ಚೆನ್ನೈ: ತಮಿಳು ಸೂಪರ್ಸ್ಟಾರ್ ಅಜಿತ್ ಕುಮಾರ್ ಅವರ ಅಪರೂಪದ ನಡೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಯಾವುದೇ ಪ್ರಚಾರ ಕಾರ್ಯಕ್ರಮ, ಆಡಿಯೋ ಲಾಂಚ್ ಅಥವಾ ಅಭಿಮಾನಿ ಸಂವಾದಗಳಿಂದ ದೂರ ಉಳಿಯುವ ಅಜಿತ್, ತಮ್ಮ ಸ್ನೇಹಿತನ ಮಕ್ಕಳಿಗೆ ಸ್ವತಃ ವಿಡಿಯೋ ಕಾಲ್ ಮಾಡಿ ಅಚ್ಚರಿ ನೀಡಿದ್ದಾರೆ.
ಸಿನಿಮಾ ಮತ್ತು ವೈಯಕ್ತಿಕ ಬದುಕನ್ನು ಪ್ರತ್ಯೇಕವಾಗಿಟ್ಟುಕೊಳ್ಳುವ ಅಜಿತ್ ಕುಮಾರ್, ಸದ್ಯ ಅಂತರರಾಷ್ಟ್ರೀಯ ರೇಸಿಂಗ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ವೇಳೆ ತಮ್ಮ ಆಪ್ತ ಸ್ನೇಹಿತನ ಇಬ್ಬರು ಮಕ್ಕಳೊಂದಿಗೆ ವಿಡಿಯೋ ಕಾಲ್ನಲ್ಲಿ ಮಾತನಾಡಿ ಅವರ ಕನಸಿನ ಕ್ಷಣವನ್ನು ಸಾಕಾರಗೊಳಿಸಿದ್ದಾರೆ.
ರೇಸಿಂಗ್ ಉಡುಪಿನಲ್ಲೇ ಕಾಣಿಸಿಕೊಂಡ ಅಜಿತ್, ಮಕ್ಕಳೊಂದಿಗೆ ಅತ್ಯಂತ ಪ್ರೀತಿಯಿಂದ ಮಾತನಾಡಿ ಅವರ ಶಿಕ್ಷಣ, ದಿನನಿತ್ಯದ ಚಟುವಟಿಕೆಗಳ ಬಗ್ಗೆ ವಿಚಾರಿಸಿದರು. ಜೊತೆಗೆ “ಶೀಘ್ರದಲ್ಲೇ ನಿಮ್ಮನ್ನು ಖುದ್ದಾಗಿ ಭೇಟಿ ಮಾಡುತ್ತೇನೆ. ದೇವರು ನಿಮ್ಮನ್ನು ಸದಾ ಕಾಪಾಡಲಿ” ಎಂದು ಶುಭ ಹಾರೈಸಿದರು.
ಸೂಪರ್ಸ್ಟಾರ್ ಜೊತೆ ನೇರವಾಗಿ ಮಾತನಾಡಿದ ಖುಷಿಯಲ್ಲಿ ಮಕ್ಕಳು ಸಂಭ್ರಮಿಸಿದ ದೃಶ್ಯಗಳು ಇದೀಗ ವೈರಲ್ ಆಗಿವೆ. ಅಭಿಮಾನಿಗಳು ವಿಡಿಯೋ ನೋಡಿ ಭಾವುಕರಾಗಿದ್ದು, ಅಜಿತ್ ಅವರ ಸರಳತೆ ಮತ್ತು ವಿನಯಶೀಲತೆಯನ್ನು ಕೊಂಡಾಡುತ್ತಿದ್ದಾರೆ.
“ಇದು ನಿಜವಾದ ಸ್ಟಾರ್ಡಮ್”, “ಅಜಿತ್ ಸರ್ ಅವರಂತಹ ವ್ಯಕ್ತಿತ್ವ ಅಪರೂಪ”, “ಕೋಟ್ಯಂತರ ಅಭಿಮಾನಿಗಳಿದ್ದರೂ ನೆಲದ ಜೊತೆಗಿನ ನಂಟು ಕಳೆದುಕೊಂಡಿಲ್ಲ” ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
90ರ ದಶಕದಿಂದ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನ ನಿರ್ಮಿಸಿಕೊಂಡಿರುವ ಅಜಿತ್, ಇಂದಿಗೂ ಪ್ರಚಾರದ ಗಿಮಿಕ್ಗಳಿಗಿಂತ ತಮ್ಮ ಕೆಲಸದ ಮೂಲಕವೇ ಜನರನ್ನು ತಲುಪುವ ನಟರಾಗಿದ್ದಾರೆ. ಇತ್ತೀಚೆಗೆ ತಾಯಿಯ ಅಗಲಿಕೆಯ ದುಃಖ ಅನುಭವಿಸಿದ್ದರೂ, ಮತ್ತೆ ರೇಸಿಂಗ್ ಟ್ರ್ಯಾಕ್ಗೆ ಮರಳಿರುವ ಅವರು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

