ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಿರುವ ಅಧಿಕಾರಿಗಳು, ರಾಜೀವ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್ ಮತ್ತು ಮಂಡಿ ಹೌಸ್ ಸೇರಿದಂತೆ 16 ಪ್ರಮುಖ ಮೆಟ್ರೋ ನಿಲ್ದಾಣಗಳ ಪ್ರವೇಶ ಹಾಗೂ ನಿರ್ಗಮನವನ್ನು ಬುಧವಾರ ಬೆಳಗ್ಗೆಯಿಂದ ತಾತ್ಕಾಲಿಕವಾಗಿ ಬಂದ್ ಮಾಡಿದ್ದಾರೆ.
ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಆದೇಶದವರೆಗೆ ಸಂಬಂಧಿತ ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳು ಮುಚ್ಚಿರಲಿವೆ ಎಂದು ದೆಹಲಿ ಮೆಟ್ರೋ ರೈಲು ನಿಗಮ (DMRC) ತಿಳಿಸಿದೆ.
ತಾತ್ಕಾಲಿಕವಾಗಿ ಮುಚ್ಚಲಾದ ಮೆಟ್ರೋ ನಿಲ್ದಾಣಗಳು
- ಲೋಕ ಕಲ್ಯಾಣ ಮಾರ್ಗ
- ರಾಜೀವ್ ಚೌಕ್
- ಪಟೇಲ್ ಚೌಕ್
- ರಾಮಕೃಷ್ಣ ಆಶ್ರಮ ಮಾರ್ಗ
- ಬಾರಾಖಂಬಾ ರೋಡ್
- ಸುಪ್ರೀಂ ಕೋರ್ಟ್
- ಸೇವಾ ತೀರ್ಥ
- ಜನಪಥ್
- ಮಂಡಿ ಹೌಸ್
- ಸೆಂಟ್ರಲ್ ಸೆಕ್ರೆಟರಿಯೇಟ್
- ಐಟಿಒ
- ದೆಹಲಿ ಗೇಟ್
- ಇಂದ್ರಪ್ರಸ್ಥ
- ಖಾನ್ ಮಾರ್ಕೆಟ್
- ಜೋರ್ ಬಾಗ್
- ಶಿವಾಜಿ ಸ್ಟೇಡಿಯಂ
ಆದಾಗ್ಯೂ, ಪ್ರಯಾಣಿಕರ ಅನುಕೂಲಕ್ಕಾಗಿ ರಾಜೀವ್ ಚೌಕ್, ಮಂಡಿ ಹೌಸ್ ಹಾಗೂ ಸೆಂಟ್ರಲ್ ಸೆಕ್ರೆಟರಿಯೇಟ್ ಮೆಟ್ರೋ ನಿಲ್ದಾಣಗಳಲ್ಲಿ ವಿವಿಧ ಮಾರ್ಗಗಳ ನಡುವೆ ರೈಲು ಬದಲಾಯಿಸುವ (Interchange) ಸೌಲಭ್ಯ ಎಂದಿನಂತೆ ಮುಂದುವರಿಯಲಿದೆ ಎಂದು ಡಿಎಂಆರ್ಸಿ ಸ್ಪಷ್ಟಪಡಿಸಿದೆ.
ಈ ಹಿಂದೆ ಜುಲೈ 20ರಂದು ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ಖಂಡಿಸಿ ಸಿಜೆಪಿ ಹಮ್ಮಿಕೊಂಡಿದ್ದ ‘ಸಂಸದ್ ಚಲೋ’ ಮೆರವಣಿಗೆಯ ಸಂದರ್ಭದಲ್ಲಿಯೂ ಸಾವಿರಾರು ಪ್ರತಿಭಟನಾಕಾರರು ದೆಹಲಿಯಲ್ಲಿ ಸೇರಿದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹಲವು ಮೆಟ್ರೋ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಈ ಬಾರಿ ಕೂಡ ಭದ್ರತಾ ದೃಷ್ಟಿಯಿಂದ ಇದೇ ರೀತಿಯ ಕ್ರಮ ಕೈಗೊಳ್ಳಲಾಗಿದೆ.

