ಬೆಂಗಳೂರು: ಕಾನೂನು ಪದವಿ (ಎಲ್ಎಲ್ಬಿ) ವ್ಯಾಸಂಗ ಮಾಡುತ್ತಿರುವ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಮಹತ್ವದ ರಿಲೀಫ್ ನೀಡಿರುವ ಕರ್ನಾಟಕ ಹೈಕೋರ್ಟ್, ಪರಿಷ್ಕೃತ ಪಠ್ಯಕ್ರಮದ ಅನ್ವಯ ಹೊಸ ವಿಷಯಗಳನ್ನು ಕಡ್ಡಾಯಗೊಳಿಸಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್ಎಲ್ಯು) ಹೊರಡಿಸಿದ್ದ ಸುತ್ತೋಲೆಯನ್ನು ರದ್ದುಪಡಿಸಿದೆ.
ಈ ಮೂಲಕ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಹಿಂದಿನ ಪಠ್ಯಕ್ರಮದಂತೆ ಕಾರ್ಮಿಕ ಕಾನೂನು–1 ಮತ್ತು ಕಾರ್ಮಿಕ ಕಾನೂನು–2 ವಿಷಯಗಳ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕೆಎಸ್ಎಲ್ಯುಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಬೆಂಗಳೂರಿನ ಬಿಎಂಎಸ್ ಕಾನೂನು ಕಾಲೇಜಿನ ಮೂರು ವರ್ಷದ ಎಲ್ಎಲ್ಬಿ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಆನಂದ ಕರೆಗೋಣೆಪ್ಪರ ಹಾಗೂ ಆರತಿ ರಾಜು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಏಕಸದಸ್ಯ ಪೀಠ ಬುಧವಾರ ನಡೆಸಿತು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಪುನರಾವರ್ತಿತ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗುವಂತೆ ವಿಶ್ವವಿದ್ಯಾಲಯದ ಸುತ್ತೋಲೆಯನ್ನು ರದ್ದುಪಡಿಸಿ, ಅವರಿಗೆ ಹಿಂದಿನ ಪಠ್ಯಕ್ರಮದ ವಿಷಯಗಳ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತೆ ಆದೇಶಿಸಿತು.
ಸುತ್ತೋಲೆಯಲ್ಲಿ ಏನಿತ್ತು?
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು 2026ರ ಏಪ್ರಿಲ್ 8ರಂದು ಸುತ್ತೋಲೆ ಹೊರಡಿಸಿ, 2025-26ನೇ ಶೈಕ್ಷಣಿಕ ವರ್ಷದಿಂದ ಎಲ್ಎಲ್ಬಿ ಕೋರ್ಸ್ನ ಪಠ್ಯಕ್ರಮವನ್ನು ಪರಿಷ್ಕರಿಸಿತ್ತು.
ಅದರಂತೆ, ಕಾರ್ಮಿಕ ಕಾನೂನು–1 ಮತ್ತು ಕಾರ್ಮಿಕ ಕಾನೂನು–2 ವಿಷಯಗಳ ಬದಲಿಗೆ ಕಾರ್ಮಿಕ ಹಾಗೂ ಕೈಗಾರಿಕಾ ಕಾನೂನು–1 ಮತ್ತು ಕಾರ್ಮಿಕ ಹಾಗೂ ಕೈಗಾರಿಕಾ ಕಾನೂನು–2 ವಿಷಯಗಳನ್ನು ಹೊಸದಾಗಿ ಅಳವಡಿಸಿ, ಹೊಸ ವಿದ್ಯಾರ್ಥಿಗಳ ಜೊತೆಗೆ ಪುನರಾವರ್ತಿತ ವಿದ್ಯಾರ್ಥಿಗಳಿಗೂ ಅದನ್ನು ಕಡ್ಡಾಯಗೊಳಿಸಲಾಗಿತ್ತು.
ವಿದ್ಯಾರ್ಥಿಗಳ ಆಕ್ಷೇಪ ಏನು?
ಮೂರು ವರ್ಷದ ಎಲ್ಎಲ್ಬಿ ಕೋರ್ಸ್ಗೆ ಸೇರ್ಪಡೆಯಾದ ವಿದ್ಯಾರ್ಥಿಗಳು ಗರಿಷ್ಠ ಐದು ವರ್ಷಗಳೊಳಗೆ ಪದವಿ ಪೂರ್ಣಗೊಳಿಸುವ ಅವಕಾಶ ಹೊಂದಿರುತ್ತಾರೆ. ಈ ಅವಧಿಯಲ್ಲಿ ಕೆಲವು ವಿಷಯಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪುನರಾವರ್ತಿತ ವಿದ್ಯಾರ್ಥಿಗಳಾಗಿ ಪರೀಕ್ಷೆ ಬರೆಯಬೇಕಾಗುತ್ತದೆ.
ಆದರೆ, ಈಗಾಗಲೇ ಅಧ್ಯಯನ ಮಾಡಿದ್ದ ವಿಷಯಗಳ ಬದಲಿಗೆ ಹೊಸ ವಿಷಯಗಳನ್ನು ಕಡ್ಡಾಯಗೊಳಿಸಿರುವುದು ಪುನರಾವರ್ತಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ಅರ್ಜಿದಾರರು ವಾದಿಸಿದ್ದರು.
ಈ ವಾದವನ್ನು ಪರಿಗಣಿಸಿದ ಹೈಕೋರ್ಟ್, ಪುನರಾವರ್ತಿತ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸುತ್ತೋಲೆಯನ್ನು ರದ್ದುಪಡಿಸಿ, ಅವರಿಗೆ ಹಿಂದಿನ ಪಠ್ಯಕ್ರಮದ ಪ್ರಕಾರವೇ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕೆಎಸ್ಎಲ್ಯುಗೆ ನಿರ್ದೇಶನ ನೀಡಿದೆ. ಅರ್ಜಿದಾರರ ಪರ ಹಿರಿಯ ವಕೀಲ ಶ್ರೀವತ್ಸ ವಾದ ಮಂಡಿಸಿದ್ದು, ವಕೀಲ ಶಶಾಂಕ್ ನ್ಯಾಯಾಲಯದಲ್ಲಿ ಹಾಜರಿದ್ದರು.