Home Blog

ಮಹಿಳಾ ಮೀಸಲು ಸೋಲು, ದ್ರೌಪದಿ ವಸ್ತ್ರಾಪಹರಣಕ್ಕೆ ಸಮ: ಯೋಗಿ ಆದಿತ್ಯನಾಥ್ ಕಿಡಿ

0

ಲಕ್ನೋ: ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಹಿನ್ನಡೆಯಾದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಂಸತ್ತಿನಲ್ಲಿ 131ನೇ ಸಂವಿಧಾನ ತಿದ್ದುಪಡಿ ಮಸೂದೆ ಚರ್ಚೆಯ ವೇಳೆ ವಿರೋಧ ಪಕ್ಷಗಳ ನಡವಳಿಕೆಯನ್ನು ಮಹಾಭಾರತದ ದ್ರೌಪದಿ ವಸ್ತ್ರಾಪಹರಣ ಘಟನೆಯೊಂದಿಗೆ ಹೋಲಿಸಿ ಅವರು ಟೀಕಿಸಿದರು.

ಕ್ಷೇತ್ರ ಪುನರ್ವಿಂಗಡಣೆಯ ಬಳಿಕ ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ಉದ್ದೇಶಿಸಿದ್ದ ಮಸೂದೆಗೆ ಇಂಡಿಯಾ ಒಕ್ಕೂಟ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಸಮಾಜವಾದಿ ಪಕ್ಷ ಸೇರಿದಂತೆ ಹಲವು ವಿಪಕ್ಷಗಳ ನಡೆಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.

“ಸಂಸತ್ತಿನಲ್ಲಿ ಕಾಂಗ್ರೆಸ್, ಎಸ್‌ಪಿ, ಟಿಎಂಸಿ ಮತ್ತು ಡಿಎಂಕೆ ಪಕ್ಷಗಳ ವರ್ತನೆ ದ್ರೌಪದಿಯ ವಸ್ತ್ರಾಪಹರಣದ ದೃಶ್ಯವನ್ನು ನೆನಪಿಸುವಂತಿತ್ತು. ಅವರ ಹೇಳಿಕೆಗಳು ಮತ್ತು ನಡವಳಿಕೆಗಳು ಬೇಜವಾಬ್ದಾರಿತನವನ್ನು ತೋರಿಸುತ್ತವೆ” ಎಂದು ಯೋಗಿ ಆದಿತ್ಯನಾಥ್ ಕಿಡಿಕಾರಿದರು.

ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿ ನೀಡುವ ಬೇಡಿಕೆಯನ್ನು ಉಲ್ಲೇಖಿಸಿದ ಅವರು, ಮಹಿಳಾ ಸಬಲೀಕರಣದ ಗುರಿಯನ್ನು ಹೊಂದಿರುವ ಮಸೂದೆ ಕುರಿತು ಅಪ್ರಸ್ತುತ ವಿಷಯಗಳನ್ನು ಎತ್ತಲಾಗುತ್ತಿದೆ ಎಂದು ಆರೋಪಿಸಿದರು.

“ಸಂವಿಧಾನವನ್ನು ಗೌರವಿಸುತ್ತೇವೆ ಎಂದು ಹೇಳುವವರು, ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ” ಎಂದು ಟೀಕಿಸಿದರು.

ಚೆನ್ನಾಗಿ ನಿದ್ರೆ ಬೇಕೇ? ಮಲಗುವ ಮುನ್ನ ಈ ಆಹಾರಗಳಿಂದ ದೂರವಿರಿ

0

ಇಂದಿನ ವೇಗದ ಜೀವನಶೈಲಿಯಲ್ಲಿ ನೆಮ್ಮದಿಯ ನಿದ್ರೆ ದೊರಕುವುದು ಕಷ್ಟವಾಗುತ್ತಿದೆ. ಹಗಲಿನ ಕೆಲಸದಷ್ಟೇ, ರಾತ್ರಿಯ ನಿದ್ರೆಯೂ ಆರೋಗ್ಯಕ್ಕೆ ಅತ್ಯಂತ ಮುಖ್ಯ.

ಆದರೆ ಕೆಲಸದ ಒತ್ತಡ ಮಾತ್ರವಲ್ಲ, ನಾವು ಮಲಗುವ ಮುನ್ನ ಸೇವಿಸುವ ಆಹಾರವೂ ನಿದ್ರೆಯ ಗುಣಮಟ್ಟದ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ.

ಸರಿಯಾಗಿ ನಿದ್ರೆ ಆಗದಿದ್ದರೆ ಮರುದಿನ ಜಂಕ್ ಫುಡ್ ತಿನ್ನುವ ಬಯಕೆ ಹೆಚ್ಚಾಗಿ, ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಉತ್ತಮ ನಿದ್ರೆಗೆ ಮಲಗುವ ಮುನ್ನ ಕೆಲವು ಆಹಾರಗಳನ್ನು ತಪ್ಪಿಸುವುದು ಅಗತ್ಯ.

1. ಕೆಫೀನ್ ಮತ್ತು ಚಾಕೊಲೇಟ್
ಕಾಫಿ, ಟೀ ಹಾಗೂ ಎನರ್ಜಿ ಪಾನೀಯಗಳಲ್ಲಿ ಇರುವ ಕೆಫೀನ್ ಮೆದುಳನ್ನು ಜಾಗೃತವಾಗಿರಿಸುತ್ತದೆ. ಇದರಿಂದ ಆಳವಾದ ನಿದ್ರೆ ಬರಲು ಅಡಚಣೆ ಉಂಟಾಗುತ್ತದೆ. ಡಾರ್ಕ್ ಚಾಕೊಲೇಟ್‌ನಲ್ಲಿ ಕೂಡ ಕೆಫೀನ್ ಮತ್ತು ಸಕ್ಕರೆ ಇರುವುದರಿಂದ ನಿದ್ರೆಗೆ ತೊಂದರೆ ಉಂಟಾಗಬಹುದು.

2. ಮಸಾಲೆ ಮತ್ತು ಎಣ್ಣೆ ಪದಾರ್ಥಗಳು
ಪನೀರ್, ಚೋಲೆ-ಭಾತುರೆ, ಪಿಜ್ಜಾ, ಬರ್ಗರ್ ಮುಂತಾದ ಎಣ್ಣೆ ಮತ್ತು ಮಸಾಲೆಯುಕ್ತ ಆಹಾರಗಳು ರಾತ್ರಿ ಸೇವಿಸಿದರೆ ಆಮ್ಲೀಯತೆ ಮತ್ತು ಎದೆಯುರಿ ಉಂಟಾಗಬಹುದು. ಹೆಚ್ಚಿನ ಕೊಬ್ಬಿನಾಂಶ ಇರುವ ಮಾಂಸಾಹಾರ ಜೀರ್ಣಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ನಿದ್ರೆ ಅಸ್ವಸ್ಥವಾಗಬಹುದು.

3. ಕೆಲವು ಹಣ್ಣು-ತರಕಾರಿಗಳೂ ಸಮಸ್ಯೆ
ಕಲ್ಲಂಗಡಿ ಮತ್ತು ಸೌತೆಕಾಯಿ ನೀರಿನಾಂಶ ಹೆಚ್ಚಿರುವುದರಿಂದ ರಾತ್ರಿ ಪದೇ ಪದೇ ಮೂತ್ರ ವಿಸರ್ಜನೆಗೆ ಎಬ್ಬಿಸಬಹುದು. ಬ್ರೋಕೋಲಿ, ಹೂಕೋಸು, ಎಲೆಕೋಸುಗಳು ಹೊಟ್ಟೆಯಲ್ಲಿ ಅನಿಲ ಉಂಟುಮಾಡಿ ನಿದ್ರೆಗೆ ಅಡ್ಡಿಯಾಗಬಹುದು.

4. ಸಕ್ಕರೆ ಮತ್ತು ಆಮ್ಲೀಯ ಆಹಾರಗಳು
ಕೇಕ್, ಪೇಸ್ಟ್ರಿ, ಸಿಹಿ ಪದಾರ್ಥಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಏರುಪೇರು ಮಾಡುತ್ತವೆ. ಟೊಮೆಟೊ, ನಿಂಬೆ, ಕಿತ್ತಳೆ ಮುಂತಾದ ಆಮ್ಲೀಯ ಆಹಾರಗಳು ಎದೆಯಲ್ಲಿ ಭಾರವಾದ ಭಾವನೆ ಉಂಟುಮಾಡಬಹುದು.

5. ಮದ್ಯಪಾನ ಕುರಿತು ತಪ್ಪು ಕಲ್ಪನೆ
ಮದ್ಯಪಾನ ಮಾಡಿದರೆ ಚೆನ್ನಾಗಿ ನಿದ್ರೆ ಬರುತ್ತದೆ ಎನ್ನುವುದು ತಪ್ಪು. ಮದ್ಯವು ನಿದ್ರೆಯ ನೈಸರ್ಗಿಕ ಚಕ್ರವನ್ನು ಹಾಳುಮಾಡಿ ಮಧ್ಯರಾತ್ರಿ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ.

ಹಾಸನದಲ್ಲಿ ದುರಂತ: ಅಳಿಯನನ್ನು ಉಳಿಸಲು ಕೆರೆಗೆ ಇಳಿದ ಮಾವನೂ ಸಾವು

0

ಮೈಸೂರು/ಹಾಸನ: ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಮುಳುಗಿ ಮೃತಪಟ್ಟ ಘಟನೆ ಪಿರಿಯಾಪಟ್ಟಣದ ದೊಡ್ಡ ಹರವೆ ಗ್ರಾಮದ ಬಳಿ ನಡೆದಿದೆ. ಗಣೇಶ್ (22) ಮತ್ತು ಇಮ್ರಾನ್ (28) ಮೃತರು.

ನಾಲ್ವರು ಯುವಕರು ಈಜಲು ನದಿಗೆ ಇಳಿದ ವೇಳೆ ಇಬ್ಬರು ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ. ಗಣೇಶ್ ಮೃತದೇಹ ಪತ್ತೆಯಾಗಿದ್ದು, ಇಮ್ರಾನ್ ಶವಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಸಂಬಂಧ ಬೈಲಕುಪ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೇ ವೇಳೆ, ಇತ್ತೀಚೆಗೆ ಅರ್ಕೇಶ್ವರ ದೇಗುಲ ಸಮೀಪ ಕಾವೇರಿ ನದಿಯಲ್ಲಿ ಆರು ಮಂದಿ ಮುಳುಗಿ ಮೃತಪಟ್ಟ ಘಟನೆ ಸಂಭವಿಸಿದ್ದರಿಂದ ಆತಂಕ ಇನ್ನಷ್ಟು ಹೆಚ್ಚಾಗಿದೆ. ನೀರಿನ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮಗಳ ಅಗತ್ಯತೆ ಮತ್ತೊಮ್ಮೆ ಹೊರಹೊಮ್ಮಿದೆ.

4 ವರ್ಷದ ಬಾಲಕಿ ಅತ್ಯಾಚಾರ-ಕೊಲೆ ಪ್ರಕರಣ: ಆರೋಪಿ ಪೊಲೀಸರ ಎನ್‌ಕೌಂಟರ್‌ನಲ್ಲಿ ಸಾವು

0

ಗಾಜಿಯಾಬಾದ್: ಅಕ್ಕನ ಮಗಳು ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಪ್ರಕರಣದಲ್ಲಿ ವಾಂಟೆಡ್ ಆಗಿದ್ದ ಆರೋಪಿ ಪೊಲೀಸರ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾನೆ. ಜಸೀಮ್ ಅಲಿಯಾಸ್ ಛೋಟು ಎಂಬಾತನನ್ನು ವಾರಗಟ್ಟಲೆ ಶೋಧ ನಡೆಸಿದ ಬಳಿಕ ಬಂತ್ಲಾ ಕಾಲುವೆ ಪ್ರದೇಶದಲ್ಲಿ ಪೊಲೀಸರು ಎನ್‌ಕೌಂಟರ್ ನಡೆಸಿದ್ದಾರೆ.

ಏಪ್ರಿಲ್ 11ರಂದು ದಿನಗೂಲಿ ಕಾರ್ಮಿಕರಾಗಿ ಕೆಲಸಕ್ಕೆ ಹೋಗಿದ್ದ ವೇಳೆ ಬಾಲಕಿ ಮನೆದಿಂದ ನಾಪತ್ತೆಯಾಗಿದ್ದಳು. ಈ ವೇಳೆ ಆಕೆಯ ಮಾವನಾಗಿದ್ದ ಜಸೀಮ್, ತಿಂಡಿ ಕೊಡುತ್ತೇನೆ ಎಂದು ಕರೆದುಕೊಂಡು ಹೋಗಿ, ತನ್ನ ಬಾಡಿಗೆ ಕೋಣೆಯಲ್ಲಿ ಅತ್ಯಾಚಾರ ನಡೆಸಿ ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ನಂತರ ಕಾರು ನಿಲ್ಲಿಸಿದ್ದ ಪ್ರದೇಶದ ಬಳಿ ಬಾಲಕಿಯ ಶವ ಪತ್ತೆಯಾಗಿತ್ತು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಿ ಆರೋಪಿಗಾಗಿ ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಆರೋಪಿಯ ಮಾಹಿತಿ ನೀಡಿದವರಿಗೆ 50,000 ರೂ. ಬಹುಮಾನ ಘೋಷಿಸಲಾಗಿತ್ತು.

ಭಾನುವಾರ ರಾತ್ರಿ ಬಂತ್ಲಾ ಕಾಲುವೆ ಬಳಿ ಆರೋಪಿ ಕಾಣಿಸಿಕೊಂಡಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಅವನನ್ನು ತಡೆದಾಗ, ಆತ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಪ್ರತಿಯಾಗಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಜಸೀಮ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸಿದರೂ ವೈದ್ಯರು ಮೃತ ಎಂದು ಘೋಷಿಸಿದ್ದಾರೆ.

ಘಟನೆಯಲ್ಲಿ ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳು ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗಿದೆ. ಸ್ಥಳದಿಂದ ಅಕ್ರಮ ಪಿಸ್ತೂಲ್ ಹಾಗೂ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಮುಜಫರ್‌ನಗರ ಮೂಲದವನಾಗಿದ್ದು, ಹಿಂದಿನಿಂದಲೂ ಅಪರಾಧ ಚರಿತ್ರೆ ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ನೇಹಿತರ ಜೊತೆ ಮದ್ಯಪಾನ… ಮರುದಿನ ಕಾರಿನಲ್ಲೇ ಶವ ಪತ್ತೆ!

ಬೆಂಗಳೂರು: ನಗರದ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ 56 ವರ್ಷದ ವ್ಯಕ್ತಿಯೊಬ್ಬರು ತಮ್ಮದೇ ಕಾರಿನೊಳಗೆ ಮೃತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕುತೂಹಲ ಹುಟ್ಟಿಸಿದೆ. ಬಸಾಪುರ ನಿವಾಸಿ ನಾರಾಯಣಪ್ಪ ಮೃತ ವ್ಯಕ್ತಿಯಾಗಿದ್ದು, ಕಾರಿನ ಚಾಲಕನ ಪಕ್ಕದ ಸೀಟ್‌ನಲ್ಲಿ ಅಚಲವಾಗಿ ಕುಳಿತಿರುವುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲಿಸಿದಾಗ, ನಾರಾಯಣಪ್ಪ ಅದಾಗಲೇ ಮೃತಪಟ್ಟಿರುವುದು ದೃಢಪಟ್ಟಿದೆ. ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಂತೆ, ಅವರು ಸ್ನೇಹಿತರಾದ ಮಂಜುನಾಥ ರೆಡ್ಡಿ ಮತ್ತು ಶಿವು ಜೊತೆ ಎಲೆಕ್ಟ್ರಾನಿಕ್ಸ್ ಸಿಟಿಯ ಬಾರ್‌ಗೆ ತೆರಳಿ ಮದ್ಯಪಾನ ಮಾಡಿದ್ದರು. ತೀವ್ರ ಮದ್ಯಪಾನದ ಪರಿಣಾಮವಾಗಿ ನಿಂತುಕೊಳ್ಳಲೂ ಕಷ್ಟವಾಗಿದ್ದ ಅವರನ್ನು ಸ್ನೇಹಿತರು ಹಿಡಿದು ಕಾರಿನವರೆಗೆ ಕರೆತಂದಿದ್ದಾರೆ.

ನಂತರ ನಾರಾಯಣಪ್ಪ ಕಾರಿನ ಪ್ಯಾಸೆಂಜರ್ ಸೀಟ್‌ನಲ್ಲಿ ಕುಳಿತಿದ್ದು, ಅವರ ಕಾರನ್ನು ಮಂಜುನಾಥ ರೆಡ್ಡಿ ಚಾಲನೆ ಮಾಡಿದ್ದಾರೆ. ಶಿವು ಬಾರ್ನಿಂದ ಹೊರಬಂದ ಬಳಿಕ ಬೇರೆ ದಾರಿಯಲ್ಲಿ ತೆರಳಿದ್ದಾನೆ. ಈ ಎಲ್ಲಾ ಘಟನೆಗಳು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕೆಲ ಕಿಲೋಮೀಟರ್ ಪ್ರಯಾಣಿಸಿದ ಬಳಿಕ ಮಂಜುನಾಥ ರೆಡ್ಡಿಗೆ ಕಾರು ಚಲಾಯಿಸಲು ಅಸಾಧ್ಯವಾದ ಕಾರಣ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಮನೆಗೆ ತೆರಳಿದ್ದಾರೆ. ಆದರೆ ಮರುದಿನ ಅದೇ ಸ್ಥಳದಲ್ಲಿ ಕಾರಿನೊಳಗೆ ನಾರಾಯಣಪ್ಪ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಈ ಕುರಿತು ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿದ್ದು, ದೇಹದಲ್ಲಿ ಯಾವುದೇ ಗಾಯಗಳಿಲ್ಲದೆ ಅನುಮಾನಾಸ್ಪದ ಅಂಶ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. ಸಾವಿನ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ವರದಿ ಬಳಿಕವೇ ತಿಳಿಯಲಿದೆ.

ಕಲಬುರಗಿಯಲ್ಲಿ ಅನುಮಾನಾಸ್ಪದ ಸಾವು: ಪೋಕ್ಸೋ ಕೇಸ್​​ ಆರೋಪಿ ಶವ ಪತ್ತೆ

0

ಕಲಬುರಗಿ: ಅಪ್ರಾಪ್ತೆಯನ್ನು ಪ್ರೀತಿಸಿ ಮದುವೆಯಾದ ಪ್ರಕರಣದಲ್ಲಿ ಪೋಕ್ಸೋ ಕೇಸ್ ಎದುರಿಸುತ್ತಿದ್ದ ಯುವಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕಾಳಗಿ ತಾಲೂಕಿನಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ರೇವಣಸಿದ್ದಪ್ಪ ತಳಕೇರಿ (26) ಎಂಬಾತ ಊರಾಚೆಯ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ ಅಥವಾ ಸಂಚುನೀಡಿದ ಕೊಲೆಯೋ ಎಂಬ ಪ್ರಶ್ನೆಗಳು ಎದ್ದಿವೆ.

ಟಂಟಂ ಆಟೋ ಚಾಲಕರಾಗಿದ್ದ ರೇವಣಸಿದ್ದಪ್ಪ ತನ್ನ ವಾಹನದಲ್ಲಿ ಓಡಾಡುತ್ತಿದ್ದ ಅಪ್ರಾಪ್ತ ಬಾಲಕಿಯೊಂದಿಗೆ ಪ್ರೇಮ ಸಂಬಂಧ ಬೆಳೆಸಿಕೊಂಡಿದ್ದ. ವಿಷಯ ಕುಟುಂಬಗಳಿಗೆ ತಿಳಿದ ಬಳಿಕ ಪೋಷಕರು ಅವನನ್ನು ಹೈದರಾಬಾದ್‌ಗೆ ಕಳುಹಿಸಿದ್ದರೂ, ಪ್ರೇಮವನ್ನು ಮುಂದುವರಿಸಿದ ಆತ ಯುವತಿಯನ್ನು ಅಲ್ಲಿಗೆ ಕರೆಸಿಕೊಂಡು ಮದುವೆಯಾದನು. ಈ ಘಟನೆ ಬಾಲಕಿಯ ಕುಟುಂಬಕ್ಕೆ ತಿಳಿದ ತಕ್ಷಣವೇ ದೂರು ದಾಖಲಾಗಿ, ಪೋಕ್ಸೋ ಕಾಯ್ದೆಯಡಿ ಪೊಲೀಸರು ಅವನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ, ಜೀವನದ ಒತ್ತಡಗಳು ಹೆಚ್ಚಾಗಿದ್ದವು ಎಂದು ತಿಳಿದುಬಂದಿದೆ. ಪ್ರೇಮಿಸಿದ ಯುವತಿಯನ್ನು ಕಳೆದುಕೊಳ್ಳುವುದು, ಪ್ರಕರಣದ ಒತ್ತಡ, ಸಮಾಜದ ಮಾತುಗಳು ಎಲ್ಲಾ ಸೇರಿ ಅವನ ಮನಸ್ಥಿತಿಯನ್ನು ಕುಗ್ಗಿಸಿವೆ ಎನ್ನಲಾಗುತ್ತಿದೆ. ಯುವತಿಯ ಪೋಷಕರು ತಾಳಿ ಕಿತ್ತು ಅವಮಾನಿಸಿದ ಘಟನೆ ಕೂಡ ಅವನ ಮೇಲೆ ಆಳವಾದ ಪರಿಣಾಮ ಬೀರಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಾವಿಗೂ ಮೊದಲೇ ಇನ್ಸ್ಟಾಗ್ರಾಂನಲ್ಲಿ ತನ್ನ ಫೋಟೋಗೆ ‘RIP’ ಎಂದು ಪೋಸ್ಟ್ ಮಾಡಿರುವುದು ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿದೆ. ಸದ್ಯ ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಯೋ ಅಥವಾ ಕೊಲೆ ಮಾಡಿ ಶವವನ್ನು ನೇಣು ಹಾಕಿರುವುದೋ ಎಂಬುದರ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

11 ವರ್ಷದ ಅವಳಿ ಹೆಣ್ಣುಮಕ್ಕಳ ಕತ್ತು ಸೀಳಿ ಕೊಲೆ: ಪಾಪಿ ತಂದೆ ಅರೆಸ್ಟ್!

0

ಕಾನ್ಪುರ: ತಂದೆಯೊಬ್ಬ ತನ್ನ 11 ವರ್ಷದ ಅವಳಿ ಹೆಣ್ಣುಮಕ್ಕಳನ್ನು ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಭಾನುವಾರ ಮುಂಜಾನೆ ನಡೆದಿದೆ.

ಮೃತರನ್ನು ರಿದ್ಧಿ ಮತ್ತು ಸಿದ್ಧಿ ಎಂದು ಗುರುತಿಸಲಾಗಿದೆ. ಆರೋಪಿಯನ್ನು 48 ವರ್ಷದ ಮೆಡಿಕಲ್ ರೆಪ್ ಶಶಿ ರಂಜನ್ ಮಿಶ್ರಾ ಎಂದು ಗುರುತಿಸಲಾಗಿದೆ. ಆತ ತನ್ನ ಇಬ್ಬರು ಪುತ್ರಿಯರ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಳಿಕ ಆರೋಪಿ ತಾನೇ ಪೊಲೀಸರಿಗೆ ಕರೆ ಮಾಡಿ ಮಕ್ಕಳನ್ನು ಕೊಲೆ ಮಾಡಿರುವುದಾಗಿ ಮಾಹಿತಿ ನೀಡಿದ್ದಾನೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಇಬ್ಬರು ಬಾಲಕಿಯರ ಶವಗಳು ಮನೆಯಲ್ಲಿ ರಕ್ತದ ಮಡುವಿನಲ್ಲಿ ಪತ್ತೆಯಾಗಿವೆ.

ಮೃತರ ಕುಟುಂಬ ಬಿಹಾರ ಮೂಲದವರಾಗಿದ್ದು, ಪತ್ನಿ ರೇಷ್ಮಾ, ಅವಳಿ ಹೆಣ್ಣುಮಕ್ಕಳು ಮತ್ತು ಆರು ವರ್ಷದ ಮಗನೊಂದಿಗೆ ಕಾನ್ಪುರದಲ್ಲಿ ವಾಸವಾಗಿದ್ದರು. ಆರೋಪಿ ಪತ್ನಿಯ ಮೇಲೆ ಅನೈತಿಕ ಸಂಬಂಧದ ಶಂಕೆ ಹೊಂದಿದ್ದನೆಂದು ತಿಳಿದುಬಂದಿದೆ. ಈ ಕಾರಣದಿಂದ ಮನೆಯಲ್ಲಿ ನಿರಂತರ ಕಲಹ ನಡೆಯುತ್ತಿತ್ತು ಎಂದು ಪತ್ನಿ ಆರೋಪಿಸಿದ್ದಾರೆ.

ಪತ್ನಿ ರೇಷ್ಮಾ ಅವರ ಪ್ರಕಾರ, ಆರೋಪಿ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಎಲ್ಲರ ಮೇಲೂ ನಿಗಾ ಇಟ್ಟಿದ್ದನು. ಜೊತೆಗೆ ಹೆಣ್ಣುಮಕ್ಕಳಿದ್ದ ಕೋಣೆಗೆ ಯಾರನ್ನೂ ಹೋಗಲು ಬಿಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಶನಿವಾರ ರಾತ್ರಿ ಊಟದ ನಂತರ ಮಕ್ಕಳನ್ನು ಮಲಗಿಸಲು ಕರೆದೊಯ್ದ ಆರೋಪಿ, ನಂತರ ಭೀಕರ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಪೊಲೀಸರು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಮನಗರ: ಸುಟ್ಟಘಟ್ಟ ಗ್ರಾಮದ ತೋಟದಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷ!

ರಾಮನಗರ: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮತ್ತೆ ಮುಂದುವರಿದಿದ್ದು, ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ಉಂಟಾಗಿದೆ.

ಚನ್ನಪಟ್ಟಣ ತಾಲ್ಲೂಕಿನ ಸುಣ್ಣಘಟ್ಟ ಗ್ರಾಮದ ಸಮೀಪ ಮೂರು ಕಾಡಾನೆಗಳು ಕಾಣಿಸಿಕೊಂಡ ಘಟನೆ ನಡೆದಿದೆ.

ಗ್ರಾಮದ ಶಿವಶಂಕರ್ ಅವರ ತೋಟದಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ. ತಕ್ಷಣ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾಡಾನೆಗಳನ್ನು ಸುರಕ್ಷಿತವಾಗಿ ಕಾಡಿಗೆ ಹಿಮ್ಮೆಟ್ಟಿಸಲು ಸಿಬ್ಬಂದಿ ಕ್ರಮ ಕೈಗೊಂಡಿದ್ದು, ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ. ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಗ್ರಾಮದಲ್ಲಿ ನಿಗಾ ಮುಂದುವರಿಸಲಾಗಿದೆ. ಕಾಡಾನೆಗಳ ಚಲನವಲನವನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆ ತಂಡಗಳು ಹೈಅಲರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ.

ಇಟಲಿಯಲ್ಲಿ ಭೀಕರ ಘಟನೆ: ಇಬ್ಬರು ಭಾರತೀಯರಿಗೆ ಗುಂಡಿಕ್ಕಿ ಹತ್ಯೆ!

ರೋಮ್‌: ಇಟಲಿಯ ಬರ್ಗಾಮೊ ಪ್ರಾಂತ್ಯದ ಕೊವೊ ಪಟ್ಟಣದಲ್ಲಿ ಇಬ್ಬರು ಭಾರತೀಯರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಭೀಕರ ಘಟನೆ ನಡೆದಿದೆ.

ಮೃತರನ್ನು ರಾಗಿಂದರ್ ಸಿಂಗ್ (48) ಹಾಗೂ ಗುರ್ಮಿತ್ ಸಿಂಗ್ (48) ಎಂದು ಗುರುತಿಸಲಾಗಿದೆ.

ವೈಶಾಖಿ ಹಬ್ಬದ ಸಂದರ್ಭದಲ್ಲಿರುವಾಗ, ಪೂಜಾ ಸ್ಥಳವಾಗಿ ಬಳಸಲಾಗುತ್ತಿದ್ದ ಗೋದಾಮಿನಿಂದ ಹೊರಬರುತ್ತಿದ್ದ ವೇಳೆ ಇಬ್ಬರ ಮೇಲೆ ಗುಂಡು ಹಾರಿಸಲಾಗಿದೆ ಎಂದು ತಿಳಿದುಬಂದಿದೆ. ಈ ಘಟನೆ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿರುವ ಗುರುದ್ವಾರ ಮಾತಾ ಸಾಹಿಬ್ ಕೌರ್ ಜಿ ಮುಂಭಾಗದ ಚೌಕದಲ್ಲಿ ನಡೆದಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಗುಂಡು ಹಾರಿಸಿದ ವ್ಯಕ್ತಿ ಕೂಡ ಭಾರತೀಯನಾಗಿದ್ದು, ಘಟನೆ ಬಳಿಕ ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿತನು ಗುರುದ್ವಾರಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಎನ್ನಲಾಗಿದ್ದು, ವೈಯಕ್ತಿಕ ದ್ವೇಷವೇ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಘಟನೆ ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ. ಇಟಲಿ ಪೊಲೀಸರು ಪ್ರಕರಣದ ಎಲ್ಲ ಆಯಾಮಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

ಚಿಕ್ಕಮಗಳೂರು ಬನ್ನೂರಿನಲ್ಲಿ ದಾರುಣ ಘಟನೆ: ಕೃಷಿಹೊಂಡದಲ್ಲಿ ಇಬ್ಬರು ಕಾರ್ಮಿಕರ ಶವ ಪತ್ತೆ!

ಚಿಕ್ಕಮಗಳೂರು: ತಾಲೂಕಿನ ಬನ್ನೂರು ಗ್ರಾಮದ ಕೃಷಿಹೊಂಡದಲ್ಲಿ ಇಬ್ಬರು ಕಾರ್ಮಿಕರ ಮೃತದೇಹಗಳು ಪತ್ತೆಯಾಗಿರುವ ದಾರುಣ ಘಟನೆ ನಡೆದಿದೆ.

ಮೃತರನ್ನು ರಮೇಶ್ (27) ಹಾಗೂ ಮಹೇಶ್ (34) ಎಂದು ಗುರುತಿಸಲಾಗಿದೆ.

ಮೃತರು ಕೊಪ್ಪ ತಾಲೂಕಿನ ಜಯಪುರ ಗ್ರಾಮದವರಾಗಿದ್ದು, ಬನ್ನೂರು ಗ್ರಾಮದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಕೃಷಿಹೊಂಡದ ಬಳಿ ಅವರ ಚಪ್ಪಲಿ ಪತ್ತೆಯಾಗಿದ್ದರಿಂದ ಅವರು ನೀರಿನಲ್ಲಿ ಮುಳುಗಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕೃಷಿಹೊಂಡದಲ್ಲಿ ಶೋಧ ಕಾರ್ಯ ನಡೆಸಿದರು. ಬಳಿಕ ಇಬ್ಬರ ಮೃತದೇಹಗಳನ್ನು ನೀರಿನಿಂದ ಹೊರತೆಗೆದು ಪತ್ತೆಹಚ್ಚಲಾಗಿದೆ.

ಈ ಘಟನೆ ಅಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ.

error: Content is protected !!