ಹಾಸನ:- ನಗರದ ಎಟಿಎಂಗಳಿಗೆ ಹಾಕಬೇಕಿದ್ದ ಕೋಟಿ ಕೋಟಿ ರೂ. ಹಣವನ್ನು ದುರುಪಯೋಗಪಡಿಸಿಕೊಂಡು ಕಂಪನಿಗೆ ಸುಳ್ಳು ಲೆಕ್ಕ ನೀಡಿರುವ ಗಂಭೀರ ಆರೋಪ ಕ್ಯಾಶ್ ಮ್ಯಾನೆಜ್ಮೆಂಟ್ ಸರ್ವಿಸಸ್ ಕಂಪನಿ ವಿರುದ್ಧ ಕೇಳಿಬಂದಿದೆ.
ಹಾಸನ ನಗರದ ಗೌರಿಕೊಪ್ಪಲಿಯಲ್ಲಿರುವ ಸಿಎಂಎಸ್ ಕಚೇರಿಯಿಂದ ಪ್ರತಿದಿನ ಕೆನರಾ ಬ್ಯಾಂಕ್, ಎಸ್ಬಿಐ, ಬ್ಯಾಂಕ್ ಆಫ್ ಬರೋಡ, ಐಡಿಬಿಐ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಹಾಗೂ ಆಕ್ಸಿಸ್ ಬ್ಯಾಂಕ್ ಸೇರಿ ಒಟ್ಟು 15 ಬ್ಯಾಂಕ್ಗಳ 28 ಎಟಿಎಂಗಳಿಗೆ ಹಣ ತುಂಬಲಾಗುತ್ತಿತ್ತು. ಫೆಬ್ರವರಿ 6ರಂದು ನಡೆದ ಆಡಿಟ್ನಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿರಲಿಲ್ಲ. ಆದರೆ ಫೆ.18ರಂದು ನಡೆದ ಮರು ಆಡಿಟ್ನಲ್ಲಿ 2 ಕೋಟಿಗೂ ಅಧಿಕ ಹಣದ ಕೊರತೆ ಬೆಳಕಿಗೆ ಬಂದಿದ್ದು, ಕಂಪನಿಯ ಸಿಬ್ಬಂದಿ ನಂದೀಶ್ ಹಾಗೂ ಮಧು ಹಣ ಹಾಕದೇ ಹಾಕಿರುವುದಾಗಿ ಎಂಟ್ರಿ ಮಾಡಿ ನಗದು ಲಪಟಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆ ಬೆಂಗಳೂರಿನಿಂದ ಸಿಎಂಎಸ್ ಮೇಲಾಧಿಕಾರಿಗಳು ಹಾಸನಕ್ಕೆ ಆಗಮಿಸಿ ವಿಶೇಷ ಆಡಿಟ್ ನಡೆಸುತ್ತಿದ್ದು, ಪರಿಶೀಲನೆ ಬಳಿಕ ಸಂಪೂರ್ಣ ಮೊತ್ತ ಸ್ಪಷ್ಟವಾಗಲಿದ್ದು, ಬಳಿಕ ಪೊಲೀಸರಿಗೆ ದೂರು ನೀಡಲು ತೀರ್ಮಾನಿಸಲಾಗಿದೆ.

