ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನೆಯಲ್ಲಿ ಮಹತ್ವದ ಬದಲಾವಣೆ ನಡೆದಿದ್ದು, ಪಕ್ಷದ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಇದರ ಬೆನ್ನಲ್ಲೇ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಬಿಜೆವೈಎಂ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ್ದಾರೆ.
ಈ ಕುರಿತು ತೇಜಸ್ವಿ ಸೂರ್ಯ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದು, ಬಿಜೆವೈಎಂನೊಂದಿಗಿನ ತಮ್ಮ 14 ವರ್ಷಗಳ ಪಯಣವನ್ನು ನೆನಪಿಸಿಕೊಂಡಿದ್ದಾರೆ. ತಮ್ಮ ನಂತರ ಯುವ ಘಟಕದ ನಾಯಕತ್ವ ವಹಿಸಿಕೊಂಡಿರುವ ಹೇಮಾಂಗ್ ಜೋಶಿ ಅವರನ್ನು ಅಭಿನಂದಿಸಿದ್ದಾರೆ.
ನಗರ ಘಟಕದಲ್ಲಿ ತಳಮಟ್ಟದ ಕಾರ್ಯಕರ್ತನಾಗಿ ತಮ್ಮ ಬಿಜೆವೈಎಂ ಪಯಣ ಆರಂಭಿಸಿದ್ದನ್ನು ಸ್ಮರಿಸಿರುವ ತೇಜಸ್ವಿ ಸೂರ್ಯ, ಈ ಪ್ರಯಾಣವು ಒಂದು ದಿನ ರಾಷ್ಟ್ರೀಯ ಅಧ್ಯಕ್ಷ ಸ್ಥಾನದವರೆಗೆ ಕರೆದೊಯ್ಯುತ್ತದೆ ಎಂದು ತಾವು ಎಂದಿಗೂ ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.
ತಮ್ಮ ರಾಜಕೀಯ ಪಯಣದಲ್ಲಿ ಮಾರ್ಗದರ್ಶನ ನೀಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಅವರಿಗೆ ತೇಜಸ್ವಿ ಸೂರ್ಯ ಕೃತಜ್ಞತೆ ಸಲ್ಲಿಸಿದ್ದಾರೆ.
ಅದೇ ರೀತಿ ಬಿಜೆಪಿ ನಾಯಕರಾದ ತರುಣ್ ಚುಗ್ ಹಾಗೂ ಸುನಿಲ್ ಬನ್ಸಲ್ ಅವರು ನೀಡಿದ ಮಾರ್ಗದರ್ಶನಕ್ಕೂ ಧನ್ಯವಾದ ಅರ್ಪಿಸಿದ್ದಾರೆ.
ತಮ್ಮೊಂದಿಗೆ ನಿಂತು, ಮಾರ್ಗದರ್ಶನ ನೀಡಿ, ತಪ್ಪುಗಳನ್ನು ತಿದ್ದಿದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಧನ್ಯವಾದ ಸಲ್ಲಿಸಿರುವ ತೇಜಸ್ವಿ ಸೂರ್ಯ, ‘ಸ್ಥಾನಗಳು ಬದಲಾಗುತ್ತವೆ, ಶೀರ್ಷಿಕೆಗಳು ಬದಲಾಗುತ್ತವೆ. ಆದರೆ ಒಮ್ಮೆ ಬಿಜೆವೈಎಂ, ಯಾವಾಗಲೂ ಬಿಜೆವೈಎಂ’ ಎಂಬ ಸಂದೇಶವನ್ನು ತಮ್ಮ ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
ಬಿಜೆಪಿಯ ಸಾಂಸ್ಥಿಕ ಬದಲಾವಣೆಗಳ ಭಾಗವಾಗಿ ಬಿಜೆವೈಎಂಗೆ ಹೊಸ ನಾಯಕತ್ವ ತಂಡ ಅಸ್ತಿತ್ವಕ್ಕೆ ಬರುತ್ತಿರುವ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಈ ಹೇಳಿಕೆ ನೀಡಿದ್ದಾರೆ. ನೂತನವಾಗಿ ಆಯ್ಕೆಯಾಗಿರುವ ಎಲ್ಲ ಪದಾಧಿಕಾರಿಗಳಿಗೂ ಅವರು ಶುಭಾಶಯ ಕೋರಿದ್ದಾರೆ.

