Home Blog Page 2

ಗಂಡ-ಹೆಂಡ್ತಿ ನಡುವೆ ಜಗಳ: ಇಬ್ಬರು ಪುಟ್ಟ ಮಕ್ಕಳನ್ನ ಕಾಲುವೆಗೆ ಎಸೆದ ಪಾಪಿ ತಂದೆ

0

ಯಾದಗಿರಿ: ಹೆಂಡತಿ ಜೊತೆಗಿನ ಜಗಳ ವಿಕೋಪಕ್ಕೆ ತಿರುಗಿದ ಬಳಿಕ ತಂದೆಯೊಬ್ಬ ತನ್ನದೇ ಇಬ್ಬರು ಮಕ್ಕಳನ್ನು ಕಾಲುವೆಗೆ ಎಸೆದಿರುವ ಆರೋಪ ಯಾದಗಿರಿಯ ಶಹಾಪುರ ತಾಲೂಕಿನ ಗೋಗಿ ಗ್ರಾಮದಲ್ಲಿ ಕೇಳಿಬಂದಿದೆ. 9 ವರ್ಷದ ಬಾಲಕಿ ಹಾಗೂ 2 ವರ್ಷದ ಬಾಲಕನಿಗಾಗಿ ಕಾಲುವೆಯಲ್ಲಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ.

ಶಾಂತಪ್ಪ ಬಿರಾದಾರ್ ತನ್ನ ಮೂವರು ಮಕ್ಕಳನ್ನು ಬೈಕ್‌ನಲ್ಲಿ ಕರೆದೊಯ್ದಿದ್ದ ಎನ್ನಲಾಗಿದೆ. ಬಳಿಕ 9 ವರ್ಷದ ಸಾನ್ವಿ ಮತ್ತು 2 ವರ್ಷದ ಸೃಜನ್ ಅವರನ್ನು ಕಾಲುವೆಗೆ ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ. ಮತ್ತೊಬ್ಬ ಮಗಳನ್ನು ಮಾತ್ರ ವಾಪಸ್ ಕರೆತಂದು ತಾಯಿಗೆ ಒಪ್ಪಿಸಿದ್ದಾನೆ ಎನ್ನಲಾಗಿದೆ.

ಇಬ್ಬರು ಮಕ್ಕಳು ಕಾಲುವೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ಘಟನೆ ಬಳಿಕ ಅವರ ಯಾವುದೇ ಸುಳಿವು ಸಿಕ್ಕಿಲ್ಲ. ಮಕ್ಕಳಿಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾಲುವೆಯಲ್ಲಿ ಶೋಧ ನಡೆಸುತ್ತಿದ್ದಾರೆ.

ಈ ಸಂಬಂಧ ಗೋಗಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆ ಕುರಿತು ತನಿಖೆ ಮುಂದುವರಿಸಿದ್ದಾರೆ. ಸಂಸಾರದ ಕಲಹದ ಕೋಪವನ್ನು ಮಕ್ಕಳ ಮೇಲೆ ತೀರಿಸಿಕೊಂಡಿರುವ ಆರೋಪ ಇದೀಗ ಗ್ರಾಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಸಚಿವ ನಾಗೇಂದ್ರ ರಾಜೀನಾಮೆಗೆ ಪಟ್ಟು: ವಿಧಾನ ಪರಿಷತ್ʼನಲ್ಲಿ ವಿಪಕ್ಷಗಳ ಪ್ರತಿಭಟನೆ

0

ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಇಂದು ಕೂಡ ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳು ಪ್ರತಿಭಟಿಸಿದ ಪ್ರಸಂಗ ನಡೆಯಿತು. ಕಪ್ಪು ಬಟ್ಟೆ ಹಿಡಿದು ರಾಜೀನಾಮೆಗೆ ಪಟ್ಟು ಹಿಡಿದ ವಿಪಕ್ಷ ಸದಸ್ಯರು, ಸದನದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸರ್ಕಾರ ಮೊದಲು ರಾಜೀನಾಮೆ ಕೊಡಿಸಬೇಕು, ಕಳಂಕಿತ ಮಂತ್ರಿಗಳನ್ನು ಇಟ್ಟುಕೊಂಡು ಹೇಗೆ ಸದನ ನಡೆಸಲು ಸಾಧ್ಯ ಎಂದು ಪ್ರಶ್ನಿಸಿ, ಮೊದಲು ರಾಜೀನಾಮೆ ಕೊಡಿಸಿ ನಂತರ ಸದನ ಮುಂದುವರಿಸುವಂತೆ ಆಗ್ರಹಿಸಿದರು.

ಈ ವೇಳೆ ಕಾಂಗ್ರೆಸ್‌ನ ರವಿ ಮಾತನಾಡಿ, ಬರಗಾಲದ ಬಗ್ಗೆ ಚರ್ಚೆ ಮಾಡುವಂತೆಯೂ, ನಾಗೇಂದ್ರ ವಿಚಾರವಾಗಿ ನೋಟಿಸ್ ಕೊಟ್ಟು ಚರ್ಚಿಸುವಂತೆಯೂ ಸಲಹೆ ನೀಡಿದರು. ಆದರೆ ಸದನದಲ್ಲಿ ಗದ್ದಲ ಗಲಾಟೆ ಮುಂದುವರಿಯಿತು. ಬಿಜೆಪಿ ಸದಸ್ಯರು ಪ್ರಶ್ನೆ ಕೇಳುವ ಬದಲು ಸಚಿವ ನಾಗೇಂದ್ರ ಅವರನ್ನು ವಜಾಗೊಳಿಸುವಂತೆ ಘೋಷಣೆ ಕೂಗಿದರು. ವಿಪಕ್ಷಗಳ ಗಲಾಟೆಯ ನಡುವೆಯೇ ಪ್ರಶ್ನೋತ್ತರ ಕಲಾಪ ನಡೆಯಿತು. ‘ಕೋಟಿ ಕೋಟಿ ಲೂಟಿ’ ಎಂಬ ಘೋಷಣೆಗಳನ್ನೂ ವಿಪಕ್ಷ ಸದಸ್ಯರು ಕೂಗಿದರು.

ಪ್ರಶ್ನೋತ್ತರ ಅವಧಿಗೆ ಅಡ್ಡಿಪಡಿಸಬಾರದು ಎಂದು ಆಗ್ರಹಿಸಿದ ನಾಗರಾಜ್ ಯಾದವ್, ಈ ಬಗ್ಗೆ ಸಭಾಪತಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಮಧ್ಯೆ ವಿಪಕ್ಷಗಳು ರಾಹುಲ್ ಗಾಂಧಿ ಅವರ ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ ಆಡಳಿತ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಇದರಿಂದ ಸದನದಲ್ಲಿ ಮತ್ತೆ ಗದ್ದಲ ಏರ್ಪಟ್ಟಿತು. ಕಪ್ಪು ಬಟ್ಟೆ ತಿರುಗಿಸುತ್ತಾ ‘ಕೋಟಿ ಕೋಟಿ ಎಲ್ಲಿ ಹೋಯ್ತು, ರಾಹುಲ್ ಗಾಂಧಿ ಜೇಬಿಗೆ ಹೋಯ್ತು’ ಎಂದು ವಿಪಕ್ಷಗಳು ಘೋಷಣೆ ಕೂಗಿದವು.

ಪಾಯಿಂಟ್ ಆಫ್ ಆರ್ಡರ್ ಎತ್ತಿದ ಬಸವರಾಜ್ ಹೊರಟ್ಟಿ, ಸದನವನ್ನು ಈ ರೀತಿ ನಡೆಸುವುದು ಸರಿಯಲ್ಲ, ಯಾರು ಪ್ರಶ್ನೆ ಕೇಳುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ, ಈ ಪದ್ಧತಿಗೆ ಇತಿಶ್ರೀ ಹಾಡುವಂತೆಯೂ, ಸದನ ಮುಂದೂಡಿ ಮಾತುಕತೆ ನಡೆಸುವಂತೆಯೂ ಮನವಿ ಮಾಡಿದರು.

‘ಭ್ರಷ್ಟಾಚಾರಿಗಳನ್ನು ಮಂತ್ರಿ ಮಾಡಿದ್ದೀರಿ, ಹೀಗೆ ಸದನ ಹೇಗೆ ನಡೆಸುತ್ತೀರಿ’ ಎಂದು ಘೋಷಣೆ ಕೂಗಿದ ವಿಪಕ್ಷಗಳು, ನಾಗೇಂದ್ರ ಅವರನ್ನು ವಜಾಗೊಳಿಸುವಂತೆ ಚಪ್ಪಾಳೆ ತಟ್ಟಿ ಘೋಷಣೆ ಕೂಗಿದವು.

ತಮಿಳುನಾಡು ಶಾಸಕರಿಗೆ ವಿಜಯ್ ಸರ್ಕಾರದ ಬಂಪರ್ ಕೊಡುಗೆ! ಸರ್ಕಾರಿ ಕಾರಿನ ಜತೆಗೆ 75 ಸಾವಿರ ರೂ. ವಾಹನ ಭತ್ಯೆ

ಚೆನ್ನೈ: ತಮಿಳುನಾಡು ಶಾಸಕರಿಗೆ ಸಿಎಂ ಜೋಸೆಫ್ ವಿಜಯ್ ಬಂಪರ್ ಕೊಡುಗೆಗಳನ್ನು ಘೋಷಿಸಿದ್ದಾರೆ. ಇನ್ಮುಂದೆ ರಾಜ್ಯದ ಎಲ್ಲಾ 234 ಶಾಸಕರಿಗೆ ಕಾರು, ಇಂಧನ ಮತ್ತು ನಿರ್ವಹಣಾ ವೆಚ್ಚಗಳಿಗಾಗಿ ಭತ್ಯೆ ಸಿಗಲಿದೆ.

ತಮಿಳುನಾಡು ಶಾಸಕರಿಗೆ ಕಾರು, ಇಂಧನ ಭತ್ಯೆ ಹಾಗೂ ಕಾರ್ಯದರ್ಶಿ ವ್ಯವಸ್ಥೆ ಸಿಗಲಿದೆ. ಶಾಸಕರು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಗಳಿಗೆ ಸಹಾಯವಾಗಲೆಂದು ಸರ್ಕಾರಿ ವಾಹನ ನೀಡಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ. ಜನರ ಸಮಸ್ಯೆಗಳನ್ನು ಪರಿಹರಿಸಲು ಶಾಸಕರು ತಮ್ಮ ಕ್ಷೇತ್ರಗಳಿಗೆ ಆಗಾಗ್ಗೆ ಪ್ರಯಾಣಿಸಬೇಕಾಗುತ್ತದೆ, ಸರ್ಕಾರಿ ವಾಹನವು ಪಾರದರ್ಶಕ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಖಚಿತಪಡಿಸುತ್ತದೆ ಎಂದು ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಆಯ್ಕೆಯಾದ ಮತ್ತು ಬಡ ಹಿನ್ನೆಲೆಯಿಂದ ಬಂದ ಹಲವಾರು ಶಾಸಕರಿದ್ದು, ಜನಪ್ರತಿನಿಧಿಯಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅವರಿಗೆ ಕಾರು ಅಗತ್ಯವಿದೆ ಎಂದು ಸಿಎಂ ಹೇಳಿದ್ದಾರೆ.

ಅಗತ್ಯವಿರುವ ಲಾಜಿಸ್ಟಿಕ್ಸ್ ಬೆಂಬಲವಿಲ್ಲದೆ ಶಾಸಕರು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ವಿಸಿಕೆ ಶಾಸಕ ಜ್ಯೋತಿಮಣಿ ಈ ಹಿಂದೆ ಹೇಳಿ, ಶಾಸಕರಿಗೆ ಕಾರುಗಳನ್ನು ನೀಡುವಂತೆ ವಿನಂತಿಸಿದ್ದರು. ಈ ಮನವಿಯ ಬೆನ್ನಲ್ಲೇ ಸರ್ಕಾರದಿಂದ ಈ ಘೋಷಣೆ ಹೊರಬಿದ್ದಿದೆ.

ವಿಜಯ್ ಸರ್ಕಾರವು ಶಾಸಕರಿಗೆ ಚಾಲಕ, ಇಂಧನ ಮತ್ತು ಕಾರುಗಳ ನಿರ್ವಹಣೆ ವೆಚ್ಚಗಳಿಗಾಗಿ ತಿಂಗಳಿಗೆ ₹75,000 ಭತ್ಯೆಯನ್ನು ಘೋಷಿಸಿದೆ. ಹೆಚ್ಚುವರಿಯಾಗಿ, ಶಾಸಕರು ಈಗ ಅಧಿಕೃತ ಕೆಲಸಕ್ಕಾಗಿ ಕಾರ್ಯದರ್ಶಿಯನ್ನು ನೇಮಿಸಿಕೊಳ್ಳಲು ₹25,000 ರಾಜ್ಯ ಅನುದಾನವನ್ನು ಪಡೆಯಲಿದ್ದಾರೆ. ಮುಖ್ಯಮಂತ್ರಿಯ ಈ ಘೋಷಣೆಯನ್ನು ಶಾಸಕರು ಸ್ವಾಗತಿಸಿದ್ದಾರೆ.

ಕೆ.ಆರ್. ಪುರಂ ತ್ರಿವಳಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಲವ್ವರ್ ಕೆನತ್ ವಿರುದ್ಧ ಮಾಫಿ ಸಾಕ್ಷಿಯಾಗಲು ಶ್ವೇತಾ ಸಿದ್ಧ!

0

ಬೆಂಗಳೂರು: ಕೆ.ಆರ್. ಪುರಂ ತ್ರಿವಳಿ ಕೊಲೆ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದೆ. ಪ್ರಕರಣದ ಪ್ರಮುಖ ಆರೋಪಿ ಶ್ವೇತಾ ಇದೀಗ ತನ್ನ ಲವ್ವರ್ ಕೆನತ್ ವಿರುದ್ಧವೇ ಸಾಕ್ಷಿ ಹೇಳಲು ಮುಂದೆ ಬಂದಿದ್ದು, ಮಾಫಿ ಸಾಕ್ಷಿ ಅಥವಾ ಅಪ್ರೂವರ್ ಆಗಲು ಅವಕಾಶ ನೀಡುವಂತೆ 29ನೇ ಎಸಿಜೆಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ತಾನು ಕೊಲೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿದ್ದೆ ಎಂದು ಒಪ್ಪಿಕೊಂಡಿರುವ ಶ್ವೇತಾ, ಕೊಲೆ ಮಾಡುವ ನಿರ್ಧಾರ ಕೆನತ್‌ನದ್ದಾಗಿತ್ತು ಮತ್ತು ನೇರವಾಗಿ ಕೊಲೆ ಮಾಡಿದ್ದು ಆತನೇ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಆದರೆ ತಾನು ಯಾರಿಗೂ ಚಾಕುವಿನಿಂದ ಇರಿದಿಲ್ಲ ಹಾಗೂ ನೇರವಾಗಿ ಕೊಲೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೆನತ್ ವಿರುದ್ಧ ಮಾಫಿ ಸಾಕ್ಷಿಯಾಗಿ ಹೇಳಿಕೆ ನೀಡಲು ತಾನು ಸಿದ್ಧಳಿದ್ದು, ಪ್ರಕರಣದಲ್ಲಿ ತನ್ನನ್ನು ಅಪ್ರೂವರ್ ಆಗಿ ಪರಿಗಣಿಸಬೇಕು ಎಂದು ಶ್ವೇತಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಆದರೆ ಶ್ವೇತಾ ಅರ್ಜಿಯನ್ನು ನ್ಯಾಯಾಲಯ ಸದ್ಯಕ್ಕೆ ಪರಿಗಣಿಸಿಲ್ಲ. ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಕೆಲವು ಫೊರೆನ್ಸಿಕ್ ವರದಿಗಳು ಬರಬೇಕಿದ್ದು, ಅವು ಲಭ್ಯವಾದ ಬಳಿಕ ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾದ ಬಳಿಕ ಮಾಫಿ ಸಾಕ್ಷಿಯಾಗಲು ಮತ್ತೆ ಅರ್ಜಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ. ಹೀಗಾಗಿ ಶ್ವೇತಾ ಸಲ್ಲಿಸಿದ್ದ ಅರ್ಜಿಯನ್ನು ಸದ್ಯಕ್ಕೆ ಇತ್ಯರ್ಥಪಡಿಸಿರುವ ಕೋರ್ಟ್, ಮುಂದಿನ ಹಂತದಲ್ಲಿ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.

ಕೋಲಾರ: ಹಾಲಿನ ದರ ಹೆಚ್ಚಳಕ್ಕೆ ಆಗ್ರಹಿಸಿ ಹಾಲು ಉತ್ಪಾದಕರ ಬೃಹತ್ ಪ್ರತಿಭಟನೆ

0

ಕೋಲಾರ: ಹಾಲಿನ ಖರೀದಿ ದರ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೋಲಾರದಲ್ಲಿ ಹಾಲು ಉತ್ಪಾದಕರು ಬೃಹತ್ ಪ್ರತಿಭಟನೆ ನಡೆಸಿದರು. ಸಾವಿರಾರು ಹಾಲು ಉತ್ಪಾದಕರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತರಿಂದ ಖರೀದಿಸುವ ಹಾಲಿನ ದರವನ್ನು ಲೀಟರ್‌ಗೆ ₹10ಕ್ಕೆ ಹೆಚ್ಚಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಇದರ ಜೊತೆಗೆ ಪಶು ಆಹಾರದ ಬೆಲೆಯನ್ನು ಕಡಿಮೆ ಮಾಡಬೇಕು ಹಾಗೂ ಹಾಲು ಉತ್ಪಾದಕರಿಗೆ ನೀಡುತ್ತಿರುವ ₹5 ಪ್ರೋತ್ಸಾಹಧನವನ್ನು ₹7ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಮೈಸೂರು ದಸರಾ ಗಜಪಡೆಯಿಂದ ‘ಕ್ಯಾಪ್ಟನ್’ ಅಭಿಮನ್ಯು ಔಟ್: ಅಂಬಾರಿ ಹೊತ್ತ ಗಜರಾಜನಿಗೆ ವಯಸ್ಸಿನ ಬ್ರೇಕ್!

0

ಮೈಸೂರು: ಮೈಸೂರು ದಸರಾ ವೈಭವಕ್ಕೆ ವರ್ಷಗಳ ಕಾಲ ರಾಜಗಾಂಭೀರ್ಯ ತುಂಬಿದ್ದ ಅಭಿಮನ್ಯು ಈ ಬಾರಿ ಗಜಪಡೆಯ ಭಾಗವಾಗುವುದಿಲ್ಲ. 60 ವರ್ಷ ವಯಸ್ಸಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಭಿಮನ್ಯುವನ್ನು ದಸರಾ ಆನೆಗಳ ಪಟ್ಟಿಯಿಂದ ಕೈಬಿಟ್ಟಿದ್ದು, ಸತತ ಆರು ಬಾರಿ ಚಿನ್ನದ ಅಂಬಾರಿ ಹೊತ್ತ ಗಜರಾಜನ ದಸರಾ ಕರ್ತವ್ಯಕ್ಕೆ ಅಂತ್ಯ ಹಾಡಿದೆ.

ಚಿನ್ನದ ಅಂಬಾರಿ ಹೊತ್ತು ಮೈಸೂರು ರಾಜಬೀದಿಯಲ್ಲಿ ಹೆಜ್ಜೆ ಹಾಕುತ್ತಿದ್ದ ಅಭಿಮನ್ಯುವಿನ ಗಾಂಭೀರ್ಯ ದಸರಾ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು. ಆರು ಬಾರಿ ಅಂಬಾರಿ ಹೊತ್ತಿದ್ದ ಈ ಗಜರಾಜನಿಗೆ ಮೈಸೂರು ಜನರಲ್ಲೂ ಅಪಾರ ಅಭಿಮಾನವಿದೆ. ಆದರೆ ವಯಸ್ಸಿನ ಕಾರಣದಿಂದ ಈ ಬಾರಿ ಅಭಿಮನ್ಯುವಿಗೆ ದಸರಾ ಕರ್ತವ್ಯದಿಂದ ವಿಶ್ರಾಂತಿ ನೀಡಲಾಗಿದೆ.

ಅಭಿಮನ್ಯುವಿನ ಖ್ಯಾತಿ ಅಂಬಾರಿ ಹೊರುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಕಾಡಾನೆ ಸೆರೆ ಕಾರ್ಯಾಚರಣೆಗಳಲ್ಲಿ ಪರಿಣತಿ ಹೊಂದಿದ್ದ ಆತ ‘ಕೂಂಬಿಂಗ್ ಸ್ಪೆಷಲಿಸ್ಟ್’ ಎಂದೇ ಗುರುತಿಸಿಕೊಂಡಿದ್ದ. ಅಪಾಯಕಾರಿ ಕಾಡಾನೆಗಳನ್ನು ನಿಯಂತ್ರಿಸುವ ಕಾರ್ಯಾಚರಣೆಗಳಲ್ಲಿ ಅರಣ್ಯ ಇಲಾಖೆಯ ಪ್ರಮುಖ ಆನೆಗಳಲ್ಲಿ ಒಂದಾಗಿದ್ದ.

ಅಭಿಮನ್ಯುವಿನ ಸ್ಥಾನವನ್ನು ಸದ್ಯ ಖಾಲಿ ಇಡಲಾಗಿದ್ದು, ಭೀಮ ಮತ್ತು ಹರ್ಷ ಆನೆಗಳನ್ನು ಮೀಸಲು ಆನೆಗಳಾಗಿ ಇರಿಸಲಾಗಿದೆ. ದಸರಾ ಗಜಪಡೆಯ ಮೊದಲ ಹಂತದಲ್ಲಿ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಲಕ್ಷ್ಮೀ ಹಾಗೂ ಕಾವೇರಿ ಆಗಮಿಸಲಿವೆ. ಎರಡನೇ ಹಂತದಲ್ಲಿ ರೂಪ, ಚೈತ್ರ ಹಾಗೂ ಶ್ರೀಕಂಠ ಗಜಪಡೆ ಸೇರಲಿವೆ.

ಅಭಿಮನ್ಯು ಈ ಬಾರಿ ಚಿನ್ನದ ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಸಾಗದಿದ್ದರೂ, ಮೈಸೂರು ದಸರಾ ಇತಿಹಾಸದಲ್ಲಿ ಆತನ ಸ್ಥಾನ ಅಳಿಸಲಾಗದು. ಅಂಬಾರಿಯ ಭಾರ ಹೊತ್ತು ರಾಜಬೀದಿಯಲ್ಲಿ ಹೆಜ್ಜೆ ಹಾಕಿದ ಆ ಗಜರಾಜನ ನೆನಪು ಮಾತ್ರ ಮೈಸೂರು ಜನರ ಮನದಲ್ಲಿ ಎಂದಿಗೂ ಉಳಿಯಲಿದೆ.

‘ಬಿಜೆಪಿಗೆ, ರಾಜ್ಯಕ್ಕೆ ತುಂಬಲಾರದ ನಷ್ಟ’: ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನಿಧನಕ್ಕೆ ಗಣ್ಯರ ಕಂಬನಿ

0

ಬೆಂಗಳೂರು: ಮಾಜಿ ಶಿಕ್ಷಣ ಸಚಿವ ಹಾಗೂ ತಿಪಟೂರು ಮಾಜಿ ಶಾಸಕ ಬಿ.ಸಿ. ನಾಗೇಶ್ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ನಾಯಕರು ನಾಗೇಶ್ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

ಬಿ.ಸಿ. ನಾಗೇಶ್ ಅವರು ಅಜಾತಶತ್ರು ಸ್ವಭಾವದವರಾಗಿದ್ದು, ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುತ್ತಿದ್ದರು. ಅವರ ಅಗಲಿಕೆ ಬಿಜೆಪಿಗೆ ತುಂಬಲಾರದ ನಷ್ಟ ತಂದಿದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ದುಃಖಿತ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ಎಂಎಲ್‌ಸಿ ಸಿ.ಟಿ. ರವಿ ಅವರು ನಾಗೇಶ್ ಅವರನ್ನು ಮೃದು ಹೃದಯದ ವ್ಯಕ್ತಿ ಹಾಗೂ ರಾಜಕೀಯವನ್ನು ಮೀರಿ ಜನಪ್ರೀತಿ ಗಳಿಸಿದ್ದ ನಾಯಕ ಎಂದು ಸ್ಮರಿಸಿದ್ದಾರೆ. ಶಾಸಕರಾಗುವುದಕ್ಕೂ ಮುನ್ನವೇ ಎಬಿವಿಪಿಯಲ್ಲಿ ಸೇವೆ ಸಲ್ಲಿಸಿದ್ದ ಅವರು ಕೊನೆಯವರೆಗೂ ಪಕ್ಷ ಮತ್ತು ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿರುವುದು ನೋವಿನ ಸಂಗತಿ ಎಂದು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಗೇಶ್ ಅವರನ್ನು ‘ಸರಳ, ಸಜ್ಜನ ಜೆಂಟಲ್‌ಮ್ಯಾನ್ ಇನ್ ಪಾಲಿಟಿಕ್ಸ್’ ಎಂದು ಬಣ್ಣಿಸಿದ್ದಾರೆ. ತಿಪಟೂರು ಕ್ಷೇತ್ರದ ಅಭಿವೃದ್ಧಿಗೆ ನಾಗೇಶ್ ಸಾಕಷ್ಟು ಶ್ರಮಿಸಿದ್ದರು. ವಿಶೇಷವಾಗಿ ನೀರಾವರಿ ಯೋಜನೆಗಳಿಗಾಗಿ ಕೆಲಸ ಮಾಡಿದ್ದರು ಎಂದು ಸ್ಮರಿಸಿದ್ದಾರೆ.

ತಮ್ಮ ಮುಖ್ಯಮಂತ್ರಿತ್ವದ ಅವಧಿಯಲ್ಲಿ ನಾಗೇಶ್ ಶಿಕ್ಷಣ ಸಚಿವರಾಗಿ ಹೊಸ ಶಿಕ್ಷಣ ನೀತಿ ಜಾರಿಗೆ ತರಲು ಶ್ರಮಿಸಿದ್ದರು. ಅವರ ನಿಧನ ಬಿಜೆಪಿಗೆ ಮಾತ್ರವಲ್ಲದೆ ರಾಜ್ಯಕ್ಕೂ ಹಾಗೂ ವೈಯಕ್ತಿಕವಾಗಿ ತಮ್ಮಿಗೂ ದೊಡ್ಡ ನಷ್ಟ ಎಂದು ಬೊಮ್ಮಾಯಿ ಹೇಳಿದ್ದಾರೆ.

67 ವರ್ಷದ ಬಿ.ಸಿ. ನಾಗೇಶ್ ಅವರು ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಬೆಂಗಳೂರಿನ ಜಯನಗರದಲ್ಲಿರುವ ಪುತ್ರಿಯ ನಿವಾಸದಲ್ಲಿ ಮಂಗಳವಾರ ನಿಧನರಾದರು.

ನಾಗೇಶ್ ಅವರ ಪಾರ್ಥಿವ ಶರೀರವನ್ನು ಮಲ್ಲೇಶ್ವರಂನ ಬಿಜೆಪಿ ಕಚೇರಿಗೆ ತರಲಾಗಿದ್ದು, ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಿ.ವೈ. ವಿಜಯೇಂದ್ರ, ಸಿ.ಟಿ. ರವಿ, ರವಿಕುಮಾರ್ ಸೇರಿದಂತೆ ಹಲವು ಬಿಜೆಪಿ ನಾಯಕರು ಅಂತಿಮ ದರ್ಶನ ಪಡೆದಿದ್ದಾರೆ.

ನಾಗೇಶ್ ಅವರ ಅಂತ್ಯಕ್ರಿಯೆ ತಿಪಟೂರಿನ ಸ್ವಗೃಹದಲ್ಲಿ ನಡೆಯಲಿದೆ.

ಬಿಡದಿಯಲ್ಲಿ ₹5 ಕೋಟಿ ಮೌಲ್ಯದ ನಕಲಿ ಔಷಧಿ ವಶಕ್ಕೆ: ಸಚಿವ ಯು.ಟಿ. ಖಾದರ್ ಹೇಳಿದ್ದೇನು?

0

ಬೆಂಗಳೂರು: ನಕಲಿ ಔಷಧಿ ತಯಾರಿಕೆ ಹಾಗೂ ಪೂರೈಕೆ ಆರೋಪದ ಹಿನ್ನೆಲೆಯಲ್ಲಿ ನಡೆದ ದಾಳಿಯ ಬೆನ್ನಲ್ಲೇ ಆರೋಗ್ಯ ಸಚಿವ ಯು.ಟಿ. ಖಾದರ್ ಸುದ್ದಿಗೋಷ್ಠಿ ನಡೆಸಿ ಪ್ರಕರಣದ ಕುರಿತು ಹಲವು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಆಹಾರ ಸುರಕ್ಷತಾ ಆಯುಕ್ತ ಶ್ರೀನಿವಾಸ್, ಆರೋಗ್ಯ ಇಲಾಖೆ ಕಾರ್ಯದರ್ಶಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ಬಿಡದಿಯಲ್ಲಿ ನಿನ್ನೆ ನಡೆದ ಕಾರ್ಯಾಚರಣೆ ವೇಳೆ ಭಾರೀ ಪ್ರಮಾಣದ ಔಷಧಿಗಳನ್ನು ವಶಕ್ಕೆ ಪಡೆಯಲಾಗಿದೆ. ಬೀಟ್ ಪೊಲೀಸರಿಂದ ಅಧಿಕಾರಿಗಳಿಗೆ ಮಾಹಿತಿ ದೊರೆತ ತಕ್ಷಣ ಕಾರ್ಯಾಚರಣೆ ನಡೆಸಲಾಗಿದ್ದು, ದಾಳಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಔಷಧಿಗಳು ಪತ್ತೆಯಾಗಿವೆ. ಕಾರ್ಯಾಚರಣೆಯಲ್ಲಿ ವಿಳಂಬವಾಗಿದ್ದರೆ ಔಷಧಿಗಳನ್ನು ಬೇರೆಡೆಗೆ ಸಾಗಿಸುವ ಸಾಧ್ಯತೆ ಇತ್ತು ಎಂದು ಸಚಿವರು ತಿಳಿಸಿದ್ದಾರೆ.

ಒಂದೇ ದಿನ ಸುಮಾರು ₹5 ಕೋಟಿ ಮೌಲ್ಯದ ಔಷಧಿಗಳನ್ನು ರವಾನೆ ಮಾಡಲಾಗುತ್ತಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ.

ಸಿದ್ಧಯ್ಯ ಎಂಬುವರಿಗೆ ಸೇರಿದ ಫಾರ್ಮ್‌ಹೌಸ್‌ ಅನ್ನು ಪ್ರಶಾಂತ್ ಎಂಬುವರಿಗೆ ಲೀಸ್‌ಗೆ ನೀಡಲಾಗಿತ್ತು ಎನ್ನಲಾಗಿದೆ. ಇದೇ ಸ್ಥಳದಲ್ಲಿ ಪ್ರಭು ಎಂಬ ವ್ಯಕ್ತಿ ನಕಲಿ ಔಷಧಿ ತಯಾರಿಕೆ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದಲ್ಲಿ ಸಿಕ್ಕಿಬಿದ್ದಿದ್ದಾನೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ತೆಲಂಗಾಣ ಹಾಗೂ ಹಿಮಾಚಲ ಪ್ರದೇಶದಿಂದ ಕಡಿಮೆ ಬೆಲೆಗೆ ಔಷಧಿಗಳನ್ನು ತರಿಸಲಾಗುತ್ತಿತ್ತು. ಬಳಿಕ ಅವುಗಳ ಮೇಲೆ ಸ್ಥಳೀಯವಾಗಿ ಲೇಬಲ್‌ಗಳನ್ನು ಅಂಟಿಸಿ, ಪ್ರತಿಷ್ಠಿತ ಔಷಧಿ ಕಂಪನಿಗಳ ಉತ್ಪನ್ನಗಳಂತೆ ಬಿಂಬಿಸಿ ಆಸ್ಪತ್ರೆಗಳು ಹಾಗೂ ಮೆಡಿಕಲ್‌ಗಳಿಗೆ ಪೂರೈಕೆ ಮಾಡಲಾಗುತ್ತಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಸಚಿವರು ಹೇಳಿದ್ದಾರೆ. ಫೋಜ್ ಲೇಬಲ್, ಹಿಜ್ಲಮ, ಕ್ರವಿಟಾಜ್ ಸೇರಿದಂತೆ ಹಲವು ಔಷಧಿಗಳ ಹೆಸರಿನಲ್ಲಿ ಉತ್ಪನ್ನಗಳನ್ನು ತಯಾರಿಸಲಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

ಈ ಪ್ರಕರಣದ ತನಿಖೆಯನ್ನು ಎಸ್‌ಪಿ ನೇತೃತ್ವದಲ್ಲಿ ನಡೆಸಲಾಗುತ್ತಿದೆ. ಈ ಕುರಿತು ಈಗಾಗಲೇ ಗೃಹ ಸಚಿವರನ್ನು ಭೇಟಿ ಮಾಡಿ ಮಾಹಿತಿ ನೀಡಿರುವುದಾಗಿ ಯು.ಟಿ. ಖಾದರ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಅವರನ್ನೂ ಭೇಟಿ ಮಾಡಿ ಪ್ರಕರಣದ ಕುರಿತು ಚರ್ಚಿಸುವುದಾಗಿ ಹೇಳಿದ್ದಾರೆ.

ಇದು ಕೇವಲ ಸ್ಥಳೀಯ ಮಟ್ಟದ ಪ್ರಕರಣವಲ್ಲ. ಇದರ ಹಿಂದೆ ಅಂತರರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ದೊಡ್ಡ ಜಾಲ ಇರುವ ಸಾಧ್ಯತೆಯಿದೆ ಎಂದು ಸಚಿವರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಜಾಲದ ಹಿಂದೆ ಯಾರಿದ್ದಾರೆ? ಔಷಧಿಗಳು ಎಲ್ಲಿಂದ ಬಂದವು? ದಂಧೆಯಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ? ಜಾಲದ ಸಂಪರ್ಕ ಎಲ್ಲಿಯವರೆಗೆ ಇದೆ? ಯಾವೆಲ್ಲ ಕಡೆ ಈ ಔಷಧಿಗಳನ್ನು ಪೂರೈಕೆ ಮಾಡಲಾಗಿದೆ? ಕಳೆದ ಎರಡು ವರ್ಷಗಳಲ್ಲಿ ಎಷ್ಟು ಮಂದಿ ಈ ಔಷಧಿಗಳನ್ನು ಬಳಸಿದ್ದಾರೆ? ಎಂಬ ಎಲ್ಲಾ ಪ್ರಶ್ನೆಗಳಿಗೂ ತನಿಖೆಯ ಮೂಲಕ ಉತ್ತರ ಕಂಡುಕೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಅಲ್ಲದೆ, ನಕಲಿ ಔಷಧಿಗಳ ಬಳಕೆಯಿಂದ ಯಾರಾದರೂ ಮೃತಪಟ್ಟಿದ್ದಾರೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಪ್ರಕರಣದ ಕುರಿತು ವಿಧಾನಮಂಡಲದ ಸದನದಲ್ಲೂ ಚರ್ಚೆ ನಡೆಸಲಾಗುವುದು. ಕೇಂದ್ರ ಸರ್ಕಾರಕ್ಕೂ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ನೀಡಲಾಗುವುದು ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ.

ಇದೇ ವೇಳೆ ನಕಲಿ ಔಷಧಿ ದಂಧೆಯ ಕುರಿತು ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಿ ಕಾರ್ಯಾಚರಣೆಗೆ ನೆರವಾದ ಬೀಟ್ ಪೊಲೀಸರ ಕಾರ್ಯವನ್ನು ಸಚಿವರು ಶ್ಲಾಘಿಸಿದ್ದಾರೆ. ಮಾಹಿತಿ ನೀಡಿ ಕಾರ್ಯಾಚರಣೆಗೆ ಸಹಕರಿಸಿದ ಪೊಲೀಸರಿಗೆ ವಿಶೇಷ ಬಹುಮಾನ ನೀಡುವುದಾಗಿ ಯು.ಟಿ. ಖಾದರ್ ಘೋಷಿಸಿದ್ದಾರೆ.

ಫುಟ್ ಪಾತ್ ಮೇಲೆ ವಾಹನ ಚಲಾಯಿಸಿದ್ರೆ ಇನ್ಮುಂದೆ 5 ಸಾವಿರ ರೂ. ದಂಡ! ಸಾರಿಗೆ ಇಲಾಖೆಯಿಂದ ಸರ್ಕಾರಕ್ಕೆ ಮಹತ್ವದ ಪ್ರಸ್ತಾವನೆ

0

ಬೆಂಗಳೂರು: ಫುಟ್‌ಪಾತ್ ಮೇಲೆ ವಾಹನ ಚಲಾಯಿಸುವ ಸವಾರರಿಗೆ ಇನ್ಮುಂದೆ ಭಾರಿ ದಂಡ ಬೀಳುವ ಸಾಧ್ಯತೆ ಇದೆ. ನಿಯಮ ಉಲ್ಲಂಘಿಸುವವರಿಗೆ ಈಗಿರುವ ದಂಡಕ್ಕಿಂತ ಹಲವು ಪಟ್ಟು ಹೆಚ್ಚಿಸಲು ಸಾರಿಗೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಸದ್ಯ ಫುಟ್‌ಪಾತ್ ಮೇಲೆ ವಾಹನ ಚಲಾಯಿಸಿದರೆ ₹500 ದಂಡ ವಿಧಿಸಲಾಗುತ್ತಿದೆ. ಆದರೆ ಮುಂಬರುವ ದಿನಗಳಲ್ಲಿ ಮೊದಲ ಬಾರಿ ಈ ನಿಯಮ ಉಲ್ಲಂಘನೆ ಮಾಡಿದವರಿಗೆ ₹5,000ಕ್ಕೆ ಹೆಚ್ಚಿಸುವಂತೆ ಸಾರಿಗೆ ಇಲಾಖೆ ಪ್ರಸ್ತಾವನೆ ನೀಡಿದೆ. ಇದೇ ನಿಯಮವನ್ನು ಎರಡನೇ ಬಾರಿ ಉಲ್ಲಂಘಿಸಿದರೆ ₹10,000 ದಂಡ ವಿಧಿಸುವಂತೆ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ಯಾವುದೇ ರೀತಿಯ ವಾಹನವನ್ನು ಫುಟ್‌ಪಾತ್ ಮೇಲೆ ಚಲಾಯಿಸಿದರೂ ಈ ದಂಡ ಅನ್ವಯಿಸುವ ಸಾಧ್ಯತೆ ಇದೆ.

ಬೆಂಗಳೂರಿನ ಹಲವು ಭಾಗಗಳಲ್ಲಿ ಫುಟ್‌ಪಾತ್ ಮೇಲೆ ವಾಹನಗಳ ಸಂಚಾರ ಹೆಚ್ಚಾಗಿದ್ದು, ಇದರಿಂದ ಪಾದಚಾರಿಗಳು ರಸ್ತೆಗೆ ಇಳಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿ ಅಪಘಾತದ ಆತಂಕವೂ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ಹೆಚ್ಚಿಸುವ ಪ್ರಸ್ತಾವನೆಯನ್ನು ಸಾರಿಗೆ ಇಲಾಖೆ ಸಿದ್ಧಪಡಿಸಿದೆ.

ಈ ಸಂಬಂಧ ಸಾರಿಗೆ ಆಯುಕ್ತರು ಸರ್ಕಾರದ ಸಾರಿಗೆ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಪ್ರಸ್ತಾವನೆಗೆ ಕಾನೂನು ಇಲಾಖೆಯ ಅಭಿಪ್ರಾಯ ಪಡೆದ ಬಳಿಕ ಅಂತಿಮ ಆದೇಶ ಹೊರಡಿಸಬಹುದು ಎಂದು ಸಾರಿಗೆ ಇಲಾಖೆ ತಿಳಿಸಿದೆ. ಸರ್ಕಾರದ ಅಂತಿಮ ಆದೇಶದ ಬಳಿಕವಷ್ಟೇ ಹೊಸ ದಂಡ ಮೊತ್ತ ಜಾರಿಗೆ ಬರಲಿದೆ.

ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದ ಡೇವಿಡ್ ವಾರ್ನರ್ʼಗೆ ಸಂಕಷ್ಟ: ನ್ಯಾಯಾಲಯದಿಂದ ಭಾರಿ ದಂಡ ವಿಧಿಸಿ ಆದೇಶ

0

ಸಿಡ್ನಿ: ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಪ್ರಕರಣದಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರನ್ನು ಸಿಡ್ನಿಯ ವೇವರ್ಲಿ ಸ್ಥಳೀಯ ನ್ಯಾಯಾಲಯ ತಪ್ಪಿತಸ್ಥರೆಂದು ಘೋಷಿಸಿದೆ. ಪ್ರಕರಣದಲ್ಲಿ ವಾರ್ನರ್‌ಗೆ 1,500 ಆಸ್ಟ್ರೇಲಿಯನ್ ಡಾಲರ್‌ಗಳ ದಂಡ ವಿಧಿಸಲಾಗಿದ್ದು, ವಾಹನ ಚಲಾಯಿಸಲು ಕಠಿಣ ಷರತ್ತುಗಳನ್ನು ಕೂಡ ನ್ಯಾಯಾಲಯ ವಿಧಿಸಿದೆ.

ಏಪ್ರಿಲ್ 5ರಂದು ಈಸ್ಟರ್ ದಿನದಂದು ಡೇವಿಡ್ ವಾರ್ನರ್ ಮದ್ಯಪಾನ ಮಾಡಿ ಕಾರು ಚಲಾಯಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಪೊಲೀಸರನ್ನು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಅವರು ಕಾರನ್ನು ನಿಲ್ಲಿಸಿ, ತಮ್ಮೊಂದಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಂದಿಗೆ ಆಸನಗಳನ್ನು ಬದಲಾಯಿಸಲು ಯತ್ನಿಸಿದ್ದರು ಎಂದು ಪ್ರಕರಣದ ವಿಚಾರಣೆಯಲ್ಲಿ ತಿಳಿದುಬಂದಿದೆ.

ಪೊಲೀಸರು ವಾರ್ನರ್ ಅವರನ್ನು ವಶಕ್ಕೆ ಪಡೆದು ಮದ್ಯಪಾನ ಪರೀಕ್ಷೆ ನಡೆಸಿದಾಗ, ಅವರ ದೇಹದಲ್ಲಿನ ಆಲ್ಕೋಹಾಲ್ ಪ್ರಮಾಣ ಕಾನೂನುಬದ್ಧ ಮಿತಿಗಿಂತ ಎರಡು ಪಟ್ಟು ಹೆಚ್ಚಾಗಿತ್ತು ಎಂಬುದು ದೃಢಪಟ್ಟಿದೆ.

ಈ ಪ್ರಕರಣದ ಅಂತಿಮ ವಿಚಾರಣೆ ಸಿಡ್ನಿಯ ವೇವರ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ನಡೆದಿದ್ದು, ಘಟನೆಯ ಸಂದರ್ಭದಲ್ಲಿ ಕಾರಿನಲ್ಲಿ ಮಕ್ಕಳು ಕೂಡ ಇದ್ದರು ಎಂಬ ಅಂಶವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ವಾರ್ನರ್ ಅವರ ವಾಹನಕ್ಕೆ 12 ತಿಂಗಳ ಕಾಲ ಬ್ರೀಥಲೈಜರ್ ಲಾಕ್ ಸಾಧನವನ್ನು ಅಳವಡಿಸುವಂತೆ ನ್ಯಾಯಾಲಯ ಆದೇಶಿಸಿದೆ.

ವಿಚಾರಣೆ ವೇಳೆ ವಾರ್ನರ್ ಪರ ವಕೀಲರು, ಪ್ರಕರಣಕ್ಕೆ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ದೊರೆತಿರುವುದರಿಂದ ವಾರ್ನರ್ ಈಗಾಗಲೇ ಸಾಕಷ್ಟು ನಷ್ಟ ಅನುಭವಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ಪ್ರಕರಣವು ಅವರ ವಾಣಿಜ್ಯ ಒಪ್ಪಂದಗಳ ಮೇಲೂ ಪರಿಣಾಮ ಬೀರಬಹುದು. ವಿಶೇಷವಾಗಿ ಭಾರತ ಮತ್ತು ಬಾಂಗ್ಲಾದೇಶ ಸೇರಿದಂತೆ ವಿವಿಧ ದೇಶಗಳಲ್ಲಿನ ಟಿ20 ಫ್ರಾಂಚೈಸಿ ಲೀಗ್‌ಗಳಲ್ಲಿ ಆಡುವ ಅವಕಾಶಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಾದಿಸಿದರು.

ಆದರೆ, ನ್ಯಾಯಾಧೀಶ ಕ್ಲೇರ್ ಫರ್ನಾನ್ ಈ ವಾದಗಳನ್ನು ತಿರಸ್ಕರಿಸಿದರು. ಸಾರ್ವಜನಿಕ ಸುರಕ್ಷತೆಯೇ ನ್ಯಾಯಾಲಯದ ಮೊದಲ ಆದ್ಯತೆ ಎಂದು ಅವರು ಸ್ಪಷ್ಟಪಡಿಸಿದರು. ಅದರಲ್ಲೂ ಘಟನೆಯ ಸಂದರ್ಭದಲ್ಲಿ ಕಾರಿನಲ್ಲಿ ಮಕ್ಕಳು ಇದ್ದರು ಎಂಬುದನ್ನು ನ್ಯಾಯಾಧೀಶರು ಪ್ರಮುಖವಾಗಿ ಪರಿಗಣಿಸಿದರು.

ಏನಿದು ಬ್ರೀಥಲೈಜರ್ ಲಾಕ್?

ನ್ಯಾಯಾಲಯದ ಆದೇಶದಂತೆ ಡೇವಿಡ್ ವಾರ್ನರ್ ಅವರ ಕಾರಿನಲ್ಲಿ 12 ತಿಂಗಳ ಕಾಲ ಬ್ರೀಥಲೈಜರ್ ಲಾಕ್ ಸಾಧನ ಅಳವಡಿಸಲಾಗುತ್ತದೆ. ಇದು ವಾಹನದ ಡ್ಯಾಶ್‌ಬೋರ್ಡ್‌ನಲ್ಲಿ ಅಳವಡಿಸುವ ಸುರಕ್ಷತಾ ಸಾಧನವಾಗಿದ್ದು, ಕಾರು ಸ್ಟಾರ್ಟ್ ಮಾಡುವ ಮೊದಲು ಚಾಲಕ ತನ್ನ ಉಸಿರಿನ ಮಾದರಿಯನ್ನು ನೀಡಬೇಕಾಗುತ್ತದೆ.

ಚಾಲಕನ ಉಸಿರಿನಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಆಲ್ಕೋಹಾಲ್ ಪತ್ತೆಯಾದರೆ, ಸಾಧನವು ಕಾರಿನ ಎಂಜಿನ್ ಸ್ಟಾರ್ಟ್ ಆಗುವುದನ್ನು ತಡೆಯುತ್ತದೆ. ಹೀಗಾಗಿ ವಾರ್ನರ್ ಮುಂದಿನ 12 ತಿಂಗಳು ಈ ಸಾಧನ ಅಳವಡಿಸಿರುವ ವಾಹನದಲ್ಲೇ ಚಾಲನೆ ಮಾಡಬೇಕಾಗುತ್ತದೆ.