ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ ರಾಜ್ಯಮಟ್ಟದ ಖಾಲಿ ಗಾಡಾ ಓಟ ಸ್ಪರ್ಧೆ ಭರ್ಜರಿಯಾಗಿ ನಡೆಯಿತು. ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ಪ್ರತಿಬಿಂಬಿಸಿದ ಈ ಕಾರ್ಯಕ್ರಮ ರೈತ ಬಾಂಧವರ ಸ್ವಯಂಪ್ರೇರಿತ ಪ್ರಯತ್ನದಿಂದ ಗಮನ ಸೆಳೆಯಿತು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ ಎತ್ತುಗಳ ಜೋಡಿಗಳು ಸ್ಪರ್ಧೆಗೆ ವಿಶೇಷ ಮೆರುಗು ತಂದವು. ಅಖಾಡಕ್ಕೆ ಎಂಟ್ರಿ ಕೊಟ್ಟ ಎತ್ತುಗಳ ಗಂಭೀರ ನಡೆ ಹಾಗೂ ಶರವೇಗದ ಓಟ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು. ಕಟ್ಟು ಮಸ್ತಾಗಿ ಬೆಳೆಸಿದ ಎತ್ತುಗಳು ಧೂಳೆಬ್ಬಿಸುತ್ತಾ ಓಡಿದ ದೃಶ್ಯಗಳು ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿತು.

ಸ್ಪರ್ಧೆಯಲ್ಲಿ ಒಂದು ನಿಮಿಷದಲ್ಲಿ ಹೆಚ್ಚು ದೂರ ಓಡಿದ ಎತ್ತುಗಳ ಜೋಡಿಯನ್ನು ವಿಜೇತರಾಗಿ ಘೋಷಿಸಲಾಯಿತು. ಪ್ರಥಮ ಬಹುಮಾನ ₹51 ಸಾವಿರ, ದ್ವಿತೀಯ ₹41 ಸಾವಿರ ಹಾಗೂ ತೃತೀಯ ₹31 ಸಾವಿರ ರೂಪಾಯಿ ನೀಡಲಾಗಿದ್ದು, ಒಟ್ಟು 9 ಬಹುಮಾನಗಳನ್ನು ವಿತರಿಸಲಾಯಿತು.

ಎತ್ತುಗಳ ಮಾಲೀಕರು ವಿಶೇಷ ಆಹಾರಗಳಾದ ಹುರುಳಿ, ಜೋಳದ ನುಚ್ಚು, ಹಿಂಡಿ ನೀಡಿ ಎತ್ತುಗಳನ್ನು ತಯಾರಿಸುತ್ತಾರೆ. ಕೃಷಿಯ ಜೊತೆಗೆ ಈ ಕ್ರೀಡೆಗೂ ಹೆಚ್ಚಿನ ಸಮಯ ಮೀಸಲಿಡುವ ರೈತರ ಅಭಿರುಚಿ ಇಲ್ಲಿ ಸ್ಪಷ್ಟವಾಗಿ ಗೋಚರಿಸಿತು.

ಸಾವಿರಾರು ಜನರು ಸ್ಪರ್ಧೆ ವೀಕ್ಷಿಸಿ ಕೇಕೆ, ಸಿಳ್ಳೆ ಹಾಗೂ ಚಪ್ಪಾಳೆಗಳಿಂದ ಎತ್ತುಗಳಿಗೆ ಹುಮ್ಮಸ್ಸು ತುಂಬಿದರು. ಗ್ರಾಮೀಣ ಕ್ರೀಡೆಗಳ ಜೀವಂತಿಕೆ ಮತ್ತು ಜನರ ಒಲವು ಈ ಕಾರ್ಯಕ್ರಮದಲ್ಲಿ ಸ್ಪಷ್ಟವಾಗಿ ಕಾಣಿಸಿತು.


