Home Blog

ಉತ್ತರ ಪ್ರದೇಶದಲ್ಲಿ ಚಂಡಮಾರುತ ಅಬ್ಬರ: 5 ಜಿಲ್ಲೆಗಳಲ್ಲಿ 54 ಮಂದಿ ದುರ್ಮರಣ!

ಲಕ್ನೋ: ಉತ್ತರ ಪ್ರದೇಶದ ಐದು ಜಿಲ್ಲೆಗಳಲ್ಲಿ ಬುಧವಾರ ಭಾರಿ ಮಳೆಯೊಂದಿಗೆ ಬೀಸಿದ ಪ್ರಬಲ ಚಂಡಮಾರುತವು ವ್ಯಾಪಕ ಹಾನಿಯನ್ನುಂಟುಮಾಡಿದ್ದು, ಒಟ್ಟು 54 ಮಂದಿ ಜೀವ ಕಳೆದುಕೊಂಡಿರುವ ದಾರುಣ ಘಟನೆ ವರದಿಯಾಗಿದೆ.

ಪ್ರಯಾಗ್‌ರಾಜ್ ಪ್ರದೇಶದಲ್ಲೇ 16 ಮಂದಿ ಮಳೆ ಸಂಬಂಧಿತ ಅನಾಹುತಗಳಿಂದ ಸಾವನ್ನಪ್ಪಿದ್ದಾರೆ. ಭದೋಹಿ ಜಿಲ್ಲೆಯಲ್ಲಿ 16 ಮಂದಿ, ಫತೇಪುರ್ ಜಿಲ್ಲೆಯಲ್ಲಿ 9 ಮಂದಿ, ಉನ್ನಾವೊದಲ್ಲಿ 4 ಮಂದಿ, ಕಾನ್ಪುರ ದೇಹತ್‌ನಲ್ಲಿ 3 ಮಂದಿ, ಬುದೌನ್ ಜಿಲ್ಲೆಯಲ್ಲಿ 5 ಮಂದಿ, ಚಂದೌಲಿಯಲ್ಲಿ 2 ಮಂದಿ ಹಾಗೂ ಸೋನಭದ್ರಾದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಭದೋಹಿ ಜಿಲ್ಲೆಯಲ್ಲಿ ಬಿರುಗಾಳಿ ಪರಿಣಾಮ ಹಲವು ಪ್ರದೇಶಗಳಲ್ಲಿ ಮರಗಳು ಉರುಳಿ ಬಿದ್ದಿದ್ದು, ಮನೆಗಳಿಗೆ ಹಾನಿಯಾಗಿದೆ. ವಿದ್ಯುತ್ ಕಂಬಗಳು ನೆಲಸಮವಾಗಿರುವುದರಿಂದ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕುನ್ವರ್ ವೀರೇಂದ್ರ ಕುಮಾರ್ ಮೌರ್ಯ ತಿಳಿಸಿದ್ದಾರೆ.

ಚಂಡಮಾರುತದಿಂದಾಗಿ ಮೊಬೈಲ್ ನೆಟ್‌ವರ್ಕ್ ಸೇವೆಗಳು ಕೂಡ ವ್ಯತ್ಯಯಗೊಂಡಿದ್ದು, ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳಿಗೆ ತೊಂದರೆ ಉಂಟಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪರಿಹಾರ ಕಾರ್ಯಗಳನ್ನು ವೇಗಗೊಳಿಸಲಾಗಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತ್ರಸ್ತ ಕುಟುಂಬಗಳಿಗೆ ತಕ್ಷಣ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, 24 ಗಂಟೆಗಳ ಒಳಗೆ ಅಗತ್ಯ ಕ್ರಮಗಳನ್ನು ಪೂರ್ಣಗೊಳಿಸಲು ನಿರ್ದೇಶನ ನೀಡಿದ್ದಾರೆ.

ಕಾನ್ ರೆಡ್ ಕಾರ್ಪೆಟ್‌ನಲ್ಲಿ ಆಲಿಯಾ ಭಟ್‌ಗೆ ಶಾಕ್? ‘ಯಾರೂ ಗುರುತಿಸಲಿಲ್ಲ’ ವಿಡಿಯೋ ವೈರಲ್!

ಕಾನ್ ಸಿನಿಮೋತ್ಸವದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಅವರ ರೆಡ್ ಕಾರ್ಪೆಟ್ ಎಂಟ್ರಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಆಲಿಯಾ ಫೋಟೋಗೆ ಪೋಸ್ ನೀಡುತ್ತಿದ್ದ ವೇಳೆ ಛಾಯಾಗ್ರಾಹಕರು ಬೇರೆ ಸೆಲೆಬ್ರಿಟಿಗಳತ್ತ ಗಮನ ಹರಿಸಿದ್ದ ದೃಶ್ಯ ವೈರಲ್ ಆಗಿದ್ದು, ‘ಯಾರೂ ಆಲಿಯಾ ಅವರನ್ನು ಗುರುತಿಸಲಿಲ್ಲವೇ?’ ಎಂಬ ಪ್ರಶ್ನೆ ಮೂಡಿಸಿದೆ.

ವೈರಲ್ ವಿಡಿಯೋದಲ್ಲಿ ಆಲಿಯಾ ಭಟ್ ಗೌನ್ ಧರಿಸಿ ರೆಡ್ ಕಾರ್ಪೆಟ್ ಮೇಲೆ ಆತ್ಮವಿಶ್ವಾಸದಿಂದ ನಡೆದು ಬರುತ್ತಿರುವುದು ಕಾಣಿಸುತ್ತದೆ. ಅವರು ಕ್ಯಾಮೆರಾಗಳಿಗೆ ಕೈ ಬೀಸಿ ಫ್ಲೈಯಿಂಗ್ ಕಿಸ್ ನೀಡುತ್ತಿದ್ದರೂ, ಪಕ್ಕದಲ್ಲಿದ್ದ ಕೆಲವು ಫೋಟೋಗ್ರಾಫರ್‌ಗಳು ಅಂತಾರಾಷ್ಟ್ರೀಯ ತಾರೆಯರ ಫೋಟೋ ತೆಗೆಯುವುದರಲ್ಲಿ ನಿರತರಾಗಿದ್ದರು.

ಇದನ್ನು ನೋಡಿ ಕೆಲ ನೆಟ್ಟಿಗರು ಆಲಿಯಾ ಅವರನ್ನು ಟ್ರೋಲ್ ಮಾಡಿದ್ದು, ‘ಕಾನ್‌ನಲ್ಲಿ ಅವರಿಗೆ ಯಾರೂ ಗಮನವೇ ಕೊಡಲಿಲ್ಲ’ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ಇದನ್ನು ಭಾರತೀಯ ಚಿತ್ರರಂಗಕ್ಕೆ ಮುಜುಗರದ ಸಂಗತಿ ಎಂದು ಬರೆದಿದ್ದಾರೆ.

ಆದರೆ ಅಭಿಮಾನಿಗಳು ಮಾತ್ರ ಇದನ್ನು ಒಪ್ಪುತ್ತಿಲ್ಲ. ‘ರೆಡ್ ಕಾರ್ಪೆಟ್‌ನಲ್ಲಿ ನೂರಾರು ಛಾಯಾಗ್ರಾಹಕರು ಇರುತ್ತಾರೆ. ಬೇರೆ ಬೇರೆ ದಿಕ್ಕಿನಿಂದ ಫೋಟೋ ತೆಗೆದುಕೊಳ್ಳುತ್ತಾರೆ. ವೈರಲ್ ಆಗಿರುವ ಕ್ಲಿಪ್ ನೋಡಿ ತೀರ್ಪು ಕೊಡಬಾರದು’ ಎಂದು ಹೇಳಿದ್ದಾರೆ.

ಕಾನ್ ಸಿನಿಮೋತ್ಸವವು ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಒಂದಾಗಿದ್ದು, ಈ ಬಾರಿ ಕೂಡ ಹಲವು ಭಾರತೀಯ ತಾರೆಯರು ಅದ್ದೂರಿಯಾಗಿ ಭಾಗವಹಿಸಿದ್ದಾರೆ. ಪ್ರಿಯಾಂಕಾ ಉಪೇಂದ್ರ ನಟನೆಯ ‘ಸೆಪ್ಟೆಂಬರ್ 21’ ಸೇರಿದಂತೆ ಕೆಲವು ಭಾರತೀಯ ಸಿನಿಮಾಗಳು ಕೂಡ ಉತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿವೆ.

ಸಂಬರಗಿಯಲ್ಲಿ ಬಿರುಗಾಳಿ ಅಬ್ಬರ: ಮನೆಗಳ ಮೇಲ್ಛಾವಣಿ ಹಾರಿ ಭಾರಿ ಹಾನಿ!

ಬೆಳಗಾವಿ: ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಗುರುವಾರ ಸಂಜೆ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಹಠಾತ್ ಆರಂಭವಾದ ವರುಣಾರ್ಭಟಕ್ಕೆ ಗ್ರಾಮಸ್ಥರು ಕಂಗಾಲಾಗಿದ್ದು, ಹಲವು ಮನೆಗಳಿಗೆ ವ್ಯಾಪಕ ಹಾನಿ ಸಂಭವಿಸಿದೆ.

ತೀವ್ರ ಗಾಳಿಯ ಪರಿಣಾಮ ಐದಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿಗಳು ಹಾರಿಹೋಗಿದ್ದು, ಸುಮಾರು 200 ಅಡಿಯಷ್ಟು ದೂರಕ್ಕೆ ತಗಡಿನ ಶೀಟ್‌ಗಳು ಬಿದ್ದಿರುವುದು ಮಳೆಯ ರೌದ್ರತೆಗೆ ಸಾಕ್ಷಿಯಾಗಿದೆ. ಬಡ ಕುಟುಂಬಗಳು ತಾತ್ಕಾಲಿಕವಾಗಿ ಬೀದಿಗೆ ಬಿದ್ದ ಪರಿಸ್ಥಿತಿ ಉಂಟಾಗಿದೆ.

ಮನೆಯೊಳಗಿನ ದವಸ ಧಾನ್ಯಗಳು, ಬಟ್ಟೆ ಹಾಗೂ ಹಾಸಿಗೆಗಳು ನೀರಿನಿಂದ ಹಾನಿಯಾಗಿದ್ದು, ಮನೆಗಳ ಮೇಲೆ ಅಳವಡಿಸಿದ್ದ ಸೋಲಾರ್ ಪ್ಯಾನಲ್‌ಗಳು ಕೂಡ ಧರೆಗುರುಳಿವೆ. ದನದ ಕೊಟ್ಟಿಗೆಗಳು ನೆಲಸಮವಾಗಿರುವುದರಿಂದ ಗ್ರಾಮದಲ್ಲಿ ದನಸಂಪತ್ತಿಗೂ ಹಾನಿಯಾಗಿದೆ.

ವಿದ್ಯುತ್ ಕಂಬಗಳು ಹಾಗೂ ತೆಂಗಿನ ಮರಗಳು ಉರುಳಿ ಬಿದ್ದ ಪರಿಣಾಮ ಸಂಪೂರ್ಣ ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಜನರು ಪರದಾಡುವಂತಾಗಿದೆ. ಸಂಕಷ್ಟಕ್ಕೆ ಸಿಲುಕಿರುವ ಗ್ರಾಮಸ್ಥರು ಸರ್ಕಾರದಿಂದ ತಕ್ಷಣ ಪರಿಹಾರ ಮತ್ತು ಪುನರ್ವಸತಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಲಕ್ಷ್ಮೀದೇವಿ ಹಾಡಿನಿಂದ ಸೋಪ್ ಪ್ರಚಾರ: ಟ್ರೋಲ್ ಬಳಿಕ ವಿಡಿಯೋ ಡಿಲೀಟ್ ಮಾಡಿ ಕ್ಷಮೆ ಕೇಳಿದ ನಟ ಆಲಿ!

ತೆಲುಗು ಚಿತ್ರರಂಗದ ಖ್ಯಾತ ಹಾಸ್ಯನಟ ಆಲಿ ಹೊಸ ವಿವಾದಕ್ಕೆ ಸಿಲುಕಿದ್ದಾರೆ. ಗರ್ ಸೋಪ್ ಜಾಹೀರಾತಿನಲ್ಲಿ ಲಕ್ಷ್ಮೀದೇವಿಗೆ ಸಂಬಂಧಿಸಿದ ಹಾಡನ್ನು ಬಳಸಿದ ಆರೋಪದ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿದ್ದು, ಇದೀಗ ನಟ ಆಲಿ ಕ್ಷಮೆ ಕೇಳಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಗರ್ ಸೋಪ್ ಜಾಹೀರಾತಿನಲ್ಲಿ ಆಲಿ, ಸೋಪಿಗೆ ಪೂಜೆ ಸಲ್ಲಿಸುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಲಕ್ಷ್ಮೀದೇವಿಯ ಕುರಿತ ಹಾಡನ್ನು ಬಳಸಲಾಗಿತ್ತು. ಇದನ್ನು ಕೆಲ ಹಿಂದೂಪರ ಸಂಘಟನೆಗಳು ತೀವ್ರವಾಗಿ ವಿರೋಧಿಸಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿವೆ.

ಈ ದೃಶ್ಯಕ್ಕೆ ಹಿನ್ನೆಲೆ ಕೂಡ ಇದೆ. ಆಲಿ ನಟಿಸಿದ್ದ ‘ದೇವುಡು ಚೇಸಿನ ಮನುಷುಲು’ ಸಿನಿಮಾದಲ್ಲಿ ಅವರು ಲಕ್ಷ್ಮೀದೇವಿಯ ಭಕ್ತನ ಪಾತ್ರ ಮಾಡಿದ್ದರು. ಆ ಚಿತ್ರದ ಜನಪ್ರಿಯ ಹಾಡು ಮತ್ತು ಸನ್ನಿವೇಶವನ್ನೇ ಜಾಹೀರಾತಿನಲ್ಲಿ ಮರುಸೃಷ್ಟಿ ಮಾಡಲಾಗಿತ್ತು. ಆದರೆ ದೇವಿಯ ಹಾಡನ್ನು ವಾಣಿಜ್ಯ ಜಾಹೀರಾತಿಗೆ ಬಳಸಿರುವುದು ವಿವಾದದ ಕಿಡಿ ಹಚ್ಚಿದೆ.

ವಿವಾದ ತೀವ್ರವಾಗುತ್ತಿದ್ದಂತೆ ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಆಲಿ, ‘ಕಂಪೆನಿ ಹೇಳಿದಂತೆ ನನ್ನ ಹಳೆಯ ಸಿನಿಮಾದ ದೃಶ್ಯವನ್ನು ಸ್ವಲ್ಪ ಬದಲಾವಣೆ ಮಾಡಿ ಅಭಿನಯಿಸಿದ್ದೆ. ಆದರೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತಕ್ಷಣ ಜಾಹೀರಾತನ್ನು ಡಿಲೀಟ್ ಮಾಡಿದ್ದೇವೆ. ಯಾರಿಗಾದರೂ ಇದರಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ’ ಎಂದು ಹೇಳಿದ್ದಾರೆ.

ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಜಾಹೀರಾತುಗಳಲ್ಲಿ ಧಾರ್ಮಿಕ ಅಂಶ ಬಳಕೆಯ ಬಗ್ಗೆ ಮತ್ತೆ ಪ್ರಶ್ನೆಗಳು ಎದ್ದಿವೆ.

ಬೆಳಿಗ್ಗೆ ಫುಲ್ ಬಾಡಿ ಚೆಕಪ್‌ಗೆ ಅಪಾಯಿಂಟ್ಮೆಂಟ್: ಅದಕ್ಕೂ ಮುನ್ನವೇ ದಿಲೀಪ್ ರಾಜ್ ಸಾವು!

ಕನ್ನಡದ ಜನಪ್ರಿಯ ನಟ ಮತ್ತು ನಿರ್ಮಾಪಕ ದಿಲೀಪ್ ರಾಜ್ ಅವರ ನಿಧನದ ಬಳಿಕ ಹಲವು ಆಘಾತಕಾರಿ ಮಾಹಿತಿಗಳು ಹೊರಬರುತ್ತಿವೆ. ಇದೀಗ ನಟಿ ಅಭಿನಯ ಅವರು ನೀಡಿರುವ ಹೇಳಿಕೆ ಅಭಿಮಾನಿಗಳ ಮನ ಕಲುಕಿದೆ. ಹೃದಯಾಘಾತಕ್ಕೂ ಮುನ್ನ ದಿಲೀಪ್ ರಾಜ್ ಆರೋಗ್ಯ ತಪಾಸಣೆಗೆ ಸಿದ್ಧತೆ ನಡೆಸಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.

‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ದಿಲೀಪ್ ರಾಜ್ ಜೊತೆ ಅಭಿನಯಿಸಿದ್ದ ನಟಿ ಅಭಿನಯ, ಅವರ ಅಂತಿಮ ದರ್ಶನ ಪಡೆದು ಮಾತನಾಡುವ ವೇಳೆ ಭಾವುಕರಾದರು. ‘ಹಿಟ್ಲರ್ ಕಲ್ಯಾಣದಲ್ಲಿ ನನಗೆ ಉತ್ತಮ ಪಾತ್ರ ನೀಡಿದ್ದರು. ನಂತರ ಬ್ರಹ್ಮಗಂಟು ಸೀರಿಯಲ್‌ನಲ್ಲೂ ಅವಕಾಶ ಕೊಟ್ಟಿದ್ದರು. ನಾವು ಚೆನ್ನಾಗಿ ಕೆಲಸ ಮಾಡ್ತೀವಿ ಅನ್ನೋ ನಂಬಿಕೆ ಅವನಿಗಿತ್ತು. ತುಂಬಾ ಪ್ರೋತ್ಸಾಹ ಕೊಡುತ್ತಿದ್ದ’ ಎಂದು ಹೇಳಿದರು.

ಆ ಬಳಿಕ ಅವರು ದಿಲೀಪ್ ರಾಜ್ ಆರೋಗ್ಯದ ಬಗ್ಗೆ ಮಹತ್ವದ ವಿಚಾರ ಹಂಚಿಕೊಂಡರು. ‘ವರ್ಕ್ ಪ್ರೆಷರ್‌ನಿಂದೋ ಏನೋ ಗೊತ್ತಿಲ್ಲ, ಅವರಿಗೆ ನೋವು ಇತ್ತು ಅಂತ ಹೇಳುತ್ತಿದ್ದರು. ಅದಕ್ಕಾಗಿ ಫುಲ್ ಬಾಡಿ ಚೆಕಪ್ ಮಾಡಿಸಿಕೊಳ್ಳಲು ವೈದ್ಯರ ಅಪಾಯಿಂಟ್ಮೆಂಟ್ ಕೂಡ ತೆಗೆದುಕೊಂಡಿದ್ದರು. ಬೆಳಿಗ್ಗೆ ಆಸ್ಪತ್ರೆಗೆ ಹೋಗಬೇಕಿತ್ತು. ಆದರೆ ಅದಕ್ಕೂ ಮುನ್ನವೇ ಹೃದಯಾಘಾತದಿಂದ ಅವರು ನಮ್ಮನ್ನೆಲ್ಲ ಬಿಟ್ಟು ಹೋದರು’ ಎಂದು ಅಭಿನಯ ಕಣ್ಣೀರಿಟ್ಟರು.

ದಿಲೀಪ್ ರಾಜ್ ನಟನೆಯ ಜೊತೆಗೆ ನಿರ್ಮಾಪಕರಾಗಿಯೂ ಯಶಸ್ಸು ಕಂಡಿದ್ದರು. ‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಅವರಿಗೆ ಹೊಸ ಮಟ್ಟದ ಜನಪ್ರಿಯತೆ ತಂದುಕೊಟ್ಟಿತ್ತು. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಕಿರುತೆರೆ ಮತ್ತು ಚಿತ್ರರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ.

ವಿರಾಟ್ ಜೊತೆ ಲಂಡನ್ ಜೀವನ; ಬಾಲಿವುಡ್‌ಗೆ ಅನುಷ್ಕಾ ಗುಡ್‌ಬೈ ಹೇಳಿದ್ರಾ?

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೊನೆಯಾಗಿ ದೊಡ್ಡ ಪರದೆ ಮೇಲೆ ಕಾಣಿಸಿಕೊಂಡಿದ್ದು 2018ರಲ್ಲಿ ಬಿಡುಗಡೆಯಾದ ‘ಜೀರೋ’ ಸಿನಿಮಾದಲ್ಲಿ. ಆ ಬಳಿಕ ಎಂಟು ವರ್ಷ ಕಳೆದರೂ ಅವರು ಹೊಸ ಸಿನಿಮಾವೊಂದನ್ನೂ ಘೋಷಿಸಿಲ್ಲ. ಇತ್ತೀಚೆಗೆ ಜಾಹೀರಾತೊಂದರಲ್ಲಿ ಕಾಣಿಸಿಕೊಂಡ ಅವರನ್ನು ಕಂಡ ಅಭಿಮಾನಿಗಳು ಮತ್ತೆ ಅವರ ಕಮ್‌ಬ್ಯಾಕ್ ಬಗ್ಗೆ ಚರ್ಚೆ ಆರಂಭಿಸಿದ್ದಾರೆ.

ವಿರಾಟ್ ಕೊಹ್ಲಿ ಜೊತೆ ಮದುವೆಯಾದ ಬಳಿಕ ಅನುಷ್ಕಾ ತಮ್ಮ ವೈಯಕ್ತಿಕ ಜೀವನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. 2021ರಲ್ಲಿ ಪುತ್ರಿ ವಮಿಕಾ ಮತ್ತು 2024ರಲ್ಲಿ ಪುತ್ರ ಅಕಾಯ್ ಜನಿಸಿದ ಬಳಿಕ ಅವರು ಸಂಪೂರ್ಣವಾಗಿ ಕುಟುಂಬದ ಜವಾಬ್ದಾರಿಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಹಿಂದೆ ನೀಡಿದ್ದ ಸಂದರ್ಶನದಲ್ಲೇ ಮದುವೆ ಮತ್ತು ಮಕ್ಕಳ ಬಳಿಕ ಸಂಸಾರಕ್ಕೆ ಹೆಚ್ಚು ಸಮಯ ಕೊಡಲು ಬಯಸುತ್ತೇನೆ ಎಂದು ಅನುಷ್ಕಾ ಹೇಳಿದ್ದರು.

ಸದ್ಯ ವಿರಾಟ್ ಮತ್ತು ಅನುಷ್ಕಾ ಲಂಡನ್‌ನಲ್ಲಿ ವಾಸವಾಗಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ತಮ್ಮ ಮಕ್ಕಳನ್ನು ಮಾಧ್ಯಮಗಳ ಅತಿಯಾದ ಗಮನದಿಂದ ದೂರ ಇಟ್ಟು ಸಾಮಾನ್ಯ ಜೀವನ ನೀಡಬೇಕು ಎಂಬ ಕಾರಣಕ್ಕೆ ಅವರು ವಿದೇಶದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎನ್ನಲಾಗಿದೆ.

ಆದರೂ ವಿರಾಟ್ ಕೊಹ್ಲಿಯ ವೃತ್ತಿಜೀವನದಲ್ಲಿ ಅನುಷ್ಕಾ ಸದಾ ಬೆಂಬಲವಾಗಿ ನಿಂತಿದ್ದಾರೆ. ಐಪಿಎಲ್ ಪಂದ್ಯಗಳಲ್ಲಿ ಸ್ಟೇಡಿಯಂಗೆ ಬಂದು ಕೊಹ್ಲಿಗೆ ಚಿಯರ್ ಮಾಡುವ ಅವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇವೆ.

ಇನ್ನೊಂದೆಡೆ ಅನುಷ್ಕಾ ಅಭಿನಯದ ‘ಚಕ್ದಾ ಎಕ್ಸ್‌ಪ್ರೆಸ್’ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ಭಾರತೀಯ ಮಹಿಳಾ ಕ್ರಿಕೆಟ್ ದಿಗ್ಗಜ ಜೂಲನ್ ಗೋಸ್ವಾಮಿ ಜೀವನಾಧಾರಿತ ಈ ಚಿತ್ರ 2022ರಲ್ಲೇ ಪೂರ್ಣಗೊಂಡಿದ್ದರೂ, ನಿರ್ಮಾಣ ಗುಣಮಟ್ಟ ಮತ್ತು ಬಜೆಟ್ ಸಂಬಂಧಿತ ಕಾರಣಗಳಿಂದ ಸಿನಿಮಾ ರಿಲೀಸ್ ವಿಳಂಬವಾಗುತ್ತಿದೆ ಎಂದು ವರದಿಯಾಗಿದೆ.

ಭಾರತದ ‘ಧುರಂಧರ್’ಗೆ ಉತ್ತರ ಕೊಡಲು ಹೋಗಿ ಪಾಕ್ ಸಿನಿಮಾ ಫುಲ್ ಫೇಲ್: ‘ಮೇರಾ ಲಿಯಾರಿ’ಗೆ 22 ಟಿಕೆಟ್ ಮಾತ್ರ ಸೇಲ್!

ಭಾರತದ ಸೂಪರ್ ಹಿಟ್ ‘ಧುರಂಧರ್’ ಸಿನಿಮಾಗೆ ಪ್ರತಿಯಾಗಿ ಪಾಕಿಸ್ತಾನಿ ಚಿತ್ರರಂಗ ನಿರ್ಮಿಸಿದ್ದ ‘ಮೇರಾ ಲಿಯಾರಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಂಪೂರ್ಣ ಕುಸಿದಿದೆ. ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ಈ ಸಿನಿಮಾ ಪ್ರೇಕ್ಷಕರ ಕೊರತೆಯಿಂದ ಕೆಲವೇ ದಿನಗಳಲ್ಲಿ ಥಿಯೇಟರ್‌ಗಳಿಂದ ಹೊರಬಿದ್ದಿದೆ.

ಕರಾಚಿಯ ಲಿಯಾರಿ ಪ್ರದೇಶದ ಕಥಾಹಂದರ ಹೊಂದಿದ್ದ ಈ ಚಿತ್ರವನ್ನು ಅಬು ಅಲಿಹಾ ನಿರ್ದೇಶಿಸಿದ್ದರು. ಆಯೇಷಾ ಒಮರ್ ಹಾಗೂ ದನನೀರ್ ಮೊಬೀನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರೂ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ವಿಫಲವಾಗಿದೆ. ವರದಿಗಳ ಪ್ರಕಾರ, ಅನೇಕ ಥಿಯೇಟರ್‌ಗಳಲ್ಲಿ ಸಿನಿಮಾ ನೋಡಲು ಜನವೇ ಬರದ ಸ್ಥಿತಿ ನಿರ್ಮಾಣವಾಗಿದ್ದು, ಒಟ್ಟು ಕೇವಲ 22 ಟಿಕೆಟ್‌ಗಳು ಮಾತ್ರ ಮಾರಾಟವಾಗಿವೆ.

ಪ್ರೇಕ್ಷಕರ ಕೊರತೆಯಿಂದಾಗಿ ಚಿತ್ರಮಂದಿರ ಮಾಲೀಕರು ಸಿನಿಮಾವನ್ನು ತೆಗೆದು ಬೇರೆ ಚಿತ್ರಗಳನ್ನು ಪ್ರದರ್ಶಿಸಲು ಆರಂಭಿಸಿದ್ದಾರೆ. ಸಿಂಧ್ ಸರ್ಕಾರ ಈ ಸಿನಿಮಾಗೆ ಪ್ರಚಾರಾತ್ಮಕ ಬೆಂಬಲ ನೀಡಿದ್ದರೂ ಅದು ಬಾಕ್ಸ್ ಆಫೀಸ್‌ನಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ.

ಭಾರತದ ‘ಧುರಂಧರ್’ ಸಿನಿಮಾ ಜಾಗತಿಕ ಮಟ್ಟದಲ್ಲಿ ಯಶಸ್ಸು ಕಂಡ ಬಳಿಕ ಲಿಯಾರಿ ಪ್ರದೇಶದ ನಕಾರಾತ್ಮಕ ಚಿತ್ರಣಕ್ಕೆ ಪ್ರತಿಕ್ರಿಯೆಯಾಗಿ ‘ಮೇರಾ ಲಿಯಾರಿ’ ಸಿನಿಮಾ ನಿರ್ಮಾಣವಾಗಿತ್ತು. ‘ಧುರಂಧರ್’ ಚಿತ್ರದಲ್ಲಿ ಲಿಯಾರಿ ಭಾಗದ ಗ್ಯಾಂಗ್ ವಾರ್, ಕ್ರೈಂ ನೆಟ್ವರ್ಕ್ ಮತ್ತು ಭಯೋತ್ಪಾದನೆಯ ಅಂಶಗಳನ್ನು ತೋರಿಸಲಾಗಿತ್ತು.

ಆದರೆ ಪಾಕಿಸ್ತಾನಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗಿದ್ದು, ಕಳಪೆ ನಿರೂಪಣೆ ಮತ್ತು ಮನರಂಜನಾ ಅಂಶದ ಕೊರತೆಯಿಂದಾಗಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೆ ಗುರಿಯಾಗಿದೆ. ಭಾರತದ ಸಿನಿಮಾಗೆ ಟಕ್ಕರ್ ಕೊಡಲು ಹೊರಟ ಪಾಕಿಸ್ತಾನದ ಪ್ರಯತ್ನ ತನ್ನದೇ ನೆಲದಲ್ಲಿ ಕುಸಿದಿದೆ ಎನ್ನುವ ಚರ್ಚೆ ಜೋರಾಗಿದೆ.

ಹಾಸನದಲ್ಲಿ ಭೀಕರ ಘಟನೆ: ಜಿಮ್‌ನಲ್ಲಿ ಯುವಕನ ಮೇಲೆ ಮಾರಣಾಂತಿಕ ದಾಳಿ!

ಹಾಸನ: ಕ್ಷುಲ್ಲಕ ಕಾರಣಕ್ಕೆ ಜಿಮ್‌ನಲ್ಲಿ ನಡೆದ ಭೀಕರ ಹಲ್ಲೆ ಘಟನೆಯೊಂದು ಹಾಸನ ನಗರವನ್ನು ಬೆಚ್ಚಿಬೀಳಿಸಿದೆ.

ನಗರದ ಎಂ.ಜೆ. ಫಿಟ್‌ನೆಸ್ ಜಿಮ್‌ನಲ್ಲಿ ನಡೆದ ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿಯೂ ವೈರಲ್ ಆಗಿದೆ.

ಮಾಹಿತಿಯ ಪ್ರಕಾರ, ವ್ಯಾಯಾಮ ಮಾಡುವ ವೇಳೆ ಅಚಾತುರ್ಯದಿಂದ ಇಬ್ಬರ ಭುಜ ತಗುಲಿದ ವಿಷಯವೇ ಗಂಭೀರ ವಾಗ್ವಾದಕ್ಕೆ ಕಾರಣವಾಗಿದೆ. ಇದನ್ನೇ ನೆಪವಾಗಿಸಿಕೊಂಡ ವರುಣ್ ಎಂಬಾತ ಕೋಪಗೊಂಡು ಕೀರ್ತನ್ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಹಲ್ಲೆಯ ಪರಿಣಾಮವಾಗಿ ಕೀರ್ತನ್ ತಲೆಗೆ ಗಂಭೀರ ಗಾಯವಾಗಿದ್ದು, ಆತ ಪ್ರಜ್ಞೆ ತಪ್ಪಿ ಕೋಮಾಗೆ ಜಾರಿದ್ದಾನೆ. ಪ್ರಸ್ತುತ ಗಾಯಾಳು ICUನಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಈ ಸಂಬಂಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವರುಣ್ ವಿರುದ್ಧ ತನಿಖೆ ಆರಂಭಿಸಲಾಗಿದೆ. ಘಟನೆ ಕುರಿತು ಜಿಮ್‌ನ ಸಿಸಿಟಿವಿ ದೃಶ್ಯಗಳು ಪರಿಶೀಲನೆಗೆ ಒಳಪಡಿಸಲಾಗಿದೆ.

ಕ್ಷಣಿಕ ಕೋಪ ಹಾಗೂ ಅಸಹನೆಯ ಪರಿಣಾಮ ಹೇಗೆ ದೊಡ್ಡ ದುರಂತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಈ ಘಟನೆ ಮತ್ತೊಂದು ಎಚ್ಚರಿಕೆಯ ಉದಾಹರಣೆಯಾಗಿದೆ.

ಚಿನ್ನದ ದರ ಏರಿಕೆ: ರಾಜ್ಯದಲ್ಲಿ ಆಭರಣ ವ್ಯಾಪಾರಕ್ಕೆ ಭಾರಿ ಹೊಡೆತ!

ಬೆಂಗಳೂರು: ಚಿನ್ನದ ದರ ಏರಿಕೆಯ ಪರಿಣಾಮವಾಗಿ ರಾಜ್ಯದಲ್ಲಿ ಚಿನ್ನಾಭರಣ ಖರೀದಿ ಗಣನೀಯವಾಗಿ ಇಳಿಕೆಯಾಗಿದ್ದು, ವ್ಯಾಪಾರಿಗಳು ಮತ್ತು ಅಕ್ಕಸಾಲಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಚಿನ್ನದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರ ಖರೀದಿ ಶಕ್ತಿ ಕುಸಿದಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಪ್ರಧಾನಿಗಳ ಇತ್ತೀಚಿನ ಆರ್ಥಿಕ ಮಿತವ್ಯಯ ಸಲಹೆಯ ಬಳಿಕ ಖರೀದಿ ಮತ್ತಷ್ಟು ಇಳಿಕೆಯಾಗಿದೆ ಎಂದು ವರದಿಯಾಗಿದೆ.

ಈ ವರ್ಷ ಅಕ್ಷಯ ತೃತೀಯ ಸಂದರ್ಭದಲ್ಲಿಯೇ ಸುಮಾರು 30% ವ್ಯಾಪಾರ ಕುಸಿತ ದಾಖಲಾಗಿದ್ದು, ಕಳೆದ ಕೆಲ ತಿಂಗಳಿನಿಂದ ಒಟ್ಟಾರೆ ಚಿನ್ನದ ವ್ಯಾಪಾರವು 50%ಕ್ಕೂ ಹೆಚ್ಚು ಇಳಿಕೆಯಾಗಿರುವುದು ಗಮನಾರ್ಹವಾಗಿದೆ. ಸಾಮಾನ್ಯವಾಗಿ ವರ್ಷಪೂರ್ತಿ ನಡೆಯುವ ವ್ಯಾಪಾರವೂ ಇದೀಗ ತೀವ್ರವಾಗಿ ಕುಸಿದಿದೆ ಎಂದು ಜುವೆಲ್ಲರಿ ಮಾಲೀಕರು ಹೇಳಿದ್ದಾರೆ.

ಚಿನ್ನಾಭರಣಗಳ ಬೇಡಿಕೆ ಕಡಿಮೆಯಾದ ಕಾರಣ ತಯಾರಿಕಾ ಕಾರ್ಯ ಕೂಡ ಕುಂಠಿತಗೊಂಡಿದ್ದು, ಅಕ್ಕಸಾಲಿಗರಿಗೂ ಕೆಲಸದ ಕೊರತೆ ಎದುರಾಗಿದೆ. ದಿನನಿತ್ಯ ಕೆಲಸಕ್ಕಾಗಿ ಅಂಗಡಿಗಳಿಂದ ಅಂಗಡಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಕ್ಕಸಾಲಿಗರು ತಿಳಿಸಿದ್ದಾರೆ.

ಒಟ್ಟಾರೆ, ಚಿನ್ನದ ದರ ಏರಿಕೆ ಒಂದು ಕಡೆ ವ್ಯಾಪಾರವನ್ನು ಕುಗ್ಗಿಸುತ್ತಿದ್ದರೆ, ಮತ್ತೊಂದು ಕಡೆ ಈ ಉದ್ಯಮದ ಮೇಲೆ ಅವಲಂಬಿತ ಸಾವಿರಾರು ಕುಟುಂಬಗಳ ಜೀವನೋಪಾಯಕ್ಕೂ ಪರಿಣಾಮ ಬೀರುತ್ತಿದೆ.

IPL 2026: ಕೊಹ್ಲಿ ಶತಕದ ಅಬ್ಬರ: ಕೆಕೆಆರ್ ಮಣಿಸಿ ಮತ್ತೆ ನಂ.1 ಆದ ಆರ್‌ಸಿಬಿ

ವಿರಾಟ್ ಕೊಹ್ಲಿಯ ಅಜೇಯ ಶತಕದ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಐಪಿಎಲ್ 2026ರ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ.

ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಕಲೆಹಾಕಿತು. ಅಂಗ್‌ಕ್ರಿಶ್ ರಘುವಂಶಿ 71 ರನ್ ಹಾಗೂ ರಿಂಕು ಸಿಂಗ್ ಅಜೇಯ 49 ರನ್‌ಗಳಿಸಿ ತಂಡಕ್ಕೆ ಬಲ ತುಂಬಿದರು. ಕ್ಯಾಮರೂನ್ ಗ್ರೀನ್ 32 ರನ್‌ಗಳ ಕೊಡುಗೆ ನೀಡಿದರು.

193 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಆರಂಭಿಕ ಜೇಕಬ್ ಬೆಥೆಲ್ 15 ರನ್‌ಗಳಿಗೆ ಔಟಾದರು. ಬಳಿಕ ವಿರಾಟ್ ಕೊಹ್ಲಿ ಹಾಗೂ ಕನ್ನಡಿಗ ದೇವದತ್ ಪಡಿಕ್ಕಲ್ 92 ರನ್‌ಗಳ ಜೊತೆಯಾಟ ನಡೆಸಿ ತಂಡಕ್ಕೆ ಬಲ ತುಂಬಿದರು. ಪಡಿಕ್ಕಲ್ 39 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು.

ಆ ಬಳಿಕ ರಜತ್ ಪಾಟೀದಾರ್ 11 ಹಾಗೂ ಟಿಮ್ ಡೇವಿಡ್ 2 ರನ್‌ಗಳಿಗೆ ಔಟಾದರೂ, ಒಂದೆಡೆ ಸ್ಥಿರ ಆಟವಾಡಿದ ಕೊಹ್ಲಿ 58 ಎಸೆತಗಳಲ್ಲಿ ಶತಕ ಪೂರೈಸಿದರು. ಕೊಹ್ಲಿ ಅಜೇಯ 105 ರನ್‌ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಜಿತೇಶ್ ಶರ್ಮಾ ಅಜೇಯ 8 ರನ್‌ಗಳಿಸಿದರು.

ಈ ಶತಕದೊಂದಿಗೆ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ತಮ್ಮ 9ನೇ ಶತಕ ದಾಖಲಿಸಿದರೆ, ಟಿ20 ಕ್ರಿಕೆಟ್‌ನಲ್ಲಿ 14 ಸಾವಿರ ರನ್‌ಗಳ ಮೈಲಿಗಲ್ಲು ಕೂಡ ತಲುಪಿದರು.

ಈ ಗೆಲುವಿನೊಂದಿಗೆ ಆರ್‌ಸಿಬಿ 12 ಪಂದ್ಯಗಳಿಂದ 16 ಅಂಕ ಕಲೆಹಾಕಿ ಪ್ಲೇಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ.

error: Content is protected !!