Home Blog

ಮಂಡ್ಯದಲ್ಲಿ ಸಿನಿಮಾಶೈಲಿ ದರೋಡೆ: 26 ಲಕ್ಷ ರೂ. ಹಣ ಕಳವು!

ಮಂಡ್ಯ: ಜಿಲ್ಲೆಯ ಮದ್ದೂರು ಪಟ್ಟಣದ ಹೊರವಲಯದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಕಾರನ್ನು ದುಷ್ಕರ್ಮಿಗಳ ಗ್ಯಾಂಗ್‌ ಅಡ್ಡಗಟ್ಟಿ 26 ಲಕ್ಷ ರೂ. ದರೋಡೆ ಮಾಡಿದ ಘಟನೆ ನಡೆದಿದೆ.

ಮೈಸೂರಿನ ಖಾಸಗಿ ಕಂಪನಿ ಉದ್ಯೋಗಿ ಗೋವಿಂದರಾಜು ಅವರು ಐ-20 ಕಾರಿನಲ್ಲಿ ಕಂಪನಿಗಳ ನಡುವೆ ಹಣ ಸಾಗಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ರಾತ್ರಿ ಸುಮಾರು 7 ಗಂಟೆ ಸಮಯದಲ್ಲಿ ಐಶ್ವರ್ಯ ಕಾನ್ವೆಂಟ್ ಬಳಿ ಇನ್ನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅವರ ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿದ್ದಾರೆ.

ನಂತರ ಕಾರಿನ ಗಾಜು ಒಡೆದು, ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿದ ಆರೋಪಿಗಳು 26 ಲಕ್ಷ ರೂ. ನಗದು ಹಣವನ್ನು ದೋಚಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆ ಬಗ್ಗೆ ತಕ್ಷಣ ಮದ್ದೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ವಿ.ಜೆ. ಶೋಭರಾಣಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.

ಮಂಗಳೂರಿನಲ್ಲಿ ಲಿಫ್ಟ್ ಕುಸಿದು ಇನ್‌ಸ್ಟಾ ಮಾರ್ಟ್ ಉದ್ಯೋಗಿ ದುರ್ಮರಣ!

ಮಂಗಳೂರು: ನಗರದ ಕುಂಟಿಕಾನ ಪ್ರದೇಶದಲ್ಲಿ ದುರ್ಘಟನೆ ಸಂಭವಿಸಿದ್ದು, ಲಿಫ್ಟ್ ಕುಸಿದು ಇನ್‌ಸ್ಟಾ ಮಾರ್ಟ್ ಉದ್ಯೋಗಿಯೊಬ್ಬರು ಸಾವನ್ನಪ್ಪಿದ್ದಾರೆ.

ಬೆಳ್ತಂಗಡಿ ತಾಲೂಕಿನ ಬೆಳಲು ನಿವಾಸಿ ನೌಫಾಲ್ (28) ಮೃತ ದುರ್ದೈವಿ. ಇನ್‌ಸ್ಟಾ ಮಾರ್ಟ್ ಸಪ್ಲೈ ಪಾಯಿಂಟ್‌ನಲ್ಲಿ ದಿನಸಿ ವಸ್ತುಗಳನ್ನು ಲಿಫ್ಟ್ ಮೂಲಕ ಸಾಗಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ವಸ್ತುಗಳನ್ನು ಮೇಲ್ಮಹಡಿಗೆ ಸಾಗಿಸುತ್ತಿದ್ದಾಗ ಏಕಾಏಕಿ ಲಿಫ್ಟ್ ಕುಸಿದಿದ್ದು, ಅದರೊಳಗೆ ಸಿಲುಕಿದ ನೌಫಾಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಸ್ಥಳದ ಸಿಸಿ ಕ್ಯಾಮೆರಾದಲ್ಲಿ ದುರಂತದ ದೃಶ್ಯಗಳು ಸೆರೆಯಾಗಿವೆ.

ಘಟನೆ ತಿಳಿಯುತ್ತಿದ್ದಂತೆ ಕದ್ರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಲಿಫ್ಟ್ ದುರಂತದ ನಿಖರ ಕಾರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಭದ್ರಾ ಜಲಾಶಯದಿಂದ ನೀರು ಬಿಡುಗಡೆಗೆ ತೀರ್ಮಾನ: ನದಿ ತೀರದ ಜನರಿಗೆ ಎಚ್ಚರಿಕೆ!

ಶಿವಮೊಗ್ಗ: ಹಾವೇರಿ, ರಾಣೇಬೆನ್ನೂರು, ಬ್ಯಾಡಗಿ ಹಾಗೂ ಹಿರೇಕೆರೂರು ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.

ಬಹುಗ್ರಾಮ ನದಿ ನೀರು ಯೋಜನೆಯಡಿ ತುಂಗಭದ್ರಾ ನದಿಯ ನೀರನ್ನು ಅವಲಂಬಿಸಿರುವ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಮೇ 18ರಿಂದ 23ರವರೆಗೆ ಪ್ರತಿದಿನ 2 ಸಾವಿರ ಕ್ಯೂಸೆಕ್ ನೀರನ್ನು ಭದ್ರಾವತಿ ಸಮೀಪದ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಹರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ನದಿ ತೀರದ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂದು ಸೂಚನೆ ನೀಡಲಾಗಿದೆ. ನದಿಯ ಕೆಳಭಾಗದಲ್ಲಿ ಸಾರ್ವಜನಿಕರು ಅನಗತ್ಯವಾಗಿ ತಿರುಗಾಡುವುದು, ದನಕರುಗಳನ್ನು ಮೇಯಿಸುವುದು ಹಾಗೂ ತೋಟಗಾರಿಕೆ ಚಟುವಟಿಕೆ ನಡೆಸುವುದನ್ನು ತಪ್ಪಿಸಬೇಕು ಎಂದು ಎಚ್ಚರಿಸಲಾಗಿದೆ.

ಇದೇ ವೇಳೆ ರೈತರು ನದಿ ದಂಡೆಯಲ್ಲಿ ಅಳವಡಿಸಿರುವ ಪಂಪ್‌ಸೆಟ್‌ಗಳ ಮೂಲಕ ನೀರನ್ನು ಎತ್ತುವುದನ್ನೂ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಭದ್ರಾ ಜಲಾಶಯ ಯೋಜನೆಯ ಕುಡಿಯುವ ನೀರಿನ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

ಸೊಳ್ಳೆ ಅಗರಬತ್ತಿ ಸುರಕ್ಷಿತವೇ? ಹೊಸ ಸಮೀಕ್ಷೆಯಿಂದ ಆತಂಕಕಾರಿ ಮಾಹಿತಿ ರಿವಿಲ್!

ಮನೆಗಳಲ್ಲಿ ಸೊಳ್ಳೆಗಳಿಂದ ರಕ್ಷಣೆಗಾಗಿ ಬಳಸಲಾಗುವ ಅಗರಬತ್ತಿ, ಕಾಯಿಲ್ ಹಾಗೂ ವಿವಿಧ ಮಸ್ಕಿಟೋ ರಿಪೆಲೆಂಟ್‌ಗಳು ಕೆಲವೊಮ್ಮೆ ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಇತ್ತೀಚಿನ ಸಮೀಕ್ಷೆ ಎಚ್ಚರಿಕೆ ನೀಡಿದೆ.

ಸಿಐಆರ್ ನೋಂದಣಿ ಇಲ್ಲದ ಉತ್ಪನ್ನಗಳನ್ನು ಬಳಸುವುದರಿಂದ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಎಚ್‌ಐಸಿಎ ನಡೆಸಿದ ಸಮೀಕ್ಷೆಯ ಪ್ರಕಾರ, ದೇಶದ 12 ನಗರಗಳಲ್ಲಿ 1,264 ಕುಟುಂಬಗಳು ಹಾಗೂ 405 ವೈದ್ಯರನ್ನು ಒಳಗೊಂಡ ಅಧ್ಯಯನ ನಡೆಸಲಾಗಿದೆ. ಇದರಲ್ಲಿ ಸುಮಾರು 70 ಶೇಕಡಾ ವೈದ್ಯರು ಅನಧಿಕೃತ ಸೊಳ್ಳೆ ಅಗರಬತ್ತಿಗಳ ಹೊಗೆ ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಅದೇ ರೀತಿ 67 ಶೇಕಡಾ ವೈದ್ಯರು ಕೆಲವು ಅಗರಬತ್ತಿಗಳ ಹೊಗೆ ಸಿಗರೇಟ್ ಹೊಗೆಯಷ್ಟೇ ಹಾನಿಕಾರಕವಾಗಬಹುದು ಎಂದು ತಿಳಿಸಿದ್ದಾರೆ. ನಿರಂತರವಾಗಿ ಸೊಳ್ಳೆ ಅಗರಬತ್ತಿ ಅಥವಾ ಕಾಯಿಲ್ ಬಳಸುವುದರಿಂದ ಕೆಮ್ಮು, ಗಂಟಲು ಕೆರೆತ, ಎದೆ ಉರಿ, ತಲೆನೋವು ಹಾಗೂ ಅಲರ್ಜಿ ಸಮಸ್ಯೆಗಳು ಕಾಣಿಸಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ವಿಶೇಷವಾಗಿ ಆಸ್ತಮಾ, ಸಿಒಪಿಡಿ ಮತ್ತು ಅಲರ್ಜಿ ಇರುವವರಿಗೆ ಇದು ಹೆಚ್ಚು ಅಪಾಯಕಾರಿಯಾಗಿದೆ ಎಂದು ತಿಳಿಸಲಾಗಿದೆ. ಮಕ್ಕಳ ಮತ್ತು ಹಿರಿಯರ ಶ್ವಾಸಕೋಶಗಳು ಹೆಚ್ಚು ಸಂವೇದನಾಶೀಲವಾಗಿರುವುದರಿಂದ ಅವರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ.

ತಜ್ಞರ ಪ್ರಕಾರ, ಸೊಳ್ಳೆ ನಿವಾರಕ ಉತ್ಪನ್ನಗಳನ್ನು ಖರೀದಿಸುವಾಗ ಸಿಐಆರ್ ನೋಂದಣಿ ಸಂಖ್ಯೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಅನಧಿಕೃತ ಉತ್ಪನ್ನಗಳನ್ನು ತಪ್ಪಿಸುವುದು, ಕೊಠಡಿಯಲ್ಲಿ ಸರಿಯಾದ ಗಾಳಿಯ ಹರಿವು ಇರಿಸುವುದು ಹಾಗೂ ಮಕ್ಕಳ ಕೋಣೆಯಲ್ಲಿ ಹೊಗೆ ಬಳಕೆಯನ್ನು ಕಡಿಮೆ ಮಾಡುವುದು ಮುಖ್ಯ ಎಂದು ಸಲಹೆ ನೀಡಲಾಗಿದೆ. ಮಸ್ಕಿಟೋ ನೆಟ್ ಹಾಗೂ ಕಿಟಕಿ ಜಾಲಿಗಳಂತಹ ಸುರಕ್ಷಿತ ಪರ್ಯಾಯಗಳನ್ನು ಬಳಸುವುದು ಉತ್ತಮ ಎಂದು ವೈದ್ಯರು ತಿಳಿಸಿದ್ದಾರೆ.

ಹಿಟ್ ಅಂಡ್ ರನ್ ಕೇಸ್‌ಗೆ ಕ್ಲೈಮ್ಯಾಕ್ಸ್..!

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರನ್ನು ಬಲಿ ಪಡೆದು ಪರಾರಿಯಾಗಿದ್ದ ವಾಹನವನ್ನು ಹಗರಿಬೊಮ್ಮನಹಳ್ಳಿ ಪೊಲೀಸರು ಪತ್ತೆ ಹಚ್ಚಿ ಹಿಟ್ ಅಂಡ್ ರನ್ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೇ 7ರಂದು ಮಧ್ಯಾಹ್ನ ಸುಮಾರು 2.30ರ ವೇಳೆಗೆ ವಲ್ಲಭಾಪುರ ಗ್ರಾಮದ ಸಮೀಪ ಹಳೆ ಹಗರಿಬೊಮ್ಮನಹಳ್ಳಿ ನಿವಾಸಿ ಮುಂಡರಗಿ ನಾಗರಾಜ್ ಅವರಿಗೆ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿತ್ತು. ಅಪಘಾತದ ತೀವ್ರತೆಗೆ ನಾಗರಾಜ್ ಸ್ಥಳದಲ್ಲೇ ಮೃತಪಟ್ಟಿದ್ದರು.

ಪ್ರಕರಣ ದಾಖಲಿಸಿಕೊಂಡ ಹಗರಿಬೊಮ್ಮನಹಳ್ಳಿ ಪೊಲೀಸರು ಆರೋಪಿತ ವಾಹನಕ್ಕಾಗಿ ಬಲೆ ಬೀಸಿದ್ದರು. ವೃತ್ತ ನಿರೀಕ್ಷಕ ವಿಕಾಸ್ ಪಿ. ಲಮಾಣಿ ಮಾರ್ಗದರ್ಶನದಲ್ಲಿ ಪಿಎಸ್ಐ ಉಮಾಪತಿ ನಾಯ್ಕ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಮುಖ್ಯ ಪೇದೆಗಳಾದ ಮಲ್ಲೇಶ್ ನಾಯ್ಕ, ಸಿದ್ದೇಶ್, ಶಂಕರ್ ನಾಯ್ಕ, ಭೋಜ್ಯ ನಾಯ್ಕ, ಪರಶುರಾಮ್ ವೈ., ದೊಡ್ಡ ಬಸವರಾಜ್ ಹಾಗೂ ಯಮುನಪ್ಪ ಬಂಡೆ ಸತತ ತನಿಖೆ ನಡೆಸಿ ಕೊನೆಗೆ ಅಪಘಾತ ಎಸಗಿದ ವಾಹನವನ್ನು ಬಳ್ಳಾರಿಯಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.

ಪ್ರಕರಣ ಭೇದಿಸಿದ ಪೊಲೀಸ್ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೊಸಪೇಟೆ ಹಾಗೂ ಕೂಡ್ಲಿಗಿ ಡಿವೈಎಸ್ಪಿ ಶ್ಲಾಘಿಸಿದ್ದಾರೆ.

ಹಗರಿಬೊಮ್ಮನಹಳ್ಳಿ ಸಾರ್ವಜನಿಕರೂ ಪೊಲೀಸರ ಕಾರ್ಯಕ್ಷಮತೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

‘ಸೆಲ್ಫಿಗೆ ಸೀಮಿತ’ ಕಮ್ಯೂನಿಟಿ ಮೊಬಿಲೈಜರ್‌ಗಳು..?

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಗರಗಳು ಮತ್ತು ಪಟ್ಟಣಗಳನ್ನು ಸ್ವಚ್ಛವಾಗಿಡಲು ಹಾಗೂ ಸಾರ್ವಜನಿಕರಲ್ಲಿ ಕಸ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ನೇಮಕ ಮಾಡಿರುವ ಕಮ್ಯೂನಿಟಿ ಮೊಬಿಲೈಜರ್ ಹುದ್ದೆಗಳ ಕಾರ್ಯಕ್ಷಮತೆ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.

ಸ್ವಚ್ಛ ಭಾರತ ಮಿಷನ್ 2.0 ಅಡಿಯಲ್ಲಿ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮಹಿಳಾ ಸ್ವಸಹಾಯ ಸಂಘಗಳ ಮೂಲಕ ರಾಜ್ಯಾದ್ಯಂತ 2605 ಕಮ್ಯೂನಿಟಿ ಮೊಬಿಲೈಜರ್‌ಗಳನ್ನು ಜುಲೈ 2025ರಿಂದ ಗೌರವಧನ ಆಧಾರದ ಮೇಲೆ ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.

ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸಂಖ್ಯೆ ಆಧಾರದ ಮೇಲೆ ನೇಮಕಾತಿ ಮಾಡಲಾಗಿದ್ದು, ಅವರಿಗೆ ಮಾಸಿಕ ₹17 ಸಾವಿರದಿಂದ ₹18 ಸಾವಿರಕ್ಕೂ ಹೆಚ್ಚು ಗೌರವಧನ ನಿಗದಿಪಡಿಸಲಾಗಿದೆ.

ಕಮ್ಯೂನಿಟಿ ಮೊಬಿಲೈಜರ್‌ಗಳ ಮುಖ್ಯ ಕರ್ತವ್ಯ ಮನೆ ಮನೆಗೆ ತೆರಳಿ ಹಸಿ-ಒಣ ಕಸ ವಿಂಗಡಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಸ್ವಚ್ಛತಾ ವಾಹನಗಳ ಕಾರ್ಯ ಪರಿಶೀಲಿಸುವುದು ಹಾಗೂ ಕಸ ವಿಲೇವಾರಿ ಕುರಿತು ಮಾಹಿತಿ ಸಂಗ್ರಹಿಸಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿದೆ.

ಆದರೆ, ನೆಲಮಟ್ಟದಲ್ಲಿ ಈ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಪ್ರತಿದಿನ ಬೆಳಿಗ್ಗೆ ಪೌರಕಾರ್ಮಿಕರು ನಡೆಸುವ ಸ್ವಚ್ಛತಾ ಕಾರ್ಯದ ಬಳಿ ಹೋಗಿ ಸೆಲ್ಫಿ ತೆಗೆದು ಗ್ರೂಪ್‌ಗೆ ಹಾಕುವುದೇ ಕಮ್ಯೂನಿಟಿ ಮೊಬಿಲೈಜರ್ ಕೆಲಸ ಎಂಬಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನರೇಗಲ್ಲ ಪಟ್ಟಣದ ಕೈಗಾ–ಇಲಕಲ್ಲ ರಾಜ್ಯ ಹೆದ್ದಾರಿಯ ಪಕ್ಕದಲ್ಲೇ ಕಸದ ರಾಶಿಗಳು ಬಿದ್ದಿರುವುದು ಸ್ವಚ್ಛತಾ ಕಾರ್ಯದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಪಟ್ಟಣದ ಜನರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವುದು, ಆರೋಗ್ಯ ನಿರೀಕ್ಷಕರೊಂದಿಗೆ ಸಮನ್ವಯ ಸಾಧಿಸುವುದು ಹಾಗೂ ಬೆಳಿಗ್ಗೆ 6 ಗಂಟೆಯಿಂದ ಪೌರಕಾರ್ಮಿಕರ ಕಾರ್ಯವನ್ನು ಮೇಲ್ವಿಚಾರಣೆ ಮಾಡುವುದು ಕಮ್ಯೂನಿಟಿ ಮೊಬಿಲೈಜರ್‌ಗಳ ಜವಾಬ್ದಾರಿಯಾಗಿತ್ತು. ಆದರೆ ಆ ಕೆಲಸಗಳು ನಡೆಯುತ್ತಿಲ್ಲ ಎಂದು ಆರೋಪಿಸಲಾಗಿದೆ.

“ಪೌರಕಾರ್ಮಿಕರೇ ಹೆಚ್ಚು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಕಮ್ಯೂನಿಟಿ ಮೊಬಿಲೈಜರ್‌ಗಳಿಗಿಂತ ಪೌರಕಾರ್ಮಿಕರ ಸಂಬಳ ಹೆಚ್ಚಿಸಿ ಅವರಿಗೆ ಪ್ರೋತ್ಸಾಹ ನೀಡುವುದು ಸೂಕ್ತ.”

ಜ್ಯೋತಿ ಪಾಯಪ್ಪಗೌಡ್ರ,

ಮಾಜಿ ಸದಸ್ಯೆ, ಪಟ್ಟಣ ಪಂಚಾಯಿತಿ ನರೇಗಲ್ಲ

ಜಮೀನಿನಲ್ಲಿ ಸಿಡಿಲು ಬಡಿದು ಮಹಿಳೆ ಸೇರಿ ಎರಡು ಹಸುಗಳು ಸಾವು!

ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಸತ್ಯಗಾಲ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಆಲನಹಳ್ಳಿ ನಿವಾಸಿ ವಿನೋದಾ ಮೃತ ರೈತ ಮಹಿಳೆ.

ಇಂದು ಸಂಜೆ ಜಮೀನಿನಲ್ಲಿ ಕಟ್ಟಿಹಾಕಿದ್ದ ಹಸುಗಳನ್ನು ಮಳೆಯ ಕಾರಣದಿಂದ ಮನೆಗೆ ಕರೆತರಲು ಹೋದ ಸಂದರ್ಭದಲ್ಲೇ ಸಿಡಿಲು ಬಡಿತ ಸಂಭವಿಸಿದೆ ಎಂದು ತಿಳಿದುಬಂದಿದೆ. ಸಿಡಿಲಿನ ತೀವ್ರತೆಗೆ ವಿನೋದಾ ಮಾತ್ರವಲ್ಲದೆ ಅವರಿಗೆ ಸೇರಿದ ಎರಡು ಹಸುಗಳು ಕೂಡ ಸ್ಥಳದಲ್ಲೇ ಸಾವನ್ನಪ್ಪಿವೆ.

ಘಟನೆ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳೀಯರು ಆಘಾತ ವ್ಯಕ್ತಪಡಿಸಿದ್ದಾರೆ.

ಲಕ್ಕುಂಡಿಗೆ ‘ಹೆರಿಟೇಜ್ ಹಬ್’ ಕನಸು..! ದೇಶದ ಅಗ್ರ ಪುರಾತತ್ವ ಕೇಂದ್ರವನ್ನಾಗಿಸಲು ಸಚಿವ ಎಚ್.ಕೆ. ಪಾಟೀಲ ಮಾಸ್ಟರ್ ಪ್ಲಾನ್

ವಿಜಯಸಾಕ್ಷಿ ಸುದ್ದಿ, ಬೆಂಗಳೂರು/ಗದಗ: “ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಪುರಾತತ್ವ ವೈಭವವನ್ನು ಒಳಗೊಂಡಿರುವ ಲಕ್ಕುಂಡಿಯನ್ನು ದೇಶದ ಅಗ್ರ ಪುರಾತತ್ವ ಕೇಂದ್ರವನ್ನಾಗಿ ರೂಪಿಸುವ ದಿಸೆಯಲ್ಲಿ ಸಮಗ್ರ ಯೋಜನೆಗಳೊಂದಿಗೆ ಕಾರ್ಯನಿರ್ವಹಿಸಬೇಕು” ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಮಟ್ಟದ ಸಲಹಾ ಸಮಿತಿ ಸಭೆಯು ಶನಿವಾರ ಬೆಂಗಳೂರಿನ ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಸಚಿವ ಎಚ್.ಕೆ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ, ಲಕ್ಕುಂಡಿಯ ಪುರಾತತ್ವ ಸಂಪತ್ತಿನ ಸಂರಕ್ಷಣೆ, ದೇವಾಲಯಗಳ ಪುನರುಜ್ಜೀವನ, ಪುರಾತನ ಬಾವಿಗಳ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕಾರ್ಯಗಳನ್ನು ಸಮನ್ವಯದಿಂದ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಈಗಾಗಲೇ 15 ಬಾವಿ ಹಾಗೂ 15 ದೇವಾಲಯಗಳನ್ನು ಸಾರ್ವಜನಿಕರಿಗೆ ಪರಿಚಯಿಸಲಾಗಿದ್ದು, ಕಾಲಕ್ರಮೇಣ ನಿರ್ಲಕ್ಷ್ಯಕ್ಕೆ ಒಳಗಾಗಿ ತಮ್ಮ ಗುರುತನ್ನು ಕಳೆದುಕೊಂಡಿದ್ದ ಅನೇಕ ಪಾರಂಪರಿಕ ತಾಣಗಳನ್ನು ಸರ್ಕಾರ ಮತ್ತು ಸ್ಥಳೀಯರ ಸಹಕಾರದಿಂದ ಮರು ಅನಾವರಣಗೊಳಿಸುವ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಅವರು ತಿಳಿಸಿದರು.

2026ರೊಳಗೆ ಕನಿಷ್ಠ 50 ಬಾವಿ ಹಾಗೂ 50 ದೇವಾಲಯಗಳನ್ನು ಗುರುತಿಸಿ, ಲಕ್ಕುಂಡಿಯ ಪಾರಂಪರಿಕ ತಾಣಗಳ ಸಂಖ್ಯೆಯನ್ನು 100ರ ಗಡಿಗೆ ತಲುಪಿಸುವ ಮಹತ್ವಾಕಾಂಕ್ಷಿ ಗುರಿ ಹೊಂದಲಾಗಿದೆ. ಈ ಯೋಜನೆ ಸಾಕಾರಗೊಳ್ಳಲು ಸ್ಥಳೀಯರ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದು ಸಚಿವರು ಹೇಳಿದರು.

ಇತಿಹಾಸದಲ್ಲಿ ಲಕ್ಕುಂಡಿಯಲ್ಲಿ ಅನೇಕ ಬಾವಿ ಹಾಗೂ ದೇವಾಲಯಗಳಿರುವ ಬಗ್ಗೆ ಉಲ್ಲೇಖಗಳಿದ್ದು, ಅವುಗಳನ್ನು ಹೆಕ್ಕಿ ಹೊರತೆಗೆದು ಸಂರಕ್ಷಿಸುವ ಕಾರ್ಯವನ್ನು ಪ್ರಾಧಿಕಾರ ಕೈಗೊಳ್ಳಬೇಕು. ಈ ದಿಶೆಯಲ್ಲಿ ಅಧಿಕಾರಿಗಳು ಹಾಗೂ ಪ್ರಾಧಿಕಾರದ ಸದಸ್ಯರು ಚುರುಕಾಗಿ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಸೂಚಿಸಿದರು.

ನರಗುಂದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, “ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊತ್ತಿರುವ ಲಕ್ಕುಂಡಿಯ ಪುರಾತತ್ವ ಸಂಪತ್ತು ಇಂದಿನ ಪೀಳಿಗೆಗೆ ಅಚ್ಚರಿಯ ಸಂಗತಿಯಾಗಿದೆ. ಆ ಕಾಲದ ಶಿಲ್ಪಿಗಳ ಪ್ರತಿಭೆ, ಕಲಾತ್ಮಕತೆ ಮತ್ತು ತಾಂತ್ರಿಕ ಸಾಮರ್ಥ್ಯಕ್ಕೆ ಇಲ್ಲಿ ದೊರೆಯುತ್ತಿರುವ ಶಿಲ್ಪಗಳು ಹಾಗೂ ಪುರಾವೆಗಳು ಜೀವಂತ ಸಾಕ್ಷಿಗಳಾಗಿವೆ” ಎಂದು ಹೇಳಿದರು.

ಸಚಿವ ಎಚ್.ಕೆ. ಪಾಟೀಲರ ನೇತೃತ್ವದಲ್ಲಿ ನಡೆಯುತ್ತಿರುವ ಅನ್ವೇಷಣಾ ಕಾರ್ಯಗಳಿಂದ ಲಕ್ಕುಂಡಿಯ ಐತಿಹಾಸಿಕ ಮಹತ್ವ ಮತ್ತಷ್ಟು ಬೆಳಕಿಗೆ ಬರುತ್ತಿದೆ. ಈಗ ಪತ್ತೆಯಾಗಿರುವ ಪುರಾವೆಗಳು ಕೇವಲ ಆರಂಭ ಮಾತ್ರ. ಇನ್ನಷ್ಟು ಅನ್ವೇಷಣೆಗಳು ನಡೆದರೆ ಲಕ್ಕುಂಡಿಯ ಗತ ವೈಭವ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ಸಭೆಯಲ್ಲಿ ರಾಜ್ಯ ಮಟ್ಟದ ಸಲಹಾ ಸಮಿತಿ ಸದಸ್ಯರು ಲಕ್ಕುಂಡಿಯ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಸಲಹೆಗಳು ಹಾಗೂ ಅಭಿಪ್ರಾಯಗಳನ್ನು ಮಂಡಿಸಿದರು. ಪಾರಂಪರಿಕ ತಾಣಗಳ ಸಂರಕ್ಷಣೆ, ಪ್ರವಾಸೋದ್ಯಮ ವಿಸ್ತರಣೆ, ಸ್ಥಳೀಯ ಕಲಾ ಪರಂಪರೆಯ ಉತ್ತೇಜನ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಸದಸ್ಯರು ಅಭಿಪ್ರಾಯಪಟ್ಟರು.

ಸಭೆಯಲ್ಲಿ ರಾಜ್ಯ ಮಟ್ಟದ ಸಲಹಾ ಸಮಿತಿ ಸದಸ್ಯರಾದ ಸಿ.ಜಿ. ಬೆಟಸೂರಮಠ, ಸಿದ್ದಲಿಂಗೇಶ್ವರ ಎಚ್. ಪಾಟೀಲ, ಶ್ರೀಮತಿ ಗೀತಾಂಜಲಿ ರಾವ್, ಅ.ದ. ಕಟ್ಟಿಮನಿ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕ್ ಚಂದ್ರ, ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತ ದೇವರಾಜ್ ಎ., ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೊಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಲಕ್ಕುಂಡಿಯನ್ನು ದೇಶದ ಅಗ್ರ ಪುರಾತತ್ವ ಕೇಂದ್ರವನ್ನಾಗಿ ರೂಪಿಸುವ ಗುರಿಯೊಂದಿಗೆ ಸರ್ಕಾರ ಸಮಗ್ರ ಯೋಜನೆ ರೂಪಿಸಿದೆ. ಇತಿಹಾಸದಲ್ಲಿ ಉಲ್ಲೇಖವಾಗಿರುವ ಬಾವಿ ಹಾಗೂ ದೇವಾಲಯಗಳನ್ನು ಪತ್ತೆಹಚ್ಚಿ ಸಂರಕ್ಷಿಸುವ ಕಾರ್ಯಕ್ಕೆ ವೇಗ ನೀಡಲಾಗುತ್ತದೆ.”

ಎಚ್.ಕೆ. ಪಾಟೀಲ

ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ

ಗದಗಕ್ಕೆ ಕೈಕೊಟ್ಟ ಸ್ಪೆಷಲ್ ರೈಲುಗಳು..!

ವಿಜಯಸಾಕ್ಷಿ ಸುದ್ದಿ, ಗದಗ: ಮೈಸೂರು–ಹಜರತ್ ನಿಜಾಮುದ್ದೀನ್ ಹಾಗೂ ಯಶವಂತಪುರ–ವಿಜಯಪುರ ವಿಶೇಷ ರೈಲುಗಳನ್ನು ಗದಗ ಬೈಪಾಸ್ ಮೂಲಕ ಸಂಚರಿಸಿ, ಗದಗ ಮೇನ್ ಜಂಕ್ಷನ್‌ನಲ್ಲಿ ನಿಲುಗಡೆ ನೀಡದಿರುವ ಕ್ರಮಕ್ಕೆ ಪ್ರಯಾಣಿಕರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ತಕ್ಷಣವೇ ಗದಗ ಮೇನ್ ಜಂಕ್ಷನ್ ಹಾಗೂ ಬಾಗಲಕೋಟೆ ನಿಲ್ದಾಣಗಳಲ್ಲಿ ನಿಲುಗಡೆ ಕಲ್ಪಿಸಬೇಕೆಂದು ಗದಗ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ಆಗ್ರಹಿಸಿದ್ದಾರೆ.

ದಿ. 16ರಂದು ಸಂಜೆ 6.15ಕ್ಕೆ ಸಂಚರಿಸಿದ ಯಶವಂತಪುರ–ವಿಜಯಪುರ ವಿಶೇಷ ರೈಲು ಹಾಗೂ ದಿ. 21ರಂದು ಮುಂಜಾನೆ 4 ಗಂಟೆಗೆ ಸಂಚರಿಸಲಿರುವ ಮೈಸೂರು–ಹಜರತ್ ನಿಜಾಮುದ್ದೀನ್ ವಿಶೇಷ ರೈಲುಗಳು ಗದಗ ಬೈಪಾಸ್ ಮೂಲಕ ಸಂಚಾರ ಮಾಡುತ್ತಿವೆ. ರೈಲು ಸಂಖ್ಯೆ 06261 ವಿಶೇಷ ರೈಲು ಹುಬ್ಬಳ್ಳಿ ಬಿಟ್ಟ ನಂತರ ನೇರವಾಗಿ ವಿಜಯಪುರಕ್ಕೆ ಸಂಚರಿಸುತ್ತಿದ್ದು, ಗದಗ ಮೇನ್ ಜಂಕ್ಷನ್‌ನಲ್ಲಿ ನಿಲುಗಡೆ ಇಲ್ಲದೇ ಬೈಪಾಸ್ ಮೂಲಕ ಸಂಚರಿಸುತ್ತಿರುವುದು ಜಿಲ್ಲೆಯ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದೇ ರೈಲು ವಾಪಸ್ 06262 ಸಂಖ್ಯೆಯಲ್ಲಿ ವಿಜಯಪುರದಿಂದ ಹೊರಟು ನೇರವಾಗಿ ಹುಬ್ಬಳ್ಳಿ ತಲುಪಿ ಮುಂದೆ ಮೈಸೂರಿಗೆ ಸಂಚರಿಸಲಿದ್ದು, ಈ ರೈಲುಗೂ ಗದಗ ಮೇನ್ ಜಂಕ್ಷನ್‌ನಲ್ಲಿ ನಿಲುಗಡೆ ಕಲ್ಪಿಸಬೇಕೆಂದು ಆಗ್ರಹಿಸಲಾಗಿದೆ.

ಇನ್ನೊಂದೆಡೆ, ರೈಲು ಸಂಖ್ಯೆ 06577 ಯಶವಂತಪುರ–ವಿಜಯಪುರ ವಿಶೇಷ ರೈಲು ಮೇ 16ರಿಂದ ಜೂನ್ 27ರವರೆಗೆ ಪ್ರತಿ ಶನಿವಾರ ಸಂಜೆ 6.15ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಗ್ಗೆ 5.15ಕ್ಕೆ ವಿಜಯಪುರ ತಲುಪಲಿದೆ. ಈ ರೈಲು ಸಹ ಗದಗ ಬೈಪಾಸ್ ಮೂಲಕ ಸಂಚರಿಸುತ್ತಿದ್ದು, ಗದಗ ಹಾಗೂ ಬಾಗಲಕೋಟೆ ಭಾಗದ ಪ್ರಯಾಣಿಕರಿಗೆ ಭಾರೀ ತೊಂದರೆ ಉಂಟಾಗುತ್ತಿದೆ ಎಂದು ವಿಶ್ವನಾಥ ಖಾನಾಪೂರ ತಿಳಿಸಿದ್ದಾರೆ.

ವಾಪಸ್ ಸಂಚರಿಸುವ ರೈಲು ಸಂಖ್ಯೆ 06578 ಪ್ರತಿ ಭಾನುವಾರ ಸಂಜೆ 5 ಗಂಟೆಗೆ ವಿಜಯಪುರದಿಂದ ಹೊರಟು ಮರುದಿನ ಬೆಳಗ್ಗೆ 4 ಗಂಟೆಗೆ ಯಶವಂತಪುರ ತಲುಪಲಿದ್ದು, ಈ ರೈಲು ಸಹ ಗದಗ ಮೇನ್ ಜಂಕ್ಷನ್‌ನಲ್ಲಿ ನಿಲುಗಡೆ ಇಲ್ಲದೇ ಹಾವೇರಿ ಮೂಲಕ ಯಶವಂತಪುರ ತಲುಪಲಿದೆ. ಮತ್ತೆ ಈ ರೈಲು ಹುಬ್ಬಳ್ಳಿ ಬೈಪಾಸ್ ಮೂಲಕ ಬಾದಾಮಿ ಬಿಟ್ಟರೆ ನೇರವಾಗಿ ಹಾವೇರಿ ಮೂಲಕ ಯಶವಂತಪುರ ತಲುಪಲಿದ್ದು, ಗದಗ ಭಾಗದ ಪ್ರಯಾಣಿಕರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಕುರಿತು ಮಾಜಿ ಮುಖ್ಯಮಂತ್ರಿ ಹಾಗೂ ಲೋಕಸಭಾ ಸದಸ್ಯ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಗಿದ್ದು, “ಗದಗ ಮೇನ್ ಜಂಕ್ಷನ್ ಮೂಲಕ ವಿಜಯಪುರಕ್ಕೆ ಹೋಗುವ ರೈಲುಗಳು ಗದಗ ಮೇನ್ ಜಂಕ್ಷನ್ ಮೂಲಕವೇ ಸಂಚಾರ ಆಗುತ್ತವೆ” ಎಂದು ಅವರು ತಿಳಿಸಿದ್ದರು ಎಂದು ಖಾನಾಪೂರ ಹೇಳಿದ್ದಾರೆ.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ, ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ, ನೈರುತ್ಯ ರೈಲ್ವೆ ಇಲಾಖೆ ಹಾಗೂ ವಿಜಯಪುರ ಲೋಕಸಭಾ ಸದಸ್ಯ ರಮೇಶ್ ಜಿಗಜಿಣಗಿ ಅವರಿಗೆ ಬಸವರಾಜ ಬೊಮ್ಮಾಯಿ ಅವರು ಸಹ ಮನವರಿಕೆ ಮಾಡಿದರೂ ಸಹ ಗದಗ ಮೇನ್ ಜಂಕ್ಷನ್‌ಗೆ ನಿಲುಗಡೆ ಇಲ್ಲದೇ ರೈಲುಗಳು ಸಂಚರಿಸುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಇನ್ನಾದರೂ ವಿಶೇಷ ರೈಲುಗಳಿಗೆ ಗದಗ ಮೇನ್ ಜಂಕ್ಷನ್‌ನಲ್ಲಿ ನಿಲುಗಡೆ ಕಲ್ಪಿಸಿ, ಗದಗ ಮಾರ್ಗದ ಮೂಲಕವೇ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಗದಗ ಜಿಲ್ಲಾ ವಿಕಾಸ ವೇದಿಕೆ ಪರವಾಗಿ ಜಗದೀಶ ಕಂಗೂರಿ, ಶಿದ್ದಪ್ಪ ಜರತಖನಿ, ವೆಂಕಟೇಶ ಕಬಾಡಿ, ರಜಾಕ್ ನೂರಭಾಷಾ, ಶಿವಮೂರ್ತಯ್ಯ ಪುರಾಣಿಕಮಠ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.

“ಗದಗ ಮೇನ್ ಜಂಕ್ಷನ್ ಉತ್ತರ ಕರ್ನಾಟಕದ ಪ್ರಮುಖ ರೈಲು ನಿಲ್ದಾಣ. ಇಲ್ಲಿಗೆ ನಿಲುಗಡೆ ನೀಡದೇ ವಿಶೇಷ ರೈಲುಗಳನ್ನು ಬೈಪಾಸ್ ಮೂಲಕ ಓಡಿಸುವುದು ಜಿಲ್ಲೆಯ ಜನತೆಗೆ ಮಾಡುತ್ತಿರುವ ಅನ್ಯಾಯ. ಗದಗ ಹಾಗೂ ಬಾಗಲಕೋಟೆ ಭಾಗದ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗುವಂತೆ ತಕ್ಷಣವೇ ನಿಲುಗಡೆ ಕಲ್ಪಿಸಬೇಕು.”

ವಿಶ್ವನಾಥ ಖಾನಾಪೂರ

ಅಧ್ಯಕ್ಷರು, ಗದಗ ಜಿಲ್ಲಾ ವಿಕಾಸ ವೇದಿಕೆ

error: Content is protected !!