Home Blog

ಕಾವೇರಿ ಕಿಚ್ಚು ತೀವ್ರ; KRS ಮುತ್ತಿಗೆಗೆ ಬಿಜೆಪಿ ಸಜ್ಜು, ಮಂಡ್ಯದಲ್ಲಿ 1500 ಪೊಲೀಸರ ಭದ್ರತೆ!

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಆದೇಶದ ವಿರುದ್ಧ ಮಂಡ್ಯ ಜಿಲ್ಲೆಯಲ್ಲಿ ಹೋರಾಟದ ಕಾವು ಮತ್ತಷ್ಟು ಹೆಚ್ಚಾಗಿದೆ.

ಕಾವೇರಿ ನೀರು ನಿಯಂತ್ರಣ ಸಮಿತಿ 3,500 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ನೀಡಿರುವ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು ಇಂದು ಕೆಆರ್‌ಎಸ್‌ ಜಲಾಶಯಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ.

ಬಿಜೆಪಿ ಪ್ರತಿಭಟನೆಯ ನೇತೃತ್ವವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಹಿಸಲಿದ್ದು, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.

ಇಂದು ಬೆಳಗ್ಗೆ 11 ಗಂಟೆಗೆ ಕೆಆರ್‌ಎಸ್‌ ಜಲಾಶಯದ ಬಳಿ ಪ್ರತಿಭಟನೆ ಆರಂಭವಾಗಲಿದ್ದು, ಬಳಿಕ ಅಣೆಕಟ್ಟಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಬಿಜೆಪಿ ನಾಯಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಕೆಆರ್‌ಎಸ್‌ ಸೇರಿದಂತೆ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಒಟ್ಟು 1,500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ಮಾಹಿತಿ ಪ್ರಕಾರ, ಇಬ್ಬರು ಎಸ್‌ಪಿ, 9 ಡಿವೈಎಸ್‌ಪಿ, 27 ಇನ್ಸ್‌ಪೆಕ್ಟರ್‌ಗಳು, 45 ಪಿಎಸ್‌ಐ ಹಾಗೂ 78 ಎಎಸ್‌ಐ ಸೇರಿದಂತೆ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಕೆಆರ್‌ಎಸ್‌ ಸುತ್ತಮುತ್ತ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಬೃಂದಾವನ ಉದ್ಯಾನವನಕ್ಕೂ ತಾತ್ಕಾಲಿಕವಾಗಿ ಪ್ರವೇಶ ನಿಷೇಧಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರವಾಸಿಗರಿಗೆ ಅವಕಾಶ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತ ಮಂಡ್ಯ ಜಿಲ್ಲಾದ್ಯಂತ ರೈತ ಸಂಘಟನೆಗಳು ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಕೂಡ ಕಾವೇರಿ ನೀರು ವಿಚಾರವಾಗಿ ಪ್ರತಿಭಟನೆ ಮುಂದುವರಿಸಿವೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಕೌಟುಂಬಿಕ ಕಲಹಕ್ಕೆ ಎರಡು ಜೀವ ಬಲಿ; ಬಳ್ಳಾರಿಯಲ್ಲಿ ಪತ್ನಿ-ಮಗು ಕೊಂದು ಪತಿ ಪರಾರಿ!

0

ಬಳ್ಳಾರಿ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿ ತನ್ನ ಪತ್ನಿ ಹಾಗೂ ಏಳು ತಿಂಗಳ ಮಗುವನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿರುವ ಹೃದಯವಿದ್ರಾವಕ ಘಟನೆ ಬಳ್ಳಾರಿ ನಗರದಲ್ಲಿ ನಡೆದಿದೆ.

ಬಳ್ಳಾರಿ ನಗರದ ಅಂದ್ರಾಳ್ ಪ್ರದೇಶದಲ್ಲಿ ಘಟನೆ ನಡೆದಿದ್ದು, ಹೊನ್ನೂರಸ್ವಾಮಿ ಎಂಬಾತ ತನ್ನ ಪತ್ನಿ ರಾಜೇಶ್ವರಿ ಹಾಗೂ ಏಳು ತಿಂಗಳ ಮಗಳು ಅಶ್ವಿನಿಯನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, ಆರೋಪಿ ಸುತ್ತಿಗೆಯಿಂದ ಹೊಡೆದು ಇಬ್ಬರನ್ನೂ ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಎಪಿಎಂಸಿ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕೊಲೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದ್ದು, ಕೌಟುಂಬಿಕ ಕಲಹವೇ ಘಟನೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಮಹಾರಾಷ್ಟ್ರದ ಭಿವಂಡಿಯಲ್ಲಿ ಭೀಕರ ದುರಂತ; 4 ಅಂತಸ್ತಿನ ಕಟ್ಟಡ ಕುಸಿದು ಓರ್ವ ಸಾವು, ಹಲವರು ಸಿಲುಕಿರುವ ಶಂಕೆ

0

ಮುಂಬೈ: ಮಹಾರಾಷ್ಟ್ರದ ಭಿವಂಡಿಯಲ್ಲಿ ಭಾರಿ ದುರಂತ ಸಂಭವಿಸಿದ್ದು, ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಓರ್ವ ಮೃತಪಟ್ಟಿರುವ ಘಟನೆ ನಡೆದಿದೆ.

ಕಟ್ಟಡದ ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಎನ್‌ಡಿಆರ್‌ಎಫ್‌ ತಂಡ, ಭಿವಂಡಿ ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ಅವಶೇಷಗಳಡಿ ಸಿಲುಕಿರುವವರನ್ನು ಸುರಕ್ಷಿತವಾಗಿ ಹೊರತೆಗೆಯಲು ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಮಾರು 8 ರಿಂದ 10 ಮಂದಿ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ. ಗಾಯಗೊಂಡವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಟ್ಟಡ ಕುಸಿತದಿಂದ ಸುತ್ತಮುತ್ತಲಿನ ಪ್ರದೇಶದ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್‌ ಹೆಚ್ಚಿಸಲಾಗಿದೆ.

ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗದಂತೆ ಸಾರ್ವಜನಿಕರು ಸಹಕರಿಸಬೇಕು ಹಾಗೂ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಸಾವುನೋವುಗಳ ಕುರಿತು ಸಂಪೂರ್ಣ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಸೋಮವಾರ ಬಿಲ್ವಪತ್ರೆ ಕೀಳಬಹುದಾ? ಶಿವಪೂಜೆ ಮಾಡುವವರು ತಿಳಿಯಲೇಬೇಕಾದ ಮಹತ್ವದ ನಿಯಮಗಳು

0

ಶಿವಪೂಜೆಯಲ್ಲಿ ಬಿಲ್ವಪತ್ರೆ ಅಥವಾ ಬೇಲ್ಪತ್ರೆಗೆ ಅತ್ಯಂತ ವಿಶೇಷವಾದ ಸ್ಥಾನವಿದೆ.

ಶಿವಲಿಂಗಕ್ಕೆ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಭಗವಾನ್ ಶಿವನು ಪ್ರಸನ್ನನಾಗಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬ ಧಾರ್ಮಿಕ ನಂಬಿಕೆ ಇದೆ.

ಆದರೆ ಶಿವ ಮಹಾಪುರಾಣದ ಪ್ರಕಾರ ಶಿವಲಿಂಗಕ್ಕೆ ಬಿಲ್ವಪತ್ರೆ ಅರ್ಪಿಸುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು ಎಂದು ಹೇಳಲಾಗಿದೆ. ಸರಿಯಾದ ವಿಧಾನದ ಮೂಲಕ ಬಿಲ್ವಪತ್ರೆ ಅರ್ಪಿಸಿದರೆ ಪೂಜೆಯ ಸಂಪೂರ್ಣ ಫಲ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಸೋಮವಾರ, ಚತುರ್ದಶಿಯಂದು ಬಿಲ್ವಪತ್ರೆ ಕೀಳಬಾರದು:

ಧಾರ್ಮಿಕ ನಂಬಿಕೆಗಳ ಪ್ರಕಾರ ಸೋಮವಾರ ಅಥವಾ ಚತುರ್ದಶಿ ತಿಥಿಯಂದು ಬಿಲ್ವಪತ್ರೆಯನ್ನು ಮರದಿಂದ ಕೀಳಬಾರದು. ಈ ದಿನಗಳಲ್ಲಿ ಬಿಲ್ವಪತ್ರೆ ಕೀಳುವುದು ಅಶುಭ ಎಂದು ಪರಿಗಣಿಸಲಾಗುತ್ತದೆ.

ಹೀಗಾಗಿ ಸೋಮವಾರ ಶಿವನಿಗೆ ಬಿಲ್ವಪತ್ರೆ ಅರ್ಪಿಸಬೇಕಿದ್ದರೆ ಹಿಂದಿನ ದಿನವೇ ಎಲೆಗಳನ್ನು ಕಿತ್ತು ಇಟ್ಟುಕೊಳ್ಳಬೇಕು. ಒಂದು ದಿನ ಮುಂಚಿತವಾಗಿ ಕಿತ್ತು ಇಟ್ಟ ಬಿಲ್ವಪತ್ರೆಯನ್ನೂ ಪೂಜೆಗೆ ಬಳಸಬಹುದು ಎಂದು ನಂಬಲಾಗಿದೆ.

ಯಾವ ಬಿಲ್ವಪತ್ರೆಯನ್ನು ಅರ್ಪಿಸಬೇಕು?

ಬಿಲ್ವಪತ್ರೆ ಕೀಳುವಾಗ ಮೂರು ಎಲೆಗಳು ಒಂದೇ ತೊಟ್ಟಿನಲ್ಲಿ ಇರುವ ಎಲೆಯನ್ನು ಆಯ್ಕೆ ಮಾಡಬೇಕು. ಈ ಮೂರು ಎಲೆಗಳು ಬ್ರಹ್ಮ, ವಿಷ್ಣು, ಮಹೇಶ್ವರರ ಸಂಕೇತ ಹಾಗೂ ಶಿವನ ತ್ರಿಶೂಲದ ಪ್ರತೀಕ ಎಂದು ಪರಿಗಣಿಸಲಾಗುತ್ತದೆ.

ಹರಿದಿರುವ, ಕೀಟಗಳು ತಿಂದಿರುವ ಅಥವಾ ಅಪೂರ್ಣವಾಗಿರುವ ಬಿಲ್ವಪತ್ರೆಯನ್ನು ಶಿವಲಿಂಗಕ್ಕೆ ಅರ್ಪಿಸಬಾರದು ಎಂಬ ನಂಬಿಕೆ ಇದೆ. ಹಾಗೆಯೇ ಬಿಲ್ವಮರದ ಕೊಂಬೆಗಳನ್ನು ಮುರಿಯದೆ ಎಲೆಗಳನ್ನು ಮಾತ್ರ ಕೀಳಬೇಕು.

ಶಿವಲಿಂಗಕ್ಕೆ ಎಷ್ಟು ಬಿಲ್ವಪತ್ರೆ ಅರ್ಪಿಸಬೇಕು?

ಶಿವಪೂಜೆಯಲ್ಲಿ ಬಿಲ್ವಪತ್ರೆಗಳ ಸಂಖ್ಯೆಯೂ ಮಹತ್ವ ಹೊಂದಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಬೆಸ ಸಂಖ್ಯೆಯಲ್ಲಿ ಬಿಲ್ವಪತ್ರೆಗಳನ್ನು ಅರ್ಪಿಸುವುದು ಶುಭ.

3, 5, 7, 11, 21, 51 ಅಥವಾ 101 ಬಿಲ್ವಪತ್ರೆಗಳನ್ನು ಅರ್ಪಿಸುವುದು ವಿಶೇಷ ಎಂದು ಹೇಳಲಾಗಿದೆ. ಶಿವಲಿಂಗಕ್ಕೆ ಅರ್ಪಿಸುವ ಮೊದಲು ಬಿಲ್ವಪತ್ರೆಯನ್ನು ಶುದ್ಧ ನೀರಿನಿಂದ ತೊಳೆಯಬೇಕು.

ಬಿಲ್ವಪತ್ರೆ ಅರ್ಪಿಸುವ ಸರಿಯಾದ ವಿಧಾನ

ಶಿವಲಿಂಗಕ್ಕೆ ಬಿಲ್ವಪತ್ರೆ ಅರ್ಪಿಸುವಾಗ ಅದರ ಮೃದುವಾದ ಭಾಗವು ಶಿವಲಿಂಗಕ್ಕೆ ತಾಗುವಂತೆ ಕೆಳಮುಖವಾಗಿ ಇಡಬೇಕು. ಎಲೆಯ ಒರಟಾದ ಭಾಗವು ಮೇಲ್ಮುಖವಾಗಿರಬೇಕು ಎಂಬುದು ಧಾರ್ಮಿಕ ಪದ್ಧತಿ.

ಈ ರೀತಿಯಲ್ಲಿ ಭಕ್ತಿಯಿಂದ ಬಿಲ್ವಪತ್ರೆ ಅರ್ಪಿಸುವುದರಿಂದ ಶಿವನ ಅನುಗ್ರಹ ದೊರೆಯುತ್ತದೆ ಮತ್ತು ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂಬ ನಂಬಿಕೆ ಇದೆ.

ಆಷಾಢ 3ನೇ ಶುಕ್ರವಾರ: ಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸಿದ ತಾಯಿ ಚಾಮುಂಡಿ!

ಮೈಸೂರು: ಆಷಾಢ ಮಾಸದ 3ನೇ ಶುಕ್ರವಾರದ ಹಿನ್ನೆಲೆ ನಾಡದೇವತೆ ತಾಯಿ ಚಾಮುಂಡೇಶ್ವರಿ ಇಂದು ಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ.

ವಿಶೇಷ ಪೂಜೆ ಹಾಗೂ ಅಲಂಕಾರದ ಅಂಗವಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.

ಬೆಳಗಿನ ಬ್ರಾಹ್ಮಿ ಮುಹೂರ್ತದಿಂದಲೇ ಭಕ್ತರು ಚಾಮುಂಡಿ ಬೆಟ್ಟದತ್ತ ಆಗಮಿಸಿದರು. ಕೆಲವರು ವಾಹನಗಳ ಮೂಲಕ ಬಂದರೆ, ಇನ್ನೂ ಕೆಲ ಭಕ್ತರು ಮೆಟ್ಟಿಲುಗಳ ಮಾರ್ಗವಾಗಿ ತೆರಳಿ ತಾಯಿ ಚಾಮುಂಡಿಯ ದರ್ಶನ ಪಡೆದರು.

ಆಷಾಢದ 3ನೇ ಶುಕ್ರವಾರದ ಪ್ರಯುಕ್ತ ತಾಯಿ ಚಾಮುಂಡಿಗೆ ಲಕ್ಷ್ಮಿ ದೇವಿಯ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದ ಒಳಾಂಗಣವನ್ನು ಚೆಂಡು ಹೂ, ಕಮಲ ಸೇರಿದಂತೆ ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ಜೊತೆಗೆ ಕಿತ್ತಳೆ, ಮಾವು ಸೇರಿದಂತೆ ಹಲವು ಬಗೆಯ ಹಣ್ಣುಗಳನ್ನು ಅಲಂಕಾರಕ್ಕೆ ಬಳಸಲಾಗಿತ್ತು.

ದೇವಸ್ಥಾನದ ಆವರಣ ಕರ್ಪೂರ, ಗಂಧ ಹಾಗೂ ಧೂಪದ ಪರಿಮಳದಿಂದ ಆಧ್ಯಾತ್ಮಿಕ ವಾತಾವರಣದಿಂದ ಕೂಡಿತ್ತು. ಬೆಳಗ್ಗೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ತಾಯಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಆಷಾಢ ಮಾಸದ ಮೊದಲ ಶುಕ್ರವಾರ ತಾಯಿ ಚಾಮುಂಡಿಗೆ ನಾಗಲಕ್ಷ್ಮಿ ಅಲಂಕಾರ ಮಾಡಲಾಗಿತ್ತು. ಎರಡನೇ ಶುಕ್ರವಾರ ಲಕ್ಷ್ಮಿ ಅಲಂಕಾರ ನೆರವೇರಿಸಲಾಗಿತ್ತು. ಇದೀಗ ಮೂರನೇ ಶುಕ್ರವಾರವೂ ಲಕ್ಷ್ಮಿ ದೇವಿಯ ಅಲಂಕಾರದಲ್ಲಿ ಭಕ್ತರಿಗೆ ದರ್ಶನ ನೀಡಿದ್ದಾಳೆ.

ವಿಶೇಷ ದರ್ಶನಕ್ಕಾಗಿ 2 ಸಾವಿರ ರೂಪಾಯಿ ಮೌಲ್ಯದ ಟಿಕೆಟ್ ವ್ಯವಸ್ಥೆ ಮಾಡಲಾಗಿದ್ದು, ಅಭಿಷೇಕ, ಕುಂಕುಮಾರ್ಚನೆ ಹಾಗೂ ಮಹಾಮಂಗಳಾರತಿ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆ 5.30ರಿಂದ 10 ಗಂಟೆಯವರೆಗೆ ವಿವಿಐಪಿ ದರ್ಶನ ವ್ಯವಸ್ಥೆ ಕಲ್ಪಿಸಲಾಗಿತ್ತು.

ಝೀರೋ ಟ್ರಾಫಿಕ್‌ನಲ್ಲೂ ಉಳಿಯಲಿಲ್ಲ 4 ತಿಂಗಳ ಕಂದಮ್ಮ; ಶ್ವಾಸಕೋಶ ಸೋಂಕಿಗೆ ಮಗು ಬಲಿ!

ದಾವಣಗೆರೆ: ಅಂಬುಲೆನ್ಸ್‌ಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ ತುರ್ತಾಗಿ ಆಸ್ಪತ್ರೆಗೆ ಸಾಗಿಸಿದರೂ ಪ್ರಯತ್ನ ಫಲಿಸದೆ, ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ನಾಲ್ಕು ತಿಂಗಳ ಹಸುಗೂಸು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಂಡಿ ಗ್ರಾಮದ ಹನುಮೇಶ್ ಹಾಗೂ ಪವಿತ್ರಾ ದಂಪತಿಯ ಹೆಣ್ಣು ಮಗು ಮೃತಪಟ್ಟಿದೆ. ಮೂರು ತಿಂಗಳ ಹಿಂದೆ ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಪವಿತ್ರಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಕಳೆದ ಕೆಲವು ದಿನಗಳಿಂದ ಮಗು ಶ್ವಾಸಕೋಶ ಸೋಂಕಿನಿಂದ ಬಳಲುತ್ತಿತ್ತು.

ಕಳೆದ ಒಂದು ವಾರದಿಂದ ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ವೈದ್ಯರು ಸಲಹೆ ನೀಡಿದ್ದರು.

ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಅಂಬುಲೆನ್ಸ್‌ಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ, ದಾರಿ ಮಧ್ಯೆ ಹೊನ್ನಾಳಿ ತಾಲೂಕಿನ ಹೆಚ್. ಕಡದಕಟ್ಟೆ ಬಳಿ ಅಂಬುಲೆನ್ಸ್‌ನ ಟೈರ್ ಪಂಕ್ಚರ್ ಆಗಿದ್ದು, ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಮಗುವಿನ ಜೀವ ಉಳಿಸಲು ಪೋಷಕರು, ಪೊಲೀಸರು ಹಾಗೂ ಸ್ಥಳೀಯರು ತಕ್ಷಣ ಕಾರ್ಯಪ್ರವೃತ್ತರಾದರು. ಹೊನ್ನಾಳಿ ಸಿಪಿಐ ಸುನೀಲ್ ಕುಮಾರ್ ಹಾಗೂ ಸ್ಥಳೀಯರ ಸಹಕಾರದಿಂದ ಅಂಬುಲೆನ್ಸ್ ಟೈರ್ ಬದಲಾಯಿಸಲಾಯಿತು. ಬಳಿಕ ಮಗುವಿನ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಆದರೆ, ಪೊಲೀಸರ ಹಾಗೂ ವೈದ್ಯರ ಸತತ ಪ್ರಯತ್ನದ ನಡುವೆಯೂ ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ. ಹಸುಗೂಸನ್ನು ಉಳಿಸಲು ನಡೆಸಿದ ಪ್ರಯತ್ನಗಳ ನಡುವೆಯೇ ನಡೆದ ಈ ಘಟನೆ ಪೋಷಕರಲ್ಲಿ ಹಾಗೂ ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದೆ.

ಕಲಬುರಗಿ-ರಾಯಚೂರಿನಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಜೊತೆ ಚೆಲ್ಲಾಟ? ಆಹಾರ ಸೇವಿಸಿ 70ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಿನ್ನೆ ಬೆಳಗಿನ ಉಪಹಾರ ಸೇವಿಸಿದ ಬಳಿಕ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ನಡೆದಿದೆ.

ಹೊಟ್ಟೆನೋವು, ವಾಂತಿ, ತಲೆಸುತ್ತು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಹುತೇಕ ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದೆ.

ಶಾಲೆಯಲ್ಲಿ ಬೆಳಗಿನ ಉಪಹಾರಕ್ಕೆ ಅವಲಕ್ಕಿ ತಯಾರಿಸಲಾಗಿತ್ತು. ಉಪಹಾರದಿಂದ ದುರ್ವಾಸನೆ ಬರುತ್ತಿದೆ ಎಂದು ವಿದ್ಯಾರ್ಥಿಗಳು ಅಡುಗೆ ಸಿಬ್ಬಂದಿಗೆ ತಿಳಿಸಿ, ಬೇರೆ ಆಹಾರ ನೀಡುವಂತೆ ಮನವಿ ಮಾಡಿದ್ದರು. ಆದರೆ, ಸಿಬ್ಬಂದಿ ಮನವಿಯನ್ನು ನಿರಾಕರಿಸಿದ್ದರಿಂದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಅದೇ ಉಪಹಾರ ಸೇವಿಸಿದ್ದಾರೆ. ಕೆಲವೇ ಹೊತ್ತಿನಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.

ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಅಫಜಲಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಪೈಕಿ ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ ವಸತಿ ಶಾಲೆಯ ವಿದ್ಯಾರ್ಥಿಗಳು ಅಫಜಲಪುರ ಸರ್ಕಾರಿ ಆಸ್ಪತ್ರೆ ಎದುರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ವಿಷಯ ತಿಳಿಯುತ್ತಿದ್ದಂತೆ ಶಾಸಕ ಎಂ.ವೈ. ಪಾಟೀಲ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ಮಕ್ಕಳ ಜೀವದೊಂದಿಗೆ ನಿರ್ಲಕ್ಷ್ಯ ತೋರಿದ ವಾರ್ಡನ್, ಮುಖ್ಯ ಶಿಕ್ಷಕ ಹಾಗೂ ಅಡುಗೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕ ಸೂಚನೆ ನೀಡಿದರು.

ಪಲಾವ್ ತಿಂದು 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ:

ಇನ್ನು ನಿನ್ನೆ ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲೂ ಹುಳ ಬಿದ್ದಿದ್ದ ಪಲಾವ್ ಸೇವಿಸಿದ ಪರಿಣಾಮ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ವಾಂತಿ, ಭೇದಿ, ತಲೆನೋವು ಹಾಗೂ ತಲೆಸುತ್ತಿನ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆಹಾರದಲ್ಲಿ ಹುಳಗಳು ಪತ್ತೆಯಾಗಿರುವ ಹಿನ್ನೆಲೆ ವಾರ್ಡನ್ ವಿರುದ್ಧ ಪೋಷಕರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಮತ್ತೆ ಮಧ್ಯರಾತ್ರಿ ಮೋದಿ ವಿಡಿಯೋ! ಪೇಪರ್ ಲೀಕ್ ಮಾಫಿಯಾಗೆ ಖಡಕ್ ಎಚ್ಚರಿಕೆ

0

ನವದೆಹಲಿ: ಇತ್ತೀಚೆಗೆ ಮಧ್ಯರಾತ್ರಿ ಸೆಲ್ಫೀ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ, ನಿನ್ನೆ ಮಧ್ಯರಾತ್ರಿ ಮತ್ತೊಂದು ಸೆಲ್ಫೀ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ–2026 ಕುರಿತು ಮಾತನಾಡಿರುವ ಅವರು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.

“ಪ್ರಶ್ನೆಪತ್ರಿಕೆ ಸೋರಿಕೆ ಮಾಫಿಯಾ, ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗಿರುವ ಯಾವುದೇ ಗ್ಯಾಂಗ್ ಹಾಗೂ ದೇಶದ ಮಕ್ಕಳ ಭವಿಷ್ಯದೊಂದಿಗೆ ಆಟವಾಡುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಇಂತಹವರ ವಿರುದ್ಧ ಕಾನೂನಿನಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ್ದಾರೆ.

ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕ ಮತ್ತು ವಿಶ್ವಾಸಾರ್ಹವಾಗಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಫಾಸ್ಟ್-ಟ್ರ್ಯಾಕ್ ವ್ಯವಸ್ಥೆ, ವಿವಿಧ ಪಾಲುದಾರರ ಸಲಹೆಗಳ ಆಧಾರದ ಮೇಲೆ ಸಾಂಸ್ಥಿಕ ಸುಧಾರಣೆಗಳು ಹಾಗೂ ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ಪರೀಕ್ಷಾ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ದಶಕಗಳಿಂದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆಯುತ್ತಿದ್ದು, ಅದನ್ನು ತಡೆಯಲು ಕಠಿಣ ಕಾನೂನಿನ ಅಗತ್ಯವಿತ್ತು. ಇದೇ ಉದ್ದೇಶದಿಂದ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಉಭಯ ಸದನಗಳಲ್ಲಿ ಚರ್ಚೆಯ ಬಳಿಕ ಅಂಗೀಕಾರವಾಗಿದೆ ಎಂದು ಪ್ರಧಾನಿ ಹೇಳಿದರು.

ವಿರೋಧ ಪಕ್ಷಗಳ ಸಭಾತ್ಯಾಗದ ನಡುವೆಯೇ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ–2026 ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕಾರಗೊಂಡಿದೆ. ಈ ವಿಧೇಯಕವು ಈಗಾಗಲೇ ಲೋಕಸಭೆಯಲ್ಲೂ ಅಂಗೀಕಾರವಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಂಕಿತಕ್ಕಾಗಿ ಕಳುಹಿಸಲಾಗಿದೆ.

ಕಾಲದೊಂದಿಗೆ ಬೆಳೆದ ವ್ಯಕ್ತಿತ್ವ, ಮೌಲ್ಯಗಳೊಂದಿಗೆ ಅರಳಿದ ಬದುಕು..!

ಬ್ಬ ವ್ಯಕ್ತಿಯ ಸಾಧನೆಯನ್ನು ಅವರು ಅಲಂಕರಿಸಿದ ಹುದ್ದೆಗಳಿಂದ ಅಳೆಯಲು ಸಾಧ್ಯವಿಲ್ಲ. ಅವರು ಸಮಾಜಕ್ಕೆ ನೀಡಿದ ಕೊಡುಗೆ, ಉಳಿಸಿದ ಮೌಲ್ಯಗಳು ಮತ್ತು ಜನರ ಮನಸ್ಸಿನಲ್ಲಿ ಮೂಡಿಸಿದ ವಿಶ್ವಾಸವೇ ಅವರ ವ್ಯಕ್ತಿತ್ವದ ನಿಜವಾದ ಅಳತೆ. ಹಿರಿಯ ಪತ್ರಕರ್ತ ಡಾ. ಅನಂತ ಕಾರ್ಕಳ ಅವರ ಬದುಕು ಈ ಮಾತಿಗೆ ಜೀವಂತ ಸಾಕ್ಷಿಯಾಗಿದೆ.

ಮೂರು ದಶಕಗಳಿಗೂ ಹೆಚ್ಚು ಕಾಲ ಮುದ್ರಣ ಹಾಗೂ ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅವರು, ತಮ್ಮ ಲೇಖನಿ, ನೇರ ನುಡಿ ಮತ್ತು ಸಾಮಾಜಿಕ ಬದ್ಧತೆಯ ಮೂಲಕ ಅಸಂಖ್ಯಾತ ಜನರ ವಿಶ್ವಾಸ ಗಳಿಸಿದ್ದಾರೆ. ಅವರ ಪತ್ರಿಕೋದ್ಯಮ ಕೇವಲ ಸುದ್ದಿಗಳ ಪ್ರಸಾರಕ್ಕೆ ಸೀಮಿತವಾಗಿರದೆ, ಸಮಾಜದ ಸಮಸ್ಯೆಗಳಿಗೆ ಧ್ವನಿಯಾಗುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದೆ.

ಗದಗದ ನೆಲದಲ್ಲಿ ಆರಂಭವಾದ ಅವರ ಪತ್ರಿಕೋದ್ಯಮದ ಪಯಣ, ರಾಜ್ಯದ ಪ್ರಮುಖ ಪತ್ರಿಕೆಗಳು ಹಾಗೂ ದೂರದರ್ಶನ ಮಾಧ್ಯಮಗಳವರೆಗೆ ವಿಸ್ತರಿಸಿತು. ವರದಿಗಾರ, ಸಂಪಾದಕ ಮತ್ತು ಹಿರಿಯ ಪತ್ರಕರ್ತರಾಗಿ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸಿದ ಅವರು, ಸತ್ಯ, ನಿಷ್ಪಕ್ಷಪಾತತೆ ಮತ್ತು ಜನಪರ ನಿಲುವಿನಿಂದ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಸಮಾಜದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು, ಆಡಳಿತದ ವೈಫಲ್ಯಗಳನ್ನು ಪ್ರಶ್ನಿಸುವುದು ಮತ್ತು ಜನರ ಪರವಾಗಿ ಧ್ವನಿ ಎತ್ತುವುದು ಅವರ ವೃತ್ತಿ ಜೀವನದ ಧ್ಯೇಯವಾಗಿತ್ತು. ಈ ಕಾರಣದಿಂದಲೇ ಅವರ ಲೇಖನಗಳು ಕೇವಲ ಸುದ್ದಿಗಳಾಗಿರದೆ, ಜನರ ಆಶಯಗಳ ಪ್ರತಿಬಿಂಬವಾಗಿ ಗುರುತಿಸಿಕೊಂಡಿವೆ.

ಸ್ನಾತಕೋತ್ತರ ಪದವಿ, ಬಿ.ಎಡ್., ಎಲ್.ಎಲ್.ಬಿ. ಹಾಗೂ ಗೌರವ ಡಾಕ್ಟರೇಟ್ ಪದವಿಗಳನ್ನು ಪಡೆದಿರುವ ಡಾ. ಅನಂತ ಕಾರ್ಕಳ ಅವರು ಜ್ಞಾನ ಮತ್ತು ಅನುಭವದ ಅಪೂರ್ವ ಸಂಗಮವಾಗಿದ್ದಾರೆ. ನಿರಂತರ ಅಧ್ಯಯನ ಹಾಗೂ ವೃತ್ತಿ ಬದ್ಧತೆಯ ಮೂಲಕ ಪತ್ರಿಕೋದ್ಯಮದ ಹೊಸ ತಲೆಮಾರಿಗೆ ಪ್ರೇರಣೆಯಾಗಿದ್ದಾರೆ.

ಪತ್ರಕರ್ತರ ಸಂಘಟನೆಗಳಲ್ಲಿಯೂ ಅವರು ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದು, ಹೋರಾಟದ ಸಂದರ್ಭದಲ್ಲಿ ನಾಯಕನಾಗಿ, ಮಾರ್ಗದರ್ಶನದ ವೇಳೆ ಹಿರಿಯನಾಗಿ ಹಾಗೂ ಸಂಕಷ್ಟದ ಸಂದರ್ಭಗಳಲ್ಲಿ ಸಹೋದ್ಯೋಗಿಗಳ ಬೆನ್ನೆಲುಬಾಗಿ ನಿಂತಿದ್ದಾರೆ.

ಸರಳತೆ, ಸಜ್ಜನಿಕೆ, ಸತ್ಯನಿಷ್ಠೆ ಮತ್ತು ಮಾನವೀಯ ಮೌಲ್ಯಗಳು ಅವರ ವ್ಯಕ್ತಿತ್ವದ ಪ್ರಮುಖ ಆಧಾರಸ್ತಂಭಗಳಾಗಿವೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿಯೂ ವೃತ್ತಿಯ ಮೌಲ್ಯಗಳನ್ನು ಉಳಿಸಿಕೊಂಡು ಪತ್ರಿಕೋದ್ಯಮದ ಗೌರವವನ್ನು ಹೆಚ್ಚಿಸಿದ ಅಪರೂಪದ ಪತ್ರಕರ್ತರ ಸಾಲಿನಲ್ಲಿ ಅವರು ಗುರುತಿಸಿಕೊಂಡಿದ್ದಾರೆ.

ಅರವತ್ತು ವರ್ಷಗಳು ಬದುಕಿನ ಒಂದು ಮೈಲಿಗಲ್ಲು ಮಾತ್ರ. ಅನುಭವ, ಚಿಂತನೆ, ಸಾಮಾಜಿಕ ಕಾಳಜಿ ಮತ್ತು ವೃತ್ತಿ ಬದ್ಧತೆಯಿಂದ ಸಮೃದ್ಧವಾಗಿರುವ ಅವರ ಬದುಕು ಇನ್ನಷ್ಟು ಅರ್ಥಪೂರ್ಣವಾಗಲಿ. ಅವರ ಮಾರ್ಗದರ್ಶನ, ಮೌಲ್ಯಗಳು ಮತ್ತು ಲೇಖನಿಯ ಬೆಳಕು ಮುಂದಿನ ಪೀಳಿಗೆಯ ಪತ್ರಕರ್ತರಿಗೆ ಸದಾ ಸ್ಫೂರ್ತಿಯಾಗಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.

– ಟಿ. ಎನ್. ಭಾಂಡಗೆ
ವಕೀಲರು, ಗದಗ

ಗೂಡ್ಸ್ ವಾಹನ-ಆಟೋ ಮುಖಾಮುಖಿ ಡಿಕ್ಕಿ: ಐವರಿಗೆ ಗಂಭೀರ ಗಾಯ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗದಗ-ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಗೊಜನೂರ ಸಮೀಪ ಆಟೋರಿಕ್ಷಾ ಹಾಗೂ ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ, ಆಟೋರಿಕ್ಷಾದಲ್ಲಿದ್ದ ಇಬ್ಬರು ಚಿಕ್ಕ ಮಕ್ಕಳು ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ.

ಗದಗ ಮೂಲದ ಒಂದೇ ಕುಟುಂಬದ ಸದಸ್ಯರು ಲಕ್ಷ್ಮೇಶ್ವರದ ದೂದಪೀರಾ ದರ್ಗಾಕ್ಕೆ ಆಟೋರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ, ಲಕ್ಷ್ಮೇಶ್ವರದಿಂದ ಗದಗದತ್ತ ಬರುತ್ತಿದ್ದ ಗೂಡ್ಸ್ ವಾಹನ ಎದುರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಪ್ರಯಾಣಿಕರು ರಸ್ತೆಗೆ ಚದುರಿ ಬಿದ್ದಿದ್ದಾರೆ.

ಅಪಘಾತದಲ್ಲಿ ಅಬೂಬಕರ್ ಹುಬ್ಬಳ್ಳಿ (30), ಮುಸ್ತಾಕ್ ಹುಬ್ಬಳ್ಳಿ (25), ಆಯೇಷಾ ಹುಬ್ಬಳ್ಳಿ (30), ಬಿಸ್ಮಿಲ್ಲಾ ಹುಬ್ಬಳ್ಳಿ (48) ಹಾಗೂ ಮೂರು ವರ್ಷದ ಮಗು ಅಬೂಬಕರ್ ಹುಬ್ಬಳ್ಳಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮತ್ತೊಬ್ಬರಾದ ದಿಲ್‌ಶ್ಯಾದ್ ಕುನ್ನುಟಗಿ (64) ಗಾಯಗೊಂಡಿದ್ದು, ಎರಡು ವರ್ಷದ ನೂರೈಸ್ ಎಂಬ ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ.

ಗಾಯಾಳುಗಳ ತಲೆ, ಮುಖ, ಕಣ್ಣು, ಕೈ-ಕಾಲು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ತೀವ್ರ ಪೆಟ್ಟಾಗಿದ್ದು, ಸ್ಥಳೀಯರು ತಕ್ಷಣವೇ ಅವರನ್ನು ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಗದಗ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಸ್ಥಳದಲ್ಲಿದ್ದ ಸಾರ್ವಜನಿಕರೊಬ್ಬರು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದರು.

ಅಪಘಾತದ ಬಳಿಕ ಗೂಡ್ಸ್ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಈ ಸಂಬಂಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.