ವಿಜಯಸಾಕ್ಷಿ ಸುದ್ದಿ, ರೋಣ : ನರೇಗಾ ಯೋಜನೆಯು ನಮ್ಮ ಭಾಗದ ದುಡಿಯುವ ಜನರಿಗೆ ಆಶಾಕಿರಣವಾಗಿದೆ. ಸತತ ಬರಗಾಲ ಬೀಳುವ ಸಮಯದಲ್ಲಿ ದುಡಿಯಲು ಕೆಲಸ ಇಲ್ಲದ ವೇಳೆ ನರೇಗಾ ಯೋಜನೆಯಡಿಯಲ್ಲಿ ಸಾಮೂಹಿಕ ಕಾಮಗಾರಿಯ ಕೆಲಸ ನೀಡುವ ಮೂಲಕ ಕೂಲಿಕಾರರಿಗೆ ಇದ್ದೂರಲ್ಲೇ ಕೆಲಸಗಳು ಸಿಗುತ್ತವೆ ಎಂದು ಹೊಳೆ ಮಣ್ಣೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವನಗೌಡ ಮೆಣಸಗಿ ಅಭಿಪ್ರಾಯಪಟ್ಟರು.
ತಾಲೂಕಿನ ಹೊಳೆ ಮಣ್ಣೂರ ಗ್ರಾಮದಲ್ಲಿ ಮೇ-1, ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ನರೇಗಾ ಕೂಲಿಕಾರರಿಗೆ ಸಿಹಿ ವಿತರಣೆ ಮಾಡಿ ಹೂಗುಚ್ಛ ನೀಡುವ ಮೂಲಕ ಕಾರ್ಮಿಕ ದಿನಾಚರಣೆಯನ್ನು ಆಚರಿಸಿ ಅವರು ಮಾತನಾಡಿದರು.
ಬರಗಾಲದಲ್ಲಿ ಕೆಲಸ ಕೊಡುವ ಏಕೈಕ ಯೋಜನೆ ನರೇಗಾ. ಈ ಯೋಜನೆಯ ಮೂಲಕ ಬಡ ಜನರನ್ನು ಅರ್ಥಿಕ ಸಂಕಷ್ಟದಿಂದ ಪಾರು ಮಾಡವ ಸಲುವಾಗಿ 2005ರಲ್ಲಿ ಜಾರಿಗೆ ತರಲಾಯಿತು. ಕೂಲಿಕಾರರಿಗೆ ಕುಡಿಯುವ ನೀರಿನ ವ್ಯವಸ್ಥೆ, ದಣಿವಾರಿಸಿಕೊಳ್ಳಲು ನೆರಳಿನ ವ್ಯವಸ್ಥೆ ಮಾಡುವುದು ನರೇಗಾ ಯೋಜನೆಯಲ್ಲಿದೆ.
ಕಾರ್ಮಿಕ ಆಂದೋಲನದ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಆಚರಿಸುವ ದಿನ ಇದಾಗಿದ್ದು, ಸಾಕಷ್ಟು ಕಾರ್ಮಿಕ ಹೋರಾಟಗಾರರ ಶ್ರಮದ ಫಲದಿಂದ ಇಂದಿನ ದಿನಗಳಲ್ಲಿ ಸರ್ಕಾರದ ಯೋಜನೆಗಳಲ್ಲಿ ಕಾರ್ಮಿಕರಿಗೆ ಅಧಿಕ ಸೌಲಭ್ಯಗಳು ಸಿಗುವಂತಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಹೊಳೆಮಣ್ಣೂರ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ, ನರೇಗಾ ಸಿಬ್ಬಂದಿ ವರ್ಗ ಮತ್ತು ಕೂಲಿಕಾರರು ಭಾಗವಹಿಸಿದ್ದರು.