Home Blog

‘ಇದು ಅಂಬಾನಿ ಕುಟುಂಬದ ಗಿಫ್ಟ್’ ಎಂದ ರಿಯಾನಾ: 2.2 ಕೋಟಿ ರೂ. ಮೌಲ್ಯದ ಡೈಮಂಡ್ ಬ್ರೇಸ್ಲೆಟ್‌ಗೆ ಫ್ಯಾನ್ಸ್ ಫಿದಾ

ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಕುಟುಂಬದಿಂದ ಉಡುಗೊರೆಯಾಗಿ ಪಡೆದಿರುವ ದುಬಾರಿ ವಜ್ರದ ಬ್ರೇಸ್ಲೆಟ್ ಕುರಿತು ಜಾಗತಿಕ ಗಾಯಕಿ ರಿಹಾನ್ನಾ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಅಂಬಾನಿ ಕುಟುಂಬದೊಂದಿಗೆ ತಮ್ಮ ಆತ್ಮೀಯ ಬಾಂಧವ್ಯವನ್ನು ಸ್ಮರಿಸಿದ ರಿಹಾನ್ನಾ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಆ ಅಮೂಲ್ಯ ಆಭರಣವನ್ನು ಪ್ರದರ್ಶಿಸಿದ್ದಾರೆ.

ಡಬಲ್ ಡೆನಿಮ್ ಉಡುಪಿನಲ್ಲಿ ಕಾಣಿಸಿಕೊಂಡಿರುವ ರಿಹಾನ್ನಾ, ತಮ್ಮ ಕೈಯಲ್ಲಿದ್ದ ವಜ್ರದ ಬ್ರೇಸ್ಲೆಟ್ ತೋರಿಸುತ್ತಾ “ಇದು ಅಂಬಾನಿ ಕುಟುಂಬದಿಂದ ನನಗೆ ದೊರೆತ ವಿಶೇಷ ಉಡುಗೊರೆ” ಎಂದು ಹೇಳಿದ್ದಾರೆ. ಈ ಹೇಳಿಕೆಯ ಬಳಿಕ ಆ ಬ್ರೇಸ್ಲೆಟ್‌ನ ಮೌಲ್ಯ ಎಷ್ಟು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿತ್ತು.

ಸೆಲೆಬ್ರಿಟಿ ಜ್ಯುವೆಲ್ಲರಿ ವಿಶ್ಲೇಷಕ ಪ್ರಿಯಾಂಶು ಗೋಯಲ್ ಮಾಹಿತಿ ಪ್ರಕಾರ, ರಿಹಾನ್ನಾ ಧರಿಸಿರುವ ಟೆನಿಸ್ ಶೈಲಿಯ ವಜ್ರದ ಬ್ರೇಸ್ಲೆಟ್‌ನ ಅಂದಾಜು ಮೌಲ್ಯ 2.2 ಕೋಟಿ ರೂಪಾಯಿಗಳಷ್ಟಿದೆ. ಅಪರೂಪದ ವಜ್ರಗಳಿಂದ ವಿನ್ಯಾಸಗೊಳಿಸಲಾದ ಈ ಆಭರಣವು ಜಾಗತಿಕ ಸೆಲೆಬ್ರಿಟಿ ವಲಯದಲ್ಲೂ ವಿಶೇಷ ಸ್ಥಾನ ಪಡೆದಿದೆ.

ಏಪ್ರಿಲ್‌ನಲ್ಲಿ ತಮ್ಮ ಬ್ಯೂಟಿ ಬ್ರ್ಯಾಂಡ್ ಸಂಬಂಧಿತ ಕಾರ್ಯಕ್ರಮಕ್ಕಾಗಿ ಭಾರತಕ್ಕೆ ಆಗಮಿಸಿದ್ದ ರಿಹಾನ್ನಾ, ಈ ವೇಳೆ ಅಂಬಾನಿ ನಿವಾಸಕ್ಕೆ ಭೇಟಿ ನೀಡಿ ಭಾರತೀಯ ಸಂಪ್ರದಾಯದಂತೆ ಆರತಿ ಬೆಳಗುವ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು. ಈ ಭೇಟಿ ಬಳಿಕ ಅಂಬಾನಿ ಕುಟುಂಬದಿಂದ ಅವರಿಗೆ ಈ ವಿಶೇಷ ಉಡುಗೊರೆ ನೀಡಲಾಗಿದೆ ಎನ್ನಲಾಗಿದೆ.

2024ರಲ್ಲಿ ಜಾಮ್‌ನಗರದಲ್ಲಿ ನಡೆದ ಅಂಬಾನಿ ಕುಟುಂಬದ ಪೂರ್ವ ವಿವಾಹ ಸಮಾರಂಭದಲ್ಲಿ ರಿಹಾನ್ನಾ ನೀಡಿದ್ದ ಅದ್ಧೂರಿ ಸಂಗೀತ ಪ್ರದರ್ಶನ ವಿಶ್ವದಾದ್ಯಂತ ಸುದ್ದಿಯಾಗಿತ್ತು. ಇದೀಗ 2.2 ಕೋಟಿ ರೂಪಾಯಿ ಮೌಲ್ಯದ ವಜ್ರದ ಬ್ರೇಸ್ಲೆಟ್ ಮತ್ತೊಮ್ಮೆ ಅಂಬಾನಿ-ರಿಹಾನ್ನಾ ಸ್ನೇಹವನ್ನು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ತಂದಿದೆ.

ನಿರ್ದೇಶಕ ಪವನ್ ಒಡೆಯರ್ಗೆ ಮಾತೃ ವಿಯೋಗ: ಅನಾರೋಗ್ಯದಿಂದ ಗೀತಾ ಒಡೆಯರ್ ನಿಧನ

ಕುಣಿಗಲ್/ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಮತ್ತೆ ದುಃಖದ ಸುದ್ದಿ ಎದುರಾಗಿದೆ. ಖ್ಯಾತ ನಿರ್ದೇಶಕ ಪವನ್ ಒಡೆಯರ್ ಅವರ ತಾಯಿ ಗೀತಾ ಒಡೆಯರ್ (73) ಅವರು ದೀರ್ಘಕಾಲದ ಅನಾರೋಗ್ಯದ ಬಳಿಕ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಗೀತಾ ಒಡೆಯರ್ ಅವರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ ಎರಡು ತಿಂಗಳುಗಳಿಂದ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡುಬಂದ ಹಿನ್ನೆಲೆ ಕುಟುಂಬ ಸದಸ್ಯರು ನಿರಂತರ ವೈದ್ಯಕೀಯ ಆರೈಕೆ ಒದಗಿಸಿದ್ದರು. ಆದಾಗ್ಯೂ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.

ಗೀತಾ ಒಡೆಯರ್ ಅವರು ಮಲ್ಟಿಪಲ್ ಮೈಲೋಮಾ ಎಂಬ ರಕ್ತ ಸಂಬಂಧಿ ಕ್ಯಾನ್ಸರ್ ಹಾಗೂ ಜಿಬಿ ಸಿಂಡ್ರೋಮ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಅನಾರೋಗ್ಯದ ನಡುವೆಯೂ ಹೋರಾಟ ನಡೆಸಿದ ಅವರು ವಿಧಿವಶರಾಗಿರುವುದು ಕುಟುಂಬದವರಿಗೆ ಆಘಾತ ತಂದಿದೆ.

ಮೃತರ ಪಾರ್ಥಿವ ಶರೀರವನ್ನು ಕುಣಿಗಲ್‌ಗೆ ರವಾನಿಸಲಾಗಿದ್ದು, ಇಂದು ಸ್ವಗ್ರಾಮದಲ್ಲೇ ಅಂತ್ಯಸಂಸ್ಕಾರ ನಡೆಯಲಿದೆ. ಸಂಬಂಧಿಕರು, ಸ್ನೇಹಿತರು ಮತ್ತು ಅಭಿಮಾನಿಗಳು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಪವನ್ ಒಡೆಯರ್ ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರಾಗಿದ್ದು, ‘ಗೋವಿಂದಾಯ ನಮಃ’, ‘ಗೂಗ್ಲಿ’, ‘ರಣವಿಕ್ರಮ’ ಹಾಗೂ ‘ನಟಸಾರ್ವಭೌಮ’ ಚಿತ್ರಗಳ ಮೂಲಕ ವಿಶಿಷ್ಟ ಗುರುತನ್ನು ನಿರ್ಮಿಸಿಕೊಂಡಿದ್ದಾರೆ. ಒಡೆಯರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಹಲವು ಚಿತ್ರಗಳ ನಿರ್ಮಾಣದಲ್ಲೂ ಅವರು ತೊಡಗಿಸಿಕೊಂಡಿದ್ದಾರೆ.

ಜೂನ್ 16ರಂದು ಹಿರಿಯ ನಿರ್ಮಾಪಕ ಚಿನ್ನೇಗೌಡರ ಪತ್ನಿ ಹಾಗೂ ನಟರಾದ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಅವರ ತಾಯಿ ಜಯಮ್ಮ ನಿಧನರಾಗಿದ್ದರು. ಆ ಶೋಕದಿಂದ ಚಿತ್ರರಂಗ ಹೊರಬರುವ ಮುನ್ನವೇ ಪವನ್ ಒಡೆಯರ್ ತಾಯಿ ಗೀತಾ ಒಡೆಯರ್ ನಿಧನರಾಗಿರುವುದು ಸ್ಯಾಂಡಲ್‌ವುಡ್‌ಗೆ ಮತ್ತೊಂದು ಆಘಾತವಾಗಿ ಪರಿಣಮಿಸಿದೆ.

ಆಷಾಢ ಮಾಸ ಆರಂಭ: ಚಿನ್ನ–ಬೆಳ್ಳಿ ಬೇಡಿಕೆ ಕುಸಿತ? ವ್ಯಾಪಾರಿಗಳಲ್ಲಿ ಆತಂಕ!

ಆಷಾಢ ಮಾಸ ಆರಂಭದ ಹಿನ್ನೆಲೆಯಲ್ಲಿ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತವಾಗುವ ಸಾಧ್ಯತೆ ವ್ಯಕ್ತವಾಗಿದೆ.

ಮದುವೆ, ಉಪನಯನ, ಗೃಹಪ್ರವೇಶ ಸೇರಿದಂತೆ ಯಾವುದೇ ಶುಭ ಕಾರ್ಯಗಳು ಇಲ್ಲದ ಕಾರಣ ಆಭರಣ ಖರೀದಿ ತೀವ್ರವಾಗಿ ಕಡಿಮೆಯಾಗುತ್ತಿದೆ ಎಂದು ಜ್ಯುವೆಲ್ಲರಿ ವ್ಯಾಪಾರಿಗಳು ತಿಳಿಸಿದ್ದಾರೆ.

ಜುಲೈ 15ರಿಂದ ಆರಂಭವಾಗುವ ಆಷಾಢ ಮಾಸವನ್ನು ಸಾಂಪ್ರದಾಯಿಕವಾಗಿ ‘ಶೂನ್ಯ ಮಾಸ’ ಎಂದು ಪರಿಗಣಿಸುವುದರಿಂದ ಈ ಅವಧಿಯಲ್ಲಿ ಗ್ರಾಹಕರು ಹೊಸ ಆಭರಣ ಖರೀದಿಗೆ ಮುಂದಾಗುವುದಿಲ್ಲ. ಇದರ ಪರಿಣಾಮವಾಗಿ ಶೋರೂಮ್‌ಗಳಲ್ಲಿ ಗ್ರಾಹಕರ ಸಂಖ್ಯೆಯಲ್ಲಿ ಇಳಿಕೆ ಕಂಡುಬರುತ್ತಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನ–ಬೆಳ್ಳಿ ಬೇಡಿಕೆ ಕುಸಿಯುವ ಲಕ್ಷಣಗಳು ಕಾಣಿಸುತ್ತಿವೆ.

ವ್ಯಾಪಾರಿಗಳ ಪ್ರಕಾರ, ಬೇಡಿಕೆ ಕಡಿಮೆಯಾಗುವುದರಿಂದ ಚಿನ್ನದ ದರದಲ್ಲಿ ತಾತ್ಕಾಲಿಕ ಇಳಿಕೆ ಕಂಡುಬರುವ ಸಾಧ್ಯತೆ ಇದೆ. ಶ್ರಾವಣ ಮಾಸ ಆರಂಭವಾದ ಬಳಿಕ ಹಬ್ಬಗಳ ಸೀಸನ್ ಶುರುವಾಗುತ್ತಿದ್ದಂತೆ ಬೇಡಿಕೆ ಮತ್ತೆ ಏರಿಕೆಯಾಗುವ ನಿರೀಕ್ಷೆಯಿದೆ.

ಈ ನಡುವೆ ಆರ್ಥಿಕ ತಜ್ಞರು, ದರ ಇಳಿಕೆಯ ಅವಧಿಯನ್ನು ಬಳಸಿ ಹಂತ ಹಂತವಾಗಿ ಚಿನ್ನ ಖರೀದಿಸುವುದು ಲಾಭದಾಯಕ ಎಂದು ಸಲಹೆ ನೀಡಿದ್ದಾರೆ. ಆದರೆ ಗ್ರಾಹಕರು ಸಂಪ್ರದಾಯ ಮತ್ತು ಮಾರುಕಟ್ಟೆ ಎರಡನ್ನೂ ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ದುಬಾರೆ ದುರಂತದ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ! ಆನೆ ಶಿಬಿರಗಳಿಗೆ ಹೊಸ ಸುರಕ್ಷತಾ ನಿಯಮಗಳು ಜಾರಿ

ಬೆಂಗಳೂರು: ರಾಜ್ಯದ ಆನೆ ಶಿಬಿರಗಳು ಮತ್ತು ಸೆರೆಯಲ್ಲಿರುವ ಆನೆಗಳ ನಿರ್ವಹಣಾ ಕೇಂದ್ರಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಅರಣ್ಯ ಇಲಾಖೆ ಮೊದಲ ಬಾರಿಗೆ “ಕರ್ನಾಟಕ ಆನೆ ಶಿಬಿರ ಸುರಕ್ಷತಾ ನಿಯಮಾವಳಿ ಜಾರಿಗೊಳಿಸಿದೆ.

ಹೊಸ ನಿಯಮಗಳ ಪ್ರಕಾರ, ಆನೆಗಳನ್ನು ವೀಕ್ಷಿಸುವ ಪ್ರವಾಸಿಗರು ಕನಿಷ್ಠ 30 ಅಡಿ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದ್ದು, ಆನೆಗಳಿಗೆ ಸ್ನಾನ ಮಾಡಿಸುವುದು, ಮುಟ್ಟುವುದು ಅಥವಾ ಆಹಾರ ನೀಡುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರವಾಸಿಗರು ಗುರುತಿಸಲಾದ ಗ್ರೀನ್ ಝೋನ್ ಪ್ರದೇಶದಲ್ಲೇ ನಿಂತು ಆನೆಗಳನ್ನು ವೀಕ್ಷಿಸಬೇಕು ಎಂದು ಸೂಚಿಸಲಾಗಿದೆ.

ಅದೇ ರೀತಿ ಆನೆಗಳ ಹಾಗೂ ಪ್ರವಾಸಿಗರ ಚಟುವಟಿಕೆಗಳನ್ನು ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುವುದು. ಯಾವುದೇ ಶಿಬಿರದಲ್ಲಿ ಒಂದೇ ಸಮಯದಲ್ಲಿ 10ಕ್ಕಿಂತ ಹೆಚ್ಚು ಆನೆಗಳನ್ನು ಸಾರ್ವಜನಿಕ ವೀಕ್ಷಣೆಗೆ ಪ್ರದರ್ಶಿಸಲು ಅವಕಾಶ ಇರದು ಎಂದು ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ.

ಮೇ 19ರಂದು ದುಬಾರೆ ಆನೆ ಶಿಬಿರದಲ್ಲಿ ನಡೆದ ದುರಂತದ ನಂತರ ಈ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲಾಗಿದೆ. ಶಿಬಿರಗಳಿಗೆ ನಿಯಮ ಪಾಲನೆಗಾಗಿ 15 ದಿನಗಳ ಗಡುವು ನೀಡಲಾಗಿದ್ದು, ಬಳಿಕ ಪರಿಶೀಲನೆ ನಡೆಸಿ ಪ್ರಮಾಣೀಕರಣ ನೀಡಲಾಗುತ್ತದೆ. ಅನುಮತಿ ಸಿಗುವವರೆಗೆ ಶಿಬಿರಗಳ ಕಾರ್ಯಾಚರಣೆಗೂ ಅವಕಾಶ ಇರುವುದಿಲ್ಲ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಹೊಸ ನಿಯಮಗಳಡಿ ಪ್ರವಾಸಿಗರ ಸಂಖ್ಯೆ ಮತ್ತು ಸಮಯಕ್ಕೂ ಮಿತಿ ವಿಧಿಸಲಾಗಿದೆ. ಒಂದೇ ಬ್ಯಾಚ್‌ನಲ್ಲಿ 50 ರಿಂದ 75 ಪ್ರವಾಸಿಗರಿಗೆ ಮಾತ್ರ ಅವಕಾಶ ಇರಲಿದ್ದು, ವೀಕ್ಷಣಾ ಅವಧಿಯನ್ನು 20 ರಿಂದ 30 ನಿಮಿಷಗಳಿಗೆ ಸೀಮಿತಗೊಳಿಸಲಾಗುತ್ತದೆ.

ಕಳೆದ ವರ್ಷ ತುಂಬಿದ್ದ ಹೇಮಾವತಿ ಡ್ಯಾಂ ಈ ವರ್ಷ ಖಾಲಿ! ರೈತರು ಕಂಗಾಲು

ಹಾಸನ: ಮಲೆನಾಡು ಭಾಗದಲ್ಲಿ ಈ ಬಾರಿ ಮುಂಗಾರು ಮಳೆ ತೀವ್ರವಾಗಿ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ.

ಗೊರೂರು ಸಮೀಪದ 37 ಟಿಎಂಸಿ ಸಾಮರ್ಥ್ಯದ ಹೇಮಾವತಿ ಜಲಾಶಯದಲ್ಲಿ ಸದ್ಯ ಕೇವಲ 14 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಅದರಲ್ಲಿ ಬಳಕೆಗೆ ಯೋಗ್ಯವಾದ ನೀರು ಸುಮಾರು 10 ಟಿಎಂಸಿ ಮಾತ್ರ ಉಳಿದಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ ಸುಮಾರು 25 ಟಿಎಂಸಿ ನೀರು ಇದ್ದು, ಪರಿಸ್ಥಿತಿ ಬಹಳ ಉತ್ತಮವಾಗಿತ್ತು.

ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗಗಳಲ್ಲಿ ಮಳೆಯ ಕೊರತೆ ಉಂಟಾಗಿರುವುದರಿಂದ ಜಲಾಶಯಕ್ಕೆ ನೀರಿನ ಒಳಹರಿವು ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಮೈಸೂರು, ಮಂಡ್ಯ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳ ಕೃಷಿಗೆ ನೀರು ಒದಗಿಸುವ ಹೇಮಾವತಿ ನದಿಯ ಹರಿವಿಗೂ ತೊಂದರೆ ಉಂಟಾಗಿದೆ.

ಮಳೆ ಕೊರತೆ ಹಾಗೂ ಜಲಾಶಯದ ನೀರಿನ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಪ ಮಳೆಯನ್ನು ನಂಬಿ ಬಿತ್ತನೆ ಮಾಡಿದ ಬೆಳೆಗಳು ಒಣಗುವ ಭೀತಿಯಲ್ಲಿದ್ದು, ಬೋರ್‌ವೆಲ್‌ಗಳ ಮೇಲೂ ಒತ್ತಡ ಹೆಚ್ಚಾಗಿದೆ.

ಈ ಪರಿಸ್ಥಿತಿ ಮುಂದುವರಿದರೆ ಕುಡಿಯುವ ನೀರಿನ ಪೂರೈಕೆಗೂ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದು, ರೈತರು ಹಾಗೂ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.

ಸರ್ಕಾರಿ ಅಧಿಕಾರಿಗಳ ಕಿರುಕುಳ ಆರೋಪ: ಬೀದಿ ವ್ಯಾಪಾರಿಗಳಿಂದ ದೊಡ್ಡ ಮಟ್ಟದ ಮುಷ್ಕರ!

ಬೆಂಗಳೂರು: ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳಿಂದ ನಡೆಯುತ್ತಿರುವ ಕಿರುಕುಳವನ್ನು ಖಂಡಿಸಿ ಹಾಗೂ ರಕ್ಷಣೆ ನೀಡುವಂತೆ ಆಗ್ರಹಿಸಿ ಬೆಂಗಳೂರಿನ ಸುಮಾರು 58,000ಕ್ಕೂ ಹೆಚ್ಚು ಬೇಕರಿ, ಬೀಡಾ ಅಂಗಡಿ ಮಾಲೀಕರು ಹಾಗೂ ಬೀದಿ ಬದಿ ವ್ಯಾಪಾರಿಗಳು ಜೂನ್ 18ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ರಾಜ್ಯ ಅಧ್ಯಕ್ಷ ರವಿಶೆಟ್ಟಿ ಬೈಂದೂರು ಅವರು ಮಾತನಾಡಿ, ಸಣ್ಣ ವ್ಯಾಪಾರಿಗಳು ಕಾನೂನುಬದ್ಧವಾಗಿ ವ್ಯಾಪಾರ ನಡೆಸುತ್ತಾ ತೆರಿಗೆ ಪಾವತಿಸುತ್ತಿದ್ದರೂ ನಿರಂತರ ತಪಾಸಣೆ, ದಂಡ ಹಾಗೂ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಷ್ಕರದ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಬೇಕರಿಗಳು ಹಾಗೂ ಸಣ್ಣ ಅಂಗಡಿಗಳು ಬಂದ್ ಆಗುವ ಸಾಧ್ಯತೆ ಇದೆ. ರಾಜ್ಯದ ಇತರ ಭಾಗಗಳಲ್ಲಿ ಭಾಗಶಃ ಬೆಂಬಲ ವ್ಯಕ್ತವಾಗುವ ಸಾಧ್ಯತೆ ಇದ್ದು, ಪ್ರತಿಭಟನೆ ವಿಸ್ತರಿಸುವ ಸೂಚನೆಗಳಿವೆ.

ಸಂಘಟನೆಗಳ ಪ್ರಕಾರ, ಅಧಿಕಾರಿಗಳು ವ್ಯಾಪಾರಿಗಳನ್ನು ಪೊಲೀಸ್ ಠಾಣೆ ಹಾಗೂ ಪಾಲಿಕೆ ಕಚೇರಿಗಳಿಗೆ ಅಲೆದಾಡಿಸಿ ವಿಚಾರಣೆ ನಡೆಸುತ್ತಿರುವುದು ಹಾಗೂ ಅನಗತ್ಯ ದಂಡ ವಿಧಿಸುತ್ತಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಮುಷ್ಕರ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸಂಘಟನೆಗಳು ಎಚ್ಚರಿಸಿದ್ದು, ತಮ್ಮ ಬೇಡಿಕೆಗಳು ಈಡೇರದವರೆಗೂ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿವೆ.

ನಟಿ ಸಂಚಿತಾ ಉಗಾಳೆ ಆತ್ಮಹತ್ಯೆಗೆ ಕಿರುಕುಳವೇ ಕಾರಣ’: ತಂದೆಯ ಗಂಭೀರ ಆರೋಪ

ಮುಂಬೈ: ಕಿರುತೆರೆ ನಟಿ ಸಂಚಿತಾ ಉಗಾಳೆ ಆತ್ಮಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಗಳು ಹೊರಬರುತ್ತಿವೆ. ಜೂನ್ 14ರಂದು ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ನಟಿಯ ಸಾವಿನ ಹಿಂದೆ ಮಾನಸಿಕ ಕಿರುಕುಳ ಮತ್ತು ಹಣಕ್ಕಾಗಿ ಒತ್ತಡ ಹೇರಲಾಗುತ್ತಿತ್ತು ಎಂಬ ಗಂಭೀರ ಆರೋಪವನ್ನು ಅವರ ತಂದೆ ಮಚ್ಚೀಂದ್ರ ಉಗಾಳೆ ಮಾಡಿದ್ದಾರೆ.

ಸಂಚಿತಾ ಕಳೆದ ಕೆಲವು ತಿಂಗಳುಗಳಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಹೇಳಿರುವ ಅವರು, “ಹೊರಗೆ ಎಲ್ಲರೊಂದಿಗೆ ನಗುಮುಖದಿಂದ ವರ್ತಿಸುತ್ತಿದ್ದಳು. ಆದರೆ ಒಳಗೊಳಗೆ ಭಾರೀ ನೋವು ಅನುಭವಿಸುತ್ತಿದ್ದಳು. ಕೆಲವೊಮ್ಮೆ ಏಕಾಏಕಿ ಖಿನ್ನತೆಗೆ ಜಾರುತ್ತಿದ್ದಳು” ಎಂದು ತಿಳಿಸಿದ್ದಾರೆ.

ಕುಟುಂಬದವರು ಆಕೆಯ ಮಾನಸಿಕ ಸ್ಥಿತಿಯನ್ನು ಗಮನಿಸಿ ಸದಾ ಜೊತೆಗೇ ಇರುತ್ತಿದ್ದರು. “ನಾವು ಆಕೆಯನ್ನು ಒಬ್ಬಳೇ ಬಿಡುತ್ತಿರಲಿಲ್ಲ. ಆದರೆ ಘಟನೆ ನಡೆದ ದಿನ ಕೇವಲ ಅರ್ಧ ಗಂಟೆ ಮಾತ್ರ ಆಕೆ ಒಂಟಿಯಾಗಿದ್ದಳು. ಆ ಸಮಯದಲ್ಲೇ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಾಳೆ ಎಂದು ಊಹಿಸಿರಲಿಲ್ಲ” ಎಂದು ತಂದೆ ಕಣ್ಣೀರಿಟ್ಟಿದ್ದಾರೆ.

ಇದೇ ವೇಳೆ, ಯಾರೋ ವ್ಯಕ್ತಿ ಸಂಚಿತಾಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ. “ಹಣದ ಬೇಡಿಕೆ, ಒತ್ತಡ ಮತ್ತು ಮಾನಸಿಕ ಹಿಂಸೆ ನಿರಂತರವಾಗಿತ್ತು. ಆಕೆ ಎಲ್ಲವನ್ನೂ ಮನಸ್ಸಿನಲ್ಲೇ ಇಟ್ಟುಕೊಂಡು ನೋವು ಅನುಭವಿಸುತ್ತಿದ್ದಳು. ಈ ಪ್ರಕರಣದ ಸಂಪೂರ್ಣ ಸತ್ಯ ಹೊರಬರಬೇಕು” ಎಂದು ಹೇಳಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ಮೃತದೇಹ ಒಳಗಡೆಯಿಂದ ಲಾಕ್ ಮಾಡಲಾಗಿದ್ದ ಕೋಣೆಯಲ್ಲಿ ಪತ್ತೆಯಾಗಿತ್ತು. ಸದ್ಯ ಪೊಲೀಸರು ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದು, ಸಾವಿನ ಹಿಂದಿನ ನಿಜವಾದ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.

ದೊಡ್ಡಣ್ಣ ‘ಸತ್ತಿದ್ದಾರೆ’ ಎಂದು ಪೋಸ್ಟ್ ವೈರಲ್: ಕಿಡಿಗೇಡಿಗಳ ವಿರುದ್ಧ ಠಾಣೆ ಮೆಟ್ಟಿಲೇರಿದ ನಟ

ಬೆಂಗಳೂರು: ಹಿರಿಯ ನಟ ದೊಡ್ಡಣ್ಣ ಅವರ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಇದೀಗ ಕಾನೂನಿನ ಕ್ರಮ ಆರಂಭವಾಗಿದೆ. ಬದುಕಿರುವ ವ್ಯಕ್ತಿಯನ್ನು ಮೃತರೆಂದು ಘೋಷಿಸಿ ವೈರಲ್ ಪೋಸ್ಟ್‌ಗಳನ್ನು ಹರಿಬಿಟ್ಟ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ದೊಡ್ಡಣ್ಣ, ಬೆಂಗಳೂರು ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ಸಲ್ಲಿಸಿದ್ದಾರೆ.

‘ಪಬ್ಲಿಕ್ ಫ್ರೆಂಡ್’ ಎಂಬ ಸಾಮಾಜಿಕ ಜಾಲತಾಣ ಖಾತೆಯಲ್ಲಿ ದೊಡ್ಡಣ್ಣ ಅವರ ನಿಧನದ ಸುದ್ದಿ ಹಾಗೂ ಶ್ರದ್ಧಾಂಜಲಿ ಪೋಸ್ಟ್ ಪ್ರಕಟವಾಗಿತ್ತು. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದಂತೆ ಅಭಿಮಾನಿಗಳು ಮತ್ತು ಕುಟುಂಬ ಸದಸ್ಯರು ಆತಂಕಕ್ಕೊಳಗಾಗಿದ್ದರು. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ದೊಡ್ಡಣ್ಣ ಅವರು ಸ್ವತಃ ಸಾರ್ವಜನಿಕವಾಗಿ ಕಾಣಿಸಿಕೊಂಡು ತಾವು ಆರೋಗ್ಯವಾಗಿದ್ದೇನೆ ಎಂದು ಸ್ಪಷ್ಟನೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸತತವಾಗಿ ತಮ್ಮ ಸಾವಿನ ಕುರಿತು ನಕಲಿ ಸುದ್ದಿಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಕಠಿಣ ಕಾನೂನು ಹೋರಾಟಕ್ಕೆ ಮುಂದಾಗಿರುವ ದೊಡ್ಡಣ್ಣ, ಎಐ ತಂತ್ರಜ್ಞಾನ ಬಳಸಿಕೊಂಡು ಸುಳ್ಳು ಮಾಹಿತಿ ಸೃಷ್ಟಿಸಿ ವೈರಲ್ ಮಾಡಿರುವುದು ಗಂಭೀರ ಅಪರಾಧ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

“ನಾನು ಬದುಕಿರುವಾಗಲೇ ನನ್ನನ್ನು ಸತ್ತಿದ್ದೇನೆ ಎಂದು ಘೋಷಿಸಿ ಪೋಸ್ಟ್ ಮಾಡಲಾಗಿದೆ. ಇದರಿಂದ ನನಗೆ ಮಾನಸಿಕ ಆಘಾತ ಉಂಟಾಗಿದ್ದು, ಕುಟುಂಬಸ್ಥರು ಹಾಗೂ ಅಭಿಮಾನಿಗಳು ತೀವ್ರ ಸಂಕಟ ಅನುಭವಿಸಿದ್ದಾರೆ” ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸೈಬರ್ ಪೊಲೀಸರು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸುಳ್ಳು ಪೋಸ್ಟ್ ಪ್ರಕಟಿಸಿದ ಖಾತೆಯ ಐಪಿ ವಿಳಾಸ, ಅದರ ನಿರ್ವಹಣೆ ಹಾಗೂ ಮಾಹಿತಿ ಹರಡಿದ ಜಾಲದ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ತನಿಖೆ ಪೂರ್ಣಗೊಂಡ ಬಳಿಕ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

‘ಪ್ರಾಬ್ಲಂ ನಮ್ಮಲ್ಲಲ್ಲ, ನೆಗೆಟಿವಿಟಿ ಹುಡುಕುವ ಮನಸ್ಥಿತಿಯಲ್ಲಿದೆ’: ಟ್ರೋಲಿಗರ ವಿರುದ್ಧ ಗೀತಾ ಭಾರತಿ ಭಟ್ ವಾಗ್ದಾಳಿ

ಬೆಂಗಳೂರು: ‘ಜೋಡಿ ನಂ.1’ ರಿಯಾಲಿಟಿ ಶೋನಲ್ಲಿ ದಾಂಪತ್ಯ ಜೀವನದ ಕುರಿತ ತಮ್ಮ ಅನುಭವಗಳನ್ನು ಹಂಚಿಕೊಂಡ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಎದುರಾದ ಟೀಕೆಗಳಿಗೆ ನಟಿ ಗೀತಾ ಭಾರತಿ ಭಟ್ ಹಾಗೂ ಅವರ ಪತಿ ರಾಜಾರಾಮ್ ಭಟ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ವೈರಲ್ ಆಗಿರುವ ವಿಡಿಯೋ ಸಂದೇಶದಲ್ಲಿ ದಂಪತಿ, ತಮ್ಮ ಹೇಳಿಕೆಗಳನ್ನು ತಿರುಚಿ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

‘ನಾವು ಹೇಳಿದ ಸಂಪೂರ್ಣ ಮಾತುಗಳನ್ನು ಕೇಳದೇ, ಅದರಲ್ಲಿನ ಒಂದು ಭಾಗವನ್ನು ಮಾತ್ರ ತೆಗೆದುಕೊಂಡು ಜಗಳ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ. ವಾಸ್ತವದಲ್ಲಿ ಅದು ಗಂಡ-ಹೆಂಡತಿ ನಡುವಿನ ಮುಕ್ತ ಸಂಭಾಷಣೆ. ಜೀವನದಲ್ಲಿ ಎದುರಾಗುವ ಸವಾಲುಗಳ ಬಗ್ಗೆ ಮಾತನಾಡಿದ್ದೇವೆ ಅಷ್ಟೇ’ ಎಂದು ಗೀತಾ ಸ್ಪಷ್ಟಪಡಿಸಿದ್ದಾರೆ.

ಟಿಆರ್‌ಪಿ ಮತ್ತು ಪ್ರಚಾರಕ್ಕಾಗಿ ಕಾರ್ಯಕ್ರಮದಲ್ಲಿ ವೈಯಕ್ತಿಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ ಎಂಬ ಆರೋಪಗಳನ್ನು ತಳ್ಳಿ ಹಾಕಿದ ಅವರು, ‘ಎಲ್ಲರ ಮನೆಗಳಲ್ಲಿ ನಡೆಯುವ ಸಾಮಾನ್ಯ ಸಂಗತಿಗಳನ್ನೇ ಚರ್ಚೆ ಮಾಡಿದ್ದೇವೆ. ಅದನ್ನು ವಿವಾದ ಎಂದು ಬಿಂಬಿಸುವುದು ತಪ್ಪು’ ಎಂದು ಹೇಳಿದ್ದಾರೆ.

ಕಾರ್ಯಕ್ರಮದ ಬಳಿಕ ತಮ್ಮ ಅನುಭವಗಳಿಗೆ ಸಂಬಂಧಿಸಿ ಅನೇಕ ಕುಟುಂಬಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಗೀತಾ ಹೇಳಿದ್ದಾರೆ. ‘ನಿಮ್ಮ ಮಾತು ಕೇಳಿದ ಬಳಿಕ ನಮ್ಮ ಕುಟುಂಬದಲ್ಲೂ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚೆ ಮಾಡಿದ್ದೇವೆ’ ಎಂಬ ಪ್ರತಿಕ್ರಿಯೆಗಳು ಬಂದಿವೆ ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ ಸಾಮಾಜಿಕ ಜಾಲತಾಣದ ಕೆಲವು ಇನ್ಫ್ಲುಯೆನ್ಸರ್‌ಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಗೀತಾ, ‘ವೈರಲ್ ಆಗಿರುವ ವಿಡಿಯೋಗಳನ್ನು ಮರುಬಳಕೆ ಮಾಡಿಕೊಂಡು ನೆಗೆಟಿವ್ ಅಭಿಪ್ರಾಯಗಳ ಮೂಲಕ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಇದು ಸಮಾಜಕ್ಕೆ ಯಾವುದೇ ರೀತಿಯ ಸಕಾರಾತ್ಮಕ ಕೊಡುಗೆ ನೀಡುವುದಿಲ್ಲ’ ಎಂದು ಹೇಳಿದ್ದಾರೆ.

ರಾಜಾರಾಮ್ ಭಟ್ ಮಾತನಾಡಿ, ‘ಬೇರೆಯವರ ಕಷ್ಟವನ್ನು ಮನರಂಜನೆ ಅಥವಾ ಜನಪ್ರಿಯತೆಗಾಗಿ ಬಳಸಿಕೊಳ್ಳುವ ಸಂಸ್ಕೃತಿ ಹೆಚ್ಚುತ್ತಿದೆ. ಸಮಾಜಕ್ಕೆ ಉಪಯುಕ್ತವಾಗುವ ವಿಚಾರಗಳ ಬಗ್ಗೆ ಮಾತನಾಡುವುದು ಮುಖ್ಯ’ ಎಂದು ಹೇಳಿದರು.

ಕೊನೆಯಲ್ಲಿ ದಂಪತಿ, ‘ನೆಗೆಟಿವಿಟಿಯನ್ನು ಹುಡುಕುವ ಬದಲು ವಿಷಯದ ಸಂಪೂರ್ಣ ಅರ್ಥವನ್ನು ತಿಳಿದು ಪ್ರತಿಕ್ರಿಯಿಸಿ. ಸಾಮಾಜಿಕ ಜಾಲತಾಣಗಳು ಜವಾಬ್ದಾರಿಯುತ ಸಂವಾದದ ವೇದಿಕೆಯಾಗಬೇಕು’ ಎಂದು ಮನವಿ ಮಾಡಿದ್ದಾರೆ.

ಆರಾಧ್ಯದೈವದ ದೇವಸ್ಥಾನಕ್ಕೂ ಕಳ್ಳರ ಕಾಟ! ಒಂದೇ ತಿಂಗಳಲ್ಲಿ ನಾಲ್ಕು ಬಾರಿ ಕಳ್ಳತನ; ಪೊಲೀಸರ ನಿರ್ಲಕ್ಷ್ಯ ಆರೋಪ?

0

ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸಾಸರವಾಡ ಗ್ರಾಮದಲ್ಲಿರುವ ಸುತ್ತಮುತ್ತಲಿನ ಗ್ರಾಮಗಳ ಆರಾಧ್ಯದೈವಗಳಾದ ಶ್ರೀ ವೀರಭದ್ರೇಶ್ವರ, ಶ್ರೀ ಗಡ್ಡಿಬಸವೇಶ್ವರ ಹಾಗೂ ಶಂಕರಲಿಂಗ ದೇವಸ್ಥಾನಗಳು ಕಳ್ಳರ ಕಾಟದಿಂದ ತತ್ತರಿಸಿವೆ.

ಒಂದೇ ತಿಂಗಳ ಅವಧಿಯಲ್ಲಿ ನಾಲ್ಕು ಬಾರಿ ಕಳ್ಳತನ ನಡೆದಿರುವುದು ಭಕ್ತರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ದೇವಸ್ಥಾನದ ಕಾಣಿಕೆ ಹುಂಡಿ ಹಾಗೂ ಇನ್ನಿತರೆ ವಸ್ತುಗಳನ್ನು ಗುರಿಯಾಗಿಸಿಕೊಂಡಿರುವ ಖದೀಮರು, ರಾತ್ರಿ ವೇಳೆ ದೇವಸ್ಥಾನ ಪ್ರವೇಶಿಸಿ ಕಳ್ಳತನ ನಡೆಸುತ್ತಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ನಡೆದ ಸರಣಿ ಕಳ್ಳತನಗಳಲ್ಲಿ ಸುಮಾರು ಎರಡು ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಕಾಣಿಕೆ ಹಣ ದೋಚಿರುವ ಶಂಕೆ ವ್ಯಕ್ತವಾಗಿದೆ.

ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದಂತೆ ದೇವಸ್ಥಾನ ಆಡಳಿತ ಮಂಡಳಿ ದೇವಸ್ಥಾನದ ಸುತ್ತಮುತ್ತ ಸಿಸಿ ಕ್ಯಾಮರಾಗಳನ್ನು ಅಳವಡಿಸಿತ್ತು. ಆದರೆ ಕ್ಯಾಮರಾಗಳಿದ್ದರೂ ಖದೀಮರು ಹಿಂದೆ ಸರಿಯದೆ, ಕಳ್ಳತನಕ್ಕೂ ಮುನ್ನ ಸಿಸಿ ಕ್ಯಾಮರಾಗಳನ್ನೇ ಧ್ವಂಸಗೊಳಿಸಿ ತಮ್ಮ ಕೃತ್ಯ ಎಸಗಿದ್ದಾರೆ.

ಆದರೆ ಕಳ್ಳರ ಈ ಕರಾಮತ್ತು ಸಂಪೂರ್ಣವಾಗಿ ತಪ್ಪಿಸಿಕೊಳ್ಳಲಿಲ್ಲ. ದೇವಸ್ಥಾನದ ಸಮೀಪದ ಗಿಡದಲ್ಲಿ ಅಳವಡಿಸಲಾಗಿದ್ದ ಮತ್ತೊಂದು ಸಿಸಿ ಕ್ಯಾಮರಾದಲ್ಲಿ ಕಳ್ಳರ ಚಲನವಲನಗಳು ಸೆರೆಯಾಗಿದ್ದು, ಪ್ರಕರಣಕ್ಕೆ ಮಹತ್ವದ ಸುಳಿವು ದೊರೆತಿದೆ ಎಂದು ತಿಳಿದುಬಂದಿದೆ.

ಗ್ರಾಮಸ್ಥರು ಹಾಗೂ ದೇವಸ್ಥಾನದ ಭಕ್ತರು ಕಳ್ಳರ ಹಾವಳಿಗೆ ಕಡಿವಾಣ ಹಾಕುವಂತೆ ಹಲವು ಬಾರಿ ಶಿರಹಟ್ಟಿ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. ಆದರೂ ಇದುವರೆಗೆ ನಾಲ್ಕು ಬಾರಿ ಕಳ್ಳತನ ನಡೆದಿದ್ದರೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ಸು ಕಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಕಳ್ಳತನಗಳ ಸರಣಿ ಘಟನೆಗಳಿಂದ ಭಕ್ತರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, “ಆರಾಧ್ಯದೈವದ ದೇವಸ್ಥಾನಗಳೇ ಸುರಕ್ಷಿತವಾಗಿಲ್ಲದಿದ್ದರೆ ಸಾಮಾನ್ಯ ಜನರ ಸ್ಥಿತಿ ಏನು?” ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ಕೂಡಲೇ ಆರೋಪಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

error: Content is protected !!