Home Blog Page 15

ಶ್ರೀಗಳ ಹೇಳಿಕೆಯ ಹಿಂದೆ ಕಾಣದ ಕೈವಾಡ: ವಸಂತಗೌಡ ಪೊಲೀಸಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಡಾ. ಕಲ್ಲಯ್ಯಜ್ಜನವರು ತಮ್ಮ ವಿರುದ್ಧ ಮಾಡಿರುವ ಜೀವ ಬೆದರಿಕೆ ಹಾಗೂ ಹಣದ ಬೇಡಿಕೆ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಅವುಗಳನ್ನು ಸಾಬೀತುಪಡಿಸಬೇಕು ಎಂದು ಪುಣ್ಯಾಶ್ರಮದ ಸೋಲ್ ಟ್ರಸ್ಟ್ ಸದಸ್ಯರು ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋಲ್ ಟ್ರಸ್ಟ್ ಸದಸ್ಯ ವಸಂತಗೌಡ ಪೊಲೀಸಪಾಟೀಲ, ಕಳೆದ 40 ವರ್ಷಗಳಿಂದ ಶ್ರೀಮಠಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದೇನೆ. 1987ರಿಂದ ಪುಟ್ಟರಾಜ ಗವಾಯಿಗಳ ಕಾಲದಿಂದಲೂ ಮಠದೊಂದಿಗೆ ನಂಟು ಹೊಂದಿದ್ದೇನೆ. ಏಕಾಏಕಿ ತಮ್ಮ ವಿರುದ್ಧ ಜೀವ ಬೆದರಿಕೆ ಆರೋಪ ಮಾಡಿರುವುದು ತೀವ್ರ ನೋವುಂಟು ಮಾಡಿದೆ. ಶ್ರೀಗಳ ಈ ಹೇಳಿಕೆಯ ಹಿಂದೆ ಕಾಣದ ಕೈವಾಡವಿದ್ದು, ಯಾರೋ ಪ್ರೇರಣೆ ನೀಡಿ ಈ ರೀತಿಯ ಹೇಳಿಕೆ ಕೊಡಿಸಿದ್ದಾರೆ ಎನ್ನುವ ಅನುಮಾನವಿದೆ ಎಂದು ಆರೋಪಿಸಿದರು.

ರಾಜು ಖಾನಪ್ಪನವರ ಅವರು ಮಠದ ಲೆಕ್ಕಪತ್ರಗಳ ಬಗ್ಗೆ ಅಲ್ಲ, ದೇಣಿಗೆ ಸ್ವೀಕಾರ ಮತ್ತು ರಸೀದಿ ನೀಡುವ ಪ್ರಕ್ರಿಯೆ ಕುರಿತು ಪ್ರಶ್ನಿಸಿದ್ದರು. ಆ ಪ್ರಶ್ನೆಯಿಂದಲೇ ಮಠದ ಗೌರವಕ್ಕೆ ಧಕ್ಕೆಯಾಗುವಂತಹದ್ದು ಏನೂ ಇಲ್ಲ ಎಂದು ಹೇಳಿದರು.

ಸೋಲ್ ಟ್ರಸ್ಟ್ ಸದಸ್ಯ ಶಿವರುದ್ರಪ್ಪ ಇಟಗಿ ಮಾತನಾಡಿ, ಪೀಠಾಧಿಪತಿಗಳಿಂದ ₹10 ಲಕ್ಷ ಹಣ ಕೇಳಿದ್ದೇನೆ ಎಂಬ ಆರೋಪ ಸಂಪೂರ್ಣ ಸುಳ್ಳು. ತಾವು ಪ್ರತಿವರ್ಷ ವೀರೇಶ್ವರ ಪುಣ್ಯಾಶ್ರಮ ಸೇರಿದಂತೆ ವಿವಿಧ ಧಾರ್ಮಿಕ ಸಂಸ್ಥೆಗಳಿಗೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡುತ್ತಿದ್ದು, ಇಲ್ಲಿಯವರೆಗೆ ಪುಣ್ಯಾಶ್ರಮಕ್ಕೇ ₹4.50 ಲಕ್ಷಕ್ಕೂ ಅಧಿಕ ದೇಣಿಗೆ ನೀಡಿರುವುದಾಗಿ ಹೇಳಿ, ಅದರ ರಸೀದಿಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು.

ತಮ್ಮ ಸಹಿಯಿಲ್ಲದೆ ಟ್ರಸ್ಟ್‌ನಲ್ಲಿ ಠರಾವು ಮಾಡಿ ಬ್ಯಾಂಕ್ ಖಾತೆ ತೆರೆಯಲಾಗಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗೆ ದೂರು ನೀಡಿ ಹಣಕಾಸು ವ್ಯವಹಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದೆ. ಇದೇ ಕಾರಣಕ್ಕೆ ತಮ್ಮ ವಿರುದ್ಧ ಆರೋಪ ಮಾಡಲಾಗುತ್ತಿದೆ ಎಂದು ದೂರಿದರು.

ಟ್ರಸ್ಟ್ ಸದಸ್ಯ ಚಂದ್ರು ಬಾಳಿಹಳ್ಳಿಮಠ ಮಾತನಾಡಿ, ಪುಣ್ಯಾಶ್ರಮವು ಲಕ್ಷಾಂತರ ಭಕ್ತರ ದೇಣಿಗೆಯಿಂದ ಬೆಳೆದಿದೆ. ದೇಣಿಗೆ ನೀಡಿದವರ ಹೆಸರನ್ನು ರಥದ ಗಾಲಿ ಸೇರಿದಂತೆ ವಿವಿಧೆಡೆ ದಾಖಲಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ನಾಲ್ಕು ವರ್ಷಗಳ ಹಿಂದೆ ದಾಖಲಿಸಿದ ಹೆಸರಿನ ಬಗ್ಗೆ ಈಗ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಅಚ್ಚರಿ ತಂದಿದೆ ಎಂದರು.

ಜಾತ್ರೆ ಈಗಾಗಲೇ ಆರಂಭವಾಗಿದ್ದು, ಈ ಸಂದರ್ಭದಲ್ಲಿ ಯಾವುದೇ ಗೊಂದಲ ಸೃಷ್ಟಿಸದೆ ಭಕ್ತರೆಲ್ಲರೂ ಸೇರಿ ಜಾತ್ರೆಯನ್ನು ಯಶಸ್ವಿಗೊಳಿಸಬೇಕು. ಬಳಿಕ ಸಮಾಜದ ಹಿರಿಯರು, ಭಕ್ತರು ಹಾಗೂ ಶ್ರೀಗಳನ್ನು ಒಳಗೊಂಡ ಸಭೆ ನಡೆಸಿ ಎಲ್ಲ ವಿಚಾರಗಳನ್ನು ಚರ್ಚೆ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಮನವಿ ಮಾಡಿದರು.

ಡಾ. ಪ್ರಕಾಶ ಬಸರಿಗಿಡದ ಮಾತನಾಡಿ, ಪುಣ್ಯಾಶ್ರಮದ ಆವರಣದಲ್ಲಿ ತಮ್ಮ ಪೂರ್ವಜರ ಸಮಾಧಿ ಇದ್ದು, ಅದರ ಕುರಿತು ಅನಗತ್ಯ ಆರೋಪ ಮಾಡಲಾಗುತ್ತಿದೆ. ಮಠದ ಆಸ್ತಿಗೆ ಸಂಬಂಧಿಸಿದ ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ತಾವು ಯಾವುದೇ ಆಸ್ತಿ ಕಬಳಿಸುವ ಪ್ರಯತ್ನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಎಂ.ಆರ್. ಹಿರೇಮಠ, ಚನ್ನಬಸಯ್ಯ ಬಂಕಾಪೂರ, ಪರಶುರಾಮ ಕಟ್ಟಿಮನಿ, ಸಂಗಮೇಶ ದುಂದೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“1987ರಿಂದ ಶ್ರೀಮಠದ ಸೇವೆ ಮಾಡುತ್ತಿದ್ದೇನೆ. ಶ್ರೀಗಳ ಹೇಳಿಕೆಯಿಂದ ತುಂಬಾ ನೋವಾಗಿದೆ. ಅವರ ಹೇಳಿಕೆಯ ಹಿಂದೆ ಕಾಣದ ಕೈವಾಡವಿದೆ ಎನ್ನುವ ಅನುಮಾನ ನಮ್ಮನ್ನು ಕಾಡುತ್ತಿದೆ.”

– ವಸಂತಗೌಡ ಪೊಲೀಸಪಾಟೀಲ, ಸೋಲ್ ಟ್ರಸ್ಟಿ, ವೀರೇಶ್ವರ ಪುಣ್ಯಾಶ್ರಮ

“ಪೀಠಾಧಿಪತಿಗಳ ಬಳಿ ₹10 ಲಕ್ಷ ಕೇಳಿದ್ದೇನೆ ಎಂಬ ಆರೋಪ ಸಂಪೂರ್ಣ ಸುಳ್ಳು. ನಾನು ಪ್ರತಿವರ್ಷ ಧಾರ್ಮಿಕ ಸಂಸ್ಥೆಗಳಿಗೆ ದೇಣಿಗೆ ನೀಡುತ್ತೇನೆ, ಹಣ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.”

– ಇಟಗಿ ಶಿವರುದ್ರಪ್ಪ, ಸೋಲ್ ಟ್ರಸ್ಟ್ ಸದಸ್ಯ

ಪುಟ್ಟರಾಜ ಅಜ್ಜನವರ ಸೇವೆಯಲ್ಲಿ ಜಾತಿ, ರಾಜಕೀಯ ತರಬೇಡಿ: ರಮೇಶ ಮುಳಗುಂದ

0

ವಿಜಯಸಾಕ್ಷಿ ಸುದ್ದಿ, ಗದಗ: ವೀರೇಶ್ವರ ಪುಣ್ಯಾಶ್ರಮದಲ್ಲಿ ಕಳೆದ 11 ವರ್ಷಗಳಿಂದ ಯಾವುದೇ ದೇಣಿಗೆ ಪಡೆಯದೆ ಉಚಿತ ಸಾಮೂಹಿಕ ವಿವಾಹ ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಪುಟ್ಟರಾಜ ಅಜ್ಜನವರ ಸೇವೆಯಲ್ಲಿ ಜಾತಿ ಅಥವಾ ರಾಜಕೀಯ ಬೆರೆಸಬಾರದು ಎಂದು ದಿ. ಕೆ.ಎಚ್. ಪಾಟೀಲ ಅಭಿಮಾನಿ ಬಳಗದ ಉಪಾಧ್ಯಕ್ಷ ರಮೇಶ ಮುಳಗುಂದ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಮುಖಂಡ ರಾಜು ಖಾನಪ್ಪನವರ ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿದರು.

“ಸಾಮೂಹಿಕ ವಿವಾಹಕ್ಕಾಗಿ ಯಾರಿಂದಲೂ ಒಂದು ರೂಪಾಯಿ ದೇಣಿಗೆ ಪಡೆದಿಲ್ಲ. ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಸಮಾಜಸೇವಕ ಪೀರಸಾಬ್ ಕೌತಾಳ ಭರಿಸುತ್ತಿದ್ದಾರೆ. ವಧು-ವರರಿಗೆ ಅಗತ್ಯ ವಸ್ತುಗಳನ್ನೂ ಉಚಿತವಾಗಿ ನೀಡಲಾಗುತ್ತಿದೆ. ನಾವು ತನು-ಮನ-ಧನದಿಂದ ಸೇವೆ ಮಾಡುತ್ತಿದ್ದೇವೆ. ದೇಣಿಗೆ ಪಡೆದಿದ್ದೇವೆ ಎಂಬುದಕ್ಕೆ ದಾಖಲೆಗಳಿದ್ದರೆ ಬಹಿರಂಗಪಡಿಸಲಿ” ಎಂದು ಸವಾಲು ಹಾಕಿದರು.

ಪುಟ್ಟರಾಜ ಗವಾಯಿಗಳು ಹಾಗೂ ಪಂಚಾಕ್ಷರಿ ಅಜ್ಜನವರ ಪುಣ್ಯಭೂಮಿಯಾದ ವೀರೇಶ್ವರ ಪುಣ್ಯಾಶ್ರಮದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವಂತಹ ಹೇಳಿಕೆಗಳು ಸೂಕ್ತವಲ್ಲ. ಹಿಂದೂ ಧರ್ಮವೇ ಎಲ್ಲರನ್ನು ಸಮಾನವಾಗಿ ಕಾಣುವ ಸಂದೇಶ ನೀಡುತ್ತದೆ. ಹೀಗಿರುವಾಗ ಮಠದ ಸೇವಾ ಕಾರ್ಯಗಳ ಬಗ್ಗೆ ಅನಗತ್ಯ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಹೇಳಿದರು.

ರಾಜು ಖಾನಪ್ಪನವರು ಮೊದಲು ಹಿಂದೂ ಧರ್ಮದ ತತ್ವಗಳನ್ನು ಅಧ್ಯಯನ ಮಾಡಬೇಕು. ಪ್ರತಿ ವರ್ಷ ಜಾತ್ರಾ ಮಹೋತ್ಸವದ ಅಂಗವಾಗಿ ರಸಮಂಜರಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಅವರು ಕೂಡ ಕಾರ್ಯಕ್ರಮಗಳಿಗೆ ಬಂದು ವಾಸ್ತವ ಅರಿಯಲಿ ಎಂದು ಹೇಳಿದರು.

ಬಳಗದ ಸದಸ್ಯ ವಿನೋದ್ ಸಿದ್ದಲಿಂಗ ಮಾತನಾಡಿ, ಪುಟ್ಟರಾಜ ಅಜ್ಜನವರ ಜಯಂತಿ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಮಾಜದಲ್ಲಿ ಸಾಮರಸ್ಯ ಬೆಳೆಸುವ ಉದ್ದೇಶದಿಂದ ನಡೆಸಲಾಗುತ್ತಿದೆ. ಮಠದಲ್ಲಿ ಯಾವುದೇ ಜಾತಿ, ಧರ್ಮದ ಭೇದವಿಲ್ಲ. ಎಲ್ಲ ಸಮುದಾಯದ ಭಕ್ತರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.

ಪೀರಸಾಬ್ ಕೌತಾಳ ಅವರು ನಗರಸಭೆಯ ಮೂಲಕ ಶ್ರೀಮಠಕ್ಕೆ ಕುಡಿಯುವ ನೀರಿನ ವ್ಯವಸ್ಥೆ, ಹೈಮಾಸ್ಟ್ ದೀಪ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಿದ್ದು, ಜಾತ್ರಾ ಮಹೋತ್ಸವ ಯಶಸ್ವಿಯಾಗಲು ತನು-ಮನ-ಧನದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆಯನ್ನು ಪ್ರಶ್ನಿಸುವುದು ಸರಿಯಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಚಂದ್ರು ಕಡಕೋಳ, ಅನಿಲ್ ಶಿಂಗಟಾಲಕೇರಿ, ಹನುಮಂತಪ್ಪ ಆಸಂಗಿ, ದಾವಲ ಇರಕಲ್, ಅಜರುದ್ದೀನ್ ಮೂಲಿಮನಿ ಹಾಗೂ ರಜಾಕ್ ಸೂಡಿ ಉಪಸ್ಥಿತರಿದ್ದರು.

“ಕಳೆದ 11 ವರ್ಷಗಳಿಂದ ವೀರೇಶ್ವರ ಪುಣ್ಯಾಶ್ರಮದಲ್ಲಿ ಯಾರಿಂದಲೂ ಒಂದು ರೂಪಾಯಿ ದೇಣಿಗೆ ಪಡೆಯದೇ ಸಾಮೂಹಿಕ ವಿವಾಹ ಸೇರಿದಂತೆ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ದೇಣಿಗೆ ಪಡೆದಿದ್ದೇವೆ ಎಂಬುದಕ್ಕೆ ದಾಖಲೆಗಳಿದ್ದರೆ ಬಹಿರಂಗಪಡಿಸಲಿ.”

– ರಮೇಶ ಮುಳಗುಂದ, ಉಪಾಧ್ಯಕ್ಷರು, ದಿ. ಕೆ.ಎಚ್. ಪಾಟೀಲ ಅಭಿಮಾನಿ ಬಳಗ

ತುಲಾಭಾರ ತಕ್ಕಡಿ ಸಮರ್ಪಿಸಿದ ವಸಂತ ಪಡಗದ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ–ಬೆಟಗೇರಿ ಅವಳಿ ನಗರದ ಭಕ್ತರ ಆರಾಧ್ಯ ದೈವವಾದ ಕೈಲಾಸ ವರಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಯುವ ಮುಖಂಡ ವಸಂತ ಪಡಗದ ಅವರು ನೂತನ ತುಲಾಭಾರದ ತಕ್ಕಡಿಯನ್ನು ಕೊಡುಗೆಯಾಗಿ ಸಮರ್ಪಿಸಿದರು.

ದೇವಸ್ಥಾನದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಹೂವಿನಿಂದ ಅಲಂಕೃತಗೊಂಡ ತುಲಾಭಾರದ ತಕ್ಕಡಿಯನ್ನು ದೇವಸ್ಥಾನದ ಆಡಳಿತ ಮಂಡಳಿಗೆ ಹಸ್ತಾಂತರಿಸಲಾಯಿತು.

ವಸಂತ ಪಡಗದ ಅವರ ಧಾರ್ಮಿಕ ಸೇವಾ ಕಾರ್ಯವನ್ನು ಮೆಚ್ಚಿದ ದೇವಸ್ಥಾನದ ಪ್ರಮುಖರು ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಬಿ. ಪ್ರಸನ್ನಕುಮಾರ, ಕಾರ್ಯದರ್ಶಿ ಯೋಗೀಶ್ ವೊರಾ, ಕೆ. ವೆಂಕಟರಮಣ ಭಟ್, ವ್ಯವಸ್ಥಾಪಕ ರಾಮಚಂದ್ರ ಹೆಗಡೆ, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಅರ್ಚಕ ವೃಂದ, ಸ್ಥಳೀಯ ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

ಭಾವೈಕ್ಯತೆಯ ಸಂದೇಶ ಸಾರಿದ ಮೊಹರಂ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತ್ಯಾಗ, ಬಲಿದಾನ ಹಾಗೂ ಧಾರ್ಮಿಕ ಸೌಹಾರ್ದದ ಸಂಕೇತವಾದ ಮೊಹರಂ ಹಬ್ಬವನ್ನು ಶುಕ್ರವಾರ ಶಿರಹಟ್ಟಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಿಂದೂ–ಮುಸ್ಲಿಂ ಬಾಂಧವರು ಶ್ರದ್ಧೆ, ಭಕ್ತಿ ಮತ್ತು ಭಾವೈಕ್ಯತೆಯಿಂದ ಆಚರಿಸಿದರು.

ಹಬ್ಬದ ಅಂಗವಾಗಿ ಪ್ರತಿಷ್ಠಾಪಿಸಲಾದ ಆಲೇ ದೇವರುಗಳು, ಪಾಂಜಾಗಳು ಹಾಗೂ ಡೋಲಿಗಳ ಮೆರವಣಿಗೆಗಳು ಭಕ್ತರ ಗಮನ ಸೆಳೆದವು. ಹೆಜ್ಜೆ ಮೇಳ, ಹರಕೆ ಸೇವೆ, ಅಗ್ನಿ ತುಳಿಯುವುದು ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳು ಶ್ರದ್ಧಾಭಕ್ತಿಯಿಂದ ನಡೆದವು. ಹರಕೆ ಹೊತ್ತ ಭಕ್ತರು ದೇವರಿಗೆ ಪ್ರಾರ್ಥನೆ ಸಲ್ಲಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಮುಸ್ಲಿಂ ಸಮುದಾಯದ ಭಕ್ತರು ಸಂಪ್ರದಾಯದಂತೆ ಕೆಂಡ ಹಾಯುವ ಸೇವೆ ನೆರವೇರಿಸಿದರೆ, ಹಿಂದೂ ಸಮುದಾಯದ ಭಕ್ತರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ ಮೊಹರಂ ಹಬ್ಬದ ಪ್ರತಿಯೊಂದು ಆಚರಣೆಯಲ್ಲೂ ಭಾಗವಹಿಸುವ ಮೂಲಕ ಕೋಮು ಸೌಹಾರ್ದದ ಸಂದೇಶ ಸಾರಿದರು.

ತಾಲೂಕಿನ ಮಾಚೇನಹಳ್ಳಿ ಹಾಗೂ ಪರಸಾಪೂರ ಗ್ರಾಮಗಳಲ್ಲಿ ಮುಸ್ಲಿಂ ಕುಟುಂಬಗಳೇ ಇಲ್ಲದಿದ್ದರೂ, ಹಲವು ವರ್ಷಗಳಿಂದ ಹಿಂದೂ ಸಮುದಾಯದವರು ಸಂಪ್ರದಾಯಬದ್ಧವಾಗಿ ಮೊಹರಂ ಆಚರಿಸಿಕೊಂಡು ಬರುತ್ತಿರುವುದು ವಿಶೇಷವಾಗಿತ್ತು. ಹರಕೆ ಹೊತ್ತ ಭಕ್ತರು ಅಗ್ನಿ ತುಳಿದು ತಮ್ಮ ಭಕ್ತಿಭಾವ ವ್ಯಕ್ತಪಡಿಸಿದರು.

ಮೊಹರಂ ಹಬ್ಬದ ಆಚರಣೆ ಶಿರಹಟ್ಟಿ ತಾಲೂಕಿನಾದ್ಯಂತ ಧರ್ಮಕ್ಕಿಂತ ಮಾನವೀಯತೆ ದೊಡ್ಡದು ಎಂಬ ಸಂದೇಶ ಸಾರುವ ಮೂಲಕ ಹಿಂದೂ–ಮುಸ್ಲಿಂ ಭಾವೈಕ್ಯತೆಗೆ ಮತ್ತೊಮ್ಮೆ ಸಾಕ್ಷಿಯಾಯಿತು.

ಜಿರಳೆ ಕಂಡರೆ ಏಕೆ ಹೆದರುತ್ತಾರೆ? ಮಹಿಳೆಯರಲ್ಲಿ ಈ ಭಯ ಹೆಚ್ಚಿರಲು ಕಾರಣವೇನು? ಇಲ್ಲಿದೆ ತಜ್ಞರ ವಿವರಣೆ

0

ಪ್ರತಿಯೊಬ್ಬರಿಗೂ ಒಂದಲ್ಲೊಂದು ರೀತಿಯ ಭಯ ಇರುತ್ತದೆ. ಕೆಲವರಿಗೆ ಕತ್ತಲೆ, ಕೆಲವರಿಗೆ ಎತ್ತರ, ಇನ್ನು ಕೆಲವರಿಗೆ ನೀರು ಅಥವಾ ಹಾವುಗಳೆಂದರೆ ಭಯ. ಇದೇ ರೀತಿ ಅನೇಕ ಮಂದಿಗೆ, ವಿಶೇಷವಾಗಿ ಕೆಲ ಮಹಿಳೆಯರಿಗೆ ಜಿರಳೆಗಳನ್ನು ಕಂಡರೆ ಭಯವಾಗುವುದು ಸಾಮಾನ್ಯ.

ಆದರೆ ಈ ಭಯದ ಹಿಂದೆ ಮನೋವೈಜ್ಞಾನಿಕ ಕಾರಣಗಳಿವೆ ಎಂದು ತಜ್ಞರು ಹೇಳುತ್ತಾರೆ.

ಮನೋವಿಜ್ಞಾನದ ಪ್ರಕಾರ, ಜಿರಳೆಗಳ ಬಗ್ಗೆ ಇರುವ ತೀವ್ರ ಭಯವನ್ನು ‘ಕತ್ಸರಿಡಾಫೋಬಿಯಾ’ ಎಂದು ಕರೆಯಲಾಗುತ್ತದೆ. ಇದು ಒಂದು ರೀತಿಯ ಫೋಬಿಯಾ ಆಗಿದ್ದು, ಜಿರಳೆಯನ್ನು ಕಂಡ ತಕ್ಷಣ ಕೆಲವರಲ್ಲಿ ಹೃದಯ ಬಡಿತ ಹೆಚ್ಚಾಗುವುದು, ಕೈ-ಕಾಲು ತಣ್ಣಗಾಗುವುದು, ಅತಿಯಾಗಿ ಬೆವರುವುದು ಹಾಗೂ ಕೆಲ ಕ್ಷಣ ಯೋಚಿಸುವ ಸಾಮರ್ಥ್ಯವೂ ಕುಂಠಿತವಾಗುವಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ತಜ್ಞರ ಪ್ರಕಾರ, ಈ ಭಯ ಹೆಚ್ಚಾಗಿ ಬಾಲ್ಯದಲ್ಲೇ ರೂಪುಗೊಳ್ಳುತ್ತದೆ. ಮನೆಯಲ್ಲಿ ಪೋಷಕರು ಅಥವಾ ಹಿರಿಯರು ಜಿರಳೆಯನ್ನು ಕಂಡು ಭಯಪಡುವುದನ್ನು ಮಕ್ಕಳು ಗಮನಿಸುತ್ತಾರೆ. ಇದರಿಂದ ಜಿರಳೆ ಅಪಾಯಕಾರಿ ಎಂಬ ಕಲ್ಪನೆ ಅವರ ಮನಸ್ಸಿನಲ್ಲಿ ಮೂಡಿ, ಕ್ರಮೇಣ ಅದು ಭಯವಾಗಿ ಬೆಳೆಯಬಹುದು.

ಇನ್ನು ಹುಡುಗಿಯರಲ್ಲಿ ಈ ಭಯ ಹೆಚ್ಚು ಕಾಣಿಸಿಕೊಳ್ಳಲು ಸಾಮಾಜಿಕ ಹಾಗೂ ಮಾನಸಿಕ ಅಂಶಗಳೂ ಕಾರಣವೆಂದು ಹೇಳಲಾಗುತ್ತದೆ. ಬಾಲ್ಯದಿಂದಲೇ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡುವ ಕಾರಣ, ಕೊಳಕು ವಾತಾವರಣದಲ್ಲಿ ವಾಸಿಸುವ ಜಿರಳೆಗಳ ಬಗ್ಗೆ ನಕಾರಾತ್ಮಕ ಭಾವನೆ ಬೆಳೆದು ಭಯ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಜಿರಳೆಗಳ ದೈಹಿಕ ಗುಣಲಕ್ಷಣಗಳೂ ಈ ಭಯವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಎಣ್ಣೆಯುಕ್ತ ಮೈ, ವೇಗವಾಗಿ ಓಡುವ ಸ್ವಭಾವ ಹಾಗೂ ಇದ್ದಕ್ಕಿದ್ದಂತೆ ಹಾರುವ ಗುಣ ಅನೇಕರಲ್ಲಿ ಆತಂಕವನ್ನು ಉಂಟುಮಾಡುತ್ತದೆ. ವಿಶೇಷವಾಗಿ ಅನಿರೀಕ್ಷಿತವಾಗಿ ದೇಹದ ಮೇಲೆ ಬೀಳುವ ಸಾಧ್ಯತೆ ಇರುವುದರಿಂದ ಭಯ ಮತ್ತಷ್ಟು ಹೆಚ್ಚಾಗುತ್ತದೆ.

ಜಿರಳೆಗಳು ಹಾವು ಅಥವಾ ಕಾಡುಪ್ರಾಣಿಗಳಂತೆ ನೇರವಾಗಿ ಮಾರಕವಲ್ಲದಿದ್ದರೂ, ಅವು ಕೊಳಕು ಪ್ರದೇಶಗಳಲ್ಲಿ ವಾಸಿಸುವುದರಿಂದ ವಿವಿಧ ಸೂಕ್ಷ್ಮಜೀವಿಗಳು ಮತ್ತು ಅಲರ್ಜಿನ್‌ಗಳನ್ನು ಹೊತ್ತಿರುತ್ತವೆ. ಇದರಿಂದ ಅಸ್ತಮಾ ಅಥವಾ ಉಸಿರಾಟದ ಸಮಸ್ಯೆ ಇರುವವರಿಗೆ ಆರೋಗ್ಯದ ತೊಂದರೆ ಉಂಟಾಗುವ ಸಾಧ್ಯತೆ ಇದೆ.

ಮನಶ್ಶಾಸ್ತ್ರಜ್ಞರ ಪ್ರಕಾರ, ಈ ರೀತಿಯ ಭಯವನ್ನು ಸೂಕ್ತ ಸಮಾಲೋಚನೆ ಹಾಗೂ ಕ್ರಮೇಣ ಮಾನಸಿಕವಾಗಿ ಸಿದ್ಧಗೊಳ್ಳುವ ಮೂಲಕ ಕಡಿಮೆ ಮಾಡಬಹುದು. ಜಿರಳೆಗಳಿಗೆ ಭಯಪಡುವವರನ್ನು ಹಾಸ್ಯ ಮಾಡುವುದು ಅಥವಾ ಕೀಳಾಗಿ ನೋಡುವುದು ಸರಿಯಲ್ಲ. ಇದು ಉದ್ದೇಶಪೂರ್ವಕ ಪ್ರತಿಕ್ರಿಯೆಯಲ್ಲ, ಬದಲಾಗಿ ಮನಸ್ಸಿನ ಸಹಜ ರಕ್ಷಣಾತ್ಮಕ ಪ್ರತಿಕ್ರಿಯೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪೊಲೀಸರ ಮೇಲೆ ಹಲ್ಲೆ ಮಾಡಿ ಕೈಕೋಳದೊಂದಿಗೆ ಪರಾರಿಯಾದ ನಟೋರಿಯಸ್ ಕ್ರಿಮಿನಲ್!

ಮಂಗಳೂರು: ಮಂಗಳೂರು ನಗರದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಕೈಕೋಳದೊಂದಿಗೆ ನಟೋರಿಯಸ್ ಕ್ರಿಮಿನಲ್ ಪರಾರಿಯಾಗಿರುವ ಘಟನೆ ರೋಜಾರಿಯೋ ಚರ್ಚ್ ರಸ್ತೆಯಲ್ಲಿ ನಡೆದಿದೆ.

ಪರಾರಿಯಾದ ಆರೋಪಿಯನ್ನು ಬಾಗಲಕೋಟೆ ಮೂಲದ ಅಲ್ತಾಫ್ ಹುಸೇನ್ ಎಂದು ಗುರುತಿಸಲಾಗಿದೆ. ಆತ ಪರಾರಿಯಾಗುವ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಲ್ತಾಫ್ ಹುಸೇನ್ ವಾಹನ ಕಳ್ಳತನ, ಸರಗಳ್ಳತನ ಹಾಗೂ ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ. ಉತ್ತರ ಪ್ರದೇಶ ಮೂಲದ ಮಹಮ್ಮದ್ ಸಿದ್ದಿಕ್ ಮತ್ತು ರವಿ ಬೌರ ಎಂಬ ಇಬ್ಬರು ಸಹಚರರೊಂದಿಗೆ ಸೇರಿ ಕೃತ್ಯ ಎಸಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಜಪ್ಪಿನಮೊಗರು ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಸರಗಳ್ಳತನ ಪ್ರಕರಣದಲ್ಲೂ ಇದೇ ಗ್ಯಾಂಗ್ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ. ಕೆಲವು ದಿನಗಳ ಹಿಂದೆ ಈ ಗ್ಯಾಂಗ್ ನಗರದ ಮೀನುಗಾರಿಕಾ ಬಂದರು ಪ್ರದೇಶಕ್ಕೆ ಮರಳಿರುವ ಖಚಿತ ಮಾಹಿತಿ ಪಡೆದ ಪೊಲೀಸರು ಮೂವರನ್ನೂ ಬಂಧಿಸಿ ಪಾಂಡೇಶ್ವರ ಪೊಲೀಸ್ ಠಾಣೆಗೆ ಕರೆತರುತ್ತಿದ್ದರು.

ಈ ವೇಳೆ ಅಲ್ತಾಫ್ ಹುಸೇನ್ ಪೊಲೀಸರನ್ನು ತಳ್ಳಿ ಹಲ್ಲೆ ನಡೆಸಿ ಕೈಕೋಳ ಸಮೇತ ಪರಾರಿಯಾಗಿದ್ದಾನೆ. ಸದ್ಯ ಪರಾರಿಯಾದ ಆರೋಪಿಯ ಬಂಧನಕ್ಕಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಕರ್ನಾಟಕದಲ್ಲಿ ಮುಂದಿನ 7 ದಿನ ಭಾರಿ ಮಳೆ: ಕರಾವಳಿಗೆ ಯೆಲ್ಲೋ ಅಲರ್ಟ್, ಬೆಂಗಳೂರು ಸೇರಿ ಹಲವು ಜಿಲ್ಲೆಗಳಿಗೆ ಎಚ್ಚರಿಕೆ

ಬೆಂಗಳೂರು: ಮುಂಗಾರು ಮಳೆಯ ಅಬ್ಬರದ ನಡುವೆಯೇ ಕರ್ನಾಟಕದಲ್ಲಿ ಮುಂದಿನ ಏಳು ದಿನಗಳ ಕಾಲ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಜೂನ್ 27ರಂದು ಬಿಡುಗಡೆಗೊಂಡ ಹವಾಮಾನ ವರದಿ ಪ್ರಕಾರ,

ರಾಜ್ಯದ ವಿವಿಧ ಭಾಗಗಳಲ್ಲಿ ಗುಡುಗು, ಸಿಡಿಲು ಹಾಗೂ ಬಿರುಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಜೂನ್ 30ರಿಂದ ಮಳೆಯ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಇಲಾಖೆ ತಿಳಿಸಿದೆ.

ಕರಾವಳಿ ಭಾಗಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಮುಂದಿನ ಏಳು ದಿನಗಳ ಕಾಲ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಜೂನ್ 27ರಿಂದ 30ರವರೆಗೆ ಭಾರಿ ಮಳೆಯೊಂದಿಗೆ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಬೀಸುವ ಸಾಧ್ಯತೆ ಇದ್ದು, ಜುಲೈ 1ರಿಂದ 3ರವರೆಗೆ ಕೂಡ ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಉತ್ತರ ಒಳನಾಡಿನ ಜಿಲ್ಲೆಗಳಲ್ಲೂ ಮುಂದಿನ ಒಂದು ವಾರ ಗುಡುಗು-ಸಿಡಿಲಿನೊಂದಿಗೆ ಮಳೆಯಾಗುವ ನಿರೀಕ್ಷೆಯಿದೆ. ಜೂನ್ 27ರಂದು ಕೆಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ನಂತರದ ದಿನಗಳಲ್ಲಿ ಹಗುರದಿಂದ ಸಾಧಾರಣ ಮಳೆಯೊಂದಿಗೆ ಬಿರುಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ.

ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಜೂನ್ 27 ಮತ್ತು 28ರಂದು ಗುಡುಗು, ಸಿಡಿಲು ಹಾಗೂ ಬಿರುಗಾಳಿಯೊಂದಿಗೆ ಸಾಧಾರಣ ಮಳೆಯಾಗಲಿದೆ. ಜೂನ್ 29ರಂದು ಗ್ರೀನ್ ಅಲರ್ಟ್ ಘೋಷಿಸಲಾಗಿದ್ದು, ಜೂನ್ 30ರಿಂದ ಜುಲೈ 3ರವರೆಗೆ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಮಳೆ, ಗುಡುಗು ಹಾಗೂ ಸಿಡಿಲಿನ ಮುನ್ಸೂಚನೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. ವಿಶೇಷವಾಗಿ ರೈತರು, ಮೀನುಗಾರರು ಹಾಗೂ ಹೊರಾಂಗಣ ಕೆಲಸಗಳಲ್ಲಿ ತೊಡಗಿರುವವರು ಎಚ್ಚರಿಕೆಯಿಂದ ಇರಬೇಕು. ಗುಡುಗು-ಸಿಡಿಲಿನ ವೇಳೆ ಮರಗಳ ಕೆಳಗೆ ಆಶ್ರಯ ಪಡೆಯಬಾರದು ಹಾಗೂ ಹಳೆಯ ಅಥವಾ ಶಿಥಿಲಗೊಂಡ ಕಟ್ಟಡಗಳ ಸಮೀಪ ನಿಲ್ಲಬಾರದು ಎಂದು ಇಲಾಖೆ ಸಲಹೆ ನೀಡಿದೆ.

ಅಂಬಾನಿಯ ₹900 ಕೋಟಿ ದೇಣಿಗೆಯ ಲೆಕ್ಕ ಬಹಿರಂಗಪಡಿಸಿ: ರಾಮಮಂದಿರ ದೇಣಿಗೆ ಕುರಿತು ಬಿ.ಕೆ. ಹರಿಪ್ರಸಾದ್ ಪ್ರಶ್ನೆ

ಬೆಂಗಳೂರು: ಅಯೋಧ್ಯೆಯ ರಾಮ ಮಂದಿರ ದೇಣಿಗೆ ನಿರ್ವಹಣೆ ಕುರಿತು ಪಾರದರ್ಶಕತೆ ಇರಬೇಕು ಎಂದು ಆಗ್ರಹಿಸಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಬಿಜೆಪಿ ಹಾಗೂ ರಾಮ ಮಂದಿರ ಟ್ರಸ್ಟ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮ ಮಂದಿರ ದೇಣಿಗೆ ವಿವಾದದ ಕುರಿತು ಶಿವಸೇನೆ ನಾಯಕ ಸಂಜಯ್ ರಾವತ್ ಎತ್ತಿರುವ ಪ್ರಶ್ನೆಗಳನ್ನು ಉಲ್ಲೇಖಿಸಿ ಪ್ರತಿಕ್ರಿಯೆ ನೀಡಿದರು.

ಇತಿಹಾಸದ ಬಗ್ಗೆ ಮಾತನಾಡುವಾಗ ಬಿಜೆಪಿ ನಾಯಕರು ಮಹಮ್ಮದ್ ಘಜ್ನಿ ಲೂಟಿ ಮಾಡಿದ್ದನ್ನು ಪದೇ ಪದೇ ಉಲ್ಲೇಖಿಸುತ್ತಾರೆ. ಆದರೆ ಘಜ್ನಿಯ ನಂತರ ದೇಶವನ್ನು ಲೂಟಿ ಮಾಡಿರುವವರು ಬಿಜೆಪಿಯವರೇ ಎಂದು ಹರಿಪ್ರಸಾದ್ ಆರೋಪಿಸಿದರು.

ಈ ಹಿಂದೆ ರಾಮ ಮಂದಿರ ನಿರ್ಮಾಣದ ಹೆಸರಿನಲ್ಲಿ ಹಣ ಸಂಗ್ರಹಿಸಲಾಗಿತ್ತು. ಉದ್ಯಮಿ ಮುಕೇಶ್ ಅಂಬಾನಿ ₹900 ಕೋಟಿ ದೇಣಿಗೆ ನೀಡಿದ್ದರು ಎಂದು ಹೇಳಲಾಗುತ್ತಿದೆ. ಆ ಹಣದ ಲೆಕ್ಕವೂ ಸಾರ್ವಜನಿಕವಾಗಿ ಲಭ್ಯವಿಲ್ಲ ಎಂದು ಅವರು ಆರೋಪಿಸಿದರು.

“ಪೇಜಾವರ ಶ್ರೀಗಳೂ ರಾಮ ಮಂದಿರದ ದೇಣಿಗೆ ಲೆಕ್ಕ ಕೇಳಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಶ್ರೀಗಳ ಈ ಪ್ರಶ್ನೆಗೆ ಏನು ಉತ್ತರ ನೀಡುತ್ತಾರೆ? ಅವರು ಶ್ರೀಗಳ ಅಭಿಪ್ರಾಯವನ್ನು ಒಪ್ಪುತ್ತಾರೆಯೇ ಅಥವಾ ವಿರೋಧಿಸುತ್ತಾರೆಯೇ?” ಎಂದು ಪ್ರಶ್ನಿಸಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಹರಿಪ್ರಸಾದ್, ಅವರು ಕೇಂದ್ರ ಸಚಿವರು. ಅವರ ಮಾತುಗಳನ್ನು ನಾನು ಏಕೆ ಕೇಳಬೇಕು? ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷ ತೊರೆದಾಗ ಅವರ ವಿರುದ್ಧವೇ ಮಾತನಾಡಿದ್ದರು. ಈಗ ಅವರನ್ನೇ ಹೊಗಳುತ್ತಿದ್ದಾರೆ ಎಂದು ಟೀಕಿಸಿದರು.

ರಾಮ ಮಂದಿರ ಟ್ರಸ್ಟ್ ದೇಣಿಗೆಯ ಲೆಕ್ಕ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ರಾಮನ ಹೆಸರಿನಲ್ಲಿಯೂ ಕಳ್ಳತನ ಮತ್ತು ಲೂಟಿ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಕುರಿತು ಸಂಪೂರ್ಣ ಸ್ಪಷ್ಟನೆ ನೀಡಬೇಕು ಎಂದು ಬಿ.ಕೆ. ಹರಿಪ್ರಸಾದ್ ಒತ್ತಾಯಿಸಿದರು.

ಸಿಬ್ಬಂದಿ ಮಾತ್ರ ಇಷ್ಟೊಂದು ದೊಡ್ಡ ಹಗರಣ ನಡೆಸಲು ಸಾಧ್ಯವೇ? ರಾಮ ಮಂದಿರ ದೇಣಿಗೆ ಪ್ರಕರಣದಲ್ಲಿ ಪ್ರಿಯಾಂಕಾ ಗಾಂಧಿ ಪ್ರಶ್ನೆ

ನವದೆಹಲಿ: ಅಯೋಧ್ಯೆಯ ರಾಮ ಮಂದಿರದಲ್ಲಿ ಭಕ್ತರು ನೀಡಿದ ದೇಣಿಗೆ ಹಾಗೂ ಕಾಣಿಕೆ ಹಣದ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣವನ್ನು ತನಿಖೆಯ ಹೆಸರಿನಲ್ಲಿ ಮುಚ್ಚಿಹಾಕುವ ಪ್ರಯತ್ನ ಮಾಡದೆ, ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕಾ ಗಾಂಧಿ, ಇದು ಕೇವಲ ಹಣದ ಕಳ್ಳತನವಲ್ಲ, ಶ್ರೀರಾಮ ಹಾಗೂ ಅವರ ಮೇಲೆ ಅಪಾರ ಭಕ್ತಿ ಹೊಂದಿರುವ ಲಕ್ಷಾಂತರ ಭಕ್ತರ ನಂಬಿಕೆಗೆ ಮಾಡಿದ ದ್ರೋಹವಾಗಿದೆ ಎಂದು ಹೇಳಿದ್ದಾರೆ.

“ಸದಾಚಾರ, ಸತ್ಯ ಮತ್ತು ಧರ್ಮದ ಪ್ರತೀಕವಾಗಿರುವ ಶ್ರೀರಾಮನ ವಿರುದ್ಧ ಹಾಗೂ ಅವರ ಭಕ್ತರ ವಿಶ್ವಾಸದ ವಿರುದ್ಧ ಈ ಕೃತ್ಯ ಎಸಗಲಾಗಿದೆ. ಈ ಪ್ರಕರಣ ದೇಶದಾದ್ಯಂತ ಜನರನ್ನು ಆಘಾತಕ್ಕೀಡು ಮಾಡಿದೆ” ಎಂದು ಬರೆದಿದ್ದಾರೆ.

ಲಕ್ಷಾಂತರ ಭಕ್ತರು ತಮ್ಮ ಭಕ್ತಿಭಾವದಿಂದ ದೇವಸ್ಥಾನಕ್ಕೆ ಕಾಣಿಕೆ ಹಾಗೂ ದೇಣಿಗೆ ನೀಡುತ್ತಾರೆ. ಆ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಕಳ್ಳತನ ನಡೆಸಿರುವುದು ಗಂಭೀರ ಅಪರಾಧ ಮಾತ್ರವಲ್ಲ, ಧಾರ್ಮಿಕ ನಂಬಿಕೆಗೆ ಮಾಡಿದ ದ್ರೋಹವೂ ಆಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಕರಣದಲ್ಲಿ ಮತ್ತೊಂದು ಪ್ರಮುಖ ಪ್ರಶ್ನೆಯನ್ನು ಎತ್ತಿರುವ ಪ್ರಿಯಾಂಕಾ ಗಾಂಧಿ, “ಕೆಳಮಟ್ಟದ ಸಿಬ್ಬಂದಿ ಮಾತ್ರ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಗಿತಗೊಳಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ದೇಣಿಗೆಯನ್ನು ದುರ್ಬಳಕೆ ಮಾಡಲು ಸಾಧ್ಯವೇ? ಅಥವಾ ಇದರ ಹಿಂದೆ ಪ್ರಭಾವಿ ವ್ಯಕ್ತಿಗಳನ್ನೂ ಒಳಗೊಂಡ ದೊಡ್ಡ ಪಿತೂರಿ ಇದೆಯೇ?” ಎಂದು ಪ್ರಶ್ನಿಸಿದ್ದಾರೆ.

ಪ್ರಕರಣವನ್ನು ತನಿಖೆಯ ಹೆಸರಿನಲ್ಲಿ ಮರೆಮಾಚುವ ಬದಲು, ಸಂಪೂರ್ಣ ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಈ ಕಳ್ಳತನದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನೂ ಕಾನೂನಿನ ಮುಂದೆ ತಂದು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಕಾಂಗ್ರೆಸ್ ನಾಯಕಿ ಒತ್ತಾಯಿಸಿದ್ದಾರೆ.

ಸಮ್ಮತಿಯ ಲೈಂಗಿಕ ಸಂಬಂಧ ಪ್ರಕರಣದಲ್ಲಿ 19 ವರ್ಷದ ಯುವಕನ ಬಂಧನಕ್ಕೆ ಹೈಕೋರ್ಟ್ ಅಸಮಾಧಾನ; ಬಿಡುಗಡೆಗೆ ಆದೇಶ

ಬೆಂಗಳೂರು: ಇಬ್ಬರು ವಯಸ್ಕರ ನಡುವಿನ ಪರಸ್ಪರ ಸಮ್ಮತಿಯ ಪ್ರೀತಿಯ ಸಂಬಂಧವನ್ನು ಸಮಾಜ ಅಥವಾ ಕುಟುಂಬ ಒಪ್ಪುವುದಿಲ್ಲ ಎಂಬ ಕಾರಣಕ್ಕೆ ಅದನ್ನು ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಮ್ಮತಿಯ ಪ್ರೀತಿಯ ಸಂಬಂಧವನ್ನು ಅಪರಾಧೀಕರಣಗೊಳಿಸಲು ಕ್ರಿಮಿನಲ್ ಕಾನೂನನ್ನು ದುರುಪಯೋಗಪಡಿಸಿಕೊಳ್ಳಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ಮದುವೆ ಯಾಗುವುದಾಗಿ ಭರವಸೆ ನೀಡಿ ಲೈಂಗಿಕ ಸಂಪರ್ಕ ಬೆಳೆಸಿದ ಆರೋಪದಲ್ಲಿ ಜೈಲು ಸೇರಿದ್ದ 19 ವರ್ಷದ ಯುವಕನನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿದೆ.

ಬೆಂಗಳೂರು ನಿವಾಸಿ ಎಂ. ಧನುಷ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಜೊತೆಗೆ, ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ಮುಂದಿನ ಎಲ್ಲ ನ್ಯಾಯಿಕ ಪ್ರಕ್ರಿಯೆಗಳಿಗೆ ತಡೆ ನೀಡಿದೆ.

ವಿಚಾರಣೆ ವೇಳೆ ದೂರುದಾರಳಾದ ಯುವತಿ ಸ್ವತಃ ನ್ಯಾಯಾಲಯದ ಮುಂದೆ ಹಾಜರಾಗಿ, ತಮ್ಮಿಬ್ಬರ ನಡುವಿನ ಸಂಬಂಧ ಸಂಪೂರ್ಣ ಸಮ್ಮತಿಯದ್ದಾಗಿತ್ತು. ತಾವು ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ಸಹ ಸಿದ್ಧರಾಗಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಪೀಠ ಮಹತ್ವದ ಆದೇಶ ಹೊರಡಿಸಿದೆ.

ಕ್ರಿಮಿನಲ್ ಕಾನೂನು ಅತ್ಯಂತ ಗಂಭೀರವಾದ ಸಾಧನವಾಗಿದ್ದು, ಕುಟುಂಬದ ಒಪ್ಪಿಗೆ ಇಲ್ಲ ಅಥವಾ ಸಮಾಜಕ್ಕೆ ಮುಜುಗರವಾಗುತ್ತದೆ ಎಂಬ ಕಾರಣಕ್ಕೆ ಇಬ್ಬರು ವಯಸ್ಕರ ನಡುವಿನ ಸಮ್ಮತಿಯ ಸಂಬಂಧವನ್ನು ಅಪರಾಧವೆಂದು ಪರಿಗಣಿಸಲು ಅದನ್ನು ಬಳಸಲು ಅವಕಾಶ ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದಾಗ ಯುವಕನಿಂದ ಯಾವುದೇ ಬಲವಂತ, ಬೆದರಿಕೆ ಅಥವಾ ಲೈಂಗಿಕ ದೌರ್ಜನ್ಯ ನಡೆದಿರುವುದಕ್ಕೆ ಪ್ರಾಥಮಿಕವಾಗಿ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಇದು ಇಬ್ಬರು ವಯಸ್ಕರ ನಡುವಿನ ಪರಸ್ಪರ ಸಮ್ಮತಿಯ ಸಂಬಂಧವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಕೇವಲ 19 ವರ್ಷದ ಯುವಕನನ್ನು ಜೈಲಿನಲ್ಲೇ ಮುಂದುವರಿಸುವುದು ಆತನ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಹೊರ ಜಗತ್ತಿಗಿಂತ ಜೈಲಿನ ವಾತಾವರಣವೇ ಆತನಿಗೆ ಹೆಚ್ಚಿನ ಅಪಾಯ ಉಂಟುಮಾಡಬಹುದು ಎಂದು ನ್ಯಾಯಾಲಯ ಹೇಳಿದೆ.

ಈ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯದ ಮುಂದಿನ ಎಲ್ಲ ಪ್ರಕ್ರಿಯೆಗಳಿಗೆ ತಡೆ ನೀಡಿರುವ ಹೈಕೋರ್ಟ್, ಜೈಲು ಅಧಿಕಾರಿಗಳಿಗೆ ಇ-ಮೇಲ್ ಮೂಲಕ ತಕ್ಷಣ ಆದೇಶದ ಪ್ರತಿಯನ್ನು ರವಾನಿಸಿ, ಯುವಕನನ್ನು ಕೂಡಲೇ ಬಿಡುಗಡೆ ಮಾಡುವಂತೆ ಸೂಚಿಸಿದೆ.

ಪ್ರಕರಣದ ಹಿನ್ನೆಲೆ

19 ವರ್ಷದ ಧನುಷ್ ಹಾಗೂ ಅದೇ ವಯಸ್ಸಿನ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ಯುವತಿಯ ದೂರಿನ ಆಧಾರದ ಮೇಲೆ ಬೆಂಗಳೂರಿನ ಪೊಲೀಸ್ ಠಾಣೆಯೊಂದರಲ್ಲಿ ಧನುಷ್ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 64 (ಅತ್ಯಾಚಾರ) ಮತ್ತು ಸೆಕ್ಷನ್ 69 (ಮದುವೆಯಾಗುವ ಸುಳ್ಳು ಭರವಸೆ ನೀಡಿ ಲೈಂಗಿಕ ಸಂಬಂಧ ಬೆಳೆಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಯುವಕನ ಬಿಡುಗಡೆಗೆ ಆದೇಶ ನೀಡಿ ಮುಂದಿನ ವಿಚಾರಣೆಗೆ ತಡೆ ನೀಡಿದೆ.