Home Blog

ಪಕ್ಷದಲ್ಲಿ ನಾಯಕತ್ವ ಬಿಕ್ಕಟ್ಟು: ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಕೀರ್ ಸ್ಟಾರ್ಮರ್ ರಾಜೀನಾಮೆ!

0

ಲಂಡನ್: ಬ್ರಿಟನ್ ಪ್ರಧಾನಿ ಹಾಗೂ ಆಡಳಿತಾರೂಢ ಲೇಬರ್ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಪಕ್ಷದೊಳಗಿನ ತೀವ್ರ ಅಸಮಾಧಾನ, ಇತ್ತೀಚಿನ ಚುನಾವಣಾ ಹಿನ್ನಡೆ ಹಾಗೂ ನಾಯಕತ್ವದ ಮೇಲಿನ ವಿಶ್ವಾಸ ಕುಸಿದ ಹಿನ್ನೆಲೆ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಹೊಸ ನಾಯಕನ ಆಯ್ಕೆಯಾಗುವವರೆಗೆ ಅವರು ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ.

ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಲೇಬರ್ ಪಕ್ಷ ಭಾರೀ ಹಿನ್ನಡೆ ಅನುಭವಿಸಿತ್ತು. ಪಕ್ಷದ ಸಾಂಪ್ರದಾಯಿಕ ಭದ್ರಕೋಟೆಗಳಲ್ಲಿಯೂ ಮತದಾರರು ದೂರವಾಗಿದ್ದು, ಅನೇಕ ಸಂಸದರು ಸ್ಟಾರ್ಮರ್ ನಾಯಕತ್ವದ ಬಗ್ಗೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ನಡುವೆಯೇ ಆಂಡಿ ಬರ್ನ್‌ಹ್ಯಾಮ್ ಅವರ ರಾಜಕೀಯ ಪ್ರಭಾವ ಹೆಚ್ಚಾಗಿದ್ದು, ಅವರು ಮುಂದಿನ ನಾಯಕತ್ವದ ಪ್ರಮುಖ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದಾರೆ.

ವಲಸೆ ನೀತಿ, ಆರ್ಥಿಕ ಸವಾಲುಗಳು, ಸರ್ಕಾರದ ಕೆಲವು ವಿವಾದಾತ್ಮಕ ನಿರ್ಧಾರಗಳು ಹಾಗೂ ಸಚಿವ ಸಂಪುಟದೊಳಗಿನ ರಾಜೀನಾಮೆಗಳ ಸರಣಿಯಿಂದ ಸ್ಟಾರ್ಮರ್ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿತ್ತು. ರಕ್ಷಣಾ ವೆಚ್ಚ ಸೇರಿದಂತೆ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದ್ದವು.

2024ರ ಜುಲೈ 5ರಂದು ಭಾರೀ ಬಹುಮತದೊಂದಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ಸ್ಟಾರ್ಮರ್ ಅವರು ಎರಡು ವರ್ಷಕ್ಕೂ ಮುನ್ನವೇ ನಾಯಕತ್ವ ತ್ಯಜಿಸುವ ಪರಿಸ್ಥಿತಿ ಎದುರಿಸಿದ್ದಾರೆ. ಲೇಬರ್ ಪಕ್ಷವು 2024ರ ಸಾರ್ವತ್ರಿಕ ಚುನಾವಣೆಯಲ್ಲಿ 650 ಸ್ಥಾನಗಳ ಪೈಕಿ 410ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಐತಿಹಾಸಿಕ ವಿಜಯ ಸಾಧಿಸಿತ್ತು.

ಬ್ರಿಟನ್‌ನಲ್ಲಿ ಈಗ ಹೊಸ ಲೇಬರ್ ನಾಯಕನ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದ್ದು, ಸಂಸತ್ತು ಸೆಪ್ಟೆಂಬರ್‌ನಲ್ಲಿ ಪುನರಾರಂಭವಾಗುವ ವೇಳೆಗೆ ಹೊಸ ಪ್ರಧಾನಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ.

ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಕತ್ತು ಹಿಸುಕಿದ್ದು ಕಾಂಗ್ರೆಸ್: ಸಿ.ಟಿ. ರವಿ ಆರೋಪ

ಬೆಂಗಳೂರು: ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೌಲ್ಯಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವ ಕಾಂಗ್ರೆಸ್ ನಾಯಕರು ಇದೀಗ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿರುವುದು ವಿಪರ್ಯಾಸ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಅಧಿಕಾರ ಸ್ವೀಕರಿಸಿದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಬಿ.ಕೆ. ಹರಿಪ್ರಸಾದ್ ಬಿಜೆಪಿ ವಿರುದ್ಧ ಟೀಕೆ ಮಾಡಿದ್ದಾರೆ. ಆದರೆ ಸಂವಿಧಾನಕ್ಕೆ ನಿಜವಾದ ಧಕ್ಕೆ ತಂದಿರುವುದು ಕಾಂಗ್ರೆಸ್ ಪಕ್ಷವೇ ಎಂದು ಹೇಳಿದರು.

ಸಂವಿಧಾನಕ್ಕೆ ಇದುವರೆಗೆ 106 ತಿದ್ದುಪಡಿಗಳು ನಡೆದಿದ್ದು, ಅವುಗಳಲ್ಲಿ 76 ತಿದ್ದುಪಡಿಗಳನ್ನು ಕಾಂಗ್ರೆಸ್ ಸರ್ಕಾರಗಳೇ ಮಾಡಿವೆ. ಈ ತಿದ್ದುಪಡಿಗಳ ಬಹುಪಾಲು ಅಧಿಕಾರ ದುರುಪಯೋಗ ಮತ್ತು ರಾಜಕೀಯ ಸ್ವಾರ್ಥಕ್ಕಾಗಿ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಕತ್ತು ಹಿಸುಕಿದ್ದು ಕಾಂಗ್ರೆಸ್. ಸಂವಿಧಾನ ನೀಡಿದ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸಿ, ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಕಳುಹಿಸಿದ್ದೂ ಇದೇ ಕಾಂಗ್ರೆಸ್ ಎಂದು ಸಿ.ಟಿ. ರವಿ ಟೀಕಿಸಿದರು.

ಇದೀಗ ಸಂವಿಧಾನದ ರಕ್ಷಕರಂತೆ ಮಾತನಾಡುತ್ತಿರುವ ಕಾಂಗ್ರೆಸ್, ಯಾವುದೇ ವ್ಯಾಪಕ ಚರ್ಚೆಯಿಲ್ಲದೆ ಸಂವಿಧಾನದ ಮುನ್ನುಡಿಗೆ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಎಂಬ ಪದಗಳನ್ನು ಸೇರಿಸಿತ್ತು. ಈ ಕ್ರಮವನ್ನು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಹ ಒಪ್ಪಿರಲಿಲ್ಲ ಎಂದು ಅವರು ಹೇಳಿದರು.

“ಅಂಬೇಡ್ಕರ್ ಅವರ ವಿಚಾರಗಳಿಗೆ ವಿರುದ್ಧವಾಗಿ ನಡೆದುಕೊಂಡವರು ಇಂದು ಬಿಜೆಪಿ ಮೇಲೆ ಆರೋಪ ಮಾಡುತ್ತಿರುವುದು ಎಷ್ಟು ನ್ಯಾಯ?” ಎಂದು ಪ್ರಶ್ನಿಸಿದ ಸಿ.ಟಿ. ರವಿ, ಕಾಂಗ್ರೆಸ್ ತನ್ನ ಇತಿಹಾಸವನ್ನು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೈ ಕೊಟ್ಟ ವರುಣ: 11 ಎಕರೆಯಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ನಾಶ ಮಾಡಿದ ರೈತ

0

ಹಾವೇರಿ: ಮುಂಗಾರು ಮಳೆ ವಿಳಂಬದಿಂದ ಬೆಳೆ ಸಂಪೂರ್ಣ ಹಾಳಾದ ಹಿನ್ನಲೆಯಲ್ಲಿ ಹಾವೇರಿ ಜಿಲ್ಲೆಯ ರೈತನೊಬ್ಬ 11 ಎಕರೆ ಮೆಕ್ಕೆಜೋಳ ಬೆಳೆ ಟ್ರ್ಯಾಕ್ಟರ್‌ನಿಂದ ನಾಶಪಡಿಸಿರುವ ಘಟನೆ ಶಿಡೇನೂರ ಗ್ರಾಮದಲ್ಲಿ ನಡೆದಿದೆ.

ಬ್ಯಾಡಗಿ ತಾಲೂಕಿನ ರೈತ ಕಿರಣ ಗಡಿಗೋಳ ಅವರು ಲಾವಣಿಗೆ ಪಡೆದು ಒಟ್ಟು 11 ಎಕರೆ ಭೂಮಿಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಬೀಜ, ಡೀಸೆಲ್ ಸೇರಿದಂತೆ ಎರಡು ಲಕ್ಷ ರೂ.ಗೂ ಅಧಿಕ ವೆಚ್ಚ ಮಾಡಿದರೂ, ಮಳೆಯ ಕೊರತೆಯಿಂದ ಬೆಳೆ ಸರಿಯಾಗಿ ಮೊಳಕೆಯೊಡೆಯದೆ ನಷ್ಟಕ್ಕೆ ಕಾರಣವಾಗಿದೆ.

ಮಳೆ ನಿರೀಕ್ಷೆ ಸಂಪೂರ್ಣ ವಿಫಲವಾದ ಹಿನ್ನೆಲೆಯಲ್ಲಿ ಕೇವಲ ಶೇಕಡಾ 30ರಷ್ಟು ಮಾತ್ರ ಬೆಳೆ ಬೆಳೆಯುತ್ತಿದ್ದುದನ್ನು ಗಮನಿಸಿದ ರೈತ ತೀವ್ರ ನಿರಾಶೆಯಿಂದ ಟ್ರ್ಯಾಕ್ಟರ್ ಬಳಸಿ ಸಂಪೂರ್ಣ ಬೆಳೆ ನಾಶ ಮಾಡಿದ್ದಾರೆ.

ಈ ಘಟನೆಯು ಜಿಲ್ಲೆಯ ಇತರ ರೈತರ ಸಂಕಷ್ಟದ ಪ್ರತಿನಿಧಿಯಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದು, ಸರ್ಕಾರ ತಕ್ಷಣ ಪರಿಹಾರ ಘೋಷಿಸಬೇಕು ಹಾಗೂ ಜಿಲ್ಲೆಯನ್ನು ಬರಗಾಲ ಪ್ರದೇಶವೆಂದು ಘೋಷಿಸಬೇಕು ಎಂಬ ಒತ್ತಾಯ ವ್ಯಕ್ತವಾಗಿದೆ.

Gold-Silver Price Today: ಬಂಗಾರ ಪ್ರಿಯರಿಗೆ ಇಂದಿನ ಚಿನ್ನದ ದರ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ಚಿನ್ನ-ಬೆಳ್ಳಿ ದರಗಳ ಪಟ್ಟಿ

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿರುವುದು ಹಾಗೂ ಹಾರ್ಮುಜ್ ಜಲಸಂಧಿ ಬಂದ್ ಆಗಿರುವ ಬೆಳವಣಿಗೆಗಳಿಂದ ಹೂಡಿಕೆದಾರರು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುವ ಚಿನ್ನದತ್ತ ಮುಖ ಮಾಡಿದ್ದು, ಇದರ ಪರಿಣಾಮವಾಗಿ ಚಿನ್ನದ ದರ ಏರಿಕೆಯಾಗಿದೆ.

24 ಕ್ಯಾರೆಟ್ ಚಿನ್ನದ ದರ ಏರಿಕೆ

ಜೂನ್ 22ರಂದು 24 ಕ್ಯಾರೆಟ್ ಚಿನ್ನದ 1 ಗ್ರಾಂ ದರದಲ್ಲಿ 43 ರೂಪಾಯಿ ಏರಿಕೆಯಾಗಿದ್ದು, 14,651 ರೂಪಾಯಿಗೆ ತಲುಪಿದೆ. 10 ಗ್ರಾಂ ಚಿನ್ನದ ದರ 430 ರೂಪಾಯಿ ಹೆಚ್ಚಾಗಿ 1,46,510 ರೂಪಾಯಿಯಾಗಿದೆ. ಕಳೆದ ವಾರ 10 ಗ್ರಾಂ ಚಿನ್ನದ ದರ 1,45,860 ರೂಪಾಯಿವರೆಗೆ ಇಳಿಕೆಯಾಗಿತ್ತು.

22 ಕ್ಯಾರೆಟ್ ಚಿನ್ನಕ್ಕೂ ಬೆಲೆ ಹೆಚ್ಚಳ

22 ಕ್ಯಾರೆಟ್ ಚಿನ್ನದ 1 ಗ್ರಾಂ ದರ 40 ರೂಪಾಯಿ ಏರಿಕೆ ಕಂಡು 13,430 ರೂಪಾಯಿಯಾಗಿದೆ. 10 ಗ್ರಾಂ ಚಿನ್ನದ ದರ 400 ರೂಪಾಯಿ ಹೆಚ್ಚಳಗೊಂಡು 1,34,300 ರೂಪಾಯಿಗೆ ತಲುಪಿದೆ.

ಬೆಳ್ಳಿ ದರದಲ್ಲಿ ಬದಲಾವಣೆ ಇಲ್ಲ

ಇನ್ನೊಂದೆಡೆ, ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಬೆಳ್ಳಿ ಪ್ರತಿ ಗ್ರಾಂಗೆ 250 ರೂಪಾಯಿಯಲ್ಲೇ ಸ್ಥಿರವಾಗಿದ್ದು, ಒಂದು ಕೆಜಿ ಬೆಳ್ಳಿ ದರ 2,50,000 ರೂಪಾಯಿಯಾಗಿ ದಾಖಲಾಗಿದೆ.

ರಾಜ್ಯದ ಬಸ್ ಪ್ರಯಾಣಿಕರಿಗೆ ಶಾಕ್! ಟಿಕೆಟ್ ದರ 33% ರಿಂದ 44% ಏರಿಕೆಗೆ ಸಾರಿಗೆ ನಿಗಮಗಳ ಪ್ರಸ್ತಾವನೆ

ಬೆಂಗಳೂರು: ರಾಜ್ಯದ ಬಸ್ ಪ್ರಯಾಣಿಕರಿಗೆ ಶೀಘ್ರದಲ್ಲೇ ಟಿಕೆಟ್ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಇದೆ. ತೀವ್ರ ಆರ್ಥಿಕ ಸಂಕಷ್ಟ, ಡೀಸೆಲ್ ಬೆಲೆ ಏರಿಕೆ ಹಾಗೂ ಕಾರ್ಯಾಚರಣಾ ವೆಚ್ಚ ಹೆಚ್ಚಳದಿಂದ ಸಂಕಷ್ಟಕ್ಕೆ ಸಿಲುಕಿರುವ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರದ ಅನುಮತಿ ಕೋರಿವೆ.

ಈ ಸಂಬಂಧ ನಾಲ್ಕೂ ಸಾರಿಗೆ ನಿಗಮಗಳು ಮುಖ್ಯಮಂತ್ರಿ ಅವರಿಗೆ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಿದ್ದು, ಬಿಎಂಟಿಸಿ ಟಿಕೆಟ್ ದರವನ್ನು ಶೇ.44 ರಷ್ಟು ಹಾಗೂ ಕೆಎಸ್‌ಆರ್‌ಟಿಸಿ ಶೇ.33 ರಷ್ಟು ಹೆಚ್ಚಿಸಲು ಮನವಿ ಮಾಡಿದೆ. ಜೊತೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯೂಕೆಆರ್‌ಟಿಸಿ) ಕೂಡ ದರ ಪರಿಷ್ಕರಣೆಗೆ ಒತ್ತಾಯಿಸಿವೆ.

ದರ ಏರಿಕೆಗೆ ಪ್ರಮುಖ ಕಾರಣಗಳು

ಸಾರಿಗೆ ನಿಗಮಗಳ ಪ್ರಕಾರ, ಇತ್ತೀಚಿನ ಡೀಸೆಲ್ ದರ ಏರಿಕೆ ಸಂಸ್ಥೆಗಳ ಆರ್ಥಿಕ ಸ್ಥಿತಿಗೆ ದೊಡ್ಡ ಹೊಡೆತ ನೀಡಿದೆ. ಕೇವಲ ಹತ್ತು ದಿನಗಳ ಅವಧಿಯಲ್ಲಿ ನಾಲ್ಕು ಬಾರಿ ಡೀಸೆಲ್ ಬೆಲೆ ಏರಿಕೆಯಾಗಿದ್ದು, ಪ್ರತಿ ಲೀಟರ್‌ಗೆ ₹7.81 ಹೆಚ್ಚಳವಾಗಿದೆ.

ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್‌ಗಳಿಗೆ ಪ್ರತಿದಿನ 13 ಲಕ್ಷ ಲೀಟರ್‌ಗಿಂತ ಹೆಚ್ಚು ಡೀಸೆಲ್ ಬಳಕೆಯಾಗುತ್ತಿದೆ. ಇದರ ಪರಿಣಾಮವಾಗಿ ತಿಂಗಳಿಗೆ ಸುಮಾರು ₹40 ಕೋಟಿ ಹಾಗೂ ವರ್ಷಕ್ಕೆ ಸುಮಾರು ₹480 ಕೋಟಿ ಹೆಚ್ಚುವರಿ ವೆಚ್ಚ ಉಂಟಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಶಕ್ತಿ’ ಯೋಜನೆಯ ಹೊರೆ

ಮಹಿಳೆಯರಿಗಾಗಿ ಜಾರಿಯಲ್ಲಿರುವ ‘ಶಕ್ತಿ’ ಉಚಿತ ಬಸ್ ಪ್ರಯಾಣ ಯೋಜನೆ, ಹೆಚ್ಚುತ್ತಿರುವ ಕಾರ್ಯಾಚರಣಾ ವೆಚ್ಚ, ಬಿಡಿಭಾಗಗಳ ಬೆಲೆ ಏರಿಕೆ ಹಾಗೂ ಸಾರಿಗೆ ನೌಕರರ ವೇತನ ಪರಿಷ್ಕರಣೆ ಸೇರಿದಂತೆ ಹಲವು ಕಾರಣಗಳಿಂದ ನಿಗಮಗಳ ಮೇಲಿನ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಾಗಿದೆ.

ಸದ್ಯ ನಷ್ಟದಲ್ಲಿರುವ ಸಾರಿಗೆ ಸಂಸ್ಥೆಗಳನ್ನು ಆರ್ಥಿಕವಾಗಿ ಉಳಿಸಿಕೊಳ್ಳಲು ಟಿಕೆಟ್ ದರ ಏರಿಕೆ ಅನಿವಾರ್ಯವಾಗಿದೆ ಎಂಬುದು ಅಧಿಕಾರಿಗಳ ವಾದವಾಗಿದೆ.

ಸರ್ಕಾರದ ತೀರ್ಮಾನವೇನು?

ಸಾರಿಗೆ ನಿಗಮಗಳ ಪ್ರಸ್ತಾವನೆ ಸದ್ಯ ಮುಖ್ಯಮಂತ್ರಿಗಳ ಪರಿಶೀಲನೆಯಲ್ಲಿದೆ. ಸರ್ಕಾರ ಸಂಪೂರ್ಣ ಪ್ರಸ್ತಾವನೆಗೆ ಒಪ್ಪಿಗೆ ನೀಡುತ್ತದೆಯೇ ಅಥವಾ ಕಡಿಮೆ ಪ್ರಮಾಣದ ದರ ಏರಿಕೆಗೆ ಅನುಮೋದನೆ ನೀಡುತ್ತದೆಯೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಸರ್ಕಾರದ ಅಂತಿಮ ತೀರ್ಮಾನದ ಬಳಿಕ ಹೊಸ ಬಸ್ ದರ ಜಾರಿಗೆ ಬರುವ ಸಾಧ್ಯತೆ ಇದೆ.

HCG ಕ್ಯಾನ್ಸರ್ ಆಸ್ಪತ್ರೆಗೆ ಕೇಂದ್ರದ ಶಾಕ್; ಹೊಸ ಕ್ಲಿನಿಕಲ್ ಟ್ರಯಲ್ʼಗೆ 2 ವರ್ಷ ನಿಷೇಧ

0

ಬೆಂಗಳೂರು: ನಗರದ ಪ್ರತಿಷ್ಠಿತ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಗೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಕಠಿಣ ಕ್ರಮ ಕೈಗೊಂಡಿದೆ. ಮಾನವ ಕ್ಲಿನಿಕಲ್ ಪ್ರಯೋಗಗಳಲ್ಲಿ ಗಂಭೀರ ಲೋಪಗಳು ಹಾಗೂ ನಿಯಮ ಉಲ್ಲಂಘನೆಗಳು ಕಂಡುಬಂದ ಹಿನ್ನೆಲೆಯಲ್ಲಿ, ಆಸ್ಪತ್ರೆಯ ನೈತಿಕ ಸಮಿತಿಗೆ ಮುಂದಿನ 24 ತಿಂಗಳ ಕಾಲ ಯಾವುದೇ ಹೊಸ ಕ್ಲಿನಿಕಲ್ ಟ್ರಯಲ್‌ಗಳನ್ನು ನಡೆಸದಂತೆ ನಿರ್ಬಂಧ ಹೇರಲಾಗಿದೆ.

ಆಸ್ಪತ್ರೆಯ ನೈತಿಕ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ನ್ಯಾಯಮೂರ್ತಿ ಪಿ. ಕೃಷ್ಣಭಟ್ ಸಲ್ಲಿಸಿದ್ದ ಲಿಖಿತ ದೂರಿನ ಆಧಾರದ ಮೇಲೆ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ಕೇಂದ್ರ ಹಾಗೂ ರಾಜ್ಯ ಔಷಧ ನಿಯಂತ್ರಣ ಸಂಸ್ಥೆಗಳು ನಡೆಸಿದ ಜಂಟಿ ತನಿಖೆಯಲ್ಲಿ ಹಲವು ಮಾರ್ಗಸೂಚಿಗಳ ಉಲ್ಲಂಘನೆ ನಡೆದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ನಿಷೇಧಕ್ಕೆ ಕಾರಣವೇನು?

ತನಿಖೆಯಲ್ಲಿ, ಔಷಧ ಪ್ರಯೋಗಗಳ ವೇಳೆ ಮೃತಪಟ್ಟ ಕೆಲವು ರೋಗಿಗಳ ಮಾಹಿತಿಯನ್ನು ನಿಯಮಾನುಸಾರ ನಿಗದಿತ ಅವಧಿಯಲ್ಲಿ ನಿಯಂತ್ರಕ ಸಂಸ್ಥೆಗೆ ಸಲ್ಲಿಸದಿರುವುದು ಪತ್ತೆಯಾಗಿದೆ. ಕೆಲ ಪ್ರಕರಣಗಳಲ್ಲಿ ಸಾವಿನ ವರದಿಗಳನ್ನೇ ದಾಖಲಿಸದೇ ಮುಚ್ಚಿಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಇದಲ್ಲದೆ, ಕ್ಲಿನಿಕಲ್ ಪ್ರಯೋಗದ ವೇಳೆ ತೊಂದರೆ ಅನುಭವಿಸಿದ ಅಥವಾ ಮೃತಪಟ್ಟ ರೋಗಿಗಳ ಕುಟುಂಬಗಳಿಗೆ ನೀಡಬೇಕಾದ ಪರಿಹಾರ ಧನ ಪಾವತಿಸಿರುವುದಕ್ಕೆ ಸಂಬಂಧಿಸಿದ ಯಾವುದೇ ಸಮರ್ಪಕ ದಾಖಲೆಗಳು ಆಸ್ಪತ್ರೆಯ ಬಳಿ ಲಭ್ಯವಿಲ್ಲ ಎಂದು ತನಿಖೆಯಲ್ಲಿ ಉಲ್ಲೇಖಿಸಲಾಗಿದೆ.

ಹೊಸ ಔಷಧಗಳ ಪ್ರಯೋಗಕ್ಕೆ ಒಳಗಾಗುವ ರೋಗಿಗಳಿಗೆ ಅಗತ್ಯ ವೈದ್ಯಕೀಯ ಆರೈಕೆ ಹಾಗೂ ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಒದಗಿಸುವಲ್ಲಿಯೂ ಆಸ್ಪತ್ರೆ ವಿಫಲವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

24 ತಿಂಗಳು ಹೊಸ ಪ್ರಯೋಗಗಳಿಗೆ ಅವಕಾಶವಿಲ್ಲ

ಸಿಡಿಎಸ್‌ಸಿಒ ಆದೇಶದ ಪ್ರಕಾರ, ಮುಂದಿನ 24 ತಿಂಗಳವರೆಗೆ ಆಸ್ಪತ್ರೆ ಯಾವುದೇ ಹೊಸ ಕ್ಲಿನಿಕಲ್ ಟ್ರಯಲ್ ಅಥವಾ ಔಷಧ ಸಂಶೋಧನಾ ಯೋಜನೆಗಳನ್ನು ಆರಂಭಿಸುವಂತಿಲ್ಲ. ಆದರೆ ಈಗಾಗಲೇ ನಡೆಯುತ್ತಿರುವ ಕ್ಲಿನಿಕಲ್ ಪ್ರಯೋಗಗಳನ್ನು ಮುಂದುವರಿಸಲು ಅವಕಾಶ ನೀಡಲಾಗಿದೆ. ಅದರೊಂದಿಗೆ ಪ್ರತಿ ತಿಂಗಳು ರೋಗಿಗಳ ಸುರಕ್ಷತೆಗೆ ಸಂಬಂಧಿಸಿದ ಪ್ರಗತಿ ವರದಿಯನ್ನು ಸರ್ಕಾರಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಚಿಕಿತ್ಸೆಗೆ ಯಾವುದೇ ತೊಂದರೆ ಇಲ್ಲ

ಈ ನಿರ್ಬಂಧವು ಕೇವಲ ಹೊಸ ಕ್ಲಿನಿಕಲ್ ಟ್ರಯಲ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಆಸ್ಪತ್ರೆಯ ದೈನಂದಿನ ಕಾರ್ಯಚಟುವಟಿಕೆಗಳು, ಕ್ಯಾನ್ಸರ್ ರೋಗಿಗಳ ತಪಾಸಣೆ ಹಾಗೂ ಚಿಕಿತ್ಸಾ ಸೇವೆಗಳು ಎಂದಿನಂತೆ ಯಾವುದೇ ಅಡಚಣೆಯಿಲ್ಲದೆ ಮುಂದುವರಿಯಲಿವೆ.

ಇದೇ ವೇಳೆ, ಸಿಡಿಎಸ್‌ಸಿಒ ಹೊರಡಿಸಿರುವ ಆದೇಶವನ್ನು ಎಚ್‌ಸಿಜಿ ಆಸ್ಪತ್ರೆಯ ಆಡಳಿತ ಮಂಡಳಿ ಪರಿಶೀಲಿಸುತ್ತಿದ್ದು, ಈ ಆದೇಶದ ವಿರುದ್ಧ ಕಾನೂನು ಹೋರಾಟ ನಡೆಸುವ ಕುರಿತು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಹಿಡಕಲ್ ಜಲಾಶಯ ಬರದ ನಡುವೆ 51 ವರ್ಷಗಳ ಇತಿಹಾಸ ಮರುಕಳಿಕೆ: ನೀರಿನಿಂದ ಹೊರಬಂದ ವಿಠ್ಠಲ ದೇವಸ್ಥಾನಕ್ಕೆ ಭಕ್ತರ ದಂಡು

0

ಬೆಳಗಾವಿ: ಮುಂಗಾರು ಮಳೆಯ ವಿಳಂಬದಿಂದ ಹಿಡಕಲ್ ಜಲಾಶಯದ ನೀರಿನ ಮಟ್ಟ ಇಳಿಕೆಯಾಗುತ್ತಿದ್ದಂತೆಯೇ, ಜಲಗರ್ಭದಲ್ಲಿ ಮುಳುಗಿದ್ದ ಐತಿಹಾಸಿಕ ವಿಠ್ಠಲ ದೇವಸ್ಥಾನ ಮತ್ತೆ ಬೆಳಕಿಗೆ ಬಂದಿದೆ.

ಹುಕ್ಕೇರಿ ತಾಲೂಕಿನ ಹುನ್ನೂರು ಗ್ರಾಮದಲ್ಲಿದ್ದ ಈ ದೇವಸ್ಥಾನ 1928ರಲ್ಲಿ ನಿರ್ಮಾಣಗೊಂಡಿದ್ದು, 1978ರಲ್ಲಿ ಜಲಾಶಯ ನಿರ್ಮಾಣದ ಬಳಿಕ ಸಂಪೂರ್ಣ ಮುಳುಗಿತ್ತು. ಬರೋಬ್ಬರಿ 51 ವರ್ಷಗಳ ಬಳಿಕ ಈಗ ಮತ್ತೆ ದೇವಾಲಯದ ಸಂಪೂರ್ಣ ರಚನೆ ಗೋಚರವಾಗಿದ್ದು, ಇತಿಹಾಸ ಮರುಕಳಿಸಿದಂತಾಗಿದೆ.

2023ರ ಬರಗಾಲದ ಸಂದರ್ಭದಲ್ಲೂ ದೇವಾಲಯ ಮೊದಲ ಬಾರಿಗೆ ಹೊರಬಂದಿದ್ದರೆ, ಈಗ 2026ರಲ್ಲಿ ಮತ್ತೊಮ್ಮೆ ನೀರಿನ ಮಟ್ಟ ಕುಸಿತದಿಂದ ಅದು ಸ್ಪಷ್ಟವಾಗಿ ಕಾಣಿಸುತ್ತಿದೆ. ದೀರ್ಘಕಾಲ ನೀರಿನಲ್ಲಿದ್ದರೂ ದೇವಾಲಯದ ರಚನೆ ಹಾಗೂ ವಿಠ್ಠಲನ ವಿಗ್ರಹ ಅಚಲವಾಗಿರುವುದು ಭಕ್ತರಲ್ಲಿ ಅಚ್ಚರಿ ಹಾಗೂ ಭಕ್ತಿಭಾವ ಮೂಡಿಸಿದೆ.

ದೇವಾಲಯ ಗೋಚರಿಸುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಜಿಲ್ಲೆ ಹಾಗೂ ಪಕ್ಕದ ಮಹಾರಾಷ್ಟ್ರದಿಂದಲೂ ಭಕ್ತರು ದಾಳಿ ಮಾಡುತ್ತಿದ್ದು, ವಿಠ್ಠಲನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ನೀರಿನ ಕೊರತೆ ಆತಂಕಕಾರಿಯಾಗಿದ್ದರೂ, ಇತಿಹಾಸದ ಈ ಅಪರೂಪದ ಮರುಪ್ರಕಟನೆ ಭಕ್ತ ವಲಯದಲ್ಲಿ ಭಕ್ತಿ ಉತ್ಸಾಹವನ್ನು ಹೆಚ್ಚಿಸಿದೆ.

 

ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಕವರ್ ಕಚ್ಚುತ್ತಿದ್ದಂತೆ ಭೀಕರ ಸ್ಫೋ: ಸಾಕುನಾಯಿ ದುರ್ಮರಣ

0

ದಾವಣಗೆರೆ: ಆಹಾರವಿದೆ ಎಂದು ಭಾವಿಸಿ ಪ್ಲಾಸ್ಟಿಕ್ ಕವರ್ ಕಚ್ಚಿದ ಸಾಕುನಾಯಿ ಭೀಕರ ಸ್ಫೋಟದಲ್ಲಿ ಸಾವನ್ನಪ್ಪಿರುವ ಘಟನೆ ಚನ್ನಗಿರಿ ತಾಲೂಕಿನ ನಲ್ಕುದರೆ ಗ್ರಾಮದಲ್ಲಿ ಆತಂಕ ಸೃಷ್ಟಿಸಿದೆ.

ಅರೆಕೇರೆ ರುದ್ರೇಶ್ ಅವರಿಗೆ ಸೇರಿದ ನಾಯಿ, ಜಮೀನಿಗೆ ತೆರಳುತ್ತಿದ್ದ ವೇಳೆ ರಸ್ತೆ ಬದಿಯಲ್ಲಿದ್ದ ಅನುಮಾನಾಸ್ಪದ ಪ್ಲಾಸ್ಟಿಕ್ ಕವರ್ ಅನ್ನು ಬಾಯಿಯಿಂದ ಕಚ್ಚಿದೆ. ತಕ್ಷಣವೇ ಕವರ್‌ನೊಳಗಿದ್ದ ಸ್ಫೋಟಕ ವಸ್ತು ಸಿಡಿದು, ನಾಯಿಯ ಮುಖ ಸಂಪೂರ್ಣ ನಜ್ಜುಗುಜ್ಜಾಗಿದ್ದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದೆ.

ಸ್ಫೋಟದ ಭಾರೀ ಶಬ್ದದಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪ್ರಾಥಮಿಕ ಮಾಹಿತಿ ಪ್ರಕಾರ ಕಾಡು ಹಂದಿಗಳನ್ನು ಬೇಟೆಯಾಡಲು ಅಥವಾ ಓಡಿಸಲು ಬಳಸುವ ಸಿಡಿಮದ್ದು ಮಾದರಿಯ ವಸ್ತು ಇದಾಗಿರಬಹುದು ಎಂದು ಶಂಕಿಸಲಾಗಿದೆ.

ಸಂಬಂಧಿತ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಸ್ಫೋಟಕ ವಸ್ತುವಿನ ಅವಶೇಷಗಳನ್ನು ವಶಪಡಿಸಿಕೊಂಡು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ವರದಿ ಬಂದ ಬಳಿಕ ಸ್ಫೋಟದ ನಿಖರ ಕಾರಣ ತಿಳಿಯಲಿದೆ.

ನಿರಪರಾಧ ಪ್ರಾಣಿಯ ಸಾವಿಗೆ ಕಾರಣವಾದ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸಂತೆಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಭೈರಮಂಗಲಕ್ಕೆ ಬನ್ನಿ, ರೈತರ ಜೊತೆ ಮಾತನಾಡೋಣ: ಡಿ.ಕೆ. ಶಿವಕುಮಾರ್ʼಗೆ ಹೆಚ್.ಡಿ. ಕುಮಾರಸ್ವಾಮಿ ಸವಾಲು

ಬೆಂಗಳೂರು: ಬಿಡದಿ ಸ್ಮಾರ್ಟ್ ಸಿಟಿ ಟೌನ್‌ಶಿಪ್ ಯೋಜನೆ ವಿಚಾರವಾಗಿ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ದಾಖಲೆಗಳೊಂದಿಗೆ ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಭೈರಮಂಗಲಕ್ಕೆ ಬಂದು ರೈತರೊಂದಿಗೆ ನೇರವಾಗಿ ಮಾತನಾಡುವಂತೆ ಸವಾಲು ಹಾಕಿದ್ದಾರೆ.

ಮಾಜಿ ಶಾಸಕ ಮಾಗಡಿ ಮಂಜುನಾಥ್ ಹಾಗೂ ಜೆಡಿಎಸ್‌ನ ಗ್ರೇಟರ್ ಬೆಂಗಳೂರು ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ತಮ್ಮ ಮುಖ್ಯಮಂತ್ರಿ ಅವಧಿಯಲ್ಲಿ ಟೌನ್‌ಶಿಪ್ ಯೋಜನೆ ಕುರಿತು ಏನೆಲ್ಲ ನಿರ್ಧಾರಗಳು ಕೈಗೊಳ್ಳಲಾಗಿತ್ತು ಹಾಗೂ ಕಾಂಗ್ರೆಸ್ ನಾಯಕರು ಆಗ ವ್ಯಕ್ತಪಡಿಸಿದ್ದ ನಿಲುವಿನ ಕುರಿತು ದಾಖಲೆಗಳನ್ನು ಪ್ರದರ್ಶಿಸಿದರು.

“2006ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಐದು ಕಡೆ ಟೌನ್‌ಶಿಪ್ ಯೋಜನೆ ಘೋಷಿಸಿದ್ದು ನಿಜ. ಆದರೆ 2007ರ ಜುಲೈನಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಇದೇ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದರು” ಎಂದು ಕುಮಾರಸ್ವಾಮಿ ಹೇಳಿದರು.

ಅಂದು ಕಾಂಗ್ರೆಸ್ ನಾಯಕರು “ಇದು ಫಲವತ್ತಾದ ಕೃಷಿ ಭೂಮಿ, ರೈತರು ಭೂಮಿ ನೀಡಬಾರದು, ಇದು ರಿಯಲ್ ಎಸ್ಟೇಟ್ ಮಾಫಿಯಾದ ದಂಧೆ” ಎಂದು ಸದನದಲ್ಲಿ ಭಾಷಣ ಮಾಡಿದ್ದರು. ಆ ಭಾಷಣಗಳ ದಾಖಲೆಗಳು ತಮ್ಮ ಬಳಿ ಇವೆ ಎಂದು ಅವರು ತಿಳಿಸಿದರು.

ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ 2007ರ ಆಗಸ್ಟ್ 1ರಂದು ವಿಧಾನಸಭೆಯಲ್ಲೇ ಬಿಡದಿ ಟೌನ್‌ಶಿಪ್ ಯೋಜನೆಯನ್ನು ಕೈಬಿಡುವುದಾಗಿ ಘೋಷಿಸಿದ್ದೆ. ಅದರ ನಂತರ 2007ರ ಬಳಿಕ ಈ ಯೋಜನೆಯಲ್ಲಿ ತಮ್ಮ ಯಾವುದೇ ಪಾತ್ರ ಇರಲಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ತಮ್ಮನ್ನು ಯೋಜನೆಯ ‘ಪಿತಾಮಹ’ ಎಂದು ಟೀಕಿಸುವ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಈ ಯೋಜನೆಗೆ ಸಂಬಂಧಿಸಿದಂತೆ ರೈತರ ಭೂಸ್ವಾಧೀನಕ್ಕೆ ನನ್ನ ಅವಧಿಯಲ್ಲಿ ಯಾವುದೇ ಆದೇಶ ಹೊರಡಿಸಲಿಲ್ಲ. 2025ರ ಮಾರ್ಚ್ 12ರಂದು ಮೊದಲ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರವೇ. ಅಲ್ಲದೆ, ಈ ವರ್ಷದ ಜೂನ್ 10ರಂದು ಅಂತಿಮ ಅಧಿಸೂಚನೆಯನ್ನೂ ಇದೇ ಸರ್ಕಾರ ಹೊರಡಿಸಿದೆ. ಇದರಲ್ಲಿ ನನ್ನ ಪಾತ್ರ ಎಲ್ಲಿದೆ?” ಎಂದು ಪ್ರಶ್ನಿಸಿದರು.

“ನನಗೆ ಈ ಯೋಜನೆ ಬಗ್ಗೆ ಆಸಕ್ತಿ ಅಥವಾ ಹಪಾಹಪಿ ಇದ್ದಿದ್ದರೆ, 2018ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಅದನ್ನು ಜಾರಿಗೆ ತರಬಹುದಿತ್ತು. ಆದರೆ ಹಾಗೆ ಮಾಡಿಲ್ಲ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಇನ್ನು ಭೇಟಿ ಇಲ್ಲ; ‘ಕೃಷ್ಣಾ’ದಲ್ಲೇ ಸಾರ್ವಜನಿಕರ ಭೇಟಿ – ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು:ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇನ್ನು ಮುಂದೆ ಸಾರ್ವಜನಿಕರು, ಶಾಸಕರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ತಮ್ಮ ಗೃಹ ಕಚೇರಿ ‘ಕೃಷ್ಣಾ’ದಲ್ಲೇ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಮುಖ್ಯಮಂತ್ರಿ, ಅನಿವಾರ್ಯ ಕಾರಣಗಳಿಂದ ಇನ್ನು ಮುಂದೆ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಯಾರನ್ನೂ ಭೇಟಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕರು, ಜನಪ್ರತಿನಿಧಿಗಳು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮನ್ನು ಭೇಟಿ ಮಾಡಲು ಸದಾಶಿವನಗರ ನಿವಾಸಕ್ಕೆ ಬರುವ ಬದಲು, ಮುಖ್ಯಮಂತ್ರಿಗಳ ಗೃಹ ಕಚೇರಿ ‘ಕೃಷ್ಣಾ’ಕ್ಕೆ ಆಗಮಿಸುವಂತೆ ಅವರು ಮನವಿ ಮಾಡಿದ್ದಾರೆ.

ಅಲ್ಲದೆ, ಯಾರೂ ಸದಾಶಿವನಗರ ನಿವಾಸಕ್ಕೆ ಬರುವ ತೊಂದರೆ ತೆಗೆದುಕೊಳ್ಳಬಾರದು ಹಾಗೂ ಈ ನಿರ್ಧಾರವನ್ನು ಅನ್ಯಥಾ ಭಾವಿಸಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನು ಮುಂದೆ ಎಲ್ಲ ಸಾರ್ವಜನಿಕ ಭೇಟಿಗಳು ಹಾಗೂ ಮನವಿ ಸ್ವೀಕಾರ ಸೇರಿದಂತೆ ಅಧಿಕೃತ ಭೇಟಿಗಳು ಮುಖ್ಯಮಂತ್ರಿಗಳ ಗೃಹ ಕಚೇರಿ ‘ಕೃಷ್ಣಾ’ದಲ್ಲೇ ನಡೆಯಲಿವೆ ಎಂದು ತಿಳಿಸಿದ್ದಾರೆ.

error: Content is protected !!