ಬಾಗಲಕೋಟೆ: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಮನೆಯೊಂದರ ಮೇಲ್ಛಾವಣಿ ಕುಸಿದ ಘಟನೆ ನಡೆದಿದ್ದು, ಸಾಕು ಬೆಕ್ಕಿನ ಕಾರಣದಿಂದ ತಂದೆ ಮತ್ತು ಮಗ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಅಪರೂಪದ ಘಟನೆ ಬೆಳಕಿಗೆ ಬಂದಿದೆ.
ಬಾಗಲಕೋಟೆಯ ವಲ್ಲಭಬಾಯಿ ನಗರದ ನಿವಾಸಿಗಳಾದ ಶಬ್ಬೀರ್ ಬಾಗವಾನ್ ಹಾಗೂ ಅವರ ಪುತ್ರ ಆರ್ಬಾಜ್ ಬಾಗವಾನ್ ಈ ಘಟನೆಯಿಂದ ಪಾರಾದವರು. ಹಣ್ಣಿನ ವ್ಯಾಪಾರ ಮಾಡುತ್ತಿರುವ ಇವರ ಮನೆಗೆ ನಿನ್ನೆ ಸುರಿದ ಭಾರೀ ಮಳೆಯಿಂದ ಹಾನಿಯಾಗಿದೆ.
ಮಳೆಯ ತೀವ್ರತೆಗೆ ಮನೆಯ ಮೇಲ್ಛಾವಣಿಯಿಂದ ಮಣ್ಣಿನ ತುಕಡಿಗಳು ಉದುರಲು ಆರಂಭವಾಗಿದ್ದವು. ಇದೇ ವೇಳೆ ಮನೆಯಲ್ಲಿದ್ದ ಸಾಕು ಬೆಕ್ಕು ಏಕಾಏಕಿ ಹೊರಗೆ ಓಡಿದೆ. ಬೆಕ್ಕಿಗೆ ಹಸಿವಾಗಿರಬಹುದು ಎಂದು ಭಾವಿಸಿದ ಶಬ್ಬೀರ್ ಬಾಗವಾನ್ ಅದನ್ನು ಹಿಡಿಯಲು ಮನೆಯ ಹೊರಗೆ ತೆರಳಿದ್ದಾರೆ. ತಂದೆಯ ಹಿಂದೆ ಮಗ ಆರ್ಬಾಜ್ ಕೂಡ ಹೊರಬಂದಿದ್ದಾರೆ.
ಇಬ್ಬರೂ ಮನೆಯ ಹೊಸ್ತಿಲು ದಾಟಿ ಹೊರಗೆ ಬಂದ ಕೆಲವೇ ಕ್ಷಣಗಳಲ್ಲಿ ಇಡೀ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಪರಿಣಾಮ ಇಬ್ಬರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ಬಗ್ಗೆ ಮಾತನಾಡಿದ ಆರ್ಬಾಜ್, “ಮೇಲ್ಛಾವಣಿಯಿಂದ ಮಣ್ಣು ಬೀಳುತ್ತಿದ್ದಾಗ ಬೆಕ್ಕು ಹೊರಗೆ ಓಡಿತು. ಅದನ್ನು ಹಿಡಿಯಲು ತಂದೆ ಹೊರಗೆ ಹೋದರು. ನಾನು ಅವರ ಹಿಂದೆ ಹೋದೆ. ನಾವು ಹೊರಬಂದ ತಕ್ಷಣವೇ ಇಡೀ ಮೇಲ್ಛಾವಣಿ ಕುಸಿಯಿತು. ಬೆಕ್ಕಿನಿಂದಲೇ ನಮ್ಮ ಜೀವ ಉಳಿಯಿತು” ಎಂದು ತಿಳಿಸಿದ್ದಾರೆ.
ಇನ್ನೂ ಘಟನೆಯ ವೇಳೆ ಮನೆಯ ಉಳಿದ ಸದಸ್ಯರು ವಿಜಯಪುರಕ್ಕೆ ಮದುವೆ ಕಾರ್ಯಕ್ರಮದ ನಿಮಿತ್ತ ತೆರಳಿದ್ದ ಕಾರಣ, ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಆದರೆ ಮೇಲ್ಛಾವಣಿ ಕುಸಿದ ಪರಿಣಾಮ ಮನೆಯಲ್ಲಿದ್ದ ಪಾತ್ರೆಗಳು, ದವಸ-ಧಾನ್ಯಗಳು ಸೇರಿದಂತೆ ವ್ಯಾಪಾರಕ್ಕಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮಾವಿನ ಹಣ್ಣುಗಳು ಸಂಪೂರ್ಣವಾಗಿ ನಾಶವಾಗಿವೆ. ಇದರಿಂದ ವ್ಯಾಪಾರಿ ಶಬ್ಬೀರ್ ಬಾಗವಾನ್ ಅವರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ.
ಸದ್ಯ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಕ್ಕೆ ಜಿಲ್ಲಾಡಳಿತ ಹಾಗೂ ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಶಬ್ಬೀರ್ ಬಾಗವಾನ್ ಮನವಿ ಮಾಡಿದ್ದಾರೆ.






