ನವದೆಹಲಿ: ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವಿನ ಬಳಿಕ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೆ ಚುನಾವಣಾ ಅಕ್ರಮದ ಆರೋಪಗಳನ್ನು ಮುಂದಿಟ್ಟಿದ್ದಾರೆ.
ಚುನಾವಣಾ ಪ್ರಕ್ರಿಯೆಯಲ್ಲಿ ಗಂಭೀರ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಅವರು, ಬಿಜೆಪಿ ಜನಾದೇಶವನ್ನು ದುರುಪಯೋಗಪಡಿಸಿಕೊಂಡು ಅಧಿಕಾರಕ್ಕೆ ಬಂದಿದೆ ಎಂದು ಟೀಕಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್ ಗಾಂಧಿ, ಲೋಕಸಭೆಯಲ್ಲಿರುವ ಬಿಜೆಪಿಯ ಪ್ರತಿ ಆರನೇ ಸಂಸದ ಮತ ಕಳ್ಳತನದ ಮೂಲಕ ಆಯ್ಕೆಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಹರಿಯಾಣ ಉದಾಹರಣೆ ಉಲ್ಲೇಖಿಸಿದ ಅವರು, ಕಾಂಗ್ರೆಸ್ ಗೆಲ್ಲಬೇಕಿದ್ದ ಸರ್ಕಾರವನ್ನು ಬಿಜೆಪಿ ಅಕ್ರಮವಾಗಿ ತನ್ನದಾಗಿಸಿಕೊಂಡಿದೆ. ಅಲ್ಲಿ ಆಯ್ಕೆಯಾದ ಶಾಸಕರು ಜನರ ನಿಜವಾದ ಪ್ರತಿನಿಧಿಗಳಲ್ಲ ಎಂದು ಟೀಕಿಸಿದರು.
ಕೆಲವೊಮ್ಮೆ ಮತ ಕಳ್ಳತನದ ಮೂಲಕ ಒಂದು ಸ್ಥಾನ ಕದಿಯಲಾಗುತ್ತದೆ. ಕೆಲವೊಮ್ಮೆ ಇಡೀ ಸರ್ಕಾರವನ್ನೇ ಕಬಳಿಸಲಾಗುತ್ತದೆ. ಲೋಕಸಭೆಯ 240 ಬಿಜೆಪಿ ಸಂಸದರಲ್ಲಿ ಹಲವರು ಇಂತಹ ಅಕ್ರಮದ ಫಲಾನುಭವಿಗಳು. ಅವರನ್ನು ಬಿಜೆಪಿಯದೇ ಭಾಷೆಯಲ್ಲಿ ‘ಒಳನುಸುಳುವವರು’ ಎಂದು ಕರೆಯಬೇಕೇ? ಎಂದು ಪ್ರಶ್ನಿಸಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧವೂ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು.
ಈ ಸರ್ಕಾರ ಎಲ್ಲದರಲ್ಲೂ ರಾಜಿ ಮಾಡಿಕೊಂಡಿದೆ. ಇದು ಸತ್ಯವನ್ನು ಎದುರಿಸಲು ಹೆದರುತ್ತಿದೆ. ಸಂವಿಧಾನಿಕ ಸಂಸ್ಥೆಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದೆ. ಮತದಾರರ ಪಟ್ಟಿ ಮತ್ತು ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಹಾಳು ಮಾಡಿದೆ ಎಂದು ಆರೋಪಿಸಿದರು.

