ಐಸಿಸಿ ಬಿಡುಗಡೆ ಮಾಡಿರುವ ನೂತನ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. 916 ರೇಟಿಂಗ್ ಪಾಯಿಂಟ್ಗಳೊಂದಿಗೆ ಇಶಾನ್ ಕಿಶನ್ ಮಹತ್ವದ ಸಾಧನೆ ಮಾಡಿದ್ದಾರೆ.
ಟಿ20 ಶ್ರೇಯಾಂಕದಲ್ಲಿ ಅತಿ ಹೆಚ್ಚು ರೇಟಿಂಗ್ ಪಾಯಿಂಟ್ಗಳನ್ನು ಗಳಿಸಿದ ಭಾರತೀಯ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಇಶಾನ್ ಕಿಶನ್ ಈಗ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಅವರನ್ನು ಹಿಂದಿಕ್ಕಿದ್ದಾರೆ.
ವಿರಾಟ್ ಕೊಹ್ಲಿ ಅವರ ಅತ್ಯುತ್ತಮ ಟಿ20 ರೇಟಿಂಗ್ ಪಾಯಿಂಟ್ 909 ಆಗಿದ್ದರೆ, ಸೂರ್ಯಕುಮಾರ್ ಯಾದವ್ 912 ರೇಟಿಂಗ್ ಪಾಯಿಂಟ್ಗಳನ್ನು ಪಡೆದಿದ್ದರು. ಇದೀಗ ಇಶಾನ್ ಕಿಶನ್ 916 ಅಂಕಗಳೊಂದಿಗೆ ಇಬ್ಬರನ್ನೂ ಹಿಂದಿಕ್ಕಿದ್ದಾರೆ.
ಆದರೆ ಟಿ20 ಇತಿಹಾಸದಲ್ಲಿ ಅತಿ ಹೆಚ್ಚು ರೇಟಿಂಗ್ ಪಾಯಿಂಟ್ ಪಡೆದ ಭಾರತೀಯ ಆಟಗಾರ ಎಂಬ ದಾಖಲೆ ಇನ್ನೂ ಅಭಿಷೇಕ್ ಶರ್ಮಾ ಅವರ ಹೆಸರಿನಲ್ಲಿದೆ. ಅಭಿಷೇಕ್ ಶರ್ಮಾ 931 ರೇಟಿಂಗ್ ಪಾಯಿಂಟ್ಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಅಭಿಷೇಕ್ ಶರ್ಮಾ ಸುಮಾರು 11 ತಿಂಗಳ ಕಾಲ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿದ್ದರು. ಕಳೆದ ವರ್ಷದ ಜುಲೈನಲ್ಲಿ ಅವರು ಅಗ್ರಸ್ಥಾನಕ್ಕೇರಿದ್ದರು. ಇದೀಗ ಇಶಾನ್ ಕಿಶನ್ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ದಾರೆ.
ಐಸಿಸಿ ಟಿ20 ಶ್ರೇಯಾಂಕದಲ್ಲಿ ಅತಿ ಹೆಚ್ಚು ರೇಟಿಂಗ್ ಪಾಯಿಂಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಇಂಗ್ಲೆಂಡ್ನ ಡೇವಿಡ್ ಮಲನ್ ಎರಡನೇ ಸ್ಥಾನದಲ್ಲಿದ್ದಾರೆ. ನಾಲ್ಕು ಭಾರತೀಯ ಆಟಗಾರರು ಅಗ್ರ ಐದರಲ್ಲಿರುವುದು ವಿಶೇಷವಾಗಿದೆ.
ಇಶಾನ್ ಕಿಶನ್ ಅವರ ಇತ್ತೀಚಿನ ಪ್ರದರ್ಶನವೇ ಶ್ರೇಯಾಂಕ ಏರಿಕೆಗೆ ಪ್ರಮುಖ ಕಾರಣವಾಗಿದೆ. ಜಿಂಬಾಬ್ವೆ ಪ್ರವಾಸದ ವೇಳೆ ಮೂರು ಟಿ20 ಪಂದ್ಯಗಳಲ್ಲಿ ಆಡಿದ್ದ ಇಶಾನ್ 48.33ರ ಸರಾಸರಿಯಲ್ಲಿ 145 ರನ್ ಗಳಿಸಿದ್ದರು. ಅವರ ಸ್ಟ್ರೈಕ್ ರೇಟ್ 154ಕ್ಕಿಂತ ಹೆಚ್ಚಿತ್ತು.
ಈ ಭರ್ಜರಿ ಪ್ರದರ್ಶನದ ಪರಿಣಾಮವಾಗಿ ಇಶಾನ್ ಕಿಶನ್ ಅವರ ರೇಟಿಂಗ್ ಪಾಯಿಂಟ್ಗಳು ಏರಿಕೆಯಾಗಿದ್ದು, ಟಿ20 ಕ್ರಿಕೆಟ್ನಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದ್ದಾರೆ.
ಗುರು ಎಂದರೆ ಕೇವಲ ವ್ಯಕ್ತಿಯಲ್ಲ; ಅಜ್ಞಾನವನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಹಚ್ಚುವ ಶಕ್ತಿ. ಭಾರತೀಯ ಸಂಸ್ಕೃತಿಯಲ್ಲಿ “ಗುರು ಬ್ರಹ್ಮಾ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ” ಎಂಬ ಶ್ಲೋಕವು ಗುರುವಿನ ಸ್ಥಾನವನ್ನು ಅತ್ಯುನ್ನತ ಮಟ್ಟದಲ್ಲಿ ಪ್ರತಿಪಾದಿಸುತ್ತದೆ. ಮನುಷ್ಯನ ಬದುಕಿಗೆ ದಿಕ್ಕು, ದೃಷ್ಟಿ, ಸಂಸ್ಕಾರ ಮತ್ತು ಮೌಲ್ಯಗಳನ್ನು ನೀಡುವ ಮಹಾನ್ ವ್ಯಕ್ತಿತ್ವವೇ ಗುರು. ಅಂತಹ ಗುರುಗಳ ಬಗ್ಗೆ ಕೃತಜ್ಞತೆ ಸಲ್ಲಿಸುವ ದಿನವೇ ಗುರುಪೂರ್ಣಿಮೆ.
ಈ ದಿನವನ್ನು ವೇದವ್ಯಾಸರ ಜನ್ಮದಿನ ಅಥವಾ ವ್ಯಾಸಪೂರ್ಣಿಮೆ ಎಂದೂ ಆಚರಿಸಲಾಗುತ್ತದೆ. ಆದರೆ ಗುರುಪೂರ್ಣಿಮೆ ಕೇವಲ ಧಾರ್ಮಿಕ ಆಚರಣೆಯಲ್ಲ; ಜ್ಞಾನ, ಮೌಲ್ಯ ಹಾಗೂ ಮಾನವೀಯತೆಯನ್ನು ಗೌರವಿಸುವ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ.
ಗುರು ಎಂದರೆ ಶಾಲೆಯ ಶಿಕ್ಷಕರಷ್ಟೇ ಅಲ್ಲ. ಜೀವನದಲ್ಲಿ ಸರಿದಾರಿಯನ್ನು ತೋರಿಸುವ ತಾಯಿ-ತಂದೆ, ಶಿಕ್ಷಕರು, ಆಧ್ಯಾತ್ಮಿಕ ಮಾರ್ಗದರ್ಶಕರು, ಸಮಾಜಸೇವಕರು, ಸಾಹಿತ್ಯಕಾರರು, ವಿಜ್ಞಾನಿಗಳು, ಸ್ನೇಹಿತರು ಮತ್ತು ಬದುಕಿನ ಅನುಭವಗಳೂ ನಮ್ಮ ಗುರುಗಳೇ ಆಗಿದ್ದಾರೆ. ಅಜ್ಞಾನವನ್ನು ಕಳೆದು ಅರಿವಿನ ಬೆಳಕನ್ನು ಹಚ್ಚುವ ಪ್ರತಿಯೊಂದು ಶಕ್ತಿಯೂ ಗುರುವಿನ ಸ್ಥಾನದಲ್ಲಿದೆ.
ಭಾರತೀಯ ಪರಂಪರೆಯನ್ನು ಅವಲೋಕಿಸಿದರೆ ಬಸವಾದಿ ಶಿವಶರಣರ ವಚನಗಳು ಬದುಕಿನ ನಿಜಾರ್ಥವನ್ನು ತಿಳಿಸುವ ಅಮೂಲ್ಯ ಜ್ಞಾನದ ಭಂಡಾರಗಳಾಗಿವೆ. ಬದುಕಿನ ಪ್ರತಿಯೊಂದು ಸಂದರ್ಭವನ್ನೂ ವಿವೇಕದಿಂದ ಎದುರಿಸಿದಾಗ ಮಾತ್ರ ಅನಗತ್ಯ ಗೊಂದಲಗಳಿಂದ ದೂರವಿರಲು ಸಾಧ್ಯ. “ಅರಿವೇ ಗುರು” ಎಂಬ ಭಾವನೆಯೇ ವ್ಯಕ್ತಿಯನ್ನು ನೈತಿಕವಾಗಿ ಉನ್ನತಿಗೇರಿಸುತ್ತದೆ.
ಇಂದು ಗುರುಪೂರ್ಣಿಮೆಯ ಹೆಸರಿನಲ್ಲಿ ಆಧ್ಯಾತ್ಮಿಕತೆಯ ಮಾತುಗಳು ಹೆಚ್ಚಾಗಿದ್ದರೂ, ನಿಜವಾದ ಆಧ್ಯಾತ್ಮ ಅಪರೂಪವಾಗುತ್ತಿದೆ. ಆಧ್ಯಾತ್ಮವೆಂದರೆ ಆಡಂಬರದ ಬದುಕಲ್ಲ; ಆಸೆ-ಆಮಿಷಗಳನ್ನು ಮೀರಿ ಸರಳ, ಮೌಲ್ಯಯುತ ಬದುಕು ನಡೆಸುವುದೇ ನಿಜವಾದ ಸಾಧನೆ. ಆದರೆ ಇತ್ತೀಚಿನ ದಿನಗಳಲ್ಲಿ ವೈಭವದ ಪ್ರದರ್ಶನ ಮತ್ತು ವ್ಯಾಮೋಹಗಳಲ್ಲಿ ಸಿಲುಕಿರುವ ಕೆಲವರು ಗುರುವಿನ ಪವಿತ್ರ ಸ್ಥಾನಕ್ಕೆ ಧಕ್ಕೆಯುಂಟು ಮಾಡುತ್ತಿರುವುದು ವಿಷಾದನೀಯ.
ಈ ಸಂದರ್ಭದಲ್ಲಿ ವಿಜಯಪುರದ ಜ್ಞಾನಯೋಗಾಶ್ರಮದ ಪರಮಪೂಜ್ಯ ಸಿದ್ದೇಶ್ವರ ಶ್ರೀಗಳು ನೆನಪಾಗುತ್ತಾರೆ. ಅವರ ಪ್ರತಿಯೊಂದು ನುಡಿಮುತ್ತೂ ಬದುಕಿಗೆ ದಾರಿದೀಪವಾಗಿತ್ತು. ಸರಳತೆ, ನಿಸ್ವಾರ್ಥತೆ ಮತ್ತು ಜೀವನಮೌಲ್ಯಗಳನ್ನು ಬೋಧಿಸಿದ ಅವರ ವಿಚಾರಧಾರೆಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ. ಅವರಂತಹ ಆದರ್ಶಗಳನ್ನು ಇಂದಿನ ಸಮಾಜ ಅನುಸರಿಸುವ ಅಗತ್ಯ ಹೆಚ್ಚಿದೆ.
ಇದು ಮಾಹಿತಿಯ ಯುಗ. ಮಾಹಿತಿ ಎಲ್ಲೆಡೆ ಸಿಗುತ್ತಿದೆ. ಆದರೆ ಮೌಲ್ಯಯುತ ಜ್ಞಾನ ಮಾತ್ರ ವಿರಳವಾಗುತ್ತಿದೆ. ತಂತ್ರಜ್ಞಾನ ಬೆಳೆಯುತ್ತಿದ್ದರೂ ಸಹನೆ, ಮಾನವೀಯತೆ, ನೈತಿಕತೆ ಮತ್ತು ಸಾಮಾಜಿಕ ಜವಾಬ್ದಾರಿಗಳು ಕುಗ್ಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಇಂದಿನ ಶಿಕ್ಷಕರು ಕೇವಲ ಪಾಠ ಹೇಳುವವರಲ್ಲ. ಅವರು ಮಾರ್ಗದರ್ಶಕರು, ಮೌಲ್ಯ ಶಿಕ್ಷಣದ ಹರಿಕಾರರು, ಮನೋಬಲ ತುಂಬುವವರು ಹಾಗೂ ಸಮಾಜ ಪರಿವರ್ತನೆಯ ಶಿಲ್ಪಿಗಳು. ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ, ಸಾಮಾಜಿಕ ಜಾಲತಾಣಗಳ ವ್ಯಸನ ಮತ್ತು ಕುಟುಂಬ ಮೌಲ್ಯಗಳ ಕುಸಿತದ ನಡುವೆ ಶಿಕ್ಷಕರ ಪಾತ್ರ ಇನ್ನಷ್ಟು ಮಹತ್ವ ಪಡೆದಿದೆ.
ಕುಟುಂಬವೂ ಮೊದಲ ಪಾಠಶಾಲೆಯೇ. ತಾಯಿ-ತಂದೆಯೇ ಮಗುವಿನ ಮೊದಲ ಗುರುಗಳು. ಪ್ರೀತಿ, ಶಿಸ್ತು, ಪ್ರಾಮಾಣಿಕತೆ, ಸೇವಾ ಮನೋಭಾವ ಹಾಗೂ ಮಾನವೀಯತೆಯನ್ನು ಕುಟುಂಬದಲ್ಲಿಯೇ ಕಲಿಸಿದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ.
ಇಂದು ಮೊಬೈಲ್ ಮತ್ತು ಕೃತಕ ಬುದ್ಧಿಮತ್ತೆಯ ಮೂಲಕ ಮಾಹಿತಿ ಕ್ಷಣಾರ್ಧದಲ್ಲಿ ಲಭ್ಯವಾಗುತ್ತದೆ. ಆದರೆ ಮಾಹಿತಿಯನ್ನು ಯಂತ್ರ ನೀಡಬಹುದು; ಬದುಕಿನ ಮೌಲ್ಯಗಳನ್ನು ಕಲಿಸುವುದು ಆದರ್ಶ ಗುರುವಿಗೆ ಮಾತ್ರ ಸಾಧ್ಯ. ಆದ್ದರಿಂದ ತಂತ್ರಜ್ಞಾನದ ಜೊತೆಗೆ ವಿವೇಕ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಗುರುಗಳ ಅಗತ್ಯ ಹಿಂದೆಂದಿಗಿಂತ ಹೆಚ್ಚಾಗಿದೆ.
ಅವಸರದ ಬದುಕು, ಸಹನೆಯ ಕೊರತೆ, ಸಂಬಂಧಗಳ ಬಿರುಕು ಹಾಗೂ ಸ್ವಾರ್ಥದ ನಡುವೆ ಮನುಷ್ಯ ತನ್ನೊಳಗೆ ಬದಲಾವಣೆ ತರಲು ಕಲಿತಾಗ ಮಾತ್ರ ಸಮಾಜದಲ್ಲಿ ಸಕಾರಾತ್ಮಕ ಪರಿವರ್ತನೆ ಸಾಧ್ಯ. ಉತ್ತಮ ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು.
ಗುರುವನ್ನು ಗೌರವಿಸುವ ಸಮಾಜವೇ ಜ್ಞಾನವಂತ ಸಮಾಜ. ಮೌಲ್ಯಗಳನ್ನು ಬೆಳೆಸುವ ಶಿಕ್ಷಣವೇ ರಾಷ್ಟ್ರದ ಭವಿಷ್ಯವನ್ನು ರೂಪಿಸುತ್ತದೆ. ಕೃತಜ್ಞತೆಯೇ ಮಾನವೀಯತೆಯ ಅತ್ಯುನ್ನತ ಗುಣ. ಉತ್ತಮ ಗುರುಗಳನ್ನು ರೂಪಿಸುವುದು ಉತ್ತಮ ಭವಿಷ್ಯವನ್ನು ಕಟ್ಟುವಂತೆಯೇ ಆಗಿದೆ.
ಹೀಗಾಗಿ ಗುರುಪೂರ್ಣಿಮೆ ಕೇವಲ ಒಂದು ಹಬ್ಬವಲ್ಲ; ಅದು ಜ್ಞಾನದ ಬೆಳಕನ್ನು ಆರಾಧಿಸುವ ಜೀವನದರ್ಶನ. ವರ್ಷಕ್ಕೊಮ್ಮೆ ಆಚರಿಸುವ ದಿನವಾಗಿ ಉಳಿಯದೆ, ಪ್ರತಿದಿನವೂ ಗುರುವಿನ ಬೋಧನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪವಾಗಬೇಕು. ಆಗ ಮಾತ್ರ ಜ್ಞಾನ, ಸಂಸ್ಕಾರ, ಮಾನವೀಯತೆ ಮತ್ತು ನೈತಿಕತೆಯಿಂದ ಕೂಡಿದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ.
Oplus_16908288
– ಶ್ರೀಮತಿ ಸುಧಾ ಹುಚ್ಚಣ್ಣವರ ಉಪನ್ಯಾಸಕರು ಹಾಗೂ ಲೇಖಕರು, ಗದಗ
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ಅನಧಿಕೃತವಾಗಿ ತಂಬಾಕು ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಶಿರಹಟ್ಟಿ–ಲಕ್ಷ್ಮೇಶ್ವರ ತಾಲೂಕು ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಜಂಟಿ ತಂಡ ಬುಧವಾರ ದಾಳಿ ನಡೆಸಿ, ಕೊಟ್ಪಾ (COTPA) ಕಾಯ್ದೆ–2003ರಡಿ ₹3,200 ದಂಡ ವಿಧಿಸಿತು.
ಪಟ್ಟಣದ ಬಸ್ ನಿಲ್ದಾಣ ಸೇರಿದಂತೆ ವಿವಿಧ ಪ್ರದೇಶಗಳ ಅಂಗಡಿಗಳ ಮೇಲೆ ದಾಳಿ ನಡೆಸಿದ ತಂಡ, ಕೊಟ್ಪಾ ಕಾಯ್ದೆಯ ಸೆಕ್ಷನ್–4ರಡಿ ನಿಯಮ ಉಲ್ಲಂಘಿಸಿರುವ ಪ್ರಕರಣಗಳನ್ನು ಪತ್ತೆಹಚ್ಚಿತು. ನಿಯಮಾನುಸಾರ ತಂಬಾಕು ಉತ್ಪನ್ನಗಳ ಪ್ಯಾಕೆಟ್ಗಳ ಮೇಲೆ ಶೇ.85ರಷ್ಟು ಆರೋಗ್ಯ ಎಚ್ಚರಿಕೆ ಸಂದೇಶ ಮುದ್ರಿಸದೇ ಇರುವುದು ಹಾಗೂ ಅಂಗಡಿಗಳಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಕಡ್ಡಾಯ ಸೂಚನಾ ಫಲಕ ಅಳವಡಿಸದೇ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ದಂಡ ವಿಧಿಸಿ ಎಚ್ಚರಿಕೆ ನೀಡಲಾಯಿತು.
ಕಾರ್ಯಾಚರಣೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಗೋಪಾಲ ಸುರಪುರ, ಸಿಎಚ್ಇಒ ಎಫ್.ಬಿ. ಹೂಗಾರ, ಹಿರಿಯ ಆರೋಗ್ಯ ನಿರೀಕ್ಷಕರಾದ ಆರ್.ವಿ. ಗುರಣ್ಣವರ, ಎಫ್.ಸಿ. ಹೊಸಮಠ, ಕಿರಿಯ ಆರೋಗ್ಯ ನಿರೀಕ್ಷಕರಾದ ಆರ್.ಕೆ. ಪುಥಳಿಕರ, ಜೆ.ಆರ್. ತಳವಾರ, ಸಾಮಾಜಿಕ ಕಾರ್ಯಕರ್ತ ಬಿ.ಸಿ. ಚಿತ್ತರಗಿ, ಪ್ರೊಬೆಷನರಿ ಪಿಎಸ್ಐ ಸೂರ್ಯಕಾಂತ ಎಲ್.ಜಿ. ಹಾಗೂ ಎಎಸ್ಐ ಸಿ.ಆರ್. ನದಾಫ್ ಭಾಗವಹಿಸಿದ್ದರು.
ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆಯಾಗದ ಪರಿಣಾಮ ತೇವಾಂಶದ ಕೊರತೆಯಿಂದ ಬೆಳೆಗಳು ನಾಶವಾಗುತ್ತಿದ್ದು, ಬೇಸತ್ತ ರೈತರು ತಾವೇ ಬೆಳೆಗಳನ್ನು ಹರಗಿ ಹಾಕುವ ಪರಿಸ್ಥಿತಿ ಎದುರಾಗಿದೆ. ನರೇಗಲ್ಲ ಹೋಬಳಿ ವ್ಯಾಪ್ತಿಯ ಅಬ್ಬಿಗೇರಿ ಗ್ರಾಮದ ರೈತ ಸಿದ್ದಪ್ಪ ಹನಮನಾಳ ಅವರು ಮಂಗಳವಾರ ತಮ್ಮ ಎರಡು ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಉಳ್ಳಾಗಡ್ಡಿ ಹಾಗೂ ಮೆಣಸಿನಕಾಯಿ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ಹರಗಿ ನಾಶಪಡಿಸಿದರು.
ದುಬಾರಿ ಬೆಲೆಗೆ ಬೀಜ, ಗೊಬ್ಬರ ಖರೀದಿಸಿ ಉತ್ತಮ ಆದಾಯದ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದರೂ, ಮಳೆಯ ಕೊರತೆಯಿಂದ ಬೆಳೆ ಸಮರ್ಪಕವಾಗಿ ಮೊಳಕೆಯೊಡೆಯಲಿಲ್ಲ. ಅಲ್ಪಸ್ವಲ್ಪ ಬಂದಿದ್ದ ಬೆಳೆ ಸಹ ಬಿಸಿಗಾಳಿ ಮತ್ತು ತೇವಾಂಶದ ಕೊರತೆಯಿಂದ ಒಣಗುತ್ತಿದ್ದು, ಹಾಕಿದ ಬಂಡವಾಳವೂ ಕೈತಪ್ಪಿದಂತಾಗಿದೆ ಎಂದು ರೈತ ಸಿದ್ದಪ್ಪ ಹನಮನಾಳ ಅಳಲು ತೋಡಿಕೊಂಡರು.
ರೋಣ ತಾಲೂಕು ರೈತ ಸಂಘದ ಅಧ್ಯಕ್ಷ ಎಸ್.ಎ. ಚೌರೆಡಿ ಮಾತನಾಡಿ, ಗದಗ ಜಿಲ್ಲೆಯಲ್ಲಿ ಮುಂಗಾರು ಸಂಪೂರ್ಣ ವಿಫಲವಾಗಿದ್ದು, ಬಹುತೇಕ ಬೆಳೆಗಳು ನಾಶವಾಗುವ ಹಂತ ತಲುಪಿವೆ. ಜಿಲ್ಲಾಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿ ವಾರ ಕಳೆದರೂ ಯಾವುದೇ ಪರಿಹಾರ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ರೈತರು ಪ್ರತಿದಿನ ಬೆಳೆ ನಾಶಪಡಿಸುತ್ತಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ರಾಜ್ಯ ಸರ್ಕಾರ ತಕ್ಷಣವೇ ಬೆಳೆಹಾನಿ ಪರಿಹಾರ ಹಾಗೂ ಬೆಳೆ ವಿಮೆ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
“ಸಾಲ ಮಾಡಿ ಬೆಳೆ ಬೆಳೆದಿದ್ದೇವೆ. ಮಳೆ ಕೈಕೊಟ್ಟಿದ್ದರಿಂದ ಬೆಳೆ ಸಂಪೂರ್ಣ ಹಾಳಾಗಿದೆ. ಗದಗ ಜಿಲ್ಲೆಯನ್ನು ತಕ್ಷಣ ಬರಪೀಡಿತ ಎಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು.” – ಸಿದ್ದಪ್ಪ ಹನಮನಾಳ, ರೈತ
ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಶ್ರೀ ಹಡಪದ ಅಪ್ಪಣ್ಣ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಬುಧವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು, ಹಿರಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಾಜದ ಗಣ್ಯರು ಉಪಸ್ಥಿತರಿದ್ದರು.
ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್-2026) ಪ್ರಕ್ರಿಯೆಯಲ್ಲಿ 9,02,947 ಎನ್ಯುಮರೇಷನ್ ಫಾರ್ಮ್ಗಳನ್ನು ವಿತರಿಸುವ ಮೂಲಕ ಶೇ.100 ಸಾಧನೆ ಮಾಡಲಾಗಿದೆ. ಇದುವರೆಗೆ 7,74,971 ಫಾರ್ಮ್ಗಳ ಡಿಜಿಟಲೀಕರಣ ಪೂರ್ಣಗೊಂಡಿದ್ದು, ಶೇ.85.83ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಚುನಾವಣಾ ಆಯೋಗದ ಪರಿಷ್ಕೃತ ವೇಳಾಪಟ್ಟಿಯಂತೆ ಬಿಎಲ್ಒಗಳು ಆಗಸ್ಟ್ 8ರವರೆಗೆ ಮನೆ-ಮನೆಗೆ ಭೇಟಿ ನೀಡಿ ಎನ್ಯುಮರೇಷನ್ ಫಾರ್ಮ್ ವಿತರಣೆ ಹಾಗೂ ಸಂಗ್ರಹ ಕಾರ್ಯ ಮುಂದುವರಿಸಲಿದ್ದಾರೆ ಎಂದು ಹೇಳಿದರು.
ಎಸ್ಐಆರ್ ಪ್ರಕ್ರಿಯೆ ಕುರಿತು ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ, ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮತದಾರರು ಬಿಎಲ್ಒಗಳಿಗೆ ಅಗತ್ಯ ದಾಖಲೆ ಹಾಗೂ ಮಾಹಿತಿಯನ್ನು ಒದಗಿಸಬೇಕು. ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಪಾರದರ್ಶಕ ಹಾಗೂ ನಿಖರ ಮತದಾರರ ಪಟ್ಟಿ ಸಿದ್ಧಪಡಿಸುವುದೇ ಈ ವಿಶೇಷ ಪರಿಷ್ಕರಣೆಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ 1,15,655 ಎನ್ಯುಮರೇಷನ್ ಫಾರ್ಮ್ಗಳನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ. ಇದರಲ್ಲಿ 29,907 ಮರಣ ಹೊಂದಿದ ಮತದಾರರು, 66,286 ಶಾಶ್ವತವಾಗಿ ಸ್ಥಳಾಂತರಗೊಂಡವರು, 13,240 ಮಂದಿ ಈಗಾಗಲೇ ಬೇರೆಡೆ ಹೆಸರು ನೋಂದಾಯಿಸಿಕೊಂಡವರು, 5,853 ಗೈರುಹಾಜರಿದ್ದವರು ಹಾಗೂ 369 ವಿವಿಧ ಕಾರಣಗಳಿಂದ ಫಾರ್ಮ್ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ಜಿಲ್ಲಾಧಿಕಾರಿ ವಿವರಿಸಿದರು. ಜಿಲ್ಲೆಯಲ್ಲಿ 967 ಮತಗಟ್ಟೆಗಳು, 967 ಬಿಎಲ್ಒಗಳು, 97 ಬಿಎಲ್ಒ ಮೇಲ್ವಿಚಾರಕರು, 967 ಮತದಾರರ ನೆರವು ಕೇಂದ್ರಗಳು ಹಾಗೂ 161 ಬಿಎಲ್ಒ ನೆರವು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಗಂಗಪ್ಪ ಎಂ., ಬಸನಗೌಡ ಕೋಟೂರ, ನಂದಾ ಹಣಬರಟ್ಟಿ, ಎಸ್.ಡಿ. ಪಾಟೀಲ ಹಾಗೂ ಚುನಾವಣಾ ತಹಶೀಲ್ದಾರ ಸಂತೋಷ ಹಿರೇಮಠ ಉಪಸ್ಥಿತರಿದ್ದರು.
ವಿಧಾನಸಭಾ ಕ್ಷೇತ್ರವಾರು ಡಿಜಿಟಲೀಕರಣ
ಶಿರಹಟ್ಟಿ – 2,00,222
ಗದಗ – 1,93,722
ರೋಣ – 2,06,733
ನರಗುಂದ – 1,74,294
ಎಸ್ಐಆರ್ ಪರಿಷ್ಕೃತ ವೇಳಾಪಟ್ಟಿ
ಆಗಸ್ಟ್ 8 – ಫಾರ್ಮ್ ವಿತರಣೆ ಹಾಗೂ ಮತಗಟ್ಟೆಗಳ ಪುನರ್ವಿಂಗಡಣೆ ಪೂರ್ಣ
ಆಗಸ್ಟ್ 17 – ಕರಡು ಮತದಾರರ ಪಟ್ಟಿ ಪ್ರಕಟಣೆ
ಆಗಸ್ಟ್ 17ರಿಂದ ಸೆಪ್ಟೆಂಬರ್ 16ರವರೆಗೆ – ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆ
ಅಕ್ಟೋಬರ್ 15ರೊಳಗೆ – ಆಕ್ಷೇಪಣೆಗಳ ವಿಲೇವಾರಿ
ಅಕ್ಟೋಬರ್ 19 – ಅಂತಿಮ ಮತದಾರರ ಪಟ್ಟಿ ಪ್ರಕಟಣೆ
“ಎಸ್ಐಆರ್ ಕುರಿತು ಊಹಾಪೋಹಗಳಿಗೆ ಕಿವಿಗೊಡದೆ, ಮತದಾರರು ಬಿಎಲ್ಒಗಳಿಗೆ ಅಗತ್ಯ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸಬೇಕು.”
ವಿಜಯಸಾಕ್ಷಿ ಸುದ್ದಿ, ಗದಗ: ಕಡ್ಲಿಗಡಬ ಹುಣ್ಣಿಮೆ ಹಾಗೂ ಗುರುಪೌರ್ಣಿಮೆ ಅಂಗವಾಗಿ ನಭಾಪೂರ ಹದ್ದಿನಲ್ಲಿರುವ ಶ್ರೀ ಮಲ್ಲೆಮ್ಮತಾಯಿ ದೇವಸ್ಥಾನದಲ್ಲಿ ಬುಧವಾರ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.
ಈ ಪ್ರಯುಕ್ತ ಬೆಳಿಗ್ಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ವಿಜೃಂಭಣೆಯಿಂದ ನಡೆಯಿತು. ಬೆಳಧಡಿ ಗ್ರಾಮದ ಕೃಷ್ಣಪ್ಪ ಶಿವಪ್ಪ ತೋಟದ ಕುಟುಂಬದವರು ಅಭಿಷೇಕ ಸೇವೆಯನ್ನು ನೆರವೇರಿಸಿ ದೇವಿಯ ಕೃಪೆಗೆ ಪಾತ್ರರಾದರು.
ಪೂಜಾ ವಿಧಿವಿಧಾನಗಳನ್ನು ಅರ್ಚಕ ಮಲ್ಲಯ್ಯಸ್ವಾಮಿ ಅಂಗಡಿ ಹಿರೇಮಠ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು, ತಾಯಂದಿರು ಹಾಗೂ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಲ್ಲೆಮ್ಮತಾಯಿಯ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಭಾಗವಹಿಸಿದರು.
ಪೂಜೆ ಬಳಿಕ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಗಿದ್ದು, ತೋಟದ ಕುಟುಂಬದವರು ಪ್ರಸಾದ ಸೇವೆಯ ವ್ಯವಸ್ಥೆ ಮಾಡಿದರು. ಭಕ್ತರು ದೇವಿಯ ಆಶೀರ್ವಾದ ಪಡೆದು ಧನ್ಯತೆ ಮೆರೆದರು.
ಹಾಸನ: ಇತ್ತೀಚೆಗೆ ನಿಧನರಾದ ಶ್ರೀಮತಿ ಚನ್ನಮ್ಮ ಅವರ ಉತ್ತರ ಕ್ರಿಯೆಯ ವಿಧಿ ವಿಧಾನಗಳು ಗುರುವಾರ ಹರದನಹಳ್ಳಿಯ ಮಾವಿನಕೆರೆ ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಅವರ ಸಮಾಧಿ ಸ್ಥಳದಲ್ಲಿ ನಡೆಯಲಿವೆ.
ಉತ್ತರ ಕ್ರಿಯೆಯ ಹಿಂದಿನ ದಿನವಾದ ಬುಧವಾರ, ಸಮಾಧಿ ಸ್ಥಳದಲ್ಲಿ ನಡೆಯುತ್ತಿರುವ ಸಿದ್ಧತೆಗಳನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಸಹೋದರ ಹಾಗೂ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರೊಂದಿಗೆ ಪರಿಶೀಲಿಸಿದರು.
ಗಣ್ಯರು ಹಾಗೂ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸುವ ಹಿನ್ನೆಲೆಯಲ್ಲಿ ಐದು ಹೆಲಿಪ್ಯಾಡ್ಗಳನ್ನು ಸಿದ್ಧವಾಗಿಡಲಾಗಿದೆ. ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದ್ದು, ಈ ಹಿನ್ನೆಲೆಯಲ್ಲಿ ವ್ಯಾಪಕ ವ್ಯವಸ್ಥೆ ಮಾಡಲಾಗಿದೆ. ಸುಮಾರು ಆರು ಲಕ್ಷಕ್ಕೂ ಹೆಚ್ಚು ಆಹ್ವಾನ ಪತ್ರಿಕೆಗಳನ್ನು ಮನೆಮನೆಗೂ ತಲುಪಿಸಲಾಗಿದೆ ಎಂದು ತಿಳಿಸಲಾಗಿದೆ.
ಚನ್ನಮ್ಮ ಅವರ ಸಮಾಧಿ ದರ್ಶನ ಹಾಗೂ ಪ್ರಸಾದ ಸ್ವೀಕಾರಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಒಂದು ಪಂಕ್ತಿಯಲ್ಲಿ 22 ಸಾವಿರ ಜನರು ಕುಳಿತು ಪ್ರಸಾದ ಸ್ವೀಕರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.
ಮಳೆಯ ಸಾಧ್ಯತೆ ಹಿನ್ನೆಲೆಯಲ್ಲಿ 15 ಬೃಹತ್ ಜರ್ಮನ್ ಟೆಂಟ್ಗಳನ್ನು ಅಳವಡಿಸಲಾಗಿದ್ದು, ಅದರಲ್ಲಿ ಮೂರು ವಿಭಾಗಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಗಣ್ಯರಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಚನ್ನಮ್ಮ ಅವರ ಸಮಾಧಿ ದರ್ಶನಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಯಾವುದೇ ಭೇದಭಾವವಿಲ್ಲದೆ ಒಂದೇ ರೀತಿಯ ಪ್ರಸಾದ ವಿತರಿಸಲಾಗುತ್ತದೆ. ಪ್ರಸಾದದಲ್ಲಿ 20ಕ್ಕೂ ಹೆಚ್ಚು ಪದಾರ್ಥಗಳು ಇರಲಿದ್ದು, ಚನ್ನಮ್ಮ ಅವರಿಗೆ ಇಷ್ಟವಾದ ಆಹಾರ ಪದಾರ್ಥಗಳನ್ನೂ ಸೇರಿಸಲಾಗಿದೆ.
20ಕ್ಕೂ ಹೆಚ್ಚು ಬಗೆಯ ಪ್ರಸಾದ:
ಪ್ರಸಾದದಲ್ಲಿ ಅಕ್ಕಿ ಪಾಯಸ, ಬೂಂದಿ, ಕಾಯಿ ಹೋಳಿಗೆ, ಕಜ್ಜಾಯ, ಬಾದಾಮಿ ಹಲ್ವಾ, ಇಡ್ಲಿ-ಸಾಂಬಾರ್, ದೋಸೆ, ಪುಳಿಯೋಗರೆ, ಬಿಸಿಬೇಳೆ ಬಾತ್, ಮಸಾಲೆ ವಡೆ, ಉದ್ದಿನ ವಡೆ, ಕೋಸಂಬರಿ, ತರಕಾರಿ ಕೂಟು, ಅನ್ನ, ಮಜ್ಜಿಗೆ ಹುಳಿ ಸೇರಿದಂತೆ ಹಲವು ಬಗೆಯ ಖಾದ್ಯಗಳು ಇರಲಿವೆ.
ಪ್ರಸಾದ ತಯಾರಿಕಾ ಕಾರ್ಯದಲ್ಲಿ ಐದು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ. ಶಾಸ್ತ್ರೋಕ್ತವಾಗಿ ಪ್ರಸಾದ ತಯಾರಿಸಲಾಗುತ್ತಿದ್ದು, ಹಲವು ತಂಡಗಳನ್ನು ರಚಿಸಲಾಗಿದೆ.
ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, “ನಮ್ಮ ತಾಯಿ ಅನ್ನಪೂರ್ಣಿಯಂತೆ ನಮ್ಮ ಮನೆಯನ್ನು ಸಲುಹಿದ್ದರು. ಮನೆಗೆ ಬಂದ ಪ್ರತಿಯೊಬ್ಬರನ್ನೂ ಪ್ರೀತಿ ಮತ್ತು ವಾತ್ಸಲ್ಯದಿಂದ ನೋಡಿಕೊಳ್ಳುತ್ತಿದ್ದರು. ಅವರು ಗಳಿಸಿದ ಪ್ರೀತಿಯೇ ಇಂದು ಜನರ ರೂಪದಲ್ಲಿ ಕಾಣಿಸುತ್ತಿದೆ” ಎಂದು ಭಾವುಕರಾದರು.
“ತಾಯಿಯ 11ನೇ ದಿನದ ಕಾರ್ಯಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಿರೀಕ್ಷೆಗೂ ಮೀರಿ ಜನರು ಆಗಮಿಸುವ ಸಾಧ್ಯತೆ ಇದೆ. ಸಮಾಧಿ ದರ್ಶನ ಹಾಗೂ ಪೂಜೆಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಆಗಮಿಸಿ ತಾಯಿಯ ಆತ್ಮಕ್ಕೆ ಶಾಂತಿ ಕೋರಿ” ಎಂದು ಮನವಿ ಮಾಡಿದರು.
ಚನ್ನಮ್ಮ ಅವರು ಚಿರನಿದ್ರೆ ಮಾಡುತ್ತಿರುವ ಸ್ಥಳ ತಮ್ಮ ಪಾಲಿಗೆ ಪುಣ್ಯಸ್ಥಳವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು. ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನ ಈ ಸ್ಥಳ ಮುಂದಿನ ದಿನಗಳಲ್ಲಿ ದುರ್ಬಲರು ಹಾಗೂ ಅನಾಥರ ಪಾಲಿಗೆ ನೆರವಾಗುವ ಕೇಂದ್ರವಾಗಿ ಬೆಳೆಯಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ (ರಿ), ಬೆಂಗಳೂರು ವತಿಯಿಂದ ಬಣಜಿಗ ಸಮಾಜಕ್ಕೆ 2ಎ ಉದ್ಯೋಗ ಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ, ಬುಧವಾರ ಗದಗ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮತ್ತು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.
ಹೈಕೋರ್ಟ್ ಆದೇಶದಂತೆ ಬಣಜಿಗ ಸಮಾಜವನ್ನು ಪ್ರವರ್ಗ ‘ಡಿ’ಯಿಂದ ಪ್ರವರ್ಗ ‘ಬಿ’ಗೆ ವರ್ಗೀಕರಿಸಿ 2ಎ ಮೀಸಲಾತಿಯ ಸೌಲಭ್ಯ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಮಾಜದ ಬಹುಕಾಲದ ಬೇಡಿಕೆಯನ್ನು ಸರ್ಕಾರ ತ್ವರಿತವಾಗಿ ಈಡೇರಿಸಿ, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ನ್ಯಾಯಯುತ ಅವಕಾಶ ಒದಗಿಸಬೇಕೆಂದು ಮನವಿ ಮಾಡಲಾಗಿದೆ.
ಮನವಿಯನ್ನು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹಾಗೂ ಗದಗ ತಹಸೀಲ್ದಾರರಿಗೆ ಸಲ್ಲಿಸಿ, ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಅಧ್ಯಕ್ಷ ಈಶಣ್ಣ ಮುನವಳ್ಳಿ, ತಾಲೂಕು ಅಧ್ಯಕ್ಷ ನಾಗೇಶಪ್ಪ ಸವಡಿ, ಮಾಜಿ ತಾಲೂಕು ಅಧ್ಯಕ್ಷ ರೇವಣಪ್ಪ ಯಳಮಲಿ, ರಾಜು ಕುರುಡಗಿ, ಬಿ.ಬಿ. ಅಸೂಟಿ, ಸುರೇಶ ನಿಲುಗಲ್, ವಿರೂಪಾಕ್ಷಪ್ಪ ಅಕ್ಕಿ, ಚನ್ನವೀರಪ್ಪ ದುಂದುರ, ಬಸವರಾಜ ರಾಮನಕೊಪ್ಪ, ಶಿವಲೀಲಾ ಅಕ್ಕಿ, ಲಲಿತಾ ಇಂಗಳಳ್ಳಿ, ವೀರಣ್ಣ ಗಡಗಿ, ಸುರೇಶ ಮಾಳವಾಡ, ಎಸ್.ವಿ. ಮೆಣಸಿನಕಾಯಿ, ಎಸ್.ಎಂ. ಅಗಡಿ, ಚೇತನ ಅಂಗಡಿ, ಸುರೇಶ ಅಚ್ಚಳ್ಳಿ, ರವಿ ಪಟ್ಟಣಶೆಟ್ಟರ, ಮಾಂತೇಶ ರಾಮನಕೊಪ್ಪ, ಶಿದ್ದಲಿಂಗಪ್ಪ ಅರಳಿ, ಅಶೋಕ ಅಂಗಡಿ, ಸಂಗಪ್ಪ ಯಳಮಲಿ, ಬಸೆಟ್ಟೆಪ್ಪ ಅಚ್ಚಳ್ಳಿ, ಕೂಡ್ಲೆಪ್ಪ ಅಂಗಡಿ ಸೇರಿದಂತೆ ಜಿಲ್ಲಾ, ತಾಲೂಕು, ಗ್ರಾಮ, ಮಹಿಳಾ ಹಾಗೂ ಯುವ ಘಟಕಗಳ ಪದಾಧಿಕಾರಿಗಳು ಮತ್ತು ಸಮಾಜದ ಗಣ್ಯರು ಉಪಸ್ಥಿತರಿದ್ದರು.
ವಿಜಯಸಾಕ್ಷಿ ಸುದ್ದಿ, ಗದಗ: ಶಿರಡಿ ಸಾಯಿಬಾಬಾ ಅವರು ಮಾನವೀಯತೆ, ಭಕ್ತಿ ಮತ್ತು ಆದರ್ಶ ಜೀವನದ ಸಂದೇಶಗಳನ್ನು ನೀಡಿ ಮನುಕುಲವನ್ನು ಉದ್ಧರಿಸಿದ ಮಹಾನ್ ದೇವಮಾನವರಾಗಿದ್ದಾರೆ. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ಬಳಗಾನೂರಿನ ಪೂಜ್ಯ ಶಿವಶಾಂತವೀರ ಶರಣರು ಹೇಳಿದರು.
ಗದಗ-ಬೆಟಗೇರಿ ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗ ನಗರದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸೋಮವಾರ ನಡೆದ ನೂತನ ಶ್ರೀ ಸಾಯಿ ಪ್ರಸಾದ ನಿಲಯ, ವೆಬ್ಸೈಟ್ ಹಾಗೂ ಡಾ. ಸಂಗಮನಾಥ ಶೆಟ್ಟರ ಕನ್ನಡಕ್ಕೆ ಅನುವಾದಿಸಿದ ‘ಶ್ರೀ ಶಿರಡಿ ಬಾಬಾ ಮಹಾತ್ಮೆ–ಸಂಕಲ್ಪ ಸಿದ್ಧಿ ವ್ರತ’ ಗ್ರಂಥ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಾಯಿಬಾಬಾ ಅವರ ಉದ್ದೇಶ ಸಾಮಾನ್ಯ ವ್ಯಕ್ತಿಯನ್ನು ಆದರ್ಶ ವ್ಯಕ್ತಿಯನ್ನಾಗಿ ರೂಪಿಸುವುದಾಗಿತ್ತು. ಜ್ಞಾನ, ಭಕ್ತಿ, ಸ್ಮರಣೆ ಹಾಗೂ ಜನೋಪಯೋಗಿ ಕಾರ್ಯಗಳ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕೆಂಬ ಸಂದೇಶವನ್ನು ಅವರು ಸಾರಿದರು. ಸುಖ-ದುಃಖಗಳು ದೇಹಕ್ಕೆ ಮಾತ್ರ ಸಂಬಂಧಿಸಿದ್ದು, ಆತ್ಮ ಸದಾ ಚೈತನ್ಯಸ್ವರೂಪಿಯಾಗಿರುತ್ತದೆ. ಆತ್ಮಚಿಂತನೆಯ ಮೂಲಕ ಬದುಕಿನಲ್ಲಿ ನೆಮ್ಮದಿ ಹಾಗೂ ಆತ್ಮವಿಕಾಸ ಸಾಧ್ಯ ಎಂದು ಹೇಳಿದರು.
ಗದಗಿನ ಸಾಯಿಬಾಬಾ ಮಂದಿರ ಜ್ಞಾನ ದಾಸೋಹ, ಭಕ್ತಿ ದಾಸೋಹ ಹಾಗೂ ಅನ್ನದಾಸೋಹದ ಮೂಲಕ ಸಾಯಿಬಾಬಾ ಅವರ ತತ್ವ ಸಂದೇಶಗಳನ್ನು ಸಮಾಜಕ್ಕೆ ತಲುಪಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಡಾ. ಸಂಗಮನಾಥ ಶೆಟ್ಟರ ಅವರು ಸಂತಕವಿ ದಾಸಗಣು ಮಹಾರಾಜರ ಮರಾಠಿ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವುದು ಅಭಿನಂದನೀಯ ಕಾರ್ಯ ಎಂದರು.
ಗ್ರಂಥ ಪರಿಚಯಿಸಿದ ಡಾ. ಸಂಗಮನಾಥ ಶೆಟ್ಟರ, ಸಾಯಿಬಾಬಾ ಅವರ ತತ್ವಗಳಲ್ಲಿ ನಿಸ್ವಾರ್ಥ ಕರ್ತವ್ಯ, ದಾನ, ವಿನಯ ಹಾಗೂ ಆತ್ಮಶುದ್ಧಿಗೆ ವಿಶೇಷ ಮಹತ್ವ ನೀಡಲಾಗಿದೆ. ಭಕ್ತರ ಬೇಡಿಕೆಯ ಮೇರೆಗೆ ಪರಿಷ್ಕೃತ ದ್ವಿತೀಯ ಮುದ್ರಣವನ್ನು ದಾನಿಗಳ ಸಹಕಾರದಿಂದ ಪ್ರಕಟಿಸಲಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ದತ್ತಾ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕಿರಣ ಪ್ರಕಾಶ ಭೂಮಾ ಮಾತನಾಡಿ, “ಸಬ್ ಕಾ ಮಾಲಿಕ್ ಏಕ್” ಎಂಬ ಸಾಯಿಬಾಬಾ ಸಂದೇಶ ಇಂದಿಗೂ ಪ್ರಸ್ತುತವಾಗಿದ್ದು, ಜಾತಿ-ಧರ್ಮ ಭೇದ ಮರೆತು ಮಾನವೀಯತೆಯಿಂದ ಬದುಕಬೇಕು ಎಂದು ಹೇಳಿದರು.
ಗದಗ-ಬೆಟಗೇರಿ ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗ ಸಮಿತಿಯ ಅಧ್ಯಕ್ಷ ಮಹೇಶಗೌಡ ತಲೆಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಭಕ್ತರ ಸಹಕಾರ ಹಾಗೂ ದಾನಿಗಳ ಕೊಡುಗೆಯಿಂದ ಮಂದಿರದಲ್ಲಿ ಅನೇಕ ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ಸುಶೀಲಾ ಗಂಗಣ್ಣ ಕೋಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದಾನಿಗಳು, ಸೇವಾಕರ್ತರು ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು. ಕುಮಾರಿ ಕ್ಷೀತಿ ಅಶ್ವಥ್ ಸುಲಾಖೆ ಪ್ರಾರ್ಥಿಸಿದರು. ಡಾ. ಎಸ್.ಡಿ. ಯರಗೇರಿ ಕಾರ್ಯಕ್ರಮ ನಿರೂಪಿಸಿ, ಅಮೃತ ವಾಲಿ ವಂದಿಸಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.
“ಸಾಯಿಬಾಬಾ ಪವಾಡಗಳನ್ನು ಮಾತ್ರ ಮಾಡಲಿಲ್ಲ; ಮಾನವೀಯತೆ, ಭಕ್ತಿ ಮತ್ತು ಆದರ್ಶ ಜೀವನದ ಮಾರ್ಗವನ್ನೂ ತೋರಿಸಿದರು.” – ಪೂಜ್ಯ ಶಿವಶಾಂತವೀರ ಶರಣರು