ವಿಜಯಸಾಕ್ಷಿ ಸುದ್ದಿ, ಗದಗ: ಬಾಲ್ಯದಲ್ಲಿ ಅಂಧತ್ವಕ್ಕೆ ಶರಣಾಗಿ ಗದುಗಿನ ಸುಕ್ಷೇತ್ರ ಶ್ರೀ ವೀರೇಶ್ವರ ಪುಣ್ಯಾಶ್ರಮದ ಗಾನಯೋಗಿ ಪಂ. ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯರಾಗಿ ಅಭ್ಯಾಸಗೈಯುತ್ತ ಸರಳ ಬದುಕಿನ ವಿದ್ಯಾರ್ಥಿಯಾಗಿ ಇಂದು ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾಗಿ, ಉಭಯ ಗುರುಗಳ ಮಾರ್ಗದರ್ಶನದಂತೆ ಅಂಧ-ಅನಾಥರಿಗೆ ಅಭಯ ಹಸ್ತ ನೀಡಿ ಆಶ್ರಮವನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಪರಮಪೂಜ್ಯ ಶ್ರೀ ಕಲ್ಲಯ್ಯಜ್ಜನವರ ಜೀವನ ಸಮಾಜಕ್ಕೆ ಮಾದರಿಯಾಗಿದೆ.
ಪೂಜ್ಯಶ್ರೀ ಕಲ್ಲಯ್ಯಜ್ಜನವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದಲ್ಲಿ 1971ರ ಜುಲೈ 3ರಂದು ಶ್ರೀ ವೀರಯ್ಯನವರು ಹಿರೇಮಠ ಹಾಗೂ ಮಾತೋಶ್ರೀ ಬಸಮ್ಮನವರ ಪುತ್ರರಾಗಿ ಜನ್ಮತಾಳಿದರು. ಗಂಗಾವತಿ ತಾಲೂಕಿನ ಉಡಮಕಲ್ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಕಲ್ಲಯ್ಯಜ್ಜನವರು ನಂತರ ಗದುಗಿನ ಕೆ.ಎಚ್. ಪಾಟೀಲ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣ ಪಡೆದರು. ಅಲ್ಲಿಂದ ಪಂ. ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಬಿ.ಮ್ಯೂಸಿಕ್ ಪದವಿ ಪಡೆದರು.
ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರಲ್ಲಿ ಜೂನಿಯರ್, ಸೀನಿಯರ್, ವಿದ್ವತ್ ದರ್ಜೆ ಸಂಗೀತ ಅಭ್ಯಾಸವನ್ನು ಪಡೆದರು. ಸಂಸ್ಥೆಯಲ್ಲಿ ಎರಡು ವರ್ಷ ಆಶ್ರಮದ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. ಗುರುವಿನ ಆಶೀರ್ವಾದದಿಂದ ಸ್ವಂತ ಕವಿಗಳಾಗಿ ನಾಟಕ ಹಾಗೂ ಕವನಗಳನ್ನು ಅಲ್ಲದೆ, ತಮ್ಮ ಗುರುಗಳಾದ ಪದ್ಮಭೂಷಣ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಚರಿತಾಮೃತ ಕುರಿತು `ಧರೆಗೆ ಬಂದ ದೇವರು’ ಎಂಬ ಗ್ರಂಥವನ್ನು ರಚಿಸಿದ್ದಾರೆ. ಗುರುವಿನ ಮೇಲೆ ಇಟ್ಟಿರುವ ಭಕ್ತಿ ಪ್ರೇಮದ ಕಾಣಿಕೆಯಾಗಿ ಇವರಿಗೆ ನೂರಾರು ತುಲಾಭಾರ ಸೇವೆಗಳು ಜರುಗಿವೆ.
ಬಡವ-ಬಲ್ಲಿದರ, ದೀನ-ದಲಿತರ ಕಣ್ಮಣಿಗಳು, ಪುಣ್ಯಾಶ್ರಮದ ಸರ್ವಾಂಗೀಣ ಅಭಿವೃದ್ಧಿಯ ಹರಿಕಾರರು, ಅವಳಿ ನಗರದ ಪುಣ್ಯಧಾಮ, ಸಂಗೀತ ಕಾಶಿ ಸುಕ್ಷೇತ್ರ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾಗಿರುವ ಪರಮಪೂಜ್ಯ ಶ್ರೀ ಡಾ.ಕಲ್ಲಯ್ಯಜ್ಜನವರ 55ನೇ ವರ್ಷದ ಜನ್ಮದಿನದ ಸಂಭ್ರಮಾಚರಣೆಯು ಜುಲೈ 3ರಂದು ಸಂಜೆ 6 ಗಂಟೆಗೆ ಶ್ರೀ ವೀರೇಶ್ವರ ಪುಣ್ಯಾಶ್ರಮದ ಶ್ರೀಗುರು ಪುಟ್ಟರಾಜ ಕಲಾಭವನದಲ್ಲಿ ಜರುಗಲಿದೆ.
ಈ ಕಾರ್ಯಕ್ರಮದಲ್ಲಿ ಕಪೋತಗಿರಿ ನಂದಿವೇರಿ ಸಂಸ್ಥಾನ ಮಠದ ಪೂಜ್ಯಶ್ರೀ ಶಿವಕುಮಾರ ಮಹಾಸ್ವಾಮಿಗಳು ಹಾಗೂ ಲಿಂಗಸೂರ ಮಾಣಿಕೇಶ್ವರಿ ಆಶ್ರಮದ ಪೂಜ್ಯಶ್ರೀ ಶಿವಶರಣೆ ನಂದೀಶ್ವರಿ ಅಮ್ಮನವರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.
2001ರ ಸೆಪ್ಟಂಬರ್ 17ರಂದು ಪಂ. ಪುಟ್ಟರಾಜ ಕವಿ ಗುರುಗಳ ಅಪ್ಪಣೆಯ ಮೇರೆಗೆ ಶ್ರೀ ವೀರೇಶ್ವರ ಪುಣ್ಯಾಶ್ರಮಕ್ಕೆ ಮರಳಿ ಬಂದು ಹೆಚ್ಚಿನ ಸಂಗೀತ ವಿದ್ಯಾಭ್ಯಾಸ ಪಡೆದರು. ಪೂಜ್ಯಶ್ರೀ ಪಂ. ಪುಟ್ಟರಾಜ ಕವಿ ಗವಾಯಿಗಳವರ ನಂತರ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾಗಿ ಆಶ್ರಮವನ್ನು ಮುನ್ನಡೆಸುತ್ತಿದ್ದಾರೆ.