ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕನ್ನಡ ಸಾಹಿತ್ಯಕ್ಕೆ ಸರ್ವಜ್ಞರ ತ್ರಿಪದಿಗಳು ಎಂದೆಂದಿಗೂ ಅಜರಾಮರವಾಗಿದ್ದು, ಸರ್ವಜ್ಞನ ವ್ಯಕ್ತಿತ್ವ ನಿತ್ಯ ಅನಿಕೇತನವಾದುದು. ಒಂದೇ ಕಡೆ ನಿಲ್ಲದೆ ಗಾಳಿಯ ಅಲೆಯಂತೆ ಜಗ ಸುತ್ತಿದವನು. ಮಂಡೆ ಬೋಳಿಸಿಕೊಂಡು ತುಂಡುಗಂಬಳಿ ಹೊದ್ದು ಹಿಂಡನಗಲಿದ ಗಜದಂತೆ ಜಗ ಸುತ್ತಿ ಜಗದ ಜನರ ಜೀವನವನ್ನು ಅರಿತವನು ಎಂದು ಉಪನ್ಯಾಸಕ ಸಿ.ಎಸ್. ಹಿರೇಮಠ ಅಭಿಪ್ರಾಯಪಟ್ಟರು.
ಅವರು ತಾಲೂಕ ಕಸಾಪದ ಮಾಸದ ಮಾತು ಕಾರ್ಯಕ್ರಮ ಸರಣಿಯ ೧೦ನೇ ಸಂಚಿಕೆಯಲ್ಲಿ ಸರ್ವಜ್ಞನ ಜಯಂತಿಯ ಅಂಗವಾಗಿ ಪಟ್ಟಣದ ಬಸ್ತಿಬಣದ ಮಹಾರಾಜ ಮಂದಿರದಲ್ಲಿ ಸರ್ವಜ್ಞನ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.
ಮೂರು ಸಾಲುಗಳ ಹೊಟ್ಟೆಯಲ್ಲಿ ಮೂಜಗ ತೋರಿದ ದಿಟ್ಟ ಸರ್ವಜ್ಞ. ನೇರ, ದಿಟ್ಟ, ಪ್ರಾಮಾಣಿಕತೆ, ವೈಚಾರಿಕತೆಗಳನ್ನು ಗರ್ಭಿಸಿರುವ ಅವರ ತ್ರಿಪದಿಗಳು ಮಾನವ ಕುಲದ ಸಂಪತ್ತು. ಅವು ನಿಜಕ್ಕೂ ಅಗಾಧತೆಯ ನಿಜಾಸಾಗರ. ಅವರು ನೀಡಿರುವ ಒಂದೊಂದು ವಚನ ಸಮ ಸಮಾಜದ ಚಿಂತನೆಗೆ ಪೂರಕವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಸರ್ವಜ್ಞ ಚಿಂತನ ಹಂಚಿಕೊಂಡ ಟೀಮ್ ಚಿರನೂತನದ ಷಣ್ಮುಖ ಗಡ್ಡೆಣ್ಣನವರ ಎಲ್ಲರೊಳು ಒಂದಾಗಿ, ಎಲ್ಲರನ್ನು ಗುರುವಾಗಿ ಕಂಡು, ಎಲ್ಲರಲ್ಲೂ ಇರುವ ವಿದ್ಯೆ ಯನ್ನು ಗ್ರಹಿಸಿ, ಸಂಗ್ರಹಿಸಿ ತಮ್ಮದಾಗಿಸಿಕೊಳ್ಳುವದೆ ಆಗಿದೆ ಎಂಬುದು ತ್ರಿಕಾಲ ಜ್ಞಾನಿ ಸರ್ವಜ್ಞನ ವಿಚಾರವಾಗಿತ್ತು ಎಂದರು.
ಹಿರಿಯ ಸಮಾಜ ಚಿಂತಕ ಮಹಾದೇವಪ್ಪ ಕುಂಬಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಜ್ಯ ಪ್ರಶಸ್ತಿಗೆ ಭಾಜನರಾದ ಪತ್ರಕರ್ತರಾದ ದಿಗಂಬರ ಪೂಜಾರ ಹಾಗೂ ಮಾಳಿಂಗರಾಯ ಪೂಜಾರರನ್ನು ಸನ್ಮಾನಿಸಲಾಯಿತು. ಸಿಆರ್ಪಿ ಚಂದ್ರಶೇಖರ ವಡಕಣ್ಣವರ ಸರ್ವಜ್ಞನ ತ್ರಿಪದಿಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಬಸವರಾಜ ಹುಲಮನಿ, ಯಲ್ಲಪ್ಪ ಚಕ್ರಸಾಲಿ ದೇವಪ್ಪ ಕುಂಬಾರ, ಹಿರಿಯ ಸಾಹಿತಿ ಎಸ್.ಎಫ್. ಆದಿ, ಐ.ಎ. ಬಳಿಗಾರ, ವಿ.ಎಮ್. ಹೂಗಾರ, ಎನ್.ಪಿ. ಪ್ಯಾಟಿಗೌಡ, ಈಶ್ವರ ಬನ್ನಿಕೊಪ್ಪ, ಪಿ.ಎಚ್. ಕೊಂಡಾಬಿಂಗಿ, ಶಿವಾನಂದ ಚಕ್ರಸಾಲಿ, ಮಲ್ಲಪ್ಪ ಹಾಲಗುಂಡಿ, ಶಿವಪ್ರಕಾಶ್ ಗುಡಿಗೇರಿ, ಈರಣ್ಣ ರಿತ್ತಿ, ಸಿದ್ದಪ್ಪ ನೀರಲಗಿ, ಸುರೇಶ ಕಾಕಡೆ ಮುಂತಾದವರು ಉಪಸ್ಥಿತರಿದ್ದರು.
ಕಸಾಪ ಗೌರವ ಕಾರ್ಯದರ್ಶಿ ಮಂಜುನಾಥ ಚಾಕಲಬ್ಬಿ ಸ್ವಾಗತಿಸಿದರು. ಎಸ್.ಬಿ. ಅಣ್ಣಿಗೇರಿ, ಅಕ್ಷತಾ ಹಡಪದ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ, ಈರಣ್ಣ ಗಾಣಿಗೇರ ವಂದಿಸಿದರು.
ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ತಾಲೂಕಾಧ್ಯಕ್ಷ ಈಶ್ವರ ಮೇಡ್ಲೇರಿ, ಮನುಕುಲಕ್ಕೆ ಸರ್ವಜ್ಞನ ಪ್ರತಿಯೊಂದು ನುಡಿಗಳು ಅರ್ಥಪೂರ್ಣವಾಗಿವೆ. ಸರ್ವಜ್ಞ ಎಂದರೆ ನಾನು ಎಲ್ಲ ತಿಳಿದವನು ಎಂಬ ಅರ್ಥವಲ್ಲ. ಸರ್ವರೊಳು ಒಂದೊಂದು ನುಡಿ ಕಲಿತವನ ಎಂಬ ಅರ್ಥವು ಕಲಿಕೆಗಿರುವ ಸಾಮಾಜಿಕ, ಜಾನಪದೀಯ ಆಯಾಮವನ್ನು ಎತ್ತಿ ತೋರಿಸುತ್ತದೆ. ವಿದ್ಯೆಯ ಪರ್ವತವಾಗುವುದು ನಾವೇನೋ ಅಪೂರ್ವವಾದದ್ದನ್ನು ಕಲಿತು ಜ್ಞಾನ ಸಿದ್ಧಿಸಿಕೊಳ್ಳುವುದರಲ್ಲಿಲ್ಲ ಎಂದು ಹೇಳಿದರು.