ಗದಗ: ಜಿಲ್ಲೆಯ ಪ್ರಸಿದ್ಧ ಶ್ರೀ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಸಂಭ್ರಮದ ನಡುವೆ ಭೀಕರ ಅಪಘಾತ ಸಂಭವಿಸಿದೆ.
ಜಾತ್ರೆಯ ಅತಿ ದೊಡ್ಡ ಆಕರ್ಷಣೆಯಾಗಿದ್ದ ‘ಡ್ಯಾನ್ಸಿಂಗ್ ಫ್ಲೋರ್’ ಮನರಂಜನಾ ಯಂತ್ರವು ಚಾಲನೆಯಲ್ಲಿರುವಾಗಲೇ ತಾಂತ್ರಿಕ ದೋಷದಿಂದ ಮುರಿದು ಬಿದ್ದಿದ್ದು, ಕನಿಷ್ಠ 21 ಜನರು ಗಾಯಗೊಂಡಿದ್ದಾರೆ.
ಭಾನುವಾರ ರಾತ್ರಿ ಸುಮಾರು 8:30ರ ಸುಮಾರಿಗೆ ಈ ಘಟನೆ ನಡೆದಿದೆ. ಯಂತ್ರವು ವೇಗವಾಗಿ ತಿರುಗುತ್ತಿದ್ದಾಗ ಅದರ ಕಬ್ಬಿಣದ ಸಲಾಕೆಗಳು ಹಾಗೂ ಪಾರ್ಶ್ವದ ಭಾಗಗಳು ಇದ್ದಕ್ಕಿದ್ದಂತೆ ಮುರಿದಿವೆ. ಪರಿಣಾಮವಾಗಿ ಯಂತ್ರದಲ್ಲಿದ್ದವರು ಒಬ್ಬರ ಮೇಲೊಬ್ಬರು ಬಿದ್ದಿದ್ದು, ತೀವ್ರ ಸ್ವರೂಪದ ಪೆಟ್ಟು ಬಿದ್ದಿದೆ. ಗಾಯಾಳುಗಳಲ್ಲಿ 6 ವರ್ಷದ ಮಗು ಸೇರಿ ಮಹಿಳೆಯರು ಮತ್ತು ವಯಸ್ಕರು ಇದ್ದಾರೆ. ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಲ್ಲಿ ಜಹೀರ ಅಹ್ಮದ್ ತಂದೆ ನಜೀರ ಅಹ್ಮದ್ ಖಾಜಿ (42 ವರ್ಷ), ಕಲಂದರ ತಂದೆ ಜಹೀರ ಅಹ್ಮದ್ ಖಾಜಿ (15 ವರ್ಷ), ಶಿಫಾ ತಂದೆ ಜಹೀರ ಅಹ್ಮದ್ ಖಾಜಿ (16 ವರ್ಷ), ಸಮೀನಾ ಕೋಂ. ಮೆಹಬೂಬ್ ಭಾಷಾ ಗಂಗಾವತಿ (18 ವರ್ಷ), ಸನಾ ತಂದೆ ಮೆಹಬೂಬ್ ಭಾಷಾ ಖಾಜಿ (15 ವರ್ಷ), ಸಗುಪ್ತಾ ತಂದೆ ಸಾದಿಕ್ ಭಾಷಾ ಖಾಜಿ (14 ವರ್ಷ), ಜ್ಯೋತಿ ತಂದೆ ರಾಜಪ್ಪ ಗಬ್ಬೂರ (18 ವರ್ಷ), ನಾಜಿಯಾ ಕೋಂ. ಸುಲೇಮಾನ್ ತೋಟಿಗಾರ (20 ವರ್ಷ), ಕಿರಣ ತಂದೆ ಉಮೇಶ ಹುಲ್ಲೂರ (25 ವರ್ಷ), ದೀಪಕ ತಂದೆ ಅನುರಾಜ ಹುಬ್ಬಳ್ಳಿ (29 ವರ್ಷ), ರಾಜೇಸಾಬ ತಂದೆ ಇಮಾಮಸಾಬ ಅಣ್ಣಿಗೇರಿ (23 ವರ್ಷ), ಸುಮನ್ ಕೋಂ. ಮಂಜು ನವಲಗುಂದ (28 ವರ್ಷ), ವಿಶಾಲ ತಂದೆ ಮಂಜು ನವಲಗುಂದ (06 ವರ್ಷ), ಸಲ್ಮಾ ತಂದೆ ಅಬಾದವುಲ್ಲಾ ಹಂದೂರ (17 ವರ್ಷ), ಖುಷಿ ತಂದೆ ಗಿರೀಶ ದಲಬಂಜನ (14 ವರ್ಷ), ಕಿರಣ ತಂದೆ ರಮೇಶ ಕಬಾಡಿ (21 ವರ್ಷ), ಮಾಹೀನ್ ತಂದೆ ಶಬ್ಬೀರ ಕಂದಗಲ್ (10 ವರ್ಷ), ರುಬಿನಾ ಕೋಂ. ಶಬ್ಬೀರ ಅಹ್ಮದ ಕಂದಗಲ್ (36 ವರ್ಷ), ಮುಸ್ತಾಕ ತಂದೆ ಬಾಬು ಸಾಬ ಹಳೆಮನಿ (25 ವರ್ಷ), ಪ್ರದೀಪಕುಮಾರ ತಂದೆ ಮಂಜುನಾಥ ಕಮ್ಮಾರ (25 ವರ್ಷ), ಸತೀಶ ಗಬ್ಬೂರ (22 ವರ್ಷ) ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಗದಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಾತ್ರಾ ಸಮಿತಿ ಅಧ್ಯಕ್ಷರು, ಮ್ಯಾನೇಜರ್ ಹಾಗೂ ಡ್ಯಾನ್ಸಿಂಗ್ ಫ್ಲೋರ್ ಮಾಲೀಕರು ಸೇರಿದಂತೆ ಏಳು ಜನ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.
ಪರಶುರಾಮ ಸಮಗಾರ, ವಿಶ್ವನಾಥ ದೊಡ್ಡಮನಿ, ನೂರಅಹ್ಮದ ಧಾರವಾಡ, ನಾರಾಯಣ ದೊಡ್ಡಮನಿ, ಮಲ್ಲು ಬಾದನ, ವಿನಾಯಕ ಮಾನ್ವಿ (ಜಾತ್ರಾ ಕಮಿಟಿ ಅಧ್ಯಕ್ಷ), ಎಮ್.ಎಸ್. ಅಂಗಡಿ (ತೋಂಟದಾರ್ಯ ಮಠದ ಮ್ಯಾನೇಜರ್) ಹಾಗೂ ಇತರರು ವಿರುದ್ಧ ಪ್ರಕರಣ ದಾಖಲಾಗಿದೆ.

ಯಂತ್ರೋಪಕರಣಗಳ ನಿರ್ವಹಣೆಯಲ್ಲಿ ಬೇಜವಾಬ್ದಾರಿತನ ತೋರಿದ ಹಿನ್ನೆಲೆಯಲ್ಲಿ ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023 ಅಡಿಯಲ್ಲಿ ಕಲಂ 289, 125(A), 125(B) ಹಾಗೂ 292 ರಡಿ ಮೊಕದ್ದಮೆ ಹೂಡಲಾಗಿದೆ. ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡಿದ ಆಯೋಜಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆಯ ಮುಖಂಡ ರಾಜು ಖಾನಪ್ಪನವರ ಹಾಗೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ತನಿಖೆಯನ್ನು ಪೊಲೀಸ್ ಉಪನಿರೀಕ್ಷಕಿ ಆರ್.ಆರ್. ಮುಂಡೆವಾಡಗಿ ಅವರು ಕೈಗೊಂಡಿದ್ದಾರೆ.