Home Blog

ಸಿಡಿಲು ಬಡಿದು ವೃದ್ಧೆ ಸಾವು; ನೀರಿನಲ್ಲಿ ಮುಳುಗಿ ನಾಲ್ವರು ದುರ್ಮರಣ

0

ಹಾಸನ: ಜಿಲ್ಲೆಯಲ್ಲಿ ಮಳೆ-ಗಾಳಿ ತೀವ್ರಗೊಂಡಿರುವ ಹಿನ್ನೆಲೆ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು ಐವರು ಸಾವನ್ನಪ್ಪಿರುವ ದುರ್ಘಟನೆಗಳು ಸಂಭವಿಸಿವೆ.

ಆಲೂರು ತಾಲೂಕಿನಲ್ಲಿನ ಘಟನೆಯಲ್ಲಿ, ಜಾನುವಾರು ಮೇಯಿಸಲು ತೆರಳಿದ್ದ ನೀಲಮ್ಮ (70) ಮಳೆಯಿಂದ ರಕ್ಷಣೆ ಪಡೆಯಲು ಮರದ ಬಳಿ ಆಶ್ರಯ ಪಡೆದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಸ್ಥಳಕ್ಕೆ ಚೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದೆಡೆ, ಭಾರೀ ಮಳೆ ಮತ್ತು ಬಿರುಗಾಳಿಯಿಂದ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿ ಹೋಬಳಿಯ ಕಾರೆಹಳ್ಳಿ, ನಾಗರನವಿಲೆ, ಚಿಕ್ಕೋನಹಳ್ಳಿ ಹಾಗೂ ರೇಚಿಹಳ್ಳಿ ರಸ್ತೆಗಳುದ್ದಕ್ಕೂ ಸುಮಾರು 20ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ಪರಿಣಾಮವಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಚೆಸ್ಕಾಂ ಸಿಬ್ಬಂದಿ ದಿನಪೂರ್ತಿ ಮರ ತೆರವು ಕಾರ್ಯಾಚರಣೆ ನಡೆಸಿದರು.

ಇದರ ಜೊತೆಗೆ, ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ನಿಲಗುಂದ-ಹೊಸಳ್ಳಿ ಗ್ರಾಮದ ಕೆರೆಯಲ್ಲಿ ಜಾನುವಾರುಗಳ ಮೈ ತೊಳೆಯಲು ತೆರಳಿದ್ದ ವೇಳೆ ಕಾಲು ಜಾರಿ ನೀರಿಗೆ ಬಿದ್ದ ಅಳಿಯ ಪ್ರತೀಕ್ (10) ಮತ್ತು ಮಾವ ಪ್ರಭಾಕರ್ (45) ಈಜು ಬರದೇ ಮುಳುಗಿ ಮೃತಪಟ್ಟಿದ್ದಾರೆ. ಬೇಸಿಗೆ ರಜೆ ಹಿನ್ನೆಲೆಯಲ್ಲಿ ಪ್ರತೀಕ್ ಮಾವನ ಮನೆಗೆ ಬಂದಿದ್ದ ಎನ್ನಲಾಗಿದೆ.

ಮತ್ತೊಂದು ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲೂ ಸಂಭವಿಸಿದ್ದು, ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮಳೆಗಾಲದ ಅವಘಡಗಳಿಂದ ಜನರು ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ.

ಕೇಂದ್ರ ಸರ್ಕಾರ ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿದೆ: ಸಿಎಂ ಸಿದ್ದರಾಮಯ್ಯ ಆರೋಪ

ಚಾಮರಾಜನಗರ: ಕೇಂದ್ರ ಸರ್ಕಾರ ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿಕೊಂಡು ತನಿಖಾ ದಾಳಿಗಳನ್ನು ನಡೆಸುತ್ತಿದೆ, ಬಿಜೆಪಿಯವರ ಮೇಲೆ ಇಂತಹ ಕ್ರಮಗಳು ಕಾಣಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಗುಂಡ್ಲುಪೇಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ನಡೆಸಿದ ದಾಳಿ ಕುರಿತು ಪ್ರತಿಕ್ರಿಯಿಸಿ ಈ ಆರೋಪ ಮಾಡಿದರು.

ಮೂಢನಂಬಿಕೆಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಚಾಮರಾಜನಗರಕ್ಕೆ ಬಂದರೆ ಕುರ್ಚಿ ಹೋಗುತ್ತದೆ ಎಂಬ ಮಾತು ತಪ್ಪು. ನಾನು ಇಲ್ಲಿ ಹಲವು ಬಾರಿ ಭೇಟಿ ನೀಡಿದ್ದೇನೆ. ಇಲ್ಲಿಗೆ ಬಂದರೆ ಕುರ್ಚಿ ಗಟ್ಟಿಯಾಗುತ್ತದೆ ಎಂದು ಪ್ರಾಸಂಗಿಕವಾಗಿ ಹೇಳಿದ್ದೆ ಎಂದರು. ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದ ಅವರು, ಮೊದಲು ವಿರೋಧಿಸಿದ್ದವರೇ ಈಗ ಅದನ್ನು ಅನುಸರಿಸುತ್ತಿದ್ದಾರೆ. ಗ್ಯಾರಂಟಿಗಳು ಬಡವರ ಪರ ಯೋಜನೆಗಳೆಂಬುದು ಅವರಿಗೆ ಈಗ ಅರಿವಾಗಿದೆ ಎಂದು ಹೇಳಿದರು.

ನಾರಿ ಶಕ್ತಿ ವಂದನ್ ಮಸೂದೆ ಕುರಿತು ಬಿಜೆಪಿ ಮಾಡಿದ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ, ಮಹಿಳಾ ಮೀಸಲಾತಿಗೆ ವಿರೋಧಿಗಳು ಬಿಜೆಪಿಯವರೇ. ರಾಜೀವ್‌ ಗಾಂಧಿ ಅವಧಿಯಲ್ಲಿ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ತರಲಾಗಿತ್ತು. ಆದರೆ ಅದನ್ನು ರಾಜ್ಯಸಭೆಯಲ್ಲಿ ತಡೆದವರು ಬಿಜೆಪಿಯವರೇ ಎಂದು ಹೇಳಿದರು. ನಮ್ಮ ವಿರೋಧ ಕ್ಷೇತ್ರ ಮರುವಿಂಗಡಣೆಗೆ ಮಾತ್ರ, ಮಹಿಳಾ ಮೀಸಲಾತಿಗೆ ಅಲ್ಲ ಎಂದು ಸ್ಪಷ್ಟಪಡಿಸಿದರು.

ತೃತೀಯ ಭಾಷೆಗೆ ಅಂಕ ನೀಡುವ ವಿಚಾರದಲ್ಲಿ ನ್ಯಾಯಾಲಯದ ನಿರ್ದೇಶನವನ್ನು ಪಾಲಿಸಲಾಗುವುದು. ಹಿಂದಿನ ವರ್ಷಗಳಂತೆ ಮೌಲ್ಯಮಾಪನ ಮಾಡಿ ಅಂಕ ನೀಡಬೇಕು ಎಂದು ಉಚ್ಚ ನ್ಯಾಯಾಲಯ ಸೂಚಿಸಿರುವುದಾಗಿ ಹೇಳಿದರು.

ಅಲ್ಪಸಂಖ್ಯಾತರು ಹೈಕಮಾಂಡ್ಗೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿ, ನಿರ್ಧಾರ ಕೈಗೊಳ್ಳುವಾಗ ಅವರೇ ಉಪಸ್ಥಿತರಿದ್ದರು. ನಂತರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ಇದೇ ವೇಳೆ, ದಾವಣಗೆರೆ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಮುಂಬೈ ಇಂಡಿಯನ್ಸ್ ಭರ್ಜರಿ ಜಯ: ‘ಇದು ತಂಡದ ಟರ್ನಿಂಗ್ ಪಾಯಿಂಟ್’ ಎಂದ ಹಾರ್ದಿಕ್ ಪಾಂಡ್ಯ

0

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ನ 30ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಭರ್ಜರಿ ಗೆಲುವು ಸಾಧಿಸಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡ 20 ಓವರ್‌ಗಳಲ್ಲಿ 199 ರನ್ ಗಳಿಸಿತು.

ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು ಕೇವಲ 15.5 ಓವರ್‌ಗಳಲ್ಲಿ 100 ರನ್‌ಗಳಿಗೆ ಆಲೌಟ್ ಆಗಿ, ಮುಂಬೈ ಇಂಡಿಯನ್ಸ್‌ಗೆ 99 ರನ್‌ಗಳ ಭಾರೀ ಜಯ ಒಲಿಯಿತು.

ಪಂದ್ಯದ ಬಳಿಕ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ, ಈ ಗೆಲುವು ಕೇವಲ ಎರಡು ಅಂಕಗಳಲ್ಲ, ಇದು ತಂಡದ ಆತ್ಮವಿಶ್ವಾಸವನ್ನು ಬದಲಿಸುವ ಟರ್ನಿಂಗ್ ಪಾಯಿಂಟ್. ಮುಂದಿನ ಪಂದ್ಯಗಳಲ್ಲಿ ಇದರ ಪರಿಣಾಮ ಕಾಣುತ್ತದೆ ಎಂದು ಹೇಳಿದರು.

ಯುವ ಆಟಗಾರರ ಪ್ರದರ್ಶನವನ್ನು ವಿಶೇಷವಾಗಿ ಶ್ಲಾಘಿಸಿದ ಅವರು, ತಿಲಕ್ ವರ್ಮಾ ಅವರ ಬ್ಯಾಟಿಂಗ್ ತಂಡದ ಗೆಲುವಿಗೆ ಪ್ರಮುಖ ಕಾರಣ ಎಂದರು. ತಿಲಕ್ ಅದ್ಭುತ ಪ್ರತಿಭಾವಂತ. ಚೆಂಡನ್ನು ನೋಡಿ ಹೊಡೆಯುವಂತೆ ಹೇಳಿದ್ದೆ, ಅದನ್ನು ಅವರು ನಿಖರವಾಗಿ ಅನುಸರಿಸಿದರು ಎಂದು ಹೇಳಿದರು.

ಇದಲ್ಲದೆ, ಚೊಚ್ಚಲ ಪಂದ್ಯವಾಡಿದ ಕ್ರಿಶ್ ಹಾಗೂ ನಾಲ್ಕು ವಿಕೆಟ್ ಪಡೆದ ಅಶ್ವನಿ ಅವರ ಶಿಸ್ತಿನ ಬೌಲಿಂಗ್ ಗೆಲುವಿಗೆ ಬಲವಾಯಿತು. ಈ ಜಯದ ಶ್ರೇಯಸ್ಸು ನಮ್ಮ ಯುವ ಆಟಗಾರರದ್ದು ಎಂದು ಪಾಂಡ್ಯ ಹೇಳಿದರು.

ಬುಮ್ರಾ ಅವರಿಗೆ ಮೊದಲ ಓವರ್ ನೀಡಿದ ಬಗ್ಗೆ ಮಾತನಾಡಿದ ಪಾಂಡ್ಯ, ಬುಮ್ರಾ ವಿಶೇಷ ಬೌಲರ್. ತಂಡಕ್ಕೆ ಯಾವಾಗ ಅಗತ್ಯವೋ ಅಲ್ಲಿ ಬಳಸುತ್ತೇವೆ. ಇಂದು ಆರಂಭದಲ್ಲೇ ವಿಕೆಟ್ ಬೇಕಿತ್ತು, ಅದಕ್ಕಾಗಿ ಅವರನ್ನು ಬಳಸಿದೆವು. ಇದು ತಂಡದ ನಿರ್ಧಾರ ಎಂದು ಸ್ಪಷ್ಟಪಡಿಸಿದರು.

ಪಂದ್ಯದ ನಂತರ ದಣಿದಂತೆ ಕಾಣಿಸಿದ ಬಗ್ಗೆ ಪ್ರತಿಕ್ರಿಯಿಸಿದ ಪಾಂಡ್ಯ, ಪಂದ್ಯದುದ್ದಕ್ಕೂ ನಾನು ಜೋರಾಗಿ ಕಿರುಚುತ್ತಿದ್ದೆ. ಒಂದು ಕ್ಷಣ ತಲೆ ಸುತ್ತಿದಂತೆ ಅನಿಸಿತು. ಆದರೆ ತಂಡದಲ್ಲಿ ಉತ್ಸಾಹ ತುಂಬುವುದು ಅಗತ್ಯವಿತ್ತು ಎಂದು ಹೇಳಿದರು.

ಮೋದಿ ಒಬ್ಬ ಭಯೋತ್ಪಾದಕ- ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ, ಬಿಜೆಪಿ ಆಕ್ರೋಶ

0

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ರಾಜಕೀಯ ತಾಪಮಾನ ಮಧ್ಯೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಎಐಡಿಎಂಕೆ-ಬಿಜೆಪಿ ಮೈತ್ರಿಯನ್ನು ಟೀಕಿಸುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಭಯೋತ್ಪಾದಕ’ ಎಂದು ಕರೆದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, ಎಐಡಿಎಂಕೆ ಪಕ್ಷವು ಮೋದಿಯವರೊಂದಿಗೆ ಕೈಜೋಡಿಸಿರುವುದನ್ನು ಪ್ರಶ್ನಿಸಿ, ಸಮಾನತೆ ಮತ್ತು ನ್ಯಾಯದ ಮೌಲ್ಯಗಳನ್ನು ಬಿಜೆಪಿ ಪಾಲಿಸುತ್ತಿಲ್ಲ ಎಂದು ಆರೋಪಿಸಿದರು. ಈ ವೇಳೆ ಬಳಸಿದ ಪದಪ್ರಯೋಗ ತೀವ್ರ ಪ್ರತಿಕ್ರಿಯೆ ಹುಟ್ಟಿಸಿದೆ.

ಈ ಹೇಳಿಕೆಯನ್ನು ಬಿಜೆಪಿ ಖಂಡಿಸಿದ್ದು, ರಾಜಕೀಯ ಶಿಷ್ಟಾಚಾರ ಮೀರಲಾಗಿದೆ ಎಂದು ಆರೋಪಿಸಿದೆ. ವಿವಾದ ತೀವ್ರಗೊಂಡ ಬೆನ್ನಲ್ಲೇ ಖರ್ಗೆ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

ಮೋದಿಯವರು ತಮ್ಮ ವಿರೋಧಿಗಳನ್ನು ಬೆದರಿಸುತ್ತಾರೆ ಎಂಬ ಅರ್ಥದಲ್ಲಿ ‘ಭಯೋತ್ಪಾದಕ’ ಎಂಬ ಪದ ಬಳಸಿದ್ದಾಗಿ ಹೇಳಿದ ಖರ್ಗೆ, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ತಿಳಿಸಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗದ ಬಗ್ಗೆ ತಾವು ಹೇಳಲು ಯತ್ನಿಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

ರಬ್ಬರ್ ತೋಟದಲ್ಲಿ ಸುಟ್ಟ ಅಸ್ಥಿಪಂಜರ ಪತ್ತೆ: ಕೊಲೆ ಶಂಕೆ

ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಅರಳಿಕೊಪ್ಪ ಗ್ರಾಮದಲ್ಲಿ ರಬ್ಬರ್ ತೋಟವೊಂದರಲ್ಲಿ ಯುವಕನ ಅಸ್ಥಿಪಂಜರ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಸಂಚಲನ ಮೂಡಿಸಿದೆ. ಘಟನೆಗೆ ಕೊಲೆ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಅರಳಿಕೊಪ್ಪ ನಿವಾಸಿ ಎಲ್ಡೋ ಅವರಿಗೆ ಸೇರಿದ ತೋಟದಲ್ಲಿ ಈ ಅಸ್ಥಿಪಂಜರ ಪತ್ತೆಯಾಗಿದೆ. ಶವ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಮೂಳೆಗಳು ಮಾತ್ರ ಉಳಿದಿರುವ ಸ್ಥಿತಿ ಕಂಡುಬಂದಿದೆ. ತೋಟದ ಕೆಲಸಗಾರರು ಈ ದೃಶ್ಯ ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪತ್ತೆಯಾದ ಅಸ್ಥಿಪಂಜರವು ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಕೇರಳ ಮೂಲದ ಕಾರ್ಮಿಕ ಬಿಬಿನ್‌ನದ್ದಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಬಿಬಿನ್ ಇದೇ ತೋಟದಲ್ಲಿ ಕೆಲಸ ಮಾಡುತ್ತಿದ್ದನು. ಘಟನೆ ಸ್ಥಳದಲ್ಲಿ ಅವನು ಬಳಸುತ್ತಿದ್ದ ಜರ್ಕಿನ್ ಪತ್ತೆಯಾಗಿರುವುದು ಅನುಮಾನಕ್ಕೆ ಬಲ ನೀಡಿದೆ. ಈ ಸಂಬಂಧ ಬಿಬಿನ್ ಕುಟುಂಬಸ್ಥರು ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯ್ಮಾ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಸುಟ್ಟು ಸಾಕ್ಷ್ಯ ನಾಶಪಡಿಸಲು ಯತ್ನಿಸಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡುಬಂದಿದೆ.

ಎಫ್‌ಎಸ್‌ಎಲ್ ತಂಡದ ಸಹಾಯದಿಂದ ತನಿಖೆ ಮುಂದುವರಿದಿದ್ದು, ಪ್ರಕರಣದ ಸೂಕ್ಷ್ಮ ತನಿಖೆ ನಡೆಯುತ್ತಿದೆ. ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆಹಚ್ಚುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್‌ಗೆ ಮತ್ತೊಂದು ಶಾಕ್: IPL ಟೂರ್ನಿಯಿಂದ ಯುವ ಬ್ಯಾಟ್ಸ್ʼಮನ್ ಔಟ್!

0

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್-19ರಲ್ಲಿ ಸೋಲು-ಗೆಲುವಿನ ಹೋರಾಟದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಯುವ ಸ್ಫೋಟಕ ಬ್ಯಾಟರ್ ಆಯುಷ್ ಮ್ಹಾತ್ರೆ ಗಾಯಗೊಂಡು ಟೂರ್ನಿಯಿಂದಲೇ ಹೊರಗುಳಿದಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ, ಚೆನ್ನೈ ಸೂಪರ್ ಕಿಂಗ್ಸ್​  ಪರ ಆಡುತ್ತಿದ್ದ ಆಯುಷ್ ಮ್ಹಾತ್ರೆ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರನ್ ಓಡುವಾಗ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ನಂತರ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಗಾಯ ಗಂಭೀರವಾಗಿರುವುದು ದೃಢಪಟ್ಟಿದೆ.

ವೈದ್ಯಕೀಯ ವರದಿಯ ಪ್ರಕಾರ, ಸಂಪೂರ್ಣ ಗುಣಮುಖರಾಗಲು ಕನಿಷ್ಠ 6 ರಿಂದ 12 ವಾರಗಳ ವಿಶ್ರಾಂತಿ ಅಗತ್ಯವಿದೆ. ಈ ಹಿನ್ನೆಲೆ ಐಪಿಎಲ್‌ನ ಉಳಿದ ಪಂದ್ಯಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ.

ಈ ಸೀಸನ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದ ಆಯುಷ್ ಮ್ಹಾತ್ರೆ, 6 ಪಂದ್ಯಗಳಲ್ಲಿ 177.88 ಸ್ಟ್ರೈಕ್ ರೇಟ್‌ನಲ್ಲಿ 201 ರನ್ ಗಳಿಸಿ ತಂಡದ ಪರ ಅಗ್ರ ರನ್‌ಸ್ಕೋರರ್ ಆಗಿದ್ದರು. ಅವರ ಅನುಪಸ್ಥಿತಿ ಸಿಎಸ್‌ಕೆ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ.

ಇದೀಗ ಅವರ ಬದಲಿಗೆ ಹೊಸ ಆಟಗಾರನನ್ನು ತಂಡದಲ್ಲಿ ಸೇರಿಸಿಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್‌ಮೆಂಟ್ ಚಿಂತನೆ ನಡೆಸುತ್ತಿದೆ.

ಇ.ಡಿ ದಾಳಿ ಹಿನ್ನೆಲೆ: ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿ ದಾಳಿ: ಸಿಎಂ ಸಿದ್ದರಾಮಯ್ಯ ಆರೋಪ

ಚಾಮರಾಜನಗರ: ಕೇಂದ್ರ ಸರ್ಕಾರ ಕಾಂಗ್ರೆಸ್ ನಾಯಕರನ್ನು ಮಾತ್ರ ಗುರಿಯಾಗಿಸಿಕೊಂಡು ತನಿಖಾ ದಾಳಿಗಳನ್ನು ನಡೆಸುತ್ತಿದೆ, ಆದರೆ ಬಿಜೆಪಿ ನಾಯಕರ ಮೇಲೆ ಅಂತಹ ಕ್ರಮಗಳು ಕಾಣುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ ನಲಪಾಡ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸಿದ ಕುರಿತು ಕೇಳಿದ ಪ್ರಶ್ನೆಗೆ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದರು.

ಗುಂಡ್ಲುಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ತಾನು ಮೂಢನಂಬಿಕೆಗಳಲ್ಲಿ ನಂಬಿಕೆ ಇರಿಸಿಕೊಳ್ಳುವುದಿಲ್ಲ. ಚಾಮರಾಜನಗರಕ್ಕೆ ಹಲವು ಬಾರಿ ಭೇಟಿ ನೀಡುತ್ತಿರುವುದೂ ಅದಕ್ಕಾಗಿಯೇ ಎಂದು ಹೇಳಿದರು. “ಇಲ್ಲಿ ಬಂದರೆ ಕುರ್ಚಿ ಗಟ್ಟಿಯಾಗುತ್ತದೆ” ಎಂಬ ಮಾತು ಪ್ರಾಸಂಗಿಕವಾಗಿ ಹೇಳಿದ್ದೆ ಎಂದು ಸ್ಪಷ್ಟಪಡಿಸಿದರು.

ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಇದನ್ನು ವಿರೋಧಿಸುತ್ತಿದ್ದವರೇ ಈಗ ಅದೇ ಯೋಜನೆಗಳನ್ನು ಘೋಷಿಸುತ್ತಿದ್ದಾರೆ. ಗ್ಯಾರಂಟಿಗಳು ಬಡವರ ಪರ ಕಾರ್ಯಕ್ರಮಗಳು ಎಂಬುದು ಅವರಿಗೆ ಈಗ ಅರ್ಥವಾಗಿದೆ ಎಂದು ಹೇಳಿದರು.

ಮಹಿಳಾ ಮೀಸಲಾತಿ ವಿಚಾರದಲ್ಲಿ ಬಿಜೆಪಿಯ ಆರೋಪಗಳಿಗೆ ತಿರುಗೇಟು ನೀಡಿದ ಸಿಎಂ, “ಬಿಜೆಪಿಯವರೇ ಮಹಿಳಾ ಮೀಸಲಾತಿ ವಿರೋಧಿಗಳು” ಎಂದು ಆರೋಪಿಸಿದರು. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ವೇಳೆ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೊಂಡಿತು. ಆದರೆ ಅದನ್ನು ರಾಜ್ಯಸಭೆಯಲ್ಲಿ ವಿರೋಧಿಸಿದವರು ಇದೇ ಬಿಜೆಪಿ ಪಕ್ಷದವರು ಎಂದು ಹೇಳಿದರು.

ಇನ್ನು ಎನ್‌ಡಿಎ ಸರ್ಕಾರ ರಾಜಕೀಯ ಉದ್ದೇಶದಿಂದ ಕ್ಷೇತ್ರ ಮರುವಿಂಗಡಣೆ ಸೇರಿಸಿ ಮೀಸಲಾತಿ ಮಸೂದೆ ಮಂಡಿಸಿದೆ. ನಮ್ಮ ವಿರೋಧ ಕ್ಷೇತ್ರ ಮರುವಿಂಗಡಣೆಗೆ ಮಾತ್ರ, ಮಹಿಳಾ ಮೀಸಲಾತಿಗೆ ಅಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

ಬಾಗಲಕೋಟೆ- ಕಾರಿನೊಳಗೆ ವ್ಯಕ್ತಿಯ ಸಾವಿಗೆ ಬಿಗ್ ಟ್ವಿಸ್ಟ್: ಅನೈತಿಕ ಸಂಬಂಧಕ್ಕೆ ಕೃಷಿಕನ ಬರ್ಬರ ಹತ್ಯೆ

0

ಬಾಗಲಕೋಟೆ: ಕನ್ನೊಳ್ಳಿ ಗ್ರಾಮದಲ್ಲಿ ಕಾರಿನೊಳಗೆ ದಹನಗೊಂಡು ಸಾವನ್ನಪ್ಪಿದ್ದ ವ್ಯಕ್ತಿಯ ಪ್ರಕರಣಕ್ಕೆ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಸಿಕ್ಕಿದೆ. ಇದು ಆಕಸ್ಮಿಕ ಘಟನೆ ಅಲ್ಲ, ಅನೈತಿಕ ಸಂಬಂಧದ ವೈಷಮ್ಯದಿಂದ ನಡೆದ ಕೊಲೆ ಎಂಬುದು ಸ್ಪಷ್ಟವಾಗಿದೆ.

ಸೋಮು ಪಡಸಲಗಿ ಎಂಬ ಕೃಷಿಕನನ್ನು ಸದಾಶಿವ ಪಡಸಲಗಿ ಹಾಗೂ ಅವನ ಸಹಚರರಾದ ರವಿ ಪಾಟಿಲ್ ಮತ್ತು ನಾವಿ ಸೇರಿ ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಮೊದಲು ಕಾರನ್ನು ತಡೆದು ಸೋಮು ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಕೊಂದು, ಬಳಿಕ ಶವಕ್ಕೆ ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ ಹಚ್ಚಿದ್ದಾರೆ.

ಸುಮಾರು ಮೂರು ವರ್ಷಗಳಿಂದ ಸೋಮು ಮತ್ತು ಸದಾಶಿವ ಪತ್ನಿ ನಡುವೆ ಸಂಬಂಧವಿದ್ದುದರಿಂದ ಇಬ್ಬರ ನಡುವೆ ವೈಷಮ್ಯ ಮುಂದುವರಿದಿತ್ತು. ಇದೇ ಹಿನ್ನೆಲೆ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ.

ಘಟನೆಯ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಇನ್ನಷ್ಟು ವಿವರಗಳು ಹೊರಬರುವ ಸಾಧ್ಯತೆ ಇದೆ.

ಪ್ರೇಯಸಿಯ ಮನೆಗೆ ನುಗ್ಗಿ ಪೆಟ್ರೋಲ್ ಸುರಿದುಕೊಂಡು ಪ್ರಿಯಕರ ಆತ್ಮಹತ್ಯೆ: ಯುವತಿಗೆ ಬೆಂಕಿ ಹಚ್ಚಲು ಯತ್ನ

0

ಬೆಂಗಳೂರು: ಪ್ರೇಮ ಸಂಬಂಧದ ಗಲಾಟೆ ಭೀಕರ ಅಂತ್ಯ ಕಂಡ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನಾಪುರದಲ್ಲಿ ನಡೆದಿದೆ. ಪ್ರೇಯಸಿಯ ಮನೆಗೆ ನುಗ್ಗಿದ ಯುವಕ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಯುವತಿಗೂ ಬೆಂಕಿ ಹಚ್ಚಲು ಯತ್ನಿಸಿರುವ ಘಟನೆ ಆತಂಕ ಮೂಡಿಸಿದೆ.

ಮೃತನನ್ನು ಕಿರಣ್ ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ ಮತ್ತು ಯುವತಿ ನಡುವೆ ಸ್ನೇಹ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ. ಮಂಗಳವಾರ ಯುವತಿಯ ತಾಯಿ ಮತ್ತು ಅಣ್ಣ ಮನೆಯಲ್ಲಿ ಇಲ್ಲದ ಸಮಯದಲ್ಲಿ ಕಿರಣ್ ಮನೆಗೆ ತೆರಳಿ ಮಾತನಾಡಲು ಯತ್ನಿಸಿದ್ದಾನೆ.

ಮಾತಿನ ಚಕಮಕಿಯ ನಡುವೆ ಗಲಾಟೆ ತೀವ್ರಗೊಂಡಿದ್ದು, ಕಿರಣ್ ತನ್ನ ಬಳಿ ತಂದಿದ್ದ ಪೆಟ್ರೋಲ್ ಅನ್ನು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಬಳಿಕ ಯುವತಿಗೂ ಬೆಂಕಿ ಹಚ್ಚಲು ಯತ್ನಿಸಿದ್ದು, ತಪ್ಪಿಸಿಕೊಳ್ಳುವ ವೇಳೆ ಆಕೆಗೆ ಸಣ್ಣಪುಟ್ಟ ಸುಟ್ಟಗಾಯಗಳಾಗಿವೆ.

ಬೆಂಕಿಯ ತೀವ್ರತೆಗೆ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರೀತಿಯಲ್ಲಿ ಉಂಟಾದ ಮನಸ್ತಾಪವೇ ಈ ದುರಂತಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಸಂಪುಟ ಪುನರ್ ರಚನೆ ಮಾಡಬೇಕೆಂದು ಹೈಕಮಾಂಡ್ ಗೆ ಮನವಿ ಮಾಡಿದ್ದೇವೆ: ನಾರಾಯಣಸ್ವಾಮಿ

ಬೆಂಗಳೂರು: ರಾಜ್ಯ ಸಚಿವ ಸಂಪುಟವನ್ನು ಪುನರ್‌ರಚನೆ ಮಾಡಬೇಕೆಂದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಕಾಂಗ್ರೆಸ್ ಶಾಸಕ ಬಂಗಾರಪೇಟೆ ನಾರಾಯಣಸ್ವಾಮಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ದೆಹಲಿಗೆ ತೆರಳಿ ಖರ್ಗೆ ಅವರನ್ನು ಭೇಟಿಯಾಗಿದ್ದು, ಸಂಪುಟ ಪುನರ್‌ರಚನೆ ಕುರಿತು ಮನವಿ ಮಾಡಲಾಗಿದೆ. ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಖರ್ಗೆ ಭರವಸೆ ನೀಡಿದ್ದಾರೆ. ಮೇ ಮೊದಲ ವಾರದಲ್ಲಿ ಪುನರ್‌ರಚನೆ ಸಾಧ್ಯತೆ ಇರುವುದಾಗಿ ಸೂಚನೆ ನೀಡಿದ್ದಾರೆ ಎಂದರು.

ಸಂಪುಟ ಪುನರ್‌ರಚನೆ ಸಿಎಂ ಪರಮಾಧಿಕಾರವಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಚರ್ಚಿಸಲಾಗುವುದು ಎಂದು ಖರ್ಗೆ ಹೇಳಿದ್ದಾರೆ ಎಂದು ವಿವರಿಸಿದರು.

ನಾಯಕತ್ವ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ನಾಯಕತ್ವ ಬದಲಾವಣೆ ಬೇಡಿಕೆ ಇಟ್ಟಿಲ್ಲ, ಆ ವಿಷಯವನ್ನು ಹೈಕಮಾಂಡ್‌ಗೆ ಬಿಟ್ಟಿದ್ದೇವೆ. ನಾವು ಕೇವಲ ಸಂಪುಟ ವಿಸ್ತರಣೆ ಬಗ್ಗೆ ಮಾತ್ರ ಮನವಿ ಮಾಡಿದ್ದೇವೆ ಎಂದು ನಾರಾಯಣಸ್ವಾಮಿ ಸ್ಪಷ್ಟಪಡಿಸಿದರು.

ಇನ್ನು ಅಲ್ಪಸಂಖ್ಯಾತ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಜೀರ್, ಜಬ್ಬಾರ್ ಹಾಗೂ ಜಮೀರ್ ಅವರ ವಿರುದ್ಧ ಪಕ್ಷವಿರೋಧಿ ಚಟುವಟಿಕೆ ನಡೆಸಿದ ದೃಢ ದಾಖಲೆಗಳಿಲ್ಲ. ಸಣ್ಣಪುಟ್ಟ ತಪ್ಪುಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಹೇಳಿದರು.

error: Content is protected !!