ಗದಗ: ಒಂದೂವರೆ ವರ್ಷದಿಂದ ನಿಗೂಢತೆಯಲ್ಲಿದ್ದ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಸುನೀಲ್ ಲಮಾಣಿ ಸಾವಿನ ಪ್ರಕರಣಕ್ಕೆ ಇದೀಗ ಸ್ಫೋಟಕ ತಿರುವು ಸಿಕ್ಕಿದೆ. ಮೃತನ ಕುಟುಂಬಸ್ಥರು ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದು, ಶಾಸಕ ಚಂದ್ರು ಲಮಾಣಿ ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ಧವೇ ಗಂಭೀರ ಆರೋಪಗಳ ಸುರಿಮಳೆಗೈದಿದ್ದಾರೆ.
2025ರ ಜನವರಿ 9ರಂದು ಶಾಸಕ ಚಂದ್ರು ಲಮಾಣಿ ನಿವಾಸದಲ್ಲೇ ಸುನೀಲ್ ಲಮಾಣಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆರಂಭದಲ್ಲಿ ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿತ್ತು. ಆದರೆ ಈಗ ಮೃತನ ಕುಟುಂಬ ಆ ವಾದವನ್ನು ತಳ್ಳಿಹಾಕಿದ್ದು, ಪ್ರಕರಣದ ಹಿಂದೆ ಇನ್ನೂ ದೊಡ್ಡ ಸತ್ಯ ಅಡಗಿದೆ ಎಂದು ಆರೋಪಿಸಿದೆ.
ಶಾಸಕರ ಅವ್ಯವಹಾರಗಳ ಬಗ್ಗೆ ಸುನೀಲ್ಗೆ ಮಾಹಿತಿ ಇದ್ದ ಕಾರಣ ಆತನಿಗೆ ನಿರಂತರ ಬೆದರಿಕೆ ಹಾಕಲಾಗುತ್ತಿತ್ತು. ದುಡಿಸಿಕೊಂಡ ವೇತನವನ್ನೂ ಪೂರ್ಣವಾಗಿ ನೀಡಿರಲಿಲ್ಲ. ಇದೇ ಒತ್ತಡ ಆತನ ಸಾವಿಗೆ ಕಾರಣವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಅಷ್ಟೇ ಅಲ್ಲ, “ಈ ಪ್ರಕರಣವನ್ನು ಕೆದಕಿದರೆ ನಿಮ್ಮ ದೊಡ್ಡ ಮಗ ಕೂಡ ಬೀದಿ ಹೆಣವಾಗ್ತಾನೆ” ಎಂದು ಶಾಸಕ ಚಂದ್ರು ಲಮಾಣಿ ಬೆದರಿಕೆ ಹಾಕಿದ್ದಾರೆ ಎಂದು ಮೃತನ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಜೊತೆಗೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಪಿಎಸ್ಐ ಸಹ ಜೀವ ಬೆದರಿಕೆ ಹಾಕಿದ್ದು, ಮರಣೋತ್ತರ ಪರೀಕ್ಷೆಯ ವರದಿಯನ್ನು ನೀಡಲು ಒಂದು ವರ್ಷ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದ್ದಾರೆ ಎಂದು ದೂರಿದ್ದಾರೆ.
ಘಟನೆ ನಡೆದ ದಿನವೇ ಪೊಲೀಸರು ಕುಟುಂಬಸ್ಥರು ಆಗಮಿಸುವ ಮುನ್ನವೇ ಶವವನ್ನು ತೆರವುಗೊಳಿಸಿದ್ದರು. ಮೃತನ ಕತ್ತಿನಲ್ಲಿ ರಕ್ತದ ಗುರುತು ಕಂಡಿದ್ದು, ಸಾಮಾನ್ಯ ಆತ್ಮಹತ್ಯೆಯಲ್ಲಿ ಕಾಣುವ ಲಕ್ಷಣಗಳು ಇರಲಿಲ್ಲ. ಹೀಗಾಗಿ ಇದು ಆತ್ಮಹತ್ಯೆಯಲ್ಲ, ಕೊಲೆ ಇರಬಹುದೆಂಬ ಅನುಮಾನವನ್ನು ಕುಟುಂಬ ಅಂದಿನಿಂದಲೇ ವ್ಯಕ್ತಪಡಿಸಿತ್ತು.
ಸದ್ಯ ಕುಟುಂಬಸ್ಥರ ಹೊಸ ಆರೋಪಗಳಿಂದ ಸುನೀಲ್ ಲಮಾಣಿ ಸಾವಿನ ಪ್ರಕರಣ ಮತ್ತೆ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆರೋಪಗಳ ಕುರಿತು ಇನ್ನೂ ಶಾಸಕ ಚಂದ್ರು ಲಮಾಣಿ ಅವರ ಅಧಿಕೃತ ಪ್ರತಿಕ್ರಿಯೆ ಹೊರಬಂದಿಲ್ಲ. ಕುಟುಂಬದ ಆರೋಪಗಳ ಹಿನ್ನೆಲೆಯಲ್ಲಿ ತನಿಖೆ ಹೊಸ ಆಯಾಮ ಪಡೆಯುವ ಸಾಧ್ಯತೆ ಎದುರಾಗಿದೆ.

