ವಿಜಯಸಾಕ್ಷಿ ಸುದ್ದಿ, ಗದಗ: ರೈತರ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಆಗಸ್ಟ್ 5ರಂದು ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯಲಿರುವ ‘ಡಿಸಿ ಕಚೇರಿ ಚಲೋ’ ಬೃಹತ್ ಪ್ರತಿಭಟನೆಗೆ ತಿಮ್ಮಾಪೂರ ಗ್ರಾಮದ ರೈತರು ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ತಿಮ್ಮಾಪೂರ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಿ.ಆರ್. ನಾರಾಯಣರೆಡ್ಡಿ ಬಣ) ಗ್ರಾಮ ಘಟಕ ಕೋಟುಮಚಿಗಿ ವತಿಯಿಂದ ರೈತ ಸಭೆ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ, 2025-26ನೇ ಸಾಲಿನ ಎಲ್ಲ ಬೆಳೆಗಳ ವಿಮೆಯನ್ನು ತಕ್ಷಣ ಮಂಜೂರು ಮಾಡಬೇಕು, ಗದಗ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು, ರಾಷ್ಟ್ರೀಕೃತ ಬ್ಯಾಂಕ್ಗಳ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಹಾಗೂ ಕಪ್ಪತ್ತಗುಡ್ಡ ಅರಣ್ಯವನ್ನು ಸಂರಕ್ಷಿಸಬೇಕು ಎಂಬುದು ರೈತರ ಪ್ರಮುಖ ಬೇಡಿಕೆಗಳಾಗಿವೆ. ಸರ್ಕಾರ ಕೂಡಲೇ ಇವುಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಕಬ್ಬು ಬೆಳೆಗಾರರು ತಮ್ಮ ಬೇಡಿಕೆಗಳಿಗಾಗಿ ಎಂಟು ದಿನಗಳ ಕಾಲ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಯಶಸ್ಸು ಸಾಧಿಸಿದ್ದಾರೆ. ಅದೇ ರೀತಿಯಲ್ಲಿ ರೈತರು ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ನ್ಯಾಯ ದೊರೆಯಲಿದೆ. ರಾಷ್ಟ್ರೀಕೃತ ಬ್ಯಾಂಕ್ ಸಾಲ ಹಾಗೂ ಬೆಳೆ ವಿಮೆ ಕುರಿತು ಎರಡು-ಮೂರು ದಿನಗಳಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳದಿದ್ದರೆ ಆಗಸ್ಟ್ 5ರ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿದರು.
ರೈತ ಮುಖಂಡ ಶರಣಪ್ಪ ಮ್ಯಾಗೇರಿ ಮಾತನಾಡಿ, ಆಗಸ್ಟ್ 5ರಂದು ನಡೆಯುವ ಪ್ರತಿಭಟನೆಗೆ ತಿಮ್ಮಾಪೂರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಗದಗಕ್ಕೆ ತೆರಳಿ ಭಾಗವಹಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಕೋಟುಮಚಿಗಿ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ಘೋಷಿಸಿತು. ಬಳಿಕ “ರೈತರ ಶಕ್ತಿ ಬಹಳ ಇದೆ” ಎಂಬ ಘೋಷಣೆಗಳೊಂದಿಗೆ ಪ್ರತಿಭಟನೆಯನ್ನು ಯಶಸ್ವಿಗೊಳಿಸುವ ಸಂಕಲ್ಪ ಕೈಗೊಳ್ಳಲಾಯಿತು.
ಸಭೆಯಲ್ಲಿ ಹುಚ್ಚಿರಪ್ಪ ಬಡೆಗೇರ, ಪಾಲಾಕ್ಷಯ್ಯ ಬಳಗೇರಮಠ, ಮಲ್ಲಪ್ಪ ರಮಾಣೆ, ಸಂತೋಷ ಮುತ್ತಾಳ, ಮುನಿಯಪ್ಪ ಶಿಂಗಟಾಲಕೇರಿ, ಮುತ್ತಪ್ಪ ಜಗ್ಗಲ, ಹುಚ್ಚಿರಪ್ಪ ಜೋಗಿನ, ಶಿವರಾಜ ಒಂಟೇಲಿ, ಮಾದೇಗೌಡ ಸಂಕನಗೌಡ್ರ, ಪರಪ್ಪ ಕಡಗದ, ಬೀರಪ್ಪ ಕಂಬಳಿ, ರೇಣಕಪ್ಪ ಕಿನ್ನಾಳ, ಬಾಬು ದಿವಟಿ, ಜಗದೀಶ್ ಮಲ್ಲನವರ ಸೇರಿದಂತೆ ನೂರಾರು ರೈತರು, ಕೂಲಿ ಕಾರ್ಮಿಕರು ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

