Home Blog

ಗುಳೆ ತಪ್ಪಿಸಿ, ಊರಲ್ಲೇ ಉದ್ಯೋಗ ಪಡೆಯಿರಿ: ವಿಬಿಜಿ-ರಾಮ್-ಜಿ ಯೋಜನೆಯಡಿ 125 ದಿನ ಕೆಲಸ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಗ್ರಾಮೀಣ ಪ್ರದೇಶದ ಕೂಲಿಕಾರರು ಗುಳೆ ಹೋಗುವುದನ್ನು ತಪ್ಪಿಸಿ ತಮ್ಮ ಊರಿನಲ್ಲಿಯೇ ಉದ್ಯೋಗ ಪಡೆದುಕೊಳ್ಳುವ ಮಹತ್ವಾಕಾಂಕ್ಷೆಯ ಉದ್ದೇಶದೊಂದಿಗೆ ವಿಬಿಜಿ-ರಾಮ್-ಜಿ ಯೋಜನೆಯಡಿ 125 ದಿನಗಳ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಹೇಳಿದರು.

ತಾಲೂಕಿನ ನಿಡಗುಂದಿ ಗ್ರಾಮದ ಹೊಸ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಗುರುವಾರ ವಿಬಿಜಿ-ರಾಮ್-ಜಿ ಯೋಜನೆಯಡಿ ಆಯೋಜಿಸಿದ್ದ ವಿಭಿನ್ನ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಚಟುವಟಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಕೂಲಿಕಾರರು ಉದ್ಯೋಗಕ್ಕಾಗಿ ದೂರದ ಊರುಗಳಿಗೆ ಗುಳೆ ಹೋಗುವ ಬದಲು, ತಮ್ಮ ಗ್ರಾಮದಲ್ಲಿಯೇ ಸರ್ಕಾರ ನಿಗದಿಪಡಿಸಿರುವ ದಿನಗಳವರೆಗೆ ಕೆಲಸ ನಿರ್ವಹಿಸಿ ಉದ್ಯೋಗ ಪಡೆಯಬೇಕು. ಯೋಜನೆಯಡಿ ಲಭ್ಯವಿರುವ ವೈಯಕ್ತಿಕ ಕಾಮಗಾರಿಗಳ ಸೌಲಭ್ಯವನ್ನೂ ಅರ್ಹರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸರಿಯಾಗಿ ಕೆಲಸ ಮಾಡಿದರೆ ನಿರಂತರ ಉದ್ಯೋಗ

ವಿಬಿಜಿ-ರಾಮ್-ಜಿ ಯೋಜನೆಯಡಿ 125 ದಿನಗಳ ಕೆಲಸ ಪಡೆಯಲು ಕೂಲಿಕಾರರು ಜವಾಬ್ದಾರಿಯಿಂದ ಹಾಗೂ ಗುಣಮಟ್ಟದಿಂದ ಕೆಲಸ ನಿರ್ವಹಿಸಬೇಕು. ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ಮಾತ್ರ ನಿರಂತರವಾಗಿ ಕೆಲಸ ನೀಡಲು ಸಾಧ್ಯವಾಗುತ್ತದೆ. ಆ ಮೂಲಕ 125 ದಿನಗಳ ಕಾಲ ಉದ್ಯೋಗದ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಹೇಳಿದರು.

ಈ ನಿಟ್ಟಿನಲ್ಲಿ ನಿಡಗುಂದಿ ಗ್ರಾಮದ ಪ್ರತಿಯೊಬ್ಬ ಕೂಲಿಕಾರರೂ ಕಾಮಗಾರಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯೋಜನೆಯ ಸಂಪೂರ್ಣ ಪ್ರಯೋಜನ ಪಡೆಯಬೇಕು ಎಂದು ಕರೆ ನೀಡಿದರು.

ಹೊಸ ಕೆರೆ ತಾಲೂಕಿಗೆ ಮಾದರಿಯಾಗಲಿ

ನಿಡಗುಂದಿ ಗ್ರಾಮದ ಹೊಸ ಕೆರೆ ಪ್ರಸ್ತುತ ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡಿದೆ. ಕೆರೆಯಲ್ಲಿ ಮುಳ್ಳುಕಂಟಿಗಳು, ಗಿಡಗಂಟಿಗಳು ಹಾಗೂ ಜಾಲಿ ಮರಗಳು ಬೆಳೆದು, ಅಪಾರ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದೆ. ಇದರಿಂದ ಕೆರೆಯಲ್ಲಿ ನೀರು ನಿಲ್ಲದಂತಾಗಿದ್ದು, ಕೆರೆಯ ಆಕಾರವೂ ಹಾಳಾಗಿದೆ ಎಂದು ಅವರು ಹೇಳಿದರು.

ಕೆರೆಯ ಪುನಶ್ಚೇತನ ಹಾಗೂ ಅಭಿವೃದ್ಧಿಗಾಗಿ ವಿಬಿಜಿ-ರಾಮ್-ಜಿ ಯೋಜನೆಯಡಿ ಅಂದಾಜು 90 ಲಕ್ಷ ರೂ. ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕೂಲಿಕಾರರು ಶ್ರದ್ಧೆಯಿಂದ ಕೆಲಸ ನಿರ್ವಹಿಸಿ ಕೆರೆಯನ್ನು ಅಭಿವೃದ್ಧಿಪಡಿಸಿದರೆ, ನಿಡಗುಂದಿಯ ಹೊಸ ಕೆರೆ ತಾಲೂಕಿಗೆ ಮಾದರಿ ಕೆರೆಯಾಗಿ ರೂಪುಗೊಳ್ಳಬೇಕು ಎಂದು ಆಶಿಸಿದರು.

ಕೆರೆಯಲ್ಲೇ ಮೂಡಿದ ‘ವಿಬಿಜಿ-ರಾಮ್-ಜಿ’ ಅಕ್ಷರ!

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ನಿಡಗುಂದಿ ಗ್ರಾಮದ ಹೊಸ ಕೆರೆಯ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರ ಮೂಲಕ ‘ವಿಬಿಜಿ-ರಾಮ್-ಜಿ’ ಎಂಬ ಅಕ್ಷರಗಳನ್ನು ರೂಪಿಸಲಾಯಿತು. ಅಕ್ಷರಗಳ ಮಧ್ಯೆ ಮಹಿಳಾ ಕೂಲಿಕಾರರನ್ನು ಕುಳ್ಳಿರಿಸಿ, ಸುತ್ತಲೂ ಇತರ ಕೂಲಿಕಾರರನ್ನು ನಿಲ್ಲಿಸುವ ಮೂಲಕ ವಿನೂತನ ಹಾಗೂ ವಿಭಿನ್ನ ರೀತಿಯ ಐಇಸಿ ಚಟುವಟಿಕೆ ನಡೆಸಲಾಯಿತು.

ಈ ವಿಶಿಷ್ಟ ಕಾರ್ಯಕ್ರಮವು ಕೂಲಿಕಾರರ ಗಮನ ಸೆಳೆಯುವುದರ ಜತೆಗೆ ಯೋಜನೆಯ ಮಹತ್ವ, ಉದ್ಯೋಗಾವಕಾಶ ಹಾಗೂ ಅದರ ಪ್ರಯೋಜನಗಳ ಕುರಿತು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಿತು.

ತಾಲೂಕಿನಾದ್ಯಂತ ಜಾಬ್ ಕಾರ್ಡ್ ಮೇಳ

ಸರ್ಕಾರ ಹಾಗೂ ಜಿಲ್ಲಾ ಪಂಚಾಯಿತಿ, ಗದಗ ಅವರ ನಿರ್ದೇಶನದಂತೆ ತಾಲೂಕಿನಾದ್ಯಂತ ಜಾಬ್ ಕಾರ್ಡ್ ಮೇಳ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಚಂದ್ರಶೇಖರ ಬಿ. ಕಂದಕೂರ ತಿಳಿಸಿದರು.

ಅಭಿಯಾನದಡಿ ಹೊಸ ಜಾಬ್ ಕಾರ್ಡ್ ಮಾಡಿಸುವುದು, ಈಗಾಗಲೇ ಇರುವ ಜಾಬ್ ಕಾರ್ಡ್‌ಗಳಲ್ಲಿ ಅಗತ್ಯ ತಿದ್ದುಪಡಿ ಮಾಡಿಸುವುದು ಹಾಗೂ ಇ-ಕೆವೈಸಿ ನವೀಕರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಅರ್ಹ ಕೂಲಿಕಾರರು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಮತದಾರರ ಪಟ್ಟಿ ಪರಿಷ್ಕರಣೆಗೂ ಅವಕಾಶ

ಮತದಾರರ ಪಟ್ಟಿ ಪರಿಷ್ಕರಣೆ–2026ರ ಅಂಗವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ತಿದ್ದುಪಡಿ ಹಾಗೂ ಹೊಸದಾಗಿ ಹೆಸರು ಸೇರ್ಪಡೆ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದರು.

18 ವರ್ಷ ಮೇಲ್ಪಟ್ಟ ಯುವಕ-ಯುವತಿಯರು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರ್ಪಡೆ ಮಾಡಿಸಿಕೊಳ್ಳಬಹುದು. ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು, ಅದರಲ್ಲಿ ಯಾವುದೇ ತಿದ್ದುಪಡಿ ಅಗತ್ಯವಿದ್ದರೆ ಸಂಬಂಧಪಟ್ಟ ಗ್ರಾಮದ ಬಿಎಲ್‌ಒ ಅವರನ್ನು ಸಂಪರ್ಕಿಸಿ ತಿದ್ದುಪಡಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅರ್ಹ ಮತದಾರರು ಮರು ಸೇರ್ಪಡೆಗೆ ಅವಕಾಶವಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಮರೇಶ ಮೂಲಿಮನಿ, ಜಿಲ್ಲಾ ಐಇಸಿ ಸಂಯೋಜಕ ವಿ.ಎಸ್. ಸಜ್ಜನ್, ತಾಂತ್ರಿಕ ಸಹಾಯಕ ಅಜಯ್ ಹೂಗಾರ, ಬಿಲ್ ಕಲೆಕ್ಟರ್ ಮತ್ತಪ್ಪ, ಜಿಕೆಎಂ ಅನಿತಾ ಸಂಗನಾಳ, ಪಂಚಾಯಿತಿ ಸಿಬ್ಬಂದಿ, ಕಾಯಕ ಬಂಧುಗಳು ಹಾಗೂ ಕೂಲಿಕಾರರು ಉಪಸ್ಥಿತರಿದ್ದರು.

ಗ್ರಾಮೀಣ ಕೂಲಿಕಾರರು ಗುಳೆ ಹೋಗುವ ಬದಲು ತಮ್ಮ ಊರಿನಲ್ಲಿಯೇ ಲಭ್ಯವಾಗುವ ಉದ್ಯೋಗಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದರೆ ವಿಬಿಜಿ-ರಾಮ್-ಜಿ ಯೋಜನೆಯಡಿ ನಿರಂತರ ಉದ್ಯೋಗ ದೊರೆಯಲಿದ್ದು, 125 ದಿನಗಳ ಕೆಲಸದ ಅವಕಾಶವನ್ನು ಪ್ರತಿಯೊಬ್ಬ ಅರ್ಹ ಕೂಲಿಕಾರರೂ ಬಳಸಿಕೊಳ್ಳಬೇಕು.

— ಚಂದ್ರಶೇಖರ ಬಿ. ಕಂದಕೂರ, ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯಿತಿ, ಗಜೇಂದ್ರಗಡ

ಕೂಡ್ಲಿಗಿ ಸರ್ಕಲ್‌ಗೆ ‘ವಾಸವಿ ವೃತ್ತ’ ನಾಮಕರಣಕ್ಕೆ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪಟ್ಟಣದ ಅಭಿವೃದ್ಧಿಗೆ 1953ರಿಂದಲೂ ಆರ್ಯವೈಶ್ಯ ಸಮಾಜ ಅಪಾರ ಕೊಡುಗೆ ನೀಡುತ್ತಾ ಬಂದಿದ್ದು, ಈ ಹಿನ್ನೆಲೆಯಲ್ಲಿ ಪಟ್ಟಣದ ಕೂಡ್ಲಿಗಿ ಸರ್ಕಲ್‌ಗೆ ‘ವಾಸವಿ ವೃತ್ತ’ ಎಂದು ನಾಮಕರಣ ಮಾಡಬೇಕು ಎಂದು ಆರ್ಯವೈಶ್ಯ ಸಂಘದ ಅಧ್ಯಕ್ಷ ಕೆ. ರಾಘವೇಂದ್ರ ಆಗ್ರಹಿಸಿದರು.

ಆರ್ಯವೈಶ್ಯ ಸಮಾಜದ ಮುಖಂಡರು ಹಾಗೂ ಸದಸ್ಯರೊಂದಿಗೆ ಶಾಸಕರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಹಗರಿಬೊಮ್ಮನಹಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆ, ಬಂಡಿಹಳ್ಳಿ ಗುಡ್ಡದ ತಿಮ್ಮಪ್ಪನ ತೇರು ಹಾಗೂ ದೇವಸ್ಥಾನ, ಪುರಸಭೆಯ ಉದ್ಯಾನವನ, ಪ್ರೌಢಶಾಲೆ, ಪಿಯು ಕಾಲೇಜು, ಪದವಿ ಕಾಲೇಜು ಹಾಗೂ ಎಲ್‌ಆ್ಯಂಡ್‌ಟಿ ಕುಡಿಯುವ ನೀರಿನ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಆರ್ಯವೈಶ್ಯ ಸಮಾಜ ಸ್ಥಳದಾನ ಹಾಗೂ ವಿವಿಧ ರೀತಿಯ ಕೊಡುಗೆಗಳನ್ನು ನೀಡಿದೆ ಎಂದು ತಿಳಿಸಿದರು.

ಪಟ್ಟಣದ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾರ್ವಜನಿಕ ಅಭಿವೃದ್ಧಿಯಲ್ಲಿ ಆರ್ಯವೈಶ್ಯ ಸಮಾಜದ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ಪ್ರಸ್ತುತ ಕೂಡ್ಲಿಗಿ ಸರ್ಕಲ್ ಎಂದು ಕರೆಯಲಾಗುತ್ತಿರುವ ವೃತ್ತಕ್ಕೆ ವಾಸವಿ ವೃತ್ತ ಎಂದು ನಾಮಕರಣ ಮಾಡುವ ಮೂಲಕ ಸಮಾಜದ ಕೊಡುಗೆಯನ್ನು ಗೌರವಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ಸ್ವೀಕರಿಸಿದ ಶಾಸಕ ನೇಮಿರಾಜ್ ನಾಯಕ್ ಮಾತನಾಡಿ, ಆರ್ಯವೈಶ್ಯ ಸಮಾಜವು ತಾಲೂಕು ಹಾಗೂ ಪಟ್ಟಣದ ಅಭಿವೃದ್ಧಿಗೆ ನೀಡಿರುವ ಗಣನೀಯ ಕೊಡುಗೆ ಶ್ಲಾಘನೀಯವಾಗಿದೆ. ಸಮಾಜದ ಮನವಿಗೆ ಸ್ಪಂದಿಸಿ ಶೀಘ್ರದಲ್ಲಿಯೇ ಕೂಡ್ಲಿಗಿ ವೃತ್ತಕ್ಕೆ ‘ವಾಸವಿ ವೃತ್ತ’ ಎಂದು ನಾಮಕರಣ ಮಾಡಿ, ಅಗತ್ಯ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದ ರಾಜ್ಯಾಧ್ಯಕ್ಷ ಭರತ್ ಗಂಗಾವತಿ, ಆರ್ಯವೈಶ್ಯ ಸಂಘ ಟ್ರಸ್ಟ್ ಅಧ್ಯಕ್ಷ ಕೆ. ರಾಘವೇಂದ್ರ, ಮಂಜುನಾಥ ಶ್ರೇಷ್ಠಿ, ಸುದರ್ಶನ ಶ್ರೇಷ್ಠಿ, ಲಕ್ಷ್ಮೀಪತಿ, ಬೆಲ್ಲಂಕೊಂಡಿ ರಮೇಶ್, ಗೋಪಾಲ, ವೆಂಕಟಾಚಲಪತಿ ವೇಣುಗೋಪಾಲ, ಕುಮಾರ್ ಇಂಜಿನಿಯರ್, ಪ್ರಭಾಕರ ಶ್ರೇಷ್ಠಿ, ಬೇಳೂರು ಮಾರುತಿ ಶ್ರೇಷ್ಠಿ, ಕುಪ್ಪಾ ಶಿವಕುಮಾರ, ಕುಪ್ಪಾ ಲಕ್ಷ್ಮೀಪತಿ, ಬಾಲಾಜಿ, ಪ್ರವೀಣ್, ಪ್ರಕಾಶ್, ಬಸಾಪುರ ರಾಘವೇಂದ್ರ, ಹನುಮಂತ ಶ್ರೇಷ್ಠಿ, ನಾನ್ಯಾಪೂರ ಕೃಷ್ಣಮೂರ್ತಿ, ರಾಜೇಂದ್ರ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಡಿ.ಕೆ. ಶಿವಕುಮಾರರಿಗೆ ಸ್ವಾಗತ

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ ಅವರು ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಪ್ರಾಧಿಕಾರದ ಉಪಾಧ್ಯಕ್ಷ ರೆಹಾನ್ ರಝಾ ಐನಾಪುರ ಉಪಸ್ಥಿತರಿದ್ದರು.

ಗುಟ್ಕಾ, ತಂಬಾಕು ನಿಷೇಧ ಹಿಂಪಡೆಯದಂತೆ ಸಿಎಂಗೆ ಮನವಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಾರ್ವಜನಿಕ ಆರೋಗ್ಯ ಹಾಗೂ ಯುವಜನರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗುಟ್ಕಾ ಮತ್ತು ತಂಬಾಕು ನಿಷೇಧವನ್ನು ಯಾವುದೇ ಕಾರಣಕ್ಕೂ ಹಿಂಪಡೆಯಬಾರದು ಎಂದು ಆಗ್ರಹಿಸಿ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗ, ಲಕ್ಷ್ಮೇಶ್ವರ ಮಹಿಳಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ವಿವಿಧ ಮಹಿಳಾ ಸಂಘಟನೆಗಳು ಹಾಗೂ ವಿದ್ಯಾರ್ಥಿನಿಯರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ತಂಬಾಕು ಉತ್ಪನ್ನಗಳ ಬಳಕೆಯಿಂದ ಯುವಜನರ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಉಂಟಾಗುತ್ತಿದ್ದು, ಅನೇಕ ಕುಟುಂಬಗಳ ನೆಮ್ಮದಿ ಹಾಳಾಗುತ್ತಿದೆ. ಆದ್ದರಿಂದ ತಂಬಾಕು ಲಾಬಿ ಅಥವಾ ವ್ಯಾಪಾರಿ ಹಿತಾಸಕ್ತಿಗಳ ಒತ್ತಡಕ್ಕೆ ಮಣಿಯದೆ ನಿಷೇಧವನ್ನು ಕಟ್ಟುನಿಟ್ಟಾಗಿ ಮುಂದುವರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮುಂದಿನ ಪೀಳಿಗೆಯ ಆರೋಗ್ಯ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಗುಟ್ಕಾ ಮತ್ತು ತಂಬಾಕು ನಿಷೇಧವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸಂಘಟನೆಗಳ ಪದಾಧಿಕಾರಿಗಳು ಆಗ್ರಹಿಸಿದರು.

ಈ ವೇಳೆ ಬಳಗದ ಆಡಳಿತ ಮಂಡಳಿಯ ಮುಖ್ಯಸ್ಥರಾದ ಜಯಲಕ್ಷ್ಮೀ ಗಡ್ಡದೇವರಮಠ, ಜಯಲಕ್ಷ್ಮೀ ಮಹಾಂತಶೆಟ್ಟರ, ರಾಜೇಶ್ವರಿ ಪಾಟೀಲ, ರಮೇಶ ನವಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

‘ಹಜ್ ಟಿಕೆಟ್‌ಗಾಗಿ’ ರಸ್ತೆಯಲ್ಲೇ ಭಿಕ್ಷಾಟನೆ

ವಿಜಯಸಾಕ್ಷಿ ಸುದ್ದಿ, ಗದಗ: “ಅಮ್ಮಾ… ಧರ್ಮ ಮಾಡಿ ತಾಯಿ… ದಯವಿಟ್ಟು ಇಲ್ಲ ಅನ್ನಬೇಡಿ… ನಿಮ್ಮ ಧರ್ಮ ನಿಮ್ಮನ್ನು, ನಿಮ್ಮ ಕುಟುಂಬವನ್ನು ಕಾಪಾಡುತ್ತದೆ… ಚಿಲ್ಲರೆ ಇಲ್ಲ ಅಂತ ಮಾತ್ರ ಹೇಳಬೇಡಿ… ದೇವರು ನಿಮಗೆ ಎಷ್ಟು ಶಕ್ತಿ ಕೊಟ್ಟಿದ್ದಾನೋ ಅಷ್ಟನ್ನಾದರೂ ಕೊಡಿ…”

ಇದು ರಸ್ತೆಯಲ್ಲಿ ಸಾಮಾನ್ಯ ಭಿಕ್ಷುಕರೊಬ್ಬರು ಕೇಳಿದ ಮಾತಲ್ಲ. ಬದಲಾಗಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಯನ್ನು ಖಂಡಿಸಿ, ಶಿವರಾಮಕೃಷ್ಣ ಸೇವಾ ಟ್ರಸ್ಟ್ ಸಂಚಾಲಕ ರಾಜೂ ಖಾನಪ್ಪನವರ ನೇತೃತ್ವದಲ್ಲಿ ಹಿಂದೂ ಕಾರ್ಯಕರ್ತರು ನಡೆಸಿದ ವಿನೂತನ ಪ್ರತಿಭಟನೆಯ ದೃಶ್ಯವಿದು.

ಸಚಿವರಿಗೆ ಹಜ್ ಯಾತ್ರೆಗೆ ತೆರಳುವ ಆಸೆಯಿದ್ದರೆ, ಅದಕ್ಕಾಗಿ ಜನರಿಂದ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ವಿಮಾನದ ಟಿಕೆಟ್ ಕೊಡಿಸುತ್ತೇವೆ ಎಂಬ ವ್ಯಂಗ್ಯದ ಮೂಲಕ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಗದಗ ನಗರದ ಹುಯಿಲಗೋಳ ನಾರಾಯಣರಾವ ವರ್ತುಲದಲ್ಲಿ ಶಿವರಾಮಕೃಷ್ಣ ಸೇವಾ ಟ್ರಸ್ಟ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಹಿಂದೂ ಕಾರ್ಯಕರ್ತರು ಕೈಯಲ್ಲಿ ಪಾತ್ರೆಗಳನ್ನು ಹಿಡಿದು ಸಾರ್ವಜನಿಕರಿಂದ ಭಿಕ್ಷೆ ಸಂಗ್ರಹಿಸಿದರು.

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಇಸ್ಲಾಂ ಅತ್ಯುತ್ತಮ ಧರ್ಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿ, ತಮಗೂ ಹಜ್ ಯಾತ್ರೆಗೆ ತೆರಳುವ ಆಸೆಯಿದೆ ಎಂದು ಹೇಳಿದ್ದರು ಎಂದು ಪ್ರತಿಭಟನಾಕಾರರು ಆರೋಪಿಸಿದರು. ಅಲ್ಲದೆ, ಮಠ-ಮಂದಿರಗಳಿಗೆ ಹೋಗುವುದಿಲ್ಲ ಹಾಗೂ ಅಲ್ಲಿಗೆ ಹೋಗುವ ಅಗತ್ಯವಿಲ್ಲ ಎಂಬರ್ಥದಲ್ಲಿ ಸಚಿವರು ಮಾತನಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ಹೇಳಿಕೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಜನಪ್ರತಿನಿಧಿಯಾಗಿರುವ ಸಚಿವರು ಎಲ್ಲ ಧರ್ಮಗಳ ನಂಬಿಕೆ, ಆಚರಣೆ ಹಾಗೂ ಧಾರ್ಮಿಕ ಕೇಂದ್ರಗಳನ್ನು ಸಮಾನ ಗೌರವದಿಂದ ಕಾಣಬೇಕು ಎಂದು ಆಗ್ರಹಿಸಿದರು.

ಭಿಕ್ಷಾಟನೆಯಲ್ಲೇ ವ್ಯಂಗ್ಯದ ಪ್ರತಿಭಟನೆ!

ಪ್ರತಿಭಟನೆಯ ಪ್ರಮುಖ ಆಕರ್ಷಣೆಯಾಗಿದ್ದು ಕಾರ್ಯಕರ್ತರ ವಿನೂತನ ಭಿಕ್ಷಾಟನೆ. ಸಾಮಾನ್ಯವಾಗಿ ಸಾಮಾಜಿಕ ಸೇವೆ ಅಥವಾ ನೆರವಿಗಾಗಿ ಭಿಕ್ಷೆ ಸಂಗ್ರಹಿಸುವ ಬದಲು, ಸಚಿವರ ಹೇಳಿಕೆಯನ್ನು ವ್ಯಂಗ್ಯಾತ್ಮಕವಾಗಿ ಖಂಡಿಸಲು ಕಾರ್ಯಕರ್ತರು ಈ ವಿಶಿಷ್ಟ ಮಾರ್ಗವನ್ನು ಅನುಸರಿಸಿದರು.

ಸಚಿವರಿಗೆ ನಿಜವಾಗಿಯೂ ಹಜ್ ಯಾತ್ರೆಗೆ ಹೋಗುವ ಆಸೆಯಿದ್ದರೆ, ನಾವು ಜನರಿಂದ ಭಿಕ್ಷೆ ಬೇಡಿ ಹಣ ಸಂಗ್ರಹಿಸುತ್ತೇವೆ. ಅದೇ ಹಣದಲ್ಲಿ ಅವರಿಗೆ ವಿಮಾನದ ಟಿಕೆಟ್ ಮಾಡಿಸಿಕೊಡುತ್ತೇವೆ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಈ ಮೂಲಕ ಧಾರ್ಮಿಕ ವಿಚಾರಗಳ ಕುರಿತು ರಾಜಕಾರಣಿಗಳು ಎಚ್ಚರಿಕೆಯಿಂದ ಹಾಗೂ ಜವಾಬ್ದಾರಿಯಿಂದ ಮಾತನಾಡಬೇಕು ಎಂಬ ಸಂದೇಶವನ್ನು ಕಾರ್ಯಕರ್ತರು ರವಾನಿಸಿದರು.

ಗದಗ-ಬೆಟಗೇರಿ ಅವಳಿ ನಗರದಲ್ಲಿ ನಡೆದ ಈ ವಿನೂತನ ಪ್ರತಿಭಟನೆ ಸಾರ್ವಜನಿಕರ ಗಮನ ಸೆಳೆಯಿತು. ಸುಮಾರು 200ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನೆಯಲ್ಲಿ ಮಹಾಂತೇಶ ಪಾಟೀಲ, ವೆಂಕಟೇಶ ದೊಡ್ಡಮನಿ, ಹುಲುಗಪ್ಪ ವಾಲ್ಮೀಕಿ, ಶಿವಯೋಗಿ ಹಿರೇಮಠ, ಮಹಾಬಲೇಶ್ವರ ಶೆಟ್ಟರ, ಈರಪ್ಪ ಹೆಬಸೂರು, ಸುನಿಲ್ ಮುಳ್ಳಾಳ, ಕಿರಣ ಹಿರೇಮಠ, ಕುಮಾರ ಮಿಟ್ಟಿಮಠ, ಅಶೋಕ ಬಜಂತ್ರಿ, ಕುಮಾರ ನಡಗೇರಿ, ಮಂಜು ಗುಡಿಮನಿ, ಭರತ್ ಲದ್ದಿ, ಈರಣ್ಣ ವಾಲ್ಮೀಕಿ, ಅಭಿಷೇಕ ಕುರ್ತಕೋಟಿ, ಶಿವಕುಮಾರ ಲದ್ದಿ, ಬಸವರಾಜ ಬನ್ನಿಮರದ, ಕೃಷ್ಣ ಹಂಡಿ, ಶರಣಪ್ಪ ಲಕ್ಕುಂಡಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಮಠ-ಮಂದಿರಗಳು ಕೇವಲ ಧಾರ್ಮಿಕ ಕೇಂದ್ರಗಳಲ್ಲ. ಅವುಗಳೊಂದಿಗೆ ಜನರ ಭಾವನೆ, ಸಂಸ್ಕೃತಿ ಹಾಗೂ ಪರಂಪರೆ ಬೆಸೆದುಕೊಂಡಿವೆ. ಅವುಗಳ ಕುರಿತು ಯಾರೂ ಲಘುವಾಗಿ ಮಾತನಾಡಬಾರದು. ಸಚಿವರು ತಮ್ಮ ಹೇಳಿಕೆಯನ್ನು ಸ್ಪಷ್ಟಪಡಿಸಬೇಕು ಅಥವಾ ಹಿಂಪಡೆಯಬೇಕು. ಸಚಿವರಿಗೆ ನಿಜವಾಗಿಯೂ ಹಜ್ ಯಾತ್ರೆಗೆ ತೆರಳುವ ತವಕವಿದ್ದರೆ, ಹಿಂದೂ ಸಂಘಟನೆಗಳ ಕಾರ್ಯಕರ್ತರು ರಸ್ತೆಯಲ್ಲಿ ಭಿಕ್ಷಾಟನೆ ನಡೆಸಿ ವಿಮಾನದ ಟಿಕೆಟ್ ಖರೀದಿಸಿ ಕೊಡುತ್ತೇವೆ.

— ರಾಜೂ ಖಾನಪ್ಪನವರ, ಹಿಂದೂ ಸಂಘಟನೆಗಳ ಮುಖಂಡ

ಕಪ್ಪತ್ತಗುಡ್ಡದಲ್ಲಿ ನಂದಿಬಸವೇಶ್ವರನ ಜಾತ್ರಾ ವೈಭವ

0

ವಿಜಯಸಾಕ್ಷಿ ಸುದ್ದಿ, ಡಂಬಳ: ನೂರಾರು ವರ್ಷಗಳ ಇತಿಹಾಸ ಹೊಂದಿರುವ ಡೋಣಿ ಗ್ರಾಮದ ಕಪ್ಪತ್ತಗುಡ್ಡದ ನಂದಿವೇರಿ ಸಂಸ್ಥಾನಮಠದಲ್ಲಿ ಪ್ರತಿವರ್ಷ ಶ್ರಾವಣ ಮಾಸದಲ್ಲಿ ನಡೆಯುವ ಶ್ರೀ ನಂದಿಬಸವೇಶ್ವರ ಜಾತ್ರಾ ಮಹೋತ್ಸವವು ಭಕ್ತಿಸಾಗರದ ನಡುವೆ ವಿವಿಧ ವಾದ್ಯ ವೈಭವಗಳೊಂದಿಗೆ ಅದ್ದೂರಿಯಾಗಿ ಜರುಗಿತು.

ಕಪ್ಪತ್ತಗುಡ್ಡದ ನಂದಿವೇರಿ ಸಂಸ್ಥಾನಮಠವು ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಪರಿಸರ ಸಂರಕ್ಷಣೆ ಮತ್ತು ಜಾಗೃತಿಗೆ ವಿಶೇಷ ಆದ್ಯತೆ ನೀಡುತ್ತಿರುವುದು ಜಾತ್ರೆಯ ಪ್ರಮುಖ ವೈಶಿಷ್ಟ್ಯವಾಗಿದೆ. ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಸಸಿಗಳನ್ನು ವಿತರಿಸುವ ಮೂಲಕ ಪರಿಸರ ಉಳಿಸಿ ಬೆಳೆಸುವ ಸಂದೇಶವನ್ನು ಸಾರಲಾಯಿತು.

ಮಠದ ವತಿಯಿಂದ ವರ್ಷವಿಡೀ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ತಿಂಗಳ ಎರಡನೇ ಭಾನುವಾರ ಪರಿಸರ ಪ್ರಿಯರಿಗೆ ಕಪ್ಪತ್ತಗುಡ್ಡದ ವಿಶೇಷತೆಗಳು ಹಾಗೂ ಬಂಗಾರಕೊಳ್ಳದ ವೀಕ್ಷಣೆಗೆ ಅವಕಾಶ ಕಲ್ಪಿಸಿ, ಪರಿಸರದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

ಪರಿಸರ ಉತ್ಸವ, ಪರಿಸರ ಸಂರಕ್ಷಣೆ, ಸಂವರ್ಧನೆ, ಸಂಶೋಧನೆ ಹಾಗೂ ಪ್ರದರ್ಶನ ಕಾರ್ಯಕ್ರಮಗಳಿಗೆ ಮಠದ ವತಿಯಿಂದ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕಪ್ಪತ್ತಗುಡ್ಡದಲ್ಲಿರುವ ಅಪರೂಪದ ಗಿಡಮೂಲಿಕೆಗಳು ಮತ್ತು ಸಸ್ಯ ಸಂಪತ್ತಿನ ಸಂರಕ್ಷಣೆಯ ಬಗ್ಗೆಯೂ ಭಕ್ತರಲ್ಲಿ ಅರಿವು ಮೂಡಿಸಲಾಗುತ್ತಿದೆ. ಗುಡ್ಡದ ತಪ್ಪಲು ಪ್ರದೇಶಗಳಲ್ಲಿನ ಗಿಡಮೂಲಿಕೆಗಳನ್ನು ಅನಗತ್ಯವಾಗಿ ಕೀಳದಂತೆ ಜಾಗೃತಿ ಮೂಡಿಸುವ ಕಾರ್ಯವೂ ನಡೆಯುತ್ತಿದೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಎನ್‌ಎಸ್‌ಎಸ್ ವಿದ್ಯಾರ್ಥಿಗಳ ಸಹಯೋಗದಲ್ಲಿ ಪರಿಸರ ಉತ್ಸವದ ಮಹತ್ವವನ್ನು ಆಗಮಿಸಿದ ಭಕ್ತರಿಗೆ ತಿಳಿಸಲಾಯಿತು. ಕಪ್ಪತ್ತಗುಡ್ಡದ ನಂದಿವೇರಿ ಸಂಸ್ಥಾನಮಠದ ರಥೋತ್ಸವದಲ್ಲಿ ವಿವಿಧ ಜಿಲ್ಲೆಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.

ಕಪ್ಪತ್ತಗುಡ್ಡದ ನಂದಿವೇರಿ ಸಂಸ್ಥಾನಮಠ ಹಾಗೂ ಗದಗ ಮಠ ಸ್ಥಾಪನೆಯಾಗಿ ಸುಮಾರು 300 ವರ್ಷಗಳ ಇತಿಹಾಸವಿದ್ದು, ಕಪ್ಪತ್ತಗುಡ್ಡ ಪ್ರದೇಶದಲ್ಲಿ ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯವೂ ನಿರಂತರವಾಗಿ ನಡೆಯುತ್ತಿದೆ.

ಪುರಾಣಗಳ ಪ್ರಕಾರ, ನಂದಿವೇರಿ ಬಸವಣ್ಣನನ್ನು ಶಿವನ ವಾಹನವೆಂದು ನಂಬಲಾಗಿದ್ದು, ಕೈಲಾಸದಿಂದ ಶಿವ-ಪಾರ್ವತಿಯರು ನಂದಿಯ ಮೂಲಕ ಈ ಕ್ಷೇತ್ರಕ್ಕೆ ಆಗಮಿಸಿ ನೆಲೆಸಿದ್ದಾರೆ ಎಂಬ ನಂಬಿಕೆ ಇದೆ. ಶಿವ, ಪಾರ್ವತಿ ಹಾಗೂ ದೇವಾನುದೇವತೆಗಳ ಪವಿತ್ರ ಸಾನ್ನಿಧ್ಯ ಹೊಂದಿರುವ ಕ್ಷೇತ್ರವೆಂದು ಕಪ್ಪತ್ತಗುಡ್ಡದ ನಂದಿವೇರಿ ಸಂಸ್ಥಾನಮಠ ಭಕ್ತರ ನಂಬಿಕೆಯ ಕೇಂದ್ರವಾಗಿದೆ.

ಜಾತ್ರಾ ಮಹೋತ್ಸವವು ಧಾರ್ಮಿಕ ಭಕ್ತಿ, ಸಂಪ್ರದಾಯ ಹಾಗೂ ಪರಿಸರ ಕಾಳಜಿಯ ಸಂದೇಶವನ್ನು ಒಂದೇ ವೇದಿಕೆಯಲ್ಲಿ ಸಾರುವ ಮೂಲಕ ವಿಶೇಷವಾಗಿ ಗಮನ ಸೆಳೆಯಿತು.

ಪರಿಸರವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಿದರೆ ಉತ್ತಮ ಮಳೆ-ಬೆಳೆಯೊಂದಿಗೆ ಆರೋಗ್ಯಯುತ ಜೀವನ ಸಾಧ್ಯವಾಗಲಿದೆ.
— ಪರಮಪೂಜ್ಯ ಶಿವಕುಮಾರ ಸ್ವಾಮೀಜಿ, ನಂದಿವೇರಿ ಸಂಸ್ಥಾನಮಠ

 

ವರ್ಷವಿಡೀ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿಸರ ಉಳಿದರೆ ಮಾತ್ರ ಮಾನವನ ಬದುಕು ಉತ್ತಮವಾಗಿರಲು ಸಾಧ್ಯ ಎಂಬ ಸಂದೇಶವನ್ನು ಶಿವಕುಮಾರ ಸ್ವಾಮೀಜಿಗಳು ನೀಡುತ್ತಿರುವುದು ಅತ್ಯಂತ ಅಮೂಲ್ಯವಾದ ಕಾರ್ಯವಾಗಿದೆ.
— ಬಾಲಚಂದ್ರ ಜಾಬಶೆಟ್ಟಿ, ಮಠದ ಭಕ್ತರು, ರಾಮದುರ್ಗ

ಸೈಟ್ ಹಗರಣದ ಬೆನ್ನಲ್ಲೇ ಮತ್ತೊಂದು ಆರೋಪ; KUDA ನೇಮಕಾತಿಯಲ್ಲಿ ಗೋಲ್‌ಮಾಲ್?

0

ಕೊಪ್ಪಳ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ಹಂಚಿಕೆ ವಿಚಾರದ ಅವ್ಯವಹಾರದ ಆರೋಪದ ಬೆನ್ನಲ್ಲೇ ಇದೀಗ ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲೂ ನಿಯಮ ಉಲ್ಲಂಘನೆಯ ಆರೋಪ ಕೇಳಿಬಂದಿದೆ.

ಟೆಂಡರ್ ಪ್ರಕ್ರಿಯೆ ನಡೆಸದೆ ಹಾಗೂ ಸರ್ಕಾರದ ಅನುಮೋದನೆ ಪಡೆಯದೆ ಹೆಚ್ಚುವರಿ ಹುದ್ದೆಗಳಿಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿರುವುದು ಲೆಕ್ಕಪತ್ರ ಪರಿಶೋಧನೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.

2025-26ನೇ ಸಾಲಿನಲ್ಲಿ ಪ್ರಾಧಿಕಾರದಲ್ಲಿ ಒಟ್ಟು ಏಳು ಮಂದಿ ಹೊರಗುತ್ತಿಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಇವರಲ್ಲಿ ನಾಲ್ವರು ಗ್ರೂಪ್‌-ಡಿ ಸಿಬ್ಬಂದಿ, ಓರ್ವ ಚಾಲಕ, ಓರ್ವ ಕಂಪ್ಯೂಟರ್ ಆಪರೇಟರ್ ಹಾಗೂ ಓರ್ವ ಕ್ಲೀನರ್ ಸೇರಿದ್ದಾರೆ.

ಆದರೆ, ಈ ಏಳು ಹುದ್ದೆಗಳ ಪೈಕಿ ಕೇವಲ ಮೂರು ಹುದ್ದೆಗಳಿಗೆ ಮಾತ್ರ ಮಂಜೂರಾತಿ ಇತ್ತು ಎಂದು ಲೆಕ್ಕಪತ್ರ ಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಉಳಿದ ನಾಲ್ಕು ಹುದ್ದೆಗಳಿಗೆ ಸರ್ಕಾರದ ಅನುಮೋದನೆ ಪಡೆಯದೆ ನೇಮಕ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಹೆಚ್ಚುವರಿ ಸಿಬ್ಬಂದಿಗೆ ₹19 ಲಕ್ಷ ಪಾವತಿ:

ಏಳು ಮಂದಿ ಸಿಬ್ಬಂದಿಗೆ ಒಟ್ಟು ₹27 ಲಕ್ಷಕ್ಕೂ ಅಧಿಕ ಮೊತ್ತವನ್ನು ಪಾವತಿಸಲಾಗಿದೆ ಎನ್ನಲಾಗಿದೆ. ಈ ಪೈಕಿ ಮಂಜೂರಾತಿ ಇಲ್ಲದ ಹೆಚ್ಚುವರಿ ಹುದ್ದೆಗಳಿಗೆ ಸುಮಾರು ₹19 ಲಕ್ಷ ಪಾವತಿಸಿರುವುದು ಪರಿಶೋಧನೆಯಲ್ಲಿ ಆಕ್ಷೇಪಕ್ಕೆ ಕಾರಣವಾಗಿದೆ. ಈ ಮೊತ್ತವನ್ನು ವಸೂಲಿ ಮಾಡುವಂತೆ ಪರಿಶೋಧನಾ ವರದಿಯಲ್ಲಿ ಶಿಫಾರಸು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಟೆಂಡರ್ ಪ್ರಕ್ರಿಯೆ ನಡೆಸದೆ ಹೊರಗುತ್ತಿಗೆ ಸಿಬ್ಬಂದಿಯನ್ನು ನೇಮಕ ಮಾಡಿರುವುದು ಹಾಗೂ ಸರ್ಕಾರದ ಅನುಮೋದನೆ ಇಲ್ಲದೆ ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸಿರುವ ಆರೋಪಗಳು ಇದೀಗ ಪ್ರಾಧಿಕಾರದ ಕಾರ್ಯವೈಖರಿ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಸೈಟ್ ಹಗರಣದ ಬೆನ್ನಲ್ಲೇ ಮತ್ತೊಂದು ಆರೋಪ:

ಈಗಾಗಲೇ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ಹಂಚಿಕೆ ವಿಚಾರದಲ್ಲಿ ಸುಮಾರು ₹8.89 ಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣದ ತನಿಖೆಯನ್ನು ಕೊಪ್ಪಳ ನಗರ ಪೊಲೀಸರು ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊರಗುತ್ತಿಗೆ ನೌಕರ ರವೀಂದ್ರ ಕುಮಾರ್, ಅವರ ಪತ್ನಿ ರಮಾ ಹಾಗೂ ಸಹೋದರ ಅನಿಲ್ ಕುಮಾರ್ ಅವರನ್ನು ಬಂಧಿಸಲಾಗಿತ್ತು. ಮಾಜಿ ಆಯುಕ್ತ ಯೋಗಾನಂದ ಅವರಿಗೂ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದೀಗ ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲೂ ನಿಯಮ ಉಲ್ಲಂಘನೆಯ ಆರೋಪ ಬೆಳಕಿಗೆ ಬಂದಿರುವುದು ಪ್ರಾಧಿಕಾರಕ್ಕೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಅಗತ್ಯ ಬಿದ್ದರೆ ಪ್ರಕರಣವನ್ನು ತನಿಖಾ ಸಂಸ್ಥೆಗೆ ವಹಿಸುವ ಕುರಿತು ಚಿಂತನೆ ನಡೆಸುವುದಾಗಿ ತಿಳಿಸಿದ್ದಾರೆ.

ಒಟ್ಟಿನಲ್ಲಿ, ನಿವೇಶನ ಹಂಚಿಕೆ ಅವ್ಯವಹಾರದ ಆರೋಪದ ಬಳಿಕ ಇದೀಗ ಹೊರಗುತ್ತಿಗೆ ಸಿಬ್ಬಂದಿ ನೇಮಕಾತಿಯಲ್ಲೂ ಅಕ್ರಮದ ಆರೋಪ ಕೇಳಿಬಂದಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ಉದ್ಯೋಗಕ್ಕಾಗಿ ಗುಳೆ ಹೋಗುವುದು ತಪ್ಪಿಸಿ : ಗ್ರಾಮದಲ್ಲೇ ಕೆಲಸ ಕಲ್ಪಿಸುವ ಭರವಸೆ: ಸಂತೋಷ್ ಲಾಡ್

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಉದ್ಯೋಗ ಅರಸಿ ಗ್ರಾಮೀಣ ಜನರು ಗುಳೆ ಹೋಗಬೇಕಾದ ಪರಿಸ್ಥಿತಿಯನ್ನು ತಪ್ಪಿಸುವ ಉದ್ದೇಶದಿಂದ ವಿಬಿಜಿ-ರಾಮ್-ಜಿ ಯೋಜನೆಯಡಿ ಮಂಜೂರಾಗಿರುವ ಕಾಮಗಾರಿಗಳನ್ನು ಗ್ರಾಮದಲ್ಲಿಯೇ ಕೈಗೆತ್ತಿಕೊಂಡು ಸ್ಥಳೀಯ ನಿವಾಸಿಗಳಿಗೆ ಉದ್ಯೋಗ ಒದಗಿಸಲಾಗುವುದು ಎಂದು ಕಾರ್ಮಿಕ ಹಾಗೂ ಉದ್ಯೋಗ ಸಚಿವರು ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್. ಲಾಡ್ ಹೇಳಿದರು.

ಧಾರವಾಡ ತಾಲೂಕಿನ ಕಲಕೇರಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಜನಸಂಪರ್ಕ ಸಭೆ ಹಾಗೂ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಬಿಜಿ-ರಾಮ್-ಜಿ ಯೋಜನೆಗೆ ಸಂಬಂಧಿಸಿದಂತೆ ಯೋಜನಾ ಅನುಮೋದನೆ ಹಾಗೂ ಕಾಮಗಾರಿಗಳಿಗೆ ಅಧಿಕೃತ ಮಂಜೂರಾತಿ ದೊರೆತಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಗ್ರಾಮಸ್ಥರು ಕೆಲಸಕ್ಕಾಗಿ ಬೇರೆ ಊರುಗಳಿಗೆ ತೆರಳುವ ಅಗತ್ಯವಿಲ್ಲ. ಗ್ರಾಮದ ಜನರಿಗೆ ಇದೇ ಊರಿನಲ್ಲಿಯೇ ನಿಯಮಿತವಾಗಿ ಉದ್ಯೋಗ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ರೈತರು ಹಾಗೂ ಕೂಲಿಕಾರರಿಗೆ ಭರವಸೆ ನೀಡಿದರು.

ಗ್ರಾಮಗಳ ಅಭಿವೃದ್ಧಿಗೆ ಯುವಜನತೆ ಹಾಗೂ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರವೇ ಜನರ ಬಳಿಗೆ ಬಂದಿದೆ. ಗ್ರಾಮ ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಯುವಕರು, ಸಾರ್ವಜನಿಕರು ಮತ್ತು ಊರಿನ ಮುಖಂಡರು ಒಗ್ಗಟ್ಟಿನಿಂದ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಸಾರ್ವಜನಿಕರು ಸಲ್ಲಿಸಿರುವ ಪ್ರಮುಖ ಹಾಗೂ ತುರ್ತು ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ನಿಗದಿತ ಅವಧಿಯಲ್ಲಿ ಹಂತ ಹಂತವಾಗಿ ಈಡೇರಿಸಲಾಗುವುದು. ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಲು ಸಾರ್ವಜನಿಕರ ಮೇಲ್ವಿಚಾರಣೆಯೂ ಅಗತ್ಯ ಎಂದು ಹೇಳಿದರು.

ಮೂಲಸೌಕರ್ಯದಿಂದ ಶಿಕ್ಷಣದವರೆಗೆ ಭರವಸೆ

ಗ್ರಾಮದ ಸ್ಮಶಾನಗಳ ಅಭಿವೃದ್ಧಿ, ಸಮುದಾಯ ಭವನಗಳ ನಿರ್ಮಾಣ ಹಾಗೂ ಹಾಳಾಗಿರುವ ಗ್ರಾಮೀಣ ರಸ್ತೆಗಳನ್ನು ತಕ್ಷಣವೇ ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಅಂಗವಿಕಲರಿಗೆ ಸ್ವಯಂ ಉದ್ಯೋಗಕ್ಕಾಗಿ ಅಂಗಡಿ ಸೌಲಭ್ಯ, ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಆರ್ಥಿಕ ನೆರವು ನೀಡುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು. ಶಾಲಾ ಶೌಚಾಲಯಗಳ ನಿರ್ಮಾಣ, ಮಾದರಿ ಶಾಲೆಗಳಿಗೆ ಹೆಚ್ಚುವರಿ ಕೊಠಡಿಗಳ ಅನುದಾನ ಹಾಗೂ ಕಲಕೇರಿ ಗ್ರಾಮದಲ್ಲಿ ನೂತನ ಕಾಲೇಜು ಸ್ಥಾಪನೆಗೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕಲಕೇರಿ ಗ್ರಾಮದಲ್ಲಿ ಹೊಸ ಬ್ಯಾಂಕ್ ಶಾಖೆ ಹಾಗೂ ಪಶುಸಂಗೋಪನಾ ಆಸ್ಪತ್ರೆ ಸ್ಥಾಪನೆಗೆ ಸಾರ್ವಜನಿಕರಿಂದ ಸಲ್ಲಿಕೆಯಾದ ಅರ್ಜಿಗಳನ್ನು ಸ್ವೀಕರಿಸಿ ಪರಿಶೀಲಿಸಲಾಗಿದೆ ಎಂದರು.

ಗ್ರಾಮೀಣ ಯುವಕರನ್ನು ಸಂಘಟಿಸಲು ಹಾಗೂ ಕ್ರೀಡೆ, ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ‘ಭಾರತ ಜೋಡೋ’ ಯುವ ಸಂಘಗಳ ಯೋಜನೆಯಡಿ ಅರ್ಹ ಯುವ ಸಂಘಗಳಿಗೆ ಪ್ರೋತ್ಸಾಹಧನ ನೀಡುವ ಯೋಜನೆಯ ಸದುಪಯೋಗ ಪಡೆಯುವಂತೆ ಸಚಿವರು ಕರೆ ನೀಡಿದರು.

ಜನಪ್ರತಿನಿಧಿಗಳು ಜನಸೇವಕರು. ಗ್ರಾಮಗಳ ಸಮಸ್ಯೆ ಪರಿಹಾರಕ್ಕೆ ಪಕ್ಷಭೇದ ಮರೆತು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಉದ್ಯೋಗಕ್ಕಾಗಿ ಗುಳೆ ಹೋಗುವ ಪರಿಸ್ಥಿತಿ ತಪ್ಪಿಸಿ, ಗ್ರಾಮದಲ್ಲಿಯೇ ಕೆಲಸ ಹಾಗೂ ಅಭಿವೃದ್ಧಿಯ ಅವಕಾಶ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಿದೆ.

— ಸಂತೋಷ್ ಎಸ್. ಲಾಡ್, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು

ಸ್ಲಂ ನಿವಾಸಿಗಳ ಭರವಸೆ ಈಡೇರಿಸಿ: ಸರ್ಕಾರಕ್ಕೆ ಸ್ಲಂ ಜನಾಂದೋಲನ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ: ೨೦೨೩ರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಸ್ಲಂ ನಿವಾಸಿಗಳಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಸ್ಲಂ ಜನಾಂದೋಲನ-ಕರ್ನಾಟಕ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ಪದಾಧಿಕಾರಿಗಳು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಸ್ಲಂ ಪ್ರದೇಶಗಳಿಗೆ ‘ಶ್ರಮಿಕ ನಿವಾಸ ಪ್ರದೇಶ’ ಎಂದು ನಾಮಕರಣ ಮಾಡಿ, ವಸತಿ ಯೋಜನೆ ಹಾಗೂ ಹಕ್ಕುಪತ್ರ ವಿತರಣೆ ಮಾಡುವ ಭರವಸೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದ ವಸತಿರಹಿತ ಕುಟುಂಬಗಳ ಸಮೀಕ್ಷೆ ನಡೆಸಿ ‘ನಗರ ಲ್ಯಾಂಡ್ ಬ್ಯಾಂಕ್’ ಯೋಜನೆ ಜಾರಿಗೊಳಿಸುವುದರೊಂದಿಗೆ ಪ್ರತಿಯೊಂದು ಬಡ ಕುಟುಂಬಕ್ಕೂ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಬಡವರು ಸ್ವತಃ ಮನೆ ನಿರ್ಮಿಸಿಕೊಳ್ಳಲು ರಾಜ್ಯ ಸರ್ಕಾರದಿಂದ ರೂ. ೩.೫ ಲಕ್ಷ ಹಾಗೂ ಕೇಂದ್ರ ಸರ್ಕಾರದಿಂದ ರೂ. ೧.೫ ಲಕ್ಷ ಸಬ್ಸಿಡಿ ನೀಡಬೇಕು. ಜಿಲ್ಲಾ ಕೇಂದ್ರಗಳಲ್ಲಿ ನಿವೇಶನ ಹಂಚಿಕೆ ಮಾಡುವಾಗ ಘೋಷಿತ ಹಾಗೂ ಅಘೋಷಿತ ಕೊಳಚೆ ಪ್ರದೇಶದ ಕುಟುಂಬಗಳಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಆರ್. ಮಾನ್ವಿ, ಮೌಲಾಸಾಬ ಎಸ್. ಗಚ್ಚಿ, ಶರಣಪ್ಪ ಸೂಡಿ, ಪರವೀನ್‌ಬಾನು ಹವಾಲ್ದಾರ, ಪುಷ್ಪಾ ಬಿಜಾಪೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ಯಾಕ್ಸ್‌ಗಳ ಬಲವರ್ಧನೆಗೆ ವಿಶೇಷ ತರಬೇತಿ ಶಿಬಿರ

0

ವಿಜಯಸಾಕ್ಷಿ ಸುದ್ದಿ, ಗದಗ: ಸಹಕಾರ ಇಲಾಖೆ ಗದಗ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಗದಗ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಕೆಸಿಸಿ ಬ್ಯಾಂಕ್ ಧಾರವಾಡದ ಸಂಯುಕ್ತ ಆಶ್ರಯದಲ್ಲಿ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗಾಗಿ ವಿಶೇಷ ತರಬೇತಿ ಶಿಬಿರ ನಡೆಯಿತು.

ಪಟ್ಟಣದ ನಾಟಕ ಕಲಾಬ್ರಹ್ಮ ಶ್ರೀ ಎಚ್. ವೆಂಕುಬರಾವ ಕಲಾಭವನದಲ್ಲಿ ನಡೆದ ಕಾರ್ಯಕ್ರಮವನ್ನು ಕೆಸಿಸಿ ಬ್ಯಾಂಕ್ ನಿರ್ದೇಶಕ ಗೋವಿಂದಗೌಡ ವಿ. ಪಾಟೀಲ ಉದ್ಘಾಟಿಸಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಲವರ್ಧನೆಗೊಳಿಸಿ ಬಹುಸೇವಾ ಕೇಂದ್ರಗಳನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಶೇಷ ಯೋಜನೆಗಳನ್ನು ಜಾರಿಗೊಳಿಸಿದೆ. ಸಹಕಾರ ಸಂಘಗಳಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಹಣ ದುರುಪಯೋಗ ಪ್ರಕರಣಗಳಿಗೆ ಕಡಿವಾಣ ಹಾಕುವಲ್ಲಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ನಿರ್ದೇಶಕರ ಜವಾಬ್ದಾರಿ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಸಿಸಿ ಬ್ಯಾಂಕ್ ನಿರ್ದೇಶಕ ಮಾಳಪ್ಪ ಗು. ನಿಂಗಜ್ಜನವರ ಅವರು, ಸಹಕಾರ ಸಂಘಗಳು ರೈತರ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಮಾದರಿ ಸಂಘಗಳ ಕಾರ್ಯವೈಖರಿಯಿಂದ ಇತರ ಸಂಸ್ಥೆಗಳು ಪ್ರೇರಣೆ ಪಡೆಯಬೇಕು ಎಂದು ತಿಳಿಸಿದರು.

ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಸಹಾಯಕ ನಿರ್ದೇಶಕಿ ಎಚ್.ಎ. ಬಂಡೆಣ್ಣವರ ಮಾತನಾಡಿ, ಪ್ಯಾಕ್ಸ್‌ಗಳು ಆರ್ಥಿಕವಾಗಿ ಸಬಲಗೊಂಡು ಲಾಭದಾಯಕವಾಗಿ ಕಾರ್ಯನಿರ್ವಹಿಸಿದರೆ ಸಹಕಾರ ಚಳುವಳಿಗೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದರು.

ತರಬೇತಿ ಕಾರ್ಯಾಗಾರದಲ್ಲಿ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕರ ಕರ್ತವ್ಯ ಮತ್ತು ಜವಾಬ್ದಾರಿಗಳು, ಸಹಕಾರಿ ಕಾಯ್ದೆಯ ಇತ್ತೀಚಿನ ತಿದ್ದುಪಡಿಗಳು, ಬಹುಸೇವಾ ಕೇಂದ್ರಗಳಾಗಿ ಪ್ಯಾಕ್ಸ್‌ಗಳ ಪರಿವರ್ತನೆ ಹಾಗೂ ಸಹಕಾರ ಸಂಘಗಳ ಪ್ರಗತಿ ಕುರಿತು ಶಂಕರ ಎಸ್. ಕರಬಸಣ್ಣವರ, ವಿಶ್ವನಾಥ ಎಚ್. ಲಮಾಣಿ ಹಾಗೂ ಜಗದೀಶಗೌಡ ಎಂ. ಪಾಟೀಲ ಉಪನ್ಯಾಸ ನೀಡಿದರು.

ಶಿರಹಟ್ಟಿ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಕೆ.ಸಿ. ಕೂಸನೂರಮಠ, ಕೆಸಿಸಿ ಬ್ಯಾಂಕ್‌ನ ವಿಶ್ವನಾಥ ಎಚ್. ಲಮಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಗದಗ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಎಸ್. ಕರಿಯಪ್ಪನವರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರಶೀದಾಬಾನು ಸಿ. ಯಲಿಗಾರ ವಂದಿಸಿದರು.