Home Blog Page 161

ಮಂಡ್ಯ| ತಹಸೀಲ್ದಾರ್ ನೇತೃತ್ವದಲ್ಲಿ ಪೊಲೀಸರ ದಾಳಿ; 10 ಕೆಜಿ ಗಾಂಜಾ ಸೀಜ್, ಮೂವರು ಅರೆಸ್ಟ್!

0

ಮಂಡ್ಯ:- ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ನುಗ್ಗಹಳ್ಳಿ ಬಳಿ ತಹಸೀಲ್ದಾರ್ ನೇತೃತ್ವದಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ಮೂವರು ಗಾಂಜಾ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ.

ಬಂಧಿತರಿಂದ 10 ಕೆಜಿ ಗಾಂಜಾವನ್ನು ಜಪ್ತಿ ಮಾಡಲಾಗಿದೆ. ಪಾಂಡವಪುರ ತಹಸೀಲ್ದಾರ್ ಬಸಪ್ಪರೆಡ್ಡಿ ರೋಣದ ನೇತೃತ್ವದಲ್ಲಿ, ಖಚಿತ ಮಾಹಿತಿಯ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಗಾಂಜಾ ಡೀಲ್ ಮಾಡಲು ಕಾರಿನಲ್ಲಿ ಬಂದಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ರಕ್ಷಿತ್, ಗೌತಮ್ ಹಾಗೂ ಮನೋಜ್ ಬಂಧಿತ ಆರೋಪಿಗಳಾಗಿದ್ದು, ಒರಿಸ್ಸಾದಿಂದ ಗಾಂಜಾ ಖರೀದಿಸಿ ಸ್ಥಳೀಯರಿಗೆ ಮಾರಾಟ ಮಾಡಲು ತಂದಿದ್ದರು ಎನ್ನಲಾಗಿದೆ.

ಇದೀಗ ಆರೋಪಿಗಳು ಬಳಸಿದ್ದ ಕಾರನ್ನು ಜಪ್ತಿ ಮಾಡಲಾಗಿದ್ದು, ಅವರ ವಿರುದ್ಧ NDPS ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ

ಬಿಜೆಪಿ ಸಂಸದ ಮನೋಜ್ ತಿವಾರಿ ಮುಂಬೈ ಮನೆಯಲ್ಲಿ ಕಳ್ಳತನ: ಮಾಜಿ ಉದ್ಯೋಗಿ ಅರೆಸ್ಟ್!

0

ಮುಂಬೈ: ಬಿಜೆಪಿ ಸಂಸದ ಹಾಗೂ ಪ್ರಸಿದ್ಧ ಗಾಯಕ ಮನೋಜ್ ತಿವಾರಿ ಅವರ ಮುಂಬೈ ನಿವಾಸದಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಅಂಧೇರಿ ಪಶ್ಚಿಮದ ಶಾಸ್ತ್ರಿ ನಗರದಲ್ಲಿರುವ ಸುಂದರ್‌ಬನ್ ಅಪಾರ್ಟ್‌ಮೆಂಟ್‌ನ ಮನೆಯಿಂದ ಒಟ್ಟು 5.40 ಲಕ್ಷ ರೂ. ನಗದು ಕಳುವಾಗಿದೆ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಮನೋಜ್ ತಿವಾರಿ ಅವರ ಮಾಜಿ ಕೆಲಸಗಾರ ಸುರೇಂದ್ರ ಕುಮಾರ್ ದೀನನಾಥ್ ಶರ್ಮಾ ಅವರನ್ನು ಅಂಬೋಲಿ ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಆರೋಪಿಯನ್ನು ಗುರುತಿಸಲಾಗಿದ್ದು, ನಕಲಿ ಕೀಲಿಗಳನ್ನು ಬಳಸಿ ಮನೆ, ಮಲಗುವ ಕೋಣೆ ಹಾಗೂ ಕ್ಲೋಸೆಟ್ ತೆರಳಿ ಕಳ್ಳತನ ನಡೆಸಿದ್ದಾನೆ ಎನ್ನಲಾಗಿದೆ.

ಮನೋಜ್ ತಿವಾರಿ ಅವರ ಮ್ಯಾನೇಜರ್ ಪ್ರಮೋದ್ ಪಾಂಡೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಆರೋಪಿಯು ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಒಸಡುಗಳಲ್ಲಿ ರಕ್ತ ಬರುವುದು ಡಯಾಬಿಟಿಸ್ ಬರುವ ಮುನ್ಸೂಚನೆಯೇ? ಇಲ್ಲಿದೆ ಉತ್ತರ

0

ಸಾಮಾನ್ಯವಾಗಿ ಕೆಲವರಿಗೆ ಹಲ್ಲುಜ್ಜುವಾಗ ಅಥವಾ ಗಟ್ಟಿಯಾದ ಆಹಾರ ಸೇವಿಸುವ ವೇಳೆ ಒಸಡುಗಳಿಂದ ರಕ್ತಸ್ರಾವವಾಗುವುದು ಕಂಡುಬರುತ್ತದೆ. ಅಪರೂಪಕ್ಕೆ ಇಂತಹ ಅನುಭವವಾಗುವುದು ಸಾಮಾನ್ಯವೇ ಆಗಿರಬಹುದು. ಆದರೆ ಪದೇಪದೇ ಒಸಡುಗಳಿಂದ ರಕ್ತಸ್ರಾವವಾಗುತ್ತಿದ್ದರೆ ಅದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.

ಬಹುತೇಕ ಜನರು ಒಸಡು ರಕ್ತಸ್ರಾವವನ್ನು ಸಣ್ಣ ಸಮಸ್ಯೆಯೆಂದು ಪರಿಗಣಿಸುತ್ತಾರೆ. ಆದರೆ ಇದು ಕೆಲವೊಮ್ಮೆ ಗಂಭೀರ ಕಾಯಿಲೆಗಳ ಮುನ್ಸೂಚನೆಯಾಗಿರಬಹುದು. ಹಾಗಾದರೆ ಒಸಡುಗಳಿಂದ ರಕ್ತಸ್ರಾವವಾಗಲು ಕಾರಣವೇನು? ಇದಕ್ಕೂ ಮಧುಮೇಹ (ಡಯಾಬಿಟಿಸ್) ಅಥವಾ ಹೃದಯ ಸಂಬಂಧಿ ಕಾಯಿಲೆಗಳಿಗೂ ಸಂಬಂಧವಿದೆಯೇ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.

ಒಸಡುಗಳಿಂದ ರಕ್ತಸ್ರಾವವಾಗಲು ಕಾರಣವೇನು?

ಹೆಚ್ಚಿನ ಸಂದರ್ಭಗಳಲ್ಲಿ ಒಸಡು ಕಾಯಿಲೆ, ಅಂದರೆ ಪೆರಿಯೊಡಾಂಟಲ್ ಸೋಂಕಿನಿಂದ ರಕ್ತಸ್ರಾವವಾಗುತ್ತದೆ. ಒಸಡುಗಳಲ್ಲಿ ಊತ, ಉರಿತನ ಅಥವಾ ಸೋಂಕು ಇದ್ದರೆ ರಕ್ತಸ್ರಾವ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಕೆಲವು ಸಂದರ್ಭಗಳಲ್ಲಿ ಇದು ಇತರೆ ಗಂಭೀರ ಕಾಯಿಲೆಗಳ ಸಂಕೇತವೂ ಆಗಿರಬಹುದು ಎಂದು ವೈದ್ಯರು ಹೇಳುತ್ತಾರೆ.

ಡಯಾಬಿಟಿಸ್‌ಗೂ ಸಂಬಂಧವಿದೆಯೇ?

ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿದ್ದರೆ ದೇಹದಲ್ಲಿ ಸೋಂಕುಗಳು ಬೇಗನೆ ಬೆಳೆಯುತ್ತವೆ. ಈ ಕಾರಣದಿಂದ ಮಧುಮೇಹ ಇರುವವರಿಗೆ ಒಸಡಿಗೆ ಸಂಬಂಧಪಟ್ಟ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತವೆ. ಅಧ್ಯಯನಗಳ ಪ್ರಕಾರ, ಡಯಾಬಿಟಿಸ್ ಇರುವವರಿಗೆ ಒಸಡು ಕಾಯಿಲೆಗಳ ಅಪಾಯ 3ರಿಂದ 4 ಪಟ್ಟು ಹೆಚ್ಚು. ಆದ್ದರಿಂದ ಒಸಡುಗಳಲ್ಲಿ ನಿರಂತರವಾಗಿ ರಕ್ತಸ್ರಾವವಾಗುತ್ತಿದ್ದರೆ, ಸಕ್ಕರೆ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು ಎಂದು ತಜ್ಞರು ಸಲಹೆ ನೀಡುತ್ತಾರೆ.

ಹೃದಯ ಕಾಯಿಲೆಗಳ ಎಚ್ಚರಿಕೆನಾ?

ಹಲವಾರು ಅಧ್ಯಯನಗಳು ಒಸಡು ಕಾಯಿಲೆ ಅಥವಾ ನಿರಂತರ ರಕ್ತಸ್ರಾವ ಇರುವವರಿಗೆ ಹೃದಯ ಸಮಸ್ಯೆಗಳ ಸಾಧ್ಯತೆ ಹೆಚ್ಚಿರುತ್ತದೆ ಎಂದು ಸೂಚಿಸುತ್ತವೆ. ಆದರೆ ಒಸಡು ರಕ್ತಸ್ರಾವದಿಂದಲೇ ಹೃದಯಾಘಾತವಾಗುತ್ತದೆ ಎಂಬುದಕ್ಕೆ ನೇರ ಪುರಾವೆಗಳು ಇಲ್ಲ. ಆದರೂ ಇದು ಹೃದಯ ಆರೋಗ್ಯದ ಬಗ್ಗೆ ಎಚ್ಚರಿಕೆ ನೀಡುವ ಸಂಕೇತವಾಗಿರಬಹುದು ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.

ನಿರ್ಲಕ್ಷ್ಯ ಮಾಡಿದರೆ ಏನಾಗಬಹುದು?

ಒಸಡುಗಳಿಂದ ರಕ್ತಸ್ರಾವವಾದರೆ ನಿಮಗೆ ಖಂಡಿತವಾಗಿ ಮಧುಮೇಹ ಅಥವಾ ಹೃದ್ರೋಗವಿದೆ ಎಂದರ್ಥವಲ್ಲ. ಆದರೆ ಇಂತಹ ಲಕ್ಷಣಗಳು ಆರಂಭಿಕ ಹಂತದಲ್ಲೇ ಕಾಯಿಲೆಗಳನ್ನು ಪತ್ತೆಹಚ್ಚಲು ಸಹಾಯಕವಾಗಬಹುದು. ಆದ್ದರಿಂದ ಇದನ್ನು ಹಗುರವಾಗಿ ತೆಗೆದುಕೊಳ್ಳುವುದು ಭವಿಷ್ಯದಲ್ಲಿ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.

ಏನು ಮಾಡಬೇಕು?

ಒಸಡುಗಳಲ್ಲಿ ಆಗಾಗ ರಕ್ತಸ್ರಾವವಾಗುವುದು, ಊತ, ನೋವು ಅಥವಾ ಬಾಯಿಯಲ್ಲಿ ದುರ್ವಾಸನೆ ಕಾಣಿಸಿಕೊಂಡರೆ ತಕ್ಷಣ ದಂತ ತಜ್ಞರನ್ನು ಸಂಪರ್ಕಿಸಿ. ಮಧುಮೇಹ ಅಥವಾ ಹೃದ್ರೋಗದ ಕುಟುಂಬದ ಇತಿಹಾಸವಿದ್ದರೆ ಇನ್ನಷ್ಟು ಎಚ್ಚರ ವಹಿಸಬೇಕು.

ದಿನಕ್ಕೆ ಎರಡು ಬಾರಿ ಮೃದುವಾದ ಬ್ರಷ್ ಬಳಸಿ ಹಲ್ಲುಜ್ಜುವುದು, ಬಾಯಿಯ ಸ್ವಚ್ಛತೆ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ಒಟ್ಟಾರೆ, ಒಸಡುಗಳಿಂದ ರಕ್ತಸ್ರಾವವನ್ನು ನಿರ್ಲಕ್ಷಿಸದೆ ಸಮಯದಲ್ಲೇ ತಜ್ಞರ ಸಲಹೆ ಪಡೆಯುವುದು ನಿಮ್ಮ ಒಟ್ಟಾರೆ ಆರೋಗ್ಯದ ರಕ್ಷಣೆಗೆ ಅಗತ್ಯ.

ಕೊಟ್ಟಿಗೆಪಾಳ್ಯದಲ್ಲಿ ಕಸದ ರಾಶಿಗೆ ಬೆಂಕಿ, ನೀಲಗಿರಿ ತೋಪಿಗೆ ವ್ಯಾಪಿಸಿದ ಅಗ್ನಿ ಜ್ವಾಲೆ!

0

ಬೆಂಗಳೂರು:- ಮಾಗಡಿ ರೋಡ್–ಮಾಲಗಾಳ ರಸ್ತೆಯ ಕೊಟ್ಟಿಗೆಪಾಳ್ಯದಲ್ಲಿ ಕಸದ ರಾಶಿಗೆ ಬೆಂಕಿ ಬಿದ್ದು, ಪಕ್ಕದಲ್ಲಿದ್ದ ನೀಲಗಿರಿ ತೋಪಿಗೆ ಬೆಂಕಿ ವ್ಯಾಪಿಸಿದ ಘಟನೆ ನಡೆದಿದೆ.

ನೀಲಗಿರಿ ತೋಪಿನ ಸಮೀಪದಲ್ಲೇ ಇದ್ದ ಕಸದ ರಾಶಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಗಾಳಿಯ ತೀವ್ರತೆಯಿಂದ ಬೆಂಕಿಯ ಜ್ವಾಲೆ ಹೆಚ್ಚಾಗಿ ತೋಪಿಗೂ ಹರಡಿತು. ಇದರಿಂದ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿತ್ತು. ವಿಷಯ ತಿಳಿದ ತಕ್ಷಣ ಕೊಟ್ಟಿಗೆಪಾಳ್ಯದ ಸ್ಥಳೀಯರು ಸ್ವಯಂಪ್ರೇರಿತವಾಗಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿ, ಅಗ್ನಿ ಅವಘಡವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದಿದ್ದಾರೆ. ಇದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಅಕ್ರಮವಾಗಿ ನೀರಿನ ಬಾಟಲ್ ಮಾರಾಟ; ರೈಲಿನಲ್ಲೇ ಯುವಕನ ಮೇಲೆ ಹಲ್ಲೆ! Video Viral

0

ಬೆಂಗಳೂರು:- ನೀರಿನ ಬಾಟಲ್ ಮಾರಾಟ ವಿಚಾರಕ್ಕೆ ರೈಲಿನಲ್ಲಿ ಯುವಕನ ಮೇಲೆಯೇ ಹಲ್ಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

ಹಾಸನ ಮಾರ್ಗದ ರೈಲಿನಲ್ಲಿ ಈ ಅಮಾನವೀಯ ಘಟನೆ ಜರುಗಿದೆ. ಗೊಮ್ಮಟೇಶ್ವರ ರೈಲು ನಿಲ್ದಾಣದಲ್ಲಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಬಾಟಲ್ ಗಳನ್ನ ಅಕ್ರಮವಾಗಿ ಕೊಡ್ತಾನೆ ಎಂಬ ವಿಚಾರಕ್ಕೆ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ರೈಲಿನ ಗುತ್ತಿಗೆ ಪುಡ್ ರಿಲವರಿ ಸಿಬ್ಬಂದಿಯಿಂದ ಈ ಹಲ್ಲೆ ನಡೆದಿದೆ. ಅಲ್ಲದೇ ಎಲ್ಲಾ ನೀರಿನ ಬಾಟಲಿಗಳನ್ನು ಹೊರಗೆ ಎಸೆಯುವಂತೆ ಧಮ್ಕಿ ಹಾಕಿದ್ದಾನೆ.

ಸ್ಥಳೀಯ ಹಾಗೂ ಆರ್ ಪಿಎಫ್ ಸಿಬ್ಬಂದಿಯ ಗಮನಕ್ಕೆ ತರದೆ ಗುತ್ತಿಗೆ ಸಿಬ್ಬಂದಿಯಿಂದ ಹಲ್ಲೆ ನಡೆಸಲಾಗಿದೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬೆಂಗಳೂರು| ಕುಡಿದ ಮತ್ತಿನಲ್ಲಿ ಪಾನಿಪುರಿ ಅಂಗಡಿಗೆ ಕಾರು ನುಗ್ಗಿಸಿದ ಚಾಲಕ!

0

ಬೆಂಗಳೂರು:- ಚಾಲಕನೋರ್ವ ಕುಡಿದ ಮತ್ತಿನಲ್ಲಿ ಪಾನಿಪುರಿ ಅಂಗಡಿಗೆ ಕಾರು ನುಗ್ಗಿಸಿದ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಸಂಚಾರ ವಿಭಾಗ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಬಿ ಇ ಎಲ್ ಲೇಔಟ್ ನಲ್ಲಿರುವ ಪಾವನಿ ಚಾಟ್ಸ್ ಗೆ ಕಾರು ನುಗ್ಗಿದೆ. KA 03 NE 1782 ನೋಂದಣಿ ಸಂಖ್ಯೆಯ ಕಾರು ಇದಾಗಿದ್ದು, ಕುಡಿದ ಮತ್ತಿನಲ್ಲಿ ಚಾಲಕ ಕಾರು ಚಾಲನೆ ಮಾಡಿರೋ ಆರೋಪ ಕೇಳಿಬಂದಿದೆ. ಕಳೆದ ರಾತ್ರಿ 09 ಗಂಟೆಯ ಸುಮಾರಿಗೆ ಈ ಘಟನೆ ಜರುಗಿದೆ.

ಕಾರು ಗುದ್ದಿದ್ದಲ್ಲದೇ ಚಾಟ್ಸ್ ಮಾಲೀಕರಿಗೆ ಅವಾಜ್ ಹಾಕಿರೋ ಆರೋಪ ಕೇಳಿಬಂದಿದೆ. ಘಟನೆ ಬೆನ್ನಲ್ಲೇ ಕಾಮಾಕ್ಷಿಪಾಳ್ಯ ಸಂಚಾರ ವಿಭಾಗ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು| ಚಲಿಸುತ್ತಿದ್ದ ಕಾರು ನಡುರಸ್ತೆಯಲ್ಲೇ ಬೆಂಕಿಗಾಹುತಿ; ಚಾಲಕ ಪಾರು!

0

ಬೆಂಗಳೂರು:- ನಡು‌ ರಸ್ತೆಯಲ್ಲಿಯೇ ಕಾರೊಂದು ಹೊತ್ತಿ ಉರಿದಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ.

ಯಶವಂತಪುರ ಕಡೆಯಿಂದ ಮಲ್ಲೇಶ್ವರಂ ನ ಸರ್ಕಲ್ ಮಾರಮ್ಮ ದೇವಸ್ಥಾನದ ಕಡೆಗೆ ಹೋಗುತ್ತಿದ್ದ ಕಾರು, ಇದ್ದಕ್ಕಿದ್ದಂತೆ ಬೆಂಕಿಯಲ್ಲಿ ಹೊತ್ತಿ ಉರಿದಿದೆ. ಘಟನೆಗೂ ಮುನ್ನ ಕಾರಿನ ಒಳಬಾಗದಲ್ಲಿ ಹೊಗೆ ಕಾಣಿಸಿ ಕೊಳ್ಳುತ್ತಿದ್ದಂತೆ ಎಚ್ಚೆತ್ತ ಚಾಲಕ, ತಕ್ಷಣ ಕಾರಿನಿಂದ ಕೆಳಗಡೆ ಇಳಿದಿದ್ದಾನೆ.

ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಪಾಯವಾಗಿಲ್ಲ. ಸ್ಥಳೀಯರು ಕೂಡಲೇ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಯಶವಂತಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಸೀರಿಯಲ್ ಕಳ್ಳನ ಬೇಟೆ: ಗದಗ ಪೊಲೀಸರ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಗೆ ಸಿಕ್ಕಿಬಿದ್ದ ₹3.35 ಲಕ್ಷ ಚಿನ್ನಾಭರಣ

0

ಗದಗ: ಗ್ರಾಮೀಣ ಠಾಣೆಯ ಪೊಲೀಸರು ಮನೆ ಕಳ್ಳತನ ಪ್ರಕರಣವನ್ನು ತ್ವರಿತವಾಗಿ ಭೇದಿಸಿ, ಆರೋಪಿಯನ್ನು ಬಂಧಿಸಿ ₹3.35 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

2025 ಡಿಸೆಂಬರ್ 15ರಂದು ಹುಲಕೋಟಿ ಆಶ್ರಯ ಕಾಲೋನಿಯ ನಿವಾಸಿ ಹುಸೇನಸಾಬ್ ತಂದೆ ಹೊನ್ನೂರಸಾಬ್ ನದಾಪ್ (50) ಅವರು ಮನೆಯನ್ನು ಕೀಲಿ ಹಾಕಿ ಸ್ನೇಹಿತರ ಮನೆಯಲ್ಲಿ ಬೀಗತನ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಕಳ್ಳತನ ನಡೆದಿತ್ತು. ಮಧ್ಯಾಹ್ನ 1.45 ರಿಂದ ಸಂಜೆ 6.30ರ ನಡುವೆ ಕಳ್ಳರು ಮನೆ ಬಾಗಿಲಿನ ಕೀಲಿಯನ್ನು ಬಳಸಿ ಒಳನುಗ್ಗಿ, ಬೆಡ್‌ರೂಮ್‌ನಲ್ಲಿದ್ದ ಟ್ರೆಜರಿ ಚಾವಿಯನ್ನು ಪಡೆದು ಲಾಕರ್ ತೆರೆಯಲಾಗಿದೆ. ಇದರಿಂದ 23 ಗ್ರಾಂ ತೂಕದ ಚಿನ್ನಾಭರಣಗಳು (ಅಂದಾಜು ₹2.30 ಲಕ್ಷ) ಹಾಗೂ ₹61,000 ನಗದು ಹಣ ಕಳವಾಗಿತ್ತು.

ಈ ಸಂಬಂಧ ಗದಗ ಗ್ರಾಮೀಣ ಠಾಣೆಯಲ್ಲಿ ಗುನ್ನೆ ಸಂಖ್ಯೆ 278/2025 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 331(3), 305 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ IPS ಅವರ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹಾಂತೇಶ ಸಜ್ಜನ್ ಮತ್ತು ಡಿಎಸ್‌ಪಿ ಮುರ್ತುಜಾ ಖಾದ್ರಿ ಮಾರ್ಗದರ್ಶನದಲ್ಲಿ, ಪಿಐ ಸಿದ್ದರಾಮೇಶ್ವರ ಗಡೇದ್ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿತು. ತಂಡದಲ್ಲಿ ಪಿಎಸ್‌ಐ ಎಸ್.ಬಿ. ಕವಲೂರ್, ಸಿಬ್ಬಂದಿಗಳಾದ ಗಂಗಾಧರ ಮಜ್ಜಿಗೆ, ಪ್ರಕಾಶ್ ಗಾಣಿಗೇರ, ಮೆಹಬೂಬ್ ವಡ್ಡಟ್ಟಿ, ಅನಿಲ್ ಬನ್ನಿಕೊಪ್ಪ ಹಾಗೂ ತಾಂತ್ರಿಕ ಸಿಬ್ಬಂದಿಗಳಾದ ಗುರುರಾಜ್ ಬೂದಿಹಾಳ್ ಮತ್ತು ಸಂಜೀವ್ ರವರು ಇದ್ದರು.

ವೈಜ್ಞಾನಿಕ ತನಿಖೆ ಮತ್ತು ತಾಂತ್ರಿಕ ಮಾಹಿತಿ ಆಧಾರದ ಮೇಲೆ ಆರೋಪಿ ವಿ. ಮಹೇಶ್ ತಂದೆ ಗುರುಸ್ವಾಮಿ (32), ಹೊಸಪೇಟೆ ತಾಲ್ಲೂಕಿನ ನಿವಾಸಿಯನ್ನು ಬಂಧಿಸಲಾಗಿದೆ. ವಿಚಾರಣೆಯಲ್ಲಿ ಹುಲಕೋಟಿ ಹಾಗೂ ಲಕ್ಕುಂಡಿಯಲ್ಲಿನ ಇನ್ನೊಂದು ಮನೆ ಕಳ್ಳತನ ಪ್ರಕರಣವನ್ನೂ ಒಪ್ಪಿಕೊಂಡಿದ್ದಾನೆ.

ಎರಡೂ ಪ್ರಕರಣಗಳಿಂದ ಒಟ್ಟು 61 ಗ್ರಾಂ ತೂಕದ ಚಿನ್ನಾಭರಣಗಳು (ಅಂದಾಜು ಮೌಲ್ಯ ₹3,35,000) ವಶಪಡಿಸಿಕೊಳ್ಳಲಾಗಿದೆ. ಆರೋಪಿ ವಿರುದ್ಧ ಬಳ್ಳಾರಿ, ಹಾವೇರಿ, ದಾವಣಗೆರೆ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.

ಗದಗ ಗ್ರಾಮೀಣ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಶ್ರಮದಿಂದ ಈ ಯಶಸ್ವಿ ಕಾರ್ಯಾಚರಣೆ ಸಾಧ್ಯವಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರು ತಂಡಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ಯಶಸ್ವಿ ಕಾರ್ಯಾಚರಣೆಗೆ ಪೊಲೀಸ್ ತಂಡವನ್ನು ಎಸ್‌ಪಿ ರೋಹನ್ ಜಗದೀಶ್ ಅಭಿನಂದಿಸಿದ್ದಾರೆ. ಸಾರ್ವಜನಿಕರು ಮನೆಯನ್ನು ಖಾಲಿ ಮಾಡುವಾಗ ಹೆಚ್ಚಿನ ಭದ್ರತೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಸಮನ್ವಯತೆಯೊಂದಿಗೆ ಆರೋಗ್ಯಕರ ಜೀವನ ನಡೆಸಿ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಸುಕ್ಷೇತ್ರ ಬಳಗಾನೂರಿನ ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವದ ಅಂಗವಾಗಿ ಬಳಗಾನೂರ ಶ್ರೀ ಶರಣರ ಮಠದಲ್ಲಿ ಮಹಾತ್ಮರ ಜೀವನ-ದರ್ಶನ ಪ್ರವಚನ ಪ್ರಾರಂಭೋತ್ಸವ ಜರುಗಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಡ್ನೂರ-ರಾಜೂರ-ಗದಗ ಬೃಹನ್ಮಠದ ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಮನುಷ್ಯನ ಜೀವನದ ಕೊನೆಯ ಹಂತವೇ ಮರಣವಾಗಿದೆ. ಅವನ ಸಾವಿನ ಜೊತೆಗೆ ಯಾವುದೂ ಬರುವುದಿಲ್ಲ. ಅವನ ದೇಹತ್ಯಾಗದ ನಂತರ ಅವನ ಸನ್ನಡತೆ, ಸದಾಚಾರ, ಪರೋಪಕಾರ, ದಾನ, ಧರ್ಮ ಮಾರ್ಗದ ಬದುಕಿನ ಮೌಲ್ಯಗಳು ಉಳಿಯುತ್ತವೆ. ಆ ದಿಶೆಯಲ್ಲಿ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಸರ್ವರಲ್ಲಿ ಸಮಾನತೆ, ಸಮನ್ವಯತೆ ಬೆಳೆಸಿಕೊಂಡು ಆರೋಗ್ಯಕರ ಜೀವನ ನಿರ್ವಹಿಸಬೇಕೆಂದರು.

ನಿವೃತ್ತ ಉಪನಿರ್ದೇಶಕ ಡಿ.ಐ. ಅಸುಂಡಿ ಮಾತನಾಡಿ, ಶ್ರೀ ಚನ್ನವೀರ ಶರಣರ ಪ್ರಭಾವ ಹಾಗೂ ಅವರ ಒಡನಾಟವನ್ನು ಸ್ಮರಿಸಿದರು. ಬಳೂಟಿಗಿಯ ಸಿದ್ದಯ್ಯ ಶಾಸ್ತ್ರಿಗಳಿಂದ ಪ್ರವಚನ ಸೇವೆ ಜರುಗಿತು. ಮುತ್ತು ಗದಗ, ಶರಣು ಕೆ. ಹಿರೇಮಠ, ಸೋಮನಾಳ ಇವರಿಂದ ಸಂಗೀತಸೇವೆ ಜರುಗಿತು.

ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಡಿ.ಐ. ಅಸುಂಡಿ ದಂಪತಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಸವಡಿ ಗ್ರಾಮದ ಎಂ.ಬಿ. ಪರಡ್ಡಿ ಕುಟುಂಬ ವರ್ಗದವರಿಂದ ಹಾಗೂ ಸವಡಿ ಗ್ರಾಮದ ಸಮಸ್ತ ಸದ್ಭಕ್ತರಿಂದ ಶ್ರೀ ಶಿವಶಾಂತವೀರ ಶರಣರ ತುಲಾಭಾರದ ಭಕ್ತಿಸೇವೆ ಜರುಗಿತು. ಬಳಗಾನೂರಿನ ವೇದಾ ಶ್ರೀಧರ ಬಡಿಗೇರ, ವಿರಾಜ್ ಶ್ರೀಧರ ಬಡಿಗೇರ ಇವರ ನಾಣ್ಯ ತುಲಾಭಾರ ಹಾಗೂ ತೆಂಗಿನಕಾಯಿ ತುಲಾಭಾರದ ಭಕ್ತಿಸೇವೆಯ ಹಮ್ಮಿನಿಯನ್ನು ಶ್ರೀಶರಣರಿಗೆ ಸಮರ್ಪಿಸಿದರು.

ಸವಡಿಯ ಶ್ರೀಕಾಳಿಕಾ ಭಜನಾ ಸಂಘದವರು ಭಜನಾ ಪದಗಳನ್ನು ಪ್ರಸ್ತುತಪಡಿಸಿದರು. ತಾ.ಪಂ ಮಾಜಿ ಅಧ್ಯಕ್ಷ ವಿ.ಎಸ್. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಸ್. ಪುರಾಣಿಕಮಠ ಸ್ವಾಗತಿಸಿದರು. ಪ್ರಾ. ಪ್ರಕಾಶ ಬರದೂರ, ಶಿವಲಿಂಗಶಾಸ್ತ್ರಿ ಸಿದ್ದಾಪೂರ ನಿರೂಪಿಸಿದರು. ಬಿ.ವಾಯ್. ಡೊಳ್ಳಿನ ವಂದಿಸಿದರು.

ನೇತೃತ್ವ ವಹಿಸಿದ್ದ ಶ್ರೀ ಶಿವಶಾಂತವೀರ ಶರಣರು ಮಾತನಾಡಿ, ಮನುಷ್ಯ ಜನ್ಮ ಶ್ರೇಷ್ಠವಾದದ್ದು. ಮನುಷ್ಯ ಮಹಾತ್ಮರ, ದಾರ್ಶನಿಕರ ದಾರಿಯಲ್ಲಿ ಸಾಗಿ ನಮ್ಮಲ್ಲಿಯ ಅಜ್ಞಾನ ದೂರೀಕರಿಸಿ ಸುಜ್ಞಾನದ ಬೆಳಕನ್ನು ಹೊಂದುವುದೇ ಸತ್ಸಂಗದ ಉದ್ದೇಶವಾಗಿದೆ. ಶರಣರ ಪುಣ್ಯಸ್ಮರಣೆ, ಶ್ರೀಮಠದ ಜಾತ್ರೆ ಎನ್ನುವುದು ನೆಪ ಮಾತ್ರ. ಅದರಡಿಯಲ್ಲಿ ಆಧ್ಯಾತ್ಮಿಕ ಶರಣರ ಸಂದೇಶಗಳನ್ನು ಜನರಲ್ಲಿ ತರುವುದಾಗಿದೆ ಎಂದರು.

ಕಲಾವಿದರನ್ನು ಬೆಳೆಸಿ, ಕಲೆಯನ್ನು ಉಳಿಸಿ: ನಟಿ ಭಾರತಿ ವಿಷ್ಣುವರ್ಧನ್

0

ವಿಜಯಸಾಕ್ಷಿ ಸುದ್ದಿ, ಬಾಗಲಕೋಟ: ಕಲಾವಿದರನ್ನು ಬೆಳೆಸಿದಾಗ ಕಲೆಯೂ ಉಳಿಯುತ್ತದೆ. ಧಾರ್ಮಿಕ, ಆಧ್ಯಾತ್ಮಿಕ ತಾಣದಲ್ಲಿ ಪ್ರಶಸ್ತಿ ಸ್ವೀಕರಿಸಿರುವುದು ಸಂತಸವಾಗಿದೆ. ನನ್ನೆಲ್ಲ ಸಾಧನೆಗೆ ವಿಷ್ಣುವರ್ಧನ ಕಾರಣ. ಅವರಿಗೆ ಈ ಪ್ರಶಸ್ತಿ ಸಲ್ಲಬೇಕು ಎಂದು ಬಹುಭಾಷಾ ಹಿರಿಯ ಚಲನಚಿತ್ರ ನಟಿ ಭಾರತಿ ವಿಷ್ಣುವರ್ಧನ್ ಹೇಳಿದರು.

ಅವರು ಸಿದ್ಧನಕೊಳ್ಳದಲ್ಲಿ ಮೂರು ದಿನಗಳ ಕಾಲ ನಡೆದ ಶ್ರೀ ಸಿದ್ದಶ್ರೀ ಉತ್ಸವ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-2026ರ ಕಾರ್ಯಕ್ರಮದ 2ನೇ ದಿನ `ಶ್ರೀ ಸಿದ್ಧಶ್ರೀ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಸಿದ್ದನಕೊಳ್ಳದ ಶ್ರೀಮಠವು ನಾಡಿನಾದ್ಯಂತ ಯುವ ಕಲಾವಿದರನ್ನು ಬೆಳೆಸಿ ಪೋಷಿಸುತ್ತಿದೆ. ಅದರಲ್ಲೂ ಉತ್ತರಕರ್ನಾಟಕದ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಹಿರಿಯ ರಂಗಭೂಮಿ ಕಲಾವಿದೆ ಮಾಲತಿ ಸುಧೀರ್ ಅವರಿಗೆ ರಾಜ್ಯ ಪ್ರಶಸ್ತಿಯನ್ನು ಶ್ರೀಮಠದ ಧರ್ಮಾಧಿಕಾರಿ ಡಾ. ಶಿವಕುಮಾರ ಸ್ವಾಮೀಜಿ ಹಾಗೂ ಜಾತ್ರಾ ಮಹೋತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷರು, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಶಾಸಕರಾದ ಡಾ. ವಿಜಯಾನಂದ ಕಾಶಪ್ಪನವರ ಪ್ರದಾನ ಮಾಡಿದರು.

ರಾಷ್ಟ್ರ ಪ್ರಶಸ್ತಿಯು ರೂ.50 ಸಾವಿರ ನಗದು, ರಾಜ್ಯ ಪ್ರಶಸ್ತಿಯು ರೂ.25 ಸಾವಿರ ನಗದು, ಪ್ರಶಸ್ತಿ ಫಲಕ ಹೊಂದಿದೆ. ಈ ಸಂದರ್ಭದಲ್ಲಿ ಕೀರ್ತಿ ಅನಿರುದ್ಧ, ಅಪ್ಪಾಸಾಹೇಬ ನಾಡಗೌಡ, ಶಿವಾನಂದ ಮುತ್ತನವರ, ಡಿವೈಎಸ್ಪಿ ಸಂತೋಷ ಬನ್ನಟ್ಟಿ, ಸಂಗಮೇಶ ಹುದ್ದಾರ, ಚಲನಚಿತ್ರೋತ್ಸವ ಸಂಚಾಲಕ ಡಾ. ಪ್ರಭು ಗಂಜಿಹಾಳ, ಚಲನಚಿತ್ರೋತ್ಸವ ಸಮಿತಿಯ ವೀರೇಶ ಹಂಡಿಗಿ, ಸುನಂದಾ ಕಲಬುರ್ಗಿ, ಲೋಕೇಶ ವಿದ್ಯಾಧರ, ವೀರೇಶ ಪುರವಂತರ, ಸಂಗನಗೌಡ ಕುರುಡಗಿ ಸೇರಿದಂತೆ ಅನೇಕ ಗಣ್ಯರು, ಕಲಾವಿದರು ಇದ್ದರು. ಐಹೊಳೆಯ ಕಲಾವಿದ ವೀರೇಶ ಪುರವಂತರ ಸಹೋದರರು ನಿರ್ಮಿಸಿದ ವೇದಿಕೆಯಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಉಚಿತವಾಗಿ ಒಟ್ಟು 28 ಹೊಸ ಚಲನಚಿತ್ರಗಳ ಟೀಸರ್, ಟ್ರೇಲರ್, ಪೋಸ್ಟರ್ ಬಿಡುಗಡೆ ಮಾಡಿ, ತಂಡದ ಕಲಾವಿದರನ್ನು ಗೌರವಿಸಲಾಯಿತು.

error: Content is protected !!