ಬೆಂಗಳೂರು: ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯ ಕಟ್ಟಿಗೆನಹಳ್ಳಿಯಲ್ಲಿ ನೇಪಾಳಿ ಗ್ಯಾಂಗ್ ಖಾಸಗಿ ಕಂಪನಿ ಉದ್ಯೋಗಿ ಚಂದ್ರಮೌಳಿ ಅವರ ಮನೆಯಲ್ಲಿ ಬರೋಬ್ಬರಿ ಒಂದು ಕೆಜಿ ಚಿನ್ನಾಭರಣ ಕಳ್ಳತನ ನಡೆಸಿರುವ ಘಟನೆ ನಡೆದಿದೆ. ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿಗಳಾದ ಧೀರೇಂದ್ರ ಪ್ರೇಮ್, ಅಭಿಷೇಕ್, ಅಂಬರೆ ಧಮೈ ಹಾಗೂ ದೀಪಕ್ ಶಾಹಿ ಅವರನ್ನು ಬಂಧಿಸಲಾಗಿದ್ದು, ಇಬ್ಬರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಚಂದ್ರಮೌಳಿ ಅವರ ಮನೆಯಲ್ಲಿ ಕಳ್ಳತನ ನಡೆಸಲು ನೇಪಾಳಿ ಗ್ಯಾಂಗ್ 6 ತಿಂಗಳಿನಿಂದ ಯೋಜನೆ ರೂಪಿಸಿತ್ತು. ಪ್ರಮುಖ ಆರೋಪಿ ಸಂಜಯ್ ಮತ್ತು ಆತನ ಪತ್ನಿ ಚಂದ್ರಮೌಳಿ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.
ಕಳೆದ ವರ್ಷ ವರಮಹಾಲಕ್ಷ್ಮೀ ಪೂಜೆ ವೇಳೆ ಚಿನ್ನಾಭರಣಗಳು ಸಂಜಯ್ ಪತ್ನಿಯ ಕಣ್ಣಿಗೆ ಬಿದ್ದಿದ್ದವು. ಆಗಸ್ಟ್ 16ರಂದು ಚಂದ್ರಮೌಳಿ ಕುಟುಂಬ ಸಂಬಂಧಿಯ ತಿಥಿ ಕಾರ್ಯಕ್ಕೆ ತೆರಳಿದ ಸಂದರ್ಭ ನೋಡಿಕೊಂಡು ರಾತ್ರಿ 2 ಗಂಟೆ ಸುಮಾರಿಗೆ ಸಂಜಯ್ ಚಿನ್ನಾಭರಣ ಕದ್ದಿದ್ದಾನೆ ಎನ್ನಲಾಗಿದೆ. ಬಳಿಕ ಸಂಬಂಧಿಕರ ಬಳಿ ಚಿನ್ನ ಕೊಟ್ಟು, ಬೆಳಿಗ್ಗೆ ವಿಮಾನದಲ್ಲಿ ದಂಪತಿ ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ.
ಉಳಿದ ಆರೋಪಿಗಳು ಚಿನ್ನಾಭರಣದೊಂದಿಗೆ ಬಸ್ ಹತ್ತಿ ಹೊರಟಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಯಲಹಂಕ ಪೊಲೀಸರು ಫೇಸ್ಬುಕ್ ಮೂಲಕ ಆರೋಪಿಗಳ ಸುಳಿವು ಪತ್ತೆ ಮಾಡಿದ್ದು, ಅಷ್ಟೊತ್ತಿಗಾಗಲೇ ಅವರು ನೇಪಾಳ ಗಡಿ ತಲುಪಿದ್ದರು. ತಕ್ಷಣ ಶಸ್ತ್ರ ಸೀಮಾ ಬಲ (SSB)ಗೆ ಮಾಹಿತಿ ನೀಡಿದ ಪೊಲೀಸರು, ಆರೋಪಿಗಳಿದ್ದ ಬಸ್ ತಡೆದು ನಿಲ್ಲಿಸಿದರು. ವಿಮಾನದಲ್ಲಿ ತೆರಳಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಅವರಿಂದ 55 ಲಕ್ಷ ರೂ. ಮೌಲ್ಯದ 360 ಗ್ರಾಂ ಚಿನ್ನ, 960 ಗ್ರಾಂ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿ ಸಂಜಯ್ ಮತ್ತು ಆತನ ಪತ್ನಿಗಾಗಿ ಹುಡುಕಾಟ ಮುಂದುವರಿದಿದೆ.
ಈ ಪ್ರಕರಣದ ಪ್ರಮುಖ ಆರೋಪಿ ಸಂಜಯ್ಗೆ ಈ ಹಿಂದೆಯೂ ಕ್ರೈಂ ಹಿನ್ನೆಲೆ ಇರುವುದು ತನಿಖೆ ವೇಳೆ ಬಯಲಾಗಿದೆ. 2021ರಲ್ಲಿ ಕೆ.ಜಿ. ಹಳ್ಳಿ ಪೊಲೀಸರು ಮನೆಗಳ್ಳತನ ಪ್ರಕರಣ ಸಂಬಂಧ ಈತನನ್ನು ಬಂಧಿಸಿದ್ದರು ಎಂದು ತಿಳಿದುಬಂದಿದೆ.

