Home Blog

ಗುರುಗಳ ಆಶೀರ್ವಾದವೇ ಬದುಕಿನ ಬೆಳಕು..!

ವಿಜಯಸಾಕ್ಷಿ ಸುದ್ದಿ, ನರಗುಂದ: 23 ವರ್ಷಗಳ ಹಿಂದೆ ಒಂದೇ ತರಗತಿಯಲ್ಲಿ ಕುಳಿತು ಓದಿದ ವಿದ್ಯಾರ್ಥಿಗಳು ಮತ್ತೆ ಒಂದೇ ವೇದಿಕೆಯಲ್ಲಿ ಸೇರಿ ತಮ್ಮ ಗುರುಗಳಿಗೆ ಗೌರವ ನಮನ ಸಲ್ಲಿಸಿದ ಅಪರೂಪದ ಕ್ಷಣಕ್ಕೆ ಚಿಕ್ಕನರಗುಂದ ಸಾಕ್ಷಿಯಾಯಿತು. ನೆನಪುಗಳು, ನಗು, ಭಾವುಕ ಕ್ಷಣಗಳು, ಗುರುಭಕ್ತಿ ಹಾಗೂ ಸ್ನೇಹದ ಬಾಂಧವ್ಯಗಳಿಂದ ಕೂಡಿದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಎಲ್ಲರ ಮನಸ್ಸನ್ನು ತಟ್ಟಿತು.
ಚಿಕ್ಕನರಗುಂದದ ಡಿ.ಎಸ್. ಕೆಂಚನಗೌಡ್ರ ಪ್ರೌಢಶಾಲೆಯ 2002-2003ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಆಯೋಜಿಸಿದ್ದ “ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ” ಕಾರ್ಯಕ್ರಮಕ್ಕೆ ನರಗುಂದ ಪುಣ್ಯಾರಣ್ಯ ಪತ್ರಿವನಮಠದ ಷ.ಬ್ರ. ಡಾ. ಶ್ರೀ ಗುರುಸಿದ್ಧವೀರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಗುರು ಎಂದರೆ ಬೆಳಕು, ಜ್ಞಾನ ಹಾಗೂ ತೇಜಸ್ಸು. ಅದಕ್ಕಾಗಿಯೇ ಗುರುಗಳನ್ನು ಜ್ಞಾನಸೂರ್ಯ ಎಂದು ಕರೆಯುತ್ತಾರೆ. ಸೂರ್ಯೋದಯವಾದಾಗ ಕತ್ತಲೆ ಕರಗುವಂತೆ, ಗುರುವಿನ ಜ್ಞಾನದ ಅನುಗ್ರಹ ದೊರೆತಾಗ ಅಜ್ಞಾನ ದೂರವಾಗಿ ಸುಜ್ಞಾನ ಅರಳುತ್ತದೆ. ಗುರುಗಳು ಜ್ಞಾನದ ಸಂಜೀವಿನಿ ನೀಡುವ ಶಕ್ತಿಯಾಗಿದ್ದಾರೆ ಎಂದು ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನರಗುಂದ ಕಾಲೇಜಿನ ಉಪನ್ಯಾಸಕ ಎಸ್. ವ್ಹಿ. ದಂಡನಾಯ್ಕರ್, “ಎಲ್ಲರನ್ನು ಸಮದೃಷ್ಟಿಯಿಂದ ನೋಡಿ ಜ್ಞಾನದ ಧಾರೆಯನ್ನು ಹರಿಸುವ ಗುರುಗಳನ್ನು ಗೌರವಿಸುವುದು ನಮ್ಮ ಭವ್ಯ ಪರಂಪರೆ. ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವ ಈ ಅಪೂರ್ವ ಸಂಗಮ ನಿಜಕ್ಕೂ ಅರ್ಥಪೂರ್ಣ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಂದನಾರ್ಹ ಗುರು ಬಳಗಕ್ಕೆ ವಿದ್ಯಾರ್ಥಿಗಳು ಪುಷ್ಪಾರ್ಚನೆ ಸಲ್ಲಿಸಿ ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿದರು. ವರ್ಷಗಳ ಬಳಿಕ ತಮ್ಮ ವಿದ್ಯಾರ್ಥಿಗಳನ್ನು ಕಂಡ ಗುರುಗಳ ಕಣ್ಣುಗಳಲ್ಲಿ ಸಂತಸದ ಕಣ್ಣೀರು ಮಿಂಚಿತು.
ಗುರುಗಳಾದ ಎಚ್. ಏ. ಮುದಿಯಪ್ಪನವರ ಮಾತನಾಡಿ, “2002-2003ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಆಯೋಜಿಸಿರುವ ಈ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಿಂದ ತುಂಬಾ ಸಂತೋಷವಾಗಿದೆ. ಇದು ನಮ್ಮ ಪಾಲಿಗೆ ಐದನೇ ಗುರುವಂದನಾ ಕಾರ್ಯಕ್ರಮ. ಒಬ್ಬ ಶಿಕ್ಷಕನಿಗೆ ಇದಕ್ಕಿಂತ ದೊಡ್ಡ ಸಂತೋಷ ಇನ್ನೇನು ಬೇಕು? 23 ವರ್ಷಗಳ ಬಳಿಕ ಎಲ್ಲರನ್ನು ಮತ್ತೆ ನೋಡುವ ಅವಕಾಶ ಸಿಕ್ಕಿದೆ” ಎಂದು ಭಾವುಕರಾದರು.
“ಕವಿ ಹೇಳುವಂತೆ ‘ಸ್ವರ್ಗದೊಳಗೆ ಈ ಸ್ನೇಹ ದೊರೆಯುವುದೇನು? ಇಲ್ಲವಾಗಿರೆ ನಮಗೆ ಇಲ್ಲೇ ನೂರು ವರ್ಷಗಳಿರಲಿ’ ಎಂಬ ಮಾತು ಇಂದು ಸಾರ್ಥಕವಾಗಿದೆ. ಮನೆಯೇ ಮೊದಲ ಪಾಠಶಾಲೆ, ಜನನಿಯೇ ಮೊದಲ ಗುರು. ಮಕ್ಕಳನ್ನು ಮೊಬೈಲ್ ಹಾಗೂ ಟಿವಿಯಿಂದ ದೂರವಿಟ್ಟು ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರ ನೀಡಿ. ತಂದೆ-ತಾಯಿಗಳನ್ನು ಗೌರವಿಸಿ, ಬಂಧು ಬಳಗದೊಂದಿಗೆ ಉತ್ತಮ ಜೀವನ ನಡೆಸಿ” ಎಂದು ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್. ಎಸ್. ಕಂದಗಲ್ಲ ಮಾತನಾಡಿ, “ಗುರುವಿನ ಗುಲಾಮನಾಗುವ ತನಕ ದೊರೆಯುವುದನ್ನು ಮುಕ್ತಿ ಎಂಬ ನುಡಿಗಟ್ಟು ಇದೆ. ಜೀವನವನ್ನು ರೂಪಿಸುವ ಶಕ್ತಿ ಗುರುಗಳಲ್ಲಿದೆ. ವಿದ್ಯಾರ್ಥಿಗಳ ಈ ಸಮಾರಂಭ ಶಿಕ್ಷಕರು ಬಿತ್ತಿದ ನೈತಿಕ ಮೌಲ್ಯಗಳ ಪ್ರತಿಬಿಂಬ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ರೇಣುಕಾ ಹೂಲಿ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಹಳೆಯ ವಿದ್ಯಾರ್ಥಿಗಳಾದ ಮಹಾಂತೇಶ ಹಲಗೌಡ್ರ, ನಿರ್ಮಲಾ ಹನಸಿ, ಗೀತಾ ಕಂಬಳಿ, ರವಿ ತಳವಾರ, ಹನಮಂತ ಮೇಟಿ ಶಾಲಾ ದಿನಗಳ ಅನುಭವಗಳನ್ನು ಹಂಚಿಕೊಂಡು ಭಾವನಾತ್ಮಕ ಕ್ಷಣಗಳನ್ನು ನೆನಪಿಸಿಕೊಂಡರು.
ಮುತ್ತು ರಾಯರಡ್ಡಿ ಸ್ವಾಗತಿಸಿದರು. ಪ್ರಕಾಶ ಗುಡಸಲಮನಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಕಾಂತ ಚಲವಾದಿ ವಂದಿಸಿದರು.
ಸಭೆಯಲ್ಲಿ ಎಲ್ಲಾ ಹಳೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕುಟುಂಬ ಸಮೇತರಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.
 “23 ವರ್ಷಗಳ ಬಳಿಕ ಮತ್ತೆ ಒಂದೇ ವೇದಿಕೆಯಲ್ಲಿ ಸೇರಿರುವ ನಮ್ಮ ಸ್ನೇಹಿತರು ಮತ್ತು ಗುರುಗಳನ್ನು ನೋಡುವುದು ಬದುಕಿನ ಅತ್ಯಂತ ಅಮೂಲ್ಯ ಕ್ಷಣ. ಗುರುಗಳ ಆಶೀರ್ವಾದವೇ ನಮ್ಮ ಜೀವನದ ನಿಜವಾದ ಸಂಪತ್ತು.”
ಮುತ್ತು ರಾಯರಡ್ಡಿ
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ
 “ಗುರುಗಳು ಕಲಿಸಿದ ಪಾಠವೇ ಇಂದು ನಮ್ಮ ಬದುಕಿನ ದಾರಿದೀಪವಾಗಿದೆ. ವರ್ಷಗಳು ಕಳೆದರೂ ಶಾಲೆಯ ನೆನಪು ಮತ್ತು ಗುರುಗಳ ಋಣವನ್ನು ಮರೆಯಲು ಸಾಧ್ಯವಿಲ್ಲ.”
ಎಚ್. ಏ. ಮುದಿಯಪ್ಪನವರ
ಶಿಕ್ಷಕರು

ಬಸವರಾಜ ಶಿವಣ್ಣನವರಿಗೆ ಸಚಿವ ಸ್ಥಾನ ನೀಡಿ..!

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಬಸವರಾಜ ಶಿವಣ್ಣನವರ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಹಾಲಮತ ಸಮಾಜದ ವತಿಯಿಂದ ಸೋಮವಾರ ಪತ್ರಿಕಾಗೋಷ್ಠಿ ನಡೆಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಾಲಮತ ಸಮಾಜದ ಮುಖಂಡ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ನಿರ್ದೇಶಕ ಸೋಮಣ್ಣ ಬೆಟಗೇರಿ, “ಉತ್ತರ ಕರ್ನಾಟಕ ಭಾಗದ ರೈತರು, ಬಡವರು ಹಾಗೂ ಅಹಿಂದ ವರ್ಗದವರ ಸಮಸ್ಯೆಗಳಿಗೆ ಸ್ಪಂದಿಸುವ ಸಚಿವರ ಅಗತ್ಯವಿದೆ. ಆ ನಿಟ್ಟಿನಲ್ಲಿ ಬಸವರಾಜ ಶಿವಣ್ಣನವರ ಅವರು ಸೂಕ್ತ ಅಭ್ಯರ್ಥಿಯಾಗಿದ್ದಾರೆ” ಎಂದು ಹೇಳಿದರು.
ನಾಲ್ಕು ಬಾರಿ ಶಾಸಕರಾಗಿ ಅಪಾರ ಜನಪ್ರಿಯತೆ ಗಳಿಸಿರುವ ಅವರು ಪಕ್ಷ ಹಾಗೂ ಸರ್ಕಾರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಜನಸಾಮಾನ್ಯರೊಂದಿಗೆ ಆತ್ಮೀಯವಾಗಿ ಬೆರೆಯುವ ನಾಯಕರಾಗಿರುವ ಶಿವಣ್ಣನವರ ಅವರಿಗೆ ಸಚಿವ ಸ್ಥಾನ ನೀಡಿದರೆ ಉತ್ತರ ಕರ್ನಾಟಕ ಭಾಗಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆಯುವುದರ ಜೊತೆಗೆ ಅಹಿಂದ ವರ್ಗ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಪಕ್ಷದ ಸಂಘಟನೆ ಬಲಪಡಿಸುವಲ್ಲಿ ಹಾಗೂ ಸಾಮಾಜಿಕ ನ್ಯಾಯದ ಆಶಯಗಳನ್ನು ಸಾಕಾರಗೊಳಿಸುವಲ್ಲಿ ಶಿವಣ್ಣನವರ ಅವರ ಪಾತ್ರ ಮಹತ್ವದ್ದಾಗಿದೆ. ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಪಕ್ಷಕ್ಕೂ ಲಾಭವಾಗಲಿದ್ದು, ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಲಿದೆ ಎಂದು ಹೇಳಿದರು.
ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಭಾವಿ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ಬಸವರಾಜ ಶಿವಣ್ಣನವರಿಗೆ ಸಚಿವ ಸ್ಥಾನ ನೀಡುವ ಮೂಲಕ ಉತ್ತರ ಕರ್ನಾಟಕದ ಜನರ ಆಶಯ ಈಡೇರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಹುಲ್ ಹೊಳಲಾಪುರ, ಮುದಕಣ್ಣ ಗದ್ದಿ, ಛಾಯಪ್ಪ ಬಸಾಪುರ, ಮುತ್ತಣ್ಣ ಟೋಕಾಳಿ, ಮಂಜುನಾಥ ಶೇರಸೂರಿ, ಸುರೇಶ ಹೊಳಲಾಪುರ, ಮಲ್ಲೇಶಪ್ಪ ಬಸಾಪುರ ಹಾಗೂ ಪುಟ್ಟಪ್ಪ ಬಳಗಾನೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕೈಗಾರಿಕಾ ಅಭಿವೃದ್ಧಿಗೆ ವೇಗ ನೀಡಿ

ವಿಜಯಸಾಕ್ಷಿ ಸುದ್ದಿ, ಗದಗ: ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ನೇತೃತ್ವದ ನಿಯೋಗ ಭಾಗವಹಿಸಿ ಜಿಲ್ಲೆಯ ಕೈಗಾರಿಕಾ ವಸಾಹತುಗಳಲ್ಲಿ ಎದುರಾಗಿರುವ ಸಮಸ್ಯೆಗಳ ಕುರಿತು ಚರ್ಚಿಸಿತು.
ಸಭೆಯಲ್ಲಿ ಕೈಗಾರಿಕಾ ವಸಾಹತು ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ, ಕೈಗಾರಿಕಾ ನಿವೇಶನಗಳ ಹಂಚಿಕೆಯಲ್ಲಿ ಆಗುತ್ತಿರುವ ವಿಳಂಬ ಹಾಗೂ ಕೈಗಾರಿಕೆಗಳ ಸ್ಥಾಪನೆಗೆ ಎದುರಾಗುತ್ತಿರುವ ಅನಾನುಕೂಲತೆಗಳ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆಯಲಾಯಿತು.
ಜಿಲ್ಲೆಯಲ್ಲಿ ಕೈಗಾರಿಕೆಗಳಿಗೆ ಪೂರಕ ವಾತಾವರಣ ನಿರ್ಮಿಸಿ ಉದ್ಯಮಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ನಿಯೋಗ ಮನವಿ ಮಾಡಿತು.
ನಿಯೋಗದಲ್ಲಿ ಉಪಾಧ್ಯಕ್ಷರಾದ ಜಯದೇವ್ ಮೆಣಸಗಿ, ಪ್ರಕಾಶ್ ಉಗಲಾಟ್, ಶಿದ್ರಾಮಪ್ಪ ಉಮಚಗಿ ಹಾಗೂ ಸಹಕಾರ್ಯದರ್ಶಿ ಅಶೋಕ್ ಸಂಕಣ್ಣವರ ಭಾಗವಹಿಸಿದ್ದರು ಎಂದು ಕಾರ್ಯದರ್ಶಿ ಚನ್ನವೀರ ಹುಣಸಿಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಕ್ಕಳ ಭವಿಷ್ಯ ಕಟ್ಟುವ ಶಕ್ತಿ ಸರ್ಕಾರಿ ಶಾಲೆಗಳಲ್ಲಿದೆ..!

ವಿಜಯಸಾಕ್ಷಿ ಸುದ್ದಿ, ಗದಗ: “ಸರ್ಕಾರಿ ಶಾಲೆಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುತ್ತವೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವ ಮೂಲಕ ಅವರ ಭವಿಷ್ಯ ನಿರ್ಮಾಣಕ್ಕೆ ಕೈಜೋಡಿಸಬೇಕು” ಎಂದು ಗದಗ ಶಹರ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಪಿ. ಪ್ರಭಯ್ಯನಮಠ ಹೇಳಿದರು.
ಗದಗ ಹುಡ್ಕೋ ಕಾಲೋನಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಆಯೋಜಿಸಿದ್ದ ಶಾಲಾ ಪ್ರಾರಂಭೋತ್ಸವ ಹಾಗೂ ಪೋಷಕರ-ಶಿಕ್ಷಕರ ಮಹಾಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಬಿಸಿಯೂಟ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲಾಗುತ್ತಿದೆ ಎಂದು ತಿಳಿಸಿದರು.
ನಗರಸಭೆ ಸದಸ್ಯೆ ವಿದ್ಯಾವತಿ ಗಡಗಿ ಕಾರ್ಯಕ್ರಮ ಉದ್ಘಾಟಿಸಿ, “ಸರ್ಕಾರಿ ಶಾಲೆಗಳು ಪ್ರಗತಿಯ ದ್ಯೋತಕ. ಮಕ್ಕಳು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕವಾಗಿ ಮುಂದೆ ಬರಬೇಕು” ಎಂದರು.
ಬಿಸಿಯೂಟ ಯೋಜನಾಧಿಕಾರಿ ಶಂಕರ ಹಡಗಲಿ, ಶೈಕ್ಷಣಿಕ ಚಿಂತಕ ಡಾ. ಬಸವರಾಜ ಧಾರವಾಡ, ಎಸ್‌ಡಿಎಂಸಿ ಅಧ್ಯಕ್ಷೆ ನಂದಾ ಖಟವಟೆ, ಸದಸ್ಯ ಪ್ರಕಾಶ ಶೇಂದ್ರೆ, ನಾಮನಿರ್ದೇಶಿತ ಸದಸ್ಯ ದುರ್ಗಪ್ಪ ವಿಭೂತಿ ಮಾತನಾಡಿ ಸರ್ಕಾರಿ ಶಾಲೆಗಳ ಗುಣಮಟ್ಟ ಹಾಗೂ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲಾ ಮುಖ್ಯೋಪಾಧ್ಯಾಯ ವೈ. ಎಚ್. ತೆಕ್ಕಲಕೋಟಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಭೂಮಿಕಾ ಶೇಂದ್ರೆ (98.24%), ಉಮಾಮಹೇಶ್ವರಿ ಬುಕ್‌ಸಾಗರಮಠ (91.84%), ಮೇಹಕ್ ಇಲ್ಲಾಳ (90.88%) ಅವರನ್ನು ಸನ್ಮಾನಿಸಲಾಯಿತು.
ಮಕ್ಕಳಿಗೆ ಹೂವು ಹಾಕಿ, ಆರತಿ ಮಾಡಿ, ಸಿಹಿ ಹಂಚುವ ಮೂಲಕ ಹೊಸ ಶೈಕ್ಷಣಿಕ ವರ್ಷದ ಸ್ವಾಗತ ಮಾಡಲಾಯಿತು.
 “ಸರ್ಕಾರಿ ಶಾಲೆಗಳು ಮಕ್ಕಳಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ ಹಾಗೂ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಕೇಂದ್ರಗಳಾಗಿವೆ.”
ಎಸ್. ಪಿ. ಪ್ರಭಯ್ಯನಮಠ, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ

ಲೋಕ ಕಲ್ಯಾಣಕ್ಕಾಗಿ ಶ್ರೀಗಳ ಮೌನ ತಪಸ್ಸು..!

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಐತಿಹಾಸಿಕ ಕರೇವಾಡಿ ಮಠದ ಉತ್ತರಾಧಿಕಾರಿಗಳಾದ ಡಾ. ಮಂಜುನಾಥಯ್ಯ ದೇವರು ಲೋಕ ಕಲ್ಯಾಣ, ಉತ್ತಮ ಮಳೆ-ಬೆಳೆ ಹಾಗೂ ಜನರಿಗೆ ಶಾಂತಿ ಮತ್ತು ಸಮೃದ್ಧಿ ದೊರೆಯಲೆಂದು ಜೂನ್ 1ರಿಂದ 3ರವರೆಗೆ ಮೌನಾನುಷ್ಠಾನ ಕೈಗೊಂಡಿದ್ದಾರೆ.
ಪಟ್ಟಣದ ಹಳ್ಳದಕೇರಿ ಓಣಿಯ ಗುಂಜಳ ರಸ್ತೆಯ ಸಾಲಾವಳಿ ಬಸವೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಈ ಮೌನಾನುಷ್ಠಾನಕ್ಕೆ ಭಕ್ತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ನಿತ್ಯ ಇಷ್ಟಲಿಂಗ ಮಹಾಪೂಜೆ, ರುದ್ರಾಭಿಷೇಕ ಹಾಗೂ ಪ್ರಸಾದ ಸೇವೆ ನಡೆಯುತ್ತಿದೆ.
ಮೌನಾನುಷ್ಠಾನದ ಮಂಗಲ ಸಮಾರಂಭದ ಅಂಗವಾಗಿ ಜೂನ್ 3ರಂದು ಸಂಜೆ 5 ಗಂಟೆಗೆ ಧರ್ಮಸಭೆ ಆಯೋಜಿಸಲಾಗಿದೆ. ಧರ್ಮಸಭೆಯ ಸಾನಿಧ್ಯವನ್ನು ಶ್ರೀಮಠದ ಮಳೆಮಲ್ಲಿಕಾರ್ಜುನ ಶಿವಾಚಾರ್ಯರು, ಗಂಜಿಗಟ್ಟಿಯ ಶ್ರೀ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಸ್ವಾಮೀಜಿ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಪೂಜ್ಯರು, ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಠದ ಕಮಿಟಿ ತಿಳಿಸಿದೆ.

ವಿಶೇಷ ಮಕ್ಕಳಿಗೆ ಹಬ್ಬದ ಸ್ವಾಗತ..!

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಅರುಣೋದಯ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ಹೊಸ ಶೈಕ್ಷಣಿಕ ವರ್ಷದ ಆರಂಭ ಸೋಮವಾರ ಹಬ್ಬದ ಸಂಭ್ರಮದಲ್ಲಿ ನಡೆಯಿತು. ಶಾಲೆಗೆ ಆಗಮಿಸಿದ ಪುಟಾಣಿ ಮಕ್ಕಳಿಗೆ ಗುಲಾಬಿ ಹೂ ನೀಡಿ, ಬಾಯಿ ಸಿಹಿ ಮಾಡುವ ಮೂಲಕ ಶಿಕ್ಷಕ ಬಳಗ ಆತ್ಮೀಯವಾಗಿ ಸ್ವಾಗತ ಕೋರಿತು. ಶಾಲಾ ಆವರಣ ಮಕ್ಕಳ ನಗು, ಬಣ್ಣಬಣ್ಣದ ರಂಗೋಲಿ ಹಾಗೂ ಸಂಭ್ರಮದ ವಾತಾವರಣದಿಂದ ಕಂಗೊಳಿಸಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಲುಕ್ಕಣಸಾ ರಾಜೋಳಿ, “ವಿಶೇಷ ಚೇತನ ಮಕ್ಕಳು ನಿಜಕ್ಕೂ ವಿಶೇಷ ಪ್ರತಿಭೆಗಳುಳ್ಳವರು. ಅವರನ್ನು ಪಾಲಕರು ಮತ್ತು ಶಿಕ್ಷಕರು ಪ್ರೀತಿ, ಸ್ನೇಹ ಹಾಗೂ ತಾಳ್ಮೆಯಿಂದ ನೋಡಿಕೊಳ್ಳಬೇಕು. ಅವರ ಬುದ್ಧಿಮಟ್ಟಕ್ಕೆ ತಕ್ಕ ಶಿಕ್ಷಣ ನೀಡಿದರೆ ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆದು ಜೀವನದಲ್ಲಿ ದೊಡ್ಡ ಸಾಧನೆ ಮಾಡುತ್ತಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹುಬ್ಬಳ್ಳಿಯ ಸೇವಾ ಟ್ರಸ್ಟ್‌ನ ಈ ಸಂಸ್ಥೆ ಹಲವು ವರ್ಷಗಳಿಂದ ವಿಶೇಷ ಮಕ್ಕಳ ಸೇವೆಗೆ ಸಮರ್ಪಿತವಾಗಿದ್ದು, “ಇಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕ ಹಳೆಯ ವಿದ್ಯಾರ್ಥಿಗಳು ಇಂದು ಉನ್ನತ ಶಿಕ್ಷಣ ಪಡೆದು ಉತ್ತಮ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ” ಎಂದು ಅವರು ಹೆಮ್ಮೆಯಿಂದ ತಿಳಿಸಿದರು.
ಶಾಲೆಯ ಕಾರ್ಯದರ್ಶಿ ಜಯರಾಜ ಮುಳಗುಂದ ಮಾತನಾಡಿ, “ವಿಶೇಷ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಂಸ್ಥೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅನುಭವಿ ಶಿಕ್ಷಕ ಬಳಗ ಪ್ರತಿ ಮಗುವಿನ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದು, ಮಕ್ಕಳ ಪ್ರತಿಭೆ ಹೊರತರುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಯುತ್ತಿದೆ” ಎಂದರು.
ಆಡಳಿತ ಮಂಡಳಿಯ ಸದಸ್ಯರಾದ ಬಸವರಾಜ ನಾಗಲಾಪೂರ, ಡಾ. ಉಮೇಶ ಹಾದಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಮಲ್ಲಪ್ಪ ಹಕ್ಕಿ ಸ್ವಾಗತಿಸಿದರು. ಸದಸ್ಯ ಬಸವರಾಜ ಪಟ್ಟಣಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಟ್ಟಡ ನಿರ್ವಾಹಕ ಮಲ್ಲಿಕಾರ್ಜುನ ನಾಗಲಾಪೂರ ವಂದನಾರ್ಪಣೆ ಸಲ್ಲಿಸಿದರು.
ಶಿಕ್ಷಕ-ಶಿಕ್ಷಕಿಯರಾದ ಜಗದೀಶ ಹಡಪದ, ಜಯಶ್ರೀ ಭಾವರೆ, ಸುರೇಶ ಹಾದಿ ಹಾಗೂ ಸಿಬ್ಬಂದಿಗಳಾದ ರೇಣುಕಾ ದಾಸರ, ವೀಣಾ ಕೊಲ್ಲಾಪುರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಾಲೆಯ ಆವರಣ ಗುಲಾಬಿ ಹೂವಿನ ಸುವಾಸನೆ, ಮೈಸೂರಪಾಕ್ ಸಿಹಿ ಹಂಚಿಕೆ ಹಾಗೂ ಮಕ್ಕಳ ಸಂಭ್ರಮದಿಂದ ಕಳೆಗಟ್ಟಿತ್ತು. ಶೈಕ್ಷಣಿಕ ವರ್ಷದ ಮೊದಲ ದಿನವೇ ಮಕ್ಕಳ ಮುಖದಲ್ಲಿ ಮೂಡಿದ ಸಂತಸ ಪಾಲಕರಲ್ಲೂ ಹೊಸ ವಿಶ್ವಾಸ ಮೂಡಿಸಿತು.

15ವರ್ಷ ಅಲೆದ್ರೂ ಸಿಗಲಿಲ್ಲ ಸೂರು!

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಸ್ಥಳೀಯ ಪಟ್ಟಣ ಪಂಚಾಯಿತಿಯಿಂದ 2012ರಿಂದ ಕಡುಬಡವರು ಹಾಗೂ ನಿರ್ಗತಿಕರಿಗೆ ಹಂಚಿಕೆಯಾಗಬೇಕಿದ್ದ ನಿವೇಶನಗಳು ಇಂದಿಗೂ ವಿತರಣೆಯಾಗದಿರುವುದನ್ನು ಖಂಡಿಸಿ ಪಟ್ಟಣದ ಮಹಿಳೆಯರು ಪಪಂ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಹದಿನೈದು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಿವೇಶನ ಹಂಚಿಕೆ ಸದಸ್ಯರ ಆಡಳಿತಾವಧಿಯಲ್ಲಿಯೂ ಪೂರ್ಣಗೊಂಡಿಲ್ಲ ಎಂದು ಮಹಿಳೆಯರು ಆರೋಪಿಸಿದರು. ಸುಮಾರು 4000 ಅರ್ಜಿಗಳ ಪೈಕಿ 373 ಫಲಾನುಭವಿಗಳ ಹೆಸರಿನ ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗಿತ್ತು. ಆದರೆ ಸರಿಯಾದ ರೀತಿಯಲ್ಲಿ ಹಂಚಿಕೆ ಪ್ರಕ್ರಿಯೆ ನಡೆಯದೇ ತಟಸ್ಥ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಉಸ್ತುವಾರಿ ಸಚಿವರು ಪರಿಶೀಲನೆ ನಡೆಸಿ ನಿವೇಶನ ಹಂಚಿಕೆ ಮಾಡುವಂತೆ ಜಿಲ್ಲಾಧಿಕಾರಿ, ಆಡಳಿತಾಧಿಕಾರಿ ಹಾಗೂ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅವರ ಸೂಚನೆಯಂತೆ ಪರಿಶೀಲನೆಯೂ ನಡೆದಿತ್ತು. ಆದರೆ ಅಂತಿಮ ಹಂಚಿಕೆ ಕಾರ್ಯ ಮಾತ್ರ ಇನ್ನೂ ಆರಂಭವಾಗಿಲ್ಲ ಎಂದು ಮಹಿಳೆಯರು ಕಿಡಿಕಾರಿದರು.
ಕಳೆದ ವಾರ ಪಪಂ ಕಚೇರಿಗೆ ಬಂದಾಗ ಮುಖ್ಯಾಧಿಕಾರಿ ಸೋಮವಾರ ಬರುವಂತೆ ತಿಳಿಸಿದ್ದರು. ಆದರೆ ಸೋಮವಾರ ಬಂದಾಗ ಮುಖ್ಯಾಧಿಕಾರಿಯೇ ಕಾರ್ಯಾಲಯದಲ್ಲಿ ಇರಲಿಲ್ಲ. “ಕಳೆದ ಹಲವು ವರ್ಷಗಳಿಂದ ನಾವು ಹೀಗೆಯೇ ಕಚೇರಿಗೆ ಸುತ್ತಿ ಸಾಕಾಗಿದೆ. ಆದರೆ ಅಂದು ಬಾ, ಇಂದು ಬಾ ಎಂದು ಹೇಳುತ್ತಿದ್ದು, ನಿವೇಶನ ರಹಿತರ ಬಗ್ಗೆ ಅಧಿಕಾರಿಗಳಿಗೆ ಕಾಳಜಿಯೇ ಇಲ್ಲವಾಗಿದೆ” ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಒಂದು ಪಟ್ಟಿ ಸದಸ್ಯರ ಅವಧಿಯಲ್ಲಿ ಸಿದ್ಧವಾಗಿತ್ತು. ಆದರೆ ನಿವೇಶನ ಹಂಚಿಕೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿದರು. ಈಗಾಗಲೇ ಮನೆ ಹೊಂದಿರುವವರಿಗೆ, ಎರಡು-ಮೂರು ಅಂತಸ್ತಿನ ಕಟ್ಟಡ ಹೊಂದಿರುವವರಿಗೆ, ಒಂದೇ ಕುಟುಂಬದ ಇಬ್ಬರು-ಮೂರು ಜನರಿಗೆ, ಸದಸ್ಯರ ಹಿಂಬಾಲಕರಿಗೆ, ಸದಸ್ಯರ ಸೊಸೆಯಂದಿರು ಹಾಗೂ ಹೆಂಡತಿಯರಿಗೆ ನಿವೇಶನ ನೀಡಲಾಗಿದೆ. ಆದರೆ ನಿಜವಾದ ಬಡವರಿಗೆ ನಿವೇಶನ ನೀಡದೇ ಸರ್ಕಾರದ ನೀತಿ-ನಿಯಮಗಳನ್ನು ಗಾಳಿಗೆ ತೂರಿ ಅವೈಜ್ಞಾನಿಕವಾಗಿ ಹಂಚಿಕೆ ಮಾಡಲಾಗಿದೆ ಎಂದು ದೂರಿದರು.
ಈ ನಿವೇಶನಗಳಿಗಾಗಿ 2012, 2017 ಹಾಗೂ 2024ರಲ್ಲಿ ಹಲವು ಬಾರಿ ಅರ್ಜಿ ಸಲ್ಲಿಸಿ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡಿದ್ದೇವೆ. ಆದರೂ ನಮಗೆ ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದೇವೆ. ಬಾಡಿಗೆ ಮನೆಯ ಕಷ್ಟ ತಪ್ಪಿಸುವಂತೆ ಮಹಿಳೆಯರು ಮನವಿ ಮಾಡಿದರು.
ಮುಖ್ಯಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದಾಗ ಅವರು ಬೆಂಗಳೂರಿಗೆ ತೆರಳಿರುವುದಾಗಿ ತಿಳಿಸಿ, ಶುಕ್ರವಾರ ಬರುವಂತೆ ಹೇಳಿದ್ದಾರೆ. ಅಷ್ಟರೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಇನ್ನಷ್ಟು ಮಹಿಳೆಯರನ್ನು ಸೇರಿಸಿ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
“2012ರಿಂದ ಬಾಡಿಗೆ ಮನೆಯಲ್ಲಿದ್ದೇವೆ. ಅಂದಿನಿಂದಲೇ ಅರ್ಜಿ ಸಲ್ಲಿಸುತ್ತಿದ್ದೇವೆ. ದುಡಿಮೆ ಬಿಟ್ಟು ಕಾರ್ಯಾಲಯಕ್ಕೆ ಅಲೆದು ಸಾಕಾಗಿದೆ. ಈ ಬಾರಿ ಪಟ್ಟಿಯಲ್ಲಿ ನನ್ನ ಹೆಸರು ಬಂದರೂ ನಿವೇಶನ ನೀಡಿಲ್ಲ.”
ಯಾಸ್ಮಿನ್ ಬೇಗಂ ಇಬ್ರಾಹಿಂಸಾಬ ಮಕಾಂದಾರ
ವಾರ್ಡ್ ನಂ.17ರ ನಿವಾಸಿ

ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನಕ್ಕಾಗಿ ಅಲೈದೇವರಿಗೆ ಹರಕೆ..!

ವಿಜಯಸಾಕ್ಷಿ ಸುದ್ದಿ, ರೋಣ: ಶಾಸಕ ಜಿ. ಎಸ್. ಪಾಟೀಲ ಅವರಿಗೆ ಈ ಬಾರಿ ಸಚಿವ ಸ್ಥಾನ ದೊರಕಲಿ ಎಂದು ಮುದ್ಗಲ್ ಅಲೈದೇವರಲ್ಲಿ ಹರಕೆ ಹೊತ್ತು 51 ಕೆಜಿ ಸಕ್ಕರೆ ನೈವೇದ್ಯ ಅರ್ಪಿಸುವುದಾಗಿ ಕಾಂಗ್ರೆಸ್ ಮುಖಂಡರು ಘೋಷಿಸಿದ್ದಾರೆ.
ಸೋಮವಾರ ನಿಡಗುಂದಿ ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ತಾಪಂ ಮಾಜಿ ಸದಸ್ಯ ಅಂದಪ್ಪ ಬಿಚ್ಚೂರ, “ರಾಜ್ಯದಲ್ಲೇ ಅತ್ಯಂತ ವಿಜೃಂಭಣೆಯಿಂದ ನಡೆಯುವ ಮುದ್ಗಲ್ ಮೊಹರಂ ಹಬ್ಬ ತನ್ನದೇ ಆದ ಇತಿಹಾಸ ಹೊಂದಿದೆ. ಲಕ್ಷಾಂತರ ಭಕ್ತರ ನಂಬಿಕೆಯ ಕೇಂದ್ರವಾಗಿರುವ ಅಲೈದೇವರು ಭಕ್ತರ ಇಚ್ಛೆಗಳನ್ನು ಈಡೇರಿಸುವ ಶಕ್ತಿ ಹೊಂದಿದೆ. ಹೀಗಾಗಿ ಶಾಸಕ ಜಿ. ಎಸ್. ಪಾಟೀಲರಿಗೆ ಸಚಿವ ಸ್ಥಾನ ದೊರಕಲಿ ಎಂದು ಈ ಬಾರಿ ವಿಶೇಷ ಹರಕೆ ಹೊತ್ತಿದ್ದೇವೆ” ಎಂದು ಹೇಳಿದರು.
“ಪ್ರತಿ ವರ್ಷ ಮೊಹರಂ ಸಂದರ್ಭದಲ್ಲಿ ಮುದ್ಗಲ್‌ಗೆ ತೆರಳಿ ಅಲೈದೇವರ ದರ್ಶನ ಪಡೆದುಕೊಳ್ಳುತ್ತೇವೆ. ಈ ಬಾರಿಯೂ ದೇವರ ದರ್ಶನಕ್ಕೆ ತೆರಳುತ್ತಿದ್ದು, ಸಚಿವ ಸ್ಥಾನಕ್ಕಾಗಿ ಪ್ರಾರ್ಥನೆ ಸಲ್ಲಿಸಿ ದೇವರಿಗೆ ಸಕ್ಕರೆ ನೈವೇದ್ಯ ಅರ್ಪಿಸುತ್ತೇವೆ” ಎಂದು ತಿಳಿಸಿದರು.
ಗ್ರಾಪಂ ಮಾಜಿ ಸದಸ್ಯ ಪಕ್ಕೀರಪ್ಪ ಕುಕನೂರ ಮಾತನಾಡಿ, “ಜಿ. ಎಸ್. ಪಾಟೀಲರು ಸಮಾಜಮುಖಿ ಹಾಗೂ ಜಾತ್ಯಾತೀತ ತತ್ವಗಳನ್ನು ಹೊಂದಿರುವ ನಾಯಕರಾಗಿದ್ದಾರೆ. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರಿಗೆ ಪಕ್ಷದ ವರಿಷ್ಠರು ಸಚಿವ ಸ್ಥಾನ ನೀಡಬೇಕು ಎನ್ನುವುದು ನಮ್ಮ ಆಗ್ರಹ” ಎಂದರು.
“ನಾವು ನಂಬಿಕೊಂಡಿರುವ ಮುದ್ಗಲ್ ಅಲೈದೇವರಿಗೆ ಮೊಹರಂ ಹಬ್ಬದಲ್ಲಿ 51 ಕೆಜಿ ಸಕ್ಕರೆ ನೈವೇದ್ಯ ಸಮರ್ಪಿಸಲು ಹರಕೆ ಹೊತ್ತಿದ್ದೇವೆ. ಅಲೈದೇವರು ಶಾಸಕ ಜಿ. ಎಸ್. ಪಾಟೀಲರಿಗೆ ಆಶೀರ್ವದಿಸಲಿದ್ದಾರೆ ಎಂಬ ವಿಶ್ವಾಸ ನಮಗಿದೆ” ಎಂದು ಹೇಳಿದರು.
“ಜಿ. ಎಸ್. ಪಾಟೀಲರು ದೈವಭಕ್ತಿಯುಳ್ಳ ವ್ಯಕ್ತಿಯಾಗಿದ್ದು, ಈ ಬಾರಿ ಅವರಿಗೆ ಸಚಿವ ಸ್ಥಾನ ಸಿಗಲಿದೆ” ಎಂದು ಅವರು ಆಶಾಭಾವನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ನಿದ್ರೆಗೆ ಅಡ್ಡಿಯಾಗುತ್ತಿರುವ ಈ ವಿಟಮಿನ್ ಕೊರತೆಗಳು! ತಜ್ಞರ ಸಲಹೆ

ಇತ್ತೀಚಿನ ದಿನಗಳಲ್ಲಿ ಅನೇಕರು ನಿದ್ರಾಹೀನತೆ, ಮಧ್ಯರಾತ್ರಿ ಪದೇ ಪದೇ ಎಚ್ಚರವಾಗುವುದು ಮತ್ತು ಸಾಕಷ್ಟು ನಿದ್ರೆ ಮಾಡಿದರೂ ದಣಿವು ಅನುಭವಿಸುವ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಸಾಮಾನ್ಯವಾಗಿ ಇದನ್ನು ಒತ್ತಡ ಮತ್ತು ಬ್ಯುಸಿ ಜೀವನಶೈಲಿಗೆ ಸಂಬಂಧಿಸಿದಂತೆ ನೋಡಲಾಗುತ್ತದೆ. ಆದರೆ ತಜ್ಞರ ಪ್ರಕಾರ ದೇಹದಲ್ಲಿನ ಕೆಲವು ಅಗತ್ಯ ಪೋಷಕಾಂಶಗಳ ಕೊರತೆಯೂ ನಿದ್ರೆಯ ಗುಣಮಟ್ಟವನ್ನು ಹಾಳು ಮಾಡಬಹುದು.

ವೈದ್ಯರ ಮಾಹಿತಿ ಪ್ರಕಾರ ವಿಟಮಿನ್ ಡಿ, ವಿಟಮಿನ್ ಬಿ12, ಮ್ಯಾಗ್ನೀಶಿಯಂ ಮತ್ತು ಐರನ್ ದೇಹದ ನಿದ್ರೆ ನಿಯಂತ್ರಣ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇವುಗಳ ಕೊರತೆಯಿಂದ ನಿದ್ರೆ ಸರಿಯಾಗಿ ಬಾರದಿರುವುದು, ದಣಿವು ಮತ್ತು ಮಾನಸಿಕ ಅಸ್ಥಿರತೆ ಕಾಣಿಸಿಕೊಳ್ಳಬಹುದು.

ವಿಟಮಿನ್ ಡಿ ಕೊರತೆಯಿಂದ ನಿದ್ರೆಯ ಅವಧಿ ಹಾಗೂ ಗುಣಮಟ್ಟ ಕಡಿಮೆಯಾಗುವ ಸಾಧ್ಯತೆ ಇದೆ. ವಿಟಮಿನ್ ಬಿ12 ನರಮಂಡಲದ ಆರೋಗ್ಯಕ್ಕೆ ಅಗತ್ಯವಾಗಿದ್ದು, ಇದರ ಕೊರತೆಯಿಂದ ಪದೇ ಪದೇ ನಿದ್ರೆ ಭಂಗವಾಗಬಹುದು. ಮ್ಯಾಗ್ನೀಶಿಯಂ ದೇಹವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ; ಇದರ ಕೊರತೆಯಿಂದ ಆತಂಕ ಹಾಗೂ ನಿದ್ರಾಹೀನತೆ ಹೆಚ್ಚಾಗಬಹುದು. ಐರನ್ ಕೊರತೆಯಿಂದ ದೇಹಕ್ಕೆ ಆಮ್ಲಜನಕ ಸರಿಯಾಗಿ ಸರಬರಾಜಾಗದೆ ದಣಿವು ಮತ್ತು ಅಶಾಂತಿ ಉಂಟಾಗಬಹುದು.

ನಿರಂತರ ದಣಿವು, ಗಮನ ಕೇಂದ್ರೀಕರಣ ಕಷ್ಟ, ಮನಸ್ಥಿತಿಯಲ್ಲಿ ಬದಲಾವಣೆ, ತಲೆನೋವು ಹಾಗೂ ರಾತ್ರಿ ಸರಿಯಾಗಿ ನಿದ್ರೆ ಬರದಿರುವಂತಹ ಲಕ್ಷಣಗಳು ದೀರ್ಘಕಾಲ ಮುಂದುವರಿದರೆ ವೈದ್ಯರ ಸಲಹೆಯೊಂದಿಗೆ ಅಗತ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.

ಚೆನ್ನಾಗಿ ನಿದ್ರೆ ಬರಲು ಪ್ರತಿದಿನ ಒಂದೇ ಸಮಯಕ್ಕೆ ಮಲಗುವ ಅಭ್ಯಾಸ ಬೆಳೆಸಿಕೊಳ್ಳುವುದು, ಮಲಗುವ ಮೊದಲು ಮೊಬೈಲ್ ಬಳಕೆ ಕಡಿಮೆ ಮಾಡುವುದು, ಸಮತೋಲಿತ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಯೋಗ ಹಾಗೂ ಧ್ಯಾನ ಅನುಸರಿಸುವುದು ಸಹಾಯಕವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಶಾಲೆಯಂಗಳದಲ್ಲಿ ಮತ್ತೆ ಮೊಳಗಿದ ಮಕ್ಕಳ ಕಲರವ..!

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಬೇಸಿಗೆ ರಜೆಯ ಬಳಿಕ ಮತ್ತೆ ಶಾಲೆಯತ್ತ ಮರಳಿದ ಮಕ್ಕಳ ಕಿಲಕಿಲ ನಗು, ಹೂವಿನ ಸ್ವಾಗತ, ಬಣ್ಣಬಣ್ಣದ ರಂಗೋಲಿ ಹಾಗೂ ಸಂಭ್ರಮದ ವಾತಾವರಣದಿಂದ ಸಮೀಪದ ಜಕ್ಕಲಿ ಗ್ರಾಮದ ಶ್ರೀ ಅಂದಾನಪ್ಪ ಜ್ಞಾನಪ್ಪ ದೊಡ್ಡಮೇಟಿ ಸರ್ಕಾರಿ ಪ್ರೌಢಶಾಲೆ ಸೋಮವಾರ ಹಬ್ಬದ ಮನೆಯಂತೆ ಕಂಗೊಳಿಸಿತು.
2026-27ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ, ದಾಖಲಾತಿ ಆಂದೋಲನ ಹಾಗೂ ಪಾಲಕ-ಪೋಷಕರ ಮಹಾಸಭೆ ಶಾಲೆಯಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಮತ್ತು ಸಡಗರದಿಂದ ನೆರವೇರಿತು.
ಶಾಲಾ ಆವರಣವನ್ನು ತಳಿರು ತೋರಣ, ಹೂವಿನ ಅಲಂಕಾರ, ಸ್ವಾಗತ ಫಲಕ ಹಾಗೂ ಆಕರ್ಷಕ ರಂಗೋಲಿಗಳಿಂದ ಸಿಂಗರಿಸಲಾಗಿತ್ತು. ಶಾಲೆಗೆ ಆಗಮಿಸಿದ ಮಕ್ಕಳನ್ನು ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಪಾಲಕರು ಪುಷ್ಪವೃಷ್ಟಿ, ಆರತಿ, ಗುಲಾಬಿ ಹೂವು ಹಾಗೂ ಸಿಹಿ ಹಂಚುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ಮಕ್ಕಳ ಮುಖದಲ್ಲಿದ್ದ ನಗು ಮತ್ತು ಉತ್ಸಾಹ ಶಾಲೆಯ ಆವರಣಕ್ಕೆ ಹೊಸ ಚೈತನ್ಯ ತುಂಬಿದಂತಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕಿ ಎಂ. ಶಾರದಮ್ಮ ವಹಿಸಿದ್ದರು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಎಸ್‌ಡಿಎಂಸಿ ಅಧ್ಯಕ್ಷೆ ಸುಜಾತಾ ಕಮ್ಮಾರ, “ಶಿಕ್ಷಣವು ಪ್ರತಿಯೊಬ್ಬ ಮಗುವಿನ ಮೂಲಭೂತ ಹಕ್ಕು. ಗ್ರಾಮೀಣ ಭಾಗದ ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಸರ್ಕಾರಿ ಶಾಲೆಗಳು ಮಹತ್ವದ ಪಾತ್ರ ವಹಿಸುತ್ತಿವೆ” ಎಂದು ಹೇಳಿದರು.
ಪಾಲಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಗಮನಹರಿಸಿ ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಅವರು ಸಲಹೆ ನೀಡಿದರು.
ದಾಖಲಾತಿ ಆಂದೋಲನದ ಅಂಗವಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರಭಾತಫೇರಿ ನಡೆಸಿದರು. “ಪ್ರತಿಯೊಬ್ಬ ಮಗು ಶಾಲೆಗೆ – ಪ್ರತಿಯೊಂದು ಮನೆ ಶಿಕ್ಷಣದ ಬೆಳಕಿಗೆ”, “ಶಿಕ್ಷಣವೇ ಜೀವನದ ನಿಜವಾದ ಸಂಪತ್ತು”, “ಓದಿ ಬೆಳೆಯೋಣ – ದೇಶ ಕಟ್ಟೋಣ” ಎಂಬ ಘೋಷಣೆಗಳನ್ನು ಕೂಗುತ್ತ ಶಿಕ್ಷಣದ ಮಹತ್ವದ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು.
ಗ್ರಾಮಸ್ಥರು ಕೂಡ ಮಕ್ಕಳ ದಾಖಲಾತಿ ಹೆಚ್ಚಿಸಲು ಸಹಕರಿಸುವುದಾಗಿ ಭರವಸೆ ನೀಡಿದರು.
ನಂತರ ನಡೆದ ಪಾಲಕ-ಪೋಷಕರ ಮಹಾಸಭೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ಹಾಜರಾತಿ, ಕಲಿಕಾ ಗುಣಮಟ್ಟ, ಶಿಸ್ತು, ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳ ಕುರಿತು ಸವಿಸ್ತಾರ ಚರ್ಚೆ ನಡೆಯಿತು. ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಭವಿಷ್ಯದ ಕುರಿತು ಪಾಲಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಶಿಕ್ಷಕರು ಮಕ್ಕಳ ನಿಯಮಿತ ಹಾಜರಾತಿ ಹಾಗೂ ಮನೆಯಲ್ಲಿ ಅಧ್ಯಯನದ ವಾತಾವರಣ ನಿರ್ಮಿಸುವ ಅಗತ್ಯವನ್ನು ಪಾಲಕರಿಗೆ ಮನವರಿಕೆ ಮಾಡಿಕೊಟ್ಟರು.
ಹೊಸ ಶೈಕ್ಷಣಿಕ ವರ್ಷದ ಅಂಗವಾಗಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಬಳಿಕ ಮಧ್ಯಾಹ್ನದ ಬಿಸಿಯೂಟ ಯೋಜನೆಗೂ ಚಾಲನೆ ನೀಡಲಾಗಿದ್ದು, ವಿದ್ಯಾರ್ಥಿಗಳು ಒಟ್ಟಾಗಿ ಊಟ ಮಾಡುವ ಮೂಲಕ ಸಹಬಾಳ್ವೆಯ ಮೌಲ್ಯಗಳನ್ನು ಅರಿತುಕೊಂಡರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ವಿ. ವಿ. ಅಣ್ಣಿಗೇರಿ, ಆರ್. ಡಿ. ಬಡಿಗೇರ, ನೆಹರು ಮನೋಳಿ, ಗೌರಮ್ಮ, ಯು. ಎಸ್. ಕಣವಿ, ಎಸ್. ವಿ. ಗುಗ್ಗರಿ, ಎಸ್‌ಡಿಎಂಸಿ ಸದಸ್ಯರು, ಪಾಲಕ-ಪೋಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಒಟ್ಟಾರೆಯಾಗಿ ಶಿಕ್ಷಣದ ಹಬ್ಬದಂತಿದ್ದ ಈ ಕಾರ್ಯಕ್ರಮವು ಶಾಲೆ, ಪಾಲಕರು ಹಾಗೂ ಗ್ರಾಮಸ್ಥರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದು, ಹೊಸ ಶೈಕ್ಷಣಿಕ ವರ್ಷಕ್ಕೆ ಆಶಾದಾಯಕ ಮತ್ತು ಅರ್ಥಪೂರ್ಣ ಚಾಲನೆ ನೀಡಿದಂತಾಯಿತು.
 “ಪ್ರತಿಯೊಬ್ಬ ಮಗುವೂ ಶಾಲೆಯ ಬೆಳಕಿಗೆ ಬರಬೇಕು. ಶಿಕ್ಷಣವೇ ಮಕ್ಕಳ ಭವಿಷ್ಯ ರೂಪಿಸುವ ಶಕ್ತಿ. ಪಾಲಕರು ಮತ್ತು ಶಿಕ್ಷಕರು ಕೈಜೋಡಿಸಿದಾಗ ಮಾತ್ರ ಗ್ರಾಮೀಣ ಮಕ್ಕಳ ಬದುಕು ಪ್ರಕಾಶಮಾನವಾಗುತ್ತದೆ.”
ಸುಜಾತಾ ಕಮ್ಮಾರ, ಎಸ್‌ಡಿಎಂಸಿ ಅಧ್ಯಕ್ಷೆ
error: Content is protected !!