ವಿಜಯಸಾಕ್ಷಿ ಸುದ್ದಿ, ಗದಗ: ನಿವೃತ್ತ ಮುಖ್ಯೋಪಾಧ್ಯಾಯ ರಾಚಪ್ಪ ವ್ಹಿ. ಕೋರಿ ಅವರು ನಿಧನದ ಬಳಿಕವೂ ಮತ್ತೊಬ್ಬರ ಬದುಕಿಗೆ ಬೆಳಕಾಗುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ನಗರದ ವಿವೇಕಾನಂದ ನಗರದ ಕರಿಯಮ್ಮಕಲ್ಲು ಬಡಾವಣೆಯ ನಿವಾಸಿ ರಾಚಪ್ಪ ಕೋರಿ ಅವರು ಆ.17ರಂದು ನಿಧನರಾಗಿದ್ದು, ಅವರ ಸ್ವಇಚ್ಛೆಯಂತೆ ಕುಟುಂಬದವರು ನೇತ್ರದಾನ ಹಾಗೂ ದೇಹದಾನ ನೆರವೇರಿಸಿದ್ದಾರೆ.
ನಿಧನದ ಬಳಿಕ ತಜ್ಞ ವೈದ್ಯರ ತಂಡ ನೇತ್ರದಾನದ ಪ್ರಕ್ರಿಯೆ ಪೂರ್ಣಗೊಳಿಸಿತು. ಬಳಿಕ ಆ.18ರಂದು ಮೃತರ ದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳ ಅಂಗರಚನಾ ಶಾಸ್ತ್ರ ಅಧ್ಯಯನಕ್ಕಾಗಿ ಗದಗದ ಡಿ.ಜಿ.ಎಂ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದಾನ ಮಾಡಲಾಯಿತು.
ಮೃತರ ಅಂತಿಮ ಇಚ್ಛೆಯನ್ನು ಗೌರವಿಸಿದ ಕುಟುಂಬದ ಈ ಮಾನವೀಯ ಕಾರ್ಯ ಸಾರ್ವಜನಿಕರಲ್ಲಿ ನೇತ್ರದಾನ ಹಾಗೂ ದೇಹದಾನದ ಕುರಿತು ಜಾಗೃತಿ ಮೂಡಿಸುವಂತಾಗಿದೆ. ಮರಣದ ನಂತರವೂ ತಮ್ಮ ದೇಹ ಹಾಗೂ ಅಂಗಾಂಗಗಳು ಮತ್ತೊಬ್ಬರ ಬದುಕಿಗೆ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ನೆರವಾಗುವಂತೆ ಮಾಡಿರುವುದು ಮಾದರಿ ಕಾರ್ಯವಾಗಿದೆ.
ಈ ಸಂದರ್ಭದಲ್ಲಿ ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರವೀಣ ವಾರಕರ, ಕಾರ್ಯದರ್ಶಿ ಲಿಂಗರಾಜ ತೋಟದ, ರಮೇಶ ಶಿಗ್ಲಿ, ರಾಜಣ್ಣ ಮಲ್ಲಾಡದ, ಅಶ್ವಥ್ ಸುಲಾಖೆ ಸೇರಿದಂತೆ ಕುಟುಂಬದ ಸದಸ್ಯರು ಹಾಗೂ ಬಂಧು-ಬಳಗದವರು ಉಪಸ್ಥಿತರಿದ್ದರು.

