ತಿರುಮಲ: ಸತತ ರಜೆ ಹಾಗೂ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಭಕ್ತರ ದಟ್ಟಣೆ ಗಣನೀಯವಾಗಿ ಹೆಚ್ಚಾಗಿದೆ. ವೈಕುಂಠಂ ಕ್ಯೂ ಕಾಂಪ್ಲೆಕ್ಸ್ ಸೇರಿದಂತೆ ಸರತಿ ಸಾಲುಗಳು ಭಕ್ತರಿಂದ ಕಿಕ್ಕಿರಿದು ತುಂಬಿವೆ.
ಭಕ್ತರ ದಟ್ಟಣೆ ನಿಯಂತ್ರಿಸಿ ಸಾಮಾನ್ಯ ಭಕ್ತರಿಗೆ ಶೀಘ್ರ ದರ್ಶನ ಕಲ್ಪಿಸುವ ಉದ್ದೇಶದಿಂದ ತಿರುಮಲ ತಿರುಪತಿ ದೇವಸ್ಥಾನಂ (TTD) ಮಹತ್ವದ ನಿರ್ಧಾರ ಕೈಗೊಂಡಿದೆ. ಸೆಪ್ಟೆಂಬರ್ 13ರಂದು ಸಂಪೂರ್ಣವಾಗಿ ವಿಐಪಿ ದರ್ಶನ ರದ್ದುಗೊಳಿಸಲಾಗಿದ್ದು, ಸೆಪ್ಟೆಂಬರ್ 12ರಂದು ಯಾವುದೇ ವಿಐಪಿ ಶಿಫಾರಸು ಪತ್ರಗಳನ್ನು ಸ್ವೀಕರಿಸದಿರಲು ತೀರ್ಮಾನಿಸಲಾಗಿದೆ.
ವಿಐಪಿ ದರ್ಶನದ ಸಮಯವನ್ನು ಸಾಮಾನ್ಯ ಭಕ್ತರಿಗೆ ಮೀಸಲಿಡಲಾಗಿದ್ದು, ಪ್ರಸ್ತುತ ಸರತಿ ಸಾಲಿನಲ್ಲಿರುವ ಭಕ್ತರಿಗೆ ಶ್ರೀವಾರಿಯ ದರ್ಶನ ಪಡೆಯಲು ಸುಮಾರು 24 ಗಂಟೆಗಳ ಸಮಯ ಬೇಕಾಗುತ್ತಿದೆ ಎಂದು ತಿಳಿಸಲಾಗಿದೆ.
ಇದರ ನಡುವೆಯೇ ಶ್ರೀವಾರಿ ಹುಂಡಿ ಕಾಣಿಕೆಯಲ್ಲೂ ದಾಖಲೆ ನಿರ್ಮಾಣವಾಗಿದೆ. ಬುಧವಾರ ಬೆಳಿಗ್ಗೆಯಿಂದ ಮಧ್ಯರಾತ್ರಿವರೆಗೆ ಬಂದ ಕಾಣಿಕೆಗಳ ಎಣಿಕೆಯಲ್ಲಿ ಬರೋಬ್ಬರಿ 6.93 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಟಿಟಿಡಿ ಇತಿಹಾಸದಲ್ಲಿ ಹುಂಡಿ ಆದಾಯ 6 ಕೋಟಿ ರೂಪಾಯಿ ದಾಟಿರುವುದು ಇದು ಮೂರನೇ ಬಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ತಿರುಮಲದಲ್ಲಿ ಸೆಪ್ಟೆಂಬರ್ 14ರಿಂದ ಶ್ರೀವಾರಿ ಸಾಲಕಟ್ಲ ಬ್ರಹ್ಮೋತ್ಸವಗಳು ಆರಂಭವಾಗಲಿದ್ದು, ಸೆಪ್ಟೆಂಬರ್ 15ರಿಂದ 23ರವರೆಗೆ ಅದ್ದೂರಿಯಾಗಿ ನಡೆಯಲಿವೆ. ಬ್ರಹ್ಮೋತ್ಸವದ ಒಂಬತ್ತು ದಿನಗಳ ಕಾಲ ಸಕಲ ವಿಶೇಷ ಸೇವೆಗಳು ಹಾಗೂ ವಿಶೇಷ ಪ್ರವೇಶ ದರ್ಶನಗಳನ್ನು ಟಿಟಿಡಿ ರದ್ದುಗೊಳಿಸಿದೆ.
ಇದೇ ಸಂದರ್ಭದಲ್ಲಿ ನವೀಕರಿಸಲಾದ ಆಧುನಿಕ ಎಸ್ವಿ ವಸ್ತುಸಂಗ್ರಹಾಲಯವನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಉದ್ಘಾಟಿಸಲಿದ್ದಾರೆ.
ಭಕ್ತರ ಹೆಚ್ಚಿನ ಸಂಖ್ಯೆಯ ಆಗಮನ ಹಿನ್ನೆಲೆಯಲ್ಲಿ ಟಿಟಿಡಿ ಕೈಗೊಂಡಿರುವ ಬದಲಾವಣೆಗಳು ಮತ್ತು ನಿಯಮಾವಳಿಗಳಿಗೆ ಸಹಕರಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.

