Home Blog

ಫ್ರೆಂಡ್ ರಿಕ್ವೆಸ್ಟ್ ತಿರಸ್ಕರಿಸಿದ್ದಕ್ಕೆ ಎಐ ಬಳಸಿ ಮಹಿಳೆಯ ಅಶ್ಲೀಲ ಫೋಟೋ ಸೃಷ್ಟಿ; ಪೂಜಾರಿ ಹೆಸರಿನಲ್ಲಿ ಮೋಸ ಮಾಡಿದ ಆರೋಪಿ ಅರೆಸ್ಟ್

ನವದೆಹಲಿ: ಇನ್‌ಸ್ಟಾಗ್ರಾಮ್‌ನಲ್ಲಿ ಮಹಿಳೆ ಫ್ರೆಂಡ್ ರಿಕ್ವೆಸ್ಟ್ ನಿರಾಕರಿಸಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಎಐ ತಂತ್ರಜ್ಞಾನ ಬಳಸಿ ಮಹಿಳೆ ಹಾಗೂ ಆಕೆಯ ತಾಯಿಯ ಅಶ್ಲೀಲ ಮಾರ್ಫ್ ಫೋಟೋ ಮತ್ತು ವಿಡಿಯೋಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

27 ವರ್ಷದ ಸುಮಿತ್ ನೆಮಚಂದ್ ಶರ್ಮಾ ಬಂಧಿತ ಆರೋಪಿ. ಈತ ಸೋಷಿಯಲ್ ಮೀಡಿಯಾದಲ್ಲಿ ತಾನು ಪೂಜಾರಿ ಎಂದು ಹೇಳಿಕೊಂಡು ಧಾರ್ಮಿಕ ವಿಡಿಯೋಗಳನ್ನು ಮಾಡುತ್ತಿದ್ದ ಎನ್ನಲಾಗಿದೆ.

ಗುಜರಾತ್ ಮೂಲದ ಮಹಿಳೆಗೆ ಇನ್‌ಸ್ಟಾಗ್ರಾಮ್ ಮೂಲಕ ಸುಮಿತ್ ಪರಿಚಯವಾಗಿದ್ದ. ಆರಂಭದಲ್ಲಿ ಧಾರ್ಮಿಕ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದ ಆತ, ಬಳಿಕ ಮಹಿಳೆಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಸ್ನೇಹ ಬೆಳೆಸಲು ಯತ್ನಿಸಿದ್ದಾನೆ. ಆದರೆ ಮಹಿಳೆ ಅದನ್ನು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ ಮಹಿಳೆಯ ಇನ್‌ಸ್ಟಾಗ್ರಾಮ್ ಖಾತೆಯಲ್ಲಿದ್ದ ಫೋಟೋಗಳನ್ನು ಡೌನ್‌ಲೋಡ್ ಮಾಡಿಕೊಂಡು ಎಐ ತಂತ್ರಜ್ಞಾನ ಬಳಸಿ ಅಶ್ಲೀಲ ರೂಪದಲ್ಲಿ ಮಾರ್ಫ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೂಗಲ್‌ನಲ್ಲಿ ‘AI Remove Clothes’ ಸೇರಿದಂತೆ ವಿವಿಧ ಎಐ ಟೂಲ್‌ಗಳನ್ನು ಹುಡುಕಿ ಬಳಸಿದ ಆರೋಪಿಯು, ಮಹಿಳೆ ಹಾಗೂ ಆಕೆಯ ತಾಯಿಯ 100ಕ್ಕೂ ಹೆಚ್ಚು ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಸೃಷ್ಟಿಸಿದ್ದಾನೆ ಎನ್ನಲಾಗಿದೆ.

ಇದೇ ವೇಳೆ, ಮಹಿಳೆಯ ಹೆಸರಿನಲ್ಲಿ ಮೂರು ನಕಲಿ ಇನ್‌ಸ್ಟಾಗ್ರಾಮ್ ಖಾತೆಗಳು ಹಾಗೂ ಯೂಟ್ಯೂಬ್ ಚಾನೆಲ್‌ಗಳನ್ನು ತೆರೆಯಲಾಗಿದ್ದು, ಅವುಗಳಲ್ಲಿ ಅಶ್ಲೀಲ ಚಿತ್ರಗಳು ಮತ್ತು ವಿಡಿಯೋಗಳನ್ನು ಅಪ್‌ಲೋಡ್ ಮಾಡಿ ಮಹಿಳೆ ಹಾಗೂ ಕುಟುಂಬದ ಮಾನಹಾನಿಗೆ ಯತ್ನಿಸಲಾಗಿದೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

ಪೊಲೀಸರ ಪ್ರಕಾರ, ಆರೋಪಿ ಎಕ್ಸ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ 8ರಿಂದ 10 ನಕಲಿ ಖಾತೆಗಳನ್ನು ತೆರೆದಿದ್ದಾನೆ.

ಈ ಕುರಿತು ಮಹಿಳೆ ಅಹಮದಾಬಾದ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಇನ್ಸ್‌ಪೆಕ್ಟರ್ ಎಂ.ಎಚ್. ಭೆಟಾರಿಯಾ ನೇತೃತ್ವದ ತಂಡ ಡಿಜಿಟಲ್ ಟ್ರ್ಯಾಕಿಂಗ್ ಮೂಲಕ ಆರೋಪಿಯನ್ನು ದೆಹಲಿಯ ಉತ್ತರ-ಪೂರ್ವ ಭಾಗದ ಉಸ್ಮಾನ್‌ಪುರದಲ್ಲಿ ಪತ್ತೆಹಚ್ಚಿ ಬಂಧಿಸಿದೆ.

ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಬೆಂಗಳೂರಿನಲ್ಲಿ ಧೂಳಿನ ಬಿರುಗಾಳಿ ಬಳಿಕ ಧಾರಾಕಾರ ಮಳೆ; ನಗರಾದ್ಯಂತ ಟ್ರಾಫಿಕ್ ಜಾಮ್

ಬೆಂಗಳೂರು: ಹವಾಮಾನ ಇಲಾಖೆ ನೀಡಿದ್ದ ಯೆಲ್ಲೋ ಅಲರ್ಟ್ ಮುನ್ಸೂಚನೆ ಬೆಂಗಳೂರಿನಲ್ಲಿ ಅಕ್ಷರಶಃ ನಿಜವಾಗಿದ್ದು, ಸಿಲಿಕಾನ್ ಸಿಟಿಯಲ್ಲಿ ಸಂಜೆ ವೇಳೆಗೆ ದಿಢೀರ್ ಹವಾಮಾನ ಬದಲಾವಣೆಯಾಗಿದೆ.

ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದಲ್ಲಿ ಬೀಸಿದ ಭೀಕರ ಧೂಳಿನ ಬಿರುಗಾಳಿ, ಗುಡುಗು-ಮಿಂಚಿನ ಆರ್ಭಟ ಹಾಗೂ ಧಾರಾಕಾರ ಮಳೆಯಿಂದ ನಗರ ಜನಜೀವನ ಅಸ್ತವ್ಯಸ್ತಗೊಂಡಿದೆ.

ಮಧ್ಯಾಹ್ನದವರೆಗೆ ಉರಿ ಬಿಸಿಲಿನಿಂದ ಕಂಗೆಟ್ಟಿದ್ದ ಬೆಂಗಳೂರಿನಲ್ಲಿ ಸಂಜೆ 6 ಗಂಟೆಯ ನಂತರ ಏಕಾಏಕಿ ಕಪ್ಪು ಮೋಡಗಳು ಆವರಿಸಿವೆ. ಬಿರುಗಾಳಿಯ ತೀವ್ರತೆ ಎಷ್ಟಿತ್ತೆಂದರೆ ರಸ್ತೆಗಳಲ್ಲಿ ವಾಹನ ಸವಾರರಿಗೆ ಸರಿಯಾಗಿ ಕಾಣಿಸದಷ್ಟು ಧೂಳು ಆವರಿಸಿತ್ತು.

ಅದಾದ ಬಳಿಕ ಮೆಜೆಸ್ಟಿಕ್, ಕಾರ್ಪೊರೇಷನ್, ಎಂ.ಜಿ ರಸ್ತೆ, ಯಶವಂತಪುರ, ಇಂದಿರಾನಗರ, ವೈಟ್‌ಫೀಲ್ಡ್, ಜಯನಗರ ಹಾಗೂ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ.

ಕಚೇರಿ ಮುಗಿಸಿ ಮನೆಗೆ ತೆರಳುತ್ತಿದ್ದ ಸಾರ್ವಜನಿಕರು ಹಾಗೂ ದ್ವಿಚಕ್ರ ವಾಹನ ಸವಾರರು ದಿಢೀರ್ ಮಳೆಗೆ ಸಿಲುಕಿ ರಸ್ತೆ ಬದಿಯಲ್ಲಿ ಆಶ್ರಯ ಪಡೆಯುವಂತಾಯಿತು. ಮಳೆ ನೀರು ರಸ್ತೆಗಳಲ್ಲಿ ಹರಿದ ಪರಿಣಾಮ ಪ್ರಮುಖ ಜಂಕ್ಷನ್‌ಗಳು, ಫ್ಲೈಓವರ್‌ಗಳು ಹಾಗೂ ಹೆದ್ದಾರಿಗಳ ಮೇಲೆ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ.

ಬಿರುಗಾಳಿಯ ರಭಸಕ್ಕೆ ನಗರದ ಕೆಲವೆಡೆ ಮರದ ಕೊಂಬೆಗಳು ಮುರಿದು ಬಿದ್ದಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಬೆಸ್ಕಾಂ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಮುಂದಿನ 2ರಿಂದ 3 ಗಂಟೆಗಳ ಕಾಲ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಅನಗತ್ಯವಾಗಿ ಹೊರಗೆ ಸಂಚರಿಸದಂತೆ ಹಾಗೂ ಎಚ್ಚರಿಕೆಯಿಂದ ಇರುವಂತೆ ಬಿಬಿಎಂಪಿ ಮತ್ತು ಟ್ರಾಫಿಕ್ ಪೊಲೀಸರು ಸೂಚನೆ ನೀಡಿದ್ದಾರೆ.

ಕೋಲ್ಕತ್ತಾದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ; ಪ್ರಧಾನಿ ಮೋದಿ ಭಾಗಿ

ಕೋಲ್ಕತ್ತಾ: 2026ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಈ ಬಾರಿ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕೇಂದ್ರ ಆಯುಷ್ ಸಚಿವ ಪ್ರತಾಪ್‌ರಾವ್ ಜಾಧವ್ ತಿಳಿಸಿದ್ದಾರೆ.

ಜೂನ್ 21ರಂದು ನಡೆಯಲಿರುವ ಯೋಗ ದಿನಾಚರಣೆಗೆ ದೇಶದ ವಿವಿಧ ಭಾಗಗಳಿಂದ ಯೋಗಾಸಕ್ತರು ಆಗಮಿಸುವ ನಿರೀಕ್ಷೆಯಿದೆ. ಈ ಬಾರಿಯ ಯೋಗ ದಿನಾಚರಣೆಯ ಥೀಮ್ ‘ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’ ಎಂದು ಘೋಷಿಸಲಾಗಿದೆ. ದೈಹಿಕ ಆರೋಗ್ಯ, ಮಾನಸಿಕ ಯೋಗಕ್ಷೇಮ ಮತ್ತು ಆರೋಗ್ಯಕರ ವೃದ್ಧಾಪ್ಯವನ್ನು ಉತ್ತೇಜಿಸುವಲ್ಲಿ ಯೋಗದ ಮಹತ್ವವನ್ನು ಈ ಮೂಲಕ ಸಾರಲಾಗುತ್ತಿದೆ.

ಆಯುಷ್ ಸಚಿವಾಲಯದ ಅಧೀನದಲ್ಲಿರುವ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಯೋಗ ಉತ್ಸಾಹಿಗಳು ಭಾಗವಹಿಸಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಯೋಗವು ದೈನಂದಿನ ಜೀವನದ ಭಾಗವಾಗಬೇಕು ಎಂಬ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಡಿಯಲ್ಲಿ ಆಯುಷ್ ಸಚಿವಾಲಯವು ದೇಶದ ಪ್ರತಿಯೊಂದು ಹಳ್ಳಿ, ಮನೆ, ಶಾಲೆ, ಕಚೇರಿ ಮತ್ತು ಸಮುದಾಯಗಳಿಗೆ ಯೋಗವನ್ನು ತಲುಪಿಸಲು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಪ್ರತಾಪ್‌ರಾವ್ ಜಾಧವ್ ಹೇಳಿದ್ದಾರೆ.

ಯೋಗವು ಕೇವಲ ವ್ಯಾಯಾಮವಲ್ಲ, ಅದು ದೈಹಿಕ ಹಾಗೂ ಮಾನಸಿಕ ಸಮತೋಲನ ಕಾಪಾಡುವ ಜೀವನ ಶೈಲಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ಮತ್ತೆ ಮಳೆಯ ಅಬ್ಬರ; ಮೇ 31ರವರೆಗೆ ಆರೆಂಜ್, ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ದಿನದ ವೇಳೆಯಲ್ಲಿ ಬಿಸಿಲಿನ ತಾಪ ಮುಂದುವರಿದಿದ್ದರೂ, ಮಧ್ಯಾಹ್ನದ ಬಳಿಕ ವಾತಾವರಣದಲ್ಲಿ ದಿಢೀರ್ ಬದಲಾವಣೆ ಕಾಣಿಸಿಕೊಳ್ಳುತ್ತಿದೆ.

ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ, ಮೇ 31ರವರೆಗೆ ರಾಜ್ಯದ ಹಲವು ಭಾಗಗಳಲ್ಲಿ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿಗೆ ಆರೆಂಜ್ ಅಲರ್ಟ್:

ಮೇ 28ರಂದು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ತೀವ್ರ ಹವಾಮಾನ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ‘ಆರೆಂಜ್ ಅಲರ್ಟ್’ ಘೋಷಿಸಿದೆ. ಭಾರೀ ಗುಡುಗು, ಮಿಂಚು ಹಾಗೂ ಚಂಡಮಾರುತದ ಮಾದರಿಯ ಬಿರುಗಾಳಿ ಬೀಸುವ ಸಾಧ್ಯತೆ ಇದೆ.

ಮೇ 29ರಿಂದ ಮೇ 31ರವರೆಗೆ ಈ ಭಾಗಕ್ಕೆ ‘ಯೆಲ್ಲೋ ಅಲರ್ಟ್’ ನೀಡಲಾಗಿದ್ದು, ಅಲ್ಲಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಜೂನ್ 1ರಿಂದ ಜೂನ್ 3ರವರೆಗೆ ಯಾವುದೇ ವಿಶೇಷ ಹವಾಮಾನ ಎಚ್ಚರಿಕೆ ಇಲ್ಲ ಎಂದು ಇಲಾಖೆ ತಿಳಿಸಿದೆ.

ಉತ್ತರ ಒಳನಾಡಿನಲ್ಲಿ ಎರಡು ದಿನ ಹೈ ಅಲರ್ಟ್:

ಮೇ 28 ಮತ್ತು 29ರಂದು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ತೀವ್ರ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ‘ಆರೆಂಜ್ ಅಲರ್ಟ್’ ಜಾರಿಯಲ್ಲಿರಲಿದೆ. ತೀವ್ರ ಸಿಡಿಲು ಹಾಗೂ ಬಿರುಗಾಳಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

ಮೇ 30 ಮತ್ತು 31ರಂದು ಹವಾಮಾನದ ತೀವ್ರತೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದ್ದು, ‘ಯೆಲ್ಲೋ ಅಲರ್ಟ್’ ಮುಂದುವರಿಯಲಿದೆ. ಜೂನ್ 1ರಿಂದ ಮಳೆಯ ಅಬ್ಬರ ಕಡಿಮೆಯಾಗುವ ನಿರೀಕ್ಷೆಯಿದೆ.

ಕರಾವಳಿಯಲ್ಲಿ ನಾಲ್ಕು ದಿನ ಮಳೆ ಸಾಧ್ಯತೆ;

ಮೇ 28ರಿಂದ ಮೇ 31ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ನಿರಂತರವಾಗಿ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಗುಡುಗು ಸಹಿತ ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಸಾರ್ವಜನಿಕರಿಗೆ ಎಚ್ಚರಿಕೆ:

ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಕ್ಷಣಾರ್ಧದಲ್ಲಿ ಭಾರೀ ಗಾಳಿ-ಮಳೆ ಸಂಭವಿಸುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರು ಸಿಡಿಲಿನ ಸಮಯದಲ್ಲಿ ಸುರಕ್ಷಿತ ಕಟ್ಟಡಗಳಲ್ಲಿ ಆಶ್ರಯ ಪಡೆಯುವಂತೆ ಸೂಚಿಸಲಾಗಿದೆ.

ರೈತರು ಕಟಾವು ಮಾಡಿದ ಬೆಳೆಗಳನ್ನು ಸುರಕ್ಷಿತವಾಗಿ ಮುಚ್ಚಿಡುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.

ವೈಭವ್ ಸೂರ್ಯವಂಶಿ ಆಟಕ್ಕೆ ಕ್ರಿಸ್ ಗೇಲ್ ಭಾರಿ ಮೆಚ್ಚುಗೆ;‘ಹೊಸ ಸಿಕ್ಸರ್ ಮೆಷಿನ್’ ಎಂದ ಯೂನಿವರ್ಸಲ್ ಬಾಸ್!

ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದು, ಈ ಜಯದ ಹೀರೋ ಆಗಿ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಹೊರಹೊಮ್ಮಿದ್ದಾರೆ.

ಸನ್‌ರೈಸರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ವೈಭವ್ ಕೇವಲ 29 ಎಸೆತಗಳಲ್ಲಿ 97 ರನ್ ಸಿಡಿಸಿ ಕ್ರಿಕೆಟ್ ಅಭಿಮಾನಿಗಳನ್ನು ಬೆರಗುಗೊಳಿಸಿದರು. ಅವರ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 12 ಸಿಕ್ಸರ್ ಮತ್ತು 5 ಬೌಂಡರಿಗಳು ಸೇರಿದ್ದವು. ವೈಭವ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ 47 ರನ್‌ಗಳಿಂದ ಗೆದ್ದು ಕ್ವಾಲಿಫೈಯರ್-2ಕ್ಕೆ ಪ್ರವೇಶಿಸಿದೆ.

ಈ ಅದ್ಭುತ ಪ್ರದರ್ಶನದೊಂದಿಗೆ ವೈಭವ್ ಹಲವು ದಾಖಲೆಗಳನ್ನು ನಿರ್ಮಿಸಿದ್ದು, ಐಪಿಎಲ್‌ನ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕ್ರಿಸ್ ಗೇಲ್ ಅವರ ದಾಖಲೆಯನ್ನೇ ಮುರಿದಿದ್ದಾರೆ. ಆದರೆ ಕೇವಲ 3 ರನ್‌ಗಳಿಂದ ಶತಕ ತಪ್ಪಿಸಿಕೊಂಡ ಕಾರಣ, ಐಪಿಎಲ್ ಇತಿಹಾಸದ ಅತಿ ವೇಗದ ಶತಕದ ದಾಖಲೆ ಮುರಿಯುವ ಅವಕಾಶ ಕೈಚೆಲ್ಲಿದರು. ಆ ದಾಖಲೆ ಇನ್ನೂ ಕ್ರಿಸ್ ಗೇಲ್ ಹೆಸರಿನಲ್ಲೇ ಉಳಿದಿದೆ.

ವೈಭವ್ ಆಟಕ್ಕೆ ಸ್ವತಃ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವೈಭವ್ ಫೋಟೋ ಹಂಚಿಕೊಂಡಿರುವ ಗೇಲ್, “ವೈಭವ್ ಅಸಾಧಾರಣ ಹಾಗೂ ಅದ್ಭುತ ಆಟಗಾರ. ಯುವ ಪ್ರತಿಭೆ, ಹೊಸ ಸಿಕ್ಸರ್ ಮೆಷಿನ್. ಆದರೆ ವೇಗದ ಶತಕದ ದಾಖಲೆಯನ್ನು ಮುರಿಯದಿರುವುದು ಸ್ವಲ್ಪ ಬೇಸರ” ಎಂದು ಬರೆದುಕೊಂಡಿದ್ದಾರೆ.

ವೈಭವ್ ಈ ಸೀಸನ್‌ನಲ್ಲಿ ಹಲವು ಅಪರೂಪದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಒಂದು ಐಪಿಎಲ್ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅನ್‌ಕ್ಯಾಪ್ಡ್ ಆಟಗಾರ ಎಂಬ ದಾಖಲೆ ಅವರದಾಗಿದೆ. ಅಲ್ಲದೆ, 200ಕ್ಕೂ ಹೆಚ್ಚು ಸ್ಟ್ರೈಕ್‌ರೇಟ್‌ನಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ ಐಪಿಎಲ್ ಇತಿಹಾಸದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಯೂ ಇವರ ಪಾಲಾಗಿದೆ.

ಇದರ ಜೊತೆಗೆ ಪ್ಲೇಆಫ್ ಪಂದ್ಯದಲ್ಲಿ ಅತಿ ಹೆಚ್ಚು 12 ಸಿಕ್ಸರ್ ಬಾರಿಸಿದ ಆಟಗಾರ, ಕೇವಲ 24 ಎಸೆತಗಳಲ್ಲಿ 10 ಸಿಕ್ಸರ್ ಸಿಡಿಸಿದ ದಾಖಲೆ ಹಾಗೂ ಪವರ್‌ಪ್ಲೇಯಲ್ಲಿ ಅತಿ ಹೆಚ್ಚು 8 ಸಿಕ್ಸರ್ ಬಾರಿಸಿದ ಸಾಧನೆಯನ್ನೂ ವೈಭವ್ ಮಾಡಿದ್ದಾರೆ.

ಐಪಿಎಲ್ 2026ರಲ್ಲಿ ಇದುವರೆಗೆ ವೈಭವ್ 15 ಇನ್ನಿಂಗ್ಸ್‌ಗಳಲ್ಲಿ 680 ರನ್ ಗಳಿಸಿದ್ದು, 45.33 ಸರಾಸರಿ ಮತ್ತು 242.85 ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಈ ಅವಧಿಯಲ್ಲಿ ಒಂದು ಶತಕ ಹಾಗೂ ನಾಲ್ಕು ಅರ್ಧಶತಕಗಳು ಅವರ ಖಾತೆಯಲ್ಲಿವೆ.

ತಪ್ಪು ಪ್ಯಾಡ್ ಬಳಕೆ ಆರೋಗ್ಯಕ್ಕೆ ಅಪಾಯ; ಮಹಿಳೆಯರಿಗೆ ವೈದ್ಯರ ಸಲಹೆ

ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರಲ್ಲಿ ಪಿರಿಯಡ್ಸ್ ಹೈಜೀನ್ ಕುರಿತು ಜಾಗೃತಿ ಹೆಚ್ಚಾಗುತ್ತಿದೆ.

ಮಹಿಳೆಯರು ಈಗ ಸ್ಯಾನಿಟರಿ ಪ್ಯಾಡ್‌ಗಳ ಗುಣಮಟ್ಟ ಹಾಗೂ ಅವು ಚರ್ಮದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ತಜ್ಞರ ಪ್ರಕಾರ, ಸರಿಯಾದ ಪ್ಯಾಡ್ ಆಯ್ಕೆ ಮಾಡದಿದ್ದರೆ ಚರ್ಮದ ಸಮಸ್ಯೆಗಳು ಹಾಗೂ ಸೋಂಕಿನ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ.

ವೈದ್ಯರ ಮಾಹಿತಿ ಪ್ರಕಾರ, ಸ್ಯಾನಿಟರಿ ಪ್ಯಾಡ್‌ನ ಮೇಲಿನ ಪದರ ದೇಹದ ಸೂಕ್ಷ್ಮ ಭಾಗದೊಂದಿಗೆ ನೇರ ಸಂಪರ್ಕದಲ್ಲಿರುತ್ತದೆ. ಪ್ಯಾಡ್‌ಗಳಲ್ಲಿ ಅಧಿಕ ಪ್ರಮಾಣದ ಸುಗಂಧ ದ್ರವ್ಯಗಳು ಅಥವಾ ಹಾನಿಕಾರಕ ರಾಸಾಯನಿಕಗಳಿದ್ದರೆ ಚರ್ಮದಲ್ಲಿ ಉರಿ, ಕೆಂಪು ದದ್ದುಗಳು ಹಾಗೂ ಅಲರ್ಜಿ ಸಮಸ್ಯೆಗಳು ಕಾಣಿಸಬಹುದು ಎಂದು ಅವರು ಎಚ್ಚರಿಸಿದ್ದಾರೆ.

ವಿಶೇಷವಾಗಿ ಬೇಸಿಗೆ ಮತ್ತು ತೇವಾಂಶ ಇರುವ ವಾತಾವರಣದಲ್ಲಿ ದೀರ್ಘಕಾಲ ಒಂದೇ ಪ್ಯಾಡ್ ಬಳಸುವುದರಿಂದ ಬ್ಯಾಕ್ಟೀರಿಯಾ ಹಾಗೂ ಫಂಗಲ್ ಇನ್‌ಫೆಕ್ಷನ್ ಅಪಾಯ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಮೃದುವಾದ, ಗಾಳಿಯಾಡುವ ಹಾಗೂ ಚರ್ಮ ಸ್ನೇಹಿ ಪ್ಯಾಡ್‌ಗಳನ್ನು ಬಳಸುವಂತೆ ತಜ್ಞರು ಸಲಹೆ ನೀಡಿದ್ದಾರೆ. ಹೆಚ್ಚು ಸುಗಂಧವಿರುವ ಪ್ಯಾಡ್‌ಗಳನ್ನು ಬಳಸದಿರುವುದು ಉತ್ತಮ ಎಂದೂ ತಿಳಿಸಿದ್ದಾರೆ.

ಆರೋಗ್ಯದ ದೃಷ್ಟಿಯಿಂದ ಪ್ರತಿ 4ರಿಂದ 6 ಗಂಟೆಗಳಿಗೊಮ್ಮೆ ಪ್ಯಾಡ್ ಬದಲಾಯಿಸುವುದು ಅಗತ್ಯವಾಗಿದೆ. ಹೆಚ್ಚು ಬೆವರು ಅಥವಾ ಚರ್ಮದ ಸಮಸ್ಯೆ ಇರುವ ಮಹಿಳೆಯರಿಗೆ ಕಾಟನ್ ಆಧಾರಿತ ಪ್ಯಾಡ್‌ಗಳು ಮತ್ತು ಕಾಟನ್ ಪ್ಯಾಂಟಿ ಉತ್ತಮ ಆಯ್ಕೆ ಎಂದು ವೈದ್ಯರು ಹೇಳಿದ್ದಾರೆ.

ಇತ್ತೀಚೆಗೆ ಮೋರಿಂಗಾ ಆಧಾರಿತ ಸ್ಯಾನಿಟರಿ ಪ್ಯಾಡ್‌ಗಳು ಮಹಿಳೆಯರ ಗಮನ ಸೆಳೆಯುತ್ತಿವೆ. ಮೋರಿಂಗಾದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಹಾಗೂ ಉರಿ ಕಡಿಮೆ ಮಾಡುವ ಗುಣಗಳಿರುವುದರಿಂದ ಚರ್ಮದ ಸಮಸ್ಯೆ ಮತ್ತು ದುರ್ಗಂಧ ಕಡಿಮೆ ಮಾಡಲು ಸಹಾಯಕವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಹಿಳೆಯರ ಆರೋಗ್ಯದಲ್ಲಿ ಪಿರಿಯಡ್ಸ್ ಹೈಜೀನ್ ಪ್ರಮುಖ ಪಾತ್ರ ವಹಿಸುತ್ತಿದ್ದು, ಗುಣಮಟ್ಟದ ಹಾಗೂ ಸುರಕ್ಷಿತ ಸ್ಯಾನಿಟರಿ ಪ್ಯಾಡ್ ಆಯ್ಕೆ ಮಾಡುವುದು ಆರೋಗ್ಯ ಕಾಪಾಡುವ ಪ್ರಮುಖ ಹೆಜ್ಜೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

‘ಪೆದ್ದಿ’ ಕಥೆ ಕೇಳಿ ಮೋದಿ ಹೇಳಿದ್ದೇನು? ರಾಮ್ ಚರಣ್ ಬಹಿರಂಗಪಡಿಸಿದ ‘ಹಳ್ಳಿ ಟ್ಯಾಲೆಂಟ್’ ಸೀಕ್ರೆಟ್!

ನವದೆಹಲಿ: ರಾಮ್ ಚರಣ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಪೆದ್ದಿ’ ಬಿಡುಗಡೆಗೆ ಸಜ್ಜಾಗುತ್ತಿರುವ ನಡುವೆಯೇ ಚಿತ್ರದ ಪ್ರಚಾರ ಹೊಸ ಹಂತಕ್ಕೇರಿದೆ. ದೆಹಲಿಯಲ್ಲಿ ನಡೆದ ಭರ್ಜರಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ರಾಮ್ ಚರಣ್, ಪ್ರಧಾನಿ ನರೇಂದ್ರ ಮೋದಿ ಜೊತೆ ‘ಪೆದ್ದಿ’ ಕುರಿತಾಗಿ ನಡೆದ ವಿಶೇಷ ಸಂಭಾಷಣೆಯನ್ನು ಬಹಿರಂಗಪಡಿಸಿದ್ದು, ಅದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

“‘ಪೆದ್ದಿ’ ಕೇವಲ ಸಿನಿಮಾ ಅಲ್ಲ. ಇದು ಹಳ್ಳಿಯ ಯುವಕರ ಕನಸು, ಪ್ರತಿಭೆ ಮತ್ತು ಹೋರಾಟದ ಕಥೆ,” ಎಂದು ರಾಮ್ ಚರಣ್ ಹೇಳಿದರು. ಗ್ರಾಮೀಣ ಭಾರತದ ಅಸಲಿ ಶಕ್ತಿಯನ್ನು ಈ ಸಿನಿಮಾ ತೆರೆಗೆ ತರುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಧಾನಿ ಮೋದಿ ಜೊತೆಗಿನ ಭೇಟಿಯನ್ನು ನೆನೆಸಿಕೊಂಡ ರಾಮ್ ಚರಣ್, “ನಾನು ದೆಹಲಿಯಲ್ಲಿ ಮೋದಿ ಅವರನ್ನು ಭೇಟಿಯಾದಾಗ ಅವರು ‘ಪೆದ್ದಿ’ ಬಗ್ಗೆ ಕೇಳಿದರು. ಆಗ ನಾನು ಇದು ಹಳ್ಳಿಗಳಿಂದ ರಾಷ್ಟ್ರಮಟ್ಟಕ್ಕೆ ಹೊರಹೊಮ್ಮುವ ಪ್ರತಿಭೆಗಳ ಕಥೆ ಎಂದು ವಿವರಿಸಿದೆ,” ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ್ದ ಮೋದಿ, ಪಶ್ಚಿಮ ಬಂಗಾಳದ ಒಂದು ಹಳ್ಳಿಯ ಫುಟ್ಬಾಲ್ ಆಟಗಾರರ ಉದಾಹರಣೆ ನೀಡಿದರಂತೆ. “ಒಬ್ಬ ಆಟಗಾರ ಸಾಧನೆ ಮಾಡಿದ ಬಳಿಕ ಇಡೀ ಹಳ್ಳಿ ಫುಟ್ಬಾಲ್ ಕಡೆ ತಿರುಗಿತು. ಈಗ ಆ ಪ್ರದೇಶವೇ ಪ್ರತಿಭೆಗಳ ಕೇಂದ್ರವಾಗಿದೆ,” ಎಂದು ಪ್ರಧಾನಿ ಹೇಳಿದ್ದನ್ನು ರಾಮ್ ಚರಣ್ ಬಹಿರಂಗಪಡಿಸಿದರು.

‘ಪೆದ್ದಿ’ ಸಿನಿಮಾದಲ್ಲಿ ರಾಮ್ ಚರಣ್ ಗ್ರಾಮೀಣ ಹಿನ್ನೆಲೆಯ ಯುವಕನಾಗಿ ಕಾಣಿಸಿಕೊಳ್ಳಲಿದ್ದು, ಕ್ರಿಕೆಟ್‌ನಿಂದ ಕುಸ್ತಿ ಕ್ಷೇತ್ರದವರೆಗೆ ಸಾಗುವ ಪ್ರೇರಣಾದಾಯಕ ಪಯಣ ಕಥೆಯ ಹೈಲೈಟ್ ಆಗಿದೆ. ಪಾತ್ರಕ್ಕಾಗಿ ವಿಶೇಷ ದೈಹಿಕ ತಯಾರಿ ನಡೆಸಬೇಕಾಯಿತು ಎಂದು ರಾಮ್ ಚರಣ್ ಹೇಳಿದ್ದಾರೆ.

ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸಿರುವ ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್, ಜಗಪತಿ ಬಾಬು, ಬೊಮನ್ ಇರಾನಿ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಎಆರ್ ರೆಹಮಾನ್ ಸಂಗೀತ ನೀಡಿರುವ ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಅದ್ಧೂರಿಯಾಗಿ ನಿರ್ಮಿಸಿದೆ.

ನಟಿ, ಮಿಸ್ ಪುಣೆ ತ್ವಿಶಾ ಶರ್ಮಾ ಸಾವಿನ ಹಿಂದಿನ ಡಾರ್ಕ್ ಸೀಕ್ರೆಟ್‌? ಜಾಮೀನು ರದ್ದಾದ ಬೆನ್ನಲ್ಲೇ ಅತ್ತೆ ಅರೆಸ್ಟ್!

ಭೋಪಾಲ್: ಮಾಜಿ ಮಾಡೆಲ್ ಹಾಗೂ ನಟಿ ತ್ವಿಶಾ ಶರ್ಮಾ ಸಾವಿನ ಪ್ರಕರಣದಲ್ಲಿ ಸಿಬಿಐ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪ್ರಕರಣದ ಎರಡನೇ ಆರೋಪಿಯಾಗಿರುವ ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರನ್ನು ಬಂಧಿಸಿದೆ. ಹೈಕೋರ್ಟ್ ಜಾಮೀನು ರದ್ದುಪಡಿಸಿದ ಕೆಲವೇ ಗಂಟೆಗಳಲ್ಲಿ ಈ ಬಂಧನ ನಡೆದಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಸಿಬಿಐ ಮೂಲಗಳ ಪ್ರಕಾರ, ತ್ವಿಶಾ ಸಾವಿನ ಹಿಂದೆ ಸಾಮಾನ್ಯ ಆತ್ಮಹತ್ಯೆಗಿಂತಲೂ ಗಂಭೀರ ಸಂಗತಿಗಳಿರುವ ಶಂಕೆ ಬಲವಾಗುತ್ತಿದೆ. ಮರಣೋತ್ತರ ಪರೀಕ್ಷೆಯಲ್ಲಿ ದೇಹದ ಮೇಲೆ ಪತ್ತೆಯಾದ ಗಾಯಗಳು ಹಾಗೂ ಗರ್ಭಪಾತ ಸಂಬಂಧದ ಒತ್ತಡದ ಆರೋಪಗಳು ತನಿಖೆಯನ್ನು ಮತ್ತಷ್ಟು ಗಂಭೀರಗೊಳಿಸಿವೆ.

ಮದುವೆಯಾದ ಕೆಲವೇ ತಿಂಗಳಲ್ಲಿ ತ್ವಿಶಾ ಗರ್ಭಿಣಿಯಾಗಿದ್ದು, ಬಳಿಕ ನಡೆದ ಗರ್ಭಪಾತದ ಹಿಂದೆ ಕುಟುಂಬದ ಒತ್ತಡವಿತ್ತು ಎಂಬ ಆರೋಪ ಕೇಳಿಬಂದಿದೆ. ಪತಿ ಮಗುವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾನೆ ಎನ್ನಲಾದ ಚಾಟ್‌ಗಳು ಹಾಗೂ ಗರ್ಭಪಾತಕ್ಕೆ ಒತ್ತಾಯಿಸಿದ್ದ ಆರೋಪದ ವಾಟ್ಸಾಪ್ ಸಾಕ್ಷ್ಯಗಳು ಈಗ ಸಿಬಿಐ ತನಿಖೆಯ ಪ್ರಮುಖ ಅಂಶಗಳಾಗಿವೆ.

ಇದಕ್ಕೂ ಮೊದಲು ಪ್ರಕರಣದ ಮೊದಲ ಆರೋಪಿ ಸಮರ್ಥ್ ಸಿಂಗ್ 10 ದಿನ ತಲೆಮರೆಸಿಕೊಂಡ ಬಳಿಕ ಬಂಧನಕ್ಕೊಳಗಾಗಿದ್ದರು. ಈಗ ಅತ್ತೆಯ ಬಂಧನದೊಂದಿಗೆ ಪ್ರಕರಣ ಮತ್ತಷ್ಟು ಹೈಪ್ರೊಫೈಲ್ ಸ್ವರೂಪ ಪಡೆದುಕೊಂಡಿದೆ.

ಮೂಲಗಳ ಪ್ರಕಾರ, ಸಿಬಿಐ ಅಧಿಕಾರಿಗಳು ಇದೀಗ ಕುಟುಂಬದ ಆರ್ಥಿಕ ವ್ಯವಹಾರಗಳು, ವರದಕ್ಷಿಣೆ ಆರೋಪಗಳು ಹಾಗೂ ಡಿಜಿಟಲ್ ಸಾಕ್ಷ್ಯಗಳ ಮೇಲೆ ಫೋಕಸ್ ಮಾಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಶಾಕಿಂಗ್ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

ಸಿಎಂ ಸ್ಥಾನ ತ್ಯಜಿಸಿದ ಬೆನ್ನಲ್ಲೇ ಸಿದ್ದರಾಮಯ್ಯ ದೆಹಲಿ ಪ್ರಯಾಣ!

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಸಿದ್ದರಾಮಯ್ಯ ಅವರು ಇದೀಗ ದೆಹಲಿ ಪ್ರವಾಸ ಕೈಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ರಾಜ್ಯಪಾಲರ ಕಚೇರಿಗೆ ರಾಜೀನಾಮೆ ಪತ್ರ ತಲುಪಿದ ಬೆನ್ನಲ್ಲೇ ಸಿದ್ದರಾಮಯ್ಯ ದಿಢೀರ್ ದೆಹಲಿ ಪ್ರಯಾಣಕ್ಕೆ ಸಿದ್ಧರಾಗಿದ್ದಾರೆ ಎನ್ನುವ ಮಾಹಿತಿ ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿದೆ.

ಸಿದ್ದರಾಮಯ್ಯ ಅವರು ಇಂದು ಸಂಜೆಯೇ ದೆಹಲಿಗೆ ತೆರಳುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವುದು ಈ ಪ್ರವಾಸದ ಪ್ರಮುಖ ಉದ್ದೇಶ ಎಂದು ತಿಳಿದುಬಂದಿದೆ.

ಎಐಸಿಸಿ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಹಿರಿಯ ನಾಯಕರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ ಹಿನ್ನೆಲೆಯಲ್ಲಿ ಹೈಕಮಾಂಡ್‌ಗೆ ಧನ್ಯವಾದ ತಿಳಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ರಾಜೀನಾಮೆಯ ಬಳಿಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಯಾವಾಗ ನಡೆಯಲಿದೆ ಎಂಬ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಹೈಕಮಾಂಡ್ ಸಹ ಈ ಕುರಿತು ಸ್ಪಷ್ಟ ಸೂಚನೆ ನೀಡಿಲ್ಲ.

ಈ ನಡುವೆ ಸಿದ್ದರಾಮಯ್ಯ ಅವರ ದೆಹಲಿ ಪ್ರವಾಸದ ಸುದ್ದಿ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಕುತೂಹಲ ಹೆಚ್ಚಿಸಿದೆ.

ಅಧಿಕಾರದ ಹಿಂದೆ ಹೋಗಿಲ್ಲ, ಆಸ್ತಿ-ಹಣದ ಆಸೆಯೂ ಇಲ್ಲ: ಸಿದ್ದರಾಮಯ್ಯ ನೇರ ನುಡಿ

ಬೆಂಗಳೂರು:“ನಾನು ಯಾವತ್ತಿಗೂ ಸಿದ್ಧಾಂತ ಮತ್ತು ಮೌಲ್ಯಗಳಲ್ಲಿ ರಾಜೀ ಮಾಡಿಕೊಂಡಿಲ್ಲ. ಅಧಿಕಾರದ ಹಿಂದೆ ಹೋದವನಲ್ಲ, ಆಸ್ತಿ ಮತ್ತು ಹಣದ ಹಿಂದೆ ಬಿದ್ದವನೂ ಅಲ್ಲ ಎಂದು ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವುಕರಾಗಿ ಹೇಳಿದರು.

ರಾಜ್ಯಪಾಲರ ಅನುಪಸ್ಥಿತಿಯಲ್ಲಿ ರಾಜೀನಾಮೆ ಪತ್ರವನ್ನು ಅವರ ಕಾರ್ಯದರ್ಶಿಗೆ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ತಮ್ಮ ರಾಜಕೀಯ ಪಯಣದ ಹಲವು ನೆನಪುಗಳನ್ನು ಹಂಚಿಕೊಂಡರು.

ನನಗೆ ಎರಡು ಬಾರಿ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿದೆ. ಎರಡು ಬಾರಿ ವಿರೋಧ ಪಕ್ಷದ ನಾಯಕನಾಗಿಯೂ ಕೆಲಸ ಮಾಡಿದ್ದೇನೆ. ಈ ಅವಕಾಶಗಳನ್ನು ಕಾಂಗ್ರೆಸ್ ಪಕ್ಷ ನೀಡಿದೆ. ಸೋನಿಯಾ ಗಾಂಧಿ ಅವರು ನನ್ನನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿದರು. ಆಗ ನನ್ನ ಜೊತೆಗೆ ಎಂಟು ಮಂದಿ ಶಾಸಕರು ಕೂಡ ಪಕ್ಷ ಸೇರಿದ್ದರು. ಅವರಲ್ಲಿ ಕೆಲವರು ಈಗ ನಮ್ಮೊಂದಿಗಿಲ್ಲ. ಅವರಿಗೆಲ್ಲ ನಾನು ಚಿರಋಣಿ ಎಂದು ಹೇಳಿದರು.

ನಾನು ಕೊನೆಯ ಉಸಿರಿರುವ ತನಕ ಕೋಮುವಾದಿಗಳ ವಿರುದ್ಧ ಹೋರಾಟ ಮಾಡುತ್ತೇನೆ. ಸಂವಿಧಾನಕ್ಕೆ ಯಾರೇ ಧಕ್ಕೆ ತಂದರೂ ಅದರ ವಿರುದ್ಧ ಹೋರಾಡುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದರು.

ತಮ್ಮ ರಾಜಕೀಯ ಬದುಕಿನ ಬಗ್ಗೆ ಮಾತನಾಡಿದ ಅವರು, “ಹಳ್ಳಿಯಿಂದ ಬಂದ ನಾನು ಶಾಸಕ, ಸಚಿವ, ವಿರೋಧ ಪಕ್ಷದ ನಾಯಕ ಅಥವಾ ಮುಖ್ಯಮಂತ್ರಿ ಆಗುತ್ತೇನೆ ಎಂದು ಯಾವತ್ತೂ ಕನಸು ಕಂಡಿರಲಿಲ್ಲ” ಎಂದು ಹೇಳಿದರು.

2006ರಲ್ಲಿ ಕಾಂಗ್ರೆಸ್‌ಗೆ ಸೇರಿದ ಬಳಿಕ ಕಾರ್ಯಕರ್ತರು, ಮುಖಂಡರು, ಶಾಸಕರು ಮತ್ತು ಸಂಸದರು ನನಗೆ ಅಪಾರ ಪ್ರೀತಿ ತೋರಿಸಿದ್ದಾರೆ. ನನಗೆ ಅವಕಾಶ ಕಲ್ಪಿಸಿದ್ದಾರೆ. ಅವರಿಗೆಲ್ಲ ನಾನು ಕೃತಜ್ಞ ಎಂದು ಹೇಳಿದರು.

ಮುಖ್ಯಮಂತ್ರಿಯಾಗಿ ತಮ್ಮ ಜೊತೆ ಕೆಲಸ ಮಾಡಿದ ಸಹೋದ್ಯೋಗಿಗಳ ಬೆಂಬಲ ಮತ್ತು ಸಹಕಾರವನ್ನು ನೆನೆದು ಭಾವುಕರಾದ ಸಿದ್ದರಾಮಯ್ಯ, ಅವರ ಪ್ರೀತಿ ಮತ್ತು ಸಹಕಾರಕ್ಕೆ ನಾನು ಯಾವಾಗಲೂ ಚಿರಋಣಿ ಆಗಿರುತ್ತೇನೆ ಎಂದರು.

ತಮ್ಮ ರಾಜಕೀಯ ಪ್ರವೇಶದ ಕುರಿತು ಮಾತನಾಡಿದ ಅವರು, ನನ್ನ ರಾಜಕೀಯ ಪ್ರವೇಶ ಆಕಸ್ಮಿಕ. ನನಗೆ ಯಾವುದೇ ರಾಜಕೀಯ ಕುಟುಂಬದ ಹಿನ್ನೆಲೆ ಇರಲಿಲ್ಲ ಎಂದು ಹೇಳಿದರು. ರಾಜಕೀಯಕ್ಕೆ ಬಂದ ದಿನದಿಂದಲೇ ಬುದ್ಧ, ಬಸವಣ್ಣ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ತತ್ವ-ಆದರ್ಶಗಳಲ್ಲಿ ನಂಬಿಕೆ ಇಟ್ಟಿದ್ದೇನೆ. ಸಂವಿಧಾನದ ಮೇಲೆ ಅಪಾರ ವಿಶ್ವಾಸವಿದೆ ಎಂದು ಹೇಳಿದರು.

ಕೊನೆಯಲ್ಲಿ ಕುವೆಂಪು ಅವರ ಸಾಲುಗಳನ್ನು ಉಲ್ಲೇಖಿಸಿದ ಸಿದ್ದರಾಮಯ್ಯ, “ಇಡೀ ಸಮಾಜ ಸರ್ವಜನಾಂಗದ ಶಾಂತಿಯ ತೋಟವಾಗಬೇಕು ಎಂಬುದು ನನ್ನ ನಂಬಿಕೆ” ಎಂದು ಕರೆ ನೀಡಿದರು.

error: Content is protected !!