Home Blog Page 122

ರಾಜೀವ್‌ ಗೌಡ ತಪ್ಪಿಸಿಕೊಂಡರೂ ಬಿಡಲ್ಲ; ಶೀಘ್ರವೇ ಬಂಧಿಸಲಾಗತ್ತೆ, ಗೃಹ ಸಚಿವ ಪರಮೇಶ್ವರ್‌ ಎಚ್ಚರಿಕೆ!

0

ಬೆಂಗಳೂರು: ರಾಜೀವ್‌ ಗೌಡ ಬಂಧನಕ್ಕೆ ಮೊದಲ ದಿನವೇ ಆದೇಶ ನೀಡಲಾಗಿತ್ತು. ಆದರೆ ಬಂಧಿಸುವಷ್ಟರಲ್ಲಿ ಅವರು ತಪ್ಪಿಸಿಕೊಂಡು ಹೋಗಿದ್ದಾರೆ. ಎಷ್ಟು ದಿನ ಅಡಗಿ ಕುಳಿತರೂ ಖಂಡಿತವಾಗಿಯೂ ಅವರನ್ನು ಹಿಡಿಯುತ್ತೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜೀವ್‌ ಗೌಡನನ್ನು ತಕ್ಷಣ ಬಂಧಿಸಲಾಗುವುದು, ಯಾವುದೇ ಮುಲಾಜಿಲ್ಲ, ಯಾರ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಖಡಕ್ ಸಂದೇಶ ನೀಡಿದ್ದಾರೆ. ಇದೇ ವೇಳೆ ಬೆಳಗಾವಿಯಲ್ಲಿ ನಡೆದ 400 ಕೋಟಿ ರೂ. ರಾಬರಿ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಮಹಾರಾಷ್ಟ್ರ ಪೊಲೀಸರು ತನಿಖೆಗೆ ಸಹಕಾರ ಕೋರಿ ನಮ್ಮ ಪೊಲೀಸರಿಗೆ ಪತ್ರ ಬರೆದಿದ್ದಾರೆ. ತನಿಖೆ ಇನ್ನೂ ಪ್ರಾರಂಭಿಕ ಹಂತದಲ್ಲಿದ್ದು, ಹೆಚ್ಚಿನ ಮಾಹಿತಿ ಸಿಕ್ಕ ಬಳಿಕ ರಾಜ್ಯ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಗಣರಾಜ್ಯೋತ್ಸವದ ವೇಳೆ ರಾಜ್ಯಪಾಲರು ಭಾಷಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಇಂದು ಸಂಜೆಯೊಳಗೆ ಸ್ಪಷ್ಟತೆ ಸಿಗಲಿದೆ, ಭಾಷಣದ ಪ್ರತಿಯನ್ನು ನಾನು ಇನ್ನೂ ನೋಡಿಲ್ಲ, ರಾಜ್ಯಪಾಲರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದು ತಿಳಿಯಲಿದೆ ಎಂದು ಹೇಳಿದರು.

ಲ್ಯಾಂಬೋರ್ಗಿನಿ ಕಾರು ಪ್ರಕರಣಕ್ಕೆ ಹೈಕೋರ್ಟ್ ತಡೆ: ಸಮುದಾಯ ಸೇವೆಗೆ ಸಿದ್ಧರಾಗಲು ಸೂಚನೆ

0

ಬೆಂಗಳೂರು: ಐಷಾರಾಮಿ ಲ್ಯಾಂಬೋರ್ಗಿನಿ ಕಾರನ್ನು ಅಜಾಗರೂಕವಾಗಿ ಚಾಲನೆ ಮಾಡಿದುದು ಹಾಗೂ ನಿಗದಿತ ಡೆಸಿಬಲ್ ಮಿತಿಗಿಂತ ಹೆಚ್ಚು ಶಬ್ದ ಹೊರಸೂಸುವ ಸೈಲೆನ್ಸರ್ ಅಳವಡಿಸಿದ್ದ ಆರೋಪ ಸಂಬಂಧ ದಾಖಲಾದ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದ್ದು, ಅರ್ಜಿದಾರರು ಸಮುದಾಯ ಸೇವೆಗೆ ಸಿದ್ಧರಾಗುವಂತೆ ಸೂಚಿಸಿದೆ. ಈ ಸಂಬಂಧ ಬೆಂಗಳೂರು ಸಿ.ವಿ.ರಾಮನ್ ನಗರದ ನಿವಾಸಿ ಬಿ.ಆರ್. ಚಿರಂತನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಅರ್ಜಿದಾರರು ಶಬ್ದ ಮಾಲಿನ್ಯಕ್ಕೆ ಕಾರಣವಾಗಿದ್ದ ಸೈಲೆನ್ಸರ್ ಅನ್ನು ಈಗಾಗಲೇ ಬದಲಾಯಿಸಿದ್ದು, ಶಬ್ದ ಮಾಲಿನ್ಯ ಮತ್ತು ವೇಗ ಚಾಲನೆಗೆ ಸಂಬಂಧಿಸಿದ ದಂಡವನ್ನೂ ಪಾವತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಮುಂದಿನ ವಿಚಾರಣೆಯವರೆಗೆ ತಡೆ ನೀಡಲಾಗಿದೆ. ಸಮುದಾಯ ಸೇವೆಗೆ ಸಂಬಂಧಿಸಿದಂತೆ ಪ್ರಕರಣದ ಅಂತಿಮ ಇತ್ಯರ್ಥದ ವೇಳೆ ಸೂಕ್ತ ಆದೇಶ ನೀಡಲಾಗುವುದು ಎಂದು ಪೀಠ ತಿಳಿಸಿದೆ. ಜೊತೆಗೆ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಫೆಬ್ರವರಿ 6ಕ್ಕೆ ಮುಂದೂಡಲಾಗಿದೆ.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, 2025ರ ಡಿಸೆಂಬರ್ 14ರಂದು ಮಡಿಕೇರಿಯಲ್ಲಿ ಲ್ಯಾಂಬೋರ್ಗಿನಿ ಶೋರೂಂ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮಕ್ಕೆ 13 ಲ್ಯಾಂಬೋರ್ಗಿನಿ ಕಾರುಗಳು ತೆರಳುತ್ತಿದ್ದವು. ಈ ಸಂದರ್ಭ ಬೆಂಗಳೂರು–ಮೈಸೂರು ರಸ್ತೆಯ ರಾಜರಾಜೇಶ್ವರ ನಗರ ಸಮೀಪ ವೇಗ ಚಾಲನೆಯ ಆರೋಪ ಸಂಬಂಧ ಎಕ್ಸ್‌ನಲ್ಲಿ ವಿಡಿಯೋ ವೈರಲ್ ಆಗಿತ್ತು. ಆದರೆ ಆ ವಾಹನಗಳ ಪೈಕಿ ಅರ್ಜಿದಾರರ ಕಾರು ಕೊನೆಯದಾಗಿತ್ತು. ಸಾರ್ವಜನಿಕರೊಬ್ಬರು ಸೆರೆಹಿಡಿದ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಇದಲ್ಲದೆ, ಬೆಂಗಳೂರು ಸಂಚಾರ ದಟ್ಟಣೆಯಲ್ಲಿ ಗಂಟೆಗೆ 200 ಕಿಲೋಮೀಟರ್ ವೇಗದಲ್ಲಿ ವಾಹನ ಚಾಲನೆ ಮಾಡುವುದು ಅಸಾಧ್ಯ. ವಿಡಿಯೋ ವೈರಲ್ ಆದ ಸುಮಾರು ಒಂದೂವರೆ ತಿಂಗಳ ಬಳಿಕ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ವಕೀಲರು ವಾದಿಸಿದರು.

ಈ ನಡುವೆ ಅರ್ಜಿದಾರರು ಶಬ್ದ ಮಾಲಿನ್ಯ ಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿ 8,500 ರೂ. ದಂಡ ಪಾವತಿಸಿ, ಸೈಲೆನ್ಸರ್ ಬದಲಿಸಿದ್ದಾರೆ. ವೇಗ ಚಾಲನೆಗೆ ಗರಿಷ್ಠ 1,000 ರೂ. ದಂಡ ವಿಧಿಸುವುದಷ್ಟೇ ಕಾನೂನಿನಲ್ಲಿ ಅವಕಾಶವಿದೆ ಎಂದು ಅವರು ಹೇಳಿದರು. ಲ್ಯಾಂಬೋರ್ಗಿನಿ ಕಾರು ಎಂಬ ಕಾರಣಕ್ಕೆ ಮಾತ್ರ ಪ್ರಕರಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂಬ ವಾದವನ್ನೂ ಮಂಡಿಸಿದರು.

ವಿಚಾರಣೆ ವೇಳೆ ನ್ಯಾಯಮೂರ್ತಿಗಳು, “ರಾಜರಾಜೇಶ್ವರಿ ನಗರದ ಟ್ರಾಫಿಕ್ ಸ್ಥಿತಿಯಲ್ಲಿ ವೇಗವಾಗಿ ಕಾರು ಚಾಲನೆ ಮಾಡುವುದು ಹೇಗೆ ಸಾಧ್ಯ?” ಎಂದು ಪ್ರಾಸಿಕ್ಯೂಷನ್‌ಗೆ ಪ್ರಶ್ನಿಸಿದರು. ಇದಕ್ಕೆ ಸರ್ಕಾರಿ ವಕೀಲರು ವಿಡಿಯೋವನ್ನು ಪೀಠಕ್ಕೆ ಪ್ರದರ್ಶಿಸಿದರು.

ಅಲ್ಲದೆ, ಅರ್ಜಿದಾರರ ಲ್ಯಾಂಬೋರ್ಗಿನಿ ಕಾರು ಮಹಾರಾಷ್ಟ್ರದಲ್ಲಿ ನೋಂದಣಿಯಾಗಿದ್ದು, ಹೊರ ರಾಜ್ಯ ನೋಂದಣಿ ಹಿನ್ನೆಲೆಯಲ್ಲಿ 2025ರ ಸೆಪ್ಟೆಂಬರ್‌ನಲ್ಲಿ 1.05 ಕೋಟಿ ರೂ. ಮೋಟಾರು ವಾಹನ ತೆರಿಗೆ ಪಾವತಿಸಲಾಗಿದೆ ಎಂದು ಸರ್ಕಾರಿ ವಕೀಲರು ತಿಳಿಸಿದರು.

ಬೆಳಗಾವಿ| ಚೋರ್ಲಾ ಘಾಟ್‌ನಲ್ಲಿ ₹400 ಕೋಟಿ ನಗದು ದರೋಡೆ; ಇದು ದೇಶದ ಅತಿದೊಡ್ಡ ರಾಬರಿ ಕೇಸ್!

0

ಬೆಳಗಾವಿ:- ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್‌ನಲ್ಲಿ ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದ್ದ 400 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನಿಷೇಧಿತ 2,000 ರೂ. ಮುಖಬೆಲೆಯ ನೋಟುಗಳಿದ್ದ ಎರಡು ಕಂಟೇನರ್‌ಗಳನ್ನು ಹೈಜಾಕ್ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

2025ರ ಅಕ್ಟೋಬರ್ 16ರಂದು ನಡೆದ ಈ ದರೋಡೆ ಪ್ರಕರಣವು ಅಂತರರಾಜ್ಯ ಮಟ್ಟದ ಭಾರೀ ನಗದು ದರೋಡೆಯಾಗಿದ್ದು, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಪೊಲೀಸರನ್ನು ತೀವ್ರ ಅಚ್ಚರಿಗೆ ಗುರಿಮಾಡಿದೆ. ಮಹಾರಾಷ್ಟ್ರದ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಅವರಿಗೆ ಸೇರಿದ ಹಣ ಇದಾಗಿದ್ದು, ಅಪಾಯಕಾರಿ ಹಾಗೂ ಅರಣ್ಯ ಪ್ರದೇಶವಾದ ಚೋರ್ಲಾ ಘಾಟ್ ಮಾರ್ಗದಲ್ಲಿ ಕಂಟೇನರ್‌ಗಳು ಏಕಾಏಕಿ ನಾಪತ್ತೆಯಾಗಿದ್ದವು ಎಂಬುದು ತನಿಖೆಯಿಂದ ಗೊತ್ತಾಗಿದೆ.

ಈ ದರೋಡೆ ಪ್ರಕರಣ ಹಲವು ತಿಂಗಳುಗಳು ಗುಪ್ತವಾಗಿಯೇ ಉಳಿದಿದ್ದು, ನಾಸಿಕ್ ಮೂಲದ ಸಂದೀಪ್ ಪಾಟೀಲ ಎಂಬಾತನ ಅಪಹರಣ ಪ್ರಕರಣದ ದೂರಿನ ಮೂಲಕ ಸಂಪೂರ್ಣ ಬಹಿರಂಗವಾಗಿದೆ.

ಕಂಟೇನರ್ ಹೈಜಾಕ್ ಆದ ಕೆಲ ದಿನಗಳ ಬಳಿಕ, ಕಿಶೋರ್ ಶೇಟ್ ಅವರ ಸಹಚರರು ಸಂದೀಪ್ ಪಾಟೀಲನನ್ನು ಗನ್ ಪಾಯಿಂಟ್‌ನಲ್ಲಿ ಅಪಹರಿಸಿ, ಸುಮಾರು ಒಂದೂವರೆ ತಿಂಗಳ ಕಾಲ ಅಕ್ರಮ ಬಂಧನದಲ್ಲಿಟ್ಟು 400 ಕೋಟಿ ರೂ. ಹಣ ಕೊಡದಿದ್ದರೆ ಜೀವ ಉಳಿಯೋದಿಲ್ಲ ಎಂದು ಬೆದರಿಕೆ ಹಾಕಿ ಮಾನಸಿಕ ಹಾಗೂ ದೈಹಿಕ ಚಿತ್ರಹಿಂಸೆ ನೀಡಿದ್ದರು. ನಂತರ ಅಪಹರಣಕಾರರಿಂದ ತಪ್ಪಿಸಿಕೊಂಡ ಸಂದೀಪ್, 2026ರ ಜನವರಿ 1ರಂದು ನಾಸಿಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕವೇ ಈ ಭಾರೀ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ.

ದೂರು ಆಧರಿಸಿ ತಕ್ಷಣ ಕಾರ್ಯಾಚರಣೆ ನಡೆಸಿದ ಮಹಾರಾಷ್ಟ್ರ ಪೊಲೀಸರು ಈವರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಇನ್ನೂ ಇಬ್ಬರು ಪ್ರಮುಖ ಆರೋಪಿಗಳು ಪರಾರಿಯಾಗಿದ್ದಾರೆ. ಅವರ ಬಂಧನದ ನಂತರವೇ ಕಂಟೇನರ್‌ಗಳು ಹಾಗೂ ನಗದು ಹಣ ಪತ್ತೆಯಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಕರಣದ ಗಂಭೀರತೆಯನ್ನು ಗಮನಿಸಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ವಿಶೇಷ ತನಿಖಾ ತಂಡ (SIT) ರಚಿಸುವಂತೆ ಆದೇಶಿಸಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈ ಹಣ ಬಳಕೆಯಾಗಿದೆ ಎಂಬ ಅನುಮಾನವೂ ತನಿಖಾಧಿಕಾರಿಗಳಲ್ಲಿ ಮೂಡಿದ್ದು, ಈ ಪ್ರಕರಣ ರಾಜಕೀಯ ಹಾಗೂ ಆರ್ಥಿಕ ವಲಯಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.

ಬಿಯರ್ ಕುಡಿಸಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ; ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ, 8.76 ಲಕ್ಷ ದಂಡ!

0

ಬೆಳಗಾವಿ:- ಬೆಳಗಾವಿಯಲ್ಲಿ ಅಪ್ರಾಪ್ತೆಗೆ ಬಿಯರ್ ಕುಡಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಪೋಕ್ಸೋ ವಿಶೇಷ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ.

ಪ್ರಕರಣವನ್ನು ಕೇವಲ 8 ತಿಂಗಳಲ್ಲಿ ಇತ್ಯರ್ಥಗೊಳಿಸಿದ ನ್ಯಾಯಾಲಯ, ಸಾಕೀಬ್ ನಿಜಾಮಿ (22) ಹಾಗೂ ರವಿ ನಾಯ್ಯೋಡಿಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ 8.76 ಲಕ್ಷ ರೂ. ದಂಡ ವಿಧಿಸಿದೆ. ಕೃತ್ಯಕ್ಕೆ ಸಹಕರಿಸಿದ ರೋಹನ್ ಪಾಟೀಲ್ ಮತ್ತು ಅಶುತೋಷ್ ಪಾಟೀಲ್‌ಗೆ ತಲಾ 20 ವರ್ಷ ಜೈಲು ಶಿಕ್ಷೆ ಮತ್ತು 6 ಲಕ್ಷ ರೂ. ದಂಡ ವಿಧಿಸಲಾಗಿದೆ.

ಜೊತೆಗೆ ಸಂತ್ರಸ್ತೆಗೆ 10 ಲಕ್ಷ ರೂ. ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗಿದೆ. 2025 ಮೇ 10ರಂದು ಸಾವಗಾಂವ್‌ನ ಫಾರ್ಮ್‌ಹೌಸ್‌ನಲ್ಲಿ ನಡೆದ ಈ ಕೃತ್ಯದ ಕುರಿತು ಸಂತ್ರಸ್ತೆಯ ಪೋಷಕರು ದೂರು ದಾಖಲಿಸಿದ್ದು, ಸರ್ಕಾರದ ಪರ ವಿಶೇಷ ಅಭಿಯೋಜಕ ಎಲ್.ವಿ. ಪಾಟೀಲ್ ವಕಾಲತ್ತು ನಡೆಸಿದರು.

ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂದೂಗಳ ಮೇಲಿನ ದಾಳಿ; 23 ವರ್ಷದ ಯುವಕ ಸಜೀವ ದಹನ!

0

ಢಾಕಾ;- ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಸರಣಿ ಹತ್ಯೆ ಮುಂದುವರಿದಿದೆ.

ಬಾಂಗ್ಲಾದೇಶದ ನರಸಿಂಗ್ಡಿ ಜಿಲ್ಲೆಯಲ್ಲಿ 23 ವರ್ಷದ ಹಿಂದೂ ಯುವಕ ಚಂಚಲ್ ಚಂದ್ರ ಭೌಮಿಕ್ ಅವರನ್ನು ಗ್ಯಾರೇಜ್ ಒಳಗೆ ಪೆಟ್ರೋಲ್ ಸುರಿದು ಸಜೀವ ದಹನ ಮಾಡಿರುವ ಅಮಾನುಷ ಘಟನೆ ನಡೆದಿದೆ.

ಕೆಲಸದ ನಿಮಿತ್ತ ನರಸಿಂಗ್ಡಿಯಲ್ಲಿ ವಾಸವಿದ್ದ ಚಂಚಲ್, ಶುಕ್ರವಾರ ತಡರಾತ್ರಿ ಗ್ಯಾರೇಜ್‌ನಲ್ಲಿ ಮಲಗಿದ್ದ ವೇಳೆ ಕಿಡಿಗೇಡಿಗಳು ಹೊರಗಿನಿಂದ ಶಟರ್‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿ ವೇಗವಾಗಿ ವ್ಯಾಪಿಸಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ದಾಳಿ ಪೂರ್ವನಿಯೋಜಿತ ಕೃತ್ಯ ಎಂದು ಕುಟುಂಬಸ್ಥರು ಆರೋಪಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬೆಂಕಿ ಹಚ್ಚಿದ ದೃಶ್ಯ ವೈರಲ್ ಆಗಿದೆ.

ಅಗ್ನಿಶಾಮಕ ದಳ ಒಂದು ಗಂಟೆಯ ಪರಿಶ್ರಮದ ಬಳಿಕ ಬೆಂಕಿ ನಂದಿಸಿದ್ದು, ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

ಒನ್ ವೇ ಸವಾರರೇ ಟಾರ್ಗೆಟ್: ಸಿಕ್ಕಿಬಿದ್ದೋರ ಡಿಎಲ್ ಕ್ಯಾನ್ಸಲ್; ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪ್ಲ್ಯಾನ್!

0

ಬೆಂಗಳೂರು:- ನಗರದಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಇದಕ್ಕೆ ಸವಾರರ ಅವೈಜ್ಞಾನಿಕ ಒನ್‌ವೇ ಸಂಚಾರವೇ ಪ್ರಮುಖ ಕಾರಣ ಎಂಬುದು ಸಂಚಾರಿ ಪೊಲೀಸರ ಆಂತರಿಕ ಸಮೀಕ್ಷೆಯಿಂದ ಬಹಿರಂಗವಾಗಿದೆ.

50–100 ಮೀಟರ್ ಮಾತ್ರವೆಂದು ನಿಯಮ ಉಲ್ಲಂಘಿಸಿ ಒನ್‌ವೇಗಳಲ್ಲಿ ನುಗ್ಗುವ ಸವಾರರಿಂದ ಎದುರುಬರುವ ವಾಹನಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು, ಇದರಿಂದ ನಗರದಲ್ಲಿ ಸಂಚಾರ ಅಸ್ತವ್ಯಸ್ತವಾಗುತ್ತಿದೆ. ಈ ಹಿನ್ನೆಲೆ ಟ್ರಾಫಿಕ್ ಹತೋಟಿಗೆ ಮೊದಲ ಹೆಜ್ಜೆಯಾಗಿ ಬೆಂಗಳೂರು ಸಂಚಾರಿ ಪೊಲೀಸರು ಆರ್‌ಟಿಓ ಜೊತೆ ಕೈಜೋಡಿಸಿ ಒನ್‌ವೇ ಸವಾರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ವಿಶೇಷ ತಂಡಗಳನ್ನು ರಚಿಸಿ ನಿಯಮ ಉಲ್ಲಂಘಿಸುವ ಸವಾರರನ್ನು ಪತ್ತೆಹಚ್ಚಿ, ಅವರ ಚಾಲನಾ ಪರವಾನಗಿಗಳನ್ನು ಆರ್‌ಟಿಓಗೆ ರವಾನೆ ಮಾಡಲಾಗುತ್ತಿದ್ದು, ಪೊಲೀಸರ ಶಿಫಾರಸಿನ ಮೇರೆಗೆ ಇಂತಹ ಡಿಎಲ್‌ಗಳನ್ನು ಮೂರು ತಿಂಗಳ ಕಾಲ ಅಮಾನತು ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.

ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ: ಪಾಕಿಸ್ತಾನ ತಂಡ ಪ್ರಕಟ, ಸಲ್ಮಾನ್ ಅಲಿ ಅಘಾ ನಾಯಕ

0

ಇಸ್ಲಾಮಾಬಾದ್: ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ಪಾಕಿಸ್ತಾನ್ ಟಿ20 ತಂಡವನ್ನು ಪ್ರಕಟಿಸಲಾಗಿದೆ. 16 ಸದಸ್ಯರ ಈ ತಂಡವನ್ನು ಸಲ್ಮಾನ್ ಅಲಿ ಅಘಾ ಮುನ್ನಡೆಸಲಿದ್ದು, ಟಿ20 ವಿಶ್ವಕಪ್‌ನಲ್ಲಿಯೂ ಅವರು ಪಾಕ್ ತಂಡದ ನಾಯಕನಾಗಿ ಮುಂದುವರೆಯುವುದು ಖಚಿತವಾಗಿದೆ.

ಈ ತಂಡದಲ್ಲಿ ಹಿರಿಯ ಆಟಗಾರರಾದ ಬಾಬರ್ ಆಝಂ ಹಾಗೂ ಶಾಹೀನ್ ಶಾ ಅಫ್ರಿದಿಗೆ ಮರು ಅವಕಾಶ ನೀಡಲಾಗಿದೆ. ಕಳಪೆ ಫಾರ್ಮ್ ಹಿನ್ನೆಲೆ ಇಬ್ಬರನ್ನೂ ತಂಡದಿಂದ ಹೊರಗಿಡಲಾಗಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಸರಣಿಗೆ ಪಾಕ್ ಕ್ರಿಕೆಟ್ ಮಂಡಳಿ ಅನುಭವಿ ಆಟಗಾರರ ಮೇಲೆ ಮತ್ತೆ ನಂಬಿಕೆ ಇಟ್ಟಿದೆ.

ಇನ್ನೊಂದೆಡೆ, ಅನುಭವಿ ವಿಕೆಟ್ ಕೀಪರ್ ಮೊಹಮ್ಮದ್ ರಿಝ್ವಾನ್ ಅವರನ್ನು ಈ ಸರಣಿಗೆ ಆಯ್ಕೆ ಮಾಡಿಲ್ಲ. ಜೊತೆಗೆ ವೇಗಿ ಹ್ಯಾರಿಸ್ ರೌಫ್ ಅವರಿಗೂ ಟಿ20 ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಈ ಆಯ್ಕೆ ಕುರಿತಾಗಿ ಪಾಕ್ ಕ್ರಿಕೆಟ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಪಾಕಿಸ್ತಾನ್ ಟಿ20 ತಂಡ

ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಬಾಬರ್ ಆಝಂ, ಫಹೀಮ್ ಅಶ್ರಫ್, ಫಖರ್ ಝಮಾನ್, ಖ್ವಾಜಾ ಮೊಹಮ್ಮದ್ ನಫಯ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಝ್, ಮೊಹಮ್ಮದ್ ಸಲ್ಮಾನ್ ಮಿರ್ಝ, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಸಾಹಿಬ್ಝಾದ ಫರ್ಹಾನ್ (ವಿಕೆಟ್ ಕೀಪರ್), ಶಾಹೀನ್ ಶಾ ಅಫ್ರಿದಿ, ಸೈಮ್ ಅಯ್ಯೂಬ್, ಶಾದಾಬ್ ಖಾನ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಉಸ್ಮಾನ್ ತಾರಿಖ್.

ಆಸ್ಟ್ರೇಲಿಯಾ ಟಿ20 ತಂಡ

ಮಿಚೆಲ್ ಮಾರ್ಷ್ (ನಾಯಕ), ಶಾನ್ ಅಬಾಟ್, ಕ್ಸೇವಿಯರ್ ಬಾರ್ಟ್ಲೆಟ್, ಮಹ್ಲಿ ಬಿಯರ್ಡ್ಮನ್, ಕೂಪರ್ ಕೊನೊಲಿ, ಬೆನ್ ದ್ವಾರ್ಶುಯಿಸ್, ಜ್ಯಾಕ್ ಎಡ್ವರ್ಡ್ಸ್, ಕ್ಯಾಮರೋನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಮ್ಯಾಥ್ಯೂ ಕುಹ್ನೆಮನ್, ಮಿಚೆಲ್ ಓವನ್, ಜೋಶ್ ಫಿಲಿಪಿ, ಮ್ಯಾಥ್ಯೂ ರೆನ್ಶಾ, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಆ್ಯಡಂ ಝಂಪಾ.

ರಥಸಪ್ತಮಿ 2026: ಹಬ್ಬದ ಆಚರಣೆ ಮತ್ತು ಮಹತ್ವವನ್ನು ತಿಳಿಯಿರಿ!

0

ರಥಸಪ್ತಮಿಯು ಹಿಂದೂ ಧರ್ಮದಲ್ಲಿ ಅತ್ಯಂತ ಮಹತ್ವದ ಹಾಗೂ ಮಂಗಳಕರ ಪರ್ವ ಕಾಲಗಳಲ್ಲಿ ಒಂದಾಗಿದೆ.

ಜಗದ ಚಕ್ಷು ಹಾಗೂ ಬ್ರಹ್ಮಾಂಡದ ಶಕ್ತಿಯ ಮೂಲವಾದ ಸೂರ್ಯ ಭಗವಾನರ ಜನ್ಮದಿನವೆಂದು ಆಚರಿಸಲಾಗುತ್ತದೆ. ಮಾಘ ಮಾಸದ ಶುಕ್ಲಪಕ್ಷದ ಸಪ್ತಮಿ ದಿನದಂದು ಈ ಪರ್ವ ನಡೆಯುತ್ತಿದ್ದು, ಈ ದಿನ ಸೂರ್ಯನ ವಿಶೇಷ ಲಹರಿಗಳು ಇಡೀ ಬ್ರಹ್ಮಾಂಡದ ಮೇಲೆ ಪ್ರಭಾವ ಬೀರುತ್ತವೆ ಎಂದು ನಂಬಲಾಗಿದೆ.

2026ರಲ್ಲಿ ರಥಸಪ್ತಮಿ ಜನವರಿ 25ರ ಭಾನುವಾರವಾಗಿದ್ದು, ಸಪ್ತಮಿ ತಿಥಿ ಬೆಳಗ್ಗೆ 12:39ರಿಂದ ರಾತ್ರಿ 11:10ರವರೆಗೆ ಇರುತ್ತದೆ. ಈ ದಿನ ಬೆಳಗಿನ ಜಾವ ಏಳು ಎಕ್ಕದ ಎಲೆಗಳನ್ನು ತಲೆ, ಭುಜ, ಮೊಣಕಾಲು ಹಾಗೂ ಪಾದಗಳ ಮೇಲೆ ಇಟ್ಟುಕೊಂಡು ಪೂರ್ವಾಭಿಮುಖವಾಗಿ ಸೂರ್ಯನನ್ನು ಸ್ಮರಿಸುತ್ತಾ ಸ್ನಾನ ಮಾಡುವ ಪದ್ಧತಿ ಇದೆ. ಇದರಿಂದ ಆಯುರಾರೋಗ್ಯ, ಐಶ್ವರ್ಯ, ಪ್ರಜ್ಞಾವರ್ಧನೆ ಆಗುವುದರ ಜೊತೆಗೆ ಮಾಟಮಂತ್ರ ಹಾಗೂ ದುಷ್ಟಶಕ್ತಿಗಳಿಂದ ರಕ್ಷಣೆ ದೊರೆಯುತ್ತದೆ ಎಂದು ನಂಬಲಾಗಿದೆ.

ಸೂರ್ಯನಿಗೆ ಎಕ್ಕದ ಎಲೆಗಳು ಅತ್ಯಂತ ಪ್ರಿಯವಾದುದರಿಂದ ಈ ಸ್ನಾನವು ಜನ್ಮಪಾಪಗಳನ್ನು ನಿವಾರಿಸಿ ಮನಸ್ಸನ್ನು ಶುದ್ಧಗೊಳಿಸಿ ಜೀವನದಲ್ಲಿ ಉತ್ಸಾಹವನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತದೆ. ಇದೇ ವೇಳೆ ರಥಸಪ್ತಮಿ ದಿನ ಸೂರ್ಯನ ಚೈತನ್ಯಶಕ್ತಿ ಸಪ್ತ ನದಿಗಳಲ್ಲಿ ವಿಶೇಷವಾಗಿ ಪ್ರವಹಿಸುವುದರಿಂದ ನದಿಸ್ನಾನಕ್ಕೆ ಹೆಚ್ಚಿನ ಮಹತ್ವವಿದ್ದು, ಶ್ರೀರಂಗಪಟ್ಟಣ, ಹೇಮಗಿರಿ, ಶಿಕಾರಿಪುರ, ಇಡಗುಂಜಿ, ಕೊಪ್ಪಳ ಮುಂತಾದ ಪವಿತ್ರ ಸ್ಥಳಗಳಲ್ಲಿ ಸ್ನಾನ ಹಾಗೂ ಬ್ರಹ್ಮರಥೋತ್ಸವಗಳು ಭಕ್ತಿಯಿಂದ ಆಚರಿಸಲಾಗುತ್ತವೆ.

ನೆಲಮಂಗಲ ಜಾಸ್ ಟೋಲ್ ಬಳಿ ಸರಣಿ ಅಪಘಾತ; ತಪ್ಪಿದ ದುರಂತ, ಕಾರುಗಳು ಜಖಂ!

0

ನೆಲಮಂಗಲ:- ನೆಲಮಂಗಲ ಜಾಸ್ ಟೋಲ್ ಬಳಿ ಮೂರು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮೂರು ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಪರಿಣಾಮ ಕಾರುಗಳು ಜಖಂ ಆಗಿವೆ. ಸ್ಥಳಕ್ಕೆ ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 22 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ನೆಲಮಂಗಲ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ದಟ್ಟಣೆ ಹೆಚ್ಚಾಗಿದೆ. ಜೊತೆಗೆ ನಿನ್ನೆ ಶನಿವಾರ ವೀಕೆಂಡ್, ಭಾನುವಾರ ರಜೆ, ಸೋಮವಾರ ಗಣರಾಜ್ಯೋತ್ಸವ ರಜೆ ಹೀಗಾಗಿ ಜನ ತಮ್ಮ ತಮ್ಮ ಊರುಗಳತ್ತ ತೆರಳುತ್ತಿದ್ದಾರೆ.

ಇನ್ನೂ ಕೆಲವರು ಪ್ರವಾಸಿ ತಾಣಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಬಳಿಕ ಸಂಚಾರಿ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ.

ದೇಶದ ಉದ್ಧಾರಕ್ಕೆ ಕಂಕಣಬದ್ಧರಾಗೋಣ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಹಿಂದೂ ಸಮ್ಮೇಳನ ಸಮಿತಿಯ ವತಿಯಿಂದ ಶನಿವಾರ ಪಟ್ಟಣದಲ್ಲಿ ನಡೆದ ಹಿಂದೂ ಸಮಾವೇಶಕ್ಕೂ ಮುಂಚೆ ನಡೆದ ಶೋಭಾಯಾತ್ರೆಯು ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಕೊಂತಿ ಮಲ್ಲಪ್ಪನ ದೇವಸ್ಥಾನದ ಎದುರು ಬೃಹತ್ ಶೋಭಾಯಾತ್ರೆಗೆ ನರೇಗಲ್ಲ ಹಿರೇಮಠದ ಷ.ಬ್ರ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿದರು. ನರೇಗಲ್ಲ ಹೋಬಳಿಯ 21 ಗ್ರಾಮಗಳಿಂದ ಆಗಮಿಸಿದ್ದ ಎಲ್ಲ ಹಿಂದೂಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಯಾತ್ರೆಗೆ ವಿಶೇಷ ಮೆರುಗು ನೀಡಿದರು.

ಗೊಂಬೆ ಕುಣಿತ, ಹನುಮಂತನ ವೇಷ, ಮಹಿಳೆಯರ ಡೊಳ್ಳು, ಜಾಂಜ್ ಮೇಳ ಮುಂತಾದವುಗಳು ಮೆರವಣಿಗೆಯ ಆಕರ್ಷಣೆ ಹೆಚ್ಚಿಸಿದ್ದವು. ಮಹಿಳೆಯರು ಮತ್ತು ಮಕ್ಕಳು ವಿವಿಧ ವೇಷಭೂಷಣಗಳನ್ನು ತೊಟ್ಟು ಮೆರವಣಿಗೆಯುದ್ದಕ್ಕೂ ಸಾಗಿದರು. ಅದರಲ್ಲಿ ರಾಮ, ಲಕ್ಷ್ಮಣ, ಸೀತೆ, ಹನುಮಂತ, ಇತ್ಯಾದಿ ಮಹಾನುಭಾವರ ವೇಷಭೂಷಣಗಳು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರುಗಳ ವೇಷಭೂಷಣಗಳಿದ್ದವು. ಶೋಭಾಯಾತ್ರೆ ಸಾಗಿದ ರಸ್ತೆಯುದ್ದಕ್ಕೂ ನೆರೆದು ಯಾತ್ರೆ ನೋಡುತ್ತಿದ್ದ ಜನರಲ್ಲಿ ಆಧ್ಯಾತ್ಮಿಕದ ಅಲೆ, ದೇಶ ಭಕ್ತಿಯ ಅಲೆಯನ್ನೇ ಎಬ್ಬಿಸಿದವು.

ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಶಿವಾಚಾರ್ಯರು, ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎನ್ನುವ ಭಾವನೆ ಎಂದಿಗೂ ನಮ್ಮಲ್ಲಿರಬೇಕು. ನಮ್ಮ ನಡುವಿನ ಚಿಕ್ಕಪುಟ್ಟ ಭಿನ್ನಾಭಿಪ್ರಾಯಗಳನ್ನು ತೊಡೆದು ಹಾಕಿ ನಾವು ದೇಶದ ಉದ್ಧಾರಕ್ಕೆ ಕಂಕಣಬದ್ಧರಾಗಬೇಕು. ಶಕ್ತಿಶಾಲಿ ದೇಶವನ್ನು ಕಟ್ಟಲು ಮುಂದಾಗಬೇಕು. ನಮ್ಮ ಮಕ್ಕಳಲ್ಲಿ ದೇಶದ ಬಗ್ಗೆ ಪ್ರೀತಿಯನ್ನು ಹುಟ್ಟಿಸುವುದರ ಜೊತೆಗೆ, ಅವರಲ್ಲಿ ಆಧ್ಯಾತ್ಮಿಕ ಅರಿವನ್ನೂ, ಸಂಸ್ಕೃತಿಯನ್ನೂ ಬಿತ್ತಬೇಕು. ನಮ್ಮ ಮಕ್ಕಳಲ್ಲಿ ಅಂತಹ ಗುಣಗಳು ಇಂತಹ ಸಮ್ಮೇಳನಗಳಿಂದ ಬರುತ್ತವೆ. ಆದ್ದರಿಂದ ಎಲ್ಲಿಯಾದರೂ ಇಂತಹ ಸಮ್ಮೇಳನಗಳು ನಡೆದರೆ ನಿಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಿ. ಇಂದು ಇಲ್ಲಿ ನೆರೆದಿರುವ ಹಿಂದೂ ಸಮಾಜದ ಜನರನ್ನು ಕಂಡು ಸಂತಸವಾಗಿದೆ ಎಂದು ಹೇಳಿದರು.

ಖವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ ಮಾರ್ಗದರ್ಶನದಲ್ಲಿ ನರೇಗಲ್ಲ ಪೊಲೀಸ್ ಠಾಣೆಯ ಪಿಎಸ್‌ಐ ಐಶ್ವರ್ಯ ನಾಗರಾಳ ಮತ್ತು ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ವ್ಯವಸ್ಥೆ ನಿರ್ವಹಿಸಿದರು. ಈ ಸಂದರ್ಭದಲ್ಲಿ ಗಜೇಂದ್ರಗಡ ಪಿಎಸ್‌ಐ ಡಿ. ಪ್ರಕಾಶ, ರೋಣ ಪಿಎಸ್‌ಐ ಪ್ರಕಾಶ ಬಣಕಾರ, ಅಪರಾಧ ವಿಭಾಗದ ಪಿಎಸ್‌ಐ ಚವಡಿ ಬೀರಣ್ಣ ಅವರ ಜೊತೆಗೆ ರೋಣ, ಗಜೇಂದ್ರಗಡ, ಮುಂಡರಗಿ, ನರಗುಂದ ಠಾಣಾ ಸಿಬ್ಬಂದಿಗಳು ಇದ್ದರು.

ಕೊಂತಿ ಮಲ್ಲಪ್ಪನ ಗುಡಿಯಿಂದ ಪ್ರಾರಂಭವಾದ ಶೋಭಾಯಾತ್ರೆಯು ಶ್ರೀ ದ್ಯಾಮವ್ವ-ಶ್ರೀ ವೀರಭದ್ರ ದೇವಸ್ಥಾನ, ಶ್ರೀ ವಿನಾಯಕ ದೇವಸ್ಥಾನ ಮೂಲಕ ಸಂತೆ ಬಜಾರ, ಹಳೆ ಬಸ್ ನಿಲ್ದಾಣ, ಪಟ್ಟಣದ ಮುಖ್ಯ ಬೀದಿ, ಹೊಸ ಬಸ್ ನಿಲ್ದಾಣದ ಮೂಲಕ ಸಮಾರಂಭದ ಮುಖ್ಯ ವೇದಿಕೆ ಹಿರೇಮಠದ ಮುಖ್ಯ ವೇದಿಕೆಗೆ ತಲುಪಿತು.

error: Content is protected !!