Home Blog Page 17

ಕಾರ್ಖಾನೆ ವಿಸ್ತರಣೆ ವಿರೋಧಿಸಿ ಪ್ರತಿಭಟನೆ: 20ನೇ ದಿನ ಪೂರ್ಣಗೊಳಿಸಿದ ಬಲ್ಡೋಟಾ ಹೋರಾಟ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: 20ನೇ ದಿನಗಳಿಂದ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪ.ಹಿ. ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆಯಿಂದ ನಡೆಯುತ್ತಿರುವ ಅನಿರ್ದಿಷ್ಟ ಧರಣಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಕಟ್ಟಡ ಮತ್ತು ಬಾರ್ ಬೆಂಡಿಂಗ್ ಇತರೆ ನಿರ್ಮಾಣಕಾರರ ಸಂಘದ ಕಟ್ಟಡ ಮೇಸ್ತ್ರಿಗಳು ಅಶೋಕ ವೃತ್ತದಿಂದ ಧರಣಿ ಸ್ಥಳಕ್ಕೆ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಘೋಷಣೆ ಕೂಗುತ್ತಾ ಧರಣಿ ಹೋರಾಟ ನಡೆಸಿದರು.

ಬಿಜೆಪಿ ಎಂ.ಎಲ್.ಸಿ ಹೇಮಲತಾ ನಾಯಕ ಮಾತನಾಡಿ, ನಾನು ಸದನದಲ್ಲಿ ಬಲ್ಡೋಟಾ ವಿಸ್ತರಣೆಯ ನಿಲುಗಡೆ, ಬಸಾಪುರ ಕೆರೆ ರಕ್ಷಣೆ ಮಾಡಲು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರ ದುಂಬಾಲು ಬಿದ್ದಿದ್ದೇನೆ. ನನಗೆ ಚರ್ಚೆ ಮಾಡಲು ಸರಕಾರ ಅವಕಾಶ ಕೊಡುತ್ತಿಲ್ಲ. ಮುಖ್ಯಮಂತ್ರಿಗಳಲ್ಲಿ ಸರ್ವ ಪಕ್ಷದ ನಿಯೋಗದಿಂದ ಭೇಟಿ ಮಾಡಿದಾಗ “ಇಷ್ಟು ದಿನ ಈ ಸಮಸ್ಯೆ ಉಲ್ಬಣಗೊಳ್ಳಲು ಬಿಟ್ಟು ಈಗ ಏನು ಮಾಡುತ್ತೀರಿ?” ಎಂದಾಗಲೂ ಯಾರೂ ಮಾತಾಡಲಿಲ್ಲ. ಜಿಲ್ಲಾ ಮಂತ್ರಿ ತಂಗಡಗಿಯವರು ಮುಖ್ಯಮಂತ್ರಿಗಳಿಗೆ “ಶ್ರೀ ಗವಿಸಿದ್ದೇಶ್ವರರು ಹೋರಾಟಕ್ಕೆ ಧುಮುಕಿದ್ದಾರೆ” ಎಂದು ಮನವರಿಕೆ ಮಾಡಿದಾಗ ಜಿಲ್ಲಾಧಿಕಾರಿಗೆ ತಕ್ಷಣ ಕರೆ ಮಾಡಿ ತಾತ್ಕಾಲಿಕವಾಗಿ ವಿಸ್ತರಣಾ ಚಟುವಟಿಕೆ ನಿಲ್ಲಿಸಲು ಮೌಖಿಕ ಆದೇಶ ಮಾಡಿದ್ದು ಬಿಟ್ಟರೆ, ಇದುವರೆಗೆ ಲಿಖಿತ ಆದೇಶ ಮಾಡಿಲ್ಲ. ನಾನು ಇದನ್ನು ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೆ ತರುವಂತೆ ಹೋರಾಡುತ್ತೇನೆ. ಇದರಲ್ಲಿ ಇಡೀ ಕೊಪ್ಪಳ ನಗರ, ಭಾಗ್ಯನಗರ ಮತ್ತು 20ಕ್ಕೂ ಹೆಚ್ಚು ಬಾಧಿತ ಹಳ್ಳಿಗಳ ಆರೋಗ್ಯ ರಕ್ಷಣೆ ಹಿತಕ್ಕಾಗಿ ಹೋರಾಡುತ್ತೇನೆ ಎಂದರು.

ಜೆಡಿಎಸ್ ಮುಖಂಡ ರಾಜು ನಾಯಕ, ಬಿಜೆಪಿ ಎಸ್.ಸಿ. ಘಟಕದ ಅಧ್ಯಕ್ಷ ಗಣೇಶ ಹೊರತಟ್ನಾಳ ಹೋರಾಟ ಬೆಂಬಲಿಸಿ ಮಾತನಾಡಿದರು. ಬಿಜೆಪಿ ಮುಖಂಡರಾದ ಮಹೇಶ ವಿ.ಅಂಗಡಿ, ರಮೇಶ ಮಲ್ಲಪ್ಪ ಕವಲೂರು, ಪೀರಾ ಹುಸೇನ ಹೊಸಳ್ಳಿ, ಪಿ.ವಿ. ಪರೂತಗೌಡ್ರ, ನೀಲಕಂಠಯ್ಯ ಹಿರೇಮಠ, ಕೀರ್ತಿ ಪಾಟೀಲ್, ಗೀತಾ ಮುತ್ತಾಳ, ವಾಣಿಶ್ರೀ ಎಚ್.ಎಮ್, ಡಾ. ಗೀತಾ ಮಠದ ಧರಣಿಗೆ ಬೆಂಬಲ ಸೂಚಿಸಿದರು. ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮುಂದೆ ಇನ್ನಷ್ಟು ವಿಭಿನ್ನವಾಗಿ ಹೋರಾಟ ಮಾಡುವ ಯೋಜನೆ ಹೊಂದಿರುವ ಸಂಘಟಕರು, ಸಾರ್ವಜನಿಕರ ಸಹಭಾಗಿತ್ವಕ್ಕೆ ಮನವಿ ಮಾಡಿದ್ದಾರೆ.

ಹೋರಾಟದಲ್ಲಿ ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ. ಗೋನಾಳ, ಮಂಜುನಾಥ ಜಿ.ಗೊಂಡಬಾಳ, ಮಹಾದೇವಪ್ಪ ಮಾವಿನಮಡು, ವೆಂಕಟೇಶ, ದುರುಗೇಶ, ನಾಗರಾಜ್ ಚಾಳೀಸ್, ಮಂಜುನಾಥಗೌಡ ಯತ್ನಟ್ಟಿ, ಮಖಬೂಲ್ ರಾಯಚೂರು, ಬಸವರಾಜ್ ನರೇಗಲ್, ಮೂಕಪ್ಪ ಮೇಸ್ತ್ರಿ ಬಸಾಪುರ, ಡಿ.ಎಂ. ಬಡಿಗೇರ್, ಎಸ್.ಬಿ. ರಾಜೂರ, ಮುದಕಪ್ಪ ಹೊಸಮನಿ, ಬಸವರಾಜ್ ಶೀಲವಂತರ, ಕಾಶಪ್ಪ ಚಲವಾದಿ ಮುಂತಾದವರಿದ್ದರು.

ಇದೇ ವೇಳೆ ಖ್ಯಾತ ಸಿನಿಮಾ ನಿರ್ದೇಶಕ ಮಹಾದೇವ ಹಡಪದ ಧಾರವಾಡ, ಚಿಂತಕ ಜಿ.ಕೆ. ಗೋವಿಂದರಾವ ಅವರ ಮೊಮ್ಮಗಳು ಎ. ಅನನ್ಯ, ಸಾಹಿತಿ ಮಲ್ಲಿಕಾರ್ಜುನ ಹಿರೇಮಠ, ನೈಸರ್ಗಿಕ ಕೃಷಿಕರಾದ ದೇವೇಂದ್ರಪ್ಪ ಬಳೂಟಗಿ ಧರಣಿ ಸ್ಥಳಕ್ಕೆ ಬಂದು ಬೆಂಬಲಿಸಿ ಮಾತನಾಡಿದರು. ಬಾಲ ನ್ಯಾಯಮಂಡಳಿ ಸದಸ್ಯರು ನೇತ್ರಾ ಬಿ. ಪಾಟೀಲ್, ಕವಿತಾ ಬಿ.ಒಂಟಿ, ಗವಿಸಿದ್ದಯ್ಯ ಹಳ್ಳಿಕೇರಿಮಠ, ರವಿ ಕಾಂತನವರ, ಮೌಲಾ ಹುಸೇನ್, ರಮೇಶ ಎಚ್.ಎಚ್. ಭಾಗವಹಿಸಿದ್ದರು.

 

ಗದಗ ಎಪಿಎಂಸಿಯಲ್ಲಿ ದಿಢೀರ್ ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಬೆಲೆ ಕುಸಿತದಿಂದ ಆಕ್ರೋಶಕ್ಕೊಳಗಾದ ರೈತರು ಪ್ರತಿಭಟನೆಯ ಹಾದಿ ಹಿಡಿಯುವುದು ಇತ್ತೀಚಿನ ವರ್ಷಗಳಲ್ಲಿ ಅನಿವಾರ್ಯವಾಗಿದ್ದು, ಜಿಲ್ಲೆಯ ಉಳ್ಳಾಗಡ್ಡಿ ಬೆಳೆಗಾರರು ದರ ಕುಸಿತದ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ಗದಗಿನ ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿಭಟನೆ ನಡೆಸಿದರು.

ಬುಧವಾರ ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು, ಉಳ್ಳಾಗಡ್ಡಿ ಮಾರಾಟಕ್ಕೆ ಮುಂದಾದರು. ಟೆಂಡರ್ ಪ್ರಕ್ರಿಯೆ ನಿಗದಿತ ಸಮಯಕ್ಕಿಂತ ಸ್ವಲ್ಪ ತಡವಾಗಿ ಆರಂಭವಾದರೂ, ಅತೀ ಕಡಿಮೆ ದರ ಘೋಷಣವಾಗುತ್ತಿದ್ದಂತೆ ರೈತರ ಆಕ್ರೋಶದ ಕಟ್ಟೆ ಒಡೆದಿತ್ತು.

ಇಡೀ ಮಾರುಕಟ್ಟೆಯ ಎಲ್ಲ ದಲಾಲಿ ಅಂಗಡಿಕಾರರು ಉದ್ದೇಶಪೂರ್ವಕವಾಗಿಯೇ ಉಳ್ಳಾಗಡ್ಡಿ ದರದಲ್ಲಿ ಭಾರೀ ಕುಸಿತ ಮಾಡಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿ, ದಲಾಲಿ ಅಂಗಡಿಗಳ ಮುಂದೆಯೇ ದಿಢೀರ್ ಪ್ರತಿಭಟನೆ ಕೈಗೊಂಡರು.

ಈ ಸಂದರ್ಭದಲ್ಲಿ ಈರುಳ್ಳಿ ಖರೀದಿದಾರರು-ರೈತರ ನಡುವಿನ ವಾಗ್ವಾದ ತಾರಕಕ್ಕೇರಿತು. ಒಂದೆರಡು ಅಂಗಡಿಗಳಲ್ಲಿ ಆರಂಭವಾದ ಪ್ರತಿಭಟನೆ ಕೆಲ ಹೊತ್ತಿನಲ್ಲಿಯೇ ಎಪಿಎಂಸಿ ತುಂಬೆಲ್ಲಾ ಹರಡಿ ಎಲ್ಲಾ ಅಂಗಡಿಗಳ ಮುಂದೆ ರೈತರು ಪ್ರತಿಭಟನೆ ಮಾಡುವುದಲ್ಲದೇ ಎಪಿಎಂಸಿ ಮುಖ್ಯ ರಸ್ತೆಗೆ ಆಗಮಿಸಿ ಪ್ರತಿಭಟನೆ ನಡೆಸಿ, ಕೂಡಲೇ ಮರು ಟೆಂಡರ್ ನಡೆಸುವಂತೆ ಒತ್ತಾಯಿಸಿದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸ್, ಎಪಿಎಂಸಿ ಅಧಿಕಾರಿಗಳು ರೈತರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಪಟ್ಟು ಬಿಡದ ರೈತರು ಗದಗ ಮಾರುಕಟ್ಟೆ ತುಂಬಾ ಮರು ಟೆಂಡರ್ ಮಾಡಬೇಕು, ಉತ್ತಮ ದರ ಕೊಡಬೇಕು ಎಂದು ಆಗ್ರಹಿಸಿದಾಗ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗಿ ಕೆಲಕಾಲ ಈರುಳ್ಳಿ ಖರೀದಿ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿತು.

ಇನ್ನೊಂದೆಡೆ ಗದಗ ತಾಲೂಕಿನ ಕೋಟುಮಚಗಿ ಗ್ರಾಮದಲ್ಲೂ ರೈತರು ಬೆಂಬಲ ಬೆಲೆ, ಬೆಳೆ ಪರಿಹಾರ ಹಾಗೂ ರೈತರ ಹೊಲಗಳಿಗೆ ತೆರಳುವ ರಸ್ತೆ ಸುಧಾರಣೆ ಸಹಿತ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ವೇಳೆ ರೈತ ಮುಖಂಡ, ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷ ಮುತ್ತನಗೌಡ ಚವಡರಡ್ಡಿ ಮಾತನಾಡಿ, ರೈತರು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ಸರಕಾರ ಈರುಳ್ಳಿಗೆ ಬೆಂಬಲ ಬೆಲೆ ಘೋಷಿಸಬೇಕು, ಮೆಕ್ಕೆಜೋಳ ಖರೀದಿ ಕೇಂದ್ರ ಶೀಘ್ರ ಪ್ರಾರಂಭಗೊಳ್ಳಬೇಕು. ರೈತರಿಗೆ ದೊರಕಬೇಕಾದ ಬೆಳೆ ಪರಿಹಾರ ಶೀಘ್ರ ದೊರಕಬೇಕು. ರೈತರ ಹೊಲವಾರಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಅವುಗಳ ದುರಸ್ತಿ ಕಾರ್ಯವಾಗಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಈ ಕುರಿತು ಸರಕಾರ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿ ಕ್ವಿಂಟಾಲ್ ಈರುಳ್ಳಿ ನೂರು ರೂಪಾಯಿಯಿಂದ ಕೇವಲ ಮುನ್ನೂರು ರೂಪಾಯಿವರೆಗೆ ಮಾರಾಟವಾಗುತ್ತಿದೆ. ಇಷ್ಟು ಕಡಿಮೆ ದರಕ್ಕೆ ಮಾರಾಟ ಮಾಡಿದರೆ ರೈತರಿಗೆ ಮಾರಾಟಕ್ಕೆ ಈರುಳ್ಳಿ ತಂದಿರುವ ವಾಹನದ ಬಾಡಿಗೆ ಕೊಡಲೂ ಸಾಧ್ಯವಾಗದು. ರಾಜ್ಯದ ಇತರೆ ಮಾರುಕಟ್ಟೆಗಳಲ್ಲಿ ಉತ್ತಮ ದರವಿದೆ. ಆದರೆ ಗದಗ ಮಾರುಕಟ್ಟೆಯಲ್ಲಿ ಮಾತ್ರ ಇಷ್ಟು ಕಡಿಮೆ ದರಕ್ಕೆ ಕೇಳುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ, ಸರ್ಕಾರ ಇತ್ತ ಗಮನ ಹರಿಸಿ ನಮಗೆ ನ್ಯಾಯಯುತ ದರ ನೀಡಬೇಕು ಎಂದು ರೈತರು ಒತ್ತಾಯಿಸಿದರು.

 

ಸರ್ಕಾರಗಳು ರೈತರ ಬದುಕಿನೊಂದಿಗೆ ಆಟವಾಡುತ್ತಿವೆ: ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸರ್ಕಾರ ಮೆಕ್ಕೆಜೋಳ ಬೆಳೆದ ರೈತರ ಬೆಂಬಲಕ್ಕೆ ನಿಲ್ಲದ್ದಿದ್ದರೆ ಎಲ್ಲಾ ರೈತರು ಗವಿನಜೋಳವನ್ನು ಆಯಾ ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿಗಳ ಕಚೇರಿ ಎದುರಿನಲ್ಲಿ ಹಾಗೂ ರಾಜ್ಯಾದ್ಯಂತ ಎಲ್ಲ ರಸ್ತೆಗಳಲ್ಲಿ ಹಾಕಿ ರಸ್ತೆ ಬಂದ್ ಮಾಡಿದಾಗ ಮಾತ್ರ ಎಸಿ ಕಾರಿನಲ್ಲಿ ತಿರುಗಾಡುವ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸರ್ಕಾರಕ್ಕೆ ಬಿಸಿ ತಟ್ಟುತ್ತದೆ ಎಂದು ಶಿರಹಟ್ಟಿಯ ಫಕ್ಕೀರೇಶ್ವರ ಸಂಸ್ಥಾನಮಠದ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.

ಅವರು ಬುಧವಾರ ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸಬೇಕೆಂದು ಲಕ್ಷ್ಮೇಶ್ವರದಲ್ಲಿ 5 ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಆಗಮಿಸಿ ರೈತರ ಹೋರಾಟಕ್ಕೆ ಬೆಂಬಲ ನೀಡಿ ಮಾತನಾಡಿದರು.

ರೈತರು ಶಾಂತಿಯುತವಾಗಿ ಬೆಂಬಲ ಬೆಲೆ ಖರೀದಿ ಕೇಂದ್ರ ಸ್ಥಾಪನೆಗೆ ಕೇಳುತ್ತಿದ್ದರೂ ಸರಕಾರ ಕಣ್ತೆರೆಯುತ್ತಿಲ್ಲ. ರೈತರ ಹೆಸರು ಹೇಳಿಕೊಂಡೇ ಚುನಾವಣೆ ಗೆಲ್ಲುವ ಎಲ್ಲ ರಾಜಕೀಯ ಪಕ್ಷಗಳು ಅಧಿಕಾರದ ಗದ್ದುಗೆ ಏರಿದ ನಂತರ ರೈತರ ಬಗ್ಗೆ ಕಿಂಚಿತ್ತೂ ಗಮನ ಹರಿಸದೇ ಅವರ ಬದುಕಿನೊಂದಿಗೆ ಚೆಲ್ಲಾಟವಾಡುತ್ತವೆ ಎಂದರು.

ಆದ್ರಳ್ಳಿ ಗವಿಮಠದ ಶ್ರೀ ಕುಮಾರ ಮಹಾರಾಜರು ಮಾತನಾಡಿ, ಪ್ರತಿವರ್ಷವೂ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಕ್ಕಾಗಿ ಹೋರಾಟ ಮಾಡುವುದು ಸಾಮಾನ್ಯವಾಗಿದೆ. ಈ ಸಮಸ್ಯೆ ತಪ್ಪಬೇಕು ಮತ್ತು ಶಾಶ್ವತ ಬೆಂಬಲ ಬೆಲೆ ಖರೀದಿ ಕೇಂದ್ರಗಳು ಕಾರ್ಯನಿರ್ವಹಿಸಬೇಕು. ರೈತರು ತಮ್ಮ ಬೇಡಿಕೆಗಳನ್ನು ಹೋರಾಟದ ಮೂಲಕವೇ ಈಡೇರಿಸಿಕೊಳ್ಳುವ ಪರಿಸ್ಥಿತಿ ಸರಿಯಲ್ಲ ಎಂದರು.

ಕುಂದಗೋಳ ಕಲ್ಯಾಣಪುರಮಠ ಬಸವಣ್ಣ ಅಜ್ಜನವರು ಮಾತನಾಡಿ, ಸರ್ಕಾರಗಳು ರೈತರ ಧ್ವನಿಯಾಗಿರಬೇಕು. ರೈತರ ಬದುಕು ಈ ವರ್ಷದ ಕಾರ್ತಿಕ ಮಾಸದ ದೀಪದೊಂದಿಗೆ ಪ್ರಜ್ವಲಿಸಬೇಕೆಂದರೆ ನ. 20ರಂದು ಕರೆ ನೀಡಿರುವ ಲಕ್ಷ್ಮೇಶ್ವರ ಬಂದ್‌ಗೆ ಮತ್ತು ಹೋರಾಟಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ಜಮಖಂಡಿ ಮತ್ತು ಕುಕನೂರ ಶ್ರೀಗಳು, ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದವರು ಬೆಂಬಲ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಯುವ ಘಟಕದ ಅಧ್ಯಕ್ಷ ಮೈಸೂರಿನ ಫಯಾಜ್ ಮಾತನಾಡಿ, ರೈತರು, ಮಠಾಧೀಶರು 5 ದಿನಗಳಿಂದ ಅನ್ನ- ನೀರು ಬಿಟ್ಟು ನ್ಯಾಯವಾದ ಬೇಡಿಕೆಗೆ ಹೋರಾಟ ಮಾಡುತ್ತಿದ್ದರೂ ಶಾಸಕರು, ಉಸ್ತುವಾರಿ ಸಚಿವರು ಇಲ್ಲಿಯವರೆಗೂ ಬಂದು ರೈತರಿಗೆ ಸಾಂತ್ವನ ಹೇಳದಿರುವುದು ನಾಚಿಕೆಗೇಡಿನ ಸಂಗತಿ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಜವಾಬ್ದಾರಿಯಿಂದ ಬೇಡಿಕೆ ಈಡೇರಿಸಬೇಕು ಎಂದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಯುವ ಘಟಕದ ಅಧ್ಯಕ್ಷ ಫಯಾಜ್ ಮೈಸೂರು, ರಾಮಣ್ಣ ಲಮಾಣಿ (ಶಿಗ್ಲಿ), ಜಿ.ಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ, ಚನ್ನಪ್ಪ ಜಗಲಿ, ಡಿ.ವೈ ಹುನಗುಂದ, ಶರಣು ಗೋಡಿ ಮುಂತಾದವರು ಮಾತನಾಡಿದರು.

ರೈತರಾದ ಬಸವರಾಜ ಬೆಂಡಿಗೇರಿ, ಪೂರ್ಣಜಿ ಖರಾಟೆ, ನಾಗಪ್ಪ ಗೌರಿ, ಮಹಾಂತೇಶ ಉಮಚಗಿ, ಉಪವಾಸ ಕೈಗೊಂಡಿದ್ದಾರೆ. ತಹಸೀಲ್ದಾರ ರಾಘವೇಂದ್ರ ರಾವ್, ಸಿಪಿಐ ಬಿ.ವಿ ನ್ಯಾಮಗೌಡ, ಪಿಎಸ್‌ಐ ನಾಗರಾಜ ಗಡಾದ, ಟಿ.ಕೆ. ರಾಠೋಡ ಇವರನ್ನೊಳಗೊಂಡ ಪೊಲೀಸ್ ಪಡೆ ಯಾವುದೇ ಅಹಿತಕರ ಘಟನೆಯಾಗದಂತೆ ನಿಗಾ ವಹಿಸಿದ್ದಾರೆ.

ಹೋರಾಟದ ನೇತೃತ್ವ ವಹಿಸಿರುವ ಸಮಗ್ರ ರೈತ ಹೋರಾಟ ಸಂಘಟನೆಗಳ ಮುಖಂಡ ಮಂಜುನಾಥ ಮಾಗಡಿ, ರವಿಕಾಂತ ಅಂಗಡಿ, ಪರಮೇಶ ಲಮಾಣಿ, ನಾಗರಾಜ ಚಿಂಚಲಿ, ಎಂ.ಎಸ್. ದೊಡ್ಡಗೌಡ್ರ, ಚನ್ನಪ್ಪ ಷಣ್ಮುಖಿ, ಹೊನ್ನಪ್ಪ ವಡ್ಡರ, ನೀಲಪ್ಪ ಶೆರಸೂರಿ, ಮಂಜುನಾಥ ಕೊಡಳ್ಳಿ, ಮಲ್ಲಿಕಾರ್ಜುನ ನಿರಾಲೋಟ, ಟಾಕಪ್ಪ ಸಾತಪುತೆ, ಗುರಪ್ಪ ಮುಳುಗುಂದ, ಸೋಮಣ್ಣ ಡಾಣಗಲ್, ಪ್ರಕಾಶ ಕೊಂಚಿಗೇರಿಮಠ, ಪವನ ಬಂಕಾಪುರ, ಭರತ ಬಳಿಗಾರ ನೂರಾರು ರೈತರು ಇದ್ದರು.

ಖಾಸಗಿ ಶಾಲೆಗಳ ಆಡಳಿತ ಮಂಡಳಿ, ಸಮಗ್ರ ರೈತ ಹೋರಾಟ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಶ್ರೀ ರಾಮಸೇನೆ, ಬಜಾರ ವ್ಯಾಪಾರಸ್ಥರ ಸಂಘ, ಬೀದಿ ಬದಿ ವ್ಯಾಪಾರಸ್ಥರ ಸಂಘ, ವಿದ್ಯಾರ್ಥಿ ಸಂಘಟನೆಗಳು, ರೈತರು, ಗೋಸಾವಿ ಸಮಾಜ, ವಕೀಲರ ಸಂಘ, ಮೆಕಾನಿಕ್ ಸಂಘ, ಮಾಜಿ ಸೈನಿಕರ ಸಂಘ, ಔಷಧ ವ್ಯಾಪಾರಸ್ಥರ ಸಂಘ ಸೇರಿ ಅನೇಕರು ಧರಣಿ ಸ್ಥಳಕ್ಕೆ ಬಂದು ಬೆಂಬಲ ವ್ಯಕ್ತಪಡಿಸಿದರಲ್ಲದೆ, ಗುರುವಾರದ ಲಕ್ಷ್ಮೇಶ್ವರ ಬಂದ್‌ಗೆ ವ್ಯಾಪಾರ-ವಹಿವಾಟು ಬಂದ್ ಮಾಡಿ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.

 

ಬೆಂಗಳೂರು ದರೋಡೆ ಪ್ರಕರಣ: ಆರೋಪಿಗಳ ಸುಳಿವು ಸಿಕ್ಕಿದೆ ಎಂದ ಗೃಹ ಸಚಿವ!

0

ಬೆಂಗಳೂರು:- ಬೆಂಗಳೂರಿನಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸುಳಿವು ಸಿಕ್ಕಿದ್ದು, ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನಗರದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳಿವು ಸಿಕ್ಕಿದ್ದು, ಆರೋಪಿಗಳನ್ನು ಹಿಡಿಯುತ್ತೇವೆ. ಎಟಿಎಂಗಳಿಗೆ ಹಣ ಹಾಕುವ ಮಾಹಿತಿಯನ್ನು ಆರೋಪಿಗಳಿಗೆ ನೀಡಿದ್ದಾರೆ. ಇದಕ್ಕೆ ಕಾರಣ ಏನು? ಮಾಹಿತಿ ಕೊಟ್ಟಿದ್ದು ಯಾರು? ಹಣ ಹಾಕುವವರಲ್ಲಿ ಯಾರಾದರೂ ಇದ್ದಾರೋ? ಎಂಬುದರ ಬಗ್ಗೆ ಈಗಷ್ಟೇ ಲೀಡ್ ಸಿಕ್ಕಿದೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದರು.

ಬೆಂಗಳೂರಿನಲ್ಲಿ ಹಾಡುಹಗಲೇ ಇಂತಹ ಘಟನೆ ನಡೆದಿಲ್ಲ. 7 ಕೋಟಿ ರೂ.ಗೂ ಹೆಚ್ಚು ಮೊತ್ತದ ಹಣ ರಾಬರಿಯಾಗಿದೆ. ವಾಹನ ಸಂಖ್ಯೆ ಎಲ್ಲದರ ಮಾಹಿತಿ ಸಿಕ್ಕಿದೆ. ಕೃತ್ಯ ಎಸಗಿದವರು ಇಲ್ಲಿಯವರಾ? ಹೊರ ರಾಜ್ಯದವರಾ? ತನಿಖೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿ ಸಿಕ್ಕಿದೆ. ತನಿಖೆಗೆ ಅಡ್ಡಿಯಾಗುವುದರಿಂದ ಎಲ್ಲ ಮಾಹಿತಿಯನ್ನು ಹಂಚಿಕೊಳ್ಳಲಾಗುವುದಿಲ್ಲ. ಖಂಡಿತವಾಗಿ ಅರೋಪಿಗಳನ್ನು ಅರೆಸ್ಟ್ ಮಾಡುತ್ತೇವೆ ಎಂದರು.

ಸಾಲು ಮರದ ತಿಮ್ಮಕ್ಕ ಹೆಸರಿನಲ್ಲಿ ಪ್ರತಿ ವರ್ಷ 5 ಪರಿಸರವಾದಿಗಳಿಗೆ ಪ್ರಶಸ್ತಿ: ಸಿದ್ದರಾಮಯ್ಯ

0

ಬೆಂಗಳೂರು:- ಸಾಲು ಮರದ ತಿಮ್ಮಕ್ಕ ಹೆಸರಿನಲ್ಲಿ ಪ್ರತಿ ವರ್ಷ 5 ಪರಿಸರವಾದಿಗಳಿಗೆ ಪ್ರಶಸ್ತಿ ಘೋಷಣೆ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಇವರ ವತಿಯಿಂದ ಆಯೋಜಿಸಲಾಗಿದ್ದ ಸುವರ್ಣ ಮಹೋತ್ಸವ -2025 ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 50 ವರ್ಷಗಳ ಸುವರ್ಣ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು,ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಒಂದು ಕೋಟಿ ದತ್ತಿ ನಿಧಿಯನ್ನು ಸ್ಥಾಪಿಸಿ ಠೇವಣಿ ಇರುವ ಹಣದ ಬಡ್ಡಿಯಲ್ಲಿ ಪ್ರತಿ ವರ್ಷವೂ ಕಾರ್ಯಕ್ರಮ ಆಯೋಜಿಸಲಾಗುವುದು ಹಾಗೂ ಕನಿಷ್ಠ 5 ಪರಿಸರವಾದಿಗಳಿಗೆ ಸಾಲು ಮರದ ತಿಮ್ಮಕ್ಕನವರ ಹೆಸರಿನಲ್ಲಿ ಪ್ರಶಸ್ತಿಯನ್ನು ಪ್ರತಿ ವರ್ಷ ಕೊಡಲಾಗುವುದು ಎಂದರು.

ಇಂದು ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ ಜನ್ಮದಿನ. 1974ರ ಇಂದಿನ ದಿನದಂದು ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪಿತವಾಯಿತು. ಇಂದಿರಾ ಗಾಂಧಿಯವರು ಪರಿಸರ ಮತ್ತು ಅರಣ್ಯ ರಕ್ಷಣೆಗೆ ಹಲವು ಪ್ರಮುಖ ಕಾಯ್ದೆಗಳನ್ನು ಜಾರಿಗೆ ತಂದಿದ್ದರು. ಪರಿಸರ ಸಂರಕ್ಷಣೆಯ ಜವಾಬ್ದಾರಿ ಕೇವಲ ಸರ್ಕಾರದ ಮೇಲಿಲ್ಲ. ಸಾರ್ವಜನಿಕರು ಪರಿಸರ ಸಂರಕ್ಷಣೆಯಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಬೇಕು. ಭೂಮಿಯ ಮೇಲಿನ ಜೀವಸಂಕುಲಕ್ಕೆ ಉತ್ತಮ ಪರಿಸರದಲ್ಲಿ ಬದುಕಲು ಅವಶ್ಯ.ಮಾಲಿನ್ಯ ರಹಿತ ಪರಿಸರವನ್ನು ನಿರ್ಮಿಸುವುದು ಅತ್ಯಂತ ಅವಶ್ಯವಾಗಿದೆ ಎಂದರು.

ನಾವು ಉಸಿರಾಡುವ ಗಾಳಿ, ನೀರು ಹಾಗೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅಗತ್ಯ.ಕೇಂದ್ರದ ವರದಿಯ ಪ್ರಕಾರ ದೇಶದ ಹಲವು ನಗರಗಳು ಮಾಲಿನ್ಯದಿಂದ ಕೂಡಿವೆ. ಈ ಪಟ್ಟಿಯಲ್ಲಿ ಬೆಂಗಳೂರು,ದಾವಣಗೆರೆ, ಕಲ್ಬುರ್ಗಿ ನಗರವೂ ಸೇರಿರುವುದು ಆತಂಕಕಾರಿ ವಿಷಯ. ನಮ್ಮ ರಾಜ್ಯವನ್ನು ವಾಸಯೋಗ್ಯವಾಗಿಸಲು , ಜನರೆಲ್ಲರೂ ಪರಿಸರ ಬಗ್ಗೆ ಕಾಳಜಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಕೃತಿಯನ್ನು ಪೂಜಿಸಿ ಆರಾಧಿಸುವ ನಾವುಗಳೇ ಅವುಗಳನ್ನು ರಕ್ಷಿಸಿಕೊಳ್ಳಬೇಕಿದೆ: ಡಿಕೆಶಿ

0

ಬೆಂಗಳೂರು: ಪ್ರಕೃತಿಯನ್ನು ಪೂಜಿಸಿ ಆರಾಧಿಸುವ ನಾವುಗಳೇ ಅವುಗಳನ್ನು ರಕ್ಷಿಸಿಕೊಳ್ಳಬೇಕಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ನಮ್ಮ ಧರ್ಮದಲ್ಲಿ ಅರಳಿ ಮರ, ಬೇವಿನ ಮರ, ಬನ್ನಿ ಮರಕ್ಕೆ ಪೂಜೆ ಮಾಡುತ್ತೇವೆ. ಪ್ರಾಣಿಗಳನ್ನು ದೇವರ ವಾಹನಗಳೆಂದು ಪರಿಗಣಿಸಿದ್ದೇವೆ. ಇವುಗಳನ್ನು ನಾವು ಕಾಪಾಡಿಕೊಳ್ಳಬೇಕು. ನಮ್ಮ ಪರಿಸರ, ನೀರು, ಗಾಳಿ, ಬೆಳಕು ಶಾಶ್ವತವಾಗಿ ಇರುತ್ತವೆ. ನಾವುಗಳು ಇರಲಿ, ಇಲ್ಲದಿರಲಿ, ಇವುಗಳು ಹಾಗೆಯೇ ಇರುತ್ತವೆ. ನೀರು, ಗಾಳಿಗೆ ಬಣ್ಣ ಇಲ್ಲ. ನಾವು ಇವುಗಳನ್ನು ಕಾಪಾಡಿಕೊಂಡು ಹೋಗಬೇಕು.

ಪ್ರಕೃತಿ ನಿಯಮ ಎಲ್ಲರಿಗೂ ಒಂದೇ. ಸೂರ್ಯ ಹುಟ್ಟುವುದು, ಮುಳುಗುವುದು, ಗಾಳಿ ಯಾವ ದಿಕ್ಕಿನಲ್ಲಿ ಬೀಸಬೇಕು ಎಲ್ಲವೂ ಪ್ರಕೃತಿ ನಿಯಮ. ನಮ್ಮ ಕಾಲದಲ್ಲಿ ಬಾವಿ ಹಾಗೂ ಹೊಳೆಯಲ್ಲಿ ನೀರನ್ನು ತರುತ್ತಿದ್ದೆವು. ಈಗ ಒಂದು ಬಾಟೆಲ್ ನೀರು 30-40 ರೂ. ಲೀಟರ್ ಆಗಿದೆ. ಪರಿಶುದ್ಧ ನೀರು ಇಲ್ಲವಾದರೆ ನಾವು ಇರಲು ಸಾಧ್ಯವಿಲ್ಲ ಎಂದರು.

ನಾನು ಮೊನ್ನೆ ಮೂರು ದಿನ ದೆಹಲಿಗೆ ಹೋಗಿದ್ದೆ. ಆಗ ನನ್ನ ಪಿಎ ಎದೆ ಬಳಿ ಒಂದು ಪುಟ್ಟ ಯಂತ್ರ ಹಾಕಿದ್ದ, ನಾನು ಏನದು ಎಂದು ಕೇಳಿದೆ. ಅದಕ್ಕೆ ಅವರು ಇದು ಏರ್ ಪ್ಯೂರಿಫೈಯರ್ ಎಂದು ಹೇಳಿದರು. ದೆಹಲಿಯ ಗಾಳಿ ಸೇವಿಸಿದರೆ ಒಂದು ದಿನಕ್ಕೆ 14 ಸಿಗರೇಟ್ ಸೇದುವುದಕ್ಕೆ ಸಮವಾಗುವಷ್ಟು ಅಲ್ಲಿನ ವಾಯುಮಾಲಿನ್ಯ ಪರಿಸ್ಥಿತಿ ಇದೆ. ನಾವು ಬಹಳ ಪುಣ್ಯವಂತರು. ನಾವು ಪರಿಸರ ಕಾಪಾಡಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.

ಮುಸ್ಲಿಂ ಶಾಸಕರಿಗೆ ಅವಕಾಶ ನೀಡಿ: ಮೊಹಮ್ಮದ್‌ಶಫಿ ಎಸ್. ನಾಗರಕಟ್ಟೆ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕದಲ್ಲಿ ಸಚಿವ ಸಂಪುಟ ಪುನರ್‌ರಚನೆ ಆದರೆ ಕಿತ್ತೂರ ಕರ್ನಾಟಕ ಭಾಗದ ಸ್ಥಳೀಯ ಮುಸ್ಲಿಂ ಶಾಸಕರಿಗೆ ಆದ್ಯತೆ ನೀಡಬೇಕೆಂದು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ರಾಜ್ಯಾಧ್ಯಕ್ಷ ಮೊಹಮ್ಮದ್‌ಶಫಿ ಎಸ್. ನಾಗರಕಟ್ಟೆ ಆಗ್ರಹಿಸಿದ್ದಾರೆ.

ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಾ, ಕಳೆದ 70 ವರ್ಷಗಳಿಂದ ಕಿತ್ತೂರ ಕರ್ನಾಟಕ ಭಾಗದ ಮುಸ್ಲಿಂ ಶಾಸಕರಿಗೆ ಸಂಪುಟದಲ್ಲಿ ಸರಿಯಾದ ಪ್ರಾತಿನಿಧ್ಯ ಸಿಕ್ಕಿಲ್ಲ. ಕೇವಲ ಬೆಂಗಳೂರು ಸುತ್ತಮುತ್ತಲಿನ ಪ್ರದೇಶದ ಶಾಸಕರಿಗೆ, ವಿಶೇಷವಾಗಿ ದಕ್ಷಿಣ ಕರ್ನಾಟಕದ ಮುಸ್ಲಿಂ ಶಾಸಕರು ಸಂಪುಟದಲ್ಲಿ ಮಂತ್ರಿ ಆಗಿದ್ದಾರೆ. ಈ ಕಾರಣದಿಂದ ಕಿತ್ತೂರ ಕರ್ನಾಟಕದ ಮುಸ್ಲಿಮರು ರಾಜಕೀಯವಾಗಿ ಹಿಂದುಳಿಯಲು ಪ್ರಮುಖ ಕಾರಣವಾಗಿದೆ. ಕಿತ್ತೂರ ಕರ್ನಾಟಕ ಭಾಗದ ಮುಸ್ಲಿಂ ರಾಜಕಾರಣಿಗಳನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಗಿದೆ. ಈ ಭಾಗದ ಮುಸ್ಲಿಮರು ಕೇವಲ ಮತ ಬ್ಯಾಂಕ್ ಆಗಿ ಉಳಿದುಬಿಟ್ಟಿದ್ದಾರೆ.

ಈ ಭಾಗದ ಮುಸ್ಲಿಂ ಶಾಸಕರಿಗೆ ಸಂಪುಟದಲ್ಲಿ ಮಂತ್ರಿ ಸ್ಥಾನ ಸಿಕ್ಕರೆ ಈ ಭಾಗದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ನಾವು ಬೆಂಗಳೂರಿನ ನಾಯಕರಿಗೆ ಮನ್ನಣೆ ಹಾಕಬೇಕಾಗುತ್ತದೆ. ಸಮಾಜದ ಪ್ರತಿಯೊಂದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬೆಂಗಳೂರಿಗೆ ಹೋಗುವ ಸಂದರ್ಭ ನಿರ್ಮಾಣವಾಗಿದೆ ಎಂದರು.

ಈ ಸಂದರ್ಭದಲ್ಲಿ ಗದಗ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿಗಳಾದ ಎಂ.ಡಿ. ಜಾಫರ್ ದಾಲಾಯತ್, ಆಸಿಫ್ ಜಮಾದಾರ್, ಅನೀಸ್ ಶೇಖ್, ಎಸ್.ಎಂ. ಮುಲ್ಲಾ, ಮೊಹಮ್ಮದ್ ಯೂನುಸ್ ಬಾಗಲಕೋಟ, ಇಮ್ರಾನ್ ಬೆಟಗೇರಿ, ಅಬ್ದುಲ್ ರಜಾಕ್ ಧಾರವಾಡ, ಸಲೀಂ ಪಠಾಣ್ ಮುಂತಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಆರಾಧನಾ ಮಹೋತ್ಸವದಲ್ಲಿ ಭಕ್ತಿ ಸಂಗೀತ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿಯ ಯೋಗಿರಾಜರ ಆರಾಧನಾ ಮಹೋತ್ಸವದ 2ನೇ ದಿನದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಗಾಯಕಿ ಗೌರಿ ಅರುಣ ಕುಲಕರ್ಣಿ ಹಾಗೂ ಯುವ ಗಾಯಕಿ ಅರ್ಪಿತಾ ಜಹಗೀರದಾರ ಅವರು ತಮ್ಮ ಸುಮಧುರ ಕಂಠದಿಂದ ಹಾಡಿದ ಭಕ್ತಿ ಗೀತೆಗಳು ಸೇರಿದ ನೂರಾರು ಭಕ್ತರನ್ನು ಮಂತ್ರ ಮುಗ್ಧರನ್ನಾಗಿಸಿತು.

ಗೌರಿ ಅವರು ತಾವೇ ರಚಿಸಿದ ದತ್ತಾತ್ರೇಯ ಸ್ವಾಮಿಯ ದತ್ತ ಮನೆಗೆ ಬಂದ, ಯೋಗಿರಾಜ ಮಹಾರಾಜರ ಜೀವನ ಚರಿತ್ರೆಯ ಸಾಧನೆಯ ಹಾಡು, ರಾಮ ಭಜನೆಯ ಮಾಡೋ ಮನುಜ ಹಾಗೂ ಅರ್ಪಿತಾ ಹಾಡಿದ ಸುಂದರಿ ಬಂದಾಳೋ ನೋಡಾ, ಹರಿ ರಮಣಾ ಗೋವಿಂದ ಸೇರಿದಂತೆ ಹತ್ತಕ್ಕೂ ಹೆಚ್ಚು ಭಕ್ತಿ ಹಾಡುಗಳು ಮನ ಸೆಳೆದವು. ಗದಗ ಕರಿಯಮ್ಮಕಲ್ಲು ಬಡಾವಣೆಯ ಶ್ರೀಕರಿ ಮಹಿಳಾ ಭಜನಾ ಮಂಡಳಿಯಿಂದ ಭಜನೆ ನಡೆಯಿತು.

ಶ್ರೀಕಾಂತ ಹೂಲಿ ಅವರ ಭಕ್ತಿ ಸಂಗೀತದ ಹಾಡುಗಳು ಭಕ್ತರನ್ನು ಭಕ್ತ ಪರವಶನ್ನಾಗಿಸಿತು.
ಇವರಿಗೆ ಉಮೇಶ ಪಾಟೀಲ ಹಾಗೂ ಹನುಮಂತಪ್ಪ ಹೆಬ್ಬಳ್ಳಿ ಅವರು ಸಂಗೀತ ಸೇವೆ ನೀಡಿದರು. ಸಂಪ್ರದಾಯದಂತೆ ಸಂಜೆ ಗುರುವಿನಹಳ್ಳಿಯ ವಿಶ್ವನಾಥ ಕುಲಕರ್ಣಿಯವರಿಂದ ಕೃಷ್ಣನ ಸಂಧಾನ ಕುರಿತು ಗಮಕ ವಾಚನ ಮತ್ತು ಕೀರ್ತನ ಕೇಸರಿ ದಿಗಂಬರಶಾಸ್ತ್ರಿಗಳಿಂದ ಕೀರ್ತನೆ ನೆರವೇರಿತು.

ಬೆಳಿಗ್ಗೆ ವಿದ್ಯಾಶಂಕರ ದೇವರು ಹಾಗೂ ಯೋಗಿರಾಜರಿಗೆ ಲಘು ಅಭಿಷೇಕ ನಡೆಯಿತು. ಕಾಕಡಾರತಿಯೊಂದಿಗೆ ಮಧ್ಯಾಹ್ನ ಆರಾಧನಾ ಬ್ರಾಹ್ಮಣರಿಂದ ಅಲಂಕಾರ ಪೂಜಾ ಕಾರ್ಯಕ್ರಮವು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಿತು.

ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಬೇಕಿದೆ: ಕೃಷ್ಣಗೌಡ ಎಚ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ಶಿಕ್ಷಣ ವ್ಯವಸ್ಥೆಯು ಪಠ್ಯಕ್ರಮ ಆಧಾರಿತವಾಗಿದ್ದು, ಅದರೊಟ್ಟಿಗೆ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ವೃದ್ಧಿಸಲು ತಾಂತ್ರಿಕ ಶಿಕ್ಷಣದ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವೆಂಬುದನ್ನು ಅರಿತುಕೊಳ್ಳಬೇಕಿದೆ ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಎಚ್. ಪಾಟೀಲ ಅಭಿಪ್ರಾಯಪಟ್ಟರು.

ಗದಗ ತಾಲೂಕಿನ ಬೆಳಧಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಟಗೇರಿ-ಗದುಗಿನ ಅಮರಶಿಲ್ಪಿ ಜಕಣಾಚಾರಿ ಕಟ್ಟಡ ನಿರ್ಮಾಣ ಕೂಲಿಕಾರ್ಮಿಕರ ಸಂಘ ಏರ್ಪಡಿಸಿದ್ದ ಬಡ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಣೆ, ಸಂಘದ ವಾರ್ಷಿಕೋತ್ಸವ ಸಮಾರಂಭ ಹಾಗೂ ನಿವೃತ್ತ/ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಮರಶಿಲ್ಪಿ ಜಕಣಾಚಾರಿ ಕಟ್ಟಡ ನಿರ್ಮಾಣ ಕೂಲಿಕಾರ್ಮಿಕರ ಸಂಘವು ಪ್ರತಿ ವರ್ಷ ಈ ರೀತಿಯ ರಚನಾತ್ಮಕ ಕಾರ್ಯ ಮಾಡಿಕೊಂಡು ಬಂದಿದ್ದು, ಬರಲಿರುವ ದಿನಗಳಲ್ಲಿ ಇಂತಹ ಕಾರ್ಯಕ್ರಮ ರೂಪಿಸುವ ಮುನ್ನ ಸಂಘಟನೆಯವರು ನನ್ನೊಂದಿಗೆ ಚರ್ಚಿಸಿದಲ್ಲಿ ನನ್ನ ವಿಚಾರಗಳನ್ನು ತಿಳಿದುಕೊಂಡರೆ ನನ್ನಿಂದಾದ ಸಹಕಾರ ನೀಡುತ್ತೇನೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಈಶಪ್ಪ ಬಳ್ಳಾರಿ ಸಂದರ್ಭೋಚಿತವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಗದಗ ಗ್ರಾಮೀಣ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಜಿ.ಎಚ್. ಬಾವಿಕಟ್ಟಿ, ಬೆಳಧಡಿ ಗ್ರಾ.ಪಂ ಅಧ್ಯಕ್ಷ ಬಸವರಾಜ ಪೂಜಾರ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಈರಣ್ಣ ಕಲ್ಮಠ, ಗದಗ-ಬೆಟಗೇರಿ ನಗರಸಭೆಯ ಸದಸ್ಯ ಚಂದ್ರಶೇಖರಗೌಡ ಕರಿಸೋಮನಗೌಡ್ರ, ಕಾರ್ಮಿಕ ಇಲಾಖೆಯ ನಿರೀಕ್ಷಕರಾದ ಸುಷ್ಮಾ ಮೈತ್ರಿ, ಕಾರ್ಮಿಕ ಕಲ್ಯಾಣ ಸಂಸ್ಥೆಯ ಮೊಹಮ್ಮದ್ ಇರ್ಫಾನ್ ಡಂಬಳ ಆಗಮಿಸಿದ್ದರು.

ವೇದಿಕೆಯ ಮೇಲೆ ಗದಗ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವ್ಹಿ.ಎಂ. ಹಿರೇಮಠ, ಗ್ರಾ.ಪಂ ಮಾಜಿ ಅಧ್ಯಕ್ಷ ಶಂಕ್ರಪ್ಪ ಹೊಸಮನಿ, ಕುಬೇರಪ್ಪ ಪವಾರ, ಪ್ರಶಸ್ತಿ ವಿಜೇತ ಶಿಕ್ಷಕಿ ಕರ್ಜಗಿ, ಫಕ್ಕೀರೇಶ ಗಾಣಿಗೇರ, ಎಸ್.ಪಿ. ಕರಿಸೋಮನಗೌಡ್ರ, ಮಹಾಂತೇಶ ಕೊಪ್ಪದ, ಸಿದ್ಧಿ ಮೊಹಮ್ಮದ್, ಮೋತಿಲಾಲ ಮ್ಯಾಳಗಿಮನಿ, ಚಾಂದಸಾಬ ಅಬ್ಬಿಗೇರಿ, ಚನ್ನವೀರಗೌಡ ಪಾಟೀಲ ಉಪಸ್ಥಿತರಿದ್ದರು.

ಕಾರ್ಮಿಕ ಸಂಘದ ಕಾರ್ಯದರ್ಶಿ ಶಂಕರಗೌಡ ಭರಮಗೌಡ್ರ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ಭೋಜರಾಜ ಹಡಪದ ನಿರೂಪಿಸಿದರು. ನಿಂಗಪ್ಪ ಕಟ್ಟಿಮನಿ ವಂದಿಸಿದರು. ಸಮಾರಂಭದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮದ ಹಿರಿಯರು ಪಾಲ್ಗೊಂಡಿದ್ದರು.

ನಾವು ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಶಿಕ್ಷಕರು ಅಧ್ಯಯನಶೀಲರಾಗಿ ಕಲಿಸುವ ಹಾಗೂ ವಿದ್ಯಾರ್ಥಿಗಳು ಪರಿಶ್ರಮದಿಂದ ಅಭ್ಯಾಸ ಮಾಡಿದಾಗ ಮಾತ್ರ ಇದು ಸಾಕಾರಗೊಳ್ಳಲು ಸಾಧ್ಯ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಸ್ಪರ್ಧಾತ್ಮಕವಾದ ಫಲಿತಾಂಶವನ್ನು ಕಂಡುಕೊಂಡಾಗ ಮಾತ್ರ ಮುಂದಿನ ಅಧ್ಯಯನಕ್ಕೆ ಪ್ರವೇಶ ಸುಗಮಗೊಳ್ಳುವದು. ಮಕ್ಕಳ ಭವ್ಯ ಭವಿಷ್ಯ ರೂಪುಗೊಳ್ಳಲು ಕಲಿಸುವ, ಕಲಿಯುವ ಕಾರ್ಯ ನಿರಂತರವಾಗಿ ಇರಬೇಕೆಂದು ಕೃಷ್ಣಗೌಡ ಪಾಟೀಲ ಅಭಿಪ್ರಾಯಪಟ್ಟರು.

 

ಸಮಸ್ಯೆ ಗಂಭೀರವಾಗುವ ಮುನ್ನ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ ನಿಯಂತ್ರಣ ಕುರಿತು ಗದಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ಸಭೆ ಜರುಗಿತು. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೀದಿ ನಾಯಿಗಳಿಂದ ಉಂಟಾಗುತ್ತಿರುವ ಸಮಸ್ಯೆಗಳು ಹಾಗೂ ಅವುಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಬೀದಿ ನಾಯಿಗಳ ನಿಯಂತ್ರಣ ಎಂದರೆ ಅವುಗಳನ್ನು ಕೊಲ್ಲುವುದು ಅಲ್ಲ, ಮಾನವೀಯ ಮತ್ತು ಕಾನೂನುಬದ್ಧ ರೀತಿಯಲ್ಲಿ ಜನರ ಜೀವ, ಆರೋಗ್ಯ၊ ಸುರಕ್ಷತೆ ಕಾಪಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಬೀದಿ ನಾಯಿಗಳಿಂದ ಮಕ್ಕಳಿಗೂ, ಮಹಿಳೆಯರಿಗೂ, ಹಿರಿಯ ನಾಗರಿಕರಿಗೂ ಅಪಾಯ ಉಂಟಾಗುತ್ತಿರುವ ಘಟನೆಗಳು ಕೆಲವೆಡೆ ವರದಿಯಾಗಿರುವ ಹಿನ್ನೆಲೆಯಲ್ಲಿ, ಸಮಸ್ಯೆ ಗಂಭೀರವಾಗುವ ಮುನ್ನ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಸೂಚಿಸಿದರು.

ಬೀದಿ ನಾಯಿಗಳನ್ನು ಸುರಕ್ಷಿತವಾಗಿ ವಶಪಡಿಸಿಕೊಳ್ಳಲು ವಿಶೇಷ ತಂಡ ರಚನೆ, ಅವುಗಳಿಗೆ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ, ರೇಬಿಸ್ ಲಸಿಕೆ, ಆರೋಗ್ಯ ತಪಾಸಣೆ ನಡೆಸಿ, ಗುರುತು ಹಾಕಿ ಹಿಂದಿರುಗಿ ಬಿಡುವ ಬಗ್ಗೆ ಪ್ರಾಥಮಿಕ ತೀರ್ಮಾನ ಕೈಗೊಳ್ಳಲಾಯಿತು. ಜೊತೆಗೆ ಹುಚ್ಚುನಾಯಿ ಶಂಕೆ ಇರುವ ನಾಯಿಗಳನ್ನು ಪ್ರತ್ಯೇಕವಾಗಿ ವಶಕ್ಕೆ ಪಡೆದು ಅಗತ್ಯ ವೈದ್ಯಕೀಯ ಪರೀಕ್ಷೆ ನಡೆಸುವ ವಿಷಯದಲ್ಲೂ ನಿರ್ದೇಶನ ನೀಡಲಾಯಿತು.

ಜಿಲ್ಲೆಯಾದ್ಯಂತ ಕಸದ ಸಮರ್ಪಕ ನಿರ್ವಹಣೆ ಇಲ್ಲದಿರುವುದು ಬೀದಿ ನಾಯಿಗಳ ಹೆಚ್ಚುವಿಕೆಗೆ ಪ್ರಮುಖ ಕಾರಣವಾಗಿದ್ದು, ಮಾರುಕಟ್ಟೆ, ಹೋಟೆಲ್, ಮಾಂಸದ ಅಂಗಡಿಗಳು, ಸಾರ್ವಜನಿಕ ಸ್ಥಳಗಳ ತ್ಯಾಜ್ಯವನ್ನು ಮುಚ್ಚಿದ ಡಬ್ಬಿಗಳಲ್ಲಿ ಸಂಗ್ರಹಿಸುವ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲು ಸಭೆ ತೀರ್ಮಾನಿಸಿತು. ನಿಯಮ ಉಲ್ಲಂಘಿಸುವ ವಾಣಿಜ್ಯ ಸಂಸ್ಥೆಗಳ ವಿರುದ್ಧ ದಂಡ ವಿಧಿಸಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಯಿತು.

ಶಾಲೆಗಳು, ಆಂಗನವಾಡಿಗಳು, ಗ್ರಾಮ ಸಭೆಗಳು, ಮಹಿಳಾ ಸಂಘಗಳ ಮೂಲಕ ನಾಯಿ ಕಚ್ಚಿದರೆ ತಕ್ಷಣ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ರೇಬಿಸ್ ಲಸಿಕೆಯ ಮಹತ್ವ ಕುರಿತು ಜಾಗೃತಿ ಮೂಡಿಸುವ ನಿರ್ಧಾರ ಕೈಗೊಳ್ಳಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳು ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಸಮಗ್ರ ಕಾರ್ಯಯೋಜನೆ ತಯಾರಿಸಿ, ನಿಗದಿತ ಅವಧಿಯಲ್ಲಿ ವರದಿ ಸಲ್ಲಿಸಲು ಒಪ್ಪಿಕೊಂಡರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಎಚ್.ಬಿ. ಹುಲಗಣ್ಣವರ, ಜಿ.ಪಂ ಸಹಕಾರ್ಯದರ್ಶಿ ಶಿವಾನಂದ ಕಲ್ಮನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

ಜಿಲ್ಲೆಯಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಮನ್ವಯದೊಂದಿಗೆ ಬೀದಿ ನಾಯಿ ಜನನ ನಿಯಂತ್ರಣ (ಎಬಿಸಿ ಪ್ರಕ್ರಿಯೆ) ಕಾರ್ಯಕ್ರಮವನ್ನು ಹಂತ ಹಂತವಾಗಿ ಜಾರಿಗೆ ತರಲು ಜಿಲ್ಲಾಧಿಕಾರಿಗಳು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.

error: Content is protected !!