Home Blog Page 149

ಮಠಗಳು ಸಂಸ್ಕಾರ ಬೆಳೆಸುವ ಆಧ್ಯಾತ್ಮ ಕೇಂದ್ರಗಳಾಗಲಿ: ರಂಭಾಪುರಿ ಶ್ರೀ

0

ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಭಾರತ ಧರ್ಮ ಭೂಮಿಯಲ್ಲಿ ಧರ್ಮ ಮತ್ತು ಆಧ್ಯಾತ್ಮಿಕ ಚಿಂತನೆಗಳಿಗೆ ಬಹಳಷ್ಟು ಮಹತ್ವದ ಸ್ಥಾನವಿದೆ. ಸಕಲ ಜೀವಾತ್ಮರಿಗೂ ಸದಾ ಒಳಿತನ್ನೇ ಬಯಸಿದ ವೀರಶೈವ ಧರ್ಮ ವಿಶಾಲ ಉತ್ಕೃಷ್ಟ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಹೊಂದಿದೆ. ಈ ನಾಡಿನ ಮಠಗಳು ಸಂಸ್ಕಾರ ಕೊಡುವ, ಸಂಸ್ಕೃತಿ ಕಲಿಸುವ ಆಧ್ಯಾತ್ಮಿಕ ಕೇಂದ್ರಗಳಾಗಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಶುಕ್ರವಾರ ತಾಲೂಕಿನ ಶ್ರೀಮತ್ಕಾಶೀ ಶಾಖಾ ವಿರೂಪಾಪುರ ಕಲಕೇರಿ ಶ್ರೀ ಮುದುಕೇಶ್ವರ ಹಿರೇಮಠದ ಶ್ರೀ ಗುರು ಪಟ್ಟಾಧಿಕಾರ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಮಾನವ ಜೀವನದ ಶ್ರೇಯಸ್ಸು ಧರ್ಮಾಚರಣೆಯಲ್ಲಿದೆ. ಧರ್ಮದ ದಿಕ್ಸೂಚಿ ಇಲ್ಲದೇ ಇದ್ದರೆ ಮಾನವ ಜೀವನ ವ್ಯರ್ಥ. ಸಂತಸ, ಶಾಂತಿಯ ಬದುಕಿಗೆ ಧರ್ಮ ಪರಿಪಾಲನೆಯ ಅವಶ್ಯಕತೆಯಿದೆ. ಭೌತಿಕ ಸಂಪತ್ತಿನ ಜೊತೆಗೆ ಒಂದಿಷ್ಟಾದರೂ ಶಿವಜ್ಞಾನದ ಅರಿವು ಮತ್ತು ಗುರು ಕಾರುಣ್ಯ ಇರಬೇಕಾಗುತ್ತದೆ. ವೀರಶೈವ ಧರ್ಮದಲ್ಲಿ ಶ್ರೀ ಗುರುವಿಗೆ ಮಹತ್ವದ ಸ್ಥಾನವನ್ನು ಕಲ್ಪಿಸಿದ್ದಾರೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ್ವ-ಸಿದ್ಧಾಂತಗಳು ಜೀವನದ ವಿಕಾಸಕ್ಕೆ ಅಡಿಪಾಯವಾಗಿವೆ.

ವಿರೂಪಾಪುರ ಕಲಕೇರಿ ಹಿರೇಮಠದ ಮುದುಕೇಶ್ವರ ಶಿವಾಚಾರ್ಯರು ಅತ್ಯಂತ ಮುಗ್ಧರು, ಸರಳ ಜೀವಿಗಳು. ಭಕ್ತರ ಸಹಕಾರದಿಂದ ಶ್ರೀ ಮಠವನ್ನು ಅಭಿವೃದ್ಧಿಪಡಿಸಿದ್ದಾರೆ. ಪಟ್ಟಾಭಿಷಿಕ್ತರಾದ ನೂತನ ಅಭಿನವ ಮುದುಕೇಶ್ವರ ಶಿವಾಚಾರ್ಯರು ಹಿರಿಯರ ಆದರ್ಶ ದಾರಿಯಲ್ಲಿ ಮುನ್ನಡೆದು ಈ ಭಾಗದ ಭಕ್ತರಿಗೆ ಸನ್ಮಾರ್ಗ ದರ್ಶನ ನೀಡುವರೆಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದ ಶ್ರೀ ರಂಭಾಪುರಿ ಜಗದ್ಗುರುಗಳು, ಉಭಯ ಶ್ರೀಗಳಿಗೆ ಸ್ಮರಣಿಕೆ ಮತ್ತು ಫಲಪುಷ್ಪವಿತ್ತು ಶುಭ ಹಾರೈಸಿದರು.

ಸಾನ್ನಿಧ್ಯ ವಹಿಸಿದ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಆಶೀರ್ವಚನ ನೀಡಿ, ವಿಜ್ಞಾನ-ತಂತ್ರಜ್ಞಾನ ಬೆಳೆದಂತೆ ಮನುಷ್ಯನಲ್ಲಿ ಭಾವನೆಗಳು ಬೆಳೆಯುತ್ತಿಲ್ಲ. ಸುಖದ ಮೂಲ ಧರ್ಮ ಪರಿಪಾಲನೆಯಲ್ಲಿ ಇದೆ ಎಂಬುದನ್ನು ಯಾರೂ ಮರೆಯಬಾರದು. ಸಂಸ್ಕಾರ, ಸಂಸ್ಕೃತಿಗಳ ಪುನರುತ್ಥಾನ ಈ ನಾಡಿನ ಮಠಗಳಿಂದ ನಿರಂತರ ನಡೆಯುತ್ತಲೇ ಬಂದಿದೆ. ವಿದ್ಯಾ ವಿನಯ ಸಂಪನ್ನರಾದ ಅಭಿನವ ಮುದುಕೇಶ್ವರ ಶಿವಾಚಾರ್ಯರನ್ನು ಪಡೆದ ಇಲ್ಲಿಯ ಜನ ಭಾಗ್ಯವಂತರು. ವೀರಶೈವ ಧರ್ಮದ ಆದರ್ಶ ಚಿಂತನಗಳನ್ನು ಭಕ್ತ ಸಂಕುಲಕ್ಕೆ ಬೋಧಿಸಿ ಸನ್ಮಾರ್ಗಕ್ಕೆ ಕರೆ ತರುವ ಶಕ್ತಿಯನ್ನು ನೂತನ ಶ್ರೀಗಳಿಗೆ ಭಗವಂತ ಕೊಡಲೆಂದು ಆಶಿಸಿ ಆಶೀರ್ವದಿಸಿದರು.

ನೇತೃತ್ವ ವಹಿಸಿದ ಹಿರಿಯ ಪಟ್ಟಾಧ್ಯಕ್ಷರಾದ ಮುದುಕೇಶ್ವರ ಶಿವಾಚಾರ್ಯರು ಮಾತನಾಡಿ, ಶ್ರಮದ ಬೆವರಿನ ಫಲ ಶಾಶ್ವತ ಮತ್ತು ಸುಖದಾಯಕ. ಕಾಯಕದಿಂದಲೇ ಮನುಷ್ಯನಿಗೆ ಕಳಾ ಚೈತನ್ಯ ಪ್ರಾಪ್ತಿಯಾಗುತ್ತದೆ. ಶ್ರೀ ಮಠದ ಅಭಿವೃದ್ಧಿಗಾಗಿ ಸದಾ ಶ್ರಮಿಸಿರುವೆ. ಇದೇ ದಾರಿಯಲ್ಲಿ ನೂತನ ಶ್ರೀಗಳು ಕಾರ್ಯೋನ್ಮುಖರಾಗಿ ಮಾರ್ಗದರ್ಶನ ನೀಡುತ್ತಾರೆ ಎಂದರು.

ಮುಕ್ತಿಮಂದಿರ, ಹುಕ್ಕೇರಿ, ಬನ್ನಿಕೊಪ್ಪ, ಸುಳ್ಳ, ಶಿರಕೋಳ, ಕೊಣಂದೂರು, ಹಿರೇವಡ್ಡಟ್ಟಿ, ಅಂಗೂರು, ಹಂಪಸಾಗರ, ಹಿರೇಮಲ್ಲಕೇರಿ ಮಾನಿಹಳ್ಳಿ, ಮೈನಳ್ಳಿ ಮೊದಲ್ಗೊಂಡು 25ಕ್ಕೂ ಹೆಚ್ಚು ಮಠಾಧೀಶರು ಉಪಸ್ಥಿತರಿದ್ದರು. ಮಾಜಿ ಸಚಿವ ಎಸ್.ಎಸ್. ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೀರೇಶ ಕೂಗು, ಚಂದ್ರು ಬಾಳಿಹಳ್ಳಿಮಠ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು. ಶಿವಕುಮಾರಗೌಡ ಪಾಟೀಲ ಸ್ವಾಗತಿಸಿದರು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.

ಪಟ್ಟಾಭಿಷಿಕ್ತರಾದ ನೂತನ ಅಭಿನವ ಮುದುಕೇಶ್ವರ ಶಿವಾಚಾರ್ಯರು ಮಾತನಾಡಿ, ಧರ್ಮ ಮಾನವ ಜೀವನದ ಉಸಿರಾಗಬೇಕು. ಅನ್ನ, ನೀರು, ಗಾಳಿ ಮನುಷ್ಯನಿಗೆ ಎಷ್ಟು ಅವಶ್ಯಕವೋ ಅಷ್ಟೇ ಧರ್ಮ ಪಾಲನೆಯ ಅವಶ್ಯಕತೆಯಿದೆ. ವೀರಶೈವ ಧರ್ಮದ ಆದರ್ಶ ಚಿಂತನ ಮತ್ತು ಗುರು ಪರಂಪರೆಯ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬರುತ್ತೇವೆ ಎಂದು ಸಂಕಲ್ಪ ತೊಟ್ಟರು.

ದೇವತಾ ಕಾರ್ಯಕ್ರಮಕ್ಕೆ ದೇಣಿಗೆ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಸಮೀಪದ ಕೊಡಗಾನೂರು ಗ್ರಾಮದಲ್ಲಿನ ಶ್ರೀ ಮಾರುತಿ ದೇವಸ್ಥಾನದ ನೂತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ 1,40,000 ರೂ. ದೇಣಿಗೆಯನ್ನು ನಿವೃತ್ತ ಶಿಕ್ಷಕರಾದ ನೂರಂದಪ್ಪ ಮಾಹಾಂತಪ್ಪ ಕಲ್ಯಾಣಿ ಹಾಗೂ ಅವರ ಧರ್ಮಪತ್ನಿ ಪಾರ್ವತಮ್ಮ ನೂರಂದಪ್ಪ ಕಲ್ಯಾಣಿ ಅವರು ನೀಡಿದರು.

ದೇವಸ್ಥಾನದ ಅಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯಗಳಿಗೆ ಸದಾ ಸಹಕಾರ ನೀಡುತ್ತಿರುವ ಕಲ್ಯಾಣಿ ದಂಪತಿ, ಈ ಬಾರಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ಯಶಸ್ವಿಯಾಗಿ ನೆರವೇರಲೆಂಬ ಉದ್ದೇಶದಿಂದ ದೇಣಿಗೆ ಮೊತ್ತದ ಚೆಕ್‌ನ್ನು ದೇವಸ್ಥಾನ ಸಮಿತಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಗುರು ಹಿರಿಯರು, ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಯುವಕ ಮಿತ್ರರು ಭಾಗವಹಿಸಿ ದಂಪತಿಯನ್ನು ಗೌರವಪೂರ್ವಕವಾಗಿ ಸನ್ಮಾನಿಸಿದರು. ಈ ವೇಳೆ ಮಾತನಾಡಿದ ಗ್ರಾಮ ಹಿರಿಯರು, ಶಿಕ್ಷಕರಾಗಿ ಹಲವು ವರ್ಷಗಳ ಕಾಲ ಸಮಾಜ ಸೇವೆ ಸಲ್ಲಿಸಿದ ನೂರಂದಪ್ಪ ಕಲ್ಯಾಣಿ ಅವರು ನಿವೃತ್ತಿಯಾದ ನಂತರವೂ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮದ ಏಕತೆ, ಭಕ್ತಿಭಾವ ಮತ್ತು ಸಹಕಾರದ ಪ್ರತೀಕವಾಗಿ ಈ ದೇಣಿಗೆ ಕಾರ್ಯ ಗಮನ ಸೆಳೆದಿದ್ದು, ನೂತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ನೆರವೇರಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

ಈ ಸಂದರ್ಭದಲ್ಲಿ ಚಂದ್ರಶೇಖರಯ್ಯ ಹಿರೇಮಠ, ಆರ್.ಎನ್. ಜೋಶಿ, ಬಸಯ್ಯ ಕಪ್ಲಿಮಠ, ಪ್ರಶಾಂತ ವಾಲ್ಮೀಕಿ, ನಾಗಯ್ಯ ಹಿರೇಮಠ, ಹನುಮಂತ ರಾಮಜಿ, ರಾಚಯ್ಯ ಬಾಳಿಕಾಯಿಮಠ, ಅಂದಪ್ಪ ವಾಲ್ಮೀಕಿ, ಶರಣಪ್ಪ ಹೂಗಾರ, ರಾಮಪ್ಪ ಹೂಗಾರ, ಸಂಗಪ್ಪ ಹೂಗಾರ ಸೇರಿದಂತೆ ಊರಿನ ಹಿರಿಯರು, ಯುವಕರು ಉಪಸ್ಥಿತರಿದ್ದರು.

ನೇತ್ರದಾನ ಜಾಗೃತಿ ಜಾಥಾ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಲಯನ್ಸ್ ಕ್ಲಬ್, ಗದಗ ಐಎಂಎ, ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಗದಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಗರದಲ್ಲಿ ನೇತ್ರದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜಾಥಾ ಜರುಗಿತು.

ಗದಗ ತೋಂಟದಾರ್ಯ ಮಠದಿಂದ ಆರಂಭಗೊಂಡ ಜಾಥಾ ಮಹೇಂದ್ರಕರ ಸರ್ಕಲ್, ಟಾಂಗಾ ಕೂಟ, ಹತ್ತಿಕಾಳ ಕೂಟ, ಹಳೇ ಬಸ್ ನಿಲ್ದಾಣ, ಕೃಷ್ಣಾ ಟಾಕೀಸ್ ಮಾರ್ಗವಾಗಿ ಮರಳಿ ತೋಂಟದಾರ್ಯ ಮಠವನ್ನು ತಲುಪಿತು.

ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಗದಗ ಜಿಲ್ಲೆಯಲ್ಲಿ ಯಾರೇ ಮೃತಪಟ್ಟರೂ ಕುಟುಂಬಸ್ಥರು ತಕ್ಷಣ 9448611272, 9480193193, 9886328687, 9945865368 ಈ ನಂಬರ್‌ಗೆ ಫೋನ್ ಮಾಡಿದರೆ ನೇತ್ರದಾನ ಪ್ರಕ್ರಿಯೆ ಕೈಗೊಳ್ಳಲಾಗುವುದು. ಕಾರಣ ವ್ಯಕ್ತಿಯ ಮರಣದ ನಂತರ ಕಣ್ಣು ಮಣ್ಣಿನಲ್ಲಿ ಮಣ್ಣಾಗದೆ, ಕಣ್ಣಿಲ್ಲದವರಿಗೆ ಅವರ ಕಣ್ಣು ಕಾಣುವಂತೆ ಮಾಡಲು ಕಣ್ಣುದಾನ ಮಾಡಲು ಕುಟುಂಬಸ್ಥರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಈ ಮಾನವೀಯ ಕಾರ್ಯಕ್ಕೆ ಕೈಜೋಡಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಲಾಯಿತು.

ರ್ಯಾಲಿಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ರಾಜು ವೇರ್ಣೆಕರ, ರಾಜಣ್ಣ ಮಲ್ಲಾಡದ, ರೇಣುಕಪ್ರಸಾದ ಹಿರೇಮಠ, ಆನಂದ ಪೋತ್ನೀಸ್, ರಮೇಶ್ ಶಿಗ್ಲಿ, ನಿತೀಶ್ ಸಾಲಿ, ಡಾ. ಶ್ರೀಧರ ಕುರಡಗಿ, ಮಂಜುನಾಥ ವೀರಲಿಂಗಯ್ಯನಮಠ, ಎಸ್.ಕೆ. ಶೆಟ್ಟರ, ಅಮೀತ್‌ಚಂದ್, ಪ್ರವೀಣ ವಾರಕರ, ಪ್ರಸಾದ ಶಿಗ್ಲಿಮಠ, ಪ್ರಕಾಶ ರಾಯ್ಕರ್, ಡಾ. ಲಾವಣ್ಯ, ಡಾ. ಸುನೀತಾ ಕುರಡಗಿ, ಸುರೇಖಾ ಮಲ್ಲಾಡದ, ಸಹನಾ ಹಿರೇಮಠ ಮುಂತಾದವರಿದ್ದರು.

ಚಿಕ್ಕೋಡಿ| ಕೊಳೆತ ಡೇಟ್ಸ್ ಮಾರಾಟ: ಗ್ರಾಹಕರ ಆರೋಗ್ಯಕ್ಕೆ ಸ್ಮಾರ್ಟ್ ಬಜಾರ್ ಅಪಾಯ!

0

ಚಿಕ್ಕೋಡಿ:- ಪಟ್ಟಣದ ಚಿಕ್ಕೋಡಿಯಲ್ಲಿರುವ ರಿಲಯನ್ಸ್ ಸ್ಮಾರ್ಟ್ ಬಜಾರ್ನಲ್ಲಿ ಗ್ರಾಹಕರ ಆರೋಗ್ಯಕ್ಕೆ ಅಪಾಯ ಉಂಟುಮಾಡುವ ಗಂಭೀರ ನಿರ್ಲಕ್ಷ್ಯ ಪ್ರಕರಣ ಬೆಳಕಿಗೆ ಬಂದಿದೆ.

ಸ್ಮಾರ್ಟ್ ಬಜಾರ್‌ನಲ್ಲಿ ಫಂಗಸ್ ಹಿಡಿದ ಡೇಟ್ಸ್ ಸೇರಿದಂತೆ ಕೊಳೆತ ಆಹಾರ ಪದಾರ್ಥಗಳನ್ನು ಮಾರಾಟಕ್ಕೆ ಇಟ್ಟಿರುವುದು ಪತ್ತೆಯಾಗಿದ್ದು, ಗ್ರಾಹಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. KIMIA ಕಂಪನಿಯ ಡೇಟ್ಸ್‌ಗಳನ್ನು ಗ್ರಾಹಕರು ಖರೀದಿಸಿ ಸೇವಿಸಲು ಮುಂದಾದ ವೇಳೆ ಅವುಗಳಲ್ಲಿ ಫಂಗಸ್ ಕಂಡುಬಂದಿದೆ. ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಸ್ಮಾರ್ಟ್ ಬಜಾರ್ ಮ್ಯಾನೇಜರ್‌ರನ್ನು ಗ್ರಾಹಕರು ತರಾಟೆಗೆ ತೆಗೆದುಕೊಂಡು, ಯಾವುದೇ ಪರಿಶೀಲನೆ ಇಲ್ಲದೆ ಕೆಟ್ಟ ಗುಣಮಟ್ಟದ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಹಣ್ಣು–ತರಕಾರಿ ಸೇರಿದಂತೆ ಹಲವು ಆಹಾರ ವಸ್ತುಗಳು ಕೊಳೆತ ಸ್ಥಿತಿಯಲ್ಲಿರುವುದೂ ಕಂಡುಬಂದಿದೆ ಎನ್ನಲಾಗಿದೆ. ಈ ಗಂಭೀರ ಬೆಳವಣಿಗೆಗಳ ನಡುವೆಯೂ ಚಿಕ್ಕೋಡಿ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದ್ದು, FSSAI ಇಲಾಖೆ ಹಾಗೂ ಸ್ಮಾರ್ಟ್ ಬಜಾರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಹಕರು ಒತ್ತಾಯಿಸಿದ್ದಾರೆ.

Bengaluru Power Cut: ಬೆಂಗಳೂರಿಗರಿಗೆ ಮುಗಿಯದ ‘ಪವರ್’ ಸಮಸ್ಯೆ; ಶನಿವಾರವೂ ಈ ಏರಿಯಾಗಳಲ್ಲಿ ಇರಲ್ಲ ಕರೆಂಟ್!

0

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಶನಿವಾರವೂ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಎಲ್ಲೆಲ್ಲಿ ಪವರ್ ಕಟ್?

ಕೆಎಂಎಫ್, ವೈಎನ್‌ಕೆ ನ್ಯೂ ಟೌನ್ 208, 407 ಬಿ ಸೆಕ್ಟರ್, ಅಲ್ಲಾಳಸಂದ್ರ, ಶಾರದನಗರ, ಜನಪ್ರಿಯ, ಅನ್ರಿಯಾ, ಮಾರುತಿ ನಗರ, ಕೋಗಿಲು, ಬಿ.ಬಿ ರಸ್ತೆ ಯಲಹಂಕ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಲಿದೆ.

ಬಾಗಲೂರು ಕ್ರಾಸ್, ವೆಂಕಟಾಲ, ನಿಟ್ಟೆ ಕಾಲೇಜು, ಬಿಎಸ್‌ಎಫ್‌, ಐಎಎಫ್‌, ಇಂಟರ್‌ನ್ಯಾಷನಲ್ ಸ್ಕೂಲ್, ಕಾಗೆನ್ ಅಡ್ಯಾನ್ ಕಾಲೇಜು, ರಾಯಣ್ಣನ ಶಾಲೆ ಪಾಲನಹಳ್ಳಿ, ದ್ವಾರಕಾನಗರ ಇತ್ಯಾದಿ. ಪೂರ್ವಂಕರ ಆರ್‌ಎಂಜೆಡ್ ಗ್ಯಾಲೇರಿಯಾ, ತಿರುಮಲ ನಗರ, ಅಟ್ಟೂರು ಬಡಾವಣೆ 1ನೇ ಅಡ್ಡರಸ್ತೆ- ಯಿಂದ 10ನೇ ಅಡ್ಡರಸ್ತೆ, ಎಸ್ಕಾರ್ಟ್ಸ್ ಬಡಾವಣೆ, ದೊಡ್ಡಬೆಟ್ಟಹಳ್ಳಿ, ಟಿಪ್ಪು ಸರ್ಕಲ್, ಚಿಕ್ಕಬೆಟ್ಟಹಳ್ಳಿ, ಕಾವೇರಿ ಬಡಾವಣೆ, ಗಿರಿಧಾಮನಗರ, ಎಎಂಎಸ್ ಬಡಾವಣೆ, ಡಿಫೆನ್ಸ್‌ ಕಾಲೊನಿ, ಎಂ.ಎಸ್‌. ಪಾಳ್ಯ, ಶಿಕ್ಷಕರ ಕಾಲೊನಿ, ಬಿಇಎಲ್ 6ನೇ ಬ್ಲಾಕ್, ಎಚ್‌ಎಂಟಿ 3ನೇ ಬ್ಲಾಕ್, ಎಚ್‌ಎಂಟಿ 4ನೇ ಬ್ಲಾಕ್ ಹಾಗೂ ಎಚ್‌ಎಂಟಿ 6ನೇ ಬ್ಲಾಕ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಕಲಬುರ್ಗಿ| ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿದ್ದ ವಿದ್ಯಾರ್ಥಿ ಪ್ರಶ್ನಿಸಿದ್ದಕ್ಕೆ ಮೇಲ್ವಿಚಾರಕರ ಮೇಲೆ ಹಲ್ಲೆ!

0

ಕಲಬುರ್ಗಿ:- ನಗರದ ಡಾ. ಮಾಲಕರೆಡ್ಡಿ ಹೋಮಿಯೋಪಥಿಕ್ ಕಾಲೇಜಿನಲ್ಲಿ ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಸಹಾಯಕ ಪ್ರಾಧ್ಯಾಪಕರ ಮೇಲೆ ವಿದ್ಯಾರ್ಥಿ ಹಲ್ಲೆ ಮಾಡಿರುವ ಘಟನೆ ಜರುಗಿದೆ.

ಸಹಾಯಕ ಪ್ರಾಧ್ಯಾಪಕ ಶಿವರಾಜಕುಮಾರ್​ ಮೇಲೆ ವಿದ್ಯಾರ್ಥಿ ಶಹಬಾಜ್​​ ಎಂಬಾತನಿಂದ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಇಂದು ಡಾ.ಮಾಲಕರೆಡ್ಡಿ ಹೋಮಿಯೋಪಥಿಕ್ ಕಾಲೇಜಿನಲ್ಲಿ ಮಟೇರಿಯಾ ಮೆಡಿಕಾ ವಿಷಯದ ಇಂಟರ್ನಲ್ ಎಕ್ಸಾಮ್​ ನಡೆದಿತ್ತು. ಈ ವೇಳೆ ವಿದ್ಯಾರ್ಥಿ ಶಹಬಾಜ್​ ಮೊಬೈಲ್ ಬಳಸಿಕೊಂಡು ಕಾಪಿ ಮಾಡಲು ಮುಂದಾಗಿದ್ದ. ಇದನ್ನು ಗಮನಿಸಿದ ಪರೀಕ್ಷಾ ಮೇಲ್ವಿಚಾರಕರಾಗಿದ್ದ ಸಹಾಯಕ ಪ್ರಾಧ್ಯಾಪಕ ಶಿವರಾಜಕುಮಾರ್​, ಪ್ರಶ್ನಿಸಿ ಉತ್ತರ ಪತ್ರಿಕೆ ಪಡೆದುಕೊಂಡಿದ್ದರು.

ವಿದ್ಯಾರ್ಥಿಯನ್ನು ತಕ್ಷಣವೇ ಪರೀಕ್ಷಾ ಹಾಲ್‌ನಿಂದ ಹೊರಹೋಗುವಂತೆ ಸೂಚಿಸಿದ್ದಾರೆ. ಇದರಿಂದ ಕೋಪಗೊಂಡ ವಿದ್ಯಾರ್ಥಿ ತಕ್ಷಣ ಪ್ರಾಧ್ಯಾಪಕ ಶಿವರಾಜಕುಮಾರ್ ಅವರ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾನೆ. ಈ ಆಕಸ್ಮಿಕ ಘಟನೆಯಿಂದ ಕೆಲಕಾಲ ಕಾಲೇಜು ಆವರಣದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿತ್ತು.

ಇನ್ನು ವಿದ್ಯಾರ್ಥಿ ಶಹಬಾಜ್ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಅಲ್ಲದೇ ಮುಂದಿನ ಪರೀಕ್ಷೆಗಳಿಗೆ ಅವಕಾಶ ನೀಡದಿರಲು ಕಾಲೇಜು ಮಂಡಳಿ ನಿರ್ಧರಿಸಿದೆ ಎನ್ನಲಾಗಿದೆ.

ಪೊಲೀಸಪ್ಪನ ಕಿರುಕುಳ ತಾಳಲಾರದೇ ನೇಣಿಗೆ ಕೊರಳೊಡ್ಡಿದ ವಿಧವಾ ಮಹಿಳೆ!

0

ಶಿವಮೊಗ್ಗ:- ಜಿಲ್ಲೆಯ ಭದ್ರಾವತಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಪೊಲೀಸಪ್ಪನ ಕಾಟ ತಾಳಲಾರದೆ ವಿಧವೆ ಮಹಿಳೆ ವಾಟ್ಸಾಪ್​​ನಲ್ಲಿ ಡೆತ್ ನೋಟ್​ ಬರೆದಿಟ್ಟು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಸ್ವಾತಿ ಎಂದು ಗುರುತಿಸಲಾಗಿದೆ. ಇನ್ನು ತಂದೆ ಮತ್ತು ತಾಯಿ ಸಾವಿನಿಂದ ಹೆಣ್ಣು ಮಕ್ಕಳ್ಳಿಬ್ಬರು ಅನಾಥವಾಗಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಮೃತಳ ಹೆತ್ತವರು ಟಾರ್ಚರ್ ಕೊಟ್ಟ ಪೋಲಿಸ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಮೃತ ಸ್ವಾತಿಗೆ 7 ವರ್ಷಗಳ ಹಿಂದೆ ಮದುವೆಯಾಗಿತ್ತು. ಒಂದು ವಾರದ ಹಿಂದಷ್ಟೇ ಪತಿ ಜಗದೀಶ್ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಪೊಲೀಸ್ ಮೋಹನ್,​ ಸ್ವಾತಿಗೆ ಫೇಸ್​ಬುಕ್​ನಲ್ಲಿ ಮೆಸೇಜ್ ಮಾಡಿದ್ದ. ಆತನ ಅಕೌಂಟ್​ ಅನ್ನು ಸ್ವಾತಿ ಬ್ಲಾಕ್ ಮಾಡಿದ್ದರು. ಇದಕ್ಕೆ ಕೋಪಗೊಂಡ ಪೋಲಿಸ್ ಬೇರೆ ಅಕೌಂಟ್​ ನಿಂದ ಸ್ವಾತಿ ಬಗ್ಗೆ ಅಪಪ್ರಚಾರ ಮಾಡಿದ್ದ. ಬಳಿಕ ಈತನ ಕಾಟ ತಾಳಲಾರದೆ ಸ್ವಾತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನ್ಯೂ ಟೌನ್​​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಡೆತ್ ನೋಟ್ ನಲ್ಲಿ ಏನಿದೆ?

ಅಮ್ಮ ದಯವಿಟ್ಟು ಕ್ಷಮಿಸಿ. ನನ್ನ ಬಗ್ಗೆ ಇಲ್ಲಸಲ್ಲದ ಹಾಗೆ ಮೋಹನ್ ಅಪಪ್ರಚಾರ ಮಾಡಿದ್ದಾರೆ. ನನಗೆ ತಡಿಯುವುದಕ್ಕೆ ಆಗುತ್ತಿಲ್ಲ. ನನ್ನ ಗಂಡ ಸತ್ತಿದು ಫುಲ್ ಡ್ರಿಂಕ್ಸ್ ಮಾಡಿ. ಈ ಮೋಹನ್ ಎನ್ನುವ ಪೊಲೀಸ್ ನನ್ನ ಬಗ್ಗೆ ಜನಗಳ ಹತ್ತಿರ ಏನೇನೋ ಹೇಳಿರುವುದು ನನಗೆ ಈಗ ಬೆಳಿಗ್ಗೆ ವಿಷಯ ಗೊತಾಯ್ತು. ಅವನನ್ನು ಮಾತ್ರ ಸಮ್ಮನೇ ಬಿಡಬೇಡಿ ಎಂದಿದ್ದಾರೆ.

ಅವರು ಯಾರು ಅಂತಾನೆ ನಂಗೆ ಗೊತ್ತಿಲ್ಲ. ಫೇಸ್​ಬುಕ್​ನಲ್ಲಿ ಮೆಸೇಜ್​​ ಮಾಡಿದ್ದರು. ನಾನು ಬ್ಲಾಕ್ ಮಾಡಿದೆ. ಅದೇ ಸಿಟ್ಟಿಗೆ ಏನೇನೋ ಹೇಳಿದ್ದಾರೆ. ನನ್ನ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳಿ. ದಯವಿಟ್ಟು ಸ್ವಾರಿ ಅಮ್ಮ ಎಂದು ಬರೆದಿದ್ದಾರೆ.

ಗುಜರಾತ್‌ ನಲ್ಲಿ ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು!

0

ಗುಜರಾತ್‌: ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುಜರಾತ್ ವಲ್ಸಾದ್ ಜಿಲ್ಲೆಯ ಕಪ್ರಡಾ ತಾಲ್ಲೂಕಿನಲ್ಲಿ ನಡೆದಿದೆ. ಅತಿ ವೇಗವಾಗಿ ಬಂದ ಸರಕು ಸಾಗಣೆ ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಅಪಘಾತದ ವೇಳೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಏಳು ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಲು ಸೂಚನೆ ನೀಡಿದ್ದಾರೆ.

ಸರ್ಕಾರ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ನೀಡುತ್ತಿಲ್ಲ: ಎನ್. ರವಿಕುಮಾರ್ ಆರೋಪ

0

ಬೆಂಗಳೂರು: ಸರ್ಕಾರಿ ನೌಕರರು, ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲವಾಗಿದೆ. ನಾವು ಅಲ್ಪಸಂಖ್ಯಾತರಿಗೆ, ಮುಸಲ್ಮಾನ ಬಂಧುಗಳಿಗೆ ಮಾತ್ರ ರಕ್ಷಣೆ ಕೊಡುವುದಾಗಿ ರಾಜ್ಯ ಸರಕಾರ ಘೋಷಿಸಲಿ ಎಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜಯವಾಗಲಿ ಎಂದು ಘೋಷಣೆ ಕೂಗಿದರೂ ನಾವೇನೂ ಮಾಡುವುದಿಲ್ಲ ಎಂದು ತಿಳಿಸಿ ಎಂದು ಒತ್ತಾಯಿಸಿದರು. ಇದು ನಮ್ಮ ಸರಕಾರ ಎಂದು ಇವರಿಗೆ ಅನಿಸಿರಬೇಕು ಎಂದು ತಿಳಿಸಿದರು.

ಕರ್ನಾಟಕದಲ್ಲಿ ಹಿಂದೂ ರಾಷ್ಟ್ರೀಯ ನಾಯಕರು, ದೇವಾನುದೇವತೆಗಳ ಭಾವಚಿತ್ರದ ಮೆರವಣಿಗೆ ಮಾಡಬಾರದೆಂದು ಘೋಷಣೆ ಮಾಡಿಬಿಡಿ ಎಂದು ತಿಳಿಸಿದರು. ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಮೆರವಣಿಗೆ ಮಾತ್ರ ಮಾಡಬೇಕೆಂದು ಪ್ರಕಟಿಸಿ ಎಂದು ಹೇಳಿದರು. ಗಣಪತಿ ಉತ್ಸವ, ಶಿವಾಜಿ ಜಯಂತಿ ಬಂದಾಗ ಹೀಗಾಗುತ್ತಿದೆ. ಯಾಕೆ ಕರ್ನಾಟಕ ರಾಜ್ಯದಲ್ಲಿ ಈ ಥರ ತುಷ್ಟೀಕರಣ ಆಗುತ್ತಿದೆ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಡಿ.ಕೆ.ಶಿವಕುಮಾರ್ ಅವರ ಮೈ ಬ್ರದರರ್ಸ್ ಪಾಲಿಸಿಯಿಂದ ಹೀಗಾಗುತ್ತಿದೆ. ಹಾಗಿದ್ದರೆ ಹಿಂದೂಗಳು ನಿಮ್ಮ ಸಹೋದರರಲ್ಲವೇ ಎಂದು ಕೇಳಿದರು. ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜಯವಾಗಲಿ ಎಂದು ಘೋಷಣೆ ಕೂಗಿದಾಗ ಮುಖ್ಯಮಂತ್ರಿಗಳು ಕ್ರಮ ಕೈಗೊಂಡಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಗಮನ ಸೆಳೆದರು.

ಚಪ್ಪಲಿ ಹೊಲಿದ ಅಣ್ಣಂದಿರು, ನ್ಯಾಯ ಹೊತ್ತ ತಂಗಿ: ಪದ್ಮಾವತಿ ನಾಗಣ್ಣ ಮಾದಿಗರ ಪ್ರೇರಣಾದಾಯಕ ಸಾಧನೆ

0

ದಾಂಡೇಲಿ: ಕುಟುಂಬದ ಆರ್ಥಿಕ ಸಂಕಷ್ಟದ ನಡುವೆ ಬೆಳೆದ ಪದ್ಮಾವತಿ ನಾಗಣ್ಣ ಮಾದಿಗ ಇಂದು ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದು, ಬಡತನದ ವಿರುದ್ಧದ ಹೋರಾಟಕ್ಕೆ ಪ್ರೇರಣಾದಾಯಕ ಉದಾಹರಣೆಯಾಗಿದ್ದಾರೆ.

ತಂದೆಯ ನಿಧನದ ನಂತರ ಅಣ್ಣಂದಿರು ಜೀವನವನ್ನೇ ತಂಗಿಯ ಶಿಕ್ಷಣಕ್ಕೆ ಅರ್ಪಿಸಿದರು. ರಸ್ತೆ ಬದಿಯಲ್ಲಿ ಚಪ್ಪಲಿ ಹೊಲಿಯುತ್ತಾ ಅವಳ ಕನಸಿಗೆ ಬೆಂಬಲ ನೀಡಿದರು.

ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ಪದ್ಮಾವತಿ, ಇಂಗ್ಲಿಷ್ ಅಡೆತಡೆಯನ್ನು ಮೀರಿ ಕಾನೂನು ಪದವಿ ಪಡೆದು ನ್ಯಾಯಾಂಗ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡಿದ್ದಾರೆ.

ಮಾದಿಗ ಸಮುದಾಯದ ಉತ್ತರ ಕನ್ನಡ ಜಿಲ್ಲೆಯ ಮೊದಲ ಮಹಿಳಾ ನ್ಯಾಯಾಧೀಶೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪದ್ಮಾವತಿ, “ಕನ್ನಡ ಮಾಧ್ಯಮದಲ್ಲೂ ದೊಡ್ಡ ಸಾಧನೆ ಸಾಧ್ಯ” ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ.

error: Content is protected !!