ಬಾಗಲಕೋಟೆ:- ಭಾರೀ ಮಳೆಯಿಂದ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ನೀರಿನ ಪ್ರಮಾಣ ಬಾರಿ ಹೆಚ್ಚಾಗಿದೆ. ಇದರಿಂದ ಮಾಚಕನೂರು ಗ್ರಾಮದಲ್ಲಿರುವ ಹೊಳೆಬಸವೇಶ್ವರ ದೇವಸ್ಥಾನಕ್ಕೆ ಜಲದಿಗ್ಬಂಧನ ಆಗಿದೆ.
ಅಷ್ಟೇ ಅಲ್ಲ, ದೇವಸ್ಥಾನದೊಳಗೆ 10 ಅಡಿಯಷ್ಟು ನೀರಿದ್ದು, ದೇವರ ದರ್ಶನ ಬಂದ ಮಾಡಲಾಗಿದೆ. ಹೀಗಾಗಿ ನದಿ ದಡದಲ್ಲಿ ಹೊಳೆಬಸವೇಶ್ವರ ಉತ್ಸವ ಮೂರ್ತಿ ಪ್ರತಿಷ್ಟಾಪನೆ ಮಾಡಿ ಪೂಜಿಸಲಾಗುತ್ತಿದೆ. ಶ್ರಾವಣ ಕೊನೆ ಶುಕ್ರವಾರದ ಪೂಜೆ ನದಿ ದಡದಲ್ಲೆ ನಡೆಯುತ್ತಿದೆ. ಇನ್ನು ತುಂಬಿದ ನದಿಯಲ್ಲಿ ಕೆಲವರು ಈಜಿ ದೇವಸ್ಥಾನ ಕಡೆ ಹೊರಡೋದು. ಉಕ್ಕಿ ಹರಿಯುವ ನದಿಯಲ್ಲಿ ಮಕ್ಕಳು ನೀರಾಟ ಆಡುತ್ತಾ ದುಸ್ಸಾಹಸ ಮೆರೆಯುತ್ತಿದ್ದಾರೆ.
ಇದು ಒಂದು ಕಡೆ ಆದರೆ, ಬೊರ್ಗರೆದು ಹರಿಯುತ್ತಿರುವ ಘಟಪ್ರಭಾ ನದಿಯಿಂದ ಅಕ್ಕ-ಪಕ್ಕದ ನೂರಾರು ಎಕರೆ ಬೆಳೆ ಜಲಾವೃತವಾಗಿದೆ. ಇದೆ ತಿಂಗಳ ಆರಂಭದಲ್ಲಿ ನಿರಂತರ ಹದಿನೈದು ದಿನಗಳ ಕಾಲ ನೀರಲ್ಲಿ ನಿಂತು ಹಾಳಾದ ಕಬ್ಬು ಈಗ ಮತ್ತೆ ಮುಳುಗಡೆಯಾಗಿದೆ. ಮೇಲಿಂದ ಮೇಲೆ ಪ್ರವಾಹದ ಹೊಡೆತದಿಂದ ರೈತರು ಕಂಗಾಲಾಗಿದ್ದಾರೆ. ಕಳೆದ ಬಾರಿ ಪ್ರವಾಹದ ಕಲೆ ಮಾಸುವ ಮುನ್ನ ಮತ್ತೆ ಪ್ರವಾಹ ಆತಂಕ ಶುರುವಾಗಿದೆ.
ಘಟಪ್ರಭಾ ನದಿಯಲ್ಲಿ ಕ್ಷಣ ಕ್ಷಣಕ್ಕೂ ನೀರಿನ ವೇಗ ಹೆಚ್ಚುತ್ತಿದ್ದು, ಮಾಚಕನೂರು ಚಿಕ್ಕೂರು ಮಧ್ಯದ ಘಟಪ್ರಭಾ ಸೇತುವೆ ಜಲಾವೃತ ಹಂತಕ್ಕೆ ಬಂದಿದೆ.
ಮುಳುಗಡೆಯಾಗಲು ಅರ್ಧ ಅಡಿಯಿಂದ ಒಂದು ಅಡಿ ಮಾತ್ರ ಬಾಕಿ ಇದೆ. ಸೇತುವೆ ಮುಳುಗಿದರೆ ಮಾಚಕನೂರು ಚಿಕ್ಕೂರು ಬಂಟನೂರ ಲೋಕಾಪುರ ಸಂಪರ್ಕ ಕಡಿತವಾಗಲಿದೆ. ನದಿ ಅಕ್ಕಪಕ್ಕದ ರೈತರ ಮೋಟರ್ ಪಂಪ್ ಗಳು ಕೂಡ ಜಲಾವೃತವಾಗಿವೆ. ಮೇಲಿಂದ ಮೇಲೆ ಬೆಳೆ ಹಾನಿ ಅನುಭವಿಸುತ್ತಿದ್ದೇವೆ. ನಮಗೆ ಶಾಶ್ವತ ಪರಿಹಾರ ನೀಡಿ ಎಂದು ರೈತರು ಆಗ್ರಹ ಮಾಡುತ್ತಿದ್ದಾರೆ.