Home Blog

ಹನೂರು ಶೂಟೌಟ್ ಪ್ರಕರಣ: ಮೃತರ ಕುಟುಂಬಕ್ಕೆ ತಲಾ ₹15 ಲಕ್ಷ ಪರಿಹಾರ ವಿತರಣೆ

0

ಚಾಮರಾಜನಗರ: ಕಾವೇರಿ ವನ್ಯಜೀವಿಧಾಮದ ಶಾಗ್ಯ ಬೀಟ್‌ನಲ್ಲಿ ನಡೆದ ಶೂಟೌಟ್‌ನಲ್ಲಿ ಮೃತಪಟ್ಟ ಕುಮಾರ್, ಅಂತೋಣಿ ಸಾಮಿ ಹಾಗೂ ಪೀಟರ್ ಅವರ ಕುಟುಂಬಗಳಿಗೆ ಹನೂರು ಶಾಸಕ ಎಂ.ಆರ್. ಮಂಜುನಾಥ್ ತಲಾ ₹15 ಲಕ್ಷ ಪರಿಹಾರ ವಿತರಿಸಿದ್ದಾರೆ. ಸರ್ಕಾರದಿಂದ ₹5 ಲಕ್ಷ ಹಾಗೂ ವೈಯಕ್ತಿಕವಾಗಿ ₹10 ಲಕ್ಷ ಸೇರಿಸಿ ಒಟ್ಟು ₹45 ಲಕ್ಷ ಪರಿಹಾರವನ್ನು ಮೂರು ಕುಟುಂಬಗಳಿಗೆ ನೀಡಲಾಗಿದೆ. ಪ್ರತಿಭಟನಾನಿರತರಿಗೆ ನೀಡಿದ್ದ ಭರವಸೆಯಂತೆ ಶಾಸಕರು ಮೃತರ ಮನೆಗಳಿಗೆ ತೆರಳಿ ಪರಿಹಾರ ಹಸ್ತಾಂತರಿಸಿದ್ದಾರೆ.

ಪ್ರಕರಣದ ತನಿಖೆ ಮುಂದುವರಿದಿದ್ದು, ತನಿಖೆಯಲ್ಲಿ ತಪ್ಪಿತಸ್ಥರು ಕಂಡುಬಂದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಂ.ಆರ್. ಮಂಜುನಾಥ್ ಭರವಸೆ ನೀಡಿದ್ದಾರೆ.

ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಬಳಿಕ ಮೂವರ ಮೃತದೇಹಗಳನ್ನು ತಡರಾತ್ರಿ ಗ್ರಾಮಕ್ಕೆ ತರಲಾಗಿದೆ. ತೋಮಿಯಾರ್ ಪಾಳ್ಯದ ಚರ್ಚ್‌ನಲ್ಲಿ ಮೃತದೇಹಗಳನ್ನು ಇರಿಸಲಾಗಿದ್ದು, ಪಾದ್ರಿ ಕೆ. ಚಾರ್ಲ್ಸ್ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಬಳಿಕ ಕ್ರೈಸ್ತ ಸಂಪ್ರದಾಯದಂತೆ ಸ್ವಗ್ರಾಮಗಳಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ.

ಇತ್ತ ಶೂಟೌಟ್ ನಡೆದ ಸ್ಥಳದಲ್ಲಿ ಕೊಳ್ಳೇಗಾಲ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಎರಡು ದಿನಗಳ ಕಾಲ ಸ್ಥಳ ಮಹಜರು ನಡೆಸಿದ್ದಾರೆ. ಅರಣ್ಯ ಇಲಾಖೆ ಕೂಡ ಪ್ರಕರಣಕ್ಕೆ ಸಂಬಂಧಿಸಿದ ಹಲವು ಸಾಕ್ಷ್ಯಗಳನ್ನು ತನಿಖಾಧಿಕಾರಿಗೆ ಸಲ್ಲಿಸಿದೆ.

ಘಟನೆ ಬಳಿಕ ವಶಕ್ಕೆ ಪಡೆದಿದ್ದ ಸುಮಾರು 30 ಕೆ.ಜಿ. ಜಿಂಕೆ ಮಾಂಸ, ಎರಡು ಒಂಟಿ ನಳಿಕೆಯ ನಾಡ ಬಂದೂಕುಗಳು, ಹೆಡ್‌ಟಾರ್ಚ್‌ಗಳು, ಚಪ್ಪಲಿಗಳು, ಅಡುಗೆ ಪಾತ್ರೆಗಳು, ಸಾಂಬಾರ ಪದಾರ್ಥಗಳು, ಚಾಕು ಹಾಗೂ ಬ್ಯಾಗ್‌ಗಳನ್ನು ಸಾಕ್ಷ್ಯವಾಗಿ ತನಿಖಾಧಿಕಾರಿಗೆ ಹಸ್ತಾಂತರಿಸಲಾಗಿದೆ.

ಪ್ರಕರಣವನ್ನು ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಂಪೂರ್ಣ ತನಿಖಾ ವರದಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ ಮೃತ ಪೀಟರ್ ಅವರ ಸಹೋದರಿ ಮಾರ್ಗರೇಟ್ ಗಂಭೀರ ಆರೋಪ ಮಾಡಿದ್ದಾರೆ. ಪಂಚನಾಮೆ ಹೆಸರಿನಲ್ಲಿ ತಮ್ಮಿಂದ ಸಹಿ ಪಡೆದು, ತಮ್ಮ ಗಮನಕ್ಕೆ ಬಾರದಂತೆ ಇಬ್ಬರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಹಾಗೂ ಮೃತದೇಹಗಳನ್ನು ಐಸ್‌ಬಾಕ್ಸ್‌ನಲ್ಲೂ ಇರಿಸಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಮಾರ್ಟಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸೆಲ್ವಂ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಕ್ರೈಸ್ತ ಸಮುದಾಯದ ಪ್ರಮುಖ ನಾಯಕರು ಈ ಘಟನೆಯಲ್ಲಿ ಮೃತ ಕುಟುಂಬಗಳ ನೋವಿಗೆ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಭಾವಿ ಸಮುದಾಯಗಳಿಗೆ ಇಂತಹ ಘಟನೆ ನಡೆದಿದ್ದರೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಹೋರಾಟ ನಡೆಯುತ್ತಿತ್ತು ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

3 ನಿಮಿಷದ Zoom ಕಾಲ್‌ನಲ್ಲಿ 900 ಮಂದಿಗೆ ಗೇಟ್‌ಪಾಸ್: 5 ವರ್ಷ ಬಳಿಕ CEOಗೇ ಮಂಡಳಿಯಿಂದ ಗೇಟ್‌ಪಾಸ್

0

ನ್ಯೂಯಾರ್ಕ್: ಕೋವಿಡ್ ಕಾಲದಲ್ಲಿ ಕೇವಲ ಮೂರು ನಿಮಿಷದ Zoom ಕಾಲ್ ಮೂಲಕ 900ಕ್ಕೂ ಹೆಚ್ಚು ಉದ್ಯೋಗಿಗಳನ್ನು ಏಕಾಏಕಿ ವಜಾಗೊಳಿಸಿ ಜಾಗತಿಕ ಸುದ್ದಿಯಾಗಿದ್ದ ಭಾರತ ಮೂಲದ ಉದ್ಯಮಿ ವಿಶಾಲ್ ಗರ್ಗ್ ಇದೀಗ ತಾವೇ ತಮ್ಮ ಹುದ್ದೆ ಕಳೆದುಕೊಂಡಿದ್ದಾರೆ. ‘ಬೆಟರ್ ಹೋಮ್ & ಫೈನಾನ್ಸ್’ ಕಂಪನಿಯ CEO ಆಗಿದ್ದ ವಿಶಾಲ್ ಗರ್ಗ್ ಅವರನ್ನು ಕಂಪನಿಯ ಆಡಳಿತ ಮಂಡಳಿಯೇ ಸರ್ವಾನುಮತದಿಂದ ವಜಾಗೊಳಿಸಿದೆ.

ವಿಶಾಲ್ ಗರ್ಗ್ ಅವರ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ, ಸ್ವಭಾವ ಹಾಗೂ ನಂಬಿಕಾರ್ಹತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ ಮಂಡಳಿ, ಅವರನ್ನು CEO ಹುದ್ದೆಯಿಂದ ತೆಗೆದುಹಾಕಲು ನಿರ್ಧರಿಸಿದೆ. ಕಂಪನಿಯ ಆರ್ಥಿಕ ಕಾರ್ಯಕ್ಷಮತೆಯೂ ಈ ಬೆಳವಣಿಗೆಗೆ ಪ್ರಮುಖ ಹಿನ್ನೆಲೆಯಾಗಿದೆ.

ವಿಶಾಲ್ ಗರ್ಗ್ ಅವರ ನಾಯಕತ್ವದಲ್ಲಿ 2022ರಿಂದ ಕಂಪನಿಯು ಸುಮಾರು 1.5 ಬಿಲಿಯನ್ ಡಾಲರ್ ನಿವ್ವಳ ನಷ್ಟ ಅನುಭವಿಸಿದೆ ಎಂದು ವರದಿಯಾಗಿದೆ. ಇದೇ ಅವಧಿಯಲ್ಲಿ ಕಂಪನಿಯ ಷೇರು ಮೌಲ್ಯ ಶೇ.90ಕ್ಕೂ ಹೆಚ್ಚು ಕುಸಿದಿದೆ.

2021ರ ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್‌ಗೆ ಕೆಲವೇ ದಿನಗಳಿರುವಾಗ ವಿಶಾಲ್ ಗರ್ಗ್ ಮೂರು ನಿಮಿಷಗಳ Zoom ವೆಬಿನಾರ್ ಮೂಲಕ 900ಕ್ಕೂ ಹೆಚ್ಚು ಉದ್ಯೋಗಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಿದ್ದರು. ಈ ನಿರ್ಧಾರಕ್ಕೆ ಜಾಗತಿಕ ಮಟ್ಟದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಘಟನೆಯ ಬಳಿಕ ಹಲವು ಹಿರಿಯ ಅಧಿಕಾರಿಗಳು ಕಂಪನಿಯಿಂದ ಹೊರನಡೆದಿದ್ದರು. ಕಂಪನಿಯ ಪ್ರತಿಷ್ಠೆಗೂ ದೊಡ್ಡ ಹೊಡೆತ ಬಿದ್ದಿತ್ತು.

ತಮ್ಮ ವರ್ತನೆಗೆ ವಿಶಾಲ್ ಗರ್ಗ್ ನಂತರ ಕ್ಷಮೆಯಾಚಿಸಿದ್ದರೂ, ವಿವಾದದ ಪರಿಣಾಮದಿಂದ ಕಂಪನಿಯ ಮೇಲಿನ ನಕಾರಾತ್ಮಕ ಭಾವನೆ ಸಂಪೂರ್ಣವಾಗಿ ದೂರವಾಗಲಿಲ್ಲ. ಇದರ ಬೆನ್ನಲ್ಲೇ ವ್ಯವಹಾರ ಕುಸಿತ ಹಾಗೂ ಷೇರು ಮೌಲ್ಯದ ಭಾರೀ ಇಳಿಕೆ ಅವರ ನಾಯಕತ್ವದ ಮೇಲೆ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿತು.

ಇದೀಗ ಕಂಪನಿಯ ಹಂಗಾಮಿ CEO ಆಗಿ ಡೇನಿಯಲ್ ಲೂಯಿಸ್ ಅವರನ್ನು ನೇಮಿಸಲಾಗಿದೆ. ಗಮನಾರ್ಹವೆಂದರೆ, ವಿಶಾಲ್ ಗರ್ಗ್ ಅವರೇ ಲೂಯಿಸ್ ಅವರನ್ನು ಕಂಪನಿಯೊಳಗೆ ಕರೆತಂದಿದ್ದರು ಎನ್ನಲಾಗಿದೆ. ನಂತರ ಅವರು ನಿರ್ದೇಶಕರ ಮಂಡಳಿಗೆ ಸೇರ್ಪಡೆಯಾಗಿದ್ದು, ಮಂಡಳಿಯ ಇತರ ಸದಸ್ಯರನ್ನು ವಿಶಾಲ್ ಗರ್ಗ್ ಅವರನ್ನು ವಜಾಗೊಳಿಸುವ ನಿರ್ಧಾರದತ್ತ ಕರೆದೊಯ್ದರು ಎಂಬ ಮಾಹಿತಿ ಇದೆ.

ವಜಾಗೊಂಡಿರುವುದನ್ನು ಪ್ರಶ್ನಿಸಿರುವ ವಿಶಾಲ್ ಗರ್ಗ್ ಇದೀಗ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಕಂಪನಿಯನ್ನು ಮತ್ತೆ ಲಾಭದ ಹಾದಿಗೆ ತರುವವರೆಗೆ ವರ್ಷಕ್ಕೆ ಕೇವಲ ಒಂದು ಡಾಲರ್ ವೇತನಕ್ಕೆ ಕೆಲಸ ಮಾಡಲು ಸಿದ್ಧ ಎಂದು ಹೇಳುವ ಮೂಲಕ CEO ಹುದ್ದೆಯನ್ನು ಮರಳಿ ಪಡೆಯುವ ಪ್ರಯತ್ನ ನಡೆಸುತ್ತಿದ್ದಾರೆ.

“ಕತ್ತಲಲ್ಲಿ ಆತ್ಮರಕ್ಷಣೆಗಾಗಿ ಫೈರಿಂಗ್”: ಹನೂರು ಎನ್‌ಕೌಂಟರ್ ಬಗ್ಗೆ ಸದನದಲ್ಲಿ ರಾಮಲಿಂಗಾರೆಡ್ಡಿ ಸ್ಪಷ್ಟನೆ

0

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದೆ. ಘಟನೆ ಕುರಿತು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಸದನಕ್ಕೆ ಸಂಪೂರ್ಣ ಮಾಹಿತಿ ನೀಡಿದ್ದು, ಮೃತರು ತಮ್ಮ ಜಮೀನಿಗೆ ತೆರಳಿರಲಿಲ್ಲ, ಬದಲಾಗಿ ಅರಣ್ಯದೊಳಗೆ 5ರಿಂದ 8 ಕಿಲೋಮೀಟರ್ ಅಕ್ರಮವಾಗಿ ಪ್ರವೇಶಿಸಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.

ಶಾಗ್ಯ ಸಮೀಪ ಕಳ್ಳಬೇಟೆಗಾರರು ಅಕ್ರಮವಾಗಿ ಅರಣ್ಯ ಪ್ರವೇಶಿಸಿರುವ ಮಾಹಿತಿ ಹಿಂದಿನ ರಾತ್ರಿ 8 ಗಂಟೆ ಸುಮಾರಿಗೆ ಅರಣ್ಯ ಇಲಾಖೆಗೆ ಲಭ್ಯವಾಗಿತ್ತು. ಮಾಹಿತಿ ಆಧರಿಸಿ 10 ಸಿಬ್ಬಂದಿಯನ್ನು ಒಳಗೊಂಡ ಎರಡು ತಂಡಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಮುಂಜಾನೆ ಸುಮಾರು 5 ಗಂಟೆಗೆ ಅರಣ್ಯದ ಬಂಡೆಯೊಂದರ ಬಳಿ ಬ್ಯಾಟರಿ ಬೆಳಕು ಕಾಣಿಸಿಕೊಂಡಿದ್ದು, ಸಿಬ್ಬಂದಿ ಶರಣಾಗುವಂತೆ ಸೂಚಿಸಿದ್ದರು ಎಂದು ಸಚಿವರು ತಿಳಿಸಿದ್ದಾರೆ.

ಈ ವೇಳೆ ಬೇಟೆಗಾರರ ಕಡೆಯಿಂದ ಅರಣ್ಯ ಸಿಬ್ಬಂದಿಯತ್ತ ಗುಂಡಿನ ದಾಳಿ ನಡೆದಿದೆ. ಇದಕ್ಕೆ ಪ್ರತಿಯಾಗಿ ಸಿಬ್ಬಂದಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಕತ್ತಲಿನ ವಾತಾವರಣ ಹಾಗೂ ಎತ್ತರದ ಪ್ರದೇಶದ ಕಾರಣ ಎದುರಿನವರ ಚಲನವಲನ ಸ್ಪಷ್ಟವಾಗಿ ಕಾಣಿಸಿರಲಿಲ್ಲ. ಗುಂಡಿನ ಚಕಮಕಿಯಲ್ಲಿ ಅರಣ್ಯ ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗುಂಡಿನ ದಾಳಿ ನಿಂತ ಬಳಿಕ ಸ್ಥಳಕ್ಕೆ ತೆರಳಿದಾಗ ಮೂವರು ಗುಂಡೇಟಿನಿಂದ ಗಾಯಗೊಂಡಿರುವುದು ಪತ್ತೆಯಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದರು ಎಂದು ಸಚಿವರು ವಿವರಿಸಿದ್ದಾರೆ.

ಘಟನಾ ಸ್ಥಳದಲ್ಲಿ ಎರಡು ನಾಡಬಂದೂಕುಗಳು, ಕಾಡತೂಸುಗಳು, ಪಟಾಕಿ, ಮದ್ದಿನ ಬಾಕ್ಸ್, ಮೊಬೈಲ್‌ಗಳು, ಚಾರ್ಜರ್ ಬ್ಯಾಟರಿ ಹಾಗೂ ದಿನಸಿ ವಸ್ತುಗಳು ಪತ್ತೆಯಾಗಿವೆ. ಅಲ್ಲದೆ, ಬ್ಯಾಗ್‌ಗಳಲ್ಲಿ ಸುಮಾರು 20ರಿಂದ 35 ಕೆ.ಜಿ. ಜಿಂಕೆ ಮಾಂಸವೂ ಪತ್ತೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಅರಣ್ಯ ಸಂರಕ್ಷಣೆ ಇಲಾಖೆಯ ಕರ್ತವ್ಯವಾಗಿದ್ದು, ಪ್ರಕರಣದಲ್ಲಿ ಈಗಾಗಲೇ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ತನಿಖೆಯ ಬಳಿಕ ಅರಣ್ಯ ಸಿಬ್ಬಂದಿಯಿಂದ ಉದ್ದೇಶಪೂರ್ವಕವಾಗಿ ತಪ್ಪು ನಡೆದಿರುವುದು ಅಥವಾ ಕಾನೂನು ಉಲ್ಲಂಘನೆಯಾಗಿರುವುದು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಮಲಿಂಗಾರೆಡ್ಡಿ ಸದನಕ್ಕೆ ಭರವಸೆ ನೀಡಿದ್ದಾರೆ.

ಇದೇ ವೇಳೆ ಪ್ರಕರಣಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮೃತರ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ನೀಡಬೇಕು ಹಾಗೂ ಗುಂಡಿನ ದಾಳಿ ಪ್ರಕರಣದ ಸತ್ಯಾಸತ್ಯತೆ ಬಹಿರಂಗವಾಗಲು ತಕ್ಷಣ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಪ್ರಕರಣದ ನೈತಿಕ ಹೊಣೆ ಹೊತ್ತು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಬೇಕು ಎಂದೂ ಆಗ್ರಹಿಸಿದ್ದಾರೆ.

KUDAಯಲ್ಲಿ ಕೋಟ್ಯಂತರ ಹಣಕ್ಕೆ ಕನ್ನ! ₹8.43 ಕೋಟಿ ಅಕ್ರಮ ವರ್ಗಾವಣೆ ಬಯಲು; ಹೊರಗುತ್ತಿಗೆ ನೌಕರನಿಗಾಗಿ ಪೊಲೀಸರ ಬೇಟೆ

0

ಕೊಪ್ಪಳ, ಆಗಸ್ಟ್ 17: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಭಾರೀ ಹಣಕಾಸು ಅಕ್ರಮ ಇದೀಗ ಬಯಲಾಗಿದೆ. ಆಡಿಟ್ ವೇಳೆ ₹8.43 ಕೋಟಿ ಹಣ ಅಕ್ರಮವಾಗಿ ವರ್ಗಾವಣೆಯಾಗಿರುವುದು ಪತ್ತೆಯಾಗಿದ್ದು, ಪ್ರಾಧಿಕಾರದ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ ಹಣ ವರ್ಗಾವಣೆ ಮಾಡಿರುವ ಶಂಕೆ ತನಿಖೆಗೆ ವೇಗ ನೀಡಿದೆ.

ಪ್ರಾಧಿಕಾರಕ್ಕೆ ಅಧ್ಯಕ್ಷರು ಹಾಗೂ ಸದಸ್ಯರ ನೇಮಕವಾಗದ ಅವಧಿಯನ್ನೇ ಆರೋಪಿಗಳು ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. 2022-23ರ ಅವಧಿಯಲ್ಲಿ ಹಾಗೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸುಮಾರು ಒಂದೂವರೆ ವರ್ಷಗಳ ಕಾಲ ಅಧ್ಯಕ್ಷರಿಲ್ಲದ ಪರಿಸ್ಥಿತಿ ಇತ್ತು. ಇದೇ ಸಂದರ್ಭದಲ್ಲಿ ಕೊಪ್ಪಳದ ವಿವಿಧ ಬ್ಯಾಂಕ್‌ಗಳಲ್ಲಿ ಪ್ರಾಧಿಕಾರದ ಹೆಸರಿನಲ್ಲಿ ಅನಧಿಕೃತ ಖಾತೆಗಳನ್ನು ತೆರೆಯಲಾಗಿದೆ ಎಂಬ ಆರೋಪವಿದೆ.

ಈ ಖಾತೆಗಳ ಮೂಲಕ ಒಟ್ಟು ₹8.43 ಕೋಟಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಆಡಿಟ್‌ನಲ್ಲಿ ಬೆಳಕಿಗೆ ಬಂದಿದೆ. ಇಷ್ಟು ದೊಡ್ಡ ಮೊತ್ತದ ಹಣದ ವರ್ಗಾವಣೆ ಒಬ್ಬ ವ್ಯಕ್ತಿಯ ಕೈಚಳಕದಿಂದ ಮಾತ್ರ ಸಾಧ್ಯವಿಲ್ಲ. ಹೀಗಾಗಿ ಪ್ರಕರಣದ ಹಿಂದೆ ಸಂಘಟಿತ ಜಾಲವಿರುವ ಸಾಧ್ಯತೆಯ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಹೊರಗುತ್ತಿಗೆ ನೌಕರ ರವೀಂದ್ರ ಕುಮಾರ್ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿ ಗುರುತಿಸಿಕೊಂಡಿದ್ದಾನೆ. ಹೊಸಪೇಟೆಯಲ್ಲಿ ಇದ್ದುಕೊಂಡೇ ಕೊಪ್ಪಳ ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈತ, ತಾನು ಸರ್ಕಾರಿ ನೌಕರನೆಂದು ಬಿಂಬಿಸಿಕೊಂಡಿದ್ದ ಎನ್ನುವ ಆರೋಪವೂ ಇದೆ.

ನಕಲಿ ಖಾತೆಗಳನ್ನು ಯಾರು ತೆರೆದರು? ಅವುಗಳಿಗೆ ಅನುಮತಿ ನೀಡಿದವರು ಯಾರು? ₹8.43 ಕೋಟಿ ಹಣವನ್ನು ಯಾವ ಖಾತೆಗಳಿಗೆ ವರ್ಗಾಯಿಸಲಾಗಿದೆ? ಅಂದಿನ ಅಧಿಕಾರಿಗಳ ಪಾತ್ರವೇನು? ಎಂಬ ಪ್ರಶ್ನೆಗಳಿಗೆ ತನಿಖೆಯ ಮೂಲಕ ಉತ್ತರ ಸಿಗಬೇಕಿದೆ.

ಸದ್ಯ ರವೀಂದ್ರ ಕುಮಾರ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಅಕ್ರಮ ವರ್ಗಾವಣೆಯ ಸಂಪೂರ್ಣ ವಿವರ ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವ ಇತರರ ಬಗ್ಗೆ ತನಿಖಾ ತಂಡ ಮಾಹಿತಿ ಕಲೆಹಾಕುತ್ತಿದೆ.

‘ಉಚಿತ ಎಲೆಕ್ಟ್ರಿಕ್ ಸ್ಟೌ’ ಹೆಸರಿನಲ್ಲಿ ಫೇಕ್ ಮೆಸೇಜ್ ವೈರಲ್: ಸಾರ್ವಜನಿಕರು ಮೋಸ ಹೋಗದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಚ್ಚರಿಕೆ

0

ನವದೆಹಲಿ: ಕೇಂದ್ರ ಸರ್ಕಾರದಿಂದ ಉಚಿತ ಎಲೆಕ್ಟ್ರಿಕ್‌ ಸ್ಟೌ ವಿತರಣೆ ಮಾಡಲಾಗುತ್ತಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಇಂತಹ ನಕಲಿ ಸಂದೇಶಗಳನ್ನು ನಂಬಿ ಯಾರೂ ಮೋಸ ಹೋಗಬಾರದು ಎಂದು ಅವರು ಮನವಿ ಮಾಡಿದ್ದಾರೆ.

ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವಾಲಯದ ಹೆಸರನ್ನು ಬಳಸಿಕೊಂಡು ಕೆಲವರು ‘ಉಚಿತ ಎಲೆಕ್ಟ್ರಿಕ್‌ ಸ್ಟೌ ವಿತರಣೆ’ ಎಂಬ ನಕಲಿ ಸುದ್ದಿ ಹಾಗೂ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಾರೆ. ಆದರೆ, ನವೀಕರಿಸಬಹುದಾದ ಇಂಧನ ಸಚಿವಾಲಯ (MNRE) ವತಿಯಿಂದ ಇಂತಹ ಯಾವುದೇ ಯೋಜನೆಯನ್ನು ಜಾರಿಗೆ ತರಲಾಗಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕರನ್ನು ದಾರಿ ತಪ್ಪಿಸುವ ಅಥವಾ ವಂಚಿಸುವ ಉದ್ದೇಶದಿಂದ ಸಚಿವಾಲಯದ ಹೆಸರಿನಲ್ಲಿ ಇಂತಹ ಫೇಕ್‌ ಮೆಸೇಜ್‌ಗಳನ್ನು ಹರಿಬಿಡಲಾಗುತ್ತಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಸಂದೇಶಗಳು ಕಂಡುಬಂದರೆ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಪ್ರಹ್ಲಾದ್‌ ಜೋಶಿ ತಿಳಿಸಿದ್ದಾರೆ.

ಸರ್ಕಾರದ ಯಾವುದೇ ಯೋಜನೆಗೆ ಸಂಬಂಧಿಸಿದ ಮಾಹಿತಿ ತಿಳಿದುಕೊಳ್ಳಲು ಸಚಿವಾಲಯದ ಅಧಿಕೃತ ವೆಬ್‌ಸೈಟ್‌ ಹಾಗೂ ಪರಿಶೀಲಿತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪ್ರಕಟವಾಗುವ ಮಾಹಿತಿಯನ್ನು ಮಾತ್ರ ನಂಬಬೇಕು ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್‌ ಮಾಡದಂತೆ ಸಚಿವರು ಸೂಚಿಸಿದ್ದಾರೆ. ಪರಿಶೀಲನೆ ನಡೆಸದೆ ಯಾವುದೇ ಸಂದೇಶಗಳನ್ನು ಇತರರಿಗೆ ಫಾರ್ವರ್ಡ್‌ ಮಾಡಬಾರದು. ಮುಖ್ಯವಾಗಿ ಬ್ಯಾಂಕಿಂಗ್‌, ಹಣಕಾಸು ಹಾಗೂ ವೈಯಕ್ತಿಕ ಮಾಹಿತಿಯನ್ನು ಅಪರಿಚಿತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ಪಡೆಯಲು ಅಧಿಕೃತ ವೆಬ್‌ಸೈಟ್‌, ಸರ್ಕಾರದ ಮಾಧ್ಯಮ ಪ್ರಕಟಣೆಗಳು ಹಾಗೂ ವಿಶ್ವಾಸಾರ್ಹ ಸುದ್ದಿ ಸಂಸ್ಥೆಗಳನ್ನು ಮಾತ್ರ ಅವಲಂಬಿಸುವಂತೆ ಪ್ರಹ್ಲಾದ್‌ ಜೋಶಿ ಸಲಹೆ ನೀಡಿದ್ದಾರೆ.

‘ಉಚಿತ ಎಲೆಕ್ಟ್ರಿಕ್‌ ಸ್ಟೌ’ ಹೆಸರಿನಲ್ಲಿ ಬರುವ ಯಾವುದೇ ಸಂದೇಶ ಅಥವಾ ಲಿಂಕ್‌ ಅನ್ನು ಕ್ಲಿಕ್‌ ಮಾಡುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಅನುಮಾನಾಸ್ಪದ ಸಂದೇಶಗಳಿಂದ ದೂರವಿದ್ದು, ವಂಚನೆಗೆ ಒಳಗಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಚಿವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಆಟೋ ಬಳಿ ನಾಯಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ!

0

ಹೈದರಾಬಾದ್: ಸಾಕು ನಾಯಿ ಆಟೋ ಬಳಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ತೆಲಂಗಾಣದ ಖಮ್ಮಂ ನಗರದಲ್ಲಿ ನಡೆದಿದೆ. ಘಟನೆಯಲ್ಲಿ 23 ವರ್ಷದ ಯುವಕನೊಬ್ಬ ಮೃತಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಯುವಕನನ್ನು ಉಂಡೇಟಿ ಶ್ರೀನಾಥ್‌ (23) ಎಂದು ಗುರುತಿಸಲಾಗಿದೆ. ಶ್ರೀನಾಥ್‌ ಡೆಕೊರೇಷನ್‌ ಸಂಬಂಧಿತ ಕೆಲಸ ಮಾಡುತ್ತಿದ್ದರು.

ಆಗಸ್ಟ್‌ 13ರಂದು ರಾತ್ರಿ 10.30ರ ಸುಮಾರಿಗೆ ಶ್ರೀನಾಥ್‌ ತಮ್ಮ ಸ್ನೇಹಿತ ವೀರೇಶ್‌ ಜೊತೆ ಆಟೋದಲ್ಲಿ ಕುಳಿತಿದ್ದರು. ಇದೇ ವೇಳೆ ಸ್ಥಳೀಯ ನಿವಾಸಿ ವೆಮುಲ ಮಧು (28) ತನ್ನ ಸಾಕು ನಾಯಿಯನ್ನು ವಾಕಿಂಗ್‌ಗೆ ಕರೆದುಕೊಂಡು ಬಂದಿದ್ದ.

ಈ ಸಂದರ್ಭದಲ್ಲಿ ಸಾಕು ನಾಯಿ ಶ್ರೀನಾಥ್‌ ಹಾಗೂ ವೀರೇಶ್‌ ಕುಳಿತಿದ್ದ ಆಟೋ ಸಮೀಪ ಮೂತ್ರ ವಿಸರ್ಜನೆ ಮಾಡಿದ್ದಲ್ಲದೆ, ಅವರತ್ತ ಬೊಗಳಿದೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ಶ್ರೀನಾಥ್‌ ಹಾಗೂ ಮಧು ನಡುವೆ ಮಾತಿನ ಚಕಮಕಿ ನಡೆದಿದೆ.

ನಂತರ ಜಗಳ ಮತ್ತಷ್ಟು ವಿಕೋಪಕ್ಕೆ ತಿರುಗಿದ್ದು, ಶ್ರೀನಾಥ್‌ ಮತ್ತು ವೀರೇಶ್‌ ಮಧುವಿನ ಮನೆ ಕಡೆಗೆ ತೆರಳಿದ್ದಾರೆ. ಅಲ್ಲಿ ಮತ್ತೆ ಇಬ್ಬರ ನಡುವೆ ಗಲಾಟೆ ನಡೆದಿದ್ದು, ದೊಣ್ಣೆಗಳಿಂದ ಹೊಡೆದಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವೇಳೆ ಮಧು ಮನೆಯೊಳಗೆ ತೆರಳಿ ತರಕಾರಿ ಕತ್ತರಿಸಲು ಬಳಸುವ ಚಾಕುವನ್ನು ತಂದು ಶ್ರೀನಾಥ್‌ಗೆ ಹಲವು ಬಾರಿ ಇರಿದಿದ್ದಾನೆ ಎನ್ನಲಾಗಿದೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡ ಶ್ರೀನಾಥ್‌ ತೀವ್ರ ರಕ್ತಸ್ರಾವಕ್ಕೊಳಗಾಗಿ ಮನೆಯ ಸಮೀಪದ ಚರಂಡಿ ಬಳಿ ಕುಸಿದು ಬಿದ್ದಿದ್ದಾರೆ.

ಬಳಿಕ ಆರೋಪಿ ಮಧು ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಶ್ರೀನಾಥ್‌ನನ್ನು ಕುಟುಂಬಸ್ಥರು ಹಾಗೂ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಪರೀಕ್ಷಿಸಿ ಶ್ರೀನಾಥ್‌ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಘಟನಾ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವೆಮುಲ ಮಧುವನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಜಗಳಕ್ಕೆ ಕಾರಣ, ಹತ್ಯೆಯ ಸಂದರ್ಭ ಹಾಗೂ ಘಟನೆಗೆ ಸಂಬಂಧಿಸಿದ ಇತರ ಅಂಶಗಳ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಸುಪ್ರೀಂನಲ್ಲಿ ಕರ್ನಾಟಕಕ್ಕೆ ಹಿನ್ನಡೆ: ಕಾವೇರಿ ವಿಚಾರಣೆ ಒಂದು ವಾರ ಮುಂದೂಡಿಕೆ, CWMA ಆದೇಶ ಪಾಲಿಸಲು ಸೂಚನೆ..!

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್‌ನಿಂದ ಮಹತ್ವದ ಸೂಚನೆ ಎದುರಾಗಿದೆ. ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಒಂದು ವಾರಕ್ಕೆ ಮುಂದೂಡಿದ್ದು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿರುವ ಆದೇಶವನ್ನು ಪಾಲಿಸುವಂತೆ ಕರ್ನಾಟಕಕ್ಕೆ ಸೂಚಿಸಿದೆ.

ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್‌ ಹಾಗೂ ಸಂದೀಪ್‌ ಮೆಹ್ತಾ ಅವರನ್ನೊಳಗೊಂಡ ಪೀಠ ನಡೆಸಿತು.

ವಿಚಾರಣೆ ವೇಳೆ ತಮಿಳುನಾಡು ಪರ ವಕೀಲರು, CWMA ನಿರ್ದೇಶನಗಳ ಹೊರತಾಗಿಯೂ ಕರ್ನಾಟಕದಿಂದ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿಯುತ್ತಿಲ್ಲ ಎಂದು ವಾದಿಸಿದರು. ನೀರಿನ ಹರಿವು ಕಾಣಿಸುತ್ತಿಲ್ಲ. ಹೀಗಾಗಿ ತಮಿಳುನಾಡಿನ ರೈತರಿಗೆ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಇಂದು ಬೆಳಗ್ಗಿನ ವೇಳೆಗೆ ಜಲಾಶಯದಲ್ಲಿ ಶೇ.76ರಷ್ಟು ನೀರು ಸಂಗ್ರಹವಿದೆ. ನ್ಯಾಯಾಲಯದ ಹಿಂದಿನ ಆದೇಶದ ಪ್ರಕಾರ 64 ಟಿಎಂಸಿ ನೀರು ಬರಬೇಕಾಗಿತ್ತು. ಆದರೆ, ತಮಿಳುನಾಡಿಗೆ ಕೇವಲ 14 ಟಿಎಂಸಿ ನೀರು ಬಂದಿದೆ. ಮಳೆಯ ಕೊರತೆಯನ್ನು ಪರಿಗಣಿಸಿದರೂ ಕನಿಷ್ಠ ಅರ್ಧದಷ್ಟು ನೀರನ್ನು ಹರಿಸಬೇಕಿತ್ತು ಎಂದು ತಮಿಳುನಾಡು ವಾದಿಸಿತು.

ಇದಕ್ಕೆ ಪ್ರತಿಯಾಗಿ ಕರ್ನಾಟಕ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣದಲ್ಲಿ ಭಾರೀ ಅನಿಶ್ಚಿತತೆ ಇದ್ದು, ಅಗಾಧ ಪ್ರಮಾಣದ ಮಳೆ ಕೊರತೆಯಾಗಿದೆ ಎಂದು ತಿಳಿಸಿತು.

CWMA ಈಗಾಗಲೇ ಎರಡು ಪ್ರತ್ಯೇಕ ಆದೇಶಗಳನ್ನು ನೀಡಿದ್ದು, ಮೊದಲ ಆದೇಶದಂತೆ 3,500 ಕ್ಯೂಸೆಕ್‌ ಹಾಗೂ ಎರಡನೇ ಆದೇಶದಂತೆ 12,000 ಕ್ಯೂಸೆಕ್‌ ನೀರು ಹರಿಸಲು ನಿರ್ದೇಶಿಸಲಾಗಿದೆ ಎಂದು ಕರ್ನಾಟಕದ ಪರ ವಕೀಲರು ವಿವರಿಸಿದರು.

ನಾವು 3,500 ಕ್ಯೂಸೆಕ್‌ಗಿಂತಲೂ ಹೆಚ್ಚಿನ ಪ್ರಮಾಣದ ನೀರನ್ನು ಹರಿಸಿದ್ದೇವೆ. ಕರ್ನಾಟಕ ನೀರು ಹರಿಸಿಲ್ಲ ಎಂಬ ತಮಿಳುನಾಡಿನ ವಾದ ಸತ್ಯಕ್ಕೆ ದೂರವಾಗಿದೆ ಎಂದು ಕರ್ನಾಟಕ ತಿಳಿಸಿತು.

CWMAಯ ಎರಡನೇ ಆದೇಶದ ಅನ್ವಯ ಕೆಆರ್‌ಎಸ್‌ ಜಲಾಶಯದಿಂದ ನೀರು ಹರಿಸಲಾಗಿದೆ. ಕೆಆರ್‌ಎಸ್‌ನಿಂದ ಬಿಳಿಗುಂಡ್ಲು ತಲುಪಲು ಸುಮಾರು 48 ಗಂಟೆಗಳ ಸಮಯ ಬೇಕಾಗುತ್ತದೆ. ಹೀಗಾಗಿ ನೀರು ಹರಿಸಿದ ತಕ್ಷಣವೇ ಅದರ ಪರಿಣಾಮ ಬಿಳಿಗುಂಡ್ಲುವಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಕರ್ನಾಟಕದ ಪರ ವಾದಿಸಲಾಯಿತು.

ಉಭಯ ರಾಜ್ಯಗಳ ವಾದ-ಪ್ರತಿವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್‌, ನೀರು ಹರಿಯುವಿಕೆಯ ಪ್ರಮಾಣವನ್ನು ಖಚಿತಪಡಿಸಿಕೊಳ್ಳಲು ಸಮಯ ಬೇಕಾಗುತ್ತದೆ ಎಂದು ತಿಳಿಸಿತು.

ಕಾವೇರಿ ನೀರು ಹರಿಸುವ ವಿಚಾರದ ಮುಂದಿನ ವಿಚಾರಣೆಯನ್ನು ಒಂದು ವಾರಕ್ಕೆ ಮುಂದೂಡಿದ ನ್ಯಾಯಾಲಯ, ಮುಂದಿನ ವಿಚಾರಣೆಯ ವೇಳೆ ಎರಡೂ ರಾಜ್ಯಗಳು ಅಗತ್ಯ ಅಂಕಿ-ಅಂಶಗಳೊಂದಿಗೆ ಹಾಜರಾಗಬೇಕು ಎಂದು ಸೂಚಿಸಿತು. ಇದೇ ವೇಳೆ CWMA ನೀಡಿರುವ ಆದೇಶವನ್ನು ಪಾಲಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಿದೆ.

IND vs SL: ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ʼನಲ್ಲಿ ಭಾರತ 462 ರನ್ʼಗೆ ಆಲೌಟ್!

0

ಗಾಲೆ: ಗಾಲೆ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ 462 ರನ್‌ಗಳಿಗೆ ಆಲೌಟ್ ಆಗಿದೆ. ಮಳೆಯ ಅಡ್ಡಿಯ ನಡುವೆಯೂ ಕನ್ನಡಿಗ ದೇವದತ್ ಪಡಿಕ್ಕಲ್ ಅವರ ಆಕರ್ಷಕ ಶತಕ ಹಾಗೂ ಕೆ.ಎಲ್. ರಾಹುಲ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಯಶಸ್ವಿ ಜೈಸ್ವಾಲ್ 32 ರನ್ ಗಳಿಸಿ ರನ್‌ಔಟ್ ಆದರು. ಬಳಿಕ ಕ್ರೀಸ್‌ಗೆ ಬಂದ ದೇವದತ್ ಪಡಿಕ್ಕಲ್, ಶ್ರೀಲಂಕಾ ಬೌಲರ್‌ಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಭರ್ಜರಿ ಬ್ಯಾಟಿಂಗ್ ನಡೆಸಿದರು.

ಪಡಿಕ್ಕಲ್ ಕೇವಲ 134 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಗಮನಾರ್ಹ ಇನ್ನಿಂಗ್ಸ್ ಆಡಿದರು. ಶತಕದ ಬಳಿಕವೂ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರಿಸಿದ ಅವರು ಅಂತಿಮವಾಗಿ 230 ಎಸೆತಗಳಲ್ಲಿ 167 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿತ್ತು. ಪಡಿಕ್ಕಲ್ ವಿಕೆಟ್ ಒಪ್ಪಿಸುವ ವೇಳೆಗೆ ಭಾರತದ ಸ್ಕೋರ್ 350 ರನ್‌ಗಳ ಗಡಿ ದಾಟಿತ್ತು.

ಇನ್ನೊಂದೆಡೆ ಅನುಭವಿ ಬ್ಯಾಟರ್ ಕೆ.ಎಲ್. ರಾಹುಲ್ ಕೂಡ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ 82 ರನ್ ಗಳಿಸಿದರು. ಕೆಳ ಕ್ರಮಾಂಕದಲ್ಲಿ ವಿಕೆಟ್‌ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ಅರ್ಧಶತಕ ಸಿಡಿಸಿ ತಂಡದ ಮೊತ್ತ ಹೆಚ್ಚಿಸಲು ನೆರವಾದರು. ಜುರೆಲ್ 51 ರನ್ ಗಳಿಸಿದ್ದು, ಮಾನವ್ ಸುತಾರ್ ಅವರೊಂದಿಗೆ 55 ರನ್‌ಗಳ ಮಹತ್ವದ ಜೊತೆಯಾಟವಾಡಿದರು. ಈ ಜೊತೆಯಾಟದ ನೆರವಿನಿಂದ ಭಾರತ 400 ರನ್‌ಗಳ ಗಡಿ ದಾಟಿತು.

ಮೂರನೇ ದಿನದ ಆರಂಭದಲ್ಲೇ ಅಸಿತಾ ಫೆರ್ನಾಂಡೊ ಅವರ ಬೌಲಿಂಗ್‌ನಲ್ಲಿ ಪ್ರಸಿದ್ಧ್ ಕೃಷ್ಣ ವಿಕೆಟ್ ಒಪ್ಪಿಸುವುದರೊಂದಿಗೆ ಭಾರತದ ಮೊದಲ ಇನಿಂಗ್ಸ್ 462 ರನ್‌ಗಳಿಗೆ ಅಂತ್ಯಗೊಂಡಿತು.

ಶ್ರೀಲಂಕಾ ಪರ ಎಡಗೈ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದರು. 109 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದ ಜಯಸೂರ್ಯ, ಲಂಕಾ ತಂಡದ ಪರ ಯಶಸ್ವಿ ಬೌಲರ್ ಎನಿಸಿಕೊಂಡರು.

ಭಾರತ ಪ್ಲೇಯಿಂಗ್ XI

ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ದೇವದತ್ ಪಡಿಕ್ಕಲ್, ಶುಭ್‌ಮನ್ ಗಿಲ್ (ನಾಯಕ), ರಿಷಭ್ ಪಂತ್, ಧ್ರುವ್ ಜುರೆಲ್, ರವೀಂದ್ರ ಜಡೇಜಾ, ಮಾನವ್ ಸುತಾರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಶ್ರೀಲಂಕಾ ಪ್ಲೇಯಿಂಗ್ XI

ಲಹಿರು ಉದಾರ, ನಿಶಾನ್ ಮಧುಶಂಕ, ದಿನೇಶ್ ಚಂಡಿಮಲ್, ಕಮಿಂದು ಮೆಂಡಿಸ್, ಧನಂಜಯ ಡಿ ಸಿಲ್ವಾ (ನಾಯಕ), ಸೋನಾಲ್ ದಿನುಶಾ, ನಿರೋಶಾ ಡಿಕ್ವೆಲ್ಲಾ, ಕೇಶರ ನುವಂತ, ಪ್ರಭಾತ್ ಜಯಸೂರ್ಯ, ಲಹಿರು ಕುಮಾರ, ಅಸಿತಾ ಫೆರ್ನಾಂಡೊ.

62 ಎಸೆತಗಳಲ್ಲಿ 39 ರನ್ ಗಳಿಸಿ ಪಂತ್ ಔಟ್: ಟೀಂ ಇಂಡಿಯಾ ವಿಕೆಟ್ ಕೀಪರ್ ವಿರುದ್ಧ ಮೊಹಮ್ಮದ್ ಕೈಫ್ ಅಸಮಾಧಾನ

0

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಬೃಹತ್ ಮೊತ್ತದತ್ತ ಸಾಗುತ್ತಿದ್ದರೂ, ವಿಕೆಟ್‌ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರ ವಿಕೆಟ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಪಂತ್ 62 ಎಸೆತಗಳಲ್ಲಿ 39 ರನ್ ಗಳಿಸಿದ್ದ ವೇಳೆ ಅನಗತ್ಯವಾಗಿ ದೊಡ್ಡ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿಕೊಂಡರು. ಪಂತ್ ಅವರ ಈ ಬ್ಯಾಟಿಂಗ್ ನಿರ್ಧಾರವನ್ನು ಭಾರತ ತಂಡದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ತೀವ್ರವಾಗಿ ಟೀಕಿಸಿದ್ದಾರೆ.

ಪಂತ್ ಕ್ರೀಸ್‌ನಲ್ಲಿ ಉತ್ತಮವಾಗಿ ನೆಲೆಯೂರಿದ್ದರು. ಹೀಗಾಗಿ ತಂಡಕ್ಕೆ ದೊಡ್ಡ ಮೊತ್ತ ಕಲೆಹಾಕಲು ನೆರವಾಗುವ ಜವಾಬ್ದಾರಿ ಅವರ ಮೇಲಿತ್ತು. ಆದರೆ ಶ್ರೀಲಂಕಾ ತಂಡ ಎರಡನೇ ಹೊಸ ಚೆಂಡನ್ನು ಪಡೆದ ಬಳಿಕ ಮೊದಲ ಓವರ್‌ನಲ್ಲೇ ಪಂತ್ ಆಕ್ರಮಣಕಾರಿ ಹೊಡೆತಕ್ಕೆ ಮುಂದಾಗಿದ್ದು, ಇದೀಗ ಪ್ರಶ್ನೆಗೆ ಕಾರಣವಾಗಿದೆ.

ಆಫ್ ಸ್ಪಿನ್ನರ್ ಕೇಶರ ನುವಾಂತ ಅವರ ಬೌಲಿಂಗ್‌ನಲ್ಲಿ ಪಂತ್ ಕ್ರೀಸ್‌ನಿಂದ ಮುಂದೆ ಬಂದು ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿದರು. ಆದರೆ ಚೆಂಡು ಬ್ಯಾಟ್‌ನ ಕೆಳಭಾಗಕ್ಕೆ ತಾಗಿ ಮಿಡ್-ಆಫ್‌ನಲ್ಲಿದ್ದ ಫೀಲ್ಡರ್ ಕೈ ಸೇರಿತು. ಇದರೊಂದಿಗೆ ಉತ್ತಮವಾಗಿ ಆಡುತ್ತಿದ್ದ ಪಂತ್ ಅವರ ಇನ್ನಿಂಗ್ಸ್ ಅಂತ್ಯಗೊಂಡಿತು.

ಈ ಬಗ್ಗೆ ಸೋನಿ ಸ್ಪೋರ್ಟ್ಸ್ ವಾಹಿನಿಯಲ್ಲಿ ಮಾತನಾಡಿದ ಮೊಹಮ್ಮದ್ ಕೈಫ್, ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಚೆಂಡು ಬಂದಾಗ ಬ್ಯಾಟರ್‌ಗಳು ಹೆಚ್ಚಿನ ಎಚ್ಚರಿಕೆಯಿಂದ ಆಡಬೇಕು ಎಂದು ಹೇಳಿದ್ದಾರೆ. ಶತಕ ಅಥವಾ 150 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ಬ್ಯಾಟರ್ ಕೂಡ ಹೊಸ ಚೆಂಡು ಬಂದಾಗ ಕನಿಷ್ಠ 5ರಿಂದ 6 ಓವರ್‌ಗಳ ಕಾಲ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಆಡುವುದು ಸಾಮಾನ್ಯ ಕ್ರಿಕೆಟ್ ನಿಯಮ ಎಂದು ಕೈಫ್ ಅಭಿಪ್ರಾಯಪಟ್ಟಿದ್ದಾರೆ.

ಆದರೆ ಪಂತ್ ಹೊಸ ಚೆಂಡು ಬಂದ ಮೊದಲ ಓವರ್‌ನಲ್ಲೇ ಕ್ರೀಸ್ ಬಿಟ್ಟು ಮುನ್ನುಗ್ಗಿ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿದರು. ಇದು ಪರಿಸ್ಥಿತಿಗೆ ತಕ್ಕ ಕ್ರಿಕೆಟ್ ನಿರ್ಧಾರವಾಗಿರಲಿಲ್ಲ ಎಂದು ಕೈಫ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಶ್ವದ ಅತ್ಯುತ್ತಮ ಆಕ್ರಮಣಕಾರಿ ಬ್ಯಾಟರ್‌ಗಳು ಕೂಡ ತಮ್ಮ ಸ್ವಾಭಾವಿಕ ಆಟದ ವೇಗವನ್ನು ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ನಿಯಂತ್ರಿಸುತ್ತಾರೆ. ಆದರೆ ಈ ಸಂದರ್ಭದಲ್ಲಿ ಪಂತ್ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಕೈಫ್ ಹೇಳಿದ್ದಾರೆ.

ಪಂತ್ ಅವರ ವಿಕೆಟ್ ಪತನದ ಬಳಿಕ ಭಾರತದ ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತ ಕಂಡುಬಂದಿದ್ದು, ತಂಡ ಕೇವಲ 70 ರನ್‌ಗಳ ಅಂತರದಲ್ಲಿ ನಾಲ್ಕು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೂ ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 460/9 ರನ್‌ಗಳ ಬೃಹತ್ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಿದೆ.

ಆದರೆ ಪಂತ್ ಅವರ ವಿಕೆಟ್ ಶ್ರೀಲಂಕಾ ತಂಡಕ್ಕೆ ಪಂದ್ಯದಲ್ಲಿ ಮರಳಿ ಹಿಡಿತ ಸಾಧಿಸಲು ಅವಕಾಶ ಮಾಡಿಕೊಟ್ಟಿತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯೇ ಪಂತ್ ಅವರ ಪ್ರಮುಖ ಬಲವಾಗಿದ್ದರೂ, ಟೆಸ್ಟ್ ಕ್ರಿಕೆಟ್‌ನಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಅದನ್ನು ನಿಯಂತ್ರಿಸುವುದು ಅಗತ್ಯ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ಕಳಪೆ ಆಹಾರ ನೀಡುವ ಹೋಟೆಲ್ʼಗಳಿಗೆ ₹5 ಲಕ್ಷದವರೆಗೆ ದಂಡ: ಅಡುಗೆ ಕೋಣೆಯಲ್ಲಿ ಸಿಸಿಟಿವಿ ಕಡ್ಡಾಯ – ಯು.ಟಿ. ಖಾದರ್ ಎಚ್ಚರಿಕೆ

0

ಬೆಂಗಳೂರು: ಪಿಜಿ ಹಾಗೂ ಹಾಸ್ಟೆಲ್‌ಗಳಲ್ಲಿ ಕಳಪೆ ಆಹಾರ ನೀಡುವುದು ಕಂಡುಬಂದರೆ ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ಖಾಸಗಿ ಹಾಸ್ಟೆಲ್‌ಗಳಲ್ಲೂ ಆಹಾರ ಗುಣಮಟ್ಟ ಹಾಗೂ ಸ್ವಚ್ಛತೆ ಪರಿಶೀಲನೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್‌ ಎಚ್ಚರಿಕೆ ನೀಡಿದ್ದಾರೆ.

ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಕರ್ತವ್ಯ ಪ್ರಜ್ಞೆ ಮೆರೆದ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಆರೋಗ್ಯ ಸೌಧದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಧಿಕಾರಿಗಳಿಗೆ ಗೌರವ ಸಮರ್ಪಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಪಾಡಲು ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಪಿಜಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಯುವಜನರು ಹಾಗೂ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಳಸಿಕೊಂಡು ಹಣ ಗಳಿಸುವ ಪ್ರಯತ್ನ ಮಾಡಬಾರದು. ಪಿಜಿಗಳಲ್ಲಿ ಮತ್ತೆ ಕಳಪೆ ಆಹಾರ ನೀಡುವುದು ಕಂಡುಬಂದರೆ ಕ್ಷಮಿಸುವ ಪ್ರಶ್ನೆಯೇ ಇಲ್ಲ. ಖಾಸಗಿ ಹಾಸ್ಟೆಲ್‌ಗಳನ್ನೂ ಪರಿಶೀಲನೆ ನಡೆಸಲಾಗುವುದು ಎಂದು ಯು.ಟಿ. ಖಾದರ್‌ ಹೇಳಿದರು.

30 ತಂಡಗಳಿಂದ ಹೋಟೆಲ್‌ಗಳ ತಪಾಸಣೆ

ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸುವ ಸ್ಥಳ ಹಾಗೂ ಆಹಾರ ಪದಾರ್ಥಗಳು ಎಲ್ಲಿಂದ ಸರಬರಾಜಾಗುತ್ತವೆ ಎಂಬುದರ ಬಗ್ಗೆಯೂ ತಪಾಸಣೆ ನಡೆಸಲಾಗಿದೆ. ರಾಜ್ಯದಲ್ಲಿ 30 ತಂಡಗಳನ್ನು ರಚಿಸಿ 60ಕ್ಕೂ ಹೆಚ್ಚು ತ್ರೀ-ಸ್ಟಾರ್‌, ಫೈವ್‌-ಸ್ಟಾರ್‌ ಹೋಟೆಲ್‌ಗಳು, 8 ವೇರ್‌ಹೌಸ್‌ಗಳು ಹಾಗೂ 4 ಅಂತಾರಾಷ್ಟ್ರೀಯ ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದರು.

ಈ ವೇಳೆ 30 ಆಹಾರ ಉದ್ದಿಮೆದಾರರಿಗೆ ನೋಟಿಸ್‌ ನೀಡಲಾಗಿದ್ದು, ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ಈಗಾಗಲೇ ಕಳಪೆ ಆಹಾರದೊಂದಿಗೆ ಸಿಕ್ಕಿಬಿದ್ದಿರುವ ಹೋಟೆಲ್‌ಗಳಿಗೆ ನೋಟಿಸ್‌ ನೀಡುವುದರ ಜೊತೆಗೆ ₹5 ಲಕ್ಷದವರೆಗೆ ದಂಡ ವಿಧಿಸಲಾಗುವುದು. ದಂಡ ವಿಧಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ರೈಲ್ವೆ ಕ್ಯಾಂಟೀನ್‌, ಮದುವೆ ಮನೆಗಳಲ್ಲೂ ತಪಾಸಣೆ

ಪಿಜಿ ಹಾಗೂ ಖಾಸಗಿ ಹಾಸ್ಟೆಲ್‌ಗಳ ಜೊತೆಗೆ ಬಸ್‌ ನಿಲ್ದಾಣಗಳಲ್ಲಿರುವ ಹೋಟೆಲ್‌ಗಳು, ಮದುವೆ ಮನೆಗಳು ಹಾಗೂ ರೈಲ್ವೆ ಕ್ಯಾಂಟೀನ್‌ಗಳಲ್ಲೂ ಆಹಾರದ ಗುಣಮಟ್ಟ ಪರಿಶೀಲಿಸಲಾಗುವುದು. ವಿಮಾನಗಳಲ್ಲಿ ಪ್ರಯಾಣಿಕರಿಗೆ ನೀಡುವ ಆಹಾರದ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು. ಇದಕ್ಕಾಗಿ ರಾಷ್ಟ್ರೀಯ ಮಟ್ಟದ ಪ್ರಾಕ್ಟೀಸ್‌ ತಂಡವನ್ನು ರಚಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಖಾದರ್‌ ಹೇಳಿದರು.

ಆಹಾರ ಸುರಕ್ಷತಾ ನಿಯಮ ಬದಲಾವಣೆಗೆ ಕೇಂದ್ರಕ್ಕೆ ಮನವಿ

ವಿದೇಶಿ ಕಂಪನಿಗಳ ಚಾಕೊಲೇಟ್‌ಗಳು ಸೇರಿದಂತೆ ಹಲವು ಆಹಾರ ಉತ್ಪನ್ನಗಳು ಭಾರತಕ್ಕೆ ಬರುತ್ತಿವೆ. ಅವುಗಳ ಸಕ್ಕರೆ ಪ್ರಮಾಣ ಸೇರಿದಂತೆ ಗುಣಮಟ್ಟದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಕೇಂದ್ರದ ಆಹಾರ ಸುರಕ್ಷತಾ ಕಾಯ್ದೆ ಹಾಗೂ ನಿಯಮಗಳಲ್ಲಿ ಅಗತ್ಯ ಬದಲಾವಣೆ ಮಾಡಬೇಕು. ಈ ಕುರಿತು ಕೇಂದ್ರ ಆಹಾರ ಸಚಿವರಿಗೆ ಮಾಹಿತಿ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಕೂಲ್‌ಡ್ರಿಂಕ್ಸ್‌ಗಳು ಬೇರೆ ದೇಶಗಳಲ್ಲಿ ಒಂದು ರೀತಿಯ ಗುಣಮಟ್ಟ ಹೊಂದಿದ್ದು, ಭಾರತಕ್ಕೆ ಬಂದಾಗ ಅದರ ರುಚಿ ಹಾಗೂ ಗುಣಮಟ್ಟದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಬೇರೆ ದೇಶಗಳಲ್ಲಿ ಇರುವ ಗುಣಮಟ್ಟವೇ ಭಾರತದಲ್ಲಿಯೂ ಇರಬೇಕು. ಈ ಕುರಿತು ಚರ್ಚಿಸಲು ಅಂತಾರಾಷ್ಟ್ರೀಯ ಆಲ್‌ ಇಂಡಿಯಾ ಫುಡ್‌ ಸೇಫ್ಟಿ ಕಾನ್ಕ್ಲೇವ್‌ ಆಯೋಜಿಸಲಾಗುವುದು ಎಂದು ಹೇಳಿದರು.

ಹೋಟೆಲ್‌ಗಳ ಮುಂದೆ ಕ್ಯೂಆರ್‌ ಕೋಡ್‌

ಹೋಟೆಲ್‌ಗಳಲ್ಲಿ ಕಂಡುಬರುವ ಸಮಸ್ಯೆಗಳ ಕುರಿತು ಸಾರ್ವಜನಿಕರು ಮುಕ್ತವಾಗಿ ದೂರು ನೀಡಲು ಪ್ರತಿ ಹೋಟೆಲ್‌ ಹಾಗೂ ಮೆಡಿಕಲ್‌ ಶಾಪ್‌ಗಳ ಮುಂದೆ ಕ್ಯೂಆರ್‌ ಕೋಡ್‌ ಅಳವಡಿಸಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಹೋಟೆಲ್‌ಗಳಿಗಾಗಿ ಟೋಲ್‌ ಫ್ರೀ ನಂಬರ್‌ ಕೂಡ ಬಿಡುಗಡೆ ಮಾಡಲಾಗುವುದು ಎಂದು ಯು.ಟಿ. ಖಾದರ್‌ ಹೇಳಿದರು. ಈ ಸಂದರ್ಭದಲ್ಲಿ ಆಹಾರ ಸುರಕ್ಷತೆ ಮತ್ತು ಔಷಧಿ ನಿಯಂತ್ರಣ ಇಲಾಖೆಯ ವತಿಯಿಂದ ಕ್ಯೂಆರ್‌ ಕೋಡ್‌ ವ್ಯವಸ್ಥೆಯನ್ನು ಬಿಡುಗಡೆ ಮಾಡಲಾಯಿತು.

ಪಿಜಿಗಳಿಗೆ ಪ್ರತ್ಯೇಕ ಮಾರ್ಗಸೂಚಿ

ಅಡುಗೆ ಹಾಗೂ ಸ್ವಚ್ಛತೆಗೆ ಸಂಬಂಧಿಸಿದಂತೆ ಪಿಜಿಗಳಿಗೆ ಪ್ರತ್ಯೇಕ ಮಾರ್ಗಸೂಚಿ ರೂಪಿಸಲಾಗುವುದು. ಹೋಟೆಲ್‌ಗಳ ಅಡುಗೆ ಕೋಣೆಗಳಲ್ಲಿ ಸಿಸಿಟಿವಿ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗುವುದು. ಈ ಕುರಿತು ಶೀಘ್ರದಲ್ಲೇ ಸೂಚನೆ ನೀಡಲಾಗುವುದು ಎಂದು ಸಚಿವ ಯು.ಟಿ. ಖಾದರ್‌ ತಿಳಿಸಿದರು.