Home Blog

ಕರ್ನಾಟಕದಲ್ಲಿ ಬೇಸಿಗೆ ಮಳೆ ಆರ್ಭಟ: ಆಲಿಕಲ್ಲು ಮಳೆಗೆ ಜನತೆ ಖುಷ್!

ಬೆಂಗಳೂರು: ಕರ್ನಾಟಕದಲ್ಲಿ ಬೇಸಿಗೆ ಮಳೆಯ ಆರ್ಭಟ ಮುಂದುವರಿದಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣದ ನಡುವೆಯೇ ಸಂಜೆ ವೇಳೆ ನಗರದ ಹಲವೆಡೆ ಮಳೆ ಸುರಿದು, ಬಿಸಿಲಿನ ತಾಪದಿಂದ ಬಳಲುತ್ತಿದ್ದ ಜನತೆಗೆ ತಂಪಿನ ಅನುಭವ ನೀಡಿದೆ.

ಮೆಜೆಸ್ಟಿಕ್, ಶಾಂತಿನಗರ, ಕಾಡುಗೋಡಿ, ಜಯನಗರ, ಬಸವೇಶ್ವರನಗರ, ವಿಲ್ಸನ್ ಗಾರ್ಡನ್ ಹಾಗೂ ರಿಚ್ಮಂಡ್ ಟೌನ್ ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ಅಪರೂಪದ ಈ ದೃಶ್ಯ ಕಂಡು ನಗರ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ದಾವಣಗೆರೆ ಜಿಲ್ಲೆಯ ಗುಮ್ಮನೂರು, ಗುಡಾಳ್, ಹೆಬ್ಬಾಳ್, ಆನಗೋಡು ಸೇರಿದಂತೆ ಹಲವೆಡೆ ಮಳೆಯಾಗಿದ್ದು, ಆಲಿಕಲ್ಲುಗಳಿಂದ ರಸ್ತೆ ತುಂಬಿ ಜಮ್ಮು ಕಾಶ್ಮೀರದಂತೆ ಕಾಣಿಸಿಕೊಂಡಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಬಿರುಗಾಳಿ ಸಮೇತ ಭಾರೀ ಮಳೆ ಸುರಿದಿದ್ದು, ಮಳೆಯ ತೀವ್ರತೆಗೆ ರಸ್ತೆಗಳು ಕಾಣದಂತಾಗಿವೆ. ಗಾಳಿಯ ರಭಸಕ್ಕೆ ತೆಂಗಿನ ಗರಿಗಳು ಹಾನಿಗೊಳಗಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ. ಅಕಾಲಿಕ ಮಳೆಯಿಂದ ರೈತರಿಗೆ ಸಂಕಷ್ಟ ಎದುರಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಂಬಾರು ಗ್ರಾಮದಲ್ಲೂ ಆಲಿಕಲ್ಲು ಮಳೆಯಾಗಿದ್ದು, ಬಿಸಿಲಿನ ತಾಪಕ್ಕೆ ಮಳೆರಾಯ ತಂಪು ತಂದಿದ್ದಾನೆ.

ಇದೇ ವೇಳೆ ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಿರಂತರ ಮಳೆಯಾಗಿದ್ದು, ವರ್ಷದ ಮೊದಲ ಮಳೆಗೆ ಜನರು ಸಂತಸಗೊಂಡಿದ್ದಾರೆ. ಬಿಸಿಲಿನ ಬೇಗೆಯಿಂದ ಬಸವಳಿದಿದ್ದವರಿಗೆ ವರುಣ ಸಿಂಚನ ನೀಡಿದಂತಾಗಿದೆ.

 

ಮದುವೆ ಮನೆಗಳಲ್ಲಿ ಸರಣಿ ಕಳ್ಳತನ: ಪ್ಯಾಲೇಸ್ ಗ್ರೌಂಡ್‌ನಲ್ಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕ ಕಳ್ಳ!

ಬೆಂಗಳೂರು: ಮದುವೆ ಮನೆಗಳಲ್ಲಿ ಸರಣಿ ಕಳ್ಳತನ ನಡೆಸುತ್ತಿದ್ದ ಕುಖ್ಯಾತ ಆರೋಪಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.

ಬಾಬು ಅಲಿಯಾಸ್ ಪಲ್ಸರ್ ಬಾಬು ಬಂಧಿತ ಆರೋಪಿಯಾಗಿದ್ದು, ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ವೇಳೆ ರೆಡ್‌ಹ್ಯಾಂಡ್ ಆಗಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಮದುವೆ ಮನೆಗಳಲ್ಲಿ ಜನರ ಗಮನ ಬೇರೆಡೆ ಇರುವಾಗ, ವಿಶೇಷವಾಗಿ ಚಿಕ್ಕ ಮಕ್ಕಳನ್ನು ಗುರಿಯಾಗಿಸಿಕೊಂಡು ಚಿನ್ನಾಭರಣ, ಮೊಬೈಲ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕದ್ದುಕೊಂಡು ಪರಾರಿಯಾಗುತ್ತಿದ್ದನು. ಇದಲ್ಲದೆ, ಕ್ಯಾಮೆರಾ, ಲ್ಯಾಪ್‌ಟಾಪ್ ಹಾಗೂ ಬೈಕ್‌ಗಳನ್ನೂ ಕಳ್ಳತನ ಮಾಡುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಆರೋಪಿ ದೊಡ್ಡ ದೊಡ್ಡ ಮದುವೆ ಛತ್ರಗಳನ್ನು ಟಾರ್ಗೆಟ್ ಮಾಡಿಕೊಂಡಿದ್ದು, ಇಂತಹ ರೀತಿಯಲ್ಲಿ ಬರೋಬ್ಬರಿ 19 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಐಷಾರಾಮಿ ಜೀವನ ಮತ್ತು ಮೋಜುಮಸ್ತಿಗಾಗಿ ಕಳ್ಳತನ ನಡೆಸುತ್ತಿದ್ದ ಆತ ಪದೇಪದೇ ಜೈಲಿಗೆ ಹೋಗಿ ಬರುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಕದ್ದ ಚಿನ್ನಾಭರಣಗಳನ್ನು ಕರಗಿಸಿ ತಿರುಪತಿ ಲಾಕೆಟ್ ಹಾಗೂ ಉಂಗುರಗಳ ರೂಪದಲ್ಲಿ ತಯಾರಿಸಿಕೊಂಡು ಬಳಸುತ್ತಿದ್ದನು. ಕಳ್ಳತನದಿಂದ ಬಂದ ಹಣದಲ್ಲಿ ಕಾರುಗಳನ್ನು ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದನೆಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಸದ್ಯ ಆರೋಪಿಯಿಂದ ಒಟ್ಟು 42.38 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 2 ಕಾರುಗಳು, 132 ಗ್ರಾಂ ಚಿನ್ನಾಭರಣ, 7 ಮೊಬೈಲ್‌ಗಳು, 1 ಕ್ಯಾಮೆರಾ, 2 ಲೆನ್ಸ್‌ಗಳು, 2 ಲ್ಯಾಪ್‌ಟಾಪ್‌ಗಳು, 1.20 ಲಕ್ಷ ನಗದು ಹಾಗೂ 4 ಬೈಕ್‌ಗಳು ಸೇರಿವೆ.

ಪಲ್ಸರ್ ಬಾಬು ಬಂಧನದಿಂದ ಸದಾಶಿವನಗರ, ವರ್ತೂರು, ಜಾಲಹಳ್ಳಿ, ಹೆಣ್ಣೂರು ಮತ್ತು ಬಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ 8 ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಣ್ಣ ಮಕ್ಕಳಲ್ಲಿ ಪ್ರೋಟೀನ್ ಕೊರತೆ ಕಂಡುಹಿಡಿಯುವುದು ಹೇಗೆ? ಯಾವ ರೀತಿಯ ಲಕ್ಷಣ ಕಂಡುಬರುತ್ತದೆ!?

0

ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಪ್ರೋಟೀನ್ ಅತ್ಯಂತ ಅಗತ್ಯವಾದ ಪೋಷಕಾಂಶವಾಗಿದ್ದು, ಇದರ ಕೊರತೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಬೆಳೆಯುತ್ತಿರುವ ಮಕ್ಕಳಲ್ಲಿ ಹೊಸ ಸೆಲ್‌ಗಳ ನಿರ್ಮಾಣ, ಸ್ನಾಯುಗಳ ಬೆಳವಣಿಗೆ ಹಾಗೂ ರೋಗನಿರೋಧಕ ಶಕ್ತಿ ಬಲಪಡಿಸಲು ಪ್ರೋಟೀನ್ ಮುಖ್ಯ ಪಾತ್ರವಹಿಸುತ್ತದೆ. ಆದರೆ ಹಲವಾರು ಸಂದರ್ಭಗಳಲ್ಲಿ ಮಕ್ಕಳಲ್ಲಿ ಪ್ರೋಟೀನ್ ಕೊರತೆಯ ಲಕ್ಷಣಗಳನ್ನು ಪೋಷಕರು ಸುಲಭವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ.

ಪ್ರೋಟೀನ್ ಕೊರತೆಯಾದರೆ ಮಕ್ಕಳಲ್ಲಿ ತೂಕ ಕಡಿಮೆಯಾಗುವುದು, ಎತ್ತರ ಸರಿಯಾಗಿ ಹೆಚ್ಚದಿರುವುದು, ಸ್ನಾಯುಗಳ ಬೆಳವಣಿಗೆ ನಿಧಾನಗೊಳ್ಳುವುದು ಸಾಮಾನ್ಯ ಲಕ್ಷಣಗಳಾಗಿವೆ. ಜೊತೆಗೆ ರೋಗನಿರೋಧಕ ಶಕ್ತಿ ಕುಗ್ಗುವುದರಿಂದ ಮಕ್ಕಳಿಗೆ ಆಗಾಗ ಕಾಯಿಲೆಗಳು ಬರುವುದು, ಚರ್ಮದ ಗುಣಮಟ್ಟ ಹದಗೆಡುವುದು ಮತ್ತು ಕೂದಲು ಉದುರುವ ಸಮಸ್ಯೆಗಳು ಕಾಣಿಸಬಹುದು. ದಣಿವು ಮತ್ತು ದುರ್ಬಲತೆ ಕೂಡ ಪ್ರಮುಖ ಲಕ್ಷಣಗಳಾಗಿ ಕಾಣಿಸಿಕೊಳ್ಳುತ್ತವೆ.

ಮಕ್ಕಳಲ್ಲಿ ಪ್ರೋಟೀನ್ ಕೊರತೆಗೆ ಪ್ರಮುಖ ಕಾರಣ ಸರಿಯಾದ ಆಹಾರ ಪದ್ಧತಿ ಅನುಸರಿಸದಿರುವುದಾಗಿದೆ. ಹಸಿರು ತರಕಾರಿ, ಧಾನ್ಯಗಳು ಮತ್ತು ಹಣ್ಣುಗಳನ್ನು ಆಹಾರದಲ್ಲಿ ಸೇರಿಸದಿರುವುದು ಈ ಸಮಸ್ಯೆಗೆ ಕಾರಣವಾಗಬಹುದು ಎಂದು ಹೇಳಲಾಗಿದೆ.

ಹೀಗಾಗಿ ಮಕ್ಕಳ ಆಹಾರದಲ್ಲಿ ಹಾಲು, ಮೊಸರು, ಮೊಟ್ಟೆ ಸೇರಿದಂತೆ ಪ್ರೋಟೀನ್ ಸಮೃದ್ಧ ಆಹಾರಗಳನ್ನು ಸೇರಿಸುವುದು ಅವಶ್ಯಕ. ಜೊತೆಗೆ ಚಿಕನ್ ಮತ್ತು ಮೀನು ಕೂಡ ಉತ್ತಮ ಪ್ರೋಟೀನ್ ಮೂಲಗಳಾಗಿವೆ ಎಂದು ಸಲಹೆ ನೀಡಲಾಗಿದೆ.

ವಯಸ್ಸಿನ ಪ್ರಕಾರ ಮಕ್ಕಳಿಗೆ ಅಗತ್ಯವಿರುವ ಪ್ರೋಟೀನ್ ಪ್ರಮಾಣವೂ ವಿಭಿನ್ನವಾಗಿದ್ದು, 1ರಿಂದ 3 ವರ್ಷದ ಮಕ್ಕಳಿಗೆ ದಿನಕ್ಕೆ 13 ಗ್ರಾಂ, 4ರಿಂದ 8 ವರ್ಷದವರಿಗೆ 19-20 ಗ್ರಾಂ ಮತ್ತು 9ರಿಂದ 13 ವರ್ಷದ ಮಕ್ಕಳಿಗೆ ಸುಮಾರು 34 ಗ್ರಾಂ ಪ್ರೋಟೀನ್ ಅಗತ್ಯವಿದೆ ಎಂದು ಮಾಹಿತಿ ನೀಡಲಾಗಿದೆ.

ಬೆಂಗಳೂರು ವಿಮಾನ ನಿಲ್ದಾಣಗಳ ಸುತ್ತಮುತ್ತಲ ಕಟ್ಟಡಗಳ ಎತ್ತರದ ಮಿತಿ ಮರುಪರಿಶೀಲಿಸಲು ಕೇಂದ್ರ ಸಚಿವರಿಗೆ ಡಿ.ಕೆ. ಶಿವಕುಮಾರ್ ಮನವಿ

0

ನವದೆಹಲಿ: ಬೆಂಗಳೂರಿನಲ್ಲಿರುವ ಹೆಚ್ಎಎಲ್, ಜಕ್ಕೂರು, ವಾಯುನೆಲೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಕಟ್ಟಡ ಎತ್ತರದ ಮಿತಿಯಿಂದ ಅಭಿವೃದ್ಧಿ ಕಾಮಗಾರಿಗೆ ತೊಡಕಾಗಿದ್ದು, ಈ ಮಿತಿಯ ಬಗ್ಗೆ ಪರಿಶೀಲನೆ ನಡೆಸುವಂತೆ ಕೇಂದ್ರ ನಾಗರೀಕ ವಿಮಾನಯಾನ ಸಚಿವರಿಗೆ ಮನವಿ ಮಾಡಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಹಿತಿ ನೀಡಿದರು.

ಕೇಂದ್ರ ವಿಮಾನಯಾನ ಸಚಿವರಾದ ರಾಮ್ ಮೋಹನ್ ರೆಡ್ಡಿ ಅವರನ್ನು ಭೇಟಿ ಮಾಡಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಬುಧವಾರ ಮಾತನಾಡಿದರು. ಸಚಿವರೊಂದಿಗೆ ನಾಗರೀಕ ವಿಮಾನಯಾನ ಸಚಿವಾಲಯ ಹಾಗೂ ಹೆಚ್ಎಎಲ್ ನಿಂದ ಎತ್ತರದ ಮಿತಿ ಬಗ್ಗೆ ಚರ್ಚೆ ಮಾಡಿದೆವು. ಹೈದರಾಬಾದ್, ಮುಂಬೈ ಸೇರಿದಂತೆ ಬೇರೆ ಕಡೆಗಳಲ್ಲಿ ಮಿತಿ ಕಡಿಮೆ ಇದೆ.

ಬೇರೆ ನಗರಗಳಲ್ಲಿ ಅರುವಂತೆ ಬೆಂಗಳೂರಿನಲ್ಲೂ ಎತ್ತರದ ಮಿತಿ ಇರಬೇಕು ಎಂದು ಮನವಿ ಮಾಡಿದ್ದೇವೆ. ಈ ಕಟ್ಟಡ ಎತ್ತರದ ಮಿತಿಯಿಂದಾಗಿ ಬೆಂಗಳೂರಿನಲ್ಲಿ ನಾಗರೀಕರು ಪ್ರೀಮಿಯಂ ಎಫ್ಎಆರ್ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ. ಇದರಿಂದ ಸರ್ಕಾರಕ್ಕೂ ಹಣ ಬರುತ್ತಿಲ್ಲ.

ಕೇಂದ್ರ ಸರ್ಕಾರವೇ ಎಫ್ಎಆರ್ ಕಡಿಮೆ ಮಾಡಿ ಪ್ರೀಮಿಯಂ ಎಫ್ಐಆರ್ ಹೆಚ್ಚಿಸಿ ಎಂದು ಹೇಳುತ್ತದೆ. ಹೀಗಾಗಿ ನಾವು ಅನೇಕ ತೀರ್ಮಾನ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಿರುವೆ. ಅವರು ರಕ್ಷಣಾ ಮಂತ್ರಿ ಜತೆಗೆ ಮಾತನಾಡುವುದಾಗಿ ತಿಳಿಸಿದ್ದಾರೆ. ನಮ್ಮ ಅಧಿಕಾರಿಗಳು ಹೆಚ್ಎಎಲ್ ಜತೆ ಚರ್ಚೆ ಮಾಡಿದ್ದಾರೆ. ನಾನು ಕೂಡ ರಕ್ಷಣಾ ಸಚಿವರ ಭೇಟಿಗೆ ಸಮಯ ತೆಗೆದುಕೊಂಡು ನಮ್ಮ ಈ ಸಮಸ್ಯೆಗಳನ್ನು ಅವರಿಗೆ ವಿವರಿಸುತ್ತೇನೆ. ಬೆಂಗಳೂರಿನ ಅಭಿವೃದ್ಧಿಗಾಗಿ ನಾವು ಒಂದು ಪರಿಹಾರ ಕಂಡುಕೊಳ್ಳುತ್ತೇವೆ” ಎಂದು ತಿಳಿಸಿದರು.

“ನಾನು, ಸಚಿವರಾದ ಬೋಸರಾಜು, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಅವರು ಇಂದು ನಾಗರೀಕ ವಿಮಾನಯಾನ ಸಚಿವರನ್ನು ಭೇಟಿ ಮಾಡಿದೆವು. ಬೆಂಗಳೂರು ಬೆಳವಣಿಗೆ ಹಾಗೂ ಸಂಚಾರ ದಟ್ಟಣೆ ನಿವಾರಣೆ ಮಾಡಬೇಕಿದೆ.

ಹೊರವಲಯದಲ್ಲಿ ಬಡಾವಣೆಗಳು ಹೆಚ್ಚುತ್ತಿವೆ. ಅಲ್ಲೆಲ್ಲಾ ವಾಹನಗಳ ಸಂಖ್ಯೆ ಹೆಚ್ಚಾಗಿವೆ. ಬೆಂಗಳೂರು ನಗರದಲ್ಲಿ ಹೆಚ್ಎಎಲ್, ಜಕ್ಕೂರು, ಯಲಹಂಕದ ವಾಯುನೆಲೆ ಹಾಗೂ ದೇವನಹಳ್ಳಿಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣವಿದೆ. ಈ ಸುತ್ತಮುತ್ತಲ ಪ್ರದೇಶದಲ್ಲಿ ಎತ್ತರದ ಕಟ್ಟಡ ನಿರ್ಮಾಣ ಸಾಧ್ಯವಾಗುವುದಿಲ್ಲ” ಎಂದರು.

ಸರ್ಕಾರಕ್ಕೆ ಸಹಕಾರ ನೀಡದ ನೈಸ್ ಸಂಸ್ಥೆಗೆ ತಕ್ಕ ಉತ್ತರ:

“ನಾನು ಸ್ಕೈಡೆಕ್ ಮಾಡಲು ಎರಡೂವರೆ ವರ್ಷಗಳಿಂದ ಪ್ರಯತ್ನಪಟ್ಟ ಬಳಿಕ ಈಗ ಕೆಂಪೇಗೌಡ ಲೇಔಟ್ ನಲ್ಲಿ ನಿರ್ಮಿಸಲು ಮುಂದಾಗಿದ್ದೇವೆ. ವಿಮಾನ ನಿಲ್ದಾಣ ಸುತ್ತಮುತ್ತ 20 ಕಿ.ಮೀ ದೂರದಲ್ಲಿ ಇದನ್ನು ಮಾಡಲು ಸಾಧ್ಯವಿಲ್ಲ. ಎನ್ ಜಿಎಫ್ ಬಳಿ ಸ್ಕೈಡೆಕ್ ಮಾಡಲು ಜಾಗ ಉತ್ತಮವಾಗಿತ್ತು.

ಮೆಟ್ರೋ ಸೌಲಭ್ಯವಿತ್ತು. ಜತೆಗೆ ನೈಸ್ ರಸ್ತೆ ಬಳಿ ಸೋಂಪುರ ವೃತ್ತದ ಬಳಿ ನಿರ್ಮಾಣಕ್ಕೆ ಸಲಹೆ ನೀಡಿದ್ದರು. ಆದರೆ ನೈಸ್ ಸಂಸ್ಥೆಯವರು ಸಹಕಾರ ನೀಡಲಿಲ್ಲ. ನೈಸ್ ಸಂಸ್ಥೆ ವಿಚಾರವಾಗಿ ಏನು ಮಾಡಬೇಕು ಎಂದು ಮುಂದೆ ತೀರ್ಮಾನ ಮಾಡುತ್ತೇವೆ. ಅವರು ನಿರಾಕ್ಷೇಪಣ ಪತ್ರವನ್ನು ನೀಡಲಿಲ್ಲ. ಸರ್ಕಾರಕ್ಕೆ ಸಹಕಾರ ನೀಡದವರಿಗೆ ತಕ್ಕ ಉತ್ತರ ನೀಡಬೇಕಾಗುತ್ತದೆ” ಎಂದು ಹೇಳಿದರು.

“ಅಂತರರಾಷ್ಟ್ರೀಯ ಮಟ್ಟದಲ್ಲಿರುವ ಮಾರ್ಗಸೂಚಿ ಹಾಗೂ ದೇಶದ ಇತರೆ ನಗರಗಳಲ್ಲಿ ಇರುವ ಮಾರ್ಗಸೂಚಿ ಬಗ್ಗೆ ಅಧ್ಯಯನ ಮಾಡುತ್ತಿರುವುದಾಗಿ ಕೇಂದ್ರ ಸಚಿವರು ತಿಳಿಸಿದ್ದಾರೆ. ಮುಂದಿನ ಒಂದು ವಾರದಲ್ಲಿ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ನಮ್ಮ ಅಧಿಕಾರಿಗಳಿಗೂ ಭಾಗವಹಿಸಲು ಹೇಳಿದ್ದಾರೆ. ಬೆಂಗಳೂರು ಬಿಸಿನೆಸ್ ಕಾರಿಡಾರ್ ಬರುತ್ತಿದ್ದು, ಭೂ ಸಂತ್ರಸ್ತರು ತಮ್ಮ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ಮುಂದಾಗುತ್ತಾರೆ. ಅವರಿಗೆ ಎತ್ತರದ ಮಿತಿ ಇದ್ದರೆ ಕಷ್ಟವಾಗುತ್ತದೆ” ಎಂದು ತಿಳಿಸಿದರು.

ಎರಡನೇ ವಿಮಾನ ನಿಲ್ದಾಣದ ಬಗ್ಗೆ ರಾಜ್ಯ ಸರ್ಕಾರ ಚರ್ಚಿಸಿ ತೀರ್ಮಾನ

“ಇನ್ನು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ವಿಚಾರವಾಗಿ ಕೇಂದ್ರ ಸರ್ಕಾರ ತಮ್ಮ ಅಭಿಪ್ರಾಯ ಕಳುಸಿದ್ದು, ನೀವೇ ಜಾಗ ನಿಗದಿ ಮಾಡಿ ಎಂದು ಹೇಳಿದೆ. ನಮ್ಮ ಬಳಿ ಎರಡು ಮೂರು ಆಯ್ಕೆಗಳಿದ್ದು, ನಮ್ಮ ಸರ್ಕಾರ ಇದರ ಸಾಧಕ ಬಾಧಕಗಳನ್ನು ಚರ್ಚೆ ಮಾಡಿ ತೀರ್ಮಾನ ಮಾಡಲಿದೆ. ನಾನು ಬೆಂಗಳೂರಿಗೆ ವಾಪಸ್ಸಾದ ಬಳಿಕ ಕೇಂದ್ರ ಸರ್ಕಾರ ಕಳುಹಿಸಿರುವ ಅಭಿಪ್ರಾಯ ಪರಿಶೀಲನೆ ಮಾಡುತ್ತೇನೆ. ನಾನು ಬೆಂಗಳೂರು ದೃಷ್ಟಿಯಿಂದ ಈ ವಿಚಾರವನ್ನು ಕೇಂದ್ರ ಸಚಿವರ ಜತೆ ಪ್ರಸ್ತಾಪಿಸಿದೆ. ಈ ವಿಮಾನ ನಿಲ್ದಾಣ ನಿರ್ಮಾಣದ ಜವಾಬ್ದಾರಿ ಸಚಿವರಾದ ಎಂ.ಬಿ. ಪಾಟೀಲ್ ಅವರು ನೋಡಿಕೊಳ್ಳುತ್ತಾರೆ” ಎಂದರು.

ಅಂತರ್ಜಾತಿ ವಿವಾಹವಾಗುವವರಿಗೆ ಶುಭ ಸುದ್ದಿ: ‘ಇವನಮ್ಮವ ಇವ ನಮ್ಮವ’ ವಿಧೇಯಕ ವಿಧಾನಸಭೆಯಲ್ಲಿ ಮಂಡನೆ

ಬೆಂಗಳೂರು: ಅಂತರ್ಜಾತಿ ವಿವಾಹಿತರ ರಕ್ಷಣೆಗೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ‘ಇವನಮ್ಮವ ಇವ ನಮ್ಮವ’ ಎಂಬ ಹೊಸ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿದೆ.

ಅಂತರ್ಜಾತಿ ವಿವಾಹದ ಸಂದರ್ಭ ಕುಟುಂಬಸ್ಥರಿಂದ ಉಂಟಾಗುವ ವಿರೋಧ, ಸಾಮಾಜಿಕ ಬಹಿಷ್ಕಾರ ಮತ್ತು ಹಿಂಸೆ ಘಟನೆಗಳನ್ನು ತಡೆಯುವ ಉದ್ದೇಶದಿಂದ ಈ ಕಾಯ್ದೆ ತರಲು ಮುಂದಾಗಿದೆ. ಈ ವಿಧೇಯಕ ಜಾರಿಗೆ ಬಂದರೆ ಅಂತರ್ಜಾತಿ ವಿವಾಹಕ್ಕೆ ಹೆಚ್ಚಿನ ಕಾನೂನುಬದ್ಧ ರಕ್ಷಣೆ ಸಿಗಲಿದೆ.

ವಿಧೇಯಕದ ಪ್ರಮುಖ ಅಂಶಗಳು:

  • ಅಂತರ್ಜಾತಿ ವಿವಾಹ ಮಾಡಿದ ದಂಪತಿಗಳಿಗೆ ಸಾಮಾಜಿಕ, ಆರ್ಥಿಕ ಬಹಿಷ್ಕಾರ ವಿಧಿಸುವುದು ಅಪರಾಧ

  • ದಂಪತಿಯನ್ನು ಮನೆ ಬಿಟ್ಟು ಹೋಗುವಂತೆ ಒತ್ತಾಯಿಸುವುದು ಕಾನೂನುಬಾಹಿರ

  • ಜಾತಿ ಅಥವಾ ಸಂಪ್ರದಾಯದ ಹೆಸರಿನಲ್ಲಿ ಹಿಂಸೆ, ಕಿರುಕುಳಕ್ಕೆ ಕಟ್ಟುನಿಟ್ಟಿನ ನಿಷೇಧ

  • ಪೂಜಾ ಸ್ಥಳಗಳಿಗೆ ಪ್ರವೇಶ ನಿರಾಕರಣೆ ಮಾಡುವಂತಿಲ್ಲ

  • ಆಸ್ತಿ ಕಳೆದುಕೊಳ್ಳುವಂತೆ ಒತ್ತಡ ಹಾಕುವುದು ಅಪರಾಧ

  • ಉದ್ಯೋಗಕ್ಕೆ ಅಡ್ಡಿಪಡಿಸುವುದು, ಅವಕಾಶ ನಿರಾಕರಿಸುವುದು ಕಾನೂನುಬಾಹಿರ

  • ವಯಸ್ಕರ ವಿವಾಹಕ್ಕೆ ಪೋಷಕರ ಅನುಮತಿ ಅಗತ್ಯವಿಲ್ಲ

  • ದಂಪತಿಗೆ ಮಾನಸಿಕ, ದೈಹಿಕ ಹಿಂಸೆ ನೀಡುವುದು ಅಪರಾಧ

  • ಕಿಡ್ನ್ಯಾಪ್, ಬಲವಂತವಾಗಿ ಬೇರ್ಪಡಿಸುವುದು ಕಾನೂನುಬಾಹಿರ

  • ಸಹಾಯ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತಿಲ್ಲ

  • ಬ್ಯಾಂಕ್ ಖಾತೆ ಸ್ಥಗಿತಗೊಳಿಸುವುದು ಅಥವಾ ಒತ್ತಡ ಹೇರುವುದು ಅಪರಾಧ

  • ಲೈಂಗಿಕ ಹಿಂಸೆ, ಬಲವಂತದ ಗರ್ಭಪಾತಕ್ಕೆ ಕಠಿಣ ಶಿಕ್ಷೆ

  • ಮರ್ಯಾದಾ ಹತ್ಯೆಗೆ 5 ವರ್ಷ ಜೈಲು ಮತ್ತು ದಂಡ

  • ದಂಪತಿಗೆ ಬೆದರಿಕೆ ಹಾಕಿದರೆ 5ರಿಂದ 7 ವರ್ಷಗಳವರೆಗೆ ಶಿಕ್ಷೆ

  • ಸಾಕ್ಷಿಗಳ ಗುರುತು, ವಿಳಾಸ ರಹಸ್ಯವಾಗಿರಬೇಕು

ಈ ವಿಧೇಯಕದಲ್ಲಿ ಕಠಿಣ ಶಿಕ್ಷೆಗಳನ್ನೂ ಒಳಗೊಂಡಿರುವುದರಿಂದ, ಅಂತರ್ಜಾತಿ ವಿವಾಹಿತ ಜೋಡಿಗಳಿಗೆ ಭದ್ರತೆ ಮತ್ತು ಕಾನೂನುಬದ್ಧ ಬೆಂಬಲ ಒದಗಿಸುವ ಉದ್ದೇಶ ಹೊಂದಿದೆ.

ಅಂಗನವಾಡಿ ಕಾರ್ಯಕರ್ತೆಯರ ಕಡೆ ಕೇಂದ್ರ ಸರ್ಕಾರವೂ ಕಣ್ತೆರೆಯಲಿ: ಲಕ್ಷ್ಮೀ ಹೆಬ್ಬಾಳ್ಕರ್ ಆಗ್ರಹ

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ವಿಷಯದಲ್ಲಿ ಕೇವಲ ರಾಜ್ಯ ಸರ್ಕಾರದ ಕಡೆಗೆ ಬೊಟ್ಟು ಮಾಡುವುದು ಸರಿಯಲ್ಲ, ಕೇಂದ್ರ ಸರ್ಕಾರವೂ ಈ ವಿಷಯದಲ್ಲಿ ಕಣ್ತೆರೆಯಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕ‌ರ್ ಹೇಳಿದರು.

ಬಜೆಟ್ ಅಧಿವೇಶನದ ಬುಧವಾರ ಪ್ರಶೋತ್ತರ ವೇಳೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕ ರಾಜ್ಯ ಅತಿ ಹೆಚ್ಚು ಗೌರವ ಧನವನ್ನು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ನೀಡುತ್ತಿದೆ.

ಹೆಚ್ಚು ಗೌರವ ಧನ ಕೊಡುತ್ತಿರುವವರ ಪೈಕಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಸರ್ಕಾರದ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅವರ ಬಗ್ಗೆ ಸರ್ಕಾರ ಕಾಳಜಿ ವಹಿಸುತ್ತದೆ. ಹರಿಯಾಣ, ತೆಲಂಗಾಣ ಹಾಗೂ ಕೇರಳ ರಾಜ್ಯಗಳ ಬಳಿಕ ಹೆಚ್ಚು ಗೌರವ ಧನ ಕೊಡಲಾಗುತ್ತಿದೆ ಎಂದರು.

ಅಂಗನವಾಡಿ ಕಾರ್ಯಕರ್ತರಿಗೆ ಕೇಂದ್ರ ಸರ್ಕಾರ 2700 ರೂಪಾಯಿ ಗೌರವ ಧನವನ್ನು ಪಾವತಿಸಿದರೆ, ಉಳಿದ 9800 ರೂಪಾಯಿಯನ್ನು ರಾಜ್ಯ ಸರ್ಕಾರ ಭರಿಸುತ್ತಿದೆ. ಕಳೆದ ಏಪ್ರಿಲ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 1000 ರೂಪಾಯಿ, ಸಹಾಯಕಿಯರಿಗೆ 750 ರೂಪಾಯಿ ಏರಿಕೆ ಮಾಡಲಾಯಿತು.

ಅವರು ಮಾಡುತ್ತಿರುವ ಕೆಲಸಕ್ಕೆ ಇದು ಸಾಕಾಗುತ್ತಿಲ್ಲ, ಸಹಾಯಧನ ಏರಿಕೆ ಮಾಡಬೇಕು ಎಂದು ಮನವಿ ಬಂದಿದ್ದು, ಈ ಸಂಬಂಧ ನಾವು ಈಗಾಗಲೇ ಹಣಕಾಸು ಇಲಾಖೆಗೆ ಮನವಿ ಸಲ್ಲಿಸಿದ್ದೇವೆ. ಆದರೆ ಈ ವಿಷಯದಲ್ಲಿ ಕೇಂದ್ರ ಸರಕಾರ ಒಂದು ಹೆಜ್ಜೆ ಮುಂದೆ ಹೋದರೆ ನಾವೂ ಒಂದು ಹೆಜ್ಜೆ ಮುಂದೆ ಹೋಗುತ್ತೇವೆ. ಅವರೂ ಕಣ್ತೆರೆಯಬೇಕು ಎಂದು ಸಚಿವರು ಹೇಳಿದರು.

ಪ್ರಸಕ್ತ ವರ್ಷದಿಂದ 5,000 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಸರ್ಕಾರಿ ಮಾಂಟೆಸ್ಸರಿ ಆರಂಭಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಪೌಷ್ಟಿಕ ಆಹಾರದ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡುವುದೇ ನಮ್ಮ ಉದ್ದೇಶ. ಬಿಎ.ಬಿಎಡ್, ಎಂಎ, ಎಂಕಾಂ ಪದವಿ ಪಡೆದಿರುವ ಸುಮಾರು 17,000 ಅಂಗನವಾಡಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ, ಸರ್ಕಾರಿ ಮಾಂಟೆಸ್ಸರಿಗಳಲ್ಲಿ ಗುಣಮಟ್ಟ ಕಾಯ್ದುಕೊಳುವುದು ನಮ್ಮ ಉದ್ದೇಶ ಎಂದು ಸಚಿವರು ತಿಳಿಸಿದರು.

ಆಟೋ ಮ್ಯುಟೇಶನ್ ಜಾರಿ: ಶೇ.98 ಖಾತೆ ಬದಲಾವಣೆ ಈಗ ಸ್ವಯಂ ಚಾಲಿತ – ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ಆಸ್ತಿ ನೋಂದಣಿ ಬಳಿಕ ಖಾತೆ ಬದಲಾವಣೆ ಪ್ರಕ್ರಿಯೆಯನ್ನು ಸುಲಭಗೊಳಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಆಟೋ ಮ್ಯುಟೇಶನ್ ವ್ಯವಸ್ಥೆಯ ಮೂಲಕ ಈಗ ಶೇ.98 ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾಗುತ್ತಿವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಪ್ರಶ್ನೆಗೆ ಉತ್ತರಿಸಿದ ಅವರು, ಖಾತೆ ಬದಲಾವಣೆಯಲ್ಲಿ ಆಗುತ್ತಿದ್ದ ವಿಳಂಬದ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಹಂತ ಹಂತವಾಗಿ ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.

ಮೊದಲ ಹಂತದಲ್ಲಿ ಶೇ.66 ರಷ್ಟು ಖಾತೆಗಳನ್ನು ಸ್ವಯಂ ಚಾಲಿತವಾಗಿ ಬದಲಾಯಿಸಲಾಗುತ್ತಿತ್ತು. ಈಗ ಅದನ್ನು ಮತ್ತಷ್ಟು ವಿಸ್ತರಿಸಿ ಶೇ.98ಕ್ಕೆ ಏರಿಸಲಾಗಿದೆ ಎಂದು ವಿವರಿಸಿದರು.

ಪ್ರಸ್ತುತ ಕೆಲ ಖಾತೆಗಳು ಅರ್ಜಿ ಸಲ್ಲಿಸಿದ 3 ಗಂಟೆಗಳಲ್ಲೇ ಬದಲಾಗುತ್ತಿದ್ದು, ಕೆಲವು 8 ದಿನ ಅಥವಾ 16 ದಿನಗಳ ಒಳಗೆ ಕಾನೂನು ಪ್ರಕಾರ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ತಕರಾರು ದಾಖಲಾಗಿದೆಯಾದರೆ ಮಾತ್ರ ವಿಳಂಬವಾಗುತ್ತದೆ ಎಂದು ಹೇಳಿದರು.

ಈ ವ್ಯವಸ್ಥೆಯಿಂದ ಮಧ್ಯವರ್ತಿಗಳ ಅವಶ್ಯಕತೆ ಇಲ್ಲದೆ, ಯಾರನ್ನೂ ಭೇಟಿ ಮಾಡದೇ ಸೇವೆ ಪಡೆಯಬಹುದಾಗಿದೆ. ಇದು ದೇಶದ ಮಟ್ಟದಲ್ಲಿ ಪ್ರಗತಿಪರ ಹೆಜ್ಜೆ ಎಂದು ಸಚಿವರು ತಿಳಿಸಿದ್ದಾರೆ.

ಇದಲ್ಲದೆ, ತಕರಾರು ಸಲ್ಲಿಕೆಯಲ್ಲಿ ದುರುಪಯೋಗ ತಡೆಯಲು ಆಧಾರ್ ಇ-ಕೆವೈಸಿ ಕಡ್ಡಾಯಗೊಳಿಸಲಾಗಿದೆ. ಇದರಿಂದ ಒಂದೇ ವ್ಯಕ್ತಿ ಅನೇಕ ತಕರಾರು ಸಲ್ಲಿಸುವುದನ್ನು ನಿಯಂತ್ರಿಸಲು ಸಾಧ್ಯವಾಗಿದೆ.

ಆರ್‌ಐ ಅಧಿಕಾರಿಗಳು ಅನಾವಶ್ಯಕವಾಗಿ ತಕರಾರು ಸಲ್ಲಿಸುವ ವ್ಯವಸ್ಥೆಯನ್ನು ರದ್ದುಪಡಿಸಿದ್ದು, ಇಲಾಖೆಯಲ್ಲಿ ಪಾರದರ್ಶಕತೆ ಹೆಚ್ಚಿಸಲಾಗಿದೆ ಎಂದು ಸಚಿವರು ಹೇಳಿದರು.

ಗ್ಯಾಸ್ ವಿತರಣೆಗೆ ಸರ್ಕಾರ ಗೈಡ್ ಲೈನ್: ಆಸ್ಪತ್ರೆಗಳಿಗೆ 100%, ಹೋಟೆಲ್ ಗಳಿಗೆ ಕೇವಲ 10%

ಬೆಂಗಳೂರು: ರಾಜ್ಯದಲ್ಲಿ ಉಂಟಾದ ಕಮರ್ಷಿಯಲ್ LPG ಕೊರತೆ ಹಿನ್ನೆಲೆ ಕರ್ನಾಟಕ ಸರ್ಕಾರ ಗ್ಯಾಸ್ ವಿತರಣೆಗೆ ಹೊಸ ಗೈಡ್‌ಲೈನ್ಸ್ ಬಿಡುಗಡೆ ಮಾಡಿದೆ.

ನಾಳೆಯಿಂದಲೇ ಈ ಮಾರ್ಗಸೂಚಿಗಳು ಜಾರಿಗೆ ಬರಲಿದ್ದು, ಅಗತ್ಯ ವಲಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿಶೇಷವಾಗಿ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಶೇ.100 ಗ್ಯಾಸ್ ವಿತರಣೆ ಮಾಡಲು ಸೂಚಿಸಲಾಗಿದೆ.

ಇತರ ಪ್ರಮುಖ ವಲಯಗಳಾದ ಸೀಡ್ ಪ್ರೋಸೆಸಿಂಗ್, ಆಯಿಲ್ ಉತ್ಪಾದನಾ ಕಂಪನಿಗಳು, ಏರ್‌ಲೈನ್ಸ್ ಮತ್ತು ರೈಲ್ವೆಗಳಿಗೆ ಶೇ.70 ಗ್ಯಾಸ್ ನೀಡಲಾಗುತ್ತದೆ. ವೃದ್ಧಾಶ್ರಮಗಳಿಗೂ ಇದೇ ಪ್ರಮಾಣದಲ್ಲಿ ಪೂರೈಕೆ ಮಾಡಲು ಸೂಚಿಸಲಾಗಿದೆ.

ಆದರೆ, ಹೋಟೆಲ್‌ಗಳು, ಇಂಡಸ್ಟ್ರಿಯಲ್ ಕ್ಯಾಂಟೀನ್‌ಗಳು, ಕಾರ್ಪೋರೇಟ್ ಗೆಸ್ಟ್ ಹೌಸ್‌ಗಳು ಮತ್ತು ಫುಡ್ ಪ್ರೋಸೆಸಿಂಗ್ ಕಂಪನಿಗಳಿಗೆ ಕೇವಲ ಶೇ.10 ಗ್ಯಾಸ್ ವಿತರಣೆ ಮಾಡಲು ಸರ್ಕಾರ ನಿರ್ದೇಶನ ನೀಡಿದೆ. ಈ ಗೈಡ್‌ಲೈನ್ಸ್ ಅನುಸರಿಸಿ ಗ್ಯಾಸ್ ಏಜೆನ್ಸಿಗಳು ವಿತರಣೆ ಮಾಡಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

LPG ಸಂಕಷ್ಟ: “ಒಂದು ವಾರ ಸಹಿಸಿಕೊಳ್ಳಿ” – ಹೋಟೆಲ್ʼಗಳಿಗೆ ಸಚಿವ ಮುನಿಯಪ್ಪ ಮನವಿ

ಬೆಂಗಳೂರು: ರಾಜ್ಯದಲ್ಲಿ ಕಮರ್ಷಿಯಲ್ LPG ಕೊರತೆ ಹಿನ್ನೆಲೆಯಲ್ಲಿ ಹೋಟೆಲ್‌ಗಳು ಒಂದು ವಾರ ಸಹಕಾರ ನೀಡಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಮಾಡಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಗ್ಯಾಸ್ ಸಮಸ್ಯೆ ಕುರಿತು ಮಾತನಾಡಿದ ಅವರು, ಗೃಹ ಬಳಕೆಯ ಡೊಮೆಸ್ಟಿಕ್ ಸಿಲಿಂಡರ್‌ಗಳಿಗೆ ಯಾವುದೇ ಕೊರತೆ ಇಲ್ಲ. ಅಗತ್ಯವಿರುವಷ್ಟು ಸರಬರಾಜು ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಆದರೆ ಕಮರ್ಷಿಯಲ್ ಗ್ಯಾಸ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದ್ದು, ಕೇಂದ್ರ ಸರ್ಕಾರ 20% ಮಾತ್ರ ವಿತರಣೆ ಮಾಡಲು ಸೂಚಿಸಿದೆ. ಪ್ರಸ್ತುತ ಸುಮಾರು 9 ಸಾವಿರ ಕಮರ್ಷಿಯಲ್ ಸಿಲಿಂಡರ್‌ಗಳನ್ನು ವಿತರಿಸಲಾಗುತ್ತಿದ್ದು, ಅವುಗಳನ್ನು ಆಸ್ಪತ್ರೆಗಳು, ವಸತಿ ಶಾಲೆಗಳು, ಹಾಸ್ಟೆಲ್‌ಗಳು ಮತ್ತು ಇಂದಿರಾ ಕ್ಯಾಂಟೀನ್‌ಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಸೀಮಿತ ಪ್ರಮಾಣದಲ್ಲಿ ಮಾತ್ರ ಗ್ಯಾಸ್ ನೀಡಲು ಸಾಧ್ಯವಾಗುತ್ತಿದ್ದು, ಇದರಿಂದ ಸಮಸ್ಯೆ ಎದುರಾಗಿದೆ. ಹೀಗಾಗಿ ಒಂದು ವಾರ ಸಹಿಸಿಕೊಳ್ಳುವಂತೆ ಹೋಟೆಲ್‌ ಮಾಲೀಕರಿಗೆ ಮನವಿ ಮಾಡಿದರು.

ಇರಾನ್‌ನ ಪರಿಸ್ಥಿತಿ ಹಿನ್ನೆಲೆ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಈಗಾಗಲೇ 16 ಹಡಗುಗಳು ಕ್ಯೂನಲ್ಲಿ ಇದ್ದು, ಅವು ಬಂದ ನಂತರ ಸಮಸ್ಯೆ ನಿವಾರಣೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಒಂದು ವಾರದ ಬಳಿಕ ಸುಮಾರು 15 ಸಾವಿರ ಸಿಲಿಂಡರ್ ಸಂಗ್ರಹಿಸಿ, ಹೋಟೆಲ್ ಅಸೋಸಿಯೇಷನ್ ಜೊತೆ ಚರ್ಚಿಸಿ ಹಂಚಿಕೆ ಮಾಡುವ ಯೋಜನೆ ಇದೆ ಎಂದು ಸಚಿವರು ಹೇಳಿದರು.

ಶಾರ್ಟ್ ಸರ್ಕ್ಯೂಟ್ ದುರಂತ: EV ಚಾರ್ಜಿಂಗ್ ಪಾಯಿಂಟ್ʼನಲ್ಲಿ ಬೆಂಕಿ, 7 ಮಂದಿ ಸಜೀವ ದಹನ

0

ಭೋಪಾಲ್: ಇವಿ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಭೀಕರ ಅಗ್ನಿ ಅವಘಡ ಸಂಭವಿಸಿ 7 ಮಂದಿ ಸಜೀವ ದಹನಗೊಂಡ ಘಟನೆ ಇಂದೋರ್ನಲ್ಲಿ ನಡೆದಿದೆ.

ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಬಂಗಾಳಿ ಸ್ಕ್ವೇರ್ ಸಮೀಪದ ವಸತಿ ಕಟ್ಟಡದಲ್ಲಿ ಈ ದುರಂತ ಸಂಭವಿಸಿದೆ. ರಾತ್ರಿಯಿಡೀ ಚಾರ್ಜ್ ಮಾಡಲು ಎಲೆಕ್ಟ್ರಿಕ್ ಕಾರನ್ನು ಪ್ಲಗ್ ಇನ್ ಮಾಡಲಾಗಿದ್ದು, ಈ ವೇಳೆ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.

ಅದರಿಂದ ಬೆಂಕಿ ಮನೆಯೊಳಗೆ ಸಂಗ್ರಹಿಸಿದ್ದ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಹಬ್ಬಿ, ನಾಲ್ಕು ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಪರಿಣಾಮ ಬೆಂಕಿ ಮೂರು ಅಂತಸ್ತಿನ ಕಟ್ಟಡವನ್ನೇ ಆವರಿಸಿದೆ.

ಈ ದುರ್ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸ್ಥಳೀಯರು ಅಗ್ನಿಶಾಮಕ ದಳ ಬರುವ ಮುನ್ನ ಮೂವರನ್ನು ರಕ್ಷಿಸಿದ್ದಾರೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ಪತ್ತೆ ಹಚ್ಚಲು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

error: Content is protected !!