Home Blog

ಬೆಂಗಳೂರು ತಾಜ್ ಹೋಟೆಲ್‌ನಲ್ಲಿ ಘೋರ ದುರಂತ; ಇಬ್ಬರು ಮಕ್ಕಳನ್ನು ಕೊಂದು ತಂದೆ ಆತ್ಮಹತ್ಯೆಗೆ ಯತ್ನ!

0

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ತಾಜ್ ಹೋಟೆಲ್‌ನಲ್ಲಿ ತಂದೆಯೊಬ್ಬ ತನ್ನ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ಹತ್ಯೆ ಮಾಡಿ ಬಳಿಕ ಆತ್ಮಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆ ನಡೆದಿದೆ.

ಮೃತ ಮಕ್ಕಳನ್ನು ಶೇಕ್ ಜೆಹರಾ (5) ಹಾಗೂ ಶೇಕ್ ಜೋಯಾ (10) ಎಂದು ಗುರುತಿಸಲಾಗಿದೆ. ಮಕ್ಕಳ ತಂದೆ ಇಮ್ರಾನ್‌ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಹಿತಿ ಪ್ರಕಾರ, ಇಮ್ರಾನ್‌ ಬೆಂಗಳೂರಿನ ನಾಗವಾರ ನಿವಾಸಿಯಾಗಿದ್ದು, Zimmy ಕ್ಯಾಬ್‌ ಸಂಸ್ಥೆಯಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಮಕ್ಕಳನ್ನು ಹತ್ಯೆ ಮಾಡುವ ಉದ್ದೇಶದಿಂದಲೇ ಹೋಟೆಲ್‌ನಲ್ಲಿ ಮುಂಚಿತವಾಗಿ ಕೊಠಡಿ ಬುಕ್ ಮಾಡಿದ್ದ ಎನ್ನಲಾಗುತ್ತಿದೆ.

ತಾಜ್ ಹೋಟೆಲ್‌ನ ನಾಲ್ಕನೇ ಮಹಡಿಯ ಕೊಠಡಿಯಲ್ಲಿ ಇಬ್ಬರು ಮಕ್ಕಳನ್ನು ನೇಣು ಹಾಕಿ ಹತ್ಯೆ ಮಾಡಿದ ಬಳಿಕ ಇಮ್ರಾನ್‌ ತಾನು ಕೂಡ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತೀವ್ರ ನೋವಿನಿಂದ ಆತ ಚೀರಾಡಿದಾಗ ಹೋಟೆಲ್ ಸಿಬ್ಬಂದಿಗೆ ಘಟನೆ ತಿಳಿದುಬಂದಿದೆ. ಕೂಡಲೇ ಸಿಬ್ಬಂದಿ ಕೊಠಡಿಗೆ ತೆರಳಿ ಇಮ್ರಾನ್‌ನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಏರ್‌ಪೋರ್ಟ್‌ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರು ಮಕ್ಕಳ ಸಾವಿಗೆ ಹಾಗೂ ಇಮ್ರಾನ್‌ ಆತ್ಮಹತ್ಯೆಗೆ ಯತ್ನಿಸಲು ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪಂಚಮಸಾಲಿ ಸಹಕಾರಿಗೆ ₹5.11 ಲಕ್ಷ ನಿವ್ವಳ ಲಾಭ

0

ವಿಜಯಸಾಕ್ಷಿ ಸುದ್ದಿ, ಗದಗ: ವೀರಶೈವ ಪಂಚಮಸಾಲಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ, ಗದಗ ಸಂಸ್ಥೆಯ 2025–26ನೇ ಸಾಲಿನ 30ನೇ ವಾರ್ಷಿಕ ಸರ್ವ ಸಾಧಾರಣ ಮಹಾಸಭೆ ಭಾನುವಾರ ಎಪಿಎಂಸಿ ಯಾರ್ಡ್‌ನ ಸ್ಟೇಟ್ ಬ್ಯಾಂಕ್ ಎದುರಿನ ಸಹಕಾರಿ ಕಚೇರಿ ಆವರಣದಲ್ಲಿ ನಡೆಯಿತು.

ಸಹಕಾರಿ ಅಧ್ಯಕ್ಷ ಎಸ್.ಎಂ. ಪಾಟೀಲ (ಮಲ್ಲಸಮುದ್ರ) ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2025–26ನೇ ಸಾಲಿನ ಲೆಕ್ಕಪತ್ರ, ಜಮಾ–ಖರ್ಚು, ಲಾಭ–ಹಾನಿ, ಅಢಾವೆ ಪತ್ರಿಕೆ ಹಾಗೂ ಲೆಕ್ಕಪರಿಶೋಧನಾ ವರದಿಯ ಅನುಪಾಲನಾ ವರದಿ ಸೇರಿದಂತೆ ಅಜೆಂಡಾದ 1ರಿಂದ 23ರವರೆಗಿನ ವಿಷಯಗಳನ್ನು ಚರ್ಚಿಸಿ ಸರ್ವಾನುಮತದಿಂದ ಅನುಮೋದಿಸಲಾಯಿತು.

ಸಹಕಾರಿಯ ಮ್ಯಾನೇಜರ್ ವಿ.ಸಿ. ಕರಡಿ ಅವರು ಸಭೆಯಲ್ಲಿ ಸಂಸ್ಥೆಯ ಸಂಪೂರ್ಣ ಮಾಹಿತಿಯನ್ನು ಸದಸ್ಯರಿಗೆ ವಿವರಿಸಿದರು. 2026–27ನೇ ಸಾಲಿನ ಅಂದಾಜು ಆಯ–ವ್ಯಯ ಪತ್ರಿಕೆಯನ್ನೂ ಸಭೆಯಲ್ಲಿ ಮಂಡಿಸಲಾಯಿತು.

2025–26ನೇ ಸಾಲಿನಲ್ಲಿ ಸಹಕಾರಿಯು ₹5,11,104.28 ನಿವ್ವಳ ಲಾಭ ಗಳಿಸಿದೆ. ಈ ಹಿನ್ನೆಲೆಯಲ್ಲಿ ಸದಸ್ಯರಿಗೆ ಶೇ.10ರಷ್ಟು ಲಾಭಾಂಶ (ಡಿವಿಡೆಂಡ್) ವಿತರಿಸಲು ಘೋಷಿಸಲಾಯಿತು.

ಸಭೆಯ ಆರಂಭದಲ್ಲಿ ಸಹಕಾರಿ ಸದಸ್ಯರು ನಿಧನ ಹೊಂದಿದ ಹಿನ್ನೆಲೆಯಲ್ಲಿ ಎರಡು ನಿಮಿಷ ಮೌನಾಚರಣೆ ಸಲ್ಲಿಸಲಾಯಿತು. ಐ.ಬಿ. ಅವರಾದಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ವಿ.ಎಸ್. ಉಪ್ಪಿನ ಸ್ವಾಗತಿಸಿದರು.

ಸಮಾಜದ ಆಶಯದಂತೆ ಸಭೆಯಲ್ಲಿ ಪಂಚಮಸಾಲಿ ವಧು–ವರರ ಮಾಹಿತಿ ಕೇಂದ್ರವನ್ನು ಆರಂಭಿಸಲಾಯಿತು. ಇದರ ಪ್ರಯೋಜನವನ್ನು ಸಮಾಜದ ಎಲ್ಲರೂ ಪಡೆದುಕೊಳ್ಳುವಂತೆ ಮನವಿ ಮಾಡಲಾಯಿತು. ಮಲ್ಲಪ್ಪ ಯ. ಹುಣಸಿಕಟ್ಟಿ (ಹೊಂಬಳ) ಅವರು ಮಾಹಿತಿ ಕೇಂದ್ರವನ್ನು ಉದ್ಘಾಟಿಸಿದರು. ನಿವೃತ್ತ ಜಿಲ್ಲಾ ಸರ್ಜನ್ ಡಾ. ಆರ್.ಎನ್. ಪಾಟೀಲ ಅವರು ವಿದ್ಯಾರ್ಥಿಗಳಿಗೆ ಸನ್ಮಾನ ನೆರವೇರಿಸಿದರು.

ವೇದಿಕೆಯಲ್ಲಿ ಸಹಕಾರಿ ಉಪಾಧ್ಯಕ್ಷ ಡಿ.ಎನ್. ಆಸಂಗಿ, ನಿರ್ದೇಶಕರಾದ ಎಸ್.ಬಿ. ಕಲಕೇರಿ, ಎಸ್.ಎಲ್. ನೀಲಗುಂದ, ವಿ.ಎಸ್. ಉಪ್ಪಿನ, ಸವಿತಾ ಎಂ. ಪಾಟೀಲ ಹಾಗೂ ರಾಜೇಶ್ವರಿ ಐ. ಕಣವಿ ಉಪಸ್ಥಿತರಿದ್ದರು.

ನಿರ್ದೇಶಕ ಎಸ್.ಎಲ್. ನೀಲಗುಂದ ವಂದನಾರ್ಪಣೆ ಸಲ್ಲಿಸಿ, ಸಂಸ್ಥೆಯ ಸದಸ್ಯರು, ನೌಕರ ವರ್ಗ ಹಾಗೂ ಪಿಗ್ಮಿ ಏಜೆಂಟರಿಗೆ ಕೃತಜ್ಞತೆ ಸಲ್ಲಿಸಿದರು.

12 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸಹಕಾರಿ ಸದಸ್ಯರ ಮಕ್ಕಳಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಎಸ್‌ಎಸ್‌ಎಲ್‌ಸಿಯ 7 ವಿದ್ಯಾರ್ಥಿಗಳು ಹಾಗೂ ಪಿಯುಸಿಯ 5 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 12 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಕೊನೆಯ ಎಸೆತದವರೆಗೂ ರೋಚಕ ಹೋರಾಟ: ನೈಟ್ ರೈಡರ್ಸ್‌ಗೆ 2 ರನ್‌ಗಳ ಗೆಲುವು!

0

ವಿಜಯಸಾಕ್ಷಿ ಸುದ್ದಿ, ಗದಗ: ಪತ್ರಿಕಾ ದಿನಾಚರಣೆ ಅಂಗವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿರುವ ಗದಗ ಮೀಡಿಯಾ ಕ್ರಿಕೆಟ್ ಲೀಗ್ (GMCL) ಪಂದ್ಯಾವಳಿಯ ಅಂಗವಾಗಿ ಭಾನುವಾರ ನಡೆದ ಎರಡನೇ ಅಭ್ಯಾಸ ಪಂದ್ಯಾವಳಿಯಲ್ಲಿ ಪತ್ರಕರ್ತ ಎಚ್.ಎಂ. ಶರೀಫನವರ್ ನೇತೃತ್ವದ ನೈಟ್ ರೈಡರ್ಸ್ ತಂಡ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆಯಿತು.

ನಾಲ್ಕು ತಂಡಗಳಾದ ನೈಟ್ ರೈಡರ್ಸ್, ರೂರಲ್ ಕಿಂಗ್ಸ್, ಆರ್‌ಸಿಬಿ ಹಾಗೂ ವಿನ್ನರ್ಸ್ ನಡುವೆ ನಡೆದ ಪಂದ್ಯಾವಳಿಯಲ್ಲಿ ನೈಟ್ ರೈಡರ್ಸ್ ತಂಡ ಮೊದಲ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದರೆ, ಫೈನಲ್‌ನಲ್ಲಿ ರೂರಲ್ ಕಿಂಗ್ಸ್ ವಿರುದ್ಧ ಕೇವಲ 2 ರನ್‌ಗಳ ಅಂತರದಲ್ಲಿ ರೋಚಕ ಜಯ ದಾಖಲಿಸಿತು.

ಆರ್‌ಸಿಬಿಗೆ ವಿಕೆಟ್‌ ನಷ್ಟವಿಲ್ಲದೆ ಸೋಲು

ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ನೈಟ್ ರೈಡರ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ ನಿಗದಿತ 10 ಓವರ್‌ಗಳಲ್ಲಿ 82 ರನ್ ಗಳಿಸಿತು. ತಂಡದ ಪರ ಆರಂಭಿಕರಾದ ವಿನಾಯಕ ಚೌಡಾಪುರ 18 ಹಾಗೂ ವೀರೇಶ ಉಮನಾಬಾದಿ 13 ರನ್ ಗಳಿಸಿದರು.

ನೈಟ್ ರೈಡರ್ಸ್ ಪರ ಅರುಣಕುಮಾರ ಹಿರೇಮಠ 2 ವಿಕೆಟ್, ಸುರೇಶ ಕಡ್ಲಿಮಟ್ಟಿ ಹಾಗೂ ಮಂಜು ಪತ್ತಾರ ತಲಾ ಒಂದು ವಿಕೆಟ್ ಪಡೆದರು.

82 ರನ್‌ಗಳ ಗುರಿ ಬೆನ್ನತ್ತಿದ ನೈಟ್ ರೈಡರ್ಸ್ ಕೇವಲ 6 ಓವರ್‌ಗಳಲ್ಲೇ ವಿಕೆಟ್ ನಷ್ಟವಿಲ್ಲದೆ ಗೆಲುವಿನ ಗಡಿ ತಲುಪಿತು. ನಾಯಕ ಸುರೇಶ ಕಡ್ಲಿಮಟ್ಟಿ 48 ಹಾಗೂ ಆರಂಭಿಕ ಉಮೇಶ ಸಜ್ಜನ 22 ರನ್ ಗಳಿಸಿ ಅಜೇಯರಾಗಿ ಉಳಿದರು.

ವಿನ್ನರ್ಸ್ ವಿರುದ್ಧ ರೂರಲ್ ಕಿಂಗ್ಸ್ ಅಬ್ಬರ

ಎರಡನೇ ಪಂದ್ಯದಲ್ಲಿ ವಿನ್ನರ್ಸ್ ತಂಡವನ್ನು ರೂರಲ್ ಕಿಂಗ್ಸ್ 9 ವಿಕೆಟ್‌ಗಳಿಂದ ಮಣಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವಿನ್ನರ್ಸ್ ತಂಡ 10 ಓವರ್‌ಗಳಲ್ಲಿ 93 ರನ್ ಗಳಿಸಿತು. ಅನಿಲ ತೆಂಬದಮನಿ 25, ಅಶೋಕ 17 ಹಾಗೂ ಶಂಭು 12 ರನ್ ಗಳಿಸಿದರು.

ರೂರಲ್ ಕಿಂಗ್ಸ್ ಪರ ಸಂಜೀವ ಪಾಂಡ್ರೆ 3, ನಿಂಗನಗೌಡ ಹನಮಗೌಡ್ರ 2 ಹಾಗೂ ಶಿವಾನಂದ ಹಿರೇಮಠ 1 ವಿಕೆಟ್ ಪಡೆದರು.

ಗುರಿ ಬೆನ್ನತ್ತಿದ ರೂರಲ್ ಕಿಂಗ್ಸ್ ತಂಡ ಕೇವಲ ಒಂದು ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಆರಂಭಿಕರಾದ ಶಿವಾನಂದ ಹಿರೇಮಠ 48 ಹಾಗೂ ನಿಂಗನಗೌಡ ಹನಮಗೌಡ್ರ 31 ರನ್ ಗಳಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.

2 ರನ್‌ಗಳ ರೋಚಕ ಗೆಲುವು; ಸೋಲಿಗೆ ಸೇಡು

ಬಳಿಕ ನಡೆದ ನೈಟ್ ರೈಡರ್ಸ್ ಹಾಗೂ ರೂರಲ್ ಕಿಂಗ್ಸ್ ನಡುವಿನ ಫೈನಲ್ ಪಂದ್ಯವೇ ದಿನದ ಪ್ರಮುಖ ಆಕರ್ಷಣೆಯಾಗಿತ್ತು. ಕಳೆದ ಭಾನುವಾರ ರೂರಲ್ ಕಿಂಗ್ಸ್ ವಿರುದ್ಧ ಕಂಡಿದ್ದ ಸೋಲಿಗೆ ನೈಟ್ ರೈಡರ್ಸ್ ತಂಡ ಈ ಪಂದ್ಯದಲ್ಲಿ ಕೇವಲ 2 ರನ್‌ಗಳ ಅಂತರದ ಗೆಲುವಿನ ಮೂಲಕ ಸೇಡು ತೀರಿಸಿಕೊಂಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನೈಟ್ ರೈಡರ್ಸ್ ತಂಡ ನಿಗದಿತ 10 ಓವರ್‌ಗಳಲ್ಲಿ 89 ರನ್ ಗಳಿಸಿತು. ಅರುಣಕುಮಾರ ಹಿರೇಮಠ 25, ಉಮೇಶ ಸಜ್ಜನ 17, ಮಂಜು ಪತ್ತಾರ 13 ಹಾಗೂ ಸಂಗನಗೌಡ ಖಾನಪ್ಪಗೌಡ್ರ 11 ರನ್ ಗಳಿಸಿದರು.

ರೂರಲ್ ಕಿಂಗ್ಸ್ ಪರ ಸಂಜೀವ ಪಾಂಡ್ರೆ 2 ವಿಕೆಟ್, ಶಿವಾನಂದ ಹಿರೇಮಠ ಹಾಗೂ ನಿಂಗನಗೌಡ ಹನಮಗೌಡ್ರ ತಲಾ ಒಂದು ವಿಕೆಟ್ ಪಡೆದರು.

89 ರನ್‌ಗಳ ಗುರಿ ಬೆನ್ನತ್ತಿದ ರೂರಲ್ ಕಿಂಗ್ಸ್ ತಂಡ 10 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 87 ರನ್ ಗಳಿಸಲಷ್ಟೇ ಶಕ್ತವಾಯಿತು. ಪರಶುರಾಮ ಹಳ್ಳದ 26, ಪ್ರಕಾಶ ಗುದ್ದಿನ 20 ಹಾಗೂ ನಿಂಗನಗೌಡ ಹನಮಗೌಡ್ರ 10 ರನ್ ಗಳಿಸಿದರು.

ನೈಟ್ ರೈಡರ್ಸ್ ಪರ ಸುರೇಶ ಕಡ್ಲಿಮಟ್ಟಿ ಹಾಗೂ ಉಮೇಶ ಸಜ್ಜನ ತಲಾ 2 ವಿಕೆಟ್, ಮಂಜು ಪತ್ತಾರ ಹಾಗೂ ಸಂಗನಗೌಡ ಖಾನಪ್ಪಗೌಡ್ರ ತಲಾ ಒಂದು ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಈ ಸಂದರ್ಭದಲ್ಲಿ ಕಾನಿಪ ಜಿಲ್ಲಾ ಅಧ್ಯಕ್ಷ ರಾಜು ಹೆಬ್ಬಳ್ಳಿ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಅರುಣಕುಮಾರ ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ, ಹಿರಿಯ ವರದಿಗಾರರಾದ ಅನಂತ ಕಾರ್ಕಳ, ಅನಿಲ ತೆಂಬದಮನಿ, ಸುನಿಲ ತೆಂಬದಮನಿ, ಸಂಪಾದಕರಾದ ಎಚ್.ಎಂ. ಶರೀಫನವರ್, ಜಗದೀಶ್ ಎಸ್.ಪಿ., ಆನಂದ ಸಾಲಿಗ್ರಾಮ ಸೇರಿದಂತೆ ಸಂಪಾದಕರು, ವರದಿಗಾರರು ಹಾಗೂ ಛಾಯಾಗ್ರಾಹಕರು ಉಪಸ್ಥಿತರಿದ್ದರು.

ಗದಗ ಮೀಡಿಯಾ ಕ್ರಿಕೆಟ್ ಲೀಗ್‌ನ ಕ್ರೀಡಾ ಸಮಿತಿ ಪದಾಧಿಕಾರಿಗಳಾದ ವೆಂಕಟೇಶ ಇಮರಾಪುರ, ಸಂತೋಷ ಕೊಣ್ಣೂರ ಹಾಗೂ ರುದ್ರಗೌಡ ಪಾಟೀಲ ಸೇರಿದಂತೆ ಹಲವರು ಪಂದ್ಯಾವಳಿಯ ಆಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದರು.

ತಂಡದ ಎಲ್ಲ ಆಟಗಾರರ ಪರಿಶ್ರಮವೇ ಗೆಲುವಿಗೆ ಕಾರಣ

“ನಮ್ಮ ತಂಡದ ಎಲ್ಲ ಆಟಗಾರರು ಉತ್ತಮ ಪ್ರದರ್ಶನ ನೀಡುವ ಮೂಲಕ ವಿಜೇತ ತಂಡವಾಗಿ ಹೊರಹೊಮ್ಮಲು ಕಾರಣರಾಗಿದ್ದಾರೆ. ದಿನನಿತ್ಯದ ಅಭ್ಯಾಸದಿಂದ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು. ಒಟ್ಟಾರೆಯಾಗಿ ಕ್ರೀಡಾ ಮನೋಭಾವದಿಂದ ನಾಲ್ಕು ತಂಡಗಳ ಮಾಲೀಕರು, ನಾಯಕರು ಹಾಗೂ ಆಟಗಾರರು ಭಾಗವಹಿಸಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸಿದ್ದಾರೆ. ಮುಂದಿನ ಪಂದ್ಯಗಳಲ್ಲಿ ನಾಲ್ಕೂ ತಂಡಗಳು ಮತ್ತಷ್ಟು ಉತ್ತಮ ಪ್ರದರ್ಶನ ನೀಡಲಿ.”

– ಎಚ್.ಎಂ. ಶರೀಫನವರ್, ನೈಟ್ ರೈಡರ್ಸ್ ತಂಡದ ಮಾಲೀಕರು

ಶಾಲೆಯಲ್ಲಿ ಚೆಸ್ ನೋಡುತ್ತಿದ್ದ SSLC ವಿದ್ಯಾರ್ಥಿ ಏಕಾಏಕಿ ಕುಸಿದು ಸಾವು!

0

ಶಿವಮೊಗ್ಗ: ಶಾಲೆಯಲ್ಲಿ ಚೆಸ್ ಆಟ ವೀಕ್ಷಿಸುತ್ತಿದ್ದ ವೇಳೆ ಏಕಾಏಕಿ ಕುಸಿದುಬಿದ್ದ SSLC ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಶಿವಮೊಗ್ಗ ತಾಲೂಕಿನ ತಮ್ಮಡಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಜಿ.ಕೆ. ವಿನಯ್ (15) ಎಂದು ಗುರುತಿಸಲಾಗಿದೆ. ಶಾಲೆಯಲ್ಲಿ ಇತರ ವಿದ್ಯಾರ್ಥಿಗಳು ಚೆಸ್ ಆಡುತ್ತಿದ್ದುದನ್ನು ವಿನಯ್ ಕುಳಿತು ನೋಡುತ್ತಿದ್ದ ವೇಳೆ ದಿಢೀರ್ ಕುಸಿದುಬಿದ್ದಿದ್ದಾನೆ. ಕೂಡಲೇ ಶಿಕ್ಷಕರು ಆತನನ್ನು ಆಯನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.

ಆದರೆ ವಿನಯ್ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲು ಮುಂದಾಗಿದ್ದಾರೆ. ಈ ವೇಳೆ ಮಾರ್ಗಮಧ್ಯೆಯೇ ವಿನಯ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ವಿನಯ್‌ನ ತಂದೆ-ತಾಯಿ ಶಿಕಾರಿಪುರದವರಾಗಿದ್ದು, ಆಯನೂರು ಸಮೀಪದ ತಮ್ಮಡಿಹಳ್ಳಿಯಲ್ಲಿರುವ ಅಜ್ಜನ ಮನೆಯಲ್ಲಿ ವಾಸವಿದ್ದು ವ್ಯಾಸಂಗ ಮಾಡುತ್ತಿದ್ದ. ವಿದ್ಯಾರ್ಥಿಯ ಅಕಾಲಿಕ ಸಾವಿನಿಂದ ಕುಟುಂಬಸ್ಥರು ಹಾಗೂ ಶಾಲಾ ಶಿಕ್ಷಕರು, ಸಹಪಾಠಿಗಳು ಆಘಾತಕ್ಕೊಳಗಾಗಿದ್ದಾರೆ. ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

ಇನ್ನು ಮಗನ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು, ವಿನಯ್ ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಘಟನೆ ಸಂಬಂಧ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶಿವಳ್ಳಿಯಲ್ಲಿ ‘ಪಂಚಾಯಿತಿ’ ಕನ್ನಡ ಚಿತ್ರದ ಚಿತ್ರೀಕರಣ

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ನೇಟಿವ್ ಕ್ರಿಯೇಷನ್ಸ್ ಅಡಿಯಲ್ಲಿ ದೊಡ್ಡ ನಾಗಯ್ಯ ನಿರ್ಮಿಸುತ್ತಿರುವ ಹಾಗೂ ಹಿರಿಯ ನಿರ್ದೇಶಕ ಪಿ. ಶೇಷಾದ್ರಿ ನಿರ್ದೇಶನದ ‘ಪಂಚಾಯಿತಿ’ ಕನ್ನಡ ಚಲನಚಿತ್ರದ ಚಿತ್ರೀಕರಣ ಧಾರವಾಡ ಸಮೀಪದ ಶಿವಳ್ಳಿಯಲ್ಲಿ ಭರದಿಂದ ಸಾಗಿದೆ.

ಹುಬ್ಬಳ್ಳಿ, ಶಿವಳ್ಳಿ, ಹೆಬಸೂರ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದೊಂದು ವಾರದಿಂದ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.

ಚಿತ್ರದ ಕಥೆ ಉತ್ತರ ಕರ್ನಾಟಕದ ಹಾಲಳ್ಳಿ ಎಂಬ ಗ್ರಾಮದ ಗ್ರಾಮ ಪಂಚಾಯಿತಿ ಚುನಾವಣೆಯ ಸುತ್ತ ಹೆಣೆದಿದೆ. ಪಂಚಾಯಿತಿ ಅಧ್ಯಕ್ಷರ ಹಠಾತ್ ನಿಧನದಿಂದ ಆರಂಭವಾಗುವ ಸಂಘರ್ಷ ಕ್ರಮೇಣ ಇಡೀ ಗ್ರಾಮದ ರಾಜಕೀಯ ಸ್ವರೂಪವನ್ನೇ ಬದಲಿಸುವ ಕಥಾವಸ್ತುವನ್ನು ಹೊಂದಿದೆ.

ಚುನಾವಣಾ ಕಣಕ್ಕೆ ಸ್ಥಳೀಯ ಶಾಸಕರ ಪ್ರವೇಶ, ಹಣದ ಪ್ರಭಾವ, ಜಾತಿ ಹಾಗೂ ಸಾಮಾಜಿಕ ಸಮೀಕರಣಗಳು ಮತ್ತು ಸ್ಥಳೀಯ ಅಸಮಾಧಾನಗಳು ಕಥೆಯಲ್ಲಿ ಪ್ರಮುಖವಾಗಿ ಮೂಡಿಬರಲಿವೆ. ಚಿತ್ರದ ಪ್ರಮುಖ ಪಾತ್ರವಾದ ‘ಪಾಟೀಲ’ ಇಂದಿನ ರಾಜಕೀಯ ವ್ಯವಸ್ಥೆಯ ಪ್ರತಿನಿಧಿಯಾಗಿ ಕಾಣಿಸಿಕೊಳ್ಳಲಿದೆ.

ಚಿತ್ರದ ಕಥೆಯನ್ನು ಅರವಿಂದ ಮಿತ್ರ ಬರೆದಿದ್ದು, ಪಿ. ಶೇಷಾದ್ರಿ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಗುರುಪ್ರಸಾದ್ ಕಾಶಿ ಛಾಯಾಗ್ರಹಣ ಹಾಗೂ ಕೆಂಪರಾಜ್ ಸಂಕಲನದ ಜವಾಬ್ದಾರಿ ವಹಿಸಿದ್ದಾರೆ.

ಚಿತ್ರದಲ್ಲಿ ಉತ್ತರ ಕರ್ನಾಟಕದ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗಿದ್ದು, ಮುಖ್ಯ ಭೂಮಿಕೆಯಲ್ಲಿ ಗೋಕುಲ್ ರಾಜ್, ಬಿಂದು, ಜಗದೀಶ್ ಮೂಕಿ, ಶ್ರುತಿ ಬಿಸರಹಳ್ಳಿ ಹಾಗೂ ಬಸವರಾಜ್ ತಿರ್ಲಾಪುರ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ.

ಸಹ ನಿರ್ದೇಶಕರಾಗಿ ಟಿ.ಆರ್. ಪ್ರಭು, ವಿದ್ಯಾಶ್ರೀ ಹಾಗೂ ಪ್ರಕಾಶ್‌ರಾಜಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ. ಡಾ. ಪ್ರಭು ಗಂಜಿಹಾಳ ಹಾಗೂ ಡಾ. ವೀರೇಶ್ ಹಂಡಿಗಿ ಪಿಆರ್‌ಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿತ್ರಕ್ಕೆ ದೊಡ್ಡ ನಾಗಯ್ಯ ಬಂಡವಾಳ ಹೂಡಿದ್ದಾರೆ.

ಸೆ.25ಕ್ಕೆ ‘ಕಾಮನ್ ಮ್ಯಾನ್ ನಾನೇ ಸಿಎಂ’ ತೆರೆಗೆ

ವಿಜಯಸಾಕ್ಷಿ ಸುದ್ದಿ, ಗದಗ: ಸುರಭಿ ಫಿಲಂಸ್‌ನ ‘ಕಾಮನ್ ಮ್ಯಾನ್ ನಾನೇ ಸಿಎಂ’ ಚಿತ್ರ ಸೆ.25ರಂದು ತೆರೆಗೆ ಬರಲಿದೆ ಎಂದು ಚಿತ್ರದ ನಿರ್ಮಾಪಕ ಹಾಗೂ ಕಥೆ ರಚನಾಕಾರ ಡಾ. ಎನ್. ನರಸಿಂಹಮೂರ್ತಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯ ವ್ಯಕ್ತಿಯೊಬ್ಬ ರಾಜಕಾರಣಕ್ಕೆ ಬಂದು ಮುಖ್ಯಮಂತ್ರಿ ಹುದ್ದೆಗೇರಿದರೆ ಏನೆಲ್ಲ ಬದಲಾವಣೆ ತರಬಹುದು ಎಂಬುದನ್ನು ವಿಭಿನ್ನ ಕಥಾಹಂದರದ ಮೂಲಕ ಚಿತ್ರದಲ್ಲಿ ತೋರಿಸಲಾಗಿದೆ ಎಂದರು.

ಚಿತ್ರದ ನಾಯಕ ವೃತ್ತಿಯಲ್ಲಿ ವಕೀಲನಾಗಿದ್ದು, ಅನಿರೀಕ್ಷಿತ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುತ್ತಾನೆ. ಬಳಿಕ ಸಮಾಜದಲ್ಲಿ ಸುಧಾರಣೆ ತರಲು ಆತ ಕೈಗೊಳ್ಳುವ ಪ್ರಯತ್ನಗಳು ಹಾಗೂ ಎದುರಾಗುವ ಸನ್ನಿವೇಶಗಳನ್ನು ಕುತೂಹಲಕರವಾಗಿ ಕಟ್ಟಿಕೊಡಲಾಗಿದೆ ಎಂದು ಹೇಳಿದರು.

‘ಕೆರೆಬೇಟೆ’ ಖ್ಯಾತಿಯ ಗೌರಿಶಂಕರ ನಾಯಕನಾಗಿ ನಟಿಸಿದ್ದು, ಸೋನಾ ಲದ್ವಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಬಾಂಬೆ ಮೂಲದ ಮತ್ತೋರ್ವ ನಟಿಯೂ ಚಿತ್ರದಲ್ಲಿ ನಟಿಸಿದ್ದಾರೆ.

ಚಿತ್ರಕ್ಕೆ ಸಾಯಿಪ್ರಕಾಶ್ ನಿರ್ದೇಶನ ಮಾಡಿದ್ದು, ಇದು ಅವರ ನಿರ್ದೇಶನದ 106ನೇ ಚಿತ್ರವಾಗಿದೆ. ವಿನಯ ಚಂದ್ರ ಸಂಗೀತ ನಿರ್ದೇಶನ, ಜೆ.ಜಿ. ಕೃಷ್ಣ ಹಾಗೂ ದೀಪಕ್ ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ಬೆಂಗಳೂರು ಸೇರಿದಂತೆ ವಿವಿಧೆಡೆ ಚಿತ್ರೀಕರಣ ನಡೆಸಲಾಗಿದೆ ಎಂದು ನರಸಿಂಹಮೂರ್ತಿ ತಿಳಿಸಿದರು.

ಚಿತ್ರವನ್ನು ಕುಟುಂಬ ಸಮೇತ ವೀಕ್ಷಿಸಬಹುದಾಗಿದ್ದು, ಕಲಾಪೋಷಕರು ಚಿತ್ರಮಂದಿರಗಳಿಗೆ ತೆರಳಿ ಚಿತ್ರ ವೀಕ್ಷಿಸುವ ಮೂಲಕ ಕಲಾವಿದರು ಹಾಗೂ ಚಿತ್ರತಂಡವನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ನಟಿ ಸೋನಾ ಲದ್ವಾ ಮಾತನಾಡಿ, ತಾವು ಮೂಲತಃ ರಾಣೆಬೆನ್ನೂರಿನವರಾಗಿದ್ದು, ಮಾಡೆಲಿಂಗ್ ಕ್ಷೇತ್ರದಲ್ಲಿದ್ದ ತಮ್ಮನ್ನು ಚಿತ್ರದಲ್ಲಿ ನಟಿಸಲು ಡಾ. ನರಸಿಂಹಮೂರ್ತಿ ಅವರು ಅವಕಾಶ ನೀಡಿದ್ದಾರೆ. ಪ್ರೇಕ್ಷಕರು ಚಿತ್ರಮಂದಿರಕ್ಕೆ ತೆರಳಿ ಚಿತ್ರವನ್ನು ವೀಕ್ಷಿಸುವಂತೆ ಮನವಿ ಮಾಡಿದರು.

ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ ಮಾತನಾಡಿ, ಡಾ. ಎನ್. ನರಸಿಂಹಮೂರ್ತಿ ಅವರು ಬಡತನದಲ್ಲಿ ಬೆಳೆದು ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ತಮ್ಮ ಆದಾಯದ ಶೇ.40ರಷ್ಟನ್ನು ಸಮಾಜಕ್ಕಾಗಿ ವ್ಯಯಿಸುತ್ತಿದ್ದಾರೆ. ಅವರ ಜೀವನ ಚರಿತ್ರೆಯನ್ನು ಅಕ್ಷರ ರೂಪದಲ್ಲಿ ದಾಖಲಿಸಿ ಆತ್ಮಚರಿತ್ರೆ ಹೊರತರುವ ಚಿಂತನೆ ಕದಂಬ ಸೈನ್ಯದ್ದಾಗಿದ್ದು, ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕದಂಬ ಸೈನ್ಯದ ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ, ರಾಜ್ಯ ಸಮಿತಿ ಸದಸ್ಯ ಲಕ್ಷ್ಮಣ ಎಲೆಕೇರಿ ಚನ್ನಪಟ್ಟಣ, ಬನಶಂಕರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಪ್ಪಣ್ಣ ಬಸೆಟ್ಟೆಪ್ಪ ನೂರೊಂದಪ್ಪ ಹುಂಡೇಕಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕೋಟ್

“ಒಬ್ಬ ಸಾಮಾನ್ಯ ಮನುಷ್ಯ ರಾಜಕಾರಣಕ್ಕೆ ಬರುವುದು ಸುಲಭವಲ್ಲ. ಸಮಾಜದಲ್ಲಿ ಎದುರಾದ ಅವಮಾನವನ್ನೇ ಅವಕಾಶವಾಗಿ ಬಳಸಿಕೊಂಡು ಮುಖ್ಯಮಂತ್ರಿ ಹುದ್ದೆಗೇರುವ ಕಥೆ ಚಿತ್ರದಲ್ಲಿದೆ. ಇದು ವಿಭಿನ್ನ ಕಥೆಯಾಗಿದ್ದು, ಮನರಂಜನೆಯ ಜತೆಗೆ ಸಮಾಜಕ್ಕೆ ಸಂದೇಶ ನೀಡುವ ಪ್ರಯತ್ನ ಮಾಡಲಾಗಿದೆ.”

– ಡಾ. ಎನ್. ನರಸಿಂಹಮೂರ್ತಿ, ನಿರ್ಮಾಪಕ ಹಾಗೂ ಕಥೆ ರಚನಾಕಾರ

ಗುರುಗಳ ಋಣ, ಸ್ನೇಹದ ಬಂಧ ಜೀವನಪರ್ಯಂತ ಉಳಿಯಲಿ: ಮುಪ್ಪಿನ ಬಸವಲಿಂಗ ಸ್ವಾಮೀಜಿ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸ್ನೇಹದಲ್ಲಿ ಅಧಿಕಾರ, ಅಂತಸ್ತು, ಶ್ರೇಷ್ಠ–ಕನಿಷ್ಠ ಎಂಬ ಭಾವನೆಗಳಿಗೆ ಅವಕಾಶವಿರಬಾರದು. ಬಾಲ್ಯದಲ್ಲಿ ಬೆಳೆಸಿಕೊಂಡ ಸ್ನೇಹದ ಬಂಧ ಜೀವನದ ಕೊನೆಯ ಉಸಿರಿನವರೆಗೂ ಉಳಿಯಬೇಕು ಎಂದು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಜಗದ್ಗುರು ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

ಸಮೀಪದ ನಿಡಗುಂದಿಯ ಶ್ರೀ ಅನ್ನದಾನೇಶ್ವರ ಪ್ರೌಢಶಾಲೆಯಲ್ಲಿ 2003–04ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ವತಿಯಿಂದ ಶನಿವಾರ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಒಂದೇ ಶಾಲೆಯ ಮೈದಾನದಲ್ಲಿ ಆಟವಾಡಿ, ಪಾಠ ಕಲಿತು ಬಾಲ್ಯದ ದಿನಗಳನ್ನು ಕಳೆದ ವಿದ್ಯಾರ್ಥಿಗಳು ಇಂದು ರೈತರು, ಶಿಕ್ಷಕರು, ವೈದ್ಯರು, ಎಂಜಿನಿಯರ್‌ಗಳು, ಗುತ್ತಿಗೆದಾರರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಶಾಲಾ ದಿನಗಳ ಸ್ನೇಹ ಹಾಗೂ ಆತ್ಮೀಯತೆಯನ್ನು ಮರೆಯಬಾರದು. ವೃತ್ತಿ, ಸ್ಥಾನಮಾನ ಹಾಗೂ ಆರ್ಥಿಕ ಸ್ಥಿತಿಗತಿಗಳು ಸ್ನೇಹಕ್ಕೆ ಅಳತೆಗೋಲಾಗಬಾರದು ಎಂದರು.

ಹಲವು ವರ್ಷಗಳ ಬಳಿಕ ಹಳೆಯ ಸ್ನೇಹಿತರೆಲ್ಲ ಒಂದೆಡೆ ಸೇರಿ ತಮಗೆ ವಿದ್ಯೆ ಕಲಿಸಿದ ಗುರುಗಳನ್ನು ಗೌರವಿಸಿರುವುದು ಸಂತಸದ ಸಂಗತಿ. ಇಂತಹ ಸಮ್ಮಿಲನಗಳು ನಿರಂತರವಾಗಿ ನಡೆಯಬೇಕು. ಹಳೆಯ ವಿದ್ಯಾರ್ಥಿಗಳು ಶಾಲೆಯೊಂದಿಗೆ ಸಂಪರ್ಕದಲ್ಲಿದ್ದು, ಪ್ರಸ್ತುತ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಶಾಲೆಯ ಭೌತಿಕ ಅಭಿವೃದ್ಧಿಗೆ ತಮ್ಮ ಕೈಲಾದ ಸಹಕಾರ ನೀಡಬೇಕು ಎಂದು ಕರೆ ನೀಡಿದರು.

ಅನ್ನದಾನ ಮಹಾಶಿವಯೋಗಿಗಳು ಗ್ರಾಮೀಣ ಹಾಗೂ ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಈ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಅವರ ಶಿಕ್ಷಣ ಸೇವೆ ಹಾಗೂ ದೂರದೃಷ್ಟಿ ಇಂದಿಗೂ ಮಾದರಿಯಾಗಿದೆ. ಶಿಕ್ಷಣವು ಕೇವಲ ಅಂಕ ಗಳಿಸುವುದಕ್ಕೆ ಸೀಮಿತವಾಗದೆ, ವಿಚಾರಶಕ್ತಿ, ವಿವೇಕ ಹಾಗೂ ಜೀವನದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸಬೇಕು ಎಂದರು.

ಗುರುಗಳು ವಿದ್ಯಾರ್ಥಿಗಳ ಶಿಸ್ತಿಗಾಗಿ ಕೆಲವೊಮ್ಮೆ ಶಿಕ್ಷೆ ನೀಡಿದ್ದರೂ, ಅದರ ಹಿಂದೆ ವಿದ್ಯಾರ್ಥಿಗಳ ಉತ್ತಮ ಭವಿಷ್ಯದ ಕಾಳಜಿ ಇರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಗುರುಗಳ ಸೇವೆ ಹಾಗೂ ಮಾರ್ಗದರ್ಶನವನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಸ್‌ಎವಿವಿಪಿ ಸಮಿತಿ ನರೇಗಲ್ಲ–ನಿಡಗುಂದಿಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ನಿಡಗುಂದಿ ಪ್ರಾಚೀನ ಕಾಲದಿಂದಲೂ ಅಗ್ರಹಾರವಾಗಿ ಗುರುತಿಸಿಕೊಂಡಿದ್ದು, ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ನೀಡುವ ಪ್ರಮುಖ ಕೇಂದ್ರವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸ್ಥಾನಿಕ ಆಡಳಿತ ಮಂಡಳಿ ಚೇರ್ಮನ್ ಜಗದೀಶ ಕರಡಿ, ಶಾಲೆ ಹಾಗೂ ಶಿಕ್ಷಕರು ಸಮಾಜದಲ್ಲಿ ಪವಿತ್ರ ಸ್ಥಾನ ಹೊಂದಿದ್ದಾರೆ. ಹಳೆಯ ವಿದ್ಯಾರ್ಥಿಗಳು ಪ್ರಸ್ತುತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಾರ್ಗದರ್ಶನ ನೀಡಬೇಕು ಎಂದರು.

ಶಾಖಾ ಶಿವಯೋಗ ಮಂದಿರ ನಿಡಗುಂದಿ ಕೊಪ್ಪ ಶ್ರೀಮಠದ ಅಭಿನವ ಚನ್ನಬಸವ ಸ್ವಾಮೀಜಿ ಮಾತನಾಡಿ, ಅನ್ನದಾನೇಶ್ವರ ಪ್ರೌಢಶಾಲೆಯಲ್ಲಿ ನಿರಂತರವಾಗಿ ಗುರುವಂದನಾ ಕಾರ್ಯಕ್ರಮಗಳು ನಡೆಯುತ್ತಿರುವುದು ಇಲ್ಲಿನ ಶಿಕ್ಷಣ ಪರಂಪರೆ ಹಾಗೂ ಗುರುಗಳ ಸೇವೆಗೆ ಸಾಕ್ಷಿಯಾಗಿದೆ ಎಂದರು.

ಧರ್ಮರಮಠದ ನಾಗಪ್ಪಜ್ಜನವರು ಧರ್ಮರ, ನಿವೃತ್ತ ಶಿಕ್ಷಕ ಪಿ.ಕೆ. ಕರಡಿ, ಶಿಕ್ಷಕ ಎಸ್.ವಿ. ಹಳ್ಳಿಕೇರಿ ಹಾಗೂ ಮುಖ್ಯ ಶಿಕ್ಷಕ ಎಂ.ಬಿ. ಕೊಪ್ಪದ ಮಾತನಾಡಿದರು.

ಹಳೆಯ ವಿದ್ಯಾರ್ಥಿಗಳಾದ ಅಶೋಕ ಸರ್ವಿ, ರಮೇಶ ಉಳ್ಳಾಗಡ್ಡಿ, ಮಂಜುಳಾ ಕರಡಿ, ನೀಲಮ್ಮ ಲಗುಬಗಿ ಹಾಗೂ ಶಕೀನಾ ಅಂಗಡಿ ತಮ್ಮ ಶಾಲಾ ದಿನಗಳ ಸವಿನೆನಪುಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಎಂ.ಎಂ. ಸರ್ವಿ, ಎಂ.ಕೆ. ಸರ್ವಿ, ಕೆ.ಬಿ. ಗಡಾದ, ಬಿ.ಪಿ. ಕಾಗಿ, ಗುರುಮೂರ್ತಿ ಮಂಟಯ್ಯನವರಮಠ, ಎಸ್.ಬಿ. ಹಿರೇಮಠ, ನಂದಾ ಮೆಣಸಗಿ, ಧರ್ಮಾಯತ, ಪೂಜಾ ಅಂಗಡಿ, ಚೇತನ್ ಭೂಸನೂರಮಠ, ವೀರಪ್ಪ ಅರಮನಿ ಸೇರಿದಂತೆ ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಶಿಕ್ಷಕ ಗೋಪಾಲ ಗೋಂದಳೆ ಸ್ವಾಗತಿಸಿದರು. ತಿಪ್ಪನಗೌಡ ಪಾಟೀಲ ವಂದಿಸಿದರು. ಎಚ್.ಬಿ. ಕಟ್ಟಿಮನಿ ನಿರೂಪಿಸಿದರು.

ಹಳೆಯ ವಿದ್ಯಾರ್ಥಿಗಳೆಲ್ಲ ಹಲವು ವರ್ಷಗಳ ಬಳಿಕ ಒಂದೆಡೆ ಸೇರಿ ತಮಗೆ ವಿದ್ಯೆ ಕಲಿಸಿದ ಗುರುಗಳನ್ನು ಗೌರವಿಸಿರುವುದು ಸಂತಸದ ಸಂಗತಿ. ಇಂತಹ ಸಮ್ಮಿಲನಗಳು ನಿರಂತರವಾಗಿ ನಡೆಯಬೇಕು. ಹಳೆಯ ವಿದ್ಯಾರ್ಥಿಗಳು ಶಾಲೆಯೊಂದಿಗೆ ಸಂಪರ್ಕದಲ್ಲಿದ್ದು, ಪ್ರಸ್ತುತ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಬೇಕು.

– ಜಗದ್ಗುರು ಮುಪ್ಪಿನ ಬಸವಲಿಂಗ ಸ್ವಾಮೀಜಿ, ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠ

ಸ್ವಾತಂತ್ರ್ಯೋತ್ಸವಕ್ಕೆ ಜಿಲ್ಲಾಡಳಿತ ಸಜ್ಜು

0

ವಿಜಯಸಾಕ್ಷಿ ಸುದ್ದಿ, ಗದಗ: ಆ.15ರಂದು ಜಿಲ್ಲಾಮಟ್ಟದಲ್ಲಿ ಆಚರಿಸಲಾಗುವ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣ, ಶಿಸ್ತುಬದ್ಧ ಹಾಗೂ ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದೆ.

ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಜಿಲ್ಲಾಧಿಕಾರಿ ಶ್ರೀಧರ್ ಅವರ ನೇತೃತ್ವದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಕಾರ್ಯಕ್ರಮದ ವಿವಿಧ ವ್ಯವಸ್ಥೆಗಳ ಕುರಿತು ಚರ್ಚಿಸಿ, ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಯಿತು.

ರಾಷ್ಟ್ರೀಯ ಹಬ್ಬದ ಆಚರಣೆಯಲ್ಲಿ ಶಿಷ್ಟಾಚಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಗಣ್ಯರು, ಜನಪ್ರತಿನಿಧಿಗಳು ಹಾಗೂ ಅತಿಥಿಗಳಿಗೆ ಆಮಂತ್ರಣ ಪತ್ರಿಕೆಗಳನ್ನು ಸಕಾಲದಲ್ಲಿ ತಲುಪಿಸುವುದು, ಆಸನ ವ್ಯವಸ್ಥೆ ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸೂಚಿಸಿದರು.

ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಮುಖ್ಯ ಸಮಾರಂಭದ ವೇದಿಕೆಯನ್ನು ಆಕರ್ಷಕವಾಗಿ ಸಿದ್ಧಪಡಿಸುವುದರೊಂದಿಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಅತಿಥಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಕ್ರೀಡಾಂಗಣದ ಒಳ ಹಾಗೂ ಹೊರ ಆವರಣವನ್ನು ಸಂಪೂರ್ಣ ಸ್ವಚ್ಛಗೊಳಿಸುವಂತೆ ಸೂಚಿಸಲಾಯಿತು.

ಮಕ್ಕಳ ಸುರಕ್ಷತೆಗೆ ಆದ್ಯತೆ

ಸ್ವಾತಂತ್ರ್ಯೋತ್ಸವಕ್ಕೆ ವಿವಿಧ ಶಾಲೆಗಳಿಂದ ಆಗಮಿಸುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕ್ರೀಡಾಂಗಣಕ್ಕೆ ಕರೆತಂದು, ಕಾರ್ಯಕ್ರಮ ಮುಗಿದ ಬಳಿಕ ಯಾವುದೇ ತೊಂದರೆಯಾಗದಂತೆ ಮರಳಿ ಕಳುಹಿಸುವ ಕುರಿತು ವಿಶೇಷ ಚರ್ಚೆ ನಡೆಯಿತು. ಶಿಕ್ಷಣ, ಪೊಲೀಸ್ ಹಾಗೂ ಸಂಬಂಧಿತ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಸಾರಿಗೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಲಾಯಿತು.

ಪಥಸಂಚಲನಕ್ಕೆ ಪೂರ್ವಾಭ್ಯಾಸ

ಸಮಾರಂಭದ ಪ್ರಮುಖ ಆಕರ್ಷಣೆಯಾದ ಪಥಸಂಚಲನವನ್ನು ಶಿಸ್ತುಬದ್ಧವಾಗಿ ಹಾಗೂ ಆಕರ್ಷಕವಾಗಿ ಆಯೋಜಿಸಲು ಪೂರ್ವಾಭ್ಯಾಸ ನಡೆಸುವಂತೆ ತಿಳಿಸಲಾಯಿತು. ಪೊಲೀಸ್ ಇಲಾಖೆ, ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ ಹಾಗೂ ಶಾಲಾ ಮಕ್ಕಳು ಪಥಸಂಚಲನದಲ್ಲಿ ಭಾಗವಹಿಸಲಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮ ಹಾಗೂ ಸಚಿವರ ಸ್ವಾತಂತ್ರ್ಯೋತ್ಸವ ಸಂದೇಶದ ಸಿದ್ಧತೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಜಿಲ್ಲೆಯ ಅಭಿವೃದ್ಧಿ, ಜನಪರ ಯೋಜನೆಗಳು, ಸ್ವಾತಂತ್ರ್ಯ ಹೋರಾಟದ ಮೌಲ್ಯಗಳು, ರಾಷ್ಟ್ರೀಯ ಏಕತೆ ಮತ್ತು ದೇಶಭಕ್ತಿಯ ಸಂದೇಶ ಒಳಗೊಂಡಂತೆ ಭಾಷಣ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಸಹಾಯಕ ಆಯುಕ್ತ ಗಂಗಪ್ಪ ಎಂ. ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

“ಸ್ವಾತಂತ್ರ್ಯೋತ್ಸವದ ಪ್ರತಿಯೊಂದು ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ಕೈಗೊಳ್ಳಬೇಕು. ಶಿಷ್ಟಾಚಾರ ಪಾಲನೆಯೊಂದಿಗೆ ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ನಿಗದಿತ ಅವಧಿಯೊಳಗೆ ಸಿದ್ಧತೆ ಪೂರ್ಣಗೊಳಿಸಬೇಕು.”

— ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ, ಗದಗ

ಅರ್ಹರಿಗೆ ಪಂಚ ಗ್ಯಾರಂಟಿ ಸೌಲಭ್ಯ ಸಕಾಲಕ್ಕೆ ತಲುಪಲಿ: ಅಶೋಕ ಮಂದಾಲಿ

0

ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ತಲುಪಬೇಕು. ಸೌಲಭ್ಯ ವಿತರಣೆಯಲ್ಲಿ ಯಾವುದೇ ಕಾರಣಕ್ಕೂ ವಿಳಂಬವಾಗಬಾರದು ಎಂದು ಗದಗ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಂಚ ಗ್ಯಾರಂಟಿ ಯೋಜನೆಗಳು ಬಡಜನರನ್ನು ಆರ್ಥಿಕವಾಗಿ ಸಬಲಗೊಳಿಸುವ ಉದ್ದೇಶ ಹೊಂದಿವೆ. ಯಾವುದೇ ಅರ್ಹ ಫಲಾನುಭವಿ ಸೌಲಭ್ಯದಿಂದ ವಂಚಿತನಾಗದಂತೆ ಅಧಿಕಾರಿಗಳು ಕ್ರಿಯಾಶೀಲತೆ ಹಾಗೂ ಶಿಸ್ತಿನಿಂದ ಕಾರ್ಯನಿರ್ವಹಿಸಬೇಕು. ಯೋಜನೆಗಳ ಅನುಷ್ಠಾನದಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಬೇಕು ಎಂದು ಹೇಳಿದರು.

ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಕೃಷ್ಣಗೌಡ ಎಚ್. ಪಾಟೀಲ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯಿಂದ ಯಾವುದೇ ಅರ್ಹ ಮಹಿಳೆ ವಂಚಿತರಾಗದಂತೆ ನೋಡಿಕೊಳ್ಳಬೇಕು. ಮರಣ ಹೊಂದಿದವರ ಖಾತೆಗೆ ಹಣ ಜಮೆಯಾಗುವ ಪ್ರಕರಣಗಳನ್ನು ತಡೆಗಟ್ಟಬೇಕು. ಯುವನಿಧಿ ಯೋಜನೆಯಿಂದ ಅರ್ಹರು ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು. ಅನ್ನಭಾಗ್ಯ ಯೋಜನೆಯ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಅಧಿಕಾರಿಗಳು ನೀಡಿದ ಮಾಹಿತಿಯಂತೆ, ಯುವನಿಧಿ ಯೋಜನೆಯಡಿ ಜೂನ್ 2026ರವರೆಗೆ ಗದಗ ತಾಲೂಕಿನಲ್ಲಿ 3,112 ಅಭ್ಯರ್ಥಿಗಳು ನೋಂದಣಿಯಾಗಿದ್ದು, 2,819 ಅರ್ಹ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆಯಾಗಿದೆ.

ಗೃಹಲಕ್ಷ್ಮೀ ಯೋಜನೆಯಡಿ ಏಪ್ರಿಲ್ 2026ರವರೆಗೆ 84,037 ಅರ್ಜಿಗಳು ನೋಂದಣಿಯಾಗಿದ್ದು, 75,133 ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ಪಾವತಿಸಲಾಗಿದೆ. ಮೇ ತಿಂಗಳ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ.

ಗೃಹಜ್ಯೋತಿ ಯೋಜನೆಯಡಿ ಜುಲೈ 31ರವರೆಗೆ ಗದಗ ಶಹರದಲ್ಲಿ ಅರ್ಹ 46,484 ಸ್ಥಾವರಗಳ ಪೈಕಿ 46,260 ನೋಂದಣಿಯಾಗಿದ್ದು, ಶೇ.99.52ರಷ್ಟು ಪ್ರಗತಿ ಸಾಧಿಸಲಾಗಿದೆ. ಗದಗ ಗ್ರಾಮೀಣ ಉಪವಿಭಾಗದಲ್ಲಿ ಅರ್ಹ 53,324 ಸ್ಥಾವರಗಳ ಪೈಕಿ 53,110 ನೋಂದಣಿಯಾಗಿದ್ದು, ಶೇ.99.60ರಷ್ಟು ಪ್ರಗತಿ ಸಾಧಿಸಲಾಗಿದೆ.

ಶಕ್ತಿ ಯೋಜನೆಯಡಿ 2023ರ ಜೂನ್ 11ರಿಂದ 2026ರ ಆಗಸ್ಟ್ 3ರವರೆಗೆ ಗದಗ ಘಟಕದಲ್ಲಿ ಮಹಿಳಾ ಪ್ರಯಾಣಿಕರಿಂದ ₹10,625.33 ಲಕ್ಷ ಹಾಗೂ ಬೆಟಗೇರಿ ಘಟಕದಲ್ಲಿ ₹6,297.67 ಲಕ್ಷ ಆದಾಯವಾಗಿದೆ.

ಅನ್ನಭಾಗ್ಯ ಯೋಜನೆಯಡಿ ಜುಲೈ 2026ರಲ್ಲಿ ಗದಗ ಶಹರದ 32,699 ಪಡಿತರ ಕಾರ್ಡುದಾರರಿಗೆ ಕೇಂದ್ರದ ಎನ್‌ಎಸ್‌ಎಫ್‌ಎ ಅಡಿ 2,250.98 ಕ್ವಿಂಟಲ್ ಅಕ್ಕಿ ಹಾಗೂ ಗ್ರಾಮೀಣ ಭಾಗದ 48,483 ಕಾರ್ಡುದಾರರಿಗೆ 3,578.82 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ.

ರಾಜ್ಯ ಸರ್ಕಾರದ ಅನ್ನಭಾಗ್ಯ ಅಕ್ಕಿ ಹಂಚಿಕೆ ಯೋಜನೆಯಡಿ ಗದಗ ಶಹರದ 32,699 ಕಾರ್ಡುದಾರರಿಗೆ 5,360.95 ಕ್ವಿಂಟಲ್ ಹಾಗೂ ಗ್ರಾಮೀಣ ಭಾಗದ 48,483 ಕಾರ್ಡುದಾರರಿಗೆ 7,521.35 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ.

ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ನೀಲಮ್ಮ ಬೋಳನವರ, ತಾಲೂಕು ಸಮಿತಿ ಸದಸ್ಯರಾದ ಮೀನಾಕ್ಷಿ ಬೆನಕಣ್ಣವರ, ದಯಾನಂದ ಪವಾರ, ಸಂಗು ಕರಕಲಮಟ್ಟಿ, ಎನ್.ಬಿ. ದೇಸಾಯಿ, ಸಂಗಮೇಶ ಹಾದಿಮನಿ, ರಮೇಶ ಹೊನ್ನಿನಾಯ್ಕರ, ದೇವರಡ್ಡಿ ತಿರ್ಲಾಪುರ, ಮಲ್ಲಪ್ಪ ದಂಡಿನ, ಗಣೇಶ ಸಿಂಗ್ ಮಿಟಾಡೆ, ಮಲ್ಲಪ್ಪ ಬಾರಕೇರ, ಭಾಷಾ ಮಲ್ಲಸಮುದ್ರ, ಸಾವಿತ್ರಿ ಹೂಗಾರ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ಎಚ್.ಎಸ್. ಜಿನಗ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

“ಪಂಚ ಗ್ಯಾರಂಟಿ ಯೋಜನೆಗಳು ಬಡಜನರ ಆರ್ಥಿಕ ಸಬಲೀಕರಣಕ್ಕಾಗಿ ಜಾರಿಯಾಗಿವೆ. ಯಾವುದೇ ಅರ್ಹ ಫಲಾನುಭವಿ ಸೌಲಭ್ಯದಿಂದ ವಂಚಿತರಾಗದಂತೆ ಅಧಿಕಾರಿಗಳು ಪ್ರಾಮಾಣಿಕತೆ ಹಾಗೂ ಶಿಸ್ತಿನಿಂದ ಕಾರ್ಯನಿರ್ವಹಿಸಿ, ಅನುಷ್ಠಾನದಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಬೇಕು.”

— ಅಶೋಕ ಮಂದಾಲಿ, ಅಧ್ಯಕ್ಷರು, ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ

ಗದಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ: ರೈತ ಮುಖಂಡ ಶಂಕರಗೌಡ ಜಯನಗೌಡ್ರ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬೆಳೆಗಳು ಕೈಕೊಟ್ಟು ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ರೈತ ಮುಖಂಡ ಶಂಕರಗೌಡ ಜಯನಗೌಡ್ರ ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೆ ಪಾದಯಾತ್ರೆ ನಡೆಸಿದ ರೈತರು, ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಂಕರಗೌಡ ಜಯನಗೌಡ್ರ, ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದೆ ಬೆಳೆಗಳು ನಷ್ಟವಾಗಿವೆ. ಬಿತ್ತನೆ, ಬೀಜ, ಗೊಬ್ಬರ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಹಣ ಖರ್ಚು ಮಾಡಿರುವ ರೈತರು ಇದೀಗ ಬೆಳೆ ನಷ್ಟದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಬರಪೀಡಿತ ಪ್ರದೇಶದ ನಿಯಮದಂತೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಬರ ಪರಿಸ್ಥಿತಿಯಿಂದ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುವ ಸಾಧ್ಯತೆ ಇರುವುದರಿಂದ ಪ್ರತಿ ಹೋಬಳಿ ಮಟ್ಟದಲ್ಲಿ ಗೋಶಾಲೆ ಹಾಗೂ ಮೇವು ಬ್ಯಾಂಕ್ ತೆರೆಯಬೇಕು. ರೈತರು ಕೃಷಿ ಚಟುವಟಿಕೆಗಳಿಗಾಗಿ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿ ಪಡೆದಿರುವ ಬೆಳೆ ಸಾಲವನ್ನು ಬರಗಾಲದ ಹಿನ್ನೆಲೆಯಲ್ಲಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

2025–26ನೇ ಸಾಲಿನ ಬೆಳೆ ವಿಮೆ ಯೋಜನೆಯಡಿ ಜಿಲ್ಲೆಯ ಹಲವು ರೈತರು ವಿಮೆ ಪಾವತಿಸಿದ್ದರೂ, ತಾಂತ್ರಿಕ ಹಾಗೂ ಇತರೆ ಕಾರಣಗಳಿಂದ ಕೆಲವರಿಗೆ ಸಮರ್ಪಕ ಪರಿಹಾರ ದೊರೆತಿಲ್ಲ. ಈ ಕುರಿತು ಕೂಡಲೇ ಪರಿಶೀಲನೆ ನಡೆಸಿ, ಅರ್ಹ ರೈತರಿಗೆ ಸಂಪೂರ್ಣ ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಡಬೇಕು. ಬೆಳೆ ವಿಮೆಗೆ ಸಂಬಂಧಿಸಿದ ಎಲ್ಲ ಅರ್ಜಿಗಳನ್ನು ಪುನರ್‌ಪರಿಶೀಲಿಸಿ ಅರ್ಹರಿಗೆ ನ್ಯಾಯ ದೊರಕಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

1978ರಿಂದ ಅರಣ್ಯ ಒತ್ತುವರಿದಾರರು ಹಾಗೂ ಬಗರಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ದೊರೆಯದೆ ಇರುವ ಪ್ರಕರಣಗಳನ್ನು ತ್ವರಿತವಾಗಿ ಪರಿಶೀಲಿಸಿ, ಅರ್ಹರಿಗೆ ಅರಣ್ಯ ಹಕ್ಕುಪತ್ರ ಹಾಗೂ ಪಟ್ಟಾ ನೀಡಬೇಕು. ಅರಣ್ಯ ಒತ್ತುವರಿ ಪ್ರಕರಣಗಳಲ್ಲಿ ರೈತರ ವಿರುದ್ಧ ದಾಖಲಾಗಿರುವ ಪ್ರಕರಣಗಳು ಹಾಗೂ ಎಫ್‌ಐಆರ್‌ಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ರೇಷ್ಮೆ ಬೆಳೆಗಾರರಿಗೆ ಸರ್ಕಾರದಿಂದ ದೊರೆಯಬೇಕಾದ ಸಹಾಯಧನ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಅಧಿಕಾರಿಗಳು ಈ ಕುರಿತು ಪರಿಶೀಲನೆ ನಡೆಸಿ ಅರ್ಹ ರೇಷ್ಮೆ ಬೆಳೆಗಾರರಿಗೆ ಕೂಡಲೇ ಸಹಾಯಧನ ಒದಗಿಸಬೇಕು ಎಂದು ಆಗ್ರಹಿಸಿದರು.

“ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗಾಗಿ ಹಲವು ಉತ್ತಮ ಯೋಜನೆಗಳನ್ನು ಜಾರಿಗೊಳಿಸಿದ್ದರೂ, ಭ್ರಷ್ಟ ಅಧಿಕಾರಿಗಳಿಂದಾಗಿ ಅವು ನಿಜವಾದ ರೈತರಿಗೆ ತಲುಪದಿರುವುದು ವಿಪರ್ಯಾಸ. ರೈತರಿಗೆ ಸಿಗಬೇಕಾದ ಸೌಲಭ್ಯಗಳು ಮಧ್ಯವರ್ತಿಗಳ ಪಾಲಾಗದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.”

— ಶಂಕರಗೌಡ ಜಯನಗೌಡ್ರ, ರೈತ ಸಂಘದ ಜಿಲ್ಲಾಧ್ಯಕ್ಷ