Home Blog

ಪೂರಕ ದಾಖಲೆಗಳಿಲ್ಲದಿದ್ದರೂ ಆರೋಪ ಪಟ್ಟಿ ಅಂತಿಮ ವರದಿ ಅಲ್ಲ: ಹೈಕೋರ್ಟ್ ಸ್ಪಷ್ಟನೆ

ಬೆಂಗಳೂರು: ಕಾಲ್ ಡಿಟೈಲ್ ರೆಕಾರ್ಡ್ಸ್ (ಸಿಡಿಆರ್) ಮತ್ತು ಫಾರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ (ಎಫ್‌ಎಸ್‌ಎಲ್) ವರದಿ ಸೇರಿದಂತೆ ಪೂರಕ ದಾಖಲೆಗಳು ಇಲ್ಲದಿದ್ದರೂ ಸಲ್ಲಿಸಲಾದ ಆರೋಪ ಪಟ್ಟಿ ಕಾನೂನುಬಾಹಿರವಾಗುವುದಿಲ್ಲ. ಆದರೆ ಅದನ್ನು ತನಿಖೆಯ ಅಂತಿಮ ವರದಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ತನಿಖೆ ಎನ್ನುವುದು ಆರೋಪಗಳು ಮತ್ತು ಸಾಕ್ಷ್ಯಗಳನ್ನು ಕ್ರಮೇಣ ಸಂಗ್ರಹಿಸುವ ಪ್ರಕ್ರಿಯೆಯಾಗಿದ್ದು, ನಂತರವೂ ಹೆಚ್ಚುವರಿ ಅಂಶಗಳನ್ನು ಸೇರಿಸುವ ಅವಕಾಶವಿದೆ. ಕೆಲವು ವರದಿಗಳು ಸೇರಿಸಲ್ಪಟ್ಟಿಲ್ಲ ಎಂಬ ಕಾರಣಕ್ಕೆ ಆರೋಪ ಪಟ್ಟಿಯನ್ನು ತಿರಸ್ಕರಿಸಲಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಇದೇ ವೇಳೆ, ಪೋಕ್ಸೋ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ವ್ಯಕ್ತಿಗೆ ಡಿಫಾಲ್ಟ್ ಜಾಮೀನು ನೀಡಲು ಅವಕಾಶವಿಲ್ಲ ಎಂದು ಹೇಳಿದೆ.

ಈ ಸಂಬಂಧ, ಬೆಂಗಳೂರಿನ ಮತ್ತೀಕೆರೆಯ ನಿವಾಸಿ ಗೋವಿಂದ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಪ್ರಕಾರ, 10 ವರ್ಷಕ್ಕಿಂತ ಕಡಿಮೆ ಶಿಕ್ಷೆಗೆ ಒಳಪಡುವ ಅಪರಾಧ ಪ್ರಕರಣಗಳಲ್ಲಿ 60 ದಿನಗಳೊಳಗೆ ಮತ್ತು 10 ವರ್ಷಕ್ಕಿಂತ ಹೆಚ್ಚು ಶಿಕ್ಷೆಗೆ ಒಳಪಡುವ ಪ್ರಕರಣಗಳಲ್ಲಿ 90 ದಿನಗಳೊಳಗೆ ಆರೋಪ ಪಟ್ಟಿ ಸಲ್ಲಿಸಬೇಕು. ಈ ನಿಯಮದ ಮುಖ್ಯ ಉದ್ದೇಶ ಅತ್ಯಾಚಾರ ಮತ್ತು ಪೋಕ್ಸೋ ಪ್ರಕರಣಗಳಲ್ಲಿ ತನಿಖೆಯನ್ನು ವೇಗವಾಗಿ ಪೂರ್ಣಗೊಳಿಸುವುದು ಹಾಗೂ ಸಂತ್ರಸ್ತೆಯ ಹಿತವನ್ನು ಕಾಪಾಡುವುದಾಗಿದೆ.

ಆದರೆ, ಈ ನಿಯಮವನ್ನು ಆರೋಪಿಗಳು ಡಿಫಾಲ್ಟ್ ಜಾಮೀನು ಪಡೆಯಲು ಬಳಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ನಿಗದಿತ ಅವಧಿಯೊಳಗೆ ಆರೋಪ ಪಟ್ಟಿ ಸಲ್ಲಿಸಿದ ನಂತರವೂ ಹೆಚ್ಚುವರಿ ವರದಿ ಬಾಕಿ ಇದ್ದರೂ, ಡಿಫಾಲ್ಟ್ ಜಾಮೀನು ಪಡೆಯಲು ಅವಕಾಶವಿಲ್ಲ ಎಂದು ಹೇಳಿದೆ.

ಅಪರಾಧ ತನಿಖೆ ಆರಂಭದಲ್ಲೇ ಸಂಪೂರ್ಣವಾಗಿರಬೇಕೆಂಬುದು ಕಡ್ಡಾಯವಲ್ಲ. ಅದು ಕಾಲಕ್ರಮೇಣ ವಿಸ್ತರಿಸುವ ಪ್ರಕ್ರಿಯೆ. ಆರೋಪ ಪಟ್ಟಿ ಸಲ್ಲಿಸುವ ಹಂತದಲ್ಲೇ ಸಂಪೂರ್ಣತೆ ಒತ್ತಾಯಿಸುವುದು ತನಿಖಾ ಸಂಸ್ಥೆಗಳ ಮೇಲೆ ಅನಾವಶ್ಯಕ ಒತ್ತಡ ಉಂಟುಮಾಡುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅತಿವೇಗದಿಂದ ಬಂದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ: ಇಬ್ಬರು ಸಾವು!

ಕಾರವಾರ: ದಾಂಡೇಲಿ ತಾಲೂಕಿನ ಕರ್ಕಾ ಕ್ರಾಸ್ ಸಮೀಪದ ಅಜಗಾಂವ ಬಳಿ ಅತೀವೇಗದ ಚಾಲನೆಯಿಂದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಈ ಅಪಘಾತದಲ್ಲಿ ಧಾರವಾಡದ ಫಾರೂಖ್ ಸಾಬ್ ಹಾಗೂ ಹಳಿಯಾಳದ ಮುದಸ್ಸಿರ್ ಇಸ್ಮಾಯಿಲ್ ಮುಲ್ಲಾ ಮೃತ ಪಟ್ಟಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ದಾಂಡೇಲಿಯಿಂದ ಹಳಿಯಾಳ ಕಡೆ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಕಾರು ಎರಡು ಮರಗಳ ನಡುವೆ ಸಿಲುಕಿಕೊಂಡಿದೆ.

ಮೃತದೇಹಗಳನ್ನು ಹಳಿಯಾಳ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ದಾಂಡೇಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಮಗಳಿಗಾಗಿ ಕಿಡ್ನಿ ಮಾರಾಟಕ್ಕೆ ಮುಂದಾದ ತಂದೆ: ನೊಂದ ಕುಟುಂಬಕ್ಕೆ ಶಾಸಕ ಸುರೇಶ್ ಕುಮಾರ್ ನೆರವು

ಬೆಂಗಳೂರು: ಬೆಂಗಳೂರಿನಲ್ಲಿ ಮಗಳ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗದೇ ತಂದೆ ಕಿಡ್ನಿ ಮಾರಾಟಕ್ಕೆ ಮುಂದಾದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

ಕುಸುಮಾ ಎಂಬ ಮಹಿಳೆ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದು, ಎಸ್ಟರ್ ಆಸ್ಪತ್ರೆನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕು ದಿನಗಳ ಚಿಕಿತ್ಸೆಗೆ ಸುಮಾರು ಐದೂವರೆ ಲಕ್ಷ ರೂಪಾಯಿ ವೆಚ್ಚವಾಗಿದ್ದು, ಹಣದ ಅಭಾವದಿಂದ ಸಂಕಷ್ಟದಲ್ಲಿದ್ದ ತಂದೆ ಕಿಡ್ನಿ ಮಾರಾಟಕ್ಕೆ ಮುಂದಾಗಿದ್ದರು

ಈ ವಿಷಯ ತಿಳಿದ ತಕ್ಷಣ ಶಾಸಕ ಸುರೇಶ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬದವರೊಂದಿಗೆ ಮಾತನಾಡಿದರು. ಬಳಿಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರ ಗಮನಕ್ಕೆ ವಿಷಯ ತಂದರು.

ಪರಿಣಾಮವಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಚಿಕಿತ್ಸಾ ವೆಚ್ಚ ಭರಿಸಲು ಕ್ರಮ ಕೈಗೊಳ್ಳಲಾಯಿತು. ಜೊತೆಗೆ ಆಸ್ಪತ್ರೆ ಆಡಳಿತ ಮಂಡಳಿಯೂ ಮಾನವೀಯತೆ ತೋರಿಸಿ, ಕುಸುಮಾ ಅವರಿಗೆ ಉಚಿತ ಚಿಕಿತ್ಸೆ ನೀಡಲು ಮುಂದಾಗಿದೆ.

ರೋಗಿಯ ಆರೋಗ್ಯವನ್ನು ಶೀಘ್ರದಲ್ಲೇ ಸುಧಾರಿಸುವುದಾಗಿ ವೈದ್ಯರು ಭರವಸೆ ನೀಡಿದ್ದು, ಈ ನೆರವಿಗೆ ಶಾಸಕ ಸುರೇಶ್ ಕುಮಾರ್ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

ಚಿತ್ರದುರ್ಗ| ಅಕ್ರಮವಾಗಿ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಆರೋಪಿ ಅರೆಸ್ಟ್!

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಳ್ಳಕೆರೆ ತಾಲೂಕಿನ ಗುಂತ ಕೊಲಮ್ಮನಹಳ್ಳಿ ಗ್ರಾಮದ ಪಾಲಯ್ಯ ಜಿ (58) ಬಂಧಿತ ಆರೋಪಿ. ಜಮೀನಿನಲ್ಲಿ ಗಾಂಜಾ ಬೆಳೆದಿರುವ ಕುರಿತು ಖಚಿತ ಮಾಹಿತಿ ಪಡೆದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದರು.

ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಭಂಡಾರು ಹಾಗೂ ಉಪ ವಿಭಾಗದ ಪೊಲೀಸ್ ಅಧಿಕಾರಿ ಸತ್ಯನಾರಾಯಣ ರಾವ್ ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕ ಹನುಮಂತಪ್ಪ ಎಂ ಶಿರೇಹಳ್ಳಿ ಮತ್ತು ಪಿಎಸ್‌ಐ ಜಿ ಪಾಂಡುರಂಗಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ದಾಳಿಯ ವೇಳೆ ಆರೋಪಿಯ ಜಮೀನಿನಲ್ಲಿ ಬೆಳೆದಿದ್ದ ಸುಮಾರು 18 ಲಕ್ಷ ರೂ. ಮೌಲ್ಯದ 791 ಗಾಂಜಾ ಗಿಡಗಳಿಂದ 187 ಕೆಜಿ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆಯಲಾಗಿದೆ. ಈ ಕಾರ್ಯಾಚರಣೆಯಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಸಹ ಭಾಗವಹಿಸಿದ್ದರು.

ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಿದ ಪೊಲೀಸ್ ಸಿಬ್ಬಂದಿಗೆ ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಲ ಮಾಡಿ ತಂದಿದ್ದ ಕೆಟಿಎಂ ಬೈಕ್ ರಾತ್ರೋ ರಾತ್ರಿ ಕಳ್ಳತನ! ಯುವಕ ಕಂಗಾಲು

ಬೆಂಗಳೂರು: ನೆಲಮಂಗಲ ನಗರದ ವೀವರ್ಸ್ ಕಾಲೋನಿಯಲ್ಲಿ ಯುವಕನೋರ್ವ ಸಾಲ ಮಾಡಿ ತೆಗದುಕೊಂಡಿದ್ದ ಕೆಟಿಎಂ ಬೈಕ್ ಅನ್ನು ಅದೇ ರಾತ್ರಿ ಕಳ್ಳರು ಕದ್ದೊಯ್ದ ಘಟನೆ ನಡೆದಿದೆ.

ಹೊಸ ಬೈಕ್ ಕಳೆದುಕೊಂಡ ಚಂದು ಕಂಗಾಲಾಗಿದ್ದಾರೆ. ಯುವಕ ಚಂದು ಬಹುದಿನಗಳ ನಂತರ ತನ್ನ ಕನಸಿನ ಬೈಕ್ ತೆಗೆದುಕೊಂಡಿದ್ದರು. ರಾತ್ರಿ ಮಲಗಿದ್ದ ವೇಳೆ ಬೈಕ್ ಕದ್ದು ಕಳ್ಳರ ಗ್ಯಾಂಗ್ ಪರಾರಿಯಾಗಿದೆ. ಮನೆಯ ಮುಂದೆ ಲಾಕ್ ಮಾಡಿ ನಿಲ್ಲಿಸಿದ್ದ ಬೈಕ್ ಅನ್ನು ಬೈಕಿನಲ್ಲಿ ಬಂದು ಕ್ಷಣಾರ್ಧದಲ್ಲಿ ಕಳ್ಳರು ಕದ್ದೊಯ್ದಿದ್ದಾರೆ. ಕಳ್ಳರು ಬೈಕ್‌ ಕದ್ದು ಎಸ್ಕೇಪ್‌ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಳ್ಳತನದಿಂದ ಬೈಕ್ ಸವಾರ ಚಂದು ಕಂಗಾಲಾಗಿದ್ದಾರೆ. ಘಟನೆ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.

ಬೇಸಿಗೆ ಎಫೆಕ್ಟ್: ಮೆಟ್ರೋ, ಎಸಿ ಬಸ್ ಕಡೆ ಮುಖ ಮಾಡಿದ ಬೆಂಗಳೂರು ಜನ! ಭರ್ಜರಿ ಆದಾಯ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೇಸಿಗೆಯ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನಜೀವನ ಕಷ್ಟಕರವಾಗಿದೆ.

ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು, ಉರಿಯುವ ಬಿಸಿಲಿಗೆ ಜನ ಹೈರಾಣಾಗುತ್ತಿದ್ದಾರೆ. ಈ ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಗರವಾಸಿಗಳು ಈಗ ಬೈಕ್, ಸ್ಕೂಟರ್ ಹಾಗೂ ಎಸಿ ಇಲ್ಲದ ಕಾರುಗಳನ್ನು ಬಿಟ್ಟು, ತಂಪಾದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಎಸಿ ಬಸ್‌ಗಳು ಹಾಗೂ ನಮ್ಮ ಮೆಟ್ರೋ ಕಡೆಗೆ ಮುಖ ಮಾಡಿದ್ದಾರೆ. ಇದರಿಂದ ಸಾರಿಗೆ ಸಂಸ್ಥೆಗಳ ಆದಾಯವೂ ಹೆಚ್ಚುತ್ತಿದೆ.

ನಗರದಲ್ಲಿ ಈಗಾಗಲೇ 36 ಡಿಗ್ರಿ ತಾಪಮಾನ ದಾಖಲಾಗಿದ್ದು, ಬಿಸಿಲಿನ ತೀವ್ರತೆಗೆ ಜನರು ಕಂಗಾಲಾಗಿದ್ದಾರೆ. ಇದರ ಪರಿಣಾಮವಾಗಿ ಬಿಎಂಟಿಸಿ ಎಸಿ ಬಸ್‌ಗಳಿಗೆ ಭಾರೀ ಬೇಡಿಕೆ ಹೆಚ್ಚಾಗಿದೆ. ಡೀಸೆಲ್ ಹಾಗೂ ವಿದ್ಯುತ್ ಚಾಲಿತ ಸೇರಿ 535 ಎಸಿ ಬಸ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಬೇಸಿಗೆ ಆರಂಭವಾದ ಬಳಿಕ ಸುಮಾರು 2.5 ಕೋಟಿ ರೂ. ಆದಾಯ ಬಂದಿದೆ.

ಪ್ರಯಾಣಿಕರಾದ ಬಾಲಾಜಿ ಮಾತನಾಡಿ, “ನಗರದಲ್ಲಿ ಬಿಸಿಲು ಜಾಸ್ತಿಯಾಗಿರುವುದರಿಂದ ಹೊರಗೆ ಹೋಗಲು ಕಷ್ಟ. ಅದಕ್ಕಾಗಿ ಎಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದೇನೆ” ಎಂದಿದ್ದಾರೆ.

ಇನ್ನೊಂದೆಡೆ, ನಮ್ಮ ಮೆಟ್ರೋ ರೈಲುಗಳಲ್ಲಿ ಸಹ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ವಿಶೇಷವಾಗಿ ವೈಟ್‌ಫೀಲ್ಡ್–ಚಲ್ಲಘಟ್ಟ ಮಾರ್ಗದಲ್ಲಿ ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಭಾರೀ ಜನಸಂದಣಿ ಕಂಡುಬರುತ್ತಿದೆ. ನಿಲ್ಲಲು ಜಾಗವಿಲ್ಲದಷ್ಟು ಜನಸಂದಣಿ ಇದ್ದರೂ, ತಂಪಾದ ಪ್ರಯಾಣ ಜನರಿಗೆ ಸ್ವಲ್ಪ ನೆಮ್ಮದಿ ನೀಡುತ್ತಿದೆ.

ಮೆಟ್ರೋ ಪ್ರಯಾಣಿಕರಾದ ರಾಮದಾಸ್ ಪಂಡಿತ್ ಹೇಳುವಂತೆ, “ವೈಟ್‌ಫೀಲ್ಡ್‌ನಿಂದ ಮೆಜೆಸ್ಟಿಕ್‌ಗೆ ಮೆಟ್ರೋದಲ್ಲಿ ಬಂದೆ. ತುಂಬಾ ಜನಸಂದಣಿ ಇದ್ದರೂ ತಂಪಾಗಿತ್ತು. ಆದರೆ ಹೊರಗೆ ಇಳಿದ ಕೂಡಲೇ ಬೆವರು ಸುರಿಯುತ್ತಿದೆ” ಎಂದಿದ್ದಾರೆ.

ಒಟ್ಟಿನಲ್ಲಿ, ಬೆಂಗಳೂರಿನ ಬಿಸಿಲು ಜನರನ್ನು ಕಂಗೆಡಿಸುತ್ತಿದ್ದರೂ, ಎಸಿ ಬಸ್‌ಗಳು ಮತ್ತು ಮೆಟ್ರೋ ಸೇವೆಗಳು ತಾತ್ಕಾಲಿಕ ಪರಿಹಾರವಾಗಿ ಪರಿಣಮಿಸಿವೆ. ಬಿಸಿಲು ಹೆಚ್ಚಾದಂತೆ ಸಾರಿಗೆ ಸಂಸ್ಥೆಗಳ ಆದಾಯವೂ ಏರಿಕೆಯಾಗುತ್ತಿರುವುದು ಗಮನಾರ್ಹವಾಗಿದೆ.

ದಕ್ಷಿಣ ಭಾರತದ ಸ್ವಾಭಿಮಾನ ಉಳಿಸಲು ಒಟ್ಟಾಗಿ ಹೋರಾಡುತ್ತಿದ್ದೇವೆ: ಡಿ.ಕೆ. ಶಿವಕುಮಾರ್

0

ಕೃಷ್ಣಗಿರಿ:ನಾವೆಲ್ಲರೂ ಪರಸ್ಪರ ಅಣ್ಣತಮ್ಮಂದಿರು. ಊರುಗಳಾಗಿ ಭಾಗವಾಗಿದ್ದೇವೆ ಅಷ್ಟೇ. ನಾವೆಲ್ಲರೂ ಇಂದು ದಕ್ಷಿಣ ಭಾರತದ ಸ್ವಾಭಿಮಾನ ಉಳಿಸಲು ಒಟ್ಟಾಗಿ ಹೋರಾಟ ಮಾಡುತ್ತಿದ್ದೇವೆ.” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೃಷ್ಣಗಿರಿ ಜಿಲ್ಲೆಯ ಥಳಿ ವಿಧಾನಸಭಾ ಕ್ಷೇತ್ರದ ಕೆಲಮಂಗಲಂ ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು. ಥಳಿ ಕರ್ನಾಟಕ ರಾಜ್ಯದ ಗಡಿ ಭಾಗದಲ್ಲಿರುವ ವಿಧಾನಸಭಾ ಕ್ಷೇತ್ರ. ನನ್ನ ಕ್ಷೇತ್ರ ಕನಕಪುರದೊಂದಿಗೆ ಗಡಿಯನ್ನು ಈ ಕ್ಷೇತ್ರ ಹಂಚಿಕೊಂಡಿದೆ. ಇಲ್ಲಿ ಸಾಕಷ್ಟು ಜನ ಕನ್ನಡಿಗರು ಇದ್ದೀರಿ.

ನನ್ನ ಕ್ಷೇತ್ರದಲ್ಲಿ ಜಮೀನು ಹೊಂದಿರುವ ಈ ಭಾಗದ ಅನೇಕರಿಗೆ ನಮ್ಮ ಕ್ಷೇತ್ರದಲ್ಲೇ ಮತ ಇಟ್ಟುಕೊಳ್ಳಿ ಎಂದು ನಾನು ಆಹ್ವಾನ ಕೊಟ್ಟಿದ್ದರೂ ನೀವುಗಳು ಇಲ್ಲಿನ ಅಭ್ಯರ್ಥಿ ರಾಮಚಂದ್ರ ಅವರು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಇಲ್ಲೇ ಮತ ಹೊಂದಿದ್ದೀರಿ.

ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಬಳಿಕ ಮತದಾರರೆಲ್ಲರೂ ನಿಮ್ಮ ಕ್ಷೇತ್ರದಲ್ಲೇ ಮತದಾನ ಮಾಡಲು ಬಸುತ್ತಿದ್ದಾರೆ ಇಲ್ಲಿ ಕಲ್ಪಿಸಲಾಗಿರುವ ಯೋಜನೆಗಳೇನು ಎಂದು ನಾನು ರಾಮಚಂದ್ರ ಅವರನ್ನು ಕೇಳಿದೆ. ಅವರು ನಮಗೆ ಮಾಹಿತಿ ನೀಡಿದರು. ಆ ಮಾಹಿತಿ ಬಗ್ಗೆ ನಾನು, ರಾಮಲಿಂಗಾ ರೆಡ್ಡಿ, ಸಿದ್ದರಾಮಯ್ಯ ಅವರೆಲ್ಲರೂ ಸೇರಿ ಚರ್ಚೆ ಮಾಡಿ ನಮ್ಮ ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದೆವು” ಎಂದು ತಿಳಿಸಿದರು.

“ಕರ್ನಾಟಕದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಇತ್ತು. ಮೋದಿ ಅವರು ಸೇರಿದಂತೆ ಬಿಜೆಪಿಯವರೆಲ್ಲರೂ ಅಚ್ಚೇದಿನ ನೀಡುವುದಾಗಿ ಹೇಳಿದ್ದರು. ನಿಮಗೆ 15 ಲಕ್ಷ ಹಾಕುತ್ತೇವೆ ಎಂದು ನಿಮ್ಮಿಂದ ಜನಧನ್ ಖಾತೆ ತೆರೆಸಿದರು. ನಿಮಗೆ ಆ ಹಣ ಬಂತಾ? ಆದರೆ ನಾವು ಪಂಚ ಗ್ಯಾರಂಟಿ ಭರವಸೆ ನೀಡಿದೆವು. ನಾವು ರಾಜ್ಯದಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಬಡ ಕುಟುಂಬದ ಮಹಿಳೆಗೆ ಮಾಸಿಕ 2 ಸಾವಿರ, 200 ಯೂನಿಟ್ ವರೆಗೂ ವಿದ್ಯುತ್ ಉಚಿತ, 10 ಕೆ.ಜಿ ಅಕ್ಕಿ, ನಿರುದ್ಯೋಗಿಗಳಿಗೆ 3 ಸಾವಿರ ವರೆಗೂ ನಿರುದ್ಯೋಗ ಭತ್ಯೆ ನೀಡಿದೆವು” ಎಂದು ಹೇಳಿದರು.

ಮೋದಿ ಅವರಿಂದ ಗ್ಯಾಸ್ ಹೋಗಿ ಸೌದೆ ಒಲೆ ವಾಪಸ್ ಬಂದಿದೆ

“ಇಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟದ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ತಮಿಳುನಾಡಿನಾದ್ಯಂತ ಉಚಿತ ಬಸ್ ಪ್ರಯಾಣ, ಮಹಿಳೆಯರಿಗೆ 2 ಸಾವಿರ ಹಣ ನೀಡುವ ಭರವಸೆ ನೀಡಿದ್ದಾರೆ. ಇನ್ನು ಮೋದಿ ಅವರಿಂದ ಗ್ಯಾಸ್ ಹೋಗಿ ಸೌದೆ ಒಲೆ ವಾಪಸ್ ಬಂದಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ.

ಹೀಗಾಗಿ ಕುಟುಂಬದ ಅಗತ್ಯ ವಸ್ತುಗಳ ಖರೀದಿಗೆ 8 ಸಾವಿರ ನೀಡುವ ಭರವಸೆ ನೀಡಲಾಗಿದೆ. ಡಿಎಂಕೆ, ಕಾಂಗ್ರೆಸ್ ಪಕ್ಷಗಳು ಕೊಟ್ಟ ಮಾತಿನಂತೆ ನಡೆಯುವ ಪಕ್ಷಗಳು. ನಮ್ಮ ರಾಜ್ಯದಲ್ಲಿ ರೈತರಿಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಅದೇ ರೀತಿ ನಿಮ್ಮ ರಾಜ್ಯದಲ್ಲಿ ರೈತರಿಗೆ ಮೀಟರ್ ರಹಿತ ಪಂಪ್ ಸೆಟ್ ನೀಡುವ ಭರವಸೆ ನೀಡಿದ್ದೇವೆ. ಹಿರಿಯ ನಾಗರೀಕರಿಗೆ ವೃದ್ಧಾಪ್ಯ ವೇತನದ ಮೂಲಕ 2 ಸಾವಿರ, ವಿಕಲಾಂಗರಿಗೆ 2500 ನೀಡುವುದಾಗಿ ಘೋಷಣೆ ಮಾಡಿದ್ದೇವೆ.

ಪೆರಿಯಾರ್ ಅವರ ಮಾರ್ಗದರ್ಶನದಲ್ಲಿ ಡಿಎಂಕೆ ನೇತೃತ್ವದ ಸರ್ಕಾರ ಆಡಳಿತ ನಡೆಸುತ್ತಿದೆ. ಪೆರಿಯಾರ್ ಅವರ ಮಾತೃಭೆ ಕನ್ನಡವಾಗಿತ್ತು. ಅವರು ತಮಿಳು ಭಾಷೆಗಾಗಿ ಹೋರಾಟ ಮಾಡಿಕೊಂಡು ಬಂದರು. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಮಾತೃಭಾಷೆ ತಮಿಳು.

ಮೋದಿಯವರು ಅಧಿಕಾರಕ್ಕೆ ಬಂದು 12 ವರ್ಷಗಳಾಗಿದ್ದು, ಅವರು ಯಾವುದಾದರೂ ಒಂದು ವಿಚಾರದಲ್ಲಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರಾ? ನುಡಿದಂತೆ ನಡೆದು ಒಂದು ಕಾರ್ಯಕ್ರಮ ಜಾರಿಗೆ ತಂದಿದ್ದಾರಾ? ಇಲ್ಲ. ಉಚಿತವಾಗಿ ಅಕ್ಕಿ ನೀಡುವ ಕಾರ್ಯಕ್ರಮ, ಅಂಗನವಾಡಿ ಕಾರ್ಯಕ್ರಮ, ಆಶಾ ಕಾರ್ಯಕರ್ತೆಯರ ಕಾರ್ಯಕ್ರಮ, ಉಳುವವನಿಗೆ ಭೂಮಿ, ಉಚಿತ ವಿದ್ಯುತ್ ಸೇರಿದಂತೆ ಜನಪರ ಯೋಜನೆಗಳನ್ನು ಜಾರಿಗೆ ತಂದಿರುವುದು ಕಾಂಗ್ರೆಸ್ ಸರ್ಕಾರವೇ ಹೊರತು. ಬಿಜೆಪಿಯಲ್ಲ.

ಬಿಜೆಪಿಯವರದ್ದು ಖಾಲಿ ಬುಟ್ಟಿ, ಬೇವಿನಸೊಪ್ಪು ನಂದೇ ಬೆಳಗೋ ಪೂಜಾರಿ ಎಂಬ ಮಾತಿನಂತೆ ಖಾಲಿ ಮಾತು ಅಷ್ಟೇ. ಬಿಜೆಪಿ ರಾಜ್ಯಾಧ್ಯಕ್ಷರಾದ ಅಣ್ಣಾಮಲೈ ನಮ್ಮ ರಾಜ್ಯದಲ್ಲಿ ಸೇವೆಸಲ್ಲಿಸಿದ್ದರು. ಬಿಜೆಪಿಯವರು ಪಾಪ ಆತನನ್ನು ಕಿತ್ತೊಗೆದಿದ್ದಾರೆ. ಆತನಿಗೆ ಟಿಕೆಟ್ ನೀಡಿಲ್ಲ. ಈಗ ಎಐಡಿಎಂಕೆ ಅವರು ಆತನನ್ನು ನೀವು ಇಟ್ಟುಕೊಂಡರೆ ನಾವು ನಿಮ್ಮ ಹತ್ತಿರಕ್ಕೂ ಬರುವುದಿಲ್ಲ ಎಂದು ಹೇಳಿದ್ದಾರೆ” ಎಂದರು.

ಮೋದಿಯಿಂದ ಉದ್ಘಾಟನೆಗೂ ಮೊದಲೇ ರಾಜಸ್ಥಾನದ ಸಂಸ್ಕರಣಾಗಾರದಲ್ಲಿ ಬೆಂಕಿ ಅವಘಡ! 

0

ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಉದ್ಘಾಟನೆ ಮಾಡಬೇಕಿದ್ದ ರಾಜಸ್ಥಾನದ ರಿಫೈನರಿ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭಾರಿ ಹಾನಿ ಸಂಭವಿಸಿದೆ.

79,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಈ ಅತ್ಯಾಧುನಿಕ ರಿಫೈನರಿ ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ಭಾಗವಹಿಸಲು ನಿರ್ಧರಿಸಲಾಗಿತ್ತು. ಆದರೆ ಅಗ್ನಿ ಅವಘಡದಿಂದ ಕಾರ್ಯಕ್ರಮ ಮುಂದೂಡುವ ಸಾಧ್ಯತೆ ಇದೆ.

ರಾಜಸ್ಥಾನದ ಬಲೋತ್ರದಲ್ಲಿರುವ ಪಚಪದ್ರಾ ರಿಫೈನರಿ ಘಟಕವು ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಮತ್ತು ರಾಜ್ಯ ಸರ್ಕಾರದ ಜಂಟಿ ಯೋಜನೆಯಾಗಿದೆ. ಈ ಘಟಕವು ಮುದ್ರಾ ಬಂದರಿನೊಂದಿಗೆ ನೇರ ಸಂಪರ್ಕ ಹೊಂದಿರುವುದರಿಂದ ಸಾಗಣೆ ಮತ್ತು ಪೂರೈಕೆಯಲ್ಲಿ ಮಹತ್ವದ ಪಾತ್ರ ವಹಿಸುವ ನಿರೀಕ್ಷೆ ಇತ್ತು.

ಘಟಕದಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಆವರಿಸಿದ್ದು, ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸುಮಾರು 20 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಈವರೆಗೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.

ಈ ರಿಫೈನರಿ ಘಟಕವು ಭಾರತದ ಮೊದಲ ಗ್ರೀನ್‌ಫೀಲ್ಡ್ ರಿಫೈನರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ವರ್ಷಕ್ಕೆ ಸುಮಾರು 5,000 ಕೋಟಿ ರೂ. ಆದಾಯ ರಾಜ್ಯ ಸರ್ಕಾರಕ್ಕೆ ಬರಲಿದೆ ಎಂದು ಅಂದಾಜಿಸಲಾಗಿದೆ.

ಮಧ್ಯಪ್ರಾಚ್ಯ ಸಂಘರ್ಷ ಪರಿಣಾಮ: ಭಾರತದಲ್ಲಿ LPG ಬಳಕೆ 13% ಕುಸಿತ

0

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಸಂಘರ್ಷದ ಪರಿಣಾಮವಾಗಿ ಭಾರತದಲ್ಲಿ ಎಲ್‌ಪಿಜಿ (LPG) ಬಳಕೆ ಗಣನೀಯವಾಗಿ ಕುಸಿತ ಕಂಡಿದೆ. ಪೂರೈಕೆಯಲ್ಲಿ ಉಂಟಾದ ಅಡಚಣೆಗಳ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಲ್ಲಿ ಬಳಕೆ ಶೇ.13ರಷ್ಟು ಇಳಿಕೆಯಾಗಿದೆ.

ಪೆಟ್ರೋಲಿಯಂ ಪ್ಲಾನಿಂಗ್ ಅಂಡ್ ಅನಾಲಿಸಿಸ್ ಸೆಲ್ (PPAC) ದತ್ತಾಂಶದ ಪ್ರಕಾರ, ಕಳೆದ ವರ್ಷದ ಇದೇ ಅವಧಿಯಲ್ಲಿ 2.729 ದಶಲಕ್ಷ ಟನ್ ಎಲ್‌ಪಿಜಿ ಬಳಕೆಯಾಗಿದ್ದರೆ, ಈ ವರ್ಷದ ಮಾರ್ಚ್‌ನಲ್ಲಿ ಅದು 2.379 ದಶಲಕ್ಷ ಟನ್‌ಗೆ ಇಳಿಕೆಯಾಗಿದೆ.

ಭಾರತ ತನ್ನ ಒಟ್ಟು ಎಲ್‌ಪಿಜಿ ಬೇಡಿಕೆಯ ಸುಮಾರು ಶೇ.60 ರಷ್ಟು ಆಮದು ಮಾಡಿಕೊಳ್ಳುತ್ತದೆ. ಪ್ರಮುಖವಾಗಿ ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ಸರಕು ಸಾಗಣೆಗೆ ಪಶ್ಚಿಮ ಏಷ್ಯಾ ಸಂಘರ್ಷದಿಂದ ತೊಂದರೆ ಉಂಟಾಗಿದೆ. ಇದರಿಂದ ಹಡಗುಗಳ ಸಂಚಾರ ವ್ಯತ್ಯಯಗೊಂಡಿದ್ದು, ಪೂರೈಕೆಯಲ್ಲಿ ಅನಿಶ್ಚಿತತೆ ಹೆಚ್ಚಾಗಿದೆ.

ಈ ಅಭಾವದ ಪರಿಣಾಮ ಗೃಹೇತರ ಬಳಕೆದಾರರ ಮೇಲೆ ಹೆಚ್ಚು ಕಂಡುಬಂದಿದೆ. ವಾಣಿಜ್ಯ ಬಳಕೆದಾರರಿಗೆ ಎಲ್‌ಪಿಜಿ ಮಾರಾಟ ಶೇ.48ರಷ್ಟು ಕುಸಿತಗೊಂಡಿದ್ದು, ಬೃಹತ್ ಬಳಕೆದಾರರ ಬಳಕೆ ಶೇ.75.5ರಷ್ಟು ಇಳಿಕೆಯಾಗಿದೆ.

ಪಂಚಮಸಾಲಿ ಪೀಠದಲ್ಲಿ ಹಣ ದುರುಪಯೋಗ ಆರೋಪ: ವಚನಾನಂದ ಸ್ವಾಮೀಜಿ ವಿರುದ್ಧ ದೂರು

ದಾವಣಗೆರೆ: ಪಂಚಮಸಾಲಿ ಗುರುಪೀಠದ ಒಳಜಗಳ ಮತ್ತಷ್ಟು ತೀವ್ರಗೊಂಡಿದ್ದು, ವಚನಾನಂದ ಸ್ವಾಮೀಜಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಪಂಚಮಸಾಲಿ ಮಠದ ಟ್ರಸ್ಟ್ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಅವರು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ಹರಜಾತ್ರೆ ಸಂದರ್ಭದಲ್ಲಿ ಭಕ್ತರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ದುರುಪಯೋಗ ಮಾಡಿದ್ದಾರೆ ಹಾಗೂ ‘ಶ್ವಾಸ’ ಕೇಂದ್ರದ ಸಂಪರ್ಕದಲ್ಲೇ ಮುಂದುವರಿದಿದ್ದಾರೆ ಎಂಬ ಆರೋಪಗಳನ್ನು ಮಾಡಿದ್ದಾರೆ.

ದೂರಿನ ಪ್ರಕಾರ, 2018ರ ಏಪ್ರಿಲ್‌ನಲ್ಲಿ ಗುರುಪೀಠಕ್ಕೆ ನೇಮಕವಾದಾಗ ವಚನಾನಂದ ಸ್ವಾಮೀಜಿಗೆ ಬೆಂಗಳೂರಿನ ‘ಶ್ವಾಸ’ ಸಂಸ್ಥೆಯಿಂದ ಸಂಪೂರ್ಣವಾಗಿ ದೂರವಾಗಬೇಕೆಂದು ಷರತ್ತು ವಿಧಿಸಲಾಗಿತ್ತು. ಆದರೆ ಅವರು ಆ ಸಂಸ್ಥೆಯೊಂದಿಗೆ ಸಂಬಂಧವನ್ನು ಕಡಿತಗೊಳಿಸದೇ ಹೆಚ್ಚಿನ ಸಮಯವನ್ನು ಅಲ್ಲಿ ಕಳೆದಿದ್ದಾರೆ ಎನ್ನಲಾಗಿದೆ.

ಇದರಿಂದ ಮಠದ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ತೋರಿಸದಿದ್ದರೆಂದು ಭಕ್ತರಲ್ಲಿ ಅಸಮಾಧಾನ ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ, 2026ರ ಹರಜಾತ್ರೆಯಲ್ಲಿ ಭಕ್ತರಿಂದ ಲಕ್ಷಾಂತರ ರೂಪಾಯಿ ಹಣವನ್ನು ರಸೀದಿ ನೀಡದೆ ಸಂಗ್ರಹಿಸಿ,

ಅದನ್ನು ತಮ್ಮ ವೈಯಕ್ತಿಕ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಹಣದ ಬಗ್ಗೆ ಪ್ರಶ್ನಿಸಿದ ಭಕ್ತರಿಗೆ ಸ್ಪಷ್ಟ ಉತ್ತರ ನೀಡದೆ ಅವಾಚ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಸಂಗ್ರಹಿಸಿದ ಹಣವನ್ನು ಟ್ರಸ್ಟ್‌ಗೆ ಸಲ್ಲಿಸದೆ,

ಬೆಂಬಲಿಗರೊಂದಿಗೆ ಮಠದ ಆವರಣದಲ್ಲಿ ಗೊಂದಲ ಸೃಷ್ಟಿಸಿ ಭಕ್ತರಲ್ಲಿ ಆತಂಕ ಉಂಟುಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಈ ಎಲ್ಲ ಕಾರಣಗಳಿಂದ ಸುದೀರ್ಘ ಚರ್ಚೆಯ ಬಳಿಕ ವಚನಾನಂದ ಸ್ವಾಮೀಜಿಯನ್ನು ಜಗದ್ಗುರು ಸ್ಥಾನದಿಂದ ಪದಚ್ಯುತಿಗೊಳಿಸಲಾಗಿದೆ ಎಂದು ಟ್ರಸ್ಟ್ ಸ್ಪಷ್ಟಪಡಿಸಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

error: Content is protected !!