Home Blog

ಬೆಂಗಳೂರಿನಲ್ಲಿ ಮಳೆ ಅವಾಂತರ: ಕ್ಲಬ್ ಕಾಂಪೌಂಡ್ ಕುಸಿದು ಆಟೋ ಚಾಲಕ ಸಾವು!

ಬೆಂಗಳೂರು:- ಇಂದು ನಗರದಲ್ಲಿ ಸುರಿದ ಭಾರೀ ಮಳೆಗೆ ದುರಂತವೊಂದು ಸಂಭವಿಸಿದೆ.

ಭಾರೀ ಮಳೆ ಹಿನ್ನೆಲೆ ಕ್ಲಬ್ ಕಾಂಪೌಂಡ್ ಕುಸಿದು ಆಟೋ ಮೇಲೆ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದೆ. ಗಂಗೊಂಡನಹಳ್ಳಿ ನಿವಾಸಿಯಾದ ಶಿವಬೋರಯ್ಯ (56) ಮೃತ ವ್ಯಕ್ತಿ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನೂ ನಗರದಾದ್ಯಂತ ಸಂಜೆ ವೇಳೆ ಮತ್ತೆ ಮಳೆರಾಯ ಅಬ್ಬರಿಸಿದ್ದು, ರಸ್ತೆಗಳು ಸೇರಿ ಅಂಡರ್‌ಪಾಸ್‌ಗಳು ಜಲಾವೃತಗೊಂಡಿದೆ. ಅಷ್ಟೇ ಅಲ್ಲ ಕೆಲವೆಡೆ ಮರಗಳು ಧರೆಗುರುಳಿದ ಘಟನೆಗಳು ಕೂಡ ವರದಿಯಾಗಿವೆ.

ಕೆ.ಆರ್. ಸರ್ಕಲ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ಮಧ್ಯೆ GBA ಕಮಿಷನರ್ ಮಹೇಶ್ವರ್ ರಾವ್ ಅವರು ಅಂಡರ್‌ಪಾಸ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ಅಂಡರ್‌ಪಾಸ್‌ಗಳಲ್ಲಿ ನೀರು ಸಂಗ್ರಹವಾಗದಂತೆ ಹಾಗೂ ರಸ್ತೆಗಳಲ್ಲಿ ಸರಾಗವಾಗಿ ನೀರು ಹರಿಯುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕಸದ ಸಮರ್ಪಕ ವಿಲೇವಾರಿ ಮತ್ತು ಒಣಗಿದ ಮರಗಳ ತೆರವಿಗೆ ವಿಶೇಷ ಗಮನ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ತ್ರಿಕೋನ ಪ್ರೇಮಕ್ಕೆ 18 ವರ್ಷದ ಯುವಕ ಬಲಿ! ನಾಟಕ ನೋಡಲು ಹೋದವನ ದುರಂತ ಅಂತ್ಯ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕು ವ್ಯಾಪ್ತಿಯ ಗಿರಿಸಾಗರ ಗ್ರಾಮದಲ್ಲಿ ನಡೆದ ನಿಗೂಢ ನಾಪತ್ತೆ ಪ್ರಕರಣವು ಇದೀಗ ಭೀಕರ ಕೊಲೆ ಪ್ರಕರಣವಾಗಿ ಬೆಳಕಿಗೆ ಬಂದಿದೆ.

18 ವರ್ಷದ ಯುವಕ ವಿಕಾಸ್ ದಳವಾಯಿ ಹತ್ಯೆಯಾಗಿರುವುದು ದೃಢಪಟ್ಟಿದ್ದು, ಪ್ರೇಮ ಸಂಬಂಧದ ತ್ರಿಕೋನವೇ ಈ ಕೃತ್ಯಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಮೇ 20ರಂದು ಓಂಕಾರೇಶ್ವರ ದೇವಿ ಜಾತ್ರೆ ಸಂದರ್ಭದಲ್ಲಿ ಗ್ರಾಮದಲ್ಲಿ ನಡೆದ ನಾಟಕ ವೀಕ್ಷಿಸಲು ಹೋಗಿದ್ದ ವಿಕಾಸ್ ದಳವಾಯಿ ಮನೆಗೆ ಮರಳದೆ ನಾಪತ್ತೆಯಾಗಿದ್ದ. ಬಳಿಕ ಕುಟುಂಬಸ್ಥರು ಬೀಳಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಆರಂಭದಲ್ಲಿ ಸುಳಿವು ಸಿಗದೇ ಇದ್ದರೂ, ನಂತರದ ವಿಚಾರಣೆಯಲ್ಲಿ ಪ್ರಕರಣಕ್ಕೆ ಭೀಕರ ತಿರುವು ಸಿಕ್ಕಿದೆ.

ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಯುವತಿಯನ್ನೇ ಕೇಂದ್ರವಾಗಿಸಿಕೊಂಡ ತ್ರಿಕೋನ ಪ್ರೇಮಕಥೆಯಲ್ಲಿ ಮತ್ತೊಬ್ಬ ಪ್ರೇಮಿ ಕೃಷ್ಣಾ ಹಾಗೂ ಆಕೆಯ ಸಹೋದರ ರಾಜು ಸೇರಿಕೊಂಡು ವಿಕಾಸ್‌ನನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ನಂತರ ಸಾಕ್ಷ್ಯ ನಾಶಪಡಿಸಲು ಶವವನ್ನು ಗೋಣಿ ಚೀಲದಲ್ಲಿ ತುಂಬಿ, ಕಲ್ಲುಗಳನ್ನು ಕಟ್ಟಿಹಾಕಿ ಘಟಪ್ರಭಾ ನದಿಗೆ ಎಸೆದಿರುವುದು ತಿಳಿದುಬಂದಿದೆ.

ನಾಪತ್ತೆ ಪ್ರಕರಣದ ತನಿಖೆ ಮುಂದುವರಿದಂತೆ ಶಂಕೆಯ ಆಧಾರದ ಮೇಲೆ ರಾಜುವಿನ ಸಹೋದರ ರವಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ ಎಂದು ತಿಳಿದುಬಂದಿದೆ.

ಈಗ ಪ್ರಮುಖ ಆರೋಪಿಗಳಾದ ಕೃಷ್ಣಾ ಮತ್ತು ರಾಜು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಮೃತ ಯುವಕನ ಕುಟುಂಬದಲ್ಲಿ ಆಕ್ರಂದನ ಮಡುಗಟ್ಟಿದ್ದು, ಗ್ರಾಮದಲ್ಲಿ ಶೋಕವಾತಾವರಣ ನಿರ್ಮಾಣವಾಗಿದೆ.

3 ತಿಂಗಳೊಳಗೆ ಅಂತಿಮ ತೀರ್ಪು ಕಡ್ಡಾಯ: ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್ ಆದೇಶ!

ನವದೆಹಲಿ: ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ತೀರ್ಪು ವಿಳಂಬದ ಸಮಸ್ಯೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಮತ್ತು ಐತಿಹಾಸಿಕ ಆದೇಶವನ್ನು ಹೊರಡಿಸಿದೆ.

ವಾದ–ಪ್ರತಿವಾದ ಮುಗಿದು ತೀರ್ಪು ಕಾಯ್ದಿರಿಸಿದ ನಂತರ ಗರಿಷ್ಠ 3 ತಿಂಗಳ ಒಳಗಾಗಿ ಎಲ್ಲಾ ಹೈಕೋರ್ಟ್‌ಗಳು ಅಂತಿಮ ತೀರ್ಪು ನೀಡಲೇಬೇಕು ಎಂದು ಕಡ್ಡಾಯಗೊಳಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಲ್ಯ ಬಾಗ್ಚಿ ಅವರ ಪೀಠವು ಈ ನಿರ್ದೇಶನ ನೀಡಿದ್ದು, ತೀರ್ಪು ವಿಳಂಬವಾಗುವುದರಿಂದ ಕಕ್ಷಿದಾರರಿಗೆ ಅನ್ಯಾಯವಾಗುತ್ತದೆ ಮತ್ತು ನ್ಯಾಯಾಂಗದ ಮೇಲಿನ ನಂಬಿಕೆ ಕುಸಿಯುತ್ತದೆ ಎಂದು ಗಂಭೀರವಾಗಿ ಅಭಿಪ್ರಾಯಪಟ್ಟಿದೆ.

ಹೆಚ್ಚುವರಿ ಸಮಯಕ್ಕೂ ಮಿತಿ:

ಹೊಸ ಆದೇಶದ ಪ್ರಕಾರ, 3 ತಿಂಗಳೊಳಗೆ ತೀರ್ಪು ನೀಡದಿದ್ದರೆ ಪ್ರಕರಣವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರಬೇಕು. ಅವರು ಗರಿಷ್ಠ 2 ವಾರಗಳ ಹೆಚ್ಚುವರಿ ಸಮಯ ಮಾತ್ರ ನೀಡಬಹುದು. ಅದಾದ ಮೇಲೂ ತೀರ್ಪು ಹೊರಬರದಿದ್ದರೆ, ಪ್ರಕರಣವನ್ನು ಹೊಸ ಪೀಠಕ್ಕೆ ವರ್ಗಾಯಿಸಿ ಮರು ವಿಚಾರಣೆ ನಡೆಸಲು ಕಕ್ಷಿದಾರರಿಗೆ ಅವಕಾಶ ನೀಡಬಹುದು.

ಜಾಮೀನು ಪ್ರಕರಣಗಳಿಗೆ ತ್ವರಿತ ತೀರ್ಪು:

ಜಾಮೀನು ಅರ್ಜಿಗಳ ವಿಚಾರಣೆಯಾದ ದಿನವೇ ಅಥವಾ ಮರುದಿನವೇ ತೀರ್ಪು ಪ್ರಕಟಿಸಿ, ಅದನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಸೂಚಿಸಿದೆ. ಜಾಮೀನು ಮಂಜೂರಾದರೆ ಕೈದಿಗಳನ್ನು ತಕ್ಷಣವೇ ಬಿಡುಗಡೆ ಮಾಡುವ ವ್ಯವಸ್ಥೆ ಕಲ್ಪಿಸಬೇಕೆಂದು ಸಹ ಹೇಳಲಾಗಿದೆ.

ಪಾರದರ್ಶಕತೆ ಮತ್ತು ಆನ್‌ಲೈನ್ ಮೇಲ್ವಿಚಾರಣೆ:

ಕಾಯ್ದಿರಿಸಿದ ತೀರ್ಪುಗಳ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಸ್ಪಷ್ಟವಾಗಿ ಪ್ರದರ್ಶಿಸಬೇಕು. ಪ್ರತಿ ತಿಂಗಳು ಬಾಕಿ ಇರುವ ಪ್ರಕರಣಗಳ ಕುರಿತು ನ್ಯಾಯಾಂಗ ಸಿಬ್ಬಂದಿಗೆ ಸ್ವಯಂಚಾಲಿತ ಎಚ್ಚರಿಕೆ (ಅಲರ್ಟ್) ಹೋಗುವಂತೆ ಹೈಕೋರ್ಟ್ ವೆಬ್‌ಸೈಟ್‌ಗಳನ್ನು ನವೀಕರಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ಕಾರಣಗಳಿಲ್ಲದ ತೀರ್ಪಿಗೆ ತೀವ್ರ ಟೀಕೆ:

ಕೇವಲ “ಅರ್ಜಿ ಅಂಗೀಕರಿಸಲಾಗಿದೆ” ಅಥವಾ “ವಜಾ ಮಾಡಲಾಗಿದೆ” ಎಂಬ ರೀತಿಯಲ್ಲಿ ಕಾರಣವಿಲ್ಲದೆ ತೀರ್ಪುಗಳನ್ನು ಕಾಯ್ದಿರಿಸುವ ಪದ್ಧತಿಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದೆ. ಪ್ರತಿಯೊಂದು ಆದೇಶಕ್ಕೂ ಕಾನೂನುಬದ್ಧ ಕಾರಣಗಳನ್ನು ದಾಖಲಿಸುವುದು ಕಡ್ಡಾಯ ಎಂದು ತಿಳಿಸಲಾಗಿದೆ.

ಈ ಮಾರ್ಗಸೂಚಿಗಳು ಹೈಕೋರ್ಟ್‌ಗಳಷ್ಟೇ ಅಲ್ಲದೆ ದೇಶದ ಎಲ್ಲಾ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಿಗೂ ಅನ್ವಯವಾಗಲಿವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಗರ್ಭಿಣಿಯರ ಸ್ಟ್ರೆಸ್ ಮಗುವಿನ ಆರೋಗ್ಯಕ್ಕೂ ಅಪಾಯಕಾರಿಯೇ? ತಜ್ಞರ ಎಚ್ಚರಿಕೆ

ಗರ್ಭಾವಸ್ಥೆ ಮಹಿಳೆಯ ಜೀವನದ ಅತ್ಯಂತ ಮಹತ್ವದ ಹಂತವಾಗಿದ್ದು, ಈ ಅವಧಿಯಲ್ಲಿ ದೇಹದಲ್ಲಿ ಹಲವು ಹಾರ್ಮೋನ್ ಬದಲಾವಣೆಗಳು ನಡೆಯುತ್ತವೆ.

ಜೊತೆಗೆ ಮಾನಸಿಕ ಒತ್ತಡ, ಆತಂಕ ಮತ್ತು ಭಾವನಾತ್ಮಕ ಏರುಪೇರುಗಳೂ ಸಹ ಸಾಮಾನ್ಯವಾಗಿರುತ್ತವೆ. ಆದರೆ ಈ ಸಮಯದಲ್ಲಿ ಅತಿಯಾದ ಒತ್ತಡ, ಕೋಪ ಮತ್ತು ಚಿಕ್ಕ ವಿಷಯಕ್ಕೂ ಹೆಚ್ಚು ಸ್ಟ್ರೆಸ್ ತೆಗೆದುಕೊಳ್ಳುವುದು ಗರ್ಭದಲ್ಲಿರುವ ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಅಧ್ಯಯನಗಳ ಪ್ರಕಾರ, ದೀರ್ಘಕಾಲ ಮಾನಸಿಕ ಒತ್ತಡದಲ್ಲಿರುವ ಗರ್ಭಿಣಿಯರಲ್ಲಿ ಹಾರ್ಮೋನ್ ಬದಲಾವಣೆಗಳು ಕಂಡುಬರುತ್ತವೆ. ಇದು ತಾಯಿಯ ಆರೋಗ್ಯದ ಜೊತೆಗೆ ಗರ್ಭದಲ್ಲಿರುವ ಮಗುವಿನ ಮೆದುಳಿನ ಬೆಳವಣಿಗೆಯ ಮೇಲೂ ಪರಿಣಾಮ ಬೀರಬಹುದು.

ತಜ್ಞರ ಅಭಿಪ್ರಾಯದಂತೆ, ಗರ್ಭಾವಸ್ಥೆಯಲ್ಲಿ ನಿರಂತರ ಒತ್ತಡದಲ್ಲಿರುವುದರಿಂದ ಮಗುವಿನ ಭಾವನಾತ್ಮಕ ಬೆಳವಣಿಗೆ, ವರ್ತನೆ ಹಾಗೂ ಏಕಾಗ್ರತೆಯ ಸಾಮರ್ಥ್ಯಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಕೆಲವು ಮಕ್ಕಳಲ್ಲಿ ಚಿಡಿಚಿಡಿತನ, ಆತಂಕ ಅಥವಾ ಗಮನ ಕೇಂದ್ರೀಕರಿಸುವಲ್ಲಿ ತೊಂದರೆಗಳೂ ಕಾಣಿಸಬಹುದು. ಆದರೆ ಪ್ರತಿಯೊಬ್ಬ ಗರ್ಭಿಣಿಯಲ್ಲೂ ಇದೇ ರೀತಿಯ ಪರಿಣಾಮ ಕಾಣಿಸಿಕೊಳ್ಳುತ್ತದೆ ಎನ್ನಲು ಸಾಧ್ಯವಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

ನಿರ್ಲಕ್ಷಿಸಬಾರದ ಲಕ್ಷಣಗಳು:

  • ನಿರಂತರ ಆತಂಕ ಅಥವಾ ಭಯ
  • ಹೆಚ್ಚು ಕೋಪ ಅಥವಾ ಚಿಡಿಚಿಡಿತನ
  • ನಿದ್ರೆಯ ಕೊರತೆ
  • ಹೆಚ್ಚು ದುಃಖ ಅಥವಾ ಏಕಾಂಗಿತನ
  • ದೈನಂದಿನ ಚಟುವಟಿಕೆಗಳಲ್ಲಿ ಆಸಕ್ತಿ ಕಡಿಮೆಯಾಗುವುದು

ಈ ಲಕ್ಷಣಗಳು ದೀರ್ಘಕಾಲ ಮುಂದುವರಿದರೆ ವೈದ್ಯರು ಅಥವಾ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸುವುದು ಉತ್ತಮ ಎಂದು ಸಲಹೆ ನೀಡಲಾಗಿದೆ.

ಒತ್ತಡ ಕಡಿಮೆ ಮಾಡಲು ಸಲಹೆಗಳು:

ಗರ್ಭಿಣಿಯರು ಸಾಕಷ್ಟು ವಿಶ್ರಾಂತಿ ಪಡೆಯುವುದು ಮತ್ತು ಉತ್ತಮ ನಿದ್ರೆ ಮಾಡುವುದು ಮುಖ್ಯ. ಕುಟುಂಬದವರೊಂದಿಗೆ ಮಾತುಕತೆ ನಡೆಸುವುದು ಭಾವನಾತ್ಮಕ ಬೆಂಬಲ ನೀಡುತ್ತದೆ. ಲಘು ವ್ಯಾಯಾಮ, ಧ್ಯಾನ ಹಾಗೂ ಸಮತೋಲನ ಆಹಾರ ಪದ್ಧತಿ ಮಾನಸಿಕ ಆರೋಗ್ಯ ಕಾಪಾಡಲು ಸಹಕಾರಿ. ಅಗತ್ಯವಿದ್ದರೆ ವೈದ್ಯರ ಸಲಹೆ ಪಡೆಯುವುದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಉತ್ತಮ ಎಂದು ತಜ್ಞರು ತಿಳಿಸಿದ್ದಾರೆ.

15ರ ಹುಡುಗನಿಗೆ ಪಾಕಿಸ್ತಾನದಿಂದಲೂ ಸಲಾಂ! ವೈಭವ್ ಆಟ ನೋಡಿ ಬೆರಗಾದ ಪಿಎಸ್‌ಎಲ್ ಫ್ರಾಂಚೈಸಿ ಮಾಲೀಕ

ಇಸ್ಲಾಮಾಬಾದ್: ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಜಾಗತಿಕ ಕ್ರಿಕೆಟ್ ವಲಯದ ಗಮನ ಸೆಳೆದಿದ್ದು, ಇದೀಗ ಪಾಕಿಸ್ತಾನ ಸೂಪರ್ ಲೀಗ್ ಫ್ರಾಂಚೈಸಿಯ ಮಾಲೀಕರಿಂದಲೂ ಭರ್ಜರಿ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ಪೇಶಾವರ್ ಝಲ್ಮಿ ತಂಡದ ಮಾಲೀಕ ಜಾವೇದ್ ಅಫ್ರಿದಿ, 15 ವರ್ಷದ ವೈಭವ್ ಪ್ರದರ್ಶನವನ್ನು ಕೊಂಡಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಸಂದೇಶ ಹಂಚಿಕೊಂಡಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ಪ್ರತಿಭೆ ಅಪರೂಪ. ಅವರ ಬ್ಯಾಟಿಂಗ್ ಶೈಲಿ ಮತ್ತು ಆತ್ಮವಿಶ್ವಾಸ ನಿಜಕ್ಕೂ ಅಚ್ಚರಿ ಮೂಡಿಸಿದೆ. ಭವಿಷ್ಯದಲ್ಲಿ ವಿಶ್ವ ಕ್ರಿಕೆಟ್‌ನ ಸೂಪರ್‌ಸ್ಟಾರ್ ಆಗುವ ಎಲ್ಲಾ ಗುಣಗಳು ಅವರಲ್ಲಿವೆ ಎಂದು ಅವರು ಬರೆದಿದ್ದಾರೆ.

ವೈಭವ್ ಸೂರ್ಯವಂಶಿಯಂತಹ ಯುವ ಆಟಗಾರರಿಗೆ ಐಪಿಎಲ್ ಅತ್ಯುತ್ತಮ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟ ಜಾವೇದ್ ಅಫ್ರಿದಿ, ಪಾಕಿಸ್ತಾನದಲ್ಲೂ ಯುವ ಪ್ರತಿಭೆಗಳನ್ನು ಬೆಳೆಸಲು ಪಿಎಸ್‌ಎಲ್‌ನಂತಹ ಟೂರ್ನಿಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಹೇಳಿದ್ದಾರೆ. ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ಮತ್ತು ವೇದಿಕೆಗಳನ್ನು ಕಲ್ಪಿಸುವ ಅಗತ್ಯವಿದೆ ಎಂದೂ ಅವರು ಒತ್ತಿ ಹೇಳಿದ್ದಾರೆ.

ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿರುವ ವೈಭವ್, ಪ್ರಸ್ತುತ ಐಪಿಎಲ್ ಆವೃತ್ತಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. 15 ಪಂದ್ಯಗಳಲ್ಲಿ 680 ರನ್ ಕಲೆಹಾಕಿರುವ ಅವರು, 242.85 ಸ್ಟ್ರೈಕ್‌ರೇಟ್‌ನೊಂದಿಗೆ ಟೂರ್ನಿಯ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಇತ್ತೀಚೆಗೆ ಹೈದರಾಬಾದ್ ವಿರುದ್ಧ ನಡೆದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಕೇವಲ 29 ಎಸೆತಗಳಲ್ಲಿ 97 ರನ್ ಸಿಡಿಸಿ ವೈಭವ್ ಎಲ್ಲರ ಗಮನ ಸೆಳೆದಿದ್ದರು. ಕೇವಲ ಮೂರು ರನ್‌ಗಳಿಂದ ಶತಕ ವಂಚಿತರಾದರೂ, ಅವರ ಸ್ಫೋಟಕ ಇನ್ನಿಂಗ್ಸ್ ಕ್ರಿಕೆಟ್ ಅಭಿಮಾನಿಗಳನ್ನು ರೋಮಾಂಚನಗೊಳಿಸಿತ್ತು.

ವೈಭವ್ ಪ್ರದರ್ಶನಕ್ಕೆ ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ವೆಸ್ಟ್ ಇಂಡೀಸ್ ದಂತಕಥೆ ಕ್ರಿಸ್ ಗೇಲ್ ಸೇರಿದಂತೆ ಹಲವು ಮಾಜಿ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ಐಪಿಎಲ್ ಆವೃತ್ತಿಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಯಶಸ್ಸಿನಲ್ಲಿ ವೈಭವ್ ನಿರ್ಣಾಯಕ ಪಾತ್ರ ವಹಿಸಿರುವುದು ಗಮನಾರ್ಹ.

ಇಂದಿನಿಂದ ಮಳೆಯ ರೌದ್ರಾವತಾರ: ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

0

ಮಂಗಳೂರು: ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆ ಮತ್ತೆ ಚುರುಕುಗೊಂಡಿದ್ದು, ಮುಂದಿನ ಐದು ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಲ್ಲಿ ಭಾರೀ ಮಳೆ, ಗುಡುಗು, ಮಿಂಚು ಮತ್ತು ಬಿರುಗಾಳಿ ಬೀಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ಸೂಚನೆ ನೀಡಿವೆ.

ಮೇ 29ರಿಂದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಕೆಲವೆಡೆ 115.5 ಮಿ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಇಂದು ಮತ್ತು ನಾಳೆ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಇದ್ದು, ನಂತರದ ದಿನಗಳಲ್ಲಿ 30ರಿಂದ 40 ಕಿಲೋಮೀಟರ್ ವೇಗದ ಗಾಳಿ ಮುಂದುವರಿಯಲಿದೆ. ಇದರಿಂದ ಮರಗಳು, ವಿದ್ಯುತ್ ಕಂಬಗಳು ಹಾಗೂ ದುರ್ಬಲ ಕಟ್ಟಡಗಳಿಗೆ ಹಾನಿಯಾಗುವ ಸಾಧ್ಯತೆ ಇರುವುದಾಗಿ ಎಚ್ಚರಿಕೆ ನೀಡಲಾಗಿದೆ.

ಉತ್ತರ ಒಳನಾಡು ಜಿಲ್ಲೆಗಳಲ್ಲೂ ಗುಡುಗು ಸಹಿತ ಮಳೆಯಾಗಲಿದ್ದು, ಕರಾವಳಿ ಕರ್ನಾಟಕದಲ್ಲಿ ಸಿಡಿಲು ಮತ್ತು ಮಿಂಚಿನ ಚಟುವಟಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಮೀನುಗಾರರು ಸಮುದ್ರಕ್ಕೆ ಇಳಿಯುವ ಮೊದಲು ಹವಾಮಾನ ಮಾಹಿತಿ ಪರಿಶೀಲಿಸುವಂತೆ ಸೂಚಿಸಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲೂ ಇಂದು ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, ಸಂಚಾರ ದಟ್ಟಣೆ ಮತ್ತು ನೀರು ನಿಲ್ಲುವ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರು ಅನಗತ್ಯ ಪ್ರಯಾಣ ತಪ್ಪಿಸಿ ಮುನ್ನೆಚ್ಚರಿಕೆ ವಹಿಸುವಂತೆ ಇಲಾಖೆ ಸಲಹೆ ನೀಡಿದೆ.

‘ಧುರಂಧರ್’ ಚಿತ್ರತಂಡದ ಸದಸ್ಯನ ಲೈಂಗಿಕ ದೌರ್ಜನ್ಯ ಕೃತ್ಯ ಸಾಬೀತು: ಕಠಿಣ ಕ್ರಮ ಕೈಗೊಂಡ ಸಿನಿಮಾ ತಂಡ

ಬಾಲಿವುಡ್ ವಲಯದಲ್ಲಿ ಸಂಚಲನ ಮೂಡಿಸಿದ್ದ ‘ಧುರಂಧರ್’ ಚಿತ್ರದ ಪ್ರೊಡಕ್ಷನ್ ಡಿಸೈನರ್ ಸೈನಿ ಎಸ್. ಜೊಹ್ರೆ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಆಂತರಿಕ ಪಿಒಎಸ್‌ಎಚ್ ಸಮಿತಿ ನಡೆಸಿದ ತನಿಖೆಯಲ್ಲಿ ಆರೋಪಗಳು ಸಾಬೀತಾಗಿರುವುದರಿಂದ ಚಿತ್ರರಂಗದಲ್ಲಿ ಭಾರೀ ಚರ್ಚೆ ಆರಂಭವಾಗಿದೆ.

ಮಹಿಳೆಯೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಆರಂಭವಾದ ತನಿಖೆ ಸುಮಾರು ಆರು ತಿಂಗಳ ಕಾಲ ಮುಂದುವರಿದಿತ್ತು. ಪ್ರಕರಣದ ಪ್ರತಿಯೊಂದು ಅಂಶವನ್ನು ಪರಿಶೀಲಿಸಿದ ಸಮಿತಿ, 2026ರ ಮಾರ್ಚ್ ಅಂತ್ಯದಲ್ಲಿ ತನ್ನ ಅಂತಿಮ ವರದಿಯನ್ನು ಸಲ್ಲಿಸಿದ್ದು, ಸೈನಿ ಎಸ್. ಜೊಹ್ರೆ ವಿರುದ್ಧದ ಆರೋಪಗಳಿಗೆ ಬಲವಾದ ಆಧಾರಗಳಿವೆ ಎಂದು ಅಭಿಪ್ರಾಯಪಟ್ಟಿದೆ.

ಲೈಂಗಿಕ ದೌರ್ಜನ್ಯ ಮತ್ತು ಸಾಕ್ಷ್ಯ ನಾಶಕ್ಕೆ ಯತ್ನ ಸೇರಿದಂತೆ ಎರಡು ಪ್ರಮುಖ ಆರೋಪಗಳಲ್ಲಿ ಅವರನ್ನು ಹೊಣೆಗಾರರೆಂದು ಸಮಿತಿ ನಿರ್ಧರಿಸಿದೆ. ಇದರ ಬೆನ್ನಲ್ಲೇ ಯಶ್ ರಾಜ್ ಫಿಲ್ಮ್ಸ್ ತನ್ನ ಮುಂದಿನ ಸಿನಿಮಾದ ಕ್ರೆಡಿಟ್ ಹಾಗೂ ಯೋಜನೆಗಳಿಂದ ಅವರ ಹೆಸರನ್ನು ಕೈಬಿಟ್ಟಿದೆ ಎನ್ನಲಾಗಿದೆ.

ಸಂತ್ರಸ್ತೆಯ ದೂರಿನ ಪ್ರಕಾರ, ಚಂಡೀಗಢದ ಐಷಾರಾಮಿ ಹೋಟೆಲ್‌ನಲ್ಲಿ ನಡೆದ ಘಟನೆಯಲ್ಲಿ ಪಾನೀಯದಲ್ಲಿ ಮಾದಕ ವಸ್ತು ಬೆರೆಸಿ ಪ್ರಜ್ಞೆ ತಪ್ಪುವಂತೆ ಮಾಡಿ ಕಿರುಕುಳ ನೀಡಲಾಗಿತ್ತು. ಬಳಿಕ ಹಲ್ಲೆ ನಡೆಸಿ ಕೊಠಡಿಯಿಂದ ಹೊರಬರದಂತೆ ತಡೆಹಿಡಿಯಲಾಗಿದೆ ಎಂಬ ಗಂಭೀರ ಆರೋಪಗಳನ್ನು ಅವರು ಮಾಡಿದ್ದರು.

ಈ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದರು. ನಂತರ ನ್ಯಾಯಾಲಯ ಜಾಮೀನು ನೀಡಿದ್ದರೂ, ಇದೀಗ ಆಂತರಿಕ ಸಮಿತಿಯ ವರದಿ ಹೊರಬಿದ್ದಿರುವುದು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಚಿತ್ರರಂಗದಲ್ಲಿ ಸುರಕ್ಷಿತ ಕಾರ್ಯಕ್ಷೇತ್ರದ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿರುವ ಈ ಪ್ರಕರಣ, ಮುಂದಿನ ದಿನಗಳಲ್ಲಿ ಕಾನೂನು ಹೋರಾಟದ ಹೊಸ ಹಂತಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ.

ಎಚ್‌ಡಿಎಂಸಿ ವಿಭಜನೆಗೆ ಗ್ರೀನ್ ಸಿಗ್ನಲ್: ಒಂದೇ ಸಹಿಯಿಂದ ಉಲ್ಟಾ ಆಯ್ತು ಬೃಹತ್ ಮಹಾನಗರ ಪಾಲಿಕೆ ಕನಸು!

0

ಹುಬ್ಬಳ್ಳಿ: ಅವಳಿ ನಗರಗಳ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ವೇದಿಕೆ ಸಿದ್ಧವಾಗಿದೆ. ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ, ಹುಬ್ಬಳ್ಳಿ-ಧಾರವಾಡ ಬೃಹತ್ ಮಹಾನಗರ ಪಾಲಿಕೆ ರಚನೆಗೆ ಸಂಬಂಧಿಸಿದ ಹಿಂದಿನ ನಿರ್ಣಯ ಅಮಾನ್ಯವಾಗಿದೆ.

ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯ ಬಳಿಕ ಮಾಹಿತಿ ನೀಡಿದ ಮೇಯರ್ ಜ್ಯೋತಿ ಪಾಟೀಲ್, ರಾಜ್ಯಪಾಲರ ಅಂಕಿತದೊಂದಿಗೆ ಪ್ರತ್ಯೇಕ ಪಾಲಿಕೆ ರಚನೆಗೆ ಕಾನೂನುಬದ್ಧ ಮಾನ್ಯತೆ ದೊರೆತಿದೆ. ಇದರಿಂದ ಬೃಹತ್ ಮಹಾನಗರ ಪಾಲಿಕೆ ರಚನೆಗೆ ಕೈಗೊಳ್ಳಲಾಗಿದ್ದ ಠರಾವು ಮುಂದುವರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

16ನೇ ಹಣಕಾಸು ಆಯೋಗದ ಮಾನದಂಡಗಳ ಪ್ರಕಾರ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರಗಳಿಗೆ ಹೆಚ್ಚುವರಿ ಅನುದಾನ ಪಡೆಯುವ ಉದ್ದೇಶದಿಂದ ಅವಳಿ ನಗರಗಳನ್ನು ಬೃಹತ್ ಮಹಾನಗರ ಪಾಲಿಕೆಯಾಗಿ ಪರಿವರ್ತಿಸುವ ಪ್ರಸ್ತಾಪ ಮುಂದಿಡಲಾಗಿತ್ತು. ಆದರೆ ಧಾರವಾಡವನ್ನು ಪ್ರತ್ಯೇಕ ಪಾಲಿಕೆಯಾಗಿಸಬೇಕೆಂಬ ಬೇಡಿಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಸ್ವರೂಪ ಪಡೆದಿತ್ತು.

ಈಗ ರಾಜ್ಯಪಾಲರ ಸಹಿಯೊಂದಿಗೆ ಧಾರವಾಡ ಪ್ರತ್ಯೇಕ ಪಾಲಿಕೆ ರಚನೆಗೆ ಅಂತಿಮ ಮುದ್ರೆ ಬಿದ್ದಿದ್ದು, ದೀರ್ಘಕಾಲದ ಹೋರಾಟಕ್ಕೆ ಯಶಸ್ಸು ದೊರೆತಂತಾಗಿದೆ. ಮುಂದಿನ ದಿನಗಳಲ್ಲಿ ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಪ್ರತ್ಯೇಕ ಆಡಳಿತ ವ್ಯವಸ್ಥೆ ರೂಪುಗೊಳ್ಳಲಿದ್ದು, ಎರಡೂ ನಗರಗಳ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ಮತ್ತು ಯೋಜನೆಗಳನ್ನು ಜಾರಿಗೊಳಿಸುವ ಸಾಧ್ಯತೆಗಳು ಹೆಚ್ಚಾಗಿವೆ.

ಪಾಲಿಕೆಗಳ ವಿಭಜನೆಯ ಬಳಿಕ ಸರ್ಕಾರ ಅಭಿವೃದ್ಧಿ ಅನುದಾನ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಮಾಡದೆ ಎರಡೂ ನಗರಗಳಿಗೆ ಸಮರ್ಪಕ ನೆರವು ನೀಡಬೇಕು ಎಂದು ಮೇಯರ್ ಜ್ಯೋತಿ ಪಾಟೀಲ್ ಒತ್ತಾಯಿಸಿದ್ದಾರೆ.

ವಿಜಯ್ ಕುಟುಂಬದಲ್ಲಿ ಹೊಸ ಅಧ್ಯಾಯ! ಮಗನ ಮೊದಲ ಸಿನಿಮಾ ರಿಲೀಸ್‌ಗೆ ಮುಹೂರ್ತ ಫಿಕ್ಸ್

ತಮಿಳು ಚಿತ್ರರಂಗದಲ್ಲಿ ದಳಪತಿ ವಿಜಯ್ ಅವರ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬ ಚರ್ಚೆ ನಡೆಯುತ್ತಿರುವ ನಡುವೆಯೇ, ಅವರ ಪುತ್ರ ಜೇಸನ್ ಸಂಜಯ್ ಅವರ ಮೊದಲ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆದರೆ ತಂದೆಯಂತೆ ನಟನಾಗಿ ಅಲ್ಲ, ನಿರ್ದೇಶಕರಾಗಿ ಅವರು ಚಿತ್ರರಂಗ ಪ್ರವೇಶಿಸುತ್ತಿರುವುದು ವಿಶೇಷವಾಗಿದೆ.

ಜೇಸನ್ ಸಂಜಯ್ ನಿರ್ದೇಶನದ ಚೊಚ್ಚಲ ಚಿತ್ರ ‘ಸಿಗ್ಮ’ ಜುಲೈ 31ರಂದು ತೆರೆಗೆ ಬರಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಯುವಜನತೆಯ ಮನಸ್ಸಿಗೆ ಹತ್ತಿರವಾಗುವ ಆಕ್ಷನ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಿಸಿದೆ.

ಸಂದೀಪ್ ಕೃಷ್ಣ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರದಲ್ಲಿ ಫಾರಿಯಾ ಅಬ್ದುಲ್ಲಾ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಸಂಪತ್ ರಾಜ್ ಸೇರಿದಂತೆ ಹಲವು ಖ್ಯಾತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಂಗೀತ ನಿರ್ದೇಶಕ ಎಸ್. ತಮನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಚಿತ್ರದ ಟೀಸರ್ ಈಗಾಗಲೇ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಹೊಸ ತಲೆಮಾರಿನ ನಿರ್ದೇಶಕರಾಗಿ ಜೇಸನ್ ಸಂಜಯ್ ಗಮನ ಸೆಳೆದಿದ್ದಾರೆ. ಹಲವು ವರ್ಷಗಳಿಂದ ಜೇಸನ್ ನಟನಾಗಿ ಎಂಟ್ರಿ ಕೊಡುತ್ತಾರೆ ಎಂಬ ಊಹಾಪೋಹಗಳು ಕೇಳಿಬಂದಿದ್ದರೂ, ಅವರು ನಿರ್ದೇಶನ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನ ಆರಂಭಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಇದೇ ವೇಳೆ ವಿಜಯ್ ಅವರ ಕುಟುಂಬದ ಬೆಳವಣಿಗೆಗಳೂ ಸಾಕಷ್ಟು ಚರ್ಚೆಗೆ ಕಾರಣವಾಗಿವೆ. ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಸುದ್ದಿಗಳ ನಡುವೆಯೇ ಮಗನ ಮೊದಲ ಸಿನಿಮಾ ಬಿಡುಗಡೆಯಾಗುತ್ತಿರುವುದು ವಿಶೇಷ. ಇದೀಗ ‘ಸಿಗ್ಮ’ ಬಿಡುಗಡೆಯ ವೇಳೆ ವಿಜಯ್ ಸಾರ್ವಜನಿಕವಾಗಿ ಮಗನ ಸಿನಿಮಾವನ್ನು ಬೆಂಬಲಿಸುತ್ತಾರೆಯೇ ಅಥವಾ ದೂರವೇ ಉಳಿಯುತ್ತಾರೆಯೇ ಎಂಬ ಪ್ರಶ್ನೆ ಸಿನಿ ವಲಯದಲ್ಲಿ ಭಾರಿ ಕುತೂಹಲ ಹುಟ್ಟಿಸಿದೆ.

ಜುಲೈ 31ರಂದು ಬಿಡುಗಡೆಯಾಗಲಿರುವ ‘ಸಿಗ್ಮ’ ಕೇವಲ ಒಂದು ಸಿನಿಮಾ ಮಾತ್ರವಲ್ಲ, ವಿಜಯ್ ಕುಟುಂಬದ ಹೊಸ ಸಿನಿ ಅಧ್ಯಾಯಕ್ಕೆ ಸಾಕ್ಷಿಯಾಗಲಿರುವ ಚಿತ್ರವಾಗಿಯೂ ಗಮನ ಸೆಳೆಯುತ್ತಿದೆ.

ಹಾಡಹಗಲೇ ಬೈಕ್ ಎಗರಿಸಿದ ಕಳ್ಳ! ಸಿಸಿ ಟಿವಿಯಲ್ಲಿ ಕಳ್ಳನ ಕೈಚಳಕ ಸೆರೆ

ಗದಗ: ನಗರದ ಹೃದಯಭಾಗದಲ್ಲೇ ಹಾಡಹಗಲೇ ಖದೀಮನೊಬ್ಬ ಕ್ಷಣಾರ್ಥದಲ್ಲಿ ಬೈಕ್ ಕದ್ದು ಪರಾರಿಯಾದ ಘಟನೆ ಗದಗದಲ್ಲಿ ನಡೆದಿದೆ.

ನಗರದ ಕೆ.ಸಿ. ರಾಣಿ ರಸ್ತೆಯಲ್ಲಿ ನಡೆದ ಈ ಕಳ್ಳತನ ಪ್ರಕರಣ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದ್ದು, ಕಳ್ಳನ ಚಾಕಚಕ್ಯತೆ ಸಿಸಿ ಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.

ಗಣೇಶ್ ಹುಬ್ಬಳ್ಳಿ ಎಂಬುವರಿಗೆ ಸೇರಿದ KA-26 EB-9527 ನಂಬರ್‌ನ ದ್ವಿಚಕ್ರ ವಾಹನವನ್ನು ಖದೀಮ ಕದ್ದು ಪರಾರಿಯಾಗಿದ್ದಾನೆ. ಬೆಳಿಗ್ಗೆ ವೇಳೆಯಲ್ಲೇ ಸಾರ್ವಜನಿಕರ ಸಂಚಾರ ನಡುವೆ ಆರೋಪಿ ಯಾವುದೇ ಆತಂಕವಿಲ್ಲದೆ ಬೈಕ್ ಎಗರಿಸಿರುವುದು ದೃಶ್ಯಾವಳಿಗಳಲ್ಲಿ ಕಂಡು ಬಂದಿದೆ.

ಕಳ್ಳತನದ ಬಳಿಕ ಬೈಕ್ ಅನ್ನು ಕೊಪ್ಪಳ ಮಾರ್ಗವಾಗಿ ಕೊಂಡೊಯ್ಯಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ವಿವಿಧ ಚೆಕ್‌ಪೋಸ್ಟ್‌ಗಳಿಗೆ ವಾಹನದ ಮಾಹಿತಿ ರವಾನಿಸಿದ್ದಾರೆ. ಸಿಸಿ ಟಿವಿ ದೃಶ್ಯಗಳ ಆಧಾರದಲ್ಲಿ ಆರೋಪಿಯ ಪತ್ತೆಗೆ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.

ಅವಳಿ ನಗರದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ವಾಹನ ಕಳ್ಳತನ ಪ್ರಕರಣಗಳು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದು, ಪೊಲೀಸರು ರಾತ್ರಿ ಹಾಗೂ ಬೆಳಗಿನ ಜಾವ ಗಸ್ತು ಹೆಚ್ಚಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.

error: Content is protected !!