Home Blog

ಕಡಜ ಹುಳಗಳ ದಾಳಿಗೆ 8 ವರ್ಷದ ಬಾಲಕ ಬಲಿ! ತಂದೆಗೂ ಗಂಭೀರ ಗಾಯ

0

ಶಿವಮೊಗ್ಗ: ಮನೆಯ ಹಿಂದಿನ ಬಾಳೆ ಗಿಡದಲ್ಲಿದ್ದ ಕಡಜದ ಗೂಡಿನಿಂದ ದಾಳಿ ನಡೆಸಿದ ಪರಿಣಾಮ 8 ವರ್ಷದ ಬಾಲಕ ಮೃತಪಟ್ಟಿರುವ ದುರ್ಘಟನೆ ಸಾಗರ ತಾಲೂಕಿನ ಹೆಗ್ಗೋಡು ಬಳಿಯ ಅತ್ತಿಸರದಲ್ಲಿ ನಡೆದಿದೆ.

ಮೃತ ಬಾಲಕನನ್ನು ನಿಶ್ಚಿತ್ (8) ಎಂದು ಗುರುತಿಸಲಾಗಿದೆ. ಆತ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಮನೆಯ ಹಿಂದಿನ ಬಾಳೆ ಗಿಡದಲ್ಲಿ ಕಡಜದ ಹುಳುವಿನ ಗೂಡು ಇತ್ತು ಎನ್ನಲಾಗಿದೆ. ಈ ವೇಳೆ ಬಾಲಕ ನಿಶ್ಚಿತ್ ಹಾಗೂ ಆತನ ತಂದೆ ವೆಂಕಟೇಶ್ ಮೇಲೆ ಕಡಜದ ಹುಳುಗಳು ದಾಳಿ ನಡೆಸಿವೆ.

ದಾಳಿಯಿಂದ ಗಾಯಗೊಂಡ ತಂದೆ-ಮಗನನ್ನು ತಕ್ಷಣ ಹೆಗ್ಗೋಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರನ್ನೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ನಿಶ್ಚಿತ್ ಮೃತಪಟ್ಟಿದ್ದಾನೆ. ತಂದೆ ವೆಂಕಟೇಶ್ ಅವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಘಟನೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

‘ನೀವು ಎಂದೆಂದಿಗೂ ಏಕೈಕ ನಟಿ’: ಶ್ರೀದೇವಿ ಜನ್ಮದಿನದಂದು ಭಾವುಕ ಪೋಸ್ಟ್ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ

ದಿವಂಗತ ನಟಿ ಶ್ರೀದೇವಿ ಅವರ ಜನ್ಮದಿನದಂದು ಪ್ರಿಯಾಂಕಾ ಚೋಪ್ರಾ ಭಾವಪೂರ್ಣ ಗೌರವ ಸಲ್ಲಿಸಿದ್ದಾರೆ. ಶ್ರೀದೇವಿ ಅವರ ಸಂಪೂರ್ಣ ಸಿನಿಮಾ ಪಯಣವನ್ನು ದಾಖಲಿಸುವ ‘ಎಂಪ್ರೆಸ್: ದಿ ಡೆಫಿನಿಟಿವ್ ಬಯಾಗ್ರಫಿ ಆಫ್ ಶ್ರೀದೇವಿ’ ಪುಸ್ತಕದ ಮೊದಲ ನೋಟವನ್ನು ಪ್ರಿಯಾಂಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಧೀರಜ್ ಯು. ಕುಮಾರ್ ಬರೆದಿರುವ ಈ ಜೀವನಚರಿತ್ರೆಯನ್ನು ವೆಸ್ಟ್‌ಲ್ಯಾಂಡ್ ಬುಕ್ಸ್ ಪ್ರಕಟಿಸುತ್ತಿದೆ. ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀದೇವಿ ಹೇಗೆ ಭಾರತೀಯ ಚಿತ್ರರಂಗದ ಮೊದಲ ಮಹಿಳಾ ಸೂಪರ್‌ಸ್ಟಾರ್ ಆಗಿ ಬೆಳೆದರು ಎಂಬುದನ್ನು ಕೃತಿಯಲ್ಲಿ ವಿವರಿಸಲಾಗಿದೆ.

ಶ್ರೀದೇವಿಯ ವೃತ್ತಿಜೀವನದ ಪ್ರಮುಖ ಘಟ್ಟಗಳು, ಅವರು ನಟಿಸಿದ ಸಿನಿಮಾಗಳು, ಸಾಧನೆಗಳು ಹಾಗೂ ಭಾರತೀಯ ಸಿನಿಮಾಗೆ ನೀಡಿದ ಸಾಂಸ್ಕೃತಿಕ ಮತ್ತು ಕಲಾತ್ಮಕ ಕೊಡುಗೆಯನ್ನು ಪುಸ್ತಕದಲ್ಲಿ ದಾಖಲಿಸಲಾಗಿದೆ.

ಈ ಪುಸ್ತಕದ ಮುಖಪುಟದಲ್ಲೇ ವಿಶೇಷ ಆಕರ್ಷಣೆಯಿದೆ. ಅಮಿತಾಭ್ ಬಚ್ಚನ್ ಅವರು ಶ್ರೀದೇವಿಯ ಪ್ರತಿಭೆಯನ್ನು ಸ್ಮರಿಸುವ ವಿಶೇಷ ಸಾಲುಗಳು ಮುಖಪುಟದಲ್ಲಿ இடம்பெಟ್ಟಿವೆ. ಶ್ರೀದೇವಿ ಅವರ ಅಪ್ರತಿಮ ಪ್ರತಿಭೆಯನ್ನು ಹಿರಿಯ ನಟ ಗೌರವಿಸಿದ್ದಾರೆ.

ಪುಸ್ತಕದ ಫಸ್ಟ್ ಲುಕ್ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ, ಶ್ರೀದೇವಿ ಅವರನ್ನು ‘ಏಕೈಕ ನಟಿ’ ಎಂದು ಬಣ್ಣಿಸಿದ್ದಾರೆ. ‘ನಿಮ್ಮ ನೆನಪು ಸದಾ ಇರುತ್ತದೆ. ಹ್ಯಾಪಿ ಹೆವೆನ್ಲಿ ಬರ್ತ್‌ಡೇ ಶ್ರೀದೇವಿ’ ಎಂದು ಭಾವನಾತ್ಮಕ ಸಂದೇಶ ನೀಡಿದ್ದಾರೆ.

ಶ್ರೀದೇವಿ ಕೇವಲ ನಾಲ್ಕನೇ ವಯಸ್ಸಿನಲ್ಲೇ ಕ್ಯಾಮೆರಾ ಎದುರಿಸಿದ್ದರು. 1967ರ ತಮಿಳು ಸಿನಿಮಾ ‘ಕಂದನ್ ಕರುಣೈ’ ಅವರ ಬಾಲನಟಿಯಾಗಿ ಮೊದಲ ಚಿತ್ರ. ನಂತರ 1972ರಲ್ಲಿ ‘ರಾಣಿ ಮೇರಾ ನಾಮ್’ ಮೂಲಕ ಹಿಂದಿ ಚಿತ್ರರಂಗ ಪ್ರವೇಶಿಸಿದರು.

ಬಹುಭಾಷಾ ಸಿನಿಮಾಗಳಲ್ಲಿ ನಟಿಸಿದ ಶ್ರೀದೇವಿ, ಸಾಲು ಸಾಲು ಯಶಸ್ವಿ ಚಿತ್ರಗಳ ಮೂಲಕ ತಮ್ಮದೇ ಆದ ಸಾಮ್ರಾಜ್ಯ ನಿರ್ಮಿಸಿದರು. ಭಾರತೀಯ ಚಿತ್ರರಂಗದ ಮೊದಲ ಮಹಿಳಾ ಸೂಪರ್‌ಸ್ಟಾರ್ ಎಂಬ ಸ್ಥಾನವನ್ನು ಪಡೆದ ಅವರು ತಮ್ಮ ವಿಶಿಷ್ಟ ಅಭಿನಯದಿಂದ ತಲೆಮಾರುಗಳ ಪ್ರೇಕ್ಷಕರನ್ನು ಗೆದ್ದಿದ್ದರು.

1996ರಲ್ಲಿ ಬೋನಿ ಕಪೂರ್ ಅವರನ್ನು ವಿವಾಹವಾದ ಶ್ರೀದೇವಿ, ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಅವರ ತಾಯಿ. 2018ರಲ್ಲಿ ದುಬೈನಲ್ಲಿ ನಿಧನರಾದ ಶ್ರೀದೇವಿಗೆ ಭಾರತ ಸರ್ಕಾರ 2013ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

ಇದೀಗ ಅವರ ಜೀವನ ಮತ್ತು ಸಿನಿಮಾ ಪಯಣವನ್ನು ಸಮಗ್ರವಾಗಿ ದಾಖಲಿಸಿರುವ ‘ಎಂಪ್ರೆಸ್’ ಪುಸ್ತಕ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಶ್ರೀದೇವಿ ಅಭಿಮಾನಿಗಳಲ್ಲಿ ಈಗಾಗಲೇ ಕುತೂಹಲ ಮೂಡಿಸಿದೆ.

IFFM 2026 ಪ್ರಶಸ್ತಿ ಪಟ್ಟಿ ಪ್ರಕಟ: ರಿಷಬ್ ಶೆಟ್ಟಿಗೆ ಡಬಲ್ ಗೌರವ, ರೇಖಾ-ರಾಣಿ ಮುಖರ್ಜಿಗೂ ಪ್ರತಿಷ್ಠಿತ ಸನ್ಮಾನ

0

ಆಸ್ಟ್ರೇಲಿಯಾದಲ್ಲಿ ನಡೆದ 17ನೇ ‘ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್’ (IFFM 2026) ವಿಜೇತರ ಪಟ್ಟಿ ಬಿಡುಗಡೆಯಾಗಿದೆ. ಭಾರತೀಯ ಸಿನಿಮಾದ ವಿವಿಧ ಭಾಷೆಗಳ ಕಥೆ, ಪ್ರತಿಭೆ ಮತ್ತು ತಾಂತ್ರಿಕ ಸಾಧನೆಗಳನ್ನು ಗುರುತಿಸುವ ಈ ಚಲನಚಿತ್ರೋತ್ಸವದಲ್ಲಿ ಕನ್ನಡ ಸೇರಿದಂತೆ ದಕ್ಷಿಣ ಮತ್ತು ಉತ್ತರ ಭಾರತದ ಹಲವು ಪ್ರಮುಖ ಕಲಾವಿದರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಕನ್ನಡದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಈ ಬಾರಿಯ ಪ್ರಶಸ್ತಿ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕಾಗಿ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ನೀಡಲಾಗಿದೆ. ಭಾರತೀಯ ಸಿನಿಮಾದಲ್ಲಿ ಅವರ ವಿಶಿಷ್ಟ ಕೊಡುಗೆ ಹಾಗೂ ಸಾಂಸ್ಕೃತಿಕ ಕಥೆಗಳನ್ನು ಜಾಗತಿಕ ವೇದಿಕೆಗೆ ಕೊಂಡೊಯ್ದ ಸಾಧನೆಯನ್ನು ಗುರುತಿಸಿ ‘ಲೀಡರ್‌ಶಿಪ್ ಇನ್ ಸಿನಿಮಾ’ ಗೌರವವನ್ನೂ ಅವರಿಗೆ ನೀಡಲಾಗಿದೆ.

ಭಾರತೀಯ ಚಿತ್ರರಂಗದ ಹಿರಿಯ ನಟಿ ರೇಖಾ ಅವರಿಗೆ ‘ಎಕ್ಸಲೆನ್ಸ್ ಇನ್ ಸಿನಿಮಾ’ ಪ್ರಶಸ್ತಿ ದೊರೆತಿದೆ. ರಾಣಿ ಮುಖರ್ಜಿ ಅವರ 30 ವರ್ಷಗಳ ಯಶಸ್ವಿ ಸಿನಿಮಾ ಪಯಣವನ್ನು ವಿಶೇಷವಾಗಿ ಗೌರವಿಸಲಾಗಿದೆ. ನಟ ಪಂಕಜ್ ತ್ರಿಪಾಠಿ ‘ಆರ್ಟಿಸ್ಟ್ ಆಫ್ ಡಿಸ್ಟಿಂಕ್ಷನ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

‘ಲೋಕಾ ಚಾಪ್ಟರ್ 1: ಚಂದ್ರ’ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ. ‘ದಿ ಗ್ರೇಟ್ ಶಂಸುದ್ದೀನ್ ಫ್ಯಾಮಿಲಿ’ಗೆ ವಿಶೇಷ ಉಲ್ಲೇಖ ಲಭಿಸಿದೆ.

‘ನಾಟ್ ಎ ಹೀರೊ’ ಅತ್ಯುತ್ತಮ ಇಂಡಿ ಸಿನಿಮಾ ಪ್ರಶಸ್ತಿ ಗೆದ್ದರೆ, ‘ಕಿಕ್ಕ್ರನ್ ದೇ ಫುಲ್’ ಇಂಡಿ ವಿಭಾಗದಲ್ಲಿ ವಿಶೇಷ ಉಲ್ಲೇಖ ಪಡೆದಿದೆ.

ನಟರ ವಿಭಾಗದಲ್ಲಿ ದುಲ್ಕರ್ ಸಲ್ಮಾನ್ ‘ಕಾಂತಾ’ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ‘ಫುಲ್ ಪ್ಲೇಟ್’ ಚಿತ್ರಕ್ಕಾಗಿ ಕೀರ್ತಿ ಕುಲ್ಹಾರಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಮಧುಶ್ರೀ ದತ್ತಾ ನಿರ್ದೇಶನದ ‘ಫ್ಲೈಯಿಂಗ್ ಟೈಗರ್ಸ್’ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಪ್ರೇಕ್ಷಕರ ಆಯ್ಕೆಯ ‘ಪೀಪಲ್ಸ್ ಚಾಯ್ಸ್’ ಪ್ರಶಸ್ತಿ ಹಿಂದಿಯ ‘ಸೈಯಾರಾ’ ಪಾಲಾಗಿದೆ. ‘ಲಾಲಾ ಅಂಡ್ ಪಾಪಿ’ಗೆ ‘ರೈನ್‌ಬೋ ಸ್ಟೋರಿಟೆಲ್ಲರ್’ ಗೌರವ ಸಿಕ್ಕಿದೆ.

ವೆಬ್ ಸರಣಿ ವಿಭಾಗದಲ್ಲಿ ‘ಮಟ್ಕಾ ಕಿಂಗ್’ಗಾಗಿ ವಿಜಯ್ ವರ್ಮಾ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ‘ದೆಹಲಿ ಕ್ರೈಮ್’ ಸೀಸನ್ 3ಗಾಗಿ ರಸಿಕಾ ದುಗ್ಗಲ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

‘ಫ್ರೀಡಮ್ ಅಟ್ ಮಿಡ್‌ನೈಟ್ – ಸೀಸನ್ 2’ ಅತ್ಯುತ್ತಮ ಸರಣಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಒಟ್ಟಾರೆ IFFM 2026 ಪ್ರಶಸ್ತಿ ಪ್ರದಾನ ಸಮಾರಂಭವು ಭಾರತೀಯ ಚಿತ್ರರಂಗದ ವಿವಿಧ ಭಾಷೆಗಳ ಪ್ರತಿಭೆ ಮತ್ತು ವಿಭಿನ್ನ ಕಥನಗಳಿಗೆ ಜಾಗತಿಕ ವೇದಿಕೆಯಲ್ಲಿ ದೊರೆಯುತ್ತಿರುವ ಮನ್ನಣೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ರಿಷಬ್ ಶೆಟ್ಟಿಗೆ ದೊರೆತ ಡಬಲ್ ಗೌರವ ಕನ್ನಡ ಚಿತ್ರರಂಗದ ಪಾಲಿಗೆ ಈ ಬಾರಿಯ ಪ್ರಮುಖ ಹೈಲೈಟ್ ಆಗಿದೆ.

‘ಆತ್ಮಹತ್ಯೆ ಮಾಡಿ ಕರೆದರೆ ನಾನು ಬರಲ್ಲ’: ಅಭಿಮಾನಿ ಸಾವಿನ ಬಳಿಕ ಅಂತ್ಯಸಂಸ್ಕಾರಕ್ಕೆ ಹೋಗದ ಕಾರಣ ತಿಳಿಸಿದ ಯಶ್

ಬೆಂಗಳೂರು: ಅಭಿಮಾನಿಗಳ ಮೇಲಿನ ಪ್ರೀತಿ ಹಾಗೂ ಕಾಳಜಿಗೆ ಹೆಸರಾಗಿರುವ ಪ್ಯಾನ್ ಇಂಡಿಯಾ ನಟ ಯಶ್, 2021ರಲ್ಲಿ ಮಂಡ್ಯದಲ್ಲಿ ನಡೆದ ಅಭಿಮಾನಿಯೊಬ್ಬರ ಆತ್ಮಹತ್ಯೆ ಪ್ರಕರಣದ ಕುರಿತು ಮೊದಲ ಬಾರಿಗೆ ತಮ್ಮ ನಿಲುವನ್ನು ವಿವರಿಸಿದ್ದಾರೆ. ಅಭಿಮಾನಿಯೊಬ್ಬ ತಮ್ಮ ಅಂತ್ಯಸಂಸ್ಕಾರಕ್ಕೆ ಯಶ್ ಹಾಗೂ ಸಿದ್ದರಾಮಯ್ಯ ಬರಬೇಕು ಎಂದು ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರೂ, ಯಶ್ ಅಂತ್ಯಸಂಸ್ಕಾರಕ್ಕೆ ತೆರಳಿರಲಿಲ್ಲ. ಇದಕ್ಕೆ ಕಾರಣವೇನು ಎಂಬುದನ್ನು ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ರಜತ್ ಶರ್ಮ ಪ್ರಶ್ನಿಸಿದ್ದಾರೆ.

ಮಂಡ್ಯ ತಾಲೂಕಿನ ಕೆರೆಗೋಡು ಹೋಬಳಿಯ ಕೊಡಿದೊಡ್ಡಿ ಗ್ರಾಮದ ಕೃಷ್ಣ ಎಂಬ ಯುವಕ 2021ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತಮ್ಮ ಅಂತ್ಯಸಂಸ್ಕಾರಕ್ಕೆ ಯಶ್ ಹಾಗೂ ಆಗಿನ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗಮಿಸಬೇಕು ಎಂಬ ಆಶಯವನ್ನು ಅವರು ಪತ್ರದಲ್ಲಿ ಬರೆದಿದ್ದರು. ಸಿದ್ದರಾಮಯ್ಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರೂ ಯಶ್ ತೆರಳಿರಲಿಲ್ಲ.

ಈ ಕುರಿತು ಮಾತನಾಡಿದ ಯಶ್, ಅಭಿಮಾನಿಯ ಸಾವಿನಿಂದ ತಮಗೆ ಬಹಳ ದುಃಖವಾಗಿತ್ತು. ಆದರೂ ಅಂತ್ಯಸಂಸ್ಕಾರಕ್ಕೆ ತೆರಳದಿರುವುದು ಉದ್ದೇಶಪೂರ್ವಕವಾಗಿ ತೆಗೆದುಕೊಂಡ ನಿರ್ಧಾರ ಎಂದು ಹೇಳಿದ್ದಾರೆ.

ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ನಂತರ ತಾನು ತೆರಳಿದರೆ, ಮುಂದೆ ಇದೇ ರೀತಿಯ ಕೃತ್ಯಕ್ಕೆ ಪ್ರೋತ್ಸಾಹ ಸಿಕ್ಕಂತಾಗಬಹುದು ಎಂಬ ಆತಂಕ ಯಶ್ ವ್ಯಕ್ತಪಡಿಸಿದ್ದಾರೆ. ‘ಯಶ್ ಅವರನ್ನು ಕರೆಸಬೇಕಾದರೆ ಹೀಗೆ ಮಾಡಬಹುದು’ ಎಂಬ ತಪ್ಪು ಸಂದೇಶ ಇತರ ಅಭಿಮಾನಿಗಳಿಗೆ ಹೋಗಬಾರದು ಎಂಬ ಕಾರಣಕ್ಕೆ ತಾವು ಅಂದು ಹೋಗಲಿಲ್ಲ ಎಂದು ವಿವರಿಸಿದ್ದಾರೆ.

ಅಭಿಮಾನಿಗಳು ತಮ್ಮನ್ನು ಭೇಟಿಯಾಗಬೇಕಾದರೆ ಆತ್ಮಹತ್ಯೆಯಂತಹ ಮಾರ್ಗ ಆಯ್ಕೆ ಮಾಡಬಾರದು. ಬದಲಾಗಿ ಜೀವನದಲ್ಲಿ ಸಾಧನೆ ಮಾಡಿ, ಆ ಸಾಧನೆಯ ಮೂಲಕ ತಮ್ಮನ್ನು ಕರೆಯುವಂತೆ ಯಶ್ ಹೇಳಿದ್ದಾರೆ. ಅಂತಹ ಸಂದರ್ಭಗಳಲ್ಲಿ ಖಂಡಿತವಾಗಿಯೂ ತಮ್ಮ ಅಭಿಮಾನಿಗಳ ಬಳಿಗೆ ತೆರಳಿ ಅವರ ಸಾಧನೆಯ ಬಗ್ಗೆ ಹೆಮ್ಮೆ ಪಡುವುದಾಗಿ ತಿಳಿಸಿದ್ದಾರೆ.

ತಮ್ಮ ಅಭಿಮಾನಿಗಳ ಬಗ್ಗೆ ಇರುವ ಕಾಳಜಿಯನ್ನೂ ಯಶ್ ಇದೇ ಸಂದರ್ಭದಲ್ಲಿ ವಿವರಿಸಿದ್ದಾರೆ. ಸಮಯ ಮಾಡಿಕೊಂಡು ಅಭಿಮಾನಿಗಳನ್ನು ಭೇಟಿಯಾಗುವುದಾಗಿ ಹಾಗೂ ಪ್ರತಿಯೊಬ್ಬರೊಂದಿಗೂ ವೈಯಕ್ತಿಕವಾಗಿ ನಿಂತು ಫೋಟೋ ತೆಗೆಸಿಕೊಳ್ಳುವುದಾಗಿ ಹೇಳಿದ್ದಾರೆ.

ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡುವ ಯಶ್, ಅವರೊಂದಿಗೆ ಪ್ರತ್ಯೇಕವಾಗಿ ಫೋಟೋ ತೆಗೆಸಿಕೊಳ್ಳುವ ಮೂಲಕ ಅಭಿಮಾನಿಗಳೊಂದಿಗೆ ನೇರ ಸಂಪರ್ಕ ಕಾಯ್ದುಕೊಳ್ಳುವ ಪ್ರಯತ್ನ ಮಾಡುತ್ತಾರೆ.

ಸರ್ಕಾರಿ ಶಿಕ್ಷಕರ ಉದ್ಯೋಗಾಕಾಂಕ್ಷಿಗಳಿಗೆ ಬಂಪರ್‌ ಚಾನ್ಸ್‌: 15,000 ಹುದ್ದೆಗಳಿಗೆ ನೇಮಕಾತಿ

0

ಬೆಂಗಳೂರು: ಸರ್ಕಾರಿ ಶಿಕ್ಷಕರ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರ ಭರ್ಜರಿ ಅವಕಾಶ ನೀಡಿದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಒಟ್ಟು 15,000 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಶಾಲಾ ಶಿಕ್ಷಣ ಇಲಾಖೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಆಗಸ್ಟ್ 18ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದೆ.

ರಾಜ್ಯದ ವಿವಿಧ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನೇಮಕಾತಿಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಂಡಿದ್ದು, ಸಂಪೂರ್ಣ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

15 ಸಾವಿರ ಹುದ್ದೆಗಳ ಹಂಚಿಕೆ ಹೇಗೆ?

ಶಿಕ್ಷಕರ ನೇಮಕಾತಿಯ 15,000 ಹುದ್ದೆಗಳನ್ನು ಎರಡು ಪ್ರಾದೇಶಿಕ ವೃಂದಗಳಾಗಿ ವಿಂಗಡಿಸಲಾಗಿದೆ.

  • ಕಲ್ಯಾಣ ಕರ್ನಾಟಕ — 6,967 ಹುದ್ದೆಗಳು
  • ಉಳಿಕೆ ಮೂಲ ವೃಂದ — 8,033 ಹುದ್ದೆಗಳು

ಎರಡೂ ವೃಂದಗಳನ್ನು ಸೇರಿಸಿ ರಾಜ್ಯಾದ್ಯಂತ ಒಟ್ಟು 15,000 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಈ ನೇಮಕಾತಿಯಲ್ಲಿ ಸರ್ಕಾರಿ ಶಾಲೆಗಳ ವಿವಿಧ ಹಂತಗಳಲ್ಲಿ ಖಾಲಿ ಇರುವ ಪ್ರಮುಖ ಬೋಧಕ ಹುದ್ದೆಗಳು ಸೇರ್ಪಡೆಯಾಗಿವೆ. ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು, ಗಣಕ ವಿಜ್ಞಾನ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಗಳು ನೇಮಕಾತಿಯ ವ್ಯಾಪ್ತಿಯಲ್ಲಿವೆ.

ಒಳ ಮೀಸಲಾತಿ ವಿಚಾರ ಹಾಗೂ ನ್ಯಾಯಾಲಯದ ತಡೆಯಾಜ್ಞೆಗಳ ಕಾರಣದಿಂದ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ವಿಳಂಬಗೊಂಡಿತ್ತು. ಇದೀಗ ಪ್ರಮುಖ ಕಾನೂನು ಮತ್ತು ಆಡಳಿತಾತ್ಮಕ ಅಡೆತಡೆಗಳು ನಿವಾರಣೆಯಾಗಿರುವ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಶಿಕ್ಷಕರ ನೇಮಕಾತಿ ಮೂಲಕ ಸರ್ಕಾರಿ ಶಾಲೆಗಳಲ್ಲಿನ ಸಿಬ್ಬಂದಿ ಕೊರತೆ ನೀಗಿಸುವುದರ ಜತೆಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಗುರಿಯನ್ನು ಇಲಾಖೆ ಹೊಂದಿದೆ.

ಅಭ್ಯರ್ಥಿಗಳಿಗೆ ಸ್ಪಷ್ಟ ಮಾಹಿತಿ ಒದಗಿಸುವ ಉದ್ದೇಶದಿಂದ ಶೈಕ್ಷಣಿಕ ಜಿಲ್ಲಾವಾರು ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಲಾಗುತ್ತದೆ. ಆಯಾ ಜಿಲ್ಲೆಯಲ್ಲಿ ಲಭ್ಯವಿರುವ ಹುದ್ದೆಗಳ ಸಂಖ್ಯೆ, ಹುದ್ದೆಗಳ ವಿವರ, ಮೀಸಲಾತಿ ಹಂಚಿಕೆ ಹಾಗೂ ಅನ್ವಯಿಸುವ ನೇಮಕಾತಿ ನಿಯಮಗಳನ್ನು ಅಧಿಸೂಚನೆಯಲ್ಲಿ ತಿಳಿಸಲಾಗುತ್ತದೆ.

ಅರ್ಹ ಅಭ್ಯರ್ಥಿಗಳು ಆಗಸ್ಟ್ 18ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ತಾವು ಆಯ್ಕೆ ಮಾಡಿಕೊಳ್ಳುವ ಹುದ್ದೆ ಮತ್ತು ಜಿಲ್ಲೆಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳನ್ನು ಪರಿಶೀಲಿಸುವುದು ಅಗತ್ಯ.

ನೇಮಕಾತಿಯ ಅಧಿಕೃತ ಅಧಿಸೂಚನೆಗಳು ಸರ್ಕಾರದ ಇ-ರಾಜಪತ್ರದಲ್ಲಿ ಲಭ್ಯವಿದ್ದು, ಅಭ್ಯರ್ಥಿಗಳು ಕರ್ನಾಟಕ ಇ-ರಾಜಪತ್ರ ಮೂಲಕ ಜಿಲ್ಲಾವಾರು ಹುದ್ದೆ, ಮೀಸಲಾತಿ ಹಾಗೂ ನೇಮಕಾತಿ ನಿಯಮಗಳನ್ನು ಪರಿಶೀಲಿಸಬಹುದು. ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ಮಾಹಿತಿಗಾಗಿ ಸರ್ಕಾರಿ ಶಾಲಾ ಶಿಕ್ಷಣ ಇಲಾಖೆ ವೆಬ್‌ಸೈಟ್‌ ಬಳಸಬಹುದು.

15,000 ಹುದ್ದೆಗಳ ನೇಮಕಾತಿ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಮಹತ್ವದ ಅವಕಾಶವಾಗಿದ್ದು, ಅಭ್ಯರ್ಥಿಗಳು ಯಾವುದೇ ಅನಧಿಕೃತ ಮೂಲದ ಮಾಹಿತಿಯನ್ನು ಅವಲಂಬಿಸದೆ ಅಧಿಕೃತ ಅಧಿಸೂಚನೆಯಲ್ಲಿರುವ ನಿಯಮಗಳು ಮತ್ತು ಅರ್ಹತಾ ಷರತ್ತುಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸುವುದು ಸೂಕ್ತ.

ಗುಟ್ಕಾ, ಪಾನ್‌ ಮಸಾಲ ಮೇಲಿನ ಒಂದು ವರ್ಷದ ನಿಷೇಧಕ್ಕೆ ಬ್ರೇಕ್‌; ಆದೇಶ ಹಿಂಪಡೆದ ಸಿಎಂ ಡಿ.ಕೆ. ಶಿವಕುಮಾರ್

0

ಬೆಂಗಳೂರು: ತಂಬಾಕು ಅಥವಾ ನಿಕೋಟಿನ್ ಒಳಗೊಂಡಿರುವ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ಮೇಲೆ ಕರ್ನಾಟಕ ಸರ್ಕಾರ ಹೇರಿದ್ದ ಒಂದು ವರ್ಷದ ನಿಷೇಧವನ್ನು ಹಿಂಪಡೆಯಲು ನಿರ್ಧರಿಸಿದೆ. ನಿಷೇಧ ಜಾರಿಗೆ ಬಂದ ಕೇವಲ ಎರಡು ದಿನಗಳಲ್ಲೇ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ನಿಷೇಧ ಆದೇಶವನ್ನು ಹಿಂಪಡೆಯುವಂತೆ ಸೂಚಿಸಿದ್ದಾರೆ. ರಾಜ್ಯಾದ್ಯಂತ ತಂಬಾಕು ಹಾಗೂ ನಿಕೋಟಿನ್ ಹೊಂದಿರುವ ಗುಟ್ಕಾ ಮತ್ತು ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ವಿತರಣೆ, ಸಾಗಣೆ ಹಾಗೂ ಮಾರಾಟಕ್ಕೆ ಆಹಾರ ಸುರಕ್ಷತಾ ಆಯುಕ್ತರು ಒಂದು ವರ್ಷದ ಅವಧಿಗೆ ನಿಷೇಧ ಹೇರಿದ್ದರು.

ನಿಷೇಧದ ಆದೇಶವನ್ನು ತಮ್ಮ ಗಮನಕ್ಕೆ ತರದೇ ಹೊರಡಿಸಿರುವುದಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ನಿಷೇಧದಿಂದ ಅಡಿಕೆ ಬೆಳೆಗಾರರು ಸೇರಿದಂತೆ ಹಲವು ರೈತರಿಗೆ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಆದೇಶವನ್ನು ತಕ್ಷಣವೇ ಹಿಂಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದಕ್ಕೂ ಮುನ್ನ ಗುರುವಾರ ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರ ನಿಯೋಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಗುಟ್ಕಾ ನಿಷೇಧ ಆದೇಶವನ್ನು ಹಿಂಪಡೆಯುವಂತೆ ಮನವಿ ಮಾಡಿತ್ತು. ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಹಾಗೂ ಕಾಂಗ್ರೆಸ್ ಶಾಸಕ ಡಿ.ಜಿ. ಶಾಂತನಗೌಡ ನೇತೃತ್ವದಲ್ಲಿ ನಿಯೋಗ ಸಿಎಂ ಅವರನ್ನು ಭೇಟಿ ಮಾಡಿತ್ತು.

ಸರ್ಕಾರದ ನಿರ್ಧಾರದಿಂದ ಅಡಿಕೆ ಬೆಳೆಗಾರರಲ್ಲಿ ಆತಂಕ ಉಂಟಾಗಿದ್ದು, ಮಾರುಕಟ್ಟೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ನಿಯೋಗ ಮುಖ್ಯಮಂತ್ರಿ ಗಮನಕ್ಕೆ ತಂದಿತ್ತು. ನಿಷೇಧದಿಂದ ಉಂಟಾಗಬಹುದಾದ ಆರ್ಥಿಕ ನಷ್ಟದಿಂದ ಅಡಿಕೆ ಬೆಳೆಗಾರರನ್ನು ರಕ್ಷಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಇದೀಗ ರೈತರ ಹಿತ ಹಾಗೂ ಮಾರುಕಟ್ಟೆಯ ಮೇಲಿನ ಪರಿಣಾಮವನ್ನು ಪರಿಗಣಿಸಿರುವ ಸರ್ಕಾರ, ನಿಷೇಧ ಆದೇಶವನ್ನು ಹಿಂಪಡೆಯಲು ಮುಂದಾಗಿದೆ.

ಕರ್ನಾಟಕದ 18 ಪೊಲೀಸ್‌ ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಘೋಷಣೆ; ಅತ್ಯುತ್ತಮ ಸೇವೆಗೆ ಗೌರವ

0

ಬೆಂಗಳೂರು: ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೇಂದ್ರ ಗೃಹ ಸಚಿವಾಲಯವು ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಹಾಗೂ ಶ್ಲಾಘನೀಯ ಸೇವೆ ಸಲ್ಲಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡುವ ಪ್ರತಿಷ್ಠಿತ ‘ರಾಷ್ಟ್ರಪತಿ ಪದಕ-2026’ ಪ್ರಶಸ್ತಿಯನ್ನು ಘೋಷಿಸಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಒಟ್ಟು 17 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಬಾರಿ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.

ವಿಶಿಷ್ಟ ಸೇವಾ ಪದಕ

ಪೊಲೀಸ್ ಇಲಾಖೆಯಲ್ಲಿ ಅತ್ಯಂತ ವಿಶಿಷ್ಟ ಹಾಗೂ ಸುದೀರ್ಘ ಸೇವೆ ಸಲ್ಲಿಸಿರುವ ಸಿಸಿಬಿಯ ಸಹಾಯಕ ಪೊಲೀಸ್ ಆಯುಕ್ತ (ACP) ಹೆಚ್.ಎನ್. ಧರ್ಮೇಂದ್ರ ಅವರಿಗೆ ಪ್ರತಿಷ್ಠಿತ ‘ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ’ ಗೌರವ ದೊರೆತಿದೆ.

ಶ್ಲಾಘನೀಯ ಸೇವಾ ಪದಕ ಪುರಸ್ಕೃತರು

ರಾಜ್ಯದ ವಿವಿಧ ಪೊಲೀಸ್ ವಿಭಾಗಗಳು, ಕಮಿಷನರೇಟ್‌ಗಳು ಹಾಗೂ ಜಿಲ್ಲೆಗಳಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿರುವ 16 ಅಧಿಕಾರಿ ಮತ್ತು ಸಿಬ್ಬಂದಿಗೆ ‘ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ’ ಘೋಷಿಸಲಾಗಿದೆ.

  • ಸಾರಾ ಫಾತಿಮಾ – ಎಸ್‌ಪಿ, ರೈಲ್ವೇಸ್, ಬೆಂಗಳೂರು
  • ಥಾಮಸ್ ಮ್ಯಾಥ್ಯೂ – ಕಮಾಂಡೆಂಟ್, ಕೆಎಸ್‌ಆರ್‌ಪಿ
  • ಮಹಾದೇವ್ – ಎಸಿಪಿ, ಆಗ್ನೇಯ ಸಂಚಾರ ವಿಭಾಗ, ಬೆಂಗಳೂರು
  • ಪರಮಾನಂದ್ – ಡಿವೈಎಸ್‌ಪಿ, ಡಿಎಆರ್, ರಾಯಚೂರು
  • ಷಣ್ಮುಗವರ್ಮಾ – ಪೊಲೀಸ್ ಇನ್ಸ್‌ಪೆಕ್ಟರ್, ಪೊಲೀಸ್ ತರಬೇತಿ ಶಾಲೆ, ಮೈಸೂರು
  • ಭಾವುದ್ದೀನ್ ರುಕ್ಮುದ್ದೀನ್ – ಪೊಲೀಸ್ ಇನ್ಸ್‌ಪೆಕ್ಟರ್, ಮಾಳಮಾರುತಿ ಠಾಣೆ, ಬೆಳಗಾವಿ
  • ಗುರುಪ್ರಸಾದ್ ಗೋಪಾಲ್ ನಾಯಕ್ – ಇನ್ಸ್‌ಪೆಕ್ಟರ್, ಸಿಐಡಿ
  • ನಯೀಂ – ರಿಸರ್ವ್ ಪೊಲೀಸ್ ಇನ್ಸ್‌ಪೆಕ್ಟರ್, ರಾಜಭವನ
  • ಶ್ರೀನಿವಾಸ – ಪಿಎಸ್‌ಐ, ಕೆ.ಪಿ. ಅಗ್ರಹಾರ ಠಾಣೆ, ಬೆಂಗಳೂರು
  • ಜ್ಞಾನದೇವ್ ನವಲ ತರಾಸೆ – ಎಆರ್‌ಎಸ್‌ಐ, ಕೆಎಸ್‌ಆರ್‌ಪಿ
  • ಮಹದೇವಸ್ವಾಮಿ – ಹೆಡ್ ಕಾನ್ಸ್‌ಟೇಬಲ್, ವಿಧಾನಸೌಧ ಭದ್ರತೆ
  • ಮಾರಿಯಾ ಜೋಸೆಫ್ ದಿನೇಶ್ ಕುಮಾರ್ – ಹೆಡ್ ಕಾನ್ಸ್‌ಟೇಬಲ್, ಡಿಸಿಆರ್‌ಇ, ಕೆಜಿಎಫ್
  • ಚಂದ್ರಶೇಖರ ಚಿಕ್ಕಣ್ಣನವರ್ – ಹೆಡ್ ಕಾನ್ಸ್‌ಟೇಬಲ್, ಕೆಎಸ್‌ಆರ್‌ಪಿ
  • ಅಬ್ದುಲ್ ಕಮಾಲ್ – ಹೆಡ್ ಕಾನ್ಸ್‌ಟೇಬಲ್, ತರೀಕೆರೆ ಠಾಣೆ
  • ನಾಗೇಶ್ ಮಚ್ಚಯ್ಯ – ಹೆಡ್ ಕಾನ್ಸ್‌ಟೇಬಲ್, ಸಿಐಡಿ
  • ಮನೋಹರ್ – ಪೊಲೀಸ್ ಕಾನ್ಸ್‌ಟೇಬಲ್, ಹುಣಸೂರು ಠಾಣೆ

ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿರುವ ವಿಶಿಷ್ಟ ಹಾಗೂ ಶ್ಲಾಘನೀಯ ಸೇವೆಯನ್ನು ಗುರುತಿಸಿ ನೀಡಲಾಗುತ್ತಿರುವ ಈ ಗೌರವಕ್ಕೆ ಭಾಜನರಾದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕರ್ನಾಟಕ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕ ವಲಯದಿಂದ ಅಭಿನಂದನೆಗಳು ವ್ಯಕ್ತವಾಗಿವೆ.

ದೇಶಕ್ಕಾಗಿ ಬದುಕಿ, ದೇಶವನ್ನು ಕಟ್ಟುವ ಕೆಲಸ ಮಾಡಿ: ವಿದ್ಯಾರ್ಥಿಗಳಿಗೆ ಮಾಜಿ ಸಿಎಂ ಬೊಮ್ಮಾಯಿ ಕರೆ

0

ಹಾವೇರಿ: “ಸ್ವಾತಂತ್ರ್ಯ ಬಂದ ನಂತರ ಜನಿಸಿದ ನಮಗೆಲ್ಲರಿಗೂ ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಬೃಹತ್ ಜವಾಬ್ದಾರಿಯಿದೆ. ಈಗ ದೇಶಕ್ಕಾಗಿ ಪ್ರಾಣ ಕೊಡುವ ಕಾಲವಲ್ಲ, ದೇಶಕ್ಕಾಗಿ ಬದುಕಿ, ದೇಶವನ್ನು ಕಟ್ಟುವ ಕೆಲಸ ಮಾಡಬೇಕಿದೆ” ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಕರೆ ನೀಡಿದ್ದಾರೆ.

ಯೂತ್ ಫಾರ್ ನೇಷನ್, ಹಾವೇರಿ ವತಿಯಿಂದ ಏರ್ಪಡಿಸಿದ ರಾಷ್ಟ್ರ ಪ್ರೇಮದ ಶ್ರಾವಣ ಸಂಭ್ರಮೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು. ​ಹಾವೇರಿಯ ಎಂ.ಜಿ. ರಸ್ತೆಯಲ್ಲಿ ಆಯೋಜಿಸಲಾಗಿದ್ದ ‘ತಿರಂಗಾ ಯಾತ್ರೆ’ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಸುಮಾರು ಎರಡೂವರೆ ಕಿಲೋಮೀಟರ್‌ಗೂ ಹೆಚ್ಚು ದೂರ ಕಾಲ್ನಡಿಗೆಯಲ್ಲಿ ಸಾಗಿ ‘ತಿರಂಗಾ ಯಾತ್ರೆ’ಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಸಹಸ್ರಾರು ವಿದ್ಯಾರ್ಥಿಗಳ ದೇಶಭಕ್ತಿ ಹಾಗೂ ಉತ್ಸಾಹವನ್ನು ಬೊಮ್ಮಾಯಿ ಅವರು ಮುಕ್ತಕಂಠದಿಂದ ಶ್ಲಾಘಿಸಿದರು.

​ತ್ಯಾಗ-ಬಲಿದಾನಗಳ ಸ್ಮರಣೆ:

ಹಾವೇರಿಯ ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹಾದೇವಪ್ಪ ಸೇರಿದಂತೆ ದೇಶದ ಮುಕ್ತಿಗಾಗಿ ಪ್ರಾಣ-ಆಸ್ತಿಗಳನ್ನು ತ್ಯಾಗ ಮಾಡಿದ ಸಾವಿರಾರು ವೀರರ ಹೋರಾಟವನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.

​ಇಂದು ದೇಶಕ್ಕೆ ಬಲವಾದ ನಾಯಕತ್ವ ದೊರೆತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಸದೃಢವಾಗಿ ಬೆಳೆಯುತ್ತಿದೆ ಎಂದರು.
​ಕೋವಿಡ್ ಸಮಯದ ಸಾಧನೆ: ಜಗತ್ತಿನ ಮುಂದುವರಿದ ರಾಷ್ಟ್ರಗಳೇ ಕೊರೊನಾ ಮಹಾಮಾರಿಯಿಂದ ಕಂಗಾಲಾಗಿದ್ದಾಗ, ಭಾರತವು ಸ್ವದೇಶಿ ಲಸಿಕೆಯನ್ನು ಕಂಡುಹಿಡಿದು ದೇಶದ 130 ಕೋಟಿಗೂ ಹೆಚ್ಚು ಜನರಿಗೆ ಉಚಿತವಾಗಿ ನೀಡಿ, ವಿದೇಶಗಳಿಗೂ ಪೂರೈಸಿ ಮಾದರಿಯಾಯಿತು ಎಂದು ಸರ್ಕಾರದ ಸಾಧನೆಯನ್ನು ಎತ್ತಿಹಿಡಿದರು.

​ಬಲಿಷ್ಠ ನಾಯಕತ್ವ

​​”ಇಂದಿನ 21ನೇ ಶತಮಾನವು ಜ್ಞಾನ ಮತ್ತು ತಂತ್ರಜ್ಞಾನದ ಶತಮಾನವಾಗಿದೆ. ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದು, ಅವು ನಮ್ಮನ್ನು ನಿಯಂತ್ರಿಸುವ ಮೊದಲು ನಾವೇ ತಂತ್ರಜ್ಞಾನವನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತವು ಸವಾಲುಗಳನ್ನು ಜಾಣತನದಿಂದ ಎದುರಿಸುತ್ತಿದೆ. ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್, ಆಪರೇಷನ್ ಸಿಂಧೂರ್‌ಗಳ ಮೂಲಕ ಬದ್ಧ ವೈರಿಗಳಿಗೆ ಸೂಕ್ತ ಉತ್ತರ ನೀಡಲಾಗಿದೆ. ಇರಾನ್-ಇಸ್ರೇಲ್ ಅಥವಾ ಇತರ ಜಾಗತಿಕ ಬಿಕ್ಕಟ್ಟುಗಳು ಎದುರಾದರೂ ದೇಶದಲ್ಲಿ ಪೆಟ್ರೋಲ್ ಹಾಗೂ ಅಗತ್ಯ ವಸ್ತುಗಳ ಅಭಾವ ಉಂಟಾಗದಂತೆ ನೋಡಿಕೊಳ್ಳಲಾಗಿದೆ. ಬಾಂಗ್ಲಾ ದೇಶದಂತಹ ನೆರೆಹೊರೆಯ ರಾಷ್ಟ್ರಗಳು ಇಂಧನಕ್ಕಾಗಿ ಭಾರತದತ್ತ ಮುಖ ಮಾಡುವ ವಾತಾವರಣ ನಿರ್ಮಾಣವಾಗಿದೆ.

​ಜೆನ್ ಝಿ’ ಮತ್ತು ಅಲ್ಫಾ ತಲೆಮಾರಿನ ಜವಾಬ್ದಾರಿ

ಇಂದಿನ ಜೆನ್ ಝಿ ಹಾಗೂ ಅಲ್ಫಾ ತಲೆಮಾರಿನ ಯುವಕರು ಜಾಗತಿಕ ಬದಲಾವಣೆಗಳ ಮುಂಚೂಣಿಯಲ್ಲಿದ್ದಾರೆ. ಬರುವ ಹೊಸ ಹೊಸ ಸವಾಲುಗಳನ್ನು ಎದುರಿಸುವ ಶಕ್ತಿ ಯುವಜನತೆಯಲ್ಲಿದೆ. ಪ್ರಸ್ತುತ ಭಾರತವು ವಿಶ್ವದ 4ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಆದರೆ 2047ರ ವೇಳೆಗೆ ಭಾರತವು ವಿಶ್ವದಲ್ಲೇ ಪ್ರಥಮ ಸ್ಥಾನಕ್ಕೆ ತಲುಪಬೇಕಿದೆ. ಈ ಕನಸು ನನಸಾಗಲು ಬರಿ ರಾಜಕಾರಣಿಗಳು ವೇದಿಕೆ ಮೇಲೆ ಕುಳಿತರೆ ಸಾಲದು; ಯುವಜನತೆ ಮತ್ತು ವಿದ್ಯಾರ್ಥಿಗಳು ಕಠಿಣ ಶ್ರಮ ವಹಿಸಬೇಕು ಎಂದರು.

​ಜ್ಞಾನವೇ ಅಂತಿಮ ಅಸ್ತ್ರ:

“ಹಿಂದಿನ ಕಾಲದಲ್ಲಿ ಸೈನ್ಯ ಅಥವಾ ಹಣವಿದ್ದವರು ಜಗತ್ತನ್ನು ಆಳುತ್ತಿದ್ದರು, ಆದರೆ ಇಂದು ಜ್ಞಾನವಿದ್ದವರು ಮಾತ್ರ ಜಗತ್ತನ್ನು ಮುನ್ನಡೆಸಲು ಸಾಧ್ಯ. ಹೀಗಾಗಿ ವಿದ್ಯಾರ್ಥಿಗಳು ಉತ್ತಮ ವಿದ್ಯೆ ಕಲಿತು, ಜ್ಞಾನಾರ್ಜನೆ ಮಾಡಿ ತಮ್ಮ ಕ್ಷೇತ್ರದಲ್ಲಿ ಎಕ್ಸ್‌ಪರ್ಟ್ ಆಗಬೇಕು ಎಂದರು.
​‘ತಿರಂಗಾ ಯಾತ್ರೆ’ ಯಶಸ್ಸು: ದೇಶಪ್ರೇಮದ ಜಾಗೃತಿ ಮೂಡಿಸಲು ಆಯೋಜಿಸಲಾಗಿದ್ದ ‘ತಿರಂಗಾ ಯಾತ್ರೆ’ಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿರುವುದಕ್ಕೆ ಬೊಮ್ಮಾಯಿ ಅವರು ಧನ್ಯವಾದ ಸಲ್ಲಿಸಿ, ಶುಭ ಹಾರೈಸಿದರು.

ಈ ಸಂಧರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ವೀರುಪಾಕ್ಷಪ್ಪ ಬಳ್ಳಾರಿ, ಮಾಜಿ ಸಚಿವರಾದ ಬಿ.ಸಿ.ಪಾಟೀಲ್, ಮಾಜಿ ಶಾಸಕರಾದ ಶಿವರಾಜ ಸಜ್ಜನ, ಅರುಣಕುಮಾರ ಪೂಜಾರ, ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣವರ ಸೇರಿದಂತೆ ಹಲವಾರು ಪ್ರಮುಖರು ಹಾಗೂ ವಿದ್ಯಾರ್ಥಿಗಳು ಯಾತ್ರೆಯಲ್ಲಿ ಉಪಸ್ಥಿತರಿದ್ದರು.

₹6,000 ಕೋಟಿ ಡ್ರಗ್ಸ್ ದಂಧೆ: ದುಬೈನಲ್ಲಿ ಅಡಗಿದ್ದ ಕಿಂಗ್‌ಪಿನ್ ವಿಕ್ರೇಂದರ್ ಬಸೋಯಾ ಭಾರತಕ್ಕೆ ವಾಪಸ್

0

ಮುಂಬೈ: ₹6,000 ಕೋಟಿ ಮೌಲ್ಯದ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಆರೋಪಿಯಾಗಿರುವ ಕುಖ್ಯಾತ ಡ್ರಗ್ ಸಿಂಡಿಕೇಟ್‌ ಆಪರೇಟರ್ ವಿಕ್ರೇಂದರ್ ಸಿಂಗ್ ಬಸೋಯಾನನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ದುಬೈನಿಂದ ಭಾರತಕ್ಕೆ ಕರೆತಂದಿದೆ. UAEನಲ್ಲಿ ಬಂಧನಕ್ಕೊಳಗಾದ ಬಳಿಕ ಬಸೋಯಾನನ್ನು ಭಾರತಕ್ಕೆ ಗಡೀಪಾರು ಮಾಡಲಾಗಿದ್ದು, ಏರ್ ಇಂಡಿಯಾ AI 4310 ವಿಮಾನದ ಮೂಲಕ ದೇಶಕ್ಕೆ ಕರೆತರಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ವರದಿಯಾಗಿದೆ.

ಬಸೋಯಾ ವಿರುದ್ಧ ಎನ್‌ಸಿಬಿ ಈ ಹಿಂದೆ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿತ್ತು. ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಿ ಭಾರತಕ್ಕೆ ವಾಪಸ್ ಕರೆತರುವ ಕಾರ್ಯಾಚರಣೆಯಲ್ಲಿ ಕೇಂದ್ರ ಸರ್ಕಾರದ ಪ್ರಯತ್ನ ಹಾಗೂ UAE ಅಧಿಕಾರಿಗಳ ಸಹಕಾರ ಪ್ರಮುಖವಾಗಿತ್ತು ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ, ದೆಹಲಿ ಪೊಲೀಸರ ಸುಮಾರು 13,000 ಪ್ರಕರಣಗಳಿಗೆ ಸಂಬಂಧಿಸಿದ ದೊಡ್ಡ ಡ್ರಗ್ಸ್ ಜಾಲದ ಪ್ರಮುಖ ಆರೋಪಿ ಎನ್ನಲಾಗಿರುವ ಸಂದೀಪ್ ಧುನಿಯಾನ ಆಪ್ತನಾಗಿ ಬಸೋಯಾ ಗುರುತಿಸಿಕೊಂಡಿದ್ದಾನೆ. ಧುನಿಯಾ ದುಬೈನಿಂದ ಪಾಕಿಸ್ತಾನಕ್ಕೆ ತೆರಳಿದ್ದಾನೆ ಎನ್ನಲಾಗಿದ್ದು, ಈ ಜಾಲದ ಅಂತರರಾಷ್ಟ್ರೀಯ ಸಂಪರ್ಕಗಳ ಕುರಿತು ತನಿಖಾ ಸಂಸ್ಥೆಗಳು ಪರಿಶೀಲನೆ ನಡೆಸುತ್ತಿವೆ.

ಬಸೋಯಾನ ಭಾರತಕ್ಕೆ ವಾಪಸ್ ಕರೆತಂದಿರುವ ಬೆಳವಣಿಗೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ವಾಗತಿಸಿದ್ದಾರೆ. ವಿದೇಶಗಳಲ್ಲಿ ಅಡಗಿರುವ ಡ್ರಗ್ಸ್ ಕಳ್ಳಸಾಗಣೆದಾರರನ್ನು ಪತ್ತೆಹಚ್ಚಿ ಅವರ ಜಾಲಗಳನ್ನು ಭೇದಿಸಲು ಸರ್ಕಾರ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಮಾದಕ ವಸ್ತುಗಳ ವಿರುದ್ಧದ ಸರ್ಕಾರದ ಶೂನ್ಯ ಸಹಿಷ್ಣುತೆ ನೀತಿಯಲ್ಲಿ ಬಸೋಯಾನ ವಾಪಸಾತಿ ಮತ್ತೊಂದು ಪ್ರಮುಖ ಹೆಜ್ಜೆ ಎಂದು ಶಾ ಬಣ್ಣಿಸಿದ್ದಾರೆ. ಡ್ರಗ್ಸ್ ಕಳ್ಳಸಾಗಣೆದಾರರು ದೇಶದ ಹೊರಗೆ ಎಲ್ಲಿಯೇ ಅಡಗಿಕೊಂಡರೂ ಭಾರತೀಯ ಕಾನೂನಿನ ವ್ಯಾಪ್ತಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಈ ಕಾರ್ಯಾಚರಣೆ ನೀಡಿದೆ ಎಂದು ಅವರು ಹೇಳಿದ್ದಾರೆ.

ಶಿವಗಂಗೆ ಬೆಟ್ಟದಲ್ಲಿ 6 ದಿನದ ಶೋಧಕ್ಕೂ ಸುಳಿವಿಲ್ಲ: ಟೆಕ್ಕಿ ಅದ್ವೈತ್‌ಗಾಗಿ ಕಾರ್ಯಾಚರಣೆ ಸ್ಥಗಿತ, ತನಿಖೆಗೆ ಹೊಸ ತಿರುವು

0

ಬೆಂಗಳೂರು: ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿ ನಾಪತ್ತೆಯಾಗಿದ್ದ ಟೆಕ್ಕಿ ಅದ್ವೈತ್ ಉಪಾಧ್ಯಾಯನಿಗಾಗಿ ಕಳೆದ ಆರು ದಿನಗಳಿಂದ ನಡೆಯುತ್ತಿದ್ದ ತೀವ್ರ ಶೋಧ ಕಾರ್ಯಾಚರಣೆಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಬೆಟ್ಟ, ಕಂದಕ ಹಾಗೂ ಅರಣ್ಯ ಪ್ರದೇಶಗಳಲ್ಲಿ ವ್ಯಾಪಕವಾಗಿ ಹುಡುಕಾಟ ನಡೆಸಿದರೂ ಅದ್ವೈತ್‌ನ ಯಾವುದೇ ಸುಳಿವು ಪತ್ತೆಯಾಗಿಲ್ಲ.

ಎನ್‌ಡಿಆರ್‌ಎಫ್‌ ಸಿಬ್ಬಂದಿ, ನೆಲಮಂಗಲ ಟೌನ್ ಹಾಗೂ ಡಾಬಸ್‌ಪೇಟೆ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ, ಚಿತ್ರದುರ್ಗದ ಸಾಹಸಿ ಜ್ಯೋತಿರಾಜ್ ಮತ್ತು ಸ್ಥಳೀಯರು ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಅಪಾಯಕಾರಿ ಪ್ರದೇಶಗಳಲ್ಲೂ ತಂಡಗಳು ಪರಿಶೀಲನೆ ನಡೆಸಿದರೂ ನಾಪತ್ತೆಯಾಗಿರುವ ಟೆಕ್ಕಿಯ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಹೀಗಾಗಿ ಶಿವಗಂಗೆ ಬೆಟ್ಟದಲ್ಲಿ ನಡೆಯುತ್ತಿದ್ದ ಶೋಧ ಕಾರ್ಯಾಚರಣೆಯನ್ನು ಸದ್ಯಕ್ಕೆ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಇದರೊಂದಿಗೆ ಪ್ರಕರಣದ ಮುಂದಿನ ತನಿಖೆ ಇದೀಗ ಮತ್ತಷ್ಟು ಕುತೂಹಲ ಮೂಡಿಸಿದೆ.

ಕಾಡುಗೋಡಿ ಪೊಲೀಸರಿಗೆ ಪ್ರಕರಣ ವರ್ಗಾವಣೆ

ಈ ನಡುವೆ ಡಾಬಸ್‌ಪೇಟೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕಾಡುಗೋಡಿ ಪೊಲೀಸರಿಗೆ ರವಾನಿಸಿದ್ದಾರೆ. ಮುಂದಿನ ತನಿಖೆಯನ್ನು ಕಾಡುಗೋಡಿ ಪೊಲೀಸರು ಕೈಗೆತ್ತಿಕೊಳ್ಳಲಿದ್ದು, ಅದ್ವೈತ್‌ನ ನಾಪತ್ತೆಯ ಹಿಂದಿನ ಕಾರಣದ ಕುರಿತು ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಕರಣದಲ್ಲಿ ಇದೀಗ ಹೊಸ ಅನುಮಾನವೂ ಮೂಡಿದೆ. ಪ್ರೇಯಸಿಯನ್ನು ಹೆದರಿಸುವ ಉದ್ದೇಶದಿಂದ ಅಥವಾ ಬೇರೆ ಯಾವುದಾದರೂ ಕಾರಣಕ್ಕಾಗಿ ಅದ್ವೈತ್ ಉದ್ದೇಶಪೂರ್ವಕವಾಗಿ ನಾಪತ್ತೆಯಾಗಿದ್ದಾನೆಯೇ ಎಂಬ ಶಂಕೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಕಾಡುಗೋಡಿ ಪೊಲೀಸರು ಅದ್ವೈತ್‌ನ ವೈಯಕ್ತಿಕ ಹಿನ್ನೆಲೆ, ನಾಪತ್ತೆಯಾಗುವ ಮುನ್ನದ ಚಟುವಟಿಕೆಗಳು, ಕೊನೆಯದಾಗಿ ಆತ ಸಂಪರ್ಕದಲ್ಲಿದ್ದವರು ಹಾಗೂ ನಾಪತ್ತೆಯಾದ ಸಂದರ್ಭದ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

ಆರು ದಿನಗಳ ನಿರಂತರ ಶೋಧದ ಬಳಿಕವೂ ಯಾವುದೇ ಸುಳಿವು ಸಿಗದಿರುವುದು ಪ್ರಕರಣದ ತನಿಖೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಇದೀಗ ಕಾಡುಗೋಡಿ ಪೊಲೀಸರ ತನಿಖೆಯಲ್ಲಿ ಅದ್ವೈತ್ ನಾಪತ್ತೆ ಪ್ರಕರಣಕ್ಕೆ ಯಾವ ತಿರುವು ಸಿಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.