Home Blog

ಟ್ರೆಕ್ಕಿಂಗ್ ನೆಪದಲ್ಲಿ ಭಾವಿ ಪತಿಯನ್ನು ಕಂದಕಕ್ಕೆ ತಳ್ಳಿ ಕೊಲೆ: ಆರೋಪಿ ಧರಿಸಿದ್ದ ಹೂಡಿಯಿಂದ ಬಯಲಾಯ್ತು ಪ್ಲ್ಯಾನ್!

0

ಮುಂಬೈ: ಟ್ರೆಕ್ಕಿಂಗ್‌ಗೆ ಕರೆದುಕೊಂಡು ಹೋಗಿ ಭಾವಿ ಪತಿಯನ್ನು ಕಂದಕಕ್ಕೆ ತಳ್ಳಿ ಹತ್ಯೆಗೈದ ಪ್ರಕರಣವನ್ನು ಮಹಾರಾಷ್ಟ್ರ ಪೊಲೀಸರು ಭೇದಿಸಿದ್ದು, ಆರೋಪಿಯೊಬ್ಬ ಧರಿಸಿದ್ದ ಹೂಡಿಯೇ ತನಿಖೆಗೆ ಮಹತ್ವದ ಸುಳಿವಾಗಿ ಪರಿಣಮಿಸಿದೆ.

ಮಹಾರಾಷ್ಟ್ರದ ಲೋಹಗಡ್ ಕೋಟೆಯಲ್ಲಿ ಜೂನ್ 18ರಂದು ಈ ಘಟನೆ ನಡೆದಿತ್ತು. ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಅವರು ಭಾವಿ ಪತ್ನಿ ಸಿಯಾ ಗೋಯಲ್ ಜೊತೆ ಟ್ರೆಕ್ಕಿಂಗ್‌ಗೆ ತೆರಳಿದ್ದ ವೇಳೆ ಕಾಲು ಜಾರಿ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಮೊದಲು ಅಪಘಾತ ಪ್ರಕರಣವೆಂದು ದಾಖಲಿಸಿಕೊಂಡಿದ್ದರು.

ಆದರೆ ತನಿಖೆ ಮುಂದುವರಿದಂತೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಸಿಯಾ ಗೋಯಲ್ ತನ್ನ ಪ್ರಿಯಕರ ಚೇತನ್ ಚೌಧರಿ ಜೊತೆ ಸೇರಿ ಕೇತನ್ ಅಗರ್ವಾಲ್ ಅವರನ್ನು ಸುಮಾರು 400 ಅಡಿ ಆಳದ ಕಂದಕಕ್ಕೆ ತಳ್ಳಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

ಪ್ರಕರಣದ ತನಿಖೆ ವೇಳೆ ಕೋಟೆ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದರು. ಈ ವೇಳೆ ಕೇತನ್ ಮತ್ತು ಸಿಯಾ ಅವರನ್ನು ಹಿಂಬಾಲಿಸುತ್ತಿದ್ದ ವ್ಯಕ್ತಿಯೊಬ್ಬ ಬಿಸಿಲಿನ ನಡುವೆಯೂ ಹೂಡಿ ಧರಿಸಿರುವುದು ಗಮನ ಸೆಳೆದಿತ್ತು. ಜೂನ್ ತಿಂಗಳಲ್ಲಿ ಸುಮಾರು 33 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇದ್ದರೂ ದಪ್ಪ ಹಾಗೂ ಬೆಚ್ಚಗಿನ ಉಡುಪು ಧರಿಸಿದ್ದ ವ್ಯಕ್ತಿ ಪೊಲೀಸರಲ್ಲಿ ಅನುಮಾನ ಹುಟ್ಟಿಸಿದ್ದಾನೆ.

ಈ ಸುಳಿವಿನ ಆಧಾರದಲ್ಲಿ ತನಿಖೆ ಮುಂದುವರಿಸಿದ ಪೊಲೀಸರು, ಹೂಡಿ ಧರಿಸಿದ್ದ ವ್ಯಕ್ತಿಯ ಗುರುತು ಪತ್ತೆಹಚ್ಚಿದ್ದು, ಆತ ಚೇತನ್ ಚೌಧರಿ ಎಂಬುದು ತಿಳಿದುಬಂದಿದೆ. ತನ್ನ ಚಲನವಲನಗಳ ಬಗ್ಗೆ ಸುಳಿವು ಸಿಗದಂತೆ ಮಾಡಲು ಚೇತನ್ ತನ್ನ ಮೊಬೈಲ್ ಫೋನ್ ಅನ್ನು ಕೆಲಸದ ಸ್ಥಳದಲ್ಲೇ ಬಿಟ್ಟು ಹೋಗಿದ್ದ ಹಾಗೂ ಸ್ಥಳ ಮಾಹಿತಿ ಪತ್ತೆಯಾಗದಂತೆ ಸಿಬ್ಬಂದಿಯೊಬ್ಬರ ಮೊಬೈಲ್ ಬಳಸಿದ್ದಾನೆ ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.

ಇದರ ಜೊತೆಗೆ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ನಡುವೆ ಸಾವಿರಾರು ಬಾರಿ ಕರೆಗಳು ನಡೆದಿರುವುದು ಹಾಗೂ ಹಲವು ಗಂಟೆಗಳ ಕಾಲ ಇಬ್ಬರೂ ಸಂಭಾಷಣೆ ನಡೆಸಿರುವುದನ್ನು ಕಾಲ್ ಡೀಟೇಲ್ ದಾಖಲೆಗಳು ದೃಢಪಡಿಸಿವೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರೂ ಕುಟುಂಬದ ಗೌರವದ ಕಾರಣ ಸಿಯಾ ನಿಶ್ಚಿತಾರ್ಥವನ್ನು ರದ್ದುಪಡಿಸಲು ಮುಂದಾಗಿರಲಿಲ್ಲ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಕೇತನ್ ಅಗರ್ವಾಲ್ ಮತ್ತು ಸಿಯಾ ಗೋಯಲ್ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದೇ ವರ್ಷದ ನವೆಂಬರ್‌ನಲ್ಲಿ ಉದಯಪುರದಲ್ಲಿ ಅದ್ದೂರಿ ವಿವಾಹ ನೆರವೇರಿಸಲು ಕುಟುಂಬಗಳು ಸಿದ್ಧತೆ ನಡೆಸಿದ್ದವು. ಆದರೆ ಮದುವೆಗೆ ಮುನ್ನವೇ ಕೇತನ್ ಅವರನ್ನು ಲೋಹಗಡ್ ಕೋಟೆಗೆ ಕರೆದುಕೊಂಡು ಹೋಗುವಂತೆ ಸಿಯಾ ಹಲವು ಬಾರಿ ಒತ್ತಾಯ ಮಾಡಿದ್ದಳು ಎನ್ನಲಾಗಿದೆ.

ಜೂನ್ 18ರಂದು ಕೋಟೆಯ ಕಣಿವೆ ಸಮೀಪ ಮೂವರು ಇದ್ದ ವೇಳೆ ಕೇತನ್ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದರು. ಘಟನೆಯ ಬಳಿಕ ಸಿಯಾ ಗೋಯಲ್ ಪೊಲೀಸರಿಗೆ ಕರೆ ಮಾಡಿ, ಫೋಟೋ ತೆಗೆಯುವ ವೇಳೆ ಕಾಲು ಜಾರಿ ಬಿದ್ದಿದ್ದಾರೆ ಎಂದು ಮಾಹಿತಿ ನೀಡಿದ್ದಳು. ಆದರೆ ಸಿಸಿಟಿವಿ ದೃಶ್ಯಾವಳಿ, ಮೊಬೈಲ್ ಕರೆಗಳ ವಿವರಗಳು ಹಾಗೂ ಇತರೆ ತಾಂತ್ರಿಕ ಸಾಕ್ಷ್ಯಗಳ ಪರಿಶೀಲನೆಯ ಬಳಿಕ ಇದು ಪೂರ್ವನಿಯೋಜಿತ ಹತ್ಯೆ ಎಂಬುದು ದೃಢಪಟ್ಟಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಇಬ್ಬರೂ ಹತ್ಯೆ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನವಿಲು ಗರಿ ರೀಲ್ಸ್‌ಗೆ ಸಂಕಷ್ಟ: ನೋಟಿಸ್ ಬೆನ್ನಲ್ಲೇ ವಿಡಿಯೋ ಡಿಲೀಟ್, ಕ್ಷಮೆ ಕೇಳಿದ ನಿವೇದಿತಾ-ಕಿಶನ್

ಬೆಂಗಳೂರು: ನವಿಲು ಗರಿಗಳನ್ನು ಬಳಸಿಕೊಂಡು ಮಾಡಿದ್ದ ‘ಹೇ ನವಿಲೇ’ ಇನ್‌ಸ್ಟಾಗ್ರಾಮ್ ರೀಲ್ಸ್ ಭಾರೀ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ನಟಿ ನಿವೇದಿತಾ ಗೌಡ ಮತ್ತು ಇನ್‌ಫ್ಲುಯೆನ್ಸರ್ ಕಿಶನ್ ಬಿಳಗಲಿ ಕ್ಷಮೆಯಾಚನೆ ಮಾಡಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಇಬ್ಬರೂ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಿದ್ದಾರೆ.

ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ನಿವೇದಿತಾ ಗೌಡ, “ವನ್ಯಜೀವಿಗಳಿಗೆ ಸಂಬಂಧಿಸಿದ ಗರಿಗಳು ಅಥವಾ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು, ಬಳಸುವುದು ಮತ್ತು ಅದರಿಂದ ಕಂಟೆಂಟ್ ಸೃಷ್ಟಿಸುವುದು ಕಾನೂನುಬಾಹಿರ ಎಂಬ ಅರಿವು ನಮಗೆ ಇರಲಿಲ್ಲ. ಈ ತಪ್ಪಿನಿಂದ ಇತರರು ಪಾಠ ಕಲಿಯಬೇಕು” ಎಂದು ಹೇಳಿದ್ದಾರೆ.

ಇನ್ನೊಂದೆಡೆ ಕಿಶನ್ ಬಿಳಗಲಿ, “ವಿಡಿಯೋ ನಿರ್ಮಾಣದ ವೇಳೆ ಬಳಸಿದ ನವಿಲು ಗರಿಗಳನ್ನು ಬಾಡಿಗೆಗೆ ಪಡೆದಿದ್ದೆವು. ಆದರೆ ಕಾನೂನಿನ ಬಗ್ಗೆ ಮಾಹಿತಿ ಇರಲಿಲ್ಲ. ಸಾರ್ವಜನಿಕ ವ್ಯಕ್ತಿಗಳಾಗಿ ನಾವು ನೀಡುವ ಸಂದೇಶದ ಹೊಣೆಗಾರಿಕೆ ಅರಿತುಕೊಂಡಿದ್ದೇವೆ. ಆದ್ದರಿಂದಲೇ ವಿಡಿಯೋ ಅಳಿಸಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ.

ಅರಣ್ಯ ಇಲಾಖೆಯ ನೋಟಿಸ್ ಬಳಿಕ ಇಬ್ಬರೂ ತನಿಖೆಗೆ ಸಂಪೂರ್ಣ ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ.

‘ಹೇ ನವಿಲೇ’ ಹಾಡಿಗೆ ಚಿತ್ರೀಕರಿಸಿದ್ದ ರೀಲ್ಸ್‌ನಲ್ಲಿ ನವಿಲು ಗರಿಗಳನ್ನು ಉಡುಪಿನ ಭಾಗವಾಗಿ ಬಳಸಲಾಗಿತ್ತು. ಈ ದೃಶ್ಯಗಳು ವೈರಲ್ ಆಗುತ್ತಿದ್ದಂತೆಯೇ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆ ಕುರಿತು ಸಾಮಾಜಿಕ ಕಾರ್ಯಕರ್ತರು ಹಾಗೂ ಪರಿಸರ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರಕರಣದ ಕುರಿತು ಅರಣ್ಯ ಇಲಾಖೆ ತನಿಖೆ ಮುಂದುವರಿಸಿದೆ.

ಕಂಗನಾಗೆ ಗುಡ್‌ಬೈ, ಫರಾ-ರಿತೇಶ್‌ಗೆ ಹಾಯ್! ಹೊಸ ಅವತಾರದಲ್ಲಿ ಬರುತ್ತಿದೆ ‘ಲಾಕ್ ಅಪ್’

ರಿಯಾಲಿಟಿ ಶೋ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದ್ದ ‘ಲಾಕ್ ಅಪ್’ ಇದೀಗ ಸಂಪೂರ್ಣ ಹೊಸ ರೂಪದಲ್ಲಿ ಮರಳುತ್ತಿದೆ. ‘ಲಾಕ್ ಅಪ್: ಸಚ್ ಯಾ ಸಜಾ’ ಹೆಸರಿನ ಎರಡನೇ ಸೀಸನ್‌ನಲ್ಲಿ ಮೊದಲ ಸೀಸನ್‌ನ ಮುಖವಾಗಿದ್ದ ಕಂಗನಾ ರಣಾವತ್ ಕಾಣಿಸಿಕೊಳ್ಳುವುದಿಲ್ಲ. ಅವರ ಬದಲಿಗೆ ಫರಾ ಖಾನ್ ಮತ್ತು ರಿತೇಶ್ ದೇಶ್‌ಮುಖ್ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ನಿರ್ಮಾಪಕಿ ಏಕ್ತಾ ಕಪೂರ್, “ಈ ಸೀಸನ್‌ಗಾಗಿ ನಾವು ಸಂಪೂರ್ಣ ಹೊಸ ಫಾರ್ಮ್ಯಾಟ್ ರೂಪಿಸಿದ್ದೇವೆ. ಹಳೆಯ ಶೋನ ಅಂಶಗಳನ್ನು ಮುಂದುವರಿಸುವ ಬದಲು, ಸಂಪೂರ್ಣ ಹೊಸ ಅನುಭವ ನೀಡುವ ಉದ್ದೇಶ ಹೊಂದಿದ್ದೇವೆ. ಹೀಗಾಗಿ ನಿರೂಪಕರಿಂದ ಹಿಡಿದು ಕಾನ್ಸೆಪ್ಟ್‌ವರೆಗೂ ಎಲ್ಲವೂ ಬದಲಾಗಿದೆ” ಎಂದು ಹೇಳಿದ್ದಾರೆ.

ಮೊದಲ ಸೀಸನ್‌ನಲ್ಲಿ ಕಂಗನಾ ಅವರ ಖಡಕ್ ನಿರೂಪಣೆ ಶೋಗೆ ವಿಶೇಷ ಗುರುತನ್ನು ತಂದುಕೊಟ್ಟಿತ್ತು. ಆದರೆ ಈ ಬಾರಿ ಶೋವನ್ನು ವಿಭಿನ್ನ ರೀತಿಯಲ್ಲಿ ಪ್ರಸ್ತುತಪಡಿಸಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಕಂಗನಾ ಅವರ ರಾಜಕೀಯ ಜವಾಬ್ದಾರಿಗಳೂ ಈ ನಿರ್ಧಾರಕ್ಕೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ.

ಇನ್ನು ಶೋನ ಮತ್ತೊಂದು ದೊಡ್ಡ ಬದಲಾವಣೆ ಎಂದರೆ, ಈ ಬಾರಿ ಪ್ರಸಾರ ವೇದಿಕೆ. ಮೊದಲ ಸೀಸನ್ ALTBalaji ಮತ್ತು MX Player ನಲ್ಲಿ ಪ್ರಸಾರವಾಗಿದ್ದರೆ, ಎರಡನೇ ಸೀಸನ್ ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ.

14 ಜನ ಖ್ಯಾತ ಸೆಲೆಬ್ರಿಟಿಗಳನ್ನು ಜೈಲು ಮಾದರಿಯ ವಾತಾವರಣದಲ್ಲಿ ಆರು ವಾರಗಳ ಕಾಲ ಇರಿಸಲಾಗುತ್ತದೆ. ಯಾವುದೇ ಹೊರಗಿನ ಸಂಪರ್ಕವಿಲ್ಲದೆ ಅವರು ಟಾಸ್ಕ್‌ಗಳು, ಶಿಕ್ಷೆಗಳು ಮತ್ತು ಮಾನಸಿಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಬಾಲಾಜಿ ಟೆಲಿಫಿಲ್ಮ್ಸ್ ಮತ್ತು ಕೊಲೊಸಿಯಮ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಿರುವ ಈ ಶೋ ಜೂನ್ 27ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಆರಂಭವಾಗಲಿದೆ.

ರಿಯಾಲಿಟಿ ಶೋ ಅಭಿಮಾನಿಗಳಲ್ಲಿ ಈಗಾಗಲೇ ಭಾರೀ ಕುತೂಹಲ ಮೂಡಿಸಿರುವ ‘ಲಾಕ್ ಅಪ್ 2’, ಹೊಸ ನಿರೂಪಕರು ಮತ್ತು ಹೊಸ ಫಾರ್ಮ್ಯಾಟ್‌ನೊಂದಿಗೆ ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸುತ್ತದೆ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಮುಂಬೈನಲ್ಲಿ ಧಾರಾಕಾರ ಮಳೆ ಅಬ್ಬರ: ಜಲಾವೃತಗೊಂಡ ರಸ್ತೆಗಳು, ರೈಲು ಸಂಚಾರದಲ್ಲಿ ವ್ಯತ್ಯಯ

ಮುಂಬೈ: ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಯಿಂದ ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ಹಲವೆಡೆ ಮರಗಳು ಉರುಳಿಬಿದ್ದಿರುವ ಘಟನೆಗಳು ವರದಿಯಾಗಿವೆ. ಕೆಲವು ಪ್ರದೇಶಗಳಲ್ಲಿ ಗೋಡೆ ಕುಸಿತದ ಘಟನೆಗಳೂ ಸಂಭವಿಸಿವೆ.

ನಗರದಲ್ಲಿ ಮುಂದುವರಿದ ಮಳೆಯ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (IMD) ಮುಂಬೈಗೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.

ಮಂಗಳವಾರ ರಾತ್ರಿ 8.30ರಿಂದ ಬುಧವಾರ ಬೆಳಗ್ಗೆ 5.30ರ ಅವಧಿಯಲ್ಲಿ ಮುಂಬೈನ ಹಲವು ಭಾಗಗಳಲ್ಲಿ ದಾಖಲೆಯ ಮಳೆಯಾಗಿದೆ. ರಾಮ ಮಂದಿರ ಪ್ರದೇಶದಲ್ಲಿ 224 ಮಿ.ಮೀ., ಕೊಲಾಬಾದಲ್ಲಿ 218.5 ಮಿ.ಮೀ. ಹಾಗೂ ಸಾಂತಾಕ್ರೂಜ್‌ನಲ್ಲಿ 210.6 ಮಿ.ಮೀ. ಮಳೆ ದಾಖಲಾಗಿದೆ. ಈ ಮಳೆಯಿಂದಾಗಿ ಹಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸಾರ್ವಜನಿಕರು ಸಂಕಷ್ಟ ಅನುಭವಿಸಿದರು.

ಭಾರೀ ಮಳೆಯ ಪರಿಣಾಮ ರೈಲು ಸಂಚಾರಕ್ಕೂ ಹೊಡೆತ ಬಿದ್ದಿದೆ. ತುರ್ಭೆ ಮತ್ತು ಕೋಪರ್ಖೈರನೆ ರೈಲು ನಿಲ್ದಾಣಗಳ ನಡುವಿನ ಹಳಿಯಲ್ಲಿ ಕುಸಿತ ಉಂಟಾದ ಕಾರಣ ಕೆಲಕಾಲ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಬಳಿಕ ರೈಲ್ವೆ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಂಡು ಸಂಚಾರವನ್ನು ಪುನರಾರಂಭಿಸಿದರು.

ಆದಾಗ್ಯೂ, ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಜಲಾವೃತಗೊಂಡಿದ್ದ ಹಲವೆಡೆ ನೀರು ಇಳಿದಿದ್ದು, ರಸ್ತೆ ಸಂಚಾರವೂ ಕ್ರಮೇಣ ಸಾಮಾನ್ಯಗೊಂಡಿದೆ.

ಮೆಟ್ರೋ ತಾಂತ್ರಿಕ ದೋಷಕ್ಕೆ ತತ್ತರಿಸಿದ ಬೆಂಗಳೂರು: ಮನೆ ಸೇರಲು ಲಾರಿ-ಟ್ರಕ್ʼಗಳ ಮೊರೆ ಹೋದ ಐಟಿ ಉದ್ಯೋಗಿಗಳು

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಐಟಿ ಹಬ್ ಎಂದು ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ಮತ್ತೊಮ್ಮೆ ಸಾರಿಗೆ ವ್ಯವಸ್ಥೆಯ ದುರ್ಬಲತೆ ಬಯಲಿಗೆ ಬಂದಿದ್ದು, ಮೆಟ್ರೋ ರೈಲು ಸೇವೆಯಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಸಾವಿರಾರು ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸಿದ್ದಾರೆ.

ಜೂನ್ 23ರ ಸಂಜೆ ನಮ್ಮ ಮೆಟ್ರೋ ಸೇವೆಯಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿ, ನಗರದ ಪ್ರಮುಖ ಭಾಗಗಳಲ್ಲಿ ಪ್ರಯಾಣಿಕರು ಪರದಾಡುವಂತಾಯಿತು. ವಿಶೇಷವಾಗಿ ಕಚೇರಿ ಸಮಯದಲ್ಲಿ ಸೇವೆ ಸ್ಥಗಿತಗೊಂಡ ಪರಿಣಾಮ ಸಾವಿರಾರು ಐಟಿ ಉದ್ಯೋಗಿಗಳು ಹಾಗೂ ಸಾರ್ವಜನಿಕರು ಮನೆ ತಲುಪಲು ಹರಸಾಹಸ ಪಟ್ಟರು.

ಮೆಟ್ರೋ ಸೇವೆ ದಿಢೀರ್ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ನಿಲ್ದಾಣಗಳ ಹೊರಗೆ ಮತ್ತು ರಸ್ತೆಗಳಲ್ಲಿ ಜನಸಂದಣಿ ಹೆಚ್ಚಾಯಿತು. ಈ ವೇಳೆ ಆನ್‌ಲೈನ್ ಕ್ಯಾಬ್ ಸೇವೆಗಳು ಸಮರ್ಪಕವಾಗಿ ಲಭ್ಯವಾಗದಿದ್ದರೆ, ಹಲವು ಆಟೋ ಚಾಲಕರು ಪ್ರಯಾಣಿಕರನ್ನು ಕರೆದೊಯ್ಯಲು ನಿರಾಕರಿಸಿದ ಆರೋಪಗಳು ಕೇಳಿಬಂದವು.

ಪರಿಣಾಮವಾಗಿ, ಕೆಲ ಪ್ರಯಾಣಿಕರು ಮನೆ ತಲುಪುವ ಅನಿವಾರ್ಯತೆಯಿಂದ ರಸ್ತೆಯಲ್ಲಿ ಸಾಗುತ್ತಿದ್ದ ಲಾರಿಗಳು ಹಾಗೂ ಟ್ರಕ್‌ಗಳಿಗೆ ಕೈ ತೋರಿಸಿ, ಅವುಗಳ ಮೂಲಕ ಪ್ರಯಾಣಿಸುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ವಿಡಿಯೊವನ್ನು Karnataka Portfolio ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಹಲವರು, ಕೃತಕ ಬುದ್ಧಿಮತ್ತೆ (AI), ಸ್ಮಾರ್ಟ್ ಮೊಬಿಲಿಟಿ, ಎಲೆಕ್ಟ್ರಿಕ್ ವಾಹನಗಳು ಹಾಗೂ ಭವಿಷ್ಯದ ಸಾರಿಗೆ ವ್ಯವಸ್ಥೆಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುವ ನಗರದಲ್ಲಿ, ಮೂಲಭೂತ ಮತ್ತು ಸುರಕ್ಷಿತ ಸಾರ್ವಜನಿಕ ಸಾರಿಗೆಯನ್ನೇ ಖಚಿತಪಡಿಸಲು ಸಾಧ್ಯವಾಗದಿರುವುದು ವಿಪರ್ಯಾಸ ಎಂದು ಅಭಿಪ್ರಾಯಪಟ್ಟಿದ್ದಾರೆ.

“ಮೆಟ್ರೋ ಕೈಕೊಡುತ್ತದೆ, ಕ್ಯಾಬ್‌ಗಳು ಸಿಗುವುದಿಲ್ಲ, ಆಟೋಗಳು ಬರುವುದಿಲ್ಲ, ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಾರೆ. ನಂತರ ಅಧಿಕಾರಿಗಳಿಂದ ಸ್ಪಷ್ಟೀಕರಣ ಬರುತ್ತದೆ. ಮರುದಿನ ಮತ್ತೆ ಇದೇ ಸಮಸ್ಯೆ ಮರುಕಳಿಸುತ್ತದೆ” ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಡಿ, ಐಟಿ, ಸಿಬಿಐ ಕೇಂದ್ರ ಸರ್ಕಾರದ ಕೈಗೊಂಬೆಗಳು: ಪ್ರಿಯಾಂಕ್ ಖರ್ಗೆ ಆರೋಪ

ಬೆಂಗಳೂರು: ಜಾರಿ ನಿರ್ದೇಶನಾಲಯ (ಇಡಿ) ದಾಳಿಗಳ ಸ್ವರೂಪ ಹಾಗೂ ಅವುಗಳ ಹಿಂದಿರುವ ರಾಜಕೀಯ ಉದ್ದೇಶಗಳ ಕುರಿತು ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳಾದ ಐಟಿ, ಇಡಿ ಮತ್ತು ಸಿಬಿಐ ಸ್ವಾಯತ್ತ ಸಂಸ್ಥೆಗಳಂತೆ ಕಾರ್ಯನಿರ್ವಹಿಸುವ ಬದಲು ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ 12 ವರ್ಷಗಳಲ್ಲಿ ದೇಶದಾದ್ಯಂತ ಸಾವಿರಾರು ಇಡಿ ದಾಳಿಗಳು ನಡೆದಿವೆ. ಆದರೆ, ಆ ದಾಳಿಗಳ ಆಧಾರದ ಮೇಲೆ ಅಪರಾಧ ಸಾಬೀತಾದ ಪ್ರಕರಣಗಳ ಪ್ರಮಾಣ ಶೇಕಡಾ 2ಕ್ಕೂ ಕಡಿಮೆ ಇದ್ದು, ಅದು ಶೇಕಡಾ 1.5ಕ್ಕಿಂತಲೂ ಕಡಿಮೆ ಮಟ್ಟದಲ್ಲಿದೆ ಎಂದು ಹೇಳಿದರು.

ಈ ಅಂಕಿಅಂಶಗಳೇ ಇಡಿ ದಾಳಿಗಳ ಹಿಂದೆ ರಾಜಕೀಯ ಉದ್ದೇಶ ಅಡಗಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ ಎಂದು ಖರ್ಗೆ ಅಭಿಪ್ರಾಯಪಟ್ಟರು.

ಕೇಂದ್ರ ತನಿಖಾ ಸಂಸ್ಥೆಗಳ ಕಾರ್ಯವೈಖರಿಯನ್ನು ಟೀಕಿಸಿದ ಪ್ರಿಯಾಂಕ್ ಖರ್ಗೆ, “ಯಾವಾಗ ಬೇಕೋ ಆಗ ದಾಳಿ ನಡೆಸುವ ರೀತಿಯಲ್ಲಿ ಈ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಇದು ಕಾನೂನು ಜಾರಿಯ ಕ್ರಮಕ್ಕಿಂತ ರಾಜಕೀಯ ಉದ್ದೇಶದ ಭಾಗವಾಗಿ ಕಾಣುತ್ತಿದೆ” ಎಂದು ಆರೋಪಿಸಿದರು. ತಮ್ಮ ಮೇಲೆಯೂ ಇಡಿ ದಾಳಿ ನಡೆಯುವ ಸಾಧ್ಯತೆಯನ್ನು ಉಲ್ಲೇಖಿಸಿದ ಸಚಿವರು, ಇವತ್ತಲ್ಲ ನಾಳೆ ನನ್ನ ಮೇಲೂ ಇಡಿ ದಾಳಿ ಆಗಬಹುದು. ಅಂತಹ ಪರಿಸ್ಥಿತಿಯನ್ನು ನಾನು ನಿರೀಕ್ಷಿಸುತ್ತಿದ್ದೇನೆ ಎಂದು ಹೇಳಿದರು.

ಜಾರಕಿಹೊಳಿ ಕುಟುಂಬಕ್ಕೆ ಇಡಿ ಶಾಕ್: ಅಬಕಾರಿ ಆಯುಕ್ತ ವೈ. ಮಂಜುನಾಥ್ ಮನೆ ಸೇರಿ 6 ಕಡೆ ದಾಳಿ

0

ಬೆಳಗಾವಿ: ರಾಜ್ಯದಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ವಿರುದ್ಧ ಇಡಿ ನಡೆಸುತ್ತಿರುವ ಕಾರ್ಯಾಚರಣೆಯ ಭಾಗವಾಗಿ, ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ವಿರುದ್ಧ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಸಚಿವ ಸತೀಶ್ ಜಾರಕಿಹೊಳಿ ಅವರ ಭಾವರಾಗಿರುವ ಮಂಜುನಾಥ್ ಅವರ ಮೇಲೆ ಬೇನಾಮಿ ಆಸ್ತಿ, ಅಕ್ರಮ ಹೂಡಿಕೆ ಮತ್ತು ಹಣ ವರ್ಗಾವಣೆ ಆರೋಪಗಳ ಹಿನ್ನೆಲೆ ಇಡಿ ಅಧಿಕಾರಿಗಳು ಬುಧವಾರ ಮುಂಜಾನೆ ದಾಳಿ ನಡೆಸಿದ್ದಾರೆ.

ಬೆಂಗಳೂರು, ಬೆಳಗಾವಿ, ಮೈಸೂರು ಸೇರಿದಂತೆ ರಾಜ್ಯದ ಆರು ಪ್ರಮುಖ ಸ್ಥಳಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ಮಹತ್ವದ ದಾಖಲೆಗಳು, ಆಸ್ತಿ ವಿವರಗಳು ಮತ್ತು ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಮಂಜುನಾಥ್ ಅವರ ನಿವಾಸ ಮಾತ್ರವಲ್ಲದೆ ಅವರ ಆಪ್ತರು, ಸ್ನೇಹಿತರು ಹಾಗೂ ವ್ಯವಹಾರಿಕ ಸಂಪರ್ಕ ಹೊಂದಿರುವವರ ಮನೆಗಳ ಮೇಲೂ ಶೋಧ ನಡೆದಿದೆ.

ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿರುವ ಕುಟುಂಬದ ಮನೆಗಳು, ಬೆಳಗಾವಿಯಲ್ಲಿನ ಹೈಟೆಕ್ ಅಪಾರ್ಟ್‌ಮೆಂಟ್ ಹಾಗೂ ಅಥಣಿ ತಾಲೂಕಿನ ಐನಾಪುರದಲ್ಲಿರುವ ಆಪ್ತರ ನಿವಾಸಗಳು ತನಿಖೆಯ ವ್ಯಾಪ್ತಿಗೆ ಬಂದಿವೆ. ಗೋವಾ ಸೇರಿದಂತೆ ರಾಜ್ಯದ ಹೊರಭಾಗಗಳಲ್ಲೂ ಇಡಿ ಅಧಿಕಾರಿಗಳು ಸಮನ್ವಯ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ತನಿಖಾ ಮೂಲಗಳ ಪ್ರಕಾರ, ಅಬಕಾರಿ ಇಲಾಖೆಯಲ್ಲಿನ ಪ್ರಭಾವಿ ಹುದ್ದೆಯನ್ನು ಬಳಸಿಕೊಂಡು ಬೇನಾಮಿ ಹೆಸರಿನಲ್ಲಿ ಭಾರೀ ಪ್ರಮಾಣದ ಭೂಮಿ, ಬಾರ್‌ಗಳು ಮತ್ತು ವಾಣಿಜ್ಯ ಆಸ್ತಿಗಳನ್ನು ಸಂಪಾದಿಸಿರುವ ಆರೋಪಗಳಿವೆ. ಗೋವಾ-ಮಹಾರಾಷ್ಟ್ರ ಗಡಿ ಭಾಗದ ಕೆಲವು ಅನುಮಾನಾಸ್ಪದ ಹಣಕಾಸು ವ್ಯವಹಾರಗಳು ಹಾಗೂ ಆಸ್ತಿ ಹೂಡಿಕೆಗಳ ಕುರಿತಂತೆ ಇಡಿ ವಿಶೇಷ ಗಮನ ಹರಿಸಿದೆ.

ಸಚಿವರ ಕುಟುಂಬದ ನಿಕಟ ಸಂಬಂಧಿಯ ವಿರುದ್ಧ ಜಾರಿ ನಿರ್ದೇಶನಾಲಯ ಕೈಗೊಂಡಿರುವ ಈ ಕ್ರಮ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದು, ತನಿಖೆ ಮುಂದುವರಿದಂತೆ ಇನ್ನಷ್ಟು ಪ್ರಭಾವಿ ಹೆಸರುಗಳು ಬೆಳಕಿಗೆ ಬರುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ಅಟ್ಟಹಾಸ; ಕುರಿ ಮೇಯಿಸುತ್ತಿದ್ದ ಆದಿವಾಸಿ ಮಹಿಳೆ ಗ್ರೇಟ್‌ ಎಸ್ಕೇಪ್

ಚಾಮರಾಜನಗರ: ಮಲೆ ಮಹದೇಶ್ವರಬೆಟ್ಟ ವ್ಯಾಪ್ತಿಯಲ್ಲಿ ಚಿರತೆ ದಾಳಿಗಳು ಮರುಕಳಿಸುತ್ತಿರುವ ಬೆನ್ನಲ್ಲೇ ಅರಣ್ಯ ಇಲಾಖೆಯ ಕಾರ್ಯವೈಖರಿಯ ವಿರುದ್ಧ ಆದಿವಾಸಿ ಸೋಲಿಗ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಆನೆಹೊಲ ಹಾಡಿಯಲ್ಲಿ ಆದಿವಾಸಿ ಮಹಿಳೆಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿದ ಘಟನೆಯ ಬಳಿಕ ಸ್ಥಳೀಯರು ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಸ್ಥಳೀಯರ ಪ್ರಕಾರ, ಬೇರೆ ಪ್ರದೇಶಗಳಲ್ಲಿ ಸೆರೆಹಿಡಿಯಲಾಗುವ ಚಿರತೆಗಳನ್ನು ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಪಾಲಾರ್ ಹಾಗೂ ಪೊನ್ನಾಚಿ ಕಾಡು ಪ್ರದೇಶಗಳಲ್ಲಿ ಮತ್ತೆ ಬಿಡಲಾಗುತ್ತಿದೆ. ಇದರಿಂದ ಹಾಡಿಗಳ ಸುತ್ತಮುತ್ತ ಚಿರತೆಗಳ ಸಂಖ್ಯೆ ಹೆಚ್ಚುತ್ತಿದ್ದು, ಜನರು ಹಾಗೂ ಜಾನುವಾರುಗಳ ಜೀವಕ್ಕೆ ನಿರಂತರ ಅಪಾಯ ಎದುರಾಗಿದೆ ಎಂದು ಆರೋಪಿಸಲಾಗಿದೆ.

ಈ ಹಿಂದೆ ಮಾದಪ್ಪನ ಬೆಟ್ಟದಲ್ಲಿ ಪಾದಯಾತ್ರಿಕನ ಸಾವಿಗೆ ಕಾರಣವಾಗಿದ್ದ ಚಿರತೆಯನ್ನು ಸೆರೆ ಹಿಡಿದು ಕಾಲರ್ ಐಡಿ ಅಳವಡಿಸಿದ ಬಳಿಕ ಮತ್ತೆ ಇದೇ ಕಾಡು ಪ್ರದೇಶದಲ್ಲಿ ಬಿಡುಗಡೆ ಮಾಡಲಾಗಿತ್ತು ಎನ್ನಲಾಗಿದೆ. ನಂತರವೂ ಹಸು, ಮೇಕೆ ಸೇರಿದಂತೆ ಸಾಕುಪ್ರಾಣಿಗಳ ಮೇಲೆ ಪದೇಪದೆ ದಾಳಿಗಳು ನಡೆದಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಇತ್ತೀಚೆಗೆ ಪೊನ್ನಾಚಿ ಸಮೀಪದ ಕಕ್ಕೆಹೊಲ ಗ್ರಾಮದಲ್ಲಿ ಅಳವಡಿಸಿದ್ದ ಪಂಜರಕ್ಕೆ ಬಿದ್ದ ಚಿರತೆಯ ಕತ್ತಿನಲ್ಲೂ ಕಾಲರ್ ಐಡಿ ಪತ್ತೆಯಾಗಿರುವುದು ಜನರ ಅನುಮಾನಕ್ಕೆ ಮತ್ತಷ್ಟು ಬಲ ನೀಡಿದೆ. ಈಗಾಗಲೇ ಚಿರತೆ ದಾಳಿಗಳಿಂದ ಭಯಭೀತರಾಗಿರುವ ಸೋಲಿಗರು, ಕಾಡುಪ್ರಾಣಿಗಳ ನಿರ್ವಹಣೆಯಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಘಟನೆಗಳ ಸರಣಿಯಿಂದ ಕಂಗಾಲಾಗಿರುವ ಗ್ರಾಮಸ್ಥರು, ಕಾಡಂಚಿನ ಹಾಡಿಗಳ ಸುರಕ್ಷತೆಗೆ ವಿಶೇಷ ಕಾರ್ಯಯೋಜನೆ ರೂಪಿಸುವಂತೆ ಮತ್ತು ಮಾನವ-ವನ್ಯಜೀವಿ ಸಂಘರ್ಷ ತಡೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಹೃದಯಾಘಾತ: ಡಿಎಆರ್ ಪೊಲೀಸ್ ಕಾನ್ಸ್ಟೇಬಲ್ ದುರ್ಮರಣ

ರಾಯಚೂರು: ಮೊಹರಂ ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಕಾನ್ಸ್ಟೇಬಲ್ ಮೃತಪಟ್ಟಿರುವ ಘಟನೆ ಜಿಲ್ಲೆಯ ದೇವದುರ್ಗದಲ್ಲಿ ನಡೆದಿದೆ.

ಮೃತರನ್ನು ರೇಣುಕಾರಾಜ (38) ಎಂದು ಗುರುತಿಸಲಾಗಿದೆ. ಅವರು ದೇವದುರ್ಗ ಡಿಎಆರ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಿಪಿಐ ಅವರ ವಾಹನ ಚಾಲಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು.

ಮೊಹರಂ ಹಬ್ಬದ ಭದ್ರತಾ ಬಂದೋಬಸ್ತ್ ಹಿನ್ನೆಲೆಯಲ್ಲಿ ಮದರಕಲ್ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಜೀಪ್ ಚಾಲನೆ ಮಾಡುತ್ತಿದ್ದ ರೇಣುಕಾರಾಜ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಖಾಸಗಿ ಕಾರಿನ ಮೂಲಕ ದೇವದುರ್ಗ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಸ್ಪತ್ರೆಗೆ ತಲುಪುವ ಮುನ್ನವೇ ಮಾರ್ಗ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.

ರೇಣುಕಾರಾಜ ಅವರು ಲಿಂಗಸುಗೂರು ತಾಲೂಕಿನ ಅಮದಿಹಾಳ ಗ್ರಾಮದವರಾಗಿದ್ದು, 2008ನೇ ಬ್ಯಾಚ್‌ನ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದರು. ಹಲವು ವರ್ಷಗಳಿಂದ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್)ಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕರ್ತವ್ಯನಿಷ್ಠ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು.

ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೇ ಹೃದಯಾಘಾತದಿಂದ ಪೊಲೀಸ್ ಸಿಬ್ಬಂದಿಯೊಬ್ಬರು ಮೃತಪಟ್ಟಿರುವ ಘಟನೆ ಪೊಲೀಸ್ ಇಲಾಖೆಯಲ್ಲಿ ದುಃಖದ ವಾತಾವರಣ ಸೃಷ್ಟಿಸಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳು ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಕುಟುಂಬದವರಿಗೆ ಸಂತಾಪ ಸೂಚಿಸಿದ್ದಾರೆ.

ಹರಿಹರದಲ್ಲಿ ಬಂಧಿತ ಶಂಕಿತ ಉಗ್ರನಿಂದ ಬೆಚ್ಚಿಬೀಳಿಸುವ ಬಹಿರಂಗ: ರಾಮ ಮಂದಿರವನ್ನು ಸ್ಫೋಟಿಸಲು ಸಂಚು

0

ದಾವಣಗೆರೆ: ಸಾಮಾನ್ಯ ಕಾರ್ಮಿಕನ ಸೋಗಿನಲ್ಲಿ ಹರಿಹರದಲ್ಲಿ ಅಡಗಿದ್ದ ಉತ್ತರ ಪ್ರದೇಶ ಮೂಲದ ಯುವಕನ ಬಂಧನವು ಭದ್ರತಾ ಸಂಸ್ಥೆಗಳನ್ನು ಎಚ್ಚರಗೊಳಿಸಿದೆ. ಸುಹೇಲ್ ಎಂಬ 20 ವರ್ಷದ ಶಂಕಿತನ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯಲ್ಲಿ ದೇಶದ ಭದ್ರತೆಗೆ ಸಂಬಂಧಿಸಿದ ಗಂಭೀರ ಅಂಶಗಳು ಬೆಳಕಿಗೆ ಬಂದಿವೆ.

ಹರಿಹರ ಸಮೀಪದ ಕೈಗಾರಿಕಾ ವಲಯದ ಫ್ಯಾಕ್ಟರಿಯೊಂದರಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ, ತನ್ನ ನಿಜವಾದ ಚಟುವಟಿಕೆಗಳನ್ನು ಮುಚ್ಚಿಟ್ಟಿದ್ದಾನೆ ಎಂಬ ಅನುಮಾನಗಳ ನಡುವೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರವನ್ನು ಗುರಿಯಾಗಿಸಿಕೊಂಡಿದ್ದ ವಿಚಾರ ತನಿಖಾಧಿಕಾರಿಗಳ ಗಮನಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಆರೋಪಿಯ ಮೊಬೈಲ್ ಫೋನ್‌ನಲ್ಲಿರುವ ಮಾಹಿತಿ ಪರಿಶೀಲಿಸಿದಾಗ ಪಾಕಿಸ್ತಾನ ಮೂಲದ ಸಂಪರ್ಕ ಸಂಖ್ಯೆಗಳು, ಅನುಮಾನಾಸ್ಪದ ಆನ್‌ಲೈನ್ ಜಾಲಗಳ ಸಂಪರ್ಕ ಮತ್ತು ದೇಶವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದ ಡಿಜಿಟಲ್ ಸಾಕ್ಷ್ಯಗಳು ಪತ್ತೆಯಾಗಿವೆ. ‘MEMON & JUTTU-333’ ಹಾಗೂ ‘RANABHAI-333’ ಹೆಸರಿನ ಗುಂಪುಗಳೊಂದಿಗೆ ಈತನ ಸಂಪರ್ಕವಿದ್ದ ಬಗ್ಗೆ ತನಿಖೆಯಲ್ಲಿ ಉಲ್ಲೇಖವಾಗಿದೆ.

ಇದಲ್ಲದೆ, ಆಯುಧಗಳನ್ನು ಹಿಡಿದು ತೆಗೆಸಿಕೊಂಡಿದ್ದ ಹಲವು ಚಿತ್ರಗಳು, ಸಂದೇಶಗಳು ಮತ್ತು ಸಂವಹನ ದಾಖಲೆಗಳು ತನಿಖಾ ಸಂಸ್ಥೆಗಳ ಕೈ ಸೇರಿವೆ. ಪ್ರಾಥಮಿಕ ಮಾಹಿತಿ ಪ್ರಕಾರ, ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಜಾಲದ ಭಾಗವಾಗಿರುವ ಸಾಧ್ಯತೆಯನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ತುಮಕೂರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಉಗ್ರ ಸಂಘಟನೆಗಳು, ವಿದೇಶಿ ಸಂಪರ್ಕಗಳು ಮತ್ತು ಸ್ಥಳೀಯ ನೆರವು ಜಾಲದ ಕುರಿತು ತನಿಖೆ ಮುಂದುವರಿದಿದೆ.

error: Content is protected !!