ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಬಹುದಿನಗಳ ನಿರೀಕ್ಷೆ, ನಿರಂತರ ಹೋರಾಟ ಹಾಗೂ ಜನರ ಒಗ್ಗಟ್ಟಿನ ಫಲವಾಗಿ ಹೊಸಪೇಟೆ–ಅರಸೀಕೆರೆ ನಡುವೆ ಸಂಚರಿಸುವ ಡೆಮು ರೈಲು ಹಗರಿಬೊಮ್ಮನಹಳ್ಳಿ ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಸಂಭ್ರಮ ಮನೆ ಮಾಡಿತು. ಸಾರ್ವಜನಿಕರು, ರೈಲ್ವೆ ಪ್ರಯಾಣಿಕರು, ಹೋರಾಟಗಾರರು ಹಾಗೂ ವಿವಿಧ ಸಂಘ–ಸಂಸ್ಥೆಗಳ ಮುಖಂಡರು ರೈಲಿಗೆ ಭವ್ಯ ಸ್ವಾಗತ ಕೋರಿದರು.
ಬೆಳಿಗ್ಗೆ ಸುಮಾರು 7.30ಕ್ಕೆ ರೈಲು ಹಗರಿಬೊಮ್ಮನಹಳ್ಳಿ ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ನಿಲ್ದಾಣದಲ್ಲಿ ಹರ್ಷೋದ್ಗಾರ ಮೊಳಗಿತು. ಬಹುನಿರೀಕ್ಷಿತ ರೈಲು ಸೇವೆ ಆರಂಭವಾಗಿರುವುದು ಈ ಭಾಗದ ಜನತೆಗೆ ಹೊಸ ಸಂಚಾರದ ಆಶಾಭಾವನೆ ಮೂಡಿಸಿದೆ.
ನಂದಿಪುರದ ಪರಮಪೂಜ್ಯ ಡಾ. ಮಹೇಶ್ವರ ಮಹಾಸ್ವಾಮಿಗಳು ಪುಷ್ಪನಮನ ಸಲ್ಲಿಸುವ ಮೂಲಕ ನೂತನ ರೈಲು ಸೇವೆಯನ್ನು ಸ್ವಾಗತಿಸಿದರು. ಇಂದಿನ ರೈಲ್ವೆ ಸೌಲಭ್ಯದ ಹಿಂದೆ ಅನೇಕ ಜನರ ಶ್ರಮ, ಹೋರಾಟ ಹಾಗೂ ಸಹಕಾರ ಅಡಗಿದೆ ಎಂದು ಅವರು ಸ್ಮರಿಸಿದರು.
ರೈಲ್ವೆ ಸಂಪರ್ಕಕ್ಕಾಗಿ ನಡೆದ ಹೋರಾಟದ ಪ್ರತಿಯೊಂದು ಹಂತದಲ್ಲೂ ಸಾರ್ವಜನಿಕರು ತಮ್ಮ ಸಮಯ, ಶ್ರಮ ಹಾಗೂ ಸಹಕಾರ ನೀಡಿದ್ದಾರೆ. ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಗುರು–ಹಿರಿಯರು, ವಿವಿಧ ಸಂಘ–ಸಂಸ್ಥೆಗಳು, ಯುವಕರು ಹಾಗೂ ಪತ್ರಕರ್ತರು ಮತ್ತು ಮಾಧ್ಯಮ ಮಿತ್ರರ ಸಹಕಾರದಿಂದಲೇ ಈ ಯಶಸ್ಸು ಸಾಧ್ಯವಾಗಿದೆ ಎಂದು ತಿಳಿಸಿದರು.
ರೈಲ್ವೆ ಹೋರಾಟ ಸಮಿತಿಯ ಸಂಚಾಲಕ ಕೊಟ್ರೇಶ್ ಶೆಟ್ಟರ್ ಮಾತನಾಡಿ, ಹೊಸಪೇಟೆ–ಅರಸೀಕೆರೆ ಡೆಮು ರೈಲು ಆರಂಭವಾಗಿರುವುದು ಈ ಭಾಗದ ನಾಗರಿಕರಿಗೆ ಅತ್ಯಂತ ಅನುಕೂಲಕರವಾಗಿದೆ ಎಂದರು.
ತುಮಕೂರು ಹಾಗೂ ಬೆಂಗಳೂರಿಗೆ ನೇರ ರೈಲು ಸಂಪರ್ಕ ಕಲ್ಪಿಸುವಂತೆ ಬಹುಕಾಲದಿಂದ ಬೇಡಿಕೆ ಸಲ್ಲಿಸಲಾಗುತ್ತಿತ್ತು. ಸದ್ಯ ಅರಸೀಕೆರೆವರೆಗೆ ಸಂಪರ್ಕ ದೊರೆತಿದ್ದು, ಮುಂದಿನ ಹಂತದಲ್ಲಿ ಮೈಸೂರು ಸೇರಿದಂತೆ ಇನ್ನಷ್ಟು ಪ್ರಮುಖ ನಗರಗಳಿಗೆ ನೇರ ರೈಲು ಸಂಪರ್ಕ ಕಲ್ಪಿಸುವಂತೆ ಹೋರಾಟ ಮುಂದುವರಿಸಲಾಗುವುದು ಎಂದು ಹೇಳಿದರು.
ಸತ್ಸಂಗ ಸಮಿತಿಯ ಹಿರಿಯ ನಾಗರಿಕ ಜಿ. ಲಕ್ಷ್ಮೀಪತಿ ಮಾತನಾಡಿ, ಇಂದಿನ ರೈಲ್ವೆ ಸೌಲಭ್ಯಗಳ ಹಿಂದೆ ರೈಲ್ವೆ ಹೋರಾಟ ಸಮಿತಿಯ ನಿರಂತರ ಶ್ರಮವಿದೆ. ಅಧಿಕಾರಿಗಳನ್ನು ಸಂಪರ್ಕಿಸಿ ನಿರಂತರವಾಗಿ ಬೇಡಿಕೆಗಳನ್ನು ಮುಂದಿಟ್ಟ ಪರಿಣಾಮ ಹಲವು ರೈಲ್ವೆ ಸೌಲಭ್ಯಗಳು ದೊರೆತಿವೆ ಎಂದು ತಿಳಿಸಿದರು.
ವಿಜಯನಗರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾದಾಮಿ ಮೃತ್ಯುಂಜಯ ಮಾತನಾಡಿ, ಹೊಸಪೇಟೆ–ಅರಸೀಕೆರೆ ರೈಲು ಸೇವೆಯಿಂದ ಈ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಮೈಸೂರು ಸೇರಿದಂತೆ ಪ್ರಮುಖ ನಗರಗಳಿಗೆ ನೇರ ರೈಲು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕು ಎಂದು ಒತ್ತಾಯಿಸಿದರು.
ಡಿಶ್ ಮಂಜುನಾಥ್ ಮಾತನಾಡಿ, ಬಹುದಿನಗಳ ಕನಸು ಇಂದು ನನಸಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಮನಸಿ ದೇವರಾಜ್ ರೈಲು ಸೇವೆ ಉಳಿಸಿಕೊಳ್ಳಲು ಈ ಹಿಂದೆ ನಡೆದ ಹೋರಾಟಗಳನ್ನು ಸ್ಮರಿಸಿದರು.
ನ್ಯಾರೋ ಗೇಜ್ ರೈಲು ಸೇವೆ ರದ್ದಾದ ಸಂದರ್ಭದಲ್ಲಿ ರೈಲು ಮಾರ್ಗ ಉಳಿಸುವ ವಿಚಾರವಾಗಿ ಹೋರಾಟ ನಡೆದಿತ್ತು. ನಂದಿಪುರದ ಪೂಜ್ಯ ಶ್ರೀರಂತಪ್ಪಜ್ಜ ಸ್ವಾಮೀಜಿ ಸೇರಿದಂತೆ ಅನೇಕ ನಾಗರಿಕರು ಹೋರಾಟಕ್ಕೆ ಧುಮುಕಿದ್ದರು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ವಕೀಲ ಸತ್ಯನಾರಾಯಣ, ರೈಲ್ವೆ ಹೋರಾಟಗಾರರ ಸಮಿತಿಯ ಸದಸ್ಯರು, ಆಟೋ ಸಂಘದ ಕೈಲಾಸ್ ಹಾಗೂ ಸತೀಶ್ ಪಾಟೀಲ್ ಸೇರಿದಂತೆ ಹಲವರು ಮಾತನಾಡಿ, ಮುಂದಿನ ದಿನಗಳಲ್ಲಿ ಧರ್ಮಸ್ಥಳ, ಶಿವಮೊಗ್ಗ, ಮೈಸೂರು ಸೇರಿದಂತೆ ಪ್ರಮುಖ ಸ್ಥಳಗಳಿಗೆ ರೈಲು ಸಂಪರ್ಕ ವಿಸ್ತರಿಸಿದರೆ ಸಾರ್ವಜನಿಕರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ವೈ. ಮಲ್ಲಿಕಾರ್ಜುನ್, ಕೆ. ಮೈಲಾರಪ್ಪ, ಆಡಿಟರ್ ನಟರಾಜ್, ಅಕ್ಕಿ ಶಿವಣ್ಣ, ನೀಲಕಂಠಪ್ಪ, ವಿರೂಪಾಕ್ಷಪ್ಪ, ಹೊನ್ನೂರಪ್ಪ, ಚಿನ್ನಪ್ಪ ಮಲ್ಕಿ ಒಡೆಯರ್ ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ರೈಲ್ವೆ ಹೋರಾಟ ಸಮಿತಿಯ ಸದಸ್ಯರು, ಪತ್ರಕರ್ತರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಡೆಮು ರೈಲಿನಲ್ಲಿ ಪ್ರಯಾಣಿಸಿದರೆ ಈ ಸೇವೆ ಮತ್ತಷ್ಟು ಬಲಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಡಬಲ್ ಲೈನ್, ವಿದ್ಯುದೀಕರಣ ಹಾಗೂ ಕಡಿಮೆ ಸಮಯದಲ್ಲಿ ವೇಗವಾಗಿ ಪ್ರಯಾಣಿಸುವಂತಹ ರೈಲು ಸೌಲಭ್ಯಗಳು ಈ ಭಾಗಕ್ಕೆ ದೊರೆಯಬೇಕು.
— ಡಾ. ಮಹೇಶ್ವರ ಮಹಾಸ್ವಾಮಿಗಳು