Home Blog

ಮಂಡ್ಯ ಮನೆಯಲ್ಲಿ ರಕ್ತ ಕಲೆಗಳು ಪತ್ತೆ ಪ್ರಕರಣ: ತನಿಖೆಯಲ್ಲಿ ಸ್ಪೋಟಕ ವಿಚಾರ ಬಯಲು!

0

ಮಂಡ್ಯ: ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಹೊಂಬಾಳೆಗೌಡನ ದೊಡ್ಡಿ ಗ್ರಾಮದಲ್ಲಿ ಸತೀಶ್ ದಂಪತಿಯ ಮನೆಯಲ್ಲಿ ನಿಗೂಢವಾಗಿ ರಕ್ತದ ಕಲೆಗಳು ಕಾಣಿಸಿಕೊಂಡಿದ್ದ ಘಟನೆಗೆ ಹೊಸ ತಿರುವು ಸಿಕ್ಕಿದೆ.

ಮನೆಯ ಒಳಗೆ ಕಂಡುಬಂದ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಇದೀಗ ಲ್ಯಾಬ್ ವರದಿ ಬಂದು ಅದು ಮನುಷ್ಯನ ರಕ್ತವೆಂದು ದೃಢಪಟ್ಟಿದೆ.

ಸತೀಶ್ ದಂಪತಿ ವಾಸವಾಗಿದ್ದ ಮನೆಯಲ್ಲಿ ಹಾಲ್, ಬಾತ್‌ರೂಂ, ಟಿವಿ, ಫ್ಯಾನ್ ಸೇರಿದಂತೆ ಅನೇಕ ಸ್ಥಳಗಳಲ್ಲಿ ರಕ್ತದ ಕಲೆಗಳು ಕಾಣಿಸಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಎಫ್‌ಎಸ್‌ಎಲ್ ತಂಡ ಸ್ಥಳ ಪರಿಶೀಲನೆ ನಡೆಸಿ ಶ್ವಾನದಳದ ಸಹಾಯದಿಂದ ಮಾದರಿಗಳನ್ನು ಸಂಗ್ರಹಿಸಿದ್ದರು. ಪ್ರಾಥಮಿಕ ಪರೀಕ್ಷೆಯಲ್ಲಿ ಅದು ಮನುಷ್ಯನ ರಕ್ತವೆಂದು ಸ್ಪಷ್ಟಗೊಂಡಿದ್ದು, ಅಂತಿಮ ದೃಢೀಕರಣಕ್ಕಾಗಿ ಎಫ್‌ಎಸ್‌ಎಲ್ ವರದಿ ನಿರೀಕ್ಷೆಯಲ್ಲಿದೆ.

ಈ ಬೆಳವಣಿಗೆಯಿಂದ ಗ್ರಾಮಸ್ಥರಲ್ಲಿ ಆತಂಕ ಮತ್ತು ಕುತೂಹಲ ಮೂಡಿದ್ದು, ರಕ್ತ ಮನೆಯಲ್ಲಿ ಹೇಗೆ ಹರಿಯಿತು ಹಾಗೂ ಅದು ಯಾರದೆಯೆಂಬ ಪ್ರಶ್ನೆಗಳು ಪೊಲೀಸರಿಗೂ ತಲೆನೋವಾಗಿದೆ. ಸತೀಶ್ ದಂಪತಿ ತಮ್ಮ ಇಬ್ಬರು ಮಕ್ಕಳನ್ನು ಬೆಂಗಳೂರಿನಲ್ಲಿ ವಿದ್ಯಾಭ್ಯಾಸಕ್ಕಾಗಿ ಇರಿಸಿ ಮನೆಯಲ್ಲಿ ಇಬ್ಬರೇ ವಾಸವಾಗಿದ್ದರು ಎನ್ನಲಾಗಿದೆ.

ಘಟನೆಯ ದಿನ ಬೆಳಿಗ್ಗೆ ಸತೀಶ್ ಅವರ ಪತ್ನಿ ಮನೆ ಸ್ವಚ್ಛಗೊಳಿಸುತ್ತಿದ್ದ ವೇಳೆ, ಅಡುಗೆಮನೆಗೆ ಹೋದ ಕೆಲ ಕ್ಷಣಗಳಲ್ಲೇ ಹಾಲ್ ಮತ್ತು ಬಾತ್‌ರೂಂ ಸೇರಿ ಹಲವು ಸ್ಥಳಗಳಲ್ಲಿ ರಕ್ತದ ಕಲೆಗಳು ಕಾಣಿಸಿಕೊಂಡಿದ್ದವು. ಬೆಚ್ಚಿಬಿದ್ದ ದಂಪತಿಗಳು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬೆಸಗರಹಳ್ಳಿ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಪ್ರಾರಂಭಿಸಿದ್ದು, ಪ್ರಕರಣದ ನಿಜಾಂಶ ತಿಳಿಯಲು ತನಿಖೆ ಮುಂದುವರಿಸಿದ್ದಾರೆ.

ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವ ಮಾಡೋಣ

ಬನ್ನಿರಿ ಎಲ್ಲರೂ ಆಚರಿಸೋಣ

ನಮ್ಮೆಲ್ಲರಿಗೂ ಶುಭದಿನ

ಹಾಡುತ ನಲಿಯುತ ಆನಂದಿಸೋಣ

ಎಲ್ಲರೂ ಒಂದೆಡೆ ಕೂಡೋಣ

ಕನ್ನಡ ಧ್ವಜವನು ಹಾರಿಸೋಣ

ಭೇದ-ಭಾವ ಮರೆಯೋಣ

ಒಂದಾಗಿ ಎಲ್ಲರೂ ನಲಿಯೋಣ

ಕನ್ನಡ ಗೀತೆಯನು ಹಾಡೋಣ

ಕನ್ನಡ ವಂದನೆ ಸಲ್ಲಿಸೋಣ

ಎಲ್ಲರೂ ಒಂದಾಗಿ ಬಾಳೋಣ

ತಾಯ್ನಾಡಿಗಾಗಿ ದುಡಿಯೋಣ

ಕನ್ನಡ ರಾಜ್ಯೋತ್ಸವ ಮಾಡೋಣ

ಬನ್ನಿರಿ ಎಲ್ಲರೂ ಆಚರಿಸೋಣ.

– ವಿ.ಎಂ.ಎಸ್. ಗೋಪಿ.

ಲೇಖಕರು, ಬೆಂಗಳೂರು.

ಕನ್ನಡ ಅಧ್ಯಯನದಿಂದ ಉತ್ತಮ ಭವಿಷ್ಯ: ಡಾ. ರುದ್ರೇಶ ಮೇಟಿ

0

ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡದ ಪುಸ್ತಕಗಳ ಓದುವಿಕೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ಹೊಂದಿದಾಗ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿ ವಿದ್ಯಾರ್ಥಿಯೂ ಯೋಗ್ಯ ಜ್ಞಾನ, ಸ್ಪಷ್ಟ ಸಂವಹನ ಹಾಗೂ ಭಾಷಾ ಪಟುವಾಗಿ ಹೊರಹೊಮ್ಮಿ ಉತ್ತಮ ಉದ್ಯೋಗ ಹೊಂದಲು ಸಾಧ್ಯವಾಗಲಿದೆ ಎಂದು ಧಾರವಾಡ ಮೇರು ಐಎಎಸ್, ಕೆಎಎಸ್ ಅಧ್ಯಯನ ಕೇಂದ್ರದ ನಿರ್ದೇಶಕ, ಅಂಜುಮನ್ ಕಾಲೇಜಿನ ಡಾ. ರುದ್ರೇಶ ಮೇಟಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಐಕ್ಯೂಎಸಿ ಕಾರ್ಯಕ್ರಮದಡಿ `ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ’ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಶಿಕ್ಷಕರ ಅರ್ಹತಾ ಪರೀಕ್ಷೆಗಳು, ಬ್ಯಾಂಕ್, ರೈಲ್ವೆ ಹಾಗೂ ಇತರೆ ಕೇಂದ್ರ–ರಾಜ್ಯ ಸೇವಾ ಪರೀಕ್ಷೆಗಳಲ್ಲಿ ಕನ್ನಡ ಅಭ್ಯಾಸ ಅನಿವಾರ್ಯವಾಗಿದೆ. ಕನ್ನಡ ಕೇವಲ ಒಂದು ವಿಷಯವಲ್ಲ, ಅದು ನಮ್ಮ ಸಂಸ್ಕೃತಿ, ಸಂವಿಧಾನ ಮತ್ತು ಆಡಳಿತ ಪ್ರಕ್ರಿಯೆ ವ್ಯವಸ್ಥೆಗೆ ಕೊಂಡಿಯಾಗಿ ಕೆಲಸ ಮಾಡುತ್ತದೆ. ಆ ಹಿನ್ನೆಲೆಯಲ್ಲಿ ಕನ್ನಡ ಅಧ್ಯಯನದಲ್ಲಿ ವಿದ್ಯಾರ್ಥಿಗಳು ತಮ್ಮ ನಿರಂತರವಾಗಿ ತೊಡಗಿಸಿಕೊಂಡರೆ ನಿಮ್ಮ ಭವಿಷ್ಯ ಉತ್ತಮವಾಗಿರಲಿದೆ ಎಂದು ಹೇಳಿದರು.

ಪ್ರಾಚಾರ್ಯರಾದ ಡಾ. ಶಾಂತಾ ಪೂಜಾರ ಮಾತನಾಡಿ, ಭಾಷೆ ಒಂದು ಸಂಸ್ಕೃತಿಯ ದಾರಿ. ಕನ್ನಡ ಭಾಷೆ ನಮ್ಮ ಸಂಪ್ರದಾಯ. ಆ ಹಿನ್ನೆಲೆಯಲ್ಲಿ ಕನ್ನಡ ಸಂಸ್ಕೃತಿ ಮತ್ತು ಇತಿಹಾಸವನ್ನು ಜೀವಂತವಾಗಿರಿಸುತ್ತದೆ. ಕನ್ನಡ ಪ್ರತಿಯೊಬ್ಬರಿಗೆ ಜ್ಞಾನದ ಸುಧೆಯ ಬುಗ್ಗೆ ಎಂದು ಹೇಳಿದರು.

ವ್ಯವಸ್ಥಾಪಕ ಬಿ.ಎಫ್. ಕರಬುಡ್ಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರೊ. ಎಸ್.ಯು. ಸಜ್ಜನಶೆಟ್ಟರ, ಪ್ರಕಾಶ ಕರಿಗಾರ, ಪ್ರೊ. ಎ.ಕೆ. ಜಮಾದಾರ್, ಐಕ್ಯೂಎಸಿ ಸಂಚಾಲಕರಾದ ಪ್ರೊ. ಮಹಬೂಬ ಆರಿಫ್ ಸದರಸೋಫೆವಾಲೆ, ಡಾ. ಸುಜಾತಾ ಬರದೂರ, ಪ್ರೊ. ಸತೀಶ ಸರ್ವಿ, ಪ್ರೊ. ದ್ಯಾಮಣ್ಣ ಮನಿಕಟ್ಟಿ, ಪ್ರೊ. ರಿಯಾಜ್ ಅಹ್ಮದ್ ದೊಡ್ಡಮನಿ, ಪ್ರೊ. ಪ್ರತಿಭಾ ಚವ್ಹಾಣ, ಪ್ರೊ. ಸುಮಿತ್ರಾ ಮೇದಾರ, ಪ್ರೊ. ವಹಿದಾ ಕಿಲ್ಲೆದಾರ, ರಾಜೇಶ್ವರಿ ಬದನಿಕಾಯಿ, ಬಸುರಾಜ ಡಾನಿ, ಶ್ರೀದೇವಿ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿವರ್ಗ, ವಿದ್ಯಾರ್ಥಿನಿಯರು ಇದ್ದರು.

ನರೇಗಲ್ಲದ ಕೋಚಲಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿದೆ ಕನ್ನಡ ಭಾಷಾ ಪ್ರಯೋಗ ಶಾಲೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪ್ರಸ್ತುತ ದಿನಮಾನಗಳಲ್ಲಿ ಕನ್ನಡದ ಸ್ಥಿತಿ ಪಟ್ಟಣ, ನಗರ, ಮಹಾನಗರಗಳಲ್ಲಿ ಮಾತ್ರವಲ್ಲದೆ ಉದ್ಯೋಗ ಕ್ಷೇತ್ರದಲ್ಲಿಯೂ ದುರ್ಬಲವಾಗಿದೆ. ಇಂಗ್ಲಿಷ್ ಮಾಧ್ಯಮದ ಅಬ್ಬರ, ಪೋಷಕರ ಒತ್ತಡ ಮತ್ತು ಪಠ್ಯಕ್ರಮದ ಬದಲಾವಣೆಯ ನಡುವೆ ಕನ್ನಡ ವಿಷಯ ಕೇವಲ ಒಂದು ಪೇಪರ್ ಆಗಿ ಉಳಿದಿದೆ. ವಿದ್ಯಾರ್ಥಿಗಳು ಕನ್ನಡ ಓದಿದರೂ ಕನ್ನಡದಲ್ಲಿ ಮಾತನಾಡುವುದಿಲ್ಲ. ಆದರೆ, ಇಲ್ಲೊಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಜ್ಯದಾದ್ಯಂತ ಗಮನ ಸೆಳೆದಿದೆ. ಇಲ್ಲಿ ಪ್ರತಿದಿನ ಕನ್ನಡ ರಾಜ್ಯೋತ್ಸವದಂತೆಯೇ ಉತ್ಸವದ ವಾತಾವರಣ ತುಂಬಿರುತ್ತದೆ.

ಇದು ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ. 1ರ ಕೋಚಲಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಇಲ್ಲಿ ಕನ್ನಡ ಭಾಷೆಯ ಸೊಗಸು ಮತ್ತು ಸಾಹಿತ್ಯದ ವೈಭವವನ್ನು ಹೊಸ ತಲೆಮಾರಿಗೆ ಪರಿಚಯಿಸಲು ಆರಂಭವಾದ ಕನ್ನಡ ಭಾಷಾ ಪ್ರಯೋಗ ಈಗ ಎಲ್ಲರ ಕಣ್ಣು, ಮನ ಸೆಳೆಯುತ್ತಿದೆ. ಈ ಪ್ರಯೋಗ ಶಾಲೆಯ ಹೃದಯಭಾಗದಲ್ಲಿ ನಿಂತಿದ್ದಾರೆ ಶಿಕ್ಷಕ ವಿಜಯಕುಮಾರ ಡಿ.ಆರ್.
ಕನ್ನಡದ ಮೇಲಿನ ಅಭಿಮಾನದಿಂದ ಅವರ ಕನಸೆಂದರೆ — ಕನ್ನಡ ಕಲಿಯಬೇಕು, ಕನ್ನಡ ಮಾತನಾಡಬೇಕು, ಕನ್ನಡದಲ್ಲಿ ಯೋಚಿಸಬೇಕು. ಮಕ್ಕಳಲ್ಲಿ ಭಾಷಾ ಪ್ರೀತಿ ಬೆಳೆಸಲು ಅವರು ರೂಪಿಸಿರುವ ಪ್ರಯೋಗಗಳು, ಚಟುವಟಿಕೆಗಳು ಮತ್ತು ಪಾಠ ವಿಧಾನಗಳು ವಿಶಿಷ್ಟವಾಗಿವೆ.

ಭಾಷಾ ಪ್ರಯೋಗ ಶಾಲೆಯ ಗೋಡೆಗಳು ಚಿತ್ರಗಳು, ನುಡಿಗಟ್ಟುಗಳು, ಕಾವ್ಯ ಪದ್ಯಗಳು ಮತ್ತು ಕನ್ನಡದ ಚಿಂತಕರ ನುಡಿಮುತ್ತುಗಳಿಂದ ಅಲಂಕರಿಸಲ್ಪಟ್ಟಿವೆ. ಇಲ್ಲಿ ಪದಗಳು ಕೇವಲ ಶಬ್ದವಲ್ಲ — ಸಂಸ್ಕೃತಿಯ ನಾಡಿಯಂತಿವೆ. ಮಕ್ಕಳು ಇಲ್ಲಿ ಕಲಿಯುವುದಿಲ್ಲ, ಅವರು ಕನ್ನಡದ ಅಕ್ಷರಗಳ ಜೊತೆ ಬದುಕುತ್ತಾರೆ. ಕನ್ನಡ ಪ್ರಯೋಗ ಶಾಲೆ ಕೇವಲ ಶಿಕ್ಷಣದ ಕೇಂದ್ರವಲ್ಲ, ಅದು ನಾಡು-ನುಡಿ ಮತ್ತು ನಾಳೆಯ ಕನಸನ್ನು ಕಟ್ಟುತ್ತಿರುವ ಹೊಸ ಚಳವಳಿ.

ಸರ್ಕಾರದ ಕನ್ನಡ ಪ್ರೋತ್ಸಾಹ ಕಾರ್ಯಕ್ರಮಗಳು ಸಾಮಾನ್ಯವಾಗಿ ರಾಜ್ಯೋತ್ಸವದ ದಿನಕ್ಕೆ ಮಾತ್ರ ಸೀಮಿತವಾಗುತ್ತವೆ. ಆದರೆ ವಿಜಯಕುಮಾರರಂತಹ ಶಿಕ್ಷಕರು ತಮ್ಮ ಮಟ್ಟಿಗೆ ಕನ್ನಡಕ್ಕೆ ಜೀವ ತುಂಬುತ್ತಿದ್ದಾರೆ. ಸರ್ಕಾರ ಇಂತಹ ಪ್ರಯೋಗ ಶಾಲೆಗಳನ್ನು ಮಾದರಿಯಾಗಿ ಪರಿಗಣಿಸಿ, ರಾಜ್ಯದಾದ್ಯಂತ ಇಂತಹ ಪಾಠಮನೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಬೇಕಾಗಿದೆ.

ಶಾಲೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಚಿತ್ರಗಳು ಮತ್ತು ಅವರ ಪುಸ್ತಕ ಸಂಗ್ರಹವೂ ವಿಶೇಷ ಆಕರ್ಷಣೆಯಾಗಿದೆ. ಕುವೆಂಪು, ಬೇಂದ್ರೆ, ಗಿರೀಶ ಕಾರ್ನಾಡ್, ಚಂದ್ರಶೇಖರ ಕಂಬಾರ, ಯು.ಆರ್. ಅನಂತಮೂರ್ತಿ ಮುಂತಾದ ಪ್ರಖ್ಯಾತ ಸಾಹಿತಿಗಳ ಪುಸ್ತಕಗಳು ಶಾಲೆಯ ಕನ್ನಡ ಗ್ರಂಥಾಲಯ ವಿಭಾಗದಲ್ಲಿ ಸಂಗ್ರಹವಾಗಿವೆ.

ಕನ್ನಡ ಕಲಿಯುವುದು ಕೇವಲ ಪಾಠವಲ್ಲ, ಅದು ಬದುಕಿನ ಪಾಠ.”
ಈ ವಿಶಿಷ್ಟ ಪ್ರಯೋಗ ಶಾಲೆಯ ಹೃದಯ ಶಿಕ್ಷಕ ವಿಜಯಕುಮಾರ ಡಿ.ಆರ್. ಅವರ ವೈಯಕ್ತಿಕ ಆಸಕ್ತಿ, ಶ್ರಮ ಮತ್ತು ಕನ್ನಡದ ಮೇಲಿನ ಅಪ್ರಮೇಯ ಅಭಿಮಾನದಿಂದ ಈ ಶಾಲೆಯನ್ನು ಸಂಪೂರ್ಣವಾಗಿ ಕನ್ನಡದ ವಾತಾವರಣಕ್ಕೆ ತಂದಿದ್ದಾರೆ.
ವ್ಯಾಕರಣ ಚಾರ್ಟ್‌ಗಳು, ಪದ್ಯಮಾಲೆಗಳು, ನುಡಿಗಟ್ಟು ಪಟಗಳು, ಭಾಷಾ ಆಟಗಳು, ಕವಿತೆಗಳ ಹೂಗುಚ್ಛಗಳು, ಹಿರಿಯ ಕನ್ನಡ ಚಿಂತಕರ ಉಲ್ಲೇಖಗಳು ಎಲ್ಲವೂ ಮಕ್ಕಳಲ್ಲಿ ಕನ್ನಡದ ಆಸಕ್ತಿ ಹುಟ್ಟಿಸುತ್ತಿವೆ.
ಆರ್.ಎಸ್. ಬುರಡಿ, ಉಪ ನಿರ್ದೇಶಕರು, ಶಿಕ್ಷಣ ಇಲಾಖೆ

“ಪ್ರತಿ ಮಗುವೂ ಇಂಗ್ಲಿಷ್ ಕಲಿಯಲಿ, ಆದರೆ ಕನ್ನಡ ಬಿಟ್ಟು ಹೋಗಬಾರದು.”
ಈ ಮಾತು ಮಕ್ಕಳು, ಪೋಷಕರು ಮತ್ತು ಗ್ರಾಮಸ್ಥರಲ್ಲಿ ಹೊಸ ಚೈತನ್ಯ ಮೂಡಿಸಿದೆ. ಇಂತಹ ಪ್ರಯತ್ನಗಳು ಮುಂದುವರಿಯಲು ಸರ್ಕಾರದ ಪ್ರೋತ್ಸಾಹ ಅಗತ್ಯ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಶಿಕ್ಷಣ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ಇಂತಹ ಪ್ರಯೋಗ ಶಾಲೆಗಳಿಗೆ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡಿದರೆ, ರಾಜ್ಯದ ಪ್ರತಿಯೊಂದು ಹಳ್ಳಿಯಲ್ಲಿಯೂ ಕನ್ನಡದ ಮಂದಿರಗಳು ಮೂಡಬಹುದು. ಈ ಪ್ರಯೋಗ ಶಾಲೆ ನಿರ್ಮಾಣಕ್ಕೆ ಶಾಲೆಯ ಮುಖ್ಯ ಶಿಕ್ಷಕಿ ಎಸ್.ಬಿ. ಕೊಟ್ರಶೆಟ್ಟಿ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ.
ವಿಜಯಕುಮಾರ ಡಿ.ಆರ್., ಶಿಕ್ಷಕ, ಸ.ಹಿ.ಪ್ರಾ ಶಾಲೆ, ಕೋಚಲಾಪೂರ

ಕನ್ನಡದ ನುಡಿ, ನುಡಿಗಟ್ಟು, ಜನಪದ ಗೀತೆ ಮತ್ತು ಕಥೆಗಳು ನಾಶವಾಗುತ್ತಿರುವ ಸಂದರ್ಭದಲ್ಲಿ ಈ ಪ್ರಯೋಗ ಶಾಲೆ ಆಶಾಕಿರಣವಾಗಿದೆ.” ಮಕ್ಕಳು ತಮ್ಮ ಭಾಷೆಯ ಗೌರವವನ್ನು ಅರಿತು ಕನ್ನಡದಲ್ಲಿ ನವೋತ್ಸಾಹದಿಂದ ಮಾತನಾಡುತ್ತಿರುವುದು ವಿಜಯಕುಮಾರರ ಪ್ರಯತ್ನದ ಫಲ.
ಅರ್ಜುನ ಕಾಂಬೋಜಿ, ಕ್ಷೇತ್ರ ಶಿಕ್ಷಣಾಧಿಕಾರಿ, ರೋಣ

ಕೆಎಸ್‌ಆರ್‌ಟಿಸಿ ನೌಕರರಿಂದ ರಾಷ್ಟ್ರ ಏಕತಾ ಪ್ರತಿಜ್ಞಾ ಪ್ರಮಾಣ

0

ಲಕ್ಷ್ಮೇಶ್ವರ: ಲಕ್ಷ್ಮೇಶ್ವರದ ಕೆಎಸ್‌ಆರ್‌ಟಿಸಿ ಸಾರಿಗೆ ಘಟಕದಲ್ಲಿ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಡಿಪೋ ಮ್ಯಾನೇಜರ್ ಸವಿತಾ ಆದಿ ಅವರ ನೇತೃತ್ವದಲ್ಲಿ ಸಿಬ್ಬಂದಿ, ನೌಕರರು ಏಕತಾ ಪ್ರತಿಜ್ಞಾ ಪ್ರಮಾಣ ಸ್ವೀಕರಿಸಿದರು.

ಸಾಹಿತಿ ಡಾ. ರಾಜೇಂದ್ರ ಗಡಾದರಿಗೆ ವಿಶ್ವೇಶ್ವರಯ್ಯ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿಯ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ, ಮಕ್ಕಳ ಸಾಹಿತಿ, ಸಂಶೋಧಕ, ಕವಿ, ಹಿರಿಯ ಲೇಖಕ ಡಾ. ರಾಜೇಂದ್ರ ಎಸ್. ಗಡಾದ ಅವರಿಗೆ ಬೆಂಗಳೂರಿನ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ನೀಡುವ 2025ನೇ ಸಾಲಿನ ಪ್ರತಿಷ್ಠಿತ ವಿಶ್ವೇಶ್ವರಯ್ಯ ಅಂತರಾಷ್ಟ್ರೀಯ ಪ್ರಶಸ್ತಿ ಸಂದಿದೆ.

ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕವಿ, ಸಾಹಿತಿ ಡಾ. ಸಿ. ಸೋಮಶೇಖರ್ ಅವರ ಸರ್ವಾಧ್ಯಕ್ಷತೆಯಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಕವಿಗಳ ಪ್ರಥಮ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಾಹಿತಿ ಡಾ. ರಾಜೇಂದ್ರ ಗಡಾದರಿಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು, ಮಾಜಿ ಲೋಕಾಯುಕ್ತ ಡಾ. ಎನ್. ಸಂತೋಷ ಹೆಗಡೆಯವರು ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ಸಿ. ನಂಜಯ್ಯನಮಠ, ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಎಂ. ಎಸ್. ಮುತ್ತುರಾಜ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ್, ಹಿರಿಯ ಚಲನಚಿತ್ರ ಕಲಾವಿದರಾದ ಶಂಕರ್ ಭಟ್, ಗಣೇಶರಾವ್ ಕೇಸರ್‌ಕರ್, ಮೀನಾ, ಅಥಣಿ ಮೋಟಗಿಮಠದ ಡಾ. ಪ್ರಭುಚನ್ನಬಸವ ಮಹಾಸ್ವಾಮಿಗಳು, ಚಪ್ಪಲಕಟ್ಟಿ ಹಿರೇಮಠದ ಡಾ. ಕಲ್ಮೇಶ್ವರ ಮಹಾಸ್ವಾಮಿಗಳು, ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನದ ಅಧ್ಯಕ್ಷ, ಪತ್ರಕರ್ತ, ಚಲನಚಿತ್ರ ನಿರ್ದೇಶಕ ರಮೇಶ್ ಸುರ್ವೆ ಹಾಜರಿದ್ದರು.

ಪ್ರಶಸ್ತಿಗೆ ಭಾಜನರಾದ ಡಾ. ರಾಜೇಂದ್ರ ಗಡಾದರನ್ನು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು, ಜಿಲ್ಲಾ ವಚನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್ತು, ಜಿಲ್ಲಾ ಸಿರಿಗನ್ನಡ ವೇದಿಕೆ, ಜಿಲ್ಲಾ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು, ಅಡವೀಂದ್ರ ಸ್ವಾಮಿಮಠದ ಶಿವಾನುಭವ ಸಮಿತಿ, ಕನ್ನಡ ಜಾಗೃತಿ ವೇದಿಕೆ, ಸಂಗಮ ಪ್ರಕಾಶನ ವೇದಿಕೆ ಮುಂತಾದ ಸಂಘಟನೆಗಳು ಅಭಿನಂದಿಸಿವೆ.

ಕನ್ನಡ ಜಾಗೃತಿ ಸಮಿತಿಗೆ ಆಯ್ಕೆ; ಅಭಿನಂದನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡ ಪರ ಅಭಿವೃದ್ಧಿ ಕಾರ್ಯಗಳಿಗೆ ಕರ್ನಾಟಕ ಸರ್ಕಾರದಿಂದ ಕನ್ನಡ ಜಾಗೃತಿ ಸಮಿತಿ ಜಿಲ್ಲಾ ಮಟ್ಟದ ಸಮಿತಿಗಳನ್ನು ಆಯ್ಕೆ ಮಾಡಲಾಗಿದೆ.

ಗದಗ ಜಿಲ್ಲೆಯಲ್ಲಿ ಒಟ್ಟು ಐದು ಜನರನ್ನು ಕನ್ನಡ ಜಾಗೃತಿ ಸಮಿತಿಗೆ ಆಯ್ಕೆ ಮಾಡಲಾಗಿದೆ. ಹಿರಿಯರು, ಬಸವ ಅನುಯಾಯಿಗಳು ಹಾಗೂ ನಿವೃತ್ತ ಇಂಜಿನಿಯರಾದ ಅಶೋಕ ಬರಗುಂಡಿ, ಯುವ ಹೋರಾಟಗಾರ ಮುತ್ತು ಬಿಳೆಯಳ್ಳಿ, ಪಿ.ಪಿ.ಜಿ ಕಲಾ ಕಾಲೇಜಿನ ಪ್ರಾಚಾರ್ಯ ರಾಜಶೇಖರ ದಾನರಡ್ಡಿ, ಸಾಮಾಜಿಕ ಹೋರಾಟಗಾರ ಮುತ್ತಣ್ಣ ಹಾಳಕೇರಿ ಮುಂಡರಗಿ, ಮಹಿಳಾ ಹೋರಾಟಗಾರ್ತಿ ಲಾಡಮಾ ನದಾಫ್ ಗದಗ ಇವರನ್ನು ಆಯ್ಕೆ ಮಾಡಿರುವ ಸರ್ಕಾರಕ್ಕೆ ಹಾಗೂ ಸಮಿತಿಯ ಎಲ್ಲ ಸದಸ್ಯರಿಗೆ ಆನಂದ ಶಿಂಗಾಡಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಕನ್ನಡ ಉಳಿವಿಗಾಗಿ, ಕನ್ನಡದ ಅಭಿವೃದ್ಧಿಗಾಗಿ ಸಮಿತಿಯ ಸದಸ್ಯರು ತಮ್ಮ ಸೇವೆಯನ್ನು ಮುಡಿಪಾಗಿಡಲಿ ಎಂದು ಗದಗ ಜಿಲ್ಲಾ ಛಲವಾದಿ ಮಹಾಸಭಾ ಆಶಿಸಿದೆ.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಸಿದ್ದನಗೌಡರ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2025ನೇ ಸಾಲಿನ 70ನೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಮುಳಗುಂದ ಪಟ್ಟಣದ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರ ವೀರಪ್ಪ ದೇವಪ್ಪ ಸಿದ್ದನಗೌಡರ ಆಯ್ಕೆಯಾಗಿದ್ದಾರೆ.

ವೀರಪ್ಪ ಸಿದ್ದನಗೌಡರು 2016ರಲ್ಲಿ ಹೊಸ ದಿಗಂತ ಪತ್ರಿಕೆಯಿಂದ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ಮುಳಗುಂದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ. 1ರ ಎಸ್‌ಡಿಎಂಸಿ ಅಧ್ಯಕ್ಷರಾಗಿ ಶಾಲೆಯ ಸಂಪೂರ್ಣ ಅಭಿವೃದ್ಧಿಯ ಹರಿಕಾರರಾಗಿದ್ದು, ಪತ್ರಿಕಾ ಧರ್ಮವನ್ನು ಉಸಿರಾಗಿಸಿಕೊಂಡು ತಮ್ಮ ಬರವಣಿಗೆ ಮೂಲಕ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಸಾಕಷ್ಟು ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದವರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮುಳಗುಂದ ಘಟಕದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರ ಸೇವೆಯನ್ನು ಗುರುತಿಸಿ 2025ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

 

ಹನುಮನ ಸ್ಮರಣೆಯಿಂದ ದೋಷಗಳು ದೂರ

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಹನುಮಾನ ಚಾಲೀಸಾ ಪಠಣದಿಂದ ಮನಸ್ಸಿಗೆ ಶಾಂತಿ ದೊರಕುತ್ತದೆ. ನಿತ್ಯವೂ ಈ ಪಾಠವನ್ನು ಪಠಣೆ ಮಾಡುವುದರಿಂದ ಮನಸ್ಸಿನಲ್ಲಿನ ಭಯ ಇತ್ಯಾದಿಗಳು ದೂರವಾಗುತ್ತವೆ. ಆದ್ದರಿಂದ ದಿನಕ್ಕೆ ಒಮ್ಮೆಯಾದರೂ ಮನೆಯಲ್ಲಿ ಹನುಮಾನ ಚಾಲೀಸಾ ಪಠಣೆ ಮಾಡಬೇಕೆಂದು ಎ.ಜಿ. ಕುಲಕರ್ಣಿ ಹೇಳಿದರು.

ಪಟ್ಟಣದ ಜಕ್ಕಲಿ ಕ್ರಾಸ್‌ನಲ್ಲಿರುವ ಶ್ರೀ ಮಾರುತಿ ಮಂದಿರದಲ್ಲಿ ನರೇಗಲ್ಲ ಬ್ರಹ್ಮ ಸಮಾಜದಿಂದ ಆಚರಿಸಲಾದ ಹನುಮಾನ ಚಾಲೀಸಾ ಪಠಣೆಯ ನಂತರ ಅವರು ಮಾತನಾಡಿದರು.

ಹನುಮಂತ ಶಕ್ತಿ, ಯುಕ್ತಿಗೆ ಹೆಸರಾದ ದೇವರು. ನಂಬಿದವರನ್ನು ಹೇಗೆ ಪೊರೆಯಬೇಕು ಎಂಬುದನ್ನು ಅವನ ಚರಿತ್ರೆಯಿಂದ ನಾವು ತಿಳಿಯಬಹುದು. ಇಂತಹ ಸ್ವಾಮಿ ನಿಷ್ಠೆಯುಳ್ಳ ಹನುಮಂತನ ಪಠಣೆ ಮಾಡುವುದರಿಂದ ಸರ್ವ ದೋಷಗಳೂ ನಿವಾರಣೆಯಾಗುತ್ತವೆ ಎಂದು ಕುಲಕರ್ಣಿ ಹೇಳಿದರು.

ಶ್ರೀ ದತ್ತಭಕ್ತ ಮಂಡಳಿಯ ಅಧ್ಯಕ್ಷ ಡಾ. ನಾಗರಾಜ ಗ್ರಾಮಪುರೋಹಿತ ಮಾತನಾಡಿ, ಹನುಮಾನ ಚಾಲೀಸಾ ಪಠಣೆಯ ಸವಿರುಚಿಯನ್ನು ನಮಗೆ ಹತ್ತಿಸಿದವರು ಶ್ರೀಕ್ಷೇತ್ರ ಹೆಬ್ಬಳ್ಳಿಯ ಪರಮಪೂಜ್ಯ ಶ್ರೀ ದತ್ತಾವಧೂತ ಗುರುಗಳು. ನರೇಗಲ್ಲನ್ನೊಳಗೊಂಡಂತೆ ನಾಡಿನ ಹಲವಾರು ಕಡೆಗಳಲ್ಲಿ ಅವರು ಭಕ್ತರಿಂದ ಹನುಮಾನ ಚಾಲೀಸಾ ಹೇಳಿಸುತ್ತಿದ್ದಾರೆ. ನವೆಂಬರ್‌ನಲ್ಲಿ ಅವರು ಹುಬ್ಬಳ್ಳಿಯಲ್ಲಿ 100 ತಾಸುಗಳ ಹನುಮಾನ ಚಾಲೀಸಾ ಪಠಣೆಯನ್ನು ಇರಿಸಿಕೊಂಡಿದ್ದಾರೆ. ಅವರ ಅಣತಿಯಂತೆ ನರೇಗಲ್ಲದ ಸದ್ಭಕ್ತರು ಅಲ್ಲಿಗೆ ತೆರಳಿ, ಹನುಮಾನ ಚಾಲೀಸಾ ಪಠಣೆಯಲ್ಲಿ ಪಾಲ್ಗೊಳ್ಳುವ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಎಸ್.ಎಚ್. ಕುಲಕರ್ಣಿ, ಆನಂದ ಕುಲಕರ್ಣಿ, ಪ್ರಶಾಂತ ಗ್ರಾಮಪುರೋಹಿತ, ಆನಂದ ಕಾಳೆ, ರಂಗಣ್ಣ ಕುಲಕರ್ಣಿ, ಎ.ಎ. ಕುಲಕರ್ಣಿ, ನಾಗೇಶ ಗ್ರಾಮಪುರೋಹಿತ, ನಾಗರಾಜ ನಾಡಿಗೇರ, ಆದರ್ಶ ಕುಲಕರ್ಣಿ, ಅರುಣ ಗ್ರಾಮಪುರೋಹಿತ, ಬಾಬು ಕಾಳೆ, ಪರಿಮಳಾ ಗ್ರಾಮಪುರೋಹಿತ, ಪದ್ಮಾ ಕುಲಕರ್ಣಿ, ಅರ್ಚನಾ ಕುಲಕರ್ಣಿ, ರೇಣುಕಾ ಗ್ರಾಮಪುರೋಹಿತ, ಭಾಗ್ಯಾಬಾಯಿ ಕಾಳೆ, ರೂಪಾ ಕುಲಕರ್ಣಿ, ಪ್ರತಿಕ್ಷಾ ಕುಲಕರ್ಣಿ, ಭಾರತಿಬಾಯಿ ಗ್ರಾಮಪುರೋಹಿತ, ನಿಖಿತಾ ಗ್ರಾಮಪುರೋಹಿತ, ಲಕ್ಷ್ಮೀ ಗ್ರಾಮಪುರೋಹಿತ, ಸನ್ಮತಿ ಸದರಜೋಷಿ, ಅನಿತಾ ಗ್ರಾಮಪುರೋಹಿತ, ಜ್ಯೋತಿ ನಾಡಿಗೇರ, ಜಯಶ್ರೀ ಗ್ರಾಮಪುರೋಹಿತ, ಶೋಭಾ ಸೂರಭಟ್ಟನವರ, ಪಲ್ಲವಿ ಗ್ರಾಮಪುರೋಹಿತ, ಅನುಪಮಾ ಗ್ರಾಮಪುರೋಹಿತ ಮುಂತಾದವರಿದ್ದರು.

ಪಾರ್ಶ್ವವಾಯುವಿನ ಲಕ್ಷಣಗಳನ್ನು ತಕ್ಷಣ ಗುರುತಿಸಿ: ಡಾ. ರಾಜೇಂದ್ರ ಸಿ. ಬಸರಿಗಿಡದ

0

`ವಿಶ್ವ ಪಾರ್ಶ್ವವಾಯು ದಿನ’ ಕಾರ್ಯಕ್ರಮದಲ್ಲಿ ಡಾ. ರಾಜೇಂದ್ರ ಸಿ. ಬಸರಿಗಿಡದ
ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚಿನ ದಿನಗಳಲ್ಲಿ ಪಾರ್ಶ್ವವಾಯು ಸಮಸ್ಯೆ ಸಮಾಜದಲ್ಲಿ ಹೆಚ್ಚಾಗುತ್ತಿದ್ದು, ಪಾರ್ಶ್ವವಾಯುವಿನಿಂದ ಕುಟುಂಬ/ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದೆ ಉಳಿಯುತ್ತಿದೆ. ಪಾರ್ಶ್ವವಾಯುವಿನ ಲಕ್ಷಣಗಳನ್ನು ಬೇಗನೆ ಗುರುತಿಸಿ ಚಿಕಿತ್ಸೆ ಪಡೆಯುವಿಕೆ ಹಾಗೂ ತಡೆಗಟ್ಟುವುದು ಅತ್ಯವಶ್ಯಕವಾಗಿದೆ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ರಾಜೇಂದ್ರ ಸಿ. ಬಸರಿಗಿಡ ತಿಳಿಸಿದರು.

ಜಿಲ್ಲಾಡಳಿತ ಗದಗ, ಜಿಲ್ಲಾ ಪಂಚಾಯಿತಿ ಗದಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ವಿಭಾಗ, ಕೆ.ಎಚ್. ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜನರಲ್ ಮೆಡಿಸಿನ್ ಮುಖ್ಯಸ್ಥರಾದ ಡಾ. ಸಂಗಮೇಶ ಅಸೂಟಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿದ ವಿಶ್ವ ಪಾರ್ಶ್ವವಾಯು ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಾರ್ಶ್ವವಾಯು ಬಾಧಿತ ರೋಗಿಗಳು ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಕಾರ್ಯಕ್ರಮದ ಸದುಪಯೋಗ ಪಡೆಯಬೇಕು. ಕೆ.ಎಚ್. ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಹೊಸ ಕಟ್ಟಡ ಕೊಠಡಿ ಸಂಖ್ಯೆ: 105ರಲ್ಲಿ ಪ್ರತಿನಿತ್ಯ ಮೆದುಳು ಆರೋಗ್ಯ ಕ್ಲಿನಿಕ್‌ಗೆ ಭೇಟಿ ನೀಡಿ ಚಿಕಿತ್ಸೆ, ಮನೋಸಾಮಾಜಿಕ ಬೆಂಬಲ, ಫಿಜಿಯೋಥೆರಪಿ ಹಾಗೂ ಸ್ಪೀಚ್ ಥೆರಪಿ ಸೌಲಭ್ಯವನ್ನು ಪಡೆದು ಪಾರ್ಶ್ವವಾಯುವಿನಿಂದ ಗುಣಮುಖವಾಗಲು ತಿಳಿಸಿದರು.

ಶ್ವಾಸಕೋಶ ತಜ್ಞರಾದ ಡಾ. ಇರ್ಫಾನ್ ಎಮ್ ಮಾತನಾಡಿ, ಸಮಾಜದಲ್ಲಿ ಮೂಢ ನಂಬಿಕೆಗಳಿಂದ ಆಚರಣೆಯಲ್ಲಿರುವ ವಿವಿಧ ಚಿಕಿತ್ಸೆಗೆ ಒಳಗಾಗಿ ರೋಗವನ್ನು ಹೆಚ್ಚು ಮಾಡಿಕೊಳ್ಳದೆ ತಜ್ಞ ವೈದ್ಯರನ್ನು ಭೇಟಿ ಮಾಡಿ ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಂಡು ಪಾರ್ಶ್ವವಾಯುವಿನಿಂದ ಮುಕ್ತರಾಗಲು ತಿಳಿಸಿದರು.

ಕೆ.ಎಚ್. ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಎನ್.ಸಿ.ಡಿ ವಿಭಾಗದ ವೈದ್ಯಕೀಯ ಅಧಿಕಾರಿಗಳಾದ ಡಾ. ಅರ್ಪಿತಾ ಮಾತನಾಡಿ, ಗ್ರಾಮೀಣ ರೋಗಿಗಳು ಪ್ರಥಮ ಚಿಕಿತ್ಸೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಎಂದು ತಿಳಿಸಿ, ಪಾರ್ಶ್ವವಾಯು ಕುರಿತು ಎಚ್ಚರಿಕೆಯಿಂದಿರಲು ತಿಳಿಸಿದರು.

ರವಿ ನಂದ್ಯಾಳ ಸ್ವಾಗತಿಸಿದರು. ರೋಣದ ಜಿಲ್ಲಾ ಸಂಯೋಜಕ ಪ್ರವೀಣ ಎಸ್ ನಿರೂಪಿಸಿದರು, ಕ್ಲಿನಿಕಲ್ ಸೈಕೋಲಜಿಸ್ಟ್ ರೇವಣಸಿದ್ದಪ್ಪ ವಂದಿಸಿದರು. ಈ ಸಂದರ್ಭದಲ್ಲಿ ಎನ್.ಟಿ.ಸಿ.ಪಿ ಕಾರ್ಯಕ್ರಮದ ಆಪ್ತ ಸಮಾಲೋಚಕರಾದ ರೇಷ್ಮಾ ನದಾಫ್, ಎನ್.ಸಿ.ಡಿ ವಿಭಾಗದ ಹಾಗೂ ಬಿ.ಎಸ್.ಸಿ ನರ್ಸಿಂಗ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆ.ಎಚ್. ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಸಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ಡಾ. ಅರುಣಕುಮಾರ ಮಾತನಾಡಿ, ವಿಶ್ವ ಪಾರ್ಶ್ವವಾಯು ದಿನ–2025ರ ಘೋಷವಾಕ್ಯ `ಪ್ರತಿ ನಿಮಿಷವೂ ಮುಖ್ಯ’ ಎಂಬುದರ ಕುರಿತು ಮಾತನಾಡಿ, ರೋಗಿಗಳಿಗೆ ಒಂದು ನಿಮಿಷವೂ ಸಹ ಬಂಗಾರದಂತಹ ಸಮಯವಾಗಿದ್ದು, ಸಮಯವನ್ನು ಕಳೆಯದೆ ಚಿಕಿತ್ಸೆಗೆ ತುರ್ತಾಗಿ ಸ್ಪಂದಿಸುವುದು ಅತೀ ಅವಶ್ಯಕ ಎಂದು ತಿಳಿಸಿದರು.

error: Content is protected !!