Home Blog

ಗದಗ ಪೊಲೀಸರ ಭರ್ಜರಿ ಕಾರ್ಯಾಚರಣೆ: ಅಂತರರಾಜ್ಯ ಕಳ್ಳರ ಬೃಹತ್ ಜಾಲ ಬಯಲು! 11 ಆರೋಪಿಗಳ ಬಂಧನ

ಗದಗ: ಜಿಲ್ಲೆಯಲ್ಲಿ ಸರಣಿ ಮನೆ ಕಳ್ಳತನ ಪ್ರಕರಣಗಳಿಂದ ಆತಂಕ ಸೃಷ್ಟಿಸಿದ್ದ ಅಂತರರಾಜ್ಯ ಕಳ್ಳರ ಸಂಘಟಿತ ಜಾಲವನ್ನು ಗದಗ ಪೊಲೀಸರು ಭೇದಿಸಿ ಭಾರೀ ಸಾಧನೆ ಮಾಡಿದ್ದಾರೆ. ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣದ ತನಿಖೆಯಲ್ಲಿ ಒಟ್ಟು 14 ಪ್ರಕರಣಗಳನ್ನು ಪತ್ತೆ ಹಚ್ಚಿ, 11 ಆರೋಪಿಗಳನ್ನು ಬಂಧಿಸಿ, ಸುಮಾರು ₹1,26,53,780 ಮೌಲ್ಯದ ಆಭರಣ ಮತ್ತು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ

ಎಪ್ರಿಲ್ 1, 2026ರಂದು ಬೆಟಗೇರಿ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಖ್ಯೆ 22/2025ರಲ್ಲಿ ₹3.25 ಲಕ್ಷ ಮೌಲ್ಯದ ಆಭರಣ ಕಳವು ಮಾಡಲಾಗಿತ್ತು. ವಿಜಯಲಕ್ಷ್ಮೀ ಕೋಂ ಸಂಪತ್ ಕುಮಾರ ಜಾಡಗೌಡ ಅವರು ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ IPS ಹಾಗೂ ಉಪ ಪೊಲೀಸ್ ಅಧೀಕ್ಷಕ ಮುರ್ತಾಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ ಬೆಟಗೇರಿ ಠಾಣೆಯ ಸಿಪಿಐ ಧೀರಜ್ ಬಿ. ಸಿಂಧೆ, ಪಿಎಸ್ಐ ಮಾರುತಿ ಎಸ್. ಜೋಗದಂಡಕರ, ಎಎಸ್ಐಗಳಾದ ಐ.ಎಸ್. ಲಮಾಣಿ, ಬಿ.ಎಫ್. ಯರಗುಪ್ಪಿ ಹಾಗೂ ಸಿಬ್ಬಂದಿಗಳಾದ ಜಿ.ಡಿ. ಹೂಲಿ, ಆನಂದಸಿಂಗ್ ದೊಡಮನಿ, ಎನ್.ಡಿ. ನದಾಫ್, ಎಸ್.ಬಿ. ಬಣಕಲ್, ಪರಶುರಾಮ ದೊಡಮನಿ,

ಪ್ರವೀಣ ಕಲ್ಲೂರ, ನಾಗರಾಜ ಬರಡಿ, ಅಶೋಕ್ ಗದಗ, ಅವಿನಾಶಸಿಂಗ್ ಬ್ಯಾಳಿ, ಮಂಜುನಾಥ ಅಸೂಟಿ, ಕುಮಾರ ತಿಗರಿ, ಅಣ್ಣಪ್ಪ ಕವಲೂರ, ಎನ್.ಡಿ. ಹುಬ್ಬಳ್ಳಿ, ಎಸ್.ಹೆಚ್. ದೊಣಿ ಹಾಗೂ ತಾಂತ್ರಿಕ ಸಹಾಯಕರಾದ ಗುರುರಾಜ ಬೂದಿಹಾಳ, ಸಂಜು ಕೊರಡೂರು ಒಳಗೊಂಡ ವಿಶೇಷ ತಂಡ ಕಾರ್ಯಚರಣೆ ನಡೆಸಿ 1) ಸುರೇಶ್ @ ಸಣ್ಣ ಸುರೇಶ್, ತಂದೆ ಸತ್ಯಪ್ಪ ಸಿಂಗನೂರು, ವಯಸ್ಸು 27 ವರ್ಷ, ಸಾ: ಕಾದ್ರೋಳಿ, ತಾ: ಕಿತ್ತೂರು, ಜಿ: ಬೆಳಗಾವಿ, 2) ನಾಗಪ್ಪ, ತಂದೆ ತಿಮ್ಮಪ್ಪ ದುರಗಮುರಗಿ, ವಯಸ್ಸು 45 ವರ್ಷ,

ಸಾ: ಅಳ್ನಾವರ, ಜಿ: ಧಾರವಾಡ, 3) ಶಿವು, ತಂದೆ ಸುಂಕಪ್ಪ ಬೆಳಗಂಟಿ, ವಯಸ್ಸು 24 ವರ್ಷ, ಸಾ: ಗರಗ, ತಾ/ಜಿ: ಧಾರವಾಡ, 4) ಸುರೇಶ್ @ ದೊಡ್ಡ ಸುರೇಶ್, ತಂದೆ ಬಾಬು ತವಮ್ಮನವರ್, ವಯಸ್ಸು 35 ವರ್ಷ, ಸಾ: ದಡ್ಡಿ, ತಾ: ಹುಕ್ಕೇರಿ, ಜಿ: ಬೆಳಗಾವಿ, 5) ಶಂಕರ @ ಕುಡ್ಡ ಶಂಕರ, ತಂದೆ ಯಲ್ಲಪ್ಪ ಕರಿ, ವಯಸ್ಸು 24 ವರ್ಷ, ಸಾ: ವೆಂಕಟಾಪುರ, ತಾ/ಜಿ: ಧಾರವಾಡ, 6) ಮಂಜುನಾಥ, ತಂದೆ ನಾಗರಾಜ ಬಾದಗಿ, ವಯಸ್ಸು 30 ವರ್ಷ, ಸಾ: ಧಾರವಾಡ, ತಾ/ಜಿ: ಧಾರವಾಡ, 7) ಹುಲಗಪ್ಪ, ತಂದೆ ಫಕೀರಪ್ಪ ಬೆಳಗಾಲಪೇಟೆ, ವಯಸ್ಸು 19 ವರ್ಷ, ಸಾ: ಬೆಳಗಾಲಪೇಟೆ,

ತಾ: ಹಾನಗಲ್, ಜಿ: ಹಾವೇರಿ, 8) ಆನಂದ, ತಂದೆ ದುರಗಪ್ಪ ಯರಗಣ್ಣವರ್, ವಯಸ್ಸು 21 ವರ್ಷ, ಸಾ: ಮುನವಳ್ಳಿ, ತಾ/ಜಿ: ಧಾರವಾಡ, ಇನ್ನೊಂದು ಪ್ರಕರಣದ ಆರೋಪಿಗಳಾದ 9) ಗಂಗಾರಾಮ, ತಂದೆ ಬೈರಾಮ ಚವಾಣ್, ವಯಸ್ಸು 50 ವರ್ಷ, ಜಾತಿ ಹಿಂದೂ ಪಾರದಿ (ಹರಣಶಿಕಾರಿ), ಸಾ: ಮೊಗಾಬಿ, ತಾ: ಆಳಂದ, ಜಿ: ಕಲಬುರಗಿ, 10) ಕನಿರಾಮ, ತಂದೆ ಕಮಸರ ಚವಾಣ್,

ವಯಸ್ಸು 60 ವರ್ಷ, ಜಾತಿ ಹಿಂದೂ ಪಾರದಿ (ಹರಣಶಿಕಾರಿ), ಸಾ: ಶಕಾಪುರ, ತಾ: ಆಳಂದ, ಜಿ: ಕಲಬುರಗಿ ಹಾಗೂ 11) ಶ್ರೀಕಾಂತ್, ತಂದೆ ಶರಣಪ್ಪ ದೂಧಳೆ @ ಪೂಜಾರಿ, ವಯಸ್ಸು 44 ವರ್ಷ, ಸಾ: ಮೊಗಾಬಿ, ತಾ: ಆಳಂದ, ಪ್ರಸ್ತುತ: ಶಿವಶಕ್ತಿ ನಗರ, ತುರುಬೆ ಸ್ಟೋರ್ಸ್ ಹತ್ತಿರ, ಮುಂಬೈ, ಮಹಾರಾಷ್ಟ್ರ ಇವರನ್ನು ಬಂಧಿಸಲಾಗಿದೆ.

ಬಂಧಿತರಿಂದ 587 ಗ್ರಾಂ ಬಂಗಾರದ ಆಭರಣಗಳು ಅಂದಾಜು ಮೌಲ್ಯ ₹89,22,400 ರೂ.ಗಳು.
₹9,31,680 ಮೌಲ್ಯದ 3822 ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ ₹9,33,000 ರೂ.ಮೌಲ್ಯದ 4 ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ಒಟ್ಟು ₹1,07,87 ,080 ವಶಪಡಿಸಿಕೊಳ್ಳಲಾಗಿದೆ.

ಹಾಗೆಯೇ ಮತ್ತೊಂದು ಪ್ರಕರಣವನ್ನು ಭೇದಿಸಿರುವ ಪೊಲೀಸರು, 116 ಗ್ರಾಂ –ಬಂಗಾರದ ಆಭರಣಗಳು ಅಂದಾಜು ಮೌಲ್ಯ ₹17,32,800 ಹಾಗೂ 515 ಗ್ರಾಂ –ಬೆಳ್ಳಿಯ ಆಭರಣಗಳು ಅಂದಾಜು ಮೌಲ್ಯ ₹1,33,900 ರೂ. ಜಪ್ತಿ ಮಾಡಿದ್ದಾರೆ.

ಇನ್ನೂ ಕಳ್ಳತನ ಪ್ರಕರಣಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಮುಂದುವರಿಯಲಿದೆ. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ತಂಡದ ಪರಿಶ್ರಮ ಶ್ಲಾಘನೀಯ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರೋಹನ್ ಜಗದೀಶ್ ಹೇಳಿದ್ದಾರೆ.

Raja Raghuvanshi Murder Case: ಹನಿಮೂನ್ ವೇಳೆ ಪತಿಯನ್ನು ಕೊಂದಿದ್ದ ಸೋನಮ್ʼಗೆ ಜಾಮೀನು!

0

ಮಧ್ಯಪ್ರದೇಶ: ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಮೇಘಾಲಯ ಹನಿಮೂನ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸೋನಮ್ ರಘುವಂಶಿಗೆ ಶಿಲ್ಲಾಂಗ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಮೃತ ರಾಜಾ ರಘುವಂಶಿ ಅವರ ಹಿರಿಯ ಸಹೋದರ ವಿಪಿನ್ ರಘುವಂಶಿ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಆದರೆ, ಸೋನಮ್ ಕುಟುಂಬ ಅಥವಾ ಆಕೆಯ ಸಹೋದರರಿಂದ ಈ ಬಗ್ಗೆ ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗಿಲ್ಲ.

ಪ್ರಕರಣದ ವಿಚಾರಣೆ ಶಿಲ್ಲಾಂಗ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಸೋನಮ್ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ, ವಾದ-ಪ್ರತಿವಾದ ಆಲಿಸಿದ ಬಳಿಕ ಜಾಮೀನು ನೀಡಿದೆ ಎಂದು ವಿಪಿನ್ ರಘುವಂಶಿ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಲು ಸೋನಮ್ ಸಹೋದರ ಗೋವಿಂದ್ ರಘುವಂಶಿ ನಿರಾಕರಿಸಿದ್ದಾರೆ. ಇತ್ತ, “ಜಾಮೀನು ಕುರಿತು ಮಾಧ್ಯಮಗಳ ಮೂಲಕ ಮಾಹಿತಿ ತಿಳಿದಿದ್ದು, ಇದರ ವಿರುದ್ಧ ಹೈಕೋರ್ಟ್‌ನಲ್ಲಿ ಆಕ್ಷೇಪಣೆ ಸಲ್ಲಿಸುತ್ತೇವೆ” ಎಂದು ವಿಪಿನ್ ರಘುವಂಶಿ ಹೇಳಿದ್ದಾರೆ.

ಪ್ರಕರಣದ ಹಿನ್ನೆಲೆ:
2025ರ ಮೇ 11ರಂದು ಇಂದೋರ್‌ನಲ್ಲಿ ಸೋನಮ್ ಮತ್ತು ರಾಜಾ ರಘುವಂಶಿ ವಿವಾಹವಾಗಿದ್ದರು. ಬಳಿಕ ಮೇ 20ರಂದು ಹನಿಮೂನ್‌ಗೆ ಮೇಘಾಲಯಕ್ಕೆ ತೆರಳಿದ್ದರು. ಮೇ 23ರಂದು ಇಬ್ಬರೂ ನಾಪತ್ತೆಯಾಗಿದ್ದು, ಕುಟುಂಬದವರು ದೂರು ದಾಖಲಿಸಿದ್ದರು.

ಪೊಲೀಸರ ಶೋಧ ಕಾರ್ಯಾಚರಣೆಯ ನಡುವೆ ಜೂನ್ 2ರಂದು ಕಾಡಿನಲ್ಲಿ ರಾಜಾ ಅವರ ಕೊಳೆತ ಸ್ಥಿತಿಯ ಮೃತದೇಹ ಪತ್ತೆಯಾಗಿತ್ತು. ಆದರೆ ಸೋನಮ್ ಪತ್ತೆಯಾಗಿರಲಿಲ್ಲ. ಬಳಿಕ ಜೂನ್ 9ರಂದು ಉತ್ತರ ಪ್ರದೇಶದ ಘಾಜಿಪುರದ ರೆಸ್ಟೋರೆಂಟ್ ಬಳಿ ಸೋನಮ್ ಪತ್ತೆಯಾಗಿದ್ದಳು.

ವಿಚಾರಣೆ ವೇಳೆ, ತನ್ನ ಪ್ರಿಯಕರ ರಾಜ್ ಕುಶ್ವಾಹ ಮತ್ತು ಇತರರ ಜೊತೆಗೂಡಿ ಪತಿ ರಾಜಾ ಹತ್ಯೆಗೆ ಸಂಚು ರೂಪಿಸಿದ್ದಾಗಿ ಸೋನಮ್ ಒಪ್ಪಿಕೊಂಡಿದ್ದಳು. ಆಕೆಯ ಹೇಳಿಕೆಯ ಆಧಾರದ ಮೇಲೆ ರಾಜ್ ಕುಶ್ವಾಹ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದರು.

ಈ ಪ್ರಕರಣದಲ್ಲಿ ಒಟ್ಟು ಎಂಟು ಮಂದಿಯನ್ನು ಬಂಧಿಸಲಾಗಿದ್ದು, ಅವರಲ್ಲಿ ಮೂವರಿಗೆ ಈಗಾಗಲೇ ಜಾಮೀನು ದೊರೆತಿದೆ.

ರುಪತಿ ಲಡ್ಡುಗೆ ಮತ್ತೆ ನಂದಿನಿ ತುಪ್ಪ: ಬಮೂಲ್‌ ನಿಂದ ಸರಬರಾಜಿಗೆ ಮರುಚಾಲನೆ

ಬೆಂಗಳೂರು: ಬೆಲೆ ಏರಿಕೆ ಸೇರಿದಂತೆ ವಿವಿಧ ಕಾರಣಗಳಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ನಂದಿನಿ ತುಪ್ಪದ ಸರಬರಾಜು ಮತ್ತೆ ತಿರುಪತಿ ತಿರುಮಲ ದೇವಸ್ಥಾನಕ್ಕೆ ಆರಂಭವಾಗಿದೆ.

ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್) ವತಿಯಿಂದ ತಿರುಪತಿ ದೇವಸ್ಥಾನಕ್ಕೆ ನಂದಿನಿ ತುಪ್ಪ ಸರಬರಾಜು ಕಾರ್ಯಕ್ರಮಕ್ಕೆ ಒಕ್ಕೂಟದ ಅಧ್ಯಕ್ಷ ಡಿ.ಕೆ. ಸುರೇಶ್ ಇಂದು ಬೆಂಗಳೂರು ಡೇರಿ ಆವರಣದಲ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ನಿರ್ದೇಶಕರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಶ್ವವಿಖ್ಯಾತ ತಿರುಪತಿ ವೆಂಕಟೇಶ್ವರ ಸ್ವಾಮಿಯ ಲಡ್ಡು ಪ್ರಸಾದ ತಯಾರಿಕೆಗೆ ಬಳಸಲಾಗುವ ಕರ್ನಾಟಕದ ಹೆಮ್ಮೆಯ ನಂದಿನಿ ತುಪ್ಪ ಇದೀಗ ಮತ್ತೆ ದೇವಸ್ಥಾನಕ್ಕೆ ತಲುಪಲಿದೆ.

ಬೆಲೆ ಏರಿಕೆ ಮತ್ತು ಕೆಲವು ತಾಂತ್ರಿಕ ಕಾರಣಗಳಿಂದಾಗಿ ಕಳೆದ ಕೆಲವು ಸಮಯದಿಂದ ಕೆಎಂಎಫ್ ಹಾಗೂ ತಿರುಪತಿ ತಿರುಮಲ ದೇವಸ್ಥಾನದ ನಡುವೆ ತುಪ್ಪ ಸರಬರಾಜು ಒಪ್ಪಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಆದರೆ, ಎರಡೂ ಸಂಸ್ಥೆಗಳ ನಡುವಿನ ಮಾತುಕತೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಸರಬರಾಜು ಮರುಪ್ರಾರಂಭಗೊಂಡಿದೆ.

ತಿರುಪತಿ ಲಡ್ಡುವಿನ ವಿಶಿಷ್ಟ ಸ್ವಾದ ಮತ್ತು ಗುಣಮಟ್ಟಕ್ಕೆ ನಂದಿನಿ ತುಪ್ಪ ಪ್ರಮುಖ ಪಾತ್ರ ವಹಿಸುತ್ತಿದ್ದು, ಭಕ್ತರ ನಿರೀಕ್ಷೆಯಂತೆ ಈ ಸೇವೆ ಪುನರಾರಂಭಗೊಂಡಿರುವುದು ಸಂತಸದ ವಿಚಾರವಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕೆಎಂಎಫ್ ಅಧಿಕಾರಿಗಳು, “ತಿರುಪತಿ ಲಡ್ಡುವಿನ ಪವಿತ್ರತೆ ಮತ್ತು ಗುಣಮಟ್ಟವನ್ನು ಕಾಪಾಡುವಲ್ಲಿ ನಂದಿನಿ ತುಪ್ಪ ಪ್ರಮುಖವಾಗಿದೆ. ಭಕ್ತರ ಅಪೇಕ್ಷೆಯಂತೆ ಮತ್ತೆ ಸರಬರಾಜು ಆರಂಭಿಸಿರುವುದು ಸಂತೋಷ ತಂದಿದೆ” ಎಂದು ತಿಳಿಸಿದರು.

ಇಂದು ನಂದಿನಿ ತುಪ್ಪ ಹೊತ್ತ ಲಾರಿಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಅಧಿಕೃತವಾಗಿ ಸರಬರಾಜು ಮರುಚಾಲನೆ ನೀಡಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ: ಮತ್ತೆ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದರ್ಶನ್!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ ಅವರು ಮತ್ತೊಮ್ಮೆ ಜಾಮೀನು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹಿರಿಯ ವಕೀಲ ರಂಜಿತ್ ರೋಹಟಗಿ ಅವರ ಮೂಲಕ ದರ್ಶನ್ ಈ ಅರ್ಜಿ ಸಲ್ಲಿಸಿದ್ದು, ಮೇ 4ರಂದು ಈ ಮನವಿ ವಿಚಾರಣೆಗೆ ಬರಲಿದೆ ಎಂದು ತಿಳಿದುಬಂದಿದೆ.

ಈ ಪ್ರಕರಣದಲ್ಲಿ ದರ್ಶನ್ ಹಲವು ಬಾರಿ ಜಾಮೀನು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. 2024ರ ಜೂನ್ 11ರಂದು ಮೈಸೂರಿನಲ್ಲಿ ಮೊದಲ ಬಾರಿಗೆ ಬಂಧಿತರಾದ ಅವರನ್ನು ವಿಚಾರಣೆಗಾಗಿ ಬೆಂಗಳೂರಿಗೆ ಕರೆತರಲಾಗಿತ್ತು.

ನಂತರ 2024ರ ಅಕ್ಟೋಬರ್‌ನಲ್ಲಿ ವೈದ್ಯಕೀಯ ಕಾರಣಗಳನ್ನು ಉಲ್ಲೇಖಿಸಿ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಬಳಿಕ ಡಿಸೆಂಬರ್ 2024ರಲ್ಲಿ ಅವರಿಗೆ ಜಾಮೀನು ಮಂಜೂರಾಗಿತ್ತು.

ಆದರೆ, ರಾಜ್ಯ ಸರ್ಕಾರ ಈ ಜಾಮೀನನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇದರ ಬೆನ್ನಲ್ಲೇ 2025ರಲ್ಲಿ ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸಿದ್ದರಿಂದ ದರ್ಶನ್ ಮತ್ತೆ ಜೈಲು ಸೇರಬೇಕಾಯಿತು.

ಸುಪ್ರೀಂಕೋರ್ಟ್ ಆದೇಶದಂತೆ 2025ರ ಆಗಸ್ಟ್ 14ರಂದು ಪೊಲೀಸರು ಅವರನ್ನು ಮತ್ತೆ ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು. ಜಾಮೀನು ಅವಧಿಯಲ್ಲಿ ಅವರು ತಮ್ಮ ‘ಡೆವಿಲ್’ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದರು.

ಈಗ ಸುಮಾರು ಎಂಟೂವರೆ ತಿಂಗಳ ಬಳಿಕ ದರ್ಶನ್ ಮತ್ತೊಮ್ಮೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಈ ಬಾರಿ ಸಲ್ಲಿಸಿರುವ ಅರ್ಜಿಯಲ್ಲಿ ಯಾವ ಆಧಾರದ ಮೇಲೆ ಜಾಮೀನು ಕೋರಲಾಗಿದೆ ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ.

ಮಧ್ಯಪ್ರಾಚ್ಯ ಉದ್ವಿಗ್ನತೆ ಪ್ರಭಾವ: ಬೆಂಗಳೂರಿನಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ, ಬೆಳ್ಳಿ ಸ್ಥಿರ!

ಬೆಂಗಳೂರು: ಅಂತರರಾಷ್ಟ್ರೀಯ ಮಾರುಕಟ್ಟೆಯ ಬೆಳವಣಿಗೆಗಳು, ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿ ಹಾಗೂ ಡಾಲರ್ ಮೌಲ್ಯದ ಏರಿಳಿತದ ಪರಿಣಾಮವಾಗಿ ಚಿನ್ನದ ದರದಲ್ಲಿ ಏರಿಕೆ ಕಂಡುಬಂದಿದ್ದು, ಬೆಳ್ಳಿ ದರ ಸ್ಥಿರವಾಗಿದೆ ಎಂದು ಗುಡ್ ರಿಟರ್ನ್ಸ್ ವರದಿ ತಿಳಿಸಿದೆ.

ಏಪ್ರಿಲ್ 29, 2026ರಂದು 24 ಕ್ಯಾರೆಟ್ ಚಿನ್ನದ ದರದಲ್ಲಿ 10 ಗ್ರಾಂಗೆ 440 ರೂಪಾಯಿ ಏರಿಕೆಯಾಗಿದ್ದು, ಹೊಸ ಬೆಲೆ 1,51,370 ರೂಪಾಯಿಗೆ ತಲುಪಿದೆ. ಇದೇ ವೇಳೆ 1 ಗ್ರಾಂ ಚಿನ್ನದ ಬೆಲೆಯಲ್ಲಿ 44 ರೂಪಾಯಿ ಹೆಚ್ಚಳವಾಗಿದ್ದು, 15,137 ರೂಪಾಯಿಯಾಗಿ ದಾಖಲಾಗಿದೆ.

22 ಕ್ಯಾರೆಟ್ ಚಿನ್ನದ ದರದಲ್ಲೂ ಏರಿಕೆ ಕಂಡುಬಂದಿದೆ. 1 ಗ್ರಾಂಗೆ 40 ರೂಪಾಯಿ ಹೆಚ್ಚಳವಾಗಿ 13,875 ರೂಪಾಯಿಗೆ ತಲುಪಿದ್ದರೆ, 10 ಗ್ರಾಂ ಚಿನ್ನದ ಬೆಲೆಯಲ್ಲಿ 400 ರೂಪಾಯಿ ಏರಿಕೆಯಾಗಿ 1,38,750 ರೂಪಾಯಿಯಾಗಿದೆ.

ಇನ್ನು ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಪ್ರತಿ ಗ್ರಾಂ ಬೆಳ್ಳಿ 260 ರೂಪಾಯಿಯಲ್ಲೇ ಸ್ಥಿರವಾಗಿದ್ದು, ಪ್ರತಿ ಕೆಜಿ ಬೆಳ್ಳಿ ಬೆಲೆ 2.60 ಲಕ್ಷ ರೂಪಾಯಿಯಾಗಿದೆ.

ಇರಾನ್–ಅಮೆರಿಕ ನಡುವಿನ ಉದ್ವಿಗ್ನತೆ, ಜಾಗತಿಕ ಆರ್ಥಿಕ ಅನಿಶ್ಚಿತತೆ ಹಾಗೂ ಡಾಲರ್ ಮೌಲ್ಯದ ಏರಿಳಿತದಿಂದ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಭಾರೀ ಚಲನವಲನ ಮುಂದುವರಿದಿದೆ.

ಅಮಿತ್ ಶಾ ಹೆಸರಿನಲ್ಲಿ ವಂಚನೆ ಆರೋಪ: ಸುಜಯೇಂದ್ರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

0

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿಶೇಷ ಕರ್ತವ್ಯಾಧಿಕಾರಿ ಎಂದು ನಂಬಿಸಿ ಜಮ್ಮು-ಕಾಶ್ಮೀರ ಮೂಲದ ವೈದ್ಯನಿಂದ ₹2.70 ಕೋಟಿ ವಂಚನೆ ಮಾಡಿದ ಪ್ರಕರಣದಲ್ಲಿ ಆರೋಪಿ ಸುಜಯೇಂದ್ರ ವಿರುದ್ಧ ಪೊಲೀಸರು ಬೆಂಗಳೂರಿನ 24ನೇ ಎಸಿಜೆಎಂ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

ಯದುಗಿರಿ ಯತಿರಾಜ ಮಠದೊಂದಿಗೆ ಆಪ್ತ ಸಂಬಂಧ ಬೆಳೆಸಿಕೊಂಡಿದ್ದ ಸುಜಯೇಂದ್ರ, ಮಠಕ್ಕೆ ಧನಸಹಾಯ ನೀಡಿ ವಿಶ್ವಾಸ ಗಳಿಸಿದ್ದ. ನಂತರ ದೇಶದ ವಿವಿಧ ಭಾಗಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ,

ರಾಜಕೀಯ ವ್ಯಕ್ತಿಗಳೊಂದಿಗೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಬಳಸಿಕೊಂಡು ಜನರನ್ನು ನಂಬಿಸುವ ಮೂಲಕ ವಂಚನೆ ನಡೆಸುತ್ತಿದ್ದನು. 2023ರಲ್ಲಿ ಏರ್‌ಪೋರ್ಟ್ ಸಮೀಪ ಜಮೀನು ಒದಗಿಸುವುದಾಗಿ ಹೇಳಿ ಮೋಸ ಮಾಡಿದ ಪ್ರಕರಣವೂ ಈತನ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ಡಾ. ರಾಜಾ ಲಂಗೇರ್ ಎಂಬ ವೈದ್ಯರು ಕೂಡ ಮಠದ ಭಕ್ತರಾಗಿದ್ದು, ಅಲ್ಲಿಯೇ ಸುಜಯೇಂದ್ರನ ಪರಿಚಯವಾಗಿತ್ತು. ತನ್ನನ್ನು ಅಮಿತ್ ಶಾ ಅವರ ವಿಶೇಷ ಕರ್ತವ್ಯಾಧಿಕಾರಿ ಎಂದು ಪರಿಚಯಿಸಿಕೊಂಡ ಆತ, ಬೆಂಗಳೂರಿನ ಏರ್‌ಪೋರ್ಟ್ ಸಮೀಪ ಮಠಕ್ಕೆ ಸೇರಿದ ಜಮೀನನ್ನು ಕಡಿಮೆ ದರದಲ್ಲಿ ಕೊಡಿಸುವುದಾಗಿ ಹೇಳಿ ವಿಶ್ವಾಸ ಗಳಿಸಿದ್ದ.

ಸ್ವಾಮೀಜಿಯ ಸಹಮತವೂ ಇದೆ ಎಂದು ಹೇಳಿ ವೈದ್ಯರಿಂದ ₹2.70 ಕೋಟಿ ಹಣ ಪಡೆದುಕೊಂಡಿದ್ದನು. ಆದರೆ ಭರವಸೆ ನೀಡಿದಂತೆ ಜಮೀನು ಒದಗಿಸದೇ ವಿಳಂಬವಾಗುತ್ತಿದ್ದಂತೆ ಅನುಮಾನಗೊಂಡ ವೈದ್ಯರು ವಿಚಾರಣೆ ನಡೆಸಿದಾಗ ಮೋಸದ ಅಸಲಿ ಮುಖ ಬಹಿರಂಗವಾಗಿದೆ.

ಇದರ ಜೊತೆಗೆ, ಸುಜಯೇಂದ್ರನ ವಿರುದ್ಧ ರಾಜ್ಯಪಾಲರ ನಕಲಿ ಸಹಿ ಮತ್ತು ಲೋಕಭವನದ ಅಧಿಕೃತ ಲೆಟರ್‌ಹೆಡ್ ಬಳಸಿಕೊಂಡು ವಂಚನೆ ನಡೆಸಿದ ಆರೋಪವೂ ಕೇಳಿಬಂದಿದೆ. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರದೀಪ್ ಅವರ ದೂರಿನ ಮೇರೆಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

2025ರಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗೆ ಪತ್ರ ಬರೆದಿದ್ದ ಸುಜಯೇಂದ್ರ, ರಾಜ್ಯಪಾಲರ ಶಿಫಾರಸ್ಸು ಇದೆ ಎಂದು ನಂಬಿಸಿ ವಿದ್ಯಾರ್ಥಿಗೆ ಸೀಟ್ ನೀಡುವಂತೆ ಒತ್ತಡ ಹೇರಿದ್ದನೆಂಬ ಆರೋಪವೂ ಇದೆ. ಈತನ ಮನೆ ಮೇಲೆ ನಡೆದ ದಾಳಿಯಲ್ಲಿ ಕೇಂದ್ರ ಗೃಹ ಸಚಿವಾಲಯ ಮತ್ತು ಲೋಕಭವನದ ಹೆಸರಿನ ನಕಲಿ ಲೆಟರ್‌ಹೆಡ್‌ಗಳು ಹಾಗೂ ನಕಲಿ ಮುದ್ರೆಗಳು ಪತ್ತೆಯಾಗಿದ್ದು, ವಂಚನೆ ಜಾಲದ ವ್ಯಾಪ್ತಿ ದೊಡ್ಡದಾಗಿರುವ ಅನುಮಾನ ಮೂಡಿಸಿದೆ.

ಕರಾವಳಿ ಜನರಿಗೆ ಗುಡ್‌ ನ್ಯೂಸ್: ವಂದೇ ಭಾರತ್ ಸಂಚಾರಕ್ಕೆ ರೈಲ್ವೆ ಸಚಿವರಿಂದ ಮಹತ್ವದ ಸುಳಿವು

ದಕ್ಷಿಣ ಕನ್ನಡ: ಕರಾವಳಿ ಕರ್ನಾಟಕ ಮತ್ತು ಗೋವಾವನ್ನು ವೇಗವಾಗಿ ಸಂಪರ್ಕಿಸುವ ಮಹತ್ವಾಕಾಂಕ್ಷಿ ಬೆಂಗಳೂರು–ಮಂಗಳೂರು–ಮಡ್ಗಾಂವ್ ವಂದೇ ಭಾರತ್ ರೈಲು ಸೇವೆ ಶೀಘ್ರದಲ್ಲೇ ಆರಂಭವಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ನೀಡಿರುವ ಹೇಳಿಕೆ ಕರಾವಳಿ ಭಾಗದ ಜನರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಇತ್ತೀಚೆಗೆ ಯೋಜನೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಮುಂದಿನ ಕೆಲವು ತಿಂಗಳೊಳಗೆ ಬೆಂಗಳೂರು, ಮಂಗಳೂರು ಮತ್ತು ಮಡ್ಗಾಂವ್ ನಡುವೆ ವೇಗದ ವಂದೇ ಭಾರತ್ ರೈಲು ಸಂಚಾರ ಆರಂಭಿಸುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.

ಹಾಸನ–ಮಂಗಳೂರು ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿಯ ಅಂತಿಮ ಪರಿಶೀಲನೆ ಮಾತ್ರ ಬಾಕಿಯಿದ್ದು, ಅದು ಪೂರ್ಣಗೊಂಡ ಬಳಿಕವೇ ಸೇವೆಗೆ ಹಸಿರು ನಿಶಾನೆ ಸಿಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ರೈಲು ಸೇವೆ ಆರಂಭವಾದರೆ ಕರಾವಳಿ ಹಾಗೂ ಮಲೆನಾಡು ಭಾಗಗಳ ನಡುವಿನ ಸಂಚಾರಕ್ಕೆ ಹೊಸ ಚೈತನ್ಯ ಸಿಗಲಿದೆ. ಈಗಾಗಲೇ ಮಾರ್ಗದ ಬಹುತೇಕ ಭಾಗಗಳಲ್ಲಿ ವಿದ್ಯುದೀಕರಣ ಪೂರ್ಣಗೊಂಡಿದ್ದು, ಪ್ರಯೋಗಾತ್ಮಕ ಸಂಚಾರ ಕಾರ್ಯಗಳೂ ನಡೆಯುತ್ತಿವೆ. ಇದರಿಂದ ಯೋಜನೆ ಅಂತಿಮ ಹಂತ ತಲುಪಿರುವುದು ಸ್ಪಷ್ಟವಾಗಿದೆ.

ರೈಲ್ವೆ ಇಲಾಖೆಯ ಮೂಲಗಳ ಪ್ರಕಾರ, ಬಹುಕಾಲದಿಂದ ನಿರೀಕ್ಷೆಯಲ್ಲಿದ್ದ ಈ ಸೇವೆಯನ್ನು ಮಳೆಗಾಲ ಆರಂಭಕ್ಕೂ ಮುನ್ನವೇ ಸಾರ್ವಜನಿಕರಿಗೆ ಪರಿಚಯಿಸುವ ಸಾಧ್ಯತೆ ಇದೆ. ಸುರಕ್ಷತಾ ಅನುಮೋದನೆ ಹಾಗೂ ತಾಂತ್ರಿಕ ಪರೀಕ್ಷೆಗಳು ಪೂರ್ಣಗೊಂಡ ಬಳಿಕ ಅಧಿಕೃತ ಚಾಲನೆ ನೀಡಲಾಗುತ್ತದೆ.

ಜನಗಣತಿ ರಾಷ್ಟ್ರೀಯ ಕರ್ತವ್ಯ: ಖಾಸಗಿ ಶಾಲಾ ಸಿಬ್ಬಂದಿಯೂ ಪಾಲ್ಗೊಳ್ಳಬೇಕು – ಹೈಕೋರ್ಟ್ ಸೂಚನೆ

ಬೆಂಗಳೂರು: ಜನಗಣತಿ ರಾಷ್ಟ್ರೀಯ ಕರ್ತವ್ಯವಾಗಿದ್ದು, ಅದಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ರಜೆಯಲ್ಲಿರುವ ಶಿಕ್ಷಕರನ್ನು ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿ, ಗಣತಿ ಕಾರ್ಯದಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡುವಂತೆ ನಗರದ ಖಾಸಗಿ ಶಾಲೆಯ ಪ್ರಾಂಶುಪಾಲರಿಗೆ ನಿರ್ದೇಶನ ನೀಡಿದೆ.

ಜೆ.ಪಿ. ನಗರದ 7ನೇ ಹಂತದಲ್ಲಿರುವ ‘ದಿ ಬ್ರಿಗೇಡ್ ಶಾಲೆ’ ಪ್ರಾಂಶುಪಾಲ ಶುಭಾರ್ ಜೈನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚ್ಚಿನ್ ಶಂಕರ್ ಮಗದಂ ಅವರಿದ್ದ ಪೀಠ ಈ ಆದೇಶ ನೀಡಿದೆ.

ಇದಲ್ಲದೆ, ಮುಂದಿನ ಒಂದು ವಾರದೊಳಗೆ ಎಲ್ಲ ಶಿಕ್ಷಕರನ್ನು ಹಿಂದಿರುಗುವಂತೆ ಸೂಚಿಸಿ, ಜನಗಣತಿ ಆಯುಕ್ತರ ಮುಂದೆ ವರದಿ ಮಾಡಿಸುವುದನ್ನು ಖಚಿತಪಡಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ. ಈ ಷರತ್ತಿನ ಆಧಾರದಲ್ಲಿ ಪ್ರಾಂಶುಪಾಲರ ವಿರುದ್ಧ ಜನಗಣತಿ ಕಾಯ್ದೆಯ ಸೆಕ್ಷನ್ 11ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸುವ ಕ್ರಮ ಕೈಗೊಳ್ಳಬಾರದು ಎಂದು ತಿಳಿಸಿದೆ.

ವಿಚಾರಣೆ ವೇಳೆ ನ್ಯಾಯಪೀಠ, “ಸುಮಾರು 10ರಿಂದ 11 ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ಅತ್ಯಂತ ಮಹತ್ವದ ರಾಷ್ಟ್ರೀಯ ಕಾರ್ಯ. ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಶಾಲಾ ಮುಖ್ಯಸ್ಥರು ಸಹಕರಿಸದಿದ್ದರೆ ಸರ್ಕಾರ ಈ ಕಾರ್ಯ ಪೂರ್ಣಗೊಳಿಸುವುದು ಹೇಗೆ?” ಎಂದು ಪ್ರಶ್ನಿಸಿತು.

ಮುಂದಿನ ವಿಚಾರಣೆಯ ವೇಳೆ ಶಾಲೆಯಲ್ಲಿ ಲಭ್ಯವಿರುವ ಶಿಕ್ಷಕರ ಸಂಪೂರ್ಣ ಪಟ್ಟಿಯನ್ನು ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿ ವಿಚಾರಣೆಯನ್ನು ಮುಂದೂಡಿದೆ.

ಪ್ರಕರಣದ ಹಿನ್ನೆಲೆ:
ದೇಶಾದ್ಯಂತ 2026ರ ಜನಗಣತಿ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ಹಂತ ಏಪ್ರಿಲ್ 1ರಿಂದ ಸ್ವಯಂ ಗಣತಿಯೊಂದಿಗೆ ಶುರುವಾಗಿದೆ. ಎರಡನೇ ಹಂತದಲ್ಲಿ ಏಪ್ರಿಲ್ 16ರಿಂದ ಗಣತಿದಾರರು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸೆಪ್ಟೆಂಬರ್ ಅಂತ್ಯದೊಳಗೆ ಗಣತಿ ಪೂರ್ಣಗೊಳ್ಳಬೇಕಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಪ್ರಧಾನ ಜನಗಣತಿ ಅಧಿಕಾರಿ ಏಪ್ರಿಲ್ 9ರಂದು ದಿ ಬ್ರಿಗೇಡ್ ಶಾಲೆಗೆ ಪತ್ರ ಬರೆದು ಶಿಕ್ಷಕರನ್ನು ಗಣತಿ ಕಾರ್ಯಕ್ಕೆ ನಿಯೋಜಿಸುವಂತೆ ಸೂಚಿಸಿದ್ದರು. ಇದನ್ನು ಪ್ರಶ್ನಿಸಿ ಶಾಲೆ ಹೈಕೋರ್ಟ್ ಮೆಟ್ಟಿಲೇರಿತ್ತು.

ಅರ್ಜಿದಾರರ ಪರ ವಕೀಲರು, ಶಾಲೆಯ 84 ಶಿಕ್ಷಕರನ್ನು ನಿಯೋಜಿಸಬಹುದಾದರೂ, ಹಲವರು ಬೇಸಿಗೆ ರಜೆ ಹಿನ್ನೆಲೆಯಲ್ಲಿ ವಿದೇಶ ಪ್ರವಾಸದಲ್ಲಿದ್ದಾರೆ. ಈಗಾಗಲೇ 12 ಮಂದಿ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲರು, ಶಾಲೆಯಲ್ಲಿ ಎಷ್ಟು ಮಂದಿ ಶಿಕ್ಷಕರು ಲಭ್ಯವಿದ್ದಾರೆ ಎಂಬುದರ ಸ್ಪಷ್ಟ ಮಾಹಿತಿ ಅಗತ್ಯವಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

PUC ವಿದ್ಯಾರ್ಥಿನಿಯರ ಮಿಸ್ಸಿಂಗ್ ಕೇಸ್: ಆಧಾರ್ ಹಿಡಿದು ಹೋದ ಬಳಿಕ ಸುಳಿವು ಇಲ್ಲ, CIDಗೆ ವರ್ಗಾವಣೆ

0

ಬೆಂಗಳೂರು: ನಗರದ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಜನವರಿಯಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿನಿಯರ ಪ್ರಕರಣವನ್ನು ರಾಜ್ಯ ಸರ್ಕಾರ ಅಪರಾಧ ತನಿಖಾ ಇಲಾಖೆ (ಸಿಐಡಿ)ಗೆ ವರ್ಗಾವಣೆ ಮಾಡಿದೆ. ಘಟನೆ ನಡೆದು ಎಂಟು ತಿಂಗಳು ಕಳೆದರೂ ವಿದ್ಯಾರ್ಥಿನಿಯರ ಬಗ್ಗೆ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತನಿಷ್ಕಾ ಹಾಗೂ ಆಕೆಯ ಜೂನಿಯರ್ ತೇಜಸ್ವಿನಿ ಜನವರಿ 31ರಂದು ಮನೆಯಿಂದ ಹೊರಟ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದರು. ಅವರು ಮನೆಗೆ ವಾಪಸ್ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ಪೋಷಕರು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನಿಖೆಯಲ್ಲಿ ವಿದ್ಯಾರ್ಥಿನಿಯರು ಮನೆ ಬಿಟ್ಟು ಹೋಗುವಾಗ ತಮ್ಮ ಆಧಾರ್ ಕಾರ್ಡ್‌ಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಿದ್ದರೆಂಬುದು ಬೆಳಕಿಗೆ ಬಂದಿತ್ತು. ಆದರೆ, ಕಳೆದ ಎಂಟು ತಿಂಗಳ ಅವಧಿಯಲ್ಲಿ ಅವರು ಯಾವುದೇ ಮೊಬೈಲ್ ಫೋನ್ ಅಥವಾ ಎಟಿಎಂ ಕಾರ್ಡ್ ಬಳಸಿಲ್ಲ ಎಂಬುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಜೊತೆಗೆ, ಕುಟುಂಬ ಸದಸ್ಯರು ಅಥವಾ ಸ್ನೇಹಿತರನ್ನು ಸಹ ಸಂಪರ್ಕಿಸಿಲ್ಲ.

ಪ್ರಕರಣ ದಾಖಲಾದ ತಕ್ಷಣ ಪೊಲೀಸರು ತನಿಖೆ ಆರಂಭಿಸಿ, ಆರಂಭಿಕ ಹಂತದಲ್ಲಿ ವಿದ್ಯಾರ್ಥಿನಿಯರು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಸುಳಿವು ಪತ್ತೆಹಚ್ಚಿದ್ದರು. ಬಳಿಕ ಮುಂಬೈ, ಚೆನ್ನೈ, ಕೊಯಮತ್ತೂರು, ದೆಹಲಿ, ಕಾಶಿ, ಕೇರಳ, ಚಾಮರಾಜನಗರ ಮತ್ತು ಮೈಸೂರು ಸೇರಿದಂತೆ ದೇಶದ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಹುಡುಕಾಟ ನಡೆಸಲಾಗಿತ್ತು. ಆದರೂ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಲಿಲ್ಲ.

ಸ್ಥಳೀಯ ಪೊಲೀಸರ ತನಿಖೆಯಿಂದ ಅಸಮಾಧಾನಗೊಂಡ ಪೋಷಕರು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ನಂತರ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸಿದ್ದರು. ಇದೀಗ ಸರ್ಕಾರ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿದ್ದು, ವಿದ್ಯಾರಣ್ಯಪುರ ಪೊಲೀಸರು ಸಂಬಂಧಿತ ಎಲ್ಲಾ ದಾಖಲೆಗಳು ಮತ್ತು ಪ್ರಮುಖ ಮಾಹಿತಿಯನ್ನು ಸಿಐಡಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಪ್ರಕರಣದ ತನಿಖೆಯನ್ನು ಸಿಐಡಿಯ ವಿಶೇಷ ತಂಡ ಕೈಗೆತ್ತಿಕೊಂಡಿದ್ದು, ನಾಪತ್ತೆಯಾದ ವಿದ್ಯಾರ್ಥಿನಿಯರ ಪತ್ತೆಗೆ ಹೊಸ ದಿಕ್ಕಿನಲ್ಲಿ ತನಿಖೆ ಆರಂಭಿಸಿದೆ.

ಗದಗ| ವಾಕಿಂಗ್ ಮಾಡುತ್ತಿದ್ದ ಮೂವರ ಮೇಲೆ ಹರಿದ ಕಾರು! ಶಿಕ್ಷಕ ಸೇರಿ ಇಬ್ಬರು ಸಾವು, ಮತ್ತೋರ್ವ ಗಂಭೀರ

0

ಗದಗ: ವಾಕಿಂಗ್ ಮಾಡುತ್ತಿದ್ದ ಮೂವರ ಮೇಲೆ ಕಾರೊಂದು ಹರಿದ ಪರಿಣಾಮ ಶಿಕ್ಷಕ ಸೇರಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.

ಮೂಲತಃ ಮಾಡಳ್ಳಿ ಗ್ರಾಮದ ಅಶೋಕ ಸರವಿ(52) ಹಾಗೂ ಆಟೋ ಚಾಲಕ ಶಿವಾನಂದ ಹುಲಕೋಟಿ(50) ಮೃತರು. ಘಟನೆಯಲ್ಲಿ ಮತ್ತೋರ್ವ ಶಿಕ್ಷಕ ಎಮ್.ಎಸ್ ಚಾಕಲಬ್ಬಿ ಗಾಯಗೊಂಡಿದ್ದಾರೆ. ಮೃತರಲ್ಲಿ ಅಶೋಕ್ ಸರವಿ ಅಕ್ಕಿಗುಂದ ತಾಂಡಾದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಹುಬ್ಬಳ್ಳಿ ರಸ್ತೆಯಲ್ಲಿರುವ ಚೆನ್ನಮ್ಮ ಕಾಲೇಜ್ ಸಮೀಪ ಈ ಘಟನೆ ಸಂಭವಿಸಿದೆ. ಮುಂಜಾನೆ ಎಂದಿನಂತೆ ವಾಕಿಂಗ್‌ಗೆ ತೆರಳಿದ್ದ ಮೂವರಿಗೆ ಲಕ್ಷ್ಮೇಶ್ವರದಿಂದ ಹುಬ್ಬಳ್ಳಿ ಕಡೆಗೆ ಸಾಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಮತ್ತೋರ್ವ ಗಾಯಗೊಂಡಿದ್ದಾರೆ ಅವರನ್ನು ತಕ್ಷಣ ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಲಕ್ಷ್ಮೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

error: Content is protected !!