Home Blog

ಗಣೇಶ ಹಬ್ಬಕ್ಕೆ ಹೂವು-ಹಣ್ಣು ಖರೀದಿಸುವ ಮುನ್ನ ದರ ನೋಡಿ: ಬೆಂಗಳೂರಿನ ಇಂದಿನ ಬೆಲೆಪಟ್ಟಿ ಇಲ್ಲಿದೆ

0

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ.

ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ತರಕಾರಿ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಜೋರಾಗಿದೆ. ಆದರೆ ಹಬ್ಬದ ಸಂಭ್ರಮದಲ್ಲಿರುವ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಹೂವು ಹಾಗೂ ತೋರಣಗಳ ಬೆಲೆಯಲ್ಲಿ ಏರಿಕೆಯಾಗಿದೆ. ಇದರ ಜೊತೆಗೆ ಹಬ್ಬದ ಪೂಜೆಗೆ ಅಗತ್ಯವಿರುವ ಹಣ್ಣು, ತರಕಾರಿ ಹಾಗೂ ದಿನಸಿ ವಸ್ತುಗಳ ದರದಲ್ಲೂ ವ್ಯತ್ಯಾಸ ಕಂಡುಬಂದಿದೆ.

ಸೇವಂತಿಗೆ ಹೂವು ಕೆ.ಜಿ.ಗೆ 350 ರೂ. ಇದ್ದರೆ, ಗುಲಾಬಿ ಹೂವು ಕೆ.ಜಿ.ಗೆ 350 ರೂ. ಇದೆ. ಮಿಕ್ಸ್ ಹೂವಿನ ದರ ಕೆ.ಜಿ.ಗೆ 300ರಿಂದ 400 ರೂ.ವರೆಗೆ ಇದೆ.

ತಾವರೆ ಹೂವು ಜೋಡಿಗೆ 50 ರೂ. ಇದೆ. ಕನಕಾಂಬರ ಮೊಳಕ್ಕೆ 50 ರೂ. ಇದ್ದರೆ, ಕೆ.ಜಿ.ಗೆ ಸುಮಾರು 2 ಸಾವಿರ ರೂ.ವರೆಗೆ ಇದೆ. ಮಲ್ಲಿಗೆ ಮೊಳಕ್ಕೆ 50 ರೂ. ಇದ್ದರೆ, ಕೆ.ಜಿ.ಗೆ 1 ಸಾವಿರ ರೂ.ವರೆಗೆ ಇದೆ.

ತುಳಸಿ ತೋರಣ ಮೊಳಕ್ಕೆ 60 ರೂ. ಇದ್ದು, ಮಾವಿನ ಎಲೆ ಕಟ್ಟು 10ರಿಂದ 30 ರೂ.ವರೆಗೆ ಮಾರಾಟವಾಗುತ್ತಿದೆ. ಬಾಳೆ ದಿಂಡು ಜೋಡಿಗೆ 50ರಿಂದ 80 ರೂ.ವರೆಗೆ ದರವಿದೆ.

ಹಣ್ಣುಗಳ ದರ:

ಹಬ್ಬದ ಪೂಜೆಗೆ ಅಗತ್ಯವಿರುವ ಹಣ್ಣುಗಳ ದರದಲ್ಲೂ ಏರಿಕೆ ಕಂಡುಬಂದಿದೆ. ಸೇಬು ಕೆ.ಜಿ.ಗೆ 200ರಿಂದ 300 ರೂ., ದಾಳಿಂಬೆ 100ರಿಂದ 250 ರೂ., ಸಪೋಟ 150ರಿಂದ 200 ರೂ. ಹಾಗೂ ದ್ರಾಕ್ಷಿ 120ರಿಂದ 150 ರೂ.ವರೆಗೆ ಇದೆ.

ಮೂಸಂಬಿ ಹಾಗೂ ಕಿತ್ತಳೆ ಕೆ.ಜಿ.ಗೆ 80ರಿಂದ 100 ರೂ. ಇದ್ದರೆ, ಬಾಳೆಹಣ್ಣು 80ರಿಂದ 150 ರೂ.ವರೆಗೆ ಮಾರಾಟವಾಗುತ್ತಿದೆ.

ತರಕಾರಿ ದರ:

ಈರುಳ್ಳಿ ಕೆ.ಜಿ.ಗೆ 60ರಿಂದ 70 ರೂ., ಹಸಿ ಮೆಣಸಿನಕಾಯಿ 40ರಿಂದ 60 ರೂ., ಬೀಟ್‌ರೂಟ್ 50ರಿಂದ 60 ರೂ. ಇದೆ. ಬೆಳ್ಳುಳ್ಳಿ ಕೆ.ಜಿ.ಗೆ 200ರಿಂದ 250 ರೂ.ವರೆಗೆ ದರವಿದೆ.

ನಿಂಬೆಹಣ್ಣು ಒಂದಕ್ಕೆ 8ರಿಂದ 15 ರೂ. ಹಾಗೂ ನುಗ್ಗೆಕಾಯಿ ಒಂದಕ್ಕೆ 10ರಿಂದ 15 ರೂ. ಇದೆ. ಕ್ಯಾಪ್ಸಿಕಂ 50ರಿಂದ 70 ರೂ. ಹಾಗೂ ಬಟಾಣಿ ಕೆ.ಜಿ.ಗೆ 140ರಿಂದ 160 ರೂ.ವರೆಗೆ ಮಾರಾಟವಾಗುತ್ತಿದೆ.

ದಿನಸಿ ವಸ್ತುಗಳ ದರ:

ಗೌರಿ-ಗಣೇಶ ಹಬ್ಬದ ಅಡುಗೆ ಹಾಗೂ ನೈವೇದ್ಯಕ್ಕೆ ಬೇಕಾಗುವ ದಿನಸಿ ವಸ್ತುಗಳ ದರವೂ ಹೀಗಿದೆ. ಬೆಲ್ಲ ಕೆ.ಜಿ.ಗೆ 50ರಿಂದ 55 ರೂ., ತೊಗರಿಬೇಳೆ 160ರಿಂದ 170 ರೂ., ಹುರಿಗಡಲೆ 150ರಿಂದ 180 ರೂ. ಹಾಗೂ ಕಡಲೆಬೀಜ 100ರಿಂದ 140 ರೂ. ಇದೆ.

ಸಕ್ಕರೆ ಕೆ.ಜಿ.ಗೆ 60ರಿಂದ 80 ರೂ., ಚಿರೋಟಿ ರವೆ 90ರಿಂದ 100 ರೂ., ಕಡಲೆಕಾಳು 90ರಿಂದ 100 ರೂ.ವರೆಗೆ ಇದೆ. ಮೈದಾ ಹಿಟ್ಟು ಕೆ.ಜಿ.ಗೆ 45ರಿಂದ 50 ರೂ. ಇದೆ.

ಅಡುಗೆ ಎಣ್ಣೆ ಲೀಟರ್‌ಗೆ 190ರಿಂದ 210 ರೂ.ವರೆಗೆ ಇದ್ದು, ವಿವಿಧ ಬ್ರ್ಯಾಂಡ್‌ಗಳಿಗೆ ಅನುಗುಣವಾಗಿ ದರದಲ್ಲಿ ವ್ಯತ್ಯಾಸವಿದೆ.

ಒಟ್ಟಾರೆ, ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಖರೀದಿ ಚಟುವಟಿಕೆ ಹೆಚ್ಚಾಗಿದ್ದು, ಹೂವು, ಹಣ್ಣು, ತರಕಾರಿ ಹಾಗೂ ದಿನಸಿ ವಸ್ತುಗಳ ದರ ಏರಿಕೆ ಜನರಿಗೆ ಹೆಚ್ಚುವರಿ ಹೊರೆ ತಂದಿದೆ.

ಗಣೇಶ ಹಬ್ಬಕ್ಕೆ ಮೋದಕ ಮಾತ್ರವಲ್ಲ, ಈ ಸಾಂಪ್ರದಾಯಿಕ ಕಡುಬು-ಉಂಡೆ ಮಾಡಿ: ಉತ್ತರ ಕರ್ನಾಟಕದ ಸ್ಪೆಷಲ್ ರೆಸಿಪಿ!

0

ಗಣೇಶ ಹಬ್ಬ ಬಂತೆಂದರೆ ಸಾಕು, ಎಲ್ಲೆಡೆ ಸಿಹಿ ಮೋದಕದ ಸಡಗರ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಗಣೇಶ ಚತುರ್ಥಿಯ ಸಂಭ್ರಮಕ್ಕೆ ಮೋದಕದ ಜೊತೆಗೆ ಅಲ್ಲಿನ ಸಾಂಪ್ರದಾಯಿಕ ನೈವೇದ್ಯಗಳಿಗೂ ವಿಶೇಷ ಸ್ಥಾನವಿದೆ.

ಗಣಪತಿಗೆ ಪ್ರಿಯವೆಂದು ಭಾವಿಸಲಾಗುವ ಕಡುಬು, ಚೌತಿ ಉಂಡೆ ಹಾಗೂ ಹೂರಣದ ಕಡುಬುಗಳು ಹಬ್ಬದ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಮನೆಮನೆಗಳಲ್ಲಿ ಸಿದ್ಧವಾಗುತ್ತವೆ. ಅದರಲ್ಲೂ ಗರಿಗರಿಯಾದ ಹುರಿದ ಗೋಧಿ ಹಿಟ್ಟಿನ ಕಡುಬು ಹಾಗೂ ಶೇಂಗಾ-ಹುರಿಗಡಲೆ ಚೌತಿ ಉಂಡೆ ಪ್ರಮುಖ ನೈವೇದ್ಯಗಳಾಗಿವೆ.

ಉತ್ತರ ಕರ್ನಾಟಕ ಶೈಲಿಯ ಹುರಿದ ಗೋಧಿ ಹಿಟ್ಟಿನ ಕಡುಬು:

ಗಣೇಶನಿಗೆ ಗರಿಗರಿಯಾದ ಹುರಿದ ಕಡುಬು ಅರ್ಪಿಸುವುದು ಉತ್ತರ ಕರ್ನಾಟಕದ ಹಲವು ಮನೆಗಳಲ್ಲಿ ನಡೆದುಬಂದಿರುವ ಸಂಪ್ರದಾಯ. ಇದನ್ನು ಗೋಧಿ ಹಿಟ್ಟು ಅಥವಾ ಚಿರೋಟಿ ರವೆಯಿಂದ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು ಅಥವಾ ಚಿರೋಟಿ ರವೆ, ಬೆಲ್ಲ, ಹಸಿ ಕೊಬ್ಬರಿ ತುರಿ, ಹುರಿದ ಗಸಗಸೆ, ಏಲಕ್ಕಿ ಪುಡಿ ಹಾಗೂ ಎಣ್ಣೆ ಅಥವಾ ತುಪ್ಪ.

ಮಾಡುವ ವಿಧಾನ:

ಮೊದಲು ಬಾಣಲೆಯಲ್ಲಿ ಹಸಿ ಕೊಬ್ಬರಿ ತುರಿ ಹಾಗೂ ಪುಡಿಮಾಡಿದ ಬೆಲ್ಲವನ್ನು ಹಾಕಿ ಕಡಿಮೆ ಉರಿಯಲ್ಲಿ ಬೆಲ್ಲ ಕರಗುವವರೆಗೆ ಹುರಿದುಕೊಳ್ಳಬೇಕು. ಬಳಿಕ ಹುರಿದ ಗಸಗಸೆ ಹಾಗೂ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ಹೂರಣ ಸಿದ್ಧವಾಗುತ್ತದೆ.

ಇನ್ನೊಂದೆಡೆ ಗೋಧಿ ಹಿಟ್ಟಿಗೆ ಚಿಟಿಕೆ ಉಪ್ಪು ಹಾಗೂ ಸ್ವಲ್ಪ ಕಾದ ಎಣ್ಣೆ ಸೇರಿಸಿ, ಅಗತ್ಯವಿರುವಷ್ಟು ನೀರು ಹಾಕಿ ಗಟ್ಟಿಯಾಗಿ ನಾದಿಕೊಳ್ಳಬೇಕು.

ನಂತರ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿಕೊಂಡು ಪೂರಿಯಂತೆ ಲಟ್ಟಿಸಬೇಕು. ಮಧ್ಯದಲ್ಲಿ ಸಿದ್ಧಪಡಿಸಿದ ಹೂರಣವನ್ನು ತುಂಬಿ ಅರ್ಧಚಂದ್ರಾಕಾರವಾಗಿ ಮಡಚಿ, ಅಂಚುಗಳನ್ನು ಚೆನ್ನಾಗಿ ಕೂಡಿಸಿಕೊಳ್ಳಬೇಕು.

ಕಾದ ಎಣ್ಣೆಯಲ್ಲಿ ಕಡುಬುಗಳನ್ನು ಹೊಂಬಣ್ಣ ಬರುವವರೆಗೆ ಕರಿದರೆ ಗರಿಗರಿಯಾದ ರುಚಿಕರವಾದ ಕಡುಬು ಸವಿಯಲು ಸಿದ್ಧ.

ಶೇಂಗಾ-ಹುರಿಗಡಲೆ ಚೌತಿ ಉಂಡೆ:

ಗಣೇಶ ಚತುರ್ಥಿಯ ಸಂದರ್ಭದಲ್ಲಿ ಉತ್ತರ ಕರ್ನಾಟಕದಲ್ಲಿ ತಯಾರಿಸುವ ಮತ್ತೊಂದು ವಿಶೇಷ ನೈವೇದ್ಯವೆಂದರೆ ಶೇಂಗಾ-ಹುರಿಗಡಲೆ ಚೌತಿ ಉಂಡೆ. ಸರಳವಾಗಿ ತಯಾರಿಸಬಹುದಾದ ಈ ಉಂಡೆ ರುಚಿಕರವಾಗಿದ್ದು, ಹಬ್ಬದ ಪ್ರಸಾದವಾಗಿಯೂ ಬಳಸಲಾಗುತ್ತದೆ.

ಬೇಕಾಗುವ ಸಾಮಗ್ರಿಗಳು:
ಹುರಿದ ಶೇಂಗಾ, ಹುರಿಗಡಲೆ ಅಥವಾ ಪುಠಾಣಿ, ಬೆಲ್ಲದ ಪುಡಿ, ತುಪ್ಪ ಹಾಗೂ ಏಲಕ್ಕಿ ಪುಡಿ.

ಮಾಡುವ ವಿಧಾನ:

ಮೊದಲು ಹುರಿದ ಶೇಂಗಾದ ಸಿಪ್ಪೆ ತೆಗೆದು, ಹುರಿಗಡಲೆಯೊಂದಿಗೆ ಮಿಕ್ಸಿ ಜಾರಿಗೆ ಹಾಕಿ ತರಿತರಿಯಾಗಿ ಪುಡಿಮಾಡಿಕೊಳ್ಳಬೇಕು.

ನಂತರ ಅದೇ ಜಾರಿಗೆ ಪುಡಿಮಾಡಿದ ಬೆಲ್ಲ ಹಾಗೂ ಏಲಕ್ಕಿ ಪುಡಿ ಸೇರಿಸಿ ಮತ್ತೊಮ್ಮೆ ಮಿಶ್ರಣ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ, ಬಿಸಿ ಮಾಡಿದ ತುಪ್ಪವನ್ನು ಸ್ವಲ್ಪಸ್ವಲ್ಪವಾಗಿ ಸೇರಿಸುತ್ತಾ ಚೆನ್ನಾಗಿ ಕಲಸಬೇಕು.

ಮಿಶ್ರಣ ಒಂದಾಗುತ್ತಿದ್ದಂತೆ ಕೈಯಲ್ಲಿ ಸಣ್ಣ ಸಣ್ಣ ಉಂಡೆಗಳನ್ನಾಗಿ ಕಟ್ಟಿದರೆ ರುಚಿಕರವಾದ ಚೌತಿ ಉಂಡೆ ಸಿದ್ಧ.

ಹೀಗೆ ಗಣೇಶ ಹಬ್ಬದಂದು ಉತ್ತರ ಕರ್ನಾಟಕದ ಮನೆಗಳಲ್ಲಿ ಸಾಂಪ್ರದಾಯಿಕ ನೈವೇದ್ಯಗಳನ್ನು ತಯಾರಿಸಿ ಗಣೇಶನಿಗೆ ಭಕ್ತಿಯಿಂದ ಅರ್ಪಿಸುವ ಪದ್ಧತಿ ತಲೆಮಾರುಗಳಿಂದ ನಡೆದುಕೊಂಡು ಬಂದಿದೆ. ಹಬ್ಬದ ಸಂಭ್ರಮದ ಜೊತೆಗೆ ಈ ಸಾಂಪ್ರದಾಯಿಕ ತಿನಿಸುಗಳು ಕೂಡ ಗಣೇಶ ಚತುರ್ಥಿಯ ವಿಶೇಷತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ.

ಗಣೇಶೋತ್ಸವದಲ್ಲಿ “ಕೈ” ಶಾಸಕನ ತಲೆಗೆ ಪೆಟ್ಟು! ಚಿಕಿತ್ಸೆ ಬಳಿಕ ಡಿಸ್ಚಾರ್ಜ್: ವಿರೋಧಿಗಳ ಷಡ್ಯಂತ್ರದ ಬಗ್ಗೆ ಗಣಿಗ ರವಿಕುಮಾರ್ ಹೇಳಿದ್ದೇನು?

0

ಮಂಡ್ಯ: ಗಣೇಶೋತ್ಸವ ಸ್ವಾಗತ ಕಾರ್ಯಕ್ರಮದ ವೇಳೆ ಕಾಂಗ್ರೆಸ್ ಶಾಸಕ ಗಣಿಗ ಪಿ.ರವಿಕುಮಾರ್ ಅವರ ತಲೆಗೆ ಕಬ್ಬಿಣದ ರಾಡ್ ಬಿದ್ದು ಗಾಯವಾಗಿರುವ ಘಟನೆ ಮಂಡ್ಯ ನಗರದ ಮರಿಗೌಡ ಬಡಾವಣೆಯಲ್ಲಿ ನಡೆದಿದೆ.

ಗಣೇಶೋತ್ಸವದ ವೇಳೆ ಕಾರ್ಯಕ್ರಮದ ಸ್ಕ್ರೀನ್ ಎಳೆಯುತ್ತಿದ್ದ ಸಂದರ್ಭದಲ್ಲಿ ಕಬ್ಬಿಣದ ರಾಡ್ ಆಕಸ್ಮಿಕವಾಗಿ ಶಾಸಕರ ತಲೆಯ ಮೇಲೆ ಬಿದ್ದಿದೆ. ಪರಿಣಾಮ ತಲೆಗೆ ಗಾಯವಾಗಿದ್ದು, ತಕ್ಷಣ ಅವರನ್ನು ಮಂಡ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತುರ್ತು ಚಿಕಿತ್ಸಾ ಘಟಕದಲ್ಲಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಪರಿಶೀಲನೆಗಾಗಿ ಸಿಟಿ ಸ್ಕ್ಯಾನ್ ನಡೆಸಿದ್ದರು. ಗಾಯಕ್ಕೆ ಹೊಲಿಗೆ ಹಾಕಲಾಗಿದ್ದು, ಚಿಕಿತ್ಸೆ ಬಳಿಕ ಶಾಸಕ ಗಣಿಗ ರವಿಕುಮಾರ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಘಟನೆ ವಿಷಯ ತಿಳಿಯುತ್ತಿದ್ದಂತೆ ಮಂಡ್ಯ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಆಸ್ಪತ್ರೆಗೆ ಆಗಮಿಸಿ, ಶಾಸಕರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಇನ್ನು ಶಾಸಕರಿಗೆ ಗಾಯವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು, ಮತದಾರರು, ವಿವಿಧ ಪಕ್ಷಗಳ ನಾಯಕರು ಹಾಗೂ ಮುಖಂಡರು ಆಸ್ಪತ್ರೆಗೆ ಆಗಮಿಸಿದ್ದರು.

ಈ ನಡುವೆ, ಘಟನೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಗಣಿಗ ರವಿಕುಮಾರ್, ತಮ್ಮ ಮೇಲೆ ಯಾವುದೇ ಷಡ್ಯಂತ್ರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಗಣೇಶೋತ್ಸವದ ವೇಳೆ ಸ್ಕ್ರೀನ್ ಎಳೆಯುತ್ತಿದ್ದಾಗ ಕಬ್ಬಿಣದ ರಾಡ್ ತಲೆಯ ಮೇಲೆ ಬಿದ್ದಿದೆ. ಇದರಿಂದ ಸಣ್ಣ ಪ್ರಮಾಣದ ಗಾಯವಾಗಿದೆ. ವೈದ್ಯರು ಸ್ಟೀಚ್ ಹಾಕಿದ್ದು, ಸುಮಾರು 10 ದಿನಗಳ ಕಾಲ ರೆಸ್ಟ್ ಮಾಡಲು ಹೇಳಿದ್ದಾರೆ. ತಾವು ಸುಮಾರು 6 ದಿನ ವಿಶ್ರಾಂತಿ ಪಡೆಯುವುದಾಗಿ ಗಣಿಗ ರವಿಕುಮಾರ್ ಹೇಳಿದ್ದಾರೆ.

‘ನಾನು ಆರೋಗ್ಯವಾಗಿದ್ದೇನೆ. ಯಾವುದೇ ತೊಂದರೆ ಇಲ್ಲ. ಯಾರೂ ಆತಂಕ ಪಡಬೇಡಿ, ಗಾಬರಿ ಆಗಬೇಡಿ. ನನ್ನ ಮೇಲೆ ಯಾವುದೇ ಷಡ್ಯಂತ್ರ ಇಲ್ಲ, ರಾಡ್ ಆಕಸ್ಮಿಕವಾಗಿ ತಲೆಯ ಮೇಲೆ ಬಿದ್ದಿದೆ’ ಎಂದು ಶಾಸಕ ಗಣಿಗ ರವಿಕುಮಾರ್ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕಾರ್ಯಕ್ರಮದ ಆಯೋಜನೆ ಹಾಗೂ ನಿರ್ವಹಣೆಯಲ್ಲಿ ಯಾವುದೇ ನಿರ್ಲಕ್ಷ್ಯವಾಗಿದೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಯಬೇಕಿದೆ.

ಇನ್ನು ಶಾಸಕ ಗಣಿಗ ರವಿಕುಮಾರ್ ಈ ಹಿಂದೆ ಕೆರಗೋಡು ಹನುಮಧ್ವಜ ವಿವಾದದ ಸಂದರ್ಭದಲ್ಲೂ ಸುದ್ದಿಯಾಗಿದ್ದರು. ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದ ಶಾಸಕರಿಗೆ ಇದೀಗ ಗಣೇಶೋತ್ಸವ ಕಾರ್ಯಕ್ರಮದ ವೇಳೆ ಗಾಯವಾಗಿರುವುದು ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ.

ಸದ್ಯ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಶಾಸಕ ಗಣಿಗ ರವಿಕುಮಾರ್ ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯಲಿದ್ದಾರೆ.

ಗಣಪತಿ ಮೆರವಣಿಗೆಯಲ್ಲಿ ಮಹಿಳೆಯರೊಂದಿಗೆ ಅಸಭ್ಯ ವರ್ತನೆ: ಕಿಡಿಗೇಡಿಗಳನ್ನು ಚದುರಿಸಿದ ಪೊಲೀಸರು

0

ಹುಬ್ಬಳ್ಳಿ: ನಗರದಲ್ಲಿ ಗಣಪತಿ ಮೂರ್ತಿ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಪರಿಚಿತ ಕಿಡಿಗೇಡಿಗಳು ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ.

ಸೆಪ್ಟೆಂಬರ್ 12ರಂದು ರಾತ್ರಿ 9:30ರ ಸುಮಾರಿಗೆ ಮರಾಠ ಗಲ್ಲಿಯಿಂದ ಸಿಬಿಟಿ ಕಡೆಗೆ ತೆರಳುವ ರಸ್ತೆಯ ಬಳಿ ಮೇದಾರ್ ಓಣಿ ಹಾಗೂ ಕಲಾಲ್ ಓಣಿಯ ಗಣಪತಿ ಮೆರವಣಿಗೆಗಳು ಮುಖಾಮುಖಿಯಾಗಿದ್ದವು.

ಈ ವೇಳೆ ಕಲಾಲ್ ಓಣಿಯ ಗಣಪತಿ ಮೆರವಣಿಗೆಯ ಡಿಜೆ ಮುಂದೆ ಕೆಲ ಯುವಕರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು ಎನ್ನಲಾಗಿದೆ. ತಕ್ಷಣ ಪೊಲೀಸರು ಮಧ್ಯಪ್ರವೇಶಿಸಿ, ಕನಿಷ್ಠ ಬಲಪ್ರಯೋಗದ ಮೂಲಕ 30 ಸೆಕೆಂಡ್‌ಗಳಿಗಿಂತ ಕಡಿಮೆ ಅವಧಿಯಲ್ಲಿ ಅವರನ್ನು ಅಲ್ಲಿಂದ ಚದುರಿಸಿದ್ದಾರೆ ಎಂದು ಪೊಲೀಸ್ ಕಮಿಷನರ್ ಭೂಷಣ ಬೋರಸೆ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಅಪರಿಚಿತ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಕಮಿಷನರ್ ತಮ್ಮ ಅಧಿಕೃತ ವಾಟ್ಸ್‌ಆಪ್ ಖಾತೆಯ ಮೂಲಕ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಶಾಲಾ ವೇಳಾಪಟ್ಟಿ ಬದಲಾವಣೆ ಸಾಧ್ಯತೆ: ಟ್ರಾಫಿಕ್ ನಿಯಂತ್ರಣಕ್ಕೆ ಸರ್ಕಾರದ ಹೊಸ ಚಿಂತನೆ!

0

ಬೆಂಗಳೂರು: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಲೆಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ.

ಬೆಂಗಳೂರಿನಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆ ಶಾಲಾ ವಾಹನಗಳು ಹಾಗೂ ಕಚೇರಿ ವಾಹನಗಳು ಒಂದೇ ಸಮಯದಲ್ಲಿ ರಸ್ತೆಗೆ ಇಳಿಯುವುದರಿಂದ ಪ್ರಮುಖ ರಸ್ತೆಗಳಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಹೀಗಾಗಿ ಶಾಲೆಗಳ ಸಮಯವನ್ನು ಬದಲಾಯಿಸುವಂತೆ ಖಾಸಗಿ ಶಾಲೆಗಳ ಒಕ್ಕೂಟ ಹಾಗೂ ಸಾರ್ವಜನಿಕರಿಂದ ಸರ್ಕಾರಕ್ಕೆ ಮನವಿಗಳು ಬಂದಿವೆ.

ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದು, ಶಾಲಾ ಸಮಯ ಬದಲಾವಣೆ ಮಾಡುವ ಮುನ್ನ ಎಲ್ಲಾ ಭಾಗಿದಾರರ ಅಭಿಪ್ರಾಯಗಳನ್ನು ಪಡೆಯಲಾಗುವುದು ಎಂದು ತಿಳಿಸಿದ್ದಾರೆ.

ಪೋಷಕರು, ಶಾಲಾ ಆಡಳಿತ ಮಂಡಳಿಗಳ ಜೊತೆ ಚರ್ಚೆ:

ಶಾಲಾ ಸಮಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ವಿವಿಧ ಇಲಾಖೆಗಳು, ಸಂಚಾರ ಪೊಲೀಸ್ ಅಧಿಕಾರಿಗಳು, ಖಾಸಗಿ ಶಾಲಾ ಆಡಳಿತ ಮಂಡಳಿಗಳು, ಶಾಲಾ ವಾಹನ ಚಾಲಕರ ಸಂಘ ಹಾಗೂ ಪೋಷಕರೊಂದಿಗೆ ಸುದೀರ್ಘ ಚರ್ಚೆ ನಡೆಸಲಿದೆ.

ಎಲ್ಲಾ ಭಾಗಿದಾರರ ಅಭಿಪ್ರಾಯಗಳನ್ನು ಸಂಗ್ರಹಿಸಿದ ಬಳಿಕವೇ ಶಾಲಾ ಸಮಯ ಬದಲಾವಣೆ ಕುರಿತು ಸೂಕ್ತ ಹಾಗೂ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಬೆಳಗ್ಗೆ ಕಚೇರಿ ಮತ್ತು ಶಾಲಾ ಸಮಯ ಒಂದೇ ಆಗಿರುವುದರಿಂದ ಒಂದೇ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ವಾಹನಗಳು ರಸ್ತೆಗೆ ಇಳಿಯುತ್ತಿವೆ. ಇದರಿಂದ ಪ್ರಮುಖ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.

ಹೀಗಾಗಿ ಶಾಲಾ ಸಮಯವನ್ನು ಸುಮಾರು 30 ನಿಮಿಷದಿಂದ ಒಂದು ಗಂಟೆಯವರೆಗೆ ಮುಂಚಿತವಾಗಿ ಅಥವಾ ಬೇರೆ ಸಮಯಕ್ಕೆ ಬದಲಾಯಿಸುವ ಸಾಧ್ಯತೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರಿಂದ ವಿದ್ಯಾರ್ಥಿಗಳ ಸುರಕ್ಷತೆ ಹೆಚ್ಚುವುದರ ಜೊತೆಗೆ ರಸ್ತೆ ಮೇಲಿನ ವಾಹನಗಳ ಒತ್ತಡವೂ ಕಡಿಮೆಯಾಗಬಹುದು ಎಂಬುದು ಇಲಾಖೆಯ ಲೆಕ್ಕಾಚಾರವಾಗಿದೆ.

ಈ ಹಿಂದೆ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಶಾಲಾ ಹಾಗೂ ಕಚೇರಿ ವೇಳಾಪಟ್ಟಿಯಲ್ಲಿ ಸೂಕ್ತ ಬದಲಾವಣೆ ಮಾಡುವಂತೆ ಉಚ್ಚ ನ್ಯಾಯಾಲಯವೂ ಸರ್ಕಾರಕ್ಕೆ ಸಲಹೆ ನೀಡಿತ್ತು.

ಇದೀಗ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶಾಲಾ ಸಮಯ ಬದಲಾವಣೆಯ ಕುರಿತು ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಹಾಸನದಲ್ಲಿ ಭೀಕರ ಅಪಘಾತ: ಸ್ಕೂಟಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ, ಗೃಹಿಣಿ ದಾರುಣ ಸಾವು!

0

ಹಾಸನ: ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಗೃಹಿಣಿಯೊಬ್ಬರು ಬಲಿಯಾಗಿರುವ ಘಟನೆ ಹಾಸನ ನಗರದ ಎನ್.ಆರ್. ವೃತ್ತದಲ್ಲಿ ನಡೆದಿದೆ.

ಅಪರ್ಣಾ ಡಿ.ಜೆ. ಎಂಬ 31 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಹಾಸನ ತಾಲೂಕಿನ ದೊಡ್ಡಆಲದಹಳ್ಳಿ ಗ್ರಾಮದ ಅಪರ್ಣಾ ಬೆಂಗಳೂರಿನಲ್ಲಿ ಪತಿ ಯೋಗೀಶ್ ಜೊತೆ ವಾಸವಾಗಿದ್ದರು. ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ತವರು ಮನೆಗೆ ಬಂದಿದ್ದರು.

ನಿನ್ನೆ ಆಸ್ಪತ್ರೆಗೆಂದು ಸ್ನೇಹಿತೆ ರಕ್ಷಿತಾ ಜೊತೆ ಸ್ಕೂಟಿಯಲ್ಲಿ ಹಾಸನ ನಗರಕ್ಕೆ ಬಂದಿದ್ದರು. ಆಸ್ಪತ್ರೆ ಕೆಲಸ ಮುಗಿಸಿ ಊರಿಗೆ ವಾಪಸ್ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಸ್ಕೂಟಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಅಪರ್ಣಾ ಹಾಗೂ ರಕ್ಷಿತಾ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಅಪರ್ಣಾ ಬಸ್‌ನ ಚಕ್ರಕ್ಕೆ ಸಿಲುಕಿದ್ದು, ಸ್ವಲ್ಪ ದೂರದವರೆಗೆ ಎಳೆದೊಯ್ಯಲಾಗಿದೆ. ಕೂಡಲೇ ಆಟೋ ಚಾಲಕ ಕುಮಾರ್ ಅವರು ಅಪರ್ಣಾರನ್ನು ಬಸ್ ಚಕ್ರದಿಂದ ಹೊರತೆಗೆದು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅಪರ್ಣಾ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇನ್ನು ಬಸ್ ಚಾಲಕ ಬ್ರೇಕ್ ಹಿಡಿಯಲಿಲ್ಲ ಎಂದು ಹೇಳಿರುವುದಾಗಿ ತಿಳಿದುಬಂದಿದೆ. ಅಪರ್ಣಾ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದೇ ವೇಳೆ ಅಪಘಾತದ ಸಂದರ್ಭದಲ್ಲಿ ಅಪರ್ಣಾ ಧರಿಸಿದ್ದ ಎರಡು ಎಳೆ ಚಿನ್ನದ ಮಾಂಗಲ್ಯ ಸರ ಕಳುವಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾಸನ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಹಿಂದೂ ಮಹಾ ಗಣಪತಿಗೆ 12 ಲಕ್ಷ ರೂ. ಮೌಲ್ಯದ 5 ಕೆಜಿ ಬೆಳ್ಳಿ ಕಿರೀಟ, ಆಯುಧ ಉಡುಗೊರೆ!

0

ಚಿಕ್ಕಮಗಳೂರು: ಈ ಬಾರಿ ಚಿಕ್ಕಮಗಳೂರು ನಗರದಲ್ಲಿ ಹಿಂದೂ ಮಹಾ ಗಣಪತಿ ಉತ್ಸವವನ್ನು ಹಿಂದೆಂದಿಗಿಂತಲೂ ಅದ್ದೂರಿಯಾಗಿ ಆಚರಿಸಲು ಆಡಳಿತ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ.

ಅಷ್ಟಕ್ಕೂ ಈ ಬಾರಿ ಗಣಪತಿಗೆ ಭಕ್ತರು ವಿಶೇಷ ಉಡುಗೊರೆಯನ್ನೇ ನೀಡಿದ್ದಾರೆ. ಬರೋಬ್ಬರಿ 12 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ 5 ಕೆಜಿ ಬೆಳ್ಳಿ ಕಿರೀಟ ಹಾಗೂ ಆಯುಧಗಳನ್ನು ಮಾಡಿಸಿಕೊಡಲಾಗಿದೆ.

ಇದರಲ್ಲಿ 4 ಕೆಜಿ ತೂಕದ ಬೆಳ್ಳಿ ಕಿರೀಟ ಹಾಗೂ ಒಟ್ಟು 1 ಕೆಜಿ ತೂಕದ ಎರಡು ಬೆಳ್ಳಿ ಆಯುಧಗಳಿವೆ. ಈ ಬೆಳ್ಳಿ ಆಭರಣಗಳನ್ನು ಶೃಂಗೇರಿಯಲ್ಲಿ ಪೂಜೆ ಮಾಡಿಸಿ ಚಿಕ್ಕಮಗಳೂರಿಗೆ ತರಲಾಗಿದೆ.

ಕಿರೀಟಕ್ಕೆ ಶೃಂಗೇರಿಯ ಕಿರಿಯ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ತೀರ್ಥ ಶ್ರೀಗಳು ಪೂಜೆ ನೆರವೇರಿಸಿ ಪುಷ್ಪಾರ್ಚನೆ ಮಾಡಿದ್ದಾರೆ. ಇದೇ ವೇಳೆ ಹಿಂದೂ ಮಹಾ ಗಣಪತಿ ಆಡಳಿತ ಮಂಡಳಿ ಶೃಂಗೇರಿ ಶ್ರೀಗಳಿಗೂ ಉತ್ಸವಕ್ಕೆ ಆಹ್ವಾನ ನೀಡಿದೆ.

ಇನ್ನು ಒಟ್ಟು 11 ದಿನಗಳ ಕಾಲ ನಡೆಯಲಿರುವ ಗಣೇಶೋತ್ಸವದಲ್ಲಿ ವಿಘ್ನೇಶ್ವರನು ಬೆಳ್ಳಿ ಕಿರೀಟ ಹಾಗೂ ಆಯುಧಗಳ ಸಮೇತ ಭಕ್ತರಿಗೆ ದರ್ಶನ ನೀಡಲಿದ್ದಾನೆ.

ಕಳೆದ 12 ವರ್ಷಗಳಿಂದ ಪ್ರತಿ ವರ್ಷವೂ ವಿಭಿನ್ನ ರೀತಿಯಲ್ಲಿ ಗಣೇಶೋತ್ಸವ ಆಚರಿಸುತ್ತಿರುವ ಆಡಳಿತ ಮಂಡಳಿ, ಈ ಬಾರಿಯೂ ಮತ್ತಷ್ಟು ವಿಜೃಂಭಣೆಯಿಂದ ಹಬ್ಬ ಆಚರಿಸಲು ಸಿದ್ಧವಾಗಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಸೇವೆಗೆ ಆದ್ಯತೆ ನೀಡಿ : ಯು.ಟಿ. ಖಾದರ್

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಸರ್ಕಾರಿ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ವೈದ್ಯರು ಮತ್ತು ಸಿಬ್ಬಂದಿಯ ಜವಾಬ್ದಾರಿ. ಸಣ್ಣಪುಟ್ಟ ಲೋಪಗಳಿಂದಲೂ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡದಂತೆ ಎಚ್ಚರ ವಹಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಫರೀದ್ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ ಹಾಗೂ ಆರೋಗ್ಯ ಇಲಾಖೆ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ತಮ್ಮ ಕೇಂದ್ರವನ್ನು ಸ್ವಂತ ಸಂಸ್ಥೆಯಂತೆ ಭಾವಿಸಿ ಸಮಯಪಾಲನೆಗೆ ಆದ್ಯತೆ ನೀಡಬೇಕು. ಆಸ್ಪತ್ರೆಗಳಲ್ಲಿ ಸ್ವಚ್ಛತೆ, ನೈರ್ಮಲ್ಯ ಕಾಪಾಡಿ ರೋಗಿಗಳಿಗೆ ಧೈರ್ಯ ಮತ್ತು ನಂಬಿಕೆ ಮೂಡುವ ವಾತಾವರಣ ನಿರ್ಮಿಸಬೇಕು. ಪತಿ-ಪತ್ನಿ ಒಂದೇ ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಅನುಕೂಲವಾಗುವಂತೆ ವರ್ಗಾವಣೆ ನಿಯಮಗಳಲ್ಲಿ ಬದಲಾವಣೆ ತರಲಾಗುವುದು. ಉತ್ತಮ ಸೇವೆ ಸಲ್ಲಿಸುವ ವೈದ್ಯರಿಗೆ ಅದೇ ಸ್ಥಳದಲ್ಲಿ ಮುಂದುವರಿಯಲು ಅವಕಾಶ ಕಲ್ಪಿಸುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದರು.

ಗುತ್ತಿಗೆ ಆಧಾರದಲ್ಲಿ ಮೂರರಿಂದ ಐದು ವರ್ಷ ಸೇವೆ ಸಲ್ಲಿಸಿರುವ ವೈದ್ಯರನ್ನು ಖಾಯಂಗೊಳಿಸುವ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗುವುದು. ತಾಲೂಕು ಆಸ್ಪತ್ರೆಗಳ ಡಯಾಲಿಸಿಸ್ ಕೊರತೆ ಶೀಘ್ರ ಪರಿಹರಿಸಲಾಗುವುದು. ಜಿಲ್ಲಾ ಆಸ್ಪತ್ರೆಯ ಸಾಮರ್ಥ್ಯ ವಿಸ್ತರಣೆ ಹಾಗೂ ಹೊಸ ಆಸ್ಪತ್ರೆ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗುತ್ತಿದೆ. ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಅಗತ್ಯವಿರುವ ರೋಗಿಗಳನ್ನು 108 ಆಂಬುಲೆನ್ಸ್ ಮೂಲಕ 20ರಿಂದ 30 ನಿಮಿಷಗಳಲ್ಲಿ ತಾಲೂಕು ಆಸ್ಪತ್ರೆಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಬೇಕು. ತಾಲೂಕು ಆಸ್ಪತ್ರೆಗಳಲ್ಲಿ ಪ್ರಮುಖ ಚಿಕಿತ್ಸಾ ಸೌಲಭ್ಯಗಳ ಜತೆಗೆ ಮರಣೋತ್ತರ ಪರೀಕ್ಷೆ ವ್ಯವಸ್ಥೆಯನ್ನೂ ಬಲಪಡಿಸಬೇಕು ಎಂದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿಕ್ಷಕರಿಗೆ 15 ದಿನಗಳ ಕಠಿಣ ತರಬೇತಿ ನೀಡಲಾಗುವುದು. ಪ್ರತಿಯೊಂದು ಶಾಲೆಯಲ್ಲೂ ಫುಟ್‌ಬಾಲ್, ಕ್ರಿಕೆಟ್, ಹಾಕಿ, ಕಬಡ್ಡಿ, ಖೋ-ಖೋ ತಂಡಗಳನ್ನು ರಚಿಸಿ ಶಾಲೆಯಿಂದ ರಾಜ್ಯ ಮಟ್ಟದವರೆಗೆ ಪ್ರತಿಭೆ ಬೆಳೆಸಬೇಕು. ಬ್ಯಾಂಡ್, ಪಥಸಂಚಲನ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೂ ಉತ್ತೇಜನ ನೀಡಲಾಗುವುದು. ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ ಮೂಲಕ ಮಕ್ಕಳಲ್ಲಿ ಶಿಸ್ತು ಮತ್ತು ಸೇವಾ ಮನೋಭಾವ ಬೆಳೆಸಬೇಕು ಎಂದರು.

ಸಭೆಯಲ್ಲಿ ಶಾಸಕರಾದ ವಿನಯ ಕುಲಕರ್ಣಿ, ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರಡ್ಡಿ, ಅಪರ ಜಿಲ್ಲಾಧಿಕಾರಿ ಗೀತಾ, ಜಿಪಂ ಸಿಇಒ ಭುವನೇಶ್ ಪಾಟೀಲ, ಪೂರ್ಣಿಮಾ ಚೂರಿ ಸೇರಿದಂತೆ ಅಧಿಕಾರಿಗಳು, ವೈದ್ಯರು, ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಸರ್ಕಾರಿ ಆಸ್ಪತ್ರೆಗಳು ಜನರ ನಂಬಿಕೆಯ ಕೇಂದ್ರಗಳಾಗಬೇಕು. ಪ್ರತಿಯೊಬ್ಬ ರೋಗಿಗೂ ಗೌರವ, ಗುಣಮಟ್ಟದ ಚಿಕಿತ್ಸೆ ಮತ್ತು ವಿಶ್ವಾಸದ ವಾತಾವರಣ ದೊರೆಯುವಂತೆ ವೈದ್ಯರು ಹಾಗೂ ಸಿಬ್ಬಂದಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು.

— ಯು.ಟಿ. ಖಾದರ್ ಫರೀದ್, ಸಚಿವ

50 ವರ್ಷ ಅಧಿಕಾರದಲ್ಲಿದ್ದರೂ ಅಭಿವೃದ್ಧಿ ಏಕೆ ಆಗಿಲ್ಲ: ಎಚ್.ಕೆ. ಪಾಟೀಲ ವಿರುದ್ಧ ರಾಜು ಕುರುಡಗಿ ವಾಗ್ದಾಳಿ

0

ವಿಜಯಸಾಕ್ಷಿ ಸುದ್ದಿ, ಗದಗ: ಐದು ದಶಕಗಳಿಂದ ರಾಜಕೀಯದಲ್ಲಿರುವ ಎಚ್.ಕೆ. ಪಾಟೀಲರು ಗದಗ-ಬೆಟಗೇರಿ ಅವಳಿ ನಗರದಲ್ಲಿ ಮೂಲಸೌಕರ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ಇದು ಗದಗ ಜನತೆಗೆ ಮಾಡುತ್ತಿರುವ ಘೋರ ಅನ್ಯಾಯ ಎಂದು ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಗದಗ-ಬೆಟಗೇರಿ ನಗರಗಳಲ್ಲಿ ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿಲ್ಲ. ವಾರಕ್ಕೊಮ್ಮೆ ಅಥವಾ ಹತ್ತು ದಿನಗಳಿಗೊಮ್ಮೆ ನೀರು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ನಗರದ ಪ್ರಮುಖ ಹಾಗೂ ಆಂತರಿಕ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ಧೂಳು ಮತ್ತು ಕಳಪೆ ಮೂಲಸೌಕರ್ಯದಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಗದಗ-ಬೆಟಗೇರಿ ಪ್ರದೇಶದ ನೇಕಾರರು ಹಾಗೂ ಕೈಮಗ್ಗ ಕಾರ್ಮಿಕರ ಸಮಸ್ಯೆಗಳೂ ಬಗೆಹರಿದಿಲ್ಲ. ಉದ್ಯೋಗಾವಕಾಶಗಳ ಕೊರತೆಯಿಂದ ಯುವಜನರು ಮತ್ತು ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದ್ದಾರೆ.

ಸ್ಥಳೀಯ ಆಡಳಿತ ಹಾಗೂ ಅಧಿಕಾರಿಗಳು ಸಾರ್ವಜನಿಕರ ಕುಂದುಕೊರತೆಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಅಭಿವೃದ್ಧಿ ಮತ್ತು ಮೂಲಸೌಕರ್ಯ ಸಮಸ್ಯೆಗಳಿಗೆ ಪರಿಹಾರ ಕೋರಿ ಸ್ಥಳೀಯ ಯುವಕರು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ ಎಂದು ರಾಜು ಕುರುಡಗಿ ಆರೋಪಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಬಡಜನರ ಸೇವೆಗಾಗಿ ಅಧಿಕಾರಕ್ಕೆ ಬಂದಿದೆ. ಆದರೆ ಸೇವೆ ಮಾಡುವುದನ್ನು ಬಿಟ್ಟು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದ ಅವರು, ಮುಂದಿನ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ನಾಯಕರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.

ವಾಸಣ್ಣ ಕುರಡಗಿ ನೇತೃತ್ವದಲ್ಲಿ ಕಾಂಗ್ರೆಸ್ ಸಂಘಟನೆಗೆ ಹೊಸ ಚೈತನ್ಯ : ಗುರುನಾಥ ದಾನಪ್ಪನವರ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕಾಂಗ್ರೆಸ್ ಪಕ್ಷದ ನೂತನ ಗದಗ ಜಿಲ್ಲಾ ಅಧ್ಯಕ್ಷರಾಗಿ ನೇಮಕಗೊಂಡಿರುವ ಹಿರಿಯ ನಾಯಕ ವಾಸಣ್ಣ ಕುರಡಗಿ ಅವರು ಸುದೀರ್ಘ ರಾಜಕೀಯ ಅನುಭವ ಹಾಗೂ ಉತ್ತಮ ಸಂಘಟನಾ ಸಾಮರ್ಥ್ಯ ಹೊಂದಿದ್ದಾರೆ ಎಂದು ಶಿರಹಟ್ಟಿ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ಗುರುನಾಥ ದಾನಪ್ಪನವರ ಹೇಳಿದರು.

ಗದಗ ಪ್ರವಾಸಿ ಮಂದಿರದಲ್ಲಿ ವಾಸಣ್ಣ ಕುರಡಗಿ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಪಕ್ಷದ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿ ಹಲವು ವರ್ಷಗಳಿಂದ ಸಂಘಟನೆಗೆ ಕೊಡುಗೆ ನೀಡಿರುವ ವಾಸಣ್ಣ ಅವರು ಕಾರ್ಯಕರ್ತರೊಂದಿಗೆ ಆತ್ಮೀಯವಾಗಿ ಬೆರೆಯುವ ಸರಳ ವ್ಯಕ್ತಿತ್ವ ಹೊಂದಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯ ಅವರಲ್ಲಿದ್ದು, ಅವರ ಅನುಭವ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆಗೆ ಹೊಸ ಬಲ ನೀಡಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಫಕೀರೇಶ ಮ್ಯಾಟಣ್ಣವರ, ತಿಪ್ಪಣ್ಣ ಸಂಶಿ, ರಾಜಣ್ಣ ಮಡಿವಾಳರ, ಫಕೀರೇಶ ನಡವಿನಕೇರಿ, ಜಗದೀಶ ಹುಲಿಗೆಮ್ಮನವರ, ಪವನ ಈಳಗೇರ, ಮಾರ್ತಾಂಡಪ್ಪ, ಹನಮಂತ ದೊಡ್ಡಮನಿ, ಕರಿಯಪ್ಪ ಸಾಂದ್ಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.