Home Blog

ಬಿಡದಿಯಲ್ಲಿ ₹5 ಕೋಟಿ ಮೌಲ್ಯದ ನಕಲಿ ಔಷಧಿ ವಶಕ್ಕೆ: ಸಚಿವ ಯು.ಟಿ. ಖಾದರ್ ಹೇಳಿದ್ದೇನು?

0

ಬೆಂಗಳೂರು: ನಕಲಿ ಔಷಧಿ ತಯಾರಿಕೆ ಹಾಗೂ ಪೂರೈಕೆ ಆರೋಪದ ಹಿನ್ನೆಲೆಯಲ್ಲಿ ನಡೆದ ದಾಳಿಯ ಬೆನ್ನಲ್ಲೇ ಆರೋಗ್ಯ ಸಚಿವ ಯು.ಟಿ. ಖಾದರ್ ಸುದ್ದಿಗೋಷ್ಠಿ ನಡೆಸಿ ಪ್ರಕರಣದ ಕುರಿತು ಹಲವು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಆಹಾರ ಸುರಕ್ಷತಾ ಆಯುಕ್ತ ಶ್ರೀನಿವಾಸ್, ಆರೋಗ್ಯ ಇಲಾಖೆ ಕಾರ್ಯದರ್ಶಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ಬಿಡದಿಯಲ್ಲಿ ನಿನ್ನೆ ನಡೆದ ಕಾರ್ಯಾಚರಣೆ ವೇಳೆ ಭಾರೀ ಪ್ರಮಾಣದ ಔಷಧಿಗಳನ್ನು ವಶಕ್ಕೆ ಪಡೆಯಲಾಗಿದೆ. ಬೀಟ್ ಪೊಲೀಸರಿಂದ ಅಧಿಕಾರಿಗಳಿಗೆ ಮಾಹಿತಿ ದೊರೆತ ತಕ್ಷಣ ಕಾರ್ಯಾಚರಣೆ ನಡೆಸಲಾಗಿದ್ದು, ದಾಳಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಔಷಧಿಗಳು ಪತ್ತೆಯಾಗಿವೆ. ಕಾರ್ಯಾಚರಣೆಯಲ್ಲಿ ವಿಳಂಬವಾಗಿದ್ದರೆ ಔಷಧಿಗಳನ್ನು ಬೇರೆಡೆಗೆ ಸಾಗಿಸುವ ಸಾಧ್ಯತೆ ಇತ್ತು ಎಂದು ಸಚಿವರು ತಿಳಿಸಿದ್ದಾರೆ.

ಒಂದೇ ದಿನ ಸುಮಾರು ₹5 ಕೋಟಿ ಮೌಲ್ಯದ ಔಷಧಿಗಳನ್ನು ರವಾನೆ ಮಾಡಲಾಗುತ್ತಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ.

ಸಿದ್ಧಯ್ಯ ಎಂಬುವರಿಗೆ ಸೇರಿದ ಫಾರ್ಮ್‌ಹೌಸ್‌ ಅನ್ನು ಪ್ರಶಾಂತ್ ಎಂಬುವರಿಗೆ ಲೀಸ್‌ಗೆ ನೀಡಲಾಗಿತ್ತು ಎನ್ನಲಾಗಿದೆ. ಇದೇ ಸ್ಥಳದಲ್ಲಿ ಪ್ರಭು ಎಂಬ ವ್ಯಕ್ತಿ ನಕಲಿ ಔಷಧಿ ತಯಾರಿಕೆ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದಲ್ಲಿ ಸಿಕ್ಕಿಬಿದ್ದಿದ್ದಾನೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ತೆಲಂಗಾಣ ಹಾಗೂ ಹಿಮಾಚಲ ಪ್ರದೇಶದಿಂದ ಕಡಿಮೆ ಬೆಲೆಗೆ ಔಷಧಿಗಳನ್ನು ತರಿಸಲಾಗುತ್ತಿತ್ತು. ಬಳಿಕ ಅವುಗಳ ಮೇಲೆ ಸ್ಥಳೀಯವಾಗಿ ಲೇಬಲ್‌ಗಳನ್ನು ಅಂಟಿಸಿ, ಪ್ರತಿಷ್ಠಿತ ಔಷಧಿ ಕಂಪನಿಗಳ ಉತ್ಪನ್ನಗಳಂತೆ ಬಿಂಬಿಸಿ ಆಸ್ಪತ್ರೆಗಳು ಹಾಗೂ ಮೆಡಿಕಲ್‌ಗಳಿಗೆ ಪೂರೈಕೆ ಮಾಡಲಾಗುತ್ತಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಸಚಿವರು ಹೇಳಿದ್ದಾರೆ. ಫೋಜ್ ಲೇಬಲ್, ಹಿಜ್ಲಮ, ಕ್ರವಿಟಾಜ್ ಸೇರಿದಂತೆ ಹಲವು ಔಷಧಿಗಳ ಹೆಸರಿನಲ್ಲಿ ಉತ್ಪನ್ನಗಳನ್ನು ತಯಾರಿಸಲಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

ಈ ಪ್ರಕರಣದ ತನಿಖೆಯನ್ನು ಎಸ್‌ಪಿ ನೇತೃತ್ವದಲ್ಲಿ ನಡೆಸಲಾಗುತ್ತಿದೆ. ಈ ಕುರಿತು ಈಗಾಗಲೇ ಗೃಹ ಸಚಿವರನ್ನು ಭೇಟಿ ಮಾಡಿ ಮಾಹಿತಿ ನೀಡಿರುವುದಾಗಿ ಯು.ಟಿ. ಖಾದರ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಅವರನ್ನೂ ಭೇಟಿ ಮಾಡಿ ಪ್ರಕರಣದ ಕುರಿತು ಚರ್ಚಿಸುವುದಾಗಿ ಹೇಳಿದ್ದಾರೆ.

ಇದು ಕೇವಲ ಸ್ಥಳೀಯ ಮಟ್ಟದ ಪ್ರಕರಣವಲ್ಲ. ಇದರ ಹಿಂದೆ ಅಂತರರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ದೊಡ್ಡ ಜಾಲ ಇರುವ ಸಾಧ್ಯತೆಯಿದೆ ಎಂದು ಸಚಿವರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಜಾಲದ ಹಿಂದೆ ಯಾರಿದ್ದಾರೆ? ಔಷಧಿಗಳು ಎಲ್ಲಿಂದ ಬಂದವು? ದಂಧೆಯಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ? ಜಾಲದ ಸಂಪರ್ಕ ಎಲ್ಲಿಯವರೆಗೆ ಇದೆ? ಯಾವೆಲ್ಲ ಕಡೆ ಈ ಔಷಧಿಗಳನ್ನು ಪೂರೈಕೆ ಮಾಡಲಾಗಿದೆ? ಕಳೆದ ಎರಡು ವರ್ಷಗಳಲ್ಲಿ ಎಷ್ಟು ಮಂದಿ ಈ ಔಷಧಿಗಳನ್ನು ಬಳಸಿದ್ದಾರೆ? ಎಂಬ ಎಲ್ಲಾ ಪ್ರಶ್ನೆಗಳಿಗೂ ತನಿಖೆಯ ಮೂಲಕ ಉತ್ತರ ಕಂಡುಕೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಅಲ್ಲದೆ, ನಕಲಿ ಔಷಧಿಗಳ ಬಳಕೆಯಿಂದ ಯಾರಾದರೂ ಮೃತಪಟ್ಟಿದ್ದಾರೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಪ್ರಕರಣದ ಕುರಿತು ವಿಧಾನಮಂಡಲದ ಸದನದಲ್ಲೂ ಚರ್ಚೆ ನಡೆಸಲಾಗುವುದು. ಕೇಂದ್ರ ಸರ್ಕಾರಕ್ಕೂ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ನೀಡಲಾಗುವುದು ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ.

ಇದೇ ವೇಳೆ ನಕಲಿ ಔಷಧಿ ದಂಧೆಯ ಕುರಿತು ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಿ ಕಾರ್ಯಾಚರಣೆಗೆ ನೆರವಾದ ಬೀಟ್ ಪೊಲೀಸರ ಕಾರ್ಯವನ್ನು ಸಚಿವರು ಶ್ಲಾಘಿಸಿದ್ದಾರೆ. ಮಾಹಿತಿ ನೀಡಿ ಕಾರ್ಯಾಚರಣೆಗೆ ಸಹಕರಿಸಿದ ಪೊಲೀಸರಿಗೆ ವಿಶೇಷ ಬಹುಮಾನ ನೀಡುವುದಾಗಿ ಯು.ಟಿ. ಖಾದರ್ ಘೋಷಿಸಿದ್ದಾರೆ.

ಫುಟ್ ಪಾತ್ ಮೇಲೆ ವಾಹನ ಚಲಾಯಿಸಿದ್ರೆ ಇನ್ಮುಂದೆ 5 ಸಾವಿರ ರೂ. ದಂಡ! ಸಾರಿಗೆ ಇಲಾಖೆಯಿಂದ ಸರ್ಕಾರಕ್ಕೆ ಮಹತ್ವದ ಪ್ರಸ್ತಾವನೆ

0

ಬೆಂಗಳೂರು: ಫುಟ್‌ಪಾತ್ ಮೇಲೆ ವಾಹನ ಚಲಾಯಿಸುವ ಸವಾರರಿಗೆ ಇನ್ಮುಂದೆ ಭಾರಿ ದಂಡ ಬೀಳುವ ಸಾಧ್ಯತೆ ಇದೆ. ನಿಯಮ ಉಲ್ಲಂಘಿಸುವವರಿಗೆ ಈಗಿರುವ ದಂಡಕ್ಕಿಂತ ಹಲವು ಪಟ್ಟು ಹೆಚ್ಚಿಸಲು ಸಾರಿಗೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಸದ್ಯ ಫುಟ್‌ಪಾತ್ ಮೇಲೆ ವಾಹನ ಚಲಾಯಿಸಿದರೆ ₹500 ದಂಡ ವಿಧಿಸಲಾಗುತ್ತಿದೆ. ಆದರೆ ಮುಂಬರುವ ದಿನಗಳಲ್ಲಿ ಮೊದಲ ಬಾರಿ ಈ ನಿಯಮ ಉಲ್ಲಂಘನೆ ಮಾಡಿದವರಿಗೆ ₹5,000ಕ್ಕೆ ಹೆಚ್ಚಿಸುವಂತೆ ಸಾರಿಗೆ ಇಲಾಖೆ ಪ್ರಸ್ತಾವನೆ ನೀಡಿದೆ. ಇದೇ ನಿಯಮವನ್ನು ಎರಡನೇ ಬಾರಿ ಉಲ್ಲಂಘಿಸಿದರೆ ₹10,000 ದಂಡ ವಿಧಿಸುವಂತೆ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ಯಾವುದೇ ರೀತಿಯ ವಾಹನವನ್ನು ಫುಟ್‌ಪಾತ್ ಮೇಲೆ ಚಲಾಯಿಸಿದರೂ ಈ ದಂಡ ಅನ್ವಯಿಸುವ ಸಾಧ್ಯತೆ ಇದೆ.

ಬೆಂಗಳೂರಿನ ಹಲವು ಭಾಗಗಳಲ್ಲಿ ಫುಟ್‌ಪಾತ್ ಮೇಲೆ ವಾಹನಗಳ ಸಂಚಾರ ಹೆಚ್ಚಾಗಿದ್ದು, ಇದರಿಂದ ಪಾದಚಾರಿಗಳು ರಸ್ತೆಗೆ ಇಳಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿ ಅಪಘಾತದ ಆತಂಕವೂ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ಹೆಚ್ಚಿಸುವ ಪ್ರಸ್ತಾವನೆಯನ್ನು ಸಾರಿಗೆ ಇಲಾಖೆ ಸಿದ್ಧಪಡಿಸಿದೆ.

ಈ ಸಂಬಂಧ ಸಾರಿಗೆ ಆಯುಕ್ತರು ಸರ್ಕಾರದ ಸಾರಿಗೆ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಪ್ರಸ್ತಾವನೆಗೆ ಕಾನೂನು ಇಲಾಖೆಯ ಅಭಿಪ್ರಾಯ ಪಡೆದ ಬಳಿಕ ಅಂತಿಮ ಆದೇಶ ಹೊರಡಿಸಬಹುದು ಎಂದು ಸಾರಿಗೆ ಇಲಾಖೆ ತಿಳಿಸಿದೆ. ಸರ್ಕಾರದ ಅಂತಿಮ ಆದೇಶದ ಬಳಿಕವಷ್ಟೇ ಹೊಸ ದಂಡ ಮೊತ್ತ ಜಾರಿಗೆ ಬರಲಿದೆ.

ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದ ಡೇವಿಡ್ ವಾರ್ನರ್ʼಗೆ ಸಂಕಷ್ಟ: ನ್ಯಾಯಾಲಯದಿಂದ ಭಾರಿ ದಂಡ ವಿಧಿಸಿ ಆದೇಶ

0

ಸಿಡ್ನಿ: ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಪ್ರಕರಣದಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರನ್ನು ಸಿಡ್ನಿಯ ವೇವರ್ಲಿ ಸ್ಥಳೀಯ ನ್ಯಾಯಾಲಯ ತಪ್ಪಿತಸ್ಥರೆಂದು ಘೋಷಿಸಿದೆ. ಪ್ರಕರಣದಲ್ಲಿ ವಾರ್ನರ್‌ಗೆ 1,500 ಆಸ್ಟ್ರೇಲಿಯನ್ ಡಾಲರ್‌ಗಳ ದಂಡ ವಿಧಿಸಲಾಗಿದ್ದು, ವಾಹನ ಚಲಾಯಿಸಲು ಕಠಿಣ ಷರತ್ತುಗಳನ್ನು ಕೂಡ ನ್ಯಾಯಾಲಯ ವಿಧಿಸಿದೆ.

ಏಪ್ರಿಲ್ 5ರಂದು ಈಸ್ಟರ್ ದಿನದಂದು ಡೇವಿಡ್ ವಾರ್ನರ್ ಮದ್ಯಪಾನ ಮಾಡಿ ಕಾರು ಚಲಾಯಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಪೊಲೀಸರನ್ನು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಅವರು ಕಾರನ್ನು ನಿಲ್ಲಿಸಿ, ತಮ್ಮೊಂದಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಂದಿಗೆ ಆಸನಗಳನ್ನು ಬದಲಾಯಿಸಲು ಯತ್ನಿಸಿದ್ದರು ಎಂದು ಪ್ರಕರಣದ ವಿಚಾರಣೆಯಲ್ಲಿ ತಿಳಿದುಬಂದಿದೆ.

ಪೊಲೀಸರು ವಾರ್ನರ್ ಅವರನ್ನು ವಶಕ್ಕೆ ಪಡೆದು ಮದ್ಯಪಾನ ಪರೀಕ್ಷೆ ನಡೆಸಿದಾಗ, ಅವರ ದೇಹದಲ್ಲಿನ ಆಲ್ಕೋಹಾಲ್ ಪ್ರಮಾಣ ಕಾನೂನುಬದ್ಧ ಮಿತಿಗಿಂತ ಎರಡು ಪಟ್ಟು ಹೆಚ್ಚಾಗಿತ್ತು ಎಂಬುದು ದೃಢಪಟ್ಟಿದೆ.

ಈ ಪ್ರಕರಣದ ಅಂತಿಮ ವಿಚಾರಣೆ ಸಿಡ್ನಿಯ ವೇವರ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ನಡೆದಿದ್ದು, ಘಟನೆಯ ಸಂದರ್ಭದಲ್ಲಿ ಕಾರಿನಲ್ಲಿ ಮಕ್ಕಳು ಕೂಡ ಇದ್ದರು ಎಂಬ ಅಂಶವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ವಾರ್ನರ್ ಅವರ ವಾಹನಕ್ಕೆ 12 ತಿಂಗಳ ಕಾಲ ಬ್ರೀಥಲೈಜರ್ ಲಾಕ್ ಸಾಧನವನ್ನು ಅಳವಡಿಸುವಂತೆ ನ್ಯಾಯಾಲಯ ಆದೇಶಿಸಿದೆ.

ವಿಚಾರಣೆ ವೇಳೆ ವಾರ್ನರ್ ಪರ ವಕೀಲರು, ಪ್ರಕರಣಕ್ಕೆ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ದೊರೆತಿರುವುದರಿಂದ ವಾರ್ನರ್ ಈಗಾಗಲೇ ಸಾಕಷ್ಟು ನಷ್ಟ ಅನುಭವಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ಪ್ರಕರಣವು ಅವರ ವಾಣಿಜ್ಯ ಒಪ್ಪಂದಗಳ ಮೇಲೂ ಪರಿಣಾಮ ಬೀರಬಹುದು. ವಿಶೇಷವಾಗಿ ಭಾರತ ಮತ್ತು ಬಾಂಗ್ಲಾದೇಶ ಸೇರಿದಂತೆ ವಿವಿಧ ದೇಶಗಳಲ್ಲಿನ ಟಿ20 ಫ್ರಾಂಚೈಸಿ ಲೀಗ್‌ಗಳಲ್ಲಿ ಆಡುವ ಅವಕಾಶಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಾದಿಸಿದರು.

ಆದರೆ, ನ್ಯಾಯಾಧೀಶ ಕ್ಲೇರ್ ಫರ್ನಾನ್ ಈ ವಾದಗಳನ್ನು ತಿರಸ್ಕರಿಸಿದರು. ಸಾರ್ವಜನಿಕ ಸುರಕ್ಷತೆಯೇ ನ್ಯಾಯಾಲಯದ ಮೊದಲ ಆದ್ಯತೆ ಎಂದು ಅವರು ಸ್ಪಷ್ಟಪಡಿಸಿದರು. ಅದರಲ್ಲೂ ಘಟನೆಯ ಸಂದರ್ಭದಲ್ಲಿ ಕಾರಿನಲ್ಲಿ ಮಕ್ಕಳು ಇದ್ದರು ಎಂಬುದನ್ನು ನ್ಯಾಯಾಧೀಶರು ಪ್ರಮುಖವಾಗಿ ಪರಿಗಣಿಸಿದರು.

ಏನಿದು ಬ್ರೀಥಲೈಜರ್ ಲಾಕ್?

ನ್ಯಾಯಾಲಯದ ಆದೇಶದಂತೆ ಡೇವಿಡ್ ವಾರ್ನರ್ ಅವರ ಕಾರಿನಲ್ಲಿ 12 ತಿಂಗಳ ಕಾಲ ಬ್ರೀಥಲೈಜರ್ ಲಾಕ್ ಸಾಧನ ಅಳವಡಿಸಲಾಗುತ್ತದೆ. ಇದು ವಾಹನದ ಡ್ಯಾಶ್‌ಬೋರ್ಡ್‌ನಲ್ಲಿ ಅಳವಡಿಸುವ ಸುರಕ್ಷತಾ ಸಾಧನವಾಗಿದ್ದು, ಕಾರು ಸ್ಟಾರ್ಟ್ ಮಾಡುವ ಮೊದಲು ಚಾಲಕ ತನ್ನ ಉಸಿರಿನ ಮಾದರಿಯನ್ನು ನೀಡಬೇಕಾಗುತ್ತದೆ.

ಚಾಲಕನ ಉಸಿರಿನಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಆಲ್ಕೋಹಾಲ್ ಪತ್ತೆಯಾದರೆ, ಸಾಧನವು ಕಾರಿನ ಎಂಜಿನ್ ಸ್ಟಾರ್ಟ್ ಆಗುವುದನ್ನು ತಡೆಯುತ್ತದೆ. ಹೀಗಾಗಿ ವಾರ್ನರ್ ಮುಂದಿನ 12 ತಿಂಗಳು ಈ ಸಾಧನ ಅಳವಡಿಸಿರುವ ವಾಹನದಲ್ಲೇ ಚಾಲನೆ ಮಾಡಬೇಕಾಗುತ್ತದೆ.

ಜೈಲಲ್ಲಿ ಪ್ರಜ್ವಲ್ ಬಳಿ ಮೊಬೈಲ್ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಇಬ್ಬರು ಸಿಬ್ಬಂದಿ ಅಮಾನತು

0

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದ್ದು, ಮತ್ತೆ ಇಬ್ಬರು ಜೈಲು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ಡಿಐಜಿ ಜಿನೇಂದ್ರ ಖನಗಾವಿ ಅವರು ತನಿಖೆ ತೀವ್ರಗೊಳಿಸಿದ್ದು, ಪ್ರಜ್ವಲ್ಗೆ ಮೊಬೈಲ್ ಕೊಟ್ಟವರು ಯಾರು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.

ಡಿಐಜಿ ಜಿನೇಂದ್ರ ಖನಗಾವಿ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಜೈಲು ಎಸ್ಪಿ ಅನ್ಷುಕುಮಾರ್ ಅವರ ಹೇಳಿಕೆ ದಾಖಲಿಸಲಾಗಿದೆ. ಬ್ಯಾರಕ್ ವಿಸಿಟ್ ವೇಳೆ ಯಾವುದೇ ಅಕ್ರಮಗಳು ಕಂಡುಬಂದಿರಲಿಲ್ಲ, ಮೊಬೈಲ್ ಯಾರು ಕೊಟ್ಟರು ಎಂಬುದು ತಮಗೆ ಗೊತ್ತಿಲ್ಲ ಎಂದು ಎಸ್ಪಿ ಹೇಳಿಕೆ ನೀಡಿದ್ದಾರೆ. ಪ್ರಜ್ವಲ್ ರೇವಣ್ಣ ಜೈಲಿನ ಯೂನಿಫಾರ್ಮ್ ಧರಿಸದ ಬಗ್ಗೆ ಎಎಸ್ಪಿಗೆ ನಿಗಾ ವಹಿಸುವಂತೆ ಸೂಚಿಸಿದ್ದೆ, ಜೈಲು ನಿಯಮಾವಳಿಗಳನ್ನು ಎಲ್ಲರೂ ಪಾಲಿಸುವಂತೆ ಎಚ್ಚರಿಕೆ ನೀಡಿ, ಯಾರಿಗೂ ವಿನಾಯಿತಿ ನೀಡದಂತೆ ಸೂಚಿಸಿದ್ದೆ ಎಂದು ಎಸ್ಪಿ ತಿಳಿಸಿದ್ದಾರೆ.

ಎಸ್ಪಿಗೆ ನೀಡಲಾಗಿದ್ದ ಶೋಕಾಸ್ ನೋಟಿಸ್ಗೆ ಉತ್ತರ ಪಡೆದ ಡಿಐಜಿ ಜಿನೇಂದ್ರ ಖನಗಾವಿ, ಸ್ಟೇಟ್ಮೆಂಟ್ ದಾಖಲಿಸಿ ವಾರದೊಳಗೆ ಅಕ್ರಮದ ವರದಿ ನೀಡಲು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಉಳಿದ ಮೂರು ದಿನಗಳಲ್ಲಿ ಜೈಲು ಡಿಐಜಿ ಹೇಳಿಕೆ ಹಾಗೂ ಸಾಕ್ಷಿಗಳ ಸಂಗ್ರಹ ಪೂರ್ಣಗೊಳಿಸಲಿದ್ದು, ಬಳಿಕ ಜೈಲು ಅಕ್ರಮದ ಬಗ್ಗೆ ಡಿಜಿಪಿಗೆ ವರದಿ ಸಲ್ಲಿಸಲಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಜೈಲರ್ ರಮೇಶ್ ಧರ್ಮಟ್ಟಿ ಹಾಗೂ ವಾರ್ಡರ್ ಮಹೇಶ್ ಸಜ್ಜನ್ ಅವರನ್ನು ಅಮಾನತುಗೊಳಿಸಿ ಡಿಜಿಪಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಪ್ರಜ್ವಲ್ ರೇವಣ್ಣ ಸೆಲ್ನಲ್ಲಿ ಮೊಬೈಲ್ ಪತ್ತೆಯಾಗಿದ್ದು, ಕಾರಾಗೃಹ ಮತ್ತು ಸುಧಾರಣಾ ಇಲಾಖೆಗೆ ಭಾರಿ ಮುಜುಗರ ಉಂಟುಮಾಡಿತ್ತು. ಪ್ರಕರಣದ ಬಳಿಕ ವಿಶೇಷ ಭದ್ರತಾ ವಿಭಾಗದ ಬ್ಯಾರಕ್ನಿಂದ ಸಾಮಾನ್ಯ ಕೈದಿಗಳ ಬ್ಯಾರಕ್ಗೆ ಅವರನ್ನು ಅಧಿಕಾರಿಗಳು ಸ್ಥಳಾಂತರಿಸಿದ್ದು, ಈಗ ಸಾಮಾನ್ಯ ಕೈದಿ ಜೀವನ ನಡೆಸಬೇಕಾದ ಸಂಕಷ್ಟ ಎದುರಾಗಿದೆ.

‘ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟ’: ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನಿಧನಕ್ಕೆ ಪ್ರಹ್ಲಾದ್ ಜೋಶಿ ಸಂತಾಪ

0

ಬೆಂಗಳೂರು: ಮಾಜಿ ಶಿಕ್ಷಣ ಸಚಿವ ಹಾಗೂ ತಿಪಟೂರು ಮಾಜಿ ಶಾಸಕ ಬಿ.ಸಿ. ನಾಗೇಶ್ ಅವರ ನಿಧನಕ್ಕೆ ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸರಳತೆ, ಸಜ್ಜನಿಕೆ ಹಾಗೂ ಸ್ನೇಹಮಯ ವ್ಯಕ್ತಿತ್ವದ ನಾಗೇಶ್ ಅವರು ವೈಚಾರಿಕ ಬದ್ಧತೆ ಮತ್ತು ಜನಪರ ಕಾಳಜಿಗೆ ಹೆಸರಾಗಿದ್ದರು ಎಂದು ಜೋಶಿ ಸ್ಮರಿಸಿದ್ದಾರೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಪೂರ್ಣಾವಧಿ ಕಾರ್ಯಕರ್ತರಾಗಿ ಸಾರ್ವಜನಿಕ ಜೀವನ ಆರಂಭಿಸಿದ್ದ ಬಿ.ಸಿ. ನಾಗೇಶ್, ಬಳಿಕ ಶಾಸಕರಾಗಿ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಅವರು ಜಾರಿಗೆ ತಂದ ಹಲವು ಸುಧಾರಣೆಗಳು ಹಾಗೂ ಸಂಘಟನಾ ಕೌಶಲ್ಯ ಸದಾ ಸ್ಮರಣೀಯ ಎಂದು ಜೋಶಿ ಹೇಳಿದ್ದಾರೆ.

ತಿಪಟೂರು ಹಾಗೂ ತುಮಕೂರು ಭಾಗದ ಶಿಕ್ಷಣ ಮತ್ತು ಅಭಿವೃದ್ಧಿಗೆ ನಾಗೇಶ್ ನೀಡಿದ ಕೊಡುಗೆ ಮಹತ್ವದ್ದಾಗಿದೆ. ಬಿಜೆಪಿ ಸಂಘಟನೆಯಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ನಿಧನದಿಂದ ಶಿಕ್ಷಣ ಕ್ಷೇತ್ರ ಹಾಗೂ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಪ್ರಹ್ಲಾದ್ ಜೋಶಿ ಸಂತಾಪ ಸೂಚಿಸಿದ್ದಾರೆ.

ಸರಳತೆ ಮತ್ತು ಸೌಜನ್ಯಕ್ಕೆ ಹೆಸರಾಗಿದ್ದ ನಾಗೇಶ್ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ. ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ದುಃಖವನ್ನು ಸಹಿಸುವ ಶಕ್ತಿ ಸಿಗಲಿ ಎಂದು ಜೋಶಿ ಪ್ರಾರ್ಥಿಸಿದ್ದಾರೆ.

ಕೇವಲ 51 ಟೆಸ್ಟ್ ಪಂದ್ಯಗಳಲ್ಲಿ 100 ಸಿಕ್ಸರ್: ಪಂತ್ʼರಿಂದ ಐತಿಹಾಸಿಕ ಸಾಧನೆ, ಗಿಲ್ ಕ್ರಿಸ್ಟ್-ಸ್ಟೋಕ್ಸ್ ದಾಖಲೆಗಳಿಗೆ ಬ್ರೇಕ್

0

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ವಿಕೆಟ್‌ಕೀಪರ್ ಬ್ಯಾಟರ್ ರಿಷಭ್ ಪಂತ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಗಾಲೆ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಂತ್ ಒಟ್ಟು ಮೂರು ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 100 ಸಿಕ್ಸರ್‌ಗಳ ಮೈಲಿಗಲ್ಲು ತಲುಪಿದ್ದಾರೆ.

ಈ ಸಾಧನೆಯೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 100 ಸಿಕ್ಸರ್‌ಗಳನ್ನು ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ರಿಷಭ್ ಪಂತ್ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ, ಪಂದ್ಯಗಳ ಸಂಖ್ಯೆ, ಇನ್ನಿಂಗ್ಸ್ ಹಾಗೂ ಎದುರಿಸಿದ ಎಸೆತಗಳ ಲೆಕ್ಕಾಚಾರದಲ್ಲೂ ಅತ್ಯಂತ ವೇಗವಾಗಿ ಈ ಮೈಲಿಗಲ್ಲು ತಲುಪಿದ ವಿಶ್ವದ ಬ್ಯಾಟರ್ ಎಂಬ ದಾಖಲೆಯನ್ನೂ ಪಂತ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಕೇವಲ 51 ಟೆಸ್ಟ್ ಪಂದ್ಯಗಳಲ್ಲಿ ಸಿಕ್ಸರ್‌ಗಳ ಶತಕ

ರಿಷಭ್ ಪಂತ್ ಕೇವಲ 51 ಟೆಸ್ಟ್ ಪಂದ್ಯಗಳಲ್ಲಿ 100 ಸಿಕ್ಸರ್‌ಗಳನ್ನು ಪೂರೈಸಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಷ್ಟು ಕಡಿಮೆ ಪಂದ್ಯಗಳಲ್ಲಿ ಯಾವುದೇ ಬ್ಯಾಟರ್ ಈ ಸಾಧನೆ ಮಾಡಿರಲಿಲ್ಲ.

ಇದಕ್ಕೂ ಮೊದಲು ಈ ದಾಖಲೆ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಅವರ ಹೆಸರಿನಲ್ಲಿತ್ತು. ಸ್ಟೋಕ್ಸ್ 82 ಟೆಸ್ಟ್ ಪಂದ್ಯಗಳಲ್ಲಿ 100 ಸಿಕ್ಸರ್‌ಗಳ ಗಡಿ ತಲುಪಿದ್ದರು. ಇದೀಗ ಪಂತ್ ಕೇವಲ 51 ಪಂದ್ಯಗಳಲ್ಲೇ ಈ ಸಾಧನೆ ಮಾಡುವ ಮೂಲಕ ಸ್ಟೋಕ್ಸ್ ಅವರ ದಾಖಲೆಯನ್ನು ಮುರಿದಿದ್ದಾರೆ.

89 ಇನ್ನಿಂಗ್ಸ್‌ನಲ್ಲೇ ಸಿಕ್ಸರ್‌ಗಳ ಶತಕ

ಇನ್ನಿಂಗ್ಸ್‌ಗಳ ಲೆಕ್ಕಾಚಾರದಲ್ಲೂ ರಿಷಭ್ ಪಂತ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಕೇವಲ 89 ಇನ್ನಿಂಗ್ಸ್‌ಗಳಲ್ಲಿ 100 ಟೆಸ್ಟ್ ಸಿಕ್ಸರ್‌ಗಳನ್ನು ಸಿಡಿಸಿರುವ ಪಂತ್, ಆಸ್ಟ್ರೇಲಿಯಾದ ಮಾಜಿ ವಿಕೆಟ್‌ಕೀಪರ್ ಬ್ಯಾಟರ್ ಆ್ಯಡಂ ಗಿಲ್‌ಕ್ರಿಸ್ಟ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಗಿಲ್‌ಕ್ರಿಸ್ಟ್ 130 ಇನ್ನಿಂಗ್ಸ್‌ಗಳಲ್ಲಿ 100 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ್ದರು. ಇದೀಗ ಪಂತ್ 89 ಇನ್ನಿಂಗ್ಸ್‌ಗಳಲ್ಲೇ ಈ ಸಾಧನೆ ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

4,918 ಎಸೆತಗಳಲ್ಲಿ ಸಿಕ್ಸರ್‌ಗಳ ಶತಕ

ಎದುರಿಸಿದ ಎಸೆತಗಳ ಸಂಖ್ಯೆಯಲ್ಲೂ ಪಂತ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಕೇವಲ 4,918 ಎಸೆತಗಳನ್ನು ಎದುರಿಸಿ 100 ಸಿಕ್ಸರ್‌ಗಳ ಮೈಲಿಗಲ್ಲು ತಲುಪಿರುವ ಪಂತ್, ಗಿಲ್‌ಕ್ರಿಸ್ಟ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಗಿಲ್‌ಕ್ರಿಸ್ಟ್ 6,578 ಎಸೆತಗಳನ್ನು ಎದುರಿಸಿದ ಬಳಿಕ 100 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ್ದರು. ಇದೀಗ ಪಂತ್ ಅದಕ್ಕಿಂತಲೂ ಕಡಿಮೆ ಎಸೆತಗಳಲ್ಲಿ ಈ ಸಾಧನೆ ಮಾಡುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಗೆ ಮತ್ತೊಂದು ದಾಖಲೆ ಸೇರಿಸಿದ್ದಾರೆ.

ಹೀಗಾಗಿ ಶ್ರೀಲಂಕಾ ವಿರುದ್ಧದ ಗಾಲೆ ಟೆಸ್ಟ್‌ನಲ್ಲಿ ರಿಷಭ್ ಪಂತ್ ಸಿಡಿಸಿದ ಮೂರು ಸಿಕ್ಸರ್‌ಗಳು ಕೇವಲ ವೈಯಕ್ತಿಕ ಮೈಲಿಗಲ್ಲು ಮಾತ್ರವಲ್ಲದೆ, ಟೆಸ್ಟ್ ಕ್ರಿಕೆಟ್‌ನಲ್ಲೇ ಅಪರೂಪದ ವಿಶ್ವ ದಾಖಲೆಗಳಿಗೆ ಕಾರಣವಾಗಿವೆ.

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ; ಮಗುವಿಗೆ ಔಷಧಿ ತರಲು ಹೊರಟಿದ್ದ ತಂದೆ ಸೇರಿ ಇಬ್ಬರು ಬಲಿ!

0

ದಾವಣಗೆರೆ: ತಾಲೂಕಿನ ಕೈದಾಳೆ-ಕುಕ್ಕುವಾಡ ಕ್ರಾಸ್ ಬಳಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

ಮೃತರನ್ನು ಕರೆಕಟ್ಟೆ ಗ್ರಾಮದ ಯೂಸುಫ್ ಖಾನ್ (33) ಹಾಗೂ ಹೊಸ ಬೆಳವನೂರು ಗ್ರಾಮದ ಅಣ್ಣಪ್ಪ (43) ಎಂದು ಗುರುತಿಸಲಾಗಿದೆ.

ದಾವಣಗೆರೆ ಕಡೆಯಿಂದ ಯೂಸುಫ್ ಖಾನ್ ಬೈಕ್‌ನಲ್ಲಿ ಬರುತ್ತಿದ್ದರು. ಇದೇ ವೇಳೆ ಚನ್ನಗಿರಿ ಕಡೆಯಿಂದ ಅಣ್ಣಪ್ಪ ಬೈಕ್‌ನಲ್ಲಿ ಬರುತ್ತಿದ್ದರು ಎನ್ನಲಾಗಿದೆ. ಕೈದಾಳೆ-ಕುಕ್ಕುವಾಡ ಕ್ರಾಸ್ ಬಳಿ ಎರಡೂ ಬೈಕ್‌ಗಳು ಮುಖಾಮುಖಿಯಾಗಿ ಡಿಕ್ಕಿಯಾಗಿದ್ದು, ಅಪಘಾತದ ತೀವ್ರತೆಗೆ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಯೂಸುಫ್ ಖಾನ್ ಅವರ ಮಗು ಅನಾರೋಗ್ಯದಿಂದ ಬಳಲುತ್ತಿದ್ದು, ಮಗುವಿಗೆ ಔಷಧಿ ತರಲು ಅವರು ಬೈಕ್‌ನಲ್ಲಿ ದಾವಣಗೆರೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಔಷಧಿ ತೆಗೆದುಕೊಂಡು ವಾಪಸ್‌ ತೆರಳುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಅಣ್ಣಪ್ಪ ಅವರ ಬೈಕ್‌ಗೆ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಪಘಾತದ ನಿಖರ ಕಾರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.

ದಾವಣಗೆರೆಯಲ್ಲಿ ಬೆಚ್ಚಿಬೀಳಿಸಿದ ಕೊಲೆ; ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಂದ ಪತ್ನಿ

0

ದಾವಣಗೆರೆ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಪತ್ನಿಯೇ ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಲೆ ಮಾಡಿ, ಬಳಿಕ ಮೃತದೇಹವನ್ನು ತುಂಗಭದ್ರಾ ನದಿಗೆ ಎಸೆದಿರುವ ಆರೋಪ ಕೇಳಿಬಂದಿದೆ.

ದಾವಣಗೆರೆ ತಾಲೂಕಿನ ಪಾಮೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಪಾಮೇನಹಳ್ಳಿ ಗ್ರಾಮದ ರಘು (36) ಕೊಲೆಯಾದ ವ್ಯಕ್ತಿ. ಆತನ ಪತ್ನಿ ಶೃತಿ, ಆಕೆಯ ಪ್ರಿಯಕರ ಉಬೇದುಲ್ಲಾ ಹಾಗೂ ಮೃತದೇಹ ಸಾಗಿಸಲು ಸಹಕರಿಸಿದ ಆರೋಪದ ಮೇಲೆ ಸುರೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ರಘು ಹಾಗೂ ಶೃತಿ ಸುಮಾರು 12 ವರ್ಷಗಳ ಹಿಂದೆ ವಿವಾಹವಾಗಿದ್ದರು. ರಘುವಿಗೆ ಕುಡಿತದ ಚಟವಿದ್ದು, ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಈ ನಡುವೆ ಕಳೆದ 2-3 ವರ್ಷಗಳಿಂದ ಶೃತಿ ಹಾಗೂ ಉಬೇದುಲ್ಲಾ ನಡುವೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಪತಿಯೊಂದಿಗೆ ಸಂಸಾರ ನಡೆಸಲು ರಘು ಅಡ್ಡಿಯಾಗುತ್ತಿದ್ದಾನೆ ಎಂದು ಭಾವಿಸಿದ ಶೃತಿ, ಪ್ರಿಯಕರ ಉಬೇದುಲ್ಲಾ ಜೊತೆ ಸೇರಿ ರಘುವನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾಳೆ ಎನ್ನಲಾಗಿದೆ.

ಯೋಜನೆಯಂತೆ ರಘುವಿನ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಉಬೇದುಲ್ಲಾ ಹಾಗೂ ಆತನ ಸ್ನೇಹಿತ ಸುರೇಶ್ ಸೇರಿಕೊಂಡು ರಘುವಿನ ಮೃತದೇಹವನ್ನು ತುಂಗಭದ್ರಾ ನದಿಗೆ ಎಸೆದಿದ್ದಾರೆ ಎನ್ನಲಾಗಿದೆ.

ಇತ್ತ ರಘು ನಾಪತ್ತೆಯಾಗಿರುವ ಕುರಿತು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.

ತನಿಖೆ ವೇಳೆ ಶೃತಿಯ ಸಹೋದರಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ ಕೆಲವು ಅನುಮಾನಾಸ್ಪದ ವಿಚಾರಗಳು ಬೆಳಕಿಗೆ ಬಂದಿವೆ. ಬಳಿಕ ಶೃತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣದ ಸತ್ಯಾಂಶ ಬಯಲಾಗಿದೆ ಎನ್ನಲಾಗಿದೆ.

ತನಿಖೆ ಮುಂದುವರಿಸಿದ ಪೊಲೀಸರು ಶೃತಿ, ಉಬೇದುಲ್ಲಾ ಹಾಗೂ ಸುರೇಶ್‌ನನ್ನು ಬಂಧಿಸಿದ್ದಾರೆ. ಸದ್ಯ ರಘುವಿನ ಮೃತದೇಹಕ್ಕಾಗಿ ತುಂಗಭದ್ರಾ ನದಿಯಲ್ಲಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಈ ಸಂಬಂಧ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ನಡೆದಿರುವುದು ಹೇಗೆ, ಮೃತದೇಹವನ್ನು ನದಿಗೆ ಎಸೆಯಲು ಬಳಸಿದ ವಾಹನ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಇತರ ಅಂಶಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಶಾರ್ಟ್ ಸರ್ಕ್ಯೂಟ್‌ನಿಂದ ಪ್ಲಾಸ್ಟಿಕ್ ಫ್ಯಾಕ್ಟರಿಗೆ ಬೆಂಕಿ?; ಕ್ಷಣಾರ್ಧದಲ್ಲಿ ಹೊತ್ತಿ ಉರಿದ ಕಾರ್ಖಾನೆ!

0

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ಪಟ್ಟಣದ ಟಿಪ್ಪುನಗರದ ಎಸ್‌ಟಿಪಿ ರಸ್ತೆಯಲ್ಲಿರುವ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.

ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಕಾರ್ಖಾನೆಯಲ್ಲಿ ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದ ಪ್ಲಾಸ್ಟಿಕ್ ಕಚ್ಚಾ ವಸ್ತುಗಳು ಹಾಗೂ ಯಂತ್ರೋಪಕರಣಗಳು ಬೆಂಕಿಗೆ ಆಹುತಿಯಾಗಿವೆ.

ಕಾರ್ಖಾನೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಸಮಯದಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಕಾರ್ಖಾನೆಗೆ ವ್ಯಾಪಿಸಿದೆ. ಪ್ಲಾಸ್ಟಿಕ್ ಕಚ್ಚಾ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿದ್ದ ಹಿನ್ನೆಲೆಯಲ್ಲಿ ಬೆಂಕಿಯ ತೀವ್ರತೆ ಹೆಚ್ಚಾಗಿದ್ದು, ದಟ್ಟ ಹೊಗೆ ಆವರಿಸಿಕೊಂಡಿತ್ತು ಎನ್ನಲಾಗಿದೆ.

ಕಾರ್ಖಾನೆ ಫ್ರೆಂಡ್ಸ್ ಇಲಿಯಾಸ್ ಅವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಬೆಂಕಿ ಕಾಣಿಸಿಕೊಂಡಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಲಭ್ಯವಾಗುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಲೋಕೇಶ್ ನೇತೃತ್ವದಲ್ಲಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸುದೀರ್ಘ ಕಾರ್ಯಾಚರಣೆಯ ಬಳಿಕ ಬೆಂಕಿ ಸಂಪೂರ್ಣವಾಗಿ ನಂದಿಸಲಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಬೆಂಕಿ ವ್ಯಾಪಿಸುವುದನ್ನು ತಡೆಯಲಾಗಿದೆ.

ಅಗ್ನಿ ಅವಘಡದಿಂದ ಕಾರ್ಖಾನೆಯಲ್ಲಿದ್ದ ಪ್ಲಾಸ್ಟಿಕ್ ಕಚ್ಚಾ ವಸ್ತುಗಳು ಹಾಗೂ ಹಲವು ಯಂತ್ರೋಪಕರಣಗಳು ಸುಟ್ಟುಹೋಗಿವೆ. ಘಟನೆಯಿಂದ ಕಾರ್ಖಾನೆ ಮಾಲೀಕರಿಗೆ ಭಾರೀ ಪ್ರಮಾಣದ ಆರ್ಥಿಕ ನಷ್ಟ ಸಂಭವಿಸಿರುವ ಸಾಧ್ಯತೆಯಿದ್ದು, ನಷ್ಟದ ನಿಖರ ಪ್ರಮಾಣ ಇನ್ನಷ್ಟೇ ತಿಳಿದುಬರಬೇಕಿದೆ.

ಘಟನೆಯ ಮಾಹಿತಿ ತಿಳಿದು ಚಿಂತಾಮಣಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರ್ಖಾನೆಯಲ್ಲಿನ ಬೆಂಕಿ ಅವಘಡದ ಸ್ಥಳವನ್ನು ಪರಿಶೀಲಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪ್ರಾಥಮಿಕವಾಗಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ನಿಖರ ಕಾರಣ ತನಿಖೆಯಿಂದ ತಿಳಿದುಬರಬೇಕಿದೆ. ಅಗ್ನಿಶಾಮಕ ಇಲಾಖೆ ಹಾಗೂ ಪೊಲೀಸರು ಘಟನೆಯ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ.

35ನೇ ವಯಸ್ಸಿನಲ್ಲಿ ಟೆಸ್ಟ್ʼಗೆ ಪದಾರ್ಪಣೆ ಮಾಡಿ ದಾಖಲೆ ಬರೆದ ಆಸ್ಟ್ರೇಲಿಯಾ ಬ್ಯಾಟರ್!

0

ನವದೆಹಲಿ: ಕ್ರಿಕೆಟ್ ದಾಖಲೆಗಳ ಮಾತು ಬಂದಾಗ ಸಚಿನ್ ತೆಂಡೂಲ್ಕರ್ ಹಾಗೂ ಸರ್ ಡೊನಾಲ್ಡ್ ಬ್ರಾಡ್‌ಮನ್ ಅವರ ಹೆಸರುಗಳು ಮೊದಲಿಗೆ ನೆನಪಿಗೆ ಬರುತ್ತವೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಸತತವಾಗಿ ಅತಿ ಹೆಚ್ಚು ರನ್‌ಗಳನ್ನು ಔಟಾಗದೆ ಕಲೆಹಾಕಿದ ಅಪರೂಪದ ದಾಖಲೆ ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಆಡಂ ವೋಗ್ಸ್ ಅವರ ಹೆಸರಿನಲ್ಲಿದೆ.

2015ರ ಡಿಸೆಂಬರ್‌ನಿಂದ 2016ರ ಫೆಬ್ರವರಿವರೆಗೆ ಆಡಂ ವೋಗ್ಸ್ ಸತತವಾಗಿ 614 ರನ್‌ಗಳನ್ನು ಔಟಾಗದೆ ಕಲೆಹಾಕಿದ್ದರು. ವೆಸ್ಟ್ ಇಂಡೀಸ್ ವಿರುದ್ಧ ಹೋಬಾರ್ಟ್ ಟೆಸ್ಟ್‌ನಲ್ಲಿ 269* ರನ್ ಗಳಿಸಿದ ವೋಗ್ಸ್, ನಂತರ ಮೆಲ್ಬೋರ್ನ್‌ನಲ್ಲಿ ನಡೆದ ಪಂದ್ಯದಲ್ಲಿ 106* ರನ್ ಗಳಿಸಿದರು. ಇದಾದ ಬಳಿಕ ನ್ಯೂಜಿಲೆಂಡ್ ವಿರುದ್ಧ ವೆಲ್ಲಿಂಗ್ಟನ್ ಟೆಸ್ಟ್‌ನಲ್ಲಿ 239 ರನ್ ಗಳಿಸಿದ ಅವರು ಅಂತಿಮವಾಗಿ ವಿಕೆಟ್ ಒಪ್ಪಿಸಿದರು.

ವೋಗ್ಸ್ ಈ ದಾಖಲೆ ನಿರ್ಮಿಸುವ ಮೊದಲು ಟೆಸ್ಟ್ ಕ್ರಿಕೆಟ್‌ನಲ್ಲಿ ಸತತವಾಗಿ ಅತಿ ಹೆಚ್ಚು ರನ್‌ಗಳನ್ನು ಔಟಾಗದೆ ಗಳಿಸಿದ ದಾಖಲೆ ಭಾರತದ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು. 2004ರಲ್ಲಿ ಸಚಿನ್ ಸತತವಾಗಿ 497 ರನ್‌ಗಳನ್ನು ಔಟಾಗದೆ ಕಲೆಹಾಕಿದ್ದರು. ಆದರೆ ವೋಗ್ಸ್ 614 ರನ್‌ಗಳೊಂದಿಗೆ ಈ ದಾಖಲೆಯನ್ನು ಮುರಿದು ಹೊಸ ಮೈಲಿಗಲ್ಲು ಸ್ಥಾಪಿಸಿದರು.

ವೋಗ್ಸ್ ಅವರ ಈ ಅದ್ಭುತ ಬ್ಯಾಟಿಂಗ್ ಅವಧಿಯಲ್ಲಿ ಟೆಸ್ಟ್ ಸರಾಸರಿ 100ರ ಗಡಿಯನ್ನು ದಾಟಿತ್ತು. ವೆಲ್ಲಿಂಗ್ಟನ್‌ನಲ್ಲಿ 239 ರನ್‌ಗಳಿಗೆ ಔಟಾದ ಬಳಿಕ ಅವರ ವೃತ್ತಿಜೀವನದ ಟೆಸ್ಟ್ ಸರಾಸರಿ 97.46ಕ್ಕೆ ಇಳಿಯಿತು. 2015-16ರ ಅವಧಿಯಲ್ಲಿ ವೋಗ್ಸ್ ಅಸಾಧಾರಣ ಫಾರ್ಮ್‌ನಲ್ಲಿದ್ದರು.

ಆಸ್ಟ್ರೇಲಿಯಾ ಪರ ಒಟ್ಟು 20 ಟೆಸ್ಟ್ ಪಂದ್ಯಗಳನ್ನು ಆಡಿರುವ ಆಡಂ ವೋಗ್ಸ್ 1,485 ರನ್‌ಗಳನ್ನು ಕಲೆಹಾಕಿದ್ದಾರೆ. ಅವರ ಖಾತೆಯಲ್ಲಿ ಐದು ಶತಕಗಳಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ 269* ರನ್.

ವೋಗ್ಸ್ ಅವರ ಈ ದಾಖಲೆ ಮತ್ತಷ್ಟು ವಿಶೇಷವಾಗಿರುವುದು ಅವರು ಟೆಸ್ಟ್ ಕ್ರಿಕೆಟ್‌ಗೆ ತಡವಾಗಿ ಪದಾರ್ಪಣೆ ಮಾಡಿದ್ದರಿಂದ. 35ನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾ ಪರ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟ ಅವರು, ಕೆಲವೇ ವರ್ಷಗಳ ಅವಧಿಯಲ್ಲಿ ತಮ್ಮ ಹೆಸರನ್ನು ಕ್ರಿಕೆಟ್ ದಾಖಲೆ ಪುಸ್ತಕದಲ್ಲಿ ಅಚ್ಚಳಿಯದಂತೆ ದಾಖಲಿಸಿದರು.

2015-16ರ ಋತುವಿನಲ್ಲಿ ವೋಗ್ಸ್ ಅವರ ಬ್ಯಾಟಿಂಗ್ ಪ್ರದರ್ಶನ ಅತ್ಯಂತ ಗಮನಾರ್ಹವಾಗಿತ್ತು. ಆ ಅವಧಿಯಲ್ಲಿ ಅವರು 969 ರನ್‌ಗಳನ್ನು 161.50ರ ಅದ್ಭುತ ಸರಾಸರಿಯಲ್ಲಿ ಕಲೆಹಾಕಿದ್ದರು.

ಸಚಿನ್ ತೆಂಡೂಲ್ಕರ್ ಮತ್ತು ಡೊನಾಲ್ಡ್ ಬ್ರಾಡ್‌ಮನ್ ಅವರಂತಹ ದಿಗ್ಗಜರ ಯುಗದ ಬಳಿಕವೂ ಆಡಂ ವೋಗ್ಸ್ ತಮ್ಮದೇ ಆದ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದ್ದಾರೆ. ಒಮ್ಮೆ ವಿಕೆಟ್ ಕಳೆದುಕೊಂಡ ಬಳಿಕ ಮತ್ತೆ ಕ್ರೀಸ್‌ಗೆ ಬಂದು ಸತತವಾಗಿ ದೊಡ್ಡ ಮೊತ್ತ ಕಲೆಹಾಕುವುದು ಸುಲಭದ ಮಾತಲ್ಲ. ಆದರೆ ವೋಗ್ಸ್ 614 ರನ್‌ಗಳ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅಪರೂಪದ ಮೈಲಿಗಲ್ಲು ಸ್ಥಾಪಿಸಿದ್ದಾರೆ.