Home Blog

ಗಿಳಿಶಾಸ್ತ್ರ ನಂಬಿ 35 ಲಕ್ಷ ಮೌಲ್ಯದ ಚಿನ್ನ ಕಳೆದುಕೊಂಡ ಐಟಿ ಅಧಿಕಾರಿ!

0

ಬೆಂಗಳೂರು: ಟ್ರಾನ್ಸ್‌ಫರ್ ಆಗಲು ಗಿಳಿಶಾಸ್ತ್ರದ ಸಹಾಯ ಪಡೆಯಲು ಮುಂದಾದ ಐಟಿ ಅಧಿಕಾರಿಯೊಬ್ಬರಿಗೆ ಪಂಗನಾಮ ಹಾಕಿದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಹಲವು ವರ್ಷಗಳಿಂದ ಬೆಂಗಳೂರಿನ ಐಟಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗೆ ಕಳೆದ ಡಿಸೆಂಬರ್ ತಿಂಗಳಲ್ಲಿ ರಸ್ತೆಬದಿಯಲ್ಲಿ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಭಾರತಿನಗರದ ಶ್ರೀ ಸರ್ಕಲ್ ಬಳಿ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್, “ನಿಮಗೆ ಶಾಸ್ತ್ರ ಹೇಳ್ತೀನಿ, ನಿಮಗೆ ಒಳ್ಳೆಯದು ಆಗುತ್ತದೆ” ಎಂದು ವಿಶ್ವಾಸ ಮೂಡಿಸಿದ್ದ ಎಂದು ತಿಳಿದುಬಂದಿದೆ.

ಮುಖ ನೋಡಿ ಜಾತಕ ಹಾಗೂ ಭವಿಷ್ಯ ಹೇಳುತ್ತೇನೆ ಎಂದು ಹೇಳಿದ ಶೇಖರ್, ಜೀವನ ಸುಧಾರಣೆಗಾಗಿ ವಿಶೇಷ ಪೂಜೆ ಮಾಡಿಸಬೇಕು ಎಂದು ಸಲಹೆ ನೀಡಿದ್ದಾನೆ. ಅದರಂತೆ ಪೂಜೆ ಮಾಡಲು ಐಟಿ ಅಧಿಕಾರಿಯಿಂದ ಸುಮಾರು 50 ಸಾವಿರ ರೂಪಾಯಿ ಹಣ ಪಡೆದು ಪೂಜೆ ಕೂಡ ಮಾಡಿಸಿದ್ದಾನೆ ಎನ್ನಲಾಗಿದೆ.

ನಂತರ ಪದೇ ಪದೇ ಕರೆ ಮಾಡಿ, ವರ್ಗಾವಣೆಯ ವಿಚಾರವಾಗಿ ಮತ್ತಷ್ಟು ದೊಡ್ಡ ಪೂಜೆ ಮಾಡಬೇಕು ಎಂದು ಹೇಳಿ, ಮನೆಯಲ್ಲಿರುವ ಚಿನ್ನಾಭರಣ ತರಬೇಕು ಎಂದು ಮನವೊಲಿಸಿದ್ದಾನೆ.

ಗಿಳಿಶಾಸ್ತ್ರದವನ ಮಾತನ್ನು ನಂಬಿದ ಐಟಿ ಅಧಿಕಾರಿ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ 194 ಗ್ರಾಂ ಚಿನ್ನಾಭರಣ ಹಾಗೂ 1 ಕೆಜಿ 300 ಗ್ರಾಂ ಬೆಳ್ಳಿಯನ್ನು ಶೇಖರ್‌ಗೆ ನೀಡಿದ್ದಾರೆ.

ಒಂದು ದಿನದಲ್ಲಿ ಪೂಜೆ ಮುಗಿಸಿ ವಾಪಸ್ ಕೊಡುತ್ತೇನೆ ಎಂದು ಹೇಳಿದ್ದ ಶೇಖರ್, ಬಳಿಕ “ಪೂಜೆ ಇನ್ನೂ ಮುಗಿದಿಲ್ಲ, ನಾಳೆ ಅಥವಾ ನಾಡಿದ್ದು ಕೊಡುತ್ತೇನೆ” ಎಂದು ಕಾಲಹರಣ ಮಾಡುತ್ತಿದ್ದನು.

ಆದರೆ ನಂತರ ಭಾರತಿನಗರದ ಶ್ರೀ ಸರ್ಕಲ್ ಬಳಿ ಹೋಗಿ ನೋಡಿದಾಗ ಗಿಳಿಯೂ ಇಲ್ಲ, ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್ ಕೂಡ ಕಾಣಿಸದಿರುವುದು ಗಮನಕ್ಕೆ ಬಂದಿದೆ. ಆಗ ತಾನು ಮೋಸಹೋಗಿರುವುದು ತಿಳಿದುಬಂದ ಐಟಿ ಅಧಿಕಾರಿ ಭಾರತಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಭಾರತಿನಗರ ಪೊಲೀಸರು ಆರೋಪಿಯಾದ ಶೇಖರ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಆಲ್ಕೋಹಾಲ್ ಜೊತೆ ಈ ಆಹಾರ ತಿಂದರೆ ಅಪಾಯ ಗ್ಯಾರಂಟಿ! ಯಾಕೆ ಗೊತ್ತಾ..?

0

ಇಂದಿನ ವೇಗದ ಜೀವನಶೈಲಿಯಲ್ಲಿ ಹಲವರಿಗಾಗಿ ಮದ್ಯಪಾನ ಒಂದು ಸಾಮಾನ್ಯ ಅಭ್ಯಾಸವಾಗುತ್ತಿದೆ. ಕೆಲವರು ಒತ್ತಡ ಕಡಿಮೆ ಮಾಡಲು, ಮತ್ತಿಬ್ಬರು ಸ್ನೇಹಿತರ ಜೊತೆ ಖುಷಿಯನ್ನು ಹಂಚಿಕೊಳ್ಳಲು ಆಲ್ಕೋಹಾಲ್‌  ಸೇವಿಸುತ್ತಾರೆ. ಮದ್ಯಪಾನ ಮಾಡುವ ಸಮಯದಲ್ಲಿ ಹಲವರು ಸೈಡ್ ಡಿಷ್ ಆಗಿ ಉಪ್ಪಿನಕಾಯಿ, ಕಬಾಬ್, ಕುರುಕುಲು ತಿಂಡಿ ಅಥವಾ ಖಾರ ತಿನಿಸುಗಳನ್ನು ತಿನ್ನುವ ಅಭ್ಯಾಸ ಹೊಂದಿದ್ದಾರೆ.

ಆದರೆ ಮದ್ಯ ಸೇವಿಸುವಾಗ ಕೆಲವು ಆಹಾರಗಳನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ. ಮದ್ಯದ ಜೊತೆ ಈ ಕೆಳಗಿನ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸುವುದು ಉತ್ತಮ.

ಬ್ರೆಡ್‌ ಆಧಾರಿತ ಆಹಾರ

ಬಿಯರ್ ಕುಡಿಯುವ ಸಮಯದಲ್ಲಿ ಸ್ಯಾಂಡ್‌ವಿಚ್‌, ಬರ್ಗರ್‌ ಮುಂತಾದ ಬ್ರೆಡ್‌ ಆಧಾರಿತ ಆಹಾರಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಬಿಯರ್ ಮತ್ತು ಬ್ರೆಡ್ ಎರಡರಲ್ಲೂ ‘ಯೀಸ್ಟ್’ ಇರುವುದರಿಂದ, ಇವು ಒಟ್ಟಿಗೆ ಹೊಟ್ಟೆಗೆ ಹೋದಾಗ ಉಬ್ಬರ ಹಾಗೂ ಗ್ಯಾಸ್ ಸಮಸ್ಯೆ ಉಂಟಾಗಬಹುದು. ಇದು ಜೀರ್ಣಾಂಗ ವ್ಯವಸ್ಥೆಗೆ ಹೆಚ್ಚುವರಿ ಒತ್ತಡ ಉಂಟುಮಾಡುತ್ತದೆ. ಆದ್ದರಿಂದ ಈ ಸಂದರ್ಭಗಳಲ್ಲಿ ಬೇಯಿಸಿದ ತರಕಾರಿಗಳು ಅಥವಾ ತರಕಾರಿ ಸಲಾಡ್ ಸೇವಿಸುವುದು ಉತ್ತಮ.

ಚಾಕೊಲೇಟ್

ಚಾಕೊಲೇಟ್ ನಲ್ಲಿ ಕೆಫೀನ್ ಮತ್ತು ಕೋಕೋ ಇರುವುದರಿಂದ ಆಮ್ಲೀಯತೆ ಹೆಚ್ಚಾಗುವ ಸಾಧ್ಯತೆ ಇದೆ. ಇದನ್ನು ಮದ್ಯದೊಂದಿಗೆ ಸೇವಿಸಿದರೆ ಗ್ಯಾಸ್, ಆಮ್ಲೀಯತೆ ಹಾಗೂ ಆಸಿಡ್ ರಿಫ್ಲಕ್ಸ್ ಸಮಸ್ಯೆಗಳು ಹೆಚ್ಚಾಗಬಹುದು. ಕೆಲವೊಮ್ಮೆ ಎದೆಯುರಿಯೂ ಉಂಟಾಗಬಹುದು.

ಕಾಳುಗಳು

ಕಡಲೆ, ಬಟಾಣಿ ಮುಂತಾದ ಕಾಳುಗಳು ಫೈಬರ್‌ ಹೆಚ್ಚು ಹೊಂದಿರುತ್ತವೆ. ಇವು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಈ ಆಹಾರಗಳೊಂದಿಗೆ ಮದ್ಯ ಸೇವಿಸಿದರೆ ಜೀರ್ಣಕ್ರಿಯೆ ನಿಧಾನವಾಗಿ ನಡೆಯುತ್ತದೆ. ಇದರಿಂದ ಹೊಟ್ಟೆ ನೋವು ಮತ್ತು ಅಜೀರ್ಣ ಸಮಸ್ಯೆಗಳು ಉಂಟಾಗಬಹುದು.

ಕರಿದ ತಿಂಡಿಗಳು

ಚಿಪ್ಸ್‌,ಕರಿದ ತಿಂಡಿಗಳು ಡೀಪ್‌ ಫ್ರೈಡ್‌ ಆಹಾರಗಳನ್ನು ಮದ್ಯದ ಜೊತೆ ತಿನ್ನುವುದು ಸಾಮಾನ್ಯ. ಆದರೆ ಈ ಆಹಾರಗಳಲ್ಲಿ ಹೆಚ್ಚಿನ ಉಪ್ಪು ಇರುವುದರಿಂದ ದೇಹದಿಂದ ನೀರು ಕಡಿಮೆಯಾಗುತ್ತದೆ. ಮದ್ಯವೂ ದೇಹವನ್ನು ನಿರ್ಜಲೀಕರಣಗೊಳಿಸುವುದರಿಂದ ಎರಡೂ ಸೇರಿ ದೇಹದಲ್ಲಿ ನೀರಿನ ಕೊರತೆ ಉಂಟುಮಾಡಬಹುದು. ಇದರಿಂದ ಮರುದಿನ ತಲೆನೋವು ಮತ್ತು ಆಯಾಸ ಹೆಚ್ಚಾಗಬಹುದು.

ಕಿತ್ತಳೆ ಹಣ್ಣು

ಕಿತ್ತಳೆ ಹಣ್ಣು ಹಣ್ಣುಗಳಲ್ಲಿ ಆಮ್ಲೀಯತೆ ಹೆಚ್ಚಾಗಿರುತ್ತದೆ. ಮದ್ಯದೊಂದಿಗೆ ಇವುಗಳನ್ನು ಸೇವಿಸಿದರೆ ಹೊಟ್ಟೆಯಲ್ಲಿ ಉರಿ ಹಾಗೂ ಜೀರ್ಣಕ್ರಿಯೆ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಮದ್ಯಪಾನದ ಸಮಯದಲ್ಲಿ ಸಿಟ್ರಸ್ ಹಣ್ಣುಗಳನ್ನು ಸೇವಿಸುವುದನ್ನು ತಪ್ಪಿಸುವುದು ಉತ್ತಮ.

ಒಟ್ಟಿನಲ್ಲಿ, ಮದ್ಯಪಾನ ಮಾಡುವ ಸಂದರ್ಭದಲ್ಲೂ ಸರಿಯಾದ ಆಹಾರ ಆಯ್ಕೆ ಮಾಡುವುದು ಆರೋಗ್ಯ ಕಾಪಾಡಿಕೊಳ್ಳಲು ಅತ್ಯಂತ ಮುಖ್ಯವಾಗಿದೆ.

ಕಸ್ಟಮರ್ ಮನೆಯಲ್ಲಿ ಕಳ್ಳತನ ಮಾಡಿದ ಕ್ಯಾಬ್ ಚಾಲಕ ಅರೆಸ್ಟ್: 25 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ.!

0

ಬೆಂಗಳೂರು: ಕಸ್ಟಮರ್ ಮನೆಯಲ್ಲಿ ಕಳವು ಮಾಡಿದ ಆರೋಪದ ಮೇಲೆ ಕ್ಯಾಬ್ ಚಾಲಕನನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಬಂಧಿತನಿಂದ ಸುಮಾರು 25 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಫೆಬ್ರವರಿ 11ರಂದು ಸೈಯದ್ ಸಲ್ಮಾನ್ ಮತ್ತು ಅವರ ಪತ್ನಿ ಶಾಪಿಂಗ್ ಸಲುವಾಗಿ ಮುಂಬೈಗೆ ತೆರಳಲು ಹೆಬ್ಬಾಳದಿಂದ ಯಶವಂತಪುರಕ್ಕೆ ಕ್ಯಾಬ್ ಬುಕ್ ಮಾಡಿಕೊಂಡಿದ್ದರು. ಈ ವೇಳೆ ಕ್ಯಾಬ್ ಚಾಲಕ ಅಬ್ದುಲ್ ರೆಹಮಾನ್, ದಂಪತಿಗಳ ಮಾತುಕತೆಯನ್ನು ಆಲಿಸಿದ್ದಾನೆ.

ಸೈಯದ್ ಸಲ್ಮಾನ್ ಅವರ ಪತ್ನಿ, “ಮನೆಯಲ್ಲಿ ಚಿನ್ನಾಭರಣ ಇದೆ, ವಾರ್ಡ್‌ರೋಬ್ ಲಾಕ್ ಮಾಡಿದ್ದೀಯಾ?” ಎಂದು ಕೇಳಿದ ಮಾತು ಕ್ಯಾಬ್ ಚಾಲಕನ ಕಿವಿಗೆ ಬಿದ್ದಿದೆ. ಅಲ್ಲದೆ ಅವರು ಮೂರು ದಿನಗಳ ಕಾಲ ಮನೆಗೆ ವಾಪಸ್ ಬರುವುದಿಲ್ಲ ಎಂಬುದನ್ನು ಕೂಡ ಚಾಲಕ ತಿಳಿದುಕೊಂಡಿದ್ದಾನೆ.

ಯಶವಂತಪುರದಲ್ಲಿ ದಂಪತಿಯನ್ನು ಇಳಿಸಿದ ನಂತರ ಅಬ್ದುಲ್ ರೆಹಮಾನ್ ಮತ್ತೆ ಹೆಬ್ಬಾಳಕ್ಕೆ ಬಂದು, ಸೈಯದ್ ಅವರ ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ್ದಾನೆ. ಈ ಕುರಿತು ದೂರು ದಾಖಲಾದ ಬಳಿಕ ಪೊಲೀಸರು ಸಿಸಿ ಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ಕ್ಯಾಬ್ ಚಾಲಕ ಮನೆ ಬಳಿ ಬಂದಿರುವುದು ಪತ್ತೆಯಾಗಿದೆ.

ನಂತರ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಇದೇ ರೀತಿಯ ಪ್ರಕರಣದಲ್ಲಿ ಈ ಹಿಂದೆ ಕೂಡ ಬಂಧಿತನು ಜಾಮೀನಿನ ಮೇಲೆ ಹೊರಬಂದು ಮತ್ತೆ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು ಪ್ರಯಾಣಿಕರಿಗೆ ಶಾಕ್: ಆಟೋ, ಕ್ಯಾಬ್ ದರ ಹೆಚ್ಚಳ!?

ಬೆಂಗಳೂರು: ಇರಾನ್–ಇಸ್ರೇಲ್–ಅಮೆರಿಕ ನಡುವಿನ ಯುದ್ಧದ ಪರಿಣಾಮ ಭಾರತದಲ್ಲಿಯೂ ಕಾಣಿಸಿಕೊಳ್ಳಲು ಆರಂಭವಾಗಿದೆ.

ಯುದ್ಧದ ಪರಿಣಾಮವಾಗಿ ಆಟೋ ಮತ್ತು ಕ್ಯಾಬ್‌ಗಳಲ್ಲಿ ಬಳಸುವ ಎಲ್‌ಪಿಜಿ ದರ ಏರಿಕೆಯಾಗಿದ್ದು, ಲೀಟರ್‌ಗೆ 10 ರಿಂದ 20 ರೂಪಾಯಿ ವರೆಗೆ ಹೆಚ್ಚಳವಾಗಿದೆ.

ಆರ್ಥಿಕ ತಜ್ಞರ ಪ್ರಕಾರ, ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ಸರಕು ಸಾಗಾಟಕ್ಕೆ ಅಡ್ಡಿಯಾಗಿರುವುದರಿಂದ ಇಂಧನ ಸರಬರಾಜಿನ ಮೇಲೆ ಪರಿಣಾಮ ಬೀರಿದೆ. ಇದರಿಂದ ಹಡಗುಗಳು ಗುಡ್ ಹೋಪ್ ಶಿಖರದ ಮಾರ್ಗವಾಗಿ ಸಂಚರಿಸಬೇಕಾಗುತ್ತಿದ್ದು, ಸಾರಿಗೆ ವೆಚ್ಚವೂ ಹೆಚ್ಚಾಗಿದೆ ಎಂದು ಆರ್ಥಿಕ ತಜ್ಞ ಪ್ರೊ. ಎಸ್.ಆರ್. ಕೇಶವ ತಿಳಿಸಿದ್ದಾರೆ.

ಯುದ್ಧದ ಪರಿಣಾಮವಾಗಿ ಬೆಂಗಳೂರಿನ ಆಟೋ ಮತ್ತು ಕ್ಯಾಬ್ ಪ್ರಯಾಣಿಕರಿಗೆ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಇದೆ. ಈ ಹಿಂದೆ ಆಟೋ ಎಲ್‌ಪಿಜಿ ದರ ಲೀಟರ್‌ಗೆ 58 ರೂ. ಇತ್ತು. ನಂತರ 59 ರೂ. ಆಗಿದ್ದರೆ, ಇದೀಗ ಕೆಲವು ಬಂಕ್‌ಗಳಲ್ಲಿ 69.74 ರೂ. ತಲುಪಿದೆ. ಕೆಲವು ಸ್ಥಳಗಳಲ್ಲಿ ಮಾಲೀಕರು 15 ರಿಂದ 20 ರೂ. ವರೆಗೆ ಹೆಚ್ಚುವರಿ ದರ ವಸೂಲಿ ಮಾಡುತ್ತಿರುವುದಾಗಿ ತಿಳಿದುಬಂದಿದೆ.

ಇನ್ನೂ ಮುಂದಿನ ವಾರದಿಂದ ಆಟೋ ಮತ್ತು ಕ್ಯಾಬ್‌ಗಳಲ್ಲಿ ಬಳಸುವ ಎಲ್‌ಪಿಜಿ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಇದರಿಂದ ಕೆಲವು ಚಾಲಕರು ಈಗಾಗಲೇ ಪ್ರತಿ ಕಿಲೋಮೀಟರ್‌ಗೆ 10 ರಿಂದ 20 ರೂ. ಹೆಚ್ಚುವರಿ ಕೇಳುತ್ತಿರುವುದಾಗಿ ಪ್ರಯಾಣಿಕರು ಹೇಳುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಆಟೋ ಮತ್ತು ಕ್ಯಾಬ್ ಮೀಟರ್ ದರ ಹೆಚ್ಚಿಸಲು ಚಾಲಕರು ಸಾರಿಗೆ ಇಲಾಖೆಯ ಆಯುಕ್ತರು ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಆಟೋ ಕನಿಷ್ಠ ಮೀಟರ್ ದರ 36 ರೂ. ಇದ್ದು, ನಂತರ ಪ್ರತಿ ಕಿಲೋಮೀಟರ್‌ಗೆ 16 ರೂ. ಇದೆ. ಕ್ಯಾಬ್‌ಗಳಿಗೆ ಕನಿಷ್ಠ ದರದ ಮೇಲೆ ಪ್ರತಿ ಕಿಲೋಮೀಟರ್‌ಗೆ 24 ರೂ. ವಸೂಲಿ ಮಾಡುತ್ತಿರುವುದಾಗಿ ತಿಳಿದುಬಂದಿದೆ.

ಒಟ್ಟಿನಲ್ಲಿ ಮಧ್ಯಪ್ರಾಚ್ಯದ ಯುದ್ಧ ಮುಂದುವರಿದರೆ ಇಂಧನ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ಅದರ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ಪ್ರಯಾಣ ದರ ಹೆಚ್ಚಳವಾಗುವ ಸಾಧ್ಯತೆ ಇದೆ.

ಪ್ರೇಕ್ಷಕರಿಗೆ ಡಬಲ್ ಮಜಾ: ಐಪಿಎಲ್‌ನಲ್ಲಿ ಪಂದ್ಯಗಳ ಸಂಖ್ಯೆ ಹೆಚ್ಚಳ!

0

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಮಹತ್ವದ ಬದಲಾವಣೆ ಮಾಡಲು ಬಿಸಿಸಿಐ ಮುಂದಾಗಿದೆ.

2026ರ ಐಪಿಎಲ್ ಸೀಸನ್‌ನಿಂದ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಲು ಯೋಜನೆ ರೂಪಿಸಲಾಗಿದ್ದು, ಒಟ್ಟು 84 ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆ ಇದೆ. ಈ ಹಿಂದೆ ಬಿಸಿಸಿಐ ಐಪಿಎಲ್ 2025 ಮತ್ತು 2026ರಲ್ಲಿ 84 ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಚರ್ಚೆ ನಡೆಸಿತ್ತು. ಆದರೆ ಆಟಗಾರರ ಲಭ್ಯತೆ ಹಾಗೂ ವಿದೇಶಿ ಆಟಗಾರರ ವಿಂಡೋ ಸಮಸ್ಯೆಯಿಂದಾಗಿ ಆ ಯೋಜನೆ ಜಾರಿಗೆ ಬರಲಿಲ್ಲ. ಇದುವರೆಗೆ ಐಪಿಎಲ್‌ನಲ್ಲಿ 74 ಪಂದ್ಯಗಳು ಮಾತ್ರ ನಡೆಯುತ್ತಿತ್ತು. ಇದೀಗ 2026ರಿಂದ ಹೆಚ್ಚುವರಿ 10 ಪಂದ್ಯಗಳನ್ನು ಸೇರಿಸಿ 84 ಪಂದ್ಯಗಳ ಟೂರ್ನಿ ನಡೆಸಲು ಬಿಸಿಸಿಐ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.

ಮಾಧ್ಯಮ ಹಕ್ಕುಗಳ ಒಪ್ಪಂದದ ಪ್ರಕಾರ ಐಪಿಎಲ್ ಸೀಸನ್ 18 ಮತ್ತು 19ರಲ್ಲಿ 84 ಪಂದ್ಯಗಳನ್ನು ಆಯೋಜಿಸುವ ಯೋಜನೆ ಇದ್ದರೂ, ಕಳೆದ ಬಾರಿ ಅದು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಪ್ರಸಾರಕರ ಬೇಡಿಕೆ ಮತ್ತು ವಾಣಿಜ್ಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಲು ಬಿಸಿಸಿಐ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ.

ಇನ್ನು 2027ರಿಂದ ಐಪಿಎಲ್ ಟೂರ್ನಿಯನ್ನು ಸಂಪೂರ್ಣ ಲೀಗ್ ಮಾದರಿಯಲ್ಲಿ ನಡೆಸುವ ಯೋಜನೆಯೂ ಇದೆ. ಅದರಂತೆ ಪ್ರತಿ ತಂಡವು ಒಟ್ಟು 18 ಪಂದ್ಯಗಳನ್ನು ಆಡಲಿದ್ದು, 9 ಪಂದ್ಯಗಳು ಹೋಮ್ ಮೈದಾನದಲ್ಲಿ ಮತ್ತು ಉಳಿದ 9 ಪಂದ್ಯಗಳು ಹೊರ ಮೈದಾನದಲ್ಲಿ ನಡೆಯಲಿವೆ. ಈ ಮೂಲಕ 2027ರಿಂದ ಐಪಿಎಲ್‌ನಲ್ಲಿ 94 ಪಂದ್ಯಗಳು ನಡೆಯುವ ಸಾಧ್ಯತೆ ಇದೆ.

ಈ ಬದಲಾವಣೆಯಿಂದ ಐಪಿಎಲ್ ಅಭಿಮಾನಿಗಳಿಗೆ ಇನ್ನಷ್ಟು ಪಂದ್ಯಗಳನ್ನು ವೀಕ್ಷಿಸುವ ಅವಕಾಶ ದೊರೆಯಲಿದೆ.

ಗುರುಗ್ರಾಮ್: ನಿರ್ಮಾಣ ಹಂತದ ಗೋಡೆ ಕುಸಿತ – 7 ಕಾರ್ಮಿಕರು ಸಾವು, ಐವರ ಸ್ಥಿತಿ ಚಿಂತಾಜನಕ!

0

ಚಂಡೀಗಢ: ಹರಿಯಾಣದ ಗುರುಗ್ರಾಮ್ ಸಿಧ್ರಾವಲಿ ಪ್ರದೇಶದ ಸಿಗ್ನೇಚರ್ ಗ್ಲೋಬಲ್ ಸೊಸೈಟಿಯಲ್ಲಿ ನಿರ್ಮಾಣ ಹಂತದ ಗೋಡೆ ಕುಸಿದ ಪರಿಣಾಮ 7 ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿ, 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಂದ್ರಜಿ ಸದಾ (32), ಭಾಗೀರಥ್ ಗೋಪಿ, ಛೋಟೆಲಾಲ್ ಸದಾ (37), ಶಿವಶಂಕರ್ (31), ಶಿವಕಾಂತ್ ಚೌಧರಿ (47) ಮತ್ತು ಮಂಗಾತ್ರಮ್ (32) ಮೃತರು. ಮತ್ತೊಬ್ಬರ ಗುರುತು ಇನ್ನೂ ಪತ್ತೆಯಾಗಿಲ್ಲ.

ಸುಮಾರಿಗೆ 12–15 ಕಾರ್ಮಿಕರು ಒಳಚರಂಡಿ ಸಂಸ್ಕರಣಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಗೋಡೆ ಕುಸಿದ ಬಳಿಕ ಕಾರ್ಮಿಕರು ಅವಶೇಷಗಳು ಮತ್ತು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದರು.

9:30 ಗಂಟೆಗೆ ಮಾಹಿತಿ ಲಭಿಸಿದ ತಕ್ಷಣ ಪೊಲೀಸರು, SDRF ಮತ್ತು ಅಗ್ನಿಶಾಮಕ ದಳ ರಕ್ಷಣಾ ಕಾರ್ಯ ಆರಂಭಿಸಿ, ಏಳು ಶವಗಳನ್ನು ಹೊರತೆಗೆಯಲಾಗಿದ್ದು, ಐವರು ಗಾಯಗೊಂಡವರನ್ನು ಭಿವಾಡಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಪೋಲೀಸರು ಗೋಡೆ ಕುಸಿತಕ್ಕೆ ಕಾರಣವನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ.

 

ಜಲಸಂಧಿಯಲ್ಲಿ ತೈಲ ಹರಿವು ತಡೆದರೆ, ಇರಾನ್ ಒಂದು ರಾಷ್ಟ್ರವಾಗಿಯೇ ಉಳಿಯದು: ಟ್ರಂಪ್ ಎಚ್ಚರಿಕೆ

0

ವಾಷಿಂಗ್ಟನ್: ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವೆ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆಯ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಎಚ್ಚರಿಕೆ ನೀಡಿದ್ದಾರೆ.

“ಹಾರ್ಮುಜ್ ಜಲಸಂಧಿಯೊಳಗೆ ತೈಲ ಹರಿವನ್ನು ನಿಲ್ಲಿಸುವ ಯಾವುದೇ ಪ್ರಯತ್ನ, ಇರಾನ್ ಅನುಭವಿಸಿದಕ್ಕಿಂತ ಇಪ್ಪತ್ತು ಪಟ್ಟು ಹೆಚ್ಚು ದಾಳಿಯನ್ನು ಎದುರಿಸಬೇಕಾಗುತ್ತದೆ. ಅಂತಹ ದಾಳಿಗಳು ಇರಾನ್ ಅನ್ನು ಒಂದು ರಾಷ್ಟ್ರವಾಗಿ ಉಳಿಸಿಕೊಳ್ಳಲು ಅಸಾಧ್ಯಮಾಡಬಹುದು. ಆದರೆ ನಾನು ಬಯಸುತ್ತೇನೆ, ಅದು ಸಂಭವಿಸಬಾರದು ಎಂದು ಟ್ರಂಪ್ ಹೇಳಿದ್ದಾರೆ.

ಫೆಬ್ರವರಿ 28 ರಂದು, ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಮಿಲಿಟರಿ ದಾಳಿ ನಡೆಸಿದವು. ಈ ಕ್ರಮ ಮಧ್ಯಪ್ರಾಚ್ಯದ ಹಲವು ದೇಶಗಳನ್ನು ಪ್ರಾದೇಶಿಕ ಯುದ್ಧದ ಅಂಚಿಗೆ ತಲುಪಿಸಿದೆ. ಟ್ರಂಪ್ ಹೇಳಿಕೆ ಪ್ರಕಾರ, ಇರಾನ್ ಈಗ ನೌಕಾಪಡೆ, ವಾಯುಪಡೆ ಮತ್ತು ಕ್ಷಿಪಣಿ ವ್ಯವಸ್ಥೆಗಳಲ್ಲಿ ದೊಡ್ಡ ಕೊರತೆ ಎದುರಿಸುತ್ತಿದೆ. ಡ್ರೋನ್ ತಯಾರಿಸುವ ಕಾರ್ಖಾನೆಗಳು ನಾಶಗೊಂಡಿದ್ದು, ಡ್ರೋನ್‌ಗಳನ್ನು ಹಲವು ಕಡೆಗೆ ಹೊಡೆದುರುಳಿಸಲಾಗಿದೆ.

“ಯುದ್ಧ ಪ್ರಾರಂಭವಾದಾಗ ನಾವು ಕನಿಷ್ಠ ನಾಲ್ಕರಿಂದ ಐದು ವಾರಗಳ ಕ್ರಮ ನಿರೀಕ್ಷಿಸಿದ್ದೆವು, ಆದರೆ ಈಗ ಸಂಘರ್ಷ ಶೀಘ್ರದಲ್ಲೇ ಮುಗಿಯಬಹುದು. ಇರಾನ್ ಯಾವುದೇ ಹೊಸ ತಂತ್ರಗಳನ್ನು ಪ್ರಯತ್ನಿಸಬಾರದು. ಹಾರ್ಮುಜ್ ಜಲಸಂಧಿ ಈಗ ತೆರೆದಿದ್ದು, ಹಡಗುಗಳು ಅಲ್ಲಿಂದ ಸುರಕ್ಷಿತವಾಗಿ ಸಾಗುತ್ತಿವೆ” ಎಂದು ತಿಳಿಸಿದ್ದಾರೆ.

 

 

ರಾಯಚೂರು| ನಿರ್ಮಾಣ ಹಂತದ ಮನೆಯ ಮೆಟ್ಟಿಲು ಕುಸಿತ: ದಂಪತಿ ಸಾವು

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಯಲಗಟ್ಟ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯ ಮೆಟ್ಟಿಲು ಏಕಾಏಕಿ ಕುಸಿದ ಪರಿಣಾಮ, ಗೌಂಡಿ ಕೆಲಸ ಮಾಡುತ್ತಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರ ಪೈಕಿ 38 ವರ್ಷದ ದ್ಯಾವಪ್ಪ ಸೂಗುರು ಮತ್ತು 32 ವರ್ಷದ ಶಿವಮ್ಮ, ದುರ್ದೈವಿಗಳು. ತನಿಖೆಯ ಪ್ರಕಾರ, ಮೆಟ್ಟಿಲು ಪಿಲ್ಲರ್ ಇಲ್ಲದೆ, ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದುದರಿಂದ ಕುಸಿತಕ್ಕೆ ಕಾರಣವಾಗಿದೆ.

ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಸಂಬಂಧ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಲಿಂಗಸುಗೂರು ತಾಲ್ಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳೀಯರು ದಾರುಣ ಘಟನೆಗೆ ಸಂಬಂಧಿಸಿದಂತೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

 

ಶಾಸಕರಿಗೆ ಔತಣಕೂಟ: ಕೆಪಿಸಿಸಿ ಅಧ್ಯಕ್ಷ ಸ್ಥಾನ ತೊರೆಯುತ್ತಾರಾ ಡಿಸಿಎಂ ಡಿಕೆಶಿ!?

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಇಂದು ಶಾಸಕರಿಗೆ ಭೋಜನಕೂಟ ಆಯೋಜಿಸಿದ್ದಾರೆ.

ಈ ಔತಣಕೂಟ ರಾಜಕೀಯ ಲೆಕ್ಕಾಚಾರ, ಪವರ್ ಶೇರಿಂಗ್ ಗೊಂದಲದ ನಡುವೆ ಆಯೋಜನೆಯಾಗಿದೆ. ಪಕ್ಷದೊಳಗಿನ ಕೆಲವರಲ್ಲಿ “ಡಿಕೆಶಿ ಅಧ್ಯಕ್ಷ ಸ್ಥಾನದಿಂದ ಇಳಿಯುವ ಬಗ್ಗೆಯೂ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಈ ಡಿನ್ನರ್ ಮೀಟಿಂಗ್ ಸಾಕಷ್ಟು ಕುತೂಹಲ ಮೂಡಿಸಿದೆ.

ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿ, “ನಾನು ಕೆಪಿಸಿಸಿ ಅಧ್ಯಕ್ಷನಾಗಿ 6 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಎಲ್ಲಾ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಭೋಜನಕೂಟ ಹಮ್ಮಿಕೊಂಡಿದ್ದೇನೆ.

ಮುಂದಿನ ದಿನಗಳಲ್ಲಿ ಪರಾಜಿತ ಅಭ್ಯರ್ಥಿಗಳು ಮತ್ತು ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಕೂಡ ಭೋಜನಕೂಟ ಹಮ್ಮಿಕೊಳ್ಳಲಾಗುವುದು. ಈಗ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಸಕರಿಗೆ ಈ ಭೋಜನಕೂಟವನ್ನು ನೀಡಿದ್ದೇವೆ” ಎಂದು ಹೇಳಿದರು.

 

ತಮಿಳುನಾಡಲ್ಲಿ ಸಿಲಿಂಡರ್ ಕೊರತೆ: ರೆಸ್ಟೋರೆಂಟ್‌ಗಳನ್ನು ಬಂದ್‌ ಮಾಡೋ ಪರಿಸ್ಥಿತಿ!

0

ಚೆನ್ನೈ: ಇಸ್ರೇಲ್‌, ಅಮೆರಿಕ ಹಾಗೂ ಇರಾನ್‌ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮದಿಂದ ದೇಶದ ಅಡುಗೆ ಅನಿಲ ಸಿಲಿಂಡರ್‌ ಬೆಲೆ ಹೆಚ್ಚಳ ಕಂಡಿದ್ದು, ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಗೃಹ ಮತ್ತು ವಾಣಿಜ್ಯ ಬಳಕೆಯ ಗ್ಯಾಸ್‌ ಸಿಲಿಂಡರ್‌ ಅಭಾವ ತಲೆದೋರಿದೆ.

ತಮಿಳುನಾಡಿನ ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮಗಳು ಈ ಪೂರೈಕಾ ತೊಂದರೆ ಹಿನ್ನೆಲೆಯಲ್ಲಿ ಬಂಡವಾಳದ ಸಮಸ್ಯೆಯನ್ನು ಎದುರಿಸುತ್ತಿದ್ದು, ಕೆಲವು ಹೋಟೆಲ್‌ಗಳು ಬಂದ್‌ ಮಾಡುವ ಪರಿಸ್ಥಿತಿಯಲ್ಲಿವೆ.

ಚೆನ್ನೈ ಹೋಟೆಲ್ ಅಸೋಸಿಯೇಷನ್ ತಮಿಳುನಾಡು ಮುಖ್ಯಮಂತ್ರಿ ಗೆ ಪತ್ರ ಬರೆದು, ಸಿಲಿಂಡರ್ ಪೂರೈಕೆಗೆ ಸಮರ್ಪಕ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. ಪತ್ರದಲ್ಲಿ, “ಸಿಲಿಂಡರ್ ಸಿಗದೆ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ವಿತರಕರು ಪೂರೈಕೆ ಸಂಪೂರ್ಣ ಸ್ಥಗಿತ ಮಾಡಿದ್ದಾರೆ. ನೋ ಸ್ಟಾಕ್ ಎಂದು ಹೇಳುತ್ತಿದ್ದು, ಬಹುತೇಕ ರೆಸ್ಟೋರೆಂಟ್ ಬಂದ್ ಮಾಡಲು ಎದುರಿಸುತ್ತಿದ್ದಾರೆ,” ಎಂದು ವಿವರಿಸಲಾಗಿದೆ.

ಅಸೋಸಿಯೇಷನ್ ಅವರು ಸರ್ಕಾರದ ತಕ್ಷಣದ ಹಸ್ತಕ್ಷೇಪಕ್ಕೆ ಆಗ್ರಹಿಸಿ, ಕಮರ್ಷಿಯಲ್ ಸಿಲಿಂಡರ್ ಪೂರೈಕೆಯನ್ನು ಸುಧಾರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

 

error: Content is protected !!