Home Blog

ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಬಿ.ಕೆ. ಹರಿಪ್ರಸಾದ್ ಹೆಸರು ಫೈನಲ್?: ಸತೀಶ್ ಜಾರಕಿಹೊಳಿಗೆ ಹೈಕಮಾಂಡ್ ಶಾಕ್!

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವ ಸ್ಥಾನಗಳ ಹಂಚಿಕೆ ಕುರಿತ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿರುವ ನಡುವೆಯೇ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಬಗ್ಗೆ ಹೈಕಮಾಂಡ್ ಒಲವು ತೋರಿದೆ ಎನ್ನುವ ಮಾಹಿತಿ ಪಕ್ಷದ ವಲಯಗಳಿಂದ ಲಭ್ಯವಾಗಿದೆ.

ಮೂಲಗಳ ಪ್ರಕಾರ, ಕೆಪಿಸಿಸಿ ಅಧ್ಯಕ್ಷರ ಜವಾಬ್ದಾರಿ ವಹಿಸಿಕೊಳ್ಳುವಂತೆ ಕಾಂಗ್ರೆಸ್ ಹೈಕಮಾಂಡ್ ನಾಯಕರಿಂದಲೇ ಬಿ.ಕೆ. ಹರಿಪ್ರಸಾದ್ ಅವರಿಗೆ ದೂರವಾಣಿ ಕರೆ ಬಂದಿದ್ದು, ಎಂಎಲ್‌ಸಿ ಸ್ಥಾನ ಜತೆಗೆ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ನೀಡುವ ಕುರಿತು ಚರ್ಚೆ ನಡೆದಿರುವುದಾಗಿ ತಿಳಿದುಬಂದಿದೆ.

ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೇರಲಿರುವುದು ಬಹುತೇಕ ಖಚಿತವಾದ ಬಳಿಕ, ಅವರು ನಿರ್ವಹಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಹಲವು ನಾಯಕರು ಆಕಾಂಕ್ಷಿಗಳಾಗಿ ಹೊರಹೊಮ್ಮಿದ್ದರು. ಈ ಪೈಕಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು.

ಆದರೆ, ಸಚಿವ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಎರಡನ್ನೂ ಬಯಸಿರುವುದು ಹೈಕಮಾಂಡ್‌ಗೆ ಮುಜುಗರ ಉಂಟುಮಾಡಿದೆ ಎನ್ನಲಾಗಿದೆ. ಇದೇ ವೇಳೆ, ಅಚ್ಚರಿಯ ಬೆಳವಣಿಗೆಯಾಗಿ ಬಿ.ಕೆ. ಹರಿಪ್ರಸಾದ್ ಅವರ ಹೆಸರು ಮುನ್ನೆಲೆಗೆ ಬಂದಿದ್ದು, ಇದೀಗ ಅವರೇ ಕೆಪಿಸಿಸಿ ಅಧ್ಯಕ್ಷರಾಗುವ ಸಾಧ್ಯತೆ ಹೆಚ್ಚಾಗಿದೆ.

ಬಿ.ಕೆ. ಹರಿಪ್ರಸಾದ್ ಅವರು ಕೂಡ ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ಹೈಕಮಾಂಡ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ನಿರ್ಧಾರಕ್ಕೆ ಬಂದಿರುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಇದರ ನಡುವೆ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಸತೀಶ್ ಜಾರಕಿಹೊಳಿ, ಪಕ್ಷ ಯಾವ ಜವಾಬ್ದಾರಿ ನೀಡಲಿದೆ ಎಂಬ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ತಿಳಿಸಿದ್ದಾರೆ.

“ಹೈಕಮಾಂಡ್‌ನಿಂದ ಅಧಿಕೃತ ಮಾಹಿತಿ ಬರುವವರೆಗೆ ಕಾಯಬೇಕು. ಪಕ್ಷದ ನಾಯಕತ್ವ ಯಾವ ತೀರ್ಮಾನ ಕೈಗೊಂಡರೂ ಅದನ್ನು ನಾನು ಸೇರಿದಂತೆ ಎಲ್ಲರೂ ಗೌರವಿಸಬೇಕು” ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ತಮ್ಮ ವಿರುದ್ಧ ನಡೆದಿರುವ ಅಪಪ್ರಚಾರದ ಕುರಿತು ಮಾತನಾಡಿದ ಅವರು, “ಈ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ. ಸತ್ಯಾಂಶ ಶೀಘ್ರದಲ್ಲೇ ಹೊರಬರಲಿದೆ” ಎಂದು ತಿಳಿಸಿದ್ದಾರೆ.

ಉಪ ಮುಖ್ಯಮಂತ್ರಿ ಹುದ್ದೆ ಕುರಿತು ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, “ಡಾ. ಜಿ. ಪರಮೇಶ್ವರ್ ಅವರಿಗೆ ಡಿಸಿಎಂ ಸ್ಥಾನ ದೊರೆತರೆ ಉತ್ತಮ. ಅವರು ರಾಜ್ಯದ ಹಿರಿಯ ದಲಿತ ನಾಯಕರಾಗಿದ್ದು, ಆ ಹುದ್ದೆಗೆ ಅರ್ಹರು” ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಹುದ್ದೆಗಳ ಹಂಚಿಕೆ ಕುರಿತ ಅಂತಿಮ ತೀರ್ಮಾನಕ್ಕೆ ಹೈಕಮಾಂಡ್ ಸಿದ್ಧತೆ ನಡೆಸಿರುವ ಹಿನ್ನೆಲೆ, ಮುಂದಿನ ಕೆಲ ದಿನಗಳಲ್ಲಿ ಸಚಿವ ಸಂಪುಟ ರಚನೆ ಹಾಗೂ ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ಕುರಿತು ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.

20 ವರ್ಷದ ಬಳಿಕ ಸರ್ಕಾರಿ ಕೆಲಸದ ಪತ್ರ: 60ರ ವಯಸ್ಸಿನಲ್ಲಿ ನೇಮಕಾತಿ ನೋಡಿ ಬೆಚ್ಚಿಬಿದ್ದ ವ್ಯಕ್ತಿ!

ಮಲಪ್ಪುರಂ: ಸರ್ಕಾರಿ ಉದ್ಯೋಗಕ್ಕಾಗಿ 20 ವರ್ಷಗಳ ಹಿಂದೆ ಬರೆದಿದ್ದ ಪರೀಕ್ಷೆಯ ಫಲವಾಗಿ ಇದೀಗ ನೇಮಕಾತಿ ಪತ್ರ ಕೈ ಸೇರಿದ ಅಪರೂಪದ ಘಟನೆ ಕೇರಳದಲ್ಲಿ ಬೆಳಕಿಗೆ ಬಂದಿದೆ. ಆದರೆ ನೇಮಕಾತಿ ಪತ್ರ ಬರುವಷ್ಟರಲ್ಲಿ ಅಭ್ಯರ್ಥಿ ಸರ್ಕಾರಿ ಸೇವೆಗೆ ಪ್ರವೇಶಿಸುವ ವಯೋಮಿತಿಯನ್ನೇ ದಾಟಿರುವುದು ವಿಪರ್ಯಾಸವಾಗಿದೆ.

ಮಲಪ್ಪುರಂ ಮೂಲದ 60 ವರ್ಷದ ಅಬ್ದುಲ್ ಮಜೀದ್ ಅವರು 2005ರಲ್ಲಿ ಕೇರಳ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ್ದ ಅರೆಕಾಲಿಕ ಜೂನಿಯರ್ ಅರೇಬಿಕ್ ಶಿಕ್ಷಕರ ಹುದ್ದೆಯ ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರ್ಯಾಂಕ್ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದರು. ಆದರೆ ಆ ಪಟ್ಟಿ 2008ರಲ್ಲೇ ಅವಧಿ ಮುಗಿಸಿಕೊಂಡಿತ್ತು.

ಆದರೆ ರ್ಯಾಂಕ್ ಪಟ್ಟಿ ರದ್ದಾದ ಸುಮಾರು 18 ವರ್ಷಗಳ ಬಳಿಕ, 2026ರ ಏಪ್ರಿಲ್ 24ರಂದು ಕೇರಳ ಪಿಎಸ್‌ಸಿ ಮಜೀದ್ ಅವರಿಗೆ ನೇಮಕಾತಿ ಸಲಹಾ ಪತ್ರ ಕಳುಹಿಸಿದೆ. ಎರಡು ದಶಕಗಳ ಹಿಂದೆ ಬರೆದಿದ್ದ ಪರೀಕ್ಷೆಗೆ ಈಗ ಉದ್ಯೋಗ ಅವಕಾಶ ಬಂದಿರುವುದು ಅಚ್ಚರಿ ಮೂಡಿಸಿದೆ.

ಆದರೆ ಅಧಿಕೃತ ದಾಖಲೆಗಳ ಪ್ರಕಾರ ಮಜೀದ್ ಅವರಿಗೆ ಮೇ 27, 2026ರಂದು 60 ವರ್ಷ ಪೂರ್ಣಗೊಂಡಿದೆ. ಹೀಗಾಗಿ ಹೊಸದಾಗಿ ಸರ್ಕಾರಿ ಸೇವೆಗೆ ಸೇರಲು ಅವರು ಅರ್ಹರಾಗಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬೆಳವಣಿಗೆಯಿಂದ ಸಂತೋಷ ಮತ್ತು ನಿರಾಶೆ ಎರಡನ್ನೂ ಅನುಭವಿಸಿರುವ ಮಜೀದ್, ತಮ್ಮ ಪ್ರಕರಣವನ್ನು ಸರ್ಕಾರ ಮಾನವೀಯ ದೃಷ್ಟಿಯಿಂದ ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.

ಡಿಕೆಶಿ ಸಿಎಂ ಖುಷಿಗೆ ಭರ್ಜರಿ ಸಿಹಿ: ನೆಲಮಂಗಲದಲ್ಲಿ 10 ಲಕ್ಷ ಲಾಡು ತಯಾರಿ

ನೆಲಮಂಗಲ: ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಿರುವ ಹಿನ್ನೆಲೆ ನೆಲಮಂಗಲ ಕ್ಷೇತ್ರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಈ ಸಂಭ್ರಮದ ಅಂಗವಾಗಿ ಕ್ಷೇತ್ರದ ಸಾವಿರಾರು ಕುಟುಂಬಗಳಿಗೆ ಉಚಿತ ಸಿಹಿ ವಿತರಿಸುವ ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ಸುಮಾರು 90 ಸಾವಿರ ಮನೆಗಳಿಗೆ ತಲಾ 750 ಗ್ರಾಂ ತೂಕದ ಲಾಡು ಬಾಕ್ಸ್ ವಿತರಿಸುವ ಗುರಿಯನ್ನು ಆಯೋಜಕರು ಹೊಂದಿದ್ದಾರೆ. ಇದಕ್ಕಾಗಿ ಭಾರಿ ಪ್ರಮಾಣದಲ್ಲಿ ಸಿದ್ಧತೆ ನಡೆಸಲಾಗಿದ್ದು, ಈಗಾಗಲೇ ಲಾಡು ತಯಾರಿಕೆ ಅಂತಿಮ ಹಂತ ತಲುಪಿದೆ.

ಸುಮಾರು 250 ರಿಂದ 300 ಬಾಣಸಿಗರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 9 ರಿಂದ 10 ಲಕ್ಷ ಲಾಡುಗಳನ್ನು ಸಿದ್ಧಪಡಿಸಲಾಗುತ್ತಿದೆ. ವಿತರಣಾ ಕಾರ್ಯದಲ್ಲಿ ನೂರಾರು ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರು ಭಾಗಿಯಾಗಲಿದ್ದಾರೆ.

ಕ್ಷೇತ್ರದ ಪ್ರತಿಯೊಂದು ಗ್ರಾಮ ಹಾಗೂ ಪ್ರತಿಯೊಂದು ಮನೆಗೂ ಸಿಹಿ ತಲುಪಿಸುವ ಉದ್ದೇಶದಿಂದ ವಿಶೇಷ ತಂಡಗಳನ್ನು ರಚಿಸಲಾಗಿದೆ. ಕೊನೆಯ ಮನೆಗೂ ಲಾಡು ತಲುಪುವವರೆಗೆ ಅಭಿಯಾನ ಮುಂದುವರಿಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಪಟ್ಟಕ್ಕೇರಿರುವ ಡಿಕೆ ಶಿವಕುಮಾರ್ ಅವರ ಸಾಧನೆಯನ್ನು ಸಂಭ್ರಮಿಸುವ ಜೊತೆಗೆ ಜನರೊಂದಿಗೆ ಸಂತಸ ಹಂಚಿಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಐಪಿಎಲ್ ಹೀರೋ ವೈಭವ್ ಸೂರ್ಯವಂಶಿಗೆ ಜಾಹೀರಾತು ಕಂಪನಿಗಳಿಂದ ಭಾರೀ ಬೇಡಿಕೆ

ಮುಂಬೈ: ಐಪಿಎಲ್‌ನಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿರುವ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ಇದೀಗ ಜಾಹೀರಾತು ಲೋಕದ ಹಾಟ್ ಫೇವರಿಟ್ ಆಗಿ ಹೊರಹೊಮ್ಮಿದ್ದಾರೆ. ಮೈದಾನದಲ್ಲಿ ರನ್‌ಗಳ ಸುರಿಮಳೆಗೈದಿರುವ ಈ ಯುವ ಆಟಗಾರನ ಹಿಂದೆ ದೇಶದ ಪ್ರಮುಖ ಕಂಪನಿಗಳು ಬ್ರಾಂಡ್ ಅಂಬಾಸಿಡರ್ ಆಗಿ ಸೇರ್ಪಡೆಗೊಳಿಸಲು ಪೈಪೋಟಿ ನಡೆಸುತ್ತಿವೆ.

ಐಪಿಎಲ್‌ನಲ್ಲಿ ತೋರಿದ ಅದ್ಭುತ ಪ್ರದರ್ಶನದ ಬಳಿಕ ವೈಭವ್ ಸೂರ್ಯವಂಶಿ ಅವರ ಬ್ರಾಂಡ್ ಮೌಲ್ಯದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಕ್ರೀಡಾ ಪಾನೀಯಗಳು, ಪೌಷ್ಠಿಕಾಂಶ ಉತ್ಪನ್ನಗಳು ಹಾಗೂ ಫೂಟ್ವೇರ್ ಕ್ಷೇತ್ರದ ಹಲವು ಪ್ರಮುಖ ಕಂಪನಿಗಳು ಅವರೊಂದಿಗೆ ಒಪ್ಪಂದಕ್ಕೆ ಮುಂದಾಗಿದ್ದು, ಈಗಾಗಲೇ ಹಲವು ಸುತ್ತಿನ ಮಾತುಕತೆಗಳು ನಡೆದಿವೆ ಎನ್ನಲಾಗಿದೆ.

ಕೇವಲ 15 ವರ್ಷದವರಾಗಿರುವ ವೈಭವ್ ಮುಂದೆ ದೀರ್ಘ ಕ್ರಿಕೆಟ್ ವೃತ್ತಿಜೀವನವಿರುವ ಕಾರಣ ಕಂಪನಿಗಳು ಅವರನ್ನು ಭವಿಷ್ಯದ ಹೂಡಿಕೆ ಎಂದು ಪರಿಗಣಿಸುತ್ತಿವೆ. ಇದೇ ಕಾರಣಕ್ಕೆ ದೀರ್ಘಾವಧಿಯ ಬದಲು ಆರಂಭಿಕವಾಗಿ 2 ರಿಂದ 3 ವರ್ಷಗಳ ಅವಧಿಯ ಒಪ್ಪಂದಗಳಿಗೆ ಹೆಚ್ಚಿನ ಆಸಕ್ತಿ ತೋರಲಾಗುತ್ತಿದೆ.

ವೈಭವ್ ಸೂರ್ಯವಂಶಿ ಅಪ್ರಾಪ್ತ ವಯಸ್ಸಿನವರಾಗಿರುವುದರಿಂದ ಜಾಹೀರಾತು ಹಾಗೂ ವಾಣಿಜ್ಯ ಒಪ್ಪಂದಗಳ ಜವಾಬ್ದಾರಿಯನ್ನು ಅವರ ಕುಟುಂಬಸ್ಥರು ನಿರ್ವಹಿಸುತ್ತಿದ್ದಾರೆ. ಈ ಎಲ್ಲಾ ಪ್ರಕ್ರಿಯೆಗಳಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ಕಾನೂನು ಸಲಹೆ ಹಾಗೂ ಅಗತ್ಯ ಮಾರ್ಗದರ್ಶನ ನೀಡುತ್ತಿದೆ ಎಂದು ವರದಿಯಾಗಿದೆ.

ವೈಭವ್ ಈಗಾಗಲೇ ಕಾಂಪ್ಲಾನ್, ರೆಡ್ ಬುಲ್ ಸೇರಿದಂತೆ ಹಲವು ಪ್ರಮುಖ ಬ್ರಾಂಡ್‌ಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆರಂಭದಲ್ಲಿ ಒಂದು ಜಾಹೀರಾತಿಗೆ ಸುಮಾರು ₹1 ಕೋಟಿ ಸಂಭಾವನೆ ಪಡೆಯುತ್ತಿದ್ದ ಅವರು, ನಂತರ ₹1.5 ಕೋಟಿಗೆ ಏರಿಸಿದ್ದರು. ಇದೀಗ ಐಪಿಎಲ್‌ನ ಅದ್ಭುತ ಪ್ರದರ್ಶನದ ಬಳಿಕ ಅವರ ಪ್ರತಿ ಜಾಹೀರಾತಿನ ಮೌಲ್ಯ ಬರೋಬ್ಬರಿ ₹2 ಕೋಟಿಗೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಈ ಬಾರಿಯ ಐಪಿಎಲ್‌ನಲ್ಲಿ ವೈಭವ್ ಸೂರ್ಯವಂಶಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಟೂರ್ನಿಯ ಅತ್ಯಂತ ಯಶಸ್ವಿ ಬ್ಯಾಟರ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು. 16 ಪಂದ್ಯಗಳಲ್ಲಿ 237.37ರ ಸ್ಟ್ರೈಕ್‌ರೇಟ್‌ನೊಂದಿಗೆ ಒಟ್ಟು 776 ರನ್ ಕಲೆಹಾಕಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದರೊಂದಿಗೆ ಕೇವಲ 15ನೇ ವಯಸ್ಸಿನಲ್ಲಿ ಐಪಿಎಲ್ ಇತಿಹಾಸದಲ್ಲೇ ಅತಿ ಕಿರಿಯ ವಯಸ್ಸಿನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಆಟಗಾರ ಎಂಬ ದಾಖಲೆ ನಿರ್ಮಿಸಿದರು. ಜೊತೆಗೆ ಪವರ್‌ಪ್ಲೇ ಅವಧಿಯಲ್ಲೇ 500ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ವಿಶೇಷ ಸಾಧನೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಮೈದಾನದೊಳಗೆ ಬ್ಯಾಟ್ ಮೂಲಕ ದಾಖಲೆಗಳನ್ನು ನಿರ್ಮಿಸುತ್ತಿರುವ ವೈಭವ್ ಸೂರ್ಯವಂಶಿ, ಮೈದಾನದ ಹೊರಗೆ ಬ್ರಾಂಡ್ ಡೀಲ್‌ಗಳ ಮೂಲಕ ಭಾರತೀಯ ಕ್ರೀಡಾ ಕ್ಷೇತ್ರದ ಅತ್ಯಂತ ಬೇಡಿಕೆಯ ಯುವ ಮುಖವಾಗಿ ಹೊರಹೊಮ್ಮಿದ್ದಾರೆ.

ವಚನಾನಂದ ಸ್ವಾಮಿ ಪೋಕ್ಸೋ ಪ್ರಕರಣ: ಇಂದು ಕೋರ್ಟ್ ನಲ್ಲಿ ಮಹತ್ವದ ವಿಚಾರಣೆ, ಮಠದಲ್ಲಿ ನಿಷೇಧಾಜ್ಞೆ ಮುಂದುವರಿಕೆ

ದಾವಣಗೆರೆ: ಪೋಕ್ಸೋ ಪ್ರಕರಣದಲ್ಲಿ ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮಿಗೆ ಮಂಜೂರಾಗಿರುವ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸುವಂತೆ ಕೋರಿ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ದಾವಣಗೆರೆ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯದಲ್ಲಿ ನಡೆಯಲಿದೆ. ಈ ವಿಚಾರಣೆಯ ಫಲಿತಾಂಶದ ಮೇಲೆ ಪ್ರಕರಣದ ಮುಂದಿನ ಬೆಳವಣಿಗೆಗಳು ನಿರ್ಧಾರವಾಗುವ ಸಾಧ್ಯತೆ ಇದೆ.

ವಚನಾನಂದ ಸ್ವಾಮಿಗೆ ನೀಡಲಾಗಿರುವ ಜಾಮೀನು ರದ್ದುಪಡಿಸುವಂತೆ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಮೇ 13ರಂದು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ಮೇ 29ರಂದು ನಡೆಯಬೇಕಾಗಿದ್ದರೂ, ಕೆಲವು ಕಾರಣಗಳಿಂದ ಅದನ್ನು ಜೂನ್ 3ಕ್ಕೆ ಮುಂದೂಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಹರ ಗ್ರಾಮಾಂತರ ಠಾಣೆಯ ಸಿಪಿಐ ಸುರೇಶ್ ಸಗರಿ ಅವರು ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ವಚನಾನಂದ ಸ್ವಾಮಿ ಪರ ವಕೀಲ ಎಸ್.ವಿ. ಪಾಟೀಲ್ ತಕರಾರು ಅರ್ಜಿ ಸಲ್ಲಿಸಿ ತಮ್ಮ ವಾದ ಮಂಡಿಸಿದ್ದಾರೆ.

ಇಂದು ನಡೆಯಲಿರುವ ವಿಚಾರಣೆಯಲ್ಲಿ ನ್ಯಾಯಾಲಯ ಜಾಮೀನು ರದ್ದುಪಡಿಸುವ ತೀರ್ಮಾನ ಕೈಗೊಂಡರೆ, ವಚನಾನಂದ ಸ್ವಾಮಿಯ ಬಂಧನದ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸದ್ಯ ಅವರು ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಲು ತೆರಳಿರುವುದಾಗಿ ತಿಳಿದುಬಂದಿದ್ದು, ಜಾಮೀನು ರದ್ದಾದರೆ ಅಲ್ಲಿಯೇ ಬಂಧಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ಹೇಳಿವೆ.

ಪ್ರಕರಣದ ಹಿನ್ನೆಲೆ

ವಚನಾನಂದ ಸ್ವಾಮಿ ವಿರುದ್ಧ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣವನ್ನು ನಂತರ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಬಾಲಕನ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಬಾಲಕನ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂಬ ಆರೋಪವನ್ನು ಸ್ವಾಮಿಯ ವಿರುದ್ಧ ಮಾಡಲಾಗಿದೆ.

ಮಠದಲ್ಲಿ ನಿಷೇಧಾಜ್ಞೆ ಮುಂದುವರಿಕೆ

ಹರಿಹರದ ಪಂಚಮಸಾಲಿ ಪೀಠದ ಟ್ರಸ್ಟಿಗಳು ಮತ್ತು ವಚನಾನಂದ ಸ್ವಾಮಿ ನಡುವಿನ ವಿವಾದದ ಹಿನ್ನೆಲೆಯಲ್ಲಿ ಮಠದಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಜಾರಿಗೊಳಿಸಿದ್ದ ನಿಷೇಧಾಜ್ಞೆಯನ್ನು ಜಿಲ್ಲಾಡಳಿತ ಮುಂದುವರಿಸಿದೆ.

ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ (ಬಿಎನ್ಎಸ್) ಕಲಂ 163ರಡಿ ಜೂನ್ 1ರಿಂದ ಜೂನ್ 15ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಆದೇಶಿಸಿದ್ದಾರೆ. ಮಠದ ಆವರಣದಲ್ಲಿ ಧಾರ್ಮಿಕ ಪೂಜೆಗಳನ್ನು ಹೊರತುಪಡಿಸಿ ಸಭೆ, ಸಮಾರಂಭ, ಪತ್ರಿಕಾಗೋಷ್ಠಿ ಸೇರಿದಂತೆ ಯಾವುದೇ ಸಾರ್ವಜನಿಕ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ. ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ.

‘ಇಬ್ಬರು ಹುಡುಗಿಯರು ಸ್ನೇಹಿತರಾಗಿರಬಾರದೇ?’ ವೈರಲ್ ಗಾಸಿಪ್‌ಗೆ ಕೃತಿ ಸನನ್ ತಿರುಗೇಟು

ಮುಂಬೈ: ‘ಕಾಕ್‌ಟೇಲ್ 2’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನನ್ ಸಲಿಂಗಪ್ರೇಮಿ ಜೋಡಿಯಾಗಿ ನಟಿಸುತ್ತಿದ್ದಾರೆ ಎಂಬ ವದಂತಿ ಹರಿದಾಡುತ್ತಿದ್ದ ಬೆನ್ನಲ್ಲೇ ನಟಿ ಕೃತಿ ಸನನ್ ಸಮಾಜದ ಮನೋಭಾವದ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೃತಿ, “ಇಬ್ಬರು ಹುಡುಗರು ಆತ್ಮೀಯವಾಗಿದ್ದರೆ ಅದನ್ನು ಬ್ರೋಮ್ಯಾನ್ಸ್ ಎಂದು ಕರೆಯುತ್ತಾರೆ. ಆದರೆ ಇಬ್ಬರು ಹುಡುಗಿಯರು ಆಪ್ತರಾಗಿದ್ದರೆ ಅವರು ಕೇವಲ ಸ್ನೇಹಿತರಾಗಿರಲು ಸಾಧ್ಯವಿಲ್ಲ ಎಂದು ಯಾಕೆ ಅಂದುಕೊಳ್ಳುತ್ತಾರೆ?” ಎಂದು ಪ್ರಶ್ನಿಸಿದರು.

ಈ ವೇಳೆ ರಶ್ಮಿಕಾ ಮತ್ತು ಕೃತಿ ತಮ್ಮ ಸ್ನೇಹದ ಬಗ್ಗೆ ಮಾತನಾಡಿದ್ದು, ಜಿಮ್‌ನಲ್ಲಿ ಆರಂಭವಾದ ಸ್ನೇಹ ಶೂಟಿಂಗ್ ವೇಳೆಯಲ್ಲೂ ಮುಂದುವರಿದಿತ್ತು ಎಂದು ತಿಳಿಸಿದರು. ಇದಕ್ಕೆ ಹಾಸ್ಯವಾಗಿ ಪ್ರತಿಕ್ರಿಯಿಸಿದ ಶಾಹಿದ್ ಕಪೂರ್, “ನಿಮ್ಮಿಬ್ಬರ ನಡುವಿನ ನ್ಯಾಚುರಲ್ ಕೆಮಿಸ್ಟ್ರಿಯೇ ಈ ವದಂತಿಗೆ ಕಾರಣವಾಗಿರಬಹುದು” ಎಂದರು.

ಬಳಿಕ ನಿರ್ದೇಶಕ ಹೋಮಿ ಅದಾಜಾನಿಯಾ, ಸೆಟ್‌ನಲ್ಲಿ ನಡೆದ ತಮಾಷೆಯ ಮಾತುಕತೆಯೇ ನಂತರ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಗಾಸಿಪ್ ಆಗಿ ಹರಡಿದೆ ಎಂದು ಸ್ಪಷ್ಟಪಡಿಸಿದರು. ಚಿತ್ರದ ಕಥೆಯಲ್ಲಿ ರಶ್ಮಿಕಾ ಮತ್ತು ಕೃತಿ ಸಲಿಂಗಪ್ರೇಮಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.

‘ಕಾಕ್‌ಟೇಲ್ 2’ ಚಿತ್ರದಲ್ಲಿ ಶಾಹಿದ್ ಕಪೂರ್, ಕೃತಿ ಸನನ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಸಿನಿಮಾ ಬಗ್ಗೆ ಈಗಾಗಲೇ ಭಾರಿ ನಿರೀಕ್ಷೆ ಮೂಡಿದೆ.

‘ಮಟ್ಕಾ’ ಮಸ್ತಿಯಲ್ಲಿ ಸಿಲುಕಿದ ಬಸವರಾಜ-ಸಂಗಪ್ಪಶೆಟ್ಟರ್‌ʼಗೆ ಗಡಿಪಾರು ಶಿಕ್ಷೆ!

ಗದಗ: ಜಿಲ್ಲೆಯಲ್ಲಿ ಅನಧಿಕೃತ ಲಾಟರಿ ಹಾಗೂ ಮಟ್ಕಾ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದ್ದು, “ಮಟ್ಕಾ ಆಡಿದ್ರೆ ಗಡಿಪಾರು ಗ್ಯಾರಂಟಿ” ಎಂಬ ಸ್ಪಷ್ಟ ಸಂದೇಶವನ್ನು ಅಧಿಕಾರಿಗಳು ರವಾನಿಸಿದ್ದಾರೆ.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ನಡೆದ 2025-26ನೇ ಸಾಲಿನ ನಾಲ್ಕನೇ ತ್ರೈಮಾಸಿಕ ಪ್ಲೇಯಿಂಗ್ ಸ್ಕ್ವಾಡ್ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲೆಯಲ್ಲಿ ನಡೆಯುತ್ತಿರುವ ಮಟ್ಕಾ ಹಾಗೂ ಅನಧಿಕೃತ ಲಾಟರಿ ದಂಧೆಗಳನ್ನು ಸಂಪೂರ್ಣ ನಿಯಂತ್ರಣಕ್ಕೆ ತರಲು ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಮಟ್ಕಾ ಪ್ರಕರಣಗಳಿಗೆ ಸಂಬಂಧಿಸಿದ ಅನೇಕ ಪ್ರಕರಣಗಳು ವಿಚಾರಣಾ ಹಂತದಲ್ಲಿದ್ದು, ಅವುಗಳನ್ನು ಶೀಘ್ರ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಗಡಿಪಾರು ಮಾಡಲಾಗಿರುವ ಆರೋಪಿತರ ಆರ್ಥಿಕ ಚಟುವಟಿಕೆಗಳ ಮೇಲೂ ನಿಗಾ ವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದು, ಜಿಎಸ್‌ಟಿ ಕಾಯ್ದೆಯಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ವಾಣಿಜ್ಯ ತೆರಿಗೆ ಇಲಾಖೆಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಮಾತನಾಡಿದ ಡಿವೈಎಸ್‌ಪಿ ಮಹಾಂತೇಶ ಸಜ್ಜನ, ಮಟ್ಕಾ ದಂಧೆಯಲ್ಲಿ ನಿರಂತರವಾಗಿ ಭಾಗಿಯಾಗುವವರ ವಿರುದ್ಧ ಗಡಿಪಾರು ಕ್ರಮ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಜನವರಿ 2026ರಲ್ಲಿ ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯ ಡಂಬಳ ‌ಗ್ರಾಮದ ಬಸವರಾಜ ತಂದೆ ಮೈಲಪ್ಪ ದೊಡ್ಡಮನಿ (21) ಎಂಬಾತನನ್ನು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಅದೇ ರೀತಿ, ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯ ವಿರುಪಾಕ್ಷಪ್ಪ ತಂದೆ ಶಂಕ್ರಪ್ಪ ಸಂಗಪ್ಪಶೆಟ್ಟರ (58) ಎಂಬಾತನನ್ನು ವಿಜಯನಗರ ಜಿಲ್ಲೆಯ ಕೊಟ್ಟೂರು ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಮೂರುಕ್ಕಿಂತ ಹೆಚ್ಚು ಮಟ್ಕಾ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿತರ ವಿರುದ್ಧ ಗಡಿಪಾರು ಶಿಕ್ಷೆ ವಿಧಿಸಲಾಗುತ್ತಿದ್ದು, ಈ ಕಠಿಣ ಕ್ರಮದಿಂದ ಜಿಲ್ಲೆಯಲ್ಲಿನ ಮಟ್ಕಾ ದಂಧೆ ಇಳಿಮುಖವಾಗುತ್ತಿದೆ ಎಂದು ಡಿವೈಎಸ್‌ಪಿ ಮಹಾಂತೇಶ ಸಜ್ಜನ ಹೇಳಿದರು.

“ಮಟ್ಕಾ ಹಾಗೂ ಅನಧಿಕೃತ ಲಾಟರಿ ದಂಧೆಯಲ್ಲಿ ಭಾಗಿಯಾಗುವವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಯಾದ ಸಿ.ಎನ್. ಶ್ರೀಧರ್ ಹೇಳಿದ್ದಾರೆ.

ಗಡಿಪಾರುಗೊಂಡ ಆರೋಪಿತರು

ಬಸವರಾಜ ತಂದೆ ಮೈಲಪ್ಪ ದೊಡ್ಡಮನಿ (21), ಸಾ: ಡಂಬಳ
ವಿಜಯನಗರ ಜಿಲ್ಲೆ, ಕೂಡ್ಲಿಗಿ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು

ವಿರುಪಾಕ್ಷಪ್ಪ ತಂದೆ ಶಂಕ್ರಪ್ಪ ಸಂಗಪ್ಪಶೆಟ್ಟರ (58), ಸಾ: ಶಿರಹಟ್ಟಿ
ವಿಜಯನಗರ ಜಿಲ್ಲೆ, ಕೊಟ್ಟೂರು ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು

ಕೈ-ಕಾಲು ಕತ್ತರಿಸಿದಾಗಷ್ಟೇ ಕಾನೂನಿನ ಭಯ ಬರುತ್ತೆ?: ಲೈಂಗಿಕ ದೌರ್ಜನ್ಯ ಪ್ರಕರಣ ವಿಚಾರಣೆ ವೇಳೆ ಹೈಕೋರ್ಟ್ ಆಕ್ರೋಶ

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ಕಾನೂನು ಭಯದ ಕೊರತೆ ಮತ್ತು ಹೆಚ್ಚುತ್ತಿರುವ ಅಪರಾಧಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ಏಕಸದಸ್ಯ ಪೀಠ, ಸಮಾಜದಲ್ಲಿ ಅಪರಾಧಗಳ ಪ್ರಮಾಣ ಹೆಚ್ಚುತ್ತಿರುವ ಕುರಿತು ಕಟು ಟೀಕೆ ಮಾಡಿದೆ.

ವಿಚಾರಣೆ ವೇಳೆ ನ್ಯಾಯಮೂರ್ತಿಗಳು, “ಜನರು ಅತ್ಯಂತ ಸುಲಭವಾಗಿ ಅಪರಾಧಗಳನ್ನು ಎಸಗುತ್ತಿದ್ದಾರೆ. ಬಹುಶಃ ಯಾರಾದರೂ ತಪ್ಪು ಮಾಡಿದಾಗ ಕೈ ಅಥವಾ ಕಾಲು ಕತ್ತರಿಸಿದರೆ ಮಾತ್ರ ಕಾನೂನಿನ ಮಹತ್ವ ಜನರಿಗೆ ಅರ್ಥವಾಗಬಹುದು” ಎಂದು ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದರೆಂದು ವರದಿಯಾಗಿದೆ. ಅತ್ಯಾಚಾರ, ಕೊಲೆ ಸೇರಿದಂತೆ ಗಂಭೀರ ಅಪರಾಧಗಳು ಹೆಚ್ಚುತ್ತಿರುವುದಕ್ಕೆ ಕಾನೂನಿನ ಭಯದ ಕೊರತೆಯೇ ಪ್ರಮುಖ ಕಾರಣ ಎಂದು ಅವರು ಸೂಚಿಸಿದರು.

“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವುದರಿಂದ ಹಲವರು ಕಾನೂನನ್ನು ಲಘುವಾಗಿ ಪರಿಗಣಿಸುತ್ತಿದ್ದಾರೆ. ಅಪರಾಧಿಗಳನ್ನು ಕಠಿಣವಾಗಿ ಎದುರಿಸದ ಕಾರಣ ಕಾನೂನು ತನ್ನ ಪರಿಣಾಮಕಾರಿತ್ವವನ್ನು ಕಳೆದುಕೊಳ್ಳುತ್ತಿದೆ” ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಜೊತೆಗೆ ಕೆಲವು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕಠಿಣ ಶಿಕ್ಷಾ ಕ್ರಮಗಳಿರುವುದರಿಂದ ಅಪರಾಧ ಪ್ರಮಾಣ ಕಡಿಮೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದೆ.

ಪ್ರಕರಣದ ಹಿನ್ನೆಲೆ

ಪ್ರಕರಣದ ಆರೋಪಿಯು ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ತನ್ನ ಸಹಪಾಠಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿದ್ದಾನೆ. ದೂರಿನ ಪ್ರಕಾರ, 2023ರ ಜುಲೈನಲ್ಲಿ ಯುವತಿಯೊಂದಿಗೆ ಪರಿಚಯ ಬೆಳೆಸಿಕೊಂಡಿದ್ದ ಆರೋಪಿ, ಸೆಪ್ಟೆಂಬರ್ 12, 2023ರಂದು ಆಕೆಯನ್ನು ತನ್ನ ಅಪಾರ್ಟ್‌ಮೆಂಟ್‌ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.

ಘಟನೆಯ ನಂತರ ಮಾನಸಿಕ ಆಘಾತಕ್ಕೊಳಗಾದ ಯುವತಿ ಚಿಕಿತ್ಸೆ ಪಡೆದು ಬಳಿಕ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ನಂತರ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

ಜಾಮೀನು ಅರ್ಜಿ ಮುಂದೂಡಿಕೆ

ಆರೋಪಿ ಪರ ವಕೀಲರು, “ನನ್ನ ಕಕ್ಷಿದಾರ ಈಗಾಗಲೇ ಎರಡು ತಿಂಗಳಿಂದ ಜೈಲಿನಲ್ಲಿದ್ದು, ಇದರಿಂದ ಆತನ ಭವಿಷ್ಯ ಮತ್ತು ವೃತ್ತಿಜೀವನಕ್ಕೆ ಹಾನಿಯಾಗುತ್ತಿದೆ” ಎಂದು ವಾದಿಸಿ ಜಾಮೀನು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, “ಆತ ಇನ್ನೂ ಕೆಲವು ದಿನ ಜೈಲಿನಲ್ಲಿರಲಿ. ಒಂದು ವೇಳೆ ವಿಚಾರಣಾ ನ್ಯಾಯಾಲಯ ಆತನನ್ನು ಅಪರಾಧಿ ಎಂದು ಘೋಷಿಸಿದರೆ, ಮತ್ತೆ ಜೈಲಿಗೇ ಹೋಗಬೇಕಾಗುತ್ತದೆ” ಎಂದು ಮೌಖಿಕವಾಗಿ ಹೇಳಿ, ಜಾಮೀನು ಅರ್ಜಿಯ ವಿಚಾರಣೆಯನ್ನು ಜೂನ್ 8ಕ್ಕೆ ಮುಂದೂಡಿದೆ.

ಗಮನಿಸಬೇಕಾದ ಸಂಗತಿಯೆಂದರೆ, ನ್ಯಾಯಾಲಯದ ಮೌಖಿಕ ಅಭಿಪ್ರಾಯಗಳು ಮತ್ತು ಅಂತಿಮ ಲಿಖಿತ ಆದೇಶಗಳು ಒಂದೇ ಆಗಿರಬೇಕೆಂಬ ನಿಯಮವಿಲ್ಲ. ಪ್ರಕರಣದ ಅಂತಿಮ ತೀರ್ಮಾನವು ವಿಚಾರಣೆ ಮತ್ತು ಸಾಕ್ಷ್ಯಾಧಾರಗಳ ಆಧಾರದ ಮೇಲೆ ನ್ಯಾಯಾಲಯದ ಅಧಿಕೃತ ಆದೇಶದಲ್ಲಿ ನಿರ್ಧಾರವಾಗಲಿದೆ.

₹1,413 ಕೋಟಿ ಆಸ್ತಿ ಘೋಷಿಸಿದ ಡಿಕೆ ಶಿವಕುಮಾರ್: ದೇಶದ ಶ್ರೀಮಂತ ಸಿಎಂ ಆಗಲಿರುವ ಕಾಂಗ್ರೆಸ್ ನಾಯಕ

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್ ಅವರು ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಚುನಾವಣಾ ಅಫಿಡವಿಟ್‌ಗಳಲ್ಲಿ ಘೋಷಿಸಿರುವ ಆಸ್ತಿ ವಿವರಗಳ ಪ್ರಕಾರ, ಅವರು ಇತರ ರಾಜ್ಯಗಳ ಮುಖ್ಯಮಂತ್ರಿಗಳನ್ನು ಹಿಂದಿಕ್ಕಿದ್ದಾರೆ.

2023ರ ವಿಧಾನಸಭೆ ಚುನಾವಣೆಯ ವೇಳೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಡಿ.ಕೆ. ಶಿವಕುಮಾರ್ ಅವರು ಒಟ್ಟು 1,413 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದರು. ಇದರಲ್ಲಿ 273 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಹಾಗೂ 1,140 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಸೇರಿದೆ. ಜೊತೆಗೆ ತಮ್ಮ ಮೇಲೆ 265 ಕೋಟಿ ರೂಪಾಯಿಗೂ ಅಧಿಕ ಸಾಲವಿರುವುದಾಗಿ ಉಲ್ಲೇಖಿಸಿದ್ದರು.

ಶಿಕ್ಷಣ, ರಿಯಲ್ ಎಸ್ಟೇಟ್ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ಹೂಡಿಕೆ

ಡಿಕೆ ಶಿವಕುಮಾರ್ ಅವರ ಆಸ್ತಿಯಲ್ಲಿ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿನ ಭೂಮಿ, ವಾಣಿಜ್ಯ ಕಟ್ಟಡಗಳು, ಶಿಕ್ಷಣ ಸಂಸ್ಥೆಗಳು ಹಾಗೂ ರಿಯಲ್ ಎಸ್ಟೇಟ್ ಹೂಡಿಕೆಗಳು ಪ್ರಮುಖವಾಗಿವೆ. ಶಿಕ್ಷಣ ಕ್ಷೇತ್ರದಲ್ಲಿನ ಸಂಸ್ಥೆಗಳು, ಜಮೀನುಗಳು ಮತ್ತು ವಿವಿಧ ಉದ್ಯಮಗಳಲ್ಲಿ ಹೂಡಿಕೆ ಅವರ ಆಸ್ತಿ ಮೌಲ್ಯವನ್ನು ಗಣನೀಯವಾಗಿ ಹೆಚ್ಚಿಸಿವೆ.

ಇತರ ಸಿಎಂಗಳಿಗಿಂತ ಮುಂಚೂಣಿಯಲ್ಲಿ ಡಿಕೆಶಿ

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು 2024ರ ಚುನಾವಣಾ ಅಫಿಡವಿಟ್‌ನಲ್ಲಿ ಸುಮಾರು 931 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದರು. ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಸುಮಾರು 648 ಕೋಟಿ ರೂಪಾಯಿ ಆಸ್ತಿ ಹೊಂದಿರುವುದಾಗಿ ದಾಖಲೆಗಳಲ್ಲಿ ಉಲ್ಲೇಖಿಸಿದ್ದಾರೆ.

ಆದರೆ 1,413 ಕೋಟಿ ರೂಪಾಯಿ ಘೋಷಿತ ಆಸ್ತಿಯೊಂದಿಗೆ ಡಿ.ಕೆ. ಶಿವಕುಮಾರ್ ಅವರು ಈ ಇಬ್ಬರು ಮುಖ್ಯಮಂತ್ರಿಗಳಿಗಿಂತಲೂ ಮುನ್ನಡೆ ಸಾಧಿಸಿ ದೇಶದ ಶ್ರೀಮಂತ ಮುಖ್ಯಮಂತ್ರಿ ಪಟ್ಟಿಗೆ ಏರಿದ್ದಾರೆ.

ದೇಶದ ಶ್ರೀಮಂತ ಶಾಸಕ ಯಾರು?

ದೇಶದ ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಮಹಾರಾಷ್ಟ್ರದ ಘಾಟ್ಕೋಪರ್ ಪೂರ್ವ ಕ್ಷೇತ್ರದ ಶಾಸಕ ಪರಾಗ್ ಶಾ ಅಗ್ರಸ್ಥಾನದಲ್ಲಿದ್ದಾರೆ. ಅವರು 2024ರ ಚುನಾವಣೆಗೆ ಮುನ್ನ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ 3,383 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದರು.

ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯಲಿರುವ ಡಿ.ಕೆ. ಶಿವಕುಮಾರ್ ಅವರು ರಾಜಕೀಯ ನಾಯಕತ್ವದ ಜೊತೆಗೆ ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಎಂಬ ವಿಶೇಷ ಗುರುತಿನೊಂದಿಗೆ ಅಧಿಕಾರ ಸ್ವೀಕರಿಸಲು ಸಜ್ಜಾಗಿದ್ದಾರೆ.

ಮಹದೇವಪುರದಲ್ಲಿ ಮಳೆಯ ಅಬ್ಬರ: ಧರೆಗೆ ಉರುಳಿದ ಬೃಹತ್ ಮರ – ನೆಲಕ್ಕಪ್ಪಳಿಸಿದ ವಿದ್ಯುತ್ ಕಂಬ!

ಮಹದೇವಪುರ: ನಿರಂತರ ಮಳೆಯ ಆರ್ಭಟದ ನಡುವೆ ಮಹದೇವಪುರ ಕ್ಷೇತ್ರದ ಕುಂದಲಹಳ್ಳಿ ಕಾಲೋನಿಯಲ್ಲಿ ಬೃಹತ್ ಮರವೊಂದು ಧರೆಗೆ ಉರುಳಿದ ಪರಿಣಾಮ ಎರಡು ಕಾರುಗಳು ಜಖಂಗೊಂಡ ಘಟನೆ ನಡೆದಿದೆ.

ಕುಂದಲಹಳ್ಳಿ ಕಾಲೋನಿಯ 3ನೇ ಕ್ರಾಸ್‌ನಲ್ಲಿ ನಡೆದ ಈ ಘಟನೆಯಲ್ಲಿ ಮರ ಬಿದ್ದ ರಭಸಕ್ಕೆ ವಿದ್ಯುತ್ ಕಂಬವೂ ನೆಲಕ್ಕಪ್ಪಳಿಸಿದೆ. ಘಟನೆಯ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಎರಡು ಕಾರುಗಳಿಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಭಾರಿ ಮಳೆ ಹಾಗೂ ಗಾಳಿಯ ಪರಿಣಾಮ ಮರ ಧರೆಗುರುಳಿರುವ ಸಾಧ್ಯತೆ ಇದ್ದು, ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆಯೇ ಜಿಬಿಎ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೃಹತ್ ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿದರು.

ಮರ ಹಾಗೂ ವಿದ್ಯುತ್ ಕಂಬ ಬಿದ್ದ ಪರಿಣಾಮ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು, ಮಳೆಗಾಲದಲ್ಲಿ ಅಪಾಯಕಾರಿಯಾಗಿರುವ ಮರಗಳನ್ನು ಗುರುತಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

error: Content is protected !!