Home Blog

ಬಂಗಾರ ಖರೀದಿದಾರರಿಗೆ ಸಿಹಿಸುದ್ದಿ: ಡಾಲರ್ ಬಲದಿಂದ ಚಿನ್ನ-ಬೆಳ್ಳಿ ಬೆಲೆ ಇಳಿಕೆ! ಇಂದಿನ ದರ ಎಷ್ಟು?

ಬೆಂಗಳೂರು: ಡಾಲರ್ ಮೌಲ್ಯ ಬಲಗೊಂಡಿರುವ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸತತ ಎರಡನೇ ದಿನವೂ ಇಳಿಕೆಯಾಗಿದೆ.

ಮಂಗಳವಾರ ಒಂದೇ ದಿನದಲ್ಲಿ ಭಾರೀ ಕುಸಿತ ಕಂಡಿದ್ದ ಚಿನ್ನದ ದರ, ಬುಧವಾರ (ಜುಲೈ 29) ಮತ್ತಷ್ಟು ಇಳಿಕೆಯಾಗಿದ್ದು, 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಮತ್ತೆ ₹13 ಸಾವಿರದ ಸಮೀಪಕ್ಕೆ ಬಂದಿದೆ. ಇದೇ ವೇಳೆ ಬೆಳ್ಳಿ ಬೆಲೆಯಲ್ಲೂ ಇಳಿಕೆ ದಾಖಲಾಗಿದೆ.

ಗುಡ್ ರಿಟರ್ನ್ಸ್ ವರದಿ ಪ್ರಕಾರ, 24 ಕ್ಯಾರೆಟ್ ಶುದ್ಧ ಚಿನ್ನದ ಪ್ರತಿ ಗ್ರಾಂಗೆ ₹66 ಇಳಿಕೆಯಾಗಿದ್ದು, ಹೊಸ ದರ ₹14,351 ಆಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹660 ಇಳಿಕೆಯಾಗಿ ₹1,43,510ಕ್ಕೆ ತಲುಪಿದೆ.

22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯೂ ಪ್ರತಿ ಗ್ರಾಂಗೆ ₹60 ಇಳಿಕೆಯಾಗಿ ₹13,155ಕ್ಕೆ ದಾಖಲಾಗಿದೆ. 10 ಗ್ರಾಂ ಚಿನ್ನದ ಬೆಲೆ ₹600 ಇಳಿಕೆಯಾಗಿ ₹1,31,550 ಆಗಿದೆ.

ಬೆಂಗಳೂರು ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಪ್ರತಿ ಗ್ರಾಂ ಬೆಲೆ ₹14,351 ಆಗಿದ್ದು, ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಂಡುಬಂದಿದೆ. ಪ್ರತಿ ಗ್ರಾಂ ಬೆಳ್ಳಿ ₹235ಕ್ಕೆ ಮಾರಾಟವಾಗುತ್ತಿದ್ದು, ಒಂದು ಕೆಜಿ ಬೆಳ್ಳಿ ಬೆಲೆ ₹2,35,000ಕ್ಕೆ ದಾಖಲಾಗಿದೆ.

ಜುಲೈ ತಿಂಗಳ ಆರಂಭದಲ್ಲಿ, ಅಂದರೆ ಜುಲೈ 1ರಂದು 22 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ ಬೆಲೆ ₹12,905 ಆಗಿದ್ದು, ಇದೇ ತಿಂಗಳ ಜುಲೈ 3ರಂದು ಗರಿಷ್ಠ ₹13,475ಕ್ಕೆ ಏರಿಕೆಯಾಗಿತ್ತು. 24 ಕ್ಯಾರೆಟ್ ಶುದ್ಧ ಚಿನ್ನದ 10 ಗ್ರಾಂ ಬೆಲೆ ಕೂಡ ಒಂದು ಹಂತದಲ್ಲಿ ₹1,47,000ವರೆಗೆ ತಲುಪಿದ್ದರೆ, ಇದೀಗ ಅದು ₹1,43,510ಕ್ಕೆ ಇಳಿಕೆಯಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಬಲಿಷ್ಠವಾಗಿರುವುದು ಹಾಗೂ ಹೂಡಿಕೆದಾರರ ಖರೀದಿ ಧೋರಣೆಯಲ್ಲಿ ಬದಲಾವಣೆ ಕಂಡುಬಂದಿರುವುದರಿಂದ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಇಳಿಕೆ ದಾಖಲಾಗುತ್ತಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

17 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಗೆ ಹೆರಿಗೆ: ಪ್ರಿಯಕರನ ವಿರುದ್ಧ ಪೋಕ್ಸೋ ಕೇಸ್, ಆರೋಪಿ ಪರಾರಿ!

ಚಿತ್ರದುರ್ಗ: ಪ್ರೀತಿಯ ಬಲೆಗೆ ಬಿದ್ದಿದ್ದ 17 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಪ್ರಿಯಕರ ಕರಿಯಣ್ಣ ಎಂಬಾತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ.

ಮಾಹಿತಿಯ ಪ್ರಕಾರ, ಅಪ್ರಾಪ್ತ ಬಾಲಕಿ ಹಾಸ್ಟೆಲ್‌ನಲ್ಲಿ ವಾಸವಿದ್ದುಕೊಂಡು ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಈ ವೇಳೆ ಗೂಡ್ಸ್ ವಾಹನ ಚಾಲಕನಾಗಿದ್ದ ಕರಿಯಣ್ಣನೊಂದಿಗೆ ಆಕೆಗೆ ಪರಿಚಯವಾಗಿ, ಬಳಿಕ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ.

ಕೆಲ ದಿನಗಳ ಬಳಿಕ ಬಾಲಕಿ ಗರ್ಭಿಣಿಯಾಗಿರುವುದು ತಿಳಿದುಬಂದಿದ್ದು, ಆಕೆಯ ತಾಯಿ ಹಿರಿಯೂರು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಅಪ್ರಾಪ್ತ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಬಾಲಕಿ ಅಪ್ರಾಪ್ತೆ ಎಂಬುದು ತಿಳಿದ ತಕ್ಷಣ ಆಸ್ಪತ್ರೆ ಸಿಬ್ಬಂದಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣದ ಕುರಿತು ಹಿರಿಯೂರು ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರಕರಣದ ಗಂಭೀರತೆ ಪರಿಗಣಿಸಿದ ಪೊಲೀಸರು ಬಾಲಕಿಯ ಪ್ರಿಯಕರ ಕರಿಯಣ್ಣ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಇನ್ನು ಬಾಲಕಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ‘ಸಖಿ ಕೇಂದ್ರ’ಕ್ಕೆ ಸ್ಥಳಾಂತರಿಸಲಾಗಿದ್ದು, ಆಕೆಗೆ ಆರೈಕೆ, ಕೌನ್ಸೆಲಿಂಗ್ ಹಾಗೂ ಅಗತ್ಯ ಕಾನೂನು ನೆರವು ನೀಡಲಾಗುತ್ತಿದೆ.

ಈ ಕುರಿತು ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

ನೀವು ಖರೀದಿಸುವ ಕೇಸರಿ ಅಸಲಿಯೋ, ನಕಲಿಯೋ ತಿಳಿಯುವುದು ಹೇಗೆ? ಈ ಸುಲಭ ಟ್ರಿಕ್ಸ್ ಬಳಸಿ!

0

ಕೇಸರಿ ವಿಶ್ವದ ಅತ್ಯಂತ ದುಬಾರಿ ಮಸಾಲೆ ಪದಾರ್ಥಗಳಲ್ಲಿ ಒಂದಾಗಿದೆ.

ಇದನ್ನು ವಿವಿಧ ಖಾದ್ಯಗಳು, ಆಯುರ್ವೇದ ಔಷಧಿಗಳು ಹಾಗೂ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಆರೋಗ್ಯದ ಹಲವು ಪ್ರಯೋಜನಗಳಿವೆ ಎಂಬ ಕಾರಣದಿಂದ ಅನೇಕರು ಕೇಸರಿಯನ್ನು ಸೇವಿಸುತ್ತಾರೆ.

ಆದರೆ ಕೇಸರಿಯ ಬೆಲೆ ಹೆಚ್ಚಿರುವುದರಿಂದ ಮಾರುಕಟ್ಟೆಯಲ್ಲಿ ನಕಲಿ ಕೇಸರಿಯ ಹಾವಳಿ ಕೂಡ ಹೆಚ್ಚಾಗಿದೆ. ನಕಲಿ ಕೇಸರಿ ಗುಣಮಟ್ಟದ ಮೇಲೆ ಮಾತ್ರವಲ್ಲದೆ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಕೇಸರಿ ಖರೀದಿಸುವ ಮುನ್ನ ಅದು ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಪರೀಕ್ಷಿಸುವುದು ಮುಖ್ಯ.

1. ಬಣ್ಣ ಬಿಡುಗಡೆಯನ್ನು ಗಮನಿಸಿ

ಅಸಲಿ ಕೇಸರಿಯನ್ನು ನೀರು ಅಥವಾ ಹಾಲಿಗೆ ಹಾಕಿದಾಗ ಅದು ನಿಧಾನವಾಗಿ ತಿಳಿ ಹಳದಿ ಅಥವಾ ಚಿನ್ನದ ಬಣ್ಣವನ್ನು ಬಿಡುಗಡೆ ಮಾಡುತ್ತದೆ. ನಿಜವಾದ ಕೇಸರಿಯ ಬಣ್ಣ ನೀರಿನಲ್ಲಿ ಬೆರೆಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.

ಆದರೆ ನಕಲಿ ಕೇಸರಿ ತಕ್ಷಣವೇ ಗಾಢ ಕೆಂಪು ಅಥವಾ ಕಿತ್ತಳೆ ಬಣ್ಣವನ್ನು ಬಿಡುತ್ತದೆ.

2. ಕೇಸರಿ ದಳಗಳ ಆಕಾರ ಪರಿಶೀಲಿಸಿ

ಅಸಲಿ ಕೇಸರಿಯ ದಳಗಳು ತೆಳ್ಳಗಿದ್ದು, ಮೇಲ್ಭಾಗದಲ್ಲಿ ಸ್ವಲ್ಪ ಅಗಲವಾಗಿರುತ್ತವೆ. ಅವು ಸಾಮಾನ್ಯವಾಗಿ ತುತ್ತೂರಿಯ ಆಕಾರದಲ್ಲಿರುತ್ತವೆ.

ನಕಲಿ ಕೇಸರಿ ದಳಗಳು ಒಂದೇ ರೀತಿಯ ಆಕಾರ ಹೊಂದಿದ್ದು, ಹೆಚ್ಚು ನೇರವಾಗಿರುವ ಸಾಧ್ಯತೆ ಇದೆ.

3. ವಾಸನೆ ಮೂಲಕ ಪರೀಕ್ಷಿಸಿ

ಅಸಲಿ ಕೇಸರಿಯು ಸೌಮ್ಯವಾದ, ಸ್ವಲ್ಪ ಸಿಹಿ ಹಾಗೂ ಹುಲ್ಲಿನಂತಹ ಪರಿಮಳವನ್ನು ಹೊಂದಿರುತ್ತದೆ.

ನಕಲಿ ಕೇಸರಿಯಲ್ಲಿ ಕೃತಕ ಅಥವಾ ಅತಿಯಾದ ತೀವ್ರ ವಾಸನೆ ಕಂಡುಬರಬಹುದು.

4. ರುಚಿ ಪರೀಕ್ಷೆ ಮಾಡಿ

ಅಸಲಿ ಕೇಸರಿಯ ರುಚಿ ಸ್ವಲ್ಪ ಕಹಿ ಮತ್ತು ಸಂಕೋಚಕವಾಗಿರುತ್ತದೆ. ಕೇಸರಿ ದಳವನ್ನು ನಾಲಿಗೆಯ ಮೇಲೆ ಇಟ್ಟಾಗ ಕೆಲ ನಿಮಿಷಗಳ ನಂತರ ದೇಹದಲ್ಲಿ ಬೆಚ್ಚಗಿನ ಅನುಭವವಾಗಬಹುದು.

ಆದರೆ ನಕಲಿ ಕೇಸರಿ ಸಿಹಿ ಅಥವಾ ಹುಳಿ ರುಚಿ ನೀಡಬಹುದು. ನಾಲಿಗೆಯ ಮೇಲೆ ಇಟ್ಟ ತಕ್ಷಣ ಬಣ್ಣ ಬಿಡಲು ಆರಂಭಿಸಿದರೆ ಅದು ನಕಲಿಯಾಗಿರುವ ಸಾಧ್ಯತೆ ಇದೆ.

5. ಕೈಯಲ್ಲಿ ಉಜ್ಜಿ ಪರೀಕ್ಷಿಸಿ

ಕೇಸರಿ ದಳವನ್ನು ಕೈಯಲ್ಲಿ ಇಟ್ಟು ಸ್ವಲ್ಪ ಉಜ್ಜಿ ನೋಡಿ. ಅಸಲಿ ಕೇಸರಿ ಸಾಮಾನ್ಯವಾಗಿ ಮೃದುವಾಗಿದ್ದು ಸುಲಭವಾಗಿ ಮುರಿಯಬಹುದು.

ನಕಲಿ ಕೇಸರಿ ಅಷ್ಟು ಸುಲಭವಾಗಿ ತುಂಡಾಗುವುದಿಲ್ಲ.

6. ನೀರಿನ ಪ್ರಯೋಗ

ಒಂದು ಲೋಟ ನೀರಿಗೆ ಸ್ವಲ್ಪ ಅಡುಗೆ ಸೋಡಾ ಸೇರಿಸಿ ಅದಕ್ಕೆ ಕೇಸರಿ ದಳ ಹಾಕಿ ಪರೀಕ್ಷಿಸಬಹುದು.

ಅಸಲಿ ಕೇಸರಿ ಇದ್ದರೆ ಮಿಶ್ರಣ ಹಳದಿ ಬಣ್ಣಕ್ಕೆ ತಿರುಗುತ್ತದೆ. ನಕಲಿ ಕೇಸರಿ ಇದ್ದರೆ ನೀರಿನ ಬಣ್ಣ ಕೆಂಪು ಬಣ್ಣಕ್ಕೆ ಬದಲಾಗುವ ಸಾಧ್ಯತೆ ಇದೆ.

ಕೇಸರಿ ಖರೀದಿಸುವಾಗ ಗುಣಮಟ್ಟದ ಬ್ರ್ಯಾಂಡ್‌ ಹಾಗೂ ವಿಶ್ವಾಸಾರ್ಹ ಮಾರಾಟಗಾರರಿಂದ ಮಾತ್ರ ಖರೀದಿಸುವುದು ಉತ್ತಮ.

ರಾಹುಲ್ ಗಾಂಧಿ ಡ್ರಗ್ಸ್ ಅಡಿಕ್ಟ್ ಎಂದಿದ್ದ ಉಡುಪಿ ಬಿಜೆಪಿ ಶಾಸಕ ಯಶಪಾಲ್ ಸುವರ್ಣ ವಿರುದ್ಧ ಎಫ್‌ಐಆರ್

0

ಉಡುಪಿ: ಬಿಜೆಪಿ ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಕುರಿತು ಅವಹೇಳನಕಾರಿ ಮತ್ತು ದ್ವೇಷ ಪ್ರಚೋದಿಸುವ ಭಾಷಣ ಮಾಡಿದ್ದಾರೆ ಎಂಬ ಆರೋಪದಡಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಜುಲೈ 28ರಂದು ಉಡುಪಿಯ ಜೋಡುಕಟ್ಟೆ ಸಮೀಪ ನಡೆದ ಬಿಜೆಪಿ ಪ್ರತಿಭಟನಾ ಸಭೆಯಲ್ಲಿ ಯಶ್‌ಪಾಲ್ ಸುವರ್ಣ ಅವರು ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದೇ ವೇಳೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣವನ್ನು ಪ್ರಸ್ತಾಪಿಸಿ ಸಮುದಾಯಗಳ ನಡುವೆ ದ್ವೇಷ ಮತ್ತು ಉದ್ವಿಗ್ನತೆ ಉಂಟುಮಾಡುವ ರೀತಿಯಲ್ಲಿ ಭಾಷಣ ಮಾಡಿದ್ದಾರೆ ಎನ್ನಲಾಗಿದೆ.

ದೂರಿನ ಪ್ರಕಾರ, ನೀಟ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ವಿರುದ್ಧವೂ ಅವಾಚ್ಯ ಶಬ್ದಗಳನ್ನು ಬಳಸಿ ನಿಂದನೆ ಮಾಡಲಾಗಿದೆ. ವಿವಿಧ ಸಮುದಾಯಗಳ ನಡುವೆ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸಲ್ಲಿಸಿದ ಲಿಖಿತ ದೂರಿನ ಆಧಾರದ ಮೇಲೆ ಉಡುಪಿ ನಗರ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 57, 192, 196(2), 352, 353(2) ಹಾಗೂ 351(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಜಪಾನ್‌ಗೆ ಮತ್ತೆ ಪ್ರಕೃತಿ ಆಘಾತ : ಪ್ರಬಲ ಭೂಕಂಪಕ್ಕೆ 13 ಬಲಿ; ಹಲವೆಡೆ ಕಟ್ಟಡಗಳು ಕುಸಿತ

0

ಜಪಾನ್‌: ಇಲ್ಲಿನ ದಕ್ಷಿಣ ಭಾಗದ ಕ್ಯುಶು ದ್ವೀಪದಲ್ಲಿರುವ ಕುಮಾಮೊಟೊ ಪ್ರಾಂತ್ಯದಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಭಾರೀ ಅನಾಹುತ ಸೃಷ್ಟಿಸಿದೆ. ಆರಂಭಿಕ ಮಾಹಿತಿಯ ಪ್ರಕಾರ 7.1 ತೀವ್ರತೆಯ ಭೂಕಂಪದಿಂದ ಕನಿಷ್ಠ 13 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪ್ರಧಾನಿ ಸನಾಯೆ ತಕೈಚಿ ತಿಳಿಸಿದ್ದಾರೆ.

ಯುಎಸ್ ಜಿಯೋಲಾಜಿಕಲ್ ಸರ್ವೆ (USGS) ಪ್ರಕಾರ ಭೂಕಂಪದ ತೀವ್ರತೆ 6.8 ಆಗಿದ್ದು, 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ. ಆದರೆ ಆರಂಭಿಕ ವರದಿಗಳಲ್ಲಿ 7.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಉಲ್ಲೇಖಿಸಲಾಗಿದೆ. ಮಂಗಳವಾರ ಮಧ್ಯಾಹ್ನ 4:27ಕ್ಕೆ ಸಂಭವಿಸಿದ ಭೂಕಂಪದಿಂದ ಹಲವೆಡೆ ಕಟ್ಟಡಗಳು ಕುಸಿದಿವೆ, ಬೆಂಕಿ ಅವಘಡಗಳು ಸಂಭವಿಸಿವೆ, ಸೇತುವೆಗಳು ಹಾನಿಗೊಳಗಾಗಿವೆ ಹಾಗೂ ಸರಕು ಸಾಗಣೆ ರೈಲುಗಳು ಹಳಿ ತಪ್ಪಿವೆ.

ಭೂಕಂಪದ ಬೆನ್ನಲ್ಲೇ ಜಪಾನ್ ಸರ್ಕಾರ ಸುನಾಮಿ ಎಚ್ಚರಿಕೆ ಜಾರಿಗೊಳಿಸಿದ್ದು, ಒಂದು ಮೀಟರ್ ಎತ್ತರದ ಅಲೆಗಳು ಅಪ್ಪಳಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಕರಾವಳಿ ಭಾಗದ ನಿವಾಸಿಗಳಿಗೆ ತಕ್ಷಣ ಸುರಕ್ಷಿತ ಹಾಗೂ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ಪರಮಾಣು ನಿಯಂತ್ರಣ ಪ್ರಾಧಿಕಾರವು ದೇಶದ ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ಯಾವುದೇ ತಕ್ಷಣದ ಅಸಹಜ ಬೆಳವಣಿಗೆ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದಾಗ್ಯೂ ಎಲ್ಲಾ ಸ್ಥಾವರಗಳ ಮೇಲೆ ನಿರಂತರ ನಿಗಾ ವಹಿಸಲಾಗಿದೆ.

ಕುಮಾಮೊಟೊ, ನಾಗಸಾಕಿ, ಕಾಗೋಶಿಮಾ, ಫುಕುವೋಕಾ, ಸಾಗಾ, ಓಯಿಟಾ ಹಾಗೂ ಮಿಯಾಜಾಕಿ ಸೇರಿದಂತೆ ಹಲವು ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಕಳೆದ ಒಂದು ವಾರದ ಅವಧಿಯಲ್ಲಿ ಜಪಾನ್‌ನಲ್ಲಿ ಸಂಭವಿಸಿದ ಎರಡನೇ ಪ್ರಬಲ ಭೂಕಂಪ ಇದಾಗಿದ್ದು, ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿವೆ.

ದೋಸೆ ಮಾಡಿ, ರಾಗಿ ಮುದ್ದೆ ತಯಾರಿಸಿ’ ಎಂದರೆ ಅದು ಕೌಟುಂಬಿಕ ದೌರ್ಜನ್ಯವಾಗುತ್ತದೆಯೇ? ಹೈಕೋರ್ಟ್ ಪ್ರಶ್ನೆ

ಬೆಂಗಳೂರು: ದೋಸೆ ಮತ್ತು ರಾಗಿ ಮುದ್ದೆ ಮಾಡುವಂತೆ ಅತ್ತೆ ಹೇಳುವುದು ಹಾಗೂ ತಲೆಕೂದಲು ಉದುರುವುದು ಕೌಟುಂಬಿಕ ದೌರ್ಜನ್ಯಕ್ಕೆ ಸೇರುತ್ತದೆಯೇ ಎಂದು ಕರ್ನಾಟಕ ಹೈಕೋರ್ಟ್‌ ಮೌಖಿಕವಾಗಿ ಪ್ರಶ್ನಿಸಿದೆ.

ಸೊಸೆ ನೀಡಿದ ದೂರಿನ ಆಧಾರದ ಮೇಲೆ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಅತ್ತೆ ಹಾಗೂ ಆಕೆಯ ಸಂಬಂಧಿಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ವಿಚಾರಣೆ ವೇಳೆ ನ್ಯಾಯಪೀಠ, ಪತಿಯು ಊಟ ಮಾಡಿದ ಬಳಿಕವೇ ತಮಗೆ ಊಟ ಮಾಡಲು ಅವಕಾಶ ನೀಡಲಾಗುತ್ತಿತ್ತು, ಪತಿಗೆ ಬಿಸಿ ದೋಸೆ ಹಾಗೂ ರಾಗಿ ಮುದ್ದೆ ಮಾಡಿಕೊಡುವಂತೆ ಅತ್ತೆ ಹೇಳುತ್ತಿದ್ದರು ಎಂಬ ಆರೋಪಗಳನ್ನು ಉಲ್ಲೇಖಿಸಿ, ಇಂತಹ ಆರೋಪಗಳಿಗೆ ಐಪಿಸಿ ಸೆಕ್ಷನ್‌ 498ಎ ಅನ್ವಯವಾಗುತ್ತದೆಯೇ ಎಂದು ಪ್ರಶ್ನಿಸಿತು.

ಕುಟುಂಬದಲ್ಲಿ ಸಾಮಾನ್ಯವಾಗಿ ನಡೆಯುವ ಜಗಳಗಳನ್ನು ಕಾನೂನಿನ ಅಡಿ ಕ್ರೌರ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ಪತಿಗೆ ದೋಸೆ ಅಥವಾ ರಾಗಿ ಮುದ್ದೆ ಮಾಡಿಕೊಡಿ ಎಂದು ಹೇಳುವುದು, ತಲೆಕೂದಲು ಉದುರುವುದು ಅಥವಾ ಪೌಷ್ಟಿಕ ಆಹಾರ ನೀಡಿಲ್ಲ ಎಂಬ ಆರೋಪಗಳನ್ನು ವರದಕ್ಷಿಣೆ ಕಿರುಕುಳ ಎಂದು ಕರೆಯಲು ಸಾಧ್ಯವಿಲ್ಲ.

ಇಂತಹ ವಿಚಾರಗಳನ್ನು ವಿಚ್ಛೇದನ ಅರ್ಜಿಯ ವಿಚಾರಣೆಯಲ್ಲಿ ಪ್ರಸ್ತಾಪಿಸಬಹುದು. ಆದರೆ ಪ್ರತಿಯೊಂದು ಅಹವಾಲನ್ನೂ ಕ್ರೌರ್ಯಕ್ಕೆ ಸಮನಾಗಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಮೌಖಿಕವಾಗಿ ಅಭಿಪ್ರಾಯಪಟ್ಟಿತು.

ಪ್ರತಿವಾದಿಯಾಗಿರುವ ಪತ್ನಿ ಸ್ವತಃ ನ್ಯಾಯಾಲಯದಲ್ಲಿ ಹಾಜರಾಗಿ, ಪತಿಯ ಮನೆಯವರು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ ಎಂದು ವಾದಿಸಿದರು. ತಮಗೆ ಪೌಷ್ಟಿಕ ಆಹಾರ ನೀಡುತ್ತಿರಲಿಲ್ಲ. ಪ್ರತಿದಿನ ದೋಸೆ, ಅನ್ನ, ಸೊಪ್ಪು ಹಾಗೂ ಬೇಳೆಸಾರು ಮಾತ್ರ ನೀಡುತ್ತಿದ್ದರು. ಮನೆಯ ಇತರರು ಮಾತ್ರ ಉತ್ತಮ ಆಹಾರ ಸೇವಿಸುತ್ತಿದ್ದರು ಎಂದು ಆರೋಪಿಸಿದರು.

ನಿರಂತರ ಕಿರುಕುಳದಿಂದ ತಲೆಕೂದಲು ಉದುರಲು ಆರಂಭವಾಯಿತು. ಅತ್ತೆ ಅಡುಗೆಮನೆಗೆ ಹೋಗಲು ಅವಕಾಶ ನೀಡುತ್ತಿರಲಿಲ್ಲ. ತಾನು ಸಂಪಾದಿಸಿದ ಸಂಬಳವನ್ನೆಲ್ಲ ಪತಿಗೆ ನೀಡುತ್ತಿದ್ದ ಕಾರಣ ವೈಯಕ್ತಿಕ ಖರ್ಚಿಗೆ ಹಣ ಉಳಿಯುತ್ತಿರಲಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಅಲ್ಲದೆ, ಪತಿಯನ್ನು ತನ್ನ ತಾಯಿಯ ಕೊಠಡಿಯಲ್ಲೇ ಮಲಗುವಂತೆ ಮಾಡಲಾಗುತ್ತಿತ್ತು. ತಾನು ಪ್ರತ್ಯೇಕ ಕೊಠಡಿಯಲ್ಲಿ ವಾಸಿಸುತ್ತಿದ್ದೆ. ಸುಮಾರು ಐದೂವರೆ ತಿಂಗಳು ಈ ಪರಿಸ್ಥಿತಿಯನ್ನು ಅನುಭವಿಸಿದ ಬಳಿಕ ಪತಿಯ ಮನೆಯಿಂದ ಹೊರಬಂದೆ ಎಂದು ಹೇಳಿದರು.

ಇದೇ ವೇಳೆ, ತಮ್ಮ ತಾಯಿ ಮನೆಯ ಬಳಿ ಬಂದು ಅರ್ಜಿದಾರರು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಹಾನಿ ಮಾಡಿದ್ದಾರೆ. ಈ ಸಂಬಂಧ ಪ್ರತ್ಯೇಕ ಮಾನಹಾನಿ ಪ್ರಕರಣವನ್ನೂ ದಾಖಲಿಸಿರುವುದಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಅರ್ಜಿದಾರರ ಪರ ವಕೀಲರು, ಅತ್ತೆ, ಆಕೆಯ ಇಬ್ಬರು ಸಹೋದರರು ಹಾಗೂ ಪತಿಯ ಸ್ನೇಹಿತನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಮನವಿ ಮಾಡಿದರು. ಪ್ರಕರಣ ಇನ್ನೂ ಎಫ್‌ಐಆರ್‌ ಹಂತದಲ್ಲಿದ್ದು, ಪತಿ ಸಲ್ಲಿಸಿದ್ದ ಅರ್ಜಿಯನ್ನು ಈಗಾಗಲೇ ಹಿಂಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.ಎರಡೂ ಪಕ್ಷಗಳ ವಾದ ಆಲಿಸಿದ ಹೈಕೋರ್ಟ್‌, ಪ್ರಕರಣದ ಕುರಿತು ತನ್ನ ಆದೇಶವನ್ನು ಕಾಯ್ದಿರಿಸಿದೆ.

ಕಾವೇರಿ ನೀರು ತಮಿಳುನಾಡಿಗೆ ಬಿಡಬಾರದು: ಶಾಸಕ ದರ್ಶನ್ ಪುಟ್ಟಣ್ಣಯ್ಯ ಎಚ್ಚರಿಕೆ!

ಮಂಡ್ಯ: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿರುವ ಸಂದರ್ಭದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು. ಒಂದು ವೇಳೆ ನೀರು ಹರಿಸಿದರೆ ಬೀದಿಗಿಳಿದು ಉಗ್ರ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕಾವೇರಿ ಜಲಾನಯನ ಪ್ರದೇಶದಲ್ಲೇ ಕುಡಿಯುವ ನೀರಿನ ಅಭಾವ ಎದುರಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ CWRC ಯಾವ ಮಾನದಂಡದ ಆಧಾರದ ಮೇಲೆ ನೀರು ಬಿಡುವಂತೆ ಆದೇಶ ನೀಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.

“ನಮ್ಮ ಜನರಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ಇದೆ. ಆದರೆ ತಮಿಳುನಾಡಿನವರು ಬೆಳೆಗಳಿಗೆ ನೀರು ಕೇಳುತ್ತಿದ್ದಾರೆ. ಸ್ಥಳೀಯ ವಾಸ್ತವ ಸ್ಥಿತಿಯನ್ನು ಅರಿತುಕೊಂಡು ಪ್ರಾಧಿಕಾರ ನಿರ್ಧಾರ ಕೈಗೊಳ್ಳಬೇಕಿತ್ತು” ಎಂದು ದರ್ಶನ್ ಪುಟ್ಟಣ್ಣಯ್ಯ ಹೇಳಿದ್ದಾರೆ.

15 ದಿನಗಳ ಕಾಲ ನೀರು ಹರಿಸುವಂತೆ ನೀಡಿರುವ ಆದೇಶವನ್ನು ರಾಜ್ಯ ಸರ್ಕಾರ ಪಾಲಿಸಬಾರದು. ಕಾನೂನು ಹೋರಾಟದ ಮೂಲಕ ರಾಜ್ಯದ ಪರಿಸ್ಥಿತಿಯನ್ನು ಪ್ರಾಧಿಕಾರದ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತಿ ವರ್ಷವೂ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸಮಸ್ಯೆ ಎದುರಾಗುತ್ತಿದೆ. ಬೆಂಗಳೂರು ಸೇರಿದಂತೆ ಕಾವೇರಿ ನೀರನ್ನು ಅವಲಂಬಿಸಿರುವ ಪ್ರತಿಯೊಬ್ಬರೂ ಜನ-ಜಾನುವಾರುಗಳ ರಕ್ಷಣೆಗೆ ಹೋರಾಟಕ್ಕೆ ಸಜ್ಜಾಗಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಕರೆ ನೀಡಿದ್ದಾರೆ.

 

ಕಾಮನ್‌ವೆಲ್ತ್ ಗೇಮ್ಸ್ : ಗುಲ್ವೀರ್‌ಗೆ ಐತಿಹಾಸಿಕ ಬೆಳ್ಳಿ; ಹರ್ಜಿಂದರ್ ಕೌರ್‌ಗೂ ರಜತ ಪದಕ

0

ಗ್ಲಾಸ್ಗೊ: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಪುರುಷರ 10,000 ಮೀಟರ್ ಓಟದಲ್ಲಿ ಗುಲ್ವೀರ್ ಸಿಂಗ್ ಐತಿಹಾಸಿಕ ಬೆಳ್ಳಿ ಪದಕ ಗೆದ್ದು ಹೊಸ ಇತಿಹಾಸ ಬರೆದರೆ, ಮಹಿಳೆಯರ 69 ಕೆಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಹರ್ಜಿಂದರ್ ಕೌರ್ ರಜತ ಪದಕ ಗೆದ್ದು ಭಾರತದ ಪದಕ ಪಟ್ಟಿಯನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದಾರೆ.

ಸ್ಕಾಟ್‌ನ್ ಕ್ರೀಡಾಂಗಣದಲ್ಲಿ ಭಾರೀ ಮಳೆ ಹಾಗೂ ನೀರು ತುಂಬಿದ ಟ್ರ್ಯಾಕ್ ನಡುವೆಯೂ ಅದ್ಭುತ ಪ್ರದರ್ಶನ ನೀಡಿದ ಗುಲ್ವೀರ್ ಸಿಂಗ್, ಆರಂಭದಿಂದ ಅಂತ್ಯದವರೆಗೆ ಪದಕದ ಪೈಪೋಟಿಯಲ್ಲಿ ಉಳಿದರು. 27 ನಿಮಿಷ 49.78 ಸೆಕೆಂಡುಗಳಲ್ಲಿ ಗುರಿ ತಲುಪಿದ ಅವರು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. 27 ನಿಮಿಷ 48.93 ಸೆಕೆಂಡುಗಳಲ್ಲಿ ಗುರಿ ತಲುಪಿದ ಆಸ್ಟ್ರೇಲಿಯಾದ ಕೈ ರಾಬಿನ್ಸನ್ ಚಿನ್ನ ಗೆದ್ದರೆ, ಡೇವಿಡ್ ಮುಲ್ಲಾರ್ಕಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಈ ಸಾಧನೆಯೊಂದಿಗೆ ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ 10,000 ಮೀಟರ್ ಓಟದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಐತಿಹಾಸಿಕ ಹೆಗ್ಗಳಿಕೆ ಗುಲ್ವೀರ್ ಸಿಂಗ್ ಪಾಲಾಯಿತು.

ಇನ್ನೊಂದೆಡೆ ಮಹಿಳೆಯರ 69 ಕೆಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಹರ್ಜಿಂದರ್ ಕೌರ್ ಬೆಳ್ಳಿ ಪದಕ ಗೆದ್ದು ಮಿಂಚಿದರು. 2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 71 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದ ಕೌರ್, ಈ ಬಾರಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡಿ ರಜತ ಪದಕ ಜಯಿಸಿದರು. ಕೆನಡಾದ ಶಾರ್ಲೆಟ್ ಸಿಮೋನ್ಯು ಚಿನ್ನದ ಪದಕ ಗೆದ್ದರು.

ಹರ್ಜಿಂದರ್ ಕೌರ್ ಅವರ ಸಾಧನೆಯೊಂದಿಗೆ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಪದಕಗಳ ಸಂಖ್ಯೆ ಏಳಕ್ಕೆ ಏರಿಕೆಯಾಗಿದ್ದು, ಗ್ಲಾಸ್ಗೊ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮತ್ತಷ್ಟು ವೇಗ ಪಡೆದಿದೆ.

ವರ್ತೂರು ಗ್ರೌಂಡ್‌ನಲ್ಲಿ ವ್ಯಕ್ತಿಯ ರುಂಡ ಪತ್ತೆ: ಕೊಲೆಯೋ, ಆತ್ಮಹತ್ಯೆಯೋ? ಪೊಲೀಸರಿಂದ ತನಿಖೆ!

ಬೆಂಗಳೂರು: ನಗರದ ವರ್ತೂರು ಗ್ರೌಂಡ್‌ನಲ್ಲಿ ವ್ಯಕ್ತಿಯೊಬ್ಬರ ರುಂಡ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ವರ್ತೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪತ್ತೆಯಾಗಿರುವ ರುಂಡ ಯಾರದ್ದು ಎಂಬುದು ಇನ್ನೂ ಖಚಿತವಾಗಿಲ್ಲ. ಮೃತ ವ್ಯಕ್ತಿಯ ಗುರುತು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ದುಷ್ಕರ್ಮಿಗಳು ವ್ಯಕ್ತಿಯನ್ನು ಕೊಲೆ ಮಾಡಿ ರುಂಡವನ್ನು ತಂದು ಇಲ್ಲಿ ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮತ್ತೊಂದೆಡೆ, ರುಂಡ ಪತ್ತೆಯಾದ ಸ್ಥಳದ ಸಮೀಪದಲ್ಲೇ ರೈಲ್ವೆ ಹಳಿ ಇರುವುದರಿಂದ, ರೈಲಿಗೆ ಸಿಲುಕಿ ಮೃತಪಟ್ಟ ವ್ಯಕ್ತಿಯ ದೇಹದ ಭಾಗವನ್ನು ನಾಯಿಗಳು ಎಳೆದು ತಂದಿರಬಹುದೇ ಎಂಬ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.

ಘಟನೆ ಕೊಲೆಯೇ ಅಥವಾ ಆತ್ಮಹತ್ಯೆ ಪ್ರಕರಣವೇ ಎಂಬುದು ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ. ಸದ್ಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಸುತ್ತಮುತ್ತಲಿನ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆಹಾಕುತ್ತಿದ್ದಾರೆ.

ಈ ಕುರಿತು ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಬೆಂಗಳೂರಿನ ಐಪಿಎಸ್ ಲೇಔಟ್ ವಿಲ್ಲಾದಲ್ಲಿ ಭರ್ಜರಿ ರೇವ್ ಪಾರ್ಟಿ: ಸಿಸಿಬಿ ದಾಳಿ ವೇಳೆ ಮೂವರು ಅರೆಸ್ಟ್!

ಬೆಂಗಳೂರು: ನಗರದ ಎಚ್‌ಎಸ್‌ಆರ್ ಲೇಔಟ್‌ನ 6ನೇ ಸೆಕ್ಟರ್‌ನಲ್ಲಿರುವ ಪ್ರತಿಷ್ಠಿತ ಐಪಿಎಸ್ ಲೇಔಟ್‌ನ ‘ಸಿ-9’ ಸರ್ವಿಸ್ ವಿಲ್ಲಾದಲ್ಲಿ ನಡೆಯುತ್ತಿದ್ದ ಭರ್ಜರಿ ರೇವ್ ಪಾರ್ಟಿ ಮೇಲೆ ಸಿಸಿಬಿ ಮಹಿಳಾ ಘಟಕದ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ.

ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಇಡೀ ರಾತ್ರಿ ನಡೆಯುತ್ತಿದ್ದ ಪಾರ್ಟಿಯನ್ನು ಪತ್ತೆಹಚ್ಚಿದ್ದಾರೆ. ಪೊಲೀಸರ ದಾಳಿಯಿಂದ ತಪ್ಪಿಸಿಕೊಳ್ಳಲು ಐಪಿಎಸ್ ಲೇಔಟ್ ಸುರಕ್ಷಿತ ಸ್ಥಳ ಎಂದು ಭಾವಿಸಿದ್ದ ಆಯೋಜಕರು, ‘ಅಮಿಗೋಸ್’ ಆ್ಯಪ್ ಮೂಲಕ ಯುವಕ-ಯುವತಿಯರನ್ನು ಪಾರ್ಟಿಗೆ ಆಹ್ವಾನಿಸಿದ್ದರು ಎನ್ನಲಾಗಿದೆ.

ಪ್ರವೇಶ ಶುಲ್ಕ ಪಡೆದು ಪಾರ್ಟಿ ಆಯೋಜನೆ:

ಪಾರ್ಟಿಗೆ ಆಗಮಿಸುವ ಯುವಕರಿಂದ ₹1,099 ಹಾಗೂ ಯುವತಿಯರಿಂದ ₹499 ಪ್ರವೇಶ ಶುಲ್ಕ ವಸೂಲಿ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ದಿನಕ್ಕೆ ₹20 ಸಾವಿರ ಬಾಡಿಗೆ ನೀಡಿ ‘ರೆವ್ ಕೀ ಹಾಸ್ಪಿಟಾಲಿಟಿ’ ವಿಲ್ಲಾವನ್ನು ಬುಕ್ ಮಾಡಲಾಗಿತ್ತು ಎನ್ನಲಾಗಿದೆ.

ವಿಲ್ಲಾದಲ್ಲಿ ಇಡೀ ರಾತ್ರಿ ಮದ್ಯ, ನಿಷೇಧಿತ ಹುಕ್ಕಾ ಹಾಗೂ ಇ-ಸಿಗರೇಟ್‌ಗಳೊಂದಿಗೆ ಮೋಜು-ಮಸ್ತಿ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಬಿ ದಾಳಿ: ಮೂವರು ಬಂಧನ:

ದಾಳಿ ವೇಳೆ ಸ್ಥಳದಲ್ಲಿದ್ದ ಯುವತಿಯರನ್ನು ಪೊಲೀಸರು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ. ಅಲ್ಲದೇ ನಿಷೇಧಿತ ಹುಕ್ಕಾ, ಇ-ಸಿಗರೇಟ್‌ಗಳು ಹಾಗೂ ಅಪಾರ ಪ್ರಮಾಣದ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆಯಲಾಗಿದೆ.

ರೇವ್ ಪಾರ್ಟಿ ಆಯೋಜನೆ ಮಾಡಿದ್ದ ಆರೋಪದಡಿ ದೀಕ್ಷಿತ್, ವೇದಾಂತ್ ಪಂಡಿತ್ ಹಾಗೂ ಶಂಕರ್ ಎಂಬ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಇನ್ನು, ನಿಯಮ ಉಲ್ಲಂಘಿಸಿ ವಿಲ್ಲಾವನ್ನು ಪಾರ್ಟಿಗೆ ನೀಡಿದ ಆರೋಪದಡಿ ಮನೆ ಮಾಲೀಕರ ವಿರುದ್ಧವೂ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.