Home Blog

ಆಡುಗೋಡಿ ಪೊಲೀಸರ ಕಾರ್ಯಾಚರಣೆ: ಮೂವರು ಗಾಂಜಾ ಪೆಡ್ಲರ್ ಗಳ ಬಂಧನ

0

ಬೆಂಗಳೂರು: ಆಡುಗೋಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಗಾಂಜಾ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ. ಸಂತೋಷ, ರಂಜಿತ್ ಅಲಿಯಾಸ್ ಡೋರಿ, ಅರುಣ್ ಅಲಿಯಾಸ್ ಮುನ್ನ ಬಂಧಿತ ಆರೋಪಿಗಳಾಗಿದ್ದು,

ಬಂಧಿತರಿಂದ 27 ಕೆಜಿ ಗಾಂಜಾ ಹಾಗೂ 220 ಗ್ರಾಂ ಹೈಡ್ರೋ ಗಾಂಜಾ ವಶಕ್ಕೆ ಪಡೆಯಲಾಗಿದೆ. ಶೋಕಿ ಜೀವನಕ್ಕಾಗಿಮಹಿಳೆಯರು ಹಾಗೂ ಅಂಗವಿಕಲರ ಕೈಯಲ್ಲಿ ಗಾಂಜಾ ಮಾರಾಟ ಮಾಡಿಸುತ್ತಿದ್ದರು. ಇವರು ವಿವೇಕ ನಗರದ ಖಾಲಿ ಜಾಗದಲ್ಲಿ ಡ್ರಂಗಳೊಳಗೆ ಗಾಂಜಾವನ್ನು ಅಡಗಿಸಿ ಇಟ್ಟಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಆರೋಪಿಗಳು “ಗಾಂಜಾ ಆರ್ಗಾನಿಕ್, ಇದರಿಂದ ಯಾವುದೇ ಹಾನಿ ಇಲ್ಲ” ಎಂಬ ತಪ್ಪು ಭ್ರಮೆಯಲ್ಲಿ ಇದ್ದರು. “MDMA ಮಾತ್ರ ಅಪಾಯಕಾರಿ” ಎಂಬ ತಪ್ಪು ಕಲ್ಪನೆ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.

ಸಿಲಿಕಾನ್ ಸಿಟಿಯಲ್ಲಿ ನಕಲಿ ಬ್ರಾಂಡೆಡ್ ವಾಚ್‌‌ʼಗಳ ದಂಧೆ ಪತ್ತೆ! ಐವರು ಅರೆಸ್ಟ್

0

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬ್ರಾಂಡೆಡ್ ವಾಚ್‌ಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿರುವ ಹೆಸರಿನಲ್ಲಿ ನಕಲಿ ವಾಚ್‌ಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ.

“ಆಫ್ ರೇಟ್”, “ಚೀಪ್ ರೇಟ್” ಎಂದು ಗ್ರಾಹಕರನ್ನು ಆಕರ್ಷಿಸಿ, ಸಾವಿರಾರು ರೂಪಾಯಿ ಮೌಲ್ಯದ ವಾಚ್‌ಗಳನ್ನು ಅರ್ಧ ಬೆಲೆಯಲ್ಲಿ ನೀಡುವ ಮೂಲಕ ಮೋಸ ಮಾಡಲಾಗುತ್ತಿತ್ತು. ಉದಾಹರಣೆಗೆ ₹5,000 ಮೌಲ್ಯದ ವಾಚ್ ಅನ್ನು ಕಡಿಮೆ ಬೆಲೆಯಲ್ಲಿ ನೀಡುವುದಾಗಿ ಹೇಳಿ ನಕಲಿ ವಾಚ್‌ಗಳನ್ನು ಮಾರಾಟ ಮಾಡಲಾಗುತ್ತಿತ್ತು.

ಈ ಪ್ರಕರಣ ಸಂಬಂಧ ಹರೀಶ್ ಕುಮಾರ್, ಸೈಯದ್ ಜೈಸದ್ ಇಕ್ಬಾಲ್, ಮೊಹಮ್ಮದ್ ಹಬೀಬ್ ಹುಸೈನ್, ಖಲೀಮ್ ಉಲ್ಲಾ ಹಾಗೂ ಅಬ್ದುಲ್ ರೆಹಮಾನ್ ಎಂಬ ಐವರನ್ನು ಬಂಧಿಸಲಾಗಿದೆ.

ಸಿಸಿಬಿ ಆರ್ಥಿಕ ಅಪರಾಧ ನಿಗ್ರಹ ದಳವು ಸುಮಾರು ₹25 ಲಕ್ಷ ಮೌಲ್ಯದ 670 ನಕಲಿ ವಾಚ್‌ಗಳನ್ನು ವಶಪಡಿಸಿಕೊಂಡಿದೆ. ಆರೋಪಿಗಳು ಆರ್.ಟಿ. ನಗರ ಹಾಗೂ ಚಿಕ್ಕಪೇಟೆ ಪ್ರದೇಶಗಳ ಅಂಗಡಿಗಳಲ್ಲಿ ಈ ನಕಲಿ ವಾಚ್‌ಗಳನ್ನು ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ಬ್ರಾಂಡೆಡ್ ವಾಚ್ ಕಂಪನಿಯಾದ ಟೈಟನ್ ತನ್ನ ಉತ್ಪನ್ನಗಳನ್ನು ನಕಲು ಮಾಡಿ ಮಾರಾಟ ಮಾಡಲಾಗುತ್ತಿದೆ ಎಂದು ಸಿಸಿಬಿಗೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ನಕಲಿ ವಾಚ್‌ಗಳನ್ನು ಎಲ್ಲಿ ತಯಾರಿಸಲಾಗುತ್ತಿತ್ತು ಮತ್ತು ಇನ್ನೂ ಯಾರು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಪ್ರತಿದಿನ “ಎಳನೀರು” ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.?

0

ಎಳನೀರು ದೇಹಕ್ಕೆ ಅತ್ಯಂತ ಆರೋಗ್ಯಕರ ಪಾನೀಯವಾಗಿದ್ದು, ಸಾಮಾನ್ಯವಾಗಿ ಬೇಸಿಗೆಯಲ್ಲಿ ಹೆಚ್ಚು ಬಳಸಲಾಗುತ್ತದೆ. ಆದರೆ ಚಳಿಗಾಲದಲ್ಲಿ ಇದನ್ನು ಕುಡಿಯಬೇಕೇ ಬೇಡವೇ ಎಂಬ ಗೊಂದಲ ಹಲವರಲ್ಲಿದೆ. ತಜ್ಞರ ಪ್ರಕಾರ, ಎಳನೀರು ಕೇವಲ ಬೇಸಿಗೆಗಷ್ಟೇ ಸೀಮಿತವಲ್ಲ; ವರ್ಷಪೂರ್ತಿ ಸೇವಿಸಬಹುದಾದ ಆರೋಗ್ಯಕರ ಪಾನೀಯವಾಗಿದೆ.

ಚಳಿಗಾಲದಲ್ಲೂ ಎಳನೀರು ಏಕೆ ಕುಡಿಯಬೇಕು?

ನಿರ್ಜಲೀಕರಣ ತಡೆಯುತ್ತದೆ
ಚಳಿಗಾಲದಲ್ಲಿ ಗಾಳಿ ಒಣವಾಗಿರುವುದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇರುತ್ತದೆ. ಈ ವೇಳೆ ಎಳನೀರು ಕುಡಿಯುವುದರಿಂದ ದೇಹ ಹೈಡ್ರೇಟ್ ಆಗಿರುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಎಳನೀರಿನಲ್ಲಿ ವಿಟಮಿನ್ C, B ಹಾಗೂ ಅಗತ್ಯ ಖನಿಜಗಳು ಸಮೃದ್ಧವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ತ್ವಚೆ ಆರೋಗ್ಯಕರವಾಗಿರುತ್ತದೆ
ಚಳಿಗಾಲದಲ್ಲಿ ಒಣ ಚರ್ಮದ ಸಮಸ್ಯೆ ಸಾಮಾನ್ಯ. ಎಳನೀರು ಕುಡಿಯುವುದರಿಂದ ತ್ವಚೆ ತೇವಾಂಶದಿಂದ ಕೂಡಿದ್ದು, ಹೊಳಪು ಉಳಿಯುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ
ನಾರಿನಂಶ ಮತ್ತು ಎಲೆಕ್ಟ್ರೋಲೈಟ್‌ಗಳಿರುವ ಎಳನೀರು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹೊಟ್ಟೆ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ತೂಕ ನಿಯಂತ್ರಣಕ್ಕೆ ಸಹಾಯ
ಕಡಿಮೆ ಕ್ಯಾಲೋರಿ ಹೊಂದಿರುವ ಎಳನೀರು ತೂಕ ಹೆಚ್ಚುವ ಭಯವಿಲ್ಲದೆ ಸೇವಿಸಬಹುದಾದ ಉತ್ತಮ ಪಾನೀಯ.

ರಕ್ತದೊತ್ತಡ ನಿಯಂತ್ರಣ
ಪೊಟ್ಯಾಸಿಯಮ್ ಅಂಶ ಅಧಿಕವಾಗಿರುವುದರಿಂದ ದೇಹದಲ್ಲಿನ ಸೋಡಿಯಂ ಮಟ್ಟ ಸಮತೋಲನದಲ್ಲಿರಲು ನೆರವಾಗುತ್ತದೆ. ಇದರಿಂದ ರಕ್ತದೊತ್ತಡ ನಿಯಂತ್ರಣ ಸುಧಾರಿಸುತ್ತದೆ.

ಶಕ್ತಿ ಹೆಚ್ಚಿಸುತ್ತದೆ
ಎಳನೀರಿನಲ್ಲಿರುವ ನೈಸರ್ಗಿಕ ಸಕ್ಕರೆ ಮತ್ತು ಎಲೆಕ್ಟ್ರೋಲೈಟ್‌ಗಳು ದೇಹಕ್ಕೆ ತ್ವರಿತ ಶಕ್ತಿ ನೀಡುತ್ತವೆ.

ಕೌಟುಂಬಿಕ ಕಲಹ: ದಂಪತಿಗಳಿಬ್ಬರು ಆತ್ಮಹತ್ಯೆಗೆ ಶರಣು!

0

ಬೆಂಗಳೂರು:- ಕೌಟುಂಬಿಕ ಕಲಹ ಹಿನ್ನಲೆ ದಂಪತಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಧಾನಿ ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

ಬಾಬು ರೆಡ್ಡಿ ಹಾಗೂ ಶಾಜಿಯಾ ಆತ್ಮಹತ್ಯೆ ಮಾಡಿಕೊಂಡ ದಂಪತಿ.

ಮೊದಲು ನೇಣುಬಿಗಿದುಕೊಂಡು ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಂಡನ ಮೃತದೇಹ ಕಂಡು ಪತ್ನಿ ಸಹ 17 ನೇ ಫ್ಲೋರ್ ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹ ಹಿನ್ನಲೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಪತಿ ಬಾಬು ರೆಡ್ಡಿ ಗೆ ಆರೋಗ್ಯ ಸಮಸ್ಯೆ ಇತ್ತು. ಇದೇ ವಿಚಾರವಾಗಿ ಆತ್ಮಹತ್ಯೆ ಮಾಡಿ ಕೊಂಡಿರಬಹುದು ಎಂಬುವ ಶಂಕೆ ಪೊಲೀಸರಿಗೆ ಮೂಡಿದೆ. ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ವಿಮಾನದಲ್ಲಿ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನ: ಹೋಗಲಿ ಅಂತ ಬಿಟ್ಟು ಕಳಿಸಿದ್ದ ಪೊಲೀಸರನ್ನೇ ನಿಂದಿಸಿದ್ದ ವ್ಯಕ್ತಿ ವಿರುದ್ದ FIR

ದೇವನಹಳ್ಳಿ:- ವಿಮಾನದ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ್ದಲ್ಲದೆ, ಬಿಟ್ಟುಕಳುಹಿಸಿದ ಪೊಲೀಸರನ್ನೇ ನಿಂದಿಸಿದ ವ್ಯಕ್ತಿ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಹಾರುತ್ತಿದ್ದ ವಿಮಾನದ ತುರ್ತು ಬಾಗಿಲು ತೆರೆಯಲು ಯತ್ನಿಸಿದ ಆರೋಪಿ ಉತ್ಕರ್ಷ್ ಗೌತಮ್, ಹೋಗಲಿ ಎಂದು ಬಿಟ್ಟು ಕಳುಹಿಸಿದ ಬೆಂಗಳೂರು ಪೊಲೀಸರನ್ನೇ ‘ಬಸ್ಟರ್ಡ್ಸ್’ ಎಂದು ನಿಂದಿಸಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಎಕ್ಸ್ (X) ಖಾತೆಯಲ್ಲಿ ಪೊಲೀಸರ ವಿರುದ್ಧ ಸುಳ್ಳು ಆರೋಪ ಮಾಡಿ ಪೋಸ್ಟ್ ಹಾಕಿದ್ದ ಆರೋಪಿಯ ವಿರುದ್ಧ ಕೆಂಪೇಗೌಡ ಏರ್‌ಪೋರ್ಟ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

FIR ಬೆನ್ನಲ್ಲೇ ಆರೋಪಿ ಎಸ್ಕೇಪ್ ಆಗಿದ್ದು, ಆತನ ಶೋಧಕ್ಕೆ ಪೊಲೀಸರು ಮುಂದಾಗಿದ್ದಾರೆ.

Crime News: ಖರ್ಚಿಗೆ ಹಣ ಕೊಟ್ಟಿಲ್ಲ ಅಂತ ಮಂಗಳಮುಖಿಯರ ಮೇಲೆ ಯುವಕರಿಂದ ಹಲ್ಲೆ!

0

ಮೈಸೂರು: ಮೈಸೂರಿನ ಸಾತಗಳ್ಳಿ ಸಮೀಪದ ಅಮೃತ ಬಡಾವಣೆಯಲ್ಲಿ ಖರ್ಚಿಗೆ ಹಣ ನೀಡಿಲ್ಲವೆಂದು ಕೋಪಗೊಂಡು ಮಂಗಳಮುಖಿಯರ ಮೇಲೆ ಯುವಕರು ತಲ್ವಾರ್ ನಿಂದ ಹಲ್ಲೆ ಮಾಡಿರುವ ಘಟನೆ ಜರುಗಿದೆ.

ಅಮೃತ ಬಡಾವಣೆಯ ಕೆಲ ಯುವಕರು, ಆನಮ್ ಎಂಬ ಮಂಗಳಮುಖಿ ಬಳಿ ಖರ್ಚಿಗೆ ಹಣ ಕೇಳಿದ್ದಾರೆ. ಇದಕ್ಕೆ ಆನಮ್ ನಿರಾಕರಿಸಿದಾಗ ಯುವಕರು ಗಲಾಟೆ ತೆಗೆದಿದ್ದಾರೆ. ಆಗ ಸ್ನೇಹಿತೆಯಾದ ಆನಮ್ ತನ್ನ ಮತ್ತೊಬ್ಬ ಸ್ನೇಹಿತೆ ಪಾರಿಯನ್ನು ಕರೆ ಮಾಡಿ ಕರೆಸಿಕೊಂಡಿದ್ದಾಳೆ. ಪಾರಿ ಸ್ಥಳಕ್ಕೆ ಬರುತ್ತಿದ್ದಂತೆ ಯುವಕರು ಹಲ್ಲೆ ಮಾಡಿದ್ದಾರೆ.

ಘಟನೆ ಸಂಬಂಧ ಮೈಸೂರಿನ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದ ಯುವಕರ ಬಂಧನಕ್ಕೆ ಪೊಲೀಸರು ಶೋಧ ಕೈಗೊಂಡಿದ್ದಾರೆ.

ಡೀಸೆಲ್‌ ಟ್ಯಾಂಕರ್‌-ಕಾರು ನಡುವೆ ಭೀಕರ ಅಪಘಾತ! ತಪ್ಪಿದ ಅನಾಹುತ

ಹಾಸನ: ಡೀಸೆಲ್‌ ಟ್ಯಾಂಕರ್‌ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿರುವ ಘಟನೆ ನಗರದ ಎಂ.ಜಿ ರಸ್ತೆಯಲ್ಲಿ ಇಂದು ಮುಂಜಾನೆ ಜರುಗಿದೆ.

ಅಪಘಾತದಿಂದ ಟ್ಯಾಂಕರ್‌ನಲ್ಲಿ ಸಣ್ಣ ಪ್ರಮಾಣದಲ್ಲಿ ಡೀಸೆಲ್‌ ಸೋರಿಕೆಯಾಗಿರುವುದು ಕಂಡುಬಂದಿದೆ. ಆದ್ರೆ ಅಗ್ನಿಶಾಮಕ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಮುಂದಾಗುವ ಅನಾಹುತ ತಪ್ಪಿದೆ. ಇನ್ನೂ ಟ್ಯಾಂಕರ್‌ ಡಿಕ್ಕಿಯಿಂದ ಕಾರಿನ ಒಂದು ಬದಿ ನಜ್ಜುಗುಜ್ಜಾಗಿದ್ದು, ರಸ್ತೆಯ ಇನ್ನೊಂದು ಬದಿಗೆ ಹಾರಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ನಗರ ಸಂಚಾರ ಪೊಲೀಸರು ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಮೈಸೂರಿನ ಏರ್ ಕ್ವಾಲಿಟಿ ಕುಸಿತ: ಪರಿಸ್ಥಿತಿ ಚಿಂತಾಜನಕ ಎಂದ ತಜ್ಞರು!

ಬೆಂಗಳೂರು: ಬೆಂಗಳೂರು ನಗರದಲ್ಲಿ ವಾಯು ಗುಣಮಟ್ಟ ಇನ್ನೂ ಹದಗೆಟ್ಟ ಸ್ಥಿತಿಯಲ್ಲೇ ಮುಂದುವರಿದಿದ್ದು, ಆರೋಗ್ಯದ ಬಗ್ಗೆ ಆತಂಕ ಮೂಡಿಸಿದೆ.

ಇದಕ್ಕಿಂತಲೂ ಹೆಚ್ಚಾಗಿ ಮೈಸೂರಿನಲ್ಲಿ ಏರ್ ಕ್ವಾಲಿಟಿ ಮತ್ತಷ್ಟು ಕುಸಿದಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಇಂದಿನ ಅಂಕಿ-ಅಂಶಗಳ ಪ್ರಕಾರ, ಕೆಲ ದಿನಗಳ ಹಿಂದೆ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ AQI ಇಂದು 166ಕ್ಕೆ ತಲುಪಿದ್ದು, ಇನ್ನೂ ‘ಅನಾರೋಗ್ಯಕರ’ ಮಟ್ಟದಲ್ಲೇ ಇದೆ. ಇದೇ ವೇಳೆ ಮೈಸೂರಿನಲ್ಲಿ AQI 185ಕ್ಕೆ ಏರಿಕೆಯಾಗಿದ್ದು, ಗಾಳಿಯ ಗುಣಮಟ್ಟ ಮತ್ತಷ್ಟು ಹದಗೆಟ್ಟಿದೆ. WHO ಮಾನದಂಡಗಳ ಪ್ರಕಾರ ಈ ಮಟ್ಟದ ವಾಯು ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ಇನ್ನೊಂದೆಡೆ ಕರಾವಳಿ ಭಾಗಗಳಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡುಬಂದಿದ್ದು, ಮಂಗಳೂರು ಮತ್ತು ಉಡುಪಿ ನಗರಗಳಲ್ಲಿ ವಾಯು ಗುಣಮಟ್ಟ ಮಧ್ಯಮ ಮಟ್ಟದಲ್ಲಿದೆ.

ರಾಜ್ಯದ ಇತರ ಪ್ರಮುಖ ನಗರಗಳ ಇಂದಿನ AQI ವಿವರ ಹೀಗಿದೆ:
ಬೆಂಗಳೂರು – 166
ಮಂಗಳೂರು – 102
ಮೈಸೂರು – 185
ಬೆಳಗಾವಿ – 64
ಕಲಬುರ್ಗಿ – 82
ಶಿವಮೊಗ್ಗ – 126
ಬಳ್ಳಾರಿ – 120
ಹುಬ್ಬಳ್ಳಿ – 84
ಉಡುಪಿ – 93
ವಿಜಯಪುರ – 119

AQI ವರ್ಗೀಕರಣ ಪ್ರಕಾರ 0-50 ‘ಉತ್ತಮ’, 50-100 ‘ಮಧ್ಯಮ’, 100-150 ‘ಕಳಪೆ’, 150-200 ‘ಅನಾರೋಗ್ಯಕರ’, 200-300 ‘ಗಂಭೀರ’ ಹಾಗೂ 300ಕ್ಕಿಂತ ಮೇಲಿನ ಮಟ್ಟ ‘ಅಪಾಯಕಾರಿ’ ಎಂದು ಪರಿಗಣಿಸಲಾಗುತ್ತದೆ.

ತಜ್ಞರು ಮಕ್ಕಳಿಗೆ, ವೃದ್ಧರಿಗೆ ಹಾಗೂ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳಿರುವವರಿಗೆ ಹೊರಾಂಗಣ ಚಟುವಟಿಕೆಗಳನ್ನು ಕಡಿಮೆ ಮಾಡುವಂತೆ ಸಲಹೆ ನೀಡಿದ್ದಾರೆ.

ಇಂದು ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ: 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​! ಗದಗದಲ್ಲೂ ಮಳೆ ನಿರೀಕ್ಷೆ

ಬೆಂಗಳೂರು: ಕಳೆದ ಎರಡು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಉಷ್ಣತೆಯ ತೀವ್ರತೆ ಕಡಿಮೆಯಾದಂತಾಗಿದೆ.

ಇಂದೂ ಸಹ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಕಲಬುರ್ಗಿ, ವಿಜಯಪುರ ಮತ್ತು ಧಾರವಾಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಬೀದರ್, ಬಾಗಲಕೋಟೆ, ಗದಗ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಸೇರಿದಂತೆ ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ, ವಿಜಯಪುರ, ಕಲಬುರ್ಗಿ, ಬೀದರ್, ಗದಗ, ಹಾವೇರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ಗಂಟೆಗೆ 30–40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ.

ಉಳಿದ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಒಣ ಹವಾಮಾನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜನಸಂದಣಿ ಮಧ್ಯೆ ಕಳ್ಳತನ: ಯುವತಿಯ ಮುಖ್ಯ ದಾಖಲೆಗಳಿದ್ದ ಬ್ಯಾಗ್ ಕಳುವು!

0

ಕೋಲ್ಕತ್ತಾ: ಸಾಮಾನ್ಯವಾಗಿ ರೈಲ್ವೆ ನಿಲ್ದಾಣಗಳ ಸುತ್ತಮುತ್ತ 24 ಗಂಟೆಯೂ ಜನ ಸಂಚಾರ ಜೋರಾಗಿರುತ್ತದೆ. ಆದರೂ, ಜನಸಂದಣಿ ನಡುವೆಯೇ ಕಳ್ಳತನದ ಘಟನೆ ನಡೆದಿದೆ.

ಕೋಲ್ಕತ್ತಾದ ಶಾಲಿಮರ್ ರೈಲ್ವೆ ನಿಲ್ದಾಣದ ಬಳಿ ಅಕ್ಕ-ತಂಗಿ ಲಗೇಜ್ ಹಿಡಿದು ನಿಂತಿದ್ದ ವೇಳೆ, ಬೈಕ್‌ನಲ್ಲಿ ಬಂದ ಕಳ್ಳನೊಬ್ಬ ಯುವತಿಯ ಕೈಯಿಂದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾನೆ.

ಯುವತಿಯ ಬ್ಯಾಗ್‌ನಲ್ಲಿ ಪ್ರಮುಖ ದಾಖಲೆಗಳು ಇದ್ದವು ಎಂದು ತಿಳಿದುಬಂದಿದೆ. ಈ ಸಂಬಂಧ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

error: Content is protected !!