ಬಾಗಲಕೋಟೆ: ಪತ್ನಿಗೆ ನೇಣು ಹಾಕಿ ಆಕೆ ಪ್ರಾಣಕ್ಕಾಗಿ ಒದ್ದಾಡುತ್ತಿದ್ದ ದೃಶ್ಯವನ್ನು ಅತ್ತೆ–ಮಾವನಿಗೆ ವಿಡಿಯೋ ಕಾಲ್ ಮೂಲಕ ತೋರಿಸಿದ ಅಮಾನವೀಯ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಭಾಗ್ಯಶ್ರೀ ಜಿಗಳೂರು (23) ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಪ್ರವೀಣ್ ಜಿಗಳೂರು ಹತ್ಯೆ ಆರೋಪಿಯಾಗಿದ್ದಾನೆ.
ಪತ್ನಿಯ ಮೇಲೆ ಅನೈತಿಕ ಸಂಬಂಧದ ಅನುಮಾನ ಹೊಂದಿದ್ದ ಪ್ರವೀಣ್, ಆಕೆಯ ಮೇಲೆ ಕಟ್ಟಿಗೆಯಿಂದ ಹಲ್ಲೆ ನಡೆಸಿ ಬಳಿಕ ನೇಣು ಬಿಗಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ನೇಣು ಬಿಗಿದ ಬಳಿಕ ಆಕೆ ಒದ್ದಾಡುತ್ತಿದ್ದ ದೃಶ್ಯವನ್ನು ವಿಡಿಯೋ ಕಾಲ್ನಲ್ಲಿ ಅತ್ತೆ–ಮಾವನಿಗೆ ತೋರಿಸಿದ್ದಾನೆ. ಅಲ್ಲದೇ ಘಟನೆ ದೃಶ್ಯವನ್ನು ವಿಡಿಯೋ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ವಿಡಿಯೋದಲ್ಲಿ ನೇಣು ಕುಣಿಕೆಯ ಹಿಂಭಾಗದಲ್ಲಿ ಮದುವೆ ಸಂದರ್ಭದಲ್ಲಿ ಬರೆದಿದ್ದ ದಂಪತಿಯ ಹೆಸರುಗಳು ಕೂಡ ಕಾಣಿಸಿಕೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾಗ್ಯಶ್ರೀ ಹಾಗೂ ಪ್ರವೀಣ್ ನಡುವೆ ಜಗಳವಾಗಿದ್ದ ಹಿನ್ನೆಲೆಯಲ್ಲಿ ಆಕೆ ಎರಡು ತಿಂಗಳ ಹಿಂದೆ ಮಹಾಲಿಂಗಪುರದಲ್ಲಿರುವ ತವರು ಮನೆಗೆ ತೆರಳಿದ್ದಳು. ಬಳಿಕ ಜುಲೈ 27ರಂದು ಚೆನ್ನಾಗಿ ಜೀವನ ನಡೆಸೋಣ ಎಂದು ಹೇಳಿ ಪ್ರವೀಣ್ ಆಕೆಯನ್ನು ಗಲಗಲಿಗೆ ಕರೆತಂದಿದ್ದ. ಅದೇ ದಿನ ಸಂಜೆ ಈ ಕೃತ್ಯ ನಡೆದಿದೆ ಎನ್ನಲಾಗಿದೆ.
ಘಟನೆ ಮಾಹಿತಿ ತಿಳಿದು ಬೀಳಗಿ ಪೊಲೀಸರು ಹಾಗೂ ಎಸ್ಪಿ ಸಿದ್ದಾರ್ಥ್ ಗೋಯೆಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಪ್ರವೀಣ್ನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

