Home Blog

ಸಿನಿಮಾದಿಂದ ಜನಸೇವೆಯತ್ತ ಧನುಷ್ ಹೆಜ್ಜೆ? ಅಭಿಮಾನಿಗಳಿಗೆ ಕೊಟ್ಟ ಸಂದೇಶವೇ ರಾಜಕೀಯ ಪ್ರವೇಶದ ಸುಳಿವಾ?

ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಮತ್ತೊಬ್ಬ ಸಿನಿಮಾ ತಾರೆ ಎಂಟ್ರಿ ಕೊಡಲಿದ್ದಾರಾ ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ. ನಟ ಧನುಷ್ ಅವರು ಅಭಿಮಾನಿಗಳನ್ನು ಉದ್ದೇಶಿಸಿ ನೀಡಿದ ಸಮಾಜ ಸೇವೆಯ ಸಂದೇಶ ಹಾಗೂ ತಮ್ಮ ಅಭಿಮಾನಿ ಸಂಘದ ಹೊಸ ಧ್ವಜ ಅನಾವರಣ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ದಳಪತಿ ವಿಜಯ್ ಬಳಿಕ ಧನುಷ್ ಕೂಡ ರಾಜಕೀಯ ಅಖಾಡಕ್ಕೆ ಇಳಿಯುವ ಸಿದ್ಧತೆ ನಡೆಸುತ್ತಿದ್ದಾರಾ ಎಂಬ ಕುತೂಹಲ ಹೆಚ್ಚಾಗಿದೆ.

ಚೆನ್ನೈನಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದ ಧನುಷ್, ತಮ್ಮ ಅಭಿಮಾನಿಗಳ ಒಗ್ಗಟ್ಟನ್ನು ಪ್ರಶಂಸಿಸಿದರು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಒಂದೇ ಉದ್ದೇಶಕ್ಕಾಗಿ ಸೇರುವುದು ದೊಡ್ಡ ಶಕ್ತಿ. ಈ ಶಕ್ತಿಯನ್ನು ಕೇವಲ ಸಿನಿಮಾಗಳಿಗೆ ಮಾತ್ರ ಬಳಸದೆ ಸಮಾಜದ ಒಳಿತಿಗಾಗಿ ಬಳಸಬೇಕು ಎಂದು ಧನುಷ್ ಹೇಳಿದ್ದಾರೆ.

ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಸ್ಥಳೀಯ ಮಟ್ಟದಲ್ಲಿ ಅಗತ್ಯವಿರುವವರಿಗೆ ಸಹಾಯ ಮಾಡುವಂತೆ ಅವರು ಅಭಿಮಾನಿಗಳಿಗೆ ಸೂಚಿಸಿದ್ದಾರೆ.

ಧನುಷ್ ಅವರ ಈ ಮಾತುಗಳು ಕೇವಲ ಅಭಿಮಾನಿಗಳಿಗೆ ನೀಡಿದ ಸಲಹೆಯೇ ಅಥವಾ ರಾಜಕೀಯ ಪ್ರವೇಶದ ಮೊದಲ ಹೆಜ್ಜೆಯೇ ಎಂಬ ಚರ್ಚೆ ಈಗ ತಮಿಳುನಾಡಿನಲ್ಲಿ ಜೋರಾಗಿದೆ. ರಕ್ತದಾನ ಶಿಬಿರದ ವೇದಿಕೆಯಲ್ಲಿ ಧನುಷ್ ತಮ್ಮ ಅಭಿಮಾನಿ ಸಂಘದ ಹೊಸ ಧ್ವಜವನ್ನು ಅನಾವರಣ ಮಾಡಿರುವುದು ವಿಶೇಷ ಗಮನ ಸೆಳೆದಿದೆ.

ಸಾಮಾನ್ಯವಾಗಿ ತಮಿಳುನಾಡಿನಲ್ಲಿ ಸಿನಿಮಾ ಅಭಿಮಾನಿ ಸಂಘಗಳು ರಾಜಕೀಯ ಚಟುವಟಿಕೆಗಳ ಮೊದಲ ಹಂತವಾಗಿರುವ ಹಿನ್ನೆಲೆಯಲ್ಲಿ, ಧನುಷ್ ಅವರ ಈ ಬೆಳವಣಿಗೆಯನ್ನು ರಾಜಕೀಯ ವಿಶ್ಲೇಷಕರು ಗಮನಿಸುತ್ತಿದ್ದಾರೆ.

ನಟ ವಿಜಯ್ ಕೂಡ ರಾಜಕೀಯ ಪ್ರವೇಶಕ್ಕೂ ಮೊದಲು ಅಭಿಮಾನಿ ಸಂಘಗಳ ಮೂಲಕ ಜನಸೇವಾ ಕಾರ್ಯಕ್ರಮಗಳನ್ನು ನಡೆಸಿದ್ದರು. ಬಳಿಕ ಪಕ್ಷ ಸ್ಥಾಪಿಸಿ ಚುನಾವಣಾ ರಾಜಕೀಯಕ್ಕೆ ಕಾಲಿಟ್ಟಿದ್ದರು. ಇದೀಗ ಧನುಷ್ ಅವರ ಹೆಜ್ಜೆಗಳು ಕೂಡ ಅದೇ ಮಾದರಿಯಲ್ಲಿವೆ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.

ಧನುಷ್ ಅವರು 2031ರ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಬಹುದು ಎಂಬ ಚರ್ಚೆಗಳೂ ನಡೆಯುತ್ತಿವೆ.

ಧನುಷ್ ಅವರ ಸಿನಿಮಾ ಪಯಣದಲ್ಲೂ ಜನಪರ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ‘ಅಸುರನ್’ನಲ್ಲಿ ಶೋಷಿತರ ಪರ ಧ್ವನಿಯಾಗಿದ್ದ ಅವರು, ‘ಕರ್ಣನ್’ನಲ್ಲಿ ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಡುವ ಪಾತ್ರ ನಿರ್ವಹಿಸಿದ್ದರು.

‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ದಬ್ಬಾಳಿಕೆ ವಿರುದ್ಧ ಹೋರಾಡುವ ಕ್ರಾಂತಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಾಮಾಜಿಕ ಸಂದೇಶ ಹೊಂದಿರುವ ಸಿನಿಮಾಗಳು, ಅಭಿಮಾನಿ ಸಂಘದ ಚಟುವಟಿಕೆಗಳು ಹಾಗೂ ಜನರೊಂದಿಗೆ ಸಂಪರ್ಕ ಬೆಳೆಸುವ ಪ್ರಯತ್ನ — ಧನುಷ್ ಅವರ ಮುಂದಿನ ರಾಜಕೀಯ ಹೆಜ್ಜೆಗಳ ಬಗ್ಗೆ ಕುತೂಹಲ ಹೆಚ್ಚಿಸಿದೆ.

ಶಿವಾಜಿನಗರದಲ್ಲಿ ಮತ್ತೆ ಫುಟ್‌ಪಾತ್ ತೆರವು ಕಾರ್ಯಾಚರಣೆ: 100ಕ್ಕೂ ಹೆಚ್ಚು ಪೊಲೀಸರ ಭದ್ರತೆ

ಬೆಂಗಳೂರು: ರಾಜಧಾನಿಯ ಅತ್ಯಂತ ಜನನಿಬಿಡ ಹಾಗೂ ಸೂಕ್ಷ್ಮ ಪ್ರದೇಶವಾಗಿರುವ ಶಿವಾಜಿನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಮತ್ತೆ ಆರಂಭವಾಗಿದೆ. ಇತ್ತೀಚೆಗೆ ಜಿಬಿಎ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ನಡೆದ ಹಲ್ಲೆ ಬಳಿಕ ಸ್ಥಗಿತಗೊಂಡಿದ್ದ ಕಾರ್ಯಾಚರಣೆ ಇದೀಗ ಪೊಲೀಸರ ಭದ್ರತೆಯೊಂದಿಗೆ ಪುನಾರಂಭಗೊಂಡಿದೆ.

ಜಿಬಿಎ ಅಧಿಕಾರಿಗಳ ತಂಡ ಶಿವಾಜಿನಗರದ ರಸೆಲ್ ಮಾರ್ಕೆಟ್ ರಸ್ತೆ, ಶಿವಾಜಿನಗರ ಚರ್ಚ್ ರಸ್ತೆ ಹಾಗೂ ಬೌರಿಂಗ್ ಆಸ್ಪತ್ರೆ ರಸ್ತೆಗಳಲ್ಲಿ ತೆರವು ಕಾರ್ಯ ನಡೆಸುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪುಲಿಕೇಶಿನಗರ ಎಸಿಪಿ, ಕಮರ್ಷಿಯಲ್ ಸ್ಟ್ರೀಟ್ ಹಾಗೂ ಶಿವಾಜಿನಗರ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.

ಜುಲೈ 21ರಂದು ಶಿವಾಜಿನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಪುಂಡರ ಗುಂಪೊಂದು ಜಿಬಿಎ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿತ್ತು. ಈ ಘಟನೆಯ ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಒಂದು ವಾರಗಳ ಕಾಲ ತೆರವು ಕಾರ್ಯ ಸ್ಥಗಿತಗೊಳಿಸಲಾಗಿತ್ತು.

ಶಿವಾಜಿನಗರ ಬಸ್‌ ನಿಲ್ದಾಣದ ಬಳಿ ಬೆಳಗ್ಗೆ ಆರಂಭವಾಗಿದ್ದ ತೆರವು ಕಾರ್ಯಾಚರಣೆ ವೇಳೆ ಮಧ್ಯಾಹ್ನ ಸುಮಾರು 12:30ರ ವೇಳೆಗೆ ಇನ್ನೋವಾ ಕಾರಿನಲ್ಲಿ ಬಂದ ಬಸವರಾಜ್ ಪಡುಕೋಟೆ ಹಾಗೂ ಆತನ ಬೆಂಬಲಿಗರು ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದರು ಎಂದು ಆರೋಪಿಸಲಾಗಿದೆ.

ಸಹಾಯಕ ಕಾರ್ಯಪಾಲಕ ಅಭಿಯಂತರ (AEE) ಮಾಧವ್ ರಾವ್ ಅವರ ಮೇಲೆ ಹಲ್ಲೆ ನಡೆಸಲಾಗಿದ್ದು, ತಳ್ಳಿದ ರಭಸಕ್ಕೆ ಅವರು ಕೆಳಗೆ ಬಿದ್ದಿದ್ದರು. ಬಳಿಕ ಹೆಲ್ಮೆಟ್ ಹಾಗೂ ಪ್ಲಾಸ್ಟಿಕ್ ಚೇರ್‌ಗಳಿಂದ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಇದೇ ವೇಳೆ ಮಹಿಳಾ ಅಧಿಕಾರಿಯೊಬ್ಬರ ಮೇಲೆ ಪೆಪ್ಪರ್ ಸ್ಪ್ರೇ ಬಳಸಿ ಭಯದ ವಾತಾವರಣ ಸೃಷ್ಟಿಸಲಾಗಿತ್ತು ಎಂದು ಆರೋಪಿಸಲಾಗಿತ್ತು.

ಘಟನೆ ಸಂಬಂಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ತನಿಖೆ ನಡೆಸಿ, ಪ್ರಮುಖ ಆರೋಪಿ ಬಸವರಾಜ್ ಪಡುಕೋಟೆ ಸೇರಿ 12 ಮಂದಿಯನ್ನು ಬಂಧಿಸಿದ್ದರು. ಈ ಪೈಕಿ ಐವರು ಪ್ರಮುಖ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಹಲ್ಲೆ ಪ್ರಕರಣದ ಬಳಿಕ ಇದೀಗ ಮತ್ತೆ ಶಿವಾಜಿನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದೆ.

ಬಂಡೀಪುರ, ನಾಗರಹೊಳೆಯಲ್ಲಿ ಸಫಾರಿ ದರ ದಿಢೀರ್ ಏರಿಕೆ: ಸೆಪ್ಟೆಂಬರ್‌ 1ರಿಂದ ಹೊಸ ದರ ಜಾರಿ

ಚಾಮರಾಜನಗರ: ಪ್ರವಾಸಿಗರಿಗೆ ಅರಣ್ಯ ಇಲಾಖೆ ಶಾಕ್ ನೀಡಿದ್ದು, ರಾಜ್ಯದ ಪ್ರಸಿದ್ಧ ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿ ದರವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಬಸ್‌, ಜೀಪ್‌ ಸಫಾರಿ, ಕ್ಯಾಮೆರಾ ಬಳಕೆ ಶುಲ್ಕ ಹಾಗೂ ವಾಹನ ನಿಲುಗಡೆ ಶುಲ್ಕ ಸೇರಿದಂತೆ ವಿವಿಧ ಸೇವೆಗಳ ದರ ಬಹುತೇಕ ದ್ವಿಗುಣಗೊಳಿಸಲಾಗಿದೆ.

ಸೆಪ್ಟೆಂಬರ್‌ 1ರಿಂದ ಪರಿಷ್ಕೃತ ಸಫಾರಿ ದರಗಳು ಜಾರಿಗೆ ಬರಲಿವೆ. ಬಂಡೀಪುರ ಹಾಗೂ ನಾಗರಹೊಳೆ ಎರಡೂ ಅಭಯಾರಣ್ಯಗಳಲ್ಲಿ ಹೊಸ ದರ ಅನ್ವಯವಾಗಲಿದೆ.

ಬಂಡೀಪುರದಲ್ಲಿ ಬಸ್‌ ಸಫಾರಿಗೆ ವಯಸ್ಕರ ಟಿಕೆಟ್‌ ದರವನ್ನು ₹650ರಿಂದ ₹1,000ಕ್ಕೆ ಹೆಚ್ಚಿಸಲಾಗಿದೆ. 12 ವರ್ಷದೊಳಗಿನ ಮಕ್ಕಳಿಗೆ ₹350ರಿಂದ ₹500ಕ್ಕೆ ಏರಿಕೆ ಮಾಡಲಾಗಿದೆ.

ಜೀಪ್‌ ಸಫಾರಿಗೆ ವಯಸ್ಕರ ದರ ₹750ರಿಂದ ₹1,500ಕ್ಕೆ ಹೆಚ್ಚಿಸಲಾಗಿದ್ದು, ಮಕ್ಕಳಿಗೆ ₹750 ದರ ನಿಗದಿ ಮಾಡಲಾಗಿದೆ. ಈ ದರದಲ್ಲಿ ನೇಚರ್‌ ಗೈಡ್‌ ಶುಲ್ಕವೂ ಸೇರಿರುತ್ತದೆ.

ಕ್ಯಾಮೆರಾ ಬಳಕೆಗೂ ಹೊಸ ಶುಲ್ಕ

ಸಫಾರಿ ವೇಳೆ ಕ್ಯಾಮೆರಾ ಬಳಕೆಗೆ ಹೊಸ ನಿಯಮ ಜಾರಿಗೊಳಿಸಲಾಗಿದೆ. 200 ಎಂಎಂವರೆಗೆ ಲೆನ್ಸ್‌ ಹೊಂದಿರುವ ಕ್ಯಾಮೆರಾಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಆದರೆ 200 ಎಂಎಂಗಿಂತ ಹೆಚ್ಚಿನ ಲೆನ್ಸ್‌ ಹೊಂದಿರುವ ಕ್ಯಾಮೆರಾಗಳಿಗೆ ₹1,500 ಜೊತೆಗೆ ಶೇ.18ರಷ್ಟು ಜಿಎಸ್‌ಟಿ ಪಾವತಿಸಬೇಕಾಗುತ್ತದೆ.

ಬಂಡೀಪುರದಲ್ಲಿ ಸ್ವಂತ ಜೀಪ್‌, ಎಲ್‌ಸಿವಿ ಅಥವಾ ಬೋಟ್‌ ಮೂಲಕ ಅನುಮತಿ ಪಡೆದ ಪ್ರದೇಶಗಳಿಗೆ ಪ್ರವೇಶಿಸುವವರಿಗೂ ಹೊಸ ದರ ನಿಗದಿ ಮಾಡಲಾಗಿದೆ.

  • ವಯಸ್ಕರಿಗೆ – ₹600
  • ಮಕ್ಕಳಿಗೆ – ₹300
  • ಜೀಪ್‌ – ₹2,500
  • ಲಘು ವಾಣಿಜ್ಯ ವಾಹನ – ₹3,500
  • ಬೋಟ್‌ – ₹3,500

ನಾಗರಹೊಳೆಯಲ್ಲಿ ಹೊಸ ಸಫಾರಿ ದರ

ನಾಗರಹೊಳೆಯಲ್ಲೂ ಸಫಾರಿ ದರ ಹೆಚ್ಚಳ ಮಾಡಲಾಗಿದೆ.

  • ಬಸ್‌ ಸಫಾರಿ: ವಯಸ್ಕರಿಗೆ ₹1,000, ಮಕ್ಕಳಿಗೆ ₹500
  • ಜೀಪ್‌ ಸಫಾರಿ: ವಯಸ್ಕರಿಗೆ ₹1,500, ಮಕ್ಕಳಿಗೆ ₹750
  • 200 ಎಂಎಂಗಿಂತ ಹೆಚ್ಚಿನ ಲೆನ್ಸ್‌ ಕ್ಯಾಮೆರಾ: ₹1,500

ವಾಹನ ನಿಲುಗಡೆ ಶುಲ್ಕದಲ್ಲೂ ಹೆಚ್ಚಳ ಮಾಡಲಾಗಿದ್ದು,

  • ಕಾರು – ₹100
  • ಲಘು ವಾಹನ – ₹200
  • ಬಸ್‌ – ₹300 ನಿಗದಿ ಮಾಡಲಾಗಿದೆ.

ನೀಟ್‌ ಪ್ರತಿಭಟನೆ ವೇಳೆ AK-47 ಹಿಡಿದು ಗುಂಡು ಹಾರಿಸಿದ ಕಾನ್ಸ್‌ಟೇಬಲ್‌ ಅಮಾನತು

0

ಪಾಟ್ನಾ: ಬಿಹಾರದಲ್ಲಿ ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ AK-47 ರೈಫಲ್‌ ಹಿಡಿದು ಗುಂಡು ಹಾರಿಸಿದ ಆರೋಪದ ಮೇಲೆ ಪೊಲೀಸ್‌ ಕಾನ್ಸ್‌ಟೇಬಲ್‌ ಒಬ್ಬರನ್ನು ಅಮಾನತು ಮಾಡಲಾಗಿದೆ. ಸಿವಾನ್ ಜಿಲ್ಲೆಯಲ್ಲಿ ನಡೆದ ‘ಬಿಹಾರ ಬಂದ್‌’ ಪ್ರತಿಭಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಜುಲೈ 25ರಂದು ಸಿವಾನ್ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆ ವೇಳೆ ಕಾನ್ಸ್‌ಟೇಬಲ್‌ವೊಬ್ಬರು ಪ್ರತಿಭಟನಾಕಾರರ ಕಡೆ AK-47 ಹಿಡಿದು ಗುಂಡು ಹಾರಿಸಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಪೊಲೀಸ್‌ ಇಲಾಖೆ ಕ್ರಮ ಕೈಗೊಂಡಿದೆ.

ಪ್ರತಿಭಟನೆ ವೇಳೆ ಮೂವರು ಗಾಯಗೊಂಡಿದ್ದು, ಅವರನ್ನು ಪಾಟ್ನಾದ ಜಯಪ್ರಭಾ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಆರೋಗ್ಯ ಸ್ಥಿತಿ ಸದ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಗಾಯಗೊಂಡವರಲ್ಲಿ 15 ವರ್ಷದ ಎಂಡಿ ಆರಿಫ್ ಎಂಬ ಬಾಲಕ ಕೂಡ ಸೇರಿದ್ದಾನೆ. ಸ್ಥಳೀಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆತ, ಪ್ರತಿಭಟನೆ ಹಿನ್ನೆಲೆಯಲ್ಲಿ ಅಂಗಡಿ ಮುಚ್ಚಿ ಮನೆಗೆ ತೆರಳುತ್ತಿದ್ದ ವೇಳೆ ಕುತ್ತಿಗೆಗೆ ಗುಂಡು ತಗುಲಿದೆ. ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಗುಂಡನ್ನು ಹೊರತೆಗೆದಿದ್ದು, ಬಾಲಕನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಬಿಹಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರು ಕಾನ್ಸ್‌ಟೇಬಲ್‌ ಗುಂಡು ಹಾರಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಈ ಘಟನೆ ಕುರಿತು ಪ್ರಸ್ತಾಪಿಸಿ, ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ.

ಇದೇ ವೇಳೆ ಪ್ರತಿಭಟನೆ ವೇಳೆ ಕೆಲವು ಪೊಲೀಸರು ರಿವಾಲ್ವಾರ್‌ಗಳನ್ನು ಕೈಯಲ್ಲಿ ಹಿಡಿದು ಸಾಗುತ್ತಿರುವ ದೃಶ್ಯಗಳು ಕೂಡ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆ ಕುರಿತು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಬರ ಎದುರಿಸಲು ₹224 ಕೋಟಿ ಬಿಡುಗಡೆ: ಕುಡಿಯುವ ನೀರಿಗೆ ಹಣದ ಕೊರತೆಯಿಲ್ಲ ಎಂದ ಈಶ್ವರ್ ಖಂಡ್ರೆ

ಬೆಂಗಳೂರು: ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ 224 ವಿಧಾನಸಭಾ ಕ್ಷೇತ್ರಗಳಿಗೆ ₹224 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಕುಡಿಯುವ ನೀರಿನ ಪೂರೈಕೆಗೆ ಯಾವುದೇ ಹಣಕಾಸಿನ ಕೊರತೆಯಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ವಿಭಾಗೀಯ ಮಟ್ಟದ ಪ್ರಕೃತಿ ವಿಕೋಪ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗಿದೆ ಎಂದು ಹೇಳಿದರು.

ಈ ಹಿಂದೆ ಕುಡಿಯುವ ನೀರಿಗಾಗಿ ₹117 ಕೋಟಿ ಬಿಡುಗಡೆ ಮಾಡಲಾಗಿತ್ತು. ಇದೀಗ 224 ಕ್ಷೇತ್ರಗಳಿಗೆ ₹224 ಕೋಟಿ ಅನುದಾನ ನೀಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಅಗತ್ಯವಿದ್ದರೆ ಖಾಸಗಿ ಬಾವಿ, ಕೊಳವೆಬಾವಿಗಳ ಮೂಲಕ ನೀರು ಪೂರೈಸಬೇಕು. ಅದೂ ಸಾಧ್ಯವಾಗದಿದ್ದರೆ ಹೊಸ ಬೋರ್‌ವೆಲ್ ಕೊರೆಸಿ ನೀರು ಒದಗಿಸಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.

ರೈತರ ಹೊಲ-ಗದ್ದೆಗಳಿಗೆ ಭೇಟಿ ನೀಡಿದ ವೇಳೆ ಅನೇಕ ಬೆಳೆಗಳು ಹಾನಿಗೊಳಗಾಗಿರುವುದು ಮತ್ತು ನೀರಿನ ಸಮಸ್ಯೆ ತೀವ್ರವಾಗಿರುವುದು ಕಂಡುಬಂದಿದೆ. ಆದ್ದರಿಂದ ಬರ ನಿರ್ವಹಣೆಗೆ ಮೊದಲ ಆದ್ಯತೆ ನೀಡಲಾಗಿದ್ದು, ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳದಂತೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದರು.

ಗ್ರಾಮೀಣಾಭಿವೃದ್ಧಿ ಇಲಾಖೆಗೆ ಬರಬೇಕಿರುವ ₹2,186 ಕೋಟಿ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಇದರಿಂದ 5,900 ಗ್ರಾಮ ಪಂಚಾಯಿತಿಗಳು ಹಣಕಾಸಿನ ಕೊರತೆ ಎದುರಿಸುತ್ತಿವೆ. ಈ ಕುರಿತು ಈಗಾಗಲೇ ಕೇಂದ್ರದ ಹಲವು ಸಚಿವರನ್ನು ಭೇಟಿ ಮಾಡಿದ್ದು, ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ 15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಿದ್ದೇನೆ ಎಂದು ಹೇಳಿದರು.

ಬಿಜೆಪಿ ನಡೆಸುತ್ತಿರುವ ಬರ ಅಧ್ಯಯನ ಕುರಿತು ಪ್ರತಿಕ್ರಿಯಿಸಿದ ಈಶ್ವರ್ ಖಂಡ್ರೆ, ಬಿಜೆಪಿಗೆ ಬರ, ಶಿಕ್ಷಣ ಅಥವಾ ಯುವಕರ ಸಮಸ್ಯೆಗಳ ಬಗ್ಗೆ ಕಾಳಜಿ ಇಲ್ಲ. ಅವರಿಗೆ ಅಧಿಕಾರಕ್ಕೆ ಬರುವ ಆತುರ ಮಾತ್ರ ಇದೆ ಎಂದು ಟೀಕಿಸಿದರು.

“ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ ತರಲಿ. ಮಹದಾಯಿ ಹಾಗೂ ಕಳಸ-ಬಂಡೂರಿ ಯೋಜನೆಗಳ ವಿಚಾರದಲ್ಲಿ ಬಿಜೆಪಿ ಏನು ಮಾಡಿದೆ ಎಂಬುದನ್ನು ಮೊದಲು ಹೇಳಲಿ” ಎಂದು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಮತ್ತೆ ಚುನಾವಣೆಗೆ ಸ್ಪರ್ಧಿಸಿ ಪಕ್ಷಕ್ಕೆ ಮಾರ್ಗದರ್ಶನ ನೀಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆ ಮಾಡಿದರೆ ಲಾಠಿಚಾರ್ಜ್‌ ಸಮರ್ಥನೀಯವಲ್ಲ: ನೀಟ್‌ ಹೋರಾಟ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಮಹತ್ವದ ಅಭಿಪ್ರಾಯ

0

ನವದೆಹಲಿ: ಪ್ರತಿಭಟನೆ ನಡೆಸಿದ ಕಾರಣಕ್ಕೆ ಮಾತ್ರ ಲಾಠಿಚಾರ್ಜ್‌ ನಡೆಸುವುದು ಸಮರ್ಥನೀಯವಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪೊಲೀಸರ ಬಲಪ್ರಯೋಗ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ವೇಳೆ, ಶಾಂತಿಯುತ ಪ್ರತಿಭಟನೆ ಸಂವಿಧಾನಬದ್ಧ ಹಕ್ಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಕಾಕ್ರೋಚ್‌ ಜನತಾ ಪಾರ್ಟಿ ನೇತೃತ್ವದಲ್ಲಿ ನಡೆದ ‘ಸಂಸತ್ ಚಲೋ’ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್‌, ಪೆಲೆಟ್‌ ಗನ್‌ ಹಾಗೂ ಅಶ್ರುವಾಯು ಪ್ರಯೋಗ ನಡೆಸಿದ್ದರು. ದೇಶದ ವಿವಿಧ ಭಾಗಗಳಲ್ಲೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ವಿರುದ್ಧ ಬಲಪ್ರಯೋಗ ನಡೆದಿದೆ ಎಂಬ ಆರೋಪಗಳ ನಡುವೆ ಈ ಕುರಿತು ಸ್ವತಂತ್ರ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿಗಳು ಸಲ್ಲಿಕೆಯಾಗಿದ್ದವು.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್‌, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ. ಮೋಹನ ಅವರಿದ್ದ ಪೀಠ ಅರ್ಜಿಗಳ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ, ಶಾಂತಿಯುತ ಹಾಗೂ ಕಾನೂನುಬದ್ಧ ಪ್ರತಿಭಟನೆ ನಡೆಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನ ನೀಡಿದೆ. ಕೇವಲ ಪ್ರತಿಭಟನೆ ನಡೆಸಿದ ಕಾರಣಕ್ಕೆ ಲಾಠಿಚಾರ್ಜ್‌ ನಡೆಸುವುದು ನ್ಯಾಯಸಮ್ಮತವಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಇದೇ ವೇಳೆ, ಪ್ರತಿಭಟನೆಗಳ ವೇಳೆ ಪೊಲೀಸರ ಬಲಪ್ರಯೋಗದ ಬಗ್ಗೆ ಸ್ವತಂತ್ರ ಪರಿಶೀಲನೆ ನಡೆಯಬೇಕು. ದೇಶಾದ್ಯಂತ ಪ್ರತಿಭಟನೆಗಳನ್ನು ನಿರ್ವಹಿಸಲು ಪೊಲೀಸರಿಗೆ ಏಕರೂಪದ ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ.

NEET-ಮುಲ್ಲಾ ಹೇಳಿಕೆ ವಿವಾದ: ಪೊಲೀಸರ ನೋಟಿಸ್‌ಗೆ ಉತ್ತರಿಸಲು 7 ದಿನ ಸಮಯ ಕೇಳಿದ ಸಿ.ಟಿ. ರವಿ!

 

ಚಿಕ್ಕಮಗಳೂರು: NEET ಪರೀಕ್ಷೆಗೂ ಮುಲ್ಲಾಗಳಿಗೂ ಏನು ಸಂಬಂಧ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಎಂಎಲ್‌ಸಿ ಸಿ.ಟಿ. ರವಿ ಅವರು ಪೊಲೀಸರ ನೋಟಿಸ್‌ಗೆ ಉತ್ತರಿಸಲು ಒಂದು ವಾರ ಕಾಲಾವಕಾಶ ಕೋರಿದ್ದಾರೆ.

ಈ ಕುರಿತು ಪೊಲೀಸ್ ಇಲಾಖೆಗೆ ಪತ್ರ ಬರೆದಿರುವ ಸಿ.ಟಿ. ರವಿ, 7 ವರ್ಷಕ್ಕಿಂತ ಕಡಿಮೆ ಶಿಕ್ಷೆಯ ಪ್ರಕರಣಗಳಲ್ಲಿ ನೋಟಿಸ್ ನೀಡುವುದು ಕಡ್ಡಾಯವಾಗಿದ್ದು, ಅದಕ್ಕೆ ಸಮಾಜಾಯಿಷಿ ನೀಡಲು 7 ದಿನಗಳ ಕಾಲಾವಕಾಶ ನೀಡುವ ಅವಕಾಶವಿದೆ ಎಂದು ತಿಳಿಸಿದ್ದಾರೆ.

ಪೊಲೀಸರು ನೀಡಿರುವ ನೋಟಿಸ್‌ಗೆ ಪ್ರತಿಕ್ರಿಯಿಸಲು ನೀಡಿರುವ ಸಮಯ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿರುವ ಅವರು, ತಾವು ಹಾಲಿ ವಿಧಾನ ಪರಿಷತ್ ಸದಸ್ಯರಾಗಿದ್ದು, ಪಕ್ಷದ ಹಲವು ಜವಾಬ್ದಾರಿಗಳಿವೆ ಎಂದು ಹೇಳಿದ್ದಾರೆ.

ಜುಲೈ 29 ಮತ್ತು 30ರಂದು ಪಕ್ಷದ ತುರ್ತು ಕೆಲಸಗಳಿಗಾಗಿ ತೆರಳಬೇಕಿದ್ದು, ರಾಯಚೂರು-ಕೊಪ್ಪಳ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಪರಿಶೀಲನೆಗೆ ಭೇಟಿ ನೀಡಬೇಕಿದೆ. ಬಳಿಕ ಕಾನೂನು ಸಲಹೆಗಾರರೊಂದಿಗೆ ಚರ್ಚಿಸಿ ಪೊಲೀಸರಿಗೆ ಉತ್ತರ ನೀಡುವುದಾಗಿ ತಿಳಿಸಿದ್ದಾರೆ.

ಜುಲೈ 25ರಂದು ಚಿಕ್ಕಮಗಳೂರಿನಲ್ಲಿ ನಡೆದ ಯೂತ್ ಫಾರ್ ನೇಷನ್ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ್ದಾರೆ ಎಂಬ ಆರೋಪದಡಿ ಸಿ.ಟಿ. ರವಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

ಈ ಸಂಬಂಧ ಜುಲೈ 26ರಂದು ಪೊಲೀಸರು ನೋಟಿಸ್ ನೀಡಲು ಅವರ ನಿವಾಸಕ್ಕೆ ತೆರಳಿದ್ದರು. ಆದರೆ ನೋಟಿಸ್ ಸ್ವೀಕರಿಸದೆ ಪೊಲೀಸರನ್ನು ವಾಪಸ್ ಕಳುಹಿಸಿದ್ದರು ಎಂದು ತಿಳಿದುಬಂದಿದೆ. ಇದೀಗ ನೋಟಿಸ್‌ಗೆ ಉತ್ತರಿಸಲು ಒಂದು ವಾರ ಕಾಲಾವಕಾಶ ನೀಡುವಂತೆ ಅವರು ಮನವಿ ಮಾಡಿದ್ದಾರೆ.

ಮರಕ್ಕೆ ತಗುಲಿ ಲಾರಿ ಅಪಘಾತ: ಮಂಡ್ಯ ಹೆದ್ದಾರಿಯಲ್ಲಿ ಬೃಹತ್ ಟ್ಯಾಂಕ್ ಉರುಳಿ ಸಂಚಾರ ಅಸ್ತವ್ಯಸ್ತ

ಮಂಡ್ಯ: ಜಿಲ್ಲೆಯ ಮುರುಕನಹಳ್ಳಿ ಸಮೀಪದ ಮೈಸೂರು-ಚನ್ನರಾಯಪಟ್ಟಣ ಹೆದ್ದಾರಿಯಲ್ಲಿ ಬೃಹತ್ ಬಾಯ್ಲರ್ ಟ್ಯಾಂಕ್ ಉರುಳಿಬಿದ್ದ ಪರಿಣಾಮ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ರಾಜಸ್ಥಾನದಿಂದ ನಂಜನಗೂಡು ಕೈಗಾರಿಕಾ ಪ್ರದೇಶಕ್ಕೆ ಸಾಗಿಸಲಾಗುತ್ತಿದ್ದ ಬಾಯ್ಲರ್ ಟ್ಯಾಂಕ್ ಹೊತ್ತ ಲಾರಿ, ಮುರುಕನಹಳ್ಳಿ ಬಳಿ ಮರಕ್ಕೆ ತಗುಲಿ ನಿಯಂತ್ರಣ ತಪ್ಪಿದೆ. ಪರಿಣಾಮ ಬೃಹತ್ ಟ್ಯಾಂಕ್ ರಸ್ತೆಯ ಮಧ್ಯದಲ್ಲೇ ಉರುಳಿಬಿದ್ದಿದೆ.

ಘಟನೆಯಿಂದ ಹೆದ್ದಾರಿ ಬಂದ್ ಆಗಿದ್ದು, ಎರಡೂ ಬದಿಗಳಲ್ಲಿ ವಾಹನಗಳ ಉದ್ದನೆಯ ಸಾಲು ಕಂಡುಬಂದಿದೆ. ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಂಚಾರ ನಿಯಂತ್ರಣಕ್ಕೆ ಮುಂದಾಗಿದ್ದು, ಬೃಹತ್ ಟ್ಯಾಂಕ್ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ. ಟ್ಯಾಂಕ್ ತೆರವಿಗೆ ವಿಶೇಷ ಉಪಕರಣಗಳ ಅಗತ್ಯವಿರುವುದರಿಂದ ಕಾರ್ಯಾಚರಣೆ ಪೂರ್ಣಗೊಳ್ಳಲು ಸಮಯ ಬೇಕಾಗುವ ಸಾಧ್ಯತೆ ಇದೆ.

ಟ್ಯಾಂಕ್ ತೆರವುಗೊಳ್ಳುವವರೆಗೆ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮಂಡ್ಯ ಪೊಲೀಸರು ಸೂಚನೆ ನೀಡಿದ್ದಾರೆ. ರಸ್ತೆ ಸುಗಮ ಸಂಚಾರಕ್ಕೆ ಪೊಲೀಸರು ಹಾಗೂ ಸಿಬ್ಬಂದಿ ಕ್ರಮ ಕೈಗೊಂಡಿದ್ದಾರೆ.

Gold Price Today: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ; ಬೆಂಗಳೂರಿನಲ್ಲಿ 10 ಗ್ರಾಂ ಬಂಗಾರಕ್ಕೆ ಎಷ್ಟಿದೆ ಬೆಲೆ?

0

ನವದೆಹಲಿ: ವಾರಾಂತ್ಯದ ಬಳಿಕ ಆರಂಭವಾದ ಚಿನ್ನದ ಬೆಲೆ ಏರಿಕೆ ಸೋಮವಾರವೂ ಮುಂದುವರಿದಿದೆ.

ಇಂದು ಬಂಗಾರದ ದರದಲ್ಲಿ ₹85 ಏರಿಕೆಯಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,33,700 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,45,860 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,33,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 24,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ:

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,586 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,370 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,939 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,586 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,370 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ.

 

‘ಪವನ್ ಬಳಿಕ ಈಗ ರಾಮ್ ಚರಣ್’: ಮೆಗಾ ಕುಟುಂಬದ ಸ್ಟಾರ್‌ಗೆ ಮಣಿಕಟ್ಟು ಶಸ್ತ್ರಚಿಕಿತ್ಸೆ

ಕೊಯಮತ್ತೂರು: ‘ಪೆದ್ದಿ’ ಚಿತ್ರದ ಚಿತ್ರೀಕರಣದ ವೇಳೆ ಗಾಯಗೊಂಡಿದ್ದ ನಟ ರಾಮ್ ಚರಣ್ ಆರೋಗ್ಯ ಸಮಸ್ಯೆಯಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಹಲವು ದಿನಗಳಿಂದ ಮಣಿಕಟ್ಟಿನ ನೋವಿನಿಂದ ಬಳಲುತ್ತಿದ್ದ ಅವರು, ವೈದ್ಯರ ಸಲಹೆಯಂತೆ ಶೀಘ್ರದಲ್ಲೇ ಮೈನರ್ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಚಿಕಿತ್ಸೆಗಾಗಿ ಕೊಯಮತ್ತೂರಿನ ಪ್ರತಿಷ್ಠಿತ ಗಂಗಾ ಆಸ್ಪತ್ರೆಗೆ ದಾಖಲಾಗಲಿದ್ದಾರೆ.

‘ಪೆದ್ದಿ’ ಚಿತ್ರದ ಪ್ರಚಾರದ ವೇಳೆಯೇ ರಾಮ್ ಚರಣ್ ಕೈಗೆ ಪ್ಲಾಸ್ಟರ್ ಧರಿಸಿಕೊಂಡು ಕಾಣಿಸಿಕೊಂಡಿದ್ದರು. ಆಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ಬಿದ್ದು ಗಾಯಗೊಂಡಿದ್ದರೂ, ಚಿತ್ರದ ಪ್ರಚಾರಕ್ಕೆ ಅಡ್ಡಿಯಾಗಬಾರದೆಂದು ವೈದ್ಯರ ಸಲಹೆಯಂತೆ ಪ್ಲಾಸ್ಟರ್ ಧರಿಸಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಆದರೆ ಇತ್ತೀಚೆಗೆ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಗಾಯ ಸಂಪೂರ್ಣ ಗುಣಮುಖವಾಗಿಲ್ಲ ಎಂಬುದು ತಿಳಿದುಬಂದಿದೆ. ನಿರಂತರ ನೋವು ಮತ್ತು ಮಣಿಕಟ್ಟಿನ ಮೇಲಿನ ಒತ್ತಡದಿಂದಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಉತ್ತಮ ಎಂದು ವೈದ್ಯರು ಸೂಚಿಸಿದ್ದಾರೆ.

ಶಸ್ತ್ರಚಿಕಿತ್ಸೆ ವೇಳೆ ಮೆಗಾಸ್ಟಾರ್ ಚಿರಂಜೀವಿ, ಸುರೇಖಾ, ಉಪಾಸನಾ ಸೇರಿದಂತೆ ಕುಟುಂಬದ ಸದಸ್ಯರು ಆಸ್ಪತ್ರೆಯಲ್ಲೇ ಜೊತೆಯಾಗಲಿದ್ದಾರೆ. ಖ್ಯಾತ ಅಸ್ಥಿ ತಜ್ಞ ಡಾ. ರಾಜಶೇಖರ್ ನೇತೃತ್ವದಲ್ಲಿ ವೈದ್ಯರ ತಂಡ ಚಿಕಿತ್ಸೆ ನೀಡಲಿದೆ.

ಗಮನಾರ್ಹ ಸಂಗತಿಯೆಂದರೆ, ಕೆಲವೇ ದಿನಗಳ ಹಿಂದೆ ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಕೂಡ ಭುಜದ ಗಾಯದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಮೆಗಾ ಕುಟುಂಬದ ಮತ್ತೊಬ್ಬ ಸ್ಟಾರ್ ನಟನಿಗೂ ಶಸ್ತ್ರಚಿಕಿತ್ಸೆ ಅಗತ್ಯವಾಗಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ‘ಪೆದ್ದಿ’ ಯಶಸ್ಸಿನ ಬಳಿಕ ರಾಮ್ ಚರಣ್ ಮುಂದಿನ ಚಿತ್ರವನ್ನು ನಿರ್ದೇಶಕ ಸುಕುಮಾರ್ ಜೊತೆ ಆರಂಭಿಸಲಿದ್ದಾರೆ.