ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶ್ರಾವಣ ಮಾಸದ ಸಂದರ್ಭದಲ್ಲಿ ಕಳೆದ ಎರಡು ದಶಕಗಳಿಂದ ಧಾರ್ಮಿಕ, ವೈಚಾರಿಕ ಹಾಗೂ ಸತ್ಸಂಗ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿರುವ ಅಕ್ಕನ ಬಳಗದ ಕಾರ್ಯ ಶ್ಲಾಘನೀಯ ಎಂದು ಹಿರಿಯ ಸಾಹಿತಿ ಲಲಿತಕ್ಕ ಕೆರಿಮನಿ ಹೇಳಿದರು.
ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಬುಧವಾರ ನಡೆದ ‘ಶ್ರಾವಣ ಸಂಜೆ’ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಅಕ್ಕನ ಬಳಗದ ಸಾಧಕಿ ದಿ. ಪ್ರೇಮಕ್ಕ ಬಿಂಕದಕಟ್ಟಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಕಳೆದ ೨೦ ವರ್ಷಗಳಿಂದ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಶರಣರು, ಸಾಹಿತಿಗಳು, ಸಾಮಾಜಿಕ ಚಿಂತಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ವಿಷಯಗಳ ಕುರಿತು ವಿಚಾರ ಮಂಡನೆಯಾಗುತ್ತಿದ್ದು, ‘ಶ್ರಾವಣ ಸಂಜೆ’ ಈ ಭಾಗದ ವಿಶಿಷ್ಟ ಕಾರ್ಯಕ್ರಮವಾಗಿ ರೂಪುಗೊಂಡಿದೆ ಎಂದರು.
ಈ ಬಾರಿ ‘ಶ್ರಾವಣ ಸಂಜೆ’ಯ ೨೦ನೇ ವರ್ಷದ ಸವಿನೆನಪಿಗಾಗಿ ಲಲಿತಕ್ಕ ಕೆರಿಮನಿ ಸಂಪಾದಕತ್ವದ ‘ಸಮಾನತೆ ಸಾರಿದ ವಚನಕಾರ್ತಿಯರು’ ಕೃತಿ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದರು.
ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ನಿರ್ಮಲಾ ಅರಳಿ, ನಿವೃತ್ತ ಶಿಕ್ಷಕ ಪೂರ್ಣಾಜಿ ಖರಾಟೆ ಹಾಗೂ ಎಲ್.ಎಸ್. ಅರಳಹಳ್ಳಿ ಮಾತನಾಡಿ, ಪ್ರತಿವರ್ಷದಂತೆ ಈ ಬಾರಿಯೂ ಹೊಸ ವಿಚಾರಗಳೊಂದಿಗೆ ಉಪನ್ಯಾಸ ಹಾಗೂ ವೈಚಾರಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಗುರುವಾರದಿಂದ ‘ಶ್ರಾವಣ ಸಂಜೆ’ ಆರಂಭ
ಗುರುವಾರ ಸಂಜೆ ೬ ಗಂಟೆಗೆ ಹೂವಿನ ಶಿಗ್ಲಿ ವೀರಕ್ತಮಠದ ಚನ್ನವೀರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಆರಂಭವಾಗಲಿದೆ. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಯೋಜನಾ ನಿರ್ದೇಶಕ ಪ್ರೊ. ಎನ್.ಎಂ. ತಳವಾರ ಉದ್ಘಾಟಿಸಲಿದ್ದು, ಎಸ್.ಪಿ. ಬಳಿಗಾರ ಅಧ್ಯಕ್ಷತೆ ವಹಿಸುವರು. ಚಂದ್ರಣ್ಣ ಮಹಾಜನಶೆಟ್ಟರ ಉಪನ್ಯಾಸ ನೀಡಲಿದ್ದಾರೆ. ಪ್ರಕಾಶ ಲಿಂಬಯ್ಯಸ್ವಾಮಿಮಠ, ಎಲ್.ಎಸ್. ಅರಳಹಳ್ಳಿ ಹಾಗೂ ನಿರ್ಮಲಾ ಅರಳಿ ಅತಿಥಿಗಳಾಗಿ ಭಾಗವಹಿಸುವರು.
ಒಂದು ತಿಂಗಳ ಕಾಲ ಪ್ರತಿದಿನ ಸಂಜೆ ೬ ಗಂಟೆಗೆ ‘ಶ್ರಾವಣ ಸಂಜೆ’ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಸಭೆಯಲ್ಲಿ ಕಾರ್ಯದರ್ಶಿ ರತ್ನಾ ಕರ್ಕಿ, ಶಕುಂತಲಾ ವಡಕಣ್ಣವರ, ನೀಲಕ್ಕ ಬೂದಿಹಾಳ, ಪಾರ್ವತಿ ಕಳ್ಳಿಮಠ, ಕುಸುಮಾ ಮಲ್ಲಾಡದ, ಕಾಂಚನಮಾಲಾ ಹಸರಡ್ಡಿ, ನಂದಿನಿ ಮಾಳವಾಡ, ಶೋಭಾ ಗಾಂಜಿ, ಮಹಾನಂದಾ ಕೊಣ್ಣೂರು, ನೀಲಾ ಕುಂಬಿ, ಪ್ರತಿಮಾ ಮಹಾಜನಶೆಟ್ಟರ, ಗಂಗಾಧರ ಅರಳಿ, ಎಂ.ಕೆ. ಕಳ್ಳಿಮಠ, ಜೆ.ಎಸ್. ರಾಮಶೆಟ್ರ, ಬಸವರಾಜ ಸಂಗಪ್ಪಶೆಟ್ಟರ, ಎನ್.ಆರ್. ಸಾತಪುತೆ, ವೆಂಕಟೇಶ ಮಾತಾಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

