ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ಹೆಗ್ಡೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಡಿಸಿಎಂ ಕುಟುಂಬದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ. ಈ ವಿಚಾರ ತಿಳಿದ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್, ಮೊಮ್ಮಗಳನ್ನು ಮುದ್ದಾಡಿ ಮಗಳ ಆರೋಗ್ಯ ವಿಚಾರಿಸಿದರು.
https://twitter.com/Tejasvi_Surya/status/2050256338643779783https://twitter.com/Tejasvi_Surya/status/2050256338643779783
ವಿಶೇಷವೆಂದರೆ ಕಾರ್ಮಿಕ ದಿನಾಚರಣೆ, ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣ ಅವರ ಜನ್ಮದಿನ ಹಾಗೂ ಶುಭ್ರ ಪೂರ್ಣಿಮೆಯ ದಿನವೇ ಡಿ.ಕೆ. ಶಿವಕುಮಾರ್ ತಾತನಾಗಿರುವುದು ಕುಟುಂಬದ ಸಂತಸವನ್ನು ಮತ್ತಷ್ಟು ಹೆಚ್ಚಿಸಿದೆ. ಮಾಧ್ಯಮ ಪ್ರತಿನಿಧಿಗಳು ಈ ಕುರಿತು ಪ್ರಶ್ನಿಸಿದಾಗ ಡಿಸಿಎಂ ಮುಗುಳ್ನಗೆಯೊಂದಿಗೆ ಸಂತಸ ವ್ಯಕ್ತಪಡಿಸಿದರು.
ಈ ಮಧ್ಯೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊಂಡ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ.
ಸಾಮಾನ್ಯವಾಗಿ ರಾಜಕೀಯ ವಿಚಾರಗಳಲ್ಲಿ ಡಿ.ಕೆ. ಶಿವಕುಮಾರ್ ಮತ್ತು ತೇಜಸ್ವಿ ಸೂರ್ಯ ನಡುವಿನ ವಾಗ್ವಾದಗಳು ಚರ್ಚೆಗೆ ಗ್ರಾಸವಾಗುತ್ತವೆ. ಆದರೆ ಅಭಿವೃದ್ಧಿ ವಿಚಾರಗಳಲ್ಲಿ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಹಲವು ಉದಾಹರಣೆಗಳಿವೆ.
ನಿನ್ನೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮಗಳಲ್ಲಿ ಇಬ್ಬರೂ ಭಾಗವಹಿಸಿದ್ದರು. ಇದೇ ವೇಳೆ ತಾನು ಶೀಘ್ರದಲ್ಲೇ ತಾತನಾಗಲಿದ್ದೇನೆ ಎಂಬ ಸಂತಸದ ಸುದ್ದಿಯನ್ನು ಡಿ.ಕೆ. ಶಿವಕುಮಾರ್ ತಮ್ಮೊಂದಿಗೆ ಹಂಚಿಕೊಂಡಿದ್ದರು ಎಂದು ತೇಜಸ್ವಿ ಸೂರ್ಯ ಎಕ್ಸ್ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.

