Home Blog Page 2

ಇಂದಿನಿಂದ SSLC ಪರೀಕ್ಷೆ: ವಿದ್ಯಾರ್ಥಿಗಳಿಗೆ ಶುಭ ಕೋರಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ!

ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಪರೀಕ್ಷೆ SSLC ಪರೀಕ್ಷೆ-1 ಇಂದಿನಿಂದ ಆರಂಭವಾಗಿದೆ.

ಪರೀಕ್ಷೆಗೆ ಪರೀಕ್ಷಾ ಬೋರ್ಡ್ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಅಕ್ರಮಗಳು ನಡೆಯದಂತೆ ಕಟ್ಟುನಿಟ್ಟಿನ ಹದ್ದಿನ ಕಣ್ಣು ಇಡಲಾಗಿದೆ. ಈ ದಿನ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:15 ರವರೆಗೆ ಪರೀಕ್ಷೆ ನಡೆಯಲಿದೆ.

ಒಟ್ಟು 8,65,988 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಇದರಲ್ಲಿ 7,75,979 ಹೊಸ ವಿದ್ಯಾರ್ಥಿಗಳು ಮತ್ತು 62,938 ಪುನರಾವರ್ತಿತ ವಿದ್ಯಾರ್ಥಿಗಳಿದ್ದಾರೆ. ಪರೀಕ್ಷೆ 2,870 ಕೇಂದ್ರಗಳಲ್ಲಿ ನಡೆಯಲಿದೆ. ಮಲ್ಲೇಶ್ವರಂ ಕರ್ನಾಟಕ ಪಬ್ಲಿಕ್ ಶಾಲೆ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ, ಶಿಕ್ಷಣ ಸಚಿವ ಮಧುಬಂಗಾರಪ್ಪ ವಿದ್ಯಾರ್ಥಿಗಳಿಗೆ ಶುಭಹಾರೈಸಿ, “ಪರೀಕ್ಷೆ ಚೆನ್ನಾಗಿ ಬರೆಯಿರಿ, ಭಯಬಿಟ್ಟು ಬರೆಯಿರಿ” ಎಂದು ಸಲಹೆ ನೀಡಿದ್ದಾರೆ.

ಪರೀಕ್ಷೆಯ ವೇಳಾಪಟ್ಟಿ:

  • ಮಾರ್ಚ್ 18: ಪ್ರಥಮ ಭಾಷೆ
  • ಮಾರ್ಚ್ 23: ವಿಜ್ಞಾನ
  • ಮಾರ್ಚ್ 25: ದ್ವಿತೀಯ ಭಾಷೆ
  • ಮಾರ್ಚ್ 28: ಗಣಿತ
  • ಮಾರ್ಚ್ 30: ತೃತೀಯ ಭಾಷೆ
  • ಏಪ್ರಿಲ್ 2: ಸಮಾಜ ವಿಜ್ಞಾನ

ಪರೀಕ್ಷಾ ಭದ್ರತೆ ಕ್ರಮಗಳು:

  • ಇಡೀ ಪರೀಕ್ಷಾ ಪ್ರಕ್ರಿಯೆ ವೆಬ್‌ಕ್ಯಾಸ್ಟಿಂಗ್ ಮೂಲಕ ಮಾನಿಟರ್ ಮಾಡಲಾಗುತ್ತದೆ.
  • ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ನಿಷೇಧಾ ಪ್ರದೇಶ ಜಾರಿಯಾಗಿದ್ದು, ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿ, ಸೈಬರ್ ಸೆಂಟರ್, ಕಂಪ್ಯೂಟರ್ ಶಾಪ್ ಮುಚ್ಚಲಾಗುತ್ತದೆ.
  • ಹಿಂದಿನ ಅಕ್ರಮ ಪ್ರಕರಣಗಳಲ್ಲಿ ಭಾಗಿಯಾಗಿದ್ದವರಿಗೆ ವಿಶೇಷ ಪೊಲೀಸ್ ನಿಗಾ.
  • ಎಲ್ಲಾ ಕೇಂದ್ರಗಳಲ್ಲಿ CCTV ಕ್ಯಾಮೆರಾ ಅಳವಡಿಕೆ.
  • ಸುಳ್ಳು ಸುದ್ದಿಯನ್ನು ಹರಡುವ ಸಾಮಾಜಿಕ ಜಾಲತಾಣಗಳ ಮೇಲೆ ಗಮನ.
  • ಪ್ರಶ್ನೆ ಪತ್ರಿಕೆ ಭದ್ರತೆ, ಸಮಯಕ್ಕಿಂತ ಮೊದಲು ಓಪನ್ ಮಾಡಬಾರದು. ಉಲ್ಲಂಘನೆ ಕಂಡುಬಂದರೆ ಕಾನೂನು ಕ್ರಮ.
  • ಪರೀಕ್ಷಾ ಕೇಂದ್ರದಲ್ಲಿ ಫೋನ್, ಎಲೆಕ್ಟ್ರಾನಿಕ್ ಉಪಕರಣಗಳು ನಿಷೇಧ.
  • ಪ್ರತಿ ಕೇಂದ್ರಕ್ಕೆ ಪೊಲೀಸ್ ಭದ್ರತೆ, ಸಿಟ್ಟಿಂಗ್ ಸ್ಕ್ವಾಡ್, ಫ್ಲೈಯಿಂಗ್ ಸ್ಕ್ವಾಡ್ ನಿಯೋಜನೆ. ಜಿಲ್ಲೆಗಳಲ್ಲಿಯೂ ಎಸ್ಪಿ, ಡಿಸಿಗಳ ನೇತೃತ್ವದಲ್ಲಿ ಭದ್ರತೆ.

ಮಲಬದ್ಧತೆ ಸಮಸ್ಯೆ ಇದೆಯಾ? ಮಜ್ಜಿಗೆಯಲ್ಲಿ ಇವು ಸೇರಿಸಿ ಕುಡಿದರೆ ಸಿಗುತ್ತೆ ಪರಿಹಾರ!

0

ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ ಸಮಸ್ಯೆ ಹೆಚ್ಚುತ್ತಿರುವುದು ವೈದ್ಯಕೀಯ ತಜ್ಞರ ಆತಂಕಕ್ಕೆ ಕಾರಣವಾಗಿದೆ. ಆಹಾರ ಪದ್ಧತಿ ಹಾಗೂ ಜೀವನಶೈಲಿಯಲ್ಲಿ ಆಗಿರುವ ಬದಲಾವಣೆಗಳಿಂದಾಗಿ ಈ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿದೆ.

ದೀರ್ಘಕಾಲ ಮಲಬದ್ಧತೆಯನ್ನು ನಿರ್ಲಕ್ಷಿಸಿದರೆ ಅದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಪೈಲ್ಸ್ ಸೇರಿದಂತೆ ಇತರ ಜೀರ್ಣಾಂಗ ಸಂಬಂಧಿತ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.

ಮಲಬದ್ಧತೆ ಆರಂಭಿಕ ಹಂತದಲ್ಲೇ ಗಮನ ಹರಿಸುವುದು ಮುಖ್ಯ. ವೈದ್ಯರನ್ನು ಸಂಪರ್ಕಿಸುವ ಮೊದಲು ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸುವುದರಿಂದ ಸಮಸ್ಯೆ ನಿವಾರಣೆ ಸಾಧ್ಯ ಎಂದು ತಜ್ಞರು ತಿಳಿಸಿದ್ದಾರೆ.

ಜೀರಿಗೆ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿದ ಮಜ್ಜಿಗೆ ಸೇವನೆ ಜೀರ್ಣಕ್ರಿಯೆ ಸುಧಾರಿಸಲು ಸಹಕಾರಿ. ದಿನಕ್ಕೆ ಎರಡು ಬಾರಿ ಈ ಮಿಶ್ರಣ ಸೇವಿಸಿದರೆ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ ಎನ್ನಲಾಗುತ್ತಿದೆ.

ಇದರ ಜೊತೆಗೆ ಆಹಾರದಲ್ಲಿ ನಾರಿನಾಂಶ ಹೆಚ್ಚಿರುವ ಪದಾರ್ಥಗಳನ್ನು ಸೇರಿಸಿಕೊಳ್ಳುವುದು ಅಗತ್ಯ. ಹಣ್ಣುಗಳು, ತರಕಾರಿಗಳು ಹಾಗೂ ಸಾಕಷ್ಟು ನೀರು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸಿ ಮಲಬದ್ಧತೆ ಸಮಸ್ಯೆಯನ್ನು ನಿಯಂತ್ರಿಸಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ. ಸಮಸ್ಯೆ ಮುಂದುವರಿದಲ್ಲಿ ವೈದ್ಯರ ಸಲಹೆ ಪಡೆಯುವುದು ಅನಿವಾರ್ಯವಾಗಿದೆ.

ರಾಯಚೂರು| ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ!

ರಾಯಚೂರು: ಸಿಡಿಲು ಬಡಿದು ತೆಂಗಿನ ಮರವೊಂದು ಹೊತ್ತಿ ಉರಿದಿರುವ ಘಟನೆ ಜಿಲ್ಲೆಯ ಅರಕೇರಾ ತಾಲ್ಲೂಕಿನ ಹಾಳಜಾಡಲದಿನ್ನಿ ಗ್ರಾಮದಲ್ಲಿ ಜರುಗಿದೆ.

ರೈತ ಶರೀಫ್ ಸಾಬ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ಸಂಭವಿಸಿದೆ. ಗುಡುಗು ಸಹಿತ ಮಳೆಯ ಸಂದರ್ಭದಲ್ಲಿ ಸಂಭವಿಸಿದ ಈ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಂಗಳವಾರ ರಾತ್ರಿ ಜಿಲ್ಲೆಯಾದ್ಯಂತ ಗುಡುಗು ಮತ್ತು ಸಿಡಿಲು ಸಹಿತ ಮಳೆಯಾಗುತ್ತಿತ್ತು. ಈ ವೇಳೆ ಜಮೀನಿನಲ್ಲಿದ್ದ ಎತ್ತರದ ತೆಂಗಿನ ಮರಕ್ಕೆ ನೇರವಾಗಿ ಸಿಡಿಲು ಬಡಿದಿದೆ. ಸಿಡಿಲು ಬಡಿದ ತೀವ್ರತೆಗೆ ಮರಕ್ಕೆ ತಕ್ಷಣ ಬೆಂಕಿ ಹೊತ್ತಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಮರ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ಅದೃಷ್ಟವಶಾತ್ ಘಟನೆಯ ವೇಳೆ ಮರದ ಹತ್ತಿರ ಯಾರೂ ಇಲ್ಲದ ಕಾರಣ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಯುಗಾದಿ ಹಬ್ಬದ ಸಂಭ್ರಮ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ, ಹೂ-ಹಣ್ಣು ದರ ಏರಿಕೆ

ಬೆಂಗಳೂರು: ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ ಮೆರೆಯುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರುಯ ಹೃದಯಭಾಗದ ಕೆಆರ್ ಮಾರುಕಟ್ಟೆನಲ್ಲಿ ಖರೀದಿ ಭರಾಟೆ ಜೋರಾಗಿದೆ. ಬುಧವಾರ ಬೆಳ್ಳಂಬೆಳಿಗ್ಗೆಯಿಂದಲೇ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿಗಾಗಿ ಜನಸಾಗರ ಹರಿದುಬಂದಿದೆ.

ಹಬ್ಬದ ಹಿನ್ನೆಲೆ ಬೇಡಿಕೆ ಹೆಚ್ಚಾಗಿರುವುದರಿಂದ ಹೂವು ಮತ್ತು ಹಣ್ಣುಗಳ ದರದಲ್ಲಿ ಏರಿಕೆ ಕಂಡುಬಂದಿದೆ. ವಿಶೇಷವಾಗಿ ಮಲ್ಲಿಗೆ ಹೂವು ಕೆಜಿಗೆ ₹1,000ರವರೆಗೆ ಏರಿಕೆಯಾಗಿದ್ದು, ಗ್ರಾಹಕರ ಗಮನ ಸೆಳೆಯುತ್ತಿದೆ.

ಹೂವುಗಳ ದರ (ಕೆಜಿಗೆ ರೂ.):

  • ಮಲ್ಲಿಗೆ – ₹1,000

  • ಮಲ್ಲಿಗೆ ಹಾರ – ₹100

  • ಸೇವಂತಿಗೆ – ₹200–250

  • ಗುಲಾಬಿ – ₹250

  • ಚೆಂಡು ಹೂ – ₹40–50

  • ಬೇವಿನ ಸೊಪ್ಪು (ಕಟ್ಟು) – ₹20

  • ಮಾವಿನ ಸೊಪ್ಪು (ಕಟ್ಟು) – ₹25

ಹಣ್ಣುಗಳ ದರ (ಕೆಜಿಗೆ ರೂ.):

  • ಖರಬೂಜ – ₹100

  • ಬೇಲದ ಹಣ್ಣು – ₹50

  • ದ್ರಾಕ್ಷಿ – ₹120

  • ದಾಳಿಂಬೆ – ₹220

ದರ ಏರಿಕೆಯ ನಡುವೆಯೂ ಜನರು ಹಬ್ಬದ ಸಿದ್ಧತೆಯಲ್ಲಿ ಯಾವುದೇ ಹಿಂಜರಿಕೆ ತೋರದೆ ಖರೀದಿ ಮುಂದುವರಿಸಿದ್ದಾರೆ.

ಇದೇ ವೇಳೆ ಮಲ್ಲೇಶ್ವರಂ, ಗಾಂಧಿ ಬಜಾರ್ ಹಾಗೂ ಯಶವಂತಪುರ ಮಾರುಕಟ್ಟೆಗಳಲ್ಲಿಯೂ ಯುಗಾದಿ ಖರೀದಿ ಸಡಗರ ತಾರಕ್ಕೇರಿದೆ.

ವಿಚ್ಛೇದನಕ್ಕೆ ಮುಂದಾಗಿದ್ದ ಪತ್ನಿಯನ್ನು ಅಟ್ಟಾಡಿಸಿಕೊಂಡು ಹೋಗಿ ಆಸಿಡ್ ಹಾಕಿದ ಪತಿ: ವಿಡಿಯೋ ವೈರಲ್

ಚೆನ್ನೈ: ಪ್ರೀತಿಸಿ ಮದುವೆಯಾದ ಪತಿಯೇ ಪತ್ನಿಯ ಮೇಲೆ ಆಸಿಡ್ ದಾಳಿ ನಡೆಸಿದ ಘಟನೆ ನಗರದ ಪಲ್ಲವರಂನ ಭಾರತಿ ನಗರದಲ್ಲಿ ನಡೆದಿದೆ. 29 ವರ್ಷದ ಸನಾ ಫಾತಿಮಾ ಸಂತ್ರಸ್ತೆಯಾಗಿದ್ದು, ಸದ್ಯ ಆರೋಪಿ ಪತಿ ಮೊಹಮ್ಮದ್ ಅಲಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸನಾ ಫಾತಿಮಾ ಮತ್ತು ಅನಾಕಪುತ್ತೂರು ನಿವಾಸಿ ಮೊಹಮ್ಮದ್ ಅಲಿ 2020ರಲ್ಲಿ ಪ್ರೀತಿಸಿ ವಿವಾಹವಾಗಿದ್ದು, ಇವರಿಗೆ ನಾಲ್ಕು ವರ್ಷದ ಮಗನಿದ್ದಾನೆ. ಆದರೆ ಪತಿ ಮದ್ಯವ್ಯಸನಿಯಾಗಿದ್ದು, ಪ್ರತಿದಿನ ಕುಡಿದು ಬಂದು ಪತ್ನಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದನೆಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಫಾತಿಮಾ ಪತಿಯಿಂದ ದೂರವಾಗಿ ತಾಯಿ ಮನೆಯಲ್ಲಿ ವಾಸವಿದ್ದು, ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದರಿಂದ ಆಕ್ರೋಶಗೊಂಡ ಪತಿ, ಶೌಚಾಲಯ ಸ್ವಚ್ಛಗೊಳಿಸುವ ಆಸಿಡ್ ಬಳಸಿ ದಾಳಿ ನಡೆಸಿದ್ದಾನೆ.

ಮಾರ್ಚ್ 15ರಂದು ತಾಯಿ ಮನೆಯ ಬಳಿ ಒಬ್ಬರೇ ನಡೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿ ಫಾತಿಮಾ ಅವರ ಮುಖಕ್ಕೆ ಆಸಿಡ್ ಎರಚಿದ್ದಾನೆ. ತೀವ್ರವಾಗಿ ಗಾಯಗೊಂಡ ಫಾತಿಮಾ ಅವರನ್ನು ಸ್ಥಳೀಯರು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ದಾಳಿಯಲ್ಲಿ ಅವರ ಎಡ ಕಣ್ಣಿಗೆ ಗಂಭೀರ ಹಾನಿಯಾಗಿದ್ದು, ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಯ ಕುರಿತು ಪಲ್ಲವರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೆಂಗಳೂರು| ಬೈಕ್‌ ಅಡ್ಡಗಟ್ಟಿ ದರೋಡೆ ಮಾಡಿದ್ದ ಗ್ಯಾಂಗ್‌ ಅರೆಸ್ಟ್, 10 ಲಕ್ಷ ಹಣ ಜಪ್ತಿ!

ಬೆಂಗಳೂರು:- ಬನ್ನೇರುಘಟ್ಟ ಪೋಲೀಸರು ಕಾರ್ಯಾಚರಣೆ ನಡೆಸಿ ಬೈಕ್‌ ಅಡ್ಡಗಟ್ಟಿ ದರೋಡೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ನಿಖಿಲ್, ಪ್ರಶಾಂತ್ ಅಲಿಯಾಸ್‌ ಪಿಂಕಿ, ಅರುಣ್ ಕುಮಾರ್, ಹರೀಶ್, ರಕ್ಷಿತ್ ಎಂದು ಗುರುತಿಸಲಾಗಿದೆ.

ಬಂಧಿತ ಗ್ಯಾಂಗ್, ಶ್ರೀ ಕೈಲಾಸ್ ಎಂಬಾತನನ್ನ ಅಡ್ಡಗಟ್ಟಿ ಸಿನಿಮೀಯ ರೀತಿಯಲ್ಲಿ ಗ್ಯಾಂಗ್‌ ದರೋಡೆ ಮಾಡಿ ಎಸ್ಕೇಪ್‌ ಆಗಿತ್ತು. ಘಟನೆ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ತಲೆಮರೆಸಿಕೊಂಡಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 10 ಲಕ್ಷ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೈಲಾಸ್‌ ಅವರು ಉಡಾನ್ ಕಂಪನಿಗೆ ಸೇರಿದ ಹಣವನ್ನ ಕಲೆಕ್ಷನ್ ಮಾಡುತ್ತಿದ್ದರು. ಕಳೆದ ಫೆ.1 ರಂದು ಹಣ ಕಲೆಕ್ಷನ್ ಮಾಡಿದ್ದರು. ಬೈಕ್‌ನಲ್ಲಿ ಬರುವಾಗ ಎರಡು ಬೈಕ್‌ಗಳಲ್ಲಿ ಗ್ಯಾಂಗ್ ಹಿಂಬಾಲಿಸಿತ್ತು. ಲಾಂಗ್‌ನಿಂದ ಹಲ್ಲೆ ನಡೆಸಿ ಹಣ, ಬೈಕ್ ರಾಬರಿ ಮಾಡಿ ಎಸ್ಕೇಪ್ ಆಗಿತ್ತು. ರಸ್ತೆಯಲ್ಲಿ ಬೈಕ್ ಬಿಟ್ಟು ಹಣ ಎಗರಿಸಿ ಪರಾರಿಯಾಗಿತ್ತು. 31,38,625 ರೂ. ಹಣವನ್ನ ರಾಬರಿ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದರು.

ಮೂರು ತಂಡಗಳ ರಚನೆ ಮಾಡಿ ಅರೋಪಿಗಳಿಗೆ ತಲಾಶ್ ನಡೆಸಿದ್ದರು. ಪರಿಚಿತರೇ ಕೃತ್ಯ ನಡೆಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಕೈಲಾಸ್‌ಗೆ ಹಣ ನೀಡಿದ್ದ ಉಡಾನ್ ಕಂಪನಿಯ ಸಿಬ್ಬಂದಿ ವಿಚಾರಣೆಗೊಳಪಡಿಸಲಾಯಿತು. ವಿಚಾರಣೆ ವೇಳೆ ರಾಬರಿ ಪ್ಲ್ಯಾನ್ ಮಾಸ್ಟರ್ ಮೈಂಡ್‌ ಬಂಧಿಸಲಾಯಿತು. ಆರೋಪಿಗಳನ್ನು ಇದೀಗ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

LPG ಗ್ಯಾಸ್ ಸಿಲಿಂಡರ್ ಬಿಕ್ಕಟ್ಟು: ಕಾಳಸಂತೆ ದಂಧೆ ಬಯಲು, 15 ಸಾವಿರ ಸಿಲಿಂಡರ್ ಸೀಜ್!

ಬೆಂಗಳೂರು / ನವದೆಹಲಿ, ಮಾರ್ಚ್ 18:
ಮಧ್ಯಪ್ರಾಚ್ಯ ಪ್ರದೇಶದಲ್ಲಿ ನಡೆಯುತ್ತಿರುವ ಇರಾನ್–ಇಸ್ರೇಲ್ ಸಂಘರ್ಷ ಪರಿಣಾಮವಾಗಿ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಗ್ಯಾಸ್ ಸಿಲಿಂಡರ್‌ಗಳ ಕೊರತೆ ಉಂಟಾಗಿದೆ. ಇದರ ಪರಿಣಾಮವಾಗಿ ಕಮರ್ಷಿಯಲ್ ಸಿಲಿಂಡರ್‌ಗಳ ಪೂರೈಕೆ ವ್ಯತ್ಯಯಗೊಂಡಿದ್ದು, ಹೋಟೆಲ್ ಉದ್ಯಮ ಗಂಭೀರ ಸಂಕಷ್ಟಕ್ಕೆ ಸಿಲುಕಿದೆ.

ಈ ಬಿಕ್ಕಟ್ಟನ್ನು ದುರುಪಯೋಗಪಡಿಸಿಕೊಂಡು ಕೆಲವು ಖದೀಮರು ಗೃಹಬಳಕೆ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಅಕ್ರಮ ತಡೆಗಾಗಿ ದೇಶಾದ್ಯಂತ ಪೊಲೀಸರು ವ್ಯಾಪಕ ದಾಳಿ ನಡೆಸಿದ್ದು, 12 ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಕಾರ್ಯಾಚರಣೆ ನಡೆದಿದೆ. ಈ ವೇಳೆ ಸುಮಾರು 15 ಸಾವಿರ ಗ್ಯಾಸ್ ಸಿಲಿಂಡರ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ದೆಹಲಿಯಲ್ಲಿ 600 ಸಿಲಿಂಡರ್‌ಗಳನ್ನು ಜಪ್ತಿ ಮಾಡಲಾಗಿದ್ದು, ಉತ್ತರ ಪ್ರದೇಶದಲ್ಲಿ 405 ತಪಾಸಣೆಗಳು ನಡೆದಿದ್ದು 10 ಮಂದಿಯನ್ನು ಬಂಧಿಸಲಾಗಿದೆ. ಜಮ್ಮು ಕಾಶ್ಮೀರದಲ್ಲಿ 504 ದಾಳಿ ನಡೆಸಿ ಎಫ್‌ಐಆರ್‌ ದಾಖಲಿಸಲಾಗಿದೆ.

ಕರ್ನಾಟಕದಲ್ಲಿಯೂ ಕ್ರಮ ಮುಂದುವರಿದಿದ್ದು, ಬೀದರ್ನಲ್ಲಿ 105 ಸಿಲಿಂಡರ್‌ಗಳು, ದಾವಣಗೆರೆ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ತಲಾ 20 ಸಿಲಿಂಡರ್‌ಗಳನ್ನು ಜಪ್ತಿ ಮಾಡಲಾಗಿದೆ.

ಇದರ ಮಧ್ಯೆ, ಕಮರ್ಷಿಯಲ್ ಗ್ಯಾಸ್ ಕೊರತೆ ಹಿನ್ನೆಲೆಯಲ್ಲಿ ಹೋಟೆಲ್ ಅಸೋಸಿಯೇಷನ್ ಹೈಕೋರ್ಟ್ ಮೆಟ್ಟಿಲೇರಿದ್ದು, ಸರ್ಕಾರಿ ತೈಲ ಕಂಪನಿಗಳಿಗೆ ಸಮರ್ಪಕ ಪೂರೈಕೆ ಮಾಡಲು ನಿರ್ದೇಶನ ನೀಡುವಂತೆ ಮನವಿ ಸಲ್ಲಿಸಿದೆ.

ಮೈಸೂರು: ಅರಮನೆ ಮುಂಭಾಗದ ರಾಜಮಾರ್ಗ ಒಡೆದು ಟಾಂಗಾ ಸ್ಟ್ಯಾಂಡ್​; ಸಾರ್ವಜನಿಕರ ಆಕ್ರೋಶ!

ಮೈಸೂರು: ಪಾರಂಪರಿಕ ಕಟ್ಟಡಗಳ ತವರಾಗಿರುವ ಮೈಸೂರಿನಲ್ಲಿ, ನಗರ ಪರಂಪರೆ ಉಳಿಸುವ ಹೆಸರಿನಲ್ಲಿ ನಡೆಯುತ್ತಿರುವ ಟಾಂಗಾ ಸ್ಟ್ಯಾಂಡ್ ನಿರ್ಮಾಣ ಕೆಲಸವು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ.

‘ಸ್ವದೇಶ ದರ್ಶನ 2.0’ ಯೋಜನೆಯಡಿ ನಗರದಲ್ಲಿ 10 ಸ್ಥಳಗಳಲ್ಲಿ ಟಾಂಗಾ ಸ್ಟ್ಯಾಂಡ್ ಸ್ಥಾಪಿಸಲು ಪಾಲಿಕೆ ಮುಂದಾಗಿದ್ದರೂ, ಅರಮನೆ ಮುಂಭಾಗದ ಚಾಮರಾಜೇಂದ್ರ ವೃತ್ತದ ಬಳಿ ಫುಟ್‌ಪಾತ್ ಮೇಲೆ ಸ್ಟ್ಯಾಂಡ್ ನಿರ್ಮಿಸಲಾಗುತ್ತಿದ್ದು, ಸಾರ್ವಜನಿಕರ ಸುರಕ್ಷತೆಯನ್ನು ಗಾಳಿಗೆ ತೂರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬಿಜೆಪಿ ನಾಯಕ ಪ್ರತಾಪ್ ಸಿಂಹ ಅವರು, ಪಾಲಿಕೆ ಆಯುಕ್ತರಿಗೆ ಮೈಸೂರು ನಗರದ ವಾಸ್ತವವೇ ಗೊತ್ತಿಲ್ಲ. ಎಸಿ ಹಾಕಿಕೊಂಡು ಕಚೇರಿಯಲ್ಲಿ ಕೂತಿರುವ ಅವರಿಗೆ ಪಾದಚಾರಿ ಮಾರ್ಗ ಯಾವುದು, ಖಾಲಿ ಜಾಗ ಯಾವುದು ಎಂಬುದು ಹೇಗೆ ತಿಳಿಯುತ್ತದೆ? ಸಿಎಂ ಬಂದಾಗ ಹೂಗುಚ್ಚ ಕೊಡುವುದೇ ಅವರ ಕೆಲಸವಲ್ಲ. ಮೊದಲು ನಗರದಲ್ಲಿ ಓಡಾಡಿ ಸಮಸ್ಯೆ ಅರ್ಥ ಮಾಡಿಕೊಳ್ಳಲಿ. ಕೂಡಲೇ ಈ ಕಾಮಗಾರಿ ನಿಲ್ಲಿಸಿ, ಹಾಳಾದ ರಸ್ತೆ ಸರಿಪಡಿಸಲಿ’ ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ಪರಂಪರೆ ಉಳಿಸುವ ಹೆಸರಿನಲ್ಲಿ ನಡೆಯುತ್ತಿರುವ ಈ ಅವೈಜ್ಞಾನಿಕ ಕಾಮಗಾರಿ ಮೈಸೂರಿಗರ ನಿದ್ದೆಗೆಡಿಸಿದೆ. ಇನ್ನಾದರೂ ಪಾಲಿಕೆ ಎಚ್ಚೆತ್ತುಕೊಂಡು ಪರ್ಯಾಯ ಜಾಗ ಹುಡುಕುತ್ತದೆಯೇ ಅಥವಾ ಸಾರ್ವಜನಿಕರ ಆಕ್ರೋಶಕ್ಕೆ ಮಣಿಯುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

 

ಯುಗಾದಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಶಾಕ್: ಖಾಸಗಿ ಬಸ್‌ ಟಿಕೆಟ್‌ ದರ ಮೂರು ಪಟ್ಟು ಹೆಚ್ಚಳ!

ಬೆಂಗಳೂರು: ಯುಗಾದಿ ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್ ಸಂಸ್ಥೆಗಳು ಟಿಕೆಟ್ ದರವನ್ನು 2–3 ಪಟ್ಟು ಹೆಚ್ಚಿಸಿರುವುದು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದೆ.

ಹಬ್ಬದ ಸಮಯವನ್ನು ಸದುಪಯೋಗ ಮಾಡಿಕೊಂಡು, ಬೆಂಗಳೂರಿನಿಂದ ವಿವಿಧ ನಗರಗಳಿಗೆ ಹೊರಡುವ ಬಸ್‌ಗಳಲ್ಲಿ ದರ ಏರಿಕೆ ತೀವ್ರವಾಗಿದೆ.

ಈಗ ದರ ಎಷ್ಟಿದೆ?
ಬೆಂಗಳೂರು – ಮಂಗಳೂರು:
600 ರೂ. – 2,999 ರೂ.

ಬೆಂಗಳೂರು – ಧಾರವಾಡ/ಹುಬ್ಬಳ್ಳಿ:
400-1,300 ರೂ. – 4,500 ರೂ.

ಬೆಂಗಳೂರು – ಶಿವಮೊಗ್ಗ:
400 ರೂ. – 2,799 ರೂ.

ಬೆಂಗಳೂರು – ಧರ್ಮಸ್ಥಳ:
500 ರೂ. – 3,600 ರೂ

ಬೆಂಗಳೂರು-ಮೈಸೂರು:
350 ರೂ. – 2,500 ರೂ.

ಹಬ್ಬಗಳು ಬಂದಾಗಲೆಲ್ಲ ಖಾಸಗಿ ಬಸ್‌ ಮಾಲೀಕರು ಬೇಕಾಬಿಟ್ಟಿಯಾಗಿ ಪ್ರಯಾಣ ದರ ನಿಗದಿ ಮಾಡುತ್ತಿದ್ದರೂ ಸಾರಿಗೆ ಇಲಾಖೆ ಅಧಿಕಾರಿಗಳು ಮಾತ್ರ ಖಾಸಗಿ ಬಸ್‌ಗಳನ್ನು ನಿಯಂತ್ರಿಸಲು ಮುಂದಾಗದೆ ಕಣ್ಮುಚ್ಚಿ ಕೂತಿದ್ದಾರೆ. ಆರಂಭದಲ್ಲಿ ಕೆಲ ಕಡೆ ದಾಳಿ ನಡೆಸಿ ನಂತರ ಸುಮ್ಮನಾಗುತ್ತದೆ. ಇದೀಗ ಯುಗಾದಿ ಸಂದರ್ಭದಲ್ಲೂ ಖಾಸಗಿ ಬಸ್‌ಗಳು ದುಬಾರಿ ಪ್ರಯಾಣ ದರ ನಿಗದಿ ಮಾಡಿದ್ದರೂ, ಅದರ ನಿಯಂತ್ರಣಕ್ಕೆ ಸಾರಿಗೆ ಇಲಾಖೆ ಮುಂದಾಗಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.

 

ಯುಗಾದಿಯಂದು ಬೇವು-ಬೆಲ್ಲ ಸೇವಿಸುವುದು ಯಾಕೆ? ಇದರ ವಿಶೇಷತೆ ತಿಳಿಯಿರಿ!

0

ಯುಗಾದಿ ಎಂದರೆ ಹೊಸ ವರ್ಷದ ಮೊದಲ ದಿನ. ಈ ದಿನವನ್ನು ಹಿಂದಿನ ವರ್ಷದ ಸಾಧನೆಗಳನ್ನು ಪರಿಶೀಲಿಸಿ, ಹೊಸ ವರ್ಷದಲ್ಲಿ ಯಾವ ಯೋಜನೆಗಳನ್ನು ಅನುಸರಿಸಬೇಕು ಎಂಬುದನ್ನು ನಿರ್ಧರಿಸುವ ದಿನವೆಂದು ಪರಿಗಣಿಸಲಾಗುತ್ತದೆ.

ವೇದಗಳಲ್ಲಿ ವರ್ಷವನ್ನು ರಥಕ್ಕೆ, ಅದರ ಚಕ್ರವನ್ನು ಉತ್ತರಾಯಣ ದಕ್ಷಿಣಾಯಣಗಳಿಗೆ ಹೋಲಿಸಲಾಗುತ್ತದೆ. ಈ ಕಾರಣದಿಂದಲೇ ವರ್ಷವನ್ನು ಯುಗ ಮತ್ತು ಅದರ ಮೊದಲ ದಿನವನ್ನು ಯುಗಾದಿ ಎಂದು ಕರೆಯಲಾಗಿದೆ.

ಹಬ್ಬದ ಪ್ರಮುಖ ಸಂಪ್ರದಾಯ ಬೇವು-ಬೆಲ್ಲ ಸೇವಿಸುವುದು. ಬೇವು- ಕಷ್ಟ, ನೋವು, ಸವಾಲುಗಳ ಸಂಕೇತವಾಗಿದ್ದು, ಬೆಲ್ಲವು ಸಂತೋಷ, ಯಶಸ್ಸು, ಸುಖದ ಸಂಕೇತವಾಗಿದೆ. ಜೀವನದಲ್ಲಿ ಕೇವಲ ಸುಖ ಅಥವಾ ಕಷ್ಟವಷ್ಟೇ ಇಲ್ಲ; ಇದು ಬೇವು-ಬೆಲ್ಲದ ಮಿಶ್ರಣದಂತೆ, ಸುಖ-ದುಃಖ, ಲಾಭ-ನಷ್ಟಗಳನ್ನೂ ಸಮಾನವಾಗಿ ಅನುಭವಿಸುತ್ತೇವೆ. ಈ ಆಚರಣೆ ನಮಗೆ ಜೀವನದಲ್ಲಿ ಸುಖ-ದುಃಖಗಳನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಬೇಕು ಎಂದು ತೋರಿಸುತ್ತದೆ.

ಬೇವು-ಬೆಲ್ಲ ಸೇವಿಸುವಾಗ “ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ ಸರ್ವಾರಿಷ್ಟವಿನಾಶಾಯ ನಿಂಬಕಂದಳ ಭಕ್ಷಣಮ್” ಎಂಬ ಶ್ಲೋಕವನ್ನು ಉಚ್ಚರಿಸುತ್ತಾರೆ. ಇದರ ಅರ್ಥ: ನೂರು ವರ್ಷಗಳ ಆಯುಷ್ಯ, ವಜ್ರದಂತೆ ದೃಢ ದೇಹ, ಸಂಪತ್ತು ಮತ್ತು ಎಲ್ಲ ಅನಿಷ್ಟಗಳ ನಿವಾರಣೆಗಾಗಿ ಈ ಬೇವನ್ನು ಸೇವಿಸುತ್ತೇನೆ. ಆಯುರ್ವೇದ ಪ್ರಕಾರ, ಬೇವಿನ ಎಲೆಗಳು ಅನಿಷ್ಟಗಳನ್ನು ನಾಶಮಾಡುತ್ತವೆ, ದೇಹವನ್ನು ಬಲಿಷ್ಠಗೊಳಿಸುತ್ತವೆ ಮತ್ತು ಆಯುಷ್ಯವನ್ನು ವೃದ್ಧಿಸುತ್ತವೆ.

ಹೀಗಾಗಿ ಯುಗಾದಿ ಹಬ್ಬವು ಹೊಸ ವರ್ಷಕ್ಕೆ ಶುಭಾರಂಭ ಮಾಡುವ ದಿನವಾಗಿದ್ದು, ಜೀವನದ ಸುಖ-ದುಃಖಗಳನ್ನು ಸಮಾನ ಮನಸ್ಸಿನಿಂದ ಸ್ವೀಕರಿಸುವ ಪಾಠ ನೀಡುತ್ತದೆ.

 

error: Content is protected !!