ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಗ್ರಾಮ ದೇವತೆಗಳಾದ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರ್ಗಮ್ಮ ದೇವಿಯರ ಹರಿಜಾತ್ರಾ ಮಹೋತ್ಸವ 18 ವರ್ಷಗಳ ಬಳಿಕ ಒಕ್ಕಲಗೇರಿ ಓಣಿಯಲ್ಲಿ ಭಕ್ತಿಭಾವ ಹಾಗೂ ಸಂಭ್ರಮದಿಂದ ನಡೆಯುತ್ತಿದ್ದು, ಜಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೇವಿಯರ ದರ್ಶನ ಪಡೆದು ಪುನೀತರಾದರು.
ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಭಾರತ ದೇಶ ಧರ್ಮ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಪರಂಪರೆಯಿಂದ ಶ್ರೀಮಂತವಾಗಿದೆ. ಜಗತ್ತಿನ ಹಲವೆಡೆ ಒಂದೇ ಧರ್ಮದವರೇ ಪರಸ್ಪರ ಬಡಿದಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಭಾರತದಲ್ಲಿ ವಿವಿಧ ಧರ್ಮ, ಜಾತಿ, ಪಂಥಗಳ ಜನರು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಇದಕ್ಕೆ ದೇಶದ ಧರ್ಮ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಪರಂಪರೆಯೇ ಕಾರಣ ಎಂದರು.
18 ವರ್ಷಗಳ ಬಳಿಕ ದ್ಯಾಮವ್ವ ಹಾಗೂ ದುರ್ಗಮ್ಮ ದೇವಿಯರ ಆಶೀರ್ವಾದ ಪಡೆಯುವ ಅವಕಾಶ ನಮ್ಮೆಲ್ಲರ ತಂದೆ-ತಾಯಿಯರ ಪುಣ್ಯದ ಫಲವಾಗಿದೆ. ಜಾತಿ, ಮತ, ಪಂಥ, ಪಕ್ಷದ ಭೇದವಿಲ್ಲದೆ ದೇವಿಯರ ಭಕ್ತರಾಗಿ ಒಂದೆಡೆ ಸೇರಿರುವುದು ನಮ್ಮ ಪುಣ್ಯ. ರಾಜ್ಯದ ಕೆಲವೆಡೆ ಅತಿವೃಷ್ಟಿ, ಇನ್ನೂ ಕೆಲವೆಡೆ ಅನಾವೃಷ್ಟಿ ಉಂಟಾಗಿದೆ. ಎಲ್ಲೆಡೆ ಉತ್ತಮ ಮಳೆ-ಬೆಳೆ ಆಗಲಿ ಎಂದು ಜಾತ್ರೆಯಲ್ಲಿ ಸೇರಿರುವ ಭಕ್ತರೆಲ್ಲರೂ ದೇವಿಯರಲ್ಲಿ ಪ್ರಾರ್ಥಿಸೋಣ ಎಂದು ಹೇಳಿದರು.
ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ದೇಶದಲ್ಲಿ ಭ್ರಷ್ಟಾಚಾರ, ಅನಾಚಾರ ಹಾಗೂ ದುರಾಚಾರ ಮಿತಿಮೀರಿವೆ. ದೇವಿ ರಕ್ತಬೀಜಾಸುರನನ್ನು ಸಂಹರಿಸಿದಂತೆ ಸಮಾಜದಲ್ಲಿನ ದುಷ್ಪ್ರವೃತ್ತಿಗಳನ್ನು ಮೆಟ್ಟಿಹಾಕಲು ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಯುವ ಮುಖಂಡ ಅನಿಲ ಮೆಣಸಿನಕಾಯಿ ಮಾತನಾಡಿ, ಸಮಾನತೆ, ಜಾತ್ಯತೀತತೆ ಹಾಗೂ ಪಕ್ಷಾತೀತ ಭಾವನೆಯೊಂದಿಗೆ ಗ್ರಾಮದೇವತೆಗಳ ಜಾತ್ರೆ ನಡೆಯುತ್ತಿದೆ. ನಮ್ಮ ಹಿರಿಯರು ಜಾತ್ರೆಯನ್ನು ಯಾವ ಭಕ್ತಿ-ಭಾವದಿಂದ ಆಚರಿಸುತ್ತಿದ್ದರೋ ಅದನ್ನು ಮುಂದಿನ ಪೀಳಿಗೆಯೂ ಮುಂದುವರಿಸಬೇಕು. ಗದಗ ನಗರದಲ್ಲಿ ನಡೆಯುತ್ತಿರುವ ಈ ಜಾತ್ರೆ ರಾಜ್ಯ ಮಟ್ಟದಲ್ಲಿ ಇತಿಹಾಸ ನಿರ್ಮಿಸಿದೆ. ಭಕ್ತಿ ಇದ್ದಲ್ಲಿ ಶಕ್ತಿ ಇರುತ್ತದೆ. ಎಲ್ಲರ ಒಳಿತಿಗಾಗಿ ದೇವಿಯರಲ್ಲಿ ಭಕ್ತಿಯಿಂದ ಪ್ರಾರ್ಥಿಸೋಣ ಎಂದರು.
ಅಡ್ನೂರ-ಗದಗ ಮಠದ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಆಧ್ಯಾತ್ಮಿಕ ವಿದ್ಯಾಶ್ರಮದ ಶಿವಶರಣೆ ಶ್ರೀ ನೀಲಮ್ಮತಾಯಿ ಅಸುಂಡಿ ಪ್ರವಚನ ನೀಡಿದರು. ಟ್ರಸ್ಟ್ ಸಮಿತಿ ಅಧ್ಯಕ್ಷ ಕೊಟ್ರಪ್ಪ ನಿಂಗಪ್ಪ ಕಮತರ ಅಧ್ಯಕ್ಷತೆ ವಹಿಸಿದ್ದರು.
ಡಾ. ಎನ್.ಎಸ್. ನಿಂಬಣ್ಣವರ, ಡಾ. ಎಸ್.ಎನ್. ಬಿರಾದಾರ, ಡಾ. ಶ್ರೀಮತಿ ಎಂ.ಡಿ. ಗೋಜನೂರ, ವೀರಣ್ಣ ಮೇಟಿ, ಈಶ್ವರಯ್ಯ ಹಿರೇಮಠ, ಸಿದ್ದಲಿಂಗಪ್ಪ ಎಂ., ಗೋಪಾಲ ಅಗರವಾಲ, ರಾಜು ಖಾನಪ್ಪನವರ, ಈರಣ್ಣ ಕರಬಿಷ್ಠಿ, ನೀಲಪ್ಪ ಅಗರವಾಲ, ನೀಲಪ್ಪ ಕಮತರ, ಸಿದ್ಧಲಿಂಗೇಶ್ವರ ಪಾಟೀಲ, ಸತ್ಯಪ್ಪ ಗಿಡ್ಡಹನಮಣ್ಣವರ, ಸಿದ್ದಣ್ಣ ಮಾರನಬಸರಿ, ಕುಮಾರ ಮಾರನಬಸರಿ, ಉಮೇಶಗೌಡ ಪಾಟೀಲ, ಸದಾಶಿವಯ್ಯ ಮದರಿಮಠ, ಬಸವರಾಜ ಬಿಂಗಿ ಸೇರಿದಂತೆ ಹಲವರು ಉಪಸ್ಥಿತರಿದ್ದು ಸನ್ಮಾನ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಬಸವರಾಜ ಮಡಿವಾಳರ, ಪರಶುರಾಮ ಹಳ್ಳದ, ಮಂಜುನಾಥ ಕಮತರ, ಮಲ್ಲಿಕಾರ್ಜುನ ಮಹಾಂತಶೆಟ್ಟರ, ಪ್ರಕಾಶ ಕಟ್ಟಿ, ಚೇತನ ಅಬ್ಬಿಗೇರಿ, ಶಿವು ಕುರಗೋಡ, ಆದರ್ಶ ಬಳಗಾನೂರ, ಕುಮಾರ ಮೆಣಸಗಿ, ಈಶ್ವರ ಹಳ್ಳಿ, ಈಶ್ವರ ಗೋಜನೂರ, ಸಚಿನ್ ಮೆಣಸಗಿ, ನಾಗರಾಜ ಮೆಣಸಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.
ಭಾರತದ ಧರ್ಮ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಪರಂಪರೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ನಮ್ಮ ದೇಶದ ಸಾಧು-ಸಂತರನ್ನು ಬೇರೆ ದೇಶಗಳಿಗೂ ಆಹ್ವಾನಿಸಲಾಗುತ್ತಿರುವುದು ಭಾರತೀಯ ಆಧ್ಯಾತ್ಮಿಕ ಪರಂಪರೆಯ ಶಕ್ತಿಗೆ ಸಾಕ್ಷಿಯಾಗಿದೆ.
— ಕೆ.ಎಸ್. ಈಶ್ವರಪ್ಪ
ಜಾತಿ, ಮತ, ಪಕ್ಷದ ಭೇದವಿಲ್ಲದೆ ದ್ಯಾಮವ್ವ-ದುರ್ಗಮ್ಮರ ಜಾತ್ರೆ ನಡೆಯುತ್ತಿರುವುದು ವಿಶೇಷ. ಭಕ್ತಿ ಇದ್ದಲ್ಲಿ ಶಕ್ತಿ ಇರುತ್ತದೆ. ಎಲ್ಲರ ಒಳಿತಿಗಾಗಿ ದೇವಿಯರಲ್ಲಿ ಪ್ರಾರ್ಥಿಸೋಣ.
— ಅನಿಲ ಮೆಣಸಿನಕಾಯಿ, ಯುವ ಮುಖಂಡರು