ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಎರಡನೇ ವಾರ್ಡ್ ವ್ಯಾಪ್ತಿಯ ಕರೇಗೋರಿ ಆಶ್ರಯ ನಿವೇಶನ ಪ್ಲಾಟ್ನ ನಿವಾಸಿಗಳು ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಶುಕ್ರವಾರ ಪುರಸಭೆಗೆ ಮುತ್ತಿಗೆ ಹಾಕಿ ಸುಮಾರು ಮೂರು ಗಂಟೆಗಳ ಕಾಲ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಚೇರಿ ಆರಂಭವಾಗುವ ವೇಳೆಯಲ್ಲೇ ಪುರಸಭೆಗೆ ದೌಡಾಯಿಸಿದ ನಿವಾಸಿಗಳು ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸಮಗ್ರ ರೈತಪರ ಸಂಘಟನೆಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಮಂಜುನಾಥ ಮಾಗಡಿ, ಎರಡನೇ ವಾರ್ಡ್ನ ಕರೇಗೋರಿ ಆಶ್ರಯ ನಿವೇಶನ ಪ್ಲಾಟ್ ನಿರ್ಮಾಣಗೊಂಡು ಸುಮಾರು ೩೦ ವರ್ಷಗಳಾದರೂ ನಿವಾಸಿಗಳು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಬಾರಿಯೂ ನಿವಾಸಿಗಳು ಪ್ರತಿಭಟನೆ ನಡೆಸುವುದು, ಅಧಿಕಾರಿಗಳು ಭರವಸೆ ನೀಡಿ ಅವರನ್ನು ಸಮಾಧಾನಪಡಿಸುವುದು ಮಾಮೂಲಾಗಿದ್ದು, ಈ ಬಾರಿ ಸಮಸ್ಯೆಗಳಿಗೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.
ಪ್ಲಾಟ್ನಲ್ಲಿ ಗಟಾರ್, ರಸ್ತೆ ಹಾಗೂ ಶೌಚಾಲಯದಂತಹ ಮೂಲಸೌಕರ್ಯಗಳ ಕೊರತೆಯಿದೆ. ರಸ್ತೆಗಳಲ್ಲಿ ತೆಗ್ಗು-ಗುಂಡಿಗಳು ನಿರ್ಮಾಣವಾಗಿದ್ದು, ನಿಂತ ನೀರಿನಿಂದ ದುರ್ವಾಸನೆ ಉಂಟಾಗುತ್ತಿದೆ. ಬೀದಿ ದೀಪಗಳಿಲ್ಲದೆ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದು, ತಿಂಗಳುಗಳಿಂದ ಸಮರ್ಪಕ ಕುಡಿಯುವ ನೀರಿನ ಪೂರೈಕೆಯೂ ಆಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನಿವಾಸಿಗಳಾದ ಮಂಜುನಾಥ ಗೊರವರ, ಸಚಿನ್ ಹೆಬ್ಬಾಳ ಹಾಗೂ ಮಂಜುನಾಥ ಸಂಶಿ ಮಾತನಾಡಿ, ಕಳೆದ ೧೦ ವರ್ಷಗಳಿಂದ ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಭಾಗದ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ. ಈ ಕುರಿತು ಲೋಕಾಯುಕ್ತರಿಗೂ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆಯಲು ನಿರಾಕರಿಸಿ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಸಿಬ್ಬಂದಿಯೊಂದಿಗೆ ಕರೇಗೋರಿ ಪ್ಲಾಟ್ಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿದರು. ಕುಡಿಯುವ ನೀರಿನ ಸಮಸ್ಯೆ ಪರಿಹಾರ, ತಾತ್ಕಾಲಿಕ ಗಟಾರ್ ನಿರ್ಮಾಣ ಹಾಗೂ ರಸ್ತೆಗೆ ಮೊರಂ ಹಾಕಿ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು. ಬಳಿಕ ತಕ್ಷಣವೇ ಪರಿಹಾರ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ನಾಗರಾಜ ಚಿಂಚಲಿ, ಅಮರಪ್ಪ ಅಮರಶೆಟ್ಟಿ, ಆನಂದ ಅಮರಶೆಟ್ಟಿ, ರಾಜಣ್ಣ ಕಣವಿ, ಈಶ್ವರಪ್ಪ ಅಮರಶೆಟ್ಟಿ, ಮಹಾಂತೇಶ ಗೊರವರ, ಚಂದ್ರು ಮುಳಗುಂದ, ಬಸವರಾಜ ಹುಬ್ಬಳ್ಳಿ, ಶಿವಪ್ಪ ಕೋಣಿ, ಸಚಿನ್ ಮರೀಗೌಡ್ರ, ಸಂತೋಷ ನುಚ್ಚುಂಬಲಿ, ವೆಂಕಟೇಶ ಮಕರಳ್ಳಿ, ಬಸವರಾಜ ನಾವಿ, ಮಂಜುನಾಥ ದೊಡ್ಡಮನಿ, ಭೀಮಪ್ಪ ಅರಳಿಕಟ್ಟಿ, ಮಂಜುನಾಥ ಉದ್ದಾರ, ದುಂಡಪ್ಪ ಹುಗ್ಗಿ, ಮಂಜುನಾಥ ಕೊಡಳ್ಳಿ, ಬಸಣ್ಣ ಬಳ್ಳೋಳ್ಳಿ, ಕೊಟ್ರಮ್ಮ ಅಗಸಿಬಾಗಿಲ ಸೇರಿದಂತೆ ಪ್ಲಾಟ್ನ ನಿವಾಸಿಗಳು ಪಾಲ್ಗೊಂಡಿದ್ದರು.

