Home Blog

ರಕ್ಷಾ ಬಂಧನ 2026: ರಾಖಿ ಕಟ್ಟಲು ಶುಭ ಸಮಯ ಯಾವುದು? ಇಲ್ಲಿದೆ ಸಂಪೂರ್ಣ ಮಾಹಿತಿ!

0

ಸಹೋದರ-ಸಹೋದರಿಯರ ನಡುವಿನ ಪ್ರೀತಿ, ಬಾಂಧವ್ಯ ಮತ್ತು ಕಾಳಜಿಯ ಸಂಕೇತವಾಗಿರುವ ರಕ್ಷಾ ಬಂಧನ ಹಬ್ಬವನ್ನು ಇಂದು ಆಚರಿಸಲಾಗುತ್ತಿದೆ.

ಈ ದಿನ ಸಹೋದರಿಯರು ಸಹೋದರರಿಗೆ ರಾಖಿ ಕಟ್ಟಿ, ಅವರ ದೀರ್ಘಾಯುಷ್ಯ ಹಾಗೂ ಒಳಿತಿಗಾಗಿ ಪ್ರಾರ್ಥಿಸುತ್ತಾರೆ. ಹೀಗಾಗಿ ರಾಖಿ ಕಟ್ಟಲು ಶುಭ ಸಮಯ ಯಾವುದು ಎಂಬ ಕುತೂಹಲ ಹಲವರಲ್ಲಿದೆ.

ಈ ಬಾರಿ ರಕ್ಷಾ ಬಂಧನವನ್ನು ಆಗಸ್ಟ್ 28ರಂದು ಆಚರಿಸಲಾಗುತ್ತಿದೆ. ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಈ ಬಾರಿ ರಾಖಿ ಕಟ್ಟಲು ಭದ್ರೆಯ ಅಡ್ಡಿ ಇಲ್ಲದಿರುವುದರಿಂದ ದಿನದ ಬಹುತೇಕ ಸಮಯವನ್ನು ಶುಭವೆಂದು ಪರಿಗಣಿಸಬಹುದು ಎಂದು ಹೇಳಲಾಗಿದೆ.

ಹುಣ್ಣಿಮೆ ತಿಥಿ ಯಾವಾಗ ಮುಕ್ತಾಯ?

ಹಿಂದೂ ಪಂಚಾಂಗದ ಪ್ರಕಾರ, ರಕ್ಷಾ ಬಂಧನದ ದಿನವಾದ ಆಗಸ್ಟ್ 28ರಂದು ಬೆಳಿಗ್ಗೆ ಹುಣ್ಣಿಮೆ ತಿಥಿ ಮುಕ್ತಾಯವಾಗಲಿದೆ. ಬಳಿಕ ಪ್ರತಿಪದ ತಿಥಿ ಆರಂಭವಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಖಿ ಕಟ್ಟಲು ಯಾವ ಸಮಯ ಸೂಕ್ತ ಎಂಬ ಬಗ್ಗೆ ಗೊಂದಲ ಮೂಡಿದೆ.

ಹಿಂದೂ ಪಂಚಾಂಗದಲ್ಲಿ ಉದಯ ತಿಥಿಗೆ ವಿಶೇಷ ಮಹತ್ವವಿದೆ. ಸೂರ್ಯೋದಯದ ವೇಳೆಯಲ್ಲಿ ಯಾವ ತಿಥಿ ಇರುತ್ತದೆಯೋ ಅದನ್ನೇ ಆ ದಿನದ ತಿಥಿಯಾಗಿ ಪರಿಗಣಿಸುವುದು ಸಂಪ್ರದಾಯ. ಇದೇ ಕಾರಣಕ್ಕೆ ಈ ಬಾರಿ ರಕ್ಷಾ ಬಂಧನವನ್ನು ಆಗಸ್ಟ್ 28ರಂದು ಆಚರಿಸಲಾಗುತ್ತಿದೆ.

ರಾಖಿ ಕಟ್ಟಲು ಶುಭ ಸಮಯ:

ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಆಗಸ್ಟ್ 28ರಂದು ಬೆಳಿಗ್ಗೆ 6:22ರಿಂದ 9:48ರವರೆಗೆ ರಾಖಿ ಕಟ್ಟಲು ಶುಭ ಸಮಯವಿದೆ ಎಂದು ಹೇಳಲಾಗಿದೆ.

ಹುಣ್ಣಿಮೆ ತಿಥಿ ಮುಕ್ತಾಯಕ್ಕೂ ಮುನ್ನ ರಾಖಿ ಕಟ್ಟಲು ಬಯಸುವವರು ಈ ಅವಧಿಯಲ್ಲಿ ರಾಖಿ ಕಟ್ಟಬಹುದು. ಆದರೆ ಭದ್ರೆಯ ಅಡ್ಡಿ ಇಲ್ಲದಿರುವುದರಿಂದ ದಿನದ ಇತರ ಸಮಯದಲ್ಲಿಯೂ ರಾಖಿ ಕಟ್ಟಬಹುದು ಎಂಬ ಅಭಿಪ್ರಾಯವಿದೆ.

ಹೀಗಾಗಿ ಕುಟುಂಬದ ಸಂಪ್ರದಾಯ ಹಾಗೂ ಸ್ಥಳೀಯ ಪಂಚಾಂಗದ ಆಧಾರದ ಮೇಲೆ ರಾಖಿ ಕಟ್ಟುವ ಸಮಯವನ್ನು ಆಯ್ಕೆ ಮಾಡಬಹುದು.

ರಾಖಿ ಕಟ್ಟುವ ಸಂಪ್ರದಾಯ ಹೇಗೆ?

ರಕ್ಷಾ ಬಂಧನದಂದು ಬೆಳಗ್ಗೆ ಸ್ನಾನ ಮಾಡಿ ಸ್ವಚ್ಛವಾದ ಬಟ್ಟೆ ಧರಿಸಿ ಪೂಜೆಯ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಬಳಿಕ ರಾಖಿ, ಕುಂಕುಮ, ಅಕ್ಷತೆ, ದೀಪ ಹಾಗೂ ಸಿಹಿತಿಂಡಿಗಳನ್ನು ತಟ್ಟೆಯಲ್ಲಿ ಸಿದ್ಧಪಡಿಸಿಕೊಳ್ಳಬೇಕು.

ಮೊದಲು ಸಹೋದರನ ಹಣೆಗೆ ಕುಂಕುಮದ ತಿಲಕ ಹಚ್ಚಿ, ಅಕ್ಷತೆ ಹಾಕಿ ಬಳಿಕ ರಾಖಿ ಕಟ್ಟುವುದು ಸಂಪ್ರದಾಯ. ನಂತರ ಸಹೋದರನಿಗೆ ಸಿಹಿ ತಿನ್ನಿಸಿ, ಆತನ ದೀರ್ಘಾಯುಷ್ಯ, ಆರೋಗ್ಯ ಮತ್ತು ಒಳಿತಿಗಾಗಿ ಸಹೋದರಿ ಪ್ರಾರ್ಥಿಸುತ್ತಾರೆ.

ಪಂಚಾಂಗ ಪರಿಶೀಲಿಸುವುದು ಉತ್ತಮ:

2026ರ ರಕ್ಷಾ ಬಂಧನದಂದು ಭದ್ರೆಯ ಅಡ್ಡಿ ಇಲ್ಲದಿರುವುದರಿಂದ ರಾಖಿ ಕಟ್ಟಲು ಅನುಕೂಲಕರ ಸಮಯವಿದೆ ಎಂದು ಜ್ಯೋತಿಷ್ಯ ಮೂಲಗಳು ಹೇಳುತ್ತವೆ. ವಿಶೇಷವಾಗಿ ಬೆಳಿಗ್ಗೆ 6:22ರಿಂದ 9:48ರವರೆಗಿನ ಅವಧಿಯನ್ನು ಶುಭ ಸಮಯವೆಂದು ಪರಿಗಣಿಸಲಾಗಿದೆ.

ಆದರೆ ತಿಥಿ ಹಾಗೂ ಶುಭ ಸಮಯದಲ್ಲಿ ಪ್ರದೇಶಾನುಸಾರ ಸ್ವಲ್ಪ ವ್ಯತ್ಯಾಸ ಇರಬಹುದು. ಹೀಗಾಗಿ ರಾಖಿ ಕಟ್ಟುವ ಮುನ್ನ ನಿಮ್ಮ ಪ್ರದೇಶದ ಪಂಚಾಂಗವನ್ನು ಪರಿಶೀಲಿಸುವುದು ಅಥವಾ ಸ್ಥಳೀಯ ಜ್ಯೋತಿಷ್ಯ ತಜ್ಞರ ಸಲಹೆ ಪಡೆಯುವುದು ಸೂಕ್ತ.

ತೆರಿಗೆ ತಪ್ಪಿಸಿಕೊಳ್ಳೋಕೆ ಸಾಧ್ಯವಿಲ್ಲ! ಬೆಂಗಳೂರಿನ ಲಕ್ಷಾಂತರ ಆಸ್ತಿಗಳ ಮೇಲೆ GBA ಕಣ್ಣು

0

ಬೆಂಗಳೂರು: ಆಸ್ತಿ ವಿವರಗಳನ್ನು ಮರೆಮಾಚಿ ತೆರಿಗೆ ವಂಚಿಸುತ್ತಿರುವವರಿಗೆ ಬಿಸಿ ಮುಟ್ಟಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಬೃಹತ್ ಆಸ್ತಿ ಸರ್ವೆಗೆ ಸಜ್ಜಾಗಿದೆ.

ಬೆಂಗಳೂರಿನಾದ್ಯಂತ ಪ್ರತಿಯೊಬ್ಬರ ಹೆಸರಿನಲ್ಲಿರುವ ಆಸ್ತಿ ಹಾಗೂ ಕಟ್ಟಡಗಳ ನೈಜ ವಿಸ್ತೀರ್ಣದ ವಿವರಗಳನ್ನು ಪತ್ತೆಹಚ್ಚಲು ಸಮಗ್ರ ಸಮೀಕ್ಷೆ ನಡೆಸಲು ಪ್ರಾಧಿಕಾರ ನಿರ್ಧರಿಸಿದೆ.

ಆಸ್ತಿ ತೆರಿಗೆ ವಂಚನೆಗೆ ಕಡಿವಾಣ ಹಾಕುವುದು ಹಾಗೂ ಖಾತಾ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವುದು ಸರ್ವೆಯ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ ನಗರದ ಎಲ್ಲ ಆಸ್ತಿಗಳನ್ನು ಸಮೀಕ್ಷೆ ನಡೆಸಿ, ಅವುಗಳಿಗೆ GPS ಟ್ಯಾಗಿಂಗ್ ಅಳವಡಿಸಲು ಸಿದ್ಧತೆ ನಡೆದಿದೆ.

ಬೆಂಗಳೂರಿನ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ ಈ ಬೃಹತ್ ಆಸ್ತಿ ಸರ್ವೆ ನಡೆಯಲಿದೆ ಎನ್ನಲಾಗಿದೆ.

ಮಾಲ್‌ಗಳು, ವಾಣಿಜ್ಯ ಸಂಕೀರ್ಣಗಳು ಹಾಗೂ ಬಹುಮಹಡಿ ವಸತಿ ಸಮುಚ್ಚಯಗಳ ಮಾಲೀಕರು ಕಟ್ಟಡದ ನೈಜ ವಿಸ್ತೀರ್ಣಕ್ಕಿಂತ ಕಡಿಮೆ ವಿಸ್ತೀರ್ಣ ತೋರಿಸಿ ತೆರಿಗೆ ವಂಚಿಸುತ್ತಿರುವ ಪ್ರಕರಣಗಳನ್ನು ಪತ್ತೆಹಚ್ಚಲು ಸಮೀಕ್ಷೆ ನೆರವಾಗಲಿದೆ.

ಸರ್ವೆ ವೇಳೆ ಪ್ರತಿಯೊಂದು ಆಸ್ತಿಯ ವಿವರಗಳನ್ನು ಡಿಜಿಟಲ್ ಇ-ಖಾತಾ ವ್ಯವಸ್ಥೆಗೆ ಸೇರ್ಪಡೆಗೊಳಿಸಿ, GPS ಲೊಕೇಶನ್‌ನೊಂದಿಗೆ ಲಿಂಕ್ ಮಾಡಲಾಗುತ್ತದೆ. ಅಧಿಕೃತ ದಾಖಲೆಗಳಿಲ್ಲದೆ ನಿರ್ಮಿಸಲಾಗಿರುವ ಅನಧಿಕೃತ ಆಸ್ತಿಗಳನ್ನೂ ಗುರುತಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ಸದ್ಯ ಜಿಬಿಎ ವ್ಯಾಪ್ತಿಯ ಆಸ್ತಿ ತೆರಿಗೆ ವ್ಯವಸ್ಥೆಯಿಂದ ಹೊರಗುಳಿದಿರುವ ಲಕ್ಷಾಂತರ ಆಸ್ತಿಗಳನ್ನು ಪತ್ತೆಹಚ್ಚಿ, ಅವುಗಳನ್ನು ಅಧಿಕೃತ ಕಂದಾಯ ದಾಖಲೆಗಳಿಗೆ ಸೇರ್ಪಡೆಗೊಳಿಸುವ ಮೂಲಕ ತೆರಿಗೆ ಸಂಗ್ರಹ ಹೆಚ್ಚಿಸುವ ಗುರಿಯನ್ನು ಪ್ರಾಧಿಕಾರ ಹೊಂದಿದೆ.

ಸಮೀಕ್ಷೆ ಪೂರ್ಣಗೊಂಡ ಬಳಿಕ ಬೆಂಗಳೂರಿನ ಆಸ್ತಿ ಮಾಲೀಕತ್ವದ ನಿಖರ ಮಾಹಿತಿಯೊಂದಿಗೆ ಸಮಗ್ರ ಡಿಜಿಟಲ್ ದಾಖಲೆ ಸಿದ್ಧವಾಗಲಿದೆ. ಆಸ್ತಿ ವಿವರಗಳನ್ನು ಸುಳ್ಳಾಗಿ ನೀಡಿ ತೆರಿಗೆ ವಂಚಿಸಿರುವುದು ಪತ್ತೆಯಾದರೆ ಅಂತಹ ಮಾಲೀಕರ ವಿರುದ್ಧ ದಂಡ ಹಾಗೂ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ವಾಲ್ಮೀಕಿ ನಿಗಮ ಹಗರಣಕ್ಕೆ ಬಿಗ್ ಟ್ವಿಸ್ಟ್: ನಾಗೇಂದ್ರ ರಾಜೀನಾಮೆ ಬಹುತೇಕ ಖಚಿತ?

0

ಬೆಂಗಳೂರು: ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ವಿಚಾರ ಇದೀಗ ದೆಹಲಿ ಅಂಗಳ ತಲುಪಿದ್ದು, ಕಾಂಗ್ರೆಸ್ ಹೈಕಮಾಂಡ್‌ನಿಂದ ರಾಜ್ಯ ನಾಯಕರಿಗೆ ಮಹತ್ವದ ಸಂದೇಶ ರವಾನೆಯಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಪಕ್ಷ ಮತ್ತು ಸರ್ಕಾರದ ಹಿತದೃಷ್ಟಿಯಿಂದ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ಹೈಕಮಾಂಡ್ ವ್ಯಕ್ತಪಡಿಸಿದೆ ಎನ್ನಲಾಗಿದೆ.

ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ನಾಯಕರೊಂದಿಗೆ ನಾಗೇಂದ್ರ ವಿರುದ್ಧದ ಪ್ರಕರಣದ ಕಾನೂನು ಹಾಗೂ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಪ್ರಕರಣದ ತನಿಖೆಯ ಹಂತ, ಪ್ರತಿಪಕ್ಷಗಳ ಹೋರಾಟದಿಂದ ಸರ್ಕಾರಕ್ಕೆ ಉಂಟಾಗುತ್ತಿರುವ ರಾಜಕೀಯ ಹಾನಿ ಹಾಗೂ ಮುಂದಿನ ದಿನಗಳಲ್ಲಿ ರಾಜ್ಯಪಾಲರ ಮಟ್ಟದಲ್ಲಿ ಸಂಭವಿಸಬಹುದಾದ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆದಿದೆ ಎನ್ನಲಾಗಿದೆ.

ಈ ಚರ್ಚೆಯ ಬಳಿಕ ವ್ಯಕ್ತಿಗಿಂತ ಪಕ್ಷ ಮತ್ತು ಸರ್ಕಾರದ ಹಿತ ಮುಖ್ಯ ಎಂಬ ನಿಲುವಿಗೆ ಕಾಂಗ್ರೆಸ್ ಹೈಕಮಾಂಡ್ ಬಂದಿದೆ ಎನ್ನಲಾಗಿದ್ದು, ನಾಗೇಂದ್ರ ರಾಜೀನಾಮೆ ನೀಡುವಂತೆ ಸೂಚನೆ ನೀಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಹೈಕಮಾಂಡ್ ಭೇಟಿಯ ಬಳಿಕ ದೆಹಲಿಯಲ್ಲಿ ಪ್ರತಿಕ್ರಿಯಿಸಿದ್ದ ಡಿ.ಕೆ. ಶಿವಕುಮಾರ್, ನಾಗೇಂದ್ರ ಅವರು ಪಕ್ಷದ ಹಿತಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಿದ್ದಾರೆ ಎಂದು ಹೇಳಿದ್ದರು. ಈ ಹೇಳಿಕೆ ನಾಗೇಂದ್ರ ರಾಜೀನಾಮೆ ಕುರಿತ ಚರ್ಚೆಗೆ ಮತ್ತಷ್ಟು ಬಲ ನೀಡಿದೆ.

ಸಿಬಿಐ ಅನುಮತಿ ಕೋರಿರುವುದು ಪ್ರಕರಣಕ್ಕೆ ಹೊಸ ತಿರುವು:

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಾಗೇಂದ್ರ ವಿರುದ್ಧ ಕಾನೂನು ಕ್ರಮ ಮುಂದುವರಿಸಲು ಸಿಬಿಐ ರಾಜ್ಯಪಾಲರ ಅನುಮತಿ ಕೋರಿರುವುದು ಪ್ರಕರಣಕ್ಕೆ ಮತ್ತಷ್ಟು ಮಹತ್ವ ತಂದಿದೆ.

ಒಂದು ವೇಳೆ ರಾಜ್ಯಪಾಲರು ಅನುಮತಿ ನೀಡಿದರೆ ಸರ್ಕಾರಕ್ಕೆ ರಾಜಕೀಯವಾಗಿ ಮುಜುಗರ ಉಂಟಾಗುವ ಸಾಧ್ಯತೆ ಇದೆ. ಇದೇ ವಿಚಾರವನ್ನು ಬಿಜೆಪಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಮುಖ ಅಸ್ತ್ರವಾಗಿ ಬಳಸುವ ಸಾಧ್ಯತೆಯೂ ಇದೆ.

ಬಿಜೆಪಿ ಪಾದಯಾತ್ರೆ ಮೂಲಕ ಕಾಂಗ್ರೆಸ್ ವಿರುದ್ಧ ಹೋರಾಟ ತೀವ್ರಗೊಳಿಸುತ್ತಿರುವ ಹಿನ್ನೆಲೆಯಲ್ಲಿ, ಪ್ರಕರಣದ ರಾಜಕೀಯ ಪರಿಣಾಮಗಳ ಬಗ್ಗೆಯೂ ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿದೆ. ಹೀಗಾಗಿ ರಾಜ್ಯಪಾಲರ ಮುಂದಿನ ನಿರ್ಧಾರಕ್ಕೂ ಮುನ್ನವೇ ರಾಜಕೀಯವಾಗಿ ಮುನ್ನೆಚ್ಚರಿಕೆ ವಹಿಸುವ ಕುರಿತು ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಮೂರು ಅಂಶಗಳ ಬಗ್ಗೆ ಹೈಕಮಾಂಡ್ ಚರ್ಚೆ:

ಡಿ.ಕೆ. ಶಿವಕುಮಾರ್ ಅವರೊಂದಿಗೆ ನಡೆದ ಸಮಾಲೋಚನೆಯಲ್ಲಿ ಪ್ರಮುಖವಾಗಿ ಮೂರು ಅಂಶಗಳನ್ನು ಪರಿಗಣಿಸಲಾಗಿದೆ ಎನ್ನಲಾಗಿದೆ.

ಮೊದಲನೆಯದಾಗಿ, ನಾಗೇಂದ್ರ ಸಚಿವ ಸಂಪುಟದಲ್ಲಿ ಮುಂದುವರಿದರೆ ವಾಲ್ಮೀಕಿ ನಿಗಮ ಪ್ರಕರಣವನ್ನು ಬಿಜೆಪಿ ದೊಡ್ಡ ರಾಜಕೀಯ ಅಸ್ತ್ರವಾಗಿ ಬಳಸುವ ಸಾಧ್ಯತೆ.

ಎರಡನೆಯದಾಗಿ, ಸಿಬಿಐ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದರೆ ಎದುರಾಗಬಹುದಾದ ಕಾನೂನು ಮತ್ತು ರಾಜಕೀಯ ಪರಿಣಾಮಗಳು.

ಮೂರನೆಯದಾಗಿ, ಪ್ರಕರಣದ ಕಾನೂನು ಹೋರಾಟದ ಹೊರೆ ನೇರವಾಗಿ ಸರ್ಕಾರದ ಮೇಲೆ ಬೀಳದಂತೆ ರಾಜಕೀಯ ಹಾನಿಯನ್ನು ನಿಯಂತ್ರಿಸುವುದು.

ಈ ಹಿನ್ನೆಲೆಯಲ್ಲಿ ನಾಗೇಂದ್ರ ರಾಜೀನಾಮೆ ಪಡೆಯುವ ಮೂಲಕ ಪ್ರತಿಪಕ್ಷಗಳ ಪ್ರಮುಖ ರಾಜಕೀಯ ಅಸ್ತ್ರವನ್ನು ನಿಷ್ಕ್ರಿಯಗೊಳಿಸಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ಹೈಕಮಾಂಡ್‌ನಲ್ಲಿದೆ ಎನ್ನಲಾಗಿದೆ.

ತಪ್ಪೊಪ್ಪಿಗೆಯಂತೆ ಬಿಂಬಿಸದಿರಲು ತಂತ್ರ?

ಒಂದು ವೇಳೆ ನಾಗೇಂದ್ರ ರಾಜೀನಾಮೆ ನೀಡಿದರೆ, ಅದನ್ನು ಪ್ರಕರಣಕ್ಕೆ ಸಂಬಂಧಿಸಿದ ತಪ್ಪೊಪ್ಪಿಗೆಯಾಗಿ ಬಿಂಬಿಸದಂತೆ ಎಚ್ಚರಿಕೆ ವಹಿಸುವ ಸಾಧ್ಯತೆ ಇದೆ. ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕಾಗಿ ಕೈಗೊಂಡ ರಾಜಕೀಯ ನಿರ್ಧಾರ ಎಂಬ ರೀತಿಯಲ್ಲಿ ರಾಜೀನಾಮೆಯನ್ನು ಪ್ರಸ್ತುತಪಡಿಸುವ ಕುರಿತು ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ನಾಗೇಂದ್ರ ರಾಜೀನಾಮೆ ನೀಡಲಿದ್ದಾರೆ ಎಂಬ ವರದಿಗಳು ಹರಿದಾಡಿದ್ದರೂ, ಆ.26ರಂದು ನಾಗೇಂದ್ರ ಅವರು ಸ್ವತಃ ಅಂತಹ ವರದಿಗಳನ್ನು ನಿರಾಕರಿಸಿದ್ದರು.

ಇದೀಗ ಡಿ.ಕೆ. ಶಿವಕುಮಾರ್ ಅವರ ದೆಹಲಿ ಭೇಟಿ ಬಳಿಕ ನಾಗೇಂದ್ರ ರಾಜೀನಾಮೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಮುಂದಿನ ಒಂದೆರಡು ದಿನಗಳಲ್ಲಿ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ಬಂಡೆಪಾಳ್ಯದಲ್ಲಿ ಮಧ್ಯರಾತ್ರಿ ಗುಂಡಿನ ಸದ್ದು: ಮಾರಕಾಸ್ತ್ರ ಹಿಡಿದು ಓಡಾಡುತ್ತಿದ್ದ ಆರೋಪಿಯ ಕಾಲಿಗೆ ಫೈರಿಂಗ್!

0

ಬೆಂಗಳೂರು: ನಗರದ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ಪೊಲೀಸರು ಗುಂಡು ಹಾರಿಸಿ ಆರೋಪಿಯೊಬ್ಬನನ್ನು ಬಂಧಿಸಿರುವ ಘಟನೆ ನಡೆದಿದೆ.

ದ್ವಿಚಕ್ರ ವಾಹನದಲ್ಲಿ ಮಾರಕಾಸ್ತ್ರ ಹಿಡಿದು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುತ್ತಿದ್ದ ಜಿಶಾನ್ ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಸೋಮಸುಂದ್ರಪಾಳ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಬೈಕ್‌ನಲ್ಲಿ ಮಾರಕಾಸ್ತ್ರದೊಂದಿಗೆ ಅನುಮಾನಾಸ್ಪದವಾಗಿ ಓಡಾಡುತ್ತಿರುವ ಬಗ್ಗೆ ಬಂಡೆಪಾಳ್ಯ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ ಪಿಎಸ್‌ಐ ಸಚಿನ್ ಹಾಗೂ ಸಿಬ್ಬಂದಿ ಸಂದೀಪ್ ಕಾಂಬ್ಳೆ ಸ್ಥಳಕ್ಕೆ ತೆರಳಿದ್ದರು.

ಮಧ್ಯರಾತ್ರಿ ಸುಮಾರು 12.50ರ ವೇಳೆಗೆ ಪೊಲೀಸರು ಜಿಶಾನ್‌ನನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಈ ವೇಳೆ ಆರೋಪಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ತನ್ನ ಬಳಿಯಿದ್ದ ಮಾರಕಾಸ್ತ್ರದಿಂದ ಪೊಲೀಸ್ ಸಿಬ್ಬಂದಿ ಸಂದೀಪ್ ಕಾಂಬ್ಳೆ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಬಳಿಕ ಪಿಎಸ್‌ಐ ಸಚಿನ್ ಅವರ ಮೇಲೂ ಹಲ್ಲೆಗೆ ಯತ್ನಿಸಿದಾಗ, ಆತ್ಮರಕ್ಷಣೆಗಾಗಿ ಪಿಎಸ್‌ಐ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿ ಸಂದೀಪ್ ಕಾಂಬ್ಳೆ ಹಾಗೂ ಕಾಲಿಗೆ ಗುಂಡೇಟು ಬಿದ್ದ ಆರೋಪಿ ಜಿಶಾನ್ ಇಬ್ಬರನ್ನೂ ಚಿಕಿತ್ಸೆಗಾಗಿ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಗದಗ ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿ: ಸೋಮವಾರದೊಳಗೆ ಬರ ಘೋಷಿಸದಿದ್ದರೆ ಮಂಗಳವಾರ ಬಂದ್ – ರೈತ ಸಂಘ ಎಚ್ಚರಿಕೆ

0

ಗದಗ: ಗದಗ ಜಿಲ್ಲೆಯ ಬರಗಾಲ ಪರಿಸ್ಥಿತಿ ಕುರಿತು ಸರ್ಕಾರಕ್ಕೆ ಅಸಮರ್ಪಕ ವರದಿ ಸಲ್ಲಿಸಲಾಗಿದೆ ಎಂಬ ಗಂಭೀರ ಆರೋಪವನ್ನು ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ಮಾಡಿದ್ದಾರೆ.

ಗದಗ ಜಿಲ್ಲೆಯ ಗದಗ, ಮುಂಡರಗಿ, ಶಿರಹಟ್ಟಿ, ರೋಣ, ನರಗುಂದ ಹಾಗೂ ಲಕ್ಷ್ಮೇಶ್ವರ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆಯಿಂದ ರೈತರು ಬೆಳೆ ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಸರ್ಕಾರ ಕೇವಲ ಒಂದು ತಾಲೂಕನ್ನು ಮಾತ್ರ ಬರಪೀಡಿತ ಎಂದು ಘೋಷಿಸಿರುವುದು ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳು ಹಾಗೂ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕೆ ವಾಸ್ತವ ಪರಿಸ್ಥಿತಿಗೆ ವಿರುದ್ಧವಾದ ಅಥವಾ ಅಸಮರ್ಪಕ ವರದಿ ನೀಡಿರುವ ಸಂಶಯ ವ್ಯಕ್ತವಾಗುತ್ತಿದೆ ಎಂದು ಬಾಬರಿ ಆರೋಪಿಸಿದರು.

ಪಕ್ಕದ ಬಾಗಲಕೋಟೆ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವ ಸರ್ಕಾರ, ಗದಗ ಜಿಲ್ಲೆಯ ರೈತರ ಸಂಕಷ್ಟವನ್ನು ಕಡೆಗಣಿಸಿರುವುದು ಸರಿಯಲ್ಲ. ಅಧಿಕಾರಿಗಳು ಖುದ್ದಾಗಿ ಹೊಲಗಳಿಗೆ ಭೇಟಿ ನೀಡಿ ಸಮರ್ಪಕ ಸಮೀಕ್ಷೆ ನಡೆಸಿದ್ದಾರೆಯೇ ಅಥವಾ ಕಚೇರಿಯಲ್ಲಿಯೇ ಕುಳಿತು ವರದಿ ಸಿದ್ಧಪಡಿಸಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರು ಮಧ್ಯಪ್ರವೇಶಿಸಿ, ಗದಗ ಜಿಲ್ಲೆಯ ಬರ ಪರಿಸ್ಥಿತಿಯ ಕುರಿತು ಮರುಪರಿಶೀಲನೆ ನಡೆಸಬೇಕು. ತಪ್ಪು ಅಥವಾ ಅಸಮರ್ಪಕ ವರದಿ ಇದ್ದರೆ ಅದನ್ನು ತಿರಸ್ಕರಿಸಿ, ಸೋಮವಾರದೊಳಗೆ ಗದಗ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಸಂಪೂರ್ಣ ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು ಎಂದು ಅವರು ಆಗ್ರಹಿಸಿದರು.

ಇಲ್ಲವಾದರೆ ಮಂಗಳವಾರ ಗದಗ ಜಿಲ್ಲಾ ಬಂದ್ ನಡೆಸುವುದರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಯಲ್ಲಪ್ಪ ಬಾಬರಿ ಎಚ್ಚರಿಕೆ ನೀಡಿದರು.

ಉತ್ತರ ಕರ್ನಾಟಕವನ್ನು ನಿರಂತರವಾಗಿ ಕಡೆಗಣಿಸುವ ಧೋರಣೆ ಮುಂದುವರಿದರೆ, ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟದ ಕಿಚ್ಚನ್ನು ರೈತ ಸಂಘಟನೆಗಳು ಹಚ್ಚಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಶಿವಮೊಗ್ಗದಲ್ಲಿ ಪ್ಯಾಲೆಸ್ತೀನ್ ಧ್ವಜ ಹಾರಿಸಿದ ಆರೋಪ! ಮೂವರ ವಿರುದ್ಧ ಸುಮೋಟೋ ಕೇಸ್

0

ಶಿವಮೊಗ್ಗ: ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗದ ಆರ್‌ಎಂಎಲ್ ನಗರದಲ್ಲಿ ನಿರ್ಮಿಸಲಾಗುತ್ತಿದ್ದ ಕಟೌಟ್ ಮೇಲೆ ಏರಿ ಪ್ಯಾಲೆಸ್ತೀನ್ ಧ್ವಜ ಹಾರಿಸಿ, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪದಡಿ ಮೂವರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ನಗರದ ನಿಹಾಲ್, ಉಮರ್ ಹಾಗೂ ಅಬ್ರಹಾರ್ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು, ನಿಹಾಲ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಆಗಸ್ಟ್ 25ರಂದು ಮಧ್ಯಾಹ್ನ ಆರ್‌ಎಂಎಲ್ ನಗರದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಲಭಿಸಿದ ಮಾಹಿತಿಯ ಆಧಾರದ ಮೇಲೆ ಇನ್‌ಸ್ಟಾಗ್ರಾಂ ಖಾತೆಯೊಂದನ್ನು ಪರಿಶೀಲಿಸಿದ್ದಾರೆ. ಈ ವೇಳೆ ಕಟೌಟ್ ಮೇಲೆ ಮೂವರು ವ್ಯಕ್ತಿಗಳು ಪ್ಯಾಲೆಸ್ತೀನ್ ಧ್ವಜ ಹಾರಿಸುತ್ತಿರುವ 14 ಸೆಕೆಂಡುಗಳ ವಿಡಿಯೋ ಪೋಸ್ಟ್ ಮಾಡಿರುವುದು ಪೊಲೀಸರ ಗಮನಕ್ಕೆ ಬಂದಿದೆ.

ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದಾಗ, ಆಗಸ್ಟ್ 24ರಂದು ಬೆಳಿಗ್ಗೆ 8ರಿಂದ 9 ಗಂಟೆಯ ಅವಧಿಯಲ್ಲಿ ಆರ್‌ಎಂಎಲ್ ನಗರದ ನಿವಾಸಿಗಳಾದ ಮೂವರು ಕಟೌಟ್ ಮೇಲೆ ಏರಿ ಈ ಕೃತ್ಯ ಎಸಗಿರುವುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಡಿಯೋ ಮೂಲಕ ರಾಷ್ಟ್ರೀಯ ಏಕತೆಗೆ ಧಕ್ಕೆ ತರುವ ಹಾಗೂ ವಿವಿಧ ಸಮುದಾಯಗಳ ನಡುವೆ ವೈಮನಸ್ಸು ಮತ್ತು ದ್ವೇಷದ ಭಾವನೆ ಮೂಡಿಸಿ ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡುವ ಪ್ರಯತ್ನ ನಡೆದಿದೆ ಎಂಬ ಆರೋಪದಡಿ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದು, ವಶಕ್ಕೆ ಪಡೆದಿರುವ ನಿಹಾಲ್‌ನಿಂದ ವಿಚಾರಣೆ ನಡೆಸುತ್ತಿದ್ದಾರೆ.

ಹೋರಾಟಕ್ಕೆ ಸಿಕ್ಕ ಫಲ: ವೈದ್ಯಕೀಯ ಶಿಕ್ಷಣದತ್ತ ದುರುಗಮ್ಮ ಹೆಜ್ಜೆ!

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕಿನ ಮೋರಗೇರಿ ಗ್ರಾಮದ ವಿದ್ಯಾರ್ಥಿನಿ ಕುಮಾರಿ ದುರುಗಮ್ಮ ಉತ್ತಂಗಿ ಅವರು ದೇಶದ ಪ್ರತಿಷ್ಠಿತ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬೆಂಗಳೂರಿನ ಸಪ್ತಗಿರಿ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ಪ್ರವೇಶ ಪಡೆದಿದ್ದು, ಕುಟುಂಬ ಹಾಗೂ ಸಮಾಜಕ್ಕೆ ಹೆಮ್ಮೆ ತಂದಿದ್ದಾರೆ.

ಈ ಸಾಧನೆಯ ಹಿನ್ನೆಲೆಯಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕು ಮಾದಿಗ ಸಮಾಜ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪನವರು ಸ್ಥಾಪಿಸಿದ) ಪದಾಧಿಕಾರಿಗಳು ಮೋರಗೇರಿಯಲ್ಲಿರುವ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ದುರುಗಮ್ಮ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಪರಶುರಾಮ ಹೆಗ್ಡಾಳ್, ಅತ್ಯಂತ ಕಡುಬಡತನದಲ್ಲಿ ಬೆಳೆದ ವಿದ್ಯಾರ್ಥಿನಿ ದುರುಗಮ್ಮ ಅವರು ಅನೇಕ ಸವಾಲುಗಳನ್ನು ಮೆಟ್ಟಿ ನಿಂತು ಶ್ರಮವಹಿಸಿ ಸಾಧನೆ ಮಾಡಿದ್ದಾರೆ. ತಂದೆ-ತಾಯಿ ಹಾಗೂ ಇಡೀ ಸಮಾಜ ಹೆಮ್ಮೆಪಡುವಂತಹ ಸಾಧನೆ ಮಾಡಿರುವ ಅವರು, ಓದುವ ಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ ಎಂದರು.

ಕಿತ್ತನೂರು ದೇವೇಂದ್ರ ಮಾತನಾಡಿ, ಕಿತ್ತು ತಿನ್ನುವ ಬಡತನವಿದ್ದರೂ ಕಷ್ಟ-ಕಾರ್ಪಣ್ಯಗಳನ್ನು ಬದಿಗೊತ್ತಿ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದ ತಂದೆ-ತಾಯಿಯ ಶ್ರಮ ಇಂದು ಸಾರ್ಥಕವಾಗಿದೆ ಎಂದರು.

ನಿವೃತ್ತ ಶಿಕ್ಷಕ ಕೊಟ್ರೇಶ್ ಮೇಷ್ಟ್ರು ಅವರು ವಿದ್ಯಾರ್ಥಿನಿಯ ಮುಂದಿನ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹಿರಿಯರಾದ ಕೇಚ್ಚಿನಬಂಡಿ ದುರುಗಪ್ಪ, ಯಡ್ರಾಮ್ಮನಹಳ್ಳಿ ಮರಿಯಪ್ಪ, ಕಿತ್ತನೂರು ದುರುಗಪ್ಪ, ಕಡಲಬಾಳು ಪಕೀರಪ್ಪ, ಏಳುಕೋಟಿ ದೂಪದಹಳ್ಳಿ, ಡಿಎಸ್‌ಎಸ್ ಖಜಾಂಚಿ ಚಿಂತ್ರಪಳ್ಳಿ ರಮೇಶ್, ಶಿವಮೂರ್ತಿ ನೆಲ್ಕುದ್ರಿ, ಬ್ಯಾಳಾಳ್ ಅಜಯ್, ತೀರ್ಥ ಪ್ರಸಾದ್ ಹಂಪಪಟ್ಟಣ, ಬಸವರಾಜ ಕೇಚ್ಚಿನಬಂಡಿ, ಬಸವರಾಜ ಸೊಬಟಿ, ಚಾರೆಪ್ಪ ಹೊಸಕೇರಿ, ಸ್ವಾಮಿ ಹೊಸಕೇರಿ, ಪರಶುರಾಮ ಅಂಕಸಮುದ್ರ, ಮಹಾಂತೇಶ ಕಡಲಬಾಳು, ಮಲ್ಲಿಕಾರ್ಜುನ ಮಗಿಮಾವಿನಹಳ್ಳಿ, ಆನಂದಳ್ಳಿ ಬಸವರಾಜ್ ಹಾಗೂ ಸ್ಥಳೀಯ ಮುಖಂಡ ಮೋರಗೇರಿ ಮೈಲಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

53 ವರ್ಷ ಕಳೆದರೂ ಸ್ಲಂ ನಿವಾಸಿಗಳಿಗೆ ಭೂಮಿಹಕ್ಕಿಲ್ಲ: ಕೂಡಲೇ ಹಕ್ಕು ಖಾತ್ರಿಗೆ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ/ಬೆಂಗಳೂರು: ರಾಜ್ಯದಲ್ಲಿ 1973ರಲ್ಲಿ ಜಾರಿಗೆ ಬಂದ ಸ್ಲಂ ಕಾಯ್ದೆಯಡಿ ಸರ್ಕಾರಿ ಹಾಗೂ ಖಾಸಗಿ ಮಾಲಿಕತ್ವದ ಸಾವಿರಾರು ಗುಡಿಸಲು ಪ್ರದೇಶಗಳನ್ನು ಅಧಿಕೃತವಾಗಿ ಸ್ಲಂಗಳೆಂದು ಘೋಷಣೆ ಮಾಡಲಾಗಿದ್ದರೂ, 53 ವರ್ಷಗಳು ಕಳೆದರೂ ಅಲ್ಲಿನ ನಿವಾಸಿಗಳಿಗೆ ಭೂಮಿಯ ಮಾಲಿಕತ್ವ ಕಲ್ಪಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿರುವ ಸ್ಲಂ ಜನಾಂದೋಲನ–ಕರ್ನಾಟಕ ರಾಜ್ಯ ಸಮಿತಿ, ಸ್ಲಂ ನಿವಾಸಿಗಳಿಗೆ ಕೂಡಲೇ ಭೂಮಿಹಕ್ಕು ಖಾತ್ರಿಗೊಳಿಸುವಂತೆ ಆಗ್ರಹಿಸಿದೆ.

ಈ ಸಂಬಂಧ ಬೆಂಗಳೂರಿನ ಗಾಂಧಿ ಭವನಕ್ಕೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಘಟನೆಯ ಪದಾಧಿಕಾರಿಗಳು ಮನವಿ ಸಲ್ಲಿಸಿ, 1973ರ ಸ್ಲಂ ಕಾಯ್ದೆಯಡಿ ಘೋಷಣೆಯಾಗಿರುವ ಕೊಳಗೇರಿ ಪ್ರದೇಶಗಳ ನಿವಾಸಿಗಳಿಗೆ ಭೂಮಿಹಕ್ಕು ಕಲ್ಪಿಸುವ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.

ಕರ್ನಾಟಕದಲ್ಲಿ ಸ್ಲಂ ಕಾಯ್ದೆಯಡಿ ಇರುವ 708 ಖಾಸಗಿ ಮಾಲಿಕತ್ವದ ಸ್ಲಂ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಈ ಪ್ರದೇಶಗಳನ್ನು ಸ್ಲಂ ಕಾಯ್ದೆಯ ಸೆಕ್ಷನ್ 17ರ ಅಡಿಯಲ್ಲಿ ವಶಪಡಿಸಿಕೊಂಡು, ಭೂಮಿಹಕ್ಕು ಕಲ್ಪಿಸುವ ಉದ್ದೇಶದಿಂದ ಕನಿಷ್ಠ ₹2 ಸಾವಿರ ಕೋಟಿ ಅನುದಾನ ಮೀಸಲಿಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಇತ್ತೀಚೆಗೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರು ಪ್ರತಿ ಜಿಲ್ಲೆಗೆ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವುದಾಗಿ ಘೋಷಿಸಿರುವುದನ್ನು ಸ್ವಾಗತಿಸಿದ ಸಂಘಟನೆ, ಈ ಯೋಜನೆ ಕೇವಲ ಘೋಷಣೆಗೆ ಸೀಮಿತವಾಗದೆ ಸರ್ಕಾರ ಅಧಿಕೃತ ಸುತ್ತೋಲೆ ಹೊರಡಿಸಿ, ರಾಜ್ಯದ ಸ್ಲಂಗಳಲ್ಲಿ ವಾಸಿಸುವ ಕುಟುಂಬಗಳು ಹಾಗೂ ಲಕ್ಷಾಂತರ ನಿವೇಶನ ರಹಿತ ಕುಟುಂಬಗಳಿಗೆ ಇದರ ಪ್ರಯೋಜನ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಸ್ಲಂ ಜನಾಂದೋಲನ–ಕರ್ನಾಟಕ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ, ರಾಜ್ಯ ಸಂಘಟನಾ ಸಂಚಾಲಕ ಇಮ್ತಿಯಾಜ್ ಆರ್. ಮಾನ್ವಿ, ಜನಾರ್ಧನ ಹಳ್ಳಿಬೆಂಚಿ, ಮಹಿಳಾ ಸಂಚಾಲಕಿ ಚಂದ್ರಮ್ಮ, ವಿಭಾಗೀಯ ಸಂಚಾಲಕಿ ಶೋಭಾ ಕಮತರ, ಖಜಾಂಚಿ ಮಂಜುಬಾಯಿ, ಗದಗ ಭಾಗದ ಸಂಚಾಲಕಿ ಪುಷ್ಪಾ ಬಿಜಾಪೂರ, ಬೆಳಗಾವಿ ಸಂಚಾಲಕ ಫಕ್ಕೀರಪ್ಪ ತಳವಾರ, ಧಾರವಾಡ ಸಂಚಾಲಕ ರಸೂಲ್ ನದಾಫ, ಕೊಪ್ಪಳ ಸಂಚಾಲಕಿ ನಾಗರತ್ನ ಅಳವಂಡಿ, ಗಂಗಾವತಿ ಸಂಚಾಲಕಿ ರೇಷ್ಮಾಬಾನು, ಹೊಸಪೇಟೆ ಸಂಚಾಲಕಿ ವೆಂಕಮ್ಮ, ಚಿತ್ರದುರ್ಗ ಸಂಚಾಲಕಿ ಸುಧಾ, ಕೆ. ರಾಜಣ್ಣ, ತುಮಕೂರು ಸಂಚಾಲಕ ಅರುಣ ಟಿ., ತಿರುಮಲಯ್ಯ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

4 ಲಕ್ಷ ಹುದ್ದೆಗಳು ಖಾಲಿ, ಭರ್ತಿ ಮಾಡುತ್ತಿರುವುದು ಕೆಲವೇ ಸಾವಿರ: ಸಂಕನೂರ ಪ್ರಶ್ನೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರಾಜ್ಯದ ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ ಸರ್ಕಾರ ಸೀಮಿತ ಸಂಖ್ಯೆಯ ಹುದ್ದೆಗಳನ್ನು ಭರ್ತಿ ಮಾಡುತ್ತಿರುವುದು ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗೆ ವಿರುದ್ಧವಾಗಿದೆ ಎಂದು ಪಶ್ಚಿಮ ಪದವೀಧರ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಪ್ರೊ. ಎಸ್.ವಿ. ಸಂಕನೂರ ಪ್ರಶ್ನಿಸಿದರು.

ಪಟ್ಟಣದಲ್ಲಿ ಗುರುವಾರ ವಿವಿಧ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಶಿಕ್ಷಕರು ಹಾಗೂ ಪದವೀಧರರನ್ನು ಭೇಟಿ ಮಾಡಿ ಬೆಂಬಲ ಕೋರಿದ ಅವರು, ರಾಜ್ಯದ 43 ಇಲಾಖೆಗಳಲ್ಲಿ ಸುಮಾರು 2.88 ಲಕ್ಷ ಹುದ್ದೆಗಳು ಸೇರಿದಂತೆ ನಿಗಮ-ಮಂಡಳಿಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಒಟ್ಟು ಸುಮಾರು ನಾಲ್ಕು ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಹೇಳಿದರು.

ಸರ್ಕಾರ ಕೇವಲ ಕೆಲವು ಸಾವಿರ ಹುದ್ದೆಗಳ ಭರ್ತಿಗೆ ಮುಂದಾಗಿರುವುದರಿಂದ ನಿರುದ್ಯೋಗಿ ಪದವೀಧರರಲ್ಲಿ ನಿರಾಸೆ ಮೂಡಿದೆ. ಕನಿಷ್ಠ ಎರಡು ಲಕ್ಷ ಹುದ್ದೆಗಳನ್ನಾದರೂ ಭರ್ತಿ ಮಾಡುವ ಮೂಲಕ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸರ್ಕಾರವನ್ನು ನಿರಂತರವಾಗಿ ಒತ್ತಾಯಿಸಲಾಗುವುದು ಎಂದರು.

ಕಳೆದ ಎರಡು ಅವಧಿಯಲ್ಲಿ ಪದವೀಧರ ಕ್ಷೇತ್ರದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಲು ಜನರು ಅವಕಾಶ ನೀಡಿದ್ದು, ಈ ಬಾರಿಯೂ ಬೆಂಬಲ ನೀಡುವ ವಿಶ್ವಾಸವಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರವಲ್ಲದೆ ಸದಾ ಪದವೀಧರರ ಸಮಸ್ಯೆಗಳ ಪರವಾಗಿ ವಿಧಾನಪರಿಷತ್ತಿನಲ್ಲಿ ಧ್ವನಿಯಾಗುವುದಾಗಿ ಭರವಸೆ ನೀಡಿದರು.

ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಶಿಕ್ಷಕರು, ಪದವೀಧರರು ಹಾಗೂ ಶೈಕ್ಷಣಿಕ ಕ್ಷೇತ್ರದ ಸಮಸ್ಯೆಗಳ ಕುರಿತು ಪ್ರೊ. ಸಂಕನೂರ ಅವರು ಹಲವು ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಪದವೀಧರರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಯುವ ಮುಖಂಡ ಗಂಗಾಧರ ಮೆಣಸಿನಕಾಯಿ, ಪ್ರಕಾಶ ಮಾದನೂರ, ಚಂದ್ರಶೇಖರ ಲಮಾಣಿ, ಸಂತೋಷ ರಾಥೋಡ, ಕಿರಣ ಹಿರೇಮಠ ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು ಹಾಗೂ ಪದವೀಧರರು ಉಪಸ್ಥಿತರಿದ್ದರು.

ನಿರುದ್ಯೋಗಿ ಪದವೀಧರರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವುದು ನನ್ನ ಆದ್ಯತೆಯಾಗಿದೆ. ಚುನಾವಣೆಯ ಸಮಯದಲ್ಲಿ ಮಾತ್ರವಲ್ಲದೆ ಸದಾ ಅವರ ಪರವಾಗಿ ನನ್ನ ಧ್ವನಿ ವಿಧಾನಪರಿಷತ್ತಿನಲ್ಲಿ ಪ್ರತಿಧ್ವನಿಸಲಿದೆ.

— ಪ್ರೊ. ಎಸ್.ವಿ. ಸಂಕನೂರ

ಕೃಷ್ಣ–ವಿಶ್ವಕರ್ಮ ಜಯಂತಿಗೆ ಭರದ ಸಿದ್ಧತೆ ; ಅರ್ಥಪೂರ್ಣ ಆಚರಣೆಗೆ ಎಡಿಸಿ ಸೂಚನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಮುಂಬರುವ ಶ್ರೀ ಕೃಷ್ಣ ಜಯಂತಿ ಹಾಗೂ ವಿಶ್ವಕರ್ಮ ಜಯಂತಿಯನ್ನು ಎಲ್ಲರ ಸಹಕಾರ ಮತ್ತು ಸಮನ್ವಯದೊಂದಿಗೆ ಯಾವುದೇ ಲೋಪವಾಗದಂತೆ ವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಶ್ರೀ ಕೃಷ್ಣ ಜಯಂತಿ ಹಾಗೂ ವಿಶ್ವಕರ್ಮ ಜಯಂತಿ ಆಚರಣೆ ಸಂಬಂಧ ಪ್ರತ್ಯೇಕವಾಗಿ ನಡೆದ ಪೂರ್ವಸಿದ್ಧತಾ ಸಭೆಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸೆ. 4ರಂದು ಶ್ರೀ ಕೃಷ್ಣ ಜಯಂತಿ

ಸೆಪ್ಟೆಂಬರ್ 4ರಂದು ಜರುಗಲಿರುವ ಶ್ರೀ ಕೃಷ್ಣ ಜಯಂತಿಯನ್ನು ಶಿಷ್ಟಾಚಾರದನ್ವಯ ಆಮಂತ್ರಣ ಪತ್ರಿಕೆ ಮುದ್ರಿಸಿ, ವೇದಿಕೆ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲ ತಾಲೂಕುಗಳು, ಶಾಲಾ–ಕಾಲೇಜುಗಳು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಕ್ರಮ ವಹಿಸಬೇಕು ಎಂದು ಅವರು ಸೂಚಿಸಿದರು.

ಶ್ರೀ ಕೃಷ್ಣನ ಜೀವನ, ತತ್ವಾದರ್ಶಗಳು ಹಾಗೂ ಭಗವದ್ಗೀತೆಯ ಸಂದೇಶವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳು, ಕ್ರೀಡಾಪಟುಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಹಿರಿಯರನ್ನು ಸನ್ಮಾನಿಸುವ ಮೂಲಕ ಕಾರ್ಯಕ್ರಮವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಬೇಕು ಎಂದರು.

ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರು, ಊಟೋಪಹಾರ, ಆಸನ ವ್ಯವಸ್ಥೆ, ವೇದಿಕೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳಲ್ಲಿ ಯಾವುದೇ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಸೆ. 17ರಂದು ವಿಶ್ವಕರ್ಮ ಜಯಂತಿ

ಇದೇ ವೇಳೆ ಸೆಪ್ಟೆಂಬರ್ 17ರಂದು ಜರುಗಲಿರುವ ವಿಶ್ವಕರ್ಮ ಜಯಂತಿಯನ್ನು ವ್ಯವಸ್ಥಿತವಾಗಿ ಹಾಗೂ ಅಚ್ಚುಕಟ್ಟಾಗಿ ಆಚರಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಡಾ. ದುರಗೇಶ್ ಕೆ.ಆರ್. ತಿಳಿಸಿದರು.

ಶಿಷ್ಟಾಚಾರದನ್ವಯ ಆಮಂತ್ರಣ ಪತ್ರಿಕೆ ಮುದ್ರಿಸಿ ಗಣ್ಯರಿಗೆ ಆಹ್ವಾನ ನೀಡಬೇಕು. ಜಿಲ್ಲೆ ಹಾಗೂ ತಾಲೂಕು ಮಟ್ಟದ ಜತೆಗೆ ಶಾಲಾ–ಕಾಲೇಜುಗಳು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ವಿಶ್ವಕರ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಕ್ರಮ ಕೈಗೊಳ್ಳಬೇಕು ಎಂದರು.

ವಿಶ್ವಕರ್ಮರ ಜೀವನ, ಸಾಧನೆ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಪ್ರತಿಭಾವಂತರು ಹಾಗೂ ಹಿರಿಯರನ್ನು ಗುರುತಿಸಿ ಸನ್ಮಾನಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಜಯಂತಿ ಕಾರ್ಯಕ್ರಮದ ಅಂಗವಾಗಿ ವೇದಿಕೆ, ಆಸನ, ಕುಡಿಯುವ ನೀರು, ಊಟೋಪಹಾರ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕೈಗೊಳ್ಳಬೇಕು. ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಲೋಪವಾಗದಂತೆ ಸಂಬಂಧಿಸಿದ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ವಿಶ್ವಕರ್ಮರ ಕುರಿತು ವಿಶೇಷ ಉಪನ್ಯಾಸ, ಪುಸ್ತಕ ಬಿಡುಗಡೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತೂ ಸಭೆಯಲ್ಲಿ ಚರ್ಚಿಸಲಾಯಿತು.

ಎರಡೂ ಪೂರ್ವಸಿದ್ಧತಾ ಸಭೆಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಸವರಾಜ ವಿ. ಬಳ್ಳಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗಬಾರದು. ಮಹನೀಯರ ಜೀವನ, ತತ್ವಾದರ್ಶ, ಸಾಧನೆ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಜನರಿಗೆ ತಲುಪಿಸುವ ಮೂಲಕ ಯುವಜನತೆಗೂ ಪ್ರೇರಣೆ ನೀಡುವಂತಾಗಬೇಕು. ಯಾವುದೇ ಲೋಪಕ್ಕೆ ಅವಕಾಶ ನೀಡದೆ ಎಲ್ಲ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು.
— ಡಾ. ದುರಗೇಶ್ ಕೆ.ಆರ್., ಅಪರ ಜಿಲ್ಲಾಧಿಕಾರಿ