Home Blog

ವಿಜಯಪುರದಲ್ಲಿ ಮತ್ತೆ ಸಕ್ರಿಯವಾಗಿದ್ದ ರೌಡಿಶೀಟರ್ ತುಳಸಿರಾಮನಿಗೆ ಗಡಿಪಾರು ಶಿಕ್ಷೆ!

ವಿಜಯಪುರ: ಭೀಮಾತೀರದ ರೌಡಿಶೀಟರ್ ತುಳಸಿರಾಮನನ್ನು ಗಡಿಪಾರು ಮಾಡಿ ಚಾಮರಾಜನಗರ ಜಿಲ್ಲಾ ಕಾರಾಗೃಹದಲ್ಲಿ ಬಂಧನದಲ್ಲಿಡುವಂತೆ ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ್ ಕೆ ಆದೇಶ ಹೊರಡಿಸಿದ್ದಾರೆ.

ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅರ್ಜನಾಳ ಗ್ರಾಮದವನಾಗಿರುವ ತುಳಸಿರಾಮ, ಪ್ರಸ್ತುತ ವಿಜಯಪುರದ ಗಣೇಶ್ ನಗರದಲ್ಲಿ ವಾಸವಾಗಿದ್ದ. ಭೀಮಾತೀರದ ಹಂತಕ ಬಾಗಪ್ಪ ಹರಿಜನನ ಆಪ್ತ ಶಿಷ್ಯನಾಗಿದ್ದ ತುಳಸಿರಾಮ, ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸ್ ದಾಖಲೆಗಳು ತಿಳಿಸಿವೆ.

ತುಳಸಿರಾಮ ಸಮಾಜದ ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದ ಹಿನ್ನೆಲೆಯಲ್ಲಿ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ.

ಅಕ್ರಮ ಸಾರಾಯಿ, ಮಾದಕ ವಸ್ತು, ಜೂಜು ಹಾಗೂ ಇತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪಗಳು ಆತನ ಮೇಲಿವೆ. ಅಲ್ಲದೆ, ಭಾರತೀಯ ದಂಡ ಸಂಹಿತೆ ಹಾಗೂ ಭಾರತೀಯ ನ್ಯಾಯ ಸಂಹಿತೆಯಡಿ ಹಲವು ಪ್ರಕರಣಗಳು ದಾಖಲಾಗಿವೆ.

ತುಳಸಿ ನಗರದಲ್ಲಿ ನಡೆದ ರವಿ ಮೇಲಿನಕೇರಿ ಹಾಗೂ ಸುಶೀಲ್ ಕಾಳೆ ಹತ್ಯೆ ಪ್ರಕರಣದಲ್ಲಿ ತುಳಸಿರಾಮ ಪ್ರಮುಖ ಆರೋಪಿಯಾಗಿದ್ದ. ಇತ್ತೀಚೆಗೆ ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಇದೀಗ ತುಳಸಿರಾಮನನ್ನು ವಿಜಯಪುರ ಜಿಲ್ಲೆಯಿಂದ ಹೊರಹಾಕಿ, ಚಾಮರಾಜನಗರ ಜಿಲ್ಲಾ ಕಾರಾಗೃಹದಲ್ಲಿ ಇರಿಸಲು ಆದೇಶಿಸಲಾಗಿದೆ.

ಮೂರು ವರ್ಷಗಳ ಬಳಿಕ ದೆಹಲಿಯಲ್ಲಿ ಶುದ್ಧ ಗಾಳಿ; ಸತತ ಮಳೆಯಿಂದ AQI ‘ಉತ್ತಮ’ ಮಟ್ಟಕ್ಕೆ!

0

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸತತ ಎರಡು ದಿನ ಸುರಿದ ಮಳೆಯ ಪರಿಣಾಮ ವಾಯು ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ.

ಮೂರು ವರ್ಷಗಳ ಬಳಿಕ ಮೊದಲ ಬಾರಿಗೆ ಏರ್ ಕ್ವಾಲಿಟಿ ಇಂಡೆಕ್ಸ್ (AQI) ‘ಉತ್ತಮ’ ವರ್ಗಕ್ಕೆ ಇಳಿದಿದ್ದು, ದೆಹಲಿಯ ನಿವಾಸಿಗಳಿಗೆ ನೆಮ್ಮದಿಯ ವಾತಾವರಣ ನಿರ್ಮಾಣವಾಗಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ದೆಹಲಿಯ AQI 48ಕ್ಕೆ ದಾಖಲಾಗಿದೆ. 0ರಿಂದ 50ರ ನಡುವಿನ AQI ಅನ್ನು ‘ಉತ್ತಮ’ ವರ್ಗ ಎಂದು ಪರಿಗಣಿಸಲಾಗುತ್ತದೆ. ಇದಕ್ಕೂ ಮುನ್ನ ನಿನ್ನೆ AQI 59 ದಾಖಲಾಗಿತ್ತು. ನಿರಂತರ ಮಳೆಯ ಪರಿಣಾಮ ಅದು ಮತ್ತಷ್ಟು ಇಳಿಕೆಯಾಗಿ 48ಕ್ಕೆ ತಲುಪಿದೆ.

ತಜ್ಞರ ಪ್ರಕಾರ, ಸತತ ಮಳೆಯಿಂದ ವಾತಾವರಣದಲ್ಲಿದ್ದ PM2.5, PM10 ಸೇರಿದಂತೆ ಧೂಳು ಮತ್ತು ಇತರ ಮಾಲಿನ್ಯಕಾರಿ ಕಣಗಳು ಕೊಚ್ಚಿಹೋಗಿವೆ. ಈ ಪ್ರಕ್ರಿಯೆಯನ್ನು ‘ವೆಟ್ ಡಿಪಾಸಿಷನ್’ ಅಥವಾ ‘ವಾಷ್‌ಔಟ್ ಎಫೆಕ್ಟ್’ ಎಂದು ಕರೆಯಲಾಗುತ್ತದೆ.  2015ರಲ್ಲಿ AQI ವ್ಯವಸ್ಥೆ ಜಾರಿಯಾದ ಬಳಿಕ ದೆಹಲಿಯಲ್ಲಿ ಕೇವಲ 15 ದಿನಗಳು ಮಾತ್ರ ‘ಉತ್ತಮ’ ಗಾಳಿ ಗುಣಮಟ್ಟ ದಾಖಲಾಗಿದೆ. ಸಾಮಾನ್ಯವಾಗಿ ವರ್ಷಕ್ಕೆ ಒಂದು ಅಥವಾ ಎರಡು ದಿನಗಳಷ್ಟೇ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಈ ಹಿಂದೆ 2023ರ ಸೆಪ್ಟೆಂಬರ್ 10ರಂದು ಜಿ-20 ಶೃಂಗಸಭೆಯ ಹಿನ್ನೆಲೆಯಲ್ಲಿ ಜಾರಿಗೊಂಡ ನಿರ್ಬಂಧಗಳು ಹಾಗೂ ಮಳೆಯ ಪರಿಣಾಮ ಉತ್ತಮ ಗಾಳಿ ಗುಣಮಟ್ಟ ದಾಖಲಾಗಿತ್ತು. 2020ರ ಕೋವಿಡ್ ಲಾಕ್‌ಡೌನ್ ಅವಧಿಯಲ್ಲೂ ಮುಂಗಾರು ಸಮಯದಲ್ಲಿ ಐದು ದಿನಗಳ ಕಾಲ ಇದೇ ರೀತಿಯ ಪರಿಸ್ಥಿತಿ ಕಂಡುಬಂದಿತ್ತು.

ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್‌ಮೆಂಟ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಅನುಮಿತಾ ರಾಯ್‌ಚೌಧುರಿ ಮಾತನಾಡಿ, ಮುಂಗಾರು ಮಳೆಯು ವಾಯುಮಾಲಿನ್ಯವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುವ ಪರಿಣಾಮಕಾರಿ ನೈಸರ್ಗಿಕ ಪ್ರಕ್ರಿಯೆಯಾಗಿದೆ. ಆದರೆ ಇದು ಶಾಶ್ವತ ಪರಿಹಾರವಲ್ಲ. ವಾಹನಗಳು, ಕೈಗಾರಿಕೆಗಳು, ನಿರ್ಮಾಣ ಚಟುವಟಿಕೆಗಳು ಹಾಗೂ ತ್ಯಾಜ್ಯ ಸುಡುವಿಕೆಯಿಂದ ಉಂಟಾಗುವ ಮಾಲಿನ್ಯವನ್ನು ನಿಯಂತ್ರಿಸಿದಾಗ ಮಾತ್ರ ದೀರ್ಘಕಾಲಿಕವಾಗಿ ಗಾಳಿ ಗುಣಮಟ್ಟ ಸುಧಾರಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಿಡಕಲ್ ಜಲಾಶಯ ತುಂಬುತ್ತಿದ್ದಂತೆ ಮತ್ತೆ ಜಲಾವೃತವಾದ ಐತಿಹಾಸಿಕ ಹುನ್ನೂರು ವಿಠ್ಠಲ ದೇವಸ್ಥಾನ!

ಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಘಟಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಬೆಳಗಾವಿ ಜಿಲ್ಲೆಯ ಹಿಡಕಲ್ ಜಲಾಶಯ ವೇಗವಾಗಿ ತುಂಬುತ್ತಿದೆ.

ಇದರ ಪರಿಣಾಮ ಹಿನ್ನೀರಿನಲ್ಲಿರುವ ಐತಿಹಾಸಿಕ ಹುನ್ನೂರು ವಿಠ್ಠಲ ದೇವಸ್ಥಾನ ಮತ್ತೊಮ್ಮೆ ಸಂಪೂರ್ಣ ಜಲಾವೃತವಾಗಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುನ್ನೂರು ಗ್ರಾಮದ ಈ ವಿಠ್ಠಲ ದೇವಸ್ಥಾನ 1978ರಲ್ಲಿ ಹಿಡಕಲ್ ಜಲಾಶಯ ನಿರ್ಮಾಣವಾದ ಬಳಿಕ ನೀರಿನಲ್ಲೇ ಉಳಿದಿದೆ. ಗ್ರಾಮವನ್ನು ಸ್ಥಳಾಂತರ ಮಾಡಲಾಗಿದ್ದರೂ, ಐತಿಹಾಸಿಕ ದೇವಾಲಯವನ್ನು ಸ್ಥಳಾಂತರಿಸಿರಲಿಲ್ಲ.

ಈ ವರ್ಷ ಬೇಸಿಗೆಯಲ್ಲಿ ಹಿಡಕಲ್ ಜಲಾಶಯದ ನೀರಿನ ಮಟ್ಟ ಇಳಿಕೆಯಾಗಿದ್ದಾಗ ದೇವಸ್ಥಾನ ಮತ್ತೆ ಭಕ್ತರಿಗೆ ದರ್ಶನ ನೀಡಿತ್ತು. ಸಾವಿರಾರು ಭಕ್ತರು ಭೇಟಿ ನೀಡಿ ಶ್ರೀ ವಿಠ್ಠಲನ ದರ್ಶನ ಪಡೆದಿದ್ದರು. ಆದರೆ ಈಗ ಮಳೆ ತೀವ್ರಗೊಂಡು ಜಲಾಶಯಕ್ಕೆ ನೀರಿನ ಹರಿವು ಹೆಚ್ಚಾದ ಪರಿಣಾಮ ದೇವಸ್ಥಾನ ಮತ್ತೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ.

ವರ್ಷಗಳ ಕಾಲ ನೀರಿನಲ್ಲೇ ಇದ್ದರೂ ದೇವಸ್ಥಾನದ ಕಟ್ಟಡಕ್ಕೆ ಯಾವುದೇ ಗಮನಾರ್ಹ ಹಾನಿಯಾಗದಿರುವುದು ವಿಶೇಷ. ಇದೇ ಕಾರಣದಿಂದ ಈ ಅಪರೂಪದ ದೇವಾಲಯವನ್ನು ನೋಡಲು ಹಾಗೂ ದರ್ಶನ ಪಡೆಯಲು ಪ್ರತಿ ವರ್ಷ ಸಾವಿರಾರು ಭಕ್ತರು ಆಗಮಿಸುತ್ತಾರೆ.

ಸದ್ಯ ಘಟಪ್ರಭಾ ನದಿಯ ನೀರಿನ ಹರಿವು ನಿರಂತರವಾಗಿ ಹೆಚ್ಚುತ್ತಿದ್ದು, ಹಿಡಕಲ್ ಜಲಾಶಯವೂ ಭರ್ತಿಯಾಗುವ ಹಂತ ತಲುಪಿದೆ. ಹಿನ್ನೀರಿನ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಸ್ಥಳೀಯ ಆಡಳಿತ ಸೂಚನೆ ನೀಡಿದೆ.

GBA ಚುನಾವಣೆ ವಿಳಂಬ ಸರಿಯಲ್ಲ; ನ್ಯಾಯಾಲಯದ ಆದೇಶವನ್ನು ಸರ್ಕಾರ ಗೌರವಿಸಬೇಕು – ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಚುನಾವಣೆ ವಿಚಾರದಲ್ಲಿ ನ್ಯಾಯಾಲಯದ ಆದೇಶವನ್ನು ರಾಜ್ಯ ಸರ್ಕಾರ ಗೌರವಿಸಿ ನಿಗದಿತ ಅವಧಿಯೊಳಗೆ ಚುನಾವಣೆ ನಡೆಸಬೇಕು ಎಂದು ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.

ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಜನರು ಬಹಳ ದಿನಗಳಿಂದ ಸ್ಥಳೀಯ ಸಂಸ್ಥೆ ಚುನಾವಣೆಗಾಗಿ ಕಾಯುತ್ತಿದ್ದಾರೆ. ಆದರೆ ಸೋಲಿನ ಭೀತಿಯಿಂದ ಕಾಂಗ್ರೆಸ್ ಸರ್ಕಾರ ಚುನಾವಣೆ ಮುಂದೂಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

“ಬೆಂಗಳೂರು ಅಭಿವೃದ್ಧಿಯ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮಳೆ ಬಂದರೆ ರಸ್ತೆಗಳು ಜಲಾವೃತವಾಗುತ್ತವೆ, ಜನರು ದೋಣಿಯಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗುಂಡಿಗಳು, ಕಸದ ಸಮಸ್ಯೆ ಹಾಗೂ ಭ್ರಷ್ಟಾಚಾರದಿಂದ ಜನರು ಬೇಸತ್ತಿದ್ದಾರೆ. ಇದೇ ಕಾರಣಕ್ಕೆ ಚುನಾವಣೆಯಲ್ಲಿ ಸೋಲುವ ಭಯದಿಂದ ನಗರವನ್ನು ಐದು ಭಾಗಗಳಾಗಿ ವಿಭಜಿಸಿ, ಕನಿಷ್ಠ ಒಂದೆರಡು ಪ್ರದೇಶಗಳಲ್ಲಾದರೂ ಗೆಲುವು ಸಾಧಿಸುವ ಲೆಕ್ಕಾಚಾರ ನಡೆಸಲಾಗಿದೆ” ಎಂದು ಅವರು ಟೀಕಿಸಿದರು.

“ಈಗ ಚುನಾವಣೆ ಎದುರಿಸುವುದು ಕಷ್ಟ ಎನ್ನುವುದು ಸರ್ಕಾರಕ್ಕೆ ಅರಿವಾಗಿದೆ. ಆದ್ದರಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನೆಪ ಮುಂದಿಟ್ಟು ಸುಪ್ರೀಂ ಕೋರ್ಟ್‌ಗೆ ಕಾಲಾವಕಾಶ ಕೋರಲಾಗಿದೆ” ಎಂದು ಆರೋಪಿಸಿದರು.

ಎಸ್‌ಐಆರ್ ಪ್ರಕ್ರಿಯೆ ಕುರಿತು ಮಾತನಾಡಿದ ಅವರು, “ಈ ಪ್ರಕ್ರಿಯೆಯಿಂದ ಯಾರ ಮತದಾನದ ಹಕ್ಕೂ ಕಸಿದುಕೊಳ್ಳುವುದಿಲ್ಲ. ಮತದಾರರ ಪಟ್ಟಿಯಲ್ಲಿರುವ ಮೃತರ ಹೆಸರುಗಳನ್ನು ತೆಗೆದುಹಾಕುವುದು ಹಾಗೂ ಅರ್ಹರಲ್ಲದವರ ಹೆಸರುಗಳನ್ನು ತೆರವುಗೊಳಿಸುವುದು ಅಗತ್ಯ. ಹೊರ ರಾಜ್ಯಗಳಿಂದ ಬಂದು ಅನಧಿಕೃತವಾಗಿ ಹೆಸರು ಸೇರಿಸಿಕೊಂಡಿದ್ದರೆ ಅವನ್ನೂ ಪರಿಶೀಲಿಸಲೇಬೇಕು” ಎಂದರು.

ಎಸ್‌ಐಆರ್ ವೇಳೆ ಕೆಲವರು ಗುಂಪು ಸೇರಿ ಅರ್ಜಿಗಳನ್ನು ಭರ್ತಿ ಮಾಡುತ್ತಿರುವ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದೇವೆ. ಬಿಎಲ್‌ಒಗಳು ಹಾಗೂ ಬಿಎಲ್‌ಎ-2 ಅಧಿಕಾರಿಗಳು ಮನೆಮನೆಗೆ ತೆರಳಿ ಪರಿಶೀಲನೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಬೆಂಗಳೂರು ಅಭಿವೃದ್ಧಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಅಭಿವೃದ್ಧಿ ಚರ್ಚೆಯ ವಿಷಯವಲ್ಲ, ಅದು ಕೆಲಸ ಮಾಡಿ ತೋರಿಸಬೇಕಾದ ಜವಾಬ್ದಾರಿ. ಕಳೆದ ಮೂರು ವರ್ಷಗಳಿಂದ ಸರ್ಕಾರ ಏನು ಮಾಡುತ್ತಿತ್ತು? ಈಗ ಮುಖ್ಯಮಂತ್ರಿ ಆಗಿರುವವರೇ ಆಗಾಗಲೂ ಬೆಂಗಳೂರಿನ ಜವಾಬ್ದಾರಿ ಹೊಂದಿದ್ದರು. ಆಗ ನಗರದ ಸಮಸ್ಯೆಗಳು ಕಾಣಲಿಲ್ಲವೇ? ಈಗ ನಾಟಕ ಮಾಡುವುದನ್ನು ಬಿಟ್ಟು ಕೆಲಸಕ್ಕೆ ಮುಂದಾಗಲಿ” ಎಂದು ವಾಗ್ದಾಳಿ ನಡೆಸಿದರು.

ಮಳೆಗಾಲದಲ್ಲಿ ನಗರದಲ್ಲಿ ನೀರು ಸರಾಗವಾಗಿ ಹರಿಯುವಂತೆ ಚರಂಡಿ ಮತ್ತು ಕಸದ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು. ಇಲ್ಲವಾದರೆ ಮತ್ತೆ ಜನರು ದೋಣಿಯಲ್ಲಿ ಸಂಚರಿಸುವ ಪರಿಸ್ಥಿತಿ ಎದುರಾಗಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕರೂರು ಕಾಲ್ತುಳಿತ ನನ್ನ ರಾಜಕೀಯ ಜೀವನದ ಆಳವಾದ ಗಾಯ: ಸ್ಮಾರಕ ನಿರ್ಮಾಣ ಘೋಷಿಸಿದ ಸಿಎಂ ವಿಜಯ್

ತಮಿಳುನಾಡು: ಕರೂರು ಕಾಲ್ತುಳಿತ ದುರಂತವು ತನ್ನ ರಾಜಕೀಯ ಜೀವನದ ಅತ್ಯಂತ ನೋವಿನ ಅಧ್ಯಾಯವಾಗಿದ್ದು, ಆ ಘಟನೆ ಎಂದಿಗೂ ಮರೆಯಲಾಗದ ಆಳವಾದ ಗಾಯವಾಗಿ ಉಳಿಯಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಹಾಗೂ ಟಿವಿಕೆ ಮುಖ್ಯಸ್ಥ ಜೋಸೆಫ್ ವಿಜಯ್ ಹೇಳಿದ್ದಾರೆ.

ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಕರೂರಿಗೆ ಭೇಟಿ ನೀಡಿದ ವಿಜಯ್, ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿ, ಕಾಲ್ತುಳಿತ ದುರಂತಕ್ಕೆ ಪೊಲೀಸರು ಜನಸಂದಣಿಯನ್ನು ಸಮರ್ಪಕವಾಗಿ ನಿಯಂತ್ರಿಸಲು ವಿಫಲರಾದರು ಎಂದು ಆರೋಪಿಸಿದರು. ಈ ದುರಂತದ ಹೊಣೆಯನ್ನು ತಮ್ಮ ಮೇಲೆ ಹೊರಿಸಲು ಡಿಎಂಕೆ ಸರ್ಕಾರ ಪ್ರಯತ್ನಿಸಿತು ಎಂದು ಕೂಡ ಟೀಕಿಸಿದರು.

ಕಾರ್ಯಕ್ರಮದ ವೇಳೆ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಿದ ವಿಜಯ್ ಭಾವುಕರಾದರು. “ನನ್ನ ರಾಜಕೀಯ ಜೀವನದಲ್ಲಿ ಎಷ್ಟೇ ಯಶಸ್ಸು ಸಿಕ್ಕರೂ, ಅಮಾಯಕ ಜೀವಗಳ ಸಾವಿನಿಂದಾದ ಈ ನೋವನ್ನು ಅಳಿಸಲು ಸಾಧ್ಯವಿಲ್ಲ” ಎಂದು ಹೇಳಿದರು.

“ಮನುಷ್ಯ ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಕೆಲವು ಗಾಯಗಳು ಎಂದಿಗೂ ಮಾಸುವುದಿಲ್ಲ. ನನ್ನ ಜೀವನದಲ್ಲಿ ಅಂಥ ಅತಿ ದೊಡ್ಡ ಗಾಯವೆಂದರೆ ಕರೂರು ಕಾಲ್ತುಳಿತ ದುರಂತ” ಎಂದು ವಿಜಯ್ ಹೇಳಿದರು.

ಚುನಾವಣಾ ಪ್ರಚಾರದ ವೇಳೆ ರಾಜ್ಯದಾದ್ಯಂತ ಜನರೊಂದಿಗೆ ನೇರ ಸಂವಾದ ನಡೆಸುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪೆರಂಬಲೂರಿನಲ್ಲಿ ಜನಸಂದಣಿ ಹೆಚ್ಚಿದ್ದ ಕಾರಣ ಸಭೆ ರದ್ದುಗೊಳಿಸುವಂತೆ ಪೊಲೀಸರು ಸಲಹೆ ನೀಡಿದ್ದರು. ಆದರೆ, ಕರೂರಿನಲ್ಲಿ ಅದಕ್ಕಿಂತ ಹೆಚ್ಚಿನ ಜನರು ಸೇರಿದ್ದರೂ ಯಾವುದೇ ಎಚ್ಚರಿಕೆ ನೀಡಲಿಲ್ಲ ಎಂದು ಆರೋಪಿಸಿದರು.

ನಮಕ್ಕಲ್ ಸಭೆಯ ಬಳಿಕ ಕರೂರಿಗೆ ಆಗಮಿಸಿದ್ದೇವೆ. ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಭಾವಿಸಿದ್ದರೆ ಕಾರ್ಯಕ್ರಮವನ್ನು ರದ್ದುಗೊಳಿಸುವ ಅಧಿಕಾರ ಪೊಲೀಸರಿಗೆ ಇತ್ತು. ಆದರೆ ಅವರು ಹಾಗೆ ಮಾಡದೆ ನಮ್ಮನ್ನು ಸ್ಥಳಕ್ಕೆ ಕರೆತಂದರು. ನಾನು ಅವರನ್ನು ಸಂಪೂರ್ಣವಾಗಿ ನಂಬಿದ್ದೆ. ಅಂದು ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ಕೂಡ ತಿಳಿಸಿದ್ದೆ. ಇಂತಹ ದುರಂತ ಸಂಭವಿಸುತ್ತದೆ ಎಂದು ಊಹಿಸಿರಲಿಲ್ಲ ಎಂದು ವಿಜಯ್ ಹೇಳಿದರು.

ಘಟನೆಗೆ ಯಾರು ಹೊಣೆ? ಇಷ್ಟೊಂದು ದೊಡ್ಡ ಜನಸಮೂಹಕ್ಕೆ ಅಗತ್ಯ ಪೊಲೀಸ್ ಭದ್ರತೆ ಒದಗಿಸಲಾಗಿತ್ತೇ ಎಂಬ ಪ್ರಶ್ನೆಯನ್ನು ಕೂಡ ಅವರು ಎತ್ತಿದರು. ತಮ್ಮನ್ನು ನೋಡಲು ಬಂದಿದ್ದ ಹಲವು ಮಕ್ಕಳು ಪ್ರಾಣ ಕಳೆದುಕೊಂಡಿರುವುದು ಅತ್ಯಂತ ದುಃಖದ ಸಂಗತಿ ಎಂದು ಹೇಳಿದರು.

ಕರೂರು ಕಾಲ್ತುಳಿತದಲ್ಲಿ ಮೃತಪಟ್ಟವರ ಗೌರವಾರ್ಥ ಸ್ಮಾರಕ ನಿರ್ಮಿಸಲಾಗುವುದು ಎಂದು ವಿಜಯ್ ಘೋಷಿಸಿದರು. “ಈ ದುರಂತವನ್ನು ಮುಂದಿನ ಪೀಳಿಗೆ ನೆನಪಿಸಿಕೊಳ್ಳಬೇಕು. ಇಂತಹ ಘಟನೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸುವ ಪ್ರವೃತ್ತಿಗೆ ತೆರೆ ಬೀಳಬೇಕು. ಈ ಉದ್ದೇಶದಿಂದ ಟಿವಿಕೆ ಕರೂರಿನಲ್ಲಿ ಸ್ಮಾರಕ ನಿರ್ಮಿಸಲಿದೆ” ಎಂದು ಅವರು ತಿಳಿಸಿದರು.

ತುಂಡಾದ ತಂತಿ ತಗುಲಿ ಮಹಿಳೆ ದುರ್ಮರಣ: ಜೆಸ್ಕಾಂ ವಿರುದ್ಧ ಆಕ್ರೋಶ

0

ಬೀದರ್: ಗಾಳಿಗೆ ತುಂಡಾಗಿ ಜಮೀನಿನೊಳಗೆ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಕೂಲಿ ಕಾರ್ಮಿಕ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಭಾಲ್ಕಿ ತಾಲೂಕಿನ ಮಳಚಾಪುರ ಗ್ರಾಮದಲ್ಲಿ ನಡೆದಿದೆ. ಈ ದುರ್ಘಟನೆಗೆ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮೃತ ತುಳಸಮ್ಮ (50) ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಜಮೀನಿನಲ್ಲಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ ಅದರ ಸಂಪರ್ಕಕ್ಕೆ ಬಂದಿದ್ದಾರೆ. ಪರಿಣಾಮ ವಿದ್ಯುತ್ ಪ್ರವಹಿಸಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ರವಾನಿಸಿದರು.

ಆಸ್ಪತ್ರೆ ಎದುರು ಕುಟುಂಬಸ್ಥರು ಪ್ರತಿಭಟನೆಯ ಸ್ವರ ಎತ್ತಿ, ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದೇ ಸಾವಿಗೆ ಕಾರಣ ಎಂದು ಆರೋಪಿಸಿದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಘಟನೆಯ ಸಂಪೂರ್ಣ ವಿವರಗಳನ್ನು ಕಲೆಹಾಕುತ್ತಿದ್ದಾರೆ.

ನಾಲ್ಕು ಮತದಾರರ ಗುರುತಿನ ಚೀಟಿ ಪ್ರಕರಣ: ನಟ ಪ್ರಕಾಶ್ ರಾಜ್ʼಗೆ ಜಾಮೀನು ಮಂಜೂರು

ಬೆಂಗಳೂರು: ನಾಲ್ಕು ಮತದಾರರ ಗುರುತಿನ ಚೀಟಿ (ವೋಟರ್ ಐಡಿ) ಹೊಂದಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನಟ ಪ್ರಕಾಶ್ ರಾಜ್‌ಗೆ ಬಿಗ್ ರಿಲೀಫ್ ಸಿಕ್ಕಿದ್ದು, 48ನೇ ಎಸಿಜೆಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ (NBW) ಜಾರಿಗೊಳಿಸಿದ್ದರಿಂದ ಪ್ರಕಾಶ್ ರಾಜ್ ಬಂಧನದ ಭೀತಿ ಎದುರಿಸುತ್ತಿದ್ದರು. ಇಂದು ಅವರ ಪರ ವಕೀಲರು ವಾರಂಟ್ ರದ್ದುಗೊಳಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜೊತೆಗೆ ಪ್ರಕಾಶ್ ರಾಜ್ ಸ್ವತಃ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಮಧ್ಯಾಹ್ನ ವಿಚಾರಣೆ ನಡೆಸಿದ 48ನೇ ಎಸಿಜೆಎಂ ನ್ಯಾಯಾಲಯ, ₹4,000 ನಗದು ಶ್ಯೂರಿಟಿ ಸಲ್ಲಿಸುವ ಷರತ್ತಿನೊಂದಿಗೆ ಪ್ರಕಾಶ್ ರಾಜ್‌ಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಏನಿದು ಪ್ರಕರಣ?

ಪ್ರಕಾಶ್ ರಾಜ್ ಹೆಸರಿನಲ್ಲಿ ಕರ್ನಾಟಕ, ತಮಿಳುನಾಡು ಹಾಗೂ ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಒಟ್ಟು ನಾಲ್ಕು ಮತದಾರರ ಗುರುತಿನ ಚೀಟಿಗಳಿವೆ ಎಂಬ ಆರೋಪ ಕೇಳಿಬಂದಿತ್ತು.

ಈ ಸಂಬಂಧ ವಕೀಲ ದಿಲೀಪ್ ಕುಮಾರ್ ಅವರು 2019ರಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತರು ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಲಾಗಿತ್ತು.

ಅಲ್ಲಿಯೂ ಕ್ರಮವಾಗದ ಕಾರಣ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಪ್ರಕರಣದ ವಿಚಾರಣೆಗೆ ನ್ಯಾಯಾಲಯ ಪ್ರಕಾಶ್ ರಾಜ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ ಸಮನ್ಸ್‌ಗೆ ಸ್ಪಂದಿಸದೇ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಲಾಗಿತ್ತು.

ಈಗ ವಾರಂಟ್ ರದ್ದುಗೊಳಿಸುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರಕಾಶ್ ರಾಜ್‌ಗೆ ಜಾಮೀನು ಮಂಜೂರು ಮಾಡಿ ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಸೋನಿಯಾ ಬಗ್ಗೆ ಮಾತನಾಡುವ ಮೊದಲು ಯಡಿಯೂರಪ್ಪ ಇತಿಹಾಸ ನೆನಪಿಸಿಕೊಳ್ಳಿ: ವಿಜಯೇಂದ್ರ ವಿರುದ್ಧ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರು: ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾಡಿರುವ ಟೀಕೆಗಳಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸೋನಿಯಾ ಗಾಂಧಿ ವಿರುದ್ಧ ಯಾವುದೇ ಪ್ರಕರಣಗಳಿಲ್ಲವೇ ಎಂದು ಪ್ರಶ್ನಿಸುವ ಮೊದಲು, ಚೆಕ್ ಮೂಲಕ ಲಂಚ ಪಡೆದ ಪ್ರಕರಣದಲ್ಲಿ ಜೈಲು ಸೇರಿದ್ದ ಬಿ.ಎಸ್. ಯಡಿಯೂರಪ್ಪ ಅವರ ಇತಿಹಾಸವನ್ನು ನೆನಪಿಸಿಕೊಳ್ಳಬೇಕು” ಎಂದು ವಾಗ್ದಾಳಿ ನಡೆಸಿದರು.

ವಿಜಯೇಂದ್ರ ಅವರನ್ನು ಉಲ್ಲೇಖಿಸಿ, “ಬೇಬಿ ಯಡಿಯೂರಪ್ಪ” ಎಂದು ವ್ಯಂಗ್ಯವಾಡಿದ ಹರಿಪ್ರಸಾದ್, “ತಮ್ಮ ನಾಯಕರ ಮೇಲಿರುವ ಆರೋಪಗಳಿಗೆ ಮೊದಲು ಉತ್ತರ ನೀಡಿದ್ದರೆ ಉತ್ತಮವಾಗುತ್ತಿತ್ತು” ಎಂದು ಟೀಕಿಸಿದರು.

ರಾಷ್ಟ್ರೀಯ ಹೆರಾಲ್ಡ್ ಪ್ರಕರಣದ ಕುರಿತು ಮಾತನಾಡಿದ ಅವರು, “ಈ ಪ್ರಕರಣ ಕಳೆದ ಹತ್ತು ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ನ್ಯಾಷನಲ್ ಹೆರಾಲ್ಡ್ ಕಂಪನಿ ಕಾಯ್ದೆಯ ಪ್ರಕಾರ ಇದರಲ್ಲಿ ಹಣವನ್ನು ತೆಗೆದುಕೊಳ್ಳುವ ಅಥವಾ ನೀಡುವ ಪ್ರಶ್ನೆಯೇ ಇಲ್ಲ” ಎಂದು ಹೇಳಿದರು.

ಕೇಂದ್ರ ಸರ್ಕಾರದ ಬಳಿ ಎಲ್ಲಾ ತನಿಖಾ ಸಂಸ್ಥೆಗಳಿರುವುದನ್ನು ಉಲ್ಲೇಖಿಸಿದ ಅವರು, “ಯಾವುದೇ ಅವ್ಯವಹಾರ ನಡೆದಿರುವುದು ಸಾಬೀತಾಗಿದ್ದರೆ, ಅದನ್ನು ನ್ಯಾಯಾಲಯದ ಮುಂದೆ ಸಾಬೀತುಪಡಿಸಲಿ” ಎಂದು ಬಿಜೆಪಿ ಹಾಗೂ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದರು.

ರಾಜ್‌ಪಾಲ್ ಯಾದವ್‌ಗೆ ಹೈಕೋರ್ಟ್‌ನಿಂದ ಭಾರೀ ಆಘಾತ: ಜೈಲು ಶಿಕ್ಷೆ ಎತ್ತಿಹಿಡಿದ ಕೋರ್ಟ್

ನವದೆಹಲಿ: ಚೆಕ್‌ ಬೌನ್ಸ್ ಪ್ರಕರಣಗಳಲ್ಲಿ ಸಿಲುಕಿರುವ ಬಾಲಿವುಡ್ ನಟ ರಾಜ್‌ಪಾಲ್ ಯಾದವ್‌ಗೆ ದೆಹಲಿ ಹೈಕೋರ್ಟ್ ಭಾರೀ ಆಘಾತ ನೀಡಿದೆ. ಕೆಳ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಎತ್ತಿಹಿಡಿದಿರುವ ಹೈಕೋರ್ಟ್, 7 ಪ್ರಕರಣಗಳಲ್ಲಿ ತಲಾ ಮೂರು ತಿಂಗಳ ಸಾದಾ ಜೈಲು ಶಿಕ್ಷೆಯನ್ನು ಕಾಯಂ ಮಾಡಿದೆ. ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಾಗಲಿದ್ದು, ಪ್ರತಿ ಪ್ರಕರಣದಲ್ಲೂ ದೂರುದಾರರಿಗೆ ತಲಾ 1.05 ಕೋಟಿ ರೂಪಾಯಿ ಪಾವತಿಸುವಂತೆ ನಟನಿಗೆ ಆದೇಶಿಸಲಾಗಿದೆ.

ಪ್ರಕರಣದಲ್ಲಿ ರಾಜ್‌ಪಾಲ್ ಯಾದವ್ ಅವರ ಪತ್ನಿ ರಾಧಾ ಯಾದವ್ ಅವರಿಗೂ ಭಾರೀ ಆರ್ಥಿಕ ಹೊರೆ ಬಿದ್ದಿದೆ. ಪ್ರತಿ ಪ್ರಕರಣಕ್ಕೂ ತಲಾ 5.51 ಕೋಟಿ ರೂಪಾಯಿ ಪರಿಹಾರ ಪಾವತಿಸಲು ಹೈಕೋರ್ಟ್ ನಿರ್ದೇಶನ ನೀಡಿದ್ದು, ಈ ಹಿಂದೆ ಪಾವತಿಸಿದ್ದ 2.25 ಕೋಟಿ ರೂಪಾಯಿಯನ್ನು ಬಾಕಿ ಮೊತ್ತದಲ್ಲಿ ಸರಿಹೊಂದಿಸಲಾಗುವುದು ಎಂದು ತಿಳಿಸಿದೆ.

ವಿಚಾರಣೆ ವೇಳೆ ಸಂಧಾನದ ಮೂಲಕ ಬಾಕಿ ಹಣ ಪಾವತಿಸುವುದಾಗಿ ರಾಜ್‌ಪಾಲ್ ಯಾದವ್ ಹಲವು ಬಾರಿ ನ್ಯಾಯಾಲಯಕ್ಕೆ ಭರವಸೆ ನೀಡಿದ್ದರು. ಆದರೆ, ನೀಡಿದ್ದ ಮಾತನ್ನು ಉಳಿಸಿಕೊಳ್ಳಲು ವಿಫಲರಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಕಠಿಣ ನಿಲುವು ತಾಳಿತು. ಅಂತಿಮ ಹಂತದಲ್ಲಿ ದೂರುದಾರ ಸಂಸ್ಥೆ ಮೆಸರ್ಸ್ ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ಗೆ ಇನ್ನು ಯಾವುದೇ ಹಣ ಪಾವತಿಸಲು ಸಾಧ್ಯವಿಲ್ಲ, ತಾವು ಜೈಲು ಶಿಕ್ಷೆ ಅನುಭವಿಸಲು ಸಿದ್ಧ ಎಂದು ಅವರು ತಿಳಿಸಿದ್ದಾಗಿ ದಾಖಲಾಗಿದೆ.

ಆದಾಗ್ಯೂ, ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಶಿಕ್ಷೆ ಜಾರಿಗೆ ತಡೆ ಮುಂದುವರಿಯಲಿದೆ.

ವಿಚಾರಣೆ ವೇಳೆ ನ್ಯಾಯಾಲಯ, “ಯಾವುದೇ ವ್ಯಕ್ತಿ ಸಿನಿಮಾ ಕ್ಷೇತ್ರದವರಾಗಿದ್ದಾರೆ ಎಂಬ ಕಾರಣಕ್ಕೆ ವಿಶೇಷ ಸೌಲಭ್ಯ ನೀಡಲು ಸಾಧ್ಯವಿಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರು” ಎಂದು ಕಠಿಣ ಅಭಿಪ್ರಾಯ ವ್ಯಕ್ತಪಡಿಸಿದೆ.

ರಾಮಮಂದಿರ ದೇಣಿಗೆ ಎಣಿಕೆಗೆ ಕಠಿಣ ನಿಯಮ; ಸಾಮೂಹಿಕ ರಾಜೀನಾಮೆ ನೀಡಿದ 23 ಸಿಬ್ಬಂದಿ

0

ಅಯೋಧ್ಯೆ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜಾರಿಗೊಳಿಸಿರುವ ಕಠಿಣ ಸುರಕ್ಷತಾ ನಿಯಮಗಳಿಗೆ ಅಸಮಾಧಾನ ವ್ಯಕ್ತಪಡಿಸಿ, ದೇಣಿಗೆ ಎಣಿಕೆ ಕಾರ್ಯದಲ್ಲಿ ನಿಯೋಜಿತರಾಗಿದ್ದ 23 ಬ್ಯಾಂಕ್ ಸಿಬ್ಬಂದಿ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ.

ಅಯೋಧ್ಯೆಯ ರಾಮಮಂದಿರಕ್ಕೆ ದೇಶ-ವಿದೇಶಗಳಿಂದ ಪ್ರತಿದಿನ ಭಾರೀ ಪ್ರಮಾಣದಲ್ಲಿ ನಗದು ಹಾಗೂ ಚಿನ್ನಾಭರಣಗಳ ರೂಪದಲ್ಲಿ ಕಾಣಿಕೆ ಹರಿದುಬರುತ್ತಿದೆ. ದೇಣಿಗೆ ಎಣಿಕೆ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಮತ್ತು ಭದ್ರತೆ ಕಾಪಾಡುವ ಉದ್ದೇಶದಿಂದ ಟ್ರಸ್ಟ್ ಇತ್ತೀಚೆಗೆ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ.

ಹೊಸ ನಿಯಮದ ಪ್ರಕಾರ, ಕಾಣಿಕೆ ಎಣಿಕೆ ಕಾರ್ಯದಲ್ಲಿ ತೊಡಗುವ ಸಿಬ್ಬಂದಿ ಯಾವುದೇ ಜೇಬುಗಳಿರುವ ಉಡುಪು ಧರಿಸುವಂತಿಲ್ಲ. ಜೇಬಿಲ್ಲದ ಬಟ್ಟೆ ಧರಿಸಿ ಮಾತ್ರ ಎಣಿಕೆ ಕೊಠಡಿಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ.

ಇದರ ಜೊತೆಗೆ, ಎಣಿಕೆ ಕೊಠಡಿಗೆ ಪ್ರವೇಶಿಸುವ ಮೊದಲು ಮತ್ತು ಹೊರಬರುವ ವೇಳೆ ಸಿಬ್ಬಂದಿಗೆ ಪೊಲೀಸರು ಸಂಪೂರ್ಣ ತಪಾಸಣೆ ನಡೆಸುತ್ತಿದ್ದಾರೆ. ಬೆಲ್ಟ್, ಪರ್ಸ್ ಸೇರಿದಂತೆ ಯಾವುದೇ ವೈಯಕ್ತಿಕ ವಸ್ತುಗಳನ್ನು ಒಳಗೆ ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ಸಂಪೂರ್ಣ ಎಣಿಕೆ ಪ್ರಕ್ರಿಯೆ ಹೈಟೆಕ್ ಸಿಸಿಟಿವಿ ಕ್ಯಾಮೆರಾಗಳ ನಿಗಾದಲ್ಲೇ ನಡೆಯುತ್ತಿದೆ.

ರಾಮಮಂದಿರದ ದೇಣಿಗೆ ಎಣಿಕೆ ಕಾರ್ಯಕ್ಕೆ ವಿವಿಧ ಬ್ಯಾಂಕುಗಳ, ವಿಶೇಷವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ ಹೊಸ ನಿಯಮಗಳು ಮತ್ತು ತಪಾಸಣಾ ಕ್ರಮಗಳು ತಮ್ಮ ಪ್ರಾಮಾಣಿಕತೆಯನ್ನೇ ಪ್ರಶ್ನಿಸುವಂತಿವೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.

ಇದಲ್ಲದೆ, ಹಿಂದೆ ಎರಡು ಪಾಳಿಗಳಲ್ಲಿ ನಡೆಯುತ್ತಿದ್ದ ಕೆಲಸವನ್ನು ಈಗ ಒಂದೇ ಪಾಳಿಗೆ ಸೀಮಿತಗೊಳಿಸಲಾಗಿದೆ. ಕರ್ತವ್ಯದ ಅವಧಿಯನ್ನು ಆರು ಗಂಟೆಯಿಂದ ಒಂಬತ್ತು ಗಂಟೆಗೆ ಹೆಚ್ಚಿಸಲಾಗಿದೆ. ವೇತನದಲ್ಲಿ ಕಡಿತ, ಒಂದೇ ಕೆಲಸಕ್ಕೆ ಬೇರೆಬೇರೆ ಸಂಬಳ ಹಾಗೂ ಮಾಸಿಕ ರಜೆಗಳ ಸಂಖ್ಯೆಯಲ್ಲೂ ಕಡಿತ ಮಾಡಲಾಗಿದೆ ಎಂದು ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂದಿರಕ್ಕೆ ಪ್ರತಿದಿನ ಲಕ್ಷಾಂತರ ರೂಪಾಯಿ ಕಾಣಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ಅಥವಾ ಹಣದ ದುರುಪಯೋಗಕ್ಕೆ ಅವಕಾಶ ನೀಡಬಾರದು ಎಂಬ ಉದ್ದೇಶದಿಂದಲೇ ಈ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದ್ದೇವೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ಪಷ್ಟಪಡಿಸಿದೆ.

ಈ ಹಿಂದೆ ದೇಣಿಗೆ ದುರುಪಯೋಗದ ಕುರಿತು ವದಂತಿಗಳು ಹರಿದಾಡಿದ್ದ ಕಾರಣ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ.

ರಾಜೀನಾಮೆ ನೀಡಿರುವ ಸಿಬ್ಬಂದಿಯ ಸ್ಥಾನಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದ್ದು, ದೇಣಿಗೆ ಎಣಿಕೆ ಕಾರ್ಯ ಎಂದಿನಂತೆ ಮುಂದುವರಿದಿದೆ.

ಭವಿಷ್ಯದಲ್ಲಿ ಮಾನವ ಹಸ್ತಕ್ಷೇಪವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಕೈಯಿಂದ ಹಣ ಎಣಿಸುವ ಪದ್ಧತಿಯನ್ನು ಹಂತ ಹಂತವಾಗಿ ಸ್ಥಗಿತಗೊಳಿಸಿ, ಅತ್ಯಾಧುನಿಕ ನೋಟು ಎಣಿಕೆ ಯಂತ್ರಗಳು ಹಾಗೂ ಸ್ವಯಂಚಾಲಿತ ತಂತ್ರಜ್ಞಾನವನ್ನು ಅಳವಡಿಸಲು ಟ್ರಸ್ಟ್ ಯೋಜನೆ ರೂಪಿಸಿದೆ.