Home Blog

ಕರ್ನಾಟಕದಲ್ಲಿ ಇಂದು ಗುಡುಗು ಸಹಿತ ಮಳೆ: 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾರ್ಭಟ ಮುಂದುವರಿದಿದ್ದು, ಇಂದೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆ 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಬೀದರ್, ಕಲಬುರ್ಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಹಾವೇರಿ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದರ ಜೊತೆಗೆ, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಜೊತೆಗೆ ಉತ್ತರ ಒಳನಾಡಿನ ವಿಜಯಪುರ, ಬಾಗಲಕೋಟೆ, ಕಲಬುರ್ಗಿ, ಬೀದರ್, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಮಳೆ ಜೋರಾಗಿರಲಿದೆ. ಉಳಿದ ಭಾಗಗಳಲ್ಲಿ ಒಣಹವಾಮಾನ ಮುಂದುವರಿಯುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ತವರಿನಲ್ಲಿ ಮುಗ್ಗರಿಸಿದ ಕೆಕೆಆರ್: ಹೈದರಾಬಾದ್ʼಗೆ 65 ರನ್ ಭರ್ಜರಿ ಜಯ

0

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ (SRH) ತಂಡವು ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ಕೋಲ್ಕತ್ತಾ ನೈಟ್ ರೈಡರ್ಸ್‌ (KKR) ವಿರುದ್ಧ 65 ರನ್‌ಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಎಸ್‌ಆರ್‌ಎಚ್‌ ತಂಡವು 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 226 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಹೆನ್ರಿಚ್ ಕ್ಲಾಸೆನ್ ಕೇವಲ 35 ಎಸೆತಗಳಲ್ಲಿ 52 ರನ್‌ಗಳ ಅಬ್ಬರದ ಅರ್ಧಶತಕ ಬಾರಿಸಿ ತಂಡಕ್ಕೆ ಬಲ ನೀಡಿದರು. ಟ್ರಾವಿಸ್ ಹೆಡ್ 46, ಅಭಿಷೇಕ್ ಶರ್ಮಾ 48 ಹಾಗೂ ನಿತೀಶ್ ಕುಮಾರ್ ರೆಡ್ಡಿ 39 ರನ್‌ಗಳನ್ನು ಗಳಿಸಿ ತಂಡದ ಮೊತ್ತವನ್ನು ಎತ್ತರಕ್ಕೆ ಕೊಂಡೊಯ್ದರು.

227 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕೆಕೆಆರ್‌ ತಂಡ ಆರಂಭದಿಂದಲೇ ಸಂಕಷ್ಟಕ್ಕೆ ಸಿಲುಕಿತು. 16 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿಗೆ ಶರಣಾಯಿತು.

ಅಂಗ್ರೀಶ್ ರಘುವಂಶಿ 52 ರನ್‌ಗಳೊಂದಿಗೆ ಹೋರಾಟ ನಡೆಸಿದರೆ, ರಿಂಕು ಸಿಂಗ್ 35 ರನ್‌ಗಳನ್ನು ಸೇರಿಸಿದರು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು. ಒಟ್ಟಿನಲ್ಲಿ, ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಆಕ್ರಮಣಕಾರಿ ಆಟಕ್ಕೆ ಕೆಕೆಆರ್‌ ತಂಡ ಮಣಿಯಬೇಕಾಯಿತು.

ಕಟ್ಟಿಗೆಯಿಂದ ಹೊಡೆದು ಅಳಿಯನ ಕೊಲೆ: ಆರೋಪಿ ಮಾವನಿಗೆ ಜೀವಾವಧಿ ಶಿಕ್ಷೆ!

0

ಕಾರವಾರ: ಮದ್ಯ ಸೇವಿಸಲು ಹಣ ನೀಡುವುದಿಲ್ಲ ಎಂಬ ಕಾರಣಕ್ಕೆ ತನ್ನ ಅಳಿಯನನ್ನು ಕೊಲೆ ಮಾಡಿದ ಮಾವನಿಗೆ ಕಾರವಾರ ಜಿಲ್ಲೆಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

2024ರ ಮೇ 2ರಂದು ಮನೆಯ ಸದಸ್ಯರು ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಮನೆಯಲ್ಲಿ ಇದ್ದ ಅಳಿಯನ ಮೇಲೆ ಆರೋಪಿ ಕಟ್ಟಿಗೆಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದನು. ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಭಾರತ ದಂಡ ಸಂಹಿತೆಯ ಕಲಂ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ವೇಳೆ ಸರ್ಕಾರದ ಪರವಾಗಿ ಸಾರ್ವಜನಿಕ ಅಭಿಯೋಜಕ ರಾಜೇಶ್ ಎಂ. ಮಳಗಿಕರ್ ವಾದ ಮಂಡಿಸಿದ್ದು, ಆರೋಪಿತನ ವಿರುದ್ಧ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯದ ಗಮನಕ್ಕೆ ತಂದರು. ತನಿಖಾಧಿಕಾರಿ ಪೊಲೀಸ್ ನಿರೀಕ್ಷಕ ಸೀತಾರಾಮ ಅವರು ಕೂಡ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷ್ಯಗಳನ್ನು ಒದಗಿಸಿದರು.

ಇದಲ್ಲದೆ, ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಹೆಡ್ ಕಾನ್‌ಸ್ಟೇಬಲ್ ಮಹೇಶ್ ನಾಯ್ಕ್ ಹಾಗೂ ಕಾನ್‌ಸ್ಟೇಬಲ್ ಶಂಕರಾಚಾರಿ ಎನ್ ಸಹಕರಿಸಿದ್ದರು.

ಪ್ರಕರಣದ ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಶಿರಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೀಠಾಸೀನ ನ್ಯಾಯಾಧೀಶ ಕಿರಣ ಕಿಣಿ ಅವರು ಆರೋಪಿತನ ವಿರುದ್ಧ ಆರೋಪ ಸಾಬೀತಾಗಿರುವುದಾಗಿ ತೀರ್ಮಾನಿಸಿದರು.

ಅದರಂತೆ, ಆರೋಪಿಗೆ ಜೀವಾವಧಿ ಕಾರಾಗೃಹ ಶಿಕ್ಷೆಯ ಜೊತೆಗೆ 10,000 ರೂ. ದಂಡ ವಿಧಿಸಲಾಗಿದೆ. ಜೊತೆಗೆ ಮೃತನ ಪತ್ನಿಗೆ 50,000 ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದ್ದು, ಹೆಚ್ಚಿನ ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪಡೆಯಬಹುದಾಗಿದೆ ಎಂದು ತಿಳಿಸಿದೆ.

 

ಕಾಂಗ್ರೆಸ್ ಮುಖಂಡನ ಶವ ಅನುಮಾನಾಸ್ಪದವಾಗಿ ಪತ್ತೆ! ಕೊಲೆ ಶಂಕೆ

0

ಚಿತ್ರದುರ್ಗ: ಜನಪರ ಕೆಲಸಗಳಿಂದ ಹೆಸರು ಮಾಡಿದ್ದ ಕಾಂಗ್ರೆಸ್ ರೈತ ಮೋರ್ಚಾ ಮುಖಂಡ ಶಿವಲಿಂಗಪ್ಪ (50) ಅವರ ಶವ ಅನುಮಾನಾಸ್ಪದವಾಗಿ ಚಿತ್ರದುರ್ಗ ನಗರದ ರಾಷ್ಟ್ರೀಯ ಹೆದ್ದಾರಿ 48ರ ಬಳಿ ಪತ್ತೆಯಾಗಿದೆ.

ಚಿತ್ರದುರ್ಗದಲ್ಲಿ ರಸಗೊಬ್ಬರ ಅಂಗಡಿ ನಡೆಸುತ್ತಿದ್ದ ಶಿವಲಿಂಗಪ್ಪ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಹಾಗೂ ಸ್ನೇಹಿತರು ವಿವಿಧ ಕಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಸೋದರ ಅಳಿಯ ಬಸವರಾಜ್ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಪೊಲೀಸ್ ಮೂಲಗಳ ಪ್ರಕಾರ, ಕಳೆದ ಮಂಗಳವಾರ ಬೆಳಿಗ್ಗೆ 11ರಿಂದ ಸಂಜೆ 7ರವರೆಗೆ ಮಹೇಶ್ವರಿ ಲೇಔಟ್ ಪ್ರದೇಶದಲ್ಲಿ ಶಿವಲಿಂಗಪ್ಪ ಅವರ ಮೊಬೈಲ್ ಲೊಕೇಶನ್ ಕಾಣಿಸಿಕೊಂಡಿತ್ತು. ನಂತರ ಮೊಬೈಲ್ ಸ್ವಿಚ್ ಆಫ್ ಆಗಿದ್ದ ಸ್ಥಳದ ಸಮೀಪದಲ್ಲೇ ಇದೀಗ ಶವ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಶವ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿದ್ದು, ಮುಖ ಗುರುತು ಸಿಗದಂತಾಗಿತ್ತು ಎಂದು ತಿಳಿದುಬಂದಿದೆ. ಶವವನ್ನು ಗುರುತಿಸಿದ ಬಳಿಕ ಕುಟುಂಬಸ್ಥರು ಇದು ಕೊಲೆ ಆಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಕರಣವನ್ನು ಸೂಕ್ತವಾಗಿ ತನಿಖೆ ನಡೆಸಿ ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಈ ಸಂಬಂಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಲಂಚ ಸ್ವೀಕಾರ ಪ್ರಕರಣ: ಜಿಲ್ಲಾ ವ್ಯವಸ್ಥಾಪಕನಿಗೆ 2 ವರ್ಷ ಜೈಲು, ₹40 ಸಾವಿರ ದಂಡ!

ಶಿವಮೊಗ್ಗ: ಗಂಗಾ ಕಲ್ಯಾಣ ಯೋಜನೆ ಫಲಾನುಭವಿಯಿಂದ ₹10,000 ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕನಿಗೆ ಶಿವಮೊಗ್ಗ ನ್ಯಾಯಾಲಯವು 2 ವರ್ಷಗಳ ಜೈಲು ಶಿಕ್ಷೆ ಹಾಗೂ ₹40,000 ದಂಡ ವಿಧಿಸಿ ತೀರ್ಪು ನೀಡಿದೆ.

ಆರ್.ಎಸ್. ಪರಮೇಶ್ವರಪ್ಪ ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದಾರೆ. ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಹೊಸಗುಂದದ ಹೆಚ್.ಎಸ್. ಜನಾರ್ಧನ ಅವರಿಗೆ ಮಂಜೂರಾದ ಕೊಳವೆ ಬಾವಿ ಕೊರೆಸಲು ₹10,000 ಲಂಚದ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.

ಲಂಚ ಸ್ವೀಕರಿಸುವ ವೇಳೆ ಕಚೇರಿಯಲ್ಲೇ ಸಿಕ್ಕಿಬಿದ್ದಿದ್ದ ಪರಮೇಶ್ವರಪ್ಪ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ತನಿಖೆಯನ್ನು ಲೋಕಾಯುಕ್ತ ಡಿಎಸ್‌ಪಿ ಎ. ಚಂದ್ರಪ್ಪ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದಲ್ಲಿ ಲೋಕಾಯುಕ್ತ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಎಂ.ಡಿ. ಸುಂದರ್‌ರಾಜ್ ವಾದ ಮಂಡಿಸಿದ್ದರು.

ಈ ಪ್ರಕರಣದಲ್ಲಿ ನ್ಯಾಯಾಲಯ ನೀಡಿದ ತೀರ್ಪು ಭ್ರಷ್ಟಾಚಾರದ ವಿರುದ್ಧ ಕಠಿಣ ಸಂದೇಶ ನೀಡಿದಂತಾಗಿದೆ.

 

ಭೂ ಒತ್ತುವರಿ ಪ್ರಕರಣ: ಹೆಚ್.ಡಿ. ಕುಮಾರಸ್ವಾಮಿಗೆ ತಾತ್ಕಾಲಿಕ ರಿಲೀಫ್!

ಬೆಂಗಳೂರು: ಕೇತಗಾನಹಳ್ಳಿ ಅಕ್ರಮ ಭೂ ಒತ್ತುವರಿ ಆರೋಪ ಸಂಬಂಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ತಾತ್ಕಾಲಿಕ ರಿಲೀಫ್ ದೊರೆತಿದೆ.

ಪ್ರಕರಣದ ತುರ್ತು ವಿಚಾರಣೆಗೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆ ಸಲ್ಲಿಸಿದ್ದ ತುರ್ತು ವಿಚಾರಣೆ ಅರ್ಜಿ ಪರಿಗಣಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್, ಪ್ರಕರಣವನ್ನು ಸಾಮಾನ್ಯ ವಿಚಾರಣೆಯ ಕ್ರಮದಲ್ಲೇ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದ ಸರ್ವೇ ಕಾರ್ಯಗಳ ನಂತರ ತುರ್ತು ವಿಚಾರಣೆಗಾಗಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಕುಮಾರಸ್ವಾಮಿ ಪರ ವಕೀಲರು ತುರ್ತು ವಿಚಾರಣೆಯ ಅಗತ್ಯವಿಲ್ಲ ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಈ ವಾದವನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ತಕ್ಷಣದ ವಿಚಾರಣೆ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಇನ್ನೊಂದೆಡೆ, ಅರ್ಜಿದಾರರ ಪರವಾಗಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿದರು.

ಈ ತೀರ್ಪಿನಿಂದ ಕುಮಾರಸ್ವಾಮಿಗೆ ತಾತ್ಕಾಲಿಕ ನೆಮ್ಮದಿ ಸಿಕ್ಕಂತಾಗಿದೆ.

ವರದಕ್ಷಿಣೆ ಕಿರುಕುಳ: ನೇಣಿಗೆ ಕೊರಳೊಡ್ಡಿದ ನವವಿವಾಹಿತ ಟೆಕ್ಕಿ!

0

ಹೈದರಾಬಾದ್: ಪತಿಯ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನವವಿವಾಹಿತ ಸಾಫ್ಟ್‌ವೇರ್ ಇಂಜಿನಿಯರ್ ಆತ್ಮಹತ್ಯೆಗೆ ಶರಣಾದ ದುರ್ಘಟನೆ ಹೈದರಾಬಾದ್ ನಗರದ ಮಿಯಾಪುರ್ ಪ್ರದೇಶದ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.

ಇಶಿತಾ ಯಾದವ್ (26) ಮೃತರು. ಬುಧವಾರ ಸಂಜೆ ತಮ್ಮ ಅಪಾರ್ಟ್‌ಮೆಂಟ್‌ನ ಹಾಲ್‌ನಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಇಶಿತಾ ಅವರ ಶವ ಪತ್ತೆಯಾಗಿದೆ. ಈ ಬಗ್ಗೆ ಆಕೆಯ ಪತಿ ನೀರಜ್ ಭನ್ಸಾಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಇಶಿತಾ ಮತ್ತು ನೀರಜ್ 2020ರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದು, ಸುಮಾರು ಐದು ವರ್ಷಗಳ ಕಾಲ ಪರಸ್ಪರ ಸಂಪರ್ಕದಲ್ಲಿದ್ದರು. ಇಶಿತಾ ಬಿಹಾರದವರಾಗಿದ್ದರೆ, ನೀರಜ್ ಮಧ್ಯಪ್ರದೇಶದವನಾಗಿದ್ದ. ಈ ವರ್ಷ ಫೆಬ್ರವರಿ 20ರಂದು ಪಾಟ್ನಾದಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಿವಾಹವಾಗಿದ್ದು, ನಂತರ ದಂಪತಿ ಹೈದರಾಬಾದ್‌ನಲ್ಲಿ ವಾಸವಾಗಿದ್ದರು.

ಮದುವೆಯ ಬಳಿಕ ಹೆಚ್ಚುವರಿ ವರದಕ್ಷಿಣೆಗಾಗಿ ನೀರಜ್ ಇಶಿತಾಗೆ ಕಿರುಕುಳ ನೀಡುತ್ತಿದ್ದನು ಎಂದು ಮೃತೆಯ ಪೋಷಕರು ಆರೋಪಿಸಿದ್ದಾರೆ. ಇತ್ತೀಚೆಗೆ ಆರಂಭಿಸಿದ ಸ್ಟಾರ್ಟ್‌ಅಪ್ ವ್ಯವಹಾರಕ್ಕೆ ಹಣ ಹೂಡಿಕೆ ಮಾಡುವಂತೆ ಒತ್ತಾಯ ಮಾಡುತ್ತಿದ್ದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮೃತೆಯ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯಾದ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

ಈ ಘಟನೆ ಮಹಿಳೆಯರ ಮೇಲಿನ ವರದಕ್ಷಿಣೆ ಕಿರುಕುಳದ ವಿರುದ್ಧ ಮತ್ತೊಮ್ಮೆ ಆತಂಕ ಮೂಡಿಸಿದೆ.

ನೀರು ಕಾಯಿಸುವಾಗ ದುರಂತ: ವಿದ್ಯುತ್ ಸ್ಪರ್ಶದಿಂದ ಗೃಹಿಣಿ ಸಾವು!

ಧಾರವಾಡ: ಮನೆಯಲ್ಲಿ ನೀರು ಕಾಯಿಸುವ ವೇಳೆ ವಿದ್ಯುತ್ ಸ್ಪರ್ಶದಿಂದ ಯುವ ಗೃಹಿಣಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.

ನಿವೇದಿತಾ ನಾಯ್ಕರ್ (24) ಮೃತರು ಎಂದು ಗುರುತಿಸಲಾಗಿದೆ.

ಎರಡು ಮಕ್ಕಳ ತಾಯಿಯಾಗಿದ್ದ ನಿವೇದಿತಾ ನಾಯ್ಕರ್, ಬಕೆಟ್‌ನಲ್ಲಿ ಕ್ವಾಯಿಲ್ ಉಪಯೋಗಿಸಿ ನೀರು ಕಾಯಿಸಲು ಇಟ್ಟಿದ್ದರು. ಈ ವೇಳೆ ಆಕಸ್ಮಿಕವಾಗಿ ಬಕೆಟ್ ಮುಟ್ಟಿದಾಗ ವಿದ್ಯುತ್ ಸ್ಪರ್ಶಗೊಂಡಿದ್ದು, ಗಂಭೀರವಾಗಿ ಗಾಯಗೊಂಡ ಅವರು ಬಾತ್ರೂಮ್‌ನಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಘಟನೆ ಗ್ರಾಮದಲ್ಲಿ ಶೋಕ ವಾತಾವರಣವನ್ನು ಮೂಡಿಸಿದೆ.

ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಏ.5ರಂದು ನಮ್ಮ ಮೆಟ್ರೋ ಸಂಚಾರ ಮಧ್ಯರಾತ್ರಿವರೆಗೂ ವಿಸ್ತರಣೆ!

ಬೆಂಗಳೂರು: ಐಪಿಎಲ್ ಪಂದ್ಯಗಳ ಹಿನ್ನೆಲೆ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ನಮ್ಮ ಮೆಟ್ರೋ ಸೇವೆಯನ್ನು ಮತ್ತೆ ವಿಸ್ತರಿಸಿದೆ.

ಏಪ್ರಿಲ್ 5ರಂದು ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಡುವಿನ ಪಂದ್ಯದ ಹಿನ್ನೆಲೆ, ಮೆಟ್ರೋ ಸಂಚಾರವನ್ನು ರಾತ್ರಿ 2 ಗಂಟೆಯವರೆಗೆ ವಿಸ್ತರಿಸಲಾಗಿದೆ.

ಈ ಪಂದ್ಯವು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಅಭಿಮಾನಿಗಳ ಸುಗಮ ಹಾಗೂ ಸುರಕ್ಷಿತ ಪ್ರಯಾಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸೇವೆ ರಾತ್ರಿ 11:00ರಿಂದ ಮಧ್ಯರಾತ್ರಿ 2:00ರವರೆಗೆ ಲಭ್ಯವಿರಲಿದೆ.

ಕೊನೆಯ ರೈಲುಗಳ ಸಮಯ ಹೀಗಿದೆ:

  • ವೈಟ್‌ಫೀಲ್ಡ್ (ಕಾಡುಗೋಡಿ): ರಾತ್ರಿ 12:30
  • ಚೆಲ್ಲಘಟ್ಟ: ರಾತ್ರಿ 12:45
  • ರೇಷ್ಮೆ ಸಂಸ್ಥೆ ಹಾಗೂ ಮಾದಾವರ: ರಾತ್ರಿ 12:45
  • ಬೊಮ್ಮಸಂದ್ರ: ರಾತ್ರಿ 12:30
  • ಆರ್.ವಿ. ರಸ್ತೆ: ರಾತ್ರಿ 2:00
  • ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮಜೆಸ್ಟಿಕ್): ರಾತ್ರಿ 1:30 (ನಾಲ್ಕು ದಿಕ್ಕುಗಳಿಗೆ)

ಪಂದ್ಯ ವೀಕ್ಷಿಸಲು ಬರುವ ಪ್ರೇಕ್ಷಕರ ಅನುಕೂಲಕ್ಕಾಗಿ ಡಿಜಿಟಲ್ ಟಿಕೆಟ್‌ಗಳಲ್ಲಿ ಕ್ಯೂಆರ್ ಕೋಡ್ ವ್ಯವಸ್ಥೆ ಮಾಡಲಾಗಿದೆ. ಕಬ್ಬನ್ ರಸ್ತೆ ಭಾಗದಿಂದ ಪ್ರವೇಶಿಸುವವರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ಬಳಕೆ ಮಾಡಬೇಕಾಗಿದ್ದು, ಲಿಂಕ್ ರಸ್ತೆ ಭಾಗದಿಂದ ಬರುವವರು ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣ ಬಳಸುವಂತೆ ಸೂಚಿಸಲಾಗಿದೆ.

ಇದಲ್ಲದೆ, ಪಂದ್ಯ ದಿನಗಳಲ್ಲಿ ಹಲವಾರು ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಎರಡು ಚಕ್ರ ವಾಹನಗಳಿಗೆ ₹30 ಹಾಗೂ ಕಾರುಗಳಿಗೆ ₹60 ಶುಲ್ಕ ನಿಗದಿ ಮಾಡಲಾಗಿದ್ದು, ಈ ದರವು ಆ ದಿನದ ಮೆಟ್ರೋ ಸೇವೆ ಮುಗಿಯುವವರೆಗೆ ಮಾನ್ಯವಾಗಿರುತ್ತದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

 

ಎತ್ತಿನಹೊಳೆ ಪ್ರಾಜೆಕ್ಟ್ʼಗೆ ಗ್ರೀನ್ ಸಿಗ್ನಲ್: ಕೇಂದ್ರ ಸರ್ಕಾರ ಒಪ್ಪಿಗೆ

ನವದೆಹಲಿ: ಎತ್ತಿನಹೊಳೆ ಯೋಜನೆಗೆ ಹಾಸನ ಮತ್ತು ತುಮಕೂರು ಜಿಲ್ಲೆಗಳ 277 ಎಕರೆ ಅರಣ್ಯ ಭೂಮಿಯನ್ನು ಬಳಸಲು ಕೇಂದ್ರ ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ಷರತ್ತುಬದ್ಧ ಅನುಮತಿ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರವು ತಾತ್ವಿಕ ಅನುಮೋದನೆ ನೀಡಿದೆ.

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (ಅರಣ್ಯ ಸಂರಕ್ಷಣಾ ವಿಭಾಗ) ಈ ಕುರಿತು ಮಾಹಿತಿ ನೀಡಿದ್ದು, ಯೋಜನೆ ಮುಂದುವರಿಸಲು ಒಟ್ಟು 34 ಷರತ್ತುಗಳನ್ನು ವಿಧಿಸಿದೆ. ಇದರಿಂದಾಗಿ ಕಳೆದ ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ಯೋಜನೆ ಕಾಮಗಾರಿಗೆ ಮತ್ತೆ ಚಾಲನೆ ಸಿಗುವ ನಿರೀಕ್ಷೆಯಿದೆ.

ಕೇಂದ್ರದ ಪ್ರಮುಖ ಷರತ್ತುಗಳು:

  • ಅರಣ್ಯ ಅನುಮತಿ ಇಲ್ಲದೇ ಈಗಾಗಲೇ ಕಾಮಗಾರಿ ನಡೆಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು.
  • ಅಕ್ರಮವಾಗಿ ಬಳಸಿದ ಅರಣ್ಯ ಭೂಮಿಯ ಮೌಲ್ಯದ ಆರು ಪಟ್ಟು ದಂಡ ಪಾವತಿಸಬೇಕು.
  • ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿ ಕಾಮಗಾರಿ ನಡೆಸಬೇಕು.
  • ಬಳಸುವ ಅರಣ್ಯ ಭೂಮಿಗೆ ಸಮನಾಗಿ ಅರಣ್ಯೇತರ ಭೂಮಿಯಲ್ಲಿ ಪರಿಹಾರ ಅರಣ್ಯೀಕರಣ (Compensatory Afforestation) ಮಾಡಬೇಕು.
  • ಅರಣ್ಯೇತರ ಭೂಮಿಯನ್ನು ರಾಜ್ಯ ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಿ, ಸಂರಕ್ಷಿತ ಅರಣ್ಯವಾಗಿ ಘೋಷಿಸಬೇಕು.
  • CAMPA ಖಾತೆಗೆ ಪರಿಹಾರ ಅರಣ್ಯೀಕರಣ ವೆಚ್ಚವನ್ನು ಜಮಾ ಮಾಡಬೇಕು ಹಾಗೂ ಕನಿಷ್ಠ 10 ವರ್ಷ ನಿರ್ವಹಣೆ ಮಾಡಬೇಕು.

ಇತರೆ ನಿಯಮಗಳು:
ಯೋಜನೆಗಾಗಿ ಬಳಸುವ ಒಟ್ಟು ಅರಣ್ಯ ಭೂಮಿಯ ಪ್ರಮಾಣ 111.0277 ಹೆಕ್ಟೇರ್ ಮೀರಬಾರದು. ಅರಣ್ಯ ಪ್ರದೇಶದಲ್ಲಿ ಹೊಸ ರಸ್ತೆ ನಿರ್ಮಾಣ ಅಥವಾ ಕಾರ್ಮಿಕ ಶಿಬಿರ ಸ್ಥಾಪನೆಗೆ ಅವಕಾಶ ಇಲ್ಲ. ಮರಗಳನ್ನು ಕಡಿಯುವುದು ಅಗತ್ಯವಿದ್ದಲ್ಲಿ ಮಾತ್ರ, ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ಮಾಡಬೇಕು.

ಅಲ್ಲದೆ, ಸಸ್ಯ-ಪ್ರಾಣಿ ಜೀವಿಗಳಿಗೆ ಹಾನಿಯಾಗದಂತೆ ಕ್ರಮ ಕೈಗೊಳ್ಳಬೇಕು. ಪ್ರತಿ ವರ್ಷ ಡಿಸೆಂಬರ್ 31ರಂದು ಷರತ್ತುಗಳ ಅನುಸರಣೆ ಬಗ್ಗೆ ರಾಜ್ಯ ಸರ್ಕಾರ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಈ ಷರತ್ತುಗಳಲ್ಲಿ ಯಾವುದೇ ಉಲ್ಲಂಘನೆ ನಡೆದರೆ, ಅದು ಅರಣ್ಯ ಸಂರಕ್ಷಣಾ ಕಾಯಿದೆ ಉಲ್ಲಂಘನೆ ಎಂದು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ.

error: Content is protected !!