ಮೈಸೂರು: ಮುಡಾ ಹಗರಣ ಇದೀಗ ಭೂ ಹಂಚಿಕೆ ಆರೋಪದ ಮಟ್ಟವನ್ನು ಮೀರಿ, ತನಿಖಾ ಸಂಸ್ಥೆಯ ನೈಜತೆ ಮತ್ತು ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವ ಹಂತಕ್ಕೆ ತಲುಪಿದೆ. ಲೋಕಾಯುಕ್ತ ಅಧಿಕಾರಿಗಳಿಗೆ ಲಂಚ ನೀಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಸ್ನೇಹಮಯಿ ಕೃಷ್ಣ ತಮ್ಮ ಬಳಿ ಸ್ಪಷ್ಟ ದಾಖಲೆಗಳಿವೆ ಎಂದು ಬಹಿರಂಗವಾಗಿ ಹೇಳಿದ್ದಾರೆ.
ಅವರ ಕೈಗೆ ಸಿಕ್ಕ ದಾಖಲೆಗಳಲ್ಲಿ “DCM” ಎಂಬ ಉಲ್ಲೇಖದ ಮುಂದೆ 12 ಕೋಟಿ 50 ಲಕ್ಷ ರೂಪಾಯಿ ಹಣ ನೀಡಿರುವ ಮಾಹಿತಿ ಇರುವುದಾಗಿ ತಿಳಿಸಿದ್ದಾರೆ. “DCM” ಎಂದರೆ ಕಂಪನಿಯ ಹೆಸರೋ? ಅಥವಾ ವ್ಯಕ್ತಿಯೋ? ಯಾರ ಸೂಚನೆಯಂತೆ ಈ ಹಣ ನೀಡಲಾಗಿದೆ? ಯಾರಿಗೆ ಹಣ ತಲುಪಿದೆ? ಎಂಬ ಹಲವು ಗಂಭೀರ ಪ್ರಶ್ನೆಗಳು ಉದ್ಭವವಾಗಿವೆ.
ಈ ಎಲ್ಲಾ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಸ್ನೇಹಮಯಿ ಕೃಷ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು, ನ್ಯಾಯಾಲಯ ಈ ಅರ್ಜಿಯನ್ನು ಸ್ವೀಕರಿಸಿದೆ. ಈ ಪ್ರಕರಣದ ವಿಚಾರಣೆ ಫೆಬ್ರವರಿ 20ರಂದು ನಡೆಯಲಿದೆ.
ಮುಡಾ ಹಗರಣ ಈಗ ಕೇವಲ ಭ್ರಷ್ಟಾಚಾರ ತನಿಖೆಯಲ್ಲ, ತನಿಖೆ ನಡೆಸಿದ ಸಂಸ್ಥೆಯ ಮೇಲೆಯೇ ಸಂಶಯದ ನೆರಳು ಬೀಳುವಂತಹ ಪರಿಸ್ಥಿತಿಗೆ ತಲುಪಿದೆ. ಫೆಬ್ರವರಿ 20ರ ನ್ಯಾಯಾಲಯದ ವಿಚಾರಣೆ ಈ ಆರೋಪಗಳಿಗೆ ಸ್ಪಷ್ಟ ಉತ್ತರ ನೀಡುತ್ತದೆಯೇ? ಅಥವಾ ಮತ್ತಷ್ಟು ಸ್ಫೋಟಕ ಸಂಗತಿಗಳು ಹೊರಬೀಳುತ್ತವೆಯೇ? ಎಂಬುದರ ಮೇಲೆ ಇಡೀ ರಾಜ್ಯದ ಗಮನ ಕೇಂದ್ರೀಕೃತವಾಗಿದೆ.



