Home Blog Page 3

ರೀಲ್ಸ್ʼಗಾಗಿ ಸ್ಟಂಟ್: ಹುಬ್ಬಳ್ಳಿ ಬಿಜೆಪಿ ಮುಖಂಡ ವೀರೇಶ್ ಸಂಗಳದ ಪುತ್ರ ಸಾವು!

0

ಧಾರವಾಡ: ರೀಲ್ಸ್ ವಿಡಿಯೋ ಚಿತ್ರೀಕರಣಕ್ಕಾಗಿ ಅಪಾಯಕರ ಸ್ಟಂಟ್ ಮಾಡಲು ಹೋಗಿ 15 ವರ್ಷದ ಬಾಲಕ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಮೈಸೂರಿನಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ನಮೀಷ್ ಸಂಗಳದ (15) ಮೃತ ಬಾಲಕನಾಗಿದ್ದು, ಯುಗಾದಿ ಹಬ್ಬದ ರಜೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಮನೆಗೆ ಬಂದಿದ್ದನು. ಗುರುವಾರ ಸಂಜೆ ಸ್ನೇಹಿತನೊಂದಿಗೆ ಶೇಜವಾಡಕ್ಕರ್ ಪ್ಲಾಟ್ ಪ್ರದೇಶಕ್ಕೆ ರೀಲ್ಸ್ ಚಿತ್ರೀಕರಣಕ್ಕಾಗಿ ತೆರಳಿದ್ದಾನೆ.

ಆಡಿ ಕಾರು ಮತ್ತು ಬೈಕ್ ಬಳಸಿ ವೇಗದ ಸ್ಟಂಟ್ ಹಾಗೂ ಕ್ರ್ಯಾಶ್ ದೃಶ್ಯ ಚಿತ್ರೀಕರಿಸಲು ಈ ಇಬ್ಬರು ಬಾಲಕರು ಯೋಜನೆ ಮಾಡಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಬೈಕ್ ಸವಾರನಾಗಿದ್ದ ನಮೀಷ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ನಮೀಷ್ ಸುಮಾರು 30 ಅಡಿ ದೂರಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನೆಯ ಬಳಿಕ ಸ್ಥಳೀಯರು ಕಾರು ಚಾಲನೆ ಮಾಡುತ್ತಿದ್ದ ಅಪ್ರಾಪ್ತ ಬಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ, “ನಾನು ಕಾರು ನಿಲ್ಲಿಸಿದ್ದೆ, ಅವನೇ ವೇಗವಾಗಿ ಬಂದು ಡಿಕ್ಕಿ ಹೊಡೆದನು” ಎಂದು ಆತ ಹೇಳಿಕೊಂಡಿದ್ದಾನೆ. ಕಾರು ತನ್ನ ತಂದೆಯದ್ದೇ ಎಂದು ಕೂಡ ತಿಳಿಸಿದ್ದಾನೆ.

ಬಿಜೆಪಿ ಮುಖಂಡ ವೀರೇಶ್ ಸಂಗಳದ ಅವರ ಪುತ್ರನಾಗಿದ್ದ ನಮೀಷ್ ಸಾವಿನಿಂದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಯಾದಗಿರಿಯಲ್ಲಿ ತಂದೆ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ತಂದೆ ಹತ್ಯೆಗೆ ಮಗನ ಪ್ಲ್ಯಾನ್! ಯಾಕೆ ಗೊತ್ತಾ..?

0

ಯಾದಗಿರಿ: ಜಿಲ್ಲೆಯ ಗೋನಾಳ ಗ್ರಾಮದಲ್ಲಿ ನಡೆದ ವೃದ್ಧನ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಮಗನೇ ತಂದೆಯನ್ನು ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಾನೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಮಾರ್ಚ್ 12ರ ರಾತ್ರಿ 74 ವರ್ಷದ ಹಂಪಣ್ಣ ಸಜ್ಜನ ಹತ್ಯೆಯಾಗಿತ್ತು. ಘಟನೆಯ ಬಳಿಕ ಅವರ ಪುತ್ರ ಶರಣಬಸಪ್ಪ ವಡಗೇರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರಂಭದಲ್ಲಿ ಆರೋಪಿಗಳನ್ನು ಪತ್ತೆಹಚ್ಚಲು ಕಷ್ಟಪಟ್ಟರು. ಆದರೆ ನಾಲ್ಕು ದಿನಗಳ ಬಳಿಕ ರಮೇಶ್, ಜಿ. ವಿರೇಶ್, ಎಂ. ವಿರೇಶ್ ಹಾಗೂ ಕೃಷ್ಟ ಎಂಬ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ಆರೋಪಿಗಳನ್ನು ಬಂಧಿಸಿದ ಬಳಿಕ ಪ್ರಕರಣದ ಹಿನ್ನಲೆ ಬೆಳಕಿಗೆ ಬಂದಿದೆ. ತಿರುಪತಿ ಮೂಲದ ಈ ನಾಲ್ವರು ಹತ್ಯೆ ನಡೆಸಿದರೆ, ಹತ್ಯೆಗೆ ಸುಪಾರಿ ನೀಡಿದ್ದವರು ಮೃತನ ಪುತ್ರ ನರಸರೆಡ್ಡಿ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ಮೊದಲು ಆಸ್ತಿ ವಿಚಾರವೇ ಕೊಲೆಗೆ ಕಾರಣ ಎಂದು ಶಂಕಿಸಲಾಗಿತ್ತು. ಆದರೆ, ಮೃತನ ಮೊಬೈಲ್ ಪರಿಶೀಲನೆ ವೇಳೆ ಹಲವು ಮಹಿಳೆಯರೊಂದಿಗೆ ತೆಗೆದಿರುವ ಫೋಟೋಗಳು ಪತ್ತೆಯಾಗಿದ್ದು, ಅನೈತಿಕ ಸಂಬಂಧಗಳ ವಿಚಾರ ಹೊರಬಂದಿದೆ.

ಹಂಪಣ್ಣ ಸಜ್ಜನ ಗ್ರಾಮದಲ್ಲಿ ಕುಟುಂಬದಿಂದ ದೂರವಾಗಿ ಹೊಲದಲ್ಲೇ ವಾಸಿಸುತ್ತಿದ್ದರು. ಪತ್ನಿ ಸಾವಿನ ನಂತರ ಏಕಾಂಗಿಯಾಗಿ ಬದುಕುತ್ತಿದ್ದ ಅವರು, ಮದ್ಯಪಾನ ವ್ಯಸನಕ್ಕೂ ಒಳಗಾಗಿದ್ದರು. ತಮ್ಮ ಕಾಮತೃಷೆ ತೀರಿಸಿಕೊಳ್ಳಲು ಹಣದ ಆಮಿಷ ನೀಡಿ ಮಹಿಳೆಯರನ್ನು ಕರೆಸಿಕೊಳ್ಳುತ್ತಿದ್ದರೆಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಇದೇ ಕಾರಣದಿಂದ ಕುಟುಂಬದಲ್ಲೂ ಅಸಮಾಧಾನ ಉಂಟಾಗಿದ್ದು, ವಿಶೇಷವಾಗಿ ಮಗನ ಪತ್ನಿಯೊಂದಿಗೆ ಸಹ ಅನೈತಿಕ ವರ್ತನೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರ ತಿಳಿದ ನರಸರೆಡ್ಡಿ ಕೋಪಗೊಂಡು, ನಾಲ್ವರಿಗೆ ಸುಮಾರು ₹2 ಲಕ್ಷ ನೀಡಿ ತಂದೆಯನ್ನು ಕೊಲೆ ಮಾಡುವಂತೆ ಸುಪಾರಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟಿನಲ್ಲಿ, ಅನೈತಿಕ ಸಂಬಂಧಗಳ ಹಿನ್ನೆಲೆಯೇ ಈ ಹತ್ಯೆಗೆ ಕಾರಣವಾಗಿದ್ದು, ಪ್ರಕರಣಕ್ಕೆ ಇದೀಗ ಸ್ಪಷ್ಟತೆ ಸಿಕ್ಕಿದೆ.

ಕರಾವಳಿಯಾದ್ಯಂತ ಶುಕ್ರವಾರ ಈದುಲ್ ಫಿತ್ರ್ ಹಬ್ಬ ಸಂಭ್ರಮ

ಮಂಗಳೂರು: ಕರಾವಳಿ ಭಾಗದಾದ್ಯಂತ ಶುಕ್ರವಾರ ಈದುಲ್ ಫಿತ್ರ್ ಹಬ್ಬವನ್ನು ಆಚರಿಸುವಂತೆ ದಕ್ಷಿಣ ಕನ್ನಡ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಕರೆ ನೀಡಿದ್ದಾರೆ.

ಶವ್ವಾಲ್ ಮಾಸದ ಪ್ರಥಮ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ನಾಳೆ ಈದ್ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಧಿಕೃತವಾಗಿ ಘೋಷಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಮುಸ್ಲಿಂ ಸಮುದಾಯದವರು ರಮಝಾನ್ ಉಪವಾಸವನ್ನು ಕಟ್ಟುನಿಟ್ಟಾಗಿ ಆಚರಿಸಿದ್ದರು. ಇಂದು ಚಂದ್ರದರ್ಶನವಾದ ಹಿನ್ನೆಲೆ ಉಪವಾಸ ವ್ರತಕ್ಕೆ ತೆರೆ ಬಿದ್ದು, ನಾಳೆ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗಳ ಮೂಲಕ ಈದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಿದ್ದಾರೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಾದ್ಯಂತ ಈದ್ ಹಬ್ಬದ ಸಂಭ್ರಮ ಈಗಲೇ ಕಳೆಗಟ್ಟಿದೆ.

ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ಸಿಎಂ ಹಸ್ತಕ್ಷೇಪಕ್ಕೆ ಹೈಕೋರ್ಟ್ ಆಕ್ಷೇಪ

ಬೆಂಗಳೂರು: ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಸ್ತಕ್ಷೇಪಕ್ಕೆ ಕರ್ನಾಟಕ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.

ಬೆಸ್ಕಾಂ ಎಇ ಚೇತನ್ ಎಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಗ್ರೂಪ್ ಬಿ ಮತ್ತು ಸಿ ವರ್ಗದ ನೌಕರರ ವರ್ಗಾವಣೆಯಲ್ಲಿ ಸಿಎಂ ಕಚೇರಿಯ ಪಾತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಮುಖ್ಯಮಂತ್ರಿಗಳಿಗೆ ನೌಕರರ ವರ್ಗಾವಣೆಯಂತಹ ವಿಷಯಗಳಿಗಿಂತ ಮಹತ್ವದ ಆಡಳಿತಾತ್ಮಕ ಕೆಲಸಗಳಿದ್ದು, ಈ ರೀತಿಯ ವಿಷಯಗಳನ್ನು ಸಂಬಂಧಿತ ಇಲಾಖೆಗಳಿಗೇ ಬಿಟ್ಟುಕೊಡಬೇಕು ಎಂದು ನ್ಯಾಯಮೂರ್ತಿಗಳಾದ ಡಿ.ಕೆ.ಸಿಂಗ್ ಮತ್ತು ಟಿ.ಎಂ.ನದಾಫ್ ಒಳಗೊಂಡ ದ್ವಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

ಮುಖ್ಯಮಂತ್ರಿ ಕಚೇರಿ ವರ್ಗಾವಣೆ ಮನವಿಗಳನ್ನು ಸ್ವೀಕರಿಸಬಾರದು ಹಾಗೂ ಇಂತಹ ವಿಚಾರಗಳಿಗೆ ಸಮಯ ವಿನಿಯೋಗಿಸಬಾರದು ಎಂದು ಸೂಚಿಸಿದ ನ್ಯಾಯಾಲಯ, ಈ ಆದೇಶದ ಪ್ರತಿಯನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಲು ನಿರ್ದೇಶನ ನೀಡಿದೆ.

ಇದೇ ವೇಳೆ, ಸಿಎಂ ಕಚೇರಿಯಿಂದ ನೀಡುವ ವರ್ಗಾವಣೆ ಪತ್ರಗಳ ಕುರಿತು ಹೈಕೋರ್ಟ್ ಮುಖ್ಯ ಕಾರ್ಯದರ್ಶಿಯ ನಿಲುವನ್ನು ಕೇಳಿತ್ತು. ಪ್ರತಿಯಾಗಿ, ಸಿಎಂ ಕಚೇರಿಯಿಂದ ನೀಡುವ ಟಿಪ್ಪಣಿಗಳು ಕೇವಲ ಶಿಫಾರಸುಗಳಾಗಿದ್ದು, ಅಂತಿಮವಾಗಿ ಸಂಬಂಧಪಟ್ಟ ಇಲಾಖೆವೇ ವರ್ಗಾವಣೆ ಆದೇಶ ಹೊರಡಿಸುತ್ತದೆ ಎಂದು ಮುಖ್ಯ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ.

ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ: ವಿಮಾನಯಾನದಲ್ಲಿ ಗೊಂದಲ, ಪ್ರಯಾಣ ವೆಚ್ಚ ಭಾರೀ ಏರಿಕೆ

0

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಇತ್ತೀಚಿನ ಯುದ್ಧ ಪರಿಸ್ಥಿತಿ ಮತ್ತು ಉದ್ವಿಗ್ನತೆ ಜಾಗತಿಕ ವಿಮಾನಯಾನ ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಿದೆ.

ಹಲವಾರು ದೇಶಗಳ ವಾಯುಪ್ರದೇಶಗಳಲ್ಲಿ ವಿಧಿಸಲಾಗಿರುವ ನಿರ್ಬಂಧಗಳು, ವಿಮಾನ ಮಾರ್ಗ ಬದಲಾವಣೆಗಳು ಮತ್ತು ಅಚಾನಕ್ ಹಾರಾಟ ರದ್ದುಪಡಿಸುವ ಘಟನೆಗಳು ಹೆಚ್ಚುತ್ತಿರುವುದರಿಂದ ಜಾಗತಿಕ ವಿಮಾನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಇದರ ಪರಿಣಾಮವಾಗಿ ಯುರೋಪ್, ಏಷ್ಯಾ ಮತ್ತು ಆಫ್ರಿಕಾ ನಡುವಿನ ಅನೇಕ ಮಾರ್ಗಗಳಲ್ಲಿ ಪ್ರಯಾಣ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ.

ಭಾರತದ ದೃಷ್ಟಿಯಿಂದ ಈ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ದೇಶದಿಂದ ವಿವಿಧ ರಾಷ್ಟ್ರಗಳಿಗೆ ತೆರಳುವ ವಿಮಾನಗಳು ಬಹುತೇಕವಾಗಿ ಮಧ್ಯಪ್ರಾಚ್ಯದ ಪ್ರಮುಖ ಹಬ್‌ಗಳಾದ ದುಬೈ, ದೋಹಾ ಮತ್ತು ಅಬುಧಾಬಿ ಮೂಲಕ ಸಂಚರಿಸುತ್ತವೆ.

ಈ ಮಾರ್ಗಗಳಲ್ಲಿ ಉಂಟಾದ ವ್ಯತ್ಯಯಗಳಿಂದ ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆಗಳು ಕಂಡುಬರುತ್ತಿದ್ದು, ಹೆಚ್ಚಿದ ಪ್ರಯಾಣ ವೆಚ್ಚದಿಂದ ಅನೇಕರು ತಮ್ಮ ಪ್ರಯಾಣವನ್ನು ಮುಂದೂಡಲು ಅಥವಾ ರದ್ದುಪಡಿಸಲು ಮುಂದಾಗುತ್ತಿದ್ದಾರೆ.

ಸಾಮಾನ್ಯವಾಗಿ ಮಧ್ಯಪ್ರಾಚ್ಯ ಮತ್ತು ಅರಬ್ ರಾಷ್ಟ್ರಗಳಿಂದ ಪ್ರತಿದಿನ ಸುಮಾರು 25 ರಿಂದ 30 ವಿಮಾನಗಳು ಬೆಂಗಳೂರಿಗೆ ಆಗಮಿಸುತ್ತಿದ್ದವು. ಆದರೆ, ಇತ್ತೀಚಿನ ಯುದ್ಧ ಪರಿಸ್ಥಿತಿ ಮತ್ತು ಭದ್ರತಾ ಕಾರಣಗಳಿಂದ ಅನೇಕ ವಿಮಾನ ಸಂಸ್ಥೆಗಳು ತಮ್ಮ ಹಾರಾಟಗಳನ್ನು ಸ್ಥಗಿತಗೊಳಿಸಿರುವುದರಿಂದ ಈ ಸಂಪರ್ಕ ಗಂಭೀರವಾಗಿ ಕುಂಠಿತವಾಗಿದೆ.

ಈ ಬೆಳವಣಿಗೆಯಿಂದ ದೇಶಾದ್ಯಂತ ವಿಮಾನಯಾನ ಪ್ರಯಾಣಿಕರ ಸಂಖ್ಯೆಯಲ್ಲಿ ಸುಮಾರು 40%ರವರೆಗೆ ಕುಸಿತ ಕಂಡುಬಂದಿದ್ದು, ಬೆಂಗಳೂರಿನಂತಹ ಪ್ರಮುಖ ಅಂತಾರಾಷ್ಟ್ರೀಯ ಪ್ರವೇಶ ದ್ವಾರಗಳಿಗೆ ಇದು ನೇರ ಹೊಡೆತ ನೀಡಿದೆ.

ಲಂಡನ್ʼನಲ್ಲಿ ಪಾನ್ ಉಗುಳಿದ ಇಬ್ಬರು ಭಾರತೀಯರಿಗೆ ₹1.7 ಲಕ್ಷ ದಂಡ!

0

ಲಂಡನ್: ರಸ್ತೆಯಲ್ಲಿ ಪಾನ್ ಉಗುಳಿದ ಪ್ರಕರಣದಲ್ಲಿ ಭಾರತೀಯ ಮೂಲದ ಇಬ್ಬರು ವ್ಯಕ್ತಿಗಳಿಗೆ ತಲಾ ಸುಮಾರು ₹1.7 ಲಕ್ಷ ದಂಡ ವಿಧಿಸಿರುವ ಘಟನೆ ಲಂಡನ್ ನಲ್ಲಿ ನಡೆದಿದೆ.

ಮೊದಲ ಪ್ರಕರಣದಲ್ಲಿ, ಎಡ್ಗ್ವೇರ್ ನಿವಾಸಿಯಾದ ಅಕ್ಷಿತ್ಕುಮಾರ್ ಭದ್ರೆ ಪಟೇಲ್ (31) ಅವರಿಗೆ ವಾಯುವ್ಯ ಲಂಡನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 1,391 ಯುರೋ ದಂಡ ವಿಧಿಸಿದೆ.

ಜೂನ್ 11, 2025 ರಂದು ಕಿಂಗ್ಸ್ಬರಿ ಪ್ರದೇಶದ ರಸ್ತೆಯಲ್ಲಿ ಪಾನ್ ಉಗುಳಿದ ಹಿನ್ನೆಲೆಯಲ್ಲಿ ಅವರಿಗೆ ಮೊದಲಿಗೆ 100 ಯುರೋ ದಂಡ ವಿಧಿಸಲಾಗಿತ್ತು. ಆದರೆ, ಅವರು ದಂಡ ಪಾವತಿಸದೇ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆಯ ವೇಳೆ ಸಹ ಹಾಜರಾಗದ ಕಾರಣ, ನ್ಯಾಯಾಲಯವು ಹೆಚ್ಚಿನ ದಂಡ ವಿಧಿಸಿದೆ.

ಇನ್ನೊಂದು ಪ್ರಕರಣದಲ್ಲಿ, ರುಯಿಸ್ಲಿಪ್ ನಿವಾಸಿ ಹಿತೇಶ್ ಪಟೇಲ್ (32) ಅವರಿಗೂ ಇದೇ ಪ್ರಮಾಣದ 1,391 ಯುರೋ (ಸುಮಾರು ₹1.7 ಲಕ್ಷ) ದಂಡ ವಿಧಿಸಲಾಗಿದೆ. ಜೂನ್ 12, 2025 ರಂದು ವೆಂಬ್ಲಿ ಹಿಲ್ ರಸ್ತೆಯಲ್ಲಿ ಪಾನ್ ಉಗುಳಿದ ಆರೋಪದ ಮೇರೆಗೆ ಪ್ರಕರಣ ದಾಖಲಾಗಿತ್ತು. ಅವರು ಸಹ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ, ನ್ಯಾಯಾಲಯವು ಅನುಪಸ್ಥಿತಿಯಲ್ಲೇ ವಿಚಾರಣೆ ನಡೆಸಿ ದಂಡ ವಿಧಿಸಿದೆ.

ಪಶ್ಚಿಮ ಏಷ್ಯಾ ಬಿಕ್ಕಟ್ಟು: ರಾಜತಾಂತ್ರಿಕತೆಗೆ ಮರಳುವಂತೆ ಪ್ರಧಾನಿ ಮೋದಿ ಒತ್ತಾಯ

0

ನವದೆಹಲಿ: ಮಧ್ಯ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಿದ ಮೋದಿ, ಉದ್ವಿಗ್ನತೆಯನ್ನು ಕಡಿಮೆ ಮಾಡಲು ತುರ್ತು ಕ್ರಮ ಅಗತ್ಯವಿದೆ ಮತ್ತು ರಾಜತಾಂತ್ರಿಕ ಮಾರ್ಗಗಳಿಗೆ ಮರಳುವುದು ಮುಖ್ಯವೆಂದು ಹೇಳಿದ್ದಾರೆ. ಈ ಕುರಿತು ಅವರು ಎಕ್ಸ್ (ಹಳೆಯ ಟ್ವಿಟ್ಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಬಲಪಡಿಸಲು ಪರಸ್ಪರ ಸಮನ್ವಯವನ್ನು ಮುಂದುವರಿಸುವ ಬಗ್ಗೆ ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಮೋದಿ ತಿಳಿಸಿದ್ದಾರೆ.

ಇದಕ್ಕೂ ಮೊದಲು, ಉದ್ವಿಗ್ನತೆಯನ್ನು ಶಮನಗೊಳಿಸುವ ಪ್ರಯತ್ನಗಳ ಭಾಗವಾಗಿ ಮೋದಿ ಅವರು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಹಾಗೂ ಒಮಾನ್ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅಲ್ ಸೈದ್ ಅವರೊಂದಿಗೂ ಮಾತುಕತೆ ನಡೆಸಿದ್ದಾರೆ.

ನವೀಕರಿಸಬಹುದಾದ ಇಂಧನದಲ್ಲಿ ಭಾರತಕ್ಕೆ ಭಾರೀ ಸಾಧನೆ: ಜಗತ್ತಿನಲ್ಲಿ 3ನೇ ಸ್ಥಾನ – ಪ್ರಹ್ಲಾದ್ ಜೋಶಿ

0

ನವದೆಹಲಿ: ಸೌರಶಕ್ತಿ ಹಾಗೂ ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತವು ಜಗತ್ತಿನಲ್ಲಿ ಮೂರನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದ್ದು, ಇದು ಊಹಿಸಲಸಾಧ್ಯವಾದ ಮಹತ್ವದ ಸಾಧನೆಯಾಗಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

WION ವರ್ಲ್ಡ್ ಪಲ್ಸ್ ಕಾರ್ಯಕ್ರಮದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, 2030ರೊಳಗೆ 500 ಗಿಗಾವಾಟ್ (GW) ನವೀಕರಿಸಬಹುದಾದ ಇಂಧನ ಗುರಿ ಸಾಧಿಸಲು ಭಾರತ ವೇಗವಾಗಿ ಸಾಗುತ್ತಿದೆ ಎಂದರು. ಶುದ್ಧ ಇಂಧನ ಕ್ಷೇತ್ರದಲ್ಲಿ ದೇಶವು ಅಭೂತಪೂರ್ವ ಬೆಳವಣಿಗೆ ಸಾಧಿಸುತ್ತಿದೆ ಎಂದು ಹೇಳಿದರು.

ಭಾರತದ ಮಾಡ್ಯೂಲ್ ಹಾಗೂ ಉತ್ಪಾದನಾ ಸಾಮರ್ಥ್ಯವು ಗಣನೀಯವಾಗಿ ವೃದ್ಧಿಯಾಗಿದೆ. ದೇಶದ ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು 35 ಗಿಗಾವಾಟ್‌ಗೆ ತಲುಪಿದ್ದು, 55 ಲಕ್ಷ ಸ್ಥಾಪನೆಗಳ ಮೂಲಕ ನಿರ್ವಹಿಸಲಾಗುತ್ತಿದೆ. ಇದರಲ್ಲಿ 31 ಲಕ್ಷ ಮನೆಗಳು ಒಳಗೊಂಡಿವೆ ಎಂದು ವಿವರಿಸಿದರು.

ಇದೇ ವೇಳೆ, PM ಸೂರ್ಯಘರ್ ಮತ್ತು PM ಕುಸುಮ್ ಯೋಜನೆಗಳ ಅಡಿಯಲ್ಲಿ 23 ಲಕ್ಷ ಸೌರಶಕ್ತಿ ಆಧಾರಿತ ನೀರಾವರಿ ಪಂಪುಗಳನ್ನು ಸ್ಥಾಪಿಸಲಾಗಿದೆ. ಇದು ಒಂದು ದಶಕದ ಹಿಂದೆ ಊಹಿಸಲಾಗದ ಮೈಲುಗಲ್ಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶವು ಮಹತ್ತರ ಪರಿವರ್ತನೆ ಕಂಡಿದೆ ಎಂದು ಅವರು ಅಭಿಪ್ರಾಯಪಟ್ಟರು.

ಯುಗಾದಿ ದಿನವೇ ದೇವಾಲಯದ ಮುಂದೆ ವಾಮಾಚಾರ: ಸ್ಥಳೀಯರ ಆತಂಕ

ಚಿಕ್ಕಮಗಳೂರು: ಯುಗಾದಿ ಹಬ್ಬದ ದಿನವೇ ದೇವಾಲಯದ ಎದುರು ವಾಮಾಚಾರ ನಡೆಸಿರುವ ಘಟನೆ ಕಳಸ ತಾಲೂಕಿನ ಕಂಚಿನಕೆರೆ ಗ್ರಾಮದಲ್ಲಿ ನಡೆದಿದೆ.

ಅಮಾವಾಸ್ಯೆ ಹಿನ್ನೆಲೆ ಕಳೆದ ರಾತ್ರಿ ದುಷ್ಕರ್ಮಿಗಳು ಕಾಲಭೈರವೇಶ್ವರನ ಗುಡಿಯ ಮುಂಭಾಗದಲ್ಲಿ ವಾಮಾಚಾರ ನಡೆಸಿದ್ದಾರೆ. ದೇವಸ್ಥಾನದ ಎದುರು ದೊಡ್ಡ ಕಲ್ಲುಗಳನ್ನು ವೃತ್ತಾಕಾರವಾಗಿ ಇಟ್ಟು, ಅದರ ಮಧ್ಯಭಾಗದಲ್ಲಿ ಕೃತ್ಯ ಎಸಗಲಾಗಿದೆ. ಅರಿಶಿನ, ಕುಂಕುಮ, ನಿಂಬೆಹಣ್ಣು, ತೆಂಗಿನಕಾಯಿ, ಕುಂಬಳಕಾಯಿ ಹಾಗೂ ನಾಣ್ಯಗಳನ್ನು ಬಳಸಿರುವುದು ಕಂಡುಬಂದಿದೆ.

ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಕಳಸದ ಕಳಸೇಶ್ವರ ಸ್ವಾಮಿ ದೇವಸ್ಥಾನ ವ್ಯಾಪ್ತಿಗೆ ಸೇರಿದ ಕಾಲಭೈರವೇಶ್ವರನ ಗುಡಿ ಅತ್ಯಂತ ಪುರಾತನವಾಗಿದೆ. ಪ್ರತಿವರ್ಷ ಕಳಸೇಶ್ವರ ದೇವಸ್ಥಾನದ ಗಿರಿಜಾ ಕಲ್ಯಾಣ ರಥೋತ್ಸವ ಇದೇ ಮಾರ್ಗವಾಗಿ ಸಾಗುತ್ತದೆ.

ಕಳೆದ ವರ್ಷವೂ ಯುಗಾದಿ ಹಬ್ಬದ ಮುನ್ನಾದಿನ ದೇವಸ್ಥಾನದಲ್ಲಿ ಕಳ್ಳತನ ನಡೆದಿತ್ತು. ಇದೀಗ ಹಬ್ಬದ ದಿನವೇ ಜನಸಂಚಾರ ಹೆಚ್ಚಿರುವ ಪ್ರದೇಶದಲ್ಲಿ ಇಂತಹ ಘಟನೆ ನಡೆದಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಸಹೋದರಿ ಜವರಮ್ಮ ನಿಧನ: ಕುಟುಂಬದಲ್ಲಿ ಶೋಕ

ಹಾಸನ: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಅವರ ಸಹೋದರಿ ಜವರಮ್ಮ ಅವರು ಇಂದು ನಿಧನರಾಗಿದ್ದಾರೆ. 88 ವರ್ಷದ ಜವರಮ್ಮ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಜವರಮ್ಮ ಅವರ ನಿಧನದಿಂದ ಕುಟುಂಬದಲ್ಲಿ ಶೋಕ ವಾತಾವರಣ ನಿರ್ಮಾಣವಾಗಿದೆ. ತಂಗಿಯ ಅಗಲಿಕೆಗೆ ದೇವೇಗೌಡರು ಕಂಬನಿ ಮಿಡಿದಿದ್ದಾರೆ. ಅವರ ಅಂತ್ಯ ಸಂಸ್ಕಾರ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಬಸವನಾಯಕನಹಳ್ಳಿಯಲ್ಲಿ ನೆರವೇರಿತು.

ಇನ್ನೂ, ಜವರಮ್ಮ ಅವರು ದೇವೇಗೌಡರ ಮಗಳಾದ ಅನುಸೂಯ ಅವರನ್ನು ತಮ್ಮ ಮಗನಿಗೆ ವಿವಾಹ ಮಾಡಲು ಹಿಂದೆ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಆದರೆ, ದೇವೇಗೌಡರ ಮದುವೆಯ ನಂತರ ಪ್ರಸ್ತಾಪ ಮುರಿದುಬಿದ್ದ ಹಿನ್ನೆಲೆಯಲ್ಲಿ, ಸಹೋದರಸಹೋದರಿಯ ನಡುವೆ ವೈಮನಸ್ಸು ಉಂಟಾಯಿತು ಎಂದು ಮೂಲಗಳು ತಿಳಿಸಿವೆ.

error: Content is protected !!