Home Blog

ಬೆಂಗಳೂರಿನಲ್ಲಿ ವರುಣನ ಅಬ್ಬರ – ಹಲವು ಕಡೆ ಭಾರೀ ಮಳೆ, ರಸ್ತೆಗಳು ಜಲಾವೃತ!

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವೆಡೆ ಗುರುವಾರ ವರುಣನ ಅಬ್ಬರ ಕಂಡುಬಂದಿದೆ.

ಮೆಜೆಸ್ಟಿಕ್, ರಾಜಾಜಿನಗರ, ವಸಂತನಗರ, ಕಲಾಸಿಪಾಳ್ಯ, ಟೌನ್‌ಹಾಲ್, ವಿಜಯನಗರ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಕೆಲ ಹೊತ್ತಿನಲ್ಲೇ ರಸ್ತೆಗಳು ಜಲಾವೃತವಾಗಿವೆ.

ಏಕಾಏಕಿ ಸುರಿದ ಮಳೆಯಿಂದ ಪ್ರಮುಖ ರಸ್ತೆಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸಂಚಾರ ನಿಧಾನಗೊಂಡಿದೆ. ಸಂಜೆ ವೇಳೆಗೆ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಹಲವೆಡೆ ವಾಹನ ಸವಾರರು ಪರದಾಟ ಅನುಭವಿಸಿದರು.

ಇದೇ ವೇಳೆ ಹವಾಮಾನ ಇಲಾಖೆ ರಾಜ್ಯದಲ್ಲಿ ಮುಂದಿನ ಕೆಲ ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಕರಾವಳಿ ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಹೆಚ್ಚಾಗುವ ಸಾಧ್ಯತೆ ಇದ್ದು, ಏಪ್ರಿಲ್ 10ರಿಂದ 12ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಇಲಾಖೆ ಸೂಚಿಸಿದೆ.

ದಕ್ಷಿಣ ಒಳನಾಡಿನ ಬೆಂಗಳೂರು, ಮೈಸೂರು, ಕೊಡಗು ಮತ್ತು ಚಾಮರಾಜನಗರದ ಕೆಲ ಭಾಗಗಳಲ್ಲಿ ಸಂಜೆ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಉತ್ತರ ಒಳನಾಡಿನ ಬೆಳಗಾವಿ, ಕಲಬುರಗಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯಲಿದ್ದು, ತಾಪಮಾನ ಏರಿಕೆಯಾಗುವ ನಿರೀಕ್ಷೆಯಿದೆ.

ಬೆಂಗಳೂರು ನಗರದಲ್ಲಿ ಹಗಲಿನ ವೇಳೆ ಬಿಸಿಲಿನ ವಾತಾವರಣ ಕಂಡುಬರುವ ಸಾಧ್ಯತೆ ಇದ್ದು, ಸಂಜೆ ವೇಳೆಗೆ ಮೋಡಕವಿದ ಆಕಾಶ ಹಾಗೂ ಮಳೆಯ ಸಾಧ್ಯತೆ ಇದೆ. ನಗರದ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗಾಳಿಯ ವೇಗ ಗಂಟೆಗೆ 6 ರಿಂದ 13 ಕಿಲೋ ಮೀಟರ್ ಇರುವ ಸಾಧ್ಯತೆಯೂ ಇದೆ.

ಮಥುರಾ ಯಮುನಾ ನದಿಯಲ್ಲಿ ಬೋಟ್ ಮಗುಚಿ ದುರಂತ – 10 ಮಂದಿ ಸಾವು

0

ಮಥುರಾ: ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದ ಶೃಂಗಾರ್ ಘಾಟ್ ಬಳಿ ಯಮುನಾ ನದಿಯಲ್ಲಿ ಭಕ್ತರನ್ನು ಹೊತ್ತೊಯ್ಯುತ್ತಿದ್ದ ಬೋಟ್ ಮಗುಚಿದ ದುರ್ಘಟನೆ ಸಂಭವಿಸಿದ್ದು, ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಹಲವರು ನಾಪತ್ತೆಯಾಗಿದ್ದಾರೆ.

ಮಾಹಿತಿಯ ಪ್ರಕಾರ, ಪಂಜಾಬ್‌ನ ಲುಧಿಯಾನದಿಂದ ಬಂದ ಸುಮಾರು 25 ಭಕ್ತರು ಬಂಕೆ ಬಿಹಾರಿ ದೇವಸ್ಥಾನಕ್ಕೆ ಭೇಟಿ ನೀಡಲು ಬೋಟ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ನಡೆದಿದೆ. ಯಮುನಾ ನದಿಯಲ್ಲಿ ಬೋಟ್ ಮಗುಚಿ ಈ ದುರಂತ ಸಂಭವಿಸಿದೆ.

ಘಟನೆಯ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದು, ಇದು ಅತ್ಯಂತ ದುಃಖದ ಮತ್ತು ಹೃದಯವಿದ್ರಾವಕ ಘಟನೆ ಎಂದು ಹೇಳಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಅವರು, ಅಧಿಕಾರಿಗಳಿಗೆ ತಕ್ಷಣ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆ ನಡೆಸುವಂತೆ ಮತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.

ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ತೆಲಂಗಾಣ ಸರ್ಕಾರ: 1 ಕೋಟಿ ಗಿಳಿ ಹಸಿರು ಸೀರೆ ಆರ್ಡರ್ ಮಾಡಿದ ಸಿಎಂ

0

ಹೈದರಾಬಾದ್: ತೆಲಂಗಾಣ ಸರ್ಕಾರವು ಈ ವರ್ಷವೂ ಮಹಿಳೆಯರಿಗೆ ಉಚಿತ ಸೀರೆ ವಿತರಣಾ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಿದೆ.

ಈ ಬಾರಿ ಸೀರೆಗಳಿಗೆ ಹೊಸ ಬಣ್ಣ ಮತ್ತು ವಿನ್ಯಾಸವನ್ನು ಪರಿಚಯಿಸಲಾಗಿದ್ದು, ನೀಲಿ ಸೀರೆಗಳ ಬದಲು ಗಿಳಿ ಹಸಿರು ಬಣ್ಣಕ್ಕೆ ಕೆಂಪು ಜರಿ ಇರುವ ಸೀರೆಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ.

ಅಧಿಕಾರಿಗಳ ಪ್ರಕಾರ, ಈ ಯೋಜನೆಗಾಗಿ ಸುಮಾರು 450 ಕೋಟಿ ರೂ. ವೆಚ್ಚದಲ್ಲಿ 1 ಕೋಟಿ ಸೀರೆಗಳ ಉತ್ಪಾದನೆಗೆ ಟೆಸ್ಕೊಗೆ ಆದೇಶ ನೀಡಲಾಗಿದೆ. ಕಳೆದ ವರ್ಷವೂ ಇದೇ ಯೋಜನೆಯಡಿ ಸುಮಾರು 86 ಲಕ್ಷ ಸೀರೆಗಳನ್ನು ವಿತರಿಸಲಾಗಿತ್ತು.

ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ನಿರ್ದೇಶನದಂತೆ ಪ್ರತಿ ವರ್ಷ ವಿಭಿನ್ನ ಬಣ್ಣ ಮತ್ತು ವಿನ್ಯಾಸದ ಸೀರೆಗಳನ್ನು ನೀಡುವ ಯೋಜನೆ ಜಾರಿಗೆ ತರಲಾಗುತ್ತಿದೆ. ಈ ವರ್ಷದ ಸೀರೆ ವಿತರಣೆಯನ್ನು ಅಕ್ಟೋಬರ್ ವೇಳೆಗೆ ಉತ್ಪಾದನೆ ಪೂರ್ಣಗೊಳಿಸಿ, ನವೆಂಬರ್ 19ರಂದು ನಡೆಯುವ ಇಂದಿರಾ ಗಾಂಧಿ ಜಯಂತಿಯಂದು ವಿತರಿಸಲು ಸರ್ಕಾರ ಯೋಜಿಸಿದೆ.

ಗ್ರಾಮೀಣ ಹಾಗೂ ನಗರ ಪ್ರದೇಶದ ಮಹಿಳೆಯರಿಗೆ ಏಕಕಾಲದಲ್ಲಿ ಸೀರೆ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಪೋಷಕರ ಒತ್ತಡಕ್ಕೆ ಮಣಿದ ಸರ್ಕಾರ: ಮಕ್ಕಳ 1ನೇ ತರಗತಿ ದಾಖಲಾತಿ ಬಗ್ಗೆ ಮಹತ್ವದ ಆದೇಶ!

ಬೆಂಗಳೂರು: ಒಂದನೇ ತರಗತಿ ದಾಖಲಾತಿಗೆ ಸಂಬಂಧಿಸಿದ ವಯೋಮಿತಿಯಲ್ಲಿ ರಾಜ್ಯ ಸರ್ಕಾರ ಮಹತ್ವದ ಸಡಿಲಿಕೆ ನೀಡಿದೆ. 2026–27ನೇ ಶೈಕ್ಷಣಿಕ ಸಾಲಿಗೆ ಮಾತ್ರ ಅನ್ವಯವಾಗುವಂತೆ, ಮಕ್ಕಳ ಪ್ರವೇಶಕ್ಕೆ ಇರುವ 6 ವರ್ಷದ ಕಡ್ಡಾಯ ವಯೋಮಿತಿಯಲ್ಲಿ 60 ದಿನಗಳ ವಿನಾಯಿತಿ ಘೋಷಿಸಲಾಗಿದೆ.

ಇದರಿಂದ ಜೂನ್ 1 ರಿಂದ ಜುಲೈ 30ರೊಳಗೆ 6 ವರ್ಷ ತುಂಬುವ ಮಕ್ಕಳಿಗೂ ಒಂದನೇ ತರಗತಿಗೆ ಪ್ರವೇಶ ಪಡೆಯಲು ಅವಕಾಶ ಸಿಗಲಿದೆ. ಅಂದರೆ, ಸುಮಾರು 5 ವರ್ಷ 10 ತಿಂಗಳ ವಯಸ್ಸಿನ ಮಕ್ಕಳನ್ನೂ ಶಾಲೆಗೆ ದಾಖಲಿಸಿಕೊಳ್ಳಬಹುದು.

ಪೋಷಕರಿಂದ ಬಂದಿದ್ದ ಮನವಿಗಳನ್ನು ಪರಿಗಣಿಸಿ, ಕರ್ನಾಟಕ ಶಿಕ್ಷಣ ಅಧಿನಿಯಮ 1983ರ ಕಲಂ 20ರ ಅಡಿಯಲ್ಲಿ ಈ ವಿಶೇಷ ಆದೇಶ ಹೊರಡಿಸಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಇತ್ತೀಚೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನೀಡಿದ್ದ ಭರವಸೆಯಂತೆ ಈ ನಿರ್ಧಾರ ಜಾರಿಗೆ ಬಂದಿದೆ.

ಈ ಮೊದಲು 6 ವರ್ಷ ಕಡ್ಡಾಯ ವಯೋಮಿತಿ ನಿಯಮಕ್ಕೆ ಪೋಷಕರಿಂದ ವಿರೋಧ ವ್ಯಕ್ತವಾಗಿದ್ದು, ಪ್ರತಿಭಟನೆಗಳೂ ನಡೆದಿದ್ದವು. ಇದೀಗ ಸರ್ಕಾರದ ಈ ತೀರ್ಮಾನದಿಂದ ಸಾವಿರಾರು ಮಕ್ಕಳಿಗೆ ಶಾಲಾ ಪ್ರವೇಶದ ಅವಕಾಶ ಸಿಗಲಿದೆ.

ಮದುವೆ ತಡ ಆಗ್ತಿದ್ಯಾ!? ಶನಿ, ಮಂಗಳ ದೋಷ ಕಾರಣವಾ!? ಜ್ಯೋತಿಷ್ಯ ಹೇಳುವುದೇನು?

0

ಅನೇಕರು ಜೀವನದಲ್ಲಿ ಉತ್ತಮ ಉದ್ಯೋಗ, ಗೌರವಾನ್ವಿತ ಕುಟುಂಬ ಹಾಗೂ ಸುಸಂಸ್ಕೃತ ಬದುಕು ಹೊಂದಿದ್ದರೂ ಮದುವೆ ವಿಳಂಬವಾಗುತ್ತಿರುವುದನ್ನು ಕಾಣಬಹುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂತಹ ಸ್ಥಿತಿಗೆ ಜಾತಕದ ಗ್ರಹಸ್ಥಿತಿ ಮತ್ತು ದೋಷಗಳು ಪ್ರಮುಖ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಜಾತಕದಲ್ಲಿ ಏಳನೇ ಮನೆ (ವಿವಾಹ ಸ್ಥಾನ) ಅತ್ಯಂತ ಪ್ರಮುಖವಾಗಿದೆ. ಈ ಮನೆಯ ಅಧಿಪತಿ ದುರ್ಬಲವಾಗಿದ್ದರೆ ಅಥವಾ 6, 8, 12ನೇ ಮನೆಗಳಲ್ಲಿ ಸ್ಥಿತಿಯಲ್ಲಿದ್ದರೆ ಮದುವೆ ವಿಳಂಬವಾಗುವ ಸಾಧ್ಯತೆ ಹೆಚ್ಚುತ್ತದೆ. ಜೊತೆಗೆ ಪಾಪ ಗ್ರಹಗಳ ದೃಷ್ಟಿಯೂ ಸಂಬಂಧಗಳಲ್ಲಿ ಅಡೆತಡೆಗಳನ್ನು ಉಂಟುಮಾಡಬಹುದು ಎಂದು ಜ್ಯೋತಿಷ್ಯರು ಹೇಳುತ್ತಾರೆ.

ಶನಿಯ ಪ್ರಭಾವದಿಂದ ಮದುವೆ ತಡವಾಗಬಹುದು ಎಂದು ನಂಬಿಕೆ ಇದೆ. ಆದರೆ ತಡವಾದ ಮದುವೆ ಹೆಚ್ಚು ಸ್ಥಿರವಾಗಿರುತ್ತದೆ ಎಂಬ ಅಭಿಪ್ರಾಯವೂ ಇದೆ. ಮತ್ತೊಂದೆಡೆ, ಮಂಗಳ ದೋಷ (ಕುಜ ದೋಷ) ಇದ್ದರೆ ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಸಮಸ್ಯೆಗಳು ಎದುರಾಗಬಹುದು ಎಂದು ಹೇಳಲಾಗುತ್ತದೆ.

ಅದೇ ರೀತಿ, ರಾಹು ಮತ್ತು ಕೇತುಗಳ ಪ್ರಭಾವದಿಂದ ಸಂಬಂಧಗಳು ಅಂತಿಮ ಹಂತದಲ್ಲಿ ಮುರಿದು ಬೀಳುವ ಸಾಧ್ಯತೆ ಇದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಮದುವೆ ಪ್ರಕ್ರಿಯೆಯಲ್ಲಿ ಗೊಂದಲ ಮತ್ತು ವಿಳಂಬ ಉಂಟಾಗಬಹುದು.

ವಿವಾಹ ಜೀವನ ಸುಗಮವಾಗಲು ಸ್ತ್ರೀಯರ ಜಾತಕದಲ್ಲಿ ಗುರು ಮತ್ತು ಪುರುಷರ ಜಾತಕದಲ್ಲಿ ಶುಕ್ರ ಗ್ರಹಗಳು ಬಲವಾಗಿರಬೇಕು ಎಂದು ಜ್ಯೋತಿಷ್ಯರು ಅಭಿಪ್ರಾಯಪಡುತ್ತಾರೆ. ಈ ಗ್ರಹಗಳು ದುರ್ಬಲವಾಗಿದ್ದರೆ ವಿವಾಹ ಪ್ರಸ್ತಾಪಗಳು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಹಣೆಬರಹದಲ್ಲಿ ಎಲ್ಲಿ ಬರೆದಿದೆಯೋ ಅಲ್ಲಿಂದಲೇ ಸ್ಪರ್ಧೆ: ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಚುನಾವಣಾ ಸಮಯದಲ್ಲಿ ನಿರ್ಧರಿಸಲಾಗುತ್ತದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರು ಎಲ್ಲೆಡೆ ನಮ್ಮ ಮೇಲೆ ಪ್ರೀತಿ ತೋರಿಸುತ್ತಿದ್ದಾರೆ. ಕುಮಾರಸ್ವಾಮಿ ಅವರ ಅನುಪಸ್ಥಿತಿಯಲ್ಲಿ ನನ್ನನ್ನೇ ಕರೆಯುತ್ತಾರೆ. ಆದ್ದರಿಂದ ರಾಜ್ಯದ ವಿವಿಧ ಭಾಗಗಳಿಗೆ ತೆರಳಬೇಕಾಗುತ್ತದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದರು.

2028ರೊಳಗೆ ನಮ್ಮ ಗುರಿ ಸಾಧಿಸಬೇಕು. ಸದನದಲ್ಲಿ ನಮ್ಮ ಸಂಖ್ಯೆಯನ್ನು ನೋಡಿ ಕೆಲವರು ಅಪಹಾಸ್ಯ ಮಾಡಿದ್ದಾರೆ. ಆದರೆ ನಾವು ಪಕ್ಷವನ್ನು ಮತ್ತಷ್ಟು ಬಲಪಡಿಸಿ ತೋರಿಸುತ್ತೇವೆ ಎಂದು ಹೇಳಿದರು.

ಎನ್‌ಡಿಎ ಮೈತ್ರಿ ಸರ್ಕಾರ ರಚಿಸುವ ಗುರಿಯಿದೆ ಎಂದು ತಿಳಿಸಿದ ಅವರು, ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದು ಮುಂದಿನ ದಿನಗಳಲ್ಲಿ ತೀರ್ಮಾನವಾಗುತ್ತದೆ. ನಮ್ಮ ಮುಖ್ಯ ಉದ್ದೇಶ ಗುರಿ ಸಾಧನೆ. ಜೆಡಿಎಸ್ ಎಲ್ಲಿದೆ ಎಂಬ ಪ್ರಶ್ನೆ ಕೇಳುವವರಿಗೆ ನಾವು ಕಾರ್ಯದಿಂದ ಉತ್ತರ ಕೊಡುತ್ತೇವೆ ಎಂದು ಹೇಳಿದರು.

ಆಸ್ತಿಯಲ್ಲಿ ಪಾಲು ಕೇಳಿದ ಕಾರಣ ಕೊಲೆ: ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್!

0

ಕಾರವಾರ: ಆಸ್ತಿಯಲ್ಲಿ ಪಾಲು ಕೇಳಿದ ವ್ಯಕ್ತಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಶಿರಸಿಯ ಪ್ರಥಮ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಬಿದ್ರಳ್ಳಿ ಗ್ರಾಮದ ಕೇಶವ ಪಾಂಡುರಂಗ ಕಿತ್ತೂರಕರ್ ತಮ್ಮ ಆಸ್ತಿಯಲ್ಲಿ ಪಾಲು ಕೇಳಿದ್ದರು. ಇದನ್ನು ತಪ್ಪಿಸುವ ಉದ್ದೇಶದಿಂದ ಅಕ್ಷಯ ಅಲಿಯಾಸ್ ಆಕಾಶ ಪಾಂಡುರಂಗ ಕಿತ್ತೂರಕರ್, ಪಾಂಡುರಂಗ ಕೀರಪ್ಪ ಕಿತ್ತೂರಕರ್ ಹಾಗೂ ಲತಾ ತುಳಸಾಯಿ ಪಾಂಡುರಂಗ ಕಿತ್ತೂರಕರ್ ಸೇರಿ ಐವರು ಸಂಚು ರೂಪಿಸಿ ಅವರನ್ನು ಕೊಲೆ ಮಾಡಿದ್ದರು.

ಈ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ 2019ರ ಅಕ್ಟೋಬರ್ 15ರಂದು ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿ ಪೊಲೀಸ್ ನಿರೀಕ್ಷಕ ಬಿ.ಎಸ್. ಲೋಕಾಪುರ ಅವರು ತನಿಖೆ ನಡೆಸಿ, ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಕಾರವಾರ ಪೀಠದ ಯಲ್ಲಾಪುರದ ಪ್ರಥಮ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಅವರು ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ರಾಜೇಶ್ ಮಳಗಿಕರ್ ವಾದ ಮಂಡಿಸಿದ್ದರು.

ಹುಲಿಕಲ್ ಘಾಟ್ ದುರಂತ: ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ಘೋಷಿಸಿದ ಸಿಎಂ!

ಶಿವಮೊಗ್ಗ: ಹುಲಿಕಲ್ ಘಾಟ್‌ನಲ್ಲಿ ಸಂಭವಿಸಿದ ಭೂ ಕುಸಿತ ದುರಂತದಲ್ಲಿ ಮೃತಪಟ್ಟ ಮೂವರು ಕಾರ್ಮಿಕರ ಕುಟುಂಬಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ, ಹೊಸನಗರ ತಾಲೂಕಿನ ಹುಲಿಕಲ್ ಘಾಟ್ ತಿರುವಿನಲ್ಲಿ ರಸ್ತೆ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುವ ವೇಳೆ ಮಣ್ಣು ಕುಸಿದು ಕಾರ್ಮಿಕರು ಮೃತಪಟ್ಟ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

“ಮೃತ ಕಾರ್ಮಿಕರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಸದಸ್ಯರಿಗೆ ಈ ನೋವನ್ನು ಭರಿಸುವ ಶಕ್ತಿ ದೊರಕಲಿ,” ಎಂದು ಅವರು ತಿಳಿಸಿದ್ದಾರೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಮಾತುಕತೆ ನಡೆಸಿ ಮಾಹಿತಿ ಪಡೆದಿರುವುದಾಗಿ ಹೇಳಿದರು.

ಈ ದುರಂತದಲ್ಲಿ ಮೃತಪಟ್ಟವರು ಚಕ್ಕಾರು ಗ್ರಾಮದ ರಾಘು (37), ಹಾವೇರಿ ಜಿಲ್ಲೆಯ ನೆಲಗಲು ಗ್ರಾಮದ ರಾಜು (30) ಹಾಗೂ ಕಾರ್ಮಿಕ ಶಬ್ಬೀರ್ (40) ಎಂದು ಗುರುತಿಸಲಾಗಿದೆ. ಇವರಲ್ಲಿ ಇಬ್ಬರ ಮೃತದೇಹಗಳು ಗುರುವಾರ (ಏಪ್ರಿಲ್ 9) ಪತ್ತೆಯಾಗಿದ್ದರೆ, ಮತ್ತೊಬ್ಬರ ಶವ ಇಂದು ಬೆಳಿಗ್ಗೆ ಪತ್ತೆಯಾಗಿದೆ.

ಮೃತದೇಹಗಳನ್ನು ಶಿವಮೊಗ್ಗ ನಗರದ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಇದೇ ದುರಂತದಲ್ಲಿ ಗಾಯಗೊಂಡ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳದಲ್ಲಿ ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ನಡೆಸುತ್ತಿದ್ದ ರಕ್ಷಣಾ ಕಾರ್ಯಾಚರಣೆ ಇದೀಗ ಪೂರ್ಣಗೊಂಡಿದೆ.

ಮನೋರಮಾ ಪಿಯು ಕಾಲೇಜಿಗೆ 72% ಫಲಿತಾಂಶ: ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ

0

ಗದಗ: ನಗರದ ಮನೋರಮಾ ಸ್ವತಂತ್ರ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿ ಗಮನ ಸೆಳೆದಿದೆ. ಈ ಬಾರಿ ಕಾಲೇಜು ಒಟ್ಟು 72% ಫಲಿತಾಂಶ ಸಾಧಿಸಿದ್ದು, ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಣ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಪರೀಕ್ಷೆಯಲ್ಲಿ ಐಶ್ವರ್ಯ ಅವರು 94.33% ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಗಳಿಸಿದ್ದರೆ, ವಿಜಯಲಕ್ಷ್ಮಿ ಪೋಲಿಸ್ ಪಾಟೀಲ 94% ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಚಿನ್ನು ಪೂಜಾರ 92.5% ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದರೆ,

ಐಶ್ವರ್ಯ ಶಿದ್ಲೀಂಗ 89% ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದಾರೆ. 7 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ, 16 ವಿದ್ಯಾರ್ಥಿಗಳು ಪ್ರಥಮ ವರ್ಗದಲ್ಲಿ ಹಾಗೂ 13 ವಿದ್ಯಾರ್ಥಿಗಳು ದ್ವಿತೀಯ ವರ್ಗದಲ್ಲಿ ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಎನ್. ಎಂ. ಕುಡತರಕರ, ಪ್ರಾಚಾರ್ಯ ಬಿ. ಎಸ್. ಹಿರೇಮಠ, ಕಾರ್ಯದರ್ಶಿ ಮಂಜುನಾಥ ಕುಡತರಕರ, ಆಡಳಿತಾಧಿಕಾರಿ ಕಿಶೋರ ಮುದಗಲ್ಲ, ನಿರ್ದೇಶಕರಾದ ಸಂಜಯ ಕುಡತರಕರ, ಚೇತನ ಕುಡತರಕರ ಹಾಗೂ ಪಿಯುಸಿ ವಿಭಾಗದ ಸಂಯೋಜಕಿ ಶಾಹೀದಾ ಶಿರಹಟ್ಟಿ ಸೇರಿದಂತೆ ಸಿಬ್ಬಂದಿ ವರ್ಗ ಶ್ಲಾಘಿಸಿದ್ದಾರೆ.

ಕುಂಭಮೇಳದ ಮೊನಾಲಿಸಾ ಮದುವೆ ವಿವಾದಕ್ಕೆ ಹೊಸ ತಿರುವು: ಪತಿ ವಿರುದ್ಧ ಪೋಕ್ಸೋ ಪ್ರಕರಣ!

ನವದೆಹಲಿ: ಕುಂಭಮೇಳದಲ್ಲಿ ವೈರಲ್ ಆಗಿದ್ದ ಮೊನಾಲಿಸಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಫರ್ಮಾನ್ ಖಾನ್ ವಿರುದ್ಧ ಪೊಕ್ಸೋ ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ಮೊನಾಲಿಸಾ ತನ್ನ ಪ್ರಿಯಕರ ಫರ್ಮಾನ್ ಖಾನ್ ರನ್ನು ವಿವಾಹವಾಗಿದ್ದಳು. ಆದರೆ ಮದುವೆಯ ಸಮಯದಲ್ಲಿ ಆಕೆ ಅಪ್ರಾಪ್ತೆಯಾಗಿದ್ದಳು ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಮಹೇಶ್ವರ ಪೊಲೀಸ್ ಠಾಣೆಯಲ್ಲಿ ಫರ್ಮಾನ್ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮೊನಾಲಿಸಾ ಮತ್ತು ಫರ್ಮಾನ್ ಖಾನ್ ಮದುವೆ ಸಂದರ್ಭದಲ್ಲೇ ಅವರ ವಯಸ್ಸು ಮತ್ತು ‘ಲವ್ ಜಿಹಾದ್’ ಆರೋಪ ಸೇರಿದಂತೆ ಹಲವು ವಿವಾದಗಳು ಎದ್ದಿದ್ದವು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ (ಎನ್‌ಸಿಎಸ್‌ಟಿ) ಕೇರಳ ಹಾಗೂ ಮಧ್ಯಪ್ರದೇಶದಲ್ಲಿ ತನಿಖೆ ಆರಂಭಿಸಿತ್ತು.

ಆಯೋಗದ ಅಧ್ಯಕ್ಷ ಅಂತರ್ ಸಿಂಗ್ ಆರ್ಯ ನೇತೃತ್ವದಲ್ಲಿ ನಡೆದ ವಿಚಾರಣೆಯಲ್ಲಿ, ಮೊನಾಲಿಸಾ ಪಾರ್ಧಿ ಬುಡಕಟ್ಟು ಸಮುದಾಯಕ್ಕೆ ಸೇರಿದವಳಾಗಿದ್ದು, ಮದುವೆ ಸಮಯದಲ್ಲಿ 18 ವರ್ಷ ತುಂಬಿರಲಿಲ್ಲ ಎಂಬುದು ದೃಢಪಟ್ಟಿದೆ. ಆಸ್ಪತ್ರೆ ದಾಖಲೆಗಳ ಪ್ರಕಾರ, ಆಕೆ 2009ರ ಡಿಸೆಂಬರ್ 30ರಂದು ಜನಿಸಿದ್ದು, 2026ರ ಮಾರ್ಚ್ 11ರಂದು ಮದುವೆಯಾಗಿದ್ದಾಳೆ. ಆ ವೇಳೆಗೆ ಆಕೆಗೆ ಕೇವಲ 16 ವರ್ಷ ವಯಸ್ಸು ಇತ್ತು.

ಮದುವೆ ವೇಳೆ ಆಕೆ 18 ವರ್ಷ ಪೂರೈಸಿದ್ದಾಳೆ ಎಂದು ತೋರಿಸಲು ನಕಲಿ ಜನನ ಪ್ರಮಾಣಪತ್ರ ಬಳಸಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಇದರ ಆಧಾರದ ಮೇಲೆ ಕೇರಳದ ದೇವಸ್ಥಾನದಲ್ಲಿ ಮದುವೆ ನಡೆಸಲಾಗಿದ್ದು, ನಂತರ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಮದುವೆ ನೋಂದಣಿಯೂ ಮಾಡಲಾಗಿದೆ.

ತನಿಖೆ ಬಳಿಕ ಫರ್ಮಾನ್ ಖಾನ್ ವಿರುದ್ಧ ಬಿಎನ್‌ಎಸ್, ಪೊಕ್ಸೋ ಕಾಯ್ದೆ ಹಾಗೂ ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಯಾರಾದರೂ ವ್ಯಕ್ತಿಗಳು ಅಥವಾ ಸಂಸ್ಥೆಗಳು ಭಾಗಿಯಾಗಿದ್ದಾರೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಇದೇ ವೇಳೆ, ಎನ್‌ಸಿಎಸ್‌ಟಿ ಕೇರಳ ಮತ್ತು ಮಧ್ಯಪ್ರದೇಶ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರಿಗೆ ಸಮನ್ಸ್ ಜಾರಿ ಮಾಡಿದ್ದು, ಏಪ್ರಿಲ್ 22ರಂದು ನವದೆಹಲಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಗಮನಾರ್ಹವಾಗಿ, ಕಳೆದ ವರ್ಷ ಪ್ರಯಾಗರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರಾಟ ಮಾಡುತ್ತಿದ್ದ ಮೊನಾಲಿಸಾ ತನ್ನ ವಿಶಿಷ್ಟ ಕಣ್ಣಿನ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದಳು. ನಂತರ 2026ರ ಮಾರ್ಚ್ 11ರಂದು ಕೇರಳದ ಪೂವಾರಿನ ಅರುಮಾನೂರ್ ನೈನಾರ್ ದೇವಸ್ಥಾನದಲ್ಲಿ ಫರ್ಮಾನ್ ಖಾನ್ ರನ್ನು ವಿವಾಹವಾಗಿದ್ದಳು.

error: Content is protected !!