ಬೆಂಗಳೂರು: ಉದ್ಯಮಿ ವೈಶಾಕ್ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೇ ಮತ್ತೊಂದು ಭಾವುಕ ಬೆಳವಣಿಗೆ ನಡೆದಿದ್ದು, ಅಂತಿಮ ದರ್ಶನಕ್ಕಾಗಿ ಚಾಮರಾಜಪೇಟೆ ಚಿತಾಗಾರಕ್ಕೆ ಬಂದ ನಟಿ ಕೃಷಿ ತಾಪಂಡ ಅವರಿಗೆ ಸ್ನೇಹಿತನ ಮುಖ ನೋಡಲು ಅವಕಾಶ ಸಿಗದೇ ಕಣ್ಣೀರಿಡುತ್ತಾ ವಾಪಸ್ಸಾಗಿದ್ದಾರೆ.
ಚಿತಾಗಾರಕ್ಕೆ ಕೃಷಿ ಆಗಮಿಸುವಷ್ಟರಲ್ಲಿ ವೈಶಾಕ್ ಅಂತ್ಯಕ್ರಿಯೆಯ ವಿಧಿವಿಧಾನಗಳು ಆರಂಭವಾಗಿದ್ದವು. ಈ ವೇಳೆ ಕುಟುಂಬಸ್ಥರು ಕೃಷಿಗೆ ದರ್ಶನಕ್ಕೆ ಅವಕಾಶ ನೀಡದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಪರಿಣಾಮ ಕೃಷಿ ಯಾವುದೇ ಪ್ರತಿಕ್ರಿಯೆ ನೀಡದೆ ಅಲ್ಲಿಂದ ತೆರಳಿದ್ದು, ಕಾರಿನಲ್ಲೇ ಕುಳಿತು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.
ಜೂನ್ 24ರಂದು ಆರ್.ಆರ್.ನಗರದ ಕೃಷಿ ತಾಪಂಡ ನಿವಾಸದಲ್ಲೇ ವೈಶಾಖ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಹಲವು ಬಾರಿ ಕೃಷಿಗೆ ಕರೆ ಮಾಡಿದ್ದಲ್ಲದೆ, ಬದುಕಲು ಇಷ್ಟವಿಲ್ಲ ಎಂದು ಸಂದೇಶ ಕಳುಹಿಸಿದ್ದಾನೆ ಎನ್ನಲಾಗಿದೆ.
ಘಟನೆ ವೇಳೆ ಕೃಷಿ ನೆಲಮಂಗಲದಲ್ಲಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ವೈಶಾಖ್ ಕುಟುಂಬಕ್ಕೆ ವಿಷಯ ಮುಟ್ಟಿಸಿದ್ದರು. ಬಳಿಕ ಮಧ್ಯರಾತ್ರಿ ಮನೆಗೆ ಬಂದು ನೋಡಿದಾಗ ವೈಶಾಖ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ರಾಜರಾಜೇಶ್ವರಿ ನಗರ ಪೊಲೀಸರಿಗೆ ಕೃಷಿಯೇ ಮಾಹಿತಿ ನೀಡಿದ್ದರು.
ಪ್ರಕರಣ ಸಂಬಂಧ ತನಿಖೆ ಮುಂದುವರಿದಿದ್ದು, ವೈಶಾಖ್ ಮೊಬೈಲ್ ಹಾಗೂ ಇತರೆ ಡಿಜಿಟಲ್ ಮಾಹಿತಿ ಪರಿಶೀಲನೆ ನಡೆಸಲಾಗುತ್ತಿದೆ. ಸದ್ಯ ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

