Home Blog

ಭಾರತದ ನೂತನ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಎನ್‌.ಎಸ್‌. ರಾಜಾ ಸುಬ್ರಮಣಿ ನೇಮಕ

ನವದೆಹಲಿ: ಭಾರತದ ರಕ್ಷಣಾ ಪಡೆಗಳ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಎನ್‌.ಎಸ್‌. ರಾಜಾ ಸುಬ್ರಮಣಿ (ನಿವೃತ್ತ) ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಇದೇ ವೇಳೆ ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರನ್ನು ನೇಮಕ ಮಾಡುವ ಮಹತ್ವದ ಆದೇಶವೂ ಹೊರಬಿದ್ದಿದೆ.

ಪ್ರಸ್ತುತ ಸಿಡಿಎಸ್ ಆಗಿರುವ ಜನರಲ್ ಅನಿಲ್ ಚೌಹಾಣ್ ಅವರು ಮೇ 30ರಂದು ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಲಿದ್ದು, ಅವರ ಸ್ಥಾನವನ್ನು ರಾಜಾ ಸುಬ್ರಮಣಿ ವಹಿಸಿಕೊಳ್ಳಲಿದ್ದಾರೆ.

ಪ್ರಸ್ತುತ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯದಲ್ಲಿ ಮಿಲಿಟರಿ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಲೆಫ್ಟಿನೆಂಟ್ ಜನರಲ್ ರಾಜಾ ಸುಬ್ರಮಣಿ, ಕಳೆದ ವರ್ಷ ಜುಲೈ 31ರಂದು ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥ ಹುದ್ದೆಯಿಂದ ನಿವೃತ್ತರಾಗಿದ್ದರು.

ಎನ್‌.ಎಸ್‌. ರಾಜಾ ಸುಬ್ರಮಣಿ ಅವರು ಭಾರತೀಯ ಸೇನೆಯಲ್ಲಿ ಸುಮಾರು 39 ವರ್ಷಗಳ ಸೇವೆ ಸಲ್ಲಿಸಿರುವ ಅನುಭವಿ ಅಧಿಕಾರಿ. 1985ರ ಡಿಸೆಂಬರ್ 14ರಂದು ಗರ್ವಾಲ್ ರೈಫಲ್ಸ್‌ನ 8ನೇ ಬೆಟಾಲಿಯನ್‌ಗೆ ಮೊದಲ ಬಾರಿ ನಿಯೋಜನೆಗೊಂಡಿದ್ದರು.

ಅವರು ಕಳೆದ ವರ್ಷ ಸೆಪ್ಟೆಂಬರ್ 1ರಂದು ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಮಿಲಿಟರಿ ಸಲಹೆಗಾರರಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ಇದಕ್ಕೂ ಮೊದಲು ಜುಲೈ 2024ರಿಂದ ಜುಲೈ 2025ರವರೆಗೆ ಭೂಸೇನೆಯ ಉಪ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ, ಮಾರ್ಚ್ 2023ರಿಂದ ಜೂನ್ 2024ರವರೆಗೆ ಸೆಂಟ್ರಲ್ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿಯೂ ಸೇವೆ ಸಲ್ಲಿಸಿದ್ದರು.

ಭಾರತೀಯ ಸೇನೆಯಲ್ಲಿ ಸಲ್ಲಿಸಿದ ದೀರ್ಘಕಾಲದ ಸೇವೆ ಹಾಗೂ ಶೌರ್ಯವನ್ನು ಪರಿಗಣಿಸಿ ರಾಜಾ ಸುಬ್ರಮಣಿ ಅವರಿಗೆ ಹಲವು ಪ್ರತಿಷ್ಠಿತ ಸೇನಾ ಗೌರವಗಳು ಲಭಿಸಿವೆ. ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಸೇನಾ ಪದಕ ಹಾಗೂ ವಿಶಿಷ್ಟ ಸೇವಾ ಪದಕ ಸೇರಿದಂತೆ ಅನೇಕ ಗೌರವಗಳು ಅವರ ಮುಡಿಗೇರಿವೆ.

ಜನರಲ್ ಅನಿಲ್ ಚೌಹಾಣ್ ನಿವೃತ್ತಿಯಾದ ಬಳಿಕ ಮೇ 30ರಂದು ರಾಜಾ ಸುಬ್ರಮಣಿ ಅವರು ಅಧಿಕೃತವಾಗಿ ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಕಡಿಮೆ ಬಡ್ಡಿ ಆಮಿಷಕ್ಕೆ ಚಿನ್ನ ದೋಚಿದ ಜ್ಯುವೆಲರಿ ಮಾಲೀಕ; ಅಂಗಡಿಗೆ ಬೀಗ ಜಡಿದು ಪರಾರಿ

ಬೆಂಗಳೂರು: ಕಡಿಮೆ ಬಡ್ಡಿದರದಲ್ಲಿ ಹೆಚ್ಚು ಸಾಲ ನೀಡುವುದಾಗಿ ನಂಬಿಸಿ ಗ್ರಾಹಕರ ಚಿನ್ನಾಭರಣ ಪಡೆದು ಕೋಟ್ಯಂತರ ರೂಪಾಯಿ ವಂಚನೆ ನಡೆಸಿದ ಆರೋಪದಡಿ ಬೆಂಗಳೂರಿನ ಜ್ಯುವೆಲರಿ ಶಾಪ್ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಯು ಅಂಗಡಿ ಮುಚ್ಚಿ ತಲೆಮರೆಸಿಕೊಂಡಿದ್ದಾನೆ.

ರಾಘವೇಂದ್ರ ಜ್ಯುವೆಲರಿ ಶಾಪ್ ಮಾಲೀಕ ತೇಜಸ್ ಗೌಡ ಅಲಿಯಾಸ್ ಮೂರ್ತಿ ಈ ವಂಚನೆ ಪ್ರಕರಣದ ಪ್ರಮುಖ ಆರೋಪಿ. ವಿವಿಧ ಫೈನಾನ್ಸ್ ಕಂಪನಿಗಳಲ್ಲಿ ಚಿನ್ನ ಅಡವಿಟ್ಟಿದ್ದ ಗ್ರಾಹಕರ ಮಾಹಿತಿ ಸಂಗ್ರಹಿಸಿ, ಕಡಿಮೆ ಬಡ್ಡಿಗೆ ಹೆಚ್ಚಿನ ಸಾಲ ನೀಡುವುದಾಗಿ ಆಮಿಷ ಒಡ್ಡುತ್ತಿದ್ದ ಎನ್ನಲಾಗಿದೆ.

ಗ್ರಾಹಕರು ನಂಬಿದ ಬಳಿಕ ಅವರ ಅಡವಿಟ್ಟಿದ್ದ ಚಿನ್ನವನ್ನು ಬಿಡಿಸಿಕೊಂಡು, ತನ್ನದೇ ಜ್ಯುವೆಲರಿ ಅಂಗಡಿಯಲ್ಲಿ ಇಟ್ಟುಕೊಳ್ಳುತ್ತಿದ್ದ. ಕಳೆದ ಒಂದು ವರ್ಷದಿಂದ ಇದೇ ಮಾದರಿಯಲ್ಲಿ ವಂಚನೆ ನಡೆಸಿದ್ದ ಆರೋಪಿ, ಕಳೆದ ಮೂರು ತಿಂಗಳಿಂದ ಅಂಗಡಿ ಮುಚ್ಚಿ ಪರಾರಿಯಾಗಿದ್ದಾನೆ.

ಯಲಹಂಕ ಅಳ್ಳಾಳಸಂದ್ರ ನಿವಾಸಿ ಸೌಮ್ಯಲತಾ ಅವರಿಗೆ ಮಾತ್ರವೇ 50 ಲಕ್ಷ ರೂ.ಕ್ಕೂ ಅಧಿಕ ವಂಚನೆ ನಡೆದಿರುವ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

ಮನೆಯಲ್ಲಿ ಇಲಿಗಳ ಕಾಟವೇ? ತಪ್ಪದೇ ಅನುಸರಿಸಿ ಈ ಟಿಪ್ಸ್ – ಮತ್ತೆ ಬರಲ್ಲ

ಮನೆಯಲ್ಲಿ ಮಕ್ಕಳ ಕಿತಾಪತಿ ಸಹಿಸಿಕೊಳ್ಳಬಹುದು. ಆದರೆ ಇಲಿಗಳ ಕಾಟ ಮಾತ್ರ ಯಾರಿಗೂ ಸುಲಭವಾಗಿ ತಾಳಲಾಗದು. ಒಮ್ಮೆ ಇಲಿ ಮನೆಗೆ ಪ್ರವೇಶಿಸಿದರೆ, ಅದು ವೇಗವಾಗಿ ಹೆಚ್ಚಾಗಿ ದೊಡ್ಡ ಸಮಸ್ಯೆಯಾಗಬಹುದು. ಆಹಾರ ಪದಾರ್ಥಗಳನ್ನು ಹಾಳುಮಾಡುವುದು, ಬಟ್ಟೆಗಳನ್ನು ಕಚ್ಚುವುದು, ವಿದ್ಯುತ್ ತಂತಿಗಳನ್ನು ಹಾನಿಗೊಳಿಸುವುದು ಮಾತ್ರವಲ್ಲದೆ, ಮನೆಯಲ್ಲಿ ಮಲಮೂತ್ರ ವಿಸರ್ಜನೆ ಮಾಡುವ ಮೂಲಕ ರೋಗಾಣುಗಳನ್ನು ಹರಡುವ ಅಪಾಯವೂ ಇರುತ್ತದೆ.

ಬಹಳಷ್ಟು ಮಂದಿ ಮಾರುಕಟ್ಟೆಯಲ್ಲಿ ಸಿಗುವ ಇಲಿ ವಿಷ ಅಥವಾ ರಾಸಾಯನಿಕಗಳನ್ನು ಬಳಸುತ್ತಾರೆ. ಆದರೆ ಅವುಗಳಿಂದ ಇಲಿಗಳು ಸತ್ತು ಮನೆಯೊಳಗಿನ ಮೂಲೆಗಳಲ್ಲಿ ಕೊಳೆಯುವ ಸಾಧ್ಯತೆ ಇದೆ. ಇದರಿಂದ ದುರ್ವಾಸನೆ ಉಂಟಾಗುತ್ತದೆ. ಜೊತೆಗೆ, ಮನೆಯಲ್ಲಿ ಸಣ್ಣ ಮಕ್ಕಳು ಅಥವಾ ಸಾಕುಪ್ರಾಣಿಗಳು ಇದ್ದರೆ ಇಂತಹ ವಿಷಕಾರಿ ಪದಾರ್ಥಗಳ ಬಳಕೆ ಅಪಾಯಕಾರಿಯಾಗಬಹುದು. ಇಂತಹ ಸಂದರ್ಭದಲ್ಲಿ ಮನೆಯಲ್ಲೇ ಸುಲಭವಾಗಿ ಸಿಗುವ ಕೆಲವು ನೈಸರ್ಗಿಕ ವಿಧಾನಗಳ ಮೂಲಕ ಇಲಿಗಳನ್ನು ಓಡಿಸಬಹುದು.

ಪುದೀನದ ವಾಸನೆ ಪರಿಣಾಮಕಾರಿ
ಪುದೀನದ ಸುವಾಸನೆ ಮನುಷ್ಯರಿಗೆ ಇಷ್ಟವಾದರೂ, ಇಲಿಗಳಿಗೆ ಅದು ಅಸಹ್ಯಕರ. ಪುದೀನದಲ್ಲಿರುವ ಮೆಂಥಾಲ್ ಇಲಿಗಳ ಉಸಿರಾಟ ವ್ಯವಸ್ಥೆಗೆ ತೊಂದರೆ ಉಂಟುಮಾಡುತ್ತದೆ. ಹತ್ತಿ ಉಂಡೆಗಳ ಮೇಲೆ ನಾಲ್ಕು–ಐದು ಹನಿ ಪುದೀನ ಎಣ್ಣೆ ಹಾಕಿ, ಇಲಿಗಳು ಓಡಾಡುವ ಸ್ಥಳಗಳು, ರಂಧ್ರಗಳ ಬಳಿ ಅಥವಾ ಅಡುಗೆಮನೆಯ ಮೂಲೆಗಳಲ್ಲಿ ಇಟ್ಟರೆ ಉತ್ತಮ ಫಲಿತಾಂಶ ಸಿಗುತ್ತದೆ. ಎಣ್ಣೆ ಲಭ್ಯವಿಲ್ಲದಿದ್ದರೆ ತಾಜಾ ಪುದೀನ ಎಲೆಗಳನ್ನು ರುಬ್ಬಿ ಬಳಸಬಹುದು.

ಕೆಂಪು ಮೆಣಸಿನ ಪುಡಿಯ ತಂತ್ರ
ಕೆಂಪು ಮೆಣಸಿನ ಪುಡಿ ಇಲಿಗಳಿಗೆ ತೀವ್ರ ಕಿರಿಕಿರಿ ಉಂಟುಮಾಡುತ್ತದೆ. ಇಲಿಗಳ ಪ್ರವೇಶದ್ವಾರಗಳ ಬಳಿ ಅಥವಾ ರಂಧ್ರಗಳ ಸುತ್ತ ಸ್ವಲ್ಪ ಮೆಣಸಿನ ಪುಡಿಯನ್ನು ಸಿಂಪಡಿಸಬಹುದು. ಆದರೆ ಇದನ್ನು ಬಳಸುವಾಗ ಜಾಗರೂಕತೆ ಅಗತ್ಯ. ಪುಡಿ ಗಾಳಿಯಲ್ಲಿ ಹರಡದಂತೆ ನೋಡಿಕೊಳ್ಳಬೇಕು. ಮಕ್ಕಳಿಂದ ದೂರವಿಡಬೇಕು.

ಈರುಳ್ಳಿ ಚೂರುಗಳ ಉಪಯೋಗ
ಈರುಳ್ಳಿಯ ತೀವ್ರ ವಾಸನೆ ಇಲಿಗಳಿಗೆ ಇಷ್ಟವಿರುವುದಿಲ್ಲ. ಈರುಳ್ಳಿಯನ್ನು ದೊಡ್ಡ ತುಂಡುಗಳಾಗಿ ಕತ್ತರಿಸಿ, ಕಪಾಟುಗಳ ಒಳಗೆ, ಸೋಫಾದ ಹಿಂದೆ ಅಥವಾ ಇಲಿಗಳು ಹೆಚ್ಚಾಗಿ ಕಾಣಿಸುವ ಸ್ಥಳಗಳಲ್ಲಿ ಇಡಬಹುದು. ಆದರೆ ಈರುಳ್ಳಿ ಬೇಗನೆ ಹಾಳಾಗುವುದರಿಂದ ಒಂದು ಅಥವಾ ಎರಡು ದಿನಕ್ಕೊಮ್ಮೆ ಬದಲಾಯಿಸಬೇಕು.

ಇಲಿ ಸಮಸ್ಯೆ ಮರುಕಳಿಸದಂತೆ ತಡೆಯಲು ಈ ಕ್ರಮಗಳು ಮುಖ್ಯ

ಆಹಾರ ಸುರಕ್ಷತೆ: ಆಹಾರ ಪದಾರ್ಥಗಳನ್ನು ಯಾವಾಗಲೂ ಗಾಳಿಯಾಡದ ಡಬ್ಬಿಗಳಲ್ಲಿ ಸಂಗ್ರಹಿಸಿ.

ಸ್ವಚ್ಛತೆ: ಅಡುಗೆಮನೆಯನ್ನು ರಾತ್ರಿ ಸಮಯದಲ್ಲಿ ಸಂಪೂರ್ಣ ಸ್ವಚ್ಛವಾಗಿಡಿ. ಉಳಿದ ಆಹಾರ ಅಥವಾ ಕಸ ಹೊರಗೆ ಇರಬಾರದು.

ರಂಧ್ರ ಮುಚ್ಚುವುದು: ಮನೆಯ ಗೋಡೆಗಳು, ಬಾಗಿಲುಗಳು ಅಥವಾ ಕಿಟಕಿಗಳ ಬಳಿ ಇರುವ ಸಣ್ಣ ರಂಧ್ರಗಳನ್ನು ಸಿಮೆಂಟ್ ಅಥವಾ ಲೋಹದ ಜಾಲರಿಯಿಂದ ಮುಚ್ಚಿ.

ಈ ಸರಳ ವಿಧಾನಗಳನ್ನು ಅನುಸರಿಸಿದರೆ, ರಾಸಾಯನಿಕಗಳ ಬಳಕೆಯಿಲ್ಲದೆ ಮನೆಯನ್ನು ಇಲಿಗಳ ಕಾಟದಿಂದ ಸುರಕ್ಷಿತವಾಗಿಡಬಹುದು.

ರಿವರ್ಸ್ ವೇಳೆ ವಿದ್ಯಾರ್ಥಿನಿಯರ ಮೇಲೆ ಹರಿದ ಥಾರ್: ವಿದ್ಯಾರ್ಥಿನಿ ಸಾವು, ಮೂವರ ಸ್ಥಿತಿ ಗಂಭೀರ

0

ರಾಯಚೂರು: ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮಹೀಂದ್ರಾ ಥಾರ್ ವಾಹನ ಹರಿದು ವಿದ್ಯಾರ್ಥಿನಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ ಮೂವರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅರಗಿನಮರ ಕ್ಯಾಂಪ್ ನಿವಾಸಿ ಭೂಮಿಕಾ (17) ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಮೇಘನಾ, ಮಹೇಶ್ವರಿ ಹಾಗೂ ಜಹೀದಾ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾಲೇಜು ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಚಾಲಕ ರಿವರ್ಸ್ ತೆಗೆದುಕೊಳ್ಳುವಾಗ ನಿರ್ಲಕ್ಷ್ಯದಿಂದ ವಾಹನ ವಿದ್ಯಾರ್ಥಿನಿಯರ ಮೇಲೆ ಹರಿದಿದೆ ಎಂದು ತಿಳಿದುಬಂದಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಧನೂರು ಸಂಚಾರ ಠಾಣೆ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಗುಂಡ್ಯಹೊಳೆಯಲ್ಲಿ ದುರಂತ; ಸ್ನಾನಕ್ಕೆ ಹೋದ ಇಬ್ಬರು ವಿದ್ಯಾರ್ಥಿನಿಯರು ನೀರಲ್ಲಿ ಮುಳುಗಿ ಸಾವು

ಮಂಗಳೂರು: ಮಂಗಳೂರಿನ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಕೊಲ್ಯದಕಟ್ಟ ಸಮೀಪದ ಗುಂಡ್ಯಹೊಳೆಯಲ್ಲಿ ಸಂಭವಿಸಿದ ದುರಂತದಲ್ಲಿ ಇಬ್ಬರು ವಿದ್ಯಾರ್ಥಿನಿಯರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಸ್ನಾನಕ್ಕೆಂದು ನದಿಗೆ ತೆರಳಿದ್ದ ನಾಲ್ವರಲ್ಲಿ ಸುನೀತಾ (21) ಮತ್ತು ಅರ್ಪಿತಾ (15) ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾರೆ. ಮೃತರು ಕುಟ್ರುಪ್ಪಾಡಿ ನಿವಾಸಿಗಳಾಗಿದ್ದು, ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ ಎನ್ನಲಾಗಿದೆ.

ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಪ್ರಕರಣ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಚಿಕಿತ್ಸೆ ಫಲಿಸದೆ ಕಾಡಾನೆ ಸಾವು; ಗೋಪಿನಾಥಂ ವನ್ಯಧಾಮದಲ್ಲಿ ಅರಣ್ಯ ಇಲಾಖೆ ಕಳವಳ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗೋಪಿನಾಥಂ ಕಾವೇರಿ ವನ್ಯಧಾಮದಲ್ಲಿ ಗಾಯಗೊಂಡಿದ್ದ ಗಂಡಾನೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ. ಕೆಲ ದಿನಗಳ ಹಿಂದೆ ಜಲಾಶಯಕ್ಕೆ ನೀರು ಕುಡಿಯಲು ಬಂದಿದ್ದ ವೇಳೆ ಕಾಡಾನೆ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆಯೇ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಚಿಕಿತ್ಸೆಯನ್ನು ಆರಂಭಿಸಿದ್ದರು.

ಗಾಯಗೊಂಡಿದ್ದ ಆನೆಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆ ನಿರಂತರ ನಿಗಾವಹಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗಂಡಾನೆ ಕೊನೆಯುಸಿರೆಳೆದಿದೆ. ಕಾಡಾನೆಯ ಸಾವಿನಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯರಲ್ಲಿ ಬೇಸರ ಮೂಡಿಸಿದೆ.

ಕಾಡಾನೆ ಸಾವಿನ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಚಲನವಲನ ಹೆಚ್ಚಾಗಿರುವ ಹಿನ್ನೆಲೆ ಇಲಾಖೆ ಹೆಚ್ಚುವರಿ ನಿಗಾ ವಹಿಸಿದೆ.

ಹಂಟು ವೈರಸ್ ಆತಂಕ: ಸೋಂಕಿತ ಹಡಗಿನಲ್ಲಿ ಇಬ್ಬರು ಭಾರತೀಯರು

ನವದೆಹಲಿ: ಕೊರೋನಾ ಮಾದರಿಯ ಹಂಟು ವೈರಸ್ ಸೋಂಕು ಪತ್ತೆಯಾಗಿರುವ ಹಡಗಿನಲ್ಲಿ ಇಬ್ಬರು ಭಾರತೀಯ ಸಿಬ್ಬಂದಿ ಇದ್ದಾರೆ ಎಂಬ ಮಾಹಿತಿ ಹೊರಬಿದ್ದಿದ್ದು, ಅವರ ಆರೋಗ್ಯ ಸ್ಥಿತಿಯ ಬಗ್ಗೆ ಆತಂಕ ಹೆಚ್ಚಾಗಿದೆ. ಅರ್ಜೆಂಟೀನಾದಿಂದ ಸ್ಪೇನ್‌ಗೆ ಪ್ರಯಾಣಿಸುತ್ತಿದ್ದ ನೌಕೆಯಲ್ಲಿ ಹಲವು ಪ್ರಯಾಣಿಕರಿಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು.

150ಕ್ಕೂ ಹೆಚ್ಚು ಜನರಿದ್ದ ಹಡಗಿನಲ್ಲಿ ಮಧ್ಯದಲ್ಲೇ ಹಲವರು ಇಳಿದಿದ್ದು, ಉಳಿದವರಲ್ಲಿ ಎಂಟು ಮಂದಿಗೆ ಸೋಂಕಿನ ಶಂಕೆ ವ್ಯಕ್ತವಾಗಿತ್ತು. ಬಳಿಕ ಐದು ಮಂದಿಯಲ್ಲಿ ಹಂಟು ವೈರಸ್ ದೃಢಪಟ್ಟಿದ್ದು, ಮೂವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇದೇ ನೌಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಭಾರತೀಯರ ಆರೋಗ್ಯ ಸ್ಥಿತಿ ಕುರಿತು ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಮೇ 10ರಂದು ಹಡಗು ಸ್ಪೇನ್ ತಲುಪಿದ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸುವ ಸಾಧ್ಯತೆ ಇದೆ.

ಈ ನಡುವೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ರಾಷ್ಟ್ರೀಯ ನರವಿಜ್ಞಾನ ಸಂಸ್ಥೆ ನಿರ್ದೇಶಕ ಡಾ. ನವೀನ್ ಕುಮಾರ್ ಮಾತನಾಡಿ, “ಹಂಟು ವೈರಸ್ ಕೊರೋನಾವಿನಂತೆ ವ್ಯಕ್ತಿಯಿಂದ ವ್ಯಕ್ತಿಗೆ ವೇಗವಾಗಿ ಹರಡುವ ಸೋಂಕಲ್ಲ. ಸೋಂಕಿತ ದಂಶಕಗಳ ಮಲ, ಮೂತ್ರ ಅಥವಾ ಲಾಲಾರಸದ ಸಂಪರ್ಕದಿಂದ ಮಾತ್ರ ಹರಡುತ್ತದೆ” ಎಂದು ತಿಳಿಸಿದ್ದಾರೆ.

ಹಂಟು ವೈರಸ್ ಸಾಮಾನ್ಯವಾಗಿ ಇಲಿಗಳಂತಹ ದಂಶಕಗಳಿಂದ ಹರಡುವ ಸೋಂಕಾಗಿದ್ದು, ಗಂಭೀರ ಉಸಿರಾಟ ಸಮಸ್ಯೆಗೆ ಕಾರಣವಾಗಬಹುದು. ಜ್ವರ, ದಣಿವು, ಉಸಿರಾಟದ ತೊಂದರೆ, ಒಣ ಕೆಮ್ಮು, ಸ್ನಾಯು ನೋವು, ವಾಂತಿ ಮತ್ತು ಅತಿಸಾರ ಪ್ರಮುಖ ಲಕ್ಷಣಗಳಾಗಿವೆ. ಸೋಂಕು ತೀವ್ರವಾದರೆ ಶ್ವಾಸಕೋಶ ಹಾಗೂ ಮೂತ್ರಪಿಂಡಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಈಜಲು ಹೋಗಿದ್ದ ಸ್ನೇಹಿತರಿಗೆ ಶಾಕ್: ಇಬ್ಬರು ಯುವಕರ ದಾರುಣ ಅಂತ್ಯ

ಆನೇಕಲ್: ಸ್ನೇಹಿತರ ಜೊತೆ ಈಜಲು ಕೆರೆಗೆ ಇಳಿದ ಇಬ್ಬರು ಯುವಕರು ನೀರಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಬೇಗಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಶಾಹಪುರ ಮೂಲದ ಆನಂದ್ ಮತ್ತು ಅಂಬರೀಶ್ ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ ನಾಲ್ವರು ಸ್ನೇಹಿತರು ಕೆರೆಯಲ್ಲಿ ಈಜಲು ತೆರಳಿದ್ದು, ಈಜು ಬಾರದ ಕಾರಣ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ನಡೆದ ಬಳಿಕ ಸ್ಥಳಕ್ಕೆ ಆನೇಕಲ್ ಹಾಗೂ ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಶೋಧ ಕಾರ್ಯ ಆರಂಭಿಸಿದರು. ಆದರೆ ಸಂಜೆ ವೇಳೆಗೆ ಕತ್ತಲೆ ಆವರಿಸಿದ ಕಾರಣ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮೃತದೇಹಗಳ ಪತ್ತೆಗೆ ನಾಳೆ ಬೆಳಗ್ಗೆ ಮತ್ತೆ ಶೋಧ ಕಾರ್ಯ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಬನ್ನೇರುಘಟ್ಟ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಉಡುಪಿಯಲ್ಲಿ ಬಾರ್-ರೆಸ್ಟೋರೆಂಟ್‌ಗಳಿಗೆ ಗ್ಯಾಸ್ ಕೊರತೆ? ವ್ಯಾಪಾರಿಗಳ ಆಕ್ರೋಶ

ಉಡುಪಿ: ಜಿಲ್ಲೆಯಲ್ಲಿ ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಅಡುಗೆ ಅನಿಲ ಪೂರೈಕೆ ಸಮಸ್ಯೆ ತೀವ್ರಗೊಂಡಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಉಡುಪಿ ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ಆಕ್ರೋಶ ವ್ಯಕ್ತಪಡಿಸಿದೆ.

ಕಳೆದ ಎರಡು ತಿಂಗಳಿನಿಂದ ಸಮರ್ಪಕ ಗ್ಯಾಸ್ ಪೂರೈಕೆ ಆಗುತ್ತಿಲ್ಲ ಎಂದು ಆರೋಪಿಸಿದ ಅಸೋಸಿಯೇಶನ್ ಸದಸ್ಯರು, ಉಡುಪಿಯ ಶಾರದಾ ಹೋಟೆಲ್‌ನಲ್ಲಿ ಸಭೆ ನಡೆಸಿ ಜಿಲ್ಲಾಡಳಿತದ ಗಮನ ಸೆಳೆಯಲು ಮುಂದಾದರು.

ಸಭೆಯಲ್ಲಿ ಮಾತನಾಡಿದ ವ್ಯಾಪಾರಿಗಳು, ಕೇಟರಿಂಗ್ ಹಾಗೂ ಕಾಳಸಂತೆಯಲ್ಲಿ ಗ್ಯಾಸ್ ಸುಲಭವಾಗಿ ಲಭ್ಯವಿದ್ದರೂ, ಸರ್ಕಾರಕ್ಕೆ ಜಿಎಸ್‌ಟಿ ಹಾಗೂ ಅಬಕಾರಿ ತೆರಿಗೆ ಪಾವತಿಸುವ ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಮಾತ್ರ ಸಮರ್ಪಕ ಪೂರೈಕೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಧ್ಯಪ್ರಾಚ್ಯ ಯುದ್ಧದ ನೆಪವಿಟ್ಟು ಗ್ಯಾಸ್ ಪೂರೈಕೆ ಕಡಿತ ಮಾಡಲಾಗಿದೆ ಎಂದು ಆರೋಪಿಸಿದ ಸದಸ್ಯರು, ಗ್ಯಾಸ್ ವಿತರಕ ಏಜೆನ್ಸಿಗಳ ಮೇಲೆ ಸಮಗ್ರ ಆಡಿಟ್ ನಡೆಸುವಂತೆ ಆಗ್ರಹಿಸಿದರು.

ಪ್ರತಿ ತಿಂಗಳು 30ರಿಂದ 40 ಸಾವಿರ ರೂಪಾಯಿ ಜಿಎಸ್‌ಟಿ ಪಾವತಿಸುತ್ತಿದ್ದರೂ, ಮೂಲಭೂತ ಅಗತ್ಯವಾದ ಅಡುಗೆ ಅನಿಲಕ್ಕಾಗಿ ಸಂಕಷ್ಟ ಎದುರಿಸುವಂತಾಗಿದೆ ಎಂದು ವ್ಯಾಪಾರಿಗಳು ದೂರಿದರು. ಬಾರ್ ಹಾಗೂ ವೆಜ್ ರೆಸ್ಟೋರೆಂಟ್‌ಗಳಿಗೆ ಆದ್ಯತೆ ಮೇರೆಗೆ ಗ್ಯಾಸ್ ಪೂರೈಕೆ ಮಾಡಬೇಕು. ಇಲ್ಲವಾದರೆ ವ್ಯವಹಾರ ನಿರ್ವಹಣೆ ಕಷ್ಟವಾಗಲಿದೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ತೀರ್ಮಾನ ಕೈಗೊಳ್ಳಲಾಗಿದ್ದು, ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಅಸೋಸಿಯೇಶನ್ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

121 ಶಾಸಕರ ಬೆಂಬಲದೊಂದಿಗೆ ಟಿವಿಕೆ ಸರ್ಕಾರಕ್ಕೆ ಗ್ರೀನ್ ಸಿಗ್ನಲ್! ನಾಳೆ ವಿಜಯ್ ಪ್ರಮಾಣವಚನ

ಚೆನ್ನೈ: ತಮಿಳುನಾಡಿನಲ್ಲಿ ಹೊಸ ರಾಜಕೀಯ ಅಧ್ಯಾಯಕ್ಕೆ ವೇದಿಕೆ ಸಿದ್ಧವಾಗಿದ್ದು, ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ರಚನೆಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ.

ಬಹುಮತ ಸಾಬೀತುಪಡಿಸಿರುವ ಹಿನ್ನೆಲೆಯಲ್ಲಿ ವಿಜಯ್ ನಾಳೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಇಂದು ಸಂಜೆ ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರನ್ನು ಭೇಟಿಯಾದ ವಿಜಯ್, 121 ಶಾಸಕರ ಬೆಂಬಲ ಪತ್ರದೊಂದಿಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಅಗತ್ಯ ಬಹುಮತವನ್ನು ಸಾಬೀತುಪಡಿಸಿದ ಹಿನ್ನೆಲೆಯಲ್ಲಿ ರಾಜ್ಯಪಾಲರು ಸರ್ಕಾರ ರಚನೆಗೆ ಒಪ್ಪಿಗೆ ಸೂಚಿಸಿದ್ದಾರೆ.

234 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 118 ಸ್ಥಾನಗಳ ಅವಶ್ಯಕತೆ ಇದ್ದು, ಟಿವಿಕೆ 108 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್, ವಿಸಿಕೆ, ಸಿಪಿಐ ಹಾಗೂ ಸಿಪಿಐ(ಎಂ) ಪಕ್ಷಗಳ ಬೆಂಬಲದೊಂದಿಗೆ ಒಟ್ಟು ಸಂಖ್ಯೆ 121ಕ್ಕೆ ಏರಿಕೆಯಾಗಿದೆ.

ನಾಳೆ ಬೆಳಗ್ಗೆ 11 ಗಂಟೆಗೆ ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ರಾಜ್ಯಪಾಲರು ವಿಜಯ್ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ಕಾರ್ಯಕ್ರಮಕ್ಕಾಗಿ ಈಗಾಗಲೇ ಭಾರೀ ಸಿದ್ಧತೆಗಳು ಆರಂಭಗೊಂಡಿವೆ.

ನಟನಾಗಿ ಜನಪ್ರಿಯತೆ ಗಳಿಸಿದ್ದ ವಿಜಯ್ ಇದೀಗ ರಾಜಕೀಯ ಕ್ಷೇತ್ರದಲ್ಲೂ ಮಹತ್ವದ ಸಾಧನೆ ಮಾಡಿದ್ದು, ಟಿವಿಕೆ ಸರ್ಕಾರದ ನೇತೃತ್ವದಲ್ಲಿ ತಮಿಳುನಾಡಿನಲ್ಲಿ ಹೊಸ ಆಡಳಿತ ಆರಂಭವಾಗಲಿದೆ.

error: Content is protected !!