ವಿಜಯಸಾಕ್ಷಿ ಸುದ್ದಿ, ನರಗುಂದ : ಹಜರತ್ ಮೆಹಬೂಬಸುಭಾನಿ ದರ್ಗಾದಿಂದ ನಿರ್ಮಿಸಿರುವ ಧ್ವಜಾಯಿ ಶೈಲಿಯ ಬ್ರಹ್ಮ ರಥವನ್ನು ವಿವಿಧ ಮಠಾಧೀಶರು, ಮೌಲ್ವಿಗಳ ಸಮ್ಮುಖದಲ್ಲಿ ವಿಶೇಷ ಪೂಜೆ, ಪುನಸ್ಕಾರ ಸಲ್ಲಿಸುವುದರ ಮೂಲಕ ಅದ್ಧೂರಿ ಕುಂಭಮೇಳ ಮೆರವಣೆಯೊಂದಿಗೆ ಹಿಂದೂ-ಮುಸ್ಲಿಂ ಭಾವೈಕ್ಯತೆಯಿಂದ ಶ್ರೀಸಿದ್ಧೇಶ್ವರ ಪಂಚಗ್ರಹ ಗುಡ್ಡದ ಹಿರೇಮಠಕ್ಕೆ ಗುರುವಾರ ಶ್ರದ್ಧಾ ಭಕ್ತಿಯಿಂದ ಶಾಸ್ತ್ರೋಕ್ತವಾಗಿ ಸಮರ್ಪಿಸಲಾಯಿತು.
ನಗರದ ಅರ್ಭಾಣ ಬಡಾವಣೆಯಿಂದ ಶಿವಾಜಿ ವರ್ತುಲ, ಬಸವೇಶ್ವರ ವೃತ್ತ, ಸರ್ವಜ್ಞ ಸರ್ಕಲ್, ಗಾಂಧಿ ಚೌಕ್ನ ಪ್ರಮುಖ ಮಾರ್ಗಗಳ ಮೂಲಕ ಪಂಚಗ್ರಹ ಗುಡ್ಡದ ಹಿರೇಮಠದವರೆಗೆ 501 ಮುತ್ತೈದೆಯರಿಂದ ಕುಂಭಮೇಳ, ಜಾಂಜ್, ಕೋಲಾಟ, ಭಜನಾ ಸಂಗೀತ, ಮಜಲು, ಡಿಜೆ, ಕೊಣ್ಣೂರಿನ ಮಹಿಳಾಡೊಳ್ಳು ಕುಣಿತ, ಜಗ್ಗಲಗಿ ಮೇಳಗಳು ಮೆರವಣಿಗೆಗೆ ವಿಶೇಷ ಮೆರಗು ನೀಡಿದವು.
ಕಾರ್ಯಕ್ರಮದ ಧರ್ಮಸಭೆಯಲ್ಲಿ ಭೈರನಹಟ್ಟಿ ಶಾಂತಲಿಂಗ ಶ್ರೀಗಳು ಮಾತನಾಡಿ, ಭಾರತ ಬಹುಜಾತಿ, ಜನಾಂಗ, ಧರ್ಮಗಳನ್ನು ಹೊಂದಿರುವ ಬಹುತ್ವ ರಾಷ್ಟçವಾಗಿದೆ. ನರಗುಂದ ಈ ಹಿಂದೆ ಬ್ರಿಟಿಷರು ಹಾಗೂ ಸರ್ಕಾರದ ವಿರುದ್ಧ ಸಿಡಿದೆದ್ದಾಗ ಬಂಡಾಯಕ್ಕೆ ಸಾಕ್ಷಿಯಾಗಿತ್ತು. ಆದರೀಗ ಬಾಬುಸಾಬ ಶರಣರಿಂದ ಪ್ರತಿಯೊಬ್ಬರೂ ಏಕತ್ವದಿಂದ ಬದುಕುವ ಭಾವೈಕ್ಯತೆ ಕ್ರಾಂತಿಗೆ ಸಾಕ್ಷಿಯಾಗಿರುವುದು ಅತ್ಯಂತ ಹೆಮ್ಮೆಯ ವಿಚಾರ. ನಮ್ಮ ನಾಡಿನ ಸಂಸ್ಕೃತಿ ಕೂಡಿ ಬಾಳುವುದಾಗಿದೆ.
ಸಂತ ಶಿಶುನಾಳ ಶರೀಫ, ಗುರು ಗೋವಿಂದ ಭಟ್ಟರಂತೆ ಸಮಾಜದ ಪ್ರತಿಯೊಬ್ಬರೂ ಭಾವೈಕ್ಯೆತೆಯಿಂದ ಬದುಕಬೇಕು ಎಂದು ಆಶೀರ್ವಚನ ನೀಡಿದರು.
ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ, ಮನುಷ್ಯ ಹುಟ್ಟುವಾಗ ಇಂತದ್ದೇ ಜಾತಿ, ಧರ್ಮದಲ್ಲಿ ಹುಟ್ಟಬೇಕೆಂದು ಯಾರೂ ಅರ್ಜಿ ಹಾಕಿಕೊಂಡು ಬಂದಿರುವುದಿಲ್ಲ. ಹುಟ್ಟು, ಸಾವು ಯಾರ ಕೈಯಲ್ಲೂ ಇಲ್ಲ. ಆದರೆ, ಇರುವಷ್ಟು ದಿನ ಜೀವನ ಸಾರ್ಥಕಪಡಿಸಿಕೊಳ್ಳಬೇಕಾದರೆ ಸಹಬಾಳ್ವೆಯ ಬದುಕು ನಡೆಸಬೇಕು.
ಸಾಮರಸ್ಯವಿಲ್ಲದೆ ಜಗತ್ತಿನಲ್ಲಿ ಏನೂ ಇಲ್ಲ. ಬಾಬುಸಾಬ ಜಮಾದಾರ ಅವರು ನಮ್ಮ ಶ್ರೀಮಠಕ್ಕೆ 4 ವರ್ಷದ ಹಿಂದಯೇ ತೇರು ನೀಡುವ ವಾಗ್ದಾನ ಮಾಡಿದ್ದರು. ಆದರೆ, ಕೋವಿಡ್ನಿಂದ ವಿಳಂಬವಾಗಿತ್ತು. ಈಗ ಒಂದು ವರ್ಷದಲ್ಲಿಯೇ ತೇರು ನಿರ್ಮಿಸಿಕೊಟ್ಟಿರುವುದು ಇಡೀ ದೇಶಕ್ಕೆ ಭಾವೈಕ್ಯತೆಯ ಸಂದೇಶ ಸಾರಿದಂತಾಗಿದೆ ಎಂದರು.
ಜನಾಬ ಅಕ್ಬರಬೇಗ್ ಮುಲ್ಲಾ ಖುರಾನ ಪಠಣ ಮಾಡಿದರು. ಸಮದ್ ಮುಲ್ಲಾ, ವಿರಕ್ತಮಠದ ಶಿವಕುಮಾರ ಶ್ರೀಗಳು, ಶಿರೋಳದ ಯಚ್ಚರೇಶ್ವರ ಸ್ವಾಮಿಗಳು, ಬನಹಟ್ಟಿ ಸೊಲಬಯ್ಯ ಸ್ವಾಮಿಗಳು ಆಶೀರ್ವಚನ ನೀಡಿದರು. ಶರಣ ಬಾಬುಸಾಬ ಜಮಾದಾರ, ರಥಶಿಲ್ಪಿ ಗಂಗಾಧರ ಆಚಾರ್ಯ, ಪಟ್ಟಣದ ವಿವಿಧ ಮುಸ್ಲಿಂ ಜಮಾತ್, ಹಿಂದೂ ಗುರು-ಹಿರಿಯರು, ದಾನಿಗಳನ್ನು ಇಮಾಮಸಾಬ ಶರಣರ ಸೇವಾ ಟ್ರಸ್ಟ್ ಕಮಿಟಿಯಿಂದ ಸನ್ಮಾನಿಸಲಾಯಿತು.
ಹುಲಕೋಟಿ ರಾಜೇಶ್ವರಿ ವಸತಿ ಶಾಲೆಯ ಆಡಳಿತಾಧಿಕಾರಿ ರಾಘವೇಂದ್ರ ಶೆಟ್ಟಿ, ಜ್ಯೋತಿಭಾ ಕನ್ಸೆ, ವಿಶ್ವನಾಥ ಸುಬೇದಾರ, ಶಾಂತು ಹೂಲಿ, ಆನಂದ ಜಿರ್ಲಿ, ಸುಭಾಸ ಘೋರ್ಪಡೆ, ಶಿವಶಂಕರ ಗಡಾದ, ಡಾ. ದೀಪ್ತಿ, ಡಾ. ಮನೋಹರ, ಶ್ರೀನಿವಾಸ ಬಳಗಲಿ, ಮಹಮ್ಮದ ನಾಯ್ಕರ, ಕಾಶೀಮಸಾಬ ಜಮಾದಾರ, ಮುತ್ತಪ್ಪ ಚವರದ, ನಜೀರಸಾಬ ನಾಯ್ಕರ, ಪ್ರಕಾಶ ಖಿಳೇಗಾವಿ, ಇತರರು ಉಪಸ್ಥಿತರಿದ್ದರು. ಶಿಕ್ಷಕ ಎಂ.ಎ. ಫಣಿಬಂದ ನಿರ್ವಹಿಸಿದರು.
ಪತ್ರಿವನಮಠ ಡಾ.ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯರು ಮಾತನಾಡಿ, ನಾಡಿನ ಹಲವಾರು ಶಿವ-ಶರಣರು ಭಾವೈಕ್ಯತೆಯನ್ನೇ ಸಾರಿದ್ದಾರೆ. ಅವರೆಲ್ಲರ ನಿಲುವನ್ನು ಬಾಬುಸಾಹೇಬ ಜಮಾದಾರ ಇಂದಿನ ಕಾಲದಲ್ಲಿ ಮಾಡಿ ತೋರಿಸಿದ್ದಾರೆ. ಬಾಬುಸಾಹೇಬರ ಧಾರ್ಮಿಕ ಸೇವೆ ಪರಿಗಣಿಸಿ, ನಮ್ಮ ಶ್ರೀಮಠದಿಂದ `ಬಿಲ್ವಶ್ರೀ’ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.