Home Blog

ಪ್ಯಾನ್ʼಗೆ ನೇಣು ಬಿಗಿದುಕೊಂಡು ಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆ!

0

ಬೀದರ್: ಬೀದರ್ ನಲ್ಲಿ ಘೋರ ದುರಂತ ಸಂಭವಿಸಿದ್ದು, ನೇಣು ಬಿಗಿದುಕೊಂಡು ಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಬ್ರಿಮ್ಸ್ ಕಾಲೇಜು ವಸತಿ ನಿಲಯದಲ್ಲಿ ನಡೆದಿದೆ.

ಅನಿಷ್ಕಾರ್ ಚೌಹಾಣ್ (21) ಮೃತ ವಿದ್ಯಾರ್ಥಿಯಾಗಿದ್ದು, ಲಬುರಗಿ ಜಿಲ್ಲೆಯ ಚಿಂಚೋಳಿ  ತಾಲೂಕಿನ ಪಾಲತೆ ತಾಂಡ ನಿವಾಸಿಯಾಗಿದ್ದ ಅನಿಷ್ಕಾರ್ ಚೌಹಾಣ್,  ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ವಸತಿ ನಿಲಯದ ತನ್ನ ಕೊಠಡಿಯಲ್ಲಿ  ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ನಿಖರ ಕಾರಣ ತಿಳಿದುಬಂದಿಲ್ಲ ಎನ್ನಲಾಗಿದೆ.

ಸದ್ಯ ಬ್ರಿಮ್ಸ್ ವಸತಿ ನಿಲಯಕ್ಕೆ ನ್ಯೂ ಟೌನ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ವಿಧಿವಿಜ್ಞಾನ ತಂಡ ಕೂಡ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.

ಇ-ಖಾತೆಯಲ್ಲಿ ಲಂಚಾವತಾರ? ಸದನದಲ್ಲಿ ಫೋನ್ ಪೇ ದಾಖಲೆ ಪ್ರದರ್ಶನ ಮಾಡಿದ ಆರ್ ಅಶೋಕ್

ಬೆಂಗಳೂರು: ಗ್ರೇಟರ್ ಬೆಂಗಳೂರು ಪಾಲಿಕೆಯಲ್ಲಿ ಇ-ಖಾತಾ ಪ್ರಕ್ರಿಯೆಯಲ್ಲಿ ಲಂಚಾವತಾರ ನಡೆಯುತ್ತಿದೆ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಆರೋಪಕ್ಕೆ ಸಾಕ್ಷಿಯಾಗಿ ಸದನದಲ್ಲೇ ಫೋನ್ ಪೇ ಹಣ ವರ್ಗಾವಣೆಯ ದಾಖಲೆಗಳನ್ನು ಪ್ರದರ್ಶಿಸಿದರು.

ರಾಜ್ಯ ಸರ್ಕಾರದಲ್ಲಿ ಲಂಚವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದನ್ನು ಉಲ್ಲೇಖಿಸಿದ ಅಶೋಕ್, “ಇಲ್ಲಿದೆ ಲಂಚದ ಸಾಕ್ಷಿ” ಎಂದು ಸದನದಲ್ಲಿ ಅಧಿಕಾರಿಗಳ ವಿರುದ್ಧ ಆರೋಪ ಹೊರಿಸಿದರು.

ಬಿಬಿಎಂಪಿಯ ರಮೇಶ್ ಎಂಬ ಅಧಿಕಾರಿಯು 30,000 ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದಾನೆ ಎಂದು ಆರೋಪಿಸಿ, ಫೋನ್ ಪೇ ಮೂಲಕ ಹಣ ವರ್ಗಾವಣೆಗೊಂಡಿರುವ ದಾಖಲೆಗಳನ್ನು ಬಿಡುಗಡೆ ಮಾಡಿದರು.

15,000 ರೂಪಾಯಿ ಲಂಚ ನೀಡಿದರೂ ಇ-ಖಾತಾ ಅರ್ಜಿ ತಿರಸ್ಕರಿಸಲಾಗಿದೆ ಎಂದು ಆರೋಪಿಸಿದರು. ಇದು ಸರ್ಕಾರದ ಲಂಚಾವತಾರದ ಸ್ಪಷ್ಟ ಉದಾಹರಣೆ ಎಂದು ಅಶೋಕ್ ಹೇಳಿದರು.

ಇನ್ನೂ, ಎಆರ್‌ಒ ನಂಜುಡಪ್ಪ ಎಂಬ ಅಧಿಕಾರಿ ಲೇಔಟ್ ಮಾಡುವವರಿಗೆ ಪ್ರತಿ ಸೈಟ್‌ಗೆ 30 ರಿಂದ 40 ಸಾವಿರ ರೂಪಾಯಿ ವಸೂಲಿ ಮಾಡುತ್ತಿರುವ ಬಗ್ಗೆ ಪೆನ್ ಡ್ರೈವ್ ಮೂಲಕ ದಾಖಲೆಗಳನ್ನು ಪ್ರದರ್ಶಿಸಿದರು.

ಪ್ರತಿಯೊಂದು ವಾರ್ಡ್‌ನಲ್ಲೂ ಇ-ಖಾತಾ ಪ್ರಕ್ರಿಯೆಗೆ ಲಂಚದ ಬೇಡಿಕೆ ಇಡಲಾಗುತ್ತಿದೆ. ಪಾಲಿಕೆ ಅಧಿಕಾರಿಗಳು ದಂಧೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ, ತೆರಿಗೆ ಕಟ್ಟದ ಪ್ರಭಾವಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಬಡವರ ಮೇಲೆ ಮಾತ್ರ ಕಠಿಣ ಕ್ರಮ ಜಾರಿಯಾಗಿದೆ ಎಂದು ಟೀಕಿಸಿದರು. ಎರಡು ವರ್ಷಗಳಿಂದ ತೆರಿಗೆ ಕಟ್ಟದ ಮನೆ ಮಾಲೀಕರಿಗೆ ನೋಟಿಸ್ ನೀಡಿ ಮನೆ ಹರಾಜು ಮಾಡುವ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಅಶೋಕ್ ವಿವರಿಸಿದರು.

Gold Price: ಮತ್ತೆ ಕುಸಿಯಿತು ಚಿನ್ನದ ಬೆಲೆ! ತಡ ಬೇಡ, ಬಂಗಾರ ಖರೀದಿ ಇಂದೇ ಮಾಡಿ 

ಬೆಂಗಳೂರು: ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ನಡುವೆಯೂ ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದೆ. ಸತತ ಏರಿಕೆಯಲ್ಲಿ ಸಾಗುತ್ತಿದ್ದ ಚಿನ್ನದ ದರ ಇದೀಗ ಗಣನೀಯವಾಗಿ ಕುಸಿದು, 1 ಲಕ್ಷ ರೂಪಾಯಿ ಗಡಿಯತ್ತ ಚಲಿಸುತ್ತಿದೆ.

ಯುದ್ಧದ ಪರಿಣಾಮದಿಂದ ಗಗನಕ್ಕೇರಿದ್ದ ಚಿನ್ನದ ಬೆಲೆ ಈಗ ಇಳಿಕೆಯಾಗಿರುವುದು ಗ್ರಾಹಕರಲ್ಲಿ ಸಂತಸ ಮೂಡಿಸಿದೆ. ಈ ದರ ಕುಸಿತದಿಂದ ವಿಶೇಷವಾಗಿ ಆಭರಣ ಖರೀದಿಸಲು ಕಾಯುತ್ತಿದ್ದವರ ಮುಖದಲ್ಲಿ ಮಂದಹಾಸ ಮೂಡಿದೆ. ಇಂದು ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆ ದಾಖಲಾಗಿದೆ:

  • 22 ಕ್ಯಾರೆಟ್ ಚಿನ್ನ: 10 ಗ್ರಾಂಗೆ ₹2,700 ಇಳಿಕೆ (ಪ್ರತಿ ಗ್ರಾಂ ₹270 ಕುಸಿತ)
  • 24 ಕ್ಯಾರೆಟ್ ಚಿನ್ನ: 10 ಗ್ರಾಂಗೆ ₹2,940 ಇಳಿಕೆ (ಪ್ರತಿ ಗ್ರಾಂ ₹294 ಕುಸಿತ)

ಪ್ರಸ್ತುತ ದರಗಳು:

  • 22 ಕ್ಯಾರೆಟ್ ಚಿನ್ನ: 10 ಗ್ರಾಂಗೆ ₹1,28,650
  • 24 ಕ್ಯಾರೆಟ್ ಚಿನ್ನ: 10 ಗ್ರಾಂಗೆ ಸುಮಾರು ₹1,40,350

ಜಾಗತಿಕ ಮಾರುಕಟ್ಟೆಯಲ್ಲಿ ಯುದ್ಧ ಪರಿಸ್ಥಿತಿ, ಡಾಲರ್ ಮೌಲ್ಯದ ಏರಿಳಿತ ಮತ್ತು ಹೂಡಿಕೆದಾರರ ಮನೋಭಾವದ ಬದಲಾವಣೆಗಳಿಂದ ಚಿನ್ನದ ಬೆಲೆಯಲ್ಲಿ ಈ ರೀತಿಯ ಕುಸಿತ ಕಂಡುಬರುತ್ತಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಒಟ್ಟಾರೆ, ಇತ್ತೀಚಿನ ದಿನಗಳಲ್ಲಿ ನಿರಂತರ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಇದೀಗ ಚಿನ್ನದ ದರ ಇಳಿಕೆ ಸ್ವಲ್ಪ ನಿರಾಳತೆ ತಂದಿದೆ.

ವಯನಾಡು ಸಂತ್ರಸ್ತರಿಗೆ ಮತ್ತೆ ₹10 ಕೋಟಿ: ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ

ಬೆಂಗಳೂರು: ವಯನಾಡು ಭೂಕುಸಿತ ಸಂತ್ರಸ್ತರಿಗೆ ಕರ್ನಾಟಕ ಸರ್ಕಾರ ₹10 ಕೋಟಿ ಹೆಚ್ಚುವರಿ ಅನುದಾನ ನೀಡಿದ ವಿಚಾರ ಇದೀಗ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಭಾರತೀಯ ಜನತಾ ಪಕ್ಷ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಅತಿಥಿ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ನೀರಗಂಟಿಗಳ ಸಂಬಳ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾದ ಸರ್ಕಾರ, ಇತರ ರಾಜ್ಯಕ್ಕೆ ಅನುದಾನ ನೀಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣವನ್ನು ಬಳಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ವಿಶೇಷವಾಗಿ, ಪ್ರಿಯಾಂಕ ಗಾಂಧಿ ಪ್ರತಿನಿಧಿಸುವ ವಯನಾಡು ಲೋಕಸಭಾ ಕ್ಷೇತ್ರಕ್ಕೆ ಅನುದಾನ ನೀಡಿರುವುದನ್ನು ಪಕ್ಷ ಪ್ರಶ್ನಿಸಿದೆ.

ರಾಜ್ಯದ ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿ, ಅಕಾಲಿಕ ಮಳೆಯಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡುವಂತಹ ಒಳರಾಜ್ಯ ಸಮಸ್ಯೆಗಳತ್ತ ಮೊದಲಿಗೆ ಗಮನ ಹರಿಸಬೇಕು. ನಂತರ ಇತರ ರಾಜ್ಯಗಳಿಗೆ ಸಹಾಯ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಬಜೆಟ್ ಅಧಿವೇಶನ ಮಾ.26ಕ್ಕೆ ಮೊಟಕುಗೊಳಿಸಲು ತೀರ್ಮಾನ: ಸ್ಪೀಕರ್ ಯು.ಟಿ.ಖಾದರ್

ಬೆಂಗಳೂರು: ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನವನ್ನು ಮಾರ್ಚ್ 26ರಂದು ಮುಕ್ತಾಯಗೊಳಿಸಲಾಗುವುದು ಎಂದು ಸ್ಪೀಕರ್ ಯು.ಟಿ. ಖಾದರ್ ಪ್ರಕಟಿಸಿದ್ದಾರೆ.

ವಿಧಾನಸಭೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾದ ತೀರ್ಮಾನಗಳ ಕುರಿತು ಸದನದಲ್ಲಿ ಮಾಹಿತಿ ನೀಡಿದ ಅವರು, ಬಜೆಟ್ ಮೇಲಿನ ಚರ್ಚೆ ಇಂದು ಕೊನೆಗೊಳ್ಳಲಿದ್ದು, ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆಗೆ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಮಾರ್ಚ್ 27ರವರೆಗೆ ಅಧಿವೇಶನ ಮುಂದುವರಿಸುವ ಯೋಜನೆ ಇದ್ದರೂ, ಇದೀಗ ಒಂದು ದಿನ ಮೊಟಕುಗೊಳಿಸಿ ಮಾರ್ಚ್ 26ಕ್ಕೆ ಅಂತ್ಯಗೊಳಿಸಲು ನಿರ್ಧರಿಸಲಾಗಿದೆ.

ಎರಡು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆಗಳ ಹಿನ್ನೆಲೆ, ಪ್ರಚಾರ ಕಾರ್ಯಕ್ಕೆ ಸದಸ್ಯರು ತೆರಳಬೇಕಿರುವುದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತು ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಎಲ್ಲಾ ಪಕ್ಷಗಳ ಸದಸ್ಯರು ಸಹಮತ ವ್ಯಕ್ತಪಡಿಸಿದ್ದಾರೆ.

ಈ ಮೂಲಕ 13 ದಿನಗಳ ಕಾಲ ನಡೆಯಬೇಕಿದ್ದ ಅಧಿವೇಶನವನ್ನು 12 ದಿನಗಳಿಗೆ ಸೀಮಿತಗೊಳಿಸಿ ಮುಕ್ತಾಯಗೊಳಿಸಲಾಗುತ್ತಿದೆ.

ಮತಾಂತರಗೊಂಡರೆ SC ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ʼನಿಂದ ಐತಿಹಾಸಿಕ ತೀರ್ಪು!

0

ನವದೆಹಲಿ: ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮಗಳಿಗೆ ಸೇರಿದವರಿಗಷ್ಟೇ ಪರಿಶಿಷ್ಟ ಜಾತಿ ಸ್ಥಾನಮಾನ ಲಭ್ಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಂಗಳವಾರ ನೀಡಿದ ಈ ತೀರ್ಪಿನಲ್ಲಿ, ಕ್ರಿಶ್ಚಿಯನ್ ಧರ್ಮ ಸೇರಿದಂತೆ ಬೇರೆ ಯಾವುದೇ ಧರ್ಮಕ್ಕೆ ಮತಾಂತರಗೊಂಡರೆ, ಆ ವ್ಯಕ್ತಿ ಪರಿಶಿಷ್ಟ ಜಾತಿ ಸ್ಥಾನಮಾನವನ್ನು ಕಳೆದುಕೊಳ್ಳುತ್ತಾನೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇದರಿಂದ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ದಲಿತ ವ್ಯಕ್ತಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ರಕ್ಷಣೆ ಪಡೆಯಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.

ನ್ಯಾಯಮೂರ್ತಿಗಳಾದ ಪಿ.ಕೆ. ಮಿಶ್ರಾ ಮತ್ತು ಮನಮೋಹನ್ ಅವರ ಪೀಠ ಈ ತೀರ್ಪು ನೀಡಿದೆ.

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮವನ್ನು ಅನುಸರಿಸುವವರು ಪರಿಶಿಷ್ಟ ಜಾತಿಯ ಸದಸ್ಯರಾಗಿರುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಈ ತೀರ್ಪು ಆಂಧ್ರಪ್ರದೇಶ ಹೈಕೋರ್ಟ್ ನೀಡಿದ ಮೇ 2025ರ ತೀರ್ಪಿನ ವಿರುದ್ಧ ಚಿಂತಾಡ ಆನಂದ್ ಎಂಬ ಪಾದ್ರಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯ ವೇಳೆ ಹೊರಬಂದಿದೆ.

ಆನಂದ್ ಅವರು ಅಕ್ಕಲ ರಾಮಿರೆಡ್ಡಿ ಮತ್ತು ಇತರರಿಂದ ಜಾತಿ ತಾರತಮ್ಯ ಹಾಗೂ ನಿಂದನೆ ಎದುರಿಸಿದ್ದಾಗಿ ಆರೋಪಿಸಿ, ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದೂರು ದಾಖಲಿಸಿದ್ದರು. ಅದರ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

ನಂತರ ರಾಮಿರೆಡ್ಡಿ ಹೈಕೋರ್ಟ್‌ಗೆ ಮೊರೆ ಹೋಗಿ ಪ್ರಕರಣ ರದ್ದುಗೊಳಿಸುವಂತೆ ಮನವಿ ಸಲ್ಲಿಸಿದರು. ಆನಂದ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರಿಂದ, ಅವರಿಗೆ ಎಸ್‌ಸಿ ಸ್ಥಾನಮಾನ ಇಲ್ಲ ಎಂದು ನ್ಯಾಯಾಲಯ ಹೇಳಿ ಎಫ್‌ಐಆರ್ ರದ್ದುಗೊಳಿಸಿತ್ತು.

ಈ ತೀರ್ಪನ್ನು ಪ್ರಶ್ನಿಸಿ ಆನಂದ್ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪನ್ನು ಸಮರ್ಥಿಸಿದೆ.

ಗ್ರಾಮಸ್ಥರ ಆತಂಕಕ್ಕೆ ತೆರೆ: ರೈತನ ಮೇಲೆ ದಾಳಿ ಮಾಡಿದ್ದ ಚಿರತೆ ಸಾವು!

ಶಿವಮೊಗ್ಗ: ಜಿಲ್ಲೆಯ ಶಿರಾಳಕೊಪ್ಪ ತಾಲೂಕಿನ ತಡಸನಹಳ್ಳಿ ಗ್ರಾಮದ ಬಳಿ ರೈತನ ಮೇಲೆ ದಾಳಿ ಮಾಡಿದ್ದ ಚಿರತೆ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.

ಮೃತ ರೈತ ಮೃತ್ಯುಂಜಯ ಅವರ ತೋಟದ ಸಮೀಪವೇ ಚಿರತೆಯ ಕಳೇಬರ ಪತ್ತೆಯಾಗಿದ್ದು, ಸ್ಥಳೀಯ ಗ್ರಾಮಸ್ಥರು ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು, ಪಶುವೈದ್ಯರ ಮೂಲಕ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಮೇಲ್ನೋಟಕ್ಕೆ ಚಿರತೆ ಹಸಿವಿನಿಂದ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ. ಅದರ ದೇಹದ ಮೇಲೆ ಯಾವುದೇ ಗಾಯಗಳ ಗುರುತುಗಳು ಕಂಡುಬಂದಿಲ್ಲ. ಕಲ್ಲುಗಳಿಂದ ದಾಳಿ ನಡೆದಿರುವ ಲಕ್ಷಣಗಳೂ ಕಾಣಿಸಿಲ್ಲ.

ಈ ಕುರಿತು ಮಾಹಿತಿ ನೀಡಿದ ಶಿರಾಳಕೊಪ್ಪ ಆರ್‌ಎಫ್‌ಒ ಜಾವೇದ್ ಬಾಷಾ ಅಂಗಡಿ, “ಇದೇ ಮೊನ್ನೆ ರೈತನ ಮೇಲೆ ದಾಳಿ ಮಾಡಿದ ಚಿರತೆ. ದಾಳಿ ನಡೆದ ಸ್ಥಳದ ಬಳಿ ನಾವು ಬೋನ್ ಇಟ್ಟಿದ್ದೆವು. ಬೋನ್‌ನಿಂದ ಸ್ವಲ್ಪ ದೂರದಲ್ಲೇ ಚಿರತೆ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ” ಎಂದು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಯಲ್ಲಿ ಚಿರತೆಯ ಹೊಟ್ಟೆಯಲ್ಲಿ ಯಾವುದೇ ಆಹಾರ ಅವಶೇಷಗಳು ಪತ್ತೆಯಾಗಿಲ್ಲ. ಇದರಿಂದ ಹಸಿವು ಅಥವಾ ಅನಾರೋಗ್ಯದಿಂದ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ.

ಸ್ಫೋಟಕ ಬ್ಯಾಟಿಂಗ್ʼಗೆ ರೆಡಿ: IPLನಲ್ಲಿ ದಾಖಲೆ ಬರೆಯಲು ಅಭಿಷೇಕ್ ಶರ್ಮಾ ಸಜ್ಜು

0

ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ತಮ್ಮ ಸ್ಫೋಟಕ ಬ್ಯಾಟಿಂಗ್ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಆಗಲಿ ಅಥವಾ ಐಪಿಎಲ್ ಆಗಲಿ, ಅವರ ಆಕ್ರಮಣಕಾರಿ ಆಟ ಶೈಲಿ ಎಲ್ಲೆಡೆ ಒಂದೇ ರೀತಿ ಕಾಣಿಸಿಕೊಳ್ಳುತ್ತದೆ.

ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಕೇವಲ 21 ಎಸೆತಗಳಲ್ಲಿ 52 ರನ್‌ಗಳ ಸ್ಫೋಟಕ ಅರ್ಧಶತಕ ಬಾರಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅವರು, ಇದೀಗ ಐಪಿಎಲ್ 2026ರ ಮೇಲೆ ಕಣ್ಣಿಟ್ಟಿದ್ದಾರೆ.

ಮಾರ್ಚ್ 28ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಎರಡು ಮಹತ್ವದ ಮೈಲಿಗಲ್ಲು ಸಾಧಿಸುವ ಸಾಧ್ಯತೆಯಿದೆ. ಈಗಾಗಲೇ ಸನ್‌ರೈಸರ್ಸ್ ಹೈದರಾಬಾದ್ ಪರ 74 ಪಂದ್ಯಗಳಲ್ಲಿ 96 ಸಿಕ್ಸರ್‌ಗಳನ್ನು ಬಾರಿಸಿರುವ ಅವರು, ಇನ್ನೂ 4 ಸಿಕ್ಸರ್ ಸಿಡಿಸಿದರೆ 100 ಸಿಕ್ಸರ್ ಗಡಿ ದಾಟಲಿದ್ದಾರೆ.

ಈ ಸಾಧನೆ ಮಾಡಿದರೆ ಸನ್‌ರೈಸರ್ಸ್ ಪರ 100 ಸಿಕ್ಸರ್‌ ಬಾರಿಸಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಇದಕ್ಕೂ ಮೊದಲು ಈ ದಾಖಲೆಯನ್ನು ಡೇವಿಡ್ ವಾರ್ನರ್ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. 2014ರಿಂದ 2021ರವರೆಗೆ ಸನ್‌ರೈಸರ್ಸ್ ಪರ 95 ಪಂದ್ಯಗಳಲ್ಲಿ ಅವರು 143 ಸಿಕ್ಸರ್‌ಗಳನ್ನು ಸಿಡಿಸಿದ್ದರು.

ಈ ಹಿನ್ನೆಲೆಯಲ್ಲಿ ಮುಂದಿನ ಐಪಿಎಲ್‌ನಲ್ಲಿ ಅಭಿಷೇಕ್ ಶರ್ಮಾ ಪ್ರದರ್ಶನದ ಮೇಲೆ ಕ್ರಿಕೆಟ್ ಅಭಿಮಾನಿಗಳ ಕಣ್ಣು ನೆಟ್ಟಿದೆ.

US-Iran war: ಅಮೆರಿಕ ಜೊತೆ ಮಾತುಕತೆಗೆ ಮೊಜ್ತಬಾ ಖಮೇನಿ ಗ್ರೀನ್ ಸಿಗ್ನಲ್!

0

ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆ, ಇರಾನ್‌ನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅಮೆರಿಕದೊಂದಿಗೆ ಶಾಂತಿ ಮಾತುಕತೆ ನಡೆಸಲು ಸಮ್ಮತಿಸಿದ್ದಾರೆ ಎಂಬ ವರದಿ ಹೊರಬಂದಿದೆ.

ಸೌದಿ ಅರೇಬಿಯಾದ ‘ಅಲ್ ಅರೇಬಿಯಾ’ ಮಾಧ್ಯಮದ ವರದಿ ಪ್ರಕಾರ, ಖಮೇನಿ ಈ ನಿರ್ಧಾರಕ್ಕೆ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಇರಾನ್ ಕಡೆಯಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರಬಂದಿಲ್ಲ.

ಇದೇ ವೇಳೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ಟ್ರೂತ್ ಸೋಶಿಯಲ್’ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಕಳೆದ ಎರಡು ದಿನಗಳಲ್ಲಿ ಇರಾನ್ ಜೊತೆ ಉತ್ತಮ ಮತ್ತು ಫಲಪ್ರದ ಮಾತುಕತೆ ನಡೆದಿರುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆ, ಇರಾನ್‌ನ ವಿದ್ಯುತ್ ಸ್ಥಾವರಗಳು ಹಾಗೂ ಇಂಧನ ಮೂಲಸೌಕರ್ಯಗಳ ಮೇಲೆ ನಡೆಸಬೇಕಿದ್ದ ಮಿಲಿಟರಿ ದಾಳಿಗಳನ್ನು ಐದು ದಿನಗಳವರೆಗೆ ಮುಂದೂಡಲು ಸೂಚನೆ ನೀಡಿರುವುದಾಗಿ ಹೇಳಿದ್ದಾರೆ.

ಇದಕ್ಕೂ ಮೊದಲು, 48 ಗಂಟೆಗಳ ಒಳಗೆ ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ಇರಾನ್‌ನ ವಿದ್ಯುತ್ ಸ್ಥಾವರಗಳನ್ನು ನಾಶ ಮಾಡುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದರು. ಈ ಗಡುವಿನೊಳಗೆ ಕ್ರಮ ಕೈಗೊಳ್ಳದಿದ್ದರೆ ದೊಡ್ಡ ಮಟ್ಟದ ಯುದ್ಧ ಸಂಭವಿಸುವ ಭೀತಿ ವ್ಯಕ್ತವಾಗಿತ್ತು.

ಆದರೆ ಅಮೆರಿಕದ ಈ ಬೆದರಿಕೆಗೆ ಜಗ್ಗದ ಇರಾನ್, ತಮ್ಮ ಇಂಧನ ಹಾಗೂ ವಿದ್ಯುತ್ ಮೂಲಸೌಕರ್ಯಗಳ ಮೇಲೆ ದಾಳಿ ನಡೆದರೆ ಮಧ್ಯಪ್ರಾಚ್ಯದ ಇತರ ದೇಶಗಳ ಇಂಧನ ವ್ಯವಸ್ಥೆಗಳನ್ನೂ ಗುರಿಯಾಗಿಸುತ್ತೇವೆ ಎಂದು ತಿರುಗೇಟು ನೀಡಿತ್ತು.

ಕರ್ನಾಟಕ ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ: 19 ವಿಶೇಷ ರೈಲುಗಳು ಖಾಯಂ ಸೇವೆಗೆ!

ಬೆಂಗಳೂರು: ರಾಜ್ಯದ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿಯಾಗಿದೆ. ಪ್ರಯಾಣಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೇ ಮಂಡಳಿ ಕರ್ನಾಟಕದಲ್ಲಿ ಸಂಚರಿಸುತ್ತಿದ್ದ 19 ವಿಶೇಷ ರೈಲುಗಳನ್ನು ಖಾಯಂ ಸೇವೆಗಳಾಗಿ ಪರಿವರ್ತಿಸಿದೆ.

ಈ ಪಟ್ಟಿಯಲ್ಲಿ 6 ಎಕ್ಸ್‌ಪ್ರೆಸ್, 9 ಮೆಮು/ಡೆಮು ಹಾಗೂ 4 ಪ್ಯಾಸೆಂಜರ್ ರೈಲುಗಳು ಸೇರಿವೆ. ಈ ಕ್ರಮದಿಂದ ಬೆಂಗಳೂರು, ಮೈಸೂರು, ಶಿವಮೊಗ್ಗ ಸೇರಿದಂತೆ 15ಕ್ಕೂ ಹೆಚ್ಚು ಜಿಲ್ಲೆಗಳ ಜನರಿಗೆ ಪ್ರಯಾಣ ಸೌಲಭ್ಯ ಹೆಚ್ಚಾಗಲಿದೆ.

ವಿಶೇಷ ರೈಲುಗಳಾಗಿ ಸಂಚರಿಸುತ್ತಿದ್ದಾಗ ಹೆಚ್ಚಿನ ದರ ಹಾಗೂ ಅನಿಶ್ಚಿತ ವೇಳಾಪಟ್ಟಿಯಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿತ್ತು. ಈಗ ಖಾಯಂ ಸೇವೆಗೆ ಪರಿವರ್ತನೆಯಾದ ಹಿನ್ನೆಲೆಯಲ್ಲಿ ಟಿಕೆಟ್ ದರದಲ್ಲಿ ಇಳಿಕೆ ಸಾಧ್ಯತೆ ಇದೆ. ಸ್ಲೀಪರ್ ಕೋಚ್‌ಗಳಲ್ಲಿ ಸುಮಾರು 30% ಹಾಗೂ ಸಾಮಾನ್ಯ ಟಿಕೆಟ್‌ಗಳಲ್ಲಿ 10–15%ರವರೆಗೆ ದರ ಕಡಿಮೆಯಾಗುವ ನಿರೀಕ್ಷೆಯಿದೆ.

ಖಾಯಂಗೊಂಡ ಎಕ್ಸ್‌ಪ್ರೆಸ್ ರೈಲುಗಳು:

  • ಮೈಸೂರು – ಅಜ್ಮೀರ್ ಎಕ್ಸ್‌ಪ್ರೆಸ್ (16281/16282) – ವಾರಕ್ಕೊಮ್ಮೆ
  • ಬೆಂಗಳೂರು ದಂಡು – ಕಲಬುರಗಿ ಎಕ್ಸ್‌ಪ್ರೆಸ್ (16563/16564) – ವಾರಕ್ಕೊಮ್ಮೆ
  • SMVT ಬೆಂಗಳೂರು – ಬೀದರ್ ಎಕ್ಸ್‌ಪ್ರೆಸ್ (16559/16560) – ವಾರಕ್ಕೊಮ್ಮೆ
  • ಯಶವಂತಪುರ – ತಾಳಗುಪ್ಪ ಎಕ್ಸ್‌ಪ್ರೆಸ್ (16555/16556) – ವಾರಕ್ಕೊಮ್ಮೆ
  • ಹುಬ್ಬಳ್ಳಿ – ಯೋಗನಗರಿ ರಿಷಿಕೇಶ ಎಕ್ಸ್‌ಪ್ರೆಸ್ (17363/17364) – ವಾರಕ್ಕೊಮ್ಮೆ
  • ಮಡಗಾಂವ್ – ಕಾರವಾರ ಎಕ್ಸ್‌ಪ್ರೆಸ್ (10109/10110)

ಮೆಮು / ಡೆಮು ರೈಲುಗಳು:

  • ಬೆಂಗಳೂರು – ಹೊಸೂರು ಮೆಮು (66595/96) – ಪ್ರತಿದಿನ
  • ಹುಬ್ಬಳ್ಳಿ – ವಿಜಯಪುರ ಮೆಮು (66501/02) – ಪ್ರತಿದಿನ
  • ಬೆಂಗಳೂರು – ಅಶೋಕಪುರಂ ಮೆಮು (66597/98) – ಪ್ರತಿದಿನ
  • ಬೆಂಗಳೂರು – ಅಶೋಕಪುರಂ ಮೆಮು (06213/14) – ವಾರಕ್ಕೆ 3 ಬಾರಿ
  • ಬಂಗಾರಪೇಟೆ – SMVT ಬೆಂಗಳೂರು ಮೆಮು (66537/38) – ಪ್ರತಿದಿನ
  • ಹೊಸಪೇಟೆ – ಹುಬ್ಬಳ್ಳಿ ಡೆಮು (76507/08) – ವಾರಕ್ಕೊಮ್ಮೆ
  • ಬಳ್ಳಾರಿ – ದಾವಣಗೆರೆ ಡೆಮು (76509/10) – ವಾರಕ್ಕೆ 6 ದಿನ
  • ಬೆಂಗಳೂರು – ಹಾಸನ ಡೆಮು (66525/26) – ವಾರಕ್ಕೆ 6 ದಿನ
  • ಬಳ್ಳಾರಿ – ಹೊಸಪೇಟೆ ಡೆಮು (07397/98) – ವಾರಕ್ಕೆ 6 ದಿನ

ಇತರೆ ಪ್ಯಾಸೆಂಜರ್ ರೈಲುಗಳು:

ಬೆಂಗಳೂರು–ಚನ್ನಪಟ್ಟಣ, ಮೈಸೂರು–SMVT ಬೆಂಗಳೂರು, ಯಶವಂತಪುರ–ಹಿಂದೂಪುರ ಹಾಗೂ ಹುಬ್ಬಳ್ಳಿ–ವಿಜಯಪುರ ಪ್ಯಾಸೆಂಜರ್ ರೈಲುಗಳನ್ನೂ ಖಾಯಂ ಮಾಡಲಾಗಿದೆ. ಈ ನಿರ್ಧಾರದಿಂದ ಪ್ರಯಾಣ ಯೋಜನೆ ಸುಲಭವಾಗಿದ್ದು, ಮುಂಗಡ ಕಾಯ್ದಿರಿಸುವಿಕೆ ಮಾಡಲು ಅನುಕೂಲವಾಗಲಿದೆ. ಒಟ್ಟಾರೆ, ರೈಲ್ವೇ ಮಂಡಳಿಯ ಈ ಕ್ರಮ ರಾಜ್ಯದ ಸಾವಿರಾರು ಪ್ರಯಾಣಿಕರಿಗೆ ದೊಡ್ಡ ಮಟ್ಟದ ನೆರವಾಗಲಿದೆ.

error: Content is protected !!