದರು.



