Home Blog Page 153

ಚನ್ನರಾಯಪಟ್ಟಣ: ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ

ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕರಿಮಾರನಹಳ್ಳಿ ಗ್ರಾಮದಲ್ಲಿ ಹಗಲಲ್ಲೇ ಜಮೀನಿನಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಬೋನಿನಲ್ಲಿ ಸೆರೆಯಾಗಿದೆ.

ನಾಯಿ ಹಾಗೂ ಕರುಗಳನ್ನು ಹೊತ್ತೊಯ್ದು ತಿಂದು ಹಾಕುತ್ತಿದ್ದ ಚಿರತೆ ವಿರುದ್ಧ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಪ್ರಭು ಅವರ ತೋಟದಲ್ಲಿ ಬೋನು ಅಳವಡಿಸಿದ್ದರು.

ಸುಮಾರು ಮೂರುವರೆ ವರ್ಷದ ಹೆಣ್ಣು ಚಿರತೆ ಸೆರೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಕಡಿಮೆಯಾಗಿದೆ. ಆದರೆ ಈ ಭಾಗದಲ್ಲಿ ಚಿರತೆಗಳ ಸಂತತಿ ಹೆಚ್ಚಿರುವ ಕಾರಣ ಉಳಿದ ಚಿರತೆಗಳನ್ನೂ ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಶಾಸಕ ಸಿ.ಎನ್. ಬಾಲಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು.

ಬಾಗಲಕೋಟೆ ಕಲ್ಲು ತೂರಾಟ: ಕೃತ್ಯ ಎಸಗಿದ ಆರೋಪಿಗಳಿಗೆ ತಕ್ಕ ಉತ್ತರ ನೀಡುವಂತೆ ಸಿಎಂ ಸೂಚನೆ

0

ಬೆಂಗಳೂರು: ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲುತೂರಾಟ ಘಟನೆಗೆ ಸಂಬಂಧಿಸಿ ನಿಷ್ಪಕ್ಷಪಾತ ತನಿಖೆ ನಡೆಸಿ, ದುಷ್ಕೃತ್ಯ ಎಸಗಿದ ಆರೋಪಿಗಳಿಗೆ ಕಾನೂನಿನ ಮೂಲಕ ತಕ್ಕ ಶಿಕ್ಷೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಸಿಎಂ, ಘಟನೆ ಸಮಾಜದ ಶಾಂತಿ ಮತ್ತು ಸೌಹಾರ್ದತೆಗೆ ಮಾರಕವಾಗಿದ್ದು, ಸರ್ಕಾರ ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿರುವುದಾಗಿ ಹೇಳಿದ ಅವರು, “ನಿಷ್ಪಕ್ಷಪಾತ ತನಿಖೆ ನಡೆಸಿ, ದುಷ್ಕೃತ್ಯ ಎಸಗಿದ ಪುಂಡರಿಗೆ ಕಾನೂನಿನ ಮೂಲಕ ತಕ್ಕ ಉತ್ತರ ನೀಡಬೇಕು” ಎಂದು ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಕೆಲ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಘಟನೆಗೆ ಕಾರಣರಾದ ಪ್ರತಿಯೊಬ್ಬರಿಗೂ ಶಿಕ್ಷೆ ನಿಶ್ಚಿತ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ನಾಡಿನ ಜನರಿಗೆ ಭಯಮುಕ್ತ ಹಾಗೂ ನೆಮ್ಮದಿಯ ಬದುಕು ನೀಡುವುದು ಸರ್ಕಾರದ ಮೊದಲ ಆದ್ಯತೆ ಎಂದು ಹೇಳಿದ ಅವರು, ಜನರ ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವ ಯಾವುದೇ ವ್ಯಕ್ತಿ ಅಥವಾ ಶಕ್ತಿಯನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರು ಯಾವುದೇ ಪ್ರಚೋದನೆಗಳಿಗೆ ಕಿವಿಗೊಡದೇ, ಸಂಯಮದಿಂದ ವರ್ತಿಸಬೇಕು ಎಂದು ಮನವಿ ಮಾಡಿದ ಸಿಎಂ, ಪೊಲೀಸ್ ಇಲಾಖೆ ತನ್ನ ಕರ್ತವ್ಯವನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಲಿದೆ ಎಂಬ ಭರವಸೆ ನೀಡಿದ್ದಾರೆ.

ಈಶ್ವರ್ ಖಂಡ್ರೆ ವಿರುದ್ಧ ಅವಾಚ್ಯ ನಿಂದನೆ ಆರೋಪ: ಭಗವಂತ ಖೂಬಾಗೆ ನೋಟಿಸ್

0

ಬೀದರ್: ಸಚಿವ ಈಶ್ವರ್ ಖಂಡ್ರೆಗೆ ಅವಾಚ್ಯವಾಗಿ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾಗೆ ಭಾಲ್ಕಿ ನಗರ ಠಾಣಾ ಪೊಲೀಸರು ಎರಡು ನೋಟಿಸ್ ಜಾರಿ ಮಾಡಿದ್ದಾರೆ. ಪೊಲೀಸರು ಮೊದಲಿಗೆ ಫೆಬ್ರವರಿ 25ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.

ನಂತರ ಮತ್ತೊಮ್ಮೆ ಹೊಸ ನೋಟಿಸ್ ಜಾರಿ ಮಾಡಿ ಫೆಬ್ರವರಿ 21ರಂದು ಠಾಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ ಸೂಚಿಸಿದ್ದಾರೆ.

ವಿಚಾರಣೆಗೆ ಹಾಜರಾಗದಿದ್ದರೆ ಬಂಧನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಭಾರತೀಯ ನಾಗರಿಕ ಸಂಹಿತೆ 2023ರ ಸಂಬಂಧಿತ ಕಲಂ ಅಡಿಯಲ್ಲಿ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.

ಏನಿದು ಪ್ರಕರಣ?
ಪೊಲೀಸ್ ಇಲಾಖೆ, ಜಿಲ್ಲಾಡಳಿತ ಮುಂದಿಟ್ಟುಕೊಂಡು ಕಾಂಗ್ರೆಸ್ ಕಾರ್ಯಕ್ರಮ ಮಾಡ್ಕೊಳ್ತಿದ್ದಿ, ನೀನು ಹಿಜಡಾ ಇದ್ದೀಯಾ ಎಂದೆಲ್ಲಾ ಏಕವಚನದಲ್ಲೇ ಈಶ್ವರ್ ಖಂಡ್ರೆರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದೇ ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತ ಸುರೇಶ್ ಬಿರಾದರ್ ಎಂಬುವವರು ಭಾಲ್ಕಿ ನಗರ ಠಾಣೆಯಲ್ಲಿ ಎಫ್‌ಆರ್ ದಾಖಲಾಗಿತ್ತು.

Umpire Dies: ಕ್ರಿಕೆಟ್ ಪಂದ್ಯದ ವೇಳೆ ಜೇನುನೊಣಗಳ ದಾಳಿಗೆ ಅಂಪೈರ್ ಸಾವು!

0

ಲಕ್ನೋ: ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಸಪ್ರು ಕ್ರೀಡಾಂಗಣದಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆ ಜೇನು ದಾಳಿಯಿಂದ ಅನುಭವಿ ಅಂಪೈರ್ ಮಾಣಿಕ್ ಗುಪ್ತಾ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಪಂದ್ಯ ಮುಗಿದ ಬಳಿಕ ಪಾನೀಯ ವಿರಾಮದ ಸಮಯದಲ್ಲಿ ಸಹ ಅಂಪೈರ್ ಅವರನ್ನು ಭೇಟಿ ಮಾಡಲು ತೆರಳಿದ್ದ ಮಾಣಿಕ್ ಗುಪ್ತಾ ಮೇಲೆ ಜೇನುಹುಳುಗಳ ಹಿಂಡು ಏಕಾಏಕಿ ದಾಳಿ ನಡೆಸಿತು. ಅಲ್ಲಿದ್ದವರ ಮೇಲೆ ಹಾರಿಬಂದ ಜೇನುಹುಳುಗಳಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ಮಾಣಿಕ್ ಆಯತಪ್ಪಿ ಬಿದ್ದಿದ್ದು, ಜೇನುಹುಳುಗಳು ಅವರನ್ನು ಮುತ್ತಿಕೊಂಡು ಕಚ್ಚಿವೆ ಎಂದು ತಿಳಿದುಬಂದಿದೆ.

ಮಾಣಿಕ್ ಗುಪ್ತಾ ಸುಮಾರು 30 ವರ್ಷಗಳಿಂದ ಅಂಪೈರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರು ರಾಜ್ಯ ಸಮಿತಿಯ ಅಂಪೈರ್ ಆಗಿದ್ದಲ್ಲದೆ ಕಾನ್ಪುರ ಕ್ರಿಕೆಟ್ ಅಸೋಸಿಯೇಷನ್ ಜೊತೆಗೂ ಸಂಬಂಧ ಹೊಂದಿದ್ದರು. ಕಾನ್ಪುರ ಕ್ರಿಕೆಟ್ ವಲಯದಲ್ಲಿ ವಿಶಿಷ್ಟ ಹಾಗೂ ಗೌರವಾನ್ವಿತ ಅಂಪೈರ್ ಎಂದು ಹೆಸರು ಗಳಿಸಿದ್ದರು.

ಮಾಣಿಕ್ ಅವರ ನೆರೆಯ ಭರತೇಂದು ಪುರಿ ಮಾತನಾಡಿ, ಮಾಣಿಕ್ ಗುಪ್ತಾ ತಮ್ಮ ಇಡೀ ಜೀವನವನ್ನು ಅಂಪೈರಿಂಗ್ ಹಾಗೂ ಕುಟುಂಬಕ್ಕಾಗಿ ಮುಡಿಪಾಗಿಟ್ಟಿದ್ದರು. ಅವರು ಕ್ರಿಕೆಟ್‌ಗೆ ಸಂಪೂರ್ಣವಾಗಿ ಸಮರ್ಪಿತರಾಗಿದ್ದರು. ಈ ಘಟನೆ ಅತ್ಯಂತ ದುರದೃಷ್ಟಕರ ಎಂದು ಸಂತಾಪ ವ್ಯಕ್ತಪಡಿಸಿದರು.

ಪ್ರವಾಸಕ್ಕೆ ಹೋಗಲು ಗಂಡ ಅನುಮತಿ ಕೊಟ್ಟಿಲ್ಲ ಎಂದು ಗೃಹಿಣಿ ಆತ್ಮಹತ್ಯೆ

0

ಮೈಸೂರು: ಪ್ರವಾಸಕ್ಕೆ ಹೋಗುವ ವಿಚಾರವಾಗಿ ಗಂಡನೊಂದಿಗೆ ನಡೆದ ಜಗಳದಿಂದ ಮನನೊಂದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಸರಸ್ವತಿಪುರಂನಲ್ಲಿ ನಡೆದಿದೆ.

25 ವರ್ಷಗಳ ಹಿಂದೆ ರಂಗನಾಥ್ ಅವರನ್ನು ವಿವಾಹವಾದ ಸಂಧ್ಯಾ, ಇಬ್ಬರು ಮಕ್ಕಳ ತಾಯಿ. ಸದ್ಯ ಪುತ್ರಿ ವಿದೇಶದಲ್ಲಿ ವ್ಯಾಸಂಗ  ಮಾಡುತ್ತಿದ್ದು ಪತಿ ಹಾಗೂ ಮಗನೊಂದಿಗೆ ಸಂಧ್ಯಾ ವಾಸವಾಗಿದ್ದರು. ಕುಟುಂಬಸ್ಥರ ಪ್ರಕಾರ ನಿನ್ನೆ ರಾತ್ರಿ ಜಗಳವಾದ ನಂತರ ಗಂಡ ಹೊರಗೆ ಹೋದಾಗ, ಸಂಧ್ಯಾ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾರೆ.

ಆದರೆ ಸಹೋದರ ಗುರುಮೂರ್ತಿ, ಇದು ಆತ್ಮಹತ್ಯೆ ಅಲ್ಲವೆಂದು ಅನುಮಾನ ವ್ಯಕ್ತಪಡಿಸಿ ಪೊಲೀಸ್ ದೂರು ನೀಡಿದ್ದಾರೆ. ಪ್ರಕರಣವನ್ನು ಸರಸ್ವತಿಪುರಂ ಪೊಲೀಸ್ ಠಾಣೆದಲ್ಲಿ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಪೊಲೀಸರು ಎಲ್ಲಾ ಆಯಾಮಗಳಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

 

ಬೆಂಗಳೂರಿನಲ್ಲಿ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿ: ಎರಡು ದಿನಗಳ ಕ್ರೀಡಾ ಸಂಭ್ರಮಕ್ಕೆ ಸಜ್ಜು

0

ಬೆಂಗಳೂರು: 9 ಡ್ರೀಮ್ಸ್ ಸಂಸ್ಥೆಯ ವಿನೂತನ ಪರಿಕಲ್ಪನೆಯ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿ ಫೆಬ್ರವರಿ 21 ಮತ್ತು 22ರಂದು ನಗರದ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಅಂಗಣದಲ್ಲಿ ನಡೆಯಲಿದೆ. ಎರಡು ದಿನಗಳ ಕಾಲ ನಡೆಯುವ ಈ ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಲಿವೆ.

“ಲೀಡರ್ಸ್ ಪ್ಲೇ.. ಫ್ರೆಂಡ್ಶಿಫ್ ವಿನ್” ಎಂಬ ಘೋಷವಾಕ್ಯದೊಂದಿಗೆ ನಡೆಯುತ್ತಿರುವ ಮೊದಲ ಆವೃತ್ತಿಯ ಟೂರ್ನಿಯ ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಅನಾವರಣಗೊಳಿಸಿದ್ದಾರೆ. ಟೂರ್ನಿಯಲ್ಲಿ ಜನಪ್ರತಿನಿಧಿಗಳು,

ಐಎಎಸ್-ಐಪಿಎಸ್ ಅಧಿಕಾರಿಗಳು, ಸಚಿವಾಲಯದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ವೈದ್ಯರು, ಸ್ಯಾಂಡಲ್ವುಡ್ ತಾರೆಯರು ಹಾಗೂ ಪತ್ರಕರ್ತರು ಕ್ರೀಡಾ ಮನೋಭಾವದಿಂದ ಭಾಗವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಸೇರಿದಂತೆ ಹಲವಾರು ಗಣ್ಯರು ಪವರ್ ಪ್ಲೇ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ.

ಟೂರ್ನಿಯಲ್ಲಿ ದಿ ಎಲೈಟ್ ಬ್ಯಾಡ್ಮಿಂಟನ್ ಕ್ಲಬ್, ಇನ್ಸ್ಪೈರ್ ಚಾಲೆಂಜರ್ಸ್, ದಿ ಕೆಫೆ ದಿವ್ಯಂ, ಎಟಿಎಸ್ ಅಟ್ಯಾಕರ್ಸ್, ಪ್ರೋ ವಿನ್ ಪ್ಯಾಂಥರ್ಸ್, ಎಸ್ಥೆಟಿಕ್ ಅಟ್ಯಾಕರ್ಸ್, ಟೆಲಿಕಾಂ ಸ್ಕೈ ಸ್ಟ್ರೈಕರ್ಸ್ ಹಾಗೂ ಕೆಜಿಎಫ್ ಸ್ಮಾಷರ್ಸ್ ತಂಡಗಳು ಸ್ಪರ್ಧಿಸಲಿವೆ.

ಲೀಗ್ ಮಾದರಿಯಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಎ ಮತ್ತು ಬಿ ಗುಂಪುಗಳಾಗಿ ತಂಡಗಳನ್ನು ವಿಭಜಿಸಲಾಗಿದೆ. ಪ್ರತಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯುವ ಎರಡು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿವೆ.

ಒಟ್ಟು 128 ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದು, ಕಳೆದ ಒಂದು ತಿಂಗಳಿನಿಂದ ಎಲ್ಲಾ ತಂಡಗಳು ಕಠಿಣ ಅಭ್ಯಾಸದಲ್ಲಿ ನಿರತರಾಗಿವೆ. ವಿನೂತನ ಮಾದರಿಯ ಈ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಗೆ ಬೆಂಗಳೂರು ಸಾಕ್ಷಿಯಾಗಲಿದೆ.

“ಇದು ದೇಶದ್ರೋಹಿ ಕೆಲಸ”: ಶಿವಾಜಿ ಜಯಂತಿ ಕಲ್ಲುತೂರಾಟ ಪ್ರಕರಣಕ್ಕೆ ಪ್ರಮೋದ್ ಮುತಾಲಿಕ್ ಆಕ್ರೋಶ

0

ಹುಬ್ಬಳ್ಳಿ: ಬಾಗಲಕೋಟೆಯಲ್ಲಿ ನಡೆದ ಶಿವಾಜಿ ಜಯಂತಿ ಮೆರವಣಿಗೆಯ ವೇಳೆ ಕಲ್ಲುತೂರಾಟ ನಡೆದ ಪ್ರಕರಣಕ್ಕೆ ಸಂಬಂಧಿಸಿ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು,

ಮಸೀದಿ ಎದುರಿಗೆ ಬಂದ ಮೆರವಣಿಗೆಯ ಮೇಲೆ ಕಲ್ಲು ಹಾಗೂ ಚಪ್ಪಲಿ ಎಸೆಯಲಾಗಿದೆ ಎಂದು ಆರೋಪಿಸಿದರು. ಇದು ಇಡೀ ಹಿಂದುಗಳ ಮೇಲೆ ನಡೆದ ದೌರ್ಜನ್ಯ. ಇಂತಹ ಕೃತ್ಯವನ್ನು ನಾನು ಖಂಡಿಸುತ್ತೇನೆ. ಇದು ದೇಶದ್ರೋಹಿ ಕೆಲಸ ಎಂದು ಹೇಳಿದರು.

ಈ ಘಟನೆಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವೇ ಕಾರಣ ಎಂದು ಆರೋಪಿಸಿದ ಮುತಾಲಿಕ್, ಜಲದಲು ಎಸ್‌ಪಿ ಅವರ ಮೇಲೂ ಕಲ್ಲು ಬಿದ್ದಿದೆ. ಬೇರೆ ಯಾರ ಮೇಲಾದರೂ ಬಿದ್ದಿದ್ದರೆ ಘಟನೆ ನಡೆದೇ ಇಲ್ಲ ಎಂದು ಸರ್ಕಾರ ಹೇಳುತ್ತಿದ್ದೀತು ಎಂದು ಟೀಕಿಸಿದರು.

ಇಂತಹ ಘಟನೆಗಳಿಗೆ ಕಾರಣವಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಮಾಜದಲ್ಲಿ ಅಶಾಂತಿ ಉಂಟುಮಾಡುವವರನ್ನು ಕಟ್ಟುನಿಟ್ಟಾಗಿ ಎದುರಿಸಬೇಕು ಎಂದರು.

ನಾವು ಭಾರತ ತಂಡವನ್ನು ಸೋಲಿಸಿದ್ದೇವೆ: ಮಾಜಿ ಆಟಗಾರರಿಗೆ ಪಾಕ್ ಆಟಗಾರನ ತಿರುಗೇಟು!

0

ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ್ ತಂಡದ ಸೋಲು ಮುಂದುವರೆದ ಹಿನ್ನೆಲೆ, ಪಾಕ್ ತಂಡದ ಪ್ರದರ್ಶನದ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗಿವೆ. ಮಾಜಿ ಕ್ರಿಕೆಟಿಗರಾದ ಬಾಸಿತ್ ಅಲಿ, ಶಾಹಿದ್ ಅಫ್ರಿದಿ ಮತ್ತು ಮೊಹಮ್ಮದ್ ಯೂಸುಫ್ ಸೇರಿದಂತೆ ಹಲವರು ಹಿರಿಯ ಆಟಗಾರರನ್ನು ಗುರಿಯಾಗಿಸಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗಳಿಗೆ ಇದೀಗ ಪಾಕಿಸ್ತಾನ್ ಆಲ್‌ರೌಂಡರ್ ಶಾದಾಬ್ ಖಾನ್ ತಿರುಗೇಟು ನೀಡಿದ್ದಾರೆ.

ನಮೀಬಿಯಾ ವಿರುದ್ಧದ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾದಾಬ್ ಖಾನ್, “ನೀವು ಶ್ರೇಷ್ಠ ಆಟಗಾರರಾಗಿರಬಹುದು. ಆದರೆ ನಿಮ್ಮ ಕಾಲದಲ್ಲಿ ವಿಶ್ವಕಪ್‌ನಲ್ಲಿ ಭಾರತವನ್ನು ಸೋಲಿಸಲು ಸಾಧ್ಯವಾಗಿರಲಿಲ್ಲ ಎಂಬುದು ನೆನಪಿರಲಿ. ನಾವು ಭಾರತ ತಂಡವನ್ನು ಸೋಲಿಸಿದ್ದೇವೆ. ಈ ವಿಷಯವೂ ಗಮನದಲ್ಲಿರಬೇಕು,” ಎಂದು ಹೇಳಿದ್ದಾರೆ.

2021ರ ICC Men’s T20 World Cup ಟೂರ್ನಿಯಲ್ಲಿ ಪಾಕಿಸ್ತಾನ್ ತಂಡವು ಭಾರತದ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತ್ತು. ವಿಶ್ವಕಪ್ ಇತಿಹಾಸದಲ್ಲಿ ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಸಿಕ್ಕ ಏಕೈಕ ಜಯವೂ ಇದಾಗಿದೆ. ಆ ಪಂದ್ಯದಲ್ಲಿ ಶಾದಾಬ್ ಖಾನ್ ಕೂಡ ತಂಡದ ಭಾಗವಾಗಿದ್ದರು. ಈ ಹಿನ್ನೆಲೆಯಲ್ಲೇ ಟೀಕಿಸಿದ ಮಾಜಿ ಆಟಗಾರರಿಗೆ ಶಾದಾಬ್ ಖಾನ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ: 8 ಮಂದಿ ಬಂಧನ

0

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಪೊಲೀಸ್ ಇಲಾಖೆ 8 ಮಂದಿಯನ್ನು ಬಂಧಿಸಿದೆ.

ಜಿಲ್ಲಾ ಎಸ್‌ಪಿ ಸಿದ್ದಾರ್ಥ ಗೋಯಲ್ ಮಾತನಾಡಿ, ವಿಡಿಯೋ ಆಧಾರದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದರು. ರಾತ್ರಿ 10:06ಕ್ಕೆ ಕಲ್ಲು ಎಸೆಯಲ್ಪಟ್ಟಿದ್ದು, ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ 7 ಮಂದಿ ವಿರುದ್ಧ ಕೇಸ್ ದಾಖಲಾಗಿದೆ.

ರಾತ್ರಿ 9:30ಕ್ಕೆ ಮಸೀದಿಯಲ್ಲಿ ಪ್ರಾರ್ಥನೆ ಮುಗಿದ ಬಳಿಕ ಕೆಲವರು ಅಲ್ಲೇ ಉಳಿದಿದ್ದರು. ಅವರಲ್ಲಿ ತನ್ವೀರ್ ಎಂಬಾತ ಉದ್ದೇಶಪೂರ್ವಕವಾಗಿ ಕಲ್ಲು ಎಸೆದಿದ್ದಾನೆ. ಕಲ್ಲು ಎಸ್‌ಪಿ ಹಾಗೂ ಇಬ್ಬರು ಕಾನ್‌ಸ್ಟೇಬಲ್‌ ಮೇಲೆ ಬಿದ್ದರೂ ಹೆಲ್ಮೆಟ್ ಧರಿಸಿದ್ದರಿಂದ ಗಾಯ ತಪ್ಪಿದೆ ಎಂದು ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಎರಡೂ ಗುಂಪಿನ ಹಿರಿಯರು ಸಹಕಾರ ನೀಡಿದ್ದಾರೆ ಎಂದು ಎಸ್‌ಪಿ ಸ್ಪಷ್ಟಪಡಿಸಿದ್ದಾರೆ.

ಶಂಕಿತ ಉಗ್ರ ಜುನೈದ್ ಅಹ್ಮದ್ ಸುಳಿವು ನೀಡಿದವರಿಗೆ ₹5 ಲಕ್ಷ ಬಹುಮಾನ: NIA ಘೋಷಣೆ

0

ಬೆಂಗಳೂರು: ಮೋಸ್ಟ್ ವಾಂಟೆಡ್ ಲಷ್ಕರ್ ಎ ತೊಯ್ಬಾ (LET) ಉಗ್ರ ಜುನೈದ್ ಅಹ್ಮದ್ ಬಗ್ಗೆ ಮಾಹಿತಿ ನೀಡುವವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ಐಎ ಘೋಷಿಸಿದೆ.

ಎನ್ಐಎ ಕಳೆದ ಮೂರು ವರ್ಷಗಳಿಂದ ದೇಶ-ವಿದೇಶಗಳಲ್ಲಿ ಜುನೈದ್ ಅಹ್ಮದ್ ಹುಡುಕಾಟ ನಡೆಸುತ್ತಿದೆ. 2023 ರಲ್ಲಿ ಸಿಸಿಬಿ ಪೊಲೀಸರು ಭೇದಿಸಿದ ಉಗ್ರ ಸಂಚಿನ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಜುನೈದ್ ಅಹ್ಮದ್, ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದನು.

ಜೈಲಿನಲ್ಲಿ ಬಂಧಿತನಾಗಿದ್ದ ಜುನೈದ್, ಟಿ. ನಾಸೀರ್ ಪ್ರೇರಣೆಯಿಂದ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿ, ಜೈಲಿನಿಂದ ಬಿಡುಗಡೆಯಾದ ಬಳಿಕ ದುಬೈ ಮೂಲಕ ತನ್ನ ಸಹಚರರಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿದ ಆರೋಪ ಇದೆ.

ನಗರದ ಮೆಜೆಸ್ಟಿಕ್ ಪ್ರತಿ ಕಂಬಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಉಗ್ರನ ಬಗ್ಗೆ ಮಾಹಿತಿ ನೀಡುವವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿ ಪೋಸ್ಟರ್‌ಗಳು ಹಾಕಲಾಗಿದೆ. ಸಿಟಿ ಮತ್ತು ತಾಲ್ಲೂಕು ಮಟ್ಟದಲ್ಲಿ ಎನ್ಐಎ ಅಧಿಕಾರಿಗಳು ವಾಂಟೆಡ್ ಪೋಸ್ಟರ್ ಅಂಟಿಸಿ ಸಾರ್ವಜನಿಕ ಸಹಕಾರ ಕೋರುತ್ತಿದ್ದಾರೆ.

ಎನ್ಐಎ ಸೂಚಿಸಿದ್ದು, ಉಗ್ರನ ಬಗ್ಗೆ ಯಾವುದೇ ಉಪಯುಕ್ತ ಮಾಹಿತಿ ದೊರೆತರೆ ತಕ್ಷಣ ಸಂಪರ್ಕಿಸಬೇಕು, ಮತ್ತು ನೀಡಲಾದ ಮಾಹಿತಿ ಚೌಕಟ್ಟಿನಲ್ಲಿ ಅಪರಾಧ ತಡೆಗೆ ಸಹಾಯ ಮಾಡಲಿದೆ.

error: Content is protected !!