ಭಾರತದ ಯುವ ವೇಗದ ಬೌಲರ್ ಅರ್ಶದೀಪ್ ಸಿಂಗ್ ತಮ್ಮ ಪಾಲಿನ ಸಾರ್ವಕಾಲಿಕ ಶ್ರೇಷ್ಠ ಐವರು ಭಾರತೀಯ ಬೌಲರ್ಗಳ ಪಟ್ಟಿಯನ್ನು ಬಹಿರಂಗಪಡಿಸಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ. ವಿಶೇಷವೆಂದರೆ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ರವಿಚಂದ್ರನ್ ಅಶ್ವಿನ್ ಅವರಂತಹ ದಿಗ್ಗಜರನ್ನು ಹಿಂದಿಕ್ಕಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರಿಗೆ ಅರ್ಶದೀಪ್ ಮೊದಲ ಸ್ಥಾನ ನೀಡಿದ್ದಾರೆ.
ಕೃಷ್ಣಾಕ್ ಅಥ್ರೆ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಅರ್ಶದೀಪ್ ಸಿಂಗ್, “ಭುವನೇಶ್ವರ್ ಕುಮಾರ್ ನನ್ನ ನೆಚ್ಚಿನ ಬೌಲರ್. ಆದ್ದರಿಂದ ಅವರಿಗೆ ಮೊದಲ ಸ್ಥಾನ ನೀಡಿದ್ದೇನೆ. ಈ ವಿಚಾರದಲ್ಲಿ ನಾನು ಸ್ವಲ್ಪ ಪಕ್ಷಪಾತಿಯಾಗಿದ್ದೇನೆ,” ಎಂದು ನಗುಮುಖದಿಂದ ಹೇಳಿದ್ದಾರೆ.
ಇದೇ ವೇಳೆ ಎರಡನೇ ಸ್ಥಾನವನ್ನು ಮೊಹಮ್ಮದ್ ಶಮಿ ಅವರಿಗೆ ನೀಡಿದ ಅರ್ಶದೀಪ್, “ಯಾವುದೇ ಪಿಚ್ನಲ್ಲಾದರೂ ಶಮಿ ಅತ್ಯುತ್ತಮ ವೇಗದ ಬೌಲಿಂಗ್ ಮಾಡುತ್ತಾರೆ. ಅವರ ಲೈನ್, ಲೆಂಗ್ತ್ ಹಾಗೂ ವೇಗ ಯಾವಾಗಲೂ ಎದುರಾಳಿಗಳಿಗೆ ಸವಾಲಾಗಿರುತ್ತದೆ. ಅವರು ವಿಶ್ವದ ಶ್ರೇಷ್ಠ ವೇಗಿಗಳಲ್ಲಿ ಒಬ್ಬರು,” ಎಂದು ಪ್ರಶಂಸಿಸಿದರು.
ಮೂರನೇ ಸ್ಥಾನದಲ್ಲಿ ಎಡಗೈ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಆಯ್ಕೆ ಮಾಡಿದ ಅರ್ಶದೀಪ್, ಅವರ ವಿಶಿಷ್ಟ ಸ್ಪಿನ್ ಕೌಶಲ್ಯವನ್ನು ಶ್ಲಾಘಿಸಿದರು. ನಾಲ್ಕನೇ ಸ್ಥಾನದಲ್ಲಿ ಯುಜುವೇಂದ್ರ ಚಹಲ್ ಅವರನ್ನು ಆಯ್ಕೆ ಮಾಡಿ, “ಚಹಲ್ ಸಾಕಷ್ಟು ವಿಕೆಟ್ಗಳನ್ನು ಪಡೆದ ಅನುಭವಿ ಸ್ಪಿನ್ನರ್. ಅವರ ಬೌಲಿಂಗ್ ತಂಡಕ್ಕೆ ಅನೇಕ ಬಾರಿ ಗೆಲುವು ತಂದುಕೊಟ್ಟಿದೆ,” ಎಂದು ಹೇಳಿದರು.
ಇನ್ನು ಭಾರತದ ಎರಡನೇ ಗರಿಷ್ಠ ಟೆಸ್ಟ್ ವಿಕೆಟ್ ಸರದಾರ ರವಿಚಂದ್ರನ್ ಅಶ್ವಿನ್ ಅವರಿಗೆ ಐದನೇ ಸ್ಥಾನ ನೀಡಿದ ಅರ್ಶದೀಪ್, ತಮಾಷೆಯ ಶೈಲಿಯಲ್ಲಿ ಕ್ಷಮೆಯನ್ನೂ ಕೇಳಿದರು. “ಅಶ್ವಿನ್ ಅಣ್ಣನಿಗೆ ಕೊನೆಯ ಸ್ಥಾನ ನೀಡಬೇಕೆಂಬ ಉದ್ದೇಶ ನನ್ನದಲ್ಲ. ಆದರೆ ಬೇರೆ ಸ್ಥಾನ ಉಳಿದಿರಲಿಲ್ಲ.
ಅವರು ದಿಗ್ಗಜ ಆಟಗಾರ. ಪಂಜಾಬ್ ಕಿಂಗ್ಸ್ನಲ್ಲಿ ನನ್ನ ಮೊದಲ ಐಪಿಎಲ್ ನಾಯಕ ಕೂಡ ಅವರೇ. ಕ್ಷಮಿಸಿ ಅಶ್ವಿನ್ ಅಣ್ಣ… ನಿಮಗೆ ನಾನು ವೈಯಕ್ತಿಕವಾಗಿ ಸಂದೇಶ ಕಳುಹಿಸುತ್ತೇನೆ,” ಎಂದು ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದರು.
ಅರ್ಶದೀಪ್ ಸಿಂಗ್ ಅವರ ಈ ಆಯ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಅಭಿಮಾನಿಗಳು ತಮ್ಮದೇ ಆದ ಟಾಪ್-5 ಭಾರತೀಯ ಬೌಲರ್ಗಳ ಪಟ್ಟಿಯನ್ನು ಹಂಚಿಕೊಳ್ಳಲು ಆರಂಭಿಸಿದ್ದಾರೆ.

