Home Blog

ಬಾಕಿ ಇರುವ ರಾಜ್ಯದ ನೀರಾವರಿ ಯೋಜನೆಗಳಿಗೆ ಅನುಮತಿ ಬಗ್ಗೆ ಕರ್ನಾಟಕ ಸಂಸದರ ಜತೆ ಚರ್ಚೆ: ಡಿ.ಕೆ. ಶಿವಕುಮಾರ್

ಬೆಂಗಳೂರು: ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುಮತಿ ಬಾಕಿ ಉಳಿಸಿಕೊಂಡಿದೆ ಆದ ಕಾರಣ ನಾನು, ಹೆಚ್.ಕೆ ಪಾಟೀಲ್ ಹಾಗೂ ಎಂ.ಬಿ ಪಾಟೀಲ್ ಅವರು ಕರ್ನಾಟಕದ ಎಲ್ಲಾ ಸಂಸದರನ್ನು ಭೇಟಿ ಮಾಡಿ ಚರ್ಚಿಸುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ದೆಹಲಿಗೆ ತೆರಳುವ ಮುನ್ನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು.

“ಚರ್ಚೆಯ ವಿಚಾರಗಳನ್ನು ಬಂದ ನಂತರ ತಿಳಿಸುತ್ತೇವೆ. ಎಲ್ಲರು ಒಟ್ಟಾಗಿ ನೀರಾವರಿ ವಿಚಾರಗಳ ಬಗ್ಗೆ ತೀರ್ಮಾನ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಾಯ ಮಾಡುತ್ತೇವೆ” ಎಂದು ಹೇಳಿದರು.

ಬೆಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್: ವೃದ್ಧೆಯಿಂದ 38 ಲಕ್ಷ ರೂ. ದೋಚಿದ ಖದೀಮರು!

0

ಬೆಂಗಳೂರು: ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ವೃದ್ಧೆಯನ್ನು ಬೆದರಿಸಿ 38 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮಾರ್ಚ್ 11ರಂದು ವೃದ್ಧೆಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ಮುಂಬೈ ಶಾಖೆಯಲ್ಲಿ ನಿಮ್ಮ ಹೆಸರಿನಲ್ಲಿ ಖಾತೆ ತೆರೆಯಲಾಗಿದೆ ಹಾಗೂ ಆ ಖಾತೆಯಿಂದ ಭಯೋತ್ಪಾದಕರಿಗೆ ಹಣ ವರ್ಗಾವಣೆ ಆಗುತ್ತಿದೆ ಎಂದು ಬೆದರಿಕೆ ಹಾಕಲಾಗಿದೆ.

ಇದನ್ನು ತನಿಖೆಯ ಭಾಗವೆಂದು ಹೇಳಿ, ಆರ್‌ಬಿಐ ಪರಿಶೀಲನೆ ನಡೆಯಲಿದೆ. 38 ಲಕ್ಷ ರೂಪಾಯಿ ಜಮಾ ಮಾಡಿದರೆ ಒಂದು ಗಂಟೆಯೊಳಗೆ ಹಣವನ್ನು ಮರಳಿ ನೀಡಲಾಗುತ್ತದೆ ಎಂದು ನಂಬಿಸಿದ್ದಾರೆ.

ವಂಚಕರ ಮಾತು ನಂಬಿದ ಗೀತಾ ಎಂಬ ವೃದ್ಧೆ ತನ್ನ ಬಳಿ ಇದ್ದ 38 ಲಕ್ಷ ರೂಪಾಯಿಯನ್ನು ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಿದ್ದಾರೆ. ಜೊತೆಗೆ, 72 ಗಂಟೆಗಳ ಕಾಲ ಯಾರನ್ನೂ ಸಂಪರ್ಕಿಸಬಾರದು ಎಂದು ಕೂಡ ಸೂಚಿಸಿದ್ದಾರೆ.

ಎರಡು ದಿನಗಳಾದರೂ ಹಣ ಮರಳಿ ಸಿಗದ ಹಿನ್ನೆಲೆಯಲ್ಲಿ ಅನುಮಾನಗೊಂಡ ವೃದ್ಧೆ, ತಾನು ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಮೋಸ ಹೋಗಿರುವುದನ್ನು ಅರಿತು ಪೂರ್ವ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರ ಪತ್ತೆಗೆ ಮುಂದಾಗಿದ್ದಾರೆ.

ರಾಯಚೂರು| ಕೆಕೆಆರ್‌ಟಿಸಿ ಬಸ್ ಹರಿದು ಮಹಿಳೆ ಸಾವು!

ರಾಯಚೂರು:- ರಾಯಚೂರಿನ ಸಿಂಧನೂರು ಬಸ್ ನಿಲ್ದಾಣದ ಮುಖ್ಯದ್ವಾರದಲ್ಲಿ ಕೆಕೆಆರ್‌ಟಿಸಿ ಬಸ್ ಹರಿದು ಮಹಿಳೆ ಸಾವನ್ನಪ್ಪಿರುವ ಘಟನೆ ಜರುಗಿದೆ.

ದೊಡ್ಡ ಈರಮ್ಮ (38) ಮೃತ ದುರ್ದೈವಿ. ಇವರು ಕೊಪ್ಪಳದ ಬೆವಿನಹಾಳ ಗ್ರಾಮದ ನಿವಾಸಿ.ಬಸ್ ಚಾಲಕನ ಅಜಾಗರೂಕತೆಯಿಂದ ಮಹಿಳೆ ಸಾವನ್ನಪ್ಪಿದ್ದು, ಅಪಘಾತದ ದೃಶ್ಯ ಪ್ರಯಾಣಿಕರನ್ನ ಬೆಚ್ಚಿಬೀಳಿಸಿದೆ.

ಸಿಂಧನೂರು ಬಸ್ ನಿಲ್ದಾಣದಲ್ಲಿ ಸೋಮವಾರ ಅಪಘಾತ ನಡೆದಿದೆ. ಘಟನೆ ಸಂಬಂಧ ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಋತುಚಕ್ರ ರಜೆ: ಉದ್ಯೋಗದಾತರಿಗೆ ಶೋಕಾಸ್‌ ನೋಟಿಸ್ ಬೇಡ – ಹೈಕೋರ್ಟ್ ಸೂಚನೆ

ಬೆಂಗಳೂರು: ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನ ವೇತನ ಸಹಿತ ರಜೆ ನೀಡುವ ಕುರಿತು ರಾಜ್ಯ ಸರ್ಕಾರ ಹೊರಡಿಸಿದ ಅಧಿಸೂಚನೆ ಹಿನ್ನೆಲೆ, ಉದ್ಯೋಗದಾತರಿಗೆ ಶೋಕಾಸ್‌ ನೋಟಿಸ್ ನೀಡಬಾರದು ಎಂದು ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.

ರಾಜ್ಯ ಕಾರ್ಮಿಕ ಇಲಾಖೆ 2025ರ ನವೆಂಬರ್ 20ರಂದು ಹೊರಡಿಸಿದ ಅಧಿಸೂಚನೆಯನ್ನು ಪ್ರಶ್ನಿಸಿ ಕರ್ನಾಟಕ ಉದ್ಯೋಗದಾತರ ಸಂಘ ಹಾಗೂ ಬೆಂಗಳೂರು ಹೋಟೆಲ್‌ಗಳ ಸಂಘ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗ್ಡೆ ಅವರ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅಧಿಸೂಚನೆ ಜಾರಿಗೆ ಸಂಬಂಧಿಸಿ ಸರ್ಕಾರ ಉದ್ಯೋಗದಾತರಿಗೆ ಶೋಕಾಸ್‌ ನೋಟಿಸ್ ನೀಡುತ್ತಿದೆ. ಇದರಿಂದ ಉದ್ಯಮಗಳಿಗೆ ತೊಂದರೆಯಾಗುತ್ತಿದೆ ಎಂದು ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಪ್ರಕರಣ ನ್ಯಾಯಾಲಯದ ಪರಿಶೀಲನೆಯಲ್ಲಿರುವ ಸಂದರ್ಭದಲ್ಲಿ ಶೋಕಾಸ್‌ ನೋಟಿಸ್ ನೀಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿತು. ಜೊತೆಗೆ, ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಸರ್ಕಾರಕ್ಕೆ ಸೂಚನೆ ನೀಡಿತು.

ಇನ್ನೊಂದೆಡೆ, ಮಹಿಳಾ ವಕೀಲರ ಪರ ಹಾಜರಾದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್, ಸರ್ಕಾರದ ಅಧಿಸೂಚನೆಯಲ್ಲಿ ಉದ್ಯೋಗದಾತರಿಗೆ ತೊಂದರೆ ಉಂಟು ಮಾಡುವ ಅಂಶಗಳಿಲ್ಲ. ಯಾವುದೇ ಶೋಕಾಸ್‌ ನೋಟಿಸ್ ನೀಡಲಾಗಿದೆ ಎಂಬ ದಾಖಲೆ ಇದ್ದರೆ ನ್ಯಾಯಾಲಯಕ್ಕೆ ಸಲ್ಲಿಸಬಹುದು ಎಂದು ಹೇಳಿದರು.

ಅರ್ಜಿದಾರರ ಪರ ವಕೀಲರು ಮಹಿಳೆಯರ ರಕ್ಷಣೆ ಕುರಿತು ಆಕ್ಷೇಪವಿಲ್ಲ. ಆದರೆ ಉದ್ಯಮದ ಹಿತಾಸಕ್ತಿಯನ್ನು ಪರಿಗಣಿಸದೇ ಅಧಿಸೂಚನೆ ಜಾರಿಗೊಳಿಸಲಾಗಿದೆ ಎಂದು ವಾದಿಸಿದರು. ಎರಡೂ ಪಕ್ಷಗಳ ವಾದಗಳನ್ನು ಆಲಿಸಿದ ನ್ಯಾಯಾಲಯ, ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್‌ 24ಕ್ಕೆ ಮುಂದೂಡಿತು.

ಚಾಮರಾಜನಗರ: ಅಕ್ರಮ ವಿದ್ಯುತ್ ತಂತಿ ಸ್ಪರ್ಶಿಸಿ ಹುಲಿ ಸಾವು!

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಪಡಗೂರು ಬಳಿ ಅಕ್ರಮ ವಿದ್ಯುತ್ ತಂತಿ ಸ್ಪರ್ಶಿಸಿ ಸುಮಾರು ಎರಡು ವರ್ಷದ ಹುಲಿ ಸಾವನ್ನಪ್ಪಿದ ಘಟನೆ ನಡೆದಿದೆ.

ಕೇರಳ ಮೂಲದ ಜಮೀನಿಗೆ ಅಳವಡಿಸಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ದುರಂತ ಸಂಭವಿಸಿದೆ. ಸ್ಥಳಕ್ಕೆ ಪೊಲೀಸ್, ಅರಣ್ಯ ಮತ್ತು ಸೆಸ್ಕ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಭಾಗದಲ್ಲಿ ಹುಲಿ ಮತ್ತು ಚಿರತೆ ಸಂಚಾರ ಹೆಚ್ಚಾಗಿದ್ದು, ಅಧಿಕಾರಿಗಳು ಥರ್ಮಲ್ ಡ್ರೋನ್ ಮೂಲಕ ಪರಿಶೀಲನೆ ನಡೆಸಿದಾಗ ಹುಲಿ ಸಾವಿಗೀಡಾಗಿದೆ ಎಂಬುದು ದೃಢಪಟ್ಟಿದೆ. ಹಿಂದೆ ಮಲೆ ಮಹದೇಶ್ವರ ವನ್ಯಧಾಮದಲ್ಲಿ 6 ಹುಲಿ, ಬಿಆರ್‌ಟಿ ಸಂರಕ್ಷಿತಾರಣ್ಯ ವ್ಯಾಪ್ತಿಯಲ್ಲಿ 1 ಹುಲಿ ಸಾವನ್ನಪ್ಪಿದ್ದರೆ, ಇದೀಗ ಗುಂಡ್ಲುಪೇಟೆ ಭಾಗದಲ್ಲಿ ಸಹಜವಾಗಿ ಹುಲಿ ಸಾವಿಗೀಡಾಗಿದೆ.

ಲಂಚ ಪಡೆಯುವಾಗಲೇ ಲಾಕ್: ಲೋಕಾ ಅಧಿಕಾರಿಗಳ ಮುಂದೆ ಮಹಿಳಾ ಪಿಡಿಒ ಹೈಡ್ರಾಮಾ! ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ

0

ಮೈಸೂರು:- ಲಂಚ ಸ್ವೀಕರಿಸುತ್ತಿದ್ದಾಗ ಲೋಕಾ ಅಧಿಕಾರಿಗಳ ಬಲೆಗೆ ಬಿದ್ದ ಮಹಿಳಾ ಅಧಿಕಾರಿಯೊಬ್ಬರು ಭಾರೀ ಹೈಡ್ರಾಮಾ ನಡೆಸಿದ್ದಾರೆ.

ಜಿಲ್ಲೆಯ ಹುಣಸೂರು ತಾಲೂಕಿನ ಮುಳ್ಳೂರು ಗ್ರಾ.ಪಂ. ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು, ಬಂಧನದಿಂದ ತಪ್ಪಿಸಿಕೊಳ್ಳಲು ಹರಿತವಾದ ಆಯುಧದಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಯ ನಾಟಕವಾಡಿದ ಘಟನೆ ಜರುಗಿದೆ.

ಎಸ್, ಮುಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿದ್ದ ಸ್ವಾಮಿ ಎಂಬುವವರು ಸಾವನ್ನಪ್ಪಿದ ಬಳಿಕ, ಅವರ ಪುತ್ರ ಮಹದೇವ್ ಅವರಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಸಿಕ್ಕಿತ್ತು. ಮೃತ ಸ್ವಾಮಿ ಅವರ ಎರಡು ವರ್ಷದ ಬಾಕಿ ಸಂಬಳ ಸುಮಾರು 4 ಲಕ್ಷ ರೂಪಾಯಿ ಬಿಡುಗಡೆ ಮಾಡಲು ಪಿಡಿಒ ಮಂಜುಳಾ ಅವರು 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಲಂಚ ನೀಡಲು ಇಚ್ಛಿಸದ ಮಹದೇವ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ, ಕಚೇರಿಯಲ್ಲಿ ಮುಂಗಡವಾಗಿ 25 ಸಾವಿರ ರೂ. ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಂಜುಳಾ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಲೋಕಾಯುಕ್ತ ಬಲೆಗೆ ಬೀಳುತ್ತಿದ್ದಂತೆ ಕಂಗಾಲಾದ ಮಂಜುಳಾ, ಕಚೇರಿಯಲ್ಲೇ ಹರಿತವಾದ ಆಯುಧದಿಂದ ಕೈ ಕೊಯ್ದುಕೊಂಡು ರಾದ್ಧಾಂತ ಮಾಡಿದ್ದಾರೆ. ಅಧಿಕಾರಿಗಳ ಮುಂದೆಯೇ ಹೈಡ್ರಾಮಾ ಸೃಷ್ಟಿಸಿ ತನಿಖೆಗೆ ಅಡ್ಡಿಪಡಿಸಲು ಯತ್ನಿಸಿದ್ದಾರೆ. ಗಾಯಗೊಂಡ ಪಿಡಿಒ ಮಂಜುಳಾ ಅವರನ್ನು ತಕ್ಷಣವೇ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಚೇತರಿಕೆ ಬಳಿಕ ತನಿಖೆ ಕೈಗೊಂಡಿದ್ದಾರೆ.

ಆರೋಗ್ಯವಂತ ವ್ಯಕ್ತಿ ದಿನಕ್ಕೆ ಎಷ್ಟು ಬಾರಿ ಮೂತ್ರ ಮಾಡಬೇಕು? ತಜ್ಞರ ಮಾಹಿತಿ ಇಲ್ಲಿದೆ!

0

ನಾವು ಪ್ರತಿದಿನ ಸೇವಿಸುವ ಆಹಾರ ಮತ್ತು ದ್ರವಗಳು ದೇಹದ ವಿವಿಧ ಕ್ರಿಯೆಗಳಿಗೆ ಸಹಕಾರಿಯಾಗುತ್ತವೆ. ಈ ಪ್ರಕ್ರಿಯೆಯಲ್ಲಿ ಮೂತ್ರಪಿಂಡಗಳು ಪ್ರಮುಖ ಪಾತ್ರವಹಿಸಿ, ದೇಹದಲ್ಲಿನ ದ್ರವಗಳನ್ನು ಫಿಲ್ಟರ್ ಮಾಡಿ ಅಗತ್ಯ ಪೋಷಕಾಂಶಗಳನ್ನು ಉಳಿಸಿ, ತ್ಯಾಜ್ಯವನ್ನು ಮೂತ್ರದ ಮೂಲಕ ಹೊರಹಾಕುತ್ತವೆ.

ಆದರೆ, ಕೆಲವರು ಹೆಚ್ಚು ಬಾರಿ ಅಥವಾ ಕಡಿಮೆ ಬಾರಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಹಾಗಾದರೆ ಆರೋಗ್ಯವಂತ ವ್ಯಕ್ತಿ ದಿನಕ್ಕೆ ಎಷ್ಟು ಬಾರಿ ಮೂತ್ರ ವಿಸರ್ಜನೆ ಮಾಡಬೇಕು ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತದೆ.

ಒಬ್ಬ ವ್ಯಕ್ತಿ ದಿನಕ್ಕೆ ಸರಾಸರಿ 2ರಿಂದ 3 ಲೀಟರ್ ನೀರನ್ನು ಕುಡಿಯಬೇಕು. ಈ ಪ್ರಮಾಣದ ನೀರನ್ನು ಕುಡಿದಾಗ ದೇಹದ ಚಯಾಪಚಯ ಕ್ರಿಯೆಗಳು ಸರಿಯಾಗಿ ನಡೆಯುತ್ತವೆ. ಕನಿಷ್ಠ 2 ಲೀಟರ್ ನೀರು ಕುಡಿಯುವ ಆರೋಗ್ಯವಂತ ವ್ಯಕ್ತಿ ದಿನಕ್ಕೆ ಸುಮಾರು 4ರಿಂದ 7 ಬಾರಿ ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯ.

4 ಬಾರಿ ಕ್ಕಿಂತ ಕಡಿಮೆ ಮೂತ್ರ ವಿಸರ್ಜನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ. ಇದು ದೇಹದಲ್ಲಿ ದ್ರವ ಕೊರತೆ ಅಥವಾ ಇತರ ಸಮಸ್ಯೆಗಳ ಸೂಚನೆ ಆಗಿರಬಹುದು. ಮತ್ತೊಂದೆಡೆ, 7 ಬಾರಿ ಕ್ಕಿಂತ ಹೆಚ್ಚು ಮೂತ್ರ ವಿಸರ್ಜನೆ ಮಾಡುವುದು ಸಹ ಸಾಮಾನ್ಯವಾಗಿರಬಹುದು, ವಿಶೇಷವಾಗಿ ಹೆಚ್ಚು ನೀರು ಕುಡಿಯುವವರು, ಕಾಫಿ, ಚಹಾ ಅಥವಾ ಮದ್ಯ ಸೇವಿಸುವವರು, ಮಧುಮೇಹ ಅಥವಾ ಮೂತ್ರನಾಳದ ಸೋಂಕು ಇರುವವರು ಈ ರೀತಿ ಅನುಭವಿಸಬಹುದು.

ಆದರೆ, ದಿನಕ್ಕೆ 11 ಬಾರಿ ಕ್ಕಿಂತ ಹೆಚ್ಚು ಮೂತ್ರ ವಿಸರ್ಜನೆ ಆಗುತ್ತಿದ್ದರೆ, ಅದನ್ನು ಅನಾರೋಗ್ಯದ ಲಕ್ಷಣವೆಂದು ಪರಿಗಣಿಸಬೇಕು. ಇಂತಹ ಸಂದರ್ಭಗಳಲ್ಲಿ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ.

ಗಮನಿಸಬೇಕಾದ ಪ್ರಮುಖ ವಿಷಯಗಳು

  • ಮೂತ್ರವನ್ನು ಹೆಚ್ಚು ಸಮಯ ತಡೆದು ಇಡುವುದು ತಪ್ಪು. ಇದು ಮೂತ್ರನಾಳದ ಸೋಂಕು ಮತ್ತು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು.
  • ಆರೋಗ್ಯವಂತ ವ್ಯಕ್ತಿಯ ಮೂತ್ರವು ಹಳದಿ-ಬಿಳಿ ಬಣ್ಣದಲ್ಲಿ ಇರುವುದು ಸಾಮಾನ್ಯ.
  • ಆಹಾರ ಪದ್ಧತಿ ಮತ್ತು ದ್ರವ ಸೇವನೆಯ ಪ್ರಕಾರ ಮೂತ್ರದ ಬಣ್ಣ ಮತ್ತು ವಾಸನೆ ಬದಲಾಗಬಹುದು.

ಹೀಗಾಗಿ, ದೇಹದ ಸೂಚನೆಗಳನ್ನು ಗಮನಿಸಿ, ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವುದು ಅತ್ಯಂತ ಮುಖ್ಯ.

ಗದಗ| ಸಿಲಿಂಡರ್ ಅಭಾವ; ನರಗುಂದದ ಇಂಡಿಯನ್ ಏಜೆನ್ಸಿಯಲ್ಲೂ ನೋ ಸ್ಟಾಕ್, ಖಾಲಿ ಸಿಲಿಂಡರ್ ಜೊತೆ ಮರಳಿದ ಜನ!

0

ಗದಗ:– ಅಮೆರಿಕ, ಇರಾನ್ ಮತ್ತು ಇಸ್ರೇಲ್ ನಡುವಣ ಯುದ್ಧದ ಪರಿಣಾಮವಾಗಿ ದೇಶದೆಲ್ಲೆಡೆ ಎಲ್​ಪಿಜಿ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರವಾಗಿದ್ದು, ಜನತೆ ಸಂಕಷ್ಟಕ್ಕೀಡಾಗಿದ್ದಾರೆ.

ಅದರಂತೆ ಮಧ್ಯಪ್ರಾಚ್ಯದ ಯುದ್ಧದ ಎಫೆಕ್ಟ್ ಇದೀಗ ಗದಗ ಜಿಲ್ಲೆಗೂ ತಟ್ಟಿದೆ. ಗದಗ ಜಿಲ್ಲೆಯ ನರಗುಂದ ಪಟ್ಟಣದ ಇಂಡಿಯನ್ ಗ್ಯಾಸ್ ಏಜೆನ್ಸಿಯಲ್ಲಿ ಸಿಲಿಂಡರ್ ಸ್ಟಾಕ್ ಕೊನೆಗೊಂಡಿದೆ. ಕಮರ್ಷಿಯಲ್ ಮತ್ತು ಗೃಹ ಬಳಕೆಗೆ ಬೇಕಾದ ಗ್ಯಾಸ್ ಸಿಲಿಂಡರ್ ಲಭ್ಯವಾಗದೇ ಸಾರ್ವಜನಿಕರು ಪರದಾಟ ನಡೆಸಿದ್ದಾರೆ.

ಇನ್ನೂ ಗ್ರಾಮೀಣ ಪ್ರದೇಶದಿಂದ ಸಿಲಿಂಡರ್ ಪಡೆಯಲು ಬಂದವರು ಗ್ಯಾಸ್ ಸಿಗದೆ ಖಾಲಿ ಸಿಲಿಂಡರ್ ಹಿಡಿದು ತಮ್ಮ ತಮ್ಮ ಊರಿನತ್ತ ತೆರಳಿದ್ದಾರೆ. ಇದೇ ವೇಳೆ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

ದೂರು ಕೊಡಲು ಬಂದ ಮಹಿಳೆ ಮೇಲೆ ಲೈಂಗಿಕ ಕಿರುಕುಳ ಆರೋಪ: ತಡರಾತ್ರಿ ಮನೆಯ ಕಾಂಪೌಂಡ್ ಹಾರಿದ್ದ ಪೊಲೀಸ್!

ಮಂಗಳೂರು: ದೂರು ನೀಡಲು ಬಂದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮೂಡಬಿದ್ರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ವಿರುದ್ಧ ಅನೇಕ ಆರೋಪಗಳು ಕೇಳಿಬರುತ್ತಿವೆ.

ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತನಿಖೆಗೆ ಆದೇಶಿಸಿದ್ದು, ಯಾವುದೇ ಸಂತ್ರಸ್ತೆಯರು ಧೈರ್ಯದಿಂದ ದೂರು ನೀಡುವಂತೆ ಮನವಿ ಮಾಡಿದ್ದಾರೆ. ಆರೋಪಿ ಸಂದೇಶ್ ಹಲವಾರು ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎನ್ನಲಾಗಿದ್ದು, ತಡರಾತ್ರಿ ಮಹಿಳೆಯೊಬ್ಬರ ಮನೆ ಕಾಂಪೌಂಡ್ ಹಾರುತ್ತಿರುವ ದೃಶ್ಯವು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ವಿಡಿಯೋ ವೈರಲ್ ಅದ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಹೊಸಕೋಟೆ: ಅರಣ್ಯ ಪ್ರದೇಶದಲ್ಲಿ ಯುವಕನ ಮೃತದೇಹ ಪತ್ತೆ!

ಹೊಸಕೋಟೆ: ಯುವಕನೋರ್ವನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಹೊಸಕೋಟೆ ತಾಲ್ಲೂಕಿನ ಅಲಸಹಳ್ಳಿ ಗೇಟ್ ಬಳಿಯ ಅರಣ್ಯ ಪ್ರದೇಶದಲ್ಲಿ ಜರುಗಿದೆ.

ಸೋಹೇಲ್ (24) ನೇಣಿಗೆ ಶರಣಾದ ಯುವಕ. ಮಗನ ದುರಂತವನ್ನು ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಯುವಕ ನಗರದ ಹಲಸೂರು ಸುತ್ತಮುತ್ತ ಟೈಲ್ಸ್ ಕೆಲಸ ಮಾಡುತ್ತಿದ್ದ, ಮತ್ತು ಮೂಲವಾಗಿ ಇವರ ಕುಟುಂಬ ರಾಜಸ್ಥಾನದಿಂದ ಬದುಕು ಕಟ್ಟಿಕೊಳ್ಳಲು ಬಂದಿದ್ದರು. ಇದೀಗ ಮಗನ ಸಾವಿನಿಂದ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.

ಸ್ಥಳಕ್ಕೆ ಹೊಸಕೋಟೆ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವಿನ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ತನಿಖೆಯಿಂದ ತಿಳಿದು ಬರಬೇಕಾಗಿದೆ.

error: Content is protected !!