ಚಿಕ್ಕಬಳ್ಳಾಪುರ: ಚಿನ್ನ, ಬೆಳ್ಳಿ, ನಗದು ಕಳ್ಳತನ ಸಾಮಾನ್ಯ. ಆದರೆ ಇದೀಗ ಕಳ್ಳರ ಕಣ್ಣು ರೈತರ ತೋಟಗಳ ಮೇಲೆ ಬಿದ್ದಿದೆ.
ಟೊಮೆಟೊ, ದಾಳಿಂಬೆ ಬಳಿಕ ಇದೀಗ ದ್ರಾಕ್ಷಿ ತೋಟಕ್ಕೆ ನುಗ್ಗಿದ ಕಳ್ಳರು, ರಾತ್ರೋರಾತ್ರಿ ಲಕ್ಷಾಂತರ ರೂ. ಮೌಲ್ಯದ ದ್ರಾಕ್ಷಿಯನ್ನು ಕದ್ದೊಯ್ದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕೊಳವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಬಸವರಾಜ್ ಎಂಬುವವರಿಗೆ ಸೇರಿದ ತೋಟದಲ್ಲಿ ಕಳ್ಳತನ ನಡೆದಿದೆ. ಬಸವರಾಜ್ ತಮ್ಮ ತೋಟದಲ್ಲಿ ರೆಡ್ ಗ್ಲೋಬ್ ತಳಿಯ ದ್ರಾಕ್ಷಿ ಬೆಳೆದಿದ್ದರು. ಪ್ರಸ್ತುತ ಮಾರುಕಟ್ಟೆಯಲ್ಲಿ ಕೆಜಿಗೆ ಸುಮಾರು 150 ರೂ. ಬೆಲೆ ಹಾಗೂ ಭಾರೀ ಬೇಡಿಕೆ ಇದೆ.
ದ್ರಾಕ್ಷಿ ಗೊಂಚಲುಗಳು ಒಂದೂವರೆಯಿಂದ ಎರಡೂವರೆ ಕೆಜಿಯಷ್ಟು ತೂಕ ಬರುವಂತೆ ಬೆಳೆದಿದ್ದು, ವರ್ತಕರು ತೋಟದಲ್ಲೇ ಖರೀದಿಸಿ ಕಟಾವು ಮಾಡಿಕೊಂಡು ಹೋಗುತ್ತಿದ್ದರು. ಆದರೆ, ರಾತ್ರಿ ವೇಳೆ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು ಮೂರು ಟನ್ ದ್ರಾಕ್ಷಿಯನ್ನು ಕಟಾವು ಮಾಡಿಕೊಂಡು ಪರಾರಿಯಾಗಿದ್ದಾರೆ.
3 ಲಕ್ಷ ರೂ. ಮೌಲ್ಯದ ದ್ರಾಕ್ಷಿ ಕಳವು:
ಕಳುವಾದ ದ್ರಾಕ್ಷಿಯ ಒಟ್ಟು ಮೌಲ್ಯ ಸುಮಾರು 3 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮಾಹಿತಿ ತಿಳಿದ ತಕ್ಷಣ ನಂದಿಗಿರಿಧಾಮ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತೋಟದ ಹಿಂಭಾಗದಲ್ಲಿರುವ ಕೆರೆಯ ಬಳಿ ವಾಹನ ನಿಲ್ಲಿಸಿ, ಅಲ್ಲಿಂದ ದ್ರಾಕ್ಷಿಯನ್ನು ಸಾಗಿಸಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಹಿಂದೆ ಟೊಮೆಟೊ ಹಾಗೂ ದಾಳಿಂಬೆ ಬೆಲೆ ಏರಿಕೆಯಾದ ಸಂದರ್ಭದಲ್ಲೂ ತೋಟಗಳಿಗೆ ನುಗ್ಗಿ ಬೆಳೆ ಕಳವು ಮಾಡಿದ್ದ ಪ್ರಕರಣಗಳು ವರದಿಯಾಗಿದ್ದವು. ಆದರೆ ದ್ರಾಕ್ಷಿ ತೋಟದಲ್ಲಿ ಇಂತಹ ಕಳ್ಳತನ ನಡೆದಿರುವುದು ಇದೇ ಮೊದಲ ಬಾರಿ ಎನ್ನಲಾಗಿದೆ.
ಒಂದೇ ರಾತ್ರಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ದ್ರಾಕ್ಷಿ ಕಳುವಾಗಿರುವುದು ಜಿಲ್ಲೆಯ ರೈತರನ್ನು ಬೆಚ್ಚಿಬೀಳಿಸಿದೆ. ತೋಟಗಾರಿಕಾ ಬೆಳೆಗಳ ಮೇಲೆ ಕಳ್ಳರ ಕಣ್ಣು ಬೀಳುತ್ತಿರುವ ಹಿನ್ನೆಲೆಯಲ್ಲಿ ತೋಟಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಹಾಗೂ ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಸ್ಥಳೀಯ ರೈತರು ಪೊಲೀಸರನ್ನು ಒತ್ತಾಯಿಸಿದ್ದಾರೆ.

