Home Blog

‘ಧರ್ಮದ ಹೆಸರಲ್ಲೇ ಬಿಜೆಪಿ ರಾಜಕಾರಣ’, ‘ನ್ಯಾಯಸಮ್ಮತ ಚುನಾವಣೆ ನಡೆದರೆ ಸೋಲು ಖಚಿತ’: ಸಂತೋಷ್ ಲಾಡ್

0

ಹುಬ್ಬಳ್ಳಿ: ದೇಶದ ರಾಜಕೀಯದಲ್ಲಿ ಹೊಸ ಬದಲಾವಣೆಯ ಅಲೆ ಆರಂಭವಾಗಿದ್ದು, ಜೆನ್-ಝೀ ಯುವಕರಿಂದ ರಾಜಕೀಯದ ದಿಕ್ಕು ಬದಲಾಗುತ್ತಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಇದೇ ವೇಳೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, “ನ್ಯಾಯಯುತ ಚುನಾವಣೆ ನಡೆದರೆ ಬಿಜೆಪಿ ಗೆಲ್ಲುವುದಿಲ್ಲ. ಅದಕ್ಕಾಗಿಯೇ ಅವರು ಪ್ರಾಮಾಣಿಕ ಚುನಾವಣೆಗೆ ಅವಕಾಶ ನೀಡುವುದಿಲ್ಲ” ಎಂದು ಆರೋಪಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಜನರ ಸಮಸ್ಯೆಗಳ ಬಗ್ಗೆ ಮಾತನಾಡುವುದಕ್ಕಿಂತ ಧರ್ಮ ಮತ್ತು ದೇವರ ಹೆಸರಿನಲ್ಲಿ ರಾಜಕೀಯ ಮಾಡುವುದೇ ಬಿಜೆಪಿಯ ಅಜೆಂಡಾ” ಎಂದು ಟೀಕಿಸಿದರು.

ಬರ ಅಧ್ಯಯನಕ್ಕಾಗಿ ಬಿಜೆಪಿ ತಂಡ ರಾಜ್ಯ ಪ್ರವಾಸ ಕೈಗೊಂಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, “ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ನೈಜ ವರದಿ ಸಲ್ಲಿಸಲಿ. ಅದರಿಂದಾದರೂ ಕರ್ನಾಟಕಕ್ಕೆ ಬೆಳೆ ಪರಿಹಾರ ಸಿಗಲಿ” ಎಂದು ಹೇಳಿದರು.

ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಂತೋಷ್ ಲಾಡ್, “ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ರಾಜ್ಯಕ್ಕೆ ಸಮರ್ಪಕ ಬೆಳೆ ಪರಿಹಾರ ಮತ್ತು ಅನುದಾನ ಸಿಕ್ಕಿಲ್ಲ. ಬೆಳೆ ವಿಮೆ ನಿಯಮಗಳಲ್ಲೂ ಬದಲಾವಣೆ ಅಗತ್ಯ” ಎಂದು ಒತ್ತಾಯಿಸಿದರು.

ರೈತರ ಮಧ್ಯಂತರ ಪರಿಹಾರದ ಬೇಡಿಕೆ ನ್ಯಾಯಸಮ್ಮತವಾಗಿದೆ. ಮುಖ್ಯಮಂತ್ರಿ ಸೂಚನೆಯಂತೆ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಬರ ಪರಿಸ್ಥಿತಿಯ ಅಧ್ಯಯನ ನಡೆಸಿ ವರದಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ನಿರ್ದೋಷಿ ಎಂದಾದ ಬಳಿಕ ಡಿಜಿಟಲ್ ದಾಖಲೆಗಳಲ್ಲೂ ಕಳಂಕ ಉಳಿಯಬಾರದು: ಮಹತ್ವದ ತೀರ್ಪು ನೀಡಿದ ಹೈಕೋರ್ಟ್

ಬೆಂಗಳೂರು: ಕಾನೂನು ಹೋರಾಟದಲ್ಲಿ ವ್ಯಕ್ತಿಯೊಬ್ಬರು ನಿರ್ದೋಷಿ ಎಂದು ನ್ಯಾಯಾಲಯದಿಂದ ಬಿಡುಗಡೆಯಾದ ಬಳಿಕವೂ, ಅವರ ಹೆಸರನ್ನು ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ಆನ್‌ಲೈನ್ ದಾಖಲೆಗಳಲ್ಲಿ ಶಾಶ್ವತವಾಗಿ ಉಳಿಯಲು ಬಿಡುವುದು ನ್ಯಾಯದ ಮೂಲ ಉದ್ದೇಶವನ್ನೇ ಸೋಲಿಸಿದಂತಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಇರಾನ್ ಮೂಲದ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ, ಸಂವಿಧಾನದ ಪರಿಚ್ಛೇದ 21ರಡಿ ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಹಕ್ಕು ಇದೆ ಎಂದು ಸ್ಪಷ್ಟಪಡಿಸಿದೆ. ನ್ಯಾಯಾಲಯವು ವ್ಯಕ್ತಿಯನ್ನು ನಿರ್ದೋಷಿ ಎಂದು ಘೋಷಿಸಿದ ನಂತರವೂ, ಡಿಜಿಟಲ್ ವೇದಿಕೆಗಳಲ್ಲಿ ಹಳೆಯ ಆರೋಪಗಳ ದಾಖಲೆಗಳು ಮುಂದುವರಿಯುವುದರಿಂದ ಅವರ ಜೀವನ, ಉದ್ಯೋಗ ಮತ್ತು ಸಾಮಾಜಿಕ ಗೌರವಕ್ಕೆ ಧಕ್ಕೆಯಾಗಬಾರದು ಎಂದು ಪೀಠ ತಿಳಿಸಿದೆ.

ಈ ಹಿನ್ನೆಲೆಯಲ್ಲಿ, ಕ್ರಿಮಿನಲ್ ಪ್ರಕರಣದಿಂದ ಮುಕ್ತಳಾಗಿ ಏಳು ವರ್ಷಗಳಾದ ಬಳಿಕವೂ ಆನ್‌ಲೈನ್‌ನಲ್ಲಿ ಆಕೆಯ ಹೆಸರು ಪ್ರಕರಣದೊಂದಿಗೆ ಕಾಣಿಸಿಕೊಳ್ಳುತ್ತಿರುವುದನ್ನು ಗಮನಿಸಿದ ಹೈಕೋರ್ಟ್, ಹೈಕೋರ್ಟ್ ಹಾಗೂ ಸಿವಿಲ್ ನ್ಯಾಯಾಲಯದ ರಿಜಿಸ್ಟ್ರಾರ್‌ಗಳು, ಹೆಬ್ಬಾಳ ಪೊಲೀಸ್ ಠಾಣೆ, ಗೂಗಲ್ ಇಂಡಿಯಾ ಹಾಗೂ ಇಂಡಿಯನ್ ಕಾನೂನ್ ಪೋರ್ಟಲ್‌ಗೆ ಸಂಬಂಧಿತ ದಾಖಲೆಗಳಿಂದ ಆಕೆಯ ಹೆಸರನ್ನು ತೆಗೆದುಹಾಕುವಂತೆ ನಿರ್ದೇಶನ ನೀಡಿದೆ.

ಸಂವಿಧಾನದ ಪರಿಚ್ಛೇದ 21 ಕೇವಲ ದೈಹಿಕ ಸ್ವಾತಂತ್ರ್ಯವನ್ನಷ್ಟೇ ನೀಡುವುದಿಲ್ಲ. ಅನಗತ್ಯ ಕಳಂಕ, ನಿರಂತರ ಅನುಮಾನ ಹಾಗೂ ಅವಮಾನದಿಂದ ಮುಕ್ತವಾಗಿ ಘನತೆಯಿಂದ ಬದುಕುವ ಹಕ್ಕನ್ನೂ ಅದು ಖಾತರಿಪಡಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸಮರ್ಥ ನ್ಯಾಯಾಲಯವೊಂದು ವ್ಯಕ್ತಿಯನ್ನು ನಿರ್ದೋಷಿ ಎಂದು ಘೋಷಿಸಿದ ಬಳಿಕ, ಡಿಜಿಟಲ್ ಜಗತ್ತಿನಲ್ಲೂ ಆ ಕಾನೂನುಬದ್ಧ ವಿಮೋಚನೆ ಪ್ರತಿಫಲಿಸಬೇಕು ಎಂಬುದು ನ್ಯಾಯಾಂಗ ಮಾಹಿತಿಯನ್ನು ಪ್ರಕಟಿಸುವ ಪ್ರತಿಯೊಂದು ಸಂಸ್ಥೆಯ ಜವಾಬ್ದಾರಿಯಾಗಿದೆ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ:

2014ರಲ್ಲಿ ದಾಖಲಾಗಿದ್ದ ಅಕ್ರಮ ಮಾನವ ಸಾಗಣೆ ತಡೆ ಕಾಯ್ದೆ, ವಿದೇಶಿಯರ ಕಾಯ್ದೆ, ಮಾಹಿತಿ ತಂತ್ರಜ್ಞಾನ ಕಾಯ್ದೆ (ಐಟಿ ಕಾಯ್ದೆ) ಹಾಗೂ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳಡಿ ಇರಾನ್ ಮೂಲದ ಮಹಿಳೆಯನ್ನು ಮೂರನೇ ಆರೋಪಿಯಾಗಿ ಸೇರಿಸಲಾಗಿತ್ತು. 2015ರಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದು, 2019ರ ಮಾರ್ಚ್ 28ರಂದು ವಿಚಾರಣಾ ನ್ಯಾಯಾಲಯ ಆಕೆಯನ್ನು ಎಲ್ಲಾ ಆರೋಪಗಳಿಂದ ನಿರ್ದೋಷಿ ಎಂದು ಬಿಡುಗಡೆ ಮಾಡಿತ್ತು.

ಬಳಿಕ ಮಹಿಳೆ ವಿಶ್ವಸಂಸ್ಥೆಯ ಮೂಲಕ ನಿರಾಶ್ರಿತರ ಸ್ಥಾನಮಾನ ಪಡೆದು ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಹೊಸ ಜೀವನ ಆರಂಭಿಸಿದ್ದರು. ಆದರೆ ಇಂಟರ್‌ನೆಟ್‌ನಲ್ಲಿ ಹೆಸರು ಹುಡುಕಿದಾಗ ಹಳೆಯ ಕ್ರಿಮಿನಲ್ ಪ್ರಕರಣದ ವಿವರಗಳು ಇನ್ನೂ ಕಾಣಿಸಿಕೊಳ್ಳುತ್ತಿದ್ದ ಕಾರಣ, ಉದ್ಯೋಗದಾತರು ಹಾಗೂ ಇತರರಿಂದ ನಡೆಯುವ ಹಿನ್ನೆಲೆ ಪರಿಶೀಲನೆಯಲ್ಲಿ ಸಮಸ್ಯೆ ಎದುರಾಗುತ್ತಿತ್ತು. ಇದರಿಂದ ವೃತ್ತಿಜೀವನಕ್ಕೆ ತೊಡಕಾಗುತ್ತಿದ್ದ ಹಿನ್ನೆಲೆಯಲ್ಲಿ ಮಹಿಳೆ ಹೈಕೋರ್ಟ್ ಮೊರೆ ಹೋಗಿದ್ದರು.

‘ತನ್ವೀರ್ ಸೇಠ್‌ಗೆ ಸಚಿವ ಸ್ಥಾನ ತಪ್ಪಲು ಮಾಜಿ ಸಿಎಂ ಕಾರಣ’: ಹೆಚ್. ವಿಶ್ವನಾಥ್ ಗಂಭೀರ ಆರೋಪ

0

ಮೈಸೂರು: ಹಿರಿಯ ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ಕೈತಪ್ಪಲು ಮೈಸೂರಿನ ಮಾಜಿ ಮುಖ್ಯಮಂತ್ರಿ ಕೈವಾಡವಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಪುತ್ರನ ರಾಜಕೀಯ ಪ್ರಭಾವ ಕಡಿಮೆಯಾಗುವ ಆತಂಕದಿಂದಲೇ ತನ್ವೀರ್ ಸೇಠ್ ಅವರನ್ನು ಸಚಿವ ಸಂಪುಟದಿಂದ ದೂರ ಇಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತಗಳಿಗೆ ಅನುಗುಣವಾಗಿ ಸಚಿವ ಸಂಪುಟ ರಚನೆಯಾಗಿದ್ದರೂ, ಹಿರಿಯ ನಾಯಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡಬೇಕಾಗಿತ್ತು. ಆದರೆ ಉದ್ದೇಶಪೂರ್ವಕವಾಗಿ ಅವರಿಗೆ ಅವಕಾಶ ನಿರಾಕರಿಸಲಾಗಿದೆ ಎಂದು ಆರೋಪಿಸಿದರು.

“ತನ್ವೀರ್ ಸೇಠ್ ಸಚಿವರಾದರೆ ತಮ್ಮ ಪುತ್ರನ ಪ್ರಭಾವ ಕುಗ್ಗುತ್ತದೆ ಎಂಬ ಕಾರಣಕ್ಕೆ ಅವರ ಸಚಿವ ಸ್ಥಾನ ತಪ್ಪಿಸಲಾಗಿದೆ. ವೈಯಕ್ತಿಕ ಸ್ವಾರ್ಥಕ್ಕಾಗಿ ಕರ್ನಾಟಕದ ರಾಜಕೀಯವನ್ನು ಹಾಳು ಮಾಡಲಾಗಿದೆ” ಎಂದು ಹೆಚ್. ವಿಶ್ವನಾಥ್ ಕಿಡಿಕಾರಿದರು.

ಇದೇ ವೇಳೆ ಸಚಿವರ ಪ್ರಮಾಣವಚನ ಸಮಾರಂಭಕ್ಕೂ ಮಾಜಿ ಮುಖ್ಯಮಂತ್ರಿ ಗೈರಾಗಿರುವುದನ್ನು ಟೀಕಿಸಿದ ಅವರು, “ಸಿದ್ದರಾಮಯ್ಯ ಅವರು ಸಮಾರಂಭಕ್ಕೆ ಹೋಗಬೇಕಿತ್ತು. ಆದರೆ ದುರಹಂಕಾರದ ನಿಲುವಿನಿಂದ ಭಾಗವಹಿಸಲಿಲ್ಲ” ಎಂದು ಹರಿಹಾಯ್ದರು.

ಸೆಲ್ಫಿಯ ಹುಚ್ಚಿಗೆ ಮತ್ತೊಂದು ಬಲಿ: ಕಾಡಾನೆಯತ್ತ ಬೆನ್ನು ಮಾಡಿ ನಿಂತ ಉದ್ಯಮಿ ಕ್ಷಣಾರ್ಧದಲ್ಲೇ ಸಾವು

0

ಬೆಂಗಳೂರು/ರಾಮನಗರ: ಕಾಡಾನೆ ಜೊತೆ ಸೆಲ್ಫಿ ತೆಗೆಯುವ ಅಪಾಯಕಾರಿ ಸಾಹಸಕ್ಕೆ ಮುಂದಾದ ಬೆಂಗಳೂರು ಮೂಲದ ಉದ್ಯಮಿಯೊಬ್ಬರು ಪ್ರಾಣ ಕಳೆದುಕೊಂಡಿರುವ ಬೆಚ್ಚಿಬೀಳಿಸುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ವನ್ಯಜೀವಿ ಅಭಯಾರಣ್ಯದಲ್ಲಿ ನಡೆದಿದೆ. ಆರಂಭದಲ್ಲಿ ಸ್ನೇಹಿತರು ನೀಡಿದ್ದ ಮಾಹಿತಿ ತನಿಖೆಯಲ್ಲಿ ಸುಳ್ಳು ಎಂದು ಬಯಲಾಗಿದ್ದು, ದುರಂತದ ನಿಜವಾದ ಕಾರಣ ಅರಣ್ಯ ಇಲಾಖೆ ತನಿಖೆಯಲ್ಲಿ ಬಹಿರಂಗವಾಗಿದೆ.

ರಾಜರಾಜೇಶ್ವರಿ ನಗರದ ನಿವಾಸಿ ಹಾಗೂ 52 ವರ್ಷದ ಉದ್ಯಮಿ ನರೇಂದ್ರ ಶಿಂಧೆ ತಮ್ಮ 10 ಸ್ನೇಹಿತರೊಂದಿಗೆ ರೆಸಾರ್ಟ್‌ಗೆ ತೆರಳಿ, ಮೂರು ಕಾರುಗಳಲ್ಲಿ ವಾಪಸ್ಸಾಗುತ್ತಿದ್ದರು. ಸೋಮವಾರ ಮುಂಜಾನೆ ಬಸವನಬೆಟ್ಟ ಸಮೀಪದ ಕರಬಗೆರೆ ಕೆರೆಯ ಬಳಿ ಕಾರು ನಿಲ್ಲಿಸಿದ ವೇಳೆ ಅವರು ಕೆಳಗಿಳಿದಿದ್ದರು.

ಮೊದಲಿಗೆ ಅವರು ಮೂತ್ರ ವಿಸರ್ಜನೆಗಾಗಿ ಇಳಿದಿದ್ದಾಗ ಆನೆ ದಾಳಿ ನಡೆಸಿದೆ ಎಂದು ಹೇಳಲಾಗಿತ್ತು. ಆದರೆ ಸ್ಥಳ ಪರಿಶೀಲನೆ, ಸಾಕ್ಷ್ಯಗಳು ಹಾಗೂ ಪರಿಸ್ಥಿತಿಯನ್ನು ಪರಿಶೀಲಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಶಿಂಧೆ ಕಾಡಾನೆಯೊಂದಿಗೆ ಸೆಲ್ಫಿ ತೆಗೆಯಲು ಮುಂದಾಗಿದ್ದಾಗಲೇ ದಾಳಿ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಆನೆಯತ್ತ ಬೆನ್ನು ಮಾಡಿ ಮೊಬೈಲ್‌ನಲ್ಲಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ್ದು, ದಂತಗಳು ದೇಹಕ್ಕೆ ತಾಕಿದ ಪರಿಣಾಮ ಅವರು ಕೆರೆಯೊಳಗೆ ಬಿದ್ದು ಮೃತಪಟ್ಟಿದ್ದಾರೆ. ಇಡೀ ಘಟನೆ ಕೆಲವೇ ಸೆಕೆಂಡುಗಳಲ್ಲಿ ನಡೆದಿದ್ದು, ತಪ್ಪಿಸಿಕೊಳ್ಳುವ ಅವಕಾಶವೇ ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಬಳಿಕ ಸ್ನೇಹಿತರು ಮೃತದೇಹವನ್ನು ಗುಪ್ತವಾಗಿ ಬೆಂಗಳೂರಿಗೆ ಕೊಂಡೊಯ್ಯಲು ಯತ್ನಿಸಿದ್ದರೂ, ಅರಣ್ಯ ಸಿಬ್ಬಂದಿ ಗೇಟ್‌ನಲ್ಲಿ ಪರಿಶೀಲನೆ ನಡೆಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

ರಾಮನಗರ ಡಿಸಿಎಫ್ ಎಂ. ರಾಮಕೃಷ್ಣಪ್ಪ ಸ್ಥಳದಲ್ಲಿ ರಕ್ತದ ಕಲೆಗಳು ಹಾಗೂ ಇತರೆ ಸಾಕ್ಷ್ಯಾಧಾರಗಳು ಪತ್ತೆಯಾಗಿವೆ ಎಂದು ತಿಳಿಸಿದ್ದು, ಕಾರು ನಿಲ್ಲಿಸಿದ್ದ ಸ್ಥಳದಿಂದ ಕೆರೆಯವರೆಗೆ ಸುಮಾರು 50 ಮೀಟರ್ ಅಂತರವಿತ್ತು ಎಂದಿದ್ದಾರೆ.

ಈ ಪ್ರಕರಣದ ಬೆನ್ನಲ್ಲೇ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದು, ವನ್ಯಜೀವಿಗಳ ಸಮೀಪ ಹೋಗುವುದು, ಫೋಟೊ ಅಥವಾ ಸೆಲ್ಫಿ ತೆಗೆಯಲು ಯತ್ನಿಸುವುದು ಜೀವಕ್ಕೆ ಮಾರಕವಾಗಬಹುದು ಎಂದು ಎಚ್ಚರಿಸಿದೆ.

ಕೊಡಗಿನಲ್ಲಿ ಭೀಕರ ಸರಣಿ ಅಪಘಾತ; ಮೂರು ವಾಹನಗಳು ಜಖಂ, ಓರ್ವರ ಸ್ಥಿತಿ ಗಂಭೀರ!

ಮಡಿಕೇರಿ: ಕೊಡಗು ಜಿಲ್ಲೆಯ ಸುಂಟಿಕೊಪ್ಪ–ಕುಶಾಲನಗರ ಮುಖ್ಯ ರಸ್ತೆಯ 7ನೇ ಹೊಸಕೋಟೆ ಬಳಿ ಇಂದು ಬೆಳಿಗ್ಗೆ ಭೀಕರ ಸರಣಿ ಅಪಘಾತ ಸಂಭವಿಸಿದೆ.

ಕೆಎಸ್‌ಆರ್‌ಟಿಸಿ ಬಸ್ ಹಾಗೂ ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಕುಶಾಲನಗರ ಕಡೆಯಿಂದ ಬರುತ್ತಿದ್ದ ರಿಟ್ಜ್ ಕಾರು 7ನೇ ಹೊಸಕೋಟೆ ಬಳಿ ಕಲ್ಲುಕೋರೆ ರಸ್ತೆಗೆ ತಿರುಗುತ್ತಿದ್ದ ವೇಳೆ, ಅದರ ಹಿಂಬದಿಯಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಅದೇ ಸಮಯದಲ್ಲಿ ಸುಂಟಿಕೊಪ್ಪ ಕಡೆಯಿಂದ ಬರುತ್ತಿದ್ದ ಬಲೆನೋ ಕಾರು ಕೂಡ ನಿಯಂತ್ರಣ ತಪ್ಪಿ ರಿಟ್ಜ್ ಕಾರಿಗೆ ಗುದ್ದಿದೆ. ಪರಿಣಾಮ ಮೂರು ವಾಹನಗಳು ಸರಣಿ ಅಪಘಾತಕ್ಕೆ ಒಳಗಾಗಿವೆ.

ಡಿಕ್ಕಿಯ ತೀವ್ರತೆಗೆ ರಿಟ್ಜ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಸುಂಟಿಕೊಪ್ಪದ ಮಾತಾಜಿ ಜ್ಯುವೆಲ್ಲರ್ಸ್ ಮಾಲೀಕರಾದ ರಮೇಶ್ ಶೇಟ್ ಅವರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಅಪಘಾತದಲ್ಲಿ ಮೂರು ವಾಹನಗಳಿಗೂ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ರಸ್ತೆ ಮಧ್ಯೆ ವಾಹನಗಳು ನಿಂತಿದ್ದರಿಂದ ಸುಂಟಿಕೊಪ್ಪ–ಕುಶಾಲನಗರ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸುಂಟಿಕೊಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದ ಕುರಿತು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಮಳೆಯಿಂದ ಕಾವೇರಿ ನದಿಗೆ ಜೀವಕಳೆ; ಭೋರ್ಗರೆಯುತ್ತಿರುವ ಹೊಗೇನಕಲ್ ಜಲಪಾತದ ಸೊಬಗು!

ಚಾಮರಾಜನಗರ: ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದು, ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಪ್ರಸಿದ್ಧ ಹೊಗೇನಕಲ್ ಜಲಪಾತ ಭೋರ್ಗರೆಯುತ್ತಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ತಮಿಳುನಾಡು ಗಡಿಯಲ್ಲಿರುವ ಹೊಗೇನಕಲ್ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಜಲಪಾತದ ಸೊಬಗು ಮತ್ತಷ್ಟು ಹೆಚ್ಚಾಗಿದೆ.

ಮಳೆಗಾಲದ ಹಿನ್ನೆಲೆಯಲ್ಲಿ ಕಾವೇರಿ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು, ಬಂಡೆಗಳ ನಡುವೆ ಧುಮುಕುತ್ತಿರುವ ಜಲಧಾರೆಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.

ಪ್ರತಿ ವರ್ಷ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುವ ಹೊಗೇನಕಲ್ ಜಲಪಾತ, ಇದೀಗ ಮಳೆಗಾಲದ ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ.

Job Interview Tips: ಉದ್ಯೋಗ ಸಂದರ್ಶನಕ್ಕೆ ಹೋಗುವ ಮುನ್ನ ಈ 10 ತಪ್ಪುಗಳನ್ನು ಮಾಡಬೇಡಿ!

0

ಉದ್ಯೋಗ ಹುಡುಕುತ್ತಿರುವವರಿಗೆ ಸಂದರ್ಶನ ಎನ್ನುವುದು ಅತ್ಯಂತ ಮಹತ್ವದ ಹಂತವಾಗಿದೆ.

ಉತ್ತಮ ಶೈಕ್ಷಣಿಕ ಅರ್ಹತೆ, ಅನುಭವ ಹಾಗೂ ಕೌಶಲ್ಯಗಳಿದ್ದರೂ, ಸಂದರ್ಶನದ ವೇಳೆ ಮಾಡುವ ಸಣ್ಣ ತಪ್ಪುಗಳಿಂದಲೂ ಉತ್ತಮ ಉದ್ಯೋಗದ ಅವಕಾಶ ಕೈತಪ್ಪಬಹುದು.

ಸಂದರ್ಶನದಲ್ಲಿ ಯಶಸ್ಸು ಪಡೆಯಲು ಕೇವಲ ಜ್ಞಾನ ಮಾತ್ರವಲ್ಲ, ಆತ್ಮವಿಶ್ವಾಸ, ಸರಿಯಾದ ಸಿದ್ಧತೆ ಹಾಗೂ ವೃತ್ತಿಪರ ವರ್ತನೆಯೂ ಮುಖ್ಯವಾಗಿದೆ.

ಹಾಗಾದರೆ ಸಂದರ್ಶನಕ್ಕೆ ತೆರಳುವ ಮುನ್ನ ಯಾವೆಲ್ಲಾ ವಿಷಯಗಳನ್ನು ಗಮನಿಸಬೇಕು? ಇಲ್ಲಿದೆ ಮಾಹಿತಿ.

1. ಕಂಪನಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಿ:

ಸಂದರ್ಶನಕ್ಕೆ ಹೋಗುವ ಮೊದಲು ನೀವು ಅರ್ಜಿ ಸಲ್ಲಿಸಿರುವ ಕಂಪನಿಯ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ.

ಕಂಪನಿಯ ಇತಿಹಾಸ, ಉತ್ಪನ್ನಗಳು, ಸೇವೆಗಳು, ಮಾರುಕಟ್ಟೆಯಲ್ಲಿನ ಸ್ಥಾನ ಹಾಗೂ ಸಂಸ್ಥೆಯ ಗುರಿಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ.

ಇದು ನಿಮ್ಮಲ್ಲಿ ಕಂಪನಿಯ ಮೇಲಿರುವ ಆಸಕ್ತಿ ಮತ್ತು ಪೂರ್ವ ಸಿದ್ಧತೆಯನ್ನು ತೋರಿಸುತ್ತದೆ.

2. ಸಮಯಪಾಲನೆಗೆ ಆದ್ಯತೆ ನೀಡಿ:

ಸಂದರ್ಶನದ ಸ್ಥಳಕ್ಕೆ ಕನಿಷ್ಠ 10 ರಿಂದ 15 ನಿಮಿಷ ಮುಂಚಿತವಾಗಿ ತಲುಪುವಂತೆ ಯೋಜನೆ ರೂಪಿಸಿ.

ತಡವಾಗಿ ಆಗಮಿಸುವುದು ನಿಮ್ಮ ವೃತ್ತಿಪರತೆಯ ಬಗ್ಗೆ ಆರಂಭದಲ್ಲೇ ಕೆಟ್ಟ ಅಭಿಪ್ರಾಯ ಮೂಡಿಸಬಹುದು.

3. ಅಚ್ಚುಕಟ್ಟಾದ ಉಡುಗೆ ಧರಿಸಿ:

ನಿಮ್ಮ ಉಡುಗೆ ನಿಮ್ಮ ವ್ಯಕ್ತಿತ್ವದ ಮೊದಲ ಪ್ರಭಾವ ಬೀರುತ್ತದೆ.

ತುಂಬಾ ಕ್ಯಾಶುವಲ್ ಅಥವಾ ಅಸ್ತವ್ಯಸ್ತ ಉಡುಪುಗಳನ್ನು ತಪ್ಪಿಸಿ. ಸ್ವಚ್ಛ, ಸರಳ ಹಾಗೂ ಕಂಪನಿಯ ವಾತಾವರಣಕ್ಕೆ ಹೊಂದುವ ಫಾರ್ಮಲ್ ಉಡುಪು ಧರಿಸುವುದು ಉತ್ತಮ.

4. ರೆಸ್ಯೂಮ್‌ ಪರಿಶೀಲಿಸಿ:

ಸಂದರ್ಶನದಲ್ಲಿ ನಿಮ್ಮ ರೆಸ್ಯೂಮ್‌ನಲ್ಲಿರುವ ಶಿಕ್ಷಣ, ಅನುಭವ, ಕೌಶಲ್ಯ ಹಾಗೂ ಸಾಧನೆಗಳ ಬಗ್ಗೆ ಪ್ರಶ್ನೆಗಳು ಕೇಳಬಹುದು.

ಆದ್ದರಿಂದ ಸಂದರ್ಶನಕ್ಕೂ ಮೊದಲು ನಿಮ್ಮ ರೆಸ್ಯೂಮ್ ಅನ್ನು ಮತ್ತೊಮ್ಮೆ ಓದಿ, ಅದರಲ್ಲಿರುವ ಮಾಹಿತಿಯ ಬಗ್ಗೆ ಸ್ಪಷ್ಟತೆ ಹೊಂದಿರಿ.

5. ಮೊಬೈಲ್ ಫೋನ್ ಸೈಲೆಂಟ್‌ನಲ್ಲಿ ಇರಲಿ:

ಸಂದರ್ಶನದ ವೇಳೆ ಮೊಬೈಲ್ ರಿಂಗ್ ಆಗುವುದು ಅಥವಾ ನೋಟಿಫಿಕೇಶನ್‌ಗಳು ಬರುವುದು ಕೆಟ್ಟ ಪ್ರಭಾವ ಬೀರುತ್ತದೆ.

ಸಂದರ್ಶನ ಕೊಠಡಿಗೆ ಪ್ರವೇಶಿಸುವ ಮೊದಲು ಮೊಬೈಲ್ ಅನ್ನು ಸೈಲೆಂಟ್ ಅಥವಾ ಸ್ವಿಚ್ ಆಫ್ ಮಾಡಿ.

6. ಹಿಂದಿನ ರಾತ್ರಿ ಉತ್ತಮ ನಿದ್ರೆ ಮಾಡಿ:

ಸಂದರ್ಶನದ ಆತಂಕದಿಂದ ನಿದ್ರೆ ಕಡಿಮೆಯಾದರೆ ಆಯಾಸ ಮತ್ತು ಏಕಾಗ್ರತೆಯ ಕೊರತೆ ಉಂಟಾಗಬಹುದು.

ಕನಿಷ್ಠ 7 ರಿಂದ 8 ಗಂಟೆಗಳ ನಿದ್ರೆ ಮಾಡಿ, ಪ್ರಶಾಂತ ಮನಸ್ಸಿನಿಂದ ಸಂದರ್ಶನಕ್ಕೆ ತೆರಳುವುದು ಉತ್ತಮ.

7. ಸಾಮಾನ್ಯ ಪ್ರಶ್ನೆಗಳಿಗೆ ಸಿದ್ಧರಾಗಿ:

ಬಹುತೇಕ ಸಂದರ್ಶನಗಳಲ್ಲಿ ಕೆಲವು ಸಾಮಾನ್ಯ ಪ್ರಶ್ನೆಗಳು ಕೇಳಲಾಗುತ್ತದೆ.

ಉದಾಹರಣೆಗೆ:

  • ನಿಮ್ಮ ಬಗ್ಗೆ ವಿವರಿಸಿ
  • ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳೇನು?
  • ಈ ಕಂಪನಿಯಲ್ಲಿ ಕೆಲಸ ಮಾಡಲು ಏಕೆ ಬಯಸುತ್ತೀರಿ?

ಈ ಪ್ರಶ್ನೆಗಳಿಗೆ ಸ್ಪಷ್ಟ ಹಾಗೂ ಆತ್ಮವಿಶ್ವಾಸದಿಂದ ಉತ್ತರಿಸಲು ಮೊದಲೇ ಅಭ್ಯಾಸ ಮಾಡಿ.

8. ಹಿಂದಿನ ಕಂಪನಿ ಅಥವಾ ಬಾಸ್ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ:

ಹಿಂದಿನ ಕಂಪನಿ, ಬಾಸ್ ಅಥವಾ ಸಹೋದ್ಯೋಗಿಗಳ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವುದನ್ನು ತಪ್ಪಿಸಿ.

ಹಳೆಯ ಅನುಭವಗಳನ್ನು ಯಾವಾಗಲೂ ವೃತ್ತಿಪರ ಹಾಗೂ ಸಕಾರಾತ್ಮಕ ರೀತಿಯಲ್ಲಿ ಹಂಚಿಕೊಳ್ಳಿ.

9. Body Language ಮುಖ್ಯ:

ಸಂದರ್ಶನದ ವೇಳೆ:

  • ಸಂದರ್ಶಕರ ಕಣ್ಣಿಗೆ ಕಣ್ಣು ನೋಡಿ ಮಾತನಾಡಿ
  • ಸಣ್ಣ ಮುಗುಳುನಗು ಇರಲಿ
  • ಆತ್ಮವಿಶ್ವಾಸದಿಂದ ಉತ್ತರ ನೀಡಿ

ಅತಿಯಾದ ಆತಂಕ ಅಥವಾ ನಿಮ್ಮ ಸಾಮರ್ಥ್ಯವನ್ನು ಕಡಿಮೆ ಅಂದಾಜು ಮಾಡಿಕೊಳ್ಳುವುದು ತಪ್ಪು.

10. ಕೊನೆಯಲ್ಲಿ ಪ್ರಶ್ನೆಗಳನ್ನು ಕೇಳಿ:

“ನಿಮಗೆ ಏನಾದರೂ ಪ್ರಶ್ನೆಗಳಿವೆಯೇ?” ಎಂದು ಸಂದರ್ಶಕರು ಕೇಳಿದಾಗ “ಇಲ್ಲ” ಎನ್ನಬೇಡಿ.

ಕೆಲಸದ ಜವಾಬ್ದಾರಿ, ತಂಡದ ಕಾರ್ಯವೈಖರಿ ಅಥವಾ ಬೆಳವಣಿಗೆಯ ಅವಕಾಶಗಳ ಬಗ್ಗೆ ಸೂಕ್ತ ಪ್ರಶ್ನೆಗಳನ್ನು ಕೇಳುವುದು ನಿಮ್ಮ ಆಸಕ್ತಿಯನ್ನು ತೋರಿಸುತ್ತದೆ.

ಯಶಸ್ಸಿಗೆ ಸರಿಯಾದ ಸಿದ್ಧತೆಯೇ ಗುಟ್ಟು:

ಉದ್ಯೋಗ ಸಂದರ್ಶನದಲ್ಲಿ ಯಶಸ್ಸು ಪಡೆಯಲು ಕೇವಲ ವಿದ್ಯಾರ್ಹತೆ ಅಥವಾ ತಾಂತ್ರಿಕ ಜ್ಞಾನ ಮಾತ್ರ ಸಾಕಾಗುವುದಿಲ್ಲ.

ಉತ್ತಮ ಸಂವಹನ ಕೌಶಲ್ಯ, ಸಮಯಪಾಲನೆ, ಆತ್ಮವಿಶ್ವಾಸ ಹಾಗೂ ವೃತ್ತಿಪರ ನಡವಳಿಕೆ ನಿಮ್ಮನ್ನು ಇತರ ಅಭ್ಯರ್ಥಿಗಳಿಗಿಂತ ವಿಭಿನ್ನವಾಗಿಸುತ್ತದೆ.

ಸರಿಯಾದ ಸಿದ್ಧತೆಯೊಂದಿಗೆ ಸಂದರ್ಶನ ಎದುರಿಸಿದರೆ ನಿಮ್ಮ ಕನಸಿನ ಉದ್ಯೋಗ ಪಡೆಯುವ ಅವಕಾಶ ಹೆಚ್ಚಾಗುತ್ತದೆ.

 

ಕೆ.ಆರ್. ಮಾರ್ಕೆಟ್ ಮೇಲ್ಸೇತುವೆ ರಸ್ತೆ 3 ತಿಂಗಳು ಬಂದ್; ಟ್ರಾಫಿಕ್ ಸಮಸ್ಯೆ ಹೆಚ್ಚುವ ಸಾಧ್ಯತೆ!

ಬೆಂಗಳೂರು: ಬೆಂಗಳೂರಿನ ಪ್ರಮುಖ ವಾಣಿಜ್ಯ ಪ್ರದೇಶವಾದ ಕೆ.ಆರ್. ಮಾರ್ಕೆಟ್‌ನಲ್ಲಿ ವಾಹನ ಸವಾರರಿಗೆ ತಾತ್ಕಾಲಿಕ ಸಂಕಷ್ಟ ಎದುರಾಗಿದೆ.

ಕೆ.ಆರ್. ಮಾರ್ಕೆಟ್ ಮೇಲ್ಸೇತುವೆಯ ಚಾಮರಾಜಪೇಟೆ ತಿರುವಿನ ರಸ್ತೆ ಮುಂದಿನ ಮೂರು ತಿಂಗಳ ಕಾಲ ಬಂದ್ ಆಗಲಿದೆ.

ಸುಲ್ತಾನ್ ರಸ್ತೆಯಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೇಲ್ಸೇತುವೆ ಮೂಲಕ ಪ್ರತಿದಿನ ವಿಕ್ಟೋರಿಯಾ ಆಸ್ಪತ್ರೆ, ಮಿಂಟೋ ಆಸ್ಪತ್ರೆ, ವಾಣಿವಿಲಾಸ ಆಸ್ಪತ್ರೆ, ಚಾಮರಾಜಪೇಟೆ, ಬಸವನಗುಡಿ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಿಗೆ ಸಾವಿರಾರು ವಾಹನಗಳು ಸಂಚರಿಸುತ್ತಿದ್ದವು.

ರಸ್ತೆ ಬಂದ್ ಆಗಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಪರ್ಯಾಯ ಮಾರ್ಗ ಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುಂದಿನ ಕೆಲವು ತಿಂಗಳು ಈ ಭಾಗದಲ್ಲಿ ಟ್ರಾಫಿಕ್ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ.

ಕೆ.ಆರ್. ಮಾರ್ಕೆಟ್‌ನಲ್ಲಿ ತೆರವು ಕಾರ್ಯಾಚರಣೆ:

ಇದರ ನಡುವೆ ಕೆ.ಆರ್. ಮಾರ್ಕೆಟ್‌ನಲ್ಲಿ ಬೃಹತ್ ತೆರವು ಕಾರ್ಯಾಚರಣೆಯೂ ಆರಂಭವಾಗಿದೆ.

ಜಿಬಿಎ (GBA) ಅಧಿಕಾರಿಗಳು ಮೇಲ್ಸೇತುವೆಯ ಕೆಳಭಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಅಂಗಡಿಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ.

ಮೂರು ಜೆಸಿಬಿಗಳ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸುಮಾರು 20 ರಿಂದ 25 ಅಂಗಡಿಗಳನ್ನು ತೆರವುಗೊಳಿಸಲಾಗುತ್ತಿದೆ.

ತೆರವು ಕಾರ್ಯಾಚರಣೆಗೆ ಕೆಲ ಅಂಗಡಿ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದ ಅಂಗಡಿಗಳನ್ನು ಏಕಾಏಕಿ ತೆರವುಗೊಳಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ, ಸಾರ್ವಜನಿಕರ ಸುರಕ್ಷತೆ ಹಾಗೂ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ಉದ್ದೇಶದಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ರಸ್ತೆ ಬಂದ್ ಮತ್ತು ತೆರವು ಕಾರ್ಯಾಚರಣೆ ಒಂದೇ ಸಮಯದಲ್ಲಿ ನಡೆಯುತ್ತಿರುವುದರಿಂದ ಕೆ.ಆರ್. ಮಾರ್ಕೆಟ್ ಸುತ್ತಮುತ್ತ ವಾಹನ ದಟ್ಟಣೆ ಹೆಚ್ಚಾಗಿದೆ. ಈ ಭಾಗದಲ್ಲಿ ಸಂಚರಿಸುವವರು ಸಾಧ್ಯವಾದಷ್ಟು ಪರ್ಯಾಯ ಮಾರ್ಗ ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

 

Cabinet Expansion Row: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ರಸ್ತೆಗಿಳಿದ ಸುಬ್ಬಾರೆಡ್ಡಿ ಬೆಂಬಲಿಗರು!

ಚಿಕ್ಕಬಳ್ಳಾಪುರ: ಸಚಿವ ಸಂಪುಟ ವಿಸ್ತರಣೆ ಬಳಿಕ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಸಮಾಧಾನ ಭುಗಿಲೆದ್ದಿದೆ.

ಮೂರು ಬಾರಿ ಶಾಸಕರಾಗಿರುವ ಶಾಸಕ ಎಸ್‌.ಎನ್‌. ಸುಬ್ಬಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.

ಜಿಲ್ಲೆಯ ಬಾಗೇಪಲ್ಲಿ, ಗುಡಿಬಂಡೆ ಹಾಗೂ ಚೇಳೂರು ತಾಲೂಕುಗಳಲ್ಲಿ ಸುಬ್ಬಾರೆಡ್ಡಿ ಬೆಂಬಲಿಗರು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನಾಕಾರರು ರಸ್ತೆ ಮಧ್ಯೆ ಬಸ್‌ಗಳನ್ನು ನಿಲ್ಲಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಹಲವು ವರ್ಷಗಳಿಂದ ಪಕ್ಷಕ್ಕಾಗಿ ಕೆಲಸ ಮಾಡಿರುವ ಹಾಗೂ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸುಬ್ಬಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಬೇಕಿತ್ತು ಎಂದು ಬೆಂಬಲಿಗರು ಆಗ್ರಹಿಸಿದ್ದಾರೆ.

ತಮಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.

ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಚಿವ ಸ್ಥಾನ ವಂಚಿತರ ಬೆಂಬಲಿಗರಿಂದ ಅಸಮಾಧಾನ ವ್ಯಕ್ತವಾಗುತ್ತಿದ್ದು, ಚಿಕ್ಕಬಳ್ಳಾಪುರದಲ್ಲೂ ಪ್ರತಿಭಟನೆ ತೀವ್ರಗೊಂಡಿದೆ.

RBI Repo Rate: ಸಾಲಗಾರರಿಗೆ ಗುಡ್ ನ್ಯೂಸ್; ರೆಪೋ ದರ 5.25%ರಲ್ಲೇ ಮುಂದುವರಿಕೆ!

0

ನವದೆಹಲಿ: ಬ್ಯಾಂಕ್‌ಗಳಲ್ಲಿ ಸಾಲ ಪಡೆದವರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮಹತ್ವದ ಮಾಹಿತಿ ನೀಡಿದೆ.

ಹಣಕಾಸು ನೀತಿ ಸಮಿತಿ ಸಭೆಯ ಬಳಿಕ ಆರ್‌ಬಿಐ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ, ಶೇಕಡಾ 5.25ರಲ್ಲೇ ಮುಂದುವರಿಸಿದೆ.

ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಅಧ್ಯಕ್ಷತೆಯಲ್ಲಿ ನಡೆದ ಮೂರು ದಿನಗಳ MPC ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ರೆಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲದಿರುವುದರಿಂದ ಗೃಹ ಸಾಲ, ವಾಹನ ಸಾಲ ಹಾಗೂ ವೈಯಕ್ತಿಕ ಸಾಲಗಳ ಬಡ್ಡಿದರದಲ್ಲಿ ಸದ್ಯಕ್ಕೆ ಯಾವುದೇ ಏರಿಕೆ ಅಥವಾ ಇಳಿಕೆ ಇರುವುದಿಲ್ಲ. ಸಾಲಗಾರರ EMI ಕೂಡ ಇದೇ ಮಟ್ಟದಲ್ಲಿ ಮುಂದುವರಿಯಲಿದೆ.

ಇತರೆ ಬಡ್ಡಿದರಗಳಲ್ಲೂ ಬದಲಾವಣೆ ಇಲ್ಲ:

ಆರ್‌ಬಿಐ ಕೆಳಗಿನ ದರಗಳಲ್ಲೂ ಯಾವುದೇ ಬದಲಾವಣೆ ಮಾಡಿಲ್ಲ:

  • ಸ್ಟ್ಯಾಂಡಿಂಗ್ ಡೆಪಾಸಿಟ್ ಫೆಸಿಲಿಟಿ (SDF): ಶೇ. 5
  • ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (MSF): ಶೇ. 5.5
  • ಬ್ಯಾಂಕ್ ದರ: ಶೇ. 5.5

ಕೇಂದ್ರ ಬ್ಯಾಂಕ್ ತನ್ನ ತಟಸ್ಥ ನಿಲುವು ಮುಂದುವರಿಸಿದೆ.

ಹಿಂದೆ ರೆಪೋ ದರ ಇಳಿಕೆ ಮಾಡಲಾಗಿತ್ತು:

ಆರ್‌ಬಿಐ ಪ್ರತಿ ಎರಡು ತಿಂಗಳಿಗೊಮ್ಮೆ ಹಣಕಾಸು ನೀತಿಯನ್ನು ಪರಿಶೀಲಿಸುತ್ತದೆ. ಕೊನೆಯ ಬಾರಿ ಡಿಸೆಂಬರ್ 5, 2025ರಂದು ರೆಪೋ ದರವನ್ನು ಶೇ. 0.25ರಷ್ಟು ಕಡಿಮೆ ಮಾಡಿ 5.25ಕ್ಕೆ ಇಳಿಸಲಾಗಿತ್ತು.

ಅದರ ಬಳಿಕ ನಡೆದ ಈ ಸಭೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಹಣದುಬ್ಬರದ ಬಗ್ಗೆ RBI ಎಚ್ಚರಿಕೆ:

ಜಾಗತಿಕ ಆರ್ಥಿಕ ಪರಿಸ್ಥಿತಿಯ ಸವಾಲುಗಳ ನಡುವೆ ಈ ಸಭೆ ನಡೆದಿದ್ದು, ಪಶ್ಚಿಮ ಏಷ್ಯಾದ ಉದ್ವಿಗ್ನತೆಗಳು ಜಾಗತಿಕ ಆರ್ಥಿಕತೆ, ಹಣದುಬ್ಬರ ಹಾಗೂ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತಿವೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ.

ಭಾರತದಲ್ಲಿ ಚಿಲ್ಲರೆ ಹಣದುಬ್ಬರ ಜೂನ್ 2026ರಲ್ಲಿ ಶೇ. 4.38ಕ್ಕೆ ಏರಿಕೆಯಾಗಿದೆ. ಮೇ ತಿಂಗಳಲ್ಲಿ ಇದು ಶೇ. 3.93ರಷ್ಟಿತ್ತು.

ಆಹಾರ ಮತ್ತು ಇಂಧನ ಬೆಲೆಗಳಲ್ಲಿನ ಒತ್ತಡದಿಂದ ಮುಂದಿನ ದಿನಗಳಲ್ಲಿ ಹಣದುಬ್ಬರ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆರ್‌ಬಿಐ ತಿಳಿಸಿದೆ.

ಸಾಮಾನ್ಯ ಜನರ ಮೇಲೆ ಪರಿಣಾಮ ಏನು?

ರೆಪೋ ದರ ಬದಲಾಗದ ಕಾರಣ:

ಗೃಹ ಸಾಲದ EMI ಬದಲಾಗುವುದಿಲ್ಲ
ಕಾರು ಸಾಲದ ಬಡ್ಡಿದರದಲ್ಲಿ ತಕ್ಷಣದ ಬದಲಾವಣೆ ಇಲ್ಲ
ವೈಯಕ್ತಿಕ ಸಾಲದ ಹೊರೆ ಹೆಚ್ಚಾಗುವುದಿಲ್ಲ
ಉಳಿತಾಯ ಖಾತೆಗಳ ಬಡ್ಡಿದರದಲ್ಲೂ ದೊಡ್ಡ ಬದಲಾವಣೆ ನಿರೀಕ್ಷೆ ಇಲ್ಲ

ಆರ್‌ಬಿಐ ಹಣದುಬ್ಬರ ನಿಯಂತ್ರಣ ಮತ್ತು ಆರ್ಥಿಕ ಬೆಳವಣಿಗೆಯನ್ನು ಸಮತೋಲನದಲ್ಲಿಡಲು ಈ ನಿರ್ಧಾರ ಕೈಗೊಂಡಿದೆ.

ತಜ್ಞರ ಪ್ರಕಾರ, ಹಣದುಬ್ಬರ ನಿಯಂತ್ರಣಕ್ಕೆ ಬಂದರೆ ಮುಂದಿನ ದಿನಗಳಲ್ಲಿ ಬಡ್ಡಿದರ ಕಡಿತದ ಸಾಧ್ಯತೆ ಇರಬಹುದು. ಸದ್ಯದ ಪರಿಸ್ಥಿತಿಯಲ್ಲಿ ದರಗಳನ್ನು ಯಥಾಸ್ಥಿತಿಯಲ್ಲಿ ಉಳಿಸುವುದು ಸೂಕ್ತ ನಿರ್ಧಾರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.