Home Blog

ಹಾವೇರಿಯಲ್ಲಿ ದುರಂತ! ಬೆಳೆ ರಕ್ಷಿಸಲು ಇಟ್ಟಿದ್ದ ನಾಡಬಾಂಬ್‌ಗೆ ಬಲಿಯಾದ ಮೂಕಜೀವಿಗಳು

0

ಹಾವೇರಿ: ಕಾಡುಹಂದಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ಜಮೀನಿನಲ್ಲಿ ಇಡಲಾಗಿದ್ದ ಎನ್ನಲಾದ ನಾಡಬಾಂಬ್ ಸೇವಿಸಿ ಎರಡು ಶ್ವಾನಗಳು ಹಾಗೂ ಒಂದು ನರಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ವೈ.ಟಿ. ಹೊನ್ನತ್ತಿ ಗ್ರಾಮದ ಸಮೀಪ ನಡೆದಿದೆ.

ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಜಮೀನುಗಳಲ್ಲಿ ಕಾಡುಹಂದಿಗಳ ಹಾವಳಿ ಹೆಚ್ಚಾಗಿದ್ದು, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿಯಾಗುತ್ತಿದೆ ಎನ್ನಲಾಗಿದೆ. ಇದರಿಂದ ಬೇಸತ್ತ ಕೆಲ ರೈತರು ಕಾಡುಹಂದಿಗಳನ್ನು ತಡೆಯುವ ಉದ್ದೇಶದಿಂದ ಜಮೀನಿನಲ್ಲಿ ನಾಡಬಾಂಬ್ ಇಟ್ಟಿರುವ ಶಂಕೆ ವ್ಯಕ್ತವಾಗಿದೆ.

ಆದರೆ ಕಾಡುಹಂದಿಗಳ ಬದಲಿಗೆ ಎರಡು ಶ್ವಾನಗಳು ಹಾಗೂ ಒಂದು ನರಿ ಆ ಸ್ಫೋಟಕವನ್ನು ಸೇವಿಸಿದ್ದು, ಸಾವನ್ನಪ್ಪಿವೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ನಾಡಬಾಂಬ್ ಇಟ್ಟವರು ಯಾರು ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ನೇಪಾಳದಲ್ಲಿ ಭೀಕರ ಪ್ರವಾಹ: 8 ಕನ್ನಡಿಗರು ಸಂಪರ್ಕಕ್ಕೆ ಸಿಗುತ್ತಿಲ್ಲ- ಗೃಹ ಸಚಿವ ಪರಮೇಶ್ವರ್ ಮಾಹಿತಿ

0

ಬೆಂಗಳೂರು: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಹಾಗೂ ಭೂಕುಸಿತದಲ್ಲಿ 8 ಮಂದಿ ಕನ್ನಡಿಗರು ನಾಪತ್ತೆಯಾಗಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಈಶಾ ಫೌಂಡೇಷನ್‌ ವತಿಯಿಂದ ಕೈಲಾಸ-ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಬೆಂಗಳೂರು ಮೂಲದ ಹಾಗೂ ಅಮೆರಿಕದ ವರ್ಜೀನಿಯಾದಲ್ಲಿ ನೆಲೆಸಿರುವ ಶ್ರೀನಿವಾಸ್ ಸುಧೀರ್, ಸುಧೀಂದ್ರ, ಲಕ್ಷ್ಮಿನಾಥ್ ಗೋಪಿಶೆಟ್ಟಿ, ವೆಂಕಟ್ ಬೆಂಗಳೂರು ಹಾಗೂ ಕೇಶವರಾವ್ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ತಿಳಿದುಬಂದಿದೆ. ಧಾರವಾಡ ಮೂಲದ ಆಸ್ಟ್ರೇಲಿಯಾ ನಿವಾಸಿ ರಾಕೇಶ್ ನಾಯಕ್ ಕೂಡ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಈ ನಡುವೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಮಲ್ಲಿನಾಥ್ ಕೊಲಕುಂದಿ ಹಾಗೂ ಸಂಗಮೇಶ್ ಕನಕಪುರ ಸುರಕ್ಷಿತವಾಗಿದ್ದಾರೆ. ಇಬ್ಬರೂ ಹೈದರಾಬಾದ್‌ನ 23 ಜನರೊಂದಿಗೆ ಆಗಸ್ಟ್ 21ರಂದು ನೇಪಾಳಕ್ಕೆ ತೆರಳಿದ್ದರು. ಮಲ್ಲಿನಾಥ್ ಇದ್ದ ಸ್ಥಳದ ಸಮೀಪವೇ ಭೀಕರ ಪ್ರವಾಹ ಸಂಭವಿಸಿದ್ದು, ಕೆಲವೇ ನಿಮಿಷಗಳ ಅಂತರದಲ್ಲಿ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿ. ಪರಮೇಶ್ವರ್, ನಾಪತ್ತೆಯಾಗಿರುವ ಕನ್ನಡಿಗರ ಕುರಿತು ಯಾವುದೇ ಸಾವು-ನೋವಿನ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಅವರನ್ನು ಸಂಪರ್ಕಿಸುವ ಹಾಗೂ ಪತ್ತೆಹಚ್ಚುವ ಪ್ರಯತ್ನ ಮುಂದುವರಿದಿದೆ ಎಂದು ಹೇಳಿದರು.

ನಾಪತ್ತೆಯಾಗಿರುವವರ ಕುರಿತು ಮಾಹಿತಿ ಸಂಗ್ರಹಿಸಲು ಕಾಠ್ಮಂಡುವಿಗೆ ಹಿರಿಯ ಅಧಿಕಾರಿಯೊಬ್ಬರನ್ನು ಕಳುಹಿಸಲಾಗುವುದು. ಚೀನಾ ರಾಯಭಾರ ಕಚೇರಿ ಹಾಗೂ ಟಿಬೆಟಿಯನ್ ಅಧಿಕಾರಿಗಳೊಂದಿಗೂ ಸಂಪರ್ಕ ಸಾಧಿಸಲು ಪ್ರಯತ್ನಿಸಲಾಗುತ್ತಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಅಗತ್ಯವಿದ್ದರೆ ಸಚಿವರನ್ನೂ ಕಳುಹಿಸಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.

ನೇಪಾಳದಲ್ಲಿ ಸಿಲುಕಿರುವ ಕರ್ನಾಟಕದವರು 1070-080-22253707 ಸಂಖ್ಯೆಗೆ ಸಂಪರ್ಕಿಸಿ ನೆರವು ಪಡೆಯಬಹುದು ಎಂದು ಅವರು ಮಾಹಿತಿ ನೀಡಿದರು.

ಇನ್ನು ಕೇಂದ್ರ ವಿದೇಶಾಂಗ ಸಚಿವಾಲಯದ ಮಾಹಿತಿ ಪ್ರಕಾರ, ನೇಪಾಳ ಹಾಗೂ ಟಿಬೆಟ್ ಭಾಗದಲ್ಲಿ ಹಲವು ಮಂದಿ ಸಂಪರ್ಕಕ್ಕೆ ಸಿಗದಿರುವುದು ಆತಂಕಕ್ಕೆ ಕಾರಣವಾಗಿದೆ. ತಮಿಳುನಾಡಿನ 21 ಮಂದಿಯನ್ನು ರಕ್ಷಿಸಲಾಗಿದೆ ಎಂದು ತಿಳಿಸಲಾಗಿದೆ. ಭಾರತ ಸರ್ಕಾರ ನೇಪಾಳದೊಂದಿಗೆ ಸಮನ್ವಯ ಸಾಧಿಸಿ ರಕ್ಷಣಾ ಕಾರ್ಯಕ್ಕೆ ನೆರವು ನೀಡುತ್ತಿದೆ.

ಈ ನಡುವೆ ನೇಪಾಳದಿಂದ ಭಾರೀ ಪ್ರಮಾಣದ ನೀರು ಹರಿದುಬರುತ್ತಿರುವ ಹಿನ್ನೆಲೆಯಲ್ಲಿ ಬಿಹಾರ ಹಾಗೂ ಉತ್ತರ ಪ್ರದೇಶದಲ್ಲೂ ಮುನ್ನೆಚ್ಚರಿಕೆ ವಹಿಸಲಾಗಿದೆ. ಗಂಡಕ್ ನದಿ ಪಾತ್ರದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಬಿಹಾರದಲ್ಲಿ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಉತ್ತರ ಪ್ರದೇಶದ ಗಂಡಕ್ ಡ್ಯಾಮ್‌ನ ಹಲವು ಗೇಟ್‌ಗಳನ್ನು ತೆರೆಯಲಾಗಿದ್ದು, ನದಿಗೆ ನೀರು ಹರಿಸಲಾಗುತ್ತಿದೆ.

ನೇಪಾಳ ಪ್ರವಾಹ ದುರಂತದ ಹಿನ್ನೆಲೆಯಲ್ಲಿ ನಾಪತ್ತೆಯಾಗಿರುವ ಕನ್ನಡಿಗರ ಕುಟುಂಬಗಳಲ್ಲಿ ಆತಂಕ ಹೆಚ್ಚಾಗಿದ್ದು, ಅವರ ಸುರಕ್ಷತೆಗಾಗಿ ಕುಟುಂಬಸ್ಥರು ಹಾಗೂ ಸರ್ಕಾರದ ಅಧಿಕಾರಿಗಳು ನಿರಂತರವಾಗಿ ಮಾಹಿತಿ ಪಡೆಯುತ್ತಿದ್ದಾರೆ.

ಭಾರತದ ಆಧ್ಯಾತ್ಮಿಕ ಪರಂಪರೆ ವಿಶ್ವಕ್ಕೆ ಮಾದರಿ: ಕೆ.ಎಸ್. ಈಶ್ವರಪ್ಪ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಗ್ರಾಮ ದೇವತೆಗಳಾದ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರ್ಗಮ್ಮ ದೇವಿಯರ ಹರಿಜಾತ್ರಾ ಮಹೋತ್ಸವ 18 ವರ್ಷಗಳ ಬಳಿಕ ಒಕ್ಕಲಗೇರಿ ಓಣಿಯಲ್ಲಿ ಭಕ್ತಿಭಾವ ಹಾಗೂ ಸಂಭ್ರಮದಿಂದ ನಡೆಯುತ್ತಿದ್ದು, ಜಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೇವಿಯರ ದರ್ಶನ ಪಡೆದು ಪುನೀತರಾದರು.

ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಭಾರತ ದೇಶ ಧರ್ಮ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಪರಂಪರೆಯಿಂದ ಶ್ರೀಮಂತವಾಗಿದೆ. ಜಗತ್ತಿನ ಹಲವೆಡೆ ಒಂದೇ ಧರ್ಮದವರೇ ಪರಸ್ಪರ ಬಡಿದಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಭಾರತದಲ್ಲಿ ವಿವಿಧ ಧರ್ಮ, ಜಾತಿ, ಪಂಥಗಳ ಜನರು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಇದಕ್ಕೆ ದೇಶದ ಧರ್ಮ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಪರಂಪರೆಯೇ ಕಾರಣ ಎಂದರು.

18 ವರ್ಷಗಳ ಬಳಿಕ ದ್ಯಾಮವ್ವ ಹಾಗೂ ದುರ್ಗಮ್ಮ ದೇವಿಯರ ಆಶೀರ್ವಾದ ಪಡೆಯುವ ಅವಕಾಶ ನಮ್ಮೆಲ್ಲರ ತಂದೆ-ತಾಯಿಯರ ಪುಣ್ಯದ ಫಲವಾಗಿದೆ. ಜಾತಿ, ಮತ, ಪಂಥ, ಪಕ್ಷದ ಭೇದವಿಲ್ಲದೆ ದೇವಿಯರ ಭಕ್ತರಾಗಿ ಒಂದೆಡೆ ಸೇರಿರುವುದು ನಮ್ಮ ಪುಣ್ಯ. ರಾಜ್ಯದ ಕೆಲವೆಡೆ ಅತಿವೃಷ್ಟಿ, ಇನ್ನೂ ಕೆಲವೆಡೆ ಅನಾವೃಷ್ಟಿ ಉಂಟಾಗಿದೆ. ಎಲ್ಲೆಡೆ ಉತ್ತಮ ಮಳೆ-ಬೆಳೆ ಆಗಲಿ ಎಂದು ಜಾತ್ರೆಯಲ್ಲಿ ಸೇರಿರುವ ಭಕ್ತರೆಲ್ಲರೂ ದೇವಿಯರಲ್ಲಿ ಪ್ರಾರ್ಥಿಸೋಣ ಎಂದು ಹೇಳಿದರು.

ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ದೇಶದಲ್ಲಿ ಭ್ರಷ್ಟಾಚಾರ, ಅನಾಚಾರ ಹಾಗೂ ದುರಾಚಾರ ಮಿತಿಮೀರಿವೆ. ದೇವಿ ರಕ್ತಬೀಜಾಸುರನನ್ನು ಸಂಹರಿಸಿದಂತೆ ಸಮಾಜದಲ್ಲಿನ ದುಷ್ಪ್ರವೃತ್ತಿಗಳನ್ನು ಮೆಟ್ಟಿಹಾಕಲು ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಯುವ ಮುಖಂಡ ಅನಿಲ ಮೆಣಸಿನಕಾಯಿ ಮಾತನಾಡಿ, ಸಮಾನತೆ, ಜಾತ್ಯತೀತತೆ ಹಾಗೂ ಪಕ್ಷಾತೀತ ಭಾವನೆಯೊಂದಿಗೆ ಗ್ರಾಮದೇವತೆಗಳ ಜಾತ್ರೆ ನಡೆಯುತ್ತಿದೆ. ನಮ್ಮ ಹಿರಿಯರು ಜಾತ್ರೆಯನ್ನು ಯಾವ ಭಕ್ತಿ-ಭಾವದಿಂದ ಆಚರಿಸುತ್ತಿದ್ದರೋ ಅದನ್ನು ಮುಂದಿನ ಪೀಳಿಗೆಯೂ ಮುಂದುವರಿಸಬೇಕು. ಗದಗ ನಗರದಲ್ಲಿ ನಡೆಯುತ್ತಿರುವ ಈ ಜಾತ್ರೆ ರಾಜ್ಯ ಮಟ್ಟದಲ್ಲಿ ಇತಿಹಾಸ ನಿರ್ಮಿಸಿದೆ. ಭಕ್ತಿ ಇದ್ದಲ್ಲಿ ಶಕ್ತಿ ಇರುತ್ತದೆ. ಎಲ್ಲರ ಒಳಿತಿಗಾಗಿ ದೇವಿಯರಲ್ಲಿ ಭಕ್ತಿಯಿಂದ ಪ್ರಾರ್ಥಿಸೋಣ ಎಂದರು.

ಅಡ್ನೂರ-ಗದಗ ಮಠದ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಆಧ್ಯಾತ್ಮಿಕ ವಿದ್ಯಾಶ್ರಮದ ಶಿವಶರಣೆ ಶ್ರೀ ನೀಲಮ್ಮತಾಯಿ ಅಸುಂಡಿ ಪ್ರವಚನ ನೀಡಿದರು. ಟ್ರಸ್ಟ್ ಸಮಿತಿ ಅಧ್ಯಕ್ಷ ಕೊಟ್ರಪ್ಪ ನಿಂಗಪ್ಪ ಕಮತರ ಅಧ್ಯಕ್ಷತೆ ವಹಿಸಿದ್ದರು.

ಡಾ. ಎನ್.ಎಸ್. ನಿಂಬಣ್ಣವರ, ಡಾ. ಎಸ್.ಎನ್. ಬಿರಾದಾರ, ಡಾ. ಶ್ರೀಮತಿ ಎಂ.ಡಿ. ಗೋಜನೂರ, ವೀರಣ್ಣ ಮೇಟಿ, ಈಶ್ವರಯ್ಯ ಹಿರೇಮಠ, ಸಿದ್ದಲಿಂಗಪ್ಪ ಎಂ., ಗೋಪಾಲ ಅಗರವಾಲ, ರಾಜು ಖಾನಪ್ಪನವರ, ಈರಣ್ಣ ಕರಬಿಷ್ಠಿ, ನೀಲಪ್ಪ ಅಗರವಾಲ, ನೀಲಪ್ಪ ಕಮತರ, ಸಿದ್ಧಲಿಂಗೇಶ್ವರ ಪಾಟೀಲ, ಸತ್ಯಪ್ಪ ಗಿಡ್ಡಹನಮಣ್ಣವರ, ಸಿದ್ದಣ್ಣ ಮಾರನಬಸರಿ, ಕುಮಾರ ಮಾರನಬಸರಿ, ಉಮೇಶಗೌಡ ಪಾಟೀಲ, ಸದಾಶಿವಯ್ಯ ಮದರಿಮಠ, ಬಸವರಾಜ ಬಿಂಗಿ ಸೇರಿದಂತೆ ಹಲವರು ಉಪಸ್ಥಿತರಿದ್ದು ಸನ್ಮಾನ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಬಸವರಾಜ ಮಡಿವಾಳರ, ಪರಶುರಾಮ ಹಳ್ಳದ, ಮಂಜುನಾಥ ಕಮತರ, ಮಲ್ಲಿಕಾರ್ಜುನ ಮಹಾಂತಶೆಟ್ಟರ, ಪ್ರಕಾಶ ಕಟ್ಟಿ, ಚೇತನ ಅಬ್ಬಿಗೇರಿ, ಶಿವು ಕುರಗೋಡ, ಆದರ್ಶ ಬಳಗಾನೂರ, ಕುಮಾರ ಮೆಣಸಗಿ, ಈಶ್ವರ ಹಳ್ಳಿ, ಈಶ್ವರ ಗೋಜನೂರ, ಸಚಿನ್ ಮೆಣಸಗಿ, ನಾಗರಾಜ ಮೆಣಸಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.

ಭಾರತದ ಧರ್ಮ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಪರಂಪರೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ನಮ್ಮ ದೇಶದ ಸಾಧು-ಸಂತರನ್ನು ಬೇರೆ ದೇಶಗಳಿಗೂ ಆಹ್ವಾನಿಸಲಾಗುತ್ತಿರುವುದು ಭಾರತೀಯ ಆಧ್ಯಾತ್ಮಿಕ ಪರಂಪರೆಯ ಶಕ್ತಿಗೆ ಸಾಕ್ಷಿಯಾಗಿದೆ.
— ಕೆ.ಎಸ್. ಈಶ್ವರಪ್ಪ

ಜಾತಿ, ಮತ, ಪಕ್ಷದ ಭೇದವಿಲ್ಲದೆ ದ್ಯಾಮವ್ವ-ದುರ್ಗಮ್ಮರ ಜಾತ್ರೆ ನಡೆಯುತ್ತಿರುವುದು ವಿಶೇಷ. ಭಕ್ತಿ ಇದ್ದಲ್ಲಿ ಶಕ್ತಿ ಇರುತ್ತದೆ. ಎಲ್ಲರ ಒಳಿತಿಗಾಗಿ ದೇವಿಯರಲ್ಲಿ ಪ್ರಾರ್ಥಿಸೋಣ.
— ಅನಿಲ ಮೆಣಸಿನಕಾಯಿ, ಯುವ ಮುಖಂಡರು

ಸಂಸ್ಕೃತ ಕಲಿತು ಬೆಳೆಸೋಣ: ಪ್ರಶಾಂತ ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಸಂಸ್ಕೃತ ಭಾಷೆ ನಮ್ಮ ದೇಶದ ಅಮೂಲ್ಯ ಸಂಪತ್ತಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂಸ್ಕೃತ ಕಲಿಯುವ ಮೂಲಕ ಅದರ ಸಂರಕ್ಷಣೆ ಹಾಗೂ ಬೆಳವಣಿಗೆಗೆ ಮುಂದಾಗಬೇಕು ಎಂದು ವಿದ್ಯಾದಾನ ಸಮಿತಿ ಪದವಿಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಪ್ರಶಾಂತ ಪಾಟೀಲ ಹೇಳಿದರು.

ಗದಗ ಜಿಲ್ಲಾ ಸಂಸ್ಕೃತ ಭಾರತೀ ವತಿಯಿಂದ ನಗರದ ಹಳೆ ಸರಾಫ ಬಜಾರದ ಜಗದಂಬಾ ಮಂದಿರದಲ್ಲಿ ಆಯೋಜಿಸಿದ್ದ ಸಂಸ್ಕೃತ ಸುಭಾಷಿತ ಪಾಠನ ವರ್ಗದ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.

ಎಸ್‌ಎಸ್‌ಕೆ ಮಹಿಳಾ ಮಂಡಳಿ ಅಧ್ಯಕ್ಷೆ ಸ್ನೇಹಲತಾ ಪಾ. ಕಬಾಡಿ ಮಾತನಾಡಿ, ನಾವು ನಿತ್ಯ ಜೀವನದಲ್ಲಿ ಅನೇಕ ಸಂಸ್ಕೃತ ಪದಗಳನ್ನು ಬಳಸುತ್ತಿದ್ದರೂ ಅವು ಸಂಸ್ಕೃತ ಪದಗಳೆಂಬ ಅರಿವು ಹಲವರಿಗೆ ಇಲ್ಲ. ಆದ್ದರಿಂದ ಸಂಸ್ಕೃತವನ್ನು ಉಳಿಸಿ, ಬೆಳೆಸಿ, ಹೆಚ್ಚು ಹೆಚ್ಚು ಕಲಿಯಬೇಕು ಎಂದರು.

ಗದಗ ಜಿಲ್ಲಾ ಸಂಸ್ಕೃತ ಭಾರತೀ ಸಂಯೋಜಕ ಹಾಗೂ ಜಗದ್ಗುರು ತೋಂಟದಾರ್ಯ ಸಂಸ್ಕೃತ ಪಾಠಶಾಲೆಯ ಮುಖ್ಯಾಧ್ಯಾಪಕ ಎಸ್.ಎನ್. ಶಿಂಪಿಗೇರ ಮಾತನಾಡಿ, ಪ್ರಾಚೀನ ಮತ್ತು ಸಮೃದ್ಧ ಭಾಷೆಯಾಗಿರುವ ಸಂಸ್ಕೃತವನ್ನು ಎಲ್ಲರೂ ಕಲಿತು ಇತರರಿಗೂ ಕಲಿಸುವ ಮೂಲಕ ಗ್ರಾಮಮಟ್ಟದಿಂದಲೇ ಅದರ ಬೆಳವಣಿಗೆಗೆ ಶ್ರಮಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಶುರಾಮಸಾ ಬದಿಯವರು ವಹಿಸಿದ್ದರು. ಜಗದ್ಗುರು ತೋಂಟದಾರ್ಯ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿನಿಯರಿಂದ ಸಮೂಹ ನೃತ್ಯ ನಡೆಯಿತು.

ಸಂಸ್ಕೃತ ಭಾರತೀ ಬಾಲಕೇಂದ್ರ ಪ್ರಮುಖ ಶೈಲಜಾ ಕುಲಕರ್ಣಿ, ನಗರ ಸಂಯೋಜಕ ಮೌನೇಶ ಭಜಂತ್ರಿ, ಸಂಸ್ಕೃತ ಶಿಕ್ಷಕಿ ವಿಜಯಲಕ್ಷ್ಮೀ ಪಟ್ಟಣಶೆಟ್ಟಿ, ಸುಮನ್ ಖಟವಟೆ ಉಪಸ್ಥಿತರಿದ್ದರು. ರೇಖಾ ಮಡಿವಾಳರ ಕಾರ್ಯಕ್ರಮ ನಿರೂಪಿಸಿದರು. ಸುಮನಾ ಭಗಿನಿ ವಂದಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಸಂಸ್ಕೃತ ಭಾಷೆ ನಮ್ಮ ದೇಶದ ಅಮೂಲ್ಯ ಸಂಪತ್ತಾಗಿದೆ. ಸಂಸ್ಕೃತ ಸಂಭಾಷಣೆಯ ಮೂಲಕ ಅದರ ಪ್ರಚಾರವನ್ನು ಹೆಚ್ಚಿಸಿ, ಹೆಚ್ಚಿನ ಜನರು ಈ ಭಾಷೆಯನ್ನು ಕಲಿಯುವಂತೆ ಮಾಡಬೇಕು.

— ಪ್ರಶಾಂತ ಪಾಟೀಲ, ಸಂಸ್ಕೃತ ಉಪನ್ಯಾಸಕ

ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕಾವ್ಯಾ ಬೆಳ್ಳಿಗೌಡರ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ಆಯೋಜಿಸಿದ್ದ “ಜನಜೀವನದ ಸಮಗ್ರ ಅಭಿವೃದ್ಧಿಗೆ ಸಹಕಾರಿ ವ್ಯವಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ” ಎಂಬ ವಿಷಯದ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ನಗರದ ತೋಂಟದ ಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ಬೆಳ್ಳಿಗೌಡರ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಚರ್ಚಾ ವಿಷಯದ ವಿರುದ್ಧವಾಗಿ ಮಾತನಾಡಿದ ಕಾವ್ಯಾ ಬೆಳ್ಳಿಗೌಡರ ಪ್ರಥಮ ಬಹುಮಾನ ಪಡೆದರೆ, ವಿಷಯದ ಪರವಾಗಿ ಮಾತನಾಡಿದ ಕಾಲೇಜಿನ ವಿದ್ಯಾರ್ಥಿ ಭರತಕುಮಾರ ಬಿಳೆಯಲಿ ತೃತೀಯ ಬಹುಮಾನ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ, ಪ್ರಾಚಾರ್ಯ ವೈ.ಎಸ್. ಮತ್ತೂರ, ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.

ಮಂಡ್ಯದಲ್ಲಿ ಮತ್ತೆ ಹಣದ ಮೂಟೆ! ಮತ್ತೊಬ್ಬ ಭಿಕ್ಷುಕಿಯ ಮನೆಯಲ್ಲಿ ಸಿಕ್ಕಿದ್ದೆಷ್ಟು ಗೊತ್ತಾ?

0

ಮಂಡ್ಯ: ಇತ್ತೀಚೆಗೆ ಮಂಡ್ಯದಲ್ಲಿ ಮೃತಪಟ್ಟ ಭಿಕ್ಷುಕಿಯೊಬ್ಬರ ಮನೆಯಲ್ಲಿ ₹8.40 ಲಕ್ಷ ಹಣ ಪತ್ತೆಯಾದ ಘಟನೆ ಬೆನ್ನಲ್ಲೇ, ಇದೀಗ ಮತ್ತೊಬ್ಬ ಭಿಕ್ಷುಕಿಯ ಮನೆಯಲ್ಲಿ ಬರೋಬ್ಬರಿ ₹3.5 ಲಕ್ಷ ಹಣ ಪತ್ತೆಯಾಗಿದೆ.

ಶ್ರೀರಂಗಪಟ್ಟಣದ ನಿವಾಸಿ ಸಾವಿತ್ರಮ್ಮ ಹೊಟ್ಟೆಪಾಡಿಗಾಗಿ ಭಿಕ್ಷಾಟನೆ ಮಾಡುತ್ತಿದ್ದು, ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ನೇತೃತ್ವದ ತಂಡ ಸಾವಿತ್ರಮ್ಮನಿಗೆ ಸ್ನಾನ ಮಾಡಿಸಿ ಆರೈಕೆ ಮಾಡಿದೆ. ಬಳಿಕ ಆಕೆಯ ಮನೆಯನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಚೀಲವೊಂದರಲ್ಲಿ ನಾಣ್ಯಗಳು ಹಾಗೂ ₹10, ₹20 ಮುಖಬೆಲೆಯ ನೋಟುಗಳು ಪತ್ತೆಯಾಗಿವೆ.

ಹಣವನ್ನು ಪ್ರತ್ಯೇಕವಾಗಿ ಎಣಿಕೆ ಮಾಡಿದಾಗ ಒಟ್ಟು ₹3.5 ಲಕ್ಷ ಇರುವುದು ಬೆಳಕಿಗೆ ಬಂದಿದೆ. ಸಾವಿತ್ರಮ್ಮ ಹಲವು ವರ್ಷಗಳಿಂದ ಭಿಕ್ಷಾಟನೆ ಮೂಲಕ ಹಣ ಸಂಗ್ರಹಿಸಿಕೊಂಡಿದ್ದರು ಎನ್ನಲಾಗಿದೆ.

ಕೆಲವು ತಿಂಗಳ ಹಿಂದಷ್ಟೇ ಸಾವಿತ್ರಮ್ಮ ಅವರ ತಾಯಿ ಮೃತಪಟ್ಟಿದ್ದರು. ತಾಯಿಯೊಂದಿಗೆ ಸೇರಿಕೊಂಡೇ ಸಾವಿತ್ರಮ್ಮ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರು. ಇದೀಗ ಸಾವಿತ್ರಮ್ಮ ಕೂಡ ಅನಾರೋಗ್ಯಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ತಂಡ ಆಕೆಯ ಆರೈಕೆಗೆ ಮುಂದಾಗಿದೆ.

ಇದೇ ವೇಳೆ, ಮಂಡ್ಯ ನಗರದ ಗುತ್ತಲು ಬಡಾವಣೆಯಲ್ಲಿ ಇತ್ತೀಚೆಗೆ ಮೃತಪಟ್ಟ ಭಿಕ್ಷುಕಿ ನೂರ್ ಉನ್ನೀಸ್ ಅವರ ಮನೆಯಲ್ಲಿ ₹8.40 ಲಕ್ಷ ಹಣ ಪತ್ತೆಯಾಗಿತ್ತು. ಸಹೋದರಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದ ನೂರ್, ಸಹೋದರಿ ಮೃತಪಟ್ಟ ಬಳಿಕ ಒಬ್ಬರೇ ವಾಸಿಸುತ್ತಿದ್ದು ಭಿಕ್ಷಾಟನೆ ಮೂಲಕ ಜೀವನ ಸಾಗಿಸುತ್ತಿದ್ದರು.

ಜೀವಂತವಾಗಿದ್ದಾಗ ಆಕೆಯ ಆರೈಕೆಗೆ ಯಾರೂ ಮುಂದಾಗಲಿಲ್ಲ. ಆದರೆ ಮೃತಪಟ್ಟ ಬಳಿಕ ಆಕೆ ಕೂಡಿಟ್ಟಿದ್ದ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಮತ್ತೊಬ್ಬ ಭಿಕ್ಷುಕಿಯ ಮನೆಯಲ್ಲಿ ₹3.5 ಲಕ್ಷ ಪತ್ತೆಯಾಗಿರುವುದು ಗಮನ ಸೆಳೆದಿದೆ.

ದಸರಾ ಉತ್ಸವ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಎಸ್.ಎಸ್.ಕೆ. ತರುಣ ಸಂಘ ಹಾಗೂ ಶ್ರೀ ಅಂಬಾಭವಾನಿ ದೇವಸ್ಥಾನ, ಬೆಟಗೇರಿ ಇವರ ಆಶ್ರಯದಲ್ಲಿ ನಡೆದ ಸಭೆಯಲ್ಲಿ 2026ನೇ ಸಾಲಿನ ಎಸ್.ಎಸ್.ಕೆ. ದಸರಾ ಉತ್ಸವ ಸಮಿತಿಯ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಮಿತಿಯ ಚೇರಮನ್ನರಾಗಿ ಸುರೇಶ ಎಸ್. ಮೇರವಾಡೆ, ವೈಸ್ ಚೇರಮನ್ನರಾಗಿ ಶ್ರೀರಾಮ ಎಸ್. ಹಬೀಬ, ಗೌರವ ಕಾರ್ಯದರ್ಶಿಯಾಗಿ ಹನುಮಂತಸಾ ಎಂ. ರಾಯಬಾಗಿ, ಸಹಕಾರ್ಯದರ್ಶಿಯಾಗಿ ಪ್ರಶಾಂತ ಟಿ. ಸೋಳಂಕಿ, ಖಜಾಂಚಿಯಾಗಿ ಸೋಮಶೇಖರ ಆರ್. ಮೇರವಾಡೆ ಹಾಗೂ ಲೆಕ್ಕ ತಪಾಸಿಗರಾಗಿ ನರಸಿಂಗಸಾ ವೈ. ಮೇರವಾಡೆ ಅವರನ್ನು ಆಯ್ಕೆ ಮಾಡಲಾಯಿತು.

ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಪಂಚ ಟ್ರಸ್ಟ್ ಕಮಿಟಿ, ತರುಣ ಸಂಘ, ಮಹಿಳಾ ಮಂಡಳದ ಸದಸ್ಯರು, ಪದಾಧಿಕಾರಿಗಳು ಹಾಗೂ ಸಮಾಜದ ಎಲ್ಲ ಬಾಂಧವರು ಅಭಿನಂದನೆ ಸಲ್ಲಿಸಿದ್ದಾರೆ.

ಇನ್‌ಫ್ಲೂಯೆಂಜಾ ಭಯ ಬೇಡ; ಎಚ್ಚರಿಕೆ ಇರಲಿ!

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ಇತ್ತೀಚೆಗೆ ಇನ್‌ಫ್ಲೂಯೆಂಜಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದ್ದು, ಗದಗ ಜಿಲ್ಲೆಯಲ್ಲಿ ಮಾತ್ರ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಜನವರಿ-2026ರಿಂದ ಇದುವರೆಗೆ ಜಿಲ್ಲೆಯಲ್ಲಿ 10 ಪ್ರಯೋಗಾಲಯ ದೃಢೀಕೃತ ಇನ್‌ಫ್ಲೂಯೆಂಜಾ ಪ್ರಕರಣಗಳು ವರದಿಯಾಗಿದ್ದು, ಎಲ್ಲ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ಇನ್‌ಫ್ಲೂಯೆಂಜಾ ಹಾಗೂ ಉಸಿರಾಟದ ತೊಂದರೆ ಇರುವ ಪ್ರಕರಣಗಳ ಮೇಲೆ ಆರೋಗ್ಯ ಇಲಾಖೆ ನಿರಂತರ ಕಣ್ಗಾವಲು ವಹಿಸಿದೆ. ಅಗತ್ಯವಿರುವ ಪ್ರಕರಣಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಅಗತ್ಯ ವೈದ್ಯಕೀಯ ಸಲಹೆ ಹಾಗೂ ಚಿಕಿತ್ಸಾ ವ್ಯವಸ್ಥೆ ಲಭ್ಯವಿದ್ದು, ಜಿಲ್ಲೆಯ ಪರಿಸ್ಥಿತಿಯ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ.

ಮಳೆಗಾಲ ಹಾಗೂ ಹವಾಮಾನ ಬದಲಾವಣೆಯ ಅವಧಿಯಲ್ಲಿ ಉಸಿರಾಟ ಸಂಬಂಧಿ ತೊಂದರೆಗಳು ಸಾಮಾನ್ಯವಾಗಿ ಹೆಚ್ಚಾಗುತ್ತವೆ. ಮಳೆಯಿಂದ ತಪ್ಪಿಸಿಕೊಳ್ಳಲು ಜನರು ಮನೆ, ಕಚೇರಿ, ಬಸ್ ಹಾಗೂ ಕಾಯುವ ಕೊಠಡಿಗಳಂತಹ ಗಾಳಿ ಸಂಚಾರ ಕಡಿಮೆ ಇರುವ ಒಳಾಂಗಣ ಪ್ರದೇಶಗಳಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗುತ್ತದೆ. ಸೋಂಕಿತ ವ್ಯಕ್ತಿಯ ಕೆಮ್ಮು ಮತ್ತು ಸೀನುವಿಕೆಯಿಂದ ಹೊರಬರುವ ಹನಿಗಳ ಮೂಲಕ ಸೋಂಕು ಇತರರಿಗೆ ತಗುಲುವ ಸಾಧ್ಯತೆ ಇರುತ್ತದೆ.

ಇನ್‌ಫ್ಲೂಯೆಂಜಾ ಹೊಸ ಕಾಯಿಲೆಯಲ್ಲ. ಹೆಚ್ಚಿನ ಜನರಲ್ಲಿ ಇದು ಸೌಮ್ಯದಿಂದ ಮಧ್ಯಮ ಪ್ರಮಾಣದಲ್ಲಿ ಕಂಡುಬರುವ ಕಾಯಿಲೆಯಾಗಿದ್ದು, ಸೂಕ್ತ ವಿಶ್ರಾಂತಿ ಹಾಗೂ ವೈದ್ಯಕೀಯ ಸಲಹೆ ಪಡೆದಲ್ಲಿ ಚೇತರಿಸಿಕೊಳ್ಳಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಜ್ವರ, ಕೆಮ್ಮು, ಮೂಗು ಕಟ್ಟಿಕೊಳ್ಳುವುದು, ಗಂಟಲು ನೋವು, ತಲೆನೋವು, ಮೈ-ಕೈ ನೋವು, ಸುಸ್ತು, ದೌರ್ಬಲ್ಯ, ಉಸಿರಾಟದ ತೊಂದರೆ ಹಾಗೂ ಎದೆನೋವು ಸೇರಿದಂತೆ ಹಲವು ಲಕ್ಷಣಗಳು ಕಂಡುಬರಬಹುದು. ಮಕ್ಕಳು, ವಯೋವೃದ್ಧರು, ಗರ್ಭಿಣಿಯರು ಹಾಗೂ ಮಧುಮೇಹ, ಹೃದಯ ಮತ್ತು ಶ್ವಾಸಕೋಶ ಸೇರಿದಂತೆ ದೀರ್ಘಕಾಲಿನ ಕಾಯಿಲೆ ಹೊಂದಿರುವವರು ಜ್ವರ ಮತ್ತು ಉಸಿರಾಟದ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು ಎಂದು ಸೂಚಿಸಲಾಗಿದೆ.

ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಟಿಶ್ಯು, ಕರವಸ್ತ್ರ ಅಥವಾ ಮೊಣಕೈಯಿಂದ ಮುಚ್ಚಿಕೊಳ್ಳಬೇಕು. ಸಾಬೂನು ಮತ್ತು ನೀರಿನಿಂದ ಆಗಾಗ್ಗೆ ಕೈಗಳನ್ನು ತೊಳೆಯಬೇಕು. ಜ್ವರ ಮತ್ತು ಕೆಮ್ಮು ಇದ್ದಾಗ ಶಾಲೆ, ಕಚೇರಿ ಹಾಗೂ ಜನಸಂದಣಿ ಇರುವ ಸ್ಥಳಗಳಿಗೆ ತೆರಳುವುದನ್ನು ತಪ್ಪಿಸಬೇಕು.

ಜನಸಂದಣಿ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು, ಸ್ವಚ್ಛವಲ್ಲದ ಕೈಗಳಿಂದ ಕಣ್ಣು, ಮೂಗು ಹಾಗೂ ಬಾಯಿಯನ್ನು ಮುಟ್ಟದಿರುವುದು ಅಗತ್ಯವಾಗಿದೆ. ಸಾಕಷ್ಟು ದ್ರವ ಹಾಗೂ ಪೌಷ್ಟಿಕ ಆಹಾರ ಸೇವಿಸುವುದರ ಜತೆಗೆ ಸಮರ್ಪಕ ವಿಶ್ರಾಂತಿ ಪಡೆಯಬೇಕು. ವೈದ್ಯರ ಸಲಹೆ ಇಲ್ಲದೆ ಆ್ಯಂಟಿಬಯೋಟಿಕ್ ಅಥವಾ ಇತರೆ ಔಷಧಿಗಳನ್ನು ಸೇವಿಸಬಾರದು ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.

ಗದಗ ಜಿಲ್ಲೆಯಲ್ಲಿ ಇನ್‌ಫ್ಲೂಯೆಂಜಾ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಅನಗತ್ಯ ಆತಂಕಕ್ಕೆ ಒಳಗಾಗಬಾರದು. ಆದರೆ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜ್ವರ, ಕೆಮ್ಮು ಅಥವಾ ಉಸಿರಾಟದ ತೊಂದರೆ ಕಂಡುಬಂದಲ್ಲಿ ನಿರ್ಲಕ್ಷಿಸದೆ ಸಮೀಪದ ಸರ್ಕಾರಿ ಆರೋಗ್ಯ ಸಂಸ್ಥೆಯನ್ನು ಸಂಪರ್ಕಿಸಿ ವೈದ್ಯಕೀಯ ಸಲಹೆ ಪಡೆಯಬೇಕು.

– ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗದಗ

ಸರ್ಕಾರಿ ನೌಕರರ ಆರೋಗ್ಯಕ್ಕೆ ಸಂಜೀವಿನಿ ಸ್ಪರ್ಶ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಸರ್ಕಾರಿ ನೌಕರರು ಹಾಗೂ ಅವರ ಕುಟುಂಬ ಸದಸ್ಯರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯುವ ನಿಟ್ಟಿನಲ್ಲಿ ಅರ್ಹ ಆಸ್ಪತ್ರೆಗಳು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ ನೋಂದಣಿಯಾಗಿ ಯೋಜನೆಯೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದರು.

ಜಿಲ್ಲಾಧಿಕಾರಿ ನೂತನ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸುವರ್ಣ ಆರೋಗ್ಯ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಧಾರವಾಡ ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಈಗಾಗಲೇ 24 ಆಸ್ಪತ್ರೆಗಳು ಎಬಿ-ಆರ್‌ಕೆ ಯೋಜನೆಯಡಿ ನೋಂದಣಿಯಾಗಿದ್ದು, ಅವುಗಳಲ್ಲಿ 20 ಆಸ್ಪತ್ರೆಗಳು ಆರೋಗ್ಯ ಸಂಜೀವಿನಿ ಯೋಜನೆಯಲ್ಲಿಯೂ ಸೇರ್ಪಡೆಯಾಗಿವೆ. ಉಳಿದ ಆಸ್ಪತ್ರೆಗಳ ಜತೆಗೆ ಅರ್ಹತೆ ಹೊಂದಿರುವ ಇತರೆ ಆಸ್ಪತ್ರೆಗಳೂ ಯೋಜನೆಗೆ ಸೇರಬೇಕು ಎಂದು ಹೇಳಿದರು.

ಹಿಂದೆ ನಿಗದಿತ ದರ ಹಾಗೂ ಪಾವತಿ ಪ್ರಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಆಸ್ಪತ್ರೆಗಳು ಯೋಜನೆಗೆ ನೋಂದಣಿಯಾಗಲು ಹಿಂದೇಟು ಹಾಕುತ್ತಿದ್ದವು. ಇದೀಗ ಪಾವತಿ ಪ್ರಕ್ರಿಯೆ ಸುಧಾರಿಸಲಾಗಿದ್ದು, ಸಿಜಿಎಚ್‌ಎಸ್ ದರಗಳಿಗೆ ಅನುಗುಣವಾಗಿ ಚಿಕಿತ್ಸಾ ದರ ನಿಗದಿಪಡಿಸಿರುವುದರಿಂದ ಹೆಚ್ಚಿನ ಆಸ್ಪತ್ರೆಗಳು ಯೋಜನೆಯಡಿ ನೋಂದಣಿಯಾಗುವ ನಿರೀಕ್ಷೆಯಿದೆ ಎಂದರು.

ಧಾರವಾಡ ಜಿಲ್ಲೆಯಲ್ಲಿ 15 ಸಾವಿರಕ್ಕೂ ಹೆಚ್ಚು ಸರ್ಕಾರಿ ನೌಕರರಿದ್ದು, ನೆರೆಯ ಜಿಲ್ಲೆಗಳ ನೌಕರರೂ ಚಿಕಿತ್ಸೆಗೆ ಇಲ್ಲಿನ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಹೀಗಾಗಿ ಯೋಜನೆಯಡಿ ಉತ್ತಮ ವೈದ್ಯಕೀಯ ಸೇವೆ ಒದಗಿಸಲು ಆಸ್ಪತ್ರೆಗಳು ಮುಂದಾಗಬೇಕು ಎಂದು ಮನವಿ ಮಾಡಿದರು.

ಹುಬ್ಬಳ್ಳಿ ಐಎಂಎ ಪ್ರತಿನಿಧಿ ಡಾ. ಬಸವರಾಜ ಸರ್ಜನ ಮಾತನಾಡಿ, ಆರೋಗ್ಯ ಸಂಜೀವಿನಿ ಯೋಜನೆಯಡಿ ಪರಿಷ್ಕೃತ ಚಿಕಿತ್ಸಾ ದರ ಹಾಗೂ ಸುಧಾರಿತ ಮರುಪಾವತಿ ವ್ಯವಸ್ಥೆ ಜಾರಿಯಾಗಿರುವುದರಿಂದ ಹೆಚ್ಚಿನ ನರ್ಸಿಂಗ್ ಹೋಮ್ ಮತ್ತು ವೈದ್ಯಕೀಯ ಸಂಸ್ಥೆಗಳನ್ನು ನೋಂದಣಿಗೆ ಒಳಪಡಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ಕಾರ್ಯಾಗಾರದಲ್ಲಿ ಆರೋಗ್ಯ ಸಂಜೀವಿನಿ ಯೋಜನೆಯ ನೋಡಲ್ ಅಧಿಕಾರಿ ಡಾ. ಶಶಿಧರ ಕಳಸನೂರಮಠ ಯೋಜನೆಯ ಪ್ರಮುಖ ಅಂಶಗಳ ಕುರಿತು ವಿವರಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪರಶುರಾಮ ಎಫ್.ಕೆ. ಮಾತನಾಡಿದರು.

ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಡಾ. ಸಿದ್ದನಗೌಡ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಸೊಲಗಿ ನಿರೂಪಿಸಿದರು. ರಮೇಶ ಲಿಂಗದಾಳ ವಂದಿಸಿದರು.

ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ಉತ್ತಮ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕು. ಈ ನಿಟ್ಟಿನಲ್ಲಿ ಅರ್ಹ ಆಸ್ಪತ್ರೆಗಳು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯೊಂದಿಗೆ ಕೈಜೋಡಿಸಬೇಕು.

— ಸ್ನೇಹಲ್ ಆರ್., ಜಿಲ್ಲಾಧಿಕಾರಿ, ಧಾರವಾಡ

ನಮ್ಮೂರ ಜಾತ್ರೆಗೆ ಬನ್ನಿ… ನಾಗಾವಿ ತಾಂಡಾದಲ್ಲಿ ಭಕ್ತಿಯ ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ನಾಗಾವಿ-ತಾಂಡಾದಲ್ಲಿ ಶ್ರೀ ನಾಗದೇವತೆಯ 26ನೇ ವರ್ಷದ ಜಾತ್ರಾಮಹೋತ್ಸವವು ಆ.29ರಂದು ಭಕ್ತಿ, ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಜರುಗಲಿದೆ.

ಶ್ರೀ ಛತ್ರಪ್ಪ ವಾಗಪ್ಪ ರಾಠೋಡ ಅವರ ತೋಟದಲ್ಲಿರುವ ಶ್ರೀ ನಾಗದೇವತೆಯ ಸನ್ನಿಧಿಯಲ್ಲಿ ಜಾತ್ರಾಮಹೋತ್ಸವವನ್ನು ಆಯೋಜಿಸಲಾಗಿದೆ. ಜಾತ್ರೆಯ ಅಂಗವಾಗಿ ರುದ್ರಾಭಿಷೇಕ, 108 ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಕುಂಭಮೇಳ, ಧರ್ಮ ಚಿಂತನಗೋಷ್ಠಿ, ಸನ್ಮಾನ ಸಮಾರಂಭ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ಭಕ್ತಿಭಾವದಿಂದ ರಥೋತ್ಸವ ಜರುಗಲಿದ್ದು, ಡೊಳ್ಳು, ಭಜನಾ ಮಂಡಳಿಗಳು, ಜಾಂಜ್ ಮೇಳ ಸೇರಿದಂತೆ ವಿವಿಧ ಕಲಾ ಪ್ರದರ್ಶನಗಳು ಜಾತ್ರೆಯ ಮೆರುಗು ಹೆಚ್ಚಿಸಲಿವೆ. ರಾತ್ರಿ ಡ್ಯಾನ್ಸ್ ಸ್ಪರ್ಧೆ ಹಾಗೂ ನೃತ್ಯ ಕಾರ್ಯಕ್ರಮವೂ ನಡೆಯಲಿದೆ.

ಇದಕ್ಕೂ ಮುನ್ನ ಆ.28ರಂದು ಸಂಜೆ ವಿವಿಧ ಬಂಜಾರ ಭಜನಾ ತಂಡಗಳು ಹಾಗೂ ಗಾಯಕರಿಂದ ಭಜನಾ ಜಾಗರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಆ.29ರಂದು ನಡೆಯುವ ಧರ್ಮ ಚಿಂತನಗೋಷ್ಠಿಯಲ್ಲಿ ಮುಂಡರಗಿಯ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳು, ಹರ್ಲಾಪೂರ-ಹಳ್ಳಿಗುಡಿಯ ಡಾ. ಅಭಿನವ ಕೊಟ್ಟೂರೇಶ್ವರ ಮಹಾಸ್ವಾಮಿಗಳು, ಕೇಸರಟ್ಟಿಯ ಬಾಲತಪಸ್ವಿ ಸೋಮಲಿಂಗ ಸ್ವಾಮಿಗಳು ಸೇರಿದಂತೆ ವಿವಿಧ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.

ಗ್ರಾಮೀಣ ಸಂಸ್ಕೃತಿ, ಪರಂಪರೆ, ಭಕ್ತಿ ಹಾಗೂ ಸಹೋದರತ್ವವನ್ನು ಬೆಸೆಯುವ ಈ ಜಾತ್ರಾಮಹೋತ್ಸವದಲ್ಲಿ ನಾಡಿನ ಭಕ್ತರು, ಬಂಧು-ಬಳಗ ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಶ್ರೀ ನಾಗದೇವತೆ ವಿವಿಧೋದ್ದೇಶಗಳ ಸೇವಾ ಟ್ರಸ್ಟ್ ಹಾಗೂ ಜಾತ್ರಾ ಸಮಿತಿ ಮನವಿ ಮಾಡಿದೆ.