Home Blog Page 21

ಭಕ್ತನ ಜೀವ ತೆಗೆದ ಚಿರತೆ ಕೊನೆಗೂ ಸೆರೆ: ಮೃತನ ಕುಟುಂಬಕ್ಕೆ 5 ಲಕ್ಷ ಪರಿಹಾರ ವಿತರಣೆ

0

ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತನ ಮೇಲೆ ದಾಳಿ ಮಾಡಿ ಕೊಂದಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆಯ ಕೈಗೆ ಸಿಕ್ಕಿದೆ. ತಾಳು ಬೆಟ್ಟದಿಂದ ಪಾದಯಾತ್ರೆ ಮೂಲಕ ಎಂ.ಎಂ. ಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ಚಿರತೆ ದಾಳಿ ನಡೆಸಿದ್ದು, ಪ್ರಕರಣ ಜನರಲ್ಲಿ ಆತಂಕ ಮೂಡಿಸಿತ್ತು.

ಚಿರತೆ ಸೆರೆಗೆ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರು. ವಿಶೇಷ ಚಿರತೆ ಕಾರ್ಯಪಡೆ, ಡ್ರೋನ್ ಮೇಲ್ವಿಚಾರಣೆ ಹಾಗೂ ಸ್ಥಳೀಯ ಮಟ್ಟದಲ್ಲಿ ತೀವ್ರ ಕಣ್ಗಾವಲು ಮೂಲಕ ಚಿರತೆಯ ಚಲನವಲನವನ್ನು ಪತ್ತೆ ಹಚ್ಚಲಾಯಿತು. ಕೊನೆಗೆ ಅರವಳಿಕೆ ನೀಡಿ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಕಾರ್ಯಾಚರಣೆಯಲ್ಲಿ ಪಶುವೈದ್ಯರಾದ ಆದರ್ಶ್ ಅವರ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಿದ್ದರು. ಸೆರೆ ಸಿಕ್ಕಿರುವುದು ಸುಮಾರು 2ರಿಂದ 3 ವರ್ಷದ ಗಂಡು ಚಿರತೆ ಎಂದು ತಿಳಿದುಬಂದಿದೆ. ಈ ಚಿರತೆಯನ್ನು ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲು ಅರಣ್ಯ ಇಲಾಖೆ ತೀರ್ಮಾನಿಸಿದೆ.

ಇದೇ ವೇಳೆ, ಚಿರತೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಉಸ್ತುವಾರಿ ಸಚಿವ ವೆಂಕಟೇಶ್ ಅವರು 5 ಲಕ್ಷ ರೂಪಾಯಿ ಪರಿಹಾರ ಮೊತ್ತದ ಚೆಕ್ ಹಸ್ತಾಂತರಿಸಿದ್ದಾರೆ.

ಮಹಿಳೆ ಮರೆತ ಪರ್ಸ್–ಐಫೋನ್ ಹಿಂದಿರುಗಿಸಿದ ಆಟೋ ಚಾಲಕ; ಎಲ್ಲೆಡೆ ಮೆಚ್ಚುಗೆ

0

ಬೆಂಗಳೂರು: ಮಹಿಳೆ ಮರೆತು ಹೋಗಿದ್ದ ಪರ್ಸ್ ಹಾಗೂ ಐಫೋನ್ ಅನ್ನು ಪ್ರಾಮಾಣಿಕತೆಯಿಂದ ಹಿಂದಿರುಗಿಸಿದ ಆಟೋ ಚಾಲಕನ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉತ್ತರ ಭಾರತ ಮೂಲದ ಮಹಿಳೆಯೊಬ್ಬರು ರ‍್ಯಾಪಿಡೊ ಮೂಲಕ ಆಟೋ ಬುಕ್ ಮಾಡಿಕೊಂಡು ಪ್ರಯಾಣಿಸಿದ್ದರು. ಪ್ರಯಾಣ ಮುಗಿದ ಬಳಿಕ ಆಟೋದಿಂದ ಇಳಿದ ಮಹಿಳೆ, ತನ್ನ ಪರ್ಸ್ ಮತ್ತು ಐಫೋನ್ ಅನ್ನು ಆಟೋದಲ್ಲೇ ಮರೆತು ಹೋಗಿದ್ದರು. ಕೆಲ ಸಮಯದ ನಂತರ ಈ ವಿಷಯ ಗಮನಕ್ಕೆ ಬಂದಾಗ ಮಹಿಳೆ ಕೊತ್ತನೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರು.

ಪೊಲೀಸರು ತಕ್ಷಣವೇ ಆಟೋ ಚಾಲಕನಿಗೆ ಕರೆ ಮಾಡಿದಾಗ, ಚಾಲಕ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ, ಪರ್ಸ್ ಮತ್ತು ಮೊಬೈಲ್ ಫೋನ್ ಅನ್ನು ಮಹಿಳೆಗೆ ಸುರಕ್ಷಿತವಾಗಿ ಮರಳಿಸಿದರು. ಆಟೋ ಚಾಲಕನ ಪ್ರಾಮಾಣಿಕತೆಗೆ ಮಹಿಳೆ ಹಾಗೂ ಪೊಲೀಸ್ ಸಿಬ್ಬಂದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಹಳಿಗೆ ಅಡ್ಡಲಾಗಿ ನಿಂತಿದ್ದ ಟ್ರಕ್​ಗೆ ರೈಲು ಡಿಕ್ಕಿ; ಮುಂದೇನಾಯ್ತು?

0

ಜಾರ್ಖಂಡ್:- ಜಾರ್ಖಂಡ್​ನ ನವದಿಹ್ ರೈಲ್ವೆ ಕ್ರಾಸಿಂಗ್‌ನಲ್ಲಿ ಮುಂದಕ್ಕೆ ಹೋಗಲಾಗದೆ ಹಳಿಗೆ ಅಡ್ಡಲಾಗಿ ನಿಂತಿದ್ದ ಟ್ರಕ್​ಗೆ ರೈಲು ಡಿಕ್ಕಿ ಹೊಡೆದಿರುವ ಭಯಾನಕ ಘಟನೆ ಜರುಗಿದೆ.

ರೈಲು, ಗೊಂಡಾ-ಅಸನ್ಸೋಲ್ ಎಕ್ಸ್‌ಪ್ರೆಸ್ ಕ್ರಾಸಿಂಗ್ ಮೂಲಕ ಹಾದುಹೋಗುತ್ತಿತ್ತು. ಟ್ರಕ್ ಈ ಕಡೆಯಿಂದ ಹಳಿ ದಾಟಿದಾಗ ಗೇಟ್ ತೆರೆದಿತ್ತು ಅತ್ತ ಹೋಗುವಷ್ಟರಲ್ಲಿ ಮುಚ್ಚಿತ್ತು ಹೀಗಾಗಿ ಅರ್ಧದಾರಿಯಲ್ಲಿ ನಿಂತ ಟ್ರಕ್​ಗೆ ರೈಲು ಡಿಕ್ಕಿ ಹೊಡೆದಿತ್ತು.

ರೈಲು ಡಿಕ್ಕಿ ಹೊಡೆದು ತಳ್ಳಿದ ಪರಿಣಾಮ ಟ್ರಕ್​ ಬೇರೆ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಇಬ್ಬರು ಬೈಕ್ ಸವಾರರು ಗಾಯಗೊಂಡಿದ್ದಾರೆ. ಘಟನೆ ಪರಿಣಾಮ, ಜಸಿದಿಹ್-ಅಸನ್ಸೋಲ್ ಮುಖ್ಯ ಮಾರ್ಗದಲ್ಲಿ ರೈಲು ಸಂಚಾರ ಸುಮಾರು ಎರಡು ಗಂಟೆಗಳ ಕಾಲ ಅಸ್ತವ್ಯಸ್ತಗೊಂಡಿತ್ತು ಎಂದು ತಿಳಿದು ಬಂದಿದೆ.

ಕೈ ತಪ್ಪಿದ ಆಸ್ಕರ್ ಕನಸು! ‘ಕಾಂತಾರ ಚಾಪ್ಟರ್ 1’ ಮತ್ತು ‘ಮಹಾವತಾರ ನರಸಿಂಹ’ ಫೈನಲ್ ಲಿಸ್ಟ್‌ನಿಂದ ಔಟ್

ಕನ್ನಡ ಸಿನಿಪ್ರಿಯರಿಗೆ ನಿರಾಸೆ ಸುದ್ದಿ ಕೇಳಿಬಂದಿದೆ. ವಿಶ್ವದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ಆಸ್ಕರ್ ರೇಸ್ನಲ್ಲಿ ಸ್ಪರ್ಧಿಸಿದ್ದ ಕನ್ನಡದ ಎರಡು ಭರವಸೆಯ ಚಿತ್ರಗಳಾದ — ‘ಕಾಂತಾರ ಚಾಪ್ಟರ್ 1’ ಮತ್ತು ‘ಮಹಾವತಾರ ನರಸಿಂಹ’ — ಅಂತಿಮ ನಾಮಿನೇಷನ್ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿವೆ.

ಭಾರತದಿಂದ ಐದು ಸಿನಿಮಾಗಳು ಆಸ್ಕರ್ ರೇಸ್ನಲ್ಲಿ ಇದ್ದರೂ, ಕನ್ನಡದಿಂದ ಭಾರಿ ನಿರೀಕ್ಷೆ ಮೂಡಿಸಿದ್ದ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಎರಡು ಚಿತ್ರಗಳು ಕೊನೆಯ ಹಂತದಲ್ಲಿ ಹೊರಬಿದ್ದಿವೆ.

ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ಅಭಿನಯದ ‘ಕಾಂತಾರ ಚಾಪ್ಟರ್ 1’ ಸಿನಿಮಾ ಜಾಗತಿಕ ಮಟ್ಟದಲ್ಲಿ ಸುಮಾರು 850 ಕೋಟಿ ರೂಪಾಯಿ ವಹಿವಾಟು ಮಾಡಿ, ಭಾರತೀಯ ಚಿತ್ರರಂಗದ ಮಟ್ಟವನ್ನು ಮತ್ತೊಮ್ಮೆ ಎತ್ತಿಹಿಡಿದಿತ್ತು. ಭಾರತೀಯ ಸಂಸ್ಕೃತಿ, ಜನಪದ ಅಸ್ಮಿತೆಯನ್ನು ವಿಶ್ವಮಟ್ಟಕ್ಕೆ ತಲುಪಿಸಿದ್ದ ಈ ಚಿತ್ರವು ಆಸ್ಕರ್ ಗೆಲ್ಲಬಹುದು ಎಂಬ ಭರವಸೆ ಹುಟ್ಟಿಸಿತ್ತು.

ಇನ್ನೊಂದೆಡೆ, ‘ಮಹಾವತಾರ ನರಸಿಂಹ’ ಸಿನಿಮಾ ಅನಿಮೇಶನ್ ವಿಭಾಗದಲ್ಲಿ ಭಾರತದ ಮೊದಲ ಆಯ್ಕೆಯಾದ ಸಿನಿಮಾ ಎಂಬ ಹೆಗ್ಗಳಿಕೆಯನ್ನು ಪಡೆದಿತ್ತು. ಆದರೆ, ಅಂತಿಮ ಪಟ್ಟಿಯಲ್ಲಿ ಈ ಚಿತ್ರಕ್ಕೂ ಸ್ಥಾನ ಸಿಗದೆ ನಿರಾಸೆ ಮೂಡಿಸಿದೆ.

ಆದರೂ, ಆಸ್ಕರ್ ವೇದಿಕೆಯಲ್ಲಿ ಕನ್ನಡ ಚಿತ್ರಗಳು ಚರ್ಚೆಗೆ ಬಂದಿರುವುದೇ ದೊಡ್ಡ ಸಾಧನೆ ಎಂಬುದಾಗಿ ಸಿನಿಪ್ರಿಯರು ಅಭಿಪ್ರಾಯಪಟ್ಟಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಾಧನೆ ಕನ್ನಡ ಚಿತ್ರರಂಗದ ಶಕ್ತಿಯನ್ನು ಮತ್ತೊಮ್ಮೆ ಜಗತ್ತಿಗೆ ತೋರಿಸಿದೆ.

ಒಂದು ವರ್ಷದ ಕಡ್ಡಾಯ ಸೇವೆ, ವೇತನ ಕಡಿತ ವಿವಾದ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

0

ಬೆಂಗಳೂರು: ರಾಜ್ಯದ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಪ್ರವೇಶ ಪಡೆದು, 2024 ಮತ್ತು 2025ನೇ ಸಾಲಿನಲ್ಲಿ ಕೋರ್ಸ್ ಪೂರ್ಣಗೊಳಿಸಿದ ನಂತರ ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ವರ್ಷದ ಕಡ್ಡಾಯ ಸೇವೆಗೆ ನಿಯೋಜನೆಗೊಂಡ ವೈದ್ಯರ ಮಾಸಿಕ ವೇತನವನ್ನು ಕಡಿತಗೊಳಿಸಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕಲಬುರಗಿ ನಿವಾಸಿ ಡಾ. ಶಶಿಕುಮಾರ್ ಸೇರಿದಂತೆ, ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಕಿರಿಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ 38 ಮಂದಿ ಎಂಬಿಬಿಎಸ್ ಪದವಿಧರರು ಈ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯ ವಿಚಾರಣೆ ಗುರುವಾರ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕ ಸದಸ್ಯ ನ್ಯಾಯಪೀಠದ ಮುಂದೆ ನಡೆಯಿತು. ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ,

ನಾಲ್ಕು ವಾರಗಳೊಳಗೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಇತರೆ ಅರ್ಜಿಗಳನ್ನೂ ಈ ಅರ್ಜಿಯೊಂದಿಗೆ ಸೇರಿಸಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸೂಚಿಸಿ, ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿದೆ.

ಮಂಗಳೂರು-ಕಾಸರಗೋಡು ಪ್ರಯಾಣಿಕರಿಗೆ ಬಿಗ್​​ ಶಾಕ್​; ಟಿಕೆಟ್ ದರ ಭಾರೀ ಏರಿಕೆ!

0

ಮಂಗಳೂರು: ಮಂಗಳೂರು–ಕಾಸರಗೋಡು ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಬಿಗ್ ಶಾಕ್ ನೀಡಿದೆ.

ಕುಂಬಳ ಟೋಲ್ ಗೇಟ್‌ನಲ್ಲಿ ಅಧಿಕೃತ ಸಂಗ್ರಹ ಆರಂಭಕ್ಕೂ ಮುನ್ನವೇ ಟೋಲ್ ಮೊತ್ತವನ್ನು ಸೇರಿಸಿ ಬಸ್ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ. ಜ.20ರಿಂದ ಪರಿಷ್ಕೃತ ದರ ಜಾರಿಗೆ ಬಂದಿದ್ದು, ಕುಂಬಳ–ಮಂಗಳೂರು ಪ್ರಯಾಣ ದರ 67ರಿಂದ 75 ರೂ.ಗೆ ಏರಿಕೆಯಾಗಿದೆ.

ರಾಜಹಂಸ ಬಸ್‌ಗಳ ದರವೂ 80ರಿಂದ 90 ರೂ.ಗೆ ಹೆಚ್ಚಿದೆ. ಪ್ರತಿದಿನ ಸುಮಾರು 35 ಕೆಎಸ್‌ಆರ್‌ಟಿಸಿ ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಟೋಲ್ ಪಾವತಿಗೆ ದಿನಕ್ಕೆ ಸುಮಾರು 48 ಸಾವಿರ ರೂ. ವ್ಯಯವಾಗುತ್ತಿದೆ. ಹೆದ್ದಾರಿ ಬಳಸದಿದ್ದರೂ ಟೋಲ್ ಪಾವತಿಸಬೇಕಾದ ಅನಿವಾರ್ಯತೆಯಿಂದ ದರ ಏರಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟೋಲ್ ವಿನಾಯಿತಿ ಕೋರಿ ಮಂಗಳೂರು ವಿಭಾಗದ ಅಧಿಕಾರಿಗಳು ಕಾಸರಗೋಡು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಪವಿತ್ರಗೌಡಗೆ ‘ವಿಐಪಿ ಟ್ರೀಟ್‌ಮೆಂಟ್’ ಬೇಡ: ಜೈಲಿನಿಂದಲೇ ಕಠಿಣ ಸಂದೇಶ ಕೊಟ್ಟ ಡಿಜಿ ಅಲೋಕ್ ಕುಮಾರ್

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿರುವ ಪವಿತ್ರಗೌಡಗೆ ಯಾವುದೇ ವಿಶೇಷ ಸೌಲಭ್ಯ ನೀಡುವುದಿಲ್ಲ ಎಂಬ ಕಠಿಣ ಸಂದೇಶವನ್ನು ಕಾರಾಗೃಹ ಮಹಾನಿರ್ದೇಶಕ ಅಲೋಕ್ ಕುಮಾರ್ ನೀಡಿದ್ದಾರೆ.

ಶಿವಮೊಗ್ಗ ಜೈಲಿಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, “ಜೈಲಿನಲ್ಲಿರುವ ಎಲ್ಲ ಕೈದಿಗಳು ಸಮಾನರು. ಯಾರಿಗೂ ಪ್ರತ್ಯೇಕ ನಿಯಮ ಇಲ್ಲ” ಎಂದು ಖಡಕ್ ಹೇಳಿಕೆ ನೀಡಿದ್ದಾರೆ.

ಕಾರಾಗೃಹದಲ್ಲಿ ನೀಡುವ ಊಟವನ್ನು ಎಫ್‌ಎಸ್‌ಐಎಲ್ ಮೂಲಕ ಗುಣಮಟ್ಟ ಪರೀಕ್ಷೆ ಮಾಡಿ ಸರ್ಟಿಫಿಕೇಟ್ ಪಡೆದ ಬಳಿಕವೇ ಕೈದಿಗಳಿಗೆ ನೀಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮನೆಯಿಂದ ಊಟ ತರಲು ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

“ಒಬ್ಬರಿಗೆ ವಿನಾಯಿತಿ ಕೊಟ್ಟರೆ, ನಾಳೆ ಸಾವಿರಾರು ಕೈದಿಗಳು ಅದೇ ಬೇಡಿಕೆ ಇಡುತ್ತಾರೆ. ಇದು ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತದೆ” ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ಪ್ರಿಜನರ್ಸ್ ಆಕ್ಟ್ ಪ್ರಕಾರ ಕೈದಿಗಳಿಗೆ ಅಗತ್ಯ ಸೌಲಭ್ಯ ನೀಡಲಾಗುತ್ತಿದೆ. ಆದರೆ ವಿಐಪಿ ಟ್ರೀಟ್‌ಮೆಂಟ್ ಎಂಬುದು ಕಾರಾಗೃಹ ವ್ಯವಸ್ಥೆಯಲ್ಲಿ ಇಲ್ಲ ಎಂಬ ಸಂದೇಶವನ್ನು ಅಲೋಕ್ ಕುಮಾರ್ ಸ್ಪಷ್ಟವಾಗಿ ರವಾನಿಸಿದ್ದಾರೆ.

‘ಯೋಚಿಸದೆ ಹೆಜ್ಜೆ ಇಡಬೇಡ’- ಗಿಲ್ಲಿಗೆ ಒಂದೊಳ್ಳೆ ಕಿವಿಮಾತು ಹೇಳಿದ ಕಿಚ್ಚ ಸುದೀಪ್

ಬಿಗ್ ಬಾಸ್ ಗೆಲುವಿನ ಬಳಿಕ ಗಿಲ್ಲಿ ನಟರ ಹೆಸರು ಎಲ್ಲೆಡೆ ಗರ್ಜಿಸುತ್ತಿದೆ. ಆದರೆ ಈ ಗೆಲುವಿನ ಹಿಂದೆ ಕಿಚ್ಚ ಸುದೀಪ್ ಅವರ ಮೌನ ಶ್ರಮ, ಮಾರ್ಗದರ್ಶನ ಮತ್ತು ಕಿವಿಮಾತುಗಳು ಪ್ರಮುಖ ಕಾರಣ ಎಂಬುದು ಇದೀಗ ಬಹಿರಂಗವಾಗಿದೆ.

ಬಿಗ್ ಬಾಸ್ ಮನೆಯೊಳಗೆ ಇರುವಾಗ ಆಟ, ಮಾತು, ವರ್ತನೆ ಎಲ್ಲವೂ ನಿಯಂತ್ರಣ ತಪ್ಪುವುದು ಸಹಜ. ಗಿಲ್ಲಿಯೂ ಹಲವು ಬಾರಿ ತಪ್ಪು ಹೆಜ್ಜೆ ಇಟ್ಟಿದ್ದಾರೆ. ಆದರೆ ಪ್ರತಿಯೊಂದು ಸಂದರ್ಭದಲ್ಲೂ ಸುದೀಪ್ ಅವರನ್ನು ಕರೆದು ತಿದ್ದುವ ಕೆಲಸ ಮಾಡಿದ್ದಾರೆ. ಇದೇ ಕಾರಣಕ್ಕೆ ಗಿಲ್ಲಿ ಹಂತಹಂತವಾಗಿ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ.

ಫಿನಾಲೆ ದಿನ ಸುದೀಪ್ ಎದುರು ‘ಸಾಯೋವರೆಗೂ ನಿಮ್ಮನ್ನು ಮರೆಯಲ್ಲ’ ಎಂದು ಗಿಲ್ಲಿ ಹೇಳಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಇದೀಗ ಬಿಗ್ ಬಾಸ್ ಗೆದ್ದ ನಂತರ ಗಿಲ್ಲಿ ಸುದೀಪ್ ಅವರನ್ನು ಖಾಸಗಿಯಾಗಿ ಭೇಟಿಯಾಗಿ, ಮತ್ತಷ್ಟು ಮಾರ್ಗದರ್ಶನ ಪಡೆದಿದ್ದಾರೆ.

ಈ ವೇಳೆ ಸುದೀಪ್, ‘ಗೆಲುವು ಬಂದಾಗ ಮನುಷ್ಯನ ಮನಸ್ಸು ಕೈ ತಪ್ಪುತ್ತದೆ. ಆ ಸಂದರ್ಭದಲ್ಲಿ ಯೋಚಿಸದೇ ಹೆಜ್ಜೆ ಇಟ್ಟರೆ ಭವಿಷ್ಯ ಹಾಳಾಗಬಹುದು’ ಎಂದು ಗಿಲ್ಲಿಗೆ ಗಂಭೀರ ಸಲಹೆ ನೀಡಿದ್ದಾರೆ. ಈ ಮಾತು ಗಿಲ್ಲಿಯನ್ನು ಇನ್ನಷ್ಟು ಹೊಣೆಗಾರ ವ್ಯಕ್ತಿಯಾಗಿಸಿದೆ ಎನ್ನಲಾಗಿದೆ.

ಇದೇ ವೇಳೆ ಗಿಲ್ಲಿ ಶಿವರಾಜ್ಕುಮಾರ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದು, ಶಿವಣ್ಣ ಮುಂಚಿತವಾಗಿಯೇ ಗಿಲ್ಲಿ ಗೆಲುವಿನ ಬಗ್ಗೆ ಹೇಳಿದ್ದ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಈ ಭೇಟಿಯ ವೇಳೆ ಸುದೀಪ್ ಅವರೊಂದಿಗೆ ವಿಡಿಯೋ ಕರೆ ಮೂಲಕ ಮಾತುಕತೆ ನಡೆಸಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಡಾ. ಬಸವರಾಜ ಬಳ್ಳಾರಿ ನೇಮಕ

0

ಬೆಂಗಳೂರು: ಗದಗ ಜಿಲ್ಲೆಯ ಯುವ ಸಂಘಟನಾ ಚತುರ ಹಾಗೂ ಗದಗ ಜಿಲ್ಲಾ ಶಾಖೆಯ ಅಧ್ಯಕ್ಷರಾದ‌ ಡಾ. ಬಸವರಾಜ ಬಳ್ಳಾರಿ ಅವರ ನೇಮಕ ಗದಗ ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ  ಹೆಮ್ಮೆ ತರುವ ವಿಷಯವಾಗಿದೆ ಎಂದು ಜಿಲ್ಲೆಯ ನೌಕರ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಡಾ. ಬಸವರಾಜ ಬಳ್ಳಾರಿ ಅವರು ಕಳೆದ ಹಲವು ವರ್ಷಗಳಿಂದ ಸರ್ಕಾರಿ ನೌಕರರ ಹಕ್ಕುಗಳು, ಸೇವಾ ಭದ್ರತೆ, ವೇತನ, ವರ್ಗಾವಣೆ ಹಾಗೂ ಕಲ್ಯಾಣ ಯೋಜನೆಗಳಿಗಾಗಿ ರಾಜ್ಯ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ ಜೊತೆಗೆ ಶ್ರಮಿಸಿದ್ದಾರೆ.

ಹೀಗಾಗಿ  ರಾಜ್ಯ ಘಟಕದ ಉಪಾಧ್ಯಕ್ಷ ಸ್ಥಾನದ ಈ ಮಹತ್ವದ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಹೇಳಲಾಗುತ್ತದೆ.

ಗದಗ ಜಿಲ್ಲಾ ಶಾಖೆಯ ಅಧ್ಯಕ್ಷರಾಗಿ ಆಯ್ಕೆ ಆದ ನಂತರ ಬಸವರಾಜ್ ಬಳ್ಳಾರಿ ಅವರು, ಸಂಘಟನೆಯನ್ನು ಬಲಪಡಿಸುವುದರ ಜೊತೆಗೆ,  ನೌಕರರ ಕಾರ್ಯಾಗಾರ, ರಾಜ್ಯವೇ ತಿರುಗಿ ನೋಡುವಂತೆ ಜಿಲ್ಲಾ ಮಟ್ಟದ ಕ್ರೀಡಾಕೂಟ, ಸಾಂಸ್ಕೃತಿಕ ಹಬ್ಬ ಹಾಗೂ ಸರ್ಕಾರಿ ನೌಕರರ ಹಿತಾಸಕ್ತಿ ಕಾಪಾಡುವಲ್ಲಿ ಸೇವಕನಂತೆ ಕಾರ್ಯನಿರ್ವಹಿಸುವ ವೈಖರಿ ಆಧರಿಸಿ ಈ ಸ್ಥಾನ ಕೊಡಲಾಗಿದೆ ಎನ್ನಲಾಗುತ್ತದೆ.

ಈ ಐತಿಹಾಸಿಕ ನೇಮಕಕ್ಕೆ ಗದಗ ಜಿಲ್ಲೆಯ ಸಮಸ್ತ ಸರ್ಕಾರಿ ನೌಕರರ ಪರವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಗದಗ ಜಿಲ್ಲಾ ಶಾಖೆ  ಅಭಿನಂದನೆ ಸಲ್ಲಿಸಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಶಾಖೆಯ ಕಾರ್ಯಾಧ್ಯಕ್ಷರಾದ ಸಿದ್ದಪ್ಪ ಎನ್. ಲಿಂಗದಾಳ, ಖಜಾಂಚಿ ಮಹಂತೇಶ ನಿಟ್ಟಾಲಿ, ಅಜಯಕುಮಾರ ಕಲಾಲ, ದೇವೇಂದ್ರಪ್ಪ ತಳವಾರ, ರಾಜು ಕೊಂಟಿಗೂಣ್ಣವರ, ಶ್ರೀಧರ ಚಿನಗುಂಡಿ, ಶರಣಯ್ಯ ಪಾರ್ವತಿಮಠ, ಮುತ್ತುರಾಜ ಮಲಕಶೆಟ್ಟಿ, ರಾಜಕುಮಾರ್ ಸೊಪ್ಪಡ್ಲ,   ಸುರೇಶ  ಹುಚ್ಚಣ್ಣವರ, ಶರಣು ಸಂಗಳದ, ದೇವಪ್ಪ ದುರಗಣ್ಣವರ, ವಾಯ್.ಎನ್. ಕಡೆಮನಿ, ಶ್ರೀಮತಿ ಸರೋಜಾ ಕಟ್ಟಿಮನಿ, ಬಿ.ಸಿ. ಹಿರೇಹಾಳ, ಮಂಜುನಾಥ ಲಿಂಗದಾಳ ಸೇರಿದಂತೆ ಹಲವಾರು ಪದಾಧಿಕಾರಿಗಳು ಹಾಗೂ ಸದಸ್ಯರು ಅಭಿನಂದನೆಗಳನ್ನು ತಿಳಿಸಿದ್ದಾರೆ.

ಈ ನೇಮಕದಿಂದ ರಾಜ್ಯ ಮಟ್ಟದಲ್ಲಿ ಗದಗ ಜಿಲ್ಲೆಯ ಧ್ವನಿ ಇನ್ನಷ್ಟು ಬಲಗೊಳ್ಳಲಿದ್ದು, ಜಿಲ್ಲೆಯ ನೌಕರರ ಸಮಸ್ಯೆಗಳು ಪರಿಣಾಮಕಾರಿಯಾಗಿ ಸರ್ಕಾರದ ಗಮನಕ್ಕೆ ಬರಲಿವೆ ಎಂಬ ವಿಶ್ವಾಸವನ್ನು ಸಂಘದ ಪದಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಕರ್ನಾಟಕ‌ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ನನ್ನ ಮೇಲೆ ಬಲವಾದ ನಂಬಿಕೆ ಇಟ್ಟುಮಹತ್ವದ ಹುದ್ದೆ ನೀಡಿದ್ದಾರೆ. ಅವರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ, ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ, ಸಂಘ ಹಾಗೂ ನೌಕರರ ಹಿತಾಸಕ್ತಿಗಾಗಿ ಹೋರಾಟ ಮಾಡಲಾಗುವುದು.

-ಡಾ. ಬಸವರಾಜ ಬಳ್ಳಾರಿ, ನೂತನ ರಾಜ್ಯ ಉಪಾಧ್ಯಕ್ಷರು ‌ಹಾಗೂ ಗದಗ ಜಿಲ್ಲಾ ಅಧ್ಯಕ್ಷರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ.

ಕೆಆರ್ ಪುರ | ಅಕ್ರಮ ಫ್ಲೆಕ್ಸ್ ಬ್ಯಾನರ್ ತೆರವು ಕಾರ್ಯಾಚರಣೆ: ₹50,000 ದಂಡ ವಸೂಲಿ

0

ಬೆಂಗಳೂರು: ಕೆಆರ್ ಪುರ ಜಿಬಿಎ ವಲಯದಲ್ಲಿ ಅಕ್ರಮ ಫ್ಲೆಕ್ಸ್ ಬ್ಯಾನರ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸಿ ₹50,000 ದಂಡ ವಸೂಲಿ ಮಾಡಲಾಗಿದೆ.

ರಾತ್ರಿಯ ಸಮಯದಲ್ಲಿ ಜಂಟಿ ಆಯುಕ್ತೆ ಡಾ. ಸುಧಾ ನೇತೃತ್ವದಲ್ಲಿ 60 ಸಿಬ್ಬಂದಿಗಳೊಂದಿಗೆ ಫೀಲ್ಡ್ ಗೆ ಇಳಿದ ಜಿಬಿಎ ಅಧಿಕಾರಿಗಳು ಪಾದಚಾರಿ ಮಾರ್ಗಗಳಲ್ಲಿ ಅಕ್ರಮವಾಗಿ ನೆರೆದಿದ್ದ ಬ್ಯಾನರ್‌ಗಳು ಮತ್ತು ನೇಮ್ ಬೋರ್ಡ್‌ಗಳನ್ನು ತೆರವುಗೊಳಿಸಿದ್ದಾರೆ. ಕೆಆರ್ ಪುರ ಸಿಟಿ, ಜಿಬಿಎ ಕಛೇರಿ ಮುಂಭಾಗ, ಶ್ರೀವಿನಾಯಕ ಜ್ಯೂವೆಲ್ಲರಿ, ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್, ಜಿಆರ್ ಟಿ ಜ್ಯೂವೆಲ್ಲರಿ ಮತ್ತು ಬಾಲಾಜಿ ವೈನ್ಸ್ ಸೇರಿದಂತೆ ಅನೇಕ ವ್ಯವಹಾರಸ್ಥರ ಬ್ಯಾನರ್‌ಗಳಿಗೆ ದಂಡ ವಿಧಿಸಲಾಗಿದೆ.

ಫ್ಲೆಕ್ಸ್ ಬ್ಯಾನರ್‌ಗಳಿಗೆ ಅಳವಡಿಸಿದ ಎಲ್ಇಡಿ ಲೈಟ್‌ಗಳಿಗೆ ಕೂಡ ಅಧಿಕಾರಿಗಳು ದಂಡ ವಿಧಿಸಿದ್ದಾರೆ.
ಜಿಬಿಎ ಅಧಿಕಾರಿಗಳ ಕಾರ್ಯಾಚರಣೆ ಮುಂದುವರಿಯಲಿದೆ ಮತ್ತು ವಲಯ ವ್ಯಾಪ್ತಿಯಲ್ಲಿನ ಎಲ್ಲಾ ಅನಧಿಕೃತ ಬ್ಯಾನರ್, ಫ್ಲೆಕ್ಸ್ ಮತ್ತು ನೇಮ್ ಬೋರ್ಡ್‌ಗಳಿಗೆ ನಿರಂತರ ಪರಿಶೀಲನೆ ಜಾರಿಯಲ್ಲಿದೆ.

error: Content is protected !!