ಹಾಸನ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ದೇವೇಗೌಡರ ಪಾರ್ಥಿವ ಶರೀರ ಹೊಳೆನರಸೀಪುರದ ಎಚ್.ಡಿ. ರೇವಣ್ಣ ಅವರ ನಿವಾಸಕ್ಕೆ ಆಗಮಿಸಿದೆ.
ಇಂದು ಮಧ್ಯಾಹ್ನ 2 ಗಂಟೆ ಬಳಿಕ ಹರದನಹಳ್ಳಿ ಬಳಿಯ ಬೆಟ್ಟದ ರಂಗನಾಥಸ್ವಾಮಿ ದೇವಾಲಯದ ತಪ್ಪಲಿನಲ್ಲಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ನೆರವೇರಲಿದೆ.
ದೇವೇಗೌಡರ ಕುಟುಂಬದ ಯಜಮಾನಿಯಾಗಿದ್ದ ಚೆನ್ನಮ್ಮ ಅವರು ಸರಳತೆ, ಕರುಣೆ ಹಾಗೂ ಆತ್ಮೀಯತೆಗೆ ಹೆಸರಾಗಿದ್ದರು. ರಾಜಕೀಯ ಕುಟುಂಬದ ಸೊಸೆ ಆಗಿದ್ದರೂ ಹಳ್ಳಿಯ ಸೊಗಡನ್ನು ಉಳಿಸಿಕೊಂಡು ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದರು. ಮನೆ ಬಾಗಿಲಿಗೆ ಬಂದ ಯಾರನ್ನೂ ಬರಿಗೈಯಲ್ಲಿ ಕಳುಹಿಸದೆ, ಊಟ ಮಾಡಿಸದೆ ಕಳುಹಿಸದ ಅನ್ನಪೂರ್ಣೆಯಾಗಿ ಗುರುತಿಸಿಕೊಂಡಿದ್ದರು.
ಚೆನ್ನಮ್ಮ ಅವರ ಅಂತಿಮ ಸಂಸ್ಕಾರಕ್ಕಾಗಿ ಬೆಟ್ಟದ ರಂಗನಾಥಸ್ವಾಮಿ ತಪ್ಪಲಿನಲ್ಲಿ ಬೃಹತ್ ಜರ್ಮನ್ ಟೆಂಟ್ ನಿರ್ಮಿಸಲಾಗಿದ್ದು, ಸುಮಾರು 30 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 2 ಗಂಟೆ ನಂತರ ಬೆಂಗಳೂರಿನ ಜೆ.ಪಿ ನಗರದ ಕನಕಗಿರಿ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಕಣ್ಣನ್ ಸ್ವಾಮಿ ನೇತೃತ್ವದಲ್ಲಿ ವಿಧಿವಿಧಾನಗಳು ನಡೆಯಲಿವೆ. ಸಂಜೆ 4.30ರೊಳಗೆ ಅಂತ್ಯಕ್ರಿಯೆ ಪೂರ್ಣಗೊಳಿಸಲು ಸಿದ್ಧತೆ ಮಾಡಲಾಗಿದೆ.
ಹರದನಹಳ್ಳಿ ಸಮೀಪದ ಕ್ಯಾತನಹಳ್ಳಿ ಗ್ರಾಮದ ಬೆಟ್ಟದ ರಂಗನಾಥಸ್ವಾಮಿ ತಪ್ಪಲಿನ ಜಾಗವನ್ನು ಕುಟುಂಬದ ಸದಸ್ಯರು ಆಯ್ಕೆ ಮಾಡಿದ್ದಾರೆ. ಈ ಪ್ರದೇಶದೊಂದಿಗೆ ಚೆನ್ನಮ್ಮ ಅವರಿಗೆ ದೀರ್ಘಕಾಲದ ನಂಟು ಇತ್ತು. ಹಳೆಕೋಟೆ, ಮುತ್ತಿಗೆ ಹಿರೀಹಳ್ಳಿ, ಹರದನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರೊಂದಿಗೆ ಅವರು ಆತ್ಮೀಯ ಸಂಬಂಧ ಹೊಂದಿದ್ದರು.
ಚೆನ್ನಮ್ಮ ಅವರ ಅಳಿಯ ಹಾಗೂ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರು, ಈ ಸ್ಥಳದಲ್ಲಿ ಸ್ಮಾರಕ ನಿರ್ಮಿಸುವ ಚಿಂತನೆ ಇದೆ ಎಂದು ತಿಳಿಸಿದ್ದಾರೆ.
ಮುತ್ತಿಗೆಹಿರಿಹಳ್ಳಿಯಲ್ಲಿ ಮುತ್ತೈದೆ ಶಾಸ್ತ್ರ:
ಚೆನ್ನಮ್ಮ ಅವರ ಪಾರ್ಥಿವ ಶರೀರವನ್ನು ಬೆಳಗಿನ ಜಾವ 4.45ರ ಸುಮಾರಿಗೆ ಹೊಳೆನರಸೀಪುರದ ರೇವಣ್ಣ ನಿವಾಸಕ್ಕೆ ತರಲಾಯಿತು. ಅದಕ್ಕೂ ಮೊದಲು ಅವರ ಹುಟ್ಟೂರು ಮುತ್ತಿಗೆಹಿರಿಹಳ್ಳಿಗೆ ಕೊಂಡೊಯ್ಯಲಾಗಿದ್ದು, ಗ್ರಾಮಸ್ಥರು ಮುತ್ತೈದೆ ಮಡಿಲು ತುಂಬಿಸುವ ಶಾಸ್ತ್ರ ನೆರವೇರಿಸಿದರು.
ನಂತರ ರೇವಣ್ಣ ಅವರ ನಿವಾಸಕ್ಕೆ ಪಾರ್ಥಿವ ಶರೀರ ಆಗಮಿಸಿದ ವೇಳೆ ಸೊಸೆ ಭವಾನಿ ರೇವಣ್ಣ ಆರತಿ ಬೆಳಗಿದರು. ಕುಟುಂಬಸ್ಥರು ಪೂಜೆ ಸಲ್ಲಿಸಿದ ಬಳಿಕ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.


