Home Blog

ಏಕರೂಪ ನಾಗರಿಕ ಸಂಹಿತೆ ಜಾರಿ ಆದ್ರೆ, ನುಸುಳುಕೋರರು 4 ಬಾರಿ ಮದುವೆಯಾಗಲು ಸಾಧ್ಯವಾಗಲ್ಲ- ಅಮಿತ್ ಶಾ!

0

ದಿಸ್ಪುರ:- ಏಕರೂಪ ನಾಗರಿಕ ಸಂಹಿತೆ ಜಾರಿಯಿಂದ ನುಸುಳುಕೋರರು 4 ಬಾರಿ ಮದುವೆಯಾಗಲು ಸಾಧ್ಯವಾಗಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಅಸ್ಸಾಂನ ಗೋಲ್‌ಪಾರ ಜಿಲ್ಲೆಯ ದುಧ್‌ನೋಯ್‌ನಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುತ್ತೇವೆ. ಇದರಿಂದ ನುಸುಳುಕೋರರು 4 ಬಾರಿ ಮದುವೆಯಾಗಲು ಸಾಧ್ಯವಾಗಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಬುಡಕಟ್ಟು ಅಭಿವೃದ್ಧಿಗಾಗಿ ಸಮಗ್ರ ಮಾರ್ಗಸೂಚಿಯನ್ನು ಸಿದ್ಧಪಡಿಸಿದ್ದಾರೆ. ಇದರ ಸಂಪೂರ್ಣ ಅನುಷ್ಠಾನವು ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದರ ಮೇಲೆ ಅವಲಂಬಿತವಾಗಿದೆ ಎಂದಿದ್ದಾರೆ.

ಪ್ರಧಾನಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಬುಡಕಟ್ಟು ಜನಾಂಗದವರ ಅಭಿವೃದ್ಧಿಗಾಗಿ ಒಂದು ಮಾರ್ಗಸೂಚಿಯನ್ನು ಸಿದ್ಧಪಡಿಸಿದ್ದಾರೆ. ಅದನ್ನು ಮುಂದಕ್ಕೆ ತೆಗೆದುಕೊಂಡು ಹೋಗಿ ಜಾರಿಗೆ ತರಲು ಬಿಜೆಪಿಗೆ ಮತ ಹಾಕಿ ಎಂದು ಜನತೆಗೆ ಮನವಿ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಜಿಮ್ ಟ್ರೈನರ್‌ ನಿಂದ ಲವ್ ಜಿಹಾದ್ ಆರೋಪ: ಸಚಿವ ಜಿ. ಪರಮೇಶ್ವರ್ ಹೇಳಿದ್ದೇನು?

ದಾವಣಗರೆ: ಹುಬ್ಬಳ್ಳಿಯಲ್ಲಿ ಜಿಮ್‌ ಟ್ರೈನರ್‌ ವಿರುದ್ದ ಕೇಳಿಬಂದಿರುವ ಲವ್ ಜಿಹಾದ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಜಿಮ್ ಟ್ರೇನರ್ ಸಮೀರ್‌ ವಿರುದ್ಧ ಕೇಳಿ ಬಂದಿರುವ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ. ಪ್ರಕರಣದ ಬಗ್ಗೆ ಎಲ್ಲಾ ಮಾಹಿತಿಯನ್ನು ನೀಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಯಾರೇ ಆಗಿದ್ದರೂ ಕೂಡ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತೇವೆ.

ಈಗಾಗಲೇ ಯುವತಿಯನ್ನು ರಕ್ಷಣೆ ಮಾಡಲಾಗಿದೆ. ಜಿಮ್ ಟ್ರೈನರ್ ಮೇಲೆ ಕ್ರಮ ತೆಗೆದುಕೊಳ್ಳಲು ಹೇಳಿದ್ದೇನೆ. ಇಂತಹ ಕೇಸ್‌ಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಮಧ್ಯಪ್ರಾಚ್ಯ ಯುದ್ಧದ ಮಧ್ಯೆ ಭಾರತಕ್ಕೆ ಹೆಚ್ಚು ತೈಲ, ಅನಿಲ ಒದಗಿಸಲು ಸಿದ್ಧ ಎಂದ ರಷ್ಯಾ!

0

ಮಾಸ್ಕೋ/ದೆಹಲಿ: ಹಾರ್ಮುಜ್‌ ಜಲಸಂಧಿಯ ಬಿಕ್ಕಟ್ಟಿನಿಂದ ಇಂಧನ ಪೂರೈಕೆ ತೀವ್ರ ಒತ್ತಡಕ್ಕೆ ಸಿಲುಕಿರುವ ಹಿನ್ನೆಲೆ, ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸಿದೆ.

ಈಗಾಗಲೇ ತೈಲ ಪೂರೈಕೆಯಲ್ಲಿ ವ್ಯತ್ಯಯ ಇರದಂತೆ ನೋಡಿಕೊಳ್ಳಲು ಸುಮಾರು 6 ಕೋಟಿ ಬ್ಯಾರಲ್ ಕಚ್ಚಾ ತೈಲವನ್ನು ಭಾರತ ರಷ್ಯಾದಿಂದ ಖರೀದಿಸಿದೆ.

ರಷ್ಯಾ ಸರ್ಕಾರ ಭಾರತಕ್ಕೆ ಬೇಕಾದ ತೈಲ ಮತ್ತು ಎಲ್‌ಎನ್‌ಜಿ (LNG) ಪೂರೈಕೆಗೆ ಉತ್ಪಾದನೆ ಹೆಚ್ಚಿಸಲು ಸಿದ್ಧ ಎಂದು ಭರವಸೆ ನೀಡಿದೆ. ಮಧ್ಯಪ್ರಾಚ್ಯ ಯುದ್ಧದ ಪರಿಣಾಮದಿಂದ ಇಂಧನ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವುದರಿಂದ, ಭಾರತಕ್ಕೆ ಅಗತ್ಯವಿರುವ ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ ಪೂರೈಕೆಯನ್ನು ಹೆಚ್ಚಿಸಬಹುದು ಎಂದು ಮಾಸ್ಕೋ ತಿಳಿಸಿದೆ.

ಭಾರತಕ್ಕೆ ಅಧಿಕೃತ ಭೇಟಿ ನೀಡಿದ ರಷ್ಯಾದ ಉಪಾಧ್ಯಕ್ಷ ಡೆನಿಸ್ ಮಾಂಟುರೊವ್ ಅವರು ಮಾತನಾಡಿ, “ಭಾರತದಿಂದ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ರಷ್ಯಾದ ಕಂಪನಿಗಳು ಇಂಧನ ರಫ್ತುಗಳನ್ನು ಸ್ಥಿರವಾಗಿ ಹೆಚ್ಚಿಸುವ ಸಾಮರ್ಥ್ಯ ಹೊಂದಿವೆ.” 2025 ರ ಅಂತ್ಯದ ವೇಳೆಗೆ ರಷ್ಯಾ ಭಾರತಕ್ಕೆ ಖನಿಜ ರಸಗೊಬ್ಬರ ಪೂರೈಕೆಯನ್ನು ಶೇ.40ರಷ್ಟು ಹೆಚ್ಚಿಸಿವೆ, ಹಾಗೂ ಭಾರತದ ಅಗತ್ಯವನ್ನು ಪೂರೈಸಲು ಮಾಸ್ಕೋ ಸಿದ್ಧವಾಗಿದೆ ಎಂದು ಮಾಂಟುರೊವ್ ತಿಳಿಸಿದ್ದಾರೆ.

 

ಶಿರಸಿ ಬಳಿ ಎರಡು ಬಸ್‌ಗಳ ನಡುವೆ ಭೀಕರ ಅಪಘಾತ: ಹಲವರಿಗೆ ಗಾಯ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಕೊಳಗಿಬೀಸ್ ಬಳಿ ಎರಡು ಬಸ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಭಟ್ಕಳದಿಂದ ಬಾಗಲಕೋಟೆಗೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಹಾಗೂ ಶಿರಸಿಯಿಂದ ಕುಮಟಾ ಕಡೆ ಹೋಗುತ್ತಿದ್ದ ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ.

ಅಪಘಾತದಲ್ಲಿ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಇಬ್ಬರೂ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಹಲವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ಶಿರಸಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ.

ಕಾರ್ಯಕ್ರಮದಲ್ಲೇ ಕುಸಿದು ಬಿದ್ದು ಅಸ್ವಸ್ಥ: ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ ಆಸ್ಪತ್ರೆಗೆ ದಾಖಲು

ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಬುಧವಾರ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಸ್ವಸ್ಥರಾಗಿದ್ದಾರೆ.

ಕಾರ್ಯಕ್ರಮದ ವೇಳೆ ಮಾತನಾಡುತ್ತಿದ್ದಾಗ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಧ್ಯ ವೈದ್ಯರ ಮಾಹಿತಿ ಪ್ರಕಾರ, ದೇಹದಲ್ಲಿ ಶುಗರ್ ಮಟ್ಟ ಕಡಿಮೆಯಾದ ಕಾರಣ ಅವರು ಅಸ್ವಸ್ಥರಾಗಿದ್ದರು, ಆದರೆ ಈಗ ಆರೋಗ್ಯ ಸ್ಥಿರವಾಗಿದೆ ಎಂದಿದ್ದಾರೆ.

ಸ್ಪೀಕರ್ ಯುಟಿ ಖಾದರ್ ಹೇಳಿದ್ದೇನು?

ಪಿಜಿಆರ್ ಸಿಂಧ್ಯಾಗೆ ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ಅಭಿನಂದನಾ ಕಾರ್ಯಕ್ರಮವಿತ್ತು, ಈ ವೇಳೆ ಮಾತನಾಡುತ್ತಿದ್ದಾಗ ನಿವೃತ್ತ ಲೋಕಾಯುಕ್ತರಾದ ಸಂತೋಷ್ ಹೆಗ್ಡೆ ಅವರಿಗೆ ವಾಮಿಟ್ ಆಯ್ತು, ಮನೆಗೆ ಹೋಗಬೇಕು ಅಂತಾ ಸ್ಟೇಜ್​ಯಿಂದ ಹೊರಟಾಗ ಕುಸಿದು ಬಿದ್ದರು.

ಈ ವೇಳೆ ಸ್ಥಳದಲ್ಲಿ ಆಂಬುಲೆನ್ಸ್ ಇರಲಿಲ್ಲ, ನನ್ನ ವಾಹನದಲ್ಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯ ಆಸ್ಪತ್ರೆಯಲ್ಲಿ ಸಂತೋಷ್​ ಹೆಗ್ಡೆ ಅವರು ಆರಾಮಾಗಿ ಇದ್ದಾರೆ. ಸಂತೋಷ್ ಹೆಗ್ಡೆ ಕುಟುಂಬಸ್ಥರು ಆಸ್ಪತ್ರೆಗೆ ಬಂದಿದ್ದಾರೆ. ಯಾವುದೇ ತೊಂದರೆಯಿಲ್ಲ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು.

ಚೀನಾ ಕಡೆ ತಿರುಗಿದ ಭಾರತಕ್ಕೆ ಬರುತ್ತಿದ್ದ ಇರಾನ್ ತೈಲ ಟ್ಯಾಂಕರ್: ವಾಣಿಜ್ಯ ಲಾಜಿಸ್ಟಿಕ್ಸ್‌ನಲ್ಲಿ ಅನುಮಾನ

0

ಟೆಹ್ರಾನ್/ಬೀಜಿಂಗ್: ಇರಾನ್‌ನ ಕಚ್ಚಾ ತೈಲವನ್ನು ಹೊತ್ತು ಭಾರತತ್ತ ಹೊರಟಿದ್ದ ಟ್ಯಾಂಕರ್ ಏಕಾಏಕಿ ಮಾರ್ಗ ಬದಲಾಯಿಸಿ ಚೀನಾ ಕಡೆಗೆ ಹೊರಟಿರುವ ಘಟನೆ ಜಾಗತಿಕ ಇಂಧನ ವಾಣಿಜ್ಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

2022ರಲ್ಲಿ ನಿರ್ಮಿತವಾಗಿದ್ದು, ಅಮೆರಿಕ ಅನುಮೋದಿತ ಅಫ್ರಾಮ್ಯಾಕ್ಸ್ ವರ್ಗದ ‘ಪಿಂಗ್ ಶುನ್’ ಟ್ಯಾಂಕರ್ ತನ್ನ ಗುರಿ ಬದಲಿಸಿಕೊಂಡಿರುವುದಾಗಿ ಕೆಪ್ಲರ್ ಹಡಗು ಟ್ರ್ಯಾಕಿಂಗ್ ಸಂಸ್ಥೆ ತಿಳಿಸಿದೆ.

ದಕ್ಷಿಣ ಆಫ್ರಿಕಾದ ಈಸ್ವತಿನಿ ಧ್ವಜವನ್ನು ಹೊತ್ತಿರುವ ಈ ಹಡಗು, ಗುಜರಾತ್‌ನ ವಾಡಿನಾರ್ ಬಂದರಿಗೆ ತಲುಪುವ ನಿರೀಕ್ಷೆಯಲ್ಲಿತ್ತು. ಹಡಗು ಟ್ರಾನ್ಸ್‌ಪಾಂಡರ್ ಹಾಗೂ AIS ವ್ಯವಸ್ಥೆ ಹೊಂದಿದ್ದರೂ, ಮಧ್ಯದಲ್ಲೇ ದಿಕ್ಕು ಬದಲಿಸಿರುವುದು ಗಮನ ಸೆಳೆದಿದೆ.

ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ಹಡಗು ಇನ್ನೂ ಅಂತಿಮ ಗುರಿ ತಲುಪಿಲ್ಲದಿದ್ದರೂ, ಚೀನಾದತ್ತ ಸಾಗುತ್ತಿದೆ ಎನ್ನಲಾಗಿದೆ.

ಮಾರ್ಗ ಬದಲಾವಣೆಗೆ ಸಂಬಂಧಿಸಿದಂತೆ ಅಧಿಕೃತ ಸ್ಪಷ್ಟನೆ ಇಲ್ಲದಿದ್ದರೂ, ಹಡಗಿನ ಬೆಲೆ, ವಿಮೆ, ಸಿಬ್ಬಂದಿ ಹಾಗೂ ದಾಖಲೆಗಳಿಗೆ ಸಂಬಂಧಿಸಿದ ಅಡಚಣೆಗಳು ಕಾರಣವಾಗಿರಬಹುದೆಂದು ಮೂಲಗಳು ಸೂಚಿಸುತ್ತಿವೆ. ಅಂತಾರಾಷ್ಟ್ರೀಯ ಬಂದರು ನಿಯಮಾವಳಿಗಳ ಅನುಸರಣೆಯಲ್ಲಿ ಉಂಟಾದ ತೊಂದರೆಗಳ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲ್ಪಟ್ಟಿರಬಹುದು ಎಂಬ ಅಂದಾಜು ವ್ಯಕ್ತವಾಗಿದೆ.

ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಪೊಲೀಸ್ ಕಾನ್ಸ್ಟೇಬಲ್ ಕಾರು: ಸ್ಥಿತಿ ಗಂಭೀರ

0

ಬೀದರ್​​: ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಪೊಲೀಸ್​​ ಕಾನ್ಸ್​ಟೇಬಲ್​ ಕಾರು ಹರಿದಿರುವ ಘಟನೆ ಜರುಗಿದೆ.

ಘಟನೆಯಲ್ಲಿ ಜ್ಞಾನಬಾಯಿ(45) ಗಂಭೀರವಾಗಿ ಗಾಯಗೊಂಡಿದ್ದಾರೆ. ಪಟ್ಟಣದ ರಸ್ತೆಯಲ್ಲಿ ಕಸ ಗುಡಿಸುತ್ತಿದ್ದ ವೇಳೆ ವೇಗವಾಗಿ ಬಂದ ಮೇಹಕರ್ ಪೊಲೀಸ್ ‌ಠಾಣೆಯ ಪಿಸಿ ಉಮಾಕಾಂತ್ ಕಾರು ಮಹಿಳೆ ಮೇಲೆ ಹರಿದಿದೆ. ಗಂಭೀರ ಗಾಯಗೊಂಡ ಜ್ಞಾನಬಾಯಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಭಾಲ್ಕಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದ ಸಂಪೂರ್ಣ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಹುಬ್ಬಳ್ಳಿಯಲ್ಲಿ ಲವ್‌ ಜಿಹಾದ್‌ ಆರೋಪ: ಜಿಮ್‌ ಟ್ರೈನರ್‌ ವಿರುದ್ಧ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

0

ಹುಬ್ಬಳ್ಳಿ: ಹಳೆ ಹುಬ್ಬಳ್ಳಿಯಲ್ಲಿ ಜಿಮ್‌ ಕೇಂದ್ರವನ್ನು ಸುತ್ತುವರಿದ ವಿವಾದ ಕಾನೂನು-ಸುವ್ಯವಸ್ಥೆಯ ಪ್ರಶ್ನೆಯಾಗಿ ತೀವ್ರಗೊಂಡಿದ್ದು, ಹಿಂದೂಪರ ಸಂಘಟನೆಗಳ ಪ್ರತಿಭಟನೆಗೆ ಕಾರಣವಾಗಿದೆ.

ಜಿಮ್‌ ಟ್ರೈನರ್ ಸಮೀರ್ ವಿರುದ್ಧ “ಲವ್ ಜಿಹಾದ್” ಆರೋಪ ಹೊರಿಸಿ, ಸಂಘಟನೆಗಳ ಕಾರ್ಯಕರ್ತರು ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಯುವಕ ಮತ್ತು ಯುವತಿಯ ಕುಟುಂಬಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿ, ಪರಸ್ಪರ ಮನೆಗಳಿಗೆ ತೆರಳಿ ಗಲಾಟೆ ನಡೆಸಿದ ಘಟನೆ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ.

ಯುವತಿಯ ಮನೆಗೆ ಯುವಕನ ಕುಟುಂಬದವರು ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಎರಡೂ ಕುಟುಂಬಗಳು ಸಂಘರ್ಷಕ್ಕೆ ಇಳಿದ ಪರಿಣಾಮ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು, ಎರಡೂ ಕಡೆಯವರ ನಡುವೆ ಗಲಾಟೆ ನಡೆದಿರುವುದನ್ನು ದೃಢಪಡಿಸಿ, ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ. ದೂರು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಈ ನಡುವೆ, ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ನೂರಾರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಳೆ ಹುಬ್ಬಳ್ಳಿ ಠಾಣೆಗೆ ಮುತ್ತಿಗೆ ಹಾಕಿ, ಟ್ರೈನರ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇನ್ನೊಂದೆಡೆ, ಯುವಕನ ಸಹೋದರಿ, ಯುವತಿ ಮತ್ತು ತನ್ನ ಸಹೋದರ ಕಳೆದ ಮೂರು ವರ್ಷಗಳಿಂದ ಪರಸ್ಪರ ಪರಿಚಯದಲ್ಲಿದ್ದು ಸಂಬಂಧ ಹೊಂದಿದ್ದಾರೆ ಎಂದು ಹೇಳಿಕೆ ನೀಡಿದ್ದು, ಈ ಸಂಬಂಧದ ಬಗ್ಗೆ ಯುವತಿಯ ಮನೆಯವರಿಗೆ ತಿಳಿದಿತ್ತು ಎಂದು ತಿಳಿಸಿದ್ದಾರೆ.

ತಮಿಳುನಾಡು ಚುನಾವಣೆ: ಬಿಜೆಪಿ 27 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಜನತಾ ಪಕ್ಷವು ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟು 27 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.

ಪ್ರಮುಖವಾಗಿ ಅವನಾಶಿ ಕ್ಷೇತ್ರದಿಂದ ಕೇಂದ್ರ ಸಚಿವ ಎಲ್. ಮುರುಗನ್ ಅವರನ್ನು ಕಣಕ್ಕಿಳಿಸಲಾಗಿದ್ದು, ಮೈಲಾಪುರ ಕ್ಷೇತ್ರದಿಂದ ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರಿಗೆ ಟಿಕೆಟ್ ನೀಡಲಾಗಿದೆ.

ಕೊಯಮತ್ತೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ ಸ್ಪರ್ಧಿಸಲಿದ್ದು, ಸತ್ತೂರು ಕ್ಷೇತ್ರದಲ್ಲಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

ಇದೇ ವೇಳೆ, ಮೋಡಕುರಿಚಿ ಕ್ಷೇತ್ರದಿಂದ ಕೀರ್ತಿಕಾ ಶಿವಕುಮಾರ್, ವಿಲವಂಕೋಡ್‌ನಿಂದ ಎಸ್. ವಿಜಯಧರಣಿ ಮತ್ತು ಥಳ್ಳಿ ಕ್ಷೇತ್ರದಿಂದ ನಾಗೇಶ್ ಕುಮಾರ್ ಅವರನ್ನು ಅಭ್ಯರ್ಥಿಗಳಾಗಿ ಘೋಷಿಸಲಾಗಿದೆ.

ಎನ್‌ಡಿಎ ಮೈತ್ರಿ ಅಡಿಯಲ್ಲಿ ನಡೆದ ಸೀಟು ಹಂಚಿಕೆಯ ಪ್ರಕಾರ, ಎಐಎಡಿಎಂಕೆ 169 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಬಿಜೆಪಿ 27 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಜೊತೆಗೆ, ಅನ್ಬುಮಣಿ ರಾಮದಾಸ್ ನೇತೃತ್ವದ ಪಟ್ಟಾಳಿ ಮಕ್ಕಳ್ ಕಚ್ಚಿಗೆ 18 ಸ್ಥಾನಗಳು ಮತ್ತು ಟಿಟಿವಿ ದಿನಕರನ್ ಅವರ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಕ್ಕೆ 11 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ.

ಎಲೆಕ್ಟ್ರಿಕ್ ವಾಹನಗಳ ತೆರಿಗೆ ಹಿಂಪಡೆದು ಜನರ ಮೇಲೆ ಬರೆ – ಕರ್ನಾಟಕ ಸರ್ಕಾರ ದಿವಾಳಿ ಸ್ಥಿತಿಯಲ್ಲಿ: ಪ್ರಹ್ಲಾದ್ ಜೋಶಿ ಕಿಡಿ

ನವದೆಹಲಿ: ಕರ್ನಾಟಕ ಕಾಂಗ್ರೆಸ್ ಸರ್ಕಾರ ಆರ್ಥಿಕ ಸಂಕಷ್ಟದಿಂದ ತತ್ತರಿಸಿ, ಸಿಕ್ಕ ಸಿಕ್ಕಲ್ಲಿ ಆದಾಯ ಸಂಗ್ರಹಿಸಲು ತುರ್ತು ಕ್ರಮ ಕೈಗೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ವಾಗ್ದಾಳಿ ನಡೆಸಿದರು.

ದೆಹಲಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಬೆಲೆ ಏರಿಕೆ ಹಾಗೂ ಹಣ ಸಂಗ್ರಹದ ನೀತಿ ಇದೀಗ ಎಲೆಕ್ಟ್ರಿಕ್ ವಾಹನಗಳ ಮೇಲೂ ಪರಿಣಾಮ ಬೀರಿದ್ದು, ಆತ್ಮನಿರ್ಭರ ಭಾರತದ ದೃಷ್ಟಿಕೋಣಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿದರು.

ಜಾಗತಿಕ ಮಟ್ಟದಲ್ಲಿ ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮ ಗ್ಯಾಸ್, ಕಚ್ಚಾ ತೈಲ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಉಂಟಾಗುತ್ತಿರುವ ಸಂದರ್ಭದಲ್ಲಿ, ಭಾರತ ನವೀಕರಿಸಬಹುದಾದ ಇಂಧನ ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಆದರೆ, ರಾಜ್ಯ ಸರ್ಕಾರ ಈ ಪ್ರಯತ್ನಗಳಿಗೆ ಅಡ್ಡಿಯಾಗುತ್ತಿದೆ ಎಂದು ಟೀಕಿಸಿದರು.

ಎಲೆಕ್ಟ್ರಿಕ್ ವಾಹನಗಳಿಗೆ ನೀಡಿದ್ದ ತೆರಿಗೆ ವಿನಾಯಿತಿಯನ್ನು ಹಿಂಪಡೆದಿರುವುದು ಪರಿಸರ ಸ್ನೇಹಿ ವಾಹನಗಳ ಬಳಕೆಯನ್ನು ಕುಗ್ಗಿಸಿ, ಜನರನ್ನು ಮತ್ತೆ ಪೆಟ್ರೋಲ್-ಡೀಸೆಲ್ ವಾಹನಗಳತ್ತ ತಳ್ಳುವ ನಿರ್ಧಾರವಾಗಿದೆ ಎಂದರು.

ಮೂರೂವರೆ ಲಕ್ಷ ಕೋಟಿ ರೂಪಾಯಿ ಬಜೆಟ್ ಹೊಂದಿರುವ ಸರ್ಕಾರ ಕೇವಲ 250 ಕೋಟಿ ರೂ. ಸಂಗ್ರಹಕ್ಕಾಗಿ ಇಂತಹ ನಿರ್ಧಾರ ಕೈಗೊಂಡಿರುವುದು ಆರ್ಥಿಕ ದಿವಾಳಿತನದ ಸಂಕೇತವಾಗಿದೆ ಎಂದು ಹೇಳಿದರು.

ಇನ್ನು, EV ವಾಹನಗಳಿಗೆ ಲೈಫ್‌ಟೈಮ್ ಟ್ಯಾಕ್ಸ್ ವಿಧಿಸುವ ಮೂಲಕ ಸರ್ಕಾರ ಹೆಚ್ಚುವರಿ ಆದಾಯ ಗಳಿಸಲು ಮುಂದಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ತೆರಿಗೆಗಳಿಂದ ಕಮರ್ಷಿಯಲ್ ಟ್ಯಾಕ್ಸ್ ಹೆಚ್ಚಿಸುವ ಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

ಭಾರತ 2030ರೊಳಗೆ ಇಂಗಾಲ ಉತ್ಸವವನ್ನು 50% ಕಡಿಮೆ ಮಾಡುವ ಗುರಿ ಹೊಂದಿದ್ದರೂ, ರಾಜ್ಯ ಸರ್ಕಾರದ ನೀತಿಗಳು ಅದಕ್ಕೆ ವಿರುದ್ಧವಾಗಿವೆ ಎಂದು ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.

error: Content is protected !!