ಆಸ್ಪತ್ರೆ ಆವರಣದಲ್ಲಿ ಪಾಪರಾಜಿಗಳ ವರ್ತನೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಪ್ತರೊಬ್ಬರನ್ನು ಭೇಟಿ ಮಾಡಿ ಹೊರಬರುತ್ತಿದ್ದ ವೇಳೆ ಫೋಟೋಗ್ರಾಫರ್ಗಳು ‘ಮಾತೃಭೂಮಿ’ ಸಿನಿಮಾ ಹೆಸರನ್ನು ಕೂಗಿ ಅವರ ಖಾಸಗಿತನಕ್ಕೆ ಅಡ್ಡಿಪಡಿಸಿದ್ದು, ಈ ವೇಳೆ ಸಲ್ಮಾನ್ ಕೋಪಗೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಸಲ್ಮಾನ್ ಖಾನ್ ಪಾಪರಾಜಿಗಳ ಬಳಿ ತೆರಳಿ, ‘ನಿಮಗೆ ತಲೆ ಕೆಟ್ಟಿದೆಯೇ?’ ಎಂದು ಪ್ರಶ್ನಿಸುತ್ತಿರುವುದು ಕಾಣಿಸಿಕೊಂಡಿದೆ. ಘಟನೆ ಬಳಿಕ ಅವರು ಸೋಶಿಯಲ್ ಮೀಡಿಯಾದಲ್ಲೂ ಸಿಡಿದೆದ್ದಿದ್ದಾರೆ.
‘ಆಸ್ಪತ್ರೆಯ ಮುಂದೆ ನಿಂತು ನನ್ನ ನೋವನ್ನು ಕಂಟೆಂಟ್ ಮಾಡಿಕೊಳ್ಳಬೇಡಿ. ನನ್ನ ನಷ್ಟದಿಂದ ಹಣ ಸಂಪಾದನೆ ಮಾಡಬೇಡಿ. ನಿಮಗೆ ಸಿನಿಮಾ ಮುಖ್ಯವೇ ಅಥವಾ ಮನುಷ್ಯನ ಜೀವ ಮುಖ್ಯವೇ?’ ಎಂದು ಸಲ್ಮಾನ್ ಖಾನ್ ಪ್ರಶ್ನಿಸಿದ್ದಾರೆ.
ಅಲ್ಲದೆ, ‘ಮುಂದಿನ ಬಾರಿ ನನ್ನ ಕಷ್ಟದ ಸಮಯದಲ್ಲಿ ಇದೇ ರೀತಿ ವರ್ತಿಸಿ ನೋಡಿ. ನಾನು ಸುಮ್ಮನಿರುವ ವ್ಯಕ್ತಿ ಅಲ್ಲ’ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಿಷ್ಣೋಯ್ ಗ್ಯಾಂಗ್ ಬೆದರಿಕೆ ಹಿನ್ನೆಲೆ ಸಲ್ಮಾನ್ ಖಾನ್ ಕಠಿಣ ಭದ್ರತೆಯಲ್ಲಿ ಸಂಚರಿಸುತ್ತಿದ್ದಾರೆ. ಈ ನಡುವೆಯೇ ಆಸ್ಪತ್ರೆ ಮುಂದೆ ನಡೆದ ಘಟನೆ ಬಾಲಿವುಡ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಸದ್ಯ ಸಲ್ಮಾನ್ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಹಾಗೂ ನಯನತಾರಾ ಜೊತೆ ನಟಿಸುತ್ತಿರುವ ‘SVC63’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

