Home Blog

ಕಾನೂನು ಸುವ್ಯವಸ್ಥೆಗೆ ಧಕ್ಕೆ ಆರೋಪ: ಗದಗ ಜಿಲ್ಲೆಯಿಂದ ರೌಡಿಶೀಟರ್ ಪ್ರಕಾಶ್ ಗಡಿಪಾರು!

0

ಗದಗ: ಗಲಾಟೆ, ಜೀವ ಬೆದರಿಕೆ, ಜಾತಿ ನಿಂದನೆ, ಸಾರ್ವಜನಿಕ ಆಸ್ತಿಗೆ ಹಾನಿ ಸೇರಿದಂತೆ ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಪ್ರಕಾಶ್ ನನ್ನು ಗದಗ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.

ಈ ಕುರಿತು ಗದಗ ಎಸ್ಪಿ ರೋಹನ್ ಜಗದೀಶ್ ಪ್ರಕಟಣೆ ನೀಡಿದ್ದು, ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಪೊಲೀಸ್ ಇಲಾಖೆಯ ಮಾಹಿತಿಯಂತೆ, ಪ್ರಕಾಶ್ ವಿರುದ್ಧ ಈಗಾಗಲೇ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಬಂಧನ ಹಾಗೂ ನ್ಯಾಯಾಂಗ ಬಂಧನಕ್ಕೊಳಗಾದ ಬಳಿಕವೂ ಆತನ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿರಲಿಲ್ಲ. ಮತ್ತೆ ಮತ್ತೆ ಸಮಾಜಘಾತಕ ಚಟುವಟಿಕೆಗಳಲ್ಲಿ ತೊಡಗುತ್ತಿದ್ದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ಗಡಿಪಾರು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಬಳಿಕ ಸಮಗ್ರ ವಿಚಾರಣೆ ನಡೆಸಿದ ಅಧಿಕಾರಿಗಳು ಗದಗ ಜಿಲ್ಲೆಯಿಂದ ಗಡಿಪಾರು ಮಾಡುವ ಆದೇಶ ಹೊರಡಿಸಿದ್ದಾರೆ.

ಎರಡು ಗಂಭೀರ ಕ್ರಿಮಿನಲ್ ಪ್ರಕರಣಗಳು:

ಪ್ರಕಾಶ್ ವಿರುದ್ಧ 2024ರ ಅಪರಾಧ ಸಂಖ್ಯೆ 76/2024ರಲ್ಲಿ ಗಲಾಟೆ, ಹಲ್ಲೆ, ಜೀವ ಬೆದರಿಕೆ, ಸಾರ್ವಜನಿಕ ಆಸ್ತಿಗೆ ಹಾನಿ, ಜಾತಿ ನಿಂದನೆ ಸೇರಿದಂತೆ ಭಾರತೀಯ ದಂಡ ಸಂಹಿತೆ (IPC) ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇದೇ ರೀತಿ ಅಪರಾಧ ಸಂಖ್ಯೆ 147/2024ರಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ (ತಿದ್ದುಪಡಿ) ಕಾಯ್ದೆಯಡಿ ಮತ್ತೊಂದು ಗಂಭೀರ ಪ್ರಕರಣ ದಾಖಲಾಗಿದ್ದು, ಈ ಎರಡೂ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ.

ಐದು ಬಾರಿ ಮುಂಜಾಗ್ರತಾ ಕ್ರಮ:

ಕ್ರಿಮಿನಲ್ ಪ್ರಕರಣಗಳ ಜೊತೆಗೆ ಪ್ರಕಾಶ್ ವಿರುದ್ಧ 2025 ಮತ್ತು 2026ರಲ್ಲಿ ಒಟ್ಟು ಐದು ಮುಂಜಾಗ್ರತಾ (P.R.) ಪ್ರಕರಣಗಳು ದಾಖಲಾಗಿವೆ. 2025ರಲ್ಲಿ ಮೂರು ಹಾಗೂ 2026ರಲ್ಲಿ ಎರಡು ಬಾರಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ಆತನ ಚಟುವಟಿಕೆಗಳಲ್ಲಿ ಯಾವುದೇ ಬದಲಾವಣೆ ಕಂಡು ಬಂದಿರಲಿಲ್ಲ. ಇದೇ ಕಾರಣದಿಂದ ಅಂತಿಮವಾಗಿ ಗಡಿಪಾರು ಕ್ರಮ ಜಾರಿಗೊಳಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಠಿಣ ಎಚ್ಚರಿಕೆ:

ಗಲಭೆ, ಜೀವ ಬೆದರಿಕೆ, ಸಾರ್ವಜನಿಕ ಆಸ್ತಿಗೆ ಹಾನಿ ಹಾಗೂ ಸಮಾಜಘಾತಕ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಮುಂದೆಯೂ ಇದೇ ರೀತಿಯ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗದಗ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ವ್ಯಕ್ತಿಯನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಸ್ಪಷ್ಟಪಡಿಸಿದ್ದಾರೆ.

ಪ್ರಕಾಶ್ ವಿರುದ್ಧ ದಾಖಲಾಗಿರುವ ಮುಂಜಾಗ್ರತಾ ಪ್ರಕರಣಗಳು:

P.R. No. 08/2025,
P.R. No. 20/2025,
P.R. No. 54/2025,
P.R. No. 23/2026,
P.R. No. 28/2026

ಗರ್ಭಾವಸ್ಥೆಯಲ್ಲಿ ಕ್ಯಾಲ್ಸಿಯಂ ಕೊರತೆ ಆಗದಿರಲು ಈ ಪೌಷ್ಟಿಕ ಆಹಾರಗಳನ್ನು ತಪ್ಪದೇ ಸೇವಿಸಿ

0

ಗರ್ಭಾವಸ್ಥೆಯು ಮಹಿಳೆಯ ಜೀವನದ ಅತ್ಯಂತ ಮಹತ್ವದ ಹಂತಗಳಲ್ಲಿ ಒಂದಾಗಿದೆ. ಈ ಅವಧಿಯಲ್ಲಿ ತಾಯಿಯ ದೇಹದಲ್ಲಿ ಹಲವು ದೈಹಿಕ ಹಾಗೂ ಹಾರ್ಮೋನಲ್ ಬದಲಾವಣೆಗಳು ಸಂಭವಿಸುತ್ತವೆ.

ಜೊತೆಗೆ ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಪೌಷ್ಟಿಕಾಂಶಗಳನ್ನು ಒದಗಿಸುವ ಜವಾಬ್ದಾರಿಯೂ ತಾಯಿಯದ್ದಾಗಿರುತ್ತದೆ. ಪ್ರೋಟೀನ್, ಕಬ್ಬಿಣ ಮತ್ತು ಫೋಲಿಕ್ ಆಮ್ಲದ ಜೊತೆಗೆ ಕ್ಯಾಲ್ಸಿಯಂ ಕೂಡ ಗರ್ಭಿಣಿಯರಿಗೆ ಅತ್ಯಗತ್ಯವಾದ ಖನಿಜಾಂಶವಾಗಿದೆ.

ಆರೋಗ್ಯ ತಜ್ಞರ ಪ್ರಕಾರ, ಗರ್ಭಾವಸ್ಥೆಯಲ್ಲಿ ಕ್ಯಾಲ್ಸಿಯಂ ಕೊರತೆಯಾದರೆ ತಾಯಿಯ ಮೂಳೆಗಳು ದುರ್ಬಲವಾಗುವುದರ ಜೊತೆಗೆ ಗರ್ಭದಲ್ಲಿರುವ ಮಗುವಿನ ಮೂಳೆಗಳು, ಹಲ್ಲುಗಳು ಹಾಗೂ ದೈಹಿಕ ಬೆಳವಣಿಗೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಗರ್ಭಿಣಿಯರಿಗೆ ಕ್ಯಾಲ್ಸಿಯಂ ಏಕೆ ಮುಖ್ಯ?

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಗರ್ಭದಲ್ಲಿರುವ ಮಗುವಿನ ಮೂಳೆಗಳು, ಹಲ್ಲುಗಳು, ಹೃದಯ, ನರಮಂಡಲ ಹಾಗೂ ಸ್ನಾಯುಗಳ ಸಮರ್ಪಕ ಬೆಳವಣಿಗೆಗೆ ಕ್ಯಾಲ್ಸಿಯಂ ಅತ್ಯಗತ್ಯವಾಗಿದೆ.

ಆಹಾರದಿಂದ ಸಾಕಷ್ಟು ಕ್ಯಾಲ್ಸಿಯಂ ದೊರೆಯದಿದ್ದರೆ, ಮಗುವಿನ ಅಗತ್ಯವನ್ನು ಪೂರೈಸಲು ತಾಯಿಯ ಮೂಳೆಗಳಲ್ಲಿ ಸಂಗ್ರಹವಾಗಿರುವ ಕ್ಯಾಲ್ಸಿಯಂ ಬಳಕೆಯಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ತಾಯಿಯಲ್ಲಿ ಮೂಳೆ ಸಾಂದ್ರತೆ ಕಡಿಮೆಯಾಗುವ ಅಪಾಯ ಹೆಚ್ಚಬಹುದು.

ಇದಲ್ಲದೆ, ಕಡಿಮೆ ಪ್ರಮಾಣದಲ್ಲಿ ಕ್ಯಾಲ್ಸಿಯಂ ಸೇವಿಸುವ ಗರ್ಭಿಣಿಯರಲ್ಲಿ ಪ್ರೀ-ಎಕ್ಲಾಂಪ್ಸಿಯಾ (ಗರ್ಭಾವಸ್ಥೆಯ ಅಧಿಕ ರಕ್ತದೊತ್ತಡ) ಅಪಾಯವೂ ಹೆಚ್ಚಾಗಬಹುದು. ವೈದ್ಯರ ಸಲಹೆಯಂತೆ ಕ್ಯಾಲ್ಸಿಯಂ ಪೂರಕಗಳನ್ನು ಸೇವಿಸುವುದರಿಂದ ಈ ಅಪಾಯವನ್ನು ಕೆಲವು ಸಂದರ್ಭಗಳಲ್ಲಿ ಕಡಿಮೆ ಮಾಡಬಹುದಾಗಿದೆ.

ಕ್ಯಾಲ್ಸಿಯಂ ಪಡೆಯಲು ಯಾವ ಆಹಾರ ಸೇವಿಸಬೇಕು?

ಗರ್ಭಿಣಿಯರು ತಮ್ಮ ದೈನಂದಿನ ಆಹಾರದಲ್ಲಿ ಈ ಪದಾರ್ಥಗಳನ್ನು ಸೇರಿಸಿಕೊಳ್ಳುವುದು ಉತ್ತಮ.

  • ಹಾಲು, ಮೊಸರು, ಮಜ್ಜಿಗೆ ಮತ್ತು ಪನೀರ್
  • ರಾಗಿ ಹಾಗೂ ಎಳ್ಳು
  • ಸೋಯಾಬೀನ್ ಮತ್ತು ಟೋಫು
  • ಬಾದಾಮಿ
  • ಹಸಿರು ಎಲೆಗಳ ಸೊಪ್ಪುಗಳು (ಮಿತ ಪ್ರಮಾಣದಲ್ಲಿ)
  • ಕ್ಯಾಲ್ಸಿಯಂ ಫೋರ್ಟಿಫೈಡ್ ಆಹಾರ ಪದಾರ್ಥಗಳು

ವಿಟಮಿನ್ ಡಿ ಕೂಡ ಅಷ್ಟೇ ಮುಖ್ಯ

ಕ್ಯಾಲ್ಸಿಯಂ ದೇಹದಲ್ಲಿ ಸರಿಯಾಗಿ ಹೀರಿಕೊಳ್ಳಲು ವಿಟಮಿನ್ ಡಿ ಅಗತ್ಯವಾಗಿರುತ್ತದೆ. ಆದ್ದರಿಂದ ಪ್ರತಿದಿನ ಬೆಳಗಿನ ಸೂರ್ಯನ ಬೆಳಕಿನಲ್ಲಿ ಸುಮಾರು 15ರಿಂದ 20 ನಿಮಿಷಗಳ ಕಾಲ ಇರುವುದರಿಂದ ವಿಟಮಿನ್ ಡಿ ಉತ್ಪಾದನೆಗೆ ಸಹಕಾರಿಯಾಗುತ್ತದೆ.

ಕ್ಯಾಲ್ಸಿಯಂ ಮಾತ್ರೆ ಸೇವಿಸುವಾಗ ಗಮನಿಸಬೇಕಾದ ಅಂಶಗಳು

ವೈದ್ಯರ ಸಲಹೆಯಿಲ್ಲದೆ ಕ್ಯಾಲ್ಸಿಯಂ ಮಾತ್ರೆಗಳನ್ನು ಸೇವಿಸಬಾರದು. ಕಬ್ಬಿಣ (Iron) ಮಾತ್ರೆ ಮತ್ತು ಕ್ಯಾಲ್ಸಿಯಂ ಮಾತ್ರೆಯನ್ನು ಒಂದೇ ಸಮಯದಲ್ಲಿ ಸೇವಿಸುವುದನ್ನು ತಪ್ಪಿಸಬೇಕು. ಎರಡರ ನಡುವೆ ಕನಿಷ್ಠ ಎರಡು ಗಂಟೆಗಳ ಅಂತರ ಇರಬೇಕು. ಜೊತೆಗೆ ಸಾಕಷ್ಟು ನೀರು ಕುಡಿಯುವುದು ಮತ್ತು ನಿಯಮಿತ ಗರ್ಭಪೂರ್ವ ತಪಾಸಣೆ ಮಾಡಿಸಿಕೊಳ್ಳುವುದೂ ಅಗತ್ಯ.

ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ಗರ್ಭಾವಸ್ಥೆಯಲ್ಲಿ ಕಾಲು ಸೆಳೆತ, ಸ್ನಾಯು ನೋವು, ಹಲ್ಲು ದುರ್ಬಲವಾಗುವುದು ಅಥವಾ ಅತಿಯಾದ ಆಯಾಸದಂತಹ ಲಕ್ಷಣಗಳು ಕಂಡುಬಂದರೆ ಅವು ಕ್ಯಾಲ್ಸಿಯಂ ಕೊರತೆಯ ಸೂಚನೆಯಾಗಿರಬಹುದು. ಇಂತಹ ಸಂದರ್ಭಗಳಲ್ಲಿ ಸ್ವಯಂ ಔಷಧಿ ಸೇವಿಸುವ ಬದಲು ಪ್ರಸೂತಿ ತಜ್ಞರನ್ನು ಸಂಪರ್ಕಿಸಿ ಅಗತ್ಯ ಪರೀಕ್ಷೆ ಹಾಗೂ ಸೂಕ್ತ ಪೌಷ್ಟಿಕಾಂಶದ ಬಗ್ಗೆ ಸಲಹೆ ಪಡೆಯುವುದು ಸುರಕ್ಷಿತ.

ತಜ್ಞರ ಅಭಿಪ್ರಾಯದಂತೆ, ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಅಗತ್ಯ ಪೌಷ್ಟಿಕಾಂಶಗಳು ಹಾಗೂ ವೈದ್ಯರ ಸಲಹೆ ಪಾಲಿಸುವ ಮೂಲಕ ತಾಯಿ ಮತ್ತು ಗರ್ಭದಲ್ಲಿರುವ ಮಗುವಿನ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು.

ಮಹಿಳಾ ಸಿಬ್ಬಂದಿ ಜೊತೆ ಅನುಚಿತ ವರ್ತನೆ ಆರೋಪ! ಇನ್‌ಫ್ಲೂಯೆನ್ಸರ್ ಅಮುಕು ಡುಮುಕು ವಿರುದ್ಧ FIR

0

ಬೆಂಗಳೂರು: ಮಹಿಳಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್ ಮಂಜು ಅಲಿಯಾಸ್ ಅಮುಕು ಡುಮುಕು ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ. ರೆಸ್ಟೋ ಬಾರ್‌ನಲ್ಲಿ ಮಹಿಳಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ್ದು, ಬಳಿಕ ಕೊಲೆ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ.

ಮಾಹಿತಿ ಪ್ರಕಾರ, ಜುಲೈ 9ರ ರಾತ್ರಿ ಮಂಜು ಅಲಿಯಾಸ್ ಅಮುಕು ಡುಮುಕು ರೆಸ್ಟೋ ಬಾರ್‌ಗೆ ತೆರಳಿ ಊಟ ಹಾಗೂ ಮದ್ಯ ಸೇವಿಸಿದ್ದರು. ಬಳಿಕ ಬಿಲ್ ನೀಡುವಂತೆ ಕೇಳಿದಾಗ ಮಹಿಳಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.

ನಂತರ ಹೊರಗೆ ತೆರಳುತ್ತಿದ್ದ ವೇಳೆ ಮಹಿಳಾ ಸಿಬ್ಬಂದಿ ಪ್ರಶ್ನಿಸಿದಾಗ, ಆಕೆಗೆ ಸೆಲ್ಫಿ ಫೋಟೋ ನೀಡುವಂತೆ ಕೇಳಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ವೇಳೆ ಸ್ಥಳದಲ್ಲಿದ್ದ ಪಬ್ ಮ್ಯಾನೇಜರ್ ಮೇಲೆ ಹಲ್ಲೆಗೆ ಯತ್ನಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಇದೆ.

ಈ ಸಂಬಂಧ ಅಮುಕು ಡುಮುಕು ಹಾಗೂ ಅವರ ಸ್ನೇಹಿತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಕೃಷಿ ಹೊಂಡದಲ್ಲಿ ಈಜಲು ಹೋಗಿ ನವ ವಿವಾಹಿತ ವಕೀಲ ಸಾವು!

ರಾಯಚೂರು: ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ನವ ವಿವಾಹಿತ ವಕೀಲನೊಬ್ಬ ಹೂಳಿನಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಉಮಲೂಟಿ ಗ್ರಾಮದ 30 ವರ್ಷದ ಹನೀಫ್ ಎಂದು ಗುರುತಿಸಲಾಗಿದೆ. ಹನೀಫ್ ಅವರು ವಕೀಲರಾಗಿದ್ದು, ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು.

ಗ್ರಾಮದ ಸ್ನೇಹಿತರೊಂದಿಗೆ ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಹೊಂಡದಲ್ಲಿ ಹೂಳು ಇರುವ ಬಗ್ಗೆ ಅರಿವಿಲ್ಲದೆ ಈಜಲು ನೀರಿಗೆ ಇಳಿದ ಹನೀಫ್, ಹೂಳಿನಲ್ಲಿ ಸಿಲುಕಿಕೊಂಡಿದ್ದಾರೆ. ಹೊರಬರಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ಘಟನೆ ಸಂಬಂಧ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿಂಧನೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ನವ ವಿವಾಹಿತನ ಸಾವಿನಿಂದ ಕುಟುಂಬಸ್ಥರು ಹಾಗೂ ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.

ಸ್ಕಾಚ್ ವಿಸ್ಕಿ ಪ್ರಿಯರಿಗೆ ಬಂಪರ್ ಸುದ್ದಿ: ಆಮದು ಸುಂಕ ಶೇ.150ರಿಂದ ಶೇ.75ಕ್ಕೆ ಇಳಿಕೆ?

ಬೆಂಗಳೂರು: ಭಾರತ ಮತ್ತು ಬ್ರಿಟನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಪ್ರೀಮಿಯಂ ಆಮದು ಮದ್ಯದ ಬೆಲೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.

ಈಗಾಗಲೇ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಹೊಸ ಅಬಕಾರಿ ತೆರಿಗೆ ನೀತಿಯಿಂದ ದುಬಾರಿ ಹಾಗೂ ಪ್ರೀಮಿಯಂ ಮದ್ಯದ ದರ ಇಳಿಕೆಯಾಗಿತ್ತು. ಇದೀಗ ಬ್ರಿಟನ್‌ನಿಂದ ಆಮದು ಮಾಡಿಕೊಳ್ಳುವ ಸ್ಕಾಚ್ ವಿಸ್ಕಿ ಮೇಲಿನ ಕಸ್ಟಮ್ಸ್ ಸುಂಕ ಕಡಿಮೆಯಾಗಿರುವುದರಿಂದ ಗ್ರಾಹಕರಿಗೆ ಇನ್ನಷ್ಟು ಅನುಕೂಲವಾಗುವ ನಿರೀಕ್ಷೆ ಇದೆ.

ಕರ್ನಾಟಕ ಸರ್ಕಾರ ಮೇ 11ರಿಂದ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ಹೊಸ ಅಬಕಾರಿ ತೆರಿಗೆ ವ್ಯವಸ್ಥೆ ಜಾರಿಗೆ ತಂದಿದೆ. ಈ ನೀತಿಯಿಂದ ಕಡಿಮೆ ಆಲ್ಕೋಹಾಲ್ ಅಂಶ ಹೊಂದಿರುವ ಕೆಲವು ಪ್ರೀಮಿಯಂ ಆಮದು ಮದ್ಯಗಳ ಬೆಲೆ ಶೇ.15ರಿಂದ 23ರಷ್ಟು ಇಳಿಕೆಯಾಗಿದೆ.

ಇದೀಗ ಜುಲೈ 15ರಿಂದ ಭಾರತ-ಬ್ರಿಟನ್ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ ಜಾರಿಗೆ ಬಂದಿದೆ. ಇದರ ಪ್ರಕಾರ ಬ್ರಿಟನ್‌ನಿಂದ ಆಮದು ಮಾಡಿಕೊಳ್ಳುವ ಸ್ಕಾಚ್ ವಿಸ್ಕಿ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.150ರಿಂದ ಶೇ.75ಕ್ಕೆ ಇಳಿಸಲಾಗಿದೆ. ಮುಂದಿನ 10 ವರ್ಷಗಳಲ್ಲಿ ಈ ಸುಂಕವನ್ನು ಹಂತ ಹಂತವಾಗಿ ಶೇ.40ಕ್ಕೆ ಇಳಿಸುವ ಯೋಜನೆ ಇದೆ.

ಇಂಟರ್‌ನ್ಯಾಷನಲ್ ಸ್ಪಿರಿಟ್ಸ್ ಅಂಡ್ ವೈನ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಪ್ರಕಾರ, ಕರ್ನಾಟಕದ ಹೊಸ ತೆರಿಗೆ ನೀತಿಯಿಂದಲೇ ಆಮದು ಮದ್ಯದ ಬೆಲೆ ಕಡಿಮೆಯಾಗಿದೆ. ಇದೀಗ CETA ಒಪ್ಪಂದದ ಪರಿಣಾಮವಾಗಿ ಪ್ರೀಮಿಯಂ ಮದ್ಯದ ಬೆಲೆ ಇನ್ನೂ ಶೇ.5ರಿಂದ 7ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.

ಆದರೆ ಈ ಬೆಲೆ ಇಳಿಕೆ ತಕ್ಷಣವೇ ಜಾರಿಗೆ ಬರುವುದಿಲ್ಲ. ಹೊಸ ಸುಂಕ ವ್ಯವಸ್ಥೆ, ದಾಖಲೆ ಪ್ರಕ್ರಿಯೆ ಹಾಗೂ ವಿತರಣಾ ವ್ಯವಸ್ಥೆಯ ಬದಲಾವಣೆ ಪೂರ್ಣಗೊಂಡ ಬಳಿಕ ಗ್ರಾಹಕರಿಗೆ ಇದರ ಲಾಭ ಸಿಗಲಿದೆ ಎಂದು ಉದ್ಯಮ ವಲಯ ತಿಳಿಸಿದೆ.

ಬ್ರಿಟನ್‌ನಿಂದ ಆಮದು ಆಗುವ ಸ್ಕಾಚ್ ವಿಸ್ಕಿ ಕಡಿಮೆ ದರದಲ್ಲಿ ಲಭ್ಯವಾದರೆ, ಭಾರತೀಯ ಪ್ರೀಮಿಯಂ ಸಿಂಗಲ್ ಮಾಲ್ಟ್ ಹಾಗೂ ಇತರೆ ಉನ್ನತ ದರ್ಜೆಯ ಮದ್ಯ ಬ್ರಾಂಡ್‌ಗಳಿಗೆ ಹೆಚ್ಚಿನ ಸ್ಪರ್ಧೆ ಎದುರಾಗುವ ಸಾಧ್ಯತೆ ಇದೆ.

ಆದರೆ ಬಲ್ಕ್ ಸ್ಕಾಚ್ ಆಮದು ಸುಲಭವಾಗುವುದರಿಂದ ದೇಶೀಯ ಮದ್ಯ ತಯಾರಕರಿಗೂ ಕೆಲವು ಅನುಕೂಲಗಳು ದೊರೆಯಬಹುದು ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆ ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದದಿಂದ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ಲಭ್ಯವಾಗಲಿದ್ದು, ಜಾಗತಿಕ ಪ್ರೀಮಿಯಂ ಮದ್ಯ ಬ್ರಾಂಡ್‌ಗಳು ಸ್ಪರ್ಧಾತ್ಮಕ ದರದಲ್ಲಿ ಸಿಗುವ ಸಾಧ್ಯತೆ ಇದೆ.

ಮನೆಗೆ ನುಗ್ಗಿದ ಸಿಮೆಂಟ್ ಲಾರಿ: ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು!

0

ಮಿರ್ಜಾಪುರ: ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ.

ಸಿಮೆಂಟ್ ತುಂಬಿದ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಗೆ ನುಗ್ಗಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಅಪಘಾತವು ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ನಡೆದಿದೆ. ವಾರಾಣಸಿಯಿಂದ ಸೋನಭದ್ರದ ಕಡೆಗೆ ಸಿಮೆಂಟ್ ಚೀಲಗಳನ್ನು ಹೊತ್ತು ತೆರಳುತ್ತಿದ್ದ ಲಾರಿ, ಮಿರ್ಜಾಪುರದ ಹೆದ್ದಾರಿ ಬಳಿ ತಲುಪಿದಾಗ ಏಕಾಏಕಿ ಟೈರ್ ಸ್ಫೋಟಗೊಂಡಿದೆ.

ಟೈರ್ ಸ್ಫೋಟದಿಂದ ಚಾಲಕನ ನಿಯಂತ್ರಣ ತಪ್ಪಿದ ಲಾರಿ ನೇರವಾಗಿ ರಸ್ತೆ ಬದಿಯ ಮನೆಯೊಳಗೆ ನುಗ್ಗಿದೆ. ಮುಂಜಾನೆ ಸಮಯವಾಗಿದ್ದರಿಂದ ಮನೆಯಲ್ಲಿದ್ದವರು ಗಾಢ ನಿದ್ರೆಯಲ್ಲಿದ್ದರು. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಮನೆಯ ಗೋಡೆಗಳು ಕುಸಿದು, ಮಲಗಿದ್ದವರ ಮೇಲೆ ಲಾರಿ ಹರಿದಿದೆ.

ಘಟನೆಯಲ್ಲಿ ರಾಜಾರಾಮ್ (47), ಸುಖಿಯಾ (70) ಹಾಗೂ ಚಂದತಾರಾ (45) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದೇ ವೇಳೆ 12 ವರ್ಷದ ಬಾಲಕಿ ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಸ್ಥಳೀಯರು ಹಾಗೂ ಪೊಲೀಸರು ರಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ವಾರಾಣಸಿಯ ಟ್ರಾಮಾ ಸೆಂಟರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಪಘಾತದ ಬಳಿಕ ಲಾರಿ ಮನೆಯೊಳಗೆ ಸಿಲುಕಿಕೊಂಡಿತ್ತು. ಪೊಲೀಸರು ಕ್ರೇನ್ ಸಹಾಯದಿಂದ ಲಾರಿಯನ್ನು ಹೊರತೆಗೆದಿದ್ದಾರೆ. ಸದ್ಯ ಲಾರಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯ ಕಾರಣವೇ ಅಥವಾ ತಾಂತ್ರಿಕ ದೋಷವೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ನಿದ್ರೆಯಲ್ಲಿದ್ದಾಗಲೇ ಒಂದೇ ಕುಟುಂಬದ ಮೂವರನ್ನು ಬಲಿ ಪಡೆದ ಈ ಘಟನೆ ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್ ಮಾಡಿದ್ರೆ ಜೈಲು! ಹೊಸ ಕಾನೂನಿನ ಬಗ್ಗೆ ಇಲ್ಲಿದೆ ಮಾಹಿತಿ!

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ ಕಮೆಂಟ್ ಮಾಡುವವರಿಗೆ ಕಡಿವಾಣ ಹಾಕಲು ಕಠಿಣ ಕಾನೂನು ಜಾರಿಗೆ ಬಂದಿದೆ.

ಇನ್ನು ಮುಂದೆ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಿ ಸಿಕ್ಕಿಬಿದ್ದರೆ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ.

2024ರ ಜುಲೈ 1ರಿಂದ ಜಾರಿಗೆ ಬಂದಿರುವ ಹೊಸ ಐಟಿ ಕಾಯ್ದೆಗಳ ಪ್ರಕಾರ, ಅಶ್ಲೀಲ ಕಮೆಂಟ್‌ಗಳಿಗೆ ಕಠಿಣ ಕ್ರಮ ಕೈಗೊಳ್ಳಬಹುದಾಗಿದೆ. ಆರೋಪ ಸಾಬೀತಾದರೆ 6 ತಿಂಗಳಿಂದ 1 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.

ಇದಲ್ಲದೆ, ಕೆಲವು ಪ್ರಕರಣಗಳಲ್ಲಿ ಕನಿಷ್ಠ 3 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸುವ ಅವಕಾಶವೂ ಇದೆ ಎಂದು ತಿಳಿಸಲಾಗಿದೆ. ದಂಡದ ಮೊತ್ತ ಪಾವತಿಸದಿದ್ದರೆ ಜೈಲು ಶಿಕ್ಷೆ ಮುಂದುವರಿಯುವ ಸಾಧ್ಯತೆಯಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರು ಹಾಗೂ ಇತರರ ವಿರುದ್ಧ ಅವಹೇಳನಕಾರಿ, ಅಶ್ಲೀಲ ಹಾಗೂ ಮಾನಹಾನಿಕರ ಕಮೆಂಟ್‌ಗಳನ್ನು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಈ ನಿಯಮಗಳನ್ನು ಜಾರಿಗೆ ತರಲಾಗಿದೆ.

ಆನ್‌ಲೈನ್‌ನಲ್ಲಿ ಯಾವುದೇ ಪೋಸ್ಟ್ ಅಥವಾ ಕಮೆಂಟ್ ಮಾಡುವ ಮೊದಲು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ರಾಯಚೂರಿನಲ್ಲಿ ಹೃದಯ ವಿದ್ರಾವಕ ಘಟನೆ: ಆರೇಳು ಬೀದಿನಾಯಿಗಳ ದಾಳಿಗೆ ಪುಟ್ಟ ಬಾಲಕಿ ಸಾವು!

ರಾಯಚೂರು: ಮನೆ ಮುಂದೆ ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗುವಿನ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ್ದು, ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕೆ.ಹಂಚಿಕಾಳ ಕ್ಯಾಂಪ್‌ನಲ್ಲಿ ನಡೆದಿದೆ.

ಮೃತ ಮಗುವನ್ನು 18 ತಿಂಗಳ ಅನಂ ಎಂದು ಗುರುತಿಸಲಾಗಿದೆ. ಮಗು ನಿದ್ದೆಯಿಂದ ಎದ್ದು ಮನೆ ಮುಂದೆ ಆಟವಾಡುತ್ತಿದ್ದಾಗ ಏಕಾಏಕಿ ಆರೇಳು ಬೀದಿನಾಯಿಗಳು ದಾಳಿ ಮಾಡಿವೆ.

ಬೀದಿನಾಯಿಗಳು ಮಗುವನ್ನು ಎಳೆದಾಡಿ ಕಚ್ಚಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ವೈದ್ಯರು ಚಿಕಿತ್ಸೆ ನೀಡಿದರೂ ಮಗು ಬದುಕುಳಿಯಲಿಲ್ಲ.

ಘಟನೆ ಕುರಿತು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮದಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಅವುಗಳ ಹಾವಳಿ ತಡೆಯಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Teacher Recruitment 2026: ರಾಜ್ಯದಲ್ಲಿ 15,000 ಶಿಕ್ಷಕರ ಹುದ್ದೆ ಭರ್ತಿಗೆ ಸರ್ಕಾರದಿಂದ ಅಧಿಸೂಚನೆ!

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿಗೆ ಸರ್ಕಾರ ಮುಂದಾಗಿದೆ.

ಒಟ್ಟು 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಈ ಸಂಬಂಧ ಕರಡು ಗೆಜೆಟ್ ಅಧಿಸೂಚನೆಯನ್ನು ಸರ್ಕಾರ ಪ್ರಕಟಿಸಿದೆ.

ಅಧಿಸೂಚನೆ ಕುರಿತು ಆಕ್ಷೇಪಣೆ ಸಲ್ಲಿಸಲು ಸರ್ಕಾರವು 15 ದಿನಗಳ ಕಾಲಾವಕಾಶ ನೀಡಿದೆ. ಅಂತಿಮ ಅಧಿಸೂಚನೆ ಬಳಿಕ ನೇಮಕಾತಿ ಪ್ರಕ್ರಿಯೆ ಮುಂದುವರಿಯಲಿದೆ.

ಒಟ್ಟು 15 ಸಾವಿರ ಹುದ್ದೆಗಳಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 6,905 ಹುದ್ದೆಗಳು ಹಾಗೂ ಇತರೆ ಜಿಲ್ಲೆಗಳಿಗೆ 8,095 ಹುದ್ದೆಗಳು ಮೀಸಲಿಡಲಾಗಿದೆ.

ಇತರೆ ಜಿಲ್ಲೆಗಳ ಹುದ್ದೆಗಳ ವಿವರ:

  • ಜಿಪಿಟಿ: 5,272 ಹುದ್ದೆಗಳು
  • ಪ್ರೌಢಶಾಲಾ ಶಿಕ್ಷಕರು: 2,286 ಹುದ್ದೆಗಳು
  • PST: 100 ಹುದ್ದೆಗಳು
  • ಕಂಪ್ಯೂಟರ್ ಸೈನ್ಸ್ ಶಿಕ್ಷಕರು: 200 ಹುದ್ದೆಗಳು
  • PE ಗ್ರೇಡ್-1: 131 ಹುದ್ದೆಗಳು
  • PE ಗ್ರೇಡ್-2: 106 ಹುದ್ದೆಗಳು
  • ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳ ವಿವರ:
  • ಜಿಪಿಟಿ (GPT): 3,228 ಹುದ್ದೆಗಳು
  • ಪ್ರೌಢಶಾಲಾ ಶಿಕ್ಷಕರು: 2,214 ಹುದ್ದೆಗಳು
  • PST: 800 ಹುದ್ದೆಗಳು
  • ಕಂಪ್ಯೂಟರ್ ಸೈನ್ಸ್ ಶಿಕ್ಷಕರು: 300 ಹುದ್ದೆಗಳು
  • PE ಗ್ರೇಡ್-1: 319 ಹುದ್ದೆಗಳು
  • PE ಗ್ರೇಡ್-2: 44 ಹುದ್ದೆಗಳು

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸುವ ಉದ್ದೇಶದಿಂದ ಈ ಬೃಹತ್ ನೇಮಕಾತಿ ಕೈಗೊಳ್ಳಲಾಗಿದೆ. ಅಭ್ಯರ್ಥಿಗಳು ಅಂತಿಮ ಅಧಿಸೂಚನೆ ಹಾಗೂ ಅರ್ಜಿ ಪ್ರಕ್ರಿಯೆ ಕುರಿತು ಸರ್ಕಾರದ ಅಧಿಕೃತ ಮಾಹಿತಿಯನ್ನು ಗಮನಿಸುವಂತೆ ಸೂಚಿಸಲಾಗಿದೆ.

‘ಸತ್ಲುಜ್’ ವಿವಾದದ ಎಫೆಕ್ಟ್! OTT ಸಿನಿಮಾಗಳಿಗೂ CBFC ಸೆನ್ಸಾರ್ ಕಡ್ಡಾಯಕ್ಕೆ ಕೇಂದ್ರದ ಸಿದ್ಧತೆ

ನವದೆಹಲಿ: ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಿನಿಮಾಗಳಂತೆ ಒಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗುವ ಚಿತ್ರಗಳಿಗೂ ಸೆನ್ಸಾರ್ ಪ್ರಮಾಣಪತ್ರ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಡಲು ಸಜ್ಜಾಗಿದೆ. ದಿಲ್ಜಿತ್ ದೋಸಾಂಜ್ ಅಭಿನಯದ ‘ಸತ್ಲುಜ್’ ಚಿತ್ರದ ವಿವಾದದ ಬಳಿಕ ಈ ವಿಷಯ ಮತ್ತೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಬಂದಿದೆ.

ಮೂಲಗಳ ಮಾಹಿತಿ ಪ್ರಕಾರ, ಯಾವುದೇ CBFC ಅನುಮೋದನೆ ಇಲ್ಲದೇ ‘ಸತ್ಲುಜ್’ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಬಳಿಕ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಆತಂಕಗಳ ಹಿನ್ನೆಲೆಯಲ್ಲಿ ಚಿತ್ರವನ್ನು ಕೇವಲ 48 ಗಂಟೆಗಳೊಳಗೆ ಹಿಂಪಡೆಯಲಾಯಿತು. ಇದೇ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ಕೇಂದ್ರ ಸರ್ಕಾರ ಐಟಿ ನಿಯಮಗಳು-2021ಕ್ಕೆ ತಿದ್ದುಪಡಿ ತರಲು ಚಿಂತನೆ ನಡೆಸುತ್ತಿದೆ.

ಈ ಪ್ರಕರಣದಲ್ಲಿ ಜೀ5 ವಿರುದ್ಧವೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಕಾರಣ, ಸೆನ್ಸಾರ್ ಮಂಡಳಿ ಸೂಚಿಸಿದ್ದ 127 ಕಟ್‌ಗಳನ್ನು ಅನುಸರಿಸದೇ ಸಂಪೂರ್ಣ ಆವೃತ್ತಿಯನ್ನು ಪ್ರಸಾರ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಇದಲ್ಲದೆ, ಒಟಿಟಿಯಿಂದ ತೆಗೆದುಹಾಕಿದ ನಂತರವೂ ಪಂಜಾಬ್‌ನಲ್ಲಿ ಖಾಸಗಿ ಕಾರ್ಯಕ್ರಮಗಳು ಹಾಗೂ ಕೆಲವು ಗುರುದ್ವಾರಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿರುವ ಬಗ್ಗೆ ವರದಿಗಳು ಬಂದಿದ್ದು, ಇಂತಹ ಅನಧಿಕೃತ ಪ್ರದರ್ಶನಗಳ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಸದ್ಯ ಈ ಕುರಿತು ಕೇಂದ್ರ ಸರ್ಕಾರದಿಂದ ಅಧಿಕೃತ ಅಧಿಸೂಚನೆ ಹೊರಬಿದ್ದಿಲ್ಲ. ಆದರೆ, ಒಟಿಟಿ ಕಂಟೆಂಟ್ ಮೇಲಿನ ನಿಯಂತ್ರಣವನ್ನು ಮತ್ತಷ್ಟು ಬಿಗಿಗೊಳಿಸುವ ಉದ್ದೇಶದಿಂದ CBFC ಪ್ರಮಾಣೀಕರಣವನ್ನು ಕಡ್ಡಾಯಗೊಳಿಸುವ ಹೊಸ ನಿಯಮಗಳು ಶೀಘ್ರದಲ್ಲೇ ಜಾರಿಗೆ ಬರಬಹುದು ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.