ಪಾಟ್ನಾ: ಬುದ್ಧನ ನಾಡು ಬಿಹಾರದಲ್ಲಿ ಜಗಜಟ್ಟಿಗಳ ಮತ ಕದನದ ತೀರ್ಪು ಹೊರಬಿದ್ದಿದೆ. ನಿಮೋ ಆಟಕ್ಕೆ ಮಹಾಘಟಬಂಧನ ಛಿದ್ರವಾಗಿದೆ. ಗ್ಯಾರಂಟಿ ಎಂಬ ಉಚಿತಗಳ ಅಲೆಯಲ್ಲಿ ಕುರ್ಚಿ ಖಚಿತದ ಕನಸು ಕಂಡಿದ್ದ ಕಾಂಗ್ರೆಸ್-ಆರ್ಜೆಡಿ ಧೂಳೀಪಟವಾಗಿದೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಪ್ರಚಂಡ ಜಯ ಸಾಧಿಸಿದ ಬೆನ್ನಲ್ಲೇಹೊಸ ಸರ್ಕಾರ ರಚನೆಗಾಗಿ ಅವರು ಎನ್ಡಿಎಯ ಎಲ್ಲಾ ಮೈತ್ರಿಕೂಟದ ಪಾಲುದಾರರ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಲಿದ್ದಾರೆ. ಇದೀಗ 10ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ನವೆಂಬರ್ 20ರಂದು ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಎನ್ಡಿಎ ಮೈತ್ರಿಕೂಟದೊಳಗೆ ಸಭೆಗಳು ನಡೆಯುತ್ತಿದ್ದು, ಸಚಿವ ಸಂಪುಟ ಹಂಚಿಕೆ ಕುರಿತು ಚರ್ಚೆಗಳು ನಡೆಯುತ್ತಿವೆ. ಏತನ್ಮಧ್ಯೆ, ಲಾಲು ಪ್ರಸಾದ್ ಯಾದವ್ ಕುಟುಂಬದೊಳಗಿನ ಬಿರುಕು ರಾಜಕೀಯ ವಲಯವನ್ನು ಬಿಸಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವರು ಸೇರಿದಂತೆ ಎನ್ಡಿಎಯ ಹಲವು ಪ್ರಮುಖ ನಾಯಕರು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದಾಖಲೆಯ 10 ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಒಂದು ದಿನ ಮೊದಲು, ನವೆಂಬರ್ 19 ರಂದು ಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗುವುದು ಎಂದು ಜೆಡಿಯು ಮೂಲಗಳು ತಿಳಿಸಿವೆ.


