Home Blog Page 2179

ವಾಲ್ಮೀಕಿ ನಾಯಕ ಸಮುದಾಯಕ್ಕೆ ಮೀಸಲಾತಿ ನೀಡದಿದ್ದರೆ ರಾಜ್ಯಾದ್ಯಂತ ಹೋರಾಟ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಸೆಪ್ಟೆಂಬರ್ 21ರಂದು ನಡೆಯುವ ಅಧಿವೇಶನದಲ್ಲಿ ವಾಲ್ಮೀಕಿ ನಾಯಕ ಸಮುದಾಯಕ್ಕೆ ಶೇಕಡಾ 7.5ರಷ್ಟು ಮೀಸಲಾತಿ ನೀಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಸುರೇಶ್ ದೊಣ್ಣಿ ಹೇಳಿದರು.

ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮೀಸಲಾತಿಗಾಗಿ ಸಮುದಾಯವು ಹಲವು ವರ್ಷಗಳಿಂದ ಹೋರಾಡುತ್ತಾ ಬಂದರೂ ಬೇಡಿಕೆ ಈಡೇರಿಲ್ಲ. ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರು ಮೀಸಲಾತಿ ಕಲ್ಪಿಸಲು ಸಮ್ಮತಿಸಿ ವರದಿ ನೀಡಿ, 2-3 ತಿಂಗಳು ಗತಿಸಿದರೂ ಸರಕಾರ ಗಮನ ಹರಿಸುತ್ತಿಲ್ಲ. ಹಾಗಾಗಿ ಸೆಪ್ಟೆಂಬರ್ 21ರೊಳಗಾಗಿ ಮೀಸಲಾತಿ ಕಲ್ಪಿಸದಿದ್ದರೆ ರಾಜನಹಳ್ಳಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ವಿಧಾನಸೌಧ ಮುತ್ತಿಗೆ ಚಳವಳಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಶರಣಪ್ಪ ನಾಯಕ್, ವಿಜಯೇಂದ್ರ ಬಿಸರಳ್ಳಿ, ರುಕ್ಕಣ್ಣ ಸ್ಯಾವಿ, ಮಲ್ಲಪ್ಪ ಬೇಲೇರಿ ಮತ್ತಿತರರು ಇದ್ದರು.

ಸಹನಾ ಸಾಧನೆ: ಮಾಚೇನಹಳ್ಳಿ ಗ್ರಾಪಂನಿಂದ ಸನ್ಮಾನ, ಹಿತ್ತಲು ಗಿಡದ ಸಾಮರ್ಥ್ಯ ಅರಿಯುವ ಸಂದರ್ಭ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ; ಪಿಎಸ್‌ಐ ಪರೀಕ್ಷೆಯಲ್ಲಿ ಮಹಿಳಾ ವಿಭಾಗದಲ್ಲಿ 26ನೇ ರ‍್ಯಾಂಕ್ ಪಡೆದ ಹಳ್ಳಿ ಹುಡುಗಿಗೆ ಭಾನುವಾರ ಸ್ಥಳೀಯ ಗ್ರಾಮ ಪಂಚಾಯತಿ ಸನ್ಮಾನ ಮಾಡಿದೆ. ತಮ್ಮೂರ ಹುಡುಗಿಯ ಸಾಧನೆಯನ್ನು ಮಾಧ್ಯಮಗಳಿಗೆ ತಲುಪಿಸಿದ ತೆಗ್ಗಿನ ಭಾವನೂರಿನ ಫಾರೂಕ್ ಕೋಟೆಹಾಳ ಸೇರಿ ಹಲವಾರು ಯುವಕರು ಈ ಸನ್ಮಾನದಲ್ಲಿ ತಮ್ಮೂರೇ ಗೆದ್ದಂತೆ ಪಾಲ್ಗೊಂಡಿದ್ದಾರೆ.

ಮಾಚೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತೆಗ್ಗಿನ ಭಾವನೂರ ಗ್ರಾಮದ ಸಹನಾ ಅವರ ಸಾಧನೆ ನಮ್ಮ ಗ್ರಾಮ ಪಂಚಾಯತಿಗೆ ಗೌರವ ಮತ್ತು ಖುಷಿ ತಂದಿದೆ. ಇಲ್ಲಿನ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಇನ್ನಷ್ಟು ಸೌಲಭ್ಯ ಒದಗಿಸಲು ಈ ಸಾಧನೆ ನಮಗೆ ಪ್ರೇರಣೆ ಆಗಿದೆ ಎಂದಿರುವ ಮಾಚೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಿರಿಯರು, ಮಾಜಿ ಸದಸ್ಯರು ಮತ್ತು ಯುವ ಮುಖಂಡರಾದ ಶಂಕರ ಮರಾಠಿ, ಆನಂದ ಮಾಳೆಕೊಪ್ಪ, ವೀರಣ್ಣ ಕೆಲೂರ ಹಾಗೂ ಖಾದರ್ ಕೋಟಿಹಾಳ ಸೇರಿದಂತೆ ಹಲವಾರು ಜನ ಸೇರಿ ಸಹನಾ ಅವರಿಗೆ ಹೃದಯಪೂರ್ವಕ ಸನ್ಮಾನ ಮಾಡಿದ್ದಾರೆ.

ಇದನ್ನೂ ಓದಿ ಪಿಎಸ್‌ಐ ಆದ ಕುಗ್ರಾಮದ ಯುವತಿ; ರಾಜ್ಯಕ್ಕೆ 26ನೇ ರ‍್ಯಾಂಕ್| ಕೋಚಿಂಗ್ ಇಲ್ಲ| ತನಗೆ ತಾನೇ ರೋಲ್ ಮಾಡೆಲ್

ವಿಜಯಸಾಕ್ಷಿ ಮೂಲಕ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ತೆಗ್ಗಿನ ಭಾವನೂರಿನ ಯುವತಿ ಸಹನಾ ಪಾಟೀಲರ ಸಾಧನೆ ಈಗ ನಾಡಿನ ತುಂಬ ಸುದ್ದಿಯಾಗಿದೆ. ನಮ್ಮ ವಿಜಯಸಾಕ್ಷಿ ಸಂಸ್ಥೆಯ ಫೇಸ್‌ಬುಕ್, ಟ್ವಿಟರ್ ಮತ್ತು ಇ-ಮೇಲ್ ಖಾತೆಗಳಿಗೆ ಸಹಸ್ರಾರು ಜನ ಪ್ರತಿಕ್ರಿಯಿಸಿ ಸಹನಾರ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದು ಕೇವಲ ಸಹನಾ ಗೆಲುವಷ್ಟೇ ಅಲ್ಲ, ಮಾತೃಭಾಷೆಯಲ್ಲಿ ಆರಂಭಿಕ ಶಿಕ್ಷಣ ನೀಡಬೇಕು ಎಂಬ ನಿಲುವಿಗೆ ದೊರೆತ ಜಯ ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸೌಲಭ್ಯ ಸಿಕ್ಕರೆ ಇನ್ನಷ್ಟು ಮಿಂಚಲಿದ್ದಾರೆ ಎಂದು ಹೇಳಿದ್ದಾರೆ.

ಹಿತ್ತಲ ಗಿಡ ಮದ್ದಲ್ಲ ಎಂಬ ಮಾತು ಅರ್ಥರಹಿತ ಎಂಬುದನ್ನು ವಿಜಯಸಾಕ್ಷಿ ನಿರೂಪಿಸುತ್ತಲೇ ಹೋಗಲಿದೆ. ಸಹನಾರವರಿಗೆ ಮತ್ತೊಮ್ಮೆ ಅಭಿನಂದನೆಗಳು.

ಅಳಿದುಳಿದ ಬೆಳೆಗೆ ಈಗ ಮಂಗಗಳಿಂದ ‘ಗಾಯ’: ಮನುಷ್ಯರ ಕೆಟಗರಿಯಲಿರುವ ಜನಪ್ರತಿನಿಧಿಗಳೇ ಮಾಯ?

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ರೋಣ: ವಿಪರೀತ ಮಳೆಯಿಂದಾಗಿ ಬೆಳೆಯೆಲ್ಲ ನಾಶವಾಯಿತು. ಹಿಂದಾಗಡೆ ಬಿತ್ತಿದ್ದ ಬೆಳೆ ಜೀವ ಉಳಿಸಿಕೊಂಡಿತ್ತು. ಆದರೆ ಅಳಿದುಳಿದ ಬೆಳೆಗೆ ಮಂಗಗಳು ಮುತ್ತಿಗೆ ಹಾಕಿ, ರೈತರ ಬದುಕಿಗೆ ಕೊಳ್ಳೆ ಇಡುತ್ತಿವೆ. ಮನುಷ್ಯನ ಪೂರ್ವಜನಾದ ಈ ಮಂಗನ ಕಾಟ ತಪ್ಪಿಸಬೇಕಾದ, ‘ಮನುಷ್ಯ’ ಎಂಬ ಕೆಟಗರಿಯಲ್ಲಿರುವ ಜನಪ್ರತಿನಿಧಿಗಳು ಮಾತ್ರ ಮಾಯವಾಗಿ ಬಿಟ್ಟಿದ್ದಾರೆ.

ತಾಲೂಕಿನ ಮಾರನಬಸರಿ ಗ್ರಾಮದಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ಕಂಗಾಲಾಗಿರುವ ರೈತರಿಗೆ ಈಗ ಮಂಗಗಳ ಕಾಟ ಶುರುವಾಗಿದ್ದು ಇದರಿಂದ ಗ್ರಾಮದ ರೈತರು ಬೆಚ್ಚಿ ಬಿದ್ದಿದ್ದಾರೆ.

ಕಳೆದ ವಾರದಿಂದ ಗ್ರಾಮದಲ್ಲಿ ಮಳೆರಾಯ ತನ್ನ ಆರ್ಭಟ ತೋರಿಸುತ್ತ ಸಾಗಿದ್ದು, ಇನ್ನೂ ಮಳೆಯು ಕಾಟ ತಪ್ಪಿಲ್ಲ. ಇದರ ಜೊತೆಗೆ ಈಗ ಮಂಗಗಳ ಕಾಟ ಆರಂಭಗೊಂಡಿದ್ದು ರೈತರು ತಮ್ಮ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಹೆಣಗಾಡುವಂತಹ ಸ್ಥಿತಿ ಗ್ರಾಮದಲ್ಲಿ ನಿರ್ಮಾಣವಾಗಿದೆ.

ಗ್ರಾಮದಲ್ಲಿ ಅತಿಯಾದ ಮಳೆಯಿಂದ ಜಮೀನುಗಳಲ್ಲಿರುವ ಬೆಳೆಗಳಿಗೆ ತಂಪು ಹೆಚ್ಚಾಗಿ ಕೊಳೆಯುವ ಸ್ಥಿತಿ ಬಂದಿದ್ದು, ಬೆಳೆಗಳಿಗೆ ರೋಗ ಸಹ ತಗುಲಿಕೊಂಡಿದೆ. ವಿಪರೀತ ಮಳೆಗೆ ತಾಲೂಕಿನ ಕೆಲ ಗ್ರಾಮಗಳು ಸಹ ತತ್ತರಿಸಿದ್ದು ಹೋಗಿವೆ.

ಈ ಬಾರಿಯೂ ಈರುಳ್ಳಿ, ಮೆಣಸಿನಕಾಯಿ ಬೆಳೆ ಸಂಪೂರ್ಣ ಕೈ ಕೊಡುವ ಲಕ್ಷಣಗಳನ್ನು ಹೊಂದಿವೆ. ಇನ್ನೊಂದು ಕಡೆ, ಮಂಗಗಳ ಹಾವಳಿಗೆ ಜಮೀನುಗಳಲ್ಲಿರುವ ಬೆಳೆಗಳು ಉಳಿಯುತ್ತಿಲ್ಲ. ಮನೆಗಳಲ್ಲಿರುವ ಸರಂಜಾಮುಗಳು ಉಳಿಯುತ್ತಿಲ್ಲ. ಹೀಗಾಗಿ ಗ್ರಾಮಸ್ಥರು ಕೈಯಲ್ಲಿ ಬಡಿಗೆ ಹಿಡಿದುಕೊಂಡು ಅಡ್ಡಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಮಾಜಿ ಶಾಸಕ ಜಿಎಸ್ ಪಾಟೀಲರು, ರೈತರ ನೆರವಿಗೆ ಬರಬೇಕು ಎಂದು ಆಡಳಿತವನ್ನು ಎಚ್ಚರಿಸಿದ್ದಾರೆ. ರೋಣದ ತಹಸೀಲ್ದಾರ್ ಜಕ್ಕನಗೌಡ್ರ ಮಾತ್ರ ಬಹುತೇಕ ತಹಸೀಲ್ದಾರ್ ಸಾಹೇಬರು ಬಾಯಿಪಾಠ ಮಾಡಿಕೊಂಡೇ ಬಂದಿರುವ, ‘ಗಮನಕ್ಕೆ ಬಂದಿದೆ. ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂಬ ತಥಾಗತಿಥ ಡೈಲಾಗ್ ಹೊಡೆದಿದ್ದಾರೆ.

‘ಮಂಗಗಳೇ ವಾಸಿ ಬಿಡಿ’ ಎಂದು ಗ್ರಾಮಸ್ಥರು ಅಂದುಕೊಂಡರೆ, ಅದಕ್ಕಿನ್ನ ಅಸಹ್ಯ ಈ ಡೆಮಾಕ್ರಸಿಗೆ ಇನ್ ಏನಿದೆ?

‘ನಂಗೆ ಹಿಂದಿ ಬರಲ್ಲ ಹೋಗ್ರಪ್ಪ’: ಹಿಂದಿ ಹೇರಿಕೆ ವಿರುದ್ಧ ಜೋರಾಯ್ತು ಅಭಿಯಾನ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು; ಬಾಲಿವುಡ್‌ನಲ್ಲಿ ಅಪಾರ ಅವಕಾಶ, ಸಂಭಾವನೆ ಇರುವ, ದೇಶದ ಬಹುಪಾಲು ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಬಹಮುಖ ಪ್ರತಿಭೆ, ಕನ್ನಡಿಗ ಪ್ರಕಾಶ ರೈ, ‘ನಂಗೆ ಹಿಂದಿ ಬರಲ್ಲ’ ಎಂಬ ಕನ್ನಡ ಟೀ ಶರ್ಟ್ ಹಾಕುವ ಮೂಲಕ ಹಿಂದಿ ಹೇರಿಕೆ ವಿರೋಧಿಸಿದ್ದಾರೆ.
ಅಮೆರಿಕದಲ್ಲೇ ವಿದ್ಯಾಭ್ಯಾಸ ಮಾಡಿ ಬಂದ ನಟ ಚೇತನ್ ಕೂಡ ಇಂತಹ ಪ್ರತಿಭಟನೆಯನ್ನೇ ಮಾಡಿದ್ದಾರೆ. ಇದರರ್ಥ ಪ್ರಕಾಶ ರೈ ತಮಿಳು ಅಥವಾ ಹಿಂದಿ ವಿರೋಧಿ ಎಂದಾಗುವುದಿಲ್ಲ, ಚೇತನ್ ಸಂಪೂರ್ಣ ಹಿಂದಿ ಎಂದೂ ಆಗಲ್ಲ. ನಮ್ಮತನ ಉಳಿಯಬೇಕೆಂದರೆ, ನಾವು ಇಂತಹ ನಿರ್ಧಾರ ತೆಗೆದುಕೊಳ್ಳಲೇಬೇಕು.

ತಮಿಳುನಾಡಿನಲ್ಲಿ ತಮಿಳು ಪರ ನಿಂತ ನಟ, ನಿರ್ದೇಶಕರನ್ನು ರೈ, ಚೇತನ್ ಸ್ವಾಗತಿಸಿದ್ದಾರೆ, ಕನ್ನಡ ಪರ ನಿಂತ ರೈ, ಚೇತನ್ ಅವರನ್ನು ದಕ್ಷಿಣದ ಎಲ್ಲ ಭಾಷೆಗಳ ಚಿತ್ರರಂಗ ಮತ್ತು ಸಾಹಿತ್ಯ ವಲಯದ ಪ್ರಮುಖರು ಬೆಂಬಲಿಸಿದ್ದಾರೆ.

ಇಲ್ಲಿ ಯಾವುದೋ ಒಂದು ಪಾರ್ಟಿ, ಪಕ್ಷಕ್ಕೆ ತಮ್ಮ ಆತ್ಮಗೌರವ ಮಾರಿಕೊಂಡಿರುವ ಕೆಲವು ‘ಸುಶಿಕ್ಷಿತರು’ ಆ ಪಾರ್ಟಿಯನ್ನು, ಅದರ ನಾಯಕನನ್ನು ಕುರುಡರಂತೆ ಆರಾಧಿಸುತ್ತಿದ್ದಾರೆ. ಅವರ ಅಂಧಭಕ್ತಿ ಎಷ್ಟು ತಳಮಟ್ಟಕ್ಕೆ ಮುಟ್ಟಿದೆ ಎಂದರೆ, ಹಿಂದಿ ಹೇರಿಕೆಯನ್ನು ವಿರೋಧಿಸುತ್ತಿರುವ ಕೋಟ್ಯಂತರ ಕನ್ನಡಿಗರು, ತಮಿಳರು, ತೆಲುಗರು, ಮಲಯಾಳಿಗಳು, ಭೋಜ್‌ಪುರಿಗಳು ಮತ್ತು ಈಶಾನ್ಯ ಭಾರತದ ಹತ್ತಾರು ಭಾಷಿಕರನ್ನೆಲ್ಲ ಅವರು ದೇಶದ್ರೋಹಿ ಎನ್ನುವ ಮಟ್ಟಕ್ಕೆ ಮುಟ್ಟಿದ್ದಾರೆ.

ತಮ್ಮ ಮಾತೃಭಾಷೆ, ಆಡುಭಾಷೆಗೆ ಗೌರವ ಕೊಡದ ಈ ಜನರು ಇಡೀ ದೇಶದಲ್ಲಿ ಏಕ ಸಂಸ್ಕೃತಿ, ಏಕ ಭಾಷೆ ಎಂಬ ಸಂವಿಧಾನ ವಿರೋಧಿ ಅಜೆಂಡಾದ ಪ್ರತಿಪಾದಕರೇ ಆಗಿದ್ದಾರೆ.

‘ನಮ್ಮ ಪ್ರಾದೇಶಿಕ ಭಾಷೆ ಪರ ನಾವು ಮಾತನಾಡುತ್ತೇವೆ. ಅದು ನಮ್ಮ ಹಕ್ಕು ಮತ್ತು ಕರ್ತವ್ಯ. ಹಿಂದಿಯೂ ಒಂದು ಗೌರವಯುತ ಭಾಷೆ. ಆದರೆ ಅದನ್ನು ಹೇರುವುದನ್ನು ನಾವು ಸಹಿಸಲ್ಲ’ –ಎಂದು ನಾವೆಲ್ಲ ಕನ್ನಡಿಗರಾಗಿ ಆತ್ಮವಿಶ್ವಾಸದಿಂದ ಹೇಳೋಣ.

ಇದನ್ನೂ ಸಹಿಸದ ಸ್ನೇಹಿತರನ್ನು ಕರೆದು ಕೂಡಿಸಿಕೊಂಡು ಮಾತಾಡೋಣ, ಮೊದಲು ನಿನ್ನ ‘ಏಕ ಸಂಸ್ಕೃತಿಯ ಪಕ್ಷದ ವಿಚಾರ ಬಿಡು ಮಾರಾಯ. ಆ ಪಕ್ಷದ ಪರ ಸಂದೇಶ ಹಾಕಿ ಪ್ರತಿ ಸಂದೇಶಕ್ಕೆ 2 ರೂ.ಗೆ ಮಾರಿಕೊಂಡವರ ಹುನ್ನಾರ ಇದು. ನೀನು ಆ ಸಾಲಿಗೆ ಸೇರಬೇಡ’ ಎಂದು ಹೇಳುವ ಮೂಲಕ ನಮ್ಮ ವಲಯದಲ್ಲೇ ಇರುವ ‘ಈ ಏಕ ಸಂಸ್ಕೃತಿಯ’ ಹುಂಬ ಆರಾಧಕರನ್ನು ಬದಲಿಸೋಣ ಅಲ್ಲವೆ?

‘ಬಂಡಾಯದ’ ಊರಲ್ಲಿ ಭೂಕುಸಿತ ನಿಲ್ಲಲಿಲ್ಲ: ಕಲ್ಲು-ಮಣ್ಣು ಒಯ್ದ ಭೂಗರ್ಭ ತಜ್ಞರ ಸುದ್ದಿನೇ ಇಲ್ಲ!

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ: ಪಟ್ಟಣದ ಅರ್ಬಾಣ, ಹಗೇದಕಟ್ಟಿ, ಕಸಬಾ, ಜಗದ ಓಣಿ, ಸಿದವಿನಬಾವಿ ಓಣಿ ಮತ್ತು ಟಿಎಂಸಿ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಕಳೆದ ಎರಡು ತಿಂಗಳಿನಿಂದ ಅಂರ್ತಜಲ ಕುಸಿತದಿಂದ ದೊಡ್ಡ ಕಂದಕಗಳು ಉಂಟಾಗಿ ಜನಜೀವನ ಭಯ ಪಡುವಂತಹ ಸ್ಥಿತಿ ನಿರ್ಮಾಣಗೊಳ್ಳುತ್ತಿದೆ.

ಕಳೆದ ಐದಾರು ವರ್ಷಗಳಿಂದ ಪದೇಪದೇ ಇಲ್ಲಿ ಭೂಕುಸಿತ ಸಂಭವಿಸುತ್ತಲೇ ಇದೆ. ಆ ಕಾಲದ ಬಂಡಾಯವೇ ಮಾಯವಾಗಿರುವ ಈ ಹೊತ್ತಿನಲ್ಲಿ ಜನರಿಗೂ ಇದು ದೊಡ್ಡ ಸಮಸ್ಯೆ ಎನಿಸಿಲ್ಲವೊ ಅಥವಾ ಇಲ್ಲಿನ ಶಾಸಕರ ಗೌಡಿಕಿ ಆ ಜನಧ್ವನಿಯನ್ನು ಹತ್ತಿಕ್ಕುತ್ತಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಇಲ್ಲಿ ಭೂಕುಸಿತ ಸಹಜ ಎಂಬಂತೆ ಜನಜೀವನ ಸಾಗಿದೆ, ಭಯದಲ್ಲಿ, ಆತಂಕದಲ್ಲಿ!

ಪಟ್ಟಣದ ಟಿಎಂಸಿ ರಸ್ತೆ ಬದುವಿನಲ್ಲಿರುವ ಶಿವಪ್ಪ ನೀಲವಾಣಿ ಅವರ ಮನೆ ಎದುರು ಸೆ. 12ರಂದು ಆಳವಾದ ಗುಂಡಿ ಬಿದ್ದಿದೆ. 2019ರಲ್ಲಿ ಕೆಲ ತಿಂಗಳು ಈ ಸಮಸ್ಯೆ ಉಂಟಾಗಿರಲಿಲ್ಲ. ಆದರೆ ಪುನ: 2020ರಲ್ಲಿ ಮತ್ತೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕಾರಣ ನಿಖರ ಮಾಹಿತಿ ಇನ್ನೂ ತಿಳಿದಿಲ್ಲ.

ಈ ಮಾಹಿತಿ ಅಗೆದು ಬಗೆದು ಶೋಧಿಸಲೆಂದೇ ಇಲ್ಲಿನ ಶಾಸಕರೂ, ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಿ.ಸಿ. ಪಾಟೀಲರು ತಮ್ಮದೇ ಉಸ್ತುವಾರಿಯಲ್ಲಿರುವ ಗಣಿ ಇಲಾಖೆಯ ಭೂಗರ್ಭ ತಜ್ಞರ ಒಂದು ಪಡೆ ಕರೆಸಿದ್ದರು. ಅವರೊಂದಿಷ್ಟು ಮಣ್ಣು ಕಲೆ ಹಾಕಿಕೊಂಡು ಹೋದವರು ಪತ್ತೆನೇ ಇಲ್ಲ. ಅವರು ವರದಿ ಬರೆದರೋ ಇಲ್ಲವೋ ದೇವರೇ ಬಲ್ಲ.

ಈ ‘ಅಪೂರ್ವ’ ಅಧ್ಯಯನಕ್ಕೂ ಮೊದಲು ಹಿಂದಿನ ಶಾಸಕರ ಅವಧಿಯಲ್ಲೂ ಕೆಲವು ಅಧ್ಯಯನ ನಡೆದಿವೆ. 2019ರಿಂದ ಇದುವರೆಗೂ ನಾಲ್ಕಾರು ಭಾರಿ ಭೂಗರ್ಭ ಶಾಸ್ತ್ರಜ್ಞರು ಅಧ್ಯಯನ ಮಾಢಿ ಕೆಲ ‘ಉಪಯುಕ್ತ’ ಕಲ್ಲು, ಮಣ್ಣು ಮತ್ತು ಇತರ ಪರಿಕರಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಎರಡು ತಿಂಗಳಿನಲ್ಲಿ ಈ ಮಾಹಿತಿ ಅಧ್ಯಯನ ಮಾಢಿ ವರದಿ ನೀಡುವುದಾಗಿ ಪುರಸಭೆಗೆ ತಿಳಿಸಿ ಹೋದ ಭೂಗರ್ಭ ತಜ್ಞರು ಮುಂದೆ ಸುದ್ದಿನೇ ಇಲ್ಲ. ಕೆಲವರು ಗುಡ್ಡದ ಬದಿಯಲ್ಲಿಯ ಕುಡಿಯುವ ನೀರಿನ ಕೆರೆ ನೀರು ತೆಗೆಸಲು ತಿಳಿಸಿದ್ದರು.
ಅದರಂತೆ ಪುರಸಭೆ ಆಡಳಿತ ಮಂಡಳಿ ನೀರು ತೆಗೆಸಿದ್ದು ಆಯಿತು. ಆದರೆ ಭೂಕುಸಿತ ನಿಲ್ಲುತಿಲ್ಲ. ಆಗಾಗ ಕಂದಕಗಳು ಉಂಟಾಗುತ್ತಲೇ ಇವೆ.

ಕಂದಕ ಉಂಟಾದ ಜಾಗೆಯಲ್ಲಿ ಅನೇಕ ಟ್ರ್ಯಾಕ್ಟರ್ ಗಳು ಮತ್ತು ಚಕ್ಕಡಿಗಳು ಸಿಲುಕಿದ್ದಲ್ಲದೇ ಜನತೆಯೂ ತೆಗ್ಗಿನಲ್ಲಿ ಬಿದ್ದು ಅಪಾಯದಿಂದ ಪಾರಾಗಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಕುರುಬಗೇರಿ ಓಣೆಯ ಶಾಲಾ ವಿದ್ಯಾರ್ಥಿನಿಯೊಬ್ಬಳು ಕಂದಕದಲ್ಲಿ ಬಿದ್ದು ಪ್ರಾಣಾಪಾಯದಿಂದ ಹೊರಬಂದಿದ್ದಾಳೆ.

ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ, ಭೂಗರ್ಭ ಶಾಸ್ತ್ರಜ್ಞರು ಭೂ ಕುಸಿತದ ಪರಿಣಾವೇನು, ಏತಕ್ಕೆ ಹೀಗಾಗುತ್ತಿದೆ ಎಂಬುದರ ಸಂಪೂರ್ಣ ವರದಿ ನೀಡುವುದಾಗಿ ತಿಳಿಸಿ ಇದುವರೆಗೂ ನೀಡಿಲ್ಲವೆಂಧು ಪತ್ರಿಕೆಗೆ ತಿಳಿಸಿದ್ದಾರೆ.

ಸಾವು-ನೋವು ಸಂಭವಿಸಿದ ನಂತರವಷ್ಟೇ ಆಡಳಿತಕ್ಕೆ ಎಚ್ಚರವಾಗುತ್ತದೆ ಎಂದು ಕಾಣುತ್ತದೆ.

ಇಂದಿನಿಂದ ಅಧಿವೇಶನ:  ಕೊರೋನಾ ನೆಪದಲ್ಲೊಂದು ಕಾಟಾಚಾರ?

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಇಂದಿನಿಂದ 18 ದಿನಗಳ ಅವಧಿಯ ಮುಂಗಾರು ಸಂಸತ್ ಅಧಿವೇಶನ ಆರಂಭವಾಗಿದೆ. ಮಾರ್ಚ್ 25ರಂದು ಲಾಕ್‌ಡೌನ್ ಘೋಷಣೆಗೂ ಮೊದಲು ಮಾರ್ಚ್ 22ರಂದು ಸಂಸತ್‌ನ ಕೊನೆ ಅಧಿವೇಶನ ನಡೆದಿತ್ತು. ಸುಮಾರು 6 ತಿಂಗಳು ನಂತರ ಈಗ ಮತ್ತೆ ಮುಂಗಾರು ಅಧಿವೇಶನ ಶುರುವಾಗುತ್ತಿದೆ.

ಕೊವಿಡ್ ಮಾರ್ಗಸೂಚಿಗಳ ಅನ್ವಯ ಕಲಾಪಕ್ಕೆ ಏರ್ಪಾಡು ಮಾಡಲಾಗಿದೆ. ಸಾಮಾಜಿಕ ಅಂತರ ಕಾಪಾಡ ಬೇಕಿರುವುದರಿಂದ  ಏಕಕಾಲಕ್ಕೆ ಎಲ್ಲ ಸಂಸದರು ಕೂಡಲು ಆಗುವುದಿಲ್ಲ. ಹೀಗಾಗಿ ಲೋಕಸಭೆ ಮತು ರಾಜ್ಯಸಭೆಗಳು ತಮ್ಮ ಅಧಿವೇಶನದ ಸಭಾಂಗಣವನ್ನು ಹಂಚಿಕೊಳ್ಳಬೇಕಿದೆ. ಹೀಗಾಗಿ ಶಿಫ್ಟ್ ನಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಕಲಾಪ ನಡೆಯಲಿವೆ. ಕೆಲವು ನೂರು ಸಂಸದರು ಪಕ್ಕದ ಹಾಲ್‌ನಿಂದ ವರ್ಚುವಲ್ ಕಲಾಪದಲ್ಲಿ ಭಾಗಿಯಾಗಬೇಕಿದೆ.

ಲೋಕಸಭೆ ಮತ್ತು ರಾಜ್ಯಸಭೆ ಸೇರಿ ಒಟ್ಟು 785 ಸದಸ್ಯರ ಪೈಕಿ 200ಕ್ಕೂ ಹೆಚ್ಚು ಜನ 65 ವಯಸ್ಸು  ದಾಟಿದವರಿದ್ದಾರೆ. ಸುಮಾರು 24 ಸಂಸದರು ಕೊವಿಡ್ ಬಾಧಿತರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಪಕ್ಷ ನಾಯಕಿ ಸೋನಿಯಾ ಗಾಂಧಿ ಚಿಕಿತ್ಸೆಗೆಂದು ವಿದೇಶಕ್ಕೆ ಹೋಗಿದ್ದಾರೆ. ಅವರ ಜೊತೆ ಅವರ ಪುತ್ರ ಸಂಸದ ರಾಹುಲ್ ಗಾಂಧಿ ಕೂಡ ಹೋಗಿದ್ದಾರೆ.
ಗೃಹ ಸಚಿವ ಅಮಿತ್ ಶಾ ಏಮ್ಸ್ ನಲ್ಲಿದ್ದಾರೆ. ಇದೆಲ್ಲದರ ಜೊತೆಗೆ ಖಾಯಂ ಚಕ್ಕರ್ ಹೊಡೆಯುವ ಸಂಸದರ ಲಿಸ್ಟೂ ದೊಡ್ಡದೇ ಇದೆಯೆನ್ನಿ.

ಜೂನ್‌ನಲ್ಲಿ ಕೇಂದ್ರ ಸರ್ಕಾರ ಪ್ರಕಟಿಸಿದ ಕೃಷಿಗೆ ಸಂಬಂಧಿಸಿದ ಮೂರು ಮಸೂದೆಗಳಿಗೆ ಅಂಗೀಕಾರ ಪಡೆಯಲು ಸರ್ಕಾರ ಯತ್ನಿಸಲಿದೆ. ಕುಸಿದ ಆರ್ಥಿಕತೆ, ಕೊವಿಡ್ ಬಿಕ್ಕಟ್ಟಿನ ಅಸಮರ್ಪಕ ನಿರ್ವಹಣೆ ಕುರಿತು ವಿಪಕ್ಷಗಳು ಯುದ್ಧ ಸಾರಲಿವೆ. ಬಹುಮುಖ್ಯವಾದ ಪ್ರಶ್ನೋತ್ತರ ಅವಧಿಯೇ ಇಲ್ಲವಾದ್ದರಿಂದ ಇದು ಆಡಳಿತ ಪಕ್ಷಕ್ಕೆ ಅನುಕೂಲವಾಗವ ಅಧಿವೇಶನವೇ ಆಗಲಿದೆ.

ಸೋಮವಾರ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನದ ದರ: ಹುಬ್ಬಳ್ಳಿಯಲ್ಲಿ 600 ರೂ. ದುಬಾರಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ರಾಜ್ಯದ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಏಕರೂಪದ ದರವಿದೆ. ದೆಹಲಿ, ಜೈಪುರ, ಲಕ್ನೋಗಳಲ್ಲಿ ಗರಿಷ್ಠ 54,400 ರೂ. ಇದೆ. ಮುಂಬೈನಲ್ಲಿ ಕನಿಷ್ಠ 50,460 ರೂ. ಇದೆ.

ಬೆಂಗಳೂರು, ಮೈಸೂರು, ಮಂಗಳೂರು: 22 ಕ್ಯಾರಟ್: 48,420 ರೂ.,24 ಕ್ಯಾರಟ್: 52,820 ರೂ.
ಹುಬ್ಬಳ್ಳಿ: 22 ಕ್ಯಾರಟ್: 48,968 ರೂ.,24 ಕ್ಯಾರಟ್: 53,420 ರೂ.

ಜಿಲ್ಲೆಯಲ್ಲಿ ಭಾನುವಾರ 198 ಜನರಿಗೆ ಸೋಂಕು; 192 ಜನ ಗುಣಮುಖ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯಲ್ಲಿ ಭಾನುವಾರ ದಿ 13 ರಂದು 198 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

198 ಜನರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 7557 ಕ್ಕೇರಿದೆ. ಭಾನುವಾರ 192 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಇದುವರೆಗೂ 6269 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. 1181 ಜನ ಸಕ್ರಿಯ ಸೋಂಕಿತರಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಭಾನುವಾರದ ಮಾಹಿತಿಯಂತೆ ಇಬ್ಬರು ಮೃತಪಟ್ಟಿದ್ದು, ಮೃತರ ಸಂಖ್ಯೆ 107 ಕ್ಕೇರಿದೆ.

ಗದಗ-89, ಮುಂಡರಗಿ-25, ನರಗುಂದ-17, ರೋಣ-33, ಶಿರಹಟ್ಟಿ-32, ಹೊರ ಜಿಲ್ಲೆಯ 02 ಪ್ರಕರಣ ಸೇರಿದಂತೆ ಒಟ್ಟು 198 ಜನರಿಗೆ ಸೋಂಕು ದೃಢಪಟ್ಟಿದೆ.

ಕೊವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು ಈ ರೀತಿ ಇವೆ…..

ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ಹುಡ್ಕೋ ಕಾಲೋನಿ, ಜಿಮ್ಸ್ , ಕಾಶಿ ವಿಶ್ವನಾಥ ನಗರ, ಎ.ಪಿ.ಎಂ.ಸಿ. ಹಮಾಲರ ಪ್ಲಾಟ್, ಮಸಾರಿ, ಬಸ್ ನಿಲ್ದಾಣದ ಹತ್ತಿರ, ದೇವಾಂಗ ಮಠ ಓಣಿ, ಆರ.ಕೆ.ನಗರ, ಇರಾನಿ ಕಾಲೋನಿ, ಹುಬ್ಬಳ್ಳಿ ರಸ್ತೆ, ಕಳಸಾಪುರ ರಸ್ತೆ, ವೀರೇಶ್ವರ ನಗರ, ಬಾಲಾಜಿ ರಸ್ತೆ, ಜಿಲ್ಲಾ ಸಮೀಕ್ಷಣಾಧಿಕಾರಿಗಳ ಕಚೇರಿ, ಬ್ಯಾಂಕರ್ಸ್ ಕಾಲೋನಿ, ಗಂಗಾಪುರ ಪೇಟ,

ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ, ಜವಳ ಗಲ್ಲಿ, ಇ.ಎನ್.ಟಿ. ರಸ್ತೆ, ಡಿ.ಸಿ.ಮಿಲ್, ಸಾಯಿ ಬಾಬಾ ದೇವಸ್ಥಾನ ಹತ್ತಿರ, ಬಸವೇಶ್ವರ ನಗರ,
ತಾಜ ನಗರ, ಕಬಾಡಿ ಚಾಳ,

ಗದಗ ತಾಲೂಕಿನ ಪಾಪನಾಶಿ ತಾಂಡೆ, ಹುಲಕೋಟಿ, ಹರ್ಲಾಪುರ, ಮಲ್ಲಸಮುದ್ರ, ದುಂದೂರ, ಮುಳಗುಂದ, ಬಿಂಕದಕಟ್ಟಿ, ಲಕ್ಕುಂಡಿ, ಚಿಕ್ಕ ಹಂದಿಗೋಳ, ಹಾತಲಗೇರಿ, ಅಸುಂಡಿ, ನರಸಾಪುರ, ಕದಡಿ, ಬೆಂತೂರ, ಲಕ್ಕುಂಡಿ,

ಮುಂಡರಗಿ ಪಟ್ಟಣದ ಎ.ಬಿ.ನಗರ, ಜೆ.ಟಿ.ಮಠ ರಸ್ತೆ, ಮುಂಡರಗಿ ತಾಲೂಕಿನ ದಿಂಡೂರ, ಹಿರೇವಡ್ಡಟ್ಟಿ, ಕಲಕೇರಿ, ಡಂಬಳ, ಮುರುಡಿ, ಕೇಲೂರ, ಬಿದರಳ್ಳಿ, ಅತ್ತಿಕಟ್ಟಿ, ಡೋಣಿ,

ನರಗುಂದ ಪಟ್ಟಣದ ದಂಡಾಪುರ ಓಣಿ, ಸರಸ್ವತಿ ನಗರ, ಹಾಲಬಾವಿ ಕೆರೆ ಒಣಿ, ನರಗುಂದ ತಾಲೂಕಿನ ಕೊಣ್ಣೂರ, ಅರಿಶಿನಗೋಡಿ, ಶಿರೋಳ, ಚಿಕ್ಕ ನರಗುಂದ, ಕಲ್ಲಾಪುರ

ರೋಣ ಪಟ್ಟಣದ ಶಿವಪೇಟ, ಪೊಲೀಸ್ ಠಾಣೆ, ಮಸೂತಿ ಓಣಿ, ಕಲ್ಮೇಶ್ವರ ಓಣಿ, ಬೀರಲಿಂಗೇಶ್ವರ ದೇವಸ್ಥಾನ ಹತ್ತಿರ, ಶಿವಾನಂದ ನಗರ,

ರೋಣ ತಾಲೂಕಿನ ಸೂಡಿ, ನರೇಗಲ್, ರಾಂಪುರ, ಅಸೂಟಿ, ಹುಲ್ಲೂರ, ಕುರಹಟ್ಟಿ, ಬೆನಹಾಳ, ಯಾವಗಲ್, ಮಾಳವಾಡ, ಕರಮುಡಿ, ಕುರುಡಿಗೇರಿ, ಮಲ್ಲಾಪುರ, ಗಜೇಂದ್ರಗಡ ಪಟ್ಟಣದ ಹಿರೇಬಜಾರ, ಕುಂಬಾರ ಓಣಿ,

ಶಿರಹಟ್ಟಿ ಪಟ್ಟಣದ ಕೋಟಿ ಓಣಿ, ವಿದ್ಯಾನಗರ, ಹನುಮಂತನ ಕಟ್ಟಿ, ವಾಲ್ಮೀಕಿ ನಗರ, ಸೇವಾನಗರ,

ಶಿರಹಟ್ಟಿ ತಾಲೂಕಿನ ರಾಮಗೇರಿ, ಶಿಗ್ಲಿ, ಗೊಜನೂರ, ನೆಲೂಗಲ್, ಬೆಳ್ಳಟ್ಟಿ, ಬಡ್ನಿ,

ಲಕ್ಷ್ಮೇಶ್ವರ ಪಟ್ಟಣದ ಸಪ್ಪಿನಕೇರಿ, ಪೇಟೆಬಣ, ಬಜಾರ ರಸ್ತೆ, ರವಿ ಥೇಟರ ಹತ್ತಿರ, ರಾಘವೇಂದ್ರ ಮಠ, ಪಂಪ ವೃತ್ತ, ಹರದಗಟ್ಟಿ,

ಕೊವಿಡ್ ಗುಣಮುಖರೇ, ಇಲ್ಲಿವೆ ಹೊಸ ಗೈಡ್‌ಲೈನ್ಸ್; ಚೇತರಿಕೆಯ ನಂತರವೂ ಜಾಗೃತಿಯಿರಲಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಅಲ್ಲಲ್ಲಿ ಕೊವಿಡ್‌ನಿಂದ ಗುಣಮುಖರಾದ ಕೆಲವರು ಮತ್ತೆ ಕೊವಿಡ್ ಪೀಡಿತರಾದ ಘಟನೆ ಸಂಭವಿಸಿವೆ. ಇದು ಬೆರಳೆಣಿಕೆಯ ಸಂಖ್ಯೆಯಾದರೂ, ಒಮ್ಮೆ ಗುಣಮುಖರಾದರು ಎಂದ ಮಾತ್ರಕ್ಕೆ ಎಲ್ಲ ಲಕ್ಷಣಗಳು, ಎಲ್ಲ ತೊಂದರೆಗಳು ಮಾಯವಾಗುವುದಿಲ್ಲ ಎಂದು ಭಾನುವಾರ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಅದರಲ್ಲೂ ಗುಣಮುಖರಾದ ವಯಸ್ಸಾದವರು, ತೀವ್ರ ಬಾಧಿತರಾಗಿ ಚೇತರಿಕೆ ಹೊಂದಿದವರು, ಇತರ ಕಾಯಿಲೆಯಿದ್ದು ಕೊವಿಡ್‌ನಿಂದ ಗುಣಮುಖರಾದವರಿಗಾಗಿ ಕೇಂದ್ರ ಆರೋಗ್ಯ ಇಲಾಖೆಯು ಹೊಸ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.

ಇಂತವರಲ್ಲಿ ನೆಗೆಟಿವ್ ಬಂದ ನಂತರದ ಹಲವು ದಿನಗಳ ಕಾಲ ಆಯಾಸ, ಮೈ ಕೈ ನೋವು, ಕೆಲವೊಮ್ಮೆ ಎದೆ ನೋವು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಉಸಿರಾಟ ಸಮಸ್ಯೆಯಾಗಬಹುದು, ದೇಹದಲ್ಲಿ ಆಮ್ಲಜನಕದ ಮಟ್ಟ ಕಡಿಮೆಯಾಗಬಹುದು.

ಹೀಗಾಗಿ ಗುಣಮುಖರಾದ ನಂತರವೂ ನಿಯಮಿತವಾಗಿ ವ್ಯಾಯಾಮ ಮಾಡಬೇಕು, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಬೇಕು.  ಮೊದಲಿನಂತೆ ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆ ಮುಂತಾದ ಕೊವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು.

ತೀರಾ ತೊಂದರೆ ಎನಿಸಿದರೆ ಸಮುದಾಯ ಆರೋಗ್ಯ ಕಾರ್ಯಕರ್ತರನ್ನು ಅಥವಾ ನೇರವಾಗಿ ವೈದ್ಯರನ್ನು ಸಂಪರ್ಕಿಸಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದೆ.

ಎಚ್‌ಕೆ ಪಾಟೀಲರಿಗೆ ಡಬಲ್ ಧಮಾಕಾ: ಹೈಕಮಾಂಡ್ ಕೊಟ್ಟ ಗಿಫ್ಟ್

ಕಾರ್ಯಕಾರಿ ಸಮಿತಿ ಸದಸ್ಯತ್ವದ ಜೊತೆಗೆ ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಶುಕ್ರವಾರ ರಾಷ್ಟ್ರೀಯ ಕಾಂಗ್ರೆಸ್ ಸಂಘಟನಾತ್ಮಕವಾಗಿ ಮಹತ್ವದ ಬದಲಾವಣೆಗಳನ್ನು ಮಾಡಿದ್ದು, ಇತ್ತೀಚೆಗೆ ಬಂಡಾಯವೆದ್ದಿದ್ದ ಹಲವರನ್ನು ಉಳಿಸಿಕೊಂಡಿದೆ. ಕೆಲವರನ್ನು ಕೈಬಿಟ್ಟಿದೆ. ರಾಜ್ಯ ಕಾಂಗ್ರೆಸ್ ಪಾಲಿಗೆ ಬಂಪರ್ ಬಹುಮಾನವೇ ಸಿಕ್ಕಿದ್ದು ಐವರಿಗೆ ಅವಕಾಶ ದೊರೆತಿದೆ.
ಅದೆಲ್ಲಕ್ಕೂ ಮುಖ್ಯವಾಗಿ ಗದಗ ಶಾಸಕ ಮತ್ತು ಮಾಜಿ ಸಚಿವ ಎಚ್.ಕೆ. ಪಾಟೀಲರಿಗೆ ಎರಡು ಪ್ರಮುಖ ಹುದ್ದೆಗಳು ದೊರಕಿವೆ. ಇದನ್ನು ಅವರ ನಿರಂತರ ಕ್ರಿಯಾಶೀಲತೆ ಮತ್ತು ಪಕ್ಷನಿಷ್ಠೆಯಲ್ಲಿ ವಿಶ್ವಾಸವಿಟ್ಟು ಹೈಕಮಾಂಡ್ ನೀಡಿದ ಕಾಣಿಕೆ, ಬಹುಮಾನ ಎನ್ನಬಹುದಾದರೂ, ಇವತ್ತು ದೇಶದ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಎದುರಿಸುತ್ತಿರುವ ಬಿಕ್ಕಟ್ಟು ಮತ್ತು ಹಿನ್ನಡೆಯನ್ನು ಗಮನಕ್ಕೆ ತೆಗೆದುಕೊಂಡರೆ, ಹೆಚ್ಚಿನ ಜವಾಬ್ದಾರಿ ಮತ್ತು ಸವಾಲಿನ ಕೆಲಸವನ್ನು ಹೈಕಮಾಂಡ್ ಎಚ್.ಕೆ. ಪಾಟೀಲರ ಹೆಗಲಿಗೆ ಏರಿಸಿದೆ ಎನ್ನುವುದೇ ಸೂಕ್ತ.

ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲೂ ಅವರ ಹೆಸರು ಕೇಳಿ ಬಂದಿತ್ತು. ಅಗ್ರೆಸಿವ್ ನಾಯಕನ ಹುಡುಕಾಟದಲ್ಲಿದ್ದ ಕಾಂಗ್ರೆಸ್ ಹೈಕಮಾಂಡ್ ಡಿ.ಕೆ. ಶಿವಕುಮಾರ್‌ಗೆ ಆ ಜವಾಬ್ದಾರಿ ನೀಡಿತು. ಸರ್ಕಾರವನ್ನು ಎಚ್ಚರಿಸುವ ಕೆಲಸದಲ್ಲಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರನ್ನು ಬಿಟ್ಟರೆ ಎಚ್.ಕೆ ಪಾಟೀಲರೆ ಕಾಣುವುದು. ಪಿಪಿಇ ಕಿಟ್ ಕುರಿತಾಗಲಿ, ರಾಜ್ಯದಲ್ಲಿ ಏರುತ್ತಿರುವ ಕೊವಿಡ್ ಮರಣ ಪ್ರಮಾಣದ ವಿಷಯವಾಗಲಿ ನಿಖರ ಮಾಹಿತಿಯೊಂದಿಗೆ ಎಚ್.ಕೆ. ಪಾಟೀಲ್ ಸಕಾರಣಿಕ ವಿರೋಧವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್ ಸಂಘಟನೆಯೊಂದಿಗೆ ಗುರುತಿಸಿಕೊಂಡ ಎಚ್‌ಕೆ ಅವರು ತಮ್ಮ ತಂದೆ ಕೆ.ಎಚ್ ಪಾಟೀಲರಂತೆ ದಾಢಸಿ ರಾಜಕಾರಣವನ್ನು ಮೈಗೂಡಿಸಿಕೊಳ್ಳಲಿಲ್ಲ. ಬಹುಶ: ಅವರು ಪದವೀಧರ ಕ್ಷೇತ್ರದ ಮೂಲಕವೇ ಹೆಚ್ಚು ಸಲ ಶಾಸಕರಾಗಿದ್ದೂ ಅದಕ್ಕೆ ಕಾರಣವಿರಬಹುದು.

ನೇರ ಚುನಾವಣೆಯಿಂದ ದಶಕಗಳ ಕಾಲ ದೂರವಿದ್ದ ಅವರು ಮೊದಲ ಸಲ ಗದಗ ಮತಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆ ಎದುರಿಸಿದಾಗ ಸೋಲಬೇಕಾಯಿತು. 2013 ಮತ್ತು 2018 ಚುನಾವಣೆಯಲ್ಲಿ ಸತತವಾಗಿ ಗೆಲುವು ಸಾಧಿಸಿದರು. ಕಳೆದ ಚುನಾವಣೆಯಲ್ಲೂ ಎಚ್‌ಕೆ ಅವರಿಗೆ ಸಣ್ಣ ಅಂತರದ ಗೆಲುವಷ್ಟೇ ಸಿಕ್ಕಿತ್ತು.
ಈಗ ಜನರ ಸಂಪರ್ಕದಲ್ಲಿರುವ ರಾಜಕಾರಣಕ್ಕೆ ಅವರೂ ಹೊಂದಿಕೊಂಡಿದ್ದಾರೆ. ಸಂವಿಧಾನ ಮತ್ತು ಕಾನೂನಿನ ಬಗ್ಗೆ ಇರುವ ಜ್ಞಾನ, ನೀರಾವರಿ ಯೋಜನೆಗಳ ಬಗ್ಗೆ ಇರುವ ಮಾಹಿತಿ ಮತ್ತು ಗ್ರಾಮೀಣಾಭಿವೃದ್ಧಿಯ ಬಗ್ಗೆ ಅವರಲ್ಲಿರುವ ಗಾಂಧಿಪ್ರಣೀತ ವಿಚಾರಗಳನ್ನು ಬೇರೆ ರಾಜಕಾರಣಿಗಳಲ್ಲಿ ಕಾಣುವುದು ಅಪರೂಪ.

ಸಿದ್ದರಾಮಯ್ಯ ಆರ್ಥಿಕ ಸ್ಥಿತಿ ಕುರಿತು ಎಷ್ಟು ಅಧಿಕಾರಯುತವಾಗಿ ಮಾತನಾಡಬಲ್ಲರೊ ಅಷ್ಟೇ ಅಧಿಕಾರಯುತವಾಗಿ ಎಚ್‌ಕೆ ನೀರಾವರಿ, ಸದನದ ಕಲಾಪ ನಿಯಮಗಳು ಮತ್ತು ಪಂಚಾಯತ್ ರಾಜ್ ಮಹತ್ವದ ಬಗ್ಗೆ ಮಾತನಾಡಬಲ್ಲರು.
ಸಿದ್ದರಾಮಯ್ಯ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಅವರು ಮಾಡಿದ ಕೆಲವು ಸಾಧನೆಗಳು ದೆಹಲಿಯಲ್ಲೂ ಮೆಚ್ಚುಗೆ ಗಳಿಸಿದವು. ಎರಡು ಸಲ ಕೇಂದ್ರ ಸರ್ಕಾರದ ಪ್ರಶಸ್ತಿಗೆ ಭಾಜನರಾಗುವ ಮೂಲಕ ಹೈಕಮಾಂಡ್ ನಜರಿನಲ್ಲಿ ವಿಶೇಷ ಗೌರವ ಪಡೆದರು.

ಈಗ ಅವರಿಗೆ ಮಹಾರಾಷ್ಟ್ರ ಉಸ್ತುವಾರಿಯಂತಹ ಸವಾಲಿನ ಕೆಲಸವನ್ನು ನೀಡಲಾಗಿದೆ. ಪಕ್ಷದ ಮಹತ್ತರ ನಿರ್ಣಯಗಳನ್ನು ಕೈಗೊಳ್ಳುವ ಕಾರ್ಯಕಾರಿ ಸಮಿತಿಯಲ್ಲಿ ಅವರಿಗೆ ಸ್ಥಾನ ಸಿಕ್ಕಿದೆ. ಅದು ಈ ಭಾಗಕ್ಕೂ ಸಂದ ಗೌರವವೂ ಆಗಿದೆ.

ಮಹಾರಾಷ್ಟ್ರದಲ್ಲಿ ಮುಳ್ಳಿನ ಹಾದಿ

ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರನೆಲವಾಗಿದ್ದ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಈಗ ಮೈತ್ರಿ ರಾಜಕಾರಣ ಆಶ್ರಯಿಸದೇ ವಿಧಿಯಿಲ್ಲ. ಮಹಾರಾಷ್ಟ್ರದಲ್ಲಿ ದೊಡ್ಡ ಮಟ್ಟದಲ್ಲಿ ಧಾರ್ಮಿಕ ಧ್ರುವೀಕರಣ ಮಾಡಿರುವ ಬಿಜೆಪಿ ಮತ್ತು ಶಿವಸೇನೆ ಪಕ್ಷಗಳು ತಮ್ಮ ವೋಟ್ ಶೇರ್ ಹೆಚ್ಚಿಸಿಕೊಳ್ಳುತ್ತ ಬಂದಿವೆ. ಶರದ್ ಪವಾರ್ ಕಾಂಗ್ರೆಸ್ ತೊರೆದು ಎನ್‌ಸಿಪಿ ಕಟ್ಟಿದ ನಂತರ ಕಾಂಗ್ರೆಸ್ ಮತಬ್ಯಾಂಕ್ ಛಿದ್ರಗೊಂಡಿದೆ. ಈಗ ಎನ್‌ಸಿಪಿ ಜೊತೆ ಮೈತ್ರಿ ರಾಜಕಾರಣ ಮಾಡಲೇಬೇಕು. ಹಿಂದೆ ಸಿದ್ಧಾಂತದ ಕಾರಣಕ್ಕೆ ಶಿವಸೇನೆಯನ್ನು ತೀವ್ರವಾಗಿ ವಿರೋಧಿಸಿದ್ದ ಕಾಂಗ್ರೆಸ್ ಈಗ ಅನಿವಾರ್ಯವಾಗಿ ಅದರ ನೇತೃತ್ವದ ಸರ್ಕಾರದಲ್ಲಿ ಭಾಗಿಯಾಗಿದೆ. ಮಹಾರಾಷ್ಟ್ರ ಕಾಂಗ್ರೆಸ್‌ನಲ್ಲಿ ಬಾಳಾಸಾಬ್ ಥೋರಟ್, ಅಶೋಕ್ ಚವ್ಹಾಣ್ ಗುಂಪುಗಳಿವೆ. ಕರ್ನಾಟಕದ ಎರಡು ಪಟ್ಟು ಜನಸಂಖ್ಯೆ ಇರುವ ಅಲ್ಲಿ ಪಕ್ಷದ ಉಸ್ತುವಾರಿ ಕೆಲಸ ಮಾಡುವುದು ಸವಾಲಿನ ಸಂಗತಿಯೇ ಆಗಿದೆ.

‘ಹೈಕಮಾಂಡ್ ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸುವೆ. ಮಹಾರಾಷ್ಟ್ರದಲ್ಲಿ ಮತ್ತೆ ಕಾಂಗ್ರೆಸ್‌ನ ಗತವೈಭವದ ದಿನಗಳು ಮರುಕಳಿಸುವಂತಾಗಲು ಶ್ರಮಿಸುವೆ.

-ಎಚ್.ಕೆ. ಪಾಟೀಲ್. ಶಾಸಕರು, ಗದಗ

error: Content is protected !!