Home Blog Page 2176

ಕಪ್ಪತಗುಡ್ಡದ ಮೇಲೆ ಚಿನ್ನದ ಕರಿನೆರಳು: ರಾಮಘಡ್ ಕಂಪನಿಯಿಂದ ಅರ್ಜಿ, ಸರ್ಕಾರದ ಮಟ್ಟದಲ್ಲಿ ಲಾಬಿ! 

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಕಪ್ಪತಗುಡ್ಡದಲ್ಲಿರುವ ಚಿನ್ನದ ನಿಕ್ಷೇಪಗಳ ಮೇಲೆ ಮತ್ತೊಮ್ಮೆ ಗಣಿ ಮಾಫಿಯಾದ ಕಣ್ಣು ಬಿದ್ದಿದೆ. ಜನರ ಪ್ರತಿರೋಧವಿದ್ದರೂ, ಪರಿಸರಪ್ರಿಯರ ಆಕ್ಷೇಪಗಳಿದ್ದರೂ ಗಣಿ ಲಾಬಿ ಮಾತ್ರ ಮರಳಿ ಯತ್ನ ಮಾಡುವುದನ್ನು ಬಿಟ್ಟಿಲ್ಲ. ಸದ್ಯಕ್ಕೆ ಮತ್ತೊಮ್ಮೆ ಚಿನ್ನದ ಗಣಿಗಾರಿಕೆಯ ಕರಿನೆರಳು ಕಪ್ಪತಗುಡ್ಡವನ್ನು ಆವರಿಸಿದೆ. ರಾಮಘಡ್ ಮಿನರಲ್ಸ್ ಆ್ಯಡ್ ಮೈನಿಂಗ್ ಲಿಮಿಟೆಡ್ (ಆರ್‌ಎಂಎಂಎಲ್) ಈಗ ಚಿನ್ನ ಹೆಕ್ಕಲು ಅನುಮತಿಗಾಗಿ ಕಾದು ಕುಳಿತಿದ್ದು, ಅನುಮತಿಗೆ ಅಗತ್ಯವಾದ ಎಲ್ಲ ತೆರೆಮರೆಯ ‘ಕ್ರಿಯೆ’ಗಳಲ್ಲಿ ಅದು ನಿರತವಾಗಿದೆ ಎನ್ನಲಾಗಿದೆ.

ವನ್ಯಜೀವಿಧಾಮವಾಗಿರುವ ಕಪ್ಪತಗುಡ್ಡ ಪ್ರದೇಶದಲ್ಲಿ ಯಾವುದೇ ಬೃಹತ್ ಕಾಮಗಾರಿಗಳನ್ನೇ ನಡೆಸುವಮತಿಲ್ಲ. ಅಂತದ್ದರಲ್ಲಿ ಗುಡ್ಡವನ್ನೇ ಆಳಕ್ಕೆ ಬಗೆಯುವ ಚಿನ್ನದ ಗಣಿಗಾರಿಕೆಗೆ ಅವಕಾಶ ನೀಡಲಂತೂ ಬರುವುದಿಲ್ಲ. ಆದರೂ ಕಂಪನಿಯೊಂದು ಬಿಟ್ಟೂ ಬಿಡದೇ ಇದರ ಹಿಂದೆ ಬಿದ್ದಿರುವುದನ್ನು ನೋಡಿ, ಚಿನ್ನದ ಗಣಿಗಾರಿಕೆಗೆ ಎಲ್ಲಿ ಅನುಮತಿ ಸಿಕ್ಕೇ ಬಿಡುತ್ತದೆಯೋ ಎಂದು ಪರಿಸರವಾದಿಗಳು ಆತಂಕಗೊಂಡಿದ್ದಾರೆ. ಕೆಲವರು ಪ್ರತಿಭಟನೆಗೂ ತಯಾರಾಗುತ್ತಿದ್ದಾರೆ.

ಈಗಾಗಲೇ ಜಿಲ್ಲೆಯ ಅರಣ್ಯ ಇಲಾಖೆಗೆ ಈ ಅರ್ಜಿಯ ಕುರಿತಂತೆ ಪರಿಶೀಲನೆ ನಡೆಸಿ ವರದಿ ಕಳಿಸಲು ರಾಜ್ಯ ಅರಣ್ಯ ಇಲಾಖೆಯ ಕೇಂದ್ರ ಕಚೇರಿ ಸೂಚಿಸಿದೆ ಎಂದು ಡಿಎಫ್‌ಒ ಸೂರ್ಯಸೇನ್ ತಿಳಿಸಿದ್ದಾರೆ.

              ಪದೇ ಪದೇ ಅರ್ಜಿ!
ಬಳ್ಳಾರಿ ಮೂಲದ ಆರ್‌ಎಂಎಂಎಲ್ ಕಪ್ಪತಗುಡ್ಡದಲ್ಲಿ ಚಿನ್ನದ ಗಣಿಗಾರಿಕೆ ನಡೆಸಲು ಅವಕಾಶ ಕೋರಿ 2019 ಅಕ್ಟೋಬರ್ 10 ರಂದು ಅರ್ಜಿ ಸಲ್ಲಿಸಿತ್ತು. ಜಿಲ್ಲೆಯ ಶಿರಹಟ್ಟಿ ತಾಲೂಕಿನ ಜಲ್ಲಿಗೇರಿ ಗ್ರಾಮದ ಸರ್ವೆ ನಂ. 45, 49 ಮತ್ತು 50ರಲ್ಲಿ ಒಟ್ಟು 39.9 ಹೆಕ್ಟೇರ್ ಅರಣ್ಯ ಭೂಮಿಯನ್ನು ಚಿನ್ನದ ಗಣಿಗಾರಿಕೆ ನಡೆಸಲು ಅವಕಾಶ ಕೋರಿ ಅರಣ್ಯ ಇಲಾಖೆ, ಕೇಂದ್ರ ಸರಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿತ್ತು. ಆರ್‌ಎಂಎಂಎಲ್ ಅರ್ಜಿ ಪರಿಶೀಲಿಸಿದ ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಕಾರಿಗಳು, ಕೆಲವು ಮಹತ್ವದ ಮಾಹಿತಿ ಒದಗಿಸಿಲ್ಲ. ಹೀಗಾಗಿ ಈ ಅರ್ಜಿ ಅಪೂರ್ಣವಾಗಿದೆ.

ಅಗತ್ಯ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಿ ಎಂದು ನಾಲ್ಕು ಪುಟದ ವಿವರಣೆ ನೀಡಿತ್ತು. ಹೀಗಾಗಿ ಆರ್‌ಎಂಎಂಎಲ್ ಕಂಪನಿ, ಈಗ ಅಗತ್ಯ ದಾಖಲೆ, ಮಾಹಿತಿಯನ್ನು ಜೋಡಿಸಿಕೊಂಡು ಮತ್ತೆ ಚಿನ್ನದ ಗಣಿಗಾರಿಕೆಗೆ ಅರ್ಜಿ ಹಾಕಿದೆ. ಅರಣ್ಯ ಇಲಾಖೆ ಅರ್ಜಿ ತಿರಸ್ಕರಿಸುವ ಬದಲು, ಪರಿಒಶೀಲನೆ ನಡೆಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.
ಜಿಲ್ಲೆಯ ಜನಪ್ರತಿನಿಧಿಗಳು ಈ ಕುರಿತಂತೆ ಇನ್ನೂ ಎಚ್ಚರ ವಹಿಸಿಲ್ಲ. ಪರಿಸರವಾದಿಗಳು ಮತ್ತು ಸಂಘಟನೆಗಳು ಈ ಬಗ್ಗೆ ಗಮನ ಹರಿಸಿ ಕಪ್ಪತಗುಡ್ಡವನ್ನು ಉಳಿಸಿಕೊಳ್ಳ ಬೇಕಾಗಿದೆ.

ಕ್ವಾರಿಗಳ ಸಂಚು

ಇನ್ನೊಂದು ಕಡೆ ಶಿರಹಟ್ಟಿ ತಾಲೂಕಿನ ವ್ಯಾಪ್ತಿಗೆ ಬರುವ ವನ್ಯಜೀವಿಧಾಮ ಬ್ಲಾಕ್-4 ಅನ್ನು ಅಧಿಸೂಚನೆಯಿಂದ ಹೊರಗಿಡಲು ಜಲ್ಲಿಕಲ್ಲು ಮತ್ತು ಎಂ-ಸ್ಯಾಂಡ್ ಮಾಫಿಯಾ ಜನಪ್ರತಿನಿಧಿಗಳ ಮೂಲಕ ಒತ್ತಡ ಹೇರುತ್ತಿದೆ. ಒಂದು ಕಡೆ ಚಿನ್ನದ ಗಣಿಗಾರಿಕೆ, ಇನ್ನೊಂದು ಕಡೆ ಕಲ್ಲು ಗಣಿಗಾರಿಕೆ ಕಪ್ಪತಗುಡ್ಡಕ್ಕೆ ಕರಿನೆರಳಿನಂತೆ ಕಾಡುತ್ತಿವೆ.


   ಅರ್ಜಿ ಸ್ವೀಕರಿಸುವುದೇ ತಪ್ಪು!

2019 ಜನವರಿ 10 ರಂದು ಕಪ್ಪತಗುಡ್ಡವನ್ನು ವನ್ಯಜೀವಿ ಧಾಮ ಎಂದು ಸರಕಾರ ಘೋಷಣೆ ಮಾಡಿದ ನಂತರವೂ ಗಣಿ ಕಂಪನಿ ಚಿನ್ನದ ಗಣಿಗಾರಿಕೆ ನಡೆಸಲು ಅವಕಾಶ ಕೋರಿದೆ. ವನ್ಯಜೀವಿ ಧಾಮ ಘೋಷಣೆ ಮಾಡಿದ ನಂತರ ಗಣಿಗಾರಿಕೆ ನಡೆಸಲು ಅವಕಾಶವಿಲ್ಲ ಎಂದು ನೇರವಾಗಿ ಗಣಿ ಕಂಪನಿಗೆ ಉತ್ತರಿಸುವ ಬದಲು, ಇನ್ನಷ್ಟು ದಾಖಲೆಯೊಂದಿಗೆ ಪುನಃ ಅರ್ಜಿ ಹಾಕಿ ಎಂದು ಇಲಾಖೆಯವರೇ ‘ಬೆಂಬಲ’ ಕೊಡುತ್ತಿರುವುದನ್ನು ನೋಡಿದರೆ, ಆರ್‌ಎಂಎಂಎಲ್ ಕಂಪನಿಯ ಬಾಹುಗಳು ಇಲಾಖೆಯ ಒಳಕ್ಕೂ ಚಾಚಿವೆ ಎಂಬುದು ಸ್ಪಷ್ಟ ಎನ್ನುತ್ತಾರೆ ಪರಿಸರವಾದಿಗಳು.

ಜಿಲ್ಲೆಯಲ್ಲಿ ಶುಕ್ರವಾರ 78 ಜನರಿಗೆ ಸೋಂಕು; 87 ಜನರು ಗುಣಮುಖ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯಲ್ಲಿ ಶುಕ್ರವಾರ ದಿ 25 ರಂದು 78 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

78 ಜನರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 8757 ಕ್ಕೇರಿದೆ. ಶುಕ್ರವಾರ 87 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಇದುವರೆಗೂ 7840 ಜನ ಗುಣಮುಖರಾಗಿದ್ದಾರೆ.

790 ಜನ ಸಕ್ರಿಯ ಸೋಂಕಿತರಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಬುಧವಾರ ಜಿಲ್ಲಾಡಳಿತ ನೀಡಿದ ಮಾಹಿತಿಯಂತೆ ಇದುವರೆಗೂ ಜಿಲ್ಲೆಯಲ್ಲಿ 127 ಜನ ಕೊವಿಡ್ ಗೆ ಮೃತಪಟ್ಟಿದ್ದಾರೆ.

ತಾಲೂಕುವಾರು ಒಟ್ಟು ಸೋಂಕಿತರ ವಿವರ: ಗದಗ-31, ಮುಂಡರಗಿ-12, ನರಗುಂದ-06, ರೋಣ-18, ಶಿರಹಟ್ಟಿ-07, ಹೊರಜಿಲ್ಲೆಯ ಪ್ರಕರಣಗಳು-04.

ಕೊವಿಡ್-19 ಸಂತ್ರಸ್ತ ಕಾರ್ಮಿಕರ ನೆರವಿಗೆ ಸಂಸದ ಕರಡಿ ಸಂಗಣ್ಣ ಸ್ಪಂದನೆ: ಕಾರ್ಮಿಕ ಇಲಾಖೆಯಿಂದ ಆಹಾರ ಸಾಮಾಗ್ರಿ ಕಿಟ್ ನೀಡಲು ಸಚಿವ ಶಿವರಾಂ ಹೆಬ್ಬಾರ್ ಗೆ ಮನವಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ,ಕೊಪ್ಪಳ :
ಕೊವಿಡ್-19 ಲಾಕ್ ಡೌನ್ ಸಂದರ್ಭದಿಂದ ಇಲ್ಲಿಯವರೆಗೂ ಸರಿಯಾದ ಉದ್ಯೋಗ ಸಿಗದೆ ಸಂಕಷ್ಟದಲ್ಲಿರುವ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪಗತಿಯಲ್ಲಿ ಬರುವ ಸಾವಿರಾರು ಕಟ್ಟಡ ಕಾರ್ಮಿಕರು, ಅಸಂಘಟಿತ ಕಾರ್ಮಿಕರ ನೆರವಿಗೆ ಸ್ಪಂದಿಸಿರುವ ಸಂಸದ ಕರಡಿ ಸಂಗಣ್ಣ ಅವುರು ಕಾರ್ಮಿಕ ಇಲಾಖೆಯಿಂದ ಆಹಾರ ಸಾಮಾಗ್ರಿ ಕಿಟ್ ಗಳನ್ನು ನೀಡುವುಂತೆ ಕಾರ್ಮಿಕ ಹಾಗೂ ಸಕ್ಕರೆ ಸಚಿವ ಶಿವರಾಂ ಹೆಬ್ಬಾರ್ ಅವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸರ್ಕಾರದಿಂದ ಸಿಗುವ ಸೌಲಭ್ಯಗಳೊಂದಿಗೆ ಇತರ ದಾನಿಗಳ ನೆರವಿನೊಂದಿಗೆ ಕೃಷಿ ಕೂಲಿಕಾರರು, ಕಾರ್ಮಿಕರು, ಬಡವರಿಗೆ ದಿನಸಿ ಕಿಟ್ ಗಳು ಸೇರಿದಂತೆ ಇತರೆ ಸಹಾಯಹಸ್ತ ನೀಡಿರುವ ಸಂಸದರು ಕಾರ್ಮಿಕ ಇಲಾಖೆಯಿಂದ ಲೋಕಸಭಾ ಕ್ಷೇತ್ರದಲ್ಲಿರುವ ಸುಮಾರು 25 ಸಾವಿರ ಕಟ್ಟಡ ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರುಗಳಿಗೆ ಕೊವಿಡ್-19 ಪೂರ್ವದಲ್ಲಿದ್ದಂತೆ ಪ್ರತಿನಿತ್ಯ ಉದ್ಯೋಗ ಸಿಗದೆ ಜೀವನ ನಿರ್ವಹಣೆ ಮಾಡಲು ಕಷ್ಟಸಾಧ್ಯವಾಗಿರುವದರಿಂದ ಆಹಾರ ಧ್ಯಾನ್ಯ ಸಾಮಾಗ್ರಿ ದಿನಸಿ ಕಿಟ್ ಗಳನ್ನು ಇಲಾಖೆಯಿಂದ ನೀಡಲು ಕೋರಿದ್ದಾರೆ.

ಕೋಟ್

ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರಿಗೆ ಜಿಲ್ಲೆಯ ಹಾಗೂ ಲೋಕ ಸಭಾ ಕ್ಷೇತ್ರದಲ್ಲಿನ ಕಾರ್ಮಿಕರು, ಅಸಂಘಟಿತ ವರ್ಗದ ಜನರ ಸಮಸ್ಯೆಗಳ ಬಗ್ಗೆ ಗಮನಕ್ಕೆ ತರಲಾಗಿದ್ದು, ಪ್ರಸ್ತುತ ಸಂಕಷ್ಟದಲ್ಲಿರುವ ಕಾರ್ಮಿಕ ವರ್ಗಕ್ಕೆ ಇಲಾಖೆಯಿಂದ ಆಹಾರ ಸಾಮಾಗ್ರಿ ಕಿಟ್ ನೀಡಲು ಮಾಡಿಕೊಂಡ ಮನವಿಗೆ ಸಚಿವರು ಸ್ಪಂದಿಸಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ.

ಕರಡಿ ಸಂಗಣ್ಣ, ಸಂಸದರು ಕೊಪ್ಪಳ.

ಗ್ರಾಮೀಣ ಬ್ಯಾಂಕ್ ಕಳ್ಳತನ ಪ್ರಕರಣ: ಆರೋಪಿಗಳ ಪತ್ತೆಗೆ 4 ವಿಶೇಷ ತಂಡ ರಚನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದಲ್ಲಿ ನಿನ್ನೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ನಡೆದಿರುವ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ 4 ವಿಶೇಷ ತಂಡಗಳನ್ನು ರಚಿಸಲಾಗಿದೆ.

ಈ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಅವರು ಮಾಹಿತಿ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಬ್ಯಾಂಕಿನ ವ್ಯವಸ್ಥಾಪಕ ರವಿ ಭೀಮಪ್ಪ ಕೋಟೆಪ್ಪಗೋಳ ಸೆ. 24 ರಂದು ರಾತ್ರಿ ತಮ್ಮ ಬ್ಯಾಂಕ್ ನಲ್ಲಿ ಕಳ್ಳತನವಾಗಿರುವ ಕುರಿತಂತೆ ದೂರು ದಾಖಲಿಸಿದ್ದಾರೆ.

ಬ್ಯಾಂಕ್ ನ ಲಾಕರ್ ನಲ್ಲಿದ್ದ 1,24,80,333 ರೂಪಾಯಿ ಮೌಲ್ಯದ 3 ಕೆ.ಜಿ 761 ಗ್ರಾಂ ಚಿನ್ನಾಭರಣಗಳು ಹಾಗೂ 21,75,572 ರೂಪಾಯಿ ನಗದು ಹಣವನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ದೂರು ನೀಡಿದ್ದಾರೆ.ಪ್ರಕರಣದ ಹಿನ್ನೆಲೆಯಲ್ಲಿ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ 4 ವಿಶೇಷ ತನಿಖಾ ತಂಡ ರಚಿಸಲಾಗಿದೆ.

ಗಂಗಾವತಿ ಡಿವೈಎಸ್ ಪಿ ಆರ್.ಎಸ್. ಉಜ್ಜನಕೊಪ್ಪ ನೇತೃತ್ವದಲ್ಲಿ ಯಲಬುರ್ಗಾ ಸಿಪಿಐ ನಾಗರಡ್ಡಿ, ಕೊಪ್ಪಳ ನಗರ ಠಾಣೆಯ ಮಾರುತಿ ಗುಳಾರಿ, ಕುಕನೂರು ಪಿಎಸ್ಐ ವೆಂಕಟೇಶ, ಡಿಸಿಐಬಿ ಘಟಕದ ಪಿಎಸ್ಐ ಅಮರೇಶ ಹುಬ್ಬಳ್ಳಿ ಹಾಗೂ ನುರಿತ ತಾಂತ್ರಿಕ ಸಿಬ್ಬಂದಿಯನ್ನೊಳಗೊಂಡ ನಾಲ್ಕು ವಿಶೇಷ ಪತ್ತೆ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಮಾಹಿತಿ ನೀಡಿದ್ದಾರೆ.

ಪಟ್ಟಣ ಪಂಚಾಯತ್ ಕಂಪ್ಯೂಟರ್ ಆಪರೇಟರ್ ಎಸಿಬಿ ಬಲೆಗೆ! ನಿಜಕ್ಕೂ ದುಡ್ಡು ಕೇಳಿದ್ಯಾರು?

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ:
ಜಿಲ್ಲೆಯ ಕುಕನೂರು ಪಟ್ಟಣ ಪಂಚಾಯತ್ ಕಂಪ್ಯೂಟರ್ ಆಪರೇಟರ್ ಮೇಲೆ ಎಸಿಬಿ ಅಧಿಕಾರಿಗಳು ಶುಕ್ರವಾರ ದಾಳಿ ಮಾಡಿದ್ದಾರೆ. ಕಂಪ್ಯೂಟರ್ ಆಪರೇಟರ್ ಕುಮಾರಸ್ವಾಮಿ ಮಠದ 1 ಲಕ್ಷ ರೂಪಾಯಿ ನಗದು ಲಂಚವಾಗಿ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.


ಗುತ್ತಿಗೆದಾರ ಅಕ್ತರಸಾಬ್ ಖಾಜಿ ಎಂಬುವರು ಕುಕನೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಯೋಜನೆಯಡಿ 24 ಲಕ್ಷ ರೂಪಾಯಿ ಅನುದಾನದ ಕಾಮಗಾರಿ ನಿರ್ವಹಿಸಿದ್ದರೆ. ಇದರ ಬಿಲ್ ಪಾವತಿಗೆ ಒಟ್ಟು 3 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಮುಂಗಡವಾಗಿ 1 ಲಕ್ಷ ರೂಪಾಯಿ ಪಡೆಯುತ್ತಿದ್ದೇನೆ ಎಂದು ಕಂಪ್ಯೂಟರ್ ಆಪರೇಟರ್ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.


ಆದರೆ, ವಾಸ್ತವದಲ್ಲಿ ಕಂಪ್ಯೂಟರ್ ಆಪರೇಟರ್ ಕೇವಲ ನೆಪ ಮಾತ್ರ. ಈತನ ಮೂಲಕ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್(ಜೆಇ) ಮತ್ತು ಮುಖ್ಯಾಧಿಕಾರಿಗಳು ಬೇಡಿಕೆ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಪ್ಯೂಟರ್ ಆಪರೇಟರ್ ನ ಸೂಕ್ತ ತನಿಖೆ ನಡೆಯಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಎಸಿಬಿ ಬಳ್ಳಾರಿ ಎಸ್ಪಿ ಗುರುನಾಥ ಅವರ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

10 ಕೆಜಿ ಸ್ಫೋಟ ವಸ್ತು ವಶ: ಅಮೋನಿಯಂ ನೈಟ್ರೆಟ್, ಜಿಲೆಟಿನ್ ಕಡ್ಡಿ ಅಕ್ರಮ ಸಂಗ್ರಹ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಕ್ವಾರಿಯಲ್ಲಿ ಬ್ಲಾಸ್ಟ್ ಮಾಡಿ ತಮ್ಮ ಸ್ವಂತ ಲಾಭಕ್ಕೋಸ್ಸರ ಕಲ್ಲನ್ನು ಒಡೆದು ತೆಗೆಯುವ ಉದ್ದೇಶದಿಂದ ಜಮೀನೊಂದರ ಶೆಡ್ಡಿನ ಮುಂದೆ ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ ಸ್ಪೋಟಕ ವಸ್ತುಗಳನ್ನು ಗದಗ ಗ್ರಾಮೀಣ ವೃತ್ತ ಸಿಪಿಐ ಆರ್.ಎಸ್.ಕಪ್ಪತ್ತನವರ ನೇತೃತ್ವದಲ್ಲಿ ಮುಳಗುಂದ ಪೊಲೀಸ್ ಠಾಣೆಯ ಪಿಎಸ್‌ಐ ಪ್ರಕಾಶ ಡಿ. ಹಾಗೂ ಸಿಬ್ಬಂದಿ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.


ತಾಲೂಕಿನ ಸೀತಾಲಹರಿ-ಶಿರಹಟ್ಟಿ ರಸ್ತೆಯ ಪಕ್ಕದ ಸಮೀಪವಿರುವ ಇಟ್ಟುಣಗಿ ಮಾಸ್ತರ ಜಮೀನಿನಲ್ಲಿ ಶೆಡ್ಡಿನ ಮುಂದೆ ಆರೋಪಿತರಾದ ಹನಮಂತಪ್ಪ ತಂದೆ ಬಸವಣ್ಣೆಪ್ಪ ಯರೆವಡ್ಡರ ಮತ್ತು ಮುದಕಪ್ಪ ಅಲಿಯಾಸ್ ಸಣ್ಣತಿರ್ಲಪ್ಪ ತಂದೆ ಯರವಡ್ಡರ ಸಂಬAಧಪಟ್ಟ ಇಲಾಖೆಯಿಂದ ಯಾವುದೇ ಪರವಾನಗಿ (ಅನುಮತಿ) ಇಲ್ಲದೇ ಸ್ಪೋಟಕ ವಸ್ತುಗಳನ್ನು ಉಪಯೋಗಿಸಿದ್ದಾರೆ.

3 ಸಾವಿರ ರೂ.ನಷ್ಟು 10 ಕೆಜಿ ತೂಕದ ಅಮೋನಿಯಮ್ ನೈಟ್ರೇಟ್, 6250 ರೂ.ನಷ್ಟು 625 ಎಲೆಕ್ಟಿçಕ್ ಡೆಟೋನೆಟರ ವೈಯರ್, 4280 ರೂ.ನಷ್ಟು 214 ಜಿಲೆಟಿನ್ ಟ್ಯೂಬುಗಳು, ಮೂರು ಮೆಗ್ಗರ್ ಬಾಕ್ಸಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.


ಅನಧಿಕೃತ ವಸ್ತುಗಳನ್ನು ವಶಪಡಿಸಿಕೊಂಡಿರುವ ಮುಳಗುಂದ ಪೊಲೀಸ್ ಠಾಣೆಯ ಗುನ್ನಾ ನಂಬರ 42/2020 ಕಲಂ 5 ಸಹ ಕಲ 9(ಬಿ) ಆಫ್ ಎಕ್ಸಪ್ಲೋಸಿವ್ಸ್ ರೂಲ್ಸ್ 2008 ಹಾಗೂ ಕಲಂ 5 ಎಕ್ಸಪ್ಲೋಸಿವ್ಸ್ ಸಬ್‌ಸ್ಟನ್ಸಸ್ ಯಾಕ್ಟ 1980 ರ ಅಡಿಯಲ್ಲಿ ಪ್ರಕರಣ ದಾಖಲಾಗಿಸಿದೆ. ಒಬ್ಬ ಆರೋಪಿತನಿಗೆ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರಪಡಿಸಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮನೆ ಕಟ್ಟಿಯಾಯ್ತು, ನೋಡಬನ್ನಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ:
ಗಾಯತ್ರಿ ಕ್ರಿಯೇಷನ್ಸ್ ಬೆಂಗಳೂರು ಹಾಗೂ ಸಂಯುಕ್ತ ಸ್ಟುಡಿಯೋಸ್ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಕಲಾತ್ಮಕ ಕನ್ನಡ ಚಿತ್ರ ’ಮನೆ’ ಚಿತ್ರೀಕರಣ ಮುಕ್ತಾಯಗೊಂಡಿದೆ.


ಉತ್ತರ ಕರ್ನಾಟಕದ ಹುಬ್ಬಳ್ಳಿ, ಶಿರಗುಪ್ಪಿ, ನಲವಡಿ ಗ್ರಾಮಗಳ ಸುತ್ತಮುತ್ತ ಹತ್ತು ದಿನಗಳ ಕಾಲ ಸತತ ಚಿತ್ರೀಕರಣ ನಡೆಸಲಾಗಿದ್ದು, ಇದು ಕಲಾತ್ಮಕ ಚಿತ್ರವಾಗಿದ್ದು ಕೌಟುಂಬಿಕ ಕಥಾ ಹಂದರವನ್ನು ಹೊಂದಿದೆ. ಸಿದ್ದಪ್ಪ ಒಬ್ಬ ಕೂಲಿ ಕಾರ್ಮಿಕ, ಆತನಿಗೆ ತನ್ನದೇ ಆದ ಸ್ವಂತ ಮನೆ ಕಟ್ಟಬೇಕೆಂಬ ಹಂಬಲ. ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಬಳಸಿಕೊಂಡು ಹೇಗೆ ಮನೆ ನಿರ್ಮಾಣ ಮಾಡುತ್ತಾನೆ? ಮಗ ಸೊಸೆಯರಿಗಾಗಿ ಸಿದ್ದಪ್ಪ ತೆಗೆದುಕೊಳ್ಳುವ ತೀರ್ಮಾನ, ಊರ ಗೌಡರು ಸಿದ್ದಪ್ಪನಿಗೆ ಮಾಡುವ ಸಹಾಯ ಕುತೂಹಲ ಮೂಡಿಸುತ್ತದೆ.


ಇದೀಗ ಚಿತ್ರ ತಂಡವು ಸಂಕಲನ ಕಾರ್ಯಕ್ಕೆ ತೊಡಗಲಿದ್ದು ಡಿಸೆಂಬರ್ ವೇಳೆಗೆ ತೆರೆಗೆ ತರಲಾಗುತ್ತದೆ. ತಾರಾಗಣದಲ್ಲಿ ರೇಣುಕುಮಾರ ಸಂಸ್ಥಾನಮಠ, ಪ್ರಮೀಳ ಸುಬ್ರಹ್ಮಣ್ಯ, ಸಾಗರ್ ಕೆ.ಎಚ್, ಅಕ್ಷತಾ ವಿಲಾಸ್, ಮಂಜುನಾಥ ಪಾಟೀಲ, ವಿದ್ಯಾ ಪ್ರಭು ಗಂಜಿಹಾಳ, ಅವಿನಾಶ ಪಿಜಿ ಮೊದಲಾದವರು ಅಭಿನಯಿಸಿದ್ದಾರೆ.

ಸಂಗೀತ ಶಿವಸತ್ಯ, ಛಾಯಾಗ್ರಹಣ ವಿನಾಯಕ ರೇವಡಿ, ಚಿತ್ರಕಥೆ, ಸಂಕಲನ ಟಿ. ಮುತ್ತುರಾಜು, ಕಥೆ ಮತ್ತು ನಿರ್ಮಾಪಕರು ಟಿ.ಎಸ್.ಕುಮಾರ, ಸಾಹಿತ್ಯ ಸಹನಿರ್ದೇಶನ ಸತೀಶ್ ಜೋಶಿ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ, ಈ ಹಿಂದೆ ಶ್ರೀ ಕಬ್ಬಾಳಮ್ಮ ಮಹಿಮೆ ಪೌರಾಣಿಕ ಸಿನಿಮಾ ನಿರ್ದೇಶನ ಮಾಡಿದ್ದ ಜಂಟಿ ನಿರ್ದೇಶಕಿಯರಾದ ಪೂರ್ಣಶ್ರೀ ಆರ್, ಮತ್ತು ರಶ್ಮೀ ಎಸ್ ನಿರ್ದೇಶನ ಹೊಣೆ ಹೊತ್ತಿದ್ದಾರೆ.

ನರೇಗಾ ಅಡಿ ತೋಟ, ನಿರ್ಮಾಣಕ್ಕೆ ಚಾಲನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ:
ನರೇಗಾ ಅಡಿಯಲ್ಲಿ ವೈಯಕ್ತಿಕ ತೋಟಗಾರಿಕೆ ಮಾಡಿಕೊಳ್ಳಲು ರೈತ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸಂಜೀವ ಚೌಗಲಾ ತಿಳಿಸಿದರು.


ತಾಲೂಕಿನ ಹೊಸಬೂದಿಹಾಳ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ವೈಯಕ್ತಿಕ ತೋಟಗಾರಿಕೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ 13 ಗ್ರಾಪಂ ವ್ಯಾಪ್ತಿಯಲ್ಲಿಯ ಪ್ರತಿ ಗ್ರಾಪಂ ವತಿಯಿಂದ 10 ಜನ ಫಲಾನುಭವಿಗಳನ್ನು ಆಯ್ಕೆ ಮಾಡಬಹುದಾಗಿದೆ ಎಂದರು.


ಎನ್‌ಆರ್‌ಇಜಿಯಡಿಯಲ್ಲಿ ಒಂದು ತೋಟ ನಿರ್ಮಾಣ ಕಾರ್ಯವನ್ನು ಫಲಾನುಭವಿಗಳು ಆರು ದಿನದೊಳಗಾಗಿ ಪೂರ್ಣಗೊಳಿಸಬೇಕು. ಇದಕ್ಕಾಗಿ ಎನ್‌ಆರ್‌ಇಜಿ ಅಡಿಯಲ್ಲಿ ಪ್ರತಿ ಕೂಲಿಕಾರ್ಮಿಕರಿಗೆ 275 ರೂ.ಗಳಂತೆ ಒಟ್ಟು ಆರು ದಿನದ ಕೂಲಿ 1658 ರೂ ನೀಡಲಾಗುವುದು.


ಒಟ್ಟು 13 ಸಸಿಗಳಾದ ತೆಂಗು ಮಾವು, ಚಿಕ್ಕು ಹಾಗೂ ಲಿಂಬು, ಕರಿಬೇವು, ನುಗ್ಗೆ, ಪಪ್ಪಾಯಿ, ಫೇರು ಇವುಗಳನ್ನು ನಾಟಿ ಮಾಡಿಕೊಳ್ಳಬಹುದು. ಫಲಾನುಭವಿಗಳು ಇವುಗಳನ್ನು ಮನೆಯ ವರಾಂಡವಿದ್ದಲ್ಲಿ ಮನೆಯ ಮುಂದೆ ಮತ್ತು ಹಿತ್ತಲಿನ ಜಾಗದಲ್ಲಿ ತೋಟ ನಿರ್ಮಾಣ ಮಾಡಿಕೊಳ್ಳಬಹುದು.

ಫಲಾನುಭವಿಗಳು ಸಸಿ ಮತ್ತು ಇತರ ಸಾಮಗ್ರಿಗಳ ಖರ್ಚು ಸ್ವಂತ ಮಾಡಿಕೊಳ್ಳಭೇಕು. ನಂತರ ಫಲಾನುಭವಿಗಳ ಖಾತೆಗೆ ಸಾಮಗ್ರಿ ವೆಚ್ಚವಾಗಿ 749 ರೂ ತೋಟಗಾರಿಕೆ ಇಲಾಖೆಯಿಂದ ಜಮೆ ಮಾಡಲಾಗುವುದು ಎಂದು ಚೌವ್ಹಾಣ ತಿಳಿಸಿದರು. ತೋಟಗಾರಿಕೆ ನಿರ್ಮಾಣಮಾಡಿಕೊಳ್ಳಲು ಈಗಾಗಲೇ ಸುಮಾರು 200 ರೈತರಿಂದ ಅರ್ಜಿ ಬಂದಿವೆ. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ ಸಂಪರ್ಕೀಸಲು ತಿಳಿಸಿದರು.


ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಆನಂದ ನರಸನ್ನವರ, ತಾಂತ್ರಿಕ ಸಹಾಯಕ ಮುತ್ತು ಕಟ್ಟಿ, ನರೇಗಾ ಸಹಾಯಕ ಅಧಿಕಾರಿ ಪೂರ್ಣಾನಂದ ಸುಂಕದ, ಮಂಜುನಾಥ ಅಳಗವಾಡಿ, ಬಸವರಾಜ ಅಳಗವಾಡಿ, ಬಾಬೂ ಮಾನೆ, ಕೃಷ್ಣಪ್ಪ ಚವ್ಹಾಣ ಉಪಸ್ಥಿತರಿದ್ದರು.

ಹೆಸರು ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭ; ಕ್ವಿಂಟಲ್ ಹೆಸರಿಗೆ 7196 ರೂ.

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ: ಹೆಸರು ಬೆಂಬಲ ಬೆಲೆ ಕೇಂದ್ರ ಆರಂಭಿಸುವಂತೆ ತಾಲೂಕಿನ ರೈತರು ಬೇಡಿಕೆ ಇಟ್ಟ ಹಿನ್ನಲೆಯಲ್ಲಿ ಇದಕ್ಕೆ ಸ್ಪಂದಿಸಿದ ಸಚಿವ ಸಿ.ಸಿ. ಪಾಟೀಲ ಸಹಕಾರ ಮಾರಾಟ ಮಂಡಳಿ ಅಧಿಕಾರಿಗಳ ಹಾಗೂ ಸಂಬಂಧಿಸಿದ ಸಚಿವರ ಜೊತೆ ಮಾತನಾಡಿ ಬೆಂಬಲ ಬೆಲೆ ಕೇಂದ್ರವನ್ನು ಆರಂಭಿಸಲು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಪಿಎಂಸಿ ಆವರಣದಲ್ಲಿ ಹೆಸರು ಬೆಂಬಲ ಬೆಲೆ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಎ.ಎಂ. ಹುಡೇದ ಹೇಳಿದರು.


ರೈತರ ಒಂದು ಖಾತೆಗೆ ನಾಲ್ಕು ಕ್ವಿಂಟಾಲ್ ಹೆಸರು ಎಫ್‌ಎಕ್ಯೂ ಆಧಾರದ ಮೇಲೆ (ಗುಣಾತ್ಮಕತೆ) ಖರೀಧಿಸಲಾಗುವುದು. ಪ್ರತಿ ಕ್ವಿಂಟಾಲ್‌ಗೆ 7196 ರೂ ದರವಿದ್ದು ಮಾರುಕಟ್ಟೆಗಿಂತ ಹೆಚ್ಚಿನ ದರವಿದೆ. ರೈತರು ಇನ್ನಷ್ಟು ಬೆಲೆ ಹೆಚ್ಚಳ ಗೊಳಿಸಲು ಮನವಿ ಮಾಡಿಕೊಂಡಿದ್ದಾರೆ. ಸಚಿವರ ಜೊತೆ ಮತನಾಡಿ ಸರ್ಕಾರದಿಂದ ಬೆಲೆ ಹೆಚ್ಚಳಗೊಳಿಸಲು ಚರ್ಚಿಸಿ ಎಂದು ಮನವಿ ಮಾಡಿಕೊಳ್ಳಲಾಗುವುದು.


ಸೆ. 15 ಕ್ಕೆ ಹೆಸರು ಬೆಂಬಲ ಬೆಲೆ ಕೇಂದ್ರ ತೆರೆಯಲು ಜಿಲ್ಲಾಧಿಕಾರಿಗಳಿಂದ ಆದೇಶವಾಗಿತ್ತು. ಅ. 15 ರವರೆಗೆ ಹೆಸರು ಉತ್ಪನ್ನ ಮಾರಾಟಗೊಳಿಸುವ ರೈತರ ಹೆಸರು ನೊಂದನೆ ಮಾಢಿಕೊಳ್ಳಲಾಗುವುದು. ನವೆಂಬರ್ 15 ರವರೆಗೆ ಖರೀಧಿ ನಡೆಸಲಾಗುವುದು.

ಸೋಮವಾರದಿಂದ ಖರೀದಿ ಕೇಂದ್ರ ಆರಂಭಗೊಳ್ಳಲಿವೆ. ನರಗುಂದ ಟಿಎಪಿಸಿಎಂಎಸ್ ಹಾಗೂ ಚಿಕ್ಕನರಗುಂದ, ಕೊಣ್ಣೂರ, ಶಿರೋಳ, ಸಂಕದಾಳ, ಹಿರೇಕೊಪ್ಪ ಮತ್ತು ಸುರಕೋಡ ಗ್ರಾಮ ಪ್ರದೇಶದಲ್ಲಿ ತೆರೆಯುವ ಕೇಂದ್ರಗಳಲ್ಲಿ ಹೆಸರು ಖರೀಧಿಸಲಾಗುವುದು ಎಂದು ಹುಡೇದ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.


ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ಶಂಕರಗೌಡ ಯಲ್ಲಪ್ಪಗೌಡ್ರ, ಎಪಿಎಂಸಿ ಸದಸ್ಯ ಎನ್.ವಿ. ಮೇಟಿ, ಸಂಭಾಜೀ ಕಾಶೀದ, ಯಲ್ಲಪ್ಪಗೌಡ ಪಾಟೀಲ, ವಿ.ಜಿ. ಹಣ್ಣಿಕೇರಿ, ಎಂ.ಬಿ. ಹಿರೇಮಠ, ಎಪಿಎಂಸಿ ಕಾರ್ಯದರ್ಶಿ ರಾಘವೇಂದ್ರ ಸಜ್ಜನ, ಕೆಎಸ್‌ಸಿಎಂಎಫ್ ವ್ಯವಸ್ಥಾಪಕ ಸಚೀನ್ ಪಾಟೀಲ, ವಿನೋದ ಚೌರಡ್ಡಿ, ನಿಂಗಪ್ಪ ಕುರಿ, ಎಪಿಎಂಸಿ ಉಪಾಧ್ಯಕ್ಷ ಮಲ್ಲಪ್ಪ ಬೋವಿ, ಸಿ.ಬಿ. ಕರಿಗೌಡ್ರ, ಮಾಬೂಸಾಬ ಕಮ್ಮಾರ, ಕೃಷ್ಣಾಜಿ ಪಾಚಂಗಿ, ಭೀಮಪ್ಪ ಪಾಚಂಗಿ, ಸಿದ್ದಪ್ಪ ಹೊನ್ನನವರ, ಬಸಪ್ಪ ಹುಲಜೋಗಿ ಇನ್ನಿತರರು ಉಪಸ್ಥಿತರಿದ್ದರು.

ಜಿಲ್ಲಾ ನ್ಯಾಯಾಧೀಶ ರಾಜಶೇಖರ ಪಾಟೀಲರಿಂದ ಪೋಷಣ್ ರಥಕ್ಕೆ ಚಾಲನೆ
ಅಪೌಷ್ಠಿಕತೆ ತೊಲಗಿಸಿ, ಬಲಿಷ್ಠ ರಾಷ್ಟ್ರ ನಿರ್ಮಿಸಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗದಗ ಇವರ ಸಹಯೋಗದಲ್ಲಿ ಸೆ.೨೫ ರಂದು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಹಾಗೂ ಪೋಷಣ ರಥಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ರಾಜಶೇಖರ ಪಾಟೀಲ ಹಾಗೂ ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ, ಅವರಿಗೆ ಪೌಷ್ಠಿಕ ಆಹಾರದ ಜೊತೆಗೆ ಸೂಕ್ತ ಚಿಕಿತ್ಸೆ ನೀಡಬೇಕು. ಈ ಮೂಲಕ ದೇಶವನ್ನು ಅಪೌಷ್ಠಿಕತೆಯಿಂದ ಮುಕ್ತಗೊಳಿಸಿ, ಆರೋಗ್ಯವಂತ ಬಲಿಷ್ಠ ರಾಷ್ಟ್ರ ನಿರ್ಮಿಸಬೇಕು ಎಂದರು.

ಇದೊಂದು ನಿರಂತರ ಅಭಿಯಾನವಾಗಿದ್ದು, ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಜೊತೆಗೆ, ಅವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಪೋಷಣ ಅಭಿಯಾನವು ಕೇವಲ ಒಂದು ಕಾರ್ಯಕ್ರಮವಲ್ಲ, ಬದಲಿಗೆ ಅದೊಂದು ಜನಾಂದೋಲನ ಮತ್ತು ಸಹಭಾಗಿತ್ವ ಆಗಿದೆ. ಸಂಬಂಧಿಸಿದ ಅಧಿಕಾರಿಗಳ ಸಮನ್ವಯತೆ, ಜನರ ಸಹಕಾರದೊಂದಿಗೆ ಕಾರ್ಯ ನಿರ್ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ರಾಜಶೇಖರ ಪಾಟೀಲ ಹೇಳಿದರು.


ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ.ಸಲಗರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಹೆಚ್.ಹೆಚ್.ಕುಕನೂರ, ಜಿಲ್ಲಾ ಪಂಚಾಯತ್ ಸಿಇಒ ಡಾ.ಆನಂದ್ ಕೆ., ಅಂಗನವಾಡಿ ಮೇಲ್ವಿಚಾರಕಿಯರು, ಕಾರ್ಯಕರ್ತೆಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ಇದ್ದರು.

error: Content is protected !!