Home Blog

ಸಹಪಾಠಿಯ ಕಿರುಕುಳ ಆರೋಪ: ಶಾಲಾ ಕಟ್ಟಡದಿಂದ ಜಿಗಿದು 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ?

ಬೀದರ್: ಚಿಟಗುಪ್ಪಾ ತಾಲೂಕಿನ ಭೆಮಳಖೇಡ ಗ್ರಾಮದಲ್ಲಿ ಶಾಲಾ ಕಟ್ಟಡದಿಂದ ಜಿಗಿದು 16 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

ಮೃತ ಬಾಲಕಿಯನ್ನು ಮದಿಯಾ ನಶೀರ್ ಪಾಷಾ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಭೆಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದಿಯಾ ಚಿಕ್ಕಪ್ಪ ಎಂ.ಡಿ. ಯೂಸುಫ್ ತಿಳಿಸಿದಂತೆ, ಸಹಪಾಠಿ ಲವ್ ಮಾಡುವಂತೆ ಕಿರುಕುಳ ನೀಡಿದ್ದಕ್ಕೆ ಮದಿಯಾ ನಶೀರ್ ಪಾಷಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಬಾಲಕಿಯ ಮೇಲೆ ನಡೆದ ಹಿಂಸೆ ಹಾಗೂ ಕಿರುಕುಳದ ದೃಶ್ಯಗಳು ಸಿಸಿ ಕ್ಯಾಮರಾಗಳಲ್ಲಿ ಸೆರೆಹಿಡಿದಿವೆ.

ಪೊಲೀಸರು ಘಟನೆ ಕುರಿತು ತನಿಖೆ ಮುಂದುವರೆಸಿದ್ದಾರೆ..

ಕೊಪ್ಪಳ: ಮಲ್ಲಾಪುರದಲ್ಲಿ ಹಾಡಹಗಲೇ ಚಿರತೆ ಓಡಾಟ, ಗ್ರಾಮಸ್ಥರಲ್ಲಿ ಆತಂಕ!

ಕೊಪ್ಪಳ: ಗಂಗಾವತಿ ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ ಹಗಲು ಹೊತ್ತಿನಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದೆ.

ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ಮಾತ್ರ ಕಾಣಿಸಿಕೊಳ್ಳುವ ಚಿರತೆ ಹಗಲು ವೇಳೆ ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಮಲ್ಲಾಪುರವು ತುಂಗಭದ್ರಾ ನದಿಯ ಸಮೀಪದಲ್ಲಿರುವುದರಿಂದ, ನದಿಯ ಆಸುಪಾಸಿನ ಪ್ರದೇಶಗಳಿಂದ ಚಿರತೆ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಗ್ರಾಮಸ್ಥರು ಚಿರತೆಯ ಸಂಚಾರ ಹೆಚ್ಚುತ್ತಿರುವುದರಿಂದ ಜಾನುವಾರುಗಳಿಗೆ ಅಪಾಯ ಉಂಟಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಕೂಡಲೇ ಮಾಹಿತಿ ನೀಡಿದ್ದು, ಚಿರತೆಯನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಬೋನ್ ಅಳವಡಿಸುವಂತೆ ಮನವಿ ಮಾಡಿದ್ದಾರೆ.

ಮಾನಸಿಕವಾಗಿ ಬಲಿಷ್ಠರಾಗಲು ಏನು ಮಾಡಬೇಕು? ಚಾಣಕ್ಯರ ಈ ಕಿವಿಮಾತುಗಳನ್ನು ಪಾಲಿಸಿ!

0

ಮಾನಸಿಕ ಶಕ್ತಿ ಸಾಧಿಸುವುದು ಯಶಸ್ಸಿನ ಹಾಗೂ ಧೈರ್ಯದಿಂದ ಬದುಕಲು ಅನಿವಾರ್ಯ.

ದೈಹಿಕವಾಗಿ ಬಲಿಷ್ಠರಾಗಲು ವ್ಯಾಯಾಮ ಮಾಡಬೇಕೆನ್ನುವುದೇ ಇದ್ದಂತೆ, ಮನಸ್ಸಿನ ಶಕ್ತಿಯನ್ನು ಹೆಚ್ಚಿಸಲು ಕೆಲ ತತ್ವಗಳನ್ನು ಪಾಲಿಸುವುದು ಅಗತ್ಯ. ಚಾಣಕ್ಯರ ಹೇಳಿಕೆಯಲ್ಲಿ ಈ ತತ್ತ್ವಗಳನ್ನು ಅನುಸರಿಸುವುದರಿಂದ ನಮ್ಮ ಆಲೋಚನೆ, ನಂಬಿಕೆಗಳು ಮತ್ತು ಜೀವನ ಶೈಲಿ ಸಂಪೂರ್ಣವಾಗಿ ಬದಲಾಯಿಸಬಹುದು, ಜೊತೆಗೆ ನಮ್ಮ ಗುರಿಗಳನ್ನು ಸಾಧಿಸುವ ಶಕ್ತಿ ಬರುತ್ತದೆ.

ಮಾನಸಿಕವಾಗಿ ಸದೃಢರಾಗಲು ಮುಖ್ಯವಾದ ಕ್ರಮಗಳು:

  1. ಪ್ರತಿದಿನ ಯೋಚಿಸುವ ಅಭ್ಯಾಸ:
    ದೇಹವನ್ನು ಫಿಟ್ ಮಾಡಿಕೊಳ್ಳಲು ಪ್ರತಿದಿನ ವ್ಯಾಯಾಮ ಮಾಡುವಂತೆ, ನಮ್ಮ ಮನಸ್ಸನ್ನು ಬಲಪಡಿಸಲು ಪ್ರತಿದಿನ ಒಳ್ಳೆಯ ಆಲೋಚನೆಗಳನ್ನು ಯೋಚಿಸುವ ಅಭ್ಯಾಸ ಮಾಡಬೇಕು. ನಿರ್ಧಾರ ತೆಗೆದುಕೊಳ್ಳುವುದು, ಸವಾಲುಗಳನ್ನು ವಿಶ್ಲೇಷಿಸುವುದು, ಮತ್ತು ಮನಸ್ಸನ್ನು ಶಾಂತವಾಗಿಡುವ ಬಗ್ಗೆ ಯೋಚಿಸಲು ಸ್ವಲ್ಪ ಸಮಯ ಮೀಸಲು ಮಾಡಬೇಕು. ಈ ಅಭ್ಯಾಸ ನಿಮ್ಮನ್ನು ತಾಳ್ಮೆಯುಳ್ಳ, ಬುದ್ಧಿವಂತ ವ್ಯಕ್ತಿಯಾಗಿ ರೂಪಿಸುತ್ತದೆ.
  2. ಸ್ವಾವಲಂಬನೆ:
    ಚಾಣಕ್ಯರ ಪ್ರಕಾರ, ನಿಮ್ಮ ಸಮಸ್ಯೆಗಳನ್ನು ಸ್ವತಃ ಪರಿಹರಿಸಲು ಪ್ರಯತ್ನಿಸಿದಾಗ, ನಿಮ್ಮ ಮನಸ್ಸು ಬಲಗೊಳ್ಳುತ್ತದೆ. ಇತರರ ಮೇಲೆ ಅವಲಂಬನೆ ಹೆಚ್ಚಾದರೆ, ಆತ್ಮವಿಶ್ವಾಸ ಕುಗ್ಗುತ್ತದೆ. ಸಣ್ಣ ಜವಾಬ್ದಾರಿಗಳನ್ನು ನಿಜವಾಗಿ ತೆಗೆದುಕೊಂಡು ಸಾಧಿಸಿದಾಗ, ನೀವು ಮಾನಸಿಕವಾಗಿ ಬಲಿಷ್ಠರಾಗುತ್ತೀರಿ.
  3. ಸಮಯದ ಸದುಪಯೋಗ:
    ಸಮಯ ಅತ್ಯಂತ ಅಮೂಲ್ಯವಾದದ್ದು. ಮಾನಸಿಕವಾಗಿ ಬಲಿಷ್ಠರಾದವರು ಸಮಯವನ್ನು ಗೌರವಿಸುತ್ತಾರೆ, ನಿಷ್ಪ್ರಯೋಜಕ ವಿಷಯಗಳಿಗೆ ವ್ಯರ್ಥ ಮಾಡುವುದಿಲ್ಲ. ಸಮಯಕ್ಕೆ ಎಚ್ಚರಗೊಳ್ಳುವುದು, ಕೆಲಸಗಳಿಗೆ ಆದ್ಯತೆ ನೀಡುವುದು ಮತ್ತು ಪ್ರತಿಯೊಂದು ಕೆಲಸವನ್ನು ಸಮಯಕ್ಕೆ ಪೂರ್ಣಗೊಳಿಸುವ ಅಭ್ಯಾಸವು ವ್ಯಕ್ತಿಯನ್ನು ಬಲಿಷ್ಠಗೊಳಿಸುತ್ತದೆ.
  4. ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ:
    ಹತಾಶೆ, ಭಯ, ಕೋಪ ಇತ್ಯಾದಿ ನಕಾರಾತ್ಮಕ ಭಾವನೆಗಳು ಮನಸ್ಸನ್ನು ದುರ್ಬಲಗೊಳಿಸುತ್ತವೆ. ಚಾಣಕ್ಯರ ಪ್ರಕಾರ, ನಾವು ಸಕಾರಾತ್ಮಕವಾಗಿ ಯೋಚಿಸಿದರೆ, ಯಾವುದೇ ಸವಾಲನ್ನು ಧೈರ್ಯದಿಂದ ಎದುರಿಸಬಹುದು ಮತ್ತು ಯಶಸ್ವಿಯಾಗಬಹುದು.
  5. ಹೊಸ ವಿಷಯಗಳನ್ನು ಕಲಿಯಿರಿ:
    ನಿರಂತರವಾಗಿ ಹೊಸ ವಿಷಯಗಳನ್ನು ಕಲಿಯುವುದು ಮತ್ತು ಜ್ಞಾನವನ್ನು ವಿಸ್ತರಿಸುವುದು ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೊಸ ಪುಸ್ತಕಗಳನ್ನು ಓದುವುದು, ಹಿಂದಿನ ಅನುಭವಗಳಿಂದ ಪಾಠ ಕಲಿಯುವುದು, ಹಾಗೂ ಇತರರಿಂದ ಒಳ್ಳೆಯದನ್ನೇ ಕಲಿಯುವ ಪ್ರಯತ್ನವು ನಿಮ್ಮ ಮನಸ್ಸನ್ನು ಬಲಿಷ್ಠಗೊಳಿಸುತ್ತದೆ.

ಮನಸ್ಸು ಬಲಿಷ್ಠವಾಗಿರಬೇಕು ಎಂಬುದು ಜೀವನದಲ್ಲಿ ಯಶಸ್ಸಿನ ಮತ್ತು ಧೈರ್ಯ ಜೀವನದ ಪ್ರಮುಖ ಅಂಶ. ಚಾಣಕ್ಯರ ತತ್ತ್ವಗಳನ್ನು ಪಾಲಿಸುವ ಮೂಲಕ, ನಾವು ನಮ್ಮ ಮನಸ್ಸನ್ನು ಸದೃಢಗೊಳಿಸಬಹುದು, ಸವಾಲುಗಳನ್ನು ಧೈರ್ಯದಿಂದ ಎದುರಿಸಬಹುದು ಮತ್ತು ಜೀವನದಲ್ಲಿ ನಮ್ಮ ಗುರಿಗಳನ್ನು ಸಾಧಿಸಬಹುದು.

ಮಾರ್ಚ್ 28 ರಿಂದ ಐಪಿಎಲ್ ಹಬ್ಬ: ಮೊದಲ ಹಂತದ 20 ಪಂದ್ಯಗಳ ವೇಳಾಪಟ್ಟಿ ಪ್ರಕಟ!

0

ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಆವೃತ್ತಿಯ ಮೊದಲ ಹಂತದ ಪಂದ್ಯಗಳ ವೇಳಾಪಟ್ಟಿ ಪ್ರಕಟವಾಗಿದೆ.

20 ಪಂದ್ಯಗಳ ವೇಳಾಪಟ್ಟಿ ಕ್ರಿಕೆಟ್ ಪ್ರೇಮಿಗಳಿಗೆ ಸಂಭ್ರಮವನ್ನು ತಂದುಕೊಡುತ್ತಿದೆ. ಐಪಿಎಲ್ ಹಬ್ಬ ಮಾರ್ಚ್ 28ರಿಂದ ಪ್ರಾರಂಭವಾಗಲಿದ್ದು, ಮೊದಲ ಉದ್ಘಾಟನಾ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾತ್ರಿ 7.30ಕ್ಕೆ ನಡೆಯಲಿದೆ.

ದೇಶದ ಮೂರು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಸದ್ಯಕ್ಕೆ ಮೊದಲ 20 ದಿನಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಿದೆ. ಚುನಾವಣಾ ದಿನಾಂಕಗಳು ಘೋಷಣೆಯಾದ ನಂತರ ಟೂರ್ನಿಯ ಉಳಿದ ಪಂದ್ಯಗಳ ಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂಜಾಬ್ ಕಿಂಗ್ಸ್ ಅವರನ್ನು ಸೋಲಿಸಿ ಚಾಂಪಿಯನ್ ಆಗಿದ್ದರು. ಆದರೆ ಸಂಭ್ರಮಾಚರಣೆ ವೇಳೆ 11 ಅಭಿಮಾನಿಗಳು ಮೃತಪಟ್ಟಿದ್ದರಿಂದ ಬೆಂಗಳೂರಿನಲ್ಲಿ ಐಪಿಎಲ್ ನಡೆಸದಿರಲು ಕರ್ನಾಟಕ ಸರ್ಕಾರ ನಿರ್ಧರಿಸಿತ್ತು. ಅಲ್ಲದೆ ಆರ್​ಸಿಬಿ ಕೂಡ ಬೆಂಗಳೂರಿನಲ್ಲಿ ತನ್ನ ತವರು ಪಂದ್ಯಗಳನ್ನು ನಡೆಸದಿರಲು ನಿರ್ಧರಿಸಿತ್ತು. ಆದರೆ ಕೆಎಸ್​ಸಿಎ ಹೊಸ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹಾಗೂ ತಂಡ ಕರ್ನಾಟಕ ಸರ್ಕಾರ ಹಾಗೂ ಆರ್​ಸಿಬಿ ಮ್ಯಾನೇಜ್​ಮೆಂಟ್ ಒಪ್ಪಿಸುವಲ್ಲಿ ಸಫಲವಾಗಿದ್ದು, ಐಪಿಎಲ್​ ಮೂಲಕವೇ ರದ್ದಾಗಿದ್ದ ಕ್ರಿಕೆಟ್​ ಇದೀಗ ಐಪಿಎಲ್ ಮೂಲಕವೇ ಚಿನ್ನಸ್ವಾಮಿಗೆ ಮರಳುತ್ತಿವೆ.

ಮೊದಲ ಹಂತದ ಪಂದ್ಯಗಳ ವೇಳಾಪಟ್ಟಿ:

  • ಮಾರ್ಚ್ 28: RCB vs ಸನ್‌ರೈಸರ್ಸ್ ಹೈದರಾಬಾದ್ – ಎಂ. ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
  • ಮಾರ್ಚ್ 29: ಮುಂಬೈ ಇಂಡಿಯನ್ಸ್ vs ಕೊಲ್ಕತ್ತಾ ನೈಟ್ ರೈಡರ್ಸ್ – ವಾಂಖೇಡೆ
  • ಮಾರ್ಚ್ 30: ರಾಜಸ್ಥಾನ್ ರಾಯಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್ – ಗುವಾಹಟಿ
  • ಮಾರ್ಚ್ 31: ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟನ್ಸ್ – ನ್ಯೂ ಚಂಡೀಗಡ
  • ಏಪ್ರಿಲ್ 1: ಲಕ್ನೋ ಸೂಪರ್ ಜೈಂಟ್ಸ್ vs ಆರ್‌ಸಿಬಿ – ಲಕ್ನೋ
  • ಏಪ್ರಿಲ್ 2: ಕೊಲ್ಕತ್ತಾ vs ಸನ್‌ರೈಸರ್ಸ್ ಹೈದರಾಬಾದ್ – ಕೊಲ್ಕತ್ತಾ
  • ಏಪ್ರಿಲ್ 3: ಚೆನ್ನೈ vs ಪಂಜಾಬ್ ಕಿಂಗ್ಸ್ – ಚೆನ್ನೈ
  • ಏಪ್ರಿಲ್ 4: ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ – ಡೆಲ್ಲಿ
  • ಏಪ್ರಿಲ್ 4: ಗುಜರಾತ್ ಟೈಟನ್ಸ್ vs ರಾಜಸ್ಥಾನ್ ರಾಯಲ್ಸ್ – ಅಹಮದಾಬಾದ್
  • ಏಪ್ರಿಲ್ 5: ಸನ್‌ರೈಸರ್ಸ್ ಹೈದರಾಬಾದ್ vs ಲಕ್ನೋ ಸೂಪರ್ ಜೈಂಟ್ಸ್ – ಹೈದರಾಬಾದ್
  • ಏಪ್ರಿಲ್ 5: ಆರ್‌ಸಿಬಿ vs ಚೆನ್ನೈ ಸೂಪರ್ ಕಿಂಗ್ಸ್ – ಬೆಂಗಳೂರು
  • ಏಪ್ರಿಲ್ 6: ಕೊಲ್ಕತ್ತಾ vs ಪಂಜಾಬ್ ಕಿಂಗ್ಸ್ – ಕೊಲ್ಕತ್ತಾ
  • ಏಪ್ರಿಲ್ 7: ರಾಜಸ್ಥಾನ್ vs ಮುಂಬೈ – ಗುವಾಹಟಿ
  • ಏಪ್ರಿಲ್ 8: ಡೆಲ್ಲಿ vs ಗುಜರಾತ್ – ಡೆಲ್ಲಿ
  • ಏಪ್ರಿಲ್ 9: ಕೊಲ್ಕತ್ತಾ vs ಲಕ್ನೋ – ಕೊಲ್ಕತ್ತಾ
  • ಏಪ್ರಿಲ್ 10: ರಾಜಸ್ಥಾನ್ vs ಆರ್‌ಸಿಬಿ – ಗುವಾಹಟಿ
  • ಏಪ್ರಿಲ್ 11: ಪಂಜಾಬ್ ಕಿಂಗ್ಸ್ vs ಸನ್‌ರೈಸರ್ಸ್ ಹೈದರಾಬಾದ್ – ನ್ಯೂ ಚಂಡೀಗಡ
  • ಏಪ್ರಿಲ್ 11: ಚೆನ್ನೈ vs ಡೆಲ್ಲಿ ಕ್ಯಾಪಿಟಲ್ಸ್ – ಚೆನ್ನೈ
  • ಏಪ್ರಿಲ್ 12: ಲಕ್ನೋ vs ಗುಜರಾತ್ – ಲಕ್ನೋ
  • ಏಪ್ರಿಲ್ 12: ಮುಂಬೈ vs ಆರ್‌ಸಿಬಿ – ಮುಂಬೈ

ಐಪಿಎಲ್ ಪ್ರೇಮಿಗಳಿಗೆ ಈ ಮೊದಲ ಹಂತದ ಪಂದ್ಯಗಳು ಕ್ರಿಕೆಟ್ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುವಂತಿವೆ.

ಹಾರ್ಡ್ ಲ್ಯಾಂಡಿಂಗ್: ವಿಮಾನದ ಮುಂಭಾಗದ ಚಕ್ರಕ್ಕೆ ಹಾನಿ! ಪ್ರಯಾಣಿಕರು ಸೇಫ್

0

ಫುಕೆಟ್: ಹೈದರಾಬಾದ್‌ನಿಂದ ಫುಕೆಟ್‌ಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಫುಕೆಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಾರ್ಡ್ ಲ್ಯಾಂಡಿಂಗ್ ಅನುಭವಿಸಿದೆ. ಇದರಿಂದ ವಿಮಾನದ ಮುಂಭಾಗದ ನೋಸ್ ಗೇರ್‌ಗೆ ಭಾರೀ ಹಾನಿಯಾಗಿದೆ.

ಬೋಯಿಂಗ್ 737 MAX 8 ವಿಮಾನದಲ್ಲಿ 133 ಪ್ರಯಾಣಿಕರು, ಇದರಲ್ಲಿ ಇಬ್ಬರು ಮಕ್ಕಳು ಹಾಗೂ 7 ಸಿಬ್ಬಂದಿ ಇದ್ದರು. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ವಿಮಾನದಿಂದ ಸ್ಥಳಾಂತರಿಸಲ್ಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂಲಗಳು ತಿಳಿಸಿದಂತೆ, ಲ್ಯಾಂಡಿಂಗ್ ಸಮಯದಲ್ಲಿ ವಿಮಾನದ ಮುಂಭಾಗದ ಚಕ್ರ ಮುರಿದು, ವಿಮಾನವು ರನ್‌ವೇ ಉದ್ದಕ್ಕೆ ಜಾರಿತು. ಈ ಘಟನೆಯ ನಂತರ ವಿಮಾನ ನಿಲ್ದಾಣದ ಅಧಿಕಾರಿಗಳು ರನ್‌ವೇ ಅನ್ನು ಹಲವು ಘಂಟೆಗಳ ಕಾಲ ಮುಚ್ಚಿದ್ದರು.

ತುರ್ತು ಪ್ರತಿಕ್ರಿಯೆ ತಂಡಗಳು ಸ್ಥಳಕ್ಕೆ ಧಾವಿಸಿ ವಿಮಾನದಲ್ಲಿದ್ದ ಪ್ರಯಾಣಿಕರ ಸುರಕ್ಷತೆಗೆ ಕ್ರಮ ಕೈಗೊಂಡು ಪ್ರದೇಶವನ್ನು ಸುರಕ್ಷಿತಗೊಳಿಸಿದ್ದರು. ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು, “ಮಾರ್ಚ್ 11ರಂದು ಹೈದರಾಬಾದ್‌ನಿಂದ ಫುಕೆಟ್‌ಗೆ ಹೋಗುವ ವಿಮಾನವು ಇಳಿಯುವಾಗ ನೋಸ್ ವೀಲ್ ಸಮಸ್ಯೆ ಅನುಭವಿಸಿತು. ಪ್ರಯಾಣಿಕರು ಎಲ್ಲಾ ಸುರಕ್ಷಿತರಿದ್ದಾರೆ” ಎಂದು ತಿಳಿಸಿದ್ದಾರೆ.

ಪ್ರಾಥಮಿಕ ತಪಾಸಣೆಯಲ್ಲಿ, ಹಾರ್ಡ್ ಲ್ಯಾಂಡಿಂಗ್ ಪರಿಣಾಮದಿಂದ ವಿಮಾನದ ನೋಸ್ ಗೇರ್‌ಗೆ ಹಾನಿ ಸಂಭವಿಸಿದ್ದುದಾಗಿ ತಿಳಿದುಬಂದಿದೆ.

5 ಲಕ್ಷ ಲಂಚ ಪ್ರಕರಣದಲ್ಲಿ ರಿಲೀಫ್: ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿಗೆ ಜಾಮೀನು ಮಂಜೂರು!

ಬೆಂಗಳೂರು/ಗದಗ : 5 ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ ಆರೋಪದಲ್ಲಿ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿಗೆ ಬಿಗ್ ರಿಲೀಫ್ ಸಿಕ್ಕಿದೆ.

ಫೆಬ್ರವರಿಯಲ್ಲಿ ಗುತ್ತಿಗೆದಾರನಿಂದ ಸುಮಾರು ಐದು ಲಕ್ಷ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಶಾಸಕರನ್ನು ರೆಡ್ ಹ್ಯಾಂಡ್ ಆಗಿ ಲಾಕ್ ಮಾಡಲಾಗಿತ್ತು. ಕಳೆದ 15 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ಅವರಿಗೆ, 2 ಲಕ್ಷ ರೂ. ಗಳ ವೈಯಕ್ತಿಕ ಬಾಂಡ್ ಮತ್ತು ಇಬ್ಬರು ಶ್ಯೂರಿಟಿ ಪಡೆದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ​ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಶಾಸಕನ ವಿರುದ್ಧ ಲಂಚ ಬೇಡಿಕೆ ಆರೋಪ:

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸಂಕಧಾಳ ಗ್ರಾಮದ ರಸ್ತೆ ಬದಿಯ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕರು 11 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿತ್ತು.

ಅಲ್ಲದೇ ಕಮಿಷನ್ ಕೊಟ್ಟರೆ ಮಾತ್ರ ಕಾಮಗಾರಿ ಎಂದು ಶಾಸಕ ಗುತ್ತಿಗೆದಾರರಿಗೆ ಧಮ್ಕಿ ಹಾಕಿದ್ದರು. ಒಂದು ವೇಳೆ 12 ಪರ್ಸೆಂಟ್​​ ಕಮಿಷನ್ ನೀಡದಿದ್ದರೆ ಟೆಂಡರ್ ರದ್ದು ಮಾಡಿ ರೌಡಿಗಳನ್ನು ಕಳುಹಿಸುವ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಗುತ್ತಿಗೆದಾರ ವಿಜಯ್​ ಪೂಜಾರ​, ಶಾಸಕ ಡಾ. ಚಂದ್ರು ಲಮಾಣಿ ವಿರುದ್ಧ ಲೋಕಾಯುಕ್ತಗೆ ದೂರು ನೀಡಿದ್ದರು.

ಲೋಕಾಯುಕ್ತ ಎಸ್​ಪಿ ಸಿದ್ದಲಿಂಗಪ್ಪ ಅವರ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ಡಾ. ಚಂದ್ರು ಲಮಾಣಿ ಅವರ ಒಡೆತನದ ಆಸ್ಪತ್ರೆಯ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಐದು ಲಕ್ಷ ಹಣ ಲಂಚ ಸ್ವೀಕರಿಸುವಾಗ ಶಾಸಕ ಚಂದ್ರು ಲಮಾಣಿ ಲೋಕಾ ಬಲೆಗೆ ಬಿದ್ದಿದ್ದರು.

ನಂತರ,  ಅವರನ್ನು ಬಂಧಿಸಿ ಬೆಂಗಳೂರಿನಲ್ಲಿರುವ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಇದೀಗ ಶಾಸಕರಿಗೆ ಜಾಮೀನು ಸಿಕ್ಕಿದೆ.

ಉದ್ಘಾಟನೆಗೆ 6 ತಿಂಗಳು: ಫ್ಲೈಓವರ್ ಗೋಡೆ ಕುಸಿತ, ಹೆದ್ದಾರಿಯಲ್ಲಿ ಆತಂಕ!

0

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಪೂರ್ವ ಬರ್ದ್ವಾನ್ ಜಿಲ್ಲೆಯ ಮೆಮರಿ ಪ್ರದೇಶದಲ್ಲಿರುವ ರಾಷ್ಟ್ರೀಯ ಹೆದ್ದಾರಿ-19ರ ಫ್ಲೈಓವರ್ ಗೋಡೆ ಕುಸಿದು ಬಿದ್ದ ಘಟನೆ ಮಂಗಳವಾರ ನಡೆದಿದೆ.

ಕೇವಲ ಆರು ತಿಂಗಳ ಹಿಂದಷ್ಟೇ ಉದ್ಘಾಟನೆಯಾಗಿದ್ದ ಈ ಫ್ಲೈಓವರ್‌ನ ಭಾಗ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ. ಮಾಹಿತಿ ಪ್ರಕಾರ, ರಸ್ತೆಯ ಸುಮಾರು 50ರಿಂದ 60 ಅಡಿಗಳಷ್ಟು ಭಾಗ ಕುಸಿದು ಬಿದ್ದಿದ್ದು, ಕೊಲ್ಕತ್ತಾಕ್ಕೆ ಹೋಗುವ ಲೇನ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಜನಸಂಚಾರ ಹೆಚ್ಚಿರುವ ಈ ಎಕ್ಸ್‌ಪ್ರೆಸ್‌ವೇಯಲ್ಲಿ ಅಚಾನಕ್ ಗೋಡೆ ಕುಸಿದ ಪರಿಣಾಮ ಸ್ಥಳದಲ್ಲಿದ್ದ ಪಾದಚಾರಿಗಳು ಹಾಗೂ ವಾಹನ ಸವಾರರು ಭಯಭೀತರಾದರು.

ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಹಾಗೂ ಆಡಳಿತಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಇದೀಗ ಫ್ಲೈಓವರ್ ನಿರ್ಮಾಣದಲ್ಲಿ ಕಡಿಮೆ ಗುಣಮಟ್ಟದ ವಸ್ತುಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಸಮಗ್ರ ತನಿಖೆ ನಡೆಸಿ ಹೊಣೆಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್: ಮಲೆ ಮಹದೇಶ್ವರ ಬೆಟ್ಟದಲ್ಲಿ ಅನ್ನದಾಸೋಹ ಸ್ಥಗಿತ?

ಚಾಮರಾಜನಗರ: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧ ಪರಿಸ್ಥಿತಿಯ ಪರಿಣಾಮವಾಗಿ ದೇಶದ ಹಲವೆಡೆ ಗ್ಯಾಸ್ ಸಿಲಿಂಡರ್ ಕೊರತೆ ಎದುರಾಗುತ್ತಿರುವ ಹಿನ್ನೆಲೆ, ಇದರ ಪ್ರಭಾವ ಈಗ ಮಲೆ ಮಹದೇಶ್ವರ ಬೆಟ್ಟಕ್ಕೂ ತಲುಪಿದೆ.

ಯುಗಾದಿ ಜಾತ್ರೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಅನ್ನದಾಸೋಹ ಹಾಗೂ ಲಾಡು ಪ್ರಸಾದ ತಯಾರಿಕೆಗೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಪ್ರತಿ ದಿನ ಸಾವಿರಾರು ಭಕ್ತರು ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಅನ್ನದಾಸೋಹದಲ್ಲಿ ಪ್ರಸಾದ ಸ್ವೀಕರಿಸುತ್ತಾರೆ. ಇದೇ ವೇಳೆ ಲಾಡು ಪ್ರಸಾದ ತಯಾರಿಕೆಗೆ ಸಹ ಸಾಕಷ್ಟು ಗ್ಯಾಸ್ ಸಿಲಿಂಡರ್ ಅಗತ್ಯವಿರುತ್ತದೆ. ದಿನಕ್ಕೆ ಸುಮಾರು 12ಕ್ಕೂ ಹೆಚ್ಚು ಸಿಲಿಂಡರ್‌ಗಳನ್ನು ಅನ್ನದಾಸೋಹ ಮತ್ತು ಲಾಡು ತಯಾರಿಕೆಗೆ ಬಳಸಲಾಗುತ್ತಿದೆ. ಸದ್ಯಕ್ಕೆ ಒಂದು ವಾರದವರೆಗೆ ಯಾವುದೇ ಸಮಸ್ಯೆ ಇಲ್ಲದಿದ್ದರೂ, ಗ್ಯಾಸ್ ಕೊರತೆ ಇದೇ ರೀತಿಯಲ್ಲಿ ಮುಂದುವರಿದರೆ ದಾಸೋಹ ಹಾಗೂ ಲಾಡು ಪ್ರಸಾದ ತಯಾರಿಕೆಯನ್ನು ಸ್ಥಗಿತಗೊಳಿಸುವ ಪರಿಸ್ಥಿತಿ ಎದುರಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಪ್ರತಿ ವರ್ಷ ಮೂರು ಬಾರಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಬೃಹತ್ ಜಾತ್ರಾಮಹೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಪಾದಯಾತ್ರೆ ಮೂಲಕ ಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಜಾತ್ರೆಯ ವೇಳೆ ಕೇವಲ ಅನ್ನದಾಸೋಹಕ್ಕೆ ದಿನಕ್ಕೆ 12ರಿಂದ 15 ಸಿಲಿಂಡರ್ ಅಗತ್ಯವಿರುತ್ತದೆ. ಅದೇ ರೀತಿ ಸುಮಾರು 2.5 ಲಕ್ಷ ಲಾಡು ತಯಾರಿಕೆಗೆ ದಿನಕ್ಕೆ 20ಕ್ಕೂ ಹೆಚ್ಚು ಸಿಲಿಂಡರ್ ಬಳಸಲಾಗುತ್ತದೆ.

ಗ್ಯಾಸ್ ಸಿಲಿಂಡರ್ ಕೊರತೆ ಮುಂದುವರಿದರೆ ಯುಗಾದಿ ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಲಾಡು ಪ್ರಸಾದ ಹಾಗೂ ಅನ್ನದಾಸೋಹ ಸೇವನೆ ಅಲಭ್ಯವಾಗುವ ಸಾಧ್ಯತೆ ಇದೆ. ಈ ಕುರಿತು ಮಲೆ ಮಹದೇಶ್ವರ ಪ್ರಾಧಿಕಾರದ ಕಾರ್ಯದರ್ಶಿ ರಘು ಅವರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಮಧ್ಯಪ್ರಾಚ್ಯದ ಯುದ್ಧದ ಪರಿಣಾಮ ಯುದ್ಧದಲ್ಲಿ ಭಾಗಿಯಾಗದ ದೇಶಗಳ ಮೇಲೂ ಪರಿಣಾಮ ಬೀರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಲವರ್ ಜೊತೆ ಠಾಣೆ ಮೆಟ್ಟಿಲೇರಿದ ಕುಂಭಮೇಳದ ಮೊನಾಲಿಸಾ: ಪೋಷಕರ ವಿರುದ್ದವೇ ದೂರು!

0

ಕುಂಭಮೇಳದಲ್ಲಿ ರುದ್ರಾಕ್ಷ ಮಾಲೆ ಮಾರುತ್ತಿದ್ದ ವೇಳೆ ತೆಗೆದ ಒಂದು ಫೋಟೋ ವೈರಲ್ ಆಗಿ ದೇಶಾದ್ಯಂತ ಪರಿಚಿತರಾದ ಯುವತಿ ಮೊನಾಲಿಸಾ ಭೋಸ್ಲೆ ಇದೀಗ ಕೇರಳದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ತಮ್ಮ ಪೋಷಕರು ಬಲವಂತವಾಗಿ ಮದುವೆ ಮಾಡಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಮಧ್ಯಪ್ರದೇಶದ ಇಂದೋರ್ ಮೂಲದ ಮೊನಾಲಿಸಾ ಭೋಸ್ಲೆ ಪ್ರಸ್ತುತ ಸಿನಿಮಾ ಚಿತ್ರೀಕರಣದ ನಿಮಿತ್ತ ಕೇರಳಕ್ಕೆ ಬಂದಿದ್ದರು. ಈ ವೇಳೆ ತಿರುವನಂತಪುರದ ಥಂಪನೂರು ಪೊಲೀಸ್ ಠಾಣೆಗೆ ತಮ್ಮ ಬಾಯ್‌ಫ್ರೆಂಡ್ ಜೊತೆ ಭೇಟಿ ನೀಡಿದ ಅವರು, ಪೋಷಕರು ತಮ್ಮ ಮೇಲೆ ಮಾನಸಿಕ ಒತ್ತಡ ಹೇರುತ್ತಿದ್ದು ಬಲವಂತದ ಮದುವೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮೊನಾಲಿಸಾ ಮಹಾರಾಷ್ಟ್ರ ಮೂಲದ ಫರ್ಮಾನ್ ಖಾನ್ ಅವರನ್ನು ಕಳೆದ ಒಂದೂವರೆ ವರ್ಷಗಳಿಂದ ಪ್ರೀತಿಸುತ್ತಿದ್ದು, ಅವರೊಡನೆ ವಿವಾಹವಾಗಲು ನಿರ್ಧರಿಸಿದ್ದಾರೆ. ಆದರೆ ಈ ಅಂತರ್ಧರ್ಮೀಯ ವಿವಾಹಕ್ಕೆ ಮೊನಾಲಿಸಾ ಅವರ ತಂದೆ ವಿಜಯ್ ಸಿಂಗ್ ಭೋಸ್ಲೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ತಮ್ಮ ಮೇಲೆ ಯಾವುದೇ ದೈಹಿಕ ಹಿಂಸೆ ನಡೆದಿಲ್ಲವಾದರೂ ಮಾನಸಿಕ ಒತ್ತಡ ಹೆಚ್ಚಾಗಿರುವುದರಿಂದ ರಕ್ಷಣೆ ನೀಡುವಂತೆ ಅವರು ಪೊಲೀಸರನ್ನು ಕೋರಿದ್ದಾರೆ.

ಮೊನಾಲಿಸಾ ಅವರ ದೂರನ್ನು ಸ್ವೀಕರಿಸಿರುವ ಪೊಲೀಸರು, ಆಕೆ ವಯಸ್ಕಳಾಗಿರುವುದರಿಂದ ತನ್ನ ಜೀವನದ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಅವಳಿಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಆಕೆಯ ತಂದೆಯನ್ನು ಕರೆಸಿ ಮಾತುಕತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಈ ಪ್ರೇಮಿಗಳಿಗೆ ಕೇರಳದ ಕೆಲವು ಸ್ಥಳೀಯ ರಾಜಕೀಯ ನಾಯಕರು ಸಹ ಬೆಂಬಲ ವ್ಯಕ್ತಪಡಿಸಿರುವುದಾಗಿ ಹೇಳಲಾಗಿದೆ.

ಕುಂಭಮೇಳದಲ್ಲಿ ವೈರಲ್ ಆದ ನಂತರ ಮೊನಾಲಿಸಾ ಭೋಸ್ಲೆಗೆ ಹಲವು ಸಿನಿಮಾಗಳ ಅವಕಾಶಗಳು ದೊರೆತಿವೆ. ಸದ್ಯ ಅವರು ‘ನಾಗಮ್ಮ’ ಎಂಬ ಮಲಯಾಳಂ ಚಿತ್ರ ಹಾಗೂ ‘ಲೈಫ್’ ಎಂಬ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಪರ್‌ಫ್ಯೂಮ್ ಹಾಕಿದ್ರೂ ಪ್ರಯೋಜನ ಇಲ್ಲವಾ? ಬೆವರಿನ ವಾಸನೆ ಕಡಿಮೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ!

0

ಬೇಸಿಗೆಯಲ್ಲಿ ಉಷ್ಣತೆ ಹೆಚ್ಚಾಗುವುದರಿಂದ ದೇಹದಲ್ಲಿ ಬೆವರು ಹೆಚ್ಚಾಗಿ ಬರುತ್ತದೆ. ಇದರ ಪರಿಣಾಮವಾಗಿ ಕೆಲವರಿಗೆ ಮೈತುರಿಕೆ, ಬೆವರು ಸಾಲೆ ಮತ್ತು ದುರ್ವಾಸನೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಈ ಬೆವರಿನ ವಾಸನೆಯಿಂದ ಅನೇಕರು ಮುಜುಗರಕ್ಕೊಳಗಾಗುವ ಸಂದರ್ಭವೂ ಉಂಟಾಗುತ್ತದೆ. ಪರ್‌ಫ್ಯೂಮ್‌ ಬಳಸಿದರೂ ಸಹ ಕೆಲವೊಮ್ಮೆ ಈ ಸಮಸ್ಯೆ ನಿವಾರಣೆಯಾಗದೇ ಇರುವುದು ಸಾಮಾನ್ಯವಾಗಿದೆ. ಆದರೆ ಕೆಲವು ಸರಳ ಆಹಾರ ಪದ್ಧತಿ ಮತ್ತು ಜೀವನಶೈಲಿಯನ್ನು ಅನುಸರಿಸುವ ಮೂಲಕ ಬೇಸಿಗೆಯಲ್ಲಿ ಬೆವರಿನ ದುರ್ವಾಸನೆಯನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.

ಮೆಂತ್ಯ ಬೀಜಗಳನ್ನು ಕೆಲವು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಆ ನೀರನ್ನು ಕುಡಿಯುವುದರಿಂದ ದೇಹ ನಿರ್ವಿಷೀಕರಣಗೊಳ್ಳುತ್ತದೆ ಹಾಗೂ ಬೆವರಿನ ವಾಸನೆ ಕಡಿಮೆಯಾಗಲು ಸಹಾಯವಾಗುತ್ತದೆ. ಅಲ್ಲದೆ ನೀರಿನಾಂಶ ಹೆಚ್ಚಿರುವ ಕಲ್ಲಂಗಡಿ ಮತ್ತು ಸೌತೆಕಾಯಿ ಸೇವನೆಯು ದೇಹದಲ್ಲಿನ ಅನಗತ್ಯ ತ್ಯಾಜ್ಯಗಳನ್ನು ಹೊರಹಾಕಿ ಬೆವರು ವಾಸನೆ ಕಡಿಮೆ ಮಾಡಲು ನೆರವಾಗುತ್ತದೆ. ಕಿತ್ತಳೆ, ನಿಂಬೆಹಣ್ಣುಗಳಂತಹ ಸಿಟ್ರಿಕ್‌ ಆಮ್ಲವುಳ್ಳ ಹಣ್ಣುಗಳು ಹಾಗೂ ಕ್ಲೋರೊಫಿಲ್‌ ಸಮೃದ್ಧ ಹಸಿರು ತರಕಾರಿಗಳನ್ನು ಸೇವಿಸುವುದೂ ದೇಹವನ್ನು ದಿನವಿಡೀ ಫ್ರೆಶ್‌ ಆಗಿಡಲು ಸಹಕಾರಿಯಾಗಿದೆ.

ಇದೇ ವೇಳೆ ಬೇಸಿಗೆಯಲ್ಲಿ ಕೆಂಪು ಮಾಂಸ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಆಲ್ಕೋಹಾಲ್‌ ಸೇವನೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಉತ್ತಮ. ಇವುಗಳಲ್ಲಿ ಇರುವ ಸಲ್ಫರ್ ಅಂಶವು ಬೆವರಿನ ದುರ್ವಾಸನೆಯನ್ನು ಹೆಚ್ಚಿಸಬಹುದು. ಧೂಮಪಾನವೂ ದೇಹದ ದುರ್ವಾಸನೆಗೆ ಕಾರಣವಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ. ಬಿಗಿಯಾದ ಸಿಂಥೆಟಿಕ್‌ ಬಟ್ಟೆಗಳ ಬದಲು ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸುವುದರಿಂದ ಬೆವರು ಕಡಿಮೆಯಾಗುತ್ತದೆ ಮತ್ತು ದೇಹಕ್ಕೆ ಗಾಳಿಯ ಹರಿವು ಸುಲಭವಾಗುತ್ತದೆ.

ಕಂಕುಳ, ಪಾದಗಳು ಹಾಗೂ ಕುತ್ತಿಗೆಯ ಭಾಗದಲ್ಲಿ ಹೆಚ್ಚು ಬೆವರುವುದರಿಂದ ಈ ಪ್ರದೇಶಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಅಗತ್ಯ. ದಿನಕ್ಕೆ ಎರಡು ಬಾರಿ ಸ್ನಾನ ಮಾಡುವುದು, ಸಾಕಷ್ಟು ನೀರು ಕುಡಿಯುವುದು ಹಾಗೂ ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರಗಳನ್ನು ಕಡಿಮೆ ಸೇವಿಸುವುದು ಕೂಡ ಬೇಸಿಗೆಯಲ್ಲಿ ಬೆವರಿನ ದುರ್ವಾಸನೆಯನ್ನು ತಡೆಯಲು ಸಹಾಯಕವಾಗುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

error: Content is protected !!