Home Blog

ಲಂಚ ಪ್ರಕರಣದಲ್ಲಿ ಕಠಿಣ ತೀರ್ಪು: ಪಿಡಿಓಗೆ 7 ವರ್ಷ ಜೈಲು!

ರಾಯಚೂರು: ರೈತನಿಂದ ಲಂಚ ಪಡೆದ ಆರೋಪ ಸಾಬೀತಾದ ಹಿನ್ನೆಲೆ ಲಿಂಗಸುಗೂರು ತಾಲೂಕಿನ ಗೋರೆಬಾಳ ಗ್ರಾಮ ಪಂಚಾಯತಿ ಪಿಡಿಓಗೆ ಜಿಲ್ಲಾ ನ್ಯಾಯಾಲಯವು 7 ವರ್ಷ ಜೈಲು ಶಿಕ್ಷೆ ಹಾಗೂ 75 ಸಾವಿರ ರೂಪಾಯಿ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

2017ರಲ್ಲಿ ಲಿಂಗಸುಗೂರು ತಾಲೂಕಿನ ಗೊರೇಬಾಳ ತಾಂಡಾದ ಚೇತನ ಎಂಬವರು ಸಹಾಯಧನದ ಶೆಡ್ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡುವಂತೆ ಅರ್ಜಿ ಸಲ್ಲಿಸಿದ್ದ ವೇಳೆ, ಗ್ರಾಮ ಪಂಚಾಯತಿ ಪಿಡಿಓ ಮಹ್ಮದ ಖಾಜಾ ಅವರು 15 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಈ ವೇಳೆ ಎಸಿಬಿ ಪೊಲೀಸರು ದಾಳಿ ನಡೆಸಿ ಪಿಡಿಓ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಪ್ರಕರಣದ ವಿಚಾರಣೆ ನಂತರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಕಠಿಣ ಶಿಕ್ಷೆ ವಿಧಿಸಿದೆ.

ಇನ್ನೊಂದೆಡೆ, ಪ್ರಕರಣದ ಪಿರ್ಯಾದಿದಾರ ಚೇತನ ನ್ಯಾಯಾಲಯದಲ್ಲಿ ಪ್ರತಿಕೂಲ ಸಾಕ್ಷ್ಯ ನೀಡಿದ ಹಿನ್ನೆಲೆಯಲ್ಲಿ, ಅವರ ವಿರುದ್ಧವೂ ಸುಳ್ಳು ಸಾಕ್ಷಿ ನೀಡಿದ ಆರೋಪದ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ನ್ಯಾಯಾಲಯ ಶಿರಸ್ತೇದಾರರಿಗೆ ಆದೇಶಿಸಿದೆ.

ಭಾರತ ರಫ್ತು ಹೊಸ ದಾಖಲೆ: 860 ಬಿಲಿಯನ್ ಡಾಲರ್ ದಾಟಿದ ಸಾಧನೆ

ನವದೆಹಲಿ: 2025-26ರ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ರಫ್ತು 860.09 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದ್ದು, ಇದು ದೇಶದ ಇತಿಹಾಸದಲ್ಲೇ ಅತ್ಯಧಿಕ ಮಟ್ಟವಾಗಿದೆ.

2024-25ರಲ್ಲಿ 825.26 ಬಿಲಿಯನ್ ಡಾಲರ್ ಇದ್ದ ರಫ್ತು, ಈ ಬಾರಿ ಶೇ. 4.22ರಷ್ಟು ಹೆಚ್ಚಳ ಕಂಡಿದೆ.

ಕೇಂದ್ರ ವಾಣಿಜ್ಯ ಇಲಾಖೆಯ ಮಾಹಿತಿ ಪ್ರಕಾರ, ಸರಕು ಮತ್ತು ಸೇವೆಗಳನ್ನು ಒಳಗೊಂಡ ಒಟ್ಟು ರಫ್ತು ಹೊಸ ದಾಖಲೆ ನಿರ್ಮಿಸಿದೆ. ಜಾಗತಿಕ ವ್ಯಾಪಾರದಲ್ಲಿ ಭಾರತದ ಸ್ಥಾನ ಮತ್ತಷ್ಟು ಬಲಗೊಂಡಿದೆ ಎಂದು ಇಲಾಖೆ ತಿಳಿಸಿದೆ.

2025-26ರಲ್ಲಿ ಭಾರತದ ಸರಕು ರಫ್ತು 441.78 ಬಿಲಿಯನ್ ಡಾಲರ್ ಆಗಿದ್ದು, ಹಿಂದಿನ ವರ್ಷ 437.70 ಬಿಲಿಯನ್ ಡಾಲರ್‌ನಿಂದ ಶೇ. 0.93ರಷ್ಟು ಏರಿಕೆಯಾಗಿದೆ. ಪೆಟ್ರೋಲಿಯ ಉತ್ಪನ್ನಗಳು, ಎಂಜಿನಿಯರಿಂಗ್ ಸರಕುಗಳು, ಕಲ್ಲಿದ್ದಲು, ಖನಿಜಗಳು ಹಾಗೂ ಕರಕುಶಲ ವಸ್ತುಗಳು ಪ್ರಮುಖ ರಫ್ತು ವಸ್ತುಗಳಾಗಿವೆ.

ಮಾರ್ಚ್ ತಿಂಗಳಲ್ಲಿ ಭಾರತದ ಸರಕು ವ್ಯಾಪಾರ ಅಂತರ 20.98 ಬಿಲಿಯನ್ ಡಾಲರ್‌ಗೆ ಇಳಿಕೆಯಾಗಿದೆ. ಫೆಬ್ರುವರಿಯಲ್ಲಿ 36.61 ಬಿಲಿಯನ್ ಡಾಲರ್ ಇದ್ದ ರಫ್ತು, ಮಾರ್ಚ್‌ನಲ್ಲಿ 38.92 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಇದೇ ವೇಳೆ, ಆಮದು 63.71 ಬಿಲಿಯನ್ ಡಾಲರ್‌ನಿಂದ 59.9 ಬಿಲಿಯನ್ ಡಾಲರ್‌ಗೆ ಕುಸಿತ ಕಂಡಿದೆ.

ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆಯೂ ಭಾರತ ಉತ್ತಮ ವಾಣಿಜ್ಯ ಸಾಧನೆ ಮಾಡಿರುವುದು ಗಮನಾರ್ಹ. ಆದರೆ, ಬಿಕ್ಕಟ್ಟು ಮುಂದುವರಿದರೆ ಮುಂದಿನ ದಿನಗಳಲ್ಲಿ ಇದೇ ಮಟ್ಟದ ವಹಿವಾಟು ಕಾಯ್ದುಕೊಳ್ಳುವುದು ಸವಾಲಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೊಲೆ ಕೇಸಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅಪರಾಧಿ! 19 ಮಂದಿ CBI ವಶಕ್ಕೆ – ಏನಿದು ಪ್ರಕರಣ..?

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಧಾರವಾಡ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು ಪ್ರಕಟವಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಾಜಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಆರೋಪಿಗಳ ವಿರುದ್ಧ ತೀರ್ಪು ನೀಡಿದೆ.

ಒಟ್ಟು 21 ಆರೋಪಿಗಳ ಪೈಕಿ 17 ಮಂದಿಯನ್ನು ದೋಷಿಗಳೆಂದು ಕೋರ್ಟ್ ಘೋಷಿಸಿದೆ. ಇನ್ನು ಇಬ್ಬರು ಮಾಫಿ ಸಾಕ್ಷಿಗಳಾಗಿದ್ದು, ಉಳಿದ ಕೆಲವರಿಗೆ ವಿನಾಯಿತಿ ನೀಡಲಾಗಿದೆ. ಈ ತೀರ್ಪಿನೊಂದಿಗೆ ವಿನಯ್ ಕುಲಕರ್ಣಿ ಮತ್ತೆ ಜೈಲು ಸೇರಬೇಕಾದ ಪರಿಸ್ಥಿತಿ ಎದುರಾಗಿದೆ. ನಾಳೆ ಶಿಕ್ಷೆಯ ಪ್ರಮಾಣದ ಬಗ್ಗೆ ವಾದ-ವಿವಾದ ನಡೆಯಲಿದ್ದು, ಬಳಿಕ ಕೋರ್ಟ್ ಅಂತಿಮ ಶಿಕ್ಷೆಯನ್ನು ಪ್ರಕಟಿಸಲಿದೆ.

ವಿನಯ್ ಕುಲಕರ್ಣಿಯನ್ನು ಪ್ರಕರಣ ದೋಷಿ ಎಂದಿರುವ ಕೋರ್ಟ್ ನಾಳೆ ಎಲ್ಲ ಆರೋಪಿಗಳನ್ನು ಹಾಜರುಪಡಿಸುವಂತೆ ಸೂಚನೆ ನೀಡಿದೆ. ತೀರ್ಪು ಹೊರ ಬಂದಿದ್ದೆ ತಡ, ಸಿಬಿಐ ಅಧಿಕಾರಿಗಳು ಎಲ್ಲ ಅರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ನಾಳೆ ಮತ್ತೆ ಕೋರ್ಟ್ ಹಾಜರಾಗಲಿದ್ದಾರೆ. ಮೂರನೇ ಭಾರಿಗೆ ವಿನಯ್ ಕುಲಕರ್ಣಿ ಜೈಲು ಸೇರಿದ್ದಾರೆ.

ಪ್ರಕರಣದಲ್ಲಿ ಎ1 ಬಸವರಾಜ ಮುತ್ತಗಿ ಮಾಫಿ ಸಾಕ್ಷಿಯಾಗಿ ಹೇಳಿಕೆ ನೀಡಿದ್ದರೆ, ಎ17 ಶಿವಾನಂದ ವಿರುದ್ಧ ಸಿಬಿಐ ಮತ್ತೆ ಆರೋಪಿಯನ್ನಾಗಿ ಪರಿಗಣಿಸುವಂತೆ ಅರ್ಜಿ ಸಲ್ಲಿಸಿದೆ. ಅಲ್ಲದೇ ಎ20 ವಾಸುದೇವ ನಿಲೇಕಣಿ ಮತ್ತು ಎ21 ಸೋಮಶೇಖರರನ್ನು ಕೋರ್ಟ್ ಬಿಡುಗಡೆಗೊಳಿಸಿದೆ.

ಪ್ರಕರಣದ ಹಿನ್ನೆಲೆ:
2016ರ ಜೂನ್ 15ರಂದು ಧಾರವಾಡದ ಸಪ್ತಾಪುರ ಬಡಾವಣೆಯ ಜಿಮ್‌ನಲ್ಲಿ ಯೋಗೇಶ್ ಗೌಡರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆಗೈದಿದ್ದರು. ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸಿ ಕೆಲವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆದರೆ ಕುಟುಂಬದ ಒತ್ತಾಯದ ಮೇರೆಗೆ 2019ರಲ್ಲಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಯಿತು.

ಸಿಬಿಐ ತನಿಖೆಯಲ್ಲಿ ಇದು ರಾಜಕೀಯ ಪ್ರೇರಿತ ಹತ್ಯೆ ಎಂಬ ಅಂಶ ಹೊರಬಂದಿದ್ದು, 2020ರಲ್ಲಿ ವಿನಯ್ ಕುಲಕರ್ಣಿಯನ್ನು ಬಂಧಿಸಲಾಗಿತ್ತು. ಬಳಿಕ ಅವರ ವಿರುದ್ಧ ಸೇರಿದಂತೆ 21 ಮಂದಿಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿದ್ದ ವಿನಯ್ ಕುಲಕರ್ಣಿಗೆ ಇದೀಗ ಮತ್ತೆ ಕಾನೂನು ಸವಾಲು ಎದುರಾಗಿದೆ.

ಧಾರವಾಡದಲ್ಲಿ ಪೊಲೀಸ್ ಬಿಗಿ ಭದ್ರತೆ

ತೀರ್ಪಿನ ಬಳಿಕ ಅಹಿಕರ ಘಟನೆ ನಡೆದಂತೆ ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸುತ್ತಿದೆ. ಮುಂಜಾಗೃತಾ ಕ್ರಮವಾಗಿ ಧಾರವಾಡದ ವಿಜಯ್ ಕುಲಕರ್ಣಿ ಮನೆ ಹಾಗೂ ಧಾರವಾಡ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪೊಲೀಸ್ ಬಿಗಿ ಭದ್ರತೆ. ಯಾವುದೇ ಅಹಿಕರ ಘಟನೆಗಳು ಜರುಗಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ.

ಯೋಗೀಶ್ ಗೌಡ ಕೊಲೆ ಕೇಸ್: ಕೈ ಶಾಸಕ ವಿನಯ್ ಕುಲಕರ್ಣಿ ಸೇರಿ 19 ಜನ ದೋಷಿ

ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ದೋಷಿ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಈ ಹೈಪ್ರೊಫೈಲ್ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಒಟ್ಟು 21 ಆರೋಪಿಗಳಲ್ಲಿ 19 ಮಂದಿಯನ್ನು ದೋಷಿಗಳೆಂದು ಘೋಷಿಸಿದೆ. ಆರೋಪಿಗಳಾದ 20 ಮತ್ತು 21ನೇ ವ್ಯಕ್ತಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ನ್ಯಾಯಾಲಯವು ಎಲ್ಲಾ ದೋಷಿಗಳನ್ನು ತಕ್ಷಣ ಕಸ್ಟಡಿಗೆ ಪಡೆಯುವಂತೆ ಸಿಬಿಐಗೆ ನಿರ್ದೇಶನ ನೀಡಿದೆ. ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

2016ರಲ್ಲಿ ನಡೆದಿದ್ದ ಈ ಕೊಲೆ ಪ್ರಕರಣ ರಾಜ್ಯದ ಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಜೈಲಿನಲ್ಲಿ ಇದ್ದುಕೊಂಡೇ ಯೋಗೇಶ್ ಗೌಡ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರಿಂದ ಪ್ರಕರಣ ಮತ್ತಷ್ಟು ಸಂಚಲನ ಮೂಡಿಸಿತ್ತು.

ಈ ಪ್ರಕರಣದ ತನಿಖೆ ನಡೆಸಿದ ಸಿಬಿಐ, ತನ್ನ ಚಾರ್ಜ್‌ಶೀಟ್‌ನಲ್ಲಿ ವಿನಯ್ ಕುಲಕರ್ಣಿಯನ್ನು 15ನೇ ಆರೋಪಿಯಾಗಿ ಉಲ್ಲೇಖಿಸಿತ್ತು.

ನಾನು ಏ.4ಕ್ಕೆ ಯುವ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ: ನನ್ನನ್ನು ಉಚ್ಚಾಟನೆ ಮಾಡಿರುವುದು ಅರ್ಥವಿಲ್ಲದ ನಿರ್ಧಾರ- ಆಫ್ರೀನ್ ಖಾನ್

ಬೆಂಗಳೂರು: ಯುವ ಬೆಂಗಳೂರು ಉತ್ತರ ಜಿಲ್ಲಾ ಉಪಾಧ್ಯಕ್ಷೆ ಆಫ್ರೀನ್ ಖಾನ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ದಾವಣಗೆರೆ ಉಪಚುನಾವಣೆಗೆ ಸಂಬಂಧಿಸಿದಂತೆ ರಿಜ್ವಾನ್ ಅರ್ಷದ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಅವರು ಉಚ್ಚಾಟನೆ ಆದೇಶ ಹೊರಡಿಸಿದ್ದಾರೆ.

ಉಚ್ಚಾಟನೆಗೆ ಪ್ರತಿಕ್ರಿಯಿಸಿದ ಆಫ್ರೀನ್ ಖಾನ್, “ನಾನು ಏಪ್ರಿಲ್ 4ರಂದೇ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ. ಈಗ ನನ್ನನ್ನು ಉಚ್ಚಾಟನೆ ಮಾಡಿರುವುದು ಅರ್ಥವಿಲ್ಲದ ನಿರ್ಧಾರ” ಎಂದು ಕಿಡಿಕಾರಿದ್ದಾರೆ.

ಇದಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದ ಅವರು, “ಮುಸ್ಲಿಂ ನಾಯಕರನ್ನು ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. 2028ರ ಚುನಾವಣೆಯಲ್ಲಿ ಜನ ತಕ್ಕ ಉತ್ತರ ನೀಡುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಕಾಂಗ್ರೆಸ್ ವಿರುದ್ಧ ಸರಣಿ ಪೋಸ್ಟ್‌ಗಳನ್ನು ಹಾಕಿರುವ ಅವರು, ಪಕ್ಷದ ಹೈಕಮಾಂಡ್ ಮುಸ್ಲಿಂ ನಾಯಕರನ್ನು ಪರಸ್ಪರ ಎದುರುಮಾಡುವ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಜೊತೆಗೆ ಜಮೀರ್ ಅಹ್ಮದ್ ಖಾನ್ ಅವರ ಪ್ರಭಾವ ಕಡಿಮೆ ಮಾಡಲು ಇತರ ನಾಯಕರನ್ನು ಮುಂದಕ್ಕೆ ತರುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಯಜಮಾನರು ವೇದಿಕೆ ಮೇಲೆ ಯಡಿಯೂರಪಲ್ಪ ಪುತ್ರನನ್ನು ಗೆಲ್ಲಿಸಿ ಅಂದಾಗ ಯಾಕೆ ಕ್ರಮ ಕೈಗೊಂಡಿಲ್ಲ: ಅಬ್ದುಲ್ ಜಬ್ಬರ್ ಆಕ್ರೋಶ

ಬೆಂಗಳೂರು: ವೇದಿಕೆ ಮೇಲೆ ಬಿ.ಎಸ್. ಯಡಿಯೂರಪ್ಪ ಅವರ ಮಗನನ್ನು ಗೆಲ್ಲಿಸಿ ಎಂದು ಭಾಷಣ ಮಾಡಿದಾಗ ಕ್ರಮ ಕೈಗೊಳ್ಳದವರು, ಈಗ ನನ್ನ ವಿರುದ್ಧ ಅಮಾನತು ಕ್ರಮ ಕೈಗೊಂಡಿದ್ದು ಯಾಕೆ ಎಂದು ಪರಿಷತ್ ಸದಸ್ಯ ಅಬ್ದುಲ್ ಜಬ್ಬರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ನಿಂದ ತನ್ನನ್ನು ಅಮಾನತು ಮಾಡಿದ ಬಳಿಕ ಪ್ರತಿಕ್ರಿಯಿಸಿದ ಅವರು, “ನನಗೆ ಇನ್ನೂ ಅಮಾನತು ಪತ್ರ ಬಂದಿಲ್ಲ. ನಿಮ್ಮಿಂದಲೇ ಈ ವಿಚಾರ ಕೇಳುತ್ತಿದ್ದೇನೆ. ಅಧಿಕೃತ ಆದೇಶ ಬಂದ ಬಳಿಕ ಸೂಕ್ತ ಉತ್ತರ ನೀಡುತ್ತೇನೆ. ನನ್ನ ವಿರುದ್ಧ ಯಾವುದೇ ಆಡಿಯೋ ಅಥವಾ ವಿಡಿಯೋ ಇದ್ದರೆ ಅದನ್ನು ಸಾರ್ವಜನಿಕವಾಗಿ ತೋರಿಸಬೇಕಲ್ಲ. ಯಾವ ಆಧಾರದಲ್ಲಿ ಅಮಾನತು ಮಾಡಿದ್ದಾರೆ?” ಎಂದು ಪ್ರಶ್ನಿಸಿದರು.

ಇನ್ನು ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಿದ ಅವರು, “ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತದೆ ಎಂದು ನನಗೆ ಅನಿಸುವುದಿಲ್ಲ. ಶಾಮನೂರು ಕುಟುಂಬದ ಒಬ್ಬರು ಮಂತ್ರಿಯಾಗಿದ್ದಾರೆ, ಮತ್ತೊಬ್ಬರು ಸಂಸದರಾಗಿದ್ದಾರೆ. ನಮ್ಮ ಸಮುದಾಯದವರಿಗೆ ಟಿಕೆಟ್ ನೀಡಬೇಕು ಎಂದು ಕೇಳಿದ್ದೇವೆ” ಎಂದು ಹೇಳಿದರು.

“ನನಗೆ ಯಾರೂ ಪ್ರಚಾರಕ್ಕೆ ಬರಲು ಹೇಳಲಿಲ್ಲ. ಅಭ್ಯರ್ಥಿ ಅಥವಾ ಅವರ ಕುಟುಂಬದವರು ಕೂಡ ಸಂಪರ್ಕಿಸಿಲ್ಲ. ಆದ್ದರಿಂದಲೇ ನಾನು ರಾಜೀನಾಮೆ ನೀಡಿದ್ದೇನೆ. ನಾನು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಲ್ಲಿಗೂ ಹೋಗಿಲ್ಲ. ನನ್ನನ್ನು ಪ್ರಚಾರಕ್ಕೆ ಕರೆಯಲೇ ಇಲ್ಲ” ಎಂದು ಸ್ಪಷ್ಟಪಡಿಸಿದರು.

ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾನು ಸ್ವಯಂ ಇಚ್ಛೆಯಿಂದಲೇ ರಾಜೀನಾಮೆ ನೀಡಿದ್ದೇನೆ. “ಅಧ್ಯಕ್ಷರು ಅಂದಮೇಲೆ ಏನು ಅಶಿಸ್ತು ಎಂಬುದನ್ನು ಸ್ಪಷ್ಟಪಡಿಸಬೇಕಲ್ಲ” ಎಂದು ಅವರು ಹೇಳಿದರು.

ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಹಿರಿಯ ಶಾಸಕರು!

ಲಕ್ನೋ: ಕರ್ನಾಟಕದ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿ ರಾಮಲಲ್ಲಾ ದರ್ಶನ ಪಡೆದಿದ್ದಾರೆ.

ಒಟ್ಟು 12 ಮಂದಿ ಶಾಸಕರು ಇಂದು ಬೆಳಗ್ಗೆ ಅಯೋಧ್ಯೆಗೆ ತೆರಳಿ ಪೂಜೆ ಸಲ್ಲಿಸಿದರು. ದರ್ಶನದ ಬಳಿಕ ಅವರು ಮತ್ತೆ ದೆಹಲಿಗೆ ಮರಳಿದರು.

ದೆಹಲಿಯಲ್ಲಿ ಹೈಕಮಾಂಡ್ ನಾಯಕರು ಲಭ್ಯವಿರದ ಹಿನ್ನೆಲೆ, ಶಾಸಕರು ಬೆಳಗ್ಗೆ 8 ಗಂಟೆಗೆ ವಿಮಾನದ ಮೂಲಕ ಅಯೋಧ್ಯೆಗೆ ಪ್ರಯಾಣಿಸಿದ್ದರು.

ದರ್ಶನಕ್ಕೆ ತೆರಳಿದವರಲ್ಲಿ ಅಶೋಕ್ ಪಟ್ಟಣ್, ಟಿ.ಬಿ. ಜಯಚಂದ್ರ, ರಾಘವೇಂದ್ರ ಹಿಟ್ನಾಳ್, ಡಿ.ಜಿ. ಶಾಂತನಗೌಡ, ಹಂಪನಗೌಡ ಬಾದರ್ಲಿ, ಬಸವರಾಜ ಶಿವಣ್ಣನವರ್, ಮಹಾಂತೇಶ್ ಕೌಜಲಗಿ, ಷಡಕ್ಷರಿ, ಯಶವಂತರಾಯಗೌಡ ಪಾಟೀಲ್ ಹಾಗೂ ಜಿ.ಟಿ. ಪಾಟೀಲ್ ಸೇರಿದಂತೆ ಇತರರು ಸೇರಿದ್ದಾರೆ.

ನಾನು ಪೀಠದಲ್ಲೇ ಇದ್ದೇನೆ, ಮುಂದೆಯೂ ಅಲ್ಲಿಯೇ ಇರುತ್ತೇನೆ: ವಚನಾನಂದ ಸ್ವಾಮೀಜಿ ಸ್ಪಷ್ಟನೆ

ದಾವಣಗೆರೆ: ಸಮುದಾಯದ ಆರೋಗ್ಯ ಕಾಪಾಡುವುದು ನಮ್ಮ ಮೊದಲ ಆದ್ಯತೆ ಎಂದು ಹರಿಹರ ಪಂಚಮಸಾಲಿ ಗುರುಪೀಠದಿಂದ ಹೊರಗಣಿಸಲ್ಪಟ್ಟ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಪೀಠದಲ್ಲೇ ಇದ್ದೇನೆ, ಮುಂದೆಯೂ ಅಲ್ಲಿಯೇ ಇರುತ್ತೇನೆ. ನಿಂದನೆ ಅಥವಾ ದ್ವೇಷಕ್ಕೆ ನಾನು ಮಹತ್ವ ಕೊಡುವುದಿಲ್ಲ. ನಮ್ಮನ್ನು ಟೀಕಿಸುವವರೇ ನಮ್ಮನ್ನು ಬೆಳೆಸುವವರು ಎಂದು ಹೇಳಿದರು.

ಇನ್ನೂ ಅನೇಕ ಕಾರ್ಯಗಳು ನಮ್ಮ ಮುಂದಿದ್ದು, ಅವುಗಳನ್ನು ನೆರವೇರಿಸುವತ್ತ ಸಂಪೂರ್ಣ ಗಮನ ಹರಿಸುತ್ತೇನೆ. ಸಣ್ಣ ಮಟ್ಟದಲ್ಲಿ ಅಲ್ಲ, ದೊಡ್ಡ ಮಟ್ಟದಲ್ಲಿ ಸಮಾಜ ಸೇವೆ ಮಾಡುವ ಉದ್ದೇಶ ನಮ್ಮದು ಎಂದು ಅವರು ತಿಳಿಸಿದರು.

ತಮ್ಮ ಆತ್ಮೀಯ ಜೀವನದ ಬಗ್ಗೆ ಮಾತನಾಡಿದ ಸ್ವಾಮೀಜಿ, ದೇಶದ ವಿವಿಧ ಮಠಗಳು, ಆಶ್ರಮಗಳಲ್ಲಿ ಅಧ್ಯಯನ ನಡೆಸಿದ್ದೇನೆ. ಹೆಚ್ಚಿನ ಜ್ಞಾನಕ್ಕಾಗಿ ಋಷಿಕೇಶ, ಹರಿದ್ವಾರ ಹಾಗೂ ಹಿಮಾಲಯ ಪ್ರದೇಶಗಳಲ್ಲಿ ಗುರುಗಳ ಮಾರ್ಗದರ್ಶನದಲ್ಲಿ ಸಾಧನೆ ಮಾಡಿದ್ದೇನೆ ಎಂದರು.

ಯೋಗದ ಮೂಲಕ ಜನರ ಆರೋಗ್ಯವನ್ನು ಸುಧಾರಿಸುವ ಉದ್ದೇಶದಿಂದ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಔಷಧಿಯಿಲ್ಲದ ಆರೋಗ್ಯದ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವ ಕಾರ್ಯದಲ್ಲಿ ತೊಡಗಿದ್ದೇನೆ ಎಂದು ಹೇಳಿದರು.

ರಾಜ್ಯದಲ್ಲಿ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ ದಾಖಲು: ಆರೆಂಜ್ ಅಲರ್ಟ್ ಘೋಷಣೆ!

ಕಲಬುರಗಿ: ರಾಜ್ಯದಲ್ಲಿ ಉಷ್ಣಾಂಶ ತೀವ್ರ ಏರಿಕೆಯಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ ಬುಧವಾರ ಅತೀ ಹೆಚ್ಚು ತಾಪಮಾನ ದಾಖಲಾಗಿದೆ. ಬಿಸಿಲಿನ ತೀವ್ರತೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಉಷ್ಣಾಂಶ ಗರಿಷ್ಠ ಮಟ್ಟ ತಲುಪಿದೆ. ಔರಾದ್ ಪ್ರದೇಶದಲ್ಲಿ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಚಿಂಚೋಳಿ ಹಾಗೂ ಅಫಜಲಪುರ ತಾಲೂಕುಗಳಲ್ಲಿ ತಲಾ 44.03 ಡಿಗ್ರಿ, ಆಳಂದ ತಾಲೂಕಿನಲ್ಲಿ 44.01 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ವಿಶೇಷವಾಗಿ ಔರಾದ್ ಪ್ರದೇಶದಲ್ಲಿನ ಉಷ್ಣಾಂಶ ಏರಿಕೆ ಆತಂಕಕ್ಕೆ ಕಾರಣವಾಗಿದೆ.

ತಾಪಮಾನದಲ್ಲಿ ನಿರಂತರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮಧ್ಯಾಹ್ನ 12 ಗಂಟೆಯಿಂದ ಸಂಜೆವರೆಗೆ ಅನಾವಶ್ಯಕವಾಗಿ ಹೊರಗೆ ಸಂಚರಿಸಬಾರದು ಎಂದು ಜಿಲ್ಲಾಡಳಿತ ಸಾರ್ವಜನಿಕರಿಗೆ ಸೂಚನೆ ನೀಡಿದೆ.

ಬಿಸಿಲಿನ ಪರಿಣಾಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು, ನೆರಳಿನಲ್ಲಿ ಇರುವಿಕೆ ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ರಸ್ತೆ ಅಪಘಾತದಲ್ಲಿ ಮೃತಪಟ್ಟ ಕ್ಷೌರಿಕನ ಕುಟುಂಬಕ್ಕೆ ₹44.47 ಲಕ್ಷ ಪರಿಹಾರ ನೀಡಲು ಹೈಕೋರ್ಟ್ ಆದೇಶ!

ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡುವುದು ಮೋಟಾರು ವಾಹನ ಕಾಯ್ದೆಯ ಪ್ರಮುಖ ಉದ್ದೇಶ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆ, ಅಪಘಾತದಲ್ಲಿ ಮೃತಪಟ್ಟ ಕ್ಷೌರಿಕನ ಕುಟುಂಬಕ್ಕೆ ₹44.47 ಲಕ್ಷ ಪರಿಹಾರವನ್ನು ನೀಡಲು ವಿಮಾ ಕಂಪನಿಗೆ ಆದೇಶಿಸಿದೆ.

ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಎಸ್. ರಾಚಯ್ಯ ಅವರಿದ್ದ ಪೀಠವು, ಮೃತರ ಕುಟುಂಬ ಹಾಗೂ ವಿಮಾ ಕಂಪನಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ.

ದಾಖಲೆಗಳ ಪರಿಶೀಲನೆಯ ಬಳಿಕ, ಮೃತ ವ್ಯಕ್ತಿ ಕ್ಷೌರಿಕ ವೃತ್ತಿಯಲ್ಲಿ ತೊಡಗಿದ್ದು ತಿಂಗಳಿಗೆ ₹14,000 ಆದಾಯ ಹೊಂದಿದ್ದನೆಂದು ಪರಿಗಣಿಸಿ, ನ್ಯಾಯಮಂಡಳಿ ನೀಡಿದ್ದ ₹32.56 ಲಕ್ಷ ಪರಿಹಾರವನ್ನು ₹44.47 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಹೆಚ್ಚುವರಿ ₹11.91 ಲಕ್ಷಕ್ಕೆ ಶೇ.6 ಬಡ್ಡಿಯೊಂದಿಗೆ ಆರು ವಾರಗಳಲ್ಲಿ ಪಾವತಿಸುವಂತೆ ಸೂಚಿಸಲಾಗಿದೆ.

ಇದಲ್ಲದೆ, ಅಪಘಾತದ ವೇಳೆ ಮೃತರೇ ವಾಹನ ಚಾಲನೆ ಮಾಡುತ್ತಿದ್ದರು ಎಂಬ ವಿಮಾ ಕಂಪನಿಯ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ. ವಾಹನವನ್ನು ಚಲಾಯಿಸುತ್ತಿದ್ದವರು ಬೇರೆ ವ್ಯಕ್ತಿಯಾಗಿದ್ದು, ಮೃತರು ಹಿಂಬದಿ ಸವಾರರಾಗಿದ್ದರು ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ಪರಿಹಾರ ಪಾವತಿಸುವ ಹೊಣೆಗಾರಿಕೆ ವಿಮಾ ಕಂಪನಿಯ ಮೇಲೇ ಇದೆ ಎಂದು ತಿಳಿಸಿ, ಕಂಪನಿಯ ಅರ್ಜಿಯನ್ನು ವಜಾಗೊಳಿಸಿದೆ.

ಘಟನೆಯ ಹಿನ್ನಲೆ:
2018ರ ಸೆಪ್ಟೆಂಬರ್ 4ರಂದು ಮಂಜುನಾಥ್ ಅವರು ಹಿಂಬದಿ ಸವಾರನಾಗಿ ಪ್ರಯಾಣಿಸುತ್ತಿದ್ದ ವೇಳೆ ನೆಲಮಂಗಲ ಸಮೀಪ ವಾಹನ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದರು. ತಲೆಗೆ ಗಂಭೀರ ಗಾಯಗೊಂಡ ಅವರು 2019ರ ಫೆಬ್ರವರಿ 23ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಬಳಿಕ ಕುಟುಂಬಸ್ಥರು ಪರಿಹಾರಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

error: Content is protected !!