Home Blog

ಹೆಚ್ಚು ಆಹಾರ ತಿಂದ್ರೆ ಮಾತ್ರ ಬೊಜ್ಜು ಬರುತ್ತೆ ಅಂತ ನೀವು ತಿಳ್ಕೊಂಡಿದ್ದೀರಾ!? ಹಾಗಿದ್ರೆ ಈ ಮಾಹಿತಿ ತಿಳಿಯಿರಿ!

0

ಇತ್ತೀಚಿನ ದಿನಗಳಲ್ಲಿ ಸ್ಥೂಲಕಾಯ ಹೆಚ್ಚುತ್ತಿರುವುದು ಸಾರ್ವಜನಿಕ ಆರೋಗ್ಯಕ್ಕೆ ಸವಾಲಾಗುತ್ತಿದೆ.

ಇದಕ್ಕೆ ಕೇವಲ ಹೆಚ್ಚು ತಿನ್ನುವುದೇ ಕಾರಣ ಎಂಬ ಭಾವನೆ ತಪ್ಪು. ಕೆಲವರಿಗೆ ಕಡಿಮೆ ಆಹಾರ ಸೇವನೆ ಇದ್ದರೂ ತೂಕ ಹೆಚ್ಚಾಗಬಹುದು. ಇದಕ್ಕೆ ಹಾರ್ಮೋನ್ ಅಸಮತೋಲನ, ನಿದ್ರಾಹೀನತೆ ಮತ್ತು ಮಾನಸಿಕ ಒತ್ತಡ ಪ್ರಮುಖ ಕಾರಣಗಳಾಗಿವೆ.

ಅಧಿಕ ತೂಕ ಹೆಚ್ಚುವ ಪ್ರಕ್ರಿಯೆಯಲ್ಲಿ ಥೈರಾಯ್ಡ್ ಸಮಸ್ಯೆ, ಪಿಸಿಓಎಸ್ ಅಥವಾ ಇನ್ಸುಲಿನ್ ರೆಸಿಸ್ಟೆನ್ಸ್ ಪ್ರಮುಖ ಪಾತ್ರ ವಹಿಸುತ್ತವೆ. ದಿನಕ್ಕೆ 5 ಗಂಟೆಗೂ ಕಡಿಮೆ ನಿದ್ರೆ ಮಾಡುವವರಲ್ಲಿ ಘ್ರೆಲಿನ್ ಹಾರ್ಮೋನ್ ಮಟ್ಟ ಹೆಚ್ಚಿ ಹಸಿವನ್ನು ಹೆಚ್ಚಿಸುತ್ತದೆ. ಅದರಿಂದ ಹೆಚ್ಚಿನ ಆಹಾರ ಸೇವನೆ ಸಂಭವಿಸಿ ತೂಕ ಹೆಚ್ಚಾಗುತ್ತದೆ.

ಮಾನಸಿಕ ಒತ್ತಡ ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಹೆಚ್ಚಿಸುವುದರಿಂದ ಹೊಟ್ಟೆ ಸುತ್ತಲಿನ ಕೊಬ್ಬು ಹೆಚ್ಚುತ್ತದೆ. ಈ ರೀತಿಯ ಕೊಬ್ಬು ಹೃದಯರೋಗ, ಸಕ್ಕರೆ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಬೊಜ್ಜು ತಡೆಗೆ ಸಲಹೆಗಳು:

  • ಆಹಾರ ನಿಯಂತ್ರಣ ಮತ್ತು ಸಮತೋಲನ
  • ಪ್ರತಿದಿನ ವ್ಯಾಯಾಮ
  • ಸರಿಯಾದ ನಿದ್ರೆ
  • ತೂಕ ಹೆಚ್ಚಾದಲ್ಲಿ ವೈದ್ಯರನ್ನು ಸಂಪರ್ಕಿಸಿರಿ.

ಸ್ಥೂಲಕಾಯ ನಿಯಂತ್ರಣಕ್ಕೆ ಜೀವನಶೈಲಿ ಪರಿವರ್ತನೆ ಮತ್ತು ವೈದ್ಯಕೀಯ ಮಾರ್ಗದರ್ಶನ ಅತ್ಯಂತ ಮುಖ್ಯವಾಗಿದೆ.

ಹೋಳಿ ಹುಣ್ಣಿಮೆಯಂದೇ ದುರ್ಘಟನೆ: ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು

ಕೊಪ್ಪಳ: ಗಂಗಾವತಿ ತಾಲ್ಲೂಕಿನ ಸಣಾಪುರ ಗ್ರಾಮದಲ್ಲಿ ಹೋಳಿ ಹಬ್ಬದ ಸಂಭ್ರಮ ಮಧ್ಯೆ ಭೀಕರ ದುರ್ಘಟನೆ ಸಂಭವಿಸಿದೆ.

ಬಣ್ಣ ಹಚ್ಚಿ ಪರಸ್ಪರ ಹಬ್ಬ ಆಚರಿಸುತ್ತಿದ್ದ ಇಬ್ಬರು ಯುವಕರು, ಮಧ್ಯಾಹ್ನದ ನಂತರ ಬಣ್ಣವನ್ನು ತೊಳೆದುಕೊಳ್ಳಲು ಕೆರೆಗೆ ಇಳಿದಾಗ ನೀರಿನ ಸುಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.

ಮೃತ ಯುವಕರನ್ನು ಗಂಗಾವತಿ ನಗರದ ಗಾಂಧಿನಗರ ನಿವಾಸಿಗಳಾದ ಅಭಿಷೇಕ್ ಮತ್ತು ಸೂರ್ಯ ಎಂದು ಗುರುತಿಸಲಾಗಿದೆ. ಯುವಕರು ಕೆರೆಯಲ್ಲಿ ಈಜಲು ಇಳಿದಾಗ ನೀರಿನ ಆಳವನ್ನು ಅರ್ಥಮಾಡಿಕೊಳ್ಳದೆ ಮುಳುಗಿದ್ದಾರೆ. ಸ್ಥಳೀಯರು ತಕ್ಷಣವೇ ಶೋಧ ಕಾರ್ಯ ಆರಂಭಿಸಿ, ಸ್ಥಳೀಯ ಈಜುಗಾರರ ಸಹಾಯದಿಂದ ಹುಡುಕಾಟ ಮುಂದುವರಿಸಿದೆ.

ಘಟನೆ ಕುರಿತು ಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಬ್ಬದ ದಿನವೇ ಇಬ್ಬರು ಯುವಕರನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಒಳ ಮೀಸಲಾತಿಯನ್ನೂ ಪರಿಗಣಿಸಿ ಯುವಜನತೆಗೆ ಉದ್ಯೋಗ ಸೃಷ್ಟಿ ಮಾಡಬೇಕು: ವಿಜಯೇಂದ್ರ ಆಗ್ರಹ

ಬೆಂಗಳೂರು: ಒಳ ಮೀಸಲಾತಿಯನ್ನೂ ಪರಿಗಣಿಸಿ ಯುವಜನತೆಗೆ ಉದ್ಯೋಗ ಸೃಷ್ಟಿ ಮಾಡಬೇಕು. ನ್ಯಾಯಾಲಯದ ಕುಂಟುನೆಪ ಕೊಡಬಾರದು. ಇಲ್ಲವಾದರೆ ಬಿಜೆಪಿ ಉಗ್ರ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾದೀತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಮೀಸಲಾತಿ ಪ್ರಮಾಣವನ್ನು ಶೇ 50ರಿಂದ ಶೇ 56ಕ್ಕೆ ಏರಿಸಿದ್ದಾರೆ. ನೀವು 50 ಸಾವಿರ ಖಾಲಿ ಹುದ್ದೆ ಭರ್ತಿ ಮಾಡುತ್ತೀರಾ, ಅಥವಾ 1 ಲಲಕ್ಷ ಹುದ್ದೆ ಭರ್ತಿ ಮಾಡುವಿರಾ ಎಂಬುದು ನಿಮಗೆ ಬಿಟ್ಟದ್ದು.

ಎಲ್ಲ ಖಾಲಿ ಹುದ್ದೆ ಭರ್ತಿ ಮಾಡಿ ಎಂಬ ಆಗ್ರಹ ನಮ್ಮದು. ಶೇ 56 ಒಳ ಮೀಸಲಾತಿ ನೀಡಿ ಬಿಜೆಪಿ ಸರಕಾರವು ಎಲ್ಲ ಸಮುದಾಯಗಳಿಗೆ ನ್ಯಾಯ ಕೊಡುವ ಕೆಲಸ ಮಾಡಿದೆ. ಅದರ ಆಧಾರದಡಿ ಶೋಷಿತ- ಪೀಡಿತ ಸಮುದಾಯಗಳಿಗೆ ಒಳ ಮೀಸಲಾತಿ ಪರಿಗಣಿಸಿ ಈ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಆಗ್ರಹಿಸಿದರು.

ಮುಖ್ಯಮಂತ್ರಿಗಳೇ ಪದೇಪದೇ ಈ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದ್ದೀರಿ. ಪರಿಶಿಷ್ಟ ಜಾತಿ- ಪಂಗಡಗಳ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ರಾಜ್ಯ ನ್ಯಾಯಾಲಯದ ಕುಂಟುನೆಪ ಹೇಳದೇ ಈ ಸಮುದಾಯಗಳಿಗೆ ಉದ್ಯೋಗ ನೀಡಿ ನ್ಯಾಯ ಕೊಡಿ ಎಂದು ಒತ್ತಾಯಿಸಿದರು.

ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ- ಪಂಗಡಗಳ ಯುವಜನತೆ ಸೇರಿ ಎಲ್ಲ ವರ್ಗಗಳ ಜನರಿಗೆ ನ್ಯಾಯ ಕೊಡುವ ಕೆಲಸ ಮಾಡಿ. ಅದನ್ನು ಬಿಟ್ಟು ಈ ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿಗಳು ತೊಟ್ಟಿಲು ತೂಗುವ ಜೊತೆಗೇ ಮಗುವನ್ನು ಚಿವುಟುವ ಕೆಲಸ ಮಾಡುತ್ತಿದ್ದು, ಇದು ಅಕ್ಷಮ್ಯ ಅಪರಾಧ ಎಂದು ಟೀಕಿಸಿದರು. ಹಳೆಯ ಮೀಸಲಾತಿ ಪ್ರಮಾಣದಡಿ ನೇಮಕಾತಿ ಮಾಡಲು ಮುಂದಾಗಿರುವ ರಾಜ್ಯ ಸರಕಾರವು ರಾಜ್ಯದಲ್ಲಿ ಬೆಂಕಿ ಹಚ್ಚಲು ಹೊರಟಂತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನೋದ್ಯಮಕ್ಕೆ ಉತ್ತೇಜನ; ಉದ್ಯಮಿಗಳ ಹೆಚ್.ಡಿ. ಕುಮಾರಸ್ವಾಮಿ ಚರ್ಚೆ

ಬೆಂಗಳೂರು: ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿ ಹಾಗೂ ಅದಕ್ಕೆ ಪೂರಕ ವ್ಯವಸ್ಥೆಯನ್ನು ಸೃಷ್ಟಿಸುವ ದಿಸೆಯಲ್ಲಿ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು, ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿ (FKCCI) ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಕೈಗಾರಿಕೋದ್ಯಮಿಗಳ ಜತೆ ಮಹತ್ವದ ಸಭೆ ನಡೆಸಿದರು.

ನಗರದ ಹೆಚ್ ಎಂಟಿ ಭವನದಲ್ಲಿರುವ ಸಚಿವರ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ; ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ವಿಸ್ತರಣೆಗೆ ಇರುವ ವಿಪುಲ ಅವಕಾಶಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ₹500 ಕೋಟಿ ವೆಚ್ಚದಲ್ಲಿ ಜಾಗತಿಕ ಮಟ್ಟದ ARAI (ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್‌ ಆಫ್ ಇಂಡಿಯಾ) ಪರೀಕ್ಷಾ ಕೇಂದ್ರವನ್ನು ಸ್ಥಾಪಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

ಈ ಸಂಬಂಧ ರಾಜ್ಯ ಸರ್ಕಾರಕ್ಕೆ, ಅದರಲ್ಲಿಯೂ ಮುಖ್ಯಮಂತ್ರಿಗಳಿಗೆ ಸ್ವತಃ ನಾನೇ ಪತ್ರ ಬರೆದಿದ್ದೇನೆ. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಈ ತರಬೇತಿ ಕೇಂದ್ರಕ್ಕೆ ಕಳೆದ ಬಜೆಟ್ ನಲ್ಲಿ ₹500 ಕೋಟಿ ಮೀಸಲಿಡಲಾಗಿದೆ. ಅಗತ್ಯಬಿದ್ದರೆ ಇನ್ನೂ ₹500 ಕೋಟಿ ಹೂಡಿಕೆ ಮಾಡಲು ಕೇಂದ್ರ ತಯಾರಿದೆ ಎಂಬ ಅಂಶವನ್ನು ಕೇಂದ್ರ ಸಚಿವರು ಸಭೆಯ ಗಮನಕ್ಕೆ ತಂದರು.

ಈ ಬಗ್ಗೆ ಸಚಿವರನ್ನು ಅಭಿನಂದಿಸಿದ ಕೈಗಾರಿಕೋದ್ಯಮಿಗಳು, ಇಂಥ ಕೇಂದ್ರವೊಂದು ರಾಜ್ಯಕ್ಕೆ ಅಗತ್ಯವಿದ್ದು, ವಾಹನೋದ್ಯಮಕ್ಕೆ ದೊಡ್ಡ ಶಕ್ತಿ ನೀಡಲಿದೆ. ಮುಖ್ಯವಾಗಿ ಇವಿ ಉದ್ಯಮಕ್ಕೆ ದೊಡ್ಡ ಪ್ರಮಾಣದಲ್ಲಿ ಬೂಸ್ಟ್ ನೀಡಲಿದೆ ಎಂದರು.

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಸಂಶೋಧನೆ, ಉತ್ಪಾದನೆ ಹಾಗೂ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುವುದು. ಸಾರಿಗೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಶೂನ್ಯಮಟ್ಟಕ್ಕೆ ಇಳಿಸಿ ಪರಿಸರ ಪೂರಕ ಸಾರಿಗೆ ವ್ಯವಸ್ಥೆ ರೂಪಿಸುವ ದೃಢ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೊಂದಿದ್ದಾರೆ. ಅವರ ಕನಸು ನನಸು ಮಾಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಸಚಿವರು ಹೇಳಿದರು.

ಕಂಪನಿಗಳು ಕರ್ನಾಟಕದಲ್ಲಿ ಹುಟ್ಟಿಕೊಳ್ಳುತ್ತಿವೆ, ಆದರೆ ಬೇರೆ ರಾಜ್ಯಗಳಲ್ಲಿ ಉತ್ಪಾದನೆ ಮಾಡುತ್ತಿವೆ. ಇಂಥ ಪರಿಸ್ಥಿತಿಯಿಂದ ಕರ್ನಾಟಕವನ್ನು ಹೊರತರಬೇಕಿದೆ. ಅದಕ್ಕೆ ARAI ಕೇಂದ್ರ ದೊಡ್ಡ ಮಟ್ಟದ ಕೊಡುಗೆ ನೀಡುತ್ತದೆ. ಆಟೋಮೊಬೈಲ್ ಪರೀಕ್ಷಾ ಕೇಂದ್ರ ಬರುವುದರ ಜತೆಗೆ ಆ ಮೂಲಕ ಸಂಶೋಧನೆ, ಉತ್ಪಾದನೆಗೂ ಮುಂದಿನ ದಿನಗಳಲ್ಲಿ ಅವಕಾಶಗಳು ತೆರೆದುಕೊಳ್ಳಲಿವೆ ಎಂದು ಎಂದು ಕೇಂದ್ರ ಸಚಿವರು ಒತ್ತಿ ಹೇಳಿದರು.

ಸ್ಥಳೀಯ ಮಟ್ಟದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ ಆಗಬೇಕು ಎಂಬುದು ಪ್ರಧಾನಿಗಳ ದೂರದೃಷ್ಟಿ. ಆ ನಿಟ್ಟಿನಲ್ಲಿ ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ ಪರಿಕಲ್ಪನೆಗಳ ಅಡಿಯಲ್ಲಿ ಬೃಹತ್ ಪ್ರಮಾಣದಲ್ಲಿ ಉತ್ತೇಜನ ನೀಡುತ್ತಿದ್ದೇವೆ. ರಾಜ್ಯದಲಿ ARAI ಪರೀಕ್ಷಾ ಕೇಂದ್ರ ಸ್ಥಾಪನೆ ಆದರೆ ಸಾವಿರಾರು ಸಂಖ್ಯೆಯಷ್ಟು ಉದ್ಯೋಗ ಸೃಷ್ಟಿ ಆಗುವುದಷ್ಟೇ ಅಲ್ಲದೆ, ಪರೋಕ್ಷ ಉದ್ಯೋಗಗಳನ್ನು ಬೃಹತ್ ಪ್ರಮಾಣದಲ್ಲಿ ಸೃಷ್ಟಿಸಿ ದೊಡ್ಡ ಮಟ್ಟದ ಆಟೋ ಇಕೋ ಸಿಸ್ಟಮ್ ನಿರ್ಮಾಣಕ್ಕೆ ನಾಂದಿ ಹಾಡುತ್ತದೆ. ಹೀಗಾಗಿ ಈ ಯೋಜನೆಗೆ ರಾಜ್ಯ ಸರ್ಕಾರದ ಸಹಕಾರವನ್ನು ಕೋರಿದ್ದೇವೆ ಎಂದು ಅವರು ಹೇಳಿದರು.

ಅದೇ ರೀತಿ ಕರ್ನಾಟಕದಲ್ಲಿ ಇವಿ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿಗೂ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದೆ. ಅತ್ಯಾಧುನಿಕ, ಸಮಗ್ರವಾದ ಇವಿ ಪೂರಕ ವ್ಯವಸ್ಥೆ ಮಾಡುವುದರಿಂದ ರಾಜ್ಯಕ್ಕೆ ಆರ್ಥಿಕ, ಉದ್ಯೋಗ ಹಾಗೂ ಉತ್ಪಾದನೆ ಕ್ಷೇತ್ರಗಳಲ್ಲಿ ಭಾರೀ ಅವಕಾಶಗಳನ್ನು ಸೃಷ್ಟಿಸಬಹುದು ಎಂದು ಸಚಿವರು ಪ್ರತಿಪಾದಿಸಿದರು.

ಎಫ್ ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ, ಹಿರಿಯ ಉಪಾಧ್ಯಕ್ಷ ಟಿ. ಸಾಯಿರಾಂ ಪ್ರಸಾದ್, ಉಪಾಧ್ಯಕ್ಷ ಬಿ.ಪಿ. ಶಶಿಧರ್, ಗ್ರೀನ್ ಎನರ್ಜಿ ಸಮಿತಿ ಅಧ್ಯಕ್ಷ ರಮೇಶ್ ಶಿವಣ್ಣ, ಮಾಜಿ ಅಧ್ಯಕ್ಷರಾದ ಎಸ್. ಸಂಪತ್ ರಾಮನ್, ಆರ್. ಶಿವಕುಮಾರ್, ಕೆ. ಶಿವಷಣ್ಮುಗಂ, ಎಲ್. ಲಕ್ಷ್ಮಣ ಸೇರಿದಂತೆ ಕೈಗಾರಿಕೋದ್ಯಮಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಮುಂಡರಗಿ ಪೊಲೀಸರ ಕಾರ್ಯಾಚರಣೆ: ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳ ಬಂಧನ

0

ಗದಗ: ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾರಿಗಳಲ್ಲಿದ್ದ ಬ್ಯಾಟರಿ ಹಾಗೂ ಸ್ಟೆಪ್ನಿ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

2025ರ ಡಿಸೆಂಬರ್ ತಿಂಗಳಲ್ಲಿ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಬಸ್ ನಿಲ್ದಾಣ ಹಾಗೂ ಮಠದ ಮುಂದೆ ನಿಲ್ಲಿಸಿದ್ದ ಲಾರಿಗಳಲ್ಲಿದ್ದ ಬ್ಯಾಟರಿ ಮತ್ತು ಸ್ಟೆಪ್ನಿ ಕಳ್ಳತನವಾಗಿದ್ದ ಕುರಿತು ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಗಾಗಿ ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ ಅವರ ಸೂಚನೆಯ ಮೇರೆಗೆ ವಿಶೇಷ ತಂಡ ರಚಿಸಲಾಯಿತು.

ನರಗುಂದ ಉಪವಿಭಾಗದ ಡಿ.ಎಸ್.ಪಿ ಪ್ರಭುಗೌಡ ಕಿರೇದಳ್ಳಿ ಅವರ ಮಾರ್ಗದರ್ಶನದಲ್ಲಿ, ಮುಂಡರಗಿ ಪೊಲೀಸ್ ಇನ್ವಸ್ಪೆಕ್ಟರ್ ಯಶವಂತ ಬಿಸನಳ್ಳಿ ಹಾಗೂ ಪಿಎಸ್‌ಐ (ಅಪರಾಧ) ಬಿ.ಎನ್. ಯಳವತ್ತಿ ನೇತೃತ್ವದ ತಂಡ 16-02-2026 ರಂದು ನಾಲ್ವರು ಆರೋಪಿತರನ್ನು ಬಂಧಿಸಿದೆ.

ಬಂಧಿತರನ್ನು ಸುನೀಲ ತಂದೆ ರಮೇಶ್ ಭಾವಳ್ಳಿ (25) ಅಳವಂಡಿ, ಕನಕಪ್ಪ ತಂದೆ ಶಂಕ್ರಪ್ಪ ಬಚನಳ್ಳಿ (22) ರಘುನಾಥನಹಳ್ಳಿ, ಅಂದಪ್ಪ ತಂದೆ ನಿಂಗಪ್ಪ ಬಿಸನಳ್ಳಿ (29) ಅಳವಂಡಿ ಹಾಗೂ ಪ್ರವೀಣ ತಂದೆ ಭರಮಪ್ಪ ಪೂಜಾರ (28) ರಘುನಾಥನಹಳ್ಳಿ ಎಂದು ಗುರುತಿಸಲಾಗಿದೆ.

ಆರೋಪಿತರು ಡಂಬಳ, ಕದಾಂಪೂರ, ಮೇವುಂಡಿ, ಬರದೂರು, ಮುಂಡರಗಿ ಹಾಗೂ ವೆಂಕಟಾಪೂರ ಹಾಗೂ ಜಂತ್ಲಿ ಗ್ರಾಮಗಳಲ್ಲಿ ನಿಲ್ಲಿಸಿದ್ದ ವಾಹನಗಳಿಂದ ಬ್ಯಾಟರಿ ಹಾಗೂ ಸ್ಟೆಪ್ನಿಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಪೊಲೀಸರು ಸುಮಾರು ₹3.70 ಲಕ್ಷ ಮೌಲ್ಯದ 40 ಎಕ್ಸೈಡ್ ಕಂಪನಿಯ ಬ್ಯಾಟರಿಗಳು, ಒಂದು ಸ್ಟೆಪ್ನಿ ಹಾಗೂ ಕಳ್ಳತನಕ್ಕೆ ಬಳಸಿದ KA-35/AA-1284 ನಂಬರಿನ ಬೊಲೇರೋ ವಾಹನ (ಸುಮಾರು ₹2 ಲಕ್ಷ ಮೌಲ್ಯ) ವಶಪಡಿಸಿಕೊಂಡಿದ್ದಾರೆ.

ಇದೇ ವೇಳೆ, ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಗೇವಾಡಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಅಪಹರಣ ಪ್ರಕರಣದಲ್ಲೂ ಪೊಲೀಸರು ಆರೋಪಿತನನ್ನು 28-02-2026 ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನೊಂದ ಬಾಲಕಿಗೆ ಸುರಕ್ಷಿತ ಸಂರಕ್ಷಣೆ ಒದಗಿಸಲಾಗಿದೆ.

ಈ ಎರಡು ಪ್ರಕರಣಗಳನ್ನು ಯಶಸ್ವಿಯಾಗಿ ಪತ್ತೆ ಹಚ್ಚಲು ಶ್ರಮಿಸಿದ ಮುಂಡರಗಿ ಪೊಲೀಸ್ ಇನ್ಸಪೆಕ್ಟರ್ ಯಶವಂತ ಬಿಸನಳ್ಳಿ, ಪಿಎಸ್‌ಐ ಬಿ.ಎನ್. ಯಳವತ್ತಿ, ಎಎಸ್‌ಐ ಎಸ್.ಎಂ. ಹಡಪದ ಹಾಗೂ ಸಿಬ್ಬಂದಿಗಳಾದ. ಜೆ ಐ ಬಚ್ಚೇರಿ, ಲಕ್ಷ್ಮಣ್ಣ ಲಮಾಣಿ, ಸುರೇಶ್ ಡೊಣ್ಣಿ, ಹೇಮಂತ ಹಂಚಿನಾಳ, ಬಾಬಾಜಾನ್ ಕಮ್ಮಾರ, ವಿರೇಶ್ ಬಿಸನಹಳ್ಳಿ, ವಿನಾಯಕ ಬಾಲರಡ್ಡಿ, ನಾಗರಾಜ್ ಹರಪನಹಳ್ಳಿ, ಶರಣಪ್ಪ ಓಜನಹಳ್ಳಿ ಬಸವರಾಜ ಬಣಕಾರ, ಮುಕ್ಕಣ್ಣ ಪೂಜಾರಗೆ ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.

Bengaluru: MBBS ಸೀಟ್ ಕೊಡಿಸುವುದಾಗಿ 25 ಲಕ್ಷ ವಂಚನೆ! ನಾಲ್ವರ ವಿರುದ್ಧ FIR

0

ಬೆಂಗಳೂರು: ನಗರದಲ್ಲಿ ಯುವತಿಗೆ MBBS ಸೀಟ್ ಕೊಡಿಸುವುದಾಗಿ ನಂಬಿಸಿ 25 ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ FIR ದಾಖಲಾಗಿದೆ.

ಸಂತ್ರಸ್ತ ಯುವತಿ ಆಯೇಷಾ ಖಥುಮ್ ಅವರಿಗೆ ಸೀಟ್ ಕೊಡಿಸುವುದಾಗಿ ಹೇಳಿ ಹಣ ಪಡೆದ ಆರೋಪದ ಮೇಲೆ ಡಾ. ಕೆ.ಪಿ. ಶರತ್ ಸೇರಿದಂತೆ ಶಂಶೇರ್ ಬೇಗ್ ಮತ್ತು ಸೈಯದ್ ತಬ್ರೇಜ್ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ BNS 318(4), 318(2) ಸೇರಿ ಒಟ್ಟು 8 ಸೆಕ್ಷನ್‌ಗಳಡಿ ಕೇಸ್ ದಾಖಲಿಸಲಾಗಿದೆ.

ಆಯೇಷಾ ಖಥುಮ್ ತಂದೆ ಲಾಲ್ ಬಾಬು ನೀಡಿದ ದೂರಿನ ಪ್ರಕಾರ, ದ್ವಿತೀಯ ಪಿಯುಸಿ ಹಾಗೂ NLT ಪರೀಕ್ಷೆ ಬರೆದಿದ್ದ ಯುವತಿ MBBS ಪ್ರವೇಶಕ್ಕಾಗಿ ಉತ್ತಮ ಕಾಲೇಜು ಹುಡುಕುತ್ತಿದ್ದರು. ಈ ವೇಳೆ ಪರಿಚಯದ ಸೈಯದ್ ತಬ್ರೇಜ್ ಮೂಲಕ ಶಂಶೇರ್ ಬೇಗ್ ಎಂಬಾತನ ಪರಿಚಯವಾಗಿತ್ತು.

ಶಂಶೇರ್ ಬೇಗ್ ತಾನು ಕಿಮ್ಸ್ ಮೆಡಿಕಲ್ ಕಾಲೇಜಿನ ಅಧ್ಯಕ್ಷರ ಪರಿಚಯವಿದೆ ಎಂದು ಹೇಳಿ ಡಾ. ಕೆ.ಪಿ. ಶರತ್ ಅವರನ್ನು ಪರಿಚಯಿಸಿದ್ದಾನೆ. ಬಳಿಕ ಬನಶಂಕರಿ 2ನೇ ಹಂತದಲ್ಲಿರುವ KIMS ಮೆಡಿಕಲ್ ಕಾಲೇಜಿನಲ್ಲಿ ಭೇಟಿಯಾಗಿದ್ದು, ಇದೇ ಕಾಲೇಜಿನಲ್ಲಿ ಆಯೇಷಾಗೆ ಸೀಟ್ ಕೊಡಿಸುವುದಾಗಿ ನಂಬಿಸಿ ಶೈಕ್ಷಣಿಕ ದಾಖಲೆಗಳನ್ನು ಪಡೆದಿದ್ದಾರೆ ಎನ್ನಲಾಗಿದೆ.

ನಂತರ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ 25 ಲಕ್ಷ ರೂಪಾಯಿ ಡೊನೇಷನ್ ನೀಡಿದರೆ ಸೀಟ್ ಪಕ್ಕಾ ಎಂದು ಹೇಳಲಾಗಿದೆ. ಆರೋಪಿಗಳ ಮಾತು ನಂಬಿದ ಕುಟುಂಬಸ್ಥರು ಯುಪಿಐ ಮತ್ತು ಚೆಕ್ ಮೂಲಕ 10 ಲಕ್ಷ ರೂಪಾಯಿ ಪಾವತಿಸಿದ್ದಾರೆ. ಬಳಿಕ ಉಳಿದ 15 ಲಕ್ಷ ರೂಪಾಯಿಯನ್ನು ನಗದು ರೂಪದಲ್ಲಿ ನೀಡಿದ್ದಾರೆ.

ಆದರೆ ಪೂರ್ತಿ ಹಣ ಪಡೆದ ಬಳಿಕ ಆರೋಪಿಗಳು ಸೀಟ್ ಕೊಡಿಸದೇ ಸಂಪರ್ಕ ತಪ್ಪಿಸಿಕೊಂಡಿದ್ದಾರೆ. ವಿಚಾರಿಸಿದಾಗ ಡಾ. ಕೆ.ಪಿ. ಶರತ್ ಅವರು ಕಿಮ್ಸ್ ಕಾಲೇಜಿನ ಅಧ್ಯಕ್ಷರಲ್ಲ ಎಂಬುದು ಬೆಳಕಿಗೆ ಬಂದಿದೆ. ತಾವು ಮೋಸ ಹೋಗಿರುವುದು ತಿಳಿದು ಆಯೇಷಾ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.

KPSC ಗೆಜೆಟೆಡ್ ನೇಮಕಾತಿಯಲ್ಲಿ ಮತ್ತೆ ಅಕ್ರಮ ಆರೋಪ: ತನಿಖೆಗೆ ಅಭ್ಯರ್ಥಿಗಳ ಆಗ್ರಹ

ಬೆಂಗಳೂರು: KPSC ನಡೆಸುತ್ತಿರುವ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆಯಲ್ಲಿ ಮತ್ತೆ ಅಕ್ರಮದ ಆರೋಪ ಕೇಳಿಬಂದಿದೆ. 384 ಹುದ್ದೆಗಳ ಭರ್ತಿಗಾಗಿ ಇಂಟರ್ವ್ಯೂಗೆ ಕರೆ ನೀಡಿರುವ 1:3 ಅನುಪಾತದ ಅರ್ಹ ಅಭ್ಯರ್ಥಿಗಳ ಪಟ್ಟಿಯಲ್ಲಿ ಗೊಂದಲಗಳಿವೆ ಎಂದು ಅಭ್ಯರ್ಥಿಗಳು ಆರೋಪಿಸಿ, ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.

ಮುಖ್ಯ ಪರೀಕ್ಷೆ ಪೂರ್ಣಗೊಂಡ ಬಳಿಕ ಇಂಟರ್ವ್ಯೂ ಹಂತಕ್ಕೆ ಆಯ್ಕೆಗೊಂಡ ಅಭ್ಯರ್ಥಿಗಳ ಪಟ್ಟಿಯನ್ನು ಮಾ. 2ರಂದು ಕೆಪಿಎಸ್ಸಿ ಪ್ರಕಟಿಸಿತ್ತು. ಆದರೆ, ಈ ಪಟ್ಟಿಯಲ್ಲಿ ಒಂದೇ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಕೆಪಿಎಸ್ಸಿ ಪರೀಕ್ಷೆಯಲ್ಲಿ ಅಕ್ರಮದ ಆರೋಪ ಇದೇ ಮೊದಲಲ್ಲ. ಇದೇ ಪರೀಕ್ಷೆಯಲ್ಲಿ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಲೋಪ ಕಂಡುಬಂದಿದ್ದ ಹಿನ್ನೆಲೆ ಭಾರಿ ವಿರೋಧ ವ್ಯಕ್ತವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಎರಡು ಬಾರಿ ಪರೀಕ್ಷೆ ನಡೆಸಲಾಗಿತ್ತು. ಇದೀಗ ಸಂದರ್ಶನಕ್ಕೆ ಆಯ್ಕೆಯಾದವರ ಪಟ್ಟಿಯಲ್ಲಿಯೂ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇಡೀ ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆ ಕುರಿತು ಪ್ರಶ್ನೆಗಳು ಉದ್ಭವಿಸಿವೆ.

ವಿಶೇಷ ಸೌಲಭ್ಯ ರದ್ದು: ಪವಿತ್ರಾ ಗೌಡ ಸೇರಿ ಆರೋಪಿಗಳಿಗೆ ಜೈಲು ನಿಯಮ ಕಟ್ಟುನಿಟ್ಟಿನ ಅನುಷ್ಠಾನ

ಬೆಂಗಳೂರು: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಪವಿತ್ರಾ ಗೌಡ ಹಾಗೂ ಇತರರಿಗೆ ಮನೆಯಿಂದ ಊಟ ತರಿಸಿಕೊಳ್ಳಲು ನೀಡಿದ್ದ ವಿಶೇಷ ಅನುಮತಿಯನ್ನು ಹೈಕೋರ್ಟ್ ರದ್ದುಪಡಿಸಿದೆ.

ಈ ಹಿಂದೆ 57ನೇ ಸಿಸಿಎಚ್ ನ್ಯಾಯಾಲಯ ವಾರಕ್ಕೊಮ್ಮೆ ಮನೆ ಊಟಕ್ಕೆ ಅವಕಾಶ ನೀಡಿತ್ತು. ವೈದ್ಯಕೀಯ ಕಾರಣಗಳನ್ನು ಉಲ್ಲೇಖಿಸಿ ಹೆಚ್ಚುವರಿ ಅವಕಾಶವೂ ನೀಡಲಾಗುತ್ತಿತ್ತು. ಈ ಸೌಲಭ್ಯವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ನಂತರ ಹೈಕೋರ್ಟ್ ತೀರ್ಪು ನೀಡಿದೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಟ್ರಯಲ್ ಕೋರ್ಟ್ ಆದೇಶವನ್ನು ರದ್ದುಪಡಿಸಿ, ಜೈಲು ನಿಯಮಗಳು ಎಲ್ಲ ಕೈದಿಗಳಿಗೆ ಸಮಾನವಾಗಿರಬೇಕು ಎಂದು ಅಭಿಪ್ರಾಯಪಟ್ಟಿದೆ.

ಇದೇ ವೇಳೆ, ಪ್ರಕರಣ ಸಂಬಂಧ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಇತ್ತೀಚೆಗೆ ನಡೆದ ವಿಚಾರಣೆಯಲ್ಲಿ ಆರೋಪಿಗಳ ಪರ ವಕೀಲರು ತನಿಖಾಧಿಕಾರಿಯನ್ನು ಆರೋಪಿಯನ್ನಾಗಿ ಮಾಡುವ ಅರ್ಜಿಯನ್ನು ವಿರೋಧಿಸಿದ್ದಾರೆ. ಮತ್ತೊಂದೆಡೆ, ಪ್ರತಿದಿನವೂ ವಿಚಾರಣೆ ನಡೆಸುವಂತೆ ಸಲ್ಲಿಸಿದ ಅರ್ಜಿಗೆ ವಿಶೇಷ ಸರ್ಕಾರಿ ಅಭಿಯೋಜಕರು ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲೇಖಿಸಿ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ತೀರ್ಪಿನಿಂದ ಪವಿತ್ರಾ ಗೌಡ ಸೇರಿದಂತೆ ಆರೋಪಿಗಳ ಮನೆ ಊಟಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿದ್ದು, ಪ್ರಕರಣದ ಮುಂದಿನ ವಿಚಾರಣೆ ಮೇಲೆ ಗಮನ ಕೆಂದ್ರೀಕೃತವಾಗಿದೆ.

ವಿದೇಶಿ ಪ್ರವಾಸಿಗರ ಮಾಹಿತಿ ನೀಡದೆ ನಿಯಮ ಉಲ್ಲಂಘನೆ: ಗೋಕರ್ಣ ಹೋಂಸ್ಟೇ ಮಾಲೀಕರ ವಿರುದ್ಧ FIR!

ಕಾರವಾರ: ವಿದೇಶಿ ಪ್ರವಾಸಿಗರು ಹೋಂಸ್ಟೇನಲ್ಲಿ ತಂಗಿರುವ ಬಗ್ಗೆ ಕಡ್ಡಾಯ ಮಾಹಿತಿ ನೀಡದೇ ನಿಯಮ ಉಲ್ಲಂಘಿಸಿರುವ ಆರೋಪದ ಮೇರೆಗೆ ಗೋಕರ್ಣದಲ್ಲಿ ಪೊಲೀಸರು ಹೋಂಸ್ಟೇ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಗೋಕರ್ಣದ ಭೀಮಕೊಂಡದಲ್ಲಿರುವ ‘ವೈಲ್ಡ್ ವಿಲೇಜ್’ ಹೋಂಸ್ಟೇ ಮಾಲೀಕ ಸೋಮಾ ಗಣಪು ಗೌಡ ಹಾಗೂ ವ್ಯವಸ್ಥಾಪಕ ಗಣೇಶ ಸೋಮಾ ಗೌಡ ವಿರುದ್ಧ ಪ್ರಕರಣ ದಾಖಲಾಗಿದೆ.

ಅರ್ಜೆಂಟೈನಾದ ಪ್ರವಾಸಿಗರಾದ ಸ್ಯಾಂಟಿಗೋ ಆಸ್ಕರ್ ಲ್ಯುಕೆ ಮೆರ್ಲೊ ಮತ್ತು ಅವರ ತಾಯಿ ಕಳೆದ ಎರಡು ದಿನಗಳಿಂದ ಹೋಂಸ್ಟೇನಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ. ವಿದೇಶಿ ಪ್ರಜೆಗಳು ತಂಗಿದಲ್ಲಿ, ಸಂಬಂಧಿತ ಮಾಹಿತಿಯನ್ನು ‘ಸಿ’ ಫಾರ್ಮ್ ಮೂಲಕ ಪೊಲೀಸ್ ಠಾಣೆಗೆ ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ ಈ ನಿಯಮವನ್ನು ಪಾಲಿಸದೆ ವಿದೇಶಿ ಪ್ರಜೆಗಳಿಗೆ ವಸತಿ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಗೋಕರ್ಣ ಪೊಲೀಸ್‌ ಠಾಣೆಯಲ್ಲಿ ಇಮಿಗ್ರೇಶನ್ ಮತ್ತು ಫಾರಿನರ್ಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಠಾಣೆಯ ಪಿಎಸ್‌ಐ ಬಿ.ಎಂ. ಅನಿಲ್ ತನಿಖೆ ಕೈಗೊಂಡಿದ್ದಾರೆ.

ಖಮೇನಿ ಹತ್ಯೆ ಕುರಿತ ಪೋಸ್ಟ್: ಶ್ರೀನಗರ ಸಂಸದ ವಿರುದ್ಧ ಎಫ್‌ಐಆರ್

ಶ್ರೀನಗರ: ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಮತ್ತು ಸಂಬಂಧಿತ ಪ್ರತಿಭಟನೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಅಗಾ ಸೈಯದ್ ರುಹುಲ್ಲಾ ಮೆಹದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆ ನೀಡಿದ ಮಾಹಿತಿಯ ಪ್ರಕಾರ, ಸಂಸದರು ಡಿಜಿಟಲ್ ವೇದಿಕೆಗಳಲ್ಲಿ ದಾರಿತಪ್ಪಿಸುವ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಗೆ ಪ್ರಚೋದನೆ ನೀಡುವ ವಿಷಯಗಳನ್ನು ಹಂಚಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ದಾಳಿ ಮತ್ತು ಖಮೇನಿ ಹತ್ಯೆ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವನ್ನು ಟೀಕಿಸುವ ಪೋಸ್ಟ್‌ಗಳನ್ನು ಅವರು ಹಂಚಿಕೊಂಡಿದ್ದರು. ಕಾಶ್ಮೀರದಲ್ಲಿ ನಡೆದ ಪ್ರತಿಭಟನೆಗಳು ಹಾಗೂ ಭದ್ರತಾ ಸಿಬ್ಬಂದಿಯೊಂದಿಗಿನ ಘರ್ಷಣೆಯ ವೀಡಿಯೊಗಳನ್ನು ಸಹ ಅಪ್‌ಲೋಡ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ನಗರದ ಮಾಜಿ ಮೇಯರ್ ಜುನೈದ್ ಅಜೀಮ್ ಮಾಟೂ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ. ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಉದ್ದೇಶಪೂರ್ವಕ ತಪ್ಪು ಮಾಹಿತಿಯನ್ನು ಹರಡಲಾಗಿದೆ ಎಂಬ ಆರೋಪದಡಿ ಕ್ರಮ ಕೈಗೊಳ್ಳಲಾಗಿದೆ.

error: Content is protected !!