Home Blog

ರೈತರ ಸಂಕಷ್ಟಕ್ಕೆ ಸ್ಪಂದಿಸಿದ ಕೇಂದ್ರ; ಸೆಪ್ಟೆಂಬರ್‌ನಲ್ಲಿ ಕರ್ನಾಟಕಕ್ಕೆ ಶಿವರಾಜ್ ಸಿಂಗ್ ಚೌಹಾಣ್ ಭೇಟಿ!

0

ನವದೆಹಲಿ: ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ಉಂಟಾಗಿರುವ ಕೃಷಿ ಸಮಸ್ಯೆಗಳು ಹಾಗೂ ರೈತರ ಸಂಕಷ್ಟಗಳ ಕುರಿತು ಕೃಷಿ ಸಚಿವ ನರೇಂದ್ರಸ್ವಾಮಿ ಅವರು ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ದೆಹಲಿಯಲ್ಲಿ ನಡೆದ ಭೇಟಿಯಲ್ಲಿ ಕರ್ನಾಟಕದಲ್ಲಿ ಬರ ಪರಿಸ್ಥಿತಿಯಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಪ್ರಧಾನ ಮಂತ್ರಿ ಫಸಲ್ ಭೀಮಾ ವಿಮಾ ಯೋಜನೆಗೆ ನೋಂದಣಿ ಅವಧಿಯನ್ನು ಆಗಸ್ಟ್ ಅಂತ್ಯದವರೆಗೆ ವಿಸ್ತರಿಸುವಂತೆ ಮನವಿ ಮಾಡಲಾಯಿತು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ವಿಮಾ ಯೋಜನೆಯ ನೋಂದಣಿ ಅವಧಿ ವಿಸ್ತರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವುದನ್ನು ನರೇಂದ್ರಸ್ವಾಮಿ ಅವರು ಕೇಂದ್ರ ಸಚಿವರ ಗಮನಕ್ಕೆ ತಂದರು.

ಮನವಿಗೆ ಸ್ಪಂದಿಸಿದ ಶಿವರಾಜ್ ಸಿಂಗ್ ಚೌಹಾಣ್, ಸೆಪ್ಟೆಂಬರ್ ಮೊದಲ ವಾರದಲ್ಲಿ ಕರ್ನಾಟಕಕ್ಕೆ ಭೇಟಿ ನೀಡಿ ಯಾವುದಾದರೊಂದು ಬರಪೀಡಿತ ಜಿಲ್ಲೆಗೆ ಭೇಟಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಮಳೆಯ ಕೊರತೆಯಿಂದ ರಾಜ್ಯದಲ್ಲಿ ಉಂಟಾಗಿರುವ ಸಮಸ್ಯೆಗಳಿಗೆ ಸ್ಪಂದಿಸುವುದಾಗಿಯೂ ತಿಳಿಸಿದ್ದಾರೆ.

ಭೇಟಿ ಬಳಿಕ ಮಾತನಾಡಿದ ನರೇಂದ್ರಸ್ವಾಮಿ, ಕೃಷಿ ವಿಮಾ ನೋಂದಣಿ ಅವಧಿ ಮುಕ್ತಾಯದ ಹಂತದಲ್ಲಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದ 666 ಕೃಷಿ ವಿಮಾ ಘಟಕಗಳಲ್ಲಿ ಮಧ್ಯಂತರ ಪರಿಹಾರ ನೀಡಲು ಈಗಾಗಲೇ ಆದೇಶಿಸಲಾಗಿದೆ ಎಂದು ಹೇಳಿದರು.

ಕೇಂದ್ರ ಪುರಸ್ಕೃತ ಯೋಜನೆಗಳನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದ್ದು, ರೈತರ ಹಿತ ಕಾಪಾಡಲು ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಅವರು ತಿಳಿಸಿದರು.

ಇನ್ನು ತಮಿಳುನಾಡಿಗೆ ಕಾವೇರಿ ನೀರು ಬಿಡುವುದರ ಜೊತೆಗೆ ರಾಜ್ಯದ ರೈತರ ಬೆಳೆಗಳಿಗೆ ನೀರು ಬಿಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೆಆರ್‌ಎಸ್ ಜಲಾಶಯದಲ್ಲಿ ಪ್ರಸ್ತುತ ಕೇವಲ 109 ಅಡಿ ನೀರು ಇದೆ. ಇದು ರಾಜ್ಯದ ರೈತರಿಗೆ ಒಂದು ಬೆಳೆ ಬೆಳೆಯಲು ಕೂಡ ಸಾಕಾಗುವುದಿಲ್ಲ ಎಂದು ಹೇಳಿದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಡಬೇಕಾದ ಪರಿಸ್ಥಿತಿ ಎದುರಾಗಿದೆ. ಸದ್ಯ ಈ ಸಮಸ್ಯೆಗೆ ಮಳೆಯೇ ಪರಿಹಾರವಾಗಿದ್ದು, ಕೃಷಿ ಚಟುವಟಿಕೆಗಳಿಗೆ ನೀರು ಬಿಡುವುದು ಕಷ್ಟಕರವಾಗಿದೆ ಎಂದು ನರೇಂದ್ರಸ್ವಾಮಿ ಹೇಳಿದರು.

ಲಭ್ಯವಿರುವ ನೀರಿನ ಪ್ರಮಾಣವನ್ನು ಆಧರಿಸಿ ರೈತರ ಕೃಷಿ ಚಟುವಟಿಕೆಗಳಿಗೆ ನೀರು ಬಿಡುವ ಕುರಿತು ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ತಮಿಳುನಾಡಿಗೆ ಕಾವೇರಿ ನೀರು: 12 ಸಾವಿರ ಕ್ಯೂಸೆಕ್ ಆದೇಶ ಮರುಪರಿಶೀಲನೆಗೆ ಕರ್ನಾಟಕ ಮೇಲ್ಮನವಿ

0

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶವನ್ನು ಮರುಪರಿಶೀಲಿಸುವಂತೆ ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸಿದೆ.

ಪ್ರಸ್ತುತ ದಿನಕ್ಕೆ 12 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ನೀಡಿರುವ ಆದೇಶವನ್ನು 6 ಸಾವಿರ ಕ್ಯೂಸೆಕ್‌ಗೆ ಇಳಿಸಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ.

ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಮುಂದುವರಿಯದಿರುವುದು, ಜಲಾಶಯಗಳ ಒಳಹರಿವು ಗಣನೀಯವಾಗಿ ಕುಸಿದಿರುವುದು ಹಾಗೂ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಮತ್ತು ನೀರಾವರಿಗೆ ಎದುರಾಗಬಹುದಾದ ಸಂಕಷ್ಟವನ್ನು ಕರ್ನಾಟಕ ಸರ್ಕಾರ ತನ್ನ ಮೇಲ್ಮನವಿಯಲ್ಲಿ ಉಲ್ಲೇಖಿಸಿದೆ.

ಆಗಸ್ಟ್‌ನಲ್ಲಿ 12 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ನೀಡಿದ್ದ ಆದೇಶವು ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಉತ್ತಮ ಮುಂಗಾರು ಮಳೆಯಾಗಲಿದೆ ಎಂಬ ನಿರೀಕ್ಷೆಯನ್ನು ಆಧರಿಸಿತ್ತು. ಆದರೆ ಸೂಪರ್ ಎಲ್ ನಿನೊ ಪರಿಣಾಮದಿಂದ ಮುಂಗಾರು ದುರ್ಬಲಗೊಂಡಿದ್ದು, ಜಲಾಶಯಗಳಿಗೆ ಹರಿದುಬರುವ ನೀರಿನ ಪ್ರಮಾಣ ತೀವ್ರವಾಗಿ ಇಳಿಕೆಯಾಗಿದೆ ಎಂದು ಸರ್ಕಾರ ತಿಳಿಸಿದೆ.

ಆಗಸ್ಟ್ 18ರ ವೇಳೆಗೆ ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಒಟ್ಟು 77.907 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಜೂನ್ 1ರಿಂದ ಆಗಸ್ಟ್ 18ರವರೆಗೆ ನಾಲ್ಕು ಪ್ರಮುಖ ಜಲಾಶಯಗಳಿಗೆ 88.662 ಟಿಎಂಸಿ ನೀರು ಒಳಹರಿವು ಬಂದಿದೆ. ದೀರ್ಘಾವಧಿಯ ಸರಾಸರಿ 169.452 ಟಿಎಂಸಿಗೆ ಹೋಲಿಸಿದರೆ ಶೇ.47.68ರಷ್ಟು ಕೊರತೆ ಉಂಟಾಗಿದೆ.

ಇನ್ನು ಜಲಾಶಯಗಳ ಒಳಹರಿವು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಆಗಸ್ಟ್ 10ರಂದು 25,964 ಕ್ಯೂಸೆಕ್ ಇದ್ದ ಒಳಹರಿವು ಆಗಸ್ಟ್ 14ರಂದು 15,060 ಕ್ಯೂಸೆಕ್‌ಗೆ ಹಾಗೂ ಆಗಸ್ಟ್ 18ರಂದು 13,141 ಕ್ಯೂಸೆಕ್‌ಗೆ ಇಳಿಕೆಯಾಗಿದೆ.

ಬಿಳಿಗುಂಡ್ಲುವಿನಲ್ಲಿ 12 ಸಾವಿರ ಕ್ಯೂಸೆಕ್ ನೀರು ಖಚಿತಪಡಿಸಲು ಜಲಾಶಯಗಳಿಂದ ಸುಮಾರು 15 ಸಾವಿರ ಕ್ಯೂಸೆಕ್ ಹೊರಹರಿವು ಮಾಡಬೇಕಾಗುತ್ತದೆ. ಇದರಿಂದ ಕರ್ನಾಟಕದ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಮತ್ತಷ್ಟು ಕುಸಿಯಲಿದೆ ಎಂದು ಸರ್ಕಾರ ಆತಂಕ ವ್ಯಕ್ತಪಡಿಸಿದೆ.

ಕಬಿನಿ ಜಲಾಶಯದ ಒಳಹರಿವು ಕೂಡ ಆಗಸ್ಟ್ 17ರಂದು 7,747 ಕ್ಯೂಸೆಕ್‌ನಿಂದ ಆಗಸ್ಟ್ 18ರಂದು 6,457 ಕ್ಯೂಸೆಕ್‌ಗೆ ಇಳಿಕೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಳಿಗುಂಡ್ಲುವಿಗೆ 12 ಸಾವಿರ ಕ್ಯೂಸೆಕ್ ನೀರು ತಲುಪಿಸಲು ಕೆಆರ್‌ಎಸ್‌ನಿಂದಲೂ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆ ಮಾಡಬೇಕಾಗಬಹುದು ಎಂದು ಸರ್ಕಾರ ಹೇಳಿದೆ.

ಕೆಆರ್‌ಎಸ್ ಜಲಾಶಯದಲ್ಲಿ ಪ್ರಸ್ತುತ 26.602 ಟಿಎಂಸಿ ಲೈವ್ ಸ್ಟೋರೇಜ್ ಇದ್ದು, ಜಲಾಶಯದ ಒಟ್ಟು ವಿನ್ಯಾಸ ಸಾಮರ್ಥ್ಯ 45.051 ಟಿಎಂಸಿಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದರೆ ಸುಮಾರು 1.959 ಲಕ್ಷ ಎಕರೆ ನೀರಾವರಿ ಪ್ರದೇಶ ಹಾಗೂ ಬೆಂಗಳೂರಿನ ಕುಡಿಯುವ ನೀರಿನ ಪೂರೈಕೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ.

ರಾಜ್ಯದ ಕುಡಿಯುವ ನೀರು ಮತ್ತು ನೀರಾವರಿ ಅಗತ್ಯಗಳಿಗೆ ಸುಮಾರು 144 ಟಿಎಂಸಿ ಹಾಗೂ ಪರಿಸರ ಹರಿವಿಗೆ ಸುಮಾರು 10 ಟಿಎಂಸಿ ಸೇರಿದಂತೆ ಒಟ್ಟು 155 ಟಿಎಂಸಿ ನೀರು ಅಗತ್ಯವಿದೆ. ಆದರೆ ಸದ್ಯ ಜಲಾಶಯಗಳಲ್ಲಿ 77.907 ಟಿಎಂಸಿ ನೀರು ಮಾತ್ರ ಲಭ್ಯವಿದೆ.

ಮತ್ತೊಂದೆಡೆ, ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಸುಮಾರು 45 ಟಿಎಂಸಿ ನೀರು ಸಂಗ್ರಹವಿದೆ ಎಂದು ಕರ್ನಾಟಕ ಸರ್ಕಾರ ತನ್ನ ಮೇಲ್ಮನವಿಯಲ್ಲಿ ಉಲ್ಲೇಖಿಸಿದೆ. ಬರ ಪರಿಸ್ಥಿತಿಯಿಂದ ಸಾಂಬಾ ಭತ್ತದ ಬಿತ್ತನೆ ಪ್ರದೇಶವೂ ಸಾಮಾನ್ಯ ವರ್ಷಗಳಿಗಿಂತ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಕರ್ನಾಟಕದ ಕುಡಿಯುವ ನೀರು ಮತ್ತು ನೀರಾವರಿ ಅಗತ್ಯಗಳಿಗೆ ನೀರು ಉಳಿಸುವ ನಿಟ್ಟಿನಲ್ಲಿ ಆಗಸ್ಟ್ 11ರಂದು ನೀಡಿರುವ ದಿನಕ್ಕೆ 12 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಆದೇಶವನ್ನು ಮರುಪರಿಶೀಲಿಸಿ, ಅದನ್ನು 6 ಸಾವಿರ ಕ್ಯೂಸೆಕ್‌ಗೆ ಇಳಿಸುವಂತೆ CWMAಗೆ ರಾಜ್ಯ ಸರ್ಕಾರ ಮನವಿ ಮಾಡಿದೆ.

ಪಡಿತರಕ್ಕಾಗಿ ಕೆಲಸ ಬಿಟ್ಟು ಕ್ಯೂನಲ್ಲಿ ನಿಲ್ಲಬೇಕು: KYC ತಂತ್ರಾಂಶದ ಎಡವಟ್ಟಿಗೆ ಬಡವರ ಪರದಾಟ

0

ಧಾರವಾಡ: ಪಡಿತರ ಚೀಟಿದಾರರ ಅರ್ಹತೆ ಪರಿಶೀಲನೆಗಾಗಿ ಸರ್ಕಾರ ಜಾರಿಗೆ ತಂದಿರುವ ಹೊಸ KYC ವ್ಯವಸ್ಥೆಯ ತಾಂತ್ರಿಕ ಸಮಸ್ಯೆಗಳು ಫಲಾನುಭವಿಗಳ ದಿನನಿತ್ಯದ ಬದುಕನ್ನೇ ಅಸ್ತವ್ಯಸ್ತಗೊಳಿಸಿವೆ. ಕುಟುಂಬದ ಎಲ್ಲ ಸದಸ್ಯರ ಬಯೋಮೆಟ್ರಿಕ್, OTP ಸೇರಿದಂತೆ ಹಲವು ಹಂತಗಳ ಪ್ರಕ್ರಿಯೆ ಪೂರ್ಣಗೊಳಿಸಬೇಕಿರುವುದರಿಂದ ನ್ಯಾಯಬೆಲೆ ಅಂಗಡಿಗಳ ಮುಂದೆ ಉದ್ದನೆಯ ಸರತಿ ಸಾಲುಗಳು ಕಂಡುಬರುತ್ತಿವೆ.

ಪಡಿತರ ವಿತರಣೆಯಲ್ಲಿ ಅನರ್ಹರನ್ನು ಪತ್ತೆಹಚ್ಚಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಸರ್ಕಾರ ತಂತ್ರಾಂಶವನ್ನು ಬಲಪಡಿಸಿದೆ. ಆದರೆ ಸರ್ವರ್‌ ಸಾಮರ್ಥ್ಯ ಮತ್ತು ತಾಂತ್ರಿಕ ದೋಷಗಳಿಂದಾಗಿ KYC ಪೂರ್ಣಗೊಳಿಸುವುದೇ ಫಲಾನುಭವಿಗಳಿಗೆ ದೊಡ್ಡ ಸವಾಲಾಗಿದೆ.

ಕುಟುಂಬದ ಪ್ರತಿಯೊಬ್ಬ ಸದಸ್ಯರು ನ್ಯಾಯಬೆಲೆ ಅಂಗಡಿಗೆ ಹಾಜರಾಗಿ ಹೆಬ್ಬೆರಳಿನ ಗುರುತು ನೀಡಬೇಕು. ಬಳಿಕ ಮೊಬೈಲ್‌ಗೆ ಬರುವ OTPಯನ್ನು ತಂತ್ರಾಂಶದಲ್ಲಿ ನಮೂದಿಸಬೇಕು. OTP ಬರಲು ವಿಳಂಬವಾದರೆ ಅಥವಾ ನಮೂದಿಸುವ ವೇಳೆಗೆ ಅದರ ಅವಧಿ ಮುಗಿದರೆ ಮತ್ತೆ ಮೊದಲಿನಿಂದಲೇ ಪ್ರಕ್ರಿಯೆ ಆರಂಭಿಸಬೇಕಾಗುತ್ತದೆ.

ಹೀಗಾಗಿ ಒಂದೇ ಕುಟುಂಬದ KYC ಪೂರ್ಣಗೊಳಿಸಲು ಹಲವು ಗಂಟೆಗಳು ಬೇಕಾಗುತ್ತಿವೆ. ಏಳೆಂಟು ಸದಸ್ಯರಿರುವ ಕುಟುಂಬಗಳ ಪರಿಸ್ಥಿತಿ ಇನ್ನಷ್ಟು ಕಷ್ಟಕರವಾಗಿದೆ. ಸರ್ವರ್‌ ಸಮಸ್ಯೆಯಿಂದ ಕೆಲವೊಮ್ಮೆ ಇಡೀ ದಿನ ಕಾದರೂ ಇಬ್ಬರು-ಮೂವರು ಸದಸ್ಯರ KYC ಮಾತ್ರ ಪೂರ್ಣಗೊಳ್ಳುತ್ತಿದೆ ಎಂಬ ಆರೋಪ ಫಲಾನುಭವಿಗಳಿಂದ ಕೇಳಿಬರುತ್ತಿದೆ.

ಇದರ ಹೊಡೆತ ನೇರವಾಗಿ ದಿನಗೂಲಿ ಕಾರ್ಮಿಕರ ಮೇಲೆ ಬಿದ್ದಿದೆ. ಕೂಲಿ ಕೆಲಸಕ್ಕೆ ತೆರಳಿದರೆ ಮಾತ್ರ ಆ ದಿನದ ಆದಾಯ ಸಿಗುವ ಕುಟುಂಬಗಳು, ಪಡಿತರ ಪಡೆಯಲು ಕೆಲಸವನ್ನೇ ಬಿಟ್ಟು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಒಂದು ದಿನದ ಕೂಲಿ ತಪ್ಪಿದರೆ ಕುಟುಂಬದ ಆಹಾರಕ್ಕೂ ಸಮಸ್ಯೆಯಾಗುವ ಸ್ಥಿತಿ ನಿರ್ಮಾಣವಾಗಿದೆ.

ವೃದ್ಧರು ಕೂಡ ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲಬೇಕಾಗಿದ್ದು, ಬಿಸಿಲಿನಲ್ಲಿ ಕೆಲವರು ಅಸ್ವಸ್ಥರಾಗುತ್ತಿರುವ ಘಟನೆಗಳು ನಡೆಯುತ್ತಿವೆ. ಇಂತಹ ಸಂದರ್ಭಗಳಲ್ಲಿ ಅಂಗಡಿ ಮಾಲೀಕರು ಹಾಗೂ ಸ್ಥಳೀಯರೇ ನೆರವಿಗೆ ಧಾವಿಸುತ್ತಿದ್ದಾರೆ.

ತಾಂತ್ರಿಕ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಸರ್ವರ್‌ ಸಮಸ್ಯೆಯ ಕಾರಣ ನೀಡಲಾಗುತ್ತಿದೆ. ಆದರೆ ಪರಿಹಾರ ಸಿಗದೆ ಜನರ ಸಂಕಷ್ಟ ಮುಂದುವರಿದಿದೆ. ಅರ್ಹ ಫಲಾನುಭವಿಗಳಿಗೆ ಪಡಿತರ ಪಡೆಯುವುದೇ ಕಷ್ಟವಾಗದಂತೆ KYC ವ್ಯವಸ್ಥೆಯನ್ನು ತಕ್ಷಣ ಸರಿಪಡಿಸಿ, ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂಬ ಆಗ್ರಹ ಇದೀಗ ಬಲಗೊಂಡಿದೆ.

ಬಸ್ ನಿಲ್ದಾಣದಲ್ಲಿ ಗುಟ್ಕಾ ಜಗಿದು ಉಗುಳಿದ್ರೆ ದಂಡ: ಚಾಲಕ-ನಿರ್ವಾಹಕರಿಗೂ ಹೊಸ ರೂಲ್ಸ್

0

ಹುಬ್ಬಳ್ಳಿ: ಬಸ್ ನಿಲ್ದಾಣಗಳು ಹಾಗೂ ಬಸ್‌ಗಳಲ್ಲಿ ಗುಟ್ಕಾ, ತಂಬಾಕು ಉತ್ಪನ್ನಗಳು ಮತ್ತು ಪಾನ್ ಬೀಡಾ ಜಗಿದು ಉಗುಳುವ ಪ್ರವೃತ್ತಿಗೆ ಕಡಿವಾಣ ಹಾಕಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಪ್ರಯಾಣಿಕರಷ್ಟೇ ಅಲ್ಲದೆ, ಕರ್ತವ್ಯದ ವೇಳೆ ತಂಬಾಕು ಉತ್ಪನ್ನಗಳನ್ನು ಬಳಸಿ ಉಗುಳುವ ಚಾಲಕರು ಮತ್ತು ನಿರ್ವಾಹಕರಿಗೂ ದಂಡ ವಿಧಿಸಲಾಗುತ್ತದೆ.

ಬಸ್ ನಿಲ್ದಾಣ ಹಾಗೂ ಸಂಸ್ಥೆಯ ಬಸ್‌ಗಳಲ್ಲಿ ಉಗುಳುವುದರಿಂದ ಸ್ವಚ್ಛತೆಗೆ ಧಕ್ಕೆಯಾಗುತ್ತಿದೆ ಎಂಬ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದುವರೆಗೆ ಪ್ರಯಾಣಿಕರು ಮತ್ತು ಸಾರ್ವಜನಿಕರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲಾಗುತ್ತಿತ್ತು. ಇದೀಗ ಸಂಸ್ಥೆಯ ಸಿಬ್ಬಂದಿಯನ್ನೂ ನಿಯಮದ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ.

ಈ ಕುರಿತು ಕರಡು ಅಧಿಸೂಚನೆ ಬಹುತೇಕ ಸಿದ್ಧವಾಗಿದ್ದು, ಭದ್ರತಾ ಸಿಬ್ಬಂದಿ ಹಾಗೂ ಸಂಸ್ಥೆಯ ಅಧಿಕಾರಿಗಳು ನಿಯಮ ಉಲ್ಲಂಘಿಸುವ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ದಂಡ ವಿಧಿಸಲಿದ್ದಾರೆ. ಮರು ಉಲ್ಲಂಘನೆ ಮಾಡಿದವರ ವಿರುದ್ಧ ಹೆಚ್ಚುವರಿ ದಂಡ ಹಾಗೂ ಶಿಸ್ತು ಕ್ರಮ ಜಾರಿಗೊಳಿಸುವ ಬಗ್ಗೆ ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎನ್‌ಡಬ್ಲ್ಯೂಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಂಗಾ ಎಂ. ತಿಳಿಸಿದ್ದಾರೆ.

ಸಂಸ್ಥೆಯ ವ್ಯಾಪ್ತಿಯ ಎಲ್ಲ ಚಾಲಕರು ಮತ್ತು ನಿರ್ವಾಹಕರಿಗೂ ಈ ನಿಯಮ ಅನ್ವಯವಾಗಲಿದೆ. ಮೊದಲ ಬಾರಿಗೆ ತಂಬಾಕು ಉತ್ಪನ್ನ ಬಳಸಿ ಉಗುಳುವ ಸಿಬ್ಬಂದಿಗೆ ₹200 ದಂಡ ವಿಧಿಸಲಾಗುತ್ತದೆ. ಮರು ಉಲ್ಲಂಘನೆ ಮಾಡಿದರೆ ಹೆಚ್ಚಿನ ದಂಡದ ಜೊತೆಗೆ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಇನ್ನು ಬಸ್ ನಿಲ್ದಾಣ ಅಥವಾ ಬಸ್‌ನಲ್ಲಿ ತಂಬಾಕು ಉತ್ಪನ್ನಗಳನ್ನು ಜಗಿದು ಉಗುಳುವ ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ₹100 ದಂಡ ವಿಧಿಸಲಾಗುತ್ತದೆ. ಬಸ್ ನಿಲ್ದಾಣ ನಿಯಂತ್ರಕರು, ಭದ್ರತಾ ಸಿಬ್ಬಂದಿ ಹಾಗೂ ಸಂಸ್ಥೆಯ ಅಧಿಕಾರಿಗಳಿಗೆ ದಂಡ ವಿಧಿಸುವ ಅಧಿಕಾರ ನೀಡಲಾಗುತ್ತದೆ.

ವೃಷಭಾವತಿ ನದಿಯಲ್ಲಿ ₹500 ನೋಟುಗಳ ರಾಶಿ: ಹಣ ನೋಡಲು ಮುಗಿಬಿದ್ದ ಜನರಿಗೆ ಶಾಕ್

0

ರಾಮನಗರ, ಆ.19: ವೃಷಭಾವತಿ ನದಿಯಲ್ಲಿ ₹500 ಮುಖಬೆಲೆಯ ನೋಟುಗಳ ಕಂತೆಗಳು ತೇಲುತ್ತಿರುವುದು ಕಂಡು ರಾಮನಗರದ ವೃಷಭಾಪುರ ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಸಲಿ ಹಣ ಎಂದು ಭಾವಿಸಿ ಸ್ಥಳೀಯರು ಪರಿಶೀಲಿಸಿದಾಗ, ನೋಟುಗಳೆಲ್ಲವೂ ನಕಲಿ ಎಂಬುದು ಪತ್ತೆಯಾಗಿದೆ.

ವೃಷಭಾಪುರ ಗ್ರಾಮದ ಬಳಿ ನದಿಯಲ್ಲಿ ಬರೋಬ್ಬರಿ 20 ಕಂತೆ ₹500 ನೋಟುಗಳು ನೀರಿನಲ್ಲಿ ಬಿದ್ದಿದ್ದವು. ನೋಟುಗಳ ಕಂತೆಗಳನ್ನು ಕಂಡ ಗ್ರಾಮಸ್ಥರು ಅಚ್ಚರಿಗೊಂಡು ಸ್ಥಳಕ್ಕೆ ಧಾವಿಸಿದ್ದರು.

ಆದರೆ ಪರಿಶೀಲನೆ ನಡೆಸಿದಾಗ ಅಪರಿಚಿತರು ಎಸೆದು ಹೋಗಿರುವ ನೋಟುಗಳು ನಕಲಿ ಎಂಬುದು ಬೆಳಕಿಗೆ ಬಂದಿದೆ. ಇಷ್ಟೊಂದು ಪ್ರಮಾಣದ ನಕಲಿ ನೋಟುಗಳು ನದಿಗೆ ಹೇಗೆ ಬಂದವು ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

ಇತ್ತೀಚೆಗಷ್ಟೇ ರಾಮನಗರದ ದೊಡ್ಡೇರಿ ಗ್ರಾಮದ ಬಳಿ ಫಾರ್ಮ್‌ಹೌಸ್‌ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ನಕಲಿ ಔಷಧಿಗಳ ಮರುಪ್ಯಾಕಿಂಗ್ ಜಾಲ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ನದಿಯಲ್ಲಿ ನಕಲಿ ನೋಟುಗಳ ಕಂತೆಗಳು ಪತ್ತೆಯಾಗಿರುವುದು ಜಿಲ್ಲೆಯಾದ್ಯಂತ ಚರ್ಚೆಗೆ ಕಾರಣವಾಗಿದೆ.

ನಕಲಿ ನೋಟುಗಳನ್ನು ಯಾರು ತಂದು ನದಿಗೆ ಎಸೆದರು? ಇದರ ಹಿಂದೆ ಯಾವುದೇ ಜಾಲವಿದೆಯೇ? ಎಂಬ ಪ್ರಶ್ನೆಗಳಿಗೆ ತನಿಖೆಯ ಬಳಿಕ ಉತ್ತರ ಸಿಗಬೇಕಿದೆ.

ವಿದ್ಯಾರ್ಥಿಗಳಿಗೆ ಪ್ರತಿಭಟನೆ ನಿರ್ಬಂಧಿಸಿದ್ದ ಆದೇಶಕ್ಕೆ ವಿಜಯ್‌ ಸರ್ಕಾರ ಯೂಟರ್ನ್‌

0

ಚೆನ್ನೈ: ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಯುವಕರು ಎಡಪಂಥೀಯ ಸಂಘಟನೆಗಳು ನಡೆಸುವ ಪ್ರತಿಭಟನೆ ಮತ್ತು ಆಂದೋಲನಗಳಲ್ಲಿ ಭಾಗವಹಿಸುವುದನ್ನು ತಡೆಯುವಂತೆ ನೀಡಿದ್ದ ಹಿಂದಿನ ನಿರ್ದೇಶನವನ್ನು ತಮಿಳುನಾಡು ಸರ್ಕಾರ ಹಿಂಪಡೆದಿದೆ.

ಆಗಸ್ಟ್‌ 17ರಂದು ಕಾಲೇಜು ಶಿಕ್ಷಣ ಇಲಾಖೆಯಿಂದ ನೀಡಲಾಗಿದ್ದ ನಿರ್ದೇಶನವನ್ನು ಇದೀಗ ರದ್ದುಗೊಳಿಸಲಾಗಿದೆ. ಈ ಕುರಿತು ಕಾಲೇಜು ಶಿಕ್ಷಣದ ಜಂಟಿ ನಿರ್ದೇಶಕಿ ಸಿಂಥಿಯಾ ಸೆಲ್ವಿ ಪಿ. ಅವರು ಆದೇಶ ಹೊರಡಿಸಿದ್ದಾರೆ.

ತಮಿಳುನಾಡಿನಾದ್ಯಂತ ಇರುವ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜುಗಳ ಪ್ರಾಂಶುಪಾಲರಿಗೆ ಈ ಹಿಂದಿನ ನಿರ್ದೇಶನ ನೀಡಲಾಗಿತ್ತು. ಎಡಪಕ್ಷಗಳು ಹಾಗೂ ತಮಿಳುನಾಡು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಆಯೋಜಿಸುವ ಪ್ರತಿಭಟನೆಗಳು ಮತ್ತು ಆಂದೋಲನಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರು ಭಾಗವಹಿಸದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.

ಅಲ್ಲದೆ, ಶಾಲಾ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಪೊಲೀಸ್‌ ಇಲಾಖೆ ಹಾಗೂ ಜಿಲ್ಲಾಡಳಿತಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ವಿದ್ಯಾರ್ಥಿಗಳು ಯಾವುದೇ ರಾಜಕೀಯ ಪಕ್ಷಗಳ ಪ್ರತಿಭಟನೆಗಳಲ್ಲಿ ಭಾಗವಹಿಸದಂತೆ ನೋಡಿಕೊಳ್ಳಬೇಕು ಎಂದು ಹಿಂದಿನ ಆದೇಶದಲ್ಲಿ ತಿಳಿಸಲಾಗಿತ್ತು.

ಆದರೆ, ಇದೀಗ ಆಗಸ್ಟ್‌ 17ರಂದು ನೀಡಿದ್ದ ಈ ನಿರ್ದೇಶನವನ್ನು ಸರ್ಕಾರ ಹಿಂಪಡೆದಿದ್ದು, ವಿದ್ಯಾರ್ಥಿಗಳು ಮತ್ತು ಯುವಕರ ಪ್ರತಿಭಟನೆ ಪಾಲ್ಗೊಳ್ಳುವಿಕೆ ಕುರಿತು ಹೊರಡಿಸಿದ್ದ ಹಿಂದಿನ ಸೂಚನೆ ರದ್ದಾಗಿದೆ.

ಬಿಎಂಟಿಸಿ ಬಸ್ ಬಿಡಿಭಾಗ ಖರೀದಿ ಅಕ್ರಮ: 8 ಜನ ಅಮಾನತು ಎಂದ ಸಚಿವ ಬೈರತಿ ಸುರೇಶ್

0

ಬೆಂಗಳೂರು: ಬಿಎಂಟಿಸಿ ಬಸ್‌ನ ಬಿಡಿ ಭಾಗಗಳ ಖರೀದಿಯಲ್ಲಿ ಅಕ್ರಮವಾಗಿದ್ದು, ಇದರ ತನಿಖೆಗೆ ಸಮಿತಿ ರಚನೆ ಮಾಡಲಾಗಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಡಾ.ಗೋವಿಂದ್ ರಾಜ್ ಈ ಬಗ್ಗೆ ಪ್ರಶ್ನೆ ಕೇಳಿದ್ದರು. ಬಿಎಂಟಿಸಿ ಬಸ್ ಬಿಡಿ ಭಾಗ ಖರೀದಿಯಲ್ಲಿ ಅಕ್ರಮವಾಗಿದ್ದು, ಎಷ್ಟು ಹಣ ಅಕ್ರಮವಾಗಿದೆ, ಅಕ್ರಮ ತನಿಖೆಗೆ ಸಮಿತಿ ರಚನೆಯಾಗಿದೆಯೇ, ಅಕ್ರಮದಲ್ಲಿ ಭಾಗಿಯಾದವರ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ ಹಾಗೂ ನಕಲಿ ಬಿಲ್ ಸೃಷ್ಟಿಸಿ ಅಕ್ರಮ ಎಸಗಿದ ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆಯೇ ಎಂದು ಪ್ರಶ್ನಿಸಿದ್ದರು.

ಇದಕ್ಕೆ ಉತ್ತರ ನೀಡಿದ ಸಚಿವ ಬೈರತಿ ಸುರೇಶ್, ಅಕ್ರಮದ ಬಗ್ಗೆ ಮಾಹಿತಿ ಸ್ವೀಕಾರವಾದ ಬೆನ್ನಲ್ಲೇ ಮಾರ್ಚ್ 27ರಂದು 5 ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು. ಸಮಿತಿ ನೀಡಿದ ಪ್ರಾಥಮಿಕ ವರದಿ ಅನ್ವಯ 8 ಜನ ಅಧಿಕಾರಿ, ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದ ಅವರು, ತನಿಖಾ ಸಮಿತಿ ಅಕ್ಟೋಬರ್ ಅಂತ್ಯದವರೆಗೆ ಅಂತಿಮ ವರದಿ ನೀಡಲಿದ್ದು, ವರದಿ ಬಳಿಕ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಒಬ್ಬರ ಹೆಸರಲ್ಲಿ 9ಕ್ಕಿಂತ ಹೆಚ್ಚು ಸಿಮ್ ಇರೋದಿಲ್ಲ! ಹೊಸ ನಿಯಮದಲ್ಲಿ ರಿಯಲ್ ಟೈಮ್ ವೆರಿಫಿಕೇಷನ್ ಕಡ್ಡಾಯ

0

ನವದೆಹಲಿ: ಅಹಮದಾಬಾದ್‌ನಲ್ಲಿ ನಡೆದ ₹1.5 ಕೋಟಿ ಮೊತ್ತದ ‘ಬಾಸ್ ಸ್ಕ್ಯಾಮ್’ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರೀ ಸೈಬರ್ ಅಪರಾಧ ಜಾಲವೊಂದು ಪತ್ತೆಯಾಗಿದೆ. ಸೈಬರ್ ಅಪರಾಧಗಳಿಗೆ ಬಳಸಲಾಗುತ್ತಿದ್ದ ಸುಮಾರು 4,500 ಸಿಮ್ ಕಾರ್ಡ್‌ಗಳನ್ನು ಪೊಲೀಸರು ಪತ್ತೆಹಚ್ಚಿದ್ದು, ಈ ಜಾಲಕ್ಕೆ ಚೀನಾ ಮತ್ತು ಪಾಕಿಸ್ತಾನದೊಂದಿಗೆ ಸಂಪರ್ಕವಿರುವ ಶಂಕೆ ವ್ಯಕ್ತವಾಗಿದೆ.

ಈ ಬೆನ್ನಲ್ಲೇ ದೇಶದಾದ್ಯಂತ ಸಿಮ್ ಕಾರ್ಡ್‌ಗಳನ್ನು ಖರೀದಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಮತ್ತಷ್ಟು ಬಿಗಿಗೊಳಿಸಿದೆ. ಸೈಬರ್ ವಂಚನೆ ತಡೆಯುವ ಸಲುವಾಗಿ ಹೊಸ ಸಿಮ್ ಕಾರ್ಡ್‌ಗಳ ವಿತರಣಾ ಪ್ರಕ್ರಿಯೆಯನ್ನು ಬಿಗಿಗೊಳಿಸಿರುವ ಕೇಂದ್ರ, ನಕಲಿ ಸಿಮ್‌ಗಳು, ಸೈಬರ್ ವಂಚನೆ ಹಾಗೂ ‘ಡಿಜಿಟಲ್ ಅರೆಸ್ಟ್’ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸಿಮ್ ವಿತರಿಸುವ ಮುನ್ನ ಗ್ರಾಹಕರ ಮಾಹಿತಿಯನ್ನು ರಿಯಲ್‌ಟೈಮ್‌ನಲ್ಲಿ ಪರಿಶೀಲಿಸುವುದನ್ನು ಕಡ್ಡಾಯಗೊಳಿಸಿದೆ.

ಟೆಲಿಕಾಂ ಕಂಪನಿಗಳು ಗ್ರಾಹಕರ ವಿವರಗಳನ್ನು ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್‌ಫಾರ್ಮ್ ಮೂಲಕ ಪರಿಶೀಲಿಸಬೇಕಿದ್ದು, ಅನುಮಾನಾಸ್ಪದ ಅಥವಾ ನಕಲಿ ಗುರುತಿನ ದಾಖಲೆಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಹೊಸ ಸಿಮ್ ಸಂಪರ್ಕ ನೀಡುವುದನ್ನು ತಡೆಯಲಾಗುತ್ತದೆ. ಇದಲ್ಲದೆ, ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳು ನೋಂದಣಿಯಾಗಿವೆ ಎಂಬುದನ್ನು ಸರ್ಕಾರದ ಮಟ್ಟದಲ್ಲಿ ಟ್ರ್ಯಾಕ್ ಮಾಡಲಾಗುತ್ತದೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ಗರಿಷ್ಠ 9 ಸಿಮ್ ಕಾರ್ಡ್‌ಗಳನ್ನು ಹೊಂದಲು ಅವಕಾಶವಿದ್ದು, ಜಮ್ಮು-ಕಾಶ್ಮೀರ, ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಈ ಮಿತಿ ಗರಿಷ್ಠ 6 ಸಿಮ್ ಕಾರ್ಡ್‌ಗಳಿಗೆ ಸೀಮಿತವಾಗಿರಲಿದೆ.

ನಕಲಿ ಗುರುತಿನ ಆಧಾರದ ಮೇಲೆ ಸಿಮ್ ಕಾರ್ಡ್ ಪಡೆಯುವುದು, ಸೈಬರ್ ವಂಚನೆ ನಡೆಸುವುದು ಹಾಗೂ ಡಿಜಿಟಲ್ ಅರೆಸ್ಟ್‌ನಂತಹ ವಂಚನೆಗಳಿಗೆ ಬಳಸಲಾಗುವ ನಕಲಿ ಸಂಪರ್ಕಗಳನ್ನು ನಿಯಂತ್ರಿಸುವುದೇ ಈ ಕ್ರಮದ ಪ್ರಮುಖ ಉದ್ದೇಶವಾಗಿದೆ.

ಹೊಸ ಸಿಮ್ ಕಾರ್ಡ್ ಖರೀದಿಗೆ ಟಫ್ ರೂಲ್ಸ್:

  • ಹೊಸ ಸಿಮ್ ಕಾರ್ಡ್ ನೀಡುವ ಮೊದಲು ರಿಯಲ್‌ಟೈಮ್ ಪರಿಶೀಲನೆ ಕಡ್ಡಾಯ
  • ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್‌ಫಾರ್ಮ್ ಮೂಲಕ ಗ್ರಾಹಕರ ವಿವರ ಪರಿಶೀಲನೆ
  • ನಕಲಿ ಗುರುತಿನ ವ್ಯಕ್ತಿಗಳಿಗೆ ಸಿಮ್ ನಿರ್ಬಂಧ
  • ವ್ಯಕ್ತಿಯ ಹೆಸರಿನ ಸಿಮ್ ಸಂಖ್ಯೆ ಸರ್ಕಾರದಿಂದ ಟ್ರ್ಯಾಕಿಂಗ್
  • ಗರಿಷ್ಠ 9 ಸಿಮ್ (ಜೆ&ಕೆ, ಈಶಾನ್ಯ ರಾಜ್ಯಗಳಲ್ಲಿ 6 ಸಿಮ್ ಮಿತಿ)

ಉದ್ದೇಶಕ್ಕೆ ಬಳಕೆಯಾಗದ ಭೂಮಿ ವಾಪಸ್: ಡಿಸಿಎಂ ಪರಮೇಶ್ವರ್ ಸ್ಪಷ್ಟನೆ

0

ಬೆಂಗಳೂರು: ಶಿಕ್ಷಣ ಸಂಸ್ಥೆಗಳು, ಸಂಘ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳಿಗೆ ಸರ್ಕಾರ ಕೊಟ್ಟಿರುವ ಭೂಮಿಯನ್ನು ನಿಗದಿತ ಉದ್ದೇಶಕ್ಕೆ ಬಳಕೆ ಮಾಡದೇ ಹೋದರೆ ಸರ್ಕಾರ ಅದನ್ನು ಮರುವಶಪಡಿಸಿಕೊಳ್ಳಲಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ನ ಶಿವಕುಮಾರ್ ಪ್ರಶ್ನೆ ಕೇಳಿದ್ದರು. ಸಂಘ ಸಂಸ್ಥೆಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಭೂಮಿ ನೀಡುತ್ತಿದ್ದು, ಅವರು ಯಾವ ಉದ್ದೇಶಕ್ಕೆ ಭೂಮಿ ಪಡೆದಿದ್ದರೋ ಅದಕ್ಕೆ ಬಳಕೆ ಮಾಡುತ್ತಿಲ್ಲ ಎಂದು ಆಕ್ಷೇಪಿಸಿದ ಅವರು, ಧಾರ್ಮಿಕ ಸಂಘಗಳಿಗೆ ಸರ್ಕಾರ ಭೂಮಿ ನೀಡಬಾರದು ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರ ನೀಡಿದ ಡಿಸಿಎಂ ಪರಮೇಶ್ವರ್, ಸಂಘ ಸಂಸ್ಥೆಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ 2010ರಿಂದ 2026ರವರೆಗೆ ಸುಮಾರು 2,400 ಎಕರೆಗೂ ಹೆಚ್ಚು ಭೂಮಿಯನ್ನು ಸರ್ಕಾರ ನೀಡಿದೆ ಎಂದು ವಿವರಿಸಿದರು. ಈ ಅವಧಿಯಲ್ಲಿ ಎಲ್ಲಾ ಸರ್ಕಾರಗಳೂ ಜಮೀನು ನೀಡಿವೆ ಎಂದ ಅವರು, ಪಡೆದ ಉದ್ದೇಶಕ್ಕೆ ಜಮೀನುಗಳನ್ನು ಬಳಸಿಕೊಳ್ಳುತ್ತಿದ್ದಾರೆಯೇ ಎಂದು ಪರಿಶೀಲಿಸಲು 2020ರಲ್ಲೇ ಡಿಸಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಯಾರು ಉಪಯೋಗ ಮಾಡಿಲ್ಲವೋ ಅಥವಾ ಕೇಳಿದ ಉದ್ದೇಶಕ್ಕೆ ಬಳಕೆಯಾಗದೇ ಹೋಗಿದೆಯೋ, ಆ ಜಮೀನನ್ನು ವಾಪಸ್ ಪಡೆಯಲಾಗುವುದು ಎಂದು ಸ್ಪಷ್ಟಪಡಿಸಿದ ಡಿಸಿಎಂ, ಸಂಘ ಸಂಸ್ಥೆಗಳಿಗೆ ಜಮೀನು ಕೊಡುವುದಕ್ಕೆ ನಿಯಮಗಳಿದ್ದು, ಅದರ ಅನ್ವಯವೇ ಭೂಮಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

IND vs SL 1st Test: ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ 165 ರನ್ʼಗಳ ಗೆಲುವು!

0

ಗಾಲೆ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ. ಗಾಲೆ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 165 ರನ್‌ಗಳಿಂದ ಶ್ರೀಲಂಕಾವನ್ನು ಮಣಿಸಿದೆ. ಈ ಗೆಲುವಿನ ಪ್ರಮುಖ ರೂವಾರಿಯಾಗಿದ್ದು ಸ್ಪಿನ್ನರ್ ಮಾನವ್ ಸುತಾರ್.

372 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 206 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಸ್ಪಿನ್ನರ್ ಮಾನವ್ ಸುತಾರ್ ಅದ್ಭುತ ಬೌಲಿಂಗ್ ಪ್ರದರ್ಶಿಸಿ 6 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಶ್ರೀಲಂಕಾ ಬ್ಯಾಟಿಂಗ್ ಪಡೆಯನ್ನು ಕಾಡಿದರು.

ಮೊದಲ ಇನ್ನಿಂಗ್ಸ್‌ನಲ್ಲೂ 4 ವಿಕೆಟ್ ಪಡೆದಿದ್ದ ಮಾನವ್ ಸುತಾರ್, ಪಂದ್ಯದಲ್ಲಿ ಒಟ್ಟು 10 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದರು. ಅವರ ಪರಿಣಾಮಕಾರಿ ಸ್ಪಿನ್ ಬೌಲಿಂಗ್‌ನ ಮುಂದೆ ಶ್ರೀಲಂಕಾ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ.

ಧನಂಜಯ-ಸೋನಲ್ ಹೋರಾಟ ವ್ಯರ್ಥ

ಶ್ರೀಲಂಕಾ ಪರ ನಾಯಕ ಧನಂಜಯ ಡಿ ಸಿಲ್ವಾ ಹಾಗೂ ಸೋನಲ್ ದಿನುಶಾ ಅರ್ಧಶತಕ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಪ್ರಯತ್ನಿಸಿದರು. ಧನಂಜಯ 59 ರನ್ ಗಳಿಸಿ ಔಟಾದರೆ, ಸೋನಲ್ ದಿನುಶಾ 84 ರನ್ ಗಳಿಸಿ ಮಾನವ್ ಸುತಾರ್ ಅವರ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

ಇನ್ನು ಭಾರತದ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಪ್ರಸಿದ್ಧ್ ಕೃಷ್ಣ 2 ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ ಹಾಗೂ ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಕಬಳಿಸಿದರು.

ಮೊದಲ ಇನ್ನಿಂಗ್ಸ್‌ನಲ್ಲಿ ಪಡಿಕ್ಕಲ್ ಅಬ್ಬರ

ಭಾರತದ ಗೆಲುವಿನಲ್ಲಿ ಬ್ಯಾಟರ್‌ಗಳ ಕೊಡುಗೆಯೂ ಪ್ರಮುಖವಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 167 ರನ್ ಸಿಡಿಸಿದರು. ಕೆ.ಎಲ್. ರಾಹುಲ್ ಕೂಡ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ 82 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ನೆರವಾದರು.

ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 462 ರನ್ ಗಳಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 193 ರನ್‌ಗಳಿಗೆ ಆಲೌಟ್ ಆಯಿತು. ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 284 ರನ್ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 206 ರನ್‌ಗಳಿಗೆ ಆಲೌಟ್ ಆಯಿತು.

ಸರಣಿಯಲ್ಲಿ ಭಾರತಕ್ಕೆ 1-0 ಮುನ್ನಡೆ

ಈ ಗೆಲುವಿನೊಂದಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಅಂತರದ ಮುನ್ನಡೆ ಸಾಧಿಸಿದೆ. ಎರಡನೇ ಟೆಸ್ಟ್ ಪಂದ್ಯ ಆಗಸ್ಟ್ 23ರಿಂದ 27ರವರೆಗೆ ಕೊಲಂಬೊದಲ್ಲಿ ನಡೆಯಲಿದೆ.

ಭಾರತ ಗೆಲುವು ಸಾಧಿಸುತ್ತಿದ್ದಂತೆಯೇ ಗಾಲೆ ಕ್ರೀಡಾಂಗಣದಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ಪಂದ್ಯ ಮುಕ್ತಾಯದ ಬಳಿಕವೂ ವಾತಾವರಣ ಗಮನ ಸೆಳೆಯಿತು.