ನವದೆಹಲಿ: ಭಾರತದ ರಕ್ಷಣಾ ಪಡೆಗಳ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ (ನಿವೃತ್ತ) ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಇದೇ ವೇಳೆ ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರನ್ನು ನೇಮಕ ಮಾಡುವ ಮಹತ್ವದ ಆದೇಶವೂ ಹೊರಬಿದ್ದಿದೆ.
ಪ್ರಸ್ತುತ ಸಿಡಿಎಸ್ ಆಗಿರುವ ಜನರಲ್ ಅನಿಲ್ ಚೌಹಾಣ್ ಅವರು ಮೇ 30ರಂದು ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಲಿದ್ದು, ಅವರ ಸ್ಥಾನವನ್ನು ರಾಜಾ ಸುಬ್ರಮಣಿ ವಹಿಸಿಕೊಳ್ಳಲಿದ್ದಾರೆ.
ಪ್ರಸ್ತುತ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯದಲ್ಲಿ ಮಿಲಿಟರಿ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಲೆಫ್ಟಿನೆಂಟ್ ಜನರಲ್ ರಾಜಾ ಸುಬ್ರಮಣಿ, ಕಳೆದ ವರ್ಷ ಜುಲೈ 31ರಂದು ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥ ಹುದ್ದೆಯಿಂದ ನಿವೃತ್ತರಾಗಿದ್ದರು.
ಎನ್.ಎಸ್. ರಾಜಾ ಸುಬ್ರಮಣಿ ಅವರು ಭಾರತೀಯ ಸೇನೆಯಲ್ಲಿ ಸುಮಾರು 39 ವರ್ಷಗಳ ಸೇವೆ ಸಲ್ಲಿಸಿರುವ ಅನುಭವಿ ಅಧಿಕಾರಿ. 1985ರ ಡಿಸೆಂಬರ್ 14ರಂದು ಗರ್ವಾಲ್ ರೈಫಲ್ಸ್ನ 8ನೇ ಬೆಟಾಲಿಯನ್ಗೆ ಮೊದಲ ಬಾರಿ ನಿಯೋಜನೆಗೊಂಡಿದ್ದರು.
ಅವರು ಕಳೆದ ವರ್ಷ ಸೆಪ್ಟೆಂಬರ್ 1ರಂದು ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಮಿಲಿಟರಿ ಸಲಹೆಗಾರರಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ಇದಕ್ಕೂ ಮೊದಲು ಜುಲೈ 2024ರಿಂದ ಜುಲೈ 2025ರವರೆಗೆ ಭೂಸೇನೆಯ ಉಪ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ, ಮಾರ್ಚ್ 2023ರಿಂದ ಜೂನ್ 2024ರವರೆಗೆ ಸೆಂಟ್ರಲ್ ಕಮಾಂಡ್ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿಯೂ ಸೇವೆ ಸಲ್ಲಿಸಿದ್ದರು.
ಭಾರತೀಯ ಸೇನೆಯಲ್ಲಿ ಸಲ್ಲಿಸಿದ ದೀರ್ಘಕಾಲದ ಸೇವೆ ಹಾಗೂ ಶೌರ್ಯವನ್ನು ಪರಿಗಣಿಸಿ ರಾಜಾ ಸುಬ್ರಮಣಿ ಅವರಿಗೆ ಹಲವು ಪ್ರತಿಷ್ಠಿತ ಸೇನಾ ಗೌರವಗಳು ಲಭಿಸಿವೆ. ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಸೇನಾ ಪದಕ ಹಾಗೂ ವಿಶಿಷ್ಟ ಸೇವಾ ಪದಕ ಸೇರಿದಂತೆ ಅನೇಕ ಗೌರವಗಳು ಅವರ ಮುಡಿಗೇರಿವೆ.
ಜನರಲ್ ಅನಿಲ್ ಚೌಹಾಣ್ ನಿವೃತ್ತಿಯಾದ ಬಳಿಕ ಮೇ 30ರಂದು ರಾಜಾ ಸುಬ್ರಮಣಿ ಅವರು ಅಧಿಕೃತವಾಗಿ ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

