ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ತೈಲ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇಂಧನ ಕೊರತೆ ಉಂಟಾಗಬಹುದೇ ಎಂಬ ಆತಂಕ ಸಾರ್ವಜನಿಕರಲ್ಲಿ ಹೆಚ್ಚಾಗಿದೆ. ಈ ಬೆಳವಣಿಗೆಯ ನಡುವೆಯೇ ಅಕ್ರಮ ಇಂಧನ ಸಂಗ್ರಹವನ್ನು ತಡೆಯಲು ತೈಲ ಕಂಪನಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿವೆ.
ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಪ್ರತಿ ಲೀಟರ್ಗೆ ಸುಮಾರು ಮೂರು ರೂಪಾಯಿ ಹೆಚ್ಚಳವಾಗಿದ್ದು, ಮುಂದಿನ ದಿನಗಳಲ್ಲಿ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಜನರು ಹೆಚ್ಚುವರಿ ಇಂಧನ ಖರೀದಿಸಿ ಬಾಟಲಿ ಹಾಗೂ ಕ್ಯಾನ್ಗಳಲ್ಲಿ ಸಂಗ್ರಹಿಸುವ ಸಾಧ್ಯತೆ ಹೆಚ್ಚಿರುವುದರಿಂದ, ತೈಲ ಕಂಪನಿಗಳು ಪೆಟ್ರೋಲ್ ಬಂಕ್ ಮಾಲೀಕರಿಗೆ ವಿಶೇಷ ಸೂಚನೆಗಳನ್ನು ನೀಡಿವೆ.
ಬಾಟಲಿ ಹಾಗೂ ಕ್ಯಾನ್ಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ತುಂಬಬಾರದು ಎಂದು ಕಂಪನಿಗಳು ಸೂಚನೆ ನೀಡಿದ್ದು, ಹಲವೆಡೆ ಬಂಕ್ಗಳ ಬಳಿ ಇದಕ್ಕೆ ಸಂಬಂಧಿಸಿದ ಬೋರ್ಡ್ಗಳನ್ನೂ ಅಳವಡಿಸಲಾಗಿದೆ. ಕೆಲವು ವಾಹನ ಸವಾರರು ಬಾಟಲಿಗಳೊಂದಿಗೆ ಬಂಕ್ಗೆ ಬಂದರೂ, ಸಿಬ್ಬಂದಿ ಇಂಧನ ನೀಡದೇ ಹಿಂತಿರುಗಿಸಿರುವ ಘಟನೆಗಳು ವರದಿಯಾಗಿವೆ.
ಇನ್ನೂ ಕೆಲವು ಕಡೆಗಳಲ್ಲಿ ಫ್ಯಾಕ್ಟರಿ, ಜನರೇಟರ್ ಹಾಗೂ ಕೈಗಾರಿಕಾ ಬಳಕೆಗೆ ಅಗತ್ಯವಿರುವ ಕಾರಣ ಕ್ಯಾನ್ಗಳಲ್ಲಿ ಇಂಧನ ಕೇಳಲಾಗುತ್ತಿದೆ. ಅಂತಹ ಅಗತ್ಯ ಬಳಕೆದಾರರಿಗೆ ಮಾತ್ರ ಪರಿಶೀಲನೆಯ ಬಳಿಕ ಪೆಟ್ರೋಲ್ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಈ ಮೂಲಕ ಅಕ್ರಮವಾಗಿ ಇಂಧನ ಸಂಗ್ರಹಿಸುವ ಪ್ರವೃತ್ತಿಗೆ ಕಡಿವಾಣ ಹಾಕಲು ತೈಲ ಕಂಪನಿಗಳೊಂದಿಗೆ ಬಂಕ್ ಮಾಲೀಕರೂ ಸಹಕರಿಸುತ್ತಿದ್ದಾರೆ.
ಒಂದು ವೇಳೆ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಇಂಧನ ದರ ಏರಿಕೆಯಾಗಿದರೆ ವಾಹನ ಸವಾರರ ಮೇಲಿನ ಆರ್ಥಿಕ ಹೊರೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ. ಈಗಾಗಲೇ ಹೆಚ್ಚುತ್ತಿರುವ ದರಗಳಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದು, ಭವಿಷ್ಯದ ಬೆಲೆ ಏರಿಕೆ ಆತಂಕ ಇಂಧನ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಸೃಷ್ಟಿಸಿದೆ.

