Home Blog

ಮನೆ ದೇವರಿಗೆ ಹೋದ ಕುಟುಂಬಕ್ಕೆ ಕಾದಿತ್ತು ಶಾಕ್; ಕ್ಷಣಾರ್ಧದಲ್ಲಿ ತಗಡಿನ ಮನೆ ಬೆಂಕಿಗಾಹುತಿ, ಗೃಹೋಪಯೋಗಿ ವಸ್ತುಗಳು ಭಸ್ಮ!

0

ಗದಗ: ತಗಡಿನ ಮನೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲೇ ಮನೆ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಶಿವಾಜಿನಗರ ತಾಂಡಾದಲ್ಲಿ ನಡೆದಿದೆ.

ಸಂತೋಷ ಲಮಾಣಿ ಎಂಬುವರಿಗೆ ಸೇರಿದ ಮನೆ ಇದಾಗಿದ್ದು, ಕುಟುಂಬಸ್ಥರೆಲ್ಲರೂ ಎರಡು ದಿನಗಳಿಂದ ಮನೆ ದೇವರಿಗೆ ತೆರಳಿದ್ದರು. ಇಂದು ಬೆಳಗಿನ ಜಾವ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಬೆಂಕಿ ನಂದಿಸಲು ಮುಂದಾಗಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಮನೆ ಸಂಪೂರ್ಣವಾಗಿ ಹೊತ್ತಿ ಉರಿದಿತ್ತು. ಬಳಿಕ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಹರಸಾಹಸಪಟ್ಟು ಬೆಂಕಿ ನಂದಿಸಿದ್ದಾರೆ. ಆದರೆ ಮನೆಯಲ್ಲಿದ್ದ ದವಸ ಧಾನ್ಯಗಳು, ಬಟ್ಟೆ, ಹಣ, ದಾಖಲೆಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.

ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆ ವಿಷಯ ತಿಳಿದು ಸ್ಥಳಕ್ಕೆ ಬಂದ ಕುಟುಂಬಸ್ಥರು ಸುಟ್ಟು ಕರಕಲಾದ ಮನೆಯನ್ನು ಕಂಡು ಕಣ್ಣೀರಿಟ್ಟಿದ್ದಾರೆ. ಘಟನೆ ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಳೆ ಕೊರತೆಯಿಂದ ಹಾವೇರಿ ರೈತರು ಕಂಗಾಲು; ವರದಾ ನದಿಗೆ ಗೇಟ್ ಅಳವಡಿಸಿ ನೀರು ನಿಲ್ಲಿಸಲು ಆಗ್ರಹ

ಹಾವೇರಿ: ಮಳೆ ಕೊರತೆಯಿಂದ ಕಂಗಾಲಾಗಿರುವ ಹಾವೇರಿ ಜಿಲ್ಲೆಯ ರೈತರು, ವರದಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ 20ಕ್ಕೂ ಅಧಿಕ ಬ್ರಿಡ್ಜ್ ಕಂ ಬ್ಯಾರೇಜ್‌ಗಳಿಗೆ ಗೇಟ್ ಅಳವಡಿಸಿ ನೀರು ನಿಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.

ಹಾವೇರಿ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಪ್ರಸಕ್ತ ವರ್ಷ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯ ಜೀವನಾಡಿ ನದಿಗಳಾದ ವರದಾ ಹಾಗೂ ತುಂಗಭದ್ರಾ ನದಿಗಳಲ್ಲೂ ನೀರಿನ ಪ್ರಮಾಣ ಇಳಿಕೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಶೇ.50ರಷ್ಟು ಕಡಿಮೆಯಾಗಿದೆ ಎಂದು ರೈತರು ತಿಳಿಸಿದ್ದಾರೆ.

ಉತ್ತರ ಕನ್ನಡ ಹಾಗೂ ಮಲೆನಾಡು ಭಾಗಗಳಲ್ಲಿ ಮಳೆಯಾಗಿದ್ದರೂ, ಇದೀಗ ವರದಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಸಣ್ಣ ನೀರಾವರಿ ಇಲಾಖೆ ಹಾಗೂ ಜಿಲ್ಲಾಡಳಿತ ಬ್ರಿಡ್ಜ್ ಕಂ ಬ್ಯಾರೇಜ್‌ಗಳ ಗೇಟ್‌ಗಳನ್ನು ಅಳವಡಿಸಿ ಲಭ್ಯವಿರುವ ನೀರನ್ನು ಸಂಗ್ರಹಿಸಬೇಕು. ಜೊತೆಗೆ ಸುತ್ತಮುತ್ತಲಿನ ಕೆರೆಗಳನ್ನು ತುಂಬಿಸುವ ಕೆಲಸಕ್ಕೂ ಆದ್ಯತೆ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಮಳೆ ಕೊರತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಸಚಿವರು ಅಧಿಕಾರಿಗಳೊಂದಿಗೆ ಎರಡು-ಮೂರು ಬಾರಿ ಸಭೆ ನಡೆಸಿದ್ದರೂ, ಕೆರೆಗಳನ್ನು ತುಂಬಿಸುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ವರದಾ ನದಿಯಲ್ಲಿರುವ ನೀರನ್ನು ಬ್ಯಾರೇಜ್‌ಗಳಲ್ಲಿ ಸಂಗ್ರಹಿಸುವುದರಿಂದ ಚಳಿಗಾಲ ಹಾಗೂ ಬೇಸಿಗೆಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದರ ಜೊತೆಗೆ ಹಿಂಗಾರು ಬೆಳೆ ಬೆಳೆಯುವ ರೈತರಿಗೂ ಅನುಕೂಲವಾಗಲಿದೆ. ಈ ವಿಚಾರದಲ್ಲಿ ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು ಎಂದು ರೈತರು ಆಗ್ರಹಿಸಿದ್ದಾರೆ.

ಮಳೆರಾಯನ ಅವಕೃಪೆಯಿಂದ ಬೆಳೆಗಳಿಗೆ ಸೂಕ್ತ ಫಸಲು ಸಿಗದೆ ಸಂಕಷ್ಟದಲ್ಲಿರುವ ರೈತರಿಗೆ, ಇದೀಗ ವರದಾ ನದಿಯ ನೀರೇ ಆಶ್ರಯವಾಗಿದೆ. ಹೀಗಾಗಿ ಲಭ್ಯವಿರುವ ನೀರನ್ನು ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಬೇಕಿದೆ.

ಹೋಟೆಲ್ ಬಾತ್‌ರೂಮ್‌ನಲ್ಲಿ ಫೋನ್ ಯಾಕಿರುತ್ತೆ? ಇದರ ಹಿಂದಿದೆ ಅಚ್ಚರಿಯ ಕಾರಣ!

0

ಐಷಾರಾಮಿ ಹೋಟೆಲ್‌ಗಳಿಗೆ ತೆರಳಿದಾಗ ಅಲ್ಲಿನ ಕೊಠಡಿಗಳು, ಸೌಲಭ್ಯಗಳು ಹಾಗೂ ಅಲಂಕಾರಗಳು ಗಮನ ಸೆಳೆಯುವುದು ಸಾಮಾನ್ಯ.

ಆದರೆ ಕೆಲವೊಂದು ಹೋಟೆಲ್‌ಗಳ ಬಾತ್‌ರೂಮ್ ಅಥವಾ ಶೌಚಾಲಯದಲ್ಲಿ ಟೆಲಿಫೋನ್ ಇರುವುದನ್ನು ನೀವು ಗಮನಿಸಿರಬಹುದು. ಬಾತ್‌ರೂಮ್‌ನಲ್ಲೇ ಫೋನ್ ಇಡುವ ಅಗತ್ಯವೇನು ಎಂಬ ಪ್ರಶ್ನೆ ಹಲವರಲ್ಲಿ ಮೂಡುವುದು ಸಹಜ. ಆದರೆ ಇದರ ಹಿಂದೆ ಹಲವು ವರ್ಷಗಳ ಹಳೆಯ ಸಂಪ್ರದಾಯ ಹಾಗೂ ಅತಿಥಿಗಳ ಅನುಕೂಲಕ್ಕೆ ಸಂಬಂಧಿಸಿದ ಕಾರಣಗಳಿವೆ.

ಒಂದು ಕಾಲದಲ್ಲಿ ಐಷಾರಾಮಿ ಹೋಟೆಲ್‌ಗಳಲ್ಲಿ ಬಾತ್‌ರೂಮ್‌ನಲ್ಲೇ ಟೆಲಿಫೋನ್ ಇರುವುದು ಪ್ರತಿಷ್ಠೆಯ ಸಂಕೇತವಾಗಿತ್ತು. ವಿಶೇಷವಾಗಿ 1980 ಮತ್ತು 1990ರ ದಶಕಗಳಲ್ಲಿ ಹೋಟೆಲ್‌ಗಳು ತಮ್ಮ ಅತಿಥಿಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಬಾತ್‌ರೂಮ್‌ಗಳಲ್ಲೂ ಟೆಲಿಫೋನ್ ಅಳವಡಿಸುತ್ತಿದ್ದವು. ಅತಿಥಿಗಳು ಬಾತ್‌ರೂಮ್‌ನಿಂದ ಹೊರಗೆ ಬಂದು ರೂಮ್‌ನಲ್ಲಿರುವ ಫೋನ್ ಬಳಸುವ ಅಗತ್ಯವಿಲ್ಲದೆ, ಅಲ್ಲಿಂದಲೇ ಹೋಟೆಲ್ ಸಿಬ್ಬಂದಿಯನ್ನು ಸಂಪರ್ಕಿಸಬಹುದಾಗಿತ್ತು.

ರೂಮ್ ಸರ್ವಿಸ್, ಹೌಸ್‌ಕೀಪಿಂಗ್ ಅಥವಾ ಇನ್ನಿತರ ಅಗತ್ಯ ಸೇವೆಗಳನ್ನು ಪಡೆಯಬೇಕಾದರೆ ಬಾತ್‌ರೂಮ್‌ನಿಂದಲೇ ಕರೆ ಮಾಡುವ ವ್ಯವಸ್ಥೆ ಅತಿಥಿಗಳಿಗೆ ಸಾಕಷ್ಟು ಅನುಕೂಲಕರವಾಗಿತ್ತು. ಹೀಗಾಗಿ ಈ ವ್ಯವಸ್ಥೆಯನ್ನು ಹೋಟೆಲ್‌ಗಳಲ್ಲಿನ ಹೆಚ್ಚುವರಿ ಐಷಾರಾಮಿ ಸೌಲಭ್ಯವೆಂದು ಪರಿಗಣಿಸಲಾಗುತ್ತಿತ್ತು.

ಕೆಲವು ವಿದೇಶಿ ಹೋಟೆಲ್‌ಗಳಲ್ಲಿ ಈ ಸೌಲಭ್ಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿತ್ತು. ಬಾತ್‌ಟಬ್‌ನಲ್ಲಿರುವಾಗಲೇ ಅತಿಥಿಗಳು ಫೋನ್ ಕರೆಗಳನ್ನು ಮಾಡಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಆ ಕಾಲದಲ್ಲಿ ಮೊಬೈಲ್ ಫೋನ್‌ಗಳ ಬಳಕೆ ಸಾಮಾನ್ಯವಾಗಿರದ ಕಾರಣ, ಹೋಟೆಲ್‌ನ ಪ್ರತಿಯೊಂದು ಭಾಗದಲ್ಲೂ ಸಂಪರ್ಕ ವ್ಯವಸ್ಥೆ ಕಲ್ಪಿಸುವುದು ಅತಿಥಿಗಳಿಗೆ ವಿಶೇಷ ಅನುಭವ ನೀಡುತ್ತಿತ್ತು.

ಮೊಬೈಲ್ ಬಂದ ಬಳಿಕ ಬದಲಾದ ಪರಿಸ್ಥಿತಿ:

ಕಾಲ ಬದಲಾದಂತೆ ಮೊಬೈಲ್ ಫೋನ್ ಮತ್ತು ನಂತರ ಸ್ಮಾರ್ಟ್‌ಫೋನ್‌ಗಳ ಬಳಕೆ ವೇಗವಾಗಿ ಹೆಚ್ಚಾಯಿತು. ಬಹುತೇಕ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಇರುವ ಪರಿಸ್ಥಿತಿ ನಿರ್ಮಾಣವಾದ ಬಳಿಕ ಬಾತ್‌ರೂಮ್‌ನಲ್ಲಿ ಪ್ರತ್ಯೇಕ ಟೆಲಿಫೋನ್ ಇಡುವ ಅಗತ್ಯ ಸಹಜವಾಗಿಯೇ ಕಡಿಮೆಯಾಯಿತು.

ಹೀಗಾಗಿ ಹಲವು ಹೋಟೆಲ್‌ಗಳು ಬಾತ್‌ರೂಮ್‌ನಲ್ಲಿದ್ದ ಟೆಲಿಫೋನ್‌ಗಳನ್ನು ತೆಗೆದುಹಾಕಲು ಆರಂಭಿಸಿದವು. ಅತಿಥಿಗಳು ತಮ್ಮ ಮೊಬೈಲ್ ಮೂಲಕವೇ ಹೋಟೆಲ್ ಸಿಬ್ಬಂದಿಯನ್ನು ಸಂಪರ್ಕಿಸಲು ಸಾಧ್ಯವಾಗಿದ್ದರಿಂದ, ಪ್ರತ್ಯೇಕ ಲ್ಯಾಂಡ್‌ಲೈನ್ ಫೋನ್‌ಗಳು ಅನಗತ್ಯವಾಗತೊಡಗಿದವು.

ಆದರೆ ಇಂದಿಗೂ ಕೆಲವು ಐಷಾರಾಮಿ ಹೋಟೆಲ್‌ಗಳ ಬಾತ್‌ರೂಮ್‌ನಲ್ಲಿ ಟೆಲಿಫೋನ್‌ಗಳು ಕಂಡುಬರುತ್ತವೆ. ಇದರ ಹಿಂದೆ ಈಗ ಕೇವಲ ಐಷಾರಾಮಿ ಪ್ರದರ್ಶನದ ಉದ್ದೇಶವಿಲ್ಲ. ಬದಲಾಗಿ, ತುರ್ತು ಸಂದರ್ಭಗಳಲ್ಲಿ ಅತಿಥಿಗಳ ಸುರಕ್ಷತೆಗೂ ಈ ಫೋನ್‌ಗಳು ಸಹಾಯಕವಾಗಬಹುದು.

ತುರ್ತು ಸಂದರ್ಭದಲ್ಲಿ ಫೋನ್ ಸಹಾಯಕ್ಕೆ:

ಬಾತ್‌ರೂಮ್‌ನಲ್ಲಿ ಜಾರಿಬಿದ್ದು ಗಾಯಗೊಂಡರೆ, ಅತಿಥಿಗೆ ತಕ್ಷಣ ಎದ್ದು ಹೊರಗೆ ಬರಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಬಹುದು. ಅಂತಹ ಸಂದರ್ಭದಲ್ಲಿ ಬಾತ್‌ರೂಮ್‌ನಲ್ಲೇ ಫೋನ್ ಇದ್ದರೆ ಹೋಟೆಲ್ ಸಿಬ್ಬಂದಿಯನ್ನು ತಕ್ಷಣ ಸಂಪರ್ಕಿಸಲು ಸಾಧ್ಯವಾಗುತ್ತದೆ.

ಅದೇ ರೀತಿ ಯಾವುದೇ ಆರೋಗ್ಯ ಸಮಸ್ಯೆ ಎದುರಾದರೂ ಅಥವಾ ತಕ್ಷಣ ಸಹಾಯದ ಅಗತ್ಯವಿದ್ದರೂ ಅಲ್ಲಿಂದಲೇ ಮುಂಭಾಗದ ಕೌಂಟರ್, ಹೌಸ್‌ಕೀಪಿಂಗ್ ಅಥವಾ ಇತರ ಸಿಬ್ಬಂದಿಗೆ ಕರೆ ಮಾಡಬಹುದು. ಅಂದರೆ, ಬಾತ್‌ರೂಮ್‌ನಲ್ಲಿರುವ ಫೋನ್ ಕೆಲ ಸಂದರ್ಭಗಳಲ್ಲಿ ಅತಿಥಿಗಳ ಸುರಕ್ಷತೆಗೆ ಹೆಚ್ಚುವರಿ ಸಂಪರ್ಕ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

ಇದರ ಜೊತೆಗೆ ರೂಮ್ ಸರ್ವಿಸ್ ಅಥವಾ ಹೌಸ್‌ಕೀಪಿಂಗ್‌ನಂತಹ ಸೇವೆಗಳನ್ನು ಪಡೆಯಲು ಕೂಡ ಈ ಫೋನ್‌ಗಳನ್ನು ಬಳಸಬಹುದು. ಮೊಬೈಲ್ ಫೋನ್ ಇದ್ದರೂ, ಹೋಟೆಲ್‌ನ ಆಂತರಿಕ ಸೇವೆಗಳಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ಲ್ಯಾಂಡ್‌ಲೈನ್ ಫೋನ್ ಕೆಲವು ಅತಿಥಿಗಳಿಗೆ ಇನ್ನೂ ಅನುಕೂಲಕರವಾಗಿರುತ್ತದೆ.

ಒಟ್ಟಿನಲ್ಲಿ, ಐಷಾರಾಮಿ ಹೋಟೆಲ್‌ಗಳ ಬಾತ್‌ರೂಮ್‌ನಲ್ಲಿ ಫೋನ್ ಇಡುವ ಪದ್ಧತಿ ಒಂದು ಕಾಲದಲ್ಲಿ ಐಷಾರಾಮಿ ಮತ್ತು ಪ್ರತಿಷ್ಠೆಯ ಸಂಕೇತವಾಗಿತ್ತು. ಆದರೆ ಮೊಬೈಲ್ ಯುಗದಲ್ಲಿ ಇದರ ಅಗತ್ಯ ಕಡಿಮೆಯಾಗಿದೆ. ಆದರೂ ಕೆಲವು ಹೋಟೆಲ್‌ಗಳು ಈ ವ್ಯವಸ್ಥೆಯನ್ನು ಅತಿಥಿಗಳ ಅನುಕೂಲ ಮತ್ತು ವಿಶೇಷವಾಗಿ ತುರ್ತು ಸಂದರ್ಭಗಳಲ್ಲಿನ ಸುರಕ್ಷತೆಯ ದೃಷ್ಟಿಯಿಂದ ಮುಂದುವರಿಸಿಕೊಂಡು ಬಂದಿವೆ.

ಹೀಗಾಗಿ ಮುಂದಿನ ಬಾರಿ ಐಷಾರಾಮಿ ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಫೋನ್ ಕಂಡಾಗ, ಅದು ಕೇವಲ ವಿಚಿತ್ರವಾಗಿ ಕಾಣುವ ವಸ್ತುವಲ್ಲ. ಅದರ ಹಿಂದೆ ಹೋಟೆಲ್ ಉದ್ಯಮದ ಹಳೆಯ ಐಷಾರಾಮಿ ಸಂಸ್ಕೃತಿ ಹಾಗೂ ಅತಿಥಿಗಳ ಸುರಕ್ಷತೆಗೆ ಸಂಬಂಧಿಸಿದ ಒಂದು ಕುತೂಹಲಕಾರಿ ಕಾರಣವೂ ಇದೆ.

ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಹೃದಯಾಘಾತ; 59 ವರ್ಷದ ಮುಖ್ಯ ಶಿಕ್ಷಕ ಸಾವು

0

ಧಾರವಾಡ: ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತ ಸಂಭವಿಸಿ ಶಾಲಾ ಮುಖ್ಯ ಶಿಕ್ಷಕರೊಬ್ಬರು ಮೃತಪಟ್ಟಿರುವ ಘಟನೆ ಧಾರವಾಡ ನಗರದ ಮಾಳಮಡ್ಡಿಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಮೃತರನ್ನು 59 ವರ್ಷದ ಐಐ ಮುಲ್ಲಾನವರ್ ಎಂದು ಗುರುತಿಸಲಾಗಿದೆ.

ಕಳೆದ ಶುಕ್ರವಾರ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮುಲ್ಲಾನವರ್ ಅವರಿಗೆ ಏಕಾಏಕಿ ಹೃದಯಾಘಾತ ಸಂಭವಿಸಿತ್ತು. ತಕ್ಷಣವೇ ಶಾಲೆಯಲ್ಲಿದ್ದ ಶಿಕ್ಷಕರು ಅವರನ್ನು ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಂಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಶುಕ್ರವಾರ ಸಂಜೆ ಮುಖ್ಯ ಶಿಕ್ಷಕ ಮುಲ್ಲಾನವರ್ ನಿಧನರಾಗಿದ್ದು, ಕುಟುಂಬಸ್ಥರು ಶಿಕ್ಷಕರ ದಿನಾಚರಣೆಯಂದೇ ಅವರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಕರ್ತವ್ಯದ ಮೇಲಿದ್ದಾಗಲೇ ಮುಖ್ಯ ಶಿಕ್ಷಕರು ಮೃತಪಟ್ಟಿರುವ ಘಟನೆ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಯಲ್ಲಿ ದುಃಖದ ವಾತಾವರಣ ಮೂಡಿಸಿದೆ.

ದೆಹಲಿಯಲ್ಲಿ ಆರು ಅಂತಸ್ತಿನ ಕಟ್ಟಡ ಕುಸಿತ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ, 6 ಮಂದಿ ರಕ್ಷಣೆ

0

ನವದೆಹಲಿ: ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡವೊಂದು ಕುಸಿದಿದ್ದು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಬಳಿಕ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಈವರೆಗೆ ಆರು ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಅಧಿಕಾರಿಗಳ ಪ್ರಕಾರ, 75 ಹಾಸಿಗೆಗಳ ಪೇಯಿಂಗ್ ಗೆಸ್ಟ್ (PG) ವಸತಿ ಸೌಲಭ್ಯ ಹೊಂದಿದ್ದ ಕಟ್ಟಡ ಮಧ್ಯಾಹ್ನ ಸುಮಾರು 1.30ರ ವೇಳೆಗೆ ಕುಸಿದಿದೆ. ಕಟ್ಟಡ ಕುಸಿದ ಸಂದರ್ಭದಲ್ಲಿ ಕನಿಷ್ಠ 50 ವಿದ್ಯಾರ್ಥಿಗಳು ಒಳಗಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಕುಸಿದ ಕಟ್ಟಡವು ‘ಹಾಸ್ಟೆಲ್ ಡೇಜ್’ ಹೆಸರಿನ ಪುರುಷರ ಪಿಜಿ ವಸತಿ ಎಂದು ತಿಳಿದುಬಂದಿದೆ. ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವ ಸಾಧ್ಯತೆ ಹಿನ್ನೆಲೆಯಲ್ಲಿ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.

ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ, ಅಂಬುಲೆನ್ಸ್ ಸೇರಿದಂತೆ ವಿವಿಧ ತುರ್ತು ಸೇವೆಗಳ ತಂಡಗಳನ್ನು ನಿಯೋಜಿಸಲಾಗಿದೆ. ಕನಿಷ್ಠ 12 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ನೆರವಾಗುತ್ತಿವೆ.

ಅವಶೇಷಗಳನ್ನು ತೆರವುಗೊಳಿಸಿ ಸಿಲುಕಿರುವವರನ್ನು ಪತ್ತೆಹಚ್ಚಲು ಈಗಾಗಲೇ ಜೆಸಿಬಿ ಯಂತ್ರವನ್ನು ನಿಯೋಜಿಸಲಾಗಿದೆ. ಕಟ್ಟಡದ ಚಪ್ಪಡಿಗಳು ಹಾಗೂ ಗಿರ್ಡರ್‌ಗಳನ್ನು ತೆರವುಗೊಳಿಸಲು ಹೆಚ್ಚಿನ ಯಂತ್ರೋಪಕರಣಗಳನ್ನು ಸ್ಥಳಕ್ಕೆ ತರಲಾಗುತ್ತಿದೆ. ಅಗ್ನಿಶಾಮಕ ಸಿಬ್ಬಂದಿಗೆ ನೆರವಾಗಲು ವಿಪತ್ತು ಪ್ರತಿಕ್ರಿಯಾ ತಂಡಗಳನ್ನೂ ನಿಯೋಜಿಸಲಾಗಿದೆ.

ಘಟನೆ ಕುರಿತು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ಮಾಹಿತಿ ಪಡೆದುಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗತಿಯಲ್ಲಿ ನಡೆಸಿ, ಅವಶೇಷಗಳಡಿ ಸಿಲುಕಿರುವವರನ್ನು ಸುರಕ್ಷಿತವಾಗಿ ಹೊರತೆಗೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಟ್ಟಡ ಕುಸಿತಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಸದ್ಯ ರಕ್ಷಣಾ ಕಾರ್ಯಾಚರಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಅವಶೇಷಗಳಡಿ ಸಿಲುಕಿರುವವರ ಪತ್ತೆಗಾಗಿ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ವಿಟ್ಲಪಿಂಡಿ ಉತ್ಸವದ ವೇಳೆ ಅವಘಡ! ರಥದಿಂದ ಕೆಳಗೆ ಬಿದ್ದ ಕೃಷ್ಣನ ಮಣ್ಣಿನ ಮೂರ್ತಿ

0

ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ವಿಟ್ಲಪಿಂಡಿ ಉತ್ಸವದ ವೇಳೆ ಅನಿರೀಕ್ಷಿತ ಅವಘಡವೊಂದು ನಡೆದಿದೆ. ಉತ್ಸವದ ಬಳಿಕ ಚಿನ್ನದ ರಥದಲ್ಲಿ ರಥಾರೂಢವಾಗಿದ್ದ ಕೃಷ್ಣನ ಮಣ್ಣಿನ ಮೂರ್ತಿಯನ್ನು ಕೆಳಗಿಳಿಸುವ ಸಂದರ್ಭದಲ್ಲಿ ಪರ್ಯಾಯ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಗಳ ಕೈಯಿಂದ ಮೂರ್ತಿ ಆಕಸ್ಮಿಕವಾಗಿ ಜಾರಿ ಕೆಳಗೆ ಬಿದ್ದು ಭಗ್ನವಾಗಿದೆ.

ಉಡುಪಿ ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ಲೀಲೋತ್ಸವದ ಅಂಗವಾಗಿ ವಿಟ್ಲಪಿಂಡಿ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಚಾತುರ್ಮಾಸದ ಹಿನ್ನೆಲೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಕೃಷ್ಣನ ಮಣ್ಣಿನ ಮೂರ್ತಿಯನ್ನು ಚಿನ್ನದ ರಥದಲ್ಲಿ ರಥಾರೂಢಗೊಳಿಸಿ ರಥಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಉತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

ರಥೋತ್ಸವ ಪೂರ್ಣಗೊಂಡ ಬಳಿಕ ಕೃಷ್ಣನ ಮಣ್ಣಿನ ಮೂರ್ತಿಯನ್ನು ರಥದಿಂದ ಇಳಿಸಿ ಮಧ್ವ ಸರೋವರದಲ್ಲಿ ವಿಸರ್ಜನೆಗೆ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಪರ್ಯಾಯ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಗಳ ಕೈಯಿಂದ ಮೂರ್ತಿ ಆಕಸ್ಮಿಕವಾಗಿ ಜಾರಿ ಕೆಳಗೆ ಬಿದ್ದಿದೆ.

ಕೆಳಗೆ ಬಿದ್ದ ರಭಸಕ್ಕೆ ಮಣ್ಣಿನಿಂದ ಮಾಡಲಾಗಿದ್ದ ಕೃಷ್ಣನ ಮೂರ್ತಿ ಭಗ್ನವಾಗಿದೆ. ಮೂರ್ತಿ ಕೈಯಿಂದ ಜಾರಿ ಬಿದ್ದ ದೃಶ್ಯವನ್ನು ಕಂಡು ಸ್ಥಳದಲ್ಲಿದ್ದ ಭಕ್ತರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಪ್ರತಿವರ್ಷದಂತೆ ಈ ಬಾರಿಯೂ ಭಕ್ತರ ಸಮ್ಮುಖದಲ್ಲಿ ವಿಟ್ಲಪಿಂಡಿ ಉತ್ಸವವನ್ನು ವೈಭವದಿಂದ ಆಚರಿಸಲಾಗಿತ್ತು. ಆದರೆ ಉತ್ಸವದ ಅಂತಿಮ ಹಂತದಲ್ಲಿ ನಡೆದ ಈ ಅನಿರೀಕ್ಷಿತ ಘಟನೆ ಇದೀಗ ಗಮನ ಸೆಳೆದಿದೆ.

ಕೌಶಲ್ಯಾಭಿವೃದ್ಧಿ ಇಲಾಖೆಯ ವಿದೇಶ ಅಧ್ಯಯನ 2026ಕ್ಕೆ ಸಿಎಂ ಸಿಎಂ ಡಿ ಕೆ ಶಿವಕುಮಾರ್ ಚಾಲನೆ

0

ಬೆಂಗಳೂರು: “ನಮ್ಮಲ್ಲಿರುವ ಪ್ರತಿಭಾವಂತ ಮಾನವ ಸಂಪನ್ಮೂಲ, ದೇಶದ ಬೇರೆ ಯಾವುದೇ ರಾಜ್ಯಗಳಲ್ಲಿ ಇಲ್ಲ. ನಮ್ಮ ಮಕ್ಕಳು ಜಾಗತಿಕ ಮಟ್ಟದಲ್ಲಿ ಕಲಿಯಬೇಕು. ಅವರು ಕೇವಲ ಉದ್ಯೋಗಿಗಳಾಗುವುದಲ್ಲ, ಉದ್ಯೋಗದಾತರಾಗಬೇಕು ಎಂಬುದು ನಮ್ಮ ಬಯಕೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ “ವಿದೇಶದಲ್ಲಿ ಅಧ್ಯಯನ 2026” ಕಾರ್ಯಕ್ರಮಕ್ಕೆ ಸಿಎಂ ಡಿ ಕೆ ಶಿವಕುಮಾರ್ ಅವರು ಚಾಲನೆ ನೀಡಿ ಮಾತನಾಡಿದರು.

“ದೇಶದ ಅಧ್ಯಯನಕ್ಕೆ ನಮ್ಮ ಸರ್ಕಾರ ಹೊಸ ಬಾಗಿಲು ತೆರೆದಿದೆ. ಶರಣ ಪ್ರಕಾಶ್ ಪಾಟೀಲ್ ಅವರ ನೇತೃತ್ವದಲ್ಲಿ ಸಾಗರತ್ತರ ಜ್ಞಾನ ಬೆಸೆಯುವಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ. ಜ್ಞಾನದ ಮೇಲಿನ ಹೂಡಿಕೆ ಪ್ರತಿಯೊಬ್ಬರಿಗೂ ಅತ್ಯುತ್ತಮ ಆಸ್ತಿಯಾಗುತ್ತದೆ. ಮಾನವನಿಗೆ ಎಲ್ಲೆಗಳಿವೆ, ಆದರೆ ಜ್ಞಾನಕ್ಕೆ ಎಲ್ಲೆಗಲಿಲ್ಲ. ಜಾಗತಿಕ ಮಟ್ಟದ ಶಿಕ್ಷಣದ ಅವಕಾಶ ಪಡೆಯುವುದರಿಂದ ಮಾನಸಿಕವಾಗಿ ಬಲಿಷ್ಠರನ್ನಾಗಿಸುತ್ತದೆ” ಎಂದು ತಿಳಿಸಿದರು.

“ರುಪರಪ ಹರಿಸದ, ದಾಯಾದಿ ಧಕ್ಕಿಸದ, ಬೆಂಕಿಯಲ್ಲಿ ಸುಡದ, ನೀರಿನಲ್ಲಿ ನೆನೆಯದ, ಗುಪ್ತ ನಿಧಿ ವಿದ್ಯೆ ಎಂದು ನಮ್ಮ ಗುರುಗಳು ನಮಗೆ ಕಳಿಸಿದ್ದರು. ನಾವು ಕಲಿತ ವಿದ್ಯೆಯನ್ನು ಯಾರೂ ಕಸಿಯಲು ಸಾಧ್ಯವಿಲ್ಲ. ಸಚಿವರು ಹಾಗೂ ಸರ್ಕಾರ ನಿಮಗೆ ಜಾಗತಿಕ ಮಟ್ಟದಲ್ಲಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಿ ನಿಮ್ಮ ಭವಿಷ್ಯವನ್ನು ಉಜ್ವಲಿಸುವಂತೆ ಮಾಡುತ್ತಿದೆ” ಎಂದರು.

“ಬೆಂಗಳೂರು ಜಾಗತಿಕ ನಗರ. ಇಲ್ಲಿ 2 ಲಕ್ಷ ವಿದೇಶಿ ಪಾಸ್ ಪೋರ್ಟ್ ದಾರರು ಕೆಲಸ ಮಾಡುತ್ತಿದ್ದು, ಸಿಲಿಕಾನ್ ವ್ಯಾಲಿ ಕ್ಯಾಲಿಫೋರ್ನಿಯದಲ್ಲಿ 16 ಲಕ್ಷ ಐಟಿ ವೃತ್ತಿಪರರು ಇದ್ದರೆ, ಬೆಂಗಳೂರಿನಲ್ಲಿ 26 ಲಕ್ಷ ಐಟಿ ವೃತ್ತಿಪರರು ಇದ್ದಾರೆ. ಪ್ರತಿ ವರ್ಷ 1 ಲಕ್ಷಕ್ಕೂ ಹೆಚ್ಚು ಇಂಜಿನಿಯರ್ ಗಳನ್ನು, 13,940 ವೈದ್ಯರನ್ನು ಉತ್ಪಾದನೆ ಮಾಡುತ್ತಿದ್ದು, ಇಷ್ಟು ದೊಡ್ಡ ಪ್ರಮಾಣದಲ್ಲಿ ಈ ಮಾನವ ಸಂಪನ್ಮೂಲವನ್ನು ಬೇರೆ ಎಲ್ಲೂ ತಯಾರಿಸುತ್ತಿಲ್ಲ” ಎಂದು ವಿವರಿಸಿದರು.

“ಮಹಾತ್ಮ ಗಾಂಧಿ, ಅಂಬೇಡ್ಕರ್, ರಾಜಾರಾಮ್ ಮೋಹನ್ ರಾಯ್ ರಂತಹ ನಾಯಕರು ವಿದೇಶದಲ್ಲಿ ಓದಿ, ನಮ್ಮ ದೇಶವನ್ನು ಮುನ್ನಡೆಸಿದ್ದಾರೆ. ವಿದೇಶದ ವಿವಿಗಳಲ್ಲಿ ನಮ್ಮ ಮಕ್ಕಳಿಗೆ ಅಧ್ಯಯನಕ್ಕೆ ಅವಕಾಶ ಕಲ್ಪಿಸಲು ಕರ್ನಾಟಕ ಸರ್ಕಾರ ಈ ಅವಕಾಶ ಕಲ್ಪಿಸಿದೆ. ಈ ಕಾರ್ಯಕ್ರಮದಲ್ಲಿ 80ಕ್ಕೂ ಹೆಚ್ಚು ವಿವಿಗಳು ಭಾಗವಹಿಸಿದ್ದು, 300ಕ್ಕೂ ಹೆಚ್ಚು ವಿಷಯಗಳಲ್ಲಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಸರ್ಕಾರದ ವಿವಿಧ ಇಲಾಖೆಗಳಿಂದ ವಿಶೇಷ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ವಿವಿಧ ಬ್ಯಾಂಕ್ ಗಳು ನೆರವು ನೀಡುತ್ತಿದ್ದು, 2 ಕೋಟಿ ರೂ. ವರೆಗೂ ಸಾಲ ಸೌಲಭ್ಯ ನೀಡುತ್ತಿವೆ. ರಾಜ್ಯದ ವಿದ್ಯಾರ್ಥಿಗಳು ಈ ಅವಕಾಶ ಸದುಪಯೋಗಪಡಿಸಿಕೊಂಡು ಬಲಿಷ್ಠವಾಗಬೇಕು. ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.

“ನಾವು ಕ್ವೀನ್ಸ್ ಲ್ಯಾಂಡ್ ವಿವಿ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ವಿದೇಶದ ವಿವಿಗಳಲ್ಲಿ ವ್ಯಾಸಂಗ ಮಾಡಲು 3,145 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ನಮ್ಮ ಮಕ್ಕಳು ವಿದ್ಯಾಭ್ಯಾಸ ಮುಗಿಸಿದ್ದರೂ ಅವರು ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿಗೆ ಬನ್ನಿ ಎಂದು ಕರೆದಿರುವೆ” ಎಂದರು.

“ನಿಮ್ಮ ಭವಿಷ್ಯ ರಾಜ್ಯದ ಭವಿಷ್ಯ, ನಿಮ್ಮ ಶಕ್ತಿ ದೇಶದ ಶಕ್ತಿ. ವಿದ್ಯಾರ್ಥಿಗಳು ನಮ್ಮ ಆಸ್ತಿಗಳು. ಇಡೀ ವಿಶ್ವ ನಮ್ಮನ್ನು ಗಮನಿಸುತ್ತಿದೆ. ಭಾರತವನ್ನು ಬೆಂಗಳೂರು, ಕರ್ನಾಟಕದ ಮೂಲಕ ನೋಡಲಾಗುತ್ತಿದೆ. ನಮ್ಮ ವಿದ್ಯಾರ್ಥಿಗಳ ಚುರುಕುತನವನ್ನು ವಿಶ್ವದ ಉದ್ಯಮಗಳ ನಾಯಕರು ಗಮನಿಸುತ್ತಿದ್ದಾರೆ. ನಮ್ಮಲ್ಲಿನ ಸಂಸ್ಕೃತಿ, ಇತಿಹಾಸ, ಬಾಂಧವ್ಯದ ಮೂಲಕ ನಮ್ಮ ಮಕ್ಕಳು ಉತ್ತಮ ಪ್ರಜೆಗಳಾಗುತ್ತಿದ್ದಾರೆ. ನೀವು ನಿಮ್ಮ ಮೂಲ ಮರೆಯಬಾರದು, ಮರೆತರೆ ಯಶಸ್ಸು ಸಿಗುವುದಿಲ್ಲ. ಹೀಗಾಗಿ ನೀವು ನಿಮ್ಮ ಪೋಷಕರು, ಶಿಕ್ಷಕರನ್ನು ಮರೆಯಬಾರದು” ಎಂದು ಹೇಳಿದರು.

“ನಮ್ಮ ಸರ್ಕಾರ ಶಿಕ್ಷಕರಿಗೆ ಗೌರವ ನೀಡಲು Tr. (Teacher) ಎಂದು ತಮ್ಮ ಹೆಸರಿನ ಮುಂದೆ ಸೇರಿಸಲು ತೀರ್ಮಾನಿಸಿದ್ದೇವೆ. ನನಗೆ ನೂರಾರು ಕರೆ ಬಂದಿದ್ದು, ನಮ್ಮ ತೀರ್ಮಾನವನ್ನು ಸ್ವಾಗತಿಸಿದ್ದಾರೆ. ನಾವು ಗುರುಗಳನ್ನು ದೇವರಂತೆ ಕಾಣುತ್ತೇವೆ. ಶಿಕ್ಷಕರಿಗೆ ಗೌರವ ನೀಡಲು ಮುಂದಾಗಿದ್ದೇವೆ. ನಿಮ್ಮಲ್ಲಿ ಅವರ ಯಶಸ್ಸು ಕಾಣಲು ತಂದೆ ತಾಯಿ ಹಾಗೂ ಗುರುಗಳು ಬಯಸುತ್ತಾರೆ” ಎಂದರು.

“ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಇದ್ದು, ಭಾರದಲ್ಲಿ 140 ಅಂತಾರಾಷ್ಟ್ರೀಯ ಶಾಲೆಗಳಿದ್ದು, ಬೆಂಗಳೂರಿನಲ್ಲಿ 38 ಅಂತಾರಾಷ್ಟ್ರೀಯ ಶಾಲೆಗಳಿವೆ. ಇದು ಕರ್ನಾಟಕದ ಶಕ್ತಿ. ಕರ್ನಾಟಕ ದೇಶದ ಜ್ಞಾನದ ಕೇಂದ್ರವಾಗಿದೆ. ನಿಮ್ಮೆಲ್ಲರಿಗೂ ಯಶಸ್ಸು ಸಿಗಲಿ” ಎಂದು ಶುಭ ಕೋರಿದರು.

ಕಳೆದ 3 ವರ್ಷಗಳಿಂದ ಜೆಡಿಎಸ್ʼನಲ್ಲಿ ನನಗೆ ಅವಮಾನವಾಗಿದೆ: ಮೈಸೂರಿನಲ್ಲಿ ಜಿ.ಟಿ. ದೇವೇಗೌಡ ಅಸಮಾಧಾನ ಸ್ಫೋಟ

0

ಮೈಸೂರು: ರಾಜ್ಯ ರಾಜಕಾರಣದ ಹೈವೋಲ್ಟೇಜ್ ಕ್ಷೇತ್ರಗಳಲ್ಲೊಂದಾದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಜಂಟಿ ಆಂತರಿಕ ಅಸಮಾಧಾನ ಸ್ಫೋಟಗೊಂಡಿದೆ. “ಕಳೆದ ಮೂರು ವರ್ಷಗಳಿಂದ ಜನತಾದಳ (ಜೆಡಿಎಸ್) ಪಕ್ಷದಲ್ಲಿ ನನಗೆ ತೀವ್ರ ಅವಮಾನವಾಗಿದೆ” ಎಂದು ಹಿರಿಯ ಶಾಸಕ ಜಿ.ಟಿ. ದೇವೇಗೌಡ (GTD) ಬಹಿರಂಗವಾಗಿ ತಮ್ಮ ಬೇಸರ ಹಾಗೂ ಆಕ್ರೋಶವನ್ನು ಹೊರಹಾಕಿದ್ದಾರೆ.

ಅವಮಾನಕ್ಕೆ ಉತ್ತರ ನೀಡಲು ಮೆರವಣಿಗೆ: ಚಾಮುಂಡೇಶ್ವರಿ ಕ್ಷೇತ್ರದ ಸಾರ್ವಜನಿಕರು ಹಮ್ಮಿಕೊಂಡಿದ್ದ ರಾಜಕೀಯ ಮೆರವಣಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ನಾನು ಜೆಡಿಎಸ್ ಶಾಸಕನಾಗಿದ್ದರೂ ಪಕ್ಷದ ಯಾವುದೇ ಕಾರ್ಯಕ್ರಮ ಅಥವಾ ಪ್ರಮುಖ ಸಮಾವೇಶಗಳಿಗೆ ನನ್ನನ್ನು ಕರೆಯದೆ ಅವಮಾನ ಮಾಡಲಾಯಿತು. ಈ ಅವಮಾನಕ್ಕೆ ಸೂಕ್ತ ಉತ್ತರ ನೀಡಲೆಂದೇ ನಮ್ಮ ಕ್ಷೇತ್ರದ ಜನರು ಇಂದು ಬೃಹತ್ ಮೆರವಣಿಗೆಯನ್ನು ನಡೆಸುತ್ತಿದ್ದಾರೆ. ಇದು ನನ್ನ ವೈಯಕ್ತಿಕ ಶಕ್ತಿ ಪ್ರದರ್ಶನವಲ್ಲ, ಬದಲಿಗೆ ಚಾಮುಂಡೇಶ್ವರಿ ಕ್ಷೇತ್ರದ ಜನತೆ ನನ್ನ ಮೇಲಿಟ್ಟಿರುವ ಪ್ರೀತಿಯ ಸಂಕೇತ” ಎಂದು ಅವರು ಭಾವನಾತ್ಮಕವಾಗಿ ಬಣ್ಣಿಸಿದರು.

ಪಕ್ಷ ಮುಖ್ಯವಲ್ಲ, ಜಿ.ಟಿ. ದೇವೇಗೌಡ ಮುಖ್ಯ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷಕ್ಕಿಂತ ವ್ಯಕ್ತಿಯೇ ಪ್ರಮುಖ ಎಂಬುದನ್ನು ಒತ್ತಿಹೇಳಿದ ಜಿಟಿಡಿ, “ನಮ್ಮ ಕ್ಷೇತ್ರದಲ್ಲಿ ಪಕ್ಷ ಯಾವುದೇ ಇರಲಿ, ಜನರಿಗೆ ಜಿ.ಟಿ. ದೇವೇಗೌಡ ಮಾತ್ರ ಮುಖ್ಯ. ನನ್ನನ್ನು ಏಕಾಂಗಿಯಾಗಿಸಲು ಕ್ಷೇತ್ರದ ಜನತೆ ಎಂದಿಗೂ ಬಿಡುವುದಿಲ್ಲ. ನನ್ನ ಕೊನೆಯುಸಿರು ಇರುವ ತನಕ ನಾನು ಏಕಾಂಗಿಯಾಗಿಯೇ ಈ ಜನರ ಸೇವೆ ಮಾಡುತ್ತೇನೆ. ಹಿಂದೆ ನಾನು ಬಿಜೆಪಿಗೆ ಹೋದಾಗ ಚಾಮುಂಡೇಶ್ವರಿಯಲ್ಲಿ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದವು. ನನ್ನ ವಿರುದ್ಧ ಎಂತಹ ದೊಡ್ಡ ನಾಯಕರು ಸ್ಪರ್ಧಿಸಿದರೂ ಕ್ಷೇತ್ರದ ಜನರು ಎಂದೂ ನನ್ನ ಕೈಬಿಟ್ಟಿಲ್ಲ” ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.

ಎಚ್.ಡಿ. ಕುಮಾರಸ್ವಾಮಿಗೆ ನೇರ ಕೌಂಟರ್: ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಯೊಂದಕ್ಕೆ ನೇರ ಕೌಂಟರ್ ನೀಡಿದ ಜಿ.ಟಿ. ದೇವೇಗೌಡ ಅವರು, “ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನರು ಅಭ್ಯರ್ಥಿ ಯಾರು ಎಂದು ನೋಡುವುದಿಲ್ಲ. ಅವರು ಕೇವಲ ನನ್ನ ಮುಖವನ್ನು ನೋಡಿ ಮತ ಹಾಕುತ್ತಾರೆ” ಎಂದು ಸ್ಪಷ್ಟಪಡಿಸಿದರು. ಇದರೊಂದಿಗೆ, ಮುಂಬರುವ ಮುಂದಿನ ಚುನಾವಣೆಯ ದಾರಿಯ ಕುರಿತು ಕ್ಷೇತ್ರದ ಜನರನ್ನು ಕರೆದು, ಅವರು ನೀಡುವ ಸಲಹೆಯಂತೆಯೇ ತಮ್ಮ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ಘೋಷಿಸಿದರು.

RCB ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್! ಆರ್ಯಮನ್ ಬಿರ್ಲಾ ನೀಡಿದ ಸಿಹಿಸುದ್ದಿ ಏನು ಗೊತ್ತಾ?

0

ಬೆಂಗಳೂರು: ಐಪಿಎಲ್‌ನ ಅತ್ಯಂತ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಹೆಸರು ಬದಲಾಗಲಿದೆ ಎಂಬ ಸಾಮಾಜಿಕ ಜಾಲತಾಣಗಳ ವದಂತಿಗಳಿಗೆ ಇದೀಗ ತೆರೆ ಬಿದ್ದಿದೆ. ತಂಡದ ನೂತನ ಚೇರ್ಮನ್ ಆರ್ಯಮನ್ ಬಿರ್ಲಾ ಅವರು ಆರ್‌ಸಿಬಿ ತಂಡದ ಹೆಸರು ಬದಲಿಸುವ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಆರ್ಯಮನ್ ಬಿರ್ಲಾ, ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಎಂಬ ಹೆಸರನ್ನು ಬದಲಿಸುವ ಯಾವುದೇ ಆಲೋಚನೆ ನಮ್ಮ ಮುಂದಿಲ್ಲ. ನಮಗೆ ಈ ಹೆಸರು ತುಂಬಾ ಇಷ್ಟ. ಇದೇ ಹೆಸರನ್ನು ಮುಂದುವರಿಸಲಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಆರ್‌ಸಿಬಿ ಕೇವಲ ತಂಡವಲ್ಲ, ಒಂದು ಬ್ರ್ಯಾಂಡ್:

ಆರ್‌ಸಿಬಿ ಕೇವಲ ಕ್ರಿಕೆಟ್ ತಂಡವಲ್ಲ. ಕೋಟ್ಯಂತರ ಅಭಿಮಾನಿಗಳ ಭಾವನೆ ಮತ್ತು ಬಲವಾದ ಕ್ರಿಕೆಟ್ ಬ್ರ್ಯಾಂಡ್ ಆಗಿದೆ. ವರ್ಷಗಳಿಂದ ತಂಡದೊಂದಿಗೆ ಬೆಸೆದುಕೊಂಡಿರುವ ಅಭಿಮಾನಿಗಳ ಪ್ರೀತಿ ಹಾಗೂ ಸಮುದಾಯದ ಬಾಂಧವ್ಯವನ್ನು ಹೊಸ ಆಡಳಿತ ಗೌರವಿಸುತ್ತದೆ ಎಂದು ಆರ್ಯಮನ್ ಬಿರ್ಲಾ ಹೇಳಿದ್ದಾರೆ.

ಹೀಗಾಗಿ ತಂಡದ ಹೆಸರು ಬದಲಾವಣೆಯ ಕುರಿತು ಹರಿದಾಡುತ್ತಿದ್ದ ಎಲ್ಲ ವದಂತಿಗಳಿಗೆ ಹೊಸ ಚೇರ್ಮನ್ ಅವರ ಹೇಳಿಕೆ ಸ್ಪಷ್ಟ ಉತ್ತರ ನೀಡಿದೆ. ಮುಂದಿನ ದಿನಗಳಲ್ಲೂ ಆರ್‌ಸಿಬಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂಬ ಹೆಸರಿನಲ್ಲೇ ಐಪಿಎಲ್‌ನಲ್ಲಿ ಕಣಕ್ಕಿಳಿಯಲಿದೆ.

ವದಂತಿಗಳಿಗೆ ಕಾರಣವೇನು?

ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL) ಸಂಸ್ಥೆಯಿಂದ ಆರ್‌ಸಿಬಿ ಫ್ರಾಂಚೈಸಿಯನ್ನು ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಒಕ್ಕೂಟವು ಖರೀದಿಸಿದ ಬಳಿಕ ತಂಡದ ಹೆಸರಿನ ಕುರಿತು ವದಂತಿಗಳು ಹರಡಿದ್ದವು. ಬೋಲ್ಟ್ ವೆಂಚರ್ಸ್, ಬ್ಲ್ಯಾಕ್‌ಸ್ಟೋನ್ ಮತ್ತು ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ಒಳಗೊಂಡ ಒಕ್ಕೂಟವು ಬರೋಬ್ಬರಿ 1.78 ಬಿಲಿಯನ್ ಡಾಲರ್ (ಸುಮಾರು ₹16,706 ಕೋಟಿ) ಮೊತ್ತಕ್ಕೆ ಫ್ರಾಂಚೈಸಿಯನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ವರದಿಯಾಗಿತ್ತು.

ಮಾಲೀಕತ್ವ ಬದಲಾವಣೆಯ ಬೆನ್ನಲ್ಲೇ ಹೊಸ ಆಡಳಿತ ತಂಡದ ಹೆಸರು ಅಥವಾ ಬ್ರ್ಯಾಂಡ್ ಬದಲಾಯಿಸಬಹುದು ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದ್ದವು. ಆದರೆ ಇದೀಗ ಆರ್ಯಮನ್ ಬಿರ್ಲಾ ಅವರ ಸ್ಪಷ್ಟ ಹೇಳಿಕೆಯೊಂದಿಗೆ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದೆ.

ಆರ್‌ಸಿಬಿ ತಂಡ:

ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್‌ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್, ರಿಚರ್ಡ್ ಗ್ಲೀಸನ್.

ಹೀಗಾಗಿ ಮಾಲೀಕತ್ವ ಬದಲಾದರೂ ಆರ್‌ಸಿಬಿಯ ಹೆಸರು, ಗುರುತು ಮತ್ತು ಅಭಿಮಾನಿಗಳೊಂದಿಗೆ ತಂಡ ಹೊಂದಿರುವ ಭಾವನಾತ್ಮಕ ಸಂಪರ್ಕವನ್ನು ಮುಂದುವರಿಸುವುದಾಗಿ ಹೊಸ ಆಡಳಿತ ಸ್ಪಷ್ಟಪಡಿಸಿದೆ.

KPSC ಅಕ್ರಮದ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ! ರಾಜ್ಯದಲ್ಲಿ ಜೆನ್‌-ಝೀ ಮಾದರಿ ಹೋರಾಟಕ್ಕೆ ಭರ್ಜರಿ ಪ್ಲ್ಯಾನ್‌

0

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಹಗರಣದ ವಿರುದ್ಧ ಇದೀಗ ವಿದ್ಯಾರ್ಥಿಗಳೇ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ರಾಜ್ಯದಲ್ಲಿ ಜೆನ್‌-ಝೀ ಮಾದರಿಯ ಹೋರಾಟಕ್ಕೆ ಯುವಕರು ಮುಂದಾಗಿದ್ದು, ಕೆಪಿಎಸ್‌ಸಿ ಅಕ್ರಮದ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ.

ಕೆಪಿಎಸ್‌ಸಿ ನೇಮಕಾತಿ ಅಕ್ರಮದ ಕುರಿತು ಅಪರಾಧ ತನಿಖಾ ಇಲಾಖೆ (CID) ತನಿಖೆ ನಡೆಸುತ್ತಿರುವ ನಡುವೆಯೇ ವಿದ್ಯಾರ್ಥಿಗಳು ಸ್ವತಃ ಪ್ರತಿಭಟನೆಗೆ ಮುಂದಾಗಿರುವುದು ಗಮನ ಸೆಳೆದಿದೆ. ದೆಹಲಿಯಲ್ಲಿ ನೀಟ್‌ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ನಡೆದ ಪ್ರತಿಭಟನೆಯ ಮಾದರಿಯಲ್ಲಿ ಈ ಹೋರಾಟ ನಡೆಸಲು ವಿದ್ಯಾರ್ಥಿ ಸಂಘಟನೆಗಳು ಸಿದ್ಧತೆ ನಡೆಸಿವೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಇದೇ ತಿಂಗಳ ಎರಡನೇ ವಾರದಿಂದ ಪ್ರತಿಭಟನೆ ಆರಂಭವಾಗುವ ಸಾಧ್ಯತೆ ಇದ್ದು, ವಿವಿಧ ವಿದ್ಯಾರ್ಥಿ ಸಂಘಟನೆಗಳು ಹೋರಾಟಕ್ಕೆ ಸಜ್ಜಾಗಿವೆ. ಪ್ರಮುಖವಾಗಿ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅಕ್ರಮದ ಕುರಿತು ಸಮಗ್ರ ತನಿಖೆಗೆ ಆಗ್ರಹಿಸುವುದರ ಜೊತೆಗೆ, ಪರೀಕ್ಷೆಯನ್ನು ಮರು ನಡೆಸಬೇಕು ಎಂಬ ಬೇಡಿಕೆಯನ್ನು ವಿದ್ಯಾರ್ಥಿಗಳು ಮುಂದಿಡಲಿದ್ದಾರೆ.

ಪಶುವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಕೆಪಿಎಸ್‌ಸಿಯ ಪರೀಕ್ಷಾ ಪ್ರಕ್ರಿಯೆಯಲ್ಲೇ ಅಕ್ರಮ ನಡೆದಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಕ್ರಮದ ವಿರುದ್ಧ ಧ್ವನಿ ಎತ್ತಲು ವಿದ್ಯಾರ್ಥಿಗಳು ಹಾಗೂ ಪರೀಕ್ಷಾರ್ಥಿಗಳು ಬೀದಿಗಿಳಿಯಲು ನಿರ್ಧರಿಸಿದ್ದಾರೆ.

ಪರೀಕ್ಷಾರ್ಥಿಗಳು ಈಗಾಗಲೇ ಮರುಪರೀಕ್ಷೆ ನಡೆಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಇದೀಗ ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ಹೇರಲು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಮರುಪರೀಕ್ಷೆ ನಡೆಸಿ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂಬುದು ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಯಾಗಿದೆ.

ಈ ನಡುವೆ ಕೆಪಿಎಸ್‌ಸಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಮುಂದುವರಿಸಿದ್ದು, ಅಕ್ರಮದ ಹಿಂದೆ ಯಾರು ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ.