ಬೆಂಗಳೂರು: ರಾಜ್ಯದಲ್ಲಿ ಕಳೆದ ಹಲವು ವರ್ಷಗಳಿಂದ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗೆ ಕಾರಣವಾಗಿದ್ದ ಜಾತಿಗಣತಿ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದಲ್ಲಿ ಅಧಿಕೃತವಾಗಿ ಸ್ವೀಕರಿಸಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ಅವರು ವರದಿಯನ್ನು ಸಿಎಂಗೆ ಸಲ್ಲಿಸಿದರು. ಸುಮಾರು 300 ಪುಟಗಳಿರುವ ಈ ವರದಿ ದೀರ್ಘಕಾಲದ ಸಮೀಕ್ಷೆ ಆಧಾರದಲ್ಲಿ ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿಯ ಪ್ರಕಾರ ರಾಜ್ಯದ ವಿವಿಧ ಸಮುದಾಯಗಳ ಜನಸಂಖ್ಯೆ ವಿವರಗಳು ಉಲ್ಲೇಖವಾಗಿದ್ದು, ಮುಸ್ಲಿಂ ಸಮುದಾಯ ಶೇ.14ರಷ್ಟು (75 ರಿಂದ 80 ಲಕ್ಷ ಜನಸಂಖ್ಯೆ) ಅತಿ ದೊಡ್ಡ ಸಮುದಾಯವಾಗಿದೆ ಎಂದು ಹೇಳಲಾಗಿದೆ. ನಂತರ ವೀರಶೈವ–ಲಿಂಗಾಯತ ಶೇ.11ರಷ್ಟು (60 ರಿಂದ 65 ಲಕ್ಷ), ಒಕ್ಕಲಿಗರು ಶೇ.10ರಷ್ಟು (55 ರಿಂದ 60 ಲಕ್ಷ) ಹಾಗೂ ಕುರುಬರು ಶೇ.8ರಷ್ಟು (40 ರಿಂದ 45 ಲಕ್ಷ) ಜನಸಂಖ್ಯೆ ಹೊಂದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವರದಿ ಸಲ್ಲಿಕೆ ಬಳಿಕ ಮಾತನಾಡಿದ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್, ಸಮೀಕ್ಷೆ ಸಂಪೂರ್ಣವಾಗಿ ನಡೆಸಲಾಗಿದ್ದು, ಭಾಗವಹಿಸದವರ ಅಂಕಿಅಂಶಗಳನ್ನು ಸೇರಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ವರದಿ ತಾಂತ್ರಿಕ ಹಾಗೂ ಭಾಷಾಂತರ ಕಾರ್ಯದಿಂದಾಗಿ ವಿಳಂಬವಾಗಿದೆ ಎಂದೂ ಅವರು ಹೇಳಿದ್ದಾರೆ.
ಜಾತಿಗಣತಿ ವರದಿ ಬಹಿರಂಗವಾದ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

