Home Blog

UPI ಪಾವತಿಯಲ್ಲಿ ಹೊಸ ನಿಯಮ: ₹10,000 ವರ್ಗಾವಣೆಗೆ 1 ಗಂಟೆ ವಿಳಂಬ!

0

ನವದೆಹಲಿ: ಡಿಜಿಟಲ್ ಪಾವತಿಗಳಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು, ಯುಪಿಐ (UPI) ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮುಂದಾಗಿದೆ.

ಹೊಸ ಪ್ರಸ್ತಾವನೆಯ ಪ್ರಕಾರ, ಇನ್ನು ಮುಂದೆ ₹10,000 ಕ್ಕಿಂತ ಹೆಚ್ಚಿನ ಮೊತ್ತವನ್ನು ಯುಪಿಐ ಮೂಲಕ ಪಾವತಿಸಿದಾಗ, ಆ ಹಣ ತಕ್ಷಣವೇ ಕಡಿತವಾಗುವುದಿಲ್ಲ. ಬದಲಾಗಿ, ಬ್ಯಾಂಕ್ ಆ ಮೊತ್ತವನ್ನು ಸುಮಾರು ಒಂದು ಗಂಟೆ ಕಾಲ ಹಿಡಿದಿಟ್ಟುಕೊಂಡು, ನಂತರ ಮಾತ್ರ ಗುರಿ ಖಾತೆಗೆ ಜಮಾ ಮಾಡಲಿದೆ.

ಈ ಕ್ರಮದ ಮೂಲಕ, ತಪ್ಪಾಗಿ ಅಥವಾ ಅಜ್ಞಾತವಾಗಿ ಹಣ ವರ್ಗಾವಣೆ ನಡೆದಿದ್ದರೆ, ಗ್ರಾಹಕರಿಗೆ ಒಂದು ಗಂಟೆಯ ಅವಧಿಯಲ್ಲಿ ಆ ಟ್ರಾನ್ಸಾಕ್ಷನ್ ಅನ್ನು ರದ್ದುಪಡಿಸುವ ಅವಕಾಶ ದೊರೆಯಲಿದೆ.

ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕಳೆದ ವರ್ಷ ಭಾರತದಲ್ಲಿ ₹22,931 ಕೋಟಿ ಮೌಲ್ಯದ ಡಿಜಿಟಲ್ ವಂಚನೆ ಪ್ರಕರಣಗಳು ದಾಖಲಾಗಿವೆ. ವಿಶೇಷವಾಗಿ ₹10,000 ಕ್ಕಿಂತ ಹೆಚ್ಚಿನ ಹಣ ವರ್ಗಾವಣೆಗಳಲ್ಲಿ ಹೆಚ್ಚು ವಂಚನೆ ಮತ್ತು ತಪ್ಪು ಪಾವತಿಗಳ ವರದಿ ಕಂಡುಬಂದ ಹಿನ್ನೆಲೆಯಲ್ಲಿ, ಆರ್‌ಬಿಐ ಈ ಕ್ರಮವನ್ನು ಪರಿಗಣಿಸಿದೆ.

ಆದರೆ, ಈ ಹೊಸ ನಿಯಮವು ದೈನಂದಿನ ಪಾವತಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಂಗಡಿಗಳ ಖರೀದಿ ಪಾವತಿಗಳು, EMI, ಮ್ಯೂಚುವಲ್ ಫಂಡ್ SIP, LIC ಪ್ರೀಮಿಯಂ ಹಾಗೂ ವಿವಿಧ ಸಬ್‌ಸ್ಕ್ರಿಪ್ಶನ್ ಪಾವತಿಗಳು ಹಳೆಯದಂತೆಯೇ ಮುಂದುವರಿಯಲಿವೆ.

ಇದಲ್ಲದೆ, ಬಳಕೆದಾರರು ವಿಶ್ವಾಸಾರ್ಹ ವ್ಯಕ್ತಿಗಳ ಪಟ್ಟಿಯನ್ನು (trusted list) ಸೃಷ್ಟಿಸುವ ಮೂಲಕ, ಅವರಿಗೆ ಹಣ ವರ್ಗಾವಣೆ ಮಾಡುವಾಗ ಯಾವುದೇ ವಿಳಂಬವಾಗದಂತೆ ವ್ಯವಸ್ಥೆ ಮಾಡಿಕೊಳ್ಳಬಹುದಾಗಿದೆ. ಈ ನಿಯಮವು ಮುಖ್ಯವಾಗಿ ಹೊಸ ಅಥವಾ ಅನುಮಾನಾಸ್ಪದ ಟ್ರಾನ್ಸಾಕ್ಷನ್‌ಗಳಿಗೆ ಮಾತ್ರ ಅನ್ವಯವಾಗಲಿದೆ.

16 ಕೋಟಿ ವಂಚನೆ ಆರೋಪಿ ಪೊಲೀಸ್ ಠಾಣೆಯಿಂದಲೇ ಎಸ್ಕೇಪ್! ಸಿನಿಮಾವನ್ನೇ ಮೀರಿಸಿದ ಬಳ್ಳಾರಿ ಡ್ರಾಮಾ

ಬಳ್ಳಾರಿ: ದೊಡ್ಡ ಮಟ್ಟದ ಹಣಕಾಸು ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಆರೋಪಿ, ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ತಪ್ಪಿಸಿಕೊಂಡು ಮತ್ತೆ 24 ಗಂಟೆಗಳೊಳಗೆ ಸಿಕ್ಕಿಬಿದ್ದ ಘಟನೆ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಸಂತೋಷ್ ಎಂಬ ಆರೋಪಿ, ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಕಸ್ಟಡಿಯಲ್ಲಿದ್ದಾಗಲೇ ಪರಾರಿಯಾಗಿದ್ದು, ಪೊಲೀಸರು ತಡರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಮತ್ತೆ ಬಂಧಿಸಿದ್ದಾರೆ. ಈ ಘಟನೆ ಪೊಲೀಸ್ ಭದ್ರತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

ಸಂತೋಷ್ ವಿರುದ್ಧ 16.17 ಕೋಟಿ ರೂಪಾಯಿ ಅಕ್ರಮ ವರ್ಗಾವಣೆ ಆರೋಪವಿದ್ದು, ಆತ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕಚೇರಿಯಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ. ಅಧಿಕಾರಿಗಳ ನಕಲಿ ಸಹಿಗಳನ್ನು ಬಳಸಿ ಚೆಕ್‌ಗಳ ಮೂಲಕ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಇದು ಒಬ್ಬನೇ ನಡೆಸಿದ ಕೃತ್ಯವಲ್ಲ ಎಂಬ ಶಂಕೆ ಇದೆ. ಖಾಸಗಿ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಒಟ್ಟು ಏಳು ಮಂದಿ ಈ ವಂಚನೆ ಜಾಲದಲ್ಲಿ ಭಾಗಿಯಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

2022ರಿಂದಲೇ ಹಂತ ಹಂತವಾಗಿ ಹಣ ದುರ್ಬಳಕೆ ನಡೆದಿದ್ದು, 2026 ಮಾರ್ಚ್ 3ರಂದು ಪ್ರಕರಣ ಬೆಳಕಿಗೆ ಬಂದಿದೆ. ಬಂಧನದ ಬಳಿಕ ಸಿಐಡಿಗೆ ಒಪ್ಪಿಸುವ ಮುನ್ನವೇ ಆರೋಪಿ ಠಾಣೆಯಿಂದ ತಪ್ಪಿಸಿಕೊಂಡಿರುವುದು ಪ್ರಕರಣವನ್ನು ಇನ್ನಷ್ಟು ಗಂಭೀರಗೊಳಿಸಿದೆ.

ಟ್ರೇಡಿಂಗ್ ಹೆಸರಲ್ಲಿ ಕೋಟಿ ರೂ. ದೋಖಾ ಆರೋಪ: ಕ್ರಿಸ್ಟಲ್ ಎಐ ಎಂ.ಡಿ ವಶಕ್ಕೆ!

0

ಬೆಂಗಳೂರು: ನಗರದಲ್ಲಿ ಟ್ರೇಡಿಂಗ್ ಕಂಪನಿ ಹೆಸರಿನಲ್ಲಿ ಭಾರೀ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಕ್ರಿಸ್ಟಲ್ ಎಐ ಸಂಸ್ಥೆಯ ಮೂಲಕ ನೂರಾರು ಹೂಡಿಕೆದಾರರಿಂದ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿ ಮೋಸ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕಾಮತ್ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ರೋಬೋಟ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಮೂಲಕ ಹೂಡಿಕೆ ಮಾಡಿದ ಹಣವನ್ನು ದ್ವಿಗುಣಗೊಳಿಸಲಾಗುತ್ತದೆ ಎಂದು ನಂಬಿಸಿ ಜನರನ್ನು ಮೋಸಗೊಳಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ.

ಕಮಿಷನರ್ ಕಚೇರಿಯಲ್ಲಿ ಸಿಸಿಬಿ ಪೊಲೀಸರಿಂದ ವಿಚಾರಣೆ ಮುಂದುವರಿದಿದ್ದು, ಪ್ರಾಥಮಿಕ ಅಂದಾಜು ಪ್ರಕಾರ 5ರಿಂದ 6 ಕೋಟಿಗೂ ಅಧಿಕ ವಂಚನೆ ನಡೆದಿರುವ ಸಾಧ್ಯತೆ ಇದೆ. ಆದರೆ ನಿಜವಾದ ವಂಚನೆ ಮೊತ್ತ ನೂರಾರು ಕೋಟಿಗಳಿಗೆ ತಲುಪಿರಬಹುದೆಂಬ ಶಂಕೆಯನ್ನೂ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಬೆಂಗಳೂರು ನಗರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇದಲ್ಲದೆ, ಆರೋಪಿಗಳು ದುಬೈನಲ್ಲಿ ಕಚೇರಿ ತೆರೆಯುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ವಂಚನೆ ಜಾಲ ವಿಸ್ತರಿಸಿರುವ ಮಾಹಿತಿ ಲಭ್ಯವಾಗಿದೆ. ರಾಜೇಶ್ ಕಾಮತ್ ಸೇರಿದಂತೆ ಮೂವರು ಆರೋಪಿಗಳು ಸಂಘಟಿತ ಸಂಚು ರೂಪಿಸಿ ಹೂಡಿಕೆದಾರರನ್ನು ಮೋಸಗೊಳಿಸಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.

ಜಿಬಿಎ ಚುನಾವಣೆ ಅವಧಿಯನ್ನು ಮುಂದೂಡುವಂತೆ ಆಯೋಗಕ್ಕೆ ಸರ್ಕಾರ ಪತ್ರ!

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಜೂನ್ 30ರೊಳಗೆ ನಡೆಸುವಂತೆ ಸುಪ್ರೀಂಕೋರ್ಟ್ ಈಗಾಗಲೇ ಆದೇಶಿಸಿದ್ದರೂ, ಇದೀಗ ರಾಜ್ಯ ಸರ್ಕಾರ ಚುನಾವಣೆಯನ್ನು ಮುಂದೂಡಲು ಮನವಿ ಮಾಡಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಕುರಿತು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದು, ಜನಗಣತಿ ಕಾರ್ಯವನ್ನು ಕಾರಣವಾಗಿ ಉಲ್ಲೇಖಿಸಿದೆ. ಜನಗಣತಿ ಕಾರ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದರಿಂದ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಲು ಸಮಯದ ಅಭಾವ ಇದೆ ಎಂದು ಸರ್ಕಾರ ತಿಳಿಸಿದೆ.

ಜನಗಣತಿ ಪ್ರಕ್ರಿಯೆಯ ಭಾಗವಾಗಿ ತರಬೇತಿ, ಮೇಲ್ವಿಚಾರಣೆ ಹಾಗೂ ಲಾಜಿಸ್ಟಿಕ್ಸ್ ಕಾರ್ಯಗಳಿಗೆ ದೊಡ್ಡ ಪ್ರಮಾಣದ ಸಿಬ್ಬಂದಿ ಅಗತ್ಯವಿದೆ. ಇದೇ ಸಮಯದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಕೂಡ ನಡೆಯಬೇಕಿದ್ದು, ಇದಕ್ಕೂ ಅದೇ ಸಿಬ್ಬಂದಿಯನ್ನು ಬಳಸಬೇಕಾಗುತ್ತದೆ. ಜೊತೆಗೆ ಮೇ-ಜೂನ್ ಅವಧಿಯಲ್ಲಿ ಶೈಕ್ಷಣಿಕ ಪರೀಕ್ಷಾ ಕರ್ತವ್ಯಗಳಿಗೂ ಸಿಬ್ಬಂದಿ ನಿಯೋಜನೆ ಇರುವುದರಿಂದ ಮಾನವ ಸಂಪನ್ಮೂಲ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಈ ಎಲ್ಲಾ ಕಾರಣಗಳನ್ನು ಮುಂದಿಟ್ಟು, ಚುನಾವಣಾ ಸಿದ್ಧತೆಗಳನ್ನು ಸಮರ್ಪಕವಾಗಿ ನಡೆಸಲು ಹೆಚ್ಚುವರಿ ಕಾಲಾವಕಾಶ ಅಗತ್ಯವಿದ್ದು, ಚುನಾವಣೆಯನ್ನು ಸೆಪ್ಟೆಂಬರ್ 30, 2026ರವರೆಗೆ ಮುಂದೂಡಲು ಅನುಮತಿ ನೀಡುವಂತೆ ಸರ್ಕಾರ ಮನವಿ ಮಾಡಿದೆ.

ಇದಕ್ಕೂ ಮೊದಲು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠ, ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಜೂನ್ 30ರೊಳಗೆ ಪೂರ್ಣಗೊಳಿಸುವಂತೆ ಗಡುವು ವಿಧಿಸಿತ್ತು.

ಗಮನಾರ್ಹವಾಗಿ, ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ 2015ರ ಆಗಸ್ಟ್‌ನಲ್ಲಿ ನಡೆದಿದ್ದು, ಅದರ ಅವಧಿ 2020ರ ಸೆಪ್ಟೆಂಬರ್‌ನಲ್ಲಿ ಅಂತ್ಯಗೊಂಡಿದೆ. ಅದಾದ ಬಳಿಕ ಇಂದಿನವರೆಗೆ ಚುನಾವಣೆ ನಡೆದಿಲ್ಲ. ಇದೀಗ ಮತ್ತೊಮ್ಮೆ ಮುಂದೂಡಿಕೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ, ರಾಜ್ಯ ಚುನಾವಣಾ ಆಯೋಗ ಏನು ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

IPL 2026: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗ್ರೀನ್‌ ಜೆರ್ಸಿ ಹವಾ: ಡೆಲ್ಲಿ ವಿರುದ್ಧ ಗೆಲುವಿಗೆ RCB ಭರ್ಜರಿ ಸಿದ್ಧತೆ!

0

ಬೆಂಗಳೂರು: ಪ್ರತಿ ಐಪಿಎಲ್ ಸೀಸನ್‌ನಲ್ಲಿ ಒಂದು ಪಂದ್ಯವನ್ನು ಹಸಿರು ಜೆರ್ಸಿಯಲ್ಲಿ ಆಡುವ ಪರಂಪರೆಯನ್ನು ಮುಂದುವರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.

ಪ್ರತಿ ಆವೃತ್ತಿಯಲ್ಲೂ ಹಸಿರು ಜೆರ್ಸಿ ಧರಿಸುವ ಮೂಲಕ ಆರ್ಸಿಬಿ ತಂಡ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುತ್ತದೆ. ವಿಶೇಷವಾಗಿ, ಆಟಗಾರರು ಧರಿಸುವ ಈ ಜೆರ್ಸಿಗಳು ಮರುಬಳಕೆಯಾಗುವ ವಸ್ತುಗಳಿಂದ ತಯಾರಾಗಿರುವುದು ಗಮನಾರ್ಹ. ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ 2011ರಿಂದಲೇ ಆರ್ಸಿಬಿ ತಂಡ ಪ್ರತಿ ಸೀಸನ್‌ನ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ಧರಿಸುವ ಪದ್ಧತಿಯನ್ನು ಅನುಸರಿಸುತ್ತಿದೆ.

ಈ ಕುರಿತು ಆರ್ಸಿಬಿ ತನ್ನ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. “ಇದು ವಿಶೇಷ ದಿನ. ಆಟಗಾರರು ಹಸಿರು ಜೆರ್ಸಿಯಲ್ಲಿ ಕಾಣಿಸಿಕೊಳ್ಳುವ ಜೊತೆಗೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುತ್ತಿರುವ ನಮ್ಮ 100ನೇ ಪಂದ್ಯವೂ ಇದಾಗಿದೆ. ಈ ಸಂಪ್ರದಾಯ ನಮಗೆ ಹೆಮ್ಮೆ ತಂದಿದೆ” ಎಂದು ತಂಡ ತಿಳಿಸಿದೆ.

ಈ ಸೀಸನ್‌ನಲ್ಲಿ ಆರ್ಸಿಬಿ ಈಗಾಗಲೇ 5 ಪಂದ್ಯಗಳನ್ನು ಆಡಿದ್ದು, ಅವುಗಳಲ್ಲಿ 4ರಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಕಾಯ್ದಿರಿಸಿಕೊಂಡಿದೆ.

ರನ್‌ವೇ ಮೇಲೆ ನಿಂತ ಯುದ್ಧ ವಿಮಾನ: ಪುಣೆಯಲ್ಲಿ ವಿಮಾನ ಸಂಚಾರ ಸ್ಥಗಿತ

ಪುಣೆ: ಮಹಾರಾಷ್ಟ್ರದ ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ತಾಂತ್ರಿಕ ದೋಷದಿಂದ ರನ್‌ವೇ ಮೇಲೆ ಸ್ಥಗಿತಗೊಂಡ ಪರಿಣಾಮ ದೇಶೀಯ ವಿಮಾನ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಯಿತು.

ಶುಕ್ರವಾರ ರಾತ್ರಿ ಸುಮಾರು 10:25ರ ವೇಳೆಗೆ ವಾಡಿಕೆಯ ತರಬೇತಿ ಹಾರಾಟ ಮುಗಿಸಿ ಭೂಸ್ಪರ್ಶಿಸುವಾಗ ಯುದ್ಧ ವಿಮಾನದ ಅಡಿಭಾಗದ ಚಕ್ರ ವ್ಯವಸ್ಥೆಯಲ್ಲಿ ತಾಂತ್ರಿಕ ವೈಫಲ್ಯ ಉಂಟಾಗಿ ವಿಮಾನ ರನ್‌ವೇ ಮೇಲೆಯೇ ನಿಂತುಬಿಟ್ಟಿತು. ಆದರೆ, ವಿಮಾನದಲ್ಲಿದ್ದ ಪೈಲಟ್‌ಗಳು ಸುರಕ್ಷಿತವಾಗಿದ್ದು ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಭಾರತೀಯ ವಾಯುಪಡೆ ಸ್ಪಷ್ಟಪಡಿಸಿದೆ.

ಈ ಘಟನೆ ಹಿನ್ನೆಲೆ ಸುರಕ್ಷತಾ ಕ್ರಮವಾಗಿ ಎಲ್ಲಾ ನಾಗರಿಕ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ರನ್‌ವೇ ಕ್ಲಿಯರಿಂಗ್ ಕಾರ್ಯಾಚರಣೆ ಪೂರ್ಣಗೊಳ್ಳಲು ಹಲವು ಗಂಟೆಗಳು ಹಿಡಿದಿದ್ದು, ನಂತರ ಅಗತ್ಯ ತಾಂತ್ರಿಕ ಪರಿಶೀಲನೆಗಳ ಬಳಿಕ ಸೇವೆಗಳು ಪುನರಾರಂಭಗೊಂಡವು.

ಈ ವ್ಯತ್ಯಯದಿಂದ ಅನೇಕ ವಿಮಾನಗಳ ಆಗಮನ ಹಾಗೂ ನಿರ್ಗಮನಗಳು ರದ್ದುಪಡಿಸಲ್ಪಟ್ಟಿದ್ದು, ಪ್ರಯಾಣಿಕರು ಭಾರೀ ಸಂಕಷ್ಟಕ್ಕೆ ಸಿಲುಕಿದರು.

‘ಕ್ರಿಸ್ಟಲ್ ಎಐ’ ಟ್ರೇಡಿಂಗ್ ಸ್ಕ್ಯಾಂ: ಕೋಟಿ ಕೋಟಿ ವಂಚನೆ, ಎಂ.ಡಿ ರಾಜೇಶ್ ಕಾಮತ್ ಪೊಲೀಸರ ವಶಕ್ಕೆ

ಬೆಂಗಳೂರು: ನಗರದ ಹೂಡಿಕೆದಾರರನ್ನು ಗುರಿಯಾಗಿಸಿಕೊಂಡು “ಡಬಲ್ ಹಣ” ಆಮಿಷದಡಿ ಭಾರೀ ವಂಚನೆ ನಡೆದಿರುವುದು ಬಹಿರಂಗವಾಗಿದೆ. ಕ್ರಿಸ್ಟಲ್ ಎಐ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆ, ನೂರಾರು ಮಂದಿಯಿಂದ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿ ಮೋಸ ಮಾಡಿರುವ ಆರೋಪ ಕೇಳಿಬಂದಿದೆ.

ಈ ಪ್ರಕರಣ ಸಂಬಂಧ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕಾಮತ್ರ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ರೋಬೋಟ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಮೂಲಕ ಹೂಡಿಕೆ ಮಾಡಿದ ಹಣವನ್ನು ಕಡಿಮೆ ಅವಧಿಯಲ್ಲಿ ಡಬಲ್ ಮಾಡಿಕೊಡಲಾಗುತ್ತದೆ ಎಂದು ನಂಬಿಸಿ ಜನರನ್ನು ಸೆಳೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪ್ರಾಥಮಿಕ ತನಿಖೆಯ ಪ್ರಕಾರ 5ರಿಂದ 6 ಕೋಟಿ ರೂಪಾಯಿ ವಂಚನೆ ನಡೆದಿರುವುದು ತಿಳಿದುಬಂದಿದ್ದರೂ, ನಿಜವಾದ ಮೊತ್ತ ನೂರಾರು ಕೋಟಿಗಳಿಗೆ ತಲುಪಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬೆಂಗಳೂರು ನಗರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.

Gruhalakshmi money: ಗೃಹಲಕ್ಷ್ಮಿ ಹಣದಿಂದ ಐಸ್ ಕ್ರೀಂ ಅಂಗಡಿ ಆರಂಭಿಸಿದ ಮಹಿಳೆ!

ಬಳ್ಳಾರಿ: ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸಂಗ್ರಹಿಸಿ ಮಹಿಳೆಯೊಬ್ಬರು ಸಣ್ಣ ಮಟ್ಟದಲ್ಲಿ ಐಸ್‌ಕ್ರೀಂ ಅಂಗಡಿ ಆರಂಭಿಸಿ ಸ್ವಾವಲಂಬಿ ಬದುಕು ಕಟ್ಟಿಕೊಂಡ ಘಟನೆ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಹರಾಳು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಹರಾಳು ಗ್ರಾಮದ ಎನ್. ವಿಶಾಲಾಕ್ಷಿ ಅವರು ಈ ಉದ್ಯಮ ಆರಂಭಿಸಿ ಗಮನ ಸೆಳೆದಿದ್ದಾರೆ. ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಅವರು ಮೊದಲು ಕೂಲಿ ಕೆಲಸ ಮಾಡುತ್ತಿದ್ದರು. ನಂತರ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯಡಿ ದೊರೆಯುವ ₹2,000 ಹಣವನ್ನು ಉಳಿಸಿ ಐಸ್‌ಕ್ರೀಂ ಅಂಗಡಿ ಆರಂಭಿಸಿದ್ದಾರೆ.

ಕೊಟ್ಟೂರಿನ ವಿತರಕರಿಂದ ಚಾಕೋಬಾರ್, ಐಸ್ ಕ್ಯಾಂಡಿ, ಕುಲ್ಫಿ, ಕೋನ್ ಐಸ್, ಕಪ್ ಐಸ್ ಸೇರಿದಂತೆ ವಿವಿಧ ಐಸ್‌ಕ್ರೀಂ ಉತ್ಪನ್ನಗಳನ್ನು ಪಡೆದು ಮಾರಾಟ ಮಾಡುತ್ತಿದ್ದಾರೆ. ಅಂಗಡಿ ಆರಂಭವಾದ ಕೆಲವೇ ದಿನಗಳಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜನರು ತಂಪುಪಾನೀಯಗಳು ಮತ್ತು ಐಸ್‌ಕ್ರೀಂ ಕಡೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದರಿಂದ ವಿಶಾಲಾಕ್ಷಿ ಅವರ ವ್ಯಾಪಾರಕ್ಕೂ ಉತ್ತೇಜನ ಸಿಕ್ಕಿದೆ.

ಇದುವರೆಗೂ ಪಡೆದ ಹಣವನ್ನು ಬ್ಯಾಂಕ್‌ನಲ್ಲಿ ಉಳಿಸಿಕೊಂಡಿದ್ದ ಅವರು, ಪತಿ ಎನ್. ಬಸವರಾಜ ಅವರ ಸಹಕಾರದಿಂದ ಈ ಉದ್ಯಮ ಆರಂಭಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆ ನಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಕಥೆ ಕಳವು ಆರೋಪಕ್ಕೆ ಕೋರ್ಟ್ ಎಚ್ಚರಿಕೆ: ‘ಧುರಂಧರ್ 2’ ವಿವಾದಕ್ಕೆ ಸಂಧಾನದ ದಾರಿ

ಧುರಂಧರ್ 2 ಸಿನಿಮಾದ ಕಥೆ ಕಳವು ಆರೋಪಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ನಿರ್ದೇಶಕ ಸಂತೋಷ್ ಕುಮಾರ್ ಮಾಡಿದ್ದ ಆರೋಪವನ್ನು ಖಂಡಿಸಿದ ಆದಿತ್ಯ ಧರ್, ಮಾನನಷ್ಟ ಮೊಕದ್ದಮೆ ಹೂಡಿದ್ದು, ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದೆ.

ನ್ಯಾಯಮೂರ್ತಿ ಅರಿಫ್ ಡಾಕ್ಟರ್ ಅವರ ಪೀಠ, ಬೌದ್ಧಿಕ ಆಸ್ತಿ ಹಕ್ಕುಗಳ ಕುರಿತ ವಿವಾದಗಳನ್ನು ಕಾನೂನು ಪ್ರಕಾರ ಸಿವಿಲ್ ಮೊಕದ್ದಮೆಗಳ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಸ್ಪಷ್ಟಪಡಿಸಿದೆ. ಮಾಧ್ಯಮಗಳ ಮುಂದೆ ಆರೋಪ-ಪ್ರತ್ಯಾರೋಪ ಮಾಡುವುದು ಸರಿಯಲ್ಲ ಎಂದು ಕೋರ್ಟ್ ಸೂಚಿಸಿದೆ.

ಇದೇ ವೇಳೆ, ಈ ಹಿಂದೆ ಸಂತೋಷ್ ಕುಮಾರ್ ಅವರಿಗೆ ಮಾನಹಾನಿಕರ ಹೇಳಿಕೆ ನೀಡದಂತೆ ತಡೆಯಾಜ್ಞೆ ನೀಡಲಾಗಿತ್ತು. ಈಗ ಕೋರ್ಟ್ ನೀಡಿರುವ ಸಂಧಾನದ ಸಲಹೆ ಬಳಿಕ, ಉಭಯ ಪಕ್ಷಗಳು ಯಾವ ರೀತಿಯಲ್ಲಿ ಮುಂದುವರಿಯುತ್ತವೆ ಎಂಬುದರ ಮೇಲೆ ಮುಂದಿನ ದಿಕ್ಕು ನಿರ್ಧಾರವಾಗಲಿದೆ.

ಗೋವಾದ ಹಿನ್ನೆಲೆ, ತಂದೆ-ಮಗನ ಸೇಡಿನ ಕಥೆ: ‘ಟಾಕ್ಸಿಕ್’ ಬಗ್ಗೆ ಓಪನ್ ಆಗಿ ಹೇಳಿದ ಯಶ್

ಯಶ್ ಅವರಿಗೆ 2026ರ ವರ್ಷ ಅತ್ಯಂತ ಮಹತ್ವದ್ದಾಗಿದ್ದು, ಟಾಕ್ಸಿಕ್ ಮತ್ತು ‘ರಾಮಾಯಣ’ ಚಿತ್ರಗಳ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಜ್ಜಾಗಿದ್ದಾರೆ.

ಇತ್ತೀಚೆಗೆ ವಿದೇಶಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಯಶ್, ‘ಟಾಕ್ಸಿಕ್’ ಚಿತ್ರದ ಕಥೆಯ ಬಗ್ಗೆ ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಚಿತ್ರವು ಕೇವಲ ಆಕ್ಷನ್ ಅಥವಾ ಗ್ಯಾಂಗ್‌ಸ್ಟರ್ ಸಿನಿಮಾ ಮಾತ್ರವಲ್ಲದೆ, ತಂದೆ ಮತ್ತು ಮಗನ ನಡುವಿನ ಭಾವನಾತ್ಮಕ ಸಂಘರ್ಷದ ಮೇಲೆ ಆಧಾರಿತವಾಗಿದೆ ಎಂದು ಹೇಳಿದ್ದಾರೆ.

ಚಿತ್ರದ ಕಥೆ 1961ರವರೆಗೆ ಪೋರ್ಚುಗೀಸ್ ಆಳ್ವಿಕೆಯಲ್ಲಿ ಇದ್ದ ಗೋವಾದ ಕಾಲಘಟ್ಟದಲ್ಲಿ ನಡೆಯುತ್ತದೆ ಎಂಬುದನ್ನು ಯಶ್ ಬಹಿರಂಗಪಡಿಸಿದ್ದು, ಕಥೆಯ ವಿಭಿನ್ನತೆಗೆ ಸಾಕ್ಷಿಯಾಗಿದೆ.

ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಬಹು ತಾರಾಗಣವಿದ್ದು, ಟೀಸರ್ ಈಗಾಗಲೇ ಭಾರೀ ಪ್ರತಿಕ್ರಿಯೆ ಪಡೆದಿದೆ. ಟ್ರೇಲರ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಮೊದಲಿಗೆ ಮಾರ್ಚ್ 19ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರವನ್ನು ಜೂನ್ 4ಕ್ಕೆ ಮುಂದೂಡಲಾಗಿದ್ದು, ಇದೀಗ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಸದ್ದು ಮಾಡುವ ನಿರೀಕ್ಷೆ ಇದೆ.

error: Content is protected !!