ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಕರ್ನಾಟಕ ಏಕೀಕರಣದ ರೂವಾರಿ ಅಂದಾನಪ್ಪ ದೊಡ್ಡಮೇಟಿಯವರು ಚಿತ್ರಿಸಿರುವ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ನರೇಗಲ್ಲದ ವಿವಿಧ ಸಂಘಟನೆಗಳು ಶುಕ್ರವಾರ ಪೂಜೆ ಸಲ್ಲಿಸಿ ಗೌರವ ಅರ್ಪಿಸಿದರು.
ನರೇಗಲ್ಲ ಪಟ್ಟಣ ಪಂಚಾಯಿತಿ, ಗಜೇಂದ್ರಗಡ ತಾಲೂಕಾ ಜಾನಪದ ಪರಿಷತ್, ಬೀಚಿ ಬಳಗ, ಪೇಂಟರ್ ಸಂಘ, ಕನ್ನಡಪರ ಸಂಘಟನೆಗಳವರು ನರೇಗಲ್ಲನಿಂದ ಜಕ್ಕಲಿವರೆಗೆ ಬೈಕ್ ರ್ಯಾಲಿ ನಡೆಸಿದರು.
ನಿವೃತ್ತ ಶಿಕ್ಷಕ ಎಂ.ಎಸ್. ಧಡೇಸೂರಮಠ ಮಾತನಾಡಿ, ಕರ್ನಾಟಕದ ಜನತೆಗೆ ತೈಲ ವರ್ಣದ ಭುವನೇಶ್ವರಿ ಚಿತ್ರವನ್ನು ನೀಡಿದ ಕೀರ್ತಿ ದಿ. ಅಂದಾನಪ್ಪನವರಿಗೆ ಸಲ್ಲುತ್ತದೆ. ಅವರ ಕನಸಿನ ಕರ್ನಾಟಕ ಮಾತೆಯ ಪರಿಕಲ್ಪನೆಯ ಚಿತ್ರವನ್ನು ಗದುಗಿನ ಕಲಾವಿದ ಸಿ.ಎನ್. ಪಾಟೀಲರು ಚಿತ್ರಿಸಿದರು. ಮುಂಬೈ ವಿಧಾನ ಸಭೆಯಲ್ಲಿ ಕನ್ನಡದಲ್ಲಿಯೇ ಮಾತನಾಡಿದ ಮೊದಲ ವ್ಯಕ್ತಿ ಅಂದಾನಪ್ಪನವರು. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯವರು ಕಳೆದ ಒಂದು ವರ್ಷದ ಹಿಂದೆ ಭೇಟಿ ನೀಡಿ ಅಂದಾನಪ್ಪನವರ ಸ್ಮಾರಕದ ಜಾಗೆಯನ್ನು ಪರಿಶೀಲಿಸಿದ್ದಾರೆ. ಆದರೆ, ವರ್ಷ ಗತಿಸಿದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ನಮಗೆಲ್ಲ ನಿರಾಸೆ ಮೂಡಿಸಿದೆ ಎಂದರು.
ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಮುಖ್ಯಾಧಿಕಾರಿ ಮಹೇಶ ನಿಡಶೇಷಿ, ಬಿ.ಬಿ. ಕುರಿ, ಕಳಕನಗೌಡ ಪೊಲೀಸಪಾಟೀಲ, ಚನ್ನಬಸವ ದೊಡ್ಡಮೇಟಿ, ಶೇಖಪ್ಪ ಜುಟ್ಲ, ಶೇಖಪ್ಪ ಕೆಂಗಾರ, ಈರಣ್ಣ ಗುಜಮಾಗಡಿ, ಮಹಮ್ಮದಗೌಸ್ ಹೊಸಮನಿ, ಮೈಲಾರಪ್ಪ ಚಳ್ಳಮರದ, ಸಂದೇಶ ದೊಡ್ಡಮೇಟಿ, ಹರ್ಷವರ್ಧನ್ ದೊಡ್ಡಮೇಟಿ ಬಸವರಾಜ ಮಾಳವಾಡ, ಜೆ.ಎ. ಪಾಟೀಲ, ಆರೀಫ್ ಮಿರ್ಜಾ, ಸಂಜೀವ ಗುಡಿಮನಿ ಸೇರಿದಂತೆ ಸಂಘಟನೆಗಳ ಸದಸ್ಯರಿದ್ದರು.
ಗಜೇಂದ್ರಗಡ ತಾಲೂಕಾ ಜಾನಪದ ಪರಿಷತ್ ಅಧ್ಯಕ್ಷ ಎಂ.ಕೆ. ಬೇವಿನಕಟ್ಟಿ ಮಾತನಾಡಿ, ನರೇಗಲ್ಲ ಪಟ್ಟಣದ ಎಲ್ಲ ಸಂಘಟನೆಗಳ ಪರವಾಗಿ ಪ.ಪಂ ಅಧ್ಯಕ್ಷರಿಗೆ ಹಾಗೂ ಸರ್ವ ಸದಸ್ಯರಿಗೆ ರಾಜ್ಯೋತ್ಸವದ ನಿಮಿತ್ತ 1000 ಬಾವುಟಗಳನ್ನು ಪಟ್ಟಣದಲ್ಲಿ ಆರೋಹಣ ಮಾಡಬೇಕೆಂದು ಮಾಡಿದ ಮನವಿಗೆ ಅವರು ಸ್ಪಂದಿಸಿದ್ದಕ್ಕೆ ಅಭಿನಂದನೆಗಳನ್ನು ತಿಳಿಸಿ, ದಿ. ಅಂದಾನಪ್ಪ ದೊಡ್ಡಮೇಟಿಯವರ ಪರಿಕಲ್ಪನೆಯ ತೈಲ ವರ್ಣದ ಭುವನೇಶ್ವರಿ ಚಿತ್ರವನ್ನು ರಾಜ್ಯದ ಅಧಿಕೃತ ಲಾಂಛನವನ್ನಾಗಿಸಲು ಸರ್ಕಾರವನ್ನು ಒತ್ತಾಯಿಸಿದರು.