Home Blog

ಹೊಸಕೋಟೆಯಲ್ಲಿ ಬೆಳ್ಳಂಬೆಳಿಗ್ಗೆ ರಕ್ತಪಾತ: ಮನೆ ಮುಂದೆಯೇ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಹತ್ಯೆ!

0

ಹೊಸಕೋಟೆ: ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ದಬ್ಬಗುಂಠಹಳ್ಳಿ ಗ್ರಾಮದಲ್ಲಿ ಬೆಳ್ಳಂಬೆಳಿಗ್ಗೆ ನಡೆದ ಭೀಕರ ಕೊಲೆ ಪ್ರಕರಣ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಮುಂಜಾನೆ ಸುಮಾರು 4:30ರ ಸಮಯದಲ್ಲಿ ಮನೆ ಮುಂದೆಯೇ ವ್ಯಕ್ತಿಯೊಬ್ಬರನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೃತರನ್ನು 40 ವರ್ಷದ ಶಿವಶಂಕರ್ ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ, ನಿದ್ದೆಯಲ್ಲಿದ್ದ ವೇಳೆ ಶಿವಶಂಕರ್‌ಗೆ ಕರೆ ಬಂದಿದ್ದು, ಅವರು ಮನೆ ಹೊರಗೆ ತೆರಳಿದ ಬಳಿಕ ಮತ್ತೆ ಹಿಂದಿರುಗಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಬಳಿಕ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಕೊಲೆಗೈದ ದುಷ್ಕರ್ಮಿಗಳು ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದು, ಕೊಲೆಯ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ಘಟನೆ ಕುರಿತು ಮಾಹಿತಿ ಪಡೆದ ಹೊಸಕೋಟೆ ಪೊಲೀಸರು ಹಾಗೂ SOCO ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

 

ಚಲಿಸುತ್ತಿದ್ದ ಕ್ಯಾಂಟರ್ ಟೈರ್ ಸ್ಫೋಟ! KSRTC ಬಸ್ ಡಿಕ್ಕಿಯಾಗಿ ಹಲವು ಪ್ರಯಾಣಿಕರಿಗೆ ಗಾಯ

ತುಮಕೂರು: ಇಂದು ಮಧ್ಯಾಹ್ನ ಸುಮಾರು 12 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.

ದ್ವಾರಾಳು ಬ್ರಿಡ್ಜ್ ಸಮೀಪ ವೇಗವಾಗಿ ಸಾಗುತ್ತಿದ್ದ ಕ್ಯಾಂಟರ್ ವಾಹನದ ಟೈರ್ ಸ್ಫೋಟಗೊಂಡ ಪರಿಣಾಮ ಅದು ನಿಯಂತ್ರಣ ತಪ್ಪಿದೆ. ಇದೇ ವೇಳೆ ಅದರ ಹಿಂದಿನಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಬಸ್‌ನಲ್ಲಿದ್ದ ಹಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಶಿರಾ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಕುರಿತು ಮಾಹಿತಿ ಪಡೆದ ತಾವರೆಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಕಾರಣದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಅಣ್ಣನ ಕೊಲೆಗೆ ಪ್ರತೀಕಾರ: ಆರೋಪಿಗಳ ಮನೆ ಸುಟ್ಟು ಭಸ್ಮ!

ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ ಜಮೀನು ವಿವಾದದಿಂದ ಆರಂಭವಾದ ಜಗಳ ಕೊಲೆ ಮತ್ತು ಪ್ರತೀಕಾರದ ಹಿಂಸೆಗೆ ತಿರುಗಿ ಹತ್ತಾರು ಕುಟುಂಬಗಳನ್ನು ಸಂಕಷ್ಟಕ್ಕೆ ತಳ್ಳಿದೆ.

ಮಲ್ಲಪ್ಪ ಹಾಗೂ ಹನುಮಂತರಾಯನ ಕುಟುಂಬಗಳ ನಡುವೆ ಎರಡು ಎಕರೆ ಜಮೀನಿನ ದಾರಿ ವಿಚಾರವಾಗಿ ಕಳೆದ ನಾಲ್ಕು ವರ್ಷಗಳಿಂದ ವೈಷಮ್ಯ ಮುಂದುವರಿದಿತ್ತು. ಇದೇ ಹಳೆ ದ್ವೇಷದ ಹಿನ್ನೆಲೆ ಹನುಮಂತರಾಯನ ಕುಟುಂಬದವರು ಸೇರಿ 27 ವರ್ಷದ ಪರಮೇಶ್ವರನನ್ನು ತಲ್ವಾರ್ ಹಾಗೂ ದೊಣ್ಣೆಗಳಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಅಣ್ಣನನ್ನು ರಕ್ಷಿಸಲು ಹೋಗಿದ್ದ ರೇವಣಸಿದ್ದನಿಗೂ ಗಂಭೀರ ಗಾಯಗಳಾಗಿವೆ.

ಘಟನೆ ಸಂಬಂಧ ಕೆಂಭಾವಿ ಪೊಲೀಸರು ತ್ವರಿತ ಕ್ರಮ ಕೈಗೊಂಡು ಪ್ರಮುಖ ಆರೋಪಿಗಳಾದ ಪರಮಣ್ಣ, ದೇವಿಂದ್ರಪ್ಪ, ಚನ್ನಪ್ಪ ಮತ್ತು ಮಹದೇವಪ್ಪರನ್ನು ಬಂಧಿಸಿದ್ದಾರೆ.

ಇದೇ ವೇಳೆ ಅಣ್ಣನ ಸಾವಿನಿಂದ ಆಕ್ರೋಶಗೊಂಡ ರೇವಣಸಿದ್ದ, ಆರೋಪಿಗಳ ಕುಟುಂಬ ಊರು ಬಿಟ್ಟಿದ್ದ ಸಂದರ್ಭವನ್ನು ಬಳಸಿಕೊಂಡು ಅವರ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಅಗ್ನಿಕಾಂಡದಲ್ಲಿ ಧಾನ್ಯ, ಬಟ್ಟೆ ಸೇರಿದಂತೆ ಸುಮಾರು 10 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳು ಭಸ್ಮವಾಗಿವೆ.

ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ರೇವಣಸಿದ್ದನನ್ನೂ ಪೊಲೀಸರು ಬಂಧಿಸಿದ್ದು, ಒಂದು ಕುಟುಂಬದ ದುಃಖ ಇನ್ನಷ್ಟು ಗಂಭೀರವಾಗುವಂತಾಗಿದೆ.

 

ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳ ಗಮನಕ್ಕೆ: ಈ ಎರಡು ದಿನ ನಮ್ಮ ಮೆಟ್ರೋ ಸೇವೆ ವಿಸ್ತರಣೆ!

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 15, 18 ಹಾಗೂ 24ರಂದು ಐಪಿಎಲ್ ಪಂದ್ಯಗಳು ನಡೆಯಲಿವೆ. ಈ ಹಿನ್ನೆಲೆ ನಮ್ಮ ಮೆಟ್ರೋ ಸೇವೆಯಲ್ಲಿ ಬದಲಾವಣೆ ಮಾಡಲಾಗಿದೆ.

ಏಪ್ರಿಲ್ 15 ಮತ್ತು 24ರಂದು ಪಂದ್ಯಾವಳಿ ಹಿನ್ನೆಲೆ ಮೆಟ್ರೋ ಸೇವೆಯನ್ನು ರಾತ್ರಿ 2 ಗಂಟೆಯವರೆಗೆ ವಿಸ್ತರಿಸಲಾಗಿದೆ. ವೈಟ್‌ಫೀಲ್ಡ್ (ಕಾಡುಗೋಡಿ) ನಿಂದ ರಾತ್ರಿ 12:30ಕ್ಕೆ, ಚಲ್ಲಘಟ್ಟದಿಂದ ರಾತ್ರಿ 12:45ಕ್ಕೆ ರೈಲುಗಳು ಹೊರಡಲಿವೆ. ರೇಷ್ಮೆ ಸಂಸ್ಥೆ ಹಾಗೂ ಮಾದಾವರದಿಂದ ರಾತ್ರಿ 12:45ಕ್ಕೆ, ಬೊಮ್ಮಸಂದ್ರದಿಂದ ರಾತ್ರಿ 12:30ಕ್ಕೆ ಮತ್ತು ಆರ್.ವಿ ರಸ್ತೆದಿಂದ ರಾತ್ರಿ 2:00ಕ್ಕೆ ಕೊನೆಯ ರೈಲು ಸಂಚರಿಸಲಿದೆ.

ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮಜೆಸ್ಟಿಕ್)ದಿಂದ ನಾಲ್ಕು ದಿಕ್ಕುಗಳಿಗೆ ಮಧ್ಯರಾತ್ರಿ 1:30ಕ್ಕೆ ಕೊನೆಯ ರೈಲು ಹೊರಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಏಪ್ರಿಲ್ 18ರಂದು ನಡೆಯಲಿರುವ ಪಂದ್ಯದ ದಿನ ಯಾವುದೇ ಸಮಯ ವಿಸ್ತರಣೆ ಇರುವುದಿಲ್ಲ. ಮೆಟ್ರೋ ರೈಲುಗಳು ನಿಗದಿತ ವೇಳಾಪಟ್ಟಿಯಂತೆ ಸಂಚರಿಸಲಿವೆ ಎಂದು ಸ್ಪಷ್ಟಪಡಿಸಲಾಗಿದೆ.

ದಾವಣಗೆರೆ ಟಿಕೆಟ್ ವಿವಾದ: ಗೆಲ್ಲಿಸದಿದ್ದರೆ ರಾಜೀನಾಮೆ ನೀಡ್ತಿನಿ ಅಂದಿದ್ದು ನಿಜ – ಜಮೀರ್ ಸ್ಪಷ್ಟನೆ

ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಉಂಟಾದ ಅಸಮಾಧಾನದ ಬಗ್ಗೆ ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಾವಣಗೆರೆ ಟಿಕೆಟ್ ಸಂಬಂಧ ಕೆಪಿಸಿಸಿ ಸಭೆಯಲ್ಲಿ ತಾವು ಏಳು ಮುಸ್ಲಿಂ ನಾಯಕರ ಹೆಸರನ್ನು ನೀಡಿದ್ದಾಗಿ ಹೇಳಿದರು. “ಯಾರಿಗಾದರೂ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬರದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸಮ್ಮುಖದಲ್ಲೇ ಓಪನ್ ಆಗಿ ಹೇಳಿದ್ದೆ” ಎಂದು ತಿಳಿಸಿದರು.

ಅಬ್ದುಲ್ ಜಬ್ಬಾರ್‌ಗೆ ಟಿಕೆಟ್ ಕೇಳಿಲ್ಲ, ಏಕೆಂದರೆ ಅವರು ಎಂಎಲ್‌ಸಿ ಆಗಿದ್ದಾರೆ ಎಂಬುದು ತಿಳಿದ ಬಳಿಕ ಬೇರೆ ಮುಸ್ಲಿಂ ನಾಯಕರಲ್ಲಿ ಯಾರಿಗಾದರೂ ಟಿಕೆಟ್ ನೀಡುವಂತೆ ಕೇಳಿದ್ದೆ. ಟಿಕೆಟ್ ನೀಡದಿರುವುದರಿಂದ ಅಸಮಾಧಾನ ಇದ್ದದ್ದು ನಿಜ, ಆದರೆ ಬಳಿಕ ಎಲ್ಲವೂ ಸರಿಯಾಗಿದೆ ಎಂದು ಹೇಳಿದರು.

ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ಸಂದರ್ಭ ತಾವು ಉಪಸ್ಥಿತರಿರಲಿಲ್ಲ ಎಂದರು. ನಜೀರ್ ಅಹ್ಮದ್ ಅವರನ್ನು ಹುದ್ದೆಯಿಂದ ಕೈಬಿಟ್ಟಿರುವ ಕುರಿತು ಕಾರಣ ತಿಳಿದಿಲ್ಲ ಎಂದು ಹೇಳಿದರು.

ದಾವಣಗೆರೆ ಹಾಗೂ ಬಾಗಲಕೋಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಉತ್ತಮ ಮುನ್ನಡೆಯೊಂದಿಗೆ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ ಜಮೀರ್, “ನಾನು ಸಾಮಾನ್ಯ ಕಾರ್ಯಕರ್ತ, ಜನ ಸೇವಕ ಮಾತ್ರ” ಎಂದು ಹೇಳಿದರು.

ಇದೇ ವೇಳೆ, ಕಾಂಗ್ರೆಸ್ ಶಾಸಕರ ದೆಹಲಿ ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲರಿಗೂ ಸಚಿವರಾಗುವ ಆಸೆ ಸಹಜ ಎಂದು ಹೇಳಿದರು.

ರಾಮನಗರ: ರೈಲು ಹಳಿಯಲ್ಲಿ ಗ್ಯಾಸ್ ಸಿಲಿಂಡರ್ ಪತ್ತೆ, ಕೆಲಕಾಲ ಆತಂಕ

ರಾಮನಗರ: ಜಿಲ್ಲೆಯ ಮದ್ದೂರು–ಚನ್ನಪಟ್ಟಣ ಮಾರ್ಗಮಧ್ಯೆಯ ಶೆಟ್ಟಿಹಳ್ಳಿ ರೈಲ್ವೆ ನಿಲ್ದಾಣ ಸಮೀಪ ರೈಲು ಹಳಿಯ ಮೇಲೆ ಗ್ಯಾಸ್ ಸಿಲಿಂಡರ್ ಪತ್ತೆಯಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಿನ್ನೆ ಬೆಳಿಗ್ಗೆ ಈ ಘಟನೆ ನಡೆದಿದ್ದು, ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಮಂಗಳಾ ಎಕ್ಸ್‌ಪ್ರೆಸ್ ರೈಲಿನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಹಳಿಯ ಮೇಲೆ ಖಾಲಿ ಗ್ಯಾಸ್ ಸಿಲಿಂಡರ್, ಗ್ಯಾಸ್ ಸ್ಟವ್ ಹಾಗೂ ಬಟ್ಟೆ ತುಂಬಿದ್ದ ಪ್ಲಾಸ್ಟಿಕ್ ಚೀಲ ಕಂಡು ಬಂದ ಹಿನ್ನೆಲೆಯಲ್ಲಿ ಲೋಕೋಪೈಲೆಟ್ ರೈಲನ್ನು ನಿಲ್ಲಿಸಿ ಪರಿಶೀಲನೆ ನಡೆಸಿದ್ದಾರೆ.

ಪರಿಶೀಲನೆ ವೇಳೆ, ಮತ್ತೊಂದು ರೈಲಿನಲ್ಲಿ ಸಾಗಿಸುತ್ತಿದ್ದ ಸಿಲಿಂಡರ್ ಹಾಗೂ ಗ್ಯಾಸ್ ಸ್ಟವ್ ಇದ್ದ ಚೀಲ ಅಕಸ್ಮಾತ್ ಕೆಳಗೆ ಬಿದ್ದಿದ್ದು, ಅದರ ಹಿಂದೆ ಬಂದ ಮಂಗಳಾ ಎಕ್ಸ್‌ಪ್ರೆಸ್‌ಗೆ ಚೀಲ ಸಿಲುಕಿದ ಪರಿಣಾಮ ವಸ್ತುಗಳು ಹಳಿಯ ಮೇಲೆ ಚದರಿಕೊಂಡಿರುವುದು ತಿಳಿದುಬಂದಿದೆ.

ಘಟನೆ ತಿಳಿದು ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇದು ಆಕಸ್ಮಿಕವಾಗಿ ಬಿದ್ದ ವಸ್ತುಗಳಾ ಅಥವಾ ಉದ್ದೇಶಪೂರ್ವಕವಾಗಿ ಇಡಲಾಗಿದೆಯಾ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಸುಮಾರು ಅರ್ಧಗಂಟೆಗಳ ಬಳಿಕ ಮತ್ತೆ ರೈಲು ಸಂಚಾರ ಪುನರಾರಂಭಗೊಂಡಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಕಿಸಾನ್ ವಿಕಾಸ್ ಪತ್ರ: ಹೂಡಿಕೆ ಮಾಡಿದ ಹಣ ಡಬಲ್ ಆಗುವ ಯೋಜನೆ

0

ಜನಪ್ರಿಯ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಒಂದಾದ ಕಿಸಾನ್ ವಿಕಾಸ್ ಪತ್ರ ಹೂಡಿಕೆದಾರರಿಗೆ ಭದ್ರತೆ ಹಾಗೂ ನಿಶ್ಚಿತ ಲಾಭ ನೀಡುವ ಯೋಜನೆಯಾಗಿ ಗುರುತಿಸಿಕೊಂಡಿದೆ.

ಈ ಯೋಜನೆಯನ್ನು ಮೂಲತಃ 1988ರಲ್ಲಿ ರೈತರಿಗಾಗಿ ಆರಂಭಿಸಲಾಗಿದ್ದರೂ, ಇದೀಗ ಎಲ್ಲಾ ಭಾರತೀಯ ನಾಗರಿಕರಿಗೆ ಲಭ್ಯವಿದೆ. 10 ವರ್ಷ ಮೇಲ್ಪಟ್ಟವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದ್ದು, ಅಪ್ರಾಪ್ತರ ಹೆಸರಿನಲ್ಲಿ ಹಿರಿಯರು ಖಾತೆ ತೆರೆದು ನಂತರ ವರ್ಗಾವಣೆ ಮಾಡುವ ಅವಕಾಶವೂ ಇದೆ.

ಕಿಸಾನ್ ವಿಕಾಸ್ ಪತ್ರ ಯೋಜನೆಯ ಅವಧಿ 115 ತಿಂಗಳುಗಳಾಗಿದ್ದು, ಅಂದರೆ ಸುಮಾರು 9 ವರ್ಷ 5 ತಿಂಗಳುಗಳ ದೀರ್ಘಾವಧಿಯ ಯೋಜನೆಯಾಗಿದೆ. ಕನಿಷ್ಠ ಹೂಡಿಕೆ 1,000 ರೂಪಾಯಿಯಿಂದ ಆರಂಭವಾಗುತ್ತಿದ್ದು, ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇಲ್ಲ. ಆದರೆ 10,000 ರೂಪಾಯಿಗಿಂತ ಹೆಚ್ಚಿನ ಹೂಡಿಕೆ ಮಾಡಿದರೆ ಅದರ ಆದಾಯ ಮೂಲವನ್ನು ತೋರಿಸುವುದು ಕಡ್ಡಾಯ.

ಈ ಯೋಜನೆಯ ಪ್ರಮುಖ ಆಕರ್ಷಣೆ ಎಂದರೆ ಹೂಡಿಕೆ ಮಾಡಿದ ಹಣವು ಮೆಚ್ಯೂರಿಟಿ ಅವಧಿಯಲ್ಲಿ ಎರಡು ಪಟ್ಟು ಆಗುವುದು. ಪ್ರಸ್ತುತ ವಾರ್ಷಿಕ ಬಡ್ಡಿದರ ಶೇ. 7.5 ರಷ್ಟಿದೆ. ಹೂಡಿಕೆ ಮಾಡುವವರು ಪೋಸ್ಟ್ ಆಫೀಸ್‌ಗಳಲ್ಲಿ ಅಥವಾ ಇಂಡಿಯಾ ಪೋಸ್ಟ್ ವೆಬ್‌ಸೈಟ್ ಮೂಲಕ ಈ ಯೋಜನೆಗೆ ಸೇರಬಹುದು.

ಆದರೆ, ಈ ಯೋಜನೆಗೆ ತೆರಿಗೆ ಸೌಲಭ್ಯ ಇರುವುದಿಲ್ಲ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ಕಡಿತ ಸಿಗುವುದಿಲ್ಲ. ಜೊತೆಗೆ ಬಡ್ಡಿ ಆದಾಯಕ್ಕೆ ತೆರಿಗೆ ಅನ್ವಯವಾಗುತ್ತಿದ್ದು, ಪ್ರತಿ ವರ್ಷ ಉತ್ಪತ್ತಿಯಾಗುವ ಬಡ್ಡಿಗೆ ಶೇ. 10ರಷ್ಟು ಟಿಡಿಎಸ್ ಕಡಿತಗೊಳ್ಳುತ್ತದೆ.

ಒಟ್ಟಿನಲ್ಲಿ, ಭದ್ರ ಮತ್ತು ನಿಶ್ಚಿತ ಲಾಭ ಬಯಸುವ ಹೂಡಿಕೆದಾರರಿಗೆ ಕಿಸಾನ್ ವಿಕಾಸ್ ಪತ್ರ ಯೋಜನೆ ಒಳ್ಳೆಯ ಆಯ್ಕೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

Gold Rate: ಮತ್ತೆ ಏರಿದ ಚಿನ್ನದ ಬೆಲೆ! ಇಂದಿನ ಗ್ರಾಂ ಬೆಲೆ ಎಷ್ಟು ಗೊತ್ತಾ?

0

ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಳಿತ ಕಾಣುತ್ತಿದ್ದು, ಇವತ್ತು ಮತ್ತೆ ಏರಿಕೆಯಾಗಿದೆ.

ಮಂಗಳವಾರ ಚಿನ್ನದ ದರದಲ್ಲಿ ಗ್ರಾಮ್‌ಗೆ ಸುಮಾರು 135 ರೂಪಾಯಿ ಹೆಚ್ಚಳವಾಗಿದ್ದು, ಬೆಲೆ ಮತ್ತೊಮ್ಮೆ ಗರಿಷ್ಠ ಮಟ್ಟ ತಲುಪಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,41,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,53,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,41,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 14ಕ್ಕೆ):

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,393 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,110 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,545 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 255 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,393 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,110 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 255 ರೂ.

ಆದಿಚುಂಚನಗಿರಿಗೆ ನಾಳೆ ಮೋದಿ ಭೇಟಿ: ಪ್ರಧಾನಿಗಾಗಿ ಸಿದ್ಧವಾಗಿದೆ ಮೈಸೂರು ಪೇಟ!

ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರಕ್ಕೆ ನಾಳೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ.

ಶ್ರೀಕ್ಷೇತ್ರದ ಮಾಜಿ ಪೀಠಾಧಿಪತಿಗಳಾದ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಸ್ಮರಣಾರ್ಥ ನಿರ್ಮಾಣಗೊಂಡಿರುವ ಭವ್ಯ ‘ಶ್ರೀ ಗುರು ಭೈರವೈಕ್ಯ ಮಂದಿರ’ವನ್ನು ಪ್ರಧಾನಿ ಲೋಕಾರ್ಪಣೆಗೊಳಿಸಲಿದ್ದಾರೆ. ಬಳಿಕ ಭಕ್ತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಕ್ಷೇತ್ರ ಸಕಲ ಸಿದ್ಧತೆಯೊಂದಿಗೆ ಕಂಗೊಳಿಸುತ್ತಿದ್ದು, ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಭೈರವೈಕ್ಯ ಮಂದಿರ ವಿಶೇಷ ಆಕರ್ಷಣೆಯಾಗಿದೆ. ಕಾರ್ಯಕ್ರಮಕ್ಕಾಗಿ ಬಿಜಿಎಸ್ ಕ್ರೀಡಾಂಗಣದಲ್ಲಿ ಭವ್ಯ ವೇದಿಕೆ ನಿರ್ಮಿಸಲಾಗಿದ್ದು, ಒಂದು ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಭದ್ರತೆಯ ದೃಷ್ಟಿಯಿಂದ 2000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಪ್ರಧಾನಿ ಮೋದಿಯವರಿಗಾಗಿ ವಿಶೇಷ ‘ಮೈಸೂರು ಪೇಟ’ ಸಿದ್ಧಪಡಿಸಲಾಗಿದ್ದು, ಮೈಸೂರಿನ ಕಲಾವಿದ ನಂದನ್ ಸಿಂಗ್ ಐದು ದಿನಗಳ ಶ್ರಮದಿಂದ ಇದನ್ನು ತಯಾರಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಧರಿಸುತ್ತಿದ್ದ ಮಾದರಿಯ ಪೇಟವು ಬನಾರಸ್ ಬಟ್ಟೆ ಹಾಗೂ ಗಂಡಭೇರುಂಡ ವಿನ್ಯಾಸವನ್ನು ಒಳಗೊಂಡಿದೆ. ನಿರ್ಮಲಾನಂದನಾಥ ಶ್ರೀಗಳ ಮಾರ್ಗದರ್ಶನದಲ್ಲಿ ‘ನಮ್ಮೂರು ನಮ್ಮೋರು’ ಸಂಸ್ಥೆಯಿಂದ ಈ ಗೌರವ ಅರ್ಪಿಸಲಾಗುತ್ತಿದೆ.

ಪ್ರಧಾನಿ ಮೋದಿ ದಿನಚರಿ:

  • ಬೆಳಿಗ್ಗೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮನ
  • ಬೆಳಿಗ್ಗೆ 10:50ಕ್ಕೆ ಹೆಲಿಕಾಪ್ಟರ್ ಮೂಲಕ ಆದಿಚುಂಚನಗಿರಿ ಹೆಲಿಪ್ಯಾಡ್‌ಗೆ ಪ್ರಯಾಣ
  • ಬೆಳಿಗ್ಗೆ 11ಕ್ಕೆ ಮಠಕ್ಕೆ ಭೇಟಿ ನೀಡಿ ಭೈರವೈಕ್ಯ ಮಂದಿರ ಉದ್ಘಾಟನೆ
  • ನಂತರ ಬಿಜಿಎಸ್ ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಷಣ
  • ಕಾರ್ಯಕ್ರಮದ ಬಳಿಕ ಬೆಂಗಳೂರಿಗೆ ಮರಳಿ ಅಲ್ಲಿಂದ ಕೇರಳ ಪ್ರವಾಸಕ್ಕೆ ತೆರಳುವುದು.

ಕೊಪ್ಪಳ ಲವ್ ಜಿಹಾದ್ ಪ್ರಕರಣಕ್ಕೆ ಹೊಸ ತಿರುವು: ಆರೋಪಿಗೆ ಅಂತರಾಜ್ಯ ಲಿಂಕ್, ಸಾವಿರಾರು ವಿಡಿಯೋ, ಫೋಟೋ ಪತ್ತೆ!

ಕೊಪ್ಪಳ: ಜಿಲ್ಲೆಯಲ್ಲಿ ಕೇಳಿಬಂದಿರುವ ಲವ್ ಜಿಹಾದ್ ಆರೋಪ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ.

ಪ್ರಕರಣದಲ್ಲಿ ಆರೋಪಿ ಮುಸ್ತಫಾ ಖಾದ್ರಿಗೆ ಅಂತರಾಜ್ಯ ಸಂಪರ್ಕವಿದ್ದು, ಆರ್ಥಿಕ ಸಹಾಯ ಪಡೆದಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮೂಲಗಳ ಪ್ರಕಾರ, ಮುಸ್ತಫಾಗೆ ಗೋವಾ ಮತ್ತು ಮುಂಬೈ ಮೂಲದ ಕೆಲವರ ಸಂಪರ್ಕವಿದ್ದು, ಅಲ್ಲಿ  ಹಣಕಾಸಿನ ನೆರವು ದೊರೆಯುತ್ತಿತ್ತು ಎನ್ನಲಾಗಿದೆ. ಈ ಹಣದಿಂದಲೇ ಕೊಪ್ಪಳದಲ್ಲಿ ವೈಭವಯುತ ಜೀವನ ನಡೆಸುತ್ತಿದ್ದಾನೆ ಎಂದು ಹೇಳಲಾಗಿದೆ. ಇದೇ ಹಣವನ್ನು ಬಳಸಿ ಯುವತಿಯರೊಂದಿಗೆ ಸಂಪರ್ಕ ಬೆಳೆಸುತ್ತಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ತನಿಖೆ ವೇಳೆ ಮುಸ್ತಫಾ ಖಾದ್ರಿಯ ಮೊಬೈಲ್‌ನಲ್ಲಿ ಸುಮಾರು 9,700 ವಿಡಿಯೋಗಳು ಮತ್ತು 7,000ಕ್ಕೂ ಹೆಚ್ಚು ಫೋಟೋಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ವಿಡಿಯೋಗಳನ್ನು ಇತರರಿಗೆ ರವಾನಿಸಿರುವ ಸಾಧ್ಯತೆ ಇದ್ದು, ಈ ಹಿನ್ನೆಲೆ ಮುಸ್ತಫಾ ವಿರುದ್ಧ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇದೇ ವೇಳೆ, ಮುಸ್ತಫಾನನ್ನು ಪ್ರೀತಿಸುತ್ತಿದ್ದ ಯುವತಿಯೂ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದಾಳೆ. ಮೆಡಿಕಲ್ ಕಾಲೇಜಿನ ವಾಟರ್ ಟ್ಯಾಂಕ್ ಬಳಿ ಊಟ ಮಾಡುತ್ತಿದ್ದ ವೇಳೆ 8ರಿಂದ 10 ಮಂದಿ ಅಪರಿಚಿತರು ಬಂದು ಮುಸ್ತಫಾಗೆ ಜೀವ ಬೆದರಿಕೆ ಹಾಕಿ, ಅವನ ಬಳಿ ಇದ್ದ ಎರಡು ಮೊಬೈಲ್‌ಗಳನ್ನು ಕಸಿದುಕೊಂಡು ಹಿಂತಿರುಗಿಸಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದು, ಸಂಪೂರ್ಣ ಸತ್ಯಾಸತ್ಯತೆ ಹೊರಬರುವಂತೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

error: Content is protected !!