Home Blog

ಯಡಿಯೂರು ಕೆರೆ ಭೂವಿವಾದ: ಹೈಕೋರ್ಟ್ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್!

0

ನವದೆಹಲಿ: ಬೆಂಗಳೂರಿನ ಯಡಿಯೂರು ಕೆರೆ ಪ್ರದೇಶದ ಭೂವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

ಭೂಮಿಯ ಸರ್ವೆ ನಂಬರ್‌ಗಳಿಗೆ ಸಂಬಂಧಿಸಿದಂತೆ ಹೊಸದಾಗಿ ತನಿಖೆ ನಡೆಸಲು ಕಂದಾಯ ಅಧಿಕಾರಿಗಳಿಗೆ ನೀಡಿದ್ದ ಅನುಮತಿಯನ್ನು ಕಾನೂನುಬಾಹಿರ ಎಂದು ಹೇಳಿರುವ ಸುಪ್ರೀಂ ಕೋರ್ಟ್, 2014ರಲ್ಲಿ ನೀಡಲಾಗಿದ್ದ ಹೊಸ ತನಿಖೆಯ ನೋಟಿಸ್‌ನ್ನೂ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಸಂಜೀವ್ ಸಚ್‌ದೇವ್ ಅವರ ಪೀಠ ಈ ತೀರ್ಪು ನೀಡಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಸೆಕ್ಷನ್ 56ರ ಅಡಿಯಲ್ಲಿ ಮರುಪರಿಶೀಲನಾ ಅಧಿಕಾರವನ್ನು ಚಲಾಯಿಸಲು ಮೂರು ವರ್ಷಗಳ ಶಾಸನಬದ್ಧ ಕಾಲಮಿತಿ ಇದೆ. ಈ ಅವಧಿ ಮುಗಿದ ಬಳಿಕ ಅಧಿಕಾರಿಗಳು ಮರುಪರಿಶೀಲನಾ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

2014ರಲ್ಲಿ ಆರಂಭವಾಗಿದ್ದ ವಿವಾದ:

ಯಡಿಯೂರು ಕೆರೆ ಒತ್ತುವರಿಯಾಗಿರುವ ಕುರಿತು ಬಂದ ದೂರಿನ ಆಧಾರದ ಮೇಲೆ ಕಂದಾಯ ದಾಖಲೆಗಳ ಜಂಟಿ ನಿರ್ದೇಶಕರು ಹಾಗೂ ನೋಂದಣಾಧಿಕಾರಿಗಳು 2014ರಲ್ಲಿ ಭೂ ಕಂದಾಯ ಕಾಯ್ದೆಯ ಸೆಕ್ಷನ್ 56ರ ಅಡಿಯಲ್ಲಿ ಹೊಸದಾಗಿ ತನಿಖೆ ನಡೆಸಲು ಭೂಮಾಲೀಕರಿಗೆ ನೋಟಿಸ್ ನೀಡಿದ್ದರು.

ಈ ನೋಟಿಸ್ ಪ್ರಶ್ನಿಸಿ ಭೂಮಾಲೀಕರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್‌ನ ಏಕಸದಸ್ಯ ಪೀಠವು, ಮೂರು ವರ್ಷಗಳ ಕಾಲಮಿತಿ ಮುಗಿದ ಬಳಿಕ ಅಧಿಕಾರಿಗಳು ಮರುಪರಿಶೀಲನಾ ಅಧಿಕಾರ ಬಳಸಲು ಸಾಧ್ಯವಿಲ್ಲ ಎಂದು ಹೇಳಿ ನೋಟಿಸ್ ರದ್ದುಗೊಳಿಸಿತ್ತು.

ಏಕಸದಸ್ಯ ಪೀಠದ ಆದೇಶ ಬದಲಿಸಿದ್ದ ವಿಭಾಗೀಯ ಪೀಠ:

ಆದರೆ, 2020ರ ಜನವರಿಯಲ್ಲಿ ಹೈಕೋರ್ಟ್‌ನ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶವನ್ನು ಬದಲಿಸಿತ್ತು. ಅಧಿಕಾರಿಗಳು ಈವರೆಗೆ ಯಾವುದೇ ಅಂತಿಮ ಆದೇಶ ಹೊರಡಿಸಿಲ್ಲ ಎಂಬ ಕಾರಣ ನೀಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದಾಗಿ ತನಿಖೆ ನಡೆಸಲು ಕಂದಾಯ ಅಧಿಕಾರಿಗಳಿಗೆ ಅವಕಾಶ ನೀಡಿತ್ತು.

ಈ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಯನ್ನೂ ಹೈಕೋರ್ಟ್ 2023ರ ಜೂನ್‌ನಲ್ಲಿ ವಜಾಗೊಳಿಸಿತ್ತು. ಬಳಿಕ ಹೈಕೋರ್ಟ್ ವಿಭಾಗೀಯ ಪೀಠದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

ಮೂರು ವರ್ಷಗಳ ಕಾಲಮಿತಿ ಕಡ್ಡಾಯ ಎಂದ ಸುಪ್ರೀಂ:

ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 56ರ ಅಡಿಯಲ್ಲಿ ಆದೇಶ ಅಥವಾ ದಾಖಲೆಗಳನ್ನು ಮರುಪರಿಶೀಲಿಸುವ ಅಧಿಕಾರವನ್ನು ಕಾಯ್ದೆಯಲ್ಲಿ ನಿಗದಿಪಡಿಸಿರುವ ಮೂರು ವರ್ಷಗಳ ಅವಧಿಯ ನಂತರ ಬಳಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಕಾನೂನಿನಲ್ಲಿ ನಿಗದಿಪಡಿಸಿರುವ ಕಾಲಮಿತಿಯನ್ನು ಮೀರಿ ಮರುಪರಿಶೀಲನಾ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಕೆರೆ ಒತ್ತುವರಿ ತನಿಖೆಯ ನೆಪದಲ್ಲಿಯೂ ಶಾಸನಬದ್ಧ ಕಾಲಮಿತಿಯನ್ನು ಕಡೆಗಣಿಸಲು ಅವಕಾಶವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಈ ಮೂಲಕ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠದ ಆದೇಶವನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್, 2014ರಲ್ಲಿ ಭೂಮಾಲೀಕರಿಗೆ ನೀಡಲಾಗಿದ್ದ ಹೊಸ ತನಿಖೆಯ ನೋಟಿಸ್‌ನ್ನೂ ವಜಾಗೊಳಿಸಿದೆ.

ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಜ್ಜಾದ ಉಡುಪಿ; ಹುಲಿವೇಷ, ವಿಟ್ಲಪಿಂಡಿ ಉತ್ಸವಕ್ಕೆ ಕ್ಷಣಗಣನೆ!

0

ಉಡುಪಿ: ಕೃಷ್ಣನ ನಾಡು ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಕ್ಕೆ ಸಜ್ಜಾಗಿದೆ.

ಸೆಪ್ಟೆಂಬರ್ 4ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಅರ್ಘ್ಯ ಪ್ರದಾನ ನಡೆಯಲಿದ್ದು, ಸೆಪ್ಟೆಂಬರ್ 5ರಂದು ವಿಟ್ಲಪಿಂಡಿ–ಶ್ರೀಕೃಷ್ಣಲೀಲೋತ್ಸವ ವೈಭವದಿಂದ ನಡೆಯಲಿದೆ. ಅಷ್ಟಮಿ ಸಂಭ್ರಮಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಕೃಷ್ಣ ಮಠದ ಸುತ್ತಮುತ್ತ ಹಾಗೂ ರಥಬೀದಿಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.

ಸೆಪ್ಟೆಂಬರ್ 4ರಂದು ರಾತ್ರಿ 12.12ಕ್ಕೆ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಉಡುಪಿಗೆ ಆಗಮಿಸುವ ನಿರೀಕ್ಷೆಯಿದ್ದು, ಭಕ್ತರ ಸ್ವಾಗತಕ್ಕೆ ನಗರವನ್ನು ಸಿಂಗಾರಗೊಳಿಸಲಾಗುತ್ತಿದೆ.

ಅಷ್ಟಮಿಗೆ ಹುಲಿವೇಷದ ಮೆರುಗು:

ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಕರಾವಳಿಯ ಸಾಂಪ್ರದಾಯಿಕ ಹುಲಿವೇಷಕ್ಕೂ ಸಿದ್ಧತೆಗಳು ಭರದಿಂದ ಸಾಗಿವೆ. ಕೃಷ್ಣ ರಥಬೀದಿಯಲ್ಲಿ ಹುಲಿಗಳ ಘರ್ಜನೆ, ಕುಣಿತ ಹಾಗೂ ಹೆಜ್ಜೆಗಳ ವೈಭವ ಕಣ್ಮನ ಸೆಳೆಯಲಿದೆ.

ಹಲವು ಹುಲಿವೇಷ ತಂಡಗಳು ಈಗಾಗಲೇ ತಾಲೀಮು ಆರಂಭಿಸಿದ್ದು, ಅಷ್ಟಮಿ ಅಂಗವಾಗಿ ವಿವಿಧ ತಂಡಗಳಿಂದ ಹುಲಿವೇಷ ಸೇವೆಗಳನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹುಲಿವೇಷದ ಜತೆಗೆ ಕರಾವಳಿಯ ಸಾಂಪ್ರದಾಯಿಕ ವೇಷಗಳು ಹಾಗೂ ಜನಪದ ಕಲಾ ಪ್ರದರ್ಶನಗಳು ಉತ್ಸವಕ್ಕೆ ಮತ್ತಷ್ಟು ಮೆರುಗು ನೀಡಲಿವೆ.

ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮ:

ಅಷ್ಟಮಿ ಪ್ರಯುಕ್ತ ಹುಲಿವೇಷ ಸ್ಪರ್ಧೆ, ಕೃಷ್ಣ ವೇಷ ಸ್ಪರ್ಧೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಕ್ಕಳಿಂದ ಹಿರಿಯರವರೆಗೆ ಎಲ್ಲರನ್ನೂ ಸೆಳೆಯುವಂತೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

ರಾಜಾಂಗಣದಲ್ಲಿ ಹುಲಿವೇಷ ಕುಣಿತ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಎರಡು ದಿನಗಳ ಕಾಲ ವಿಶೇಷ ವೇದಿಕೆಯಲ್ಲಿ ಹುಲಿವೇಷ ಸ್ಪರ್ಧೆ ನಡೆಯಲಿದೆ.

ಸೆ.5ರಂದು ವಿಟ್ಲಪಿಂಡಿ ಉತ್ಸವ:

ಸೆಪ್ಟೆಂಬರ್ 5ರಂದು ಬೆಳಗ್ಗೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ಚಿನ್ನದ ರಥದಲ್ಲಿ ಶ್ರೀಕೃಷ್ಣನ ಮೃಣ್ಮಯ ವಿಗ್ರಹದ ಮೆರವಣಿಗೆ ನಡೆಯಲಿದೆ.

ವಿಟ್ಲಪಿಂಡಿ–ಶ್ರೀಕೃಷ್ಣಲೀಲೋತ್ಸವದ ಅಂಗವಾಗಿ ರಥಬೀದಿಯ ವಿಶೇಷ ವೇದಿಕೆಯಲ್ಲಿ ಆಹ್ವಾನಿತ ಮಲ್ಲಯುದ್ಧ ಪ್ರವೀಣರಿಂದ ಮಲ್ಲಯುದ್ಧ ಪ್ರದರ್ಶನವೂ ನಡೆಯಲಿದೆ. ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಲಿರುವ ಈ ಪ್ರದರ್ಶನಕ್ಕೆ ಭಕ್ತರು ಸಾಕ್ಷಿಯಾಗಲಿದ್ದಾರೆ.

ಇದರೊಂದಿಗೆ ವಿಶೇಷ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮಗಳು ಹಾಗೂ ಅಂತರರಾಷ್ಟ್ರೀಯ ಮಟ್ಟದ ಕಲಾವಿದರಿಂದ ಕಲಾ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.

ಸೆಪ್ಟೆಂಬರ್ 6ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮದ ಸಮಾರೋಪ ಸಮಾರಂಭ ನಡೆಯಲಿದ್ದು, ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ. ಅಷ್ಟಮಂಗಲ ಪ್ರಶ್ನೆಯ ಅನುಸಾರದಂತೆ ಕೋಟಿ ತುಳಸಿ ಅರ್ಚನೆಯನ್ನೂ ಕೈಗೊಳ್ಳಲಾಗಿದೆ.

ಆಕಳಿಕೆಯ ಜೊತೆ ಈ ಲಕ್ಷಣಗಳಿದ್ದರೆ ಎಚ್ಚರ! ಹೃದಯದ ಸಮಸ್ಯೆಯ ಸೂಚನೆಯಾಗಿರಬಹುದು

0

ನಿದ್ರೆ ಬರುತ್ತಿರುವಾಗ, ದೇಹ ದಣಿದಾಗ ಅಥವಾ ಬೇಸರವಾದಾಗ ಆಕಳಿಕೆ ಬರುವುದು ಸಾಮಾನ್ಯ. ಆದರೆ ಯಾವುದೇ ಸ್ಪಷ್ಟ ಕಾರಣವಿಲ್ಲದೆ ಪದೇಪದೇ ಆಕಳಿಕೆ ಬರುತ್ತಿದ್ದರೆ ಅದರ ಹಿಂದೆ ನಿದ್ರಾಹೀನತೆ, ದೈಹಿಕ ಅಥವಾ ಮಾನಸಿಕ ದಣಿವು, ಒತ್ತಡ ಸೇರಿದಂತೆ ಹಲವು ಕಾರಣಗಳಿರಬಹುದು.

ಸಾಮಾನ್ಯವಾಗಿ ಆಕಳಿಕೆ ಏಕೆ ಬರುತ್ತದೆ ಎಂಬುದಕ್ಕೆ ನಿಖರ ಕಾರಣ ಇನ್ನೂ ಸಂಪೂರ್ಣವಾಗಿ ತಿಳಿದುಬಂದಿಲ್ಲ. ನಿದ್ರೆ ಮತ್ತು ಎಚ್ಚರದ ನಡುವಿನ ಬದಲಾವಣೆ, ದಣಿವು, ಬೇಸರ ಹಾಗೂ ಮಾನಸಿಕ ಒತ್ತಡದ ಸಂದರ್ಭಗಳಲ್ಲಿ ಆಕಳಿಕೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕೆಲವು ಅಧ್ಯಯನಗಳ ಪ್ರಕಾರ ದೇಹದ ಉಷ್ಣತೆಯನ್ನು ನಿಯಂತ್ರಿಸುವ ಪ್ರಕ್ರಿಯೆಯೊಂದಿಗೂ ಆಕಳಿಕೆ ಸಂಬಂಧ ಹೊಂದಿರಬಹುದು.

ಆಕಳಿಕೆಗೂ ಹೃದಯದ ಸಮಸ್ಯೆಗೂ ಸಂಬಂಧವಿದೆಯೇ?

ಪದೇಪದೇ ಆಕಳಿಕೆ ಬರುವುದು ಮಾತ್ರ ಹೃದಯಾಘಾತದ ಲಕ್ಷಣ ಎಂದು ಹೇಳಲು ಸಾಧ್ಯವಿಲ್ಲ. ಆಕಳಿಕೆಯೊಂದಿಗೆ ಎದೆನೋವು, ಎದೆ ಬಿಗಿತ, ಉಸಿರಾಟದ ತೊಂದರೆ, ಅತಿಯಾದ ಬೆವರು, ವಾಕರಿಕೆ, ತಲೆಸುತ್ತುವಿಕೆ ಅಥವಾ ದವಡೆ, ಕುತ್ತಿಗೆ, ಭುಜ ಹಾಗೂ ಕೈಗಳಲ್ಲಿ ನೋವು ಕಾಣಿಸಿಕೊಂಡರೆ ಮಾತ್ರ ಹೆಚ್ಚಿನ ಎಚ್ಚರಿಕೆ ಅಗತ್ಯ.

ಈ ಲಕ್ಷಣಗಳು ಹೃದಯಾಘಾತ ಸೇರಿದಂತೆ ಗಂಭೀರ ಸಮಸ್ಯೆಗಳ ಸೂಚನೆಯಾಗಿರಬಹುದು. ಇಂತಹ ಸಂದರ್ಭದಲ್ಲಿ ತಡ ಮಾಡದೆ ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಮುಖ್ಯ.

ನಿದ್ರೆ ಮಾಡಿದ ಮೇಲೂ ಆಕಳಿಕೆ ನಿಲ್ಲುತ್ತಿಲ್ಲವೇ?

ಸಾಕಷ್ಟು ನಿದ್ರೆ ಮಾಡಿದ ನಂತರವೂ ನಿರಂತರವಾಗಿ ಆಕಳಿಕೆ ಬರುತ್ತಿದ್ದರೆ ಅಥವಾ ದಿನವಿಡೀ ಅತಿಯಾದ ನಿದ್ರೆ ಹಾಗೂ ದಣಿವು ಕಾಡುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ವಿಶೇಷವಾಗಿ ಹೊಸದಾಗಿ ಯಾವುದೇ ಔಷಧಿ ಸೇವನೆ ಆರಂಭಿಸಿದ ಬಳಿಕ ಆಕಳಿಕೆ ಹೆಚ್ಚಾಗಿದ್ದರೆ ಈ ವಿಷಯವನ್ನು ವೈದ್ಯರಿಗೆ ತಿಳಿಸಬೇಕು.

ಆಕಳಿಕೆ ಹೆಚ್ಚಾದಾಗ ಏನು ಗಮನಿಸಬೇಕು?

  • ಪ್ರತಿದಿನ ಸಾಕಷ್ಟು ನಿದ್ರೆ ಪಡೆಯುತ್ತಿದ್ದೀರಾ ಎಂಬುದನ್ನು ಪರಿಶೀಲಿಸಿ.
  • ಅತಿಯಾದ ದೈಹಿಕ ದಣಿವು ಅಥವಾ ಮಾನಸಿಕ ಒತ್ತಡವಿದೆಯೇ ಗಮನಿಸಿ.
  • ಹೊಸದಾಗಿ ಯಾವುದೇ ಔಷಧಿ ಸೇವನೆ ಆರಂಭಿಸಿದ್ದೀರಾ ಎಂಬುದನ್ನು ಪರಿಶೀಲಿಸಿ.
  • ಆಕಳಿಕೆಯೊಂದಿಗೆ ಎದೆನೋವು ಅಥವಾ ಉಸಿರಾಟದ ತೊಂದರೆ ಕಂಡುಬಂದರೆ ನಿರ್ಲಕ್ಷಿಸಬೇಡಿ.
  • ನಿರಂತರವಾಗಿ ಸಮಸ್ಯೆ ಮುಂದುವರಿದರೆ ವೈದ್ಯರ ಸಲಹೆ ಪಡೆಯಿರಿ.

ಒಟ್ಟಿನಲ್ಲಿ, ಆಕಳಿಕೆ ಸಾಮಾನ್ಯ ದೈಹಿಕ ಕ್ರಿಯೆಯಾಗಿರಬಹುದು. ಕೇವಲ ಆಕಳಿಕೆ ಬರುತ್ತಿದೆ ಎಂಬ ಕಾರಣಕ್ಕೆ ಹೃದಯದ ಸಮಸ್ಯೆ ಎಂದು ನಿರ್ಧರಿಸುವುದು ಸರಿಯಲ್ಲ. ಆದರೆ ಆಕಳಿಕೆಯೊಂದಿಗೆ ಇತರ ಅಸಾಮಾನ್ಯ ಲಕ್ಷಣಗಳು ಕಾಣಿಸಿಕೊಂಡರೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ.

ಕಾರು-ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಉಣಚಗೇರಿ ಗ್ರಾಮದ ಸಮೀಪ ಯಲಬುರ್ಗಾ-ಬಾದಾಮಿ ರಾಜ್ಯ ಹೆದ್ದಾರಿಯಲ್ಲಿ ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವೇಗವಾಗಿ ಬಂದ ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.

ಮೃತರನ್ನು ಗಜೇಂದ್ರಗಡ ತಾಲೂಕಿನ ಉಣಚಗೇರಿ ಗ್ರಾಮದ ನಿವಾಸಿ ೫೫ ವರ್ಷದ ಈರಪ್ಪ ಎಂದು ಗುರುತಿಸಲಾಗಿದೆ.

ಅಪಘಾತದ ರಭಸಕ್ಕೆ ಕಾರು ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಹೊಲಕ್ಕೆ ಉರುಳಿ ಬಿದ್ದಿದೆ. ಪರಿಣಾಮ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಘಟನೆ ತಿಳಿಯುತ್ತಿದ್ದಂತೆ ಗಜೇಂದ್ರಗಡ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

KMF ನಂದಿನಿ ಹಾಲಿನ ಟ್ಯಾಂಕರ್ ಪಲ್ಟಿ: ರಸ್ತೆಯಲ್ಲಿ ಹರಿದುಹೋಯ್ತು ಸಾವಿರಾರು ಲೀಟರ್ ಹಾಲು

0

ಬೆಂಗಳೂರು: ಕೆಎಂಎಫ್ ನಂದಿನಿ ಹಾಲಿನ ಟ್ಯಾಂಕರ್ ಪಲ್ಟಿಯಾದ ಪರಿಣಾಮ 14 ಸಾವಿರ ಲೀಟರ್ ಹಾಲು ರಸ್ತೆಯಲ್ಲಿ ಹರಿದ ಘಟನೆ ಹೆಬ್ಬಾಳ ಸಮೀಪ ನಡೆದಿದೆ.

ಕೆಎಂಎಫ್‌ಗೆ ಹೊರಟಿದ್ದ ಹಾಲಿನ ಟ್ಯಾಂಕರ್ ಹೆಬ್ಬಾಳ ಸಮೀಪದ ಸರ್ವಿಸ್ ರಸ್ತೆಯಲ್ಲಿ ಪಲ್ಟಿಯಾಗಿದ್ದು, ಟ್ಯಾಂಕರ್‌ನ ಮುಚ್ಚಳ ಮುಚ್ಚಲು ಸಾರ್ವಜನಿಕರು ಪರದಾಡಿದ್ದಾರೆ. ಇನ್ನೂ ಕೆಲವರು ನೀರಿನ ಬಾಟಲಿಗಳಲ್ಲಿ ಹಾಲು ತುಂಬಿಕೊಂಡಿದ್ದಾರೆ.

ಘಟನೆಯಲ್ಲಿ ಟ್ಯಾಂಕರ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ. ಟ್ಯಾಂಕರ್ ಪಲ್ಟಿಯಾದ ಪರಿಣಾಮ 14 ಸಾವಿರ ಲೀಟರ್ ಹಾಲು ರಸ್ತೆಪಾಲಾಗಿದೆ. ಘಟನಾ ಸ್ಥಳಕ್ಕೆ ಸಂಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿವೃತ್ತ ನೌಕರರಿಗೆ ಸಿಹಿಸುದ್ದಿ; ‘ಸಂಧ್ಯಾ ಕಿರಣ’ ನಗದುರಹಿತ ಆರೋಗ್ಯ ಯೋಜನೆಗೆ ಸರ್ಕಾರ ಆದೇಶ

0

ಬೆಂಗಳೂರು: ರಾಜ್ಯ ಸರ್ಕಾರದ ನಿವೃತ್ತ ನೌಕರರು ಹಾಗೂ ಕುಟುಂಬ ಪಿಂಚಣಿದಾರರಿಗೆ ಸಿಹಿಸುದ್ದಿ ಸಿಕ್ಕಿದೆ. ನಗದುರಹಿತ ಆರೋಗ್ಯ ಭಾಗ್ಯ ಯೋಜನೆ ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರಿ ನಿವೃತ್ತ ನೌಕರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ನಗದುರಹಿತ ಆರೋಗ್ಯ ಭಾಗ್ಯ ‘ಸಂಧ್ಯಾ ಕಿರಣ’ ಯೋಜನೆ ಜಾರಿಗೆ ಸರ್ಕಾರ ಆದೇಶ ಹೊರಡಿಸಿದೆ.

ಸಂಧ್ಯಾ ಕಿರಣ ನಗದುರಹಿತ ಆರೋಗ್ಯ ಯೋಜನೆಯಡಿ ಉಚಿತ ಚಿಕಿತ್ಸೆ ಲಭ್ಯವಾಗಲಿದ್ದು, ವಾರ್ಷಿಕ 5 ಲಕ್ಷ ರೂಪಾಯಿಗಳವರೆಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆ ಪಡೆಯಬಹುದಾಗಿದೆ. ನಿವೃತ್ತ ನೌಕರರಿಗೆ ಹಾಗೂ ಅವರ ಕುಟುಂಬಕ್ಕೆ ಆರೋಗ್ಯ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ. ಸಂಧ್ಯಾ ಕಿರಣ ಯೋಜನೆ ಜಾರಿಗೊಳಿಸುವಂತೆ ನೌಕರರ ಸಂಘ ಈ ಹಿಂದೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು.

ಸೆ.21ರಿಂದ 3 ದಿನ ವಿಶೇಷ ಅಧಿವೇಶನ; ಕಸ್ತೂರಿ ರಂಗನ್ ವರದಿ, ಬರ ಚರ್ಚೆಗೆ ಸಂಪುಟ ಒಪ್ಪಿಗೆ

0

ಬೆಂಗಳೂರು: ಸೆಪ್ಟೆಂಬರ್ 21ರಿಂದ ಮತ್ತೆ ಮೂರು ದಿನಗಳ ಕಾಲ ವಿಶೇಷ ಅಧಿವೇಶನ ನಡೆಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಶೇಷ ಅಧಿವೇಶನಕ್ಕೆ ಒಪ್ಪಿಗೆ ನೀಡಲಾಗಿದ್ದು, ಸೆಪ್ಟೆಂಬರ್ 21ರಿಂದ ಸೆಪ್ಟೆಂಬರ್ 23ರವರೆಗೆ ಒಟ್ಟು ಮೂರು ದಿನಗಳ ಕಾಲ ಈ ಅಧಿವೇಶನ ನಡೆಯಲಿದೆ.

ಇದಕ್ಕೂ ಮುನ್ನ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದಲ್ಲಿ ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಹೋರಾಟ ಮುಂದುವರಿಸಿತ್ತಲ್ಲದೆ ಅಹೋರಾತ್ರಿ ಧರಣಿಗೂ ಸಿದ್ಧತೆ ನಡೆಸಿತ್ತು. ಈ ಮಧ್ಯೆಯೇ ವಿಧಾನಮಂಡಲದ ಕಲಾಪವನ್ನು ಮೂರು ದಿನ ಮೊದಲೇ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಇದೀಗ ಮತ್ತೆ ಮೂರು ದಿನಗಳ ಕಾಲ ವಿಶೇಷ ಅಧಿವೇಶನ ನಡೆಯಲಿದ್ದು, ಕಸ್ತೂರಿ ರಂಗನ್ ವರದಿ ಹಾಗೂ ಬರ ಪರಿಸ್ಥಿತಿಯ ಕುರಿತು ಚರ್ಚೆ ನಡೆಯಲಿದೆ.

ಕರ್ನಾಟಕ ಅಂತಾರಾಷ್ಟ್ರೀಯ ಕಳ್ಳರ ಸಂಘದ ಅಧ್ಯಕ್ಷ ಜನಾರ್ದನ ರೆಡ್ಡಿ, ಉಪಾಧ್ಯಕ್ಷ ಶ್ರೀರಾಮುಲು: ಪ್ರದೀಪ್ ಈಶ್ವರ್ ವಾಗ್ದಾಳಿ

0

ಬೆಂಗಳೂರು: ಬಿಜೆಪಿ ನಾಯಕರಾದ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ವಿರುದ್ಧ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಕರ್ನಾಟಕವನ್ನು ಲೂಟಿ ಮಾಡಿದ್ದೇ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಎಂದು ತೀವ್ರ ಆರೋಪ ಮಾಡಿದರು. ಬಿಜೆಪಿ ಆಡಳಿತಾವಧಿಯಲ್ಲಿ ಕೋವಿಡ್ ಹಗರಣ, ಬೋವಿ ನಿಗಮ ಹಗರಣ, ನೀಟ್ ಹಗರಣ, ದೇವರಾಜ್ ಟ್ರಕ್ ಟರ್ಮಿನಲ್ ಹಗರಣ, ಕಿಯೋನಿಕ್ಸ್ ಹಗರಣ, ಪಿಎಸ್‌ಐ ನೇಮಕಾತಿ ಹಗರಣ, ಪರಶುರಾಮ್ ಥೀಮ್ ಪಾರ್ಕ್ ಹಗರಣ,

ಬಿಟ್‌ಕಾಯಿನ್ ಪ್ರಕರಣ ಹಾಗೂ ಕೆಕೆಆರ್‌ಡಿ ಅಕ್ರಮ ಸೇರಿದಂತೆ ನೂರಾರು ಕೋಟಿ ರೂಪಾಯಿ ಮೌಲ್ಯದ ಹಗರಣಗಳು ನಡೆದಿವೆ ಎಂದು ಆರೋಪಿಸಿದ ಪ್ರದೀಪ್ ಈಶ್ವರ್, ಯಡಿಯೂರಪ್ಪ, ಬೊಮ್ಮಾಯಿ, ಶ್ರೀರಾಮುಲು, ಶಶಿಕಲಾ ಜೊಲ್ಲೆ, ಕೋಟ ಶ್ರೀನಿವಾಸ ಪೂಜಾರಿ, ಸುಧಾಕರ್, ಜನಾರ್ದನ ರೆಡ್ಡಿ ಹಾಗೂ ಅಶೋಕ್ ಸೇರಿದಂತೆ ಅನೇಕರ ಅವಧಿಯಲ್ಲಿ ಈ ಹಗರಣಗಳು ನಡೆದಿವೆ ಎಂದು ದೂರಿ, ಇದಕ್ಕೆ ಬಿಜೆಪಿ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿ ಗೃಹಿಣಿಯರಿಗೆ ತಿಂಗಳಿಗೆ 2 ಸಾವಿರ ರೂಪಾಯಿ ನೀಡುತ್ತಿದೆಯೆಂದೂ, ಅಭಿವೃದ್ಧಿ ಕಾರ್ಯಗಳಿಗೆ 57 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆಯೆಂದೂ ತಿಳಿಸಿದ ಅವರು, ಬರ ಪರಿಸ್ಥಿತಿಯ ಬಗ್ಗೆ ಮಾತನಾಡಲು ವಿಪಕ್ಷಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು.

ಶ್ರೀರಾಮುಲು ಅವರು ಹಿಂದಿನ ದಿನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು ಅಗೌರವದಿಂದ ಮಾತನಾಡಿದ್ದನ್ನು ಆಕ್ಷೇಪಿಸಿದ ಪ್ರದೀಪ್ ಈಶ್ವರ್, ಇನ್ನು ಮುಂದೆ ರಾಹುಲ್ ಗಾಂಧಿ ಬಗ್ಗೆ ಅಗೌರವದಿಂದ ಮಾತನಾಡಿದರೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ, ಮಾತಿನಲ್ಲಿ ನಿಯಂತ್ರಣ ಇಟ್ಟುಕೊಳ್ಳುವಂತೆ ಶ್ರೀರಾಮುಲು ಅವರಿಗೆ ಆಗ್ರಹಿಸಿದರು.

ಖಾಸಗಿ ದ್ವಿಚಕ್ರ ವಾಹನ ಮಾಲೀಕರಿಗೆ ಬೈಕ್ ಟ್ಯಾಕ್ಸಿ ನಡೆಸಲು ಅವಕಾಶ ನೀಡಿ; ರಾಜ್ಯಗಳಿಗೆ ಗಡ್ಕರಿ ಮನವಿ!

0

ನವದೆಹಲಿ: ಖಾಸಗಿ ದ್ವಿಚಕ್ರ ವಾಹನ ಮಾಲೀಕರಿಗೆ ಬೈಕ್ ಟ್ಯಾಕ್ಸಿ ಸೇವೆ ನಿರ್ವಹಿಸಲು ಅವಕಾಶ ನೀಡುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ.

ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಖಾಸಗಿ ದ್ವಿಚಕ್ರ ವಾಹನಗಳ ಮೂಲಕ ಪ್ರಯಾಣಿಕರನ್ನು ಸಾಗಿಸುವ ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಲಾಗಿದೆಯಾದರೂ, ಕೆಲ ರಾಜ್ಯಗಳಲ್ಲಿ ಇಂತಹ ಸೇವೆಗಳಿಗೆ ಇನ್ನೂ ಅವಕಾಶ ನೀಡಿಲ್ಲ ಎಂದು ಗಡ್ಕರಿ ತಿಳಿಸಿದ್ದಾರೆ. ಸಾರಿಗೆ ಸೌಲಭ್ಯ ರಾಜ್ಯಗಳ ವ್ಯಾಪ್ತಿಗೆ ಬರುವ ವಿಷಯವಾಗಿರುವುದರಿಂದ, ತಮ್ಮ ತಮ್ಮ ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆ ಜಾರಿಗೆ ತರಬೇಕೇ ಅಥವಾ ಬೇಡವೇ ಎಂಬುದನ್ನು ರಾಜ್ಯ ಸರ್ಕಾರಗಳೇ ನಿರ್ಧರಿಸಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳು ಸೀಮಿತವಾಗಿರುವ ಹಿನ್ನೆಲೆಯಲ್ಲಿ, ಬೈಕ್ ಟ್ಯಾಕ್ಸಿ ಸೇವೆ ಜನರಿಗೆ ಹೊಸ ಆದಾಯದ ಮೂಲವಾಗಬಹುದೆಂದೂ, ಖಾಸಗಿ ದ್ವಿಚಕ್ರ ವಾಹನಗಳನ್ನು ಬಳಸಿಕೊಂಡು ಜನರು ಹೆಚ್ಚುವರಿ ಆದಾಯ ಗಳಿಸಲು ಇದು ಸಹಕಾರಿಯಾಗಲಿದೆಯೆಂದೂ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ. ಬೈಕ್ ಟ್ಯಾಕ್ಸಿ ಸೇವೆಗಳನ್ನು ಉತ್ತೇಜಿಸುವುದರಿಂದ ಸುಮಾರು 8 ಕೋಟಿ ಜನರಿಗೆ ಉದ್ಯೋಗ ಸಿಗುವ ಸಾಧ್ಯತೆಯಿದೆಯೆಂದೂ, ಉದ್ಯೋಗಾವಕಾಶಗಳು ಕಡಿಮೆ ಇರುವ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಇದು ಹೆಚ್ಚು ಪ್ರಯೋಜನಕಾರಿಯಾಗಲಿದೆಯೆಂದೂ ಅವರು ಸಲಹೆ ನೀಡಿದ್ದಾರೆ.

ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಲು ಅಗತ್ಯವಿರುವ ಪರವಾನಗಿ, ವಿಮೆ ಹಾಗೂ ಇತರ ನಿಯಮಗಳು ಆಯಾ ರಾಜ್ಯಗಳ ಕಾನೂನು ಮತ್ತು ನಿಯಮಾವಳಿಗಳ ಮೇಲೆ ಅವಲಂಬಿತವಾಗಿರುವುದರಿಂದ, ಕೇಂದ್ರ ಸಚಿವರ ಹೇಳಿಕೆಯ ಆಧಾರದ ಮೇಲೆ ದೇಶದ ಎಲ್ಲ ರಾಜ್ಯಗಳಲ್ಲೂ ತಕ್ಷಣವೇ ಬೈಕ್ ಟ್ಯಾಕ್ಸಿಗೆ ಅನುಮತಿ ದೊರೆಯುತ್ತದೆ ಎಂದು ಭಾವಿಸುವುದು ಸರಿಯಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಮುಂದುವರಿದು ಮಾತನಾಡಿದ ಗಡ್ಕರಿ, ಸಂಚಾರ ನಿಯಮಗಳನ್ನು ಪದೇಪದೇ ಉಲ್ಲಂಘಿಸುವ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಎಚ್ಚರಿಸಿದ್ದಾರೆ. ಚಾಲಕರಿಗೆ ಸುರಕ್ಷಿತ ವಾಹನ ಚಾಲನೆಯ ಕುರಿತು ಸೂಕ್ತ ಶಿಕ್ಷಣ ಮತ್ತು ತರಬೇತಿ ನೀಡುವ ಅಗತ್ಯವಿದೆಯೆಂದೂ, ವಿಶೇಷವಾಗಿ ಭಾರಿ ವಾಹನಗಳು ಹಾಗೂ ನಿರ್ಮಾಣ ಕಾಮಗಾರಿಗಳಲ್ಲಿ ಬಳಸುವ ಉಪಕರಣಗಳ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರಸ್ತುತ ಸಮರ್ಪಕ ತರಬೇತಿ ವ್ಯವಸ್ಥೆ ಇಲ್ಲ ಎಂದೂ ಕೇಂದ್ರ ಸಚಿವರು ಒತ್ತಿ ಹೇಳಿದ್ದಾರೆ.

ಪೊಲೀಸರಿಂದ ತಪ್ಪಿಸಿಕೊಳ್ಳಲು ನೀರಿನಡಿ ಅಡಗಿದ ರೌಡಿಶೀಟರ್ ಬಂಧನ

0

ಶಿವಮೊಗ್ಗ: ಪೊಲೀಸರಿಂದ ತಪ್ಪಿಸಿಕೊಳ್ಳಲು ರೌಡಿಶೀಟರ್‌ ಒಬ್ಬ ಹಳ್ಳದ ನೀರಿನಲ್ಲಿ ಸುಮಾರು ಅರ್ಧಗಂಟೆ ಮುಳುಗಿ ಅಡಗಿದ್ದ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಮಹಾಭಾರತದ ಯುದ್ಧದ ಕೊನೆಯ ದಿನ ಪಾಂಡವರಿಂದ ತಪ್ಪಿಸಿಕೊಳ್ಳಲು ದುರ್ಯೋಧನ ವೈಶಂಪಾಯನ ಸರೋವರದಲ್ಲಿ ಅಡಗಿದ್ದ ಪ್ರಸಂಗವನ್ನು ನೆನಪಿಸುವಂತಿರುವ ಈ ಘಟನೆ ಇದೀಗ ಗಮನ ಸೆಳೆದಿದೆ.

ಭದ್ರಾವತಿಯ ರೌಡಿಶೀಟರ್‌ ದಿಲೀಪ್ ಅಲಿಯಾಸ್ ಕರಿಯಾ ನೀರಿನಲ್ಲಿ ಅಡಗಿದ್ದ ವ್ಯಕ್ತಿ. ಈತನ ವಿರುದ್ಧ ಕಳ್ಳತನ, ಕೊಲೆ ಯತ್ನ ಸೇರಿದಂತೆ 16 ಪ್ರಕರಣಗಳಿವೆ. ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಮೂರು ಬಾರಿ ವಾರಂಟ್ ಜಾರಿಯಾಗಿತ್ತು. ಹೀಗಾಗಿ ಸೆಪ್ಟೆಂಬರ್ 2ರಂದು ನ್ಯೂ ಟೌನ್ ಪೊಲೀಸ್ ಠಾಣೆಯ ಸಿಬ್ಬಂದಿ ಆತನ ಬಂಧನಕ್ಕೆ ತೆರಳಿದ್ದರು.

ಪೊಲೀಸರು ಬರುತ್ತಿರುವ ಮಾಹಿತಿ ತಿಳಿದ ದಿಲೀಪ್ ಸ್ಥಳದಿಂದ ಪರಾರಿಯಾಗಿದ್ದ. ಬಳಿಕ ಭಂಡಾರಹಳ್ಳಿಯ ಹಳ್ಳದ ಬಳಿ ಆತ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಸ್ಥಳಕ್ಕೆ ತೆರಳಿ ಹುಡುಕಾಟ ನಡೆಸಿದರೂ ದಿಲೀಪ್ ಪತ್ತೆಯಾಗಿರಲಿಲ್ಲ.

ಈ ವೇಳೆ ಹಳ್ಳದಲ್ಲಿ ಕಳೆ ಸರಿದಿರುವುದನ್ನು ಪೊಲೀಸರು ಗಮನಿಸಿದ್ದಾರೆ. ಅನುಮಾನಗೊಂಡ ನ್ಯೂ ಟೌನ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ರಮೇಶ್ ಹಾಗೂ ಸಿಬ್ಬಂದಿ ಪ್ರಸನ್ನ ಹಳ್ಳಕ್ಕೆ ಇಳಿದು ಪರಿಶೀಲನೆ ನಡೆಸಿದ್ದಾರೆ. ನೀರಿನ ಅಡಿಯಿಂದ ಗುಳ್ಳೆಗಳು ಬರುತ್ತಿರುವುದು ಗಮನಕ್ಕೆ ಬಂದಿದ್ದು, ಪೊಲೀಸರು ಸುತ್ತುವರಿದು ದಿಲೀಪ್ ಅಲಿಯಾಸ್ ಕರಿಯಾನನ್ನು ಹಿಡಿದಿದ್ದಾರೆ.

ಬಳಿಕ ಹಳ್ಳದಲ್ಲೇ ಆತನ ಕೈಗೆ ಕೋಳ ತೊಡಿಸಿ ದಂಡೆಯ ಮೇಲೆ ಕರೆತರಲಾಗಿದೆ. ನ್ಯೂ ಟೌನ್ ಠಾಣೆ ಪೊಲೀಸರ ಕಾರ್ಯಾಚರಣೆಗೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.