Home Blog

‘ಹೇಳಿ ಹೋಗು ಕಾರಣ’ ನಕಲಿ ಪ್ರತಿ ಮಾರಾಟ ಪ್ರಕರಣ: ಸೆಕ್ಷನ್ 79 ರಕ್ಷಣೆ ಕೋರಿದ ಅಮೆಜಾನ್

0

ಬೆಂಗಳೂರು: ದಿವಂಗತ ಪತ್ರಕರ್ತ ರವಿ ಬೆಳಗೆರೆ ಅವರ ‘ಹೇಳಿ ಹೋಗು ಕಾರಣ’ ಕಾದಂಬರಿಯ ನಕಲಿ ಪ್ರತಿಗಳ ಮಾರಾಟ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಮಧ್ಯವರ್ತಿಯಾಗಿರುವ ಅಮೆಜಾನ್ ಕಂಪೆನಿ ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ಸೆಕ್ಷನ್ 79ರಡಿ ರಕ್ಷಣೆ ಒದಗಿಸಬೇಕು ಎಂದು ಹೈಕೋರ್ಟ್‌ಗೆ ಮನವಿ ಮಾಡಿದೆ.

ಇ-ಕಾಮರ್ಸ್ ವೇದಿಕೆಗಳಲ್ಲಿ ನಕಲಿ ಪುಸ್ತಕಗಳ ಮಾರಾಟಕ್ಕೆ ಸಂಬಂಧಿಸಿದಂತೆ ಪುಸ್ತಕದ ಹಕ್ಕುಸ್ವಾಮ್ಯ ಹೊಂದಿರುವ ಭಾವನಾ ಬೆಳಗೆರೆ ದಾಖಲಿಸಿರುವ ಪ್ರಕರಣ ರದ್ದು ಕೋರಿ ಅಮೆಜಾನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠಕ್ಕೆ ಅಮೆಜಾನ್ ಈ ಮಾಹಿತಿ ನೀಡಿದೆ.

ವಿಚಾರಣೆ ವೇಳೆ ಅಮೆಜಾನ್ ಪರ ವಕೀಲರು, ಅರ್ಜಿದಾರ ಕಂಪನಿ ಕೇವಲ ಮಾರಾಟಗಾರರು ಮತ್ತು ಖರೀದಿದಾರರನ್ನು ಸಂಪರ್ಕಿಸುವ ಒಂದು ವೇದಿಕೆಯನ್ನಷ್ಟೇ ಒದಗಿಸುತ್ತದೆ ಎಂದೂ, ಮೂರನೇ ವ್ಯಕ್ತಿಯ ಮಾರಾಟಗಾರರು ಎಸಗುವ ಹಕ್ಕುಸ್ವಾಮ್ಯ ಉಲ್ಲಂಘನೆಗೆ ಕಂಪನಿಯನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದೂ ವಾದಿಸಿದರು. ತಮ್ಮ ವೇದಿಕೆಯಲ್ಲಿ ಕಾರ್ಯಾಚರಣೆ ನಡೆಸುವ ಮಾರಾಟಗಾರರ ವಿಚಾರದಲ್ಲಿ ಕಂಪನಿ ಅಗತ್ಯ ನಿಗಾ ಮತ್ತು ತನಿಖಾ ಕ್ರಮಗಳನ್ನು ಪಾಲಿಸಿದೆ ಎಂದು ಸ್ಪಷ್ಟಪಡಿಸಿದರು.

ಇನ್ವೆಂಟರಿ ಆಧಾರಿತ ಮಾದರಿಯಲ್ಲಿ ಕಂಪನಿಗಳೇ ಖುದ್ದಾಗಿ ಉತ್ಪನ್ನ ಖರೀದಿಸಿ, ಸಂಗ್ರಹಿಸಿ, ಬೆಲೆ ನಿಗದಿಪಡಿಸಿ ಮಾರಾಟ ಮಾಡುತ್ತವೆ, ಆದರೆ ಅಮೆಜಾನ್ ಅಂತಹ ಮಾದರಿ ಹೊಂದಿಲ್ಲದೆ ಕೇವಲ ಮೂರನೇ ವ್ಯಕ್ತಿಯ ಮಾರಾಟಗಾರರಿಗೆ ಮುಕ್ತ ಮಾರುಕಟ್ಟೆ ವೇದಿಕೆಯನ್ನಷ್ಟೇ ಕಲ್ಪಿಸುತ್ತದೆ ಎಂದ ವಕೀಲರು, ಈ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79(2) ಮತ್ತು (3)ರ ಪ್ರಕಾರ ಮಧ್ಯವರ್ತಿಯಾಗಿರುವ ಕಂಪನಿ ನಾಗರಿಕ ಅಥವಾ ಕ್ರಿಮಿನಲ್ ಹೊಣೆಗಾರಿಕೆಯಿಂದ ವಿನಾಯಿತಿ ಪಡೆಯಲು ಅರ್ಹವಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಸೆಕ್ಷನ್ 79(3)(b) ಅಡಿ ನ್ಯಾಯಾಲಯದಿಂದ ಆದೇಶ ಬರುವುದಕ್ಕೂ ಮುನ್ನ ದೂರು ಬಂದ ತಕ್ಷಣವೇ ಅಮೆಜಾನ್ ಸ್ವಯಂಪ್ರೇರಿತವಾಗಿ ಎಲ್ಲಾ 12 ಮಾರಾಟಗಾರರ ಉತ್ಪನ್ನಗಳ ಪಟ್ಟಿಯನ್ನು ತೆಗೆದುಹಾಕಿದ್ದು, ತನಿಖಾಧಿಕಾರಿಗೆ ಸಂಬಂಧಪಟ್ಟ ಮಾರಾಟಗಾರರ ಸಂಪೂರ್ಣ ವಿವರಗಳನ್ನೂ ಒದಗಿಸಲಾಗಿದೆ ಎಂದು ವಿವರಿಸಿದರು. ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.

ಪ್ರಕರಣದ ಹಿನ್ನೆಲೆ: ದಿವಂಗತ ಪತ್ರಕರ್ತ ರವಿ ಬೆಳಗೆರೆ ಅವರ ‘ಹೇಳಿ ಹೋಗು ಕಾರಣ’ ಕಾದಂಬರಿಯ ಹಕ್ಕುಸ್ವಾಮ್ಯ ಹೊಂದಿರುವ ಭಾವನಾ ಬೆಳಗೆರೆ ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಕೃತಿಸ್ವಾಮ್ಯ ಕಾಯ್ದೆ-1957ರ ಸೆಕ್ಷನ್ 51(1)(b) ಮತ್ತು 63ರಡಿ ದಾಖಲಾಗಿರುವ ಈ ಪ್ರಕರಣದ ಮುಂದಿನ ವಿಚಾರಣೆ ಹಾಗೂ ಪ್ರಕ್ರಿಯೆಗಳಿಗೆ ಮೇ 19ರಂದು ಹೈಕೋರ್ಟ್ ತಡೆ ನೀಡಿತ್ತು.

ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವು ಭಾರೀ ಕುಸಿತ: ಸದ್ಯ ಡ್ಯಾಂನಲ್ಲಿ ಎಷ್ಟು ನೀರಿದೆ?

0

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜ ಸಾಗರ ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಒಳಹರಿವಿನಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.

ಕಳೆದ ಕೆಲವು ದಿನಗಳಿಂದ ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದ ಕೆಆರ್‌ಎಸ್ ಡ್ಯಾಂಗೆ ಒಳಹರಿವು ಹೆಚ್ಚಾಗಿತ್ತು. ನಿನ್ನೆ 17,427 ಕ್ಯೂಸೆಕ್ ಇದ್ದ ಒಳಹರಿವು ಇದೀಗ 10,028 ಕ್ಯೂಸೆಕ್‌ಗೆ ಇಳಿಕೆಯಾಗಿದೆ.

ಈ ವಾರದ ಆರಂಭದಲ್ಲಿ ಕೊಡಗು ಭಾಗದಲ್ಲಿ ಭಾರೀ ಮಳೆಯಾಗಿದ್ದ ಪರಿಣಾಮ ಕೆಆರ್‌ಎಸ್‌ಗೆ ನೀರಿನ ಹರಿವು ಹೆಚ್ಚಾಗಿತ್ತು. ಬುಧವಾರ ಬೆಳಗ್ಗೆ 9,438 ಕ್ಯೂಸೆಕ್ ಇದ್ದ ಒಳಹರಿವು, ನಿರಂತರ ಮಳೆಯ ಹಿನ್ನೆಲೆಯಲ್ಲಿ ಗುರುವಾರ 17,427 ಕ್ಯೂಸೆಕ್‌ಗೆ ಏರಿಕೆಯಾಗಿತ್ತು. ಇದೀಗ ಮಳೆ ಪ್ರಮಾಣ ತಗ್ಗಿರುವುದರಿಂದ ಒಳಹರಿವು ಮತ್ತೆ ಇಳಿಕೆಯಾಗಿದೆ.

KRS ಡ್ಯಾಂನ ಇಂದಿನ ನೀರಿನ ಮಟ್ಟ:

  • ಗರಿಷ್ಠ ನೀರಿನ ಮಟ್ಟ: 124.80 ಅಡಿ
  • ಇಂದಿನ ನೀರಿನ ಮಟ್ಟ: 110.20 ಅಡಿ
  • ಇಂದಿನ ಒಳಹರಿವು: 10,028 ಕ್ಯೂಸೆಕ್
  • ಗರಿಷ್ಠ ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ
  • ಪ್ರಸ್ತುತ ನೀರಿನ ಸಂಗ್ರಹ: 31.923 ಟಿಎಂಸಿ

ಒಳಹರಿವು ಕಡಿಮೆಯಾಗಿದ್ದರೂ ಜಲಾಶಯದಲ್ಲಿ ನೀರಿನ ಮಟ್ಟ 110 ಅಡಿ ದಾಟಿದೆ. ಹೀಗಾಗಿ ಸದ್ಯಕ್ಕೆ ರೈತರ ಕೃಷಿ ಚಟುವಟಿಕೆಗಳು ಹಾಗೂ ಕುಡಿಯುವ ನೀರಿನ ಅಗತ್ಯಗಳಿಗೆ ಜಲಾಶಯದಲ್ಲಿ ಸಾಕಷ್ಟು ನೀರು ಲಭ್ಯವಿದೆ.

ಮುಂದಿನ ದಿನಗಳಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೇಗಿರಲಿದೆ ಎಂಬುದರ ಮೇಲೆ ಕೆಆರ್‌ಎಸ್ ಡ್ಯಾಂನ ಒಳಹರಿವಿನ ಪ್ರಮಾಣವೂ ಅವಲಂಬಿತವಾಗಿರಲಿದೆ.

‘ನನ್ನ ಸಾವಿಗೆ ಅವರೇ ಕಾರಣ’! ಡೆತ್‌ನೋಟ್ ಬರೆದಿಟ್ಟು ಕೆರೆಗೆ ಹಾರಿದ ಯುವಕ

0

ಚಾಮರಾಜನಗರ: ಡೆತ್‌ನೋಟ್ ಬರೆದಿಟ್ಟು ಯುವಕನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಾಮರಾಜನಗರ ತಾಲೂಕಿನ ಬೆಂಡರವಾಡಿ ಗ್ರಾಮದಲ್ಲಿ ನಡೆದಿದೆ.

ಮೃತ ಯುವಕನನ್ನು ಗುರುಮೂರ್ತಿ ಎಂದು ಗುರುತಿಸಲಾಗಿದೆ.

ಆತ್ಮಹತ್ಯೆಗೂ ಮುನ್ನ ಗುರುಮೂರ್ತಿ ಡೆತ್‌ನೋಟ್ ಬರೆದಿಟ್ಟಿದ್ದು, ನಾಲ್ವರು ಬಂದು ಗಲಾಟೆ ನಡೆಸಿ ಅವಮಾನಿಸಿದ್ದೇ ತನ್ನ ಸಾವಿಗೆ ಕಾರಣ ಎಂದು ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.

ಘಟನೆ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಅಗ್ನಿಶಾಮಕ ಸಿಬ್ಬಂದಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಿ ಗುರುಮೂರ್ತಿಯ ಮೃತದೇಹವನ್ನು ಹೊರತೆಗೆದಿದ್ದಾರೆ.

ಈ ಸಂಬಂಧ ಮೃತನ ಕುಟುಂಬಸ್ಥರು ಶ್ರವಣ ಹಾಗೂ ಅಭಿ ಸೇರಿದಂತೆ ಕೆಲವರ ವಿರುದ್ಧ ದೂರು ನೀಡಿದ್ದಾರೆ. ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

‘ಕೊಲ್ಲದೇ ಬಿಡಲ್ಲ’ ಎಂದು ವಾಯ್ಸ್ ಮೆಸೇಜ್! ಮಂಗಳೂರಿನಲ್ಲಿ ನರ್ಸ್‌ಗೆ ಜೀವ ಬೆದರಿಕೆ?

0

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಯುವತಿಯೊಬ್ಬಳ ಹತ್ಯೆ ಪ್ರಕರಣದ ಬೆನ್ನಲ್ಲೇ ಮಂಗಳೂರಿನಲ್ಲಿ ಯುವತಿಗೆ ಕೊಲೆ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ.

ತನ್ನ ಮೇಲೆ ದೌರ್ಜನ್ಯ ಎಸಗಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ದೂರು ನೀಡಿದ್ದ ಯುವತಿಗೆ, ಆರೋಪಿ ವಾಟ್ಸ್‌ಆ್ಯಪ್ ಮೂಲಕ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಕ್ಷಣ ಕ್ರಮ ಕೈಗೊಂಡಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಪುತ್ತೂರು ಮೂಲದ ನಂದಿನಿ ಎಂಬ ನರ್ಸ್ ಮಂಗಳೂರಿನ ನೀರುಮಾರ್ಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆಗಸ್ಟ್ 16ರಂದು ಅವರು ಮೈಸೂರಿಗೆ ತೆರಳುವ ವೇಳೆ ಮನೆಯಲ್ಲಿದ್ದ ನಾಯಿಗೆ ಆಹಾರ ನೀಡಲು ಮನೆಯ ಕೀಯನ್ನು ಸ್ನೇಹಿತೆ ಚಂದನಾ ಅವರಿಗೆ ನೀಡಿದ್ದರು.

ಆಗಸ್ಟ್ 17ರಂದು ಚಂದನಾ ಮತ್ತೊಬ್ಬ ಸ್ನೇಹಿತೆ, ಕೇರಳ ಮೂಲದ ನರ್ಸ್ ಆದಿತ್ಯಾ ಅವರೊಂದಿಗೆ ನಂದಿನಿ ಮನೆಗೆ ತೆರಳಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ನೌಶದ್ ಎಂಬಾತ ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಇಬ್ಬರೊಂದಿಗೆ ಗಲಾಟೆ ನಡೆಸಿ ಅಶ್ಲೀಲವಾಗಿ ನಿಂದಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಈ ವಿಚಾರ ತಿಳಿದು ನಂದಿನಿ ಕರೆ ಮಾಡಿದಾಗ, ಫೋನ್ ಸ್ವೀಕರಿಸಿದ್ದ ನೌಶದ್ ಅವರಿಗೂ ಅಶ್ಲೀಲವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

‘ನಿನ್ನ ತಲೆ ತೆಗೀತೀನಿ’ ಎಂದು ವಾಟ್ಸ್‌ಆ್ಯಪ್‌ನಲ್ಲಿ ಬೆದರಿಕೆ?

ನೌಶದ್ ವಿರುದ್ಧ ನಂದಿನಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ನೀಡಿರುವ ವಿಚಾರ ತಿಳಿದ ಬಳಿಕ ಆರೋಪಿ ವಾಟ್ಸ್‌ಆ್ಯಪ್‌ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿ ಬೆದರಿಕೆ ಹಾಕಿದ್ದಾನೆ ಎಂದು ನಂದಿನಿ ಆರೋಪಿಸಿದ್ದಾರೆ.

ಪೊಲೀಸರಿಗೆ ಶರಣಾಗುವ ಮುನ್ನವೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ತೀವ್ರ ಭಯಗೊಂಡ ನಂದಿನಿ, ಆಗಸ್ಟ್ 20ರಂದು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಮತ್ತೊಂದು ದೂರು ನೀಡಿದ್ದರು ಎನ್ನಲಾಗಿದೆ.

ಮತ್ತೊಬ್ಬ ನರ್ಸ್‌ಗೂ ಬ್ಲ್ಯಾಕ್‌ಮೇಲ್ ಆರೋಪ?

ದೂರು ನೀಡಿ ಹಲವು ದಿನಗಳಾದರೂ ಆರೋಪಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗಿಲ್ಲ ಎಂದು ನಂದಿನಿ ಆರೋಪಿಸಿದ್ದಾರೆ. ಇದರಿಂದ ಆತಂಕಗೊಂಡ ಅವರು ರಕ್ಷಣೆ ಕೋರಿ ವಿಶ್ವ ಹಿಂದೂ ಪರಿಷತ್ ಹಾಗೂ ದುರ್ಗಾವಾಹಿನಿ ಮುಖಂಡರನ್ನು ಸಂಪರ್ಕಿಸಿದ್ದರು.

ಈ ವೇಳೆ ಮತ್ತೊಬ್ಬ ನರ್ಸ್ ಆದಿತ್ಯಾ ಅವರನ್ನೂ ಸಂಘಟನೆಯ ಮುಖಂಡರು ಸಂಪರ್ಕಿಸಿದ್ದು, ನೌಶದ್ ಬಳಿ ತಮ್ಮ ಫೋಟೋ ಹಾಗೂ ವಿಡಿಯೋಗಳಿವೆ ಎಂದು ಅವರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಫೋಟೋ-ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿತ್ತೇ ಎಂಬ ಅನುಮಾನವೂ ವ್ಯಕ್ತವಾಗಿದೆ.

ಸದ್ಯ ಆದಿತ್ಯಾ ಕೇರಳಕ್ಕೆ ತೆರಳಿದ್ದು, ಅವರ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ.

ದೂರು ನೀಡಿದ ನರ್ಸ್‌ಗಳಿಗೆ ಕೆಲಸದಿಂದ ವಜಾ?

ಇನ್ನೊಂದೆಡೆ, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ ಬೆನ್ನಲ್ಲೇ ನಂದಿನಿ ಹಾಗೂ ಆದಿತ್ಯಾ ಇಬ್ಬರನ್ನೂ ಆಸ್ಪತ್ರೆ ಆಡಳಿತ ಮಂಡಳಿ ಕೆಲಸದಿಂದ ವಜಾಗೊಳಿಸಿದೆ ಎಂದು ಆರೋಪಿಸಲಾಗಿದೆ.

ಈ ಕುರಿತು ಆತಂಕ ವ್ಯಕ್ತಪಡಿಸಿರುವ ನಂದಿನಿ, ಮಂಗಳೂರಿನಲ್ಲಿ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳಿಂದಾಗಿ ಹೊರಗೆ ಓಡಾಡಲು ಭಯವಾಗುತ್ತಿದೆ. ತಮ್ಮಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಪೊಲೀಸ್ ಕಮಿಷನರ್ ಹೇಳಿದ್ದೇನು?

ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಳಂಬವಾಗಿದೆ ಎಂಬ ಆರೋಪಗಳು ಹಾಗೂ ವಿವಿಧ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ಆರೋಪಿಯನ್ನು ಬಂಧಿಸುವ ಉದ್ದೇಶ ಪೊಲೀಸರಿಗೆ ಇದೆ. ಪ್ರಕರಣದಲ್ಲಿ ಯಾವುದೇ ವಿನಾಯಿತಿ ನೀಡಿಲ್ಲ. ಆದರೆ ಇದು ದೂರವಾಣಿ ಮೂಲಕ ಬೆದರಿಕೆ ಹಾಕಿದ ಪ್ರಕರಣವಾಗಿದ್ದು, ಕಾನೂನಿನಡಿ ಈ ಅಪರಾಧಕ್ಕೆ ನಿಗದಿಯಾಗಿರುವ ಶಿಕ್ಷೆಯ ಮಿತಿ ನಿರ್ದಿಷ್ಟ ಮಟ್ಟಕ್ಕಿಂತ ಕಡಿಮೆಯಿರುವ ಹಿನ್ನೆಲೆಯಲ್ಲಿ ತಕ್ಷಣ ಬಂಧಿಸಲು ಅವಕಾಶವಿಲ್ಲ ಎಂದು ಕಮಿಷನರ್ ತಿಳಿಸಿದ್ದಾರೆ ಎನ್ನಲಾಗಿದೆ.

ಪೊಲೀಸ್ ಕಮಿಷನರ್ ಅವರ ಈ ಸ್ಪಷ್ಟನೆಯ ಬೆನ್ನಲ್ಲೇ ಆರೋಪಿ ನೌಶದ್ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದಿದ್ದಾನೆ ಎಂದು ತಿಳಿದುಬಂದಿದೆ. ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆ ಮುಂದುವರಿದಿದೆ.

ರಕ್ಷಾ ಬಂಧನ 2026: ರಾಖಿ ಕಟ್ಟಲು ಶುಭ ಸಮಯ ಯಾವುದು? ಇಲ್ಲಿದೆ ಸಂಪೂರ್ಣ ಮಾಹಿತಿ!

0

ಸಹೋದರ-ಸಹೋದರಿಯರ ನಡುವಿನ ಪ್ರೀತಿ, ಬಾಂಧವ್ಯ ಮತ್ತು ಕಾಳಜಿಯ ಸಂಕೇತವಾಗಿರುವ ರಕ್ಷಾ ಬಂಧನ ಹಬ್ಬವನ್ನು ಇಂದು ಆಚರಿಸಲಾಗುತ್ತಿದೆ.

ಈ ದಿನ ಸಹೋದರಿಯರು ಸಹೋದರರಿಗೆ ರಾಖಿ ಕಟ್ಟಿ, ಅವರ ದೀರ್ಘಾಯುಷ್ಯ ಹಾಗೂ ಒಳಿತಿಗಾಗಿ ಪ್ರಾರ್ಥಿಸುತ್ತಾರೆ. ಹೀಗಾಗಿ ರಾಖಿ ಕಟ್ಟಲು ಶುಭ ಸಮಯ ಯಾವುದು ಎಂಬ ಕುತೂಹಲ ಹಲವರಲ್ಲಿದೆ.

ಈ ಬಾರಿ ರಕ್ಷಾ ಬಂಧನವನ್ನು ಆಗಸ್ಟ್ 28ರಂದು ಆಚರಿಸಲಾಗುತ್ತಿದೆ. ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಈ ಬಾರಿ ರಾಖಿ ಕಟ್ಟಲು ಭದ್ರೆಯ ಅಡ್ಡಿ ಇಲ್ಲದಿರುವುದರಿಂದ ದಿನದ ಬಹುತೇಕ ಸಮಯವನ್ನು ಶುಭವೆಂದು ಪರಿಗಣಿಸಬಹುದು ಎಂದು ಹೇಳಲಾಗಿದೆ.

ಹುಣ್ಣಿಮೆ ತಿಥಿ ಯಾವಾಗ ಮುಕ್ತಾಯ?

ಹಿಂದೂ ಪಂಚಾಂಗದ ಪ್ರಕಾರ, ರಕ್ಷಾ ಬಂಧನದ ದಿನವಾದ ಆಗಸ್ಟ್ 28ರಂದು ಬೆಳಿಗ್ಗೆ ಹುಣ್ಣಿಮೆ ತಿಥಿ ಮುಕ್ತಾಯವಾಗಲಿದೆ. ಬಳಿಕ ಪ್ರತಿಪದ ತಿಥಿ ಆರಂಭವಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಖಿ ಕಟ್ಟಲು ಯಾವ ಸಮಯ ಸೂಕ್ತ ಎಂಬ ಬಗ್ಗೆ ಗೊಂದಲ ಮೂಡಿದೆ.

ಹಿಂದೂ ಪಂಚಾಂಗದಲ್ಲಿ ಉದಯ ತಿಥಿಗೆ ವಿಶೇಷ ಮಹತ್ವವಿದೆ. ಸೂರ್ಯೋದಯದ ವೇಳೆಯಲ್ಲಿ ಯಾವ ತಿಥಿ ಇರುತ್ತದೆಯೋ ಅದನ್ನೇ ಆ ದಿನದ ತಿಥಿಯಾಗಿ ಪರಿಗಣಿಸುವುದು ಸಂಪ್ರದಾಯ. ಇದೇ ಕಾರಣಕ್ಕೆ ಈ ಬಾರಿ ರಕ್ಷಾ ಬಂಧನವನ್ನು ಆಗಸ್ಟ್ 28ರಂದು ಆಚರಿಸಲಾಗುತ್ತಿದೆ.

ರಾಖಿ ಕಟ್ಟಲು ಶುಭ ಸಮಯ:

ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಆಗಸ್ಟ್ 28ರಂದು ಬೆಳಿಗ್ಗೆ 6:22ರಿಂದ 9:48ರವರೆಗೆ ರಾಖಿ ಕಟ್ಟಲು ಶುಭ ಸಮಯವಿದೆ ಎಂದು ಹೇಳಲಾಗಿದೆ.

ಹುಣ್ಣಿಮೆ ತಿಥಿ ಮುಕ್ತಾಯಕ್ಕೂ ಮುನ್ನ ರಾಖಿ ಕಟ್ಟಲು ಬಯಸುವವರು ಈ ಅವಧಿಯಲ್ಲಿ ರಾಖಿ ಕಟ್ಟಬಹುದು. ಆದರೆ ಭದ್ರೆಯ ಅಡ್ಡಿ ಇಲ್ಲದಿರುವುದರಿಂದ ದಿನದ ಇತರ ಸಮಯದಲ್ಲಿಯೂ ರಾಖಿ ಕಟ್ಟಬಹುದು ಎಂಬ ಅಭಿಪ್ರಾಯವಿದೆ.

ಹೀಗಾಗಿ ಕುಟುಂಬದ ಸಂಪ್ರದಾಯ ಹಾಗೂ ಸ್ಥಳೀಯ ಪಂಚಾಂಗದ ಆಧಾರದ ಮೇಲೆ ರಾಖಿ ಕಟ್ಟುವ ಸಮಯವನ್ನು ಆಯ್ಕೆ ಮಾಡಬಹುದು.

ರಾಖಿ ಕಟ್ಟುವ ಸಂಪ್ರದಾಯ ಹೇಗೆ?

ರಕ್ಷಾ ಬಂಧನದಂದು ಬೆಳಗ್ಗೆ ಸ್ನಾನ ಮಾಡಿ ಸ್ವಚ್ಛವಾದ ಬಟ್ಟೆ ಧರಿಸಿ ಪೂಜೆಯ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಬಳಿಕ ರಾಖಿ, ಕುಂಕುಮ, ಅಕ್ಷತೆ, ದೀಪ ಹಾಗೂ ಸಿಹಿತಿಂಡಿಗಳನ್ನು ತಟ್ಟೆಯಲ್ಲಿ ಸಿದ್ಧಪಡಿಸಿಕೊಳ್ಳಬೇಕು.

ಮೊದಲು ಸಹೋದರನ ಹಣೆಗೆ ಕುಂಕುಮದ ತಿಲಕ ಹಚ್ಚಿ, ಅಕ್ಷತೆ ಹಾಕಿ ಬಳಿಕ ರಾಖಿ ಕಟ್ಟುವುದು ಸಂಪ್ರದಾಯ. ನಂತರ ಸಹೋದರನಿಗೆ ಸಿಹಿ ತಿನ್ನಿಸಿ, ಆತನ ದೀರ್ಘಾಯುಷ್ಯ, ಆರೋಗ್ಯ ಮತ್ತು ಒಳಿತಿಗಾಗಿ ಸಹೋದರಿ ಪ್ರಾರ್ಥಿಸುತ್ತಾರೆ.

ಪಂಚಾಂಗ ಪರಿಶೀಲಿಸುವುದು ಉತ್ತಮ:

2026ರ ರಕ್ಷಾ ಬಂಧನದಂದು ಭದ್ರೆಯ ಅಡ್ಡಿ ಇಲ್ಲದಿರುವುದರಿಂದ ರಾಖಿ ಕಟ್ಟಲು ಅನುಕೂಲಕರ ಸಮಯವಿದೆ ಎಂದು ಜ್ಯೋತಿಷ್ಯ ಮೂಲಗಳು ಹೇಳುತ್ತವೆ. ವಿಶೇಷವಾಗಿ ಬೆಳಿಗ್ಗೆ 6:22ರಿಂದ 9:48ರವರೆಗಿನ ಅವಧಿಯನ್ನು ಶುಭ ಸಮಯವೆಂದು ಪರಿಗಣಿಸಲಾಗಿದೆ.

ಆದರೆ ತಿಥಿ ಹಾಗೂ ಶುಭ ಸಮಯದಲ್ಲಿ ಪ್ರದೇಶಾನುಸಾರ ಸ್ವಲ್ಪ ವ್ಯತ್ಯಾಸ ಇರಬಹುದು. ಹೀಗಾಗಿ ರಾಖಿ ಕಟ್ಟುವ ಮುನ್ನ ನಿಮ್ಮ ಪ್ರದೇಶದ ಪಂಚಾಂಗವನ್ನು ಪರಿಶೀಲಿಸುವುದು ಅಥವಾ ಸ್ಥಳೀಯ ಜ್ಯೋತಿಷ್ಯ ತಜ್ಞರ ಸಲಹೆ ಪಡೆಯುವುದು ಸೂಕ್ತ.

ತೆರಿಗೆ ತಪ್ಪಿಸಿಕೊಳ್ಳೋಕೆ ಸಾಧ್ಯವಿಲ್ಲ! ಬೆಂಗಳೂರಿನ ಲಕ್ಷಾಂತರ ಆಸ್ತಿಗಳ ಮೇಲೆ GBA ಕಣ್ಣು

0

ಬೆಂಗಳೂರು: ಆಸ್ತಿ ವಿವರಗಳನ್ನು ಮರೆಮಾಚಿ ತೆರಿಗೆ ವಂಚಿಸುತ್ತಿರುವವರಿಗೆ ಬಿಸಿ ಮುಟ್ಟಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಬೃಹತ್ ಆಸ್ತಿ ಸರ್ವೆಗೆ ಸಜ್ಜಾಗಿದೆ.

ಬೆಂಗಳೂರಿನಾದ್ಯಂತ ಪ್ರತಿಯೊಬ್ಬರ ಹೆಸರಿನಲ್ಲಿರುವ ಆಸ್ತಿ ಹಾಗೂ ಕಟ್ಟಡಗಳ ನೈಜ ವಿಸ್ತೀರ್ಣದ ವಿವರಗಳನ್ನು ಪತ್ತೆಹಚ್ಚಲು ಸಮಗ್ರ ಸಮೀಕ್ಷೆ ನಡೆಸಲು ಪ್ರಾಧಿಕಾರ ನಿರ್ಧರಿಸಿದೆ.

ಆಸ್ತಿ ತೆರಿಗೆ ವಂಚನೆಗೆ ಕಡಿವಾಣ ಹಾಕುವುದು ಹಾಗೂ ಖಾತಾ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವುದು ಸರ್ವೆಯ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ ನಗರದ ಎಲ್ಲ ಆಸ್ತಿಗಳನ್ನು ಸಮೀಕ್ಷೆ ನಡೆಸಿ, ಅವುಗಳಿಗೆ GPS ಟ್ಯಾಗಿಂಗ್ ಅಳವಡಿಸಲು ಸಿದ್ಧತೆ ನಡೆದಿದೆ.

ಬೆಂಗಳೂರಿನ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ ಈ ಬೃಹತ್ ಆಸ್ತಿ ಸರ್ವೆ ನಡೆಯಲಿದೆ ಎನ್ನಲಾಗಿದೆ.

ಮಾಲ್‌ಗಳು, ವಾಣಿಜ್ಯ ಸಂಕೀರ್ಣಗಳು ಹಾಗೂ ಬಹುಮಹಡಿ ವಸತಿ ಸಮುಚ್ಚಯಗಳ ಮಾಲೀಕರು ಕಟ್ಟಡದ ನೈಜ ವಿಸ್ತೀರ್ಣಕ್ಕಿಂತ ಕಡಿಮೆ ವಿಸ್ತೀರ್ಣ ತೋರಿಸಿ ತೆರಿಗೆ ವಂಚಿಸುತ್ತಿರುವ ಪ್ರಕರಣಗಳನ್ನು ಪತ್ತೆಹಚ್ಚಲು ಸಮೀಕ್ಷೆ ನೆರವಾಗಲಿದೆ.

ಸರ್ವೆ ವೇಳೆ ಪ್ರತಿಯೊಂದು ಆಸ್ತಿಯ ವಿವರಗಳನ್ನು ಡಿಜಿಟಲ್ ಇ-ಖಾತಾ ವ್ಯವಸ್ಥೆಗೆ ಸೇರ್ಪಡೆಗೊಳಿಸಿ, GPS ಲೊಕೇಶನ್‌ನೊಂದಿಗೆ ಲಿಂಕ್ ಮಾಡಲಾಗುತ್ತದೆ. ಅಧಿಕೃತ ದಾಖಲೆಗಳಿಲ್ಲದೆ ನಿರ್ಮಿಸಲಾಗಿರುವ ಅನಧಿಕೃತ ಆಸ್ತಿಗಳನ್ನೂ ಗುರುತಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ಸದ್ಯ ಜಿಬಿಎ ವ್ಯಾಪ್ತಿಯ ಆಸ್ತಿ ತೆರಿಗೆ ವ್ಯವಸ್ಥೆಯಿಂದ ಹೊರಗುಳಿದಿರುವ ಲಕ್ಷಾಂತರ ಆಸ್ತಿಗಳನ್ನು ಪತ್ತೆಹಚ್ಚಿ, ಅವುಗಳನ್ನು ಅಧಿಕೃತ ಕಂದಾಯ ದಾಖಲೆಗಳಿಗೆ ಸೇರ್ಪಡೆಗೊಳಿಸುವ ಮೂಲಕ ತೆರಿಗೆ ಸಂಗ್ರಹ ಹೆಚ್ಚಿಸುವ ಗುರಿಯನ್ನು ಪ್ರಾಧಿಕಾರ ಹೊಂದಿದೆ.

ಸಮೀಕ್ಷೆ ಪೂರ್ಣಗೊಂಡ ಬಳಿಕ ಬೆಂಗಳೂರಿನ ಆಸ್ತಿ ಮಾಲೀಕತ್ವದ ನಿಖರ ಮಾಹಿತಿಯೊಂದಿಗೆ ಸಮಗ್ರ ಡಿಜಿಟಲ್ ದಾಖಲೆ ಸಿದ್ಧವಾಗಲಿದೆ. ಆಸ್ತಿ ವಿವರಗಳನ್ನು ಸುಳ್ಳಾಗಿ ನೀಡಿ ತೆರಿಗೆ ವಂಚಿಸಿರುವುದು ಪತ್ತೆಯಾದರೆ ಅಂತಹ ಮಾಲೀಕರ ವಿರುದ್ಧ ದಂಡ ಹಾಗೂ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ವಾಲ್ಮೀಕಿ ನಿಗಮ ಹಗರಣಕ್ಕೆ ಬಿಗ್ ಟ್ವಿಸ್ಟ್: ನಾಗೇಂದ್ರ ರಾಜೀನಾಮೆ ಬಹುತೇಕ ಖಚಿತ?

0

ಬೆಂಗಳೂರು: ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ವಿಚಾರ ಇದೀಗ ದೆಹಲಿ ಅಂಗಳ ತಲುಪಿದ್ದು, ಕಾಂಗ್ರೆಸ್ ಹೈಕಮಾಂಡ್‌ನಿಂದ ರಾಜ್ಯ ನಾಯಕರಿಗೆ ಮಹತ್ವದ ಸಂದೇಶ ರವಾನೆಯಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಪಕ್ಷ ಮತ್ತು ಸರ್ಕಾರದ ಹಿತದೃಷ್ಟಿಯಿಂದ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ಹೈಕಮಾಂಡ್ ವ್ಯಕ್ತಪಡಿಸಿದೆ ಎನ್ನಲಾಗಿದೆ.

ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ನಾಯಕರೊಂದಿಗೆ ನಾಗೇಂದ್ರ ವಿರುದ್ಧದ ಪ್ರಕರಣದ ಕಾನೂನು ಹಾಗೂ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಪ್ರಕರಣದ ತನಿಖೆಯ ಹಂತ, ಪ್ರತಿಪಕ್ಷಗಳ ಹೋರಾಟದಿಂದ ಸರ್ಕಾರಕ್ಕೆ ಉಂಟಾಗುತ್ತಿರುವ ರಾಜಕೀಯ ಹಾನಿ ಹಾಗೂ ಮುಂದಿನ ದಿನಗಳಲ್ಲಿ ರಾಜ್ಯಪಾಲರ ಮಟ್ಟದಲ್ಲಿ ಸಂಭವಿಸಬಹುದಾದ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆದಿದೆ ಎನ್ನಲಾಗಿದೆ.

ಈ ಚರ್ಚೆಯ ಬಳಿಕ ವ್ಯಕ್ತಿಗಿಂತ ಪಕ್ಷ ಮತ್ತು ಸರ್ಕಾರದ ಹಿತ ಮುಖ್ಯ ಎಂಬ ನಿಲುವಿಗೆ ಕಾಂಗ್ರೆಸ್ ಹೈಕಮಾಂಡ್ ಬಂದಿದೆ ಎನ್ನಲಾಗಿದ್ದು, ನಾಗೇಂದ್ರ ರಾಜೀನಾಮೆ ನೀಡುವಂತೆ ಸೂಚನೆ ನೀಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಹೈಕಮಾಂಡ್ ಭೇಟಿಯ ಬಳಿಕ ದೆಹಲಿಯಲ್ಲಿ ಪ್ರತಿಕ್ರಿಯಿಸಿದ್ದ ಡಿ.ಕೆ. ಶಿವಕುಮಾರ್, ನಾಗೇಂದ್ರ ಅವರು ಪಕ್ಷದ ಹಿತಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಿದ್ದಾರೆ ಎಂದು ಹೇಳಿದ್ದರು. ಈ ಹೇಳಿಕೆ ನಾಗೇಂದ್ರ ರಾಜೀನಾಮೆ ಕುರಿತ ಚರ್ಚೆಗೆ ಮತ್ತಷ್ಟು ಬಲ ನೀಡಿದೆ.

ಸಿಬಿಐ ಅನುಮತಿ ಕೋರಿರುವುದು ಪ್ರಕರಣಕ್ಕೆ ಹೊಸ ತಿರುವು:

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಾಗೇಂದ್ರ ವಿರುದ್ಧ ಕಾನೂನು ಕ್ರಮ ಮುಂದುವರಿಸಲು ಸಿಬಿಐ ರಾಜ್ಯಪಾಲರ ಅನುಮತಿ ಕೋರಿರುವುದು ಪ್ರಕರಣಕ್ಕೆ ಮತ್ತಷ್ಟು ಮಹತ್ವ ತಂದಿದೆ.

ಒಂದು ವೇಳೆ ರಾಜ್ಯಪಾಲರು ಅನುಮತಿ ನೀಡಿದರೆ ಸರ್ಕಾರಕ್ಕೆ ರಾಜಕೀಯವಾಗಿ ಮುಜುಗರ ಉಂಟಾಗುವ ಸಾಧ್ಯತೆ ಇದೆ. ಇದೇ ವಿಚಾರವನ್ನು ಬಿಜೆಪಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಮುಖ ಅಸ್ತ್ರವಾಗಿ ಬಳಸುವ ಸಾಧ್ಯತೆಯೂ ಇದೆ.

ಬಿಜೆಪಿ ಪಾದಯಾತ್ರೆ ಮೂಲಕ ಕಾಂಗ್ರೆಸ್ ವಿರುದ್ಧ ಹೋರಾಟ ತೀವ್ರಗೊಳಿಸುತ್ತಿರುವ ಹಿನ್ನೆಲೆಯಲ್ಲಿ, ಪ್ರಕರಣದ ರಾಜಕೀಯ ಪರಿಣಾಮಗಳ ಬಗ್ಗೆಯೂ ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿದೆ. ಹೀಗಾಗಿ ರಾಜ್ಯಪಾಲರ ಮುಂದಿನ ನಿರ್ಧಾರಕ್ಕೂ ಮುನ್ನವೇ ರಾಜಕೀಯವಾಗಿ ಮುನ್ನೆಚ್ಚರಿಕೆ ವಹಿಸುವ ಕುರಿತು ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಮೂರು ಅಂಶಗಳ ಬಗ್ಗೆ ಹೈಕಮಾಂಡ್ ಚರ್ಚೆ:

ಡಿ.ಕೆ. ಶಿವಕುಮಾರ್ ಅವರೊಂದಿಗೆ ನಡೆದ ಸಮಾಲೋಚನೆಯಲ್ಲಿ ಪ್ರಮುಖವಾಗಿ ಮೂರು ಅಂಶಗಳನ್ನು ಪರಿಗಣಿಸಲಾಗಿದೆ ಎನ್ನಲಾಗಿದೆ.

ಮೊದಲನೆಯದಾಗಿ, ನಾಗೇಂದ್ರ ಸಚಿವ ಸಂಪುಟದಲ್ಲಿ ಮುಂದುವರಿದರೆ ವಾಲ್ಮೀಕಿ ನಿಗಮ ಪ್ರಕರಣವನ್ನು ಬಿಜೆಪಿ ದೊಡ್ಡ ರಾಜಕೀಯ ಅಸ್ತ್ರವಾಗಿ ಬಳಸುವ ಸಾಧ್ಯತೆ.

ಎರಡನೆಯದಾಗಿ, ಸಿಬಿಐ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದರೆ ಎದುರಾಗಬಹುದಾದ ಕಾನೂನು ಮತ್ತು ರಾಜಕೀಯ ಪರಿಣಾಮಗಳು.

ಮೂರನೆಯದಾಗಿ, ಪ್ರಕರಣದ ಕಾನೂನು ಹೋರಾಟದ ಹೊರೆ ನೇರವಾಗಿ ಸರ್ಕಾರದ ಮೇಲೆ ಬೀಳದಂತೆ ರಾಜಕೀಯ ಹಾನಿಯನ್ನು ನಿಯಂತ್ರಿಸುವುದು.

ಈ ಹಿನ್ನೆಲೆಯಲ್ಲಿ ನಾಗೇಂದ್ರ ರಾಜೀನಾಮೆ ಪಡೆಯುವ ಮೂಲಕ ಪ್ರತಿಪಕ್ಷಗಳ ಪ್ರಮುಖ ರಾಜಕೀಯ ಅಸ್ತ್ರವನ್ನು ನಿಷ್ಕ್ರಿಯಗೊಳಿಸಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ಹೈಕಮಾಂಡ್‌ನಲ್ಲಿದೆ ಎನ್ನಲಾಗಿದೆ.

ತಪ್ಪೊಪ್ಪಿಗೆಯಂತೆ ಬಿಂಬಿಸದಿರಲು ತಂತ್ರ?

ಒಂದು ವೇಳೆ ನಾಗೇಂದ್ರ ರಾಜೀನಾಮೆ ನೀಡಿದರೆ, ಅದನ್ನು ಪ್ರಕರಣಕ್ಕೆ ಸಂಬಂಧಿಸಿದ ತಪ್ಪೊಪ್ಪಿಗೆಯಾಗಿ ಬಿಂಬಿಸದಂತೆ ಎಚ್ಚರಿಕೆ ವಹಿಸುವ ಸಾಧ್ಯತೆ ಇದೆ. ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕಾಗಿ ಕೈಗೊಂಡ ರಾಜಕೀಯ ನಿರ್ಧಾರ ಎಂಬ ರೀತಿಯಲ್ಲಿ ರಾಜೀನಾಮೆಯನ್ನು ಪ್ರಸ್ತುತಪಡಿಸುವ ಕುರಿತು ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ನಾಗೇಂದ್ರ ರಾಜೀನಾಮೆ ನೀಡಲಿದ್ದಾರೆ ಎಂಬ ವರದಿಗಳು ಹರಿದಾಡಿದ್ದರೂ, ಆ.26ರಂದು ನಾಗೇಂದ್ರ ಅವರು ಸ್ವತಃ ಅಂತಹ ವರದಿಗಳನ್ನು ನಿರಾಕರಿಸಿದ್ದರು.

ಇದೀಗ ಡಿ.ಕೆ. ಶಿವಕುಮಾರ್ ಅವರ ದೆಹಲಿ ಭೇಟಿ ಬಳಿಕ ನಾಗೇಂದ್ರ ರಾಜೀನಾಮೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಮುಂದಿನ ಒಂದೆರಡು ದಿನಗಳಲ್ಲಿ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ಬಂಡೆಪಾಳ್ಯದಲ್ಲಿ ಮಧ್ಯರಾತ್ರಿ ಗುಂಡಿನ ಸದ್ದು: ಮಾರಕಾಸ್ತ್ರ ಹಿಡಿದು ಓಡಾಡುತ್ತಿದ್ದ ಆರೋಪಿಯ ಕಾಲಿಗೆ ಫೈರಿಂಗ್!

0

ಬೆಂಗಳೂರು: ನಗರದ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ಪೊಲೀಸರು ಗುಂಡು ಹಾರಿಸಿ ಆರೋಪಿಯೊಬ್ಬನನ್ನು ಬಂಧಿಸಿರುವ ಘಟನೆ ನಡೆದಿದೆ.

ದ್ವಿಚಕ್ರ ವಾಹನದಲ್ಲಿ ಮಾರಕಾಸ್ತ್ರ ಹಿಡಿದು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುತ್ತಿದ್ದ ಜಿಶಾನ್ ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಸೋಮಸುಂದ್ರಪಾಳ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಬೈಕ್‌ನಲ್ಲಿ ಮಾರಕಾಸ್ತ್ರದೊಂದಿಗೆ ಅನುಮಾನಾಸ್ಪದವಾಗಿ ಓಡಾಡುತ್ತಿರುವ ಬಗ್ಗೆ ಬಂಡೆಪಾಳ್ಯ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ ಪಿಎಸ್‌ಐ ಸಚಿನ್ ಹಾಗೂ ಸಿಬ್ಬಂದಿ ಸಂದೀಪ್ ಕಾಂಬ್ಳೆ ಸ್ಥಳಕ್ಕೆ ತೆರಳಿದ್ದರು.

ಮಧ್ಯರಾತ್ರಿ ಸುಮಾರು 12.50ರ ವೇಳೆಗೆ ಪೊಲೀಸರು ಜಿಶಾನ್‌ನನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಈ ವೇಳೆ ಆರೋಪಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ತನ್ನ ಬಳಿಯಿದ್ದ ಮಾರಕಾಸ್ತ್ರದಿಂದ ಪೊಲೀಸ್ ಸಿಬ್ಬಂದಿ ಸಂದೀಪ್ ಕಾಂಬ್ಳೆ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಬಳಿಕ ಪಿಎಸ್‌ಐ ಸಚಿನ್ ಅವರ ಮೇಲೂ ಹಲ್ಲೆಗೆ ಯತ್ನಿಸಿದಾಗ, ಆತ್ಮರಕ್ಷಣೆಗಾಗಿ ಪಿಎಸ್‌ಐ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿ ಸಂದೀಪ್ ಕಾಂಬ್ಳೆ ಹಾಗೂ ಕಾಲಿಗೆ ಗುಂಡೇಟು ಬಿದ್ದ ಆರೋಪಿ ಜಿಶಾನ್ ಇಬ್ಬರನ್ನೂ ಚಿಕಿತ್ಸೆಗಾಗಿ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಗದಗ ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿ: ಸೋಮವಾರದೊಳಗೆ ಬರ ಘೋಷಿಸದಿದ್ದರೆ ಮಂಗಳವಾರ ಬಂದ್ – ರೈತ ಸಂಘ ಎಚ್ಚರಿಕೆ

0

ಗದಗ: ಗದಗ ಜಿಲ್ಲೆಯ ಬರಗಾಲ ಪರಿಸ್ಥಿತಿ ಕುರಿತು ಸರ್ಕಾರಕ್ಕೆ ಅಸಮರ್ಪಕ ವರದಿ ಸಲ್ಲಿಸಲಾಗಿದೆ ಎಂಬ ಗಂಭೀರ ಆರೋಪವನ್ನು ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ಮಾಡಿದ್ದಾರೆ.

ಗದಗ ಜಿಲ್ಲೆಯ ಗದಗ, ಮುಂಡರಗಿ, ಶಿರಹಟ್ಟಿ, ರೋಣ, ನರಗುಂದ ಹಾಗೂ ಲಕ್ಷ್ಮೇಶ್ವರ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆಯಿಂದ ರೈತರು ಬೆಳೆ ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಸರ್ಕಾರ ಕೇವಲ ಒಂದು ತಾಲೂಕನ್ನು ಮಾತ್ರ ಬರಪೀಡಿತ ಎಂದು ಘೋಷಿಸಿರುವುದು ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳು ಹಾಗೂ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕೆ ವಾಸ್ತವ ಪರಿಸ್ಥಿತಿಗೆ ವಿರುದ್ಧವಾದ ಅಥವಾ ಅಸಮರ್ಪಕ ವರದಿ ನೀಡಿರುವ ಸಂಶಯ ವ್ಯಕ್ತವಾಗುತ್ತಿದೆ ಎಂದು ಬಾಬರಿ ಆರೋಪಿಸಿದರು.

ಪಕ್ಕದ ಬಾಗಲಕೋಟೆ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವ ಸರ್ಕಾರ, ಗದಗ ಜಿಲ್ಲೆಯ ರೈತರ ಸಂಕಷ್ಟವನ್ನು ಕಡೆಗಣಿಸಿರುವುದು ಸರಿಯಲ್ಲ. ಅಧಿಕಾರಿಗಳು ಖುದ್ದಾಗಿ ಹೊಲಗಳಿಗೆ ಭೇಟಿ ನೀಡಿ ಸಮರ್ಪಕ ಸಮೀಕ್ಷೆ ನಡೆಸಿದ್ದಾರೆಯೇ ಅಥವಾ ಕಚೇರಿಯಲ್ಲಿಯೇ ಕುಳಿತು ವರದಿ ಸಿದ್ಧಪಡಿಸಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರು ಮಧ್ಯಪ್ರವೇಶಿಸಿ, ಗದಗ ಜಿಲ್ಲೆಯ ಬರ ಪರಿಸ್ಥಿತಿಯ ಕುರಿತು ಮರುಪರಿಶೀಲನೆ ನಡೆಸಬೇಕು. ತಪ್ಪು ಅಥವಾ ಅಸಮರ್ಪಕ ವರದಿ ಇದ್ದರೆ ಅದನ್ನು ತಿರಸ್ಕರಿಸಿ, ಸೋಮವಾರದೊಳಗೆ ಗದಗ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಸಂಪೂರ್ಣ ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು ಎಂದು ಅವರು ಆಗ್ರಹಿಸಿದರು.

ಇಲ್ಲವಾದರೆ ಮಂಗಳವಾರ ಗದಗ ಜಿಲ್ಲಾ ಬಂದ್ ನಡೆಸುವುದರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಯಲ್ಲಪ್ಪ ಬಾಬರಿ ಎಚ್ಚರಿಕೆ ನೀಡಿದರು.

ಉತ್ತರ ಕರ್ನಾಟಕವನ್ನು ನಿರಂತರವಾಗಿ ಕಡೆಗಣಿಸುವ ಧೋರಣೆ ಮುಂದುವರಿದರೆ, ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟದ ಕಿಚ್ಚನ್ನು ರೈತ ಸಂಘಟನೆಗಳು ಹಚ್ಚಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಶಿವಮೊಗ್ಗದಲ್ಲಿ ಪ್ಯಾಲೆಸ್ತೀನ್ ಧ್ವಜ ಹಾರಿಸಿದ ಆರೋಪ! ಮೂವರ ವಿರುದ್ಧ ಸುಮೋಟೋ ಕೇಸ್

0

ಶಿವಮೊಗ್ಗ: ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗದ ಆರ್‌ಎಂಎಲ್ ನಗರದಲ್ಲಿ ನಿರ್ಮಿಸಲಾಗುತ್ತಿದ್ದ ಕಟೌಟ್ ಮೇಲೆ ಏರಿ ಪ್ಯಾಲೆಸ್ತೀನ್ ಧ್ವಜ ಹಾರಿಸಿ, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪದಡಿ ಮೂವರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ನಗರದ ನಿಹಾಲ್, ಉಮರ್ ಹಾಗೂ ಅಬ್ರಹಾರ್ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು, ನಿಹಾಲ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಆಗಸ್ಟ್ 25ರಂದು ಮಧ್ಯಾಹ್ನ ಆರ್‌ಎಂಎಲ್ ನಗರದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಲಭಿಸಿದ ಮಾಹಿತಿಯ ಆಧಾರದ ಮೇಲೆ ಇನ್‌ಸ್ಟಾಗ್ರಾಂ ಖಾತೆಯೊಂದನ್ನು ಪರಿಶೀಲಿಸಿದ್ದಾರೆ. ಈ ವೇಳೆ ಕಟೌಟ್ ಮೇಲೆ ಮೂವರು ವ್ಯಕ್ತಿಗಳು ಪ್ಯಾಲೆಸ್ತೀನ್ ಧ್ವಜ ಹಾರಿಸುತ್ತಿರುವ 14 ಸೆಕೆಂಡುಗಳ ವಿಡಿಯೋ ಪೋಸ್ಟ್ ಮಾಡಿರುವುದು ಪೊಲೀಸರ ಗಮನಕ್ಕೆ ಬಂದಿದೆ.

ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದಾಗ, ಆಗಸ್ಟ್ 24ರಂದು ಬೆಳಿಗ್ಗೆ 8ರಿಂದ 9 ಗಂಟೆಯ ಅವಧಿಯಲ್ಲಿ ಆರ್‌ಎಂಎಲ್ ನಗರದ ನಿವಾಸಿಗಳಾದ ಮೂವರು ಕಟೌಟ್ ಮೇಲೆ ಏರಿ ಈ ಕೃತ್ಯ ಎಸಗಿರುವುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಡಿಯೋ ಮೂಲಕ ರಾಷ್ಟ್ರೀಯ ಏಕತೆಗೆ ಧಕ್ಕೆ ತರುವ ಹಾಗೂ ವಿವಿಧ ಸಮುದಾಯಗಳ ನಡುವೆ ವೈಮನಸ್ಸು ಮತ್ತು ದ್ವೇಷದ ಭಾವನೆ ಮೂಡಿಸಿ ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡುವ ಪ್ರಯತ್ನ ನಡೆದಿದೆ ಎಂಬ ಆರೋಪದಡಿ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದು, ವಶಕ್ಕೆ ಪಡೆದಿರುವ ನಿಹಾಲ್‌ನಿಂದ ವಿಚಾರಣೆ ನಡೆಸುತ್ತಿದ್ದಾರೆ.