Home Blog

ವಾಜಪೇಯಿ ಕಂಡ ಸರಕು ಸಾಗಣೆ ಕಾರಿಡಾರ್ ಕನಸು ನನಸು ಮಾಡಿದ್ದೇವೆ: ಯುಪಿಎ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ

0

ವಡೋದರಾ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕಂಡಿದ್ದ ಸರಕು ಸಾಗಣೆ ಕಾರಿಡಾರ್ ನಿರ್ಮಾಣದ ಕನಸನ್ನು ತಮ್ಮ ಸರ್ಕಾರ ಪೂರ್ಣಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುಜರಾತ್‌ನ ವಡೋದರಾದಲ್ಲಿ ನಡೆದ ‘ನಮೋ ಫಾರ್ ವಿಕಸಿತ್ ಭಾರತ್’ ಕಾರ್ಯಕ್ರಮದಲ್ಲಿ ₹35,000 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ 2,800 ಕಿ.ಮೀ ಉದ್ದದ ಸರಕು ಸಾಗಣೆ ಕಾರಿಡಾರ್ (Freight Corridor) ಅನ್ನು ಲೋಕಾರ್ಪಣೆ ಮಾಡಲಾಗಿದ್ದು, ಇದನ್ನು 21ನೇ ಶತಮಾನದ ಐತಿಹಾಸಿಕ ಸಾಧನೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.

ಫ್ರೈಟ್ ಕಾರಿಡಾರ್ ಯೋಜನೆಯನ್ನು ಉಲ್ಲೇಖಿಸಿದ ಮೋದಿ, ಬಿಜೆಪಿ ಸರ್ಕಾರ ಹಾಗೂ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಕಾರ್ಯವೈಖರಿಯನ್ನು ಹೋಲಿಸಿದರು. ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲೇ ಈ ಯೋಜನೆಗೆ ರೂಪುರೇಷೆ ಸಿದ್ಧವಾಗಿತ್ತು. ಆದರೆ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಯೋಜನೆಗೆ ನಿರೀಕ್ಷಿತ ಪ್ರಗತಿ ಸಿಗಲಿಲ್ಲ. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕಾಮಗಾರಿಗಳಿಗೆ ವೇಗ ಸಿಕ್ಕಿತು ಎಂದು ಪ್ರಧಾನಿ ಹೇಳಿದರು.

ಫ್ರೈಟ್ ಕಾರಿಡಾರ್‌ನ ಉಪಯುಕ್ತತೆಯನ್ನು ಪ್ರಶ್ನಿಸುವವರ ವಿರುದ್ಧವೂ ಮೋದಿ ವ್ಯಂಗ್ಯವಾಡಿದರು. ‘ಹಾಗಾದರೆ ಟ್ರಕ್ ಡ್ರೈವರ್‌ಗಳು ಏನು ಮಾಡಬೇಕು? ಟ್ರಕ್‌ಗಳ ಗತಿ ಏನು? ಟ್ರಕ್‌ಗಳು ಎಲ್ಲಿಗೆ ಹೋಗುತ್ತವೆ? ಟ್ರಕ್ ಖರೀದಿಸಿದವರ ಪಾಡೇನು?’ ಎಂದು ಪ್ರಶ್ನಿಸುವ ಮೂಲಕ ಟೀಕಾಕಾರರನ್ನು ಲೇವಡಿ ಮಾಡಿದರು.

ಸ್ವಾತಂತ್ರ್ಯದ ಬಳಿಕವೂ ರೈಲ್ವೆ ಸಂಪರ್ಕದಿಂದ ವಂಚಿತವಾಗಿದ್ದ ಹಲವು ಪ್ರದೇಶಗಳಿಗೆ ಈ ಕಾರಿಡಾರ್ ಸಂಪರ್ಕ ಕಲ್ಪಿಸುತ್ತಿದ್ದು, ಇದು ‘ಆತ್ಮನಿರ್ಭರ ಭಾರತ’ದ ಭಾಗವಾಗಿದೆ ಎಂದು ಮೋದಿ ಹೇಳಿದರು.

2014ರ ನಂತರ ಭಾರತ 50,000 ಆಧುನಿಕ ರೈಲ್ವೆ ಬೋಗಿಗಳನ್ನು ನಿರ್ಮಿಸಿದೆ ಎಂದು ಪ್ರಧಾನಿ ತಿಳಿಸಿದರು. ಆದರೆ ಹಿಂದಿನ ಸರ್ಕಾರಕ್ಕೆ 10 ವರ್ಷಗಳ ಅವಧಿಯಲ್ಲಿ 50,000 ಶೌಚಾಲಯಗಳನ್ನೂ ನಿರ್ಮಿಸಲು ಸಾಧ್ಯವಾಗಿರಲಿಲ್ಲ ಎಂದು ಹಿಂದಿನ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಭಾರತ ಇದೀಗ ‘ಚಿಪ್ಸ್‌ನಿಂದ ಶಿಪ್‌ವರೆಗೆ’ ವಿವಿಧ ಉತ್ಪನ್ನಗಳನ್ನು ದೇಶೀಯವಾಗಿಯೇ ತಯಾರಿಸುವ ಹೊಸ ಉತ್ಪಾದನಾ ಯುಗವನ್ನು ಪ್ರವೇಶಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಪರಪ್ಪನ ಅಗ್ರಹಾರ ಬಳಿಕ ಮಂಗಳೂರು ಜೈಲಿನಲ್ಲೂ ಮೊಬೈಲ್ ಕರ್ಮಕಾಂಡ: 10 ಫೋನ್ ವಶ

0

ಮಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಬ್ಯಾರಕ್‌ಗಳಲ್ಲಿ ಮೊಬೈಲ್‌ಗಳು ಪತ್ತೆಯಾದ ಪ್ರಕರಣದ ಬೆನ್ನಲ್ಲೇ ಮಂಗಳೂರು ಜಿಲ್ಲಾ ಕಾರಾಗೃಹದಲ್ಲೂ ಜೈಲಿನೊಳಗಿನ ಅಕ್ರಮ ಮೊಬೈಲ್ ಬಳಕೆ ಬಯಲಾಗಿದೆ. ಬರ್ಕೆ ಠಾಣೆ ಪೊಲೀಸರು ನಡೆಸಿದ ದಾಳಿಯಲ್ಲಿ ಎ-ಬ್ಲಾಕ್‌ನಲ್ಲಿದ್ದ 9 ಕೈದಿಗಳ ಬಳಿ ಒಟ್ಟು 10 ಮೊಬೈಲ್ ಫೋನ್‌ಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ.

ಜೈಲಿನೊಳಗೆ ಕೈದಿಗಳು ಮೊಬೈಲ್ ಬಳಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದರು ಎನ್ನಲಾಗಿದೆ. ರಿಫತ್ ಅಲಿ, ಇಬ್ರಾಹಿಂ ಖಲೀಲ್, ಅಸ್ಫಕ್ ಅಲಿಯಾಸ್ ಜುಟ್ಟು ಅಸ್ಫಕ್, ಅರ್ಷದ್, ದಾವೂದ್ ಫರ್ವೇಜ್, ನಝರತ್ ಅಲಿ, ಶಿಫಾನ್, ಅಬ್ದುಲ್ ಸಾದೀಕ್ ಮತ್ತು ಅರ್ಫಜ್ ಅವರ ಬಳಿ ಮೊಬೈಲ್‌ಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಇವರ ಪೈಕಿ ನಾಲ್ವರು ತೊಕ್ಕೊಟ್ಟು ಸಮೀಪ ನಡೆದ ಅರೀಫ್ ಕೊಲೆ ಪ್ರಕರಣದ ಆರೋಪಿಗಳು ಎನ್ನಲಾಗಿದ್ದು, ಜೈಲಿನೊಳಗೆ ಮೊಬೈಲ್‌ಗಳ ಬಳಕೆ ಹಾಗೂ ಅವುಗಳ ಪೂರೈಕೆಯ ಹಿಂದೆ ಯಾರಿದ್ದಾರೆ ಎಂಬುದನ್ನು ಬರ್ಕೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ವಿವಿಧ ಜೈಲುಗಳಲ್ಲಿ ಕೈದಿಗಳು ಹೊರಗಿನ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿರುವುದು ಹಾಗೂ ಜೈಲಿನೊಳಗೆ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಭದ್ರತೆ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಆಗಸ್ಟ್ 11ರಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಮೇಲೂ ಸಿಸಿಬಿ ದಾಳಿ ನಡೆಸಿತ್ತು.

ಪರಪ್ಪನ ಅಗ್ರಹಾರ ದಾಳಿ ವೇಳೆ ಅತ್ಯಾಚಾರ ಪ್ರಕರಣದಲ್ಲಿ ಆರೋಪ ಸಾಬೀತಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್‌ನಲ್ಲಿದ್ದ ಮೊಬೈಲ್ ಸೇರಿದಂತೆ 10ಕ್ಕೂ ಹೆಚ್ಚು ಮೊಬೈಲ್‌ಗಳು ಪತ್ತೆಯಾಗಿದ್ದವು. ಇದೀಗ ಮಂಗಳೂರು ಜಿಲ್ಲಾ ಕಾರಾಗೃಹದಲ್ಲೂ ಒಂದೇ ಬ್ಲಾಕ್‌ನಲ್ಲಿ 9 ಕೈದಿಗಳ ಬಳಿ 10 ಮೊಬೈಲ್‌ಗಳು ಸಿಕ್ಕಿರುವುದು ಜೈಲುಗಳಲ್ಲಿನ ಮೊಬೈಲ್ ಬಳಕೆ ಮತ್ತು ಭದ್ರತಾ ವ್ಯವಸ್ಥೆಯ ಕುರಿತು ಚರ್ಚೆಗೆ ಕಾರಣವಾಗಿದೆ.

ಜೈಲಿನಲ್ಲಿ ಮೊಬೈಲ್ ಬಳಕೆ ಆರೋಪ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ 2 ದಿನ ಪೊಲೀಸ್ ಕಸ್ಟಡಿಗೆ

0

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್ ಫೋನ್ ಬಳಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪ್ರಜ್ವಲ್ ರೇವಣ್ಣ ಅವರನ್ನು 42ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಬಾಡಿ ವಾರೆಂಟ್ ಆಧಾರದ ಮೇಲೆ ಪ್ರಜ್ವಲ್ ರೇವಣ್ಣ ಅವರನ್ನು ಪೊಲೀಸ್ ಕಸ್ಟಡಿಗೆ ಪಡೆಯಲು ಪೊಲೀಸರು ನ್ಯಾಯಾಲಯದಲ್ಲಿ ಮನವಿ ಮಾಡಿದರು.

ಈ ಪ್ರಕರಣದಲ್ಲಿ ಪ್ರತಾಪ್ ಎ1 ಆರೋಪಿಯಾಗಿದ್ದು, ಪ್ರಜ್ವಲ್ ರೇವಣ್ಣ ಎ2 ಆರೋಪಿಯಾಗಿದ್ದಾರೆ. ಪ್ರಕರಣದ ತನಿಖೆಗೆ ಅಗತ್ಯವಿರುವ ಹಿನ್ನೆಲೆಯಲ್ಲಿ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಹಾಗೂ ಪ್ರತಾಪ್ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಅನುಮತಿ ನೀಡುವಂತೆ ಪೊಲೀಸರು ಕೋರ್ಟ್‌ಗೆ ಮನವಿ ಮಾಡಿದ್ದರು.

ಪೊಲೀಸರ ಮನವಿಯನ್ನು ಪರಿಗಣಿಸಿದ 42ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಸಂದೀಪ್ ಪಾಟೀಲ್ ಅವರು ಪ್ರಜ್ವಲ್ ರೇವಣ್ಣ ಅವರನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದ್ದಾರೆ.

ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇಂದಿನಿಂದಲೇ ಪೊಲೀಸರು ಪ್ರಜ್ವಲ್ ರೇವಣ್ಣ ಅವರನ್ನು ವಶಕ್ಕೆ ಪಡೆದು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಿದ್ದಾರೆ.

ಮಾತು ಕೇಳದ ಅಧಿಕಾರಿಗಳನ್ನು ಫೈರ್ ಮಾಡ್ತೇನೆ: ಮತ್ತೆ ವಿವಾದ ಸೃಷ್ಟಿಸಿದ ಸಚಿವ ರಾಯರೆಡ್ಡಿ ಹೇಳಿಕೆ

0

ಕೊಪ್ಪಳ: ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರ ಮತ್ತೊಂದು ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದಲ್ಲಿ ನಡೆದ ಪದವಿಪೂರ್ವ ಕಾಲೇಜು ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಅಧಿಕಾರಿಗಳು ತಮ್ಮ ಮಾತು ಕೇಳಬೇಕು ಎಂದು ಖಡಕ್ ಸೂಚನೆ ನೀಡಿದ್ದು, ಮಾತು ಕೇಳದ ಅಧಿಕಾರಿಗಳನ್ನು ಫೈರ್ ಮಾಡುವುದಾಗಿ ಎಚ್ಚರಿಸಿದ್ದಾರೆ.

ವೇದಿಕೆಯಲ್ಲೇ ಯಲಬುರ್ಗಾ ತಹಶೀಲ್ದಾರ್ ಪ್ರಕಾಶ್ ನಾಶಿ ಅವರ ಹೆಸರನ್ನು ಪ್ರಸ್ತಾಪಿಸಿದ ರಾಯರೆಡ್ಡಿ, ಸಚಿವ ಸ್ಥಾನದ ಕಾರ್ಯಭಾರದಲ್ಲಿ ತಾವು ಸಂಪೂರ್ಣ ಬ್ಯುಸಿಯಾಗಿರುವುದರಿಂದ ತಹಶೀಲ್ದಾರ್ ತಮ್ಮ ಪಿಆರ್‌ಒ ಆಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ತಮ್ಮ ಪಿಎಗೆ ಡಿಜಿಟಲ್ ಸಿಗ್ನೇಚರ್ ಬಳಸಿ ಪತ್ರಗಳನ್ನು ವಿಲೇವಾರಿ ಮಾಡುವಂತೆ ಸೂಚಿಸಿರುವುದಾಗಿಯೂ ತಿಳಿಸಿದ್ದಾರೆ.

ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿ ಕುರಿತು ಮಾತನಾಡಿದ ಸಚಿವರು, ಇಲಾಖೆಯ ಅಡಿಯಲ್ಲಿ ಸುಮಾರು 1.52 ಕೋಟಿ ವಿದ್ಯಾರ್ಥಿಗಳು ಹಾಗೂ 96 ವಿಶ್ವವಿದ್ಯಾಲಯಗಳು ಬರುತ್ತವೆ ಎಂದು ಹೇಳಿದರು. ಇದರ ನಡುವೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಗ್ಯಾರಂಟಿ ಯೋಜನೆಗಳು ಎಂದಿನಂತೆ ಮುಂದುವರಿಯಲಿವೆ. ಯಾವುದೇ ಕಾರಣಕ್ಕೂ ಅವುಗಳನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಚಿವರ ಹೇಳಿಕೆಗಳನ್ನು ಅವರ ಬೆಂಬಲಿಗರು ಸಮರ್ಥಿಸಿಕೊಂಡಿದ್ದಾರೆ. ಜನಪ್ರತಿನಿಧಿಯಾಗಿ ಅಭಿವೃದ್ಧಿ ಕಾರ್ಯಗಳನ್ನು ವೇಗವಾಗಿ ಪೂರ್ಣಗೊಳಿಸುವ ಉದ್ದೇಶದಿಂದ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ ಎಂದು ಬೆಂಬಲಿಗರು ಹೇಳಿದ್ದಾರೆ.

ಇತ್ತೀಚೆಗಷ್ಟೇ ಮುಸ್ಲಿಂ ಧರ್ಮದ ಕುರಿತು ಬಸವರಾಜ ರಾಯರೆಡ್ಡಿ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಆ ವಿವಾದದ ಬೆನ್ನಲ್ಲೇ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಸಚಿವರು ವೇದಿಕೆಯಲ್ಲಿ ನೀಡಿರುವ ಹೇಳಿಕೆ ಇದೀಗ ಮತ್ತೊಂದು ಚರ್ಚೆಗೆ ಕಾರಣವಾಗಿದೆ.

ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ವಿರುದ್ಧ ಭೂ ವಂಚನೆ ಆರೋಪ: 27 ಎಕರೆ ಜಮೀನು ಕಬಳಿಕೆ

ಕಲಬುರಗಿ: ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ವಿರುದ್ಧ ಭೂ ವಂಚನೆ ಆರೋಪ ಕೇಳಿಬಂದಿದ್ದು, ಅಳಿಯನೊಂದಿಗೆ ಸೇರಿ ನಕಲಿ ದಾಖಲೆ ಸೃಷ್ಟಿಸಿ 27 ಎಕರೆ ಜಮೀನು ಕಬಳಿಸಿದ್ದಾರೆ ಎಂದು ಭೂಮಾಲಕಿ ಬಸಮ್ಮ ಕುಟುಂಬ ಆರೋಪಿಸಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಅಣಬಿ ಗ್ರಾಮದಲ್ಲಿರುವ ಸರ್ವೆ ನಂಬರ್ 242 ಮತ್ತು 245ರ ಜಮೀನಿಗೆ ಸಂಬಂಧಿಸಿದಂತೆ ಶಹಾಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಬಸಮ್ಮ ಅವರ ಪುತ್ರ ಎಂಬಂತೆ ಸುಳ್ಳು ದಾಖಲೆ ಸೃಷ್ಟಿಸಿ ಜಮೀನಿನ ಮಾಲೀಕತ್ವವನ್ನು ಬದಲಾಯಿಸಲಾಗಿದೆ ಎಂದು ಕುಟುಂಬ ಆರೋಪಿಸಿದೆ. ಅಳಿಯ ಶಂಕರಗೌಡ ಅವರ ಹೆಸರಿಗೆ ಮೊದಲಿಗೆ ಜಮೀನು ನೋಂದಣಿ ಮಾಡಿಸಿ, ಬಳಿಕ ಶಿವಶಂಕರಪ್ಪ ಅವರ ಹೆಸರಿಗೆ ವರ್ಗಾಯಿಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಭೂಮಿ ವಂಚನೆಯ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಭೂ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಶಿವಶಂಕರಪ್ಪ ಅವರ ಪ್ರತಿಕ್ರಿಯೆ ಪಡೆಯಲು ಟಿವಿ9 ಯತ್ನಿಸಿದರೂ ಸಂಪರ್ಕ ಸಾಧ್ಯವಾಗಿಲ್ಲ. ಹೀಗಾಗಿ ಅವರಿಂದ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಇದರ ಬೆನ್ನಲ್ಲೇ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣವೂ ಶಿವಶಂಕರಪ್ಪ ಅವರಿಗೆ ಮತ್ತಷ್ಟು ಸಂಕಷ್ಟ ತಂದಿದೆ. ಪ್ರಕರಣದಲ್ಲಿ ಬಂಧನ ಭೀತಿ ಎದುರಾಗಿದ್ದು, ಜಾಮೀನು ಅರ್ಜಿ ವಜಾಗೊಂಡ ಬಳಿಕ ಸಿಐಡಿ ಅಧಿಕಾರಿಗಳು ಮೂರನೇ ನೋಟಿಸ್ ಜಾರಿ ಮಾಡಿದ್ದರು. ಆದರೆ ಶಿವಶಂಕರಪ್ಪ ಸಿಐಡಿ ವಿಚಾರಣೆಗೆ ಹಾಜರಾಗಿರಲಿಲ್ಲ.

ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬಳಿಕ ಸಿಐಡಿ ಅಧಿಕಾರಿಗಳು ಶಿವಶಂಕರಪ್ಪ ಅವರ ಮನೆ ಮೇಲೆ ದಾಳಿ ನಡೆಸಿದ್ದರು. ಆದರೆ ಈ ವೇಳೆ ಅವರು ಮನೆಯಲ್ಲಿ ಇರಲಿಲ್ಲ ಎಂಬುದು ಅಧಿಕಾರಿಗಳಿಗೆ ತಿಳಿದುಬಂದಿತ್ತು.

ಜಾಮೀನು ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರು ಕೆಪಿಎಸ್‌ಸಿ ನೇಮಕಾತಿ ಅಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ನೀಟ್ ಪರೀಕ್ಷೆಯ ಅಕ್ರಮದಿಂದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳನ್ನು ಉಲ್ಲೇಖಿಸಿ, ಇಂತಹ ಅಕ್ರಮಗಳಿಂದ ಪರಿಶ್ರಮಪಟ್ಟು ಓದಿದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಏನಾಗಬೇಕು ಎಂದು ಪ್ರಶ್ನಿಸಿದ್ದರು.

ಕೆಪಿಎಸ್‌ಸಿ ಮೇಲಿನ ಜನರ ವಿಶ್ವಾಸ ನಾಶವಾಗುತ್ತಿದೆ ಮತ್ತು ಇದು ವ್ಯವಸ್ಥಿತ ಫ್ರಾಡ್ ಎಂದು ಹೇಳಿದ್ದ ನ್ಯಾಯಮೂರ್ತಿಗಳು, ಶಿವಶಂಕರಪ್ಪ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದರು.

ದೆಹಲಿ ಕಟ್ಟಡ ಕುಸಿತ ಪ್ರಕರಣ; ಅಡಿಪಾಯದ ಮಿತಿ ಗೊತ್ತಿದ್ದರೂ 4 ಹೆಚ್ಚುವರಿ ಮಹಡಿ ನಿರ್ಮಾಣ, FIRನಲ್ಲಿ ಗಂಭೀರ ಆರೋಪ

0

ನವದೆಹಲಿ: ದೆಹಲಿಯಲ್ಲಿ ಕಟ್ಟಡ ಕುಸಿದು ಹಲವರ ಸಾವಿಗೆ ಕಾರಣವಾದ ಪ್ರಕರಣದ ತನಿಖೆಯಲ್ಲಿ ಕಟ್ಟಡದ ಮಾಲೀಕರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಅಸ್ತಿತ್ವದಲ್ಲಿದ್ದ ಅಡಿಪಾಯದ ಮಿತಿ ಹಾಗೂ ಅದು ಹೆಚ್ಚುವರಿ ಭಾರವನ್ನು ತಡೆದುಕೊಳ್ಳಲು ಸಾಧ್ಯವಿಲ್ಲ ಎಂಬುದು ತಿಳಿದಿದ್ದರೂ, ಬಾಡಿಗೆ ಆದಾಯದ ಉದ್ದೇಶದಿಂದ ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಕಟ್ಟಡದ ಮಾಲೀಕ ಹರಿ ರಾಮ್ ಬನ್ಸಾಲ್ ಅಲಿಯಾಸ್ ಗುಪ್ತಾ ಹಾಗೂ ಅವರ ಸಹೋದರರಿಗೆ ಕಟ್ಟಡದ ಅಡಿಪಾಯದ ಮಿತಿಗಳ ಬಗ್ಗೆ ಮೊದಲೇ ತಿಳಿದಿತ್ತು ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ. ಆದರೂ ನಾಲ್ಕು ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಲಾಗಿದ್ದು, ಇದರಿಂದ ಕಟ್ಟಡದ ರಚನಾತ್ಮಕ ಸ್ಥಿರತೆಗೆ ಧಕ್ಕೆಯಾಗಿ ಕುಸಿತಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಉಲ್ಲೇಖಿಸಲಾಗಿದೆ.

ಕಟ್ಟಡ ನಿರ್ಮಾಣ ಅಥವಾ ದುರಸ್ತಿಯಲ್ಲಿ ನಿರ್ಲಕ್ಷ್ಯ ವಹಿಸುವುದು ಹಾಗೂ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯ ಉಂಟುಮಾಡುವ ಕೃತ್ಯಗಳಿಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105, 290 ಮತ್ತು 125(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅಡಿಪಾಯವು ಹೆಚ್ಚುವರಿ ಭಾರವನ್ನು ತಡೆದುಕೊಳ್ಳಲು ಸಾಧ್ಯವಿಲ್ಲ ಎಂಬುದು ತಿಳಿದಿದ್ದರೂ ನಾಲ್ಕು ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಲು ಹೇಗೆ ಅವಕಾಶ ನೀಡಲಾಯಿತು ಎಂಬ ಪ್ರಶ್ನೆ ಇದೀಗ ಪೊಲೀಸರ ತನಿಖೆಯ ಪ್ರಮುಖ ಅಂಶವಾಗಿದೆ.

ಈ ಹೆಚ್ಚುವರಿ ನಿರ್ಮಾಣಕ್ಕೆ ಯಾರು ಅನುಮತಿ ನೀಡಿದರು? ಹೆಚ್ಚುವರಿ ಮಹಡಿಗಳನ್ನು ನಿರ್ಮಿಸುವ ಮೊದಲು ಅಧಿಕೃತ ಅನುಮೋದನೆ ಪಡೆಯಲಾಗಿತ್ತೇ? ಕಟ್ಟಡದ ರಚನಾತ್ಮಕ ಸುರಕ್ಷತೆಯನ್ನು ಪರಿಶೀಲಿಸಲಾಗಿತ್ತೇ? ಎಂಬುದರ ಕುರಿತು ಪೊಲೀಸರು ತನಿಖೆ ನಡೆಸಲಿದ್ದಾರೆ.

ಎಫ್‌ಐಆರ್‌ನಲ್ಲಿ ದಾಖಲಾಗಿರುವ ಆರೋಪಗಳು ಸದ್ಯ ನಡೆಯುತ್ತಿರುವ ತನಿಖೆಯ ಭಾಗವಾಗಿದ್ದು, ಆರೋಪಗಳು ತನಿಖೆ ಹಾಗೂ ಮುಂದಿನ ಕಾನೂನು ಪ್ರಕ್ರಿಯೆಯಲ್ಲಿ ಸಾಬೀತಾಗಬೇಕಿದೆ.

ಅಯೋಧ್ಯೆಯಲ್ಲಿ ಮಹತ್ವದ ಬದಲಾವಣೆ: ದೇಣಿಗೆ ಎಣಿಕೆಗೆ ಹೊಸ ನಿಯಮ, 45 ದಿನದ CCTV ಬ್ಯಾಕಪ್ 180 ದಿನಕ್ಕೆ ಹೆಚ್ಚಳ

0

ಉತ್ತರ ಪ್ರದೇಶ: ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಹೊಸ ಸಿಇಒ ಆಗಿ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ನೇಮಕಗೊಂಡ ಬೆನ್ನಲ್ಲೇ, ರಾಮಮಂದಿರದ ಆಡಳಿತ ಮತ್ತು ಭದ್ರತಾ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ತರಲಾಗಿದೆ. ವಿಶೇಷವಾಗಿ ದೇಣಿಗೆ ಎಣಿಕೆ ಪ್ರಕ್ರಿಯೆಯಲ್ಲಿ ಅಕ್ರಮಗಳಿಗೆ ಅವಕಾಶವಾಗದಂತೆ ಹೊಸ ನಿಯಮಗಳನ್ನು ಜಾರಿಗೆ ತರಲು ಟ್ರಸ್ಟ್ ನಿರ್ಧರಿಸಿದೆ.

ದೇಣಿಗೆ ಎಣಿಕೆ ಮಾಡುವ ಸಿಬ್ಬಂದಿಗೆ ಜೇಬುಗಳಿಲ್ಲದ ಸಮವಸ್ತ್ರ ಕಡ್ಡಾಯಗೊಳಿಸಲಾಗಿದೆ. ಎಣಿಕಾ ಕೇಂದ್ರಕ್ಕೆ ಪ್ರವೇಶಿಸುವಾಗ ಹಾಗೂ ಅಲ್ಲಿಂದ ಹೊರಬರುವಾಗ ತಪಾಸಣೆ ನಡೆಸುವುದು ಕಡ್ಡಾಯವಾಗಲಿದೆ. ದೇಣಿಗೆ ಎಣಿಕೆಯ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ರೆಕಾರ್ಡ್ ಮಾಡುವ ವ್ಯವಸ್ಥೆಯನ್ನೂ ಜಾರಿಗೆ ತರಲಾಗುತ್ತಿದೆ.

ಈ ಹಿಂದೆ ಎಣಿಕಾ ಕೇಂದ್ರದ ಸಿಸಿಟಿವಿ ದೃಶ್ಯಗಳನ್ನು 45 ದಿನಗಳ ಕಾಲ ಬ್ಯಾಕಪ್‌ನಲ್ಲಿ ಸಂರಕ್ಷಿಸಲಾಗುತ್ತಿತ್ತು. ಇದೀಗ ಈ ಅವಧಿಯನ್ನು 180 ದಿನಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಸಾಮಾನ್ಯ ಕ್ಯಾಮೆರಾಗಳ ಬದಲಿಗೆ PTZ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಇವು ಸ್ವಯಂ ತಿರುಗುವಿಕೆ ಹಾಗೂ ಜೂಮ್ ಮಾಡುವ ವ್ಯವಸ್ಥೆಯನ್ನು ಹೊಂದಿರಲಿವೆ.

ಎಣಿಕಾ ಕೇಂದ್ರದ ಮೇಲ್ವಿಚಾರಣೆಗಾಗಿ ಈ ಹಿಂದೆ 13 ಕ್ಯಾಮೆರಾಗಳಿದ್ದರೆ, ಇದೀಗ ಒಟ್ಟು 27 ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಹೆಚ್ಚುವರಿ ಎಸ್‌ಐಎಸ್‌ ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಲಾಗುತ್ತದೆ.

ಎಣಿಕಾ ಕೇಂದ್ರಕ್ಕೆ ಪ್ರವೇಶವನ್ನೂ ನಿರ್ಬಂಧಿಸಲಾಗಿದ್ದು, ಅನುಮತಿ ಪಡೆದ 43 ಮಂದಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಲೆಕ್ಕಪತ್ರ ನಿರ್ವಹಣೆಯನ್ನು ಡಿಜಿಟಲ್ ರೂಪಕ್ಕೆ ತರಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಚಾರ್ಟರ್ಡ್ ಅಕೌಂಟೆಂಟ್‌ರನ್ನು ನೇಮಕ ಮಾಡಲಾಗುತ್ತದೆ.

ಹಣ ಬಿಡುಗಡೆ ಮಾಡುವ ಸಂದರ್ಭದಲ್ಲಿ ಖಜಾಂಚಿ ಮಹೇಶ್ ಭಾಗಚಂದಕ್, ಮುಖ್ಯ ಎಂಜಿನಿಯರ್ ಜಗದೀಶ್ ಅಫಲೆ ಹಾಗೂ ಸಿಎ ಚಂದನ್ ರೈ ಅವರ ಸಹಿ ಕಡ್ಡಾಯವಾಗಲಿದೆ.

ಇನ್ನು ದೇಣಿಗೆ ಎಣಿಕೆ ಕಾರ್ಯಕ್ಕೆ ಗುತ್ತಿಗೆ ನೌಕರರ ಬದಲಿಗೆ ಎಸ್‌ಬಿಐನ 36 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಸಂಗ್ರಹವಾಗುವ ನಗದು ಹಣವನ್ನು ಎಸ್‌ಬಿಐ ಬ್ಯಾಂಕ್ ವಾಹನದಲ್ಲೇ ವರ್ಗಾವಣೆ ಮಾಡುವ ವ್ಯವಸ್ಥೆ ಮಾಡಲಾಗಿದ್ದು, ಹಣ ವರ್ಗಾವಣೆಯ ಪ್ರತಿಯೊಂದು ಹಂತವನ್ನೂ ವಿಡಿಯೋ ರೆಕಾರ್ಡ್ ಮಾಡಲು ಟ್ರಸ್ಟ್ ನಿರ್ಧರಿಸಿದೆ.

ಇತ್ತೀಚೆಗೆ ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಹೊಸ ಸಿಇಒ ಆಗಿ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ಅವರನ್ನು ನೇಮಕ ಮಾಡಲಾಗಿದೆ. ಇದೇ ವೇಳೆ ದೆಹಲಿ ಮೂಲದ ಮಹೇಶ್ ಭಾಗಚಂದಕ್, ಅಯೋಧ್ಯೆ ನಿವಾಸಿ ಮದನ್ ಮೋಹನ್ ಪಾಂಡೆ ಹಾಗೂ ಶಿಕೋಹಾಬಾದ್‌ನ ನಿರ್ಮಲಾ ಯಾದವ್ ಅವರನ್ನು ಹೊಸ ಟ್ರಸ್ಟಿಗಳಾಗಿ ನೇಮಕ ಮಾಡಲಾಗಿದೆ.

₹70 ಕೋಟಿ ಕೊಟ್ಟು ಹಿಲ್ ಸ್ಟೇಷನ್ʼನಲ್ಲಿ 3.86 ಎಕರೆ ಜಮೀನು ಖರೀದಿಸಿದ ಸಚಿನ್ ತೆಂಡೂಲ್ಕರ್!

0

ಮುಂಬೈ: ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಇದೀಗ ರಿಯಲ್ ಎಸ್ಟೇಟ್ ಹೂಡಿಕೆಯ ಮೂಲಕವೂ ಗಮನ ಸೆಳೆದಿದ್ದಾರೆ. ಮಹಾರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣ ಲೋನಾವಲಾದಲ್ಲಿ ಸಚಿನ್ ಸುಮಾರು ₹70 ಕೋಟಿ ಮೌಲ್ಯದ 3.86 ಎಕರೆ ಭೂಮಿಯನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ.

ಆಸ್ತಿ ನೋಂದಣಿ ದಾಖಲೆಗಳನ್ನು ಸಂಗ್ರಹಿಸುವ ‘ಜ್ಯಾಪ್ಕಿ’ (Zapkey) ಪ್ರಕಾರ, ಈ ವಹಿವಾಟು ಸೆಪ್ಟೆಂಬರ್ 4, 2026ರಂದು ನಡೆದಿದೆ. ಮೂರು ಪ್ರತ್ಯೇಕ ಆಸ್ತಿ ಒಪ್ಪಂದಗಳ ಮೂಲಕ ಸಚಿನ್ ಈ ಜಮೀನನ್ನು ಖರೀದಿಸಿದ್ದಾರೆ ಎನ್ನಲಾಗಿದೆ.

ಇದರಲ್ಲಿ ಮೊದಲ ಪ್ಲಾಟ್ ಸುಮಾರು 3.09 ಎಕರೆ ವಿಸ್ತೀರ್ಣ ಹೊಂದಿದ್ದು, ಇದಕ್ಕಾಗಿ ಸಚಿನ್ ₹63.69 ಕೋಟಿ ಪಾವತಿಸಿ ಶೇ.100ರಷ್ಟು ಮಾಲೀಕತ್ವ ಪಡೆದಿದ್ದಾರೆ. ಎರಡನೇ ಪ್ಲಾಟ್‌ನಲ್ಲಿ ಶೇ.50ರಷ್ಟು ಪಾಲನ್ನು ₹4.56 ಕೋಟಿಗೆ, ಮೂರನೇ ಪ್ಲಾಟ್‌ನಲ್ಲಿ ಶೇ.50ರಷ್ಟು ಪಾಲನ್ನು ₹1.75 ಕೋಟಿಗೆ ಖರೀದಿಸಿದ್ದಾರೆ ಎಂದು ದಾಖಲೆಗಳಿಂದ ತಿಳಿದುಬಂದಿದೆ.

ಈ ಆಸ್ತಿಗಳನ್ನು ನಂದನ್ ಧನಂಜಯ್ ಮೆಹ್ತಾ ಮತ್ತು ವಿವಸ್ವತ್ ಧನಂಜಯ್ ಮೆಹ್ತಾ ಅವರಿಂದ ಖರೀದಿಸಲಾಗಿದೆ ಎನ್ನಲಾಗಿದೆ. ಜಮೀನಿನೊಂದಿಗೆ ಅಲ್ಲಿರುವ ನಿರ್ಮಿತ ರಚನೆಗಳೂ ಒಪ್ಪಂದದ ಭಾಗವಾಗಿವೆ. ಆಸ್ತಿ ನೋಂದಣಿಗಾಗಿ ಸಚಿನ್ ಸುಮಾರು ₹4.20 ಕೋಟಿ ಮುದ್ರಾಂಕ ಶುಲ್ಕ ಹಾಗೂ ₹90,000 ನೋಂದಣಿ ಶುಲ್ಕ ಪಾವತಿಸಿದ್ದಾರೆ ಎಂದು ವರದಿಯಾಗಿದೆ.

ಸಚಿನ್ ಈ ಜಮೀನಿನಲ್ಲಿ ಏನು ನಿರ್ಮಿಸಲಿದ್ದಾರೆ ಎಂಬುದು ಸದ್ಯ ಕುತೂಹಲಕ್ಕೆ ಕಾರಣವಾಗಿದೆ. ಕುಟುಂಬಕ್ಕಾಗಿ ಐಷಾರಾಮಿ ಸೆಕೆಂಡ್ ಹೋಮ್ ಅಥವಾ ಫಾರ್ಮ್‌ಹೌಸ್ ನಿರ್ಮಿಸುವ ಸಾಧ್ಯತೆ ಇದೆ ಎಂಬ ಚರ್ಚೆ ನಡೆಯುತ್ತಿದೆ. ಲೋನಾವಲಾ ಪ್ರವಾಸಿಗರ ನೆಚ್ಚಿನ ತಾಣವಾಗಿರುವುದರಿಂದ ರಿಸಾರ್ಟ್ ಅಥವಾ ವೆಲ್ನೆಸ್ ಸೆಂಟರ್‌ನಂತಹ ಹಾಸ್ಪಿಟಾಲಿಟಿ ಪ್ರಾಜೆಕ್ಟ್‌ಗೂ ಬಳಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಸಚಿನ್ ಅವರಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಮುಂಬೈನ ಬಾಂದ್ರಾದಲ್ಲೂ ಸಚಿನ್ ಅವರಿಗೆ ಐಷಾರಾಮಿ ಬಂಗಲೆ ಇದೆ. 2007ರಲ್ಲಿ ಸುಮಾರು ₹39 ಕೋಟಿಗೆ ಖರೀದಿಸಿದ್ದ ಈ ಬಂಗಲೆಯ ಪ್ರಸ್ತುತ ಮೌಲ್ಯ ₹100 ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ಇದೀಗ ಲೋನಾವಲಾದಲ್ಲಿ ಸುಮಾರು ₹70 ಕೋಟಿಯ ಹೊಸ ಹೂಡಿಕೆ ಮಾಡುವ ಮೂಲಕ ಸಚಿನ್ ಅವರ ರಿಯಲ್ ಎಸ್ಟೇಟ್ ಆಸ್ತಿ ಮತ್ತಷ್ಟು ವಿಸ್ತರಿಸಿದೆ.

“ಪ್ರೂಫ್ ಏನಿದೆ? ನಿನ್ನ ಮೇಲೆ ಮಾನಹಾನಿ ಕೇಸ್ ಹಾಕ್ತೀವಿ”: KPSC ಹಗರಣದ ವಿರುದ್ಧ ದೂರು ಕೊಟ್ಟ ಅಭ್ಯರ್ಥಿಗೆ ಅನಾಮಿಕನಿಂದ ಬೆದರಿಕೆ!

0

ಬೆಂಗಳೂರು: ಕೆಪಿಎಸ್‌ಸಿ ಹಗರಣದ ವಿರುದ್ಧ ದೂರು ನೀಡಿದ್ದ ಅಭ್ಯರ್ಥಿ ಮಂಜುನಾಥ್ ಅವರಿಗೆ ಇದೀಗ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ವೆಟರನರಿ ಆಫೀಸರ್ ನೇಮಕಾತಿಗೆ ಸಂಬಂಧಿಸಿದಂತೆ ಅನುಮಾನಾಸ್ಪದ ಅಭ್ಯರ್ಥಿಗಳ ಪಟ್ಟಿಯನ್ನು ನೀಡಿದ್ದೇಕೆ ಎಂದು ಪ್ರಶ್ನಿಸಿ ವ್ಯಕ್ತಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಮಂಜುನಾಥ್ ಅವರಿಗೆ ಕರೆ ಮಾಡಿದ ಅನಾಮಿಕ ವ್ಯಕ್ತಿ, ವೆಟರನರಿ ಆಫೀಸರ್‌ಗಳ ಪಟ್ಟಿಯಲ್ಲಿ ತನ್ನ ಸ್ನೇಹಿತೆಯೊಬ್ಬರ ಹೆಸರನ್ನು ನೀಡಿದ್ದೀರಿ. ಯಾವ ಸಾಕ್ಷ್ಯ ಇಟ್ಟುಕೊಂಡು ಆ ಹೆಸರು ನೀಡಿದ್ದೀರಿ? ನಿಮಗೆ ಅದು ಖಚಿತವಾಗಿದೆಯೇ? ಯಾವುದೇ ಪ್ರೂಫ್ ಇದೆಯೇ? ಎಂದು ಪ್ರಶ್ನಿಸಿದ್ದಾನೆ ಎನ್ನಲಾಗಿದೆ.

ಅಲ್ಲದೆ, ‘ನೀನು ಎಲ್ಲಿದ್ದೀಯಾ? ಯಾಕೆ ದೂರು ಕೊಟ್ಟೆ? ಏನು ಎವಿಡೆನ್ಸ್ ಇದೆ ಎಂದು ದೂರು ಕೊಟ್ಟೆ? 40 ಪರ್ಸೆಂಟ್ ಸ್ಕ್ಯಾಮ್ ಆಗಿದೆ ಅಂತ ಹೇಳುತ್ತಿದ್ದೀರಲ್ಲ, ಅದಕ್ಕೆಲ್ಲ ಪ್ರೂಫ್ ಇದೆಯಾ?’ ಎಂದು ಪ್ರಶ್ನಿಸಿ ಆವಾಜ್ ಹಾಕಿದ್ದಾನೆ ಎನ್ನಲಾಗಿದೆ.

ಅನುಮಾನಾಸ್ಪದ ಅಭ್ಯರ್ಥಿಗಳ ಪಟ್ಟಿಯನ್ನು ನೀಡಿದ್ದೇಕೆ, ಈ ರೀತಿ ಮಾಡಲು ನಿಮಗೆ ಯಾರು ಹೇಳಿದ್ದಾರೆ ಎಂದು ಪ್ರಶ್ನಿಸಿದ ಅನಾಮಿಕ, ‘ನಿಮ್ಮ ಮೇಲೆ ನಾವು ಕೇಸ್ ಮಾಡುತ್ತೇವೆ. ಮಾನಹಾನಿ ಪ್ರಕರಣ ದಾಖಲಿಸುತ್ತೇವೆ. ನಮಗೂ ಲಾಯರ್ ಇದ್ದಾರೆ, ಎಲ್ಲವೂ ಗೊತ್ತಿದೆ’ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಇಷ್ಟೇ ಅಲ್ಲದೆ, ‘ಇದೆಲ್ಲಾ ಮಾಡಲು ನೀನೇನು ಸರ್ಕಾರನಾ?’ ಎಂದು ಪ್ರಶ್ನಿಸಿ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ. ಕೆಪಿಎಸ್‌ಸಿ ವೆಟರನರಿ ಆಫೀಸರ್ ನೇಮಕಾತಿಗೆ ಸಂಬಂಧಿಸಿದಂತೆ ಅಕ್ರಮದ ಆರೋಪಗಳು ಕೇಳಿಬಂದಿರುವ ಬೆನ್ನಲ್ಲೇ, ಈ ಹಗರಣದ ವಿರುದ್ಧ ದೂರು ನೀಡಿದ್ದ ಅಭ್ಯರ್ಥಿಗೆ ಅನಾಮಿಕ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿರುವ ಆರೋಪ ಇದೀಗ ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದೆ.

40 ಅಡಿ ಪ್ರಪಾತಕ್ಕೆ ಉರುಳಿದ ಪ್ರವಾಸಿ ಜೀಪ್: ಪ್ರಾಣಾಪಾಯದಿಂದ ಪಾರಾದ ಕೇರಳ ಪ್ರವಾಸಿಗರು

0

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿದ ಪ್ರವಾಸಿ ಜೀಪ್‌ವೊಂದು ಸುಮಾರು 40 ಅಡಿ ಎತ್ತರದಿಂದ ಉರುಳಿ ಕಾರ್ಮಿಕರ ವಾಸದ ಮನೆ ಮೇಲೆ ಬಿದ್ದ ಘಟನೆ ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ನಡೆದಿದೆ. ಚಂದ್ರದ್ರೋಣ ಪರ್ವತದ ಸಾಲಿನ ಝರಿ ಫಾಲ್ಸ್ ಬಳಿ ಈ ಘಟನೆ ಸಂಭವಿಸಿದ್ದು, ಕೇರಳ ಮೂಲದ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜೀಪ್ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದೆ. 40 ಅಡಿ ಎತ್ತರದಿಂದ ಬಿದ್ದ ರಭಸಕ್ಕೆ ಜೀಪ್ ಸಂಪೂರ್ಣ ನಜ್ಜುಗುಜ್ಜಾಗಿದೆ.

ಅದೃಷ್ಟವಶಾತ್ ಚಾಲಕ ಸೇರಿದಂತೆ ಮೂವರು ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕ ಹಾಗೂ ಪ್ರವಾಸಿಗರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಭಾರೀ ಅನಾಹುತ ತಪ್ಪಿದೆ.

ಜೀಪ್ ಬಿದ್ದ ರಭಸಕ್ಕೆ ಕಾರ್ಮಿಕರ ಲೈನ್ ಮನೆಗೂ ಹಾನಿಯಾಗಿದೆ. ಜೀಪ್ ಚಾಲಕನ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.