ತುಮಕೂರು: ಎಲ್ಐಸಿ ಪಾಲಿಸಿಯಿಂದ ಸಿಗುವ 30 ಲಕ್ಷ ರೂಪಾಯಿ ವಿಮೆ ಹಣದ ಆಸೆಗೆ ಸ್ವಂತ ತಮ್ಮನನ್ನೇ ಅಣ್ಣ ಕೊಲೆ ಮಾಡಿ, ಅದನ್ನು ಬೈಕ್ ಅಪಘಾತವೆಂದು ಬಿಂಬಿಸಲು ಯತ್ನಿಸಿದ ಘಟನೆ ತುಮಕೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣದ ತನಿಖೆ ನಡೆಸಿದ ಪಟ್ಟನಾಯಕನಹಳ್ಳಿ ಪೊಲೀಸರು ಅಸಲಿ ಸತ್ಯವನ್ನು ಬಯಲಿಗೆಳೆದಿದ್ದಾರೆ.
ಮೃತನನ್ನು 35 ವರ್ಷದ ರಮೇಶ್ ಎಂದು ಗುರುತಿಸಲಾಗಿದ್ದು, ಆತ ಮೂಲತಃ ಆಂಧ್ರಪ್ರದೇಶದ ನಿವಾಸಿಯಾಗಿದ್ದ. ಕಳೆದ ಆರು ವರ್ಷಗಳಿಂದ ಬೆಂಗಳೂರಿನಲ್ಲಿ ಎಳನೀರು ವ್ಯಾಪಾರ ಹಾಗೂ ಮಂಡ್ಯದಲ್ಲಿ ಕಬ್ಬಿನ ಜ್ಯೂಸ್ ವ್ಯಾಪಾರ ನಡೆಸುತ್ತಿದ್ದನು. ಹೆಂಡತಿಯಿಂದ ದೂರವಾಗಿದ್ದ ರಮೇಶ್ ಮಾಟಮಂತ್ರದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಎನ್ನಲಾಗಿದೆ.
ಪೊಲೀಸರ ಪ್ರಕಾರ, ಆರೋಪಿ ಹನುಮಂತರಾಜು ತನ್ನ ತಮ್ಮ ರಮೇಶ್ ಹೆಸರಿನಲ್ಲಿ 15 ಲಕ್ಷ ರೂಪಾಯಿ ಮೊತ್ತದ ಎಲ್ಐಸಿ ಪಾಲಿಸಿ ಮಾಡಿಸಿದ್ದು, ಅದರ ನಾಮಿನಿಯಾಗಿ ತನ್ನ ಹೆಸರನ್ನೇ ನೋಂದಾಯಿಸಿಕೊಂಡಿದ್ದ. ಪ್ರತಿ ವರ್ಷ ಸುಮಾರು 85 ಸಾವಿರ ರೂಪಾಯಿ ಪ್ರೀಮಿಯಂ ಪಾವತಿಸುತ್ತಿದ್ದ. ಅಪಘಾತದಲ್ಲಿ ಮೃತಪಟ್ಟರೆ ವಿಮಾ ಮೊತ್ತದ ದ್ವಿಗುಣ ಅಂದರೆ 30 ಲಕ್ಷ ರೂಪಾಯಿ ಸಿಗುವ ನಿಯಮವಿದ್ದ ಕಾರಣ, ಹಣದ ದುರಾಸೆಯಿಂದ ಈ ಕೃತ್ಯ ಎಸಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಜೂನ್ 19ರಂದು ನಿಧಿ ಪೂಜೆ ನೆಪದಲ್ಲಿ ರಮೇಶ್ನನ್ನು ಶಿರಾ-ಅಮರಾಪುರ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡ ಆರೋಪಿಗಳು, ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಆತನ ಮೇಲೆ ಕಾರು ಹರಿಸಿದ್ದರೂ ಜೀವ ಉಳಿದಿದ್ದರಿಂದ ಬ್ಯಾಟರಿ ಜಂಪಿಂಗ್ ವೈರ್ನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೊಲೆ ಬಳಿಕ ಪ್ರಕರಣವನ್ನು ಅಪಘಾತದ ರೂಪಕ್ಕೆ ತರುವ ಉದ್ದೇಶದಿಂದ ಶವ ಮತ್ತು ಬೈಕ್ ಅನ್ನು ರಸ್ತೆಯಲ್ಲಿ ಬಿಟ್ಟು, ಬೈಕ್ ಮುಂಭಾಗವನ್ನು ಜಖಂಗೊಳಿಸಿ ಅಪಘಾತದ ನಾಟಕವಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಮೃತನ ಹಿರಿಯ ಸಹೋದರ ರಂಗನಾಥ ನೀಡಿದ ದೂರಿನ ಮೇರೆಗೆ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಮೂರು ವಿಶೇಷ ತಂಡಗಳನ್ನು ರಚಿಸಿ ತನಿಖೆ ನಡೆಸಿದ ಪೊಲೀಸರು, ಪ್ರಮುಖ ಆರೋಪಿ ಹನುಮಂತರಾಜು ಸೇರಿದಂತೆ ಇತರ ಆರೋಪಿಗಳಾದ ಲಕ್ಷ್ಮೀಕಾಂತ, ನವೀನ್ ಹಾಗೂ ಎಂ.ಡಿ. ಜಿಲಾನ್ ಅವರನ್ನು ಬಂಧಿಸಿದ್ದಾರೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

