ವಿಜಯಸಾಕ್ಷಿ ಸುದ್ದಿ, ಬಳ್ಳಾರಿ/ಗದಗ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅನಿಲ್ ಮೆಣಸಿನಕಾಯಿ ಅವರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಬೇಕು. ಅವರ ಗೆಲುವಿಗಾಗಿ ಮೂರು ಹೊತ್ತಿನ ಬುತ್ತಿ ಕಟ್ಟಿಕೊಂಡು ಕಾರ್ಯಕರ್ತರು ಶ್ರಮಿಸೋಣ ಎಂದು ಮಾಜಿ ಸಚಿವ ಶ್ರೀರಾಮುಲು ಕರೆ ನೀಡಿದರು.
ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಭಾನುವಾರ ಶ್ರೀರಾಮುಲು ಹಾಗೂ ಅನಿಲ್ ಮೆಣಸಿನಕಾಯಿ ನೇತೃತ್ವದಲ್ಲಿ ನಡೆದ ಬಿಜೆಪಿ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ಅನಿಲ್ ಮೆಣಸಿನಕಾಯಿ ಜನನಾಯಕರಾಗಿದ್ದು, ಗದಗದಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ನಿರ್ಮಾಣವಾಗಿದೆ. ಇತರೆ ಎಲ್ಲರಿಗಿಂತಲೂ ಅನಿಲ್ ಮೆಣಸಿನಕಾಯಿ ಅವರ ಮೇಲೆ ತಮ್ಮ ಪ್ರೀತಿ ಹೆಚ್ಚಿದೆ. ಈ ಬಾರಿ ಸರಿಯಾದ ಸಮಯದಲ್ಲಿ ಗದಗಕ್ಕೆ ಆಗಮಿಸಿ ಪ್ರಚಾರ ನಡೆಸುತ್ತೇನೆ. ಅವರನ್ನು ವಿಧಾನಸೌಧದಲ್ಲಿ ಶಾಸಕನಾಗಿ ನೋಡಬೇಕು ಎಂಬ ಆಸೆ ನನಗಿದೆ ಎಂದರು.
ಜೆನ್ಜಿ ಪೀಳಿಗೆ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುವ ಶಕ್ತಿಯಾಗಿದ್ದು, ಅವರನ್ನು ಕಡೆಗಣಿಸಲು ಸಾಧ್ಯವಿಲ್ಲ. ಗದಗ ನಗರದಲ್ಲಿ ನೀರು ಹಾಗೂ ಕೈಗಾರಿಕೆಗಾಗಿ ಜೆನ್ಜಿ ಯುವಕರು ನಡೆಸಿದ ಪ್ರತಿಭಟನೆ ಕಾಂಗ್ರೆಸ್ಗೆ ಎಚ್ಚರಿಕೆ ಗಂಟೆಯಾಗಿದೆ ಎಂದರು.
ಸಕಾರಾತ್ಮಕ ಬೇಡಿಕೆಗಳಿಗಾಗಿ ಜೆನ್ಜಿ ಯುವಕರು ನಡೆಸುವ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಲಿದೆ. ಗದಗದ ಜೆನ್ಜಿ ಹೋರಾಟದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ನೋಟಿಸ್ ನೀಡಿರುವ ವಿಷಯ ತಮ್ಮ ಗಮನಕ್ಕೆ ಬಂದಿದ್ದು, ಜಿಲ್ಲಾ ನಾಯಕರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಶ್ರೀರಾಮುಲು ಹೇಳಿದರು.
ಈ ಸಂದರ್ಭದಲ್ಲಿ ರವಿಕಾಂತ ಅಂಗಡಿ, ವಸಂತ ಪಡಗದ, ಪರಮೇಶ ಲಮಾಣಿ, ಶರಣು ಚಿಂಚಲಿ, ವೀರೇಶ ಕಲ್ಮಠ, ಮಂಜುನಾಥ ಹಳ್ಳೂರುಮಠ, ಬಸಯ್ಯ ಸಾಸೊಳ್ಳಿಮಠ, ಸುಭಾಸ ಸುಂಕದ, ಕುಮಾರ ಮಾರನಬಸರಿ, ಚೆನ್ನಮ್ಮ ಹುಳಕನ್ನವರ, ಆಶಾ ಜೂಲಗುಡ್ಡ, ಟಿ.ಡಿ. ಪೂಜಾರ, ಕಾಳು ತೋಟದ, ಶಶಿಕುಮಾರ್ ಕಳಸಾಪೂರಶೆಟ್ರ, ಫಕೀರೇಶ ಮುಳಗುಂದ, ರಾಮು ವಾಲ್ಮೀಕಿ, ದೇವಾನಂದ ತೋಟದ, ಗೋಪಾಲ ನಾಯಕ, ಸಂತೋಷ ಪವಾರ, ಪ್ರಭುಗೌಡ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನನಗೆ ಅಧಿಕಾರ ಇಲ್ಲ. ಆದರೆ ಜನರ ಮನಸ್ಸಿನಲ್ಲಿ ನನಗೆ ಜಾಗ ಕೊಟ್ಟಿದ್ದೀರಿ. ನಾವು ಈ ಹಿಂದೆ ಹೊಸ ಪಕ್ಷ ಕಟ್ಟಿದಾಗ ಅನಿಲ್ ಮೆಣಸಿನಕಾಯಿ ಅವರು ಜೋಡೆತ್ತಿನಂತೆ ನನಗೆ ಸಹಕಾರ ನೀಡಿದ್ದರು. ಈ ಬಾರಿ ಮೂರು ಹೊತ್ತಿನ ಬುತ್ತಿ ಕಟ್ಟಿಕೊಂಡು ಅವರ ಗೆಲುವಿಗಾಗಿ ಶ್ರಮಿಸೋಣ.
— ಶ್ರೀರಾಮುಲು, ಮಾಜಿ ಸಚಿವ

