Home Blog

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ – ಹಲವೆಡೆ ಅವಾಂತರ, ಮರಗಳು ಧರೆಗುರುಳಿ ಹಾನಿ!

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದ್ದು, ಗುಡುಗು ಸಹಿತ ಬಿರುಗಾಳಿ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಅವಾಂತರಗಳು ಸಂಭವಿಸಿವೆ.

ಬೀದರ್ ಜಿಲ್ಲೆಯ ಅಣದೂರು ವಾಡಿ ಗ್ರಾಮದ ಬಳಿ ಇರುವ ಮಾಂಜ್ರಾ ವಾಟರ್ ಪಾರ್ಕ್‌ನಲ್ಲಿ ಗೋಡೆ ಕುಸಿದು ಬಿದ್ದು ಅನಾಹುತ ಸಂಭವಿಸಿದ್ದು, ಮಕ್ಕಳು ಹಾಗೂ ಮಹಿಳೆಯರು ಸೇರಿ 10ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅದೇ ಜಿಲ್ಲೆಯ ಕಮಠಾಣ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಮೂವರು ಮಕ್ಕಳು ಗಾಯಗೊಂಡಿದ್ದಾರೆ.

ಗದಗ ಜಿಲ್ಲೆಯಲ್ಲಿ ಬಿರುಗಾಳಿ ಮಳೆಗೆ ಚವಡಿ ಕೂಟ ಬಳಿ ಮನೆಯ ಮೇಲಿದ್ದ ಸಿಂಟೆಕ್ಸ್ ಟ್ಯಾಂಕ್ ಹಾರಿ ಬಂದು ವಿದ್ಯುತ್ ತಂತಿಗೆ ತಗುಲಿ ನೇತಾಡಿದ ಘಟನೆ ನಡೆದಿದೆ.

ಕಲಬುರಗಿ ಜಿಲ್ಲೆಯ ಪಿಲ್ಲಿಗುಂಟಾ ತಾಂಡಾದಲ್ಲಿ ಸಿಡಿಲು ಬಡಿದು ಸುಮಾರು 25 ಮೇಕೆಗಳು ಸಾವನ್ನಪ್ಪಿವೆ.

ಚಿಕ್ಕೋಡಿ ಉಪ ವಿಭಾಗದಲ್ಲಿ ಸುರಿದ ಗಾಳಿ ಮಳೆಗೆ ಕಟಕಭಾವಿ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಹಾರಿಹೋಗಿದೆ. ಬಳ್ಳಾರಿ ನಗರದಲ್ಲೂ ಮಳೆ ಅವಾಂತರ ಉಂಟಾಗಿದ್ದು, ಹಲವು ಕಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಬೃಹತ್ ಮರ ಬಿದ್ದು ಎರಡು ಕಾರುಗಳು ಜಖಂ ಆಗಿವೆ. ಕನಕ ದುರ್ಗಮ್ಮ ದೇವಸ್ಥಾನಕ್ಕೆ ಹೋಗುವ ರಸ್ತೆ ಹಾಗೂ ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ನಿಂತು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.

ಚಿತ್ರದುರ್ಗದಲ್ಲೂ ಮಳೆಯಿಂದ ಮುಖ್ಯರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ.

ಇನ್ನು ರಾಜಧಾನಿ ಬೆಂಗಳೂರಿನ ಸದಾಶಿವನಗರದಲ್ಲಿ ಗಾಳಿ ಮಳೆಗೆ ಬೃಹತ್ ಮರ ಕಾರಿನ ಮೇಲೆ ಉರುಳಿದ ಘಟನೆ ವರದಿಯಾಗಿದೆ. ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಎಚ್ಚರಿಕೆಯಿಂದ ಇರಲು ಸೂಚಿಸಿದೆ.

ದಸರಾದಿಂದ ಕಂಜನ್ ಆನೆಗೆ ಕೋಕ್: ಅರಣ್ಯ ಇಲಾಖೆಯ ಮಹತ್ವದ ನಿರ್ಧಾರ!

ಕೊಡಗು: ಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ ನಡೆದ ದಾರುಣ ಘಟನೆಯ ಬಳಿಕ, ದಸರಾ ಮಹೋತ್ಸವದಿಂದ ಕಂಜನ್ ಆನೆಯನ್ನು ಹೊರಗಿಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಮಾರ್ತಾಂಡ ಆನೆಯ ಮೇಲೆ ದಾಳಿ ಮಾಡಿದ ಕಂಜನ್ ಆನೆಯನ್ನು ಇನ್ನು ಮುಂದೆ ದಸರಾ ಜಂಬೂಸವಾರಿಯಲ್ಲಿ ಬಳಸಬಾರದು ಎಂದು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಂಜನ್ ಆನೆಗೆ ದಸರಾದಿಂದ ‘ಕೋಕ್’ ನೀಡಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಈ ದುರ್ಘಟನೆ ರಾಜ್ಯಾದ್ಯಂತ ಶೋಕಕ್ಕೆ ಕಾರಣವಾಗಿದೆ. ಜೊತೆಗೆ ಈ ಘಟನೆಯ ಸಮಯದಲ್ಲಿ ಪ್ರವಾಸಿ ಮಹಿಳೆಯೊಬ್ಬರು ಕೂಡ ಮೃತಪಟ್ಟಿರುವುದು ಘಟನೆ ಗಂಭೀರತೆಯನ್ನು ಹೆಚ್ಚಿಸಿದೆ.

ಅರಣ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ದಸರಾ ಉತ್ಸವದಲ್ಲಿ ಭಾಗವಹಿಸುತ್ತಿದ್ದ ಕಂಜನ್ ಆನೆಯ ಭವಿಷ್ಯದ ಭಾಗವಹಿಸುವಿಕೆಯನ್ನು ರದ್ದುಪಡಿಸಲಾಗಿದೆ. ಆನೆಯ ವರ್ತನೆ ಮತ್ತು ಸುರಕ್ಷತಾ ಕಾರಣಗಳನ್ನು ಗಮನದಲ್ಲಿಟ್ಟು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಘಟನೆಯ ಕುರಿತು ಅರಣ್ಯ ಇಲಾಖೆ ತನಿಖೆ ಮುಂದುವರಿಸಿದೆ.

ದುಬಾರೆ ಶಿಬಿರ ದುರಂತ: ಮಾರ್ತಾಂಡ ಆನೆ ಚಿಕಿತ್ಸೆ ಫಲಕಾರಿಯಾಗದೆ ಸಾವು!

ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿ ನಡೆದ ಕಾಡಾನೆಗಳ ಕಾದಾಟದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದೆ.

ನಿನ್ನೆ ಮಾವುತರು ಸ್ನಾನಕ್ಕೆಂದು ಕಾವೇರಿ ನದಿಗೆ ಕಂಜನ್ ಮತ್ತು ಮಾರ್ತಾಂಡ ಆನೆಗಳನ್ನು ಕರೆತಂದಿದ್ದ ಸಂದರ್ಭದಲ್ಲಿ ಅವುಗಳ ನಡುವೆ ಕಾದಾಟ ಸಂಭವಿಸಿತ್ತು. ಈ ದುರಂತದಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದರು. ಜೊತೆಗೆ ಮಾರ್ತಾಂಡ ಆನೆಗೂ ಗಂಭೀರ ಗಾಯಗಳಾಗಿದ್ದವು.

ಶಿಬಿರದಲ್ಲೇ ತಕ್ಷಣ ಚಿಕಿತ್ಸೆ ನೀಡಲಾಗಿದ್ದರೂ ಆನೆ ಆರೋಗ್ಯ ಸ್ಥಿತಿ ಚಿಂತಾಜನಕವಾಗಿಯೇ ಇತ್ತು. ಆದರೆ ಎಲ್ಲಾ ಪ್ರಯತ್ನಗಳ ನಡುವೆಯೂ ಇಂದು ಮಾರ್ತಾಂಡ ಆನೆ ಕೊನೆಯುಸಿರೆಳೆದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಡಿಎಫ್ಒ ಅಭಿಶೇಕ್ ಮಾಹಿತಿ ನೀಡಿದ್ದು, ಘಟನೆಯಿಂದ ಶಿಬಿರದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ನಾಳೆ ಜಿಲ್ಲೆಯಾದ್ಯಂತ ಔಷಧ ಅಂಗಡಿಗಳು ಬಂದ್..!

ವಿಜಯಸಾಕ್ಷಿ ಸುದ್ದಿ, ಗದಗ: ಅಖಿಲ ಭಾರತ ಔಷಧ ವ್ಯಾಪಾರಸ್ಥರ ಸಂಘದ ಕರೆ ಮೇರೆಗೆ ಮೇ 20ರಂದು ಜಿಲ್ಲೆಯಾದ್ಯಂತ ಔಷಧ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಜಿಲ್ಲಾ ಔಷಧ ವ್ಯಾಪಾರಸ್ಥರ ಮುಖಂಡ ರಾಮನಗೌಡ ದಾನಪ್ಪಗೌಡ್ರ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ಹಾಗೂ ರಾಜ್ಯ ಮಟ್ಟದಲ್ಲಿ ಹೋಲ್‌ಸೇಲ್ ಮತ್ತು ರಿಟೇಲ್ ಔಷಧ ವ್ಯಾಪಾರಸ್ಥರು ಬಂದ್‌ಗೆ ಬೆಂಬಲ ಸೂಚಿಸಿದ್ದು, ಗದಗ ಜಿಲ್ಲೆಯಲ್ಲಿಯೂ ಸುಮಾರು 480ಕ್ಕೂ ಹೆಚ್ಚು ಔಷಧ ಅಂಗಡಿಗಳು ಸಂಪೂರ್ಣ ಬಂದ್ ಆಗಲಿವೆ ಎಂದರು.

ಸಣ್ಣ ಹಳ್ಳಿಗಳಲ್ಲಿಯೂ ವೈದ್ಯರು ಹಾಗೂ ಆಸ್ಪತ್ರೆಗಳ ಸೌಲಭ್ಯ ಕೊರತೆಯಿರುವ ಸಂದರ್ಭಗಳಲ್ಲಿ ಔಷಧ ವ್ಯಾಪಾರಸ್ಥರು ಸಾರ್ವಜನಿಕರಿಗೆ ಅಗತ್ಯ ಔಷಧಿಗಳನ್ನು ಪೂರೈಸುತ್ತಿದ್ದಾರೆ. ಆದರೆ ಜಿ.ಎಸ್.ಆರ್. ಆನ್‌ಲೈನ್ ವ್ಯವಸ್ಥೆಯ ಮೂಲಕ ಮನೆ ಬಾಗಿಲಿಗೆ ಔಷಧ ವಿತರಣೆ ಮಾಡುವ ಕ್ರಮದಿಂದ ಸಾಂಪ್ರದಾಯಿಕ ಔಷಧ ವ್ಯಾಪಾರಕ್ಕೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿದರು.

ಇ-ಕಾಮರ್ಸ್ ವ್ಯವಸ್ಥೆಯಲ್ಲಿ ಚೈನ್ ಸಿಸ್ಟಮ್ ದುರ್ಬಳಕೆ ಆಗುತ್ತಿದ್ದು, ನಕಲಿ ಹಾಗೂ ಗುಣಮಟ್ಟವಿಲ್ಲದ ಔಷಧಗಳ ಮಾರಾಟ ನಡೆಯುತ್ತಿದೆ. ನಾರ್ಕೋಟಿಕ್ಸ್ ಹಾಗೂ ಆಂಟಿಬಯೋಟಿಕ್ ಔಷಧಗಳ ಮಾರಾಟಕ್ಕೂ ಸೂಕ್ತ ನಿಯಂತ್ರಣ ಇಲ್ಲದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಡ್ರಗ್ ಕಂಟ್ರೋಲ್ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಕೆಲವು ಆನ್‌ಲೈನ್ ಸಂಸ್ಥೆಗಳು ವೈದ್ಯರ ಚೀಟಿ ಇಲ್ಲದೆ ಔಷಧ ವಿತರಣೆ ಮಾಡುತ್ತಿವೆ. ಕೆಲವೆಡೆ ವೈದ್ಯರ ಚೀಟಿಯನ್ನು ನಕಲಿ ಸೃಷ್ಟಿಸಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ ಎಂದು ಆರೋಪಿಸಿದರು.

ಮೆಡ್ ಪ್ಲಸ್, ಅಪೋಲೊ ಹಾಗೂ ಐಎಂಎ ಸಂಘಟನೆಗಳು ಕೂಡ ಬಂದ್‌ಗೆ ಬೆಂಬಲ ಸೂಚಿಸಿವೆ ಎಂದು ತಿಳಿಸಿದರು.

ಸಾರ್ವಜನಿಕರಿಗೆ ತೊಂದರೆ ಆಗದಂತೆ ತುರ್ತು ಸೇವೆಗಾಗಿ 8867757396, 9448746476 ಹಾಗೂ 9480296041 ಸಂಪರ್ಕ ಸಂಖ್ಯೆಗಳನ್ನು ನೀಡಲಾಗಿದೆ. ಅಗತ್ಯ ಸಂದರ್ಭಗಳಲ್ಲಿ ಈ ಸಂಖ್ಯೆಗಳಿಗೆ ಕರೆ ಮಾಡುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಭು ಕಾಬಳೆ, ರಮಜಾನಸಾಬ ನದಾಫ್, ಶಿವಯೋಗಿ, ಸದಾನಂದ ಹಾಗೂ ಜಗದೀಶ ಹಿರೇಮಠ ಉಪಸ್ಥಿತರಿದ್ದರು.

ಕೋಟ್

“ಆನ್‌ಲೈನ್ ಔಷಧ ವಿತರಣೆಯಿಂದ ಸಾಂಪ್ರದಾಯಿಕ ಔಷಧ ವ್ಯಾಪಾರಕ್ಕೆ ದೊಡ್ಡ ಹೊಡೆತ ಬೀಳುತ್ತಿದೆ.”
— ರಾಮನಗೌಡ ದಾನಪ್ಪಗೌಡ್ರ, ಜಿಲ್ಲಾ ಔಷಧ ವ್ಯಾಪಾರಸ್ಥರ ಮುಖಂಡ

‘SIR’ ಮೂಲಕ ಪ್ರಜಾಪ್ರಭುತ್ವ ಕಗ್ಗೊಲೆ: ಅಶೋಕ ಮಂದಾಲಿ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಬಿಜೆಪಿ ಸರ್ಕಾರವು SIR (Special Intensive Revision) ಪ್ರಕ್ರಿಯೆಯನ್ನು ಚುನಾವಣೆ ಗೆಲುವಿನ ‘ಟೂಲ್ ಕಿಟ್’ ಆಗಿ ಬಳಸಿಕೊಂಡು ವಿರೋಧ ಪಕ್ಷಗಳ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುತ್ತಿದೆ ಎಂದು ಗದಗ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, “2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ NDA ಮೈತ್ರಿಕೂಟ ಕೇವಲ 7 ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. ಆದರೆ EVM ಹ್ಯಾಕ್, ವೋಟ್ ಚೋರಿ ಹಾಗೂ SIR ಮೂಲಕ ಇಂದು 22 ರಾಜ್ಯಗಳಲ್ಲಿ NDA ಅಧಿಕಾರದಲ್ಲಿದೆ” ಎಂದು ಆರೋಪಿಸಿದ್ದಾರೆ.

SIR ಪ್ರಕ್ರಿಯೆ ಮೂಲಕ ವಿರೋಧ ಪಕ್ಷಗಳಿಗೆ ಸೇರಿದ ಮತದಾರರ ಹೆಸರನ್ನು ತೆಗೆದು ಹಾಕಿ ಕಡಿಮೆ ಮತಗಳ ಅಂತರದಲ್ಲಿ ಬಿಜೆಪಿ ಜಯ ಸಾಧಿಸುತ್ತಿದೆ ಎಂದು ದೂರಿದ ಅವರು, 2026ರ ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ, ಪಾಂಡಿಚೇರಿ ಹಾಗೂ ತಮಿಳುನಾಡು ಚುನಾವಣೆಯಲ್ಲಿ 2 ಕೋಟಿಗೂ ಹೆಚ್ಚು ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆರೋಪಿಸಿದರು.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸ್ಪರ್ಧಿಸಿದ್ದ ಭವಾನಿಪುರ ಕ್ಷೇತ್ರದಲ್ಲಿ 51 ಸಾವಿರ ಮತದಾರರ ಹೆಸರು ಕಡಿತಗೊಂಡಿದ್ದು, ಅವರು ಕೇವಲ 15 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ ಎಂದು ಹೇಳಿದರು.

ತಮಿಳುನಾಡಿನಲ್ಲಿ ಸ್ಟಾಲಿನ್ ಸ್ಪರ್ಧಿಸಿದ್ದ ಕೊಳತ್ತೂರು ಕ್ಷೇತ್ರದಲ್ಲಿ 1 ಲಕ್ಷ ಮತದಾರರ ಹೆಸರು ತೆಗೆದು ಹಾಕಲಾಗಿದ್ದು, ಅವರು ಕೇವಲ 8 ಸಾವಿರ ಮತಗಳಿಂದ ಸೋತಿದ್ದಾರೆ ಎಂದು ಆರೋಪಿಸಿದರು.

ದೆಹಲಿ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ಸ್ಪರ್ಧಿಸಿದ್ದ ನ್ಯೂ ದೆಹಲಿ ಕ್ಷೇತ್ರದಲ್ಲಿ 38 ಸಾವಿರ ಮತಗಳನ್ನು ತೆಗೆದು ಹಾಕಿದ್ದು, ಅವರು 4 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ ಎಂದು ದೂರಿದರು.

SIR ಮೂಲಕ 12 ರಾಜ್ಯಗಳಲ್ಲಿ ಒಟ್ಟು 7.2 ಕೋಟಿ ಮತದಾರರ ಹೆಸರು ತೆಗೆದು ಹಾಕಲಾಗಿದೆ ಎಂದು ಆರೋಪಿಸಿದ ಅಶೋಕ ಮಂದಾಲಿ, 2024ರಿಂದ ನಡೆದ 15 ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ 9 ರಾಜ್ಯಗಳಲ್ಲಿ ಗೆಲುವು ಸಾಧಿಸಿರುವುದರ ಹಿಂದೆ ಇದೇ ತಂತ್ರ ಕಾರ್ಯನಿರ್ವಹಿಸಿದೆ ಎಂದು ಹೇಳಿದರು.

“ಚುನಾವಣಾ ಆಯೋಗ ಜಾಣ ಕುರುಡು”

“ಚುನಾವಣಾ ಆಯೋಗವು ಬಿಜೆಪಿಯ ಚುನಾವಣಾ ಏಜೆಂಟ್‌ನಂತೆ ವರ್ತಿಸುತ್ತಿದೆ” ಎಂದು ಆರೋಪಿಸಿದ ಅವರು, ಹರಿಯಾಣ ಚುನಾವಣೆಯಲ್ಲಿ ‘ಬ್ರೆಜಿಲಿಯನ್ ಮಾಡೆಲ್’ ಭಾವಚಿತ್ರ ಬಳಸಿ 22 ಬಾರಿ ಮತದಾನ ನಡೆದಿದ್ದರೂ ಕ್ರಮ ಕೈಗೊಳ್ಳಲಿಲ್ಲ ಎಂದು ದೂರಿದರು.

ಬಿಹಾರದಲ್ಲಿ ಮೊದಲ ಹಂತದ SIR ವೇಳೆ 7.89 ಕೋಟಿ ಮತದಾರರ ಪಟ್ಟಿಯಿಂದ 65 ಲಕ್ಷ ಹೆಸರು ತೆಗೆದು ಹಾಕಲಾಗಿತ್ತು. ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡ ಬಳಿಕ ಮಾತ್ರ ಮಾಹಿತಿ ಬಹಿರಂಗವಾಯಿತು ಎಂದು ಹೇಳಿದರು.

“ಕರ್ನಾಟಕದಲ್ಲೂ ಮತದಾರರ ಸೇರ್ಪಡೆ ಪ್ರಶ್ನೆ”

ಕರ್ನಾಟಕದಲ್ಲಿ 2023ರ ನವೆಂಬರ್‌ನಿಂದ ಜನವರಿವರೆಗೆ 9 ಲಕ್ಷ ಹಾಗೂ ಜನವರಿಯಿಂದ ಏಪ್ರಿಲ್‌ವರೆಗೆ 16 ಲಕ್ಷ ಮತದಾರರನ್ನು ಹೇಗೆ ಸೇರ್ಪಡೆ ಮಾಡಲಾಯಿತು ಎಂಬ ಪ್ರಶ್ನೆಯನ್ನು ಅಶೋಕ ಮಂದಾಲಿ ಎತ್ತಿದರು.

ಆಳಂದ ಕ್ಷೇತ್ರದಲ್ಲಿ ಮತದಾರರ ಹೆಸರು ತೆಗೆದು ಹಾಕಲು ಪ್ರತಿ ಹೆಸರಿಗೆ 80 ರೂ. ನೀಡಲಾಗಿತ್ತು ಎಂಬ ಆರೋಪದ ಬಗ್ಗೆ ತನಿಖೆ ಯಾಕೆ ನಡೆಸಲಿಲ್ಲ ಎಂದು ಪ್ರಶ್ನಿಸಿದರು.

“ಮತಗಳ್ಳತನದ ಉದಾಹರಣೆಗಳು”

2024ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ 11,956 ನಕಲಿ ಮತದಾರರು, 40,009 ನಕಲಿ ವಿಳಾಸಗಳು ಹಾಗೂ 10,452 ನಕಲಿ ನೋಂದಣಿಗಳ ಮೂಲಕ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಕ್ರಮ ನಡೆದಿದೆ ಎಂದು ಆರೋಪಿಸಿದರು.

2024ರ ಹರಿಯಾಣ ಚುನಾವಣೆಯಲ್ಲಿ ಸುಮಾರು 25 ಲಕ್ಷ ಮತಗಳ್ಳತನ ನಡೆದಿದ್ದು, “ಬ್ರೆಜಿಲಿಯನ್ ಮಾಡೆಲ್” ಭಾವಚಿತ್ರ ಬಳಸಿ ಮತದಾನ ನಡೆಸಲಾಗಿದೆ ಎಂದು ರಾಹುಲ್ ಗಾಂಧಿ ಸಾಕ್ಷಿ ಸಮೇತ ಬಯಲು ಮಾಡಿದ್ದಾರೆ ಎಂದು ಹೇಳಿದರು.

ರಾಜ್ಯವಾರು ಆರೋಪಗಳ ಪಟ್ಟಿ

ಪಶ್ಚಿಮ ಬಂಗಾಳ : 90.66 ಲಕ್ಷ ಮತದಾರರ ಕಡಿತ

ಅಸ್ಸಾಂ : 2.43 ಲಕ್ಷ ಮತದಾರರ ಕಡಿತ

ಪಾಂಡಿಚೇರಿ : 77 ಸಾವಿರ ಮತದಾರರ ಕಡಿತ

ಬಿಹಾರ : 65 ಲಕ್ಷ ಮತದಾರರ ಕಡಿತ

ದೆಹಲಿ : 5.20 ಲಕ್ಷ ಮತದಾರರ ಕಡಿತ

ಮಹಾರಾಷ್ಟ್ರ : 11.20 ಲಕ್ಷ ಮತದಾರರ ಕಡಿತ

ಒಡಿಶಾ : 8.50 ಲಕ್ಷ ಮತದಾರರ ಕಡಿತ

ಆಂಧ್ರ ಪ್ರದೇಶ : 6.20 ಲಕ್ಷ ಮತದಾರರ ಕಡಿತ

ಹರಿಯಾಣ : 3.40 ಲಕ್ಷ ಮತದಾರರ ಕಡಿತ ನಡೆದಿದೆ ಎಂದು ಆರೋಪಿಸಿದರು.

“SIR ಮೂಲಕ ಮತದಾರರ ಹಕ್ಕು ಕಸಿದುಕೊಂಡು ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ.”

ಅಶೋಕ ಮಂದಾಲಿ

ಗದಗ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ

ಅದಾನಿ ವಿರುದ್ಧದ ಕ್ರಿಮಿನಲ್ ಪ್ರಕರಣ ಅಂತ್ಯ: ಅಮೆರಿಕ ನ್ಯಾಯಾಂಗದ ಮಹತ್ವದ ನಿರ್ಧಾರ!

ವಾಷಿಂಗ್ಟನ್: ಭಾರತದ ಪ್ರಮುಖ ಉದ್ಯಮಿ ಹಾಗೂ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿಗೆ ಅಮೆರಿಕದಿಂದ ಮಹತ್ವದ ಪರಿಹಾರ ಸಿಕ್ಕಿದೆ.

ಇವರ ವಿರುದ್ಧ ಇದ್ದ ಎಲ್ಲಾ ಕ್ರಿಮಿನಲ್ ವಂಚನೆ ಮತ್ತು ಲಂಚದ ಆರೋಪಗಳನ್ನು ಅಮೆರಿಕದ ನ್ಯಾಯಾಂಗ ಇಲಾಖೆ ಶಾಶ್ವತವಾಗಿ ಕೈಬಿಟ್ಟಿದೆ ಎಂದು ವರದಿಯಾಗಿದೆ.

ನ್ಯೂಯಾರ್ಕ್‌ನಲ್ಲಿ ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ವಿರುದ್ಧ ಹೈಪ್ರೊಫೈಲ್ ಸೆಕ್ಯೂರಿಟೀಸ್ ಮತ್ತು ವೈರ್ ವಂಚನೆ ಪ್ರಕರಣಗಳು ದಾಖಲಾಗಿದ್ದವು. ಆದರೆ ಈ ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಟರ್‌ಗಳಿಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೈಬಿಡಲಾಗಿದೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ತಿಳಿಸಿದೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್‌ನ ಷೇರುಗಳು ಸಕಾರಾತ್ಮಕ ಚಲನೆಯನ್ನು ತೋರಿಸುತ್ತಿವೆ ಎಂದು ತಿಳಿದುಬಂದಿದೆ.

ಇದೇ ವೇಳೆ, ಪ್ರಕರಣ ಇತ್ಯರ್ಥವಾದ ನಂತರ ಅಮೆರಿಕದ ಆರ್ಥಿಕತೆಯಲ್ಲಿ ಸುಮಾರು 10 ಬಿಲಿಯನ್ ಡಾಲರ್ (ಅಂದಾಜು 83,000 ಕೋಟಿ ರೂ.) ಹೂಡಿಕೆ ಮಾಡುವುದಾಗಿ ಹಾಗೂ ಸುಮಾರು 15,000 ಹೊಸ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಅದಾನಿ ಸಮೂಹ ಭರವಸೆ ನೀಡಿದೆ.

ಈ ಪ್ರಕರಣದ ಅಂತ್ಯವು ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಹೂಡಿಕೆ ವಲಯದಲ್ಲೂ ಗಮನ ಸೆಳೆದಿದ್ದು, ಮುಂದಿನ ಬೆಳವಣಿಗೆಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಠಾಣೆಯಲ್ಲೇ ಕುಳಿತು ಟ್ರಾಫಿಕ್ ಕಂಟ್ರೋಲ್..!

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ದಿನೇದಿನೇ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿರುವ ನಡುವೆ, ಲಕ್ಷ್ಮೇಶ್ವರ ಪೊಲೀಸ್ ಠಾಣೆ ತಂತ್ರಜ್ಞಾನ ಆಧಾರಿತ ಹೊಸ ಮಾದರಿಯ ಸಂಚಾರ ನಿಯಂತ್ರಣ ವ್ಯವಸ್ಥೆ ಜಾರಿಗೆ ತಂದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಪುರಸಭೆಯ ಸಹಕಾರದೊಂದಿಗೆ ಪೊಲೀಸ್ ಇಲಾಖೆ “ಪಬ್ಲಿಕ್ ಅಡ್ರೆಸ್ ಸಿಸ್ಟಂ” ಬಳಸಿ ಠಾಣೆಯಲ್ಲೇ ಕುಳಿತು ಟ್ರಾಫಿಕ್ ನಿಯಂತ್ರಣ ಮಾಡುವ ವ್ಯವಸ್ಥೆ ಜಾರಿಗೆ ತಂದಿದೆ. ಪಟ್ಟಣದ ಪ್ರಮುಖ ವೃತ್ತಗಳು, ಮಾರುಕಟ್ಟೆ ಪ್ರದೇಶಗಳು ಹಾಗೂ ವಾಹನ ದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳ ಮೂಲಕ ಪೊಲೀಸ್ ಸಿಬ್ಬಂದಿ ವಾಹನ ಸಂಚಾರದ ಮೇಲೆ ನಿಗಾ ವಹಿಸುತ್ತಿದ್ದಾರೆ.

ವಾಹನ ದಟ್ಟಣೆ, ಅಡ್ಡಾದಿಡ್ಡಿ ಪಾರ್ಕಿಂಗ್, ರಸ್ತೆ ನಿಯಮ ಉಲ್ಲಂಘನೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಕ್ಯಾಮರಾಗಳ ಮೂಲಕ ಗಮನಿಸಿ ತಕ್ಷಣವೇ ಕ್ರಮ ಕೈಗೊಳ್ಳಲಾಗುತ್ತಿದೆ. ಧ್ವನಿವರ್ಧಕಗಳ ಮೂಲಕ “ವಾಹನಗಳನ್ನು ಸರಿಯಾಗಿ ನಿಲ್ಲಿಸಿ”, “ರಸ್ತೆ ಮಧ್ಯೆ ವಾಹನ ನಿಲ್ಲಿಸಬೇಡಿ”, “ಟ್ರಾಫಿಕ್ ನಿಯಮ ಪಾಲಿಸಿ” ಎಂಬ ಸೂಚನೆಗಳನ್ನು ಠಾಣೆಯಿಂದಲೇ ನೇರವಾಗಿ ನೀಡಲಾಗುತ್ತಿದೆ. ಸಂಚಾರ ದಟ್ಟಣೆ ಹೆಚ್ಚಾದಲ್ಲಿ ಸೈರನ್ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ.

ವಿಶೇಷವಾಗಿ ಶಾಲಾ-ಕಾಲೇಜು ಅವಧಿ, ಮಾರುಕಟ್ಟೆ ದಿನಗಳು ಹಾಗೂ ಹಬ್ಬದ ಸಂದರ್ಭಗಳಲ್ಲಿ ಈ ವ್ಯವಸ್ಥೆ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕೆಲವೆಡೆ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಧ್ವನಿವರ್ಧಕದ ಮೂಲಕವೇ ಎಚ್ಚರಿಕೆ ನೀಡಲಾಗುತ್ತಿದ್ದು, ಜನರು ಕೂಡ ಇದಕ್ಕೆ ಸ್ಪಂದಿಸುತ್ತಿದ್ದಾರೆ.

ಈ ವ್ಯವಸ್ಥೆಯನ್ನು ಪುರಸಭೆಯವರು ಸ್ವಚ್ಛತೆ, ಕರ ವಸೂಲಿ ಹಾಗೂ ಸಾರ್ವಜನಿಕ ಪ್ರಕಟಣೆಗಳಿಗೂ ಬಳಸಿಕೊಳ್ಳುತ್ತಿರುವುದು ವಿಶೇಷವಾಗಿದೆ.

62 ಸಿಸಿ ಕ್ಯಾಮರಾಗಳ ಕಣ್ಗಾವಲು

ಪಟ್ಟಣದಲ್ಲಿ ಈಗಾಗಲೇ ಪುರಸಭೆಯ ಸಹಯೋಗದಲ್ಲಿ ಅಳವಡಿಸಿರುವ 62 ಸಿಸಿ ಕ್ಯಾಮರಾಗಳು ಸಂಚಾರದ ಚಲನವಲನಗಳನ್ನು ಸೆರೆಹಿಡಿಯುತ್ತಿವೆ. ಅಲ್ಲದೇ ಗ್ರಾಮೀಣ ಭಾಗಗಳಲ್ಲಿ 38 ಹಾಗೂ ಪಟ್ಟಣ ಸಂಪರ್ಕಿಸುವ ರಸ್ತೆಗಳಲ್ಲಿ 3 ವಿಶೇಷ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಈ ಕ್ಯಾಮರಾಗಳ ಮೂಲಕ ಟ್ರಾಫಿಕ್ ಮಾತ್ರವಲ್ಲದೆ ಕಾನೂನುಬಾಹಿರ ಚಟುವಟಿಕೆ, ಅಕ್ರಮ ಸಾಗಾಣಿಕೆ, ಕಳ್ಳತನ ಹಾಗೂ ಅಪರಾಧ ಪ್ರಕರಣಗಳ ಮೇಲೂ ನಿಗಾ ಇಡಲಾಗುತ್ತಿದೆ.

ಪ್ರಮುಖ ರಸ್ತೆಗಳಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಸುಧಾರಿಸಲು ಪೊಲೀಸರು ಕ್ರಮ ಕೈಗೊಂಡಿದ್ದರೂ ಕೆಲವರು ನಿಯಮ ಉಲ್ಲಂಘಿಸುತ್ತಿದ್ದಾರೆ. ಇಂತಹ ವಾಹನಗಳನ್ನು ಸೀಜ್ ಮಾಡಿ ತೆರವುಗೊಳಿಸಲು ಟೋಯಿಂಗ್ ವಾಹನ ವ್ಯವಸ್ಥೆ ದೊರಕಿದರೆ ಇನ್ನಷ್ಟು ಪರಿಣಾಮಕಾರಿ ಟ್ರಾಫಿಕ್ ನಿರ್ವಹಣೆ ಸಾಧ್ಯವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಪ್ರಮುಖ ಸ್ಥಳಗಳಲ್ಲಿ ಧ್ವನಿವರ್ಧಕ ಅಳವಡಿಕೆ

ಪಟ್ಟಣದ ಹಾವಳಿ ಆಂಜನೇಯ ದೇವಸ್ಥಾನ, ಸರಾಫ್ ಬಜಾರ್, ಭಾನು ಮಾರ್ಕೆಟ್, ಸೋಮೇಶ್ವರ ಪಾದಗಟ್ಟಿ, ಪುರಸಭೆ ಮುಂಭಾಗ, ಸರ್ಕಾರಿ ಆಸ್ಪತ್ರೆ ಕ್ರಾಸ್, ಶಿಗ್ಲಿ ನಾಕಾ, ಬಸ್ ನಿಲ್ದಾಣ ಹಾಗೂ ಪಂಪ ವೃತ್ತ ಸೇರಿದಂತೆ 10 ಪ್ರಮುಖ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ.

“ಕಡಿಮೆ ಸಿಬ್ಬಂದಿಯಲ್ಲಿಯೇ ಹತ್ತು ಜನರ ಕೆಲಸವನ್ನು ತಂತ್ರಜ್ಞಾನದ ಮೂಲಕ ನಿರ್ವಹಿಸಲು ಸಾಧ್ಯವಾಗುತ್ತಿದೆ.”

ನಾಗರಾಜ ಗಡದ, ಪಿಎಸ್‌ಐ, ಲಕ್ಷ್ಮೇಶ್ವರ

“ಸಿಸಿ ಕ್ಯಾಮರಾ-ಧ್ವನಿವರ್ಧಕ ಬಳಸಿ ಠಾಣೆಯಿಂದಲೇ ಟ್ರಾಫಿಕ್ ನಿಯಂತ್ರಿಸುವ ಕ್ರಮ ಇತರ ಪಟ್ಟಣಗಳಿಗೂ ಮಾದರಿಯಾಗಲಿದೆ.”

ಗಂಗಾಧರ ಮೆಣಸಿನಕಾಯಿ

ಬಿಜೆಪಿ ಪ್ರಧಾನ ಕಾರ್ಯದರ್ಶಿ

ನಗರಸಭೆ ವಿರುದ್ಧ ಎಸ್‌ಡಿಪಿಐ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಸಂಭವಿಸಿದ ಭಾರೀ ಬಿರುಗಾಳಿ ಸಹಿತ ಮಳೆಯಿಂದ ಅನೇಕ ಮನೆಗಳು ಹಾನಿಗೊಳಗಾಗಿದ್ದು, ಮನೆ ಕಳೆದುಕೊಂಡ ನಿರಾಶ್ರಿತ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಖಾಯಂ ವಸತಿ ಮನೆಗಳನ್ನು ಕಲ್ಪಿಸಬೇಕು ಎಂದು ಎಸ್‌ಡಿಪಿಐ ಪಕ್ಷದ ಗದಗ ವಿಧಾನಸಭಾ ಮತಕ್ಷೇತ್ರ ಸಮಿತಿ ಆಗ್ರಹಿಸಿದೆ.

ಈ ಸಂಬಂಧ ಎಸ್‌ಡಿಪಿಐ ಪಕ್ಷದ ಗದಗ ವಿಧಾನಸಭಾ ಮತಕ್ಷೇತ್ರ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ, ನಗರದ ಗಾಂಧಿ ವೃತ್ತದಿಂದ ಗದಗ-ಬೆಟಗೇರಿ ನಗರಸಭೆ ಕಚೇರಿವರೆಗೆ ಪಾದಯಾತ್ರೆ ನಡೆಸಲಾಯಿತು. ಪ್ರತಿಭಟನಾಕಾರರು ನಗರಸಭೆ ಆಡಳಿತ ವ್ಯವಸ್ಥೆ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಪೌರಾಯುಕ್ತರಿಗೆ ಮನವಿ ಸಲ್ಲಿಸಿ, ಬಿರುಗಾಳಿ ಹಾಗೂ ಮಳೆಯಿಂದ ಹಾನಿಗೊಂಡ ಮನೆಗಳಿಗೆ ತುರ್ತು ದುರಸ್ತಿ ಕಾರ್ಯ ಕೈಗೊಳ್ಳಬೇಕು. ಸಾರ್ವಜನಿಕರ ಆಸ್ತಿ-ಪಾಸ್ತಿ ಹಾನಿಯನ್ನು ಸರಿಪಡಿಸಿ ಮೂಲಭೂತ ಸೌಲಭ್ಯಗಳನ್ನು ತಕ್ಷಣ ಕಲ್ಪಿಸಬೇಕು ಎಂದು ಒತ್ತಾಯಿಸಲಾಯಿತು.

ನಗರಾದ್ಯಂತ ಬೀದಿ ದೀಪಗಳ ಅವ್ಯವಸ್ಥೆ ಹಾಗೂ ಕಳಪೆ ಮಟ್ಟದ ರಸ್ತೆಗಳ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿದೆ. ಗದಗ-ಬೆಟಗೇರಿ ನಗರಸಭೆ ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಇಲಾಖೆಗಳಿಂದ ತ್ವರಿತ ಕಾರ್ಯಾಚರಣೆ ನಡೆಸಬೇಕು ಎಂದು ಮನವಿ ಮುಖಾಂತರ ಆಗ್ರಹಿಸಲಾಯಿತು.

ಪ್ರತಿಭಟನೆಯಲ್ಲಿ ಗದಗ ವಿಧಾನಸಭಾ ಮತಕ್ಷೇತ್ರ ಸಮಿತಿ ಅಧ್ಯಕ್ಷ ಮುಸ್ತಾಕ್ ಹೊಸಮನಿ, ಕಾರ್ಯದರ್ಶಿ ಸಮೀರ್ ಕೊಟ್ಟೂರು, ಇಬ್ರಾಹಿಂ ಕುಂದರಪಿ, ಜಿಲ್ಹಾನಿ ಲಕ್ಕುಂಡಿ, ರಶೀದ್ ಕಟ್ಟಿಮನಿ, ಗದಗ ಜಿಲ್ಲಾ ಸಮಿತಿ ಉಪಾಧ್ಯಕ್ಷ ಹಾಗೂ ಹಿರಿಯ ಮುಖಂಡ ಹಿದಾಯತುಲ್ಲಾ ಕಾಗದಗಾರ, ವಿಮೆನ್ ಇಂಡಿಯಾ ಮೂವ್ಮೆಂಟ್ ಅಧ್ಯಕ್ಷೆ ಸುಮಯ್ಯ ಬಳ್ಳಾರಿ, ಗಂಗಿಮಡಿ ಸಾರ್ವಜನಿಕರು, ಸಂತ್ರಸ್ತರು ಹಾಗೂ ಎಸ್‌ಡಿಪಿಐ ಕಾರ್ಯಕರ್ತರು ಉಪಸ್ಥಿತರಿದ್ದರು.

“ಪ್ರಕೃತಿ ವಿಕೋಪಕ್ಕೊಳಗಾಗಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಖಾಯಂ ವಸತಿ ಹಾಗೂ ಮೂಲಭೂತ ಸೌಲಭ್ಯಗಳನ್ನು ತಕ್ಷಣ ಕಲ್ಪಿಸಬೇಕು.”

ಮುಷ್ತಾಕ್ ಹೊಸಮನಿ, ಎಸ್‌ಡಿಪಿಐ ಮುಖಂಡ

“ಕರ್ನಾಟಕ ಪ್ರೆಸ್ ಕ್ಲಬ್‌ಗೆ ವೀರೇಶ್ ಅಂಗಡಿ ಸಾರಥ್ಯ!”

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಕರ್ನಾಟಕ ಪ್ರೆಸ್ ಕ್ಲಬ್‌ನ ಕೂಡ್ಲಿಗಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ವಿಜಯವಾಣಿ ವರದಿಗಾರ ವೀರೇಶ್ ಅಂಗಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಪ್ರೆಸ್ ಕ್ಲಬ್‌ನ ರಾಜ್ಯ ಉಪಾಧ್ಯಕ್ಷ ಕೆ. ಕೊಟ್ರೇಶ್, ರಾಜ್ಯಾಧ್ಯಕ್ಷ ಬಿಚ್ಚುಗತ್ತಿ ಖಾಜ್ ಹುಸೇನ್ ಹಾಗೂ ವಿಜಯನಗರ ಜಿಲ್ಲಾಧ್ಯಕ್ಷ ಕಾಕುಬಾಳು ಪ್ರಕಾಶ್ ಅವರ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಕೆ. ಕೊಟ್ರೇಶ್, ಪತ್ರಕರ್ತರ ಕಲ್ಯಾಣಕ್ಕಾಗಿ ಆರೋಗ್ಯ ವಿಮೆ ಯೋಜನೆ, ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪ್ರೋತ್ಸಾಹ ಧನ ಹಾಗೂ 55 ವರ್ಷ ಮೇಲ್ಪಟ್ಟ ಪತ್ರಕರ್ತರಿಗೆ ವಾರ್ಷಿಕ ₹5000 ಪ್ರೋತ್ಸಾಹ ಧನ ನೀಡುವ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಎಂ. ಮಂಜು ಮಯೂರ ಅವರನ್ನು ಕರ್ನಾಟಕ ಪ್ರೆಸ್ ಕ್ಲಬ್‌ನ ರಾಜ್ಯ ಕಾರ್ಯದರ್ಶಿಯಾಗಿ ಹಾಗೂ ಎಚ್. ವೀರಣ್ಣ ಅವರನ್ನು ವಿಜಯನಗರ ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಪತ್ರ ವಿತರಿಸಲಾಯಿತು.

ಇತರೆ ಪದಾಧಿಕಾರಿಗಳ ಆಯ್ಕೆ

ಗೌರವ ಅಧ್ಯಕ್ಷರಾಗಿ ಕಾವಲಿ ಶಿವಪ್ಪ ನಾಯಕ (ಉದಯದಿಗಂತ), ಉಪಾಧ್ಯಕ್ಷರಾಗಿ ಎಲೆ ನಾಗರಾಜ್ (ಹೊಂಬೆಳಕು), ಖಜಾಂಚಿಯಾಗಿ ಎ.ಎಂ. ಸೋಮಶೇಖರಯ್ಯ (ಪ್ರಜಾವಾಣಿ), ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಂ. ವೀರೇಶ್ (ಸಂಯುಕ್ತ ಕರ್ನಾಟಕ), ಸಹ ಕಾರ್ಯದರ್ಶಿಯಾಗಿ ಬಿ. ನಾಗರಾಜ್ (ಹೊಸಪೇಟೆ ಟೈಮ್ಸ್), ಸಂಘಟನಾ ಕಾರ್ಯದರ್ಶಿಯಾಗಿ ಇಬ್ರಾಹಿಂ (ಬಳ್ಳಾರಿ ಬೆಳಗಾಯಿತು) ಅವರನ್ನು ಆಯ್ಕೆ ಮಾಡಲಾಯಿತು.

ಇದಲ್ಲದೆ ಬಗುಡಿ ಬಾಲಪ್ಪ (ಈ ನಮ್ಮ ಕನ್ನಡ ನಾಡು), ಶಿವು ಪ್ರಸಾದ್ (ಸಂಯುಕ್ತ ಕರ್ನಾಟಕ), ಎಸ್‌.ಎಂ. ರಿಯಾಜ್ ಬಾಷಾ (ವಿಜಯನಗರ ಟೈಮ್ಸ್) ಸೇರಿದಂತೆ ಹಲವರನ್ನು ಪದಾಧಿಕಾರಿಗಳಾಗಿ ನೇಮಕ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕೊಟ್ಟೂರು ತಾಲೂಕಿನ ಪ್ರೆಸ್ ಕ್ಲಬ್ ಅಧ್ಯಕ್ಷ ಡಿ. ಸಿದ್ದಪ್ಪ, ಉಪಾಧ್ಯಕ್ಷ ತೆಗ್ಗಿನಕೇರಿ ಕೊಟ್ರೇಶ್, ಹೆಚ್‌. ದಾದಾಪೀರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಪತ್ರಕರ್ತರ ಹಿತಾಸಕ್ತಿ ಮತ್ತು ಭದ್ರತೆಗಾಗಿ ಸಂಘಟಿತ ಹೋರಾಟ ಮುಂದುವರೆಯಲಿದೆ.”

ಕೆ. ಕೊಟ್ರೇಶ್ರಾ

ಜ್ಯ ಉಪಾಧ್ಯಕ್ಷ, ಕರ್ನಾಟಕ ಪ್ರೆಸ್ ಕ್ಲಬ್

₹23 ಕೋಟಿ ಅಕ್ರಮ ಬಿಲ್‌ಗಳ ಶಂಕೆ: ಕೊಳಚೆ ನಿರ್ಮೂಲನಾ ಮಂಡಳಿ ಮೇಲೆ ಲೋಕಾಯುಕ್ತ ದಾಳಿ!

ಬೆಳಗಾವಿ/ಬೆಂಗಳೂರು: ರಾಜ್ಯದಲ್ಲಿ ಭಾರೀ ಅಕ್ರಮ ಅನುದಾನ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಳಗಾವಿ ಕೊಳಚೆ ನಿರ್ಮೂಲನಾ ಮಂಡಳಿಗೆ ಸಂಬಂಧಿಸಿದ 8 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.

ದೂರುಗಳ ಪ್ರಕಾರ, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಬಂದ ಅನುದಾನದಲ್ಲಿ 600 ಕುಟುಂಬಗಳಿಗೆ ಮನೆ ನಿರ್ಮಿಸಬೇಕಾಗಿದ್ದರೂ ಯೋಜನೆ ಪೂರ್ಣಗೊಳಿಸದೇ ಸುಮಾರು ₹33 ಕೋಟಿ ಅನುದಾನದಲ್ಲಿ ₹23 ಕೋಟಿ ರೂಪಾಯಿ ಅಕ್ರಮವಾಗಿ ದುರುಪಯೋಗ ಮಾಡಲಾಗಿದೆ ಎಂಬ ಆರೋಪ ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ಬೆಳಗಾವಿ ಲೋಕಾಯುಕ್ತ ಎಸ್‌ಪಿ ಪ್ರಶಾಂತ್ ದೇಸಾಯಿ ನೇತೃತ್ವದಲ್ಲಿ ಬೆಂಗಳೂರು, ಧಾರವಾಡ, ರಾಮದುರ್ಗ, ವಿಜಯಪುರ, ಹುಬ್ಬಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆದಿದೆ.

ದಾಳಿಯ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಬಿಲ್‌ಗಳು ಹಾಗೂ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ₹23 ಕೋಟಿ ರೂಪಾಯಿ ಅನಧಿಕೃತ ಬಿಲ್‌ಗಳ ಬಗ್ಗೆ ಲೋಕಾಯುಕ್ತ ತಂಡಗಳು ಪರಿಶೀಲನೆ ಮುಂದುವರಿಸಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಳಚೆ ನಿರ್ಮೂಲನಾ ಅಭಿವೃದ್ಧಿ ಇಲಾಖೆಯ ನಿವೃತ್ತ ಎಇಇ ಶಂಭುಲಿಂಗಪ್ಪ, ಎಕ್ಸಿಕ್ಯೂಟಿವ್ ಇಂಜಿನಿಯರ್ ಲಮಾಣಿ, NTCC ಮ್ಯಾನೇಜರ್ ಎನ್. ಪ್ರಸಾದ್ ಹಾಗೂ ವಿಜಯಪುರ ಗುತ್ತಿಗೆದಾರ ಗಿರಮಲಪ್ಪ ಜೋಗೂರ ವಿರುದ್ಧ ಪ್ರಕರಣ ದಾಖಲಾಗಿದೆ.

error: Content is protected !!