Home Blog

ಲಕ್ಕುಂಡಿ ಪಾರಂಪರಿಕ ಪ್ರದೇಶವನ್ನು ಯುನೆಸ್ಕೋ ಪಟ್ಟಿ ಸೇರಿಸಲು ಪ್ರಸ್ತಾವನೆ: ಸಚಿವ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯ ಲಕ್ಕುಂಡಿಯನ್ನು ವಿಶ್ವಪರಂಪರೆ ತಾತ್ಕಾಲಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸಲು ನಾಮನಿರ್ದೇಶನ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದ್ದು, ಸರ್ಕಾರದ ಅನುಮೋದನೆಯೊಂದಿಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮುಖಾಂತರ ಸ್ಮಾರಕಗಳು ಮತ್ತು ಸೈಟ್‌ಗಳ ಇಂಟರ್‌ನ್ಯಾಷನಲ್ ಕೌನ್ಸಿಲ್‌ಗೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಸೋಮವಾರದಂದು ಜರುಗಿದ ಗಣರಾಜ್ಯೋತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಚಾಲುಕ್ಯ ಸಾಮ್ರಾಜ್ಯದ ರಾಜಧಾನಿ, ಕನ್ನಡ ಸಾಹಿತ್ಯ ಪೋಷಕಿಯಾಗಿದ್ದ ದಾನಚಿಂತಾಮಣಿ ಅತ್ತಿಮಬ್ಬೆಯವರ ಸ್ಥಳವಾದ ಗದಗ ಜಿಲ್ಲೆ ಲಕ್ಕುಂಡಿ ಗ್ರಾಮವು ಐತಿಹಾಸಿಕ ಪಾರಂಪರಿಕ ಪ್ರದೇಶವಾಗಿದ್ದು, ಈ ಪಾರಂಪರಿಕ ಗ್ರಾಮದಲ್ಲಿರುವ ಸ್ಮಾರಕಗಳು, ದೇವಾಲಯಗಳು, ಬಾವಿಗಳು, ಶಾಸನಗಳ ಸಂರಕ್ಷಣೆಗಾಗಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಲಾಗಿದ್ದು, ಈ ಪ್ರಾಧಿಕಾರದ ಮುಖಾಂತರ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಮನೆಯ ಅಡಿಪಾಯ ತೆಗೆಯುವ ಸಂದರ್ಭದಲ್ಲಿ ದೊರೆತ ಬೆಲೆಬಾಳುವ ಚಿನ್ನಾಭರಣಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ ಬಾಲಕನ ಪ್ರಾಮಾಣಿಕತೆಯನ್ನು ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಮೆಚ್ಚಿಕೊಂಡಿದ್ದು, ಅವರ ಕುಟುಂಬಕ್ಕೆ ಕಾನೂನು ಪ್ರಕಾರ ಸಿಗಬೇಕಾದ ಎಲ್ಲ ಪರಿಹಾರ ಮತ್ತು ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಸಕ್ತ ಸಾಲಿನಲ್ಲಿ ಲಕ್ಕುಂಡಿ ಪಾರಂಪರಿಕ ಶ್ರೀ ವಿರೂಪಾಕ್ಷ ದೇವಾಲಯ ಸಂರಕ್ಷಣೆ, ಶ್ರೀ ಮಲ್ಲಿಕಾರ್ಜುನ ದೇವಾಲಯ ಹಾಗೂ ಗದ್ದುಗೆ ಸಂರಕ್ಷಣೆ, ಶ್ರೀ ಚಂದ್ರಮೌಳೇಶ್ವರ ದೇವಾಲಯ ಸಂರಕ್ಷಣೆ, ಶ್ರೀ ಹಾಲಗುಂಡಿ ಬಸವಣ್ಣ ದೇವಾಲಯ ಸಂರಕ್ಷಣೆ ಕಾಮಗಾರಿ, ಶ್ರೀ ಕಣ್ಣರ ಭಾವಿ ಸಂರಕ್ಷಣೆ ಕಾಮಗಾರಿ, ಶ್ರೀ ಕಲ್ಮಠ ಭಾವಿ ಹಾಗೂ ಕಂಪೌಂಡ್ ಗೋಡೆ ಕಾಮಗಾರಿಗಳಿಗೆ ರೂ.10.16 ಕೋಟಿ ವೆಚ್ಚದಲ್ಲಿ ಸಂರಕ್ಷಣೆ ಕಾಮಗಾರಿ ಕೈಗೊಂಡು ಸ್ಮಾರಕಗಳ ಸಂರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಸಚಿವರು ತಿಳಿಸಿದರು.

ಶಿರಹಟ್ಟಿ ತಾಲೂಕಿನ ಶ್ರೀ ಹೊಳಲಮ್ಮ ದೇವಿ ದೇವಸ್ಥಾನ ಮೂಲಭೂತ ಸೌಲಭ್ಯ ಅಭಿವೃದ್ಧಿ ಕಾಮಗಾರಿಗೆ ರೂ.6 ಕೋಟಿ 47 ಲಕ್ಷ, ಗದಗ ನಗರದ ಶ್ರೀ ವೀರನಾರಾಯಣ, ತ್ರಿಕೂಟೇಶ್ವರ ದೇವಸ್ಥಾನ, ಜುಮ್ಮಾ ಮಸೀದಿ, ಲಕ್ಕುಂಡಿ ಸೇರಿದಂತೆ ಗದಗ ಜಿಲ್ಲೆಯ 22 ಧಾರ್ಮಿಕ ಕೇಂದ್ರಗಳ ಮೂಲಭೂತ ಸೌಲಭ್ಯ ಅಭಿವೃದ್ಧಿ ಕಾಮಗಾರಿಗಳಿಗೆ ರೂ.13 ಕೋಟಿ 5 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. ಕಪ್ಪತ್ತಗುಡ್ಡ ಗದಗ ಮೃಗಾಲಯ ವಿಸ್ತರಣೆ, ಮಾಗಡಿ ಕೆರೆ ಅಭಿವೃದ್ಧಿಗಾಗಿ ರೂ.22 ಕೋಟಿ 50 ಲಕ್ಷಗಳನ್ನು ಪ್ರವಾಸೋದ್ಯಮ ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ ಎಂದರು.

ರಾಜ್ಯದಲ್ಲಿ ವಾಣಿಜ್ಯ ವಹಿವಾಟು ನಿರ್ವಹಣೆಯಲ್ಲಿ ಸಾರ್ವಜನಿಕರು ವಿಶೇಷವಾಗಿ ಮಹಿಳೆಯರು ಹೆಚ್ಚಾಗಿ ಬ್ಯಾಂಕ್ ಖಾತೆಗಳನ್ನು ಆರಂಭಿಸುತ್ತಿರುವುದಕ್ಕೆ ಮಹಿಳೆಯರು ಬ್ಯಾಂಕಿನ ಒಂದಿಗೆ ವ್ಯವಹರಿಸುತ್ತಿರುವುದಕ್ಕೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯೇ ಪ್ರಮುಖ ಕಾರಣವಾಗಿದ್ದು, 2022ರಲ್ಲಿ ಬ್ಯಾಂಕ್ ಖಾತೆ ಹೊಂದಿರುವವರ ಸಂಖ್ಯೆ ಶೇ. 9 ಇದ್ದದ್ದು ಪ್ರಸ್ತುತ ಶೇ. 73ರಷ್ಟು ಆಗಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಜಿಲ್ಲೆಯಲ್ಲಿ ನಮ್ಮ ಸರ್ಕಾರದ ಅತ್ಯಂತ ಮಹತ್ವದ ಯೋಜನೆಯಾದ ಪಂಚ ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಜಾರಿಗೊಂಡು ರಾಜ್ಯದ ಬಡತನವನ್ನು ಬೇರು ಸಹಿತ ಕಿತ್ತೊಗೆಯುವ ಸಾಧನೆ ನಮ್ಮ ಸರ್ಕಾರದ್ದಾಗಿದೆ. ಕ್ರಾಂತಿಕಾರಕವಾದ ಈ ಯೋಜನೆಗಳು ನಮ್ಮ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.

ಗದಗ ಜಿಲ್ಲೆಯಲ್ಲಿ ಒಟ್ಟು 1,41,981 ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿಯಾಗಿದ್ದಾರೆ. 2025-26ನೇ ಸಾಲಿನ ಡಿಸೆಂಬರ್ ಅಂತ್ಯದವರೆಗೆ ಗದಗ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ವಿಶೇಷ ಘಟಕ ಯೋಜನೆಯಡಿ ರೂ.85 ಕೋಟಿ ಬಿಡುಗಡೆಯಾಗಿದ್ದು, ರೂ.73 ಕೋಟಿ ಖರ್ಚು ಮಾಡಲಾಗಿದೆ. ಗಿರಿಜನ ಉಪಯೋಜನೆಯಡಿಯಲ್ಲಿ ರೂ.12 ಕೋಟಿ ಬಿಡುಗಡೆಯಾಗಿದ್ದು ರೂ.7 ಕೋಟಿ ಖರ್ಚು ಮಾಡುವುದರ ಮೂಲಕ ಶೇ.62ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ವಿವರಿಸಿದರು.

ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ, 2021-22ನೇ ಸಾಲಿನ ಕರ್ನಾಟಕ ನೀರಾವರಿ ನಿಗಮ ಹಾಗೂ ಮಾನ್ಯ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ವಾರ್ಡ್ ನಂ.17 ಮತ್ತು 18ರ ಮಧ್ಯದಲ್ಲಿ ಹರಿಯುವ ರಾಜ ಕಾಲುವೆಯ ಮೇಲೆ ಇಂದಿರಾ ವನ ನಿರ್ಮಾಣ ಮಾಡಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ವಸತಿ ರಹಿತ ಫಲಾನುಭವಿಗಳಿಗೆ ಎ.ಎಚ್.ಪಿ ಯೋಜನೆಯಡಿಯಲ್ಲಿ ಒಟ್ಟು 71 ಎಕರೆ ಜಮೀನಿನಲ್ಲಿ 3630 ಮನೆಗಳಲ್ಲಿ 205 ಮನೆಗಳು ಹಂಚಿಕೆ ಮಾಡಲಾಗಿದೆ. ಪ್ರಸ್ತುತ 774 ಮನೆಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, 2606 ಮನೆಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ಪರಿಪೂರ್ಣವಾದ ಸಂವಿಧಾನದ ಪಾಲನೆಗೆ ಮುಂದಾಗಿ: ಸಚಿವ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಜಾಪ್ರಭುತ್ವದ ಮೌಲ್ಯಗಳಾದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯ, ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ ದೊರೆಯುವಂತೆ ಮಾಡುವುದಕ್ಕಾಗಿ ವ್ಯಕ್ತಿಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕಾಗಿ ದೃಢಸಂಕಲ್ಪ ಮಾಡಿ, ನಮ್ಮ ಸಂವಿಧಾನ ಸಭೆಯಲ್ಲಿ 1949ರ ನವೆಂಬರ್ 26ರಂದು ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು ಅಂಗೀಕರಿಸಿ ಶಾಸನವಾಗಿ ವಿಧಿಸಿಕೊಂಡಿದ್ದೇವೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ನುಡಿದರು.

ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಜರುಗಿದ ಗಣರಾಜ್ಯೋತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸಂವಿಧಾನದ ರಕ್ಷಕರಾಗಿರುವ, ಉನ್ನತ ಹುದ್ದೆ ಅಲಂಕರಿಸಿ ಸಂವಿಧಾನದ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ನಮ್ಮ ದೇಶದ ಜವಾಬ್ದಾರಿಯುತರು ತಮ್ಮ ಮನಸೋ ಇಚ್ಛೆಯಂತೆ ಅದನ್ನು ಅರ್ಥೈಸಿ ಅಗೌರವಿಸುವ, ಸಂವಿಧಾನವನ್ನು ಉಲ್ಲಂಘಿಸುವ ಕೆಲಸ ನಡೆಯುತ್ತಿರುವುದು ಅತ್ಯಂತ ವಿಷಾದದ ಸಂಗತಿ. ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಅತ್ಯಂತ ಸೂಕ್ಷ್ಮವಾದ ಮತ್ತು ಗಂಭೀರವಾದ ವಿಷಯಗಳನ್ನು ಶಾಸನಸಭೆಗಳಲ್ಲೂ ಸಹ ಗಮನಿಸದೇ ಕೇವಲ ತಮ್ಮ ರಾಜಕೀಯ ನಿಲುವುಗಳಿಗೆ ಪೂರಕವಾಗಿ ವ್ಯಾಖ್ಯಾನಿಸುತ್ತಿರುವುದು ಕಳವಳಕಾರಿಯಾಗಿದೆ ಎಂದರು.

ರಾಜ್ಯದಿಂದ ಹೆಚ್ಚಿನ ತೆರಿಗೆ ಕೊಡುಗೆಯನ್ನು ಕೇಂದ್ರಕ್ಕೆ ನೀಡುತ್ತಿದ್ದರೂ ಅತ್ಯಂತ ಕನಿಷ್ಠ ನೆರವು ನಮಗೆ ಹರಿದುಬರುತ್ತಿದೆ. ಇದರ ಹೊರತಾಗಿಯೂ ಕರ್ನಾಟಕವು ತನ್ನ ಸ್ವಂತ ಸಂಪನ್ಮೂಲಗಳದಿಂದ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ರಾಜ್ಯದ 1.25 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತಿದೆ. ಕರ್ನಾಟಕದ ತಲಾ ಆದಾಯವು ಜಿಲ್ಲಾವಾರು ಲೆಕ್ಕ ಹಾಕಿದಾಗ ಗಣನೀಯವಾಗಿ ಹೆಚ್ಚಾಗಿರುವುದು ನೆಮ್ಮದಿ ತಂದಿದೆ. ಗದಗಿನಂಥ ಜಿಲ್ಲೆಯಲ್ಲಿ ಅರ್ಥ ವ್ಯವಸ್ಥೆಯು ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುತ್ತಿದ್ದು, ತಲಾ ಆದಾಯವು ಕನಿಷ್ಠ ರೂ.22000 ಪ್ರತಿ ತಿಂಗಳಿಗೆ ತಲುಪಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸಬೇಕಾದದ್ದು ನಮ್ಮ ಕರ್ತವ್ಯ. ಸಂವಿಧಾನದ ಆಣತಿಗಳನ್ನು ಮತ್ತು ನಿರ್ದೇಶನಗಳನ್ನು ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಚಲನಶೀಲಗೊಳಿಸುವ ಸದುದ್ದೇಶದಿಂದ ಪಾಲನೆ ಮಾಡಬೇಕಾದುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಸಂವಿಧಾನವನ್ನು ಉಲ್ಲಂಘಿಸುವ ಸಣ್ಣ ಕ್ರಿಯೆಯನ್ನು ಸಹ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕತೆ ಮತ್ತು ಜವಾಬ್ದಾರಿ ಭಾರತೀಯ ನಾಗರಿಕನದ್ದಾಗಿದ್ದು, ಈ ಜವಾಬ್ದಾರಿಯನ್ನು ನಾಗರಿಕರು ಅತ್ಯಂತ ಹೊಣೆಗಾರಿಕೆಯಿಂದ ನಿರ್ವಹಿಸಬೇಕು ಎಂದು ಕರೆ ನೀಡಿದರು.

ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್, ಉಪವಿಭಾಗಾಧಿಕಾರಿ, ಗಂಗಪ್ಪ ಎಂ, ತಹಸೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು, ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ಕಾಪಾಡುವ ಗುತ್ತಿಗೆದಾರರ ಕೇಂದ್ರೀಕೃತ ವಿಬಿಜಿ ಗ್ರಾಮಜಿ ಯೋಜನೆ ಹೆಸರಿನಲ್ಲಿ ಗ್ರಾಮೀಣ ಹಿತಾಸಕ್ತಿಯನ್ನು ಗಾಳಿಗೆ ತೂರಲಾಗಿದೆ. ಇದರಿಂದಾಗಿ ಗ್ರಾಮೀಣ ಆಸ್ತಿ ಸೃಜನೆಯ ಮೇಲೆ ಮತ್ತು ಕೂಲಿಕಾರರು ಅವರು ಇರುವ ಸ್ಥಳಗಳಲ್ಲಿಯೇ ಉದ್ಯೋಗ ಒದಗಿಸಬೇಕೆಂಬ ಘನವಾದ ಉದಾತ್ತ ಉದ್ದೇಶಗಳಿಗಾಗಿ ಕೇಂದ್ರ ಸರ್ಕಾರಕ್ಕೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾನೂನು ಪುನಃ ಸ್ಥಾಪನೆ ಮಾಡುವಂತೆ ಕರ್ನಾಟಕ ರಾಜ್ಯ ಒತ್ತಾಯಿಸುತ್ತಿದೆ. ಬಡವರ, ಕೃಷಿ ಕಾರ್ಮಿಕರ ಪರವಾದ ಗ್ರಾಮೀಣ ಆಸ್ತಿ ಸೃಜನೆಗೆ ಬಹುದೊಡ್ಡ ಅವಕಾಶ ಕಲ್ಪಿಸುವ, ನಿರುದ್ಯೋಗಿ ಭತ್ಯೆ ಒದಗಿಸುವ, ಕಾರ್ಮಿಕರು ಅವರಿರುವ ಸ್ಥಳದಲ್ಲಿಯೇ ಕೆಲಸ ಒದಗಿಸುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾನೂನುನ್ನು ಮರು ಸ್ಥಾಪಿಸಬೇಕೆಂದು ನಮ್ಮ ಸರ್ಕಾರ ಕೇಂದ್ರವನ್ನು ಒತ್ತಾಯಿಸುತ್ತದೆ ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

77ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಸಾಧಕರಿಗೆ ಸನ್ಮಾನ, ಆಕರ್ಷಕ ಪಥಸಂಚಲನ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗಿನ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಕಾನೂನು, ಸಂಸದೀಯ, ಪ್ರವಾಸೋದ್ಯಮ ಇಲಾಖೆ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ 77ನೇ ಗಣರಾಜ್ಯೋತ್ಸವದ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ವಿವಿಧ ದಳಗಳ ವೀಕ್ಷಣೆ ಮಾಡಿದರು.

ನಂತರ ಜರುಗಿದ ಆಕರ್ಷಕ ಪಥಸಂಚಲನದ ನೇತೃತ್ವವನ್ನು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಶಂಕರಗೌಡ ಚೌಧರಿ ವಹಿಸಿದ್ದರು. ಜಿಲ್ಲಾ ಪೊಲೀಸ್ ಬ್ಯಾಂಡ್‌ನ ಮೇರೆಗೆ ದೇಶ ಕಿ ಧರತಿ ಹಾಡಿನ ಹಿಮ್ಮೇಳದಲ್ಲಿ ಶಿಸ್ತಿನ ಹೆಜ್ಜೆ ಹಾಕಿದ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ನಾಗರಿಕ ಪೊಲೀಸ್ ಪಡೆ, ಹೋಮ್‌ಗಾರ್ಡ್, ಅಬಕಾರಿ, ಅರಣ್ಯ ರಕ್ಷಕ ಪಡೆ, ಅಗ್ನಿಶಾಮಕ ದಳ, ಎನ್.ಸಿ.ಸಿ ಬಾಯ್ಸ್ ಹಾಗೂ ಗರ್ಲ್ಸ್, ಮಾಜಿ ಸೈನಿಕರ ಸಂಘ, ಸ್ಕೌಟ್ಸ್, ಗೈಡ್ಸ್, ಜನರಲ್ ಹಾಗೂ ಸೇವಾ ದಳಗಳು ಸಚಿವರಿಗೆ ಗೌರವವಂದನೆ ನೀಡಿದವು.

ಸಾರ್ವಜನಿಕ ವಲಯದಲ್ಲಿ ಪ್ರಾಮಾಣಿಕತೆ ಮೆರೆದ ಪ್ರಜ್ವಲ್ ರಿತ್ತಿ, ಕಸ್ತೂರೆವ್ವ ರಿತ್ತಿ, ಗಂಗವ್ವ ರಿತ್ತಿ, ರಜೀಯಾಬೇಗಂ ತಹಸೀಲ್ದಾರ, ಕಿಡ್ನಿ ಕಸಿ ಮಾಡುವುದರಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಡಾ. ಪವನ ಕೋಳಿವಾಡ, ಡಾ. ಭುವನೇಶ ಆರಾಧ್ಯ, ಡಾ. ದೀಪಕ ಕುರಹಟ್ಟಿ, ಮುಖ್ಯಮಂತ್ರಿಯವರ ಪದಕ ಪುರಸ್ಕೃತರಾದ ಶಿದ್ದಾರೆಡ್ಡಿ ಕಪ್ಪತ್ತನವರ, ಅಂಗಾಂಗ ದಾನ ಮಾಡಿದ ನಾರಾಯಣ ವನ್ನಾಲ ಕುಟುಂಬಸ್ಥರಿಗೆ, ಸಮಾಜ ಸೇವಾ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದ ಡಾ. ಹೇಮರಡ್ಡಿ ಕಿಲಬನವರ, ಎನ್.ಸಿ.ಸಿ ವಿಭಾಗದಲ್ಲಿ ಪದನ್ನೋತಿ ಹೊಂದಿದ ಮೇಜರ್ ಡಾ. ಬಿ.ಎಸ್. ರಾಠೋಡ, ರಾಜ್ಯ ಮಟ್ಟದ ಕನ್ನಡ ಸೇವಾ ಪ್ರಶಸ್ತಿಗೆ ಭಾಜನರಾದ ರಾಘವೇಂದ್ರ ಗೆಜ್ಜಿ, ಸರ್ಕಾರಿ ಸೇವೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಸುಜಾತಾ ಗೊಬ್ಬರಗುಂಪಿ, ರವಿ ಎಲ್.ಗುಂಜೀಕರ, ಗುರುರಾಜ್ ಚವ್ಹಾಣ್, ಅಕ್ಕಮಹಾದೇವಿ ತಳವಾರ, ಬಿ.ಎಸ್. ಚಕಾರಿ, ದಾವಲಸಾಬ ಗುಬ್ಬಿ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಜಮೀನು ನೀಡಿದ ಪ್ರೇಮನಗೌಡ ಪವಾಡಿಗೌಡ್ರ, ಶಿವನಗೌಡ್ರ ಪವಾಡಿಗೌಡ್ರ, ರಾಮನಗೌಡ ಬೋಜಪ್ಪಗೌಡ, ಈಶ್ವರಪ್ಪ ಕುಂಬಾರ, ಪ್ರಕಾಶ ತೋಪಿನ ಇವರನ್ನು ಸನ್ಮಾನಿಸಲಾಯಿತು.

ಪತ್ರಿಕೋದ್ಯಮ/ಮಾಧ್ಯಮ ವಿಭಾಗದಲ್ಲಿ ರಮೇಶ ಭಜಂತ್ರಿ, ಮಾಲಿಂಗಯ್ಯ ಹಿರೇಮಠ, ರಮೇಶ ನಾಡಿಗೇರ, ಎಂ.ಎ. ಸ್ವಾಮಿ, ಸಿ.ಎಸ್. ಅರಸನಾಳ, ಪ್ರಾಣೇಶ ಕೊಡಗಾನೂರ, ಮೆಹಬೂಬ ಮೋತೆಖಾನ್, ಶಿದ್ದಲಿಂಗಯ್ಯ ಮಣ್ಣೂರಮಠ, ಲೋಕೇಶ ಮಲ್ಲಿಗವಾಡ, ಚಂದ್ರು ಭಜಂತ್ರಿ, ಸುನೀಲಸಿಂಗ್ ಲದ್ದಿಗೇರಿ ಅವರನ್ನು ಗೌರವಿಸಲಾಯಿತು.

ಎಲ್.ಎಲ್.ಎಂ ಉನ್ನತ ಶಿಕ್ಷಣ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸಹನಾ ಕಾರ್ಕಳ, ಬಾಲ ಗೌರವ ಪ್ರಶಸ್ತಿ ಪಡೆದ ಸುಪ್ರಿಯಾ ಇಟಗಿ, ರಾಜ್ಯಮಟ್ಟದ ಸಂಸತ್ ಅಣಕು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರಿಯಾಂಕಾ ಮಾನೆ, ರಾಜ್ಯಮಟ್ಟದ ಏಕಪಾತ್ರಾಭಿನಯದಲ್ಲಿ ಪ್ರಥಮ ಸ್ಥಾನ ಪಡೆದ ನಿಧಿ ತೋಟದ, ಏಕಲವ್ಯ ಪ್ರಶಸ್ತಿ ಪಡೆದ ಐಶ್ವರ್ಯ ಕರಿಗಾರ, ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚಿನ ಅಂಕ ಪಡೆದ ಮಲ್ಲಪ್ಪ ಬೋಳನವರ, ಲಕ್ಷ್ಮೀ ಹಿರೇಮಠ, ಗಾಯತ್ರಿ ಹಳ್ಳಿ, ವರ್ಷಾ ಗುಂಜ್ಯಾಳ, ಸ್ಪೂರ್ತಿ ಉಡಚಗೊಂಡ, ಲಕ್ಷ್ಮೀ ನಲುಡಿ, ಕ್ರೀಡಾ ಕ್ಷೇತ್ರದಲ್ಲಿ ಮಾಲತಿ ಇನಾಮದಾರ, ವೈಭವ ಸಂಗನಬಶೆಟ್ಟರ್, ಸಿ.ಸಿ. ಮಂಜುನಾಥ ಕುರಿ, ಮಂಜುನಾಥ ಹಳೆರಿತ್ತಿ, ಸಾಕ್ಷಿ ಬಾಗಡೆ, ಅಮೃತಾ ಮೇಟಿ, ಪ್ರಿಯಾಂಕಾ ಲಮಾಣಿ, ಸೃಷ್ಟಿ ಪಾಟೀಲ, ಯಶವಂತಗೌಡ ನಾಡಗೌಡ್ರ, ಸಹನಾ ಹರ್ತಿ, ಆನಂದ ಬೇಂದ್ರೆ, ಮಹಾಂತೇಶ ಬೇಂದ್ರೆ, ಮಹಾಂತೇಶ ಬೇವೂರ, ಮೇಘಾ ಮುನವಳ್ಳಿಮಠ ಇವರುಗಳನ್ನು ಸಚಿವ ಎಚ್.ಕೆ. ಪಾಟೀಲ ಹಾಗೂ ಗಣ್ಯರು ಸನ್ಮಾನಿಸಿದರು.

ಸಮಾರಂಭದಲ್ಲಿ ವಿ.ಪ ಸದಸ್ಯ ಎಸ್.ವಿ. ಸಂಕನೂರ, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್, ಉಪವಿಭಾಗಾಧಿಕಾರಿ, ಗಂಗಪ್ಪ ಎಂ, ತಹಸೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು, ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

77ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಸಚಿವ ಎಚ್.ಕೆ. ಪಾಟೀಲರು ಅಕ್ಕ ಪಡೆ ಯೋಜನೆಗೆ ಚಾಲನೆ ನೀಡಿದರು. ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ಹೊಲಿಗೆ ಯಂತ್ರ ಕಿಟ್, ಇಲೆಕ್ಟ್ರಿಷಿಯನ್ ಕಿಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಲಾವಿದರಿಗೆ, ಸಾಹಿತಿಗಳಿಗೆ ಮಾಸಾಶನ ಮಂಜೂರಾತಿ ಪತ್ರ, ಕಾರ್ಮಿಕ ಇಲಾಖೆ ವತಿಯಿಂದ ಸೇಪ್ಟಿ ಕಿಟ್, ಗೌಂಡಿ ಕಿಟ್, ಪ್ಲಂಬರ್ ಕಿಟ್, ಕಾರ್ಪೆಂಟರ್, ವೆಲ್ಡರ್ ಕಿಟ್, ಕೃಷಿ ಇಲಾಖೆಯ ವತಿಯಿಂದ ಫಲಾನುಭವಿಗಳಿಗೆ ವಿವಿಧ ಯಂತ್ರೋಪಕರಣಗಳನ್ನು ವಿತರಿಸಿದರು.

ಸಂವಿಧಾನ ಉಳಿದರಷ್ಟೇ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ: ಶಾಸಕ ಜಿ.ಎಸ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ರೋಣ: ಇತ್ತೀಚಿನ ದಿನಗಳಲ್ಲಿ ಸಂವಿಧಾನ ಬದಲಾವಣೆ ಕುರಿತು ಕೆಲವರು ಮಾತನಾಡುತ್ತಾರೆ. ಆದರೆ ಸಂವಿಧಾನ ಉಳಿದರೆ ಮಾತ್ರ ಪ್ರಜಾಪ್ರಭುತ್ವ ಉಳಿಯಲಿದೆ ಎಂಬ ಸತ್ಯವನ್ನು ಅವರು ಮರೆತಿದ್ದಾರೆ ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕರಾದ ಜಿ.ಎಸ್. ಪಾಟೀಲ ಅಭಿಪ್ರಾಯಪಟ್ಟರು.

ಅವರು ಸೋಮವಾರ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕಾಡಳಿತದ ವತಿಯಿಂದ ಜರುಗಿದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಂವಿಧಾನ ಭಾರತ ದೇಶದ ಅತ್ಯಂತ ದೊಡ್ಡ ಶಕ್ತಿಯಾಗಿದೆ. ಇಡೀ ವಿಶ್ವದಲ್ಲಿ ಭಾರತ ದೇಶದ ಸಂವಿಧಾನ ಮಾದರಿಯಾಗಿದೆ. ಇಂದಿನ ಯುವ ಪೀಳಿಗೆ ಡಾ. ಬಿ.ಆರ್. ಅಂಬೇಡ್ಕರರು ದೇಶದ ಬಗ್ಗೆ ಇಟ್ಟುಕೊಂಡ ಚಿಂತನೆಗಳನ್ನು ಮೆಲುಕು ಹಾಕಬೇಕು. ಮುಖ್ಯವಾಗಿ, ದೇಶದ ಹಿತಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಮಹನೀಯರ ಬಗ್ಗೆ ತಿಳಿದುಕೊಳ್ಳಬೇಕು. ಅಂದಾಗ ಮಾತ್ರ ಸಂವಿಧಾನದ ಮಹತ್ವ ತಿಳಿಯಲಿದೆ ಎಂದರು.

ಮತಕ್ಷೇತ್ರದ ಸಂಪೂರ್ಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ನಿರ್ವಹಿಸಲಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಉತ್ತಮ ರಸ್ತೆ ಸಂಪರ್ಕ, ಕುಡಿಯುವ ನೀರು, ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ರೋಣ, ಗಜೇಂದ್ರಗಡ, ನರೇಗಲ್ಲ ಪಟ್ಟಣಗಳ ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಅನುದಾನವನ್ನು ನೀಡಲಾಗಿದ್ದು, ರೋಣ ಪಟ್ಟಣಕ್ಕೆ ಡಿಪ್ಲೋಮಾ ಕಾಲೇಜನ್ನು ತರುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.

ತಹಸೀಲ್ದಾರ ನಾಗರಾಜ ಕೆ ಧ್ವಜಾರೋಹಣ ನೆರವೇರಿಸಿದರು. ತಾ.ಪಂ ಇಒ ಚಂದ್ರಶೇಖರ ಕಂದಕೂರ, ಸಿಪಿಐ ವಿಜಯಕುಮಾರ, ಕೃಷಿ ಇಲಾಖೆಯ ಎಸ್.ಎಫ್. ತಹಸೀಲ್ದಾರ, ಪಿಎಸ್‌ಐ ಪ್ರಕಾಶ ಬಣಕಾರ, ಮುಖ್ಯಾಧಿಕಾರಿ ರಮೇಶ ಹೊಸಮನಿ, ಮಲ್ಲಿಕಾರ್ಜುನ ಹುಣಸಿ, ಬಿಇಒ ಅರ್ಜುನ ಕಂಬೋಗಿ, ಅಕ್ಷರದಾಸೋಹಾಧಿಕಾರಿ ಕೆ.ಎಲ್. ನಾಯಕ, ಸಂಜಯ ದೊಡ್ಡಮನಿ ಸೇರಿದಂತೆ ಮುಖಂಡರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ರೋಣ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. 50 ಕೋಟಿ ರೂಗಳ ವೆಚ್ಚದಲ್ಲಿ ಜೆಟಿಟಿಸಿ ಕಾಲೇಜನ್ನು ಆರಂಭಿಸಲಾಗಿದ್ದು, ಬೃಹತ್ ಕಟ್ಟಡ ನಿರ್ಮಾಣ ಕಾರ್ಯ ನಡೆದಿದೆ. ರೋಣ ತಾಲೂಕು ಅನ್ನದಾತ ರೈತರನ್ನು ಹೆಚ್ಚಾಗಿ ಹೊಂದಿದೆ. ಇದನ್ನು ಮನಗಂಡು ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಮುಂದಾಗಿದ್ದು, ಜಿಗಳೂರ ಕೆರೆಗೆ ನೀರನ್ನು ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೆರೆಯ ಅಂದವನ್ನು ಹೆಚ್ಚಿಸಲು 5 ಕೋಟಿ ರೂ ವೆಚ್ಚದಲ್ಲಿ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಹುತಾತ್ಮ ದಿನಾಚರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ಹುತಾತ್ಮ ದಿನಾಚರಣೆ ಅಂಗವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಕ್ಕೆ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಅಪರ ಜಿಲ್ಲಾಧಿಕಾರಿ ದುರಗೇಶ್ ಕೆ.ಆರ್, ಶರಣು ಗೋಗೇರಿ ಸೇರಿದಂತೆ ಗಣ್ಯರು, ಮುಖಂಡರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಧ್ವಜರೋಹಣ

0

ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಕಾರ್ಯಾಲಯದಲ್ಲಿ 77ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜರೋಹಣವನ್ನು ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ನೆರವೇರಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ. ಸಂಕನೂರ, ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್. ಕರಿಗೌಡ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಜಿಲ್ಲಾ ಉಪಾಧ್ಯಕ್ಷೆ ಜಯಶ್ರೀ ಉಗಲಾಟದ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಿರ್ಮಲಾ ಕೊಳ್ಳಿ, ಮಾಜಿ ಅಧ್ಯಕ್ಷೆ ಅಶ್ವಿನಿ ಜಗತಾಪ್, ಪ್ರಮುಖರಾದ ಜಗನ್ನಾಥಸಾ ಭಾಂಡಗೆ, ಸಿದ್ದು ಪಲ್ಲೇದ, ಮಂಜುನಾಥ ಶಾಂತಗೇರಿ, ಗದಗ ನಗರ ಮಂಡಲ ಉಪಾಧ್ಯಕ್ಷೆ ಚನ್ನಮ್ಮ ಹುಳಕಣ್ಣವರ, ಪದ್ಮಿನಿ ಮುತ್ತಲದಿನ್ನಿ, ಗದಗ ನಗರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ವಿಜಯಲಕ್ಷ್ಮಿ ಮಾನ್ವಿ, ಪ್ರಧಾನ ಕಾರ್ಯದರ್ಶಿ ಸ್ವಾತಿ ಅಕ್ಕಿ, ಪುಷ್ಪಾ ಪೂಜಾರ, ರೇಖಾ ಗೌಳಿ, ಅಪ್ಪಣ್ಣ ಟೆಂಗಿನಕಾಯಿ, ಕೆ.ಪಿ. ಕೋಟಿಗೌಡ್ರ, ಮೇಘನಾ ಕೊಟ್ಟೂರ, ದೇವೇಂದ್ರಪ್ಪ ಹೂಗಾರ, ವಿನೋದ ಹಂಸನೂರ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯ ನಿರ್ವಹಣೆಯಲ್ಲಿ ಮಾನವೀಯತೆಯಿರಲಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾಡಳಿತದಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ದ್ವಜಾರೋಹಣ ನೆರವೇರಿಸಿ, ಸಂವಿಧಾನದ ಮಹತ್ವ ಮತ್ತು ಸರ್ಕಾರಿ ನೌಕರರ ಕರ್ತವ್ಯಗಳ ಕುರಿತು ಮಹತ್ವದ ಸಂದೇಶ ನೀಡಿದರು.

ನಾವು ಕಾನೂನು ಹಾಕಿಕೊಂಡು ನಡೆಯುತ್ತಿರುವವರು. ನಾವು ಹೇಗೆ ಕಾನೂನಾತ್ಮಕವಾಗಿ ಬದುಕಬೇಕು ಎಂಬುದನ್ನು ಸಂವಿಧಾನ ನಮಗೆ ತಿಳಿಸುತ್ತದೆ. ವೇದಗಳಲ್ಲಿ ಜೀವನದ ಸಾರಾಂಶ ಇರುವಂತೆ, ಸಂವಿಧಾನದಲ್ಲೂ ನಮ್ಮ ಜೀವನದ ಮೌಲ್ಯಗಳು ಅಡಗಿವೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ವ್ಯವಸ್ಥೆಯಲ್ಲಿ ಸರ್ಕಾರದ ಆಶಯಗಳನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ಕಾರ್ಯಾಂಗದ ಮೇಲಿದೆ. ನಾವು ಸರ್ಕಾರ ಮತ್ತು ಸಾರ್ವಜನಿಕರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತೇವೆ. ಅಧಿಕಾರಿಗಳು ತಮ್ಮ ಕಾರ್ಯನಿರ್ವಹಣೆಯಲ್ಲಿ ಮಾನವೀಯತೆಯನ್ನು ಅಳವಡಿಸಿಕೊಂಡು, ಸಾರ್ವಜನಿಕರಿಗೆ ಸಹಾಯ ಮಾಡಬೇಕು. ನೌಕರಿಯಲ್ಲಿ ಅಹಂ ಹಾಗೂ ಜಂಭ ಬೇಡ. ನಾಗರಿಕರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿ ಪರಿಹಾರ ಒದಗಿಸುವ ಮನೋಭಾವ ಇರಬೇಕು ಎಂದು ಸಲಹೆ ನೀಡಿದರು.

ಕಾನೂನು ಜಾರಿ ಮಾಡುವವರು ನಾವೇ ಆಗಿರುವುದರಿಂದ, ಕಾನೂನಿಗೆ ಮಾನವೀಯತೆಯ ನೆಲೆ ಸೇರಿಸಿ ಕಾರ್ಯನಿರ್ವಹಿಸಬೇಕು. ನಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಮಾನವೀಯತೆಯನ್ನು ಮೈಗೂಡಿಸಿಕೊಂಡು ಜನಸೇವೆ ಮಾಡೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮಮ್ಮಿ-ಡ್ಯಾಡಿ ಸಂಸ್ಕೃತಿಯನ್ನು ಹೊಡೆದೋಡಿಸಿ: ದಿಲೀಪ್ ವರ್ಣೇಕರ್

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಭಾರತದ ಪ್ರತಿ ಮನೆಮನೆಯಲ್ಲಿಯೂ ಸ್ವದೇಶಿ ಮಂತ್ರ ರಿಂಗಣಿಸುತ್ತಿರಬೇಕು. ಇದರಿಂದ ಭಾರತದ ಉದ್ಧಾರವಾಗಲು ಸಾಧ್ಯ. ಇಲ್ಲವಾದರೆ ಎಲ್ಲವನ್ನೂ ಪರದೇಶಕ್ಕೆ ಕೊಟ್ಟು ಒಂದಿನ ನಾವು ಪಾಪರ್‌ಗಳಾಗಬೇಕಾಗುತ್ತದೆ ಎಂದು ಧರ್ಮ ಜಾಗರಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ದಿಲೀಪ್ ವರ್ಣೇಕರ್ ಹೇಳಿದರು.

ಪಟ್ಟಣದ ಹಿರೇಮಠ ಸಭಾಭವನದಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ ಮುಖ್ಯ ವಕ್ತಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದಲ್ಲಿ ಹಿಂದೂಗಳ ಸಂಖ್ಯೆ ಕ್ಷೀಣಿಸಲು ಹಿಂದೂಗಳೇ ಕಾರಣ. ನಮಗೆ ಒಬ್ಬರು-ಇಬ್ಬರು ಮಕ್ಕಳು ಸಾಕೆಂದು ನಿರ್ಧರಿಸುತ್ತ ಹೋದರೆ ಒಂದು ದಿನ ನಾವೇ ಈ ದೇಶದಲ್ಲಿ ಅಲ್ಪಸಂಖ್ಯಾತರಾಗಬೇಕಾಗುತ್ತದೆ. ಈ ಎಚ್ಚರಿಕೆ ಎಲ್ಲರಲ್ಲಿಯೂ ಇರಲಿ. ಆದ್ದರಿಂದ ಹಿಂದೂಗಳು ಕನಿಷ್ಠ ಮೂರು-ನಾಲ್ಕು ಮಕ್ಕಳನ್ನಾದರೂ ಪಡೆಯಬೇಕು. ಇದರಿಂದ ನಮ್ಮ ಹಿಂದೂಸ್ತಾನವನ್ನು ನಮ್ಮದನ್ನಾಗಿ ಉಳಿಸಿಕೊಳ್ಳಲು ಸಾಧ್ಯ ಎಂದರು.

ದೂರದರ್ಶನದಲ್ಲಿ ಬರುವ ಜಾಹೀರಾತುಗಳನ್ನು ನೋಡಿ ನಾವೇನಾದರೂ ವಿದೇಶಿ ವಸ್ತುಗಳ ಖರೀದಿಗೆ ಮುಗಿಬಿದ್ದರೆ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗಿಳಿಯುತ್ತದೆ. ಆದ್ದರಿಂದ ನಾವೆಲ್ಲರೂ ಸ್ವದೇಶಿ ವಸ್ತುಗಳನ್ನು ಬಳಸುವತ್ತ ಹೆಚ್ಚಿನ ಗಮನ ನೀಡಬೇಕು. ನಮ್ಮ ದೇಶವನ್ನು ಶ್ರೀಮಂತಿಕೆಯ ರಾಷ್ಟ್ರ ಮಾಡಬೇಕು. ಮಹಿಳೆಯರು ಕ್ರಿಯಾಶೀಲರಾದರೆ ಹಿಂದೂ ಸಮಾಜವನ್ನು ಕಟ್ಟಲು ಯಾವುದೇ ತೊಂದರೆಯಿಲ್ಲ. ಜಗತ್ತಿನ 40 ದೇಶಗಳಲ್ಲಿ ಸಂಘದ ಶಾಖೆಗಳಿವೆ. ಹಿಂದೂಗಳನ್ನು ಒಟ್ಟುಗೂಡಿಸಲು ಹೋರಾಡಿ ಯಶಸ್ವಿಯಾದವರು ಡಾ. ಹೆಡಗೆವಾರರು ಎಂದು ಹೇಳಿದರು.

ಬೇರೆ ಧರ್ಮದವರು ಯಾರೇ ಭಾರತವನ್ನು ಆಳಿದರೂ ಅವರಿಗೆ ಭಾರತವನ್ನು ತಮ್ಮ ಧರ್ಮದ ದೇಶವನ್ನಾಗಿಸಲು ಸಾಧ್ಯವಾಗಿಲ್ಲ. ಯಾಕೆಂದರೆ ಹಿಂದುತ್ವ ಈ ದೇಶದಲ್ಲಿ ಅಷ್ಟೊಂದು ಗಟ್ಟಿಯಾಗಿದೆ. ಮಮ್ಮಿ-ಡ್ಯಾಡಿ ಸಂಸ್ಕೃತಿಯನ್ನು ಹೊಡೆದೋಡಿಸಿ ಅಪ್ಪ-ಅಮ್ಮ ಸಂಸ್ಕೃತಿಯನ್ನು ಜಾರಿಗೆ ತಂದರೆ ದೇಶದ ಸಂಸ್ಕೃತಿ ಇನ್ನಷ್ಟು ಹೆಚ್ಚುತ್ತದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ಸಂಘದ ನೂರು ವರ್ಷಗಳ ಕಾರ್ಯಕ್ರಮ ಶ್ಲಾಘನೀಯ. ಮುಖ್ಯ ವಕ್ತಾರರ ವಿಚಾರಗಳನ್ನು ನಾವು ಅಳವಡಿಸಿಕೊಳ್ಳಲು ಪ್ರಯತ್ನಿಸೋಣ. ಹಿಂಸೆಯಿಂದ ದೂರವಿದ್ದು ಅಹಿಂಸೆಯಿಂದ ಜೀವನ ನಡೆಸುವವನೇ ನಿಜವಾದ ಹಿಂದೂ. ಯಾರೇ ಈ ದೇಶವನ್ನು ನಾಶ ಮಾಡಲು, ಮತಾಂತರ ಮಾಡಲು ಯತ್ನಿಸಿದರೆ ಅದು ಸಾಧ್ಯವಾಗುವುದಿಲ್ಲ. ಏಕೆಂದರೆ ಭಾರತೀಯರು ಭೋಗ ಜೀವಿಗಳಲ್ಲ, ಅವರು ತ್ಯಾಗ ಜೀವಿಗಳು ಮತ್ತು ಯೋಗ ಜೀವಿಗಳು. ಮನುಸ್ಮೃತಿ ಆಗಿನ ಕಾಲಕ್ಕೆ ಸೂಕ್ತವಾಗಿತ್ತು. ಅದರಲ್ಲಿನ ಅನೇಕ ಉತ್ತಮೋತ್ತಮ ಅಂಶಗಳು ಇಂದಿಗೂ ಪ್ರಸ್ತುತವಾಗಿವೆ. ಸುಮ್ಮನೆ ಅದನ್ನು ಟೀಕಿಸುವುದು ಬೇಡ ಎಂದರು.

ಕಾರ್ಯಕ್ರಮದಲ್ಲಿ ರವಿ ದಂಡಿ, ಉಮೇಶ ಪಾಟೀಲ, ಆರ್.ಜಿ. ಪಾಟೀಲ, ಉಮೇಶ ಸಂಗನಾಳಮಠ, ಮುತ್ತಣ್ಣ ಪಲ್ಲೇದ, ರಾಜಶೇಖರ ವಂಕಲಕುಂಟಿ, ಹೇಮಗಿರೀಶ ಹಾವನಾಳ, ಸುತ್ತಲಿನ ಗ್ರಾಮಗಳ ಪ್ರಮುಖರನೇಕರು ಪಾಲ್ಗೊಂಡಿದ್ದರು. ಗೀತಾ ಭೋಪಳಾಪೂರ ಪ್ರಾರ್ಥಿಸಿದರು. ಜಗದೀಶ ಸಂಕನಗೌಡ್ರ ಸ್ವಾಗತಿಸಿದರು. ಅರ್ಚನಾ ಕೊಂಡಿ ಸಮಿತಿಯ ಸದಸ್ಯರನ್ನು ಪರಿಚಯಿಸಿದರು. ಸಮಿತಿ ಅಧ್ಯಕ್ಷ ಬಸವರಾಜ ವಂಕಲಕುಂಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಘುನಾಥ ಕೊಂಡಿ ನಿರೂಪಿಸಿದರು. ಡಾ. ಆರ್.ಕೆ. ಗಚ್ಚಿನಮಠ ವಂದಿಸಿದರು.

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರೂ ಸಹ ಸಂಘದ ಧೋರಣೆಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಸಂಘವು ಜಾತಿ-ಜಾತಿಗಳಲ್ಲಿನ ವ್ಯತ್ಯಾಸವನ್ನು ಹೊಡೆದೋಡಿಸಲು ಪ್ರಯತ್ನಿಸುತ್ತಿದೆ. ಹಿಂದೂ ಧರ್ಮಕ್ಕೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಮಹತ್ವವಿದೆ. ಸ್ವಾಮಿ ವಿವೇಕಾನಂದರು ವಿಶ್ವಧರ್ಮಸಮ್ಮೇಳನದಲ್ಲಿ ಮಾತನಾಡಿ ಹಿಂದೂ ಧರ್ಮದ ಪ್ರತಿಪಾದನೆ ಮಾಡಿದ್ದು ಇದಕ್ಕೆ ಕಾರಣ. ಇನ್ನಾದರೂ ನಾವು ಒಗ್ಗಟ್ಟಾಗದಿದ್ದರೆ ಬಿಕ್ಕಟ್ಟನ್ನು ಸೃಷ್ಟಿಸಿ ಹಿಂದೂ ರಾಷ್ಟ್ರವನ್ನು ಛಿದ್ರಛಿದ್ರ ಮಾಡಲು ದುಷ್ಟ ಶಕ್ತಿಗಳು ಕಾಯುತ್ತಿವೆ. ಅದಕ್ಕಾಗಿ ಹಿಂದೂಗಳೆಲ್ಲರೂ ಎಚ್ಚರವಾಗಿರಬೇಕೆಂದು ದಿಲೀಪ್ ಹೇಳಿದರು.

ಮದುವೆಯಾದ ಎರಡೇ ವರ್ಷದಲ್ಲಿ ಗೃಹಿಣಿ ಸೂಸೈಡ್; ವರದಕ್ಷಣಿ ಕಿರುಕುಳ ಕಾರಣವಾ?

0

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಯಡಿಯೂರಿನಲ್ಲಿ ಮದುವೆಯಾದ ಎರಡೇ ವರ್ಷದಲ್ಲಿ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಕೀರ್ತಿ ಶ್ರೀ (24) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಗಂಡನ ಹಾಗೂ ಅವರ ಕುಟುಂಬಸ್ಥರ ವರದಕ್ಷಿಣೆ ಕಿರುಕುಳದಿಂದ ಕೀರ್ತಿ ಸಾವಿಗೆ ಶರಣಾಗಿದ್ದಾಳೆ ಎಂದು ಕೀರ್ತಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಮೃತಕೀರ್ತಿ ಶ್ರೀ ಮೂಲತಃ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನವಳು. 2023 ರ ನವೆಂಬರ್‌ನಲ್ಲಿ ಗುರುಪ್ರಸಾದ್ ಅವರೊಂದಿಗೆ ಮದುವೆಯಾಗಿದ್ದರು. ಕುಟುಂಬದವರ ಆರೋಪದ ಪ್ರಕಾರ, ಮದುವೆಗೆ ಸುಮಾರು 35 ಲಕ್ಷ ರೂ. ವೆಚ್ಚದ 400 ಗ್ರಾಂ ಚಿನ್ನ ಮತ್ತು 5 ಲಕ್ಷ ರೂ. ನಗದು ನೀಡಲಾಗಿತ್ತು. ಆದರೂ, ಕೀರ್ತಿ ಶ್ರೀ ಮೇಲೆ ಗಂಡನ ಮತ್ತು ಅವರ ಮನೆಯವರು ಹಣಕ್ಕಾಗಿ ನಿತ್ಯ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಕೀರ್ತಿ ಶ್ರೀ ತಂದೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿ ತನಿಖೆ ನಡೆಸಲು ವಿನಂತಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದಾವಣಗೆರೆ| 2028ಕ್ಕೆ ಸಿಎಂ ಆಗುವ ಹಗಲು ಕನಸು ಕಾಣ್ತಿದ್ದಾರೆ ಕುಮಾರಸ್ವಾಮಿ; ಜಮೀರ್ ವ್ಯಂಗ್ಯ

0

ದಾವಣಗೆರೆ:- ಎಲ್ಲರೂ ರಾತ್ರಿ ಕನಸು ಕಂಡ್ರೆ ಕುಮಾರಸ್ವಾಮಿ ಹಗಲುಗನಸು ಕಾಣ್ತಾರೆ ಎಂದು ಹೇಳುವ ಮೂಲಕ 2028 ಕ್ಕೆ ನಾನೇ ಸಿಎಂ ಆಗ್ತೀನಿ ಎಂಬ ಹೆಚ್‌ಡಿಕೆ ಹೇಳಿಕೆಗೆ ಜಮೀರ್ ಅಹಮದ್ ಟಾಂಗ್‌ ಕೊಟ್ಟಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಎಲ್ಲರೂ ರಾತ್ರಿ ಕನಸು ಕಂಡ್ರೆ ಕುಮಾರಸ್ವಾಮಿ ಹಗಲುಗನಸು ಕಾಣುತ್ತಾರೆ. 2013, 2019 ಹಾಗೂ 2023 ರಲ್ಲಿ ನಾವೇ ಬರುತ್ತೇವೆ ಅಂದ್ರು ಬರಲಿಲ್ಲ. ಜೆಡಿಎಸ್‌ನಲ್ಲಿ ಸಿದರಾಮಯ್ಯ ಇದ್ದಾಗ 59 ಸೀಟ್‌ ಗೆದ್ದಿದ್ದರು. ಅದನ್ನು ಕೂಡ ಕುಮಾರಸ್ವಾಮಿ ರೀಚ್ ಆಗಲಿಲ್ಲ. 2023ರ ಚುನಾವಣೆಯಲ್ಲಿ 19ಕ್ಕೆ ಬಂದ್ರು, ಅವರು ಸಿಎಂ ಆಗುವ ಹಗಲುಗನಸು ಕಾಣುತ್ತಾರೆ.

ದೇವೇಗೌಡ್ರು ನೂರು ವರ್ಷ ಅರೋಗ್ಯವಾಗಿ ಇರಲಿ. ನಾನು ಈಗ ಕಾಂಗ್ರೆಸ್‌ನಲ್ಲಿ ಇರಬಹುದು, ಆದರೆ ಅವರು ನನ್ನ ರಾಜಕೀಯ ಗುರುಗಳು. ಇನ್ನೂ, ಪ್ರಾದೇಶಿಕ ಪಕ್ಷಕ್ಕೆ ಅಷ್ಟೋ ಇಷ್ಟೋ ಶಕ್ತಿ ಇದೆ. ಬಿಜೆಪಿ ಸೇರಿ ಅದನ್ನು ಕೂಡ ಕಳ್ಕೊಂಡಿದ್ದಾರೆ. ಬಿಜೆಪಿ ಜೊತೆ ಸೇರಿದ್ರೆ ಏನು ಆಗುತ್ತೆ ಅಂತಾ ಮುಂದೆ ನೋಡೋಣ ಎಂದಿದ್ದಾರೆ.

error: Content is protected !!