ಬೆಂಗಳೂರು: “ಬೆಂಗಳೂರಿನಲ್ಲಿ ಲಾಲ್ ಬಾಗ್ ಮಾದರಿಯ 3 ಉದ್ಯಾನ ನಿರ್ಮಾಣ ಮಾಡಲು ನಮ್ಮ ಸರ್ಕಾರ ಚಿಂತನೆ ನಡೆಸಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಲಾಲ್ ಬಾಗ್ ನಲ್ಲಿ ‘ಗಂಗ ಸಾಮ್ರಾಜ್ಯ ವೈಭವ’ ಪರಿಕಲ್ಪನೆಯಲ್ಲಿ ಆಯೋಜಿಸಲಾಗಿರುವ 220ನೇ ಫಲಪುಷ್ಪ ಪ್ರದರ್ಶನಕ್ಕೆ ಶಿವಕುಮಾರ್ ಅವರು ಗುರುವಾರ ಚಾಲನೆ ನೀಡಿ, ಮಾಧ್ಯಮಗಳೊಂದಿಗೆ ಮಾತನಾಡಿದರು.
“ಬೆಂಗಳೂರಿನಲ್ಲಿರುವ ರಕ್ಷಣಾ ಇಲಾಖೆ ಜಾಗದಲ್ಲಿ ಇಂತಹ ಉದ್ಯಾನ ನಿರ್ಮಾಣ ಮಾಡುವ ಉದ್ದೇಶವಿದೆ. ಈ ಭೂಮಿ ರಕ್ಷಣಾ ಇಲಾಖೆ ವಶದಲ್ಲೇ ಇರುತ್ತದೆ. ಆದರೆ ಅಲ್ಲಿ ಇಂತಹ ಉದ್ಯಾನ ನಿರ್ಮಿಸಲು ಅನುಮತಿ ಬೇಕು ಎಂದು ಪತ್ರ ಬರೆದಿದ್ದು, ಸಧ್ಯದಲ್ಲೇ ರಕ್ಷಣಾ ಸಚಿವರನ್ನು ಭೇಟಿ ಮಾಡುತ್ತೇನೆ. ವಾರಣಾಸಿಯಲ್ಲಿ ರಕ್ಷಣಾ ಇಲಾಖೆ ಜಾಗದಲ್ಲಿ ಉದ್ಯಾನ ನಿರ್ಮಿಸಲು ಪ್ರಧಾನಮಂತ್ರಿಗಳು ಅನುಮತಿ ನೀಡಿದ್ದಾರೆ.
ಇದರ ಜೊತೆಗೆ ಬೆಂಗಳೂರು ನಗರದೊಳಗೆ ಇರುವ ಅರಣ್ಯ ಜಾಗದಲ್ಲಿ ಇಂತಹ ಉದ್ಯಾನವನ ನಿರ್ಮಿಸಲು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಜಿಬಿಎ, ಬಿಡಿಎ, ತೋಟಗಾರಿಕೆ ಇಲಾಖೆ ಸೇರಿದಂತೆ ಇತರ ಇಲಾಖೆಗಳಿಗೆ ಜವಾಬ್ದಾರಿ ವಹಿಸಿ ನಿರ್ಮಿಸಲು ಆಲೋಚಿಸಿದ್ದೇವೆ. ನಮ್ಮ ಕಾಲದಲ್ಲಿ ನಗರದ ಹಸಿರು ಕಾಪಾಡಿ, ಸಾರ್ವಜನಿಕರ ಬದುಕಿಗೆ ಅನುಕೂಲ ಮಾಡಿಕೊಡಲು ಮುಂದಾಗಿದ್ದೇವೆ” ಎಂದು ತಿಳಿಸಿದರು.
ನಾಗರಿಕರು ಬಂದು ಈ ಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಳ್ಳಬೇಕು:
“ಲಾಲ್ ಬಾಗ್ ಕೇವಲ ಉದ್ಯಾನವನ ಮಾತ್ರವಲ್ಲ. ಇದೊಂದು ಇತಿಹಾಸ. ಗಂಗ ಸಾಮ್ರಾಜ್ಯದಲ್ಲಿ ಕೃಷಿಕರು, ರೈತರ ಇತಿಹಾಸವನ್ನು ಇಟ್ಟುಕೊಂಡು ಈ ಫಲಪುಷ್ಟ ಪ್ರದರ್ಶನವನ್ನು ರೂಪಿಸಲಾಗಿದೆ. ಗಂಗರು ಆಗಿನ ಕಾಲದಲ್ಲಿ ಕಟ್ಟಿದ್ದ ಕೆರೆಗಳು ಇಂದಿಗೂ ಉಳಿದಿವೆ. ಕಷ್ಟಕಾಲದಲ್ಲಿ ಆ ಕೆರೆಗಳು ರಕ್ಷಣೆ ಮಾಡಿವೆ. ಗಂಗರ ಇತಿಹಾಸ ಸಮಾನತೆ, ಕೃಷಿಕರ ಬದುಕು, ಹೋರಾಟವನ್ನು ಹೊಂದಿದೆ.
ಇದು ನಮ್ಮ ಸಂಸ್ಕೃತಿ, ರೈತರ ಬದುಕು ಹಾಗೂ ಕಲೆಯ ಸಂಭ್ರಮ. ಈ ವರ್ಷದ ಸ್ವಾತಂತ್ರ್ಯ ಸಂಭ್ರಮದಲ್ಲಿ ನಾಡಿನ ಜನತೆ ಈ ಫಲಪುಷ್ಟ ಪ್ರದರ್ಶನ ವೀಕ್ಷಿಸಿ ಆನಂದಿಸಬೇಕು. ಯುವಕರು, ಮಹಿಳೆಯರು, ಹಿರಿಯರು ಸೇರಿದಂತೆ ಎಲ್ಲರೂ ಈ ಪ್ರದರ್ಶನವನ್ನು ಕಣ್ತುಂಬಿಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ. ಈ ಕಾರ್ಯಕ್ರಮವನ್ನು ನಾನು ಉದ್ಘಾಟಿಸಿರುವುದು ಸಂತೋಷ ತಂದಿದೆ. 10 ದಿನಗಳ ಕಾಲ ಈ ಪ್ರದರ್ಶನ ನಡೆಯಲಿದೆ. ಲಾಲ್ ಬಾಗ್ ಅನ್ನು ಹೈದರಾಲಿ ಸ್ಥಾಪಿಸಿದರು, ಬ್ರಿಟೀಷರು ಅಭಿವೃದ್ದಿ ಮಾಡಿದರು. ಈಗ ಕರ್ನಾಟಕ ಸರ್ಕಾರ ಮುಂದುವರಿಸುತ್ತಿದೆ” ಎಂದು ತಿಳಿಸಿದರು.
“ಈ ವರ್ಷ ಗಂಗ ಸಾಮ್ರಾಜ್ಯ ರೂಪುಗೊಂಡಿದೆ. ದಕ್ಷಿಣ ಭಾರತದ ಗಂಗರ ಸಾಮ್ರಾಜ್ಯದ ವೈಭವವನ್ನು ಪುಷ್ಪಗಳ ಮೂಲಕ ಮೂಡಿಸಲಾಗಿದೆ. ಅವರ ಹೋರಾಟ, ಸಂಸ್ಕೃತಿ ಎಲ್ಲವೂ ಇಲ್ಲಿ ಅನಾವರಣಗೊಂಡಿದೆ. ಗಂಗರ ಇತಿಹಾಸ ಕರ್ನಾಟಕ ರಾಜ್ಯದ ಇತಿಹಾಸದ ಭಾಗ. ತೋಟಗಾರಿಕಾ ಇಲಾಖೆಯವರು ಈ ಪರಿಕಲ್ಪನೆಯನ್ನು ಅತ್ಯುತ್ತಮವಾಗಿ ರೂಪಿಸಿದ್ದಾರೆ” ಎಂದು ಹೇಳಿದರು.
ಆಗಸ್ಟ್ 15ರಂದು ರೈತರು, ಸರ್ಕಾರದ ಪಾಲುದಾರಿಕೆ ಕಾರ್ಯಕ್ರಮ ಪ್ರಕಟ
“ರಾಜ್ಯದಲ್ಲಿ ಹಸಿರು ಹೆಚ್ಚಿಸಿ ರೈತರ ಬದುಕು ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿದ್ದೇವೆ. ಇದು ರೈತರು ಹಾಗೂ ಸರ್ಕಾರದ ನಡುವಿನ ಪಾಲುದಾರಿಕೆಯ ಕಾರ್ಯಕ್ರಮವಾಗಿದೆ. ಇದನ್ನು ಆಗಸ್ಟ್ 15ರಂದು ಪ್ರಕಟಿಸುತ್ತೇವೆ. ಸರ್ಕಾರದ 100 ದಿನಗಳ ಕಾರ್ಯಕ್ರಮ ರೂಪಿಸಲಾಗಿದ್ದು, ರೈತರ ಬದುಕಿಗೆ ಯಾವ ರೀತಿ ಶಕ್ತಿ ತುಂಬಬೇಕು ಎಂದು ಆಲೋಚಿಸಿ ಕಾರ್ಯಕ್ರಮ ರೂಪಿಸುತ್ತಿದ್ದೇವೆ” ಎಂದು ತಿಳಿಸಿದರು.
ನಮ್ಮಲ್ಲಿ ಎಲ್ಲಾ ಶಾಸಕರು ಸಚಿವ ಸ್ಥಾನಕ್ಕೆ ಅರ್ಹರು:
ಕಾಂಗ್ರೆಸ್ ಹಿರಿಯ ನಾಯಕರ ಮನೆಗೆ ಭೇಟಿ ನೀಡಿದ್ದು ಸಮಸ್ಯೆ ಬಗೆಹರಿಸಲಾಗಿದೆಯೇ ಎಂದು ಕೇಳಿದಾಗ, “ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ಸಮಸ್ಯೆ ಇರುವುದು ಮಾಧ್ಯಮಗಳಲ್ಲಿ. ನಮ್ಮ ಹಿರಿಯ ನಾಯಕರ ಭಾವನೆಗೆ ನಾವು ಗೌರವ ಸಲ್ಲಿಸಬೇಕು. 140 ಶಾಸಕರು ಹಾಗೂ 40 ಪರಿಷತ್ ಸದಸ್ಯರಿದ್ದು, ಆ ಪೈಕಿ ನಾವು ಸಚಿವ ಸ್ಥಾನ ನೀಡಲು ಸಾಧ್ಯವಿರುವುದು ಕೇವಲ 33 ಜನರಿಗೆ ಮಾತ್ರ. ನಮ್ಮ ಪಕ್ಷದಲ್ಲಿ ಎಲ್ಲರೂ ಅರ್ಹರೆ. ನಾವು ಅವರ ಆಸೆ ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಪ್ರಾಮಾಣಿಕರಾಗಿದ್ದು, ಎಲ್ಲರೂ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ” ಎಂದು ತಿಳಿಸಿದರು.

