Home Blog

ಮಳೆರಾಯನ ರೌದ್ರಾವತಾರಕ್ಕೆ ಬಿಚ್ಚಿಬಿದ್ದ ಗದಗ: ಭೀಕರ ಗಾಳಿಗೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು!

ಗದಗ:- ಗದಗ-ಬೆಟಗೇರಿ ಅವಳಿ ನಗರದಲ್ಲಿ ಸೋಮವಾರ ಸಂಜೆ ಸುರಿದ ಭಾರಿ ಗಾಳಿ ಸಹಿತ ಮಳೆ ಜನಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ.

ಅರ್ಧ ಗಂಟೆಗೂ ಹೆಚ್ಚು ಕಾಲ ಮುಂದುವರಿದ ಮಳೆ ಹಾಗೂ ಭಾರೀ ಗಾಳಿಗೆ ಅನೇಕ ಕಡೆ ಬೃಹತ್ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ಸಂಚಾರಕ್ಕೆ ತೀವ್ರ ಅಡ್ಡಿ ಉಂಟಾಯಿತು. ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡು ಸಾರ್ವಜನಿಕರು ಕತ್ತಲಲ್ಲೇ ಪರದಾಡುವಂತಾಯಿತು.

ವೀರನಾರಾಯಣ ದೇವಸ್ಥಾನದ ಬಳಿ ಬೃಹತ್ ಮರವೊಂದು ಮನೆ ಮೇಲಕ್ಕೆ ಬಿದ್ದ ಪರಿಣಾಮ ಕೆಲಕಾಲ ಭೀತಿಯ ವಾತಾವರಣ ನಿರ್ಮಾಣವಾಯಿತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮುಳಗುಂದ ನಾಕಾ ಬಳಿ ಗೂಡ್ಸ್ ವಾಹನದ ಮೇಲೆ ಮರ ಬಿದ್ದಿದ್ದು, ವಾಹನ ಜಖಂಗೊಂಡಿದೆ. ಇದರಿಂದ ರಸ್ತೆ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡು ವಾಹನಗಳ ಸರದಿ ನಿರ್ಮಾಣವಾಯಿತು.

ಗದಗ ಡಿಪೋ ಮುಂಭಾಗದಲ್ಲಿಯೂ ಬೃಹತ್ ಮರ ಧರೆಗುರುಳಿದ ಪರಿಣಾಮ ಸಾರಿಗೆ ಬಸ್‌ಗಳು ಡಿಪೋದಿಂದ ಹೊರಬರಲಾಗದ ಸ್ಥಿತಿ ಉಂಟಾಯಿತು. ಬಳಿಕ ಜೆಸಿಬಿ ಹಾಗೂ ಕಟಿಂಗ್ ಯಂತ್ರಗಳ ಸಹಾಯದಿಂದ ಮರ ತೆರವು ಕಾರ್ಯಾಚರಣೆ ನಡೆಸಲಾಯಿತು.

ನೆಲಕ್ಕುರುಳಿದ 100 ವರ್ಷದ ಬೇವಿನ ಮರ:-

ಬೆಟಗೇರಿಯ ಕಬಾಡಿ ರಸ್ತೆಯ ಜೋಡು ಬಸವೇಶ್ವರ ದೇವಸ್ಥಾನದ ಬಳಿ ಸುಮಾರು 100 ವರ್ಷದ ಬೇವಿನ ಮರ ವಿದ್ಯುತ್ ಕಂಬದೊಂದಿಗೆ ಬುಡಸಹಿತ ಉರುಳಿ ಬಿದ್ದಿದೆ. ಇದರಿಂದ ವಿದ್ಯುತ್ ತಂತಿಗಳು ತುಂಡಾಗಿ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಯಿತು. ಎರಡು ಕಾರುಗಳ ಮೇಲೂ ಮರ ಬಿದ್ದಿದ್ದು, ವಾಹನಗಳು ಜಖಂಗೊಂಡಿವೆ.

ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ!

ಎಸ್‌ಎಂ ಕೃಷ್ಣ ನಗರ, ಉಸಿಗಿನಗಟ್ಟಿ ಓಣಿ ಹಾಗೂ ಯಲಿಗಾರ ಪ್ಲಾಟ್ ಭಾಗಗಳಲ್ಲಿ ಭಾರೀ ಗಾಳಿಗೆ ಮನೆಗಳ ಚಾವಣಿಗಳು ಹಾರಿ ಹೋಗಿರುವ ಘಟನೆಗಳು ವರದಿಯಾಗಿವೆ. ನಿವಾಸಿಗಳು ಭೀತಿಯಿಂದ ಮನೆಗಳಿಂದ ಹೊರಬಂದ ದೃಶ್ಯಗಳು ಕಂಡುಬಂದವು.

ರಸ್ತೆ ಮೇಲೆ ತೇಲಿದ ಸಿಂಟ್ಯಾಕ್ಸ್ ಟ್ಯಾಂಕ್:-

ತಿಲಕ್ ಪಾರ್ಕ್ ಬಳಿ ಭಾರೀ ಮಳೆಯಿಂದ ಸಿಂಟ್ಯಾಕ್ಸ್ ನೀರಿನ ಟ್ಯಾಂಕ್ ರಸ್ತೆ ಮೇಲೆ ತೇಲಿದ ದೃಶ್ಯ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿತು.

ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರ:-

ಬೆಟಗೇರಿಯಲ್ಲಿ ಸಿಡಿಲು ಬಡಿದ ಪರಿಣಾಮ ತೆಂಗಿನ ಮರವೊಂದು ಹೊತ್ತಿ ಉರಿದ ಘಟನೆ ನಡೆದಿದೆ. ಭಾರೀ ಸಿಡಿಲಿನ ಶಬ್ದಕ್ಕೆ ಜನರು ಆತಂಕಗೊಂಡರು.

ಒಟ್ಟಾರೆ ಗಾಳಿ-ಮಳೆಯ ಅಬ್ಬರಕ್ಕೆ ಗದಗ-ಬೆಟಗೇರಿ ನಗರ ತತ್ತರಿಸಿದ್ದು, ಅದೃಷ್ಟವಶಾತ್ ಜೀವಹಾನಿ ಸಂಭವಿಸಿಲ್ಲ. ಆದರೆ ಆಸ್ತಿ ಹಾನಿ, ವಿದ್ಯುತ್ ವ್ಯತ್ಯಯ ಹಾಗೂ ಸಂಚಾರ ಅಸ್ತವ್ಯಸ್ತದಿಂದ ಜನರು ತೀವ್ರ ಸಂಕಷ್ಟ ಅನುಭವಿಸಿದ್ದಾರೆ.

ಬೆಟ್ಟದ ನೆಲ್ಲಿಕಾಯಿ ಗಂಟಲಲ್ಲಿ ಸಿಲುಕಿ 2 ವರ್ಷದ ಗಂಡು ಮಗು ಸಾವು!

ಕೋಲಾರ: ಕೋಲಾರ ಜಿಲ್ಲೆ ಮಾಲೂರು ಪಟ್ಟದ ಗಾಂಧಿ ಸರ್ಕಲ್‌ನಲ್ಲಿ ಇಂದು ದುರಂತ ಸಂಭವಿಸಿದೆ.

ಬೆಟ್ಟದ ನೆಲ್ಲಿಕಾಯಿ ಗಂಟಲಲ್ಲಿ ಸಿಲುಕಿ ರವಿ ಹಾಗೂ ಮಾಲಾ ದಂಪತಿಯ ಎರಡು ವರ್ಷದ ಗಂಡು ಮಗು ವಿಜಯೇಂದ್ರ ಮೃತಪಟ್ಟಿದ್ದಾನೆ.

ಘಟನೆ ನಡೆದ ದಿನ ಆಟವಾಡುವಾಗ ಮಗು ಬೆಟ್ಟದ ನೆಲ್ಲಿಕಾಯಿ ನುಂಗಿದೆ. ಈ ವೇಳೆ ಅದು ಗಂಟಲಲ್ಲಿ ಸಿಲುಕಿಕೊಂಡಿದೆ. ಪರಿಣಾಮ ಉಸಿರಾಟದ ಸಮಸ್ಯೆ ಉಂಟಾಗಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ದುರದೃಷ್ಟವಶಾತ್ ಗಂಟಲಲ್ಲಿ ಸಿಲುಕಿದ್ದ ನೆಲ್ಲಿಕಾಯಿ ಹೊರ ತೆಗೆಯಲಾಗದೇ ಮಗು ಸಾವನ್ನಪ್ಪಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು,

ಈ ಘಟನೆ ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

“ಅಂತರ್‌ಜಿಲ್ಲಾ ಕಳ್ಳರ ಗ್ಯಾಂಗ್‌ಗೆ ಬಿಗ್ ಶಾಕ್!”

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಧಾರವಾಡ ಹಾಗೂ ಹಾವೇರಿ ಜಿಲ್ಲಾ ಪೊಲೀಸರ ಭರ್ಜರಿ ಜಂಟಿ ಕಾರ್ಯಾಚರಣೆಯಲ್ಲಿ ಅಂತರ್‌ರಾಜ್ಯ ಕಳ್ಳರ ಜಾಲವನ್ನು ಭೇದಿಸಿ, ಸುಮಾರು ₹1 ಕೋಟಿ 15 ಲಕ್ಷ ಮೌಲ್ಯದ ಬಂಗಾರ, ಬೆಳ್ಳಿ ಆಭರಣಗಳು ಹಾಗೂ ಕಳ್ಳತನದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಕಿರೇಸೂರ ಗ್ರಾಮದಲ್ಲಿ ಕಳೆದ ಎಪ್ರಿಲ್ ತಿಂಗಳಲ್ಲಿ ನಡೆದ ಮನೆ ಕಳ್ಳತನ ಹಾಗೂ ಹಾವೇರಿ ಜಿಲ್ಲೆಯ ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ದಿನಗಳ ಹಿಂದೆ ನಡೆದ ಬಂಗಾರದ ಅಂಗಡಿ ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರ ಗ್ರಾಮದ ಶಿವರಾಜ ಹನಮಂತಪ್ಪ ಮೋಡಕೇರ ಹಾಗೂ ಅಶೋಕ @ ರಮೇಶ್ ಶಿವಪ್ಪ ಕೊಂಚಿಕೊರವರ (ಅಂಬಾಮಠ, ಶಿಂದನೂರ ತಾಲೂಕು) ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಆರೋಪಿಗಳಿಂದ ೩೧೦ ಗ್ರಾಂ ಬಂಗಾರದ ಆಭರಣಗಳು, ೨೬ ಕೆ.ಜಿ. ಬೆಳ್ಳಿಯ ಆಭರಣಗಳು ಹಾಗೂ ತೆಲಂಗಾಣ ರಾಜ್ಯದಲ್ಲಿ ಕಳವು ಮಾಡಿದ್ದ ಬುಲೆರೋ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕ ಗುಂಜನ್ ಆರ್ಯ ಹಾಗೂ ಹಾವೇರಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಯಶೋದಾ ವಂಟಗೋಡಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ಧಾರವಾಡ ಜಿಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆ, ಡಿವೈಎಸ್‌ಪಿ ಶಿವಾನಂದ ಕಟಗಿ, ಡಿವೈಎಸ್‌ಪಿ ವಿನೋದ ಮುಕ್ತಧಾರ ನೇತೃತ್ವದಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸ್‌ಪೆಕ್ಟರ್ ಮುರುಗೇಶ ಚನ್ನಣ್ಣವರ, ನವಲಗುಂದ ಸಿಪಿಐ ರವಿ ಕಪ್ಪತ್ತನವರ, ಹಾನಗಲ್ ಸಿಪಿಐ ಬಸವರಾಜ ಹಳಬಣ್ಣವರ, ಪಿಎಸ್‌ಐ ಇಮ್ರಾನ್ ಪಠಾಣ ಸೇರಿದಂತೆ ವಿವಿಧ ಠಾಣೆಗಳ ಸಿಬ್ಬಂದಿ ಚುರುಕಿನ ಕಾರ್ಯಾಚರಣೆ ನಡೆಸಿದರು.

ಒಟ್ಟು ಆರು ಜನ ಆರೋಪಿತರ ತಂಡದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಉಳಿದ ನಾಲ್ವರು ಆರೋಪಿತರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಪ್ರಕರಣವನ್ನು ಸಿನಿಮೀಯ ರೀತಿಯಲ್ಲಿ ಭೇದಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿ ಸೂಕ್ತ ಬಹುಮಾನ ಘೋಷಿಸಲಾಗಿದೆ ಎಂದು ಎಸ್‌ಪಿ ಗುಂಜನ್ ಆರ್ಯ ತಿಳಿಸಿದ್ದಾರೆ.

“ಜಿಲ್ಲೆಗಳ ನಡುವೆ ಸಮನ್ವಯದಿಂದ ಕಾರ್ಯಾಚರಣೆ ನಡೆಸಿದ ಪರಿಣಾಮ ದೊಡ್ಡ ಕಳ್ಳತನ ಜಾಲವನ್ನು ಭೇದಿಸಲು ಸಾಧ್ಯವಾಯಿತು.”

ಗುಂಜನ್ ಆರ್ಯ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

“ಮರುಮೌಲ್ಯಮಾಪನದಲ್ಲಿ ಬದಲಾದ ಭವಿಷ್ಯ!”

ವಿಜಯಸಾಕ್ಷಿ ಸುದ್ದಿ, ಗದಗ: ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನದ ಬಳಿಕ ಗದಗ ಗ್ರಾಮೀಣ ವಲಯದ ಬ್ರೈಟ್ ಹಾರೈಝನ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ವೈಷ್ಣವಿ ಲಮಾಣಿ 625ಕ್ಕೆ 620 ಅಂಕಗಳನ್ನು ಪಡೆದು 99.2 ಶೇಕಡಾ ಫಲಿತಾಂಶದೊಂದಿಗೆ ಗದಗ ಗ್ರಾಮೀಣ ವಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಮರುಮೌಲ್ಯಮಾಪನದ ನಂತರ ಅಂಕಗಳಲ್ಲಿ ಏರಿಕೆಯಾಗಿದ್ದು, ವೈಷ್ಣವಿ ಸಾಧನೆಗೆ ಶಾಲೆಯ ಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ವಿದ್ಯಾರ್ಥಿನಿಯ ಶ್ರಮ, ಏಕಾಗ್ರತೆ ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಶಾಲೆಯ ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿದೆ.

ಗದಗ| ಗಂಗಿಮಡಿಯಲ್ಲಿ ಬಿರುಗಾಳಿ ಅವಾಂತರ: 30ಕ್ಕೂ ಹೆಚ್ಚು ಮನೆಗಳಿಗೆ ಹಾನಿ, ಬೀದಿಪಾಲಾದ ಕುಟುಂಬಗಳು!

ಗದಗ: ಭಾರೀ ಗಾಳಿ ಸಹಿತ ಸುರಿದ ಮಳೆಯಿಂದ ಗದಗ ನಗರದಲ್ಲಿ ಮತ್ತೆ ಅವಾಂತರ ಸೃಷ್ಟಿಯಾಗಿದ್ದು, ನಗರದ ಗಂಗಿಮಡಿ ಬಡಾವಣೆಯಲ್ಲಿ 30ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ ಶೀಟುಗಳು ಗಾಳಿಗೆ ಹಾರಿಹೋಗಿ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಬಿರುಗಾಳಿಯ ರಭಸಕ್ಕೆ ಮನೆಗಳ ಮೇಲ್ಛಾವಣಿ ಶೀಟುಗಳು ಒಮ್ಮೆಲೆ ಕಿತ್ತು ಹಾರಿಹೋಗಿದ್ದು, ಮನೆಯೊಳಗಿದ್ದ ಮಹಿಳೆಯರು, ಮಕ್ಕಳು ಹಾಗೂ ವೃದ್ಧರಲ್ಲಿ ಕೆಲಕಾಲ ಭೀತಿ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ಸಂದರ್ಭದಲ್ಲಿ ತಾಯಿ, ಗರ್ಭಿಣಿ ಮಗಳು ಹಾಗೂ ಮೊಮ್ಮಕ್ಕಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಸ್ಥಳೀಯರನ್ನು ಆತಂಕಗೊಳಿಸಿದೆ.

ಶೀಟುಗಳು ಹಾರುತ್ತಿದ್ದ ವೇಳೆ ಮನೆಗಳೊಳಗೆ ಕೂಗಾಟ–ಚೀರಾಟ ಕೇಳಿಬಂದಿದ್ದು, ಜನರು ಭಯಭೀತರಾಗಿ ತಕ್ಷಣವೇ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಮಳೆಯ ನೀರು ಮನೆಗಳೊಳಗೆ ನುಗ್ಗಿದ ಪರಿಣಾಮ ದಿನಸಿ ವಸ್ತುಗಳು, ಅಡುಗೆ ಸಾಮಗ್ರಿಗಳು, ಬಟ್ಟೆ ಸೇರಿದಂತೆ ಬಹುತೇಕ ಸಾಮಗ್ರಿಗಳು ನೀರುಪಾಲಾಗಿವೆ. ಹಲವು ಮನೆಗಳಲ್ಲಿ ಅಡುಗೆ ಮಾಡಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

30ಕ್ಕೂ ಹೆಚ್ಚು ಕುಟುಂಬಗಳು ರಾತ್ರಿ ಪೂರ್ತಿ ಮನೆಗಳನ್ನು ತೊರೆದು ಹೊರಗೇ ಕಾಲ ಕಳೆಯಬೇಕಾದ ಪರಿಸ್ಥಿತಿ ಉಂಟಾಗಿದ್ದು, ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಚಳಿಯಲ್ಲಿ ಪರದಾಡಿದ್ದಾರೆ.

ಘಟನೆಯ ನಂತರವೂ ಸ್ಥಳಕ್ಕೆ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಭೇಟಿ ನೀಡದಿರುವುದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರಸಭೆ ಸದಸ್ಯ ರವಿ ಕಮತರ ವಿರುದ್ಧ ಕಿಡಿಕಾರಿದ ಮಹಿಳೆಯರು, ಚುನಾವಣೆಯ ವೇಳೆ ಮತ ಕೇಳಲು ಬರುತ್ತಾರೆ ಆದರೆ ಸಂಕಷ್ಟದ ಸಂದರ್ಭದಲ್ಲಿ ಯಾರೂ ಕಾಣಿಸಿಕೊಳ್ಳುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ತಕ್ಷಣ ಕಾಳಜಿ ಕೇಂದ್ರ ತೆರೆಯಬೇಕು ಹಾಗೂ ಹಾನಿಗೊಳಗಾದ ಮನೆಗಳಿಗೆ ಪರಿಹಾರ ಮತ್ತು ತುರ್ತು ನೆರವು ಒದಗಿಸಬೇಕು ಎಂದು ಸ್ಥಳೀಯರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಘಟನಾ ಸ್ಥಳಕ್ಕೆ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

“ಮತದಾನದ ಹಕ್ಕು ಕಸಿಯಲು ಬಿಡುವುದಿಲ್ಲ!”

ವಿಜಯಸಾಕ್ಷಿ ಸುದ್ದಿ, ಗದಗ: “ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕು ನೀಡಿದೆ. ಆದರೆ ಕೇಂದ್ರ ಸರ್ಕಾರದ ಕುತಂತ್ರ ಹಾಗೂ ಚುನಾವಣಾ ಆಯೋಗದ ಸಂವಿಧಾನ ವಿರೋಧಿ ನಡೆಗಳಿಂದ ಎಸ್‌ಐಆರ್ ಪ್ರಕ್ರಿಯೆ ಮೂಲಕ ಜನರ ಸಂವಿಧಾನಬದ್ಧ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ” ಎಂದು ಗದಗ–ಬೆಟಗೇರಿ ಮುಸ್ಲಿಂ ಸಮಾಜದ ವೇದಿಕೆ ಅಧ್ಯಕ್ಷ ಮಹ್ಮದ್ ಯೂಸುಫ್ ನಮಾಜಿ ಆರೋಪಿಸಿದರು.

ನಗರದಲ್ಲಿ ಆಯೋಜಿಸಿದ್ದ ಎಸ್‌ಐಆರ್ ಕುರಿತು ವೇದಿಕೆ ಪದಾಧಿಕಾರಿಗಳು ಹಾಗೂ ಅಲ್ಪಸಂಖ್ಯಾತ ಸಮುದಾಯದ ಮುಖಂಡರ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬಿಹಾರ ಹಾಗೂ ಪಶ್ಚಿಮ ಬಂಗಾಳ ಚುನಾವಣೆ ಸಂದರ್ಭದಲ್ಲಿ ಜಾರಿಗೊಂಡ ಎಸ್‌ಐಆರ್ ಪ್ರಕ್ರಿಯೆಯಿಂದ ಲಕ್ಷಾಂತರ ಜನರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದ ಅವರು, ಚುನಾವಣೆಯ ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಮತದಾನದ ಹಕ್ಕು ಕಳೆದುಕೊಂಡವರಿಗೆ ಸರ್ಕಾರದ ಸೌಲಭ್ಯ ನೀಡುವುದಿಲ್ಲ ಎಂದು ಘೋಷಿಸಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.

ಎಸ್‌ಐಆರ್ ಪ್ರಕ್ರಿಯೆಯ ಹಿಂದಿನ ಉದ್ದೇಶವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಸಮುದಾಯದ ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಕಾರ್ಯಕರ್ತರು ಕೈಗೊಳ್ಳಬೇಕು ಎಂದು ಕರೆ ನೀಡಿದರು.

ವೇದಿಕೆ ಕಾರ್ಯದರ್ಶಿ ಇಮ್ತಿಯಾಜ್ ಆರ್. ಮಾನ್ವಿ ಮಾತನಾಡಿ, “ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ಕೈಗೊಂಬೆಯಾಗಿ ಬಳಸಿಕೊಂಡು ವಿಶೇಷ ತೀವ್ರ ಪರಿಷ್ಕರಣೆ ನೆಪದಲ್ಲಿ ಮೂಲ ನಿವಾಸಿಗಳ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಯತ್ನಿಸುತ್ತಿದೆ” ಎಂದು ಆರೋಪಿಸಿದರು.

ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿಟ್ಟು ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದಲೇ ಎಸ್‌ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ದೂರಿದ ಅವರು, ಎಲ್ಲರೂ ಒಗ್ಗೂಡಿ ಜನಜಾಗೃತಿ ಆಂದೋಲನ ಆರಂಭಿಸಬೇಕಾಗಿದೆ ಎಂದರು.

ವಕೀಲ ಎಂ.ಬಿ. ನದಾಫ್ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆ ಸಂವಿಧಾನ ವಿರೋಧಿಯಾಗಿದ್ದು, ಎಲ್ಲ ಸಮುದಾಯಗಳು ಒಗ್ಗೂಡಿ ವಿರೋಧಿಸಬೇಕು ಎಂದು ಹೇಳಿದರು.

ಸಮುದಾಯದ ಯುವಕರು ಬೂತ್ ಮಟ್ಟದಲ್ಲಿ ಸ್ವಯಂಪ್ರೇರಿತವಾಗಿ ಕಾರ್ಯನಿರ್ವಹಿಸಿ ಜನರ ಮತದಾನದ ಹಕ್ಕು ರಕ್ಷಿಸಲು ಮುಂದಾಗಬೇಕು ಎಂದು ಕರೆ ನೀಡಿದರು.

ನಗರಸಭೆ ಸದಸ್ಯ ಜೂನಸಾಬ ನಮಾಜಿ ಮಾತನಾಡಿ, ಗದಗ–ಬೆಟಗೇರಿ ನಗರದ ಎಲ್ಲಾ ವಾರ್ಡ್‌ಗಳಲ್ಲಿ ಯುವಕರಿಗೆ ಮಾಹಿತಿ ನೀಡುವ ಜೊತೆಗೆ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಗತ್ಯ ದಾಖಲೆಗಳ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು.

ಜಮಿಯತೆ ಉಲ್ಲಮಾ ಸಂಘಟನೆಯ ಮುಖಂಡ ಮೌಲಾನಾ ಶಬ್ಬೀರಹ್ಮದ್ ಬೋದ್ಲೇಖಾನ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅನ್ವರ್ ಶಿರಹಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಭೆಯಲ್ಲಿ ಬಾಬಾಜಾನ ಬಳಗಾನೂರ, ಮುನ್ನಾ ಶೇಖ್, ರಫೀಕ್ ಜಮಾಲಖಾನವರ, ಸುಲೇಮಾನ ಮಾಳೆಕೊಪ್ಪ, ಇರ್ಫಾನ್ ಡಂಬಳ, ವಾಶೀಂ ಖಾಜಿ, ಅಸ್ಲಂ ಎಸ್‌.ಜಿ., ಉಮರ್ ಫಾರೂಖ್ ಹುಬ್ಬಳ್ಳಿ, ಎ.ಹೆಚ್. ಹೊಸಳ್ಳಿ, ಅಲ್ತಾಫ್ ಹುಬ್ಬಳ್ಳಿ, ಅಲ್ಲಾಭಕ್ಷ ದೊಡ್ಡಮನಿ, ದಾವಲಸಾಬ ಇರಕಲ್ಲ, ಇಬ್ರಾಹಿಂ ಹಳ್ಳಿಕೇರಿ, ಮಹ್ಮದಸಾಬ್ ಮುಲ್ಲಾ, ಕರೀಮಸಾಬ್ ಸುಣಗಾರ, ಆರೀಫ್ ಹುನಗುಂದ, ಸಾದಿಕ್ ನರೇಗಲ್ಲ, ಮುನ್ನಾ ಕಲ್ಮನಿ, ರಿಯಾಜ್ ಪಾಮಡಿ, ಶಬ್ಬೀರ್ ಪೀರಜಾದೆ, ಮೌಲಾಸಾಬ್ ಗಚ್ಚಿ ಸೇರಿದಂತೆ ನೂರಾರು ಪದಾಧಿಕಾರಿಗಳು ಭಾಗವಹಿಸಿದ್ದರು.

“ಮತದಾನದ ಹಕ್ಕು ಕಸಿಯುವ ಯಾವುದೇ ಪ್ರಯತ್ನವನ್ನು ಜನರು ಒಗ್ಗಟ್ಟಿನಿಂದ ಎದುರಿಸಬೇಕು.”

ಮಹ್ಮದ್ ಯೂಸುಫ್ ನಮಾಜಿ

ಗದಗ–ಬೆಟಗೇರಿ ಮುಸ್ಲಿಂ ಸಮಾಜದ ವೇದಿಕೆ ಅಧ್ಯಕ್ಷ

“ಪ್ರಾಮಾಣಿಕ ಸೇವೆಗೆ ಸಿಎಂ ಚಿನ್ನದ ಪದಕ!”

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪೊಲೀಸ್ ಇಲಾಖೆಯೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಾ ಅನೇಕ ಕಾನೂನು ಸುವ್ಯವಸ್ಥೆ ಕಾರ್ಯಗಳಲ್ಲಿ ಕೈಜೋಡಿಸುತ್ತಿರುವ ಗೃಹರಕ್ಷಕ ದಳದ ಸಿಬ್ಬಂದಿಯ ಸೇವೆ ಶ್ಲಾಘನೀಯವಾಗಿದೆ ಎಂದು ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಗೃಹರಕ್ಷಕ ದಳದ ಜಿಲ್ಲಾ ಬೋಧಕ ಕಿರಣಕುಮಾರ ಕಟಗಿ ಹೇಳಿದರು.

ಸೋಮವಾರ ಪಟ್ಟಣದ ಗೃಹರಕ್ಷಕ ದಳದ ಸಿಬ್ಬಂದಿಗಳ ವತಿಯಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ಯಾವುದೇ ಕೆಲಸ ಮಾಡುತ್ತಿದ್ದರೂ ಅದರಲ್ಲಿ ನಿಷ್ಠೆ, ಪ್ರಾಮಾಣಿಕತೆ ಮತ್ತು ಜವಾಬ್ದಾರಿ ಇರಬೇಕು. ಯಾವ ಹುದ್ದೆಯನ್ನೂ ಚಿಕ್ಕದಾಗಿ ಪರಿಗಣಿಸಬಾರದು ಎಂದು ಹೇಳಿದರು.

ಜಿಲ್ಲೆಯ ಗೃಹರಕ್ಷಕ ದಳದ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವುದೇ ತಮಗೆ ಮುಖ್ಯಮಂತ್ರಿ ಚಿನ್ನದ ಪದಕ ದೊರಕಲು ಕಾರಣವಾಗಿದೆ ಎಂದು ತಿಳಿಸಿದ ಅವರು, “ಈ ಗೌರವವನ್ನು ಜಿಲ್ಲೆಯ ಎಲ್ಲಾ ಸಿಬ್ಬಂದಿಗಳಿಗೆ ಅರ್ಪಿಸುತ್ತೇನೆ” ಎಂದು ಹೇಳಿದರು.

ಸನ್ಮಾನಗಳು ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಇಂದಿನ ಗೌರವ ಇನ್ನಷ್ಟು ಉತ್ತಮ ಸೇವೆ ಸಲ್ಲಿಸಲು ಪ್ರೇರಣೆ ನೀಡಿದೆ ಎಂದು ಅವರು ಅಭಿಪ್ರಾಯಪಟ್ಟರು.

ಪಿಎಸ್‌ಐ ನಾಗರಾಜ ಗಡದ ಮಾತನಾಡಿ, ಕಿರಣಕುಮಾರ ಕಟಗಿ ಅವರು ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಕಡಿಮೆ ಅವಧಿಯಲ್ಲೇ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

“ಎಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆ ಇರುತ್ತದೆಯೋ ಅಲ್ಲಿ ಪ್ರಶಸ್ತಿಗಳು ತಾನಾಗಿಯೇ ಬರುತ್ತವೆ” ಎಂದು ಹೇಳಿದರು.

ಗೃಹರಕ್ಷಕ ದಳದ ಸಿಬ್ಬಂದಿಗಳು ಪೊಲೀಸ್ ಇಲಾಖೆಗೆ ಅತ್ಯಂತ ಸಹಕಾರಿಯಾಗಿದ್ದು, ಅವರಿಗೆ ಇನ್ನಷ್ಟು ಸೌಲಭ್ಯ ದೊರಕುವಂತಾಗಬೇಕು ಎಂದು ಆಶಿಸಿದರು.

ಗೃಹರಕ್ಷಕ ದಳದ ಜಿಲ್ಲಾ ಸಮಾದೇಶಕ ಸಿ.ಬಿ. ಗೂಳರಡ್ಡಿ ಮಾತನಾಡಿ, ಸಿಬ್ಬಂದಿಗಳ ಸೇವಾ ಮನೋಭಾವಕ್ಕೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಗೃಹರಕ್ಷಕ ದಳದ ಸಿಬ್ಬಂದಿಗಳಾದ ಸಿ.ಜಿ. ಹೂವಿನ, ಬಿ.ಎನ್. ಛಬ್ಬಿ, ಸೋಮಶೇಖರಯ್ಯ ಕಲ್ಮಠ, ಬಿ.ಎಚ್. ಬೆಂತೂರ, ಸಿ.ಎನ್. ಅಗಡಿ, ಎಂ.ಎಸ್. ಬೂದಿಹಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಯಾವ ಹುದ್ದೆಯೂ ಚಿಕ್ಕದಲ್ಲ; ಪ್ರಾಮಾಣಿಕ ಸೇವೆಯೇ ವ್ಯಕ್ತಿಗೆ ನಿಜವಾದ ಗೌರವ ತಂದುಕೊಡುತ್ತದೆ.”

ಕಿರಣಕುಮಾರ ಕಟಗಿ

ಗೃಹರಕ್ಷಕ ದಳದ ಜಿಲ್ಲಾ ಬೋಧಕ

ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ: ಎಸಿ ಸ್ಥಗಿತದಿಂದ ಉಸಿರುಗಟ್ಟಿದ ಪರಿಸ್ಥಿತಿ!

ನವದೆಹಲಿ: ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಸಂಭವಿಸಿ ಪ್ರಯಾಣಿಕರು ತೀವ್ರ ಅಸೌಕರ್ಯ ಅನುಭವಿಸಿದ ಘಟನೆ ಇಂದು ನಡೆದಿದೆ.

ವಿಮಾನದಲ್ಲಿ ಸುಮಾರು 25 ನಿಮಿಷಗಳ ಕಾಲ ಏರ್‌ಕಂಡಿಷನರ್ (AC) ಮತ್ತು ಕ್ಯಾಬಿನ್ ಲೈಟ್‌ಗಳು ಆಫ್ ಆಗಿದ್ದರಿಂದ ಸಂಪೂರ್ಣ ಕತ್ತಲೆ ಆವರಿಸಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ. ಇದರಿಂದ ಒಳಗಿನ ಉಷ್ಣತೆ ಹೆಚ್ಚಾಗಿ ಉಸಿರುಗಟ್ಟುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಸಮಯದಲ್ಲಿ ಪ್ರಯಾಣಿಕರಲ್ಲಿ ಆತಂಕ ಹಾಗೂ ಗೊಂದಲ ಉಂಟಾಗಿದೆ. ಕೆಲ ಪ್ರಯಾಣಿಕರು ಘಟನೆಯ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ.

ಘಟನೆಯ ಕುರಿತು ವಿಮಾನಯಾನ ಸಂಸ್ಥೆಯಿಂದ ಅಧಿಕೃತ ಸ್ಪಷ್ಟನೆ ನಿರೀಕ್ಷಿಸಲಾಗುತ್ತಿದೆ.

“ಸಂವಿಧಾನ ಉಳಿಸಿ… ಎಸ್ಐಆರ್ ರದ್ದುಪಡಿಸಿ!”

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ”: “ಸತ್ತಿರುವವರನ್ನು ಮತದಾರರ ಪಟ್ಟಿಯಿಂದ ತೆಗೆಯಬೇಕಿತ್ತು. ಆದರೆ ಬದುಕಿರುವ ಜನರನ್ನೇ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದು ಜನಾಂಗ ಹತ್ಯೆಗೆ ಸಮಾನ. ಬದುಕಿರುವವರನ್ನೇ ಸತ್ತವರಂತೆ ಮಾಡುವುದೇ ಎಸ್ಐಆರ್. ಇದನ್ನು ನಾವೆಲ್ಲರೂ ಒಗ್ಗಟ್ಟಾಗಿ ವಿರೋಧಿಸಬೇಕು” ಎಂದು ಸಾಮಾಜಿಕ ಹೋರಾಟಗಾರ್ತಿ ಸವಿತಾ ಬನ್ನಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿಯಲ್ಲಿ ನಡೆದ ಮೇ ಸಾಹಿತ್ಯ ಮೇಳದ ಎರಡನೇ ದಿನ ಎಸ್ಐಆರ್ ರದ್ದುಗೊಳಿಸುವಂತೆ ಬೃಹತ್ ಪ್ರತಿಭಟನಾ ಜಾಥಾ ನಡೆಯಿತು. ಹಿರಿಯ ಕಾದಂಬರಿಕಾರ ಕುಂ. ವೀರಭದ್ರಪ್ಪ (ಕುಂವೀ) ಅವರು ಚೆನ್ನಮ್ಮ ವೃತ್ತದಿಂದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದವರೆಗೆ ನಡೆದ ಜಾಥಾಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಚಿಂತಕ ಡಾ. ಅಶೋಕ ಶೆಟ್ಟರ್, “ಭಾರತದಲ್ಲಿ ಸಂವಿಧಾನದ ಮೇಲೆಯೇ ದಾಳಿ ನಡೆಯುತ್ತಿದೆ. ಎಸ್ಐಆರ್ ಎಂಬ ಹೆಸರಿನಲ್ಲಿ ಕೋಟ್ಯಾಂತರ ಜನರನ್ನು ಚುನಾವಣಾ ಪ್ರಕ್ರಿಯೆಯಿಂದ ಹೊರಗಿಡುವ ಯತ್ನ ನಡೆಯುತ್ತಿದೆ. ಕರ್ನಾಟಕದಲ್ಲೂ ಇದನ್ನು ಜಾರಿಗೊಳಿಸಲು ಅವಕಾಶ ನೀಡಬಾರದು” ಎಂದು ಎಚ್ಚರಿಸಿದರು.

ಹೋರಾಟಗಾರ ರಂಜಾನ್ ದರ್ಗಾ ಮಾತನಾಡಿ, “ಸಂವಿಧಾನ ವಿರೋಧಿ ಕ್ರಮಗಳ ಮೂಲಕ ಬಡವರು, ಓಬಿಸಿ ಹಾಗೂ ಹಿಂದುಳಿದ ವರ್ಗಗಳನ್ನು ಚುನಾವಣಾ ವ್ಯವಸ್ಥೆಯಿಂದ ಹೊರ ತಳ್ಳಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ಮೂಲಕ ಲಕ್ಷಾಂತರ ಜನರನ್ನು ಮತದಾನದ ಹಕ್ಕಿನಿಂದ ವಂಚಿಸಲಾಗಿದೆ. ಕರ್ನಾಟಕದಲ್ಲಿ ಇದನ್ನು ಜಾರಿಗೊಳಿಸದಂತೆ ಸಾಹಿತ್ಯ ಮೇಳವೇ ಹೋರಾಟದ ವೇದಿಕೆಯಾಗಬೇಕು” ಎಂದು ಕರೆ ನೀಡಿದರು.

ಪ್ರತಿಭಟನಾ ಜಾಥಾದಲ್ಲಿ ಮೂಡ್ನಾಕೂಡ ಚಿನ್ನಸ್ವಾಮಿ, ಶ್ರೀಪಾದ್ ಭಟ್ ಸೇರಿದಂತೆ ನೂರಾರು ಸಾಹಿತ್ಯಾಸಕ್ತರು, ಹೋರಾಟಗಾರರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

“ಎಸ್ಐಆರ್ ಹೆಸರಿನಲ್ಲಿ ಜನರನ್ನು ಚುನಾವಣಾ ಪ್ರಕ್ರಿಯೆಯಿಂದ ಹೊರಗಿಡುವ ಯತ್ನ ನಡೆಯುತ್ತಿದೆ.”

 ಡಾ. ಅಶೋಕ ಶೆಟ್ಟರ್, ಸಾಹಿತಿ

ಸಂವಿಧಾನಕ್ಕೆ ಧಕ್ಕೆ ತಂದರೆ ಕ್ಷಮೆ ಇಲ್ಲ: ಶಾಸಕ ಜಿ.ಎಸ್. ಪಾಟೀಲ

ವಿಜಯಸಾಕ್ಷಿ ಸುದ್ದಿ, ‌ನರೇಗಲ್ಲ: “ಭಾರತದ ಸಂವಿಧಾನ ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕು, ಸ್ವಾತಂತ್ರ್ಯ ಮತ್ತು ಸಮಾನತೆಯ ಜೀವನಾಡಿ. ಸಂವಿಧಾನದ ತಂಟೆಗೆ ಬರುವವರಿಗೆ ಜನರೇ ತಕ್ಕ ಉತ್ತರ ನೀಡುತ್ತಾರೆ” ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಎಚ್ಚರಿಕೆ ನೀಡಿದರು.

ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿ, ಡಾ. ಬಿ.ಆರ್. ಅಂಬೇಡ್ಕರ್ ಅಭಿಮಾನಿ ಬಳಗ ಹಾಗೂ ಜಿ.ಎಸ್. ಪಾಟೀಲ ಅಭಿಮಾನಿ ಬಳಗದ ವತಿಯಿಂದ ನರೇಗಲ್ಲ ಪಟ್ಟಣದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಹಾಗೂ ಡಾ. ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶದ ಸಂವಿಧಾನವನ್ನು ಬದಲಿಸುವ ಕುರಿತು ಕೆಲವರು ಮಾತನಾಡುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದ ಅವರು, “ಏಳು ದಶಕಗಳಿಂದ ದೇಶ ಸಂವಿಧಾನದ ಆಶಯದಂತೆ ಬದುಕುತ್ತಿದೆ. ಮುಂದಿನ ಪೀಳಿಗೆಯೂ ಅದನ್ನು ಕಾಪಾಡುವ ಹೊಣೆ ಹೊತ್ತುಕೊಳ್ಳಬೇಕು” ಎಂದು ಹೇಳಿದರು.

ದಲಿತರು, ಹಿಂದುಳಿದವರು ಎನ್ನುವ ಬದಲು ಎಲ್ಲರೂ ಸಮಾನರು ಎಂಬ ಮನೋಭಾವ ಸಮಾಜದಲ್ಲಿ ಬೆಳೆಬೇಕು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದಿಂದಲೇ ದೇಶದಲ್ಲಿ ಸಮಾನತೆ ಹಾಗೂ ಸಹಬಾಳ್ವೆ ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿಯ ರಾಜ್ಯ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಮೈಲಾರಪ್ಪ ವಿ. ಚಳ್ಳಮರದ ಅವರ ಸಂಘಟನಾ ಶಕ್ತಿಯನ್ನು ಶಾಸಕ ಜಿ.ಎಸ್. ಪಾಟೀಲ ಶ್ಲಾಘಿಸಿದರು.

“ಮೈಲಾರಪ್ಪ ಕಾಂಗ್ರೆಸ್ ಪಕ್ಷಕ್ಕೆ ಬಂದ ಬಳಿಕ ಮತ್ತಷ್ಟು ಚುರುಕುಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಲಿದ್ದಾರೆ” ಎಂದು ಭರವಸೆ ನೀಡಿದರು.

ರೋಣ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್ ಜಿ. ಪಾಟೀಲ, “ಸಂವಿಧಾನವೇ ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರು ಹಾಗೂ ಮಹಿಳೆಯರಿಗೆ ಸಮಾನ ಬದುಕಿನ ಹಕ್ಕು ನೀಡಿದೆ” ಎಂದು ಹೇಳಿದರು.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಷಯ ಐ. ಪಾಟೀಲ, “ಭಾರತೀಯ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠವಾದದ್ದು. ಪ್ರಜೆಗಳ ಹಕ್ಕುಗಳ ರಕ್ಷಣೆಗೆ ಸಂವಿಧಾನವೇ ಶಕ್ತಿ” ಎಂದರು.

ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಎಚ್. ಪಾಟೀಲ, “ಭ್ರಾತೃತ್ವ ಮತ್ತು ಸಾಮರಸ್ಯವೇ ಸಂವಿಧಾನದ ಆತ್ಮ” ಎಂದು ಹೇಳಿದರು.

ಬಾಗಲಕೋಟೆಯ ಯುವ ಮುಖಂಡ ವಿನಯ ಆರ್. ತಿಮ್ಮಾಪುರ ಮಾತನಾಡಿದರು.

ರೋಣ ಬೂದೀಶ್ವರಮಠದ ಡಾ. ವಿಶ್ವನಾಥ ಮಹಾಸ್ವಾಮಿಗಳು, ರಹಿಮಾನ ಶಾವಲಿ ದರ್ಗಾದ ಸಯ್ಯದ್ ಮಂಜೂರ ಹುಸೇನ ಶ್ಯಾವಲಿ ಶರಣರು, ಇಟಗಿಯ ಶಿವಶರಣ ಗೆದಿಗೆಪ್ಪಜ್ಜನವರು ಹಾಗೂ ಸೂಡಿ ಮರುಳು ಸಿದ್ದೇಶ್ವರ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು.

ಸರ್ಕಾರಿ ಸೇವೆಯಲ್ಲಿ ಸಾಧನೆ ಮಾಡಿದ ಮಾದಿಗ ಸಮುದಾಯದವರಿಗೆ ಸನ್ಮಾನ ಹಾಗೂ ಎಸ್‌ಎಸ್‌ಎಲ್‌ಸಿ–ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಜಿ.ಎಸ್. ಪಾಟೀಲರಿಗೆ ‘ಜೈ ಭೀಮ್ ರತ್ನ’ ರಾಜ್ಯ ಪ್ರಶಸ್ತಿ

ದಲಿತರ ಅಭಿವೃದ್ಧಿ, ಯುವಕರಿಗೆ ಉದ್ಯೋಗ ಸೃಷ್ಟಿ, ನೆಲ–ಜಲ ಸಂರಕ್ಷಣೆಗೆ ನೀಡಿದ ಕೊಡುಗೆ ಹಾಗೂ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕ ಕಾಯ್ದುಕೊಂಡಿದ್ದಕ್ಕಾಗಿ ಶಾಸಕ ಜಿ.ಎಸ್. ಪಾಟೀಲ ಅವರಿಗೆ ‘ಜೈ ಭೀಮ್ ರತ್ನ’ ರಾಜ್ಯ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬೈಲಪ್ಪ ತಳವಾರ, ಬಿ.ವಿ. ಗೌಡರ, ಅರುಣ ಕುಲಕರ್ಣಿ, ವಿ.ಎ. ಕುಂಬಾರ, ಈಶಯ್ಯ ಕಲ್ಲೂರ, ಹನಮಪ್ಪ ಅಬ್ಬಿಗೆರಿ, ಸುರೇಶ ಹಳ್ಳಿಕೇರಿ ಹಾಗೂ ಚಂದ್ರು ಎಂ. ರಾಥೋಡ್ ಅವರನ್ನು ವಿವಿಧ ಕ್ಷೇತ್ರಗಳ ಸೇವೆಗಾಗಿ ಸನ್ಮಾನಿಸಲಾಯಿತು.

“ಸಂವಿಧಾನದ ತಂಟೆಗೆ ಬರುವವರಿಗೆ ಜನರೇ ತಕ್ಕ ಉತ್ತರ ನೀಡುತ್ತಾರೆ. “ಸಮಾನತೆ ಮತ್ತು ಸಹಬಾಳ್ವೆಗೆ ಡಾ. ಅಂಬೇಡ್ಕರ್ ನೀಡಿದ ಸಂವಿಧಾನವೇ ಬಲ.”

ಜಿ.ಎಸ್. ಪಾಟೀಲ, ಶಾಸಕ

error: Content is protected !!