Home Blog

ಹೊತ್ತಿ ಉರಿದ ಹೋಟೆಲ್; ಬೆಂಕಿ ಕೆನ್ನಾಲಿಗೆಗೆ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ನಾಶ!

ವಿಜಯಪುರ:- ಜಿಲ್ಲೆಯ ಇಂಡಿ ಪಟ್ಟಣದ ಹೊಟೇಲ್‌ವೊಂದರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಹೊತ್ತಿಯುರಿದ ಘಟನೆ ನಡೆದಿದೆ.

ಹೋಟೆಲ್‌ನಲ್ಲಿ ಏಕಾಏಕಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ಘಟನೆ ಹಿನ್ನೆಲೆ ಲಕ್ಷಾಂತರ ಮೌಲ್ಯದ ಅಪಾರ ಪ್ರಮಾಣದ ವಸ್ತುಗಳು ಹಾನಿಯಾಗಿವೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ, ಬೆಂಕಿ ನಂದಿಸಿದ್ದಾರೆ. ಇಂಡಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಹಲವೆಡೆ ಗ್ಯಾಸ್ ಸಿಲಿಂಡರ್ ಕೊರತೆ: ಹೋಟೆಲ್ ಗಳು ಬಂದ್ ಮಾಡ್ದೆ ವಿಧಿಯಿಲ್ಲ!?

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ವಾಣಿಜ್ಯ ಎಲ್‌ಪಿಜಿ (LPG) ಸಿಲಿಂಡರ್ ಕೊರತೆಯಿಂದ ಹೋಟೆಲ್ ಮಾಲೀಕರಿಗೆ ಸಂಕಷ್ಟ ಉಂಟಾಗಿದೆ.

ಸಿಲಿಂಡರ್ ಇಲ್ಲದ ಕಾರಣ ಪುರಿ, ದೋಸೆ ಸೇರಿದಂತೆ ಹೆಚ್ಚು ಗ್ಯಾಸ್ ಬಳಕೆಯ ಐಟಂಗಳ ತಯಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೆಲ ಸಣ್ಣ ಹೋಟೆಲ್‌ಗಳು ಮುಚ್ಚಿರುವಾಗ, ದೊಡ್ಡ ಹೋಟೆಲ್‌ಗಳು ಕೆಲ ದಿನಗಳಷ್ಟು ಮಾತ್ರ ವ್ಯವಹಾರ ನಡೆಸುತ್ತಿದ್ದಾರೆ.

ಬೆಲೆ ಏರಿಕೆ ಮತ್ತು ಪೂರೈಕೆ ಕೊರತೆಯಿಂದ ಉದ್ಯೋಗಿಯಾಗಿರುವ ಸಾವಿರಾರು ಹೋಟೆಲ್ ಕೆಲಸಗಾರರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಕೆಲ ಹೋಟೆಲ್ ಮಾಲೀಕರು ಸರ್ಕಾರದ ವಿಳಂಬ ನೀತಿಯನ್ನು ಟೀಕಿಸುತ್ತಿದ್ದಾರೆ. ಇನ್ನು ಬೆಂಗಳೂರಿನ ಅನೇಕ ಹೋಟೆಲ್‌ಗಳು ಮುಚ್ಚುವ ಸಾಧ್ಯತೆ ಉಂಟು ಎಂಬ ಆತಂಕ ಉಂಟಾಗಿದೆ.

ಮೂರೇ ದಿನಗಳಲ್ಲಿ ಸಿಲಿಂಡರ್ ಬೆಲೆ 1,600 ರೂಪಾಯಿಯಿಂದ 2,200 ರೂಪಾಯಿಗೆ ಏರಿಕೆಯಾಗಿದೆ. ಹೋಟೆಲ್ ಮಾಲೀಕರು ಪೂರೈಕೆ ಸಮರ್ಪಕವಾಗದಿದ್ದರೆ ಉದ್ಯಮ ಸಂಪೂರ್ಣ ಕುಸಿಯಲಿದೆ ಎಂದು ಎಚ್ಚರಿಸಿದ್ದಾರೆ.

 

IPL ಆರಂಭಕ್ಕೆ ದಿನಗಣನೆ: RCB ತಂಡದ ಮೊದಲ ಎದುರಾಳಿ ಯಾರು ಗೊತ್ತಾ?

0

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್-19 ಆರಂಭಕ್ಕೆ ಸಿದ್ಧತೆಗಳು ಶುರುವಾಗಿದೆ.

ಮಾರ್ಚ್ 28 ರಂದು ಆರಂಭವಾಗಲಿರುವ ಟೂರ್ನಿಯ ಮೊದಲ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳು ಮುಖಾಮುಖಿಯಾಗಲಿದ್ದು, ಇದು ಉದ್ಘಾಟನಾ ಪಂದ್ಯವಾಗಲಿದೆ.

ಕಳೆದ ಬಾರಿಯ ರನ್ನರ್ ಅಪ್ ತಂಡ ಪಂಜಾಬ್ ಕಿಂಗ್ಸ್ ಉದ್ಘಾಟನಾ ಪಂದ್ಯದಲ್ಲಿ ಭಾಗವಹಿಸಲಾರದು. ಮೊದಲ ಎರಡು ದಿನಗಳಲ್ಲಿ RCB, CSK, ಮುಂಬೈ ಇಂಡಿಯನ್ಸ್ ಮತ್ತು ಕೆಕೆಆರ್ ತಂಡಗಳ ಪಂದ್ಯಗಳನ್ನು ಆಯೋಜಿಸಲು ಯೋಜನೆ ರೂಪಿಸಲಾಗಿದೆ.

ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳ ನಿರ್ಧಾರಾತ್ಮಕ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಮೊದಲ 20 ದಿನಗಳ ವೇಳಾಪಟ್ಟಿಯನ್ನೇ ಪ್ರಕಟಿಸಲಾಗಿದೆ; ಚುನಾವಣೆಯ ದಿನಾಂಕ ನಿಗದಿಯಾದ ಬಳಿಕ ಉಳಿದ ಪಂದ್ಯಾವಳಿ ಪ್ರಕಟವಾಗಲಿದೆ.

ಅಮೆರಿಕದಲ್ಲಿ ಹೊಸ ತೈಲ ಸಂಸ್ಕರಣಾ ಘಟಕ ನಿರ್ಮಿಸಲಿದೆ ರಿಲಯನ್ಸ್: ಟ್ರಂಪ್ ಘೋಷಣೆ

0

ವಾಷಿಂಗ್ಟನ್‌: ಭಾರತೀಯ ತೈಲ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಮೆರಿಕದ ಟೆಕ್ಸಾಸ್‌ನಲ್ಲಿ 300 ಬಿಲಿಯನ್ ಡಾಲರ್ (27.56 ಲಕ್ಷ ಕೋಟಿ ರೂ.) ವೆಚ್ಚದ ಹೊಸ ತೈಲ ಸಂಸ್ಕರಣಾ ಘಟಕವನ್ನು ನಿರ್ಮಿಸಲು ಹೂಡಿಕೆ ಮಾಡಲು ನಿರ್ಧರಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಟ್ರಂಪ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ಪ್ರಕಾರ, ಬ್ರೌನ್ಸ್‌ವಿಲ್ಲೆ ಬಂದರಿನಲ್ಲಿ 50 ವರ್ಷಗಳಲ್ಲಿ ಮೊದಲ ಬಾರಿಗೆ ಹೊಸ ತೈಲ ಘಟಕ ತೆರೆಯಲಾಗುತ್ತಿದೆ. ಇದು ಅಮೆರಿಕದ ಇತಿಹಾಸದ ಅತಿ ದೊಡ್ಡ ತೈಲ ಹೂಡಿಕೆ ಒಪ್ಪಂದವಾಗಿದೆ. ಘಟಕದಿಂದ ಅಮೆರಿಕದ ಇಂಧನ ಉತ್ಪಾದನೆ ಹೆಚ್ಚಾಗುತ್ತದೆ, ರಾಷ್ಟ್ರೀಯ ಭದ್ರತೆ ಬಲಪಡುತ್ತದೆ ಮತ್ತು ಸಾವಿರಾರು ಉದ್ಯೋಗ ಸೃಷ್ಟಿಯಾಗುತ್ತದೆ.

ರಿಲಯನ್ಸ್‌ ಮತ್ತು ಭಾರತ ಪಾಲುದಾರರಿಗೆ ಧನ್ಯವಾದ. ತೆರಿಗೆ ಕಡಿತ ನೀತಿಗಳಿಂದ ದೇಶಕ್ಕೆ ಶತಕೋಟಿ ಡಾಲರ್‌ಗಳ ಡೀಲ್‌ಗಳು ಬರಲಿದೆ ಎಂದಿದ್ದಾರೆ ಟ್ರಂಪ್. ಈ ಘಟಕ ವಿಶ್ವದ ಅತ್ಯಂತ ಸ್ವಚ್ಛ ತೈಲ ಸಂಸ್ಕರಣಾಗಾರವಾಗಿದ್ದು, ಅಮೆರಿಕ ಮಾರುಕಟ್ಟೆಗಳಿಗೆ ಇಂಧನವನ್ನು ಪೂರೈಕೆ ಮಾಡುತ್ತದೆ ಮತ್ತು ಜಾಗತಿಕ ರಫ್ತಿಗೆ ಶಕ್ತಿ ತುಂಬಲಿದೆ.

ಮುಂಡರಗಿಯಲ್ಲಿ ಹಗಲು ಹೊತ್ತಿನಲ್ಲೇ ಮನೆಗಳ್ಳತನ – ಬ್ಯಾಂಕ್ ಮ್ಯಾನೇಜರ್ ಮನೆ ದೋಚಿದ ಕಳ್ಳರು!

0

ಗದಗ: ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಹಗಲು ಹೊತ್ತಿನಲ್ಲೇ ಮತ್ತೊಂದು ಮನೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಪಟ್ಟಣದ ಜನರಲ್ಲಿ ಆತಂಕ ಮೂಡಿಸಿದೆ.

ಈ ಬಾರಿ ದುಷ್ಕರ್ಮಿಗಳು ಬ್ಯಾಂಕ್ ವ್ಯವಸ್ಥಾಪಕರ ಮನೆಯನ್ನೇ ಗುರಿಯಾಗಿಸಿಕೊಂಡು ಮಧ್ಯಾಹ್ನದ ವೇಳೆಯಲ್ಲೇ ಮನೆಗೆ ನುಗ್ಗಿ ಹಣ, ಬಂಗಾರ ಹಾಗೂ ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಮಂಗಳವಾರ ನಡೆದಿದೆ.

ಪಟ್ಟಣದ ಜನನೀಬೀಡ ಪ್ರದೇಶದಲ್ಲಿ ವಾಸವಾಗಿರುವ ಕೆನರಾ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕರಾದ ರಾಘವೇಂದ್ರಕುಮಾರ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ.

ಮಧ್ಯಾಹ್ನ ಸುಮಾರು 3.20 ರಿಂದ 4.40 ಗಂಟೆಯೊಳಗಿನ ಅವಧಿಯಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ. ಘಟನೆಯ ವೇಳೆ ರಾಘವೇಂದ್ರಕುಮಾರ ಅವರು ಬ್ಯಾಂಕ್ ಕೆಲಸಕ್ಕೆ ತೆರಳಿದ್ದರೆ, ಅವರ ಪತ್ನಿ ಸ್ಥಳೀಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಮನೆಯ ಬಾಗಿಲಿನ ಕೀಲಿಯನ್ನು ಮುರಿದು ಒಳನುಗ್ಗಿ, ಮನೆಯಲ್ಲಿ ಇದ್ದ ಹಣ, ಬಂಗಾರ ಹಾಗೂ ಬೆಳ್ಳಿ ವಸ್ತುಗಳನ್ನು ಕದ್ದುಕೊಂಡು ಪರಾರಿಯಾಗಿದ್ದಾರೆ.

ಕೊಪ್ಪಳ ಪಟ್ಟಣಕ್ಕೆ ಸಂಪರ್ಕ ಹೊಂದಿರುವ ಪ್ರಮುಖ ರಸ್ತೆಗೆ ಸಮೀಪದಲ್ಲಿರುವ ಜನನೀಬೀಡ ಪ್ರದೇಶದಲ್ಲೇ ಈ ಘಟನೆ ನಡೆದಿರುವುದು ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

ಇತ್ತೀಚೆಗೆ ಪಟ್ಟಣದ ವಿದ್ಯಾನಗರ ಪ್ರದೇಶದಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಮಾಸುವ ಮುನ್ನವೇ ಹಗಲು ಹೊತ್ತಿನಲ್ಲಿ ಮತ್ತೊಂದು ಮನೆ ಕಳ್ಳತನ ನಡೆದಿರುವುದು ಜನರಲ್ಲಿ ಭಯವನ್ನು ಹೆಚ್ಚಿಸಿದೆ.

ಸುದ್ದಿ ತಿಳಿಯುತ್ತಿದ್ದಂತೆ ಮುಂಡರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣದ ತನಿಖೆಗಾಗಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕೂಡ ಕರೆಸಿ ಪರಿಶೀಲನೆ ನಡೆಸಲಾಗಿದೆ.

ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ತುಮಕೂರಿನಲ್ಲಿ ಹೃದಯ ವಿದ್ರಾವಕ ಘಟನೆ: 2 ವರ್ಷದ ಮಗುವಿಗೆ ನೇಣು ಹಾಕಿ ತಾಯಿ ಆತ್ಮಹತ್ಯೆ!

ತುಮಕೂರು: ಗುಬ್ಬಿ ತಾಲ್ಲೂಕಿನ ಹಾಳಗಲವಾಡಿಯಲ್ಲಿ ಎರಡು ವರ್ಷದ ಮಗುವಿನ ಜೊತೆ ತಾಯಿ ಒಂದೇ ಕುಣಿಕೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ.

ಗಂಗಾಮಣಿ(30), ಪ್ರೇಕ್ಷಾ (2) ಮೃತರು. ಗಂಗಾಮಣಿ ತನ್ನೊಟ್ಟಿಗೆ ಏನು ಅರಿಯದ 2 ವರ್ಷದ ಮಗುವಿನ ಕುತ್ತಿಗೆಗೆ ಕುಣಿಕೆ ಹಾಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಎಂಟು ವರ್ಷದ ಹಿಂದೆ ಯತೀಶ್ ಎಂಬಾತನ ಜೊತೆ ಗಂಗಾಮಣಿ ವಿವಾಹವಾಗಿದ್ದು, ದಂಪತಿಗೆ ಮೂರು ಮಕ್ಕಳು ಇದ್ದಾರೆ. ಇನ್ನು ಇಬ್ಬರು ಮಕ್ಕಳು ವಿನಯ್ (7) ಮತ್ತು ರಕ್ಷಿತಾ (5) ಶಾಲೆಗೆ ಹೋಗಿದ್ದರಿಂದ ಸಾವಿನಿಂದ ಪಾರಾಗಿದ್ದಾರೆ.

ಇನ್ನು ಮಕ್ಕಳು ಶಾಲೆಯಿಂದ ಮನೆಗೆ ಬಂದಿದ್ದಾರೆ. ಆದ್ರೆ, ಮನೆ ಒಳಗಿನಿಂದ ಲಾಕ್ ಆಗಿದ್ದು, ಇದನ್ನು ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದಾರೆ. ಬಳಿಕ ಪಕ್ಕದ ಮನೆಯವರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಚೇಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಟೀಮ್ ಇಂಡಿಯಾಗೆ ಹೊಸ ಕ್ಯಾಪ್ಟನ್ ಆಗ್ತಾರಾ ಸಂಜು ಸ್ಯಾಮ್ಸನ್!?

0

ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗಲು ಪ್ರಮುಖ ಪಾತ್ರವಹಿಸಿದ ಸಂಜು ಸ್ಯಾಮ್ಸನ್ ಪ್ರಸ್ತುತ ಕ್ರಿಕೆಟ್ ಪ್ರೇಮಿಗಳ ಮನಸ್ಸಿನಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ.

ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಟೀಂ ಇಂಡಿಯಾವನ್ನು ವಿಶ್ವ ಚಾಂಪಿಯನ್‌ ಮಾಡಿದ್ದ ಸಂಜುಗೆ ಸರಣಿಯ “ಪ್ಲೇಯರ್ ಆಫ್ ದಿ ಸೀರೀಸ್” ಪ್ರಶಸ್ತಿಯೂ ಲಭಿಸಿತು.

ಈ ನಡುವೆ, ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಸಂಜು ಸ್ಯಾಮ್ಸನ್ಗೆ ಭಾರತ ಟಿ20 ತಂಡದ ನಾಯಕತ್ವ ನೀಡಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಕೈಫ್ ಹೇಳಿದ್ದಾರೆ, “ಸೂರ್ಯಕುಮಾರ್ ಯಾದವ್ ನಾಯಕತ್ವ ತ್ಯಜಿಸಿದರೆ, ತಂಡವನ್ನು ಮುನ್ನಡೆಸಲು ಸಂಜು ಸ್ಯಾಮ್ಸನ್ ಅತ್ಯುತ್ತಮ ಆಯ್ಕೆ. ಅವರಲ್ಲಿ ನಾಯಕತ್ವ ಗುಣಗಳಿದ್ದು, ತಂಡದ ಪ್ರತಿಯೊಬ್ಬ ಆಟಗಾರನ ಮೌಲ್ಯವನ್ನು ಗುರುತಿಸುವ ಸಾಮರ್ಥ್ಯವಿದೆ. ಫಾರ್ಮ್‌ನಲ್ಲಿ ಇಲ್ಲದ ಆಟಗಾರರನ್ನು ಸಹ ಪ್ರೋತ್ಸಾಹಿಸುವವರು ಯಶಸ್ವಿ ನಾಯಕರಾಗುತ್ತಾರೆ. ವೈಫಲ್ಯವನ್ನು ಆಟದ ಒಂದು ಭಾಗ ಎಂದು ಅರ್ಥಮಾಡಿಕೊಳ್ಳುವುದರಿಂದ ತಂಡಕ್ಕೆ ಲಾಭವಾಗುತ್ತದೆ.”

ಸಂಜು ಸ್ಯಾಮ್ಸನ್ ಈಗಾಗಲೇ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸುವ ಅನುಭವ ಹೊಂದಿದ್ದಾರೆ ಮತ್ತು ತಂಡವನ್ನು ಫೈನಲ್‌ಗೆ ತಲುಪಿಸಿದರು. ಕೈಫ್ ಅಭಿಪ್ರಾಯ ಪ್ರಕಾರ, ಅವರು ತಮ್ಮ ಫಾರ್ಮ್ ಉತ್ತಮವಾಗಿದ್ದರೆ ಮತ್ತು ಫಿಟ್ನೆಸ್ ಕಾಪಾಡಿಕೊಂಡರೆ ಟೀಂ ಇಂಡಿಯಾ ಟಿ20 ತಂಡದ ನಾಯಕತ್ವ ವಹಿಸಲು ಸಿದ್ಧರಾಗಿದ್ದಾರೆ.

ಇದಕ್ಕಿಂತ ಮುಖ್ಯವಾಗಿ, ಸೂರ್ಯಕುಮಾರ್ ಯಾದವ್ ಪ್ರಸ್ತುತ 35 ವರ್ಷ ವಯಸ್ಸಿನವರು. 2028 ರ ಟಿ20 ವಿಶ್ವಕಪ್ ವೇಳೆಗೆ ಅವರಿಗೆ 37 ವರ್ಷ ವಯಸ್ಸಾಗಿರುತ್ತದೆ. 37 ನೇ ವಯಸ್ಸಿನಲ್ಲಿ ನಾಯಕತ್ವ ವಹಿಸುವುದು ಸ್ವಲ್ಪ ಅಸಂಭವವಾಗಬಹುದು, ವಿಶೇಷವಾಗಿ ಅವರ ಫಾರ್ಮ್ ಮತ್ತು ಫಿಟ್ನೆಸ್ ಮೇಲೆ ಅವಲಂಬಿತವಾಗಿದೆ. ಸೂರ್ಯಕುಮಾರ್ ಯಾದವ್ ಟಿ20 ವಿಶ್ವಕಪ್ ನಲ್ಲಿ ಆಟಗಾರರಾಗಿ ಸಾದಾರಣ ಪ್ರದರ್ಶನ ನೀಡಿದ್ರು; ಫೈನಲ್ ಪಂದ್ಯದಲ್ಲಿ ಗೋಲ್ಡನ್ ಡಕ್‌ಗೆ ಔಟಾಗಿದ್ದರು ಮತ್ತು ಇಡೀ ಟೂರ್ನಮೆಂಟ್‌ನಲ್ಲಿ 30.25 ಸರಾಸರಿಯಲ್ಲಿ ಕೇವಲ 242 ರನ್ ಗಳಿಸಿದ್ದು, ಅವರ ಫಾರ್ಮ್ ಸ್ಪಷ್ಟವಾಗಿ ಉತ್ತಮವಾಗಿರಲಿಲ್ಲ.

ಹೀಗಾಗಿ, ಬಿಸಿಸಿಐ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಮತ್ತು ಮುಂದಿನ ಟಿ20 ವಿಶ್ವಕಪ್ ನಾಯಕತ್ವವನ್ನು ಯಾರಿಗೆ ನೀಡುತ್ತದೆ ಎಂಬುದನ್ನು ಎಲ್ಲರೂ ಕಾಯುತ್ತಿದ್ದಾರೆ.

ಮದ್ಯಪ್ರಿಯರ ಗಮನಕ್ಕೆ: ಬಿಯರ್‌ ಕೂಡ ಸುರಕ್ಷಿತವಲ್ಲ – ತಜ್ಞರ ಎಚ್ಚರಿಕೆ

0

ಕೆಲವರು ಬಿಯರ್ ಅನ್ನು ಇತರ ಮದ್ಯಪಾನಗಳಿಗಿಂತ ಕಡಿಮೆ ಹಾನಿಕಾರಕ ಎಂದು ನಂಬುತ್ತಾರೆ, ಪ್ರತಿದಿನ ಒಂದು ಅಥವಾ ಎರಡು ಕ್ಯಾನ್ ಬಿಯರ್ ಕುಡಿಯುವುದರಿಂದ ದೇಹಕ್ಕೆ ದೊಡ್ಡ ಹಾನಿ ಆಗುವುದಿಲ್ಲ ಎಂದು ಭಾವಿಸುತ್ತಾರೆ.

ಬಿಯರ್‌ನಲ್ಲಿ ಅಲ್ಕೋಹಾಲ್ ಇದ್ದು, ಲಿವರ್ ಮೂಲಕ ಶೋಧನೆಯಾಗುವ ಪ್ರಕ್ರಿಯೆಯಲ್ಲಿ ಲಿವರ್ ಕೋಶಗಳಿಗೆ ಹಾನಿ ಉಂಟಾಗಬಹುದು. ನಿರಂತರವಾಗಿ ಹೆಚ್ಚು ಅಲ್ಕೋಹಾಲ್ ಸೇವನೆ ಲಿವರ್‌ನ ಶೋಧನ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಲಿವರ್ ಸಂಬಂಧಿತ ರೋಗಗಳ ಅಪಾಯ ಹೆಚ್ಚಿಸುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.

ಅಲ್ಕೋಹಾಲ್ ಸೇವನೆಯು ಮಧುಮೇಹ, ಹೊಟ್ಟೆ ಸಮಸ್ಯೆ, ದೀರ್ಘಕಾಲದ ಕ್ಯಾನ್ಸರ್ ಅಪಾಯಕ್ಕೆ ಕಾರಣವಾಗಬಹುದು. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಯಾವುದೇ ಪ್ರಮಾಣದ ಅಲ್ಕೋಹಾಲ್ ಕೂಡ ಸಂಪೂರ್ಣ ಸುರಕ್ಷಿತವಲ್ಲ. ಅಂತರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಅಲ್ಕೋಹಾಲ್ ಅನ್ನು ಗ್ರೂಪ್ 1 ಕಾರ್ಸಿನೋಜನ್ ಎಂದು ವರ್ಗೀಕರಿಸಿದೆ, ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವುದನ್ನು ಸೂಚಿಸುತ್ತದೆ.

ತಜ್ಞರ ಸಲಹೆ: ಲಿವರ್ ಸಮಸ್ಯೆ ಇರುವವರು ಅಥವಾ ಆರೋಗ್ಯದ ಬಗ್ಗೆ ಚಿಂತಿಸುವವರು ಬಿಯರ್ ಮತ್ತು ಇತರ ಮದ್ಯಪಾನಗಳನ್ನು ಸಾಧ್ಯವಾದಷ್ಟು ತಪ್ಪಿಸಬೇಕು.

ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ರಾಜೀನಾಮೆ: ದಿಢೀರ್ ನಿರ್ಧಾರಕ್ಕೆ ಕಾರಣ ಏನು?

0

ದೆಹಲಿ: ಡಿಸೆಂಬರ್‌ನಲ್ಲಿ ಸಂಭವಿಸಿದ ವಿಮಾನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಮಂಗಳವಾರ ರಾಜೀನಾಮೆ ನೀಡಿದ್ದಾರೆ.

ಈ ಮಧ್ಯಂತರ ಸಂದರ್ಭದಲ್ಲಿಯೇ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಭಾಟಿಯಾ ಸಂಸ್ಥೆಯ ನಿರ್ವಹಣೆಯನ್ನು ವಹಿಸಿಕೊಂಡಿದ್ದಾರೆ.

ಎಲ್ಬರ್ಸ್ ಅವರ ರಾಜೀನಾಮೆ ಪತ್ರದಲ್ಲಿ, “ವೈಯಕ್ತಿಕ ಕಾರಣಗಳಿಂದ ಇಂದು ಜಾರಿಗೆ ಬರುವಂತೆ ಸಿಇಒ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ. ನೋಟಿಸ್ ಅವಧಿಯನ್ನು ಮನ್ನಾ ಮಾಡಬೇಕು ಎಂದು ವಿನಂತಿಸುತ್ತೇನೆ” ಎಂದು ಹೇಳಿದ್ದಾರೆ. 2022 ರ ಸೆಪ್ಟೆಂಬರ್‌ನಿಂದ 2025 ರವರೆಗೆ ಅವರು ಇಂಡಿಗೋ ಸಿಇಒ ಆಗಿ ಸೇವೆ ಸಲ್ಲಿಸಿದ್ದು, ಸಂಸ್ಥೆಯ 10 ಬಿಲಿಯನ್ ಡಾಲರ್ ಆದಾಯವನ್ನು ಮೀರಿಸಿದ ಪ್ರಮುಖ ಸಾಧನೆಗಳಲ್ಲೊಂದು ಫ್ಲೀಟ್ 440 ಕ್ಕೂ ಹೆಚ್ಚು ವಿಮಾನಗಳಿಗೆ ವಿಸ್ತರಿಸುವುದು.

ಆದರೆ, ಡಿಸೆಂಬರ್ 2025 ರ ಭಾರಿ ಕಾರ್ಯಾಚರಣಾ ಕುಸಿತವು ಅವರ ಅಧಿಕಾರಾವಧಿಯನ್ನು ಬಿಕ್ಕಟ್ಟು ಎದುರಿಸಬೇಕಾದ ಪರಿಸ್ಥಿತಿಗೆ ತಂದಿತು. ಪೈಲಟ್ ಆಯಾಸವನ್ನು ತಪ್ಪಿಸಲು ಜಾರಿಗೆ ತರಲಾದ ಹೊಸ ನಿಯಮಗಳ ಪಾಲನೆ ಸಂಬಂಧಿ ಹೋರಾಟದ ಪರಿಣಾಮವೂ ಈ ವಿಮಾನ ಬಿಕ್ಕಟ್ಟಿಗೆ ಕಾರಣವಾಗಿರುವುದಾಗಿ ವರದಿ ಮಾಡಲಾಗಿದೆ.

 

PG ವೈದ್ಯಕೀಯ ಸೀಟು ಹಂಚಿಕೆ: ಉಳಿಕೆ ಸೀಟಿಗೆ ಮಾ.11ರಂದು ಮತ್ತೊಂದು ಸುತ್ತಿನ ಕೌನ್ಸೆಲಿಂಗ್!

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದಂತೆ ಸ್ಟ್ರೇ ವೇಕೆನ್ಸಿ ಸುತ್ತಿನಲ್ಲಿ ಇನ್ನೂ 783 ಸೀಟು ಉಳಿದಿದ್ದು, ಅವುಗಳ ಹಂಚಿಕೆ ಮಾ.11ರಂದು ಮತ್ತೊಂದು ಸುತ್ತಿನ ಕೌನ್ಸೆಲಿಂಗ್ ಮೂಲಕ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ತಿಳಿಸಿದ್ದಾರೆ.

ಈ ಸೀಟು ಹಂಚಿಕೆಯನ್ನು ಯಾವುದೇ ಸುತ್ತಿನಲ್ಲಿ ಸೀಟು ಪಡೆಯದ ಅಭ್ಯರ್ಥಿಗಳು ಪಡೆದುಕೊಳ್ಳಬಹುದಾಗಿದೆ. ಯಾವ ಕಾಲೇಜಿನಲ್ಲಿ, ಯಾವ ಕೋರ್ಸ್‌ನಲ್ಲಿ ಎಷ್ಟು ಸೀಟು ಉಳಿದಿವೆ ಮತ್ತು ಅದರ ಶುಲ್ಕವನ್ನು KEA ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಅಭ್ಯರ್ಥಿಗಳು ತಮ್ಮ ಆಯ್ಕೆಯ ಕೋರ್ಸ್‌ನ ಪೂರ್ಣ ಶುಲ್ಕದ ಡಿ.ಡಿ ಅಥವಾ ಚೆಕ್ ಜೊತೆಗೆ ಮಾರ್ಚ್ 11ರಂದು ಮಧ್ಯಾಹ್ನ 3 ಗಂಟೆಯೊಳಗೆ ಮಲ್ಲೇಶ್ವರದ KEA ಕಚೇರಿಗೆ ಸಲ್ಲಿಸಬೇಕು. ಡಿ.ಡಿ/ಚೆಕ್ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಮಲ್ಲೇಶ್ವರ, ಬೆಂಗಳೂರು- ಇವರ ಹೆಸರಿನಲ್ಲಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.

ಡಿ.ಡಿ/ಚೆಕ್ ಮತ್ತು ಎಲ್ಲಾ ಮೂಲ ದಾಖಲೆಗಳನ್ನು ಸಲ್ಲಿಸಿದವರಿಗೆ ಮಾ.11 ರಂದು ಮಧ್ಯಾಹ್ನ 12:30ರಿಂದ ಸಂಜೆ 4 ಗಂಟೆವರೆಗೆ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುವುದು. ಅದೇ ದಿನ ಸಂಜೆ 7 ಗಂಟೆಗೆ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುತ್ತದೆ. ಸೀಟು ಪಡೆದವರು ಮಾ.12ರಂದು ಸಂಜೆ 5:30ರೊಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು.

 

error: Content is protected !!