Home Blog

ಬಹಳ ಜನ ರಾಜೀನಾಮೆ ಕೊಡಬೇಡಿ ಎಂದಿದ್ದರು, ಆದ್ರೆ ಮಾತು ಕೊಟ್ಟಿದ್ದೆ: ರಾಜೀನಾಮೆ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ

0

ಚಿಕ್ಕಮಗಳೂರು: ‘ಬಹಳ ಜನ ನನಗೆ ರಾಜೀನಾಮೆ ಕೊಡಬೇಡಿ ಸರ್ ಎಂದು ಹೇಳಿದ್ದರು. ಆದರೆ ನಾನು ಮಾತು ಕೊಟ್ಟಿದ್ದೇನೆ, ಅದನ್ನು ಉಳಿಸಿಕೊಳ್ಳಬೇಕು ಎಂದು ರಾಜೀನಾಮೆ ನೀಡಿದೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕಡೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದರು. ತಾವು ಯಾವುದೋ ದೇವಸ್ಥಾನಕ್ಕೆ ಹೋದಾಗ ಕೆಲವರು ‘ಮೋದಿ, ಮೋದಿ’ ಎಂದು ಘೋಷಣೆ ಕೂಗುತ್ತಿದ್ದರು. ಮೋದಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಾರಾ? ಸಂಗೊಳ್ಳಿ ರಾಯಣ್ಣ ಅವರ ರೀತಿಯಲ್ಲಿ ಹೋರಾಡಿದ್ದಾರಾ? ಎಂದು ಪ್ರಶ್ನಿಸಿದರು.

‘2 ಕೋಟಿ ಉದ್ಯೋಗ ಎಲ್ಲಿ? ಅಚ್ಚೇ ದಿನ್ ಎಲ್ಲಿ? ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇನೆ ಎಂದು ಹೇಳಿದ್ದರು, ಮಾಡಿದ್ದಾರಾ? ಪ್ರಧಾನಿ ಆಗಿ 12 ವರ್ಷಗಳಾಗಿವೆ. ವಿದೇಶದಲ್ಲಿರುವ ಕಪ್ಪುಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಹಾಕುತ್ತೇನೆ ಎಂದಿದ್ದರು, ಹಾಕಿದ್ದಾರಾ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಜೆಪಿಗೆ ಏಕೆ ಮತ ಹಾಕಬೇಕು ಎಂದು ಪ್ರಶ್ನಿಸಿದ ಅವರು, ಜನರಿಗೆ ತಪ್ಪು ಮಾಹಿತಿ ನೀಡಿ ತಪ್ಪು ದಾರಿಗೆ ಎಳೆಯಲಾಗಿದೆ ಎಂದು ಟೀಕಿಸಿದರು.

ಇದೇ ವೇಳೆ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ತಮ್ಮಯ್ಯ, ಯಾರಯ್ಯ ನಿನ್ನ ಮೇಲೆ ಸೋತದ್ದು? ಸಿ.ಟಿ. ರವಿ’ ಎಂದು ವ್ಯಂಗ್ಯವಾಡಿದರು. ಸಿ.ಟಿ. ರವಿ ತಮ್ಮ ಬಗ್ಗೆ ಇತ್ತೀಚೆಗೆ ಹೇಳಿಕೆ ನೀಡಿರುವುದಾಗಿ ಉಲ್ಲೇಖಿಸಿದ ಅವರು, ‘ನಾನು ಹೇಳಲ್ಲ, ನಮ್ಮ ಕಡೆ ಅವರನ್ನು ಲೂಟಿ ರವಿ ಎಂದು ಕರೆಯುತ್ತಾರೆ’ ಎಂದು ಟೀಕಿಸಿದರು.

ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸದ ಕಾರಣಕ್ಕೆ ತಮ್ಮ ಮುಖ್ಯಮಂತ್ರಿ ಸ್ಥಾನ ಹೋಯಿತು ಎಂದು ಸಿ.ಟಿ. ರವಿ ಹೇಳಿದ್ದಾರಂತೆ ಎಂದು ಸಿದ್ದರಾಮಯ್ಯ ಹೇಳಿದರು. ಈ ಸಂದರ್ಭದಲ್ಲಿ ತಮ್ಮ ರಾಜೀನಾಮೆಯ ಕಾರಣವನ್ನೂ ವಿವರಿಸಿದ ಅವರು, ‘ನಾನು ರಾಹುಲ್ ಗಾಂಧಿಗೆ ಮಾತು ಕೊಟ್ಟಿದ್ದೆ. ಅವರು ರಾಜೀನಾಮೆ ಕೊಡು ಎಂದರು, ಕೊಟ್ಟೆ. ಬಹಳ ಜನ ನನಗೆ ರಾಜೀನಾಮೆ ಕೊಡಬೇಡಿ ಸರ್ ಎಂದಿದ್ದರು. ಆದರೆ ನಾನು ಮಾತು ಕೊಟ್ಟಿದ್ದೇನೆ, ಕೊಡಬೇಕು ಎಂದು ರಾಜೀನಾಮೆ ಕೊಟ್ಟೆ’ ಎಂದು ತಿಳಿಸಿದರು.

‘ರಾಜಕೀಯದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡ ಯಾವುದೇ ಸರ್ಕಾರ ಇದ್ದರೆ, ಅದು ಸಿದ್ದರಾಮಯ್ಯ ಸರ್ಕಾರ’ ಎಂದು ಹೇಳುವ ಮೂಲಕ ಸಿ.ಟಿ. ರವಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಶಾಲಾ ವಾಹನ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿ: 6 ವಿದ್ಯಾರ್ಥಿಗಳಿಗೆ ಗಾಯ

ಮರಳಿ ಗ್ರಾಮಕ್ಕೆ ತೆರಳುವಾಗ ಅವಘಡ: ಗಂಭೀರ ಗಾಯಗೊಂಡ ಇಬ್ಬರು ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಗೆ

ಗದಗ: ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಮುಗಿಸಿಕೊಂಡು ವಿದ್ಯಾರ್ಥಿಗಳನ್ನು ಭೈರನಹಟ್ಟಿ ಗ್ರಾಮಕ್ಕೆ ಕರೆದೊಯ್ಯುತ್ತಿದ್ದ ಶಾಲಾ ವಾಹನ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ನರಗುಂದ ಪಟ್ಟಣದ ಪುಟ್ಟರಾಜ ಗವಾಯಿಗಳ ಸರ್ಕಲ್‌ ಬಳಿ ನಡೆದಿದೆ.

ಪೊಲೀಸರ ಮಾಹಿತಿ ಪ್ರಕಾರ, ನರಗುಂದ ಪಟ್ಟಣದ ರೊಟ್ರಾಕ್ಟ್ ಸ್ಕೂಲ್‌ನಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಮುಗಿಸಿಕೊಂಡು KA-17/D-8588 ನೋಂದಣಿ ಸಂಖ್ಯೆಯ ಮಹೀಂದ್ರ ಸುಪ್ರೋ ಮ್ಯಾಕ್ಸಿ ಕ್ಯಾಬ್ ಶಾಲಾ ವಾಹನವು ಭೈರನಹಟ್ಟಿಗೆ ತೆರಳುತ್ತಿದ್ದಾಗ, ಚಾಲಕ ಗೌಡೇಶ್ ಹುಡೇದ ವಾಹನವನ್ನು ನಿಯಂತ್ರಿಸಲಾಗದೆ ಹುಬ್ಬಳ್ಳಿ-ವಿಜಾಪುರ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಭೈರನಹಟ್ಟಿಯ ಅಭಿಷೇಕ್ ಗೌಡ (14), ಪ್ರಜ್ವಲ್ ಗೌಡ (14), ಶಿವು(15), ಮುದ್ದು ಪರಶುರಾಮ್  (10), ಸೌಮ್ಯ  (14) ಹಾಗೂ ಗುರುನಾಥ್  (13) ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಅಭಿಷೇಕ್ ಗೌಡ ಹಾಗೂ ಪ್ರಜ್ವಲ್ ಗೌಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ನಾಲ್ವರು ನರಗುಂದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾಯಗೊಂಡ ವಿದ್ಯಾರ್ಥಿಗಳಿಗೆ ಯಾವುದೇ ಪ್ರಾಣಾಪಾಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಾಹನ ಚಾಲಕ ಗೌಡೇಶ್ ಹುಡೇದ ಅವರಿಗೆ ಯಾವುದೇ ಗಾಯವಾಗಿಲ್ಲ ಎನ್ನಲಾಗಿದೆ.  ಘಟನೆ ಕುರಿತು ನರಗುಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಖರ್ಗೆ ಭಾಷಣ ಸ್ಥಳ ಶುದ್ಧೀಕರಣ ವಿವಾದಕ್ಕೆ ಬಿಗ್‌ ಟ್ವಿಸ್ಟ್‌! ಬೆಂಗಳೂರಿನಲ್ಲಿ ದಾಖಲಾಗಿದ್ದ FIR ಉತ್ತರಾಖಂಡಕ್ಕೆ ವರ್ಗಾವಣೆ

ಬೆಂಗಳೂರು: ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದ ಸಮಾವೇಶದ ಸ್ಥಳದಲ್ಲಿ ಶುದ್ಧೀಕರಣ ನಡೆಸಿದ ಹಾಗೂ ಅದನ್ನು ಸಮರ್ಥಿಸಿಕೊಂಡ ಆರೋಪದ ಮೇಲೆ ಉತ್ತರಾಖಂಡ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಮಹೇಂದ್ರ ಭಟ್ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಬೆಂಗಳೂರಿನಲ್ಲಿ ದಾಖಲಾಗಿದ್ದ ಎಫ್‌ಐಆರ್ ಇದೀಗ ಉತ್ತರಾಖಂಡಕ್ಕೆ ವರ್ಗಾವಣೆಯಾಗಿದೆ.

ಕಾಂಗ್ರೆಸ್ ಮುಖಂಡ ರಾಮಪ್ಪ ಎಂಬುವರು ಸೆಪ್ಟೆಂಬರ್ 4ರಂದು ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ಈ ದೂರಿನನ್ವಯ ಜೀರೋ ಎಫ್‌ಐಆರ್ ದಾಖಲಾಗಿತ್ತು. ಇದೀಗ ಘಟನೆ ನಡೆದ ಸ್ಥಳ ಆಧರಿಸಿ ಎಫ್‌ಐಆರ್ ಅನ್ನು ಉತ್ತರಾಖಂಡದ ಹಲ್ದ್ವಾನಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಈ ವಿವಾದ ಸಂಬಂಧ ದೇಶಾದ್ಯಂತ ಸುಮಾರು 8 ಎಫ್‌ಐಆರ್‌ಗಳು ದಾಖಲಾಗಿವೆ.

ಅಖಿಲ ಭಾರತ ಆದಿವಾಸಿ ಕಾಂಗ್ರೆಸ್‌ನ ಮಾಜಿ ಉಪಾಧ್ಯಕ್ಷ ಟಿ.ಆರ್. ರಾಮಪ್ಪ ನೀಡಿದ ಲಿಖಿತ ದೂರಿನ ಅನ್ವಯ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ಸೆಕ್ಷನ್ 196(1)(ಬಿ), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ 1989ರ ಸೆಕ್ಷನ್ 3(1)(ಯು), ಹಾಗೂ ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ 1955ರ ಸಂಬಂಧಿತ ಸೆಕ್ಷನ್‌ಗಳ ಅಡಿ ಜೀರೋ ಎಫ್‌ಐಆರ್ ದಾಖಲಾಗಿತ್ತು.

2026ರ ಆಗಸ್ಟ್ 8ರಂದು ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿ ಭಾಷಣ ಮಾಡಿದ್ದರು. ಸಮಾವೇಶ ಮುಗಿದ ಬಳಿಕ ಆಗಸ್ಟ್ 10ರಂದು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಆ ಜಾಗದಲ್ಲಿ ಶುದ್ಧೀಕರಣ ಪೂಜೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮಲ್ಲಿಕಾರ್ಜುನ ಖರ್ಗೆ ಅವರ ಉಪಸ್ಥಿತಿಯಿಂದ ಮೈದಾನ ಅಪವಿತ್ರಗೊಂಡಿದೆ ಎಂಬಂತೆ ಬಿಂಬಿಸಿ ಅಪಮಾನ ಮಾಡುವ ಉದ್ದೇಶದಿಂದಲೇ ಈ ಶುದ್ಧೀಕರಣ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕೃತ್ಯವನ್ನು ಉತ್ತರಾಖಂಡ ರಾಜ್ಯ ಬಿಜೆಪಿ ಅಧ್ಯಕ್ಷ ಮಹೇಂದ್ರ ಭಟ್ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದಾರೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಮಸ್ಯೆಗಳನ್ನು ಬಗೆಹರಿಸಿ ಜನರಲ್ಲಿ ಹರ್ಷ ತರುವುದೇ ಸರ್ಕಾರದ ಯಶಸ್ಸಿನ ಮಾನದಂಡ: ಸಿಎಂ ಡಿ ಕೆ ಶಿವಕುಮಾರ್

0

ಕೂಡ್ಲಿಗಿ: “ಸರ್ಕಾರದ ಯಶಸ್ಸು ಜಾಹಿರಾತಿನಲ್ಲಿ ಇರುವುದಿಲ್ಲ. ಜನರ ಮುಖದಲ್ಲಿ ನಗು ಮೂಡಿದೆ ಎಂಬುದೇ ಯಶಸ್ಸಿನ ಮಾನದಂಡ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ವಿಜಯನಗರ ಜಿಲ್ಲೆಯ ಕೂಡ್ಲಗಿಯಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಪ್ರಜಾಸೇವೆ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

“ಜನ ಸೇವೆಯೇ ಜನಾರ್ಧನ ಸೇವೆ ಎಂದು ಭಾವಿಸಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮ ಸೇವೆ ಮಾಡಲು 136 ಸೀಟು ನೀಡಿ ರಾಜ್ಯವನ್ನು ಹೊಸ ದಿಕ್ಕಿನಲ್ಲಿ ಮುನ್ನಡೆಸಲು ಅವಕಾಶ ಕೊಟ್ಟಿದ್ದೀರಿ. ಇದು ಕೇವಲ ಸರ್ಕಾರ ಕಾರ್ಯಕ್ರಮ ಅಲ್ಲ. ಜನ ಸರ್ಕಾರದ ಬಳಿ ಹೋಗುವ ಕಾಲ ಹೋಗಿ, ಸರ್ಕಾರ ಜನರ ಬಳಿಗೆ ಹೋಗುವ ಕಾಲ ಬಂದಿದೆ. ಜನರ ಮನೆ ಬಾಗಿಲಿಗೆ ಆಡಳಿತ ತಲುಪಿಸಲು ಈ ಕಾರ್ಯಕ್ರಮ ಮಾಡಲಾಗುತ್ತಿದೆ” ಎಂದು ಹೇಳಿದರು.

“ವಿಧಾನಸೌಧ, ಜಿಲ್ಲಾ ಹಾಗೂ ತಾಲೂಕು, ಸರ್ಕಾರಿ ಕಚೇರಿಯಲ್ಲಿ ಕೂತು ಅಧಿಕಾರಿಗಳು ಕೆಲಸ ಮಾಡುವುದಲ್ಲ. ಜನರ ಕಷ್ಟ ಕೇಳಿ, ಅವರ ಸಮಸ್ಯೆ ಬಗೆಹರಿಸಲು ಹೊಸ ಇಲಾಖೆ ಆರಂಭೀಸಿದ್ದೇವೆ” ಎಂದರು.

ನನ್ನನ್ನು ಪ್ರಜಾಸೇವಕ ಎಂದು ಕರೆಯಿರಿ

“ಸಂಸದ ಜಿ ಸಿ ಚಂದ್ರಶೇಖರ ಅವರು ನನ್ನನ್ನು ನಾಡಿನ ದೊರೆ ಎಂದು ಸಂಬೋಧನೆ ಮಾಡಿದರು. ಆದರೆ, ನಾನು ನಾಡಿನ ದೊರೆ ಅಲ್ಲ, ಪ್ರಜಾಸೇವಕ ಎಂದು ಕರೆಯಬೇಕು. ನನಗೆ ಅದಕ್ಕಿಂತ ದೊಡ್ಡ ಸಂತೋಷ ಬೇರೆ ಇಲ್ಲ” ಎಂದು ಮನವಿ ಮಾಡಿದರು.

“ದೊರೆಗಳ ಕಾಲ ಹೋಗಿ ಪ್ರಜಾಪ್ರಭುತ್ವ ಬಂದಿದೆ. ಪ್ರಜೆಗಳ ಬದುಕಿನಲ್ಲಿ ಬದಲಾವನೆ ತರಲು ಇಲಾಖೆ ತರಲಾಗಿದೆ. ಇದು ಕೇವಲ ಇಲಾಖೆ ಮಾತ್ರವಲ್ಲ. ಜನರ ಸಮಸ್ಯೆ ಆಲಿಸಿ, ಸ್ಪಂದಿಸಿ ಪರಿಹಾರ ನೀಡಲು ಈ ತೀರ್ಮಾನ ಮಾಡಿದ್ದೇವೆ. ಎಲ್ಲರೂ ಡಿಸಿ ಕಚೇರಿ, ಮಂತ್ರಿ ಕಚೇರಿ, ವಿಧಾನಸೌಧಕ್ಕೆ ಬರಲು ಆಗುವುದಿಲ್ಲ. ನಮ್ಮ ಅವಧಿಯಲ್ಲಿ ಈ ಪರಿಸ್ಥಿತಿ ಬದಲಾಗಿ, ಅಧಿಕಾರಿಗಳು ಜನರನ್ನು ಹುಡುಕಿಕೊಂಡು ಹೋಗಬೇಕು” ಎಂದು ಕರೆ ನೀಡಿದರು.

“ಕೂಡ್ಲಿಗಿಯಲ್ಲಿರುವ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮ ಇರುವ ಜಾಗಕ್ಕೆ ನಾವು ಹೋಗಿ ನಮಿಸಿದ್ದೇವೆ. ಅವರ ಚಿಂತನೆಯ ಹಾದಿಯಲ್ಲಿ ಮುನ್ನಡೆಯಲು ಶಕ್ತಿ ನೀಡುವಂತೆ ಮಹಾತ್ಮನಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ. ಆಡಳಿತ ಸಮಾಜದ ಕೊನೆ ವ್ಯಕ್ತಿಯನ್ನು ತಲುಪಬೇಕು ಎಂಬುದು ಗಾಂಧೀಜಿ ಅವರ ಸಂದೇಶ. ನಾವು ಬಸವಣ್ಣನ ನಾಡಿನಲ್ಲಿ ಕೆಲಸ ಮಾಡುತ್ತಿದ್ದು, ನಿನ್ನೆ ಅವರ ಐಕ್ಯ ಸ್ಥಳಕ್ಕೆ ಹೋಗಿ ಪೂಜೆ ಸಲ್ಲಿಸಿ, ಬರ ಪ್ರದೇಶದ ರೈತರ ಸಮಸ್ಯೆ ನೋಡಿ ಇಲ್ಲಿಗೆ ಬದಿರುವೆ” ಎಂದು ತಿಳಿಸಿದರು.

ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ

“ನಾನು ಕೇವಲ ಹೆಲಿಕಾಪ್ಟರ್ ನಲ್ಲಿ ಮಾತ್ರ ಬರ ವೀಕ್ಷಣೆ ಮಾಡಿಲ್ಲ. ಪ್ರಯಾಣ ಮಾಡುವಾಗ ಈ ಭಾಗದ ಜಮೀನುಗಳನ್ನು ನೋಡಿದೆ. ಆದರೆ ವಿರೋಧ ಪಕ್ಷದವರು ಅದನ್ನು ಟೀಕಿಸುತ್ತಾರೆ. ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಎಂಬುದು ನಮ್ಮ ನಂಬಿಕೆ” ಎಂದು ತಿರುಗೇಟು ನೀಡಿದರು.

ಜನರ ಕಷ್ಟಕ್ಕೆ ಸ್ಪಂದಿಸಿ; ಅಧಿಕಾರಿಗಳಿಗೆ ಸೂಚನೆ

“ಪ್ರತಿ ಜಿಲ್ಲಾ ಮಂತ್ರಿ ತಮ್ಮ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶನಿವಾರ ಭೇಟಿ ನೀಡಬೇಕು. ಜನರ ಸಮಸ್ಯೆ ಆಲಿಸಬೇಕು ಎಂದು ಸೂಚಿಸಿದ್ದೇನೆ. ನಂತರ ಎರಡನೇ ಹಂತದಲ್ಲಿ ಹೋಬಳಿ ಮಟ್ಟದಲ್ಲಿ ಮಾಡಬೇಕು. ಶಾಸಕರು ಪಂಚಾಯ್ತಿ ಮಟ್ಟದಲ್ಲಿ ಹೋಗಬೇಕು. ಶಾಸಕರು ಹೋಗದಿದ್ದರೆ ಅಧಿಕಾರಿಗಳು ಜನರ ಬಳಿ ಹೋಗಬೇಕು, ಅಧಿಕಾರಿಗಳು ಜನರ ಮಧ್ಯೆ ಇರಬೇಕು. ಜನರ ಕಷ್ಟಕ್ಕೆ ಸ್ಪಂದಿಸಬೇಕು” ಎಂದು ಸೂಚನೆ ನೀಡಿದರು.

“ಎಲ್ಲಾ ಸಮಸ್ಯೆ ಬಗೆಹರಿಸಲು ಆಗದೇ ಇದ್ದರೂ ಕಾನೂನು ಚೌಕಟ್ಟಿನಲ್ಲಿ ಆದಷ್ಟು ಪರಿಹಾರ ನೀಡಲಾಗುವುದು. ಪಿಂಚಣಿ, ಭೂಮಿ ಗ್ಯಾರಂಟಿ, ಖಾತೆ ಸಮಸ್ಯೆ, ನಿವೇಶನ ಹಾಗೂ ಮನೆ ರಹಿತರು, ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಈ ಇಲಾಖೆ ಮೂಲಕ ಬಗೆಹರಿಸಲಾಗುವುದು” ಎಂದರು.

ಸಮಸ್ಯೆ ಬಗೆಹರಿಸಲು ಕಾನೂನು ಹೋರಾಟಕ್ಕೆ ವಕೀಲರ ಸೇವೆ ಅವಕಾಶ ಬಳಸಿಕೊಳ್ಳಿ

“ನಿಮ್ಮ ಪಂಚಾಯಿತಿಗಳಲ್ಲಿ ನಿಮಗೆ ಅರ್ಜಿ ನೀಡುತ್ತಾರೆ. ನೀವು ಅವುಗಳ ಮೂಲಕ ನಿಮ್ಮ ಮನವಿ ಸಲ್ಲಿಸಬೇಕು. ಸುಮಾರು 50 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನೀವು ಅರ್ಜಿ ಕೊಟ್ಟ ನಂತರ ನಾವು ಅದನ್ನು ಮರೆಯುವುದಿಲ್ಲ. ಅದಕ್ಕೆ ಪರಿಹಾರ ಸಿಗುವವರೆಗೆ ಸರ್ಕಾರ ಕೆಲಸ ಮಾಡಲಿದೆ. ಪರಿಹಾರ ಸಿಗದಿದ್ದರೆ ಯಾವ ಕಾರಣಕ್ಕೆ ಆಗುವುದಿಲ್ಲ ಎಂದು ವಿವರಣೆ ನೀಡಲಾಗುವುದು. ಕಾನೂನು ಮೂಲಕ ಬಗೆಹರಿಸಬೇಕಾದ ಸಂದರ್ಭದಲ್ಲಿ ಕೋರ್ಟ್ ನಲ್ಲಿ ನಿಮ್ಮ ಪರ ವಾದ ಮಂಡಿಸಲು ವಕೀಲರ ಸೇವೆ ಒದಗಿಸಲಾಗುವುದು. ಬಡವರಿಗೆ ವಕೀಲರ ಸೇವೆ ನೀಡಲು ಅವಕಾಶವಿದೆ. ಅದನ್ನು ಬಳಸಿಕೊಳ್ಳಿ” ಎಂದು ಕರೆ ನೀಡಿದರು.

“ಇಡೀ ರಾಜ್ಯಕ್ಕೆ ವಿಜಯ ಸಿಗಬೇಕು ಎಂದು ಈ ಕಾರ್ಯಕ್ರಮವನ್ನು ಪವಿತ್ರವಾದ ಕೃಷ್ಣದೇವರಾಯನ ಭೂಮಿ ವಿಜಯನಗರ ಆಯ್ಕೆ ಮಾಡಿರುವೆ. ಇಲ್ಲಿ ಎಷ್ಟು ಜನ ಬಂದಿದ್ದಾರೆ, ಎಷ್ಟು ಸಮಸ್ಯೆ ಅರ್ಜಿ ಕೊಟ್ಟಿದ್ದಾರೆ ಎಂಬುದಕ್ಕಿಂತ, ಎಷ್ಟು ಜನರ ಸಮಸ್ಯೆ ಬಗೆಹರಿದಿದೆ ಎಂಬುದು ಈ ಕಾರ್ಯಕ್ರಮದ ಯಶಸ್ಸನ್ನು ತಿಳಿಸುತ್ತದೆ” ಎಂದರು.

ಪಾದಯಾತ್ರೆಯಿಂದ ನಮಗೇನು ಆತಂಕವಿಲ್ಲ, ಬಿಜೆಪಿಗರ ಬಿಪಿ-ಶುಗರ್ ಕಡಿಮೆಯಾಗುತ್ತದೆ: ಲಕ್ಷ್ಮಣ ಸವದಿ ವ್ಯಂಗ್ಯ

0

ಕಾರವಾರ: ಬಿಜೆಪಿ ನಡೆಸುತ್ತಿರುವ ಪಾದಯಾತ್ರೆಯಿಂದ ಆಡಳಿತಾರೂಢ ಕಾಂಗ್ರೆಸ್‌ಗೆ ಆತಂಕ ಉಂಟಾಗಿದೆ ಎಂಬುದು ಸುಳ್ಳು. ಪಾದಯಾತ್ರೆಯಿಂದ ಕಾಂಗ್ರೆಸ್‌ಗೆ ಯಾವುದೇ ನಷ್ಟವಿಲ್ಲ ಎಂದು ಸಚಿವ ಲಕ್ಷ್ಮಣ ಸವದಿ ವ್ಯಂಗ್ಯವಾಡಿದ್ದಾರೆ.

ಇಂದು ಅಂಕೋಲದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಪಾದಯಾತ್ರೆ ನಡೆಸುವುದರಿಂದ ಅವರ ಬಿಪಿ ಮತ್ತು ಶುಗರ್‌ ಕಡಿಮೆಯಾಗಬಹುದು ಎಂದು ಟಾಂಗ್ ನೀಡಿದರು.

“ಬಿಜೆಪಿಗರಿಗೆ ಪಾದಯಾತ್ರೆಯಿಂದ ಬಿಪಿ-ಶುಗರ್ ಕಡಿಮೆಯಾದರೆ, ಅವರನ್ನು ಚಿಕಿತ್ಸೆ ನೀಡುವ ವೈದ್ಯರಿಗೆ ಆದಾಯದಲ್ಲಿ ನಷ್ಟವಾಗಬಹುದು ಎಂಬ ಆತಂಕ ಇರಬಹುದು. ಆದರೆ ಕಾಂಗ್ರೆಸ್‌ನವರಿಗೆ ಯಾವುದೇ ನಷ್ಟವಿಲ್ಲ” ಎಂದು ಲಕ್ಷ್ಮಣ ಸವದಿ ವ್ಯಂಗ್ಯವಾಗಿ ಹೇಳಿದರು.

ಬಿಜೆಪಿ ನಾಯಕರ ಪಾದಯಾತ್ರೆ ಕುರಿತ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಗರ ಬಿಪಿ ಮತ್ತು ಶುಗರ್‌ ಕಡಿಮೆಯಾಗುತ್ತದೆ ಎಂಬುದೇ ಈ ಪಾದಯಾತ್ರೆಯ ದೊಡ್ಡ ಹೈಲೈಟ್ ಎಂದು ಟೀಕಿಸಿದರು.

ಇನ್ನು ರಾಜ್ಯದಲ್ಲಿ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕದ ಕುರಿತು ಮಾತನಾಡಿದ ಸಚಿವ ಸವದಿ, ಮುಖ್ಯಮಂತ್ರಿಗಳೇ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟ ಬಳಿಕ ನಿಗಮ ಮಂಡಳಿಗಳ ಅಧ್ಯಕ್ಷರೂ ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕು ಎಂಬ ಬಗ್ಗೆ ಮೊದಲೇ ಚರ್ಚೆಯಾಗಿತ್ತು ಎಂದು ಹೇಳಿದರು.

ನಿಗಮ ಮಂಡಳಿಗಳಿಗೆ ಶೀಘ್ರದಲ್ಲೇ ಹೊಸ ನೇಮಕಾತಿ ನಡೆಯಲಿದೆ. ಕೆಲವೇ ದಿನಗಳಲ್ಲಿ ನಿಗಮ ಮಂಡಳಿಗಳಿಗೂ ಅಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಯಲಿದೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.

101ರಿಂದ 180–200ಕ್ಕೆ ಬರಪೀಡಿತ ತಾಲೂಕುಗಳ ಸಂಖ್ಯೆ ಏರಿಕೆ ಸಾಧ್ಯತೆ: ಈಶ್ವರ್ ಖಂಡ್ರೆ

0

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಎಲ್‌ ನಿನೋ ಪ್ರಭಾವದಿಂದ ಮಳೆ ಪ್ರಮಾಣ ಕಡಿಮೆಯಾಗಿದ್ದು, ಈ ತಿಂಗಳಾಂತ್ಯದ ವೇಳೆಗೆ 180ರಿಂದ 200 ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಬಿ. ಖಂಡ್ರೆ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಶೀಘ್ರವೇ 24 ಬ್ಲಾಕ್‌ಗಳನ್ನು ಬರಪೀಡಿತ ಎಂದು ಘೋಷಿಸಲು ಸಿದ್ಧತೆ ನಡೆದಿದೆ ಎಂದು ತಿಳಿಸಿದರು. ತಿಂಗಳಾಂತ್ಯಕ್ಕೆ ನಡೆಯುವ ಮತ್ತೊಂದು ಗ್ರೌಂಡ್ ಟ್ರೂಥಿಂಗ್‌ನಲ್ಲಿ ಈ ಸಂಖ್ಯೆ ಹೆಚ್ಚಳವಾಗಿ 180ರಿಂದ 200ಕ್ಕೆ ತಲುಪಲಿದೆ ಎಂದರು.

ರಾಜ್ಯದಲ್ಲಿ 2026ರ ಮುಂಗಾರು ಮತ್ತು ಬರ ಪರಿಸ್ಥಿತಿ ಹಾಗೂ ಇತರೆ ನೈಸರ್ಗಿಕ ವಿಕೋಪ ಪರಿಸ್ಥಿತಿಗಳ ಪರಾಮರ್ಶೆ ಮತ್ತು ಸಮರ್ಥ ನಿರ್ವಹಣೆಗೆ ನೀತಿ ನಿರೂಪಣೆ ಹಾಗೂ ಅಗತ್ಯ ಕ್ರಮಗಳ ಬಗ್ಗೆ ನಿರ್ಣಯಿಸಲು ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ರಚಿಸಿರುವ ಸಂಪುಟದ ಉಪ ಸಮಿತಿಯ ಸದಸ್ಯರಾಗಿರುವುದಾಗಿ ಖಂಡ್ರೆ ತಿಳಿಸಿದರು. ಈ ಸಂಬಂಧ ಇತ್ತೀಚೆಗೆ ನಡೆದ ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಎನ್‌ಡಿಆರ್‌ಎಫ್‌ನಿಂದ ಒಣಭೂಮಿ ಮತ್ತು ನೀರಾವರಿ ಭೂಮಿಗೆ ಪರಿಹಾರ ನೀಡಲಾಗುತ್ತದೆಯೆಂದೂ, ಇದರ ಜೊತೆಗೆ ರಾಜ್ಯದಲ್ಲಿ ತೀವ್ರ ಬೆಳೆ ಹಾನಿಯಾಗಿರುವ ಪ್ರದೇಶಗಳಿಗೆ ಹೆಚ್ಚುವರಿ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳುವರೆಂದೂ ಸಚಿವರು ತಿಳಿಸಿದರು. ಪ್ರಸ್ತುತ ಬರಪೀಡಿತ ಎಂದು ಘೋಷಿಸಲಾಗಿರುವ 101 ಬ್ಲಾಕ್‌ಗಳಿಗೆ 2,600 ಕೋಟಿ ರೂಪಾಯಿ ನೀಡಬೇಕು ಎಂಬುದು ರಾಜ್ಯದ ಬೇಡಿಕೆಯಾಗಿದೆ ಎಂದು ಅವರು ಹೇಳಿದರು.

ಕರ್ನಾಟಕದ ಬಿಜೆಪಿ ಸಂಸತ್ ಸದಸ್ಯರು ಮತ್ತು ನಾಯಕರು ರಾಜ್ಯದ ಬರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರೈತರಿಗೆ ನೆರವಾಗಲು ಕೇಂದ್ರದ ಮೇಲೆ ಒತ್ತಡ ಹೇರಿ ಹಣ ಕೊಡಿಸುವ ಕಾರ್ಯ ಮಾಡಬೇಕೆಂದೂ, ಅದು ಬಿಟ್ಟು ಪಾದಯಾತ್ರೆ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆಂದೂ ಸಚಿವ ಖಂಡ್ರೆ ಆಕ್ಷೇಪಿಸಿದರು.

ಅಡುಗೆ ಮಾಡದೆ ಡ್ಯಾನ್ಸ್ ಕ್ಲಾಸ್ʼಗೆ ಹೋಗಿದ್ದಕ್ಕೆ ಪತ್ನಿಯನ್ನೇ ಕೊಂದ ಪತಿ! ಆರೋಪಿ ಅರೆಸ್ಟ್

0

ಮುಂಬೈ: ಅಡುಗೆ ಮಾಡದೆ ಡ್ಯಾನ್ಸ್ ಕ್ಲಾಸ್‌ಗೆ ತೆರಳಲು ಮುಂದಾಗಿದ್ದ ಪತ್ನಿಯನ್ನು ಪತಿ ಹತ್ಯೆಗೈದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಹತ್ಯೆಯಾಗಿರುವುದು ಯಾಮಿನಿ (38) ಎಂಬುವರು. ಆಕೆಯ ಪತಿ ಕೃಷ್ಣ ಲಾಲ್ ಯಾದವ್ (41) ಕೊಲೆ ಆರೋಪಿಯಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಹೌಸಿಂಗ್ ಸೊಸೈಟಿಯಲ್ಲಿ ಡ್ಯಾನ್ಸ್ ಕ್ಲಾಸ್‌ಗೆ ತೆರಳಲು ಸಿದ್ಧರಾಗಿದ್ದ ಮಹಿಳೆ ಅಡುಗೆ ಮಾಡದೇ ಇದ್ದುದಕ್ಕೆ, ಕುಡಿದು ಬಂದಿದ್ದ ಪತಿ ಜಗಳ ತೆಗೆದು ಹತ್ಯೆಗೈದಿರುವುದಾಗಿ ತಿಳಿದುಬಂದಿದೆ.

ಕೃಷ್ಣ ಲಾಲ್ ಕೆಲಸದಿಂದ ಮನೆಗೆ ಮರಳಿದಾಗ ಯಾಮಿನಿ ಬಳಿ ಅಡುಗೆ ಮಾಡಲು ತಿಳಿಸಿದ್ದ. ಆದರೆ ಯಾಮಿನಿ ಡ್ಯಾನ್ಸ್ ಕ್ಲಾಸ್‌ಗೆ ತೆರಳಬೇಕಿರುವುದಾಗಿ ಅಡುಗೆ ಮಾಡಲು ನಿರಾಕರಿಸಿದ್ದರು. ಇದರಿಂದ ಮದ್ಯದ ಅಮಲಿನಲ್ಲಿದ್ದ ಆರೋಪಿ, ತಮ್ಮ ಇಬ್ಬರು ಮಕ್ಕಳ ಮುಂದೆಯೇ ಯಾಮಿನಿಯ ಕುತ್ತಿಗೆ ಮತ್ತು ಹೊಟ್ಟೆಯ ಮೇಲೆ ಹಲ್ಲೆ ನಡೆಸಿದ್ದ.

ಹಲ್ಲೆಯ ಬಳಿಕ ಕುತ್ತಿಗೆ ಮತ್ತು ಹೊಟ್ಟೆಯಲ್ಲಿ ತೀವ್ರ ನೋವಿದೆ ಎಂದು ಯಾಮಿನಿ ಮಾತ್ರೆ ತರುವಂತೆ ಪತಿಗೆ ಕೇಳಿಕೊಂಡಿದ್ದರು. ಕೃಷ್ಣ ಲಾಲ್ ಮಾತ್ರೆ ತರಲು ತೆರಳಿದಾಗ ಮೆಡಿಕಲ್ ಬಂದ್ ಆಗಿದ್ದ ಕಾರಣ ಖಾಲಿ ಕೈಯಲ್ಲಿ ಹಿಂತಿರುಗಿದ್ದ. ಈ ವೇಳೆಗಾಗಲೇ ಮಹಿಳೆಯ ಹೊಟ್ಟೆ ಊದಿಕೊಂಡು ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಚಿಕಿತ್ಸೆ ವೇಳೆ ಆಕೆ ಸಾವನ್ನಪ್ಪಿದ್ದರು.

ಆರಂಭದಲ್ಲಿ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕುತ್ತಿಗೆಯ ಮೂಳೆ ಮುರಿತ ಮತ್ತು ಕರುಳಿಗೆ ತೀವ್ರ ಹಾನಿ ಸೇರಿದಂತೆ ಗಂಭೀರ ಗಾಯಗಳಾಗಿರುವುದು ಪತ್ತೆಯಾಗಿತ್ತು. ಬಳಿಕ ಪತಿಯನ್ನು ವಿಚಾರಣೆ ನಡೆಸಿದಾಗ ಆತ ಹಲ್ಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಇದು ಬಯಲಾಗುತ್ತಿದ್ದಂತೆ ಪತಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಲಾಗಿದೆ.

ಮೊದಲ ಬಾರಿಗೆ ವಿಮಾನ ಹತ್ತಿದ ಮಕ್ಕಳ ಸಂಭ್ರಮ: ಡಾ. ಅಂಬೇಡ್ಕರ್ ಜೀವನ ಅರಿಯಲು ಮುಂಬೈ ಪ್ರವಾಸ

0

ಚಿಕ್ಕಬಳ್ಳಾಪುರ: ವಿಮಾನದಲ್ಲಿ ಪ್ರಯಾಣಿಸಬೇಕು ಎಂಬ ಮಕ್ಕಳ ಕನಸು ನನಸಾಗಿದ್ದು, ಸರ್ಕಾರಿ ಶಾಲೆ ಹಾಗೂ ಅನಾಥಾಶ್ರಮದ 200ಕ್ಕೂ ಹೆಚ್ಚು ಮಕ್ಕಳು ಮುಂಬೈ ಪ್ರವಾಸಕ್ಕೆ ತೆರಳಿದ್ದಾರೆ. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ಪ್ರಯಾಣಿಸಿರುವ ಮಕ್ಕಳು, ಮೊದಲ ವಿಮಾನಯಾನದ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ.

ದೇವನಹಳ್ಳಿ ತಾಲೂಕಿನ ಮಲ್ಲೇಪುರ ಸರ್ಕಾರಿ ಶಾಲೆಯ ಮಕ್ಕಳು ಸೇರಿದಂತೆ ವಿವಿಧ ಸರ್ಕಾರಿ ಶಾಲೆಗಳು ಹಾಗೂ ಅನಾಥಾಶ್ರಮದ ಮಕ್ಕಳು, ಪೋಷಕರು ಮತ್ತು ಶಿಕ್ಷಕರು ಪ್ರವಾಸದಲ್ಲಿ ಭಾಗಿಯಾಗಿದ್ದಾರೆ. ಎರಡು ದಿನಗಳ ಕಾಲ ಮುಂಬೈನ ಪ್ರಮುಖ ಪ್ರವಾಸಿ ತಾಣಗಳನ್ನು ವೀಕ್ಷಿಸಲಿರುವ ಮಕ್ಕಳು, ಹಲವು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.

ಪ್ರವಾಸದ ಪ್ರಮುಖ ಉದ್ದೇಶ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನ ಮತ್ತು ಹೋರಾಟದ ಕುರಿತು ಮಕ್ಕಳಿಗೆ ಅರಿವು ಮೂಡಿಸುವುದಾಗಿದೆ. ಮಕ್ಕಳು ಅಂಬೇಡ್ಕರ್ ಅವರ ಚೈತ್ಯಭೂಮಿ, ನಿವಾಸ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಅವರ ಜೀವನ, ಸಾಧನೆ ಹಾಗೂ ಚರಿತ್ರೆಯ ಕುರಿತು ತಿಳಿದುಕೊಳ್ಳಲಿದ್ದಾರೆ.

ದೇವನಹಳ್ಳಿ ಭಾಗದ ಸಮಾಜ ಸೇವಕ ಎಂ.ಪಿ. ಗಿರೀಶ್ ಅವರ ನೇತೃತ್ವದಲ್ಲಿ ಈ ವಿಶೇಷ ಪ್ರವಾಸ ಆಯೋಜಿಸಲಾಗಿದೆ. ಸಾಮಾನ್ಯವಾಗಿ ಪ್ರವಾಸಕ್ಕೆ ಅವಕಾಶ ಸಿಗದ ಮಕ್ಕಳಿಗೂ ಹೊಸ ಅನುಭವ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ.

ಮಕ್ಕಳಿಗೆ ಪ್ರವಾಸ ಕೇವಲ ಮನರಂಜನೆಗೆ ಸೀಮಿತವಾಗದೆ, ಶಿಕ್ಷಣ ಹಾಗೂ ಪ್ರೇರಣೆಯ ಅನುಭವವಾಗಲಿದೆ. ಮೊದಲ ಬಾರಿಗೆ ವಿಮಾನ ಹತ್ತಿದ ಮಕ್ಕಳು ತಮ್ಮ ಸಂತಸವನ್ನು ಹಂಚಿಕೊಂಡಿದ್ದು, ಮುಂಬೈ ಪ್ರವಾಸವನ್ನು ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ಪ್ರವಾಸ ಆಯೋಜಕ ಗಿರೀಶ್ ತಿಳಿಸಿದ್ದಾರೆ.

ಸರ್ಕಾರವೇ ಜನರ ಮನೆಬಾಗಿಲಿಗೆ ಬರಲಿದೆ; ಹೊಸ ಪ್ರಜಾಸೇವಾ ಯೋಜನೆ ದೇಶಕ್ಕೆ ಮಾದರಿ: ಡಿಕೆಶಿ

0

ಬಳ್ಳಾರಿ: ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು ಇನ್ನು ಮುಂದೆ ಜನರು ಸರ್ಕಾರಿ ಕಚೇರಿಗಳತ್ತ ಅಲೆಯಬೇಕಿಲ್ಲ. ಸರ್ಕಾರವೇ ಜನರ ಮನೆಬಾಗಿಲಿಗೆ ತೆರಳಿ ಸೇವೆ ನೀಡಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದರು. ವಿಜಯನಗರದಲ್ಲಿ ನೂತನ ಪ್ರಜಾಸೇವಾ ಇಲಾಖೆ ಹಾಗೂ ಆಡಳಿತ ವಿಕೇಂದ್ರೀಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ಜನರು 136 ಸ್ಥಾನಗಳಲ್ಲಿ ಕಾಂಗ್ರೆಸ್‌ನ್ನು ಗೆಲ್ಲಿಸಿ ಅಧಿಕಾರಕ್ಕೆ ತಂದಿದ್ದಾರೆ. ದೊರೆಗಳ ಆಡಳಿತ ಮುಗಿದಿದ್ದು, ಈಗ ಪ್ರಜೆಗಳ ಆಡಳಿತವಿದೆ. ಹೀಗಾಗಿ ‘ನಾಡಿನ ದೊರೆ’ ಎಂದು ಕರೆಯದೆ ‘ಪ್ರಜಾಸೇವಕ’ ಎಂದು ಕರೆಯುವಂತೆ ಅವರು ಮನವಿ ಮಾಡಿದರು.

ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಆಡಳಿತ ನಡೆಸುವ ಬದಲು ಪ್ರತಿ ಶನಿವಾರ ಹಳ್ಳಿ ಹಾಗೂ ಪಂಚಾಯಿತಿ ಮಟ್ಟಕ್ಕೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು ಎಂದು ಸೂಚಿಸಿದರು. ವಿಧಾನಸೌಧ, ಡಿಸಿ ಕಚೇರಿ ಅಥವಾ ಜನಪ್ರತಿನಿಧಿಗಳ ಕಚೇರಿಗಳಿಗೆ ಜನರು ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದರು.

ಗ್ಯಾರಂಟಿ ಯೋಜನೆಗಳ ಆರಂಭದ ವೇಳೆ ಟೀಕೆಗಳು ವ್ಯಕ್ತವಾಗಿದ್ದರೂ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅವುಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ ದೇಶಕ್ಕೆ ಮಾದರಿಯಾಗಿದೆ. ಇದೇ ರೀತಿ ‘ಪ್ರಜಾಸೇವಾ ಯೋಜನೆ’ಯೂ ದೇಶಕ್ಕೆ ಮಾದರಿಯಾಗಲಿದೆ ಎಂದು ಡಿಕೆಶಿ ವಿಶ್ವಾಸ ವ್ಯಕ್ತಪಡಿಸಿದರು.

‘ಬಾಗಿಲಿಗೆ ಬಂದಿದೆ ನಿಮ್ಮ ಸರ್ಕಾರ, ಸೇವೆಗಿರಲಿ ನಿಮ್ಮ ಸಹಕಾರ’ ಎಂಬ ಘೋಷವಾಕ್ಯದೊಂದಿಗೆ ಅಧಿಕಾರಿಗಳು ಜನರ ಬಳಿಗೆ ತೆರಳಲಿದ್ದಾರೆ. ಅರ್ಜಿ ಸ್ವೀಕರಿಸುವುದರಲ್ಲೇ ಪ್ರಕ್ರಿಯೆ ಮುಗಿಯದೆ, ಪರಿಹಾರ ದೊರೆಯುವವರೆಗೂ ಸರ್ಕಾರ ಬೆಂಬಲವಾಗಿ ನಿಲ್ಲಲಿದೆ. ಬಡವರ ಕಾನೂನು ಹೋರಾಟಕ್ಕೆ ಅಗತ್ಯವಿದ್ದರೆ ಸರ್ಕಾರವೇ ವಕೀಲರನ್ನು ಒದಗಿಸಲಿದೆ ಎಂದು ಹೇಳಿದರು.

ಕಂದಾಯ ಇಲಾಖೆಯ ಹಕ್ಕುಪತ್ರ ಹಾಗೂ ‘ಭೂಮಿ ಗ್ಯಾರಂಟಿ’ ಕಾರ್ಯಕ್ರಮವನ್ನು ಮುಂದುವರಿಸಲಾಗುವುದು ಎಂದ ಅವರು, ಸರ್ಕಾರಿ ಶಾಲೆಗಳ ಮಕ್ಕಳಿಗೆ ಆಂತರಿಕವಾಗಿ ಶೇ.7ರಷ್ಟು ಮೀಸಲಾತಿ ನೀಡುವ ನಿರ್ಧಾರವನ್ನು ಶೀಘ್ರ ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ಶಿಕ್ಷಕರ ದಿನದ ಅಂಗವಾಗಿ ಶಿಕ್ಷಕರಿಗೆ ಶುಭ ಕೋರಿದ ಡಿಕೆಶಿ, ರಾಜ್ಯದ 4 ಲಕ್ಷಕ್ಕೂ ಅಧಿಕ ಶಿಕ್ಷಕರಿಗೆ ವಿಶೇಷ ಬಿರುದು ಹಾಗೂ ಗೌರವ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.

ಬರ ಪರಿಸ್ಥಿತಿ ಕುರಿತು ಮಾತನಾಡಿದ ಅವರು, ಈಗಾಗಲೇ ಹಲವು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಮತ್ತೊಂದು ಹಂತದಲ್ಲಿ 50 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವುದಾಗಿ ತಿಳಿಸಿದರು. ಹೆಲಿಕಾಪ್ಟರ್ ಬಳಕೆ ಕುರಿತು ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಜನರ ಕಷ್ಟಕ್ಕೆ ಸ್ಪಂದಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದರು.

ಪಂಚಾಯಿತಿ ಮಟ್ಟದಲ್ಲಿ ಹೊಸ ನಾಯಕತ್ವ ಬೆಳೆಸುವ ಉದ್ದೇಶದಿಂದ ‘ಭಾರತ್ ಜೋಡೋ ಯುವಕ ಸಂಘ’ಗಳನ್ನು ರಚಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಬ್ಬಂದಿ ಮೇಲೆ ಕೈದಿಗಳ ಹಲ್ಲೆ; ಕಾರಣ ತಿಳಿದು ಕ್ರಮ ಎಂದ ಪ್ರಿಯಾಂಕ್ ಖರ್ಗೆ

0

ಕಲಬುರಗಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಬ್ಬಂದಿ ಮೇಲೆ ಕೈದಿಗಳು ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಹಲ್ಲೆಗೆ ನಿಖರ ಕಾರಣವೇನು ಎಂಬುದನ್ನು ತಿಳಿದುಕೊಂಡ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೈಲಿನಲ್ಲಿರುವ ಕೈದಿಗಳಿಗೆ ಕಾಲಕಾಲಕ್ಕೆ ಕೌನ್ಸೆಲಿಂಗ್ ನೀಡಲಾಗುತ್ತಿದೆ. ಕೆಲ ಸಂದರ್ಭಗಳಲ್ಲಿ ಕೈದಿಗಳ ಮಾನಸಿಕ ಸ್ಥಿತಿ ಸಹಜವಾಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಜಗಳ, ಹಲ್ಲೆಯಂತಹ ಘಟನೆಗಳು ನಡೆಯುವ ಸಾಧ್ಯತೆಯಿದೆ ಎಂದು ಹೇಳಿದರು.

ಕೈದಿಗಳು ಕೇಳಿದ್ದನ್ನು ನೀಡದಿದ್ದಾಗಲೂ ಕೆಲವರು ಈ ರೀತಿಯಾಗಿ ವರ್ತಿಸುವ ಸಾಧ್ಯತೆ ಇದೆ. ಹೀಗಾಗಿ ಜೈಲು ಇಲಾಖೆಯ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಸಂಖ್ಯೆ ಹೆಚ್ಚಾಗಿದೆ. ಜೈಲು ಸಿಬ್ಬಂದಿ ಹಾಗೂ ಕೈದಿಗಳ ನಡುವೆ ಉಂಟಾಗುವ ಇಂತಹ ಘಟನೆಗಳನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಇದೇ ವೇಳೆ ಬಿಜೆಪಿ ನಾಯಕ ಬಿ. ಶ್ರೀರಾಮುಲು ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, “ನಾನು ಜೈಲಿಗೆ ಹೋಗುತ್ತೇನೆ ಎಂದು ರಾಮುಲು ಅವರು ಹೇಳುತ್ತಿದ್ದಾರೆ. ಜೈಲಿಗೆ ಹೋಗಿ ಬಂದವರನ್ನು ನಮ್ಮನ್ನು ಜೈಲಿಗೆ ಕಳುಹಿಸುತ್ತಾರಾ?” ಎಂದು ಪ್ರಶ್ನಿಸಿದರು. ರಾಮುಲು ಅವರು ಮೊದಲು ಕನ್ನಡವನ್ನು ಸರಿಯಾಗಿ ಮಾತನಾಡುವುದನ್ನು ಕಲಿಯಲಿ ಎಂದು ವ್ಯಂಗ್ಯವಾಡಿದರು.

ಬರ ಘೋಷಣೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳ ಪ್ರಕಾರವೇ ಬರ ಘೋಷಣೆ ಮಾಡಬೇಕು. ಆದರೆ ಇದನ್ನು ಬಿಟ್ಟು ಕಲಬುರಗಿಯಲ್ಲಿ ಬಿಜೆಪಿ ಪ್ರತಿಭಟನೆಯ ಹೆಸರಿನಲ್ಲಿ ಗುಂಡಾಗಿರಿ ಮಾಡುತ್ತಿದೆ ಎಂದು ಆರೋಪಿಸಿದರು.