Home Blog

ಮನುಸ್ಮೃತಿ ವಿವಾದ: ರಾಹುಲ್‌ ಗಾಂಧಿ ವಿರುದ್ಧ ದೂರು ನೀಡಿದ ಸುಪ್ರೀಂ ಕೋರ್ಟ್‌ ವಕೀಲೆ ನಾಜಿಯಾ ಖಾನ್!

0

ನವದೆಹಲಿ: ಛಾತ್ರೋಂ ಕಿ ಗೂಂಜ್ ಕಾರ್ಯಕ್ರಮದಲ್ಲಿ ಮನುಸ್ಮೃತಿ ಕುರಿತು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಸುಪ್ರೀಂ ಕೋರ್ಟ್ ವಕೀಲೆ ನಾಜಿಯಾ ಖಾನ್ ದೂರು ದಾಖಲಿಸಿದ್ದಾರೆ.

ಪ್ರಾಚೀನ ಗ್ರಂಥದಿಂದ ಆಯ್ದ ಭಾಗಗಳನ್ನು ಮಾತ್ರ ಎತ್ತಿಹಿಡಿದು, ತಿರುಚಿ ಪ್ರಸ್ತುತಪಡಿಸುವ ಮೂಲಕ ಮನುಸ್ಮೃತಿಗೆ ಕಳಂಕ ತರಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ನಾಜಿಯಾ ಖಾನ್, ತಾವು ಕಲ್ಮಾ ಮತ್ತು ಶಹಾದಾ ಎರಡನ್ನೂ ಪಠಿಸುತ್ತೇನೆ ಎಂದೂ, ಜೊತೆಗೆ ‘ವಂದೇ ಮಾತರಂ’ ಹಾಡುವಾಗ ತಾನೊಬ್ಬಳು ಖಾನ್ ಆಗಿದ್ದರೂ ತನ್ನ ಬಗ್ಗೆ ತನಗೇ ಅಪಾರ ಹೆಮ್ಮೆ ಎನಿಸುತ್ತದೆ ಎಂದೂ ಹೇಳಿದ್ದಾರೆ. ರಾಹುಲ್ ಗಾಂಧಿ ಕೇವಲ ಒಂದೇ ಅಧ್ಯಾಯವನ್ನು ಆಯ್ದುಕೊಂಡು, ಪದಗಳನ್ನು ತಿರುಚಿ, ಮನುಸ್ಮೃತಿಗೆ ಅಪಖ್ಯಾತಿ ತರುವ ಮತ್ತು ತಪ್ಪು ಅಭಿಪ್ರಾಯ ಸೃಷ್ಟಿಸುವ ಪ್ರಯತ್ನ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಪ್ರತಿಯೊಬ್ಬರ ವಾಕ್ ಸ್ವಾತಂತ್ರ್ಯದ ಹಕ್ಕನ್ನು ತಾನು ಗೌರವಿಸುವುದಾಗಿ ತಿಳಿಸಿದ ಖಾನ್, ಭಾಷಣದ ವೇಳೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಭಾವಚಿತ್ರಗಳನ್ನು ಪ್ರದರ್ಶಿಸಿದ್ದನ್ನು ಪ್ರಶ್ನಿಸಿದ್ದಾರೆ. ಬಿಜೆಪಿ ಸರ್ಕಾರ ಬಂದ ನಂತರ ಪ್ರತಿಯೊಬ್ಬರೂ ಮನುಸ್ಮೃತಿ ಓದಬೇಕು ಅಥವಾ ಪಾಲಿಸಬೇಕು ಎಂದು ಪ್ರಧಾನಿ ಮೋದಿ ಎಂದಾದರೂ ಹೇಳಿದ್ದಾರೆಯೇ ಎಂದು ಪ್ರಶ್ನಿಸಿದ ಖಾನ್, ರಾಹುಲ್ ಗಾಂಧಿ ಈ ರೀತಿ ಏಕೆ ಮಾಡಿದರು ಎಂಬುದಕ್ಕೆ ಉತ್ತರಿಸಬೇಕಾಗುತ್ತದೆ ಎಂದಿದ್ದಾರೆ.

ಮಹಾರಾಷ್ಟ್ರದ ಪುಣೆಯಲ್ಲಿ ಆಗಸ್ಟ್ 22ರಂದು ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ, ಮಹಿಳೆಯರ ಗುರುತು ಕೇವಲ ತಂದೆ, ಪತಿ ಅಥವಾ ಮಗನ ಸಂಬಂಧಗಳಿಗೆ ಸೀಮಿತವಾಗಿರಬಾರದು, ಆಕೆ ತನಗೆ ತಾನೇ ಒಡತಿ, ಬೇರೆ ಯಾರಿಗೂ ಸೇರಿದವಳಲ್ಲ ಎಂದು ಪ್ರತಿಪಾದಿಸಿದ್ದರು.

ಈ ವೇಳೆ ಮನುಸ್ಮೃತಿಯ ಸಾಲುಗಳನ್ನು ಉಲ್ಲೇಖಿಸಿದ್ದ ರಾಹುಲ್, ಬಾಲ್ಯದಲ್ಲಿ ಹೆಣ್ಣು ತಂದೆಗೆ ಸೇರಿದವಳು, ಯೌವನದಲ್ಲಿ ಗಂಡನಿಗೆ ಸೇರಿದವಳು, ಪತಿ ತೀರಿಕೊಂಡಾಗ ಮಕ್ಕಳಿಗೆ ಸೇರಿದವಳು, ಆಕೆ ಎಂದಿಗೂ ಸ್ವತಂತ್ರಳಾಗಿರಬಾರದು ಎಂದು ಮನುಸ್ಮೃತಿ ಹೇಳುತ್ತದೆ ಎಂದಿದ್ದರು. ಇದು ಮನುಸ್ಮೃತಿಯ ನೇರ ಉಲ್ಲೇಖವೆಂದೂ, ಇಂತಹ ಮಾತುಗಳು ನಾಚಿಕೆಗೇಡು ಎಂದೂ ಹೇಳಿದ್ದ ಅವರು, ಮಹಿಳೆಯರಿಗೆ ಸ್ವತಂತ್ರವಾಗಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಹಕ್ಕಿದೆ ಎಂದು ತಿಳಿಸಿದ್ದರು.

ಭೂಸ್ವಾಧೀನ ಪರಿಹಾರದ ಜೊತೆ ಭಾವನಾತ್ಮಕ ನಷ್ಟ ಪರಿಹಾರವೂ ಹಕ್ಕು: ಹೈಕೋರ್ಟ್ ಮಹತ್ವದ ತೀರ್ಪು

0

ಬೆಂಗಳೂರು: ಅಭಿವೃದ್ಧಿ ಕಾರ್ಯಗಳಿಗಾಗಿ ಜಮೀನು ಕಳೆದುಕೊಳ್ಳುವ ರೈತರಿಗೆ ಮೂಲ ಪರಿಹಾರದ ಜೊತೆಗೆ ಮಾನಸಿಕ ನಷ್ಟಕ್ಕಾಗಿ (ಸೊಲಾಟಿಯಂ) ಹೆಚ್ಚುವರಿ ಪರಿಹಾರ ಪಡೆದುಕೊಳ್ಳುವ ಹಕ್ಕಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಭೂಸ್ವಾಧೀನಕ್ಕಾಗಿ ಪರಿಹಾರ ನೀಡುವ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಧ್ಯಸ್ಥಗಾರರು ಹೊರಡಿಸಿದ ಆದೇಶ ರದ್ದು ಮಾಡಬೇಕು ಮತ್ತು ಮಾರುಕಟ್ಟೆ ಮೌಲ್ಯದ ಪರಿಹಾರದ ಹೊರತಾಗಿಯೂ ಭಾವನಾತ್ಮಕ ಪರಿಹಾರ ಹಾಗೂ ಸ್ವಾಧೀನದ ದಿನದಿಂದ ಬಡ್ಡಿ ಪಾವತಿ ಮಾಡಬೇಕೆಂದು ಕೋರಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಅಮರಾವತಿ ಗ್ರಾಮದ ದಿ. ಜಿ. ಸಿದ್ದರಾಮಯ್ಯ ಅವರ ವಾರಸುದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಧಾರವಾಡದ ಹೈಕೋರ್ಟ್ ಪೀಠ ಈ ಅರ್ಜಿಯ ವಿಚಾರಣೆ ನಡೆಸಿತು. ರಾಷ್ಟ್ರೀಯ ಹೆದ್ದಾರಿ ಕಾಯ್ದೆಯಡಿ ಭೂಮಿ ಕಳೆದುಕೊಂಡವರಿಗೂ ಭೂಸ್ವಾಧೀನ ಕಾಯ್ದೆಯ ಸೆಕ್ಷನ್ 23(2)ರ ಅಡಿಯಲ್ಲಿ ಮಾನಸಿಕ ನಷ್ಟ ಅಥವಾ ಭಾವನಾತ್ಮಕ ಪರಿಹಾರ ಮತ್ತು ಸೆಕ್ಷನ್ 28ರ ಅಡಿಯಲ್ಲಿ ಬಡ್ಡಿ ಪಡೆಯುವ ಕಾನೂನುಬದ್ಧ ಹಕ್ಕಿದೆ ಎಂದು ಪೀಠ ಸ್ಪಷ್ಟಪಡಿಸಿತು.

ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡುವ ಸಂಬಂಧದ ಆದೇಶಗಳಲ್ಲಿ ಮಾನಸಿಕ ನಷ್ಟಕ್ಕೆ ಪರಿಹಾರ ಹಾಗೂ ಬಡ್ಡಿ ನಮೂದಿಸಿಲ್ಲ ಎಂಬ ಕಾರಣಕ್ಕೆ ಅದನ್ನು ನಿರಾಕರಿಸುವುದು ಸಂವಿಧಾನದ 14 ಮತ್ತು 300-ಎ ವಿಧಿಗಳ ಉಲ್ಲಂಘನೆಯಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು. ಆದ್ದರಿಂದ ಸಂತ್ರಸ್ತರಿಗೆ ಕಾನೂನುಬದ್ಧವಾಗಿ ಸಿಗಬೇಕಾದ ಭಾವನಾತ್ಮಕ ನಷ್ಟ ಮತ್ತು ಬಡ್ಡಿ ಸೌಲಭ್ಯಗಳನ್ನು ಲೆಕ್ಕಹಾಕಿ ಸೂಕ್ತ ಆದೇಶ ಹೊರಡಿಸಬೇಕು ಎಂದು ವಿಶೇಷ ಭೂಸ್ವಾಧೀನ ಅಧಿಕಾರಿಗೆ ನ್ಯಾಯಾಲಯ ನಿರ್ದೇಶಿಸಿದೆ.

ಈ ಸಂಬಂಧ ಉಭಯ ಪಕ್ಷಕಾರರು ಯಾವುದೇ ನೋಟಿಫಿಕೇಶನ್‌ಗಾಗಿ ಕಾಯದೆ, 2026ರ ಸೆಪ್ಟೆಂಬರ್ 10ರಂದು ಮಧ್ಯಾಹ್ನ 3 ಗಂಟೆಗೆ ನೇರವಾಗಿ ವಿಶೇಷ ಭೂಸ್ವಾಧೀನ ಅಧಿಕಾರಿಯವರ ಸಮಕ್ಷಮ ಹಾಜರಾಗುವಂತೆ ಪೀಠ ಸೂಚನೆ ನೀಡಿದೆ. ಪ್ರಕರಣ ಸಂಬಂಧ ಅರ್ಜಿದಾರರ ಪರವಾಗಿ ವಕೀಲ ಸಂಕೇತ್ ಶಂಕರಪ್ಪ ಅಂಬಲಿ ವಕಾಲತ್ತು ವಹಿಸಿದ್ದರು.

ಪ್ರಕರಣದ ಹಿನ್ನೆಲೆ: ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಅಮರಾವತಿ ಗ್ರಾಮದ ಜಿ. ಸಿದ್ಧರಾಮಯ್ಯ ಅವರಿಗೆ ಸೇರಿದ ಜಮೀನನ್ನು 2009ರಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಪರಿಹಾರ ಪಡೆಯುವುದಕ್ಕಾಗಿ ನಡೆಯುತ್ತಿದ್ದ ನ್ಯಾಯಾಂಗ ಪ್ರಕ್ರಿಯೆ ನಡುವೆ ಸಿದ್ದರಾಮಯ್ಯ ಮೃತಪಟ್ಟಿದ್ದು, ಅವರ ವಾರಸುದಾರರು ಕಾನೂನು ಪ್ರಕ್ರಿಯೆ ಮುಂದುವರೆಸಿ, ವಿಶೇಷ ಭೂಸ್ವಾಧೀನ ಅಧಿಕಾರಿ ನಿಗದಿಪಡಿಸಿದ್ದ ಪರಿಹಾರ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ನೈಸ್ ವಿರುದ್ಧ ‘ನಥಿಂಗ್ ನೈಸ್’ ವೆಬ್ʼಸೈಟ್ ಬಿಡುಗಡೆ: ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ನಿಖಿಲ್ ಕುಮಾರಸ್ವಾಮಿ

0

ಬೆಂಗಳೂರು: ನೈಸ್ ವಿರುದ್ಧ ಜೆಡಿಎಸ್ ಹೋರಾಟ ಮತ್ತೊಂದು ಹಂತಕ್ಕೆ ತಲುಪಿದೆ. ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿರುವ ಜೆಡಿಎಸ್ “ನಥಿಂಗ್ ನೈಸ್” ವೆಬ್‌ಸೈಟ್ ಬಿಡುಗಡೆ ಮಾಡಿದೆ. ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಈ ವೆಬ್‌ಸೈಟ್ ಬಿಡುಗಡೆ ಮಾಡಿದರು.

ಈ ವೆಬ್‌ಸೈಟ್‌ನಲ್ಲಿ ನೈಸ್ ಯೋಜನೆಯ ಸಂಪೂರ್ಣ ವಿವರ, ಟೋಲ್ ಏಕೆ ಕಟ್ಟಬಾರದು, ಹೈಕೋರ್ಟ್ ಆದೇಶ ಏನು ಎಂಬುದು ಸೇರಿ ನೈಸ್ ಅಕ್ರಮದ ಸಂಪೂರ್ಣ ದಾಖಲಾತಿಗಳಿರಲಿದ್ದು, ಇದರ ಮೂಲಕ ಜನರಲ್ಲಿ ಜಾಗೃತಿ ಅಭಿಯಾನ ನಡೆಸಲು ಜೆಡಿಎಸ್ ಮುಂದಾಗಿದೆ.

ವೆಬ್‌ಸೈಟ್ ಬಿಡುಗಡೆ ಬಳಿಕ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ನೈಸ್ ಸಂಸ್ಥೆಯಿಂದ 26 ವರ್ಷಗಳಿಂದ ಹಗರಣ ನಡೆದಿದೆ ಎಂದು ಆರೋಪಿಸಿದರು. ಸಾರ್ವಜನಿಕ ಹೆಸರಿನಲ್ಲಿ ನೈಸ್ ಅಭಿವೃದ್ಧಿಪಡಿಸಿಲ್ಲ, ರೈತರಿಗೆ ಪರಿಹಾರ ಸಿಕ್ಕಿಲ್ಲ, ಜನರ ಭೂಮಿ ಪಡೆದು ಅಭಿವೃದ್ಧಿ ಮಾಡಿಲ್ಲ, ನೈಸ್ ರಸ್ತೆಯಲ್ಲಿ ಓಡಾಡುವವರಿಗೆ ಸಮಸ್ಯೆಯಾಗುತ್ತಿದೆ ಎಂದು ಕಿಡಿಕಾರಿದರು.

1997ರಲ್ಲಿ ಫ್ರೇಮ್‌ವರ್ಕ್ ಅಗ್ರಿಮೆಂಟ್ ಆಗಿದ್ದರೂ ಅದರ ಉಲ್ಲಂಘನೆ ಆಗಿದೆ ಎಂದ ಅವರು, 5 ಟೌನ್‌ಶಿಪ್ ಆಗಬೇಕಿದ್ದ ಈ ಯೋಜನೆ ಇನ್ನೂ ಸಂಪೂರ್ಣವಾಗಿಲ್ಲ ಎಂದರು. 111 ಕಿ.ಮೀ ರಸ್ತೆ ಯೋಜನೆ ಪೈಕಿ ಕೇವಲ 5 ಕಿ.ಮೀ ಮಾತ್ರ ಪೂರ್ಣಗೊಂಡಿದ್ದು, 23 ವರ್ಷ ಕಳೆದರೂ ರೈತರಿಗೆ ಪರಿಹಾರ ಸಿಕ್ಕಿಲ್ಲ, ಶೇ.65-70ರಷ್ಟು ರೈತರು ಬೀದಿಯಲ್ಲಿದ್ದಾರೆ ಎಂದು ಆರೋಪಿಸಿದರು. ಜಯಚಂದ್ರ ಜಂಟಿ ಸದನ ಸಮಿತಿ ವರದಿಯಲ್ಲಿ 22 ಷರತ್ತುಗಳ ಪೈಕಿ 16 ಷರತ್ತು ಉಲ್ಲಂಘನೆಯಾಗಿದೆ ಎಂಬ ವರದಿ ಇರುವುದಾಗಿಯೂ, ಜುಲೈನಲ್ಲಿ ಹೈಕೋರ್ಟ್ ಭೂಮಿ ಕಳೆದುಕೊಂಡ ರೈತರಿಗೆ ಜಮೀನು ವಾಪಸ್ ಕೊಡಲು ಆದೇಶಿಸಿರುವುದಾಗಿಯೂ ತಿಳಿಸಿ, ಸರ್ಕಾರ ಮೌನವಾಗಿರದೆ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ, ಈ ಸರ್ಕಾರ ರಿಯಲ್ ಎಸ್ಟೇಟ್ ಪರ ಇದೆ ಎಂದೂ, ಹೊಸ ಸಿಎಂ ರಿಯಲ್ ಎಸ್ಟೇಟ್ ಫೋರಂನ ಸಿಇಒ ಆಗಿದ್ದರು ಎಂದೂ ಆರೋಪಿಸಿದ ನಿಖಿಲ್, ಸರ್ಕಾರ ನೈಸ್ ಯೋಜನೆ ಟೇಕ್ ಓವರ್ ಮಾಡಬೇಕು ಎಂದು ಒತ್ತಾಯಿಸಿದರು. ಇಂದಿನಿಂದ ಅಭಿಯಾನ ಆರಂಭಿಸುವುದಾಗಿಯೂ, ರೈತರ ಭೂಮಿ ವಾಪಸ್ ಕೊಡಿಸುವ ಕೆಲಸ ಮಾಡುವುದಾಗಿಯೂ ಹೇಳಿದ ಅವರು, ಪರಿಹಾರ ಹಣವನ್ನು ಬಡ್ಡಿ ಸಮೇತ ಕೊಡಬೇಕು ಹಾಗೂ ಟೋಲ್ ಸಂಗ್ರಹ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಹುಟ್ಟುಹಬ್ಬ ಆಚರಿಸಲು ನೇಪಾಳಕ್ಕೆ ಹೋಗಿದ್ದರು: ನಾಪತ್ತೆಯಾದ ತಂದೆ–ತಾಯಿಯನ್ನು ನೆನೆದು ಕಣ್ಣೀರಿಟ್ಟ ಪುತ್ರಿ!

0

ನವದೆಹಲಿ: ನೇಪಾಳದ ಭೀಕರ ಜಲಪ್ರಳಯದ ಬಳಿಕ ನಾಪತ್ತೆಯಾಗಿರುವ ಅಪ್ಪ-ಅಮ್ಮನನ್ನು ನೆನೆದು ಮಗಳು ಕಣ್ಣೀರಿಟ್ಟಿದ್ದಾರೆ. ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹ ಮತ್ತು ಭೂಕುಸಿತದ ನಂತರ ಕಾಣೆಯಾದ ಸುಮಾರು 1,400 ಜನರಲ್ಲಿ ದೀಪಕ್ ಮತ್ತು ಅವರ ಪತ್ನಿ ಮಧು ಅಹುಜಾ ಕೂಡ ಸೇರಿದ್ದಾರೆ.

ಅಮೆರಿಕದ ನಾಗರಿಕರೂ ಭಾರತದ ಸಾಗರೋತ್ತರ ನಾಗರಿಕರು (OCI) ಕಾರ್ಡ್ ಹೊಂದಿದ್ದ ಈ ದಂಪತಿ, ದೀಪಕ್ ಅವರ 60ನೇ ಹುಟ್ಟುಹಬ್ಬದಂದು ಪವಿತ್ರ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಬಹುನಿರೀಕ್ಷಿತ ಆಸೆ ಪೂರೈಸಲು ಅಮೆರಿಕದಿಂದ ಪ್ರಯಾಣ ಬೆಳೆಸಿದ್ದರು.

ಇಶಾ ಸೇಕ್ರೆಡ್ ವಾಕ್ಸ್ ಮತ್ತು ಟ್ರೆಕ್ಕರ್ಸ್ ಸೊಸೈಟಿಯೊಂದಿಗೆ ಗ್ರೂಪ್ ಎಸ್3 ಅಡಿಯಲ್ಲಿ ಟಿಬೆಟ್‌ನ ಸಾಗಾ ತಲುಪಿದ್ದ ಅವರು, ಅಲ್ಲಿ ತಮ್ಮ ಗ್ರೂಪ್‌ನೊಂದಿಗೆ ಸದ್ಗುರುಗಳನ್ನು ಭೇಟಿಯಾಗಿದ್ದರು. ನಂತರ ಅಮೆರಿಕಗೆ ವಾಪಸ್ ಆಗಲು ಗಡಿಯ ಕಡೆಗೆ ದಕ್ಷಿಣಕ್ಕೆ ಹೋಗುತ್ತಿದ್ದಾಗ ಹವಾಮಾನ ಪರಿಸ್ಥಿತಿ ಅವರ ಪ್ರಯಾಣಕ್ಕೆ ಅಡ್ಡಿಪಡಿಸಿತು.

ಗೈರಾಂಗ್ ಬಂದರಿನ ವಲಸೆ ಪೋಸ್ಟ್‌ನಲ್ಲಿ ಸ್ಥಳೀಯ ಸಮಯ ಬೆಳಗ್ಗೆ 9 ಗಂಟೆ ಸುಮಾರಿಗೆ ಅಹುಜಾ ಕುಟುಂಬವನ್ನು ಕೊನೆಯದಾಗಿ ಪತ್ತೆಹಚ್ಚಲಾಗಿತ್ತು. ಕೆಲವು ನಿಮಿಷಗಳ ನಂತರ ಧಾರಾಕಾರ ಮಳೆ ಮತ್ತು ಹಿಮನದಿ ಸರೋವರದ ಸ್ಫೋಟದಿಂದ ಉಂಟಾದ ಬೃಹತ್ ಪ್ರವಾಹ ಆ ಪ್ರದೇಶವನ್ನು ಆವರಿಸಿ, ರಸ್ತೆಗಳು, ವಿದ್ಯುತ್ ಮತ್ತು ದೂರಸಂಪರ್ಕ ಕಡಿತಗೊಂಡಿತು.

ತಮ್ಮ ಪೋಷಕರು ಗಡಿ ಠಾಣೆಯ ಚೀನಾದ ಬದಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಭಾವಿಸಿರುವ ಪುತ್ರಿಯರಾದ ಶ್ರೇಯಾ ಮತ್ತು ಆಶ್ನಾ, ಅಂತರರಾಷ್ಟ್ರೀಯ ರಾಯಭಾರ ಕಚೇರಿಗಳೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ. ಅಪ್ಪ-ಅಮ್ಮ ಕೈಲಾಸ ಯಾತ್ರೆಯ ಕೊನೆಯ ಹಂತದಲ್ಲಿ, ಮನೆಗೆ ಮರಳಲು ಸಾಗಾವನ್ನು ಬಿಡುತ್ತಿದ್ದರು ಎಂದೂ, ಇಶಾ ಫೌಂಡೇಶನ್ ಪ್ರಕಾರ ಅವರು ನೇಪಾಳ ಸ್ಥಳೀಯ ಸಮಯ ಬೆಳಗ್ಗೆ 9 ಗಂಟೆಗೆ ಟಿಬೆಟ್-ನೇಪಾಳ ಗಡಿ ತಲುಪಿದ್ದರೆಂದೂ, ಕೊನೆಯದಾಗಿ ಗೈರಾಂಗ್ ಬಂದರು ಗಡಿ ದಾಟುವ ಕಚೇರಿಯಲ್ಲಿದ್ದ ಕೆಲವೇ ನಿಮಿಷಗಳ ನಂತರ ಆ ಕಚೇರಿಗೆ ಪ್ರವಾಹ ಅಪ್ಪಳಿಸಿತು ಎಂದು ಶ್ರೇಯಾ ಕಣ್ಣೀರಿಟ್ಟಿದ್ದಾರೆ.

ಅಂದು ಪೋಷಕರೊಂದಿಗೆ ಮಾತನಾಡಿ ನಿದ್ರೆಗೆ ಜಾರಿದ್ದೆವು, ಪ್ರವಾಹದ ಸುದ್ದಿ ಕೇಳಿ ಎಚ್ಚರವಾದೆವು ಎಂದ ಶ್ರೇಯಾ, ಪೋಷಕರು ಇಶಾ ಫೌಂಡೇಶನ್‌ನೊಂದಿಗೆ ಇರುವುದರಿಂದ ಅವರು ಪ್ರವಾಹಕ್ಕೆ ಸಿಲುಕಿದ ಗುಂಪಿನ ಭಾಗವಾಗಿದ್ದಾರೆ ಎಂದು ಫೌಂಡೇಶನ್ ಇಮೇಲ್ ಮೂಲಕ ತಿಳಿಸಿತು ಎಂದು ಹೇಳಿದ್ದಾರೆ.

2019ರಿಂದ 2023ರವರೆಗೆ ಹಂಚಿಕೆಯಾದ ಎಲ್ಲಾ ಸೈಟುಗಳು ರದ್ದು ಎಂದ ಯತೀಂದ್ರ ಸಿದ್ದರಾಮಯ್ಯ!

0

ಮೈಸೂರು: 2019ರಿಂದ 2023ರವರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ 50:50 ಅನುಪಾತದಲ್ಲಿ ಹಂಚಿಕೆಯಾಗಿರುವ ಎಲ್ಲಾ ಸೈಟುಗಳನ್ನು ರದ್ದುಪಡಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮುಡಾ ಸೈಟು ಹಂಚಿಕೆ ಹಗರಣ ಸಂಬಂಧ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2019ರಿಂದ 2023ರವರೆಗಿನ ಎಲ್ಲಾ 50:50 ಸೈಟುಗಳನ್ನು ರದ್ದುಪಡಿಸಲಾಗಿದ್ದು, 1,000ಕ್ಕೂ ಹೆಚ್ಚು ಸೈಟುಗಳನ್ನು ರದ್ದುಮಾಡಲಾಗಿದೆ ಎಂದರು. 50:50 ಸೈಟುಗಳು ಮತ್ತು ಆ ಸೈಟುಗಳಲ್ಲಿ ಮನೆ ಕಟ್ಟಿದವರ ಪಟ್ಟಿಯನ್ನು ತರಿಸುತ್ತಿರುವುದಾಗಿಯೂ, ಕಾನೂನಾತ್ಮಕ ಹೋರಾಟ ಇರುವ ಸೈಟುಗಳ ಬಗ್ಗೆ ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದೆಂದೂ ತಿಳಿಸಿದರು.

ಸಂಪೂರ್ಣ ಆದೇಶವನ್ನು ಪ್ರಾಧಿಕಾರಕ್ಕೆ ಕಳುಹಿಸಲಾಗಿದ್ದು, ಆದೇಶ ಜಾರಿ ಮಾಡುವ ಕೆಲಸದಲ್ಲಿ ಅಧಿಕಾರಿಗಳು ತೊಡಗಿದ್ದಾರೆ ಎಂದ ಸಚಿವರು, 2018ರ ಹಿಂದೆ ಸೈಟು ಪಡೆದಿರುವ ಬಗ್ಗೆಯೂ ಪರಿಶೀಲನೆ ನಡೆಯುತ್ತಿದ್ದು, ಅಲ್ಲಿ ಅಕ್ರಮಗಳಾಗಿದ್ದರೆ ಅವನ್ನೂ ರದ್ದು ಮಾಡುವುದಾಗಿ ಹೇಳಿದರು. ರಸ್ತೆಗೆ ತಮ್ಮ ಜಮೀನು ಕೊಟ್ಟು ಪರಿಹಾರ ಪಡೆದವರು ಕೂಡ ನಿವೇಶನ ಪಡೆದಿದ್ದಾರೆಂದೂ, ಸಾಕಷ್ಟು ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಎಲ್ಲವನ್ನೂ ರದ್ದು ಮಾಡಲಾಗಿದೆಯೆಂದೂ ಸ್ಪಷ್ಟಪಡಿಸಿದರು.

ಸಚಿವ ನಾಗೇಂದ್ರ ವಿಚಾರವಾಗಿ ಪ್ರತಿಕ್ರಿಯಿಸಿದ ಯತೀಂದ್ರ, ನಾಗೇಂದ್ರ ಯಾವುದೇ ತಪ್ಪು ಮಾಡಿಲ್ಲ ಎಂದರು. ತಪ್ಪು ಮಾಡಿದ್ದರೆ ಬಿಜೆಪಿಯವರು ಚರ್ಚೆಗೆ ಬರಬೇಕಿತ್ತು, ಆದರೆ ಗದ್ದಲ ಮಾಡಿ ಅಧಿವೇಶನ ಕೆಡಿಸಿದರು ಎಂದು ಆರೋಪಿಸಿದರು. ನಾಗೇಂದ್ರ ವಿಚಾರದಲ್ಲಿ ಸಿಎಂ ಹಾಗೂ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದ್ದು, ಬಿಜೆಪಿ ಪ್ರತಿಭಟನೆ ಮಾಡುವ ಬದಲು ಸದನದಲ್ಲಿ ಚರ್ಚೆ ಮಾಡಬಹುದಿತ್ತು ಎಂದು ಹೇಳಿದರು.

ಕಾನ್ಪುರದಲ್ಲಿ ಭೀಕರ ತರಬೇತಿ ವಿಮಾನ ಅಪಘಾತ: ಕರ್ನಾಟಕದ ಅಭಿಷೇಕ್ ಪೂಜಾರಿ ಸೇರಿ ಇಬ್ಬರು ಪೈಲಟ್‌ಗಳು ಸಾವು

0

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ತರಬೇತಿ ವಿಮಾನ ಪತನಗೊಂಡು ಕರ್ನಾಟಕದ ತರಬೇತಿ ಪೈಲಟ್ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಗಂಗಾ ನದಿ ಬಳಿಯ ನತ್ತುಪುರವಾ ಗ್ರಾಮದ ಸಮೀಪದ ಗಂಗಾ ಬ್ಯಾರೇಜ್ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ.

ಮೃತರನ್ನು ಗುಜರಾತ್ ಮೂಲದ ಬೋಧಕ ಪೈಲಟ್ ಸಚಿನ್ ಭಾಟಿಯಾ ಹಾಗೂ ಕರ್ನಾಟಕದ ಅಭಿಷೇಕ್ ಪೂಜಾರಿ ಎಂದು ಗುರುತಿಸಲಾಗಿದೆ. ಬೆಳಗ್ಗೆ ಸುಮಾರು 11.30ಕ್ಕೆ ತರಬೇತಿ ಕೇಂದ್ರದಿಂದ ಹಾರಾಟ ಆರಂಭಿಸಿದ್ದ ಡಬಲ್ ಎಂಜಿನ್ ವಿಮಾನ, ತರಬೇತಿ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಸುಮಾರು 20 ನಿಮಿಷಗಳ ಬಳಿಕ ಪತನಗೊಂಡಿದೆ.

ಪೊಲೀಸ್ ಆಯುಕ್ತ ರಘುಬೀರ್ ಲಾಲ್ ಅವರ ಪ್ರಕಾರ, ವಿಮಾನವು ಹೊಲವೊಂದಕ್ಕೆ ಅಪ್ಪಳಿಸಿದ್ದು, ಅಪಘಾತದ ತೀವ್ರತೆಗೆ ವಿಮಾನದ ಅವಶೇಷಗಳು ಸುತ್ತಮುತ್ತ ಚದುರಿಕೊಂಡಿವೆ. ವಿಮಾನ ಪತನದ ವೇಳೆ ಭಾರಿ ಶಬ್ದ ಕೇಳಿಬಂದಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ.

ಪತನಗೊಂಡ ಟೆಕ್ನಮ್ ಅವಳಿ ಎಂಜಿನ್ ವಿಮಾನವನ್ನು 2023ರಲ್ಲಿ ತರಬೇತಿ ಉದ್ದೇಶಕ್ಕಾಗಿ ಫ್ಲೈಟ್ ಟ್ರೈನಿಂಗ್ ಶಾಲೆಗೆ ತರಲಾಗಿತ್ತು. ಬೋಧಕ ಪೈಲಟ್ ಸಚಿನ್ ಭಾಟಿಯಾ ಅವರಿಗೆ ಸುಮಾರು 3,000 ಗಂಟೆಗಳ ಹಾರಾಟದ ಅನುಭವವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ವಿಮಾನ ಅಪಘಾತದ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ಘಟನೆಯ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ ಮಾಹಿತಿ ನೀಡಲಾಗಿದ್ದು, ತಾಂತ್ರಿಕ ತನಿಖೆ ಮೂಲಕ ಅಪಘಾತದ ಕಾರಣ ಪತ್ತೆಹಚ್ಚಲಾಗುವುದು ಎಂದು ಡಿಜಿಸಿಎ ತಿಳಿಸಿದೆ.

ಈ ವರ್ಷವೇ ಮೂರನೇ ತರಬೇತಿ ವಿಮಾನ ಅಪಘಾತ

ತರಬೇತಿ ವಿಮಾನಗಳಿಗೆ ಸಂಬಂಧಿಸಿದ ಅಪಘಾತಗಳು ಈ ವರ್ಷವೂ ಮುಂದುವರಿದಿವೆ. ಜೂನ್‌ನಲ್ಲಿ ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ಎರಡು ಆಸನಗಳ ತರಬೇತಿ ವಿಮಾನವೊಂದು ಹೊಲಕ್ಕೆ ಪತನಗೊಂಡಿತ್ತು. ಅಲೀಗಢ ವಿಮಾನ ನಿಲ್ದಾಣದಿಂದ ತರಬೇತಿ ಹಾರಾಟಕ್ಕೆ ತೆರಳಿದ್ದ ವಿಮಾನ ಹೈಟೆನ್ಷನ್ ವಿದ್ಯುತ್ ತಂತಿಗೆ ಡಿಕ್ಕಿ ಹೊಡೆದ ಬಳಿಕ ಪತನಗೊಂಡಿತ್ತು. ಘಟನೆಯಲ್ಲಿ ಮಹಾರಾಷ್ಟ್ರ ಮೂಲದ ತರಬೇತಿ ಪೈಲಟ್ ಕೈನಾತ್ ಖಾನ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದರು.

ಇದಕ್ಕೂ ಮೊದಲು ಮೇ 13ರಂದು ಮಹಾರಾಷ್ಟ್ರದ ಬಾರಾಮತಿಯಲ್ಲಿ ರೆಡ್‌ಬರ್ಡ್ ಫ್ಲೈಟ್ ಟ್ರೈನಿಂಗ್ ಅಕಾಡೆಮಿಗೆ ಸೇರಿದ ತರಬೇತಿ ವಿಮಾನ ಲ್ಯಾಂಡಿಂಗ್ ವೇಳೆ ಕಂಬಕ್ಕೆ ಡಿಕ್ಕಿ ಹೊಡೆದು ತುರ್ತು ಲ್ಯಾಂಡಿಂಗ್ ಮಾಡಿತ್ತು. ವಿಮಾನದಲ್ಲಿದ್ದ ತರಬೇತಿ ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದರು.

ಕಾನ್ಪುರದ ಇಂದಿನ ದುರಂತದಲ್ಲಿ ಇಬ್ಬರು ಪೈಲಟ್‌ಗಳ ಜೀವಹಾನಿಯಾಗಿರುವುದು ತರಬೇತಿ ವಿಮಾನಗಳ ಸುರಕ್ಷತೆ ಕುರಿತು ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಭಾರತದ ಚೆಸ್ ಪ್ರತಿಭೆಗೆ ಮತ್ತೊಂದು ಗರಿ: ಗ್ರ್ಯಾಂಡ್ ಚೆಸ್ ಟೂರ್ ಫೈನಲ್ಸ್ ಪ್ರಶಸ್ತಿ ಗೆದ್ದ ಆರ್. ಪ್ರಜ್ಞಾನಂದ

0

ವಾಷಿಂಗ್ಟನ್: ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ಅವರು ಅಮೆರಿಕದ ಸೈಂಟ್ ಲೂಯಿಸ್‌ನಲ್ಲಿ ನಡೆದ ಪ್ರತಿಷ್ಠಿತ ಗ್ರ್ಯಾಂಡ್ ಚೆಸ್ ಟೂರ್ ಪ್ರಶಸ್ತಿಯನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ತಮ್ಮ ವೃತ್ತಿಜೀವನದ ಅತ್ಯಂತ ದೊಡ್ಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಪ್ರಜ್ಞಾನಂದ, ಗ್ರ್ಯಾಂಡ್ ಚೆಸ್ ಟೂರ್ ಚಾಂಪಿಯನ್ ಆದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಫೈನಲ್‌ನಲ್ಲಿ ಅಮೆರಿಕದ ಸ್ಟಾರ್ ಗ್ರ್ಯಾಂಡ್‌ಮಾಸ್ಟರ್ ಫ್ಯಾಬಿಯಾನೊ ಕರುವಾನಾ ವಿರುದ್ಧ ಅದ್ಭುತ ಕಮ್‌ಬ್ಯಾಕ್ ಮಾಡಿದ ಪ್ರಜ್ಞಾನಂದ, ಒಟ್ಟಾರೆ 15-13 ಅಂಕಗಳ ಅಂತರದಿಂದ ರೋಚಕ ಗೆಲುವು ದಾಖಲಿಸಿದರು. ಈ ಐತಿಹಾಸಿಕ ಸಾಧನೆಗಾಗಿ ಅವರಿಗೆ 2 ಲಕ್ಷ ಅಮೆರಿಕನ್ ಡಾಲರ್, ಅಂದರೆ ಸುಮಾರು 1.67 ಕೋಟಿ ರೂಪಾಯಿಗೂ ಅಧಿಕ ನಗದು ಬಹುಮಾನ ಲಭಿಸಿದೆ.

ಫೈನಲ್ ಪಂದ್ಯದ ಆರಂಭದಲ್ಲಿ ಕರುವಾನಾ ಸಂಪೂರ್ಣ ಮೇಲುಗೈ ಸಾಧಿಸಿದ್ದರು. ಮೊದಲ ಕ್ಲಾಸಿಕಲ್ ಗೇಮ್‌ನಲ್ಲಿ ಪ್ರಜ್ಞಾನಂದ 6-0 ಅಂತರದಿಂದ ಸೋಲನುಭವಿಸಿ ಭಾರೀ ಹಿನ್ನಡೆ ಅನುಭವಿಸಿದರು. ಬಳಿಕ ಎರಡನೇ ಕ್ಲಾಸಿಕಲ್ ಗೇಮ್‌ನಲ್ಲಿ 3-3ರ ಡ್ರಾ ಸಾಧಿಸುವ ಮೂಲಕ ತಿರುಗೇಟು ನೀಡಿದರು.

ಆದರೂ ಕ್ಲಾಸಿಕಲ್ ಸುತ್ತುಗಳ ಅಂತ್ಯದ ವೇಳೆಗೆ ಕರುವಾನಾ 6 ಪಾಯಿಂಟ್‌ಗಳ ಮುನ್ನಡೆಯೊಂದಿಗೆ ಅಂತಿಮ ದಿನದಾಟಕ್ಕೆ ಪ್ರವೇಶಿಸಿದ್ದರು. ಈ ಹಂತದಲ್ಲಿ ಪ್ರಜ್ಞಾನಂದ ಅವರ ಮುಂದೆ ದೊಡ್ಡ ಸವಾಲು ಎದುರಾಗಿತ್ತು.

ಆದರೆ ರ್‍ಯಾಪಿಡ್ ವಿಭಾಗದಲ್ಲಿ ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಅದ್ಭುತ ಪ್ರದರ್ಶನ ನೀಡಿದರು. ಸತತ ಎರಡು ರ್‍ಯಾಪಿಡ್ ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ರಜ್ಞಾನಂದ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಕರುವಾನಾ ವಿರುದ್ಧದ ಭಾರೀ ಹಿನ್ನಡೆಯನ್ನು ಹಂತ ಹಂತವಾಗಿ ಸರಿದೂಗಿಸಿದ ಅವರು, ಚಾಂಪಿಯನ್ ಪಟ್ಟದ ರೇಸ್‌ನಲ್ಲಿ ಮತ್ತೆ ಪ್ರಬಲವಾಗಿ ಕಾಣಿಸಿಕೊಂಡರು.

ಮುನ್ನಡೆ ಕಾಯ್ದುಕೊಳ್ಳಲು ನಾಲ್ಕು ಪಂದ್ಯಗಳ ಬ್ಲಿಟ್ಜ್ ಹಂತ ನಿರ್ಣಾಯಕವಾಗಿತ್ತು. ಮೊದಲ ಬ್ಲಿಟ್ಜ್ ಪಂದ್ಯದಲ್ಲಿ ಪ್ರಜ್ಞಾನಂದ ಅವರಿಗೆ ಗೆಲುವಿನ ಉತ್ತಮ ಅವಕಾಶವಿದ್ದರೂ, ಸಮಯದ ಒತ್ತಡದಲ್ಲಿ ಕೆಲ ತಪ್ಪುಗಳನ್ನು ಮಾಡಿದರು. ಆದರೆ ಕರುವಾನಾಗೆ ಗೆಲುವಿನ ನಿರ್ಣಾಯಕ ನಡೆಗಳನ್ನು ಕಂಡುಕೊಳ್ಳಲು ಸಾಧ್ಯವಾಗದ ಕಾರಣ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.

ಬ್ಲಿಟ್ಜ್ ಹಂತದಲ್ಲಿ ಸಮಬಲ ಸಾಧಿಸಿದ ಪ್ರಜ್ಞಾನಂದ, ಅಂತಿಮವಾಗಿ ಒಟ್ಟಾರೆ 15-13 ಅಂಕಗಳ ಅಂತರದಿಂದ ಕರುವಾನಾ ಅವರನ್ನು ಮಣಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಈ ಗೆಲುವಿನೊಂದಿಗೆ ಆರ್. ಪ್ರಜ್ಞಾನಂದ ಗ್ರ್ಯಾಂಡ್ ಚೆಸ್ ಟೂರ್ ಚಾಂಪಿಯನ್ ಆದ ಮೊದಲ ಭಾರತೀಯ ಎಂಬ ಅಪರೂಪದ ದಾಖಲೆಯನ್ನು ನಿರ್ಮಿಸಿದ್ದಾರೆ. 6 ಪಾಯಿಂಟ್‌ಗಳ ಹಿನ್ನಡೆಯಿಂದ ಆರಂಭಿಸಿ, ರ್‍ಯಾಪಿಡ್ ಮತ್ತು ಬ್ಲಿಟ್ಜ್ ಹಂತಗಳಲ್ಲಿ ಸಂಘಟಿತ ಆಟದ ಮೂಲಕ ಪಂದ್ಯವನ್ನು ತಮ್ಮತ್ತ ತಿರುಗಿಸಿಕೊಂಡಿರುವ ಪ್ರಜ್ಞಾನಂದ ಅವರ ಪ್ರದರ್ಶನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಭಾರತೀಯ ಚೆಸ್‌ನ ಯುವ ಪ್ರತಿಭೆಯಾಗಿ ಈಗಾಗಲೇ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಪ್ರಜ್ಞಾನಂದ ಅವರ ಈ ಐತಿಹಾಸಿಕ ಗೆಲುವು ದೇಶದ ಚೆಸ್ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯವನ್ನು ಸೇರ್ಪಡೆಗೊಳಿಸಿದೆ.

24 AEE ನೇಮಕಾತಿ ಅಕ್ರಮ ಆರೋಪ: ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಹೆಚ್‌ಡಿಕೆ ಆಗ್ರಹ

0

ಬೆಂಗಳೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾಗಿದ್ದ ಅವಧಿಯಲ್ಲಿ 24 ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳ (AEE) ನೇಮಕಾತಿಯನ್ನು ತರಾತುರಿಯಲ್ಲಿ ಮಾಡಲಾಗಿದೆ ಎಂದು ಆರೋಪಿಸಿರುವ ಹೆಚ್‌ಡಿಕೆ, ಈ ಅಕ್ರಮದ ಹೊಣೆ ಹೊತ್ತು ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ನೇಮಕಾತಿಗೆ ಸಂಬಂಧಿಸಿದ ಒಎಂಆರ್ ಶೀಟ್‌ಗಳು ಹಾಗೂ ದಾಖಲೆಗಳನ್ನು ಬಿಡುಗಡೆ ಮಾಡಿರುವ ಕುಮಾರಸ್ವಾಮಿ, ನೇಮಕಾತಿಯನ್ನು ತರಾತುರಿಯಲ್ಲಿ ನಡೆಸಬಾರದು ಎಂದು ನ್ಯಾಯಾಲಯದ ಆದೇಶವಿದ್ದರೂ 24 ಮಂದಿಗೆ ನೇಮಕಾತಿ ಆದೇಶ ನೀಡಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.

‘ನಮ್ಮ ಧ್ವನಿ ಅಡಗಿಸಲು ಸಾಧ್ಯವಿಲ್ಲ’

ಪ್ರಿಯಾಂಕ್ ಖರ್ಗೆ ಪಾರದರ್ಶಕ ಆಡಳಿತದ ಬಗ್ಗೆ ಮಾತನಾಡುತ್ತಾರೆ. ಆದರೆ ಸರ್ಕಾರದ ವಿರುದ್ಧ ಧ್ವನಿ ಎತ್ತುವವರನ್ನು ಮೌನಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೆಚ್‌ಡಿಕೆ ವಾಗ್ದಾಳಿ ನಡೆಸಿದ್ದಾರೆ. ಆರ್‌ಎಸ್‌ಎಸ್ ಖಾತೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪ್ರತಿದಿನ ಪ್ರಶ್ನಿಸುವ ಪ್ರಿಯಾಂಕ್ ಖರ್ಗೆ, ತಮ್ಮ ಇಲಾಖೆಯಲ್ಲಿನ ನೇಮಕಾತಿ ವಿಚಾರಕ್ಕೂ ಉತ್ತರಿಸಬೇಕು ಎಂದು ಸವಾಲು ಹಾಕಿದ್ದಾರೆ.

ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿಚಾರವನ್ನೂ ಪ್ರಸ್ತಾಪಿಸಿದ ಹೆಚ್‌ಡಿಕೆ, ಮೊದಲು ಆರೋಗ್ಯ ಸರಿಯಿಲ್ಲ ಎಂದು ಹೇಳಿದ್ದ ಸಚಿವರು ಬಳಿಕ ಅವರು ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ ಎಂದಿದ್ದರು. ಗೃಹ ಸಚಿವರಿಗೆ ಅಧಿಕಾರಿಯೊಬ್ಬರಿರುವ ಸ್ಥಳವೇ ಗೊತ್ತಿಲ್ಲದಿದ್ದರೆ ಗೃಹ ಇಲಾಖೆ ಯಾಕೆ ನಡೆಸಬೇಕು ಎಂದು ಪ್ರಶ್ನಿಸಿದ್ದಾರೆ.

ಹೆಚ್‌ಡಿಕೆಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ತಮ್ಮ ವಿರುದ್ಧದ ಆರೋಪಗಳಿಗೆ ಪ್ರಿಯಾಂಕ್ ಖರ್ಗೆ ಕೂಡ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ನನ್ನ ನಾಲಿಗೆ ಬಗ್ಗೆ ಮಾತನಾಡುವವರು ಜೆಡಿಎಸ್‌ನಲ್ಲಿ ಯಾರು? ನಿಮ್ಮ ಪಕ್ಷದ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಪ್ರಿಯಾಂಕ್ ಖರ್ಗೆ ಬೇಕಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.

ಅಧಿಕಾರಕ್ಕಾಗಿ ತತ್ವ ಮತ್ತು ಸಿದ್ಧಾಂತಗಳನ್ನು ಬದಿಗೊತ್ತುವವರಿಂದ ತಾವು ರಾಜಕೀಯ ಪಾಠ ಕಲಿಯಬೇಕಿಲ್ಲ ಎಂದು ಹೇಳಿರುವ ಪ್ರಿಯಾಂಕ್ ಖರ್ಗೆ, ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆಯಾಗಿದ್ದ ವಿಚಾರಕ್ಕೂ ಪ್ರತಿಕ್ರಿಯಿಸಿದ ಅವರು, ಅಧಿಕಾರಿ ಎಲ್ಲಿದ್ದಾರೆ ಎಂಬ ಮಾಹಿತಿ ತಮಗೆ ಇದೆ. ಆದರೆ ಆ ಮಾಹಿತಿಯನ್ನು ಕುಮಾರಸ್ವಾಮಿ ಅಥವಾ ಬಿಜೆಪಿಯವರಿಗೆ ಹೇಳುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹೀಗಾಗಿ 24 AEE ನೇಮಕಾತಿ ಆರೋಪದಿಂದ ಆರಂಭವಾದ ರಾಜಕೀಯ ಸಮರ ಇದೀಗ ಜ್ಞಾನೇಂದ್ರ ಕುಮಾರ್ ಪ್ರಕರಣದವರೆಗೂ ವಿಸ್ತರಿಸಿದ್ದು, ಹೆಚ್‌ಡಿಕೆ ಮತ್ತು ಪ್ರಿಯಾಂಕ್ ಖರ್ಗೆ ನಡುವಿನ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಪ್ರದೋಷ್ ಮಾಫಿ ಸಾಕ್ಷಿಗೆ ಡೇಟ್ ಫಿಕ್ಸ್ ; ಸೆ.2ರಂದು ಕೋರ್ಟ್‌ಗೆ ಹಾಜರು

0

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಎ14 ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಿ ನ್ಯಾಯಾಲಯದ ಮುಂದೆ ಸಾಕ್ಷಿ ನುಡಿಯುವ ದಿನಾಂಕ ನಿಗದಿಯಾಗಿದೆ. ಸೆಪ್ಟೆಂಬರ್ 2ರಂದು ಪ್ರದೋಷ್ ಖುದ್ದು ಕೋರ್ಟ್‌ಗೆ ಹಾಜರಾಗಿ ಹೇಳಿಕೆ ನೀಡಲಿದ್ದಾರೆ.

ಪ್ರದೋಷ್ ಅವರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದ್ದು, ನಿಗದಿತ ದಿನಾಂಕದಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿದೆ. ಪ್ರದೋಷ್ ಜೈಲಿನಲ್ಲಿರುವ ಹಿನ್ನೆಲೆಯಲ್ಲಿ ಅವರನ್ನು ಕೋರ್ಟ್‌ಗೆ ಕರೆತರುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಪ್ರದೋಷ್ ಇದೀಗ ಮಾಫಿ ಸಾಕ್ಷಿಯಾಗಲು ಒಪ್ಪಿಕೊಂಡಿದ್ದಾರೆ. ಪ್ರಕರಣದ ಕುರಿತು ತಮಗೆ ತಿಳಿದಿರುವ ಮಾಹಿತಿಯನ್ನು ನ್ಯಾಯಾಲಯದ ಮುಂದೆ ಸಾಕ್ಷ್ಯ ರೂಪದಲ್ಲಿ ದಾಖಲಿಸುವ ಪ್ರಕ್ರಿಯೆ ಸೆಪ್ಟೆಂಬರ್ 2ರಿಂದ ನಡೆಯಲಿದೆ.

ಪ್ರದೋಷ್ ನೀಡುವ ಹೇಳಿಕೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಯಾವೆಲ್ಲ ಅಂಶಗಳು ಹೊರಬರಲಿವೆ ಎಂಬುದು ಇದೀಗ ಕುತೂಹಲ ಮೂಡಿಸಿದೆ. ಅವರ ಸಾಕ್ಷ್ಯ ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆಯಿದೆ.

ಹೀಗಾಗಿ ಸೆಪ್ಟೆಂಬರ್ 2ರಂದು ನಡೆಯಲಿರುವ ಪ್ರದೋಷ್ ಅವರ ಸಾಕ್ಷ್ಯ ದಾಖಲಿಸುವ ಪ್ರಕ್ರಿಯೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆಯಲ್ಲಿ ಪ್ರಮುಖ ಘಟ್ಟವಾಗಲಿದೆ.

ಶಾಲಾ ಮಕ್ಕಳೊಂದಿಗೆ ರಕ್ಷಾಬಂಧನ ಆಚರಿಸಿದ ಪ್ರಧಾನಿ ಮೋದಿ!

0

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಾಲಾ ಮಕ್ಕಳೊಂದಿಗೆ ರಕ್ಷಾಬಂಧನ ಹಬ್ಬವನ್ನು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಿದ್ದಾರೆ. ತಮ್ಮ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿನಿಯರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಅವರ ಕೈಗೆ ಪ್ರೀತಿಯಿಂದ ರಾಖಿ ಕಟ್ಟಿ ಶುಭ ಹಾರೈಸಿದರು.

ರಾಖಿ ಕಟ್ಟಲು ಬಂದ ವಿದ್ಯಾರ್ಥಿನಿಯರನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡ ಪ್ರಧಾನಿ ಮೋದಿ, ಮಕ್ಕಳೊಂದಿಗೆ ಆತ್ಮೀಯವಾಗಿ ಹರಟೆ ಹೊಡೆದರು. ರಾಖಿ ಕಟ್ಟುವಾಗ ಮಕ್ಕಳಿಗೆ ಹೈ-ಫೈವ್ ನೀಡುತ್ತಾ, ಅವರ ಯೋಗಕ್ಷೇಮ ಹಾಗೂ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸಿದರು. ವಿದ್ಯಾರ್ಥಿನಿಯೊಬ್ಬಳು ರಾಖಿ ಕಟ್ಟಿದ ನಂತರ, ಪ್ರಧಾನಿ ಅವಳ ತಲೆ ಮೇಲೆ ಕೈಯಿಟ್ಟು ಆಶೀರ್ವದಿಸಿದರು. ಮಕ್ಕಳೊಂದಿಗೆ ನಗುತ್ತಾ, ತಮಾಷೆಯ ಮಾತುಗಳನ್ನಾಡುತ್ತಾ ಸಂವಾದ ನಡೆಸಿದ ಪ್ರಧಾನಿ, ಪ್ರತಿಯೊಬ್ಬ ಮಗುವಿಗೂ ಪ್ರೀತಿಯಿಂದ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು.