ಬೆಂಗಳೂರು: ಪೀಣ್ಯ ಎಲಿವೇಟೆಡ್ ಫ್ಲೈಓವರ್ನಲ್ಲಿ ಏಪ್ರಿಲ್ 13ರಿಂದ 5 ದಿನಗಳ ಕಾಲ ವಾಹನ ಸಂಚಾರ ನಿರ್ಬಂಧಿಸಲಾಗುತ್ತದೆ ಎಂದು ಮೊದಲು ಘೋಷಿಸಲಾಗಿದ್ದ ನಿರ್ಧಾರವನ್ನು ಇದೀಗ ಮುಂದೂಡಲಾಗಿದೆ.
ಹೀಗಾಗಿ ನಾಳೆಯಿಂದ ಫ್ಲೈಓವರ್ ಎಂದಿನಂತೆ ವಾಹನ ಸಂಚಾರಕ್ಕೆ ಮುಕ್ತವಾಗಿರಲಿದೆ ಎಂದು ಬೆಂಗಳೂರು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಕೇಬಲ್ಗಳ ದುರಸ್ತಿ ಕಾರ್ಯದ ನಂತರ ಫ್ಲೈಓವರ್ನ ಸುರಕ್ಷತಾ ಪರಿಶೀಲನೆಗಾಗಿ ಅಂತಿಮ ಲೋಡ್ ಟೆಸ್ಟಿಂಗ್ ನಡೆಸಲು ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಏಪ್ರಿಲ್ 13ರಿಂದ 17ರವರೆಗೆ ಸಂಚಾರ ಬಂದ್ ಮಾಡುವ ಯೋಜನೆ ರೂಪಿಸಲಾಗಿತ್ತು.
ಆದರೆ ಕಾರಣಾಂತರಗಳಿಂದ ಲೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಮುಂದೂಡಲಾಗಿದ್ದು, ವಾಹನ ಸಂಚಾರ ನಿರ್ಬಂಧಿಸುವ ಅಗತ್ಯ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಸಂಚಾರ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ನಡುವೆ ಸಂಚಾರ ಪೊಲೀಸರು NHAIಗೆ ಪತ್ರ ಬರೆದು, ಫ್ಲೈಓವರ್ ಬಂದ್ ಮಾಡಿದರೆ ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ ಮತ್ತು 8ನೇ ಮೈಲಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದರು. ಜೊತೆಗೆ ಶಾಲೆಗಳಿಗೆ ರಜೆ ಇರುವ ಹಿನ್ನೆಲೆ ವಾಹನ ದಟ್ಟಣೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇತ್ತು ಎಂದು ತಿಳಿಸಿದ್ದರು.
ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಸಂಚಾರ ಒತ್ತಡ ಹೆಚ್ಚಾಗುವ ಸಾಧ್ಯತೆ ಇರುವ ಕಾರಣವೂ ಈ ನಿರ್ಧಾರಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಒಟ್ಟಿನಲ್ಲಿ, ತಾತ್ಕಾಲಿಕ ಬಂದ್ ನಿರ್ಧಾರ ಹಿಂಪಡೆಯಲಾಗಿದ್ದು, ಪೀಣ್ಯ ಫ್ಲೈಓವರ್ನಲ್ಲಿ ವಾಹನ ಸಂಚಾರ ಮುಂದುವರಿಯಲಿದೆ.

