Home Blog

ಗದಗ ಜಿಲ್ಲೆಯಲ್ಲಿ ಅಬ್ಬರದ ಗಾಳಿ–ಮಳೆ: ಮನೆಗಳ ತಗಡಿನ ಶೀಟ್ ಹಾರಿ ಅವಾಂತರ, ಹಲವರಿಗೆ ಗಾಯ

0

ಗದಗ: ಜಿಲ್ಲೆಯ ಹಲವೆಡೆ ಮಂಗಳವಾರ ಸಂಜೆ ಗಾಳಿ, ಗುಡುಗು ಸಹಿತ ಮಳೆಯ ಅಬ್ಬರ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ವಿಶೇಷವಾಗಿ ಮುಂಡರಗಿ ತಾಲೂಕಿನ ದಿಂಡೂರ ತಾಂಡಾದಲ್ಲಿ ಭಾರಿ ಅವಾಂತರ ಉಂಟಾಗಿದೆ.

ಭಾರಿ ಗಾಳಿಯ ಪರಿಣಾಮ ನಾಲ್ಕಕ್ಕೂ ಹೆಚ್ಚು ಮನೆಗಳ ತಗಡಿನ ಶೀಟ್‌ಗಳು ಹಾರಿ ಹೋಗಿದ್ದು, ಹಲವರಿಗೆ ಗಾಯಗಳಾಗಿವೆ. ಶಿವಪ್ಪ ಲಮಾಣಿ ಅವರಿಗೆ ಕಾಲಿಗೆ ಗಾಯವಾಗಿದ್ದು, ಸೋಮವ್ವ ಲಮಾಣಿ ಅವರ ಕೈ ಮುರಿದಿದೆ. ದೇವಲಪ್ಪ ಲಮಾಣಿ ತಲೆ ಮತ್ತು ಬೆನ್ನಿಗೆ ಗಾಯಗೊಂಡಿದ್ದಾರೆ. ಗಾಯಾಳುಗಳ ಅಳಲು ಕಣ್ಣೀರಾಗಿದ್ದು, ತಕ್ಷಣದ ನೆರವಿಗಾಗಿ ಪರದಾಟ ನಡೆದಿದೆ.

ಇನ್ನೊಂದೆಡೆ, ತಹಶೀಲ್ದಾರ, ರೆವಿನ್ಯೂ ಇನ್ಸಪೆಕ್ಟರ್ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸಂಪರ್ಕಕ್ಕೆ ಸಿಗದೇ ಇರುವುದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೈ ಮುರಿದ ಮಹಿಳೆ ಸೋಮವ್ವ ಅವರನ್ನು ಆಸ್ಪತ್ರೆಗೆ ಸಾಗಿಸಲು ಕೂಡ ತೊಂದರೆ ಎದುರಾಗಿದೆ.

ಭಾರಿ ಗಾಳಿ ಮತ್ತು ಮಳೆಯ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ತಾಂಡಾ ನಿವಾಸಿಗಳು ಕತ್ತಲಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಗಾಳಿಯ ತೀವ್ರತೆಗೆ ಹಲವು ಮರಗಳು ಧರೆಗೆರುಳಿದ್ದು, ಮನೆ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಸೇರಿದಂತೆ ವಾಹನಗಳು ಹಾನಿಗೀಡಾಗಿವೆ.

ಗಾಳಿ–ಮಳೆಯ ಅಬ್ಬರ ಇನ್ನೂ ನಿಲ್ಲದಿರುವುದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಸ್ಥಳೀಯ ಆಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಆಗ್ರಹವಾಗಿದೆ.

ಭೀಮ್ ಆ್ಯಪ್‌ನಲ್ಲಿ ಹೊಸ ಫೀಚರ್: ಯುಪಿಐ ಪಾವತಿಗೆ ಬಯೋಮೆಟ್ರಿಕ್ ಸೌಲಭ್ಯ!

0

ನವದೆಹಲಿ: ಡಿಜಿಟಲ್ ಪಾವತಿಗಳನ್ನು ಇನ್ನಷ್ಟು ಸುರಕ್ಷಿತ ಮತ್ತು ಸುಲಭಗೊಳಿಸುವ ನಿಟ್ಟಿನಲ್ಲಿ ಭೀಮ್ ಆ್ಯಪ್ ನಲ್ಲಿ ಹೊಸ ಬಯೋಮೆಟ್ರಿಕ್ ದೃಢೀಕರಣ ಫೀಚರ್ ಪರಿಚಯಿಸಲಾಗಿದೆ.

ಯುಪಿಐ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ಎನ್​ಪಿಸಿಐನ ಅಂಗಸಂಸ್ಥೆಯಾದ ಭೀಮ್ ಸರ್ವಿಸಸ್ ಲಿಮಿಟೆಡ್ ಈ ಸೌಲಭ್ಯವನ್ನು ಅಧಿಕೃತವಾಗಿ ಘೋಷಿಸಿದೆ.

ಈ ಹೊಸ ಫೀಚರ್ ಮೂಲಕ ಬಳಕೆದಾರರು ₹5,000ರವರೆಗೆ ಯುಪಿಐ ಪಾವತಿಗಳನ್ನು ಫಿಂಗರ್‌ಪ್ರಿಂಟ್ ಅಥವಾ ಫೇಶಿಯಲ್ ರೆಕಗ್ನಿಶನ್ ಮೂಲಕವೇ ದೃಢೀಕರಿಸಬಹುದು. ಇದರಿಂದ ಪಿನ್ ನಮೂದಿಸುವ ಅಗತ್ಯವಿಲ್ಲ. ₹5,000ಕ್ಕಿಂತ ಹೆಚ್ಚಿನ ಮೊತ್ತದ ವ್ಯವಹಾರಗಳಿಗೆ ಮಾತ್ರ ಪಿನ್ ಅಗತ್ಯವಿರುತ್ತದೆ.

ಫಿಂಗರ್‌ಪ್ರಿಂಟ್ ಹಾಗೂ ಮುಖ ಗುರುತು ಸೌಲಭ್ಯ ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಫೀಚರ್ ಕಾರ್ಯನಿರ್ವಹಿಸುತ್ತದೆ. ಬಳಕೆದಾರರ ಬಯೋಮೆಟ್ರಿಕ್ ಮಾಹಿತಿಯನ್ನು ಫೋನ್‌ನಲ್ಲೇ ಸಂಗ್ರಹಿಸಲಾಗುತ್ತದೆ. ಹೀಗಾಗಿ ಭದ್ರತೆ ಹೆಚ್ಚುವುದರ ಜೊತೆಗೆ ದುರುಪಯೋಗದ ಸಾಧ್ಯತೆ ಕಡಿಮೆಯಾಗುತ್ತದೆ.

ಬಯೋಮೆಟ್ರಿಕ್ ಫೀಚರ್ ಸಕ್ರಿಯಗೊಳಿಸುವ ವಿಧಾನ:

  • ಭೀಮ್ ಆ್ಯಪ್ ತೆರೆಯಿರಿ
  • ಪ್ರೊಫೈಲ್ ವಿಭಾಗಕ್ಕೆ ಹೋಗಿ
  • ನಿಮ್ಮ ಬ್ಯಾಂಕ್ ಖಾತೆ ಆಯ್ಕೆ ಮಾಡಿ
  • “Biometric Transactions” ಆಯ್ಕೆಯನ್ನು ಸಕ್ರಿಯಗೊಳಿಸಿ
  • ನಂತರ ಫಿಂಗರ್‌ಪ್ರಿಂಟ್/ಫೇಸ್ ಮೂಲಕ ₹5,000ರವರೆಗೆ ಪಾವತಿ ಮಾಡಬಹುದು

ಈ ಹೊಸ ವ್ಯವಸ್ಥೆಯಿಂದ ಯುಪಿಐ ಪಾವತಿಗಳು ಇನ್ನಷ್ಟು ವೇಗವಾಗಿ ಹಾಗೂ ಸುರಕ್ಷಿತವಾಗಿ ನಡೆಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟ್ರಂಪ್–ಮೋದಿ ಮಾತುಕತೆ: ಹಾರ್ಮುಜ್ ಜಲಸಂಧಿ ಮುಕ್ತತೆಗೆ ಒತ್ತಾಯ, ಶಾಂತಿಗೆ ಭಾರತ ಬೆಂಬಲ!

0

ನವದೆಹಲಿ/ವಾಷಿಂಗ್ಟನ್‌: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ದೂರವಾಣಿ ಮಾತುಕತೆ ಮಹತ್ವ ಪಡೆದಿದೆ.

ಮಂಗಳವಾರ ನಡೆದ ಈ ಮಾತುಕತೆಯಲ್ಲಿ ಹಾರ್ಮುಜ್ ಜಲಸಂಧಿ ಮುಕ್ತವಾಗಿಸುವ ಕಾರ್ಯತಂತ್ರಗಳು ಹಾಗೂ ಪಶ್ಚಿಮ ಏಷ್ಯಾದ ಪ್ರಸ್ತುತ ಪರಿಸ್ಥಿತಿ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ.

ಈ ಕುರಿತು ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಟ್ರಂಪ್ ಮತ್ತು ಮೋದಿ ಮಧ್ಯಪ್ರಾಚ್ಯದ ಬೆಳವಣಿಗೆಗಳು ಹಾಗೂ ಜಲಸಂಧಿಯ ಮಹತ್ವದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಇದಾದ ಕೆಲವೇ ನಿಮಿಷಗಳಲ್ಲಿ ಪ್ರಧಾನಿ ಮೋದಿ ಕೂಡ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದು, “ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಿ ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಕುರಿತು ಉಪಯುಕ್ತ ಅಭಿಪ್ರಾಯಗಳನ್ನು ಹಂಚಿಕೊಂಡೆವು. ಉದ್ವಿಗ್ನತೆಯನ್ನು ಕಡಿಮೆ ಮಾಡಿ ಶಾಂತಿಯನ್ನು ಶೀಘ್ರವಾಗಿ ಮರುಸ್ಥಾಪಿಸಲು ಭಾರತ ಬೆಂಬಲಿಸುತ್ತದೆ” ಎಂದು ಹೇಳಿದ್ದಾರೆ.

ಇನ್ನೂ, ಜಾಗತಿಕ ತೈಲ ಮತ್ತು ಇಂಧನ ವ್ಯಾಪಾರಕ್ಕೆ ಅತ್ಯಂತ ಪ್ರಮುಖವಾಗಿರುವ ಹಾರ್ಮುಜ್ ಜಲಸಂಧಿಯನ್ನು ಮುಕ್ತ, ಸುರಕ್ಷಿತ ಮತ್ತು ಎಲ್ಲರಿಗೂ ಪ್ರವೇಶಿಸಬಹುದಾದ ರೀತಿಯಲ್ಲಿ ಉಳಿಸುವುದು ಅಗತ್ಯ ಎಂದು ಮೋದಿ ಒತ್ತಿಹೇಳಿದ್ದಾರೆ.

ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಲು ಅಗತ್ಯ ಕ್ರಮಗಳ ಕುರಿತು ಮುಂದುವರಿದು ಸಂಪರ್ಕದಲ್ಲಿರಲು ಇಬ್ಬರು ನಾಯಕರು ಒಪ್ಪಿಕೊಂಡಿದ್ದಾರೆ.

ಕ್ರೆಡಿಟ್ ಕಾರ್ಡ್ ಇಎಂಐ: ಕಾಣುವಷ್ಟು ಸುಲಭವಲ್ಲ, ಅಡಗಿರುವ ಖರ್ಚುಗಳಿಗೆ ಎಚ್ಚರ!

0

ಕ್ರೆಡಿಟ್ ಕಾರ್ಡ್ ಬಳಸಿ ಶಾಪಿಂಗ್ ಮಾಡುವವರು ಹೆಚ್ಚಿನವರು ಇಎಂಐ ಆಯ್ಕೆಯನ್ನು ಬಳಸುವುದು ಸಾಮಾನ್ಯ.

ವಿಶೇಷವಾಗಿ ದುಬಾರಿ ವಸ್ತುಗಳನ್ನು ಖರೀದಿಸುವಾಗ ಒಮ್ಮೆಗೆ ಹಣ ಪಾವತಿಸಲು ಸಾಧ್ಯವಾಗದಿದ್ದರೆ ತಿಂಗಳ ಕಂತುಗಳಲ್ಲಿ ಪಾವತಿಸುವುದು ಸುಲಭವೆನಿಸುತ್ತದೆ. “ನೋ ಕಾಸ್ಟ್” ಅಥವಾ “ಝೀರೋ ಕಾಸ್ಟ್” ಇಎಂಐ ಎಂಬ ಆಫರ್‌ಗಳು ಗ್ರಾಹಕರನ್ನು ಇನ್ನಷ್ಟು ಆಕರ್ಷಿಸುತ್ತವೆ.

ಆದರೆ ಈ ಇಎಂಐ ಆಯ್ಕೆ ಮೇಲ್ನೋಟಕ್ಕೆ ಕಾಣುವಷ್ಟು ಸರಳವಲ್ಲ. ಉದಾಹರಣೆಗೆ, ₹80,000 ಮೌಲ್ಯದ ವಾಷಿಂಗ್ ಮಷೀನ್ ಖರೀದಿಸಿ 12 ತಿಂಗಳ ಇಎಂಐ ಆಯ್ಕೆ ಮಾಡಿಕೊಂಡರೆ ತಿಂಗಳಿಗೆ ₹7,900 ಪಾವತಿಸುವುದು ಸುಲಭವೆನಿಸುತ್ತದೆ. ಆದರೆ ಈ ಕಂತುಗಳ ಹಿಂದೆ ಅಡಗಿರುವ ಖರ್ಚುಗಳನ್ನು ಹಲವರು ಗಮನಿಸುವುದಿಲ್ಲ.

ಇಎಂಐಗೆ ಪರಿವರ್ತಿಸಿದ ಕ್ಷಣದಿಂದಲೇ ಅದು ಸಾಲವಾಗುತ್ತದೆ. ಹಣಕಾಸು ಸಂಸ್ಥೆಗಳು ಇದಕ್ಕೆ ಶೇ.12ರಿಂದ 24ರವರೆಗೆ ವಾರ್ಷಿಕ ಬಡ್ಡಿ ವಿಧಿಸಬಹುದು. ಜೊತೆಗೆ ಪ್ರೋಸಸಿಂಗ್ ಫೀ, ಜಿಎಸ್‌ಟಿ ಸೇರಿದಂತೆ ಇತರೆ ಶುಲ್ಕಗಳೂ ಸೇರುತ್ತವೆ. ಇದರ ಪರಿಣಾಮವಾಗಿ ₹80,000 ಮೌಲ್ಯದ ವಸ್ತುವಿಗೆ ಒಟ್ಟು ₹1 ಲಕ್ಷದವರೆಗೆ ಪಾವತಿಸುವ ಸ್ಥಿತಿ ಎದುರಾಗಬಹುದು.

ಇಎಂಐಗೆ ಸಂಬಂಧಿಸಿದ ಪ್ರಮುಖ ಶುಲ್ಕಗಳು:

  • ಬಡ್ಡಿದರ: ಶೇ.12–24
  • ಪ್ರೋಸಸಿಂಗ್ ಫೀ: ಖರೀದಿ ಮೊತ್ತದ ಶೇ.1–3
  • ಜಿಎಸ್‌ಟಿ: ಬಡ್ಡಿ ಮತ್ತು ಪ್ರೋಸಸಿಂಗ್ ಫೀ ಮೇಲೆ ಶೇ.18
  • ಮುಂಗಡ ಪಾವತಿ ಶುಲ್ಕ: ಬಾಕಿ ಮೊತ್ತದ ಶೇ.1–5
  • ಕ್ಯಾಷ್‌ಬ್ಯಾಕ್/ರಿವಾರ್ಡ್ ನಷ್ಟ
  • ಮರ್ಚಂಟ್ ಡಿಸ್ಕೌಂಟ್ ನಷ್ಟ

ಇಎಂಐ ಆಯ್ಕೆ ಮಾಡಿಕೊಂಡ ನಂತರ ಮಧ್ಯದಲ್ಲಿ ಪೂರ್ಣ ಹಣ ಕಟ್ಟಲು ಯತ್ನಿಸಿದರೂ ದಂಡ ವಿಧಿಸುವ ಸಾಧ್ಯತೆ ಇದೆ. ಜೊತೆಗೆ, ಕ್ರೆಡಿಟ್ ಕಾರ್ಡ್ ಮೂಲಕ ಸಿಗುವ ಕ್ಯಾಷ್‌ಬ್ಯಾಕ್ ಮತ್ತು ರಿವಾರ್ಡ್ ಪಾಯಿಂಟ್‌ಗಳು ಇಎಂಐ ಆಯ್ಕೆ ಮಾಡಿದರೆ ಅನ್ವಯವಾಗುವುದಿಲ್ಲ.

“ಝೀರೋ ಕಾಸ್ಟ್ ಇಎಂಐ” ಎಂಬ ಆಫರ್‌ಗಳಲ್ಲಿಯೂ ಗ್ರಾಹಕರು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆ ಇದೆ. ಈ ಆಫರ್‌ನಲ್ಲಿ ಬಡ್ಡಿ ಇಲ್ಲದಿದ್ದರೂ, ಅಂಗಡಿ ನೀಡುವ ಡಿಸ್ಕೌಂಟ್ ಕಡಿತಗೊಳ್ಳಬಹುದು. ಅಂದರೆ, ಬಡ್ಡಿಯ ಲಾಭ ಸಿಗುವುದಾದರೂ ರಿಯಾಯಿತಿ ತಪ್ಪುತ್ತದೆ.

ಒಟ್ಟಿನಲ್ಲಿ, ಇಎಂಐ ಆಯ್ಕೆ ಮಾಡುವ ಮುನ್ನ ಅದರ ಎಲ್ಲಾ ನಿಯಮಗಳು ಮತ್ತು ಅಡಗಿರುವ ಶುಲ್ಕಗಳನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ ಎಂದು ತಜ್ಞರು ಸಲಹೆ ನೀಡುತ್ತಾರೆ.

ಡಬಲ್ ಹಣದ ಆಮಿಷಕ್ಕೆ ಗುತ್ತಿಗೆದಾರ ಬಲಿ: ₹28 ಲಕ್ಷ ವಂಚನೆ, ಮೂವರು ಅರೆಸ್ಟ್!

ಬೆಂಗಳೂರು: “ಹಣ ಅಂದರೆ ಹೆಣ ಕೂಡ ಬಾಯಿ ಬಿಡುತ್ತೆ” ಎನ್ನುವ ಮಾತು ಮತ್ತೊಮ್ಮೆ ಸತ್ಯವಾಗಿದೆ.

ಡಬಲ್–ತ್ರಿಬಲ್ ಹಣ ಸಿಗುತ್ತದೆ ಎಂಬ ಆಮಿಷಕ್ಕೆ ಒಳಗಾದ ಗುತ್ತಿಗೆದಾರನೊಬ್ಬ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ನಗರದ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣದಲ್ಲಿ, ಹಣ ಡಬ್ಲಿಂಗ್ ಮಾಡುವ ನೆಪದಲ್ಲಿ ಗುತ್ತಿಗೆದಾರ ರಮೇಶ್ ಅವರಿಂದ ಸುಮಾರು ₹28.60 ಲಕ್ಷ ವಂಚಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುಗಿರಿ ಮೂಲದ ವಿಜಯ್, ಕೆರೆಗುಡ್ಡದಹಳ್ಳಿಯ ಕೃಷ್ಣ ಸಿಂಗ್ ಹಾಗೂ ಚಾಲಕ ನವೀನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು “ಬಾರಿಶ್ ಹಣ” ಎಂಬ ಹೆಸರಿನಲ್ಲಿ ಕಪ್ಪು ಹಣವನ್ನು 90 ದಿನಗಳಲ್ಲಿ ಖರ್ಚು ಮಾಡಬೇಕು, ನೀವು ಒಂದು ಲಕ್ಷ ಕೊಟ್ಟರೆ ಮೂರು ಲಕ್ಷ ನೀಡುತ್ತೇವೆ ಎಂದು ನಂಬಿಸಿ, ಗುತ್ತಿಗೆದಾರನನ್ನು ಮೋಸ ಮಾಡಿದ್ದಾರೆ. ಇವರ ಮಾತು ನಂಬಿದ ರಮೇಶ್ ಅವರು 8ನೇ ಮೈಲಿ ಬಳಿ ₹28 ಲಕ್ಷಕ್ಕೂ ಅಧಿಕ ಹಣವನ್ನು ನೀಡಿದ್ದರು.

ಹಣ ಪರಿಶೀಲನೆ ಮಾಡಿ ಬರುತ್ತೇವೆ ಎಂದು ಹೇಳಿದ ಆರೋಪಿಗಳು, ಹಣ ಸಮೇತ ಪರಾರಿಯಾಗಿದ್ದರು. ನಂತರ ಮೋಸವಾಗಿರುವುದು ತಿಳಿದ ರಮೇಶ್, ತಕ್ಷಣವೇ ಬಾಗಲಗುಂಟೆ ಪೊಲೀಸರಿಗೆ ದೂರು ನೀಡಿದ್ದಾರೆ.

ತನಿಖೆ ಕೈಗೊಂಡ ಪೊಲೀಸರು, ಆರೋಪಿಗಳನ್ನು ಬಂಧಿಸಿ ಒಟ್ಟು ₹40 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ. ಇದೇ ಮಾದರಿಯ ವಂಚನೆಗೆ ಮತ್ತೊಬ್ಬ ವ್ಯಕ್ತಿಯೂ ₹18 ಲಕ್ಷ ಕಳೆದುಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, “ಡಬಲ್ ಅಥವಾ ತ್ರಿಬಲ್ ಹಣ ಸಿಗುತ್ತದೆ” ಎಂಬ ಆಮಿಷಕ್ಕೆ ಒಳಗಾಗಬಾರದು. ಅತಿಯಾದ ಲಾಭದ ಆಸೆ ಇಟ್ಟರೆ ಇಂತಹ ವಂಚನೆಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಕಲ್ಲಂಗಡಿ ಹಣ್ಣು ತಿಂದು ಸಿಪ್ಪೆ ಎಸೆಯುತ್ತಿದ್ದೀರಾ!? ಹಾಗಿದ್ರೆ ಈ ತಪ್ಪು ಮಾಡ್ಬೇಡಿ! ಬಗೆ ಬಗೆಯ ತಿನಿಸು ತಯಾರಿಸಿ

0

ಸುಡು ಬೇಸಿಗೆಯಲ್ಲಿ ತಂಪಾಗಿರಲು ಜನರು ಹೆಚ್ಚಾಗಿ ಆಯ್ಕೆ ಮಾಡುವ ಹಣ್ಣು ಕಲ್ಲಂಗಡಿ.

ದೇಹವನ್ನು ತಂಪಾಗಿಡುವುದರ ಜೊತೆಗೆ ಆರೋಗ್ಯಕ್ಕೂ ಉಪಕಾರಿ ಆಗಿರುವ ಈ ಹಣ್ಣು ಬೇಸಿಗೆ ವೇಳೆ ಮಾರುಕಟ್ಟೆಯಲ್ಲಿ ಹೇರಳವಾಗಿ ಲಭ್ಯವಾಗುತ್ತದೆ.

ಆದರೆ, ಕಲ್ಲಂಗಡಿ ಹಣ್ಣನ್ನು ತಿಂದ ನಂತರ ಅದರ ಸಿಪ್ಪೆಯನ್ನು ಬಹುತೇಕರು ಕಸದ ಬುಟ್ಟಿಗೆ ಎಸೆಯುತ್ತಾರೆ. ವಾಸ್ತವವಾಗಿ, ಈ ಸಿಪ್ಪೆಯಿಂದಲೇ ಹಲವು ರುಚಿಕರ ಹಾಗೂ ಆರೋಗ್ಯಕರ ರೆಸಿಪಿಗಳನ್ನು ತಯಾರಿಸಬಹುದು ಎಂಬುದು ಅನೇಕರಿಗೆ ತಿಳಿದಿಲ್ಲ.

ಜಾಮ್ ತಯಾರಿ ಸುಲಭ
ಕಲ್ಲಂಗಡಿ ಸಿಪ್ಪೆಯಿಂದ ರುಚಿಯಾದ ಜಾಮ್ ಮಾಡಬಹುದು. ಮೊದಲು ಸಿಪ್ಪೆಯ ಹಸಿರು ಪದರ ತೆಗೆದು ಒಳಗಿನ ಭಾಗವನ್ನು ಸಣ್ಣ ತುಂಡುಗಳಾಗಿ ಕತ್ತರಿಸಬೇಕು. ಇದಕ್ಕೆ ಸಕ್ಕರೆ, ನಿಂಬೆ ರಸ ಮತ್ತು ವೆನಿಲ್ಲಾ ಎಸೆನ್ಸ್ ಸೇರಿಸಿ ಜೆಲ್ಲಿ ಹದಕ್ಕೆ ಬರುವವರೆಗೆ ಕುದಿಸಿದರೆ ಸವಿಯಾದ ಜಾಮ್ ಸಿದ್ಧ. ದಾಲ್ಚಿನ್ನಿ ಸೇರಿಸಿದರೆ ಸುವಾಸನೆ ಹೆಚ್ಚುತ್ತದೆ.

ಉಪ್ಪಿನಕಾಯಿ ಹೊಸ ರುಚಿ
ಮಾವು, ನಿಂಬೆ ಮಾದರಿಯಲ್ಲೇ ಕಲ್ಲಂಗಡಿ ಸಿಪ್ಪೆಯಿಂದಲೂ ಉಪ್ಪಿನಕಾಯಿ ಮಾಡಬಹುದು. ಸಿಪ್ಪೆಯನ್ನು ತುಂಡುಗಳಾಗಿ ಕತ್ತರಿಸಿ ಸಾಂಪ್ರದಾಯಿಕ ವಿಧಾನದಲ್ಲಿ ಮಸಾಲೆ ಸೇರಿಸಿ ತಯಾರಿಸಿದರೆ ವಿಶಿಷ್ಟ ರುಚಿ ಸಿಗುತ್ತದೆ.

ಚಟ್ನಿ ಕೂಡ ಸವಿಯಬಹುದು
ಕಲ್ಲಂಗಡಿ ಸಿಪ್ಪೆಯಿಂದ ಚಟ್ನಿ ಕೂಡ ತಯಾರಿಸಬಹುದು. ಸಣ್ಣ ತುಂಡುಗಳಾಗಿ ಕತ್ತರಿಸಿದ ಸಿಪ್ಪೆಗೆ ಉಪ್ಪು, ಮೆಣಸಿನಕಾಯಿ, ಶುಂಠಿ ಹಾಗೂ ಇಷ್ಟದ ಮಸಾಲೆಗಳನ್ನು ಸೇರಿಸಿ ರುಬ್ಬಿದರೆ ರುಚಿಕರ ಚಟ್ನಿ ಸಿದ್ಧವಾಗುತ್ತದೆ.

ಇದರ ಜೊತೆಗೆ ಕಲ್ಲಂಗಡಿ ಸಿಪ್ಪೆಯಿಂದ ಪಲ್ಯ, ಹಲ್ವಾ, ಟುಟ್ಟಿ ಫ್ರೂಟಿ ಮುಂತಾದ ಹಲವು ಪದಾರ್ಥಗಳನ್ನು ತಯಾರಿಸಬಹುದು.

ಒಟ್ಟಿನಲ್ಲಿ, ಕಸದ ಬುಟ್ಟಿಗೆ ಹೋಗುವ ಕಲ್ಲಂಗಡಿ ಸಿಪ್ಪೆಯನ್ನು ಬಳಸಿ ರುಚಿಕರ ಪದಾರ್ಥಗಳನ್ನು ತಯಾರಿಸುವ ಮೂಲಕ ಆಹಾರ ವ್ಯರ್ಥತೆಯನ್ನು ಕಡಿಮೆ ಮಾಡಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಎಸ್ಸಿ-ಎಸ್ಟಿ ಸಮುದಾಯಗಳ ಮಾರಾಮಾರಿ ಕೇಸ್: 21ಜನ ವಶಕ್ಕೆ, ಗ್ರಾಮದಲ್ಲಿ ಆತಂಕದ ಛಾಯೆ!

0

ಗದಗ:- ಹಳೆಯ ವೈಷಮ್ಯ ಹಿನ್ನೆಲೆಯಲ್ಲಿ ಕ್ಷುಲ್ಲಕ ನೀರಿನ ವಿಚಾರಕ್ಕೆ ಕಿರಿಕ್ ಉಂಟಾಗಿ ಎಸ್ಸಿ-ಎಸ್ಟಿ ಸಮುದಾಯಗಳ ನಡುವೆ ಭೀಕರ ಮಾರಾಮಾರಿ ನಡೆದಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ಸೋಮವಾರ ಜರುಗಿತ್ತು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯಲ್ಲಿ ಒಟ್ಟು 33 ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಮುಂಡರಗಿ ತಾಲೂಕು ಆಸ್ಪತ್ರೆ ಮತ್ತು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಬೆನ್ನಲ್ಲೇ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಭಾರೀ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಎಸ್, ಸೋಮವಾರ ಸಂಜೆ, ಎಸ್ಸಿ ಸಮುದಾಯದ ಯುವಕನೋರ್ವ, ಎಸ್ಟಿ ಸಮುದಾಯದ ಜಮೀನಿನಲ್ಲಿರುವ ಬೋರ್‌ವೆಲ್ ಬಳಿ ನೀರು ಕುಡಿಯಲು ತೆರಳಿದ ವೇಳೆ ಮಾತಿನ ಚಕಮಕಿ ಉಂಟಾಗಿದೆ. ಈ ಸಣ್ಣ ಗಲಾಟೆ ಕೆಲವೇ ಕ್ಷಣಗಳಲ್ಲಿ ತೀವ್ರ ಸ್ವರೂಪ ಪಡೆದು ಎರಡು ಸಮುದಾಯಗಳ ನಡುವೆ ಕಿಚ್ಚನ್ನು ಹಬ್ಬಿಸಿದೆ. ಅಲ್ಲದೇ ಗಲಾಟೆಯಲ್ಲಿ ಜನರು, ಪರಸ್ಪರ ಕಲ್ಲು ತೂರಾಟ, ದೊಣ್ಣೆ ಹಾಗೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಯಿಂದಾಗಿ ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಇನ್ನೂ ಘರ್ಷಣೆಯಲ್ಲಿ ಗಾಯಗೊಂಡ ಎಸ್ಟಿ ಸಮುದಾಯದ 9 ಜನರು ಮುಂಡರಗಿ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಎಸ್ಸಿ ಸಮುದಾಯದ 24 ಜನರು ಚಿಕಿತ್ಸೆ ಪಡೆಯುತ್ತಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನೂ ಗಾಯಾಳುಗಳನ್ನು ನೋಡಲು ಆಸ್ಪತ್ರೆಗೆ ಭೇಟಿ ನೀಡಿದವರ ಮನಸ್ಸು ಮರುಕ ಹುಟ್ಟುವಂತೆ ಮಾಡಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಗದಗ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಜೊತೆಗೆ ಘಟನೆಯ ಕುರಿತು ಸಮಾಜ ಕಲ್ಯಾಣ ಇಲಾಖೆಗೆ ಸವಿಸ್ತಾರ ವರದಿ ಸಲ್ಲಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಡಳಿತವೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಪೂರ್ಣ ವರದಿ ಕೇಳಿದೆ.

ಘಟನೆ ಬಳಿಕ ಚಿಕ್ಕವಡ್ಡಟ್ಟಿ ಗ್ರಾಮವು ಬೂದಿ ಮುಚ್ಚಿದ ಕೆಂಡದಂತಿದ್ದು, ಯಾವುದೇ ಅನಾಹುತ ಸಂಭವಿಸದಿರಲು ಡಿವೈಎಸ್ಪಿ ನೇತೃತ್ವದಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಿ ಕಟ್ಟುನಿಟ್ಟಿನ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಗ್ರಾಮದಲ್ಲಿ ಪೊಲೀಸರು ಸತತ ಗಸ್ತು ತಿರುಗುತ್ತಿದ್ದು, ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ಇಡಲು ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದಾರೆ. ಘಟನೆ ಬೆನ್ನಲ್ಲೇ ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದ್ದು, ಪ್ರಕರಣ ಸಂಬಂಧ 21 ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಂಧನ ಭೀತಿಯಿಂದ ಕೆಲ ಯುವಕರು ಗ್ರಾಮ ತೊರೆದು ಹೋಗಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ. ಇನ್ನೂ ಕೆಲ ಶಂಕಿತರಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಘಟನೆ ಬಗ್ಗೆ ಗದುಗಿನ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮಾತನಾಡಿ, “ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ನಡೆದ ಈ ಘರ್ಷಣೆ ಪ್ರಕರಣದಲ್ಲಿ ಎರಡು ಕಡೆಯಿಂದ ದೂರು ದಾಖಲಾಗಿದ್ದು, ಈಗಾಗಲೇ 21 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಹಳೆ ವೈಷಮ್ಯ ಹಾಗೂ ನೀರಿನ ವಿಚಾರವೇ ಈ ಗಲಾಟೆಗೆ ಕಾರಣವಾಗಿದೆ. ಪ್ರಕರಣದ ಕುರಿತು ಸವಿಸ್ತಾರ ತನಿಖೆ ಮುಂದುವರಿದಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಆರ್‌ಸಿಬಿಗೆ ಕೆಎಂಎಫ್ ಸಾಥ್: ನಂದಿನಿಗೆ ಅಂತಾರಾಷ್ಟ್ರೀಯ ವೇದಿಕೆ! ಸಿದ್ದರಾಮಯ್ಯ ಸಂತಸ

ಬೆಂಗಳೂರು: ಐಪಿಎಲ್ ಹಬ್ಬದ ಸಂಭ್ರಮ ಶುರುವಾಗುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳ ಉತ್ಸಾಹ ಹೆಚ್ಚಾಗಿದೆ.

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಮೊದಲ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರರಾಗಿದ್ದಾರೆ.  ಈ ನಡುವೆ ಕನ್ನಡಿಗರ ಹೆಮ್ಮೆಯ ಕೆಎಂಎಫ್ 2026ರ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿಗೆ ಪ್ರಾಯೋಜಕತ್ವ ನೀಡಿದ್ದು, ನಂದಿನಿ ಉತ್ಪನ್ನಗಳಿಗೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ವೇದಿಕೆ ಸಿಕ್ಕಂತಾಗಿದೆ.

ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಮಾತನಾಡಿ, 2026ರ ಆವೃತ್ತಿಯಲ್ಲಿ ಆರ್​ಸಿಬಿಗೆ KMF ಪ್ರಾಯೋಜಕತ್ವ ನೀಡಿದೆ. ಈ ಮೂಲಕ ನಂದಿನಿ ಉತ್ಪನ್ನಗಳು ದೇಶಕ್ಕೆ ಪರಿಚಯವಾಗಲಿದೆ. ಆರ್​ಸಿಬಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ, ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಂದಿನಿ ಉತ್ಪನ್ನ ಪರಿಚಯವಾಗಲಿದೆ. ವಿರಾಟ್​ ​ಕೊಹ್ಲಿ, ರಜತ್​ ಪಾಟಿದಾರ್, ದೇವದತ್ತ ಪಡಿಕಲ್​ರಿಂದ KMF ಉತ್ಪನ್ನ ಪ್ರಚಾರಕ್ಕೆ ಮುಂದಾಗಿದ್ದೇವೆ.​ 4 ಕೋಟಿ ರೂ ವೆಚ್ಚದಲ್ಲಿ KMF ಒಂದು ವರ್ಷದ ಟೆಂಡರ್ ಪಡೆದಿದೆ ಎಂದು ಮಾಹಿತಿ ನೀಡಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಕರ್ನಾಟಕದ ಹೆಮ್ಮೆಯ ನಂದಿನಿ ಬ್ರ್ಯಾಂಡ್, ಕಳೆದ ಐಪಿಎಲ್ ಸೀಸನ್‌ನ ಚಾಂಪಿಯನ್ ತಂಡ ಆರ್‌ಸಿಬಿಯ ಅಧಿಕೃತ ಡೈರಿ ಪಾಲುದಾರನಾಗಿದೆ. ನಂದಿನಿಯ ವಿಶ್ವಾಸಾರ್ಹತೆ ಮತ್ತು ಆರ್‌ಸಿಬಿಯ ಕ್ರೀಡಾ ಬದ್ಧತೆ ಈ ಬಾರಿಯ ಐಪಿಎಲ್‌ನ ಆಕರ್ಷಣೆಯ ಕೇಂದ್ರಬಿಂದುವಾಗಲಿದೆ ಎಂದಿದ್ದಾರೆ.

ರಾಜ್ಯದಲ್ಲಿ ಭಾರೀ ಮಳೆ ಎಚ್ಚರಿಕೆ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು: ಮುಂದಿನ ಮೂರು ಗಂಟೆಗಳೊಳಗೆ ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕಲಬುರಗಿ, ಯಾದಗಿರಿ, ರಾಯಚೂರು, ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುಡುಗು-ಸಿಡಿಲಿನೊಂದಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಭಾರೀ ಮಳೆಯ ಹಿನ್ನೆಲೆ ಕಲಬುರಗಿ, ಯಾದಗಿರಿ, ರಾಯಚೂರು, ಉಡುಪಿ, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಗುಡುಗು ಸಹಿತ ಮಳೆಯ ಸಂದರ್ಭದಲ್ಲಿ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ದೆಹಲಿ ವಿಧಾನಸಭೆ, ಮೆಟ್ರೋ ಸ್ಟೇಷನ್‌ʼಗೆ ಬಾಂಬ್ ಬೆದರಿಕೆ: ಭದ್ರತೆ ಹೆಚ್ಚಳ

0

ನವದೆಹಲಿ: ದೆಹಲಿ ವಿಧಾನಸಭೆ ಸಂಕೀರ್ಣ ಹಾಗೂ ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಕಚೇರಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಇಂದು ಬೆಳಗ್ಗೆ ಸುಮಾರು 7:28ರ ಸುಮಾರಿಗೆ ವಿಧಾನಸಭೆ ಸಂಕೀರ್ಣಕ್ಕೆ ಮೊದಲ ಬೆದರಿಕೆ ಸಂದೇಶ ಕಳುಹಿಸಲಾಗಿದೆ.

ಇದರ ಜೊತೆಗೆ ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಅಧಿಕೃತ ಇಮೇಲ್ ಖಾತೆಗೂ ಇದೇ ರೀತಿಯ ಸಂದೇಶ ಬಂದಿದೆ. ಸಂದೇಶದಲ್ಲಿ ವಿಧಾನಸಭಾ ಮೆಟ್ರೋ ನಿಲ್ದಾಣದ ಹೆಸರನ್ನೂ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಬೆಳವಣಿಗೆಯ ಬೆನ್ನಲ್ಲೇ ವಿಧಾನಸಭೆ ಆವರಣ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳಮತ್ತು ಪೊಲೀಸ್ ತಂಡಗಳನ್ನು ತಕ್ಷಣವೇ ನಿಯೋಜಿಸಲಾಗಿದೆ.

ಘಟನೆಯ ಹಿನ್ನೆಲೆ ದೆಹಲಿ ನಗರಾದ್ಯಂತ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಸಾರ್ವಜನಿಕ ಸುರಕ್ಷತೆಗಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಇಮೇಲ್ ಬೆದರಿಕೆಯ ಮೂಲವನ್ನು ಪತ್ತೆಹಚ್ಚಲು ಭದ್ರತಾ ಸಂಸ್ಥೆಗಳು ತನಿಖೆ ಆರಂಭಿಸಿವೆ. ಬೆದರಿಕೆ ನಿಜವಾಗಿದೆಯೇ ಅಥವಾ ವದಂತಿಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.

error: Content is protected !!