Home Blog Page 3

ಸೇವೆಗೆ ಸಿಹಿ ಪ್ರತಿಫಲ: ಡೆಲಿವರಿ ಬಾಯ್ಸ್ʼಗಳಿಗೆ ಉಡುಗೊರೆ ನೀಡಿದ ಯುವಕ

0

ಹೈದರಾಬಾದ್‌:- ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಎಲ್ಲರೂ ತಮ್ಮ ಕುಟುಂಬದೊಂದಿಗೆ ಖುಷಿಪಡುತ್ತಿದ್ದರೂ, ಕೆಲವರು ತಮ್ಮ ಕರ್ತವ್ಯಕ್ಕಾಗಿ ಹಬ್ಬವನ್ನೇ ತ್ಯಜಿಸಿ ದುಡಿಯುತ್ತಾರೆ. ಅಂಥವರಲ್ಲಿ ಡೆಲಿವರಿ ಬಾಯ್ಸ್‌ ಕೂಡ ಒಬ್ಬರು.

ಈ ಹಿನ್ನಲೆಯಲ್ಲಿ ಹೈದರಾಬಾದ್‌ನ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಗುಂಡೇಟಿ ಮಹೇಂಧರ್ ರೆಡ್ಡಿ ಅವರು ಮಾನವೀಯತೆ ಮೆರೆದಿದ್ದಾರೆ. ಸ್ವಿಗ್ಗಿ, ಬ್ಲಿಂಕಿಟ್, ಜೆಪ್ಟೋ ಹಾಗೂ ಬಿಗ್‌ಬಾಸ್ಕೆಟ್ ಮೂಲಕ ಸಿಹಿತಿಂಡಿಗಳನ್ನು ಆರ್ಡರ್ ಮಾಡಿ, ಮನೆ ಬಾಗಿಲಿಗೆ ಬಂದ ಡೆಲಿವರಿ ಬಾಯ್ಸ್‌ಗಳಿಗೆ ಅದನ್ನೇ ಉಡುಗೊರೆಯಾಗಿ ನೀಡಿ ದೀಪಾವಳಿ ಶುಭಾಶಯ ಕೋರಿದ್ದಾರೆ.

ಈ ಘಟನೆಯ ವೀಡಿಯೋವನ್ನು ರೆಡ್ಡಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, “ಈ ದೀಪಾವಳಿಗೆ ನಮ್ಮ ಡೆಲಿವರಿಗಳನ್ನು ಸಿಹಿಗೊಳಿಸೋಣ” ಎಂದು ಶೀರ್ಷಿಕೆ ನೀಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ರೆಡ್ಡಿಯವರ ಮಾನವೀಯತೆ ಮೆಚ್ಚಿಕೊಂಡು “ನಿಜವಾದ ದೀಪಾವಳಿ ಹೀಗೆ ಇರಬೇಕು” ಎಂದು ಪ್ರಶಂಸಿಸಿದ್ದಾರೆ.

ಗುರುವಿಲ್ಲದೆ ಗುರಿ ಸಾಧನೆ ಅಸಾಧ್ಯ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

0

ವಿಜಯಸಾಕ್ಷಿ ಸುದ್ದಿ, ಗದಗ: ಗುರು ಎಂದರೆ ಮಾರ್ಗದರ್ಶಕ, ಬೆಳಕಿನ ದಾರಿಯನ್ನು ತೋರಿಸುವವನು. ಗುರಿ ಎಂದರೆ ಬದುಕಿನ ಉದ್ದೇಶ, ಸಾಧನೆ ಅಥವಾ ಕನಸು. ಜೀವನದಲ್ಲಿ ಒಬ್ಬ ಗುರು, ಮಾರ್ಗದರ್ಶಕ ಅಥವಾ ಪ್ರೇರಣಾದಾಯಕ ವ್ಯಕ್ತಿಯಿಲ್ಲದೆ ಮಕ್ಕಳು ಯಶಸ್ಸು ಸಾಧಿಸುವುದು ಕಷ್ಟ. ಗುರುವು ನಮ್ಮೊಳಗಿನ, ಅಂದರೆ ಮಕ್ಕಳ ಸಾಮರ್ಥ್ಯವನ್ನು ಗುರುತಿಸಿ, ಅವರನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವಂತೆ ಮಾಡುತ್ತಾನೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.

ಎಸ್‌ಎಸ್‌ಎಲ್‌ಸಿ ಫಲಿತಾಂಶ ಮುನ್ನೋಟ ಸಭೆ–2026ರಲ್ಲಿ ಫಲಿತಾಂಶ ವೃದ್ಧಿಗಾಗಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲೆಯ ವಿವಿಧ ಅಂಶಗಳು ಹಾಗೂ ಎಸ್‌ಎಂ1 ಫಲಿತಾಂಶ ವಿಶ್ಲೇಷಣೆ ಮಾಡಿ ನಿರ್ದಿಷ್ಟ ಗುರಿ ಹಾಗೂ ಬದ್ಧತೆಯೊಂದಿಗೆ ಕೆಲಸ ನಿರ್ವಹಿಸುವುದು, ಎಲ್‌ಬಿಎಗಳನ್ನು ಪಾಠಗಳ ಪೂರ್ವಸಿದ್ಧತೆಯಲ್ಲಿ ಬಳಸಿಕೊಂಡು ಮಗುವಿಗೆ ಚಿಕಿತ್ಸಕ ವಿಧಾನದಲ್ಲಿ ಮಗುವಿನ ಮಟ್ಟಕ್ಕೆ ಇಳಿದು, ಪಾಠದ ಉದ್ದೇಶವನ್ನರಿತು ಪೂರ್ವ ತಯಾರಿಯೊಂದಿಗೆ ಲಭ್ಯವಿರುವ ಕಲಿಕಾ-ಬೋಧನೋಪಕರಣ ಹಾಗೂ ತಂತ್ರಜ್ಞಾನದ ಸಾಮಗ್ರಿಗಳನ್ನು ಬಳಸಿಕೊಂಡು ಮಗುವಿನ ಭಾಗವಹಿಸಿಕೆಯೊಂದಿಗೆ ಚಟುವಟಿಕೆ ಆಧಾರಿತವಾಗಿ ಪರಿಣಾಮಕಾರಿ ಬೋಧಿಸುವ-ಕಲಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಕೆ. ಲಮಾಣಿ, ಡಯಟ್ ಪ್ರಾಚಾರ್ಯರಾದ ಮಂಗಳಾ ತಾಪಸ್ಕರ್, ಎಸ್‌ಎಸ್‌ಎಲ್‌ಸಿ ಜಿಲ್ಲಾ ನೋಡಲ್ ಅಧಿಕಾರಿ ಎಚ್.ಬಿ. ರಡ್ಡೇರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಿವೈಪಿಸಿಗಳಾದ ಎಂ.ಎಚ್. ಕಂಬಳಿ, ರವಿಪ್ರಕಾಶ್ ಎಸ್.ಎನ್, ಜಿಲ್ಲೆಯ ಎಲ್ಲ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಯಟ್‌ನ ಹಿರಿಯ ಉಪನ್ಯಾಸಕರು, ಜಿಲ್ಲೆಯ ಶಾಲಾ ದತ್ತು ಅಧಿಕಾರಿಗಳು, ಜಿಲ್ಲೆಯ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಹಾಜರಿದ್ದರು. ಕಾರ್ಯಕ್ರಮವನ್ನು ಎಂ.ಎ. ಯರಗುಡಿ ನಿರೂಪಿಸಿದರು. ಎಂ.ಎಚ್. ಕಂಬಳಿ ವಂದಿಸಿದರು.

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಎಫ್. ಪೂಜಾರ ಮಾತನಾಡಿ, ಇಲಾಖೆ ಎಲ್ಲಾ ಕಾರ್ಯಕ್ರಮಗಳಲ್ಲಿ ನಾವೆಲ್ಲಾ ಬೆನ್ನೆಲುಬಾಗಿರುತ್ತೇವೆ. ಜೊತೆಗೆ ಅತ್ಯುತ್ತಮ ಫಲಿತಾಂಶ ನಮ್ಮ ಧ್ಯೇಯವಾಗಿರಲಿ ಎಂದು ತಿಳಿಸಿದರು.

ಕಸಾಪ ತಾಲೂಕಾಧ್ಯಕ್ಷರ ಬದಲಾವಣೆಗೆ ಒತ್ತಾಯ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಚಟುವಟಿಕೆಗಳಿಲ್ಲದೆ ಸಂಪೂರ್ಣವಾಗಿ ನಿಷ್ಕಿಯಗೊಂಡಿದೆ. ಈ ಹಿಂದೆ ದಿ. ಐ.ಎ. ರೇವಡಿಯವರು ಎಲ್ಲರನ್ನೊಳಗೊಂಡಂತೆ ಕ್ರಿಯಾಶೀಲವಾಗಿ ತಾಲೂಕಿನಲ್ಲಿ ಸಂಚರಿಸಿ ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದರು.如今 ಪ್ರಸ್ತುತ ಅಧ್ಯಕ್ಷರ ಅವಧಿಯಲ್ಲಿ ಇದುವರೆಗೂ ಅಜೀವ ಸದಸ್ಯರ ಸಭೆ, ಕಾರ್ಯಕಾರಿ ಮಂಡಳಿ ಸದಸ್ಯರ ಸಭೆಗಳು ನಡೆಯದೆ ಕಾಟಾಚಾರಕ್ಕೆ ಇದ್ದಂತಾಗಿದೆ ಎಂದು ಕಸಾಪ ಅಜೀವ ಸದಸ್ಯ ಹಾಗೂ ತಾಲೂಕು ಮಾಜಿ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇವರ ಅಧಿಕಾರಾವಧಿಯಲ್ಲಿ ಯಾರಿಗೆಲ್ಲ ಅವಕಾಶ ನೀಡಲಾಗಿದೆ, ಯಾವ ಸಾಹಿತಿ-ಬರಹಗಾರರಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ ಎಂದು ತಿಳಿಸಲಿ. ಯಾವುದೇ ಚಟುವಟಿಕೆಗಳನ್ನು ಮಾಡದ ಅಧ್ಯಕ್ಷರನ್ನು ಯಥಾಸ್ಥಿತಿ ಮುಂದುವರೆಸುತ್ತಾ ಸಾಗಿರುವ ಕಸಾಪ ಜಿಲ್ಲಾಧ್ಯಕ್ಷರು ಕೂಡಲೇ ಈ ಬಗ್ಗೆ ಗಮನ ಹರಿಸಬೇಕು.

ಗಜೇಂದ್ರಗಡದಲ್ಲಿಯೇ ಗದಗ ಜಿಲ್ಲಾ 10ನೇ ಸಮ್ಮೇಳನ ಹಾಗೂ ಗಜೇಂದ್ರಗಡ ತಾಲೂಕು ಪ್ರಥಮ ಸಮ್ಮೇಳನ ನಡೆದು ವರ್ಷ ಕಳೆಯುತ್ತಾ ಬಂದರೂ ಇದುವರೆಗೂ ಲೆಕ್ಕಪತ್ರ ಮಂಡಿಸಿಲ್ಲ. ಆದ್ದರಿಂದ, ಕಸಾಪ ಜಿಲ್ಲಾಧ್ಯಕ್ಷರು ಇತ್ತ ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ.

20 ತೊಲೆ ಬಂಗಾರ ಹಾಕಿದ ಎಂದು ಹೇಳಿರುವುದು ಚಾರಿತ್ರ್ಯಹನನದ ಕಾರ್ಯ; ತೋಂಟದ ಶ್ರೀಗಳು

0

ವಿಜಯಸಾಕ್ಷಿ ಸುದ್ದಿ, ಗದಗ: ಸಂದರ್ಶನವೊಂದರಲ್ಲಿ ಮಹಾರಾಷ್ಟ್ರ ಕನೇರಿಮಠದ ಶ್ರೀಗಳು ನಮ್ಮ ಪೂರ್ವಾಶ್ರಮದ ಸಂಬಂಧಿಗಳಿಗೆ ನಾವು 20 ತೊಲೆ ಬಂಗಾರ ಕೊಟ್ಟಿರುವುದಾಗಿ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂತು. ಅವರ ಈ ಆರೋಪ ನಿರಾಧಾರ ಮತ್ತು ಶುದ್ಧ ಸುಳ್ಳು. ಈ ರೀತಿಯ ಆರೋಪ ಮಾಡುವ ಮೂಲಕ ಬಸವ ಸಂಸ್ಕೃತಿ ಅಭಿಯಾನದ ಮುಂಚೂಣಿಯಲ್ಲಿರುವ ನಮ್ಮನ್ನು ಹೆದರಿಸಿ ಹಿಂದೆ ಸರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಡಂಬಳ-ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಶ್ರೀಗಳು, ಈ ಮೊದಲು ನಾವು ನಮ್ಮ ಪೂರ್ವಾಶ್ರಮ ಸಂಬಂಧಿಗಳ ಯಾವುದೇ ಮದುವೆಗೆ ಹೋದ ಉದಾಹರಣೆ ಇಲ್ಲ. ಮದುವೆಯಾಗುವ ಹುಡುಗ ನಮ್ಮ ಪ್ರಸಾದನಿಲಯದ ವಿದ್ಯಾರ್ಥಿಯಾಗಿದ್ದವ. ಅವನ ದಯನೀಯ ಪ್ರಾರ್ಥನೆಗೆ ಹೋಗಲೇಬೇಕಾದ ಅನಿವಾರ್ಯತೆ. ಆದಾಗ್ಯೂ ಮದುವೆಯ ದಿನ ಹೋಗದೇ ಹಿಂದಿನ ದಿನ ನಾವು ಎಲ್ಲ ಮದುವೆಗಳಿಗೆ ಹೋದಂತೆ ಹೋಗಿ ಅವನಿಗೊಂದು ಶಾಲು ಹೊದಿಸಿ ಆಶೀರ್ವದಿಸಿ ಬರಲಾಗಿದೆ. ನಾವು ಈ ಮದುವೆಯಲ್ಲಿ ಯಾವುದೇ ಬಂಗಾರ ಕೊಟ್ಟಿಲ್ಲ. 20 ತೊಲೆ ಬಂಗಾರ ಹಾಕಿದರು ಎಂದು ಹೇಳಿರುವುದು ನಮ್ಮ ಚಾರಿತ್ರೋಯಹನನದ ಕಾರ್ಯವಾಗಿದೆ.

ಲಿಂಗಾಯತ ಸ್ವತಂತ್ರ ಧರ್ಮವಾದರೆ ಲಿಂಗಾಯತರು ಧಾರ್ಮಿಕ ಅಲ್ಪಸಂಖ್ಯಾತರಾಗುವ ಮೂಲಕ ಸಂವಿಧಾನದತ್ತವಾದ ಅನೇಕ ಸೌಲಭ್ಯಗಳನ್ನು ಪಡೆಯುತ್ತಾರೆ. ಇದು ಲಿಂಗಾಯತರ ಭವಿಷ್ಯದ ಹಿತದೃಷ್ಟಿಯಿಂದ ನಡೆದ ಹೋರಾಟ. ಇದರಿಂದ ದೇಶ ಹಾಳಾಗುತ್ತದೆ ಎಂದು ಹೇಳುವುದು ಸರಿಯಲ್ಲ. ಈ ಮೊದಲು ಭಾರತೀಯರೇ ಆಗಿರುವ ಬೌದ್ಧ ಧರ್ಮೀಯರಿಗೆ, ಸಿಖ್ಖ ಧರ್ಮದವರಿಗೆ ಮತ್ತು ಇತ್ತೀಚೆಗೆ ಜೈನಧರ್ಮದವರಿಗೆ ಸ್ವತಂತ್ರ ಧರ್ಮದ ಸ್ಥಾನ ನೀಡಲಾಗಿದೆ. ಇದರಿಂದ ದೇಶದ ಭದ್ರತೆಗೆ ಯಾವ ಹಾನಿಯಾಗಿದೆ? ಅದೇ ಮಾದರಿಯಲ್ಲಿ ದೇಶಪ್ರೇಮಿಗಳಾಗಿರುವ ಲಿಂಗಾಯತರ ಸಾಂವಿಧಾನಿಕ ಹಕ್ಕುಗಳನ್ನು ಪಡೆಯುವುದು ಲಿಂಗಾಯತ ಹೋರಾಟದ ಉದ್ದೇಶವಾಗಿದೆ.

ಇದನ್ನು ತಾತ್ತಿವಕ ನೆಲೆಯಲ್ಲಿ ಅವರು ಖಂಡಿಸುವುದನ್ನು ಬಿಟ್ಟು, ಹೋರಾಟದ ಮುಂಚೂಣಿಯಲ್ಲಿರುವ ನಮ್ಮನ್ನು ಮಾತ್ರ ಗುರಿ ಮಾಡಿಕೊಂಡು ಸುಳ್ಳು ಆರೋಪ ಹೊರಿಸುವುದು ಎಷ್ಟು ಸರಿ? ನಾವು ಅಂಥ ಕೆಲಸ ಮಾಡಿದ್ದರೆ ನಮ್ಮ ಭಕ್ತರು ಪ್ರಶ್ನಿಸುತ್ತಾರೆ. ನಿಮ್ಮ ಮಠದ ಹಾಗೆಯೇ ನಮ್ಮ ಮಠದ ಆಡಳಿತವೂ ಪಾರದರ್ಶಕವೇ ಆಗಿದೆ. ಮಠದ ಎಲ್ಲ ವ್ಯವಹಾರಗಳನ್ನು ವ್ಯವಸ್ಥಾಪಕರು, ವಿದ್ಯಾಸಂಸ್ಥೆಗಳ ವ್ಯವಹಾರಗಳನ್ನು ಆಡಳಿತಾಧಿಕಾರಿಗಳು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ನಾವು ನಮಗೆ ಬೇಕಾದವರನ್ನು ನೇಮಿಸಿಕೊಂಡು ಯಾವುದೇ ಭ್ರಷ್ಟ ವ್ಯವಹಾರ ಮಾಡಿಲ್ಲ ಎಂದು ಕನೇರಿ ಶ್ರೀಗಳಿಗೆ ಸ್ಪಷ್ಟಪಡಿಸಿದ್ದಾರೆ.

ಇನ್ನು ಮೇಲಾದರೂ ಧರ್ಮಕ್ಕೆ ಧರ್ಮಾಧಿಕಾರಿಗಳಿಗೆ ಸಂಬಂಧಿಸಿದ ವಿಷಯವನ್ನು ತಾತ್ತಿವಕ ನೆಲೆಯಲ್ಲಿ ಖಂಡಿಸಲಿ, ಅದಕ್ಕೆ ಸ್ವಾಗತವಿದೆ. ಆದರೆ ಸುಳ್ಳು ಆರೋಪಗಳ ಮೂಲಕ ಚಾರಿತ್ರೋಯಹನನ ಮಾಡುವ ಕೆಲಸ ಯಾರೂ ಮಾಡಬಾರದು. ಇದು ಮಠಾಧಿಪತಿಗಳಾದವರಿಗೆ ಶೋಭೆ ತರುವಂತಹದ್ದಲ್ಲ ಎಂದು ಶ್ರೀಗಳು ತಿಳಿಸಿದ್ದಾರೆ.

ಸಮ ಸಮಾಜ ನಿರ್ಮಾಣವಾಗಲು ಉಳ್ಳವರು ಇಲ್ಲದವರಿಗೆ ಕೊಡಬೇಕು: ಸಿಎಂ ಸಿದ್ದರಾಮಯ್ಯ

0

ಪುತ್ತೂರು: ಸಮ ಸಮಾಜ ನಿರ್ಮಾಣವಾಗಲು ಉಳ್ಳವರು ಇಲ್ಲದವರಿಗೆ ಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ರೈ ಎಸ್ಟೇಟ್ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇವರ ವತಿಯಿಂದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಅಶೋಕ ಜನ-ಮನ 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಶೋಕ್ ಅವರು ಕಾಂಗ್ರೆಸ್ ಶಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಟ್ರಸ್ಟ್ ವತಿಯಿಂದ ಪ್ರತಿ ವರ್ಷ ವಸ್ತ್ರದಾನ ಮಾಡುವ ಕಾರ್ಯವನ್ನು 13 ವರ್ಷಗಳಿಂದ ಮಾಡ್ತಾ ಬರುತ್ತಿದ್ದಾರೆ. ಒಂದು ಲಕ್ಷ ಜನರಿಗೆ ಇಂದು ವಸ್ತ್ರದಾನ ಮಾಡುತ್ತಿದ್ದಾರೆ. ಇತರರಿಗೆ ಅವರು ಸ್ಫೂರ್ತಿಯಾಗಲಿ ಎಂದರು.

ಸಮಾಜದಲ್ಲಿನ ದುರ್ಬಲರಿಗೆ ತಮ್ಮ ಗಳಿಕೆಯ ಒಂದು ಭಾಗವನ್ನು ನೀಡುವುದು ಒಳ್ಳೆಯ ಕೆಲಸ ಎಂದರು. ಸಮ ಸಮಾಜ ನಿರ್ಮಾಣ ಸಂವಿಧಾನದ ಉದ್ದೇಶ. ಕಾಯಕ ಮತ್ತು ದಾಸೋಹ ತತ್ವವನ್ನು ಬಸವಣ್ಣ ನಮಗೆ ನೀಡಿದ್ದಾರೆ ಎಂದರು.

ಸಹಿಷ್ಣುತೆ, ಸಹಬಾಳ್ವೆ ಅಗತ್ಯ

ನಮ್ಮ ನಾಡು ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣಬೇಕು. ಸರ್ವಜನಾಂಗದ ಶಾಂತಿಯ ತೋಟವಾಗಬೇಕು. ಪರಸ್ಪರ ಕಚ್ಚಾಡುವ, ಅಸಮಾನತೆವುಳ್ಳ ಸಮಾಜ ನಿರ್ಮಾಣವಾಗಬಾರದು. ಇತರೆ ಧರ್ಮಗಳ ಬಗ್ಗೆ ಸಹಿಷ್ಣುತೆ ಅಗತ್ಯ. ಸಹಬಾಳ್ವೆ ಇರಬೇಕು. ಇದನ್ನು ಎಲ್ಲರೂ ಪಾಲಿಸಿದಾಗ ಸಂವಿಧಾನದ ಧ್ಯೇಯೋದ್ದೇಶಗಳನ್ನು ಪಾಲಿಸಿದಂತಾಗುತ್ತದೆ ಎಂದರು.

ತಲಾ ಆದಾಯದಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ

ರಾಜ್ಯ ಹಸಿವು ಮುಕ್ತವಾಗಬೇಕೆಂದು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಶಕ್ತಿ ಯೋಜನೆ ಜಾರಿಯಾದ ನಂತರ ತಲಾ ಆದಾಯದಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಸರ್ಕಾರ ದಿವಾಳಿಯಾಗಿದೆ ಎಂದು ಟೀಕಿಸುತ್ತಾರೆ. ಸರ್ಕಾರದ ಬಳಿ ಹಣವಿಲ್ಲದಿದ್ದರೆ ಕಾಂಗ್ರೆಸ್ ಸರ್ಕಾರ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 2500 ಕೋಟಿ ರೂ. ಗಳ ಅನುದಾನ ಕೊಡಲು ಸಾಧ್ಯವಾಗುತ್ತಿತ್ತೆ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಜಗಳ ಉಂಟು ಮಾಡುವುದಕ್ಕೆ ಕಡಿವಾಣ

ಟೀಕೆ ಮಾಡುವವರು ಸುಮ್ಮನೆ ಟೀಕೆ ಮಾಡುತ್ತಾರೆ. ಏಕೆಂದರೆ ಜಾತಿ ಧರ್ಮದ ಹೆಸರಿನಲ್ಲಿ ಜಗಳ ತರುವುದರಲ್ಲಿ ಜಿಲ್ಲೆ ನಂಬರ್ ಒನ್ ಸ್ಥಾನದಲ್ಲಿತ್ತು. ಅದಕ್ಕೆಲ್ಲಾ ನಮ್ಮ ಸರ್ಕಾರ ಕಡಿವಾಣ ಹಾಕಿದೆ ಎಂದರು. ಜಾತಿ ಧರ್ಮ ಎಂದು ಜಗಳ ತರುವವರ ಮಕ್ಕಳನ್ನು ಇದಕ್ಕೆ ಕಳಿಸುವುದಿಲ್ಲ. ಬಡವರ ಮಕ್ಕಳನ್ನು, ಅಮಾಯಕರನ್ನು ಕಳಿಸುತ್ತಾರೆ. ದಕ್ಷ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.ಈಗ ಸುಧಾರಣೆಯಾಗಿದೆಯಲ್ಲವೆ ಎಂದು ಕೇಳಿದರು. ಪೋಲಿಸ್ ಅಧಿಕಾರಿಗಳು ದಕ್ಷರಾಗಿದ್ದರೆ ಬದಲಾವಣೆ ತರಲು ಸಾಧ್ಯ. ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಅನ್ಯೋನ್ಯತೆಯಿಂದ ಕೆಲಸ ಮಾಡಬೇಕು ಎಂದರು.

ಪುತ್ತೂರಿನಲ್ಲಿಯೇ ವೈದ್ಯಕೀಯ ಕಾಲೇಜು
ಬಜೆಟ್ ನಲ್ಲಿ ಘೋಷಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವೈದ್ಯಕೀಯ ಕಾಲೇಜು ಪುತ್ತೂರಿನಲ್ಲಿಯೇ ನಿರ್ಮಾಣವಾಗಲಿದೆ ಈ ಬಗ್ಗೆ ಯಾರಿಗೂ ಅನುಮಾನ ಬೇಡವೆಂದು ಮುಖ್ಯಮಂತ್ರಿಗಳು ತಿಳಿಸಿದರು. ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ ಎಂದರು.

ವಿಜೃಂಭಣೆಯ ಗಂಧ-ಉರುಸ್ ಆಚರಣೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮದಲ್ಲಿ ಶನಿವಾರ ಹಜರತ್ ಮೆಹಬೂಬ್ ಸುಭಾನಿ ದರ್ಗಾದ ಗಂಧ ಮತ್ತು ಉರುಸು ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಏಕೀಕರಣದ ರೂವಾರಿ ದಿ. ಅಂದಾನಪ್ಪ ದೊಡ್ಡಮೇಟಿಯವರ ಮನೆಯಿಂದ ಗಂಧವನ್ನು ಡೊಳ್ಳು ವಾದ್ಯ ವೈಭವದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಬಂಡಿವಡ್ಡರ ಓಣಿಯಲ್ಲಿರುವ ದರ್ಗಾಕ್ಕೆ ತರಲಾಯಿತು.

ದರ್ಗಾದಲ್ಲಿರುವ ಸಮಾಧಿಗೆ ವಿದ್ಯುತ್ ದೀಪಗಳ ಅಲಂಕಾರ ಹಾಗೂ ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ನಂತರ ನೆರೆದಿದ್ದ ಭಕ್ತರಿಗೆ ಅನ್ನ ಪ್ರಸಾದ ವಿತರಣೆ ನೆರವೇರಿತು.

ಈ ವೇಳೆ ತಾ.ಪಂ ಮಾಜಿ ಸದಸ್ಯ ಸಂದೇಶ್ ದೊಡ್ಡಮೇಟಿ, ಗ್ರಾ.ಪಂ ಮಾಜಿ ಸದಸ್ಯ ಹರ್ಷವರ್ಧನ್ ದೊಡ್ಡಮೇಟಿ, ಜಮಾತ್ ಕಮಿಟಿಯ ಅಧ್ಯಕ್ಷ ಹುಚ್ಚುಸಾಬ ಬಸಾಪೂರು, ಯಮನೂರಸಾಬ ನದಾಫ್, ಕಾಶೀಮಲ್ಲಿ ಗಡಾದ, ಬಾಬುಸಾಬ ರಾಜೂರ, ಹಸನ್‌ಸಾಬ ಗಡಾದ, ರೈಮನಸಾಬ ಬಾಲೇಸಾಬನವರ, ಮಾಬು ನದಾಫ್, ಬಂಧು ಗಡಾದ, ದಾದಾಸಾಹೇಬ್ ನಮಾಜಿ, ಕುತ್ಬುದೀನ್ ಗಡಾದ, ಎಂ.ಎಚ್. ನದಾಫ್, ಹುಸೇನಸಾಬ ಓಲೆಕಾರ ಸೇರಿದಂತೆ ಇನ್ನಿತರರು ಇದ್ದರು.

ಪುತ್ತೂರಲ್ಲಿ ಸಿಎಂ ಕಾರ್ಯಕ್ರಮದಲ್ಲಿ ನೂಕುನುಗ್ಗಲು: 11ಕ್ಕೂ ಹೆಚ್ಚು ಮಂದಿ ಅಸ್ವಸ್ಥ

0

ಪುತ್ತೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ಪುತ್ತೂರು ತಾಲೂಕಿನ ಕ್ರೀಡಾಂಗಣದಲ್ಲಿ ನಡೆದಿದೆ.

‘ಅಶೋಕ ಜನಮನ–2025’ ಕಾರ್ಯಕ್ರಮವನ್ನು ಪುತ್ತೂರು ಶಾಸಕ ಅಶೋಕ್ ರೈ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗವಹಿಸಿದ್ದರು. ಕ್ರೀಡಾಂಗಣದ ಸಾಮರ್ಥ್ಯಕ್ಕಿಂತ ಹೆಚ್ಚು ಜನರು ಆಗಮಿಸಿದ್ದರಿಂದ ತೀವ್ರ ನೂಕುನುಗ್ಗಲು ಉಂಟಾಗಿ ಮಹಿಳೆಯರು ಹಾಗೂ ಮಕ್ಕಳು ಅಸ್ವಸ್ಥರಾದರು.

ಅಸ್ವಸ್ಥರನ್ನು ತಕ್ಷಣ ಪುತ್ತೂರು ತಾಲೂಕು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕಾರ್ಯಕ್ರಮವನ್ನು ಅಶೋಕ್ ರೈ ಮಾಲೀಕತ್ವದ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದು, ದೀಪಾವಳಿ ಹಬ್ಬದ ಅಂಗವಾಗಿ ಜನರಿಗೆ ತಟ್ಟೆ ಹಾಗೂ ವಸ್ತ್ರ ವಿತರಣೆ ಕೂಡ ನಡೆದಿತ್ತು. ಸಿಎಂ ಸಿದ್ದರಾಮಯ್ಯ ಅವರು ಈ ಕಾರ್ಯಕ್ರಮಕ್ಕೆ ಅಧಿಕೃತ ಉದ್ಘಾಟನೆ ನೆರವೇರಿಸಿದ್ದರು ಎನ್ನಲಾಗಿದೆ.

ಸೇಡಂ RSS ಪಥಸಂಚಲನ: ಸರ್ಕಾರಿ ವೈದ್ಯ ಭಾಗಿ – ತನಿಖೆ ಸಾಧ್ಯತೆ!

0

ಕಲಬುರಗಿ:- ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಭಾನುವಾರ ನಡೆದ ಆರ್‌ಎಸ್ಎಸ್ ಪಥಸಂಚಲನದಲ್ಲಿ ಸರ್ಕಾರಿ ವೈದ್ಯರೊಬ್ಬರು ಭಾಗವಹಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಇದಕ್ಕೂ ಮುನ್ನ, ಅಕ್ಟೋಬರ್ 12ರಂದು ರಾಯಚೂರಿನ ಲಿಂಗಸುಗೂರು ಪಟ್ಟಣದಲ್ಲಿ ನಡೆದ ಇದೇ ರೀತಿಯ ಪಥಸಂಚಲನದಲ್ಲಿ ರೋಡಲಬಂಡಾ ಗ್ರಾಮದ ಪಿಡಿಒ ಪ್ರವೀಣ್ ಕುಮಾರ್ ಭಾಗವಹಿಸಿದ್ದಕ್ಕಾಗಿ ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಡಾ. ಅರುಂಧತಿ ಅವರು ಇಲಾಖಾ ತನಿಖೆ ಕೈಗೊಂಡು ಅಮಾನತು ಆದೇಶ ಹೊರಡಿಸಿದ್ದರು.

ಸರ್ಕಾರಿ ನೌಕರರು ರಾಜಕೀಯ ಅಥವಾ ಸಂಘಟನೆ ಚಟುವಟಿಕೆಯಲ್ಲಿ ಭಾಗವಹಿಸುವುದು ಕರ್ನಾಟಕ ಸಿವಿಲ್ ಸೇವಾ ನಿಯಮಗಳ ಉಲ್ಲಂಘನೆ ಆಗುವುದರಿಂದ, ಸೇಡಂ ಪ್ರಕರಣದಲ್ಲಿಯೂ ಇದೇ ರೀತಿಯ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಡಿಸಿಸಿ ಬ್ಯಾಂಕ್ ಚುನಾವಣೆ ಗೆಲುವಿನ ಸಂಭ್ರಮಾಚರಣೆ ಬಳಿಕ ಪಿಕೆಪಿಎಸ್ ಸದಸ್ಯ ಸಾವು..!

0

ಬೆಳಗಾವಿ: ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ ಬಳಿಕ ಪಿಕೆಪಿಎಸ್ (ಪ್ರಗತಿ ಕಾರ್ಮಿಕ ಪಂಚಾಯತ್ ಸಂಘ) ಸದಸ್ಯ ಹೃದಯಾಘಾತದಿಂದ ನಿಧನರಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಮಕೇರಿ ಗ್ರಾಮದಲ್ಲಿ ನಡೆದಿದೆ. ಹನುಮಂತಗೌಡ (40) ಮೃತ ದುರ್ಧೈವಿಯಾಗಿದ್ದು, ರಾಮದುರ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಣ್ಣ ಯಾದವಾಡ ಅವರ ಪರ ಪ್ರಚಾರ ಮಾಡಿದ್ದ  ಹನುಮಂತಗೌಡ,

ಫಲಿತಾಂಶದ ದಿನವಾದ ನಿನ್ನೆ ಅಕ್ಟೋಬರ್ 19, 2025 ವಿಜಯೋತ್ಸವದಲ್ಲಿ ಭಾಗವಹಿಸಿದ್ದರು. ಆದರೆ, ಆ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಘಟನೆಯು ರಾಮದುರ್ಗ ಮತ್ತು ಬೆಳಗಾವಿಯಲ್ಲಿ ಶೋಕದ ವಾತಾವರಣವನ್ನು ಸೃಷ್ಟಿಸಿದೆ.

ಚುನಾವಣೆ ಗೆಲುವಿನ ಸಂಭ್ರಮದಲ್ಲಿದ್ದವರಿಗೆ ಇದು ಕಂಬನಿ ಮಿಡಿಯುವಂತೆ ಮಾಡಿದೆ. ಡಿಸಿಸಿ ಬ್ಯಾಂಕ್ ಚುನಾವಣೆಯ ಫಲಿತಾಂಶವು ರಾಮದುರ್ಗದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. ಮಲ್ಲಣ್ಣ ಯಾದವಾಡ ಅವರ ಜಯವನ್ನು ಜನರು ಸಂಭ್ರಮಿಸಿದ್ದಾರೆ. ಆದರೆ ಈ ದುರಂತದಿಂದ ಸಂಭ್ರಮ ದುಃಖಕ್ಕೆ ತಿರುಗಿದೆ.

ಕವಿತೆಯೆಂಬುದು ಅಭಿವ್ಯಕ್ತಿ ಮಾಧ್ಯಮ: ಡಾ. ಬಸವರಾಜ ಬೊಮ್ಮನಹಳ್ಳಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕವಿತೆಗಳು ಮನದಾಳದ ಪ್ರೀತಿ, ಸ್ನೇಹ, ನೋವು, ಸಂತೋಷ, ಕೋಪ ಇತರೆಲ್ಲ ಭಾವನೆಗಳು ಹಾಗೂ ಅನುಭವ, ಆಲೋಚನೆಗಳ ಅಭಿವ್ಯಕ್ತಿ ಮಾಧ್ಯಮವಾಗಿವೆ ಎಂದು ಜಿಮ್ಸ್‌ನ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಹೇಳಿದರು.

ಅವರು ಪಟ್ಟಣದ ಮಹಾಕವಿ ಪಂಪ ವೃತ್ತದ ಬಳಿಯ ಎಸ್.ಬಿ. ಮುಳ್ಳಳ್ಳಿ ಅವರ ನಿವಾಸದಲ್ಲಿ ಭಾನುವಾರ `ನಮ್ಮ-ನಿಮ್ಮ ವೇದಿಕೆ’ಯ ಆಶ್ರಯದಲ್ಲಿ ನಡೆದ ಕವಿತೆ-ಮಾತು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಾಹಿತ್ಯದ ಮೂಲಕ ಮನಸ್ಸಿನ ಭಾವನೆಗಳು, ಕಲ್ಪನೆಗಳ ಅಭಿವ್ಯಕ್ತಿಸುವುದು ಕವಿತೆಯಾಗಿದೆ. ಭಾವನೆಗಳಿಗೆ ಶಬ್ದ-ಅರ್ಥಗಳ ಬಣ್ಣ ಹಚ್ಚಿ ಸುಂದರಗೊಳಿಸುವುದು ಕಾವ್ಯಕ್ಕೆ ಇರುವ ಶಕ್ತಿ. ಅಧ್ಯಯನವು ಕಾವ್ಯ ಕಟ್ಟಲು ಸಹಕಾರಿಯಾಗಿವೆ ಎಂದರಲ್ಲದೆ, ತಾವು ತಂದೆ, ಗುರುಗಳು, ಗೆಳೆಯರು, ಕೋವಿಡ್, ಜಾನಪದ, ಬಾಲ್ಯ ಹೀಗೆ ರಚಿಸಿದ ಹಲವು ಕವಿತೆಗಳನ್ನು ವಾಚನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತುಂಬಿಸಿದರು.

ಶಿಗ್ಗಾವಿಯ ವಿರಕ್ತ ಮಠದ ಸಂಗನಬಸವ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಕವಿತೆಗಳು ವ್ಯಕ್ತಿತ್ವವನ್ನು ಅಭಿವ್ಯಕ್ತಿಗೊಳಿಸುವ ಕಲೆಯಾಗಿದೆ. ಭಾವನೆಗಳಿಗೆ ಶಬ್ದಗಳ ಬಲೆ ಹೆಣೆದು ಸುಂದರವಾಗಿ ಕಾಣುವಂತೆ ಮಾಡಿ ಗೇಯತೆಗೆ ತೊಡಗಿಸುವ ಕಾರ್ಯ ಅದ್ಭುತ ಎಂದು ಹೇಳಿದರು.

ಸಾಹಿತಿ ಡಾ. ಮಂಜುನಾಥ ಬಮ್ಮನಕಟ್ಟಿ ಮಾತನಾಡಿ, ಕವಿತೆಗಳು ಬದುಕು ಮತ್ತು ಸಮಾಜಕ್ಕೆ ಪೂರಕವಾಗಿರಬೇಕು ಈ ನಿಟ್ಟಿನಲ್ಲಿ ಕವಿಗಳ ಜವಾಬ್ದಾರಿ ಮುಖ್ಯವಾಗಿರುತ್ತದೆ ಎಂದರು.

ಸುಮಾ ಚೋಟಗಲ್, ಎಸ್.ಬಿ. ಮುಳ್ಳಳ್ಳಿ ಮಾತನಾಡಿದರು. ಈ ವೇಳೆ ಜಿ.ಪಂ ಮಾಜಿ ಸದಸ್ಯ ಎಸ್.ಪಿ. ಬಳಿಗಾರ, ಸಾಹಿತಿ ಸಿ.ಜಿ. ಹಿರೇಮಠ, ಪಿ.ಬಿ. ಖರಾಟೆ, ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ, ಫಕ್ಕಿರೇಶ ಮ್ಯಾಟಣ್ಣವರ, ಬಸವರಾಜ ದೊಡ್ಡಮನಿ, ಎಸ್.ಎಫ್. ಕೊಡ್ಲಿ, ರಾಜು ಪಾಟೀಲ್, ಸುವರ್ಣ ನಂದಿಕೋಲಮಠ ಮುಂತಾದವರಿದ್ದರು. ರವಿರಾಜ ಶಿಗ್ಲಿ ಪ್ರಾರ್ಥಿಸಿದರು. ಬಸವರಾಜ ಬಾಳೇಶ್ವರಮಠ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!