Home Blog

ಚಿತ್ರದುರ್ಗದಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಣೆ ಲಾರಿ‌ ಪೊಲೀಸರ ವಶಕ್ಕೆ! ಚಾಲಕ ಅರೆಸ್ಟ್

ಚಿತ್ರದುರ್ಗ: ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಉಪಾಧ್ಯ ಹೋಟೆಲ್ ಬಳಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ಬಡಾವಣೆ ಠಾಣಾ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.

ಶಿವಮೊಗ್ಗದಿಂದ ಚಿತ್ರದುರ್ಗ ಮೂಲಕ ತುಮಕೂರು ಕಡೆಗೆ ಹೊರಟಿದ್ದ ಲಾರಿಯನ್ನು ಸ್ಥಳೀಯರು ಅನುಮಾನದ ಆಧಾರದ ಮೇಲೆ ತಡೆದಿದ್ದಾರೆ. ಉಪಾಧ್ಯ ಹೋಟೆಲ್ ಬಳಿ ಲಾರಿಯನ್ನು ನಿಲ್ಲಿಸಲು ಯತ್ನಿಸುವ ವೇಳೆ ಚಾಲಕ ನಿಯಂತ್ರಣ ಕಳೆದುಕೊಂಡು ಹೋಟೆಲ್ ಬೋರ್ಡ್‌ಗೆ ಡಿಕ್ಕಿ ಹೊಡೆದಿದ್ದಾನೆ.

ಈ ವೇಳೆ ಲಾರಿಯಿಂದ ಪಡಿತರ ಅಕ್ಕಿ ಚೀಲಗಳು ಕೆಳಗೆ ಬಿದ್ದಿದ್ದು, ಇದನ್ನು ಗಮನಿಸಿದ ಸ್ಥಳೀಯರು ಹಾಗೂ ಹೋಟೆಲ್ ಮಾಲೀಕರು ಲಾರಿಯನ್ನು ತಡೆಯಲು ಮುಂದಾಗಿದ್ದಾರೆ. ಘಟನೆ ಬಳಿಕ ಲಾರಿಯನ್ನು ತೆಗೆದುಕೊಂಡು ಹೋಗಲು ಚಾಲಕ ಪ್ರಯತ್ನಿಸಿದರೂ, ಸ್ಥಳೀಯ ನಿವಾಸಿಗಳು ಕಾರನ್ನು ಅಡ್ಡಗಟ್ಟಿ ಲಾರಿಯನ್ನು ತಡೆದಿದ್ದಾರೆ.

ತಕ್ಷಣವೇ ಚಿತ್ರದುರ್ಗದ ಬಡಾವಣೆ ಠಾಣಾ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಘಟನಾ ಸ್ಥಳಕ್ಕೆ ಬಂದ ಪೊಲೀಸರು ಲಾರಿಯನ್ನು ಸಂಪೂರ್ಣವಾಗಿ ವಶಕ್ಕೆ ಪಡೆದು ಚಾಲಕನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಶಾಲೆ ಬಿಸಿಯೂಟಕ್ಕೂ ಗ್ಯಾಸ್ ಕೊರತೆ: ಸೌದೆ ಒಲೆಯಲ್ಲೇ ಅಡುಗೆ ಮಾಡಿದ ಸಿಬ್ಬಂದಿ!

ಚಿಕ್ಕಮಗಳೂರು: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷದಿಂದ ಉಂಟಾದ ಗ್ಯಾಸ್ ಕೊರತೆಯ ಪರಿಣಾಮ ಶಾಲೆಗಳ ಬಿಸಿಯೂಟ ಯೋಜನೆ ಮೇಲೂ ಬೀರಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ಯಾಸ್ ಸಿಲಿಂಡರ್ ಸಿಗದೆ ಸಿಬ್ಬಂದಿ ಅಡುಗೆ ಮಾಡಲು ಪರದಾಡಿದ್ದಾರೆ.

ಸಿಲಿಂಡರ್ ಸರಬರಾಜಾಗದ ಹಿನ್ನೆಲೆ ಶಾಲೆಯ ಸಿಬ್ಬಂದಿ ಸೌದೆ ಬಳಸಿ ಬಯಲಲ್ಲೇ ಬಿಸಿಯೂಟ ಸಿದ್ಧಪಡಿಸಿದ್ದಾರೆ. ಕಳೆದ ಐದು ದಿನಗಳಿಂದ ಗ್ಯಾಸ್ ಇಲ್ಲದೆ ಸೌದೆ ಬಳಸಿ ಅಡುಗೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಶಾಲೆಯಲ್ಲಿ ಸುಮಾರು 60 ರಿಂದ 70 ವಿದ್ಯಾರ್ಥಿಗಳು ಇದ್ದು, ಗ್ಯಾಸ್ ಇಲ್ಲದೆ ಸೌದೆಯಲ್ಲಿ ಅಷ್ಟು ಮಕ್ಕಳಿಗೆ ಅಡುಗೆ ಮಾಡುವುದು ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.

ಜಿಲ್ಲಾಧಿಕಾರಿಗಳ ಸೂಚನೆಯಿದ್ದರೂ ಗ್ಯಾಸ್ ಏಜೆನ್ಸಿ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ನಡುವೆ ಪರೀಕ್ಷೆ ಸಮಯವಾಗಿರುವುದರಿಂದ ಶಿಕ್ಷಕರು ಮಕ್ಕಳಿಗೆ ಅಭ್ಯಾಸ ಮಾಡಿಸುತ್ತಿದ್ದು, ಅಡುಗೆ ಸಮಸ್ಯೆಯನ್ನು ಸಹ ಎದುರಿಸುವುದು ಕಷ್ಟಕರವಾಗಿದೆ ಎಂದು ತಿಳಿಸಿದ್ದಾರೆ. ತಕ್ಷಣ ಶಾಲೆಗೆ ಗ್ಯಾಸ್ ಸೌಲಭ್ಯ ಕಲ್ಪಿಸಬೇಕೆಂದು ಶಾಲಾ ಆಡಳಿತ ಮಂಡಳಿ ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.

ಉಡುಪಿಯಲ್ಲಿ LPG ಟ್ಯಾಂಕರ್ ಪಲ್ಟಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ಅಸ್ತವ್ಯಸ್ತ

0

ಉಡುಪಿ: ಮಧ್ಯಪ್ರಾಚ್ಯ ಯುದ್ಧದಿಂದ ಗ್ಯಾಸ್ ಅಭಾವದ ಪರಿಸ್ಥಿತಿ ನಿರ್ಮಾಣವಾಗಿರುವ ನಡುವೆಯೇ ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ಎಲ್‌ಪಿಜಿ ಗ್ಯಾಸ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಘಟನೆ ನಡೆದಿದೆ.

ಮಂಗಳೂರಿನಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಟ್ಯಾಂಕರ್ ಕಾಮಗಾರಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಗುಚಿ ಬಿದ್ದಿದೆ. ಇದರ ಪರಿಣಾಮ ಕೆಲಕಾಲ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.

ಘಟನೆಯ ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಟ್ಯಾಂಕರ್‌ನಲ್ಲಿ ಅನಿಲ ಸೋರಿಕೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಿರಂತರವಾಗಿ ನೀರು ಹಾಯಿಸಲಾಯಿತು.

ಮಂಗಳೂರಿನಿಂದ ಮತ್ತೊಂದು ಟ್ಯಾಂಕರ್ ತರಿಸಿ ಅನಿಲವನ್ನು ವರ್ಗಾಯಿಸುವ ಕಾರ್ಯ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ! ನ‌ಗರದಲ್ಲಿ ದರಗಳು ಹೀಗಿವೆ

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆ ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಏರಿಳಿತದ ಪರಿಣಾಮ ಚಿನ್ನ ಮತ್ತು ಬೆಳ್ಳಿ ದರದಲ್ಲೂ ಬದಲಾವಣೆ ಕಂಡುಬರುತ್ತಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಗುಡ್ ರಿಟರ್ನ್ಸ್ ವರದಿ ಮಾಡಿದೆ.

ಮಾರ್ಚ್ 16, 2026ರ ಸೋಮವಾರದಂದು 24 ಕ್ಯಾರೆಟ್ ಚಿನ್ನದ 10 ಗ್ರಾಂ ದರದಲ್ಲಿ 490 ರೂಪಾಯಿ ಇಳಿಕೆ ಕಂಡುಬಂದಿದ್ದು, ಬೆಲೆ 1,59,170 ರೂಪಾಯಿಗೆ ತಲುಪಿದೆ. ಇದೇ ವೇಳೆ 1 ಗ್ರಾಂ ಚಿನ್ನದ ಬೆಲೆ 49 ರೂಪಾಯಿ ಇಳಿಕೆ ಆಗಿ 15,917 ರೂಪಾಯಿಗೆ ದಾಖಲಾಗಿದೆ.

ಇನ್ನು 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ 45 ರೂಪಾಯಿ ಇಳಿಕೆ ಕಂಡು 14,590 ರೂಪಾಯಿಗೆ ತಲುಪಿದ್ದು, 10 ಗ್ರಾಂ ಚಿನ್ನದ ದರ 1,45,900 ರೂಪಾಯಿಗೆ ಇಳಿಕೆಯಾಗಿದೆ.

ಬೆಳ್ಳಿ ದರದಲ್ಲಿಯೂ ಗಮನಾರ್ಹ ಕುಸಿತ ಕಂಡುಬಂದಿದ್ದು, ಒಂದು ಕೆಜಿ ಬೆಳ್ಳಿ ಬೆಲೆ ಸುಮಾರು 5 ಸಾವಿರ ರೂಪಾಯಿ ಇಳಿಕೆ ಆಗಿ 2,70,000 ರೂಪಾಯಿಗೆ ತಲುಪಿದೆ.

ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಇರಾನ್-ಅಮೆರಿಕ ಸಂಘರ್ಷದ ನಡುವೆ ಡಾಲರ್ ಮೌಲ್ಯದ ಏರಿಳಿತದ ಪರಿಣಾಮ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಭಾರಿ ಚಲನೆ ಕಂಡುಬರುತ್ತಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

 

ತ್ರಿಬಲ್ ರೈಡಿಂಗ್, ನೋ ಹೆಲ್ಮೆಟ್: ‘ಹುಲಿ ಹುಲಿ’ ಅಂತಾ ವಿಡಿಯೋ ಮಾಡಿದ್ದ ರೀಲ್ಸ್ ಮಂಜುಗೆ ಖಾಕಿ ಕ್ಲಾಸ್!

ದೇವನಹಳ್ಳಿ: ದೊಡ್ಡಬಳ್ಳಾಪುರದಲ್ಲಿ ಹೆಲ್ಮೆಟ್ ಧರಿಸದೇ ತ್ರಿಬಲ್ ರೈಡ್ ಮಾಡಿಕೊಂಡು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡವರಿಗೆ ಪೊಲೀಸರೇ ಶಾಕ್ ನೀಡಿದ್ದಾರೆ.

ಬೈಕ್ ಮೇಲೆ ಮೂವರು ಸೇರಿ ‘ಹುಲಿ ಹುಲಿ’ ಹಾಡಿಗೆ ರೀಲ್ಸ್ ಮಾಡಿದ್ದ ಪ್ರಕರಣದಲ್ಲಿ ರೀಲ್ಸ್ ಮಂಜು, ಗಂಗಾರಂಗ ಮತ್ತು ಸವಿತಾ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಹೆಲ್ಮೆಟ್ ಧರಿಸದೇ ಸಂಚರಿಸಿದ್ದಲ್ಲದೇ, ಒಂದೇ ಬೈಕ್‌ನಲ್ಲಿ ಮೂವರು ಪ್ರಯಾಣಿಸಿ ಸಂಚಾರ ನಿಯಮ ಉಲ್ಲಂಘಿಸಿದ್ದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ರೀಲ್ಸ್ ಮಂಜುವನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು. ಬಳಿಕ ನಿಯಮ ಉಲ್ಲಂಘನೆ ಸಂಬಂಧ ಒಂದು ಸಾವಿರ ರೂಪಾಯಿ ದಂಡ ವಿಧಿಸಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಮುಂದಿನ ದಿನಗಳಲ್ಲಿ ಟ್ರಾಫಿಕ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾಮಾಜಿಕ ಜಾಲತಾಣಕ್ಕಾಗಿ ಜೀವಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ರೀಲ್ಸ್ ಮಾಡಬಾರದು ಎಂದು ಪೊಲೀಸರು ಸೂಚಿಸಿದ್ದಾರೆ.

ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

 

ಉಡುಪಿ: ಕಟಪಾಡಿಯಲ್ಲಿ ಎಲ್‌ಪಿಜಿ ಟ್ಯಾಂಕರ್ ಪಲ್ಟಿ; ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ!

ಉಡುಪಿ: ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ಎಲ್‌ಪಿಜಿ ಗ್ಯಾಸ್ ಸಾಗಿಸುತ್ತಿದ್ದ ಟ್ಯಾಂಕರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ.

ಕಾಮಗಾರಿ ನಡೆಯುತ್ತಿದ್ದ ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು, ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಕಾಪು ತಾಲೂಕಿನ ಕಟಪಾಡಿ ಭಾಗದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟ್ಯಾಂಕರ್ ಸಂಚರಿಸುತ್ತಿದ್ದಾಗ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದಿದೆ. ಗ್ಯಾಸ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

ಟ್ಯಾಂಕರ್‌ನಲ್ಲಿ ಅನಿಲ ಸೋರಿಕೆ ಆಗಿದೆಯೇ ಎಂಬುದನ್ನು ಅಧಿಕಾರಿಗಳು ನಿಖರವಾಗಿ ಪರಿಶೀಲಿಸಿದ್ದು, ಯಾವುದೇ ಅನಾಹುತ ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರು. ಘಟನೆ ನಡೆದ ತಕ್ಷಣ ಸುತ್ತಮುತ್ತಲಿನ ಪ್ರದೇಶದಲ್ಲಿ ಎಚ್ಚರಿಕೆ ವಹಿಸಲಾಗಿದ್ದು, ಜನರಲ್ಲಿ ಆತಂಕ ಮೂಡಿತ್ತು.

ಘಟನೆಯ ಪರಿಣಾಮ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಬಳಿಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಸಂಚಾರವನ್ನು ಹಂತ ಹಂತವಾಗಿ ಸಾಮಾನ್ಯಗೊಳಿಸಲಾಯಿತು. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಗ್ಯಾಸ್ ಅಭಾವ ಹೆಚ್ಚಳ: ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ! ದಂಧೆಕೋರರ ವಿರುದ್ದ ದಾಖಲಾಯ್ತು FIR

ಬೆಂಗಳೂರು: ಕರ್ನಾಟಕದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಕೊರತೆ ತೀವ್ರಗೊಂಡಿದ್ದು, ಅದರ ಪರಿಣಾಮವಾಗಿ ಬೆಂಗಳೂರಿನ ಹೋಟೆಲ್ ಮತ್ತು ಉಪಾಹಾರ ಮಂದಿರಗಳ ಕಾರ್ಯಾಚರಣೆಗೆ ದೊಡ್ಡ ಹೊಡೆತ ಬಿದ್ದಿದೆ.

ವಿಶೇಷವಾಗಿ ತೈಲ ಮತ್ತು ಅನಿಲ ಪೂರೈಕೆಯ ಅಡಚಣೆಯಿಂದ ಹಲವು ಹೋಟೆಲ್‌ಗಳು ತಮ್ಮ ಸೇವೆಗಳನ್ನು ಸೀಮಿತಗೊಳಿಸುವಂತಾಗಿದ್ದು, ಕೆಲವು ಕಡೆ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಪರಿಸ್ಥಿತಿ ಎದುರಾಗಿದೆ. ಬೆಂಗಳೂರಿನ ಹಲವೆಡೆ, ವಿಶೇಷವಾಗಿ ಬನಶಂಕರಿ ಮತ್ತು ಮಲ್ಲೇಶ್ವರಂ ಭಾಗಗಳ ಹೋಟೆಲ್‌ಗಳಲ್ಲಿ ಗ್ರಾಹಕರ ಸಂಖ್ಯೆ ಕೂಡ ಕುಸಿದಿದೆ.

ನಗರದ ಆಹಾರೋದ್ಯಮದ ಮೇಲೆ ಈ ಬಿಕ್ಕಟ್ಟು ಗಂಭೀರ ಪರಿಣಾಮ ಬೀರಿದ್ದು, ಹಲವು ವರ್ಷಗಳ ಇತಿಹಾಸವಿರುವ ಖ್ಯಾತ ಉಪಾಹಾರ ಮಂದಿರಗಳೂ ಸಂಕಷ್ಟಕ್ಕೆ ಸಿಲುಕಿವೆ. ಎಲ್‌ಪಿಜಿ ಅಭಾವದಿಂದಾಗಿ ಕೆಲವು ಹೋಟೆಲ್‌ಗಳು ಪದಾರ್ಥಗಳ ಪಟ್ಟಿಯನ್ನು ಕಡಿಮೆ ಮಾಡಬೇಕಾದ ಪರಿಸ್ಥಿತಿಗೆ ತಳ್ಳಲ್ಪಟ್ಟಿವೆ. ಇನ್ನು ಕೆಲವೆಡೆ ಅಡುಗೆಗೆ ಬೇಕಾದ ಗ್ಯಾಸ್ ದೊರೆಯದೆ ಹೋಟೆಲ್‌ಗಳ ಕಾರ್ಯಾಚರಣೆಯೇ ಅಸ್ತವ್ಯಸ್ತವಾಗಿದೆ ಎಂದು ವರದಿಯಾಗಿದೆ. ಬೆಂಗಳೂರಿನ ಹೋಟೆಲ್‌ಗಳ ವ್ಯವಹಾರದಲ್ಲಿ ಸುಮಾರು 30 ಶೇಕಡಾ ಇಳಿಕೆ ಕಂಡುಬಂದಿದೆ ಎಂಬ ವರದಿಗಳು ತಿಳಿಸಿವೆ.

ಈ ಬಿಕ್ಕಟ್ಟಿನ ನಡುವೆ ಕಾಳಸಂತೆಯಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಅಕ್ರಮ ಮಾರಾಟವೂ ಹೆಚ್ಚಾಗಿದೆ. ಸಾಮಾನ್ಯವಾಗಿ ಸುಮಾರು 1,800 ರೂಪಾಯಿಗೆ ದೊರೆಯುವ ವಾಣಿಜ್ಯ ಸಿಲಿಂಡರ್‌ಗಳು 4,000ರಿಂದ 5,000 ರೂಪಾಯಿವರೆಗೆ ಮಾರಾಟವಾಗುತ್ತಿವೆ ಎಂಬ ಆರೋಪಗಳು ಕೇಳಿಬಂದಿವೆ. ಇಂತಹ ಅಕ್ರಮ ಸಂಗ್ರಹಣೆ ಮತ್ತು ಮಾರಾಟದ ವಿರುದ್ಧ ಪೀಣ್ಯ, ಚಿಕ್ಕಜಾಲ ಹಾಗೂ ಕೆಂಗೇರಿ ಭಾಗಗಳಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಹಲವು ಪ್ರಕರಣಗಳು ದಾಖಲಾಗಿವೆ. ತಪಾಸಣೆಯಲ್ಲಿ ಅನಧಿಕೃತ ಸಂಗ್ರಹಣೆ, ಅಕ್ರಮ ಮರುಪೂರೈಕೆ ಮತ್ತು ವಾಣಿಜ್ಯ ಬಳಕೆ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಮಟ್ಟದಲ್ಲೂ ಸಮಸ್ಯೆ ಚರ್ಚೆಗೆ ಬಂದಿದ್ದು, ವಾಣಿಜ್ಯ ಎಲ್‌ಪಿಜಿ ಪೂರೈಕೆ ಇನ್ನೂ 7ರಿಂದ 10 ದಿನಗಳಲ್ಲಿ ಹಂತ ಹಂತವಾಗಿ ಸಾಮಾನ್ಯ ಸ್ಥಿತಿಗೆ ಬರಬಹುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ. ಈ ಅವಧಿಯಲ್ಲಿ ಆಸ್ಪತ್ರೆಗಳು, ವಸತಿ ನಿಲಯಗಳು, ಶಾಲೆಗಳು ಮುಂತಾದ ಅಗತ್ಯ ಸೇವೆಗಳಿಗೆ ಆದ್ಯತೆಯ ಆಧಾರದ ಮೇಲೆ ಪೂರೈಕೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಹೋಟೆಲ್‌ಗಳು ಹಾಗೂ ಸಮಾರಂಭ ಭವನಗಳಿಗೆ ಮಾತ್ರ ತಾತ್ಕಾಲಿಕ ಸಂಕಷ್ಟ ಎದುರಾಗಲಿದೆ ಎಂಬುದು ಸರ್ಕಾರದ ಹೇಳಿಕೆ.

ಇದೇ ವೇಳೆ ಮುಖ್ಯಮಂತ್ರಿಯೂ ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿರುವುದು ವರದಿಯಾಗಿದೆ. ರಾಜ್ಯದ ಜನರು, ವಿಶೇಷವಾಗಿ ಹೋಟೆಲ್ ಆಹಾರಕ್ಕೆ ಅವಲಂಬಿತರಾಗಿರುವವರು, ಈ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ.

ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಕಾಡುತ್ತಿದೆಯೇ? ಹಾಗಾದ್ರೆ ಪರಿಹಾರ ಕ್ರಮಗಳು ಹೀಗಿವೆ

0

ಇತ್ತೀಚಿನ ದಿನಗಳಲ್ಲಿ ಬೊಜ್ಜು ಸಮಸ್ಯೆ ಸಾಮಾನ್ಯವಾಗುತ್ತಿದ್ದು, ಮಕ್ಕಳು ಹಾಗೂ ವಯಸ್ಕರು ಇಬ್ಬರೂ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಹಾರ ಪದ್ಧತಿಯಲ್ಲಿ ನಿಯಂತ್ರಣ ಇಲ್ಲದಿರುವುದು ಮತ್ತು ಜೀವನಶೈಲಿಯ ಅಸಮತೋಲನವೇ ಇದರ ಪ್ರಮುಖ ಕಾರಣ ಎಂದು ತಜ್ಞರು ಹೇಳುತ್ತಾರೆ.

ವೈದ್ಯಕೀಯ ಮಾನದಂಡದ ಪ್ರಕಾರ ದೇಹದ ಬಿಎಂಐ (BMI) 30 ಅಥವಾ ಅದಕ್ಕಿಂತ ಹೆಚ್ಚಿದ್ದರೆ ಅದನ್ನು ಸ್ಥೂಲಕಾಯ ಎಂದು ಪರಿಗಣಿಸಲಾಗುತ್ತದೆ. ಅಧಿಕ ತೂಕವು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಇತ್ತೀಚಿನ ದಿನಗಳಲ್ಲಿ ಅಸಮತೋಲನದ ಆಹಾರ ಮತ್ತು ದೈಹಿಕ ಚಟುವಟಿಕೆಗಳ ಕೊರತೆಯಿಂದ ಅನೇಕ ಮಕ್ಕಳು ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದಾರೆ.

ಮಕ್ಕಳಲ್ಲಿ ಅಧಿಕ ತೂಕ ಹೆಚ್ಚಾಗಲು ದೈಹಿಕ ಚಟುವಟಿಕೆಯ ಕೊರತೆಯೂ ಪ್ರಮುಖ ಕಾರಣವಾಗಿದೆ. ಆದ್ದರಿಂದ ಮಕ್ಕಳನ್ನು ಪ್ರತಿದಿನ ಹೊರಗೆ ಹೋಗಿ ಆಟವಾಡುವಂತೆ ಪ್ರೋತ್ಸಾಹಿಸುವುದು ಅಗತ್ಯವೆಂದು ತಜ್ಞರು ಸಲಹೆ ನೀಡುತ್ತಾರೆ.

ಮಕ್ಕಳಿಗೆ ಆರೋಗ್ಯಕರ ಆಹಾರಗಳ ಬಗ್ಗೆ ಅರಿವು ಕಡಿಮೆ ಇರುವುದರಿಂದ ಜಂಕ್ ಫುಡ್‌ಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಇದರ ಪರಿಣಾಮವಾಗಿ ಕ್ಯಾಲೋರಿ ಸೇವನೆ ಹೆಚ್ಚಾಗಿ ತೂಕವೂ ವೇಗವಾಗಿ ಹೆಚ್ಚಾಗುತ್ತದೆ. ಹೀಗಾಗಿ ಪೋಷಕರು ಮಕ್ಕಳ ಆಹಾರದಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ನೀಡುವತ್ತ ಗಮನಹರಿಸಬೇಕು.

ಇದೇ ವೇಳೆ ಸ್ಮಾರ್ಟ್‌ಫೋನ್, ಟಿವಿ, ಲ್ಯಾಪ್‌ಟಾಪ್ ಮುಂತಾದ ಗ್ಯಾಜೆಟ್‌ಗಳ ಬಳಕೆ ಹೆಚ್ಚಾಗಿರುವುದರಿಂದ ಅನೇಕ ಮಕ್ಕಳು ಹೊರಗೆ ಹೋಗಿ ಆಟವಾಡುವುದನ್ನು ಕಡಿಮೆ ಮಾಡಿದ್ದಾರೆ. ಗ್ಯಾಜೆಟ್‌ಗಳ ಮುಂದೆ ಹೆಚ್ಚು ಸಮಯ ಕಳೆಯುವುದು ಮಕ್ಕಳ ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ.

ಮಕ್ಕಳು ಸಮರ್ಪಕವಾಗಿ ನಿದ್ರೆ ಮಾಡಿದರೆ ದೇಹ ಚುರುಕಾಗಿರುತ್ತದೆ. ಉತ್ತಮ ಗುಣಮಟ್ಟದ ನಿದ್ರೆ ಮಕ್ಕಳಲ್ಲಿ ಟೈಪ್-2 ಮಧುಮೇಹ ಮತ್ತು ಬೊಜ್ಜಿನ ಅಪಾಯವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಬೆಂಗಳೂರು ಕರಗಕ್ಕೆ ಕೌಂಟ್‌ಡೌನ್; ಮೈಸೂರು ದಸರಾ ಮಾದರಿಯಲ್ಲಿ ಜಗಮಗಿಸಲು ಸಿದ್ಧತೆ!

ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ಇನ್ನೂ ಕೇವಲ ಒಂಬತ್ತು ದಿನಗಳು ಬಾಕಿಯಿರುವ ಹಿನ್ನೆಲೆ, ಈ ಬಾರಿಯ ಉತ್ಸವವನ್ನು ವಿಶೇಷವಾಗಿ ಆಚರಿಸಲು ಭರ್ಜರಿ ಸಿದ್ಧತೆಗಳು ಆರಂಭವಾಗಿವೆ.

ಧರ್ಮರಾಯಸ್ವಾಮಿ ದೇವಾಲಯದಲ್ಲಿ ನಡೆಯುವ ಕರಗ ಶಕ್ತ್ಯೋತ್ಸವವನ್ನು ಈ ಬಾರಿ ಹೆಚ್ಚು ಅದ್ಧೂರಿ ಮತ್ತು ಆಕರ್ಷಕವಾಗಿ ರೂಪಿಸಲು ಸಂಬಂಧಿತ ಇಲಾಖೆ ಮುಂದಾಗಿದೆ.

ಈ ಬಾರಿ ಕರಗ ಉತ್ಸವ ಮೈಸೂರು ದಸರಾ ಮಾದರಿಯಲ್ಲಿ ಜಗಮಗಿಸುವ ಸಾಧ್ಯತೆ ಹೆಚ್ಚಾಗಿದೆ. ನಗರದ ಪ್ರಮುಖ ರಸ್ತೆಗಳನ್ನು ವೈಭವಮಯ ಲೈಟಿಂಗ್ ಮೂಲಕ ಅಲಂಕರಿಸುವ ಯೋಜನೆ ರೂಪಿಸಲಾಗಿದ್ದು, ಈ ಕಾರ್ಯಕ್ಕಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ಕರಗ ಸಾಗುವ ಮಾರ್ಗಗಳನ್ನೂ ಒಳಗೊಂಡಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಬೆಳಕು ಅಲಂಕಾರ ಮಾಡಲು ಯೋಜಿಸಲಾಗಿದೆ.

ಕರಗ ಸಂಭ್ರಮದ ನಿಮಿತ್ತ ಒಟ್ಟು 39 ಲಕ್ಷ ರೂಪಾಯಿ ವೆಚ್ಚದಲ್ಲಿ ಲೈಟಿಂಗ್ ಅಳವಡಿಸಲು ಟೆಂಡರ್ ಕರೆಯಲಾಗಿದೆ. ಮೊದಲ ಹಂತದಲ್ಲಿ 10.14 ಲಕ್ಷ ರೂಪಾಯಿ ವೆಚ್ಚದಲ್ಲಿ ಧರ್ಮರಾಯಸ್ವಾಮಿ ದೇವಾಲಯ, ಸಂಪಂಗಿ ಕೆರೆ ಪ್ರದೇಶ ಹಾಗೂ ಕರಗ ಸಾಗುವ ಪ್ರಮುಖ ಮಾರ್ಗಗಳಲ್ಲಿ ಬೆಳಕು ಅಲಂಕಾರ ಕೈಗೊಳ್ಳಲಾಗುತ್ತದೆ. ಎರಡನೇ ಹಂತದಲ್ಲಿ 28.92 ಲಕ್ಷ ರೂಪಾಯಿ ವೆಚ್ಚದಲ್ಲಿ ಜಿಬಿಎ ಪ್ರಧಾನ ಕಚೇರಿ, ನಗರದ ಪ್ರಮುಖ ವೃತ್ತಗಳು ಮತ್ತು ಆಯ್ದ ಪ್ರಮುಖ ರಸ್ತೆಗಳನ್ನು ಬೆಳಗಿಸಲು ಯೋಜಿಸಲಾಗಿದೆ.

ಉತ್ಸವಕ್ಕೆ ಮಾರ್ಚ್ 24ರಂದು ಧರ್ಮರಾಯಸ್ವಾಮಿ ದೇವಾಲಯದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಅಧಿಕೃತ ಚಾಲನೆ ಸಿಗಲಿದೆ. ಮಾರ್ಚ್ 30ರಂದು ಹಸಿ ಕರಗ ಕಾರ್ಯಕ್ರಮ ನಡೆಯಲಿದ್ದು, ಏಪ್ರಿಲ್ 1ರಂದು ಮುಖ್ಯ ಕರಗ ಶಕ್ತ್ಯೋತ್ಸವ ಜರುಗಲಿದೆ. ಇದಲ್ಲದೆ, ಭಕ್ತರಿಗೆ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತಾಗಿಯೂ ಚರ್ಚೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಕಳೆದ ವರ್ಷ ಸುಮಾರು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಕರಗ ಉತ್ಸವ ನಡೆದಿತ್ತು. ಆದರೆ ಈ ಬಾರಿ ಕೇವಲ ಲೈಟಿಂಗ್ ವ್ಯವಸ್ಥೆಗಾಗಿಯೇ 39 ಲಕ್ಷ ರೂಪಾಯಿ ಮೀಸಲಿಡಲಾಗಿರುವುದು, ಉತ್ಸವವನ್ನು ಈ ಬಾರಿ ಇನ್ನಷ್ಟು ವೈಭವದಿಂದ ನಡೆಸುವ ಉದ್ದೇಶವನ್ನು ತೋರಿಸುತ್ತದೆ. ಇದರಿಂದ ಬೆಂಗಳೂರಿನ ಹೃದಯಭಾಗ ಮತ್ತೆ ಮೈಸೂರು ದಸರಾ ಶೈಲಿಯಲ್ಲಿ ಬೆಳಕಿನಿಂದ ಕಂಗೊಳಿಸುವ ನಿರೀಕ್ಷೆ ಮೂಡಿದೆ.

 

IPL ಆರಂಭಕ್ಕೆ ದಿನಗಣನೆ: ಮಹತ್ವದ ಬದಲಾವಣೆ ತಂದ ಬಿಸಿಸಿಐ, ಒಂದು ತಂಡಕ್ಕೆ ಎಷ್ಟು ಪಂದ್ಯಗಳು?

0

ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೊದಲ ಹಂತದ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದ್ದು, ಅದರಂತೆ ಈ ಬಾರಿಯ ಟೂರ್ನಿ ಮಾರ್ಚ್ 28ರಿಂದ ಆರಂಭವಾಗಲಿದೆ.

ಉದ್ಘಾಟನಾ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.

ಆದರೆ ಮೊದಲ ಹಂತದ 20 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಿರುವ ಬಿಸಿಸಿಐ, ಟೂರ್ನಿಯ ಸಂಪೂರ್ಣ ಸ್ವರೂಪವನ್ನು ಇನ್ನೂ ಬಹಿರಂಗಪಡಿಸಿಲ್ಲ. ವಿಶೇಷವಾಗಿ ಈ ಬಾರಿಯ ಲೀಗ್ ಹಂತದಲ್ಲಿ ಎಷ್ಟು ಪಂದ್ಯಗಳು ನಡೆಯಲಿವೆ ಎಂಬ ಪ್ರಶ್ನೆಗೆ ಇನ್ನೂ ಅಧಿಕೃತ ಉತ್ತರ ಸಿಕ್ಕಿಲ್ಲ. ಇದರಿಂದ ಐಪಿಎಲ್‌ನ ಒಟ್ಟಾರೆ ಪಂದ್ಯಗಳ ಸಂಖ್ಯೆ ಮತ್ತು ಮಾದರಿ ಕುರಿತು ಕುತೂಹಲ ಹೆಚ್ಚಾಗಿದೆ.

ಐಪಿಎಲ್ ಮಾಧ್ಯಮ ಹಕ್ಕುಗಳ ಒಪ್ಪಂದದ ಪ್ರಕಾರ, ಸೀಸನ್ 18 ಮತ್ತು 19ರಲ್ಲಿ ಒಟ್ಟು 84 ಪಂದ್ಯಗಳನ್ನು ಆಯೋಜಿಸುವ ಯೋಜನೆ ಇತ್ತು. ಆದರೆ ಕಳೆದ ಸೀಸನ್‌ನಲ್ಲಿ ಆಟಗಾರರ ಲಭ್ಯತೆ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಂದ 84 ಪಂದ್ಯಗಳ ಮಾದರಿಯನ್ನು ಅನುಷ್ಠಾನಕ್ಕೆ ತರಲಾಗಿರಲಿಲ್ಲ. ಈ ಬಾರಿ ಮಾತ್ರ ಪ್ರಸಾರ ಹಕ್ಕು ಹೊಂದಿರುವ ಸಂಸ್ಥೆ 84 ಪಂದ್ಯಗಳ ಟೂರ್ನಿ ನಡೆಸುವಂತೆ ಒತ್ತಾಯಿಸುತ್ತಿದೆ ಎಂಬ ವರದಿಗಳು ಕೇಳಿಬರುತ್ತಿವೆ.

ಒಮ್ಮೆ 84 ಪಂದ್ಯಗಳ ಟೂರ್ನಿ ನಡೆಸಲು ನಿರ್ಧರಿಸಿದರೆ, ಐಪಿಎಲ್‌ನ ಈಗಿನ ಮಾದರಿಯಲ್ಲಿ ಕೆಲವು ಬದಲಾವಣೆಗಳು ಅನಿವಾರ್ಯವಾಗಲಿವೆ. ಅಂದರೆ ಟೂರ್ನಿಯನ್ನು ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಆಯೋಜಿಸುವ ಸಾಧ್ಯತೆ ಇದೆ. ಈ ಮಾದರಿಯಲ್ಲಿ ಲೀಗ್ ಹಂತದಲ್ಲೇ ಹೆಚ್ಚಿನ ಪಂದ್ಯಗಳು ನಡೆಯಲಿದ್ದು, ಪ್ರತಿಯೊಂದು ತಂಡಕ್ಕೂ ಹಿಂದಿನ ಸೀಸನ್‌ಗಿಂತ ಹೆಚ್ಚುವರಿ ಪಂದ್ಯಗಳು ಸಿಗಲಿವೆ.

ಕಳೆದ ಸೀಸನ್‌ನಲ್ಲಿ ಒಟ್ಟು 74 ಪಂದ್ಯಗಳು ನಡೆದಿದ್ದವು. ಆದರೆ 84 ಪಂದ್ಯಗಳ ಟೂರ್ನಿ ನಡೆದರೆ, ಲೀಗ್ ಹಂತದಲ್ಲೇ 80 ಪಂದ್ಯಗಳು ನಡೆಯಲಿವೆ. ಉಳಿದ ನಾಲ್ಕು ಪಂದ್ಯಗಳು ಪ್ಲೇಆಫ್ ಹಂತಕ್ಕೆ ಮೀಸಲಾಗುತ್ತವೆ. ಅಂದರೆ ಒಟ್ಟು 80+4 ಮಾದರಿಯಲ್ಲಿ ಟೂರ್ನಿ ಸಾಗುವ ಸಾಧ್ಯತೆ ಇದೆ.

ಈ ಮಾದರಿಯಲ್ಲಿ ಪ್ರತಿಯೊಂದು ತಂಡವೂ ಒಟ್ಟು 16 ಲೀಗ್ ಪಂದ್ಯಗಳನ್ನು ಆಡಬೇಕಾಗುತ್ತದೆ. ಇದು ಹಿಂದಿನ ಮಾದರಿಗಿಂತ ಹೆಚ್ಚಿನ ಪಂದ್ಯಗಳಾಗುತ್ತದೆ. 10 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ ಟೂರ್ನಿ ನಡೆಸಬಹುದೆಂಬ ಲೆಕ್ಕಾಚಾರವೂ ಕೇಳಿಬರುತ್ತಿದೆ.

ಒಂದು ಗುಂಪಿನಲ್ಲಿ ಐದು ತಂಡಗಳಿದ್ದರೆ, ಒಂದು ತಂಡ ತನ್ನದೇ ಗುಂಪಿನ ಉಳಿದ ನಾಲ್ಕು ತಂಡಗಳ ವಿರುದ್ಧ ತಲಾ ಎರಡು ಪಂದ್ಯಗಳನ್ನು ಆಡಬಹುದು. ಹೀಗಾಗಿ ಕೇವಲ ಗುಂಪಿನೊಳಗೆ ಎಂಟು ಪಂದ್ಯಗಳು ನೆರವೇರುತ್ತವೆ. ಬಳಿಕ ಇನ್ನೊಂದು ಗುಂಪಿನ ಐದು ತಂಡಗಳಲ್ಲಿ ಮೂರು ತಂಡಗಳ ವಿರುದ್ಧ ತಲಾ ಎರಡು ಪಂದ್ಯಗಳು ಮತ್ತು ಉಳಿದ ಎರಡು ತಂಡಗಳ ವಿರುದ್ಧ ತಲಾ ಒಂದು ಪಂದ್ಯ ಆಡಿಸುವ ಮೂಲಕ ಒಟ್ಟು 16 ಪಂದ್ಯಗಳನ್ನು ಪೂರೈಸಬಹುದು.

ಆದರೆ ಮೊದಲ ಹಂತದ ವೇಳಾಪಟ್ಟಿಯನ್ನು ಪ್ರಕಟಿಸುವಾಗ ಬಿಸಿಸಿಐ ಯಾವುದೇ ಗುಂಪು ವಿಂಗಡಣೆ ಪ್ರಕಟಿಸಿಲ್ಲ. ಇದರಿಂದಲೇ ಈ ಬಾರಿಯ ಟೂರ್ನಿ ನಿಖರವಾಗಿ ಯಾವ ಮಾದರಿಯಲ್ಲಿ ನಡೆಯಲಿದೆ, ಒಂದು ತಂಡ ಎಷ್ಟು ಲೀಗ್ ಪಂದ್ಯಗಳನ್ನು ಆಡಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ ಐಪಿಎಲ್‌ನ ಸಂಪೂರ್ಣ ಸ್ವರೂಪದ ಚಿತ್ರ ಸ್ಪಷ್ಟವಾಗಲು ದ್ವಿತೀಯ ಹಂತದ ವೇಳಾಪಟ್ಟಿ ಪ್ರಕಟವಾಗುವವರೆಗೆ ಕಾಯಲೇಬೇಕಾಗಿದೆ.

error: Content is protected !!