Home Blog

“ಲವ್ ಮಾಕ್ಟೇಲ್ 3”ಗೆ 25 ದಿನ ಪೂರೈಸಿದ ಸಂಭ್ರಮ!

ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿ, ನಾಯಕನಾಗಿ ನಟಿಸಿರುವ ಲವ್ ಮಾಕ್ಟೇಲ್3 ಚಿತ್ರ ಯಶಸ್ವಿಯಾಗಿ 25 ದಿನ ಪೂರೈಸಿಕೊಂಡಿದೆ. ಬಿಡುಗಡೆಯಾದ ಮೊದಲ ದಿನದಿಂದಲೇ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದ ಈ ಚಿತ್ರ ದಿನದಿಂದ ದಿನಕ್ಕೆ ಉತ್ತಮ ಪ್ರದರ್ಶನ ಕಂಡಿತ್ತು.

ಇದೀಗ ಇಪ್ಪತೈದು ದಿನಗಳನ್ನು ಯಶಸ್ವಿಯಾಗಿ ದಾಟಿಕೊಳ್ಳುವ ಮೂಲಕ ೨೦೨೬ರ ಮೊದಲ ಸೂಪರ್ ಹಿಟ್ ಚಿತ್ರವಾಗಿ ದಾಖಲಾಗಿದೆ. ಟಾಕ್ಸಿಕ್ ಚಿತ್ರ ಮುಂದಕ್ಕೆ ಹೋಗುತ್ತಲೇ ಮಾರ್ಚ್ 19ರಂದು ಲವ್ ಮಾಕ್ಟೇಲ್3 ಚಿತ್ರ ಬಿಡುಗಡೆಗೊಂಡಿತ್ತು. ಕೆವಿಎನ್ ಸಂಸ್ಥೆ ವಿತರಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು.

ಎಲ್ಲ ದಿಕ್ಕಿನಿಂದಲೂ ಸಕಾರಾತ್ಮಕ ವಾತಾವರಣದಲ್ಲಿ ಬಿಡುಗಡೆಗೊಂಡಿದ್ದ ಲವ್ ಮಾಕ್ಟೇಲ್3 ಅದೇ ಆವೇಗದೊಂದಿಗೆ ಇಪ್ಪತೈದರ ನಿರ್ಣಾಯಕ ಘಟ್ಟವನ್ನು ದಾಟಿಕೊಂಡಿದೆ. ಇಂಥಾ ಗೆಲುವಿಗೆ ಕಾರಣರಾದ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸುತ್ತಲೇ, ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೇಲ್ ಸರಣಿಯ ಹ್ಯಾಟ್ರಿಕ್ ಗೆಲುವನ್ನು ಸಂಭ್ರಮಿಸಿದ್ದಾರೆ.

ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರಚೆಲ್ ಡೇವಿಡ್, ನಯೇರಾ, ಜಗದೀಶ್, ಅಭಿಲಾಶ್, ಗಿರಿರಾಜ್, ದಳಪತಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ, ನಕುಲ್ ಅಭಯಂಕರ್ ಸಂಗೀತ, ಅಮರ್ ಮತ್ತು ಜೋನಾ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

BRT ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಕಿ: ಅಪಾರ ಪ್ರಮಾಣದ ಕಾಡು ಭಸ್ಮ!

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಅರಣ್ಯ ನಾಶವಾಗಿರುವ ಘಟನೆ ವರದಿಯಾಗಿದೆ.

ಲೊಕ್ಕನಹಳ್ಳಿ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ ವೇಗವಾಗಿ ವ್ಯಾಪಿಸಿದ್ದು, ಅರಣ್ಯಾಧಿಕಾರಿಗಳು, ಸಿಬ್ಬಂದಿ ಹಾಗೂ ಬೆಂಕಿ ವಾಚರ್‌ಗಳು ಸ್ಥಳಕ್ಕೆ ದೌಡಾಯಿಸಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಬೆಂಕಿಯಿಂದ ಎಷ್ಟು ಎಕರೆ ಅರಣ್ಯ ಹಾನಿಯಾಗಿದೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

ಕಳೆದ ಕೆಲವು ದಿನಗಳಿಂದಲೂ ಈ ಭಾಗದಲ್ಲಿ ನಿರಂತರವಾಗಿ ಕಾಡು ಬೆಂಕಿ ಕಾಣಿಸಿಕೊಂಡಿದ್ದು, ಬೈಲೂರು ಮತ್ತು ಕೊಳ್ಳೇಗಾಲ ವಲಯಗಳಲ್ಲಿ ಹಲವು ಬಾರಿ ಬೆಂಕಿ ಅವಘಡ ಸಂಭವಿಸಿ ನೂರಾರು ಎಕರೆ ಅರಣ್ಯ ಪ್ರದೇಶ ಹಾನಿಗೊಳಗಾಗಿದೆ.

ಅರಣ್ಯದಂಚಿನ ಗ್ರಾಮಗಳು ಹಾಗೂ ಹಾಡಿಗಳಲ್ಲಿ ಜಾಗೃತಿ ಮೂಡಿಸಿದರೂ ಸಹ ಬೆಂಕಿ ಘಟನೆಗಳು ಮುಂದುವರಿಯುತ್ತಿರುವುದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಪರಿಸರ ಪ್ರಿಯರು ಹಾಗೂ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.

ಆಟವಾಡುತ್ತಿದ್ದ ವೇಳೆ ದುರಂತ: ಹಾವು ಕಚ್ಚಿದ ಮಗು ಚಿಕಿತ್ಸೆ ಫಲಿಸದೆ ಸಾವು!

ಶಿವಮೊಗ್ಗ: ಹಾವು ಕಚ್ಚಿದ ಪರಿಣಾಮ ಎರಡು ವರ್ಷದ ಮಗು ಮೃತಪಟ್ಟಿರುವ ದುರ್ಘಟನೆ ಜಿಲ್ಲೆಯ ಸಾಗರ ಪಟ್ಟಣದಲ್ಲಿ ನಡೆದಿದೆ.

ಸಾಗರದ ಎಸ್.ಎಸ್ ನಗರ ನಿವಾಸಿಗಳಾದ ಅಕ್ಷತಾ ಹಾಗೂ ಗಣೇಶ್ ದಂಪತಿ ಪುತ್ರ ಭವಿನ್ (2) ಮೃತಪಟ್ಟ ಮಗು. ಅಕ್ಷತಾ ತಮ್ಮ ಮಗುವಿನೊಂದಿಗೆ ತವರು ಮನೆಗೆ ಬಂದಿದ್ದ ವೇಳೆ ಘಟನೆ ನಡೆದಿದೆ.

ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಮಗುವಿಗೆ ಹಾವು ಕಚ್ಚಿದ್ದು, ಮಗು ಅಳುವುದನ್ನು ಗಮನಿಸಿದ ಕುಟುಂಬಸ್ಥರು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಮಗುವನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಆದರೆ ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ. ಘಟನೆಗೆ ಸಂಬಂಧಿಸಿ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ನಿಮ್ಮನ್ನು ಬಳಸಿಕೊಳ್ಳುವವರಿಂದ ಎಚ್ಚರ: ಚಾಣಕ್ಯ ನೀತಿ ಹೇಳುವುದೇನು?

0

ಪ್ರಾಚೀನ ಭಾರತದ ಮಹಾನ್ ತತ್ವಜ್ಞ ಆಚಾರ್ಯ ಚಾಣಕ್ಯರು ಜೀವನದಲ್ಲಿ ಯಶಸ್ಸು ಸಾಧಿಸುವುದರ ಜೊತೆಗೆ ಸುತ್ತಮುತ್ತಲಿನ ಜನರನ್ನು ಸರಿಯಾಗಿ ಗುರುತಿಸುವ ಅಗತ್ಯವನ್ನೂ ಒತ್ತಿ ಹೇಳಿದ್ದಾರೆ.

ವಿಶೇಷವಾಗಿ ಸ್ವಾರ್ಥಿ ವ್ಯಕ್ತಿಗಳನ್ನು ಗುರುತಿಸುವ ಕುರಿತು ಅವರು ನೀಡಿದ ಸಲಹೆಗಳು ಇಂದಿಗೂ ಪ್ರಸ್ತುತವಾಗಿವೆ.

ಚಾಣಕ್ಯರ ಪ್ರಕಾರ, ಕೆಲವರು ತಮ್ಮ ಅಗತ್ಯವಿದ್ದಾಗ ಮಾತ್ರ ನಮ್ಮನ್ನು ಸಂಪರ್ಕಿಸುತ್ತಾರೆ. ಇಂತಹವರು ನಮ್ಮ ಕಷ್ಟದ ಸಮಯದಲ್ಲಿ ಸಹಾಯಕ್ಕೆ ಬರುವುದಿಲ್ಲ. ತಮ್ಮ ಲಾಭಕ್ಕಾಗಿ ಮಾತ್ರ ಸಂಬಂಧ ಬೆಳೆಸುವ ಈ ರೀತಿಯ ನಡವಳಿಕೆ ಸ್ವಾರ್ಥದ ಪ್ರಮುಖ ಲಕ್ಷಣವಾಗಿದೆ.

ಇನ್ನೂ ಕೆಲವರು ನಮ್ಮ ಭಾವನೆಗಳಿಗೆ ಬೆಲೆ ಕೊಡುವುದಿಲ್ಲ. ನಾವು ಸಂಕಷ್ಟದಲ್ಲಿದ್ದರೂ ಕಾಳಜಿ ತೋರಿಸದೆ, ಅವರಿಗೆ ಸಹಾಯ ಬೇಕಾದಾಗ ಮಾತ್ರ ಸ್ನೇಹಪರವಾಗಿ ವರ್ತಿಸುತ್ತಾರೆ. ಈ ರೀತಿಯ ದ್ವಂದ್ವ ನಡವಳಿಕೆ ಇರುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಚಾಣಕ್ಯರು ಸೂಚಿಸಿದ್ದಾರೆ.

ಕಷ್ಟದ ಸಂದರ್ಭದಲ್ಲಿ ಕೈಹಿಡಿಯದವರು ನಿಜವಾದ ಸ್ನೇಹಿತರಲ್ಲ ಎಂದು ಅವರು ಹೇಳಿದ್ದಾರೆ. ನಿಜವಾದ ಸ್ನೇಹಿತ ಯಾವಾಗಲೂ ನಮ್ಮೊಂದಿಗೆ ನಿಂತುಕೊಳ್ಳುತ್ತಾನೆ, ಆದರೆ ಸ್ವಾರ್ಥಿ ವ್ಯಕ್ತಿ ತನ್ನ ಪ್ರಯೋಜನ ಇದ್ದಾಗ ಮಾತ್ರ ಹತ್ತಿರ ಬರುತ್ತಾನೆ.

ಅದೇ ರೀತಿ, ನಮ್ಮ ಯಶಸ್ಸನ್ನು ಸಹಿಸದವರು, ಬೆಂಬಲ ನೀಡದವರು ಕೂಡ ಸ್ವಾರ್ಥಿ ಗುಣವನ್ನು ತೋರಿಸುತ್ತಾರೆ. ಹೊರಗೆ ಸ್ನೇಹಪರವಾಗಿ ವರ್ತಿಸಿದರೂ ಒಳಗೆ ಅಸೂಯೆ ಹೊಂದಿರುವ ಇಂತಹ ಜನರಿಂದ ದೂರವಿರುವುದೇ ಉತ್ತಮ ಎಂದು ಚಾಣಕ್ಯರು ತಿಳಿಸಿದ್ದಾರೆ.

ಒಟ್ಟಿನಲ್ಲಿ, ನಮ್ಮ ಸುತ್ತಮುತ್ತಲಿನವರ ನಡವಳಿಕೆಯನ್ನು ಗಮನಿಸಿ ಸರಿಯಾದವರನ್ನು ಆಯ್ಕೆ ಮಾಡಿಕೊಳ್ಳುವುದು ಜೀವನದಲ್ಲಿ ಶಾಂತಿ ಮತ್ತು ಯಶಸ್ಸಿಗೆ ಮುಖ್ಯ ಎಂದು ಚಾಣಕ್ಯರ ತತ್ವಗಳು ಸೂಚಿಸುತ್ತವೆ.

ಹೀಟ್‌ವೇವ್ ಅಬ್ಬರ: ಕಲಬುರಗಿ ಜನರಿಗೆ ಬಿಸಿಲಿನ ಬಿಸಿ ಕಾಟ, ಆರೆಂಜ್ ಅಲರ್ಟ್ ಘೋಷಣೆ!

ಕಲಬುರಗಿ: ಕಲ್ಯಾಣ ಕರ್ನಾಟಕದ ಕೇಂದ್ರ ಭಾಗವಾದ ಕಲಬುರಗಿ ಜಿಲ್ಲೆ ಈಗ ರಣಬಿಸಿಲಿನ ಕೇಂದ್ರವಾಗಿಯೂ ಪರಿಣಮಿಸಿದೆ. ಜಿಲ್ಲೆಯಲ್ಲಿ ಉಷ್ಣಾಂಶ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನರು ತೀವ್ರ ಬಿಸಿಲಿನ ತಾಪಕ್ಕೆ ತತ್ತರಿಸುತ್ತಿದ್ದಾರೆ.

ಇಂದು ಜಿಲ್ಲೆಯಲ್ಲಿ 44 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ನಿನ್ನೆ ಕಲಬುರಗಿ ತಾಲೂಕಿನ ಔರಾದನಲ್ಲಿ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಚಿಂಚೋಳಿ ತಾಲೂಕಿನ ಐನಾಪೂರ, ಅಫಜಲಪುರ ತಾಲೂಕಿನ ಆನೂರು ಹಾಗೂ ಆಳಂದ ತಾಲೂಕಿನ ಮಾದನಹಿಪ್ಪರಗಾದಲ್ಲೂ 44 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಜಿಲ್ಲೆಯಾದ್ಯಂತ ಬಿಸಿಲಿನ ತೀವ್ರತೆ ಹೆಚ್ಚಾಗಿದೆ.

ಬಿಸಿಲಿನ ಝಳದಿಂದ ಜನರು ಮಧ್ಯಾಹ್ನ ವೇಳೆಯಲ್ಲಿ ಹೊರಬರಲು ಭಯಪಡುವ ಸ್ಥಿತಿ ನಿರ್ಮಾಣವಾಗಿದ್ದು, ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ನಿಂಬೆಹಣ್ಣಿನ ರಸ, ಕಬ್ಬಿನ ಹಾಲು, ತೆಂಗಿನಕಾಯಿ ನೀರು ಹಾಗೂ ಕಲ್ಲಂಗಡಿ ಹಣ್ಣಿನ ಬಳಕೆ ಹೆಚ್ಚಾಗಿದೆ. ಉದ್ಯೋಗಿಗಳಿಗೆ ಅನುಕೂಲವಾಗಲು ಕೆಲ ಸರ್ಕಾರಿ ಕಚೇರಿಗಳ ಸಮಯದಲ್ಲಿಯೂ ಬದಲಾವಣೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಆರೇಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಂ ತಿಳಿಸಿದ್ದಾರೆ. ಆರೋಗ್ಯ ಇಲಾಖೆ ಕೂಡ ಎಚ್ಚರಿಕೆ ನೀಡಿದ್ದು, ಡಿಹೈಡ್ರೇಶನ್ ಸೇರಿದಂತೆ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ವಿಶೇಷವಾಗಿ ಮಕ್ಕಳು ಹಾಗೂ ವಯೋವೃದ್ಧರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದೆ.

ಮುಂದಿನ ದಿನಗಳಲ್ಲಿ ಉಷ್ಣಾಂಶ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ಮೇ ತಿಂಗಳಲ್ಲಿ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಲಬುರಗಿ ಸೇರಿದಂತೆ ಯಾದಗಿರಿ, ರಾಯಚೂರು, ಬೀದರ್ ಜಿಲ್ಲೆಗಳಲ್ಲೂ ಬಿಸಿಲಿನ ತಾಪದಿಂದ ಜನಜೀವನ ತತ್ತರಿಸಿದೆ.

ಕರ್ನಾಟಕದಲ್ಲಿ ನೀರಿನ ಬಿಕ್ಕಟ್ಟು ತೀವ್ರ: ಜನರಿಗೆ ಡಬಲ್ ಶಾಕ್!

ಬೆಂಗಳೂರು: ರಾಜ್ಯದಲ್ಲಿ ತೀವ್ರ ಬಿಸಿಲಿನ ನಡುವೆ ಕುಡಿಯುವ ನೀರಿನ ಬಿಕ್ಕಟ್ಟು ಗಂಭೀರ ಸ್ವರೂಪ ಪಡೆದಿದ್ದು, ಹಲವೆಡೆ ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರಿನ ಲಗ್ಗೆರೆ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ ಬೆಲೆ ಏರಿಕೆಯಾಗಿದ್ದು, ನಿವಾಸಿಗಳು ದೂರದ ಪ್ರದೇಶಗಳಿಂದ ನೀರು ತರುವಂತಾಗಿದೆ. ಅಲ್ಲದೆ, ಮೂರು ದಿನಕ್ಕೊಮ್ಮೆ ಕೇವಲ ಒಂದು ಅಥವಾ ಎರಡು ಗಂಟೆಗಳ ಕಾಲ ಮಾತ್ರ ನೀರು ಪೂರೈಕೆ ಆಗುತ್ತಿರುವುದರಿಂದ ಜನಜೀವನಕ್ಕೆ ತೊಂದರೆ ಉಂಟಾಗಿದೆ.

ನೆಲಮಂಗಲದಲ್ಲಿ ನೀರಿನ ಅಸಮರ್ಪಕ ವಿತರಣೆಗೆ ವಿರೋಧವಾಗಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದು, ಜಕ್ಕಸಂದ್ರ ವಾರ್ಡ್‌ನಲ್ಲಿ ಹಣ ಕೊಟ್ಟವರಿಗೆ ಮಾತ್ರ ನೀರು ನೀಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ.

ಇನ್ನೊಂದೆಡೆ, ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ಜನರು ಚರಂಡಿ ಪೈಪ್‌ಗಳಿಂದಲೇ ನೀರು ಸಂಗ್ರಹಿಸುವ ದುಸ್ಥಿತಿ ಎದುರಿಸುತ್ತಿದ್ದಾರೆ. ಉಡುಪಿ ಭಾಗದಲ್ಲಿ ಜೀವನಾಡಿಯಾಗಿದ್ದ ಸ್ವರ್ಣ ನದಿಯ ನೀರಿನ ಮಟ್ಟವೂ ಕಳೆದ ವರ್ಷಕ್ಕಿಂತ ಒಂದು ಮೀಟರ್‌ಷ್ಟು ಕುಸಿದಿದ್ದು, ನೀರಿನ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಭೀತಿ ಇದೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಡಿಸಿಗಳ ಸಭೆಯಲ್ಲಿ ಅಣೆಕಟ್ಟುಗಳಲ್ಲಿನ ನೀರಿನ ಸಂಗ್ರಹದ ಕುರಿತು ಸಮೀಕ್ಷೆ ನಡೆಸಲಾಗಿದೆ. ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ರಾಜ್ಯದ ಐದು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಭಾಗಗಳಲ್ಲಿ ಮುಂಗಾರು ಕೊರತೆ ಉಂಟಾಗುವ ಸಾಧ್ಯತೆ ಇದ್ದು, 213 ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಅಂದಾಜಿಸಲಾಗಿದೆ. ನೀರಿನ ಸಮಸ್ಯೆ ತೀವ್ರವಾದರೆ ಸಂಬಂಧಿತ ಜಿಲ್ಲಾಧಿಕಾರಿಗಳೇ ನೇರ ಹೊಣೆ ಹೊರುವಂತೆ ಮುಖ್ಯಮಂತ್ರಿ ಎಚ್ಚರಿಕೆ ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಬಿರುಗಾಳಿ ಅಬ್ಬರ: ಮರಗಳು ಧರೆಗುರುಳಿ ಜನಜೀವನ ಅಸ್ತವ್ಯಸ್ತ

ಚಿಕ್ಕಮಗಳೂರು: ರಾಜ್ಯದಲ್ಲಿ ಬೇಸಿಗೆ ಬಿಸಿಯ ನಡುವೆ ಹಲವು ಕಡೆಗಳಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನಾದ್ಯಂತ ನಿನ್ನೆ ಸುರಿದ ಗಾಳಿ–ಮಳೆಗೆ ಹಲವೆಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ. ಬಣಕಲ್ ಸಮೀಪದ ಬಿ.ಹೊಸಹಳ್ಳಿ ಗ್ರಾಮದಲ್ಲಿ ಬಿರುಗಾಳಿಯ ಹೊಡೆತಕ್ಕೆ ಬೃಹತ್ ತೆಂಗಿನಮರವೊಂದು ಅಂಗನವಾಡಿ ಶಿಕ್ಷಕಿ ಗೌರಮ್ಮ ಅವರ ಮನೆಯ ಮೇಲೆ ಉರುಳಿಬಿದ್ದಿದೆ. ಘಟನೆಯ ರಭಸಕ್ಕೆ ಮನೆಯ ಮೇಲ್ಚಾವಣಿಯ ಹೆಂಚುಗಳು ಸಂಪೂರ್ಣವಾಗಿ ಹಾನಿಗೊಂಡಿದ್ದು, ಕಟ್ಟಡಕ್ಕೂ ಹಾನಿ ಉಂಟಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಕುಟುಂಬಸ್ಥರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಇದೇ ವೇಳೆ ಬಣಕಲ್ ಮತ್ತು ಮತ್ತಿಕಟ್ಟಿ ಗ್ರಾಮಗಳ ನಡುವಿನ ರಸ್ತೆಯಲ್ಲಿ ವಿದ್ಯುತ್ ಕಂಬ ಅಡ್ಡಬಿದ್ದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಸ್ಥಳೀಯರು ಪರದಾಡುವಂತಾಗಿದೆ. ಹಲವೆಡೆ ತೋಟಗಳ ಬೆಳೆಗಳಿಗೆ ಹಾನಿಯಾಗುವ ಆತಂಕವೂ ವ್ಯಕ್ತವಾಗಿದೆ.

ಇನ್ನು ಚಿತ್ರದುರ್ಗದ ಕೆಲವು ಭಾಗಗಳಲ್ಲಿಯೂ ಮಳೆಯ ಅಬ್ಬರದಿಂದ ಹಾನಿ ಸಂಭವಿಸಿರುವ ವರದಿಗಳು ಬಂದಿದ್ದು, ಅಧಿಕಾರಿಗಳು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ.

ಬಂಜರು ಭೂಮಿಯಲ್ಲಿ ಚಿನ್ನದ ಹಣ್ಣು: ಇಂಡಿಯಲ್ಲಿ ದಾಖಲೆ ಬೆಲೆಗೆ ಮಾವು ಮಾರಾಟ!

ವಿಜಯಪುರ: ಜಿಲ್ಲೆಯಲ್ಲೇ ಅಚ್ಚರಿ ಮೂಡಿಸುವ ಘಟನೆ ನಡೆದಿದೆ. ಸಾಮಾನ್ಯವಾಗಿ 500 ರೂ.ಯಿಂದ 2000 ರೂ.ವರೆಗೆ ಮಾರಾಟವಾಗುವ ಮಾವಿನ ಹಣ್ಣು, ಇಲ್ಲಿನ ಇಂಡಿ ಪಟ್ಟಣದಲ್ಲಿ ಬರೋಬ್ಬರಿ ₹1 ಲಕ್ಷಕ್ಕೆ ಮಾರಾಟವಾಗಿದೆ.

ಅನಂತ ಹಾಗೂ ರಾಜಶ್ರೀ ದಂಪತಿಗಳ ತೋಟದಲ್ಲಿ ಬೆಳೆದ ಅಪರೂಪದ ಮಿಯಾಝಕಿ ತಳಿಯ ಮಾವು ಈ ದಾಖಲೆಯ ಬೆಲೆಗೆ ಮಾರಾಟವಾಗಿದೆ. ಬಂಜರು ಭೂಮಿಯಲ್ಲೇ ಬೆಳೆದು ಫಲ ನೀಡಿರುವ ಈ ಮಾವಿನ ಗಿಡಗಳು ಈಗ ಹಣ್ಣುಗಳೊಂದಿಗೆ ಎಲ್ಲರ ಗಮನ ಸೆಳೆದಿವೆ.

ಸುಮಾರು 20 ವರ್ಷಗಳ ಹಿಂದೆ ಆಂಧ್ರಪ್ರದೇಶದ ರಾಜಮಂಡ್ರಿಯಿಂದ ತಲಾ ₹10 ಸಾವಿರಕ್ಕೆ 25 ಮಿಯಾಝಕಿ ಸಸಿಗಳನ್ನು ತಂದು ನೆಟ್ಟಿದ್ದ ದಂಪತಿ, ಇದೀಗ ಪ್ರತಿಯೊಂದು ಗಿಡದಿಂದ 25 ರಿಂದ 30 ಹಣ್ಣುಗಳನ್ನು ಪಡೆಯುತ್ತಿದ್ದಾರೆ.

ಈ ಅಪರೂಪದ ಮಾವಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಕೋಲ್ಕತ್ತಾ ಮತ್ತು ಮುಂಬೈನಿಂದ ದಲ್ಲಾಳಿಗಳು ಸಂಪರ್ಕಿಸಿದ್ದು, ಭಾರಿ ಬೇಡಿಕೆ ವ್ಯಕ್ತವಾಗಿದೆ. ವಿದೇಶಗಳಲ್ಲಿ ಈ ಮಾವಿಗೆ ಕೆಜಿಗೆ ₹2 ರಿಂದ ₹2.5 ಲಕ್ಷದವರೆಗೆ ಬೆಲೆ ಇರುವುದಾಗಿ ತಿಳಿದುಬಂದಿದೆ.

ಮೊದಲ ವರ್ಷದಲ್ಲಿ ದಂಪತಿ ಮನೆಯವರೇ ಹಣ್ಣು ಸವಿದಿದ್ದರು. ಆದರೆ ಈ ಬಾರಿ ಬೆಳೆ ಬಂದ ನಂತರ ಸಾಮಾಜಿಕ ಮಾಧ್ಯಮದ ಮೂಲಕ ಜನರಿಗೆ ಪರಿಚಯವಾದ ಪರಿಣಾಮ, ಹಣ್ಣುಗಳಿಗೆ ಭಾರಿ ಬೇಡಿಕೆ ಬಂದಿದೆ.

ಬಂಜರು ಭೂಮಿಯಲ್ಲೇ ಬೆಳೆದು ಯಶಸ್ಸು ಕಂಡ ಈ ಮಿಯಾಝಕಿ ಮಾವು ಇದೀಗ ವಿಜಯಪುರ ಜಿಲ್ಲೆಯಲ್ಲಿ ಚರ್ಚೆಯ ವಿಷಯವಾಗಿದೆ.

ವಾಂಖೆಡೆಯಲ್ಲಿ ಪಂಜಾಬ್ ಅಬ್ಬರ: ಮುಂಬೈ ವಿರುದ್ಧ 7 ವಿಕೆಟ್ ಭರ್ಜರಿ ಜಯ

0

ಮುಂಬೈ: ಐಪಿಎಲ್ 2026ರ 24ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಭರ್ಜರಿ ಪ್ರದರ್ಶನ ನೀಡಿ ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್‌ಗಳಿಂದ ಜಯ ದಾಖಲಿಸಿದೆ.

ಈ ಗೆಲುವಿನೊಂದಿಗೆ ಪಂಜಾಬ್ ಲೀಗ್‌ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ವಾಂಖೆಡೆ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮುಂಬೈ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆರಂಭದಲ್ಲೇ ಮುಂಬೈಗೆ ಆಘಾತ ಎದುರಾಯಿತು. ರಿಕಲ್ಟನ್ ಕೇವಲ 2 ರನ್‌ಗೆ ಔಟಾದರೆ, ಸೂರ್ಯಕುಮಾರ್ ಯಾದವ್ ಗೋಲ್ಡನ್ ಡಕ್‌ಗೆ ವಿಕೆಟ್ ಒಪ್ಪಿಸಿದರು. ಅರ್ಶ್‌ದೀಪ್ ಸಿಂಗ್ ಈ ಎರಡೂ ಪ್ರಮುಖ ವಿಕೆಟ್‌ಗಳನ್ನು ಪಡೆದರು.

ನಂತರ ಕ್ವಿಂಟನ್ ಡಿ ಕಾಕ್ ಹಾಗೂ ನಮನ್ ಧೀರ್ ಉತ್ತಮ ಜೊತೆಯಾಟ ಕಟ್ಟಿದರು. ನಮನ್ ಧೀರ್ 31 ಎಸೆತಗಳಲ್ಲಿ 50 ರನ್ ಗಳಿಸಿದರೆ, ಕ್ವಿಂಟನ್ ಡಿ ಕಾಕ್ ಸ್ಫೋಟಕ ಶತಕ ಸಿಡಿಸಿದರು. ಅವರು 60 ಎಸೆತಗಳಲ್ಲಿ 112 ರನ್‌ಗಳ ಅಮೋಘ ಇನಿಂಗ್ಸ್ ಆಡಿದರು. ಆದಾಗ್ಯೂ ಮಧ್ಯಮ ಕ್ರಮಾಂಕ ವಿಫಲವಾದ ಕಾರಣ ಮುಂಬೈ 20 ಓವರ್‌ಗಳಲ್ಲಿ 195 ರನ್‌ಗಳಿಗೆ ಸೀಮಿತವಾಯಿತು.

196 ರನ್‌ಗಳ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್‌ಗೆ ಪ್ರಾರಂಭಿಕ ಜೋಡಿ ಪ್ರಿಯಾಂಶ್ ಆರ್ಯ ಮತ್ತು ಪ್ರಭ್ಸಿಮ್ರಾನ್ ಸಿಂಗ್ ಉತ್ತಮ ಆರಂಭ ನೀಡಿದರು. ಆರ್ಯ 15 ರನ್‌ಗೆ ಔಟಾದರೂ, ಪ್ರಭ್ಸಿಮ್ರಾನ್ ಸಿಂಗ್ ಅಜೇಯ 80 ರನ್‌ಗಳ ಭರ್ಜರಿ ಆಟವಾಡಿದರು. ನಾಯಕ ಶ್ರೇಯಸ್ ಅಯ್ಯರ್ ಜೊತೆಗೂಡಿ 66 ರನ್‌ಗಳ ಮಹತ್ವದ ಜೊತೆಯಾಟ ಕಟ್ಟಿದರು.

ಪಂಜಾಬ್ ತಂಡ 21 ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿ ಗೆಲುವು ದಾಖಲಿಸಿತು. ಇತ್ತ ಮುಂಬೈ ಬೌಲಿಂಗ್ ವಿಭಾಗ ಸಂಪೂರ್ಣವಾಗಿ ಪರಿಣಾಮಕಾರಿತ್ವ ಕಳೆದುಕೊಂಡಿತು. ದೀಪಕ್ ಚಾಹರ್, ಜಸ್ಪ್ರೀತ್ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ವಿಕೆಟ್ ಪಡೆಯಲು ವಿಫಲರಾದರು.

ಈ ಸೋಲಿನೊಂದಿಗೆ ಮುಂಬೈ ಇಂಡಿಯನ್ಸ್ ಆಡಿದ 5 ಪಂದ್ಯಗಳಲ್ಲಿ 4 ಸೋಲುಗಳೊಂದಿಗೆ 9ನೇ ಸ್ಥಾನಕ್ಕೆ ಕುಸಿದಿದೆ. ಪಂಜಾಬ್ ಕಿಂಗ್ಸ್ ತನ್ನ ಅಜೇಯ ಓಟ ಮುಂದುವರೆಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಚಿನ್ನಸ್ವಾಮಿ ಟಿಕೆಟ್ ಹಗರಣ ಬಯಲು: KSCA ಸದಸ್ಯನಿಂದ ಬೃಹತ್ ಬ್ಲಾಕ್ ಮಾರ್ಕೆಟ್ ಜಾಲ!

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಟಿಕೆಟ್‌ಗಳ ಬ್ಲಾಕ್ ಮಾರ್ಕೆಟ್ ಮಾರಾಟದ ಬೃಹತ್ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ.

ಕೆಎಸ್‌ಸಿಎ ಸದಸ್ಯರೊಬ್ಬರು ಹಾಗೂ ಹೋಟೆಲ್ ಕ್ಯಾಪ್ಟನ್ ಸೇರಿ ಈ ಅಕ್ರಮ ದಂಧೆ ನಡೆಸುತ್ತಿದ್ದರೆಂಬುದು ವಿಚಾರಣೆಯಲ್ಲಿ ಬಹಿರಂಗವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಸಿಸಿಬಿ ಡಿಸಿಪಿ ಶ್ರೀಹರಿಬಾಬು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಲಕ್ಷ್ಮೀ ಕ್ಯಾಟರ್ಸ್ ಹೋಟೆಲ್‌ನ ಕ್ಯಾಪ್ಟನ್ ಚಂದ್ರಶೇಖರ್ ಬಂಧಿತನಾಗಿದ್ದಾನೆ. ಈತ ₹15,000 ಮೌಲ್ಯದ ಟಿಕೆಟ್‌ಗಳನ್ನು ₹19,000ಕ್ಕೆ ಬ್ಲಾಕ್‌ನಲ್ಲಿ ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಲಾಗಿದೆ.

ವಿಚಾರಣೆ ವೇಳೆ ನೀಡಿದ ಮಾಹಿತಿಯ ಆಧಾರದಲ್ಲಿ ಕೆಎಸ್‌ಸಿಎ ಸದಸ್ಯ ಗಣೇಶ್ ಹರಿಕೇಶ್ ಈ ದಂಧೆಯ ಪ್ರಮುಖ ಪಾತ್ರಧಾರಿ ಎಂಬುದು ಬೆಳಕಿಗೆ ಬಂದಿದೆ. ಈತ ಎರಡು ಖಾಸಗಿ ಕಂಪನಿಗಳ ಹೆಸರಿನಲ್ಲಿ ಆನ್‌ಲೈನ್ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್‌ಗಳನ್ನು ಖರೀದಿಸಿ, ನಂತರ ಅವುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ.

ಆರ್‌ಸಿಬಿಯ ಮೊದಲ ಪಂದ್ಯದಲ್ಲಿ 81 ಟಿಕೆಟ್‌ಗಳು ಹಾಗೂ ನಂತರದ ಪಂದ್ಯಕ್ಕೆ 100 ಟಿಕೆಟ್‌ಗಳನ್ನು ಸೇರಿಸಿ ಒಟ್ಟಾರೆ 181 ಟಿಕೆಟ್‌ಗಳ ಅಕ್ರಮ ವ್ಯವಹಾರ ನಡೆದಿರುವುದು ಪತ್ತೆಯಾಗಿದೆ. ಸುಮಾರು ₹17 ಲಕ್ಷಕ್ಕೂ ಅಧಿಕ ಮೌಲ್ಯದ ವ್ಯವಹಾರ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಂಧನದ ಬಳಿಕ ಚಂದ್ರಶೇಖರ್ ನೀಡಿದ ಮಾಹಿತಿಯಂತೆ ಗಣೇಶ್ ಹರಿಕೇಶ್ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಟಿಕೆಟ್ ಪೂರೈಕೆ ಮಾಡಿದ ಖಾಸಗಿ ಕಂಪನಿಗಳಿಗೆ ನೋಟಿಸ್ ನೀಡುವ ಸಿದ್ಧತೆಯೂ ನಡೆಯುತ್ತಿದೆ.

error: Content is protected !!