Home Blog Page 101

ಸಿಜೆ ರಾಯ್ ಡೈರಿಯಲ್ಲಿ ನಟಿಯರು–ರಾಜಕಾರಣಿಗಳ ಹೆಸರು! ಆತ್ಮಹತ್ಯೆ ಹಿಂದಿದೆಯಾ ಬೇರೆಯದ್ದೇ ರಹಸ್ಯ?

0

ಬೆಂಗಳೂರು: ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್‌ ಮ್ಯಾನೇಜಿಂಗ್ ಡೈರೆಕ್ಟರ್ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದಲ್ಲಿ ಹೊಸ ಹೊಸ ಅನುಮಾನಗಳು ಮೂಡುತ್ತಿವೆ. ಆತ್ಮಹತ್ಯೆಗೆ ಮುನ್ನ ಅವರು ಯಾರೊಂದಿಗೆ ಮಾತನಾಡಿದ್ದರು? ಅಥವಾ ಯಾರಿಗಾದರೂ ಮೆಸೇಜ್ ಕಳುಹಿಸಿದ್ದರಾ? ಎಂಬ ಅಂಶಗಳ ಬಗ್ಗೆ ಪೊಲೀಸರು ಸವಿಸ್ತಾರ ತನಿಖೆ ನಡೆಸುತ್ತಿದ್ದಾರೆ.

ಕಾನ್ಫಿಡೆಂಟ್ ಗ್ರೂಪ್ ಎಂಡಿ ನೀಡಿದ ದೂರಿನ ಪ್ರಕಾರ, ಆತ್ಮಹತ್ಯೆಗೆ ಮುನ್ನ ರಾಯ್ ತಮ್ಮ ತಾಯಿಯೊಂದಿಗೆ ಮಾತನಾಡಬೇಕೆಂದು ಹೇಳಿದ್ದಾರೆ. ಅಲ್ಲದೆ, ತಮ್ಮ ಗನ್‌ಮ್ಯಾನ್‌ಗೆ ಯಾರನ್ನೂ ಒಳಗೆ ಬಿಡದಂತೆ ಸೂಚಿಸಿದ್ದರು. ಆದರೆ, ಆತ್ಮಹತ್ಯೆಗೆ ಮುನ್ನ ನಿಜಕ್ಕೂ ತಾಯಿಯೊಂದಿಗೆ ಮಾತನಾಡಿದರೋ ಅಥವಾ ಬೇರೆ ಯಾರೊಂದಿಗಾದರೂ ಸಂಪರ್ಕ ಹೊಂದಿದ್ದರೋ ಎಂಬುದು ಸದ್ಯ ಪೊಲೀಸರ ಪ್ರಮುಖ ಅನುಮಾನವಾಗಿದೆ.

ಈ ಹಿನ್ನೆಲೆಯಲ್ಲಿ ರಾಯ್ ಬಳಿಯಿದ್ದ ಐಫೋನ್ ಹಾಗೂ ಆ್ಯಂಡ್ರಾಯ್ಡ್ ಸೇರಿ ಎರಡು ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದು ಸಿಐಡಿ ಸೈಬರ್ ಸೆಲ್‌ಗೆ ರವಾನಿಸಿದ್ದಾರೆ. ಎರಡೂ ಮೊಬೈಲ್‌ಗಳಿಗೆ ಪಾಸ್‌ವರ್ಡ್ ಇರುವುದರಿಂದ ಕೋರ್ಟ್ ಅನುಮತಿ ಪಡೆದು ಎಫ್‌ಎಸ್‌ಎಲ್‌ಗೆ ಕಳುಹಿಸುವ ಅಗತ್ಯವಿದೆ. ಸದ್ಯ ಸೈಬರ್ ಸೆಲ್ ಮೂಲಕ ಮೊಬೈಲ್ ಡೇಟಾ ರಿಕವರಿ ಪ್ರಕ್ರಿಯೆ ಆರಂಭಿಸಲಾಗಿದೆ.

ಇನ್ನೂ ನಿನ್ನೆ (ಜ.31) ರಾತ್ರಿ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಪತ್ತೆಯಾದ ಸಿಜೆ ರಾಯ್ ಅವರ ಡೈರಿಯನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಡೈರಿಯಲ್ಲಿ ಕೆಲ ನಟಿಯರು, ಮಾಡೆಲ್‌ಗಳು ಹಾಗೂ ರಾಜಕಾರಣಿಗಳ ಹೆಸರುಗಳು ದಾಖಲಾಗಿರುವುದು ಪತ್ತೆಯಾಗಿದೆ. ಈ ಹೆಸರುಗಳು ಕೇವಲ ಈವೆಂಟ್ ಅಥವಾ ವೃತ್ತಿಪರ ವಿಚಾರಕ್ಕೆ ಸಂಬಂಧಿಸಿದ್ದೇ? ಅಥವಾ ಬೇರೆ ಹಿನ್ನೆಲೆ ಇದೆಯೇ? ಎಂಬುದರ ಬಗ್ಗೆ ಪೊಲೀಸರು ಇಂಚಿಂಚೂ ಪರಿಶೀಲನೆ ನಡೆಸುತ್ತಿದ್ದಾರೆ.

CJ Roy: ಡಾ. ಸಿ.ಜೆ. ರಾಯ್ ಇಚ್ಛೆಯಂತೆ ಬನ್ನೇರುಘಟ್ಟದಲ್ಲಿ ಅಂತ್ಯಸಂಸ್ಕಾರ!

0

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಡಾ. ಸಿ.ಜೆ. ರಾಯ್ ಅವರ ಇಚ್ಛೆಯಂತೆ ಬನ್ನೇರುಘಟ್ಟದ ಕಾಸಾಗ್ರ್ಯಾಂಡ್ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹಿಂದೆ ತಮ್ಮ ಆಪ್ತರ ಬಳಿ ವ್ಯಕ್ತಪಡಿಸಿದ್ದ ಆಶಯದಂತೆ, ಡಾ. ಸಿ.ಜೆ. ರಾಯ್ ಅವರ ಅಂತ್ಯಸಂಸ್ಕಾರವನ್ನು ಬನ್ನೇರುಘಟ್ಟದ ಕಾಸಾಗ್ರ್ಯಾಂಡ್ನಲ್ಲಿ ನೆರವೇರಿಸಲಾಗುತ್ತದೆ. ಮೃತ ರಾಯ್ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಕೋರಮಂಗಲದಲ್ಲಿರುವ ವೈಟ್ ಹೌಸ್ನಲ್ಲಿ ಇಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ವೈಟ್ ಗೋಲ್ಡ್ ಸಂಸ್ಥೆಯ ಮಾಲೀಕ ಹಾಗೂ ರಾಯ್ ಅವರ ಸಹೋದರ ಬಾಬು ಜೋಸೆಫ  ಒಡೆತನದ  ನಿವಾಸದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಡಾ. ಸಿ.ಜೆ. ರಾಯ್ ಅವರ ಅಂತ್ಯಕ್ರಿಯೆ ಇಂದು ಸಂಜೆ ಬನ್ನೇರುಘಟ್ಟದ ಕಾಸಾಗ್ರ್ಯಾಂಡ್ನಲ್ಲಿ ನಡೆಯುವ ಸಾಧ್ಯತೆ ಇದ್ದು, ನಾಡಿನ ಪ್ರಮುಖ ಉದ್ಯಮಿಗಳು, ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ನಾಯಕರು ಭಾಗವಹಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಉತ್ಖನನ ಧೂಳಿಗೆ ಶಾಲಾ ಮಕ್ಕಳ ಆರೋಗ್ಯ ಹಾಳು! ಲಕ್ಕುಂಡಿಯಲ್ಲಿ ಎಲ್‌ಕೆಜಿ–ಯುಕೆಜಿ ಪುಟಾಣಿಗಳಲ್ಲಿ ಅನಾರೋಗ್ಯ, ಪೋಷಕರ ಆಕ್ರೋಶ

0

ಗದಗ: ಜಿಲ್ಲೆಯ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯದಿಂದ ಉಂಟಾದ ಧೂಳಿನ ಪರಿಣಾಮ ಶಾಲಾ ಮಕ್ಕಳು ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.

ಲಕ್ಕುಂಡಿ ಕೋಟೆಯ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಇರುವ ಸ್ವಾಮಿ ವಿವೇಕಾನಂದ ಖಾಸಗಿ ಶಾಲೆಯ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಯ ಪುಟ್ಟಪುಟ್ಟ ಮಕ್ಕಳು ಉತ್ಖನನ ಧೂಳಿನಿಂದ ಅಸ್ವಸ್ಥರಾಗಿದ್ದಾರೆ.

ಧೂಳಿನ ಪರಿಣಾಮ ಮಕ್ಕಳಿಗೆ ವಾಂತಿ, ಜ್ವರ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಹಲವು ಮಕ್ಕಳು ಡಸ್ಟ್ ಅಲರ್ಜಿಯಿಂದ ನರಳುತ್ತಿದ್ದಾರೆ. ಅನಾರೋಗ್ಯದ ಕಾರಣದಿಂದಾಗಿ ಕೆಲ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಲು ಸಾಧ್ಯವಾಗಿಲ್ಲ.

ಉತ್ಖನನದಿಂದ ನಿರಂತರವಾಗಿ ಏಳುತ್ತಿರುವ ಧೂಳು ಮಕ್ಕಳ ಆರೋಗ್ಯಕ್ಕೆ ಗಂಭೀರ ಅಪಾಯ ತಂದೊಡ್ಡಿದೆ ಎಂಬ ಆರೋಪ ಪೋಷಕರಿಂದ ಕೇಳಿಬಂದಿದೆ. ಶಾಲಾ ಆವರಣದ ಬಳಿ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೇ ಉತ್ಖನನ ನಡೆಸುತ್ತಿರುವ ಅಧಿಕಾರಿಗಳ ವಿರುದ್ಧ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಪುಟ್ಟ ಮಕ್ಕಳ ಆರೋಗ್ಯದ ಬಗ್ಗೆ ಯಾರಿಗೂ ಕಾಳಜಿ ಇಲ್ಲವೇ?” ಎಂದು ಪ್ರಶ್ನಿಸಿರುವ ಪೋಷಕರು, ತಕ್ಷಣವೇ ಉತ್ಖನನ ಕಾರ್ಯ ನಿಲ್ಲಿಸಿ ಮಕ್ಕಳಿಗೆ ಸುರಕ್ಷಿತ ವಾತಾವರಣ ಒದಗಿಸುವಂತೆ ಆಗ್ರಹಿಸಿದ್ದಾರೆ.
ಘಟನೆ ಕುರಿತು ಸಂಬಂಧಿಸಿದ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಿದ್ದು, ಮಕ್ಕಳ ಆರೋಗ್ಯದ ರಕ್ಷಣೆಗಾಗಿ ತುರ್ತು ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ಎದುರಾಗಿದೆ.

ಸತ್ಯಕ್ಕೆ ಗೌರವ ಕೊಡ್ತೇನೆ, ನಾನು ಕಳ್ಳತನ ಮಾಡಿಲ್ಲ, ಕೊಲೆ ಮಾಡಿಲ್ಲ: ರಾಜೀವ್ ಗೌಡ ಫಸ್ಟ್ ರಿಯಾಕ್ಷನ್

0

ಚಿಕ್ಕಬಳ್ಳಾಪುರ: ಜೈಲಿಂದ ಬಿಡುಗಡೆ ಬಳಿಕ ಉಚ್ಛಾಟಿತ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದು, ಸತ್ಯಕ್ಕೆ ಗೌರವ ಕೊಡ್ತೇನೆ, ನಾನು ಕಳ್ಳತನ ಮಾಡಿಲ್ಲ, ಕೊಲೆ ಮಾಡಿಲ್ಲ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಆರೋಪಿಸಿದರು.

ಶಿಡ್ಲಘಟ್ಟ ನನ್ನ ಕರ್ಮಭೂಮಿ ಎಂದು ಹೇಳಿದ ರಾಜೀವ್ ಗೌಡ, ಇಲ್ಲಿನ ಜನರಿಗಾಗಿ ಮಾಡಿದ ಹೋರಾಟ ಮತ್ತು ತ್ಯಾಗವೇ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ. ಆದ್ರೂ ಕೂಡ ಮುಂದಿನ ದಿನಗಳಲ್ಲಿಯೂ ಜನರಿಗಾಗಿ ಹೋರಾಟ ಮಾಡುತ್ತೇನೆ ಎಂದರು.

ಇನ್ನೂ ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಜೀವ್ ಗೌಡ, ತಾವು ಎಲ್ಲಿಯೂ ಕೂಡ ಪಕ್ಷದ ವಿಚಾರವಾಗಿ ಮಾತನಾಡಿಲ್ಲ ಎಂದು ಹೇಳಿದರು. ಈ ಕುರಿತು ಹೈಕಮ್ಯಾಂಡ್ ಬಳಿ ತೆರಳಿ ಮನವಿ ಮಾಡುವುದಾಗಿ ತಿಳಿಸಿದರು. ದೇವರು ಇದ್ದಾನೆ ಎಂದು ಹೇಳಿದ ರಾಜೀವ್ ಗೌಡ, ಅವರು ಮಾಡಿದ ಕರ್ಮವನ್ನು ಅವರು ಅನುಭವಿಸುತ್ತಾರೆ ಎಂದರು. ತಾವು ಅನುಭವಿಸಿದ ನೋವನ್ನು ಪಿತೂರಿ ಮಾಡಿದವರು ಅನುಭವಿಸುತ್ತಾರೆ ಎಂದು ಹೇಳಿದರು.

ಪೌರಾಯುಕ್ತೆ ಬೆದರಿಕೆ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ ಅವರು, ತಾವು ಮಾತನಾಡಿದ್ದು ಬೇರೆ ಉದ್ದೇಶದಿಂದ, ಆದರೆ ಅದನ್ನು ಬೇರೆ ರೀತಿಯಲ್ಲಿ ಪ್ರಚಾರ ಮಾಡಲಾಗಿದೆ ಎಂದರು. ಕಾರಣಾಂತರಗಳಿಂದ ಆ ರೀತಿಯಲ್ಲಿ ಆಗಿದೆ ಎಂದು ಹೇಳಿದರು. ಪೌರಾಯುಕ್ತೆಯೊಂದಿಗೆ ನಡೆದ ಮಾತುಕತೆ ವೈಯಕ್ತಿಕ ಉದ್ದೇಶದಿಂದಲ್ಲ, ಸಂಪೂರ್ಣವಾಗಿ ಜನರಿಗಾಗಿ ಎಂದು ಸ್ಪಷ್ಟಪಡಿಸಿದರು.

ಉದ್ಯಮಿ ರಾಯ್ ಆತ್ಮಹತ್ಯೆ ಬಗ್ಗೆ ತನಿಖೆ ನಡೆಸಿ, ಸತ್ಯಾಂಶ ಬಹಿರಂಗ ಮಾಡಲಾಗುವುದು: ಡಿ.ಕೆ. ಶಿವಕುಮಾರ್

0

ಕನಕಪುರ: “ಉದ್ಯಮಿ ಸಿ.ಜೆ. ರಾಯ್ ಅವರ ಸಾವಿನ ಪ್ರಕರಣವನ್ನು ತನಿಖೆ ಮಾಡಿಸಿ, ಸತ್ಯಾಂಶವನ್ನು ಬಹಿರಂಗಗೊಳಿಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು. ಕನಕೋತ್ಸವದ ವೇಳೆ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.

ರಾಯ್ ಅವರ ಸಾವಿನ ಬಗ್ಗೆ ಕೇಳಿದಾಗ, “ಅಧಿಕಾರಿಗಳು ಅನೇಕ ಪ್ರಶ್ನೆ ಕೇಳುವಾಗ, ಐದು ನಿಮಿಷ ಸಮಯ ನೀಡಿ ಎಂದು ಹೇಳಿ ಈ ರೀತಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಬಂದಿದೆ. ಕೇರಳದಿಂದ ವಿಚಾರಣೆಗೆ ಒಂದು ತಂಡ ಬಂದಿತ್ತು ಎಂಬ ಮಾಹಿತಿ ಇದೆ.

ಈ ಬಗ್ಗೆ ದೆಹಲಿಯಿಂದಲೂ ವರದಿ ಕೇಳಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ. ರಾಯ್ ಅವರು ಒಳ್ಳೆಯ ಉದ್ಯಮಿಗಳಾಗಿದ್ದರು, ಈ ರೀತಿ ಆಗಬಾರದಿತ್ತು” ಎಂದು ಪ್ರತಿಕ್ರಿಯಿಸಿದರು.

ಒತ್ತಡ ನಿವಾರಣೆಗೆ ನೌಕರರು ಕ್ರೀಡೆಗಳಲ್ಲಿ ಪಾಲ್ಗೊಳ್ಳಿ: ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡಿರುವ ಸರ್ಕಾರಿ ನೌಕರರಿಗೆ ನಿರಂತರ ಕಾರ್ಯದಿಂದಾಗಿ ಮಾನಸಿಕ ಮತ್ತು ದೈಹಿಕ ಒತ್ತಡಗಳು ಉಂಟಾಗುವುದು ಸಾಮಾನ್ಯ. ಇವುಗಳ ನಿಯಂತ್ರಣ ಮತ್ತು ಆರೋಗ್ಯಕರ ಜೀವನ ಮತ್ತು ಗುಣಮಟ್ಟದ ಸೇವೆಗಾಗಿ ಪ್ರತಿಯೊಬ್ಬ ಸರ್ಕಾರಿ ಅಧಿಕಾರಿ ಮತ್ತು ನೌಕರರು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ಮತ್ತು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಪ್ರಭಾರ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಹೇಳಿದರು.

ಅವರು ಶುಕ್ರವಾರ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಧಾರವಾಡ ಜಿಲ್ಲಾ ಘಟದಿಂದ ಆಯೋಜಿಸಿದ್ದ 2026-27ನೇ ಸಾಲಿನ ಜಿಲ್ಲಾ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ನೌಕರರು ಕಚೇರಿ ಕೆಲಸಕ್ಕೆ ಸೀಮಿತರಾಗದೇ, ಕ್ರೀಡೆ, ಸಾಂಸ್ಕೃತಿಕ ಕಾರ್ಯಚಟುವಟಿಕೆಗಳಲ್ಲಿ ನಿರಂತರವಾಗಿ ಭಾಗವಹಿಸಬೇಕು. ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಬೇಕು ಮತ್ತು ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ರಾಜ್ಯ ಸರಕಾರವು ಸರ್ಕಾರಿ ನೌಕರರ ಆರೋಗ್ಯ ಸಂರಕ್ಷಣೆ ಹಾಗೂ ಸಕಾಲದಲ್ಲಿ ಸಹಾಯಕ್ಕಾಗಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಎಲ್ಲ ಸರ್ಕಾರಿ ನೌಕರರು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ನೌಕರರ ಕ್ರೀಡೆ, ಸಾಂಸ್ಕೃತಿಕ ಕಾರ್ಯಗಳಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆಯಿಂದ ಅನುದಾನ, ಅಗತ್ಯ ಸೌಕರ್ಯಗಳನ್ನು ಪೂರೈಸಿ, ಪ್ರೋತ್ಸಾಹ ನೀಡಲಾಗುತ್ತಿದೆ. ನೌಕರರ ನಿರಂತರ ಶ್ರಮ ಹಾಗೂ ಕಾರ್ಯ ವೈಖರಿಯಿಂದ ಸರ್ಕಾರಿ ಸೇವೆಗಳು ಸಾರ್ವಜನಿಕರಿಗೆ ತಲುಪುತ್ತಿವೆ. ನೌಕರರು ಶಿಸ್ತು, ಸಂಯಮದಿಂದ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ ಪೂರ್ಣಿಮಾ ನಾಯ್ಡು ಹಾಗೂ ವಿರೇಶ ಬ್ಯಾಹಟ್ಟಿ ಮಾತನಾಡಿದರು. ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸೊಲಗಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ರಮೇಶ ಲಿಂಗದಾಳ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಕಾರ್ಯದರ್ಶಿ ಸುರೇಶ ಜಟ್ಟೆನ್ನವರ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕ್ರೀಡಾ ಕಾರ್ಯದರ್ಶಿ ಪಿ.ಎಫ್. ಗುಡೇನಕಟ್ಟಿ ವಂದಿಸಿದರು.

ಕಾರ್ಯಕ್ರಮದಲ್ಲಿ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಭಾಗವಹಿಸಿ, ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಧಾರವಾಡ ತಹಸೀಲ್ದಾರ ಡಾ. ಡಿ.ಎಚ್. ಹೂಗಾರ, ಧಾರವಾಡ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಂಗಾಧರ ಕಂದಕೂರ, ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕ ಮೋಹನ ಶಿವಣ್ಣನವರ, ಧಾರವಾಡ ಗ್ರಾಮೀಣ ಮತ್ತು ನಗರ ಕ್ಷೇತ್ರಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸದಾನಂದ ಅಮರಾಪುರ, ಸಂಘದ ಗೌರವಾಧ್ಯಕ್ಷ ಪ್ರಕಾಶ ಹಳಪೇಟ, ರಾಜ್ಯ ಪರಿಷತ್ ಸದಸ್ಯ ದೇವಿದಾಸ ಶಾಂತಿಕರ, ಖಜಾಂಚಿ ಮಂಜುನಾಥ ಯಡಹಳ್ಳಿ, ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ ಹೊಲ್ತಿಕೋಟಿ, ನೌಕರ ಸಂಘದ ತಾಲೂಕುಗಳ ಅಧ್ಯಕ್ಷರಾದ ವಿ.ಎಫ್. ಚುಳಕಿ, ಡಾ. ಪ್ರಲ್ಹಾದ ಗೆಜ್ಜಿ, ಜಗದೀಶ ವಿರಕ್ತಮಠ, ವಿಠ್ಠಲ ರಂಗಣ್ಣವರ, ಎಂ.ಎ. ತಹಸೀಲ್ದಾರ, ಮುತ್ತಪ್ಪ ಅಣ್ಣಿಗೇರಿ, ಹಿರಿಯ ಉಪಾಧ್ಯಕ್ಷರಾದ ರಾಜಶೇಖರ ಕೋನರಡ್ಡಿ, ರಾಜಶೇಖರ ಹೊನ್ನಪ್ಪನವರ, ಗಿರೀಶ ಚೌಡಕಿ, ಡಾ. ಸುರೇಶ ಹಿರೇಮಠ, ಮಿಲಿಂದಕುಮಾರ್ ಎಂ.ನಾಯ್ಕ, ಕ್ರೀಡಾ ಕಾರ್ಯದರ್ಶಿಗಳಾದ ಸುರೇಶ ಜಟ್ಟೆನ್ನವರ, ಪಿ.ಎಫ್. ಗುಡೇನಕಟ್ಟಿ, ಅಯ್ಯಪ್ಪ ಮೊಖಾಶಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಪಿ.ಬಿ. ಕುರಬೆಟ್, ಚಂದ್ರಶೇಖರ ತಿಗಡಿ ಇದ್ದರು.

ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಕ್ರೀಡಾಕೂಟದ ಧ್ವಜಾರೋಹಣ ನೇರವೇರಿಸಿದರು. ಮಹಾಪೌರರಾದ ಜ್ಯೋತಿ ಪಾಟೀಲ ಪಾರಿವಾಳ ಹಾರಿ ಬಿಟ್ಟರು. ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಎಸ್.ಆರ್. ಪಾಟೀಲ ಕ್ರೀಡಾಪಟು ಯಲ್ಲೂನಾಯಕ ಹಮಾಣಿ ಅವರ ತಂಡದಿಂದ ಕ್ರೀಡಾಜ್ಯೋತಿ ಸ್ವೀಕರಿಸಿದರು.

ಮಹಾಪೌರರಾದ ಜ್ಯೋತಿ ಪಾಟೀಲ ಮಾತನಾಡಿ, ಸರಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಮುಖ್ಯವಾಗಿದೆ. ಇಂದಿನ ಜನಕಲ್ಯಾಣ ಸರಕಾರಗಳು ಜನಸಾಮಾನ್ಯರ ಸಮಗ್ರ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿವೆ. ಅವುಗಳನ್ನು ಅರ್ಹರಿಗೆ ತಲುಪಿಸುವ ಮೂಲಕ ನಿಗದಿತ ಗುರಿ ಸಾಧಿಸಬೇಕು ಎಂದು ಹೇಳಿದರು.

ಕ್ರೀಡೆಯಿಂದ ಶಿಸ್ತು, ಚಾರಿತ್ರ್ಯ ವೃದ್ಧಿ: ಸಂಸದ ಬಸವರಾಜ ಬೊಮ್ಮಾಯಿ

0

ವಿಜಯಸಾಕ್ಷಿ ಸುದ್ದಿ, ಹಾವೇರಿ: ಜೀವನದಲ್ಲಿ ಯಾರು ಕ್ರೀಡೆಯನ್ನು ಮುಂದುವರೆಸಿಕೊಂಡು ಹೋಗುತ್ತಾರೆಯೋ ಅವರು ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯವಾಗಿರುತ್ತಾರೆ. ಅಷ್ಟೇ ಅಲ್ಲ, ಎಂಥಹ ಸಂದರ್ಭದಲ್ಲಿಯೂ ಸುಖ-ದುಃಖವನ್ನು ಸಮನಾಗಿ ಸ್ವೀಕರಿಸುವ ಚೈತನ್ಯ ಕ್ರೀಡಾ ಮನೋಭಾವದಿಂದ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ–ಗದಗ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಶುಕ್ರವಾರ ಹಾವೇರಿ ಜಿಲ್ಲೆಯ ಹಾನಗಲ್ಲ ನಗರದ ಜನತಾ ಶಿಕ್ಷಣ ಸಂಸ್ಥೆಯ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಸಂಸದ ಕ್ರೀಡಾ ಮಹೋತ್ಸವ 2025–26ರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಸಣ್ಣವರಿದ್ದಾಗ ಎಲ್ಲರೂ ಒಂದಿಲ್ಲೊಂದು ಕ್ರೀಡೆಯಲ್ಲಿ ತೊಡಗಿಸಿಕೊಂಡಿರುತ್ತೇವೆ. ಆದರೆ, ಅದನ್ನು ಮುಂದುವರೆಸಿಕೊಂಡು ಹೋಗುವುದಿಲ್ಲ. ಕ್ರೀಡೆಯೊಂದಿಗಿನ ನಂಟು ಜೀವನದ ಅರ್ಧದಲ್ಲಿಯೇ ನಿಂತು ಹೋಗುತ್ತದೆ. ಕ್ರೀಡೆಗೆ ವಯಸ್ಸಿನ ಮಿತಿ ಇಲ್ಲ ಎಂದು ಇಲ್ಲಿಗೆ ಬಂದಾಗಲೇ ಗೊತ್ತಾಯಿತು. ವೈಭವಿ ಮಹಿಳಾ ಮಂಡಳದವರು ಸ್ಫೂರ್ತಿಯಿಂದ, ಬಹಳ ಉತ್ಸಾಹದಿಂದ ಆಡಿದರು. ಮನಸ್ಸಿದ್ದರೆ ಕ್ರೀಡೆಯನ್ನು ಯಾವ ವಯಸ್ಸಿನಲ್ಲಿಯಾದರೂ ಆಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದೀರಿ. ಇಡೀ ದಿನ ಎಲ್ಲರೂ ಸಕ್ರಿಯರಾಗಿ ಕ್ರೀಡೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಿದರು.

ಕ್ರೀಡೆಯಿಂದ ಶಿಸ್ತು, ಚಾರಿತ್ರ್ಯ ಬರುತ್ತದೆ. ಅದಕ್ಕೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಕ್ರೀಡೆಗೂ ಅಷ್ಟೇ ಮಹತ್ವ ಕೊಟ್ಟಿದ್ದಾರೆ. ಮೊದಲು ಫಿಟ್ ಇಂಡಿಯಾ, ನಂತರ ಖೇಲೋ ಇಂಡಿಯಾ, ಓಲಿಂಪಿಕ್ಸ್ ಬಂದಾಗ ಜೀತೋ ಇಂಡಿಯಾ ಇತ್ಯಾದಿಗಳ ಪರಿಣಾಮದಿಂದ ಟೋಕಿಯೋ ಓಲಿಂಪಿಕ್ಸ್‌ನಲ್ಲಿ ಭಾರತ ಹಿಂದೆಂದಿಗಿಂತಲೂ ಹೆಚ್ಚು ಪದಕಗಳನ್ನು ಗೆಲ್ಲಲು ಸಾಧ್ಯವಾಯಿತು. ಸಂಸದರ ಕ್ರೀಡಾ ಮಹೋತ್ಸವ ಬಹಳ ಯಶಸ್ವಿಯಾಗಿ ಜಿಲ್ಲೆಯಾದ್ಯಂತ ಕ್ರೀಡಾ ಸ್ಫೂರ್ತಿಯನ್ನು ಹುಟ್ಟುಹಾಕಿದೆ. ಮುಂದಿನ ವರ್ಷ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಕೊಟ್ಟು ಉತ್ತಮ ರೀತಿಯಲ್ಲಿ ನಡೆಸೋಣ ಎಂದು ಹೇಳಿದರು.

ಈ ಕ್ರೀಡೆ ಅತ್ಯಂತ ಯಶಸ್ವಿಯಾಗಲು ಕಾರಣರಾಗಿರುವ ಪಕ್ಷದ ಎಲ್ಲ ಮುಖಂಡರಿಗೆ, ಕ್ರೀಡಾಪಟುಗಳು, ರೆಫ್ರಿಯಾಗಿ ಬಂದಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶಿವರಾಜ ಸಜ್ಜನ, ಭಾರತೀಯ ಜನತಾ ಪಕ್ಷದ ಮಂಡಳದ ಅಧ್ಯಕ್ಷರಾದ ಮಹೇಶಕುಮಾರ ಕಮಡೊಳ್ಳಿ, ಮುಖಂಡರಾದ ಪದ್ಮನಾಭ ಕುಂದಾಪೂರ, ಬಿ.ಎಸ್. ಅಕ್ಕಿವಳ್ಳಿ, ಭೋಜರಾಜ ಕರೂದಿ, ಕಲ್ಯಾಣಕುಮಾರ ಶೆಟ್ಟರ, ರಾಘವೇಂದ್ರ ತಹಸೀಲ್ದಾರ, ಮಾಲತೇಶ ಸೊಪ್ಪಿನ, ಕೃಷ್ಣಾ ಇಳಿಗೇರ, ರಾಜಶೇಖರಗೌಡ ಕಟ್ಟೆಗೌಡ್ರ, ಚಂದ್ರಪ್ಪ ಹರಿಜನ, ಸಿದ್ದಲಿಂಗಪ್ಪ ಕಮಡೊಳ್ಳಿ, ಶಿವಲಿಂಗಪ್ಪ ತಲ್ಲೂರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಕ್ರೀಡೆ ಜೀವನಕ್ಕೆ ಬಹಳ ಹತ್ತಿರ. ಸೋಲಬಾರದು ಎಂದು ಆಡುವುದು ಅಂದರೆ ಒಂದು ರಕ್ಷಣಾತ್ಮಕ ಆಟ, ಇನ್ನೊಂದು ಗೆಲ್ಲಲೇಬೇಕೆಂದು ಆಡುವುದು ಆಕ್ರಮಣಕಾರಿ ಆಟ. ಬದುಕಿನಲ್ಲಿ ಗೆಲ್ಲಲೇಬೇಕೆಂದು ಆಟ ಆಡಬೇಕು, ಅಂದಾಗ ಮಾತ್ರ ಯಶಸ್ಸು ಸಿಗುತ್ತದೆ. ಸಕಾರಾತ್ಮಕ ಮನಸ್ಸು, ಕಠಿಣ ಪರಿಶ್ರಮ, ಗುರಿ ಇದ್ದರೆ ಯಶಸ್ಸು ಸಾಧ್ಯ ಎಂದು ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಸಭೆಗೆ ಗೈರು: ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ್ ಪಾಂಡೆ ವರ್ಗಾವಣೆ – ಸರ್ಕಾರ ಆದೇಶ

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಭೆಗೆ ಗೈರಾಗಿದ್ದ ವಿಚಾರಕ್ಕೆ ಸಂಬಂಧಿಸಿ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಪಂಕಜ್ ಕುಮಾರ್ ಪಾಂಡೆ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಪಾಂಡೆ ಅವರನ್ನು ಡಿಪಿಎಆರ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಇದೇ ವೇಳೆ BWSSB ಚೇರ್ಮನ್ ಡಾ. ರಾಮ್ ಪ್ರಸಾತ್ ಮನೋಹರ್ ಅವರಿಗೆ ಕೆಪಿಟಿಸಿಎಲ್ ಎಂಡಿಯ ಹೆಚ್ಚುವರಿ ಹೊಣೆ ನೀಡಲಾಗಿದೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದಿದ್ದ ಮಹತ್ವದ ಸಭೆಗೆ ಪಂಕಜ್ ಕುಮಾರ್ ಪಾಂಡೆ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಂದ ನೋಟಿಸ್ ಕೂಡ ನೀಡಲಾಗಿತ್ತು. ಸಭೆಗೆ ಗೈರಾಗಿದ್ದ ಕಾರಣ ಶಿಸ್ತು ಕ್ರಮ ಕೈಗೊಳ್ಳುವ ಚಿಂತನೆಯಲ್ಲೂ ಸರ್ಕಾರ ಇತ್ತು.

ಆದರೆ ಸಚಿವ ಕೆ.ಜೆ. ಜಾರ್ಜ್ ಹಿರಿಯ ಐಎಎಸ್ ಅಧಿಕಾರಿ ಪಾಂಡೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಪಾಂಡೆ ವಿರುದ್ಧ ಕ್ರಮ ಕೈಗೊಂಡರೆ ತಾವು ರಾಜೀನಾಮೆ ನೀಡುವುದಾಗಿ ಜಾರ್ಜ್ ಹೇಳಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಬಂದಿದ್ದವು.

ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಸ್ತು ಕ್ರಮ ಕೈಬಿಟ್ಟು, ವರ್ಗಾವಣೆ ಅಸ್ತ್ರ ಪ್ರಯೋಗಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಯುವಕರಿಗೆ ಸ್ಫೂರ್ತಿಯಾಗಿದ್ದ ಸಿ.ಜೆ. ರಾಯ್: ಸಾವಿರಾರು ಕೋಟಿ ಒಡೆಯ ಸಾವಿಗೆ ಶರಣಾಗಿದ್ದು ಏಕೆ?

0

ಬೆಂಗಳೂರು: ಕೇರಳ ಮೂಲದ ಖ್ಯಾತ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್ ಸಿಇಒ ಸಿ.ಜೆ. ರಾಯ್ ಅವರು ಶುಕ್ರವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮುಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ಸಂಚಲನ ಮೂಡಿಸಿದೆ. ಪದೇಪದೇ ಐಟಿ ಇಲಾಖೆ ದಾಳಿಯಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ಈ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ.

ಬೆಂಗಳೂರು ನಗರದಲ್ಲಿ ಸಿ.ಜೆ. ರಾಯ್ ಹೆಸರಿನಲ್ಲಿ ಹಲವು ದೊಡ್ಡ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು ಇದ್ದವು. ಅವರ ಅಕಾಲಿಕ ಸಾವು ಉದ್ಯಮ ವಲಯದಲ್ಲಿ ಆಘಾತಕ್ಕೆ ಕಾರಣವಾಗಿದ್ದು, ಈ ಘಟನೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಶ್ರೀಮಂತ ಉದ್ಯಮಿ, ಬಹುಮುಖ ಸಾಧನೆ

ಸಿ.ಜೆ. ರಾಯ್ ಅವರು ಕಾನ್ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ಹಾಗೂ ಸಂಸ್ಥಾಪಕರಾಗಿದ್ದರು. ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದ ಅವರು, ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮ ವ್ಯಾಪಾರ ಸಾಮ್ರಾಜ್ಯವನ್ನು ವಿಸ್ತರಿಸಿದ್ದರು. ಜೊತೆಗೆ ಸ್ಲೋವಾಕ್ ಗಣರಾಜ್ಯದ ಗೌರವ ಕಾನ್ಸಲ್ ಆಗಿಯೂ ಕರ್ನಾಟಕ ಮತ್ತು ಕೇರಳದಲ್ಲಿ ಸೇವೆ ಸಲ್ಲಿಸಿದ್ದರು.

ಐಷಾರಾಮಿ ಕಾರುಗಳ ಸಂಗ್ರಹ

ಕಾರುಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ರಾಯ್, ದುಬೈ ಮತ್ತು ಭಾರತದಲ್ಲಿ ಹಲವು ದುಬಾರಿ ಐಷಾರಾಮಿ ಹಾಗೂ ಸ್ಪೋರ್ಟ್ಸ್ ಕಾರುಗಳನ್ನು ಹೊಂದಿದ್ದರು. ರೋಲ್ಸ್ ರಾಯ್ಸ್, ಲ್ಯಾಂಬೋರ್ಗಿನಿ, ಬುಗಾಟಿ ವೇರಾನ್ ಸೇರಿದಂತೆ ಅಪರೂಪದ ಕಾರುಗಳು ಅವರ ಸಂಗ್ರಹದಲ್ಲಿದ್ದವು.

ಚಿತ್ರ ನಿರ್ಮಾಣಕ್ಕೂ ಕೈಹಾಕಿದ್ದ ಉದ್ಯಮಿ

ಕಾನ್ಫಿಡೆಂಟ್ ಗ್ರೂಪ್ ಕೇವಲ ರಿಯಲ್ ಎಸ್ಟೇಟ್‌ಗೆ ಸೀಮಿತವಾಗಿರಲಿಲ್ಲ. ಸಿ.ಜೆ. ರಾಯ್ ಅವರ ಬಹುಮುಖ ಆಸಕ್ತಿಯಿಂದ ಸಂಸ್ಥೆ ವಿವಿಧ ಕ್ಷೇತ್ರಗಳಿಗೆ ವಿಸ್ತರಿಸಿತ್ತು. ಮಲಯಾಳಂ ಮತ್ತು ಕನ್ನಡದಲ್ಲಿ 11 ಚಿತ್ರಗಳನ್ನು ನಿರ್ಮಿಸಿದ್ದು, ‘ಮರಕ್ಕಾರ್’ ಎಂಬ ಅತಿ ದೊಡ್ಡ ಬಜೆಟ್‌ನ ಮಲಯಾಳಂ ಚಿತ್ರಕ್ಕೂ ಅವರು ನಿರ್ಮಾಪಕರಾಗಿದ್ದರು. 2006ರಲ್ಲಿ ‘ಐಡಿಯಾ ಸ್ಟಾರ್ ಸಿಂಗರ್’ ಜನಪ್ರಿಯ ಟಿವಿ ಕಾರ್ಯಕ್ರಮಕ್ಕೆ ಹಣಕಾಸು ಒದಗಿಸಿ ಕಾನ್ಫಿಡೆಂಟ್ ಗ್ರೂಪ್‌ನ್ನು ಪ್ರಚಾರ ಮಾಡಿದ್ದೂ ಗಮನಾರ್ಹ.

ಐಟಿ ದಾಳಿ ವೇಳೆ ನಡೆದ ದುರ್ಘಟನೆ

ಇಂದು ಬೆಳಗ್ಗೆ ಐಟಿ ಇಲಾಖೆ ಅಧಿಕಾರಿಗಳು ಎರಡು ಇನ್ನೋವಾ ಕಾರುಗಳಲ್ಲಿ ಬಂದ 8 ಸದಸ್ಯರ ತಂಡದೊಂದಿಗೆ ದಾಳಿ ನಡೆಸಿದ್ದರು. ಮಧ್ಯಾಹ್ನ ಕಚೇರಿಗೆ ಆಗಮಿಸಿದ ಸಿ.ಜೆ. ರಾಯ್ ಸುಮಾರು ಒಂದು ಗಂಟೆ ಕಾಲ ವಿಚಾರಣೆ ಎದುರಿಸಿದ್ದು, ಕೆಲ ದಾಖಲೆಗಳನ್ನು ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಬಳಿಕ ಮತ್ತಷ್ಟು ದಾಖಲೆ ತರಲು ರೂಮ್‌ಗೆ ತೆರಳಿದ ವೇಳೆ, ತಮ್ಮ ಪಿಸ್ತೂಲಿನಿಂದ ಎದೆಗೆ ಗುಂಡು ಹಾರಿಸಿಕೊಂಡಿದ್ದಾರೆ ಎನ್ನಲಾಗಿದೆ.

ಗುಂಡು ಹಾರಿಸಿದ ತಕ್ಷಣ ಐಟಿ ಅಧಿಕಾರಿಗಳು ಗನ್ ಕಿತ್ತುಕೊಂಡು ರಕ್ಷಣೆಗಾಗಿ ಪ್ರಯತ್ನಿಸಿದರೂ, ಅಷ್ಟರಲ್ಲಿ ರಾಯ್ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಹೆಚ್‌ಎಸ್‌ಆರ್ ಲೇಔಟ್‌ನ ನಾರಾಯಣ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ತನಿಖೆ ಮುಂದುವರಿಕೆ

ಘಟನೆಯ ಬಳಿಕ ಹಲವು ಅನುಮಾನಗಳು ಮೂಡಿವೆ. ಸಾಮಾನ್ಯವಾಗಿ ಐಟಿ ದಾಳಿ ವೇಳೆ ಅಗತ್ಯ ವಸ್ತುಗಳನ್ನು ವಶಕ್ಕೆ ಪಡೆಯಲಾಗುತ್ತದೆ. ಆದರೆ ರಾಯ್ ಬಳಿಯಿದ್ದ ಗನ್ ವಶಕ್ಕೆ ಪಡೆಯಲಾಗಿರಲಿಲ್ಲ ಎಂಬುದು ಪ್ರಶ್ನೆ ಹುಟ್ಟುಹಾಕಿದೆ.

ಘಟನೆ ನಂತರ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಅವರು ಐಟಿ ಅಧಿಕಾರಿಗಳ ವಿಚಾರಣೆ ನಡೆಸಿದ್ದು, ದಾಳಿ ವೇಳೆ ಸಿಕ್ಕ ದಾಖಲೆಗಳನ್ನು ವಶಕ್ಕೆ ಪಡೆದು ಅಧಿಕಾರಿಗಳು ತೆರಳಿದ್ದಾರೆ. ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.

ಲೆಕ್ಕಕ್ಕಿದ್ದು ಆಟಕ್ಕಿಲ್ಲದಂತಾದ ವಾಚಿಂಗ್ ಟವರ್!

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ನಿರ್ಮಿಸಿದ್ದ ಪೊಲೀಸ್ ಕಣ್ಗಾವಲು ಗೋಪುರ/ಪೊಲೀಸ್ ವಾಚಿಂಗ್ ಟವರ್ ಹಲವು ವರ್ಷಗಳಿಂದ ಉಪಯೋಗಿಸದೇ ಧೂಳು ತಿನ್ನುತ್ತಿದೆ.

ಗದಗ ಜಿಲ್ಲೆಯಲ್ಲಿಯೇ ಶೈಕ್ಷಣಿಕ, ಧಾರ್ಮಿಕ, ಔದ್ಯೋಗಿಕವಾಗಿ ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ಲಕ್ಷ್ಮೇಶ್ವರ ಪಟ್ಟಣದಲ್ಲಿ ದಿನೇ ದಿನೇ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದೆ. ಲಕ್ಷ್ಮೇಶ್ವರ ಪಟ್ಟಣ ನೆರೆಯ ಕುಂದಗೋಳ, ಶಿರಹಟ್ಟಿ, ಗದಗ, ಸವಣೂರ, ಶಿಗ್ಗಾಂವ, ಹಾವೇರಿ ತಾಲೂಕಿನ ಜನರಿಗೆ ಕೇಂದ್ರ ಸ್ಥಳವಾಗಿದ್ದರಿಂದ ವ್ಯಾಪಾರ, ಉದ್ಯೋಗ, ಶಿಕ್ಷಣ ಹೀಗೆ ಅನೇಕ ಕಾರಣಗಳಿಗಾಗಿ ಪಟ್ಟಣಕ್ಕೆ ಆಗಮಿಸುತ್ತಾರೆ. ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯೂ ಪಟ್ಟಣದಲ್ಲಿಯೇ ಹಾದು ಹೋಗಿದ್ದರಿಂದ ವಾಹನ ದಟ್ಟಣೆಯೂ ಹೆಚ್ಚಿರುತ್ತದೆ. ಅಲ್ಲದೇ ಮರಳು, ಮಣ್ಣು, ಎಂಸ್ಯಾಂಡ್, ಖಡಿ ಸಾಗಿಸುವ ವಾಹನಗಳು ಸಾಲುಗಟ್ಟಿರುತ್ತವೆ. ಇಂಜಿನಿಯರಿಂಗ್, ಪದವಿ, ಡಿಪ್ಲೋಮಾ, ಐಟಿಐ ಸೇರಿ ಕಾಲೇಜುಗಳು, ಹತ್ತಾರು ಶಾಲೆಗಳ ವಿದ್ಯಾರ್ಥಿಗಳು ಬರುತ್ತಾರೆ. ಬೆಳಿಗ್ಗೆಯಿಂದ ರಾತ್ರಿವರೆಗೂ ಮುಖ್ಯ ರಸ್ತೆಗಳು, ಮಾರುಕಟ್ಟೆ ರಸ್ತೆಗಳು ಜನ-ವಾಹನ ದಟ್ಟಣೆಯಿಂದ ಕೂಡಿರುತ್ತವೆ.

ಈ ನಿಟ್ಟಿನಲ್ಲಿ ಸಂಚಾರ ದಟ್ಟಣೆಯ ಜೊತೆಗೆ ಅಪಘಾತ, ಕಳ್ಳತನ, ಅಕ್ರಮ ಸಾಗಾಟ, ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯುವ ಮತ್ತು ನಿಗಾ ವಹಿಸುವ ನಿಟ್ಟಿನಲ್ಲಿ ಈ ಹಿಂದೆ ಲಕ್ಷ್ಮೇಶ್ವರ ಠಾಣೆಯ ಪಿಎಸ್‌ಐ ಆಗಿದ್ದ ರವಿಚಂದ್ರ ಬಡಫಕ್ಕೀರಪ್ಪನವರ ಸಾರ್ವಜನಿಕರ ಸಹಕಾರದಿಂದ ಲಕ್ಷಾಂತರ ರೂ ಖರ್ಚು ಮಾಡಿ ಟ್ರಾಫಿಕ್ ಸಮಸ್ಯೆ ಇರುವ ಪಟ್ಟಣದ ಶಿಗ್ಲಿ ನಾಕಾ ಮತ್ತು ದೂದಪೀರಾಂ ದರ್ಗಾದಲ್ಲಿ ಪೊಲೀಸ್ ಕಣ್ಗಾವಲು ಗೋಪುರಗಳ ವ್ಯವಸ್ಥೆ ಮಾಡಿದ್ದರು. ಇದರಲ್ಲಿ ಸಿಸಿ ಕ್ಯಾಮರಾ, ಧ್ವನಿವರ್ಧಕ, ಫ್ಯಾನ್, ಕುರ್ಚಿ ಸೇರಿ ಟ್ರಾಫಿಕ್ ಪೊಲೀಸರಿಗೆ ಅಗತ್ಯವಾಗಿದ್ದ ಎಲ್ಲ ವ್ಯವಸ್ಥೆ ಮಾಡಿದ್ದರು. ಸರದಿಯಂತೆ ಸಿಬ್ಬಂದಿ ನೇಮಿಸಿ ದಿನವೂ ಅತ್ಯಂತ ವ್ಯವಸ್ಥಿತವಾಗಿ ಸಂಚಾರ ದಟ್ಟಣೆ ನಿಯಂತ್ರಿಸಲಾಗುತ್ತಿತ್ತು. ಅಲ್ಲದೇ ಸವಾರರಿಗೆ ರಸ್ತೆ ನಿಯಮಗಳನ್ನು ತಿಳಿಸಿ ಜಾಗೃತಿ ಮೂಡಿಸುವ ಮತ್ತು ದಂಡ ವಿಧಿಸುವ ಕಾರ್ಯ ಮಾಡಲಾಗುತ್ತಿತ್ತು.

ಆದರೆ ಠಾಣೆಯ ಪಿಎಸ್‌ಐ ವರ್ಗಾವಣೆಗೊಂಡ ನಂತರ ಈ ಪೊಲೀಸ್ ಕಣ್ಗಾವಲು ಗೋಪುರಗಳು ನಿಷ್ಕ್ರಿಯಗೊಂಡವು. ಶಿಗ್ಲಿ ನಾಕಾದಲ್ಲಿದ್ದ ಟಾವರ್ ಹೊಸ ಬಸ್ ನಿಲ್ದಾಣದ ಶೌಚಾಲಯದ ಹತ್ತಿರ ಬಿಸಾಡಲಾಗಿತ್ತು. ಇತ್ತೀಚೆಗಷ್ಟೇ ಶಿಗ್ಲಿ ನಾಕಾದಲ್ಲಿ ರೈತರು ಸೇರಿ ವಿವಿಧ ಸಂಘಟನೆಯವರು ಅನಿರ್ದಿಷ್ಟಾವಧಿ ಪ್ರತಿಭಟನೆ, ಹೋರಾಟ ಮಾಡುತ್ತಿರುವುದನ್ನು ತಪ್ಪಿಸುವ ಉದ್ದೇಶದಿಂದ ಎಲ್ಲೋ ಧೂಳು ತಿನ್ನುತ್ತಾ ಬಿದ್ದಿದ್ದ ಗೋಪುರವನ್ನು ತಂದು ನಿಲ್ಲಿಸಲಾಗಿದೆ. ಬದಲಾಗಿ ಟ್ರಾಫಿಕ್ ನಿಯಂತ್ರಣದ ಉದ್ದೇಶಕ್ಕಲ್ಲ ಎಂಬುದು ವಿಷಾದದ ಸಂಗತಿ. ಇನ್ನಾದರೂ ಅತ್ಯಂತ ಅಗತ್ಯವಿರುವ ಈ ಪೊಲೀಸ್ ಕಣ್ಗಾವಲು ಗೋಪುರ ಮತ್ತೆ ಕಾರ್ಯ ನಿರ್ವಹಿಸುವಂತಾಗಬೇಕು. ಟ್ರಾಫಿಕ್ ಸಮಸ್ಯೆ, ಓವರ್ ಲೋಡ್ ಸಾಗಾಣಿಕೆ, ಅಪಘಾತ ತಡೆಗಟ್ಟುವ ಕ್ರಮಕ್ಕೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಸಿಪಿಐ, ಪಿಎಸ್‌ಐ ತುರ್ತು ಗಮನ ಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

ಈ ಕುರಿತು ಸಿಪಿಐ ಬಿ.ವಿ. ನ್ಯಾಮಗೌಡ ಅವರನ್ನು ಸಂಪರ್ಕಿಸಲಾಗಿ, ಸಿಬ್ಬಂದಿಗಳ ಕೊರತೆಯಿಂದ ಪೊಲೀಸ್ ಕಣ್ಗಾವಲು ಗೋಪುರಗಳನ್ನು ಬಳಸಲಾಗಿಲ್ಲ. ಈ ಬಗ್ಗೆ ಚರ್ಚಿಸಿ ಗೋಪುರ ದುರಸ್ತಿ ಮಾಡಿಸಿ ಬಣ್ಣ ಹಚ್ಚಿ, ಸಿಬ್ಬಂದಿ ನೇಮಿಸಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.

error: Content is protected !!