Home Blog

ಗದಗ ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿದ ಜಕ್ಕಲಿಯ ಹೆಮ್ಮೆಯ ಕುವರಿ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಅವಕಾಶ ದೊರೆತರೆ ರಾಷ್ಟ್ರಮಟ್ಟದಲ್ಲೂ ತಮ್ಮ ಸಾಮರ್ಥ್ಯ ಪ್ರದರ್ಶಿಸಬಹುದು ಎಂಬುದನ್ನು ಸಮೀಪದ ಜಕ್ಕಲಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿನಿ ಸೃಷ್ಠಿ ಉಮೇಶ್ ಮೇಟಿ ಸಾಬೀತುಪಡಿಸಿದ್ದಾರೆ. ಉತ್ತರಾಖಂಡದ ಉತ್ತರಕಾಶಿಯಲ್ಲಿರುವ ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ (ಎನ್‌ಐಎಂ) ಆಯೋಜಿಸಿದ್ದ ಪ್ರತಿಷ್ಠಿತ ಪರ್ವತಾರೋಹಣ ಹಾಗೂ ಸಾಹಸ ಶಿಬಿರದಲ್ಲಿ ಭಾಗವಹಿಸಿದ್ದ ಅವರು 15,500 ಅಡಿ ಎತ್ತರದ ಹುರ್ರಾ ಟಾಪ್ ಶಿಖರವನ್ನು ಯಶಸ್ವಿಯಾಗಿ ಏರಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಗದಗ ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಪಸರಿಸಿದ್ದಾರೆ.

ಗದಗದ ಜೆ.ಟಿ. ಕಾಲೇಜಿನ ವಿದ್ಯಾರ್ಥಿನಿ ಹಾಗೂ 38 ಕೆಎಆರ್ ಬಿಎನ್ ಎನ್‌ಸಿಸಿ ಘಟಕದ ಕೆಡೆಟ್ ಆಗಿರುವ ಸೃಷ್ಠಿ, ಶಿಖರದ ತುದಿಯಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಹಾರಿಸುವ ಮೂಲಕ ತಮ್ಮ ಸಾಹಸ, ದೇಶಭಕ್ತಿ ಹಾಗೂ ಆತ್ಮವಿಶ್ವಾಸವನ್ನು ಅನಾವರಣಗೊಳಿಸಿದ್ದಾರೆ. ಈ ಸಾಧನೆಯ ಮೂಲಕ ಅವರು ತಮ್ಮ ಕಾಲೇಜು, ಕೆಎಲ್‌ಇ ಸಂಸ್ಥೆ, ಗದಗ ಜಿಲ್ಲೆ ಹಾಗೂ ಜಕ್ಕಲಿ ಗ್ರಾಮದ ಕೀರ್ತಿಯನ್ನು ಎತ್ತಿಹಿಡಿದಿದ್ದಾರೆ.

ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾದ ಎನ್‌ಸಿಸಿ ಕೆಡೆಟ್‌ಗಳೊಂದಿಗೆ ನಡೆದ ಈ ವಿಶೇಷ ಶಿಬಿರದಲ್ಲಿ ಪರ್ವತಾರೋಹಣ, ಟ್ರೆಕ್ಕಿಂಗ್, ಸಾಹಸ ಕ್ರೀಡೆಗಳು, ಪ್ರತಿಕೂಲ ಪರಿಸ್ಥಿತಿಗಳಲ್ಲಿ ಬದುಕುವ ಕೌಶಲ, ನಾಯಕತ್ವ ಗುಣಗಳ ವಿಕಾಸ ಹಾಗೂ ದೈಹಿಕ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದ ತರಬೇತಿಗಳನ್ನು ನೀಡಲಾಯಿತು. ಈ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ಸೃಷ್ಠಿ ತಮ್ಮ ಶಿಸ್ತು, ಪರಿಶ್ರಮ ಹಾಗೂ ದೃಢ ಸಂಕಲ್ಪದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಪರ್ವತಾರೋಹಣವು ಕೇವಲ ದೈಹಿಕ ಸಾಮರ್ಥ್ಯದ ಪರೀಕ್ಷೆಯಲ್ಲ, ಮಾನಸಿಕ ದೃಢತೆ, ತಾಳ್ಮೆ, ಧೈರ್ಯ ಹಾಗೂ ಗುರಿ ಸಾಧಿಸುವ ಛಲದ ಪ್ರತೀಕವಾಗಿದೆ. ಇಂತಹ ಸವಾಲಿನ ಪರಿಸ್ಥಿತಿಯಲ್ಲೂ ಶಿಖರವನ್ನು ಯಶಸ್ವಿಯಾಗಿ ಏರಿ ತ್ರಿವರ್ಣ ಧ್ವಜ ಹಾರಿಸಿರುವ ಸೃಷ್ಠಿ ಅವರ ಸಾಧನೆ ಯುವಜನತೆಗೆ ಸ್ಪೂರ್ತಿದಾಯಕವಾಗಿದೆ.

ಸೃಷ್ಠಿ ಅವರ ಸಾಧನೆಗೆ ಪೋಷಕರಾದ ಉಮೇಶ್ ಮೇಟಿ ಹಾಗೂ ಕುಟುಂಬದವರ ನಿರಂತರ ಪ್ರೋತ್ಸಾಹವೂ ಪ್ರಮುಖ ಕಾರಣವಾಗಿದೆ. ಅವರ ಯಶಸ್ಸಿನಿಂದ ಗ್ರಾಮಸ್ಥರು, ಸ್ನೇಹಿತರು, ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದ ಗಣ್ಯರಲ್ಲಿ ಹರ್ಷ ವ್ಯಕ್ತವಾಗಿದೆ.

ಈ ಅಪೂರ್ವ ಸಾಧನೆಗಾಗಿ ಜೆ.ಟಿ. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಎನ್‌ಸಿಸಿ ಅಧಿಕಾರಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರದ ಶಿಖರಗಳನ್ನು ಏರಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರದ ಕೀರ್ತಿಯನ್ನು ಹೆಚ್ಚಿಸಲಿ ಎಂದು ಶುಭ ಹಾರೈಸಿದ್ದಾರೆ.

“ಹುರ್ರಾ ಟಾಪ್ ಶಿಖರದ ಮೇಲೆ ತ್ರಿವರ್ಣ ಧ್ವಜ ಹಾರಿಸಿರುವುದು ನನ್ನ ಜೀವನದ ಅತ್ಯಂತ ಹೆಮ್ಮೆಯ ಕ್ಷಣ. ಈ ಸಾಧನೆಯನ್ನು ದೇಶ, ಜಿಲ್ಲೆ ಹಾಗೂ ನನ್ನ ಗ್ರಾಮದ ಜನತೆಗೆ ಅರ್ಪಿಸುತ್ತೇನೆ.”

ಸೃಷ್ಠಿ ಉಮೇಶ್ ಮೇಟಿ

ಮಳೆರಾಯನ ಕೃಪೆಗೆ ಧರ್ಮಾಪೂರ ಬಸವಣ್ಣನಿಗೆ ಪರವು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಂಗಾರು ಮಳೆ ಕೈಕೊಟ್ಟು ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಪಟ್ಟಣದ ಹಳ್ಳದಕೇರಿ ಓಣಿಯ ಭಕ್ತರು ಧರ್ಮಾಪೂರ ಬಸವಣ್ಣನಿಗೆ ವಿಶೇಷ ಪೂಜೆ ಹಾಗೂ ಪರವು ನಡೆಸಿ ಮಳೆಗಾಗಿ ಪ್ರಾರ್ಥಿಸಿದರು.

ಮಳೆ ಕೊರತೆಯ ಸಂದರ್ಭದಲ್ಲಿ ಧರ್ಮಾಪೂರ ಬಸವಣ್ಣನಿಗೆ ಪೂಜೆ ಸಲ್ಲಿಸಿದರೆ ಉತ್ತಮ ಮಳೆಯಾಗುತ್ತದೆ ಎಂಬ ನಂಬಿಕೆ ಈ ಭಾಗದಲ್ಲಿ ತಲೆಮಾರಿನಿಂದಲೂ ನಡೆದುಕೊಂಡು ಬಂದಿದೆ. ಇದೇ ಹಿನ್ನೆಲೆಯಲ್ಲಿ ಸೋಮವಾರ ಹಳ್ಳದಕೇರಿ ಓಣಿಯ ಸಣ್ಣ ದ್ಯಾಮವ್ವ ದೇವಸ್ಥಾನದಿಂದ ಧರ್ಮಾಪೂರ ಬಸವಣ್ಣನ ಭಾವಚಿತ್ರವನ್ನು ಬಂಡಿಯಲ್ಲಿ ಪ್ರತಿಷ್ಠಾಪಿಸಿ ಭವ್ಯ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆಯಲ್ಲಿ ಹತ್ತಾರು ಜೋಡೆತ್ತುಗಳು, ಭಜನಾ ಮಂಡಳಿಗಳು, ಡೊಳ್ಳು-ವಾದ್ಯಗಳು ಹಾಗೂ ನೂರಾರು ಮಹಿಳೆಯರು ಆರತಿ ಮತ್ತು ಪೂರ್ಣಕುಂಭಗಳೊಂದಿಗೆ ಭಾಗವಹಿಸಿ ಧಾರ್ಮಿಕ ಸಂಭ್ರಮ ಹೆಚ್ಚಿಸಿದರು.

ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಡಾ. ಚಂದ್ರು ಲಮಾಣಿ, ರಾಜ್ಯಾದ್ಯಂತ ರೈತರು ಬಿತ್ತನೆ ಕಾರ್ಯ ಪೂರ್ಣಗೊಳಿಸಿದ್ದರೂ ಮಳೆ ಅಭಾವದಿಂದ ಬೆಳೆ ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಮತ್ತು ಸಾರ್ವಜನಿಕರು ಭಗವಂತನ ಮೊರೆ ಹೋಗಿದ್ದು, ಮಳೆರಾಯ ಕೃಪೆ ತೋರಿ ಉತ್ತಮ ಮಳೆಯಾಗಲಿ ಎಂದು ಆಶಿಸಿದರು.

ಹಳ್ಳದಕೇರಿ ಭಕ್ತವೃಂದವು ಹಲವು ವರ್ಷಗಳಿಂದ ಧರ್ಮಾಪೂರ ಬಸವಣ್ಣನಿಗೆ ಪರವು ನಡೆಸುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದೆ. ಜನರ ಪ್ರಾರ್ಥನೆ ಫಲಿಸಿ ಉತ್ತಮ ಮಳೆ ಹಾಗೂ ಸಮೃದ್ಧ ಬೆಳೆ ದೊರೆಯಲಿ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಧರ್ಮಾಪೂರ ಬಸವಣ್ಣ ಪರವು ಸಮಿತಿ ಸದಸ್ಯರು, ರೈತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

“ಮಳೆ ಇಲ್ಲದ ಸಂದರ್ಭದಲ್ಲಿ ಧರ್ಮಾಪೂರ ಬಸವಣ್ಣನಿಗೆ ಪರವು ನಡೆಸುವ ಸಂಪ್ರದಾಯ ಜನರ ಭಕ್ತಿ ಮತ್ತು ನಂಬಿಕೆಯ ಪ್ರತೀಕವಾಗಿದೆ. ರೈತರ ಪ್ರಾರ್ಥನೆಗೆ ಮಳೆರಾಯ ಶೀಘ್ರ ಸ್ಪಂದಿಸಲಿ.”

ಡಾ. ಚಂದ್ರು ಲಮಾಣಿ, ಶಾಸಕ

ಠಾಣೆಯಲ್ಲೇ ವೃದ್ಧ ಸಾವು: ಪೊಲೀಸರಿಂದ ಹಲ್ಲೆ ಆರೋಪ? ಎಎಸ್ಐ ವಿರುದ್ಧ ಕುಟುಂಬಸ್ಥರ ಆಕ್ರೋಶ!

ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಕರೆದೊಯ್ಯಲಾಗಿದ್ದ ವೃದ್ಧನೊಬ್ಬ ಮೃತಪಟ್ಟಿರುವ ಘಟನೆ ನಡೆದಿದ್ದು, ಪೊಲೀಸರ ಹಲ್ಲೆಯಿಂದಲೇ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಕರಿಕಲ್ ಗ್ರಾಮದ 70 ವರ್ಷದ ರಾಜೇಸಾಬ್ ವಾಲಿಕಾರ್ ಮೃತ ವ್ಯಕ್ತಿ. ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಬಂದಿದ್ದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ನಾರಾಯಣಪುರ ಠಾಣೆಗೆ ವಿಚಾರಣೆಗೆ ಕರೆಸಿಕೊಂಡಿದ್ದರು ಎನ್ನಲಾಗಿದೆ.

ವಿಚಾರಣೆ ವೇಳೆ ಎಎಸ್ಐ ಸಂಗಪ್ಪ ಅವರು ಹಲ್ಲೆ ನಡೆಸಿದ್ದರಿಂದ ರಾಜೇಸಾಬ್ ಕುಸಿದು ಬಿದ್ದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬಳಿಕ ಪೊಲೀಸರು ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆ ಹಾಗೂ ಠಾಣೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸಂಬಂಧಿಕರು ಹಾಗೂ ಗ್ರಾಮಸ್ಥರು ಎಎಸ್ಐ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ಮೃತನ ಸಾವಿನ ನಿಖರ ಕಾರಣ ಮರಣೋತ್ತರ ಪರೀಕ್ಷೆ ವರದಿಯ ಬಳಿಕವೇ ತಿಳಿಯಲಿದೆ.

ಕಾಫಿ ಕುಡಿಯುವ ಸಮಯವೂ ಮುಖ್ಯ; ಈ ಹೊತ್ತಲ್ಲಿ ಸೇವಿಸಿದರೆ ಹೆಚ್ಚು ಲಾಭ!

0

ಕಾಫಿ ವಿಶ್ವದ ಅತ್ಯಂತ ಜನಪ್ರಿಯ ಪಾನೀಯಗಳಲ್ಲಿ ಒಂದಾಗಿದೆ.

ಅನೇಕರು ದಿನದ ಆರಂಭವನ್ನು ಒಂದು ಕಪ್ ಸ್ಟ್ರಾಂಗ್ ಕಾಫಿಯೊಂದಿಗೆ ಮಾಡುತ್ತಾರೆ. ಆದರೆ ಕಾಫಿ ಸೇವನೆಯಿಂದ ಸಂಪೂರ್ಣ ಪ್ರಯೋಜನ ಪಡೆಯಬೇಕಾದರೆ ಅದನ್ನು ಸರಿಯಾದ ಸಮಯದಲ್ಲಿ ಕುಡಿಯುವುದು ಮುಖ್ಯ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಕಾಫಿ ಕುಡಿಯಲು ಯಾವ ಸಮಯ ಉತ್ತಮ?

ತಜ್ಞರ ಪ್ರಕಾರ ಬೆಳಿಗ್ಗೆ 9:30 ರಿಂದ 11:30 ಗಂಟೆಯ ನಡುವಿನ ಅವಧಿ ಕಾಫಿ ಕುಡಿಯಲು ಅತ್ಯುತ್ತಮ ಸಮಯವಾಗಿದೆ. ಈ ವೇಳೆ ದೇಹದಲ್ಲಿನ ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಕಡಿಮೆಯಾಗಿರುತ್ತದೆ. ಈ ಸಮಯದಲ್ಲಿ ಕಾಫಿ ಸೇವಿಸಿದರೆ ದೇಹಕ್ಕೆ ಹೆಚ್ಚಿನ ಚೈತನ್ಯ ದೊರೆಯುವುದರ ಜೊತೆಗೆ ಮೆದುಳು ಚುರುಕಾಗಿ ಕಾರ್ಯನಿರ್ವಹಿಸಲು ಸಹಾಯವಾಗುತ್ತದೆ.

ಇದೇ ರೀತಿ ಮಧ್ಯಾಹ್ನ 2ರಿಂದ 4 ಗಂಟೆಯ ನಡುವೆಯೂ ಕಾಫಿ ಸೇವಿಸಬಹುದು. ಇದು ಮಧ್ಯಾಹ್ನದ ಆಲಸ್ಯವನ್ನು ದೂರ ಮಾಡಿ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.

ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವನೆ ಬೇಡ:

ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವ ಅಭ್ಯಾಸ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಇದು ದೇಹದಲ್ಲಿನ ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಆಮ್ಲೀಯತೆ, ಹೊಟ್ಟೆ ಉರಿ, ಮಲಬದ್ಧತೆ ಸೇರಿದಂತೆ ಹಲವು ಜೀರ್ಣಕ್ರಿಯೆ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಸಂಜೆ ತಡವಾಗಿ ಕಾಫಿ ಕುಡಿಯುವುದು ಸೂಕ್ತವಲ್ಲ:

ಸಂಜೆ 4 ಗಂಟೆಯ ನಂತರ ಕಾಫಿ ಸೇವಿಸುವುದನ್ನು ಸಾಧ್ಯವಾದಷ್ಟು ತಪ್ಪಿಸುವುದು ಉತ್ತಮ. ಕಾಫಿಯಲ್ಲಿರುವ ಕೆಫೀನ್ ದೇಹದಲ್ಲಿ 6 ರಿಂದ 8 ಗಂಟೆಗಳವರೆಗೆ ಪರಿಣಾಮ ಬೀರುವ ಕಾರಣ ರಾತ್ರಿ ನಿದ್ರೆಗೆ ತೊಂದರೆ ಉಂಟಾಗಬಹುದು. ಜೊತೆಗೆ ಹಸಿವಿನ ಮೇಲೂ ಪರಿಣಾಮ ಬೀರಬಹುದು.

ಮಿತವಾದ ಕಾಫಿ ಸೇವನೆಯ ಪ್ರಯೋಜನಗಳು:

  • ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
  • ಆಯಾಸವನ್ನು ಕಡಿಮೆ ಮಾಡಿ ಚೈತನ್ಯ ನೀಡುತ್ತದೆ.
  • ಮನಸ್ಥಿತಿಯನ್ನು ಸುಧಾರಿಸಲು ಸಹಕಾರಿಯಾಗುತ್ತದೆ.
  • ಖಿನ್ನತೆಯನ್ನು ನಿಯಂತ್ರಿಸಲು ನೆರವಾಗುತ್ತದೆ.
  • ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಕಾರಿ.
  • ಅಲ್ಝೈಮರ್ ಕಾಯಿಲೆಯ ಅಪಾಯವನ್ನು ತಗ್ಗಿಸಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸಿವೆ.
  • ಕಾಫಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದ ಆರೋಗ್ಯ ರಕ್ಷಣೆಗೆ ನೆರವಾಗುತ್ತವೆ.
  • ತೂಕ ನಿಯಂತ್ರಣಕ್ಕೆ ಸಹಕಾರಿ.
  • ಟೈಪ್-2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುವಲ್ಲಿ ನೆರವಾಗಬಹುದು.

ಆದರೆ ಯಾವುದೇ ಆಹಾರ ಅಥವಾ ಪಾನೀಯದಂತೆ ಕಾಫಿಯನ್ನೂ ಹಿತಮಿತವಾಗಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮುಖ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ರಾಮನ ಹೆಸರಲ್ಲೇ ಲೂಟಿ ಮಾಡುವವರು ಮಂಜುನಾಥಸ್ವಾಮಿ ಹೆಸರಿನಲ್ಲಿ ಸತ್ಯ ಹೇಳ್ತಾರಾ?: ಬಿಜೆಪಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಆರೋಪದ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕರಿಂದ ಆಣೆ-ಪ್ರಮಾಣ ಮಾಡಿಸುವ ವಿಚಾರಕ್ಕೆ ಸಂಬಂಧಿಸಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ರಾಮನ ಹೆಸರಲ್ಲೇ ಲೂಟಿ ಮಾಡುವ ಬಿಜೆಪಿಯವರು ಮಂಜುನಾಥಸ್ವಾಮಿ ಹೆಸರಿನಲ್ಲಿ ಸತ್ಯ ಹೇಳ್ತಾರಾ?” ಎಂದು ಪ್ರಶ್ನಿಸುವ ಮೂಲಕ ಬಿಜೆಪಿ ನಾಯಕರನ್ನು ಟೀಕಿಸಿದರು.

ಬಿಜೆಪಿಯವರು ಮೊದಲು ತಮ್ಮ ಪಕ್ಷದ ಒಳಗಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿ. ಪಕ್ಷದಲ್ಲಿ ಶಿಸ್ತು ಇಲ್ಲದ ಕಾರಣವೇ ಅಡ್ಡಮತದಾನ ನಡೆದಿದೆ. ಕಾಂಗ್ರೆಸ್‌ನಲ್ಲಿ ಏನೇ ಆಗಲಿ, ಬಿಜೆಪಿಗೆ ಅದರಿಂದ ಏನು ಸಮಸ್ಯೆ ಎಂದು ಪ್ರಶ್ನಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷರು ಧರ್ಮಸ್ಥಳಕ್ಕೆ ಹೋಗಿ ಆಣೆ-ಪ್ರಮಾಣ ಮಾಡೋಣ ಎನ್ನುತ್ತಿದ್ದಾರೆ. ಆದರೆ ಅವರದೇ ಪಕ್ಷದ ಕೆಲವರು ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. “ಬಿಜೆಪಿಯೊಳಗೇ ಎಷ್ಟು ಬಣಗಳಿವೆ?” ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.

ವಿಧಾನ ಪರಿಷತ್ ಚುನಾವಣೆಯ ಅಡ್ಡಮತದಾನ ವಿಚಾರವಾಗಿ ಬಿಜೆಪಿ ನಾಯಕರು ಧರ್ಮಸ್ಥಳದಲ್ಲಿ ಶಾಸಕರಿಂದ ಪ್ರಮಾಣ ಮಾಡಿಸುವ ಕುರಿತು ಚರ್ಚೆ ನಡೆಸಿರುವ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.

ಕೆಲಸದ ಹುಡುಕಾಟದಲ್ಲಿದ್ದ ಯುವಕನ ದುರಂತ ಅಂತ್ಯ: ಕೈ ನರ ಕತ್ತರಿಸಿ ಬಳಿಕ ನೇಣಿಗೆ ಶರಣಾದ ಇಂಜಿನಿಯರಿಂಗ್ ಪದವೀಧರ

0

ಕಲಬುರಗಿ: ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದ ಇಂಜಿನಿಯರಿಂಗ್ ಪದವೀಧರ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಮಾನಸ ಲೇಔಟ್‌ನ ನಿವಾಸಿ ಹಾಗೂ ವಿಜಯಪುರ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಭಾರತಿ ಅಪ್ಪಾರಾವ್ ಮಾಲಿಪಾಟೀಲ್ ಅವರ ಪುತ್ರ ಕೃಷ್ಣ ಮಾಲಿಪಾಟೀಲ್ (25) ಮೃತ ದುರ್ದೈವಿ.

ತಂದೆಯಿಲ್ಲದೆ ತಾಯಿ ಹಾಗೂ ಅಕ್ಕನೊಂದಿಗೆ ಬೆಳೆದಿದ್ದ ಕೃಷ್ಣ, ಕಳೆದ ಕೆಲವು ವರ್ಷಗಳಿಂದ ಮಾನಸಿಕವಾಗಿ ಕುಗ್ಗಿದ್ದ ಎನ್ನಲಾಗಿದೆ. ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದ ಆತ ಕಲಬುರಗಿಯಲ್ಲಿರುವ ಮನೆಯಲ್ಲಿ ಒಬ್ಬನೇ ವಾಸವಾಗಿದ್ದ.

ವಿಜಯಪುರದಲ್ಲಿ ಸೇವೆ ಸಲ್ಲಿಸುತ್ತಿರುವ ತಾಯಿ ಜೂನ್ 18ರಂದು ಕೊನೆಯ ಬಾರಿ ಮಗನೊಂದಿಗೆ ಮಾತನಾಡಿದ್ದರು. ಬಳಿಕ ನಿರಂತರವಾಗಿ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮನೆಗೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಕೃಷ್ಣನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯಿತು.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆತ ಮೊದಲು ತನ್ನ ಕೈಯ ನರವನ್ನು ಕತ್ತರಿಸಿಕೊಂಡು, ಬಳಿಕ ಎರಡು ಕೈಗಳನ್ನು ಕಟ್ಟಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಘಟನೆಯು ಜೂನ್ 18ರಂದೇ ನಡೆದಿರಬಹುದೆಂದು ಶಂಕಿಸಲಾಗಿದೆ.

ಸಿಂಗಲ್ ಪೇರೆಂಟ್ ಕುಟುಂಬದ ಹಿನ್ನೆಲೆ ಮತ್ತು ಮಾನಸಿಕ ಒತ್ತಡ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು, ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ್ಯುವಿನ ನಿಖರ ಕಾರಣ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್: ಜೆಡಿಎಸ್ ಸಾಮಾಜಿಕ ಜಾಲತಾಣದ ವಿರುದ್ಧ FIR

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಅವಹೇಳನಕಾರಿ ಹಾಗೂ ಸುಳ್ಳು ಮಾಹಿತಿ ಒಳಗೊಂಡ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಆರೋಪದ ಹಿನ್ನೆಲೆಯಲ್ಲಿ ಜೆಡಿಎಸ್ ಸಾಮಾಜಿಕ ಜಾಲತಾಣ ಘಟಕದ ಆಡ್ಮಿನ್ ವಿರುದ್ಧ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಜೆಡಿಎಸ್‌ಗೆ ಸಂಬಂಧಿಸಿದ ಸಾಮಾಜಿಕ ಜಾಲತಾಣದ ಪುಟದಲ್ಲಿ ಮುಖ್ಯಮಂತ್ರಿ ವಿರುದ್ಧ ಆಕ್ಷೇಪಾರ್ಹ ಹಾಗೂ ತಪ್ಪು ಮಾಹಿತಿ ಒಳಗೊಂಡ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಲಾಗಿತ್ತು.

‘ಹಳೆ ಚಾಳಿ ಮತ್ತೆ ಶುರು, ಸುಟ್ಟರೂ ಹೋಗದ ಹುಟ್ಟುಗುಣ’ ಎಂಬ ಶೀರ್ಷಿಕೆಯಡಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಅದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಅವಹೇಳನಕಾರಿ ಹಾಗೂ ಸುಳ್ಳು ಮಾಹಿತಿಯನ್ನು ಒಳಗೊಂಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ‘ಕುಮಾರಸ್ವಾಮಿ ಫಾರ್ ಸಿಎಂ’ ಹಾಗೂ ‘ಜೆಡಿಎಸ್ ಸೆಕ್ಯುಲರ್ ಸೋಷಿಯಲ್ ಮೀಡಿಯಾ’ ಹೆಸರಿನ ಸಾಮಾಜಿಕ ಜಾಲತಾಣ ಪುಟಗಳ ವಿರುದ್ಧ ನೀಡಲಾದ ದೂರಿನ ಆಧಾರದ ಮೇಲೆ ಸದಾಶಿವನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

7.5% ಮೀಸಲಾತಿ ಸಿಗದಿದ್ದರೆ ರಾಜೀನಾಮೆ ಕೊಡುತ್ತೇನೆ: ರಮೇಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ

ಬಳ್ಳಾರಿ: 2028ರ ಕರ್ನಾಟಕ ವಿಧಾನಸಭಾ ಚುನಾವಣೆಯ ಬಳಿಕ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಆ ಸರ್ಕಾರದಲ್ಲಿ ತಾನೂ ಸಚಿವನಾಗುತ್ತೇನೆ. ಆದರೆ ನಮ್ಮ ಸಮಾಜಕ್ಕೆ ಶೇ.7.5ರಷ್ಟು ಮೀಸಲಾತಿ ಸಿಗದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರಲು ಸಿದ್ಧ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಘೋಷಣೆ ಮಾಡಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬಿಜೆಪಿ ಆಯೋಜಿಸಿದ್ದ ‘ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶ’ದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹಾಗೂ ಅದರ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಯಾವುದೇ ಪಕ್ಷವನ್ನು ಅಧಿಕಾರಕ್ಕೆ ತರುವುದು ಅಥವಾ ಅಧಿಕಾರದಿಂದ ಕೆಳಗಿಳಿಸುವ ರಾಜಕೀಯ ಶಕ್ತಿ ನಮ್ಮ ಸಮಾಜಕ್ಕಿದೆ. 1970ರ ದಶಕದಲ್ಲೇ ಕೇವಲ ಮೂರ್ನಾಲ್ಕು ಸ್ಥಾನಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದ್ದೇವೆ. ಈಗ ಮತ್ತಷ್ಟು ಸಂಘಟಿತರಾಗಿ, ಇತರ ಸಣ್ಣ ಸಮುದಾಯಗಳನ್ನು ಕೂಡ ಜೊತೆಯಾಗಿ ಕರೆದುಕೊಂಡು ಸಾಗಿದರೆ ಇನ್ನಷ್ಟು ರಾಜಕೀಯ ಬಲ ಪಡೆಯಬಹುದು ಎಂದು ಹೇಳಿದರು.

ನಮ್ಮ ಸಮಾಜಕ್ಕೆ ಶೇ.7.5ರಷ್ಟು ಮೀಸಲಾತಿ ದೊರೆಯದಿದ್ದರೆ, ಸಚಿವ ಸ್ಥಾನಕ್ಕಿಂತ ಸಮಾಜದ ಹಿತವೇ ಮುಖ್ಯ. ಅಂತಹ ಪರಿಸ್ಥಿತಿ ಬಂದರೆ ಯಾವುದೇ ಹಿಂಜರಿಕೆಯಿಲ್ಲದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ತಮ್ಮ ಸಹೋದರ ಹಾಗೂ ಹಾಲಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಪರೋಕ್ಷವಾಗಿ ಟೀಕಿಸಿದ ರಮೇಶ್ ಜಾರಕಿಹೊಳಿ, ಸಮಾಜದ ಹಿತದೃಷ್ಟಿಯಿಂದ ಮಾತನಾಡಲು ಕೆಲವರಿಗೆ ಧೈರ್ಯವಿಲ್ಲ. ಅವರ ಸ್ಥಾನದಲ್ಲಿ ತಾನಿದ್ದರೆ ಇಷ್ಟೊತ್ತಿಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೆ. ಆದರೆ ಅಧಿಕಾರ ತ್ಯಾಗ ಮಾಡುವ ಧೈರ್ಯ ಸತೀಶ್ ಜಾರಕಿಹೊಳಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಸಮಂತಾ ಗರ್ಭಿಣಿ? ಗೆಳತಿ-ನಿರ್ದೇಶಕಿ ನಂದಿನಿ ರೆಡ್ಡಿ ಹೇಳಿಕೆಯಿಂದ ಬಯಲಾಯಿತಾ ಗುಡ್ ನ್ಯೂಸ್!

ಹೈದರಾಬಾದ್: ನಟಿ ಸಮಂತಾ ಅವರ ವೈಯಕ್ತಿಕ ಜೀವನದ ಬಗ್ಗೆ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಇದೀಗ ಹೊಸ ತಿರುವು ಸಿಕ್ಕಿದೆ. ಸಮಂತಾ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿಗೆ ಅವರ ಆಪ್ತೆ ಹಾಗೂ ನಿರ್ದೇಶಕಿ ನಂದಿನಿ ರೆಡ್ಡಿ ನೀಡಿರುವ ಹೇಳಿಕೆ ಮತ್ತಷ್ಟು ಬಲ ತುಂಬಿದ್ದು, ಸಿನಿ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಇತ್ತೀಚೆಗೆ ಬಿಡುಗಡೆಯಾದ ‘ಮಾ ಇಂಟಿ ಬಂಗಾರಂ’ ಚಿತ್ರದ ಯಶಸ್ಸಿನ ಸಂಭ್ರಮದ ನಡುವೆ ಈ ಬೆಳವಣಿಗೆ ನಡೆದಿದೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಸಂದರ್ಭದಲ್ಲಿ ನಡೆದ ಸಕ್ಸಸ್ ಮೀಟ್‌ನಲ್ಲಿ ಸಮಂತಾ ಕಾಣಿಸಿಕೊಂಡಿದ್ದರು. ಈ ವೇಳೆ ಅವರ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ವಿಶೇಷವಾಗಿ ಅವರ ದೇಹದ ಬದಲಾವಣೆ ಗಮನಿಸಿದ ಅಭಿಮಾನಿಗಳು, ಸಮಂತಾ ಗರ್ಭಿಣಿಯಾಗಿರಬಹುದೇ ಎಂಬ ಪ್ರಶ್ನೆ ಎತ್ತಿದ್ದರು.

ಈ ನಡುವೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ನಿರ್ದೇಶಕಿ ನಂದಿನಿ ರೆಡ್ಡಿ, “ಅವಳ ಪ್ರೆಗ್ನೆನ್ಸಿ ಸರಿಯಾದ ಹಾಗೂ ಸುಂದರ ಸಮಯದಲ್ಲಿ ಬಂದಿದೆ. ನಮ್ಮ ಸಿನಿಮಾ ಕೂಡ ಯಶಸ್ಸು ಕಂಡಿದೆ” ಎಂದು ಹೇಳಿರುವುದು ಕುತೂಹಲ ಹೆಚ್ಚಿಸಿದೆ.

ನಾಗ ಚೈತನ್ಯ ಅವರೊಂದಿಗಿನ ವಿಚ್ಛೇದನದ ಬಳಿಕ ನಿರ್ದೇಶಕ ರಾಜ್ ನಿಧಿಮೋರು ಅವರೊಂದಿಗೆ ಸಮಂತಾ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದಾರೆ ಎಂಬ ವರದಿಗಳು ಹರಿದಾಡಿದ್ದವು. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಂದಿರಲಿಲ್ಲ.

ಈಗ ನಂದಿನಿ ರೆಡ್ಡಿ ಅವರ ಹೇಳಿಕೆಯ ಬೆನ್ನಲ್ಲೇ ಸಮಂತಾ ತಾಯಿ ಆಗಲಿದ್ದಾರೆ ಎಂಬ ಸುದ್ದಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಆದರೆ ನಟಿ ಅಥವಾ ಅವರ ತಂಡದಿಂದ ಇನ್ನೂ ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ.

ಸರ್ಕಾರದ ಕನ್ನಡ ಕಡ್ಡಾಯ ಆದೇಶ ಹರಿದು ಎಂಇಎಸ್ ಪುಂಡಾಟ: ಬೆಳಗಾವಿಯಲ್ಲಿ ಮತ್ತೆ ನಾಡದ್ರೋಹಿ ಘೋಷಣೆಗಳು

0

ಬೆಳಗಾವಿ: ಕನ್ನಡ ಕಡ್ಡಾಯ ಆದೇಶವನ್ನು ವಿರೋಧಿಸುವ ನೆಪದಲ್ಲಿ ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಮತ್ತೆ ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲೊಡ್ಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ಎಂಇಎಸ್ ಬೆಂಬಲಿಗರು, ರಾಜ್ಯ ಸರ್ಕಾರದ ಆದೇಶದ ಪ್ರತಿಯನ್ನು ಹರಿದು ಹಾಕಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಬಹಿರಂಗ ಉದ್ಧಟತನ ಪ್ರದರ್ಶಿಸಿದರು.

ಪ್ರತಿಭಟನೆಯ ವೇಳೆ ಮರಾಠಿ ಭಾಷೆಯಲ್ಲಿ ಆಡಳಿತಾತ್ಮಕ ಸೇವೆಗಳನ್ನು ನೀಡುವಂತೆ ಒತ್ತಾಯಿಸಿದ ಕಾರ್ಯಕರ್ತರು, ಕರ್ನಾಟಕದ ಗಡಿ ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಹಳೆಯ ವಿವಾದಾತ್ಮಕ ಬೇಡಿಕೆಯನ್ನು ಪುನರಾವರ್ತಿಸಿದರು. ಪೊಲೀಸರ ಸಮ್ಮುಖದಲ್ಲೇ ನಡೆದ ಈ ಘಟನೆ ಬೆಳಗಾವಿಯಲ್ಲಿ ಮತ್ತೊಮ್ಮೆ ಭಾಷಾ ವಿವಾದಕ್ಕೆ ಇಂಧನ ನೀಡಿದೆ.

ಇದಕ್ಕೆ ಪ್ರತಿಯಾಗಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದರು. ನಗರದ ಎಸ್‌ಪಿ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲು ಮುಂದಾದ ಕಾರ್ಯಕರ್ತರನ್ನು ಪೊಲೀಸರು ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ತಡೆದರು.

ಎಂಇಎಸ್ ಕಾರ್ಯಕರ್ತರು ಸರ್ಕಾರದ ಆದೇಶವನ್ನು ಹರಿದು ಹಾಕಿರುವುದು ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಕರವೇ ಆರೋಪಿಸಿದ್ದು, ಸಂಬಂಧಪಟ್ಟವರ ವಿರುದ್ಧ ದೇಶದ್ರೋಹ ಸೇರಿದಂತೆ ಕಠಿಣ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದೆ. ಜೊತೆಗೆ ಎಂಇಎಸ್ ಹಾಗೂ ಶಿವಸೇನೆ ಸಂಘಟನೆಗಳನ್ನು ನಿಷೇಧಿಸುವಂತೆ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

error: Content is protected !!