Home Blog

ಹೃದಯಾಘಾತಕ್ಕೆ ಬಲಿಯಾದ ನಟ ದಿಲೀಪ್ ರಾಜ್: ‘ಲವ್ ಮಾಕ್ಟೇಲ್ 3’ ಚಿತ್ರದ ಪಾತ್ರವೇ ಕೊನೆಯ ಅಭಿನಯ

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ದಿಲೀಪ್ ರಾಜ್ ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಸಿನಿರಂಗ ಹಾಗೂ ಅಭಿಮಾನಿಗಳ ವಲಯದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.

ಸುಮಾರು 20 ವರ್ಷಗಳ ಕಾಲ ಸಿನಿಮಾ ಮತ್ತು ಕಿರುತೆರೆಯಲ್ಲಿ ಸಕ್ರಿಯರಾಗಿದ್ದ ದಿಲೀಪ್ ರಾಜ್, ತಮ್ಮ ನಟನಾ ಜೀವನದ ಕೊನೆಯ ಹಂತದವರೆಗೂ ಹಲವು ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದರು. ‘ಮಿಲನ’ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಅಣ್ಣನಾಗಿ ಅಭಿನಯಿಸಿ ಅಪಾರ ಜನಪ್ರಿಯತೆ ಪಡೆದಿದ್ದ ಅವರು, ಇತ್ತೀಚೆಗೆ ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ವಕೀಲನ ಪಾತ್ರ ನಿರ್ವಹಿಸಿದ್ದರು.

ಈ ಸಿನಿಮಾದಲ್ಲಿ ಗಂಭೀರ ಹಾಗೂ ಜವಾಬ್ದಾರಿಯುತ ಲಾಯರ್ ಆಗಿ ಅವರು ಕಾಣಿಸಿಕೊಂಡಿದ್ದರು. ಪಾತ್ರದ ತೂಕಕ್ಕೆ ತಕ್ಕ ಅಭಿನಯದ ಮೂಲಕ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಚಾಕೊಲೇಟ್ ಹೀರೋ ಆಗಿ ಆರಂಭವಾದ ಅವರ ಸಿನಿ ಪಯಣ, ನಂತರ ಪೋಷಕ ಪಾತ್ರಗಳ ಮೂಲಕ ಮತ್ತಷ್ಟು ಗಟ್ಟಿಯಾದದ್ದು ವಿಶೇಷ.

ಡಬ್ಬಿಂಗ್ ಕಲಾವಿದ ಹಾಗೂ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದ ದಿಲೀಪ್ ರಾಜ್, ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ಮೂಲಕ ಅಪಾರ ಜನಪ್ರಿಯತೆ ಪಡೆದಿದ್ದರು. ಸರಳತೆ, ಶಿಸ್ತು ಮತ್ತು ನಗುಮುಖದಿಂದ ಗುರುತಿಸಿಕೊಂಡಿದ್ದ ಅವರು ಈಗ ಕೇವಲ ನೆನಪಾಗಿ ಉಳಿದಿದ್ದಾರೆ.

ಸಂಗಾತಿಗೆ ಆರ್ಥಿಕ ಬೆಂಬಲ ಮುಖ್ಯ: ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ಕೌಟುಂಬಿಕ ಕಲಹ ಪ್ರಕರಣಗಳಲ್ಲಿ ಮಧ್ಯಂತರ ಜೀವನಾಂಶದ ಪ್ರಮುಖ ಉದ್ದೇಶ ಸಂಗಾತಿಗೆ ಆರ್ಥಿಕ ಬೆಂಬಲ ಒದಗಿಸುವುದಾಗಿದೆ ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್, ಪತ್ನಿ ಸಲ್ಲಿಸಿದ್ದ ಮಧ್ಯಂತರ ಜೀವನಾಂಶ ಅರ್ಜಿಯನ್ನು ತಿರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.

ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 24ರಡಿ ತಿಂಗಳಿಗೆ 50 ಸಾವಿರ ರೂ. ಮಧ್ಯಂತರ ಜೀವನಾಂಶ ಹಾಗೂ 1 ಲಕ್ಷ ರೂ. ಮೊಕದ್ದಮೆ ವೆಚ್ಚ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಮನ್ಮಧ ರಾವ್ ಅವರಿದ್ದ ಏಕಸದಸ್ಯ ಪೀಠ ಮಹತ್ವದ ಆದೇಶ ನೀಡಿದೆ.

ಅರ್ಜಿದಾರರು ಅಂತಿಮವಾಗಿ ಪ್ರಕರಣದಲ್ಲಿ ಯಶಸ್ವಿಯಾಗುವುದಿಲ್ಲ ಎಂಬ ಕಾರಣ ಮಾತ್ರಕ್ಕೆ ಮಧ್ಯಂತರ ಜೀವನಾಂಶ ಮತ್ತು ಮೊಕದ್ದಮೆ ವೆಚ್ಚಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 24ರ ಉದ್ದೇಶ, ಆರ್ಥಿಕವಾಗಿ ಹಿಂದುಳಿದ ಸಂಗಾತಿಗೆ ಕಾನೂನು ಹೋರಾಟ ಮುಂದುವರಿಸಲು ಅಗತ್ಯ ನೆರವು ಒದಗಿಸುವುದಾಗಿದೆ. ಜೀವನ ನಿರ್ವಹಣೆ ಮತ್ತು ನ್ಯಾಯಾಲಯದ ಪ್ರಕ್ರಿಯೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಮಧ್ಯಂತರ ಜೀವನಾಂಶ ನೆರವಾಗಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಮಧ್ಯಂತರ ಜೀವನಾಂಶದ ಮೊತ್ತ ನಿಗದಿಪಡಿಸಲು ಯಾವುದೇ ಕಟ್ಟುನಿಟ್ಟಿನ ಸೂತ್ರ ಇಲ್ಲ. ಮದುವೆಯ ಅವಧಿ, ದಂಪತಿಗಳ ಆರ್ಥಿಕ ಸ್ಥಿತಿ, ಆದಾಯ ಸಾಮರ್ಥ್ಯ, ಮಕ್ಕಳ ಜವಾಬ್ದಾರಿ, ಶಿಕ್ಷಣ ಹಾಗೂ ಇತರೆ ಪರಿಸ್ಥಿತಿಗಳನ್ನು ಪರಿಗಣಿಸಿ ನ್ಯಾಯಾಲಯ ತೀರ್ಮಾನ ಕೈಗೊಳ್ಳಬೇಕು ಎಂದು ಪೀಠ ತಿಳಿಸಿದೆ.

ಇದೇ ವೇಳೆ, ಕೌಟುಂಬಿಕ ನ್ಯಾಯಾಲಯ ತನ್ನ ವಿವೇಚನಾ ಅಧಿಕಾರವನ್ನು ನ್ಯಾಯಸಮ್ಮತವಾಗಿ ಬಳಸಬೇಕು. ಕಾಯಿದೆಯ ಉದ್ದೇಶ ಹಾಗೂ ವೈವಾಹಿಕ ಕಾನೂನಿನ ಮೂಲ ತತ್ವಗಳನ್ನು ಗಮನದಲ್ಲಿಟ್ಟುಕೊಂಡೇ ತೀರ್ಪು ನೀಡಬೇಕೆಂದು ಹೈಕೋರ್ಟ್ ಸೂಚಿಸಿದೆ.

ಹಾಲಿ ಪ್ರಕರಣದಲ್ಲಿ ಪತ್ನಿಯ ಅರ್ಜಿಯನ್ನು ತಿರಸ್ಕರಿಸಲು ಕೌಟುಂಬಿಕ ನ್ಯಾಯಾಲಯ ಸಮರ್ಪಕ ಕಾರಣಗಳನ್ನು ನೀಡಿಲ್ಲ ಎಂದು ಹೇಳಿದ ಹೈಕೋರ್ಟ್, ಪ್ರಕರಣವನ್ನು ಮರು ವಿಚಾರಣೆಗೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಹಿಂತಿರುಗಿಸಿದೆ. ಜೊತೆಗೆ, ದಂಪತಿಗಳು ಜೂನ್ 10ರಂದು ವೈಯಕ್ತಿಕವಾಗಿ ಅಥವಾ ವಕೀಲರ ಮೂಲಕ ಹಾಜರಾಗುವಂತೆ ನಿರ್ದೇಶನ ನೀಡಿದೆ.

ಇಬ್ಬರೂ ತಮ್ಮ ಆಸ್ತಿ ಹಾಗೂ ಹೊಣೆಗಾರಿಕೆಗಳ ವಿವರಗಳನ್ನು ಸಲ್ಲಿಸಬೇಕು. ಸಾಧ್ಯವಾದಷ್ಟು ಬೇಗ ಪ್ರಕರಣವನ್ನು ಇತ್ಯರ್ಥಗೊಳಿಸಬೇಕು ಎಂದು ಕೌಟುಂಬಿಕ ನ್ಯಾಯಾಲಯಕ್ಕೆ ಸೂಚಿಸಲಾಗಿದೆ.

ಪ್ರಕರಣದ ಹಿನ್ನೆಲೆ ಕುರಿತು ಹೇಳುವುದಾದರೆ, ದಂಪತಿಗಳು ಕೇವಲ ಆರರಿಂದ ಏಳು ತಿಂಗಳುಗಳ ಕಾಲ ಮಾತ್ರ ಒಟ್ಟಿಗೆ ವಾಸಿಸಿದ್ದರು. ಈ ಕಾರಣದಿಂದ ಪತ್ನಿಗೆ ಮಧ್ಯಂತರ ಜೀವನಾಂಶ ಅಥವಾ ಮೊಕದ್ದಮೆ ವೆಚ್ಚಕ್ಕೆ ಅರ್ಹತೆ ಇಲ್ಲ ಎಂದು ಕೌಟುಂಬಿಕ ನ್ಯಾಯಾಲಯ 2025ರ ಸೆಪ್ಟೆಂಬರ್ 17ರಂದು ಅರ್ಜಿ ತಿರಸ್ಕರಿಸಿತ್ತು.

ಆದರೆ, ಪತ್ನಿ ತಾನು ಬಿಕಾಂ ಪದವಿ ಅಧ್ಯಯನ ಮಾಡುತ್ತಿದ್ದು ಪ್ರಸ್ತುತ ನಿರುದ್ಯೋಗಿಯಾಗಿದ್ದೇನೆ. ಪತಿ ದುಬೈನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದು ತಿಂಗಳಿಗೆ ಸುಮಾರು 8 ಲಕ್ಷ ರೂ. ಆದಾಯ ಹೊಂದಿದ್ದಾರೆ ಎಂದು ಹೈಕೋರ್ಟ್ ಮುಂದೆ ವಾದಿಸಿದ್ದರು.

ತ್ರಿಶಾ ಸಂಭಾವನೆಗೆ ಹೊಸ ಹೈಕ್ ; 10-12 ಕೋಟಿ ಪಡೆಯುತ್ತಿರುವ ಸೌತ್ ಸ್ಟಾರ್ ನಟಿ

ಚೆನ್ನೈ: ಸೌತ್ ಸಿನಿರಂಗದ ಸ್ಟಾರ್ ನಟಿ ತ್ರಿಶಾ ಕೃಷ್ಣನ್ ಇದೀಗ ವೃತ್ತಿಜೀವನದ ಸುವರ್ಣ ಕಾಲವನ್ನು ಅನುಭವಿಸುತ್ತಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿರುವ ತ್ರಿಶಾ, ಈಗ ಸಂಭಾವನೆ ವಿಚಾರದಲ್ಲೂ ಹೊಸ ಮಟ್ಟ ತಲುಪಿದ್ದಾರೆ ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ, ತ್ರಿಶಾ ಈಗ ಒಂದು ಸಿನಿಮಾಗೆ ಸುಮಾರು 10ರಿಂದ 12 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ‘ಪೊನ್ನಿಯಿನ್ ಸೆಲ್ವನ್’, ‘ಲಿಯೋ’ ರೀತಿಯ ದೊಡ್ಡ ಸಿನಿಮಾಗಳ ಯಶಸ್ಸಿನ ಬಳಿಕ ಅವರ ಬೇಡಿಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಸದ್ಯ ಕಾಲಿವುಡ್ ಮತ್ತು ಟಾಲಿವುಡ್‌ನ ಪ್ರಮುಖ ನಿರ್ಮಾಪಕರು ಹಾಗೂ ನಿರ್ದೇಶಕರು ತ್ರಿಶಾ ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದಾರೆ.

ಚಿರಂಜೀವಿ ಅಭಿನಯದ ‘ವಿಶ್ವಂಭರ’, ಸೂರ್ಯ ನಟನೆಯ ‘ಕರುಪ್ಪು’ ಸೇರಿದಂತೆ ಹಲವು ದೊಡ್ಡ ಸಿನಿಮಾಗಳಲ್ಲಿ ತ್ರಿಶಾ ಅಭಿನಯಿಸುತ್ತಿದ್ದಾರೆ. ಜೊತೆಗೆ ಕಮಲ್ ಹಾಸನ್ ಮತ್ತು ರಜನಿಕಾಂತ್ ಕಾಂಬಿನೇಷನ್‌ನ ಹೊಸ ಪ್ರಾಜೆಕ್ಟ್‌ಗೆ ಕೂಡ ಅವರ ಹೆಸರು ಕೇಳಿಬರುತ್ತಿದೆ.

ಹೊಸ ನಟಿಯರ ಪ್ರವೇಶದ ನಡುವೆಯೂ ತ್ರಿಶಾ ತಮ್ಮ ಸ್ಥಾನವನ್ನು ಗಟ್ಟಿಯಾಗಿ ಉಳಿಸಿಕೊಂಡಿದ್ದಾರೆ. ಗ್ಲಾಮರ್ ಮಾತ್ರವಲ್ಲದೇ ನಟನಾ ಸಾಮರ್ಥ್ಯವಿರುವ ಪಾತ್ರಗಳ ಮೂಲಕವೂ ಅವರು ಸಿನಿಪ್ರೇಕ್ಷಕರ ಮನಗೆದ್ದಿದ್ದಾರೆ.

ಇತ್ತೀಚೆಗೆ ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಜೊತೆಗಿನ ಅವರ ಆಪ್ತತೆ ಮತ್ತೆ ಚರ್ಚೆಗೆ ಕಾರಣವಾಗಿದೆ. ವಿಜಯ್ ರಾಜಕೀಯದಲ್ಲಿ ಭಾರೀ ಯಶಸ್ಸು ಸಾಧಿಸಿದ ಬಳಿಕ ತ್ರಿಶಾ ಜನಪ್ರಿಯತೆ ಮತ್ತು ಡಿಮ್ಯಾಂಡ್ ಇನ್ನಷ್ಟು ಹೆಚ್ಚಾಗಿದೆ ಎನ್ನುವ ಮಾತುಗಳು ಸಿನಿ ವಲಯದಲ್ಲಿ ಹರಿದಾಡುತ್ತಿವೆ.

ರಾಜ್ಯಾದ್ಯಂತ ಬಿರುಗಾಳಿ ಸಹಿತ ಭಾರಿ ಮಳೆ: ಮರಗಳು ಉರುಳಿ ಜನಜೀವನ ಅಸ್ತವ್ಯಸ್ತ

ಬೆಳಗಾವಿ: ಬೆಳಗಾವಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಂಗಳವಾರ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಬಿರುಗಾಳಿಯ ಅಬ್ಬರಕ್ಕೆ ಬೃಹತ್ ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಹಲವೆಡೆ ಸಂಚಾರ ಮತ್ತು ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ತವಾಗಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ. ರಸ್ತೆ ಮೇಲೆ ಮರಗಳು ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ವಿದ್ಯುತ್ ಕಂಬಗಳು ಧರೆಗೆ ಉರುಳಿದ ಕಾರಣ ಹಲವೆಡೆ ವಿದ್ಯುತ್ ವ್ಯತ್ಯಯ ಕೂಡ ಉಂಟಾಗಿದೆ.

ಬಾಗಲಕೋಟೆಯ ಬಾದಾಮಿಯಲ್ಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಮರಗಳು ಹಾಗೂ ವಿದ್ಯುತ್ ಕಂಬಗಳು ರಸ್ತೆಗೆ ಬಿದ್ದ ಪರಿಣಾಮ ಬಾಗಲಕೋಟೆ-ಬಾದಾಮಿ ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ.

ಇನ್ನೂ ಮಂಗಳೂರಿನಲ್ಲಿ ಗುಡುಗು-ಮಿಂಚು ಸಹಿತ ಸುರಿದ ಧಾರಾಕಾರ ಮಳೆಯಿಂದ ವಾಹನ ಸವಾರರು ಸಂಕಷ್ಟ ಅನುಭವಿಸಿದರು. ಕೆಲ ಬೈಕ್ ಸವಾರರು ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ನಡೆದುಕೊಂಡು ತೆರಳುವ ಪರಿಸ್ಥಿತಿ ಎದುರಾಯಿತು.

ಕಾರವಾರ ಹಾಗೂ ಹುಬ್ಬಳ್ಳಿಯಲ್ಲೂ ಭಾರಿ ಮಳೆಯಿಂದ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರ ನಿಧಾನಗೊಂಡಿತು. ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಹಾನಿಗೊಳಗಾದ ಪ್ರದೇಶಗಳಲ್ಲಿ ಸ್ಥಳೀಯ ಆಡಳಿತ ಪರಿಹಾರ ಕಾರ್ಯ ಕೈಗೊಂಡಿದೆ.

ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ: ಕರಾವಳಿಗೆ ಹೀಟ್‌ವೇವ್ ಅಲರ್ಟ್!

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಷ್ಟು ದಿನ ತಂಪಾಗಿದ್ದ ಕರಾವಳಿ ಭಾಗದಲ್ಲಿ ಇದೀಗ ಮತ್ತೆ ಬಿಸಿಗಾಳಿ ಆತಂಕ ಹೆಚ್ಚಾಗಿದ್ದು, ಕೆಲವು ಜಿಲ್ಲೆಗಳಿಗೆ ಹೀಟ್‌ವೇವ್ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವೆಡೆ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಎಚ್ಚರಿಕೆ ವಹಿಸುವಂತೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ.

ಕರಾವಳಿ ಭಾಗದಲ್ಲಿ ಇಂದು ಬಿಸಿಗಾಳಿ ಅಲರ್ಟ್ ಜಾರಿಯಲ್ಲಿದ್ದು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಮಳೆಯೂ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇನ್ನೂ ದಕ್ಷಿಣ ಒಳನಾಡಿನ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳ ಕೆಲವು ಭಾಗಗಳಲ್ಲಿ 30 ರಿಂದ 40 ಕಿಲೋಮೀಟರ್ ವೇಗದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ.

ಮೇ 15 ಮತ್ತು 16ರಂದು ದಕ್ಷಿಣ ಒಳನಾಡಿನ ಕೆಲ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. 64.5 ಮಿ.ಮೀ ರಿಂದ 115.5 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇರುವುದರಿಂದ ದಕ್ಷಿಣ ಒಳನಾಡಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಜನರು ಸುರಕ್ಷತಾ ಕ್ರಮಗಳನ್ನು ಪಾಲಿಸಿ, ಗುಡುಗು-ಮಿಂಚಿನ ವೇಳೆ ಮರಗಳ ಕೆಳಗೆ ನಿಲ್ಲದಂತೆ ಹಾಗೂ ಅಗತ್ಯವಿಲ್ಲದೆ ಹೊರಗೆ ತೆರಳದಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮನವಿ ಮಾಡಿದೆ.

PM ಮೋದಿ ಕರೆಗೆ ಬೆಂಗಳೂರಿಗರ ಸ್ಪಂದನೆ: ಮೆಟ್ರೋ, ಬಸ್ ಬಳಕೆ ಹೆಚ್ಚಳ!

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಉಳಿತಾಯ ಹಾಗೂ ಸಾರ್ವಜನಿಕ ಸಾರಿಗೆ ಬಳಕೆಗೆ ನೀಡಿದ ಕರೆಗೆ ಬೆಂಗಳೂರಿನಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಜಾಗತಿಕ ಕಚ್ಚಾ ತೈಲ ಬಿಕ್ಕಟ್ಟಿನ ನಡುವೆಯೇ ಮೆಟ್ರೋ ಮತ್ತು ಬಸ್ ಬಳಕೆ ಹೆಚ್ಚಿಸಲು ನೀಡಿದ ಸಲಹೆಯನ್ನು ನಗರದ ಜನರು ಪಾಸಿಟಿವ್ ಆಗಿ ಸ್ವೀಕರಿಸಿದ್ದಾರೆ. ಹೈದರಾಬಾದ್‌ನಲ್ಲಿ ಇತ್ತೀಚೆಗೆ ಮಾತನಾಡಿದ್ದ ಪ್ರಧಾನಿ ಮೋದಿ, ಜಾಗತಿಕ ಇಂಧನ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶ ಒಗ್ಗಟ್ಟಾಗಿ ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆಯನ್ನು ಬಳಸಬೇಕು ಎಂದು ಮನವಿ ಮಾಡಿದ್ದರು. ಇದರ ಪರಿಣಾಮವಾಗಿ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಕಂಡಿದೆ.

“ಬೈಕ್ ಬಳಸುವುದಕ್ಕಿಂತ ಮೆಟ್ರೋ ಬಳಕೆ ಮಾಡಿದರೆ ಹಣ ಮತ್ತು ಸಮಯ ಎರಡೂ ಉಳಿಯುತ್ತದೆ” ಎಂದು ಅನೇಕ ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ. ಕೆಲವರು ಇಷ್ಟು ದಿನ ಖಾಸಗಿ ವಾಹನ ಬಳಸುತ್ತಿದ್ದರೂ, ಈಗ ಕಚೇರಿಗೆ ಮೆಟ್ರೋ ಮೂಲಕವೇ ತೆರಳಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

ಪೆಟ್ರೋಲ್ ಹಾಗೂ ಡೀಸೆಲ್ ಆಮದು ಕಡಿಮೆ ಮಾಡಿದರೆ ದೇಶದ ಆರ್ಥಿಕತೆಗೆ ಬಲ ಸಿಗಲಿದೆ ಎಂಬ ಅರಿವು ಜನರಲ್ಲಿ ಹೆಚ್ಚುತ್ತಿದೆ ಎನ್ನಲಾಗಿದೆ.

ಇನ್ನೊಂದೆಡೆ ದೇಶಾದ್ಯಂತ ಡೀಸೆಲ್ ಕೊರತೆಯ ಎಚ್ಚರಿಕೆ ಕೂಡ ವ್ಯಕ್ತವಾಗಿದೆ. ಬಲ್ಕ್ ಸರಬರಾಜು ದರ ಹಾಗೂ ಚಿಲ್ಲರೆ ಮಾರಾಟ ದರದ ವ್ಯತ್ಯಾಸದಿಂದ ಅನೇಕ ಕೈಗಾರಿಕೆಗಳು ನೇರವಾಗಿ ಪೆಟ್ರೋಲ್ ಬಂಕ್‌ಗಳಿಂದ ಹೈ ಸ್ಪೀಡ್ ಡೀಸೆಲ್ ಖರೀದಿ ಮಾಡುತ್ತಿವೆ. ಇದರಿಂದ ಚಿಲ್ಲರೆ ಬಂಕ್‌ಗಳಲ್ಲಿ ದಾಸ್ತಾನು ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಇಂಡಿಯನ್ ಆಯಿಲ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಪ್ರಧಾನಿ ಮೋದಿ ಅವರಿಗೆ ದೂರು ನೀಡಿದೆ.

ಜಾಗತಿಕ ಮಟ್ಟದಲ್ಲಿ ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ಭೀತಿ ಹೆಚ್ಚುತ್ತಿರುವ ಹಿನ್ನೆಲೆ ಇಂಧನ ಉಳಿತಾಯ ಕ್ರಮಗಳು ಅನಿವಾರ್ಯವಾಗುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಾಲ್ಬೆರಳುಗಳಲ್ಲಿ ಕೂದಲು ಇದೆಯಾ? ಹಾಗಿದ್ರೆ ನಿಮ್ಮ ವ್ಯಕ್ತಿತ್ವ ಹೀಗಿರುತ್ತಂತೆ!

ಜ್ಯೋತಿಷ್ಯಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರದಂತೆ ದೇಹದ ರಚನೆಯೂ ವ್ಯಕ್ತಿಯ ಸ್ವಭಾವ ಹಾಗೂ ಭವಿಷ್ಯದ ಬಗ್ಗೆ ಹಲವು ಸಂಗತಿಗಳನ್ನು ಹೇಳುತ್ತದೆ ಎನ್ನಲಾಗುತ್ತದೆ.

ಹಣೆಯ ಆಕಾರ, ಕಣ್ಣುಗಳ ಬಣ್ಣ, ಮೂಗು, ಕಿವಿ, ಕಾಲ್ಬೆರಳುಗಳ ರೂಪ ಮಾತ್ರವಲ್ಲದೆ ದೇಹದ ಸಣ್ಣ ಲಕ್ಷಣಗಳೂ ವ್ಯಕ್ತಿತ್ವದ ಹಲವು ಅಂಶಗಳನ್ನು ಬಹಿರಂಗಪಡಿಸುತ್ತವೆ. ಇದೀಗ ಕಾಲ್ಬೆರಳುಗಳಲ್ಲಿ ಕೂದಲು ಇರುವವರ ವ್ಯಕ್ತಿತ್ವದ ಬಗ್ಗೆ ಕೆಲ ಆಸಕ್ತಿಕರ ಮಾಹಿತಿಗಳು ವೈರಲ್ ಆಗಿವೆ.

ಸ್ವಾವಲಂಬಿ ಮತ್ತು ಆತ್ಮವಿಶ್ವಾಸಿ ವ್ಯಕ್ತಿತ್ವ

ಕಾಲ್ಬೆರಳುಗಳ ಮೇಲೆ ಕೂದಲು ಇರುವವರು ಸಾಮಾನ್ಯವಾಗಿ ಬಲವಾದ ವ್ಯಕ್ತಿತ್ವ ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಇವರು ತಮ್ಮ ಆಲೋಚನೆ ಮತ್ತು ನಿರ್ಧಾರಗಳ ಮೇಲೆ ಹೆಚ್ಚಿನ ನಂಬಿಕೆ ಇಡುತ್ತಾರೆ. ಯಾವುದೇ ಕೆಲಸವನ್ನು ಆತ್ಮವಿಶ್ವಾಸದಿಂದ ಕೈಗೆತ್ತಿಕೊಂಡು ಯಶಸ್ಸು ಸಾಧಿಸುವ ಗುಣ ಇವರಲ್ಲಿರುತ್ತದೆ.

ನಾಯಕತ್ವದ ಗುಣ ಹೆಚ್ಚು

ಇಂತಹವರು ಉದ್ಯೋಗವಾಗಲಿ ಅಥವಾ ವ್ಯವಹಾರವಾಗಲಿ, ತಮ್ಮದೇ ಆದ ಶೈಲಿಯಲ್ಲಿ ಹೆಸರು ಮಾಡುತ್ತಾರೆ. ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹಿಂಜರಿಯದೇ ಮುನ್ನಡೆಯುವ ಗುಣ ಇವರಲ್ಲಿರುತ್ತದೆ. ತಂಡ ಅಥವಾ ಕುಟುಂಬದಲ್ಲಿ ನಾಯಕತ್ವದ ಪಾತ್ರವನ್ನು ಬೇಗನೆ ವಹಿಸಿಕೊಳ್ಳುತ್ತಾರೆ.

ಜವಾಬ್ದಾರಿಯುತರು

ಕಾಲ್ಬೆರಳುಗಳಲ್ಲಿ ಕೂದಲು ಇರುವವರು ತಮ್ಮ ಜವಾಬ್ದಾರಿಗಳಿಂದ ಹಿಂದೆ ಸರಿಯುವುದಿಲ್ಲ ಎನ್ನಲಾಗುತ್ತದೆ. ಯಾವುದೇ ವಿಷಯದಲ್ಲಿ ಪ್ರಾಯೋಗಿಕವಾಗಿ ಯೋಚಿಸಿ ತೀರ್ಮಾನ ಕೈಗೊಳ್ಳುವ ಗುಣ ಇವರಿಗೆ ಹೆಚ್ಚು. ಇದರಿಂದ ಸುತ್ತಮುತ್ತಲಿನವರು ಇವರ ಮೇಲೆ ಬೇಗನೆ ನಂಬಿಕೆ ಇಡುತ್ತಾರೆ.

ಆಧ್ಯಾತ್ಮಿಕ ಚಿಂತನೆ

ಇವರಿಗೆ ಆಧ್ಯಾತ್ಮಿಕತೆಯ ಕಡೆಗೆ ಹೆಚ್ಚಿನ ಒಲವು ಇರುತ್ತದೆ. ಆಳವಾದ ಚಿಂತನೆ ಮಾಡುವ ಗುಣ ಇವರಲ್ಲಿದ್ದು, ವಿಷಯಗಳನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯವೂ ಉತ್ತಮವಾಗಿರುತ್ತದೆ.

ಕೋಪ ಮತ್ತು ಅಹಂಕಾರವೂ ಇರಬಹುದು!

ಕಾಲ್ಬೆರಳಿನ ಕೂದಲು ತುಂಬಾ ದಪ್ಪ ಅಥವಾ ಒರಟಾಗಿದ್ದರೆ, ಅಂತಹವರು ಕೆಲವೊಮ್ಮೆ ಸೊಕ್ಕಿನ ಸ್ವಭಾವ ಹೊಂದಿರಬಹುದು ಎಂದು ಹೇಳಲಾಗುತ್ತದೆ. ಜೊತೆಗೆ ಅತಿಯಾದ ಕೋಪದಿಂದ ಕೆಲವು ಸಂದರ್ಭಗಳಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ.

IPL 2026: ಕೆಕೆಆರ್ ವಿರುದ್ಧ ಫಿಲ್ ಸಾಲ್ಟ್ ಆಡ್ತಾರಾ? ಆಡಲ್ವಾ? ಇಲ್ಲಿದೆ ಮಾಹಿತಿ!

ಇಂಡಿಯನ್ ಪ್ರೀಮಿಯರ್ ಲೀಗ್‌ನ 57ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಶಾಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಅಭಿಮಾನಿಗಳಲ್ಲಿ ಒಂದು ಪ್ರಶ್ನೆ ಹೆಚ್ಚಾಗಿ ಚರ್ಚೆಯಾಗುತ್ತಿದೆ. ಅದು ಸ್ಫೋಟಕ ಬ್ಯಾಟರ್ ಫಿಲ್ ಸಾಲ್ಟ್ ಕಣಕ್ಕಿಳಿಯುವರಾ ಎಂಬುದು.

ಗಾಯದ ಕಾರಣ ಇಂಗ್ಲೆಂಡ್‌ಗೆ ತೆರಳಿದ್ದ ಫಿಲ್ ಸಾಲ್ಟ್ ಇದೀಗ ಭಾರತಕ್ಕೆ ಮರಳಿ ಆರ್‌ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. ಹೀಗಾಗಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅವರು ಮತ್ತೆ ಆರಂಭಿಕರಾಗಿ ಆಡಲಿದ್ದಾರೆ ಎಂಬ ನಿರೀಕ್ಷೆ ಮೂಡಿತ್ತು. ಆದರೆ ಸದ್ಯದ ಮಾಹಿತಿಯ ಪ್ರಕಾರ ಅವರ ಆಡುವುದು ಅನುಮಾನ ಎನ್ನಲಾಗಿದೆ.

ಮಂಗಳವಾರ ನಡೆದ ಆರ್‌ಸಿಬಿ ತಂಡದ ಅಭ್ಯಾಸದಲ್ಲೂ ಫಿಲ್ ಸಾಲ್ಟ್ ಕಾಣಿಸಿಕೊಂಡಿಲ್ಲ. ಅವರ ಬೆರಳಿನ ಗಾಯ ಇನ್ನೂ ಸಂಪೂರ್ಣ ಗುಣಮುಖವಾಗಿಲ್ಲ ಎನ್ನಲಾಗಿದ್ದು, ವೈದ್ಯರು ಇನ್ನೂ ಕೆಲ ದಿನ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಫಿಲ್ ಸಾಲ್ಟ್ ಹೊರಗುಳಿಯುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆ, ವಿರಾಟ್ ಕೊಹ್ಲಿ ಜೊತೆ ಯುವ ಎಡಗೈ ಬ್ಯಾಟರ್ ಜೇಕಬ್ ಬೆಥೆಲ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಕಳೆದ ಪಂದ್ಯದಲ್ಲಿಯೂ ಈ ಜೋಡಿ ಆರಂಭಿಕರಾಗಿ ಕಣಕ್ಕಿಳಿದಿತ್ತು.

ಗೋಲ್ಡ್ ಖರೀದಿದಾರರಿಗೆ ಶಾಕ್: ಕೇಂದ್ರದಿಂದ ಭಾರಿ ಸುಂಕ ಏರಿಕೆ!

ನವದೆಹಲಿ: ಜಾಗತಿಕ ಆರ್ಥಿಕ ಅಸ್ಥಿರತೆ ಹಾಗೂ ಇಂಧನ ಬಿಕ್ಕಟ್ಟಿನ ನಡುವೆಯೇ ದೇಶದ ಆರ್ಥಿಕತೆಯನ್ನು ರಕ್ಷಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮಾಡಿದ ಆರ್ಥಿಕ ಮಿತವ್ಯಯದ ಮನವಿಯ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ. ಈ ಹಿಂದೆ ಶೇ 6 ರಷ್ಟಿದ್ದ ಒಟ್ಟಾರೆ ಆಮದು ಸುಂಕವನ್ನು ಈಗ ಶೇ 15 ಕ್ಕೆ ಏರಿಸಲಾಗಿದೆ. ಇದರಲ್ಲಿ ಶೇ 10 ರಷ್ಟು ಮೂಲ ಕಸ್ಟಮ್ಸ್ ಸುಂಕ ಹಾಗೂ ಶೇ 5 ರಷ್ಟು ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್ ಸೇರಿದೆ. ಈ ನಿರ್ಧಾರದಿಂದ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡ ಹಿನ್ನೆಲೆಯಲ್ಲಿ, ವಿದೇಶಿ ವಿನಿಮಯ ಮೀಸಲು ನಿಧಿಯನ್ನು ರಕ್ಷಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಇರಾನ್ ಯುದ್ಧ ಹಾಗೂ ಜಾಗತಿಕ ತೈಲ ಬೆಲೆ ಏರಿಕೆಯಿಂದ ಉಂಟಾಗಬಹುದಾದ ಆರ್ಥಿಕ ಒತ್ತಡವನ್ನು ತಡೆಯಲು ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಂಡಿದೆ.

ಪ್ರಧಾನಿ ಮೋದಿ ಅವರು ನಾಗರಿಕರಿಗೆ ಕನಿಷ್ಠ ಒಂದು ವರ್ಷದವರೆಗೆ ಚಿನ್ನ ಖರೀದಿಯನ್ನು ಮುಂದೂಡಬೇಕು, ವಿದೇಶಿ ಪ್ರವಾಸ ಕಡಿಮೆ ಮಾಡಬೇಕು ಹಾಗೂ ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸಬೇಕು ಎಂದು ಮನವಿ ಮಾಡಿದ್ದರು. ಆಮದು ಅವಲಂಬನೆ ಕಡಿಮೆ ಮಾಡಿ ದೇಶದ ಆರ್ಥಿಕತೆಯನ್ನು ಬಲಪಡಿಸುವುದೇ ಈ ಕರೆಯ ಉದ್ದೇಶ ಎಂದು ಹೇಳಲಾಗಿದೆ.

ಭಾರತವು ವಿಶ್ವದಲ್ಲೇ ಚಿನ್ನದ ಎರಡನೇ ಅತಿದೊಡ್ಡ ಗ್ರಾಹಕ ರಾಷ್ಟ್ರವಾಗಿದ್ದು, ಸುಂಕ ಏರಿಕೆಯಿಂದ ಚಿನ್ನದ ಬೇಡಿಕೆಯಲ್ಲಿ ಕುಸಿತ ಉಂಟಾಗುವ ಸಾಧ್ಯತೆ ಇದೆ. ಆದರೆ ಮತ್ತೊಂದೆಡೆ ಅಧಿಕ ತೆರಿಗೆಯಿಂದ ಚಿನ್ನದ ಕಳ್ಳಸಾಗಣೆ ಹೆಚ್ಚಾಗುವ ಆತಂಕವೂ ವ್ಯಕ್ತವಾಗಿದೆ.

ಈಗಾಗಲೇ ಏಪ್ರಿಲ್ ತಿಂಗಳಲ್ಲಿ ಭಾರತದ ಚಿನ್ನದ ಆಮದು ಕಳೆದ 30 ವರ್ಷಗಳಲ್ಲೇ ಕನಿಷ್ಠ ಮಟ್ಟ ತಲುಪಿತ್ತು. ಇದೀಗ ಸುಂಕ ಏರಿಕೆಯಿಂದ ಆಮದು ಪ್ರಮಾಣ ಇನ್ನಷ್ಟು ಇಳಿಯುವ ಸಾಧ್ಯತೆ ಇದೆ.

ಸ್ಯಾಂಡಲ್‌ವುಡ್‌ಗೆ ಆಘಾತ: ಕನ್ನಡದ ಖ್ಯಾತ ನಟ ದಿಲೀಪ್ ರಾಜ್ ಇನ್ನಿಲ್ಲ!

ಬೆಂಗಳೂರು: ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಖ್ಯಾತ ನಟ ದಿಲೀಪ್ ರಾಜ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮನೆಯಲ್ಲೇ ಅವರಿಗೆ ಹೃದಯಾಘಾತ ಸಂಭವಿಸಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಅವರು ಬದುಕುಳಿಯಲಿಲ್ಲ ಎಂದು ತಿಳಿದುಬಂದಿದೆ.

ದಿಲೀಪ್ ರಾಜ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಚಿತ್ರರಂಗದ ಅನೇಕ ಕಲಾವಿದರು, ಸ್ನೇಹಿತರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ತಮ್ಮದೇ ಆದ ನಟನೆಯ ಮೂಲಕ ಗುರುತಿಸಿಕೊಂಡಿದ್ದ ಅವರು ಹಲವು ಜನಪ್ರಿಯ ಚಿತ್ರಗಳಲ್ಲಿ ಅಭಿನಯಿಸಿದ್ದರು.

ಮಿಲನ, ಯು ಟರ್ನ್, ಆರ್ಕೆಸ್ಟ್ರಾ ಮೈಸೂರು, ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದರು.

ಸಿನಿಮಾ ಮಾತ್ರವಲ್ಲದೆ ಕಿರುತೆರೆಯಲ್ಲೂ ದಿಲೀಪ್ ರಾಜ್ ಸಕ್ರಿಯರಾಗಿದ್ದರು. ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಅಭಿನಯಿಸಿದ್ದ ಅವರು, ಪಾರು ಹಾಗೂ ನಾ ನಿನ್ನ ಬಿಡಲಾರೆ ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದರು.

error: Content is protected !!