ನವದೆಹಲಿ: ಛಾತ್ರೋಂ ಕಿ ಗೂಂಜ್ ಕಾರ್ಯಕ್ರಮದಲ್ಲಿ ಮನುಸ್ಮೃತಿ ಕುರಿತು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಸುಪ್ರೀಂ ಕೋರ್ಟ್ ವಕೀಲೆ ನಾಜಿಯಾ ಖಾನ್ ದೂರು ದಾಖಲಿಸಿದ್ದಾರೆ.
ಪ್ರಾಚೀನ ಗ್ರಂಥದಿಂದ ಆಯ್ದ ಭಾಗಗಳನ್ನು ಮಾತ್ರ ಎತ್ತಿಹಿಡಿದು, ತಿರುಚಿ ಪ್ರಸ್ತುತಪಡಿಸುವ ಮೂಲಕ ಮನುಸ್ಮೃತಿಗೆ ಕಳಂಕ ತರಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ನಾಜಿಯಾ ಖಾನ್, ತಾವು ಕಲ್ಮಾ ಮತ್ತು ಶಹಾದಾ ಎರಡನ್ನೂ ಪಠಿಸುತ್ತೇನೆ ಎಂದೂ, ಜೊತೆಗೆ ‘ವಂದೇ ಮಾತರಂ’ ಹಾಡುವಾಗ ತಾನೊಬ್ಬಳು ಖಾನ್ ಆಗಿದ್ದರೂ ತನ್ನ ಬಗ್ಗೆ ತನಗೇ ಅಪಾರ ಹೆಮ್ಮೆ ಎನಿಸುತ್ತದೆ ಎಂದೂ ಹೇಳಿದ್ದಾರೆ. ರಾಹುಲ್ ಗಾಂಧಿ ಕೇವಲ ಒಂದೇ ಅಧ್ಯಾಯವನ್ನು ಆಯ್ದುಕೊಂಡು, ಪದಗಳನ್ನು ತಿರುಚಿ, ಮನುಸ್ಮೃತಿಗೆ ಅಪಖ್ಯಾತಿ ತರುವ ಮತ್ತು ತಪ್ಪು ಅಭಿಪ್ರಾಯ ಸೃಷ್ಟಿಸುವ ಪ್ರಯತ್ನ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಪ್ರತಿಯೊಬ್ಬರ ವಾಕ್ ಸ್ವಾತಂತ್ರ್ಯದ ಹಕ್ಕನ್ನು ತಾನು ಗೌರವಿಸುವುದಾಗಿ ತಿಳಿಸಿದ ಖಾನ್, ಭಾಷಣದ ವೇಳೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಭಾವಚಿತ್ರಗಳನ್ನು ಪ್ರದರ್ಶಿಸಿದ್ದನ್ನು ಪ್ರಶ್ನಿಸಿದ್ದಾರೆ. ಬಿಜೆಪಿ ಸರ್ಕಾರ ಬಂದ ನಂತರ ಪ್ರತಿಯೊಬ್ಬರೂ ಮನುಸ್ಮೃತಿ ಓದಬೇಕು ಅಥವಾ ಪಾಲಿಸಬೇಕು ಎಂದು ಪ್ರಧಾನಿ ಮೋದಿ ಎಂದಾದರೂ ಹೇಳಿದ್ದಾರೆಯೇ ಎಂದು ಪ್ರಶ್ನಿಸಿದ ಖಾನ್, ರಾಹುಲ್ ಗಾಂಧಿ ಈ ರೀತಿ ಏಕೆ ಮಾಡಿದರು ಎಂಬುದಕ್ಕೆ ಉತ್ತರಿಸಬೇಕಾಗುತ್ತದೆ ಎಂದಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ಆಗಸ್ಟ್ 22ರಂದು ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ, ಮಹಿಳೆಯರ ಗುರುತು ಕೇವಲ ತಂದೆ, ಪತಿ ಅಥವಾ ಮಗನ ಸಂಬಂಧಗಳಿಗೆ ಸೀಮಿತವಾಗಿರಬಾರದು, ಆಕೆ ತನಗೆ ತಾನೇ ಒಡತಿ, ಬೇರೆ ಯಾರಿಗೂ ಸೇರಿದವಳಲ್ಲ ಎಂದು ಪ್ರತಿಪಾದಿಸಿದ್ದರು.
ಈ ವೇಳೆ ಮನುಸ್ಮೃತಿಯ ಸಾಲುಗಳನ್ನು ಉಲ್ಲೇಖಿಸಿದ್ದ ರಾಹುಲ್, ಬಾಲ್ಯದಲ್ಲಿ ಹೆಣ್ಣು ತಂದೆಗೆ ಸೇರಿದವಳು, ಯೌವನದಲ್ಲಿ ಗಂಡನಿಗೆ ಸೇರಿದವಳು, ಪತಿ ತೀರಿಕೊಂಡಾಗ ಮಕ್ಕಳಿಗೆ ಸೇರಿದವಳು, ಆಕೆ ಎಂದಿಗೂ ಸ್ವತಂತ್ರಳಾಗಿರಬಾರದು ಎಂದು ಮನುಸ್ಮೃತಿ ಹೇಳುತ್ತದೆ ಎಂದಿದ್ದರು. ಇದು ಮನುಸ್ಮೃತಿಯ ನೇರ ಉಲ್ಲೇಖವೆಂದೂ, ಇಂತಹ ಮಾತುಗಳು ನಾಚಿಕೆಗೇಡು ಎಂದೂ ಹೇಳಿದ್ದ ಅವರು, ಮಹಿಳೆಯರಿಗೆ ಸ್ವತಂತ್ರವಾಗಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಹಕ್ಕಿದೆ ಎಂದು ತಿಳಿಸಿದ್ದರು.

