Home Blog Page 2077

ಸಂಡೂರಿನಲ್ಲಿ ಹಣ ಬಲ ಕೆಲಸ ಮಾಡಿದೆ, ಸೋಲಿನ‌‌‌ ಹೊಣೆ ನಾನೇ ಹೊರುವೆ: ಬಂಗಾರು ಹನುಮಂತು

0

ಸಂಡೂರು: ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು ಗೆಲ್ಲುವುದು ಬಹುತೇಕ ಖಚಿತವಾಗಿದೆ. ಇದರ ಬೆನ್ನಲ್ಲೇ ಸಂಡೂರಿನಲ್ಲಿ ಹಣ ಬಲ ಕೆಲಸ ಮಾಡಿದೆ. ಸೋಲಿನ‌‌‌ ಹೊಣೆ ನಾನೇ ಹೊರುವೆ ಎಂದು ಬಿಜೆಪಿ‌ ಅಭ್ಯರ್ಥಿ ಬಂಗಾರು ಹನುಮಂತು ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಪಕ್ಷದ ಪರವಾಗಿ ದುಡಿದ ಕಾರ್ಯಕರ್ತರಿಗೆ ಧನ್ಯವಾದಗಳು.

ಕಾಂಗ್ರೆಸ್ ಹಣ ಹಂಚಿಕೆ‌ ಮಾಡದೆ ಇದ್ರೆ ಗೆದ್ದುತ್ತಿದ್ದೆ. ಸಿಎಂ ಅವರ ಕಾರ್ಯಕ್ರಮಕ್ಕೆ 500 ರೂಪಾಯಿ ಹಣ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದರು. ಇದು ನಮಗೆ ಪೆಟ್ಟು ಕೊಟ್ಟಿತು. ನನ್ನ ಸೋಲನ್ನು ಯಾರ ಮೇಲೂ ಹಾಕಲ್ಲ. ನನ್ನ ಸೋಲನ್ನು ನಾನೇ ಒಪ್ಪಿಕೊಳ್ಳುತ್ತೇನೆ. ಮುಂದಿನ ಚುನಾವಣೆಯಲ್ಲಿ ನಾನು ಅಥವಾ ದಿವಕರ್ ಆಗಲಿ ಮತ್ತೆ ಸ್ಪರ್ಧೆ ಮಾಡುತ್ತೇವೆ ಎಂದು ಬಂಗಾರು ಹನುಮಂತು ಹೇಳಿದ್ದಾರೆ.

Annapurna Tukaram: ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಂ ಜಯಭೇರಿ!?

0

ಸಂಡೂರು: ಸಂಡೂರು ವಿಧಾನಸಭೆ ಉಪಚುನಾವಣೆಯ ಫಲಿತಾಂಶ ಹೊರಬೀಳಲಿದೆ.. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಬಂದಿರುವ ಕಾಂಗ್ರೆಸ್ ಅಭ್ಯರ್ಥಿ ಇ. ಅನ್ನಪೂರ್ಣ ಅವರು ಇದೀಗ ಗೆಲುವಿನತ್ತ ದಾಪುಗಾಲು ಇಡುತ್ತಿದ್ದಾರೆ.

ಹೌದು ಅಂಚೆ ಮತ ಎಣಿಕೆಯಿಂದ ಇವಿಎಂ ಮತ ಎಣಿಕೆಯ ಮೂರು ಸುತ್ತುಗಳಲ್ಲೂ ಮುನ್ನಡೆ ಕಾಯ್ದುಕೊಂಡು ಬಂದಿದ್ದ ಕಾಂಗ್ರೆಸ್ ಅಭ್ಯರ್ಥಿ ಮಧ್ಯದಲ್ಲಿ ಹಿನ್ನಡೆ ಅನುಭವಿಸಿದರು. ಆದರೆ ಇದೀಗ 16 ಸುತ್ತುಗಳ ಮತ ಎಣಿಕೆ ಮುಕ್ತಾಯಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಇ. ಅನ್ನಪೂರ್ಣ ಅವರು 83368 ಹಾಗೂ ಬಿಜೆಪಿ ಬಂಗಾರಿ ಹನುಮಂತ 74487 ಮತಗಳನ್ನು ಗಳಿಸಿದ್ದಾರೆ. ಗೆಲುವಿನ ಬಗ್ಗೆ ಅಧಿಕೃತ ಘೋಷಣೆ ಬಾಕಿಯಿದೆ.

Channapattana ByPolls Result: ನಿಖಿಲ್‌ʼಗೆ ಬಿಗ್ ಶಾಕ್‌: ಭರ್ಜರಿ ಮುನ್ನಡೆ ಸಾಧಿಸಿದ ಸಿಪಿ ಯೋಗೇಶ್ವರ್!

0

ರಾಮನಗರ: ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳಲಿದೆ. ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ.

ಚನ್ನಪಟ್ಟಣದಲ್ಲಿ ಎಂಟನೇ ಸುತ್ತಿನ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಸಿಪಿ ಯೋಗೇಶ್ವರ 11,178 ಮತಗಳ ಭರ್ಜರಿ ಮುನ್ನಡೆ ಸಾಧಿಸಿದ್ದರು. ಇದೀಗ 10ನೇ ಸುತ್ತಿನಲ್ಲೂ ಕಾಂಗ್ರೆಸ್​ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಸಿಪಿ ಯೋಗೇಶ್ವರ್​ 18,898 ಮತಗಳ ಅಂತರಿಂದ ಮುನ್ನಡೆ ಸಾಧಿಸಿದ್ದಾರೆ. ಇದರಿಂದ ನಿಖಿಲ್‌ ಕುಮಾರಸ್ವಾಮಿಗೆ ಶಾಕ್‌ ಆಗಿದೆ.

ವಿಜಯಪುರ: ತಲೆ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯ ಬರ್ಬರ ಹತ್ಯೆ!

0

ವಿಜಯಪುರ: ತಲೆ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯನ್ನು ಬರ್ಬರವಾಗಿ ಕೊಂದಿರುವ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಸರ್ಕಾರಿ ಶಾಲೆ ಆವರಣದಲ್ಲಿ ನಡೆದಿದೆ. ಸಿಂದಗಿ ತಾ. ಮಲಘಾಣ ಗ್ರಾಮದ ನಿವಾಸಿ ಶರಣಪ್ಪ ಕಕ್ಕಳಮೇಲಿ (45) ಕೊಲೆಯಾದ ವ್ಯಕ್ತಿಯಾಗಿದ್ದು,

ತಡರಾತ್ರಿ ತಲೆ ಮೇಲೆ ಕಲ್ಲು ಹಾಕಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಕುಡಿದ ನಶೆಯಲ್ಲಿ ಹಂತಕರು ಕೊಲೆ ಮಾಡಿರುವ ಶಂಕೆಯಾಗಿದ್ದು, ಸ್ಥಳಕ್ಕೆ ಸಿಂದಗಿ ಪಿಎಸ್‌ಐ ಆರೀಪ್ ಮುಶಾಪುರಿ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಇನ್ನೂ ಘಟನೆ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಚನ್ನಪಟ್ಟಣದಲ್ಲಿ ಯೋಗೇಶ್ವರ್, ನಿಖಿಲ್ ನಡುವೆ ಬಿಗ್ ಫೈಟ್: ಯಾರಿಗೆ ಮುನ್ನಡೆ..?

0

ರಾಮನಗರ: ಜಿದ್ದಾಜಿದ್ದಿಯ ಚನ್ನಪಟ್ಟಣ ಉಪಚುನಾವಣೆಯ ಫಲಿತಾಂಶ ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ. ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಆರಂಭದ ಅಂಚೆ ಮತದಾನದಲ್ಲಿ ಸಿ.ಪಿ ಯೋಗೇಶ್ವರ್ ಹಾಗೂ ನಿಖಿಲ್ ಕುಮಾರಸ್ವಾಮಿ ಇಬ್ಬರೂ ಸಮಬಲ ಕಾಯ್ದುಕೊಂಡಿದ್ದರು. ಆದರೆ ಮೊದಲನೇ ಸುತ್ತಿನ ಮುಕ್ತಾಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಅವರು 61 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯವಾದರೂ ಚನ್ನಪಟ್ಟಣ ಚುನಾವಣೆಯ ಫಲಿತಾಂಶ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಿದೆ. ಒಮ್ಮೆ ನಿಖಿಲ್, ಮತ್ತೊಮ್ಮೆ ಯೋಗೇಶ್ವರ್ ಮುನ್ನಡೆ ಸಾಧಿಸುತ್ತಿದ್ದಾರೆ. 2ನೇ ಸುತ್ತಿನ ಮತ ಎಣಿಕೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು 131 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಕರ್ನಾಟಕದ ಮೂರು ಮತ್ತು ಕೇರಳದ ಒಂದು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಮತದಾನ ನಡೆದಿದ್ದು, ಮಹರಾಷ್ಟ್ರ ಮತ್ತು ಜಾರ್ಖಾಂಡ್​​ನ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ. ಕರ್ನಾಟಕದ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳತ್ತ ರಾಜ್ಯದ ಚಿತ್ತ ನೆಟ್ಟಿದ್ದು, ಕೆಲವೇ ಗಂಟೆಗಳಲ್ಲಿ ಫಲಿತಾಂಶ ಹೊರಬೀಳಲಿದೆ.

 

ಆನೇಕಲ್: ಕಲ್ಯಾಣ ಮಂಟಪದಲ್ಲಿ ನಲ್ಲಿಗಳನ್ನು ಕದ್ದೊಯ್ದ ಚೋರರು..!

0

ಆನೇಕಲ್:- ಕಳ್ತನ ಮಾಡೋದಕ್ಕೆ ದೇವಸ್ಥಾನ ಆದ್ರೇ ಏನು? ಮನೆಯಾದರೆ ಏನು? ಕಳ್ತನ ಮಾಡಬೇಕಷ್ಟೇ. ಇಬ್ಬರೂ ಚೋರರು ಕಲ್ಯಾಣ ಮಂಟಪದಲ್ಲಿದ್ದ ನಲ್ಲಿಗಳನ್ನು ಕದ್ದಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರದ ಕೆಎನ್‌ಟಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ಇಲ್ಲಿನ ಸೂರ್ಯ ನಗರ ಪೊಲೀಸ್ ಠಾಣೆ ವ್ಯಾಪ್ತಿ ಚಂದಾಪುರದಲ್ಲಿರುವ ಕೆಎಂಎಸ್ ಮತ್ತು ಕೆಎನ್ ಟಿ ಕಲ್ಯಾಣ ಮಂಟಪದಲ್ಲಿ ಮುಂಜಾನೆ ಕಳ್ಳರು ಕೈಚಳಕ ತೋರಿಸಿದ್ದಾರೆ.

ಇನ್ನು ಕಲ್ಯಾಣ ಮಂಟಪದ ರೂಂ ಗಳಲ್ಲಿ ಇರುವ ಬೆಲೆ ಬಾಳುವ ಸುಮಾರು 70 ನೀರಿನ ನಲ್ಲಿಗಳು ಹಾಗೂ ಪ್ಯಾಸೆಟ್ಟುಗಳು ಕಳುವು ಮಾಡಿದ್ದಾರೆ ಎಂದು ಕಲ್ಯಾಣ ಮಂಟಪದ ಮಾಲೀಕರಾದ ಟಿ.ಸುಂಕಾರೆಡ್ಡಿ ತಿಳಿಸಿದರು.

ಮೊದಲು ಕೆಎಂಎಸ್ ಕಲ್ಯಾಣ ಮಂದಿರದಲ್ಲಿ ಎಲ್ಲಾ 11 ರೂಮುಗಳಲ್ಲೂ 46 ನಲ್ಲಿಗಳು ಕಳ್ಳತನ ಮಾಡಿ,ನಂತರ ಕೆ ಎನ್ ಟಿ ಕಲ್ಯಾಣ ಮಂದಿರಕ್ಕೆ ಹೋಗಿ ಹ್ಯಾಂಡ್ ವಾಶ್ ಏರಿಯಾದಲ್ಲಿರುವ 33 ನಲ್ಲಿಗಳನ್ನು ಕಳ್ಳತನ ಮಾಡಿದ್ದಾರೆ. ನಂತರ ಗಣೇಶನ ದೇವಸ್ಥಾನ ಪಕ್ಕದಲ್ಲಿರುವ ಮ್ಯಾಗ್ನಾ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ನ ಎಸಿ ಕನೆಕ್ಟ್ ಮಾಡುವ ಕಾಪರ್ ಪೈಪ್ ಅನ್ನು ಕಳವು ಮಾಡಿಕೊಂಡು ಸ್ಕೂಟರ್ ನಲ್ಲಿ ಪರಾರಿಯಾಗಿದ್ದಾರೆ.

ಕಲ್ಯಾಣ ಮಂದಿರದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಕಳ್ಳತನದ ಬಗ್ಗೆ ಸೆರೆಯಾಗಿರುತ್ತದೆ.
ಕಳುವಾಗಿರುವ ನಲ್ಲಿಗಳು ಮತ್ತು ಪ್ಯಾಸೆಟ್ ಗಳ ಮೌಲ್ಯ ಸುಮಾರು 60 ಸಾವಿರ ರೂ ಆಗುತ್ತದೆ. ಮಾಲೀಕರಾದ ಸುಂಕಾರೆಡ್ಡಿ ಸೂರ್ಯ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BBK11: ನಾಳೆ ಕಿಚ್ಚನ ಪಂಚಾಯಿತಿ: ಈ ವಾರ ಬಿಗ್​ಬಾಸ್​ ಮನೆಯಿಂದ ಆಚೆ ಬರೋದು ಇವರೇ ನೋಡಿ!

0

ಬಿಗ್ ಬಾಸ್ ಸೀಸನ್ 11 ಬಹಳ ಕುತೂಹಲಕಾರಿಯಾಗಿ ಮೂಡಿ ಬರುತ್ತಿದೆ. ಇನ್ನೂ ಕಳೆದ ವಾರ ಅನುಷಾ ರೈ ಮನೆಯಿಂದ ಔಟಾಗಿದ್ದು, ಈ ವಾರ ಯಾರು ಹೊರ ಹೋಗಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಈ ಬಾರಿ ನಾಮಿನೇಷನ್​ ಪ್ರತಿಕ್ರಿಯೆ ತುಂಬಾ ವಿಭಿನ್ನವಾಗಿ ನಡೆದಿತ್ತು. ಈ ವಾರ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು ಚೈತ್ರಾ ಕುಂದಾಪುರ, ಉಗ್ರಂ ಮಂಜು, ತ್ರಿವಿಕ್ರಮ್, ಮೋಕ್ಷಿತಾ, ಗೌತಮಿ, ಧರ್ಮ, ಹನುಮಂತ ನಾಮಿನೇಟ್ ಆಗಿದ್ದಾರೆ. ಈ ಸ್ಪರ್ಧಿಗಳಲ್ಲಿ ಒಬ್ಬರ ಬಿಗ್​ಬಾಸ್​ ಜರ್ನಿ ಈ ವಾರ ಅಂತ್ಯಗೊಳ್ಳಲಿದೆ.

ನಾಮಿನೇಷನ್ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ವೀಕ್ಷಕರು ಯಾರು ಮನೆಯಿಂದ ಆಚೆ ಹೋಗ್ತಾರೆ ಅನ್ನೋದ್ರ ಬಗ್ಗೆ ಚರ್ಚೆ ಶುರು ಮಾಡಿದ್ದಾರೆ. ಇನ್ನು, ಐಶ್ವರ್ಯ, ಧನರಾಜ್, ಭವ್ಯ ಗೌಡ, ಗೋಲ್ಡ್ ಸುರೇಶ್, ಶಿಶೀರ್​​ ಹಾಗೂ ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಪಡೆದಿರುವ ಶೋಭಾ ಶೆಟ್ಟಿ ಮತ್ತು ರಜತ್ ನಾಮಿನೇಷನ್​ನಿಂದ ಪಾರಾಗಿದ್ದಾರೆ. ಅಲ್ಲದೇ ಈ ವಾರದ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಉಗ್ರಂ ಮಂಜು ಅವರು ಗೆದ್ದುಕೊಂಡಿದ್ದಾರೆ. ಹೀಗಾಗಿ ನಾಮಿನೇಷನ್​ನಿಂದ ಉಗ್ರಂ ಮಂಜು ಅವರು ಸೇಫ್​ ಆದ್ದಂತೆ ಒಂದು ಲೆಕ್ಕ.

ಸದ್ಯ ಕಳೆದ ಸಂಚಿಕೆಯಲ್ಲಿ ಅನುಷಾ ರೈ ಅವರು ಬಿಗ್​ಬಾಸ್​ ಮನೆಯಿಂದ ಆಚೆ ಬಂದಿದ್ದರು. ಇದಾದ ಬಳಿಕ ಈ ವಾರ ಯಾವ ಸ್ಪರ್ಧಿ ಬಿಗ್​ಬಾಸ್​ ಮನೆಯ ಆಟವನ್ನು ಅಂತ್ಯ ಮಾಡಲಿದ್ದಾರೆ ಅಂತ ಕಾದುನೋಡಬೇಕಿದೆ.

ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುವ ಪ್ರಕಾರ ಈ ವಾರ ಚೈತ್ರಾ ಅಥವಾ ಮೋಕ್ಷಿತಾ ಅವರಿಬ್ಬರಲ್ಲಿ ಒಬ್ಬರು ಹೊರ ನಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆಲ್ಲಾ ಕಿಚ್ಚನ ಪಂಚಾಯಿತಿಯಲ್ಲಿ ಉತ್ತರ ಸಿಗಲಿದೆ.

ಯುವಜನೋತ್ಸವದಲ್ಲಿ ಮನೋರಮಾ ಕಾಲೇಜನ ವಿದ್ಯಾರ್ಥಿಗಳ ಸಾಧನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಆದರ್ಶ ಶಿಕ್ಷಣ ಸಮತಿಯ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಗದಗ ಜಿಲ್ಲಾ ವಲಯ ಮಟ್ಟದ ಎರಡು ದಿನಗಳ ಯುವಜನೋತ್ಸವದಲ್ಲಿ ಗದುಗಿನ ಮನೋರಮಾ ಕಾಲೇಜನ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ.

ಕಾಲೇಜಿನ ವಿದ್ಯಾರ್ಥಿಗಳಾದ ಕಂಗನ ಪವಾರ ಪಾಶ್ಚಾತ್ಯ ಗಾಯನದಲ್ಲಿ ಪ್ರಥಮ, ಮೆಹಂದಿ ಸ್ಪರ್ಧೆಯಲ್ಲಿ ಉಮ್ಮಿ ಜವೇರಿಯಾ ಪ್ರಥಮ, ಸಯ್ಯದಾ ತಂಜೀಮ್ ಖಾಜಿ ಭಾಷಣ ಸ್ಪರ್ಧೆಯಲ್ಲಿ ಪ್ರಥಮ, ಮೈಮ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಇಂದ್ರಕುಮಾರ, ಅಭಿಷೇಕ, ಸಾಗರ, ಮೆಹಬೂಬ, ಅಮೋಘ, ಪುರುಷೋತ್ತಮ, ಜಾನಪದ ಹಾಡಿನಲ್ಲಿ ದ್ವಿತೀಯ ಸ್ಥಾನ ಪಡೆದ ಅನಿತಾ, ಪ್ರಮೋದಿನಿ, ತನುಜಾ, ಅಕ್ಷತಾ, ಶೃತಿ ಇವರಿಗೆ ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವ್ಹಿ. ಸಂಕನೂರ ಹಾಗೂ ಗಣ್ಯಮಾನ್ಯರು ಪ್ರಶಸ್ತಿ ನೀಡಿ ಗೌರವಿಸಿದರು.

ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಚೇರಮನ್ ಎನ್.ಎಮ್. ಕುಡತರಕರ, ಪ್ರಾಚಾರ್ಯ ಬಿ.ಎಸ್. ಹಿರೇಮಠ, ಆಡಳಿತಾಧಿಕಾರಿ ಕಿಶೋರ ಮುದಗಲ್ಲ, ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಕುಡತರಕರ, ನಿರ್ದೇಶಕರಾದ ಸಂಜಯ ಕುಡತರಕರ, ಚೇತನ ಕುಡತರಕರ ಹಾಗೂ ಕಾಲೇಜ ಸಂಯೋಜಕರುಗಳಾದ ಪ್ರೊ. ಸವಿತಾ ಪೂಜಾರ, ಪ್ರೊ. ಅಲ್ವಿನಾ ಡಿ, ಪ್ರೊ. ಚೈತ್ರಾ ಡಿ ಸೇರಿದಂತೆ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.


 

2 ಸಾವಿರ ರೂ.ಗೆ ಆಸೆ ಬಿದ್ದು ಕಾಂಗ್ರೆಸ್ ಗೆ ಮತ ಹಾಕಿದರು: ಶಾಸಕ ಸಿ.ಸಿ. ಪಾಟೀಲ ಆಕ್ರೋಶ

0

ವಿಜಯಸಾಕ್ಷಿ ಸುದ್ದಿ, ಗದಗ: ಕಾಂಗ್ರೆಸ್ ಸರ್ಕಾರ ಒಂದು ಸಮುದಾಯದ ತುಷ್ಟೀಕರಣಕ್ಕಾಗಿ ವಕ್ಫ್ ಕಾಯ್ದೆ ಮೂಲಕ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಸಿದ್ದರಾಮಯ್ಯನವರು ಪದೇ-ಪದೆ ಅಹಿಂದ ನಾಯಕ ಎಂದು ಹೇಳುತ್ತಾ, ಅದೇ ಸಮುದಾಯಕ್ಕೆ ಸೇರುವ ವಾಲ್ಮೀಕಿ ಜನಾಂಗದ ಹಣವನ್ನು ಲೂಟಿ ಮಾಡಿ ತೆಲಂಗಾಣ ಚುನಾವಣೆಗೆ ಬಳಸಿ ವಾಲ್ಮೀಕಿ ಜನಾಂಗಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಮಾಜಿ ಸಚಿವ, ಹಾಲಿ ಶಾಸಕ ಸಿ.ಸಿ. ಪಾಟೀಲ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಗಾಂಧಿ ಸರ್ಕಲ್‌ನಲ್ಲಿ ವಕ್ಫ್ ಕಾಯ್ದೆ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದೂಗಳ ಆಸ್ತಿಯನ್ನು ಹಿಂದೂಗಳಿಗೆ ಉಳಿಸುವ ಉದ್ದೇಶದಿಂದ ಬಿಜೆಪಿ ವತಿಯಿಂದ `ನಮ್ಮ ಭೂಮಿ, ನಮ್ಮ ಹಕ್ಕು’ ಶೀರ್ಷಿಕೆಯಡಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರರ ಸೂಚನೆಯಂತೆ ಹೋರಾಟ ನಡೆಸುತ್ತಿದೆ. 2 ವರ್ಷಗಳ ಅವಧಿಯಲ್ಲಿ ಅಭಿವೃದ್ಧಿಯ ಪರವಾಗಿ ಯಾವುದೇ ಚರ್ಚೆಯಾಗಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿ ಕಾರಿದರು.

ಇಂದು ರಾಜ್ಯ ದಿವಾಳಿಯ ಅಂಚಿನಲ್ಲಿದೆ. ಮಹಿಳೆಯರು 2 ಸಾವಿರ ರೂ.ಗೆ ಆಸೆ ಬಿದ್ದು ಕಾಂಗ್ರೆಸ್‌ಗೆ ಮತ ಹಾಕಿದರು. ಈಗ ಅವರ ಗಂಡನ ಆಸ್ತಿ ವಕ್ಫ್ ಪಾಲಾಗುತ್ತಿದೆ. ನರಗುಂದದಲ್ಲಿ 770 ಎಕರೆ ಆಸ್ತಿ ವಕ್ಫ್ ಸೇರಿದೆ. ಲಕ್ಕುಂಡಿಯ ಹಿಂದೂರುದ್ರಭೂಮಿ, ಅನ್ನದಾನೇಶ್ವರ ಮಠಗಳು ವಕ್ಫ್ ಆಸ್ತಿಯಾಗಿ ಬದಲಾಗಿದೆ ಎಂದು ವಿವರಿಸಿದರು.

ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನೀತಿಯಿಂದ ರೈತರು ಕಂಗಾಲಾಗಿದ್ದಾರೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ರೈತರಿಗೆ ನೋಟಿಸ್ ನೀಡದೇ ಆಸ್ತಿಯನ್ನು ವಕ್ಫ್ಗೆ ಸೇರಿಸಲಾಗಿದೆ. ಬಿಜೆಪಿಯಿಂದ ಹೋರಾಟದ ಮುನ್ಸೂಚನೆ ಸಿಗುತ್ತಿದ್ದಂತೆ ನೋಟಿಸ್ ವಾಪಾಸ್ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಿಎಂ ಹೇಳುತ್ತಾರೆ. ಆದರೆ, ಸಿಎಂ ಹೇಳಿದಂತೆ ನೋಟಿಸ್ ವಾಪಾಸ್ ಪಡೆಯಲು ಆಗುವುದಿಲ್ಲ. ಬದಲಾಗಿ ಕಾನೂನಿನಲ್ಲಿ ಬದಲಾವಣೆ ಆಗಬೇಕು ಎನ್ನುವ ಕನಿಷ್ಠ ಜ್ಞಾನ ಸಿಎಂ ಸಿದ್ದರಾಮಯ್ಯನವರಿಗೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಕಾಂತಿಲಾಲ್ ಬನ್ಸಾಲಿ, ಉಮೇಶಗೌಡ್ರ ಪಾಟೀಲ, ಶ್ರೀಪತಿ ಉಡುಪಿ, ಶಿವಕುಮಾರ ನಿಲಗುಂದ, ಸುರೆಶ್ ಗೂಳಮ್ಮನವರ, ಸಿದ್ದಣ್ಣ ಪಲ್ಲೇದ್, ಅಶೋಕ ಹೆಬ್ಬಣ್ಣನವರ, ಶಾಂತಣ್ಣ ಕಲಕೇರಿ, ಪ್ರೇಮನಾಥ ಬಣ್ಣದ, ನಿರ್ಮಲಾ ಕೊಳ್ಳಿ, ಅಶ್ವಿನಿ ಜಗಾಪೂರ, ವಿಜಯಲಕ್ಷ್ಮೀ ದಿಂಡೂರ, ವಿದ್ಯಾವತಿ ಗಡಗಿ, ಜಯಲಕ್ಷ್ಮೀ ಉಗಲಾಟದ, ವಿಜಯಲಕ್ಷ್ಮೀ ಮಾನ್ವಿ, ಪ್ರಭಾವತಿ ಬೆಳವಟ, ಲಕ್ಷ್ಮೀ ಖಾಕಿ, ಶಿವಪ್ಪ ಅಂಗದ, ಇರ್ಷಾದ್ ಮಾನ್ವಿ, ಸುದೀರ ಕಾಟಗೇರ, ಮಂಜುನಾಥ ಮುಳಗುಂದ, ಸಂತೋಷ್ ಅಕ್ಕಿ, ಸಂಗಮೇಶ್ ದುಂದೂರ, ಶಶಿಧರ ದಿಂಡೂರ, ರಮೇಶ್ ಸಜ್ಜಗಾರ, ಅಶ್ವಿನಿ ಅಂಕಲಕೊಟಿ, ಸ್ವಾತಿ ಅಕ್ಕಿ, ಬಸವರಾಜ ಇಟಗಿ, ಸಿದ್ದೇಶ್ ಹೂಗಾರ, ಚನ್ನಪ್ಪ ನೆಗಳೂರ, ನಾಗರಾಜ ಕುಲಕರ್ಣಿ, ಚಂದ್ರಶೇಖರ ತಡಸದ, ಎಮ್.ಎಚ್. ತಿಮ್ಮನಗೌಡ್ರ, ಪ್ರಕಾಶಗೌಡ ತಿರಕನಗೌಡ್ರ, ಲಿಂಗರಾಜ ಪಾಟೀಲ, ಮಹೇಶ್ ದಾಸರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಾಚ್ಯಾವಶೇಷಗಳ ಅನ್ವೇಷಣೆಯಲ್ಲಿ ಪಾಲ್ಗೊಳ್ಳುವಂತೆ ಲಕ್ಕುಂಡಿ ಗ್ರಾಮಸ್ಥರಿಗೆ ಸಚಿವ ಡಾ. ಎಚ್.ಕೆ. ಪಾಟೀಲ ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ನಿಮ್ಮೆಲ್ಲರ ಹೆಮ್ಮೆಯ ಲಕ್ಕುಂಡಿ ಗ್ರಾಮದ ಮೊದಲ ಹೆಸರು ‘ಲೊಕ್ಕಿ ಗುಂಡಿ’, ಎಂದರೆ ಸಾಕ್ಷಾತ್ ಲಕ್ಷ್ಮಿ ನೆಲೆ ಎಂದರ್ಥ. ಈ ಗ್ರಾಮವು ‘ದೇವಾಲಯಗಳ ಸ್ವರ್ಗ’ವೆಂದು ಹೆಸರಾಗಿದೆ. ಲಕ್ಕುಂಡಿ ಕನ್ನಡದ ರತ್ನತ್ರಯರಲ್ಲಿ ಒಬ್ಬರಾದ ರನ್ನ ಕವಿಗೆ ಆಶ್ರಯ ನೀಡಿದ್ದ ಕವಿವರ ಕಾಮಧೇನು, ದಾನಚಿಂತಾಮಣಿ ಎಂದು ಪ್ರಸಿದ್ಧಳಾದ ಅತ್ತಿಮಬ್ಬೆಗೆ ಉಸಿರಿತ್ತು ಹೆಸರಾದ ಪಾವನ ಭೂಮಿ. ಶರಣ ಸಹೋದರ-ಸಹೋದರಿಯರಾದ ಮುಕ್ತಾಯಿಯಕ್ಕ ಮತ್ತು ಅಜಗಣ್ಣನವರ ಜನ್ಮಭೂಮಿಯಾಗಿದೆ. ಇಂತಹ ಲಕ್ಕುಂಡಿಯ ಗತವೈಭವವನ್ನು ಪುನಃ ಸ್ಥಾಪಿಸಲು ಸಾರ್ವಜನಿಕರು ಕೈಜೋಡಿಸಿ ಎಂದು ಕಾನೂನು, ಪ್ರವಾಸೋದ್ಯಮ, ಜಿಲ್ಲಾ ಉಸ್ತುವಾರಿ ಸಚಿವೆಚ್.ಕೆ. ಪಾಟೀಲ ಮನವಿ ಮಾಡಿದ್ದಾರೆ.

ಕಲ್ಯಾಣ ಚಾಳುಕ್ಯರು, ಹೊಯ್ಸಳರು, ಕಲಚುರ್ಯ ಅರಸರು ಸಾವಿರ ವರ್ಷಗಳ ಹಿಂದೆ ಹಾಕಿಸಿರುವ ಶಾಸನಗಳ ಪ್ರಕಾರ ಲಕ್ಕುಂಡಿ ಸಾಕ್ಷಾತ್ ಶ್ರೀರಾಮನಿಂದ ನಿರ್ಮಿತವಾದ ಮಹಾ ಅಗ್ರಹಾರ, ಪಾವನ ಚರಿತ್ರಳಾದ ದಾನಚಿಂತಾಮಣಿ ಅತ್ತಿಮಬ್ಬೆಯ ಕರ್ಮಭೂಮಿ. ಒಳ್ಳೆಯತನಕ್ಕೆ, ಧರ್ಮಕ್ಕೆ, ಲಕ್ಷ್ಮಿ ನಮಗೆ ತವರು ಮನೆಯಂತಿದ್ದ ಲಕ್ಕುಂಡಿ ಗ್ರಾಮವು ಇಂದ್ರನ ಅಮರಾವತಿಗಿಂತಲೂ ಶ್ರೇಷ್ಠವಾಗಿದ್ದು, ಅಮರಾವತಿಯನ್ನು ಮತ್ತು ಲಕ್ಕುಂಡಿಯನ್ನು ತಕ್ಕಡಿಯಲ್ಲಿಟ್ಟು ತೂಗಿದಾಗ ಲಕ್ಕುಂಡಿಯ ತೂಕವೇ ಹೆಚ್ಚಾಗಿತ್ತೆಂದು ಶಾಸನದಲ್ಲಿ ಹೇಳಲಾಗಿದೆ.

ಹೊಯ್ಸಳರ ರಾಜಧಾನಿಯಾಗಿದ್ದ ಲಕ್ಕುಂಡಿಯಲ್ಲಿ, 101 ದೇವಾಲಯಗಳು, 101ಬಾವಿಗಳು ಇದ್ದವೆಂಬುದು ಪ್ರತೀತಿ. ಇವು ವೈವಿಧ್ಯಮಯವಾದ ವಾಸ್ತು ಶೈಲಿಯನ್ನು ಹೊಂದಿದ್ದು, ಆ ಕಾಲದಲ್ಲಿ ಕರ್ನಾಟಕದ ಶಿಲ್ಪಕಲಾ ಚಟುವಟಿಕೆಗಳ ಕಾರ್ಯಾಗಾರವಾಗಿತ್ತು. ಪ್ರಮುಖ ವ್ಯಾಪಾರಿ ಕೇಂದ್ರವೂ ಆಗಿದ್ದ ಲಕ್ಕುಂಡಿಯಲ್ಲಿ ಟಂಕಸಾಲೆ ಇದ್ದು, ಇಲ್ಲಿ ಮುದ್ರಿಸುತ್ತಿದ್ದ ನಾಣ್ಯಗಳು ರಾಜಮಾನ್ಯತೆಯನ್ನು ಪಡೆದಿತ್ತು. ನಮ್ಮ ಪೂರ್ವಜರು ದೇವಾಲಯಗಳನ್ನು ನಿರ್ಮಿಸಿ ಶಾಸನಗಳನ್ನು ಹಾಕಿಸುವಾಗ, ಸೂರ್ಯ ಚಂದ್ರ, ಆಕಾಶ, ಸಾಗರ, ಪರ್ವತಗಳಿರುವವರೆಗೂ ಅವುಗಳನ್ನು ರಕ್ಷಿಸಬೇಕೆಂದು ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ.

ನಮ್ಮ ಲಕ್ಕುಂಡಿ ಇಂದು ತನ್ನ ಗತವೈಭವವನ್ನು ಸಾರುತ್ತಿದೆ. ಆದರೆ, ಇಂದು ಕಾಲನ ಹೊಡೆತಕ್ಕೆ, ನಮ್ಮ ಆಲಕ್ಷ್ಯಕ್ಕೆ ಸಿಕ್ಕಿ ಕಣ್ಮರೆಯಾಗುತ್ತಿವೆ. ದೇವಾಲಯದ ಅವಶೇಷಗಳು ಎಲ್ಲೆಂದರಲ್ಲಿ ಚದುರಿ ಬಿದ್ದಿವೆ. ಇದು ನನಗೆ ಮಾತ್ರವಲ್ಲ, ನಮ್ಮೆಲ್ಲರಿಗೆ ತುಂಬಾ ನೋವನ್ನು ತಂದಿದೆ. ಹೀಗಾಗಿ ನಮ್ಮ ಪ್ರಾಚೀನ ಇತಿಹಾಸ ಮತ್ತು ಪರಂಪರೆಯನ್ನು ಸಂರಕ್ಷಿಸುವ ದಿಸೆಯಲ್ಲಿ ನಮ್ಮ ಸರ್ಕಾರ ಕಾರ್ಯೋನ್ಮುಖವಾಗಿದೆ.

ಅದರ ಫಲಿತವಾಗಿ, ಲಕ್ಕುಂಡಿ ಗ್ರಾಮವನ್ನು ಪುನರುತ್ಥಾನ ಮಾಡಲು ಗತವೈಭವ ಮರಳಿಸಲು ಮುಂದಡಿ ಇಟ್ಟಿದೆ. ನಿಮ್ಮ ಮನೆಗಳ ಬಳಿ ಚದುರಿ ಬಿದ್ದಿರುವ ಕಂಬಗಳು, ಭಗ್ನಗೊಂಡಿರುವ ಶಿಲ್ಪಗಳು, ಮನೆಯ ಮೆಟ್ಟಿಲಾಗಿರುವ ಶಾಸನಗಳು, ನಿರ್ಲಕ್ಷ್ಯಯಕ್ಕೊಳಗಾಗಿರುವ ತಾಳೆಗರಿಯ ಹಸ್ತಪ್ರತಿಗಳು ಇನ್ನೂ ಮುಂತಾದ ಐತಿಹಾಸಿಕ ಮಹತ್ವದ ಪ್ರಾಚ್ಯಾವಶೇಷಗಳನ್ನು ನೀಡುವಂತೆ ಕೋರಿ ನ.24ರಂದು ನಿಮ್ಮ ಮನೆಯ ಬಾಗಿಲಿಗೆ ಬಂದು ಸ್ವೀಕರಿಸುತ್ತೇವೆ. ನೀವು ಕೊಡುವ ಪ್ರಾಚ್ಯಾವಶೇಷಗಳನ್ನು ಅತ್ಯಂತ ವಿಶೇಷವಾದವುಗಳೆಂದು ಭಾವಿಸಿ, ಅವುಗಳನ್ನು ಸೂಕ್ತ ಸಂರಕ್ಷಣೆ ಮಾಡುತ್ತೇವೆ.

ವಿಶ್ವ ಭೂಪಟದಲ್ಲಿ ಹಂಪಿಯಂತೆಯೇ ಲಕ್ಕುಂಡಿಗೂ ಜಾಗತಿಕ ಮನ್ನಣೆ ತರುವ ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲ ಹಾಗೂ ಸಹಕಾರ ತುಂಬಾ ಅಗತ್ಯವಿದೆ. ಅಲಕ್ಷ್ಯಕ್ಕೊಳಗಾದ ಇತರ ಉದ್ದೇಶಗಳಿಗೆ ಬಳಸಲ್ಪಟ್ಟ ಪ್ರಾಚ್ಯಾವಶೇಷಗಳನ್ನು ಒಂದೆಡೆ ಕ್ರೋಢೀಕರಿಸಿ, ದೇವಾಲಯಗಳ ಅತಿಕ್ರಮಣವನ್ನು ತೆರವುಗೊಳಿಸಲು ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತೋರುವ ಕಾಳಜಿಯೂ ಮಹತ್ತರವಾದ ಕಾಯಕವಾಗುತ್ತದೆ. ಆ ಮೂಲಕ ನಾವೆಲ್ಲರೂ ಸೇರಿ ಮತ್ತೆ ಲಕ್ಕುಂಡಿಯ ಚರಿತ್ರೆಯನ್ನು ಪುನರ್ನಿರ್ಮಾಣ ಮಾಡಿ, ಉಳಿಸಿ-ಬೆಳೆಸಲು ಸಾಧ್ಯವಾಗುತ್ತದೆ.

ನಮ್ಮ ಈ ಮಹತ್ತರ ಕಾರ್ಯದಲ್ಲಿ ನೀವೂ ಭಾಗಿಗಳಾಗಿ. ಲಕ್ಕುಂಡಿಯ ವೈಭವವನ್ನು ಪುನರ್‌ಸ್ಥಾಪಿಸುವ ನಮ್ಮ ನವೀನ ಪ್ರಯತ್ನದ ಭಾಗವಾಗಿ ಮನೆ-ಮನೆಯಿಂದ, ಹೊಳಗಟ್ಟಿಗಳಿಂದ ನಿಮ್ಮ ಪರಿಸರದ ಕಟ್ಟಿಗಟ್ಟಿಯಲ್ಲಿನ ಸ್ಮಾರಕಗಳ, ಸುಂದರ ಶಿಲ್ಪಕಲಾ ಕಲಾಕೃತಿಗಳ, ಪ್ರಾಚ್ಯಾವಶೇಷಗಳ ಅನ್ವೇಷಣೆಗೆ ನೀವೂ ಕೈಜೋಡಿಸಬೇಕೆಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ವಿನಂತಿಸಿದ್ದಾರೆ.

error: Content is protected !!