ಹಾಸನ:– ಕಾಡಾನೆ ಸೆರೆ ಕಾರ್ಯಾಚರಣೆಗೆ ದುಬಾರೆ ಸಾಕಾನೆ ಶಿಬಿರದಿಂದ ಬಂದಿದ್ದ ಕುಮ್ಕಿ ಆನೆ ಸುಗ್ರೀವ ಆಹಾರ ನೀಡುತ್ತಿದ್ದ ಕಾವಾಡಿಗನ ಮೇಲೆ ದಾಳಿ ನಡೆಸಿದ ಘಟನೆ ತಾತ್ಕಾಲಿಕ ಸಾಕಾನೆ ಕ್ಯಾಂಪ್ನಲ್ಲಿ ನಡೆದಿದೆ.
ಆಹಾರ ನೀಡುತ್ತಿದ್ದ ವೇಳೆ ಆನೆ ಏಕಾಏಕಿ ಕಾವಾಡಿಗ ರಾಜು ಮೇಲೆ ದಾಳಿ ಮಾಡಿ ದಂತದಿಂದ ತಿವಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ರಾಜು ಅವರನ್ನು ತಕ್ಷಣ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ.
ಬುಧವಾರ ಕಾಡಾನೆ ಸೆರೆ ಕಾರ್ಯಾಚರಣೆಗೆ ಆರು ಸಾಕಾನೆಗಳನ್ನು ನಿಯೋಜಿಸಲಾಗಿತ್ತು. ಸಂಜೆ ವೇಳೆಗೆ ನರಹಂತಕ ಒಂಟಿಕೋರೆ ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು. ಆ ಕಾರ್ಯಾಚರಣೆಯಲ್ಲಿ ಸುಗ್ರೀವ ಪ್ರಮುಖ ಪಾತ್ರವಹಿಸಿತ್ತು. ಆದರೆ ನಂತರ ಆ ಕಾಡಾನೆ ತಪ್ಪಿಸಿಕೊಂಡಿದ್ದು, ಇಂದು ಬೆಳಿಗ್ಗೆ ಮತ್ತೆ ಸೆರೆ ಕಾರ್ಯಾಚರಣೆ ಆರಂಭಿಸಲು ಸಿದ್ಧತೆ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ.
ಘಟನೆಯ ನಂತರ ಡಿಸಿಎಫ್ ಸೌರಭ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಆರೋಗ್ಯ ವಿಚಾರಿಸಿದ್ದಾರೆ.
ಘಟನೆ ಬಳಿಕ ಕುಮ್ಕಿ ಆನೆಗಳಾದ ಸುಗ್ರೀವ ಹಾಗೂ ಲಕ್ಷ್ಮಣರನ್ನು ದುಬಾರೆ ಶಿಬಿರಕ್ಕೆ ವಾಪಸ್ ಕಳುಹಿಸಲಾಗಿದೆ. ಅವುಗಳ ಬದಲಿಗೆ ಬೇರೆ ಎರಡು ಕುಮ್ಕಿ ಆನೆಗಳನ್ನು ನಿಯೋಜಿಸಲು ತೀರ್ಮಾನಿಸಲಾಗಿದ್ದು, ಇಂದಿನ ಕಾಡಾನೆ ಸೆರೆ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

