Home Blog

ಆಟೋ, ಟ್ಯಾಕ್ಸಿ ಚಾಲಕರಿಗೆ ಮರಾಠಿ ಕಡ್ಡಾಯ ಆದೇಶಕ್ಕೆ 6 ತಿಂಗಳ ತಾತ್ಕಾಲಿಕ ಬ್ರೇಕ್!

0

ಮುಂಬೈ: ಮಹಾರಾಷ್ಟ್ರದಲ್ಲಿ ಎಲ್ಲಾ ಪರವಾನಗಿ ಪಡೆದ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಮರಾಠಿ ಭಾಷೆ ಕಡ್ಡಾಯಗೊಳಿಸುವ ಕುರಿತು ಹೊರಡಿಸಿದ್ದ ಆದೇಶಕ್ಕೆ ರಾಜ್ಯ ಸರ್ಕಾರ ಆರು ತಿಂಗಳ ತಾತ್ಕಾಲಿಕ ತಡೆ ನೀಡಿದೆ.

ಇತ್ತೀಚಿಗಷ್ಟೇ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು ಮೇ 1ರಿಂದ ರಾಜ್ಯಾದ್ಯಂತ ಆಟೋ ಮತ್ತು ಟ್ಯಾಕ್ಸಿ ಚಾಲಕರು ಮರಾಠಿ ಮಾತನಾಡುವುದು, ಓದುವುದು ಹಾಗೂ ಬರೆಯುವುದು ಕಡ್ಡಾಯ ಎಂದು ಘೋಷಿಸಿದ್ದರು. ನಿಯಮ ಪಾಲಿಸದಿದ್ದರೆ ಪರವಾನಗಿ ರದ್ದುಗೊಳಿಸಲಾಗುವುದು ಎಂಬ ಎಚ್ಚರಿಕೆಯೂ ನೀಡಲಾಗಿತ್ತು.

ಆದರೆ ಈ ನಿರ್ಧಾರಕ್ಕೆ ಸಂಬಂಧಿಸಿ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಚರ್ಚೆ ಮುಂದುವರಿದಿದ್ದು, ಶಿವಸೇನಾ ನಾಯಕ ಸಂಜಯ್ ನಿರುಪಮ್ ಅವರು ಸಚಿವ ಪ್ರತಾಪ್ ಸರ್ನಾಯಕ್ ಅವರಿಗೆ ಪತ್ರ ಬರೆದು ಈ ಆದೇಶವನ್ನು ಕನಿಷ್ಠ ಆರು ತಿಂಗಳುಗಳಿಂದ ಒಂದು ವರ್ಷದವರೆಗೆ ಮುಂದೂಡಬೇಕು ಎಂದು ಮನವಿ ಮಾಡಿದ್ದಾರೆ.

ಮರಾಠಿ ಮಹಾರಾಷ್ಟ್ರದ ಗುರುತು ಮತ್ತು ಹೆಮ್ಮೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಭಾಷೆ ಕಲಿಯುವುದು ವ್ಯಕ್ತಿಯ ಸಾಮರ್ಥ್ಯ ಮತ್ತು ಸಮಯದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ತಕ್ಷಣದ ಕಡ್ಡಾಯ ಜಾರಿಗೆ ತರಲಾಗುವುದರಿಂದ ಅಶಾಂತಿ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಚಾಲಕರಿಗೆ ಮರಾಠಿ ಕಲಿಯಲು ಸಮಯ ನೀಡಬೇಕು. ಪ್ರೀತಿಯಿಂದ ಕಲಿಸಿದ ಭಾಷೆ ದೀರ್ಘಕಾಲ ಉಳಿಯುತ್ತದೆ, ಭಯದಿಂದ ಜಾರಿಗೊಳಿಸಿದ ಭಾಷೆ ಅಸಮಾಧಾನಕ್ಕೆ ಕಾರಣವಾಗಬಹುದು ಎಂದು ಸಂಜಯ್ ನಿರುಪಮ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಈ ನಡುವೆ ಸರ್ಕಾರದ ಮೂಲ ಆದೇಶದಲ್ಲಿ ರಾಜ್ಯದ ಎಲ್ಲಾ ಆಟೋ ಮತ್ತು ಟ್ಯಾಕ್ಸಿ ಚಾಲಕರು ಮರಾಠಿ ಭಾಷೆಯಲ್ಲಿ ಸಂವಹನ ನಡೆಸಲು ತಿಳಿದಿರಬೇಕು ಎಂಬ ನಿಯಮವನ್ನು ಕಡ್ಡಾಯಗೊಳಿಸಲಾಗಿತ್ತು.

ಸದ್ಯ ಸರ್ಕಾರದ ಈ ತಾತ್ಕಾಲಿಕ ತೀರ್ಮಾನದಿಂದ ನಿಯಮ ಜಾರಿಗೆ ಸಂಬಂಧಿಸಿದ ಮುಂದಿನ ಹೆಜ್ಜೆ ಏನು ಎಂಬ ಕುತೂಹಲ ಮೂಡಿದೆ.

ಆದಾಯ ಹೆಚ್ಚಿಸಿಕೊಳ್ಳಲು ಚಾಣಕ್ಯನ 4 ಪ್ರಮುಖ ಸಲಹೆಗಳು: ಈ ಕೆಟ್ಟ ಅಭ್ಯಾಸಗಳನ್ನು ಬಿಟ್ಟುಬಿಡಿ ಎಂದ ಮಹಾ ನೀತಿ

0

ಇಂದಿನ ಕಾಲದಲ್ಲಿ ಪ್ರತಿಯೊಬ್ಬರೂ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು, ಶ್ರೀಮಂತಿಕೆಯನ್ನು ಗಳಿಸಬೇಕು ಎಂದು ಬಯಸುತ್ತಾರೆ.

ಆದರೆ ಅದಕ್ಕೆ ಸರಿಯಾದ ಮಾರ್ಗ ಯಾವುದು ಎಂಬುದೇ ಅನೇಕರಿಗೆ ಸ್ಪಷ್ಟವಾಗಿಲ್ಲ. ಆಚಾರ್ಯ ಚಾಣಕ್ಯರ ಪ್ರಕಾರ, ಆದಾಯ ಹೆಚ್ಚಿಸಲು ಕೇವಲ ದುಡಿಮೆ ಸಾಕಾಗುವುದಿಲ್ಲ; ಜೊತೆಗೆ ನಮ್ಮ ಆಲೋಚನೆ ಹಾಗೂ ದೈನಂದಿನ ಅಭ್ಯಾಸಗಳಲ್ಲಿ ಬದಲಾವಣೆ ಅಗತ್ಯವಾಗಿದೆ.

ಚಾಣಕ್ಯ ನೀತಿಯ ಪ್ರಕಾರ, ಕೆಲವು ಕೆಟ್ಟ ಅಭ್ಯಾಸಗಳನ್ನು ತ್ಯಜಿಸದಿದ್ದರೆ ಎಷ್ಟೇ ಹಣ ಗಳಿಸಿದರೂ ಅದು ಉಳಿಯುವುದಿಲ್ಲ. ಆದಾಯವನ್ನು ಹೆಚ್ಚಿಸಲು ಮೊದಲು ಈ ಅಭ್ಯಾಸಗಳನ್ನು ಬದಲಾಯಿಸಬೇಕು ಎಂದು ಅವರು ಹೇಳಿದ್ದಾರೆ.

1. ಸಮಯ ವ್ಯರ್ಥ ಮಾಡುವ ಅಭ್ಯಾಸವನ್ನು ಬಿಡಿ:
ಸಮಯವೇ ದೊಡ್ಡ ಸಂಪತ್ತು ಎಂದು ಚಾಣಕ್ಯರು ಹೇಳಿದ್ದಾರೆ. ಸಮಯವನ್ನು ವ್ಯರ್ಥ ಮಾಡುವವರು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ. ಸಮಯವನ್ನು ಸರಿಯಾಗಿ ಬಳಸಿದರೆ ಉತ್ಪಾದಕತೆ ಹೆಚ್ಚಾಗಿ ಆದಾಯವೂ ಸ್ವಯಂಚಾಲಿತವಾಗಿ ಹೆಚ್ಚಾಗುತ್ತದೆ.

2. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ:
ಹಣವನ್ನು ಉಳಿಸುವುದು ಹೇಗೆ ಗಳಿಸುವಷ್ಟೇ ಮುಖ್ಯ. ಅನಗತ್ಯ ವಸ್ತುಗಳಿಗೆ ಹಣ ಖರ್ಚು ಮಾಡುವ ಬದಲು ಸರಿಯಾದ ಹೂಡಿಕೆ ಕಲಿಯಬೇಕು. ಇದು ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸುತ್ತದೆ.

3. ಸೋಮಾರಿತನವನ್ನು ತ್ಯಜಿಸಿ:
ಸೋಮಾರಿತನವೇ ಯಶಸ್ಸಿನ ದೊಡ್ಡ ಅಡ್ಡಿ ಎಂದು ಚಾಣಕ್ಯರು ಎಚ್ಚರಿಸಿದ್ದಾರೆ. ಕಠಿಣ ಪರಿಶ್ರಮ ಮತ್ತು ನಿಯಮಿತ ದಿನಚರಿಯು ಆದಾಯ ಹೆಚ್ಚಿಸುವ ಪ್ರಮುಖ ಅಂಶಗಳು.

4. ಕೆಟ್ಟ ಸಹವಾಸದಿಂದ ದೂರವಿರಿ:
ನೀವು ಬೆರೆಯುವ ಜನರ ಪ್ರಭಾವ ನಿಮ್ಮ ಆಲೋಚನೆ ಮತ್ತು ಜೀವನಶೈಲಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಸಕಾರಾತ್ಮಕ ಹಾಗೂ ದುಡಿಯುವ ಮನೋಭಾವದವರೊಂದಿಗೆ ಇದ್ದರೆ ಯಶಸ್ಸಿನ ಸಾಧ್ಯತೆ ಹೆಚ್ಚುತ್ತದೆ.

ಚಾಣಕ್ಯನ ಈ ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಆದಾಯ ಹೆಚ್ಚಿಸುವುದಷ್ಟೇ ಅಲ್ಲದೆ ಆರ್ಥಿಕವಾಗಿ ಸದೃಢ ಜೀವನವನ್ನೂ ನಿರ್ಮಿಸಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

 

ಮುಂಬೈನಲ್ಲಿ ಹೃದಯವಿದ್ರಾವಕ ಘಟನೆ: ಫುಡ್‌ ಪಾಯಿಸನ್‌ನಿಂದ ಒಂದೇ ಕುಟುಂಬದ ನಾಲ್ವರು ಸಾವು!

0

ಮುಂಬೈ: ಮುಂಬೈನ ಪೈಧೋನಿ ಪ್ರದೇಶದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಒಂದೇ ಕುಟುಂಬದ ನಾಲ್ವರು ಫುಡ್‌ ಪಾಯಿಸನ್‌ನಿಂದ ಸಾವನ್ನಪ್ಪಿದ್ದಾರೆ.

ಮೃತರನ್ನು ಅಬ್ದುಲ್ಲಾ ದೋಕಾಡಿಯಾ (40), ನಸ್ರೀನ್ ದೋಕಾಡಿಯಾ (35) ಹಾಗೂ ಅವರ ಪುತ್ರಿಯರಾದ ಆಯಿಷಾ (16) ಮತ್ತು ಜೈನಾಬ್ (13) ಎಂದು ಗುರುತಿಸಲಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಏಪ್ರಿಲ್ 25ರ ರಾತ್ರಿ ಸುಮಾರು 10:30ಕ್ಕೆ ಕುಟುಂಬದ ಸದಸ್ಯರು ಸಂಬಂಧಿಕರೊಂದಿಗೆ ಒಟ್ಟಿಗೆ ಬಿರಿಯಾನಿ ಸೇವಿಸಿದ್ದರು. ಬಳಿಕ ಸಂಬಂಧಿಕರು ತಮ್ಮ ಮನೆಗಳಿಗೆ ತೆರಳಿದ್ದು, ಕುಟುಂಬದವರು ಮಾತ್ರ ಮನೆಯಲ್ಲಿ ಉಳಿದಿದ್ದರು.

ನಡುರಾತ್ರಿ ಸುಮಾರು 1:00 ರಿಂದ 1:30ರ ನಡುವೆ ನಾಲ್ವರು ಸದಸ್ಯರು ಕಲ್ಲಂಗಡಿ ಹಣ್ಣು ಸೇವಿಸಿದ್ದಾಗಿ ತಿಳಿದುಬಂದಿದೆ. ನಂತರ ಮುಂಜಾನೆ 5:30 ರಿಂದ 6:00ರ ನಡುವೆ ಅವರಿಗೆ ತೀವ್ರ ವಾಂತಿ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡಿದೆ.

ಆರಂಭದಲ್ಲಿ ಕುಟುಂಬ ವೈದ್ಯರಿಂದ ಚಿಕಿತ್ಸೆ ನೀಡಲಾಗಿದ್ದರೂ, ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ತಕ್ಷಣ ಮುಂಬೈನ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಾಲ್ವರೂ ಮೃತಪಟ್ಟಿದ್ದಾರೆ.

ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸಾವಿನ ನಿಖರ ಕಾರಣ ವರದಿ ಬಂದ ಬಳಿಕ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಈ ಸಂಬಂಧ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ.

ಈ ದುರಂತ ಘಟನೆಯಿಂದ ಸ್ಥಳೀಯರಲ್ಲಿ ಆಘಾತ ವ್ಯಕ್ತವಾಗಿದ್ದು, ಫುಡ್ ಪಾಯಿಸನ್ ಸಾಧ್ಯತೆ ಬಗ್ಗೆ ತನಿಖೆ ಮುಂದುವರಿದಿದೆ.

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಉಗ್ರ ಶಾರಿಕ್‌ಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ

ಬೆಂಗಳೂರು:  ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಮೊಹಮ್ಮದ್ ಶಾರಿಕ್‌ಗೆ ಎನ್‌ಐಎ ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ನ್ಯಾಯಾಲಯವು ಸೆಕ್ಷನ್ 121A, 122, 326 ಹಾಗೂ ಯುಎಪಿಎ ಸೇರಿದಂತೆ ಹಲವು ಗಂಭೀರ ವಿಧಿಗಳ ಅಡಿಯಲ್ಲಿ ದೋಷಿ ಎಂದು ತೀರ್ಮಾನಿಸಿ, 10 ವರ್ಷ ಜೈಲು ಶಿಕ್ಷೆ ಜೊತೆಗೆ 10 ಸಾವಿರ ರೂಪಾಯಿ ದಂಡ ವಿಧಿಸಿದೆ.

ಶಿಕ್ಷೆ ಘೋಷಣೆಯ ವೇಳೆ ಶಾರಿಕ್ ಕೋರ್ಟ್ ಮುಂದೆ ಮನವಿ ಮಾಡಿಕೊಂಡಿದ್ದು, “ನನಗೆ ಒಬ್ಬ ಮಗಳಿದ್ದಾಳೆ, ಕುಟುಂಬದ ಏಕೈಕ ದುಡಿಯುವವನು ನಾನು” ಎಂದು ಹೇಳಿ ಶಿಕ್ಷೆ ಕಡಿಮೆ ಮಾಡುವಂತೆ ವಿನಂತಿಸಿದ್ದಾನೆ. ಜೊತೆಗೆ, ಆರೋಗ್ಯ ಸಮಸ್ಯೆ ಮತ್ತು ಕುಟುಂಬ ಭೇಟಿಗೆ ಅವಕಾಶ ಇಲ್ಲದಿರುವ ಕಾರಣವನ್ನು ಉಲ್ಲೇಖಿಸಿ ತನ್ನನ್ನು ಶಿವಮೊಗ್ಗ ಜೈಲಿಗೆ ಸ್ಥಳಾಂತರ ಮಾಡುವಂತೆ ಸಹ ಮನವಿ ಮಾಡಿದ್ದಾನೆ.

ಆದರೆ, ಈ ಮನವಿಯನ್ನು ತಿರಸ್ಕರಿಸಿದ ನ್ಯಾಯಾಧೀಶರು, ಬೆಂಗಳೂರಿನ ಜೈಲಿನಲ್ಲಿ ಅಗತ್ಯ ಆರೋಗ್ಯ ಸೌಲಭ್ಯಗಳಿದ್ದು, ಶಿವಮೊಗ್ಗಕ್ಕಿಂತ ಉತ್ತಮ ವ್ಯವಸ್ಥೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮೂರು ತಿಂಗಳ ಹಿಂದೆ ಶಾರಿಕ್ ತಪ್ಪೊಪ್ಪಿಗೆ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ವೇಗವಾಗಿ ಮುಂದುವರಿದಿದ್ದು, ಇಂದು ಅಂತಿಮವಾಗಿ ಶಿಕ್ಷೆ ಪ್ರಕಟಿಸಲಾಗಿದೆ ಎಂದು ಎನ್‌ಐಎ ಕೋರ್ಟ್ ತಿಳಿಸಿದೆ.

ಗಿಡಗಳ ಆರೋಗ್ಯಕ್ಕೆ ಬೆಳಗಿನ ನೀರು ಅತ್ಯುತ್ತಮ: ತಜ್ಞರಿಂದ ಮಹತ್ವದ ಸಲಹೆ!

0

ಬೇಸಿಗೆಯ ತೀವ್ರ ಬಿಸಿಲಿನಲ್ಲಿ ಮನುಷ್ಯರು ಮಾತ್ರವಲ್ಲ, ಮನೆಯಲ್ಲಿರುವ ಗಿಡಗಳೂ ಸಹ ತೀವ್ರ ತಾಪಕ್ಕೆ ಬಸವಳಿದು ಹೋಗುತ್ತಿವೆ. ಇಂತಹ ಸಮಯದಲ್ಲಿ ಗಿಡಗಳನ್ನು ಉಳಿಸಲು ಹಲವರು ಬೆಳಗ್ಗೆ ಹಾಗೂ ಸಂಜೆ ಹೆಚ್ಚು ನೀರು ಹಾಕುವ ಅಭ್ಯಾಸ ಹೊಂದಿರುತ್ತಾರೆ.

ಆದರೆ ಅತಿಯಾದ ನೀರು ಹಾಕುವುದು ಗಿಡಗಳಿಗೆ ಹಾನಿಕಾರಕವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ತಜ್ಞರ ಪ್ರಕಾರ, ಅತಿಯಾಗಿ ನೀರು ಹಾಕಿದರೆ ಸಸ್ಯಗಳ ಬೇರುಗಳು ಕೊಳೆಯುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಸರಿಯಾದ ಸಮಯದಲ್ಲಿ ನೀರು ಹಾಕುವುದು ಅತ್ಯಂತ ಮುಖ್ಯವಾಗಿದೆ ಎಂದು ಸಲಹೆ ನೀಡಲಾಗಿದೆ.

ಬೆಳಗ್ಗೆ ನೀರು ಹಾಕಿದರೆ ಲಾಭಗಳು:
ಬೆಳಗಿನ ಜಾವ ತಾಪಮಾನ ಕಡಿಮೆಯಾಗಿರುವುದರಿಂದ ನೀರು ನಿಧಾನವಾಗಿ ಮಣ್ಣಿನಲ್ಲಿ ಇಂಗಿ ಬೇರುಗಳಿಗೆ ತಲುಪುತ್ತದೆ. ಇದರಿಂದ ಗಿಡಗಳು ದಿನವಿಡೀ ತೇವಾಂಶವನ್ನು ಪಡೆದು ಬಿಸಿಲಿನ ತೀವ್ರತೆಯನ್ನು ಸುಲಭವಾಗಿ ತಾಳಿಕೊಳ್ಳುತ್ತವೆ. ಜೊತೆಗೆ ಬೆಳಗ್ಗೆ ಹಾಕಿದ ನೀರು ಬೇಗ ಒಣಗುವುದರಿಂದ ಶಿಲೀಂಧ್ರ ಮತ್ತು ರೋಗಗಳ ಅಪಾಯವೂ ಕಡಿಮೆಯಾಗುತ್ತದೆ.

ಸಂಜೆ ನೀರು ಹಾಕಿದರೆ ಪರಿಣಾಮ:
ಸಂಜೆ ಸಮಯದಲ್ಲಿ ನೀರು ಹಾಕಿದರೆ ತೇವಾಂಶ ರಾತ್ರಿಯಿಡೀ ಉಳಿಯುತ್ತದೆ. ಇದರಿಂದ ಶಿಲೀಂಧ್ರ ಸೋಂಕು ಹಾಗೂ ಕೀಟಗಳ ಬೆಳವಣಿಗೆ ಹೆಚ್ಚುವ ಅಪಾಯವಿದೆ ಎಂದು ತಜ್ಞರು ತಿಳಿಸಿದ್ದಾರೆ.

ಒಟ್ಟಿನಲ್ಲಿ, ಬೇಸಿಗೆಯಲ್ಲಿ ಗಿಡಗಳ ಆರೋಗ್ಯ ಕಾಪಾಡಲು ಬೆಳಗ್ಗೆ ನೀರು ಹಾಕುವುದು ಅತ್ಯಂತ ಸೂಕ್ತ ವಿಧಾನ ಎಂದು ತಜ್ಞರು ಸಲಹೆ ನೀಡಿದ್ದಾರೆ. ತೀವ್ರ ಬಿಸಿಲಿನ ಸಂದರ್ಭಗಳಲ್ಲಿ ಮಾತ್ರ ಸಂಜೆ ಸ್ವಲ್ಪ ಪ್ರಮಾಣದಲ್ಲಿ ನೀರು ಚಿಮುಕಿಸಬಹುದು ಎಂದು ಸೂಚಿಸಲಾಗಿದೆ.

ಬೆಂಗಳೂರು ನಾಗರಿಕರಿಗೆ ಸಿಹಿ ಸುದ್ದಿ: ಇ-ಖಾತಾ ಇನ್ಮುಂದೆ ಆನ್‌ಲೈನ್ ಡೌನ್‌ಲೋಡ್ ಸೌಲಭ್ಯ!

ಬೆಂಗಳೂರು: ಬೆಂಗಳೂರು ಮಹಾನಗರ ಆಡಳಿತ ಸಂಸ್ಥೆ (ಜಿಬಿಎ) ಇ-ಖಾತಾ ಸೇವೆಗೆ ಸಂಬಂಧಿಸಿದಂತೆ ನಾಗರಿಕರಿಗೆ ಸಿಹಿ ಸುದ್ದಿ ನೀಡಿದೆ.

ಇನ್ಮುಂದೆ ಇ-ಖಾತಾ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಾದ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.

ಹೊಸ ವ್ಯವಸ್ಥೆಯ ಪ್ರಕಾರ, ನಾಗರಿಕರು ತಮ್ಮ ಮನೆಯಲ್ಲಿಯೇ ಕುಳಿತು ಆನ್‌ಲೈನ್ ಮೂಲಕ ಇ-ಖಾತಾ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಆಸ್ತಿ ತೆರಿಗೆ ಐಡಿ ಬಳಸಿ ಈ ಸೇವೆಯನ್ನು ಸುಲಭವಾಗಿ ಪಡೆಯುವ ವ್ಯವಸ್ಥೆಯನ್ನು ಜಿಬಿಎ ಜಾರಿಗೆ ತಂದಿದೆ.

ಕಳೆದ ಎರಡು ದಿನಗಳ ಹಿಂದೆ ಈ ಆನ್‌ಲೈನ್ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದ್ದು, ಸುಮಾರು 13 ಲಕ್ಷ ಇ-ಖಾತಾಗಳನ್ನು ತಕ್ಷಣವೇ ನಾಗರಿಕರಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶ ಹೊಂದಿದೆ. ಇದರಿಂದ ಆಡಳಿತಾತ್ಮಕ ವಿಳಂಬ ಹಾಗೂ ಕಚೇರಿ ಅಡೆತಡೆಗಳನ್ನು ಕಡಿಮೆ ಮಾಡುವ ಗುರಿ ಇಡಲಾಗಿದೆ.

ಇ-ಖಾತಾ ಡೌನ್‌ಲೋಡ್ ಮಾಡುವ ವಿಧಾನ:

  1. https://bbmpeaasthi.karnataka.gov.in/ ವೆಬ್‌ಸೈಟ್‌ಗೆ ಭೇಟಿ ನೀಡಬೇಕು
  2. ಮೊಬೈಲ್ ಸಂಖ್ಯೆ ಮತ್ತು OTP ಮೂಲಕ ಲಾಗಿನ್ ಮಾಡಬೇಕು
  3. SAS ಅಪ್ಲಿಕೇಶನ್ ಅಥವಾ ಆಸ್ತಿ ತೆರಿಗೆ ಐಡಿ ನಮೂದಿಸಬೇಕು
  4. ತಕ್ಷಣವೇ ಇ-ಖಾತಾ ಡೌನ್‌ಲೋಡ್ ಮಾಡಿಕೊಳ್ಳಬಹುದು

ಜಿಬಿಎ ಪ್ರಕಾರ, ಈ ವ್ಯವಸ್ಥೆಯಿಂದ ಮಾಲೀಕರ ಹೆಸರನ್ನು ಹುಡುಕುವ ಸಂಕೀರ್ಣ ಪ್ರಕ್ರಿಯೆ ಕಡಿಮೆಯಾಗಲಿದೆ. ಯಾವುದೇ ಸಮಯದಲ್ಲೂ ಆನ್‌ಲೈನ್ ಮೂಲಕ ಸೇವೆ ಲಭ್ಯವಾಗಲಿದೆ.

ಅಲ್ಲದೆ, ನೋಂದಾಯಿತ ಮೊಬೈಲ್ ಸಂಖ್ಯೆಗೆ SMS ಅಥವಾ WhatsApp ಮೂಲಕ ಡೌನ್‌ಲೋಡ್ ಲಿಂಕ್ ಕಳುಹಿಸಲಾಗುತ್ತದೆ. ನಗರ ಪಾಲಿಕೆ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.

ಇದೇ ವೇಳೆ ಅಧಿಕಾರಿಗಳು ಮಧ್ಯವರ್ತಿಗಳ ಸಹಾಯವನ್ನು ತಪ್ಪಿಸಿ, ನಾಗರಿಕರು ಕೇವಲ ಅಧಿಕೃತ ಆನ್‌ಲೈನ್ ವ್ಯವಸ್ಥೆಯನ್ನೇ ಬಳಸುವಂತೆ ಮನವಿ ಮಾಡಿದ್ದಾರೆ.

ವಾಷಿಂಗ್ ಮೆಷಿನ್ ಬಳಸುವಾಗ ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವು! ಕೊಲೆ ಶಂಕೆ?

ಬೆಂಗಳೂರು: ಬೆಂಗಳೂರು ಉತ್ತರ ತಾಲೂಕಿನ ಗೌಡಹಳ್ಳಿಯಲ್ಲಿ ಮಹಿಳೆಯೊಬ್ಬರು ವಾಷಿಂಗ್ ಮೆಷಿನ್ ಬಳಸುವಾಗ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಈ ಸಾವು ಕೇವಲ ಆಕಸ್ಮಿಕವೋ ಅಥವಾ ಹಿಂದೆ ಯಾವುದಾದರೂ ಸಂಚು ಇದ್ದಿರಬಹುದೋ ಎಂಬ ಅನುಮಾನಗಳು ಈಗ ಗಂಭೀರವಾಗಿವೆ.

ಮೃತರನ್ನು ಸುಜಾತ (30) ಎಂದು ಗುರುತಿಸಲಾಗಿದೆ. ತುಮಕೂರಿನ ಹೆಗ್ಗೆರೆ ನಿವಾಸಿಗಳಾದ ಪಾಂಡುರಂಗಯ್ಯ ಮತ್ತು ಭಾಗ್ಯಮ್ಮ ದಂಪತಿಯ ನಾಲ್ಕನೇ ಮಗಳಾದ ಸುಜಾತ, ಸುಮಾರು 10 ವರ್ಷಗಳ ಹಿಂದೆ ರಿಯಲ್ ಎಸ್ಟೇಟ್ ಉದ್ಯಮಿ ಚೇತನ್ ಅವರನ್ನು ವಿವಾಹವಾಗಿದ್ದರು.

ಪೊಲೀಸ್ ಮೂಲಗಳ ಪ್ರಕಾರ, ಇಂದು ಬೆಳಗ್ಗೆ 7:30ರ ಸುಮಾರಿಗೆ ವಾಷಿಂಗ್ ಮೆಷಿನ್ ಬಳಸುವಾಗ ಸುಜಾತ ಅವರಿಗೆ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ತಕ್ಷಣ ಅವರನ್ನು ವಿಪಿ ಮಾಗ್ನಸ್ ಆಸ್ಪತ್ರೆಗೆ ಕರೆದೊಯ್ಯಲಾದರೂ, ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಆದರೆ ಈ ಸಾವು ಬಗ್ಗೆ ಮೃತರ ಪೋಷಕರು ಗಂಭೀರ ಶಂಕೆ ವ್ಯಕ್ತಪಡಿಸಿದ್ದಾರೆ. ಮಗಳ ಸಾವಿನ ಹಿಂದೆ ಅಳಿಯ ಚೇತನ್ ಕೈವಾಡ ಇರಬಹುದೆಂದು ಅವರು ಆರೋಪಿಸಿದ್ದಾರೆ. ಮದುವೆಯಾದ ನಂತರ ದಂಪತಿಗಳ ನಡುವೆ ನಿರಂತರ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದ್ದು, ಸುಜಾತ ಒಂದು ತಿಂಗಳ ಹಿಂದೆ ತವರು ಮನೆಗೆ ತೆರಳಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ.

ಇದಾದ ನಂತರ ಚೇತನ್ ಹಾಗೂ ಅವರ ತಾಯಿ ಸುಜಾತ ಅವರನ್ನು ಮನವೊಲಿಸಿ ಕೇವಲ ಒಂದು ವಾರದ ಹಿಂದೆ ಗೌಡಹಳ್ಳಿಗೆ ಕರೆತಂದಿದ್ದರು ಎಂದು ಹೇಳಲಾಗುತ್ತಿದೆ. ಮನೆಗೆ ಬಂದ ಕೆಲವೇ ದಿನಗಳಲ್ಲಿ ಇಂತಹ ಘಟನೆ ಸಂಭವಿಸಿರುವುದು ಕುಟುಂಬದಲ್ಲಿ ಅನುಮಾನ ಹೆಚ್ಚಿಸಿದೆ.

ಸದ್ಯ ಮೃತದೇಹವನ್ನು ಹೆಚ್ಚಿನ ತನಿಖೆ ಮತ್ತು ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವರದಿ ಬಂದ ನಂತರವೇ ಇದು ಆಕಸ್ಮಿಕ ಸಾವು ಅಥವಾ ಬೇರೆ ಕಾರಣವೋ ಎಂಬುದು ಸ್ಪಷ್ಟವಾಗಲಿದೆ ಎಂದು ತಿಳಿಸಿದ್ದಾರೆ.

ಉಗ್ರರಾದ ಉಮರ್ ಖಾಲಿದ್, ಶಾರ್ಜಿಲ್ ಇಮಾಮ್ ಕುರಿತ ಪುಸ್ತಕ ಬಿಡುಗಡೆಗೆ ವಿರೋಧ: ಎನ್ ರವಿಕುಮಾರ್

ಬೆಂಗಳೂರು: ದೆಹಲಿ ಗಲಭೆ ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ಬಂಧಿತನಾಗಿರುವ ಉಮರ್ ಖಾಲಿದ್ ಹಾಗೂ ಶಾರ್ಜಿಲ್ ಇಮಾಮ್ ಕುರಿತ ಪುಸ್ತಕ ಬಿಡುಗಡೆಗೆ ಭಾರತೀಯ ಜನತಾ ಪಾರ್ಟಿ ವಿರೋಧವಿದೆ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಇದಕ್ಕೆ ಅವಕಾಶ ಕೊಡಬಾರದು.

ಒಂದು ವೇಳೆ ಅವಕಾಶ ನೀಡಿದರೆ ಬಿಜೆಪಿ ಖಂಡಿಸಲಿದೆ ಎಂದು ವಿಧಾನ ಪರಿಷತ್ತಿನಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್ ರವಿಕುಮಾರ್ ಹೇಳಿದ್ದಾರೆ. ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಯೋತ್ಪಾದಕರ ಕುರಿತು ಪುಸ್ತಕ ಬಿಡುಗಡೆಗೆ ಸಿದ್ಧತೆ ನಡೆದಿದೆ.

2020ರ ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆ ಸಂಬಂಧ  ಸುಪ್ರೀಂ ಕೋರ್ಟ್ ಇವರಿಬ್ಬರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಶಾರ್ಜೀಲ್ ಇಮಾಮ್ ನನ್ನು ಸಿಎಎ ಮತ್ತು ಎನ್‍ಆರ್‍ಸಿ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಮಾಡಿದ ಭಾಷಣಗಳಿಗಾಗಿ ಬಂಧಿಸಲಾಗಿದೆ. ಎನ್ ಆರ್‍ಸಿ ಮತ್ತು ಸಿಎಎ ವಿರುದ್ಧ ಹೋರಾಟದ ಸಂದರ್ಭ ಬಾಂಬ್ ಸ್ಫೋಟದಲ್ಲಿ

53 ಜನರ ಹತ್ಯೆಯಾಗಿತ್ತು. ಸುಮಾರು 700 ಜನರು ಗಾಯಗೊಂಡಿದ್ದರು. ಈಗ ಇವರ ಬಗ್ಗೆಯೇ ಪುಸ್ತಕ ಬಿಡುಗಡೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಇವರಿಬ್ಬರ ಜೊತೆಗೆ 18 ಜನರನ್ನು ಬಂಧಿಸಲಾಗಿತ್ತು. 11 ಜನರಿಗೆ ಜಾಮೀನು ಸಿಕ್ಕಿದೆ. ಇನ್ನೂ 7 ಆರೋಪಿಗಳಿಗೆ ಜಾಮೀನು ಸಿಕ್ಕಿಲ್ಲ. ಇಂತಹ ಭಯೋತ್ಪಾದಕ ಹಾಗೂ ದೇಶದ್ರೋಹಿಗಳನ್ನು ಕುರಿತ ಪುಸ್ತಕ ಬಿಡುಗಡೆ ಮಾಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.

ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್‍ನಲ್ಲಿ ನಡೆಯುತ್ತಿರುವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಟ ಪ್ರಕಾಶ್ ರೈ, ಇತಿಹಾಸಕಾರರಾದ ರಾಮಚಂದ್ರಗುಹಾ ಹಾಗೂ ಜಾನಕಿ ನಾಯರ್ ಅವರು ಭಾಗವಹಿಸುತ್ತಿದ್ದಾರೆ. ಇದಕ್ಕೆ ಯಾವುದೇ ರೀತಿ ಅವಕಾಶ ಸಿಗಬಾರದು. ಸರ್ಕಾರ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹರಿಹರ ಪಂಚಮಸಾಲಿ ಪೀಠದಲ್ಲಿ ಹೈಡ್ರಾಮಾ: ಸ್ವಾಮೀಜಿ ಬೆಂಬಲಿಗರಿಂದ ಟ್ರಸ್ಟಿ ಬೆಂಬಲಿಗರ ಮೇಲೆ ಹಲ್ಲೆ

ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದ ಆವರಣದಲ್ಲಿ ಲೆಕ್ಕ ಮಂಡನೆ ಸಂದರ್ಭದಲ್ಲಿ ಭಾರೀ ಗಲಾಟೆ ಉಂಟಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಪೀಠದ ಟ್ರಸ್ಟ್‌ನ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಲೆಕ್ಕ ಮಂಡಿಸುತ್ತಿದ್ದ ವೇಳೆ, ಸ್ವಾಮೀಜಿ ಬೆಂಬಲಿಗರು ಮತ್ತು ಟ್ರಸ್ಟ್ ಬೆಂಬಲಿಗರ ನಡುವೆ ವಾಗ್ವಾದ ಶುರುವಾಗಿದೆ. ಈ ವೇಳೆ ಪರಸ್ಪರ ನಿಂದನೆ ನಡೆಯುತ್ತಿದ್ದಂತೆಯೇ ಗಲಾಟೆ ತೀವ್ರಗೊಂಡು, ಸ್ವಾಮೀಜಿ ಬೆಂಬಲಿಗರು ವಿಜಯನಗರ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ ಶಿವನಗೌಡ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಘಟನೆ ತೀವ್ರವಾಗುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಗಲಾಟೆ, ಧಿಕ್ಕಾರ ಘೋಷಣೆಗಳ ನಡುವೆಯೇ ಉಮಾಪತಿ ಲೆಕ್ಕ ಮಂಡನೆ ಮುಂದುವರಿಸಿದರು.

2008ರಿಂದ 2026ರವರೆಗಿನ ಲೆಕ್ಕಾಚಾರವನ್ನು ಬಹಿರಂಗಪಡಿಸಿದ ಅವರು, ಭಕ್ತರಿಂದ ಬಂದ ಕಾಣಿಕೆ ಹಾಗೂ ಸರ್ಕಾರದ ಅನುದಾನ ಸೇರಿ ಒಟ್ಟು 27 ಕೋಟಿ 61 ಲಕ್ಷ 51 ಸಾವಿರ 518 ರೂಪಾಯಿ ಜಮಾ ಆಗಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಮಠದ ಅಭಿವೃದ್ಧಿ ಹಾದಿ ಕುರಿತು ಮಾತನಾಡಿದ ಉಮಾಪತಿ, “ಮಾಜಿ ಸಚಿವ ದಿವಂಗತ ಶಿವಪ್ಪ ಅವರು ಪಡೆಯಲು ಯತ್ನಿಸಿದ್ದ ಜಮೀನನ್ನು ಮಠವೇ ಹಣ ನೀಡಿ ಖರೀದಿಸಿದೆ. ಆದರೆ ಅದನ್ನು ದಾನವಾಗಿ ನೀಡಿದ್ದೇವೆ ಎಂದು ಅವರು ಹೇಳಿಕೊಳ್ಳುತ್ತಿದ್ದಾರೆ,” ಎಂದು ಸ್ಪಷ್ಟಪಡಿಸಿದರು.

ಲೆಕ್ಕ ಕೇಳುವ ಅಭಿಯಾನ ಕುರಿತು ಕಿಡಿಕಾರಿದ ಅವರು, “ಇಷ್ಟು ವರ್ಷಗಳ ಕಾಲ ಲೆಕ್ಕ ಕೇಳದವರು ಈಗ ಕೇಳುತ್ತಿದ್ದಾರೆ. ನಾವು ಪ್ರತಿವರ್ಷವೂ ಲೆಕ್ಕ ನೀಡುತ್ತಿದ್ದೇವೆ. ಇದು ಸ್ವಾಮೀಜಿಗಳ ತಪ್ಪನ್ನು ಮರೆಮಾಚಿಸುವ ಪ್ರಯತ್ನ,” ಎಂದು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

ನಿಜವಾದ ತನಿಖೆ ಮಾಡಿ, ಅಧಿಕಾರ ದುರ್ಬಳಕೆ ಬೇಡ: ಪೊಲೀಸರ ನಡೆಗೆ ಹೈಕೋರ್ಟ್ ತೀವ್ರ ಆಕ್ಷೇಪ

ಬೆಂಗಳೂರು: ರಾಜ್ಯ ಪೊಲೀಸರ ಕಾರ್ಯವೈಖರಿಯ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. “ನಿಜವಾದ ಅಪರಾಧಗಳ ತನಿಖೆಗಿಂತ ಜನರನ್ನು ಅಲೆದಾಡಿಸುವ ಕೆಲಸಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ” ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಕಿಡಿಕಾರಿದೆ.

ಚನ್ನಪಟ್ಟಣದ ಎಂ.ಕೆ. ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2024ರಲ್ಲಿ ಎರಡು ಹಸುಗಳು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ, ಎರಡು ವರ್ಷಗಳ ಬಳಿಕ 2026ರಲ್ಲಿ ಪೊಲೀಸರು ದೂರುದಾರರ ನೆರೆಮನೆಯವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಈ ಎಫ್‌ಐಆರ್ ರದ್ದುಪಡಿಸುವಂತೆ ಆರೋಪಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಹಸುಗಳು ಇನ್ನೂ ಪತ್ತೆಯಾಗಿಲ್ಲವೆಂಬ ಕಾರಣಕ್ಕೆ ಇಡೀ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಪ್ರಶ್ನಿಸಿದ ನ್ಯಾಯಾಲಯ, ಸಾಮಾನ್ಯವಾಗಿ ಜನರು ದೂರು ದಾಖಲಿಸಲು ಪೊಲೀಸ್ ಠಾಣೆಗೆ ಅನೇಕ ಬಾರಿ ಸುತ್ತಾಡಬೇಕಾಗುತ್ತದೆ. ಆದರೂ ಎಫ್‌ಐಆರ್ ದಾಖಲಿಸಲು ಪೊಲೀಸರು ಹಿಂಜರಿಯುತ್ತಾರೆ. ಆದರೆ ಎರಡು ವರ್ಷ ಹಳೆಯ ಪ್ರಕರಣದಲ್ಲಿ ತಕ್ಷಣವೇ ಕುಟುಂಬದ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನಿನ ದುರ್ಬಳಕೆ ಎಂದು ತರಾಟೆಗೆ ತೆಗೆದುಕೊಂಡಿತು.

ರಾಜ್ಯ ಸರ್ಕಾರ ಹಾಗೂ ಪೊಲೀಸರು ಹಸುಗಳ ವಿಚಾರದಲ್ಲಿ ಮಾತ್ರ ಸೀಮಿತವಾಗದೇ, ಸಮಾಜದಲ್ಲಿ ನಡೆಯುತ್ತಿರುವ ಗಂಭೀರ ಅಪರಾಧಗಳತ್ತ ಗಮನ ಹರಿಸಬೇಕು. ಜನರನ್ನು ಅನಾವಶ್ಯಕವಾಗಿ ಅಲೆದಾಡಿಸುವ ಪ್ರವೃತ್ತಿ ನಿಲ್ಲಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬದ ವಿರುದ್ಧ ನಡೆಯುತ್ತಿದ್ದ ತನಿಖಾ ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಪೊಲೀಸರ ಅಧಿಕಾರ ದುರ್ಬಳಕೆಯ ಉದಾಹರಣೆಯಾಗಿ ಈ ಪ್ರಕರಣವನ್ನು ಉಲ್ಲೇಖಿಸಿದೆ. ಇಂತಹ ನಡೆಗಳನ್ನು ಸಹಿಸಲಾಗುವುದಿಲ್ಲ ಎಂದು ನ್ಯಾಯಾಲಯ ಎಚ್ಚರಿಸಿದೆ.

error: Content is protected !!