Home Blog

ಗಾಣಿಗ ಸಮಾಜ ಕಡೆಗಣನೆ ಸಹಿಸುವುದಿಲ್ಲ: ಬಸವರಾಜ ಬಿಂಗಿ

ವಿಜಯಸಾಕ್ಷಿ ಸುದ್ದಿ, ಗದಗ: ಹೊಸ ಸರ್ಕಾರದಲ್ಲಿ ಗಾಣಿಗ ಸಮಾಜಕ್ಕೆ ಒಂದೇ ಒಂದು ಸಚಿವ ಸ್ಥಾನ ನೀಡದಿರುವುದು ದುರ್ದೈವದ ಸಂಗತಿ. ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಗಾಣಿಗ ಸಮುದಾಯದ ಶಾಸಕರಿಗೆ ಅವಕಾಶ ನೀಡಬೇಕು. ಇಲ್ಲವಾದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಗಾಣಿಗ ಸಮಾಜದ ಮುಖಂಡ ಬಸವರಾಜ ಬಿಂಗಿ ಎಚ್ಚರಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಕ್ಷ್ಮಣ ಸವದಿ, ವೀರೇಂದ್ರ ಪಪ್ಪಿ ಹಾಗೂ ಬಿ.ಕೆ. ಸಂಗಮೇಶ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ಸಮಾಜದ ಮುಖಂಡ ಡಾ. ಶೇಖರ್ ಸಜ್ಜನವರ ಮಾತನಾಡಿ, “ರಾಜ್ಯದಲ್ಲಿಯೇ ಅತಿಹೆಚ್ಚು ಮತಗಳ ಅಂತರದಿಂದ ಗೆದ್ದಿರುವ ಹಾಗೂ ಅನುಭವಿ ಹೋರಾಟಗಾರರಾಗಿರುವ ಲಕ್ಷ್ಮಣ ಸವದಿ ರಾಜ್ಯದ ಪ್ರಮುಖ ನಾಯಕರಾಗಿದ್ದಾರೆ. ಅವರನ್ನು ಸಚಿವರನ್ನಾಗಿ ಮಾಡುವುದು ಸಮಾಜದ ಬಹುದಿನಗಳ ಬೇಡಿಕೆ,” ಎಂದರು.

ಬಿಜೆಪಿಯಿಂದ ಕಾಂಗ್ರೆಸ್‌ಗೆ ಕರೆತರುವ ಸಂದರ್ಭದಲ್ಲಿ ಸಚಿವ ಸ್ಥಾನ ನೀಡುವ ಭರವಸೆ ನೀಡಲಾಗಿತ್ತು. ಈಗ ಆ ಭರವಸೆ ಈಡೇರಿಸುವ ಸಮಯ ಬಂದಿದೆ ಎಂದು ಹೇಳಿದರು.

ನಿಂಗಪ್ಪ ಕೆಂಗಾರ ಮಾತನಾಡಿ, “ಹಿಂದಿನ ಸರ್ಕಾರದಲ್ಲಿ ಲಕ್ಷ್ಮಣ ಸವದಿ ಉತ್ತಮ ಆಡಳಿತ ನೀಡಿದ್ದಾರೆ. ರಾಜ್ಯದಲ್ಲಿ ಗಾಣಿಗ ಸಮಾಜವನ್ನು ಒಗ್ಗೂಡಿಸುವ ನಾಯಕತ್ವ ಅವರದು. ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಹೋರಾಟ ತೀವ್ರಗೊಳ್ಳಲಿದೆ,” ಎಂದು ಎಚ್ಚರಿಸಿದರು.

ಜಾತ್ಯತೀತ ಸರ್ಕಾರ ಹಿಂದುಳಿದ ಹಾಗೂ ತುಳಿತಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು. ಉತ್ತರ ಕರ್ನಾಟಕದಲ್ಲಿ 30ರಿಂದ 40 ಶಾಸಕರನ್ನು ಗೆಲ್ಲಿಸುವ ಸಾಮರ್ಥ್ಯ ಗಾಣಿಗ ಸಮಾಜಕ್ಕಿದೆ. ಈ ಶಕ್ತಿಯನ್ನು ಸರ್ಕಾರ ಲಘುವಾಗಿ ತೆಗೆದುಕೊಳ್ಳಬಾರದು ಎಂದು ಮುಖಂಡರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಅಶೋಕ ಮಂದಾಲಿ, ಗಿರಿಯಪ್ಪ ಅಸೂಟಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಗಾಣಿಗ ಸಮಾಜದ ಶಕ್ತಿಯನ್ನು ಕಡೆಗಣಿಸಿದರೆ ರಾಜ್ಯಾದ್ಯಂತ ಹೋರಾಟಕ್ಕೆ ಇಳಿಯಬೇಕಾಗುತ್ತದೆ.” — ಬಸವರಾಜ ಬಿಂಗಿ

 

ಪ್ರಾಮಾಣಿಕ ನಾಯಕತ್ವಕ್ಕೆ ಗೌರವ ಕೊಡಿ: ಉಸ್ಮಾನ್ ಮಾಳೆಕೊಪ್ಪ

ವಿಜಯಸಾಕ್ಷಿ ಸುದ್ದಿ, ಗದಗ: ಉತ್ತರ ಕರ್ನಾಟಕದ ಪ್ರಾಮಾಣಿಕ ಹಾಗೂ ಅನುಭವಿ ನಾಯಕರಾಗಿರುವ ಎಚ್.ಕೆ‌.ಪಾಟೀಲ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಮೆಕ್ಯಾನಿಕಲ್ ಸಂಘದ ಅಧ್ಯಕ್ಷ ಉಸ್ಮಾನ್ ಮಾಳೆಕೊಪ್ಪ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಮೆಕ್ಯಾನಿಕಲ್ ಹುದ್ದೆ ಎನ್ನುವ ಕೀಳರಿಮೆಯಲ್ಲಿದ್ದ ನಮ್ಮನ್ನು ಒಂದೇ ವೇದಿಕೆಗೆ ತಂದು ಸಂಘಟಿಸುವಲ್ಲಿ ಶಾಸಕ ಎಚ್.ಕೆ. ಪಾಟೀಲರ ಪಾತ್ರ ಮಹತ್ವದ್ದಾಗಿದೆ” ಎಂದು ಹೇಳಿದರು.

ಸಂಘದ ಶಕ್ತಿ ಮತ್ತು ಸಾಮರ್ಥ್ಯದ ಅರಿವು ಮೂಡಿಸಿದ ಎಚ್.ಕೆ. ಪಾಟೀಲರು, ಸಂಘದ ಅಭಿವೃದ್ಧಿಗಾಗಿ 1.26 ಎಕರೆ ಜಾಗ ನೀಡಿ ಶೆಡ್ ನಿರ್ಮಾಣಕ್ಕೂ ಸಹಕಾರ ನೀಡಿದ್ದಾರೆ. ರಕ್ತದಾನ, ಅಂಗಾಂಗ ದಾನ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ನಮಗೆ ಪ್ರೇರಣೆ ನೀಡಿದ್ದಾರೆ ಎಂದು ತಿಳಿಸಿದರು.

“ಯಾವುದೇ ಕಪ್ಪು ಚುಕ್ಕೆ ಇಲ್ಲದ, ಜನಪರ ಕೆಲಸ ಮಾಡಿದ ಇಂತಹ ನಾಯಕರಿಗೆ ಸಚಿವ ಸ್ಥಾನ ನೀಡಬೇಕು” ಎಂದು ಒತ್ತಾಯಿಸಿದರು.

ಬಿ.ಎಂ. ನದ್ದಿಮುಲ್ಲಾ ಮಾತನಾಡಿ, “ಉತ್ತರ ಕರ್ನಾಟಕದಲ್ಲಿ ಪ್ರಾಮಾಣಿಕ ನಾಯಕತ್ವ ನೀಡುತ್ತಿರುವ ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡದಿರುವುದು ನೋವಿನ ಸಂಗತಿ. ಅವರ ಕುಟುಂಬ ಪೀಳಿಗೆಯಿಂದ ಜನಸೇವೆಯಲ್ಲಿ ತೊಡಗಿಕೊಂಡಿದ್ದು, ಇಂತಹ ಅನುಭವಿ ನಾಯಕರಿಗೆ ಸೂಕ್ತ ಸ್ಥಾನಮಾನ ಸಿಗಬೇಕು,” ಎಂದರು.

ಈ ವೇಳೆ ಮಹಮದ್ ಶಬ್ಬೀರ, ನಿಂಗಪ್ಪ ಎಂಬತ್ತನಾಳ, ಸೈಯದ್ ಜಮೀರ್ ಖಾಜಿ, ಮಹಮದ್ ಅಲಿ ನವಲಗುಂದ, ಅಬ್ದುಲ್ ಖಾದರ್, ಸಿರಾಜ್ ಬಾಗಲಕೋಟೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಮೆಕ್ಯಾನಿಕಲ್ ಸಮುದಾಯಕ್ಕೆ ಆತ್ಮವಿಶ್ವಾಸ ತುಂಬಿದ ನಾಯಕ ಎಚ್.ಕೆ. ಪಾಟೀಲರು. ಅವರಿಗೆ ಸಚಿವ ಸ್ಥಾನ ನೀಡುವುದು ನ್ಯಾಯ.”

ಉಸ್ಮಾನ್ ಮಾಳೆಕೊಪ್ಪ

 

ಕಳಂಕರಹಿತ ರಾಜಕಾರಣಿ ಎಚ್.ಕೆ.ಪಿಗೆ ಸಚಿವ ಸ್ಥಾನ ನೀಡಿ: ನ್ಯಾಯವಾದಿ ಮೋಹನ ಭಜಂತ್ರಿ

ವಿಜಯಸಾಕ್ಷಿ ಸುದ್ದಿ, ಗದಗ: ಕಳಂಕರಹಿತ ರಾಜಕಾರಣಿ, ಸರಳ ವ್ಯಕ್ತಿತ್ವ ಹಾಗೂ ದೂರದೃಷ್ಟಿಯ ಚಿಂತನೆ ಹೊಂದಿರುವ ಹಿರಿಯ ನಾಯಕ ಎಚ್. ಕೆ ಪಾಟೀಲ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು ಎಂದು ನ್ಯಾಯವಾದಿ ಮೋಹನ ಭಜಂತ್ರಿ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಗದಗ ಜಿಲ್ಲೆಯನ್ನು ಮಾದರಿ ಅಭಿವೃದ್ಧಿಯತ್ತ ಕೊಂಡೊಯ್ದ ನಾಯಕ ಎಚ್.ಕೆ. ಪಾಟೀಲರು. ಇಂತಹ ನಾಯಕತ್ವ ಜಿಲ್ಲೆಗೂ ಹಾಗೂ ರಾಜ್ಯಕ್ಕೂ ಅಗತ್ಯವಾಗಿದೆ ಎಂದು ಹೇಳಿದರು.

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಂತಹ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಎಚ್.ಕೆ. ಪಾಟೀಲರ ವಿಚಾರಧಾರೆ ಹಾಗೂ ಅನುಭವ ಸಹಕಾರಿಯಾಗಿದೆ ಎಂದು ತಿಳಿಸಿದರು.

ವಕೀಲ ಎಸ್.ಕೆ. ಪಾಟೀಲ ಮಾತನಾಡಿ, “ಎಚ್.ಕೆ. ಪಾಟೀಲರ ಸರಳತೆ, ಅನುಭವ ಹಾಗೂ ಮುಂದಾಲೋಚನೆಯನ್ನು ಪರಿಗಣಿಸಿ ಅವರಿಗೆ ಸಚಿವ ಸ್ಥಾನ ನೀಡಬೇಕು. ನಾಲ್ಕು ದಶಕಗಳ ಸಾರ್ವಜನಿಕ ಸೇವೆಗೆ ಗೌರವ ಸಲ್ಲಿಸುವ ಸಮಯ ಇದು,” ಎಂದರು.

ವಕೀಲ ಹುಬ್ಬಳ್ಳಿ ಮಾತನಾಡಿ, 2004-06ರ ಅವಧಿಯಲ್ಲಿ ಕಾನೂನು ಸಚಿವರಾಗಿದ್ದಾಗ ಎಚ್.ಕೆ. ಪಾಟೀಲರು ಹಲವು ಮಹತ್ವದ ಕಾರ್ಯಗಳನ್ನು ಜಾರಿಗೊಳಿಸಿದ್ದರು. ಜಿಲ್ಲಾ ನ್ಯಾಯಾಲಯ ಸ್ಥಾಪನೆಗೂ ಅವರ ಶ್ರಮ ಕಾರಣವಾಗಿದೆ ಎಂದು ಹೇಳಿದರು.

ಯಾವುದೇ ಜಾತಿ-ಧರ್ಮಕ್ಕೆ ಸೀಮಿತವಾಗದೆ ಎಲ್ಲರನ್ನು ಒಗ್ಗೂಡಿಸಿಕೊಂಡು ಸಾಗುವ ನಾಯಕತ್ವ ಅವರದ್ದಾಗಿದೆ. ಲಾ ಚೇಂಬರ್‌ಗಳ ಪರಿಕಲ್ಪನೆ ಸೇರಿದಂತೆ ಕಾನೂನು ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಳನ್ನು ಪರಿಗಣಿಸಿ ಮತ್ತೆ ಸಚಿವ ಸ್ಥಾನ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ವಕೀಲ ಸಮೂಹದಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಗದಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಜಿ ಕಲ್ಲೂರ ಹಾಗೂ ಎಸ್.ಕೆ. ನದಾಫ್, ಕೆ.ಆರ್. ಚೆನ್ನಪ್ಪಗೌಡ,  ಅನಿಲ ಸಿಂಗಟಾಲಕೇರಿ, ಟಿ.ಆರ್. ಕೋಮತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 “ಗದಗ ಜಿಲ್ಲೆಯ ಅಭಿವೃದ್ಧಿಗೆ ಎಚ್.ಕೆ. ಪಾಟೀಲರ ಕೊಡುಗೆ ಅಪಾರ. ಇಂತಹ ಅನುಭವಿ ನಾಯಕತ್ವಕ್ಕೆ ಸಚಿವ ಸ್ಥಾನ ಅಗತ್ಯ.”

ಮೋಹನ ಭಜಂತ್ರಿ

ರೈತನಿಗೆ ಸಾಲ ಸಿಗದಿದ್ದರೆ ಅಭಿವೃದ್ಧಿ ಅಸಾಧ್ಯ: ಬಸವರಾಜ ಬೊಮ್ಮಾಯಿ

ವಿಜಯಸಾಕ್ಷಿ ಸುದ್ದಿ, ಗದಗ: ಬ್ಯಾಂಕಿಂಗ್ ವ್ಯವಸ್ಥೆ ಕೇವಲ ಹಣಕಾಸು ವ್ಯವಹಾರಗಳಿಗೆ ಸೀಮಿತವಾಗದೇ ರೈತರು, ಬಡವರು, ಮಹಿಳೆಯರು ಹಾಗೂ ಹಿಂದುಳಿದ ವರ್ಗಗಳ ಆರ್ಥಿಕ ಅಭಿವೃದ್ಧಿಗೆ ಬಲ ತುಂಬಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆ (ಡಿಎಲ್‌ಆರ್‌ಸಿ) ಹಾಗೂ ಜಿಲ್ಲಾ ಮಟ್ಟದ ಬ್ಯಾಂಕುಗಳ ಸಲಹಾ ಸಮಿತಿ (ಡಿಸಿಸಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

“ಕೃಷಿ ದೇಶದ ಆರ್ಥಿಕತೆಯ ಬೆನ್ನೆಲುಬು. ಕೃಷಿ ಕ್ಷೇತ್ರದಲ್ಲಿ ಒಂದು ಶೇಕಡಾ ಬೆಳವಣಿಗೆಯಾದರೆ ಉತ್ಪಾದನಾ ಕ್ಷೇತ್ರದಲ್ಲಿ ನಾಲ್ಕು ಶೇಕಡಾ ಹಾಗೂ ಸೇವಾ ಕ್ಷೇತ್ರದಲ್ಲಿ ಹತ್ತು ಶೇಕಡಾ ಬೆಳವಣಿಗೆ ಸಾಧ್ಯ. ರೈತರ ಕೊಳ್ಳುವ ಶಕ್ತಿ ಹೆಚ್ಚಿದಾಗ ದೇಶದ ಆರ್ಥಿಕ ಚಟುವಟಿಕೆಗಳೂ ವೇಗ ಪಡೆಯುತ್ತವೆ,” ಎಂದು ಹೇಳಿದರು.

ರಾಜ್ಯ ಸರ್ಕಾರ ಶೂನ್ಯ ಬಡ್ಡಿದರದಲ್ಲಿ ಬೆಳೆಸಾಲ ನೀಡುತ್ತಿದ್ದರೂ ಎಲ್ಲ ರೈತರಿಗೆ ಅದರ ಲಾಭ ಸಿಗುತ್ತಿಲ್ಲ. ಹೀಗಾಗಿ ರಾಷ್ಟ್ರೀಕೃತ ಬ್ಯಾಂಕುಗಳು ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಸಾಲ ವಿತರಿಸಿ ರೈತರ ಬೆನ್ನಿಗೆ ನಿಲ್ಲಬೇಕು ಎಂದು ಸೂಚಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಗಳ ವಿಸ್ತರಣೆ ಅಗತ್ಯ. ರಾಷ್ಟ್ರೀಕೃತ ಬ್ಯಾಂಕುಗಳು ಹೊಸ ಶಾಖೆ ಆರಂಭಿಸಿ ಜನರಿಗೆ ಸುಲಭ ಸೇವೆ ಒದಗಿಸಬೇಕು. ಜೊತೆಗೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಮುದ್ರಾ ಯೋಜನೆಯಡಿ ಯುವ ಉದ್ಯಮಿಗಳಿಗೆ ಹೆಚ್ಚಿನ ಸಾಲ ವಿತರಿಸಬೇಕು ಎಂದರು.

ಸ್ವಸಹಾಯ ಸಂಘಗಳು, ಮಹಿಳಾ ಗುಂಪುಗಳು, ಸಣ್ಣ ಕೈಗಾರಿಕೆಗಳು ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಸುಲಭ ಸಾಲ ಸೌಲಭ್ಯ ದೊರೆಯಬೇಕು. ಕ್ರೆಡಿಟ್ ಕಾರ್ಡ್ ಸೇರಿದಂತೆ ವಿವಿಧ ಹಣಕಾಸು ನೆರವು ನೀಡುವ ಮೂಲಕ ಅವರ ಜೀವನಮಟ್ಟ ಸುಧಾರಣೆಗೆ ಬ್ಯಾಂಕುಗಳು ಕೈಜೋಡಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸಂತೋಷ್ ಎಂ.ವಿ. ಅವರು 2025-26ನೇ ಸಾಲಿನ ನಾಲ್ಕನೇ ತ್ರೈಮಾಸಿಕ ಬ್ಯಾಂಕಿಂಗ್ ಪ್ರಗತಿ ವರದಿ ಮಂಡಿಸಿದರು. ಜಿಲ್ಲೆಯಲ್ಲಿ ಆದ್ಯತಾ ವಲಯದ ಸಾಲ ವಿತರಣೆಯಲ್ಲಿ ಶೇ. 98.73ರಷ್ಟು ಗುರಿ ಸಾಧನೆಯಾಗಿದೆ ಎಂದು ತಿಳಿಸಿದರು.

ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ 7,093 ಅರ್ಜಿಗಳು ಮಂಜೂರಾಗಿದ್ದು, 6,944 ಫಲಾನುಭವಿಗಳಿಗೆ ಸಾಲ ವಿತರಿಸಲಾಗಿದೆ ಎಂದು ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ನರಗುಂದ ಶಾಸಕ ಸಿ.ಸಿ. ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಆರ್‌ಬಿಐ ಅಧಿಕಾರಿ ವಿಜಯಶ್ರೀ, ನಬಾರ್ಡ್ ಎಜಿಎಂ ಹನುಮಂತರಾಜು, ಎಸ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕ ರಾಘವೇಂದ್ರ ರಾವ್ ಸೇರಿದಂತೆ ವಿವಿಧ ಬ್ಯಾಂಕುಗಳ ಅಧಿಕಾರಿಗಳು ಉಪಸ್ಥಿತರಿದ್ದರು.

 “ರೈತ, ಬಡವರು ಮತ್ತು ಮಹಿಳೆಯರಿಗೆ ಹೆಚ್ಚು ಸಾಲ ಸೌಲಭ್ಯ ನೀಡಿದಾಗ ಮಾತ್ರ ಗ್ರಾಮೀಣ ಆರ್ಥಿಕತೆ ಬಲಿಷ್ಠವಾಗುತ್ತದೆ.”

ಬಸವರಾಜ ಬೊಮ್ಮಾಯಿ, ಸಂಸದ

 

ಮಳೆಗಾಗಿ ರೈತರ ವಿಶೇಷ ಪೂಜೆ

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಮುಂಗಾರು ವಿಳಂಬದಿಂದ ಆತಂಕಗೊಂಡಿರುವ ರೈತರು ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ವರುಣ ದೇವರ ಕೃಪೆಗೆ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದರು.

ಗ್ರಾಮದ ದಂಡಿನ ದುರ್ಗಾದೇವಿ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಅಭಿಷೇಕ ಮತ್ತು ಪೂಜೆ ನೆರವೇರಿಸಲಾಯಿತು. ಬಳಿಕ ಗ್ರಾಮದ ವಿವಿಧ ದೇವಸ್ಥಾನಗಳಲ್ಲಿ ದೇವರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.

ದುರ್ಗಾದೇವಿ ಕೆರೆಯ ದಂಡೆಯಲ್ಲಿ ಮಣ್ಣಿನಿಂದ ಈಶ್ವರ ಲಿಂಗ ಹಾಗೂ ಬಸವಣ್ಣನ ಮೂರ್ತಿ ನಿರ್ಮಿಸಿ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು. ಷಡಕ್ಷರಯ್ಯ ಬದ್ದಿಮಠ ಅವರು ಮಂತ್ರಘೋಷಗಳೊಂದಿಗೆ ಪೂಜಾ ವಿಧಿವಿಧಾನ ನಡೆಸಿಕೊಟ್ಟರು.

ಮುಂಗಾರು ಆರಂಭವಾಗಿ ಒಂದು ತಿಂಗಳು ಕಳೆದರೂ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ರೈತರು ಹಾಗೂ ಗ್ರಾಮಸ್ಥರು ಭಕ್ತಿಭಾವದಿಂದ ಪೂಜೆಯಲ್ಲಿ ಭಾಗವಹಿಸಿ ವರುಣ ದೇವರಲ್ಲಿ ಮಳೆಗಾಗಿ ಪ್ರಾರ್ಥಿಸಿದರು. ದೇವಸ್ಥಾನದ ಆವರಣದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮವೂ ನಡೆಯಿತು.

ಇದಕ್ಕೂ ಮೊದಲು ಗ್ರಾಮ ಪಂಚಾಯಿತಿ ಧ್ವನಿವರ್ಧಕದ ಮೂಲಕ ಗ್ರಾಮಸ್ಥರಿಗೆ ವಿಶೇಷ ಪೂಜೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿತ್ತು.

ಗ್ರಾಮದ ಸುತ್ತಮುತ್ತಲಿನ ಹಲವೆಡೆ ಮಳೆ ಸುರಿದು ಬಿತ್ತನೆ ಕಾರ್ಯ ಆರಂಭವಾಗಿದ್ದರೂ, ಲಕ್ಕುಂಡಿಯಲ್ಲಿ ಇನ್ನೂ ಮಳೆಯಾಗದ ಕಾರಣ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ರೈತರಾದ ಪ್ರಭು ಕುಂಬಾರ, ಶಿವಪ್ಪ ಬಿನ್ನಾಳ, ಅಜ್ಜಪ್ಪ ಕವಲೂರು, ಬಸವರಾಜ ಹಣವಾಳ, ಈಶಪ್ಪ ಕುಂಬಾರ ಹಾಗೂ ಬಸಯ್ಯ ನರಗುಂದಮಠ ತಿಳಿಸಿದರು.

 

ಹೆಲ್ಮೆಟ್ ಇಲ್ಲದಿದ್ದರೆ ದಂಡ ಫಿಕ್ಸ್

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಜೀವ ಅತ್ಯಮೂಲ್ಯವಾಗಿದ್ದು, ವಾಹನ ಸವಾರರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ತಮ್ಮ ಹಾಗೂ ಇತರರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಸಿಪಿಐ ಬಿ.ವೈ. ನ್ಯಾಮಗೌಡ್ರ ಹೇಳಿದರು.

ಮಂಗಳವಾರ ಪಟ್ಟಣದಲ್ಲಿ ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಾಲನೆ, ಅಗತ್ಯ ದಾಖಲೆಗಳಿಲ್ಲದೇ ವಾಹನ ಸಂಚಾರ, ಅತಿವೇಗ ಹಾಗೂ ಇತರೆ ಸಂಚಾರಿ ನಿಯಮ ಉಲ್ಲಂಘನೆ ಮಾಡುತ್ತಿದ್ದ ವಾಹನ ಸವಾರರನ್ನು ತಡೆದು ಪೊಲೀಸರು ತಿಳುವಳಿಕೆ ನೀಡಿದರು.

ಈ ವೇಳೆ ಮಾತನಾಡಿದ ಸಿಪಿಐ ನ್ಯಾಮಗೌಡ್ರ, ಸಂಚಾರಿ ನಿಯಮ ಪಾಲನೆಯಿಂದ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಬಹುದು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ನಾಲ್ಕು ಚಕ್ರ ವಾಹನ ಚಾಲಕರು ಸೀಟ್ ಬೆಲ್ಟ್ ಬಳಸಬೇಕು ಎಂದು ಹೇಳಿದರು.

ವಾಹನ ಚಾಲನೆಯ ವೇಳೆ ಮೊಬೈಲ್ ಬಳಕೆ ಹಾಗೂ ಅತಿವೇಗದ ಚಾಲನೆಯನ್ನು ತಪ್ಪಿಸಬೇಕು. ಮುಖ್ಯವಾಗಿ ಪಾಲಕರು ಅಪ್ರಾಪ್ತ ಮಕ್ಕಳಿಗೆ ಬೈಕ್ ನೀಡಬಾರದು ಎಂದು ಎಚ್ಚರಿಸಿದರು.

ಸಂಚಾರಿ ನಿಯಮ ಉಲ್ಲಂಘನೆ ತಡೆಯಲು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಅದರ ಆಧಾರದ ಮೇಲೆಯೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ವೇಳೆ ನಿಯಮ ಉಲ್ಲಂಘಿಸಿದ ಅನೇಕರಿಗೆ ಪೊಲೀಸರು ದಂಡ ವಿಧಿಸಿದರು. ಸಿಪಿಐ ನಾಗರಾಜ ಗಡಾದ ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

 

ಕರವೇ ಹೋರಾಟಕ್ಕೆ ಮಣಿದ ಪುರಸಭೆ: 7 ಅಂಗಡಿಗಳಿಗೆ ಸೀಲ್!

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಹೊಸ ಬಸ್‌ನಿಲ್ದಾಣದ ಹತ್ತಿರದ ಪುರಸಭೆ ವಾಣಿಜ್ಯ ಮಳಿಗೆಗಳನ್ನು ಕೂಡಲೇ ವಶಕ್ಕೆ ಪಡೆದು ಪಾರದರ್ಶಕ ಟೆಂಡರ್ ಪ್ರಕ್ರಿಯೆ ನಡೆಸಬೇಕು. ನಿಯಮ ಮೀರಿ ಮಾಂಸ ಹಾಗೂ ಎಗ್‌ರೈಸ್ ಮಾರಾಟ ನಡೆಸುತ್ತಿರುವ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಹಾಗೂ ಜಯ ಕರ್ನಾಟಕ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಜಂಟಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾ ಅಧ್ಯಕ್ಷ ಶರಣು ಗೋಡಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇದಿಕೆಯ ಅಧ್ಯಕ್ಷ ಬಸವರಾಜ ಹಿರೇಮನಿ ಹಾಗೂ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಇಸ್ಮಾಯಿಲ್ ಆಡೂರ, “ಮಳಿಗೆಗಳ ಟೆಂಡರ್ ಅವಧಿ 2023ರಲ್ಲೇ ಮುಗಿದಿದ್ದರೂ ಪುರಸಭೆ ಮರು ಟೆಂಡರ್ ಕರೆಯದೆ ಮಳಿಗೆ ಪಡೆದವರ ತಾಳಕ್ಕೆ ಕುಣಿಯುತ್ತಿದೆ” ಎಂದು ಆರೋಪಿಸಿದರು.

ಒಬ್ಬರೇ ನಾಲ್ಕು ಮಳಿಗೆ ಪಡೆದು ಲಾಭದ ಉದ್ದೇಶದಿಂದ ಬಾಡಿಗೆಗೆ ನೀಡಲಾಗಿದೆ. ಒಟ್ಟು 29 ಮಳಿಗೆಗಳಿದ್ದು, ಬಹುತೇಕರು ನಿಯಮ ಪಾಲಿಸದೇ ಅಂಗಡಿಗಳನ್ನು ನಡೆಸುತ್ತಿದ್ದಾರೆ. ನಿಯಮದ ಪ್ರಕಾರ ವಾಣಿಜ್ಯ ಮಳಿಗೆಗಳಲ್ಲಿ ಮಾಂಸ ಹಾಗೂ ಎಗ್‌ರೈಸ್ ಮಾರಾಟ ನಿಷಿದ್ಧವಾಗಿದ್ದರೂ ಇಲ್ಲಿ ಅದರದ್ದೇ ಅಬ್ಬರ ಹೆಚ್ಚಾಗಿದೆ ಎಂದು ದೂರಿದರು.

“ಮಳಿಗೆ ಸಂಕೀರ್ಣದಲ್ಲಿ ದುರ್ವಾಸನೆ ಆವರಿಸಿದ್ದು, ಮಹಿಳೆಯರು ಹಾಗೂ ಮಕ್ಕಳು ಬರಲು ಸಾಧ್ಯವಾಗುತ್ತಿಲ್ಲ. ಆಹಾರದ ಗುಣಮಟ್ಟ, ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛತೆ ಸಂಪೂರ್ಣ ನಿರ್ಲಕ್ಷ್ಯಗೊಂಡಿದೆ. ಆಹಾರಕ್ಕೆ ಕೃತಕ ಬಣ್ಣ ಹಾಗೂ ಟೇಸ್ಟಿಂಗ್ ಪೌಡರ್‌ಗಳನ್ನು ಅತಿಯಾಗಿ ಬಳಸಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆ ಲಕ್ಷಾಂತರ ರೂಪಾಯಿ ಬಾಡಿಗೆ ಸಂಗ್ರಹಿಸಿದರೂ 15-20 ವರ್ಷಗಳಿಂದ ಮಳಿಗೆಗಳಿಗೆ ಸುಣ್ಣ-ಬಣ್ಣ ಅಥವಾ ದುರಸ್ತಿ ಮಾಡಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಆಶ್ರಯದಿಂದಲೇ ನಿಯಮ ಉಲ್ಲಂಘನೆ ನಡೆಯುತ್ತಿದೆ ಎಂದು ಆರೋಪಿಸಿದರು.

ಈ ವೇಳೆ ಪುರಸಭೆ ಮಾಜಿ ಸದಸ್ಯ ಅನೀಲ ಮುಳಗುಂದ ಹಾಗೂ ಕೆಲ ಅಂಗಡಿಕಾರರು ಪುರಸಭೆಯ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಯಿತು. ಸಿಪಿಐ ಬಿ.ವೈ. ನ್ಯಾಮಗೌಡ್ರ, ಪಿಎಸ್‌ಐ ನಾಗರಾಜ ಗಡದ, ಟಿ.ಕೆ. ರಾಠೋಡ ಹಾಗೂ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಿದರು.

ಹೋರಾಟಗಾರರ ಒತ್ತಡಕ್ಕೆ ಮಣಿದ ಪುರಸಭೆ ಅಧಿಕಾರಿಗಳು

ದಾಖಲೆ ಮತ್ತು ಮಾನ್ಯತೆ ಇಲ್ಲದೇ ನಿಯಮ ಉಲ್ಲಂಘನೆ ನಡೆಸುತ್ತಿದ್ದ 7 ಅಂಗಡಿಗಳನ್ನು ಖಾಲಿ ಮಾಡಿಸಿ ಸೀಜ್ ಮಾಡಿದರು. ಪಟ್ಟಣದ ಮೂರು ವಾಣಿಜ್ಯ ಸಂಕೀರ್ಣಗಳ ಟೆಂಡರ್ ಪ್ರಕ್ರಿಯೆಯನ್ನು ಜುಲೈ ಒಳಗೆ ಪೂರ್ಣಗೊಳಿಸಲಾಗುವುದು. ನಿಯಮ ಉಲ್ಲಂಘಿಸಿದ ಮಳಿಗೆದಾರರ ವಿರುದ್ಧ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಈ ವೇಳೆ ನಾಗೇಶ ಅಮರಾಪುರ, ಸುರೇಶ ಹಟ್ಟಿ, ಮಂಜುನಾಥ ಮುಳಗುಂದ, ರಮೇಶ ಹಂಗನಕಟ್ಟಿ, ಮಾಂತೇಶ ಗುದ್ನಾಳ, ಇಲಿಯಾಸ್ ಮೀರಾನವರ, ಲೋಕೇಶ ಶರಸೂರಿ, ಮೈಲಾರಿ ಹೆಗ್ಗಣ್ಣವರ, ಎನ್.ಎಂ. ಆಡೂರ, ಎಂ.ಕೆ. ಕುಡಚಿ, ಮಹೇಶ ಸೂರಣಗಿ, ವೀರಭದ್ರಯ್ಯ ಮಠಪತಿ, ಪ್ರವೀಣ ಆಚಾರಿ, ನಿಂಗಪ್ಪ ಕುರಟ್ಟಿ, ಇಸಾಕಬಾಷಾ ಹರಪನಹಳ್ಳಿ, ಬಸಣ್ಣ ಮೇಲೇರಿ, ಮೈನು ಮೊಮಿನ್, ಹಾಲಪ್ಪ ಭಂಡಾರಿ, ನಜೀರ ಬಾಗಲಕೋಟ, ಗೌಸ ಜಮಖಂಡಿ, ಬರಕತಲಿ ಮುಳಗುಂದ, ದುದ್ದು ರತನಖಾನ್, ಯಲ್ಲಪ್ಪ ಹಂಜಗಿ, ರಾಜು ಕೆರೆಕೊಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪುರಸಭೆ ಅಧಿಕಾರಿಗಳಾದ ಮಂಜುಳಾ ಹೂಗಾರ, ಮಂಜುನಾಥ ಮುದಗಲ್, ಸುರೇಶ ಪೂಜಾರ ಹಾಗೂ ಹನಮಂತಪ್ಪ ನಂದೆಣ್ಣವರ ಉಪಸ್ಥಿತರಿದ್ದರು.

 “ಪುರಸಭೆ ಮಳಿಗೆಗಳಲ್ಲಿ ನಡೆಯುತ್ತಿರುವ ನಿಯಮ ಉಲ್ಲಂಘನೆ ವಿರುದ್ಧ ಹೋರಾಟ ಮುಂದುವರಿಯಲಿದೆ. ಪಾರದರ್ಶಕ ಟೆಂಡರ್ ಪ್ರಕ್ರಿಯೆ ನಡೆಸಲೇಬೇಕು.”

ಶರಣು ಗೋಡಿ

 

ಮಸೀದಿಗಳ ಕಮಾನುಗಳಲ್ಲಿ ಅಡಗಿದೆ ಇಸ್ಲಾಂ ತತ್ವಜ್ಞಾನ: ಡಾ. ಅಪ್ಪಣ್ಣ ಹಂಜೆ

ವಿಜಯಸಾಕ್ಷಿ ಸುದ್ದಿ, ಗದಗ: ಇಸ್ಲಾಂ ವಾಸ್ತುಕಲೆ ಕೇವಲ ಕಟ್ಟಡ ನಿರ್ಮಾಣವಲ್ಲ, ಅದು ಧಾರ್ಮಿಕ ನಂಬಿಕೆ, ಆಧ್ಯಾತ್ಮಿಕತೆ, ಅನಂತತೆ ಹಾಗೂ ಸೌಂದರ್ಯದ ಸಂಕೇತವಾಗಿದೆ ಎಂದು ಹುಲಕೋಟಿಯ ಕೆ.ಎಚ್. ಪಾಟೀಲ ಫಸ್ಟ್ ಗ್ರೇಡ್ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಅಪ್ಪಣ್ಣ ಹಂಜೆ ಹೇಳಿದರು.

ನಗರದ ಅಬ್ದುಲ್‌ ಕಲಾಂ ಆರ್ಟ್ಸ್ ಅಂಡ್

ಕಾಮರ್ಸ್ ಕಾಲೇಜ್ ಇತಿಹಾಸ ವಿಭಾಗದ ಬಿ.ಎ. 6ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಪ್ರಾಜೆಕ್ಟ್ ವರದಿ ಮೌಲ್ಯಮಾಪನ ಕಾರ್ಯದಲ್ಲಿ ಬಾಹ್ಯ ಪರಿವೀಕ್ಷಕರಾಗಿ ಮಾತನಾಡಿದ ಅವರು, ಇಸ್ಲಾಂ ಧರ್ಮದ ಕಟ್ಟಡಗಳಲ್ಲಿ ಕಾಣಸಿಗುವ ಮಿಹ್ರಾಬ್, ಕಿಬ್ಲಾ, ಕಮಾನು, ಗುಮ್ಮಟ, ಮಿನಾರ ಹಾಗೂ ಜ್ಯಾಮಿತೀಯ ವಿನ್ಯಾಸಗಳು ಇಸ್ಲಾಂ ತತ್ವ-ಸಿದ್ಧಾಂತ ಮತ್ತು ನಂಬಿಕೆಗಳ ಪ್ರತೀಕಗಳಾಗಿವೆ ಎಂದು ವಿವರಿಸಿದರು.

ಮಸೀದಿ, ದರ್ಗಾ, ಈದ್ಗಾ, ಗೋರಿ ಹಾಗೂ ಸಮಾಧಿಗಳಂತಹ ಧಾರ್ಮಿಕ ಕಟ್ಟಡಗಳನ್ನು ಕೇವಲ ವಾಸ್ತುಶೈಲಿಯಾಗಿ ನೋಡದೇ, ಅವುಗಳ ಹಿಂದಿರುವ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಿಕಲ್ಪನೆಗಳೊಂದಿಗೆ ಅರ್ಥೈಸಿಕೊಳ್ಳಬೇಕು ಎಂದರು.

ಇತಿಹಾಸ ವಿಭಾಗದ ಉಪನ್ಯಾಸಕಿ ರಾಜೇಶ್ವರಿ ಬಾರಕೇರ ಮಾತನಾಡಿ, ಇಸ್ಲಾಂ ವಾಸ್ತುಕಲೆ ಕಲಾತ್ಮಕತೆ, ವೈಜ್ಞಾನಿಕತೆ ಮತ್ತು ಸಾಂಸ್ಕೃತಿಕ ಮೌಲ್ಯಗಳ ಸಮನ್ವಯವಾಗಿದ್ದು, ವಿಭಿನ್ನ ಸಂಸ್ಕೃತಿಗಳ ನಡುವೆ ಸೌಹಾರ್ದತೆಯ ಸೇತುವೆಯಾಗಿ ಕಾರ್ಯನಿರ್ವಹಿಸಿದೆ ಎಂದು ಹೇಳಿದರು.

ಪ್ರಾಚಾರ್ಯ ಎಸ್.ಎಚ್. ಬಡೇಖಾನ ಅಧ್ಯಕ್ಷೀಯ ನುಡಿಗಳಲ್ಲಿ ಮಾತನಾಡಿ, ಧಾರ್ಮಿಕ ಕಟ್ಟಡಗಳ ಅಧ್ಯಯನ ಮಾಡುವಾಗ ಅವುಗಳ ತಾತ್ವಿಕ ಮತ್ತು ಧಾರ್ಮಿಕ ಹಿನ್ನೆಲೆಯನ್ನು ಅರ್ಥೈಸಿಕೊಳ್ಳುವುದು ಅತ್ಯಗತ್ಯ. ಇಲ್ಲವಾದರೆ ಅಧ್ಯಯನ ಕೇವಲ ಭೌತಿಕ ವಿವರಣೆಗೆ ಸೀಮಿತವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಮಾಜಶಾಸ್ತ್ರ ಉಪನ್ಯಾಸಕಿ ಸವಿತಾ ಆರಾಧ್ಯಮಠ ವಂದಿಸಿದರು. ಕನ್ನಡ ಉಪನ್ಯಾಸಕಿ ಕವಿತಾ ಅಜನಾಳ ಕಾರ್ಯಕ್ರಮ ನಿರೂಪಿಸಿದರು. ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

 “ಇಸ್ಲಾಂ ವಾಸ್ತುಕಲೆಯ ಪ್ರತಿಯೊಂದು ಕಮಾನು, ಗುಮ್ಮಟ ಮತ್ತು ವಿನ್ಯಾಸವೂ ಧಾರ್ಮಿಕ ತತ್ವ ಹಾಗೂ ಆಧ್ಯಾತ್ಮಿಕ ಸಂದೇಶವನ್ನು ಹೊತ್ತಿರುತ್ತದೆ.”

ಡಾ. ಅಪ್ಪಣ್ಣ ಹಂಜೆ

 

ಧರ್ಮ ಮರೆತರೆ ಸಮಾಜ ದಾರಿ ತಪ್ಪುತ್ತದೆ: ಪ್ರವೀಣ ಬೆನ್ನೂರ

ವಿಜಯಸಾಕ್ಷಿ ಸುದ್ದಿ, ಗದಗ: ಯುವ ಪೀಳಿಗೆಗೆ ಧರ್ಮ ಸಂಸ್ಕಾರ, ಧರ್ಮ ಶಿಕ್ಷಣ ಹಾಗೂ ಸನಾತನ ಭಾರತೀಯ ಸಂಸ್ಕೃತಿಯನ್ನು ಕಲಿಸುವುದು ಇಂದಿನ ಕಾಲದ ತುರ್ತು ಅಗತ್ಯವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕ ಪ್ರವೀಣ ಬೆನ್ನೂರ ಹೇಳಿದರು.

ನಗರದ ರಾಜೀವ ಗಾಂಧಿ ನಗರದ ನವಲೆ ಕಟ್ಟಡದಲ್ಲಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಭಾವಸಾರ ವ್ಹಿಜನ್ ಇಂಡಿಯಾ ಗದಗ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ವಿಶೇಷ ಹಿಂದೂ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಮತ್ತು ಧರ್ಮ ವಿಮುಖತೆಯಿಂದ ಯುವಜನತೆ ದಾರಿ ತಪ್ಪುತ್ತಿದೆ. ಇದಕ್ಕೆ ಪರಿಹಾರವೆಂದರೆ ಬಾಲ್ಯದಿಂದಲೇ ಮಕ್ಕಳಿಗೆ ಧರ್ಮ ಶಿಕ್ಷಣ, ರಾಷ್ಟ್ರಭಕ್ತಿ ಮತ್ತು ಭಾರತೀಯ ಸಂಸ್ಕಾರಗಳನ್ನು ಬಿತ್ತುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ‘ಲವ್ ಜಿಹಾದ್’ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಷಡ್ಯಂತ್ರಗಳ ವಿರುದ್ಧ ಸಮಾಜ ಎಚ್ಚರಗೊಳ್ಳಬೇಕು. ಮಹಿಳೆಯರು ಮತ್ತು ಯುವತಿಯರಲ್ಲಿ ಧರ್ಮರಕ್ಷಣೆ, ಸ್ವಸಂರಕ್ಷಣೆ ಹಾಗೂ ಆತ್ಮಗೌರವದ ಜಾಗೃತಿ ಮೂಡಿಸಲು ‘ರಣರಾಗಿಣಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಭಾವಸಾರ ವ್ಹಿಜನ್ ಇಂಡಿಯಾದ ನಿರ್ದೇಶಕ ಅಶ್ವಥ್ ಸುಲಾಖೆ, ಸನಾತನ ಧರ್ಮದ ಮೌಲ್ಯಗಳನ್ನು ಉಳಿಸುವುದು ಪ್ರತಿಯೊಬ್ಬ ಹಿಂದುವಿನ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.

ಸನಾತನ ಸಂಸ್ಥೆಯ ಸಾಧಕಿ ಜಯಶ್ರೀ ಹೆಬಸೂರ ಮಾತನಾಡಿ, ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಎಂಬ ಧ್ಯೇಯದೊಂದಿಗೆ ಸನಾತನ ಸಂಸ್ಥೆ ಧರ್ಮ ಜಾಗೃತಿ ಹಾಗೂ ಭಾರತೀಯ ಸಂಸ್ಕಾರದ ಉಳಿವಿಗಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಭಾವಸಾರ ವ್ಹಿಜನ್ ಇಂಡಿಯಾ ಅಧ್ಯಕ್ಷ ಶ್ರೀಪಾದ ವೈಕುಂಠೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗದಗ ಭಾವಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷ ಪರಶುರಾಮ ಮಹೇಂದ್ರಕರ, ಸಮಾಜ ಟ್ರಸ್ಟ್ ಸದಸ್ಯ ತುಕಾರಾಮ ಬೇಂದ್ರೆ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆತಿಥ್ಯ ವಹಿಸಿದ್ದ ವಿಜಯಾ ಪರಶುರಾಮ ನವಲೆ ದಂಪತಿಯನ್ನು ಸನ್ಮಾನಿಸಲಾಯಿತು.

ಭಾಗ್ಯಶ್ರೀ ನವಲೆ ಪ್ರಾರ್ಥಿಸಿದರು. ರಾಘವೇಂದ್ರ ನವಲೆ ಸ್ವಾಗತಿಸಿದರು. ರಾಜು ಕಪಟಕರ ಕಾರ್ಯಕ್ರಮ ನಿರೂಪಿಸಿದರು. ಸುಧಾ ವೈಕುಂಠೆ ವಂದಿಸಿದರು.

ಜೆ.ಡಿ. ಉತ್ತರಕರ, ರಾಜೇಂದ್ರ ತ್ರಿಮಲ್ಲೆ, ಈರಣ್ಣ ಬೆಳಮಕರ, ಷಣ್ಮುಖ ಸುಲಾಖೆ, ನಾಗರಾಜ ವಾದೋನೆ, ವೀಣಾ ಸುಲಾಖೆ, ಸುರೇಖಾ ಪಾಟೀಲ, ವಿಜಯಲಕ್ಷ್ಮೀ ದೇಸಾಯಿ, ದ್ಯಾಮಕ್ಕ ಬಸೆಟ್ಟಿ, ಅಕ್ಕಮ್ಮ ಅಬ್ಬಿಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 “ಧರ್ಮ ಶಿಕ್ಷಣ ಮತ್ತು ಭಾರತೀಯ ಸಂಸ್ಕಾರಗಳನ್ನು ಮಕ್ಕಳಿಗೆ ಬಾಲ್ಯದಲ್ಲೇ ನೀಡಿದರೆ ಮಾತ್ರ ಸಮಾಜದ ಭವಿಷ್ಯ ಸುರಕ್ಷಿತವಾಗಿರುತ್ತದೆ.”

ಪ್ರವೀಣ ಬೆನ್ನೂರ

 

ಜನರ ಆಕ್ರೋಶಕ್ಕೆ ಎಚ್ಚೆತ್ತ ಪಂಚಾಯಿತಿ: 35 ಮಿನಿ ಟ್ಯಾಂಕ್ ಸ್ವಚ್ಛತೆ, ಪೈಪ್‌ಲೈನ್ ದುರಸ್ತಿ ಆರಂಭ

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಗ್ರಾಮ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಅಸ್ವಚ್ಛತೆ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಲಕ್ಕುಂಡಿ ಗ್ರಾಮ ಪಂಚಾಯಿತಿ ಎಚ್ಚೆತ್ತುಕೊಂಡಿದ್ದು, ಗ್ರಾಮದಲ್ಲಿ ಮಿನಿ ಟ್ಯಾಂಕ್‌ಗಳ ಸ್ವಚ್ಛತೆ, ಪೈಪ್‌ಲೈನ್ ಹಾಗೂ ಕೊಳವೆಬಾವಿ ದುರಸ್ತಿ ಕಾರ್ಯವನ್ನು ಭರದಿಂದ ಆರಂಭಿಸಿದೆ.

ಕಳೆದ ಜೂನ್ 5ರಂದು ನಡೆದ ಗ್ರಾಮ ಸಭೆಯಲ್ಲಿ, ಪೈಪ್‌ಲೈನ್ ಮತ್ತು ಕೊಳವೆಬಾವಿ ದುರಸ್ತಿ ನಿರ್ಲಕ್ಷ್ಯದಿಂದ ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲ. ಗ್ರಾಮದ ಹೊರವಲಯ ಅಸ್ವಚ್ಛತೆಯಿಂದ ಕೂಡಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದರು. ಇದರ ಪರಿಣಾಮವಾಗಿ ಗ್ರಾಮ ಪಂಚಾಯಿತಿ ತುರ್ತು ಸಭೆ ನಡೆಸಿ ಕ್ರಮ ಕೈಗೊಂಡಿದೆ.

ಗ್ರಾಮದ ವಾರ್ಡ್‌, ಶಾಲೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಲಾಗಿರುವ ಒಟ್ಟು 35 ಮಿನಿ ಟ್ಯಾಂಕ್‌ಗಳನ್ನು ಪಂಚಾಯಿತಿ ಸಿಬ್ಬಂದಿಯಿಂದ ಸ್ವಚ್ಛಗೊಳಿಸಿ ಸುಣ್ಣ ಹಚ್ಚುವ ಕಾರ್ಯ ಆರಂಭಿಸಲಾಗಿದೆ. ಜಂತ್ಲಿ-ಶಿರೂರು ರಸ್ತೆಯ ಕೊಳವೆಬಾವಿಯಿಂದ ನೀರು ಪೂರೈಕೆಯಾಗುವ ಪೈಪ್‌ಲೈನ್‌ಗಳ ದುರಸ್ತಿ ಕಾರ್ಯವೂ ಪ್ರಗತಿಯಲ್ಲಿದೆ.

ಕುಡಿಯುವ ನೀರಿನ ಟ್ಯಾಂಕ್‌ಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಿ, ಸುಣ್ಣ-ಬಣ್ಣ ಬಳಿದು ಸುಂದರಗೊಳಿಸುತ್ತಿರುವ ಪಂಚಾಯಿತಿ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಗ್ರಾಮದಲ್ಲಿ ಒಟ್ಟು 11 ವಾರ್ಡ್‌ಗಳಿದ್ದು, 1ರಿಂದ 5 ಹಾಗೂ 11ನೇ ವಾರ್ಡ್‌ಗಳಿಗೆ ಈಗಾಗಲೇ 2-3 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಆದರೆ 6ರಿಂದ 10ನೇ ವಾರ್ಡ್‌ಗಳಿಗೆ 8ರಿಂದ 12 ದಿನಕ್ಕೊಮ್ಮೆ ಮಾತ್ರ ನೀರು ಬರುತ್ತಿರುವುದು ಗ್ರಾಮ ಸಭೆಯಲ್ಲಿ ಬೆಳಕಿಗೆ ಬಂದಿತ್ತು.

ಈ ಕುರಿತು ಮಾತನಾಡಿದ ಆಡಳಿತಾಧಿಕಾರಿ ಶರಣು ಗೋಗೇರಿ, ಹೆಚ್ಚು ಕುಟುಂಬಗಳಿರುವ 6ರಿಂದ 10ನೇ ವಾರ್ಡ್‌ನಲ್ಲಿ 35 ವಾಲ್‌ಗಳಿದ್ದು, ಇಲ್ಲಿ ಇಬ್ಬರು ವಾಲ್‌ಮನ್‌ಗಳನ್ನು ನೇಮಕ ಮಾಡಿ ಅವರಿಗೆ ನಿಗದಿತ ಸಮಯ ವಹಿಸಲಾಗಿದೆ. ಇನ್ನು ಮುಂದೆ ಕನಿಷ್ಠ ನಾಲ್ಕು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಗ್ರಾಮಕ್ಕೆ ಪ್ರತಿದಿನ ಸುಮಾರು 9 ಲಕ್ಷ ಲೀಟರ್ ನೀರಿನ ಅಗತ್ಯವಿದ್ದು, ಪ್ರಸ್ತುತ ತುಂಗಭದ್ರಾ ನದಿ ಪಾತ್ರದಿಂದ 5 ಲಕ್ಷ ಲೀಟರ್ ನೀರು ಮಾತ್ರ ಲಭ್ಯವಾಗುತ್ತಿದೆ. ಉಳಿದ 4 ಲಕ್ಷ ಲೀಟರ್ ನೀರನ್ನು ಗ್ರಾಮದ ಕೊಳವೆಬಾವಿ ಸಂಪನ್ಮೂಲಗಳಿಂದ ಪೂರೈಸಲು ಪ್ರಯತ್ನಿಸಲಾಗುತ್ತಿದೆ ಎಂದು ಪಿಡಿಒ ಡಾ. ಅಮೀರನಾಯಕ ಮಾಹಿತಿ ನೀಡಿದರು.

ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಅನೈರ್ಮಲ್ಯ ತಪ್ಪಿಸಲು ಗ್ರಾಮದ ವಿವಿಧ ಭಾಗಗಳ ಮಿನಿ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿ ಪರಿಸರ ಸುಂದರವಾಗಿಡುವ ಅಭಿಯಾನವನ್ನು ಆರಂಭಿಸಲಾಗಿದೆ ಎಂದರು.

 “ಒಂದು ವಾರದೊಳಗೆ ಎಲ್ಲಾ ವಾರ್ಡ್‌ಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು.”

ಶರಣು ಗೋಗೇರಿ

 

error: Content is protected !!