Home Blog

ಕಲ್ಲಿಗೆ ಡಿಕ್ಕಿಯಾಗಿ ‘ಆಯಾನ್’ ಬೋಟ್ ಮುಳುಗಡೆ; ಮೀನುಗಾರರ ಸಮಯಪ್ರಜ್ಞೆಯಿಂದ 6 ಮಂದಿ ರಕ್ಷಣೆ

0

ಮಂಗಳೂರು: ಮೀನುಗಾರಿಕಾ ಬೋಟ್‌ನ ತಳಭಾಗ ಕಲ್ಲಿಗೆ ಬಡಿದು ನೀರು ನುಗ್ಗಿದ ಪರಿಣಾಮ ಬೋಟ್ ಮುಳುಗಡೆಯಾದ ಘಟನೆ ಮಂಗಳೂರಿನ ಅಳಿವೆಬಾಗಿಲಿನಲ್ಲಿ ನಡೆದಿದೆ.

‘ಆಯಾನ್’ ಹೆಸರಿನ ಪರ್ಸಿನ್ ಬೋಟ್ ಆಳ ಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಅಳಿವೆಬಾಗಿಲಿನಲ್ಲಿ ಬೋಟ್‌ನ ತಳಭಾಗ ಕಲ್ಲಿಗೆ ಬಡಿದಿದೆ. ಪರಿಣಾಮ ಬೋಟ್‌ಗೆ ನೀರು ನುಗ್ಗಿ ಕೆಲವೇ ಸಮಯದಲ್ಲಿ ಮುಳುಗಡೆಯಾಗಿದೆ.

ಬೋಟ್‌ನಲ್ಲಿದ್ದ ಆರು ಮಂದಿ ಮೀನುಗಾರರು ಅಪಾಯಕ್ಕೆ ಸಿಲುಕಿದ್ದು, ಸಮೀಪದಲ್ಲಿದ್ದ ಇತರೆ ಮೀನುಗಾರಿಕಾ ಬೋಟ್‌ಗಳಲ್ಲಿದ್ದ ಮೀನುಗಾರರು ತಕ್ಷಣ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಈ ಬೋಟ್ ಇಬ್ರಾಹಿಂ ಖಲೀಲ್ ಎಂಬುವರಿಗೆ ಸೇರಿದ್ದು ಎನ್ನಲಾಗಿದ್ದು, ಬೋಟ್ ಮುಳುಗಡೆಯಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

ಯಾದಗಿರಿಯಲ್ಲಿ ಭೀಕರ ಅಪಘಾತ: ವಿದ್ಯುತ್ ಕಂಬಕ್ಕೆ ಬೊಲೆರೊ ಡಿಕ್ಕಿ, ಮೂವರು ಕೂಲಿ ಕಾರ್ಮಿಕರ ಸಾವು!

0

ಯಾದಗಿರಿ: ಚಾಲಕನ ನಿಯಂತ್ರಣ ತಪ್ಪಿದ ಬೊಲೆರೊ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಕೂಲಿ ಕಾರ್ಮಿಕರು ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಡ್ನಾಳ ಬಳಿ ನಡೆದಿದೆ.

ಕೂಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಬೊಲೆರೊದಲ್ಲಿದ್ದ ಭಾಗ್ಯಶ್ರೀ (35), ಸತ್ಯಮ್ಮ (30) ಹಾಗೂ ಹೊನ್ನಿಂಗಮ್ಮ (18) ಮೃತಪಟ್ಟಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿದ ಬೊಲೆರೊ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ವಾಹನದಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಎಂಟು ಕೂಲಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಘಟನೆ ಭೀಮರಾಯನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಉತ್ತರ ಕನ್ನಡದಲ್ಲಿ ಮಳೆ ಅಬ್ಬರ; ದೇವಿಮನೆ ಘಾಟ್‌ನಲ್ಲಿ ಮತ್ತೆ ಗುಡ್ಡ ಕುಸಿತ!

0

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಬರುವ ದೇವಿಮನೆ ಘಾಟ್ ಪ್ರದೇಶದಲ್ಲಿ ಭಾರಿ ಮಳೆಗೆ ಮತ್ತೆ ಗುಡ್ಡ ಕುಸಿದಿದೆ.

ರಾತ್ರಿಯಿಂದ ಮುಂಜಾನೆಯವರೆಗೆ ಸುರಿದ ಧಾರಾಕಾರ ಮಳೆಯಿಂದ ಹೆದ್ದಾರಿಯ ಒಂದು ಬದಿಯ ಗುಡ್ಡದ ಮಣ್ಣು ರಸ್ತೆಗೆ ಕುಸಿದುಬಿದ್ದಿದೆ.

ಗುಡ್ಡ ಕುಸಿತದಿಂದ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರಲ್ಲಿ ಆತಂಕ ಮೂಡಿದೆ. ರಸ್ತೆಗೆ ಮಣ್ಣು ಬಿದ್ದಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆ ಇದ್ದು, ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚಿಸಲಾಗಿದೆ.

ಕೆಲವು ತಿಂಗಳ ಹಿಂದಷ್ಟೇ ಇದೇ ದೇವಿಮನೆ ಘಾಟ್ ಪ್ರದೇಶದಲ್ಲಿ ಭಾರಿ ಭೂಕುಸಿತ ಸಂಭವಿಸಿ ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಇದೀಗ ಮುಂಗಾರು ಮಳೆ ಮತ್ತೆ ಚುರುಕಾಗಿರುವ ಹಿನ್ನೆಲೆಯಲ್ಲಿ ಘಟ್ಟ ಪ್ರದೇಶದಲ್ಲಿ ಸರಣಿ ಭೂಕುಸಿತಗಳು ಸಂಭವಿಸುವ ಆತಂಕ ಎದುರಾಗಿದೆ.

ಸ್ಥಳೀಯ ಆಡಳಿತ ಹಾಗೂ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಸ್ಥಳಕ್ಕೆ ತೆರಳಿ ರಸ್ತೆಗೆ ಬಿದ್ದಿರುವ ಮಣ್ಣು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಗುಡ್ಡ ಕುಸಿತದ ಹಿನ್ನೆಲೆಯಲ್ಲಿ ದೇವಿಮನೆ ಘಾಟ್ ಮೂಲಕ ಸಂಚರಿಸುವ ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಕೋರಮಂಗಲದಲ್ಲಿ ನಡುರಸ್ತೆಯಲ್ಲೇ ಹೊತ್ತಿ ಉರಿದ ಕಾರು; ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪಾರು!

0

ಬೆಂಗಳೂರು: ನಡುರಸ್ತೆಯಲ್ಲೇ ಚಲಿಸುತ್ತಿದ್ದ ಕಾರೊಂದು ಏಕಾಏಕಿ ಹೊತ್ತಿ ಉರಿದ ಘಟನೆ ನಗರದ ಕೋರಮಂಗಲ ವಾಟರ್ ಟ್ಯಾಂಕ್ ಜಂಕ್ಷನ್ ಬಳಿ ನಡೆದಿದೆ.

ಕಾರಿನ ಇಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲೇ ಇಡೀ ವಾಹನಕ್ಕೆ ವ್ಯಾಪಿಸಿದ್ದು, ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾತ್ರಿ ಸುಮಾರು 11.30ರ ವೇಳೆಗೆ ಘಟನೆ ನಡೆದಿದ್ದು, ಕಾರು ಚಲಿಸುತ್ತಿದ್ದಾಗಲೇ ಇಂಜಿನ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಕಾರನ್ನು ಆವರಿಸಿಕೊಂಡಿದೆ. ಇದನ್ನು ಕಂಡ ಸ್ಥಳೀಯರು ಹಾಗೂ ವಾಹನ ಸವಾರರು ಆತಂಕಗೊಂಡಿದ್ದಾರೆ.

ಕಾರಿನಲ್ಲಿದ್ದವರು ತಕ್ಷಣ ಕೆಳಗಿಳಿದ ಬಳಿಕ, ಸ್ಥಳದಲ್ಲಿದ್ದ ವಾಹನ ಸವಾರರು ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಬೆಂಕಿಯ ತೀವ್ರತೆಗೆ ಕಾರು ಸಂಪೂರ್ಣವಾಗಿ ಸುಟ್ಟುಹೋಗಿದೆ.

ಘಟನೆಯಿಂದ ಆಗರ–ಸರ್ಜಾಪುರ ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಸವಾರರು ಪರದಾಡುವಂತಾಯಿತು. ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

Gold Rate Today: ವಾರಾಂತ್ಯದಲ್ಲೂ ಏರಿದ ಚಿನ್ನದ ಬೆಲೆ; ಇಂದಿನ ರೇಟ್ ಇಲ್ಲಿದೆ ನೋಡಿ

0

ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ ಮುಂದುವರಿದಿದ್ದು, ವಾರಾಂತ್ಯದಲ್ಲೂ ಬಂಗಾರದ ದರ ಹೆಚ್ಚಾಗಿದೆ.

ಪ್ರತಿ ಗ್ರಾಂ ಚಿನ್ನದ ಬೆಲೆ ₹240 ಏರಿಕೆಯಾಗಿದ್ದು, ಕಳೆದ ಮೂರು ದಿನಗಳಲ್ಲಿ ಒಟ್ಟು ₹750ರಷ್ಟು ಹೆಚ್ಚಳ ಕಂಡಿದೆ.

ವಿದೇಶಿ ಮಾರುಕಟ್ಟೆಗಳಲ್ಲೂ ಬಹುತೇಕ ಕಡೆ ಚಿನ್ನದ ಬೆಲೆಯಲ್ಲಿ ಏರಿಕೆ ದಾಖಲಾಗಿದೆ. ಸ್ಪಾಟ್ ಗೋಲ್ಡ್ ದರ ಕೂಡ ಸುಮಾರು 2 ಡಾಲರ್ ಹೆಚ್ಚಾಗಿದೆ. ಆದರೆ, ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,49,500 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,63,090 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,49,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 27,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ:

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,309
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,950
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,232
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ.

ಮಡಿವಾಳದಲ್ಲಿ ಮೆಡಿಕಲ್ ಶಾಪ್ ಮಾಲೀಕನ ಭೀಕರ ಕೊಲೆ: ಶಬ್ಬೀರ್ ಹತ್ಯೆಗೆ ಪ್ರತೀಕಾರದ ಶಂಕೆ!?

0

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ರೌಡಿಗಳ ಅಟ್ಟಹಾಸದ ಆರೋಪ ಕೇಳಿಬಂದಿದ್ದು, ಮಡಿವಾಳದ ಅಂಡರ್‌ಪಾಸ್‌ ಸಮೀಪ ಮೆಡಿಕಲ್ ಶಾಪ್ ನಡೆಸುತ್ತಿದ್ದ ವ್ಯಕ್ತಿಯನ್ನು ಜನರ ಎದುರಲ್ಲೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಮಂಗಮ್ಮನ ಪಾಳ್ಯದ ನಿವಾಸಿ ಸುಹೇಲ್ ಮೃತ ವ್ಯಕ್ತಿ.

ನಿನ್ನೆ ರಾತ್ರಿ ಸುಮಾರು 10 ಗಂಟೆಗೆ ಸುಹೇಲ್ ಮಡಿವಾಳದಿಂದ ಕೊರಮಂಗಲದ ಕಡೆಗೆ ತೆರಳುತ್ತಿದ್ದ ವೇಳೆ, ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್‌ನಿಂದ ಬೈಕ್ ನಿಲ್ಲಿಸಿಕೊಂಡಿದ್ದರು. ಈ ವೇಳೆ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಎರಡು ತಲ್ವಾರ್‌ಗಳಿಂದ ಸುಹೇಲ್ ಮೇಲೆ ದಾಳಿ ನಡೆಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಸುಹೇಲ್ ಸ್ಥಳದಲ್ಲೇ ಮೃತಪಟ್ಟಿದ್ದು, ಹಂತಕರು ಮಾರಕಾಸ್ತ್ರಗಳನ್ನು ಸ್ಥಳದಲ್ಲೇ ಬಿಸಾಕಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಸುಹೇಲ್ ಹತ್ಯೆ ಹಿಂದೆ ಜನವರಿ 13ರಂದು ಬಂಡೆಪಾಳ್ಯದಲ್ಲಿ ನಡೆದಿದ್ದ ರೌಡಿಶೀಟರ್ ಶಬ್ಬೀರ್ ಹತ್ಯೆಯ ಪ್ರತೀಕಾರದ ಶಂಕೆ ವ್ಯಕ್ತವಾಗಿದೆ. ಶಬ್ಬೀರ್ ಕೊಲೆ ಪ್ರಕರಣದಲ್ಲಿ ಸುಹೇಲ್ ಸಹೋದರರಾದ ಖಲೀಂ, ನಜೀರ್ ಸೇರಿದಂತೆ ಮೂವರು ಭಾಗಿಯಾಗಿದ್ದರು ಎನ್ನಲಾಗಿದೆ.

ಆದರೆ, ಶಬ್ಬೀರ್ ಕೊಲೆ ಪ್ರಕರಣಕ್ಕೂ ಸುಹೇಲ್‌ಗೂ ಯಾವುದೇ ಸಂಬಂಧವಿರಲಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ, ಸುಹೇಲ್‌ಗೆ ಯಾವುದೇ ಕ್ರಿಮಿನಲ್ ಹಿನ್ನೆಲೆಯೂ ಇರಲಿಲ್ಲ ಎನ್ನಲಾಗಿದೆ. ಹೀಗಾಗಿ ಸಹೋದರರ ಮೇಲಿನ ದ್ವೇಷಕ್ಕೆ ಸುಹೇಲ್‌ನನ್ನೇ ಗುರಿಯಾಗಿಸಿ ಹತ್ಯೆ ಮಾಡಿರುವ ಸಾಧ್ಯತೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಡಿಸಿಪಿ ಸುಜಿತಾ, ಸಿಸಿಬಿ ಡಿಸಿಪಿ ಹರಿಬಾಬು ಹಾಗೂ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಣ್ಣನ ಕೊಲೆಗೆ ತಮ್ಮನ ರಿವೇಂಜ್ ಪ್ರತಿಜ್ಞೆ:

ಅಣ್ಣ ಸುಹೇಲ್ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದಿದ್ದ ಸಹೋದರ ನಜೀರ್, ಹಂತಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ. “ಸುಹೇಲ್ ನನ್ನ ಅಣ್ಣ ಮಾತ್ರ ಆಗಿರಲಿಲ್ಲ, ಅಪ್ಪನ ರೀತಿಯಲ್ಲಿದ್ದ. ಆತನನ್ನು ಕೊಲೆ ಮಾಡಿದ ಯಾರನ್ನೂ ಸುಮ್ಮನೆ ಬಿಡುವುದಿಲ್ಲ” ಎಂದು ನಜೀರ್ ಪ್ರತೀಕಾರದ ಶಪಥ ಮಾಡಿದ್ದಾನೆ ಎನ್ನಲಾಗಿದೆ.

ಕಳೆದ ಕೆಲ ದಿನಗಳಿಂದಲೇ ಕೊಲೆಗೆ ಸ್ಕೆಚ್?

ಸುಹೇಲ್ ಹತ್ಯೆ ಪೂರ್ವಯೋಜಿತವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಕಳೆದ ಕೆಲ ದಿನಗಳಿಂದಲೇ ಆರೋಪಿಗಳು ಆತನ ಚಲನವಲನಗಳನ್ನು ಗಮನಿಸುತ್ತಿದ್ದರು ಎನ್ನಲಾಗಿದೆ. ಹಾರ್ಲೆ ಡೇವಿಡ್‌ಸನ್ ಬೈಕ್‌ನಲ್ಲಿ ತೆರಳುತ್ತಿದ್ದ ಸುಹೇಲ್‌ನನ್ನು ಹಂತಕರು ಹಿಂಬಾಲಿಸಿ ದಾಳಿ ನಡೆಸಿರುವ ಸಾಧ್ಯತೆ ಇದೆ.

ಹತ್ಯೆ ಬಳಿಕ ಮಾರಕಾಸ್ತ್ರಗಳನ್ನು ಸ್ಥಳದಲ್ಲೇ ಬಿಸಾಕಿ ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಪ್ರಕರಣದ ತನಿಖೆಗಾಗಿ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಘಟನಾ ಸ್ಥಳದ ಸಿಸಿಟಿವಿ ಡಿವಿಆರ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ಸುಹೇಲ್ ಮಂಗಮ್ಮನ ಪಾಳ್ಯದಿಂದ ಮಡಿವಾಳ ಮುಖ್ಯರಸ್ತೆಗೆ ಬಂದಿದ್ದೇಕೆ? ಬೊಮ್ಮನಹಳ್ಳಿಯಲ್ಲಿರುವ ಮೆಡಿಕಲ್ ಶಾಪ್‌ನಿಂದ ಹೊರಡುವಾಗ ಕೊನೆಯದಾಗಿ ಸುಹೇಲ್‌ಗೆ ಕರೆ ಮಾಡಿದ್ದು ಯಾರು? ಹಂತಕರು ಆತನ ಚಲನವಲನಗಳನ್ನು ಹೇಗೆ ಗಮನಿಸಿದರು? ಎಂಬ ಹಲವು ಪ್ರಶ್ನೆಗಳ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹಂತಕರ ಪತ್ತೆಗೆ ಮಡಿವಾಳ ಪೊಲೀಸರು ಹಾಗೂ ಸಿಸಿಬಿ ತಂಡಗಳು ಕಾರ್ಯಾಚರಣೆ ಮುಂದುವರಿಸಿವೆ.

ರಾಯಚೂರು ರಿಮ್ಸ್‌ನಲ್ಲಿ ದುರಂತ! ಹೆರಿಗೆ ವೇಳೆ ಅವಳಿ ಗಂಡು ಮಕ್ಕಳು ಸಾವು, ವೈದ್ಯರ ವಿರುದ್ಧ ಗಂಭೀರ ಆರೋಪ!

0

ರಾಯಚೂರು: ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರ ನಿರ್ಲಕ್ಷ್ಯದಿಂದ ಹೆರಿಗೆ ವೇಳೆ ಅವಳಿ ಗಂಡು ಮಕ್ಕಳು ಮೃತಪಟ್ಟಿದ್ದಾರೆ ಎಂದು ಪೋಷಕರು ಆರೋಪಿಸಿರುವ ಘಟನೆ ರಾಯಚೂರಿನ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ನಡೆದಿದೆ.

ಮಾನವಿ ತಾಲೂಕಿನ ಚನ್ನಬಸವ ಹಾಗೂ ಕಾವೇರಿ ದಂಪತಿಯ ಅವಳಿ ಮಕ್ಕಳು ಮೃತಪಟ್ಟಿದ್ದಾರೆ. ಕಾವೇರಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೊದಲು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಮಾನ್ವಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆಯಲ್ಲಿ ಅಲ್ಲಿನ ವೈದ್ಯರು ಕಾವೇರಿ ಅವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರೆಫರ್ ಮಾಡಿದ್ದರು.

ರಾತ್ರಿ 8.30ರ ಸುಮಾರಿಗೆ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಕಾವೇರಿ ಅವರು ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ವೇಳೆ ಕುಟುಂಬಸ್ಥರು ಸಿಸೇರಿಯನ್ ಮಾಡುವಂತೆ ವೈದ್ಯರಲ್ಲಿ ಮನವಿ ಮಾಡಿದ್ದರು. ಆದರೆ, ವೈದ್ಯರು ಹಾಗೂ ಸಿಬ್ಬಂದಿ ನಾರ್ಮಲ್ ಡೆಲಿವರಿ ಆಗಲಿದೆ ಎಂದು ತಿಳಿಸಿ ಸಿಸೇರಿಯನ್ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮಧ್ಯರಾತ್ರಿ 3.30ರ ಸುಮಾರಿಗೆ ಕಾವೇರಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದಂತೆ ಕುಟುಂಬಸ್ಥರು ಆತಂಕಗೊಂಡಿದ್ದಾರೆ. “ಮಕ್ಕಳು ಹೋದರೂ ಪರವಾಗಿಲ್ಲ, ತಾಯಿಯ ಜೀವ ಉಳಿಸಿ” ಎಂದು ವೈದ್ಯರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಅಂತಿಮವಾಗಿ ಹೆರಿಗೆ ವೇಳೆ ಅವಳಿ ಗಂಡು ಮಕ್ಕಳು ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇನ್ನು ಕುಟುಂಬಸ್ಥರ ಆರೋಪವನ್ನು ರಿಮ್ಸ್ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ರಾಧಾ ಸಂಗಾವಿ ನಿರಾಕರಿಸಿದ್ದಾರೆ. “ನಮ್ಮ ಸಿಬ್ಬಂದಿಯ ಕಡೆಯಿಂದ ಯಾವುದೇ ಲೋಪವಾಗಿಲ್ಲ. ಮಾನ್ವಿಯಿಂದ ರೆಫರ್ ಆಗಿ ಬರುವಾಗಲೇ ಕಾವೇರಿ ಅವರ ರಕ್ತದೊತ್ತಡ ಹೆಚ್ಚಾಗಿತ್ತು. ಅಲ್ಲದೆ, ಗರ್ಭದಲ್ಲೇ ಮಕ್ಕಳು ಮೃತಪಟ್ಟಿದ್ದರು. ತಾಯಿಗೆ ಫಿಟ್ಸ್ ಬಾರದಂತೆ ತುರ್ತು ಚಿಕಿತ್ಸೆ ನೀಡಿ, ಗರ್ಭದಲ್ಲೇ ಮೃತಪಟ್ಟಿದ್ದ ಮಕ್ಕಳನ್ನು ಹೊರತೆಗೆಯಲಾಗಿದೆ. ಸದ್ಯ ತಾಯಿಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ” ಎಂದು ಅವರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೋಷಕರು ಹಾಗೂ ಆಸ್ಪತ್ರೆ ವೈದ್ಯರ ನಡುವೆ ವಿಭಿನ್ನ ಹೇಳಿಕೆಗಳು ಕೇಳಿಬಂದಿದ್ದು, ಅವಳಿ ಮಕ್ಕಳ ಸಾವಿನ ನಿಖರ ಕಾರಣದ ಕುರಿತು ತನಿಖೆ ನಡೆಸುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಕ್ಷೇತ್ರದ ಕೆಲಸ ನಿಲ್ಲುವುದಿಲ್ಲ, ಹಿಂಜರಿಯಬೇಡಿ: ಜಿ.ಎಸ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ರಾಜ್ಯ ವಿಧಾನಸಭೆಯ ೧೮ನೇ ಸಭಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಗಜೇಂದ್ರಗಡ ಪಟ್ಟಣಕ್ಕೆ ಆಗಮಿಸಿದ ನೂತನ ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ ಅವರಿಗೆ ಶನಿವಾರ ಅಭಿಮಾನಿಗಳು ಹಾಗೂ ಸಾರ್ವಜನಿಕರು ಅದ್ಧೂರಿ ಸ್ವಾಗತ ನೀಡಿ, ಭವ್ಯ ಮೆರವಣಿಗೆ ನಡೆಸಿದರು. ಈ ವೇಳೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಯಾರೂ ಆತಂಕಪಡಬೇಕಿಲ್ಲ ಎಂದು ಜಿ.ಎಸ್. ಪಾಟೀಲ ಅಭಯ ನೀಡಿದರು.

ಯಲಬುರ್ಗಾ ಮಾರ್ಗವಾಗಿ ಪಟ್ಟಣಕ್ಕೆ ಆಗಮಿಸುವ ಮುನ್ನ ಹಿರೇಕೊಪ್ಪ, ರಾಮಾಪೂರ ಹಾಗೂ ಉಣಚಗೇರಿ ಗ್ರಾಮಗಳಲ್ಲಿ ಜಿ.ಎಸ್. ಪಾಟೀಲ ಅವರಿಗೆ ಸ್ವಾಗತ ಕೋರಲಾಯಿತು. ಬಳಿಕ ಚೆನ್ನಮ್ಮ ವೃತ್ತಕ್ಕೆ ಆಗಮಿಸುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಜೈಕಾರ ಹಾಕಿ, ಪುಷ್ಪವೃಷ್ಟಿ ಮಾಡಿ, ಹಾರ ಹಾಗೂ ಶಾಲು ಹೊದಿಸಿ ಅಭಿನಂದಿಸಿದರು. ಅಲ್ಲಿಂದ ಕಾಲಕಾಲೇಶ್ವರ ವೃತ್ತದವರೆಗೆ ಭವ್ಯ ಮೆರವಣಿಗೆ ನಡೆಯಿತು.

ಮೆರವಣಿಗೆಯುದ್ದಕ್ಕೂ ರಸ್ತೆ ಬದಿಯಲ್ಲಿ ನಿಂತಿದ್ದ ಸಾರ್ವಜನಿಕರಿಗೆ ಕೈಮುಗಿದು ಅಭಿನಂದನೆ ಸ್ವೀಕರಿಸಿದ ಅವರು, ಈದ್ಗಾ ಮೈದಾನದ ಬಳಿ ಅಂಜುಮನ್ ಇಸ್ಲಾಂ ಕಮಿಟಿ ಹಾಗೂ ಎಸ್‌ಬಿಐ ಬಳಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ಪದಾಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿದರು. ಕಾಲಕಾಲೇಶ್ವರ ವೃತ್ತದಲ್ಲಿ ಅಭಿಮಾನಿಗಳು ಬೃಹತ್ ಸೇಬಿನ ಹಾರ ಹಾಕಿ ಗೌರವಿಸಿದರು.

ನಂತರ ಕಾಲಕಾಲೇಶ್ವರ ವೃತ್ತದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಜಿ.ಎಸ್. ಪಾಟೀಲ, ವಿಧಾನಸಭಾಧ್ಯಕ್ಷರ ಪೀಠ ಪಕ್ಷಾತೀತವಾಗಿದೆ. ಆದರೆ ಕ್ಷೇತ್ರದ ಜನರ ಆಶೋತ್ತರಗಳು, ವೈಯಕ್ತಿಕ ಕೆಲಸಗಳು ಹಾಗೂ ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ಯಾರೂ ಹಿಂಜರಿಯಬೇಕಿಲ್ಲ. ತಮಗೆ ದೊರೆತಿರುವ ಉನ್ನತ ಸ್ಥಾನವನ್ನು ಕ್ಷೇತ್ರದ ಸರ್ವಜನಾಂಗದ ಕಲ್ಯಾಣಕ್ಕೆ ಬಳಸುವುದಾಗಿ ಹೇಳಿದರು.

ಕ್ಷೇತ್ರದ ಜನರು ತಮ್ಮ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ಹಾಗೂ ಬೆಂಬಲಕ್ಕಿಂತ ದೊಡ್ಡ ಹುದ್ದೆ ಮತ್ತೊಂದಿಲ್ಲ. ತಮಗೆ ಉನ್ನತ ಸ್ಥಾನ ದೊರೆಯಲಿ ಎಂದು ಕಾಲಕಾಲೇಶ್ವರ ದೇವರು, ಪುಟ್ಟರಾಜರ ಮಠ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮ ದೇವತೆಗಳಿಗೆ ಪೂಜೆ, ಪುನಸ್ಕಾರ, ದೀಡ್ ನಮಸ್ಕಾರ ಸಲ್ಲಿಸಿ, ತುಮಕೂರಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿದ್ದನ್ನು ಸ್ಮರಿಸಿದರು.

ನನ್ನನ್ನು ರಾಜ್ಯ ವಿಧಾನಸಭೆಯ ಸಭಾಧ್ಯಕ್ಷ ಸ್ಥಾನದಲ್ಲಿ ಕೂರಿಸಿರುವುದಕ್ಕೆ ಕ್ಷೇತ್ರದ ಜನರೇ ಕಾರಣ. ನಿಮ್ಮ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದಕ್ಕೆ ನಾನು ಆಭಾರಿಯಾಗಿದ್ದೇನೆ. ನಿಮ್ಮ ಋಣ ತೀರಿಸುವ ಅವಕಾಶ ನನಗೆ ದೊರೆತಿದೆ ಎಂದು ಭಾವುಕರಾಗಿ ಹೇಳಿದರು.

ತಮ್ಮ ಭಾಷಣದ ಬಳಿಕ ಜಿ.ಎಸ್. ಪಾಟೀಲ ಅವರು ಕಾಲಕಾಲೇಶ್ವರ ವೃತ್ತದಲ್ಲಿನ ಕಾಲಕಾಲೇಶ್ವರ ದೇವರಿಗೆ ಹೂವಿನ ಹಾರ ಹಾಕಿ ನಮಸ್ಕರಿಸಿದರು.

ಮುಖಂಡ ಎಚ್.ಎಸ್. ಸೋಂಪುರ ಮಾತನಾಡಿ, ಜಿ.ಎಸ್. ಪಾಟೀಲ ಅವರನ್ನು ಸಚಿವ ಸ್ಥಾನದಲ್ಲಿ ನೋಡಬೇಕೆಂಬುದು ಅಭಿಮಾನಿಗಳ ಕನಸಾಗಿತ್ತು. ಆದರೆ ಕಾಲಕಾಲೇಶ್ವರನ ಆಶೀರ್ವಾದದಿಂದ ರಾಜ್ಯದ ಉನ್ನತ ಹುದ್ದೆಯಾದ ವಿಧಾನಸಭಾಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಸರಳ ವ್ಯಕ್ತಿತ್ವದ ಜಿ.ಎಸ್. ಪಾಟೀಲ ಅವರು ಸಭಾಧ್ಯಕ್ಷರಾಗಿ ಆಯ್ಕೆಯಾಗಿರುವುದು ರೋಣ ಕ್ಷೇತ್ರದ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.

ಸ್ವಾಗತ ಕಾರ್ಯಕ್ರಮದಲ್ಲಿ ಶಿವರಾಜ ಘೋರ್ಪಡೆ, ಅಶೋಕ ಬಾಗಮಾರ, ಸಿದ್ದಪ್ಪ ಬಂಡಿ, ಎ.ಡಿ. ಕೋಲಕಾರ, ಐ.ಎಸ್. ಪಾಟೀಲ, ಎಂ.ಎಚ್. ಕೋಲಕಾರ, ಮುರ್ತುಜಾ ಡಾಲಾಯತ್, ಶಶಿಧರ ಹೂಗಾರ, ಶ್ರೀಧರ ಬಿದರಳ್ಳಿ, ರಫೀಕ್ ತೋರಗಲ್, ಶರಣಪ್ಪ ಬೆಟಗೇರಿ, ಮಿಥುನ ಪಾಟೀಲ, ಅಕ್ಷಯ ಪಾಟೀಲ, ಸುಭಾಸ ಮ್ಯಾಗೇರಿ, ರಾಜು ಸಾಂಗ್ಲೀಕರ, ಅಪ್ಪು ಮತ್ತಿಕಟ್ಟಿ, ಅರಿಹಂತ ಬಾಗಮಾರ, ವೆಂಕಟೇಶ ಮುದಗಲ್, ಅಂದಪ್ಪ ಬಿಚ್ಚೂರ, ಶ್ರೀಕಾಂತ ಅವಧೂತ, ಮಾಬುಸಾಬ ಮ್ಯಾಗೇರಿ, ಚಿದಾನಂದ ಪಾಟೀಲ, ಸಂಗಪ್ಪ ತೇಜಿ, ಅರ್ಜುನ ರಾಠೋಡ, ಇಸ್ಮಾಯಿಲ್ ಹೊರಪೇಟಿ, ಮುತ್ತಣ್ಣ ಕೊಪ್ಪಳ, ಮಲ್ಲಿಕಾರ್ಜುನ ಗಾರಗಿ, ಶ್ರೀಧರ ಗಂಜಿಗೌಡರ, ಅಂದಪ್ಪ ರಾಠೋಡ, ಸಿದ್ದಪ್ಪ ಚೋಳಿನ, ಅಲ್ಲಾಭಕ್ಷಿ , ಪರಶುರಾಮ ಕಲಾಲ, ಸಿದ್ದು ಗೊಂಗಡಶೆಟ್ಟಿಮಠ, ಬಾಲಚಂದ್ರ ವಾಲ್ಮೀಕಿ, ಆರ್.ಎಂ. ಜಾಧವ, ಐ.ಎಚ್. ಬಾಗವಾನ, ತುಳಸಿನಾಥ ಮಾಳೊತ್ತರ ಸೇರಿದಂತೆ ಗಜೇಂದ್ರಗಡ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಪಾಲ್ಗೊಂಡಿದ್ದರು.

ಮೆರವಣಿಗೆಯ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಡಿವೈಎಸ್‌ಪಿ ಪ್ರಭುಗೌಡ ಕೆ., ಸಿಪಿಐ ವಿಜಯಕುಮಾರ, ಪಿಎಸ್‌ಐ ಪ್ರಕಾಶ ಡಿ. ಸೇರಿದಂತೆ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

ನನ್ನ ಪೀಠ ಪಕ್ಷಾತೀತವಾಗಿದೆ. ಆದರೆ ನಿಮ್ಮ ಆಶೋತ್ತರಗಳಿಗೆ, ವೈಯಕ್ತಿಕ ಕೆಲಸ ಕಾರ್ಯಗಳಿಗೆ ಹಾಗೂ ಗ್ರಾಮದ ಅಭಿವೃದ್ಧಿಗೆ ಚಿಂತಿಸಬೇಡಿ. ನೀವು ನನಗೆ ಹೆಚ್ಚಿನ ಶಕ್ತಿಯನ್ನು ನೀಡಿದ್ದೀರಿ. ಕ್ಷೇತ್ರದ ಕೆಲಸಗಳು ಅಲ್ಲಿಯೇ ನಿಂತಿವೆ ಎಂದು ಯಾರೂ ಹಿಂಜರಿಯಬೇಡಿ. ನಿಮ್ಮ ಪ್ರೀತಿ, ವಿಶ್ವಾಸ ಹೀಗೆಯೇ ಇರಲಿ. ಕ್ಷೇತ್ರದ ಸರ್ವಜನಾಂಗದ ಕಲ್ಯಾಣಕ್ಕಾಗಿ ಈ ಪೀಠದಿಂದ ಕೆಲಸ ಮಾಡುವ ಶಕ್ತಿಯನ್ನು ಕಾಲಕಾಲೇಶ್ವರ ನೀಡಲಿ.

ಜಿ.ಎಸ್. ಪಾಟೀಲ, ನೂತನ ವಿಧಾನಸಭಾಧ್ಯಕ್ಷರು

ಅವಳಿ ನಗರದ ಅಭಿವೃದ್ಧಿಗೆ ₹8.75 ಕೋಟಿ ಕಾಮಗಾರಿಗೆ ಚಾಲನೆ

0

ವಿಜಯಸಾಕ್ಷಿ ಸುದ್ದಿ, ಗದಗ:ಗದಗ-ಬೆಟಗೇರಿ ಅವಳಿ ನಗರದ ಮೂಲಸೌಕರ್ಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ನಗರದ ಸರ್ವಾಂಗೀಣ ಪ್ರಗತಿಗೆ ವೇಗ ನೀಡಲಾಗುತ್ತಿದೆ ಎಂದು ಶಾಸಕ ಡಾ. ಎಚ್.ಕೆ. ಪಾಟೀಲ ಹೇಳಿದರು.

ಶನಿವಾರ ಅವಳಿ ನಗರದ ವಿವಿಧ ವಾರ್ಡ್‌ಗಳಲ್ಲಿ 2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಹಾಗೂ ನಗರಸಭೆ ಅನುದಾನದಡಿ ಕೈಗೆತ್ತಿಕೊಳ್ಳಲಾಗಿರುವ ಒಟ್ಟು ₹8.75 ಕೋಟಿ ವೆಚ್ಚದ ರಸ್ತೆ, ಚರಂಡಿ ಹಾಗೂ ಪ್ರಮುಖ ಸಿವಿಲ್ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಸಾರ್ವಜನಿಕರ ದೈನಂದಿನ ಸಂಚಾರಕ್ಕೆ ಅನುಕೂಲವಾಗುವಂತೆ ಗುಣಮಟ್ಟದ ರಸ್ತೆ ಹಾಗೂ ಸುಸಜ್ಜಿತ ಚರಂಡಿ ವ್ಯವಸ್ಥೆ ನಿರ್ಮಿಸಲಾಗುತ್ತಿದೆ. ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಗುಣಮಟ್ಟದಿಂದ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.

ಬೆಟಗೇರಿ ಭಾಗದ ಪ್ರಮುಖ ಏಳು ವಾರ್ಡ್‌ಗಳಲ್ಲಿ ತಲಾ ₹1.25 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ತಲಾ ₹1 ಕೋಟಿ ಹಾಗೂ ನಗರಸಭೆ ಅನುದಾನದಡಿ ₹25 ಲಕ್ಷ ಸೇರಿದೆ.

ಬೆಟಗೇರಿ ವಾರ್ಡ್ ನಂ. 2, 4 ಹಾಗೂ 8ರಲ್ಲಿ ಸಿಸಿ ರಸ್ತೆ, ಚರಂಡಿ ಹಾಗೂ ವಿವಿಧ ಸಿವಿಲ್ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ವಾರ್ಡ್ ನಂ. 9, 16, 17 ಹಾಗೂ 18ರಲ್ಲಿ ರಸ್ತೆ ಮತ್ತು ಒಳಚರಂಡಿ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.

ಅವಳಿ ನಗರದ ಮೂಲಸೌಕರ್ಯವನ್ನು ಹಂತ ಹಂತವಾಗಿ ಸುಧಾರಿಸುವ ಮೂಲಕ ಜನರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಶಾಸಕ ಎಚ್.ಕೆ. ಪಾಟೀಲ ತಿಳಿಸಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಅಶೋಕ ಮಂದಾಲಿ, ಎಸ್.ಎನ್. ಬಳ್ಳಾರಿ, ಸುರೇಶ ಕಟ್ಟಿಮನಿ, ಶಕುಂತಲಾ ಅಕ್ಕಿ, ಚಂದ್ರು ಕರಿಸೋಮನಗೌಡ್ರ, ನಗರಸಭೆ ಆಯುಕ್ತ ರಾಜಾರಾಮ ಪವಾರ್, ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಹಾಗೂ ವಿವಿಧ ವಾರ್ಡ್‌ಗಳ ಸದಸ್ಯರು ಉಪಸ್ಥಿತರಿದ್ದರು.

ನೈಟ್‌ ರೈಡರ್ಸ್‌–ರೂರಲ್‌ ಕಿಂಗ್ಸ್‌ ನಡುವೆ ಆ. 23ರಂದು ಪ್ರಶಸ್ತಿ ಕದನ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಿರುವ ಗದಗ ಮೀಡಿಯಾ ಕ್ರಿಕೆಟ್‌ ಲೀಗ್‌ ಅಂತಿಮ ಘಟ್ಟ ತಲುಪಿದ್ದು, ಆ. 23ರಂದು ನಡೆಯುವ ಫೈನಲ್‌ ಪಂದ್ಯದಲ್ಲಿ ನೈಟ್‌ ರೈಡರ್ಸ್‌ ಹಾಗೂ ರೂರಲ್‌ ಕಿಂಗ್ಸ್‌ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

ಲೀಗ್‌ ಹಂತದಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಗೆಲುವು ದಾಖಲಿಸಿ ಅಗ್ರಸ್ಥಾನ ಪಡೆದ ನೈಟ್‌ ರೈಡರ್ಸ್‌ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮತ್ತೊಂದೆಡೆ, ನೈಟ್‌ ರೈಡರ್ಸ್‌ ವಿರುದ್ಧ ಸೋತರೂ ವಿನ್ನರ್ಸ್‌ ಹಾಗೂ ಆರ್‌ಸಿಬಿ ತಂಡಗಳನ್ನು ಮಣಿಸಿದ ರೂರಲ್‌ ಕಿಂಗ್ಸ್‌ ನಿರ್ಣಾಯಕ ಹಂತದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.

ಇನ್ನು ಲೀಗ್‌ ಹಂತದ ಮೂರು ಪಂದ್ಯಗಳಲ್ಲೂ ಸೋಲು ಕಂಡ ಆರ್‌ಸಿಬಿ ಹಾಗೂ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದ ವಿನ್ನರ್ಸ್‌ ತಂಡಗಳು ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿವೆ. ಹೀಗಾಗಿ ಚೊಚ್ಚಲ ಚಾಂಪಿಯನ್‌ ಪಟ್ಟಕ್ಕಾಗಿ ನೈಟ್‌ ರೈಡರ್ಸ್‌ ಹಾಗೂ ರೂರಲ್‌ ಕಿಂಗ್ಸ್‌ ನಡುವೆ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.

ಆರ್‌ಸಿಬಿ ವಿರುದ್ಧ ನೈಟ್‌ ರೈಡರ್ಸ್‌ಗೆ 27 ರನ್‌ಗಳ ಭರ್ಜರಿ ಗೆಲುವು

ಶನಿವಾರ ನಡೆದ ಲೀಗ್‌ ಹಂತದ ಆರನೇ ಪಂದ್ಯದಲ್ಲಿ ನೈಟ್‌ ರೈಡರ್ಸ್‌ ತಂಡವು ಆರ್‌ಸಿಬಿ ವಿರುದ್ಧ 27 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ನೈಟ್‌ ರೈಡರ್ಸ್‌ ನಿಗದಿತ 10 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 98 ರನ್‌ ಗಳಿಸಿತು. ಪ್ರಭುಸ್ವಾಮಿ ಅರವಟಗಿಮಠ 30 ಎಸೆತಗಳಲ್ಲಿ 39 ರನ್‌ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್‌ ಎನಿಸಿಕೊಂಡರೆ, ಮಂಜು ಪತ್ತಾರ 18 ಎಸೆತಗಳಲ್ಲಿ 35 ರನ್‌ ಗಳಿಸಿ ಸ್ಫೋಟಕ ಬ್ಯಾಟಿಂಗ್‌ ನಡೆಸಿದರು. ಆರ್‌ಸಿಬಿ ಪರ ಮಂಜು ಸಾಳೇರ ಹಾಗೂ ಗೌರೀಶ ತಲಾ ಒಂದು ವಿಕೆಟ್‌ ಪಡೆದರು.

99 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ ತಂಡವು ನಿಗದಿತ 10 ಓವರ್‌ಗಳಲ್ಲಿ 71 ರನ್‌ ಗಳಿಸಲಷ್ಟೇ ಶಕ್ತವಾಯಿತು. ವಿನಾಯ ಚೌಡಾಪೂರ 34 ಎಸೆತಗಳಲ್ಲಿ 43 ರನ್‌ ಗಳಿಸಿದರೆ, ಅಜಿತ ಹೊಂಬಾಳಿ 11 ರನ್‌ ಗಳಿಸಿದರು. ನೈಟ್‌ ರೈಡರ್ಸ್‌ ಪರ ಪ್ರಭುಸ್ವಾಮಿ ಅರವಟಗಿಮಠ ಹಾಗೂ ಸಂಗನಗೌಡ ಖಾನಪ್ಪಗೌಡ್ರ ತಲಾ ಒಂದು ವಿಕೆಟ್‌ ಪಡೆದರು.

ಆಲ್‌ರೌಂಡ್‌ ಪ್ರದರ್ಶನ ನೀಡಿದ ಪ್ರಭುಸ್ವಾಮಿ ಅರವಟಗಿಮಠ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ವಿನ್ನರ್ಸ್‌ ಮಣಿಸಿ ಫೈನಲ್‌ಗೇರಿದ ರೂರಲ್‌ ಕಿಂಗ್ಸ್‌

ಶನಿವಾರ ನಡೆದ ಐದನೇ ಪಂದ್ಯದಲ್ಲಿ ರೂರಲ್‌ ಕಿಂಗ್ಸ್‌ ತಂಡವು ವಿನ್ನರ್ಸ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿ ಫೈನಲ್‌ಗೆ ಅರ್ಹತೆ ಪಡೆಯಿತು.

ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ರೂರಲ್‌ ಕಿಂಗ್ಸ್‌, ವಿನ್ನರ್ಸ್‌ ತಂಡವನ್ನು 79 ರನ್‌ಗಳಿಗೆ ಕಟ್ಟಿಹಾಕಿತು. ಅಶೋಕ ಹೂಗಾರ 25, ಈಶ್ವರ ತಿಪ್ಪರಡ್ಡಿ 20 ಹಾಗೂ ಪರಮೇಶ ಲಮಾಣಿ 19 ರನ್‌ ಗಳಿಸಿದರು. ರೂರಲ್‌ ಕಿಂಗ್ಸ್‌ ಪರ ಶಿವಾನಂದ ಹಿರೇಮಠ, ಸಂಜೀವ ಪಾಂಡ್ರೆ, ಪ್ರಕಾಶ ಗುದ್ದಿನ, ನಿಂಗನಗೌಡ ಹನಮಗೌಡ್ರ ಹಾಗೂ ಸೂರಜ್‌ ಮಯೇಕರ ತಲಾ ಒಂದು ವಿಕೆಟ್‌ ಪಡೆದರು.

80 ರನ್‌ಗಳ ಗುರಿ ಬೆನ್ನತ್ತಿದ ರೂರಲ್‌ ಕಿಂಗ್ಸ್‌ ಕೇವಲ ಎರಡು ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ಸೇರಿತು. ನಾಯಕ ನಿಂಗನಗೌಡ 27 ಎಸೆತಗಳಲ್ಲಿ 33 ರನ್‌ ಗಳಿಸಿದರೆ, ಸಂಜೀವ ಪಾಂಡ್ರೆ 26 ಎಸೆತಗಳಲ್ಲಿ 34 ರನ್‌ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ವಿನ್ನರ್ಸ್‌ ತಂಡದ ಪರಮೇಶ ಲಮಾಣಿ 2 ವಿಕೆಟ್‌ ಪಡೆದರು.

ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಿಂಗನಗೌಡ ಹನಮಗೌಡ್ರ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಪಂದ್ಯಶ್ರೇಷ್ಠ ಪ್ರಶಸ್ತಿ ವಿಜೇತರಿಗೆ ಕಾನಿಪ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಎಂ. ಹೆಬ್ಬಳ್ಳಿ ಟ್ರೋಫಿ ವಿತರಿಸಿದರು.

ಈ ಸಂದರ್ಭದಲ್ಲಿ ಸಂಪಾದಕರ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥ ಅಬ್ಬಿಗೇರಿ, ಕಾನಿಪ ಮಾಜಿ ಅಧ್ಯಕ್ಷರಾದ ಅನಂತ ಕಾರ್ಕಳ, ಎಚ್‌.ಎಂ. ಶರೀಫನವರ, ವಿವಿಧ ತಂಡಗಳ ಮಾಲೀಕರಾದ ಸುನೀಲ ತೆಂಬದಮನಿ, ಟಿ.ಎನ್‌. ಭಾಂಡಗೆ, ಜಗದೀಶ ಪೂಜಾರ, ಅಜಿತ ಹೊಂಬಾಳಿ, ಆನಂದ ಸಾಲಿಗ್ರಾಮ, ಆನಂದಯ್ಯ ವಿರಕ್ತಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.