Home Blog

30 ಲಕ್ಷ ರೂ. ವಿಮೆ ಹಣದ ಆಸೆಗೆ ಸ್ವಂತ ತಮ್ಮನ ಹತ್ಯೆ; ಅಪಘಾತದ ನಾಟಕ ಬಯಲು!

0

ತುಮಕೂರು: ಎಲ್‌ಐಸಿ ಪಾಲಿಸಿಯಿಂದ ಸಿಗುವ 30 ಲಕ್ಷ ರೂಪಾಯಿ ವಿಮೆ ಹಣದ ಆಸೆಗೆ ಸ್ವಂತ ತಮ್ಮನನ್ನೇ ಅಣ್ಣ ಕೊಲೆ ಮಾಡಿ, ಅದನ್ನು ಬೈಕ್ ಅಪಘಾತವೆಂದು ಬಿಂಬಿಸಲು ಯತ್ನಿಸಿದ ಘಟನೆ ತುಮಕೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಪ್ರಕರಣದ ತನಿಖೆ ನಡೆಸಿದ ಪಟ್ಟನಾಯಕನಹಳ್ಳಿ ಪೊಲೀಸರು ಅಸಲಿ ಸತ್ಯವನ್ನು ಬಯಲಿಗೆಳೆದಿದ್ದಾರೆ.

ಮೃತನನ್ನು 35 ವರ್ಷದ ರಮೇಶ್ ಎಂದು ಗುರುತಿಸಲಾಗಿದ್ದು, ಆತ ಮೂಲತಃ ಆಂಧ್ರಪ್ರದೇಶದ ನಿವಾಸಿಯಾಗಿದ್ದ. ಕಳೆದ ಆರು ವರ್ಷಗಳಿಂದ ಬೆಂಗಳೂರಿನಲ್ಲಿ ಎಳನೀರು ವ್ಯಾಪಾರ ಹಾಗೂ ಮಂಡ್ಯದಲ್ಲಿ ಕಬ್ಬಿನ ಜ್ಯೂಸ್ ವ್ಯಾಪಾರ ನಡೆಸುತ್ತಿದ್ದನು. ಹೆಂಡತಿಯಿಂದ ದೂರವಾಗಿದ್ದ ರಮೇಶ್ ಮಾಟಮಂತ್ರದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಎನ್ನಲಾಗಿದೆ.

ಪೊಲೀಸರ ಪ್ರಕಾರ, ಆರೋಪಿ ಹನುಮಂತರಾಜು ತನ್ನ ತಮ್ಮ ರಮೇಶ್ ಹೆಸರಿನಲ್ಲಿ 15 ಲಕ್ಷ ರೂಪಾಯಿ ಮೊತ್ತದ ಎಲ್‌ಐಸಿ ಪಾಲಿಸಿ ಮಾಡಿಸಿದ್ದು, ಅದರ ನಾಮಿನಿಯಾಗಿ ತನ್ನ ಹೆಸರನ್ನೇ ನೋಂದಾಯಿಸಿಕೊಂಡಿದ್ದ. ಪ್ರತಿ ವರ್ಷ ಸುಮಾರು 85 ಸಾವಿರ ರೂಪಾಯಿ ಪ್ರೀಮಿಯಂ ಪಾವತಿಸುತ್ತಿದ್ದ. ಅಪಘಾತದಲ್ಲಿ ಮೃತಪಟ್ಟರೆ ವಿಮಾ ಮೊತ್ತದ ದ್ವಿಗುಣ ಅಂದರೆ 30 ಲಕ್ಷ ರೂಪಾಯಿ ಸಿಗುವ ನಿಯಮವಿದ್ದ ಕಾರಣ, ಹಣದ ದುರಾಸೆಯಿಂದ ಈ ಕೃತ್ಯ ಎಸಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಜೂನ್ 19ರಂದು ನಿಧಿ ಪೂಜೆ ನೆಪದಲ್ಲಿ ರಮೇಶ್‌ನನ್ನು ಶಿರಾ-ಅಮರಾಪುರ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡ ಆರೋಪಿಗಳು, ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಆತನ ಮೇಲೆ ಕಾರು ಹರಿಸಿದ್ದರೂ ಜೀವ ಉಳಿದಿದ್ದರಿಂದ ಬ್ಯಾಟರಿ ಜಂಪಿಂಗ್ ವೈರ್‌ನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕೊಲೆ ಬಳಿಕ ಪ್ರಕರಣವನ್ನು ಅಪಘಾತದ ರೂಪಕ್ಕೆ ತರುವ ಉದ್ದೇಶದಿಂದ ಶವ ಮತ್ತು ಬೈಕ್ ಅನ್ನು ರಸ್ತೆಯಲ್ಲಿ ಬಿಟ್ಟು, ಬೈಕ್ ಮುಂಭಾಗವನ್ನು ಜಖಂಗೊಳಿಸಿ ಅಪಘಾತದ ನಾಟಕವಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಮೃತನ ಹಿರಿಯ ಸಹೋದರ ರಂಗನಾಥ ನೀಡಿದ ದೂರಿನ ಮೇರೆಗೆ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಮೂರು ವಿಶೇಷ ತಂಡಗಳನ್ನು ರಚಿಸಿ ತನಿಖೆ ನಡೆಸಿದ ಪೊಲೀಸರು, ಪ್ರಮುಖ ಆರೋಪಿ ಹನುಮಂತರಾಜು ಸೇರಿದಂತೆ ಇತರ ಆರೋಪಿಗಳಾದ ಲಕ್ಷ್ಮೀಕಾಂತ, ನವೀನ್ ಹಾಗೂ ಎಂ.ಡಿ. ಜಿಲಾನ್ ಅವರನ್ನು ಬಂಧಿಸಿದ್ದಾರೆ.

ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ವಾಹನ ಸವಾರರಿಗೆ ಆರ್‌ಟಿಓ ಶಾಕ್: ‘ವಾಹನ್-4’ ಸರ್ವರ್ ಡೌನ್, ರಾಜ್ಯದ 70 ಕಚೇರಿಗಳಲ್ಲಿ ಸೇವೆ ಸ್ಥಗಿತ

ಬೆಂಗಳೂರು: ಕೇಂದ್ರ ಸರ್ಕಾರದ ‘ವಾಹನ್-4’ ಸಾಫ್ಟ್‌ವೇರ್‌ನಲ್ಲಿ ಉಂಟಾಗಿರುವ ತಾಂತ್ರಿಕ ದೋಷದಿಂದ ರಾಜ್ಯದ ವಾಹನ ಸವಾರರು ಹಾಗೂ ಹೊಸ ವಾಹನ ಖರೀದಿದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ ಒಂದು ವಾರದಿಂದ ಸಾಫ್ಟ್‌ವೇರ್ ಸರಿಯಾಗಿ ಕಾರ್ಯನಿರ್ವಹಿಸದ ಪರಿಣಾಮ, ರಾಜ್ಯದ 70 ಆರ್‌ಟಿಓ ಕಚೇರಿಗಳಲ್ಲಿ ದೈನಂದಿನ ಸೇವೆಗಳು ಬಹುತೇಕ ಸ್ಥಗಿತಗೊಂಡಿವೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಆರ್‌ಟಿಓ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕರು ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಲು ಮುಂದಾದಾಗ ಸಿಸ್ಟಮ್ ಹ್ಯಾಂಗ್ ಆಗುತ್ತಿದ್ದು, ಹಲವು ಪ್ರಮುಖ ಸೇವೆಗಳು ಸ್ಥಗಿತಗೊಂಡಿವೆ.

ತಾಂತ್ರಿಕ ಸಮಸ್ಯೆಯಿಂದಾಗಿ ಹೊಸ ವಾಹನಗಳ ನೋಂದಣಿ ಪ್ರಕ್ರಿಯೆ ಸಂಪೂರ್ಣವಾಗಿ ವಿಳಂಬವಾಗುತ್ತಿದೆ. ಅಲ್ಲದೆ ವಾಹನ ಮಾಲೀಕತ್ವ ವರ್ಗಾವಣೆ, ಬ್ಯಾಂಕ್ ಸಾಲದ ಎಂಟ್ರಿ ಹಾಗೂ ರದ್ದತಿ, ಫಿಟ್ನೆಸ್ ಪ್ರಮಾಣಪತ್ರ (ಎಫ್‌ಸಿ), ವಿಳಾಸ ಬದಲಾವಣೆ, ನಕಲಿ ಆರ್‌ಸಿ ಪಡೆಯುವುದು ಸೇರಿದಂತೆ ಹಲವು ಸೇವೆಗಳು ಲಭ್ಯವಾಗುತ್ತಿಲ್ಲ.

ಹೊರರಾಜ್ಯಗಳಿಗೆ ಸಂಚರಿಸಬೇಕಾದ ಲಾರಿಗಳು ಹಾಗೂ ವಾಣಿಜ್ಯ ವಾಹನಗಳಿಗೆ ಅಗತ್ಯವಿರುವ ಪರ್ಮಿಟ್ ಪಡೆಯಲು ಸಾಧ್ಯವಾಗದ ಕಾರಣ ಸಾರಿಗೆ ಉದ್ಯಮಕ್ಕೂ ಹೊಡೆತ ಬಿದ್ದಿದೆ. ಲಾರಿ ಹಾಗೂ ಟ್ಯಾಕ್ಸಿ ಮಾಲೀಕರು ಆರ್ಥಿಕ ನಷ್ಟ ಅನುಭವಿಸುತ್ತಿದ್ದು, ತಕ್ಷಣ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದ್ದಾರೆ.

ಈ ಕುರಿತು ನೂರಾರು ವಾಹನ ಮಾಲೀಕರು ಆರ್‌ಟಿಓ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ, ಇದುವರೆಗೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ. ಪರಿಣಾಮ ಪ್ರತಿದಿನ ನೂರಾರು ನಾಗರಿಕರು ಆರ್‌ಟಿಓ ಕಚೇರಿಗಳಿಗೆ ಭೇಟಿ ನೀಡಿ ಯಾವುದೇ ಸೇವೆ ಪಡೆಯದೆ ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಾಹನ್-4 ಸರ್ವರ್ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಲು ರಾಜ್ಯ ಸಾರಿಗೆ ಇಲಾಖೆ ಹಾಗೂ ಕೇಂದ್ರದ ಎನ್‌ಐಸಿ ತಾಂತ್ರಿಕ ತಂಡ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಳಿ ಕಟ್ಟುವಾಗ ಯಾಕೆ ಮೂರು ಗಂಟು ಹಾಕುತ್ತಾರೆ? ಇದರ ಹಿಂದಿದೆ ಆಳವಾದ ಆಧ್ಯಾತ್ಮಿಕ ಅರ್ಥ!

0

ಹಿಂದೂ ಧರ್ಮದಲ್ಲಿ ವಿವಾಹವನ್ನು ಅತ್ಯಂತ ಪವಿತ್ರ ಸಂಸ್ಕಾರವೆಂದು ಪರಿಗಣಿಸಲಾಗುತ್ತದೆ.

ಮದುವೆ ಎಂದರೆ ಕೇವಲ ಇಬ್ಬರ ಹೃದಯಗಳ ಸಂಗಮವಲ್ಲ, ಎರಡು ಕುಟುಂಬಗಳು ಹಾಗೂ ಎರಡು ವಂಶಗಳ ಒಗ್ಗಟ್ಟಿನ ಸಂಕೇತವಾಗಿದೆ. ವಿವಾಹದ ವೇಳೆ ನಡೆಯುವ ಹಲವು ಶಾಸ್ತ್ರಗಳಲ್ಲಿ ಮಾಂಗಲ್ಯ ಧಾರಣೆ ಅಥವಾ ತಾಳಿ ಕಟ್ಟುವ ಸಂಪ್ರದಾಯಕ್ಕೆ ವಿಶೇಷ ಮಹತ್ವವಿದೆ.

ತಾಳಿ ಕಟ್ಟುವ ಸಂದರ್ಭದಲ್ಲಿ ಮೂರು ಗಂಟುಗಳನ್ನು ಹಾಕುವ ಪದ್ಧತಿ ಇದೆ. ಈ ಮೂರು ಗಂಟುಗಳ ಹಿಂದೆ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಹತ್ವದ ಅರ್ಥ ಅಡಗಿದೆ ಎಂದು ನಂಬಲಾಗಿದೆ.

‘ಮೂರು’ ಸಂಖ್ಯೆಯ ಮಹತ್ವ:

ಹಿಂದೂ ಸಂಪ್ರದಾಯದಲ್ಲಿ ‘ಮೂರು’ ಸಂಖ್ಯೆಗೆ ವಿಶೇಷ ಸ್ಥಾನವಿದೆ. ಜ್ಯೋತಿಷ್ಯ ಹಾಗೂ ಸಂಖ್ಯಾಶಾಸ್ತ್ರದ ಪ್ರಕಾರ 3 ಎಂಬುದು ಗುರು ಗ್ರಹದ ಸಂಖ್ಯೆಯಾಗಿದೆ. ಗುರು ಗ್ರಹವನ್ನು ಜ್ಞಾನ, ಧರ್ಮ, ಶುಭಫಲ ಹಾಗೂ ವೈವಾಹಿಕ ಜೀವನದ ಕಾರಕ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಮೂರು ಗಂಟುಗಳನ್ನು ಹಾಕುವುದರಿಂದ ದಾಂಪತ್ಯ ಜೀವನದಲ್ಲಿ ಗುರು ಗ್ರಹದ ಕೃಪೆ ಸದಾ ಇರಲಿ ಎಂಬ ಆಶಯ ವ್ಯಕ್ತವಾಗುತ್ತದೆ.

ತ್ರಿಮೂರ್ತಿಗಳ ಸಂಕೇತ:

ಮೂರು ಗಂಟುಗಳು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಎಂಬ ತ್ರಿಮೂರ್ತಿಗಳನ್ನು ಪ್ರತಿನಿಧಿಸುತ್ತವೆ ಎಂಬ ನಂಬಿಕೆಯಿದೆ. ಜೊತೆಗೆ ಸತ್ವ, ರಜಸ್ ಮತ್ತು ತಮಸ್ ಎಂಬ ಮೂರು ಗುಣಗಳ ಸಮತೋಲನಕ್ಕೂ ಇದು ಸಂಕೇತವಾಗಿದೆ. ಭೂತ, ವರ್ತಮಾನ ಮತ್ತು ಭವಿಷ್ಯ ಎಂಬ ತ್ರಿಕಾಲಗಳಲ್ಲೂ ದಂಪತಿಗಳು ಒಂದಾಗಿ ಬದುಕಲಿ ಎಂಬ ಸಂದೇಶವೂ ಇದರಲ್ಲಿದೆ.

ಮೂರು ಶರೀರಗಳ ಬಂಧನ:

ಆಧ್ಯಾತ್ಮಿಕ ತತ್ವದ ಪ್ರಕಾರ ಮನುಷ್ಯನಿಗೆ ಮೂರು ವಿಧದ ಶರೀರಗಳಿವೆ ಎಂದು ಹೇಳಲಾಗುತ್ತದೆ. ತಾಳಿ ಕಟ್ಟುವ ಮೂರು ಗಂಟುಗಳು ಈ ಮೂರು ಶರೀರಗಳ ಏಕೀಕರಣವನ್ನು ಸೂಚಿಸುತ್ತವೆ.

  • ಮೊದಲ ಗಂಟು: ಸ್ಥೂಲ ಶರೀರ ಅಥವಾ ಭೌತಿಕ ದೇಹದ ಸಂಕೇತ.
  • ಎರಡನೇ ಗಂಟು: ಮನಸ್ಸು, ಭಾವನೆಗಳು ಹಾಗೂ ಸೂಕ್ಷ್ಮ ಶರೀರದ ಸಂಕೇತ.
  • ಮೂರನೇ ಗಂಟು: ಆತ್ಮ ಹಾಗೂ ಕಾರಣ ಶರೀರದ ಸಂಕೇತ.

ಈ ಮೂಲಕ ದಂಪತಿಗಳ ದೇಹ, ಮನಸ್ಸು ಮತ್ತು ಆತ್ಮಗಳ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತದೆ ಎಂಬ ನಂಬಿಕೆ ಇದೆ.

ಜವಾಬ್ದಾರಿಯ ಪ್ರತಿಜ್ಞೆ:

ಮೂರು ಗಂಟುಗಳನ್ನು ಹಾಕುವ ಮೂಲಕ ವರನು ವಧುವಿನ ಜೀವನವನ್ನು ಗೌರವಿಸುವುದು, ರಕ್ಷಿಸುವುದು ಮತ್ತು ಆಕೆಯ ಸುಖ-ದುಃಖಗಳಲ್ಲಿ ಜೊತೆಗಿರುವ ಜವಾಬ್ದಾರಿಯನ್ನು ಸ್ವೀಕರಿಸುತ್ತಾನೆ ಎಂಬ ಅರ್ಥವನ್ನು ಸಂಪ್ರದಾಯ ಪ್ರತಿಪಾದಿಸುತ್ತದೆ. ಪಂಚಭೂತಗಳ ಸಾಕ್ಷಿಯಾಗಿ ಈ ಬಂಧವನ್ನು ಶಾಶ್ವತಗೊಳಿಸುವ ಸಂಕೇತವಾಗಿ ಮೂರು ಗಂಟುಗಳನ್ನು ಪರಿಗಣಿಸಲಾಗುತ್ತದೆ.

ಹೀಗಾಗಿ ತಾಳಿ ಕಟ್ಟುವ ಮೂರು ಗಂಟುಗಳು ಕೇವಲ ಒಂದು ಸಂಪ್ರದಾಯವಲ್ಲ; ಅದು ದಾಂಪತ್ಯ ಜೀವನದ ಪಾವಿತ್ರ್ಯ, ನಂಬಿಕೆ, ಜವಾಬ್ದಾರಿ ಹಾಗೂ ಆಧ್ಯಾತ್ಮಿಕ ಏಕತೆಯ ಪ್ರತೀಕವಾಗಿದೆ.

ಜುಲೈ 11ರಂದು ರಾಷ್ಟ್ರೀಯ ಲೋಕ ಅದಾಲತ್

0

ವಿಜಯಸಾಕ್ಷಿ ಸುದ್ದಿ, ಗದಗ: ನ್ಯಾಯಾಲಯಗಳಲ್ಲಿ ವರ್ಷಗಟ್ಟಲೆ ಬಾಕಿ ಉಳಿದಿರುವ ಪ್ರಕರಣಗಳಿಗೆ ತ್ವರಿತ ಹಾಗೂ ಸೌಹಾರ್ದಯುತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಜುಲೈ 11ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಹಾಗೂ ವ್ಯಾಜ್ಯಕಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ನಾಗವೇಣಿ ಕರೆ ನೀಡಿದರು.

ನಗರದ ಜಿಲ್ಲಾ ಸತ್ರ ನ್ಯಾಯಾಲಯದ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯಗಳಲ್ಲಿ ಬಾಕಿ ಇರುವ ಹಾಗೂ ನ್ಯಾಯಾಲಯದ ಹೊರಗಿನ (ಪ್ರೀ-ಲಿಟಿಗೇಷನ್) ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಇದೊಂದು ಅಪರೂಪದ ಅವಕಾಶವಾಗಿದೆ ಎಂದು ತಿಳಿಸಿದರು.

ಗದಗ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಪ್ರಸ್ತುತ 21,101 ಪ್ರಕರಣಗಳು ಬಾಕಿ ಇದ್ದು, ಅವುಗಳಲ್ಲಿ ರಾಜಿಗೆ ಅರ್ಹವಾಗಿರುವ 2,835 ಪ್ರಕರಣಗಳನ್ನು ಈಗಾಗಲೇ ಗುರುತಿಸಲಾಗಿದೆ. ರಾಜೀ ಸಂಧಾನ ಪ್ರಕ್ರಿಯೆ ಸುಗಮವಾಗಿ ನಡೆಯಲು ಜಿಲ್ಲೆಯಾದ್ಯಂತ ಒಟ್ಟು 15 ಬೆಂಚ್‌ಗಳನ್ನು ರಚಿಸಲಾಗಿದೆ.

ಜಮೀನು ಮತ್ತು ಆಸ್ತಿ ವಿವಾದಗಳು, ಭೂಸ್ವಾಧೀನ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ದಾವೆಗಳು, ಕೌಟುಂಬಿಕ ಕಲಹಗಳು, ಕಾರ್ಮಿಕ ಪ್ರಕರಣಗಳು ಹಾಗೂ ರಾಜಿಗೆ ಅರ್ಹವಾಗಿರುವ ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಹಲವು ವ್ಯಾಜ್ಯಗಳನ್ನು ಲೋಕ ಅದಾಲತ್ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು.

ಲೋಕ ಅದಾಲತ್‌ನಲ್ಲಿ ಪ್ರಕರಣ ಇತ್ಯರ್ಥವಾದಲ್ಲಿ ನ್ಯಾಯಾಲಯಕ್ಕೆ ಪಾವತಿಸಿದ ಶುಲ್ಕವನ್ನು ಸಂಪೂರ್ಣವಾಗಿ ಮರುಪಾವತಿಸಲಾಗುತ್ತದೆ. ಅಲ್ಲದೇ, ಪ್ರಕರಣ ರಾಜಿಯಾದ ಬಳಿಕ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಹೀಗಾಗಿ ಸಮಯ, ಹಣ ಮತ್ತು ಶ್ರಮ ಉಳಿತಾಯವಾಗುವುದರ ಜೊತೆಗೆ ಪರಸ್ಪರ ಸಂಬಂಧಗಳೂ ಉಳಿಯಲಿವೆ ಎಂದು ಹೇಳಿದರು.

ಕಳೆದ ಮಾರ್ಚ್‌ನಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 3,383 ಚಾಲ್ತಿ ಪ್ರಕರಣಗಳು ಹಾಗೂ 62,299 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ ಒಟ್ಟು 65,682 ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಂಡಿದ್ದವು. ಅಲ್ಲದೆ, ಮೂರು ಕೌಟುಂಬಿಕ ಪ್ರಕರಣಗಳಲ್ಲಿ ಬೇರೆಯಾಗಿದ್ದ ಕುಟುಂಬಗಳನ್ನು ಪುನಃ ಒಂದುಗೂಡಿಸುವಲ್ಲಿ ಯಶಸ್ಸು ಸಾಧಿಸಲಾಗಿತ್ತು.

ಈ ಬಾರಿ ಜಮೀನು ಹಾಗೂ ಆಸ್ತಿ ಹಂಚಿಕೆ ಪ್ರಕರಣಗಳಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ರಾಜಿಗೆ ಅರ್ಹವಾಗಿರುವ ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಸುಮಾರು 100 ಗ್ರಾಮಗಳನ್ನು “ವ್ಯಾಜ್ಯಮುಕ್ತ ಗ್ರಾಮ”ಗಳನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಬಾಕಿ ಚಲನ್‌ಗಳ ದಂಡ ಪಾವತಿಗೆ ಶೇ.50 ರಿಯಾಯಿತಿ ನೀಡಲಾಗಿದ್ದು, ಈ ಸೌಲಭ್ಯ ಜೂನ್ 21ರಿಂದ ಜುಲೈ 10ರವರೆಗೆ ಲಭ್ಯವಿರಲಿದೆ ಎಂದು ತಿಳಿಸಲಾಯಿತು.

ಅಲ್ಲದೇ, ಜುಲೈ 18ರಂದು ಚೆಕ್ ಬೌನ್ಸ್ (ಎನ್‌ಐ ಆಕ್ಟ್) ಪ್ರಕರಣಗಳಿಗಾಗಿಯೇ ವಿಶೇಷ ಲೋಕ ಅದಾಲತ್ ನಡೆಯಲಿದ್ದು, ಆಗಸ್ಟ್ 21, 22 ಹಾಗೂ 23ರಂದು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕಾಗಿ ‘ಸಮಾಧಾನ ಸಮಾರೋಪ’ ಹೆಸರಿನ ವಿಶೇಷ ಅದಾಲತ್ ಹಮ್ಮಿಕೊಳ್ಳಲಾಗಿದೆ. ಗದಗ ಜಿಲ್ಲೆಯಿಂದ ಗುರುತಿಸಲಾದ 21 ಪ್ರಕರಣಗಳ ಪಕ್ಷಗಾರರು ದೆಹಲಿಗೆ ತೆರಳದೇ, ಇಲ್ಲಿಯೇ ವಿಡಿಯೋ ಕಾನ್ಫರೆನ್ಸ್ ಮೂಲಕ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಮ್ಮುಖದಲ್ಲಿ ರಾಜೀ ಸಂಧಾನ ಮಾಡಿಕೊಳ್ಳಬಹುದಾಗಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಉಪಸ್ಥಿತರಿದ್ದರು.

“ನ್ಯಾಯಾಲಯಗಳಲ್ಲಿ ವರ್ಷಗಟ್ಟಲೆ ಅಲೆದಾಡುವುದನ್ನು ತಪ್ಪಿಸಿ, ಹಣ ಮತ್ತು ಸಮಯವನ್ನು ಉಳಿಸಿಕೊಳ್ಳಲು ಲೋಕ ಅದಾಲತ್ ಅತ್ಯಂತ ಸುಲಭ ಹಾಗೂ ಪರಿಣಾಮಕಾರಿ ಮಾರ್ಗವಾಗಿದೆ. ಇಲ್ಲಿ ಗೆದ್ದವರು ಅಥವಾ ಸೋತವರು ಇರುವುದಿಲ್ಲ, ಇಬ್ಬರೂ ಗೆದ್ದಂತೆಯೇ. ಸಾರ್ವಜನಿಕರು ಜುಲೈ 11ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್‌ನ ಸದುಪಯೋಗ ಪಡೆದು ತಮ್ಮ ವ್ಯಾಜ್ಯಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.”

ಶ್ರೀಮತಿ ನಾಗವೇಣಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗದಗ

ನಕಲಿ ವೈದ್ಯರಿಗೆ ಜಿಲ್ಲಾಧಿಕಾರಿಯ ಖಡಕ್ ಚಾಟಿ..!

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಮತ್ತು ಅನಧಿಕೃತ ವೈದ್ಯಕೀಯ ವೃತ್ತಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಖಡಕ್ ಕ್ರಮಕ್ಕೆ ಮುಂದಾಗಿದೆ. ಜನರ ಆರೋಗ್ಯದೊಂದಿಗೆ ಚೆಲ್ಲಾಟ ನಡೆಸುವ ನಕಲಿ ವೈದ್ಯರು, ನೋಂದಣಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳು ಹಾಗೂ ಆರೋಗ್ಯ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ‘ಜಿಲ್ಲಾ ಮಟ್ಟದ ವಿಶೇಷ ಪಡೆ’ಯನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅನಧಿಕೃತ ವೈದ್ಯಕೀಯ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.

ಈಗಾಗಲೇ ವಿಶೇಷ ತಪಾಸಣೆ ವೇಳೆ ಪತ್ತೆಯಾದ ಮೂವರು ನಕಲಿ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿ, ತಲಾ 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ದಂಡದ ಮೊತ್ತವನ್ನು ಸರ್ಕಾರದ ಖಜಾನೆಗೆ ಜಮೆ ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕೆಪಿಎಂಇ (KPME) ಕಾಯ್ದೆಯಡಿ ನೋಂದಣಿ ಮಾಡಿಸದೇ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆಗಳು, ಪ್ರಯೋಗಾಲಯಗಳು, ಸ್ಕ್ಯಾನಿಂಗ್ ಕೇಂದ್ರಗಳು, ರಕ್ತ ಬ್ಯಾಂಕ್‌ಗಳು ಹಾಗೂ ಇತರೆ ಆರೋಗ್ಯ ಸಂಸ್ಥೆಗಳು 15 ದಿನಗಳೊಳಗೆ ಕಡ್ಡಾಯವಾಗಿ ಆನ್‌ಲೈನ್ ಮೂಲಕ ನೋಂದಣಿಗೆ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಿದರು. ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಾಯ್ದೆಯಡಿ ಕಠಿಣ ಕ್ರಮ ಹಾಗೂ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದಲ್ಲದೆ, ನೋಂದಾಯಿತ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳು ತಮ್ಮ ಸಂಸ್ಥೆಗಳ ನೋಂದಣಿ ಅವಧಿ ಮುಕ್ತಾಯಗೊಳ್ಳುವ ಮೂರು ತಿಂಗಳ ಮುಂಚೆಯೇ ಅಗತ್ಯ ದಾಖಲೆಗಳೊಂದಿಗೆ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಿದರು.

ಸರ್ಕಾರಿ ಆಸ್ಪತ್ರೆಗಳ 200 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳು ಕಾರ್ಯನಿರ್ವಹಿಸುವಂತಿಲ್ಲ. ಈ ನಿಯಮ ಉಲ್ಲಂಘಿಸಿದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ಆರೋಗ್ಯ ಸೇವೆಯ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ವಿರುದ್ಧ ಜಿಲ್ಲಾಡಳಿತ ಸಮರ ಸಾರಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ವಿಶೇಷ ಪಡೆಯ ರಚನೆಯೊಂದಿಗೆ ನಕಲಿ ವೈದ್ಯರ ಜಾಲಕ್ಕೆ ಕಡಿವಾಣ ಬೀಳುವ ನಿರೀಕ್ಷೆ ಮೂಡಿದೆ.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ, ಕೆಪಿಎಂಇ ನೋಡಲ್ ಅಧಿಕಾರಿ ಡಾ. ಹೆಚ್.ಎಲ್. ಗಿರಡ್ಡಿ, ಐಎಂಎ ಅಧ್ಯಕ್ಷ ಡಾ. ಶ್ರೀಧರ್ ಕುರಡಗಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಜುಬೇದ ತಿಗಳೆರ, ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ಪ್ರೀತ್ ಖೋನಾ, ಡಾ. ಬಿ.ಎಸ್. ಭಜಂತ್ರಿ, ಡಾ. ಸುಭಾಷಚಂದ್ರ ದಾಯಗೊಂಡ, ಡಾ. ಸಂತೋಷಗೌಡ ಪಾಟೀಲ, ಡಾ. ಆರ್.ಸಿ. ಕೊರವನವರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

“ಜನರ ಜೀವದೊಂದಿಗೆ ಚೆಲ್ಲಾಟ ನಡೆಸುವ ನಕಲಿ ವೈದ್ಯರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಅನಧಿಕೃತ ವೈದ್ಯಕೀಯ ವೃತ್ತಿ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.”

– ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ

ಗಜೇಂದ್ರಗಡ ಮಹಾಸಭೆಗೆ ನೂತನ ಸಾರಥಿಗಳು

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಗಜೇಂದ್ರಗಡ ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಶಿವಕುಮಾರ ಶಶಿಮಠ ಹಾಗೂ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಗೀತಾ ಶಶಿಧರ ವಾಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಟ್ಟಣದ ಮೈಸೂರುಮಠದಲ್ಲಿ ಸೋಮವಾರ ಜರುಗಿದ ಮಹಾಸಭೆಯ ತಾಲೂಕು ಘಟಕದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.

ನೂತನ ಯುವ ಘಟಕದ ಅಧ್ಯಕ್ಷ ಶಿವಕುಮಾರ ಶಶಿಮಠ ಮಾತನಾಡಿ, ತಾಲೂಕಿನಲ್ಲಿ ಯುವಕರನ್ನು ಸಂಘಟಿಸಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಹಿರಿಯರ ಮಾರ್ಗದರ್ಶನದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ನಡೆಸಿ ಸಮಾಜದ ಸಂಘಟನಾತ್ಮಕ ಬಲ ಹೆಚ್ಚಿಸಲಾಗುವುದು ಎಂದು ಹೇಳಿದರು.

ನೂತನ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ವಾಲಿ, ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಕವಿತಾ ಜಾಲಿಹಾಳ, ತಾಲೂಕು ಘಟಕದ ಅಧ್ಯಕ್ಷ ಪ್ರಭು ಚವಡಿ ಹಾಗೂ ಪ್ರಧಾನ ಕಾರ್ಯದರ್ಶಿ ಬಸವರಾಜ ಶೀಲವಂತರ ಮಾತನಾಡಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಲಹಾ ಸಮಿತಿ ಸದಸ್ಯರಾದ ಡಾ. ಬಿ.ವಿ. ಕಂಬಳ್ಯಾಳ, ಟಿ.ಎಸ್. ರಾಜೂರ, ಬಿ.ಎಂ. ಸಜ್ಜನರ, ಗುರುಸಿದ್ದಯ್ಯ ಸೂಗಿರಯ್ಯನಮಠ, ಯುವ ಘಟಕದ ನಿರ್ದೇಶಕ ಸಿದ್ದು ಗೊಂಗಡಶೆಟ್ಟಿಮಠ ಸೇರಿದಂತೆ ಸಮಾಜದ ಅನೇಕ ಮುಖಂಡರು, ಮಹಿಳೆಯರು ಹಾಗೂ ಯುವಕರು ಉಪಸ್ಥಿತರಿದ್ದರು.

ಸಭೆಯಲ್ಲಿ ನೂತನ ಅಧ್ಯಕ್ಷ ಶಿವಕುಮಾರ ಶಶಿಮಠ ಅವರನ್ನು ಮಹಾಸಭೆಯ ವತಿಯಿಂದ ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳೇ ಶಾಲೆಯ ನಿಜವಾದ ಜೀವಾಳ..!

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಶಾಲೆ ಯಾವುದೇ ಇರಲಿ, ಅಲ್ಲಿ ವಿದ್ಯಾರ್ಥಿಗಳೇ ಜೀವಾಳ. ಅವರ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವುದೇ ಶಿಕ್ಷಕರ ಪ್ರಮುಖ ಕರ್ತವ್ಯ ಎಂದು ವರ್ಗಾವಣೆಗೊಂಡ ಮುಖ್ಯ ಶಿಕ್ಷಕ ಬಿ.ಆರ್. ಗದಗಿನ ಹೇಳಿದರು.

ಸಮೀಪದ ಜಕ್ಕಲಿ ಗ್ರಾಮದ ಎಸ್‌ಎಜೆಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ತಮ್ಮ ವರ್ಗಾವಣೆ ನಿಮಿತ್ತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಸನ್ಮಾನ ಮತ್ತು ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಳೆದ ಒಂಬತ್ತು ವರ್ಷಗಳಿಂದ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದು, ಶಾಲೆಯ ಶಿಸ್ತು, ಶೈಕ್ಷಣಿಕ ಪ್ರಗತಿ ಹಾಗೂ ಭೌತಿಕ ಅಭಿವೃದ್ಧಿಗೆ ಶಿಕ್ಷಕರು, ಸಿಬ್ಬಂದಿ ಹಾಗೂ ಗ್ರಾಮಸ್ಥರ ಸಹಕಾರದಿಂದ ಹಲವಾರು ಕೆಲಸಗಳನ್ನು ಕೈಗೊಳ್ಳಲು ಸಾಧ್ಯವಾಯಿತು. ಶಾಲೆಗೆ ಸಣ್ಣ ಮಕ್ಕಳಾಗಿ ಬಂದ ವಿದ್ಯಾರ್ಥಿಗಳು ಇಂದು ಉತ್ತಮ ಸಾಧನೆ ಮಾಡಿ ಜೀವನದಲ್ಲಿ ಮುನ್ನಡೆಯುತ್ತಿರುವುದನ್ನು ನೋಡುವುದೇ ನನ್ನ ಪಾಲಿನ ದೊಡ್ಡ ಸಂತೋಷ ಮತ್ತು ಸೌಭಾಗ್ಯ ಎಂದು ಭಾವುಕರಾದರು.

ಹಿಂದಿ ಶಿಕ್ಷಕಿ ಗೌರಮ್ಮ ಮಾತನಾಡಿ, ಗದಗಿನ ಸರ್ ಅವರು ಶಿಕ್ಷಕರಿಗೆ ತಂದೆಯಂತೆ, ಅಣ್ಣನಂತೆ ಮಾರ್ಗದರ್ಶನ ನೀಡುತ್ತಿದ್ದರು. ಸಿಬ್ಬಂದಿಗೆ ಸದಾ ಪ್ರೋತ್ಸಾಹ ನೀಡಿ ಉತ್ತಮ ಕಾರ್ಯ ವಾತಾವರಣ ನಿರ್ಮಿಸಿದ್ದರು. ಅವರ ಸೇವೆ ಮತ್ತು ಮಾರ್ಗದರ್ಶನವನ್ನು ಮರೆಯಲು ಸಾಧ್ಯವಿಲ್ಲ ಎಂದರು.

ಪತ್ರಕರ್ತ ಸಂಗಮೇಶ ಮೆಣಸಿಗಿ ಮಾತನಾಡಿ, ಒಂದು ಶಾಲೆಯ ಬೆಳವಣಿಗೆಯಲ್ಲಿ ಮುಖ್ಯ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಜಕ್ಕಲಿ ಶಾಲೆಯ ಅಭಿವೃದ್ಧಿಗೆ ಗದಗಿನ ಸರ್ ಅವರ ಕೊಡುಗೆ ಅಪಾರವಾಗಿದ್ದು, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಅವರ ಸೇವೆ ಅನುಪಮವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ಶಾರದಮ್ಮ ಮಾತನಾಡಿ, “ಮಾತಿಗಿಂತ ಕೃತಿ ಮುಖ್ಯ” ಎಂಬುದನ್ನು ಗದಗಿನ ಅವರು ತಮ್ಮ ಕಾರ್ಯವೈಖರಿ ಮತ್ತು ಸೇವಾ ಮನೋಭಾವದ ಮೂಲಕ ಸಾಬೀತುಪಡಿಸಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆದು ಶಾಲೆಯ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ನೆಹರೂ ಮನೋಳಿ, ಆರ್.ಡಿ. ಬಡಿಗೇರ, ದೈಹಿಕ ಶಿಕ್ಷಣ ಶಿಕ್ಷಕಿ ವಿ.ಎಸ್. ಗುಗ್ಗರಿ, ಅತಿಥಿ ಶಿಕ್ಷಕಿಯರಾದ ದೀಪಾ ತುಕ್ಕೋಜಿ, ಪ್ರಿಯಾಂಕಾ ಕಲಹಾಳ, ವಿದ್ಯಾರ್ಥಿಗಳು ಹಾಗೂ ಅಡುಗೆ ಸಿಬ್ಬಂದಿ ಉಪಸ್ಥಿತರಿದ್ದರು.

ಶಿಕ್ಷಕ ವಿ.ವಿ. ಅಣ್ಣಿಗೇರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಯು.ಎಸ್. ಕಣವಿ ವಂದಿಸಿದರು.

“ಈ ಶಾಲೆಯಲ್ಲಿ ಕಳೆದ ಒಂಬತ್ತು ವರ್ಷಗಳ ಸೇವೆ ನನ್ನ ಬದುಕಿನ ಅಮೂಲ್ಯ ಅಧ್ಯಾಯ. ವಿದ್ಯಾರ್ಥಿಗಳ ಪ್ರೀತಿ, ಶಿಕ್ಷಕರ ಸಹಕಾರ ಮತ್ತು ಗ್ರಾಮಸ್ಥರ ವಿಶ್ವಾಸವನ್ನು ಎಂದಿಗೂ ಮರೆಯುವುದಿಲ್ಲ.”

– ಬಿ.ಆರ್. ಗದಗಿನ, ವರ್ಗಾವಣೆಗೊಂಡ ಮುಖ್ಯ ಶಿಕ್ಷಕರು

ಆಸ್ತಿ ವಿಚಾರಕ್ಕೆ ಮಗನ ಜೊತೆ ಸೇರಿ ಹೆತ್ತ ತಾಯಿಯನ್ನೇ ಕೊಂದ ಮಗಳು!

0

ಬೆಂಗಳೂರು: ಆಸ್ತಿ ವಿಚಾರವಾಗಿ ಉಂಟಾದ ಜಗಳದ ವೇಳೆ ಮಗಳು ತನ್ನ ಮಗನೊಂದಿಗೆ ಸೇರಿ ಹೆತ್ತ ತಾಯಿಯನ್ನೇ ಹತ್ಯೆ ಮಾಡಿರುವ ಬೆಚ್ಚಿಬೀಳಿಸುವ ಘಟನೆ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಸುಭಾಷ್ ನಗರದಲ್ಲಿ ನಡೆದಿದೆ.

75 ವರ್ಷದ ಜಯಮ್ಮ ಹತ್ಯೆಯಾದ ವೃದ್ಧೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮಗಳು ಭಾಗ್ಯಲಕ್ಷ್ಮಿ ಹಾಗೂ ಮೊಮ್ಮಗ ಕುಶಾಲ್ ಅವರನ್ನು ಕೆಂಗೇರಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಕುಟುಂಬದ ಸದಸ್ಯರು ಮದ್ಯದ ಚಟಕ್ಕೆ ಒಳಗಾಗಿದ್ದು, ಆಸ್ತಿ ಮಾರಾಟದ ಹಣದ ವಿಚಾರವಾಗಿ ಹಲವು ದಿನಗಳಿಂದ ಕುಟುಂಬದಲ್ಲಿ ಕಲಹ ನಡೆಯುತ್ತಿತ್ತು.

ಭಾನುವಾರ ರಾತ್ರಿ ಆಸ್ತಿ ಮಾರಾಟದ ಹಣದ ವಿಚಾರವಾಗಿ ಜಯಮ್ಮ ಮತ್ತು ಭಾಗ್ಯಲಕ್ಷ್ಮಿ ನಡುವೆ ವಾಗ್ವಾದ ನಡೆದಿದೆ. ಜಗಳ ತೀವ್ರಗೊಂಡಾಗ ಭಾಗ್ಯಲಕ್ಷ್ಮಿ ಅವರ ಮಗ ಕುಶಾಲ್ ಕೂಡ ಮಧ್ಯಪ್ರವೇಶಿಸಿದ್ದಾನೆ. ಈ ವೇಳೆ ಮನೆಯಲ್ಲಿದ್ದ ಮುದ್ದೆ ಮಾಡುವ ಮರದ ಕೋಲಿನಿಂದ ಜಯಮ್ಮ ಅವರ ತಲೆಗೆ ಬಲವಾಗಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ನಡೆದ ಬಳಿಕ ತಾಯಿ-ಮಗ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ. ಆದರೆ ಸ್ವಲ್ಪ ಸಮಯದ ನಂತರ ಕುಶಾಲ್ ತನ್ನ ಸ್ನೇಹಿತನಿಗೆ ಕರೆ ಮಾಡಿ, ಅಜ್ಜಿ ಮೃತಪಟ್ಟಿದ್ದಾರೆ, ಎಣ್ಣೆ (ಮದ್ಯ) ತೆಗೆದುಕೊಂಡು ಬಾ ಎಂದು ಹೇಳಿದ್ದಾನೆ ಎನ್ನಲಾಗಿದೆ.

ಸ್ನೇಹಿತ ಮನೆಗೆ ಬಂದಾಗ, ಕುಶಾಲ್ ಮೃತದೇಹ ಮನೆಯಲ್ಲೇ ಇದ್ದರೂ ಮದ್ಯ ಸೇವಿಸಿ ಪಾರ್ಟಿ ಮಾಡುವಂತೆ ವರ್ತಿಸಿದ್ದಾನೆ. ಇದರಿಂದ ಅನುಮಾನಗೊಂಡ ಸ್ನೇಹಿತ ಜಯಮ್ಮ ಅವರ ಮೃತದೇಹವನ್ನು ಕಂಡು ಬೆಚ್ಚಿಬಿದ್ದು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಕೆಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ. ಆರೋಪಿಗಳಾದ ಭಾಗ್ಯಲಕ್ಷ್ಮಿ ಹಾಗೂ ಕುಶಾಲ್ ಅವರನ್ನು ಬಂಧಿಸಿರುವ ಪೊಲೀಸರು, ಕೊಲೆಗೆ ನಿಖರ ಕಾರಣ ಮತ್ತು ಇತರೆ ಹಿನ್ನೆಲೆ ಕುರಿತು ತನಿಖೆ ಮುಂದುವರಿಸಿದ್ದಾರೆ.

42 ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಮಹತ್ವಾಕಾಂಕ್ಷಿ ಯೋಜನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯ ಸುಮಾರು 42 ಹಿಂದುಳಿದ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ಉದ್ದೇಶದಿಂದ ಸ್ಥಾಪನೆಯಾಗಿರುವ ಗದಗ ಜಿಲ್ಲಾ ಹಿಂದುಳಿದ ಸಮುದಾಯಗಳ ಮಹಾಮಂಡಳ ಇದೀಗ ಮಹತ್ವದ ಹೆಜ್ಜೆ ಇಟ್ಟಿದೆ. ಸಮಾಜದ ಯುವಜನರನ್ನು ಮುಖ್ಯವಾಹಿನಿಗೆ ತಂದು ಸ್ವಾವಲಂಬಿಗಳನ್ನಾಗಿಸುವ ಗುರಿಯೊಂದಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ, ವಸತಿ ಸೌಲಭ್ಯ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

ಜಿಲ್ಲೆಯ ಕುರುಬ, ಕುರುಹಿನಶೆಟ್ಟಿ, ಗಾಣಿಗ, ದೇವಾಂಗ, ಸ್ವಕುಳಸಾಳಿ, ಪದ್ಮಶಾಲಿ, ವಿಶ್ವಕರ್ಮ, ಗೊಲ್ಲ, ಸಾದರು, ಹಡಪದ, ಶಿಂಪಿಗ, ಕುಂಬಾರ, ಮಡಿವಾಳ, ಗೌಳಿ, ಎಸ್‌ಎಸ್‌ಕೆ, ಅಂಬಿಗ, ತೊಗಟಿವೀರ, ಪಟ್ಟಿಸಾಲಿ, ಕಲಾಲ, ರಜಪೂತ, ದೈವಜ್ಞ, ಕಾಟಿಕ ಉಪ್ಪಾರ ಸೇರಿದಂತೆ 42 ಹಿಂದುಳಿದ ಸಮುದಾಯಗಳ ಮುಖಂಡರು 2023ರಿಂದ ನಿರಂತರ ಸಭೆಗಳನ್ನು ನಡೆಸಿ ಸಂಘಟನೆಯೊಂದನ್ನು ರೂಪಿಸಲು ಮುಂದಾಗಿದ್ದರು.

ಈ ಮಹತ್ವಾಕಾಂಕ್ಷಿ ಕಾರ್ಯಕ್ಕೆ ಮಹಾಮಂಡಳದ ಉಪಾಧ್ಯಕ್ಷರು ಹಾಗೂ ಗಾಣಿಗ ಸಮಾಜದ ಅಧ್ಯಕ್ಷರಾದ ಬಸವರಾಜ ಬಿಂಗಿ ಅವರು ತಮ್ಮ ಸ್ವಂತ 20 ಗುಂಟೆ ಜಮೀನನ್ನು ದಾನವಾಗಿ ನೀಡಿರುವುದು ಸಂಘಟನೆಯ ಅಭಿವೃದ್ಧಿಗೆ ಬಲ ತುಂಬಿದೆ. ದಾನವಾಗಿ ನೀಡಲಾದ ಜಮೀನನ್ನು ವಾಣಿಜ್ಯ ಉದ್ದೇಶಕ್ಕೆ ಬಿನ್‌ಶೆತ್ತಿ ಮಾಡಿಸಲಾಗಿದ್ದು, ನಗರಾಭಿವೃದ್ಧಿ ಪ್ರಾಧಿಕಾರದಿಂದ ಏಕ ನಿವೇಶನ ವಿನ್ಯಾಸಕ್ಕೂ ಅನುಮೋದನೆ ದೊರೆತಿದೆ.

ಸದರ ಜಾಗೆಯಲ್ಲಿ ಹಿಂದುಳಿದ ಸಮುದಾಯಗಳ ಯುವಕ-ಯುವತಿಯರಿಗೆ ವೃತ್ತಿ ಕೌಶಲ್ಯಾಭಿವೃದ್ಧಿ ತರಬೇತಿ, ವಸತಿ ಸಹಿತ ತರಬೇತಿ ವ್ಯವಸ್ಥೆ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಈಗಾಗಲೇ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಲಾಗುತ್ತಿದೆ. ವಿವಿಧ ಸಮಾಜಗಳು ಹಾಗೂ ದಾನಿಗಳ ಸಹಕಾರದಿಂದ ನಿಧಿ ಸಂಗ್ರಹಿಸಿ ಶೀಘ್ರದಲ್ಲೇ ಭೂಮಿಪೂಜೆ ಹಾಗೂ ಬೃಹತ್ ಸಮುದಾಯ ಸಮಾವೇಶ ಆಯೋಜಿಸಲು ಮಹಾಮಂಡಳ ನಿರ್ಧರಿಸಿದೆ.

ಈ ಯೋಜನೆಗಳಿಗೆ ಚಾಲನೆ ನೀಡುವ ನಿಟ್ಟಿನಲ್ಲಿ ಭಾನುವಾರ ನಾಮಫಲಕ ಅನಾವರಣ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಮಹಾಮಂಡಳದ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ ಮಾತನಾಡಿ, ಸಂಘಟನೆಯ ಸ್ಥಾಪನೆ, ಉದ್ದೇಶಗಳು ಹಾಗೂ ಭವಿಷ್ಯದ ಯೋಜನೆಗಳ ಕುರಿತು ವಿವರಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ರಾಜೇಂದ್ರ ಕಡ್ಲಿಕೊಪ್ಪ, ಬಸವರಾಜ ಬಿಂಗಿ, ಬಿ.ಜಿ. ಕೊಳ್ಳಿ, ಕಾರ್ಯದರ್ಶಿ ರುದ್ರಣ್ಣ ಗುಳಗುಳಿ, ಹರೀಶ ಪೂಜಾರ, ಸುರೇಶ ಕುಂಬಾರ, ಅರವಿಂದ ಹುಲ್ಲೂರ, ಅನಿಲ ಗಡ್ಡಿ, ಶ್ರೀಕಾಂತ ಖಟವಟೆ, ಕೃಷ್ಣಾ ಹಡಪದ, ಕೋಶಾಧ್ಯಕ್ಷ ಪ್ರಕಾಶ ಬೊಮ್ಮನಹಳ್ಳಿ, ರಾಮಕೃಷ್ಣ ಪಾಂಡ್ರೆ ಸೇರಿದಂತೆ ವಿವಿಧ ಸಮುದಾಯಗಳ ಪ್ರಮುಖರು ಉಪಸ್ಥಿತರಿದ್ದರು.

“ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಹೊಸ ಅಧ್ಯಾಯ”

ಗದಗ ಜಿಲ್ಲಾ ಹಿಂದುಳಿದ ಸಮುದಾಯಗಳ ಮಹಾಮಂಡಳದ ಈ ಯೋಜನೆಗಳು ಯಶಸ್ವಿಯಾದರೆ, ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಹೊಸ ವೇದಿಕೆ ನಿರ್ಮಾಣವಾಗಲಿದ್ದು, ವಿವಿಧ ಸಮುದಾಯಗಳನ್ನು ಒಂದೇ ಸೂರಿನಡಿ ತರುವ ಮಹತ್ವದ ಪ್ರಯತ್ನವಾಗಿ ಗುರುತಿಸಿಕೊಳ್ಳಲಿದೆ.

ಮಳೆಗಾಗಿ ಎಪಿಎಂಸಿಯಲ್ಲಿ ವಿಶೇಷ ಪ್ರಾರ್ಥನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗಳು ಚೇತರಿಸಿಕೊಳ್ಳಲಿ ಎಂಬ ಆಶಯದೊಂದಿಗೆ ಗದಗ ಎಪಿಎಂಸಿ ವ್ಯಾಪಾರ ವಲಯದ ವತಿಯಿಂದ ಸೋಮವಾರ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು.

ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ರೈತರ ಉತ್ಪನ್ನಗಳು ಮಾರುಕಟ್ಟೆಗೆ ಆಗಮಿಸದ ಕಾರಣ ಗದಗ ಎಪಿಎಂಸಿಯ ವಹಿವಾಟು ಸೇರಿದಂತೆ ವ್ಯಾಪಾರ ಚಟುವಟಿಕೆಗಳ ಮೇಲೂ ಪರಿಣಾಮ ಬಿದ್ದಿದೆ. ಇದರ ಪರಿಣಾಮವಾಗಿ ದಲಾಲರು, ವ್ಯಾಪಾರಸ್ಥರು, ಕಾರಕೂನರು, ಚಕ್ಕಡಿಯವರು, ಹಮಾಲರು ಹಾಗೂ ಕೃಷಿ ಆಧಾರಿತ ಕಾರ್ಮಿಕ ವರ್ಗದ ಜೀವನೋಪಾಯಕ್ಕೂ ಸಂಕಷ್ಟ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ಗದಗ ಎಪಿಎಂಸಿಯ ಬಸವಣ್ಣ ದೇವಸ್ಥಾನ, ವೀರೇಶ್ವರ ಪುಣ್ಯಾಶ್ರಮ, ಬನ್ನಿಮಹಾಂಕಾಳಿ ದೇವಸ್ಥಾನ, ಮಾರುತಿ ದೇವಸ್ಥಾನ ಹಾಗೂ ಕಾಶೀ ವಿಶ್ವನಾಥ ನಗರದ ದುರ್ಗಾದೇವಿ-ಕಾಶೀ ವಿಶ್ವನಾಥ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ವರುಣ ದೇವರಲ್ಲಿ ಮಳೆಗಾಗಿ ಪ್ರಾರ್ಥಿಸಲಾಯಿತು.

ಪೂಜಾ ಕಾರ್ಯಕ್ರಮದ ಅಂಗವಾಗಿ ಜೋಡೆತ್ತಿನ ಚಕ್ಕಡಿಯೊಂದಿಗೆ ಡೊಳ್ಳು-ಮೇಳದ ಭವ್ಯ ಮೆರವಣಿಗೆ ನಡೆಸಲಾಯಿತು. ಬಳಿಕ ದೇವಾಲಯಗಳಲ್ಲಿ ವಿಶೇಷ ಸಂಕಲ್ಪ ಮಾಡಿ, ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಲಿ, ಕೃಷಿ ಕ್ಷೇತ್ರಕ್ಕೆ ಹೊಸ ಚೈತನ್ಯ ದೊರೆಯಲಿ ಹಾಗೂ ಗ್ರಾಮೀಣ ಆರ್ಥಿಕ ವ್ಯವಸ್ಥೆ ಪುನಶ್ಚೇತನಗೊಳ್ಳಲಿ ಎಂದು ಪ್ರಾರ್ಥಿಸಲಾಯಿತು.

ಕಾರ್ಯಕ್ರಮದಲ್ಲಿ ಎಪಿಎಂಸಿ ದಲಾಲರು, ಖರೀದಾರರು, ವ್ಯಾಪಾರಸ್ಥರು, ಕಾರಕೂನರು, ಚಕ್ಕಡಿಯವರು, ಹಮಾಲರು, ತಳಗಾಳು ಸಂಘದ ಸದಸ್ಯರು, ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಪೂಜೆಯ ಬಳಿಕ ಹಮಾಲರು ಹಾಗೂ ಚಕ್ಕಡಿಯವರ ಸಂಘದ ಕಾರ್ಯಾಲಯದ ಎದುರು ಭಕ್ತರಿಗೆ ಸಂಗಟಿ-ಸಾರು ದಾಸೋಹ ಏರ್ಪಡಿಸಲಾಗಿತ್ತು. ನೂರಾರು ಜನರು ದಾಸೋಹದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಮಳೆಯ ಕೊರತೆಯಿಂದ ರೈತರು ಮಾತ್ರವಲ್ಲದೆ ಕೃಷಿ ಆಧಾರಿತ ಸಂಪೂರ್ಣ ಆರ್ಥಿಕ ವ್ಯವಸ್ಥೆಯೇ ಸಂಕಷ್ಟಕ್ಕೆ ಸಿಲುಕಿದ್ದು, ಉತ್ತಮ ಮಳೆಯಾದರೆ ಮಾತ್ರ ರೈತರಿಂದ ಹಿಡಿದು ಕಾರ್ಮಿಕರವರೆಗೆ ಎಲ್ಲ ವರ್ಗದ ಜನರ ಬದುಕಿನಲ್ಲಿ ನೆಮ್ಮದಿ ಮೂಡಲಿದೆ ಎಂಬ ಆಶಯ ಕಾರ್ಯಕ್ರಮದುದ್ದಕ್ಕೂ ವ್ಯಕ್ತವಾಯಿತು.

‘ರೈತನ ನಗು ಮರಳಲಿ’

ಮಳೆಗಾಗಿ ನಡೆದ ವಿಶೇಷ ಪೂಜೆಯಲ್ಲಿ ಭಾಗವಹಿಸಿದವರು, ಉತ್ತಮ ಮಳೆಯಾಗಿ ಕೃಷಿ ಉತ್ಪಾದನೆ ಹೆಚ್ಚಳವಾಗಲಿ, ರೈತರ ಬದುಕು ಸಮೃದ್ಧಿಯಾಗಲಿ ಹಾಗೂ ಎಪಿಎಂಸಿ ಸೇರಿದಂತೆ ಗ್ರಾಮೀಣ ಆರ್ಥಿಕ ಚಟುವಟಿಕೆಗಳು ಮತ್ತೆ ಚೇತರಿಸಿಕೊಳ್ಳಲಿ ಎಂದು ವರುಣ ದೇವರಲ್ಲಿ ಪ್ರಾರ್ಥಿಸಲಾಯಿತು.

error: Content is protected !!