ಬೆಂಗಳೂರು: ಜೆಪಿನಗರ 4ನೇ ಹಂತದಿಂದ ಮೈಸೂರು ರಸ್ತೆಯವರೆಗೆ ಪ್ರಸ್ತಾವಿತ ಮೆಟ್ರೋ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮರಗಳನ್ನು ಕಡಿಯಲು ಅನುಮತಿ ಕೋರಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) ಹೈಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಿದೆ.
ಈ ಸಂಬಂಧ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಹಾಗೂ ಪರಿಸರವಾದಿ ದತ್ತಾತ್ರೇಯ ದೇವರು ಅವರು 2018ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ನಡುವೆ, ಬಿಎಂಆರ್ಸಿಎಲ್ ಈ ಮಧ್ಯಂತರ ಅರ್ಜಿಯನ್ನು ಸಲ್ಲಿಸಿ ಅನುಮತಿ ಕೋರಿದೆ.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಬು ಭಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ವಿಭಾಗೀಯ ಪೀಠ, ಈ ಹಿಂದೆ ನೀಡಿದ್ದ ಆದೇಶಗಳ ಅನುಷ್ಠಾನ ಕುರಿತ ವರದಿ ಸಲ್ಲಿಸಲು ಸೂಚಿಸಿದೆ. ಜೊತೆಗೆ, ಮರ ಕಡಿತ ವಿಚಾರವಾಗಿ ಅರ್ಜಿದಾರರೊಂದಿಗೆ ಸಮಾಲೋಚನೆ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ವಿಚಾರಣೆಯನ್ನು ಏಪ್ರಿಲ್ 10ಕ್ಕೆ ಮುಂದೂಡಲಾಗಿದೆ.
ವಿಚಾರಣೆ ವೇಳೆ ಬಿಎಂಆರ್ಸಿಎಲ್ ಪರ ವಕೀಲರು, ಈ ಮಾರ್ಗಕ್ಕೆ ಸಂಬಂಧಿಸಿದಂತೆ ಟ್ರೀ ಎಕ್ಸ್ಪರ್ಟ್ ಸಮಿತಿ ವರದಿ ನೀಡಿದ್ದು, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿರುವುದರಿಂದ ಮರ ಕಡಿತಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.
ಈ ಮಾರ್ಗದಲ್ಲಿ ಒಟ್ಟು 2,184 ಮರಗಳಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಅಡಚಣೆ ಆಗದಂತೆ ಕೆಲವು ಮರಗಳನ್ನು ಕಡಿತಗೊಳಿಸುವುದು ಅಥವಾ ಸ್ಥಳಾಂತರಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು. ಎಲ್ಲ ಮರಗಳಿಗೆ ಸಂಖ್ಯಾಕ್ರಮ ನೀಡಲಾಗಿದ್ದು, ಸ್ಥಳಾಂತರ ಸಾಧ್ಯತೆ ಕುರಿತು ಅಧ್ಯಯನ ನಡೆಸಲಾಗಿದೆ. ಸ್ಥಳಾಂತರಕ್ಕೆ ಉದ್ದೇಶಿತ ಸ್ಥಳಗಳ ವಿವರಗಳನ್ನೂ ಪೀಠಕ್ಕೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.
ಇದಕ್ಕೆ ಪ್ರತಿಯಾಗಿ, ಮೂಲ ಅರ್ಜಿದಾರರ ಪರ ವಕೀಲರು, ಹೈಕೋರ್ಟ್ ನೀಡಿದ್ದ ಹಿಂದಿನ ಆದೇಶಗಳನ್ನು ಇನ್ನೂ ಅನುಷ್ಠಾನಗೊಳಿಸಿಲ್ಲ ಹಾಗೂ ಅರಣ್ಯೀಕರಣ ವರದಿಗಳನ್ನೂ ಸಲ್ಲಿಸಲಾಗಿಲ್ಲ ಎಂದು ಆಕ್ಷೇಪಿಸಿದರು. ಆದ್ದರಿಂದ ಮಧ್ಯಂತರ ಅರ್ಜಿಯನ್ನು ಪರಿಗಣಿಸಬಾರದು ಎಂದು ಕೋರಿದರು.
ಅಲ್ಲದೆ, ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆ, 1976 ಅಡಿಯಲ್ಲಿ ಮರ ಪ್ರಾಧಿಕಾರ ರಚಿಸಿ ನಗರದಲ್ಲಿ ಮರಗಳ ಗಣನೆ ನಡೆಸುವಂತೆ ಹೈಕೋರ್ಟ್ ಈ ಹಿಂದೆ ಆದೇಶಿಸಿದ್ದರೂ, ಕಳೆದ 49 ವರ್ಷಗಳಿಂದ ಯಾವುದೇ ಸಮಗ್ರ ಗಣನೆ ನಡೆದಿಲ್ಲ ಎಂದು ತಿಳಿಸಿದರು. 2019ರ ಆದೇಶದಂತೆ ನಗರದಲ್ಲಿ ಮರಗಳ ಗಣನೆ ಪೂರ್ಣಗೊಳಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ಕ್ಕೆ ನಿರ್ದೇಶನ ನೀಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.
ಇದಕ್ಕೂ ಮೇಲೆ, ಕಳೆದ ಮೂರು ವರ್ಷಗಳಿಂದ ಯಾವುದೇ ಪ್ರಗತಿ ಕಂಡುಬಂದಿಲ್ಲ. ಬಿಎಂಆರ್ಸಿಎಲ್ ಸೇರಿದಂತೆ ವಿವಿಧ ಯೋಜನಾ ಸಂಸ್ಥೆಗಳು ಪ್ರತಿಯೊಂದು ಮರ ಕಡಿತಕ್ಕೆ ಬದಲಾಗಿ ಮರಗಳನ್ನು ನೆಡುವ ಜವಾಬ್ದಾರಿ ಹೊಂದಿದ್ದರೂ, ಆ ಹೊಣೆಗಾರಿಕೆಯನ್ನು ಜಿಬಿಎಗೆ ವರ್ಗಾಯಿಸಲಾಗಿದೆ. 50 ಸಾವಿರ ಮರಗಳನ್ನು ನೆಡುವುದಾಗಿ ಹೇಳಿದ್ದರೂ, ಇದುವರೆಗೆ ಯಾವುದೇ ವಿವರಗಳನ್ನು ಒದಗಿಸಿಲ್ಲ ಎಂದು ಪೀಠಕ್ಕೆ ತಿಳಿಸಿದರು.