ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಐತಿಹಾಸಿಕ ಗಂಗಾಪೂರಪೇಟೆಯ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಹಾಗೂ ಬೆಳ್ಳಿ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ ಜೂನ್ 28ರಿಂದ ಜುಲೈ 13ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಸಿದ್ದಪ್ಪ ಪಲ್ಲೇದ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರೆಯ ಅಂಗವಾಗಿ ಜುಲೈ 4ರಂದು ಕಳಸಾರೋಹಣ, ಜುಲೈ 7ರಂದು ಉಡಿ ತುಂಬುವ ಕಾರ್ಯಕ್ರಮ, ಜುಲೈ 8ರಂದು ಮಹಾರಥೋತ್ಸವ, ಜುಲೈ 9ರಂದು ಲಘು ರಥೋತ್ಸವ ಹಾಗೂ ಜುಲೈ 10ರಂದು ಸಾಮೂಹಿಕ ವಿವಾಹ ಮತ್ತು ಮಹಾ ಅನ್ನಸಂತರ್ಪಣೆ ಸೇರಿದಂತೆ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.
ಜೂನ್ 28ರಿಂದ ಜುಲೈ 13ರವರೆಗೆ ಹೋಮ-ಹವನ, ದೇವಿಯ ಸಹಸ್ರನಾಮಾವಳಿ ಪಠಣ, ಧಾರ್ಮಿಕ ಪ್ರವಚನಗಳು, ಆರೋಗ್ಯ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕ, ರೈತರಿಗೆ ಜಾಗೃತಿ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.
ದುರ್ಗಾದೇವಿಯ ಬೆಳ್ಳಿ ಮೂರ್ತಿ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಶ್ರೀ ಷ.ಬ್ರ. ಡಾ. ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದು, ಡಾ. ಪರಮೇಶ ಕಲ್ಲನಗೌಡರ ಉಪನ್ಯಾಸ ನೀಡಲಿದ್ದಾರೆ. ಟ್ರಸ್ಟ್ ಅಧ್ಯಕ್ಷ ಎಂ.ಎಸ್. ಪಾಟೀಲ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಶಾಸಕ ಡಿ.ಆರ್. ಪಾಟೀಲ, ಆನಂದಸ್ವಾಮಿ ಗಡ್ಡದೇವರಮಠ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಇದೇ ವೇಳೆ ರಥ ನಿರ್ಮಾಣಕ್ಕೆ ದೇಣಿಗೆ ನೀಡಿದ ಪೀರಸಾಬ್ ಕೌತಾಳ್ ದಂಪತಿಯನ್ನು ಸನ್ಮಾನಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಅನಿಲಕುಮಾರ ಸಿದ್ದಮ್ಮನಹಳ್ಳಿ, ಈಶ್ವರ ಕೋಟೆ, ರವಿ ಶಿದ್ಲಿಂಗ್, ಎಂ.ಎಸ್. ಪಾಟೀಲ, ಬಸವರಾಜ ಬೆಳದಡಿ, ಯಮನಪ್ಪ ಗೊಂದಿ, ಬಸಪ್ಪ ಶಿರೂರ, ದೇವಪ್ಪ ಹುರಕಟ್ಟಿ, ಹುಲಿಗೆಪ್ಪ ಜಡಿ, ಬಸವರಾಜ ಅಣ್ಣಿಗೇರಿ, ಶರಣಪ್ಪ ಗಾಣಿಗೇರ, ಬಸವರಾಜ ಕವಳಿಕಾಯಿ, ಬಸವರಾಜ ಹಿತ್ತಲಗುತ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“31 ಲಕ್ಷ ರೂಪಾಯಿ ವೆಚ್ಚದಲ್ಲಿ ರಥ ನಿರ್ಮಾಣ ಮಾಡಿಕೊಟ್ಟ ದಾನಿಗಳ ಹೆಸರನ್ನು ಕೆತ್ತಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ. ಇದು ಅವರ ಭಕ್ತಿಯ ಸಂಕೇತ.”
ಸಿದ್ದಪ್ಪ ಪಲ್ಲೇದ, ಅಧ್ಯಕ್ಷರು, ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಸಮಿತಿ
ರಥದ ಮೇಲಿನ ಹೆಸರು ವಿವಾದಕ್ಕೆ ಸ್ಪಷ್ಟನೆ
ದುರ್ಗಾದೇವಿ ರಥದ ಗಾಲಿಯ ಮೇಲೆ ಅನ್ಯಧರ್ಮೀಯ ಮಹಿಳೆಯ ಹೆಸರು ಕೆತ್ತನೆ ಮಾಡಿರುವ ಕುರಿತು ಹಿಂದೂ ಮುಖಂಡ ರಾಜು ಖಾನಪ್ಪನವರ ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದಪ್ಪ ಪಲ್ಲೇದ, **”ನವರಾತ್ರಿ ಉತ್ಸವದ ವೇಳೆ ಪೀರಸಾಬ್ ಕೌತಾಳ್ ಅವರು ರಥ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಸುಮಾರು ₹31 ಲಕ್ಷ ವೆಚ್ಚದಲ್ಲಿ ರಥ ನಿರ್ಮಾಣ ಮಾಡಿಕೊಟ್ಟಿದ್ದಾರೆ. ದಾನಿಗಳ ಹೆಸರನ್ನು ರಥದ ಮೇಲೆ ಕೆತ್ತಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ”** ಎಂದು ಸ್ಪಷ್ಟಪಡಿಸಿದರು.

