Home Blog

ಪ್ರಧಾನಿ ಇಂಧನ ಮಿತವ್ಯಯಕ್ಕೆ ಕಡಿವಾಣ ಹಾಕಿಲ್ಲ, ಸ್ವಯಂ ಪ್ರೇರಿತರಾಗಿ ಬಿಡಲು ಹೇಳಿದ್ದಾರೆ: ಬೊಮ್ಮಾಯಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಇಂಧನ ಮಿತವ್ಯಯದ ವಿಚಾರದಲ್ಲಿ ಯಾವುದಕ್ಕೂ ಕಡಿವಾಣ ಹಾಕಿಲ್ಲ ಸ್ವಯಂ ಪ್ರೇರಿತವಾಗಿ ಬಿಡಲು ಹೇಳಿದ್ದಾರೆ. ಒಬ್ಬ ನಾಯಕನಾಗಿ ನೈತಿಕತೆ ಇರುವುದರಿಂದ ಕರೆ ಕೊಟ್ಟಿದ್ದಾರೆ‌. ಇದರ ಬಗ್ಗೆ ಬೇರೆ ಬೇರೆ ವ್ಯಾಖ್ಯಾನ ಮಾಡಿದರೆ ಕಾಂಗ್ರೆಸ್ ಗೆ ದೇಶ ಭಕ್ತಿಯೂ ಇಲ್ಲ,

ತ್ಯಾಗವೂ ಗೊತ್ತಿಲ್ಲ. ಒಂದು ರೀತಿಯಲ್ಲಿ ಭಾರತ ದೇಶದ ಹಿತಾಸಕ್ತಿಗೆ ವಿರುದ್ದವಾಗಿ ಕಾಂಗ್ರೆಸ್ ನಾಯಕರ ಹೇಳಿಕೆಗಳಿವೆ. ಇದು ಜವಾಬ್ದಾರಿಯುತ ಪಕ್ಷದ ಹೇಳಿಕೆಯಲ್ಲ ಅವರಿಗೆ ನಾಚಿಕೆ ಆಗಬೇಕು ಎಂದು ಮಾಜಿ ಮುಖ್ಯಮಂತ್ರೊ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಪೆಟ್ರೊಲ್, ಡಿಸೆಲ್ , ಅಡುಗೆ ಎಣ್ಣೆ ಮಿತವ್ಯಯದಿಂದ ಬಳಸುವಂತೆ ಮಾಡಿರುವ ಮನವಿಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಂಧನ ಮಿತವ್ಯಯದ ಬಗ್ಗೆ ನಾನು ಭಾರತೀಯ ನಾಗರಿಕನಾಗಿ ಅಷ್ಟಾದರೂ ಮಾಡಬೇಕಲ್ಲ.

ಲಾಲ್ ಬಹದ್ದೂರು ಶಾಸ್ತ್ರಿ ಪ್ರಧಾನಿಯಾಗಿದ್ದಾಗ ದೇಶದಲ್ಲಿ ಆಹಾರದ ಕೊರತೆ ಉಂಟಾಗಿದ್ದರಿಂದ ಒಂದು ದಿನ ಉಪವಾಸ ಮಾಡಲು ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಶ್ರೀಮಂತರಿಗೆ ಗ್ಯಾಸ್ ಸಬ್ಸಿಡಿ ಬಿಡಲು ಹೇಳಿದ್ದರು 6 ಕೋಟಿ ಜನರು ಬಿಟ್ಟಿದ್ದಾರೆ. ಕೊವಿಡ್ ಸಂದರ್ಭದಲ್ಲಿ ಸಾಕಷ್ಡು ಸಲಹೆಗಳನ್ನು ಕೊಟ್ಟಿದ್ದರು. ದೇಶದ ಜನರು ಅದನ್ನು ಪಾಲಿಸಿದ್ದರಿಂದ ದೇಶದಲ್ಲಿ ಕೊವಿಡ್ ಎದುರಿಸಲು ಸಾಧ್ಯವಾಯಿತು ಎಂದು ಹೇಳಿದರು.

ಪಿ. ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದಾಗ ಬಂಗಾರದ ಬಗ್ಗೆ ವ್ಯಾಮೊಹ ಬೇಡ ಅಂತ ಹೇಳಿದ್ದರು
ಹಿಂದೆ ಇರಾನ್ ಇರಾಕ್ ಯುದ್ದ ಆದಾಗ ಎರಡೇ ದಿನದಲ್ಲಿ ಪೆಟ್ರೊಲ್ ಬಂಕ್ ಗಳ ಮುಂದೆ ಕಿಲೋ ಮೀಟರ್ ಗಟ್ಟಲೆ ಕ್ಯು ಇತ್ತು. ಯುದ್ದ ಶುರುವಾಗಿ ಎರಡು ತಿಂಗಳು ಕಳೆದರೂ ಅಂತ ಪರಿಸ್ಥಿತಿ ಇಲ್ಲ. ಈಗ ಪ್ರಧಾನಿಯವರು ಯಾವುದಕ್ಕೂ ಕಡಿವಾಣ ಹಾಕಿಲ್ಲ ಸ್ವಯಂ ಪ್ರೇರಿತವಾಗಿ ಬಿಡಲು ಹೇಳಿದ್ದಾರೆ.

ಒಬ್ಬ ನಾಯಕನಾಗಿ ನೈತಿಕತೆ ಇರುವುದರಿಂದ ಕರೆ ಕೊಟ್ಟಿದ್ದಾರೆ‌. ಇದರ ಬಗ್ಗೆ ಬೇರೆ ಬೇರೆ ವ್ಯಾಖ್ಯಾನ ಮಾಡಿದರೆ ಕಾಂಗ್ರೆಸ್ ಗೆ ದೇಶ ಭಕ್ತಿಯೂ ಇಲ್ಲ, ತ್ಯಾಗವೂ ಗೊತ್ತಿಲ್ಲ. ಒಂದು ರೀತಿಯಲ್ಲಿ ಭಾರತ ದೇಶದ ಹಿತಾಸಕ್ತಿಗೆ ವಿರುದ್ದವಾಗಿ ಕಾಂಗ್ರೆಸ್ ನಾಯಕರ ಹೇಳಿಕೆಗಳಿವೆ. ಇದು ಜವಾಬ್ದಾರಿಯುತ ಪಕ್ಷದ ಹೇಳಿಕೆಯಲ್ಲ ಅವರಿಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು.

ಮೋದಿ ಭದ್ರತೆಯಲ್ಲಿ ಭಾರೀ ಲೋಪ? ಬೆಂಗಳೂರು ಜಿಲೆಟಿನ್ ಪ್ರಕರಣ ಎನ್‌ಐಎಗೆ ವಹಿಸಲಿ: ಶ್ರೀರಾಮುಲು ಆಗ್ರಹ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿಯ ವೇಳೆ ಜಿಲೆಟಿನ್ ಹಾಗೂ ವೈಯರ್ ಪತ್ತೆಯಾದ ಪ್ರಕರಣ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (NIA) ವಹಿಸುವಂತೆ ಮಾಜಿ ಸಚಿವ ಬಿ. ಶ್ರೀರಾಮುಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, “ದೇಶದ ಪ್ರಧಾನಿಗೆ ಭದ್ರತೆ ಒದಗಿಸುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ” ಎಂದು ಕಿಡಿಕಾರಿದರು.

“ಬೇರೆ ದೇಶಗಳಿಗೆ ಹೋದಾಗ ಪ್ರಧಾನಿ ಮೋದಿಗೆ ವಿಶೇಷ ಭದ್ರತೆ ಸಿಗುತ್ತದೆ. ಆದರೆ ಕರ್ನಾಟಕಕ್ಕೆ ಬಂದಾಗಲೇ ಭದ್ರತಾ ವೈಫಲ್ಯ ಏಕೆ? ಮೋದಿ ಅವರನ್ನು ಕೇವಲ ಬಿಜೆಪಿ ಪ್ರಧಾನಿಯಾಗಿ ನೋಡದೆ, ದೇಶದ ಪ್ರಧಾನಿಯಾಗಿ ಗೌರವಿಸಬೇಕು” ಎಂದು ಶ್ರೀರಾಮುಲು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ಭೇಟಿ ಮುನ್ನ ತುರ್ತು ಆಧಾರದಲ್ಲಿ 100ಕ್ಕೂ ಹೆಚ್ಚು ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ನಡೆದಿರುವುದನ್ನೂ ಪ್ರಶ್ನಿಸಿದ ಅವರು, “ಪ್ರಧಾನಿ ಕಾರ್ಯಕ್ರಮದ ಸಮಯದಲ್ಲೇ ಜಿಲೆಟಿನ್ ಮತ್ತು ವೈಯರ್ ಪತ್ತೆಯಾಗಿರುವುದು ಅತ್ಯಂತ ಗಂಭೀರ ವಿಚಾರ. ಮೋದಿ ಅವರಿಗೆ ಏನಾದರೂ ಆಗಿದ್ದರೆ ಯಾರು ಹೊಣೆ?” ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಈ ಪ್ರಕರಣದ ಸಂಪೂರ್ಣ ಸತ್ಯ ಹೊರಬರಬೇಕಾದರೆ ಎನ್‌ಐಎ ತನಿಖೆ ಅಗತ್ಯ ಎಂದು ಆಗ್ರಹಿಸಿದ ಶ್ರೀರಾಮುಲು, “ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದಕ್ಕೆ ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ವಿರುದ್ಧ ಅಸಹನೆ ಬಂದಿದೆ” ಎಂದು ಆರೋಪಿಸಿದರು.

ಇದೇ ವೇಳೆ ಪ್ರಧಾನಿ ಮೋದಿ ನೀಡಿದ್ದ ‘ಮಿತ ಬಳಕೆ’ ಕರೆ ಕುರಿತು ಕಾಂಗ್ರೆಸ್ ನಾಯಕರು ಮಾಡುತ್ತಿರುವ ಟೀಕೆಗೆ ಪ್ರತಿಕ್ರಿಯಿಸಿದ ಅವರು, “ವಿಶ್ವ ಮಟ್ಟದಲ್ಲಿ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಆರ್ಥಿಕ ಸ್ಥಿರತೆಗೆ ಜನರು ಮಿತವಾಗಿ ಬಳಕೆ ಮಾಡಬೇಕು ಎಂಬ ಜವಾಬ್ದಾರಿಯುತ ಸಂದೇಶವನ್ನೇ ಮೋದಿ ನೀಡಿದ್ದಾರೆ” ಎಂದರು.

“ಮನಮೋಹನ್ ಸಿಂಗ್ ಮತ್ತು ಚಿದಂಬರಂ ಅವರ ಕಾಲದಲ್ಲೂ ಇದೇ ರೀತಿಯ ಆರ್ಥಿಕ ಎಚ್ಚರಿಕೆ ನೀಡಲಾಗಿತ್ತು. ಈಗ ಮೋದಿ ಹೇಳಿದಾಗ ಮಾತ್ರ ಕಾಂಗ್ರೆಸ್ ಟೀಕೆ ಮಾಡುತ್ತಿದೆ. ಕಾಂಗ್ರೆಸ್ ನಾಯಕರಿಗೆ ಆರ್ಥಿಕ ಜವಾಬ್ದಾರಿ ಅರಿವಿಲ್ಲ” ಎಂದು ವಾಗ್ದಾಳಿ ನಡೆಸಿದರು.

ಭಾರತದ ಜಾಗತಿಕ ಗೌರವ ಹೆಚ್ಚಲು ಮೋದಿ ನಾಯಕತ್ವವೇ ಕಾರಣ ಎಂದು ಹೇಳಿದ ಶ್ರೀರಾಮುಲು, “ಅಮೆರಿಕ, ಇಸ್ರೇಲ್, ಇರಾಕ್ ಯುದ್ಧಗಳ ನಡುವೆಯೂ ಭಾರತಕ್ಕೆ ತೈಲ ಪೂರೈಕೆ ನಿರಂತರವಾಗಿರುವುದು ಮೋದಿ ರಾಜತಾಂತ್ರಿಕತೆಯ ಫಲ” ಎಂದು ಶ್ಲಾಘಿಸಿದರು.

KRS ಜಲಾಶಯ ನೀರಿನ ಮಟ್ಟ 90 ಅಡಿಗೆ ಕುಸಿತ: ಹಂಚಿಕೆ ಸಂಕಷ್ಟದಲ್ಲಿ ಸರ್ಕಾರ, ಕುಡಿಯುವ ನೀರಿನ ಕೊರತೆ ಭೀತಿ ಹೆಚ್ಚಳ

0

ಮಂಡ್ಯ: ರಾಜ್ಯದಲ್ಲಿ ಹೆಚ್ಚುತ್ತಿರುವ ಬೇಸಿಗೆ ತಾಪಮಾನ ಹಿನ್ನೆಲೆಯಲ್ಲಿ ಕೃಷ್ಣರಾಜ ಸಾಗರ (KRS) ಅಣೆಕಟ್ಟಿನಲ್ಲಿ ನೀರಿನ ಮಟ್ಟ ನಿರಂತರವಾಗಿ ಕುಸಿಯುತ್ತಿದ್ದು, ಬೆಂಗಳೂರು ಸೇರಿದಂತೆ ಹಳೇ ಮೈಸೂರು ಭಾಗದ ಕುಡಿಯುವ ನೀರಿನ ಸರಬರಾಜು ಬಗ್ಗೆ ಗಂಭೀರ ಆತಂಕ ಉಂಟಾಗಿದೆ.

124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ 90 ಅಡಿಗೆ ಇಳಿದಿದೆ. ಒಟ್ಟು 16 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ 7 ಟಿಎಂಸಿ ಡೆಡ್ ಸ್ಟೋರೇಜ್ ಹೊರತುಪಡಿಸಿ ಕೇವಲ 9 ಟಿಎಂಸಿ ನೀರು ಮಾತ್ರ ಬಳಕೆಗೆ ಲಭ್ಯವಿದೆ.

ಈ ಲಭ್ಯ ನೀರನ್ನು ನಗರ ಕುಡಿಯುವ ನೀರು, ಕೃಷಿ ನೀರಾವರಿ ಹಾಗೂ ರಾಜ್ಯಾಂತರ ನೀರು ಹಂಚಿಕೆ ಬಾಧ್ಯತೆಗಳ ನಡುವೆ ಸಮತೋಲನಗೊಳಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ವಿಶೇಷವಾಗಿ ಬೆಂಗಳೂರು-ಮೈಸೂರು ನಗರಗಳಿಗೆ ನಿರಂತರ ನೀರಿನ ಪೂರೈಕೆ ಹಾಗೂ ಮಂಡ್ಯ ಭಾಗದ ಕೃಷಿ ಬೆಳೆಗಳ ರಕ್ಷಣೆ ನಡುವೆ ತೀವ್ರ ಒತ್ತಡ ನಿರ್ಮಾಣವಾಗಿದೆ.

ತಮಿಳುನಾಡಿಗೆ ಪ್ರತಿ ತಿಂಗಳ ಕೋಟಾ ಪ್ರಕಾರ ನೀರು ಬಿಡುಗಡೆ ಮಾಡಬೇಕಾದ ಅನಿವಾರ್ಯತೆಯೂ ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ. ಮುಂಗಾರು ಮಳೆ ವಿಳಂಬವಾದರೆ ನೀರಿನ ಕೊರತೆ ಗಂಭೀರ ಹಂತಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಸದ್ಯ ಸರ್ಕಾರವು ಅಣೆಕಟ್ಟಿನ ನೀರಿನ ಬಳಕೆಯನ್ನು ಅತ್ಯಂತ ನಿಯಂತ್ರಿತ ಮತ್ತು ಪ್ರಾಥಮಿಕ ಆದ್ಯತೆಯ ಆಧಾರದ ಮೇಲೆ ನಿರ್ವಹಿಸುವ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ.

ಜಿಲೆಟಿನ್ ಕಡ್ಡಿ ಪತ್ತೆಯಾದ ಸ್ಥಳದಲ್ಲೇ ಟೈಮರ್ ಕೂಡ ಪತ್ತೆ; NIA ತನಿಖೆ ಬಗ್ಗೆ ಪರಮೇಶ್ವರ್ ಹೇಳಿದ್ದೇನು..?

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ವೇಳೆ ಪತ್ತೆಯಾದ ಜಿಲೆಟಿನ್ ಕಡ್ಡಿ ಮತ್ತು ಟೈಮರ್ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಂಬ್ ಬೆದರಿಕೆ ಕರೆ ಮಾಡಿದ ವ್ಯಕ್ತಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಆತನ ವಿಚಾರಣೆ ನಡೆಯುತ್ತಿದೆ. ಇದೇ ವೇಳೆ ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಪತ್ತೆಯಾದ ಜಿಲೆಟಿನ್ ಕಡ್ಡಿ ಸೇರಿದಂತೆ ಎಲ್ಲಾ ಅನುಮಾನಾಸ್ಪದ ವಸ್ತುಗಳ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಈ ಪ್ರಕರಣದ ತನಿಖೆ ನಡೆಸಲು ಎನ್‌ಐಎ ಸಹ ಮನವಿ ಮಾಡಿದೆ. ಹೀಗಾಗಿ ತನಿಖೆಗೆ ಅವರಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ ಪರಮೇಶ್ವರ್, ಪ್ರಧಾನಿ ಭೇಟಿ ಕಾರ್ಯಕ್ರಮಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಭದ್ರತಾ ವ್ಯವಸ್ಥೆಗಳು ಈಗಾಗಲೇ ಜಾರಿಯಲ್ಲಿದ್ದವು ಎಂದರು.

ಕಾರ್ಯಕ್ರಮ ಆರಂಭಕ್ಕೂ ಸುಮಾರು ಎರಡು ಗಂಟೆಗಳ ಮುನ್ನ, ಅಂದರೆ ಬೆಳಗ್ಗೆ 9 ಗಂಟೆ ಸುಮಾರಿಗೆ ಜಿಲೆಟಿನ್ ಕಡ್ಡಿ ಪತ್ತೆಯಾಗಿರುವುದು ಭದ್ರತಾ ಸಿಬ್ಬಂದಿಯ ಎಚ್ಚರಿಕೆಯನ್ನು ತೋರಿಸುತ್ತದೆ. ಇದು ಒಳ್ಳೆಯ ಬೆಳವಣಿಗೆ. ಆದರೆ ಈ ಘಟನೆಗೆ ಭಯೋತ್ಪಾದನಾ ಸಂಘಟನೆಗಳ ಸಂಪರ್ಕವಿದೆಯೇ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ತನಿಖೆ ಪೂರ್ಣಗೊಂಡ ಬಳಿಕವೇ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಿದರು.

ಇದೇ ವೇಳೆ ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ನ್ಯಾಯಾಲಯದ ಅಂತಿಮ ತೀರ್ಪನ್ನು ಕಾದು ನೋಡಬೇಕಿದೆ ಎಂದರು. ಮರು ಎಣಿಕೆಯಲ್ಲಿ 250ಕ್ಕೂ ಹೆಚ್ಚು ಮತಗಳ ವ್ಯತ್ಯಾಸ ಕಂಡುಬಂದಿರುವುದು ಮೊದಲ ಎಣಿಕೆ ಪ್ರಕ್ರಿಯೆಯಲ್ಲಿ ಲೋಪವಾಗಿರುವ ಸಾಧ್ಯತೆಯನ್ನು ಸೂಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಮತ ಎಣಿಕೆಯಲ್ಲಿ ಅಕ್ರಮ ಅಥವಾ ತಾಂತ್ರಿಕ ದೋಷಗಳ ಬಗ್ಗೆ ದಾಖಲಾಗಿರುವ ದೂರಿನ ತನಿಖೆಯನ್ನು ರಾಜ್ಯ ಪೊಲೀಸರು ನಡೆಸುತ್ತಿದ್ದು, ವಿಧಿವಿಜ್ಞಾನ ಪ್ರಯೋಗಾಲಯದಲ್ಲಿಯೂ ಪರಿಶೀಲನೆ ನಡೆಯಲಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.

ಪ್ರಧಾನಿ ಭೇಟಿ ವೇಳೆ ಜಿಲೆಟಿನ್ ಪತ್ತೆ ರಾಜ್ಯಕ್ಕೆ ಅವಮಾನ: ಸರ್ಕಾರದ ವಿರುದ್ಧ ಅರಗ ಜ್ಞಾನೇಂದ್ರ ವಾಗ್ದಾಳಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿ ವೇಳೆ ಜಿಲೆಟಿನ್ ಪತ್ತೆಯಾಗಿರುವುದು ರಾಜ್ಯಕ್ಕೆ ತಲೆತಗ್ಗಿಸುವ ಸಂಗತಿ ಎಂದು ಮಾಜಿ ಸಚಿವ ಅರಗ ಜ್ಞಾನೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಭೇಟಿಯಂತಹ ಅತ್ಯಂತ ಮಹತ್ವದ ಕಾರ್ಯಕ್ರಮಕ್ಕೆ ಸಮರ್ಪಕ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶದ ಪ್ರಧಾನಮಂತ್ರಿಯವರಿಗೂ ಸೂಕ್ತ ರಕ್ಷಣೆ ನೀಡಲು ಸಾಧ್ಯವಾಗದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.

ಈ ಘಟನೆ ಕರ್ನಾಟಕದ ಗೌರವಕ್ಕೆ ಧಕ್ಕೆಯುಂಟುಮಾಡಿದ್ದು, ರಾಜ್ಯದ ಭದ್ರತಾ ವ್ಯವಸ್ಥೆಯ ಮೇಲೆಯೇ ಪ್ರಶ್ನೆ ಎಬ್ಬಿಸಿದೆ ಎಂದು ಟೀಕಿಸಿದರು.

ಜಿಬಿಎ ಚುನಾವಣೆಯನ್ನು ಮುಂದೂಡುವಂತೆ ಸರ್ಕಾರ ಮನವಿ ಮಾಡಿರುವ ವಿಚಾರಕ್ಕೂ ಅರಗ ಜ್ಞಾನೇಂದ್ರ ತೀವ್ರ ವಿರೋಧ ವ್ಯಕ್ತಪಡಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸರ್ಕಾರಕ್ಕೆ ಧೈರ್ಯವಿಲ್ಲ. ಇದು ಕಾಂಗ್ರೆಸ್‌ನ ಪ್ರಜಾಪ್ರಭುತ್ವ ವಿರೋಧಿ ನಿಲುವನ್ನು ತೋರಿಸುತ್ತದೆ ಎಂದು ಆರೋಪಿಸಿದರು.

ಪಂಚರಾಜ್ಯ ಚುನಾವಣಾ ಫಲಿತಾಂಶಗಳಿಂದ ಕಾಂಗ್ರೆಸ್ ದೃತಿಗೆಟ್ಟು ಹೋಗಿದ್ದು, ಜನರ ಆಕ್ರೋಶವನ್ನು ಎದುರಿಸಲು ಸಾಧ್ಯವಾಗದೆ ಚುನಾವಣೆ ಮುಂದೂಡುವ ತಂತ್ರ ಅನುಸರಿಸುತ್ತಿದೆ ಎಂದು ಹೇಳಿದರು. ಇದು ಜನಾಭಿಪ್ರಾಯದಿಂದ ತಪ್ಪಿಸಿಕೊಳ್ಳುವ ರಾಜಕೀಯ ತಂತ್ರವಾಗಿದ್ದು, ಎಲ್ಲರಿಗೂ ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.

ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ: ಮೇ 3ರಂದು ನಡೆದ ನೀಟ್ ಪರೀಕ್ಷೆ ರದ್ದು – ಸಿಬಿಐ ತನಿಖೆಗೆ ಆದೇಶ

ನವದೆಹಲಿ: ಮೇ 3ರಂದು ನಡೆದಿದ್ದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್ ಯುಜಿ)ಯನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ರದ್ದುಗೊಳಿಸಿದೆ.

ಪ್ರಶ್ನೆ ಪತ್ರಿಕೆ ಸೋರಿಕೆಯಾದ ಆರೋಪಗಳ ಹಿನ್ನೆಲೆ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಮರುಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಎನ್‌ಟಿಎ ತಿಳಿಸಿದೆ.

ರಾಜಸ್ಥಾನದ ಸಿಕಾರ್‌ನಲ್ಲಿ ಮೇ 1ರಂದೇ ‘ಊಹೆ ಪತ್ರಿಕೆ’ ಎಂಬ ಹೆಸರಿನಲ್ಲಿ ಕೆಲವು ಪ್ರಶ್ನೆಗಳು ಹರಿದಾಡಿದ್ದವು ಎಂದು ವರದಿಯಾಗಿದೆ. ಈ ಊಹೆ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳ 100ಕ್ಕೂ ಹೆಚ್ಚು ಪ್ರಶ್ನೆಗಳು ಮೂಲ ಪ್ರಶ್ನೆ ಪತ್ರಿಕೆಗೆ ಹೋಲಿಕೆಯಾಗಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಈ ಬೆಳವಣಿಗೆ ದೇಶಾದ್ಯಂತ ಪರೀಕ್ಷಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಪರೀಕ್ಷೆಯ ಪಾರದರ್ಶಕತೆ ಕುರಿತು ಪ್ರಶ್ನೆಗಳು ಉದ್ಭವಿಸಿವೆ.

ಪ್ರಕರಣದ ತನಿಖೆಯನ್ನು ರಾಜಸ್ಥಾನದ ವಿಶೇಷ ಕಾರ್ಯಾಚರಣೆ ತಂಡ (ಎಸ್‌ಒಜಿ) ಆರಂಭಿಸಿದೆ. ಪ್ರಾಥಮಿಕ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಎನ್‌ಟಿಎ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ಹಸ್ತಾಂತರಿಸಿದೆ ಎಂದು ತಿಳಿಸಿದೆ.

ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಅವ್ಯವಹಾರ ನಡೆದಿದೆಯೇ ಎಂಬುದನ್ನು ಪತ್ತೆಹಚ್ಚಲು ತನಿಖೆ ತೀವ್ರಗೊಳಿಸಲಾಗಿದೆ. ಗಮನಾರ್ಹವಾಗಿ, 2024 ಮತ್ತು 2025ರಲ್ಲಿಯೂ ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ಇದೇ ರೀತಿಯ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಗಳು ಕೇಳಿಬಂದಿದ್ದವು.

2024ರ ಪ್ರಕರಣದಲ್ಲಿ ಸಿಬಿಐ ಪಾಟ್ನಾ ಮತ್ತು ಹಜಾರಿಬಾಗ್ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ ಹಲವು ಆರೋಪಿಗಳನ್ನು ಬಂಧಿಸಿತ್ತು. ಇಂತಹ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ಭದ್ರತೆ ಮತ್ತು ವಿಶ್ವಾಸಾರ್ಹತೆ ಕುರಿತು ಮತ್ತೆ ಚರ್ಚೆ ಆರಂಭವಾಗಿದೆ.

“ಪಂಚೆ ರಾಜಕೀಯದಿಂದ ಸೂಟ್ ರಾಜಕೀಯದವರೆಗೆ”: ವ್ಯಂಗ್ಯವಾಡಿದ ಅಣ್ಣಾಮಲೈ

ತಮಿಳುನಾಡು ರಾಜಕೀಯದಲ್ಲಿ ದಳಪತಿ ವಿಜಯ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿರುವ ಘಟನೆ ಕೇವಲ ಅಧಿಕಾರ ಬದಲಾವಣೆಗಷ್ಟೇ ಸೀಮಿತವಾಗದೆ, ರಾಜ್ಯದ ರಾಜಕೀಯ ಶೈಲಿ ಮತ್ತು ಪರಂಪರೆಯ ಮೇಲೆಯೂ ಪ್ರಶ್ನೆಗಳನ್ನು ಎತ್ತಿದೆ.

ಪ್ರಮಾಣವಚನ ಸಮಾರಂಭದಲ್ಲಿ ವಿಜಯ್ ಅವರು ಧರಿಸಿದ ಕಪ್ಪು ಸೂಟು, ಬಿಳಿ ಶರ್ಟ್ ಮತ್ತು ಪ್ಯಾಂಟ್ ತಮಿಳುನಾಡಿನ ರಾಜಕೀಯದಲ್ಲಿ ಸಾಮಾನ್ಯವಾಗಿರುವ ಬಿಳಿ ಪಂಚೆ-ಶರ್ಟ್ ಸಂಪ್ರದಾಯಕ್ಕೆ ವಿರುದ್ಧವಾಗಿ ಕಾಣಿಸಿಕೊಂಡಿದೆ. ಈ ಬದಲಾವಣೆ ರಾಜಕೀಯ ಸಂಕೇತವಾಗಿ ವಿಶ್ಲೇಷಿಸಲ್ಪಡುತ್ತಿದೆ.

ಈ ನಡುವೆ ಬಿಜೆಪಿ ಮುಖಂಡ ಕೆ. ಅಣ್ಣಾಮಲೈ ಯುಎಸ್‌ನಲ್ಲಿ ನಡೆದ ಸಂವಾದದಲ್ಲಿ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಅವರು ತಮಿಳುನಾಡಿನ ದ್ರಾವಿಡ ರಾಜಕೀಯವನ್ನು ಪ್ರವಾಹದ ಉದಾಹರಣೆಯ ಮೂಲಕ ವಿವರಿಸಿದರು.

ಅವರ ಪ್ರಕಾರ, 1970ರಿಂದ 2020ರವರೆಗೆ ಕರುಣಾನಿಧಿ, ಸ್ಟಾಲಿನ್ ಮತ್ತು ಉದಯನಿಧಿ ಸ್ಟಾಲಿನ್ ಪ್ರವಾಹ ಸಂದರ್ಭಗಳಲ್ಲಿ ಸಾರ್ವಜನಿಕ ದೃಶ್ಯಗಳಲ್ಲಿ ಕಾಣಿಸಿಕೊಂಡರೂ, ಪ್ರವಾಹ ನಿರ್ವಹಣೆಯಲ್ಲಿ ಶಾಶ್ವತ ಪರಿಹಾರಗಳ ಕೊರತೆ ಮುಂದುವರಿದಿದೆ. ಇದನ್ನು ಅವರು ಪರೋಕ್ಷವಾಗಿ ಕುಟುಂಬ ರಾಜಕೀಯದ ಆಡಳಿತ ಶೈಲಿಗೆ ಸಂಬಂಧಿಸಿದ್ದಾರೆ.

ಅದೇ ವೇಳೆ ವಿಜಯ್ ಅವರ ಸೂಟ್ ರಾಜಕೀಯ ಶೈಲಿಯನ್ನು ಉಲ್ಲೇಖಿಸಿದ ಅಣ್ಣಾಮಲೈ, ಹೊಸ ನಾಯಕತ್ವವು ಕೇವಲ ಚಿತ್ರಾತ್ಮಕ ರಾಜಕೀಯವಲ್ಲದೆ, ನೆಲಮಟ್ಟದ ಆಡಳಿತ ಸವಾಲುಗಳನ್ನು ಹೇಗೆ ಎದುರಿಸುತ್ತದೆ ಎಂಬುದು ಮುಂದಿನ ಪರೀಕ್ಷೆ ಎಂದು ಹೇಳಿದ್ದಾರೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ಈ ಹೇಳಿಕೆಗಳು ತಮಿಳುನಾಡಿನ ಪರಂಪರಾತ್ಮಕ ರಾಜಕೀಯ ಮತ್ತು ಹೊಸ ರಾಜಕೀಯ ಶೈಲಿಯ ನಡುವಿನ ಸ್ಪಷ್ಟ ವಿಭಜನೆಯನ್ನು ಹೊರಹಾಕುತ್ತಿವೆ. ವಿಜಯ್ ಅವರ ಉದಯದೊಂದಿಗೆ ರಾಜ್ಯ ರಾಜಕೀಯದಲ್ಲಿ ‘ಶೈಲಿ vs ಆಡಳಿತ’ ಚರ್ಚೆ ತೀವ್ರಗೊಂಡಿದೆ.

ಇಂಧನ ಉಳಿತಾಯಕ್ಕೆ ಪ್ರಧಾನಿ ಮೋದಿ ಕರೆ; ವರ್ಕ್ ಫ್ರಂ ಹೋಮ್, ಆನ್ ಲೈನ್ ಕ್ಲಾಸ್ʼಗೆ ಸಲಹೆ

ವಡೋದರಾ: ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟು ಹಾಗೂ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಇಂಧನ ಉಳಿತಾಯದ ಬಗ್ಗೆ ಮಹತ್ವದ ಸಲಹೆ ನೀಡಿದ್ದಾರೆ.

ವರ್ಕ್ ಫ್ರಂ ಹೋಮ್ ವ್ಯವಸ್ಥೆ, ಸಾರ್ವಜನಿಕ ಸಾರಿಗೆ ಬಳಕೆ ಮತ್ತು ಶಾಲಾ-ಕಾಲೇಜುಗಳಲ್ಲಿ ಆನ್‌ಲೈನ್ ತರಗತಿಗಳನ್ನು ಪರಿಗಣಿಸುವಂತೆ ಪ್ರಧಾನಿ ಮನವಿ ಮಾಡಿದ್ದಾರೆ.

ಗುಜರಾತ್‌ನ ವಡೋದರಾದಲ್ಲಿ ಸರ್ದಾರ್‌ಧಾಮ್ ಭವನ-3 ಹಾಗೂ ವಿದ್ಯಾರ್ಥಿನಿಲಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಇಂಧನ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕೆಂದು ಕರೆ ನೀಡಿದರು.

ಕೋವಿಡ್-19 ಅವಧಿಯಲ್ಲಿ ಅನುಸರಿಸಿದ್ದ ಮಾದರಿಯಂತೆ, ಶಾಲಾ-ಕಾಲೇಜುಗಳು ತಾತ್ಕಾಲಿಕವಾಗಿ ಆನ್‌ಲೈನ್ ತರಗತಿಗಳನ್ನು ನಡೆಸುವ ಕುರಿತು ಆಲೋಚಿಸಬೇಕು ಎಂದು ಸಲಹೆ ನೀಡಿದರು.

ಇದರಿಂದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಪ್ರಯಾಣ ಕಡಿಮೆಯಾಗಿದ್ದು, ಇಂಧನ ಉಳಿತಾಯಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಪೆಟ್ರೋಲ್ ಹಾಗೂ ಡೀಸೆಲ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವಂತೆ ಮನವಿ ಮಾಡಿದ ಪ್ರಧಾನಿ, ಮೆಟ್ರೋ ರೈಲು, ಎಲೆಕ್ಟ್ರಿಕ್ ಬಸ್‌ಗಳು ಸೇರಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಹೆಚ್ಚು ಬಳಸುವಂತೆ ದೇಶವಾಸಿಗಳಿಗೆ ಕರೆ ನೀಡಿದರು.

ಅದೇ ರೀತಿ ಕಾರು ಹಂಚಿಕೆ ವ್ಯವಸ್ಥೆಯನ್ನು ಉತ್ತೇಜಿಸುವ ಮೂಲಕ ಇಂಧನ ಬಳಕೆ ಕಡಿಮೆ ಮಾಡಬಹುದು ಎಂದರು.

ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಸಾಧ್ಯವಾದಷ್ಟು ವರ್ಚುವಲ್ ಸಭೆಗಳನ್ನು ನಡೆಸಬೇಕು. ಅಗತ್ಯವಿರುವ ಕಡೆ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಬೇಕು ಎಂದು ಪ್ರಧಾನಿ ಸಲಹೆ ನೀಡಿದರು.

ಇಂಧನ ಉಳಿತಾಯದ ಜೊತೆಗೆ ದೇಶದ ವಿದೇಶಿ ವಿನಿಮಯ ಮೀಸಲು ಸಂರಕ್ಷಿಸುವ ನಿಟ್ಟಿನಲ್ಲಿ ಖಾದ್ಯ ತೈಲ ಬಳಕೆಯನ್ನು ಮಿತಗೊಳಿಸುವುದು, ಚಿನ್ನದ ಖರೀದಿಯನ್ನು ಮುಂದೂಡುವುದು ಹಾಗೂ ಅನಗತ್ಯ ವಿದೇಶಿ ಪ್ರವಾಸಗಳನ್ನು ತಪ್ಪಿಸುವಂತೆ ಮನವಿ ಮಾಡಿದರು. ಜಾಗತಿಕ ಆರ್ಥಿಕ ಸವಾಲುಗಳ ನಡುವೆ ದೇಶದ ಆರ್ಥಿಕ ಸ್ಥಿರತೆ ಕಾಪಾಡಲು ಪ್ರತಿಯೊಬ್ಬ ನಾಗರಿಕರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗಿದೆ ಎಂದು ಪ್ರಧಾನಿ ಮೋದಿ ಕರೆ ನೀಡಿದರು.

ಹಿಮಂತ ಬಿಸ್ವಾ ಶರ್ಮಾ ಮತ್ತೆ ಅಸ್ಸಾಂ ಸಿಎಂ: ಸತತ ಎರಡನೇ ಬಾರಿ ಅಧಿಕಾರ ಸ್ವೀಕಾರ

ಗುವಾಹಟಿ: ಹಿಮಂತ ಬಿಸ್ವಾ ಶರ್ಮಾ ಅವರು ಸತತ ಎರಡನೇ ಬಾರಿಗೆ ಅಸ್ಸಾಂ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಅಸ್ಸಾಂ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಗುವಾಹಟಿಯ ಖಾನಾಪಾರಾದ ಪಶುವೈದ್ಯಕೀಯ ಕಾಲೇಜು ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರು ಹಿಮಂತ ಬಿಸ್ವಾ ಶರ್ಮಾ ಹಾಗೂ ಅವರ ಸಚಿವ ಸಂಪುಟಕ್ಕೆ ಪ್ರಮಾಣವಚನ ಬೋಧಿಸಿದರು.

ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು. ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ನಾಲ್ವರು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಇವರಲ್ಲಿ ಬಿಜೆಪಿಯ ಅಜಂತಾ ನಿಯೋಗ್ ಮತ್ತು ರಾಮೇಶ್ವರ್ ತೇಲಿ, ಅಸ್ಸಾಂ ಗಣ ಪರಿಷತ್‌ನ ಅತುಲ್ ಬೋರಾ ಹಾಗೂ ಬೊಡೋ ಪೀಪಲ್ಸ್ ಫ್ರಂಟ್‌ನ ಚರಣ್ ಬೋರೋ ಸೇರಿದ್ದಾರೆ.

ಸತತ ಎರಡನೇ ಬಾರಿಗೆ ಅಸ್ಸಾಂ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ಕಾಂಗ್ರೆಸ್ಸೇತರ ನಾಯಕ ಎಂಬ ಹೆಗ್ಗಳಿಕೆಗೆ ಹಿಮಂತ ಬಿಸ್ವಾ ಶರ್ಮಾ ಪಾತ್ರರಾಗಿದ್ದಾರೆ.

ಇತ್ತೀಚೆಗೆ ನಡೆದ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭರ್ಜರಿ ಪ್ರದರ್ಶನ ನೀಡಿದ್ದು, ಒಟ್ಟು 126 ಕ್ಷೇತ್ರಗಳ ಪೈಕಿ 102 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆದಿತ್ತು.

ಈ ಭಾರೀ ಗೆಲುವಿನ ಬೆನ್ನಲ್ಲೇ ಹೊಸ ಸರ್ಕಾರ ರಚನೆಯಾಗಿದ್ದು, ಮತ್ತೊಮ್ಮೆ ಹಿಮಂತ ಬಿಸ್ವಾ ಶರ್ಮಾ ನೇತೃತ್ವಕ್ಕೆ ಜನಮಂಡೇಟ್ ದೊರೆತಿದೆ.

ಧರ್ಮಸ್ಥಳ ಬುರುಡೆ ಪ್ರಕರಣ​​: ಉತ್ಖನನ ನಡೆದು 10 ತಿಂಗಳಾದರೂ ಕೂಲಿ ಕಾರ್ಮಿಕರ ಕೈ ಸೇರದ ಹಣ

0

ಮಂಗಳೂರು, ಮೇ 12: ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆಗೆ ಸಂಬಂಧಿಸಿದ ಉತ್ಖನನ ಕಾರ್ಯಾಚರಣೆ ಇದೀಗ ಆಡಳಿತಾತ್ಮಕ ವಿವಾದಕ್ಕೆ ಕಾರಣವಾಗಿದೆ. ಎಸ್‌ಐಟಿ ಸೂಚನೆಯಂತೆ ನಡೆಸಲಾಗಿದ್ದ 17 ಸ್ಥಳಗಳ ಉತ್ಖನನ ಕಾರ್ಯದ ವೆಚ್ಚ ಪಾವತಿ ಇನ್ನೂ ಪೂರ್ಣಗೊಂಡಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.

2025ರ ಜುಲೈ ಅಂತ್ಯದಿಂದ ಆಗಸ್ಟ್ ಮಧ್ಯದವರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ ಜೆಸಿಬಿ, ಹಿಟಾಚಿ ಸೇರಿದಂತೆ ಯಂತ್ರೋಪಕರಣಗಳು ಹಾಗೂ ಕೂಲಿ ಕಾರ್ಮಿಕರನ್ನು ಬಳಸಿಕೊಳ್ಳಲಾಗಿತ್ತು. ಆದರೆ ಕಾರ್ಯಾಚರಣೆ ಮುಗಿದು 10 ತಿಂಗಳು ಕಳೆದರೂ ಸುಮಾರು 2 ಲಕ್ಷ ರೂ.ಗೂ ಅಧಿಕ ಬಿಲ್ ಬಾಕಿ ಉಳಿದಿದೆ ಎಂದು ಮಾಲಕರು ತಿಳಿಸಿದ್ದಾರೆ.

ಜೆಸಿಬಿ ಬಾಡಿಗೆ, ಕಾರ್ಮಿಕರ ಕೂಲಿ, ನೀರು, ಶಾಮಿಯಾನ ಸೇರಿದಂತೆ ಎಲ್ಲಾ ವೆಚ್ಚಗಳನ್ನು ಸೇರಿಸಿದಾಗ ಒಟ್ಟು ಬಾಕಿ ಮೊತ್ತ ಹೆಚ್ಚಾಗಿದೆ. ವಿಶೇಷವಾಗಿ ಹಿಟಾಚಿ ಯಂತ್ರವನ್ನು ಕೇವಲ ನಿರ್ದಿಷ್ಟ ದಿನಗಳಷ್ಟೇ ಬಳಸಲಾಗಿದ್ದರೂ ಅದರ ಬಾಡಿಗೆ ಹಣ ನೀಡಿಲ್ಲ ಎಂದು ಆರೋಪಿಸಲಾಗಿದೆ.

ಬಿಲ್ ಪಾವತಿ ವಿಚಾರದಲ್ಲಿ ಗ್ರಾಮ ಪಂಚಾಯತ್ ಮತ್ತು ಎಸ್‌ಐಟಿ ನಡುವೆ ಸ್ಪಷ್ಟತೆ ಇಲ್ಲದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಒಂದೆಡೆ ಪಂಚಾಯತ್ ಎಸ್‌ಐಟಿಯತ್ತ ಹೊಣೆ ತೋರಿಸುತ್ತಿದ್ದರೆ, ಮತ್ತೊಂದೆಡೆ ಎಸ್‌ಐಟಿ ಬಿಲ್ ಪಾವತಿ ಈಗಾಗಲೇ ನಡೆದಿದೆ ಎಂದು ಹೇಳುತ್ತಿದೆ ಎಂಬ ವಿರೋಧಾಭಾಸದ ಹೇಳಿಕೆಗಳು ಹೊರಬಿದ್ದಿವೆ.

ಇದರಿಂದ ಅಸಮಾಧಾನಗೊಂಡಿರುವ ಕೂಲಿ ಕಾರ್ಮಿಕರು ಮತ್ತು ಯಂತ್ರ ಮಾಲಕರು ತಕ್ಷಣ ಬಾಕಿ ಹಣ ಪಾವತಿಸಬೇಕು ಎಂದು ಆಗ್ರಹಿಸಿದ್ದಾರೆ.

error: Content is protected !!