Home Blog

ಮಂತ್ರಾಲಯದಲ್ಲಿ ಇಂದಿನಿಂದ ಗುರುರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ!

0

ರಾಯಚೂರು: ಮಂತ್ರಾಲಯದಲ್ಲಿ ಗುರುರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವಕ್ಕೆ ಇಂದಿನಿಂದ ಚಾಲನೆ ದೊರೆಯಲಿದೆ.

ಸಂಜೆ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಧ್ವಜಾರೋಹಣ ನೆರವೇರಿಸುವ ಮೂಲಕ ಸಪ್ತರಾತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಸಪ್ತರಾತ್ರೋತ್ಸವವು ಆ.27ರಿಂದ ಸೆ.2ರವರೆಗೆ ಏಳು ದಿನಗಳ ಕಾಲ ನಡೆಯಲಿದೆ. ಉತ್ಸವದ ಅಂಗವಾಗಿ ಗೋ, ಗಜ, ಅಶ್ವ, ಧಾನ್ಯ ಹಾಗೂ ಲಕ್ಷ್ಮಿ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಆ.29ರಂದು ಪೂರ್ವಾರಾಧನೆ, ಆ.30ರಂದು ಮಧ್ಯಾರಾಧನೆ ಹಾಗೂ ಆ.31ರಂದು ಉತ್ತರಾರಾಧನೆ ನಡೆಯಲಿದೆ. ಆರಾಧನಾ ಮಹೋತ್ಸವದ ಅಂಗವಾಗಿ ಮಠದ ಆವರಣದಲ್ಲಿರುವ ಪರಿಮಳ ತೀರ್ಥ ಪುಷ್ಕರಣಿಯಲ್ಲಿ ಮೂರು ದಿನಗಳ ಕಾಲ ತೆಪ್ಪೋತ್ಸವವೂ ಜರುಗಲಿದೆ.

ಆ.29ರಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ‘ರಾಘವೇಂದ್ರ ಗುರು ಅನುಗ್ರಹ ಪ್ರಶಸ್ತಿ’ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಆ.31ರಂದು ಅದ್ಧೂರಿಯಾಗಿ ಮಹಾರಥೋತ್ಸವ ನಡೆಯಲಿದ್ದು, ಈ ಸಂದರ್ಭದಲ್ಲಿ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಸುರಿಸಲಾಗುವುದು.

ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಮಂತ್ರಾಲಯಕ್ಕೆ ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಮಠದ ವತಿಯಿಂದ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ಚನ್ನಪಟ್ಟಣದ ಕಬ್ಬಿನ ತೋಟದಲ್ಲಿ 4 ಚಿರತೆ ಮರಿಗಳು ಪತ್ತೆ; ಗ್ರಾಮಸ್ಥರಲ್ಲಿ ಆತಂಕ!

0

ಚನ್ನಪಟ್ಟಣ: ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ನೇರಳೂರು ಗ್ರಾಮದ ಕಬ್ಬಿನ ತೋಟದಲ್ಲಿ ನಾಲ್ಕು ಜೀವಂತ ಚಿರತೆ ಮರಿಗಳು ಪತ್ತೆಯಾಗಿವೆ.

ಗ್ರಾಮದ ನಾಗೇಶ್ ಎಂಬುವವರಿಗೆ ಸೇರಿದ ಕಬ್ಬಿನ ತೋಟದಲ್ಲಿ ಕೂಲಿ ಕಾರ್ಮಿಕರು ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಚಿರತೆ ಮರಿಗಳು ಕಾಣಿಸಿಕೊಂಡಿವೆ. ಪತ್ತೆಯಾದ ನಾಲ್ಕೂ ಮರಿಗಳು ಕೇವಲ 4ರಿಂದ 5 ದಿನಗಳ ಹಿಂದೆ ಜನಿಸಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.

ಕಬ್ಬಿನ ದಟ್ಟವಾದ ಬೆಳೆಯನ್ನು ಸುರಕ್ಷಿತ ತಾಣವೆಂದು ಭಾವಿಸಿ ತಾಯಿ ಚಿರತೆ ಇಲ್ಲಿ ಮರಿಗಳಿಗೆ ಜನ್ಮ ನೀಡಿರಬಹುದು ಎಂದು ಶಂಕಿಸಲಾಗಿದೆ. ಮರಿಗಳು ಪತ್ತೆಯಾಗುತ್ತಿದ್ದಂತೆಯೇ ರೈತರು ಹಾಗೂ ಕಾರ್ಮಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಾಲ್ಕೂ ಚಿರತೆ ಮರಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ನಡುವೆ, ಮರಿಗಳನ್ನು ಹುಡುಕಿಕೊಂಡು ತಾಯಿ ಚಿರತೆ ಮತ್ತೆ ತೋಟ ಅಥವಾ ಗ್ರಾಮದತ್ತ ಬರುವ ಸಾಧ್ಯತೆ ಇರುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ. ತಾಯಿ ಚಿರತೆಯನ್ನು ಬೋನು ಇರಿಸಿ ಸೆರೆಹಿಡಿದು, ಗ್ರಾಮಸ್ಥರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ನೇಪಾಳ-ಟಿಬೆಟ್ ದುರಂತ..! ಕನ್ನಡಿಗರ ಮಾಹಿತಿ ಕಲೆಹಾಕುತ್ತಿದೆ ಕರ್ನಾಟಕ ಸರ್ಕಾರ!

0

ಬೆಂಗಳೂರು: ನೇಪಾಳ–ಟಿಬೆಟ್ ಗಡಿ ಭಾಗದಲ್ಲಿ ಉಂಟಾಗಿರುವ ಭೀಕರ ಪ್ರವಾಹ ಹಾಗೂ ಭೂಕುಸಿತದ ಹಿನ್ನೆಲೆಯಲ್ಲಿ, ಅಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆ ಹಾಗೂ ಅವರ ಮಾಹಿತಿ ಸಂಗ್ರಹಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದೆ.

ಪ್ರವಾಹದಿಂದ ರಸ್ತೆ ಸಂಪರ್ಕ ಹಾಗೂ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ಹಲವು ಭಾರತೀಯರು ನಾಪತ್ತೆಯಾಗಿರುವ ವರದಿಗಳು ಬಂದಿವೆ.

ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ರಕ್ಷಣಾ ಕಾರ್ಯಕ್ಕೆ ಸಜ್ಜಾಗಿದೆ.

ನೇಪಾಳ ಅಥವಾ ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ (TAR) ಸಿಲುಕಿರುವ ಕನ್ನಡಿಗರು ಹಾಗೂ ಅವರ ಕುಟುಂಬಸ್ಥರ ವಿವರಗಳನ್ನು ಸರ್ಕಾರ ಕಲೆಹಾಕುತ್ತಿದೆ. ತಮ್ಮ ಸಂಬಂಧಿಕರು, ಸ್ನೇಹಿತರು ಅಥವಾ ಪರಿಚಿತರು ನೇಪಾಳ ಅಥವಾ ಟಿಬೆಟ್ ಭಾಗದಲ್ಲಿ ಸಿಲುಕಿಕೊಂಡಿದ್ದರೆ, ಅವರ ವಿವರಗಳನ್ನು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಪ್ರಾಧಿಕಾರಕ್ಕೆ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

ಈ ಸಂಬಂಧ ಗೂಗಲ್ ಡಾಕ್ಸ್ ಮೂಲಕ ವಿವರಗಳನ್ನು ಸಲ್ಲಿಸುವಂತೆ ಮಾಹಿತಿ ಕೋರಲಾಗಿದೆ.

ಸದ್ಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳು ಮುಂದುವರಿದಿದ್ದು, ಸಿಲುಕಿರುವವರನ್ನು ಸುರಕ್ಷಿತವಾಗಿ ಕರೆತರಲು ಅಗತ್ಯ ನೆರವು ನೀಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.

ತರಕಾರಿ ಬೆಲೆ ಸೆಂಚುರಿ ಹೊಡೆಯುತ್ತಾ..? ಬೆಂಗಳೂರಲ್ಲಿ ಗ್ರಾಹಕರ ಜೇಬಿಗೆ ಬಿತ್ತು ಬೆಲೆ ಏರಿಕೆಯ ಬಿಸಿ!

ಬೆಂಗಳೂರು: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರಾಜ್ಯದಲ್ಲಿ ತರಕಾರಿ ಬೆಲೆಗಳು ನಿಧಾನವಾಗಿ ಏರಿಕೆಯಾಗುತ್ತಿವೆ.

30-40 ರೂ.ಗೆ ಸಿಗುತ್ತಿದ್ದ ಹಲವು ತರಕಾರಿಗಳ ದರ ಇದೀಗ 60-80 ರೂ.ಗೆ ತಲುಪಿದ್ದು, ಗ್ರಾಹಕರ ಜೇಬಿಗೆ ಹೊರೆ ಹೆಚ್ಚಾಗಿದೆ. ಬೆಲೆ ಏರಿಕೆಯಿಂದ ತರಕಾರಿ ಖರೀದಿ ಪ್ರಮಾಣವೂ ಕಡಿಮೆಯಾಗುತ್ತಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಹೋಲ್‌ಸೇಲ್ ಹಾಗೂ ರಿಟೇಲ್ ಮಾರುಕಟ್ಟೆಯಲ್ಲಿ ತರಕಾರಿಗಳ ದರ ಹೀಗಿದೆ:

  • ಶುಂಠಿ: ₹120–130
  • ಬೆಳ್ಳುಳ್ಳಿ: ₹230–250
  • ಬೀನ್ಸ್: ₹100–110
  • ಹಸಿಬಟಾಣಿ: ₹80–90
  • ಹಸಿಮೆಣಸಿನಕಾಯಿ: ₹80–90
  • ಈರುಳ್ಳಿ: ₹50–70
  • ನುಗ್ಗೆಕಾಯಿ: ₹90–100
  • ಟೊಮೇಟೊ: ₹25–30
  • ಕ್ಯಾರೆಟ್: ₹60–70
  • ಬೀಟ್‌ರೂಟ್: ₹60–70
  • ಕ್ಯಾಪ್ಸಿಕಂ: ₹70–80
  • ಹೀರೆಕಾಯಿ: ₹60–80
  • ಬೆಂಡೆಕಾಯಿ: ₹50–60
  • ಬದನೆಕಾಯಿ: ₹50–60
  • ಹಾಗಲಕಾಯಿ: ₹40–50
  • ಹೂಕೋಸು: ₹40–50
  • ಎಲೆಕೋಸು: ₹50–60
  • ಮೂಲಂಗಿ: ₹40–50

ಒಂದು ಕೆಜಿ ಬದಲು ಅರ್ಧ ಕೆಜಿ ಖರೀದಿ:

ತರಕಾರಿ ಬೆಲೆ ಹೆಚ್ಚಳದಿಂದ ಗ್ರಾಹಕರು ಒಂದು ಕೆಜಿ ಖರೀದಿಸುವ ಬದಲು ಅರ್ಧ ಕೆಜಿ ಅಥವಾ ಕಾಲು ಕೆಜಿಗೆ ಸೀಮಿತವಾಗುತ್ತಿದ್ದಾರೆ. ದಿನನಿತ್ಯದ ಅಡುಗೆಗೆ ತರಕಾರಿ ಅಗತ್ಯವಿದ್ದರೂ, ಬೆಲೆ ಹೆಚ್ಚಿರುವುದರಿಂದ ಖರೀದಿಸಲು ಕಷ್ಟವಾಗುತ್ತಿದೆ ಎಂದು ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ.

ಮನೆ ಸಮೀಪದ ತರಕಾರಿ ಅಂಗಡಿಗಳಿಗಿಂತ ಕೆ.ಆರ್. ಮಾರುಕಟ್ಟೆಯಲ್ಲಿ ಕೆಲವು ತರಕಾರಿಗಳು ಕಡಿಮೆ ಬೆಲೆಗೆ ಸಿಗುತ್ತಿವೆ. ಹೀಗಾಗಿ ತಾಜಾ ತರಕಾರಿ ಕಡಿಮೆ ದರದಲ್ಲಿ ಸಿಗುತ್ತದೆ ಎಂಬ ಕಾರಣಕ್ಕೆ ದೂರದಿಂದಲೂ ಗ್ರಾಹಕರು ಕೆ.ಆರ್. ಮಾರುಕಟ್ಟೆಗೆ ಬರುತ್ತಿದ್ದಾರೆ.

ರೈತರು ಮತ್ತು ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ:

ಮುಂಗಾರು ಮಳೆಯಲ್ಲಿನ ವ್ಯತ್ಯಾಸದಿಂದ ತರಕಾರಿ ಬೆಳೆ ಮೇಲೆ ಪರಿಣಾಮ ಬೀರಿದ್ದು, ಮಾರುಕಟ್ಟೆಗೆ ಪೂರೈಕೆ ಕಡಿಮೆಯಾದರೆ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಈಗಾಗಲೇ ಕೆಲವು ತರಕಾರಿಗಳ ಬೆಲೆ ₹100ರ ಗಡಿ ತಲುಪಿದ್ದು, ಬೆಲೆ ಏರಿಕೆ ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ.

ಒಟ್ಟಿನಲ್ಲಿ ತರಕಾರಿ ಬೆಲೆ ಏರಿಕೆಯಿಂದ ಒಂದೆಡೆ ರೈತರು ಸಂಕಷ್ಟದಲ್ಲಿದ್ದರೆ, ಮತ್ತೊಂದೆಡೆ ಗ್ರಾಹಕರು ಹೆಚ್ಚಿದ ದರಕ್ಕೆ ಹೊಂದಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.

ಮೊಳಕಾಲ್ಮೂರು ಜನರೇ ಗಮನಿಸಿ..! ನಾಳೆ 7 ಗಂಟೆ ಕರೆಂಟ್ ಇರಲ್ಲ, ಈ ಪ್ರದೇಶಗಳಲ್ಲಿ ವಿದ್ಯುತ್ ಕಟ್

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಜನತೆಗೆ ಪ್ರಮುಖ ಮಾಹಿತಿ.

KPTCL ವತಿಯಿಂದ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 27ರಂದು ಗುರುವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ತಾಲೂಕಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

11 ಕೆ.ವಿ. ವಿದ್ಯುತ್ ಮಾರ್ಗಗಳ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಸುಮಾರು 7 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಎನ್.ಜೆ.ವೈ., ಟೌನ್, ವಾಟರ್ ವರ್ಕ್ಸ್ ಹಾಗೂ ಇಂಡಸ್ಟ್ರಿಯಲ್ ಮಾರ್ಗಗಳ ವ್ಯಾಪ್ತಿಯ ಗ್ರಾಹಕರು ಇದರಿಂದ ತೊಂದರೆ ಅನುಭವಿಸುವ ಸಾಧ್ಯತೆಯಿದೆ.

ಈ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ:

ಮೊಳಕಾಲ್ಮೂರು ಉಪವಿಭಾಗದ ವ್ಯಾಪ್ತಿಯ ಹಲವು ಗ್ರಾಮಗಳು ಹಾಗೂ ಪಟ್ಟಣ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ. ಪ್ರಮುಖವಾಗಿ:

  • ಬಿಜಿಕೆರೆ
  • ಕೊಂಡ್ಲಹಳ್ಳಿ
  • ಗೌರಸಮುದ್ರ
  • ಅಬ್ಬೇನಹಳ್ಳಿ
  • ಮೊಳಕಾಲ್ಮೂರು ಪಟ್ಟಣ ಪಂಚಾಯಿತಿ ವ್ಯಾಪ್ತಿ
  • ಹಾನಗಲ್
  • ನೇರ್ಲಹಳ್ಳಿ
  • ರಾಯಾಪುರ
  • ತುಮಕೂರ್ಲಹಳ್ಳಿ
  • ಹಿರೇಕೆರೆಹಳ್ಳಿ
  • ಚಿಕ್ಕೇರಹಳ್ಳಿ
  • ಅಶೋಕ ಸಿದ್ದಾಪುರ
  • ನಾಗಸಮುದ್ರ
  • ದೇವಸಮುದ್ರ
  • ರಾಂಪುರ
  • ಜೆ.ಬಿ.ಹಳ್ಳಿ
  • ತಮ್ಮೇನಹಳ್ಳಿ
  • ಸಂತೇಗುಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು

ನೀರು ಸಂಗ್ರಹಿಸಿಟ್ಟುಕೊಳ್ಳಲು ಮನವಿ:

ವಿದ್ಯುತ್ ವ್ಯತ್ಯಯದಿಂದ ಕುಡಿಯುವ ನೀರಿನ ಸರಬರಾಜು, ಗೃಹಬಳಕೆ ಹಾಗೂ ವಿದ್ಯುತ್ ಆಧಾರಿತ ಚಟುವಟಿಕೆಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಹೀಗಾಗಿ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಿ, ಅಗತ್ಯವಿರುವಷ್ಟು ನೀರನ್ನು ಮುಂಚಿತವಾಗಿ ಸಂಗ್ರಹಿಸಿಟ್ಟುಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ನಿಗದಿತ ಸಮಯದೊಳಗೆ ನಿರ್ವಹಣಾ ಕಾಮಗಾರಿ ಪೂರ್ಣಗೊಳಿಸಿ ಆದಷ್ಟು ಬೇಗ ವಿದ್ಯುತ್ ಪೂರೈಕೆ ಪುನಃಸ್ಥಾಪಿಸಲು ಸಿಬ್ಬಂದಿ ಕ್ರಮ ಕೈಗೊಳ್ಳಲಿದ್ದಾರೆ.

ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರು ವಿದ್ಯುತ್ ಕಂಬಗಳು ಅಥವಾ ವಿದ್ಯುತ್ ಲೈನ್‌ಗಳ ಬಳಿ ಯಾವುದೇ ತಾಂತ್ರಿಕ ಕೆಲಸಗಳನ್ನು ಕೈಗೊಳ್ಳದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈದ್ ಮಿಲಾದ್: ಡಂಬಳದಲ್ಲಿ ಸಂಭ್ರಮದ ಮೆರವಣಿಗೆ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಪ್ರವಾದಿ ಹಜರತ್ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಗ್ರಾಮದಲ್ಲಿ ಬುಧವಾರ ಈದ್ ಮಿಲಾದ್ ಆಚರಣೆ ಹಾಗೂ ಧಾರ್ಮಿಕ ಮೆರವಣಿಗೆ ಶ್ರದ್ಧಾಭಕ್ತಿ ಮತ್ತು ಸಂಭ್ರಮದಿಂದ ನಡೆಯಿತು.

ಗ್ರಾಮದ ಜುಮ್ಮಾ ಮಸೀದಿಯಿಂದ ಆರಂಭಗೊಂಡ ಮೆರವಣಿಗೆಗೆ ಧರ್ಮಗುರುಗಳು ಹಾಗೂ ಸಮಾಜದ ಮುಖಂಡರು ಚಾಲನೆ ನೀಡಿದರು. ಮೆರವಣಿಗೆಯಲ್ಲಿ ನೂರಾರು ಮುಸ್ಲಿಂ ಬಾಂಧವರು, ಯುವಕರು ಹಾಗೂ ಮಕ್ಕಳು ಪಾಲ್ಗೊಂಡು ಪ್ರವಾದಿಯ ಸಂದೇಶಗಳನ್ನು ಸಾರಿದರು.

ಪ್ರವಾದಿ ಮುಹಮ್ಮದ್ ಅವರು ಜಗತ್ತಿಗೆ ಶಾಂತಿ, ಸೌಹಾರ್ದತೆ ಹಾಗೂ ಮಾನವೀಯತೆಯ ಸಂದೇಶ ಸಾರಿದರು. ಸಮಾಜದಲ್ಲಿ ಶಾಂತಿ ನೆಲೆಸಬೇಕು ಎಂಬುದೇ ಅವರ ಆಶಯವಾಗಿತ್ತು. ಅವರ ಜೀವನದ ಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಧರ್ಮಗುರು ಖಾದರಸಾಬ ಮುಲ್ಲಾ ಹೇಳಿದರು.

ಮುಂಜಾನೆ ಆರಂಭವಾದ ಮೆರವಣಿಗೆ ಬೆಳಗ್ಗೆ 11.30ರವರೆಗೆ ನಡೆಯಿತು. ಮಾರ್ಗದುದ್ದಕ್ಕೂ ಪ್ರವಾದಿ ಮುಹಮ್ಮದ್ ಅವರ ಪರ ಘೋಷಣೆಗಳು ಮೊಳಗಿದವು. ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಜಮಾಲಶಾವಲಿ ಶರಣರ ದರ್ಗಾ ಬಳಿ ಭಕ್ತರಿಗೆ ಗಂಜಿ ಹಾಗೂ ಬಾಳೆಹಣ್ಣು ವಿತರಿಸಲಾಯಿತು.

ದೇಶದ ಪ್ರಗತಿ, ಎಲ್ಲ ಧರ್ಮಗಳ ಜನರ ಶ್ರೇಯಸ್ಸು ಹಾಗೂ ಗ್ರಾಮದಲ್ಲಿ ಉತ್ತಮ ಮಳೆ-ಬೆಳೆಗಾಗಿ ಮಸೀದಿ ಮತ್ತು ದರ್ಗಾಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.

ಈ ಸಂದರ್ಭದಲ್ಲಿ ಧರ್ಮಗುರುಗಳಾದ ಬಶೀರಹಮ್ಮದ ತಾಂಬೋಟಿ, ಖಾಜಾಹುಸೇನ ಹೊಸಪೇಟಿ, ಬಾಬುಸಾಬ ಮೂಲಿಮನಿ, ಜಾಕೀರ ಮೂಲಿಮನಿ, ಹುಸೇನಸಾಬ ದೊಡ್ಡಮನಿ, ಇಂಮತ್ಯಾಜ ದಪೇದಾರ, ಹುಸೇನಸಾಬ ಹೊಸಬಾವಿ, ಮುನ್ನಾ ನದಾಫ್, ಹಜರತಲಿ ಹೊಂಬಳ, ಇಮಾಮ ಹೊಂಬಳ, ರಫೀಕ ಮನಿಯಾರ, ರಜಾಕಸಾಬ ತಾಂಬೋಟಿ, ಶಪೀಕ ಮೂಲಿಮನಿ, ಬುಡ್ನೆಸಾಬ ಅತ್ತಾರ, ಮೋದಿನಸಾಬ ಚಾಂದಖಾನವರ, ಮೀರಾಸಾಬ ದೊಡ್ಡಮನಿ, ಮಹಮ್ಮದಗೌಸ ಅತ್ತಾರ, ನಜೀರ ಸರಕಾವಾಸ್, ಮುರ್ತುಜಾ ಮನಿಯಾರ, ರಾಯಸಾಬ ಹಳ್ಳಿಕೇರಿ, ಗೌಸುಸಾಬ ಆಲೂರ, ಡಿ.ಡಿ. ಸೊರಟೂರ ಸೇರಿದಂತೆ ಮುಸ್ಲಿಂ ಸಮಾಜದ ಹಿರಿಯರು, ಯುವಕರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.

ಈರುಳ್ಳಿ ಬೆಲೆ ನಿಯಂತ್ರಣಕ್ಕೆ ರೈತರ ವಿರೋಧ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಈರುಳ್ಳಿ ಬೆಲೆ ಏರಿಕೆಯಾಗುವ ಮುನ್ನವೇ ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು ಗ್ರಾಹಕರ ಹಿತದೃಷ್ಟಿಯಿಂದ ಸರಿಯಾದ ಕ್ರಮವಾದರೂ, ಹಲವು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿ, ರೋಗಬಾಧೆ ಹಾಗೂ ಬೆಲೆ ಕುಸಿತದಿಂದ ನಷ್ಟ ಅನುಭವಿಸುತ್ತಿರುವ ಈರುಳ್ಳಿ ಬೆಳೆಗಾರರ ಹಿತವನ್ನೂ ಸರ್ಕಾರ ಗಮನಿಸಬೇಕು ಎಂದು ಪ್ರಗತಿಪರ ರೈತ ಸೋಮನಗೌಡ ಪಾಟೀಲ ಆಗ್ರಹಿಸಿದ್ದಾರೆ.

ನಾಸಿಕ್‌ನಿಂದ ರೈಲುಗಳ ಮೂಲಕ ದೇಶದ ಪ್ರಮುಖ ನಗರಗಳಿಗೆ 800 ಮೆಟ್ರಿಕ್ ಟನ್ ಈರುಳ್ಳಿ ಪೂರೈಸಿ, ಬಫರ್ ದಾಸ್ತಾನಿನ ಈರುಳ್ಳಿಯನ್ನು ಕೆ.ಜಿ.ಗೆ ₹35ರಂತೆ ಏಜೆನ್ಸಿಗಳ ಮೂಲಕ ಮಾರಾಟ ಮಾಡಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮ ರೈತರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ವರ್ಷ ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದು, ಬೆಳೆ ಸಮೀಕ್ಷೆ ಹಾಗೂ ಬರ ಘೋಷಣೆಯಲ್ಲೂ ವಿಳಂಬವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಹರಸಾಹಸಪಟ್ಟು ಉಳಿಸಿಕೊಂಡಿರುವ ಬೆಳೆಗೆ ಯೋಗ್ಯ ಬೆಲೆ ದೊರೆಯುವಂತೆ ಮಾಡುವುದು ಸರ್ಕಾರದ ಆದ್ಯತೆಯಾಗಬೇಕು. ಬೆಲೆ ನಿಯಂತ್ರಣದ ಕ್ರಮಗಳಿಂದ ರೈತರಿಗೆ ದೊರೆಯುತ್ತಿರುವ ಅಲ್ಪ ಆದಾಯಕ್ಕೂ ಧಕ್ಕೆ ತರಬಾರದು ಎಂದು ಒತ್ತಾಯಿಸಿದ್ದಾರೆ.

ಬೆಲೆ ಏರಿಕೆಯಾದಾಗ ಗ್ರಾಹಕರ ರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳುವ ಸರ್ಕಾರ, ಬೆಲೆ ಕುಸಿದಾಗ ರೈತರ ನೆರವಿಗೂ ಇದೇ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು. ಹಲವು ವರ್ಷಗಳ ನಷ್ಟದ ಬಳಿಕ ಈ ಬಾರಿ ದೊರೆಯುತ್ತಿರುವ ಉತ್ತಮ ಬೆಲೆ ರೈತರಿಗೆ ಕೊಂಚ ನೆಮ್ಮದಿ ನೀಡಿದೆ. ಅದಕ್ಕೂ ಬೆಲೆ ನಿಯಂತ್ರಣದ ಹೆಸರಿನಲ್ಲಿ ಧಕ್ಕೆ ತರಬಾರದು ಎಂದು ಸೋಮನಗೌಡ ಪಾಟೀಲ ಹೇಳಿದ್ದಾರೆ.

ಈರುಳ್ಳಿ ಬೆಳೆಗಾರರಿಗೆ ಯೋಗ್ಯ ಬೆಲೆ, ಬೆಳೆ ವಿಮೆ, ಬೆಂಬಲ ಬೆಲೆ ಹಾಗೂ ವೈಜ್ಞಾನಿಕ ಸಂಗ್ರಹಣಾ ವ್ಯವಸ್ಥೆ ಕಲ್ಪಿಸಬೇಕು. ಮಳೆ ಕೊರತೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ವೈಜ್ಞಾನಿಕವಾಗಿ ಗುರುತಿಸಿ, ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಸಂಸದರಾದ ಪ್ರಹ್ಲಾದ ಜೋಶಿ ಹಾಗೂ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರ್ಕಾರದ ಗಮನ ಸೆಳೆದು ರೈತರ ಪರ ಧ್ವನಿ ಎತ್ತಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಈರುಳ್ಳಿ ದೊರೆಯುವುದರ ಜತೆಗೆ ಬೆಳೆಗಾರರಿಗೂ ನ್ಯಾಯಯುತ ಬೆಲೆ ಸಿಗುವಂತಹ ಸಮತೋಲನದ ನೀತಿಯನ್ನು ಸರ್ಕಾರ ರೂಪಿಸಬೇಕು ಎಂದು ಸೋಮನಗೌಡ ಪಾಟೀಲ ಒತ್ತಾಯಿಸಿದ್ದಾರೆ.

ಬಂಡಾರದಲ್ಲಿ ಮಿಂದೆದ್ದ ಭಕ್ತರು

0

ವಿಜಯಸಾಕ್ಷಿ ಸುದ್ದಿ, ಗದಗ: ಅವಳಿ ನಗರದ ಗ್ರಾಮ ದೇವತೆಗಳಾದ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರ್ಗಮ್ಮ ದೇವಿಯರ ಹರಿ ಜಾತ್ರಾ ಮಹೋತ್ಸವದ ಅಂಗವಾಗಿ 18 ವರ್ಷಗಳ ಬಳಿಕ ಬುಧವಾರ ನಡೆದ ಬಂಡಾರದ ಜಾತ್ರೆ ಅಪಾರ ಭಕ್ತಸಾಗರಕ್ಕೆ ಸಾಕ್ಷಿಯಾಯಿತು. 140 ಕ್ವಿಂಟಾಲ್ ಬಂಡಾರದಲ್ಲಿ ನಗರದ ಪ್ರಮುಖ ರಸ್ತೆಗಳು ಹಳದಿಮಯವಾಗಿ ಕಂಗೊಳಿಸಿದರೆ, ಸಹಸ್ರಾರು ಭಕ್ತರು ಪರಸ್ಪರ ಬಂಡಾರ ಹಚ್ಚಿಕೊಂಡು ದೇವಿಯರಿಗೆ ಭಕ್ತಿಯನ್ನು ಸಮರ್ಪಿಸಿ ಸಂಭ್ರಮಿಸಿದರು.

ಒಕ್ಕಲಗೇರಿಯ ದ್ಯಾಮವ್ವನ ಕಟ್ಟಿಯಿಂದ ಆರಂಭಗೊಂಡ ದೇವರ ಪಲ್ಲಕ್ಕಿಗಳ ಮೆರವಣಿಗೆ ಗಂಜಿ ಬಸವೇಶ್ವರ ವೃತ್ತ, ರಾಚೋಟೇಶ್ವರ ಗುಡಿ, ಹನುಮಾನ್ ಗರಡಿ, ಮಾಬುಸುಬಾನಿ ಕಟ್ಟಿ, ನಾಲ್ವಾಡ ಗಲ್ಲಿ, ತಿಲಕ್ ಪಾರ್ಕ್ ರಸ್ತೆ ಮಾರ್ಗವಾಗಿ ಜೋಡ ಮಾರುತಿ ದೇವಸ್ಥಾನದ ಎದುರಿನ ದುರ್ಗಾದೇವಿ ದೇವಸ್ಥಾನದವರೆಗೆ ಸಾಗಿತು.

ಮೆರವಣಿಗೆ ಸಾಗಿದ ರಸ್ತೆಯುದ್ದಕ್ಕೂ ಬಂಡಾರದ ಹಳದಿ ಬಣ್ಣವೇ ಕಂಗೊಳಿಸಿತು. ವಿವಿಧೆಡೆ ಬಂಡಾರ ತುಂಬಿದ ಚೀಲಗಳನ್ನು ಇರಿಸಲಾಗಿತ್ತು. ಭಕ್ತರು ಪರಸ್ಪರ ಬಂಡಾರ ಎರಚಿಕೊಂಡು, ‘ಉಧೋ ಉಧೋ’ ಘೋಷಣೆಗಳನ್ನು ಮೊಳಗಿಸುತ್ತ ದೇವಿಯರ ಕೃಪೆಗೆ ಪಾತ್ರರಾಗಲು ಹಂಬಲಿಸಿದರು. ಮಹಿಳೆಯರು ಕುಂಭ-ಆರತಿ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡರೆ, ಮಕ್ಕಳು, ಯುವಕರು ಹಾಗೂ ಹಿರಿಯರು ಉತ್ಸಾಹದಿಂದ ಹೆಜ್ಜೆ ಹಾಕಿದರು.

108 ಡೊಳ್ಳುಗಳ ನಿನಾದ; ಭಕ್ತಿಯ ಮೆರವಣಿಗೆ

ಮೆರವಣಿಗೆಯಲ್ಲಿ 108 ಡೊಳ್ಳು ಕುಣಿತ, ಸಮ್ಮಾಳ, ಚಂಡಿ ವಾದ್ಯ, ವಿವಿಧ ವೇಷಧಾರಿಗಳ ತಂಡಗಳು ಸೇರಿದಂತೆ ಹಲವು ಕಲಾತಂಡಗಳು ಭಾಗವಹಿಸಿ ಜಾತ್ರೆಯ ಸಡಗರ ಹೆಚ್ಚಿಸಿದವು. ವಾದ್ಯಗಳ ಝೇಂಕಾರ, ಭಕ್ತರ ಜಯಘೋಷ ಹಾಗೂ ಬಂಡಾರದ ಎರಚಾಟದಿಂದ ಇಡೀ ನಗರವೇ ಜಾತ್ರೆಯ ಸಂಭ್ರಮದಲ್ಲಿ ಮಿಂದೆದ್ದಿತ್ತು.

ಹರಿ ಜಾತ್ರೆಯ ಹಿನ್ನೆಲೆಯಲ್ಲಿ ಒಂಬತ್ತು ದಿನಗಳ ಕಾಲ ವಿಶೇಷ ನಿಯಮಗಳನ್ನು ಪಾಲಿಸಲಾಗಿತ್ತು. ಜಾತ್ರೆ ನಡೆಯುವ ಅವಧಿಯಲ್ಲಿ ಮನೆಗಳಲ್ಲಿ ಅಡುಗೆ ಮಾಡದಿರುವುದು, ಪಾದರಕ್ಷೆ ಧರಿಸದಿರುವುದು ಸೇರಿದಂತೆ ಹಲವು ಧಾರ್ಮಿಕ ಆಚರಣೆಗಳನ್ನು ಭಕ್ತರು ಶ್ರದ್ಧೆಯಿಂದ ಅನುಸರಿಸಿದರು.

12 ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆ ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಹೀಗಾಗಿ 18 ವರ್ಷಗಳ ಬಳಿಕ ನಡೆದ ಜಾತ್ರೆಗೆ ವಿಶೇಷ ಮಹತ್ವ ದೊರೆತಿದ್ದು, ಗದಗ-ಬೆಟಗೇರಿ ಅವಳಿ ನಗರ ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿದ್ದರು.

ತವರುಮನೆಯಿಂದ ಗಂಡನ ಮನೆಗೆ ದೇವಿಯರ ಪಯಣ

ಒಕ್ಕಲಗೇರಿಯ ದ್ಯಾಮವ್ವನ ಕಟ್ಟೆ ದೇವಿಯರ ತವರುಮನೆಯ ಪ್ರತೀಕವಾಗಿದ್ದು, ನಾಲ್ವಾಡ ಮನೆತನದ ಮಗಳು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಮೆರವಣಿಗೆ ನಾಲ್ವಾಡದವರ ಮನೆಗೆ ತೆರಳಿ ಉಡಿ ತುಂಬಿಸಿಕೊಳ್ಳುವ ಸಂಪ್ರದಾಯ ನೆರವೇರಿತು. ಬಳಿಕ ಗಂಡನ ಮನೆಯಾದ ಕಿಲ್ಲಾ ಓಣಿಯತ್ತ ದೇವಿಯರ ಪಯಣ ಸಾಗಿತು.

ಭಕ್ತರು ದೇವಿಯರಿಗೆ ಉಡಿ ತುಂಬಿ, ಹರಕೆ ಸಲ್ಲಿಸಿ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿದರು. ಗಂಡನ ಮನೆಗೆ ಬೀಳ್ಕೊಡುವ ಸಂಭ್ರಮದಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಹಳದಿಮಯವಾದ ನಗರ

ಬಂಡಾರದ ಜಾತ್ರೆಯ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳು ಹಳದಿ ಬಣ್ಣದಲ್ಲಿ ಮಿಂದೆದ್ದಿದ್ದವು. ಹಲವರು ಹಳದಿ ಬಣ್ಣದ ಉಡುಪು ಧರಿಸಿ ಜಾತ್ರೆಯ ಸಡಗರದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಸಾವಿರಾರು ಭಕ್ತರು ಒಂದೆಡೆ ಸೇರಿದ್ದರಿಂದ ಜೋಡ ಮಾರುತಿ ದೇವಸ್ಥಾನ, ರಾಚೋಟೇಶ್ವರ ದೇವಸ್ಥಾನ ಹಾಗೂ ಮೇನ್ ಬಜಾರ್ ಸುತ್ತಮುತ್ತ ಕೆಲಕಾಲ ವಾಹನ ದಟ್ಟಣೆ ಉಂಟಾಯಿತು. ಪೊಲೀಸರು ಸ್ಥಳದಲ್ಲಿದ್ದು ಸಂಚಾರ ವ್ಯವಸ್ಥೆ ನಿಯಂತ್ರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಬಂಡಾರ ಜಾತ್ರೆಯಲ್ಲಿ ವಿನೋದ ಮೊರಬದ, ಸಂಗಮೇಶ ಕವಳಿಕಾಯಿ, ಬಸವರಾಜ ತುಪ್ಪದ, ಸುನೀಲ ಮುದೇನಗುಡಿ, ಪ್ರವೀಣ ಅಂದೇಲಿ, ಮಲ್ಲು ಕಿರೇಸೂರು, ಶ್ರೀಧರ್ ವಜ್ರಬಂಡಿ, ರಾಜು ಖಾನಪ್ಪನವರ್ ಇತರರು ಭಾಗವಹಿಸಿದ್ದರು.

ಗದಗ-ಬೆಟಗೇರಿ ಗ್ರಾಮದೇವಿಯರ ಹರಿ ಜಾತ್ರೋತ್ಸವದ ಪ್ರಮುಖ ಆಕರ್ಷಣೆಯೇ ಬಂಡಾರದ ಜಾತ್ರೆ. ಅವಳಿ ನಗರ ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಸಾವಿರಾರು ಜನರು ಪಾಲ್ಗೊಂಡು ಜಾತ್ರೆಯ ಯಶಸ್ಸಿಗೆ ಕಾರಣರಾಗಿದ್ದಾರೆ.

— ವಸಂತ ಪಡಗದ, ಜಾತ್ರಾ ಸಮಿತಿ ಸಹ ಕಾರ್ಯದರ್ಶಿ

ಬಂಡಾರದ ಜಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿರುವುದು ನಮ್ಮ ಪ್ರಾಚೀನ ಸಂಸ್ಕೃತಿ ಹಾಗೂ ಪರಂಪರೆ ಇಂದಿಗೂ ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿದೆ. ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರೂ ಒಂದಾಗಿ ಪಾಲ್ಗೊಂಡು ಜಾತ್ರೆಯನ್ನು ಅದ್ದೂರಿಗೊಳಿಸಿದ್ದಾರೆ.

ಕೊಟ್ರಪ್ಪ ಕಮತರ


18 ವರ್ಷಗಳ ಬಳಿಕ ಹಳದಿಮಯವಾದ ಗದಗ

ಒಂಬತ್ತು ದಿನಗಳ ಹರಿ ಜಾತ್ರಾ ಮಹೋತ್ಸವದ ಕೊನೆಯ ದಿನ ನಡೆದ ಬಂಡಾರದ ಜಾತ್ರೆ ಭಕ್ತರ ಪಾಲಿಗೆ ಅವಿಸ್ಮರಣೀಯ ಕ್ಷಣವಾಯಿತು. 140 ಕ್ವಿಂಟಾಲ್ ಬಂಡಾರ, ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆ, 108 ಡೊಳ್ಳುಗಳ ನಿನಾದ ಹಾಗೂ ವೈವಿಧ್ಯಮಯ ಕಲಾತಂಡಗಳ ಪ್ರದರ್ಶನ ಜಾತ್ರೆಯ ವೈಭವವನ್ನು ಮತ್ತಷ್ಟು ಹೆಚ್ಚಿಸಿತು.

ಶಿರಹಟ್ಟಿಯಲ್ಲಿ ಮೊಳಗಿದ ಸೌಹಾರ್ದದ ಸಂದೇಶ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಪ್ರವಾದಿ ಹಜರತ್ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಪಟ್ಟಣದಲ್ಲಿ ಬುಧವಾರ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನಾ ಮಜಹರಖಾನ್ ಪಠಾಣ, ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ವಿಶ್ವಕ್ಕೆ ಶಾಂತಿ, ಕರುಣೆ ಹಾಗೂ ಸಹಬಾಳ್ವೆಯ ಸಂದೇಶ ಸಾರಿದ್ದಾರೆ. ಅವರ ಜನ್ಮದಿನ ಮುಸ್ಲಿಮರಿಗೆ ಅತ್ಯಂತ ಪವಿತ್ರವಾಗಿದ್ದು, ಎಲ್ಲರೂ ಪರಸ್ಪರ ಸೌಹಾರ್ದದಿಂದ ಬದುಕಬೇಕು ಎಂದರು.

ಹಬ್ಬದ ಅಂಗವಾಗಿ ಪಟ್ಟಣದ ಆಸಾರ ಓಣಿ, ಮಕಾನಗಲ್ಲಿ, ತಳಗೇರಿ, ಇಂಗಲಾಪುರ ಓಣಿ ಸೇರಿದಂತೆ ವಿವಿಧೆಡೆ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಬಳಿಕ ಹಜರತ್ ಮಹಬೂಬ್ ಸುಬಾನಿ ದರ್ಗಾದಿಂದ ಬೃಹತ್ ಮೆರವಣಿಗೆಗೆ ಚಾಲನೆ ನೀಡಲಾಯಿತು. ಪಟ್ಟಣದ ಪ್ರಮುಖ ವೃತ್ತ ಹಾಗೂ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಧಾರ್ಮಿಕ ಘೋಷಣೆಗಳು ಮೊಳಗಿದವು. ಈ ವೇಳೆ ಹಬ್ಬದ ಸಂಭ್ರಮ ಎಲ್ಲೆಡೆ ಕಂಡುಬಂತು.

ಹಗರಿಬೊಮ್ಮನಹಳ್ಳಿಯಲ್ಲಿ ಈದ್ ಮಿಲಾದ್ ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪ್ರವಾದಿ ಹಜರತ್ ಮಹಮ್ಮದ್ ಅವರ ಜನ್ಮದಿನದ ಸ್ಮರಣಾರ್ಥ ಆಚರಿಸುವ ಈದ್ ಮಿಲಾದ್-ಉನ್-ನಬಿ ಹಬ್ಬವನ್ನು ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಬುಧವಾರ ಸಡಗರ, ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಿದರು.

ಹಬ್ಬದ ಅಂಗವಾಗಿ ಪಟ್ಟಣದಲ್ಲಿ ಅದ್ದೂರಿ ಧಾರ್ಮಿಕ ಮೆರವಣಿಗೆ ನಡೆಯಿತು. ರಾಮನಗರ, ಅರಳಿಹಳ್ಳಿ, ಬಸವೇಶ್ವರ ಬಜಾರ್, ಹಳೆ ಊರು, ಜಾಲೀನಗರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಮುಸ್ಲಿಂ ಸಮಾಜದ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮಕ್ಕಳು, ಯುವಕರು ಹಾಗೂ ಸಮಾಜದ ಮುಖಂಡರು ಪ್ರವಾದಿಯ ಸಂದೇಶ ಸಾರುವ ಘೋಷಣೆಗಳನ್ನು ಮೊಳಗಿಸುತ್ತ ಸಾಗಿದರು.

ಪ್ರವಾದಿ ಮಹಮ್ಮದ್ ಅವರು ಸಾರಿದ ಸಮಾನತೆ, ಶಾಂತಿ, ಸಹೋದರತ್ವ ಹಾಗೂ ಮಾನವೀಯತೆಯ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಜೀವನಾದರ್ಶಗಳನ್ನು ಸ್ಮರಿಸುತ್ತ ಈದ್ ಮಿಲಾದ್ ಆಚರಿಸುವುದು ವಿಶೇಷವಾಗಿದೆ ಎಂದು ಸಮಾಜದ ಮುಖಂಡರು ತಿಳಿಸಿದರು.

ಮೆರವಣಿಗೆಯಲ್ಲಿ ಮಾಜಿ ಶಾಸಕ ಎಸ್. ಭೀಮ ನಾಯ್ಕ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಡಾ. ಸಾಹಿರಾಬಾನು, ಪುರಸಭೆ ಸದಸ್ಯೆ ರೇಷ್ಮಾ ಶಿಖಂದರ್, ತೆಲಿಗಿ ನೆಲ ಇಸ್ಮಾಯಿಲ್ ಸಾಹೇಬ್, ಬಶೀರ್ ಸಾಹೇಬ್, ಎಣ್ಣಿ ಭಾಷಾ, ದಾದಾ ಕಲಂದರ್, ಜಂದಿ ಸಾಹೇಬ್, ನೂರು ಮಹಮ್ಮದ್ ಅಬ್ಬು, ನೂರಿ, ಗುಲ್ಜರ್, ದಾದಾಪೀರ್, ಕೆಜಿಎನ್ ಅಲ್ಲಾಭಕ್ಷಿ, ದಾದು ತತ್ತಿ ಕಾಶಿಂ, ಜಿನ್ನ ಸಾಹೇಬ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ನೂರಾರು ಮಂದಿ ಪಾಲ್ಗೊಂಡಿದ್ದರು.