Home Blog

ಮದುವೆ ಮನೆಯಲ್ಲಿ ಹಿಂಸಾಚಾರ! ಗರ್ಭಿಣಿ ಪತ್ನಿಯ ಎದುರೇ ವಧುವಿನ ಸೋದರ ಸಂಬಂಧಿ ಹತ್ಯೆ

0

ಛತ್ತೀಸ್​ಗಢ:- ಛತ್ತೀಸ್‌ಗಢದ ಒಂದು ಗ್ರಾಮದಲ್ಲಿ ಮದುವೆಯ ಸಂಭ್ರಮ ದುರ್ಘಟನೆಯಾಗಿ ಮಾರ್ಪಟ್ಟಿದೆ.

ಮದುವೆಯಾದ ಕೇವಲ 24 ಗಂಟೆಗಳಲ್ಲೇ, ವಧುವಿನ ಸೋದರಸಂಬಂಧಿ ನೀರಜ್ ಠಾಕೂರ್ ಅವರನ್ನು ಗರ್ಭಿಣಿ ಪತ್ನಿಯ ಎದುರೇ ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಪೊಲೀಸರ ಪ್ರಕಾರ, ಪೂಜಾ ಮತ್ತು ತಿಲಕ್ ಸಾಹು ಕುಟುಂಬದ ಒಪ್ಪಿಗೆಯಿಲ್ಲದೆ ದೇವಸ್ಥಾನದಲ್ಲಿ ವಿವಾಹವಾದರು. ಈ ವಿಚಾರ ತಿಳಿದ ಕೂಡಲೇ ಎರಡೂ ಕುಟುಂಬಗಳ ನಡುವೆ ಜಗಳ ಶುರುವಾಯಿತು. ಮಧ್ಯಪ್ರವೇಶಿಸಿ ಜಗಳ ಶಮನಗೊಳಿಸಲು ಪ್ರಯತ್ನಿಸಿದ ನೀರಜ್ ಠಾಕೂರ್ ಮೇಲೆ ತಿಲಕ್‌ನ ಸ್ನೇಹಿತರು ದೊಣ್ಣೆ ಮತ್ತು ಚಾಕುವಿನಿಂದ ಹಲ್ಲೆ ನಡೆಸಿದರು.

ಗಂಭೀರ ಗಾಯಗೊಂಡ ಠಾಕೂರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಅಲ್ಲಿ ಪ್ರಾಣ ಬಿಟ್ಟರು. ಈ ಪ್ರಕರಣದಲ್ಲಿ ಮೂವರು ಬಾಲ ಅಪರಾಧಿಗಳು ಸೇರಿ ಒಟ್ಟು ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕದಲ್ಲಿ ಮಳೆ ಚುರುಕು: ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ!

0

ಬೆಂಗಳೂರು: ಕರ್ನಾಟಕದಾದ್ಯಂತ ಮಳೆ ಮತ್ತೆ ಚುರುಕುಗೊಂಡಿದ್ದು, ಅಕ್ಟೋಬರ್‌ 25ರವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಘೋಷಿಸಿದೆ.

ಮುಂದಿನ ನಾಲ್ಕು ದಿನಗಳಲ್ಲಿ ದಕ್ಷಿಣ ಹಾಗೂ ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಲ್ಲಿ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಗಂಟೆಗೆ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಎಚ್ಚರಿಕೆ ನೀಡಲಾಗಿದೆ.

ಸಂಜೆ ನಂತರ ರಾಜ್ಯದ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಕೆಲವೆಡೆ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸಬಹುದು ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಪೋಷಕರಿಗೆ ಕರೆ ಮಾಡಿದ ವಿದ್ಯಾರ್ಥಿಗೆ ಮುಖ್ಯ ಶಿಕ್ಷಕನ ಹಲ್ಲೆ – ಕ್ರೌರ್ಯದ ವೀಡಿಯೋ ವೈರಲ್!

0

ಚಿತ್ರದುರ್ಗ: ಪೋಷಕರಿಗೆ ಕರೆ ಮಾಡಿದ ವಿದ್ಯಾರ್ಥಿಯ ಮೇಲೆ ಮುಖ್ಯ ಶಿಕ್ಷಕನಿಂದ ಹಲ್ಲೆ ನಡೆದಿರುವ ಅಮಾನುಷ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ನಡೆದಿದೆ. ಈ ಕ್ರೌರ್ಯದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗ್ರಾಮದಲ್ಲಿರುವ ಗುರು ತಿಪ್ಪೇರುದ್ರಸ್ವಾಮಿ ದೇಗುಲದ ವೇದಾಧ್ಯಯನ ಶಾಲೆಯಲ್ಲಿ ಉತ್ತರ ಕರ್ನಾಟಕ ಮೂಲದ ವಿದ್ಯಾರ್ಥಿಯೊಬ್ಬ ಓದುತ್ತಿದ್ದಾನೆ. ಆತನು ದೂರದ ಊರಿನಲ್ಲಿರುವ ತನ್ನ ಪೋಷಕರಿಗೆ ಬೇರೊಬ್ಬರ ಮೊಬೈಲ್‌ನಿಂದ ಕರೆ ಮಾಡಿದ ಕಾರಣಕ್ಕೆ ಮುಖ್ಯ ಶಿಕ್ಷಕ ವೀರೇಶ್ ಹಿರೇಮಠ್ ಆಕ್ರೋಶಗೊಂಡು ವಿದ್ಯಾರ್ಥಿಗೆ ಹಲ್ಲೆ ನಡೆಸಿದ್ದಾನೆ.

ಶಿಕ್ಷಕ ವಿದ್ಯಾರ್ಥಿಯ ಕಾಲಿಗೆ ಒದ್ದಾಡಿ ಕ್ರೌರ್ಯ ಮೆರೆದಿದ್ದು, ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಇದೀಗ ವೀಡಿಯೋ ವೈರಲ್ ಆಗಿ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಘಟನೆ ಬಳಿಕ ಆರೋಪಿಯು ನಾಪತ್ತೆಯಾಗಿದ್ದಾನೆ. ಈ ಕುರಿತು ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಜಾರ ಸಮಾಜದ ಪರಿಸರಸ್ನೇಹಿ ‘ದವಾಳಿ’

ಬಂಜಾರರು ದೀಪಾವಳಿಯನ್ನು ವಿಶೇಷ ಮತ್ತು ಸಂಪ್ರದಾಯಬದ್ಧ ರೀತಿಯಲ್ಲಿ ಆಚರಿಸುತ್ತಾರೆ. ಈ ಹಬ್ಬದ ಆಚರಣೆಗಳಲ್ಲಿ ಯುವತಿಯರು ಮತ್ತು ಮಹಿಳೆಯರ ಪಾತ್ರ ದೊಡ್ಡದು. ಅವರು ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ, ಹಾಡುತ್ತಾ, ನೃತ್ಯ ಮಾಡುತ್ತಾ ಹಬ್ಬವನ್ನು ಸಂಭ್ರಮಿಸುತ್ತಾರೆ. ಪಟಾಕಿ ಬದಲಿಗೆ ಪರಿಸರ ಸ್ನೇಹಿ ಆಚರಣೆಗಳಾದ ಎತ್ತುಗಳಿಗೆ ಅಲಂಕಾರ ಮಾಡುವುದು, ಕಣಗಲ ಹೂವು, ಶೇಂಗಾ, ಜೋಳ ಮುಂತಾದವುಗಳನ್ನು ಸಂಗ್ರಹಿಸುವುದು, ಸಪ್ತ ಮಾತೃಕೆಯರ ಪೂಜೆ, ಮತ್ತು ಪೂರ್ವಿಕರಿಗೆ ಗೌರವ ಸಲ್ಲಿಸುವುದು ಇವರ ಆಚರಣೆಗಳ ವಿಶೇಷತೆ.

ಅಭ್ಯಂಜನ, ಹೋಳಿಗೆ ಊಟ, ಪಟಾಕಿಗಳ ಚಿತ್ತಾರ… ದೀಪಾವಳಿ ಎಂದೊಡನೆ ಮನಸ್ಸಿನಲ್ಲಿ ಸುಳಿಯುವ ಚಿತ್ರಗಳಿವು. ಆದರೆ, ಇಂಥ ಆಚರಣೆಗಳಿಂದ ಹೊರತಾಗಿರುವ, ಬಂಜಾರರು ಆಚರಿಸುವ ‘ದವಾಳಿ’ ಹಬ್ಬವು ಪ್ರಕೃತಿಯ ಆರಾಧನೆ, ಹಿರಿಯರ ಸ್ಮರಣೆ, ಪರಸ್ಪರ ಹಂಚಿ ತಿನ್ನುವ ಗುಣ, ಸಕಲರಿಗೂ ಲೇಸು ಬಯಸುವ ಕಾರಣದಿಂದಾಗಿ ವಿಭಿನ್ನವಾಗಿ ಕಾಣುತ್ತದೆ.

ರಂಗು ರಂಗಿನ ಉಡುಪು ಮತ್ತು ವಿಶಿಷ್ಠ ಭಾಷೆಯ ಕಾರಣಕ್ಕಾಗಿ ಥಟ್ಟನೆ ಗಮನ ಸೆಳೆಯುವ ಬಂಜಾರರು (ಲಂಬಾಣಿ) ಮೂಲತಃ ಬುಡಕಟ್ಟು ಸಮುದಾಯದವರು. ಸಿಂಧು ಕಣಿವೆಯ ನಾಗರಿಕತೆಯೊಂದಿಗೆ ನಂಟು ಹೊಂದಿರುವಅಂತ ಈ ಸಮುದಾಯ ವಿಶ್ವದ 114 ದೇಶಗಳಲ್ಲಿ ಲಂಬಾಣಿ, ಲಮಾಣಿ, ಲಬಾನ್, ಸುಗಾಲಿ ಹೀಗೆ ನಾನಾ ಹೆಸರುಗಳಲ್ಲಿ ಹರಿದು ಹಂಚಿ ಹೋಗಿದೆ. ಆಧುನಿಕ ಕಾಲಘಟ್ಟದಲ್ಲೂ ತಮ್ಮ ಸಾಂಸ್ಕೃತಿಕ ಅಸ್ಮಿತೆಯನ್ನು ಜೋಪಾನವಾಗಿರಿಸಿಕೊಂಡಿರುವ ಈ ಸಮುದಾಯದವರ ವಿಭಿನ್ನ ಆಚರಣೆಗಳು ಇಂದಿಗೂ ಗಮನ ಸೆಳೆಯುತ್ತವೆ. ಅಂಥ ಆಚರಣೆಗಳಲ್ಲಿ ವಿಶಿಷ್ಟವಾದದ್ದು ಬಂಜಾರರ ‘ದವಾಳಿ’ ಅರ್ಥಾತ್ ದೀಪಾವಳಿ.

ಪ್ರಕೃತಿ ಜತೆಗಿನ ಪ್ರೀತಿ, ಹಿರಿಯರ ಸ್ಮರಣೆ, ಪರಸ್ಪರ ಹಂಚಿ ತಿನ್ನುವ ಗುಣ, ಜಾನುವಾರುಗಳೆಡೆಗಿನ ಪ್ರೇಮ ಹಾಗೂ ಸಕಲರಿಗೂ ಲೇಸು ಬಯಸುವ ಗುಣ ಇವರು ಆಚರಿಸುವ ದವಾಳಿಯ ವಿಶೇಷ. ಕಾಳಿ ಆಮಾಸ್, ನಸಾಬ್, ಧಬುಕಾರ್, ಮೇರಾ, ಫೂಲ್ ತೋಡನ್, ಗೊದಣೋ, ಸಳೋಯಿ ಸೇವನೆ ಲಂಬಾಣಿಗರ ದವಾಳಿಯ ವಿಶಿಷ್ಟ ಆಚರಣೆಗಳು. ರಾಜ್ಯದ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಸೇರಿದಂತೆ ಇತರ ಭಾಗಗಳಲ್ಲಿ ದವಾಳಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ.

ಕಾಳಿ ಅಮಾಸ್ ದಿನ ಬಂಜಾರರು ಸಾಮೂಹಿಕವಾಗಿ ಬೇಟೆಯಾಡುವುದು ವಾಡಿಕೆ. ಆದರೆ, ಈಗ ಬೇಟೆ ನಿಷಿದ್ಧವಿರುವುದರಿಂದ ಕುರಿ, ಮೇಕೆ ಕೊಯ್ದು ಅದನ್ನೇ ತಾಂಡಾದ ಪ್ರತಿ ಮನೆಗೂ ಸಮಪಾಲು ಹಾಕುತ್ತಾರೆ. ಕುರಿಯ ಪ್ರತಿ ಅಂಗದ ತುಂಡೂ ಪ್ರತಿ ಮನೆಗೂ ತಲುಪುವಂತೆ ಪಾಲು ಹಾಕುತ್ತಾರೆ. ಈ ಮೂಲಕ ಎಲ್ಲರೂ ಸಮಾನರು ಎನ್ನುವ ಸಮಾನತೆಯ ಗುಣವನ್ನು ಪ್ರತಿಪಾದಿಸುತ್ತಾರೆ. ಕುರಿಯ ಕರಳು ಇತ್ಯಾದಿ ಹಾಗೂ ರಕ್ತದಿಂದ ಸಳೋಯಿ ಎನ್ನುವ ವಿಶಿಷ್ಟ ಮಾಂಸದಡುಗೆ ಮತ್ತು ಕಾನಾಬಾಜ್ (ಸುಟ್ಟ ಕುರಿಯ ತಲೆಯ ಕಿವಿಯ ಸಮೇತ ತೆಗೆದ ಚರ್ಮ) ಖಾದ್ಯವನ್ನು ಪರಸ್ಪರ ಹಂಚಿಕೊಂಡು ತಿನ್ನುತ್ತಾರೆ.

ದುಡಿಮೆಗೆಂದು ದೂರದ ಊರುಗಳಿಗೆ ವಲಸೆ ಹೋಗಿರುವವರು ತಪ್ಪದೇ ದವಾಳಿಯಂದು ತಾಂಡಾಕ್ಕೆ ಬರುತ್ತಾರೆ. ಸಾಂಪ್ರದಾಯಿಕ ಆಚರಣೆಗಳಲ್ಲಿ ಭಾಗಿಯಾಗಿ, ಹಿರಿಯರನ್ನು ನೆನೆದು, ಒಟ್ಟಾಗಿ ಊಟ ಮಾಡಿ ಕಷ್ಟ–ಸುಖ ಹಂಚಿಕೊಳ್ಳುತ್ತಾರೆ.

ಲಂಬಾಣಿಗರ ದವಾಳಿಯ ಕೇಂದ್ರ ಬಿಂದು ತಾಂಡಾದ ಯುವತಿಯರ ‘ಮೇರಾ’ (ಶುಭ ಕೋರುವುದು) ಆಚರಣೆ. ಮದುವೆಯಾಗದ ಯುವತಿಯರಷ್ಟೇ ಇದನ್ನು ಆಚರಿಸುತ್ತಾರೆ. ‘ಮೇರಾ’ಗಾಗಿ ಹಬ್ಬಕ್ಕೂ ತಿಂಗಳ ಮುನ್ನವೇ ತಾಂಡಾದ ಸೇವಾಲಾಲ್ ಮಟ್ಟು (ದೇಗುಲ) ಎದುರು ಯುವತಿಯರ ಹಾಡು, ಕುಣಿತದ ತಯಾರಿ ನಡೆದಿರುತ್ತದೆ. ಇದಕ್ಕೆ ತಾಂಡಾದ ಹಿರಿಯ ಮಹಿಳೆಯರ ಮಾರ್ಗದರ್ಶನವಿರುತ್ತದೆ. ಮುಖ್ಯವಾಗಿ ಇಂಥ ಹಾಡು, ನೃತ್ಯಗಳ ಸಂದರ್ಭಗಳಲ್ಲಿ ಯುವತಿಯರಲ್ಲಿ ತಮ್ಮ ಮನದನ್ನೆಯನ್ನು ಯುವಕರು ಆರಿಸಿಕೊಳ್ಳುವುದು ವಿಶೇಷ. ಇಂಥ ಯುವತಿ ಇಷ್ಟವಾಗಿದ್ದಾಳೆ ಎಂದು ಯುವಕ ಮನೆಯ ಹಿರಿಯರಿಗೆ ಹೇಳಿದರೆ, ಪರಸ್ಪರರ ಮನೆಗಳಲ್ಲಿ ಮಾತುಕತೆ ನಡೆಯುತ್ತದೆ. ಹೀಗೆ ವಿವಾಹಕ್ಕೆ ‘ಮೇರಾ’ ಮುನ್ನುಡಿ ಆಗುತ್ತದೆ.

ಕುಟುಂಬದ ಹಿರಿಯರನ್ನು ಸ್ಮರಿಸುವ ಆಚರಣೆಗೆ ‘ಧಬುಕಾರ್’ ಅನ್ನಲಾಗುತ್ತದೆ. ಹಿರಿಯರಿಂದ ಪ್ರಾರಂಭವಾಗಿ ಇತ್ತೀಚೆಗೆ ಮೃತರಾದವರವರೆಗೆ ಎಲ್ಲರನ್ನೂ, ಕೆಲವೆಡೆ ತಮ್ಮ ಸಾಕುಪ್ರಾಣಿಗಳ ಹೆಸರುಗಳನ್ನೂ ಸ್ಮರಿಸುತ್ತಾ ಸಿಹಿ ಅಡುಗೆ ಎಡೆ ಹಾಕುತ್ತಾರೆ. ಮನೆಯ ಒಲೆಯನ್ನು ಸ್ವಚ್ಛಗೊಳಿಸಿ, ರಂಗೋಲಿ ಹಾಕಿ ಅಲಂಕರಿಸುತ್ತಾರೆ. ಅಕ್ಕಿ ಹಿಟ್ಟು ಬೆಲ್ಲ ಹಾಕಿದ ನೀರನ್ನು ಕಲಸಿ, ಬೇಯಿಸಿದ ಮುದ್ದೆ ಹಿಟ್ಟಿನಂಥ ಹದವಾದ ಸಿಹಿ ಖಾದ್ಯದ ಜತೆಗೆ ತುಪ್ಪ ಸೇರಿಸಿ ಈ ಒಲೆಯ ಕೆಂಡದಲ್ಲಿಯೇ ಹಿರಿಯರಿಗಾಗಿ ಎಡೆ ಹಾಕುತ್ತಾರೆ.

ಕಾಳಿ ಅಮಾಸ್‌ನ ಮರುದಿನ ಬೆಳಿಗ್ಗೆ ಯುವತಿಯರು ತಮ್ಮ ಸಾಂಪ್ರದಾಯಿಕ ಲಂಬಾಣಿ ಉಡುಪು ತೊಟ್ಟು ಬುಟ್ಟಿ ಹಿಡಿದುಕೊಂಡು ಕಾಡು ಇಲ್ಲವೇ ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ ಸಿಗುವ ಕೆಲವು ಹೂಗಳನ್ನು ತರಲು ಹೋಗುತ್ತಾರೆ. ಬರುವಾಗ ರಾಗಿ, ಜೋಳದ ತೆನೆ ಅಥವಾ ಬೆಳೆದ ಬೆಳೆಗಳನ್ನು ತರುವರು. ದಾರಿಯುದ್ದಕ್ಕೂ ಹಾಡು–ಕುಣಿತದ ಸಾಥ್ ಇರುತ್ತದೆ.

ಕಾಡಿನಲ್ಲಿರುವ ವಿಶೇಷ ಹೂಗಳನ್ನು ಸಂಗ್ರಹಿಸುತ್ತಾರೆ. ಅದರಲ್ಲೂ ಹಳದಿ ಬಣ್ಣದ ಹೊನ್ನಂಬರಿ (ಆವರಿಕೆ) ಹೂಗಳನ್ನೂ ತರುತ್ತಾರೆ. ‘ಮೇರಾ’ದಲ್ಲಿ ಸಂಗ್ರಹವಾಗಿದ್ದ ಹಣದಲ್ಲಿ ಖರೀದಿಸಿದ ತಿಂಡಿ–ತಿನಿಸನ್ನು ಕಾಡಿನಲ್ಲಿಯೇ ಒಂದೆಡೆ ಕುಳಿತು ಯುವತಿಯರು ಹಂಚಿಕೊಂಡು ತಿಂದು ತಾಂಡಾಕ್ಕೆ ಮರಳುವರು. ಬಳಿಕ ತಾಂಡಾದ ಪ್ರತಿ ಮನೆಗೆ ಭೇಟಿ ನೀಡಿ ಅಲ್ಲಿ ಐದೈದು ಗೊದಣೋ (ಸಗಣಿಯ ಉಂಡೆ) ಮಾಡುತ್ತಾರೆ. ಇವುಗಳನ್ನು ಹೂಗಳಿಂದ ಅಲಂಕರಿಸಿ ಒಳಿತಾಗಲಿ ಎಂದು ಕೋರಿ ಐದು ಕಡೆ ಅಂದರೆ ದನದ ಕೊಟ್ಟಿಗೆ, ಅಡುಗೆ ಮನೆ, ದೇವರ ಹತ್ತಿರ, ಮುಖ್ಯ ಬಾಗಿಲು, ಮನೆ ಮಾಳಿಗೆ ಮೇಲೆ ಇಡುತ್ತಾರೆ.

ಸುರೇಶ ಎಸ್. ಲಮಾಣಿ
ಲೇಖಕರು, ಹವ್ಯಾಸಿ ಛಾಯಾಗ್ರಾಹಕರು.

ಭಾರತ ಪ್ರಥಮ ಸ್ವಾತಂತ್ರ‍್ಯ ಹೋರಾಟದ ಧೀರ ನಾಯಕಿ – ಕಿತ್ತೂರು ರಾಣಿ ಚೆನ್ನಮ್ಮ

ಮಹಿಳೆ ದುರ್ಬಲಳಲ್ಲ, ಅವಳಲ್ಲಿ ದೇಶವನ್ನು ಕಾಪಾಡುವ ಶಕ್ತಿಯಿದೆ.’ ಈ ಮಾತು ಕಿತ್ತೂರಿನ ಧೀರ ನಾಯಕಿ ರಾಣಿ ಚೆನ್ನಮ್ಮರ ಬದುಕಿನ ಸಾರ. ಭಾರತದ ಸ್ವಾತಂತ್ರ್ಯ ಇತಿಹಾಸದ ಮೊದಲ ಪುಟದಲ್ಲೇ ಅಕ್ಷರಶಃ ಅಮರಳಾದ ಹೆಸರಿದು. ಬ್ರಿಟಿಷರ ಕ್ರೂರ ಆಳ್ವಿಕೆಗೆ ಮೊದಲ ಬಾರಿಗೆ ಸವಾಲು ಹಾಕಿದ ಧೈರ್ಯವಂತೆ ರಾಣಿ ಚೆನ್ನಮ್ಮರು, ಮಹಿಳಾ ಶೌರ್ಯ, ತ್ಯಾಗ ಮತ್ತು ದೇಶಭಕ್ತಿಯ ಜೀವಂತ ಪ್ರತೀಕವಾಗಿ ಇಂದಿಗೂ ಜನಮನಗಳಲ್ಲಿ ಅಳಿಯದ ಸ್ಥಾನ ಪಡೆದಿದ್ದಾರೆ.

1778ರಲ್ಲಿ ಬೆಳಗಾವಿ ಜಿಲ್ಲೆಯ ಕಾಕತ ಗ್ರಾಮದಲ್ಲಿ ಜನಿಸಿದ ಚೆನ್ನಮ್ಮರು ಬಾಲ್ಯದಲ್ಲೇ ಸಾಹಸ ಪ್ರಿಯೆ. ಕುದುರೆ ಸವಾರಿ, ಕತ್ತಿಯಾಟ, ಬಿಲ್ಲುಬಾಣ ಇವು ಅವರ ದಿನನಿತ್ಯದ ಆಟಗಳು. ದೃಢ ಮನೋಬಲ ಮತ್ತು ನ್ಯಾಯಬುದ್ಧಿಯಿಂದ ಅವರು ತೊಡಗಿದ ಪ್ರತಿ ಕಾರ್ಯದಲ್ಲೂ ಶೌರ್ಯ ಪ್ರದರ್ಶಿಸಿದರು. ಆ ಸಮಯದಲ್ಲಿ ಮಹಿಳೆಯರು ಅಂಗಳದ ಒಳಗೆ ಸೀಮಿತವಾಗಿದ್ದಾಗ, ಚೆನ್ನಮ್ಮರು ಹೊರಾಂಗಣದಲ್ಲಿ ಧೈರ್ಯ ಪ್ರದರ್ಶನದ ಮಾದರಿಯಾದರು.

ಚೆನ್ನಮ್ಮರು ಕಿತ್ತೂರಿನ ರಾಜ ಮಲ್ಲಸರ್ಜರ ಪತ್ನಿಯಾಗಿದ್ದರು. ಪತಿಯ ನಿಧನದ ಬಳಿಕ ಅವರು ರಾಜ್ಯದ ಹೊಣೆ ಹೊತ್ತು ಆಡಳಿತದಲ್ಲಿ ದೃಢತೆಯಿಂದ ನಡೆದುಕೊಂಡರು. ಸಂತಾನವಿಲ್ಲದ ಕಾರಣ ಶಿವಲಿಂಗಪ್ಪನನ್ನು ದತ್ತು ಪಡೆದರು. ಆದರೆ ಬ್ರಿಟಿಷರು ತಮ್ಮ “**Doctrine of Lapse**” ಎಂಬ ಅಕ್ರಮ ನೀತಿಯಡಿ ದತ್ತಕದ ಮೂಲಕ ರಾಜ್ಯದ ಹಕ್ಕು ಸಿಗುವುದಿಲ್ಲ ಎಂದು ಘೋಷಿಸಿ, ಕಿತ್ತೂರನ್ನು ವಶಪಡಿಸಿಕೊಳ್ಳಲು ಮುಂದಾದರು.

ರಾಣಿಗೆ ಇದು ಕೇವಲ ಆಡಳಿತದ ವಿಷಯವಲ್ಲ, ಗೌರವ ಮತ್ತು ಸ್ವಾಭಿಮಾನದ ವಿಷಯವಾಯಿತು. ಅವರು ಬ್ರಿಟಿಷ ಅಧಿಕಾರಿಗೆ ಬರೆದ ಪತ್ರದಲ್ಲಿ ಹೇಳಿದರು: ನಮ್ಮ ರಾಜ್ಯದ ಹಕ್ಕು, ಗೌರವ ಹಾಗೂ ಸ್ವಾಭಿಮಾನವನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ.’ ಎಂದು ಎಚ್ಚರಿಕೆ ಸಹ ನೀಡಿದರು.

ಬ್ರಿಟಿಷರ ವಿರುದ್ಧದ ಮೊದಲ ಮಹಿಳಾ ಕ್ರಾಂತಿಯಾಗಿ 1824ರ ಕಿತ್ತೂರು ಯುದ್ಧ ಇತಿಹಾಸದಲ್ಲಿ ಚಿರಸ್ಮರಣೀಯ. ರಾಣಿ ಚೆನ್ನಮ್ಮರ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ಸ್ಥಳೀಯ ಯೋಧರು ಅಪಾರ ಶೌರ್ಯ ತೋರಿದರು. ಅವರ ಸೇನಾಪತಿಗಳಾದ ಅಮತೂರು ಬಲಪ್ಪ, ಸಂಗೊಳ್ಳಿ ರಾಯಣ್ಣ, ಗುರು ಬಸಪ್ಪ ನಾಯ್ಕ, ಸಿದ್ದಪ್ಪ ನಾಯ್ಕ ಮುಂತಾದವರು ರಾಣಿಯ ಮಾತಿಗೆ ಜೀವಕೊಡಲು ಸಿದ್ಧರಾದರು.

ಯುದ್ಧದ ವೇಳೆ ಬ್ರಿಟಿಷ ಕಮಾಂಡರ್ ಥಾಕ್ಸನ್ ಹಾಗೂ ಅನೇಕರು ಕೊಲ್ಲಲ್ಪಟ್ಟರು. ಇದು ಭಾರತೀಯ ಸ್ವಾತಂತ್ರ್ಯ ಚಳುವಳಿಯ ಮೊದಲ ವಿಜಯದ ಬೆಳಕು ಎಂದೇ ಕರೆಯಲ್ಪಟ್ಟಿದೆ. ಈ ಸೋಲಿನಿಂದ ಕೋಪಗೊಂಡ ಬ್ರಿಟಿಷರು ಮೋಸ ಮಾಡಿ ಶಾಂತಿ ಒಪ್ಪಂದದ ನೆಪದಲ್ಲಿ ಕೋಟೆಗೆ ನುಗ್ಗಿದರು. ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣರನ್ನು ಬಂಧಿಸಿದರು. ರಾಣಿಯನ್ನು ಬೈಲಹೊಂಗಲ ಕಾರಾಗೃಹಕ್ಕೆ ಕಳುಹಿಸಿ ಕಠಿಣ ನಿಗಾವಳಿಯಲ್ಲಿ ಇರಿಸಿದರು.

ಬಂಧನದಲ್ಲಿದ್ದರೂ ಅವರ ಮನಸ್ಸಿನಲ್ಲಿ ದೇಶದ ಸ್ವಾತಂತ್ರ್ಯದ ಕನಸು ಆರಲಿಲ್ಲ. ಅವರು ತಮ್ಮ ಹೋರಾಟಗಾರರಿಗೆ ಪ್ರೇರಣಾ ಪತ್ರಗಳನ್ನು ಕಳುಹಿಸುತ್ತಿದ್ದರು. ಕೊನೆಗೆ 1829ರಲ್ಲಿ ಕಾರಾಗೃಹದಲ್ಲಿಯೇ ಪ್ರಾಣ ತ್ಯಾಗ ಮಾಡಿದರೂ, ಅವರ ಆತ್ಮದ ದೀಪ ಭಾರತಕ್ಕೆ ಶಾಶ್ವತವಾಗಿ ಬೆಳಗಿತು. ರಾಣಿ ಚೆನ್ನಮ್ಮರು ಹಾಕಿದ ಹೋರಾಟದ ಕಿಡಿ ಮಣ್ಣಿನಲ್ಲಿ ಆರಲಿಲ್ಲ. ಸಂಗೊಳ್ಳಿ ರಾಯಣ್ಣರು ಅವರಿಂದ ಪ್ರೇರಿತವಾಗಿ ಗೆರಿಲ್ಲಾ ಯುದ್ಧ ತಂತ್ರದಿಂದ ಬ್ರಿಟಿಷರಿಗೆ ಭಾರೀ ತೊಂದರೆ ನೀಡಿದರು. ಕರ್ನಾಟಕದಿಂದ ಝಾನ್ಸಿವರೆಗೆ, ಹಲವೆಡೆಗಳಲ್ಲಿ ಕ್ರಾಂತಿಚೇತನ ಹುಟ್ಟಿತು. ಅವರ ಹೋರಾಟವೇ 1857ರ ಪ್ರಥಮ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆಯಾದ ಬೀಜವಾಯಿತು.

ಪ್ರತಿ ವರ್ಷ ಅಕ್ಟೋಬರ್ ತಿಂಗಳ ಮೂರನೇ ವಾರದಲ್ಲಿ ನಡೆಯುವ ಕಿತ್ತೂರು ಉತ್ಸವ ರಾಣಿ ಚೆನ್ನಮ್ಮರ ಶೌರ್ಯವನ್ನು ಸ್ಮರಿಸುವ ಸಾಂಸ್ಕೃತಿಕ ಹಬ್ಬವಾಗಿದೆ. ರಾಜ್ಯಾದ್ಯಂತ ಶಾಲೆ, ಮಹಾವಿದ್ಯಾಲಯಗಳಲ್ಲಿ ಅಕ್ಟೋಬರ್ 23ರ ದಿನವನ್ನು ರಾಣಿ ಚೆನ್ನಮ್ಮರ ಜನ್ಮ ದಿನಾಚರಣೆ ಮೂಲಕ ಸ್ಮರಿಸಲ್ಪಡುತ್ತದೆ. ಶೌರ್ಯ ಮೆರವಣಿಗೆ, ನಾಟಕ, ನೃತ್ಯ ಪ್ರದರ್ಶನಗಳು, ಕಿತ್ತೂರಿನ ಇತಿಹಾಸದ ಚಿತ್ರ-ಶಿಲ್ಪ ಪ್ರದರ್ಶನಗಳು, ವಿದ್ಯಾರ್ಥಿಗಳ ಪ್ರಬಂಧ, ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿ ಮಕ್ಕಳಿಗೆ ರಾಣಿ ಚೆನ್ನಮ್ಮರ ಕುರಿತಾಗಿ ತಿಳಿಸಿಕೊಡಲಾಗುತ್ತದೆ.

ಕಿತ್ತೂರು ರಾಣಿ ಚೆನ್ನಮ್ಮರು ಕೇವಲ ಇತಿಹಾಸದ ಒಂದು ಅಧ್ಯಾಯವಲ್ಲ. ಅವರು ಮಹಿಳಾ ಸಬಲೀಕರಣದ ಶಾಶ್ವತ ಮಾದರಿ, ದೇಶಭಕ್ತಿಯ ಜೀವಂತ ದೀಪ. ಅವರ ಹೆಸರಿನಲ್ಲಿ ದೇಶದಾದ್ಯಂತ ರಸ್ತೆ, ವಿಶ್ವವಿದ್ಯಾಲಯಗಳು, ಸ್ಮಾರಕಗಳು ಸ್ಥಾಪಿಸಲ್ಪಟ್ಟಿವೆ. ಅವರ ಜೀವನ ಕಥೆ ಪ್ರತಿ ಭಾರತೀಯ ಮಹಿಳೆಗೆ ಆತ್ಮವಿಶ್ವಾಸ, ಶಕ್ತಿ ಮತ್ತು ಪ್ರೇರಣೆಯನ್ನು ಬಿತ್ತುತ್ತದೆ.

ರಾಣಿ ಚೆನ್ನಮ್ಮರು ಶೌರ್ಯ, ತ್ಯಾಗ ಮತ್ತು ಮಹಿಳಾ ಶಕ್ತಿಯ ಅನನ್ಯ ಪ್ರೇರಣೆ. ಅವರ ಹೆಸರಿನಂತೆ ಕಿತ್ತೂರಿನ ಮಣ್ಣು ಎಂದಿಗೂ ಧೈರ್ಯ, ಸ್ವಾತಂತ್ರ್ಯ ಮತ್ತು ಗೌರವದ ಸಂಕೇತವಾಗಿ ಬೆಳಗುತ್ತದೆ.

ವಸಂತ ಬಿ. ಮಡ್ಲೂರ
ಸಹಾಯಕ ನಿರ್ದೇಶಕರು,
ವಾ.ಸಾ.ಸಂ ಇಲಾಖೆ, ಗದಗ.

ಜನಪದ ಸಾಹಿತ್ಯ ಜೀವನ ಮೌಲ್ಯಗಳ ಹೂರಣ: ಗವಿಸಿದ್ಧಯ್ಯ ಹಳ್ಳಿಕೇರಿಮಠ

0

ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡ ಸಂಸ್ಕೃತಿಯ ಬೇರುಗಳನ್ನು ಜನಪದ ಸಾಹಿತ್ಯದಲ್ಲಿ ಕಾಣುತ್ತೇವೆ. ದಿನನಿತ್ಯದ ಬದುಕು, ಹಬ್ಬ ಹರಿದಿನಗಳು, ಕೃಷಿ ಚಟುವಟಿಕೆಗಳು, ಭಕ್ತಿ ಭಾವ, ಪೌರಾಣಿಕ ಸನ್ನಿವೇಶಗಳನ್ನು ಇದು ಒಳಗೊಂಡಿದೆ. ಒಟ್ಟಾರೆ, ಇದು ಜೀವನ ಮೌಲ್ಯಗಳ ಹೂರಣದಿಂದ ಕೂಡಿದೆ ಎಂದು ಜನಪದ ಕಲಾವಿದ ಗವಿಸಿದ್ಧಯ್ಯ ಹಳ್ಳಿಕೇರಿಮಠ ಅಭಿಪ್ರಾಯಪಟ್ಟರು.

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನ, ಕಸಾಪ ಕಾರ್ಯಾಲಯದಲ್ಲಿ ದಿ. ನಾರಾಯಣಭಟ್ ಶಿವಪೂರ ಅವರ ಸ್ಮರಣಾರ್ಥ ಏರ್ಪಡಿಸಿದ್ದ ದತ್ತಿ ಉಪನ್ಯಾಸದಲ್ಲಿ “ಯುವಜನತೆ ಮತ್ತು ಜನಪದ ಸಾಹಿತ್ಯ” ಕುರಿತು ಮಾತನಾಡಿದರು.

ಕಸಾಪ ಕಾರ್ಯದರ್ಶಿ ಕಿಶೋರಬಾಬು ನಾಗರಕಟ್ಟಿ ನಾರಾಯಣಭಟ್ ಶಿವಪೂರ ಅವರ ಸಂಸ್ಮರಣೆ ಮಾಡಿ, ಶ್ರಮ ಸಂಸ್ಕೃತಿಯ ಮೂಲಕ ಗದಗ ಪರಿಸರದಲ್ಲಿ ಹೊಟೇಲ್ ಉದ್ಯಮವನ್ನು ಪ್ರಾರಂಭಿಸಿ ಮಾದರಿ ಜೀವನ ನಡೆಸಿದ್ದಾರೆ. ಕಲೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಅಪಾರ ಒಲವನ್ನು ಹೊಂದಿದ್ದರು ಎಂದು ತಿಳಿಸಿದರು.

ನಾರಾಯಣಭಟ್ ಶಿವಪೂರ ಅವರ ಸಾಮಾಜಿಕ ಸೇವೆಯ ಕುರಿತು ಡಾ. ಆರ್.ಎನ್. ಗೋಡಬೋಲೆ, ಡಾ. ವಾಣಿ ಶಿವಪೂರ ಹಾಗೂ ಡಾ. ಅನಂತ ಶಿವಪೂರ ಮಾತನಾಡಿದರು.

ಈ ಸಂದರ್ಭದಲ್ಲಿ ಅಶೋಕ ಹಾದಿ ಅವರನ್ನು ಗೌರವಿಸಲಾಯಿತು. ಮಂಜುಳಾ ವೆಂಕಟೇಶಯ್ಯ ಕವನ ವಾಚಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಡಿ.ಎಸ್. ಬಾಪುರಿ ವಂದಿಸಿದರು.

ಕಾರ್ಯಕ್ರಮದಲ್ಲಿ ಚಂದ್ರಶೇಖರ ವಸ್ತ್ರದ, ಡಾ. ಜಿ.ಬಿ. ಪಾಟೀಲ, ಸಿ.ಕೆ.ಎಚ್. ಕಡಣಿ ಶಾಸ್ತ್ರಿ, ಆರ್.ಡಿ. ಕಪ್ಪಲಿ, ಬಿ.ಬಿ. ಹೊಳಗುಂದಿ, ರತ್ನಕ್ಕ ಪಾಟೀಲ, ರಾಜೇಶ್ವರಿ ಬಡ್ನಿ, ಉಮಾದೇವಿ ಕಣವಿ, ಬಸವರಾಜ ಗಣಪ್ಪನವರ, ಯಲ್ಲಪ್ಪ ಹಂದ್ರಾಳ, ಪ್ರಸನ್ನಕುಮಾರ ಇನಾಮದಾರ, ಚಂದ್ರಶೇಖರ ಐಲಿ, ರಾಜಶೇಖರ ಕರಡಿ, ಮಲ್ಲಿಕಾರ್ಜುನ ನಿಂಗೋಜಿ, ಜೆ.ಎ. ಪಾಟೀಲ, ಅಶೋಕ ಸತ್ಯರೆಡ್ಡಿ, ಗಂಗವ್ವ ಮುದಗಲ್, ಚನವೀರಪ್ಪ ದುಂದೂರ, ಸತೀಶ ಕುಲಕರ್ಣಿ, ಬಿ.ಎಸ್. ಹಿಂಡಿ, ಶರಣಪ್ಪ ಹೊಸಂಗಡಿ, ಬಸವರಾಜ ನೆಲಜೇರಿ, ಅಂಬಿಕಾ ಶಿವಪೂರ, ಸತೀಶಕುಮಾರ ಚನ್ನಪ್ಪಗೌಡ್ರ, ಕೆ.ಎನ್. ಶಿವಪೂರ, ಕಾರ್ತಿಕ ಶಿವಪೂರ, ಸರಸ್ವತಿ ಶಿವಪೂರ, ಎಂ.ಎಫ್. ಡೋಣಿ ಮೊದಲಾದವರು ಭಾಗವಹಿಸಿದ್ದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ:
ಶಿಷ್ಠ ಸಾಹಿತ್ಯದ ಉಗಮಕ್ಕೆ ಜನಪದವೇ ಮೂಲ. ಗ್ರಾಮೀಣ ಜನ ತಮ್ಮ ಜೀವನಾನುಭವಗಳನ್ನು ಎರಕ ಹೊಯ್ದು ಜನಪದ ಸಾಹಿತ್ಯವನ್ನು ಸೃಷ್ಟಿಸಿದ್ದಾರೆ. ಉತ್ತರ ಕರ್ನಾಟಕದ ಜನಪದ ಸಂಸ್ಕೃತಿ ವಿಶಿಷ್ಟವಾದುದು. ಜಾನಪದ ಪ್ರಕಾರಗಳ ಕಲಿಕೆ ಶಿಕ್ಷಣದ ಒಂದು ಭಾಗವಾಗಿ ಸರ್ಕಾರ ಅಳವಡಿಸಿದಾಗ ಇಂದಿನ ಪೀಳಿಗೆ ಅರಿತುಕೊಳ್ಳಲು ಸಾಧ್ಯವಾಗುತ್ತದೆ” ಎಂದು ತಿಳಿಸಿದರು.

ಪರಿಸರಕ್ಕೆ ಹಾನಿ ಮಾಡುವ ಪಟಾಕಿಗಳ ಮಾರಾಟ, ಬಳಕೆ ನಿಷೇಧ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಮುಂಡರಗಿ ತಾಲೂಕಿನಲ್ಲಿ ಗದಗ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಉಂಟಾಗುವ ಶಬ್ದ, ವಾಯು ಮಾಲಿನ್ಯ ನಿಯಂತ್ರಣದಲ್ಲಿಡಲು ಹಾಗೂ ಸಾರ್ವಜನಿಕ ಆಸ್ತಿ ಮತ್ತು ಆರೋಗ್ಯ ಸಂರಕ್ಷಣೆಯ ಹಿತದೃಷ್ಟಿಯಿಂದ ಭಾರತ ಸರ್ಕಾರದ ಪರಿಸರ (ಸಂರಕ್ಷಣಾ) ನಿಯಮಾವಳಿ 1986 ತಿದ್ದುಪಡಿ 1999 ಮತ್ತು 2000 ಅಡಿಯಲ್ಲಿ ನಿಗದಿಪಡಿಸಿರುವ ಮಾನದಂಡಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸುವಂತೆ ಮುಂಡರಗಿ ತಾಲೂಕ ತಹಸೀಲ್ದಾರ್ ಯರಿಸ್ವಾಮಿ ಪಿ.ಎಸ್. ಕೋರಿದ್ದಾರೆ.

ಸರ್ವೋಚ್ಚ ನ್ಯಾಯಾಲಯವು ನೀಡಿದ ನಿರ್ದೇಶನದಲ್ಲಿ ಅನುಮತಿಸಿರುವ ಹಸಿರು ಪಟಾಕಿಗಳನ್ನು ಬಿಟ್ಟು ಉಳಿದ ಯಾವುದೇ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಲಾಗಿದೆ. ಪಟಾಕಿ ಮಾರಾಟ ಮಾಡುವವರು ಹಾಗೂ ಪಟಾಕಿ ಸಂಗ್ರಹಿಸುವ ಗೋದಾಮುಗಳಿಗೆ ಸಂಬಂಧಪಟ್ಟ ಎಲ್ಲ ಇಲಾಖೆಯ ಅನುಮತಿ ಪಡೆಯತಕ್ಕದ್ದು.

ದಿನದ ಯಾವುದೇ ಸಮಯದಲ್ಲಿ ನಿಶ್ಶಬ್ದ ವಲಯಗಳೆಂದು ಘೋಷಿಸಲ್ಪಟ್ಟಿರುವ ಸ್ಥಳಗಳಲ್ಲಿ ಆಸ್ಪತ್ರೆ, ಶಾಲೆ, ಪ್ರಾರ್ಥನಾ ಮಂದಿರ, ವೃದ್ಧಾಶ್ರಮಗಳ ಸುತ್ತಮುತ್ತ ಯಾವುದೇ ರೀತಿಯ ಶಬ್ದ ಉಂಟುಮಾಡುವ ಪಟಾಕಿ ಹಾಗೂ ಸಿಡಿಮದ್ದುಗಳ ಬಳಕೆಯನ್ನು ನಿಷೇಧಿಸಲಾಗಿದೆ.

ಯಾವುದೇ ಕ್ರಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಲ್ಲಿ, ಅದಕ್ಕೆ ಕಾರಣರಾದವರ ಮೇಲೆ ಕಾಯ್ದೆಯನುಸಾರ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಗುವುದು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಉಂಟಾಗುವ ಶಬ್ದ ಹಾಗೂ ವಾಯು ಮಾಲಿನ್ಯ ನಿಯಂತ್ರಣದಲ್ಲಿಟ್ಟು ಹಬ್ಬವನ್ನು ‘ಹಸಿರು ದೀಪಾವಳಿ–ಸ್ವಸ್ಥ ದೀಪಾವಳಿ: ಪರಿಸರ ಸ್ನೇಹಿ ದೀಪಾವಳಿ’ಯನ್ನಾಗಿ ಆಚರಿಸಲು ಸಾರ್ವಜನಿಕರು ಸಹಕರಿಸುವಂತೆ ಮುಂಡರಗಿ ತಹಸೀಲ್ದಾರ್ ಯರಿಸ್ವಾಮಿ ಪಿ.ಎಸ್. ಕೋರಿದ್ದಾರೆ.

ಬಾಕ್ಸ್

125 ಡೆಸಿಬಲ್‌ಗಳಿಗಿಂತ ಹೆಚ್ಚು ಶಬ್ದ ಉಂಟುಮಾಡುವ ಪಟಾಕಿಗಳ ದಾಸ್ತಾನು, ಮಾರಾಟ ಹಾಗೂ ಉಪಯೋಗಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯವು ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಿದೆ. ಸರ್ವೋಚ್ಚ ನ್ಯಾಯಾಲಯ ಹಾಗೂ ಹಸಿರು ನ್ಯಾಯ ಪೀಠದ ಆದೇಶದಂತೆ ಎಲ್ಲ ಹಸಿರು ಪಟಾಕಿಗಳ ಪ್ಯಾಕೆಟ್ ಮೇಲೆ ಹಸಿರು ಪಟಾಕಿಯ ಚಿಹ್ನೆ ಹಾಗೂ ಕ್ಯೂಆರ್‌ಕೋಡ್ ಇರುವ ಹಸಿರು ಪಟಾಕಿ — ಕಡಿಮೆ ಮಾಲಿನ್ಯ ಉಂಟುಮಾಡುವ ಪಟಾಕಿ ಮಾತ್ರ ಮಾರಾಟ ಮಾಡುವುದು.

ಹಬ್ಬದ ನೆಪದಲ್ಲಿ ಇಸ್ಪೀಟ್ ಆಡಿದರೆ ಕಠಿಣ ಕ್ರಮ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜೂಜು, ಇಸ್ಪೀಟ್ ಮತ್ತಿತರ ಆಟಗಳನ್ನು ಆಡಿದರೆ, ಅಕ್ರಮ ಚಟುವಟಿಕೆಗಳನ್ನು ನಡೆಸಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ನರೇಗಲ್ಲ ಪೊಲೀಸ್ ಠಾಣೆಯ ಪಿಎಸ್‌ಐ ಐಶ್ವರ್ಯಾ ನಾಗರಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಈ ಪ್ರಕಟಣೆಯನ್ನು ಹೊರಡಿಸಲಾಗಿದ್ದು, ದೀಪಾವಳಿ ಪೂಜೆಯ ನಂತರ ಬಹಳಷ್ಟು ಜನ ದೀಪ ಕಾಯುವ ನೆಪದಲ್ಲಿ ಇಸ್ಪೀಟ್ ಮತ್ತಿತರ ಜೂಜಾಟಗಳನ್ನು ಆಡುವುದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಇಸ್ಪೀಟ್ ಆಡಿಸುವವರ ಮತ್ತು ಆಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು. ಆದ್ದರಿಂದ ನರೇಗಲ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಸಾರ್ವಜನಿಕರು ಈ ಪ್ರಕಟಣೆಯನ್ನು ಗಂಭೀರವಾಗಿ ಪರಿಗಣಿಸಿ, ಜಾಗರೂಕರಾಗಿರಬೇಕೆಂದು ತಿಳಿಸಲಾಗಿದೆ.

ಸಚಿವ ಪ್ರಲ್ಹಾದ ಜೋಷಿ ಅವರಿಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಪಶ್ಚಿಮ ಪದವೀಧರ ಚುನಾವಣೆ 2026ರ ಮತದಾರರ ನೋಂದಣಿ ಜಾಗೃತಿಯ ಅಭಿಯಾನವನ್ನು ಕೈಗೊಂಡಿರುವ ಗದುಗಿನ ನಿತ್ಯವಿಜಯ ಪ್ರತಿಷ್ಠಾನದ ಸಂಸ್ಥಾಪಕರು, ಬಿಜೆಪಿಯ ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸದಸ್ಯರಾದ ಡಾ. ಎಸ್.ಎಚ್. ಶಿವನಗೌಡರ ಅವರ ನೇತೃತ್ವದ ತಂಡವು ಗದಗ ಹಾಗೂ ಹುಬ್ಬಳ್ಳಿಯ ವಿವಿಧೆಡೆ ಮತದಾರರ ನೋಂದಣಿ ಕುರಿತು ಜಾಗೃತಿ ಮೂಡಿಸಿತು.

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರ ಕಾರ್ಯಾಲಯಕ್ಕೆ ಭೇಟಿ ನೀಡಿದ ತಂಡವು ಅವರನ್ನು ಸನ್ಮಾನಿಸಿ ಗೌರವಿಸಿತು. ಈ ಸಂದರ್ಭದಲ್ಲಿ ಔಪಚಾರಿಕವಾಗಿ ಮಾತನಾಡಿದ ಪ್ರಹ್ಲಾದ ಜೋಷಿ ಅವರು, ಮತದಾರರ ನೋಂದಣಿ ಜಾಗೃತಿ ಅಭಿಯಾನವು ಮತಕ್ಷೇತ್ರದ ಎಲ್ಲೆಡೆಯೂ ನಡೆಯುವಂತಾಗಲಿ. ಬಿಜೆಪಿಯ ಕಾರ್ಯಕರ್ತರು ಈ ಕಾರ್ಯವನ್ನು ಯಶಸ್ವಿಗೊಳಿಸಿ ಹೆಚ್ಚಿನ ಪ್ರಮಾಣದಲ್ಲಿ ನೋಂದಣಿ ಮಾಡಿಸಬೇಕು ಎಂದರು; ಡಾ. ಎಸ್.ಎಚ್. ಶಿವನಗೌಡರ ನೇತೃತ್ವದಲ್ಲಿ ಈ ಕಾರ್ಯಕ್ಕೆ ಮುಂದಾಗಿರುವ ತಂಡದ ಕಾರ್ಯ ಅಭಿನಂದನೀಯ ಎಂದರು.

ಪ್ರಚಾರ ಸಮಿತಿಗೆ ಮೈಲಾರಪ್ಪ ಉಪಾಧ್ಯಕ್ಷ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕಾಂಗ್ರೆಸ್ ಪಕ್ಷದ ಕಾರ್ಯಚಟುವಟಿಕೆಗಳನ್ನು ಸದೃಢಗೊಳಿಸಲು ರಾಜ್ಯದ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮಾರ್ಗದರ್ಶನದಂತೆ ರೋಣ ಮತಕ್ಷೇತ್ರದ ಪ್ರಚಾರ ಸಮಿತಿಯ ಉಪಾಧ್ಯಕ್ಷರಾಗಿ ಜೈಭೀಮ್ ಸಂಘಟನೆಯ ರಾಜ್ಯ ಉಪಾಧ್ಯಕ್ಷ, ಕಾಂಗ್ರೆಸ್ ಮುಖಂಡ ಮೈಲಾರಪ್ಪ ಚಳ್ಳಮರದ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

ಆಯ್ಕೆ ಸಮಿತಿ ಸಭೆಯ ಅಧ್ಯಕ್ಷತೆಯನ್ನು ಧುರೀಣ ಮಿಥುನ್ ಜಿ. ಪಾಟೀಲ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಚಾರ ಸಮಿತಿ ಉಸ್ತುವಾರಿ ಅನ್ನಪೂರ್ಣಾ ಪೂಜಾರ, ಗದಗ ಜಿಲ್ಲಾಧ್ಯಕ್ಷ ಅಶೋಕ ಮಂದಾಲಿ, ವೀರಣ್ಣ ಶೆಟ್ಟರ್, ಗಜೇಂದ್ರಗಡ ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶರಣಪ್ಪ ಬೆಟಗೇರಿ ಮತ್ತಿತರರು ಉಪಸ್ಥಿತರಿದ್ದರೆಂದು ಪ್ರಕಟಣೆ ತಿಳಿಸಿದೆ.

error: Content is protected !!