ವಿಜಯಸಾಕ್ಷಿ ಸುದ್ದಿ, ರೋಣ : ನವ ದಂಪತಿಗಳು ಸಮಾಜಮುಖಿ ಜೀವನ ನಿರ್ವಹಿಸುವ ಮೂಲಕ ಕುಟುಂಬ ನಿರ್ವಹಣೆಯಲ್ಲಿ ಪ್ರಾಮಾಣಿಕತೆಯನ್ನು ತೋರಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಶುಕ್ರವಾರ ಮಾರನಬಸರಿ ಗ್ರಾಮದಲ್ಲಿ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವ ಹಾಗೂ ಪುರಾಣ ಮಂಗಲದ ನಿಮಿತ್ತ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ ಬೀಳಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮಠಾಧೀಶರು ಮತ್ತು ಸರ್ವ ಸಮಾಜದವರ ಆಶೀರ್ವಾದ ನವ ದಂಪತಿಗಳಿಗೆ ಲಭಿಸುತ್ತದೆ. ನವ ದಂಪತಿಗಳು ತಂದೆ-ತಾಯಿಗಳನ್ನು ಪ್ರೀತಿಯಿಂದ ಕಾಣಬೇಕು. ಅಲ್ಲದೆ ಹಿರಿಯರನ್ನು ಗೌರವಿಸುವ ಜೊತೆಗೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸಬೇಕು ಎಂದರು.
ಧಾರವಾಡ ಮನ್ಸೂರ ಶ್ರೀಮಠದ ಬಸವರಾಜ ಶ್ರೀಗಳು ಮಾತನಾಡಿ, ಮಾರನಬಸರಿ ಗ್ರಾಮ ಸೌಹಾರ್ದತೆಯ ತವರೂರು. ಈ ಗ್ರಾಮದಲ್ಲಿ ಪುಣ್ಯದ ಕಾರ್ಯಗಳು ಹೆಚ್ಚಿನ ರೀತಿಯಲ್ಲಿ ನಡೆದುಕೊಂಡು ಬರುತ್ತಿವೆ. ನವ ದಂಪತಿಗಳು ಕುಟುಂಬದ ಹಿರಿಯರನ್ನು ಗೌರವಿಸಿ ಸಮಾಜಮುಖಿ ಜೀವನ ನಡೆಸಬೇಕು ಎಂದರು.
ಕುಟುಂಬ ಸಂತಸದಿಂದ ಕೂಡಿರಬೇಕಾದರೆ ಯುವಕರು ದುಶ್ಚಟಗಳಿಂದ ದೂರ ಇರಬೇಕು. ಯುವಕರು ದುಡಿಮೆಯತ್ತ ಗಮನ ಹರಿಸಬೇಕು. ಹಾಲುಮತ ಸಮಾಜದಿಂದ ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳು ನಡೆಯಬೇಕು. ಜೊತೆಗೆ ರೇವಣಸಿದ್ದೇಶ್ವರರ ಅಣತಿಯಂತೆ ಭಕ್ತಿಯನ್ನು ಹೊಂದಬೇಕು ಎಂದರು.
ಕಾರ್ಯಕ್ರಮಕ್ಕೂ ಮುನ್ನ ಸಂಗೊಳ್ಳಿ ರಾಯಣ್ಣರ ಪ್ರತಿಮೆಯನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು. ಷಣ್ಮುಖಪ್ಪಜ್ಜನವರು ಸಾನ್ನಿಧ್ಯ ವಹಿಸಿದ್ದರು. ಅಂದಪ್ಪ ಬಿಚ್ಚೂರ, ಬಸವರಾಜ ನವಲಗುಂದ, ಎಸ್.ಎಚ್. ಸೋಂಪುರ, ಶರಣಪ್ಪ ಕುರಿ, ಶಿವಶರಣಪ್ಪ ಅಬ್ಬಿಗೇರಿ, ಈರಪ್ಪ ನಿಡಗುಂದಿ, ಶಿವಪ್ಪ ಜಾಲಿಹಾಳ ಸೇರಿದಂತೆ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.