Home Blog

ಅಮೃತ ಭೋಜನದಿಂದ ಮಕ್ಕಳ ಹಾಜರಾತಿ, ಪ್ರಗತಿಗೆ ಅನುಕೂಲ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಶ್ರಾವಣ ಮಾಸದ ಅಂಗವಾಗಿ ನಗರದ ಶ್ರೀ ಕೃಷ್ಣಾಜಿ ರಂಗರಾವ್ ಕುಲಕರ್ಣಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಮೃತ ಭೋಜನ ಕಾರ್ಯಕ್ರಮಕ್ಕೆ ಶಾಲಾ ಭೂದಾನಿ ಆನಂದರಾವ್ ಕುಲಕರ್ಣಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದಾನಿಗಳ ನೆರವಿನಿಂದ ಶ್ರಾವಣ ಮಾಸದಲ್ಲಿ ಅಮೃತ ಭೋಜನ ಹಮ್ಮಿಕೊಂಡಿರುವುದು ಶಾಲಾ ಅಭಿವೃದ್ಧಿಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಪೂರಕವಾಗಿದೆ. ಪ್ರತಿವರ್ಷ ಅಮೃತ ಭೋಜನ ಕಾರ್ಯಕ್ರಮ ನಡೆಯುವುದರಿಂದ ಮಕ್ಕಳ ಹಾಜರಾತಿ ಹಾಗೂ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಮುಖ್ಯ ಶಿಕ್ಷಕ ಎಸ್.ಬಿ. ನಿಡಗುಂದಿ ಮಾತನಾಡಿ, ಸರ್ಕಾರಿ ಶಾಲೆಗಳ ಬಗ್ಗೆ ಸಾರ್ವಜನಿಕರು ಹೊಂದಿರುವ ಅಭಿಮಾನಕ್ಕೆ ಅಮೃತ ಭೋಜನ ಕಾರ್ಯಕ್ರಮ ಸಾಕ್ಷಿಯಾಗಿದೆ. ಅನೇಕ ದಾನಿಗಳು ಪ್ರತಿವರ್ಷ ಕಾರ್ಯಕ್ರಮಕ್ಕೆ ನೆರವು ನೀಡಲು ಮುಂದಾಗಿರುವುದು ಸಂತಸದ ಸಂಗತಿ. ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ದಾನಿಗಳು ಕೈಜೋಡಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದರು.

ಶಿಕ್ಷಣ ಪ್ರೇಮಿ ಅರ್ಚನಾ ಕುಲಕರ್ಣಿ, ಶಿಕ್ಷಕರಾದ ಎಸ್.ಎಂ. ಹಳ್ಳದ, ಡಿ.ಎಸ್. ಬಡಿಗೇರ ಹಾಗೂ ಬಿ.ಟಿ. ತಾಳಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಹಲವು ಸೌಲಭ್ಯಗಳಿದ್ದು, ವಿದ್ಯಾರ್ಥಿಗಳು ಅವುಗಳ ಸದುಪಯೋಗ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ೧೨೦ ವಿದ್ಯಾರ್ಥಿಗಳು ಅಮೃತ ಭೋಜನ ಸವಿದು ಸಂತಸಪಟ್ಟರು. ಕಾರ್ಯಕ್ರಮಕ್ಕೆ ನೆರವು ನೀಡಿದ ದಾನಿಗಳಿಗೆ ವಿದ್ಯಾರ್ಥಿಗಳು ಹಾಗೂ ಶಾಲೆಯ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.

ಶಿಕ್ಷಕಿ ಕೌಶಲ್ಯ ಕುರಿ ವಂದನಾರ್ಪಣೆ ಮಾಡಿದರು. ಪ್ರಶಿಕ್ಷಣಾರ್ಥಿಗಳಾದ ಶರಣು ಖವಾಸ್ತೆ ಹಾಗೂ ಗೂಳಪ್ಪ ಬೂದಿಹಾಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ವಿಜಯ ರಾಘವೇಂದ್ರ ಅಭಿನಯದ ‘ರುದ್ರಾಭಿಷೇಕಂ’ ಸೆ. ೨೫ಕ್ಕೆ ತೆರೆಗೆ

0

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ನ್ಯಾಚುರಲ್ ಸ್ಟಾರ್ ವಿಜಯ ರಾಘವೇಂದ್ರ ದ್ವಿಪಾತ್ರದಲ್ಲಿ ಅಭಿನಯಿಸಿರುವ ‘ರುದ್ರಾಭಿಷೇಕಂ’ ಚಿತ್ರ ಸೆಪ್ಟೆಂಬರ್ ೨೫ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ.

‘ಪಾನ್ ಇಂಡಿಯಾ ಕ್ರಿಯೇಷನ್ಸ್’, ವಿಜಯಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಂಸ್ಥೆಯ ಮೂಲಕ ನಿರ್ಮಾಣಗೊಂಡಿರುವ ಈ ಚಿತ್ರ ಕನ್ನಡ ಚಿತ್ರರಂಗಕ್ಕೆ ಸಂಸ್ಥೆಯ ಮೊದಲ ಹೆಜ್ಜೆಯಾಗಿದೆ. ವೀರಭದ್ರ ಸ್ವಾಮಿಯ ಜಾನಪದ ಕಥೆಯನ್ನು ಆಧರಿಸಿರುವ ಚಿತ್ರದಲ್ಲಿ ವಿಜಯ ರಾಘವೇಂದ್ರ ಅವರು ಹಿಂದೆಂದೂ ಕಾಣದ ವಿಭಿನ್ನ ಹಾಗೂ ಶಕ್ತಿಶಾಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಿಶಿಷ್ಟ ವೀರಗಾಸೆ ಪಾತ್ರದಲ್ಲಿ ಮಿಂಚಿದ್ದಾರೆ.

ಸಾಹಸಮಯ ಕಥಾಹಂದರ ಹೊಂದಿರುವ ಚಿತ್ರಕ್ಕೆ ನಾದಬ್ರಹ್ಮ ವಿ. ಮನೋಹರ್ ಸಂಗೀತ ಸಂಯೋಜಿಸಿದ್ದು, ಥ್ರಿಲ್ಲರ್ ಮಂಜು ಅವರ ಸಾಹಸ ದೃಶ್ಯಗಳು ಪ್ರಮುಖ ಆಕರ್ಷಣೆಯಾಗಿವೆ. ದೇವನಹಳ್ಳಿ, ಗೋಕರ್ಣ, ಹೊನ್ನಾವರ, ಕುಮಟಾ, ಅಬ್ಬಕ್ಕ ಫೋರ್ಟ್ ಹಾಗೂ ಅಘನಾಶಿನಿ ಹಿನ್ನೀರಿನ ಪ್ರದೇಶಗಳಲ್ಲಿ ೫೦ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.

ಚಿತ್ರವು ಈಗಾಗಲೇ ಕನ್ನಡ ಕಲಾಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, ಸೆಪ್ಟೆಂಬರ್ ೨೫ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಕೆ. ವಸಂತ್‌ಕುಮಾರ್ ತಿಳಿಸಿದ್ದಾರೆ.

ಚಿತ್ರದಲ್ಲಿ ವಿಜಯ ರಾಘವೇಂದ್ರ ಅವರಿಗೆ ನಾಯಕಿಯಾಗಿ ‘ಮಿಲ್ಕ್ ಬ್ಯೂಟಿ’ ಪ್ರಿಯಾಂಕಾ ತಿಮ್ಮೇಶ್ ಅಭಿನಯಿಸಿದ್ದಾರೆ. ರಾಜ್ ಬಲವಾಡಿ, ವಸಂತ್ ಕುಮಾರ್, ಮನು, ಬುಲೆಟ್ ವಿನು, ಸಂದೀಪ್, ಸನತ್, ಸೌಂದರ್ಯ, ನವನೀತ್, ಮಮತಾ, ಸ್ವಾತಿ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ.

ತಾಂತ್ರಿಕ ವರ್ಗದಲ್ಲಿ ಮುತ್ತುರಾಜ್ ಛಾಯಾಗ್ರಹಣ, ವಿ. ಮನೋಹರ್ ಸಂಗೀತ, ಭಜರಂಗಿ ಮೋಹನ್ ನೃತ್ಯ ಸಂಯೋಜನೆ, ಥ್ರಿಲ್ಲರ್ ಮಂಜು ಸಾಹಸ, ಬಾಬುಖಾನ್ ಕಲಾ ನಿರ್ದೇಶನ, ನೊಣವಿನಕೆರೆ ಕುಮಾರ ಪ್ರಸಾಧನ ಹಾಗೂ ಮುತ್ತುರಾಜ್.ಟಿ ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ. ನಾಗೇಂದ್ರ, ಡಾ. ಪ್ರಭು ಗಂಜಿಹಾಳ ಹಾಗೂ ಡಾ. ವೀರೇಶ್ ಹಂಡಿಗಿ ಪಿಆರ್‌ಒ ಆಗಿ ಕಾರ್ಯನಿರ್ವಹಿಸಿದ್ದಾರೆ.

ಕೆ. ವಸಂತ್‌ಕುಮಾರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನದ ಜೊತೆಗೆ ಚಿತ್ರದ ಹಾಡುಗಳನ್ನು ರಚಿಸಿ, ತತ್ವಜ್ಞಾನಿ ಪಾತ್ರದಲ್ಲೂ ಅಭಿನಯಿಸಿದ್ದಾರೆ. ಮನು ಮತ್ತು ಧೀರಜ್ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಎನ್. ಜಯರಾಮ್, ಕೆ.ಎನ್. ಮಂಜುನಾಥ್, ಕೆ. ವೆಂಕಟೇಶ್, ಬಿ. ಚಿದಾನಂದ ಮೂರ್ತಿ, ಸುರೇಶ್ ಬಾಬು, ರವಿ, ಅಶ್ವಥನಾರಾಯಣ, ಡಾ. ಎಂ. ಶಿವಕುಮಾರ್ ಹಾಗೂ ಕುಸುಮ ವಸಂತ್ ಕುಮಾರ್ ಚಿತ್ರವನ್ನು ನಿರ್ಮಿಸಿದ್ದಾರೆ.

ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು

0
ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಮಕ್ಕಳನ್ನು ದೈಹಿಕ ಹಾಗೂ ಮಾನಸಿಕವಾಗಿ ಸದೃಢಗೊಳಿಸಿ, ಅವರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಿಕ್ಷಕ ವೃತ್ತಿಗೆ ಸಮಾಜದಲ್ಲಿ ಅತ್ಯಂತ ಮಹತ್ವದ ಸ್ಥಾನವಿದೆ ಎಂದು ಕೊಟ್ಟೂರೇಶ್ವರ ಮಠದ ಡಾ. ಕೊಟ್ಟೂರೇಶ್ವರ ಮಹಾಸ್ವಾಮಿಗಳು ಹೇಳಿದರು.
ಲಕ್ಕುಂಡಿ ಸಮೀಪದ ಹರ್ಲಾಪೂರ ಕೊಟ್ಟೂರೇಶ್ವರ ಮಠದಲ್ಲಿ ನಡೆದ ೩೨೦ನೇ ಶಿವಾನುಭವ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ತುಂಬುವ ಮಹತ್ವದ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಸಾರ್ಥಕತೆ ಕಂಡುಕೊಂಡ ಶಿಕ್ಷಕರನ್ನು ಶಿವಾನುಭವ ಕಾರ್ಯಕ್ರಮದಲ್ಲಿ ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂಗತಿ. ಪಾಲಕರು ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.
ಸನ್ಮಾನ ಸ್ವೀಕರಿಸಿದ ಕೂಟುಮುಚಗಿ ಗ್ರಾಮದ ನಿವೃತ್ತ ಶಿಕ್ಷಕ ಜೆ.ಎ. ಪಾಟೀಲ ಮಾತನಾಡಿ, ಪವಿತ್ರವಾದ ಶಿಕ್ಷಕ ವೃತ್ತಿಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ ತೃಪ್ತಿ ಇದೆ. ತಮ್ಮ ಶಿಕ್ಷಣ ಸೇವೆಯನ್ನು ಗುರುತಿಸಿ ಮಠದಿಂದ ಸನ್ಮಾನಿಸಿ ಗೌರವಿಸಿರುವುದು ಸಂತಸ ತಂದಿದೆ. ಪ್ರತಿಯೊಂದು ಶಿವಾನುಭವ ಕಾರ್ಯಕ್ರಮದಲ್ಲೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.
ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಪಿ. ಹೂಗಾರ ಮಾತನಾಡಿ, ಶಿಕ್ಷಕ ವೃತ್ತಿಯ ಸಾರ್ಥಕತೆಗೆ ಮಠದ ಗುರುಗಳ ಆಶೀರ್ವಾದ ಹಾಗೂ ಮಾರ್ಗದರ್ಶನ ಪ್ರಮುಖವಾಗಿದೆ ಎಂದರು. ನಿವೃತ್ತ ಶಿಕ್ಷಕ ಟಿ. ಉದಯಕುಮಾರ ಹಾಗೂ ಜೀವನಸಾಬ ಹಿರೇಹಾಳ ಮಾತನಾಡಿದರು.
ಶಿಕ್ಷಕ ಕೆ.ಆರ್. ಕೋರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಬಿ. ವೀರಾಪೂರ ಹಾಗೂ ಮಂಜುನಾಥ ಅರ್ಕಸಾಲಿ ಸಂಗೀತ ಸೇವೆ ಸಲ್ಲಿಸಿದರು. ಮಹಾಲಿಂಗಪ್ಪ ಜಮಲಿಂಗಪ್ಪನವರ, ಶರಣಪ್ಪ ದೇಸಾಯಿ, ರಾಮಣ್ಣ ಬೆಳಧಡಿ, ವಿರುಪಾಕ್ಷಪ್ಪ ಹಡಪದ ಹಾಗೂ ದೇವೇಂದ್ರಪ್ಪ ಜಮಲಿಂಗಪ್ಪನವರ ವೇದಿಕೆಯಲ್ಲಿದ್ದರು. ವೆಂಕಟೇಶ ಜುಂಜಣಿ ನಿರೂಪಿಸಿ ವಂದಿಸಿದರು.

ಪರಿಸರ, ಗಿಡಮರ, ಪ್ರಾಣಿ–ಪಕ್ಷಿಗಳ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಲಿ: ತೋಂಟದ ಶ್ರೀ

0

ವಿಜಯಸಾಕ್ಷಿ ಸುದ್ದಿ, ಗದಗ: ಅನೇಕ ಮಹಾತ್ಮರ ತ್ಯಾಗ, ಬಲಿದಾನದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ೮೦ನೇ ಸ್ವಾತಂತ್ರ್ಯೋತ್ಸವವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸುತ್ತಿರುವ ಸಂದರ್ಭದಲ್ಲಿ ಪ್ರತಿಯೊಬ್ಬರಲ್ಲೂ ‘ನಮ್ಮ ದೇಶ, ನಾವೆಲ್ಲರೂ ಒಂದು’ ಎಂಬ ಭಾವನೆ ಬೆಳೆಯಬೇಕು ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.

ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯನ ದುರಾಸೆಯಿಂದ ಸುತ್ತಮುತ್ತಲಿನ ಪರಿಸರ, ಪ್ರಾಣಿ–ಪಕ್ಷಿಗಳು ಹಾಗೂ ನೈಸರ್ಗಿಕ ಸಂಪನ್ಮೂಲಗಳ ನಾಶ ಹೆಚ್ಚಾಗುತ್ತಿದೆ. ಗಿಡಮರ, ಪ್ರಾಣಿ–ಪಕ್ಷಿಗಳು ಮತ್ತು ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಅಣ್ಣಿಗೇರಿಯ ಶಿವಯೋಗಿ ಹುಬ್ಬಳ್ಳಿ ಹಾಗೂ ಶರಣಪ್ಪ ಸವಡಿ ಪಾಲ್ಗೊಂಡಿದ್ದರು. ಡಾ. ಜಿ.ಬಿ. ಪಾಟೀಲ, ಅಶೋಕ ಬರಗುಂಡಿ, ದಾನಯ್ಯ ಗಣಾಚಾರಿ, ಕರೆಗೌಡ್ರ, ವಿಜಯಕುಮಾರ ಮಾಲಗಿತ್ತಿ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಸ್ವಾಗತಿಸಿದರು. ಶ್ರೀಮತಿ ಹಾಸಿಲಕರ ಕಾರ್ಯಕ್ರಮ ನಿರೂಪಿಸಿದರು. ಗುರುಬಸವ ಸಿಬಿಎಸ್‌ಇ ಶಾಲೆಯ ವಿದ್ಯಾರ್ಥಿಗಳಿಂದ ರಾಷ್ಟ್ರಭಕ್ತಿ ಸಾರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಬಾಲಚಂದ್ರ ಭರಮಗೌಡರ, ವಿರೂಪಾಕ್ಷಪ್ಪ ಬೊಳ್ಳೊಳ್ಳಿ, ರಾಜಪ್ಪ ಮೆಣಜಿಗಿ, ಚನ್ನಯ್ಯ ಹಿರೇಮಠ, ವೀರಣ್ಣ ಗೋಟಡಕಿ, ಗಿರಿಜಕ್ಕ ಧರ್ಮರೆಡ್ಡಿ, ಪ್ರಕಾಶ್ ಅಶುಂಡಿ, ಸೋಮು ಪುರಾಣಿಕ ಸೇರಿದಂತೆ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.

“ನಮ್ಮ ದೇಶ, ನಾವೆಲ್ಲರೂ ಒಂದು ಎಂಬ ಭಾವ ಪ್ರತಿಯೊಬ್ಬರಲ್ಲೂ ಬೆಳೆಯಬೇಕು. ಪರಿಸರ, ಗಿಡಮರ ಹಾಗೂ ಪ್ರಾಣಿ–ಪಕ್ಷಿಗಳ ಸಂರಕ್ಷಣೆಯನ್ನು ನಮ್ಮೆಲ್ಲರ ಜವಾಬ್ದಾರಿಯನ್ನಾಗಿ ಮಾಡಿಕೊಳ್ಳಬೇಕು.”

— ತೋಂಟದಾರ್ಯ ಶ್ರೀಗಳು

ಗದಗದಲ್ಲಿ ಕೈಗಾರಿಕಾ ಪಾರ್ಕ್, ಟೆಕ್ಸಟೈಲ್ ಪಾರ್ಕ್ ಅನಿವಾರ್ಯ

0

ವಿಜಯಸಾಕ್ಷಿ ಸುದ್ದಿ, ಗದಗ: ಉತ್ತರ ಕರ್ನಾಟಕದ ಕೈಗಾರಿಕಾ ಜಡತ್ವಕ್ಕೆ ಸರ್ಕಾರವನ್ನು ದೂರುತ್ತಾ ಕೂರುವುದರಿಂದ ಪ್ರಯೋಜನವಿಲ್ಲ. ಸ್ಥಳೀಯ ನಾಯಕತ್ವ ಮತ್ತು ವಾಣಿಜ್ಯೋದ್ಯಮಿಗಳು ದೂರದೃಷ್ಟಿಯಿಂದ ಪ್ರಸ್ತಾವನೆ ಸಿದ್ಧಪಡಿಸಿ, ಸರ್ಕಾರದ ಬೆನ್ನತ್ತಿದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ-ಗದಗ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಆಯೋಜಿಸಿರುವ ‘ಗದಗ ಉತ್ಸವ’ ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ತೆರಳುವ ಮುನ್ನ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಗದಗದ ವಾಣಿಜ್ಯೋದ್ಯಮ ಬೆಳೆಯಬೇಕಾದಷ್ಟು ಬೆಳೆದಿಲ್ಲ. ಹಲವು ವರ್ಷಗಳಿಂದ ಚೇಂಬರ್‌ನ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ಸಿಗದ ಕಾರಣ ಸಮಸ್ಯೆಗಳು ಗುಡ್ಡೆಯಾಗಿ ಉಳಿದಿವೆ. ಗದಗ-ರಾಯಚೂರು ಭಾಗದಲ್ಲಿ ಹತ್ತಿ ಬೆಳೆಯುತ್ತಿದ್ದರೂ ಅದನ್ನು ಕೊಯಮತ್ತೂರಿಗೆ ಕಳುಹಿಸುವ ಪರಿಸ್ಥಿತಿ ಇದೆ. ರಾಯಚೂರಿನಲ್ಲಿ ಲಾಂಗ್ ಸ್ಟೇಪಲ್ ಹತ್ತಿ ಲಭ್ಯವಿದ್ದರೂ ಮಿಲ್‌ಗಳು ಉಳಿಯಲಿಲ್ಲ. ತಂತ್ರಜ್ಞಾನ ಬದಲಾವಣೆಗೆ ಹೊಂದಿಕೊಳ್ಳದಿರುವುದು ಹಾಗೂ ಆರ್ಥಿಕ ವ್ಯವಸ್ಥೆಯ ಕೊರತೆ ಇದಕ್ಕೆ ಕಾರಣ ಎಂದು ಹೇಳಿದರು.

ವೈಯಕ್ತಿಕ ಪ್ರಯತ್ನದಿಂದ ಕೈಗಾರಿಕೀಕರಣ ಸಾಧ್ಯವಿಲ್ಲ. ಸರ್ಕಾರ ಕೈಗಾರಿಕಾ ಪಾರ್ಕ್‌ಗೆ ಜಾಗ ಮೀಸಲಿಟ್ಟು ರಿಯಾಯಿತಿ ನೀಡಬೇಕು. ಪಾರ್ಕ್‌ನಲ್ಲಿ ಒಂದು ಅಥವಾ ಎರಡು ದೊಡ್ಡ ಆಂಕರ್ ಕೈಗಾರಿಕೆಗಳು ಬಂದರೆ, ಅವುಗಳ ಸುತ್ತ ಸಣ್ಣ ಮತ್ತು ಸ್ವತಂತ್ರ ಕೈಗಾರಿಕೆಗಳು, ಸಾರಿಗೆ, ಲಾಜಿಸ್ಟಿಕ್ಸ್, ವಸತಿ ಹಾಗೂ ಸ್ಥಳೀಯ ವ್ಯಾಪಾರ-ವಹಿವಾಟು ಸೇರಿದಂತೆ ಇಡೀ ಕೈಗಾರಿಕಾ ವ್ಯವಸ್ಥೆ ಬೆಳೆಯಲಿದೆ ಎಂದರು.

ಗದಗ ಮತ್ತು ಹಾವೇರಿ ಜಿಲ್ಲೆಗಳ ಅಭಿವೃದ್ಧಿಗೆ ಎರಡು ಮಹತ್ವದ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವುದಾಗಿ ತಿಳಿಸಿದ ಅವರು, ಹಾವೇರಿ ಜಿಲ್ಲೆಯಲ್ಲಿ ಟೆಕ್ಸಟೈಲ್ ಪಾರ್ಕ್ ಹಾಗೂ ನೇಕಾರರಿಗೆ ನೆರವು ಒಳಗೊಂಡ ಹ್ಯಾಂಡ್ಲೂಮ್ ಯೋಜನೆ ರೂಪಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ಗದಗದಲ್ಲೂ ಬೃಹತ್ ಟೆಕ್ಸಟೈಲ್ ಪಾರ್ಕ್ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು.

ಈ ಸಂಬಂಧ ಗದಗ ಜಿಲ್ಲಾಧಿಕಾರಿಗಳಿಗೆ ೫೦ರಿಂದ ೧೦೦ ಎಕರೆ ಜಮೀನು ಗುರುತಿಸಲು ಸೂಚಿಸಲಾಗಿದೆ. ಜಾಗ ದೊರೆತರೆ ೫ರಿಂದ ೧೦ ಸಾವಿರ ಜನರಿಗೆ ನೇರ ಉದ್ಯೋಗ ಕಲ್ಪಿಸುವ ಪಾರ್ಕ್ ನಿರ್ಮಿಸಲು ಸಾಧ್ಯವಾಗಲಿದೆ. ರಾಜ್ಯ ಸರ್ಕಾರ ಶೀಘ್ರ ಜಾಗ ಮಂಜೂರು ಮಾಡಿದರೆ, ಡಿಸೆಂಬರ್ ಒಳಗೆ ಕೇಂದ್ರದ ಮಂಜೂರಾತಿ ಪಡೆಯುವುದು ತಮ್ಮ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು.

ಗದಗ ಭಾಗದಲ್ಲಿ ಕಾಳು-ಕಡಿ ಬೆಳೆ ಹೆಚ್ಚಿರುವ ಹಿನ್ನೆಲೆಯಲ್ಲಿ ಫುಡ್ ಪ್ರೊಸೆಸಿಂಗ್ ಪಾರ್ಕ್‌ಗೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಟೆಕ್ಸಟೈಲ್ ಪಾರ್ಕ್ ಪ್ರಸ್ತಾವನೆ ಮುಂದುವರಿದಿದ್ದು, ಫುಡ್ ಪ್ರೊಸೆಸಿಂಗ್ ಪಾರ್ಕ್ ಪ್ರಕ್ರಿಯೆ ನಿಧಾನವಾಗಿದೆ. ಎರಡೂ ಯೋಜನೆಗಳನ್ನು ಗಂಭೀರವಾಗಿ ಮುಂದುವರಿಸುವುದಾಗಿ ತಿಳಿಸಿದರು.

ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಅವರು ವ್ಯಾಪಾರಸ್ಥರ ಸಮಸ್ಯೆಗಳು ಹಾಗೂ ಚೇಂಬರ್‌ನ ಬೇಡಿಕೆಗಳನ್ನು ಸಂಸದರಿಗೆ ಸಲ್ಲಿಸಿದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಬೊಮ್ಮಾಯಿ, ಚೇಂಬರ್‌ಗೆ ಶಾಶ್ವತ ಎಕ್ಸಿಬಿಷನ್ ಸೆಂಟರ್ ನಿರ್ಮಿಸಲು ಎರಡು ಎಕರೆ ಜಮೀನು ಕೊಡಿಸುವುದಾಗಿ ಭರವಸೆ ನೀಡಿದರು. ಜಾಗ ಹುಡುಕುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.

ಎಕ್ಸಿಬಿಷನ್ ಸೆಂಟರ್‌ನಲ್ಲಿ ವರ್ಷಕ್ಕೆ ಎರಡು-ಮೂರು ಬಾರಿ ಟೆಕ್ಸಟೈಲ್, ಹ್ಯಾಂಡ್ಲೂಮ್, ಫರ್ನಿಚರ್ ಸೇರಿದಂತೆ ವಿವಿಧ ವಲಯಗಳ ವಸ್ತು ಪ್ರದರ್ಶನ ಆಯೋಜಿಸಿದರೆ ಸ್ಥಳೀಯ ಉದ್ಯಮಗಳ ಬೆಳವಣಿಗೆಗೆ ನೆರವಾಗಲಿದೆ ಎಂದರು.

ಈ ಎಲ್ಲ ಯೋಜನೆಗಳ ಕುರಿತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಮುಖ್ಯಮಂತ್ರಿ ಹಾಗೂ ಸ್ಥಳೀಯ ನಾಯಕ ಎಚ್.ಕೆ. ಪಾಟೀಲ ಅವರೊಂದಿಗೆ ಚರ್ಚಿಸಿ, ಎಲ್ಲರ ವಿಶ್ವಾಸದೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳೋಣ. ಇದಕ್ಕೆ ವಾಣಿಜ್ಯೋದ್ಯಮಿಗಳ ಸಹಕಾರ ಹಾಗೂ ರಾಜ್ಯ ಸರ್ಕಾರದ ಬೆಂಬಲ ಅತ್ಯಗತ್ಯ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಮಧುಸೂಧನ ಪುಣೇಕರ, ಚೇಂಬರ್ ಕಾರ್ಯದರ್ಶಿ ಚನ್ನವೀರಪ್ಪ ಹುಣಶೀಕಟ್ಟಿ ಸೇರಿದಂತೆ ಮಾಜಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

“ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಹೇಳುತ್ತಾ ಕೂರುವ ಬದಲು, ‘ನಮಗೆ ಇದನ್ನು ಮಾಡಿಕೊಡಿ, ನಾವು ಇದನ್ನು ಮಾಡುತ್ತೇವೆ’ ಎಂಬ ಪ್ರಸ್ತಾವನೆ ತೆಗೆದುಕೊಂಡು ಸರ್ಕಾರದ ಮುಂದೆ ಹೋಗಬೇಕು.”

— ಬಸವರಾಜ ಬೊಮ್ಮಾಯಿ, ಸಂಸದ

ಒಳ ಮೀಸಲಾತಿಯಿಂದ ಬಂಜಾರ ಯುವಕರಿಗೆ ಅನ್ಯಾಯ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಒಳ ಮೀಸಲಾತಿ ವ್ಯವಸ್ಥೆಯಲ್ಲಿನ ರೋಸ್ಟರ್ ಬಿಂದುವಿನಿಂದ ಬಂಜಾರ ಸಮುದಾಯದ ಯುವಕರಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ತಾಲೂಕಿನ ಮಜ್ಜೂರ ತಾಂಡಾದ ಯುವಕರು ಆ. 15ರಂದು ಮನವಿ ಸಲ್ಲಿಸಿದರು.

ಒಳ ಮೀಸಲಾತಿ ವ್ಯವಸ್ಥೆಯಲ್ಲಿ ಬಂಜಾರ ಸಮುದಾಯದ ಯುವಕರಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಿ, ಅನ್ಯಾಯ ಸರಿಪಡಿಸಬೇಕು. ವಿಶೇಷವಾಗಿ ರೋಸ್ಟರ್ ಬಿಂದುವಿನಿಂದ ಉದ್ಯೋಗ ಹಾಗೂ ಶೈಕ್ಷಣಿಕ ಅವಕಾಶಗಳಲ್ಲಿ ಸಮುದಾಯಕ್ಕೆ ಆಗುತ್ತಿರುವ ತೊಂದರೆ ನಿವಾರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಮನವಿ ಸ್ವೀಕರಿಸಿ ಮಾತನಾಡಿದ ವಕೀಲರು ಹಾಗೂ ಗೋರಸೇನಾ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ, ತಾಂಡಾದ ಯುವಕರು ಸಲ್ಲಿಸಿರುವ ಮನವಿಯಲ್ಲಿನ ಅಂಶಗಳು ಗಂಭೀರವಾಗಿದ್ದು, ಬಂಜಾರ ಸಮುದಾಯದ ವಾಸ್ತವ ಸಮಸ್ಯೆಯನ್ನು ಪ್ರತಿಬಿಂಬಿಸುತ್ತವೆ ಎಂದರು.

ಶಿರಹಟ್ಟಿ ತಾಲೂಕಿನ ತಾಂಡಾ ಯುವಕರು ಸಲ್ಲಿಸಿರುವ ಮನವಿಯ ಅಂಶಗಳು ರಾಜ್ಯದಾದ್ಯಂತ ಇರುವ ಬಂಜಾರ ಸಮುದಾಯದ ಸಮಸ್ಯೆಯ ಪ್ರತಿಬಿಂಬವಾಗಿವೆ. ತಾಂಡಾ ತಾಂಡಾಗಳಿಗೆ ತೆರಳಿ ಜನಜಾಗೃತಿ ಮೂಡಿಸುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಅವರು ತಿಳಿಸಿದರು.

ಬಂಜಾರ ಸಮುದಾಯದ ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಸಮಾನ ಅವಕಾಶ ದೊರೆಯುವಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ರೋಸ್ಟರ್ ಬಿಂದುವಿನಿಂದ ಉಂಟಾಗುತ್ತಿರುವ ಸಮಸ್ಯೆಯನ್ನು ಪರಿಶೀಲಿಸಿ, ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ಶೀಘ್ರ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಜ್ಜೂರ ತಾಂಡಾದ ಯುವಕರು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

“ಒಳ ಮೀಸಲಾತಿಯಲ್ಲಿನ ರೋಸ್ಟರ್ ಬಿಂದುವಿನ ಪರಿಣಾಮವಾಗಿ ಉದ್ಯೋಗ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಂಜಾರ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂಬುದು ಯುವಕರ ಆತಂಕವಾಗಿದೆ. ‘ರೋಸ್ಟರ್ ಬಿಂದು ಹಠಾವೋ, ಒಳ ಮೀಸಲಾತಿ ಬಚಾವೋ’ ಎಂಬ ಘೋಷಣೆಯೊಂದಿಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು.”

— ರವಿಕಾಂತ ಅಂಗಡಿ, ಗೋರಸೇನಾ ರಾಜ್ಯಾಧ್ಯಕ್ಷ

ಕಸಿ ಪಡೆದವರ ‘ಎರಡನೇ ಇನ್ನಿಂಗ್ಸ್’

0

ವಿಜಯಸಾಕ್ಷಿ ಸುದ್ದಿ, ಗದಗ: ಅಂಗಾಂಗ ದಾನಿಗಳು ಹಾಗೂ ಅಂಗಾಂಗ ಸ್ವೀಕರಿಸಿದವರು ಎಲ್ಲರಂತೆ ಸಾಮಾನ್ಯ ಮತ್ತು ಸಕ್ರಿಯ ಜೀವನ ನಡೆಸಬಹುದು ಎಂಬ ಆತ್ಮವಿಶ್ವಾಸ ಮೂಡಿಸುವಲ್ಲಿ ಇಂತಹ ಕ್ರೀಡಾಕೂಟಗಳು ಅತ್ಯಂತ ಅವಶ್ಯಕ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.

ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಸಂಕಲ್ಪ ಕಿಡ್ನಿಕೇರ್ ಫೌಂಡೇಶನ್ ಹಾಗೂ ಕೆ.ಎಚ್. ಪಾಟೀಲ ಕಿಡ್ನಿ ಕೇರ್ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯದಲ್ಲೇ ಮೊದಲ ‘ಗದಗ ಟ್ರಾನ್ಸ್‌ಪ್ಲಾಂಟ್ ಗೇಮ್ಸ್-2026’ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಗದಗ ಚಿಕ್ಕ ಜಿಲ್ಲೆಯಾದರೂ ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸುವಲ್ಲಿ ದೊಡ್ಡ ಸಾಧನೆ ಮಾಡಿದೆ. ಜಿಲ್ಲೆಯಲ್ಲಿ ಇದುವರೆಗೆ 6,281 ಜನರು ಅಂಗಾಂಗ ದಾನಕ್ಕೆ ನೋಂದಣಿ ಮಾಡಿಕೊಂಡಿದ್ದು, ಒಟ್ಟಾರೆ ನೋಂದಣಿಯಲ್ಲಿ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ. ಆದರೆ ಜನಸಂಖ್ಯೆಗೆ ಹೋಲಿಸಿದರೆ ಗದಗ ಇಡೀ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಎಚ್.ಕೆ. ಪಾಟೀಲ ಹೆಮ್ಮೆ ವ್ಯಕ್ತಪಡಿಸಿದರು.

ಅಂಗಾಂಗ ದಾನಿಗಳು ಮತ್ತು ಸ್ವೀಕರಿಸಿದವರು ಸಮಾಜದ ಎಲ್ಲರಂತೆ ಸಾಮಾನ್ಯ ಹಾಗೂ ಸಕ್ರಿಯ ಜೀವನ ನಡೆಸಬಹುದು ಎಂಬ ವಿಶ್ವಾಸ ಮೂಡಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಟ್ರಾನ್ಸ್‌ಪ್ಲಾಂಟ್ ಗೇಮ್ಸ್‌ನಂತಹ ಕ್ರೀಡಾಕೂಟಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು.

ಹುಲಕೋಟಿಯ ಆರ್‌ಎಂಎಸ್ ಆಶ್ರಯದಲ್ಲಿ 12 ಉಚಿತ ಕಿಡ್ನಿ ಕಸಿ ಹಾಗೂ 100 ಉಚಿತ ಮೊಣಕಾಲು ಶಸ್ತ್ರಚಿಕಿತ್ಸೆ ನಡೆಸುವ ಸಂಕಲ್ಪ ಮಾಡಲಾಗಿದೆ. ಬರುವ ಮಾರ್ಚ್ 16ರೊಳಗೆ ಎಲ್ಲ ಉಚಿತ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸುವ ಗುರಿಯಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಅವಿನಾಶ ಓದುಗೌಡರ, ಟ್ರಾನ್ಸ್‌ಪ್ಲಾಂಟ್ ಗೇಮ್ಸ್ ಕೇವಲ ಕ್ರೀಡಾಕೂಟವಲ್ಲ, ಕಸಿ ಪಡೆದವರ ಎರಡನೇ ಬದುಕಿನ ಶುಭಾರಂಭ ಎಂದರು.

ಪ್ರತಿಯೊಂದು ಕಿಡ್ನಿ ಕಸಿಯೂ ರೋಗಿಗೆ ಹೊಸ ಜೀವನ ನೀಡುತ್ತದೆ. ಒಬ್ಬ ವ್ಯಕ್ತಿಯ ಅಂಗಾಂಗ ದಾನವು ಎಂಟು ಜನರ ಹೊಸ ಬದುಕಿಗೆ ಮುನ್ನುಡಿ ಬರೆಯಬಲ್ಲದು. 2024ರವರೆಗೆ ಗದಗದಲ್ಲಿ ಅಂಗಾಂಗ ದಾನದ ಕುರಿತು ಮಾತುಕತೆಗಳೇ ಇರಲಿಲ್ಲ. ಇಂದು ಗದಗ ಅಂಗಾಂಗ ದಾನದಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ಡಾ. ಅರುಣಕುಮಾರ್ ಮಾತನಾಡಿ, ಕಳೆದ ವರ್ಷ ರಾಜ್ಯದಲ್ಲಿ ಮೆದುಳು ನಿಷ್ಕ್ರಿಯಗೊಂಡ 198 ಜನರಿಂದ 500ಕ್ಕೂ ಹೆಚ್ಚು ರೋಗಿಗಳಿಗೆ ವಿವಿಧ ಅಂಗಾಂಗಗಳನ್ನು ದಾನ ಮಾಡಲಾಗಿದೆ. ರಾಜ್ಯದಲ್ಲಿ 95 ಅಂಗಾಂಗ ಕಸಿ ಕೇಂದ್ರಗಳಿದ್ದು, ಗ್ರಾಮೀಣ ಭಾಗದಲ್ಲಿ ಕಿಡ್ನಿ ಕಸಿ ಮಾಡುತ್ತಿರುವ ಏಕೈಕ ಆಸ್ಪತ್ರೆ ಕೆ.ಎಚ್. ಪಾಟೀಲ ಆಸ್ಪತ್ರೆಯಾಗಿದೆ. ಅಂಗಾಂಗ ದಾನಿಗಳಲ್ಲಿ ಶೇ.75ರಷ್ಟು ಮಹಿಳೆಯರಿದ್ದಾರೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಡಾ. ನಾಗನೂರ, ಡಾ. ಆನಂದ ಪೋತ್ನೀಸ್, ಡಾ. ಪ್ಯಾರ್ ಅಲಿ ನೂರಾನಿ, ಡಾ. ಅಜಯ ಶರ್ಮಾ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ, ಪ್ರಭು ಬುರಬುರೆ, ಅಶೋಕ ಮಂದಾಲಿ, ಡಾ. ಶರಣ್ ಆಲೂರ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

55 ಸ್ಪರ್ಧಿಗಳ ಕ್ರೀಡಾಸ್ಫೂರ್ತಿ

ಅಂಗಾಂಗ ದಾನಿಗಳು ಹಾಗೂ ಸ್ವೀಕರಿಸಿದವರು ಸೇರಿದಂತೆ 55 ಸ್ಪರ್ಧಿಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು.

ನಾಗಪ್ಪನಿಗೆ ಹಾಲೆರೆದು… ಮನೆಯವರ ‘ಪಾಲು’ ನೆನೆದ ನಾರಿಯರು!

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಾಗರ ಪಂಚಮಿ ಅಂದ್ರೆ ಹಳ್ಳಿ ಹೆಣ್ಮಕ್ಕಳಿಗೆ ಬರೀ ಹಬ್ಬ ಅಲ್ಲ… ಅದು ತವರುಮನೆಯ ನೆನಪು, ಕುಟುಂಬದ ಮೇಲಿನ ಕಾಳಜಿ, ಹಿರಿಯರ ಸ್ಮರಣೆ ಹಾಗೂ ತಲೆತಲಾಂತರದಿಂದ ಬಂದಿರುವ ಗ್ರಾಮೀಣ ಸಂಪ್ರದಾಯಗಳ ಸಮ್ಮಿಲನ. ಜಕ್ಕಲಿ ಗ್ರಾಮದಲ್ಲಿ ರವಿವಾರ ನಡೆದ ನಾಗರ ಪಂಚಮಿ ಆಚರಣೆಯಲ್ಲೂ ಈ ಹಳ್ಳಿ ಸೊಗಡು ಮನಮೋಹಕವಾಗಿ ಅನಾವರಣಗೊಂಡಿತು.

ಬೆಳಿಗ್ಗೆಯಿಂದಲೇ ಗ್ರಾಮದ ಬಾಕಿಷ್ಠಪ್ಪ ಭಾವಿ ಮೇಲಿರುವ ನಾಗಮೂರ್ತಿ ಹಾಗೂ ಶ್ರೀ ಕಲ್ಲೇಶ್ವರ ದೇವಸ್ಥಾನದ ಮುಂದಿನ ನಾಗಮೂರ್ತಿಗಳ ಬಳಿ ಭಕ್ತರ ದಂಡೇ ಸೇರಿತ್ತು. ಬಣ್ಣಬಣ್ಣದ ಸೀರೆ ತೊಟ್ಟು, ತಲೆಯ ಮೇಲೆ ಹೂವು ಮುಡಿದು, ಕೈಯಲ್ಲಿ ಪೂಜಾ ಸಾಮಗ್ರಿ ಹಿಡಿದು ಬಂದ ಮಹಿಳೆಯರು ನಾಗಮೂರ್ತಿಗೆ ಹಾಲೆರೆದು, ಹೂವು, ಬೆಲ್ಲ, ಕೊಬ್ಬರಿ ಅರ್ಪಿಸಿ ಭಕ್ತಿಯಿಂದ ಪೂಜೆ ಸಲ್ಲಿಸಿದರು.

ಮಳೆ ಚೆನ್ನಾಗಿ ಸುರಿದು, ಹೊಲಗಳಲ್ಲಿ ಬೆಳೆ ಸಮೃದ್ಧಿಯಾಗಲಿ, ಕುಟುಂಬದ ಸದಸ್ಯರಿಗೆ ಆರೋಗ್ಯ–ನೆಮ್ಮದಿ ದೊರೆಯಲಿ ಎಂದು ನಾಗದೇವರಲ್ಲಿ ಪ್ರಾರ್ಥಿಸಿದರು.

‘ಅಪ್ಪನ ಪಾಲು… ಅಮ್ಮನ ಪಾಲು…’—ಮನೆಯವರನ್ನೆಲ್ಲ ನೆನೆದರು

ಜಕ್ಕಲಿಯ ನಾಗರ ಪಂಚಮಿ ಆಚರಣೆಯ ವಿಶೇಷವೆಂದರೆ ‘ಹಾಲು ಹಾಕುವ’ ವಿಶಿಷ್ಟ ಸಂಪ್ರದಾಯ. ಮನೆಯಿಂದ ತಂದ ಕೊಬ್ಬರಿ ಬಟ್ಟಲಿನಲ್ಲಿ ಬೆಲ್ಲದಚ್ಚು ಹಾಗೂ ಹಾಲು ಹಾಕಿಕೊಂಡು ನಾಗಪ್ಪನಿಗೆ ಅರ್ಪಿಸುವ ವೇಳೆ ಕುಟುಂಬದ ಪ್ರತಿಯೊಬ್ಬರನ್ನೂ ಹೆಸರಿಟ್ಟು ಸ್ಮರಿಸಲಾಯಿತು.

‘ದೇವರ ಪಾಲು, ದಿಂಡರ ಪಾಲು, ಗುರು–ಹಿರಿಯರ ಪಾಲು, ಅಪ್ಪನ ಪಾಲು, ಅಮ್ಮನ ಪಾಲು, ಅಣ್ಣನ ಪಾಲು, ತಮ್ಮನ ಪಾಲು, ಅಕ್ಕನ ಪಾಲು, ತಂಗಿಯ ಪಾಲು, ಮಾವನ ಪಾಲು, ಅಳಿಯನ ಪಾಲು, ಅತ್ತೆಯ ಪಾಲು, ಸೊಸೆಯ ಪಾಲು…’ ಎಂದು ಹೇಳುತ್ತಾ ಹಾಲಿನ ಪಾಲು ಅರ್ಪಿಸಿದರು.

ಒಬ್ಬೊಬ್ಬರ ಹೆಸರು ಹೇಳುತ್ತಾ ಹಾಲು ಅರ್ಪಿಸುವಾಗ, ‘ನಮ್ಮ ಮನಿ ಮಂದಿ ಎಲ್ಲರೂ ಚೆನ್ನಾಗಿರಲಿ’ ಎಂಬ ಕಾಳಜಿ ಮಹಿಳೆಯರ ಮೊಗದಲ್ಲಿ ಎದ್ದು ಕಾಣುತ್ತಿತ್ತು. ಹೀಗಾಗಿ ನಾಗರ ಪಂಚಮಿ ಇಲ್ಲಿ ಕೇವಲ ನಾಗಪೂಜೆಯಾಗದೆ, ಕುಟುಂಬದ ಎಲ್ಲರನ್ನೂ ಒಂದೇ ಮನಸ್ಸಿನಿಂದ ನೆನೆಯುವ ಭಾವನಾತ್ಮಕ ಆಚರಣೆಯಾಗಿ ಕಂಡುಬಂತು.

ಅಣ್ಣ–ತಮ್ಮಂದಿರ ಒಳಿತಿಗಾಗಿ ಉಪವಾಸ

ಕೆಲವು ಮಹಿಳೆಯರು ಅಣ್ಣ–ತಮ್ಮಂದಿರ ಆಯುಷ್ಯ, ಆರೋಗ್ಯ ಮತ್ತು ಒಳಿತಿಗಾಗಿ ಉಪವಾಸ ಆಚರಿಸಿದರು. ನಾಗಪ್ಪನಿಗೆ ಪೂಜೆ ಸಲ್ಲಿಸಿ ಸಹೋದರರ ಕ್ಷೇಮಕ್ಕಾಗಿ ಪ್ರಾರ್ಥಿಸಿದರು. ಹೀಗೆ ಅಣ್ಣ–ತಂಗಿ, ಅಕ್ಕ–ತಮ್ಮನ ಬಾಂಧವ್ಯವನ್ನು ಗಟ್ಟಿಗೊಳಿಸುವ ಸಂಪ್ರದಾಯವೂ ಹಬ್ಬದಲ್ಲಿ ಜೀವಂತವಾಗಿತ್ತು.

ನಾಗರ ಪಂಚಮಿಯ ಅಂಗವಾಗಿ ಮನೆಗಳಲ್ಲೂ ಹಬ್ಬದ ವಾತಾವರಣ ಮನೆಮಾಡಿತ್ತು. ಕುಚ್ಚುಕಡುಬು, ಅಳಿಟ್ಟು, ನೆನೆಸಿದ ಕಡಲೆಕಾಳು, ತೆಂಗಿನಕಾಯಿ ಸೇರಿದಂತೆ ವಿವಿಧ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು.

ಪೂಜೆ ಮುಗಿಸಿ ಮನೆಗೆ ಮರಳಿದ ಬಳಿಕ ಕುಟುಂಬದ ಸದಸ್ಯರೆಲ್ಲ ಒಟ್ಟಿಗೆ ಕುಳಿತು ಅಳಿಟ್ಟು ಉಂಡೆ, ಕಡ್ಲಿ ಉಂಡೆ, ಗುಳಿಗೆ ಉಂಡೆ, ಶೇಂಗಾ ಉಂಡೆ, ಎಳ್ಳುಂಡೆ ಸೇರಿದಂತೆ ವಿವಿಧ ಸಾಂಪ್ರದಾಯಿಕ ತಿಂಡಿಗಳನ್ನು ಸವಿದರು.

ಜೋಕಾಲಿಯಲ್ಲಿ ಜೀಕಿದ ಮಕ್ಕಳು; ಬೊಲ್‌ಬುಗುರಿಯಲ್ಲಿ ಸಂಭ್ರಮ

ಸಂಜೆಯಾಗುತ್ತಿದ್ದಂತೆ ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚಾಯಿತು. ಕೆಲವರು ಹಂಗನೂಲು ಕಟ್ಟಿಕೊಂಡರೆ, ಮಹಿಳೆಯರು ಮತ್ತು ಮಕ್ಕಳು ಜೋಕಾಲಿಯತ್ತ ಹೆಜ್ಜೆ ಹಾಕಿದರು. ಬೇವಿನ ಮರಕ್ಕೆ ಕಟ್ಟಿದ್ದ ಜೋಕಾಲಿಯಲ್ಲಿ ಹದಿಹರೆಯದವರು ಜೀಕಿ ಸಂಭ್ರಮಿಸಿದರು.

ಮನೆಗಳಲ್ಲಿ ಕಟ್ಟಿದ್ದ ಜೋಕಾಲಿಯಲ್ಲಿ ಪುಟ್ಟ ಮಕ್ಕಳು ಆಟವಾಡಿದರು. ಹಿರಿಯರು ಒಣ ಕೊಬ್ಬರಿ ಬಟ್ಟಲಿಗೆ ದಾರ ಕಟ್ಟಿ ನೀಡಿದ ಬಳಿಕ ಮಕ್ಕಳು ‘ಬೊಲ್‌ಬುಗುರಿ’ ಆಡುತ್ತಾ ಓಡಾಡಿದ್ದು ಹಬ್ಬದ ಸಡಗರಕ್ಕೆ ಮತ್ತಷ್ಟು ಮೆರುಗು ನೀಡಿತು.

ಹಳ್ಳಿ ಬದುಕಿನ ಜೀವಂತ ಕೊಂಡಿ

ಮೊಬೈಲ್, ಟಿವಿ ಹಾಗೂ ಆಧುನಿಕ ಜೀವನಶೈಲಿಯ ಪ್ರಭಾವದಿಂದ ಗ್ರಾಮೀಣ ಬದುಕಿನ ಹಲವು ಆಚರಣೆಗಳು ನಿಧಾನವಾಗಿ ಮರೆಯಾಗುತ್ತಿರುವ ಕಾಲದಲ್ಲೂ ಜಕ್ಕಲಿಯಲ್ಲಿ ನಾಗರ ಪಂಚಮಿಯನ್ನು ಸಾಂಪ್ರದಾಯಿಕ ಸೊಗಡಿನೊಂದಿಗೆ ಆಚರಿಸಿರುವುದು ಗಮನ ಸೆಳೆಯಿತು.

ನಾಗಪ್ಪನಿಗೆ ಹಾಲಿನ ಧಾರೆ ಅರ್ಪಿಸಿದ ಮಹಿಳೆಯರು, ಕುಟುಂಬದ ಪ್ರತಿಯೊಬ್ಬರ ಹೆಸರನ್ನೂ ನೆನೆದು ‘ಪಾಲು’ ಹಾಕಿದ ಸಂಪ್ರದಾಯ, ಸಹೋದರರಿಗಾಗಿ ಉಪವಾಸ, ಮನೆಯಲ್ಲಿ ಸಿದ್ಧವಾದ ಸಾಂಪ್ರದಾಯಿಕ ತಿಂಡಿಗಳು ಹಾಗೂ ಜೋಕಾಲಿಯಲ್ಲಿ ಜೀಕಿದ ಮಕ್ಕಳು—ಇವೆಲ್ಲವೂ ಸೇರಿ ಜಕ್ಕಲಿಯ ನಾಗರ ಪಂಚಮಿಯನ್ನು ಜೀವಂತ ಗ್ರಾಮೀಣ ಸಂಸ್ಕೃತಿಯ ಪ್ರತಿಬಿಂಬವಾಗಿಸಿತು.

ಹಿರಿಯರು ಆಚರಿಸುವುದನ್ನು ಕಣ್ಣಾರೆ ನೋಡುತ್ತಾ ಮಕ್ಕಳು ಸಂಪ್ರದಾಯಗಳನ್ನು ಕಲಿಯುತ್ತಿರುವುದರಿಂದ ತಲೆತಲಾಂತರದಿಂದ ಬಂದಿರುವ ಹಳ್ಳಿ ಸಂಸ್ಕೃತಿಯ ಕೊಂಡಿ ಇನ್ನೂ ಗಟ್ಟಿಯಾಗಿಯೇ ಉಳಿದಿದೆ.

ಹಳೆ ಆಸ್ಪತ್ರೆಗಳಲ್ಲಿ ಪೂರ್ಣ ಚಿಕಿತ್ಸೆ ದೊರಕಿಸಿ: ಸಂಸದ ಬಸವರಾಜ ಬೊಮ್ಮಾಯಿ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ನಗರದ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕರ ಚಿಕಿತ್ಸೆಗೆ ಬಳಸಬೇಕು ಹಾಗೂ ಹಳೆಯ ಜಿಲ್ಲಾ ಆಸ್ಪತ್ರೆಯಲ್ಲೂ ಕನಿಷ್ಠ ೫೦ರಿಂದ ೧೦೦ ಹಾಸಿಗೆಗಳ ಚಿಕಿತ್ಸಾ ವ್ಯವಸ್ಥೆ ಪುನರಾರಂಭಿಸಬೇಕು ಎಂದು ಗದಗ ಜಿಲ್ಲಾ ವಿಕಾಸ ವೇದಿಕೆ ವತಿಯಿಂದ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಗದಗ ನಗರಕ್ಕೆ ಆಗಮಿಸಿದ್ದ ಬಸವರಾಜ ಬೊಮ್ಮಾಯಿ ಅವರನ್ನು ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ನೇತೃತ್ವದ ನಿಯೋಗ ಭೇಟಿ ಮಾಡಿ, ನಗರದ ಎರಡು ಆಸ್ಪತ್ರೆಗಳನ್ನು ಸಮರ್ಪಕವಾಗಿ ಬಳಕೆ ಮಾಡುವ ಮೂಲಕ ಜನರಿಗೆ ಹೆಚ್ಚಿನ ಆರೋಗ್ಯ ಸೇವೆ ಒದಗಿಸುವಂತೆ ಮನವಿ ಮಾಡಿತು.

ಈ ವೇಳೆ ಮಾತನಾಡಿದ ಬಸವರಾಜ ಬೊಮ್ಮಾಯಿ, ನಗರದ ಎರಡೂ ಆಸ್ಪತ್ರೆಗಳಲ್ಲಿ ಜನರಿಗೆ ಪೂರ್ಣ ಪ್ರಮಾಣದ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಗಮನ ಹರಿಸುವುದಾಗಿ ಭರವಸೆ ನೀಡಿದರು. ಇದರಿಂದ ಗದಗ ನಗರ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.

ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾದ ಸಂದರ್ಭದಲ್ಲಿ ಅಗತ್ಯವಿರುವ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸುವ ವ್ಯವಸ್ಥೆ ಕಲ್ಪಿಸಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವೈದ್ಯಕೀಯ ಕಾಲೇಜು ಹಾಗೂ ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಎರಡೂ ಆಸ್ಪತ್ರೆಗಳಲ್ಲಿ ಸಮರ್ಪಕ ಚಿಕಿತ್ಸಾ ಸೌಲಭ್ಯ ಒದಗಿಸಬೇಕು ಎಂದು ವೇದಿಕೆ ಮನವಿ ಮಾಡಿತು.

ಅದೇ ರೀತಿ ಹಳೆಯ ಜಿಲ್ಲಾ ಆಸ್ಪತ್ರೆಯ ಒಳಾಂಗಣ ಮತ್ತು ಹೊರಾಂಗಣವನ್ನು ಸಂಪೂರ್ಣ ಸ್ವಚ್ಛಗೊಳಿಸಿ, ಕನಿಷ್ಠ ೫೦ರಿಂದ ೧೦೦ ಹಾಸಿಗೆಗಳ ಆಸ್ಪತ್ರೆಯಾಗಿ ಪುನರಾರಂಭಿಸುವ ಮೂಲಕ ಹಿರಿಯ ನಾಗರಿಕರು, ಬಿಪಿ, ಮಧುಮೇಹ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಅಗತ್ಯ ಚಿಕಿತ್ಸೆ ದೊರೆಯುವಂತೆ ಮಾಡಬೇಕು ಎಂದು ಒತ್ತಾಯಿಸಲಾಯಿತು.

ಈ ಕುರಿತು ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಹಾಗೂ ಜಿಲ್ಲಾ ಆಡಳಿತದೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ವೇದಿಕೆ ವತಿಯಿಂದ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ರಾಜು ಕುರಡಗಿ, ನಗರಸಭೆ ಸದಸ್ಯರಾದ ಅನಿಲ ಅಬ್ಬಿಗೇರಿ, ಚಂದ್ರು ತಡಸದ, ಕಿರಣ ಭೂಮಾ, ರಮೇಶ್ ಸಜ್ಜಗಾರ, ಪ್ರಶಾಂತ ನಾಯ್ಕರ, ಅಮರನಾಥ ಬೆಟಗೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

“ನಗರದ ಎರಡು ಆಸ್ಪತ್ರೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿದರೆ ಗದಗ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರಿಗೆ ಸ್ಥಳೀಯವಾಗಿಯೇ ಉತ್ತಮ ಚಿಕಿತ್ಸೆ ದೊರೆಯಲಿದೆ. ಈ ನಿಟ್ಟಿನಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಅವರು ಸ್ಪಂದಿಸಿರುವುದು ಸ್ವಾಗತಾರ್ಹ.”

ವಿಶ್ವನಾಥ ಖಾನಾಪೂರ, ಅಧ್ಯಕ್ಷರು, ಗದಗ ಜಿಲ್ಲಾ ವಿಕಾಸ ವೇದಿಕೆ

ಶಾಲಾ ಸಂಸತ್ತಿನ ಮೂಲಕ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಪಾಠ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ನಗರದ ಎಸ್‌ಟಿಪಿಎಂ ಬಿ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತನ್ನು ಉದ್ಘಾಟಿಸಿ, ಚುನಾಯಿತ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು.

ಶಾಲಾ ಮುಖ್ಯಸ್ಥೆ ಸ್ವಾತಿ ಉ. ಪೈ ಅವರು ಚುನಾಯಿತ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜೇಶ್ವರಿ ದಾನಪ್ಪನವರ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿಯೇ ಶಿಸ್ತು, ಸಂಯಮ ಹಾಗೂ ಆದರ್ಶ ಗುಣಗಳನ್ನು ಬೆಳೆಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಅಗತ್ಯ. ಶಾಲಾ ಸಂಸತ್ತಿನ ಮೂಲಕ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಅರಿವು ಮೂಡುತ್ತದೆ ಎಂದರು.

ಶಾಲಾ ಸಂಸತ್ತಿನ ಜನರಲ್ ಸೆಕ್ರೆಟರಿಯಾಗಿ ಚಿನ್ಮಯಿ ಕಳಸಾಪುರ, ವೈಸ್ ಜನರಲ್ ಸೆಕ್ರೆಟರಿಯಾಗಿ ವಿಜನ್ ಅಗಡಿ ಆಯ್ಕೆಯಾಗಿದ್ದಾರೆ.

ಸಾಂಸ್ಕೃತಿಕ ವಿಭಾಗ: ದೃತಿ ದೇಸಾಯಿ, ನಿಖಿಲ ಗೌಡ ಪಾಟೀಲ
ಪರೀಕ್ಷಾ ವಿಭಾಗ: ವಿಕಾಸ ಕೋಟೆಗೌಡರ, ನೇಸರ ಸಂಶಿ
ಕ್ರೀಡಾ ವಿಭಾಗ: ಅದಿಫತ್ ಫಾತಿಮಾ, ಶ್ರೀಧರ ಇಟಗಿ
ಆರೋಗ್ಯ ವಿಭಾಗ: ಶ್ರೇಯಸ ಮೆದಾರ, ಖುಷಿ ಹಡಪದ
ಪ್ರವಾಸ ವಿಭಾಗ: ಪ್ರಾರ್ಥನಾ ಪಾಟೀಲ, ಸಿದ್ದಾರ್ಥ ಗಡ್ಡದೇವರಮಠ
ಸಂಭ್ರಮ ಶನಿವಾರ ವಿಭಾಗ: ಆರಾಧ್ಯ ವೆರ್ಣೇಕರ, ಚಿನ್ಮಯ ಶಿರಹಟ್ಟಿ

ಕೋ-ಆರ್ಡಿನೇಟರ್ ಸಾರಾ ಹಾಗೂ ವಿನಾಯಕ ದೊಡ್ಡಮನಿ ಅವರು ಚುನಾಯಿತ ವಿದ್ಯಾರ್ಥಿಗಳಿಗೆ ಬ್ಯಾಡ್ಜ್ ಮತ್ತು ಕ್ಯಾಪ್ ವಿತರಿಸಿ ಶುಭ ಹಾರೈಸಿದರು. ಮಂಜುಳಾ ಪಾಟೀಲ ಅವರು ಚುನಾಯಿತ ವಿದ್ಯಾರ್ಥಿಗಳ ಹೆಸರುಗಳನ್ನು ಪ್ರಕಟಿಸಿದರು.

ಶಿಕ್ಷಕಿಯರಾದ ವಿಜಯಲಕ್ಷ್ಮಿ ದೇಸಾಯಿ, ಲೀಲಾ ಬೆಳಗಟ್ಟಿ, ಆಶಾ ಜಾದವ್ ಹಾಗೂ ಪವಿತ್ರಾ ಕಾರಬರಿ ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮವನ್ನು ಕೀರ್ತಿಶ್ರೀ ಪಾಟೀಲ ಹಾಗೂ ವಿಜಯಲಕ್ಷ್ಮಿ ಎಂ. ನಿರೂಪಿಸಿದರು. ಸಿಮ್ರಾನ್ ನಡುಗೀರ್ ಸ್ವಾಗತಿಸಿದರು. ವೀಣಾ ಜಮನೂರ್ ವಂದಿಸಿದರು.