ಬೆಂಗಳೂರು: ಟ್ರಾನ್ಸ್ಫರ್ ಆಗಲು ಗಿಳಿಶಾಸ್ತ್ರದ ಸಹಾಯ ಪಡೆಯಲು ಮುಂದಾದ ಐಟಿ ಅಧಿಕಾರಿಯೊಬ್ಬರಿಗೆ ಪಂಗನಾಮ ಹಾಕಿದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಹಲವು ವರ್ಷಗಳಿಂದ ಬೆಂಗಳೂರಿನ ಐಟಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗೆ ಕಳೆದ ಡಿಸೆಂಬರ್ ತಿಂಗಳಲ್ಲಿ ರಸ್ತೆಬದಿಯಲ್ಲಿ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಭಾರತಿನಗರದ ಶ್ರೀ ಸರ್ಕಲ್ ಬಳಿ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್, “ನಿಮಗೆ ಶಾಸ್ತ್ರ ಹೇಳ್ತೀನಿ, ನಿಮಗೆ ಒಳ್ಳೆಯದು ಆಗುತ್ತದೆ” ಎಂದು ವಿಶ್ವಾಸ ಮೂಡಿಸಿದ್ದ ಎಂದು ತಿಳಿದುಬಂದಿದೆ.
ಮುಖ ನೋಡಿ ಜಾತಕ ಹಾಗೂ ಭವಿಷ್ಯ ಹೇಳುತ್ತೇನೆ ಎಂದು ಹೇಳಿದ ಶೇಖರ್, ಜೀವನ ಸುಧಾರಣೆಗಾಗಿ ವಿಶೇಷ ಪೂಜೆ ಮಾಡಿಸಬೇಕು ಎಂದು ಸಲಹೆ ನೀಡಿದ್ದಾನೆ. ಅದರಂತೆ ಪೂಜೆ ಮಾಡಲು ಐಟಿ ಅಧಿಕಾರಿಯಿಂದ ಸುಮಾರು 50 ಸಾವಿರ ರೂಪಾಯಿ ಹಣ ಪಡೆದು ಪೂಜೆ ಕೂಡ ಮಾಡಿಸಿದ್ದಾನೆ ಎನ್ನಲಾಗಿದೆ.
ನಂತರ ಪದೇ ಪದೇ ಕರೆ ಮಾಡಿ, ವರ್ಗಾವಣೆಯ ವಿಚಾರವಾಗಿ ಮತ್ತಷ್ಟು ದೊಡ್ಡ ಪೂಜೆ ಮಾಡಬೇಕು ಎಂದು ಹೇಳಿ, ಮನೆಯಲ್ಲಿರುವ ಚಿನ್ನಾಭರಣ ತರಬೇಕು ಎಂದು ಮನವೊಲಿಸಿದ್ದಾನೆ.
ಗಿಳಿಶಾಸ್ತ್ರದವನ ಮಾತನ್ನು ನಂಬಿದ ಐಟಿ ಅಧಿಕಾರಿ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ 194 ಗ್ರಾಂ ಚಿನ್ನಾಭರಣ ಹಾಗೂ 1 ಕೆಜಿ 300 ಗ್ರಾಂ ಬೆಳ್ಳಿಯನ್ನು ಶೇಖರ್ಗೆ ನೀಡಿದ್ದಾರೆ.
ಒಂದು ದಿನದಲ್ಲಿ ಪೂಜೆ ಮುಗಿಸಿ ವಾಪಸ್ ಕೊಡುತ್ತೇನೆ ಎಂದು ಹೇಳಿದ್ದ ಶೇಖರ್, ಬಳಿಕ “ಪೂಜೆ ಇನ್ನೂ ಮುಗಿದಿಲ್ಲ, ನಾಳೆ ಅಥವಾ ನಾಡಿದ್ದು ಕೊಡುತ್ತೇನೆ” ಎಂದು ಕಾಲಹರಣ ಮಾಡುತ್ತಿದ್ದನು.
ಆದರೆ ನಂತರ ಭಾರತಿನಗರದ ಶ್ರೀ ಸರ್ಕಲ್ ಬಳಿ ಹೋಗಿ ನೋಡಿದಾಗ ಗಿಳಿಯೂ ಇಲ್ಲ, ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್ ಕೂಡ ಕಾಣಿಸದಿರುವುದು ಗಮನಕ್ಕೆ ಬಂದಿದೆ. ಆಗ ತಾನು ಮೋಸಹೋಗಿರುವುದು ತಿಳಿದುಬಂದ ಐಟಿ ಅಧಿಕಾರಿ ಭಾರತಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಭಾರತಿನಗರ ಪೊಲೀಸರು ಆರೋಪಿಯಾದ ಶೇಖರ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

