Home Blog

ಗದಗ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸಿದ ಅಮಾನವೀಯ ಕೃತ್ಯ! ವಿಡಿಯೋ ವೈರಲ್ ಆರೋಪ!

ಗದಗ: ಜಿಲ್ಲೆಯಲ್ಲಿ ಅಮಾನವೀಯ ಘಟನೆ ಬೆಳಕಿಗೆ ಬಂದಿದ್ದು, ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಜಿಲ್ಲೆಯ ರೋಣ ತಾಲೂಕಿನ ಅರಹುಣಸಿ ಗ್ರಾಮದಲ್ಲಿ ಬುದ್ಧಿಮಾಂದ್ಯ ಯುವತಿಯೊಬ್ಬಳು ಆರು ತಿಂಗಳ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದ್ದು, ಲೈಂಗಿಕ ದೌರ್ಜನ್ಯ ಆರೋಪದಡಿ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಯುವತಿಗೆ ಚಾಕೊಲೇಟ್ ಹಾಗೂ ತಿಂಡಿ ಕೊಡಿಸುವ ಆಮಿಷವೊಡ್ಡಿ ದುರ್ಗಪ್ಪ ಎಂಬಾತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಯುವತಿಯ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ಯುವತಿಯ ಆರೋಗ್ಯದಲ್ಲಿ ಬದಲಾವಣೆ ಕಂಡುಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಅನುಮಾನ ವ್ಯಕ್ತವಾಗಿದ್ದು, ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಲಾಗಿದೆ. ಬಳಿಕ ಜುಲೈ 6ರಂದು ಯುವತಿಯನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಸುಮಾರು ಆರು ತಿಂಗಳ ಗರ್ಭಿಣಿಯಾಗಿರುವುದು ದೃಢಪಟ್ಟಿದೆ ಎಂದು ತಿಳಿದು ಬಂದಿದೆ.

ಘಟನೆ ಬೆಳಕಿಗೆ ಬಂದ ನಂತರ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಅಲ್ಲದೆ, ಯುವತಿಯ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಡಿಯೊ ಗ್ರಾಮದಲ್ಲಿನ ಕೆಲವರ ಮೊಬೈಲ್‌ಗಳಲ್ಲಿ ಹರಿದಾಡಿದೆ ಎಂಬ ಆರೋಪವೂ ವ್ಯಕ್ತವಾಗಿದ್ದು,

ಈ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ವಿಡಿಯೊ ವೈರಲ್ ಆಗಿದೆ ಎಂಬ ಆರೋಪದ ಸತ್ಯಾಸತ್ಯತೆಯನ್ನೂ ತನಿಖೆ ಮೂಲಕವೇ ಖಚಿತಪಡಿಸಿಕೊಳ್ಳಬೇಕಿದೆ. ಇದೇ ಪ್ರಕರಣದಲ್ಲಿ ಇನ್ನೂ ಕೆಲವರ ಪಾತ್ರವಿದೆಯೇ ಎಂಬ ಅನುಮಾನವೂ ವ್ಯಕ್ತವಾಗಿದ್ದು, ಎಲ್ಲ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಂತ್ರಸ್ತ ಯುವತಿಗೆ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದ್ದು, ವೈದ್ಯಕೀಯ ಚಿಕಿತ್ಸೆ ಹಾಗೂ ಅಗತ್ಯ ನೆರವು ನೀಡಲಾಗುತ್ತಿದೆ. ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಗಳ ಸತ್ಯಾಸತ್ಯತೆ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಯನಾಡು ಸುರಂಗ ದುರಂತ: ಕೇರಳದ ಅವಳಿ ಸುರಂಗ ನಿರ್ಮಾಣ ಮಾಡಿದ ಕಂಪನಿಗೆ ಕರ್ನಾಟಕದ ನಂಟು

ವಯನಾಡು: ಕೇರಳದ ವಯನಾಡಿನಲ್ಲಿ ಭೂಕುಸಿತ ಸಂಭವಿಸಿದ ಸುರಂಗ ನಿರ್ಮಾಣ ಕಾಮಗಾರಿಯನ್ನು ನಿರ್ವಹಿಸುತ್ತಿರುವ ದಿಲೀಪ್ ಬಿಲ್ಡ್‌ಕಾನ್ ಸಂಸ್ಥೆಗೆ ಕರ್ನಾಟಕದೊಂದಿಗೆ ನಂಟಿದ್ದು, ರಾಜ್ಯದಲ್ಲಿ ಕೈಗೊಂಡಿದ್ದ ಹಲವು ಯೋಜನೆಗಳು ಈ ಹಿಂದೆ ವಿವಾದಕ್ಕೆ ಗುರಿಯಾಗಿದ್ದವು. ಕೆಲವು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಂಸ್ಥೆ ವಿರುದ್ಧ ಆರೋಪಗಳು ಕೇಳಿಬಂದಿದ್ದು, ಕೆಲ ಯೋಜನೆಗಳಲ್ಲಿ ನಿರ್ಬಂಧವೂ ವಿಧಿಸಲಾಗಿತ್ತು.

ಬೆಂಗಳೂರು–ಮೈಸೂರು ನಡುವಿನ 117 ಕಿಲೋಮೀಟರ್ ಉದ್ದದ ಎಕ್ಸ್‌ಪ್ರೆಸ್‌ವೇಯನ್ನು ಸುಮಾರು ₹8,480 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವುದು ಇದೇ ದಿಲೀಪ್ ಬಿಲ್ಡ್‌ಕಾನ್ ಸಂಸ್ಥೆ. ಇದರ ಜೊತೆಗೆ ಮಂಗಳೂರಿನ ಕೆತ್ತಿಕಲ್‌ನಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನೂ ಸಂಸ್ಥೆ ಕೈಗೊಂಡಿತ್ತು. ಆ ವೇಳೆ ಅವೈಜ್ಞಾನಿಕವಾಗಿ ಮಣ್ಣು ವಿಲೇವಾರಿ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು.

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಾದ ಕೆಲವೇ ತಿಂಗಳಲ್ಲಿ ಸಂಭವಿಸಿದ ಸರಣಿ ಅಪಘಾತಗಳಲ್ಲಿ 90ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಹೆದ್ದಾರಿ ವಿನ್ಯಾಸದ ದೋಷ, ಪ್ರವೇಶ ಮತ್ತು ನಿರ್ಗಮನ ಮಾರ್ಗಗಳ ಸಮಸ್ಯೆ ಹಾಗೂ ಸಮರ್ಪಕ ಸುರಕ್ಷತಾ ಕ್ರಮಗಳ ಕೊರತೆಯೇ ಅಪಘಾತಗಳಿಗೆ ಕಾರಣ ಎಂಬ ಆರೋಪಗಳು ಆಗ ವ್ಯಕ್ತವಾಗಿದ್ದವು.

ಇದೇ ಯೋಜನೆಗೆ ಸಂಬಂಧಿಸಿದ ಹಣ ಬಿಡುಗಡೆ ಪ್ರಕ್ರಿಯೆಯಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದ ಪ್ರಕರಣದಲ್ಲೂ ಕಂಪನಿಯ ಕೆಲವು ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಬಂಧಿಸಲಾಗಿತ್ತು. ಈ ಹಿನ್ನೆಲೆ ಬೆಂಗಳೂರಿನ ಸುರಂಗ ರಸ್ತೆ ಯೋಜನೆಗೆ ಟೆಂಡರ್ ಸಲ್ಲಿಸುವ ಪ್ರಕ್ರಿಯೆಯಿಂದಲೂ ಸಂಸ್ಥೆಯನ್ನು ಹೊರಗಿಡಲಾಗಿತ್ತು.

ಇದೀಗ ವಯನಾಡಿನ ಕಲ್ಲಾಡಿ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಅವಳಿ ಸುರಂಗದ ಬಳಿ ಸಂಭವಿಸಿದ ಭೂಕುಸಿತದಲ್ಲಿ ಮಣ್ಣಿನೊಂದಿಗೆ ಕೊಚ್ಚಿಹೋದ ಟ್ಯಾಂಕರ್‌ ಕರ್ನಾಟಕದ ರಾಮನಗರ ಜಿಲ್ಲೆಯಲ್ಲಿ ನೋಂದಣಿಯಾಗಿರುವುದು ಬೆಳಕಿಗೆ ಬಂದಿದೆ.

ಆದರೆ, ಈ ದುರಂತಕ್ಕೆ ತಮ್ಮ ಸಂಸ್ಥೆ ಕಾರಣವಲ್ಲ ಎಂದು ದಿಲೀಪ್ ಬಿಲ್ಡ್‌ಕಾನ್ ಸ್ಪಷ್ಟನೆ ನೀಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಂಪನಿ ಅಧಿಕಾರಿಗಳು, “ಸುರಂಗದಿಂದ ಹೊರತೆಗೆದ ಮಣ್ಣನ್ನು ಸಂಗ್ರಹಿಸಿರುವ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿಲ್ಲ. ಘಟನೆ ಸುರಂಗ ಕಾಮಗಾರಿ ನಡೆಯುತ್ತಿರುವ ಸ್ಥಳದಿಂದ ಸುಮಾರು 12 ಮೀಟರ್ ದೂರದಲ್ಲಿ ನಡೆದಿದೆ. ನಾವು ವೈಜ್ಞಾನಿಕ ರೀತಿಯಲ್ಲೇ ಮಣ್ಣು ವಿಲೇವಾರಿ ಮಾಡಿದ್ದೇವೆ. ಏಕಾಏಕಿ ಸುರಿದ ಭಾರೀ ಮಳೆಯೇ ಭೂಕುಸಿತಕ್ಕೆ ಕಾರಣ” ಎಂದು ತಿಳಿಸಿದ್ದಾರೆ.

ಭಾರೀ ಮಳೆಗೆ HPCL ಘಟಕ ಜಲಾವೃತ: ನದಿಯಲ್ಲಿ ತೇಲಿ ಹೋದ 3,000 LPG ಸಿಲಿಂಡರ್ ಗಳು

ಮುಂಬೈ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ರಾಯಗಢ ಜಿಲ್ಲೆಯ ಪನ್ವೇಲ್ ತಾಲೂಕಿನ ಚವಾಣೆ ಗ್ರಾಮದಲ್ಲಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL)ನ ಪಾತಾಳಗಂಗಾ ಎಲ್‌ಪಿಜಿ ಬಾಟ್ಲಿಂಗ್ ಘಟಕಕ್ಕೆ ಪ್ರವಾಹದ ನೀರು ನುಗ್ಗಿದ್ದು, ಸುಮಾರು 3,000 ಎಲ್‌ಪಿಜಿ ಸಿಲಿಂಡರ್‌ಗಳು ನೀರಿನಲ್ಲಿ ತೇಲಿ ಹೋಗಿರುವ ಘಟನೆ ನಡೆದಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆತಂಕಕ್ಕೆ ಕಾರಣವಾಗಿವೆ.

ಪಾತಾಳಗಂಗಾ ನದಿಯ ನೀರಿನ ಮಟ್ಟ ಏರಿಕೆಯಾಗಿ ಘಟಕ ಜಲಾವೃತಗೊಂಡ ಪರಿಣಾಮ ಸಿಲಿಂಡರ್‌ಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ತೇಲಿ ಹೋದ ಸಿಲಿಂಡರ್‌ಗಳಲ್ಲಿ ಕೆಲವು ಗ್ಯಾಸ್ ತುಂಬಿದ್ದರೆ, ಇನ್ನೂ ಕೆಲವು ಖಾಲಿಯಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಬಳಿಕ ಜಿಲ್ಲಾಡಳಿತ ತುರ್ತು ಕ್ರಮ ಕೈಗೊಂಡಿದ್ದು, ಸ್ಥಳದಲ್ಲಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ನದಿಯಲ್ಲಿ ಅಥವಾ ದಡದಲ್ಲಿ ಸಿಲಿಂಡರ್‌ಗಳು ಕಂಡುಬಂದರೆ ಸಾರ್ವಜನಿಕರು ಯಾವುದೇ ಕಾರಣಕ್ಕೂ ಅವುಗಳನ್ನು ಮುಟ್ಟಬಾರದು, ಸ್ಥಳಾಂತರಿಸಬಾರದು ಅಥವಾ ಮನೆಗೆ ತೆಗೆದುಕೊಂಡು ಹೋಗಬಾರದು ಎಂದು ರಾಯಗಢ ಜಿಲ್ಲಾಧಿಕಾರಿ ಕಿಶನ್ ಜವಾಲೆ ಎಚ್ಚರಿಕೆ ನೀಡಿದ್ದಾರೆ.

ಸಿಲಿಂಡರ್‌ಗಳ ಸ್ಥಿತಿ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲದ ಕಾರಣ ಅವು ಅಪಾಯಕಾರಿಯಾಗಿರುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ಸಿಲಿಂಡರ್ ಕಂಡುಬಂದರೆ ತಕ್ಷಣ ಸ್ಥಳೀಯ ಆಡಳಿತ ಅಥವಾ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಜಿಲ್ಲೆಯ ಹಲವು ಭಾಗಗಳಲ್ಲಿ ಇನ್ನೂ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸಾರ್ವಜನಿಕರು ಅನಗತ್ಯವಾಗಿ ಪ್ರವಾಹಪೀಡಿತ ಪ್ರದೇಶಗಳಿಗೆ ತೆರಳದಂತೆ ಹಾಗೂ ಆಡಳಿತದ ಸೂಚನೆಗಳನ್ನು ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಪುತ್ತೂರಿನಲ್ಲಿ ಯುವತಿಗೆ ಚಾಕು ತೋರಿಸಿ ಕಿರುಕುಳ ಆರೋಪ: ಎರಡು ಪ್ರತ್ಯೇಕ ಪ್ರಕರಣ ದಾಖಲು, ತನಿಖೆ ಆರಂಭ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುರುಷರಕಟ್ಟೆ ಬಳಿ ಯುವತಿಗೆ ಚಾಕು ತೋರಿಸಿ ಕಿರುಕುಳ ನೀಡಲಾಗಿದೆ ಎನ್ನಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಪೊಲೀಸರು ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪುರುಷರಕಟ್ಟೆ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದೆ ಎನ್ನಲಾಗಿದ್ದು, ಈ ಕುರಿತು ಯುವತಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಕೂಟಿ ನಿಲ್ಲಿಸಿ ಬಸ್ ಹತ್ತಲು ತೆರಳುತ್ತಿದ್ದ ವೇಳೆ ತನಗೆ ಪರಿಚಯವಿದ್ದ ಸುಹೈಲ್ ಹಾಗೂ ಆತನ ಜೊತೆಗಿದ್ದ ಇತರ ಮೂವರು ಯುವಕರು ಅಡ್ಡಗಟ್ಟಿ ಚಾಕು ತೋರಿಸಿ ಕಿರುಕುಳ ನೀಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.

ಯುವತಿಯ ದೂರಿನ ಆಧಾರದ ಮೇಲೆ ಪುತ್ತೂರು ಮಹಿಳಾ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 78(1) ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಪ್ರಕರಣದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿತ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಯುವಕರಿಂದ ಪ್ರತಿದೂರು:

ಈ ನಡುವೆ ಆರೋಪಿತ ಯುವಕರು ಕೂಡ ಪೊಲೀಸರಿಗೆ ಪ್ರತ್ಯೇಕ ದೂರು ನೀಡಿದ್ದಾರೆ. ತಾವು ಯಾವುದೇ ಕಿರುಕುಳ ಅಥವಾ ಬೆದರಿಕೆ ನೀಡಿಲ್ಲ ಎಂದು ಹೇಳಿರುವ ಅವರು, ಬೇಕರಿಯಲ್ಲಿ ಬ್ರೆಡ್‌ಗೆ ಚೀಸ್ ಹಾಕಲು ಚಾಕು ಪಡೆದುಕೊಂಡಿದ್ದೆವು. ಚೀಸ್ ಕತ್ತರಿಸಿದ ಬಳಿಕ ಅದನ್ನು ವಾಪಸ್ ನೀಡಲು ತೆರಳುತ್ತಿದ್ದಾಗ ಯುವತಿ ಎದುರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಹಳೆಯ ದ್ವೇಷದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಯುವಕರು ಆರೋಪಿಸಿದ್ದಾರೆ. ಈ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

ಸಿಸಿಟಿವಿ ದೃಶ್ಯಗಳ ಪರಿಶೀಲನೆ:

ಸದ್ಯ ಪೊಲೀಸರು ಪುರುಷರಕಟ್ಟೆ ಜಂಕ್ಷನ್ ಹಾಗೂ ಬೇಕರಿ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಯುವತಿ ಮಾಡಿರುವ ಆರೋಪ ಮತ್ತು ಯುವಕರು ನೀಡಿರುವ ಪ್ರತಿದೂರಿನ ಸತ್ಯಾಸತ್ಯತೆ ಪತ್ತೆಹಚ್ಚಲು ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ.

ಪ್ರಕರಣದ ತನಿಖೆ ಮುಂದುವರಿದಿದ್ದು, ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.

ಪ್ರಭಾಸ್ ಚಿತ್ರದ ಸೆಟ್‌ನಲ್ಲಿ ಅವಘಡ; ಕೀಟ ಕಚ್ಚಿದ ಬಳಿಕ ನಟ ರಾಜೇಶ್ ಶರ್ಮ ಆರೋಗ್ಯದಲ್ಲಿ ತೀವ್ರ ಏರುಪೇರು- ಆಸ್ಪತ್ರೆಗೆ ದಾಖಲು

ಹೈದರಾಬಾದ್: ‘ಫೌಜಿ’ ಚಿತ್ರದ ಚಿತ್ರೀಕರಣದ ವೇಳೆ ಹಿರಿಯ ನಟ ರಾಜೇಶ್ ಶರ್ಮ ಅವರಿಗೆ ಕೀಟ ಕಚ್ಚಿದ ಪರಿಣಾಮ ಆರೋಗ್ಯ ಗಂಭೀರಗೊಂಡಿದೆ. ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಈ ಘಟನೆ ಬಳಿಕ ಅವರನ್ನು ಕೋಲ್ಕತ್ತಾದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ತೀವ್ರ ನಿಗಾದಲ್ಲಿ ಚಿಕಿತ್ಸೆ ಮುಂದುವರಿಸಿದ್ದಾರೆ.

ಚಿತ್ರೀಕರಣ ಮುಗಿದ ಬಳಿಕ ದಟ್ಟ ಗಿಡಗಂಟಿಗಳಿದ್ದ ಪ್ರದೇಶದಲ್ಲಿ ತಂತ್ರಜ್ಞರೊಂದಿಗೆ ಮಾತನಾಡುತ್ತಿದ್ದ ವೇಳೆ ಕೀಟ ಕಚ್ಚಿದರೂ, ಅದನ್ನು ಸಾಮಾನ್ಯ ಎಂದು ಭಾವಿಸಿ ರಾಜೇಶ್ ಶರ್ಮ ಚಿಕಿತ್ಸೆ ಪಡೆಯದೆ ನಿರ್ಲಕ್ಷ್ಯ ವಹಿಸಿದ್ದರು. ಆದರೆ ಕೆಲವೇ ಗಂಟೆಗಳಲ್ಲಿ ಬಲಗಾಲಿನಲ್ಲಿ ತೀವ್ರ ನೋವು ಮತ್ತು ಜ್ವರ ಕಾಣಿಸಿಕೊಂಡಿದ್ದು, ಕೋಲ್ಕತ್ತಾ ತಲುಪಿದ ನಂತರ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ.

ವೈದ್ಯರ ಪ್ರಕಾರ, ಸೋಂಕು ಕಾಲ್ಬೆರಳುಗಳಿಂದ ಮೊಣಕಾಲಿನವರೆಗೆ ವೇಗವಾಗಿ ಹರಡಿದ್ದು, ದೊಡ್ಡ ಗುಳ್ಳೆಗಳು ಕಾಣಿಸಿಕೊಂಡಿವೆ. ಜೊತೆಗೆ ಉಸಿರಾಟದ ತೊಂದರೆಯೂ ಕಾಣಿಸಿಕೊಂಡಿರುವುದರಿಂದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ರಕ್ತ ಹೆಪ್ಪುಗಟ್ಟುವಿಕೆ ಉಂಟಾಗುವ ಅಪಾಯವಿದ್ದು, ಅದು ಶ್ವಾಸಕೋಶಕ್ಕೆ ತಲುಪದಂತೆ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ.

ಡಾ. ಅವಿಜಿತ್ ಭಟ್ಟಾಚಾರ್ಯ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದು, ಬಂಗಾಳ ಚಲನಚಿತ್ರ ಕಲಾವಿದರ ಸಂಘ ಹಾಗೂ ನಟ ಪ್ರೊಸೆಂಜಿತ್ ಚಟರ್ಜಿ ವೈದ್ಯಕೀಯ ನೆರವು ಒದಗಿಸುತ್ತಿದ್ದಾರೆ. ಹಿಂದಿ ಮತ್ತು ಬಂಗಾಳಿ ಚಿತ್ರರಂಗದಲ್ಲಿ ಮೂರು ದಶಕಗಳಿಂದ ಸಕ್ರಿಯವಾಗಿರುವ ರಾಜೇಶ್ ಶರ್ಮ, ಅನೇಕ ಯಶಸ್ವಿ ಸಿನಿಮಾಗಳು ಮತ್ತು ವೆಬ್‌ಸಿರೀಸ್‌ಗಳ ಮೂಲಕ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದಾರೆ.

ಅಮೆರಿಕ-ಇರಾನ್ ಸಂಘರ್ಷ ತೀವ್ರ: ತನ್ನ ಹತ್ಯೆಗೆ ಸಂಚು ನಡೆಯುತ್ತಿದೆ ಎಂದ ಟ್ರಂಪ್!

ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸೇನಾ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.

ಇರಾನ್ ತನ್ನನ್ನು ಗುರಿಯಾಗಿಸಿಕೊಂಡು ಹತ್ಯೆಗೆ ಸಂಚು ರೂಪಿಸುತ್ತಿರಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.

ಟರ್ಕಿಯ ಅಂಕಾರಾದಲ್ಲಿ ನಡೆಯುತ್ತಿರುವ ನ್ಯಾಟೋ ಶೃಂಗಸಭೆ ವೇಳೆ ಮಾತನಾಡಿದ ಟ್ರಂಪ್, ತಾನು ಇರಾನ್‌ನ ಪ್ರಮುಖ ಗುರಿಯಾಗಿದ್ದೇನೆ ಎಂದು ಹೇಳಿದ್ದಾರೆ. ಇರಾನ್‌ನ ಕೆಲವು ಶಕ್ತಿಗಳು ತಮ್ಮ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಕದನ ವಿರಾಮ ಮುರಿದಿದೆ ಎಂದ ಟ್ರಂಪ್:

ಕತಾರ್ ಮಧ್ಯಸ್ಥಿಕೆಯಲ್ಲಿ ನಡೆದಿದ್ದ ಮಧ್ಯಂತರ ಕದನ ವಿರಾಮ ಒಪ್ಪಂದ ಈಗ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಇರಾನ್ ಪದೇಪದೆ ಒಪ್ಪಂದಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದ ಅವರು, ಇರಾನ್ ವಿರುದ್ಧ ಈಗಾಗಲೇ ಕಠಿಣ ದಾಳಿ ನಡೆಸಲಾಗಿದ್ದು, ಅಗತ್ಯವಿದ್ದರೆ ಮತ್ತಷ್ಟು ಮಿಲಿಟರಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇರಾನ್ ಜೊತೆ ಶಾಂತಿ ಮಾತುಕತೆ ನಡೆಸುವ ಪ್ರಯತ್ನಗಳು ಸಮಯ ವ್ಯರ್ಥವಾಗುತ್ತಿವೆ ಎಂದು ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಮೆರಿಕ ದಾಳಿಯಲ್ಲಿ 8 ಇರಾನ್ ಸೈನಿಕರ ಸಾವು:

ಇತ್ತೀಚಿನ ಅಮೆರಿಕದ ವಾಯುದಾಳಿಯಲ್ಲಿ ಇರಾನ್‌ನ 8 ಸೈನಿಕರು ಮೃತಪಟ್ಟಿದ್ದಾರೆ ಎಂದು ಇರಾನ್ ಸೇನೆ ತಿಳಿಸಿದೆ. ದಕ್ಷಿಣ ಇರಾನ್‌ನ ಬಂದರ್ ಅಬ್ಬಾಸ್ ಹಾಗೂ ಬುಶೆಹರ್ ಪ್ರದೇಶಗಳಲ್ಲಿರುವ ಮಿಲಿಟರಿ ನೆಲೆಗಳ ಮೇಲೆ ನಡೆದ ದಾಳಿಯಲ್ಲಿ ವಾಯುಪಡೆ ಮತ್ತು ನೌಕಾಪಡೆಯ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

ಅಮೆರಿಕ ಏಕಪಕ್ಷೀಯವಾಗಿ ದಾಳಿ ನಡೆಸುವ ಮೂಲಕ ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯ ಆರೋಪಿಸಿದೆ.

ಟ್ರಂಪ್‌ಗೆ ಇರಾನ್‌ನಿಂದ ಬೆದರಿಕೆ ಏಕೆ?

2020ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ವೇಳೆ ಡೊನಾಲ್ಡ್ ಟ್ರಂಪ್ ಆದೇಶದ ಮೇರೆಗೆ ಇರಾನ್‌ನ ಪ್ರಮುಖ ಸೇನಾ ಕಮಾಂಡರ್ ಜನರಲ್ ಖಾಸಿಂ ಸುಲೈಮಾನಿ ಅವರನ್ನು ಬಾಗ್ದಾದ್‌ನಲ್ಲಿ ಡ್ರೋನ್ ದಾಳಿ ಮೂಲಕ ಹತ್ಯೆ ಮಾಡಲಾಗಿತ್ತು.

ಈ ಘಟನೆ ಬಳಿಕ ಇರಾನ್ ನಾಯಕತ್ವ ಟ್ರಂಪ್ ವಿರುದ್ಧ ಸೇಡು ತೀರಿಸಿಕೊಳ್ಳುವ ಎಚ್ಚರಿಕೆ ನೀಡಿತ್ತು. ಇದೇ ಕಾರಣದಿಂದ ಈಗಲೂ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಟ್ರಂಪ್ ಹೇಳುತ್ತಿದ್ದಾರೆ.

ಹಾರ್ಮುಜ್ ಜಲಸಂಧಿ ಮೇಲೆ ವಿಶ್ವದ ಕಣ್ಣು:

ಅಮೆರಿಕ-ಇರಾನ್ ಸಂಘರ್ಷದಿಂದ ಹಾರ್ಮುಜ್ ಜಲಸಂಧಿಯಲ್ಲಿನ ಭದ್ರತೆ ಬಗ್ಗೆ ಆತಂಕ ಹೆಚ್ಚಾಗಿದೆ. ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಈ ಪ್ರದೇಶದಲ್ಲಿ ಸಂಘರ್ಷ ಮುಂದುವರಿದರೆ ಇಂಧನ ಪೂರೈಕೆಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ.

ಈ ಬೆಳವಣಿಗೆಗಳನ್ನು ವಿಶ್ವದ ರಾಷ್ಟ್ರಗಳು ಆತಂಕದಿಂದ ಗಮನಿಸುತ್ತಿವೆ.

ರಾತ್ರಿ ನಿದ್ರೆ ಸರಿಯಾಗಿ ಬರುತ್ತಿಲ್ಲವೇ? ಗಾಢ ನಿದ್ರೆಗೆ ಈ 5 ಆಹಾರಗಳನ್ನು ಸೇವನೆ ಮಾಡಿ ಸಾಕು.!

ಇತ್ತೀಚಿನ ದಿನಗಳಲ್ಲಿ ನಿದ್ರಾಹೀನತೆ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ರಾತ್ರಿ ತಡವಾಗಿ ಮೊಬೈಲ್, ಲ್ಯಾಪ್‌ಟಾಪ್ ಅಥವಾ ಟಿವಿ ಬಳಸುವುದು, ಅನಿಯಮಿತ ಜೀವನಶೈಲಿ, ಮಾನಸಿಕ ಒತ್ತಡ,

ಅತಿಯಾದ ಕ್ಯಾಫಿನ್ ಸೇವನೆ ಹಾಗೂ ದೈಹಿಕ ಚಟುವಟಿಕೆಯ ಕೊರತೆಯಿಂದ ಅನೇಕರು ಗಾಢ ನಿದ್ರೆಯಿಂದ ವಂಚಿತರಾಗುತ್ತಿದ್ದಾರೆ. ಸಮರ್ಪಕ ನಿದ್ರೆಯ ಕೊರತೆಯು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ.

ಆದರೆ ಆಹಾರ ಪದ್ಧತಿ ಮತ್ತು ಕೆಲವು ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ನಿದ್ರೆಯ ಗುಣಮಟ್ಟವನ್ನು ಸುಧಾರಿಸಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ನಿದ್ರೆ ಚೆನ್ನಾಗಿ ಬರಲು ಸಹಕಾರಿ ಎನ್ನಲಾದ ಕೆಲವು ಆಹಾರಗಳು ಹಾಗೂ ಅನುಸರಿಸಬೇಕಾದ ಅಭ್ಯಾಸಗಳು ಇಲ್ಲಿವೆ.

ಉತ್ತಮ ನಿದ್ರೆಗೆ ಸಹಾಯ ಮಾಡುವ 5 ಆಹಾರಗಳು

ಬಾದಾಮಿ:
ಬಾದಾಮಿಯಲ್ಲಿ ಮೆಗ್ನೀಷಿಯಂ, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳು ಸಮೃದ್ಧವಾಗಿವೆ. ಇವು ಸ್ನಾಯುಗಳನ್ನು ಶಾಂತಗೊಳಿಸಿ ಉತ್ತಮ ನಿದ್ರೆಗೆ ನೆರವಾಗಬಹುದು.

ಅಖರೋಟ್:
ಅಖರೋಟ್‌ನಲ್ಲಿ ಮೆಲಟೋನಿನ್, ಒಮೆಗಾ–3 ಕೊಬ್ಬಿನಾಮ್ಲಗಳು ಹಾಗೂ ಆರೋಗ್ಯಕರ ಕೊಬ್ಬುಗಳಿದ್ದು, ದೇಹದ ನಿದ್ರೆಯ ಚಕ್ರವನ್ನು ಸಮತೋಲನದಲ್ಲಿಡಲು ಸಹಕಾರಿಯಾಗಬಹುದು.

ಕಿವಿ ಹಣ್ಣು:
ವಿಟಮಿನ್ ಸಿ, ಫೋಲೇಟ್ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಕಿವಿ ಹಣ್ಣು ನಿದ್ರೆ ಬೇಗ ಬರಲು ಹಾಗೂ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ನೆರವಾಗುತ್ತದೆ ಎಂದು ಕೆಲವು ಅಧ್ಯಯನಗಳು ಸೂಚಿಸಿವೆ.

ಕೊಬ್ಬಿನಾಂಶ ಹೆಚ್ಚಿರುವ ಮೀನು:
ಸಾಲ್ಮನ್ ಹಾಗೂ ಮ್ಯಾಕರಲ್‌ನಂತಹ ಮೀನುಗಳಲ್ಲಿ ಒಮೆಗಾ–3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಡಿ ಅಧಿಕ ಪ್ರಮಾಣದಲ್ಲಿದ್ದು, ಉತ್ತಮ ನಿದ್ರೆ ಹಾಗೂ ಹೃದಯದ ಆರೋಗ್ಯಕ್ಕೆ ಸಹಕಾರಿ ಎನ್ನಲಾಗಿದೆ.

ಕ್ಯಾಮೊಮೈಲ್ ಟೀ:
ಕ್ಯಾಫಿನ್ ರಹಿತ ಈ ಹರ್ಬಲ್ ಟೀಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಮನಸ್ಸು ಮತ್ತು ದೇಹವನ್ನು ಶಾಂತಗೊಳಿಸಿ ಗಾಢ ನಿದ್ರೆಗೆ ನೆರವಾಗಬಹುದು.

ಉತ್ತಮ ನಿದ್ರೆಗಾಗಿ ಅನುಸರಿಸಬೇಕಾದ ಅಭ್ಯಾಸಗಳು

  • ಪ್ರತಿದಿನ ಒಂದೇ ಸಮಯಕ್ಕೆ ಮಲಗುವ ಮತ್ತು ಎದ್ದೇಳುವ ಅಭ್ಯಾಸ ರೂಢಿಸಿಕೊಳ್ಳಿ.
  • ಮಲಗುವ ಕನಿಷ್ಠ ಒಂದು ಗಂಟೆ ಮೊದಲು ಮೊಬೈಲ್, ಟಿವಿ ಹಾಗೂ ಲ್ಯಾಪ್‌ಟಾಪ್ ಬಳಕೆಯನ್ನು ನಿಲ್ಲಿಸಿ.
  • ಸಂಜೆ ವೇಳೆಯ ನಂತರ ಚಹಾ, ಕಾಫಿ ಸೇರಿದಂತೆ ಕ್ಯಾಫಿನ್ ಇರುವ ಪಾನೀಯಗಳ ಸೇವನೆಯನ್ನು ಕಡಿಮೆ ಮಾಡಿ.
  • ರಾತ್ರಿ ವೇಳೆ ಹಗುರವಾದ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸಿ.
  • ಮಲಗುವ ಕೋಣೆಯನ್ನು ಶಾಂತ, ಸ್ವಚ್ಛ ಹಾಗೂ ಆರಾಮದಾಯಕವಾಗಿರಿಸಿ.
  • ಪ್ರತಿದಿನ ನಿಯಮಿತವಾಗಿ ವ್ಯಾಯಾಮ ಮಾಡಿ. ಆದರೆ ಮಲಗುವ ಸಮಯಕ್ಕೆ ಸಮೀಪದಲ್ಲಿ ತೀವ್ರ ವ್ಯಾಯಾಮ ಮಾಡುವುದನ್ನು ತಪ್ಪಿಸಿ.

ತಜ್ಞರ ಪ್ರಕಾರ, ಸಮತೋಲಿತ ಆಹಾರ, ನಿಯಮಿತ ಜೀವನಶೈಲಿ ಹಾಗೂ ಉತ್ತಮ ನಿದ್ರೆಯ ಅಭ್ಯಾಸಗಳು ದೀರ್ಘಾವಧಿಯಲ್ಲಿ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗುತ್ತವೆ. ನಿದ್ರೆಯ ಸಮಸ್ಯೆ ಹಲವು ದಿನಗಳವರೆಗೆ ಮುಂದುವರಿದರೆ ಅಥವಾ ಹಗಲಿನ ವೇಳೆಯಲ್ಲಿಯೂ ಅತಿಯಾದ ಆಯಾಸ, ನಿದ್ರಾಹೀನತೆ ಅಥವಾ ಏಕಾಗ್ರತೆಯ ಕೊರತೆ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆಯುವುದು ಅಗತ್ಯ.

ಜಿಮ್‌ಗೆ ಸಮಯವಿಲ್ಲವೇ? ಪ್ರತಿದಿನ ಮೆಟ್ಟಿಲು ಹತ್ತುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು!

ಇಂದಿನ ಬ್ಯುಸಿ ಜೀವನಶೈಲಿಯಲ್ಲಿ ಜಿಮ್ ಅಥವಾ ನಿಯಮಿತ ವ್ಯಾಯಾಮಕ್ಕೆ ಸಮಯ ಮೀಸಲಿಡುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ.

ಆದರೆ ದಿನನಿತ್ಯದ ಸಣ್ಣ ದೈಹಿಕ ಚಟುವಟಿಕೆಗಳ ಮೂಲಕವೂ ಆರೋಗ್ಯ ಕಾಪಾಡಿಕೊಳ್ಳಬಹುದು. ಅಂತಹ ಸರಳ ಹಾಗೂ ಪರಿಣಾಮಕಾರಿ ವ್ಯಾಯಾಮಗಳಲ್ಲಿ ಮೆಟ್ಟಿಲು ಹತ್ತುವುದು ಪ್ರಮುಖವಾಗಿದೆ.

ಯಾವುದೇ ವಿಶೇಷ ಉಪಕರಣಗಳ ಅಗತ್ಯವಿಲ್ಲದೆ ಎಲ್ಲೆಡೆ ಮಾಡಬಹುದಾದ ಮೆಟ್ಟಿಲು ಹತ್ತುವ ಅಭ್ಯಾಸ ದೇಹವನ್ನು ಚುರುಕುಗೊಳಿಸುವುದರ ಜೊತೆಗೆ ಹೃದಯದ ಆರೋಗ್ಯಕ್ಕೂ ಸಹಕಾರಿಯಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಮೆಟ್ಟಿಲು ಹತ್ತುವುದರಿಂದ ಸಿಗುವ ಪ್ರಯೋಜನಗಳು:

ಹೃದಯದ ಆರೋಗ್ಯಕ್ಕೆ ಉತ್ತಮ:
ಮೆಟ್ಟಿಲು ಹತ್ತುವುದು ಉತ್ತಮ ಕಾರ್ಡಿಯೋ ವ್ಯಾಯಾಮವಾಗಿದೆ. ಇದು ಹೃದಯದ ಕಾರ್ಯಕ್ಷಮತೆಯನ್ನು ಹೆಚ್ಚಿಸಿ, ರಕ್ತ ಸಂಚಾರ ಸುಧಾರಿಸಲು ಸಹಾಯ ಮಾಡುತ್ತದೆ.

ಕಾಲಿನ ಸ್ನಾಯುಗಳು ಬಲಗೊಳ್ಳುತ್ತವೆ:
ಮೆಟ್ಟಿಲು ಹತ್ತುವಾಗ ತೊಡೆ, ಕಾಲಿನ ಸ್ನಾಯುಗಳು, ಸೊಂಟ ಹಾಗೂ ಗ್ಲೂಟ್ಸ್ ಭಾಗದ ಸ್ನಾಯುಗಳು ಹೆಚ್ಚು ಕೆಲಸ ಮಾಡುತ್ತವೆ. ಇದರಿಂದ ಸ್ನಾಯುಗಳ ಶಕ್ತಿ ಮತ್ತು ಸಹನಶಕ್ತಿ ಹೆಚ್ಚುತ್ತದೆ.

ತೂಕ ನಿಯಂತ್ರಣಕ್ಕೆ ಸಹಕಾರಿ:
ಸಾಮಾನ್ಯವಾಗಿ ನಡೆಯುವುದಕ್ಕಿಂತ ಮೆಟ್ಟಿಲು ಹತ್ತುವಾಗ ದೇಹ ಹೆಚ್ಚು ಶಕ್ತಿ ಬಳಸುತ್ತದೆ. ಇದರಿಂದ ಹೆಚ್ಚಿನ ಕ್ಯಾಲೊರಿ ಕರಗಲು ಸಹಾಯವಾಗುತ್ತದೆ.

ದೈಹಿಕ ಸಾಮರ್ಥ್ಯ ಹೆಚ್ಚಿಸುತ್ತದೆ:
ನಿಯಮಿತವಾಗಿ ಮೆಟ್ಟಿಲು ಹತ್ತುವುದರಿಂದ ಹೃದಯ ಮತ್ತು ಶ್ವಾಸಕೋಶಗಳ ಕಾರ್ಯಕ್ಷಮತೆ ಉತ್ತಮಗೊಳ್ಳುತ್ತದೆ. ದೇಹದ ಸ್ಟಾಮಿನಾ ಹಾಗೂ ಫಿಟ್ನೆಸ್ ಹೆಚ್ಚುತ್ತದೆ.

ಎಲುಬುಗಳ ಬಲ ಹೆಚ್ಚುತ್ತದೆ:
ಇದು ದೇಹದ ತೂಕವನ್ನು ಹೊರುವ ವ್ಯಾಯಾಮವಾಗಿರುವುದರಿಂದ ಎಲುಬುಗಳ ಆರೋಗ್ಯ ಕಾಪಾಡಲು ಸಹಕಾರಿಯಾಗುತ್ತದೆ.

ಯಾರು ಎಚ್ಚರಿಕೆ ವಹಿಸಬೇಕು?

ಮೊಣಕಾಲು ನೋವು, ಸಂಧಿವಾತ, ಹೃದಯ ಸಂಬಂಧಿ ಸಮಸ್ಯೆಗಳು, ಉಸಿರಾಟದ ತೊಂದರೆ, ತಲೆಸುತ್ತು ಅಥವಾ ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾದವರು ವೈದ್ಯರ ಸಲಹೆ ಪಡೆದು ಮಾತ್ರ ಮೆಟ್ಟಿಲು ಹತ್ತುವ ವ್ಯಾಯಾಮ ಮಾಡಬೇಕು.

ವಯೋವೃದ್ಧರು ಕೂಡ ತಮ್ಮ ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಎಚ್ಚರಿಕೆಯಿಂದ ಈ ಅಭ್ಯಾಸವನ್ನು ಮಾಡಬೇಕು.

ಮೆಟ್ಟಿಲು ಹತ್ತುವಾಗ ಗಮನಿಸಬೇಕಾದ ಅಂಶಗಳು:

  • ಆರಂಭದಲ್ಲಿ ನಿಧಾನವಾಗಿ ಪ್ರಾರಂಭಿಸಿ.
  • ಉತ್ತಮ ಹಿಡಿತ ಇರುವ ಶೂ ಧರಿಸಿ.
  • ಅಗತ್ಯವಿದ್ದರೆ ರೈಲಿಂಗ್ ಹಿಡಿದು ಹತ್ತಿ.
  • ಎದೆನೋವು, ಉಸಿರಾಟದ ತೊಂದರೆ ಅಥವಾ ತಲೆಸುತ್ತು ಕಾಣಿಸಿಕೊಂಡರೆ ತಕ್ಷಣ ನಿಲ್ಲಿಸಿ ವೈದ್ಯರನ್ನು ಸಂಪರ್ಕಿಸಿ.

ಸಮಯದ ಕೊರತೆಯ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಮೆಟ್ಟಿಲು ಹತ್ತುವ ಅಭ್ಯಾಸ ಸರಳ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ.

ಬೆಂಗಳೂರಿನಲ್ಲಿ ಅನಾಥ ವಾಹನಗಳ ತೆರವು ಕಾರ್ಯಕ್ಕೆ ಜಿಬಿಎ ಸಿದ್ಧತೆ: ಜು.10ರಿಂದ ಕಾರ್ಯಾಚರಣೆ ಆರಂಭ!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ, ಸಾರ್ವಜನಿಕ ಸ್ಥಳಗಳು ಹಾಗೂ ತೆರೆದ ಪ್ರದೇಶಗಳಲ್ಲಿ ಹಲವು ದಿನಗಳಿಂದ ಅನಾಥವಾಗಿ ನಿಲ್ಲಿಸಿರುವ ವಾಹನಗಳ ತೆರವು ಕಾರ್ಯಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಜ್ಜಾಗಿದೆ.

ಜುಲೈ 10ರಿಂದ ನಗರದ 5 ನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ಆರಂಭವಾಗಲಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟುಹೋಗಿರುವ ವಾಹನಗಳನ್ನು ಸಂಚಾರಿ ಪೊಲೀಸರು ಹಾಗೂ ಜಿಬಿಎ ಅಧಿಕಾರಿಗಳು ಜಂಟಿಯಾಗಿ ಗುರುತಿಸಿ ತೆರವುಗೊಳಿಸಲಿದ್ದಾರೆ. ಈಗಾಗಲೇ ಗುರುತಿಸಲಾದ ಅನಾಥ ವಾಹನಗಳಿಗೆ ಮೊದಲು 7 ದಿನಗಳ ಕಾಲಾವಕಾಶ ನೀಡಲಾಗುತ್ತದೆ.

ವಾಹನಗಳ ಮೇಲೆ ಅಧಿಕೃತ ಸ್ಟಿಕ್ಕರ್ ಮಾದರಿಯ ನೋಟಿಸ್ ಅಂಟಿಸಲಾಗುತ್ತದೆ. ಜೊತೆಗೆ ವಾಹನಗಳ ಚಕ್ರಗಳಿಗೆ ವೀಲ್ ಕ್ಲಾಂಪ್ ಅಳವಡಿಸಲಾಗುವುದು. ನೋಟಿಸ್ ನೀಡಿದ ಅವಧಿಯೊಳಗೆ ವಾಹನ ಮಾಲೀಕರು ವಾಹನಗಳನ್ನು ತೆರವುಗೊಳಿಸದಿದ್ದರೆ, ಅಂತಹ ವಾಹನಗಳನ್ನು ಜಪ್ತಿ ಮಾಡಿ ಸ್ಥಳಾಂತರಿಸಲಾಗುತ್ತದೆ.

ಜಪ್ತಿ ಮಾಡಲಾದ ವಾಹನಗಳನ್ನು ನಿಯಮಾನುಸಾರ ಬಹಿರಂಗ ಹರಾಜು ಮಾಡುವುದಾಗಿ ಜಿಬಿಎ ತಿಳಿಸಿದೆ. ಸಾರ್ವಜನಿಕ ಸ್ಥಳಗಳ ಸ್ವಚ್ಛತೆ, ಸಂಚಾರ ವ್ಯವಸ್ಥೆ ಸುಗಮಗೊಳಿಸುವುದು ಹಾಗೂ ಅನಗತ್ಯವಾಗಿ ನಿಲ್ಲಿಸಿರುವ ವಾಹನಗಳಿಂದ ಉಂಟಾಗುವ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ.

ಕರ್ನಾಟಕದಲ್ಲಿ ಮುಂಗಾರು ಅಬ್ಬರ: ಕರಾವಳಿ ಮತ್ತು ಮಲೆನಾಡಿನಲ್ಲಿ ಭಾರೀ ಮಳೆ; ‘ರೆಡ್ ಅಲರ್ಟ್’ ಘೋಷಣೆ!

ಬೆಂಗಳೂರು: ರಾಜ್ಯದಲ್ಲಿ ನೈಋತ್ಯ ಮುಂಗಾರು ಮತ್ತಷ್ಟು ಚುರುಕುಗೊಂಡಿದ್ದು, ಕರಾವಳಿ ಜಿಲ್ಲೆಗಳು ಹಾಗೂ ಮಲೆನಾಡು ಭಾಗಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದೆ.

ಮುಂದಿನ 24 ಗಂಟೆಗಳಲ್ಲಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಜೊತೆಗೆ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಅತಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಘಾಟ್ ಪ್ರದೇಶಗಳಲ್ಲಿ ಗುಡ್ಡ ಕುಸಿತದ ಅಪಾಯ ಇರುವುದರಿಂದ ಸಾರ್ವಜನಿಕರು ಹಾಗೂ ಪ್ರವಾಸಿಗರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಕರಾವಳಿ ಭಾಗದಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಸದ್ಯ ಯಾವುದೇ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಿಲ್ಲ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ನಗರದ ಹಲವು ಭಾಗಗಳಲ್ಲಿ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಸಾಧಾರಣದಿಂದ ಜಿಟಿ ಜಿಟಿ ಮಳೆಯಾಗುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ತುಮಕೂರು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಮುಂಗಾರು ಚುರುಕಾಗಿರುವ ಹಿನ್ನೆಲೆಯಲ್ಲಿ ಜನರು ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಗಳನ್ನು ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.