Home Blog

ಬಸ್ ನಿಲ್ದಾಣದಿಂದ ಯುವತಿ ಕಿಡ್ನ್ಯಾಪ್: ಲಾಡ್ಜ್‌ನಲ್ಲಿ ಗ್ಯಾಂಗ್‌ರೇಪ್, 24 ಗಂಟೆಯಲ್ಲೇ ಮೂವರು ಅರೆಸ್ಟ್

0

ಮೈಸೂರು: ಖಾಸಗಿ ಬಸ್ ನಿಲ್ದಾಣದ ಬಳಿ ಯುವತಿಯನ್ನು ಅಪಹರಿಸಿ ಲಾಡ್ಜ್‌ಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಟಿ. ನರಸೀಪುರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ 24 ಗಂಟೆಗಳೊಳಗೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣ ಮೈಸೂರು ಜಿಲ್ಲೆಯಲ್ಲಷ್ಟೇ ಅಲ್ಲ, ರಾಜ್ಯಾದ್ಯಂತ ಆತಂಕ ಮೂಡಿಸಿದೆ.

ಪಶ್ಚಿಮ ಬಂಗಾಳ ಮೂಲದ ಕಲ್ಪನಾ ಮುಂಡಾ ಎಂಬ ಯುವತಿಯನ್ನು ಟಿ. ನರಸೀಪುರ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಸಮೀಪ ಆರೋಪಿಗಳು ಅಪಹರಿಸಿದ್ದಾರೆ ಎನ್ನಲಾಗಿದೆ. ಬಳಿಕ ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಬಳಿಯ ಲಾಡ್ಜ್‌ಗೆ ಕರೆದೊಯ್ದು ಕಿರಣ್, ಕಿಶೋರ್ ಹಾಗೂ ರಿಯಾನ್ ಎಂಬ ಮೂವರು ಆರೋಪಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪ್ರಕರಣದ ಮಾಹಿತಿ ಸಿಕ್ಕ ತಕ್ಷಣ ತನಿಖೆ ಆರಂಭಿಸಿದ ಟಿ. ನರಸೀಪುರ ಪೊಲೀಸರು ತಾಂತ್ರಿಕ ಮಾಹಿತಿ ಹಾಗೂ ಇತರೆ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಬಂಧಿತ ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಘಟನೆ ಸಂಬಂಧ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಪ್ರಕ್ರಿಯೆ ಮುಂದುವರಿದಿದೆ. ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.

ಸಿಸಿಟಿವಿಯೇ ಬಯಲು ಮಾಡಿತು ಸುಳ್ಳು ಕಳ್ಳತನ: 65.95 ಲಕ್ಷ ದೋಚಿದಂತೆ ದೂರು ಕೊಟ್ಟ ಮಾಲೀಕನ ಸಂಚು ಫೇಲ್!

0

ಬೆಳಗಾವಿ: 65.95 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಚಿನ್ನದಂಗಡಿ ಮಾಲೀಕನೇ ಪ್ರಕರಣದ ಮಾಸ್ಟರ್‌ಮೈಂಡ್ ಎಂಬ ಸತ್ಯ ಬೆಳಕಿಗೆ ಬಂದಿದೆ. ವಿಮೆ ಹಣ ಪಡೆಯುವುದು ಮತ್ತು ಅಡವಿಟ್ಟಿದ್ದ ಚಿನ್ನವನ್ನು ಅಕ್ರಮವಾಗಿ ವಶಕ್ಕೆ ಪಡೆಯುವ ಉದ್ದೇಶದಿಂದ ಕಳ್ಳತನದ ನಾಟಕ ರೂಪಿಸಿದ್ದ ಆರೋಪಿ ಕೊನೆಗೆ ಸಿಸಿಟಿವಿ ದೃಶ್ಯಗಳಲ್ಲೇ ಸಿಕ್ಕಿಬಿದ್ದಿದ್ದಾನೆ.

ರಾಮದೇವ ಗಲ್ಲಿಯಲ್ಲಿರುವ ವಿಪಿ ವೇರ್ಣೇಕರ ಆಂಡ್ ಸನ್ಸ್ ಚಿನ್ನದಂಗಡಿಯ ಮಾಲೀಕ ಕೃಷ್ಣಾನಂದ ವೇರ್ಣೇಕರ, ಅಂಗಡಿಯಿಂದ ಚಿನ್ನಾಭರಣ, ಬೆಳ್ಳಿ ಹಾಗೂ ನಗದು ಕಳುವಾಗಿದೆ ಎಂದು ಖಡೇಬಜಾರ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಸಿಸಿಟಿವಿ ದೃಶ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆರೋಪಿಯ ಸಂಚು ಬಯಲಾಗಿದೆ.

ಕಳ್ಳತನಕ್ಕೂ ಮುನ್ನ ಕ್ಯಾಮೆರಾ ವ್ಯವಸ್ಥೆಯನ್ನು ಬಂದ್ ಮಾಡಲು ಆರೋಪಿ ಯತ್ನಿಸಿದ್ದ. ಆದರೆ ಡಿಸ್‌ಪ್ಲೇ ಮಾತ್ರ ಸ್ಥಗಿತಗೊಂಡಿದ್ದು, ಕ್ಯಾಮೆರಾ ನಿರಂತರವಾಗಿ ರೆಕಾರ್ಡ್ ಮಾಡುತ್ತಿತ್ತು. ಪರಿಣಾಮ ಅಂಗಡಿಯೊಳಗಿಂದ ಚಿನ್ನಾಭರಣ ಹಾಗೂ ನಗದನ್ನು ತೆಗೆದು ಸ್ಕೂಟಿಯ ಡಿಕ್ಕಿಗೆ ಸಾಗಿಸುತ್ತಿರುವ ದೃಶ್ಯಗಳು ಪೊಲೀಸರ ಕೈಗೆ ಸಿಕ್ಕಿವೆ. ವಿಚಾರಣೆ ವೇಳೆ ಕೃಷ್ಣಾನಂದ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಆರೋಪಿಯಿಂದ 519.8 ಗ್ರಾಂ ಚಿನ್ನಾಭರಣ, 31 ಗ್ರಾಂ ಬೆಳ್ಳಿ ಆಭರಣ, 2.83 ಲಕ್ಷ ರೂ. ನಗದು ಹಾಗೂ ಸ್ಕೂಟಿ ಸೇರಿ ಒಟ್ಟು 65.95 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಳ್ಳತನದ ಸುಳ್ಳು ದೂರು, ವಿಮೆ ವಂಚನೆ ಹಾಗೂ ಇತರೆ ಕಾನೂನು ಉಲ್ಲಂಘನೆಗಳ ಕುರಿತು ಖಡೇಬಜಾರ್ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

40 ಮಿಲಿಯನ್ ಡೌನ್ ಲೋಡ್ ಮೈಲಿಗಲ್ಲು ದಾಟಿದ ಆಧಾರ್ ಆ್ಯಪ್! ಡಿಜಿಟಲ್ ಸೇವೆ ಮತ್ತಷ್ಟು ಸುಲಭ

0

ನವದೆಹಲಿ: ಸರ್ಕಾರಿ ಬೆಂಬಲಿತ ಆಧಾರ್ ಅಪ್ಲಿಕೇಶನ್ 4 ಕೋಟಿ ಡೌನ್‌ಲೋಡ್‌ಗಳ ಮೈಲಿಗಲ್ಲನ್ನು ದಾಟಿದೆ. ಈ ಸಾಧನೆಯು ದೇಶದಲ್ಲಿ ಡಿಜಿಟಲ್ ಗುರುತಿನ ಸೇವೆಗಳ ಬಳಕೆ ವೇಗವಾಗಿ ಹೆಚ್ಚುತ್ತಿರುವುದನ್ನು ತೋರಿಸುತ್ತದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.

ಲಕ್ಷಾಂತರ ಭಾರತೀಯ ನಿವಾಸಿಗಳು ತಮ್ಮ ಆಧಾರ್‌ಗೆ ಸಂಬಂಧಿಸಿದ ಮಾಹಿತಿಯನ್ನು ನವೀಕರಿಸಲು, ಭದ್ರತಾ ಸೆಟ್ಟಿಂಗ್‌ಗಳನ್ನು ನಿರ್ವಹಿಸಲು ಹಾಗೂ ವಿವಿಧ ಸೇವೆಗಳನ್ನು ಪಡೆಯಲು ಈ ಆ್ಯಪ್ ಬಳಸುತ್ತಿದ್ದಾರೆ. ಆಧಾರ್ ಸಂಬಂಧಿತ ಹಲವು ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ‘ಒನ್-ಸ್ಟಾಪ್ ಡಿಜಿಟಲ್ ಪ್ಲಾಟ್‌ಫಾರ್ಮ್’ ಆಗಿ ಆ್ಯಪ್ ಅಭಿವೃದ್ಧಿಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಆಧಾರ್ ಆ್ಯಪ್ ಮೂಲಕ ಬಳಕೆದಾರರು ತಮ್ಮ ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ಮನೆಯಿಂದಲೇ ಅಪ್‌ಡೇಟ್ ಮಾಡಬಹುದು. ಜೊತೆಗೆ ಬಯೋಮೆಟ್ರಿಕ್ ಮಾಹಿತಿಯನ್ನು ಲಾಕ್ ಅಥವಾ ಅನ್‌ಲಾಕ್ ಮಾಡುವುದು ಹಾಗೂ ಇ-ಆಧಾರ್ ಡೌನ್‌ಲೋಡ್ ಮಾಡುವಂತಹ ಸೌಲಭ್ಯಗಳೂ ಲಭ್ಯವಿವೆ.

ಆ್ಯಪ್ ಆರಂಭವಾದ ಬಳಿಕ ಇದುವರೆಗೆ 11.65 ಲಕ್ಷಕ್ಕೂ ಹೆಚ್ಚು ವಿಳಾಸ ಅಪ್‌ಡೇಟ್‌ಗಳನ್ನು ಪ್ರಕ್ರಿಯೆಗೊಳಿಸಲಾಗಿದೆ. ಇದರಿಂದಾಗಿ ಜನರು ಆಧಾರ್ ದಾಖಲಾತಿ ಅಥವಾ ಅಪ್‌ಡೇಟ್ ಕೇಂದ್ರಗಳಿಗೆ ಭೇಟಿ ನೀಡುವ ಅಗತ್ಯ ಕಡಿಮೆಯಾಗಿದೆ. ತಮ್ಮ ಮಾಹಿತಿಯನ್ನು ಮನೆಯಿಂದಲೇ ನವೀಕರಿಸಲು ಈ ಸೌಲಭ್ಯ ಅನುಕೂಲವಾಗಿದೆ.

ಇದೇ ವೇಳೆ, ಆ್ಯಪ್ ಮೂಲಕ ಇದುವರೆಗೆ ಸುಮಾರು 49 ಲಕ್ಷ ಮೊಬೈಲ್ ಸಂಖ್ಯೆಗಳನ್ನು ಅಪ್‌ಡೇಟ್ ಮಾಡಲಾಗಿದೆ. ಇದರಿಂದ ಬಳಕೆದಾರರು ತಮ್ಮ ಆಧಾರ್‌ಗೆ ಸಂಬಂಧಿಸಿದ ಸಂಪರ್ಕ ವಿವರಗಳನ್ನು ನಿಖರವಾಗಿ ಮತ್ತು ನವೀಕೃತವಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತಿದೆ.

ಜುಲೈ 1ರಂದು ಇ-ಮೇಲ್ ಅಪ್‌ಡೇಟ್ ಸೌಲಭ್ಯವನ್ನು ಆರಂಭಿಸಿದ ಬಳಿಕ ಸುಮಾರು 12.5 ಲಕ್ಷ ಇ-ಮೇಲ್ ಐಡಿಗಳನ್ನು ಸೇರಿಸಲಾಗಿದೆ ಅಥವಾ ನವೀಕರಿಸಲಾಗಿದೆ. ಈ ಸೇವೆಗೆ ಈ ಹಿಂದೆ ₹75 ಶುಲ್ಕ ವಿಧಿಸಲಾಗುತ್ತಿತ್ತು. ಆದರೆ, ಡಿಸೆಂಬರ್ 31ರವರೆಗೆ ಆಧಾರ್ ಆ್ಯಪ್ ಮೂಲಕ ಈ ಸೇವೆಯನ್ನು ಉಚಿತವಾಗಿ ಪಡೆಯಬಹುದು ಎಂದು ಸರ್ಕಾರ ತಿಳಿಸಿದೆ.

ಆ್ಯಪ್‌ನ ಗೌಪ್ಯತೆ ಮತ್ತು ಭದ್ರತಾ ವೈಶಿಷ್ಟ್ಯಗಳಿಗೂ ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಯೋಮೆಟ್ರಿಕ್ ಲಾಕ್/ಅನ್‌ಲಾಕ್ ಸೌಲಭ್ಯವನ್ನು ಇದುವರೆಗೆ 1.91 ಕೋಟಿ ಬಾರಿ ಬಳಸಲಾಗಿದೆ. ಈ ವೈಶಿಷ್ಟ್ಯದ ಮೂಲಕ ಆಧಾರ್ ಹೊಂದಿರುವವರು ತಮ್ಮ ಬಯೋಮೆಟ್ರಿಕ್ ಮಾಹಿತಿಯನ್ನು ತಕ್ಷಣವೇ ಲಾಕ್ ಅಥವಾ ಅನ್‌ಲಾಕ್ ಮಾಡಬಹುದು. ಇದರಿಂದ ವೈಯಕ್ತಿಕ ಮಾಹಿತಿಯ ದುರುಪಯೋಗದ ಅಪಾಯವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.

ಆಧಾರ್ ಸಂಖ್ಯೆ ಹೊಂದಿರುವವರು ತಮ್ಮ ಗುರುತನ್ನು ಸುಲಭವಾಗಿ, ಸುರಕ್ಷಿತವಾಗಿ ಮತ್ತು ಗೌಪ್ಯತೆಗೆ ಆದ್ಯತೆ ನೀಡುವ ರೀತಿಯಲ್ಲಿ ಪ್ರದರ್ಶಿಸಲು, ಹಂಚಿಕೊಳ್ಳಲು ಹಾಗೂ ಪರಿಶೀಲಿಸಲು ಅನುಕೂಲವಾಗುವಂತೆ ಆ್ಯಪ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಡಿಜಿಟಲ್ ಇಂಡಿಯಾ ಮಿಷನ್ ಅಡಿಯಲ್ಲಿ ‘ವಿಕ್ಷಿತ್ ಭಾರತ್’ ಗುರಿಯನ್ನು ಮುನ್ನಡೆಸುವಲ್ಲಿ ಮತ್ತು ಜನರ ದೈನಂದಿನ ಜೀವನವನ್ನು ಮತ್ತಷ್ಟು ಸುಲಭಗೊಳಿಸುವಲ್ಲಿ ಆಧಾರ್ ಆ್ಯಪ್ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಸರ್ಕಾರ ಹೇಳಿದೆ.

ಇದೇ ತಿಂಗಳ ಆರಂಭದಲ್ಲಿ ಆಧಾರ್ ಆ್ಯಪ್‌ನಲ್ಲಿ ಇ-ಮೇಲ್ ಐಡಿ ಅಪ್‌ಡೇಟ್ ಸೌಲಭ್ಯ ಆರಂಭಿಸಿದ ಕೇವಲ ಎರಡು ದಿನಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಆಧಾರ್ ದಾಖಲೆಗಳಲ್ಲಿ ಇ-ಮೇಲ್ ವಿಳಾಸವನ್ನು ನವೀಕರಿಸಿದ್ದರು.

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಇದೀಗ ಆಧಾರ್ ಹೊಂದಿರುವವರಿಗೆ ಆ್ಯಪ್ ಮೂಲಕ ನೇರವಾಗಿ ತಮ್ಮ ಇ-ಮೇಲ್ ಐಡಿಯನ್ನು ಸೇರಿಸಲು ಅಥವಾ ಅಪ್‌ಡೇಟ್ ಮಾಡಲು ಅವಕಾಶ ನೀಡಿದೆ. ಇದರಿಂದಾಗಿ ಈ ಸೌಲಭ್ಯಕ್ಕಾಗಿ ಆಧಾರ್ ದಾಖಲಾತಿ ಅಥವಾ ಅಪ್‌ಡೇಟ್ ಕೇಂದ್ರಕ್ಕೆ ಭೇಟಿ ನೀಡುವ ಅಗತ್ಯವಿಲ್ಲ.

Chitradurga News: ಬೀದಿ ನಾಯಿಗಳ ಅಟ್ಟಹಾಸ; ನಾಲ್ವರು ಪುಟ್ಟ ಮಕ್ಕಳ ಮೇಲೆ ದಾಳಿ! ನಗರಸಭೆ ವಿರುದ್ಧ ಪೋಷಕರ ಆಕ್ರೋಶ

ಚಿತ್ರದುರ್ಗ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮತ್ತೆ ಆತಂಕ ಮೂಡಿಸಿದೆ.

ಪ್ರತ್ಯೇಕ ಎರಡು ಘಟನೆಗಳಲ್ಲಿ ನಾಲ್ವರು ಪುಟ್ಟ ಮಕ್ಕಳು ಬೀದಿ ನಾಯಿಗಳ ದಾಳಿಗೆ ಒಳಗಾಗಿ ಗಾಯಗೊಂಡಿದ್ದಾರೆ.

ನಗರದ ಚೇಳಗುಡ್ಡ ಹಾಗೂ ನೆಹರು ನಗರ ಬಡಾವಣೆಯಲ್ಲಿ ಈ ಘಟನೆಗಳು ನಡೆದಿವೆ. ಮನೆ ಮುಂದೆ ಆಟವಾಡುತ್ತಿದ್ದ 5ರಿಂದ 6 ವರ್ಷದ ಮಕ್ಕಳ ಮೇಲೆ ಏಕಾಏಕಿ ಬೀದಿ ನಾಯಿಗಳು ದಾಳಿ ನಡೆಸಿವೆ.

ನಾಯಿಗಳ ದಾಳಿಯಿಂದ ಮಕ್ಕಳ ಮುಖ, ಕೈ, ಕಾಲು ಸೇರಿದಂತೆ ದೇಹದ ಹಲವು ಭಾಗಗಳಿಗೆ ಗಾಯಗಳಾಗಿವೆ. ಗಾಯಗೊಂಡ ಆಲೀನಾ, ಆದಿಲ್, ಮನ್ವಿತ್ ಹಾಗೂ ಮತ್ತೋರ್ವ ಬಾಲಕನಿಗೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.

ನಗರಸಭೆ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ಕರೆತಂದಾಗ ನಾಯಿ ಕಡಿತಕ್ಕೆ ನೀಡುವ ಅಗತ್ಯ ಇಂಜೆಕ್ಷನ್ ಕೂಡ ತಕ್ಷಣ ಲಭ್ಯವಾಗಲಿಲ್ಲ ಎಂದು ಪೋಷಕರು ದೂರಿದ್ದಾರೆ.

Vijayanagara News: ರೈತನಿಂದ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ!

ವಿಜಯನಗರ: ರೈತನಿಂದ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಮಹಿಳಾ ಗ್ರಾಮ ಲೆಕ್ಕಾಧಿಕಾರಿಯೊಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿರುವ ಘಟನೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ.

ಬಂಧಿತ ಮಹಿಳಾ ಅಧಿಕಾರಿಯನ್ನು ಹೊಳಗುಂದಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಶಹನಾಜ್ ಬೇಗಂ ಎಂದು ಗುರುತಿಸಲಾಗಿದೆ.

ಕೊಟ್ಟೂರು ಗ್ರಾಮದ ರೈತ ಸಿದ್ಧಲಿಂಗಸ್ವಾಮಿ ಅವರು ಪಹಣಿ ತಿದ್ದುಪಡಿ ಮಾಡಿಸಲು ಬಂದಾಗ, ಕೆಲಸ ಮಾಡಿಕೊಡಲು 10 ಸಾವಿರ ರೂಪಾಯಿ ಲಂಚ ನೀಡುವಂತೆ ಶಹನಾಜ್ ಬೇಗಂ ಕೇಳಿದ್ದರು ಎನ್ನಲಾಗಿದೆ.

ಈ ಕುರಿತು ರೈತರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಹಣ ಸ್ವೀಕರಿಸುತ್ತಿದ್ದ ವೇಳೆ ಶಹನಾಜ್ ಬೇಗಂ ಅವರನ್ನು ಸ್ಥಳದಲ್ಲೇ ಹಿಡಿದಿದ್ದಾರೆ.

ವಿಜಯನಗರ ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಸಚಿನ್ ಛಲವಾದಿ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ಗಳಾದ ರಾಜೇಶ್ ಲಮಾಣಿ ಹಾಗೂ ಅಮರೇಶ್ ಹುಬ್ಬಳ್ಳಿ ಅವರ ತಂಡ ದಾಳಿ ನಡೆಸಿದೆ.

ಸದ್ಯ ಮಹಿಳಾ ಅಧಿಕಾರಿಯನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.

ಜೈಲಿನಿಂದ ಸಿಎಂವರೆಗೆ ವಿಜಯ್ ಜರ್ನಿ: ‘ಜನ ನಾಯಗನ್’ ಟೀಸರ್ ವೈರಲ್

ಚೆನ್ನೈ: ದಳಪತಿ ವಿಜಯ್ ಅವರ ಸಿನಿ ಪಯಣದ ಕೊನೆಯ ಅಧ್ಯಾಯವೆಂದು ಬಣ್ಣಿಸಲಾಗುತ್ತಿರುವ ‘ಜನ ನಾಯಗನ್’ ಸಿನಿಮಾ ಬಿಡುಗಡೆಯ ಕ್ಷಣಗಣನೆ ಆರಂಭವಾಗಿದೆ. ಜುಲೈ 23ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿರುವ ಚಿತ್ರದ ಅನೌನ್ಸ್‌ಮೆಂಟ್ ಟೀಸರ್ ಬಿಡುಗಡೆಯಾಗುತ್ತಿದ್ದಂತೆಯೇ ಅಭಿಮಾನಿಗಳಲ್ಲಿ ಭಾರೀ ಸಂಭ್ರಮ ಮನೆ ಮಾಡಿದೆ.

ಕೆವಿಎನ್ ಪ್ರೊಡಕ್ಷನ್ಸ್ ಬಿಡುಗಡೆ ಮಾಡಿರುವ 18 ಸೆಕೆಂಡುಗಳ ಟೀಸರ್‌ನಲ್ಲಿ ವಿಜಯ್ ಆ್ಯಕ್ಷನ್ ಮೋಡ್‌ನಲ್ಲಿ ಮಿಂಚಿದ್ದು, ಗನ್ ಹಿಡಿದು ಖಳರ ವಿರುದ್ಧ ಹೋರಾಡುವ ದೃಶ್ಯಗಳು ಮತ್ತು ಪೊಲೀಸ್ ಪಡೆಯ ನಡುವೆ ಕಾಣಿಸಿಕೊಳ್ಳುವ ಸನ್ನಿವೇಶಗಳು ಗಮನ ಸೆಳೆಯುತ್ತವೆ. ಆದರೆ ಜೈಲು ಕೈದಿ ಉಡುಪಿನಿಂದ ನೇರವಾಗಿ ಮುಖ್ಯಮಂತ್ರಿಯ ಬಿಳಿ ಶರ್ಟ್–ಕಪ್ಪು ಜಾಕೆಟ್ ಲುಕ್‌ಗೆ ಬದಲಾಗುವ ದೃಶ್ಯವೇ ಟೀಸರ್‌ನ ಪ್ರಮುಖ ಆಕರ್ಷಣೆಯಾಗಿದೆ.

ತಮಿಳುನಾಡಿನ ಮುಖ್ಯಮಂತ್ರಿಯಾದ ಬಳಿಕ ಬಿಡುಗಡೆಯಾಗುತ್ತಿರುವ ವಿಜಯ್ ಅವರ ಮೊದಲ ಸಿನಿಮಾ ಎಂಬ ಕಾರಣಕ್ಕೆ ಚಿತ್ರದ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. “ಇದು ನಟ ವಿಜಯ್‌ಗೆ ಕೊನೆಯ ಸಲ್ಯೂಟ್”, “ಒನ್ ಲಾಸ್ಟ್ ಡ್ಯಾನ್ಸ್”, “ಬಾಕ್ಸ್ ಆಫೀಸ್ ದಾಖಲೆ ಮುರಿಯಲಿದೆ” ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ಹೆಚ್. ವಿನೋದ್ ನಿರ್ದೇಶನದ ಈ ಚಿತ್ರ ಹಲವು ಅಡೆತಡೆಗಳನ್ನು ದಾಟಿ ತೆರೆಗೆ ಬರುತ್ತಿದೆ. ಸಂಕ್ರಾಂತಿ ಬಿಡುಗಡೆ ಯೋಜನೆ ಸೆನ್ಸಾರ್ ಪ್ರಕ್ರಿಯೆಯಿಂದ ಮುಂದೂಡಲ್ಪಟ್ಟಿದ್ದು, ಬಳಿಕ ಕಾನೂನು ಹೋರಾಟದ ನಂತರ ‘ಎ’ ಪ್ರಮಾಣಪತ್ರ ಪಡೆದುಕೊಂಡಿದೆ. ಇದರ ಮಧ್ಯೆಯೇ ಚಿತ್ರದ ಎಚ್‌ಡಿ ಪ್ರಿಂಟ್ ಸೋರಿಕೆಯಾಗಿದ್ದ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

2023ರ ‘ಭಗವಂತ್ ಕೇಸರಿ’ ಚಿತ್ರದ ಭಾಗಶಃ ರಿಮೇಕ್ ಎನ್ನಲಾಗುತ್ತಿರುವ ‘ಜನ ನಾಯಗನ್’ ಚಿತ್ರದಲ್ಲಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್ ಮತ್ತು ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ವರ್ಷದ ಬಹು ನಿರೀಕ್ಷಿತ ಬಿಡುಗಡೆಯಾಗಿ ಗುರುತಿಸಿಕೊಂಡಿದೆ.

Bengaluru Metro Update: ಹಸಿರು ಮಾರ್ಗದಲ್ಲಿ ತಾಂತ್ರಿಕ ದೋಷ; 45 ನಿಮಿಷಗಳ ಬಳಿಕ ಮೆಟ್ರೋ ಸಂಚಾರ ಪುನರಾರಂಭ

ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ವಿದ್ಯುತ್ ಪೂರೈಕೆಯಲ್ಲಿನ ತಾಂತ್ರಿಕ ದೋಷದಿಂದಾಗಿ ಇಂದು ಬೆಳಗ್ಗೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.

ಬೆಳಗ್ಗೆ 8 ಗಂಟೆ ಸುಮಾರಿಗೆ ಸಮಸ್ಯೆ ಕಾಣಿಸಿಕೊಂಡಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.

ವಿದ್ಯುತ್ ಸಮಸ್ಯೆಯಿಂದಾಗಿ ಹಸಿರು ಮಾರ್ಗದ ಸಿಲ್ಕ್ ಇನ್‌ಸ್ಟಿಟ್ಯೂಟ್‌ನಿಂದ ಯಶವಂತಪುರದವರೆಗೆ ಮಾತ್ರ ಶಾರ್ಟ್-ಲೂಪ್ ಸೇವೆಯಲ್ಲಿ ರೈಲು ಸಂಚಾರ ನಡೆಸಲಾಗಿತ್ತು.

ಯಶವಂತಪುರದಿಂದ ಮಾದಾವರ (ನಾಗಸಂದ್ರ ವಿಸ್ತರಿತ ಮಾರ್ಗ) ನಡುವಿನ 10 ನಿಲ್ದಾಣಗಳಲ್ಲಿ ಮೆಟ್ರೋ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ತಾಂತ್ರಿಕ ದೋಷ ಸರಿಪಡಿಸಲು ಬಿಎಂಆರ್‌ಸಿಎಲ್  ತುರ್ತು ಕ್ರಮ ಕೈಗೊಂಡಿದ್ದು, ಇದೀಗ ಬೆಳಗ್ಗೆ 8.45ರ ವೇಳೆಗೆ ಮೆಟ್ರೋ ಸಂಚಾರ ಮತ್ತೆ ಆರಂಭಗೊಂಡಿದೆ.

ಈ ಕುರಿತು ಬಿಎಂಆರ್‌ಸಿಎಲ್, ತಾಂತ್ರಿಕ ದೋಷವನ್ನು ಸರಿಪಡಿಸಲು ಸಿಬ್ಬಂದಿ ತುರ್ತು ಕಾರ್ಯಾಚರಣೆ ನಡೆಸಿದ್ದು, ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದೆ.

ಹಸಿರು ಮಾರ್ಗವು ಒಟ್ಟು 33.46 ಕಿ.ಮೀ ಉದ್ದ ಹೊಂದಿದ್ದು, 32 ನಿಲ್ದಾಣಗಳ ಮೂಲಕ ನಗರದ ಉತ್ತರ ಮತ್ತು ದಕ್ಷಿಣ ಭಾಗಗಳನ್ನು ಸಂಪರ್ಕಿಸುತ್ತದೆ.

ಬೆಳಗಿನ ಪೀಕ್ ಅವರ್‌ನಲ್ಲಿ ಸಮಸ್ಯೆ ಎದುರಾದ ಕಾರಣ ಕಚೇರಿ, ಕಾಲೇಜು ಹಾಗೂ ಆಸ್ಪತ್ರೆಗಳಿಗೆ ತೆರಳುತ್ತಿದ್ದ ಸಾವಿರಾರು ಪ್ರಯಾಣಿಕರು ಯಶವಂತಪುರ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ಪರದಾಡುವಂತಾಗಿತ್ತು. ಇದೀಗ ಮೆಟ್ರೋ ಸೇವೆ ಸಹಜ ಸ್ಥಿತಿಗೆ ಮರಳಿದೆ.

ಕಣ್ಣಿನ ದೃಷ್ಟಿ ಕಾಪಾಡಲು ಅಗಸೆ ಬೀಜವೇ? ಕುಂಬಳಕಾಯಿ ಬೀಜವೇ? ಯಾವುದು ಹೆಚ್ಚು ಪ್ರಯೋಜನಕಾರಿ ಎಂಬುದು ಇಲ್ಲಿದೆ

0

ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ದೃಷ್ಟಿ ಮಸುಕಾಗುವುದು, ಕಣ್ಣಿನ ಆಯಾಸ, ಡ್ರೈ ಐ ಹಾಗೂ ಮೊಬೈಲ್ ಮತ್ತು ಕಂಪ್ಯೂಟರ್ ಬಳಕೆಯಿಂದ ಉಂಟಾಗುವ ಡಿಜಿಟಲ್ ಐ ಸ್ಟ್ರೇನ್ ಸಮಸ್ಯೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಲವರು ನೈಸರ್ಗಿಕ ಪರಿಹಾರಗಳ ಮೊರೆ ಹೋಗುತ್ತಿದ್ದಾರೆ. ಕೆಲವರು ಕೆಲವು ಆಹಾರಗಳನ್ನು ಸೇವಿಸುವುದರಿಂದ ಕನ್ನಡಕದ ಅಗತ್ಯವೇ ಇರುವುದಿಲ್ಲ ಎಂಬ ನಂಬಿಕೆಯನ್ನೂ ಹೊಂದಿದ್ದಾರೆ.

ಆರೋಗ್ಯ ತಜ್ಞರ ಪ್ರಕಾರ, ಕೆಲವು ಪೌಷ್ಟಿಕ ಆಹಾರಗಳು ಕಣ್ಣಿನ ಆರೋಗ್ಯವನ್ನು ಕಾಪಾಡಲು ಮತ್ತು ಕೆಲವು ದೃಷ್ಟಿ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಅದರಲ್ಲೂ ಅಗಸೆ ಬೀಜ ಮತ್ತು ಕುಂಬಳಕಾಯಿ ಬೀಜಗಳು ಕಣ್ಣಿನ ಆರೋಗ್ಯಕ್ಕೆ ಅಗತ್ಯವಾದ ಹಲವು ಪೋಷಕಾಂಶಗಳನ್ನು ಹೊಂದಿವೆ. ಹಾಗಾದರೆ ಈ ಎರಡರಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ?

ಕಣ್ಣಿನ ಆರೋಗ್ಯಕ್ಕೆ ಅಗಸೆ ಬೀಜದ ಪ್ರಯೋಜನಗಳು

ಅಗಸೆ ಬೀಜಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು, ಫೈಬರ್, ವಿಟಮಿನ್ ಇ ಮತ್ತು ಲಿಗ್ನಾನ್ಸ್ ಸಮೃದ್ಧವಾಗಿವೆ. ಇವು ಕಣ್ಣಿನ ರೆಟಿನಾದ ಆರೋಗ್ಯವನ್ನು ಕಾಪಾಡಲು ನೆರವಾಗುವುದರ ಜೊತೆಗೆ, ಡ್ರೈ ಐ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.

ಒಮೆಗಾ-3 ಕೊಬ್ಬಿನಾಮ್ಲಗಳು ಕಣ್ಣಿನ ಉರಿಯೂತವನ್ನು ಕಡಿಮೆ ಮಾಡುವುದರ ಜೊತೆಗೆ ಕಣ್ಣೀರಿನ ಗುಣಮಟ್ಟವನ್ನು ಸುಧಾರಿಸಲು ಸಹಕಾರಿಯಾಗಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ. ಆದರೆ ಅಗಸೆ ಬೀಜ ಸೇವನೆಯಿಂದ ಕನ್ನಡಕದ ಸಂಖ್ಯೆ ಕಡಿಮೆಯಾಗುತ್ತದೆ ಅಥವಾ ಕನ್ನಡಕದ ಅಗತ್ಯವೇ ಇರುವುದಿಲ್ಲ ಎಂಬುದಕ್ಕೆ ಯಾವುದೇ ಖಚಿತವಾದ ವೈಜ್ಞಾನಿಕ ಸಾಕ್ಷ್ಯವಿಲ್ಲ.

ಕುಂಬಳಕಾಯಿ ಬೀಜದಿಂದ ಕಣ್ಣಿಗೆ ಸಿಗುವ ಪ್ರಯೋಜನಗಳು

ಕುಂಬಳಕಾಯಿ ಬೀಜಗಳಲ್ಲಿ ಜಿಂಕ್, ಮೆಗ್ನೀಷಿಯಂ, ವಿಟಮಿನ್ ಇ ಹಾಗೂ ವಿವಿಧ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಕಣ್ಣಿನ ರೆಟಿನಾದ ಸಾಮಾನ್ಯ ಕಾರ್ಯನಿರ್ವಹಣೆಗೆ ಜಿಂಕ್ ಪ್ರಮುಖ ಪೋಷಕಾಂಶವಾಗಿದೆ. ವಯೋಸಹಜವಾಗಿ ಉಂಟಾಗುವ ಕೆಲವು ದೃಷ್ಟಿ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುವಲ್ಲಿಯೂ ಇದು ಸಹಾಯ ಮಾಡಬಹುದು.

ಕುಂಬಳಕಾಯಿ ಬೀಜಗಳನ್ನು ಹುರಿದು ನೇರವಾಗಿ ಸೇವಿಸಬಹುದು. ಅಲ್ಲದೆ ಸಲಾಡ್, ಮೊಸರು, ಸ್ಮೂಥಿ ಅಥವಾ ಓಟ್ಸ್‌ಗೆ ಸೇರಿಸಿಕೊಂಡು ಕೂಡ ಸೇವಿಸಬಹುದು.

ಕಣ್ಣಿನ ಆರೋಗ್ಯಕ್ಕೆ ಸಹಾಯ ಮಾಡುವ ಇತರ ಆಹಾರಗಳು

ಕೇವಲ ಅಗಸೆ ಬೀಜ ಮತ್ತು ಕುಂಬಳಕಾಯಿ ಬೀಜಗಳಷ್ಟೇ ಅಲ್ಲದೆ, ಇತರ ಕೆಲವು ಪೌಷ್ಟಿಕ ಆಹಾರಗಳನ್ನೂ ಆಹಾರದಲ್ಲಿ ಸೇರಿಸಿಕೊಳ್ಳುವುದು ಕಣ್ಣಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಬಹುದು.

  • ಕ್ಯಾರೆಟ್: ಬೀಟಾ ಕ್ಯಾರೋಟಿನ್‌ನ ಉತ್ತಮ ಮೂಲ
  • ಪಾಲಕ್, ಮೆಂತೆ ಮತ್ತು ಇತರ ಸೊಪ್ಪುಗಳು: ಲ್ಯೂಟಿನ್ ಮತ್ತು ಜಿಯಾಕ್ಸಾಂಥಿನ್ ಸಮೃದ್ಧ
  • ಮೊಟ್ಟೆ: ಕಣ್ಣಿನ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿದೆ
  • ಮೀನು: ಸ್ಯಾಲ್ಮನ್ ಮತ್ತು ಸಾರ್ಡಿನ್‌ಗಳಲ್ಲಿ ಒಮೆಗಾ-3 ಸಮೃದ್ಧವಾಗಿದೆ
  • ಕಿತ್ತಳೆ ಮತ್ತು ನಿಂಬೆ: ವಿಟಮಿನ್ ಸಿ ಉತ್ತಮ ಮೂಲ
  • ಬಾದಾಮಿ ಮತ್ತು ವಾಲ್ನಟ್: ಆರೋಗ್ಯಕರ ಕೊಬ್ಬುಗಳು ಮತ್ತು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿವೆ
  • ಸಿಹಿ ಗೆಣಸು: ಬೀಟಾ ಕ್ಯಾರೋಟಿನ್ ಸಮೃದ್ಧ ಆಹಾರ

ದೃಷ್ಟಿ ಮಸುಕಾಗಲು ಪ್ರಮುಖ ಕಾರಣಗಳೇನು?

ದೃಷ್ಟಿ ಮಸುಕಾಗಲು ಹಲವು ಕಾರಣಗಳಿರಬಹುದು. ಸಮೀಪದೃಷ್ಟಿ ಅಥವಾ ದೂರದೃಷ್ಟಿ, ಡ್ರೈ ಐ ಸಿಂಡ್ರೋಮ್, ಮಧುಮೇಹದಿಂದ ಉಂಟಾಗುವ ಕಣ್ಣಿನ ಸಮಸ್ಯೆಗಳು, ಕ್ಯಾಟರಾಕ್ಟ್, ಗ್ಲೂಕೋಮಾ ಹಾಗೂ ಹೆಚ್ಚು ಸಮಯ ಮೊಬೈಲ್ ಅಥವಾ ಕಂಪ್ಯೂಟರ್ ಬಳಸುವುದು ಪ್ರಮುಖ ಕಾರಣಗಳಾಗಿವೆ.

ದೃಷ್ಟಿ ಹಠಾತ್ ಮಸುಕಾಗುವುದು, ಕಣ್ಣಿನಲ್ಲಿ ನೋವು ಅಥವಾ ಕೆಂಪಾಗುವಿಕೆ ಕಾಣಿಸಿಕೊಳ್ಳುವುದು, ಬೆಳಕನ್ನು ಸಹಿಸಲಾಗದಿರುವುದು ಮುಂತಾದ ಲಕ್ಷಣಗಳು ಕಂಡುಬಂದರೆ ತಡಮಾಡದೆ ನೇತ್ರ ತಜ್ಞರನ್ನು ಸಂಪರ್ಕಿಸುವುದು ಅಗತ್ಯ.

ಕಣ್ಣಿನ ಆರೋಗ್ಯ ಕಾಪಾಡಲು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

  • ಪ್ರತಿ 20 ನಿಮಿಷಕ್ಕೊಮ್ಮೆ 20-20-20 ನಿಯಮ ಪಾಲಿಸಿ.
  • ಪ್ರತಿದಿನ ಕನಿಷ್ಠ 7ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಿ.
  • ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯಿರಿ.
  • ತೀವ್ರ ಸೂರ್ಯನ ಬೆಳಕಿನಲ್ಲಿ ಯುವಿ ರಕ್ಷಣೆ ಹೊಂದಿರುವ ಸನ್‌ಗ್ಲಾಸ್‌ಗಳನ್ನು ಧರಿಸಿ.
  • ವರ್ಷಕ್ಕೊಮ್ಮೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಿ.

ಒಟ್ಟಿನಲ್ಲಿ, ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವು ಕಣ್ಣಿನ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಅಗಸೆ ಬೀಜ ಅಥವಾ ಕುಂಬಳಕಾಯಿ ಬೀಜ ಸೇವನೆಯಿಂದ ಕನ್ನಡಕದ ಅಗತ್ಯವೇ ಇರುವುದಿಲ್ಲ ಎಂಬ ಮಾತಿಗೆ ವೈಜ್ಞಾನಿಕ ಆಧಾರವಿಲ್ಲ. ಸಮತೋಲನದ ಆಹಾರ, ನಿಯಮಿತ ಕಣ್ಣಿನ ತಪಾಸಣೆ ಮತ್ತು ಆರೋಗ್ಯಕರ ಜೀವನಶೈಲಿಯೇ ದೀರ್ಘಕಾಲ ಕಣ್ಣಿನ ಆರೋಗ್ಯವನ್ನು ಕಾಪಾಡುವ ಉತ್ತಮ ಮಾರ್ಗವಾಗಿದೆ.

Bangalore Power Cut: ಆನೇಕಲ್ ಭಾಗದ ಜನರಿಗೆ ಬೆಸ್ಕಾಂನಿಂದ ಮಹತ್ವದ ಮಾಹಿತಿ; ನಾಳೆ ಇರಲ್ಲ ಪವರ್!

ಆನೇಕಲ್: ಬೆಸ್ಕಾಂ ಚಂದಾಪುರ ವಿಭಾಗದ ವ್ಯಾಪ್ತಿಯಲ್ಲಿ ಬರುವ ಸಮಂದೂರು ಹಾಗೂ ಆನೇಕಲ್ ವಿದ್ಯುತ್ ಉಪ-ಕೇಂದ್ರಗಳಲ್ಲಿ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಜುಲೈ 22ರಂದು ಬುಧವಾರ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.

ಸಮಂದೂರು ವಿದ್ಯುತ್ ಉಪ-ಕೇಂದ್ರದ ವ್ಯಾಪ್ತಿಗೆ ಬರುವ ಸಮಂದೂರು, ರಾಜಾಪುರಹಳ್ಳಿ, ಗುಡ್ಡನಹಳ್ಳಿ, ಅರವಂಟಿಗೇಪುರ, ಪಿ. ಗೊಲ್ಲಹಳ್ಳಿ, ತೆಲಗರಹಳ್ಳಿ, ವಾಣಕನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಇರುವುದಿಲ್ಲ.

ಇನ್ನು ಆನೇಕಲ್ ವಿದ್ಯುತ್ ಉಪ-ಕೇಂದ್ರದ ವ್ಯಾಪ್ತಿಯ ಆನೇಕಲ್ ಪಟ್ಟಣ, ಕಾವಲುಹೊಸಹಳ್ಳಿ, ಗೋರೇನಹಳ್ಳಿ, ಹಾಳೇನಹಳ್ಳಿ, ಹೊಂಪಲಾಘಟ್ಟ, ಚೂಡೇನಹಳ್ಳಿ, ಹೊನ್ನಕಳಶಾಪುರ, ಕರ್ಮೂರು, ಬ್ಯಾಗದದೇನಹಳ್ಳಿ, ವಿ.ಬಿ.ಎಚ್.ಸಿ ಅಪಾರ್ಟ್‌ಮೆಂಟ್, ಕಾಡ ಅಗ್ರಹಾರ, ಚಿಕ್ಕಹಾಗಡೆ, ದೊಡ್ಡಹಾಗಡೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸಂಪರ್ಕ ಕಡಿತವಾಗಲಿದೆ.

ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯ ಕೆಲಸಗಳನ್ನು ಮುಂಚಿತವಾಗಿ ಪೂರ್ಣಗೊಳಿಸಿಕೊಳ್ಳಬೇಕು ಹಾಗೂ ಬೆಸ್ಕಾಂಗೆ ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ರಾಯಚೂರಿನಲ್ಲಿ ಬೀದಿ ನಾಯಿಗಳ ಅಟ್ಟಹಾಸ: 4 ವರ್ಷದ ಬಾಲಕನಿಗೆ ನಾಯಿ ಕಡಿತ!

ರಾಯಚೂರು: ಮನೆ ಮುಂದೆ ಆಟವಾಡುತ್ತಿದ್ದ 4 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ರಾಯಚೂರು ತಾಲೂಕಿನ ಮಲಿಯಾಬಾದ್ ಗ್ರಾಮದಲ್ಲಿ ನಡೆದಿದೆ.

ಮಲಿಯಾಬಾದ್ ಗ್ರಾಮದ ವೇಣುಗೋಪಾಲ್ ಎಂಬ ಬಾಲಕ ಬೀದಿ ನಾಯಿಗಳ ದಾಳಿಗೆ ಒಳಗಾಗಿದ್ದಾನೆ.

ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಏಕಾಏಕಿ ಬಂದ ಬೀದಿ ನಾಯಿಗಳು ಬಾಲಕನ ಮೇಲೆ ದಾಳಿ ನಡೆಸಿವೆ. ದಾಳಿಯಲ್ಲಿ ಬಾಲಕನ ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ.

ತಕ್ಷಣ ಬಾಲಕನನ್ನು ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬೀದಿ ನಾಯಿಗಳ ಹಾವಳಿಯಿಂದ ಮಕ್ಕಳನ್ನು ಹೊರಗೆ ಬಿಡಲು ಪೋಷಕರು ಭಯಪಡುತ್ತಿದ್ದಾರೆ.

ಈ ಘಟನೆ ಯರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.