ಮಂಡ್ಯ: ಹೊಸ ವರ್ಷ 2026ನ್ನು ಸ್ವಾಗತಿಸಲು ಉತ್ಸಾಹದಿಂದ ಇಡೀ ದೇಶ ತುದಿಗಾಲದಲ್ಲಿ ಸಜ್ಜಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯನ್ನು ಸುರಕ್ಷಿತವಾಗಿ ನಡೆಸಲು ಪೊಲೀಸ್ ಇಲಾಖೆ ಕಠಿಣ ಭದ್ರತಾ ಕ್ರಮಗಳನ್ನು ಕೈಗೊಂಡಿದೆ.
ಕಾವೇರಿ ನದಿ ತೀರದಲ್ಲಿ ಪ್ರತಿ ವರ್ಷ ಜನರು ನದಿಗೆ ಇಳಿದು ಉತ್ಸವ ಆಚರಿಸುತ್ತಿದ್ದರು. ಕಳೆದ ವರ್ಷಗಳಲ್ಲಿ ಇದರಿಂದ ಸಂಭವಿಸಿದ ಪ್ರಾಣಹಾನಿ–ಅಪಘಾತಗಳನ್ನು ತಪ್ಪಿಸಲು ಪೊಲೀಸ್ ಇಲಾಖೆ ಜನವರಿ 1ರಿಂದ 2ರವರೆಗೆ ಬೆಳಗ್ಗೆ 6ಗಂಟೆಯಿಂದ ನಿಶ್ಚಿತ ಸಮಯದವರೆಗೆ ನದಿ ತೀರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ.
ಕಾವೇರಿ ತೀರದ ಪ್ರಮುಖ ಸ್ಥಳಗಳಾದ ಬಲಮುರಿ, ಎಡಮುರಿ, ವೇಣುಗೋಪಾಲಸ್ವಾಮಿ ದೇವಸ್ಥಾನ, ಮುತ್ತತ್ತಿ, ಕಾವೇರಿ ಹಿನ್ನೀರು ಪ್ರದೇಶಗಳಲ್ಲಿ ಜನರ ಪ್ರವೇಶವನ್ನು ನಿಯಂತ್ರಿಸಲಾಗಿದೆ. ಜನರು ನದಿಗೆ ಇಳಿಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಇದಲ್ಲದೇ ಹೊಸ ವರ್ಷಾಚರಣೆಯ ನೆಪದಲ್ಲಿ ಡ್ರಗ್ಸ್, ಗಾಂಜಾಗಳಂತಾ ಮಾದಕ ವಸ್ತುಗಳ ಬಳಿಕೆಯ ವಿಚಾರದಲ್ಲಿ ಮಂಡ್ಯ ಖಾಕಿ ಅಲರ್ಟ್ ಆಗಿದೆ.



