Home Blog

ಹಲ್ಲಿ ಕಂಡರೆ ಭಯವಾಗುತ್ತದೆಯೇ? ಇದು ಫೋಬಿಯಾದ ಲಕ್ಷಣ ಇರಬಹುದು!

0

ಮನೆಯಲ್ಲಿ ಗೋಡೆಯ ಮೇಲೆ ಹಲ್ಲಿ ಕಾಣಿಸಿಕೊಂಡ ತಕ್ಷಣ ಕೆಲವರು ಅದನ್ನು ನಿರ್ಲಕ್ಷಿಸಿದರೆ, ಇನ್ನೂ ಕೆಲವರು ಭಯದಿಂದ ದೂರ ಸರಿಯುತ್ತಾರೆ.

ಹಲ್ಲಿಯನ್ನು ನೋಡಿದ ಕೂಡಲೇ ಹೃದಯ ಬಡಿತ ಹೆಚ್ಚಾಗುವುದು, ಬೆವರುವುದು, ನಡುಕ ಉಂಟಾಗುವುದು ಅಥವಾ ಆ ಸ್ಥಳದಿಂದ ದೂರ ಹೋಗಬೇಕೆನಿಸುವುದು ಸಾಮಾನ್ಯ ಪ್ರತಿಕ್ರಿಯೆಯಾಗಿರಬಹುದು. ಆದರೆ ಈ ಭಯ ಅತಿಯಾಗಿದ್ದರೆ ಅದು ಫೋಬಿಯಾದ ಲಕ್ಷಣವೂ ಆಗಿರಬಹುದು ಎಂದು ಮಾನಸಿಕ ಆರೋಗ್ಯ ತಜ್ಞರು ತಿಳಿಸಿದ್ದಾರೆ.

ತಜ್ಞರ ಪ್ರಕಾರ, ಹಲ್ಲಿಯ ರೂಪ, ಅದರ ವೇಗದ ಚಲನೆ ಹಾಗೂ ಯಾವಾಗ ಎಲ್ಲಿ ಕಾಣಿಸಿಕೊಳ್ಳುತ್ತದೆ ಎಂಬ ಅನಿಶ್ಚಿತತೆ ಕೆಲವರಲ್ಲಿ ಭಯದ ಭಾವನೆಯನ್ನು ಹೆಚ್ಚಿಸುತ್ತದೆ. ಬಾಲ್ಯದ ಅನುಭವಗಳು, ಕುಟುಂಬದ ಸದಸ್ಯರ ವರ್ತನೆ ಹಾಗೂ ಸಾಮಾಜಿಕ ಪ್ರಭಾವಗಳೂ ಈ ಭಯದ ಬೆಳವಣಿಗೆಗೆ ಕಾರಣವಾಗಬಹುದು. ಮನೆಯಲ್ಲೇ ಹಲ್ಲಿಯನ್ನು ನೋಡಿ ಅತಿಯಾಗಿ ಹೆದರುವವರನ್ನು ಕಂಡು ಬೆಳೆದ ಮಕ್ಕಳಲ್ಲೂ ಇದೇ ರೀತಿಯ ಭಯ ಬೆಳೆವ ಸಾಧ್ಯತೆ ಇದೆ.

ಫೋಬಿಯಾ ಎಂದು ಹೇಗೆ ಗುರುತಿಸಬಹುದು?

ಹಲ್ಲಿಗಳನ್ನು ಇಷ್ಟಪಡದಿರುವುದು ಸಾಮಾನ್ಯ. ಆದರೆ ಆ ಭಯವು ದೈನಂದಿನ ಜೀವನದ ಮೇಲೆ ಪರಿಣಾಮ ಬೀಳಲು ಆರಂಭಿಸಿದರೆ ಅದನ್ನು ಫೋಬಿಯಾ ಎಂದು ಪರಿಗಣಿಸಲಾಗುತ್ತದೆ. ಹಲ್ಲಿ ಕಾಣಿಸಬಹುದು ಎಂಬ ಕಾರಣಕ್ಕೆ ಕೆಲವು ಕೊಠಡಿಗಳಿಗೆ ಹೋಗುವುದನ್ನು ತಪ್ಪಿಸುವುದು, ಮನೆಯಲ್ಲಿ ಒಬ್ಬರೇ ಇರಲು ಹೆದರುವುದು, ಪದೇ ಪದೇ ಗೋಡೆಗಳು ಮತ್ತು ಮೇಲ್ಛಾವಣಿಯನ್ನು ಪರಿಶೀಲಿಸುವುದು ಮುಂತಾದ ವರ್ತನೆಗಳು ಫೋಬಿಯಾದ ಲಕ್ಷಣಗಳಾಗಿರಬಹುದು.

ಚಿಕಿತ್ಸೆಯಿಂದ ಭಯ ನಿವಾರಣೆ ಸಾಧ್ಯ:

ಮಾನಸಿಕ ಆರೋಗ್ಯ ತಜ್ಞರ ಪ್ರಕಾರ, ಹಲ್ಲಿಗಳ ಭಯಕ್ಕೆ ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯವಿವೆ. ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ (CBT) ಹಾಗೂ ಗ್ರಾಡ್ಯುಯಲ್ ಎಕ್ಸ್‌ಪೋಸರ್ ಥೆರಪಿ ಮೂಲಕ ಈ ಭಯವನ್ನು ಹಂತಹಂತವಾಗಿ ಕಡಿಮೆ ಮಾಡಬಹುದು. ಸರಿಯಾದ ಮಾರ್ಗದರ್ಶನ, ಸಹನೆ ಮತ್ತು ಚಿಕಿತ್ಸೆಯಿಂದ ಹಲವು ವರ್ಷಗಳಿಂದ ಕಾಡುತ್ತಿರುವ ಫೋಬಿಯಾವನ್ನೂ ನಿಯಂತ್ರಣಕ್ಕೆ ತರಲು ಸಾಧ್ಯವಿದೆ.

ಹಲ್ಲಿಗಳ ಭಯವು ದಿನನಿತ್ಯದ ಚಟುವಟಿಕೆಗಳು, ಮನಶಾಂತಿ ಅಥವಾ ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದರೆ, ತಕ್ಷಣ ಮಾನಸಿಕ ಆರೋಗ್ಯ ತಜ್ಞರ ಸಲಹೆ ಪಡೆಯುವುದು ಒಳಿತು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಗದಗ ಮೇನ್ ಜಂಕ್ಷನ್ ಮೂಲಕವೇ ರೈಲು ಓಡಿಸಲಿ: ವಿಕಾಸ ವೇದಿಕೆ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ: ಗೋಲ್‌ಗುಂಬಜ್ ಎಕ್ಸ್‌ಪ್ರೆಸ್ ಹಾಗೂ ವಿಜಯಪುರ–ಯಶವಂತಪುರ ರೈಲುಗಳನ್ನು ಗದಗ ಬೈಪಾಸ್ ಮಾರ್ಗದ ಬದಲು ಗದಗ ಮೇನ್ ಜಂಕ್ಷನ್ ಮೂಲಕವೇ ಸಂಚರಿಸಲು ಅವಕಾಶ ಕಲ್ಪಿಸಬೇಕು ಎಂದು ಗದಗ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ರೈಲ್ವೆ ಇಲಾಖೆಗೆ ಆಗ್ರಹಿಸಿದ್ದಾರೆ.

ಈ ಕುರಿತು ಮನವಿ ಸಲ್ಲಿಸಿರುವ ಅವರು, ಟ್ರೇನ್ ನಂ.16535/36 ಗೋಲ್‌ಗುಂಬಜ್ ಎಕ್ಸ್‌ಪ್ರೆಸ್ ಗದಗ ಬೈಪಾಸ್ ಮೂಲಕ ಸಂಚರಿಸಿದರೆ ಜಿಲ್ಲೆಯ ಸಾವಿರಾರು ಪ್ರಯಾಣಿಕರಿಗೆ ತೊಂದರೆಯಾಗಲಿದೆ. ಬೈಪಾಸ್ ನಿಲ್ದಾಣವು ನಗರದಿಂದ ಸುಮಾರು 8 ಕಿ.ಮೀ. ದೂರದಲ್ಲಿದ್ದು, ಸಮರ್ಪಕ ರಸ್ತೆ ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೂ ಇಲ್ಲ. ಹೀಗಾಗಿ ಸಾಮಾನ್ಯ ಪ್ರಯಾಣಿಕರು, ಹಿರಿಯ ನಾಗರಿಕರು ಹಾಗೂ ಮಹಿಳೆಯರಿಗೆ ಹೆಚ್ಚಿನ ಸಮಸ್ಯೆಯಾಗಲಿದೆ ಎಂದು ತಿಳಿಸಿದ್ದಾರೆ.

ಬೈಪಾಸ್ ಮಾರ್ಗವನ್ನು ಮುಖ್ಯವಾಗಿ ಸರಕು ಸಾಗಣೆ ರೈಲುಗಳಿಗಾಗಿ ಬಳಸಬೇಕು. ಪ್ರಯಾಣಿಕರ ರೈಲುಗಳನ್ನು ಗದಗ ಮೇನ್ ಜಂಕ್ಷನ್ ಮೂಲಕವೇ ಓಡಿಸುವುದರಿಂದ ಜಿಲ್ಲೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ವಾರದಲ್ಲಿ ಎರಡು ದಿನ ಸಂಚರಿಸುವ ವಿಜಯಪುರ–ಯಶವಂತಪುರ ರೈಲು ಕೂಡ ಗದಗ ನಿಲ್ದಾಣವನ್ನು ತಪ್ಪಿಸಿ ಸಂಚರಿಸುತ್ತಿದ್ದು, ಇದರಿಂದ ಜಿಲ್ಲೆಯ ಪ್ರಯಾಣಿಕರು ನೇರ ರೈಲು ಸಂಪರ್ಕದಿಂದ ವಂಚಿತರಾಗುತ್ತಿದ್ದಾರೆ. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ರೈಲ್ವೆ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಗದಗ–ಹರಪನಹಳ್ಳಿ ಹೊಸ ರೈಲು ಮಾರ್ಗ ನಿರ್ಮಾಣವಾದರೆ ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ವಿಶ್ವನಾಥ ಖಾನಾಪೂರ ಅವರೊಂದಿಗೆ ಜಗದೀಶ ಕಂಗೂರಿ, ವೆಂಕಟೇಶ ಕಬಾಡಿ, ಸಿದ್ದು ಜರತಖನ್ನಿ, ರಜಾಕ್ ನೂರಭಾಷಾ ಸೇರಿದಂತೆ ಹಲವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯ ಸಚಿವ ವಿ. ಸೋಮಣ್ಣ, ಸಂಸದ ಬಸವರಾಜ ಬೊಮ್ಮಾಯಿ ಹಾಗೂ ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

“ಸಮಯ ಉಳಿತಾಯಕ್ಕಿಂತ ಪ್ರಯಾಣಿಕರ ಅನುಕೂಲ ಮುಖ್ಯ. ಗದಗ ಮೇನ್ ಜಂಕ್ಷನ್ ಮೂಲಕ ರೈಲು ಸಂಚಾರ ಮಾಡಿದರೆ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಬೈಪಾಸ್ ಮಾರ್ಗದಿಂದ ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಿಲ್ಲ.”

ವಿಶ್ವನಾಥ ಖಾನಾಪೂರ

ರಸ್ತೆ ಕಾಮಗಾರಿಯಲ್ಲಿ ನಿರ್ಲಕ್ಷ್ಯ: ಸಹಾಯಕ ಇಂಜಿನಿಯರ್ ಅಮಾನತು, ಗುತ್ತಿಗೆದಾರನಿಗೆ ಬ್ಲ್ಯಾಕ್‌ಲಿಸ್ಟ್ ಭೀತಿ

ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದ ಕೃಷ್ಣಭೈರೇಗೌಡ ಅವರು ಮೊದಲ ಸಭೆಯಲ್ಲೇ ನಗರದ ರಸ್ತೆಗಳ ಬಗ್ಗೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡು ಬಿಸಿ ಮುಟ್ಟಿಸಿದ್ದರು.

ಕ್ರೆಸೆಂಟ್ ರಸ್ತೆಯ ಡಾಂಬರೀಕರಣ ಕಾಮಗಾರಿಯಲ್ಲಿ ಗುಣಮಟ್ಟದ ಕೊರತೆ ಹಾಗೂ ಕರ್ತವ್ಯಲೋಪ ಕಂಡುಬಂದ ಹಿನ್ನೆಲೆಯಲ್ಲಿ ಸಂಪಂಗಿರಾಮನಗರ ವಿಭಾಗದ ಸಹಾಯಕ ಇಂಜಿನಿಯರ್ ಪೂಜಾರಪ್ಪ ಅವರನ್ನು ಅಮಾನತು ಮಾಡಲಾಗಿದೆ.

ರಸ್ತೆ ಕಾಮಗಾರಿಯಲ್ಲಿ ನಿಗದಿತ ಪ್ರಮಾಣ ಮತ್ತು ದಪ್ಪದಲ್ಲಿ ಆಸ್ಫಾಲ್ಟಿಂಗ್ ಮಾಡದೇ ನಿರ್ಲಕ್ಷ್ಯ ವಹಿಸಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಅಮಾನತು ಆದೇಶ ಹೊರಡಿಸಿದ್ದಾರೆ.

ಇದರ ಜೊತೆಗೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರ ಸಂಪೂರ್ಣ ವಿವರಗಳನ್ನು ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗುಣಮಟ್ಟ ಕಾಪಾಡದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಸಹ ನಿರ್ದೇಶನ ನೀಡಿದ್ದಾರೆ.

ಇತ್ತೀಚೆಗೆ ನಡೆದ ಸಭೆಯಲ್ಲಿ ನಗರದ ರಸ್ತೆ ಗುಂಡಿಗಳ ಸಮಸ್ಯೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಕೃಷ್ಣ ಭೈರೇಗೌಡ, “ಬೆಂಗಳೂರು ರಸ್ತೆ ಗುಂಡಿ ಮುಚ್ಚುವುದು ರಾಕೆಟ್ ಸೈನ್ಸ್ ಅಲ್ಲ” ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಪರಿಶೀಲನೆಯ ಬಳಿಕ ಮೊದಲ ಅಮಾನತು ಕ್ರಮ ಜರುಗಿರುವುದು ಅಧಿಕಾರಿಗಳಲ್ಲಿ ಎಚ್ಚರಿಕೆಯ ಸಂದೇಶ ರವಾನಿಸಿದಂತಾಗಿದೆ.

ಸಿಎ ಪರೀಕ್ಷೆಯಲ್ಲಿ ರೋಹನ ಜೋಗಿನ ಯಶಸ್ಸು

0

ವಿಜಯಸಾಕ್ಷಿ ಸುದ್ದಿ, ಗದಗ: ಮೇ 2026ರಲ್ಲಿ ನಡೆದ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ನಡೆಸಿದ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪರೀಕ್ಷೆಯಲ್ಲಿ ನಗರದ ಒಕ್ಕಲಗೇರಿ ಓಣಿಯ ರೋಹನ ರವಿ ಜೋಗಿನ ಅವರು ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ಕೆಇಬಿಯ ಪ್ರಥಮ ದರ್ಜೆ ಗುತ್ತಿಗೆದಾರ ರವಿ ಜೋಗಿನ ಅವರ ಪುತ್ರರಾಗಿರುವ ರೋಹನ, ತಮ್ಮ ನಿರಂತರ ಪರಿಶ್ರಮ ಮತ್ತು ಶ್ರದ್ಧೆಯಿಂದ ಈ ಯಶಸ್ಸು ಸಾಧಿಸಿದ್ದಾರೆ.

ಅವರು ತಮ್ಮ ಎಸ್‌ಎಸ್‌ಎಲ್‌ಸಿ ಶಿಕ್ಷಣವನ್ನು ನಗರದ ಕೆ.ಎಲ್.ಇ. ಪ್ರೌಢಶಾಲೆಯಲ್ಲಿ ಹಾಗೂ ಪಿಯುಸಿ ಶಿಕ್ಷಣವನ್ನು ಎ.ಎಸ್.ಎಸ್. ಕಾಲೇಜಿನಲ್ಲಿ ಪೂರ್ಣಗೊಳಿಸಿ, ಬಳಿಕ ಸಿಎ ವ್ಯಾಸಂಗದಲ್ಲಿ ತೊಡಗಿಸಿಕೊಂಡಿದ್ದರು.

ದೇಶದ ಅತ್ಯಂತ ಸವಾಲಿನ ವೃತ್ತಿಪರ ಪರೀಕ್ಷೆಗಳಲ್ಲಿ ಒಂದಾದ ಸಿಎ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ತೇರ್ಗಡೆ ಹೊಂದಿರುವ ರೋಹನ ಅವರ ಸಾಧನೆಗೆ ಗುರು-ಹಿರಿಯರು, ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ.

ಗ್ಯಾರಂಟಿಗೆ ಗಂಡಾಂತರ; ಸ್ಲಂ ಜನರ ಆಕ್ರೋಶ

0

ವಿಜಯಸಾಕ್ಷಿ ಸುದ್ದಿ, ಗದಗ: ಬಡಜನರ ಕಲ್ಯಾಣ, ಉಚಿತ ಶಿಕ್ಷಣ, ಆರೋಗ್ಯ ಹಾಗೂ ವಸತಿ ಭರವಸೆ ನೀಡಿ ಅಧಿಕಾರಕ್ಕೆ ಬರುವ ಸರ್ಕಾರಗಳು ಬಳಿಕ ಶ್ರೀಮಂತರು ಹಾಗೂ ಕಾರ್ಪೊರೇಟ್ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿರುವುದು ವಿಷಾದನೀಯ ಎಂದು ಬೇಲೂರು ಗುರುಬಸವೇಶ್ವರ ಮಠದ ಪರಮಪೂಜ್ಯ ಡಾ. ಪ್ರಭು ಮಹಾಂತ ಮಹಾಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಲಾಯನ್ಸ್ ಭವನದಲ್ಲಿ ಶನಿವಾರ ಸ್ಲಂ ಜನಾಂದೋಲನ-ಕರ್ನಾಟಕ, ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ಸಹಯೋಗದಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿನಿಧಿಗಳ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಗ್ಯಾರಂಟಿ ಯೋಜನೆಗಳ ಆಧಾರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ಇದೀಗ ಫಲಾನುಭವಿಗಳ ಮರುಪರಿಶೀಲನೆ ನಡೆಸುತ್ತಿರುವುದು ಬಡವರಿಗೆ ದೊರೆಯುತ್ತಿರುವ ಸೌಲಭ್ಯಗಳನ್ನು ಕಸಿದುಕೊಳ್ಳುವ ಪ್ರಯತ್ನವಾಗಿದೆ. ಸ್ಲಂ ನಿವಾಸಿಗಳ ಹಕ್ಕುಗಳಿಗೆ ಸರ್ಕಾರ ಆದ್ಯತೆ ನೀಡಬೇಕು. ಬಡವರ ಹೋರಾಟಗಳಿಗೆ ತಾವು ಸದಾ ಬೆಂಬಲವಾಗಿ ನಿಲ್ಲುವುದಾಗಿ ಭರವಸೆ ನೀಡಿದರು.

ಸಮ್ಮೇಳನದ ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ, ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಸರ್ಕಾರ ಮರೆತಿದೆ. ಸ್ಲಂ ನಿವಾಸಿಗಳಿಗೆ ಉಚಿತ ಮನೆ, ನಿವೇಶನ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ಪ್ರಗತಿಪರ ಚಿಂತಕ ಬಸವರಾಜ ಸೂಳಿಬಾವಿ ಮಾತನಾಡಿ, ದೇಶದಲ್ಲಿ ಸಾರ್ವಜನಿಕ ಆಸ್ತಿಗಳ ಖಾಸಗೀಕರಣ ವೇಗವಾಗಿ ನಡೆಯುತ್ತಿದ್ದು, ಬಡವರು ಇನ್ನೂ ಮನೆ ಹಾಗೂ ನಿವೇಶನಕ್ಕಾಗಿ ಹೋರಾಟ ನಡೆಸುವ ಪರಿಸ್ಥಿತಿ ಮುಂದುವರಿದಿರುವುದು ಸರ್ಕಾರಗಳ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಸಮ್ಮೇಳನಕ್ಕೂ ಮುನ್ನ ಗದಗ-ಬೆಟಗೇರಿ ನಗರಸಭೆ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬೃಹತ್ ಜಾಥಾ ನಡೆಸಲಾಯಿತು. ನಗರದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿದ ಜಾಥಾದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಪ್ರತಿನಿಧಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಚಂದ್ರಮ್ಮ ಅಧ್ಯಕ್ಷತೆ ವಹಿಸಿದ್ದರು. ಎಂ.ಎಸ್. ಹಡಪದ, ಬಸವರಾಜ ಪೂಜಾರ, ಪೂರ್ಣ ರವಿಶಂಕರ್, ವೆಂಕಟೇಶಯ್ಯ, ಶೇಖಣ್ಣ ಕವಳಿಕಾಯಿ, ಇಮ್ತಿಯಾಜ್ ಆರ್. ಮಾನ್ವಿ, ಅಶೋಕ ಕುಡತಿನಿ, ಜನಾರ್ಧನ ಹಳ್ಳಿಬೆಂಚಿ, ಶೋಭಾ ಕಮತರ, ರೇಣುಕಾ ಸರಡಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಬಡವರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಸರ್ಕಾರಗಳು ಇಂದು ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿಗೆ ಹೆಚ್ಚು ಆದ್ಯತೆ ನೀಡುತ್ತಿವೆ. ಸ್ಲಂ ಜನರ ಹಕ್ಕುಗಳಿಗೆ ಸರ್ಕಾರಗಳು ನ್ಯಾಯ ಒದಗಿಸಬೇಕು.”

– ಡಾ. ಪ್ರಭು ಮಹಾಂತ ಮಹಾಸ್ವಾಮೀಜಿ, ಬೇಲೂರು ಗುರುಬಸವೇಶ್ವರ ಮಠ

ಕ್ರೀಡಾ ಸಂಘಟಕರ ಜನ್ಮದಿನಕ್ಕೆ ಸಂಭ್ರಮದ ಸಡಗರ

0

ವಿಜಯಸಾಕ್ಷಿ ಸುದ್ದಿ, ಹುಲಕೋಟಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕ್ರೀಡಾ ಕಾರ್ಯದರ್ಶಿಗಳಾದ ಇಮಾಮಸಾಬ ಗಾಡಗೋಳಿ ಅವರ ಜನ್ಮದಿನವನ್ನು ಹುಲಕೋಟಿಯಲ್ಲಿರುವ ಅವರ ಸ್ವಗೃಹದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರು ಹಾಗೂ ಗದಗ ಜಿಲ್ಲಾ ಘಟಕದ ಅಧ್ಯಕ್ಷರಾದ ಬಸವರಾಜ ವೆಂಕಪ್ಪ ಬಳ್ಳಾರಿ ಕೇಕ್ ಕತ್ತರಿಸುವ ಮೂಲಕ ಜನ್ಮದಿನದ ಸಂಭ್ರಮಾಚರಣೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಇಮಾಮಸಾಬ ಗಾಡಗೋಳಿಯವರು ನೌಕರರ ಸಂಘಟನೆ ಬಲವರ್ಧನೆ, ನೌಕರರ ಹಿತಾಸಕ್ತಿಗಳ ರಕ್ಷಣೆ ಹಾಗೂ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಮಟ್ಟದ ಕ್ರೀಡಾ ಚಟುವಟಿಕೆಗಳನ್ನು ಯಶಸ್ವಿಯಾಗಿ ಸಂಘಟಿಸುವ ಮೂಲಕ ನೌಕರರ ವಲಯದಲ್ಲಿ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಘಟಕದ ಜಂಟಿ ಕಾರ್ಯದರ್ಶಿಗಳಾದ ರಾಜು ಕಂಟಿಗೊಣ್ಣವರ, ಅಮೀರನಾಯಕ, ಮುತ್ತು ಮಲಕಶೆಟ್ಟಿ, ಎಸ್.ಎಸ್. ಪಾರ್ವತಿಮಠ, ಕರೀಮಸಾಬ ಸುಣಗಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ಗಾಡಗೋಳಿಯವರಿಗೆ ಜನ್ಮದಿನದ ಶುಭಾಶಯಗಳನ್ನು ಅರ್ಪಿಸಿದರು.

ಕೊನೆಯಲ್ಲಿ ಇಮಾಮಸಾಬ ಗಾಡಗೋಳಿಯವರು ಶುಭಾಶಯ ಸಲ್ಲಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸಿದರು.

“ನೌಕರರ ಹಿತಾಸಕ್ತಿ ಹಾಗೂ ಕ್ರೀಡಾ ಚಟುವಟಿಕೆಗಳ ಉತ್ತೇಜನಕ್ಕಾಗಿ ಇಮಾಮಸಾಬ ಗಾಡಗೋಳಿಯವರು ಸಲ್ಲಿಸಿರುವ ಸೇವೆ ಶ್ಲಾಘನೀಯ. ಅವರ ಸಾಮಾಜಿಕ ಬದ್ಧತೆ ಮತ್ತು ಸರಳ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ.”

– ಬಸವರಾಜ ವೆಂಕಪ್ಪ ಬಳ್ಳಾರಿ, ರಾಜ್ಯ ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ

ಗೃಹಲಕ್ಷ್ಮಿ ಗೊಂದಲಕ್ಕೆ ಸರ್ಕಾರವೇ ಕಾರಣ: ನರಗುಂದ ಶಾಸಕ ಸಿ.ಸಿ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ; ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆ ಹೆಸರಿನಲ್ಲಿ ರಾಜ್ಯ ಸರ್ಕಾರ ಮಹಿಳೆಯರಿಗೆ ಅನ್ಯಾಯ ಮಾಡುತ್ತಿದ್ದು, ಯೋಜನೆಯಲ್ಲಿನ ಗೊಂದಲಗಳು ರಾಜ್ಯದ ಹದಗೆಟ್ಟ ಆರ್ಥಿಕ ಪರಿಸ್ಥಿತಿಗೆ ಸಾಕ್ಷಿಯಾಗಿವೆ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯಲ್ಲಿ ಅನರ್ಹರು ಇದ್ದಾರೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಯೋಜನೆಯನ್ನು ಜಾರಿಗೆ ತಂದಿದ್ದು ಇದೇ ಸರ್ಕಾರ. ಕಳೆದ ಮೂರು ವರ್ಷಗಳಿಂದ ಅನರ್ಹರಿಗೆ ಹಣ ಹೋಗಿದ್ದರೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ರಾಜ್ಯದ ಬೊಕ್ಕಸವನ್ನು ತಾವೇ ಹಾಳು ಮಾಡಿ ಈಗ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ. ಗೃಹಲಕ್ಷ್ಮಿ ಯೋಜನೆಗೆ ಮೀಸಲಿಟ್ಟಿರುವ 5 ಸಾವಿರ ಕೋಟಿ ರೂ. ಕುರಿತು ಸರ್ಕಾರ ಇದುವರೆಗೂ ಸ್ಪಷ್ಟ ಲೆಕ್ಕ ನೀಡಿಲ್ಲ. ವಿಧಾನಸಭೆಯಲ್ಲಿ ಶಾಸಕರು ಪ್ರಶ್ನೆ ಕೇಳಿದರೂ ಉತ್ತರಿಸುವ ಧೈರ್ಯ ಸರ್ಕಾರಕ್ಕಿಲ್ಲ ಎಂದು ಆರೋಪಿಸಿದರು.

ವಿಧಾನಸಭೆಯಲ್ಲಿ ನೂರಾರು ಸಿಬ್ಬಂದಿಯನ್ನು ದಿಢೀರ್ ಕಡಿತಗೊಳಿಸಿರುವ ಕ್ರಮದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಅವರು, ಸಿಬ್ಬಂದಿಗೆ ಕೆಲಸವಿರಲಿಲ್ಲ ಎನ್ನುವುದಾದರೆ ಇಷ್ಟು ವರ್ಷಗಳ ಕಾಲ ಅವರು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು. ಇದು ಸಾರ್ವಜನಿಕರ ತೆರಿಗೆ ಹಣದ ಲೂಟಿ ಅಲ್ಲದೇ ಮತ್ತೇನು ಎಂದು ಟೀಕಿಸಿದರು.

ರಾಜ್ಯದ ಹಲವು ಸಚಿವರು ತಮ್ಮ ಖಾತೆಗಳ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಒಬ್ಬ ಸಚಿವರು ನೀರಾವರಿ ಖಾತೆ ಬೇಡ ಎನ್ನುತ್ತಾರೆ, ಮತ್ತೊಬ್ಬರು ಬೇರೆ ಖಾತೆ ಕೇಳುತ್ತಿದ್ದಾರೆ. ಕೇವಲ 12 ಸಚಿವರನ್ನು ಇಟ್ಟುಕೊಂಡೇ ಇಷ್ಟೊಂದು ಸಮಸ್ಯೆಗಳು ಸೃಷ್ಟಿಯಾಗಿವೆ. ಉಳಿದ ಖಾತೆಗಳ ಹಂಚಿಕೆ ಬಳಿಕ ಇನ್ನಷ್ಟು ಗೊಂದಲಗಳು ಉಂಟಾಗಲಿವೆ ಎಂದು ಲೇವಡಿ ಮಾಡಿದರು.

ಪ್ರಿಯಾಂಕ್ ಖರ್ಗೆಗೆ ತಿರುಗೇಟು

ಆರ್‌ಎಸ್‌ಎಸ್ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬರೆದ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಸಿ.ಸಿ. ಪಾಟೀಲ, ಆರ್‌ಎಸ್‌ಎಸ್ ಇಂತಹ ನೂರಾರು ಗೃಹ ಸಚಿವರನ್ನು ನೋಡಿದೆ. ಸ್ವತಃ ಜವಾಹರಲಾಲ್ ನೆಹರೂ ಅವರೇ ಆರ್‌ಎಸ್‌ಎಸ್ ವೇಷಭೂಷಣದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಮೊದಲು ಪ್ರಿಯಾಂಕ್ ಖರ್ಗೆ ಅವರು ಗೃಹ ಸಚಿವರಾಗಿ ರಾಜ್ಯದಲ್ಲಿ ಹೆಚ್ಚುತ್ತಿರುವ ಓಸಿ, ಮಟ್ಕಾ, ಡ್ರಗ್ಸ್ ದಂಧೆ ಹಾಗೂ ಬೆಂಗಳೂರಿನಲ್ಲಿ ತಡರಾತ್ರಿವರೆಗೆ ನಡೆಯುವ ಬಾರ್-ಪಬ್‌ಗಳ ಹಾವಳಿ ತಡೆಯುವತ್ತ ಗಮನ ಹರಿಸಲಿ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಲಿಂಗರಾಜ ಪಾಟೀಲ, ಎಂ.ಎಂ. ಹಿರೇಮಠ, ಎಂ.ಎಸ್. ಕರಿಗೌಡ್ರ, ಉಷಾ ದಾಸರ, ಅನಿಲ ಅಬ್ಬಿಗೇರಿ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

“ಗೃಹಲಕ್ಷ್ಮಿ ಯೋಜನೆಯಲ್ಲಿ ಅನರ್ಹರಿಗೆ ಹಣ ಹೋಗಿದೆ ಎಂದು ಸರ್ಕಾರವೇ ಒಪ್ಪಿಕೊಳ್ಳುತ್ತಿದೆ. ಹಾಗಿದ್ದರೆ ಮೂರು ವರ್ಷಗಳ ಕಾಲ ಯೋಜನೆ ಜಾರಿಗೊಳಿಸಿದವರ ಹೊಣೆಗಾರಿಕೆ ಏನು? ಮಹಿಳೆಯರಿಗೆ ಅನ್ಯಾಯ ಮಾಡುವ ಯಾವುದೇ ಪರಿಷ್ಕರಣೆಗಳನ್ನು ನಾವು ಒಪ್ಪುವುದಿಲ್ಲ.”

– ಸಿ.ಸಿ. ಪಾಟೀಲ, ನರಗುಂದ ಶಾಸಕ

ಅಡ್ಡ ಮತದಾನ ಪ್ರಕರಣ

ಅಡ್ಡ ಮತದಾನದ ಪ್ರಕರಣದ ಕುರಿತು ಸತ್ಯಶೋಧನಾ ಸಮಿತಿ ತನಿಖೆ ನಡೆಸುತ್ತಿದ್ದು, ವರದಿ ಬಂದ ಬಳಿಕ ನೈಜತೆ ಹೊರಬರಲಿದೆ. ಪಕ್ಷಕ್ಕೆ ದ್ರೋಹ ಮಾಡಿದವರ ವಿರುದ್ಧ ವರಿಷ್ಠರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಿ.ಸಿ. ಪಾಟೀಲ ಸ್ಪಷ್ಟಪಡಿಸಿದರು.

ಯೋಗದಿಂದ ರೋಗ ಗೆದ್ದ ಸಾಧಕಿ ರೂಪಾ ಸಂತಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಯೋಗವು ಕೇವಲ ವ್ಯಾಯಾಮವಲ್ಲ, ಅದು ಬದುಕಿನ ಪರಿವರ್ತನೆಯ ಮಾರ್ಗ ಎಂಬುದನ್ನು ತಮ್ಮ ಜೀವನದಲ್ಲೇ ಸಾಬೀತುಪಡಿಸಿರುವವರು ಪಟ್ಟಣದ ಯೋಗ ಸಾಧಕಿ ರೂಪಾ ಕಲ್ಮೇಶ್ವರ ಸಂತಿ. ಆರೋಗ್ಯ ಸಮಸ್ಯೆಗಳನ್ನು ಯೋಗಾಭ್ಯಾಸದ ಮೂಲಕ ದೂರ ಮಾಡಿಕೊಂಡ ಅವರು ಇಂದು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡ ಯೋಗ ಸಾಧಕಿಯಾಗಿ ಹೊರಹೊಮ್ಮಿದ್ದಾರೆ.

ಬಾಲ್ಯದಿಂದಲೇ ಶಿಕ್ಷಣ ಮತ್ತು ಯೋಗದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ರೂಪಾ ಸಂತಿ ಅವರು ಬಿ.ಎಡ್ ಪದವೀಧರೆ. 2019ರಲ್ಲಿ ಲಕ್ಷ್ಮೇಶ್ವರದಲ್ಲಿ ನಡೆದ ಉಚಿತ ಯೋಗ ತರಬೇತಿ ಶಿಬಿರದಲ್ಲಿ ಭಾಗವಹಿಸುವ ಮೂಲಕ ಅವರ ಯೋಗಯಾನ ಆರಂಭವಾಯಿತು. ಯೋಗಾಚಾರ್ಯ ಭವಹರಲಾಲ್ ಆರ್ಯ ಅವರ ಮಾರ್ಗದರ್ಶನದಲ್ಲಿ ಆರಂಭವಾದ ಈ ಪಯಣ ಜೀವನದಲ್ಲಿ ಹೊಸ ತಿರುವು ನೀಡಿತು.

ನಿತ್ಯ ಯೋಗಾಭ್ಯಾಸದಿಂದ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಂಡ ಅವರು, ಯೋಗದ ಬಗ್ಗೆ ಇನ್ನಷ್ಟು ಆಳವಾದ ಜ್ಞಾನ ಸಂಪಾದಿಸುವ ಸಂಕಲ್ಪದೊಂದಿಗೆ ಯೋಗ ಶಿಕ್ಷಣದತ್ತ ಹೆಜ್ಜೆ ಇಟ್ಟರು. ಗುರುಗಳಾದ ಡಾ. ಎಸ್.ಎಸ್. ಹಿರೇಮಠ ಅವರ ಮಾರ್ಗದರ್ಶನದಲ್ಲಿ ಸರ್ಟಿಫಿಕೇಟ್ ಇನ್ ಯೋಗ ಸೈನ್ಸ್ (CYS) ಹಾಗೂ ಬ್ಯಾಚುಲರ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸ್ ಪದವಿ ಪಡೆದರು. ಬಳಿಕ ಯೋಗಾಚಾರ್ಯ ಕೆ.ಎಸ್. ಪಲ್ಲೇದ ಅವರ ಮಾರ್ಗದರ್ಶನದಲ್ಲಿ ಯೋಗದಲ್ಲಿ ಪಿ.ಜಿ. ಡಿಪ್ಲೊಮಾ ಪೂರ್ಣಗೊಳಿಸಿದರು.

ಅವರ ಪರಿಶ್ರಮ, ಶಿಸ್ತು, ನಿರಂತರ ಅಭ್ಯಾಸ ಮತ್ತು ಯೋಗದ ಮೇಲಿನ ಅಪಾರ ಆಸಕ್ತಿಗೆ ಪ್ರತಿಫಲವಾಗಿ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಗೋಲ್ಡ್ ಮೆಡಲ್ ಲಭಿಸಿದೆ. ಇದು ಅವರ ಯೋಗ ಸಾಧನೆಗೆ ಸಂದ ಮಹತ್ವದ ಗೌರವವಾಗಿದೆ.

ಇಂದು ರೂಪಾ ಸಂತಿ ಅವರು ಲಕ್ಷ್ಮೇಶ್ವರ ಸೇರಿದಂತೆ ವಿವಿಧೆಡೆ ಉಚಿತ ಯೋಗ ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದು, ಆರೋಗ್ಯಕರ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಯೋಗದ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮೂಲಕ ಅನೇಕರ ಜೀವನದಲ್ಲಿ ಆರೋಗ್ಯದ ಬೆಳಕು ಮೂಡಿಸುತ್ತಿದ್ದಾರೆ.

ರೂಪಾ ಸಂತಿ ಅವರ ಪ್ರಕಾರ, ಆಸನಗಳಿಂದ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ಪ್ರಾಣಾಯಾಮದಿಂದ ಉಸಿರಾಟದ ವ್ಯವಸ್ಥೆ ಸುಧಾರಿಸುತ್ತದೆ. ಧ್ಯಾನವು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ನೆಮ್ಮದಿಯ ಬದುಕಿಗೆ ದಾರಿ ಮಾಡಿಕೊಡುತ್ತದೆ. ಯೋಗವು ಯಾವುದೇ ಜಾತಿ, ಧರ್ಮ ಅಥವಾ ವರ್ಗಕ್ಕೆ ಸೀಮಿತವಾಗಿಲ್ಲ; ಅದು ವಿಶ್ವದ ಜನರಿಗೆ ಆರೋಗ್ಯಕರ ಜೀವನ ಕ್ರಮವಾಗಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

“ಯೋಗ ಕೇವಲ ಜೂನ್ 21ರ ಯೋಗ ದಿನಕ್ಕೆ ಸೀಮಿತವಾಗಬಾರದು. ಅದು ಪ್ರತಿಯೊಬ್ಬರ ನಿತ್ಯ ಜೀವನದ ಭಾಗವಾಗಬೇಕು. ಯೋಗದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಎರಡನ್ನೂ ಕಾಪಾಡಿಕೊಳ್ಳಬಹುದು.”

– ರೂಪಾ ಕಲ್ಮೇಶ್ವರ ಸಂತಿ, ಯೋಗ ಸಾಧಕಿ

ಜೂ. 26ಕ್ಕೆ ರಾಜ್ಯಾದ್ಯಂತ ‘ರಕ್ಷಕ-2’ ಅಬ್ಬರ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಸರ್ವೇಶ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ‘ರಕ್ಷಕ-2’ ಕನ್ನಡ ಚಲನಚಿತ್ರವು ಜೂನ್ 26ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಈ ಹಿಂದೆ ಶತದಿನೋತ್ಸವ ಕಂಡ ‘ರಕ್ಷಕ’ ಹಾಗೂ ‘ದೊಡ್ಡಣ್ಣ ಪುಟ್ಟಣ್ಣ’ ಚಿತ್ರಗಳ ನಿರ್ದೇಶಕರಾದ ಡಾ. ಆರ್. ವಿಜಯಕುಮಾರ್ ನಟಿಸಿ, ನಿರ್ದೇಶಿಸಿರುವ ಮೂರನೇ ಚಿತ್ರ ಇದಾಗಿದೆ. ಲವ್, ಆಕ್ಷನ್, ಫ್ಯಾಮಿಲಿ, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಕಾಮಿಡಿಯ ಸಮನ್ವಯದೊಂದಿಗೆ ಮೂಡಿ ಬಂದಿರುವ ಈ ಚಿತ್ರದಲ್ಲಿ ಮೂರು ಹಾಡುಗಳಿದ್ದು, ಕುಟುಂಬ ಸಮೇತ ಕುಳಿತು ವೀಕ್ಷಿಸಬಹುದಾದ ಮನರಂಜನಾ ಚಿತ್ರವಾಗಿದೆ.

ಚಿತ್ರದ ನಿರ್ದೇಶಕ ಡಾ. ಆರ್. ವಿಜಯಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದು, ಖ್ಯಾತ ಹಾಸ್ಯ ನಟ ಲಯಕೋಕಿಲ ಹೆಡ್ ಕಾನ್ಸ್ಟೇಬಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕನಾಗಿ ರಾಜವಂಶಿ, ನಾಯಕಿಯಾಗಿ ರಾಧಿಕಾ, ಪ್ರಮುಖ ಪಾತ್ರದಲ್ಲಿ ಮಧುಶ್ರೀ ಅಭಿನಯಿಸಿದ್ದಾರೆ. ಹಿರಿಯ ನಟ ಸುರೇಂದ್ರ ಕುಮಾರ್ ಖಳನಾಯಕನಾಗಿ ನಟಿಸಿದ್ದು, ಮುರಳಿಕೃಷ್ಣ, ವಿಜಯ್ ಮಧಾಳೇ, ಅರವಿಂದ್ ಹಾಗೂ ರೋಹಿಣಿ ಸೇರಿದಂತೆ ಹಲವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದ್ದು, ಛಾಯಾಗ್ರಹಣವನ್ನು ವಿಜಯ್ ಮಧಾಳೇ ಮತ್ತು ಆಕಾಶ್, ಸಂಕಲನವನ್ನು ವಿಜಯ್ ಮಧಾಳೇ, ಸಾಹಸ ನಿರ್ದೇಶನವನ್ನು ವೈಲೆಂಟ್ ವೇಲು, ಪ್ರಸಾಧನವನ್ನು ಜೀವನ್ ನಿರ್ವಹಿಸಿದ್ದಾರೆ. ಡಾ. ಪ್ರಭು ಗಂಜಿಹಾಳ ಹಾಗೂ ಡಾ. ವೀರೇಶ ಹಂಡಿಗಿ ಚಿತ್ರದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾಗಿದ್ದಾರೆ.

ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ ಮತ್ತು ನಿರ್ದೇಶನವನ್ನು ಡಾ. ಆರ್. ವಿಜಯಕುಮಾರ್ ವಹಿಸಿಕೊಂಡಿದ್ದು, ವಿ. ಶಿವ್ ಸರ್ವೇಶ್ ಚಿತ್ರವನ್ನು ನಿರ್ಮಿಸಿದ್ದಾರೆ. ವಿಎಸ್‌ಕೆ ಸಿನಿ ಕ್ರಿಯೇಷನ್ಸ್ ಸಂಸ್ಥೆ ಚಿತ್ರವನ್ನು ವಿಶಾಲ ಕರ್ನಾಟಕದಲ್ಲಿ ವಿತರಣೆ ಮಾಡುತ್ತಿದೆ.

ಚಿತ್ರಮಂದಿರಗಳಿಗೆ ಆಗಮಿಸಿ ‘ರಕ್ಷಕ-2’ ಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕೆಂದು ನಿರ್ದೇಶಕ ಡಾ. ಆರ್. ವಿಜಯಕುಮಾರ್ ಮನವಿ ಮಾಡಿದ್ದಾರೆ.

ಲಕ್ಷ್ಮೇಶ್ವರ ಸಮೀಪ ಭೀಕರ ರಸ್ತೆ ಅಪಘಾತ; ಅಕ್ಕ-ತಮ್ಮ ಬಲಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಗೋನಾಳ ಗ್ರಾಮದ ಸಮೀಪದ ಸಂಕ್ಲಿಪುರ ಕ್ರಾಸ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಅಕ್ಕ ಮತ್ತು ತಮ್ಮ ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

ಸವಣೂರ ಕಡೆಯಿಂದ ಲಕ್ಷ್ಮೇಶ್ವರದತ್ತ ಅತಿವೇಗವಾಗಿ ಬರುತ್ತಿದ್ದ ಐಶರ್/ಕ್ಯಾಂಟರ್ ವಾಹನವು ಸಂಕ್ಲಿಪುರ ಕ್ರಾಸ್‌ನಿಂದ ಸವಣೂರ ರಸ್ತೆಯತ್ತ ತೆರಳುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಅಪಘಾತದ ತೀವ್ರತೆಗೆ ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಕುಂದಗೋಳ ತಾಲೂಕಿನ ಕಡಪಟ್ಟಿಹಳ್ಳಾಳ ಗ್ರಾಮದ ಗೌರವ್ವ ಯಲ್ಲಪ್ಪ ಬಾರ್ಕಿ (43) ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬೈಕ್ ಚಾಲಕ ಫಕೀರೇಶ ಬಾರ್ಕಿ (40) ಅವರನ್ನು ತಕ್ಷಣ ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.

ಬಳಿಕ ಹೆಚ್ಚಿನ ಚಿಕಿತ್ಸೆಗೆ ಗದಗ ಜಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದರು.

ಒಂದೇ ಕುಟುಂಬದ ಅಕ್ಕ-ತಮ್ಮ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದು ಕುಟುಂಬಸ್ಥರ ಆಕ್ರಂದನಕ್ಕೆ ಕಾರಣವಾಗಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಮೃತರ ತಂದೆ ನೀಡಿದ ದೂರಿನ ಮೇರೆಗೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ನಾಗರಾಜ ಗಡದ ತನಿಖೆ ಕೈಗೊಂಡಿದ್ದಾರೆ.

error: Content is protected !!