Home Blog

ಹುಲಿವೇಷಗಳ ನಡುವೆ ಮೊಹರಂ ವೈಭವ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕಿನ ಚಿಂತ್ರಪಳ್ಳಿ ಗ್ರಾಮದಲ್ಲಿ ಮೊಹರಂ ಹಬ್ಬದ ಕೊನೆಯ ದಿನದ ಆಚರಣೆ ಸಡಗರ, ಸಂಭ್ರಮ ಹಾಗೂ ಧಾರ್ಮಿಕ ಭಕ್ತಿಭಾವದೊಂದಿಗೆ ನೆರವೇರಿತು. ಗ್ರಾಮದ ಮಸೀದಿಯಿಂದ ಆರಂಭವಾದ ದೇವರ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭಕ್ತರ ಗಮನ ಸೆಳೆಯಿತು.

ಮೆರವಣಿಗೆಯಲ್ಲಿ ಹುಲಿವೇಷಧಾರಿಗಳು, ಅಚ್ಚಳ್ಳಿಗಳು ಹಾಗೂ ಹಿಡಿಂಬ ವೇಷಧಾರಿಗಳು ದೇವರ ಮುಂಭಾಗದಲ್ಲಿ ಕುಣಿದು ಕುಪ್ಪಳಿಸುವ ಮೂಲಕ ಭಕ್ತಿಭಾವ ಮೆರೆದರು. ಕಹಳೆ, ಹಲಗೆ ಸೇರಿದಂತೆ ಸಾಂಪ್ರದಾಯಿಕ ತಾಳವಾದ್ಯಗಳ ನಿನಾದದ ನಡುವೆ ಮೆರವಣಿಗೆ ಸಾಗಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಮಹಿಳೆಯರು ಹಾಗೂ ಮಕ್ಕಳು ದೇವರ ಮೆರವಣಿಗೆಯ ಹಾದಿಯಲ್ಲಿ ನೀರು ಹಾಕಿ ತಮ್ಮ ಹರಕೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸಿದರು. ಮೊಹರಂ ಆಚರಣೆಯಲ್ಲಿ ಹಿಂದೂ–ಮುಸ್ಲಿಂ ಬಾಂಧವರು ಒಂದಾಗಿ ಭಾಗವಹಿಸಿ ಸೌಹಾರ್ದತೆ ಮತ್ತು ಭಾವೈಕ್ಯತೆಯ ಸಂದೇಶ ಸಾರಿದರು.

ಈ ಸಂದರ್ಭದಲ್ಲಿ ಮಸೀದಿ ಮುಖ್ಯಸ್ಥರಾದ ಹುಸೇನ್ ಸಾಬ್, ಹಸನ್ ಸಾಬ್, ಜಮಾಲ್ ಸಾಬ್, ಪುರಸಭೆ ಸದಸ್ಯ ಬಣಕಾರ್ ಸುರೇಶ್, ಗ್ರಾಮದ ಮುಖಂಡರಾದ ತಳವಾರ ಹುಲುಗಪ್ಪ, ನೇಕಾರ್ ಸುರೇಶ್, ಶೀಲಿ ಚನ್ನಪ್ಪ, ಗಂಗಾಧರ ಕೆ.ಎಂ., ಮರುಳನಗೌಡ ವಿ., ಬಾರಿಕರ ಮಾರುತಿ, ಎಂ. ಚಂದ್ರಶೇಖರ, ಬಾರಿಕರ ಶ್ರೀನಿವಾಸ, ಮುನಾಫ್ ಸಾಬ್, ಪಿಂಜಾರ್ ಸಕ್ರಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ದುಶ್ಚಟ ಮುಕ್ತ ಸಮಾಜಕ್ಕೆ ವಿದ್ಯಾರ್ಥಿಗಳೇ ಶಕ್ತಿ: ಎಎಸ್‌ಐ ಮೀನಾಕ್ಷಿ ಮಟ್ಟಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಾದಕ ವಸ್ತುಗಳ ವ್ಯಸನದಿಂದ ಮಕ್ಕಳ ಆರೋಗ್ಯ, ಕುಟುಂಬ ಹಾಗೂ ಸಮಾಜದ ಸ್ವಾಸ್ಥ್ಯ ಹದಗೆಡುತ್ತಿದ್ದು, ದುಶ್ಚಟ ಮುಕ್ತ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಎಎಸ್‌ಐ ಮೀನಾಕ್ಷಿ ಮಟ್ಟಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು. ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಗಳ ಬಗ್ಗೆ ಅರಿವು ಹೊಂದುವುದು ಅಗತ್ಯ ಎಂದರು.

ಯೋಜನೆಯ ಮೇಲ್ವಿಚಾರಕ ನಿಂಗಪ್ಪ ಪಾಟೀಲ ಮಾತನಾಡಿ, ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮದ್ಯವರ್ಜನ ಶಿಬಿರ, ಜ್ಞಾನ ವಿಕಾಸ ಹಾಗೂ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಬಿ.ಸಿ. ಪಟ್ಟೇದ ಮಾತನಾಡಿ, ಮಕ್ಕಳಲ್ಲಿ ಬಾಲ್ಯದಿಂದಲೇ ದುಶ್ಚಟಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕರು, ಸೇವಾಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

“ದುಶ್ಚಟ ಮುಕ್ತ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಾದಕ ವ್ಯಸನದಿಂದ ದೂರವಿರುವ ಸಂಕಲ್ಪ ಪ್ರತಿಯೊಬ್ಬರೂ ಮಾಡಬೇಕು.”

– ಮೀನಾಕ್ಷಿ ಮಟ್ಟಿ, ಎಎಸ್‌ಐ

ಸುಜಾತಾ ದೊಡ್ಡಮನಿ ಹುಟ್ಟುಹಬ್ಬ; ರೋಗಿಗಳಿಗೆ ಹಾಲು-ಹಣ್ಣು ವಿತರಣೆ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿಯಾಗಿದ್ದ ಸುಜಾತಾ ದೊಡ್ಡಮನಿ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗದಿಂದ ಶಿರಹಟ್ಟಿ ತಾಲೂಕು ಆಸ್ಪತ್ರೆಯ ರೋಗಿಗಳಿಗೆ ಹಾಲು, ಹಣ್ಣು ಹಾಗೂ ಬ್ರೆಡ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಸೋಮನಗೌಡ ಮರಿಗೌಡ್ರ ಮಾತನಾಡಿ, ಸುಜಾತಾ ದೊಡ್ಡಮನಿ ಅವರು ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನಗಳನ್ನು ತಂದು ಜನಸೇವೆಗೆ ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಾಲಪ್ಪ ದುಗ್ಗಾಣಿ, ಮಲ್ಲಪ್ಪ ಹುಯಿಲಗೋಳ, ಮರಿಯಪ್ಪ ಸಣ್ಣತಂಗಿಯವರ, ಮಾಬುಸಾಬ ಲಕ್ಷ್ಮೇಶ್ವರ, ಮಂಜುನಾಥ ತಳವಾರ, ಮಹದೇವಗೌಡ ಪಾಟೀಲ, ಫಕ್ಕೀರೇಶ ಬಕ್ಕಸದ, ಫಕ್ಕೀರೇಶ ಕಲ್ಯಾಣಿ, ಸಬ್‌ಜಾನಸಾಬ ಲಕ್ಷ್ಮೇಶ್ವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಳೆಗಾಗಿ ಮುಗಿಲಿನತ್ತ ರೈತರ ಚಿತ್ತ..!

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಶಿರಹಟ್ಟಿ ತಾಲೂಕಿನ ರೈತರಲ್ಲಿ ಆತಂಕ ಮನೆ ಮಾಡಿದೆ. ಮುಂಗಾರು ಪೂರ್ವ ಸುರಿದ ಮಳೆಯನ್ನು ನಂಬಿ ರೈತರು ಹೈಬ್ರಿಡ್ ಜೋಳ, ಗೋವಿನ ಜೋಳ, ತೊಗರಿ, ಹೆಸರು, ಶೇಂಗಾ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ಪೂರ್ಣಗೊಳಿಸಿದ್ದರು. ಆದರೆ ನಂತರ ಸಮರ್ಪಕ ಮಳೆಯಾಗದ ಕಾರಣ ಮೊಳಕೆಯೊಡೆದ ಬೆಳೆಗಳು ಒಣಗಲಾರಂಭಿಸಿದ್ದು, ರೈತರು ದಿನವೂ ಮುಗಿಲಿನತ್ತ ದೃಷ್ಟಿ ನೆಟ್ಟಿದ್ದಾರೆ.

ಕೆಲವೆಡೆ ಅಲ್ಪ ಪ್ರಮಾಣದ ಮಳೆಯಾದರೂ ಕೃಷಿ ಭೂಮಿಗೆ ತೇವಾಂಶ ಒದಗಿಸುವಷ್ಟು ಸುರಿಯುತ್ತಿಲ್ಲ. ಇನ್ನೊಂದೆಡೆ ಬಿತ್ತನೆ ಮಾಡದ ರೈತರು ಮಳೆಯ ನಿರೀಕ್ಷೆಯಲ್ಲೇ ಕಾಯುತ್ತಿದ್ದು, ಬಿತ್ತನೆ ಅವಧಿ ಕೈತಪ್ಪುವ ಆತಂಕ ಎದುರಿಸುತ್ತಿದ್ದಾರೆ. ಕಳೆದ ವರ್ಷವೂ ಮಳೆ ವೈಪರೀತ್ಯದಿಂದ ನಷ್ಟ ಅನುಭವಿಸಿದ್ದ ರೈತರು, ಈ ವರ್ಷವೂ ಸಾಲ ಮಾಡಿ ಬೀಜ ಮತ್ತು ಗೊಬ್ಬರ ಖರೀದಿಸಿ ಬಿತ್ತನೆ ನಡೆಸಿದ್ದಾರೆ. ಇದೀಗ ಮಳೆ ವಿಳಂಬವಾಗಿರುವುದು ಅವರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

ಮಳೆಗಾಗಿ ಶಿರಹಟ್ಟಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಗುರ್ಜಿ ಪೂಜೆ ಸೇರಿದಂತೆ ಸಾಂಪ್ರದಾಯಿಕ ಪೂಜೆ-ಪುನಸ್ಕಾರಗಳು ನಡೆಯುತ್ತಿವೆ. ಉತ್ತಮ ಮಳೆಯಾಗಿ ಬೆಳೆಗಳು ಉಳಿಯಲಿ ಎಂಬ ಆಶಯದಿಂದ ರೈತರು ವರುಣನ ಮೊರೆ ಹೋಗುತ್ತಿದ್ದಾರೆ. ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡಿರುವ ಕುಟುಂಬಗಳಲ್ಲಿ ಅನಿಶ್ಚಿತತೆಯ ವಾತಾವರಣ ನಿರ್ಮಾಣವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಕಾಶಪ್ಪನವರ, ಈಗಾಗಲೇ ಬಿತ್ತನೆ ಮಾಡಿದ ರೈತರು ಬೆಳೆ ಸಂರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹೊಸದಾಗಿ ಬಿತ್ತನೆ ಮಾಡುವವರು ಮಳೆಯಾದ ನಂತರವೇ ತೇವಾಂಶ ಪರಿಶೀಲಿಸಿ ಬಿತ್ತನೆ ಮಾಡುವುದು ಒಳಿತು ಎಂದು ಸಲಹೆ ನೀಡಿದರು.

“ಈಗಾಗಲೇ ಬಿತ್ತನೆ ಮಾಡಿದ ರೈತರು 19-19-19 ಹಾಗೂ ರಂಜಕ ಗೊಬ್ಬರ ಸಿಂಪಡಿಸಿ ಎಡೆ ಹೊಡೆಯಬೇಕು. ಹೊಸದಾಗಿ ಬಿತ್ತನೆ ಮಾಡುವವರು ಮಳೆಯಾದ ಬಳಿಕ ತೇವಾಂಶ ಪರಿಶೀಲಿಸಿ ಬಿತ್ತನೆ ಮಾಡಬೇಕು.”

– ಶಿವಕುಮಾರ ಕಾಶಪ್ಪನವರ, ಸಹಾಯಕ ಕೃಷಿ ನಿರ್ದೇಶಕರು

RSS ವಿರುದ್ಧ ಅವಹೇಳನಕಾರಿ ಪೋಸ್ಟ್! ಸಚಿವ ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಕೋರ್ಟ್‌ ಸಮನ್ಸ್‌!

ಬೆಂಗಳೂರು: ಆರ್‌ಎಸ್‌ಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ಮತ್ತು ಪೋಸ್ಟ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ಹ್ಯಾರಿಸ್ ನಲಪಾಡ್‌ಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ಬೆಂಗಳೂರು 42ನೇ ಎಸಿಜೆಎಂ ಕೋರ್ಟ್ ಜುಲೈ 21 ರಂದು ಇಬ್ಬರೂ ಖುದ್ದಾಗಿ ಹಾಜರಾಗುವಂತೆ ಆದೇಶ ನೀಡಿದೆ.

ಪ್ರಕರಣವು ಆರ್‌ಎಸ್‌ಎಸ್ ಕಾರ್ಯಕರ್ತ ಎ. ತೇಜಸ್ ಅವರು ದಾಖಲಿಸಿದ್ದ ಖಾಸಗಿ ದೂರಿಗೆ ಸಂಬಂಧಿಸಿದೆ. ದೂರಿನಲ್ಲಿ, 2025ರ ಅಕ್ಟೋಬರ್ 14 ರಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಸದಸ್ಯರ ವಿರುದ್ಧ ಟ್ವೀಟ್ ಮೂಲಕ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಅದೇ ರೀತಿ, ಯೂಟ್ಯೂಬ್ ಚಾನಲ್‌ನಲ್ಲಿ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರು ಸಹ ಸಂಘದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು, ಇದರಿಂದ ಸಂಘದ ಘನತೆಗೆ ಧಕ್ಕೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದೇ ವೇಳೆ, ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧದ ಕ್ರಿಮಿನಲ್ ಮಾನನಷ್ಟ ಪ್ರಕರಣವನ್ನು ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿಲ್ಲ ಎಂಬುದೂ ತಿಳಿದುಬಂದಿದೆ.

ಕೋರ್ಟ್ ಸಮನ್ಸ್ ಜಾರಿಯಾದ ಹಿನ್ನೆಲೆಯಲ್ಲಿ ಪ್ರಕರಣ ಇದೀಗ ಕಾನೂನು ಹಂತದಲ್ಲಿ ಮುಂದುವರಿದಿದೆ.

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತರ ದಂಡು; ಒಂದೇ ದಿನ 81 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ

0

ತಿರುಪತಿ: ತಿರುಮಲ ತಿರುಪತಿ ದೇವಾಲಯದಲ್ಲಿ ಕಳೆದ ಕೆಲವು ದಿನಗಳಿಂದ ಭಕ್ತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ.

ತಿಮ್ಮಪ್ಪನ ದರ್ಶನ ಪಡೆಯಲು ದೇಶದ ವಿವಿಧ ಭಾಗಗಳಿಂದ ಬಂದಿರುವ ಭಕ್ತರು ಉಚಿತ ಸರ್ವ ದರ್ಶನ ಕ್ಯೂನಲ್ಲಿ ಕಿಲೋಮೀಟರ್‌ಗಟ್ಟಲೆ ಸಾಲು ನಿಂತಿದ್ದಾರೆ.

ದೇವಾಲಯ ಮೂಲಗಳ ಪ್ರಕಾರ, ನಿನ್ನೆ ಒಂದೇ ದಿನದಲ್ಲಿ 81 ಸಾವಿರಕ್ಕೂ ಹೆಚ್ಚು ಭಕ್ತರು ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ. ಬೆಳಿಗ್ಗೆ 8 ಗಂಟೆಯ ನಂತರ ಸರ್ವ ದರ್ಶನಕ್ಕೆ ಬರುವ ಭಕ್ತರಿಗೆ 18 ರಿಂದ 24 ಗಂಟೆಗಳ ನಿರೀಕ್ಷೆ ಸಮಯ ಎದುರಾಗುತ್ತಿದೆ. ಟೋಕನ್ ಪಡೆದ ಭಕ್ತರಿಗೆ ಕೂಡ 4 ರಿಂದ 6 ಗಂಟೆಗಳ ಕಾಯುವ ಅವಧಿ ಇದೆ ಎಂದು ತಿಳಿದುಬಂದಿದೆ.

ದರ್ಶನಕ್ಕೆ ಬಂದ ಭಕ್ತರಲ್ಲಿ ನಿನ್ನೆ ಒಂದೇ ದಿನದಲ್ಲಿ 44,874 ಮಂದಿ ಮುಡಿಕೊಟ್ಟಿದ್ದಾರೆ. ಭಕ್ತರಿಂದ ಬಂದ ಕಾಣಿಕೆ ಮೂಲಕ ಹುಂಡಿಗೆ ಸುಮಾರು 3.76 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ.

ಭಕ್ತರ ಹೆಚ್ಚಳದೊಂದಿಗೆ ಪ್ರಸಾದ ವಿತರಣೆ ಕೂಡ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ನಿನ್ನೆ ಒಂದೇ ದಿನದಲ್ಲಿ ಸುಮಾರು 4.42 ಲಕ್ಷ ಲಡ್ಡುಗಳು ಮಾರಾಟವಾಗಿದ್ದು, 3.31 ಲಕ್ಷಕ್ಕೂ ಹೆಚ್ಚು ಭಕ್ತರು ಅನ್ನಪ್ರಸಾದ ಪಡೆದಿದ್ದಾರೆ. ಭಕ್ತರ ಆರೋಗ್ಯದ ಹಿನ್ನೆಲೆಯಲ್ಲಿ 3,916 ಮಂದಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ.

ಭಾರೀ ಜನಸಂದಣಿಯನ್ನು ನಿಯಂತ್ರಿಸಲು ತಿರುಮಲ ತಿರುಪತಿ ದೇವಾಲಯ ಆಡಳಿತವು ಹೆಚ್ಚುವರಿ ಭದ್ರತೆ ಮತ್ತು ವ್ಯವಸ್ಥೆಗಳನ್ನು ಜಾರಿಗೆ ತಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಿಡ್ನಾಪ್ ಶಂಕೆ ನಡುವೆ ಕಾರಿಗೆ ಬೆಂಕಿ: ಯುವಕ ಸಜೀವ ದಹನ, ಯುವತಿಗೆ ಚಾಕು ಇರಿತ!

ತುಮಕೂರು: ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಜೋಗಿಹಳ್ಳಿ ಗ್ರಾಮದ ಸಮೀಪ ತುಮಕೂರು–ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ನಡೆದ ಭೀಕರ ಘಟನೆಯಲ್ಲಿ ಯುವಕನೊಬ್ಬ ಕಾರಿನಲ್ಲೇ ಸಜೀವ ದಹನಗೊಂಡಿದ್ದು, ಯುವತಿಯೋರ್ವಳು ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಮೃತನನ್ನು ನಾಗೇಂದ್ರ (30) ಎಂದು ಗುರುತಿಸಲಾಗಿದ್ದು, ಗಾಯಗೊಂಡ ಯುವತಿಯನ್ನು ಬೆಂಗಳೂರಿನ ಜಯನಗರ ನಿವಾಸಿ ರಮ್ಯಾ ಎಂದು ಗುರುತಿಸಲಾಗಿದೆ. ಗಾಯಾಳು ರಮ್ಯಾಳನ್ನು ತಕ್ಷಣ ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ನಾಗೇಂದ್ರ ರಮ್ಯಾಳನ್ನು ಬೆಂಗಳೂರಿನಿಂದ ಅಂಕೋಲದ ಕಡೆಗೆ ಕಾರಿನಲ್ಲಿ ಕರೆದೊಯ್ಯುತ್ತಿದ್ದ ಎನ್ನಲಾಗಿದೆ. ಈ ವೇಳೆ ಜೋಗಿಹಳ್ಳಿ ಗ್ರಾಮದ ಸಮೀಪ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಗಲಾಟೆ ತಾರಕಕ್ಕೇರಿದ ವೇಳೆ ನಾಗೇಂದ್ರ ಯುವತಿಯ ತಲೆಗೆ ಚಾಕುವಿನಿಂದ ಇರಿದಿದ್ದಾನೆ ಎಂದು ತಿಳಿದುಬಂದಿದೆ.

ಇದರ ಬೆನ್ನಲ್ಲೇ ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಕಾರನ್ನು ಆವರಿಸಿದೆ. ಪರಿಣಾಮ ನಾಗೇಂದ್ರ ಕಾರಿನೊಳಗೇ ಸಿಲುಕಿ ಸಜೀವ ದಹನಗೊಂಡಿದ್ದಾನೆ. ಘಟನೆಯ ವೇಳೆ ಕಾರು ಚಾಲನೆ ಮಾಡುತ್ತಿದ್ದ ಪ್ರವೀಣ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರಿಗೆ ಬೆಂಕಿ ಹೇಗೆ ಹೊತ್ತಿಕೊಂಡಿತು, ಇದು ತಾಂತ್ರಿಕ ದೋಷವೇ, ಸ್ಫೋಟವೇ ಅಥವಾ ಬೇರೆ ಯಾವುದೇ ಕಾರಣವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕಳ್ಳಂಬೆಳ್ಳ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕಾರು ಬೆಂಕಿಗಾಹುತಿಯಾದ ನಿಖರ ಕಾರಣ ಹಾಗೂ ಕಿಡ್ನಾಪ್ ಶಂಕೆ ಸೇರಿದಂತೆ ಎಲ್ಲಾ ಅಂಶಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.

ಪೊಲೀಸರ ತನಿಖೆಯ ಬಳಿಕ ಘಟನೆಯ ನಿಖರ ಹಿನ್ನೆಲೆ ಮತ್ತು ಸತ್ಯಾಂಶ ಹೊರಬೀಳುವ ನಿರೀಕ್ಷೆಯಿದೆ.

ಶ್ರೀಗಳ ಹೇಳಿಕೆಯ ಹಿಂದೆ ಕಾಣದ ಕೈವಾಡ: ವಸಂತಗೌಡ ಪೊಲೀಸಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಡಾ. ಕಲ್ಲಯ್ಯಜ್ಜನವರು ತಮ್ಮ ವಿರುದ್ಧ ಮಾಡಿರುವ ಜೀವ ಬೆದರಿಕೆ ಹಾಗೂ ಹಣದ ಬೇಡಿಕೆ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಅವುಗಳನ್ನು ಸಾಬೀತುಪಡಿಸಬೇಕು ಎಂದು ಪುಣ್ಯಾಶ್ರಮದ ಸೋಲ್ ಟ್ರಸ್ಟ್ ಸದಸ್ಯರು ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋಲ್ ಟ್ರಸ್ಟ್ ಸದಸ್ಯ ವಸಂತಗೌಡ ಪೊಲೀಸಪಾಟೀಲ, ಕಳೆದ 40 ವರ್ಷಗಳಿಂದ ಶ್ರೀಮಠಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದೇನೆ. 1987ರಿಂದ ಪುಟ್ಟರಾಜ ಗವಾಯಿಗಳ ಕಾಲದಿಂದಲೂ ಮಠದೊಂದಿಗೆ ನಂಟು ಹೊಂದಿದ್ದೇನೆ. ಏಕಾಏಕಿ ತಮ್ಮ ವಿರುದ್ಧ ಜೀವ ಬೆದರಿಕೆ ಆರೋಪ ಮಾಡಿರುವುದು ತೀವ್ರ ನೋವುಂಟು ಮಾಡಿದೆ. ಶ್ರೀಗಳ ಈ ಹೇಳಿಕೆಯ ಹಿಂದೆ ಕಾಣದ ಕೈವಾಡವಿದ್ದು, ಯಾರೋ ಪ್ರೇರಣೆ ನೀಡಿ ಈ ರೀತಿಯ ಹೇಳಿಕೆ ಕೊಡಿಸಿದ್ದಾರೆ ಎನ್ನುವ ಅನುಮಾನವಿದೆ ಎಂದು ಆರೋಪಿಸಿದರು.

ರಾಜು ಖಾನಪ್ಪನವರ ಅವರು ಮಠದ ಲೆಕ್ಕಪತ್ರಗಳ ಬಗ್ಗೆ ಅಲ್ಲ, ದೇಣಿಗೆ ಸ್ವೀಕಾರ ಮತ್ತು ರಸೀದಿ ನೀಡುವ ಪ್ರಕ್ರಿಯೆ ಕುರಿತು ಪ್ರಶ್ನಿಸಿದ್ದರು. ಆ ಪ್ರಶ್ನೆಯಿಂದಲೇ ಮಠದ ಗೌರವಕ್ಕೆ ಧಕ್ಕೆಯಾಗುವಂತಹದ್ದು ಏನೂ ಇಲ್ಲ ಎಂದು ಹೇಳಿದರು.

ಸೋಲ್ ಟ್ರಸ್ಟ್ ಸದಸ್ಯ ಶಿವರುದ್ರಪ್ಪ ಇಟಗಿ ಮಾತನಾಡಿ, ಪೀಠಾಧಿಪತಿಗಳಿಂದ ₹10 ಲಕ್ಷ ಹಣ ಕೇಳಿದ್ದೇನೆ ಎಂಬ ಆರೋಪ ಸಂಪೂರ್ಣ ಸುಳ್ಳು. ತಾವು ಪ್ರತಿವರ್ಷ ವೀರೇಶ್ವರ ಪುಣ್ಯಾಶ್ರಮ ಸೇರಿದಂತೆ ವಿವಿಧ ಧಾರ್ಮಿಕ ಸಂಸ್ಥೆಗಳಿಗೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡುತ್ತಿದ್ದು, ಇಲ್ಲಿಯವರೆಗೆ ಪುಣ್ಯಾಶ್ರಮಕ್ಕೇ ₹4.50 ಲಕ್ಷಕ್ಕೂ ಅಧಿಕ ದೇಣಿಗೆ ನೀಡಿರುವುದಾಗಿ ಹೇಳಿ, ಅದರ ರಸೀದಿಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು.

ತಮ್ಮ ಸಹಿಯಿಲ್ಲದೆ ಟ್ರಸ್ಟ್‌ನಲ್ಲಿ ಠರಾವು ಮಾಡಿ ಬ್ಯಾಂಕ್ ಖಾತೆ ತೆರೆಯಲಾಗಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗೆ ದೂರು ನೀಡಿ ಹಣಕಾಸು ವ್ಯವಹಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದೆ. ಇದೇ ಕಾರಣಕ್ಕೆ ತಮ್ಮ ವಿರುದ್ಧ ಆರೋಪ ಮಾಡಲಾಗುತ್ತಿದೆ ಎಂದು ದೂರಿದರು.

ಟ್ರಸ್ಟ್ ಸದಸ್ಯ ಚಂದ್ರು ಬಾಳಿಹಳ್ಳಿಮಠ ಮಾತನಾಡಿ, ಪುಣ್ಯಾಶ್ರಮವು ಲಕ್ಷಾಂತರ ಭಕ್ತರ ದೇಣಿಗೆಯಿಂದ ಬೆಳೆದಿದೆ. ದೇಣಿಗೆ ನೀಡಿದವರ ಹೆಸರನ್ನು ರಥದ ಗಾಲಿ ಸೇರಿದಂತೆ ವಿವಿಧೆಡೆ ದಾಖಲಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ನಾಲ್ಕು ವರ್ಷಗಳ ಹಿಂದೆ ದಾಖಲಿಸಿದ ಹೆಸರಿನ ಬಗ್ಗೆ ಈಗ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಅಚ್ಚರಿ ತಂದಿದೆ ಎಂದರು.

ಜಾತ್ರೆ ಈಗಾಗಲೇ ಆರಂಭವಾಗಿದ್ದು, ಈ ಸಂದರ್ಭದಲ್ಲಿ ಯಾವುದೇ ಗೊಂದಲ ಸೃಷ್ಟಿಸದೆ ಭಕ್ತರೆಲ್ಲರೂ ಸೇರಿ ಜಾತ್ರೆಯನ್ನು ಯಶಸ್ವಿಗೊಳಿಸಬೇಕು. ಬಳಿಕ ಸಮಾಜದ ಹಿರಿಯರು, ಭಕ್ತರು ಹಾಗೂ ಶ್ರೀಗಳನ್ನು ಒಳಗೊಂಡ ಸಭೆ ನಡೆಸಿ ಎಲ್ಲ ವಿಚಾರಗಳನ್ನು ಚರ್ಚೆ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಮನವಿ ಮಾಡಿದರು.

ಡಾ. ಪ್ರಕಾಶ ಬಸರಿಗಿಡದ ಮಾತನಾಡಿ, ಪುಣ್ಯಾಶ್ರಮದ ಆವರಣದಲ್ಲಿ ತಮ್ಮ ಪೂರ್ವಜರ ಸಮಾಧಿ ಇದ್ದು, ಅದರ ಕುರಿತು ಅನಗತ್ಯ ಆರೋಪ ಮಾಡಲಾಗುತ್ತಿದೆ. ಮಠದ ಆಸ್ತಿಗೆ ಸಂಬಂಧಿಸಿದ ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ತಾವು ಯಾವುದೇ ಆಸ್ತಿ ಕಬಳಿಸುವ ಪ್ರಯತ್ನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಎಂ.ಆರ್. ಹಿರೇಮಠ, ಚನ್ನಬಸಯ್ಯ ಬಂಕಾಪೂರ, ಪರಶುರಾಮ ಕಟ್ಟಿಮನಿ, ಸಂಗಮೇಶ ದುಂದೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“1987ರಿಂದ ಶ್ರೀಮಠದ ಸೇವೆ ಮಾಡುತ್ತಿದ್ದೇನೆ. ಶ್ರೀಗಳ ಹೇಳಿಕೆಯಿಂದ ತುಂಬಾ ನೋವಾಗಿದೆ. ಅವರ ಹೇಳಿಕೆಯ ಹಿಂದೆ ಕಾಣದ ಕೈವಾಡವಿದೆ ಎನ್ನುವ ಅನುಮಾನ ನಮ್ಮನ್ನು ಕಾಡುತ್ತಿದೆ.”

– ವಸಂತಗೌಡ ಪೊಲೀಸಪಾಟೀಲ, ಸೋಲ್ ಟ್ರಸ್ಟಿ, ವೀರೇಶ್ವರ ಪುಣ್ಯಾಶ್ರಮ

“ಪೀಠಾಧಿಪತಿಗಳ ಬಳಿ ₹10 ಲಕ್ಷ ಕೇಳಿದ್ದೇನೆ ಎಂಬ ಆರೋಪ ಸಂಪೂರ್ಣ ಸುಳ್ಳು. ನಾನು ಪ್ರತಿವರ್ಷ ಧಾರ್ಮಿಕ ಸಂಸ್ಥೆಗಳಿಗೆ ದೇಣಿಗೆ ನೀಡುತ್ತೇನೆ, ಹಣ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.”

– ಇಟಗಿ ಶಿವರುದ್ರಪ್ಪ, ಸೋಲ್ ಟ್ರಸ್ಟ್ ಸದಸ್ಯ

ಪುಟ್ಟರಾಜ ಅಜ್ಜನವರ ಸೇವೆಯಲ್ಲಿ ಜಾತಿ, ರಾಜಕೀಯ ತರಬೇಡಿ: ರಮೇಶ ಮುಳಗುಂದ

0

ವಿಜಯಸಾಕ್ಷಿ ಸುದ್ದಿ, ಗದಗ: ವೀರೇಶ್ವರ ಪುಣ್ಯಾಶ್ರಮದಲ್ಲಿ ಕಳೆದ 11 ವರ್ಷಗಳಿಂದ ಯಾವುದೇ ದೇಣಿಗೆ ಪಡೆಯದೆ ಉಚಿತ ಸಾಮೂಹಿಕ ವಿವಾಹ ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಪುಟ್ಟರಾಜ ಅಜ್ಜನವರ ಸೇವೆಯಲ್ಲಿ ಜಾತಿ ಅಥವಾ ರಾಜಕೀಯ ಬೆರೆಸಬಾರದು ಎಂದು ದಿ. ಕೆ.ಎಚ್. ಪಾಟೀಲ ಅಭಿಮಾನಿ ಬಳಗದ ಉಪಾಧ್ಯಕ್ಷ ರಮೇಶ ಮುಳಗುಂದ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಮುಖಂಡ ರಾಜು ಖಾನಪ್ಪನವರ ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿದರು.

“ಸಾಮೂಹಿಕ ವಿವಾಹಕ್ಕಾಗಿ ಯಾರಿಂದಲೂ ಒಂದು ರೂಪಾಯಿ ದೇಣಿಗೆ ಪಡೆದಿಲ್ಲ. ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಸಮಾಜಸೇವಕ ಪೀರಸಾಬ್ ಕೌತಾಳ ಭರಿಸುತ್ತಿದ್ದಾರೆ. ವಧು-ವರರಿಗೆ ಅಗತ್ಯ ವಸ್ತುಗಳನ್ನೂ ಉಚಿತವಾಗಿ ನೀಡಲಾಗುತ್ತಿದೆ. ನಾವು ತನು-ಮನ-ಧನದಿಂದ ಸೇವೆ ಮಾಡುತ್ತಿದ್ದೇವೆ. ದೇಣಿಗೆ ಪಡೆದಿದ್ದೇವೆ ಎಂಬುದಕ್ಕೆ ದಾಖಲೆಗಳಿದ್ದರೆ ಬಹಿರಂಗಪಡಿಸಲಿ” ಎಂದು ಸವಾಲು ಹಾಕಿದರು.

ಪುಟ್ಟರಾಜ ಗವಾಯಿಗಳು ಹಾಗೂ ಪಂಚಾಕ್ಷರಿ ಅಜ್ಜನವರ ಪುಣ್ಯಭೂಮಿಯಾದ ವೀರೇಶ್ವರ ಪುಣ್ಯಾಶ್ರಮದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವಂತಹ ಹೇಳಿಕೆಗಳು ಸೂಕ್ತವಲ್ಲ. ಹಿಂದೂ ಧರ್ಮವೇ ಎಲ್ಲರನ್ನು ಸಮಾನವಾಗಿ ಕಾಣುವ ಸಂದೇಶ ನೀಡುತ್ತದೆ. ಹೀಗಿರುವಾಗ ಮಠದ ಸೇವಾ ಕಾರ್ಯಗಳ ಬಗ್ಗೆ ಅನಗತ್ಯ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಹೇಳಿದರು.

ರಾಜು ಖಾನಪ್ಪನವರು ಮೊದಲು ಹಿಂದೂ ಧರ್ಮದ ತತ್ವಗಳನ್ನು ಅಧ್ಯಯನ ಮಾಡಬೇಕು. ಪ್ರತಿ ವರ್ಷ ಜಾತ್ರಾ ಮಹೋತ್ಸವದ ಅಂಗವಾಗಿ ರಸಮಂಜರಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಅವರು ಕೂಡ ಕಾರ್ಯಕ್ರಮಗಳಿಗೆ ಬಂದು ವಾಸ್ತವ ಅರಿಯಲಿ ಎಂದು ಹೇಳಿದರು.

ಬಳಗದ ಸದಸ್ಯ ವಿನೋದ್ ಸಿದ್ದಲಿಂಗ ಮಾತನಾಡಿ, ಪುಟ್ಟರಾಜ ಅಜ್ಜನವರ ಜಯಂತಿ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಮಾಜದಲ್ಲಿ ಸಾಮರಸ್ಯ ಬೆಳೆಸುವ ಉದ್ದೇಶದಿಂದ ನಡೆಸಲಾಗುತ್ತಿದೆ. ಮಠದಲ್ಲಿ ಯಾವುದೇ ಜಾತಿ, ಧರ್ಮದ ಭೇದವಿಲ್ಲ. ಎಲ್ಲ ಸಮುದಾಯದ ಭಕ್ತರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.

ಪೀರಸಾಬ್ ಕೌತಾಳ ಅವರು ನಗರಸಭೆಯ ಮೂಲಕ ಶ್ರೀಮಠಕ್ಕೆ ಕುಡಿಯುವ ನೀರಿನ ವ್ಯವಸ್ಥೆ, ಹೈಮಾಸ್ಟ್ ದೀಪ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಿದ್ದು, ಜಾತ್ರಾ ಮಹೋತ್ಸವ ಯಶಸ್ವಿಯಾಗಲು ತನು-ಮನ-ಧನದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆಯನ್ನು ಪ್ರಶ್ನಿಸುವುದು ಸರಿಯಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಚಂದ್ರು ಕಡಕೋಳ, ಅನಿಲ್ ಶಿಂಗಟಾಲಕೇರಿ, ಹನುಮಂತಪ್ಪ ಆಸಂಗಿ, ದಾವಲ ಇರಕಲ್, ಅಜರುದ್ದೀನ್ ಮೂಲಿಮನಿ ಹಾಗೂ ರಜಾಕ್ ಸೂಡಿ ಉಪಸ್ಥಿತರಿದ್ದರು.

“ಕಳೆದ 11 ವರ್ಷಗಳಿಂದ ವೀರೇಶ್ವರ ಪುಣ್ಯಾಶ್ರಮದಲ್ಲಿ ಯಾರಿಂದಲೂ ಒಂದು ರೂಪಾಯಿ ದೇಣಿಗೆ ಪಡೆಯದೇ ಸಾಮೂಹಿಕ ವಿವಾಹ ಸೇರಿದಂತೆ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ದೇಣಿಗೆ ಪಡೆದಿದ್ದೇವೆ ಎಂಬುದಕ್ಕೆ ದಾಖಲೆಗಳಿದ್ದರೆ ಬಹಿರಂಗಪಡಿಸಲಿ.”

– ರಮೇಶ ಮುಳಗುಂದ, ಉಪಾಧ್ಯಕ್ಷರು, ದಿ. ಕೆ.ಎಚ್. ಪಾಟೀಲ ಅಭಿಮಾನಿ ಬಳಗ

ತುಲಾಭಾರ ತಕ್ಕಡಿ ಸಮರ್ಪಿಸಿದ ವಸಂತ ಪಡಗದ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ–ಬೆಟಗೇರಿ ಅವಳಿ ನಗರದ ಭಕ್ತರ ಆರಾಧ್ಯ ದೈವವಾದ ಕೈಲಾಸ ವರಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಯುವ ಮುಖಂಡ ವಸಂತ ಪಡಗದ ಅವರು ನೂತನ ತುಲಾಭಾರದ ತಕ್ಕಡಿಯನ್ನು ಕೊಡುಗೆಯಾಗಿ ಸಮರ್ಪಿಸಿದರು.

ದೇವಸ್ಥಾನದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಹೂವಿನಿಂದ ಅಲಂಕೃತಗೊಂಡ ತುಲಾಭಾರದ ತಕ್ಕಡಿಯನ್ನು ದೇವಸ್ಥಾನದ ಆಡಳಿತ ಮಂಡಳಿಗೆ ಹಸ್ತಾಂತರಿಸಲಾಯಿತು.

ವಸಂತ ಪಡಗದ ಅವರ ಧಾರ್ಮಿಕ ಸೇವಾ ಕಾರ್ಯವನ್ನು ಮೆಚ್ಚಿದ ದೇವಸ್ಥಾನದ ಪ್ರಮುಖರು ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಬಿ. ಪ್ರಸನ್ನಕುಮಾರ, ಕಾರ್ಯದರ್ಶಿ ಯೋಗೀಶ್ ವೊರಾ, ಕೆ. ವೆಂಕಟರಮಣ ಭಟ್, ವ್ಯವಸ್ಥಾಪಕ ರಾಮಚಂದ್ರ ಹೆಗಡೆ, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಅರ್ಚಕ ವೃಂದ, ಸ್ಥಳೀಯ ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.