Home Blog

ನಗದು ಪತ್ತೆ ಪ್ರಕರಣ: ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ

0

ನವದೆಹಲಿ: ಅಪಾರ ಪ್ರಮಾಣದ ನಗದು ಪತ್ತೆಯಾದ ಪ್ರಕರಣದಲ್ಲಿ ಸುದ್ದಿಯಾಗಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಷ್ಟ್ರಪತಿಗಳಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

ದೆಹಲಿ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅವರ ಅಧಿಕೃತ ನಿವಾಸದಲ್ಲಿ ದೊಡ್ಡ ಪ್ರಮಾಣದ ನಗದು ಪತ್ತೆಯಾಗಿತ್ತು. ಈ ಆರೋಪಗಳ ಹಿನ್ನೆಲೆ ಕಳೆದ ವರ್ಷ ಏಪ್ರಿಲ್‌ನಲ್ಲಿ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲಾಗಿತ್ತು. ಪ್ರಸ್ತುತ ಅವರು ಆಂತರಿಕ ವಿಚಾರಣೆಯನ್ನು ಎದುರಿಸುತ್ತಿದ್ದರು.

2025ರ ಮಾರ್ಚ್‌ನಲ್ಲಿ ದೆಹಲಿಯ ನಿವಾಸದಲ್ಲಿ ಸಂಭವಿಸಿದ ಅಗ್ನಿ ಅವಘಡದ ವೇಳೆ ಸುಟ್ಟ ಹಾಗೂ ಅರ್ಧ ಸುಟ್ಟ ಸ್ಥಿತಿಯಲ್ಲಿದ್ದ ನಗದು ಕಟ್ಟುಗಳು ಪತ್ತೆಯಾಗಿದ್ದು ಪ್ರಕರಣಕ್ಕೆ ಹೊಸ ತಿರುವು ನೀಡಿತ್ತು.

ಈ ಬೆಳವಣಿಗೆಗಳ ಬಳಿಕ ಅವರ ವಿರುದ್ಧ ಮಹಾಭಿಯೋಗ ಪ್ರಕ್ರಿಯೆ ಆರಂಭಿಸಲು ಲೋಕಸಭಾ ಸ್ಪೀಕರ್ ತನಿಖಾ ಸಮಿತಿಯನ್ನು ರಚಿಸಿದ್ದರು. ಈ ತನಿಖೆಯನ್ನು ಪ್ರಶ್ನಿಸಿ ನ್ಯಾಯಮೂರ್ತಿ ವರ್ಮಾ ಸುಪ್ರೀಂ ಕೋರ್ಟ್ ಮೊರೆ ಹೋದರೂ, ನ್ಯಾಯಾಲಯವು ಅವರ ಮನವಿಯನ್ನು ತಿರಸ್ಕರಿಸಿ ತನಿಖೆಗೆ ತಡೆ ನೀಡಲು ನಿರಾಕರಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಇದೀಗ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದು ಗಮನಾರ್ಹವಾಗಿದೆ.

ರಾಜ್ಯಸಭಾ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್: ಬಿಹಾರದಲ್ಲಿ ಹೊಸ ಸಿಎಂ!?

0

ಪಾಟ್ನಾ: ನಿತೀಶ್ ಕುಮಾರ್ ಅವರು ಇಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದನ್ನು ಬಿಹಾರ ಮುಖ್ಯಮಂತ್ರಿ ಹುದ್ದೆಯಿಂದ ಹೊರಬರುವ ಮುನ್ಸೂಚನೆ ಎಂದು ಪರಿಗಣಿಸಲಾಗಿದ್ದು, ರಾಜ್ಯದಲ್ಲಿ ಹೊಸ ಸರ್ಕಾರ ರಚನೆಗೆ ದಾರಿ ತೆರೆದಿದೆ.

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಿಹಾರ ಉಪಮುಖ್ಯಮಂತ್ರಿಗಳಾದ ವಿಜಯ್ ಕುಮಾರ್ ಸಿನ್ಹಾ ಮತ್ತು ಸಾಮ್ರಾಟ್ ಚೌಧರಿ ಉಪಸ್ಥಿತರಿದ್ದರು.

ಹೊಸ ಹುದ್ದೆ ವಹಿಸಿಕೊಳ್ಳುವ ಮುನ್ನ ನಿತೀಶ್ ಕುಮಾರ್ ದೆಹಲಿಗೆ ಭೇಟಿ ನೀಡಿ, ಶೀಘ್ರದಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಬಿಹಾರದಲ್ಲಿ ನನ್ನ ಹೆಚ್ಚಿನ ಕೆಲಸ ಪೂರ್ಣಗೊಂಡಿದೆ. ಈಗ ದೆಹಲಿಯ ಜವಾಬ್ದಾರಿಗಳತ್ತ ಗಮನಹರಿಸಲು ಬಯಸುತ್ತೇನೆ ಎಂದು  ಹೇಳಿದ್ದಾರೆ.

ಮುಂದಿನ ಮೂರು ಅಥವಾ ನಾಲ್ಕು ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಂತರ ಮತ್ತೊಬ್ಬರಿಗೆ ಸಿಎಂ ಹುದ್ದೆ ನೀಡಲಾಗುತ್ತದೆ ಎಂದು ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ನಿತೀಶ್ ಕುಮಾರ್ ಬಿಹಾರದ ಅತ್ಯಂತ ದೀರ್ಘಾವಧಿಯ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದಾರೆ. 1985ರಲ್ಲಿ ಶಾಸಕರಾಗಿ ರಾಜಕೀಯ ಜೀವನ ಆರಂಭಿಸಿದ ಅವರು, ಬಳಿಕ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2005ರಲ್ಲಿ ಮೊದಲ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಅವರು, ದೇಶದ ಅನುಭವಿ ಮತ್ತು ಹಿರಿಯ ರಾಜಕೀಯ ನಾಯಕರಲ್ಲಿ ಒಬ್ಬರಾಗಿದ್ದಾರೆ.

ಮೂರು ದಿನಗಳಿಂದ ನಾಪತ್ತೆಯಾಗಿದ್ದ ಬಾಲಕಿ ಶ್ರೀನಂದ, 2 ಸಾವಿರ ಅಡಿ ಕೆಳಗೆ ಶವವಾಗಿ ಪತ್ತೆ!

ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಕೇರಳ ಮೂಲದ 14 ವರ್ಷದ ಬಾಲಕಿ ಶ್ರೀನಂದಾ ಮೃತದೇಹ ಇಂದು  ಪತ್ತೆಯಾಗಿದೆ. ಸುಮಾರು 2 ಸಾವಿರ ಅಡಿ ಆಳದ ಪ್ರಪಾತದಲ್ಲಿ ಶವ ಪತ್ತೆಯಾದುದು ದೃಢಪಟ್ಟಿದೆ.

ಏಪ್ರಿಲ್ 7ರಂದು ಕೇರಳದಿಂದ ಚಿಕ್ಕಮಗಳೂರಿಗೆ ಬಂದಿದ್ದ 40 ಜನರ ಪ್ರವಾಸಿ ತಂಡದಲ್ಲಿ ಶ್ರೀನಂದಾ ಕೂಡ ಇದ್ದರು. ಇನಾಮು ದತ್ತಾತ್ರೇಯ ಪೀಠ ಹಾಗೂ ಮಾಣಿಕ್ಯಧಾರಕ್ಕೆ ಭೇಟಿ ನೀಡಿದ ವೇಳೆ ಬಾಲಕಿ ಹಠಾತ್ತಾಗಿ ನಾಪತ್ತೆಯಾಗಿದ್ದಳು. ಈ ಘಟನೆ ನಂತರ ಪೊಲೀಸರು ತಕ್ಷಣ ಶೋಧ ಕಾರ್ಯಾಚರಣೆ ಆರಂಭಿಸಿದ್ದರು.

ಬಾಲಕಿಯ ಪತ್ತೆಗಾಗಿ ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಹಾಗೂ ಎಎನ್ಎಫ್ ತಂಡಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದವು. ದಟ್ಟ ಅರಣ್ಯ ಮತ್ತು ಕಡಿದಾದ ಪರ್ವತ ಪ್ರದೇಶವಾಗಿರುವುದರಿಂದ ಡ್ರೋನ್ ಹಾಗೂ ಥರ್ಮಲ್ ಕ್ಯಾಮೆರಾಗಳನ್ನೂ ಬಳಸಲಾಗಿತ್ತು.

ಮೂರು ದಿನಗಳ ತೀವ್ರ ಶೋಧ ಕಾರ್ಯದ ನಂತರ ಇಂದು ಮಾಣಿಕ್ಯಧಾರಾದ ಆಳವಾದ ಪ್ರಪಾತದ ಕೆಳಭಾಗದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಬಾಲಕಿ ಕಾಲು ಜಾರಿ ಬಿದ್ದಿದ್ದಾಳೆಯೇ ಅಥವಾ ಬೇರೆ ಕಾರಣವಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ಈ ಘಟನೆ ಕುಟುಂಬಸ್ಥರಲ್ಲಿಯೂ ಹಾಗೂ ಸಾರ್ವಜನಿಕರಲ್ಲಿ ತೀವ್ರ ದುಃಖ ಮೂಡಿಸಿದ್ದು, ಕೇರಳದಿಂದ ಬಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ದೇವರಿಗೆ ಕೈ ಮುಗಿದು, ಕುಂಕುಮ ಹಚ್ಚಿಕೊಂಡು ಹುಂಡಿ ಹಣ ಕದ್ದ ಕಳ್ಳ!

0

ಚಾಮರಾಜನಗರ: ಸಾಮಾನ್ಯವಾಗಿ ಕಳ್ಳರಿಗೆ ಯಾವುದಕ್ಕೂ ಭಯವಿಲ್ಲ ಎಂಬ ಮಾತಿದೆ. ಆದರೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ನಡೆದ ಘಟನೆ ಎಲ್ಲರನ್ನೂ ಆಶ್ಚರ್ಯಕ್ಕೆ ಒಳಪಡಿಸಿದೆ.

ದೇವಸ್ಥಾನದ ಹುಂಡಿ ಕದಿಯಲು ಬಂದ ಖದೀಮನು, ಕಳ್ಳತನಕ್ಕೂ ಮುನ್ನ ದೇವರಿಗೆ ಕೈ ಮುಗಿದು ಕುಂಕುಮ ಹಚ್ಚಿಕೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗ್ರಾಮದ ಶಕ್ತಿ ದೇವತೆ ಪಟ್ಟದರಾಣಿ ದೇವಾಲಯದಲ್ಲಿ ಈ ಕಳ್ಳತನ ನಡೆದಿದ್ದು, ಈ ಹಿಂದೆಯೂ ಹುಂಡಿ ಹಣ ಕಳುವಾಗಿದ್ದ ಕಾರಣದಿಂದ ದೇವಸ್ಥಾನದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿತ್ತು. ಅದರಲ್ಲೇ ಈ ಘಟನೆಯ ಸಂಪೂರ್ಣ ದೃಶ್ಯ ದಾಖಲಾಗಿದೆ.

ಘಟನೆ ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮಲಾಪುರ ಗ್ರಾಮದಲ್ಲಿ ನಡೆದಿದೆ. ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ತನಿಖೆ ಮುಂದುವರಿಸಿದ್ದಾರೆ.

MSIL ಚಿಟ್ ಫಂಡ್ ಕಚೇರಿಯಲ್ಲಿ ಮಹಿಳಾ ಉದ್ಯೋಗಿಗೆ ದೌರ್ಜನ್ಯ ಆರೋಪ: 3 ಅಧಿಕಾರಿಗಳ ವಿರುದ್ಧ FIR ದಾಖಲು

ಬೆಂಗಳೂರು: MSIL ಚಿಟ್ ಫಂಡ್ ಸಂಸ್ಥೆಯ ಕಚೇರಿಯಲ್ಲಿ ಮಹಿಳಾ ಉದ್ಯೋಗಿಯೊಬ್ಬರಿಗೆ ಅಧಿಕಾರಿಗಳು ದೌರ್ಜನ್ಯ ಹಾಗೂ ಕಿರುಕುಳ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಮೂವರು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಆರೋಪಿತರಾಗಿ MSIL ಜನರಲ್ ಮ್ಯಾನೇಜರ್ ಚಂದ್ರಶೇಖರ್, ಡೆಪ್ಯುಟಿ ಮ್ಯಾನೇಜರ್ ನಳಿನಿ ಹಾಗೂ ವೀಣಾ ಅವರ ವಿರುದ್ಧ ಬೆಂಗಳೂರು ಪಶ್ಚಿಮ ಡಿಸಿಆರ್‌ಇ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂತ್ರಸ್ತ ಮಹಿಳೆ ಕಳೆದ 8 ವರ್ಷಗಳಿಂದ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಚೆಕ್‌ಬುಕ್ ಕಾಣೆಯಾಗಿರುವುದನ್ನು ನೆಪ ಮಾಡಿಕೊಂಡು, ಅದನ್ನು ಹುಡುಕುವ ವಿಚಾರದಲ್ಲಿ ಮಹಿಳೆಯನ್ನು ವಿಚಾರಣೆಗಾಗಿ ಕಚೇರಿಗೆ ಕರೆಸಲಾಗಿದೆ ಎಂದು ಆರೋಪಿಸಲಾಗಿದೆ.

ಆದರೆ ವಿಚಾರಣೆ ಹೆಸರಿನಲ್ಲಿ ಸಂಜೆ 6 ಗಂಟೆಯಿಂದ ನಿರಂತರ ಕಿರುಕುಳ ನೀಡಲಾಗಿದ್ದು, ಕಳ್ಳತನದ ಆರೋಪ ಹೊರಿಸಲಾಗಿದೆ ಎಂದು ಮಹಿಳೆ ದೂರಿದ್ದಾರೆ.

ಮಹಿಳೆಯ ಹೇಳಿಕೆಯ ಪ್ರಕಾರ, ಸೆಕ್ಯೂರಿಟಿ ಕೊಠಡಿಗೆ ಕರೆದೊಯ್ದು ಆಕೆಯ ಇಚ್ಛೆಗೆ ವಿರುದ್ಧವಾಗಿ ಅವಮಾನಿಸಲಾಗಿದೆ ಹಾಗೂ ರಾತ್ರಿ 8 ಗಂಟೆಯವರೆಗೆ ಅಕ್ರಮವಾಗಿ ಬಂಧನದಲ್ಲಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಜೊತೆಗೆ ಜಾತಿ ನಿಂದನೆ ಮತ್ತು ಬೆದರಿಕೆ ಕೂಡ ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

“ತಾವು ಹೇಳಿದಂತೆ ನಡೆದುಕೊಳ್ಳದಿದ್ದರೆ ಕೆಲಸದಲ್ಲಿ ಮುಂದುವರಿಯಲು ಅವಕಾಶ ನೀಡುವುದಿಲ್ಲ” ಎಂದು ಬೆದರಿಕೆ ಹಾಕಲಾಗಿದೆ ಎಂಬುದೂ ಆರೋಪದಲ್ಲಿ ಉಲ್ಲೇಖವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ಏ.15ಕ್ಕೆ ಆದಿಚುಂಚನಗಿರಿ ಮಠಕ್ಕೆ ಪ್ರಧಾನಿ ಭೇಟಿ: ಬಾಲಗಂಗಾಧರನಾಥ ಶ್ರೀಗಳ ಗದ್ದುಗೆ ಉದ್ಘಾಟನೆ

ಮಂಡ್ಯ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏಪ್ರಿಲ್ 15ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.

ಮಠದಲ್ಲಿ ಬಾಲಗಂಗಾಧರನಾಥ ಶ್ರೀಗಳ ಗದ್ದುಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಅದರಲ್ಲಿ ಪ್ರಧಾನಿಗಳು ಭಾಗವಹಿಸಲಿದ್ದಾರೆ. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಮಠದ ಕುರಿತು ಮಾತನಾಡುವ ನಿರೀಕ್ಷೆಯಿದೆ.

ಈ ಹಿಂದೆ ಫೆಬ್ರವರಿ ತಿಂಗಳಲ್ಲಿ ಈ ಭೇಟಿ ನಿಗದಿಯಾಗಿದ್ದರೂ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ ಎಂದು ತಿಳಿದುಬಂದಿದೆ.

ಪ್ರಧಾನಿಯವರ ಅಧಿಕೃತ ಪ್ರವಾಸ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಬೇಕಿದ್ದು, ಆದಿಚುಂಚನಗಿರಿ ಮಠ ಹಾಗೂ ಜಿಲ್ಲಾಡಳಿತದಿಂದ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.

ತುಮಕೂರು ಫ್ಲೈಓವರ್ ಬಂದ್ ಸಾಧ್ಯತೆ: ಮುಂದಿನ ವಾರ ಟ್ರಾಫಿಕ್‌ʼಗೆ ದೊಡ್ಡ ಸವಾಲು

ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ತುಮಕೂರು ಫ್ಲೈಓವರ್ ರಸ್ತೆ ಮುಂದಿನ ವಾರ ಬಂದ್ ಆಗುವ ಸಾಧ್ಯತೆ ಇದೆ. ಸಂಚಾರ ಪೊಲೀಸರ ಅನುಮತಿ ಸಿಕ್ಕಲ್ಲಿ, ಸೋಮವಾರದಿಂದ ಶುಕ್ರವಾರದವರೆಗೆ ಫ್ಲೈಓವರ್‌ನ್ನು ಮುಚ್ಚಲಾಗುತ್ತದೆ.

ಫ್ಲೈಓವರ್‌ನಲ್ಲಿ ಅಂತಿಮ ಲೋಡ್ ಪರೀಕ್ಷೆ ನಡೆಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಿದ್ಧತೆ ನಡೆಸಿದೆ. ಇತ್ತೀಚೆಗೆ ಫ್ಲೈಓವರ್‌ಗೆ 1422 ಹೊಸ ಕೇಬಲ್‌ಗಳನ್ನು ಅಳವಡಿಸಿರುವ ಹಿನ್ನೆಲೆಯಲ್ಲಿ ಲೋಡ್ ಟೆಸ್ಟಿಂಗ್ ಅಗತ್ಯವಾಗಿದೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.

ಈ ಪ್ರಸ್ತಾವನೆಗೆ ಅನುಮತಿ ದೊರೆತರೆ, ಏಪ್ರಿಲ್ 13ರಿಂದ ಏಪ್ರಿಲ್ 17ರವರೆಗೆ ಫ್ಲೈಓವರ್ ಸಂಪೂರ್ಣ ಬಂದ್ ಆಗಲಿದೆ. ಸೋಮವಾರ ಬೆಳಗ್ಗೆ 11 ಗಂಟೆಯಿಂದ ಏಪ್ರಿಲ್ 17ರ ಬೆಳಗ್ಗೆ 11 ಗಂಟೆಯವರೆಗೆ ಸಂಚಾರಕ್ಕೆ ನಿರ್ಬಂಧ ವಿಧಿಸುವ ಸಾಧ್ಯತೆ ಇದೆ.

2010ರಲ್ಲಿ ಸಂಚಾರಕ್ಕೆ ಮುಕ್ತಗೊಂಡ ಈ ಮೇಲ್ಸೇತುವೆ ಸುಮಾರು 82 ಗಂಟೆಗಳ ಕಾಲ ಬಂದ್ ಆದರೆ ಗೊರಗೊಂಟೆಪಾಳ್ಯ ಸೇರಿದಂತೆ ಪೀಣ್ಯ ಭಾಗದವರೆಗೆ ಭಾರೀ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ. ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ.

ನ್ಯಾಯಾಲಯದ ಆದೇಶ ಮೀರಿ ಚಾಮುಂಡಿ ಬೆಟ್ಟ ಕಾಮಗಾರಿ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಬೆಂಗಳೂರು: ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯನ್ನು ಮೀರಿ ಮೈಸೂರಿನ ಚಾಮುಂಡಿ ಬೆಟ್ಟದ ದೇವಸ್ಥಾನ ಆವರಣದಲ್ಲಿ ಕಾಮಗಾರಿ ನಡೆಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ವಿವಾದಿತ ಪ್ರದೇಶದಲ್ಲಿ ನಡೆಯುತ್ತಿರುವ ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನು ತಕ್ಷಣವೇ ಸ್ಥಗಿತಗೊಳಿಸಲು ಮಧ್ಯಂತರ ಆದೇಶ ನೀಡಲಾಗಿದೆ.

ಚಾಮುಂಡಿ ಬೆಟ್ಟದ ಮೂಲ ಸ್ವರೂಪಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಆಕ್ಷೇಪಿಸಿ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.

ದೇವಾಲಯದ ಆವರಣದಲ್ಲಿ ನಡೆಯುತ್ತಿರುವ ಎಲ್ಲ ರೀತಿಯ ನಿರ್ಮಾಣ ಕಾಮಗಾರಿಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಪೀಠ ಸೂಚಿಸಿದೆ. ಜೊತೆಗೆ, ಕಾಮಗಾರಿಗಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ 47 ಕೋಟಿ ರೂ. ಅನುದಾನವನ್ನು ಯಾವ ಕೆಲಸಗಳಿಗೆ ಬಳಸಲಾಗಿದೆ ಹಾಗೂ ಎಷ್ಟು ವೆಚ್ಚ ಮಾಡಲಾಗಿದೆ ಎಂಬುದರ ಕುರಿತು ಎರಡು ವಾರಗಳೊಳಗೆ ವಿವರವಾದ ಪ್ರಮಾಣಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ.

ಇದಕ್ಕೂ ಮೊದಲು, ನ್ಯಾಯಾಲಯದ ಪೂರ್ವಾನುಮತಿಯಿಲ್ಲದೆ ಯಾವುದೇ ಶಾಶ್ವತ ಕಾಮಗಾರಿ ಕೈಗೊಳ್ಳುವುದಿಲ್ಲ ಎಂದು ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಆದರೆ, ನ್ಯಾಯಾಲಯಕ್ಕೆ ಸಲ್ಲಿಸಲಾದ ಚಿತ್ರಗಳನ್ನು ಗಮನಿಸಿದರೆ, ದೇವಸ್ಥಾನ ಆವರಣದಲ್ಲಿ ಬೃಹತ್ ಮಟ್ಟದ ಶಾಶ್ವತ ನಿರ್ಮಾಣ ಕಾರ್ಯ ನಡೆದಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಪೀಠ ತಿಳಿಸಿದೆ.

ಕೇಂದ್ರ ಸರ್ಕಾರದಿಂದ 47 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂಬ ಕಾರಣ ನೀಡಿ ಕಾಮಗಾರಿಯನ್ನು ಸಮರ್ಥಿಸಿಕೊಂಡಿರುವ ಜಿಲ್ಲಾಧಿಕಾರಿಗಳ ಕ್ರಮವನ್ನು ಪೀಠ ತೀವ್ರವಾಗಿ ಟೀಕಿಸಿದೆ. ಇದು ದುರುದ್ದೇಶಪೂರಿತವಾಗಿದ್ದು, ಕಾನೂನಾತ್ಮಕವಾಗಿ ಸಂಪೂರ್ಣ ಅಸಂಗತ ಎಂದು ಹೇಳಿದೆ.

ಜಿಲ್ಲಾಧಿಕಾರಿಗಳು ರಾಜ್ಯದ ಅಧಿಕಾರಿಯಾಗಿರುವುದರಿಂದ ನ್ಯಾಯಾಲಯದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅವರ ಕರ್ತವ್ಯವಾಗಿದೆ. ಆದೇಶ ಪಾಲನೆ ಮಾಡದಿರುವುದನ್ನು ಸಮರ್ಥಿಸುವ ಯಾವುದೇ ಪ್ರಯತ್ನವೂ ನ್ಯಾಯಾಂಗ ಅಧಿಕಾರದ ಉಲ್ಲಂಘನೆಯಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಕಳೆದ ವರ್ಷ ಅಲ್ಪ ಏರಿಕೆ ಕಂಡಿದ್ದ ಫಲಿತಾಂಶ ಮತ್ತೆ ಕುಸಿತ: ಗದಗ ಜಿಲ್ಲೆಗೆ ಹಿನ್ನಡೆ

0

ಗದಗ: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಗದಗ ಜಿಲ್ಲೆ ಈ ಬಾರಿ ಮತ್ತೊಮ್ಮೆ ಹಿನ್ನಡೆಯನ್ನು ಅನುಭವಿಸಿದೆ. ಕಳೆದ ವರ್ಷ ಅಲ್ಪ ಮಟ್ಟಿನ ಏರಿಕೆ ಕಂಡಿದ್ದ ಫಲಿತಾಂಶ, ಈ ಬಾರಿ ಮತ್ತೆ ಕುಸಿತ ಕಂಡಿರುವುದು ಜಿಲ್ಲೆಯ ಶೈಕ್ಷಣಿಕ ವ್ಯವಸ್ಥೆಯ ಕುರಿತು ಪ್ರಶ್ನೆಗಳು ಮೂಡುವಂತೆ ಮಾಡಿದೆ.

2024ರಲ್ಲಿ ರಾಜ್ಯದಲ್ಲೇ ಕೊನೆಯ ಸ್ಥಾನದಲ್ಲಿದ್ದ ಗದಗ ಜಿಲ್ಲೆ, 2025ರಲ್ಲಿ 25ನೇ ಸ್ಥಾನಕ್ಕೆ ಏರಿಕೆಯಾಗಿ ನಿರೀಕ್ಷೆ ಹುಟ್ಟಿಸಿತ್ತು. ಆದರೆ 2026ರಲ್ಲಿ ಮತ್ತೆ 30ನೇ ಸ್ಥಾನಕ್ಕೆ ಜಾರುವ ಮೂಲಕ, ಜಿಲ್ಲೆ ತನ್ನ ಪ್ರದರ್ಶನವನ್ನು ಸ್ಥಿರಗೊಳಿಸಲು ವಿಫಲವಾಗಿದೆ.

ಇದ್ರಲ್ಲೂ ಗಮನಾರ್ಹ ವಿಷಯವೆಂದರೆ, ಈ ಬಾರಿ ಜಿಲ್ಲೆಯಲ್ಲಿ ಶೇಕಡಾವಾರು ಉತ್ತೀರ್ಣತೆ ಶೇ. 76.65 ದಾಖಲಾಗಿದ್ದು, ಕಳೆದ ವರ್ಷದ ಶೇ. 66.64 ಕ್ಕಿಂತ ಹೆಚ್ಚಾಗಿದೆ. ಆದಾಗ್ಯೂ, ರಾಜ್ಯದ ಇತರೆ ಜಿಲ್ಲೆಗಳ ಉತ್ತಮ ಸಾಧನೆಯ ಹಿನ್ನೆಲೆ ಗದಗ ಜಿಲ್ಲೆಯ ರ್ಯಾಂಕಿಂಗ್ ಕುಸಿತ ಕಂಡಿದೆ. ರಾಜ್ಯಮಟ್ಟದ ಒಟ್ಟಾರೆ ಉತ್ತೀರ್ಣ ಪ್ರಮಾಣ ಏರಿಕೆಯಾದುದು ಮಾತ್ರ ಸ್ವಲ್ಪ ಸಮಾಧಾನ ತಂದಿದೆ.

ಕಳೆದ ನಾಲ್ಕು ವರ್ಷದ ಪಿಯು ಫಲಿತಾಂಶ

  1. 2025-26 76.65% 30
  2. 2024-25 66.64% 25
  3. 2023-24 72.86% 32
  4. 2022-23 66.91% 30

ಇನ್ನೂ ಈ ಬಗ್ಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್. ಬಿ. ಮಸನಾಯಕ ಪ್ರತಿಕ್ರಿಯೇ ನೀಡಿದ್ದು, ಈ ಬಾರಿ ಶೇಕಡಾವಾರು ಉತ್ತೀರ್ಣತೆ ಏರಿಕೆಯಾದರೂ, ರಾಜ್ಯಮಟ್ಟದ ರ್ಯಾಂಕಿಂಗ್ನಲ್ಲಿ ಗದಗ ಜಿಲ್ಲೆ ಕುಸಿತ ಕಂಡಿದೆ. ಫಲಿತಾಂಶ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ನಿರೀಕ್ಷಿತ ಮಟ್ಟದ ಫಲಿತಾಂಶ ದೊರಕಿಲ್ಲ. ಈ ಬಗ್ಗೆ ಸಮಗ್ರ ಆತ್ಮಾವಲೋಕನ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಹಣ್ಣು ಮಾರುವ ಕುಟುಂಬದ ಮಗಳು ಜಿಲ್ಲೆಗೆ ದ್ವಿತೀಯ ಸ್ಥಾನ! ಬಡತನದಲ್ಲೂ 97.33% ಅಂಕ

0

ಲಕ್ಷ್ಮೇಶ್ವರ: ಪ್ರತಿಭೆ ಯಾರ ಸ್ವತ್ತೂ ಅಲ್ಲ, ಅದು ಸಾಧಕನ ಸ್ವತ್ತು ಎಂಬುದಕ್ಕೆ ಲಕ್ಷ್ಮೇಶ್ವರ ಪಟ್ಟಣದ ರೋಹಿಣಿ ಬೆಟಗೇರಿ ಜೀವಂತ ಉದಾಹರಣೆಯಾಗಿದ್ದಾಳೆ. ಹಣ್ಣು ಮಾರುವ ತಂದೆ-ತಾಯಿಯ ಮಗಳಾದ ರೋಹಿಣಿ ಬಡತನದಲ್ಲಿಯೇ ಓದಿ, ಪಿಯುಸಿ ಕಲಾ ವಿಭಾಗದಲ್ಲಿ 600ರಲ್ಲಿ 584 ಅಂಕ (97.33%) ಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದು ಹೆತ್ತವರ ಹಾಗೂ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾಳೆ.

ರೋಹಿಣಿ ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಶ್ರೀ ವೀರ ಗಂಗಾಧರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಇದೇ ಸಂಸ್ಥೆಯಲ್ಲಿ ಎಸ್ಎಸ್ಎಲ್ಸಿಯಲ್ಲಿ ಶೇ. 95 ಅಂಕ ಪಡೆದಿದ್ದಳು. ಪಿಯುಸಿಯಲ್ಲಿ ಕನ್ನಡ, ಹಿಂದಿ ಮತ್ತು ಭೂಗೋಳಶಾಸ್ತ್ರದಲ್ಲಿ ಶತಕಕ್ಕೆ ಶತಕ ಅಂಕಗಳನ್ನು ಗಳಿಸಿ ತನ್ನ ಪ್ರತಿಭೆ ತೋರಿದ್ದಾಳೆ. ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿಯುಳ್ಳ ಈಕೆ ಉತ್ತಮ ಚಿತ್ರ ಮತ್ತು ಪೇಟಿಂಗ್ ಮಾಡುವಲ್ಲಿಯೂ ನಿಪುಣಳಾಗಿದ್ದಾಳೆ.

ರೋಹಿಣಿಯ ತಂದೆ ಪ್ರಭು ಹಾಗೂ ತಾಯಿ ಕವಿತಾ, ಅಜ್ಜಿ ಸೋಮಕ್ಕ ಲಕ್ಷ್ಮೇಶ್ವರದಲ್ಲಿ ಬಾಳೆಹಣ್ಣು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಆಶ್ರಯ ಯೋಜನೆಯಡಿ ದೊರೆತ ಚಿಕ್ಕ ಮನೆಯನ್ನು ಹೊರತುಪಡಿಸಿ ಮತ್ತಾವುದೇ ಆಸ್ತಿ ಇಲ್ಲ. ಹಣ್ಣು ಮಾರಾಟದ ಆದಾಯದಲ್ಲಿಯೇ ಕುಟುಂಬ ನಿರ್ವಹಣೆ ನಡೆಸುತ್ತಾ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಹಂಬಲವನ್ನು ಪಾಲಕರು ಹೊಂದಿದ್ದಾರೆ.

ಇನ್ನೂ ಈ ಬಗ್ಗೆ ರೋಹಿಣಿ ಮಾತನಾಡಿದ್ದು, ಉತ್ತಮ ಫಲಿತಾಂಶ ಮಾಡಬೇಕು ಎಂಬ ಹಂಬಲದಿಂದ ಪರೀಕ್ಷೆ ಸಮಯದಲ್ಲಿ ಬೆಳಿಗ್ಗೆ ಬೇಗ ಎದ್ದು ಆಸಕ್ತಿಯಿಂದ ಓದುತ್ತಿದ್ದೆ. ಕಾಲೇಜಿನಲ್ಲಿ ಗಮನದಿಂದ ಪಾಠ ಕೇಳುತ್ತಿದ್ದೆ. ಮುಂದೆ ಪದವಿ ಪಡೆದು ಐಎಎಸ್ ಓದಿ ಉನ್ನತ ಹುದ್ದೆ ಪಡೆದು ಸಮಾಜ ಸೇವೆ ಮಾಡುವ ಆಸೆ ಇದೆ. ನನ್ನ ಯಶಸ್ಸಿಗೆ ಪಾಲಕರ ಮತ್ತು ಶಿಕ್ಷಕರ ಪ್ರೋತ್ಸಾಹ ಮುಖ್ಯ ಕಾರಣ ಎಂದಿದ್ದಾರೆ..

ಅದಲ್ಲದೆ ಮಗಳ ಸಾಧನೆ ಬಗ್ಗೆ ರೋಹಿಣಿ ತಂದೆ- ತಾಯಿಯಾದ ಪ್ರಭು, ಕವಿತಾ ಮಾತನಾಡಿದ್ದು, ನಾವು ಬಡತನದ ಕಾರಣದಿಂದ ಪ್ರಾಥಮಿಕ ಶಿಕ್ಷಣವನ್ನೇ ಪೂರ್ಣಗೊಳಿಸಲಾಗಲಿಲ್ಲ. ಆದರೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ನಮ್ಮ ಕನಸು. ಮಗಳು ಐಎಎಸ್ ಆಗಬೇಕೆಂಬ ಆಸೆ ಹೊಂದಿದ್ದಾಳೆ, ಅವಳ ಕನಸು ಈಡೇರಿಸಲು ನಾವು ದುಡಿಯುತ್ತೇವೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

error: Content is protected !!