Home Blog

ವಿದ್ಯಾರ್ಥಿಗಳಿಗೆ ಅನ್ಯಾಯ ಆಗಬಾರದು: ನೀಟ್ ಮರುಪರೀಕ್ಷೆ ವಿಳಂಬಿಸದಂತೆ ಅಶ್ವತ್ಥ ನಾರಾಯಣ ಒತ್ತಾಯ

ಬೆಂಗಳೂರು: ನೀಟ್ ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆ ಮರುಪರೀಕ್ಷೆಯನ್ನು ತಕ್ಷಣವೇ ನಡೆಸಬೇಕು ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಒತ್ತಾಯಿಸಿದ್ದಾರೆ.

ನೀಟ್ ಪರೀಕ್ಷೆ ರದ್ದುಪಡಿಸಿ ಮರುಪರೀಕ್ಷೆ ಘೋಷಿಸಿರುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪರೀಕ್ಷೆಯ ಮರು ವೇಳಾಪಟ್ಟಿಯನ್ನು ಶೀಘ್ರ ಪ್ರಕಟಿಸಿ ವಿದ್ಯಾರ್ಥಿಗಳ ಸಮಯ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಕೆಲವು ಪ್ರದೇಶಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾದ ಬಗ್ಗೆ ವರದಿಗಳು ಬಂದಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಗಂಭೀರವಾಗಿದೆ ಎಂದು ಹೇಳಿದರು. ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆ ಹಾಗೂ ವಿಶ್ವಾಸಾರ್ಹತೆ ಕಾಪಾಡುವುದು ಅತ್ಯಂತ ಮುಖ್ಯ ಎಂದು ಅಭಿಪ್ರಾಯಪಟ್ಟರು.

ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮೆರಿಟ್ ಆಧಾರದಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸಿದ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು ಎಂದು ಅವರು ಹೇಳಿದರು.

ಇಂತಹ ಅವ್ಯವಹಾರಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಾರದು. ಪರೀಕ್ಷಾ ವ್ಯವಸ್ಥೆಯ ಮೇಲಿನ ವಿಶ್ವಾಸ ಉಳಿಸಬೇಕಾದರೆ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಎಂದು ತಿಳಿಸಿದರು.

ಎಲ್ಲರೂ ಸಹಕಾರ ನೀಡುವ ಮೂಲಕ ಮರುಪರೀಕ್ಷೆಯನ್ನು ಯಾವುದೇ ವಿಳಂಬವಿಲ್ಲದೆ ತಕ್ಷಣ ನಡೆಸುವಂತೆ ಅವರು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ ಮನವಿ ಮಾಡಿದರು.

ಕರ್ನಾಟಕ ಕರಾವಳಿಗೆ ಭಾರೀ ಮಳೆ ಅಲರ್ಟ್; ಮೇ 13ರಿಂದ ಗುಡುಗು-ಮಿಂಚಿನ ಅಬ್ಬರ ಸಾಧ್ಯತೆ

ಬೆಂಗಳೂರು: ರಾಜ್ಯದ ಕರಾವಳಿ ಭಾಗಗಳಲ್ಲಿ ಮುಂಗಾರು ಪೂರ್ವ ಚಟುವಟಿಕೆಗಳು ಚುರುಕುಗೊಂಡಿದ್ದು, ಮುಂದಿನ ಕೆಲ ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ 12ರ ಸುಮಾರಿಗೆ ತಮಿಳುನಾಡು ಕರಾವಳಿ ಸಮೀಪ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ನಿರ್ಮಾಣವಾಗುವ ಸಾಧ್ಯತೆ ಇದ್ದು, ಇದರ ಪರಿಣಾಮ ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗುವ ನಿರೀಕ್ಷೆಯಿದೆ.

ಹವಾಮಾನ ಇಲಾಖೆಯ ಪ್ರಕಾರ, ಮೇ 13ರಿಂದ ಕರ್ನಾಟಕದ ಕರಾವಳಿ ಭಾಗಗಳು, ಕೇರಳ ಹಾಗೂ ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗುವ ಲಕ್ಷಣಗಳಿವೆ. ವಿಶೇಷವಾಗಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಮುಂದಿನ ನಾಲ್ಕೈದು ದಿನಗಳ ಕಾಲ ಮಧ್ಯಮದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಮೇ 15ರಿಂದ ಹಿಂದೂ ಮಹಾಸಾಗರ ಹಾಗೂ ಅರಬ್ಬಿ ಸಮುದ್ರ ಭಾಗದಲ್ಲಿ ದಕ್ಷಿಣ ಪಶ್ಚಿಮ ಮುಂಗಾರು ಮಾರುತಗಳ ಚಲನೆ ಮತ್ತಷ್ಟು ಚುರುಕುಗೊಳ್ಳಲಿದ್ದು, ಕರಾವಳಿ ಪ್ರದೇಶಗಳಿಗೆ ಮುಂಗಾರು ಪೂರ್ವ ಮಳೆಯ ಪ್ರವೇಶ ಸಾಧ್ಯತೆ ಹೆಚ್ಚಿದೆ. ಈ ಬಾರಿ ಮುಂಗಾರು ಸಾಮಾನ್ಯ ಸಮಯಕ್ಕಿಂತ ಸ್ವಲ್ಪ ಮುಂಚಿತವಾಗಿ ಕರಾವಳಿ ಪ್ರವೇಶಿಸಬಹುದೆಂಬ ಅಂದಾಜು ವ್ಯಕ್ತವಾಗಿದೆ.

ಕೆಲವು ಪ್ರದೇಶಗಳಲ್ಲಿ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಹಾಗೂ ಸಮುದ್ರ ತೀರ ಪ್ರದೇಶದ ನಿವಾಸಿಗಳು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಇದೇ ವೇಳೆ, ಸೋಮವಾರ ಸಂಜೆ ಚಿಕ್ಕಮಗಳೂರು ಜಿಲ್ಲೆಯ ಕಳಸ-ಕೊಪ್ಪ ಸುತ್ತಮುತ್ತ ಹಾಗೂ ಹಾವೇರಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದಿದ್ದು, ಮುಂಗಾರು ಪೂರ್ವ ಚಟುವಟಿಕೆಗಳು ಮತ್ತಷ್ಟು ವೇಗ ಪಡೆಯುತ್ತಿರುವ ಸೂಚನೆ ನೀಡಿದೆ.

‘ಜನ ನಾಯಗನ್’ಗೆ ಕೋಟಿ ಕೋಟಿ ಸುರಿಯಲು ರೆಡಿ OTT ಕಂಪನಿಗಳು! ; ಸಿಎಂ ವಿಜಯ್ ಎಫೆಕ್ಟ್ ಶುರು

ಚೆನ್ನೈ: ದಳಪತಿ ವಿಜಯ್ ರಾಜಕೀಯದಲ್ಲಿ ಭರ್ಜರಿ ಯಶಸ್ಸು ಸಾಧಿಸಿ ಮುಖ್ಯಮಂತ್ರಿ ಆದ ಬಳಿಕ ಅವರ ನಟನೆಯ ‘ಜನ ನಾಯಗನ್’ ಸಿನಿಮಾದ ಮಾರುಕಟ್ಟೆ ಮೌಲ್ಯ ಏಕಾಏಕಿ ಗಗನಕ್ಕೇರಿದೆ. ಈಗ ಚಿತ್ರದ ಓಟಿಟಿ ಹಕ್ಕುಗಳಿಗಾಗಿ ಪ್ರಮುಖ ಡಿಜಿಟಲ್ ವೇದಿಕೆಗಳು ಭಾರೀ ಪೈಪೋಟಿ ನಡೆಸುತ್ತಿವೆ.

ಈ ಹಿಂದೆ ಅಮೇಜಾನ್ ಪ್ರೈಮ್ ವಿಡಿಯೋ ಸಂಸ್ಥೆ ಸುಮಾರು 120 ಕೋಟಿ ರೂ.ಗೆ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿತ್ತು. ಆದರೆ ಸೆನ್ಸಾರ್ ಸಮಸ್ಯೆ ಹಾಗೂ ಬಿಡುಗಡೆ ವಿಳಂಬದ ಕಾರಣ ಆ ಡೀಲ್ ಮುರಿದುಬಿದ್ದಿತ್ತು.

ಆದರೆ ವಿಜಯ್ ಸಿಎಂ ಆದ ಬಳಿಕ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಇದೀಗ ಹೊಸ ಓಟಿಟಿ ಕಂಪನಿಯೊಂದು ಚಿತ್ರದ ಹಕ್ಕುಗಳಿಗೆ ದಾಖಲೆ ಮಟ್ಟದ ಮೊತ್ತ ಆಫರ್ ಮಾಡಿದೆ ಎಂದು ವರದಿಯಾಗಿದೆ. ಈ ಡೀಲ್ 150 ಕೋಟಿ ರೂ. ಸಮೀಪ ಇರಬಹುದು ಎಂಬ ಚರ್ಚೆ ಜೋರಾಗಿದೆ.

‘ಜನ ನಾಯಗನ್’ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ವಿಜಯ್ ಅವರ ರಾಜಕೀಯ ಇಮೇಜ್ ಸಿನಿಮಾ ಮೇಲಿನ ಹೈಪ್ ಅನ್ನು ಮತ್ತಷ್ಟು ಹೆಚ್ಚಿಸಿದೆ. ಟ್ರೇಡ್ ವಲಯದ ಪ್ರಕಾರ, ಚಿತ್ರ ಬಿಡುಗಡೆಯಾಗುವ ಮುನ್ನವೇ ಹೊಸ ದಾಖಲೆಗಳು ನಿರ್ಮಾಣವಾಗುವ ಸಾಧ್ಯತೆ ಇದೆ.

ಇನ್‌ಸ್ಟಾಗ್ರಾಮ್‌ನಲ್ಲಿ ದೂರವಾದ ಮೌನಿ-ಸೂರಜ್ ; ಪ್ರತ್ಯೇಕ ವಾಸದ ವದಂತಿ ನಡುವೆ ಡಿವೋರ್ಸ್ ಚರ್ಚೆ

ಮುಂಬೈ: ಬಾಲಿವುಡ್ ನಟಿ ಮೌನಿ ರಾಯ್ ಮತ್ತು ಅವರ ಪತಿ ಸೂರಜ್ ನಂಬಿಯಾರ್ ನಡುವಿನ ಸಂಬಂಧದ ಬಗ್ಗೆ ಹೊಸ ಚರ್ಚೆಗಳು ಆರಂಭವಾಗಿವೆ. ಇಬ್ಬರೂ ಪರಸ್ಪರ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿಕೊಂಡಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದ ಈ ಜೋಡಿ, ತಮ್ಮ ವೈಯಕ್ತಿಕ ಜೀವನದ ಅನೇಕ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು. ಆದರೆ ಈಗ ಇಬ್ಬರೂ ಡಿಜಿಟಲ್ ದೂರ ಕಾಯ್ದುಕೊಂಡಿರುವುದು ಸಂಬಂಧದಲ್ಲಿ ಬಿಕ್ಕಟ್ಟು ಮೂಡಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ.

ಸೂರಜ್ ನಂಬಿಯಾರ್ ತಮ್ಮ ಖಾತೆಯಿಂದ ಮದುವೆಯ ಕೆಲವು ಫೋಟೋಗಳನ್ನು ತೆಗೆದುಹಾಕಿದ್ದಾರೆ ಎನ್ನಲಾಗಿದ್ದು, ಮೌನಿ ರಾಯ್ ಅವರ ಖಾತೆಯಲ್ಲಿ ಮಾತ್ರ ಹಳೆಯ ಚಿತ್ರಗಳು ಇನ್ನೂ ಲಭ್ಯವಿವೆ. ಮೂಲಗಳ ಪ್ರಕಾರ, ಇಬ್ಬರೂ ಸದ್ಯ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ಮಾತುಗಳು ಬಾಲಿವುಡ್ ವಲಯದಲ್ಲಿ ಹರಿದಾಡುತ್ತಿವೆ.

ದುಬೈನಲ್ಲಿ ಉದ್ಯಮಿ ಮತ್ತು ಹೂಡಿಕೆ ಬ್ಯಾಂಕರ್ ಆಗಿರುವ ಸೂರಜ್ ನಂಬಿಯಾರ್ ಮೂಲತಃ ಬೆಂಗಳೂರಿನ ಜೈನ್ ಕುಟುಂಬದವರು. 2022ರಲ್ಲಿ ಗೋವಾದಲ್ಲಿ ಮೌನಿ ರಾಯ್ ಜೊತೆ ಅದ್ದೂರಿಯಾಗಿ ವಿವಾಹವಾಗಿದ್ದರು. ಮಲಯಾಳಿ ಹಾಗೂ ಬಂಗಾಳಿ ಸಂಪ್ರದಾಯದಂತೆ ನಡೆದಿದ್ದ ಈ ಮದುವೆ ಆ ಸಮಯದಲ್ಲಿ ಭಾರೀ ಸುದ್ದಿಯಾಗಿತ್ತು.

ಆದರೆ ಈ ವಿಚಾರದಲ್ಲಿ ಇದುವರೆಗೆ ದಂಪತಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಸದ್ಯ ಮೌನಿ ರಾಯ್ ತಮ್ಮ ಮುಂದಿನ ಸಿನಿಮಾ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದ್ದಾರೆ.

ಅಭಿಮಾನಿಗಳು ಮಾತ್ರ ಈ ಬೆಳವಣಿಗೆಯಿಂದ ಬೇಸರಗೊಂಡಿದ್ದು, ಇದು ಸಣ್ಣ ಮುನಿಸೋ ಅಥವಾ ನಿಜವಾದ ವಿಚ್ಛೇದನದ ಸುಳಿಯೋ ಎಂಬ ಪ್ರಶ್ನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Google Down? ವಿಶ್ವದಾದ್ಯಂತ ಬಳಕೆದಾರರಿಗೆ ತೊಂದರೆ; ಸರ್ಚ್ ಸೇರಿ ಹಲವು ಸೇವೆಗಳು ಸ್ಥಗಿತ

ನವದೆಹಲಿ: ವಿಶ್ವದ ಅತಿದೊಡ್ಡ ಸರ್ಚ್ ಎಂಜಿನ್ ಗೂಗಲ್ ಮಂಗಳವಾರ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ತಾಂತ್ರಿಕ ಸಮಸ್ಯೆಯನ್ನು ಎದುರಿಸಿದೆ. ಇದರ ಪರಿಣಾಮವಾಗಿ ಗೂಗಲ್ ಸರ್ಚ್ ಸೇರಿದಂತೆ ಹಲವು ಸೇವೆಗಳು ಕೆಲಕಾಲ ಸ್ಥಗಿತಗೊಂಡು ಬಳಕೆದಾರರಿಗೆ ತೊಂದರೆ ಉಂಟಾಗಿದೆ.

ಬೆಳಿಗ್ಗೆ 9:48ರಿಂದ ಗೂಗಲ್ ಸೇವೆಗಳಲ್ಲಿ ವ್ಯತ್ಯಯ ಕಾಣಿಸಿಕೊಂಡಿದ್ದು, ದೇಶದ ವಿವಿಧ ಭಾಗಗಳ ಬಳಕೆದಾರರು ಗೂಗಲ್ ಸೇವೆಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ದೂರು ನೀಡಿದ್ದಾರೆ.

ಸೇವಾ ಸ್ಥಗಿತಗಳನ್ನು ಟ್ರ್ಯಾಕ್ ಮಾಡುವ ಡೌನ್‌ಡೆಕ್ಟರ್ ಮಾಹಿತಿಯ ಪ್ರಕಾರ, ಬೆಳಿಗ್ಗೆ 10:23ರ ವೇಳೆಗೆ 3,665ಕ್ಕೂ ಹೆಚ್ಚು ಬಳಕೆದಾರರು ಸಮಸ್ಯೆ ಕುರಿತು ವರದಿ ಮಾಡಿದ್ದಾರೆ. ಗೂಗಲ್ ಸರ್ಚ್ ಸೇರಿದಂತೆ ಹಲವು ಸೇವೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬಳಕೆದಾರರು ತಿಳಿಸಿದ್ದಾರೆ.

ಸದ್ಯ ಈ ತಾಂತ್ರಿಕ ದೋಷಕ್ಕೆ ನಿಖರ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಸಮಸ್ಯೆ ಪರಿಹರಿಸಲು ಗೂಗಲ್ ತಾಂತ್ರಿಕ ತಂಡ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ.

ಗೂಗಲ್ ಸೇವೆಗಳು ಡೌನ್ ಆಗಿದೆಯೇ ಎಂಬುದನ್ನು ತಿಳಿದುಕೊಳ್ಳಲು ಬಳಕೆದಾರರು ಡೌನ್‌ಡೆಕ್ಟರ್ ವೆಬ್‌ಸೈಟ್ ಅಥವಾ ಗೂಗಲ್‌ನ ಅಧಿಕೃತ ಸ್ಟೇಟಸ್ ಡ್ಯಾಶ್‌ಬೋರ್ಡ್ ಪರಿಶೀಲಿಸಬಹುದು. ಸಾಮಾಜಿಕ ಜಾಲತಾಣಗಳಲ್ಲೂ ಹಲವರು ಈ ಸಮಸ್ಯೆ ಕುರಿತು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಈ ನಡುವೆ, ಗೂಗಲ್ ಸೇವೆಗಳಲ್ಲಿ ವ್ಯತ್ಯಯ ಉಂಟಾದ ಸಂದರ್ಭದಲ್ಲಿ ಬಳಕೆದಾರರು ತಾತ್ಕಾಲಿಕವಾಗಿ ಬಿಂಗ್, ಡಕ್‌ಡಕ್‌ಗೋ ಅಥವಾ ಯಾಹೂ ಸರ್ಚ್ ಎಂಜಿನ್‌ಗಳನ್ನು ಬಳಸಬಹುದಾಗಿದೆ. ಸಾಮಾನ್ಯವಾಗಿ ಇಂತಹ ತಾಂತ್ರಿಕ ಸಮಸ್ಯೆಗಳು ಕೆಲವೇ ನಿಮಿಷಗಳಿಂದ ಕೆಲವು ಗಂಟೆಗಳೊಳಗೆ ಸರಿಯಾಗುವ ಸಾಧ್ಯತೆ ಇದೆ.

1 ಕೋಟಿ ಮೌಲ್ಯದ 2 ತಲೆ ಮಣ್ಣು ಮುಕ್ಕ ಹಾವು ಮಾರಾಟಕ್ಕೆ ಯತ್ನ: ಐವರ ಬಂಧನ

ಚಿಕ್ಕಮಗಳೂರು: ಅಪರೂಪದ ಮತ್ತು ಅಕ್ರಮ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂ. ಮೌಲ್ಯ ಹೊಂದಿದೆ ಎನ್ನಲಾಗುವ ಎರಡು ತಲೆ ಮಣ್ಣುಮುಕ್ಕ ಹಾವು (ರೆಡ್ ಸ್ಯಾಂಡ್ ಬೋವಾ) ಮಾರಾಟಕ್ಕೆ ಯತ್ನಿಸುತ್ತಿದ್ದ ಅಂತರರಾಜ್ಯ ಜಾಲವನ್ನು ಸಿಐಡಿ ಅರಣ್ಯ ಸಂಚಾರ ದಳದ ಪೊಲೀಸರು ಭೇದಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ವಾಹನಗಳು ಮತ್ತು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಚಿಕ್ಕಮಗಳೂರು ನಗರದ ವಾಜಪೇಯಿ ಲೇಔಟ್ ಪ್ರದೇಶದಲ್ಲಿ ಹಾವು ಮಾರಾಟದ ಡೀಲ್ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಆಂಧ್ರಪ್ರದೇಶ ಮೂಲದ ವಂಶಿಕೃಷ್ಣ, ಆರೀಫ್ ಬಾಷಾ ಹಾಗೂ ಕರ್ನಾಟಕದ ಶಿವಮೊಗ್ಗ ಮತ್ತು ತುಮಕೂರು ಮೂಲದ ಯತೀಶ್, ಷಫಿ ಮತ್ತು ಮತ್ತೋರ್ವ ಆರೀಫ್ ಬಾಷಾ ಬಂಧಿತರಾದರು.

ತನಿಖೆ ಪ್ರಕಾರ, ಚಿತ್ರದುರ್ಗ ಜಿಲ್ಲೆಯ ಚನ್ನಗಿರಿಯಲ್ಲಿ ಪತ್ತೆಯಾಗಿದ್ದ ಹಾವನ್ನು ಭಾರೀ ಮೊತ್ತಕ್ಕೆ ಮಾರಾಟ ಮಾಡಲು ಆರೋಪಿಗಳು ಚಿಕ್ಕಮಗಳೂರಿಗೆ ತಂದಿದ್ದರು. ಈ ಜಾಲದ ಪ್ರಮುಖ ಸಂಚಾಲಕ ಯತೀಶ್ ಆಗಿದ್ದು, ಆಂಧ್ರ ಮೂಲದ ಸಂಪರ್ಕಗಳ ಮೂಲಕ ವಿದೇಶಿ ಖರೀದಿದಾರರಿಗೆ ಹಾವು ಸಾಗಾಟ ಮಾಡುವ ಯತ್ನ ನಡೆದಿತ್ತು ಎಂದು ತಿಳಿದುಬಂದಿದೆ.

ಬಂಧಿತರಿಂದ ಒಂದು ಸ್ವಿಫ್ಟ್ ಕಾರು, ಒಂದು ವ್ಯಾಗ್ನರ್ ಕಾರು ಹಾಗೂ ಐದು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಮಾರುಕಟ್ಟೆಯಲ್ಲಿ ಈ ರೀತಿಯ ಹಾವುಗಳಿಗೆ ಮೂಢನಂಬಿಕೆ ಆಧಾರಿತ ಬೇಡಿಕೆ ಹೆಚ್ಚಿದ್ದು, ಮಾಟಮಂತ್ರ, ಅಮೂಲ್ಯ ಲೋಹಗಳ ಪತ್ತೆ ಹಾಗೂ ಕಳ್ಳಸಾಗಣೆಗೆ ಬಳಸಲಾಗುತ್ತದೆ ಎಂಬ ವದಂತಿಗಳಿಂದ ಕಾಳಬಜಾರಿನಲ್ಲಿ ಕೋಟ್ಯಂತರ ವ್ಯವಹಾರ ನಡೆಯುತ್ತಿದೆ ಎನ್ನಲಾಗಿದೆ.

ಚಿಕ್ಕಮಗಳೂರು ಅರಣ್ಯ ಸಂಚಾರ ದಳದ ಉಪನಿರೀಕ್ಷಕ ಬಾಬುದ್ದಿನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಐಪಿಎಲ್ ಬೆಟ್ಟಿಂಗ್‌ಗೆ ಬಿದ್ದ ಯುವಕನ ದುರಂತ ಅಂತ್ಯ: ಸಾಲದ ಒತ್ತಡಕ್ಕೆ ನೇಣಿಗೆ ಶರಣು

ನೆಲಮಂಗಲ: ಐಪಿಎಲ್ ಬೆಟ್ಟಿಂಗ್ ವ್ಯಸನ ಮತ್ತೊಂದು ಜೀವ ಬಲಿ ಪಡೆದಿದೆ. ಬೆಟ್ಟಿಂಗ್‌ನಲ್ಲಿ ಭಾರೀ ನಷ್ಟ ಅನುಭವಿಸಿ ಮೈತುಂಬ ಸಾಲ ಮಾಡಿಕೊಂಡಿದ್ದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅರಿಶಿನಕುಂಟೆ ಗ್ರಾಮದಲ್ಲಿ ನಡೆದಿದೆ.

ಮೃತನನ್ನು ತಮಿಳುನಾಡಿನ ಸಿಂಗಸದನಪಲ್ಲಿ ಮೂಲದ ಶಿವಕುಮಾರ್ (28) ಎಂದು ಗುರುತಿಸಲಾಗಿದೆ. ಕಳೆದ ಆರು ವರ್ಷಗಳಿಂದ ನೆಲಮಂಗಲದಲ್ಲಿ ವಾಸವಾಗಿದ್ದ ಶಿವಕುಮಾರ್ ಕಾರ್ ಗ್ಯಾರೇಜ್‌ನಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ.

ಐಪಿಎಲ್ ಬೆಟ್ಟಿಂಗ್‌ನಲ್ಲಿ ನಿರಂತರ ಹಣ ಕಳೆದುಕೊಂಡಿದ್ದ ಆತ, ಸಾಲದ ಒತ್ತಡದಿಂದ ಮಾನಸಿಕವಾಗಿ ಕುಗ್ಗಿದ್ದ ಎನ್ನಲಾಗಿದೆ. ಎರಡು ದಿನಗಳ ಹಿಂದೆ ತನ್ನ ಬಾಡಿಗೆ ಕೊಠಡಿಯಲ್ಲಿ ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಡಿಯೋದಲ್ಲಿ, “ನನ್ನ ಸಾವಿಗೆ ನಾನೇ ಕಾರಣ. ಬೇರೆ ಯಾರಿಗೂ ಸಂಬಂಧ ಇಲ್ಲ. ಸಾಲದ ಹೊರೆ ತಾಳಲು ಆಗುತ್ತಿಲ್ಲ. ನನ್ನ ಸ್ನೇಹಿತ ನನಗೆ ಸಾಕಷ್ಟು ಸಹಾಯ ಮಾಡಿದ್ದಾನೆ. ನಾನು ಸ್ವತಃ ಈ ನಿರ್ಧಾರ ತೆಗೆದುಕೊಂಡಿದ್ದೇನೆ” ಎಂದು ಹೇಳಿದ್ದಾನೆ.

ಘಟನಾ ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಐಪಿಎಲ್ ಬೆಟ್ಟಿಂಗ್ ವ್ಯಸನದಿಂದ ಯುವಕರು ಜೀವನ ಕಳೆದುಕೊಳ್ಳುತ್ತಿರುವ ಘಟನೆಗಳು ಹೆಚ್ಚುತ್ತಿದ್ದು, ಇದು ಮತ್ತೆ ಆತಂಕಕ್ಕೆ ಕಾರಣವಾಗಿದೆ.

ಪ್ರಧಾನಿ ಇಂಧನ ಮಿತವ್ಯಯಕ್ಕೆ ಕಡಿವಾಣ ಹಾಕಿಲ್ಲ, ಸ್ವಯಂ ಪ್ರೇರಿತರಾಗಿ ಬಿಡಲು ಹೇಳಿದ್ದಾರೆ: ಬೊಮ್ಮಾಯಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಇಂಧನ ಮಿತವ್ಯಯದ ವಿಚಾರದಲ್ಲಿ ಯಾವುದಕ್ಕೂ ಕಡಿವಾಣ ಹಾಕಿಲ್ಲ ಸ್ವಯಂ ಪ್ರೇರಿತವಾಗಿ ಬಿಡಲು ಹೇಳಿದ್ದಾರೆ. ಒಬ್ಬ ನಾಯಕನಾಗಿ ನೈತಿಕತೆ ಇರುವುದರಿಂದ ಕರೆ ಕೊಟ್ಟಿದ್ದಾರೆ‌. ಇದರ ಬಗ್ಗೆ ಬೇರೆ ಬೇರೆ ವ್ಯಾಖ್ಯಾನ ಮಾಡಿದರೆ ಕಾಂಗ್ರೆಸ್ ಗೆ ದೇಶ ಭಕ್ತಿಯೂ ಇಲ್ಲ,

ತ್ಯಾಗವೂ ಗೊತ್ತಿಲ್ಲ. ಒಂದು ರೀತಿಯಲ್ಲಿ ಭಾರತ ದೇಶದ ಹಿತಾಸಕ್ತಿಗೆ ವಿರುದ್ದವಾಗಿ ಕಾಂಗ್ರೆಸ್ ನಾಯಕರ ಹೇಳಿಕೆಗಳಿವೆ. ಇದು ಜವಾಬ್ದಾರಿಯುತ ಪಕ್ಷದ ಹೇಳಿಕೆಯಲ್ಲ ಅವರಿಗೆ ನಾಚಿಕೆ ಆಗಬೇಕು ಎಂದು ಮಾಜಿ ಮುಖ್ಯಮಂತ್ರೊ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಪೆಟ್ರೊಲ್, ಡಿಸೆಲ್ , ಅಡುಗೆ ಎಣ್ಣೆ ಮಿತವ್ಯಯದಿಂದ ಬಳಸುವಂತೆ ಮಾಡಿರುವ ಮನವಿಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಂಧನ ಮಿತವ್ಯಯದ ಬಗ್ಗೆ ನಾನು ಭಾರತೀಯ ನಾಗರಿಕನಾಗಿ ಅಷ್ಟಾದರೂ ಮಾಡಬೇಕಲ್ಲ.

ಲಾಲ್ ಬಹದ್ದೂರು ಶಾಸ್ತ್ರಿ ಪ್ರಧಾನಿಯಾಗಿದ್ದಾಗ ದೇಶದಲ್ಲಿ ಆಹಾರದ ಕೊರತೆ ಉಂಟಾಗಿದ್ದರಿಂದ ಒಂದು ದಿನ ಉಪವಾಸ ಮಾಡಲು ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಶ್ರೀಮಂತರಿಗೆ ಗ್ಯಾಸ್ ಸಬ್ಸಿಡಿ ಬಿಡಲು ಹೇಳಿದ್ದರು 6 ಕೋಟಿ ಜನರು ಬಿಟ್ಟಿದ್ದಾರೆ. ಕೊವಿಡ್ ಸಂದರ್ಭದಲ್ಲಿ ಸಾಕಷ್ಡು ಸಲಹೆಗಳನ್ನು ಕೊಟ್ಟಿದ್ದರು. ದೇಶದ ಜನರು ಅದನ್ನು ಪಾಲಿಸಿದ್ದರಿಂದ ದೇಶದಲ್ಲಿ ಕೊವಿಡ್ ಎದುರಿಸಲು ಸಾಧ್ಯವಾಯಿತು ಎಂದು ಹೇಳಿದರು.

ಪಿ. ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದಾಗ ಬಂಗಾರದ ಬಗ್ಗೆ ವ್ಯಾಮೊಹ ಬೇಡ ಅಂತ ಹೇಳಿದ್ದರು
ಹಿಂದೆ ಇರಾನ್ ಇರಾಕ್ ಯುದ್ದ ಆದಾಗ ಎರಡೇ ದಿನದಲ್ಲಿ ಪೆಟ್ರೊಲ್ ಬಂಕ್ ಗಳ ಮುಂದೆ ಕಿಲೋ ಮೀಟರ್ ಗಟ್ಟಲೆ ಕ್ಯು ಇತ್ತು. ಯುದ್ದ ಶುರುವಾಗಿ ಎರಡು ತಿಂಗಳು ಕಳೆದರೂ ಅಂತ ಪರಿಸ್ಥಿತಿ ಇಲ್ಲ. ಈಗ ಪ್ರಧಾನಿಯವರು ಯಾವುದಕ್ಕೂ ಕಡಿವಾಣ ಹಾಕಿಲ್ಲ ಸ್ವಯಂ ಪ್ರೇರಿತವಾಗಿ ಬಿಡಲು ಹೇಳಿದ್ದಾರೆ.

ಒಬ್ಬ ನಾಯಕನಾಗಿ ನೈತಿಕತೆ ಇರುವುದರಿಂದ ಕರೆ ಕೊಟ್ಟಿದ್ದಾರೆ‌. ಇದರ ಬಗ್ಗೆ ಬೇರೆ ಬೇರೆ ವ್ಯಾಖ್ಯಾನ ಮಾಡಿದರೆ ಕಾಂಗ್ರೆಸ್ ಗೆ ದೇಶ ಭಕ್ತಿಯೂ ಇಲ್ಲ, ತ್ಯಾಗವೂ ಗೊತ್ತಿಲ್ಲ. ಒಂದು ರೀತಿಯಲ್ಲಿ ಭಾರತ ದೇಶದ ಹಿತಾಸಕ್ತಿಗೆ ವಿರುದ್ದವಾಗಿ ಕಾಂಗ್ರೆಸ್ ನಾಯಕರ ಹೇಳಿಕೆಗಳಿವೆ. ಇದು ಜವಾಬ್ದಾರಿಯುತ ಪಕ್ಷದ ಹೇಳಿಕೆಯಲ್ಲ ಅವರಿಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು.

ಮೋದಿ ಭದ್ರತೆಯಲ್ಲಿ ಭಾರೀ ಲೋಪ? ಬೆಂಗಳೂರು ಜಿಲೆಟಿನ್ ಪ್ರಕರಣ ಎನ್‌ಐಎಗೆ ವಹಿಸಲಿ: ಶ್ರೀರಾಮುಲು ಆಗ್ರಹ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿಯ ವೇಳೆ ಜಿಲೆಟಿನ್ ಹಾಗೂ ವೈಯರ್ ಪತ್ತೆಯಾದ ಪ್ರಕರಣ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (NIA) ವಹಿಸುವಂತೆ ಮಾಜಿ ಸಚಿವ ಬಿ. ಶ್ರೀರಾಮುಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, “ದೇಶದ ಪ್ರಧಾನಿಗೆ ಭದ್ರತೆ ಒದಗಿಸುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ” ಎಂದು ಕಿಡಿಕಾರಿದರು.

“ಬೇರೆ ದೇಶಗಳಿಗೆ ಹೋದಾಗ ಪ್ರಧಾನಿ ಮೋದಿಗೆ ವಿಶೇಷ ಭದ್ರತೆ ಸಿಗುತ್ತದೆ. ಆದರೆ ಕರ್ನಾಟಕಕ್ಕೆ ಬಂದಾಗಲೇ ಭದ್ರತಾ ವೈಫಲ್ಯ ಏಕೆ? ಮೋದಿ ಅವರನ್ನು ಕೇವಲ ಬಿಜೆಪಿ ಪ್ರಧಾನಿಯಾಗಿ ನೋಡದೆ, ದೇಶದ ಪ್ರಧಾನಿಯಾಗಿ ಗೌರವಿಸಬೇಕು” ಎಂದು ಶ್ರೀರಾಮುಲು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ಭೇಟಿ ಮುನ್ನ ತುರ್ತು ಆಧಾರದಲ್ಲಿ 100ಕ್ಕೂ ಹೆಚ್ಚು ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ನಡೆದಿರುವುದನ್ನೂ ಪ್ರಶ್ನಿಸಿದ ಅವರು, “ಪ್ರಧಾನಿ ಕಾರ್ಯಕ್ರಮದ ಸಮಯದಲ್ಲೇ ಜಿಲೆಟಿನ್ ಮತ್ತು ವೈಯರ್ ಪತ್ತೆಯಾಗಿರುವುದು ಅತ್ಯಂತ ಗಂಭೀರ ವಿಚಾರ. ಮೋದಿ ಅವರಿಗೆ ಏನಾದರೂ ಆಗಿದ್ದರೆ ಯಾರು ಹೊಣೆ?” ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಈ ಪ್ರಕರಣದ ಸಂಪೂರ್ಣ ಸತ್ಯ ಹೊರಬರಬೇಕಾದರೆ ಎನ್‌ಐಎ ತನಿಖೆ ಅಗತ್ಯ ಎಂದು ಆಗ್ರಹಿಸಿದ ಶ್ರೀರಾಮುಲು, “ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದಕ್ಕೆ ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ವಿರುದ್ಧ ಅಸಹನೆ ಬಂದಿದೆ” ಎಂದು ಆರೋಪಿಸಿದರು.

ಇದೇ ವೇಳೆ ಪ್ರಧಾನಿ ಮೋದಿ ನೀಡಿದ್ದ ‘ಮಿತ ಬಳಕೆ’ ಕರೆ ಕುರಿತು ಕಾಂಗ್ರೆಸ್ ನಾಯಕರು ಮಾಡುತ್ತಿರುವ ಟೀಕೆಗೆ ಪ್ರತಿಕ್ರಿಯಿಸಿದ ಅವರು, “ವಿಶ್ವ ಮಟ್ಟದಲ್ಲಿ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಆರ್ಥಿಕ ಸ್ಥಿರತೆಗೆ ಜನರು ಮಿತವಾಗಿ ಬಳಕೆ ಮಾಡಬೇಕು ಎಂಬ ಜವಾಬ್ದಾರಿಯುತ ಸಂದೇಶವನ್ನೇ ಮೋದಿ ನೀಡಿದ್ದಾರೆ” ಎಂದರು.

“ಮನಮೋಹನ್ ಸಿಂಗ್ ಮತ್ತು ಚಿದಂಬರಂ ಅವರ ಕಾಲದಲ್ಲೂ ಇದೇ ರೀತಿಯ ಆರ್ಥಿಕ ಎಚ್ಚರಿಕೆ ನೀಡಲಾಗಿತ್ತು. ಈಗ ಮೋದಿ ಹೇಳಿದಾಗ ಮಾತ್ರ ಕಾಂಗ್ರೆಸ್ ಟೀಕೆ ಮಾಡುತ್ತಿದೆ. ಕಾಂಗ್ರೆಸ್ ನಾಯಕರಿಗೆ ಆರ್ಥಿಕ ಜವಾಬ್ದಾರಿ ಅರಿವಿಲ್ಲ” ಎಂದು ವಾಗ್ದಾಳಿ ನಡೆಸಿದರು.

ಭಾರತದ ಜಾಗತಿಕ ಗೌರವ ಹೆಚ್ಚಲು ಮೋದಿ ನಾಯಕತ್ವವೇ ಕಾರಣ ಎಂದು ಹೇಳಿದ ಶ್ರೀರಾಮುಲು, “ಅಮೆರಿಕ, ಇಸ್ರೇಲ್, ಇರಾಕ್ ಯುದ್ಧಗಳ ನಡುವೆಯೂ ಭಾರತಕ್ಕೆ ತೈಲ ಪೂರೈಕೆ ನಿರಂತರವಾಗಿರುವುದು ಮೋದಿ ರಾಜತಾಂತ್ರಿಕತೆಯ ಫಲ” ಎಂದು ಶ್ಲಾಘಿಸಿದರು.

KRS ಜಲಾಶಯ ನೀರಿನ ಮಟ್ಟ 90 ಅಡಿಗೆ ಕುಸಿತ: ಹಂಚಿಕೆ ಸಂಕಷ್ಟದಲ್ಲಿ ಸರ್ಕಾರ, ಕುಡಿಯುವ ನೀರಿನ ಕೊರತೆ ಭೀತಿ ಹೆಚ್ಚಳ

0

ಮಂಡ್ಯ: ರಾಜ್ಯದಲ್ಲಿ ಹೆಚ್ಚುತ್ತಿರುವ ಬೇಸಿಗೆ ತಾಪಮಾನ ಹಿನ್ನೆಲೆಯಲ್ಲಿ ಕೃಷ್ಣರಾಜ ಸಾಗರ (KRS) ಅಣೆಕಟ್ಟಿನಲ್ಲಿ ನೀರಿನ ಮಟ್ಟ ನಿರಂತರವಾಗಿ ಕುಸಿಯುತ್ತಿದ್ದು, ಬೆಂಗಳೂರು ಸೇರಿದಂತೆ ಹಳೇ ಮೈಸೂರು ಭಾಗದ ಕುಡಿಯುವ ನೀರಿನ ಸರಬರಾಜು ಬಗ್ಗೆ ಗಂಭೀರ ಆತಂಕ ಉಂಟಾಗಿದೆ.

124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ 90 ಅಡಿಗೆ ಇಳಿದಿದೆ. ಒಟ್ಟು 16 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ 7 ಟಿಎಂಸಿ ಡೆಡ್ ಸ್ಟೋರೇಜ್ ಹೊರತುಪಡಿಸಿ ಕೇವಲ 9 ಟಿಎಂಸಿ ನೀರು ಮಾತ್ರ ಬಳಕೆಗೆ ಲಭ್ಯವಿದೆ.

ಈ ಲಭ್ಯ ನೀರನ್ನು ನಗರ ಕುಡಿಯುವ ನೀರು, ಕೃಷಿ ನೀರಾವರಿ ಹಾಗೂ ರಾಜ್ಯಾಂತರ ನೀರು ಹಂಚಿಕೆ ಬಾಧ್ಯತೆಗಳ ನಡುವೆ ಸಮತೋಲನಗೊಳಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ವಿಶೇಷವಾಗಿ ಬೆಂಗಳೂರು-ಮೈಸೂರು ನಗರಗಳಿಗೆ ನಿರಂತರ ನೀರಿನ ಪೂರೈಕೆ ಹಾಗೂ ಮಂಡ್ಯ ಭಾಗದ ಕೃಷಿ ಬೆಳೆಗಳ ರಕ್ಷಣೆ ನಡುವೆ ತೀವ್ರ ಒತ್ತಡ ನಿರ್ಮಾಣವಾಗಿದೆ.

ತಮಿಳುನಾಡಿಗೆ ಪ್ರತಿ ತಿಂಗಳ ಕೋಟಾ ಪ್ರಕಾರ ನೀರು ಬಿಡುಗಡೆ ಮಾಡಬೇಕಾದ ಅನಿವಾರ್ಯತೆಯೂ ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ. ಮುಂಗಾರು ಮಳೆ ವಿಳಂಬವಾದರೆ ನೀರಿನ ಕೊರತೆ ಗಂಭೀರ ಹಂತಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಸದ್ಯ ಸರ್ಕಾರವು ಅಣೆಕಟ್ಟಿನ ನೀರಿನ ಬಳಕೆಯನ್ನು ಅತ್ಯಂತ ನಿಯಂತ್ರಿತ ಮತ್ತು ಪ್ರಾಥಮಿಕ ಆದ್ಯತೆಯ ಆಧಾರದ ಮೇಲೆ ನಿರ್ವಹಿಸುವ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ.

error: Content is protected !!