ವಿಜಯಸಾಕ್ಷಿ ಸುದ್ದಿ, ಗದಗ: ತಂತ್ರಜ್ಞಾನ ಬಳಕೆ ಹೆಚ್ಚಿದಂತೆ ಸಹಕಾರ ಬ್ಯಾಂಕ್ಗಳು ಹಾಗೂ ಪತ್ತಿನ ಸಂಘಗಳಲ್ಲಿ ವಂಚನೆಯ ಅಪಾಯವೂ ಹೆಚ್ಚುತ್ತಿದ್ದು, ಅದನ್ನು ತಡೆಯಲು ಕಟ್ಟುನಿಟ್ಟಿನ ಆಂತರಿಕ ನಿಯಂತ್ರಣ, ಪರಿಣಾಮಕಾರಿ ಲೆಕ್ಕಪರಿಶೋಧನೆ ಹಾಗೂ ತಂತ್ರಜ್ಞಾನ ಆಧಾರಿತ ಭದ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ ಎಂದು ಮರ್ಚಂಟ್ಸ್ ಲಿಬರಲ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಮೋಹನ್ ಟಿ. ಕೋಟಿ ಹೇಳಿದರು.
ಗದಗ ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಮರ್ಚಂಟ್ಸ್ ಲಿಬರಲ್ ಕೋ-ಆಪರೇಟಿವ್ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ನಗರದ ಬ್ಯಾಂಕ್ ಸಭಾಭವನದಲ್ಲಿ ಅರ್ಬನ್ ಬ್ಯಾಂಕುಗಳು ಹಾಗೂ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ವ್ಯವಸ್ಥಾಪಕರು ಮತ್ತು ಮುಖ್ಯ ಕಾರ್ಯನಿರ್ವಾಹಕರಿಗಾಗಿ ಆಯೋಜಿಸಿದ್ದ ಒಂದು ದಿನದ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಾಲ ವಂಚನೆ, ನಕಲಿ ಸದಸ್ಯರ ಹೆಸರಿನಲ್ಲಿ ಸಾಲ ಮಂಜೂರು, ಒಂದೇ ಆಸ್ತಿಯ ಮೇಲೆ ಬಹು ಸಾಲ, ದಾಖಲೆಗಳ ಮೌಲ್ಯವನ್ನು ಕೃತಕವಾಗಿ ಹೆಚ್ಚಿಸುವುದು ಸೇರಿದಂತೆ ಹಲವು ರೀತಿಯ ವಂಚನೆಗಳು ನಡೆಯುತ್ತಿವೆ. ಒಟಿಪಿ, ಪಿನ್, ಪಾಸ್ವರ್ಡ್ ಕಳವು, ನಕಲಿ ಬ್ಯಾಂಕ್ ಲಿಂಕ್ಗಳು, ಮೊಬೈಲ್ ಆ್ಯಪ್ಗಳು, ಇಂಟರ್ನೆಟ್ ಬ್ಯಾಂಕಿಂಗ್ ಹಾಗೂ ಕ್ಯೂಆರ್ ಕೋಡ್ ಮೂಲಕವೂ ವಂಚನೆ ನಡೆಯುವ ಸಾಧ್ಯತೆ ಇರುವುದರಿಂದ ಸಿಬ್ಬಂದಿ ಮತ್ತು ಸದಸ್ಯರಲ್ಲಿ ನಿರಂತರ ಜಾಗೃತಿ ಮೂಡಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಸಿ.ಎಂ. ಪಾಟೀಲ ಮಾತನಾಡಿ, ಸಹಕಾರ ಸಂಸ್ಥೆಗಳು ಜನರ ವಿಶ್ವಾಸದ ಮೇಲೆ ನಿಂತಿವೆ. ಜಾಗೃತಿ, ಪಾರದರ್ಶಕ ಆಡಳಿತ, ಕಟ್ಟುನಿಟ್ಟಿನ ಆಂತರಿಕ ನಿಯಂತ್ರಣ ಹಾಗೂ ಪರಿಣಾಮಕಾರಿ ಆಡಿಟ್ ಮೂಲಕ ವಂಚನೆಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದರು.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ನೆರವಾಗಬಲ್ಲದು. ಆದರೆ ಎಐ ಬಳಕೆಯಲ್ಲಿ ನೈತಿಕತೆ, ಕಾನೂನು, ಗೌಪ್ಯತೆ, ಸುರಕ್ಷತೆ, ಪಾರದರ್ಶಕತೆ ಹಾಗೂ ಮಾನವ ಮೇಲ್ವಿಚಾರಣೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ತರಬೇತಿ ಶಿಬಿರದಲ್ಲಿ ಚಾರ್ಟರ್ಡ್ ಅಕೌಂಟೆಂಟ್ಗಳಾದ ಬಿ.ವಿ. ರವೀಂದ್ರನಾಥ ಹಾಗೂ ವರುಣ್ ಭಟ್ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಬ್ಯಾಂಕಿಂಗ್ ಮತ್ತು ಪತ್ತಿನ ಕ್ಷೇತ್ರದಲ್ಲಿನ ವಂಚನೆಗಳ ಗುರುತಿಸುವಿಕೆ, ತಡೆ ಕ್ರಮಗಳು ಹಾಗೂ ಎಐ ತಂತ್ರಜ್ಞಾನದ ಪ್ರಾಯೋಗಿಕ ಬಳಕೆಯ ಕುರಿತು ತರಬೇತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮರ್ಚಂಟ್ಸ್ ಲಿಬರಲ್ ಕೋ-ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಕೆ.ಎಸ್. ಪರ್ವತಗೌಡ್ರ, ನಿರ್ದೇಶಕರಾದ ವಿ.ಸಿ. ರಾಮನಕೊಪ್ಪ, ಟಿ.ಆರ್. ಭಾಂಡಗೆ, ಎಸ್.ಬಿ. ಅಬ್ಬಿಗೇರಿ, ಸಿ.ಎಸ್. ಸಂಕಣ್ಣವರ, ಎಸ್.ಎಚ್. ನಡವಲಗುಡ್ಡ ಹಾಗೂ ಸಿ.ಟಿ. ದುಂದೂರ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎಸ್.ಕೆ. ಕುರಡಗಿ, ಹಿರಿಯ ಲೆಕ್ಕಪರಿಶೋಧಕಿ ಜೆ.ಎನ್. ಮಾಳೆಕೊಪ್ಪ ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ಆರ್. ನಿಡಗುಂದಿ ಉಪಸ್ಥಿತರಿದ್ದರು.
ವಂಚನೆ ತಡೆಗೆ ಜಾಗೃತಿ ಮಾತ್ರವಲ್ಲ, ಕಟ್ಟುನಿಟ್ಟಿನ ನಿಯಂತ್ರಣ ವ್ಯವಸ್ಥೆಯೂ ಅಗತ್ಯ. ಪ್ರತಿಯೊಬ್ಬ ಸದಸ್ಯ, ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ಜವಾಬ್ದಾರಿ ಇದರಲ್ಲಿ ಮಹತ್ವದ್ದಾಗಿದೆ.
— ಸಿ.ಎಂ. ಪಾಟೀಲ, ಅಧ್ಯಕ್ಷರು, ಗದಗ ಜಿಲ್ಲಾ ಸಹಕಾರ ಯೂನಿಯನ್