Home Blog

ಸಿಜೆಪಿ ಪ್ರತಿಭಟನಾಕಾರರ ಪಾಸ್ ಪೋರ್ಟ್ ರದ್ದು ಎಂಬ ವೈರಲ್ ಸುದ್ದಿ ಸುಳ್ಳು: ದೆಹಲಿ ಪೊಲೀಸರಿಂದ ಸ್ಪಷ್ಟನೆ

0

ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದ ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸಲಾಗುತ್ತದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದರೂ, ಈ ಕುರಿತು ಯಾವುದೇ ಅಧಿಕೃತ ನಿರ್ಧಾರ ಕೈಗೊಂಡಿಲ್ಲ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ಗಳಲ್ಲಿ, ಪ್ರತಿಭಟನೆ ವೇಳೆ ಹಿಂಸಾಚಾರ, ಗಲಭೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿರುವವರನ್ನು ಗುರುತಿಸಿ ಅವರ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ದೆಹಲಿ ಪೊಲೀಸರು ಆರಂಭಿಸಲಿದ್ದಾರೆ ಎಂದು ಹೇಳಲಾಗಿತ್ತು. ಈ ಸಂಬಂಧ ಸಿಸಿಟಿವಿ ದೃಶ್ಯಾವಳಿ, ವಿಡಿಯೊ ದಾಖಲೆಗಳು ಹಾಗೂ ಇತರೆ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂಬ ಮಾಹಿತಿಯೂ ಹರಿದಾಡಿತ್ತು.

ಆದರೆ ಈ ಎಲ್ಲ ಸುದ್ದಿಗಳನ್ನು ದೆಹಲಿ ಪೊಲೀಸರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಸಿಜೆಪಿ ಪ್ರತಿಭಟನಾಕಾರರ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸುವ ಕುರಿತು ಯಾವುದೇ ಅಧಿಕೃತ ಆದೇಶ ಅಥವಾ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇಂತಹ ಆಧಾರರಹಿತ ಹಾಗೂ ದಾರಿತಪ್ಪಿಸುವ ಮಾಹಿತಿಯನ್ನು ನಂಬಬಾರದು ಮತ್ತು ಇತರರೊಂದಿಗೆ ಹಂಚಿಕೊಳ್ಳಬಾರದು ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಯಾವುದೇ ಮಹತ್ವದ ಮಾಹಿತಿ ಅಥವಾ ಕ್ರಮಗಳ ಕುರಿತು ಅಧಿಕೃತ ಮೂಲಗಳಿಂದ ಪ್ರಕಟವಾಗುವ ಮಾಹಿತಿಯನ್ನೇ ನಂಬುವಂತೆ ದೆಹಲಿ ಪೊಲೀಸರು ನಾಗರಿಕರಿಗೆ ಸಲಹೆ ನೀಡಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಕೇಂದ್ರದ ಬಿಗ್ ಸ್ಟೆಪ್: 10 ವರ್ಷ ಜೈಲು, ₹1 ಕೋಟಿ ದಂಡಕ್ಕೆ ಕಠಿಣ ಕಾನೂನು!

0

ನವದೆಹಲಿ: ದೇಶಾದ್ಯಂತ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮತ್ತಷ್ಟು ಕಠಿಣ ಕಾನೂನು ಜಾರಿಗೆ ಮುಂದಾಗಿದೆ. ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ–2024ಕ್ಕೆ ತಿದ್ದುಪಡಿ ತರಲು ಸರ್ಕಾರ ಸಿದ್ಧತೆ ನಡೆಸಿದ್ದು, ತಪ್ಪಿತಸ್ಥರಿಗೆ ಗರಿಷ್ಠ 10 ವರ್ಷ ಜೈಲು ಶಿಕ್ಷೆ ಹಾಗೂ ₹1 ಕೋಟಿ ದಂಡ ವಿಧಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಶೀಘ್ರವೇ ಅನುಮೋದನೆ ನೀಡುವ ಸಾಧ್ಯತೆ ಇದೆ.

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ವಿಡಿಯೋ ಸಂದೇಶದಲ್ಲಿ ಘೋಷಿಸಿದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.

ಮೂಲಗಳ ಪ್ರಕಾರ, ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ–2024ಕ್ಕೆ ತಿದ್ದುಪಡಿ ತರುವ ಪ್ರಸ್ತಾವವನ್ನು ಶುಕ್ರವಾರ ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ. ತಿದ್ದುಪಡಿ ಜಾರಿಯಾದರೆ ಪರೀಕ್ಷಾ ಅಕ್ರಮಗಳ ತನಿಖೆ ಮತ್ತು ವಿಚಾರಣೆಯನ್ನು ತ್ವರಿತಗೊಳಿಸಲು ವಿಶೇಷ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳ ಸ್ಥಾಪನೆಗೂ ಕಾನೂನು ಮಾನ್ಯತೆ ಸಿಗಲಿದೆ.

ಪ್ರಸ್ತುತ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ 3 ರಿಂದ 5 ವರ್ಷಗಳ ಜೈಲು ಶಿಕ್ಷೆ ಹಾಗೂ ₹10 ಲಕ್ಷದವರೆಗೆ ದಂಡ ವಿಧಿಸುವ ಅವಕಾಶವಿದೆ. ಆದರೆ ಹೊಸ ತಿದ್ದುಪಡಿಯಡಿ ಶಿಕ್ಷೆಯನ್ನು 5 ರಿಂದ 10 ವರ್ಷಗಳಿಗೆ ಹೆಚ್ಚಿಸುವ ಜೊತೆಗೆ, ದಂಡವನ್ನು ₹1 ಕೋಟಿವರೆಗೆ ಏರಿಸಲು ಸರ್ಕಾರ ಮುಂದಾಗಿದೆ.

ಬೆಂಗಳೂರು ಮೆಟ್ರೋ ದರ ಮತ್ತೆ ಹೆಚ್ಚಳವಾಗುತ್ತಾ? BMRCL ಹೊಸ ಲೆಕ್ಕಾಚಾರ ಏನು?

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರ ಮತ್ತೆ ಚರ್ಚೆಗೆ ಬಂದಿದೆ.

ಈಗಾಗಲೇ ದುಬಾರಿಯಾಗಿರುವ ಮೆಟ್ರೋ ಪ್ರಯಾಣ ದರವನ್ನು ಮತ್ತಷ್ಟು ಹೆಚ್ಚಿಸುವ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಹೊಸ ಲೆಕ್ಕಾಚಾರ ನಡೆಸುತ್ತಿದೆ ಎನ್ನಲಾಗಿದೆ.

ಮೆಟ್ರೋ ಹಂತ-3ಎ (Phase 3A) ಯೋಜನೆಗಾಗಿ ಸಿದ್ಧಪಡಿಸಲಾಗಿರುವ ಪರಿಷ್ಕೃತ ಸಮಗ್ರ ಯೋಜನಾ ವರದಿ (DPR)ಯಲ್ಲಿ ಮುಂದಿನ ವರ್ಷಗಳಲ್ಲಿ ದರ ಪರಿಷ್ಕರಣೆಗೆ ಹೊಸ ಸೂತ್ರವನ್ನು ಪ್ರಸ್ತಾಪಿಸಲಾಗಿದೆ. ಇದರ ಪ್ರಕಾರ ಪ್ರತಿ ವರ್ಷ ದರ ಹೆಚ್ಚಿಸುವ ಬದಲು, ಮೂರು ವರ್ಷಕ್ಕೊಮ್ಮೆ ಒಟ್ಟಿಗೆ ಶೇ.12ರಷ್ಟು ದರ ಹೆಚ್ಚಳ ಮಾಡುವ ಪ್ರಸ್ತಾವನೆ ಮಾಡಲಾಗಿದೆ.

ಪ್ರಸ್ತುತ ಜಾರಿಯಲ್ಲಿರುವ ವಾರ್ಷಿಕ ದರ ಹೆಚ್ಚಳದ ನಿಯಮಗಳ ನಡುವೆ BMRCL ಮುಂದಿಟ್ಟಿರುವ ಈ ಹೊಸ ಪ್ರಸ್ತಾವನೆ ಪ್ರಯಾಣಿಕರಲ್ಲಿ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು ಮೆಟ್ರೋ ದೇಶದ ದುಬಾರಿ ಮೆಟ್ರೋ ಸೇವೆಗಳಲ್ಲಿ ಒಂದಾಗಿದೆ. 2025ರ ಫೆಬ್ರವರಿಯಲ್ಲಿ ಮೆಟ್ರೋ ಟಿಕೆಟ್ ದರವನ್ನು ಸರಾಸರಿ ಶೇ.51.55ರಷ್ಟು ಹೆಚ್ಚಿಸಲಾಗಿತ್ತು. ದರ ಏರಿಕೆಗೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಳಿಕ BMRCL ಶೇ.5ರಷ್ಟು ದರ ಕಡಿತ ಮಾಡಿತ್ತು. ಆದರೂ ಪ್ರಯಾಣಿಕರ ಮೇಲಿನ ಹೊರೆ ಕಡಿಮೆಯಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಇದೀಗ ಹೊಸ DPRನಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಪ್ರಯಾಣ ದರವನ್ನು ಶೇ.12ರಷ್ಟು ಹೆಚ್ಚಿಸುವ ಕುರಿತು ಸಮಿತಿ ಶಿಫಾರಸು ಮಾಡಿದೆ. ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ BMRCL ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಿರುವ ಪರಿಷ್ಕೃತ ಯೋಜನಾ ವರದಿಯಲ್ಲಿ ಈ ದರ ಪರಿಷ್ಕರಣೆ ಪ್ರಸ್ತಾಪವನ್ನು ಉಲ್ಲೇಖಿಸಲಾಗಿದೆ. ಮೆಟ್ರೋ ಹಂತ-3ಎ ಕಾಮಗಾರಿಯನ್ನು 2033ರೊಳಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ.

ದರ ಏರಿಕೆ ಜಾರಿಯಾದರೆ ಬೆಂಗಳೂರಿನ ಲಕ್ಷಾಂತರ ನಿತ್ಯ ಮೆಟ್ರೋ ಪ್ರಯಾಣಿಕರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.

ಕುಂಭಮೇಳದ ವೈರಲ್ ಚೆಲುವೆ ಮೋನಾಲಿಸಾ ಬದುಕಿಗೆ ಹೊಸ ತಿರುವು: ಮದುವೆ ವಿವಾದದ ನಡುವೆ ಜೀವ ಬೆದರಿಕೆ, ಪೊಲೀಸ್ ಭದ್ರತೆಗೆ ಹೈಕೋರ್ಟ್ ಆದೇಶ

ಕೊಚ್ಚಿ: ಕುಂಭಮೇಳದಲ್ಲಿ ರುದ್ರಾಕ್ಷಿ ಮಾರಾಟ ಮಾಡುತ್ತಿದ್ದ ವೇಳೆ ವೈರಲ್ ಆಗಿ ದೇಶಾದ್ಯಂತ ಗಮನ ಸೆಳೆದಿದ್ದ ಮೋನಾಲಿಸಾ ಜೀವನ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಸಿನಿಮಾ ಅವಕಾಶಗಳ ಮೂಲಕ ಹೊಸ ಬದುಕು ಕಟ್ಟಿಕೊಳ್ಳುವ ಹಾದಿಯಲ್ಲಿದ್ದ ಮೋನಾಲಿಸಾ, ನಟ ಫರ್ಮಾನ್ ಖಾನ್ ಅವರನ್ನು ವಿವಾಹವಾದ ಬಳಿಕ ವಿವಾದಗಳ ಸುಳಿಯಲ್ಲಿ ಸಿಲುಕಿದ್ದು, ಇದೀಗ ಜೀವ ಬೆದರಿಕೆ ಆರೋಪದ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಪೊಲೀಸ್ ಭದ್ರತೆ ನೀಡುವಂತೆ ಆದೇಶಿಸಿದೆ.

ಕುಂಭಮೇಳದಲ್ಲಿ ವೈರಲ್ ಆದ ನಂತರ ಮೋನಾಲಿಸಾಗೆ ಹಲವು ಸಿನಿಮಾ ಅವಕಾಶಗಳು ಬಂದಿದ್ದವು. ಇದೇ ವೇಳೆ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ನಟ ಫರ್ಮಾನ್ ಖಾನ್ ಅವರೊಂದಿಗೆ ಪರಿಚಯ ಬೆಳೆದು ಅದು ಪ್ರೀತಿಗೆ ತಿರುಗಿ, ಬಳಿಕ ಕುಟುಂಬದ ವಿರೋಧದ ನಡುವೆಯೇ ಇಬ್ಬರೂ ವಿವಾಹವಾಗಿದ್ದರು.

ಆದರೆ ಮದುವೆಯ ಬಳಿಕ ಈ ಸಂಬಂಧ ‘ಲವ್ ಜಿಹಾದ್’ ಆರೋಪ, ಕುಟುಂಬದ ತೀವ್ರ ವಿರೋಧ ಹಾಗೂ ಬಾಲ್ಯವಿವಾಹದ ಆರೋಪ ಸೇರಿದಂತೆ ಹಲವು ವಿವಾದಗಳಿಗೆ ಕಾರಣವಾಯಿತು. ಈ ಬೆಳವಣಿಗೆಗಳ ನಡುವೆ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಆರೋಪಿಸಿದ ಮೋನಾಲಿಸಾ, ಕೇರಳ ಹೈಕೋರ್ಟ್ ಮೊರೆ ಹೋಗಿ ಪೊಲೀಸ್ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಮೋನಾಲಿಸಾಗೆ ಅಗತ್ಯ ಪೊಲೀಸ್ ಭದ್ರತೆ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಈ ಆದೇಶದೊಂದಿಗೆ ಮೋನಾಲಿಸಾ ಪ್ರಕರಣ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘2001ರ ಆಸಿಡ್ ದಾಳಿ ಆಗದೇ ಇದ್ದಿದ್ದರೆ ಅಮ್ಮ ಇಷ್ಟು ಬೇಗ ಹೋಗುತ್ತಿರಲಿಲ್ಲ’: ಕಣ್ಣೀರಿಟ್ಟ ಹೆಚ್.ಡಿ. ರೇವಣ್ಣ

0

ಹಾಸನ: ತಾಯಿ ಚೆನ್ನಮ್ಮ ಅವರ ನಿಧನದ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಹೆಚ್.ಡಿ. ರೇವಣ್ಣ (H.D. Revanna), 2001ರ ಆಸಿಡ್ ದಾಳಿ ಪ್ರಕರಣವನ್ನು ನೆನೆದು ಭಾವುಕರಾಗಿ ಕಣ್ಣೀರಿಟ್ಟರು. ಆ ದಾಳಿ ಆಗದೇ ಇದ್ದಿದ್ದರೆ ತಮ್ಮ ತಾಯಿಗೆ ಇಷ್ಟು ಬೇಗ ಸಾವಾಗುತ್ತಿರಲಿಲ್ಲ ಎಂದು ಹೇಳಿದ ಅವರು, ಹಲವು ಬಾರಿ ಭಾವುಕರಾಗಿ ಮಾತು ನಿಲ್ಲಿಸಿದರು.

“2001ರಲ್ಲಿ ಆಸಿಡ್ ದಾಳಿ ಆಗದೇ ಹೋಗಿದ್ದರೆ ನಮ್ಮ ತಾಯಿಗೆ ಇಷ್ಟು ಬೇಗ ಸಾವು ಬರ್ತಿರಲಿಲ್ಲ. ನನ್ನನ್ನು ಮುಗಿಸಬೇಕು ಎಂಬ ಸಂಚು ರೂಪಿಸಲಾಗಿತ್ತು. ಅಂದು ನಾನು ಅಲ್ಲಿದ್ದರೆ ದಾಳಿ ನನ್ನ ಮೇಲೆಯೇ ಆಗುತ್ತಿತ್ತು. ನಾನು ಇರಲಿಲ್ಲ ಎಂಬ ಕಾರಣಕ್ಕೆ ನಮ್ಮ ತಾಯಿ ಆ ನೋವನ್ನು ಅನುಭವಿಸಬೇಕಾಯಿತು. ನಮ್ಮ ತಾಯಿ ದೇವತೆಯಂತೆ ಇಡೀ ಕುಟುಂಬವನ್ನು ಸಾಕಿದರು,” ಎಂದು ರೇವಣ್ಣ ಕಣ್ಣೀರಿಟ್ಟರು.

ತಮ್ಮ ತಂಗಿಯರು ತಾಯಿಯನ್ನು ಕೊನೆಯವರೆಗೂ ಆರೈಕೆ ಮಾಡಿದ್ದು, ತಾವು ಮತ್ತು ಕುಮಾರಸ್ವಾಮಿ ಆಗಾಗ ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಿದ್ದೆವು ಎಂದು ಹೇಳಿದರು.

ತಾಯಿ ಚೆನ್ನಮ್ಮ ಅವರ ಕೊನೆಯ ಕ್ಷಣಗಳನ್ನು ಸ್ಮರಿಸಿದ ಅವರು, “ನಮ್ಮ ತಂದೆ ಬಂದು ತಾಯಿಗೆ ಕುಂಕುಮ ಇಟ್ಟು ಹೂ ಮುಡಿಸಿದ ತಕ್ಷಣವೇ ಅವರು ಕೊನೆಯುಸಿರೆಳೆದರು. ಇಂತಹ ಸಾವು ಎಲ್ಲರಿಗೂ ಸಿಗುವುದಿಲ್ಲ. ತಂದೆ-ತಾಯಿ 72 ವರ್ಷಗಳ ಸುದೀರ್ಘ ದಾಂಪತ್ಯ ಜೀವನ ನಡೆಸಿದ್ದರು. ತಂದೆಯ ರಾಜಕೀಯ ಏಳಿಗೆಯಲ್ಲಿ ತಾಯಿಯ ಪಾತ್ರ ಅಪಾರ. ನಾನು ಮತ್ತು ಕುಮಾರಸ್ವಾಮಿ ಈ ಮಟ್ಟಕ್ಕೆ ಬೆಳೆಯಲು ಅವರೇ ಕಾರಣ,” ಎಂದು ಭಾವುಕರಾದರು.

1962ರಲ್ಲಿ ತಮ್ಮ ತಂದೆ ಎಚ್.ಡಿ. ದೇವೇಗೌಡ ಅವರು ತಿಂಗಳಿಗೆ 10 ರೂಪಾಯಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ನೆನಪುಗಳನ್ನು ಹಂಚಿಕೊಂಡ ರೇವಣ್ಣ, “ಕೊನೆಯ ಮಗಳು ಹುಟ್ಟಿದ್ದು ತಂದೆ ಶಾಸಕನಾದ ಬಳಿಕ. ಅದಕ್ಕಾಗಿ ತಾಯಿಯ ಪಾರ್ಥಿವ ಶರೀರವನ್ನು ಆ ಹಳೆಯ ಬಾಡಿಗೆ ಮನೆಯ ಬಳಿಗೂ ಕೊಂಡೊಯ್ದೆವು,” ಎಂದು ಹೇಳಿದರು.

ಅಂತಿಮ ದರ್ಶನ, ಮೆರವಣಿಗೆ ಮತ್ತು ಅಂತ್ಯಕ್ರಿಯೆ ವ್ಯವಸ್ಥೆಯಲ್ಲಿ ಜಿಲ್ಲಾಡಳಿತ ಉತ್ತಮ ಸಹಕಾರ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, “ರಾಜಕೀಯ ಬೇರೆ, ಮಾನವೀಯತೆ ಬೇರೆ. ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲು ಸಹಕರಿಸಿದ ಸರ್ಕಾರ, ಜಿಲ್ಲಾಧಿಕಾರಿ, ಎಸ್‌ಪಿ ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ಧನ್ಯವಾದಗಳು,” ಎಂದರು.

ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಕೇಂದ್ರ ಸಚಿವರು, ರಾಜ್ಯ ಸಚಿವರು, ಶಾಸಕರು, ಮಾಜಿ ಶಾಸಕರು ಹಾಗೂ ಜಿಲ್ಲೆಯ ಜನತೆಗೆ ಕೃತಜ್ಞತೆ ಸಲ್ಲಿಸಿದ ರೇವಣ್ಣ, ಜುಲೈ 30ರಂದು ನಡೆಯಲಿರುವ ಆರಾಧನಾ ಮಹೋತ್ಸವಕ್ಕೆ ಪಕ್ಷಾತೀತವಾಗಿ ಎಲ್ಲರೂ ಆಗಮಿಸಬೇಕು ಎಂದು ಮನವಿ ಮಾಡಿದರು.

ಒಲೆಯ ಮೇಲಿನ ಹಾಲು ಇನ್ನು ಚೆಲ್ಲಲ್ಲ! ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ!

0

ಬಹುತೇಕ ಮನೆಗಳಲ್ಲಿ ಅಡುಗೆ ಮಾಡುವುದಕ್ಕಿಂತ ಹಾಲು ಕುದಿಸುವುದೇ ಕೆಲವೊಮ್ಮೆ ದೊಡ್ಡ ಸವಾಲಾಗುತ್ತದೆ.

ಒಲೆಯ ಮೇಲೆ ಹಾಲು ಇಟ್ಟ ಕೆಲವೇ ಕ್ಷಣಗಳಲ್ಲಿ ಗಮನ ಬೇರೆಡೆ ಹೋದರೆ ಹಾಲು ಉಕ್ಕಿ ಚೆಲ್ಲಿ ಹೋಗುತ್ತದೆ. ಇದರಿಂದ ಹಾಲು ವ್ಯರ್ಥವಾಗುವುದರ ಜೊತೆಗೆ ಗ್ಯಾಸ್ ಸ್ಟೌವ್ ಹಾಗೂ ಅಡುಗೆ ಮನೆಯ ಸ್ವಚ್ಛತೆ ಕಾಪಾಡುವುದು ಕಷ್ಟವಾಗುತ್ತದೆ.

ಆದರೆ ಕೆಲವು ಸರಳ ಉಪಾಯಗಳನ್ನು ಅನುಸರಿಸಿದರೆ ಹಾಲು ಉಕ್ಕಿ ಚೆಲ್ಲುವುದನ್ನು ಸುಲಭವಾಗಿ ತಪ್ಪಿಸಬಹುದು.

1. ಪಾತ್ರೆಯ ಅಂಚಿಗೆ ತುಪ್ಪ ಅಥವಾ ಬೆಣ್ಣೆ ಹಚ್ಚಿ:

ಹಾಲು ಕುದಿಸುವ ಪಾತ್ರೆಯ ಮೇಲ್ಭಾಗದ ಅಂಚಿಗೆ ಸ್ವಲ್ಪ ತುಪ್ಪ ಅಥವಾ ಬೆಣ್ಣೆಯನ್ನು ಹಚ್ಚಿ. ಹಾಲು ಕುದಿಯುವಾಗ ಮೇಲೇಳುವ ನೊರೆ ಅಂಚಿಗೆ ಬಂದರೂ, ತುಪ್ಪದ ಪದರದಿಂದಾಗಿ ಹಾಲು ಹೊರಗೆ ಚೆಲ್ಲುವ ಸಾಧ್ಯತೆ ಕಡಿಮೆಯಾಗುತ್ತದೆ.

2. ಪಾತ್ರೆಯ ಮೇಲೆ ಚಮಚವನ್ನು ಅಡ್ಡಲಾಗಿ ಇಡಿ:

ಹಾಲು ಕಾಯಿಸುವಾಗ ಪಾತ್ರೆಯ ಮೇಲೆ ಒಂದು ಚಮಚವನ್ನು ಅಡ್ಡಲಾಗಿ ಇಡುವುದು ಸಹ ಉಪಯುಕ್ತ. ಹಾಲು ಕುದಿಯುವ ವೇಳೆ ಉಂಟಾಗುವ ನೊರೆ ಚಮಚಕ್ಕೆ ತಾಗುವುದರಿಂದ, ಅದು ತಕ್ಷಣವೇ ಉಕ್ಕಿ ಹೊರಗೆ ಬರುವುದನ್ನು ತಡೆಯಬಹುದು.

3. ಹೆಚ್ಚಿನ ಉರಿಯಲ್ಲಿ ಹಾಲು ಕುದಿಸಬೇಡಿ:

ಹಾಲನ್ನು ಜೋರಾದ ಉರಿಯಲ್ಲಿ ಕಾಯಿಸಿದರೆ ಅದು ಬೇಗ ಕುದಿದು ಹೆಚ್ಚು ನೊರೆ ಉಂಟುಮಾಡುತ್ತದೆ. ಇದರಿಂದ ಹಾಲು ಏಕಾಏಕಿ ಉಕ್ಕಿ ಚೆಲ್ಲಬಹುದು. ಆದ್ದರಿಂದ ಯಾವಾಗಲೂ ಕಡಿಮೆ ಅಥವಾ ಮಧ್ಯಮ ಉರಿಯಲ್ಲಿ ಹಾಲನ್ನು ಕುದಿಸುವುದು ಉತ್ತಮ.

4. ಅಗಲವಾದ ಪಾತ್ರೆ ಬಳಸಿ:

ಹಾಲು ಕುದಿಸಲು ಅಗಲವಾದ ಬಾಯಿ ಹೊಂದಿರುವ ದೊಡ್ಡ ಪಾತ್ರೆಯನ್ನು ಬಳಸುವುದು ಸೂಕ್ತ. ಇದರಲ್ಲಿ ನೊರೆ ಹರಡಲು ಹೆಚ್ಚಿನ ಜಾಗ ಸಿಗುವುದರಿಂದ ಹಾಲು ಹೊರಗೆ ಚೆಲ್ಲುವ ಸಾಧ್ಯತೆ ಕಡಿಮೆಯಾಗುತ್ತದೆ.

5. ಪಾತ್ರೆಯನ್ನು ಸಂಪೂರ್ಣವಾಗಿ ಮುಚ್ಚಬೇಡಿ:

ಹಾಲು ಕುದಿಸುವಾಗ ಪಾತ್ರೆಯನ್ನು ಸಂಪೂರ್ಣವಾಗಿ ಮುಚ್ಚುವುದರಿಂದ ಒಳಗಿನ ಶಾಖ ಹೆಚ್ಚಾಗಿ ನೊರೆ ಬೇಗ ಉಂಟಾಗುತ್ತದೆ. ಇದರಿಂದ ಹಾಲು ಉಕ್ಕಿ ಹೊರಗೆ ಬೀಳಬಹುದು. ಬದಲಾಗಿ ಪಾತ್ರೆಯ ಮೇಲೆ ಚಮಚವನ್ನು ಅಡ್ಡಲಾಗಿ ಇಟ್ಟು ಹಾಲು ಕಾಯಿಸುವುದು ಉತ್ತಮ.

ಈ ಸರಳ ವಿಧಾನಗಳನ್ನು ಅನುಸರಿಸಿದರೆ ಹಾಲು ವ್ಯರ್ಥವಾಗುವುದನ್ನು ತಪ್ಪಿಸುವುದರ ಜೊತೆಗೆ ಅಡುಗೆ ಮನೆಯ ಸ್ವಚ್ಛತೆಯನ್ನೂ ಸುಲಭವಾಗಿ ಕಾಪಾಡಿಕೊಳ್ಳಬಹುದು.

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಡಿಕೆ ಶಿವಕುಮಾರ್ ಮಾಸ್ಟರ್ ಪ್ಲಾನ್; ಖಾಸಗಿ ಶಾಲೆಗಳಿಗೆ ಮಹತ್ವದ ಸೂಚನೆ!

ಬೆಂಗಳೂರು: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ.

ನಗರ ಪ್ರದೇಶಗಳಲ್ಲಿ ಪ್ರತಿ ವಿದ್ಯಾರ್ಥಿಯಿಂದ ₹50 ಸಾವಿರಕ್ಕಿಂತ ಹೆಚ್ಚು ಶುಲ್ಕ ಪಡೆಯುವ ಖಾಸಗಿ ಶಾಲೆಗಳು ಗ್ರಾಮೀಣ ಸರ್ಕಾರಿ ಶಾಲೆಗಳನ್ನು ಕಡ್ಡಾಯವಾಗಿ ದತ್ತು ಪಡೆಯಬೇಕು. ಇಲ್ಲವಾದರೆ ಅಂತಹ ಶಾಲೆಗಳ ಶುಲ್ಕಕ್ಕೆ ಮಿತಿ (ಕ್ಯಾಪ್) ವಿಧಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.

ಬೆಂಗಳೂರಿನಲ್ಲಿ ಎಫ್‌ಕೆಸಿಸಿಐ ಆಯೋಜಿಸಿದ್ದ ಜಾಗತಿಕ ಸಿಎಸ್‌ಆರ್ ಮತ್ತು ಸುಸ್ಥಿರ ಅಭಿವೃದ್ಧಿ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಿಎಂ, ಗ್ರಾಮೀಣ ಭಾಗದ ಮಕ್ಕಳಿಗೂ ನಗರ ಪ್ರದೇಶದ ಮಕ್ಕಳಂತೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬುದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು.

ಕರ್ನಾಟಕಕ್ಕೆ ಸಿಎಸ್‌ಆರ್ ನಿಧಿಯಡಿ ಕಾರ್ಪೋರೇಟ್ ಸಂಸ್ಥೆಗಳಿಂದ ಪ್ರತಿ ವರ್ಷ ಸುಮಾರು ₹10 ಸಾವಿರ ಕೋಟಿ ಹಣ ಬರುತ್ತಿದೆ. ಆದರೆ ಇದರಲ್ಲಿ ಶೇ.50ರಷ್ಟು ಹಣ ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತಿಲ್ಲ ಎಂಬ ದೂರುಗಳಿವೆ. ಇದನ್ನು ತಡೆಯಲು ಹಿರಿಯ ಐಎಎಸ್ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು ಎಂದು ಸಿಎಂ ತಿಳಿಸಿದರು.

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಿಎಸ್‌ಆರ್ ಬಳಕೆ:

ಸಿಎಸ್‌ಆರ್ ಹಣವನ್ನು ಮೊದಲ ಹಂತದಲ್ಲಿ ಗ್ರಾಮೀಣ ಪ್ರದೇಶಗಳ ಪ್ರಾಥಮಿಕ ಶಿಕ್ಷಣ ಅಭಿವೃದ್ಧಿಗೆ ಬಳಸಲಾಗುವುದು. ಬಳಿಕ ಆರೋಗ್ಯ ಸೇರಿದಂತೆ ಇತರ ಕ್ಷೇತ್ರಗಳಿಗೂ ಬಳಸಲಾಗುತ್ತದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಕಾರ್ಪೋರೇಟ್ ಸಂಸ್ಥೆಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಮೂಲಸೌಕರ್ಯ ಅಭಿವೃದ್ಧಿ, ಹೊಸ ಶಾಲೆಗಳ ನಿರ್ಮಾಣ ಹಾಗೂ ಉತ್ತಮ ಶಿಕ್ಷಣ ವ್ಯವಸ್ಥೆಗೆ ಸಹಕಾರ ನೀಡಬೇಕು. ಇದಕ್ಕಾಗಿ ರಾಜ್ಯದಲ್ಲಿ ಈಗಾಗಲೇ 2 ಸಾವಿರ ಜಾಗಗಳನ್ನು ಗುರುತಿಸಲಾಗಿದೆ ಎಂದು ಅವರು ತಿಳಿಸಿದರು.

ಖಾಸಗಿ ಶಾಲೆಗಳಿಗೆ ದತ್ತು ಕಡ್ಡಾಯ:

ನಗರದ ಖಾಸಗಿ ಶಾಲೆಗಳು ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಕೇವಲ ಕಟ್ಟಡ ಅಭಿವೃದ್ಧಿ ಮಾಡುವುದಷ್ಟೇ ಅಲ್ಲದೆ ಉತ್ತಮ ಶಿಕ್ಷಕರನ್ನು ನಿಯೋಜಿಸುವತ್ತ ಗಮನಹರಿಸಬೇಕು ಎಂದು ಸಿಎಂ ಹೇಳಿದರು.

ತಮ್ಮ ಕುಟುಂಬದ ಶಿಕ್ಷಣ ಸಂಸ್ಥೆಯ ಕುರಿತು ಪ್ರಸ್ತಾಪಿಸಿದ ಡಿ.ಕೆ. ಶಿವಕುಮಾರ್, ತಮ್ಮ ಮಗಳು ಐಶ್ವರ್ಯಾ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ಮೂರು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಗ್ರಾಮೀಣ ಮಕ್ಕಳು ಬೆಂಗಳೂರು ಸೇರಿದಂತೆ ನಗರ ಮಕ್ಕಳೊಂದಿಗೆ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯ ಹೊಂದುವಂತೆ ಶಿಕ್ಷಣ ನೀಡುವುದು ಸರ್ಕಾರದ ಉದ್ದೇಶವಾಗಿದೆ. ಶಿಕ್ಷಣಕ್ಕಾಗಿ ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ಆಗುವ ವಲಸೆ ಕಡಿಮೆ ಮಾಡುವ ಗುರಿಯೂ ಇದೆ ಎಂದು ಹೇಳಿದರು.

ನಿರುದ್ಯೋಗ ನಿವಾರಣೆಗೆ ‘ಯುವ ಸೇತು’ ಯೋಜನೆ:

ರಾಜ್ಯದ ನಿರುದ್ಯೋಗ ಸಮಸ್ಯೆ ಪರಿಹರಿಸಲು ‘ಯುವ ಸೇತು’ ಹೆಸರಿನಲ್ಲಿ ಉದ್ಯೋಗ ವಿನಿಮಯ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ ಎಂದು ಸಿಎಂ ತಿಳಿಸಿದರು. ಈ ಕೇಂದ್ರಗಳ ಮೂಲಕ ನಿರುದ್ಯೋಗಿ ಯುವಕರಿಗೆ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಲು ಹಾಗೂ ಅಗತ್ಯ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸರ್ಕಾರಿ ನೇಮಕಾತಿಯಲ್ಲಿ ಗ್ರಾಮೀಣ ಅಭ್ಯರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಇದರಲ್ಲಿ ಶೇ.7.5ರಷ್ಟು ಮೀಸಲಾತಿಯನ್ನು ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ನೀಡಲು ಕಾನೂನು ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ಮುಂದಿನ 100 ದಿನಗಳಲ್ಲಿ ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯದ ಮಾನವ ಸಂಪನ್ಮೂಲ ಉತ್ತಮವಾಗಿದ್ದು, ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಉದ್ಯೋಗಿಗಳು ಮತ್ತು ಉದ್ಯೋಗದಾತರ ಹಿತವನ್ನು ಸಮತೋಲನವಾಗಿ ಕಾಪಾಡುವ ಮೂಲಕ ರಾಜ್ಯವನ್ನು ಉದ್ಯಮ ಸ್ನೇಹಿಯಾಗಿ ರೂಪಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಇಸ್ರೇಲ್ ಕೌನ್ಸಿಲ್ ಜನರಲ್ ಒರ್ಲಿ ವಿಟ್ಸ್‌ಮನ್, ಯುಎನ್ ಕಾಂಪ್ಯಾಕ್ಟ್ ನೆಟ್‌ವರ್ಕ್ ಕಾರ್ಯನಿರ್ವಾಹಕ ನಿರ್ದೇಶಕ ರತ್ನೇಶ್, ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಬಂಡೀಪುರ ಅಂಚಿನಲ್ಲಿ ಹುಲಿ ಪ್ರತ್ಯಕ್ಷ; ಗುಂಡ್ಲುಪೇಟೆ ರೈತರಲ್ಲಿ ಭೀತಿ!

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ರಂಗನಾಥಪುರ ಗ್ರಾಮದ ಹೊರವಲಯದಲ್ಲಿ ಹುಲಿಯೊಂದು ಕಳೆದ ಎರಡು ದಿನಗಳಿಂದ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಹಾಗೂ ರೈತರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಬಫರ್ ವಲಯದ ವ್ಯಾಪ್ತಿಗೆ ಬರುವ ರಂಗನಾಥಪುರ ಗ್ರಾಮದ ಸುತ್ತಮುತ್ತಲಿನ ಜಮೀನುಗಳಲ್ಲಿ ಹುಲಿ ಸಂಚರಿಸುತ್ತಿರುವುದು ಕಂಡುಬಂದಿದೆ. ಕೃಷಿ ಚಟುವಟಿಕೆಗಳಿಗೆ ತೆರಳುವ ರೈತರು ಇದೀಗ ಭಯದಿಂದ ಜಮೀನುಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ಇಂದು ಬೆಳಗ್ಗೆ ಕೆಲ ರೈತರು ಕಾರಿನಲ್ಲಿ ತಮ್ಮ ಜಮೀನಿನ ಕಡೆಗೆ ತೆರಳುತ್ತಿದ್ದ ವೇಳೆ, ಜಮೀನಿನ ಸಮೀಪದಲ್ಲೇ ಹುಲಿ ಹಾಯಾಗಿ ಓಡಾಡುತ್ತಿರುವುದು ಕಂಡುಬಂದಿದೆ. ತಕ್ಷಣ ಎಚ್ಚೆತ್ತ ರೈತರು ಹುಲಿಯ ಓಡಾಟದ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸ್ಥಳೀಯವಾಗಿ ವೈರಲ್ ಆಗುತ್ತಿದೆ.

ಗ್ರಾಮದ ಸಮೀಪದಲ್ಲೇ ಹುಲಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಾನುವಾರುಗಳನ್ನು ಮೇಯಿಸಲು ಹಾಗೂ ಜಮೀನಿನಲ್ಲಿ ಕೆಲಸ ಮಾಡಲು ಗ್ರಾಮಸ್ಥರು ಆತಂಕ ಪಡುತ್ತಿದ್ದಾರೆ.

ಈ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಹುಲಿಯ ಚಲನವಲನದ ಮೇಲೆ ನಿಗಾ ವಹಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಬಂಡೀಪುರ ಅರಣ್ಯ ಪ್ರದೇಶದ ಸುತ್ತಮುತ್ತ ಆಗಾಗ್ಗೆ ವನ್ಯಜೀವಿಗಳ ಸಂಚಾರ ಕಂಡುಬರುತ್ತಿದ್ದು, ಇದೀಗ ರಂಗನಾಥಪುರದಲ್ಲಿ ಹುಲಿ ಕಾಣಿಸಿಕೊಂಡಿರುವುದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.

ಎಸ್‌ಐಆರ್ ಕರ್ತವ್ಯದಲ್ಲಿದ್ದ ಶಿಕ್ಷಕಿ ಹೃದಯಾಘಾತದಿಂದ ಸಾವು; ಅಧಿಕಾರಿಗಳ ಒತ್ತಡ ಆರೋಪ!

ಬೆಂಗಳೂರು: ಎಸ್‌ಐಆರ್ (SIR) ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸರ್ಕಾರಿ ಶಾಲೆಯ ಶಿಕ್ಷಕಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮೃತರನ್ನು ಕುರುಬರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿ ಶಮಂತ ಕುಮಾರಿ (44) ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಅವರನ್ನು ಬಿಎಲ್‌ಒ (BLO) ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ಕುಟುಂಬಸ್ಥರ ಮಾಹಿತಿ ಪ್ರಕಾರ, ಎಸ್‌ಐಆರ್ ಕೆಲಸದ ಒತ್ತಡದ ನಡುವೆ ಶಿಕ್ಷಕಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಶುಗರ್, ಬಿಪಿ ಹೆಚ್ಚಾಗಿ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಗುರುವಾರ (ಜು.23) ರಾತ್ರಿ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ.

ಎಸ್‌ಐಆರ್ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮೇಲಾಧಿಕಾರಿಗಳು ಒತ್ತಡ ಹೇರುತ್ತಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಶಿಕ್ಷಕಿ ಮನವಿ ಮಾಡಿದ್ದರು, ಆದರೆ ಒತ್ತಡ ಮುಂದುವರಿದ ಪರಿಣಾಮ ಆರೋಗ್ಯ ಹದಗೆಟ್ಟು ಹೃದಯಾಘಾತವಾಗಿದೆ ಎಂದು ಕುಟುಂಬಸ್ಥರು ದೂರಿದ್ದಾರೆ.

ಘಟನೆ ಬಳಿಕ ಶಿಕ್ಷಕರ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಕರ್ತವ್ಯದ ಒತ್ತಡದ ಬಗ್ಗೆ ಚರ್ಚೆ ಆರಂಭವಾಗಿದೆ. ಘಟನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ಬರಬೇಕಿದೆ.

ಮಲಗುವ ಮುನ್ನ ಒಂದು ಲೋಟ ಅರಿಶಿನ ಹಾಲು ಕುಡಿದರೆ ದೇಹಕ್ಕೆ ಸಿಗುವ ಲಾಭಗಳೇನು?

0

ಅರಿಶಿನ ಹಾಲು ಅಥವಾ ‘ಗೋಲ್ಡನ್ ಮಿಲ್ಕ್’ ಭಾರತೀಯ ಮನೆಗಳಲ್ಲಿ ಪೀಳಿಗೆಗಳಿಂದ ಬಳಕೆಯಲ್ಲಿರುವ ಜನಪ್ರಿಯ ಆರೋಗ್ಯ ಪಾನೀಯವಾಗಿದೆ. ಆಯುರ್ವೇದದಲ್ಲಿ ಅರಿಶಿನಕ್ಕೆ ವಿಶೇಷ ಸ್ಥಾನವಿದ್ದು, ಇದರಲ್ಲಿ ಇರುವ ಕುರ್ಕುಮಿನ್ (Curcumin) ಎಂಬ ಸಕ್ರಿಯ ಸಂಯುಕ್ತವು ಆಂಟಿಆಕ್ಸಿಡೆಂಟ್ ಹಾಗೂ ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ.

ತಜ್ಞರ ಪ್ರಕಾರ, ಮಿತ ಪ್ರಮಾಣದಲ್ಲಿ ರಾತ್ರಿ ಮಲಗುವ ಮುನ್ನ ಅರಿಶಿನ ಹಾಲು ಸೇವಿಸುವುದರಿಂದ ಕೆಲವು ಆರೋಗ್ಯ ಪ್ರಯೋಜನಗಳು ದೊರೆಯಬಹುದು. ಆದರೆ ಇದು ಯಾವುದೇ ಕಾಯಿಲೆಗೆ ಔಷಧಿಯ ಪರ್ಯಾಯವಲ್ಲ ಎಂಬುದನ್ನು ಗಮನದಲ್ಲಿಡಬೇಕು.

1. ಉತ್ತಮ ನಿದ್ರೆಗೆ ಸಹಕಾರಿ

ಹಾಲಿನಲ್ಲಿ ಇರುವ ಟ್ರಿಪ್ಟೋಫಾನ್ (Tryptophan) ಎಂಬ ಅಮೈನೋ ಆಮ್ಲವು ನಿದ್ರೆಗೆ ನೆರವಾಗುವ ಮೆಲಟೋನಿನ್ ಉತ್ಪಾದನೆಗೆ ಸಹಕಾರಿಯಾಗುತ್ತದೆ. ಬೆಚ್ಚಗಿನ ಹಾಲು ಕುಡಿಯುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯಬಹುದು. ಅರಿಶಿನದಲ್ಲಿರುವ ಕೆಲವು ಸಂಯುಕ್ತಗಳು ದೇಹವನ್ನು ವಿಶ್ರಾಂತಗೊಳಿಸಲು ಸಹಾಯ ಮಾಡಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸಿವೆ.

2. ರೋಗನಿರೋಧಕ ಶಕ್ತಿ ಬಲಪಡಿಸಲು ನೆರವಾಗಬಹುದು

ಅರಿಶಿನದಲ್ಲಿ ಆಂಟಿಆಕ್ಸಿಡೆಂಟ್ ಮತ್ತು ಉರಿಯೂತ ನಿವಾರಕ ಗುಣಗಳಿವೆ. ಇದು ದೇಹದ ರೋಗನಿರೋಧಕ ವ್ಯವಸ್ಥೆಗೆ ಬೆಂಬಲ ನೀಡಬಹುದು. ಋತುಮಾನದ ಶೀತ, ಕೆಮ್ಮು ಮತ್ತು ಗಂಟಲು ನೋವಿನ ಸಂದರ್ಭಗಳಲ್ಲಿ ಅರಿಶಿನ ಹಾಲನ್ನು ಮನೆಮದ್ದಾಗಿ ಬಳಸುವ ಪದ್ಧತಿ ಭಾರತದಲ್ಲಿ ಸಾಮಾನ್ಯವಾಗಿದೆ.

3. ಕೀಲು ಮತ್ತು ಸ್ನಾಯು ನೋವಿಗೆ ಪರಿಹಾರ

ಕುರ್ಕುಮಿನ್ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು ಎಂದು ಹಲವು ಅಧ್ಯಯನಗಳು ಸೂಚಿಸಿವೆ. ಇದರಿಂದ ಕೀಲು ನೋವು, ಸ್ನಾಯು ಸೆಳೆತ ಅಥವಾ ಸಂಧಿವಾತದಿಂದ ಬಳಲುವವರಿಗೆ ಸ್ವಲ್ಪ ಮಟ್ಟಿನ ಪರಿಹಾರ ದೊರೆಯಬಹುದು.

4. ಜೀರ್ಣಕ್ರಿಯೆಗೆ ಸಹಕಾರಿ

ರಾತ್ರಿ ಊಟದ ಬಳಿಕ ಕೆಲವರಿಗೆ ಅಜೀರ್ಣ, ಹೊಟ್ಟೆ ಉಬ್ಬರ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳಬಹುದು. ಅರಿಶಿನವು ಜೀರ್ಣಕ್ರಿಯೆಗೆ ನೆರವಾಗಬಹುದು ಎಂದು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈ ಪ್ರಯೋಜನಗಳ ಕುರಿತು ಹೆಚ್ಚಿನ ವೈದ್ಯಕೀಯ ಅಧ್ಯಯನಗಳು ಇನ್ನೂ ನಡೆಯುತ್ತಿವೆ.

5. ಚರ್ಮದ ಆರೋಗ್ಯಕ್ಕೆ ನೆರವಾಗಬಹುದು

ಅರಿಶಿನದಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದ ಕೋಶಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಸಹಕಾರಿಯಾಗಬಹುದು. ಸಮತೋಲನದ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯ ಜೊತೆಗೆ ಅರಿಶಿನವನ್ನು ಮಿತ ಪ್ರಮಾಣದಲ್ಲಿ ಸೇವಿಸುವುದು ಚರ್ಮದ ಆರೋಗ್ಯಕ್ಕೂ ನೆರವಾಗಬಹುದು.

ಅರಿಶಿನ ಹಾಲು ತಯಾರಿಸುವ ವಿಧಾನ

  • ಒಂದು ಲೋಟ ಹಾಲನ್ನು ಕುದಿಸಿ.
  • ಅದಕ್ಕೆ ಅರ್ಧ ಚಮಚ ಶುದ್ಧ ಅರಿಶಿನ ಪುಡಿ ಸೇರಿಸಿ.
  • ಸುಮಾರು 3–5 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿ.
  • ಬೇಕಾದರೆ ಚಿಟಿಕೆ ಕಾಳುಮೆಣಸಿನ ಪುಡಿ ಸೇರಿಸಬಹುದು. ಇದರಿಂದ ಕುರ್ಕುಮಿನ್ ದೇಹದಲ್ಲಿ ಉತ್ತಮವಾಗಿ ಹೀರಿಕೊಳ್ಳಲು ಸಹಾಯವಾಗಬಹುದು.
  • ರುಚಿಗೆ ಜೇನುತುಪ್ಪ ಅಥವಾ ಬೆಲ್ಲವನ್ನು ಸ್ವಲ್ಪ ಪ್ರಮಾಣದಲ್ಲಿ ಸೇರಿಸಿ ಬೆಚ್ಚಗಿರುವಾಗಲೇ ಸೇವಿಸಬಹುದು. (ಜೇನುತುಪ್ಪವನ್ನು ಕುದಿಯುವ ಬಿಸಿ ಹಾಲಿಗೆ ಸೇರಿಸದೆ, ಸ್ವಲ್ಪ ತಣ್ಣಗಾದ ನಂತರ ಸೇರಿಸುವುದು ಉತ್ತಮ.)

ಸೇವಿಸುವಾಗ ಇರಲಿ ಎಚ್ಚರ

  • ಲ್ಯಾಕ್ಟೋಸ್ ಅಸಹಿಷ್ಣುತೆ ಇರುವವರು ಅಥವಾ ಹಾಲಿಗೆ ಅಲರ್ಜಿ ಇರುವವರು ವೈದ್ಯರ ಸಲಹೆ ಪಡೆಯುವುದು ಒಳಿತು.
  • ಪಿತ್ತಕೋಶದ ಕಲ್ಲು, ರಕ್ತ ತೆಳುವಾಗಿಸುವ ಔಷಧಿಗಳ ಬಳಕೆ ಅಥವಾ ಇತರ ಆರೋಗ್ಯ ಸಮಸ್ಯೆಗಳಿರುವವರು ಅರಿಶಿನವನ್ನು ನಿಯಮಿತವಾಗಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಮುನ್ನ ವೈದ್ಯರನ್ನು ಸಂಪರ್ಕಿಸಬೇಕು.
  • ಯಾವುದೇ ಆಹಾರ ಪದಾರ್ಥದಂತೆ ಅರಿಶಿನವನ್ನೂ ಮಿತ ಪ್ರಮಾಣದಲ್ಲೇ ಸೇವಿಸುವುದು ಉತ್ತಮ.

ಒಟ್ಟಾರೆ, ಅರಿಶಿನ ಹಾಲು ಆರೋಗ್ಯಕರ ಜೀವನಶೈಲಿಯ ಭಾಗವಾಗಿ ಸೇವಿಸಬಹುದಾದ ಪೌಷ್ಟಿಕ ಪಾನೀಯವಾಗಿದೆ. ಸಮತೋಲನದ ಆಹಾರ, ನಿಯಮಿತ ವ್ಯಾಯಾಮ ಮತ್ತು ಸಮರ್ಪಕ ನಿದ್ರೆಯ ಜೊತೆಗೆ ಇದನ್ನು ಸೇವಿಸಿದರೆ ಆರೋಗ್ಯಕ್ಕೆ ಪೂರಕವಾಗಬಹುದು. ಆದರೆ ಇದನ್ನೇ ಎಲ್ಲ ಕಾಯಿಲೆಗಳಿಗೆ ಪರಿಹಾರವೆಂದು ಪರಿಗಣಿಸಬಾರದು.