ಮುಂಬೈ: ‘ಡಾನ್ 3’ ಚಿತ್ರದಿಂದ ಹೊರಬಂದಿರುವುದಾಗಿ ಹರಿದಾಡುತ್ತಿರುವ ವರದಿಗಳು ಮತ್ತು ಅದಕ್ಕೆ ಸಂಬಂಧಿಸಿದ ವಿವಾದಗಳ ನಡುವೆ ಬಾಲಿವುಡ್ ನಟ ರಣವೀರ್ ಸಿಂಗ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಮುಂದಿನ 18 ತಿಂಗಳ ಕಾಲ ಯಾವುದೇ ಮಾಧ್ಯಮ ಸಂದರ್ಶನ ನೀಡದಿರಲು ಅವರು ನಿರ್ಧರಿಸಿದ್ದು, ಈ ಮೂಲಕ ಸಾರ್ವಜನಿಕ ಚರ್ಚೆಗಳಿಂದ ಸಂಪೂರ್ಣ ದೂರ ಉಳಿಯಲಿದ್ದಾರೆ.
ರಣವೀರ್ ತಂಡದ ಮೂಲಗಳ ಪ್ರಕಾರ, ‘ಡಾನ್ 3’ ವಿವಾದದ ಕುರಿತು ಯಾವುದೇ ವೇದಿಕೆಯಲ್ಲಿ ಮಾತನಾಡದಿರಲು ನಟ ತೀರ್ಮಾನಿಸಿದ್ದಾರೆ. ಈ ಸಂಬಂಧ ಮಾಧ್ಯಮ ಸಂಸ್ಥೆಗಳಿಂದ ಬಂದಿರುವ ಎಲ್ಲಾ ಸಂದರ್ಶನ ಮನವಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಇತ್ತೀಚೆಗೆ ರಣವೀರ್ ಸಿಂಗ್ ಅವರ ಆಪ್ತ ವಲಯ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ, ನಟ ಸದ್ಯ ತಮ್ಮ ವೃತ್ತಿಜೀವನದ ಮುಂದಿನ ಯೋಜನೆಗಳ ಮೇಲೆ ಮಾತ್ರ ಗಮನ ಹರಿಸುತ್ತಿದ್ದು, ವಿವಾದಗಳಿಗೆ ಪ್ರತಿಕ್ರಿಯಿಸುವ ಬದಲು ಮೌನದ ಮೂಲಕವೇ ಉತ್ತರ ನೀಡಲಿದ್ದಾರೆ ಎಂದು ತಿಳಿಸಲಾಗಿದೆ.
ಸದ್ಯ ಅವರು ಜೈ ಮೆಹ್ತಾ ನಿರ್ದೇಶನದ ‘ಪ್ರಳಯ’ ಸಿನಿಮಾದ ಚಿತ್ರೀಕರಣ ಹಾಗೂ ಸಿದ್ಧತೆಗಳಲ್ಲಿ ನಿರತರಾಗಿದ್ದಾರೆ. ಕೋವಿಡ್ ಕಾಲಘಟ್ಟದ ಹಿನ್ನೆಲೆಯ ಜಾಂಬಿ ಡ್ರಾಮಾ ಶೈಲಿಯ ಈ ಸಿನಿಮಾ ರಣವೀರ್ ವೃತ್ತಿಜೀವನದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ.
‘ಪ್ರಳಯ’ ಚಿತ್ರ ಬಿಡುಗಡೆಯಾಗುವವರೆಗೂ ಯಾವುದೇ ಪ್ರಚಾರಾತ್ಮಕ ಸಂದರ್ಶನ ಅಥವಾ ಮಾಧ್ಯಮ ಸಂವಾದದಲ್ಲಿ ಭಾಗವಹಿಸದಿರಲು ರಣವೀರ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ‘ಡಾನ್ 3’ ವಿವಾದದ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನವೂ ಇದಾಗಿದೆ ಎಂದು ಬಾಲಿವುಡ್ ವಲಯ ವಿಶ್ಲೇಷಿಸುತ್ತಿದೆ.

