Home Blog

ಕಪ್ಪಾಗಿರುವ ಸ್ವಿಚ್ ಬೋರ್ಡ್‌ಗಳನ್ನು ಸುಲಭವಾಗಿ ಕ್ಲೀನ್ ಮಾಡೋದು ಹೇಗೆ? ಈ ತಪ್ಪು ಮಾತ್ರ ಮಾಡ್ಬೇಡಿ!

0

ಮನೆಯಲ್ಲಿರುವ ಸ್ವಿಚ್ ಬೋರ್ಡ್‌ಗಳ ಮೇಲೆ ದಿನಕಳೆದಂತೆ ಧೂಳು ಮತ್ತು ಕೊಳೆ ಸಂಗ್ರಹವಾಗುವುದು ಸಾಮಾನ್ಯ.

ಅದರಲ್ಲೂ ಅಡುಗೆಮನೆಯಲ್ಲಿರುವ ಸ್ವಿಚ್ ಬೋರ್ಡ್‌ಗಳ ಮೇಲೆ ಎಣ್ಣೆಯ ಜಿಡ್ಡು, ಹೊಗೆ ಹಾಗೂ ಧೂಳು ಸೇರಿಕೊಂಡು ಬೋರ್ಡ್‌ಗಳು ಕಪ್ಪಾಗಿ ಕಾಣಿಸಿಕೊಳ್ಳುತ್ತವೆ. ಎಷ್ಟೇ ಬಾರಿ ಒರೆಸಿದರೂ ಕೆಲವು ಕಲೆಗಳು ಸುಲಭವಾಗಿ ಹೋಗುವುದಿಲ್ಲ. ಹೀಗಾಗಿ ಸ್ವಿಚ್ ಬೋರ್ಡ್‌ಗಳನ್ನು ಸ್ವಚ್ಛಗೊಳಿಸುವಾಗ ಸರಿಯಾದ ವಿಧಾನ ಅನುಸರಿಸುವುದು ಮುಖ್ಯವಾಗಿದೆ.

ಸ್ವಿಚ್ ಬೋರ್ಡ್ ಸ್ವಚ್ಛಗೊಳಿಸುವ ಮೊದಲು ಮನೆಯ ಮುಖ್ಯ ವಿದ್ಯುತ್ ಸಂಪರ್ಕವನ್ನು ಸಂಪೂರ್ಣವಾಗಿ ಆಫ್ ಮಾಡಬೇಕು. ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದನ್ನು ಖಚಿತಪಡಿಸಿಕೊಂಡ ನಂತರವೇ ಸ್ವಚ್ಛಗೊಳಿಸುವ ಕೆಲಸ ಆರಂಭಿಸಬೇಕು. ತೇವವಾದ ಕೈಗಳಿಂದ ಸ್ವಿಚ್ ಬೋರ್ಡ್ ಮುಟ್ಟುವುದು ಅಥವಾ ವಿದ್ಯುತ್ ಸಂಪರ್ಕ ಇರುವಾಗ ನೀರು ಬಳಸುವುದು ಅಪಾಯಕಾರಿಯಾಗಬಹುದು.

ಮೊದಲಿಗೆ ಮೃದುವಾದ ಒಣ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ ಸ್ವಿಚ್ ಬೋರ್ಡ್ ಮೇಲಿರುವ ಧೂಳನ್ನು ನಿಧಾನವಾಗಿ ತೆಗೆಯಬೇಕು. ಸ್ವಿಚ್‌ಗಳ ಅಂಚು ಮತ್ತು ಸಂದುಗಳಲ್ಲಿ ಧೂಳು ಸಿಲುಕಿದ್ದರೆ ಮೃದುವಾದ ಬ್ರಷ್ ಬಳಸಿ ತೆಗೆಯಬಹುದು. ಈ ವೇಳೆ ನೀರು ಅಥವಾ ಯಾವುದೇ ದ್ರವ ಕ್ಲೀನರ್‌ಗಳನ್ನು ನೇರವಾಗಿ ಬೋರ್ಡ್ ಮೇಲೆ ಹಾಕಬಾರದು.

ಸ್ವಿಚ್ ಬಟನ್‌ಗಳ ಹೊರಭಾಗದಲ್ಲಿ ಎಣ್ಣೆಯ ಜಿಡ್ಡು ಅಥವಾ ಕೊಳೆ ಇದ್ದರೆ, ಬಟ್ಟೆಯನ್ನು ಸ್ವಲ್ಪ ಮಾತ್ರ ತೇವಗೊಳಿಸಿ ಚೆನ್ನಾಗಿ ಹಿಂಡಿ ನಂತರ ಪ್ಲಾಸ್ಟಿಕ್ ಹೊರಭಾಗವನ್ನು ನಿಧಾನವಾಗಿ ಒರೆಸಬಹುದು. ಬಟ್ಟೆಯಲ್ಲಿ ನೀರು ಉಳಿದಿರಬಾರದು. ಸ್ವಚ್ಛಗೊಳಿಸಿದ ಬಳಿಕ ಮತ್ತೊಂದು ಒಣ ಬಟ್ಟೆಯಿಂದ ಬೋರ್ಡ್‌ನ್ನು ಒರೆಸಬೇಕು.

ಮುಖ್ಯವಾಗಿ ಸ್ವಿಚ್‌ಗಳ ನಡುವಿನ ಸಂದು ಅಥವಾ ಬೋರ್ಡ್‌ನ ಒಳಭಾಗಕ್ಕೆ ನೀರು ಹೋಗದಂತೆ ಎಚ್ಚರಿಕೆ ವಹಿಸಬೇಕು. ಸ್ವಿಚ್ ಬೋರ್ಡ್ ಮೇಲೆ ನೇರವಾಗಿ ನೀರು ಅಥವಾ ಕ್ಲೀನಿಂಗ್ ದ್ರವವನ್ನು ಸ್ಪ್ರೇ ಮಾಡುವುದು ಅಪಾಯಕಾರಿಯಾಗಬಹುದು. ಕಲೆಗಳನ್ನು ತೆಗೆಯಲು ಚಾಕು, ಪಿನ್ ಅಥವಾ ಯಾವುದೇ ಹರಿತವಾದ ವಸ್ತುಗಳನ್ನು ಬಳಸುವುದನ್ನೂ ತಪ್ಪಿಸಬೇಕು.

ಒಟ್ಟಾರೆ, ಸ್ವಿಚ್ ಬೋರ್ಡ್‌ಗಳನ್ನು ಸ್ವಚ್ಛಗೊಳಿಸುವಾಗ ಮೊದಲು ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಒಣ ಬಟ್ಟೆಯಿಂದ ಧೂಳು ತೆಗೆಯುವುದು ಮತ್ತು ಅಗತ್ಯವಿದ್ದರೆ ಸ್ವಲ್ಪ ತೇವವಿರುವ ಬಟ್ಟೆಯಿಂದ ಹೊರಭಾಗವನ್ನು ಮಾತ್ರ ಒರೆಸುವುದು ಸುರಕ್ಷಿತ ವಿಧಾನವಾಗಿದೆ.

ಧರ್ಮ ಮತ್ತು ರಿಲಿಜನ್ ಒಂದೇ ಅಲ್ಲ, ಯುವಕರು ಅಹಂಕಾರ ಬಿಟ್ಟು ಸತ್ಯ ಅರಿಯಬೇಕು: ಮೋಹನ್ ಭಾಗವತ್

0

ಭೋಪಾಲ್: ಧರ್ಮ ಎನ್ನುವುದು ಜನರನ್ನು ಬಂಧಿಸುವುದಲ್ಲ, ಬದಲಾಗಿ ಸಮಾಜವನ್ನು ಒಗ್ಗೂಡಿಸುವ ಶಕ್ತಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆಯುತ್ತಿರುವ ‘ಯುವ ಧರ್ಮ ಸಂಸತ್–2026’ ಕಾರ್ಯಕ್ರಮದಲ್ಲಿ ಯುವಕರನ್ನುದ್ದೇಶಿಸಿ ಮಾತನಾಡಿದರು.

ಧರ್ಮ ಮತ್ತು ‘ರಿಲಿಜನ್’ ನಡುವಿನ ವ್ಯತ್ಯಾಸವನ್ನು ವಿವರಿಸಿದ ಮೋಹನ್ ಭಾಗವತ್, ಭಾರತೀಯ ಪರಂಪರೆಯಲ್ಲಿ ‘ಧರ್ಮ’ ಎಂಬ ಪರಿಕಲ್ಪನೆ ಪಾಶ್ಚಾತ್ಯ ಅರ್ಥದಲ್ಲಿನ ‘ರಿಲಿಜನ್’ಗೆ ಸಮಾನವಲ್ಲ ಎಂದು ಹೇಳಿದರು. ಧರ್ಮವನ್ನು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತಗೊಳಿಸಿ ನೋಡುವುದರಿಂದ ಅದರ ಮೂಲ ಅರ್ಥವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು.

ಭಾಗವತ್ ಅವರ ಪ್ರಕಾರ, ಧರ್ಮವು ಸತ್ಯ, ಕರುಣೆ, ಶುದ್ಧತೆ, ಆತ್ಮಶಿಸ್ತು ಹಾಗೂ ಕರ್ತವ್ಯದಂತಹ ಮೌಲ್ಯಗಳಿಗೆ ಸಂಬಂಧಿಸಿದೆ. ಧರ್ಮವು ವ್ಯಕ್ತಿಯ ಜೀವನಕ್ಕೆ ದಿಕ್ಕು ನೀಡುವುದರ ಜೊತೆಗೆ ಎಲ್ಲರ ಕಲ್ಯಾಣವನ್ನು ಒಳಗೊಂಡಿರುವ ಪರಿಕಲ್ಪನೆಯಾಗಿದೆ ಎಂದು ಅವರು ವಿವರಿಸಿದರು.

ಯುವಕರು ಧರ್ಮದ ಕುರಿತು ಚಿಂತನೆ ಮತ್ತು ಚರ್ಚೆ ನಡೆಸುತ್ತಿರುವುದು ಸಂತಸದ ವಿಚಾರ ಎಂದು ಭಾಗವತ್ ಹೇಳಿದರು. ಧರ್ಮದ ಅರಿವು ಕೇವಲ ವೃದ್ಧಾಪ್ಯದಲ್ಲಿ ಪಡೆಯಬೇಕಾದ ವಿಷಯವಲ್ಲ. ಜೀವನದ ಆರಂಭದಿಂದಲೇ ಧರ್ಮವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ನಡೆಯಬೇಕು ಎಂದು ಅವರು ಸಲಹೆ ನೀಡಿದರು.

ಮನುಷ್ಯ ತನ್ನ ಇಚ್ಛೆಯಂತೆ ಎಲ್ಲವೂ ನಡೆಯಬೇಕು ಎಂಬ ಭಾವನೆಯಲ್ಲಿ ಬದುಕುತ್ತಾನೆ. ಆದರೆ ಸೃಷ್ಟಿ ತನ್ನದೇ ಆದ ಪ್ರಕೃತಿ ಮತ್ತು ನಿಯಮಗಳಂತೆ ನಡೆಯುತ್ತದೆ. ಹೀಗಾಗಿ ಯುವಕರು ‘ಎಲ್ಲವೂ ನನಗೆ ಗೊತ್ತು’ ಎಂಬ ಅಹಂಕಾರವನ್ನು ಬದಿಗಿಟ್ಟು, ಮನಸ್ಸನ್ನು ತೆರೆದಿಟ್ಟುಕೊಂಡು ಸತ್ಯವನ್ನು ಅರಿಯುವ ಪ್ರಯತ್ನ ಮಾಡಬೇಕು ಎಂದು ಭಾಗವತ್ ಹೇಳಿದರು.

ಧರ್ಮ ಎನ್ನುವುದು ಜೀವನಪೂರ್ತಿ ಸಾಗುವ ಅರಿವು ಮತ್ತು ಆಚರಣೆಯ ಪ್ರಕ್ರಿಯೆ ಎಂದು ಅವರು ವಿವರಿಸಿದರು. ಧರ್ಮವು ಕೇವಲ ಆಚರಣೆಗಳ ಸಮೂಹವಲ್ಲ, ಅದು ವ್ಯಕ್ತಿಯ ನಡೆ-ನುಡಿ, ಕರ್ತವ್ಯ ಮತ್ತು ಜವಾಬ್ದಾರಿಗಳಿಗೂ ಸಂಬಂಧಿಸಿದೆ ಎಂದು ಹೇಳಿದರು.

 

ಸಿದ್ದರಾಮಯ್ಯರ ಬಾಯಿ ಮುಚ್ಚಿಸಿ ರೆಸ್ಟ್ ಗ್ಯಾರಂಟಿ ನೀಡಲಾಗಿದೆ: ಆರ್.ಅಶೋಕ್ ವಾಗ್ದಾಳಿ!

0

ರಾಮನಗರ: ಕಾಂಗ್ರೆಸ್ ಪಕ್ಷವು ಸಿದ್ದರಾಮಯ್ಯ ಅವರಿಗೆ ‘ರೆಸ್ಟ್ ಗ್ಯಾರಂಟಿ’ ನೀಡಿದ್ದು, ಅವರನ್ನು ಒಗ್ಗರಣೆಗೆ ಬಳಸುವ ಕರಿಬೇವು ಸೊಪ್ಪಿನಂತೆ ಸೈಡಿಗೆ ಇಟ್ಟಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರವಾಗಿ ವ್ಯಂಗ್ಯವಾಡಿದ್ದಾರೆ. ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

“ಸಿದ್ದರಾಮಯ್ಯರ ಬಾಯಿ ಮುಚ್ಚಿಸಿ ರೆಸ್ಟ್ ಗ್ಯಾರಂಟಿ ನೀಡಲಾಗಿದೆ”: “ಡಿ.ಕೆ.ಶಿವಕುಮಾರ್ ಮುಖ ನೋಡಿ ಒಕ್ಕಲಿಗರು ವೋಟ್ ಹಾಕುವುದಿಲ್ಲ ಎಂದು ಅವರದೇ ಪಕ್ಷದ ನಾಯಕ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷವು ಒಗ್ಗರಣೆಗೆ ಬಳಸಿ ಪಕ್ಕಕ್ಕೆ ಇಟ್ಟಿದೆ. ಅವರ ಬಾಯಿ ಮುಚ್ಚಿಸಲಾಗಿದ್ದು, ಮೈಸೂರಿನ ಮನೆಯಲ್ಲಿ ರೆಸ್ಟ್ ಗ್ಯಾರಂಟಿ ಮಾಡುವ ಸ್ಥಿತಿಗೆ ತರಲಾಗಿದೆ” ಎಂದು ಆರ್.ಅಶೋಕ್ ಕುಟುಕಿದರು.

“ರಾಜ್ಯ ಸರ್ಕಾರ ದಿವಾಳಿ, ಸಾಲ ಮಾಡದೇ ಬಜೆಟ್ ಮಂಡಿಸಲಿ”: ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಸರ್ಕಾರ ಸಚಿವ ಸಂಪುಟ ಸಭೆ ನಡೆಸುತ್ತಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, “ರಾಜ್ಯ ಸರ್ಕಾರ ಸಾಲದಲ್ಲಿ ಮುಳುಗಿದ್ದು, ಹೊಸ ಘೋಷಣೆಗಳಿಗೆ ಹಣ ಎಲ್ಲಿಂದ ತರುತ್ತದೆ? ಕಾಂಗ್ರೆಸ್ ಸರ್ಕಾರ ಮೂರೇ ವರ್ಷಗಳಲ್ಲಿ 1.5 ಲಕ್ಷ ಕೋಟಿ ರೂ. ಸಾಲ ಮಾಡಲು ಹೊರಟಿದ್ದು, ಪ್ರಸ್ತುತ ವರ್ಷಕ್ಕೆ 35,000 ದಿಂದ 40,000 ಕೋಟಿ ರೂ. ಬಡ್ಡಿ ಕಟ್ಟುವ ಸ್ಥಿತಿ ಎದುರಾಗಿದೆ. ಬೊಮ್ಮಾಯಿ ಸರ್ಕಾರ ಉಳಿತಾಯದ ಬಜೆಟ್ ನೀಡಿದ್ದರೆ, ಈ ಸರ್ಕಾರ ದಿವಾಳಿಯಾದ ಬಜೆಟ್ ನೀಡಿದೆ. ಧೈರ್ಯವಿದ್ದರೆ ಸಾಲ ಮಾಡದೇ ಬಜೆಟ್ ಮಂಡಿಸಿ ತೋರಿಸಲಿ” ಎಂದು ಸಿಎಂ ಅವರಿಗೆ ಸವಾಲು ಹಾಕಿದರು.

“ಅಭಿವೃದ್ಧಿ ಶೂನ್ಯ, ರೆಸಾರ್ಟ್‌ನಲ್ಲಿ ಕ್ಯಾಬಿನೆಟ್”: ಸರ್ಕಾರದ ಆಡಳಿತ ವೈಫಲ್ಯಗಳನ್ನು ಸಾಲಾಗಿ ಪಟ್ಟಿ ಮಾಡಿದ ಅವರು, “ಕೆಎಸ್ಆರ್ಟಿಸಿಗೆ 5,000 ಕೋಟಿ ರೂ. ಬಾಕಿ ಉಳಿಸಿಕೊಳ್ಳಲಾಗಿದ್ದು, ಸಿಬ್ಬಂದಿಗೆ ಸಂಬಳ ಹಾಗೂ ಡೀಸೆಲ್ಗೂ ಹಣವಿಲ್ಲದಂತಾಗಿದೆ. ಕ್ರಷರ್ಗಳಿಂದ ವರ್ಷಕ್ಕೆ 1 ಕೋಟಿ ಕಮಿಷನ್ ಬೇಡಿಕೆ ಇಟ್ಟಿರುವುದರಿಂದ ಜೆಲ್ಲಿ, ಎಂ-ಸ್ಯಾಂಡ್ ಸಿಗದೆ ರಸ್ತೆ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿವೆ. ಆಸ್ಪತ್ರೆಗಳಲ್ಲಿ ಔಷಧಿಯಿಲ್ಲ, ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಏರಿಕೆಯಾಗಿಲ್ಲ ಮತ್ತು ರೈತರಿಗೆ ಸೂಕ್ತ ಬರ ಪರಿಹಾರ ತಲುಪಿಲ್ಲ. ಹಿಂದೆ ಕಲಬುರಗಿಯಲ್ಲಿ ನಡೆಸಿದ ಕ್ಯಾಬಿನೆಟ್ ಸಭೆಯ ಘೋಷಣೆಗಳು ಒಂದೂ ಜಾರಿಯಾಗಿಲ್ಲ. ಈಗ ಮಂಗಳೂರಿನ ರೆಸಾರ್ಟ್ನಲ್ಲಿ ಮೀನು, ಏಡಿಕಾಯಿ ತಿಂದುಕೊಂಡು ಕ್ಯಾಬಿನೆಟ್ ನಡೆಸಿ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ” ಎಂದು ಟೀಕಿಸಿದರು.

ಫುಟ್ ಪಾತ್ ತೆರವುಗೊಳಿಸಿದ ಜಾಗದಲ್ಲಿ ಮತ್ತೆ ವ್ಯಾಪಾರ ಮಾಡಿದ್ರೆ FIR: ಕೃಷ್ಣ ಬೈರೇಗೌಡ ಎಚ್ಚರಿಕೆ

0

ಬೆಂಗಳೂರು: ನಗರದಲ್ಲಿ ಫುಟ್‌ಪಾತ್‌ಗಳನ್ನು ತೆರವುಗೊಳಿಸಿದ ಬಳಿಕ ಮತ್ತೆ ಅತಿಕ್ರಮಣವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಗ್ರೇಟರ್ ಬೆಂಗಳೂರು ಅಭಿವೃದ್ಧಿ (GBA) ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ತೆರವುಗೊಳಿಸಿದ ಸ್ಥಳಗಳಲ್ಲಿ ಮತ್ತೆ ವ್ಯಾಪಾರ ನಡೆಸುವ ಬೀದಿಬದಿ ವ್ಯಾಪಾರಿಗಳ ವಸ್ತುಗಳನ್ನು ವಶಪಡಿಸಿಕೊಳ್ಳುವುದರ ಜೊತೆಗೆ ದಂಡ ವಿಧಿಸಿ, ಅಗತ್ಯವಿದ್ದಲ್ಲಿ ಎಫ್‌ಐಆರ್ ದಾಖಲಿಸುವಂತೆ ಸೂಚಿಸಿದ್ದಾರೆ.

ಬೀದಿಬದಿ ವ್ಯಾಪಾರಿಗಳಿಂದ ಪಾದಚಾರಿ ಮಾರ್ಗಗಳು ಮತ್ತೆ ಒತ್ತುವರಿಯಾಗದಂತೆ ನಿರಂತರ ನಿಗಾ ವಹಿಸಬೇಕು. ತೆರವುಗೊಳಿಸಿದ ಫುಟ್‌ಪಾತ್‌ಗಳಲ್ಲಿ ಮರುಒತ್ತುವರಿ ಕಂಡುಬಂದರೆ ಕೂಡಲೇ ಸ್ಥಳದಲ್ಲೇ ಕ್ರಮ ಕೈಗೊಳ್ಳುವ ವ್ಯವಸ್ಥೆ ರೂಪಿಸಬೇಕು ಎಂದು ಸಚಿವರು ತಿಳಿಸಿದ್ದಾರೆ.

ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಒಟ್ಟಾರೆಯಾಗಿ 1,373.32 ಕಿಲೋಮೀಟರ್ ರಸ್ತೆಯಲ್ಲಿನ ಒತ್ತುವರಿ ತೆರವುಗೊಳಿಸಿ, ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಅಧಿಕಾರಿಗಳ ಕಾರ್ಯವನ್ನು ಕೃಷ್ಣ ಬೈರೇಗೌಡ ಶ್ಲಾಘಿಸಿದ್ದಾರೆ.

ಆದರೆ, ನಗರದ ಹಲವು ಪ್ರದೇಶಗಳಲ್ಲಿ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಿದ ಬಳಿಕವೂ ಕೆಲವೆಡೆ ಮತ್ತೆ ಒತ್ತುವರಿ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಇದು ಕಳವಳಕಾರಿ ವಿಚಾರವಾಗಿದ್ದು, ಮರುಒತ್ತುವರಿ ತಡೆಯಲು ಪರಿಣಾಮಕಾರಿ ನಿಗಾ ವ್ಯವಸ್ಥೆ ಅಗತ್ಯ ಎಂದು ಸಚಿವರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರತಿ ನಗರಪಾಲಿಕೆ ವ್ಯಾಪ್ತಿಯಲ್ಲಿ ಪೊಲೀಸ್ ಮತ್ತು ಪಾಲಿಕೆ ಅಧಿಕಾರಿಗಳ ಸಮನ್ವಯದೊಂದಿಗೆ ಜಂಟಿ ಟಾಸ್ಕ್‌ಫೋರ್ಸ್ ರಚಿಸುವಂತೆ ಸೂಚಿಸಲಾಗಿದೆ. ತೆರವುಗೊಳಿಸಿರುವ ಪಾದಚಾರಿ ಮಾರ್ಗಗಳಲ್ಲಿ ನಿಯಮಿತ ಹಾಗೂ ಅನಿರೀಕ್ಷಿತ ಪರಿಶೀಲನೆ ನಡೆಸಬೇಕು. ಮರುಒತ್ತುವರಿ ಕಂಡುಬಂದ ಕೂಡಲೇ ಸ್ಥಳದಲ್ಲೇ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಇದರ ಜೊತೆಗೆ ಮರುಒತ್ತುವರಿ ಪ್ರಕರಣಗಳನ್ನು ತಕ್ಷಣ ಗುರುತಿಸಿ, ಸ್ಥಳದ ಫೋಟೋ ಹಾಗೂ ಜಿಯೋ-ಟ್ಯಾಗ್ ಮಾಹಿತಿಯೊಂದಿಗೆ ವರದಿ ಮಾಡುವ ವ್ಯವಸ್ಥೆ ರೂಪಿಸುವಂತೆ ಸೂಚಿಸಲಾಗಿದೆ. ಮಾರ್ಷಲ್‌ಗಳು ಮತ್ತು ಬೀಟ್ ಪೊಲೀಸ್ ಸಿಬ್ಬಂದಿ ಜಂಟಿಯಾಗಿ ನಿಯಮಿತವಾಗಿ ಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ.

ಫುಟ್‌ಪಾತ್ ತೆರವುಗೊಳಿಸಿದ ಬಳಿಕ ಮತ್ತೆ ಅದೇ ಜಾಗದಲ್ಲಿ ವ್ಯಾಪಾರ ನಡೆಸಿ ಒತ್ತುವರಿ ಮಾಡಿದರೆ ವಸ್ತುಗಳನ್ನು ವಶಪಡಿಸಿಕೊಂಡು ದಂಡ ವಿಧಿಸುವುದರ ಜೊತೆಗೆ ಎಫ್‌ಐಆರ್ ದಾಖಲಿಸುವ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಸೂಚಿಸಿದ್ದಾರೆ. ಪಾದಚಾರಿಗಳ ಸುಗಮ ಸಂಚಾರಕ್ಕೆ ಯಾವುದೇ ರೀತಿಯ ಅಡ್ಡಿಯಾಗದಂತೆ ಮರುಒತ್ತುವರಿ ತಡೆಗೆ ನಿರಂತರ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ʼಗೆ ಹೈಕೋರ್ಟ್ʼನಿಂದ ಗುಡ್ ನ್ಯೂಸ್

0

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆದಿದ್ದು, ಸಾಕ್ಷಿಗಳ ಪಾಟೀ ಸವಾಲಿನ ಸಂದರ್ಭದಲ್ಲಿ ಖುದ್ದು ನ್ಯಾಯಾಲಯಕ್ಕೆ ಹಾಜರಾಗುವ ಅವಕಾಶವನ್ನು ನ್ಯಾಯಾಲಯ ನೀಡಿದೆ. ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಪೀಠದ ಮುಂದೆ ಅರ್ಜಿಯ ವಿಚಾರಣೆ ನಡೆಯಿತು.

ಪ್ರಕರಣದ ವಿಚಾರಣೆ ಸದ್ಯ ನ್ಯಾಯಾಲಯದಲ್ಲಿ ಮುಂದುವರಿದಿದ್ದು, ಕೆಲವು ಸಾಕ್ಷಿಗಳ ಹೇಳಿಕೆ ಮತ್ತು ಪಾಟೀ ಸವಾಲಿನ ಸಂದರ್ಭದಲ್ಲಿ ತಾವು ಖುದ್ದಾಗಿ ನ್ಯಾಯಾಲಯದಲ್ಲಿ ಹಾಜರಾಗಲು ಅವಕಾಶ ನೀಡಬೇಕು ಎಂದು ದರ್ಶನ್ ಪರ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದರು.

ಶುಕ್ರವಾರ ನಡೆದ ವಿಚಾರಣೆಯಲ್ಲಿ ದರ್ಶನ್ ಪರ ವಕೀಲರು, ನಿರ್ದಿಷ್ಟವಾಗಿ ಏಳು ಸಾಕ್ಷಿಗಳ ವಿಚಾರಣೆ ನಡೆಯುವ ಸಂದರ್ಭದಲ್ಲಿ ತಮ್ಮ ಕಕ್ಷಿದಾರರು ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗುವುದು ಅಗತ್ಯ ಎಂದು ವಾದಿಸಿದರು. ಸಾಕ್ಷಿಗಳ ಪಾಟೀ ಸವಾಲಿನ ಸಂದರ್ಭದಲ್ಲಿ ಆರೋಪಿಯ ಉಪಸ್ಥಿತಿ ಅಗತ್ಯವಾಗಬಹುದು ಎಂಬ ಅಂಶವನ್ನೂ ನ್ಯಾಯಾಲಯದ ಗಮನಕ್ಕೆ ತಂದರು.

ಮನವಿಯನ್ನು ಪರಿಗಣಿಸಿದ ಹೈಕೋರ್ಟ್, ನಿರ್ದಿಷ್ಟ ಸಾಕ್ಷಿಗಳ ಪಾಟೀ ಸವಾಲಿನ ಸಂದರ್ಭದಲ್ಲಿ ದರ್ಶನ್ ಖುದ್ದು ಹಾಜರಾಗಲು ಅವಕಾಶ ನೀಡಿದೆ. ಆದರೆ ಪ್ರತಿಯೊಂದು ವಿಚಾರಣೆಯ ದಿನವೂ ಆರೋಪಿಯು ತನ್ನ ಇಚ್ಛೆಯಂತೆ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ದರ್ಶನ್ ಅವರ ಖುದ್ದು ಹಾಜರಾತಿ ಕುರಿತು ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕ ಎಸ್‌ಪಿಪಿ ಪ್ರಸನ್ನ ಕುಮಾರ್ ಕೂಡ ವಾದ ಮಂಡಿಸಿದರು. ದರ್ಶನ್ ಯಾವ ದಿನಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂಬುದನ್ನು ಸ್ಪಷ್ಟವಾಗಿ ನಿಗದಿಪಡಿಸುವಂತೆ ಅವರು ಮನವಿ ಮಾಡಿದರು.

ವಿಚಾರಣೆಯ ಪ್ರಕ್ರಿಯೆ ಯಾವುದೇ ಕಾರಣಕ್ಕೂ ವಿಳಂಬವಾಗದಂತೆ, ನಿರ್ದಿಷ್ಟ ಸಾಕ್ಷಿಗಳ ವಿಚಾರಣೆ ಮತ್ತು ಪಾಟೀ ಸವಾಲು ನಡೆಯುವ ದಿನಗಳಲ್ಲಿ ಮಾತ್ರ ದರ್ಶನ್ ಖುದ್ದು ಹಾಜರಾಗುವ ವ್ಯವಸ್ಥೆ ಇರಬೇಕು ಎಂಬ ವಿಚಾರವೂ ವಿಚಾರಣೆ ವೇಳೆ ಚರ್ಚೆಯಾಯಿತು.

ಆರೋಪಿಯ ಹಿತದೃಷ್ಟಿಯಿಂದ ನಿರ್ದಿಷ್ಟ ಸಂದರ್ಭಗಳಲ್ಲಿ ಖುದ್ದು ಹಾಜರಾಗಲು ಅವಕಾಶ ನೀಡಬಹುದಾದರೂ, ಈ ಅವಕಾಶವನ್ನು ಬಳಸಿಕೊಂಡು ವಿಚಾರಣೆಯ ದಿನಾಂಕ ಅಥವಾ ಸಾಕ್ಷಿಗಳ ವಿಚಾರಣೆಯ ಕ್ರಮವನ್ನು ಆರೋಪಿಗಳೇ ನಿರ್ಧರಿಸುವಂತಾಗಬಾರದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಸಾಕ್ಷಿಗಳ ವಿಚಾರಣೆ ಯಾವ ದಿನ ನಡೆಯಬೇಕು ಎಂಬುದನ್ನು ಆರೋಪಿಗಳು ನ್ಯಾಯಾಲಯಕ್ಕೆ ಸೂಚಿಸಲು ಸಾಧ್ಯವಿಲ್ಲ. ನ್ಯಾಯಾಲಯ ನಿಗದಿಪಡಿಸುವ ವೇಳಾಪಟ್ಟಿಯಂತೆ ಸಾಕ್ಷಿಗಳ ವಿಚಾರಣೆ ಮುಂದುವರಿಯಬೇಕು ಎಂಬ ಅಂಶವನ್ನು ಪೀಠ ಒತ್ತಿ ಹೇಳಿದೆ.

ಹೀಗಾಗಿ, ರೇಣುಕಾಸ್ವಾಮಿ ಪ್ರಕರಣದ ನಿರ್ದಿಷ್ಟ ಸಾಕ್ಷಿಗಳ ಪಾಟೀ ಸವಾಲಿನ ವೇಳೆ ದರ್ಶನ್‌ಗೆ ನ್ಯಾಯಾಲಯದಲ್ಲಿ ಖುದ್ದು ಹಾಜರಾಗಲು ಅವಕಾಶ ಸಿಕ್ಕಿದ್ದರೂ, ಈ ಅವಕಾಶವು ನ್ಯಾಯಾಲಯ ನಿಗದಿಪಡಿಸುವ ದಿನಾಂಕ ಮತ್ತು ವಿಚಾರಣಾ ವೇಳಾಪಟ್ಟಿಗೆ ಮಾತ್ರ ಸೀಮಿತವಾಗಿದೆ.

IAS ಅಧಿಕಾರಿ ಜ್ಞಾನೇಂದ್ರ ಶೋಕಿ ಜೀವನ ಬಯಲು: ಗೆಳತಿಗೆ ಮತ್ತೆ ₹30 ಲಕ್ಷದ ಜ್ಯುವೆಲ್ಲರಿ ಗಿಫ್ಟ್!

0

ಬೆಂಗಳೂರು: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಕುರಿತು ಸಿಐಡಿ ತನಿಖೆ ಮುಂದುವರಿದಿರುವ ಬೆನ್ನಲ್ಲೇ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್‌ಗೆ ಸಂಬಂಧಿಸಿದ ಹಣಕಾಸು ವ್ಯವಹಾರಗಳ ಕುರಿತು ಮತ್ತಷ್ಟು ಮಾಹಿತಿ ತನಿಖಾಧಿಕಾರಿಗಳ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಪ್ರಕರಣದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಹಣದ ವಹಿವಾಟು ಸೇರಿದಂತೆ ಹಲವು ಆರೋಪಗಳ ಬಗ್ಗೆ ತನಿಖೆ ನಡೆಯುತ್ತಿದೆ.

ಇದೀಗ ತನಿಖೆಯ ಭಾಗವಾಗಿ ಓಂ ಲಕ್ಷ್ಮಿ ಕೋ-ಆಪರೇಟಿವ್ ಸೊಸೈಟಿಗೆ ಸಂಬಂಧಿಸಿದ ಅನುಮಾನಾಸ್ಪದ ಹಣ ವರ್ಗಾವಣೆಗಳನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ. ಈ ವೇಳೆ, ಗಂಗ್ವಾರ್‌ಗೆ ಆಪ್ತರಾಗಿದ್ದಾರೆ ಎನ್ನಲಾದ ಮಹಿಳೆಗೆ ಮತ್ತೊಮ್ಮೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಖರೀದಿಸಿಕೊಟ್ಟಿರುವ ಬಗ್ಗೆ ಮಾಹಿತಿ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಈ ಹಿಂದೆ ಜುಲೈನಲ್ಲಿ ಬೆಂಗಳೂರಿನ ಪ್ರತಿಷ್ಠಿತ ಆಭರಣ ಮಳಿಗೆಯೊಂದರಲ್ಲಿ ಖರೀದಿಸಲಾಗಿದ್ದ ಸುಮಾರು ₹26 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಸಿಐಡಿ ಅಧಿಕಾರಿಗಳು ಜಪ್ತಿ ಮಾಡಿದ್ದರು ಎನ್ನಲಾಗಿದೆ. ಇದೀಗ ಇದೇ ಮಹಿಳೆಗೆ ಮತ್ತೆ ಸುಮಾರು ₹30 ಲಕ್ಷ ಮೌಲ್ಯದ ಚಿನ್ನಾಭರಣ ಖರೀದಿಸಿರುವ ಬಗ್ಗೆ ತನಿಖೆಯಲ್ಲಿ ಮಾಹಿತಿ ಲಭ್ಯವಾಗಿದೆ ಎಂದು ಹೇಳಲಾಗಿದೆ.

ಈ ಹಣದ ಮೂಲವೇನು, ಚಿನ್ನಾಭರಣ ಖರೀದಿಗೆ ಹಣ ಎಲ್ಲಿಂದ ಬಂದಿದೆ ಹಾಗೂ ಅನುಮಾನಾಸ್ಪದ ಹಣ ವರ್ಗಾವಣೆಗಳಿಗೂ ಈ ವ್ಯವಹಾರಗಳಿಗೂ ಯಾವುದೇ ಸಂಬಂಧವಿದೆಯೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ.

ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಹಲವು ಅಭ್ಯರ್ಥಿಗಳಿಂದ ಭಾರಿ ಮೊತ್ತದ ಹಣ ಪಡೆದಿರುವ ಆರೋಪಗಳೂ ತನಿಖೆಯಲ್ಲಿವೆ. ಕೆಲ ಅಭ್ಯರ್ಥಿಗಳು ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆಯ ಮಾಹಿತಿಯನ್ನು ಪರೀಕ್ಷೆಗೂ ಮುನ್ನವೇ ಪಡೆದಿದ್ದರು ಎಂಬ ಆರೋಪಗಳ ಕುರಿತು ತನಿಖೆ ನಡೆಯುತ್ತಿದ್ದು, ಅಭ್ಯರ್ಥಿಗಳ ಹೇಳಿಕೆಗಳನ್ನು ಸಿಐಡಿ ದಾಖಲಿಸಿಕೊಂಡಿದೆ.

ಪ್ರಕರಣದ ತನಿಖೆಯಲ್ಲಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆ ಅವರನ್ನು ಸಿಐಡಿ ವಿಚಾರಣೆ ನಡೆಸಿದ್ದು, ಬಳಿಕ ನ್ಯಾಯಾಲಯವು ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ತನಿಖಾಧಿಕಾರಿಗಳು ಹಣಕಾಸು ವಹಿವಾಟುಗಳು, ಬ್ಯಾಂಕ್ ಖಾತೆಗಳು, ಡಿಜಿಟಲ್ ದಾಖಲೆಗಳು ಹಾಗೂ ಇತರೆ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

ಚಿನ್ನಾಭರಣ ಖರೀದಿ ಮತ್ತು ಹಣ ವರ್ಗಾವಣೆಗೆ ಸಂಬಂಧಿಸಿದ ಆರೋಪಗಳ ಕುರಿತು ತನಿಖೆ ಮುಂದುವರಿದಿದ್ದು, ಈ ವ್ಯವಹಾರಗಳ ಸಂಪೂರ್ಣ ಹಿನ್ನೆಲೆ ಮುಂದಿನ ತನಿಖೆಯಲ್ಲಿ ಸ್ಪಷ್ಟವಾಗಬೇಕಿದೆ.

ಮಂಗಳೂರಿನಲ್ಲಿ ಐತಿಹಾಸಿಕ ಸಂಪುಟ ಸಭೆ: ತುಳುವಿಗೆ ರಾಜ್ಯದ 2ನೇ ಅಧಿಕೃತ ಭಾಷೆ ಸ್ಥಾನಮಾನ ಘೋಷಿಸಿದ CM!

0

ಮಂಗಳೂರು: ಕರಾವಳಿ ಭಾಗದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ ಸಭೆ ನಡೆದಿದ್ದು, ಹಲವು ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಮಾರು 60 ವಿಷಯಗಳ ಬಗ್ಗೆ ಚರ್ಚೆ ನಡೆದಿದ್ದು, ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆ ಸ್ಥಾನಮಾನ ನೀಡುವ ಕುರಿತು ಮಹತ್ವದ ಘೋಷಣೆ ಮಾಡಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿ.ಕೆ. ಶಿವಕುಮಾರ್, ಮಂಗಳೂರು ಹಾಗೂ ಕರಾವಳಿ ಭಾಗದ ಅಭಿವೃದ್ಧಿ ಮತ್ತು ಸ್ಥಳೀಯ ವಿಚಾರಗಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.

ಈ ಜಿಲ್ಲೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಇಡೀ ರಾಷ್ಟ್ರವೇ ಜಿಲ್ಲೆಯ ಇತಿಹಾಸ ಮತ್ತು ಪರಂಪರೆಯನ್ನು ಗಮನಿಸಿದೆ ಎಂದು ಸಿಎಂ ಹೇಳಿದರು. ಮುಖ್ಯಮಂತ್ರಿಯಾದ ಬಳಿಕ ಕರಾವಳಿ ಭಾಗದಲ್ಲಿ ಸಚಿವ ಸಂಪುಟ ಸಭೆ ನಡೆಸುವ ಮೂಲಕ ಈ ಭಾಗದ ಜನರ ಸಮಸ್ಯೆಗಳು ಹಾಗೂ ಅಗತ್ಯಗಳನ್ನು ಅರಿಯುವ ಪ್ರಯತ್ನ ಮಾಡಲಾಗಿದೆ ಎಂದರು.

ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆ ಸ್ಥಾನಮಾನ ನೀಡುವ ವಿಚಾರವನ್ನು ಸರ್ಕಾರ ಪರಿಗಣಿಸಿದ್ದು, ಈ ಕುರಿತು ಡಿ.ಕೆ. ಶಿವಕುಮಾರ್ ಘೋಷಣೆ ಮಾಡಿದ್ದಾರೆ.

ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಕರಾವಳಿ ಭಾಗದಲ್ಲಿ ಕೇಳಿಬರುತ್ತಿದೆ. ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಗೂ ಮುನ್ನ ವಿವಿಧ ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ಈ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದರು.

ಇದೇ ವೇಳೆ ಮಂಗಳೂರು ಜಿಲ್ಲೆ ಎಂದು ಘೋಷಿಸುವ ವಿಚಾರವನ್ನು ಸಾರ್ವಜನಿಕ ಚರ್ಚೆಗೆ ಬಿಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಕುರಿತು ಒಂದು ತಿಂಗಳ ಕಾಲ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಅವಕಾಶ ನೀಡಲಾಗಿದೆ.

ಮಂಗಳೂರು ಎಂಬ ಹೆಸರಿನ ವಿಚಾರದಲ್ಲಿ ಸರ್ಕಾರದ ನಿಲುವಿನ ಬಗ್ಗೆ ಸಾರ್ವಜನಿಕ ಚರ್ಚೆಗೆ ಅವಕಾಶ ಕಲ್ಪಿಸಲಾಗಿದ್ದು, ಜನರ ಅಭಿಪ್ರಾಯವನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಮಂಗಳೂರಿನಲ್ಲಿ ನಡೆದ ಈ ಸಚಿವ ಸಂಪುಟ ಸಭೆ ಕರಾವಳಿ ಭಾಗದ ಅಭಿವೃದ್ಧಿ, ಭಾಷೆ, ಸಂಸ್ಕೃತಿ ಸೇರಿದಂತೆ ಹಲವು ಸ್ಥಳೀಯ ವಿಚಾರಗಳ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ.

ಪುನೀತ್ ರಾಜ್ ಕುಮಾರ್ ನಿಧನದ ವೇಳೆ ಆಕ್ಷೇಪಾರ್ಹ ಪೋಸ್ಟ್: ಬೆಂಗಳೂರಿನ ಯುವಕನಿಗೆ ಹೈಕೋರ್ಟ್ ತೀವ್ರ ತರಾಟೆ

ಬೆಂಗಳೂರು: ದಿವಂಗತ ನಟ ಡಾ. ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ನಿಧನದ ಸಮಯದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಂತ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಬೆಂಗಳೂರಿನ ಯುವಕ ರಿತ್ವಿಕ್ ಶರ್ಮಾನಿಗೆ ಕರ್ನಾಟಕ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ತನ್ನ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ (FIR) ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು, ಯುವಕನ ಭವಿಷ್ಯ ಹಾಗೂ ವಿದ್ಯಾಭ್ಯಾಸದ ದೃಷ್ಟಿಯಿಂದ ಪ್ರಕರಣವನ್ನು ಅಂತಿಮವಾಗಿ ರದ್ದುಗೊಳಿಸಿ ಆದೇಶಿಸಿದೆ.

“ಉಚಿತ ಎಂದು ಇಂತಹ ವಿಕೃತ ಸಂದೇಶ ಪೋಸ್ಟ್ ಮಾಡುತ್ತೀರಾ?”: ವಿಚಾರಣೆ ವೇಳೆ ನ್ಯಾಯಪೀಠವು ಅರ್ಜಿದಾರನ ದುರ್ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿತು. “ಸಾಮಾಜಿಕ ಮಾಧ್ಯಮಗಳನ್ನು ಬಳಸಲು ಮುಕ್ತ ಅವಕಾಶವಿದೆ ಎಂದ ಮಾತ್ರಕ್ಕೆ ಇಂತಹ ವಿಕೃತ ಸಂದೇಶಗಳನ್ನು ಪೋಸ್ಟ್ ಮಾಡುತ್ತೀರಾ? ಪುನೀತ್ ರಾಜ್‌ಕುಮಾರ್ ಅವರು ಮೇರುನಟ ಡಾ. ರಾಜ್‌ಕುಮಾರ್ ಅವರ ಪುತ್ರ. ಅವರು ನಿಧನರಾದ ಸಂದರ್ಭದಲ್ಲಿ ಇಂತಹ ಆಕ್ಷೇಪಾರ್ಹ ಪದ ಬಳಕೆ ಮಾಡಬಹುದೇ? ಯಾವ ರೀತಿಯ ಪದ ಬಳಸಲಾಗಿದೆ ಎಂಬುದು ನಿಮಗಾದರೂ ಗೊತ್ತೇ?” ಎಂದು ತೀವ್ರ ಅಸಮಾಧಾನ ಹೊರಹಾಕಿತು.

ವಿದ್ಯಾಭ್ಯಾಸ ಹಾಗೂ ಭವಿಷ್ಯದ ದೃಷ್ಟಿಯಿಂದ ಕೇಸ್ ರದ್ದು: ಅರ್ಜಿದಾರ ರಿತ್ವಿಕ್ ಪರ ವಕೀಲೆ ಪದ್ಮಾವತಿ ವಾದ ಮಂಡಿಸಿ, “ಕಕ್ಷಿದಾರ ರಿತ್ವಿಕ್ ಲಂಡನ್‌ನಲ್ಲಿ ಹುಟ್ಟಿ ಬೆಳೆದಿದ್ದು, ಎರಡು ವರ್ಷಗಳ ಹಿಂದಷ್ಟೇ ಭಾರತಕ್ಕೆ ಮರಳಿದ್ದಾನೆ. ಆತನಿಗೆ ಈ ಪೋಸ್ಟ್‌ನ ಗಂಭೀರ ಪರಿಣಾಮಗಳ ಅರಿವಿರಲಿಲ್ಲ. ಈ ಪೋಸ್ಟ್ ಅನ್ನು ಆತನ ಸ್ನೇಹಿತ ಮಾಡಿದ್ದು,

ತನ್ನ ಪ್ರಮಾದವನ್ನು ಒಪ್ಪಿಕೊಂಡು ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದಾನೆ. ಪ್ರಸ್ತುತ ಅರ್ಥಶಾಸ್ತ್ರದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ಕ್ರಿಮಿನಲ್ ಮೊಕದ್ದಮೆಯಿಂದ ಆತನ ಶೈಕ್ಷಣಿಕ ಹಾಗೂ ವೃತ್ತಿ ಭವಿಷ್ಯಕ್ಕೆ ಧಕ್ಕೆಯಾಗಲಿದೆ” ಎಂದು ಮನವಿ ಮಾಡಿದರು. ಅರ್ಜಿದಾರನ ದುರ್ವರ್ತನೆಗೆ ಚಾಟಿ ಬೀಸಿದ ನ್ಯಾಯಪೀಠ, ಯುವಕನ ವಿದ್ಯಾಭ್ಯಾಸ ಹಾಗೂ ಭವಿಷ್ಯದ ಹಿತದೃಷ್ಟಿಯಿಂದ ಎಫ್‌ಐಆರ್ ರದ್ದುಗೊಳಿಸಿತು.

ಏನಿದು ಪ್ರಕರಣ?: ನವೆಂಬರ್ 1, 2021 ರಂದು ಪುನೀತ್ ರಾಜ್‌ಕುಮಾರ್ ಅವರು ನಿಧನರಾದ ಬೆನ್ನಲ್ಲೇ, ಕಿಂಗ್‌ಫಿಷರ್ ಬಿಯರ್ ಬಾಟಲಿಯ ಫೋಟೋ ಹಾಕಿ ಅದರ ಮೇಲೆ ಅತ್ಯಂತ ಆಕ್ಷೇಪಾರ್ಹ ಸಾಲನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಸಂಬಂಧ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ (IT) ಕಾಯ್ದೆ ಸೆಕ್ಷನ್ 67 ಮತ್ತು ಐಪಿಸಿ ಸೆಕ್ಷನ್ 153ಎ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಹಾಲು ಉತ್ಪಾದಕರಿಂದ ಸರ್ಕಾರಕ್ಕೆ ಬಿಗ್ ಡಿಮ್ಯಾಂಡ್: ಲೀಟರ್ ಹಾಲಿಗೆ ₹8 ಹೆಚ್ಚಳಕ್ಕೆ ಒತ್ತಾಯ

0

ಬೆಂಗಳೂರು: ರಾಜ್ಯದ ಜನರಿಗೆ ಈಗಾಗಲೇ ಬೆಲೆ ಏರಿಕೆಯ ಬಿಸಿ ತಟ್ಟುತ್ತಿರುವ ಬೆನ್ನಲ್ಲೇ, ನಂದಿನಿ ಹಾಲಿನ ದರ ಮತ್ತೆ ಹೆಚ್ಚಳವಾಗುವ ಸಾಧ್ಯತೆ ಎದುರಾಗಿದೆ. ಲೀಟರ್ ಹಾಲಿನ ದರವನ್ನು ₹8 ಹೆಚ್ಚಿಸುವಂತೆ ಹಾಲು ಉತ್ಪಾದಕರ ಒಕ್ಕೂಟಗಳು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಂಡ್ಯ, ಶಿವಮೊಗ್ಗ, ಚಾಮರಾಜನಗರ, ತುಮಕೂರು ಸೇರಿದಂತೆ ಹಲವು ಹಾಲು ಉತ್ಪಾದಕರ ಒಕ್ಕೂಟಗಳ ಪ್ರತಿನಿಧಿಗಳು, ಪ್ರತಿ ಲೀಟರ್ ಹಾಲಿಗೆ ₹8 ಹೆಚ್ಚಳ ಮಾಡುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ರೈತರಿಗೆ ನೀಡುವ ಪ್ರೋತ್ಸಾಹ ಧನವನ್ನೂ ಪ್ರತಿ ಲೀಟರ್‌ಗೆ ₹8ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಳೆದ ಎಂಟು ತಿಂಗಳಿಂದ ಸರ್ಕಾರಕ್ಕೆ ಈ ಕುರಿತು ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹಾಲು ಉತ್ಪಾದಕರ ಒಕ್ಕೂಟಗಳು ಹೇಳಿವೆ. ರೈತರ ಹಿತ ಕಾಪಾಡುವ ದೃಷ್ಟಿಯಿಂದ ಹಾಲಿನ ದರ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿರುವ ಒಕ್ಕೂಟಗಳು, ಬೇಡಿಕೆ ಈಡೇರದಿದ್ದರೆ ಮೂರು ದಿನಗಳಲ್ಲಿ ವಿಧಾನಸೌಧ ಚಲೋ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.

ದರ ಏರಿಕೆಗೆ ಹಾಲು ಉತ್ಪಾದಕರ ಒಕ್ಕೂಟಗಳ ಕಾರಣಗಳೇನು?

ಹಾಲಿನ ದರ ಹೆಚ್ಚಳಕ್ಕೆ ಹಾಲು ಉತ್ಪಾದಕರ ಒಕ್ಕೂಟಗಳು ಹಲವು ಕಾರಣಗಳನ್ನು ಮುಂದಿಟ್ಟಿವೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ಕೊರತೆಯಿಂದಾಗಿ ಹಸಿರು ಮೇವು ಹಾಗೂ ಪಶು ಆಹಾರದ ಲಭ್ಯತೆಯ ಮೇಲೂ ಪರಿಣಾಮ ಬೀರಿದೆ ಎಂದು ಒಕ್ಕೂಟಗಳು ತಿಳಿಸಿವೆ.

ರಾಜ್ಯದಲ್ಲಿ ಶೇ.70ರಷ್ಟು ಮಳೆ ಕೊರತೆಯಾಗಿದೆ ಎಂದು ಒಕ್ಕೂಟಗಳು ಹೇಳಿದ್ದು, ಇದರ ಪರಿಣಾಮವಾಗಿ ಹುಲ್ಲಿನ ಕೊರತೆ ಎದುರಾಗಿದೆ. ಪಶು ಆಹಾರಕ್ಕೆ ಬಳಸುವ ಕಚ್ಚಾ ಸಾಮಗ್ರಿಗಳು, ಮೆಕ್ಕೆಜೋಳ ಹಾಗೂ ಇಂಡಿ-ಬೂಸಾದ ದರದಲ್ಲಿ ಶೇ.25ರಷ್ಟು ಏರಿಕೆಯಾಗಿದೆ ಎಂದು ತಿಳಿಸಿವೆ.

ಇದರ ಜೊತೆಗೆ ರಾಸುಗಳಿಗೆ ಬಳಸುವ ನೆಲಹಾಸಿನ ದರ ಹಾಗೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲೂ ಹೆಚ್ಚಳವಾಗಿದೆ. ಹೀಗಾಗಿ ಹಾಲು ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು, ರೈತರಿಗೆ ನೆರವಾಗಲು ಹಾಲಿನ ದರ ಹೆಚ್ಚಳ ಅಗತ್ಯ ಎಂದು ಹಾಲು ಉತ್ಪಾದಕರ ಒಕ್ಕೂಟಗಳು ವಾದಿಸಿವೆ.

ಹಾಲಿನ ದರ ಹೆಚ್ಚಳದ ಪ್ರಸ್ತಾವನೆಗೆ ಸರ್ಕಾರ ಯಾವ ರೀತಿಯ ನಿರ್ಧಾರ ಕೈಗೊಳ್ಳಲಿದೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬೇಕಿದೆ. ಪ್ರಸ್ತಾವನೆ ಅಂಗೀಕಾರವಾದರೆ ನಂದಿನಿ ಹಾಲಿನ ಬೆಲೆ ಮತ್ತೆ ಏರಿಕೆಯಾಗುವ ಸಾಧ್ಯತೆಯಿದೆ.

23 ರನ್ʼಗಳ ಅಂತರದಲ್ಲಿ 10 ವಿಕೆಟ್ ಪತನ; ಜಪಾನ್ ವಿರುದ್ಧ ಭಾರತಕ್ಕೆ ಭರ್ಜರಿ 8 ವಿಕೆಟ್ʼಗಳ ಜಯ!

0

ನಿಸ್ಶಿನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದ ಮಹಿಳಾ ಕ್ರಿಕೆಟ್ ಸ್ಪರ್ಧೆಯಲ್ಲಿ ಭಾರತ ತಂಡ ಭರ್ಜರಿ ಶುಭಾರಂಭ ಮಾಡಿದೆ. ಜಪಾನ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್‌ಗೆ ಪ್ರವೇಶಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಪಾನ್ ತಂಡ ಭಾರತದ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿತು. 19.5 ಓವರ್‌ಗಳಲ್ಲಿ ಕೇವಲ 57 ರನ್‌ಗಳಿಗೆ ಜಪಾನ್ ಆಲೌಟ್ ಆಯಿತು. ಆರಂಭದಲ್ಲಿ ವಿಕೆಟ್ ನಷ್ಟವಿಲ್ಲದೆ 24 ರನ್ ಗಳಿಸಿದ್ದ ಜಪಾನ್, ಬಳಿಕ ಕೇವಲ 23 ರನ್‌ಗಳ ಅಂತರದಲ್ಲಿ ತನ್ನ 10 ವಿಕೆಟ್‌ಗಳನ್ನು ಕಳೆದುಕೊಂಡು 57 ರನ್‌ಗಳಿಗೆ ಸರ್ವಪತನ ಕಂಡಿತು.

ಜಪಾನ್ ಪರ ಹರುನ ಇವಾಸಕಿ 10 ರನ್ ಹಾಗೂ ಅಯಾಕ ಕ್ಯಾಟೊ-ಸ್ಟಾಫರ್ಡ್ 25 ರನ್ ಗಳಿಸಿದರು. ಉಳಿದ ಬ್ಯಾಟರ್‌ಗಳು ಭಾರತೀಯ ಬೌಲಿಂಗ್ ದಾಳಿಯ ಮುಂದೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ.

ಭಾರತದ ಪರ ಶ್ರೀ ಚರಣಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ 4 ವಿಕೆಟ್ ಕಬಳಿಸಿದರು. ಶಫಾಲಿ ವರ್ಮಾ 2 ವಿಕೆಟ್ ಪಡೆದರೆ, ಶ್ರೇಯಾಂಕಾ ಪಾಟೀಲ್ ಮತ್ತು ದೀಪ್ತಿ ಶರ್ಮಾ ತಲಾ ಒಂದು ವಿಕೆಟ್ ಪಡೆದರು.

57 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಭಾರತ ತಂಡ ಕೇವಲ 5 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 59 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು. ಭಾರತದ ಪರ ಶಫಾಲಿ ವರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 15 ಎಸೆತಗಳಲ್ಲಿ ಅಜೇಯ 40 ರನ್ ಸಿಡಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ಗಳು ಸೇರಿದ್ದವು.

ರಿಚಾ ಘೋಷ್ ಅಜೇಯ 12 ರನ್ ಗಳಿಸಿ ಶಫಾಲಿಗೆ ಉತ್ತಮ ಸಾಥ್ ನೀಡಿದರು. ಕಮಲಿನಿ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದರೆ, ಭಾರತಿ ಫುಲ್ಮಾಲಿ 6 ರನ್ ಗಳಿಸಿ ಔಟಾದರು.

ಬೌಲಿಂಗ್‌ನಲ್ಲಿ ಜಪಾನ್ ತಂಡವನ್ನು 57 ರನ್‌ಗಳಿಗೆ ಕಟ್ಟಿಹಾಕಿ, ಬಳಿಕ ಶಫಾಲಿ ವರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೇವಲ 5 ಓವರ್‌ಗಳಲ್ಲಿ ಗುರಿ ತಲುಪಿದ ಭಾರತ, ಏಷ್ಯನ್ ಕ್ರೀಡಾಕೂಟದ ಮಹಿಳಾ ಕ್ರಿಕೆಟ್‌ನಲ್ಲಿ ಶುಭಾರಂಭ ಮಾಡಿದೆ. ಈ ಗೆಲುವಿನೊಂದಿಗೆ ಭಾರತ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.