Home Blog

ಮೈಕಲ್ ಹಸ್ಸಿಗಾಗಿ ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವೆ ಪೈಪೋಟಿ: ಎರಡೂ ತಂಡಗಳಿಂದ ಭರ್ಜರಿ ಆಫರ್

0

ಸಿಡ್ನಿ: ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳಾದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ತೆರೆಮರೆಯಲ್ಲಿ ಪೈಪೋಟಿ ಶುರುವಾಗಿದೆ. ಆದರೆ ಈ ಬಾರಿ ಆಟಗಾರನಿಗಾಗಿ ಅಲ್ಲ, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಐಪಿಎಲ್‌ನ ಯಶಸ್ವಿ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ಅವರಿಗಾಗಿ ಉಭಯ ತಂಡಗಳು ಪೈಪೋಟಿ ನಡೆಸುತ್ತಿವೆ.

ಮುಂಬರುವ ಆ್ಯಶಸ್ ಸರಣಿಗೂ ಮುನ್ನ ತಮ್ಮ ತಂಡದ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸುವ ಉದ್ದೇಶದಿಂದ ಮೈಕಲ್ ಹಸ್ಸಿ ಅವರನ್ನು ಕೋಚಿಂಗ್ ಸಿಬ್ಬಂದಿಗೆ ಸೇರಿಸಿಕೊಳ್ಳಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಆಸಕ್ತಿ ತೋರಿದೆ ಎನ್ನಲಾಗಿದೆ.

ಇತ್ತೀಚೆಗಷ್ಟೇ ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡಿರುವ ನ್ಯೂಜಿಲೆಂಡ್‌ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್, ಇಂಗ್ಲೆಂಡ್‌ನ ಬ್ಯಾಟಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ತುಂಬಲು ಮೈಕಲ್ ಹಸ್ಸಿ ಅವರಿಗೆ ಬ್ಯಾಟಿಂಗ್ ಕೋಚ್ ಹುದ್ದೆಯ ಆಫರ್ ನೀಡಿದ್ದಾರೆ ಎಂದು ವರದಿಯಾಗಿದೆ.

ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಾಗಿ ಕಳೆದ 15 ವರ್ಷಗಳಿಂದ ಫ್ಲೆಮಿಂಗ್ ಮತ್ತು ಹಸ್ಸಿ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಬ್ಬರ ನಡುವಿನ ಉತ್ತಮ ಬಾಂಧವ್ಯ ಹಾಗೂ ಕ್ರಿಕೆಟ್ ಜ್ಞಾನದಿಂದಾಗಿ ಸಿಎಸ್‌ಕೆ ತಂಡ ಹಲವು ಯಶಸ್ಸುಗಳನ್ನು ಕಂಡಿದೆ. ಇದೇ ಹಿನ್ನೆಲೆಯಲ್ಲಿ ಫ್ಲೆಮಿಂಗ್, ಇಂಗ್ಲೆಂಡ್ ಟೆಸ್ಟ್ ತಂಡದ ಪೂರ್ಣಾವಧಿ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುವಂತೆ ಹಸ್ಸಿ ಅವರನ್ನು ಆಹ್ವಾನಿಸಿದ್ದಾರೆ ಎನ್ನಲಾಗಿದೆ.

ಆದರೆ ಈ ಆಫರ್ ಕುರಿತು ಪ್ರತಿಕ್ರಿಯಿಸಿರುವ ‘ಮಿಸ್ಟರ್ ಕ್ರಿಕೆಟ್’ ಖ್ಯಾತಿಯ ಮೈಕಲ್ ಹಸ್ಸಿ, ಯಾವುದೇ ದೇಶದಿಂದ ಬರುವ ಕೋಚಿಂಗ್ ಆಫರ್ ಅನ್ನು ನೇರವಾಗಿ ತಿರಸ್ಕರಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಆ್ಯಶಸ್ ಸರಣಿಯಂತಹ ಪ್ರತಿಷ್ಠಿತ ಸಂದರ್ಭದಲ್ಲಿ ತಮ್ಮ ತಾಯ್ನಾಡು ಆಸ್ಟ್ರೇಲಿಯಾ ವಿರುದ್ಧವೇ ಇಂಗ್ಲೆಂಡ್ ಪರ ಕಾರ್ಯತಂತ್ರ ರೂಪಿಸುವುದು ಸ್ವಲ್ಪ ವಿಚಿತ್ರ ಎನಿಸಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇತ್ತ, ಹಸ್ಸಿ ಇಂಗ್ಲೆಂಡ್ ಪಾಳಯ ಸೇರಿಕೊಂಡರೆ ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಹಿನ್ನಡೆಯಾಗಬಹುದು ಎಂಬ ಆತಂಕ ಕ್ರಿಕೆಟ್ ಆಸ್ಟ್ರೇಲಿಯಾಗೆ ಎದುರಾಗಿದೆ. ಆಸ್ಟ್ರೇಲಿಯಾ ತಂಡದ ಹಲವು ಆಟಗಾರರ ಸಾಮರ್ಥ್ಯ, ದೌರ್ಬಲ್ಯ ಹಾಗೂ ಆಟದ ಶೈಲಿಯ ಬಗ್ಗೆ ಹಸ್ಸಿಗೆ ಆಳವಾದ ಅರಿವಿದೆ. ಹೀಗಾಗಿ ಅವರು ಇಂಗ್ಲೆಂಡ್ ತಂಡದ ಕೋಚಿಂಗ್ ಸಿಬ್ಬಂದಿಗೆ ಸೇರಿದರೆ ಆಸ್ಟ್ರೇಲಿಯಾ ತಂಡದ ಹಲವು ತಂತ್ರಗಳು ಎದುರಾಳಿ ತಂಡಕ್ಕೆ ತಿಳಿಯುವ ಸಾಧ್ಯತೆ ಇದೆ ಎಂಬುದು ಆಸೀಸ್ ಮಂಡಳಿಯ ಆತಂಕವಾಗಿದೆ.

ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಮೈಕಲ್ ಹಸ್ಸಿ ಅವರನ್ನು ತನ್ನತ್ತ ಉಳಿಸಿಕೊಳ್ಳಲು ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಕನ್ಸಲ್ಟೆಂಟ್ ಹುದ್ದೆಯ ಆಫರ್ ನೀಡಲು ಮುಂದಾಗಿದೆ ಎಂದು ಸಿಡ್ನಿಯ ಕೋಡ್ ಸ್ಪೋರ್ಟ್ಸ್ ವರದಿ ಮಾಡಿದೆ.

ಹೀಗಾಗಿ ಮುಂಬರುವ ಆ್ಯಶಸ್ ಸರಣಿಗೂ ಮುನ್ನ ಮೈಕಲ್ ಹಸ್ಸಿ ಯಾವ ತಂಡದ ಪರ ಕೋಚಿಂಗ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂಬುದು ಇದೀಗ ಕುತೂಹಲ ಮೂಡಿಸಿದೆ. ಹಸ್ಸಿಯ ನಿರ್ಧಾರ ಆ್ಯಶಸ್ ಸರಣಿಗೂ ಮುನ್ನವೇ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಪೈಪೋಟಿಗೆ ಮತ್ತಷ್ಟು ರೋಚಕತೆ ನೀಡುವ ಸಾಧ್ಯತೆಯಿದೆ.

ಪಾಕಿಸ್ತಾನ ವಿರುದ್ಧದ 2ನೇ ಟೆಸ್ಟ್ʼಗೂ ಮುನ್ನ ಬ್ರೈಡನ್ ಕಾರ್ಸ್ ತಂಡದಿಂದ ಔಟ್!

0

ಲಂಡನ್: ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ವೇಗಿ ಬ್ರೈಡನ್ ಕಾರ್ಸ್ ಅವರನ್ನು ಡರ್ಬಿ ನೈಟ್‌ಕ್ಲಬ್‌ನಲ್ಲಿ ನಡೆದ ಘಟನೆಯ ಕುರಿತು ತನಿಖೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಎರಡನೇ ಟೆಸ್ಟ್‌ಗಾಗಿ ತಂಡದಿಂದ ಕೈಬಿಡಲಾಗಿದೆ. ಅವರ ಬದಲಿಗೆ ಯುವ ವೇಗಿ ಸನ್ನಿ ಬೇಕರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಡರ್ಹಾಮ್ ತಂಡವು ಡರ್ಬಿಶೈರ್ ವಿರುದ್ಧ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಆಟಗಾರರು ಸಂಭ್ರಮಾಚರಣೆಗಾಗಿ ಡರ್ಬಿ ನಗರದ ‘ಮಾಲಿ ಮಲೋನ್ಸ್ ಟ್ಯಾವರ್ನ್’ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಬ್ರೈಡನ್ ಕಾರ್ಸ್ ಅವರು ನೈಟ್‌ಕ್ಲಬ್‌ನ ಹೊರಭಾಗದಲ್ಲಿ ಪೊಲೀಸರೊಂದಿಗೆ ಇರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ವಿಡಿಯೋದಲ್ಲಿ ಕಾರ್ಸ್ ಅವರ ಕೈಗೆ ಪೊಲೀಸರು ಕೈಕೋಳ ತೊಡಿಸಿರುವುದು ಕಂಡುಬಂದಿದೆ.

ವರದಿಗಳ ಪ್ರಕಾರ, ಕಾರ್ಸ್ ಅವರನ್ನು ಕೆಲಕಾಲ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಅವರನ್ನು ಅಧಿಕೃತವಾಗಿ ಬಂಧಿಸಲಾಗಿಲ್ಲ ಮತ್ತು ಯಾವುದೇ ಪ್ರಕರಣ ಅಥವಾ ಆರೋಪ ದಾಖಲಿಸದೆ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ. ಘಟನೆಯ ನಿಖರ ಕಾರಣದ ಕುರಿತು ತನಿಖೆ ಮುಂದುವರಿದಿದೆ. ಈ ವೇಳೆ ಇಂಗ್ಲೆಂಡ್ ಆಟಗಾರರಾದ ಮ್ಯಾಥ್ಯೂ ಪಾಟ್ಸ್ ಹಾಗೂ ಬೆನ್ ಸ್ಟೋಕ್ಸ್ ಕೂಡ ಸ್ಥಳದಲ್ಲಿದ್ದ ದೃಶ್ಯಗಳು ವಿಡಿಯೋದಲ್ಲಿ ಕಾಣಿಸಿಕೊಂಡಿವೆ.

ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಾರ್ಸ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ಅವರನ್ನು ಕೌಂಟಿ ಕ್ರಿಕೆಟ್‌ನಲ್ಲಿ ಡರ್ಹಾಮ್ ಪರ ಆಡಲು ಬಿಡುಗಡೆ ಮಾಡಲಾಗಿತ್ತು. ಇದೀಗ ಆಗಸ್ಟ್ 27ರಿಂದ ಲಾರ್ಡ್ಸ್‌ನಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಈ ವಿವಾದ ಎದುರಾಗಿದ್ದು, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಕಠಿಣ ನಿರ್ಧಾರ ಕೈಗೊಂಡಿದೆ.

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಶಿಫಾರಸಿನ ಮೇರೆಗೆ ಕ್ರಿಕೆಟ್ ರೆಗ್ಯುಲೇಟರ್ ಈ ಘಟನೆಯ ಕುರಿತು ತನಿಖೆ ನಡೆಸಲಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಬ್ರೈಡನ್ ಕಾರ್ಸ್ ಎರಡನೇ ಟೆಸ್ಟ್‌ಗೆ ಆಯ್ಕೆಗೆ ಲಭ್ಯವಿರುವುದಿಲ್ಲ ಎಂದು ಇಸಿಬಿ ಸ್ಪಷ್ಟಪಡಿಸಿದೆ. ಅವರ ಸ್ಥಾನಕ್ಕೆ ಸನ್ನಿ ಬೇಕರ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ.

ಈ ಘಟನೆ ಇಂಗ್ಲೆಂಡ್ ತಂಡದ ಆಫ್-ಫೀಲ್ಡ್ ವಿವಾದಗಳ ಸರಣಿಗೆ ಮತ್ತೊಂದು ಸೇರ್ಪಡೆಯಾಗಿದೆ. ಇತ್ತೀಚೆಗಷ್ಟೇ ತಂಡದ ನಾಯಕ ಜೋ ರೂಟ್ ಆಟಗಾರರ ಮೇಲಿದ್ದ ಮಧ್ಯರಾತ್ರಿಯ ಕರ್ಫ್ಯೂ ನಿಯಮವನ್ನು ತೆಗೆದುಹಾಕಿದ್ದರು. ಆಟಗಾರರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದ್ದರು. ಅದಾದ ಕೆಲವೇ ದಿನಗಳಲ್ಲಿ ಕಾರ್ಸ್‌ಗೆ ಸಂಬಂಧಿಸಿದ ಈ ಘಟನೆ ಬೆಳಕಿಗೆ ಬಂದಿದೆ.

ಇಂಗ್ಲೆಂಡ್ ತಂಡದಲ್ಲಿ ಈ ಹಿಂದೆಯೂ ಬೆನ್ ಸ್ಟೋಕ್ಸ್ ಮತ್ತು ಗಸ್ ಅಟ್ಕಿನ್ಸನ್ ಸೇರಿದಂತೆ ಪ್ರಮುಖ ಆಟಗಾರರು ಆಫ್-ಫೀಲ್ಡ್ ಘಟನೆಗಳ ಹಿನ್ನೆಲೆಯಲ್ಲಿ ತನಿಖೆ ಎದುರಿಸಿದ್ದರು. ಹೀಗಾಗಿ ಬ್ರೈಡನ್ ಕಾರ್ಸ್ ಪ್ರಕರಣ ಇದೀಗ ಇಂಗ್ಲೆಂಡ್ ಕ್ರಿಕೆಟ್ ತಂಡದ ಶಿಸ್ತು ಹಾಗೂ ಆಟಗಾರರ ವರ್ತನೆಯ ಕುರಿತು ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ.

ರಾಜ್ಯದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ: ತಿಂಗಳಾಂತ್ಯಕ್ಕೆ ಕೇಂದ್ರಕ್ಕೆ ಸಂಪೂರ್ಣ ವರದಿ ಸಲ್ಲಿಕೆ – ಜಿ. ಪರಮೇಶ್ವರ್

0

ಬೆಂಗಳೂರು: ರಾಜ್ಯದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ ಎಂದು ಮಾನದಂಡಗಳ ಆಧಾರದ ಮೇಲೆ ಗುರುತಿಸಲಾಗಿದೆ. ಈ ಕುರಿತು ಸಂಪೂರ್ಣ ವರದಿಯನ್ನು ಈ ತಿಂಗಳ ಅಂತ್ಯದೊಳಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದಿನ ಸಭೆಯಲ್ಲಿ ಬರ ಪರಿಸ್ಥಿತಿಯ ಬಗ್ಗೆಯೂ ಚರ್ಚೆ ನಡೆಸಲಾಗುವುದು. ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬರ ಘೋಷಣೆಯ ನಿಯಮಗಳ ಪ್ರಕಾರ ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಬಹುದು ಎಂದು ಹೇಳಿದರು.

ಮಾನದಂಡಗಳ ಪ್ರಕಾರ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡುಬಂದಿದ್ದು, ಈಗಾಗಲೇ ನಡೆಸಿರುವ ಗ್ರೌಂಡ್‌ ಟ್ರೂಥಿಂಗ್‌ ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು. ಈ ಕುರಿತು ಪ್ರತಿ ವಾರವೂ ಪರಿಶೀಲನೆ ನಡೆಸಲಾಗುತ್ತದೆ. ತಿಂಗಳಾಂತ್ಯಕ್ಕೆ ಸಂಪೂರ್ಣ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಪ್ರತಿನಿತ್ಯ ಹಲವು ಶಾಸಕರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಇಂದು ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ. ಶಾಸಕರ ಸಮಸ್ಯೆಗಳನ್ನು ಆಲಿಸಿ, ಅವುಗಳನ್ನು ಬಗೆಹರಿಸುವ ಕುರಿತು ಚರ್ಚೆ ನಡೆಯಲಿದೆ ಎಂದು ಪರಮೇಶ್ವರ್ ಹೇಳಿದರು.

ಬ್ಯಾಚ್‌-ಟು-ಬ್ಯಾಚ್‌ ಮಾದರಿಯಲ್ಲಿ ಸಂಜೆವರೆಗೆ ಶಾಸಕರೊಂದಿಗೆ ಸಭೆ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿ ಮುಖ್ಯಮಂತ್ರಿ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.

ಆಡಳಿತ ಪಕ್ಷವಾಗಿ ನಾವು ಒಗ್ಗಟ್ಟಾಗಿ ಇರಬೇಕು. ಯಾವುದೇ ಪಕ್ಷ ಅಧಿಕಾರದಲ್ಲಿದ್ದಾಗ ಆಡಳಿತ ಪಕ್ಷದ ಶಾಸಕರಿಗೆ ಹೆಚ್ಚಿನ ಒತ್ತು ನೀಡುವುದು ಸಹಜ. ಅದೇ ರೀತಿ ನಮ್ಮ ಸರ್ಕಾರವೂ ಶಾಸಕರಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತಿದೆ ಎಂದು ಜಿ. ಪರಮೇಶ್ವರ್ ಹೇಳಿದರು.

ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಆಡಳಿತ ಪಕ್ಷ ತಮ್ಮ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂಬ ನಿರೀಕ್ಷೆ ಜನರಲ್ಲಿರುತ್ತದೆ. ಹೀಗಾಗಿ ಆಡಳಿತ ಪಕ್ಷದ ಶಾಸಕರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ ಎಂದು ಅವರು ತಿಳಿಸಿದರು.

ನೈಸ್ ಯೋಜನೆ ವಿಚಾರದಲ್ಲಿ ಜೆಡಿಎಸ್ ಸಮರ: ‘ಸರ್ಕಾರ ಕೂಡಲೇ ವಶಪಡಿಸಿಕೊಳ್ಳಲಿ, ಟೋಲ್ ಸಂಗ್ರಹ ನಿಲ್ಲಿಸಲಿ’ ಎಂದು ಸಿಎಸ್ʼಗೆ ಮನವಿ

0

ಬೆಂಗಳೂರು: ನೈಸ್‌ ಯೋಜನೆಯನ್ನು ರಾಜ್ಯ ಸರ್ಕಾರ ಕೂಡಲೇ ವಶಕ್ಕೆ ಪಡೆದು, ಟೋಲ್‌ ಸಂಗ್ರಹವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಜೆಡಿಎಸ್‌ ನಿಯೋಗವು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಮನವಿ ಸಲ್ಲಿಸಿದೆ. ಜೆಡಿಎಸ್‌ ಶಾಸಕಾಂಗ ನಾಯಕ ಸುರೇಶ್‌ ಬಾಬು ನೇತೃತ್ವದ ಶಾಸಕರ ನಿಯೋಗ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಸುರೇಶ್‌ ಬಾಬು, ನೈಸ್‌ ಯೋಜನೆಯಲ್ಲಿ ಹಗಲು ದರೋಡೆ ನಡೆಯುತ್ತಿದೆ ಎಂದು ಆರೋಪಿಸಿದರು. “ಯಾರು ಇವರನ್ನು ರಕ್ಷಣೆ ಮಾಡುತ್ತಿದ್ದಾರೆ?” ಎಂದು ಪ್ರಶ್ನಿಸಿದ ಅವರು, ಹೈಕೋರ್ಟ್‌ ಕೂಡ ಟೋಲ್‌ ಸಂಗ್ರಹ ಮಾಡಬಾರದು ಎಂದು ಹೇಳಿದ್ದರೂ ಇನ್ನೂ ಟೋಲ್‌ ಸಂಗ್ರಹ ಮುಂದುವರಿದಿದೆ ಎಂದು ದೂರಿದರು.

ಕೋರ್ಟ್‌ ಆದೇಶವನ್ನು ಸರ್ಕಾರವೇ ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದ ಸುರೇಶ್‌ ಬಾಬು, ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಗಿದೆ. ಸಮಸ್ಯೆ ಬಗೆಹರಿಯದಿದ್ದರೆ ರಾಜ್ಯಪಾಲರಿಗೂ ದೂರು ನೀಡುವುದಾಗಿ ತಿಳಿಸಿದರು.

ರಾಜ್ಯ ಸರ್ಕಾರ ತಮ್ಮ ಮನವಿಗೆ ಸ್ಪಂದಿಸದಿದ್ದರೆ ಕೇಂದ್ರ ಸರ್ಕಾರದ ಮೊರೆ ಹೋಗುವುದಾಗಿ ಹೇಳಿದ ಅವರು, ಅಗತ್ಯವಿದ್ದರೆ ರಾಷ್ಟ್ರಪತಿಗಳಿಗೂ ದೂರು ನೀಡುವುದಾಗಿ ಎಚ್ಚರಿಸಿದರು. ಕೋರ್ಟ್‌ ಆದೇಶವನ್ನು ಸರ್ಕಾರ ಪಾಲಿಸಬೇಕು ಹಾಗೂ ನೈಸ್‌ ಯೋಜನೆಗಾಗಿ ಭೂಮಿ ಕಳೆದುಕೊಂಡಿರುವ ರೈತರಿಗೆ ಬಾಕಿ ಹಣ ಪಾವತಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ವಿಧಾನ ಪರಿಷತ್‌ ಜೆಡಿಎಸ್‌ ನಾಯಕ ಭೋಜೇಗೌಡ ಮಾತನಾಡಿ, ನೈಸ್‌ ಯೋಜನೆಗೆ ಸಂಬಂಧಿಸಿದಂತೆ ನ್ಯಾಯಾಲಯ ಮಹತ್ವದ ಆದೇಶಗಳನ್ನು ನೀಡಿದೆ. ಈ ಯೋಜನೆಯಲ್ಲಿ ದೊಡ್ಡ ಅಕ್ರಮ ನಡೆದಿದೆ ಎಂದು ಕೋರ್ಟ್‌ ಹೇಳಿದೆ. ಕೂಡಲೇ ಟೋಲ್‌ ಸಂಗ್ರಹ ನಿಲ್ಲಿಸಿ, ರೈತರಿಗೆ ಬಾಕಿ ಹಣ ಪಾವತಿಸುವಂತೆ ಸರ್ಕಾರವನ್ನು ಒತ್ತಾಯಿಸಿದ

ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹ: ಸೆ.1ರಿಂದ ‘ಬಳ್ಳಾರಿ ಚಲೋ’ ಪಾದಯಾತ್ರೆ ಘೋಷಿಸಿದ ಬಿಜೆಪಿ

0

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಸೆಪ್ಟೆಂಬರ್‌ 1ರಿಂದ 10 ದಿನಗಳ ಕಾಲ ‘ಬಳ್ಳಾರಿ ಚಲೋ’ ಪಾದಯಾತ್ರೆ ನಡೆಸಲು ನಿರ್ಧರಿಸಿದೆ.

ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಮಾಜಿ ಸಚಿವರಾದ ಜಿ. ಜನಾರ್ದನ ರೆಡ್ಡಿ, ಬಿ. ಶ್ರೀರಾಮುಲು, ಸಿ.ಟಿ. ರವಿ ಮತ್ತು ರಾಜುಗೌಡ ಅವರ ಉಪಸ್ಥಿತಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಘೋಷಣೆ ಮಾಡಲಾಗಿದೆ.

ಸೆಪ್ಟೆಂಬರ್‌ 1ರಿಂದ 10ರವರೆಗೆ ಒಟ್ಟು 10 ದಿನಗಳ ಕಾಲ ರಾಯಚೂರಿನಿಂದ ಬಳ್ಳಾರಿಯವರೆಗೆ ಸುಮಾರು 170 ಕಿ.ಮೀ. ಪಾದಯಾತ್ರೆ ನಡೆಯಲಿದೆ. ಲಿಂಗಸುಗೂರು ಕ್ಷೇತ್ರದ ಗುರಗುಂಟದಿಂದ ಆರಂಭವಾಗುವ ಯಾತ್ರೆ ಲಿಂಗಸುಗೂರು, ಮಸ್ಕಿ, ಸಿಂಧನೂರು, ಶಿರಗುಪ್ಪ, ತೆಕ್ಕಲಕೋಟೆ ಹಾಗೂ ಸಿಂದಗೇರಿ ಮಾರ್ಗವಾಗಿ ಬಳ್ಳಾರಿ ತಲುಪಲಿದೆ.

ಪಾದಯಾತ್ರೆಗೆ ಜೆಡಿಎಸ್‌ ಸಂಪೂರ್ಣ ಬೆಂಬಲ ನೀಡಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹಾಗೂ ಎಚ್.ಡಿ. ಕುಮಾರಸ್ವಾಮಿ ಆಗಮಿಸಲಿದ್ದು, ಬಳ್ಳಾರಿಯಲ್ಲಿ ನಡೆಯುವ ಬೃಹತ್ ಸಮಾರೋಪ ಸಮಾವೇಶದಲ್ಲಿ ಕೇಂದ್ರದ ಪ್ರಮುಖ ಸಚಿವರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ವಾಲ್ಮೀಕಿ ನಿಗಮದ ಅಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಶಿವಲಿಂಗೇಗೌಡ ಅವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಆರೋಪಿಸಿದರು. ಇಷ್ಟಾದರೂ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಿ. ನಾಗೇಂದ್ರ ಅವರಿಂದ ರಾಜೀನಾಮೆ ಪಡೆಯದೆ ಸರ್ಕಾರ ರಕ್ಷಣೆ ಮಾಡುತ್ತಿದೆ ಎಂದು ದೂರಿದರು.

ಅಧಿವೇಶನದಲ್ಲಿ ಸತ್ಯ ಎದುರಿಸಲಾಗದೆ ಸರ್ಕಾರ ಕಲಾಪವನ್ನು ಮೊಟಕುಗೊಳಿಸಿ ಪಲಾಯನ ಮಾಡಿದೆ ಎಂದು ವಿಜಯೇಂದ್ರ ಆರೋಪಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿದಾಗ ಇದ್ದ ಉತ್ಸಾಹ ಈಗ ಕಳೆಗುಂದಿದೆ. ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಹಾಗೂ ಸಿದ್ದರಾಮಯ್ಯ ಅವರ ಅಸಮಾಧಾನಗಳಲ್ಲೇ ಸರ್ಕಾರದ ಸಮಯ ಕಳೆಯುತ್ತಿದೆ ಎಂದು ಟೀಕಿಸಿದರು.

ಬಡವರ ಕಲ್ಯಾಣ ಮತ್ತು ಯುವಕರಿಗೆ ಉದ್ಯೋಗ ನೀಡುವುದಕ್ಕಿಂತ ಸರ್ಕಾರ ರಿಯಲ್ ಎಸ್ಟೇಟ್‌ ಯೋಜನೆಗಳತ್ತ ಹೆಚ್ಚು ಗಮನ ಹರಿಸುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು. ವಾಲ್ಮೀಕಿ ಸಮುದಾಯದ ಮೀಸಲಾತಿ, ಉತ್ತರ ಕರ್ನಾಟಕದ ಅಭಿವೃದ್ಧಿ ಸೇರಿದಂತೆ ಸರ್ಕಾರದ ವಿವಿಧ ವೈಫಲ್ಯಗಳನ್ನು ಜನರ ಮುಂದಿಟ್ಟು ಹೋರಾಟ ನಡೆಸುವುದಾಗಿ ಅವರು ಹೇಳಿದರು.

ಕೆಪಿಎಸ್‌ಸಿ ಹಗರಣ: ಸಿಎಂ ಗೃಹಕಚೇರಿ ʻಕೃಷ್ಣಾʼಗೆ ಮುತ್ತಿಗೆ ಹಾಕಲು ವಿದ್ಯಾರ್ಥಿಗಳ ಯತ್ನ

0

ಬೆಂಗಳೂರು: ಕೆಪಿಎಸ್‌ಸಿ ಹಗರಣದಿಂದ ಪರೀಕ್ಷಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಎಬಿವಿಪಿ ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರು ಮುಖ್ಯಮಂತ್ರಿ ಅವರ ಅಧಿಕೃತ ಗೃಹ ಕಚೇರಿ ‘ಕೃಷ್ಣಾ’ಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಎರಡು ತಂಡಗಳಲ್ಲಿ ಆಗಮಿಸಿದ ಪ್ರತಿಭಟನಾಕಾರರು ಕಚೇರಿ ಮುಂಭಾಗಕ್ಕೆ ತೆರಳಿ ಪ್ರತಿಭಟನೆ ನಡೆಸಲು ಮುಂದಾದಾಗ ಪೊಲೀಸರು ಅವರನ್ನು ತಡೆದು ಹಲವರನ್ನು ವಶಕ್ಕೆ ಪಡೆದಿದ್ದಾರೆ.

ಎರಡು ಪ್ರತ್ಯೇಕ ತಂಡಗಳಲ್ಲಿ ಆಗಮಿಸಿದ ಎಬಿವಿಪಿ ಕಾರ್ಯಕರ್ತರು ‘ಕೃಷ್ಣಾ’ ಕಚೇರಿಯತ್ತ ತೆರಳಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದು, ಸ್ಥಳದಲ್ಲಿ ಕೆಲಕಾಲ ಗಲಿಬಿಲಿ ವಾತಾವರಣ ನಿರ್ಮಾಣವಾಯಿತು.

ಪ್ರತಿಭಟನಾಕಾರರನ್ನು ಪೊಲೀಸರು ಎಳೆದೊಯ್ದು ವಶಕ್ಕೆ ಪಡೆದಿದ್ದು, ಪ್ರತಿಭಟನೆ ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಹರಸಾಹಸಪಟ್ಟರು.

ಎಬಿವಿಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಮತ್ತು ತಳ್ಳಾಟದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಕಚೇರಿ ಮುಂಭಾಗದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಕಂಡುಬಂತು.

ಎರಡು ತಂಡಗಳಿಂದ ಮುತ್ತಿಗೆ ಯತ್ನ ನಡೆದ ಹಿನ್ನೆಲೆಯಲ್ಲಿ ‘ಕೃಷ್ಣಾ’ ಕಚೇರಿ ಸುತ್ತಮುತ್ತ ಪೊಲೀಸರು ಭದ್ರತೆ ಹೆಚ್ಚಿಸಿದ್ದರು. ಪ್ರತಿಭಟನೆಯ ಪರಿಣಾಮ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು.

ಕೆಪಿಎಸ್‌ಸಿ ಹಗರಣದ ಕುರಿತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಎಬಿವಿಪಿ, ಪರೀಕ್ಷಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳ ಹಿತದೃಷ್ಟಿಯಿಂದ ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ತುಂಗಾ ನದಿಗೆ ಮಕ್ಕಳೊಂದಿಗೆ ಹಾರಿದ ತಾಯಿ: ಮಹಿಳೆ, ಮಗ ಪಾರು, ಇಬ್ಬರು ಹೆಣ್ಣು ಮಕ್ಕಳು ನಾಪತ್ತೆ

0

ಶಿವಮೊಗ್ಗ: ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆಯೊಬ್ಬರು ಮೂವರು ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಮಹಿಳೆ ಹಾಗೂ 11 ತಿಂಗಳ ಮಗು ಪ್ರಾಣಾಪಾಯದಿಂದ ಪಾರಾಗಿದ್ದು, 6 ವರ್ಷದ ಸಾನ್ವಿಕಾ ಮತ್ತು 4 ವರ್ಷದ ತನ್ವಿಕಾ ನದಿಯಲ್ಲಿ ನಾಪತ್ತೆಯಾಗಿದ್ದಾರೆ. ಇಬ್ಬರು ಬಾಲಕಿಯರಿಗಾಗಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ತೀವ್ರ ಶೋಧ ನಡೆಸುತ್ತಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಸೂರು ಗ್ರಾಮದ ಭವಾನಿ ಸೋಮವಾರ ಮಧ್ಯಾಹ್ನ ಬಸ್ ಮೂಲಕ ಶಿವಮೊಗ್ಗ ನಗರಕ್ಕೆ ಬಂದಿದ್ದರು. ಬಳಿಕ ಚಿಕ್ಕಲ್ ರಸ್ತೆಯ ಶ್ರೀ ಅರಕೇಶ್ವರ ದೇವಸ್ಥಾನದ ಬಳಿ ತೆರಳಿದ್ದಾರೆ ಎನ್ನಲಾಗಿದೆ.

ಸೋಮವಾರ ಸಂಜೆ ಸುಮಾರು 7.30ರ ವೇಳೆಗೆ ರೈಲ್ವೆ ಸೇತುವೆ ಸಮೀಪದ ತುಂಗಾ ನದಿಗೆ ಮಹಿಳೆ ಮಕ್ಕಳೊಂದಿಗೆ ತೆರಳಿದ್ದಾರೆ. ಪೊಲೀಸರ ಪ್ರಕಾರ, ಮೊದಲು ಇಬ್ಬರು ಹೆಣ್ಣುಮಕ್ಕಳನ್ನು ನದಿಗೆ ತಳ್ಳಿ, ಬಳಿಕ ತಮ್ಮ 11 ತಿಂಗಳ ಮಗನೊಂದಿಗೆ ನದಿಗೆ ಹಾರಿದ್ದಾರೆ.

ಮಹಿಳೆ ಹಾಗೂ ಮಗ ನದಿಗೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯ ಯುವಕರು ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಹೊರತೆಗೆದಿದ್ದಾರೆ. ಬಳಿಕ ಇಬ್ಬರನ್ನೂ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆರೋಗ್ಯ ಸ್ಥಿರವಾಗಿದೆ.

ಇತ್ತ ನಾಪತ್ತೆಯಾಗಿರುವ ಸಾನ್ವಿಕಾ ಮತ್ತು ತನ್ವಿಕಾ ಅವರಿಗಾಗಿ ಮಂಗಳವಾರ ಬೆಳಗ್ಗೆಯಿಂದಲೇ ನದಿಯಲ್ಲಿ ಶೋಧ ನಡೆಸಲಾಗುತ್ತಿದೆ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಘಟನೆಯ ಹಿನ್ನೆಲೆ ಕೌಟುಂಬಿಕ ಕಲಹ ಎನ್ನಲಾಗಿದ್ದು, ಮಹಿಳೆ ಈ ನಿರ್ಧಾರ ಕೈಗೊಳ್ಳಲು ಕಾರಣವಾದ ನಿಖರ ಸಂಗತಿಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಇಬ್ಬರು ಮಕ್ಕಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.

ಎಥೆನಾಲ್‌ ಗಣಿತವೇ ಸರಿಯಿಲ್ಲ: ಕೇಂದ್ರದ ಅಕ್ಕಿ ಮಾರಾಟ ನೀತಿ ವಿರುದ್ಧ ಪ್ರಿಯಾಂಕ್ ಖರ್ಗೆ ವ್ಯಂಗ್ಯ

0

ಬೆಂಗಳೂರು: ಆಹಾರ ಭದ್ರತೆಗಾಗಿ ತೆರಿಗೆದಾರರ ಹಣದಲ್ಲಿ ಭತ್ತ ಖರೀದಿಸಿ, ಸಂಗ್ರಹಿಸಿ, ಸಾಗಣೆ ವೆಚ್ಚ ಭರಿಸಿದ ಬಳಿಕ ಭಾರತೀಯ ಆಹಾರ ನಿಗಮದ ಮೂಲಕ ಎಥೆನಾಲ್ ಉತ್ಪಾದಕರಿಗೆ ಸ್ವಾಧೀನ ವೆಚ್ಚಕ್ಕಿಂತ ಸುಮಾರು ಶೇ.40ರಷ್ಟು ಕಡಿಮೆ ದರದಲ್ಲಿ ಅಕ್ಕಿ ಮಾರಾಟ ಮಾಡುತ್ತಿರುವ ಕೇಂದ್ರ ಸರ್ಕಾರದ ನೀತಿಯನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಭಾರತದ ಎಥೆನಾಲ್ ಗಣಿತವೇ ಸರಿಯಾಗಿ ಹೊಂದಿಕೆಯಾಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಆಹಾರ ಭದ್ರತೆಗಾಗಿ ಸರ್ಕಾರ ರೈತರಿಂದ ಭತ್ತ ಖರೀದಿಸುತ್ತದೆ, ಇದಕ್ಕೆ ತೆರಿಗೆದಾರರ ಹಣ ಬಳಕೆಯಾಗುತ್ತದೆ ಎಂದ ಅವರು, ಖರೀದಿಸಿದ ಧಾನ್ಯದ ಸಂಗ್ರಹಣೆ ಮತ್ತು ಸಾಗಣೆಯಿಂದ ಸರ್ಕಾರದ ಮೇಲೆ ಮತ್ತಷ್ಟು ವೆಚ್ಚದ ಹೊರೆ ಬೀಳುತ್ತದೆ ಎಂದು ವಿವರಿಸಿದ್ದಾರೆ. ಇಷ್ಟೆಲ್ಲ ವೆಚ್ಚದ ಬಳಿಕ ಅದೇ ಅಕ್ಕಿಯನ್ನು ಎಥೆನಾಲ್ ಉತ್ಪಾದಕರಿಗೆ ಶೇ.40ರಷ್ಟು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿರುವುದು ಯಾವ ರೀತಿಯ ಆರ್ಥಿಕ ನೀತಿ ಎಂದು ಪ್ರಶ್ನಿಸಿದ್ದಾರೆ.

ಖರೀದಿ, ಸಂಗ್ರಹಣೆ, ಸಾಗಣೆಗೆ ಸರ್ಕಾರ ವೆಚ್ಚ ಮಾಡಿ, ಬಳಿಕ ಅದೇ ಧಾನ್ಯವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಈ ವ್ಯವಸ್ಥೆಯಿಂದ ನಿಜವಾಗಿ ಲಾಭ ಪಡೆಯುತ್ತಿರುವವರು ಯಾರು ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ತುರ್ತಾಗಿ ಸೃಷ್ಟಿಸಲಾದ ಎಥೆನಾಲ್ ಉತ್ಪಾದನಾ ಸಾಮರ್ಥ್ಯಕ್ಕೆ ಕಚ್ಚಾ ವಸ್ತು ಒದಗಿಸುವ ಉದ್ದೇಶದಿಂದ ಆಹಾರ ಧಾನ್ಯವನ್ನು ದೊಡ್ಡ ಪ್ರಮಾಣದಲ್ಲಿ ಎಥೆನಾಲ್ ಉತ್ಪಾದನೆಗೆ ತಿರುಗಿಸಲಾಗುತ್ತಿದೆಯೇ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.

ಸರ್ಕಾರವೇ ಎಥೆನಾಲ್ ಉತ್ಪಾದಕರಿಂದ ಹೆಚ್ಚಿನ ಬೆಲೆಗೆ ಎಥೆನಾಲ್ ಖರೀದಿಸಿ ಪೆಟ್ರೋಲ್‌ನಲ್ಲಿ ಮಿಶ್ರಣ ಮಾಡುತ್ತಿರುವ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಧಾನ್ಯವನ್ನು ಕಡಿಮೆ ದರದಲ್ಲಿ ನೀಡಿ ಬಳಿಕ ಅದೇ ಉದ್ಯಮದಿಂದ ಹೆಚ್ಚಿನ ಬೆಲೆಗೆ ಎಥೆನಾಲ್ ಖರೀದಿಸುವುದರಿಂದ ಸಾಮಾನ್ಯ ಗ್ರಾಹಕನಿಗೆ ಆಗುವ ಲಾಭವೇನು ಎಂದು ಪ್ರಶ್ನಿಸಿದ್ದಾರೆ.

ಪತ್ನಿಯನ್ನು ಮನೆಗೆಲಸಕ್ಕೆ, ಪೋಷಕರ ಸೇವೆಗೆ ಬಲವಂತ ಮಾಡುವಂತಿಲ್ಲ: ಕರ್ನಾಟಕ ಹೈಕೋರ್ಟ್

0

ಬೆಂಗಳೂರು: ಪತ್ನಿಯನ್ನು ಕೇವಲ ಮನೆಗೆಲಸ ಮಾಡುವಂತೆ ಅಥವಾ ಪತಿಯ ಪೋಷಕರನ್ನು ನೋಡಿಕೊಳ್ಳುವಂತೆ ಒತ್ತಾಯಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ವಿವಾಹವು ಮಹಿಳೆಯ ವೈಯಕ್ತಿಕ ಸ್ವಾತಂತ್ರ್ಯ, ಇಚ್ಛೆ ಹಾಗೂ ಹಕ್ಕುಗಳನ್ನು ನಿಯಂತ್ರಿಸುವ ಪರವಾನಗಿ ಅಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪತ್ನಿ ಹಾಗೂ ಮಗಳಿಗೆ ಮಾಸಿಕ ₹9 ಸಾವಿರ ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಿಲ್ಲಾಕೂರ್‌ ಸುಮಲತಾ ಅವರ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.

ಪತ್ನಿಯಾದವಳು ಕೇವಲ ಮನೆಗೆಲಸ ಮಾಡುತ್ತಲೇ ಇರಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ. ವೃದ್ಧ ಪೋಷಕರನ್ನು ನೋಡಿಕೊಳ್ಳುವ ಪ್ರಾಥಮಿಕ ಜವಾಬ್ದಾರಿ ಅವರ ಮಗ ಅಥವಾ ಮಗಳಿಗೆ ಸೇರಿದ್ದೇ ಹೊರತು, ಅಳಿಯ ಅಥವಾ ಸೊಸೆಯ ಮೇಲಲ್ಲ ಎಂದು ನ್ಯಾಯಾಲಯ ಹೇಳಿದೆ.

ಮಹಿಳೆಯೊಬ್ಬಳು ತನ್ನ ತವರು ಮನೆಗೆ ತೆರಳಲು ಗಂಡನ ಮನೆಯಲ್ಲಿರುವ ಪ್ರತಿಯೊಬ್ಬರ ಅನುಮತಿ ಪಡೆಯಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ವಿವಾಹವು ಮತ್ತೊಬ್ಬ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಇಚ್ಛೆಯನ್ನು ನಿಯಂತ್ರಿಸಲು, ಆಜ್ಞಾಪಿಸಲು ಅಥವಾ ಪ್ರಾಬಲ್ಯ ಸಾಧಿಸಲು ನೀಡುವ ಪರವಾನಗಿ ಅಲ್ಲ ಎಂದು ನ್ಯಾಯಾಲಯ ಖಡಕ್‌ ಆಗಿ ಹೇಳಿದೆ.

ಮಹಿಳೆಗೆ ತನ್ನ ಇಚ್ಛೆಯಂತೆ ತವರು ಮನೆಗೆ ಭೇಟಿ ನೀಡುವ ಹಕ್ಕಿದೆ. ಅದಕ್ಕಾಗಿ ಗಂಡನ ಮನೆಯ ಪ್ರತಿಯೊಬ್ಬರ ಅನುಮತಿ ಪಡೆಯಬೇಕು ಎಂಬ ನಿಯಮವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಮಹಿಳೆಗೆ ತನ್ನ ವೃತ್ತಿಜೀವನ ಹಾಗೂ ಆರ್ಥಿಕತೆಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಪೂರ್ಣ ಹಕ್ಕಿದೆ. ಪತ್ನಿಯು ತನ್ನ ಇಚ್ಛೆ ಮತ್ತು ನಿರೀಕ್ಷೆಗಳಿಗೆ ಅನುಗುಣವಾಗಿ ಮಾತ್ರ ಬದುಕಬೇಕು ಎಂದು ಪತಿ ಒತ್ತಾಯಿಸುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಪತ್ನಿಯ ನಿಷ್ಠೆಯನ್ನು ಕೇವಲ ಆಕೆ ಎಷ್ಟು ವಿಧೇಯಳಾಗಿದ್ದಾಳೆ ಎಂಬ ಆಧಾರದ ಮೇಲೆ ಅಳೆಯಲು ಸಾಧ್ಯವಿಲ್ಲ ಎಂದೂ ಪೀಠ ಅಭಿಪ್ರಾಯಪಟ್ಟಿದೆ.

ಕೂಲಿ ಕೆಲಸ ಮಾಡುತ್ತಿದ್ದ ಪತಿ ವಿಚಾರಣೆ ವೇಳೆ, ಪತ್ನಿ ತನ್ನ ಪೋಷಕರನ್ನು ನೋಡಿಕೊಳ್ಳುತ್ತಿರಲಿಲ್ಲ, ಸರಿಯಾಗಿ ಮನೆಗೆಲಸ ಮಾಡುತ್ತಿರಲಿಲ್ಲ ಹಾಗೂ ತನ್ನ ಅನುಮತಿ ಪಡೆಯದೆ ಹಲವು ಬಾರಿ ತವರು ಮನೆಗೆ ಹೋಗಿದ್ದಳು ಎಂದು ಆರೋಪಿಸಿದ್ದ.

ಇದಕ್ಕೆ ಪ್ರತಿಯಾಗಿ ಪತ್ನಿ, ಪತಿಯ ಜೂಜು ಹಾಗೂ ಮದ್ಯಪಾನದ ಚಟದ ಜೊತೆಗೆ ಆತನ ಕುಟುಂಬಸ್ಥರಿಂದ ದೈಹಿಕ ಮತ್ತು ಮಾನಸಿಕ ಹಿಂಸೆ ಅನುಭವಿಸಿದ್ದಾಗಿ ತಿಳಿಸಿದ್ದಳು.

ಪತಿಯ ವಾದವನ್ನು ತಳ್ಳಿಹಾಕಿದ ಹೈಕೋರ್ಟ್‌, ಆತನ ನಡವಳಿಕೆಯು ಮಾಲೀಕ ಮತ್ತು ನೌಕರನ ನಡುವಿನ ಸಂಬಂಧದಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಅಂತಿಮವಾಗಿ, ಪತ್ನಿ ಹಾಗೂ ಮಗಳಿಗೆ ಮಾಸಿಕ ₹9 ಸಾವಿರ ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ. ಪತಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ.

ಜೈಲಿನ ಬದಲು ಆಸ್ಪತ್ರೆಯಲ್ಲಿ ವಿಐಪಿ ಸೌಲಭ್ಯ?: ನ್ಯಾಯಾಧೀಶರ ದಾಳಿಯಲ್ಲಿ ಕರ್ತವ್ಯಲೋಪ ಬಯಲು

0

ಮಂಡ್ಯ: ಲೋಕಾಯುಕ್ತ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಅಧಿಕಾರಿಗೆ ಆಸ್ಪತ್ರೆಯಲ್ಲಿ ವಿಶೇಷ ಸೌಲಭ್ಯ ಕಲ್ಪಿಸಿದ ಆರೋಪ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸಿ. ಚಂದ್ರಶೇಖರ್ ನೇತೃತ್ವದ ತಂಡ ನಡೆಸಿದ ದಿಢೀರ್ ತಪಾಸಣೆಯಲ್ಲಿ ಜೈಲಾಧಿಕಾರಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿಯ ಕಾರ್ಯವೈಖರಿ ಪ್ರಶ್ನಾರ್ಹವಾಗಿರುವುದು ಬೆಳಕಿಗೆ ಬಂದಿದೆ.

ಶ್ರೀರಂಗಪಟ್ಟಣದ ಎಡಿಎಲ್‌ಆರ್ ಮಹಮದ್ ಹುಸೇನ್ ಅಕ್ರಮ ಖಾತೆ ಸೃಷ್ಟಿ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದರು. ನಿಯಮದಂತೆ ಜೈಲಿನಲ್ಲಿರಬೇಕಿದ್ದ ಅವರನ್ನು ಅನಾರೋಗ್ಯದ ಕಾರಣ ನೀಡಿ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಸಾಮಾನ್ಯ ವಾರ್ಡ್ ಬದಲಿಗೆ ಆಸ್ಪತ್ರೆಯ ಸ್ಪೆಷಲ್ ರೂಮ್‌ನಲ್ಲಿ ಇರಿಸಲಾಗಿದ್ದು, ಆರೋಪಿಗೆ ವಿಶೇಷ ಸೌಲಭ್ಯ ನೀಡಲಾಗುತ್ತಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಧೀಶರ ತಂಡ ಪರಿಶೀಲನೆ ನಡೆಸಿದೆ.

ಪರಿಶೀಲನೆ ವೇಳೆ ವೈದ್ಯಾಧಿಕಾರಿಯನ್ನು ವಿಚಾರಿಸಿದಾಗ, ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸುವಷ್ಟು ಗಂಭೀರ ಆರೋಗ್ಯ ಸಮಸ್ಯೆ ಇಲ್ಲ ಎಂಬ ಮಾಹಿತಿ ದೊರೆತಿದೆ ಎನ್ನಲಾಗಿದೆ.

ಇದಕ್ಕಿಂತ ಗಂಭೀರವಾಗಿ, ಸ್ಪೆಷಲ್ ರೂಮ್‌ನಲ್ಲಿದ್ದ ಮಹಮದ್ ಹುಸೇನ್ ಜೊತೆ ಯುವತಿಯೊಬ್ಬಳು ಪತ್ತೆಯಾಗಿದ್ದಾಳೆ. ಆಕೆ ತನ್ನನ್ನು ಆರೋಪಿಯ ಗೆಳತಿ ಎಂದು ಪರಿಚಯಿಸಿಕೊಂಡಿದ್ದಾಳೆ ಎನ್ನಲಾಗಿದೆ.

ನ್ಯಾಯಾಲಯದ ಅನುಮತಿ ಪಡೆಯದೆ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿರುವುದೇಕೆ ಎಂದು ನ್ಯಾಯಾಧೀಶರು ಜೈಲಾಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಜೈಲಿನ ವೈದ್ಯರ ಸಲಹೆಯ ಮೇರೆಗೆ ದಾಖಲಿಸಲಾಗಿದ್ದು, ನಂತರ ನ್ಯಾಯಾಲಯಕ್ಕೆ ಮಾಹಿತಿ ನೀಡುವುದಾಗಿ ಅಧಿಕಾರಿಗಳು ಉತ್ತರಿಸಿದ್ದಾರೆ ಎನ್ನಲಾಗಿದೆ.

ಘಟನೆಯಿಂದ ಅಸಮಾಧಾನಗೊಂಡ ನ್ಯಾಯಾಧೀಶರು, ಜೈಲಾಧಿಕಾರಿಗಳು ಹಾಗೂ ಮಿಮ್ಸ್ ವೈದ್ಯಾಧಿಕಾರಿಗಳ ನಡೆ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ನಿಯಮ ಉಲ್ಲಂಘನೆ ಅಥವಾ ಕರ್ತವ್ಯಲೋಪ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಲೋಕಾಯುಕ್ತ ಪ್ರಕರಣದಲ್ಲಿ ಬಂಧನಕ್ಕೊಳಗಾದ ಅಧಿಕಾರಿಗೆ ಜೈಲಿನ ಬದಲು ಆಸ್ಪತ್ರೆಯ ಸ್ಪೆಷಲ್ ರೂಮ್‌ನಲ್ಲಿ ಸಿಕ್ಕಿದ್ದ ಈ ‘ವಿಶೇಷ ಸೌಲಭ್ಯ’ ಇದೀಗ ತನಿಖೆಯ ಕೇಂದ್ರಬಿಂದುವಾಗಿದೆ.