Home Blog

ಶಾಂತಿ-ಸೌಹಾರ್ದತೆಯಿಂದ ಬಕ್ರೀದ್ ಆಚರಿಸಿ: ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಜಿ. ಸುಬ್ಬಾಪೂರಮಠ

ವಿಜಯಸಾಕ್ಷಿ ಸುದ್ದಿ, ಮುಳಗುಂದ: ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸುವುದರ ಜೊತೆಗೆ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಜಿ. ಸುಬ್ಬಾಪೂರಮಠ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, “ಮುಳಗುಂದ ಪಟ್ಟಣವು ಶಾಂತಿ ಮತ್ತು ಸೌಹಾರ್ದತೆಗೆ ಹೆಸರಾಗಿದ್ದು, ಇಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಎಲ್ಲಾ ಹಬ್ಬ ಹರಿದಿನಗಳನ್ನು ಪರಸ್ಪರ ಸಹಕಾರದಿಂದ ಆಚರಿಸುತ್ತಿದ್ದಾರೆ” ಎಂದು ಹೇಳಿದರು.
“ಗೋವುಗಳ ಹತ್ಯೆ ಅಥವಾ ಅಕ್ರಮ ಸಾಗಾಟ ಕಂಡು ಬಂದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಅಪರಾಧ ಪ್ರಕರಣ ದಾಖಲಾಗುತ್ತದೆ. ತಪ್ಪಿತಸ್ಥರು ಶಿಕ್ಷೆಗೆ ಗುರಿಯಾಗುತ್ತಾರೆ. ಆದ್ದರಿಂದ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದರ ಜೊತೆಗೆ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು” ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಪಿಎಸ್‌ಐ ಡಿ.ಎಂ. ಮುಲ್ಲಾ, ಸುಧಾ ಹಲಕಿ, ಮುಖಂಡರಾದ ಎ.ಡಿ. ಮುಜಾವಾರ, ದಾವಲಸಾಬ ಲಕ್ಷ್ಮೇಶ್ವರ, ದಾವೂದ್ ಜಮಾಲಸಾಬನವರ, ಲಾಲಾಸಾಬಪೀರ ಮಕಾಂದಾರ, ಮುನ್ನಾ ಡಾಲಾಯತ, ಎಂ.ಎ. ನದ್ದಿಮುಲ್ಲಾ, ಇಸಾಕ್ ಹೊಸಮನಿ, ರಾಜೇಸಾಬ ಸೈಯದಬಡೆ, ಜಾಫರ್ ಭದ್ರಾಪೂರ, ಖಲಂದರ ಗಾಡಿ ಹಾಗೂ ರಮೇಶ್ ಮ್ಯಾಗೇರಿ ಉಪಸ್ಥಿತರಿದ್ದರು.

IPL 2026: ಆರ್‌ಸಿಬಿಗೆ ಬಿಗ್ ರಿಲೀಫ್; ತಂಡಕ್ಕೆ ಸ್ಟಾರ್‌ ಆಟಗಾರ ರಿಟರ್ನ್‌!

ಐಪಿಎಲ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಪ್ರಮುಖ ಆರಂಭಿಕ ಆಟಗಾರ ಫಿಲ್ ಸಾಲ್ಟ್ ವಾಪಸ್ಸಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಎಡಗೈ ಬೆರಳಿನ ಗಾಯಕ್ಕೆ ಒಳಗಾಗಿ ಕೆಲವು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಅವರು ಇದೀಗ ಚೇತರಿಸಿಕೊಂಡಿದ್ದು, ಈ ವಾರಾಂತ್ಯದಲ್ಲಿ ತಂಡಕ್ಕೆ ಮರಳಲಿದ್ದಾರೆ ಎನ್ನಲಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಬೌಂಡರಿ ತಡೆಯಲು ಹೋಗಿ ಫಿಲ್ ಸಾಲ್ಟ್ ಗಾಯಕ್ಕೆ ತುತ್ತಾಗಿದ್ದರು. ಗಾಯದ ನಂತರ ಅವರು ಇಂಗ್ಲೆಂಡ್‌ಗೆ ಮರಳಿದ್ದರೆ, ಅವರ ಸ್ಥಾನಕ್ಕೆ ಜಾಕೋಬ್ ಬೆಥೆಲ್ ತಂಡದಲ್ಲಿ ಅವಕಾಶ ಪಡೆದಿದ್ದರು.

ಈಗ ಸಾಲ್ಟ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಭಾರತಕ್ಕೆ ವಾಪಸ್ ಆಗುವುದು ಖಚಿತವಾಗಿದೆ. ಆದರೆ ಶುಕ್ರವಾರ ಹೈದರಾಬಾದ್ (SRH) ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಅವರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಾಣಿಸಿಕೊಳ್ಳುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ತಂಡದ ಮೂಲಗಳು ತಿಳಿಸಿವೆ.

ಸಾಲ್ಟ್ ಗಾಯಕ್ಕಿಂತ ಮುನ್ನ 6 ಪಂದ್ಯಗಳಲ್ಲಿ ಆಡಿದ್ದು, 168.33ರ ಸ್ಟ್ರೈಕ್ ರೇಟ್‌ನಲ್ಲಿ 202 ರನ್ ಕಲೆಹಾಕಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 36 ಎಸೆತಗಳಲ್ಲಿ 78 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದು, ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಪಾತ್ರರಾಗಿದ್ದರು.

ಇದೇ ವೇಳೆ ಅಂಕಪಟ್ಟಿಯಲ್ಲಿ 18 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿರುವ ಆರ್‌ಸಿಬಿ, ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿದರೆ ಕ್ವಾಲಿಫೈಯರ್-1 ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ. ಉತ್ತಮ ನೆಟ್ ರನ್‌ರೇಟ್ ಕಾಯ್ದುಕೊಳ್ಳುವುದು ಕೂಡ ತಂಡಕ್ಕೆ ಮುಖ್ಯವಾಗಿದೆ.

ಮತ್ತೊಂದೆಡೆ ಸನ್‌ರೈಸರ್ಸ್ ಹೈದರಾಬಾದ್ ಕೂಡ ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಜಯ ಸಾಧಿಸಿ ಆತ್ಮವಿಶ್ವಾಸದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಪಂದ್ಯ ತೀವ್ರ ಪೈಪೋಟಿಯ ನಿರೀಕ್ಷೆ ಹುಟ್ಟಿಸಿದೆ.

ಮಳೆಯ ಅಬ್ಬರಕ್ಕೆ ಚಿಕ್ಕಮಗಳೂರು ತತ್ತರ: ನೀರಿನಿಂದ ಮುಳುಗಿದ ರಸ್ತೆ–ಅಂಡರ್‌ಪಾಸ್!

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಭಾರಿ ಮಳೆಯ ಪರಿಣಾಮ ಹಲವು ಕಡೆ ಅವಾಂತರಗಳು ಸಂಭವಿಸಿರುವ ಘಟನೆ ವರದಿಯಾಗಿದೆ.

ಕಡೂರು ಮತ್ತು ಬೀರೂರು ಭಾಗಗಳಲ್ಲಿ ಸುರಿದ ನಿರಂತರ ಮಳೆಯಿಂದ ರಸ್ತೆಗಳು ಹಾಗೂ ರೈಲ್ವೆ ಅಂಡರ್‌ಪಾಸ್‌ಗಳು ಜಲಾವೃತಗೊಂಡು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದ್ದಾರೆ.

ಕಡೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ರಸ್ತೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಇದೇ ವೇಳೆ ಬಸವೇಶ್ವರ ಸರ್ಕಲ್ ಪ್ರದೇಶ ಕೆರೆಯಂತಾಗಿ ಮಾರ್ಪಟ್ಟಿದ್ದು, ಸ್ಥಳೀಯರಿಗೆ ಓಡಾಟ ಕಷ್ಟಕರವಾಗಿದೆ.

ಇನ್ನು ಕಡೂರು–ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ 173ರ ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ತುಂಬಿಕೊಂಡ ಪರಿಣಾಮ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಅನೇಕ ವಾಹನಗಳು ನೀರಿನಲ್ಲಿ ಸಿಲುಕಿಕೊಂಡು ಸವಾರರು ಪರದಾಡಿದ ಘಟನೆ ನಡೆದಿದೆ.

ಸ್ಥಳೀಯರು ತಕ್ಷಣ ನೀರು ತೆರವುಗೊಳಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದು, ಮುಂದಿನ ಮಳೆ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಆತಂಕ ವ್ಯಕ್ತವಾಗಿದೆ.

“ಹೆಸ್ಕಾಂ ಅಧಿಕಾರಿ ವಿರುದ್ಧ ಗುತ್ತಿಗೆದಾರರ ಆಕ್ರೋಶ!”

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಹೆಸ್ಕಾಂ ಕಾರ್ಯ ಮತ್ತು ಪಾಲನೆ ಉಪವಿಭಾಗ ಕಚೇರಿಯಲ್ಲಿ ತಾಂತ್ರಿಕ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವ ಗುರುರಾಜ್ ಸಿ. ಅವರನ್ನು ತಕ್ಷಣ ಬೇರಡೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲ್ಲೂಕು ಸಂಘದ ಸದಸ್ಯರು ಸೋಮವಾರ ಹೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಕಲ್ಯಾಣಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷ ಶರಣಪ್ಪ ಸೂರಣಗಿ ಮಾತನಾಡಿ, ಗ್ರಾಹಕರು ವಿದ್ಯುತ್ ಸಂಪರ್ಕಕ್ಕಾಗಿ ಸಲ್ಲಿಸುವ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಮಂಜೂರಾತಿಗೆ ಕಳುಹಿಸುವ ಬದಲು ತಾಂತ್ರಿಕ ಸಹಾಯಕ ಗುರುರಾಜ್ ಸಿ. ಅವರು ಮೇಲಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅಧಿಕೃತ ವಿದ್ಯುತ್ ಗುತ್ತಿಗೆದಾರರಾದ ನಮಗೆ ಹಾಗೂ ಗ್ರಾಹಕರಿಗೆ ವಿನಾಕಾರಣ ತೊಂದರೆ ನೀಡಿ ಕಡತಗಳನ್ನು ತಿರಸ್ಕರಿಸಲಾಗುತ್ತಿದೆ. ಸಣ್ಣಪುಟ್ಟ ನೆಪ ಹೇಳಿ ಕೆಲಸ ವಿಳಂಬ ಮಾಡುತ್ತಿರುವುದರಿಂದ ಗುತ್ತಿಗೆದಾರರ ಬದುಕೇ ಸಂಕಷ್ಟಕ್ಕೆ ಸಿಲುಕಿದೆ ಎಂದು ದೂರಿದರು.

ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಸುಮಾರು 20 ಅಧಿಕೃತ ಗುತ್ತಿಗೆದಾರರು ಕೆಇಆರ್‌ಸಿ ನಿಯಮಾನುಸಾರ ಸೇವೆ ಸಲ್ಲಿಸುತ್ತಿದ್ದು, ತಾಂತ್ರಿಕ ಪರಿಶೀಲನೆಗಾಗಿ ಸಲ್ಲಿಸುವ ದಾಖಲೆಗಳನ್ನು ಉದ್ದೇಶಪೂರ್ವಕವಾಗಿ ತಿರಸ್ಕರಿಸಲಾಗುತ್ತಿದೆ ಎಂದು ಆರೋಪಿಸಿದರು.

“ಇಂತಹ ಅಧಿಕಾರಿಯಿಂದ ನಮಗೆ ಕೆಲಸ ಸಾಧ್ಯವಾಗುತ್ತಿಲ್ಲ. ಅವರನ್ನು ತಕ್ಷಣ ಬೇರಡೆ ವರ್ಗಾವಣೆ ಮಾಡಿದರೆ ಮಾತ್ರ ಮುಂದಿನ ಕಾರ್ಯ ಮುಂದುವರಿಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿದ ಕಾರ್ಯನಿರ್ವಾಹಕ ಎಂಜಿನಿಯರ್ ಕಲ್ಯಾಣಶೆಟ್ಟಿ, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಬಳಿಕ ಗುತ್ತಿಗೆದಾರರು ಶಾಸಕ ಡಾ. ಚಂದ್ರು ಲಮಾಣಿ ಅವರನ್ನು ಭೇಟಿ ಮಾಡಿ, ಗುತ್ತಿಗೆದಾರರು ಹಾಗೂ ಗ್ರಾಹಕರಿಗೆ ತೊಂದರೆ ನೀಡುತ್ತಿರುವ ಅಧಿಕಾರಿಯನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಿ. ಆಂಜಿನಪ್ಪ, ಸಂಘದ ಉಪಾಧ್ಯಕ್ಷ ಜಗನ್ನಾಥ ಕುಲಕರ್ಣಿ, ಕಾರ್ಯದರ್ಶಿ ಸಂತೋಷ ವಸ್ತ್ರದ, ಚಂದ್ರು ನಾವಿ, ಮೆಹಬೂಬಖಾನ್ ಪಠಾಣ, ದುಂಡಪ್ಪ ಸವಣೂರ, ಅಪ್ಪಣ್ಣ ಕುಬೇರ, ದಾದಾಪೀರ್ ಮಿರ್ಜಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಗ್ರಾಹಕರಿಗೆ ಸೇವೆ ನೀಡಬೇಕಾದ ಕಚೇರಿಯೇ ವಿಳಂಬದ ಕೇಂದ್ರವಾಗಬಾರದು.”

ಶರಣಪ್ಪ ಸೂರಣಗಿ

ಜಿಲ್ಲಾ ಘಟಕದ ಉಪಾಧ್ಯಕ್ಷ

ದೇವಾಲಯದ ವಾತಾವರಣದಿಂದ ಒತ್ತಡ ಕಡಿಮೆಯಾಗುತ್ತದೆಯೇ? ಇಲ್ಲಿವೆ ಕಾರಣಗಳು

ಹಿಂದೂ ಧರ್ಮದಲ್ಲಿ ಪೂಜೆಗೆ ವಿಶೇಷ ಮಹತ್ವವಿದ್ದು, ಅನೇಕರು ಪ್ರತಿನಿತ್ಯ ಮನೆ ಹಾಗೂ ದೇವಾಲಯಗಳಲ್ಲಿ ಪೂಜೆ, ಧಾರ್ಮಿಕ ಕೈಂಕರ್ಯಗಳಲ್ಲಿ ಭಾಗವಹಿಸುತ್ತಾರೆ.

ಕೆಲವರು ಸಂಕಷ್ಟದ ಸಮಯದಲ್ಲಿ ದೇವರನ್ನು ಆಶ್ರಯಿಸುವರೆಂದರೆ, ಇನ್ನೂ ಕೆಲವರು ದಿನನಿತ್ಯ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ದೇವಾಲಯಕ್ಕೆ ಹೋಗುವುದು ಕೇವಲ ಧಾರ್ಮಿಕ ಚಟುವಟಿಕೆಯಾಗಿರದೆ, ಮಾನಸಿಕ ಮತ್ತು ದೈಹಿಕವಾಗಿ ಹಲವಾರು ಪ್ರಯೋಜನಗಳನ್ನು ನೀಡುತ್ತದೆ ಎಂದು ನಂಬಲಾಗುತ್ತದೆ. ದೇವಾಲಯದ ಶಾಂತ ವಾತಾವರಣ, ಮಂತ್ರ ಪಠಣೆ, ಶಂಖ ಹಾಗೂ ಗಂಟೆಯ ಧ್ವನಿ ಮನಸ್ಸಿಗೆ ಸಕಾರಾತ್ಮಕ ಶಕ್ತಿ ನೀಡುತ್ತದೆ.

ದೇವಾಲಯಕ್ಕೆ ಭೇಟಿ ನೀಡುವುದರಿಂದ ಲಭಿಸುವ ಪ್ರಯೋಜನಗಳು:

ಮನಸ್ಸಿಗೆ ಶಾಂತಿ ನೀಡುತ್ತದೆ:

ದೇವಾಲಯಗಳಲ್ಲಿ ಧೂಪದ್ರವ್ಯ, ದೀಪ ಬೆಳಕು, ಮಂತ್ರ ಪಠಣೆ ಮತ್ತು ಶಂಖ-ಗಂಟೆಯ ಶಬ್ದಗಳು ವಾತಾವರಣವನ್ನು ಶುದ್ಧಗೊಳಿಸಿ ಮನಸ್ಸಿಗೆ ಶಾಂತಿ ನೀಡುತ್ತವೆ. ಇದರಿಂದ ನಕಾರಾತ್ಮಕ ಆಲೋಚನೆಗಳು ಕಡಿಮೆಯಾಗುತ್ತವೆ.

ಒತ್ತಡ ಕಡಿಮೆ ಮಾಡುತ್ತದೆ:

ಮಂತ್ರ ಪಠಣೆ ಮತ್ತು ಧಾರ್ಮಿಕ ಧ್ವನಿಗಳು ಮನಸ್ಸನ್ನು ಶಾಂತಗೊಳಿಸಿ ದಿನನಿತ್ಯದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ಏಕಾಗ್ರತೆ ಹೆಚ್ಚಿಸುತ್ತದೆ:

ದೇವರ ದರ್ಶನ, ಧ್ಯಾನ ಮತ್ತು ತಿಲಕ ಧಾರಣೆ ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸಲು ಸಹಕಾರಿ ಎಂದು ನಂಬಲಾಗುತ್ತದೆ.

ದೈಹಿಕ ಚಟುವಟಿಕೆ ಮತ್ತು ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯ:

ದೇವಾಲಯಗಳಲ್ಲಿ ಬರಿಗಾಲಿನಲ್ಲಿ ನಡೆಯುವುದು ಮತ್ತು ಪ್ರದಕ್ಷಿಣೆ ಹಾಕುವುದು ಪಾದಗಳ ಒತ್ತಡ ಬಿಂದುಗಳನ್ನು ಸಕ್ರಿಯಗೊಳಿಸಿ ರಕ್ತಸಂಚಾರಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಶಕ್ತಿಯ ಮಟ್ಟ ಹೆಚ್ಚಿಸುತ್ತದೆ:

ಗಂಟೆಯ ಶಬ್ದ ಮತ್ತು ಧಾರ್ಮಿಕ ವಾತಾವರಣ ದೇಹದ ಶಕ್ತಿಯನ್ನು ಉತ್ತೇಜಿಸುತ್ತದೆ ಎಂದು ನಂಬಿಕೆ ಇದೆ.

ಸಕಾರಾತ್ಮಕ ಚಿಂತನೆ ಬೆಳೆಯುತ್ತದೆ:

ದೇವಾಲಯದ ಶಾಂತ ವಾತಾವರಣ ಮನಸ್ಸಿನ ಚಂಚಲತೆಯನ್ನು ಕಡಿಮೆ ಮಾಡಿ ಸಕಾರಾತ್ಮಕ ಭಾವನೆಗಳನ್ನು ಹೆಚ್ಚಿಸುತ್ತದೆ.

ಇದಲ್ಲದೆ, ಮಕ್ಕಳನ್ನು ದೇವಾಲಯಕ್ಕೆ ಕರೆದುಕೊಂಡು ಹೋಗುವುದರಿಂದ ಅವರು ಸಂಸ್ಕೃತಿ ಮತ್ತು ಪರಂಪರೆಯನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ಹೇಳಲಾಗುತ್ತದೆ.

ಮೋದಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆ ಕಾಯುತ್ತಿದ್ದಾರೆ: ಶರದ್ ಪವಾರ್ ಮೆಚ್ಚುಗೆ

ಮುಂಬೈ: ರಾಜಕೀಯವಾಗಿ ಭಿನ್ನಾಭಿಪ್ರಾಯಗಳು ಇದ್ದರೂ ಪ್ರಧಾನಿ ನರೇಂದ್ರ ಮೋದಿ ದೇಶದ ಗೌರವವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾಪಾಡಲು ಶ್ರಮಿಸುತ್ತಿದ್ದಾರೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯ ಭಿನ್ನಾಭಿಪ್ರಾಯಗಳು ಸಹಜವಾಗಿವೆ. ಆದರೆ ದೇಶದ ಗೌರವದ ವಿಚಾರದಲ್ಲಿ ರಾಜಕೀಯವನ್ನು ತರಬಾರದು ಎಂದು ಹೇಳಿದರು. ಪ್ರಧಾನಿ ಮೋದಿ ವಿದೇಶಗಳಲ್ಲಿ ಭಾರತದ ಪ್ರತಿಷ್ಠೆಯನ್ನು ಉಳಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ಪಿ.ವಿ. ನರಸಿಂಹರಾವ್ ಹಾಗೂ ಮನಮೋಹನ್ ಸಿಂಗ್ ಅವರು ಸಹ ದೇಶದ ಭವಿಷ್ಯ ಮತ್ತು ಗೌರವಕ್ಕೆ ಆದ್ಯತೆ ನೀಡಿದ್ದರು ಎಂದು ಪವಾರ್ ಸ್ಮರಿಸಿದರು. ದೇಶದ ಹಿತಕ್ಕಾಗಿ ಒಟ್ಟಾಗಿ ಕೆಲಸ ಮಾಡುವ ಅವಕಾಶ ಬಂದಾಗ ಎಲ್ಲರೂ ಒಂದೇ ಉದ್ದೇಶದಿಂದ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ತಮ್ಮ ರಾಜಕೀಯ ಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡ ಪವಾರ್, 1958ರಲ್ಲಿ ಬರಾಮತಿಯಿಂದ ಪುಣೆಗೆ ಬಂದ ಅನುಭವ ಹಾಗೂ ಯುವ ಕಾಂಗ್ರೆಸ್‌ನಲ್ಲಿ ಕೆಲಸ ಮಾಡಿದ ಸಂದರ್ಭಗಳನ್ನು ಹಂಚಿಕೊಂಡರು. ಇದೇ ವೇಳೆ ಮಾಜಿ ಪ್ರಧಾನಿ ಜವಹರಲಾಲ್ ನೆಹರೂ ಅವರನ್ನು ಭೇಟಿಯಾದ ಕ್ಷಣವನ್ನೂ ಅವರು ಸ್ಮರಿಸಿದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕುರಿತು ಮಾತನಾಡಿದ ಪವಾರ್, ವಿದೇಶ ಪ್ರವಾಸದ ವೇಳೆ ಭಾರತದ ಗೌರವಕ್ಕೆ ಧಕ್ಕೆಯಾಗುವ ಯಾವುದೇ ವರ್ತನೆಯನ್ನು ಅವರು ಒಪ್ಪಿಕೊಳ್ಳುತ್ತಿರಲಿಲ್ಲ ಎಂದು ಹೇಳಿದರು.

ಸಫಾರಿಗಳಲ್ಲಿ ಇನ್ಮುಂದೆ ತೆರೆದ ವಾಹನಗಳಿಗೆ ಅವಕಾಶ ಇಲ್ಲ: ಸಚಿವ ಈಶ್ವರ ಖಂಡ್ರೆ

ಬೆಂಗಳೂರು: ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳು ಹಾಗೂ ವನ್ಯಜೀವಿಧಾಮಗಳಲ್ಲಿ ನಡೆಯುವ ಸಫಾರಿಗಳಲ್ಲಿ ಇನ್ಮುಂದೆ ತೆರೆದ ಕ್ಯಾಂಪರ್ ವಾಹನಗಳ ಬದಲಿಗೆ ಸುರಕ್ಷಿತ ಬಸ್‌ಗಳನ್ನು ಬಳಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.

ದುಬಾರೆ ಆನೆ ಶಿಬಿರದಲ್ಲಿ ಎರಡು ಸಾಕಾನೆಗಳ ಕಾಳಗದ ವೇಳೆ ಪ್ರವಾಸಿ ಮಹಿಳೆ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಸಫಾರಿಗಳಲ್ಲಿ ಪ್ರವಾಸಿಗರ ಸುರಕ್ಷತೆ ಕುರಿತು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಅರಣ್ಯ ಸಚಿವರು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ನಿರ್ದೇಶನ ನೀಡಿದ್ದಾರೆ.

ರಾಜ್ಯದ ಬಂಡೀಪುರ, ನಾಗರಹೊಳೆ, ಕಾಳಿ, ಬಿಳಿಗಿರಿರಂಗನಬೆಟ್ಟ ಹಾಗೂ ಭದ್ರಾ ಹುಲಿ ಸಂರಕ್ಷಿತ ಪ್ರದೇಶಗಳ ಜೊತೆಗೆ ಮಲೆ ಮಹದೇಶ್ವರ ಬೆಟ್ಟ, ದಾಂಡೇಲಿ, ಕೆ.ಗುಡಿ ಸೇರಿದಂತೆ ವಿವಿಧ ವನ್ಯಜೀವಿಧಾಮಗಳಲ್ಲಿ ಸಫಾರಿ ವ್ಯವಸ್ಥೆ ಇದೆ. ಈ ಸ್ಥಳಗಳಿಗೆ ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ದೇಶ-ವಿದೇಶಗಳಿಂದಲೂ ಪ್ರವಾಸಿಗರು ಹಾಗೂ ವನ್ಯಜೀವಿ ಪ್ರಿಯರು ಭೇಟಿ ನೀಡುತ್ತಾರೆ.

ಇದುವರೆಗೆ ಸಫಾರಿ ವೇಳೆ ಆನೆ, ಹುಲಿ ಸೇರಿದಂತೆ ಯಾವುದೇ ವನ್ಯಮೃಗಗಳು ವಾಹನಗಳ ಮೇಲೆ ದಾಳಿ ನಡೆಸಿ ಜೀವಹಾನಿ ಮಾಡಿದ ಘಟನೆಗಳು ವರದಿಯಾಗಿಲ್ಲ. ಆದರೂ ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಸಚಿವರು ತಿಳಿಸಿದ್ದಾರೆ.

ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇನ್ಮುಂದೆ ಸಂಪೂರ್ಣ ಸುರಕ್ಷಿತ ಬಸ್ ಸಫಾರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿದೆ. ಪ್ರಸ್ತುತ ಬಳಕೆಯಲ್ಲಿರುವ ಕ್ಯಾಂಪರ್ ವಾಹನಗಳಿಗೆ ಕಬ್ಬಿಣದ ಜಾಲರಿ ಅಥವಾ ಒಡೆಯಲಾಗದ ಗಾಜು ಅಳವಡಿಸಿ ಸುರಕ್ಷತಾ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಅದೇ ರೀತಿ ಯಾವುದೇ ಪ್ರವಾಸಿಗರು ಅರಣ್ಯದೊಳಗೆ ವಾಹನದಿಂದ ಇಳಿಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪ್ರತಿಯೊಂದು ಸಫಾರಿ ವಾಹನದಲ್ಲೂ ಪ್ರಥಮ ಚಿಕಿತ್ಸಾ ಕಿಟ್ ಇರಬೇಕು ಹಾಗೂ ಸಫಾರಿ ಕೇಂದ್ರಗಳ ಸಮೀಪ ಅಂಬುಲೆನ್ಸ್ ವ್ಯವಸ್ಥೆ ಕಡ್ಡಾಯವಾಗಿರಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.

ಎಬೋಲಾಗೆ 136 ಮಂದಿ ಬಲಿ: ಮಾರಕ ಸೋಂಕಿನ ಬಗ್ಗೆ WHO ಕಳವಳ

ಕಿನ್ಶಾಸ: ಆಫ್ರಿಕಾ ಖಂಡದ ಕಾಂಗೋ ದೇಶದಲ್ಲಿ ಎಬೋಲಾ ಸೋಂಕಿನ ಭೀತಿ ಮತ್ತಷ್ಟು ಹೆಚ್ಚಾಗಿದ್ದು, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 136ಕ್ಕೆ ಏರಿಕೆಯಾಗಿದೆ. ಸೋಂಕಿನ ವೇಗದ ಹರಡುವಿಕೆ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತೀವ್ರ ಕಳವಳ ವ್ಯಕ್ತಪಡಿಸಿದೆ.

ಈ ಕುರಿತು ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಎಬೋಲಾ ಸೋಂಕನ್ನು ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸಲಾಗುವುದಿಲ್ಲ. ಸೋಂಕಿನ ಹರಡುವಿಕೆ ಪ್ರಮಾಣ ಮತ್ತು ವೇಗ ಆತಂಕಕಾರಿ ಮಟ್ಟದಲ್ಲಿದೆ ಎಂದು ತಿಳಿಸಿದ್ದಾರೆ.

2014ರಿಂದ 2016ರ ಅವಧಿಯಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ಕಾಣಿಸಿಕೊಂಡಿದ್ದ ಜೈರ್ ತಳಿಯ ವೈರಸ್‌ನಿಗಿಂತ ಭಿನ್ನ ಸ್ವರೂಪದ ಸೋಂಕು ಇದಾಗಿದ್ದು, ಸದ್ಯಕ್ಕೆ ಇದಕ್ಕೆ ಯಾವುದೇ ಲಸಿಕೆ ಲಭ್ಯವಿಲ್ಲ ಎಂದು ಹೇಳಲಾಗಿದೆ.

ಮೊದಲಿಗೆ ಇಟುರಿ ಪ್ರಾಂತ್ಯದಲ್ಲಿ ಕಾಣಿಸಿಕೊಂಡಿದ್ದ ಸೋಂಕು ಈಗ ನೆರೆಯ ಉತ್ತರ ಕಿವು ಪ್ರಾಂತ್ಯಕ್ಕೂ ವ್ಯಾಪಿಸಿದೆ. ಸೋಂಕಿನ ಭೀತಿಯಿಂದಾಗಿ ಒಂದು ಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ಎನ್ನಲಾಗಿದೆ.

ಪರಿಸ್ಥಿತಿ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ ನೆರೆಯ ರಾಷ್ಟ್ರಗಳಾದ ರುವಾಂಡಾ, ಬರುಂಡಿ ಹಾಗೂ ಟಾಂಜಾನಿಯಾ ದೇಶಗಳು ಗಡಿ ತಪಾಸಣೆ, ಆರೋಗ್ಯ ಕಣ್ಗಾವಲು ಮತ್ತು ತುರ್ತು ಸಿದ್ಧತಾ ಕ್ರಮಗಳನ್ನು ಬಿಗಿಗೊಳಿಸಿವೆ.

ಆಫ್ರಿಕಾ ರೋಗ ನಿಯಂತ್ರಣ ಕೇಂದ್ರಗಳು ಈ ಪರಿಸ್ಥಿತಿಯನ್ನು ಖಂಡದ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿವೆ. ಲಸಿಕೆ ಲಭ್ಯವಿಲ್ಲದಿರುವ ಕಾರಣ ವೈರಸ್ ಹರಡುವಿಕೆ ತಡೆಯಲು ಕಾಂಗೋ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಟೆಡ್ರೊಸ್ ತಿಳಿಸಿದ್ದಾರೆ.

ಕಾಂಗೋ ಆರೋಗ್ಯ ಸಚಿವ ರೋಜರ್ ಕಂಬಾ ಮಾಹಿತಿ ನೀಡಿದ್ದು, ದೇಶಾದ್ಯಂತ 543 ಶಂಕಿತ ಪ್ರಕರಣಗಳು ಪತ್ತೆಯಾಗಿವೆ. ಅವುಗಳಲ್ಲಿ 32 ಪ್ರಕರಣಗಳು ಪ್ರಯೋಗಾಲಯ ಪರೀಕ್ಷೆಯಲ್ಲಿ ದೃಢಪಟ್ಟಿವೆ. ಪ್ರಸ್ತುತ 69 ಮಂದಿ ಎಬೋಲಾ ಚಿಕಿತ್ಸಾ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

‘ಹಿಜಾಬ್’ ಬೆನ್ನಲ್ಲೇ ಕರಾವಳಿಯಲ್ಲಿ ಮತ್ತೆ ಕೇಸರಿ ಶಾಲು ಕಾವು: ಬೀದಿಗಿಳಿಯಲು ವಿಹೆಚ್‌ಪಿ ಸಜ್ಜು

0

ಮಂಗಳೂರು: ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿದ ವಿಚಾರ ಕರಾವಳಿಯಲ್ಲಿ ಮತ್ತೆ ಹೊಸ ವಿವಾದಕ್ಕೆ ಕಾರಣವಾಗಿದೆ. ಕೇಸರಿ ಶಾಲು ಧರಿಸುವ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ನೀಡುವುದಾಗಿ ವಿಶ್ವ ಹಿಂದೂ ಪರಿಷತ್ ಘೋಷಣೆ ಮಾಡಿದ್ದು, ಮತ್ತೆ ಧರ್ಮೀಯ ಉದ್ವಿಗ್ನತೆ ಹೆಚ್ಚುವ ಸಾಧ್ಯತೆ ಕಂಡುಬಂದಿದೆ.

ಕೆಲ ವಾರಗಳಲ್ಲಿ ಶಾಲಾ-ಕಾಲೇಜುಗಳು ಆರಂಭವಾಗಲಿದ್ದು, ಹಿಂದಿನ ವರ್ಷಗಳಂತೆ ಈ ಬಾರಿ ಕೂಡ ‘ಹಿಜಾಬ್ ವಿರುದ್ಧ ಕೇಸರಿ ಶಾಲು’ ವಿವಾದ ಮರುಕಳಿಸುವ ಲಕ್ಷಣಗಳು ಕಾಣಿಸುತ್ತಿವೆ. ಈ ಹಿನ್ನೆಲೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಹೆಚ್‌ಪಿ ಮುಖಂಡರು, ಕೇಸರಿ ಶಾಲು ಧರಿಸಿ ಪ್ರತಿಭಟನೆ ನಡೆಸುವ ವಿದ್ಯಾರ್ಥಿಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಹೋರಾಟಕ್ಕೆ ಭಜರಂಗದಳ ಮತ್ತು ವಿಹೆಚ್‌ಪಿ ಬೀದಿಗಿಳಿದು ಬೆಂಬಲ ನೀಡಲು ಸಿದ್ಧವಾಗಿದೆ ಎಂದು ಸಂಘಟನೆ ಮುಖಂಡರು ಹೇಳಿದ್ದಾರೆ. ಸಂಘಟನೆಗಳ ಈ ಹೇಳಿಕೆಗಳು ಶಿಕ್ಷಣ ಸಂಸ್ಥೆಗಳ ವಾತಾವರಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ವಿಹೆಚ್‌ಪಿ ಮುಖಂಡ ಶರಣ್ ಪಂಪ್ ವೆಲ್ ಮಾತನಾಡಿ, ‘ಈ ವಿವಾದ ಈಗಾಗಲೇ ತಣ್ಣಗಾಗಿತ್ತು. ಆದರೆ ಸರ್ಕಾರದ ಹೊಸ ಆದೇಶದಿಂದ ಮತ್ತೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾದರೆ ಅದಕ್ಕೆ ನೇರ ಹೊಣೆ ಸರ್ಕಾರವೇ’ ಎಂದು ಎಚ್ಚರಿಕೆ ನೀಡಿದ್ದಾರೆ.

ಸಾಮರಸ್ಯ ಕಾಪಾಡಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ತಕ್ಷಣ ಮಧ್ಯಪ್ರವೇಶಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

‘ಡ್ರ್ಯಾಗನ್’ ಗ್ಲಿಂಪ್ಸ್‌ಗೆ ಹೊಂಬಾಳೆ ಸಂಭ್ರಮ; ಜೂ.ಎನ್ಟಿಆರ್ ಜೊತೆ ಸಿನಿಮಾ ಫಿಕ್ಸ್?

ಜೂನಿಯರ್ ಎನ್ಟಿಆರ್ ಅವರ ಜನ್ಮದಿನದಂದು ಹೊಂಬಾಳೆ ಫಿಲ್ಮ್ಸ್ ನೀಡಿದ ವಿಶೇಷ ಶುಭಾಶಯ ಸಿನಿ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ‘ಡ್ರ್ಯಾಗನ್’ ಚಿತ್ರದ ಗ್ಲಿಂಪ್ಸ್ ಬಿಡುಗಡೆ ಬಳಿಕ ಹೊಂಬಾಳೆ ಫಿಲ್ಮ್ಸ್ ಅದನ್ನು ಮೆಚ್ಚಿ ಪೋಸ್ಟ್ ಹಂಚಿಕೊಂಡಿದ್ದು, ಇದರ ಹಿಂದೆ ದೊಡ್ಡ ಸಿನಿಮಾ ಡೀಲ್ ಅಡಗಿದೆಯೇ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.

ಸಾಮಾನ್ಯವಾಗಿ ನಿರ್ಮಾಣ ಸಂಸ್ಥೆಗಳು ತಮ್ಮ ಜೊತೆ ಸಿನಿಮಾ ಮಾಡಿರುವ ಅಥವಾ ಭವಿಷ್ಯದಲ್ಲಿ ಕೆಲಸ ಮಾಡುವ ಹೀರೋಗಳಿಗೆ ಮಾತ್ರ ಈ ರೀತಿಯ ವಿಶೇಷ ಪೋಸ್ಟ್ ಮಾಡುತ್ತವೆ. ಇದೇ ಕಾರಣಕ್ಕೆ ಹೊಂಬಾಳೆ ಮತ್ತು ಜೂನಿಯರ್ ಎನ್ಟಿಆರ್ ಕಾಂಬಿನೇಷನ್ ಕುರಿತು ಹೊಸ ಊಹಾಪೋಹಗಳು ಆರಂಭವಾಗಿವೆ.

ಪ್ರಭಾಸ್ ಅಭಿನಯದ ‘ಸಲಾರ್’ ಮೂಲಕ ಈಗಾಗಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿರುವ ಹೊಂಬಾಳೆ ಫಿಲ್ಮ್ಸ್, ಈಗ ತೆಲುಗು ಚಿತ್ರರಂಗದಲ್ಲೂ ತನ್ನ ಬಲ ಹೆಚ್ಚಿಸುತ್ತಿದೆ. ಜೂನಿಯರ್ ಎನ್ಟಿಆರ್ ಜೊತೆ ಭಾರಿ ಬಜೆಟ್ ಸಿನಿಮಾ ನಿರ್ಮಾಣದ ಕುರಿತು ಮಾತುಕತೆ ನಡೆಯುತ್ತಿದೆ ಎಂಬ ವರದಿಗಳು ಹರಿದಾಡುತ್ತಿವೆ.

ಈ ಸಿನಿಮಾವನ್ನು ಯಾರು ನಿರ್ದೇಶಿಸಲಿದ್ದಾರೆ ಎಂಬ ಕುತೂಹಲವೂ ಹೆಚ್ಚಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆ ಆಗಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಇನ್ನೊಂದೆಡೆ, ರಾಮ್ ಚರಣ್ ಅಭಿನಯದ ‘ಪೆದ್ದಿ’ ಚಿತ್ರದ ಕರ್ನಾಟಕ ಹಾಗೂ ವಿದೇಶಿ ವಿತರಣೆ ಹಕ್ಕುಗಳನ್ನು ಹೊಂಬಾಳೆ ಪಡೆದುಕೊಂಡಿದೆ. ‘ಡ್ರ್ಯಾಗನ್’ ಚಿತ್ರದ ಬಿಡುಗಡೆ ಮತ್ತು ವಿತರಣೆ ಜವಾಬ್ದಾರಿಯನ್ನೂ ಹೊಂಬಾಳೆ ವಹಿಸಿಕೊಳ್ಳಬಹುದು ಎಂಬ ಚರ್ಚೆಗಳು ಸಿನಿ ವಲಯದಲ್ಲಿ ಜೋರಾಗಿವೆ.

error: Content is protected !!