ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ತಿಮ್ಮಾಪೂರ ಹಾಗೂ ಹರ್ಲಾಪೂರ ಗ್ರಾಮದಿಂದ ಗದಗ ನಗರಕ್ಕೆ ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆಯು ರಾಷ್ಟ್ರೀಯ ಹೆದ್ದಾರಿಯ 8 ಕಿ.ಮೀ ಹಾಗೂ ತಿಮ್ಮಾಪೂರ ಗ್ರಾಮದಿಂದ ಯೆರೆಹಂಚಿನಾಳ ಗ್ರಾಮದ ಕಾಣೆಹಳ್ಳದವರಗೆ 2 ಕಿ.ಮೀ ಹೀಗೆ ಒಟ್ಟೂ 10 ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆಯ ತುಂಬ ಹೊಂಡಗಳೇ ತುಂಬಿದ್ದು, ವಾಹನ ಸವಾರರು ನಿತ್ಯವೂ ಪರದಾಡುವಂತಾಗಿದೆ.
ಇದೇ ರಸ್ತೆಯ ಮೂಲಕ ನಿತ್ಯ ಗದಗ, ಕುಕನೂರು ನಗರಗಳಿಗೆ ನೂರಾರು ವಾಹನಗಳು ಸಂಚರಿಸುತ್ತವೆ. ರೈತರು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಗದಗ ಎಪಿಎಂಸಿಗೆ ಇದೇ ರಸ್ತೆಯ ಮೂಲಕ ನಿತ್ಯ ಸಂಚರಿಸುತ್ತಾರೆ.
ವಾಹನ ಸವಾರರಿಗೆ ಸಮಸ್ಯೆಗಳಾಗುತ್ತಿದ್ದರೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗಮನಹರಿಸುತ್ತಿಲ್ಲ.
ವರ್ಷಕ್ಕೊಮ್ಮೆ ಪಿಡಬ್ಲ್ಯೂಡಿ ಇಲಾಖೆಯು ಈ ರಸ್ತೆಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ತೇಪೆ ಹಚ್ಚುವ ಕಾರ್ಯ ಮಾಡುತ್ತಿದೆ. ಈ ರಸ್ತೆಯಲ್ಲಿ ಅನೇಕ ಅಪಘಾತಗಳ ಸಂಭವಿಸಿದ್ದು, ಹಲವಾರು ಸಾವು ಕೂಡ ಸಂಭವಿಸಿದೆ.
ಈ ರಸ್ತೆ ನಿರ್ಮಾಣ ಮಾಡುವ ಕುರಿತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿ.ಆರ್. ನಾರಾಯಣರೆಡ್ಡಿ ಬಣದ ಗದಗ ಜಿಲ್ಲಾ ರೈತ ಸಂಘದ ಮೂಲಕ ಹಾಗೂ ಗ್ರಾಮ ಪಂಚಾಯಿತಿಯಿಂದ ಹಲವು ಬಾರಿ ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಿಲ್ಲ ಎಂದು ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ತಿಳಿಸಿದ್ದಾರೆ.
ಇನ್ನಾದರೂ ಈ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳದಿದ್ದರೆ ಲೋಕೋಪಯೋಗಿ ಕಚೇರಿಯೆದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಹುಚ್ಚೀರಪ್ಪ ಜೋಗಿನ, ಶರಣಪ್ಪ ಜೋಗಿನ, ಶೇಖಪ್ಪ ಘಂಟಿ, ರಾಮಣ್ಣ ಖಂಡ್ರೆ, ಬಾಳಪ ಗಂಗರಾತ್ರಿ, ಅಂದಪ್ಪ ಕೊಳೂರು ಮುಂತಾದ ರೈತ ಮುಖಂಡರು ಒತ್ತಾಯಿಸಿದ್ದಾರೆ.