ಬೆಂಗಳೂರು: ರಾಜ್ಯದಲ್ಲಿ H1N1 ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಈ ವರ್ಷದ ಎಂಟು ತಿಂಗಳಲ್ಲಿ 32 ಜಿಲ್ಲೆಗಳಿಂದ ಒಟ್ಟು 4,212 ಪ್ರಯೋಗಾಲಯ ದೃಢೀಕೃತ ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ಸೇರಿದಂತೆ 15 ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕಣ್ಗಾವಲು ಹಾಗೂ ಸಿದ್ಧತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಿದೆ.
ಆರೋಗ್ಯ ಸಚಿವ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಹಿರಿಯ ಆರೋಗ್ಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಲಾಗಿದೆ. ಯಾವುದೇ ತುರ್ತು ಪರಿಸ್ಥಿತಿ ಎದುರಾದರೂ ನಿಭಾಯಿಸಲು ರಾಜ್ಯದ ಆರೋಗ್ಯ ವ್ಯವಸ್ಥೆ ಸಜ್ಜಾಗಿದ್ದು, ಅಗತ್ಯ ಮೂಲಸೌಕರ್ಯ, ಆಸ್ಪತ್ರೆ ಬೆಡ್ಗಳು ಹಾಗೂ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲಾಗಿದೆ.
ಇಂಟಿಗ್ರೇಟೆಡ್ ಹೆಲ್ತ್ ಇನ್ಫಾರ್ಮೇಷನ್ ಪ್ಲಾಟ್ಫಾರ್ಮ್ (IHIP) ಕಣ್ಗಾವಲು ವರದಿ ಪ್ರಕಾರ, 32 ಜಿಲ್ಲೆಗಳಲ್ಲಿ 4,212 ಪ್ರಯೋಗಾಲಯ ದೃಢೀಕೃತ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. 2025ರಲ್ಲಿ ರಾಜ್ಯದಲ್ಲಿ 4,583 ಹಾಗೂ 2024ರಲ್ಲಿ 3,903 ಪ್ರಕರಣಗಳು ವರದಿಯಾಗಿದ್ದವು.
ರಾಜ್ಯದಲ್ಲಿ ಸಾಮಾನ್ಯವಾಗಿ ಜನವರಿಯಿಂದ ಮಾರ್ಚ್ ಹಾಗೂ ಜುಲೈನಿಂದ ಸೆಪ್ಟೆಂಬರ್ವರೆಗೆ ಇನ್ಫ್ಲುಯೆಂಜಾ ಪ್ರಕರಣಗಳು ಹೆಚ್ಚಾಗುವ ಪ್ರವೃತ್ತಿ ಇದೆ. ಹೀಗಾಗಿ ಪ್ರಸ್ತುತ ಪ್ರಕರಣಗಳ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಚುರುಕುಗೊಳಿಸಿದೆ.
ILI ಹಾಗೂ SARI ಪ್ರಕರಣಗಳ ಪತ್ತೆಗಾಗಿ ಜಿಲ್ಲಾ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿಗದಿತ ಕಣ್ಗಾವಲು ಕೇಂದ್ರಗಳಾಗಿ ಬಳಸಲಾಗುತ್ತಿದೆ. ICMR-NCDC ಪ್ರಯೋಗಾಲಯಗಳು, ರಾಜ್ಯದ ವೈರಲ್ ರೋಗನಿರ್ಣಯ ಪ್ರಯೋಗಾಲಯಗಳು (VRDL) ಹಾಗೂ ನಿಮ್ಹಾನ್ಸ್ ಮೂಲಕ ಮಾದರಿಗಳ ಪರೀಕ್ಷೆಗೆ ಅಗತ್ಯ ಕಿಟ್ಗಳು ಮತ್ತು ಉಪಕರಣಗಳನ್ನು ಸಿದ್ಧವಾಗಿರಿಸಲಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಜಿಲ್ಲಾಸ್ಪತ್ರೆಗಳವರೆಗೆ ಒಸೆಲ್ಟಾಮಿವಿರ್ ಮಾತ್ರೆಗಳು, N95 ಮಾಸ್ಕ್ಗಳು ಹಾಗೂ PPE ಕಿಟ್ಗಳನ್ನು ದಾಸ್ತಾನು ಇರಿಸಲಾಗಿದೆ. ಸೋಂಕಿತರನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಚಿಕಿತ್ಸೆ ನೀಡುವ ಉದ್ದೇಶದಿಂದ ವೈದ್ಯರು ಮತ್ತು ಶುಶ್ರೂಷಾ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗಿದೆ.
ಜ್ವರ, ಶೀತ, ಕೆಮ್ಮು ಸೇರಿದಂತೆ ಸೋಂಕಿನ ಲಕ್ಷಣಗಳು ಕಂಡುಬಂದರೆ ಮನೆಯಲ್ಲೇ ಪ್ರತ್ಯೇಕವಾಗಿರಲು ಸೂಚಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸೋಪು ಅಥವಾ ಸ್ಯಾನಿಟೈಸರ್ನಿಂದ ಕೈಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಹಾಗೂ ಕಣ್ಣು, ಮೂಗು ಮತ್ತು ಬಾಯಿಯನ್ನು ಪದೇಪದೇ ಮುಟ್ಟದಿರುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಶುದ್ಧೀಕರಿಸಿದ ಬಿಸಿ ನೀರು ಬಳಸುವುದು, ವೈದ್ಯರ ಸಲಹೆಯಿಲ್ಲದೆ ಸ್ವಯಂ ಔಷಧ ಸೇವಿಸದಿರುವುದು, ಜ್ವರ ಅಥವಾ ಶೀತದ ಲಕ್ಷಣಗಳಿರುವಾಗ ಹಸ್ತಲಾಘವ ತಪ್ಪಿಸುವುದು ಹಾಗೂ ಅನಗತ್ಯವಾಗಿ ಜನಸಂದಣಿ ಇರುವ ಸ್ಥಳಗಳಿಗೆ ತೆರಳದಿರುವಂತೆ ಸೂಚಿಸಲಾಗಿದೆ. ಸೀನುವಾಗ ಮತ್ತು ಕೆಮ್ಮುವಾಗ ಕರವಸ್ತ್ರ ಅಥವಾ ಟಿಶ್ಯೂ ಬಳಸುವಂತೆಯೂ ತಿಳಿಸಲಾಗಿದೆ.
ಇನ್ನು ಬೆಂಗಳೂರಿನ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ H1N1 ಸೋಂಕು ವ್ಯಾಪಿಸಿದೆ ಎಂಬ ವದಂತಿಗಳನ್ನು ಆರೋಗ್ಯ ಸಚಿವರು ತಳ್ಳಿಹಾಕಿದ್ದಾರೆ. ಶಾಲೆಯ ಇಬ್ಬರು ಶಿಕ್ಷಕರಲ್ಲಿ ಮಾತ್ರ ಲಕ್ಷಣಗಳು ಕಂಡುಬಂದಿದ್ದು, ಯಾವುದೇ ವಿದ್ಯಾರ್ಥಿಗೆ ಸೋಂಕು ದೃಢಪಟ್ಟಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಶಾಲಾ ಆವರಣಗಳಲ್ಲಿ ಸೋಂಕು ಹರಡುವುದನ್ನು ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಆಡಳಿತ ಮಂಡಳಿಗಳಿಗೆ ಮಾರ್ಗಸೂಚಿ ನೀಡಲಾಗಿದೆ.