ಬೆಂಗಳೂರು: ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಮಾಡುವ ಪ್ರಕ್ರಿಯೆಯನ್ನು ಪ್ರಶ್ನಿಸಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಭಾಗಶಃ ಅಂಗೀಕರಿಸಿದೆ.
ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ನೀಡಿದ್ದು, ಪ್ರದೋಷ್ ಮಾಫಿ ಸಾಕ್ಷಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೆಷನ್ಸ್ ಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಮಾರ್ಪಡಿಸಿ, ಯಾವುದೇ ವಾದ-ಪ್ರತಿವಾದಕ್ಕೆ ಅವಕಾಶ ನೀಡದೆ ಒಂದು ವಾರದೊಳಗೆ ಹೊಸ ಆದೇಶ ನೀಡುವಂತೆ ಸೂಚಿಸಿದೆ.
ಈ ಹಿಂದೆ ಸೆಷನ್ಸ್ ಕೋರ್ಟ್ನಲ್ಲಿ ಪ್ರದೋಷ್ ಅವರ ಸನ್ನಡತೆ ಕುರಿತು ಪ್ರೊಬೇಷನರಿ ಅಧಿಕಾರಿಯೊಬ್ಬರು ವರದಿ ಸಲ್ಲಿಸಿದ್ದರು. ಈ ವರದಿಯನ್ನು ಪ್ರಶ್ನಿಸಿ ದರ್ಶನ್ ಹೈಕೋರ್ಟ್ ಮೊರೆ ಹೋಗಿದ್ದರು.
ಪ್ರೊಬೇಷನರಿ ಅಧಿಕಾರಿಯು ಸಜಾಬಂಧಿಯಲ್ಲಿರುವ ವ್ಯಕ್ತಿಯ ಕುರಿತು ವರದಿ ನೀಡಬೇಕಿತ್ತು. ಆದರೆ ಪ್ರದೋಷ್ ವಿಚಾರಣಾಧೀನ ಆರೋಪಿಯಾಗಿರುವುದರಿಂದ ಅವರ ನಡವಳಿಕೆ ಕುರಿತು ಪ್ರೊಬೇಷನರಿ ಅಧಿಕಾರಿಗೆ ವರದಿ ಸಲ್ಲಿಸುವ ಅವಕಾಶವಿಲ್ಲ ಎಂದು ದರ್ಶನ್ ಪರ ವಾದಿಸಲಾಗಿತ್ತು.
ಹೀಗಾಗಿ ಪ್ರೊಬೇಷನರಿ ಅಧಿಕಾರಿ ಸಲ್ಲಿಸಿರುವ ವರದಿಯನ್ನು ರದ್ದುಪಡಿಸಬೇಕು ಎಂದು ದರ್ಶನ್ ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದರು. ಇದೀಗ ಹೈಕೋರ್ಟ್ ಅರ್ಜಿಯನ್ನು ಭಾಗಶಃ ಅಂಗೀಕರಿಸಿದ್ದು, ಈ ವಿಚಾರದಲ್ಲಿ ಸೆಷನ್ಸ್ ಕೋರ್ಟ್ ಹೊಸದಾಗಿ ಆದೇಶ ನೀಡಬೇಕಿದೆ.

