Home Blog

ಡಿ.ಕೆ. ಶಿವಕುಮಾರ್ ಕುಟುಂಬದಲ್ಲಿ ಸಂತಸ: ಗಮನ ಸೆಳೆದ ತೇಜಸ್ವಿ ಸೂರ್ಯ ಪೋಸ್ಟ್

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ಹೆಗ್ಡೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಡಿಸಿಎಂ ಕುಟುಂಬದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ. ಈ ವಿಚಾರ ತಿಳಿದ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್, ಮೊಮ್ಮಗಳನ್ನು ಮುದ್ದಾಡಿ ಮಗಳ ಆರೋಗ್ಯ ವಿಚಾರಿಸಿದರು.

https://twitter.com/Tejasvi_Surya/status/2050256338643779783https://twitter.com/Tejasvi_Surya/status/2050256338643779783

ವಿಶೇಷವೆಂದರೆ ಕಾರ್ಮಿಕ ದಿನಾಚರಣೆ, ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣ ಅವರ ಜನ್ಮದಿನ ಹಾಗೂ ಶುಭ್ರ ಪೂರ್ಣಿಮೆಯ ದಿನವೇ ಡಿ.ಕೆ. ಶಿವಕುಮಾರ್ ತಾತನಾಗಿರುವುದು ಕುಟುಂಬದ ಸಂತಸವನ್ನು ಮತ್ತಷ್ಟು ಹೆಚ್ಚಿಸಿದೆ. ಮಾಧ್ಯಮ ಪ್ರತಿನಿಧಿಗಳು ಈ ಕುರಿತು ಪ್ರಶ್ನಿಸಿದಾಗ ಡಿಸಿಎಂ ಮುಗುಳ್ನಗೆಯೊಂದಿಗೆ ಸಂತಸ ವ್ಯಕ್ತಪಡಿಸಿದರು.

ಈ ಮಧ್ಯೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ.

ಸಾಮಾನ್ಯವಾಗಿ ರಾಜಕೀಯ ವಿಚಾರಗಳಲ್ಲಿ ಡಿ.ಕೆ. ಶಿವಕುಮಾರ್ ಮತ್ತು ತೇಜಸ್ವಿ ಸೂರ್ಯ ನಡುವಿನ ವಾಗ್ವಾದಗಳು ಚರ್ಚೆಗೆ ಗ್ರಾಸವಾಗುತ್ತವೆ. ಆದರೆ ಅಭಿವೃದ್ಧಿ ವಿಚಾರಗಳಲ್ಲಿ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಹಲವು ಉದಾಹರಣೆಗಳಿವೆ.

ನಿನ್ನೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮಗಳಲ್ಲಿ ಇಬ್ಬರೂ ಭಾಗವಹಿಸಿದ್ದರು. ಇದೇ ವೇಳೆ ತಾನು ಶೀಘ್ರದಲ್ಲೇ ತಾತನಾಗಲಿದ್ದೇನೆ ಎಂಬ ಸಂತಸದ ಸುದ್ದಿಯನ್ನು ಡಿ.ಕೆ. ಶಿವಕುಮಾರ್ ತಮ್ಮೊಂದಿಗೆ ಹಂಚಿಕೊಂಡಿದ್ದರು ಎಂದು ತೇಜಸ್ವಿ ಸೂರ್ಯ ಎಕ್ಸ್ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಪತ್ನಿ ಚಿನ್ನಾಭರಣ ಸಮೇತ ಪರಾರಿ: ಇಬ್ಬರು ಮಕ್ಕಳನ್ನು ಕೊಂದು ಪತಿ ಆತ್ಮಹತ್ಯೆ!

ತುಮಕೂರು: ಕುಟುಂಬ ಕಲಹದ ಹಿನ್ನೆಲೆ ಮನನೊಂದು ವ್ಯಕ್ತಿಯೊಬ್ಬ ತನ್ನಿಬ್ಬರು ಪುಟ್ಟ ಮಕ್ಕಳನ್ನು ಹತ್ಯೆಗೈದು ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ನಡೆದಿದೆ.

ಶುಕ್ರವಾರ ರಾತ್ರಿ ಈ ದಾರುಣ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಅಕ್ಕಪಕ್ಕದ ನಿವಾಸಿಗಳು ಗಮನಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತನನ್ನು ಆಲ್ಕೆರೆ ಗ್ರಾಮದ ಮಲ್ಲೇಶ್ವರಸ್ವಾಮಿ ದೇವಾಲಯದ ಅರ್ಚಕ ಹಾಗೂ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಶಿವಣ್ಣ (40) ಎಂದು ಗುರುತಿಸಲಾಗಿದೆ. ಸಾವಿಗೂ ಮುನ್ನ ಆತ ತನ್ನ ಮಕ್ಕಳಾದ ಜೀವನ್ (10) ಮತ್ತು ಪ್ರಾಣೇಶ್ (5) ಅವರನ್ನು ಉಸಿರುಗಟ್ಟಿಸಿ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಶಿವಣ್ಣನ ಪತ್ನಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು ಎನ್ನಲಾಗಿದ್ದು, ಇದೇ ವಿಚಾರವಾಗಿ ದಂಪತಿಗಳ ನಡುವೆ ಆಗಾಗ ಕಲಹ ನಡೆಯುತ್ತಿತ್ತು. ಸುಮಾರು ಒಂದು ವಾರದ ಹಿಂದೆ ಆಕೆ ಗಂಡ ಮತ್ತು ಮಕ್ಕಳನ್ನು ಬಿಟ್ಟು ಮನೆ ತೊರೆದಿದ್ದಳು. ಈ ಕುರಿತು ಶಿವಣ್ಣ ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪೊಲೀಸರ ಮಧ್ಯಸ್ಥಿಕೆಯಿಂದ ಆಕೆ ಮನೆಗೆ ಮರಳಿದ್ದರೂ, ಮರುದಿನ ಶಿವಣ್ಣ ಕೆಲಸಕ್ಕೆ ತೆರಳಿದ್ದ ಸಮಯದಲ್ಲಿ ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣದೊಂದಿಗೆ ಮತ್ತೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ತಿಳಿದುಬಂದಿದೆ.

ಈ ಬೆಳವಣಿಗೆಯಿಂದ ತೀವ್ರ ಮನನೊಂದ ಶಿವಣ್ಣ, ಜೀವನದ ಬಗ್ಗೆ ಜಿಗುಪ್ಸೆಗೊಂಡು ಮಕ್ಕಳನ್ನು ಹತ್ಯೆ ಮಾಡಿ ಬಳಿಕ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಘಟನಾ ಸ್ಥಳಕ್ಕೆ ಕುಣಿಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳೊಂದಿಗೆ ತಂದೆಯೂ ಸಾವನ್ನಪ್ಪಿರುವ ಘಟನೆ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಡಾಲಿ ಧನಂಜಯ್ ಮನೆಗೆ ಗಂಡು ಮಗು ಆಗಮನ ಸಂತೋಷದಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ಕುಟುಂಬ

ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಮತ್ತು ಡಾ. ಧನ್ಯತಾ ದಂಪತಿಗೆ ಗಂಡು ಮಗು ಜನಿಸಿದ್ದು, ಕುಟುಂಬದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಈ ಸಂತಸದ ಸುದ್ದಿಯನ್ನು ಧನಂಜಯ್ ಅವರು ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಇತ್ತೀಚೆಗಷ್ಟೇ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯ ಬಗ್ಗೆ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದರು. ಆ ಸಂದರ್ಭದಲ್ಲಿ ಅವರು ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡು “Our universe is expanding” ಎಂಬ ಕ್ಯಾಪ್ಷನ್‌ನೊಂದಿಗೆ ಪೋಸ್ಟ್ ಮಾಡಿದ್ದರು.

2025ರ ಫೆಬ್ರವರಿ 16ರಂದು ಮೈಸೂರಿನಲ್ಲಿ ಡಾಲಿ ಧನಂಜಯ್ ಅವರು ಡಾ. ಧನ್ಯತಾ ಅವರನ್ನು ವಿವಾಹವಾಗಿದ್ದರು. ಮದುವೆ ಹಾಗೂ ಆರತಕ್ಷತೆ ಸಮಾರಂಭಗಳಲ್ಲಿ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದ ಪ್ರಮುಖರು ಭಾಗವಹಿಸಿ ದಂಪತಿಗೆ ಶುಭಹಾರೈಸಿದ್ದರು.

ಇದೀಗ ಗಂಡು ಮಗುವಿನ ಆಗಮನದೊಂದಿಗೆ ಧನಂಜಯ್ ಕುಟುಂಬದಲ್ಲಿ ಸಂಭ್ರಮ ಹೆಚ್ಚಿದ್ದು, ಅಭಿಮಾನಿಗಳು ಹಾಗೂ ಚಿತ್ರರಂಗದವರು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆ ಸುರಿಸುತ್ತಿದ್ದಾರೆ.

42°C ಹಿಟ್‌ವೇವ್ ಎಚ್ಚರಿಕೆ ನಡುವೆಯೂ ಇಂದು ಬೆಂಗಳೂರಿನಲ್ಲಿ ಮಳೆಯ ಅಬ್ಬರ

ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಮೂರು ದಿನಗಳಿಂದ ಆಲಿಕಲ್ಲು ಸಹಿತ ಮಳೆಯ ಅಬ್ಬರ ಮುಂದುವರಿದಿದ್ದು, ಇಂದು ಕೂಡ ರಾಜ್ಯದ ಹಲವೆಡೆ ಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಒಂದೆಡೆ ಮಳೆ, ಇನ್ನೊಂದೆಡೆ ಸುಡುತ್ತಿರುವ ಬಿಸಿಲು – ರಾಜ್ಯದಲ್ಲಿ ಹವಾಮಾನ ಸಂಪೂರ್ಣ ಅಸ್ಥಿರವಾಗಿದೆ.

ಕಲಬುರಗಿ ಮತ್ತು ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತಾಪಮಾನ 42 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಲಿದ್ದು, ಮುಂದಿನ ಮೂರು ದಿನಗಳವರೆಗೆ ಇದೇ ರೀತಿಯ ತೀವ್ರ ಬಿಸಿಲು ಮುಂದುವರಿಯಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ 30–40 ಕಿ.ಮೀ ವೇಗದ ಗಾಳಿಯೊಂದಿಗೆ ಸಾಧಾರಣ ಮಳೆಯ ಸಾಧ್ಯತೆ ಇದೆ.

ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಜೊತೆಗೆ ಕೆಲವೆಡೆ ಹೀಟ್‌ವೇವ್ ಅಲರ್ಟ್ ಕೂಡ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಗ್ರಾಮಾಂತರ, ಮೈಸೂರು, ಮಂಡ್ಯ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಜೋರು ಮಳೆಯ ಮುನ್ಸೂಚನೆ ಇದೆ.

ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಅಲರ್ಟ್ ನಡುವೆ ಅನಾಹುತಗಳೂ ದಾಖಲಾಗಿವೆ. ಜೆ.ಪಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೊಂದೆಡೆ ಶಿವಾಜಿನಗರದ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತದಿಂದ ಭೀಕರ ದುರಂತ ಸಂಭವಿಸಿದ್ದು, 7 ಮಂದಿ ಮೃತಪಟ್ಟಿರುವುದು ಆತಂಕ ಹೆಚ್ಚಿಸಿದೆ.

ಒಟ್ಟಿನಲ್ಲಿ ಹವಾಮಾನ ಅಸ್ಥಿರತೆಯಿಂದ ರಾಜ್ಯದಲ್ಲಿ ಮಳೆ–ಬಿಸಿಲಿನ ಜೊತೆಗೆ ಜೀವಹಾನಿಯ ಶಾಕ್ ಘಟನೆಗಳು ಜನರನ್ನು ಕಂಗಾಲು ಮಾಡಿವೆ.

ಡಿ. ಸುಧಾಕರ್​​ ಆರೋಗ್ಯದ ಬಗ್ಗೆ ಬಿಗ್​​ ಅಪ್ಡೇಟ್ ನೀಡಿದ ಸಹೋದರ

ಬೆಂಗಳೂರು/ಚಿತ್ರದುರ್ಗ: ಶ್ವಾಸಕೋಶದ ಗಂಭೀರ ಸೋಂಕಿನಿಂದ ಜೀವ-ಮರಣ ಹೋರಾಟ ನಡೆಸುತ್ತಿದ್ದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್ ಅವರ ಆರೋಗ್ಯದಲ್ಲಿ ಮಹತ್ವದ ಚೇತರಿಕೆ ಕಂಡುಬಂದಿದೆ. ಕೆಲ ದಿನಗಳಿಂದ ಆತಂಕದಲ್ಲಿ ಕಾಯುತ್ತಿದ್ದ ಅಭಿಮಾನಿಗಳಿಗೆ ಇದೀಗ ದೊಡ್ಡ ನೆಮ್ಮದಿ ಸಿಕ್ಕಿದೆ.

ಸಚಿವರ ಸಹೋದರ ಡಿ.ಕುಮಾರ್ ಮಾಹಿತಿ ನೀಡಿದ್ದು, “ಸುಧಾಕರ್ ಅವರಿಗೆ ಪ್ರಜ್ಞೆ ಬಂದಿದೆ. ಅವರು ಕಣ್ಣು ತೆರೆದು ಪ್ರತಿಕ್ರಿಯೆ ನೀಡಿದ್ದಾರೆ. ನೂರಕ್ಕೆ ನೂರರಷ್ಟು ಗುಣಮುಖರಾಗುತ್ತಾರೆ ಎಂಬ ವಿಶ್ವಾಸವಿದೆ. ಶೀಘ್ರದಲ್ಲೇ ಹಿರಿಯೂರಿಗೆ ಮರಳಿ ಜನಸೇವೆ ಮುಂದುವರಿಸುತ್ತಾರೆ” ಎಂದು ತಿಳಿಸಿದ್ದಾರೆ.

ಮೊಣಕಾಲಿನ ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಸಚಿವರಿಗೆ ಬಳಿಕ ಶ್ವಾಸಕೋಶದಲ್ಲಿ ಗಂಭೀರ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ವೈದ್ಯರು ನೀಡಿದ ಮಾಹಿತಿಯಂತೆ, ಅವರು ವೆಂಟಿಲೇಟರ್ ಮತ್ತು ಎಕ್ಮೋ ಸಹಾಯದಿಂದ ಉಸಿರಾಟ ನಡೆಸುತ್ತಿದ್ದರು.

ಕಿಮ್ಸ್ ಆಸ್ಪತ್ರೆಯ ತಜ್ಞ ವೈದ್ಯ ಡಾ. ಮಂಜುನಾಥ್ ಹೇಳಿದ್ದಂತೆ, ಸೋಂಕು ನಿಯಂತ್ರಣಕ್ಕೆ ತರಲು ಚಿಕಿತ್ಸೆ ಮುಂದುವರಿಸಲಾಗಿದ್ದು, ಅಗತ್ಯವಿದ್ದರೆ ಶ್ವಾಸಕೋಶ ಕಸಿ ಮಾಡುವ ಸಾಧ್ಯತೆಯೂ ಪರಿಶೀಲಿಸಲಾಗುತ್ತಿತ್ತು. ಈ ಹೇಳಿಕೆಗಳಿಂದಾಗಿ ಅಭಿಮಾನಿಗಳು ಹಾಗೂ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಾಗಿತ್ತು.

ಸಚಿವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಹೊರಬಿದ್ದ ಬೆನ್ನಲ್ಲೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸೇರಿದಂತೆ ಅನೇಕ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.

ಇದೀಗ ಆರೋಗ್ಯದಲ್ಲಿ ಕಂಡುಬಂದ ಸುಧಾರಣೆ ರಾಜಕೀಯ ವಲಯ ಹಾಗೂ ಅಭಿಮಾನಿಗಳಲ್ಲಿ ಆಶಾಕಿರಣ ಮೂಡಿಸಿದ್ದು, ಸಚಿವರು ಶೀಘ್ರ ಗುಣಮುಖರಾಗಲಿ ಎಂಬ ಪ್ರಾರ್ಥನೆಗಳು ಮುಂದುವರಿದಿವೆ.

ಶಾಸಕ ನೇಮಿರಾಜ್ ನಾಯ್ಕ ವಿರುದ್ಧ 30% ಕಮಿಷನ್ ಆರೋಪ

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪುರಸಭೆಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ರೇಷ್ಮಾ ಸಿಕಂದರ್ ಅವರಿಗೆ ಅಭಿನಂದನೆ ಸಲ್ಲಿಸಿದ ಬಳಿಕ, ಹಾಲಿ ಶಾಸಕ ನೇಮಿರಾಜ್ ನಾಯ್ಕ ವಿರುದ್ಧ ಗಂಭೀರ ಆರೋಪಗಳನ್ನು ಮಾಜಿ ಶಾಸಕ ಭೀಮಾನಾಯ್ಕ ಮಾಡಿದ್ದಾರೆ.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಜನರ ಸಹಾಯದಿಂದ ಅಧಿಕಾರಕ್ಕೆ ಬಂದ ಬಳಿಕ ಜನರನ್ನೇ ಮರೆತು, ಅಭಿವೃದ್ಧಿ ಕಾಮಗಾರಿಗಳಲ್ಲಿ 30% ಕಮಿಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

2016ಕ್ಕೂ ಮೊದಲು ಚಿಂತರಪಳ್ಳಿ ಮತ್ತು ಹಗರಿಬೊಮ್ಮನಹಳ್ಳಿ ಗ್ರಾಮಪಂಚಾಯಿತಿಗಳು ದೇಶದಲ್ಲೇ ಅತಿ ದೊಡ್ಡ ಪಂಚಾಯಿತಿಗಳಾಗಿದ್ದು (82 ಸದಸ್ಯರು), ಅವುಗಳನ್ನು ತಮ್ಮ ಅವಧಿಯಲ್ಲಿ ರಾಜಕೀಯ ಇಚ್ಛಾಶಕ್ತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ ಎಂದರು. ಆ ನಂತರದಿಂದ ಹಗರಿಬೊಮ್ಮನಹಳ್ಳಿ ಪುರಸಭೆಯಲ್ಲಿ ಜೋಗಿ ಹನುಮಂತಪ್ಪರಿಂದ ರೇಷ್ಮಾ ಸಿಕಂದರ್‌ವರೆಗೆ ಐದು ಕಾಂಗ್ರೆಸ್ ಅಧ್ಯಕ್ಷರು ಆಯ್ಕೆಯಾಗಿದ್ದಾರೆ ಎಂದು ಹೇಳಿದರು.

ಹೆಬಿಟೇಟ್ ಕಂಪನಿಗೆ ಸುಮಾರು ₹200 ಕೋಟಿ ಅನುದಾನ ನೀಡಲಾಗಿದ್ದು, ಅದರಲ್ಲಿ ₹100 ಕೋಟಿ ಕಮಿಷನ್ ಪಡೆದಿರುವ ಆರೋಪವಿದೆ ಎಂದು ಹೇಳಿದರು. ಕ್ಷೇತ್ರಕ್ಕೆ ಬಂದ ₹25 ಕೋಟಿ ಅನುದಾನದಲ್ಲಿ ಬಹುಪಾಲು ಕೊಟ್ಟೂರು ಭಾಗಕ್ಕೆ ಮೀಸಲಿಟ್ಟಿದ್ದಾರೆ ಎಂದು ದೂರಿದರು. ವಿವಿಧ ಯೋಜನೆಗಳಿಂದ ಬಂದ ಸುಮಾರು ₹500 ಕೋಟಿ ಅನುದಾನ ಸರಿಯಾಗಿ ಬಳಕೆಯಾಗಿಲ್ಲ ಎಂದೂ ಆರೋಪಿಸಿದರು.

ಜಾಗಟಗೆರೆ–ರಾಮಪುರ ರಸ್ತೆ ಮೂರು ತಿಂಗಳಲ್ಲಿ ಹಾಳಾಗಿರುವುದು, ಮನೆ ಇಲ್ಲದ ಪ್ರದೇಶಗಳಲ್ಲಿ ಸಿಸಿ ರಸ್ತೆ ನಿರ್ಮಿಸಿರುವುದು ಸೇರಿದಂತೆ ಹಲವು ಉದಾಹರಣೆಗಳನ್ನು ಅವರು ನೀಡಿದರು. ಮಾಲವಿ ಜಲಾಶಯದ ಗೇಟ್ ಅಳವಡಿಕೆ ಕಾಮಗಾರಿಯಲ್ಲಿ ಕೂಡ 30% ಕಮಿಷನ್ ಬೇಡಿಕೆಯ ಕಾರಣ ಕೆಲಸ ವಿಳಂಬವಾಗಿದೆ ಎಂದು ಹೇಳಿದರು. ಈ ಎಲ್ಲ ವಿಷಯಗಳನ್ನು ಪರಿಶೀಲಿಸಿ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಸಾಹಿರಾಬಾನು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಕ್ಕಿ ತೋಟೇಶ, ಕಾಂಗ್ರೆಸ್ ಮುಖಂಡರಾದ ಬಿ. ಚಂದ್ರಪ್ಪ, ನಿಕಟಪೂರ್ವ ಪುರಸಭೆ ಅಧ್ಯಕ್ಷ ಎಂ. ಮರಿರಾಮಪ್ಪ, ಹಾಲ್ದಾಳ್ ವಿಜಯಕುಮಾರ್, ಹಿರಿಯ ಕಾಂಗ್ರೆಸ್ಸಿಗ ಹೆಗ್ಡಾಳ್, ಡಿಶ್ ಮಂಜುನಾಥ್, ರಾಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿಗೋಣಿಬಸಪ್ಪ, ಪುರಸಭಾ ಸದಸ್ಯ ಪವಾಡಿ ಹನುಮಂತಪ್ಪ, ಸೆರೆಗಾರ ಹುಚ್ಚಪ್ಪ, ಬಾಲಕೃಷ್ಣ ಬಾಬು, ಕರ್ಕೀಹಳ್ಳಿ ಚಂದ್ರಪ್ಪ, ಕೆಜಿಎನ್ ಅಲ್ಲಭಕ್ಷಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗುರುಬಸವರಾಜ ಸೊನ್ನದ, ಆರ್.ಎಸ್.ಎಸ್.ಎನ್. ಅಧ್ಯಕ್ಷ ದಾದಮ್ಮನವರ ಬಸವರಾಜ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಆರ್. ವೆಂಕಟೇಶ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

“ಅಭಿವೃದ್ಧಿ ಕಾಮಗಾರಿಗಳಲ್ಲಿ ಮುಂಗಡವಾಗಿ 30% ಕಮಿಷನ್ ಪಡೆದು ಕೆಲಸ ಮಾಡಲಾಗುತ್ತಿದೆ”

ಮಾಜಿ ಶಾಸಕ ಭೀಮಾನಾಯ್ಕ

ಬೆಂಗಳೂರು ಗಾಳಿ ಇನ್ನೂ ಅಪಾಯದ ಅಂಚಿನಲ್ಲಿ: AQI 109… ಹುಬ್ಬಳ್ಳಿಯಲ್ಲಿ ಭಾರೀ ಸುಧಾರಣೆ!

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ವಾಯು ಗುಣಮಟ್ಟದಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡುಬಂದಿದ್ದರೂ, ಆರೋಗ್ಯದ ದೃಷ್ಟಿಯಿಂದ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಪ್ರಸ್ತುತ ಬೆಂಗಳೂರಿನ AQI 109ಕ್ಕೆ ತಲುಪಿದ್ದು, ಸಂಖ್ಯಾಶಃ ‘ಮಧ್ಯಮ’ ಅಥವಾ ‘ಕಳಪೆ’ ಗಡಿಯಲ್ಲಿದ್ದರೂ, ವಿಶ್ವ ಆರೋಗ್ಯ ಸಂಸ್ಥೆ ಮಾನದಂಡಗಳ ಪ್ರಕಾರ ಇದು ಇನ್ನೂ ಆರೋಗ್ಯಕ್ಕೆ ಹಾನಿಕರವಾಗಿಯೇ ಪರಿಗಣಿಸಲಾಗುತ್ತದೆ.

ಇದಕ್ಕೆ ವಿರುದ್ಧವಾಗಿ ಹುಬ್ಬಳ್ಳಿ ನಗರದಲ್ಲಿ AQI ಕೇವಲ 72ರಷ್ಟಿದ್ದು, ಉತ್ತಮ ಮಟ್ಟದ ಗಾಳಿ ಗುಣಮಟ್ಟ ದಾಖಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ಮಂಗಳೂರು ಈಗ ಸ್ವಲ್ಪ ಸುಧಾರಣೆ ಕಂಡರೂ, AQI 115ರೊಂದಿಗೆ ಇನ್ನೂ ಕಳಪೆ ಮಟ್ಟದಲ್ಲೇ ಇದೆ.

ರಾಜ್ಯದ ಪ್ರಮುಖ ನಗರಗಳ ಇಂದಿನ AQI:

  • ಬೆಂಗಳೂರು – 109
  • ಮಂಗಳೂರು – 115
  • ಮೈಸೂರು – 117
  • ಬೆಳಗಾವಿ – 46
  • ಕಲಬುರ್ಗಿ – 90
  • ಶಿವಮೊಗ್ಗ – 112
  • ಬಳ್ಳಾರಿ – 103
  • ಹುಬ್ಬಳ್ಳಿ – 72
  • ಉಡುಪಿ – 113
  • ವಿಜಯಪುರ – 75

ತಜ್ಞರ ಪ್ರಕಾರ, ಸಂಖ್ಯೆಗಳು ಸ್ವಲ್ಪ ಇಳಿಕೆಯಾಗಿದ್ದರೂ, ದೀರ್ಘಕಾಲದ ದೃಷ್ಟಿಯಲ್ಲಿ ಈ ಮಟ್ಟದ ವಾಯು ಗುಣಮಟ್ಟ ಉಸಿರಾಟ ಸಮಸ್ಯೆಗಳು, ಅಲರ್ಜಿ ಮತ್ತು ಹೃದಯ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗಬಹುದು.

AQI ವರ್ಗೀಕರಣ:

  • 0–50: ಉತ್ತಮ
  • 50–100: ಮಧ್ಯಮ
  • 100–150: ಕಳಪೆ
  • 150–200: ಅನಾರೋಗ್ಯಕರ
  • 200–300: ಗಂಭೀರ
  • 300+: ಅಪಾಯಕಾರಿ

ಒಟ್ಟಿನಲ್ಲಿ, ರಾಜ್ಯದ ಕೆಲ ನಗರಗಳಲ್ಲಿ ಸುಧಾರಣೆ ಕಂಡರೂ, ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಗಾಳಿಯ ಗುಣಮಟ್ಟ ಇನ್ನೂ ಆರೋಗ್ಯಕ್ಕೆ ಸವಾಲಾಗಿಯೇ ಉಳಿದಿದೆ.

ಬೆಂಗಳೂರಿನ ಪೀಣ್ಯ ಎಲಿವೇಟೆಡ್ ಫ್ಲೈಓವರ್ 4 ದಿನ ಬಂದ್: ಪರ್ಯಾಯ ಮಾರ್ಗ ಘೋಷಣೆ!

ಬೆಂಗಳೂರು: ನಗರದಲ್ಲಿ ಪ್ರಮುಖ ಸಂಚಾರ ಮಾರ್ಗವಾಗಿರುವ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಅನ್ನು ನಾಲ್ಕು ದಿನಗಳ ಕಾಲ ಸಂಪೂರ್ಣ ಬಂದ್ ಮಾಡಲು ತೀರ್ಮಾನಿಸಲಾಗಿದೆ. ಫ್ಲೈಓವರ್ ಕೇಬಲ್ ಅಳವಡಿಕೆ ದುರಸ್ತಿ ಮತ್ತು ಅಂತಿಮ ಲೋಡ್ ಟೆಸ್ಟಿಂಗ್ ಹಿನ್ನೆಲೆ, ಮೇ 5ರ ಬೆಳಗ್ಗೆ 5 ಗಂಟೆಯಿಂದ ಮೇ 8ರ ಬೆಳಗ್ಗೆ 11 ಗಂಟೆಯವರೆಗೆ ಸಂಚಾರ ನಿರ್ಬಂಧ ಜಾರಿಯಾಗಲಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ನಿರ್ಧಾರ ಕೈಗೊಂಡಿದ್ದು, ಫ್ಲೈಓವರ್‌ನ ಎರಡೂ ಬದಿಗಳಲ್ಲೂ ವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಸುರಕ್ಷತೆ ಮತ್ತು ಸುಗಮ ಸಂಚಾರದ ಹಿತದೃಷ್ಟಿಯಿಂದ ವಾಹನ ಸವಾರರು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಬೆಂಗಳೂರು ಟ್ರಾಫಿಕ್ ಪೊಲೀಸ್ ಮನವಿ ಮಾಡಿದೆ.

ಪರ್ಯಾಯ ಮಾರ್ಗಗಳು:

ನೆಲಮಂಗಲದಿಂದ ಬೆಂಗಳೂರಿಗೆ:
ಕೆನ್ನಮೆಟಲ್ ಫ್ಯಾಕ್ಟರಿ ಬಳಿ ಫ್ಲೈಓವರ್ ಕೆಳಭಾಗದ ಎನ್‌ಎಚ್-4 ಮತ್ತು ಸರ್ವಿಸ್ ರಸ್ತೆ ಮೂಲಕ → 8ನೇ ಮೈಲಿ → ದಾಸರಹಳ್ಳಿ → ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ → ಎಸ್.ಆರ್.ಎಸ್ ಜಂಕ್ಷನ್ → ಗೊರಗುಂಟೆಪಾಳ್ಯ → ಜಾಲಹಳ್ಳಿ ಕ್ರಾಸ್

ಸಿ.ಎಂ.ಟಿ.ಐದಿಂದ ನೆಲಮಂಗಲಕ್ಕೆ:
ಫ್ಲೈಓವರ್ ಕೆಳಭಾಗದ ಎನ್‌ಎಚ್-4 ಮತ್ತು ಸರ್ವಿಸ್ ರಸ್ತೆ ಮೂಲಕ → ಎಸ್.ಆರ್.ಎಸ್ ಜಂಕ್ಷನ್ → ಪೊಲೀಸ್ ಠಾಣೆ ಜಂಕ್ಷನ್ → ಜಾಲಹಳ್ಳಿ ಕ್ರಾಸ್ → ದಾಸರಹಳ್ಳಿ → 8ನೇ ಮೈಲಿ → ರ್ಲೆಜಿ ಟೋಲ್

ಗಮನಾರ್ಹವಾಗಿ, ಇದೇ ಕಾಮಗಾರಿಗಾಗಿ ಫ್ಲೈಓವರ್ ಅನ್ನು ಏಪ್ರಿಲ್ 13ರಿಂದ 5 ದಿನ ಬಂದ್ ಮಾಡುವ ಯೋಜನೆ ಮೊದಲು ಘೋಷಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಕಾಮಗಾರಿ ಮುಂದೂಡಲ್ಪಟ್ಟಿದ್ದು, ಸಂಚಾರವನ್ನು ತಾತ್ಕಾಲಿಕವಾಗಿ ಮುಂದುವರಿಸಲಾಗಿತ್ತು. ಈಗ ಅಂತಿಮ ಹಂತದ ಕಾಮಗಾರಿ ಆರಂಭವಾಗುತ್ತಿರುವ ಹಿನ್ನೆಲೆ, ನಗರದಲ್ಲಿ ಟ್ರಾಫಿಕ್ ಒತ್ತಡ ಹೆಚ್ಚಾಗುವ ಸಾಧ್ಯತೆ ಇದ್ದು, ವಾಹನ ಸವಾರರು ಮುಂಚಿತವಾಗಿ ಯೋಜನೆ ರೂಪಿಸಿಕೊಳ್ಳುವುದು ಅಗತ್ಯ.

ನವಿಲುಗಳ ಬಳಿಕ ಕೋಳಿಗಳ ಸಾವು: ತುಮಕೂರಿನಲ್ಲಿ H5N1 ಅಲರ್ಟ್, 5 ಗ್ರಾಮಗಳು ಸೀಲ್!

0

ತುಮಕೂರು: ಜಿಲ್ಲೆಯಲ್ಲಿ H5N1 ಹಕ್ಕಿಜ್ವರ ಆತಂಕ ತೀವ್ರಗೊಂಡಿದೆ. 44 ನವಿಲುಗಳ ಸಾವಿನ ನಂತರ ಈಗ ಕೋಳಿಗಳ ಸಾವು ವರದಿಯಾಗಿದ್ದು ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ.

ಬೊಮ್ಮನಹಳ್ಳಿ ಗ್ರಾಮದ ಕೋಳಿ ಫಾರಂನಲ್ಲಿ ಒಂದೇ ವೇಳೆ ಸುಮಾರು 30 ಕೋಳಿಗಳು ಸಾವನ್ನಪ್ಪಿದ್ದು, ಹಕ್ಕಿಜ್ವರ ಕೋಳಿಗಳಿಗೂ ತಗುಲಿದೆಯೇ ಎಂಬ ಅನುಮಾನ ಮೂಡಿದೆ. ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಏಪ್ರಿಲ್ 16ರಿಂದ ಆರಂಭವಾದ ನವಿಲುಗಳ ಸಾವು, ಆರಂಭದಲ್ಲಿ ಬಿಸಿಲಿನ ಪರಿಣಾಮ ಎಂದು ಭಾವಿಸಲಾಗಿತ್ತು. ಆದರೆ ಎಫ್‌ಎಸ್‌ಎಲ್ ವರದಿ ಹಕ್ಕಿಜ್ವರವನ್ನೇ ದೃಢಪಡಿಸಿತು.

ಇದೀಗ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದ್ದು, ಕಲ್ಲಳ್ಳಿ, ಕೋಡಿಹಳ್ಳಿ, ಹುಣ್ಣೆನಹಳ್ಳಿ, ಬೊಮ್ಮನಹಳ್ಳಿ, ಬೈರಸಂದ್ರ ಗ್ರಾಮಗಳನ್ನು ಕಂಟೋನ್ಮೆಂಟ್ ಜೋನ್ ಆಗಿ ಘೋಷಿಸಲಾಗಿದೆ. ಚಿಕನ್ ಅಂಗಡಿಗಳಿಗೆ ತಾತ್ಕಾಲಿಕ ಬೀಗ ಹಾಕಲಾಗಿದ್ದು, ಜನರಿಗೆ ಎಚ್ಚರಿಕೆ ನೀಡಲಾಗಿದೆ. ಯಾವುದೇ ಸಾವು ಕಂಡುಬಂದರೆ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಒಟ್ಟಿನಲ್ಲಿ, ತುಮಕೂರಿನಲ್ಲಿ ಹಕ್ಕಿಜ್ವರ ಪರಿಸ್ಥಿತಿ ನಿಯಂತ್ರಣದಲ್ಲಿರಿಸಲು ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದು, ಜನರು ಮುಂಜಾಗ್ರತೆ ವಹಿಸುವುದು ಅತ್ಯವಶ್ಯಕ.

ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಜೀವಕ್ಕೆ ಅಪಾಯ! ಕ್ಯಾನ್ಸರ್ ಬಗ್ಗೆ ಇರಲಿ ಎಚ್ಚರ

ಇತ್ತೀಚಿನ ದಿನಗಳಲ್ಲಿ ಭಾರತ ಸೇರಿದಂತೆ ವಿಶ್ವದಾದ್ಯಂತ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ.

ವೈದ್ಯರ ಪ್ರಕಾರ, ಜನರ ದೈನಂದಿನ ಜೀವನಶೈಲಿ ಮತ್ತು ಆಹಾರ ಪದ್ಧತಿಗಳಲ್ಲಿನ ಬದಲಾವಣೆಗಳು ಈ ಅಪಾಯವನ್ನು ಹೆಚ್ಚಿಸುತ್ತಿವೆ.

ತಂಬಾಕು ಬಳಕೆ ಮತ್ತು ಧೂಮಪಾನವು ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿದ್ದು, ಇದರಿಂದ ಬಾಯಿ, ಶ್ವಾಸಕೋಶ ಹಾಗೂ ಗಂಟಲಿನ ಕ್ಯಾನ್ಸರ್ ಅಪಾಯ ಹೆಚ್ಚುತ್ತದೆ. ಪ್ಯಾಸಿವ್ ಸ್ಮೋಕಿಂಗ್‌ನಲ್ಲೂ ಈ ಅಪಾಯ ತಪ್ಪುವುದಿಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ.

ಇದಲ್ಲದೆ, ಪ್ರಾಸೆಸ್ಡ್ ಮತ್ತು ಪ್ಯಾಕೇಜ್ಡ್ ಆಹಾರಗಳ ಹೆಚ್ಚಿದ ಬಳಕೆ, ಅವುಗಳಲ್ಲಿ ಇರುವ ಕೆಮಿಕಲ್ಸ್ ಮತ್ತು ಪ್ರಿಸರ್ವೇಟಿವ್ಸ್ ದೇಹದ ಮೇಲೆ ದುಷ್ಪರಿಣಾಮ ಬೀರುತ್ತವೆ. ಹೆಚ್ಚು ಎಣ್ಣೆಯಲ್ಲಿ ತಯಾರಿಸಿದ ಅಥವಾ ಸುಟ್ಟ ಆಹಾರ ಪದಾರ್ಥಗಳ ಸೇವನೆಯೂ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಬಿಸಿ ಆಹಾರವನ್ನು ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಸಂಗ್ರಹಿಸುವುದು ಹಾನಿಕಾರಕ ರಾಸಾಯನಿಕಗಳನ್ನು ದೇಹಕ್ಕೆ ಸೇರಿಸಬಹುದು.

ನಿದ್ರೆ ಕೊರತೆ ಹಾಗೂ ಮಾನಸಿಕ ಒತ್ತಡವೂ ಪ್ರಮುಖ ಕಾರಣಗಳಾಗಿವೆ. ರಾತ್ರಿ ತಡವಾಗಿ ಮಲಗುವುದು, ಹೆಚ್ಚು ಸ್ಕ್ರೀನ್ ಬಳಕೆ ಹಾಗೂ ಅನಿಯಮಿತ ದಿನಚರಿ ದೇಹದ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ವ್ಯಾಯಾಮದ ಕೊರತೆಯೂ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ತಜ್ಞರ ಪ್ರಕಾರ, ದೀರ್ಘಕಾಲದ ದೌರ್ಬಲ್ಯ, ಅನಿರೀಕ್ಷಿತ ತೂಕ ಇಳಿಕೆ, ದೇಹದ ಯಾವುದೇ ಭಾಗದಲ್ಲಿ ಗುಡ್ಡೆ ಕಾಣಿಸಿಕೊಳ್ಳುವುದು ಅಥವಾ ನಿರಂತರ ನೋವು ಇರುವುದು ಮುಂತಾದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಇಂತಹ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಆರೋಗ್ಯಕರ ಜೀವನಶೈಲಿ, ಸಮತೋಲನ ಆಹಾರ, ನಿಯಮಿತ ವ್ಯಾಯಾಮ ಮತ್ತು ಸಾಕಷ್ಟು ನಿದ್ರೆ ಮೂಲಕ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. ಸಮಯಕ್ಕೆ ತಕ್ಕಂತೆ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಆರೋಗ್ಯ ಕಾಪಾಡಲು ಮುಖ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.

error: Content is protected !!