Home Blog

ಇಂಧನ ದರ ಏರಿಕೆ, ವಿದ್ಯಾರ್ಥಿಗಳ ಸಂಕಷ್ಟಕ್ಕೆ ಮೋದಿ ಸರ್ಕಾರವೇ ಕಾರಣ: ಹುಡೇದ್ ಗುರು ಬಸವರಾಜ್

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪೆಟ್ರೋಲ್-ಡೀಸೆಲ್ ದರ ಏರಿಕೆ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಜನಸಾಮಾನ್ಯರ ಸಂಕಷ್ಟದ ವಿಚಾರವಾಗಿ ವಿಜಯನಗರ ಜಿಲ್ಲಾ ಕಾಂಗ್ರೆಸ್ ವಕ್ತಾರ ಹುಡೇದ್ ಗುರು ಬಸವರಾಜ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ವರದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಮೋದಿ ನೇತೃತ್ವದ ಸರ್ಕಾರ ಕಳೆದ ಕೆಲ ದಿನಗಳಲ್ಲಿ ನಾಲ್ಕು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸಿ ಜನರ ಮೇಲಿನ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಿಸಿದೆ ಎಂದು ಆರೋಪಿಸಿದರು.
“ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಸಂಕಷ್ಟದಲ್ಲಿದ್ದಾರೆ. ಇಂಧನ ದರ ಏರಿಕೆ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಬದುಕಿಗೆ ದೊಡ್ಡ ಹೊಡೆತವಾಗಿದೆ,” ಎಂದು ಹೇಳಿದರು.
ದೇಶದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಹತ್ವದ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ದೇಶದ ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕುಗ್ಗಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರಕರಣದಿಂದ ಲಕ್ಷಾಂತರ ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಕೆಲ ಯುವಕರು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ದೇಶದ ಮನಸ್ಸನ್ನು ನೋಯಿಸುವಂತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಒಂದೆಡೆ ದೇಶದಲ್ಲಿ ನಿರುದ್ಯೋಗ, ಬೆಲೆ ಏರಿಕೆ ಹಾಗೂ ಶಿಕ್ಷಣ ವ್ಯವಸ್ಥೆಯ ಅವ್ಯವಸ್ಥೆಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದರೆ, ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸಗಳಲ್ಲಿ ತೊಡಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಟೀಕಿಸಿದರು.
“ದೇಶಕ್ಕಾಗಿ ತ್ಯಾಗ ಮಾಡಬೇಕು ಎಂದು ಜನರಿಗೆ ಕರೆ ನೀಡುವ ಸರ್ಕಾರ ಮೊದಲು ಜನರ ನೋವು ಮತ್ತು ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು,” ಎಂದು ಹೇಳಿದರು.
ಪೆಟ್ರೋಲ್, ಡೀಸೆಲ್ ಹಾಗೂ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಸಣ್ಣ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ತಕ್ಷಣ ಇಂಧನ ದರ ಏರಿಕೆಯನ್ನು ಹಿಂಪಡೆದು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಪಾರದರ್ಶಕ ತನಿಖೆ ನಡೆಸಬೇಕು. ಜೊತೆಗೆ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
“ಬೆಲೆ ಏರಿಕೆ ಮತ್ತು ಶಿಕ್ಷಣ ಹಗರಣಗಳಿಂದ ಜನರು ಕಂಗೆಟ್ಟಿದ್ದಾರೆ; ಕೇಂದ್ರ ಸರ್ಕಾರ ಜನರ ಧ್ವನಿಗೆ ಸ್ಪಂದಿಸಬೇಕು.”
ಹುಡೇದ್ ಗುರು ಬಸವರಾಜ್

ಪ್ರತಿ ಮನುಷ್ಯನಲ್ಲಿ ಗಾಂಧೀಜಿ–ಅಂಬೇಡ್ಕರ್ ಪ್ರಜ್ಞೆ ಅಗತ್ಯ: ಎ.ಎಸ್. ಮಕಾನದಾರ

ವಿಜಯಸಾಕ್ಷಿ ಸುದ್ದಿ, ಗದಗ: ಜಾಗತೀಕರಣದ ಕರಿನೆರಳಿನ ಇಂದಿನ ದಿನಮಾನದಲ್ಲಿ ಪ್ರತಿಯೊಬ್ಬ ಮನುಷ್ಯನಲ್ಲೂ ಗಾಂಧೀಜಿ ಪ್ರಜ್ಞೆ ಮತ್ತು ಅಂಬೇಡ್ಕರ್ ಪ್ರಜ್ಞೆ ಮೈಗೂಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಹಿರಿಯ ಸಾಹಿತಿ, ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಗ್ರಂಥಾಲಯ ಅನುಷ್ಠಾನ ಸಮಿತಿಯ ಸಂಚಾಲಕ, ಪ್ರಕಾಶಕ ಎ.ಎಸ್. ಮಕಾನದಾರ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಸರ್ಕಾರಿ, ಅರೆ ಸರ್ಕಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘದ ರಾಜ್ಯ ಸಮಾವೇಶದ ಪೂರ್ವಭಾವಿ ಸಿದ್ಧತಾ ಸಭೆ ಹಾಗೂ ಕಾರ್ಯಾಗಾರ ಅಂಗವಾಗಿ ಬೆಂಗಳೂರಿನ ಬಿ.ಬಿ.ಎಂ.ಪಿ ಮುಖ್ಯ ಕಚೇರಿಯ ಡಾ. ರಾಜ್‌ಕುಮಾರ್ ಗಾಜಿನ ಮನೆ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯಾಂಗ ಇಲಾಖೆಯ ಸಹೋದ್ಯೋಗಿ ಶಫಿವುಲ್ಲ ರಚಿಸಿದ “ಸಮಾನತೆಯ ಬೆಳಕು ಡಾ. ಬಿ.ಆರ್. ಅಂಬೇಡ್ಕರ್” ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ರಾಜ್ಯದ 240 ತಾಲೂಕು ಘಟಕಗಳು ಹಾಗೂ 32 ಜಿಲ್ಲಾ ಘಟಕಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ, ವಿವಿಧ ಇಲಾಖೆಗಳ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರು ಸೇವಾ ಅವಧಿಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿದರು. ಉನ್ನತ ಅಧಿಕಾರಿಗಳು, ಸಾರ್ವಜನಿಕರು ಹಾಗೂ ರಾಜಕೀಯ ವ್ಯಕ್ತಿಗಳಿಂದ ನಡೆಯುತ್ತಿರುವ ಅನ್ಯಾಯ, ದಬ್ಬಾಳಿಕೆ, ದೌರ್ಜನ್ಯ ಮತ್ತು ಶೋಷಣೆಯನ್ನು ತಡೆಗಟ್ಟಲು ಸರ್ಕಾರದ ಗಮನ ಸೆಳೆಯುವ ಕುರಿತು ಸಭೆಯಲ್ಲಿ ಒತ್ತಾಯಿಸಲಾಯಿತು.
2026ನೇ ಸಾಲಿನ ಸದಸ್ಯತ್ವ ನೋಂದಣಿಯನ್ನು ರಾಜ್ಯದ ಎಲ್ಲಾ 84 ಇಲಾಖೆಗಳ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರು ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸುವ ನಿರ್ಧಾರ ಕೈಗೊಳ್ಳಲಾಯಿತು. ಬೆಳಗಾವಿ ವಿಭಾಗೀಯ, ಮೈಸೂರು ವಿಭಾಗೀಯ ಹಾಗೂ ಬೆಂಗಳೂರು ರಾಜ್ಯ ಸಮಾವೇಶಗಳನ್ನು ಶೀಘ್ರದಲ್ಲೇ ಆಯೋಜಿಸಲು ತೀರ್ಮಾನಿಸಲಾಯಿತು.
ರಾಜ್ಯದಲ್ಲಿ ಹಲವು ವರ್ಷಗಳಿಂದ ಖಾಲಿ ಉಳಿದಿರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಹಾಗೂ ಎಲ್ಲಾ ಇಲಾಖೆಗಳಲ್ಲಿ ರೋಸ್ಟರ್ ಬಿಂದುಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಸಭೆ ಸರ್ವಾನುಮತದಿಂದ ನಿರ್ಣಯ ಕೈಗೊಂಡಿತು.
ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಮಹೇಶ್ ಸಿ. ಹುಬಳ್ಳಿ, ರಾಜ್ಯ ಕಾರ್ಯಾಧ್ಯಕ್ಷ ಜೈ ಭೀಮ್, ರಾಜ್ಯ ಕಾರ್ಯಾಧ್ಯಕ್ಷ ಅನಿಲ್ ಕುಮಾರ್, ನ್ಯಾಯಾಂಗ ಇಲಾಖೆ ಪ್ರಧಾನ ಕಾರ್ಯದರ್ಶಿ ಶಶಿಕಲಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಾಕರ್ ಎಸ್. ಜಡಗಿ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಶ್ರೀಧರ್ ಕೊಟ್ರೆ, ಜಿಲ್ಲಾ ಗೌರವಾಧ್ಯಕ್ಷ ನಾಗರಾಜ್, ರಾಜ್ಯ ಉಪಾಧ್ಯಕ್ಷ ಮುನಿಕೃಷ್ಣಪ್ಪ, ನ್ಯಾಯಾಂಗ ಇಲಾಖೆ ರಾಜ್ಯ ಪದಾಧಿಕಾರಿಗಳಾದ ಸಂಗಮ ಫರ್ತಾಬಾದ್, ಸುನಿತಾ ಕೊಂಬಿನ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗೀತಾ ಮೇಲಿನಕೇರಿ, ಅಶೋಕ್ ಕಲಾದಗಿ, ರವಿ ಹಾದಿಮನಿ, ಶಿಕ್ಷಣಪ್ಪ ಮಂಟಾಳೆ, ಬೆಳಗಾವಿ ಜಿಲ್ಲಾಧ್ಯಕ್ಷ ಮಹದೇವ ಐಹೊಳೆ, ರಾಜ್ಯ ಜಂಟಿ ಕಾರ್ಯದರ್ಶಿಗಳಾದ ಗೋವಿಂದ ಸಣ್ಣಕ್ಕಿ ಹಾಗೂ ಅಂಬಿಕಾ ಗಾಯಕ್ವಾಡ್ ಸೇರಿದಂತೆ ಅನೇಕ ಪದಾಧಿಕಾರಿಗಳು ಭಾಗವಹಿಸಿದ್ದರು.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಉಪಾಧ್ಯಕ್ಷೆ ಡಾ. ಮಲ್ಲಿಕಾ ಎಂ. ದಾವಣಗೆರೆ, ಕವಿ-ಕಲಾವಿದ ಹಾಗೂ ಸಿನಿಮಾ ನಿರ್ದೇಶಕ ಹರ್ಷ ಹಜರತ್ ಅಲಿ, ಸೌರಭ ಸಾಂಸ್ಕೃತಿಕ ವೇದಿಕೆಯ ರಹಿಮಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
 “ಅನ್ಯಾಯ, ದಬ್ಬಾಳಿಕೆ ಮತ್ತು ಶೋಷಣೆಯನ್ನು ತಡೆಗಟ್ಟಲು ಸಂಘಟಿತ ಹೋರಾಟ ಅಗತ್ಯ. ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳು ಬಲವಾಗಬೇಕು.”
ಎ.ಎಸ್. ಮಕಾನದಾರ, ಸಾಹಿತಿ

ಬಿರುಗಾಳಿ ಅಬ್ಬರಕ್ಕೆ ಮರ ಉರುಳಿ ಬಸ್ ಜಖಂ!

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮಂಗಳವಾರ ಸಂಜೆ ನರೇಗಲ್ಲ ಹೋಬಳಿಯಲ್ಲಿ ಬೀಸಿದ ಬಿರುಗಾಳಿ ಹಾಗೂ ರಭಸದ ಮಳೆಗೆ ಮರವೊಂದು ಉರುಳಿ ಶಾಲಾ ವಾಹನ ಜಖಂಗೊಂಡ ಘಟನೆ ನಡೆದಿದೆ.
ಪಟ್ಟಣದ ಶ್ರೀ ಅನ್ನದಾನೇಶ್ವರ ಮಠದ ಆವರಣದಲ್ಲಿದ್ದ ತೇಗಿನ ಮರದ ದೊಡ್ಡ ಕೊಂಬೆ ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ, ವಿದ್ಯುತ್ ಕಂಬಗಳು ಮುರಿದು ಮುಂದೆ ನಿಂತಿದ್ದ ಶಾಲಾ ವಾಹನದ ಮೇಲೆ ಬಿದ್ದವು. ಪರಿಣಾಮ ಬಸ್‌ಗೆ ಹಾನಿಯಾಗಿದೆ.
ಸಂಜೆ 5 ಗಂಟೆ ಸುಮಾರಿಗೆ ಆರಂಭವಾದ ಮಳೆ ಗುಡುಗು, ಮಿಂಚು ಹಾಗೂ ಸಿಡಿಲಿನೊಂದಿಗೆ ಆರ್ಭಟಿಸಿತು. ಸುಮಾರು ಒಂದೂವರೆ ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಯಿಂದ ನರೇಗಲ್ಲ ಪಟ್ಟಣದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಿರುಗಾಳಿಯ ರಭಸಕ್ಕೆ ಕೆಲ ಮನೆಗಳ ತಗಡುಗಳು ಸಪ್ಪಳ ಮಾಡಿದ್ದು, ಜನರು ಆತಂಕಗೊಂಡರು.
ಈಗಾಗಲೇ ಹೆಸರು ಬಿತ್ತಿದ ರೈತರಿಗೆ ಮಳೆ ಆಸರೆಯಾಗಿದ್ದು, ಮುಂದಿನ ಬಿತ್ತನೆ ಕಾರ್ಯಕ್ಕೂ ಹೊಲಗದ್ದೆಗಳಲ್ಲಿ ತೇವಾಂಶ ಹೆಚ್ಚಾಗಿದೆ.
ಬುಧವಾರ ಬೆಳಗ್ಗೆಯೂ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಕಾಲೇಜು ಸಮಯದಲ್ಲಿ ಸುರಿದ ಮಳೆಯಿಂದ ವಿದ್ಯಾರ್ಥಿಗಳು ಪರದಾಡಬೇಕಾಯಿತು.
ಕಳೆದ ಮಾರ್ಚ್ ತಿಂಗಳಿಂದ ತೀವ್ರ ಬಿಸಿಲಿಗೆ ಬೇಸತ್ತಿದ್ದ ಜನರಿಗೆ ಈ ಮಳೆ ತಂಪಿನ ಅನುಭವ ನೀಡಿದ್ದು, “ನರೇಗಲ್ಲ ಈಗ ಥಂಡಾ ಕೂಲ್” ಎಂದು ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದರು.

ಗರ್ಭಿಣಿಯರಿಗೆ ಮುಖ್ಯ ಸೂಚನೆ: ಮೂತ್ರ ಸೋಂಕು ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ!

ಗರ್ಭಾವಸ್ಥೆ ಮಹಿಳೆಯ ಜೀವನದ ಅತ್ಯಂತ ವಿಶೇಷ ಹಂತವಾಗಿದ್ದರೂ, ಈ ಸಮಯದಲ್ಲಿ ದೇಹದಲ್ಲಿ ಹಲವಾರು ಹಾರ್ಮೋನಲ್ ಹಾಗೂ ಶಾರೀರಿಕ ಬದಲಾವಣೆಗಳು ಸಂಭವಿಸುತ್ತವೆ. ಇದರಲ್ಲಿ ಯೂರಿನರಿ ಟ್ರ್ಯಾಕ್ಟ್ ಇನ್ಫೆಕ್ಷನ್ ಕೂಡ ಪ್ರಮುಖ ಆರೋಗ್ಯ ಸಮಸ್ಯೆಯಾಗಿ ಕಾಣಿಸಿಕೊಳ್ಳುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಸರ್ ಗಂಗಾರಾಮ್ ಆಸ್ಪತ್ರೆಯ ತಜ್ಞೆ ಡಾ. ಆಭಾ ಮಜುಂದಾರ್ ಅವರ ಪ್ರಕಾರ, ಗರ್ಭಾವಸ್ಥೆಯಲ್ಲಿ ಪ್ರೊಜೆಸ್ಟೆರೋನ್ ಹಾರ್ಮೋನ್ ಪ್ರಮಾಣ ಹೆಚ್ಚಾಗುವುದರಿಂದ ಯೂರಿನರಿ ಸಿಸ್ಟಂ ಸಡಿಲಗೊಳ್ಳುತ್ತದೆ. ಇದರಿಂದ ಮೂತ್ರವು ಸಂಪೂರ್ಣವಾಗಿ ಹೊರಬರದೇ ಉಳಿಯುವ ಸಾಧ್ಯತೆ ಹೆಚ್ಚಾಗುತ್ತದೆ. ಜೊತೆಗೆ ಗರ್ಭಾಶಯದ ಗಾತ್ರ ಹೆಚ್ಚಾದಂತೆ ಮೂತ್ರ ಮಾರ್ಗದ ಮೇಲೆ ಒತ್ತಡ ಉಂಟಾಗಿ ಮೂತ್ರದ ಹರಿವು ನಿಧಾನಗೊಳ್ಳುತ್ತದೆ.

ಅದರ ಜೊತೆಗೆ ಗರ್ಭಿಣಿಯರ ಮೂತ್ರದಲ್ಲಿ ಸಕ್ಕರೆ ಮತ್ತು ಅಮಿನೋ ಆಮ್ಲಗಳ ಪ್ರಮಾಣ ಸ್ವಲ್ಪ ಹೆಚ್ಚಾಗುವುದರಿಂದ ಬ್ಯಾಕ್ಟೀರಿಯಾ ಬೆಳೆಯಲು ಅನುಕೂಲವಾಗುತ್ತದೆ. ಇದರಿಂದ ಯೂರಿನ್ ಇನ್ಫೆಕ್ಷನ್ ಅಪಾಯ ಹೆಚ್ಚುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಯೂರಿನ್ ಇನ್ಫೆಕ್ಷನ್ ಲಕ್ಷಣಗಳು:

  • ಮೂತ್ರ ವಿಸರ್ಜನೆ ವೇಳೆ ಉರಿ ಅಥವಾ ನೋವು
  • ಪದೇಪದೇ ಮೂತ್ರ ಬರುವುದು
  • ಹೊಟ್ಟೆ ಕೆಳಭಾಗ ಮತ್ತು ಬೆನ್ನು ನೋವು
  • ಗಾಢ ಹಳದಿ ಬಣ್ಣದ ಮೂತ್ರ
  • ದುರ್ವಾಸನೆ
  • ಕೆಲವೊಮ್ಮೆ ಜ್ವರ ಅಥವಾ ನಡುಕ

ಮುನ್ನೆಚ್ಚರಿಕೆ ಕ್ರಮಗಳು:

  • ಹೆಚ್ಚು ನೀರು ಕುಡಿಯುವುದು
  • ನೀರಿನಾಂಶ ಹೆಚ್ಚಿರುವ ಹಣ್ಣುಗಳ ಸೇವನೆ
  • ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡುವುದು
  • ಸಕ್ಕರೆ ಹಾಗೂ ಸಿಹಿ ಪದಾರ್ಥಗಳ ಸೇವನೆ ಕಡಿಮೆ ಮಾಡುವುದು
  • ಮೂತ್ರವನ್ನು ತಡೆಹಿಡಿಯಬಾರದು
  • ಹತ್ತಿಯ ಬಟ್ಟೆ ಧರಿಸುವುದು

ತಜ್ಞರ ಪ್ರಕಾರ, ಗರ್ಭಾವಸ್ಥೆಯಲ್ಲಿ ಯೂರಿನ್ ಇನ್ಫೆಕ್ಷನ್ ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ.

ಪಾಲಕರ ಆಚಾರ-ವಿಚಾರವೇ ಮಕ್ಕಳಿಗೆ ಆದರ್ಶ: ಮಂಜುನಾಥ ಅಕ್ಕಸಾಲಿ

ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಮಕ್ಕಳ ವ್ಯಕ್ತಿತ್ವ ವಿಕಸನ ಸಾಕಾರಗೊಳ್ಳಬೇಕಾದರೆ ಪಾಲಕರು ಮಕ್ಕಳ ಆಸೆ-ಆಕಾಂಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಅವಕಾಶ ಕಲ್ಪಿಸಬೇಕು ಎಂದು ಗದಗ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಮಂಜುನಾಥ ಅಕ್ಕಸಾಲಿ ಹೇಳಿದರು.
ಬೆಟಗೇರಿಯ ಕಾಳಿಕಾದೇವಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಮಾಸಿಕ ಚಿಂತನಗೋಷ್ಠಿ, ಮೌನೇಶ್ವರ ವಚನ ಪಠಣ, ಭಕ್ತರ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವ ಸಮಾರಂಭದಲ್ಲಿ ಅತಿಥಿ ಉಪನ್ಯಾಸಕರಾಗಿ ಅವರು ಮಾತನಾಡಿದರು.
ಮಕ್ಕಳ ಆಸಕ್ತಿಗೆ ಅನುಗುಣವಾಗಿ ಓದು, ಕ್ರೀಡೆ ಹಾಗೂ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಲು ವೇದಿಕೆ ಒದಗಿಸಬೇಕು. ಇಷ್ಟವಿಲ್ಲದ ವಿಷಯಗಳನ್ನು ಓದಲು ಒತ್ತಾಯಿಸಬಾರದು. ಪ್ರತಿಯೊಬ್ಬ ಮಗುವಿನ ಪ್ರತಿಭೆ ವಿಭಿನ್ನವಾಗಿದ್ದು, ಎಲ್ಲರನ್ನೂ ಒಂದೇ ಮಾನದಂಡದಿಂದ ಅಳೆಯುವುದು ತಪ್ಪು ಎಂದು ಹೇಳಿದರು.
ಮಕ್ಕಳು ಸನ್ಮಾರ್ಗದಲ್ಲಿ ನಡೆದು ಆದರ್ಶ ವ್ಯಕ್ತಿಗಳಾಗಿ ಬೆಳೆಯಬೇಕಾದರೆ ಪಾಲಕರ ಆಚಾರ-ವಿಚಾರ, ನಡೆ-ನುಡಿ ಹಾಗೂ ಜೀವನಶೈಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳ ವರ್ತನೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಅವರಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿದಾಗ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲೊಯಲಾ ಇಂಗ್ಲಿಷ್ ಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ತನ್ವಿ ಪ್ರಸನ್ನ ಅರ್ಕಸಾಲಿ ಮೌನೇಶ್ವರ ವಚನ ಪಠಣದ ಮೂಲಕ ಗಮನ ಸೆಳೆದಳು. ಬಾಲವಿನಾಯಕ ಶಾಲೆಯ ವಿದ್ಯಾರ್ಥಿನಿ ಸುಧೀಕ್ಷಾ ವಿಶ್ವನಾಥ ಕಮ್ಮಾರ ನೃತ್ಯ ಪ್ರದರ್ಶನ ನೀಡಿ ಭಕ್ತರನ್ನು ರಂಜಿಸಿದಳು.
ದೇವಸ್ಥಾನದ ಸಾಂಸ್ಕೃತಿಕ ವಿಭಾಗದ ಸಂಚಾಲಕ ವಿಶ್ವನಾಥ ಯ. ಕಮ್ಮಾರ, ವಿಜಯಕುಮಾರ ಬೆಂತೂರ, ಮಹೇಶ ಬಡಿಗೇರ ಸೇರಿದಂತೆ ಭಕ್ತರು ಕಾಳಿಕಾಸ್ತುತಿ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಶ್ರೀಧರ ಕೊಣ್ಣೂರ ಮಾತನಾಡಿ, ಪ್ರತಿ ತಿಂಗಳು ನಡೆಯುವ ಇಂತಹ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಸಮಾಜದ ಪ್ರತಿಯೊಬ್ಬರೂ ಭಾಗವಹಿಸಿ ಮೆರಗು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿವಾಹ ವಾರ್ಷಿಕೋತ್ಸವ ಹಾಗೂ ಹುಟ್ಟುಹಬ್ಬ ಆಚರಿಸಿಕೊಂಡ ಕುಟುಂಬಗಳನ್ನು ಗೌರವಿಸಲಾಯಿತು. ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು, ಮಹಿಳಾ ಮಂಡಳದ ಪದಾಧಿಕಾರಿಗಳು, ಟ್ರಸ್ಟ್ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

ತ್ಯಾಗ, ಸಮರ್ಪಣೆ- ಮಾನವೀಯತೆಯ ಸಂದೇಶವೇ ಬಕ್ರೀದ್

ಮುಸ್ಲಿಮರ ಪ್ರಮುಖ ಧಾರ್ಮಿಕ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಅಥವಾ ಈದುಲ್ ಅಝ್ಹಾವನ್ನು ವಿಶ್ವದಾದ್ಯಂತ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ. ಇಸ್ಲಾಮೀ ಕ್ಯಾಲೆಂಡರಿನ ದುಲ್‌ಹಜ್ ತಿಂಗಳ 10ರಂದು ಆಚರಿಸಲಾಗುವ ಈ ಹಬ್ಬವು ತ್ಯಾಗ, ಸಮರ್ಪಣೆ, ದೇವಭಕ್ತಿ ಹಾಗೂ ಮಾನವೀಯ ಮೌಲ್ಯಗಳ ಸಂಕೇತವಾಗಿದೆ.
ಸುಮಾರು ಐದು ಸಾವಿರ ವರ್ಷಗಳ ಹಿಂದಿನ ಪ್ರವಾದಿ ಇಬ್ರಾಹೀಮ್ (ಅ) ಅವರ ಬದುಕಿನ ಘಟನೆಗಳನ್ನು ಬಕ್ರೀದ್ ಹಬ್ಬ ನೆನಪಿಸುತ್ತದೆ. ಯಹೂದಿಗಳು, ಕ್ರೈಸ್ತರು ಹಾಗೂ ಮುಸ್ಲಿಮರು ಸಮಾನವಾಗಿ ಗೌರವಿಸುವ ಮಹಾನ್ ವ್ಯಕ್ತಿತ್ವವಾಗಿರುವ ಇಬ್ರಾಹೀಮ್ (ಅಬ್ರಾಹಂ) ಅವರು ಏಕದೇವತ್ವದ ಸಂದೇಶ ಸಾರಿದ ಪ್ರವಾದಿಯಾಗಿದ್ದರು. ಇರಾಕ್‌ನ ಉರ್ ನಗರದಲ್ಲಿ ಜನಿಸಿದ ಅವರು, ದುಷ್ಟ ರಾಜ ನಮ್ರೂದ್‌ನ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಿ ಸಮಾಜ ಸುಧಾರಣೆಯ ಹಾದಿ ಹಿಡಿದರು. ಅನೇಕ ಸಂಕಷ್ಟ, ಹಿಂಸೆ, ದೇಶಭ್ರಷ್ಟ ಪರಿಸ್ಥಿತಿಗಳ ನಡುವೆಯೂ ದೇವರ ಮಾರ್ಗದಿಂದ ಹಿಂದೆ ಸರಿಯಲಿಲ್ಲ.
ಪ್ರವಾದಿ ಇಬ್ರಾಹೀಮ್ (ಅ) ಅವರ ಬದುಕು ಅನೇಕ ಸತ್ವಪರೀಕ್ಷೆಗಳಿಂದ ಕೂಡಿತ್ತು. ವೃದ್ಧಾಪ್ಯದಲ್ಲಿ ಪತ್ನಿ ಹಾಜಿರಾ ಮತ್ತು ಪುಟ್ಟ ಮಗ ಇಸ್ಮಾಯಿಲ್ ಅವರನ್ನು ಅರೇಬಿಯಾದ ನಿರ್ಜನ ಮರುಭೂಮಿಯಲ್ಲಿ ಬಿಟ್ಟುಬರಬೇಕಾದ ಸಂದರ್ಭ ಎದುರಾದರೂ ದೇವಾಜ್ಞೆಗೆ ಶರಣಾದರು. ದಾಹದಿಂದ ಅಳುತ್ತಿದ್ದ ಮಗುವಿಗಾಗಿ ತಾಯಿ ಹಾಜಿರಾ ಸಫಾ ಮತ್ತು ಮರ್ವಾ ಬೆಟ್ಟಗಳ ನಡುವೆ ನೀರಿಗಾಗಿ ಓಡಾಡಿದ ಘಟನೆ ಇಂದಿಗೂ ಹಜ್ ಯಾತ್ರೆಯ ಪ್ರಮುಖ ಆಚರಣೆಯಾಗಿದೆ. ಇದೇ ವೇಳೆ ಇಸ್ಮಾಯಿಲ್ ಅವರ ಕಾಲಿನ ಬಳಿಯಲ್ಲಿ ಉಕ್ಕಿಬಂದ ನೀರಿನ ಚಿಲುಮೆಯೇ ಪವಿತ್ರ ಝಮ್ ಝಮ್ ಎಂದು ಪ್ರಸಿದ್ಧಿಯಾಯಿತು.
ಇಬ್ರಾಹೀಮ್ (ಅ) ಅವರ ಪುತ್ರ ಪ್ರೀತಿ ಹಾಗೂ ದೇವಭಕ್ತಿಯನ್ನು ಪರೀಕ್ಷಿಸಲು ಅಲ್ಲಾಹನು ಪುತ್ರ ಇಸ್ಮಾಯಿಲ್ ಅವರನ್ನು ಬಲಿಕೊಡಬೇಕೆಂದು ಆದೇಶಿಸಿದನೆಂದು ಇಸ್ಲಾಮಿನ ಇತಿಹಾಸ ಹೇಳುತ್ತದೆ. ದೇವರ ಆಜ್ಞೆಗೆ ತಲೆಬಾಗಿದ ಇಬ್ರಾಹೀಮ್ (ಅ) ಪುತ್ರನನ್ನು ಬಲಿಕೊಡಲು ಮುಂದಾದಾಗ, ಅಲ್ಲಾಹನು ಟಗರನ್ನು ಬಲಿಯಾಗಿ ಅರ್ಪಿಸುವಂತೆ ಸೂಚಿಸಿದನು. ಈ ಘಟನೆಯ ಸ್ಮರಣಾರ್ಥವೇ ಬಕ್ರೀದ್ ಹಬ್ಬ ಆಚರಿಸಲಾಗುತ್ತದೆ.
ಹಬ್ಬದ ದಿನ ಮುಸ್ಲಿಮರು ಮಸೀದಿ ಹಾಗೂ ಈದ್ಗಾಗಳಲ್ಲಿ ವಿಶೇಷ ನಮಾಜ್ ಮತ್ತು ಖುತ್ಬಾಗಳಲ್ಲಿ ಭಾಗವಹಿಸುತ್ತಾರೆ. ಹೊಸ ಉಡುಗೆ ತೊಟ್ಟು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಬಂಧು-ಮಿತ್ರರ ಮನೆಗಳಿಗೆ ಭೇಟಿ ನೀಡುತ್ತಾರೆ. ಬಲಿ ಅರ್ಪಿಸಿದ ಪ್ರಾಣಿಯ ಮಾಂಸವನ್ನು ಮೂರು ಭಾಗಗಳಾಗಿ ಹಂಚಿ, ಒಂದು ಭಾಗವನ್ನು ಬಡವರಿಗೆ ನೀಡುವ ಮೂಲಕ ಸಹೋದರತ್ವ ಮತ್ತು ಹಂಚಿಕೆ ಸಂಸ್ಕೃತಿಯನ್ನು ಈ ಹಬ್ಬ ಸಾರುತ್ತದೆ.
ಬಕ್ರೀದ್ ಹಬ್ಬವು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ; ಅದು ತ್ಯಾಗ, ದಾನಧರ್ಮ, ಸಹಾನುಭೂತಿ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂದೇಶವನ್ನು ಸಾರುವ ಹಬ್ಬವಾಗಿದೆ.
— ಡಾ. ತಯಬಅಲಿ ಅ. ಹೊಂಬಳ, ಗದಗ

ಖಾಸಗಿ ಶಾಲೆಗಳಿಗೆ ಸರ್ಕಾರಿ ಶಾಲೆಯ ಟಕ್ಕರ್!

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಖಾಸಗಿ ಶಾಲೆಗಳ ಪೈಪೋಟಿಯ ನಡುವೆಯೂ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಿಸಲು ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಹೊಸ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿನೂತನ ಹೆಜ್ಜೆ ಇಟ್ಟಿದ್ದು, ಹೊಸದಾಗಿ ದಾಖಲಾಗುವ ಪ್ರತಿಯೊಬ್ಬ ವಿದ್ಯಾರ್ಥಿಯ ಹೆಸರಿನಲ್ಲಿ ₹1000 ಠೇವಣಿ ಇಡುವ ಘೋಷಣೆ ಮಾಡಿದೆ.
ಈ ವಿಶಿಷ್ಟ ಪ್ರಯತ್ನ ಇದೀಗ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರಿ ಶಾಲೆಗಳ ಮೇಲಿನ ವಿಶ್ವಾಸ ಹೆಚ್ಚಿಸುವ ಕೆಲಸ ಮಾಡುತ್ತಿದೆ.
1ರಿಂದ 5ನೇ ತರಗತಿ ಮಕ್ಕಳಿಗೆ ವಿಶೇಷ ಸೌಲಭ್ಯ
ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಶಾಲೆಗೆ 1ರಿಂದ 5ನೇ ತರಗತಿಯವರೆಗೆ ದಾಖಲಾಗುವ ಪ್ರತಿಯೊಂದು ವಿದ್ಯಾರ್ಥಿಯ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ₹1000 ಠೇವಣಿ ಇಡಲಾಗುತ್ತಿದೆ. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ 10ನೇ ತರಗತಿ ಹಾಗೂ ಪಿಯುಸಿ ಶಿಕ್ಷಣಕ್ಕೆ ಇದು ಸಹಕಾರಿಯಾಗಲಿದೆ ಎಂಬುದು ಶಿಕ್ಷಕರ ಅಭಿಪ್ರಾಯವಾಗಿದೆ.
ಇದರ ಜೊತೆಗೆ ಉಚಿತ ಶಾಲಾ ಬ್ಯಾಗ್, ಟೈ-ಬೆಲ್ಟ್, ಶಾಲೆಯ ಹೆಸರುಳ್ಳ ಟೀ-ಶರ್ಟ್ ಹಾಗೂ ಮಗ್ಗಿ ಪುಸ್ತಕಗಳನ್ನು ಸಹ ನೀಡಲು ಶಾಲೆ ಮುಂದಾಗಿದೆ.
ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಾದರೂ ಇಲ್ಲಿ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಲಾಗಿದ್ದು, ಟಿವಿ ಹಾಗೂ ಯೂಟ್ಯೂಬ್ ಆಧಾರಿತ ವಿಡಿಯೋ ಪಾಠಗಳ ಮೂಲಕ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.
ಶುದ್ಧ ಕುಡಿಯುವ ನೀರು, ಶೌಚಾಲಯ ಹಾಗೂ ಎಲ್ಲ ತರಗತಿಗಳಲ್ಲೂ ಫ್ಯಾನ್ ವ್ಯವಸ್ಥೆ ಇರುವುದರಿಂದ ಶಾಲೆ ಮಕ್ಕಳಿಗೆ ಆಕರ್ಷಕ ಶಿಕ್ಷಣ ವಾತಾವರಣ ಒದಗಿಸಿದೆ.
ಸರ್ಕಾರದಿಂದ ಪಠ್ಯಪುಸ್ತಕ, ಸಮವಸ್ತ್ರ, ಶೂ-ಸಾಕ್ಸ್, ಬಿಸಿಯೂಟ ಸೇರಿದಂತೆ ಅನೇಕ ಸೌಲಭ್ಯಗಳು ದೊರೆಯುತ್ತಿದ್ದರೂ ಹಲವು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ.
ಆದರೆ ಬೆಳ್ಳಟ್ಟಿ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಸಮುದಾಯದ ಸಹಕಾರದೊಂದಿಗೆ ಮಕ್ಕಳ ದಾಖಲಾತಿ ಹೆಚ್ಚಿಸಲು ಹೊಸ ಪ್ರಯತ್ನ ಕೈಗೊಂಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
“ಗ್ರಾಮದ ಸಮುದಾಯ ಮತ್ತು ಶಿಕ್ಷಕರ ಸಹಕಾರದಿಂದ ಮಕ್ಕಳನ್ನು ಸರ್ಕಾರಿ ಶಾಲೆಯತ್ತ ಆಕರ್ಷಿಸಲು ಈ ಯೋಜನೆ ರೂಪಿಸಲಾಗಿದೆ. ಹೊಸದಾಗಿ ದಾಖಲಾಗುವ ವಿದ್ಯಾರ್ಥಿಗಳಿಗೆ ₹1000 ಠೇವಣಿ, ಶಾಲಾ ಬ್ಯಾಗ್, ಟೈ-ಬೆಲ್ಟ್, ಟೀ-ಶರ್ಟ್ ಹಾಗೂ ಮಗ್ಗಿ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತದೆ.” 
ಗಿರೀಶ ಕೊಡಬಾಳ, ಮುಖ್ಯೋಪಾಧ್ಯಾಯರು
“ಶಾಲೆಯಲ್ಲಿ ಹೊಸದಾಗಿ ದಾಖಲಾಗುವ ವಿದ್ಯಾರ್ಥಿಗಳಿಗೆ ₹1000 ಠೇವಣಿ ಹಾಗೂ ಉಚಿತ ಶೈಕ್ಷಣಿಕ ಸಾಮಗ್ರಿ ನೀಡುತ್ತಿರುವುದು ಶಿಕ್ಷಣ ಮತ್ತು ದಾಖಲಾತಿ ಹೆಚ್ಚಿಸಲು ಮಾದರಿಯಾದ ಕಾರ್ಯಕ್ರಮ. ಸರ್ಕಾರಿ ಶಾಲೆಗಳ ಉಳಿವಿಗೆ ಶಿಕ್ಷಕರ ಇಚ್ಛಾಶಕ್ತಿ ಮತ್ತು ಸಮುದಾಯದ ಸಹಕಾರವೇ ದೊಡ್ಡ ಬಲ.”
ಆರ್.ಎಸ್. ಬುರಡಿ, ಉಪನಿರ್ದೇಶಕರು

ಸ್ವಾರ್ಥದ ಯುಗದಲ್ಲಿ ತ್ಯಾಗದ ಸಂದೇಶ ಹೊತ್ತ ಬಕ್ರೀದ್

ಮಾನವ ಜೀವನದಲ್ಲಿ ಹಬ್ಬಗಳು ಕೇವಲ ಸಂಭ್ರಮದ ದಿನಗಳಲ್ಲ; ಅವು ಸಮಾಜದ ಮೌಲ್ಯಗಳನ್ನು ನೆನಪಿಸುವ ಸಂಸ್ಕೃತಿಯ ಪ್ರತಿಬಿಂಬಗಳಾಗಿವೆ. ಅಂತಹ ಪವಿತ್ರ ಹಬ್ಬಗಳಲ್ಲಿ ಇಸ್ಲಾಂ ಧರ್ಮದ ಮಹತ್ವದ ಹಬ್ಬವಾದ ಬಕ್ರೀದ್ ಅಥವಾ ಈದ್-ಉಲ್-ಅಝ್ಹಾ ವಿಶಿಷ್ಟ ಸ್ಥಾನ ಪಡೆದಿದೆ. ತ್ಯಾಗ ಮತ್ತು ಬಲಿದಾನ ಎಂಬ ಮಹಾನ್ ಮೌಲ್ಯಗಳ ಮೇಲೆ ನಿಂತಿರುವ ಈ ಹಬ್ಬವು ಆತ್ಮಶುದ್ಧಿ, ಮಾನವೀಯತೆ ಮತ್ತು ಸಮಾಜದ ಹೊಣೆಗಾರಿಕೆಯ ಸಂದೇಶ ಸಾರುತ್ತದೆ.
ಬಕ್ರೀದ್ ಹಬ್ಬದ ಮೂಲದಲ್ಲಿ ಪ್ರವಾದಿ ಹಜರತ್ ಇಬ್ರಾಹಿಂ (ಅ) ಅವರ ಅಪಾರ ಭಕ್ತಿ ಮತ್ತು ತ್ಯಾಗದ ಸಂದೇಶ ಅಡಗಿದೆ. ಅಲ್ಲಾಹನ ಆದೇಶಕ್ಕೆ ಶರಣಾಗಿ ತಮ್ಮ ಪ್ರಿಯ ಪುತ್ರನನ್ನೇ ಬಲಿಕೊಡಲು ಸಿದ್ಧರಾದ ಅವರ ನಿಷ್ಠೆ ಇಡೀ ಮಾನವಕುಲಕ್ಕೆ ಆದರ್ಶವಾಗಿದೆ. ಕೊನೆಗೆ ಅಲ್ಲಾಹ ಅವರು ಅವರ ವಿಧೇಯತೆಯನ್ನು ಸ್ವೀಕರಿಸಿ ಪುತ್ರನ ಬದಲು ಪ್ರಾಣಿಯನ್ನು ಬಲಿಯಾಗಿ ಒಪ್ಪಿಕೊಂಡ ಘಟನೆಯು ತ್ಯಾಗದ ಅತ್ಯುನ್ನತ ಸಂಕೇತವಾಗಿ ಉಳಿದಿದೆ.
ಈ ಹಬ್ಬ ನಮಗೆ ಕಲಿಸುವುದು ಕೇವಲ ಪ್ರಾಣಿಯ ಬಲಿ ಅಲ್ಲ; ಅಹಂಕಾರ, ದ್ವೇಷ, ದುರಾಸೆ ಮತ್ತು ಸ್ವಾರ್ಥವನ್ನು ತ್ಯಜಿಸುವುದೇ ನಿಜವಾದ ಬಲಿದಾನ ಎಂಬ ಸತ್ಯ. ಇಂದಿನ ಸಮಾಜದಲ್ಲಿ ಹಣ, ಅಧಿಕಾರ ಮತ್ತು ಸ್ವಾರ್ಥವೇ ಮುಖ್ಯವಾಗುತ್ತಿರುವ ಸಂದರ್ಭದಲ್ಲಿ ಬಕ್ರೀದ್ ಮನುಷ್ಯನಿಗೆ ಮಾನವೀಯತೆಯ ದಾರಿ ತೋರಿಸುತ್ತದೆ.
ಬಕ್ರೀದ್ ಹಬ್ಬದಲ್ಲಿ ಬಲಿಯಾದ ಮಾಂಸವನ್ನು ಕುಟುಂಬ, ಸಂಬಂಧಿಕರು ಮತ್ತು ಬಡವರ ನಡುವೆ ಹಂಚುವ ಪದ್ಧತಿ ಇದೆ. ಇದು ಸಮಾನತೆ ಮತ್ತು ಸಹಾನುಭೂತಿಯ ಮಹಾನ್ ಸಂದೇಶವಾಗಿದೆ. ಹಸಿದವನ ಹೊಟ್ಟೆ ತುಂಬಿದಾಗಲೇ ಹಬ್ಬಕ್ಕೆ ನಿಜವಾದ ಅರ್ಥ ಬರುತ್ತದೆ ಎಂಬ ಮಾನವೀಯ ಮೌಲ್ಯ ಇದರಲ್ಲಿ ಅಡಗಿದೆ.
ಇಂದು ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ದ್ವೇಷ ಮತ್ತು ವಿಭಜನೆ ಹೆಚ್ಚಾಗುತ್ತಿರುವುದು ವಿಷಾದನೀಯ. ಆದರೆ ನಿಜವಾದ ಧರ್ಮ ಮನುಷ್ಯನನ್ನು ವಿನಯಶೀಲನನ್ನಾಗಿ, ಸಹೃದಯನನ್ನಾಗಿ ಮಾಡಬೇಕು. ಬಕ್ರೀದ್ ಹಬ್ಬವು ಧರ್ಮಗಳ ನಡುವೆ ಸೌಹಾರ್ದ, ಸಹಬಾಳ್ವೆ ಮತ್ತು ಸಹೋದರತ್ವ ಬೆಳೆಸುವ ಸಂದೇಶ ನೀಡುತ್ತದೆ.
ಪ್ರಸ್ತುತ ಯುವ ಪೀಳಿಗೆ ಯಶಸ್ಸು ಮತ್ತು ಹಣದ ಹಿಂದೆ ಓಡುತ್ತಿರುವ ಸಂದರ್ಭದಲ್ಲಿ ಸಮಾಜದ ಬಗ್ಗೆ ಹೊಣೆಗಾರಿಕೆ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ. ದೇಶಕ್ಕೆ ಇಂದು ಬೇಕಾಗಿರುವುದು ತ್ಯಾಗ ಮನೋಭಾವದ ಯುವಕರು. ಕುಟುಂಬ, ಸಮಾಜ ಮತ್ತು ದೇಶಕ್ಕಾಗಿ ದುಡಿಯುವ ಮನಸ್ಸು ಬೆಳೆದಾಗ ಮಾತ್ರ ನಿಜವಾದ ಧರ್ಮ ಉಳಿಯುತ್ತದೆ.
ಬಕ್ರೀದ್ ಹಬ್ಬವು ಕೇವಲ ಧಾರ್ಮಿಕ ಆಚರಣೆ ಅಲ್ಲ; ಅದು ಮನುಷ್ಯನೊಳಗಿನ ಮಾನವೀಯತೆಯನ್ನು ಎಬ್ಬಿಸುವ ಆತ್ಮಪರಿಶೀಲನೆಯ ಹಬ್ಬ. ತ್ಯಾಗ ಮತ್ತು ಬಲಿದಾನದಿಂದಲೇ ಧರ್ಮದ ಹಾದಿ ಪವಿತ್ರವಾಗುತ್ತದೆ ಎಂಬ ಸಂದೇಶವನ್ನು ಈ ಹಬ್ಬ ಸಾರುತ್ತದೆ.
-ಸಿಕಂದರ ಎಂ.ಆರಿ
ಪತ್ರಕರ್ತರು/ವಕೀಲರು

“ರಾಜೀನಾಮೆ ನೀಡಬೇಡಿ”!ಸಿಎಂ ಸಿದ್ದರಾಮಯ್ಯಗೆ ವಾಟಾಳ್ ನಾಗರಾಜ್ ಮನವಿ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರಗೊಂಡಿರುವ ನಡುವೆಯೇ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ರಾಜೀನಾಮೆ ನೀಡಬಾರದೆಂದು ವಿನಂತಿಸಿದ್ದಾರೆ.

ವಿಧಾನಸೌಧದಲ್ಲಿ ಸಿಎಂ ಅವರನ್ನು ಭೇಟಿ ಮಾಡಿದ ವಾಟಾಳ್ ನಾಗರಾಜ್, “ಯಾವ ಕಾರಣಕ್ಕೂ ನೀವು ರಾಜೀನಾಮೆ ನೀಡಬಾರದು, ನೀವು ಅಧಿಕಾರದಲ್ಲಿದ್ದದ್ದು ಸಂತೋಷ ತಂದಿದೆ” ಎಂದು ಹೇಳಿ ಮನವಿ ಮಾಡಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ನಗುತ್ತಲೇ ಪ್ರತಿಕ್ರಿಯೆ ನೀಡಿ ಮುಂದೆ ಸಾಗಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ಜೋರಾಗಿವೆ. ಈ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಂಡು ಹಲವು ಸುತ್ತಿನ ಸಭೆಗಳನ್ನು ನಡೆಸಿತ್ತು. ಬಳಿಕ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿತ್ತು.

ಆದರೆ ಸಿದ್ದರಾಮಯ್ಯ ಅವರು ಗುರುವಾರ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿಗಳು ಹರಡುತ್ತಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ. ಈ ನಡುವೆ ಅವರ ಆಪ್ತರು ಹಾಗೂ ಬೆಂಬಲಿಗರು ಸಭೆಗಳನ್ನು ನಡೆಸುತ್ತಿರುವುದು ಗಮನ ಸೆಳೆದಿದೆ.

ಈ ರಾಜಕೀಯ ಬೆಳವಣಿಗೆಗಳ ಮಧ್ಯೆ ವಾಟಾಳ್ ನಾಗರಾಜ್ ಅವರ ಭೇಟಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಕಾಂಗ್ರೆಸ್‌ನಲ್ಲಿ ಗೊಂದಲ ಉಂಟಾಗುತ್ತದೆ ಎಂದು ಅವರು ಈ ಹಿಂದೆ ಹೇಳಿದ್ದನ್ನು ಮತ್ತೆ ಒತ್ತಿಹೇಳಿದ್ದಾರೆ.

ಜಾತಿಗಣತಿ ವರದಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ: ಮುಸ್ಲಿಂ ಸಮುದಾಯ ನಂ.1 ಜಾತಿ! ರಾಜ್ಯ ರಾಜಕೀಯದಲ್ಲಿ ಸಂಚಲನ

ಬೆಂಗಳೂರು: ರಾಜ್ಯದಲ್ಲಿ ಕಳೆದ ಹಲವು ವರ್ಷಗಳಿಂದ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗೆ ಕಾರಣವಾಗಿದ್ದ ಜಾತಿಗಣತಿ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದಲ್ಲಿ ಅಧಿಕೃತವಾಗಿ ಸ್ವೀಕರಿಸಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ಅವರು ವರದಿಯನ್ನು ಸಿಎಂಗೆ ಸಲ್ಲಿಸಿದರು. ಸುಮಾರು 300 ಪುಟಗಳಿರುವ ಈ ವರದಿ ದೀರ್ಘಕಾಲದ ಸಮೀಕ್ಷೆ ಆಧಾರದಲ್ಲಿ ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿಯ ಪ್ರಕಾರ ರಾಜ್ಯದ ವಿವಿಧ ಸಮುದಾಯಗಳ ಜನಸಂಖ್ಯೆ ವಿವರಗಳು ಉಲ್ಲೇಖವಾಗಿದ್ದು, ಮುಸ್ಲಿಂ ಸಮುದಾಯ ಶೇ.14ರಷ್ಟು (75 ರಿಂದ 80 ಲಕ್ಷ ಜನಸಂಖ್ಯೆ) ಅತಿ ದೊಡ್ಡ ಸಮುದಾಯವಾಗಿದೆ ಎಂದು ಹೇಳಲಾಗಿದೆ. ನಂತರ ವೀರಶೈವ–ಲಿಂಗಾಯತ ಶೇ.11ರಷ್ಟು (60 ರಿಂದ 65 ಲಕ್ಷ), ಒಕ್ಕಲಿಗರು ಶೇ.10ರಷ್ಟು (55 ರಿಂದ 60 ಲಕ್ಷ) ಹಾಗೂ ಕುರುಬರು ಶೇ.8ರಷ್ಟು (40 ರಿಂದ 45 ಲಕ್ಷ) ಜನಸಂಖ್ಯೆ ಹೊಂದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವರದಿ ಸಲ್ಲಿಕೆ ಬಳಿಕ ಮಾತನಾಡಿದ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್, ಸಮೀಕ್ಷೆ ಸಂಪೂರ್ಣವಾಗಿ ನಡೆಸಲಾಗಿದ್ದು, ಭಾಗವಹಿಸದವರ ಅಂಕಿಅಂಶಗಳನ್ನು ಸೇರಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ವರದಿ ತಾಂತ್ರಿಕ ಹಾಗೂ ಭಾಷಾಂತರ ಕಾರ್ಯದಿಂದಾಗಿ ವಿಳಂಬವಾಗಿದೆ ಎಂದೂ ಅವರು ಹೇಳಿದ್ದಾರೆ.

ಜಾತಿಗಣತಿ ವರದಿ ಬಹಿರಂಗವಾದ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

error: Content is protected !!