ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯಲ್ಲಿ ಹಿಂದೂ ದೇವಾಲಯಗಳ ವಿಗ್ರಹಗಳು ಹಾಗೂ ಮಹಾತ್ಮರ ಪ್ರತಿಮೆಗಳನ್ನು ಪದೇ ಪದೇ ವಿರೂಪಗೊಳಿಸಲಾಗುತ್ತಿದ್ದು, ದುಷ್ಕರ್ಮಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂದೂ ಸಂಘಟನೆಗಳ ಮುಖಂಡ ರಾಜೂ ಖಾನಪ್ಪನವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ರಾಜೂ ಖಾನಪ್ಪನವರ, ಜಿಲ್ಲೆಯಲ್ಲಿ ದೇವರ ಮೂರ್ತಿಗಳು ಹಾಗೂ ಮಹಾತ್ಮರ ಪ್ರತಿಮೆಗಳ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದ್ದರೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಮರ್ಪಕ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಗದಗದ ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನದ ಆವರಣದಲ್ಲಿರುವ ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಸುಪರ್ದಿಯಲ್ಲಿನ ಅಪರೂಪದ ಸರಸ್ವತಿ ದೇವಿಯ ಮೂರ್ತಿಯನ್ನು ಮತ್ತೆ ವಿರೂಪಗೊಳಿಸಿರುವುದು ಅತ್ಯಂತ ಖಂಡನೀಯ. ಈ ಮೂರ್ತಿಯ ಮೇಲೆ ಕಳೆದ ಮೂರು ವರ್ಷಗಳಲ್ಲಿ ಹಲವು ಬಾರಿ ದಾಳಿ ನಡೆದಿದ್ದರೂ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಾರಾದರೂ ದೂರು ನೀಡಿದರೆ ಮಾತ್ರ ಪ್ರಕರಣ ದಾಖಲಿಸುತ್ತೇವೆ ಎಂಬ ಪೊಲೀಸ್ ಇಲಾಖೆಯ ನಿಲುವು ಸರಿಯಲ್ಲ. ರಾಷ್ಟ್ರೀಯ ಮಹತ್ವದ ಸ್ಮಾರಕಗಳು ಮತ್ತು ಪ್ರಾಚೀನ ದೇವಾಲಯಗಳಲ್ಲಿ ಇಂತಹ ಘಟನೆಗಳು ನಡೆದಾಗ ಪೊಲೀಸ್ ಇಲಾಖೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಲಕ್ಕುಂಡಿಯಲ್ಲೂ ಪ್ರಾಚೀನ ಶಿಲ್ಪಗಳು ಹಾನಿಗೊಳಗಾಗಿದ್ದು, ಹರ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮಹಾತ್ಮ ಗಾಂಧೀಜಿ ಹಾಗೂ ದಾನಿ ಸೋಮಶೇಖರಯ್ಯ ಹುಚ್ಚಯ್ಯ ಗಣಾಚಾರಿ ಅವರ ಪ್ರತಿಮೆಗಳನ್ನೂ ದುಷ್ಕರ್ಮಿಗಳು ವಿರೂಪಗೊಳಿಸಿದ್ದಾರೆ. ಘಟನೆ ನಡೆದ ಹಲವು ದಿನಗಳಾದರೂ ಸಂಬಂಧಪಟ್ಟ ಅಧಿಕಾರಿಗಳು ದೂರು ದಾಖಲಿಸದಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಜಿಲ್ಲೆಯ ಐತಿಹಾಸಿಕ ದೇವಾಲಯಗಳು, ಶಿಲ್ಪಕಲೆ ಹಾಗೂ ಮಹನೀಯರ ಪ್ರತಿಮೆಗಳು ಮುಂದಿನ ಪೀಳಿಗೆಗೆ ಉಳಿಯಬೇಕಾದರೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅವುಗಳ ರಕ್ಷಣೆಗೆ ಶಾಶ್ವತ ಕ್ರಮ ಕೈಗೊಳ್ಳಬೇಕು. ಎಲ್ಲ ಪ್ರಾಚೀನ ದೇವಾಲಯಗಳಲ್ಲಿ ಭದ್ರತೆ ಹಾಗೂ ಸಿಸಿ ಕ್ಯಾಮೆರಾ ವ್ಯವಸ್ಥೆ ಕಲ್ಪಿಸಿ, ವಿಗ್ರಹ ವಿರೂಪ ಪ್ರಕರಣಗಳ ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಡಾ. ಕೆ.ಆರ್. ದುರ್ಗೇಶ್, ಸರ್ಕಾರದ ಗಮನಕ್ಕೆ ವಿಷಯವನ್ನು ತಂದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಹೇಶ ರೋಖಡೆ, ಭರತ್ ಲದ್ದಿ, ಕುಮಾರ ನಡಗೇರಿ, ಕುಮಾರ ಮಿಟ್ಟಿಮಠ, ಆನಂದ ಅರಕೇರಿ, ಮಹೇಶ ಬಡಿಗೇರ, ಮಂಜು ಪೂಜಾರ, ವೀರಣ್ಣ ಹೆಬಸೂರ, ಬಸಯ್ಯ ಗಣಾಚಾರಿ, ಬಸವರಾಜ ಯಳವತ್ತಿ, ಮಹೇಶ ಕಂಬಾರ, ಪರಮೇಶ ಬೆಂತೂರ, ಬಸವರಾಜ ನವಲಿ, ಅಶೋಕ ಬಜಂತ್ರಿ, ಮುತ್ತಣ್ಣ ವಾಲ್ಮೀಕಿ, ಹುಲಿಗೆಪ್ಪ ವಾಲ್ಮೀಕಿ, ಶಿವಯೋಗಿ ಹಿರೇಮಠ ಹಾಗೂ ಸುನೀಲ ಮುಳ್ಳಾಳ ಉಪಸ್ಥಿತರಿದ್ದರು.
“ಪ್ರಾಚೀನ ದೇವಾಲಯಗಳ ವಿಗ್ರಹಗಳು ಮತ್ತು ಮಹಾತ್ಮರ ಪ್ರತಿಮೆಗಳ ಮೇಲಿನ ದಾಳಿಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ಬಂಧಿಸಿ ಶಾಶ್ವತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು.”
– ರಾಜೂ ಖಾನಪ್ಪನವರ