Home Blog

ಶ್ರೀನಗರ ಹೋಟೆಲ್‌ನಲ್ಲಿ ಲಿಫ್ಟ್ ಕುಸಿತ: ಬೆಂಗಳೂರಿನ 6 ಪ್ರವಾಸಿಗರಿಗೆ ಗಾಯ!

ಬೆಂಗಳೂರು: ಜಮ್ಮು-ಕಾಶ್ಮೀರದ ಶ್ರೀನಗರದ ಹೈದರ್ಪೋರ ಪ್ರದೇಶದಲ್ಲಿರುವ ನೂತನ ಹೋಟೆಲ್‌ನಲ್ಲಿ ಲಿಫ್ಟ್ ಕುಸಿದು ಬಿದ್ದ ಪರಿಣಾಮ ಬೆಂಗಳೂರಿನ ಆರು ಮಂದಿ ಪ್ರವಾಸಿಗರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಅರಿಸನ್ ಲಕ್ಷುರಿ ಹೋಟೆಲ್‌ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಲಿಫ್ಟ್ ಏಕಾಏಕಿ ಕುಸಿದು ಬಿದ್ದ ಕಾರಣ ಪ್ರವಾಸಿಗರು ಗಾಯಗೊಂಡಿದ್ದಾರೆ. ತಕ್ಷಣವೇ ಗಾಯಾಳುಗಳನ್ನು ಶ್ರೀನಗರದ ಬರ್ಜುಲ್ಲಾದ ಬೋನ್ ಆ್ಯಂಡ್ ಜಾಯಿಂಟ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಗಾಯಗೊಂಡವರನ್ನು ವೆಂಕಟೇಶ್ (65), ಡಿ. ಮಂಗಲಾ (54), ಕುಶಲ್ಲಾ (18), ಪಂಕಜಾ (16), ವೆಂಕಟಲಕ್ಷ್ಮಮ್ಮ (60) ಹಾಗೂ ಸೌಭಾಗ್ಯ (60) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬೆಂಗಳೂರಿನ ನಿವಾಸಿಗಳಾಗಿದ್ದಾರೆ.

ಘಟನೆ ಹೇಗೆ ಸಂಭವಿಸಿತು ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಲಿಫ್ಟ್ ಕುಸಿತಕ್ಕೆ ತಾಂತ್ರಿಕ ದೋಷವೇ ಅಥವಾ ನಿರ್ಲಕ್ಷ್ಯವೇ ಕಾರಣವೋ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಆದರೆ ಈವರೆಗೆ ಹೋಟೆಲ್ ಆಡಳಿತದಿಂದ ಯಾವುದೇ ಅಧಿಕೃತ ಹೇಳಿಕೆ ನೀಡಲಾಗಿಲ್ಲ.

ಈ ಘಟನೆ ಪ್ರವಾಸಿಗರ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಅಂತಾರಾಜ್ಯ ಕಳ್ಳರಿಗೆ ಬಿಗ್​​ ಶಾಕ್: BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಬಂಧನ!

ಬೆಂಗಳೂರು: ಬಿಎಸ್‌ಎನ್‌ಎಲ್ ಮಾಡ್ಯೂಲ್‌ಗಳು ಮತ್ತು ಕಾಪರ್ ವೈರ್‌ಗಳನ್ನು ಕದಿಯುತ್ತಿದ್ದ ಗ್ಯಾಂಗ್‌ವೊಂದನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

ಉತ್ತರಪ್ರದೇಶ ಮೂಲದ ರವಿ ಚೌಹಾಣ್, ಸಂದೀಪ್ ಹಾಗೂ ಸೈಯದ್ ಜಾಹೇದ್ ಬಂಧಿತ ಆರೋಪಿಗಳು. ಇವರು ಬಿಎಸ್‌ಎನ್‌ಎಲ್ ಸಿಬ್ಬಂದಿಯಂತೆ ನೀಲಿ ಸಮವಸ್ತ್ರ ಧರಿಸಿ, ರಿಪೇರಿ ಕೆಲಸದ ನೆಪದಲ್ಲಿ ಕಳ್ಳತನ ನಡೆಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಫುಟ್‌ಪಾತ್‌ಗಳಲ್ಲಿ ಅಳವಡಿಸಿದ್ದ ಟೆಲಿಫೋನ್ ಹಾಗೂ ಇಂಟರ್ನೆಟ್ LAN ಕೇಬಲ್‌ಗಳನ್ನು ಹೊಂದಿದ್ದ ಕಬ್ಬಿಣದ ಪಿಲ್ಲರ್‌ಗಳನ್ನು ಪಿಕಾಸಿ, ಸುತ್ತಿಗೆ, ಸ್ಕ್ರೂಡ್ರೈವರ್ ಮತ್ತು ಕಟ್ಟರ್ ಬಳಸಿ ಒಡೆದು ತಂತಿಗಳನ್ನು ಕದ್ದೊಯ್ಯುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ವಿಶೇಷವೆಂದರೆ, ಕಳ್ಳತನಕ್ಕಾಗಿ ವಿಮಾನದ ಮೂಲಕ ಬೆಂಗಳೂರಿಗೆ ಬಂದು ಕೃತ್ಯ ನಡೆಸಿ, ನಂತರ ಕದ್ದ ವಸ್ತುಗಳೊಂದಿಗೆ ರೈಲಿನಲ್ಲಿ ಬೇರೆ ರಾಜ್ಯಗಳಿಗೆ ಪರಾರಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ದಿನಕ್ಕೊಂದು ರಾಜ್ಯದಲ್ಲಿ ಕಳ್ಳತನ ಮಾಡಿ ತಪ್ಪಿಸಿಕೊಳ್ಳುತ್ತಿದ್ದ ಈ ಗ್ಯಾಂಗ್‌ನ್ನು ಯಶವಂತಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಬಂಧಿಸಿದ್ದಾರೆ. ಮುಂದಿನ ತನಿಖೆ ಮುಂದುವರಿದಿದೆ.

ಅತಿಯಾದ ಉಪ್ಪು ಸೇವನೆ ಕ್ಯಾಲ್ಸಿಯಂ ಕೊರತೆಗೆ ಕಾರಣವಾಗುತ್ತಾ? ತಜ್ಞರ ಎಚ್ಚರಿಕೆ ತಿಳಿದುಕೊಳ್ಳಿ

0

ದೈನಂದಿನ ಆಹಾರದ ಅವಿಭಾಜ್ಯ ಭಾಗವಾಗಿರುವ ಉಪ್ಪನ್ನು ಅತಿಯಾಗಿ ಸೇವಿಸುವುದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದು ವೈದ್ಯಕೀಯವಾಗಿ ತಿಳಿದ ವಿಚಾರ.

ಇದೀಗ ಉಪ್ಪು ಮತ್ತು ಕ್ಯಾಲ್ಸಿಯಂ ನಡುವಿನ ಸಂಬಂಧದ ಬಗ್ಗೆ ಹೊಸ ಚರ್ಚೆ ಆರಂಭವಾಗಿದೆ.

ತಜ್ಞರ ಪ್ರಕಾರ, ಹೆಚ್ಚಿನ ಪ್ರಮಾಣದ ಉಪ್ಪು ಸೇವನೆಯಿಂದ ದೇಹದಲ್ಲಿ ಖನಿಜಗಳ ಸಮತೋಲನ ವ್ಯತ್ಯಯಗೊಳ್ಳಬಹುದು. ವಿಶೇಷವಾಗಿ ಮೂತ್ರದ ಮೂಲಕ ಕ್ಯಾಲ್ಸಿಯಂ ಹೊರಹೋಗುವ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ದೀರ್ಘಕಾಲದಲ್ಲಿ ಎಲುಬುಗಳ ದುರ್ಬಲತೆ ಮತ್ತು ಕ್ಯಾಲ್ಸಿಯಂ ಕೊರತೆಯ ಅಪಾಯ ಹೆಚ್ಚಾಗಬಹುದು.

ಕ್ಯಾಲ್ಸಿಯಂ ಎಲುಬು ಮತ್ತು ಹಲ್ಲುಗಳ ಬಲಕ್ಕೆ ಮಾತ್ರವಲ್ಲದೆ ನರ ಹಾಗೂ ಸ್ನಾಯುಗಳ ಸರಿಯಾದ ಕಾರ್ಯನಿರ್ವಹಣೆಗೆ ಅಗತ್ಯವಾಗಿರುವ ಪ್ರಮುಖ ಖನಿಜವಾಗಿದೆ. ಆದರೆ ಉಪ್ಪಿನ ಅತಿಯಾದ ಸೇವನೆ ಈ ಸಮತೋಲನವನ್ನು ಹಾಳುಮಾಡುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

ವಿಶೇಷವಾಗಿ ಹಿರಿಯರು, ಮಹಿಳೆಯರು ಹಾಗೂ ಈಗಾಗಲೇ ಕ್ಯಾಲ್ಸಿಯಂ ಕೊರತೆಯಿಂದ ಬಳಲುತ್ತಿರುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಲಾಗಿದೆ.

ತಡೆಗಟ್ಟುವ ಕ್ರಮಗಳು:
ಉಪ್ಪಿನ ಸೇವನೆಯನ್ನು ನಿಯಂತ್ರಿತ ಮಟ್ಟದಲ್ಲಿ ಇಡುವುದು, ಪ್ರೊಸೆಸ್ಡ್ ಆಹಾರಗಳನ್ನು ಕಡಿಮೆ ಮಾಡುವುದು ಹಾಗೂ ಹಾಲು, ಮೊಸರು, ಹಸಿರು ತರಕಾರಿಗಳಂತಹ ಕ್ಯಾಲ್ಸಿಯಂ ಸಮೃದ್ಧ ಆಹಾರಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ ಎಂದು ತಜ್ಞರು ಸೂಚಿಸಿದ್ದಾರೆ.

ಮಹೇಶ್ ಶೆಟ್ಟಿ ಗಡಿಪಾರು ಪ್ರಕರಣ: ವಿಚಾರಣೆ ಪೂರ್ಣ, ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು: ಬೆಳ್ತಂಗಡಿ ವಿದ್ಯಾರ್ಥಿನಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಹೋರಾಟ ನಡೆಸುತ್ತಿರುವ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಹೊರಡಿಸಿರುವ ಗಡಿಪಾರು ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಮೂರನೇ ಬಾರಿ ಗಡಿಪಾರು ಮಾಡುವಂತೆ ಪುತ್ತೂರು ಉಪವಿಭಾಗಾಧಿಕಾರಿಗಳು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಮಹೇಶ್ ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಬೆಳ್ತಂಗಡಿ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯ ಒದಗಿಸುವ ಉದ್ದೇಶದಿಂದ ಅರ್ಜಿದಾರರು ಹೋರಾಟ ನಡೆಸಿದ್ದು, ಇದೇ ಕಾರಣಕ್ಕೆ ಅವರ ವಿರುದ್ಧ ಕ್ಷುಲ್ಲಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವಾದಿಸಿದರು.

ಹಿಂದಿನ ಗಡಿಪಾರು ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದ್ದರೂ, ಹೊಸದಾಗಿ ಹೊರಡಿಸಿದ ಆದೇಶವೂ ಕಾನೂನು ನಿಯಮಗಳಿಗೆ ವಿರುದ್ಧವಾಗಿದೆ. ಅರ್ಜಿದಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳು ಮತ್ತು ಗಡಿಪಾರು ಆದೇಶದ ನಡುವೆ ಸಂಬಂಧ ಇಲ್ಲ ಎಂದು ತಿಳಿಸಿದ್ದಾರೆ.

ಮಹೇಶ್ ಶೆಟ್ಟಿ ವಿರುದ್ಧ ಒಟ್ಟು 26 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 16 ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದಾರೆ. ಎರಡು ಪ್ರಕರಣಗಳು ವಿಚಾರಣೆಯಲ್ಲಿದ್ದು, ಎಂಟು ಪ್ರಕರಣಗಳು ತನಿಖಾ ಹಂತದಲ್ಲಿವೆ. ಇತ್ತೀಚಿನ ಐದು ಕ್ಷುಲ್ಲಕ ಪ್ರಕರಣಗಳನ್ನು ಆಧರಿಸಿ ಗಡಿಪಾರು ಆದೇಶ ಹೊರಡಿಸಲಾಗಿದೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಅರ್ಜಿದಾರರ ಚಟುವಟಿಕೆಗಳಿಂದ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ ಎಂಬುದಕ್ಕೆ ಯಾವುದೇ ಸ್ಪಷ್ಟ ಪುರಾವೆ ಇಲ್ಲ. ಆದ್ದರಿಂದ ಗಡಿಪಾರು ಆದೇಶ ದುರುದ್ದೇಶಪೂರ್ವಕವಾಗಿದೆ ಮತ್ತು ಅದನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಮಹೇಶ್ ಶೆಟ್ಟಿ ಹಲವು ಬಾರಿ ಕಾನೂನು ಸುವ್ಯವಸ್ಥೆಗೆ ಸಮಸ್ಯೆ ಉಂಟುಮಾಡಿದ್ದಾರೆ. ಇತ್ತೀಚೆಗೆ ಏಪ್ರಿಲ್ 13 ಮತ್ತು 15ರಂದು ಹೊಸ ಪ್ರಕರಣಗಳೂ ದಾಖಲಾಗಿವೆ ಎಂದು ತಿಳಿಸಿದರು.

ಅರ್ಜಿದಾರರ ವಿರುದ್ಧ ಈಗಾಗಲೇ ಅನೇಕ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆ, ಗಡಿಪಾರು ಕ್ರಮದಲ್ಲಿ ಯಾವುದೇ ಕಾನೂನು ಉಲ್ಲಂಘನೆ ಆಗಿಲ್ಲ. ಆದ್ದರಿಂದ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಸರ್ಕಾರ ಪರವಾಗಿ ವಾದಿಸಲಾಯಿತು.

ಎರಡೂ ಪಕ್ಷಗಳ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಏಪ್ರಿಲ್ 29ಕ್ಕೆ ಆದೇಶ ಕಾಯ್ದಿರಿಸಿರುವುದಾಗಿ ತಿಳಿಸಿದೆ. ಅಷ್ಟರವರೆಗೆ ಗಡಿಪಾರು ಆದೇಶ ಜಾರಿಗೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಸೂಚಿಸಿದೆ.

AAPಗೆ ಬಿಗ್ ಶಾಕ್: ರಾಘವ್ ಚಡ್ಡಾ ಸೇರಿ ಬಿಜೆಪಿ ಸೇರಿದ 7 ರಾಜ್ಯಸಭಾ ಸಂಸದರು!

ನವದೆಹಲಿ: ಆಮ್ ಆದ್ಮಿ ಪಕ್ಷಕ್ಕೆ ದೊಡ್ಡ ಆಘಾತ ಎದುರಾಗಿದ್ದು, ರಾಘವ್ ಚಡ್ಡಾ ಸೇರಿದಂತೆ ಏಳು ರಾಜ್ಯಸಭಾ ಸದಸ್ಯರು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ ಎಂಬ ಮಾಹಿತಿ ಹೊರಬಂದಿದೆ.

ರಾಘವ್ ಚಡ್ಡಾ, ಅಶೋಕ್ ಮಿತ್ತಲ್, ಸಂದೀಪ್ ಪಾಠಕ್ ಸೇರಿದಂತೆ ಒಟ್ಟು ಏಳು ಮಂದಿ ರಾಜ್ಯಸಭಾ ಸಂಸದರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗಿದೆ. ರಾಜ್ಯಸಭೆಯ ಎಎಪಿ ಸದಸ್ಯರ ಪೈಕಿ ಎರಡು ಮೂರಂಚು ಮಂದಿ ಬಿಜೆಪಿಗೆ ಬೆಂಬಲ ನೀಡಿರುವುದಾಗಿ ಅವರು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ರಾಘವ್ ಚಡ್ಡಾ, “ನಾವು ಸಂವಿಧಾನದ ನಿಯಮಾನುಸಾರ ಬಿಜೆಪಿಯೊಂದಿಗೆ ವಿಲೀನಗೊಳ್ಳುವ ನಿರ್ಧಾರ ಕೈಗೊಂಡಿದ್ದೇವೆ. ನಾನು ನನ್ನ ಯೌವನದ 15 ವರ್ಷಗಳನ್ನು ಎಎಪಿಗೆ ಸಮರ್ಪಿಸಿದ್ದರೂ, ಈಗ ಪಕ್ಷ ತನ್ನ ಮೂಲ ತತ್ವಗಳು ಮತ್ತು ಮೌಲ್ಯಗಳಿಂದ ದೂರವಾಗಿದೆ” ಎಂದು ಆರೋಪಿಸಿದ್ದಾರೆ.

ಪಕ್ಷವು ರಾಷ್ಟ್ರ ಹಿತಾಸಕ್ತಿಗೆ ಕೆಲಸ ಮಾಡುವ ಬದಲು ವೈಯಕ್ತಿಕ ಲಾಭಕ್ಕಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಟೀಕಿಸಿದ ಅವರು, ಕಳೆದ ಕೆಲವು ವರ್ಷಗಳಿಂದ ತಾನು ತಪ್ಪು ಪಕ್ಷದಲ್ಲಿ ಕೆಲಸ ಮಾಡುತ್ತಿರುವ ಸರಿಯಾದ ವ್ಯಕ್ತಿ ಎಂಬ ಭಾವನೆ ಹೊಂದಿದ್ದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಎಎಪಿಯಿಂದ ದೂರ ಸರಿದು, ಜನರೊಂದಿಗೆ ಹೆಚ್ಚು ಹತ್ತಿರವಾಗಲು ನಿರ್ಧರಿಸಿದ್ದಾಗಿ ರಾಘವ್ ಚಡ್ಡಾ ಘೋಷಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜನರು ಕ್ಷಮಿಸುವುದಿಲ್ಲ: ಗೋವಿಂದ ಕಾರಜೋಳ

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದಲಿತರಿಗೆ ಒಳಮೀಸಲಾತಿ ನೀಡುವ ಬದಲು ಗೊಂದಲ ಸೃಷ್ಟಿಸಿ ವಿಷಬೀಜ ಬಿತ್ತಿ ಬೀದಿಯಲ್ಲಿ ನಿಂತು ಬಡಿದಾಡುವಂತೆ ಮಾಡಿದೆ. ನಾಡಿನ ಜನ ಇವರನ್ನು ಕ್ಷಮಿಸುವುದಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಅವರು ಆರೋಪಿಸಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಅಹಿಂದ ನಾಯಕ ಎನಿಸಿಕೊಳ್ಳಲು ಯೋಗ್ಯತೆ ಇಲ್ಲ. ದಲಿತ ಸಮುದಾಯಗಳಿಗೆ ಅವರು ದೊಡ್ಡ ಮೋಸ ಮಾಡಿದ್ದಾರೆ. 30 ವರ್ಷಗಳಿಂದ ರಾಜ್ಯದಲ್ಲಿ ಒಳಮೀಸಲಾತಿಗೆ ಹೋರಾಟ ನಡೆಯುತ್ತಿದೆ.

ಜನಸಂಖ್ಯೆಗೆ ಅನುಗುಣವಾಗಿ ಎಸ್‍ಸಿ ಮತ್ತು ಎಸ್‍ಟಿ ಮೀಸಲಾತಿ ಹೆಚ್ಚಳ ಆಗಬೇಕು ಎಂಬ ಬೇಡಿಕೆ ಇದೆ. ಆದರೆ ಇದನ್ನು ಲೆಕ್ಕಿಸದೆ ಕಾಂಗ್ರೆಸ್ ಸರ್ಕಾರ ಕೋರ್ಟ್ ಆದೇಶವನ್ನೇ ಬದಲಿಸಿ ಸರಿಯಾಗಿ ಮೀಸಲಾತಿ ಅನುಷ್ಠಾನ ಮಾಡಲಿಲ್ಲ ಎಂದು ಹೇಳಿದರು.

ಮೀಸಲಾತಿ ವಿಷಯದಲ್ಲಿ ಜಾತಿಗಳ ಮಧ್ಯೆ ಜಗಳ ಹಚ್ಚಬೇಡಿ. ಕೋರ್ಟ್ ಆದೇಶ ಮಾರ್ಪಾಡು ಮಾಡಿ ಕಡಿಮೆ ಮೀಸಲಾತಿ ನೀಡುವ ನಿಮ್ಮನ್ನು ಅಹಿಂದ ನಾಯಕ ಎಂದು ಒಪ್ಪಿಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದರು. ಒಳಮೀಸಲಾತಿಗೆ ರಾಜ್ಯದಲ್ಲಿ ಹೋರಾಟ ತೀವ್ರಗೊಂಡಾಗ ನ್ಯಾ. ಸದಾಶಿವ ಆಯೋಗವನ್ನು ಕಾಂಗ್ರೆಸ್ ಸರ್ಕಾರ ನೇಮಿಸಿತ್ತು.

ನ್ಯಾ. ನಾಗಮೋಹನ್ ದಾಸ್ ಅವರ ವರದಿಯನ್ನು ತರಿಸಿಕೊಂಡಿತ್ತು. ಬಿಜೆಪಿ ಸರ್ಕಾರ ಇದ್ದಾಗ ದಲಿತರ ಹೋರಾಟಕ್ಕೆ ಮಾನ್ಯತೆ ನೀಡಿ ಬಸವರಾಜ ಬೊಮ್ಮಾಯಿ ಅವರು ಜನಸಂಖ್ಯೆಗೆ ಅನುಗುಣಾಗಿ ಎಸ್‍ಸಿಗೆ ಶೇ15 ರಿಂದ ಶೇ17, ಎಸ್‍ಟಿಗೆ ಶೇ 3 ದಿಂದ ಶೇ 7 ಮಾಡಿದರು. ಸಾಮಾಜಿಕ ನ್ಯಾಯದ ಅಡಿಯಲ್ಲಿ ನಾಲ್ಕು ವರ್ಗೀಕರಣ ಮಾಡಿದರು ಎಂದು ವಿವರಿಸಿದರು.

ಕಾನೂನು ಸಚಿವರಾದ ಮಾಧುಸ್ವಾಮಿ ಅವರ ನೇತೃತ್ವದಲ್ಲಿ ಸಂಪುಟದ ಉಪ ಸಮಿತಿ ವರದಿ ಪಡೆದು ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು. ಎಸ್‍ಸಿಯಲ್ಲಿ ಮಾದಿಗರು ಮತ್ತು ಸಂಬಂಧಿತ ಜಾತಿಗಳಿಗೆ ಶೇ 6 ಮತ್ತು ಛಲವಾದಿ ಮತ್ತು ಉಪ ಜಾತಿಗಳಿಗೆ 5.5 ಪಸೆರ್ಂಟ್,

ಲಂಬಾಣಿ, ಬೋವಿ, ಕೊರಮ ಕೊರಚಕ್ಕೆ 4.5 ಪರ್ಸೆಂಟ್, ಅಲೆಮಾರಿಗೆ ಶೇ 1 ನೀಡಲು 2022 ರಲ್ಲಿ ಎರಡೂ ಸದನದಲ್ಲಿ ಒಪ್ಪಿಗೆ ಪಡೆದು ರಾಜ್ಯಪಾಲರ ಅನುಮೋದನೆ ಪಡೆದು ಕಾನೂನು ಮಾಡಲಾಗಿತ್ತು. 4 ವರ್ಷಗಳ ಕಾಲ 17 ಮತ್ತು 7 ಪರ್ಸೆಂಟ್ ಎಸ್‍ಟಿ/ ಎಸ್ಸಿಗೆ ಮೀಸಲಾತಿ ಸೌಲಭ್ಯ ಸಿಕ್ಕಿತ್ತು ಎಂದರು.

ಸಿದ್ದರಾಮಯ್ಯ ಸರ್ಕಾರ ಕೋರ್ಟ್‍ಗೆ ಸರಿಯಾಗಿ ಮನವರಿಕೆ ಮಾಡಿಕೊಡದೆ, ಸಾಮಾಜಕ ನ್ಯಾಯದ ಅಡಿ ಸಂವಿಧಾನದ ಆಶಯಗಳಿಗೆ ಅನುಗುಣ ಜಾರಿ ಮಾಡದೆ ಭಾಗಶಃ ತಡೆ ನೀಡಿದ ನಂತರ ಮೆಮೊ ಹಾಕಿದರು. ನಾವು ಹದಿನೇಳು ಮತ್ತು ಏಳು ಪರ್ಸೆಂಟ್ ಕೊಡಲ್ಲ. 1995 ರ ಆದೇಶದ ಅನ್ವಯ 15 ಶೇ ಎಸ್‍ಸಿಗೆ, 3 ಶೇ ಎಸ್‍ಟಿಗೆ ಕೊಡುತ್ತೇವೆ ಎಂದರು; ಅನುಮತಿ ಕೇಳಿದರು.

ವಿಧಿ ಇಲ್ಲದೆ ಒಪ್ಪಿತು. ಯಾವುದೇ ಕೋರ್ಟ್ 17 ಮತ್ತು 7 ಶೇಕಡಾಕ್ಕೆ ತಡೆ ನೀಡಿಲ್ಲ. ವಿರೋಧ ಸಹ ಮಾಡಿಲ್ಲ. ಇವರೇ ಬರೆದುಕೊಟ್ಟು ಕಡಿಮೆ ಮಾಡಿ ದಲಿತರಿಗೆ ಸಿದ್ದರಾಮಯ್ಯ ಸರ್ಕಾರ ಅನ್ಯಾಯ ಮಾಡಿದೆ. ಇವರು ಅಹಿಂದ ನಾಯಕ ಎಂಬ ಗೌರವವನ್ನು ಕಳೆದಕೊಂಡರು. ಆದೇಶ ಮಾರ್ಪಾಡು ಮಾಡಿ ಕಡಿಮೆ ಮಾಡುತ್ತಾರೋ ಅವರು ಅಹಿಂದ ನಾಯಕ ಅಲ್ಲ ಎಂದರು.

ಹುಬ್ಬಳ್ಳಿಯಲ್ಲಿ ಮೊಬೈಲ್ ಕೊಡದಿದ್ದಕ್ಕೆ ಮನನೊಂದು ಬಾಲಕ ಆತ್ಮಹತ್ಯೆ!

0

ಹುಬ್ಬಳ್ಳಿ: ವಿಡಿಯೋ ಗೇಮ್ ಆಡಲು ಮೊಬೈಲ್ ಕೊಡದ ಹಿನ್ನೆಲೆ ಮನನೊಂದ ಬಾಲಕ ಆತ್ಮಹತ್ಯೆ ಮಾಡಿಕೊಂಡ ದುಃಖದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಉದಯನಗರ ನಿವಾಸಿ ಸಮರ್ಥ (14) ಮೃತ ಬಾಲಕನಾಗಿದ್ದು, ಮೊಬೈಲ್‌ನಲ್ಲಿ ‘ಫ್ರೀ ಫೈರ್’ ಗೇಮ್‌ಗೆ ಹೆಚ್ಚು ಅಡಿಕ್ಟ್ ಆಗಿದ್ದಾನೆಂದು ತಿಳಿದುಬಂದಿದೆ. ಅವನು ಹೆಚ್ಚಿನ ಸಮಯವನ್ನು ಈ ಗೇಮ್ ಆಡುತ್ತಲೇ ಕಳೆಯುತ್ತಿದ್ದ ಹಿನ್ನೆಲೆಯಲ್ಲಿ ತಾಯಿ ಮೊಬೈಲ್ ಕಸಿದುಕೊಂಡು ಗೇಮ್ ಆಡಬಾರದೆಂದು ಬುದ್ಧಿವಾದ ಹೇಳಿದ್ದರು.

ತಾಯಿ ಮಾತಿನಿಂದ ಮನನೊಂದ ಸಮರ್ಥ ಮನೆಯ ಕೋಣೆಗೆ ತೆರಳಿ, ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ಸಿಇಟಿ ಕೇಂದ್ರದಲ್ಲಿ ವಿದ್ಯಾರ್ಥಿಯಿಂದ ಜನಿವಾರ ತೆಗೆಸಿದ ವಿವಾದ: ತನಿಖೆಗೆ KEA ಸೂಚನೆ

ಬೆಂಗಳೂರು: ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ, ಪ್ರಕರಣದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ.

ವಸ್ತ್ರಸಂಹಿತೆ ಪಾಲನೆಗಾಗಿ ಅಧಿಕಾರಿಗಳನ್ನು ನೇಮಕ ಮಾಡಿದ್ದರೂ ಈ ಘಟನೆ ಸಂಭವಿಸಿರುವುದು ಗಂಭೀರವಾಗಿ ಪರಿಗಣಿಸಲಾಗಿದೆ. ವಿದ್ಯಾರ್ಥಿಗಳ ಜನಿವಾರ ತೆಗೆಸಬಾರದೆಂದು ಮುಂಚಿತವಾಗಿ ಸ್ಪಷ್ಟ ಸೂಚನೆ ನೀಡಲಾಗಿದ್ದರೂ, ಕೆಲವರಿಗೆ ಅದನ್ನು ತೆಗೆಸಿದ ಘಟನೆ ಉದ್ದೇಶಪೂರ್ವಕವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

2026ರ ಸಿಇಟಿ ಪರೀಕ್ಷೆಯ ವೇಳೆ ಏಪ್ರಿಲ್ 23ರಂದು ನಡೆದ ಭೌತಶಾಸ್ತ್ರ ವಿಷಯದ ಪರೀಕ್ಷೆಗೆ ಹಾಜರಾಗಲು ಬಂದಿದ್ದ ಕೆಲವು ಅಭ್ಯರ್ಥಿಗಳಿಗೆ ಜನಿವಾರ ತೆಗೆಸುವಂತೆ ಸಿಬ್ಬಂದಿ ಸೂಚಿಸಿ, ಬಳಿಕ ಪರೀಕ್ಷೆಗೆ ಅವಕಾಶ ನೀಡಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಸೂಕ್ಷ್ಮ ವಿಚಾರವಾಗಿರುವುದರಿಂದ KEA ಸ್ಪಷ್ಟನೆ ನೀಡಿದೆ.

ಕಳೆದ ವರ್ಷ ನಡೆದ ಇಂತಹ ಘಟನೆಗಳನ್ನು ಉಲ್ಲೇಖಿಸಿ, ಜನಿವಾರ, ಲಿಂಗ ಸೇರಿದಂತೆ ಧಾರ್ಮಿಕ ಚಿಹ್ನೆಗಳನ್ನು ತೆಗೆಸಬಾರದು ಎಂದು ತರಬೇತಿಯಲ್ಲಿ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಆದರೂ ಘಟನೆ ನಡೆದಿರುವುದು ಗಂಭೀರವಾಗಿದ್ದು, ಹಿರಿಯ ಅಧಿಕಾರಿಗಳಿಂದ ವಿಚಾರಣೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು KEA ಸೂಚಿಸಿದೆ. ಈ ಕುರಿತು ಸಂಪೂರ್ಣ ವರದಿ ಸಲ್ಲಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರದ ಮೂಲಕ KEA ಆಗ್ರಹಿಸಿದೆ.

ಐಟಿ ಕ್ಷೇತ್ರದಂತೆ ಕೃಷಿ ತಂತ್ರಜ್ಞಾನಕ್ಕೂ ಬೆಂಗಳೂರು ರಾಜಧಾನಿಯಾಗಬೇಕು: CM ಸಿದ್ದರಾಮಯ್ಯ

ಬೆಂಗಳೂರು: ಕೃಷಿ ಕ್ಷೇತ್ರದಲ್ಲಿನ ಹೊಸ ಬದಲಾವಣೆಗಳು ಪ್ರತಿ ರೈತರನ್ನೂ ತಲುಪಬೇಕು. ಈ ದಿಸೆಯಲ್ಲಿ ಎಫ್ ಕೆ ಸಿಸಿಐ ನ ಪ್ರಯತ್ನ ಉತ್ತಮವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಆಯೋಜಿಸಿದ್ದ “ಗ್ಲೋಬಲ್ ಅಗ್ರಿಟೆಕ್ ಸಮ್ಮಿಟ್-2026″ನ್ನು ಉದ್ಘಾಟಿಸಿ ಮಾತನಾಡಿದರು.

ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು

ಎಫ್ ಕೆ ಸಿಸಿಐ ಅಧ್ಯಕ್ಷರಾದ ಶ್ರೀಮತಿ ಉಮಾರೆಡ್ಡಿ ಅವರು ಉತ್ತಮ ವಾಣಿಜ್ಯೋದ್ಯಮಿಯಾಗಿ ನನಗೆ ಚಿರಪರಿಚಿತರು. ಕೃಷಿ ವಿವಿ ಹಾಗೂ ಎಫ್ ಕೆ ಸಿಸಿಐ ಸಹಭಾಗಿತ್ವದಲ್ಲಿ ಏರ್ಪಡಿಸಲಾದ ಆಯೋಜಿಸಿದ್ದ “ಗ್ಲೋಬಲ್ ಅಗ್ರಿಟೆಕ್ ಸಮ್ಮಿಟ್-2026 ರೈತರಿಗೆ ಸಹಕಾರಿಯಾಗಿದೆ.

ರೈತರಿಗೆ ಉಪಯುಕ್ತವಾದ ಈ ಕಾರ್ಯಕ್ರಮದಲ್ಲಿ ಸಾವಯವ ಕೃಷಿ ಹಾಗೂ ಯಂತ್ರೋಪಕರಣಗಳ ವಸ್ತುಪ್ರದರ್ಶನ ಏರ್ಪಡಿಸಿರುವುದು ಉತ್ತಮವಾಗಿದೆ. ಆದರೆ ವಸ್ತುಪ್ರದರ್ಶನವನ್ನು ಪ್ರತ್ಯೇಕವಾಗಿ ಆಯೋಜಿಸುವುದು ಉತ್ತಮವಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ರೈತರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುವಂತಾಗಬೇಕು ಎಂದರು.

ಕೃಷಿ ಲಾಭದಾಯಕಗೊಳಿಸಲು ಸರ್ಕಾರದ ಯೋಜನೆಗಳು

ಭಾರತ ದೇಶ ಕೃಷಿಪ್ರಧಾನ ದೇಶ. ಕೃಷಿಯನ್ನು ಸುಸ್ಥಿರಗೊಳಿಸುವುದು ಹಾಗೂ ಲಾಭದಾಯಕಗೊಳಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಇಂದಿನ ಯುವಜನತೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೃಷಿ ಲಾಭದಾಯಕವಾದರೆ ಯುವಜನತೆ ಸಹಜವಾಗಿ ಕೃಷಿಯತ್ತ ಮುಖಮಾಡುತ್ತಾರೆ. ಸರ್ಕಾರ ಕೃಷಿಯನ್ನು ಲಾಭದಾಯಕಗೊಳಿಸಲು ಹಲವು ಯೋಜನೆಗಳನ್ನು ರೂಪಿಸಿ, ಈ ಉದ್ದೇಶಕ್ಕೆ ಕೈಗಾರಿಕೆಗಳೂ ಕೈಜೋಡಿಸಬೇಕು ಎಂದರು.

ಕೃಷಿ ತಂತ್ರಜ್ಞಾನಕ್ಕೂ ಬೆಂಗಳೂರು ರಾಜಧಾನಿಯಾಗಬೇಕು

ಮಾಹಿತಿ ತಂತ್ರಜ್ಞಾನದಲ್ಲಿ ಬೆಂಗಳೂರು ರಾಜಧಾನಿಯಾದಂತೆ, ಕೃಷಿ ತಂತ್ರಜ್ಞಾನದಲ್ಲಿಯೂ ಬೆಂಗಳೂರು ರಾಜಧಾನಿಯಾಗಬೇಕು. ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಕೃತಕ ಬುದ್ದಿಮತ್ತೆ ಸೇರಿದಂತೆ ಎಲ್ಲ ಕ್ಷೇತ್ರಗಳ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂದರು.

ಬಿಜೆಪಿ ಸ್ಥಗಿತಗೊಳಿಸಿದ್ದ ‘ಕೃಷಿಭಾಗ್ಯ’ವನ್ನು ಸರ್ಕಾರ ಪುನ: ಜಾರಿಗೊಳಿಸಿದೆ

ರಾಜ್ಯದಲ್ಲಿ ಒಣಭೂಮಿಯ ಪ್ರಮಾಣ ಹೆಚ್ಚಿದ್ದು, ಸಣ್ಣಹಿಡುವಳಿದಾರರಿಗೆ ಕೃಷಿಯನ್ನು ಲಾಭದಾಯಕಗೊಳಿಸಬೇಕಿದೆ. ಆದ್ದರಿಂದ ನಮ್ಮ ಸರ್ಕಾರ ಕೃಷಿಭಾಗ್ಯ ಯೋಜನೆಯನ್ನು ಜಾರಿಗೆ ತಂದಿತು. ಹೆಚ್ಚು ಒಣಭೂಮಿಯಿರುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.

ಬಿಜೆಪಿಯವರು ಅಧಿಕಾರಕ್ಕೆ ಬಂದಾಗ ಕೃಷಿಭಾಗ್ಯವನ್ನು ಸ್ಥಗಿತಗೊಳಿಸಿದ್ದು, ನಮ್ಮ ಸರ್ಕಾರ ಈ ಯೋಜನೆಗೆ ಮರುಜಾರಿಗೊಳಿಸಿದೆ. ಸುಮಾರು 83 ಲಕ್ಷ ರೈತರಿಗೆ 70 ಸಾವಿರ ಕೋಟಿ ರೂ.ಗಳ ಕೃಷಿಸಾಲವನ್ನು ನೀಡಲಾಗಿದೆ. ಕಳೆದ ವರ್ಷ 8 ಸಾವಿರ ಕೋಟಿ ಗಳನ್ನು ಮುಖ್ಯಮಂತ್ರಿಗಳ ಮೂಲಭೂತ ಸೌಕರ್ಯಗಳಿಗೆ ಇಡಲಾಗಿತ್ತು.

ಬಂಡವಾಳ ಹೂಡಿಕೆ ಅಧಿಕಗೊಳ್ಳಬೇಕು. ಕೈಗಾರಿಕೆ, ಗ್ರಾಮೀಣಾಭೀವೃದ್ಧಿಯಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದ್ದು, ಕೃಷಿ ಕ್ಷೇತ್ರದಲ್ಲಿಯೂ ಹೂಡಿಕೆಗಳು ಹೆಚ್ಚಾಗಬೇಕು. ಆಗ ಮಾತ್ರ ಕೃಷಿ ಲಾಭದಾಯಕವಾಗಲಿದೆ ಎಂದರು.

ಕರ್ನಾಟಕದಲ್ಲಿ ರಾಜಕೀಯ ಬದಲಾವಣೆ ಸೂಚನೆ?: ರಾಷ್ಟ್ರಪತಿ ಆಳ್ವಿಕೆ ಸಾಧ್ಯತೆ ಎಂದ ಸುರೇಶ್ ಗೌಡ

ತುಮಕೂರು: ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸುವ ಸಾಧ್ಯತೆ ಇದೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಸರ್ಕಾರದೊಳಗಿನ ಆಂತರಿಕ ಕಲಹ ಮುಂದುವರಿದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವ ಪರಿಸ್ಥಿತಿ ಉಂಟಾದರೂ ಅಚ್ಚರಿಯಿಲ್ಲ ಎಂದು  ಹೇಳಿದ್ದಾರೆ. ಕಾಂಗ್ರೆಸ್ ನಾಯಕರ ನಡುವಿನ ಶೀತಲ ಸಮರವನ್ನು ಉಲ್ಲೇಖಿಸಿದ ಸುರೇಶ್ ಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವಿನ ರಾಜಕೀಯ ಬೆಳವಣಿಗೆಗಳು ಸರ್ಕಾರವನ್ನು ಸಂಕಷ್ಟಕ್ಕೆ ತಳ್ಳುತ್ತಿವೆ ಎಂದು ಆರೋಪಿಸಿದರು.

ಸಿಎಂ ಹುದ್ದೆಗಾಗಿ ಕಾಂಗ್ರೆಸ್‌ನ ಹಿರಿಯ ನಾಯಕರ ನಡುವೆ ಪೈಪೋಟಿ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ ಮತ್ತು ಎಂ.ಬಿ. ಪಾಟೀಲ್ ಮುಖ್ಯಮಂತ್ರಿಯಾಗಲು ಆಸಕ್ತಿ ತೋರಿದ್ದಾರೆ. ಡಿ.ಕೆ. ಶಿವಕುಮಾರ್ ಈಗಾಗಲೇ ಸಿಎಂ ಆಗಲು ತಯಾರಿ ನಡೆಸುತ್ತಿದ್ದು, ಮೇ 10ರಂದು ಮುಹೂರ್ತವೂ ನಿಗದಿಯಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ರಾಜ್ಯ ಸರ್ಕಾರದ ಆಡಳಿತ ವೈಖರಿಯಿಂದ ಜನರು ಅಸಮಾಧಾನಗೊಂಡಿದ್ದಾರೆ. ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದು, ಅಧಿಕಾರ ಉಳಿಸಿಕೊಳ್ಳುವ ರಾಜಕೀಯವೇ ನಡೆಯುತ್ತಿದೆ. ಕಾಂಗ್ರೆಸ್ ಒಳಜಗಳದಿಂದ ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ ಬಿದ್ದಿದೆ ಎಂದು ಆರೋಪಿಸಿದರು.

ಇದೇ ವೇಳೆ, ಈಗಲೇ ಚುನಾವಣೆ ನಡೆದರೆ ಬಿಜೆಪಿ-ಜೆಡಿಎಸ್ ಮೈತ್ರಿ ಭರ್ಜರಿ ಗೆಲುವು ಸಾಧಿಸಲಿದೆ. 175ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದು ಸುರೇಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

error: Content is protected !!