Home Blog Page 3

ಕಾರು ಡ್ರಿಫ್ಟಿಂಗ್ ಪ್ರಕರಣ: ವಿಚಾರಣೆ ಬಳಿಕ ರಿಕ್ಕಿ ರೈಯನ್ನ ಹಿಂಬಾಗಿಲಿನಿಂದ ಕಳುಹಿಸಿದ ಪೊಲೀಸರು

ಬೆಂಗಳೂರು: ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ಪ್ರಕರಣ ಸಂಬಂಧ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿಚಾರಣೆಗೆ ಹಾಜರಾಗಿದ್ದು, ವಿಚಾರಣೆ ಬಳಿಕ ಕಬ್ಬನ್ ಪಾರ್ಕ್ ಪೊಲೀಸರು ಅವರನ್ನು ಹಿಂಬಾಗಿಲಿನಿಂದ ಹೊರಬಿಟ್ಟಿದ್ದಾರೆ. ಸಾರ್ವಜನಿಕ ವಲಯದಲ್ಲಿ ಈ ಕ್ರಮವು ತೀವ್ರ ಚರ್ಚೆಗೆ ಕಾರಣವಾಗಿದೆ.

ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣೆಯಲ್ಲಿ ವಕೀಲರೊಂದಿಗೆ ಹಾಜರಾದ ರಿಕ್ಕಿ ರೈ ವಿಚಾರಣೆಗೆ ಒಳಗಾದರು. ವಿಚಾರಣೆ ಮುಗಿದ ನಂತರ ಮಾಧ್ಯಮದ ಕಣ್ಣಿಗೆ ತಪ್ಪಿಸಿ, ಹಿಂಬಾಗಿಲು ಮೂಲಕ ಬಿಡುಗಡೆ ಮಾಡಲಾಗಿದೆ. ಈ ಕ್ರಮ ಸಾರ್ವಜನಿಕರಲ್ಲಿ ಕುತೂಹಲ ಮತ್ತು ಚರ್ಚೆ ಹುಟ್ಟಿಸಿದೆ.

ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ 5ನೇ ಎಸಿಎಂಎಂ ಕೋರ್ಟ್ ರಿಕ್ಕಿ ರೈಗೆ ನಿರೀಕ್ಷಣಾ ಜಾಮೀನು ನೀಡಿದೆ. ಬಿಎನ್‌ಎಸ್ 184 ಅಡಿ ಎಫ್‌ಐಆರ್ ದಾಖಲಾಗಿದ್ದ ಹಿನ್ನೆಲೆ, ಕೋರ್ಟ್‌ನಲ್ಲಿ ಖುದ್ದಾಗಿ ಹಾಜರಾಗಿರುವ ರಿಕ್ಕಿ ರೈ 1 ಲಕ್ಷ ರೂ. ಬಾಂಡ್ ಮತ್ತು ಶ್ಯೂರಿಟಿ ಹೊಂದಿ ಜಾಮೀನು ಪಡೆದಿದ್ದಾರೆ. ತನಿಖೆಗೆ ಸಹಕರಿಸಲು ಸೂಚನೆ ನೀಡಲಾಗಿದೆ.

ರಿಕ್ಕಿ ರೈ ಪರ ವಕೀಲ ನಾರಾಯಣ ಸ್ವಾಮಿ ಮಾಧ್ಯಮಗಳಿಗೆ ವಿವರಿಸಿದರು: “ಕಾರಿನಲ್ಲಿ ಬ್ರೇಕ್ ತೊಂದರೆ ಆಗಿದ್ದು, ಡ್ರೈವರ್‌ನ ತಪ್ಪು. ರಿಕ್ಕಿ ರೈ ಯಾವುದೇ ಡ್ರಿಫ್ಟಿಂಗ್ ಮಾಡಿದ್ದಾರೆ ಅಥವಾ ಉದ್ದೇಶಪೂರ್ವಕ ಕ್ರೇಜ್ ಹೊಂದಿಲ್ಲ. ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ ಅರ್ಥವಾಗುತ್ತಿಲ್ಲ” ಎಂದಿದ್ದಾರೆ.

ರಾಜ್ಯದೆಲ್ಲೆಡೆ ಇಂದು ಮಳೆ ಆರ್ಭಟ? 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ!

ಬೆಂಗಳೂರು: ರಾಜ್ಯದ ಕರಾವಳಿ ಸೇರಿ ಹತ್ತಾರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೀದರ್, ಕಲಬುರ್ಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಕೊಪ್ಪಳ, ಗದಗ, ಧಾರವಾಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಿದೆ.

ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಚಾಮರಾಜನಗರ, ದಾವಣಗೆರೆ, ಬಳ್ಳಾರಿ, ವಿಜಯನಗರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿಯೂ ಗುಡುಗು ಸಿಡಿಲು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ.

ಭೀಕರ ರಸ್ತೆ ಅಪಘಾತ| ಇಬ್ಬರು ಯುವಕರು ಸ್ಥಳದಲ್ಲೇ ಸಾವು!

ಹುಬ್ಬಳ್ಳಿ:- ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಗೋಕುಲ್ ರಸ್ತೆಯಲ್ಲಿರುವ ಅರ್ಬನ್ ಓಯಸಿಸ್ ಮಾಲ್ ಸಮೀಪ ಜರುಗಿದೆ.

ಫಯಾಜ್ (25) ಮತ್ತು ಮೋಹಿದ್ ಮೃತರು. ರಸ್ತೆ ಮೇಲೆ ಕೇಬಲ್ ವೈರ್ ಹರಿದು ಬಿದ್ದಿದ್ದರಿಂದ ಈ ಅಪಘಾತ ಸಂಭವಿಸಿದೆ. ಬೈಕ್‌ನಲ್ಲಿ ಸಾಗುತ್ತಿದ್ದ ಇಬ್ಬರು ಯುವಕರು, ಆ ವೈರ್‌ಗೆ ಸಿಲುಕಿ ನಿಯಂತ್ರಣ ಕಳೆದುಕೊಂಡು ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಪರಿಣಾಮವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ಹುಬ್ಬಳ್ಳಿ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

125 ಜನರಿದ್ದ ವಿಮಾನ ಪತನ: 34 ಜನ ಸಾವು ಶಂಕೆ!? 20ಕ್ಕೂ ಅಧಿಕ ಮಂದಿ ನಾಪತ್ತೆ!

0

ಕೊಲಂಬಿಯಾ: 125 ಜನರನ್ನು ಹೊತ್ತೊಯ್ಯುತ್ತಿದ್ದ ಕೊಲಂಬಿಯಾದ ವಾಯುಪಡೆಯ ವಿಮಾನ ಪತನಗೊಂಡು ಕನಿಷ್ಠ ಮೂವತ್ತನಾಲ್ಕು ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ.

ಸೋಮವಾರ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಸುಮಾರು 20ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದಾರೆ. ಸ್ಥಳದಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ತೀವ್ರವಾಗಿದೆ. ಕೊಲಂಬಿಯಾದ ವಾಯುಪಡೆಯ ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ಮಾರಕವಾದ ಅಪಘಾತ ಇದಾಗಿದೆ. ಈ ದುರಂತವು ಲಾಕ್‌ಹೀಡ್ ಮಾರ್ಟಿನ್ ನಿರ್ಮಿತ ಹರ್ಕ್ಯುಲಸ್ ಸಿ -130 ಸಾರಿಗೆ ವಿಮಾನವು ಪೆರುವಿನ ಗಡಿಯಲ್ಲಿರುವ ಪೋರ್ಟೊ ಲೆಗುಯಿಜಾಮೊದಿಂದ ಹಾರುತ್ತಿದ್ದಾಗ ಸಂಭವಿಸಿದೆ ಎಂದು ರಕ್ಷಣಾ ಸಚಿವ ಪೆಡ್ರೊ ಸ್ಯಾಂಚೆಜ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ವಿಮಾನವು ಮದ್ದುಗುಂಡುಗಳನ್ನು ಹೊತ್ತೊಯ್ಯುತ್ತಿತ್ತು, ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ನೆಲಕ್ಕೆ ಅಪ್ಪಳಿಸಿ ನಂತರ ಅದು ಸ್ಫೋಟಗೊಂಡಿತು ಮತ್ತು ಪರಿಣಾಮವಾಗಿ, ವಿಮಾನವು ಬೆಂಕಿಗೆ ಆಹುತಿಯಾಯಿತು ಎಂದು ವರದಿ ತಿಳಿಸಿದೆ.

ದಾವಣಗೆರೆ ದಕ್ಷಿಣ: ಕಾಂಗ್ರೆಸ್ ಟಿಕೆಟ್ ಘೋಷಣೆ ಬಳಿಕ ಮುಸ್ಲಿಮ್ ನಾಯಕರಿಂದ ಪ್ರತಿಭಟನೆ

0

ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ನಿಯೋಜನೆ ಸಂಬಂಧಾಗಿ ಅಲ್ಪಸಂಖ್ಯಾತ ಸಮುದಾಯದ ನಾಯಕರು ಕಾಂಗ್ರೆಸ್ ವಿರುದ್ಧ ಬಂಡಾಯ ಸೂಚಿಸಿದ್ದಾರೆ. 23 ಮಂದಿ ಮುಸ್ಲಿಮ್ ನಾಯಕರು ನಾಮಪತ್ರ ಸಲ್ಲಿಸುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಸಮುದಾಯದ ಬೇಡಿಕೆಗೆ ಸ್ಪಂದಿಸದೇ, ಎಸ್‌ಎಸ್ ಮಲ್ಲಿಕಾರ್ಜುನ್ ಪುತ್ರ ಸಮರ್ಥ್ ಶಾಮನೂರಿಗೆ ಟಿಕೆಟ್ ನೀಡಿರುವುದು ಈ ಪ್ರಚಂಡ ಪ್ರತಿಭಟನೆಯ ಕಾರಣವಾಗಿದೆ. ನಾಮಪತ್ರ ಸಲ್ಲಿಸಿದ ಮುಖಂಡರು, “ನಮ್ಮ ಸಮುದಾಯದ ನಾಯಕರಿಗೆ ಟಿಕೆಟ್ ನೀಡಬೇಕೆಂದು ನಾವು ವೀಕ್ಷಿಸುತ್ತಿದ್ದೆವು, ಆದರೆ ನಮ್ಮ ಬೇಡಿಕೆ ನಿರಾಕರಿಸಲಾಗಿದೆ” ಎಂದು ಹೇಳಿದರು.

ಕಟ್ಟುನಿಟ್ಟಿನ ಪ್ರಸ್ತುತಿಯಲ್ಲಿ, 100ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಬೇಕೆಂದು ಮುಸ್ಲಿಮ್ ಸಮುದಾಯ ಕರೆ ನೀಡಿದ್ದು, 23 ಮಂದಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸಾಧಿಕ್ ಪೈಲ್ವಾನ್ ಪ್ರತಿಕ್ರಿಯಿಸಿ, “ಎಲ್ಲಾವತ್ತು ನಾವು ಹಿಂದೆಗೆ ಸರಿಯುವುದಿಲ್ಲ. ಶಿಷ್ಯತ್ವದಲ್ಲಿ ಶ್ರಮಿಸಿದ್ದೇವೆ, ಗುರುಗಳ ಮಾರ್ಗದರ್ಶನದಲ್ಲಿ ಮುಂದೆ ಸಾಗುತ್ತೇವೆ” ಎಂದು ಹೇಳಿದರು.

ಈ ಘಟನೆ ದಾವಣಗೆರೆ ದಕ್ಷಿಣದ ಚುನಾವಣಾ ಹವಾಮಾನದಲ್ಲಿ ಪ್ರಮುಖ ತಾತ್ಸಾರವನ್ನು ಹುಟ್ಟಿಸಿದೆ.

ರೈತರ ಸಾಲ ಮನ್ನಾ ಇಲ್ಲ: ಸಂಸತ್ತಿನಲ್ಲಿ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

ನವದೆಹಲಿ: ಕೇಂದ್ರ ಸರ್ಕಾರದ ಮುಂದೆ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ಯಾವುದೇ ಪ್ರಸ್ತಾಪ ಇಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ತಿಳಿಸಿದರು.

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಮೂಲಕ ರೈತರಿಗೆ 3 ಲಕ್ಷ ರೂಪಾಯಿ ವರೆಗೆ ಸಬ್ಸಿಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಈ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿದ ರೈತರಿಗೆ ಹೆಚ್ಚುವರಿ ಪ್ರೋತ್ಸಾಹಕಗಳೂ ಲಭ್ಯವಾಗುತ್ತವೆ ಎಂದು ಸಚಿವೆ ಹೇಳಿದರು.

ಇದಲ್ಲದೆ, ಭದ್ರತೆ ರಹಿತ ಅಲ್ಪಾವಧಿ ಕೃಷಿ ಸಾಲದ ಮಿತಿ 1.60 ಲಕ್ಷ ರೂಪಾಯಿಯಿಂದ 2 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಈ ಸೌಲಭ್ಯ ಪಶುಸಂಗೋಪನೆ ಸೇರಿದಂತೆ ಕೃಷಿಗೆ ಪೂರಕ ಚಟುವಟಿಕೆಗಳಿಗೂ ಅನ್ವಯವಾಗುತ್ತದೆ ಎಂದು ಅವರು ವಿವರಿಸಿದರು.

ಆರ್‌ಬಿಐನ ಆದ್ಯತಾ ಕ್ಷೇತ್ರದ ಸಾಲ ಮಾರ್ಗಸೂಚಿಗಳ ಪ್ರಕಾರ ಕೃಷಿ ಸೇರಿದಂತೆ ಪ್ರಮುಖ ಕ್ಷೇತ್ರಗಳಿಗೆ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಸಮರ್ಪಕ ಹಣದ ಹರಿವು ಖಚಿತಪಡಿಸಲಾಗುತ್ತಿದೆ ಎಂದರು.

ಇದರ ಜೊತೆಗೆ, ಬೆಳೆ ವಿಮೆ ಯೋಜನೆ ಮತ್ತು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ ರೈತರಿಗೆ ನೇರ ಹಣ ವರ್ಗಾವಣೆ ಸೌಲಭ್ಯವೂ ಕಲ್ಪಿಸಲಾಗಿದೆ ಎಂದು ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.

ಜೀವಂತ ವ್ಯಕ್ತಿಗೆ ಮರಣ ಪ್ರಮಾಣ ಪತ್ರ! ಬಿಬಿಎಂಪಿಗೆ ಹೈಕೋರ್ಟ್ ತರಾಟೆ

ಬೆಂಗಳೂರು: ನಗರದಲ್ಲಿ ಆಡಳಿತಾತ್ಮಕ ವೈಫಲ್ಯದ ಗಂಭೀರ ಉದಾಹರಣೆ ಬೆಳಕಿಗೆ ಬಂದಿದ್ದು, ಜೀವಂತ ವ್ಯಕ್ತಿಯ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಪ್ರಕರಣದಲ್ಲಿ ಹೈಕೋರ್ಟ್ ಬಿಬಿಎಂಪಿಗೆ ಕಿಡಿಕಾರಿದೆ. ಮರಣ ಪ್ರಮಾಣ ಪತ್ರವನ್ನು ತಕ್ಷಣ ರದ್ದುಪಡಿಸಿ, ಅದರ ಕುರಿತು ಮಾ.25ರೊಳಗೆ ಹಿಂಬರಹ ಸಲ್ಲಿಸುವಂತೆ ನ್ಯಾಯಾಲಯ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಡಿ. ಮೆಹಬೂಬ್ ಬಾಷಾ ಎಂಬವರು ಜೀವಂತವಾಗಿದ್ದರೂ, 2025ರ ಏಪ್ರಿಲ್ 23ರಂದು ಬಿಬಿಎಂಪಿ ಚಿಕ್ಕಪೇಟೆ ವಲಯ ಕಚೇರಿಯ ಜನನ ಮತ್ತು ಮರಣ ನೋಂದಣಾಧಿಕಾರಿಯು ಅವರ ಹೆಸರಿನಲ್ಲಿ ತಾತ್ಕಾಲಿಕ ಮರಣ ಪ್ರಮಾಣ ಪತ್ರ ನೀಡಿರುವುದು ಪ್ರಕರಣದ ಮೂಲವಾಗಿದೆ. ಇದನ್ನು ರದ್ದುಪಡಿಸುವಂತೆ ಕೋರಿ ಅವರು ಹೈಕೋರ್ಟ್ ಮೊರೆಹೋದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲೆ ಓ. ಅಶ್ವಿನಿ, “ಅರ್ಜಿದಾರರು ಜೀವಂತವಾಗಿದ್ದರೂ ಅವರ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಲಾಗಿದೆ. ಅವರ ಆಧಾರ್ ಕಾರ್ಡ್ ಪಡಿತರ ಚೀಟಿಗೆ ಲಿಂಕ್ ಆಗಿರುವುದರಿಂದ, ಇದೀಗ ಅವರಿಗೆ ಪಡಿತರ ಸಿಗುತ್ತಿಲ್ಲ” ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಈ ವಾದವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಪೀಠ, “ಮರಣ ಪ್ರಮಾಣ ಪತ್ರವನ್ನು ತಕ್ಷಣ ರದ್ದುಪಡಿಸಿ, ಬುಧವಾರದೊಳಗೆ ವರದಿ ಸಲ್ಲಿಸಬೇಕು. ಇಲ್ಲವಾದಲ್ಲಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದೆ.

ಇದೇ ವೇಳೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿಯ ಸಂಬಂಧಿತ ಅಧಿಕಾರಿಗಳು, ಕಿದ್ವಾಯಿ ಸ್ಮಾರಕ ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ಇತರರಿಗೆ ನೋಟಿಸ್ ಜಾರಿಗೊಳಿಸಿ, ಮುಂದಿನ ವಿಚಾರಣೆಯನ್ನು ಮುಂದೂಡಲಾಗಿದೆ.

21ನೇ ಶತಮಾನದಲ್ಲೂ ಜಾತಿ ವೈಷಮ್ಯ: ನೀರಿನ ವಿಚಾರಕ್ಕೆ ಗದಗದಲ್ಲಿ ಗುಂಪು ಘರ್ಷಣೆ!

0

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿಯಲ್ಲಿ ಸಣ್ಣ ವಿಚಾರ ದೊಡ್ಡ ಗಲಾಟೆಗೆ ತಿರುಗಿದ ಘಟನೆ ಬೆಳಕಿಗೆ ಬಂದಿದೆ. ನೀರು ಕುಡಿದ ವಿಷಯಕ್ಕೆ ಎರಡು ಸಮುದಾಯಗಳ ನಡುವೆ ಉದ್ಭವಿಸಿದ ವಿವಾದ ಕಲ್ಲು ತೂರಾಟದ ಮಟ್ಟಕ್ಕೆ ಏರಿದ ಪರಿಣಾಮ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾಹಿತಿ ಪ್ರಕಾರ, ವಾಲ್ಮೀಕಿ ಸಮುದಾಯಕ್ಕೆ ಸೇರಿದ ರೈತನ ಜಮೀನಿನಲ್ಲಿ ಯುವಕನೊಬ್ಬ ನೀರು ಕುಡಿದಿದ್ದಾನೆ. ಆತ ಎಸ್ಸಿ ಸಮುದಾಯಕ್ಕೆ ಸೇರಿದವನಾಗಿದ್ದಾನೆ ಎಂಬ ಕಾರಣಕ್ಕೆ ರೈತ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಈ ವಿಷಯ ಊರಿನಲ್ಲೆಲ್ಲ ಹರಡಿ, ಎರಡು ಸಮುದಾಯಗಳ ನಡುವೆ ತೀವ್ರ ವಾಗ್ವಾದ ಶುರುವಾಗಿದೆ.

ಈ ವಾಗ್ವಾದವು ನಂತರ ಗಲಾಟೆಗೆ ತಿರುಗಿ, ಎರಡೂ ಗುಂಪಿನವರು ಪರಸ್ಪರ ಹೊಡೆದಾಟ ನಡೆಸಿ ಕಲ್ಲು ತೂರಾಟಕ್ಕೆ ಮುಂದಾದರು. ಘಟನೆಯ ಪರಿಣಾಮವಾಗಿ ಎರಡೂ ಸಮುದಾಯಗಳ ಸೇರಿ ಸುಮಾರು 15 ಜನರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

https://www.facebook.com/reel/1249793023467525

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಗ್ರಾಮದಲ್ಲಿ ಶಾಂತಿ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಸಾಮಾಜಿಕ ಸಮಾನತೆ ಮತ್ತು ಕಾನೂನುಗಳಿದ್ದರೂ, ಅಲ್ಪ ಕಾರಣಕ್ಕೂ ಜಾತಿ ಆಧಾರಿತ ಸಂಘರ್ಷಗಳು ನಡೆಯುತ್ತಿರುವುದು ಚಿಂತಾಜನಕವಾಗಿದೆ.

ಬೆಲೆ ಏರಿಕೆಯೂ ಅಡ್ಡಿಯಾಗಲಿಲ್ಲ: ಗದಗದಲ್ಲಿ ಮದ್ಯ ಮಾರಾಟದಲ್ಲಿ ಭರ್ಜರಿ ಏರಿಕೆ

0

ಗದಗ: ಜಿಲ್ಲೆಯಲ್ಲಿ ಅಬಕಾರಿ ಇಲಾಖೆಗೆ 2025-26ನೇ ಆರ್ಥಿಕ ವರ್ಷದಲ್ಲಿ ದಾಖಲೆ ಪ್ರಮಾಣದ ಆದಾಯ ಹರಿದುಬಂದಿದ್ದು, ಮದ್ಯ ಮಾರಾಟದಿಂದ ಸುಮಾರು ₹400 ಕೋಟಿ ವಹಿವಾಟು ನಡೆದಿದೆ.  ಬರಪೀಡಿತ ಪ್ರದೇಶವಾಗಿದ್ದರೂ ಜಿಲ್ಲೆಯ ಮದ್ಯಪ್ರಿಯರು ಖರೀದಿಯಲ್ಲಿ ಹಿಂದೇಟು ಹಾಕದಿರುವುದು ಗಮನಾರ್ಹವಾಗಿದೆ.

ರಾಜ್ಯ ಸರ್ಕಾರ 2025ರ ಏಪ್ರಿಲ್‌ನಿಂದ ಮದ್ಯ ಹಾಗೂ ಬಿಯರ್ ದರಗಳನ್ನು ಏರಿಸಿದ್ದರೂ, ಇದರಿಂದ ಮಾರಾಟದಲ್ಲಿ ದೊಡ್ಡ ಮಟ್ಟದ ಕುಸಿತ ಕಾಣಿಸಲಿಲ್ಲ. ಬಾಕ್ಸ್‌ಗಳ ಲೆಕ್ಕದಲ್ಲಿ ಲಿಕ್ಕರ್ ಹಾಗೂ ಬಿಯರ್ ಮಾರಾಟದಲ್ಲಿ ಸ್ವಲ್ಪ ಇಳಿಕೆ ಕಂಡರೂ, ಬೆಲೆ ಏರಿಕೆಯ ಪರಿಣಾಮ ಒಟ್ಟು ಆದಾಯದಲ್ಲಿ ಏರಿಕೆ ಕಂಡುಬಂದಿದೆ.

2024-25ನೇ ಸಾಲಿನಲ್ಲಿ ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) 8.40 ಲಕ್ಷ ಬಾಕ್ಸ್ ಮಾರಾಟವಾಗಿ ₹306.34 ಕೋಟಿ ಆದಾಯ ಬಂದಿತ್ತು. 2025-26ರಲ್ಲಿ ಇದು 8.35 ಲಕ್ಷ ಬಾಕ್ಸ್‌ಗೆ ಇಳಿದಿದ್ದರೂ, ₹340.54 ಕೋಟಿ ವ್ಯವಹಾರ ದಾಖಲಾಗಿದೆ. ಅಂದರೆ, ಬಾಕ್ಸ್‌ಗಳ ಪ್ರಮಾಣ ಕಡಿಮೆಯಾದರೂ ₹35 ಕೋಟಿ ಹೆಚ್ಚುವರಿ ಆದಾಯ ಲಭ್ಯವಾಗಿದೆ.

ಇನ್ನು ಬಿಯರ್ ಮಾರಾಟದಲ್ಲಿ ಸ್ವಲ್ಪ ಕುಸಿತ ಕಂಡುಬಂದಿದೆ. 2024-25ರಲ್ಲಿ 4.09 ಲಕ್ಷ ಬಾಕ್ಸ್ ಮಾರಾಟದಿಂದ ₹50.05 ಕೋಟಿ ಆದಾಯ ಬಂದಿದ್ದರೆ, 2025-26ರಲ್ಲಿ 3.38 ಲಕ್ಷ ಬಾಕ್ಸ್ ಮಾರಾಟದಿಂದ ₹47.05 ಕೋಟಿ ಆದಾಯ ಮಾತ್ರ ಬಂದಿದೆ. ಬಿಯರ್ ಬೆಲೆಯಲ್ಲಿ ಭಾರಿ ಏರಿಕೆಯೇ ಈ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ.

ಜಿಲ್ಲೆಯ ವಿವಿಧ ವಲಯಗಳಲ್ಲೂ ಮದ್ಯ ಮಾರಾಟದಲ್ಲಿ ಅಲ್ಪ ವ್ಯತ್ಯಾಸ ಕಂಡುಬಂದಿದೆ. ಗದಗ, ಮುಂಡರಗಿ, ನರಗುಂದ, ರೋಣ ಮತ್ತು ಶಿರಹಟ್ಟಿ ವಲಯಗಳಲ್ಲಿ ಲಿಕ್ಕರ್ ಹಾಗೂ ಬಿಯರ್ ಮಾರಾಟದ ಪ್ರಮಾಣದಲ್ಲಿ ಸಣ್ಣ ಮಟ್ಟದ ಇಳಿಕೆ ಕಂಡರೂ, ಒಟ್ಟು ಆದಾಯದಲ್ಲಿ ಏರಿಕೆ ದಾಖಲಾಗಿದೆ.

“ಮದ್ಯ ಮಾರಾಟದಲ್ಲಿ ಸ್ವಲ್ಪ ಕುಸಿತ ಕಂಡಿದ್ದರೂ, ಒಟ್ಟಾರೆ ಆರ್ಥಿಕ ವಹಿವಾಟು ಉತ್ತಮವಾಗಿದೆ. ಇಲಾಖೆ ನಿಗದಿ ಮಾಡಿದ ಗುರಿ ಸಾಧಿಸಲಾಗಿದೆ” ಎಂದು ಅಬಕಾರಿ ಡಿಸಿ ಲಕ್ಷ್ಮಿ ಎನ್ ತಿಳಿಸಿದ್ದಾರೆ.

ಬಿರುಗಾಳಿ ಮಳೆ ಅಬ್ಬರ: ವಿದ್ಯುತ್ ಕಂಬಗಳು ನೆಲಕ್ಕುರುಳಿ ಜನಜೀವನ ಅಸ್ತವ್ಯಸ್ತ!

ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆ ಭಾರೀ ಅನಾಹುತದ ಭೀತಿ ಮೂಡಿಸಿತು.

ಹಲವು ಕಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಮರಗಳು ರಸ್ತೆಯ ಮೇಲೆ ಬಿದ್ದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿತು.

ನಗರದ ಗೌರಿಶಂಕರ ನಗರದಲ್ಲಿ ಮಳೆ ಅಬ್ಬರದಿಂದ ಮನೆಗಳ ಮುಂಭಾಗ ಹಾಗೂ ರಸ್ತೆ ಮೇಲೆ ಮರಗಳು ಹಾಗೂ ವಿದ್ಯುತ್ ಕಂಬಗಳು ಬಿದ್ದವು. ಅದೃಷ್ಟವಶಾತ್ ಮಳೆ ಬೀಳುವ ವೇಳೆ ಜನ ಸಂಚಾರ ಕಡಿಮೆ ಇದ್ದುದರಿಂದ ದೊಡ್ಡ ಅನಾಹುತ ತಪ್ಪಿದೆ.

ವಿದ್ಯುತ್ ಕಂಬಗಳು ಬಿದ್ದ ಹಿನ್ನೆಲೆ ನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿ ಜನರು ತೊಂದರೆ ಅನುಭವಿಸಿದರು. ಅಲ್ಲದೆ ರಸ್ತೆಗಳ ಮೇಲೆ ಕಂಬಗಳು ಬಿದ್ದಿರುವುದರಿಂದ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು.

ಸುದ್ದಿ ತಿಳಿಯುತ್ತಿದ್ದಂತೆ ವಿದ್ಯುತ್ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತುರ್ತು ದುರಸ್ತಿ ಕಾರ್ಯ ಕೈಗೊಂಡರು. ಇದೇ ವೇಳೆ ನಗರದ ಗಡಾದ ಆಸ್ಪತ್ರೆ ಸಮೀಪ ನಿಲ್ಲಿಸಿದ್ದ ಆಟೋ ಮೇಲೆ ಭಾರೀ ಗಾತ್ರದ ಮರ ಬಿದ್ದ ಪರಿಣಾಮ ಆಟೋ ಸಂಪೂರ್ಣ ಜಖಂಗೊಂಡಿದೆ.

ಮಳೆ ವೇಳೆ ಆಟೋವನ್ನು ಮರದ ಕೆಳಗೆ ನಿಲ್ಲಿಸಿದ್ದ ಮಾಲೀಕ ಜಬೀಯುಲ್ಲಾ, ತನ್ನ ವಾಹನ ನಾಶವಾಗಿರುವುದರಿಂದ ಸಂಕಷ್ಟಕ್ಕೀಡಾಗಿದ್ದಾರೆ. ಬಿರುಗಾಳಿ ಮಳೆಯಿಂದ ಉಂಟಾದ ಹಾನಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

error: Content is protected !!