ಧಾರವಾಡ: ರೀಲ್ಸ್ ವಿಡಿಯೋ ಚಿತ್ರೀಕರಣಕ್ಕಾಗಿ ಅಪಾಯಕರ ಸ್ಟಂಟ್ ಮಾಡಲು ಹೋಗಿ 15 ವರ್ಷದ ಬಾಲಕ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಮೈಸೂರಿನಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ನಮೀಷ್ ಸಂಗಳದ (15) ಮೃತ ಬಾಲಕನಾಗಿದ್ದು, ಯುಗಾದಿ ಹಬ್ಬದ ರಜೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಮನೆಗೆ ಬಂದಿದ್ದನು. ಗುರುವಾರ ಸಂಜೆ ಸ್ನೇಹಿತನೊಂದಿಗೆ ಶೇಜವಾಡಕ್ಕರ್ ಪ್ಲಾಟ್ ಪ್ರದೇಶಕ್ಕೆ ರೀಲ್ಸ್ ಚಿತ್ರೀಕರಣಕ್ಕಾಗಿ ತೆರಳಿದ್ದಾನೆ.
ಆಡಿ ಕಾರು ಮತ್ತು ಬೈಕ್ ಬಳಸಿ ವೇಗದ ಸ್ಟಂಟ್ ಹಾಗೂ ಕ್ರ್ಯಾಶ್ ದೃಶ್ಯ ಚಿತ್ರೀಕರಿಸಲು ಈ ಇಬ್ಬರು ಬಾಲಕರು ಯೋಜನೆ ಮಾಡಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಬೈಕ್ ಸವಾರನಾಗಿದ್ದ ನಮೀಷ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ನಮೀಷ್ ಸುಮಾರು 30 ಅಡಿ ದೂರಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆಯ ಬಳಿಕ ಸ್ಥಳೀಯರು ಕಾರು ಚಾಲನೆ ಮಾಡುತ್ತಿದ್ದ ಅಪ್ರಾಪ್ತ ಬಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ, “ನಾನು ಕಾರು ನಿಲ್ಲಿಸಿದ್ದೆ, ಅವನೇ ವೇಗವಾಗಿ ಬಂದು ಡಿಕ್ಕಿ ಹೊಡೆದನು” ಎಂದು ಆತ ಹೇಳಿಕೊಂಡಿದ್ದಾನೆ. ಕಾರು ತನ್ನ ತಂದೆಯದ್ದೇ ಎಂದು ಕೂಡ ತಿಳಿಸಿದ್ದಾನೆ.
ಬಿಜೆಪಿ ಮುಖಂಡ ವೀರೇಶ್ ಸಂಗಳದ ಅವರ ಪುತ್ರನಾಗಿದ್ದ ನಮೀಷ್ ಸಾವಿನಿಂದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

