Home Blog

ಹುಬ್ಬಳ್ಳಿ-ಧಾರವಾಡ ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರದ ಗುಣಮಟ್ಟ ಕುಸಿತ: ಸಾರ್ವಜನಿಕ ಆಕ್ರೋಶ

ಹುಬ್ಬಳ್ಳಿ: ಬಡವರು, ಕಾರ್ಮಿಕರು ಹಾಗೂ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಊಟ ನೀಡುವ ಉದ್ದೇಶದಿಂದ ಆರಂಭಿಸಲಾದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಇತ್ತೀಚೆಗೆ ಆಹಾರದ ಗುಣಮಟ್ಟ ಕುಸಿದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಹುಬ್ಬಳ್ಳಿ-ಧಾರವಾಡ ಭಾಗದ ಹಲವು ಇಂದಿರಾ ಕ್ಯಾಂಟೀನ್‌ಗಳಲ್ಲಿ ನೀಡಲಾಗುತ್ತಿರುವ ಆಹಾರ ಸರಿಯಾಗಿ ಬೇಯದಿರುವುದು, ಸಾರು ನೀರಿನಂತಿರುವುದು ಹಾಗೂ ಚಪಾತಿ ಮತ್ತು ರೊಟ್ಟಿ ತಿನ್ನಲು ಯೋಗ್ಯವಾಗಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ವ್ಯಕ್ತವಾಗಿವೆ.

ಈ ಮೊದಲು ಉತ್ತಮ ಗುಣಮಟ್ಟದ ಆಹಾರ ದೊರಕುತ್ತಿದ್ದ ಹಿನ್ನೆಲೆಯಲ್ಲಿ ಕಾರ್ಮಿಕರು, ಆಟೋ ಚಾಲಕರು ಹಾಗೂ ವಿದ್ಯಾರ್ಥಿಗಳು ಕ್ಯಾಂಟೀನ್‌ಗಳನ್ನು ಹೆಚ್ಚು ಅವಲಂಬಿಸುತ್ತಿದ್ದರು. ಆದರೆ ಇತ್ತೀಚೆಗೆ ಗುಣಮಟ್ಟ ಹಾಗೂ ಪ್ರಮಾಣ ಎರಡೂ ಕಡಿಮೆಯಾಗಿದೆ ಎಂಬ ಆರೋಪಗಳು ಹೆಚ್ಚುತ್ತಿವೆ.

ಮಧ್ಯಾಹ್ನ ಮತ್ತು ರಾತ್ರಿ ಊಟದಲ್ಲಿ ನೀಡಲಾಗುವ ಅನ್ನದ ಪ್ರಮಾಣ ಕೂಡ ನಿಯಮಿತ ಮಟ್ಟಕ್ಕಿಂತ ಕಡಿಮೆಯಾಗಿದೆ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಬ್ಬಂದಿಯಿಂದ ಸರಿಯಾದ ಪ್ರತಿಕ್ರಿಯೆ ದೊರಕುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಇದರಿಂದಾಗಿ ಸಂಬಂಧಪಟ್ಟ ಅಧಿಕಾರಿಗಳು ಇಂದಿರಾ ಕ್ಯಾಂಟೀನ್‌ಗಳ ಆಹಾರದ ಗುಣಮಟ್ಟ ಮತ್ತು ಸೇವೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಮೇಲುಕೋಟೆ ದೇವಸ್ಥಾನದಲ್ಲಿ ಭಾರಿ ಕಳ್ಳತನ ಶಂಕೆ: ಅರ್ಚಕರು ಸೇರಿ ಐದು ಮಂದಿ ವಿರುದ್ಧ ಎಫ್‌ಐಆರ್

ಮಂಡ್ಯ: ಐತಿಹಾಸಿಕ ಹಾಗೂ ಪ್ರಸಿದ್ಧ ಪುಣ್ಯಕ್ಷೇತ್ರವಾದ ಮೇಲುಕೋಟೆಯ ಯೋಗನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಾರಿ ಕಳ್ಳತನ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ಸಂಬಂಧ ದೇವಸ್ಥಾನದ ಅರ್ಚಕರು ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ದೇವಸ್ಥಾನದ ಹುಂಡಿಯಲ್ಲಿದ್ದ ಚಿನ್ನ, ಬೆಳ್ಳಿ ಹಾಗೂ ನಗದು ಹಣ ಕಳ್ಳತನವಾಗಿದೆ ಎಂದು ಆರೋಪಿಸಿ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಅವರು ಮೇಲುಕೋಟೆ ಪೊಲೀಸ್ ಠಾಣೆಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.

ಮೂಲಗಳ ಪ್ರಕಾರ, ದೇವಸ್ಥಾನದಲ್ಲಿ ಈ ಹಿಂದೆ ಸಿಸಿ ಕ್ಯಾಮೆರಾಗಳಿಗೆ ಹಾನಿ ಮಾಡುತ್ತಿದ್ದ ಘಟನೆಗಳು ನಡೆದಿದ್ದರಿಂದ ಆಡಳಿತ ಮಂಡಳಿ ರಹಸ್ಯವಾಗಿ ಹೆಚ್ಚುವರಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿತ್ತು. ಆದರೆ 2026ರ ಜನವರಿ 12ರಂದು ಈ ರಹಸ್ಯ ಕ್ಯಾಮೆರಾಗಳಿಗೂ ಹಾನಿ ಮಾಡಿರುವುದು ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ದೇವಸ್ಥಾನದ ಒಳಗಿನ ಸಿಬ್ಬಂದಿಯೇ ಕಳ್ಳತನದಲ್ಲಿ ಭಾಗಿಯಾಗಿರಬಹುದು ಎಂಬ ಗಂಭೀರ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಈ ಸಂಬಂಧ ಶ್ರೀಧರ್ ಪಾರುಪತ್ತೆಗಾರ, ನಾರಾಯಣ ಭಟ್ಟ ಅರ್ಚಕ, ತಿರುವೆಂಗಡಚಾರ್ ಪರಿಚಾರಕ, ಗಂಗಾಧರ್ ಹಾಗೂ ಬಸವರಾಜ್ ಕಾವಲುಗಾರರು ಸೇರಿದಂತೆ ಐದು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಇಒ ಶೀಲಾ ಅವರು ಈ ಹಿಂದೆ ಸಂಬಂಧಿತ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಿದ್ದರೂ ಸೂಕ್ತ ಉತ್ತರ ದೊರಕದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.

ಸದ್ಯ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೇವಾಲಯದ ಒಳಗಿನವರೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರಾ ಅಥವಾ ಇದರ ಹಿಂದೆ ಬೇರೆ ಜಾಲವಿದೆಯಾ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ: ಬೆಂಗಳೂರಿನ ಈ ರಸ್ತೆಗಳಲ್ಲಿಂದು ಸಂಚಾರ ಬದಲಾವಣೆ!

ಬೆಂಗಳೂರು: ನಗರದ ಫ್ರೀಡಂ ಪಾರ್ಕ್‌ನಲ್ಲಿ ಇಂದು ಕರ್ನಾಟಕ ದಲಿತ ಸಂಘಟನೆಗಳ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯುತ್ತಿದ್ದು, ಇದರಿಂದಾಗಿ ಬೆಂಗಳೂರಿನ ಹಲವು ಭಾಗಗಳಲ್ಲಿ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.

ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರತಿಭಟನೆ ನಡೆಯಲಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸುವವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿಟಿ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ಕಡೆಗೆ ಕಾಲ್ನಡಿಗೆಯ ಮೆರವಣಿಗೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಫ್ರೀಡಂ ಪಾರ್ಕ್ ಜಂಕ್ಷನ್‌ನಿಂದ ಕನಕದಾಸ ವೃತ್ತದ ನಡುವಿನ ರಸ್ತೆ ಭಾಗವನ್ನು ಎರಡೂ ದಿಕ್ಕಿನಿಂದ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.

ಖೋಡೆ ಜಂಕ್ಷನ್‌ನಿಂದ ಕೆಆರ್ ಸರ್ಕಲ್ ಕಡೆಗೆ ಸಂಚರಿಸುವ ವಾಹನಗಳಿಗೆ ಹಳೇ ಜೆಡಿಎಸ್ ಕಚೇರಿ ರಸ್ತೆಯನ್ನು ಪರ್ಯಾಯ ಮಾರ್ಗವಾಗಿ ಬಳಸುವಂತೆ ಸೂಚಿಸಲಾಗಿದೆ. ಮೈಸೂರು ಬ್ಯಾಂಕ್ ವೃತ್ತದಿಂದ ಕೆಜಿ ರಸ್ತೆ ಮೂಲಕ ಫ್ರೀಡಂ ಪಾರ್ಕ್ ಕಡೆಗೆ ಬರುವ ವಾಹನಗಳು ಮಹಾರಾಣಿ ಅಂಡರ್‌ಪಾಸ್ ಹಾಗೂ ಪ್ಯಾಲೇಸ್ ಕ್ರಾಸ್ ರಸ್ತೆಯ ಮೂಲಕ ಸಾಗುವಂತೆ ಸೂಚನೆ ನೀಡಲಾಗಿದೆ.

ಸಂಚಾರ ಪೊಲೀಸರ ಪ್ರಕಾರ, ಗಾಂಧಿನಗರ ಭಾಗದಲ್ಲಿ ಒನ್‌ವೇ ರಸ್ತೆಯಾಗಿದ್ದ ಸುಬ್ಬಣ್ಣ ಜಂಕ್ಷನ್–ಎಂಟಿಆರ್ ಜಂಕ್ಷನ್ ಮಾರ್ಗವನ್ನು ಇಂದು ತಾತ್ಕಾಲಿಕವಾಗಿ ಟೂ-ವೇ ಸಂಚಾರಕ್ಕೆ ಪರಿವರ್ತಿಸಲಾಗಿದೆ.

ಇದಲ್ಲದೆ, ಫ್ರೀಡಂ ಪಾರ್ಕ್ ಸುತ್ತಮುತ್ತ ಪ್ರಮುಖ ರಸ್ತೆಗಳಾದ ವಿ. ರಾಮಚಂದ್ರ ರಸ್ತೆ, ಕಾಳಿದಾಸ ರಸ್ತೆ, ಪ್ಯಾಲೇಸ್ ರಸ್ತೆ ಹಾಗೂ ಕೆಜಿ ರಸ್ತೆಯಲ್ಲಿ ವಾಹನ ಪಾರ್ಕಿಂಗ್‌ಗೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ನಗರದ ಪ್ರಮುಖ ಭಾಗಗಳಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಿ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಮೀಟರ್ ಬಡ್ಡಿ ಬಕಾಸೂರರ ಅಟ್ಟಹಾಸಕ್ಕೆ ಕುಟುಂಬ ಕಂಗಾಲು! ಬಡ್ಡಿ ನೀಡದಿದ್ದಕ್ಕೆ ಮನೆ ಕಂಪೌಂಡ್ ಧ್ವಂಸ, ಜೀವ ಬೆದರಿಕೆ ಆರೋಪ

0

ಗದಗ: ನಗರದಲ್ಲಿ ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸ ಮಿತಿಮೀರಿದ್ದು, ಸಾಲದ ಹಣಕ್ಕಾಗಿ ಮನೆಗೆ ನುಗ್ಗಿ ಕಂಪೌಂಡ್ ಗೋಡೆ ಧ್ವಂಸಗೊಳಿಸಿ, ಸಿಸಿ ಕ್ಯಾಮೆರಾಗಳನ್ನು ಒಡೆದು ಹಾಕಿ, ಕುಟುಂಬ ಸದಸ್ಯರಿಗೆ ಜೀವ ಬೆದರಿಕೆ ಹಾಕಿರುವ ಗಂಭೀರ ಆರೋಪ ಕೇಳಿ ಬಂದಿದೆ.

ಗದಗ ನಗರದ ಕಳಸಾಪೂರ ರಿಂಗ್‌ರೋಡ್‌ನ ಅಭಿನವ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಬಡ್ಡಿ ಸಾಲದ ಕಾಟದಿಂದ ಇಡೀ ಕುಟುಂಬವೇ ಊರು ತೊರೆದು ಅಲೆದಾಡುವಂತಾಗಿದೆ ಎಂದು ಆರೋಪಿಸಲಾಗಿದೆ.

ಕೋಟೇಶ್ ಬಾಗಲಿ ಎಂಬಾತ ವಿವಿಧ ವ್ಯಕ್ತಿಗಳಿಂದ ಹೆಚ್ಚಿನ ಬಡ್ಡಿದರದಲ್ಲಿ ಹಣ ಪಡೆದಿದ್ದಾನೆ ಎನ್ನಲಾಗಿದ್ದು, ದರ್ಶನ್ ಎಂಬಾತನಿಂದ 8 ಲಕ್ಷ ರೂ., ಶ್ರೀಕಾಂತ ಎಂಬಾತನಿಂದ 12.80 ಲಕ್ಷ ರೂ. ಹಾಗೂ ಜೀವನ ಎಂಬಾತನಿಂದ 3 ಲಕ್ಷ ರೂ. ಸಾಲ ಪಡೆದಿದ್ದಾನೆ ಎಂದು ತಿಳಿದು ಬಂದಿದೆ. ವಾರಕ್ಕೆ ಶೇ.10 ಹಾಗೂ ತಿಂಗಳಿಗೆ ಶೇ.20ರಷ್ಟು ಬಡ್ಡಿ ವಸೂಲಿ ಮಾಡಲಾಗುತ್ತಿತ್ತು ಎಂಬ ಆರೋಪವೂ ಕೇಳಿ ಬಂದಿದೆ.

ಎರಡು ತಿಂಗಳಿಂದ ಬಡ್ಡಿ ಪಾವತಿ ನಿಲ್ಲಿಸಿದ್ದ ಹಿನ್ನೆಲೆಯಲ್ಲಿ ಸಾಲದ ಮೊತ್ತದ ದುಪ್ಪಟ್ಟು ಹಣ ನೀಡುವಂತೆ ಒತ್ತಡ ಹೇರಲಾಗಿತ್ತು ಎನ್ನಲಾಗಿದೆ. ಈ ನಡುವೆ ಕೋಟೇಶ್ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಕೆಲವರು ಮನೆಗೆ ನುಗ್ಗಿ ಪತ್ನಿ ಸುಧಾ ಬಾಗಲಿ, ತಂದೆ ನಿಂಗಪ್ಪ ಬಾಗಲಿ ಹಾಗೂ ತಾಯಿ ಹುಲಿಗೆಮ್ಮ ಬಾಗಲಿ ಅವರಿಗೆ ಮಾರಕಾಸ್ತ್ರ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಕುಟುಂಬದವರು ದೂರಿದ್ದಾರೆ.

ಅಷ್ಟೇ ಅಲ್ಲದೆ, ಜೆಸಿಬಿ ಯಂತ್ರದ ಮೂಲಕ ಮನೆ ಕಂಪೌಂಡ್ ಗೋಡೆಯನ್ನು ಧ್ವಂಸಗೊಳಿಸಿ, ಸಿಸಿ ಕ್ಯಾಮೆರಾಗಳನ್ನು ಒಡೆದು ಹಾಕಿರುವ ಆರೋಪವೂ ಕೇಳಿ ಬಂದಿದೆ. ದರ್ಶನ್ ಎಂಬಾತ 14.50 ಲಕ್ಷ ರೂ. ಮೊತ್ತದ ಖಾಲಿ ಚೆಕ್‌ಗೆ ಸಹಿ ಹಾಕಿಸಿಕೊಂಡಿದ್ದಾನೆ ಹಾಗೂ ಜೀವನ ಎಂಬಾತ ಎರಡು ಖಾಲಿ ಚೆಕ್‌ಗಳನ್ನು ಪಡೆದುಕೊಂಡಿದ್ದಾನೆ ಎಂದು ಕೋಟೇಶ್ ಬಾಗಲಿ ಆರೋಪಿಸಿದ್ದಾನೆ.

ಕ್ಯಾಸಿನೋ ಚಟದಿಂದ ಸಾಲದ ಸುಳಿಯಲ್ಲಿ ಸಿಲುಕಿದ ಕೋಟೇಶ್ ಒಂದು ವರ್ಷದಿಂದ ಗೋವಾ ಕ್ಯಾಸಿನೋ ಚಟಕ್ಕೆ ಬಿದ್ದಿದ್ದ ಕೋಟೇಶ್ ಬಾಗಲಿ, ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದಾನೆ ಎನ್ನಲಾಗಿದೆ. ಸಾಲದ ಹೊರೆ ತಾಳಲಾರದೆ ತಂದೆಯ ನಾಲ್ಕು ಎಕರೆ ಜಮೀನನ್ನು ಮಾರಾಟ ಮಾಡಲಾಗಿದ್ದು, ಮನೆಯ ಮೇಲೆಯೇ ಸುಮಾರು 50 ಲಕ್ಷ ರೂ. ಸಾಲವಿದೆ ಎಂದು ಮೂಲಗಳು ತಿಳಿಸಿವೆ.

ಕ್ಯಾಸಿನೋ ವ್ಯಸನ, ಖಾಸಗಿ ಸಾಲಗಾರರು ಹಾಗೂ ಮೀಟರ್ ಬಡ್ಡಿ ದಂಧೆಕೋರರ ಕಾಟದಿಂದ ಕೋಟ್ಯಂತರ ರೂಪಾಯಿ ಸಾಲದ ಸುಳಿಯಲ್ಲಿ ಸಿಲುಕಿರುವ ಕುಟುಂಬ ಇದೀಗ ಸಂಕಷ್ಟದ ಪರಿಸ್ಥಿತಿಯಲ್ಲಿ ದಿನ ಕಳೆಯುತ್ತಿದೆ.

ಈ ಸಂಬಂಧ ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿತ ಬಡ್ಡಿ ದಂಧೆಕೋರರ ಬಂಧನಕ್ಕಾಗಿ ಪೊಲೀಸರು ಜಾಲ ಬೀಸಿದ್ದಾರೆ. ಪ್ರಕರಣ ನಗರದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ತನಿಖೆ ಮುಂದುವರಿದಿದೆ.

ಹೆಬ್ಬಗೋಡಿಯಲ್ಲಿ ಪೊಲೀಸರ ಕಾರ್ಯಾಚರಣೆ: ರೌಡಿಶೀಟರ್ ಕಾಲಿಗೆ ಗುಂಡೇಟು!

ಬೆಂಗಳೂರು: ನಗರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿಬಂದಿದ್ದು, ರೌಡಿಶೀಟರ್ ಒಬ್ಬನಿಗೆ ಪೊಲೀಸರು ಕಾಲಿಗೆ ಗುಂಡೇಟು ಹಾರಿಸಿರುವ ಘಟನೆ ನಡೆದಿದೆ.

ಜೀವ (19) ಎಂಬ ರೌಡಿಶೀಟರ್‌ಗೆ ಹೆಬ್ಬಗೋಡಿ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಸಿಂಗೇನಾ ಅಗ್ರಹಾರದ ತೋಪು ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಗಾಯಗೊಂಡ ಆರೋಪಿಯನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹೆಬ್ಬಗೋಡಿಯ ತಿರುಪಾಳ್ಯದಲ್ಲಿ ವಾಸವಾಗಿದ್ದ ಜೀವ, ಕೊಲೆ, ಸುಲಿಗೆ ಮತ್ತು ದರೋಡೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವಾರ ಹೆಬ್ಬಗೋಡಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ನಡೆದ ದರೋಡೆ ಪ್ರಕರಣಗಳಲ್ಲೂ ಈತನ ಪಾತ್ರವಿದೆ ಎಂದು ಶಂಕಿಸಲಾಗಿದೆ.

ಖಚಿತ ಮಾಹಿತಿ ಆಧಾರದಲ್ಲಿ ಪೊಲೀಸರು ದಾಳಿ ನಡೆಸಿದ ವೇಳೆ, ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದನೆಂದು ತಿಳಿದು ಬಂದಿದೆ. ಈ ವೇಳೆ ಪೊಲೀಸ್ ಸಿಬ್ಬಂದಿ ನಾಗೇಶ್ ಮೇಲೆ ದಾಳಿ ಯತ್ನ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಸಬ್ ಇನ್‌ಸ್ಪೆಕ್ಟರ್ ಅಯ್ಯಪ್ಪ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ಅಪ್ರಾಪ್ತೆಗೆ ಬೆದರಿಕೆ ಹಾಕಿ ಸಾಮೂಹಿಕ ಅತ್ಯಾಚಾರ; ಚಿಕ್ಕಮಗಳೂರಿನಲ್ಲಿ ಐವರು ಅರೆಸ್ಟ್

ಚಿಕ್ಕಮಗಳೂರು: ಅಪ್ರಾಪ್ತ ಬಾಲಕಿಗೆ ಬ್ಲ್ಯಾಕ್‌ಮೇಲ್ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿದ ಗಂಭೀರ ಆರೋಪದ ಮೇಲೆ ಐವರು ಆರೋಪಿಗಳನ್ನು ಚಿಕ್ಕಮಗಳೂರಿನ ಗೋಣಿಬೀಡು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಸಂತ್ರಸ್ತೆಯ ಫೋಟೋವನ್ನು ತೋರಿಸಿ ಬೆದರಿಕೆ ಹಾಕಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ನ್ಯಾಯಾಲಯಕ್ಕೆ ಶರಣಾಗಿದ್ದಾನೆ ಎಂದು ತಿಳಿದುಬಂದಿದ್ದು, ಈತ ಈ ಹಿಂದೆ ಕೂಡ ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದ ಎನ್ನಲಾಗಿದೆ.

ಘಟನೆ ಬಳಿಕ ಸಂತ್ರಸ್ತೆ ಗಂಡು ಮಗುವಿಗೆ ಜನ್ಮ ನೀಡಿರುವುದಾಗಿ ತಿಳಿದುಬಂದಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಿಪಿಐ ರಾಜಶೇಖರ್ ಹಾಗೂ ಪಿಎಸ್‌ಐ ಶ್ರೀನಾಥ್ ರೆಡ್ಡಿ ನೇತೃತ್ವದಲ್ಲಿ ಪ್ರಕರಣದ ತನಿಖೆ ಮುಂದುವರಿದಿದೆ.

ಕೊಡಗಿನಲ್ಲಿ ಭಾರಿ ವಾಹನಗಳಿಗೆ ಬ್ರೇಕ್; ಜಿಲ್ಲಾಧಿಕಾರಿಯಿಂದ ಮಹತ್ವದ ಆದೇಶ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳ ರಕ್ಷಣೆಯ ದೃಷ್ಟಿಯಿಂದ ಜಿಲ್ಲೆಯಾದ್ಯಂತ ಭಾರಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.

ಜಿಲ್ಲೆಯಲ್ಲಿ ಮಳೆ ಹೆಚ್ಚಾಗುವ ಅವಧಿಯಲ್ಲಿ ರಸ್ತೆ ಬದಿಗಳಲ್ಲಿ ಮಣ್ಣು ಕುಸಿತ, ರಸ್ತೆ ಹಾನಿ ಹಾಗೂ ಅಪಘಾತಗಳ ಸಂಭವ ಹೆಚ್ಚಾಗುತ್ತಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ಎಸ್.ಜೆ. ಸೋಮಶೇಖರ್ ಆದೇಶ ಹೊರಡಿಸಿದ್ದಾರೆ.

ಆದೇಶದಂತೆ, ಇಂದಿನಿಂದ ಜುಲೈ ೯ರವರೆಗೆ ಎಲ್ಲಾ ರೀತಿಯ ಮರಳು ಸಾಗಣೆ ವಾಹನಗಳು, ಮರದ ದಿಮ್ಮಿ ಸಾಗಣೆ ವಾಹನಗಳು, ೧೮,೫೦೦ ಕೆ.ಜಿ.ಗಿಂತ ಹೆಚ್ಚಿನ ತೂಕದ ಸರಕು ಸಾಗಣೆ ವಾಹನಗಳು ಹಾಗೂ ಭಾರಿ ಸರಕು ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಬುಲೆಟ್ ಟ್ಯಾಂಕರ್‌ಗಳು, ಹಡಗು ಸರಕು ಕಂಟೇನರ್ ವಾಹನಗಳು, ಉದ್ದ ಚಾಸಿಸ್ ಹೊಂದಿರುವ ಬಹು ಅಕ್ಷ ವಾಹನಗಳು ಹಾಗೂ ಜೋಡಿತ ವಾಹನಗಳ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿದೆ.

ಆದರೆ ಅಡುಗೆ ಅನಿಲ ಹಾಗೂ ಇಂಧನ ಪೂರೈಕೆ ವಾಹನಗಳು, ಹಾಲು ಸಾಗಣೆ ವಾಹನಗಳು, ಸರ್ಕಾರಿ ಕಾರ್ಯಗಳಿಗೆ ಬಳಸುವ ವಾಹನಗಳು, ಶಾಲಾ-ಕಾಲೇಜು ವಾಹನಗಳು ಹಾಗೂ ಸಾರ್ವಜನಿಕ ಪ್ರಯಾಣಿಕರ ವಾಹನಗಳಿಗೆ ಈ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ.

ಜಿಲ್ಲೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೨೭೫ರ ಕುಶಾಲನಗರ ಮತ್ತು ಸಂಪಾಜೆ ಗಡಿಭಾಗಗಳಲ್ಲಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಿ, ಇಪ್ಪತ್ತನಾಲ್ಕು ಗಂಟೆಗಳ ನಿಗಾ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಒಣಗಿದ ನಿಂಬೆಹಣ್ಣು ಕಸದ ಬುಟ್ಟಿಗೆ ಹಾಕ್ತೀರಾ? ಮೊದಲು ಇದನ್ನು ಓದಿ!

0

ಮನೆಗಳಲ್ಲಿ ಸಾಮಾನ್ಯವಾಗಿ ನಿಂಬೆಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲಾಗುತ್ತದೆ.

ಆದರೆ ಕೆಲವು ದಿನಗಳಲ್ಲೇ ಅವು ಒಣಗಿ ಹೋಗುತ್ತವೆ. ಹೀಗಾಗಿ ಅನೇಕರು ಅವುಗಳನ್ನು ಉಪಯೋಗವಿಲ್ಲವೆಂದು ಭಾವಿಸಿ ಕಸದ ಬುಟ್ಟಿಗೆ ಎಸೆಯುತ್ತಾರೆ. ಆದರೆ ಒಣಗಿದ ನಿಂಬೆಹಣ್ಣುಗಳಲ್ಲೂ ಹಲವು ಉಪಯೋಗಗಳಿದ್ದು, ಮನೆ ಸ್ವಚ್ಛತೆ ಹಾಗೂ ದೈನಂದಿನ ಬಳಕೆಯಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು.

ಸಿಂಕ್ ಸ್ವಚ್ಛಗೊಳಿಸಲು ಸಹಕಾರಿ:
ಒಣಗಿದ ನಿಂಬೆಹಣ್ಣನ್ನು ಎರಡು ಭಾಗಗಳಾಗಿ ಕತ್ತರಿಸಿ ಸಿಂಕ್ ಮೇಲೆ ಉಜ್ಜಿದರೆ ನೈಸರ್ಗಿಕ ಕ್ಲೀನರ್‌ನಂತೆ ಕಾರ್ಯನಿರ್ವಹಿಸುತ್ತದೆ. ಇದರಿಂದ ಕಲೆಗಳು, ದುರ್ವಾಸನೆ ಹಾಗೂ ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡಬಹುದು.

ದುರ್ವಾಸನೆ ನಿವಾರಣೆ:
ಒಣಗಿದ ನಿಂಬೆಹಣ್ಣಿನ ತುಂಡುಗಳಿಗೆ ಅಡುಗೆ ಸೋಡಾ ಸೇರಿಸಿ ಫ್ರಿಡ್ಜ್, ಶೂ ರ್ಯಾಕ್ ಅಥವಾ ಕಪಾಟುಗಳಲ್ಲಿ ಇಟ್ಟರೆ ಅಹಿತಕರ ವಾಸನೆ ಕಡಿಮೆಯಾಗಲು ಸಹಕಾರಿಯಾಗುತ್ತದೆ.

ಪಾತ್ರೆಗಳಿಗೆ ಹೊಳಪು ತರಬಹುದು:
ತಾಮ್ರ, ಹಿತ್ತಾಳೆ ಅಥವಾ ಉಕ್ಕಿನ ಪಾತ್ರೆಗಳ ಮೇಲೆ ಸ್ವಲ್ಪ ಉಪ್ಪು ಸಿಂಪಡಿಸಿ ಒಣಗಿದ ನಿಂಬೆಹಣ್ಣಿನಿಂದ ಉಜ್ಜಿದರೆ ಮೊಂಡುತನದ ಕಲೆಗಳು ದೂರವಾಗಿ ಪಾತ್ರೆಗಳು ಹೊಳೆಯುತ್ತವೆ.

ಕೀಟಗಳನ್ನು ದೂರವಿಡಲು ನೆರವು:
ಇರುವೆಗಳು ಹಾಗೂ ಕೆಲವು ಕೀಟಗಳು ನಿಂಬೆಯ ವಾಸನೆಯನ್ನು ಇಷ್ಟಪಡುವುದಿಲ್ಲ. ಅಡುಗೆಮನೆಯ ಮೂಲೆಗಳಲ್ಲಿ ಒಣಗಿದ ನಿಂಬೆ ತುಂಡುಗಳನ್ನು ಇಟ್ಟರೆ ಕೀಟಗಳ ಕಾಟವನ್ನು ಕಡಿಮೆ ಮಾಡಬಹುದು.

ಗಿಡಮೂಲಿಕೆ ಚಹಾ ತಯಾರಿಸಬಹುದು:
ಒಣಗಿದ ನಿಂಬೆಹಣ್ಣನ್ನು ನೀರಿನಲ್ಲಿ ನೆನೆಸಿ ನಂತರ ಕುದಿಸಿ, ಅದಕ್ಕೆ ಜೇನುತುಪ್ಪ ಸೇರಿಸಿ ಕುಡಿಯಬಹುದು. ಇದು ತಾಜಾತನ ನೀಡುವ ಪಾನೀಯವಾಗಿದ್ದು, ಆರೋಗ್ಯಕರ ಜೀವನಶೈಲಿಯ ಭಾಗವಾಗಿ ಬಳಸಬಹುದು.

 

ಮೋದಿ 12 ವರ್ಷಗಳ ಆಡಳಿತಕ್ಕೆ ಬಿಜೆಪಿ ಸಂಭ್ರಮ

0

ಲಕ್ಷ್ಮೇಶ್ವರ: ದೇಶದ ಪ್ರಧಾನಿಯಾಗಿ ಸತತ 12 ವರ್ಷಗಳ ಕಾಲ ಸೇವೆ ಸಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ದಾಖಲೆಯನ್ನು ಹಿಂದಿಕ್ಕಿ ಸ್ವಾತಂತ್ರ್ಯೋತ್ತರ ಭಾರತದ ಸುದೀರ್ಘ ಸೇವೆ ಸಲ್ಲಿಸಿದ ಪ್ರಧಾನಿಯಾಗಿ ಇತಿಹಾಸ ನಿರ್ಮಿಸಿದ್ದಾರೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಪಟ್ಟಣದ ಐತಿಹಾಸಿಕ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಅವರು ಪ್ರಧಾನಿಯಾಗಿ 12 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶಿರಹಟ್ಟಿ ಬಿಜೆಪಿ ಮಂಡಲ ಹಾಗೂ ನಗರ ಘಟಕದಿಂದ ಆಯೋಜಿಸಿದ್ದ ವಿಶೇಷ ಪೂಜೆ ಹಾಗೂ ಸಿಹಿ ಹಂಚುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೇಂದ್ರದಲ್ಲಿ ಯುಪಿಎ ಸರ್ಕಾರದ ವಿರುದ್ಧ ದೇಶಾದ್ಯಂತ ಬಿಜೆಪಿ ಅಲೆ ಸೃಷ್ಟಿಸಿ, ಸತತ ಮೂರು ಲೋಕಸಭಾ ಚುನಾವಣೆಯಲ್ಲಿ ಜಯ ಸಾಧಿಸಿದ ಮೋದಿ ಅವರು ಹಿಂದುತ್ವ, ಸಾಂಸ್ಕೃತಿಕ ರಾಷ್ಟ್ರೀಯತೆ ಹಾಗೂ ಅಭಿವೃದ್ಧಿಯ ಮಂತ್ರದೊಂದಿಗೆ ದೇಶವನ್ನು ಅಭಿವೃದ್ಧಿಯ ಗಿರಿಶಿಖರದತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ಕಾರ್ಯಕರ್ತರ ಪರಿಶ್ರಮವೇ ಈ ಯಶಸ್ಸಿನ ಹಿಂದೆ ದೊಡ್ಡ ಶಕ್ತಿ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಭಾರತೀಯ ಸೇನೆಯ ಅಗ್ನಿಪಥ್ ಯೋಜನೆಯಡಿ ಅಗ್ನಿವೀರರಾಗಿ ಆಯ್ಕೆಯಾಗಿರುವ ಪ್ರಕಾಶ ಕುಂಬಾರ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಚಂಬಣ್ಣ ಬಾಳಿಕಾಯಿ, ಗಂಗಾಧರ ಮೆಣಸಿನಕಾಯಿ, ಪ್ರವೀಣ ಬೋಮಲೆ, ಬಸವರಾಜ ಚಕ್ರಸಾಲಿ, ನಿಂಗಪ್ಪ ಬನ್ನಿ, ನೀಲಪ್ಪ ಹತ್ತಿ, ದುಂಡೇಶ ಕೋಟಗಿ, ಅನೀಲ ಮುಳಗುಂದ, ವೀರಣ್ಣ ಅಕ್ಕೂರ, ಈರಣ್ಣ ಪೂಜಾರ, ಸಂತೋಷ ಜಾವೂರ, ಮಂಜುನಾಥ ಗಜಾಕೋಶ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

“ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್, ಸಬ್‌ಕಾ ವಿಶ್ವಾಸ್ ಧ್ಯೇಯದೊಂದಿಗೆ ಮೋದಿ ನಾಯಕತ್ವದಲ್ಲಿ ಭಾರತ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ”

ಡಾ. ಚಂದ್ರು ಲಮಾಣಿ, ಶಾಸಕ

ಸೀಜ್ ಮಾಡಿದ ಅಂಗಡಿಗಳನ್ನೇ ಮತ್ತೆ ತೆರೆದ ಪುರಸಭೆ!

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಬಸ್ ನಿಲ್ದಾಣದ ಸಮೀಪ ಇರುವ ಪುರಸಭೆಯ ವಾಣಿಜ್ಯ ಮಳಿಗೆಗಳನ್ನು ಸೀಜ್ ಮಾಡಿದ್ದ ಪುರಸಭೆ ಅಧಿಕಾರಿಗಳು, ಕೋರ್ಟ್ ತಡೆಯಾಜ್ಞೆ ಹಿನ್ನೆಲೆ ಮತ್ತೆ ಸೀಲ್ ತೆರವುಗೊಳಿಸಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ ಘಟನೆ ಬುಧವಾರ ನಡೆದಿದೆ.

ವಾಣಿಜ್ಯ ಮಳಿಗೆಗಳ ಗುತ್ತಿಗೆ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಹೊಸದಾಗಿ ಟೆಂಡರ್ ಕರೆದು ಹರಾಜು ಪ್ರಕ್ರಿಯೆ ನಡೆಸಬೇಕು. ಅಲ್ಲದೆ, ಎಗ್ ರೈಸ್ ಹಾಗೂ ಚಿಕನ್ ಮಾರಾಟ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ವಿವಿಧ ಕನ್ನಡಪರ ಸಂಘಟನೆಗಳು ಮಂಗಳವಾರ ಪ್ರತಿಭಟನೆ ನಡೆಸಿದ್ದವು. ಪ್ರತಿಭಟನೆಯ ಒತ್ತಡಕ್ಕೆ ಮಣಿದ ಪುರಸಭೆ ಅಧಿಕಾರಿಗಳು ಸಂಬಂಧಿಸಿದ ಅಂಗಡಿಗಳನ್ನು ಸೀಜ್ ಮಾಡಿದ್ದರು.

ಈ ನಡುವೆ ಅಂಗಡಿ ಮಾಲೀಕರು ಹಾಗೂ ಕೆಲವು ಸಂಘಟನೆಗಳ ಮುಖಂಡರು, ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ತಡೆಯಾಜ್ಞೆ (ಸ್ಟೇ) ಪಡೆದಿದ್ದರೂ ಪುರಸಭೆ ಅಧಿಕಾರಿಗಳು ಕಾನೂನುಬಾಹಿರವಾಗಿ ಅಂಗಡಿಗಳನ್ನು ಸೀಜ್ ಮಾಡಿದ್ದಾರೆ ಎಂದು ಆರೋಪಿಸಿದರು.

ಕರವೇ ಪ್ರವೀಣ ಶೆಟ್ಟಿ ಬಣದ ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಕಲಘಟಗಿ ಹಾಗೂ ಡಿಎಸ್‌ಎಸ್ ಮುಖಂಡ ಸುರೇಶ ನಂದೆಣ್ಣವರ ಮಾತನಾಡಿ, “ಉಚ್ಚ ನ್ಯಾಯಾಲಯದ ಆದೇಶ ಜಾರಿಯಲ್ಲಿದ್ದರೂ ಅಂಗಡಿಗಳನ್ನು ಯಾವ ಆಧಾರದ ಮೇಲೆ ಸೀಜ್ ಮಾಡಲಾಗಿದೆ?” ಎಂದು ಪ್ರಶ್ನಿಸಿದರು.

ಚಿಕನ್ ಹಾಗೂ ಮಟನ್ ಮಾರಾಟದ ಬಗ್ಗೆ ನಮಗೂ ಆಕ್ಷೇಪವಿದೆ. ಆದರೆ ಕಾನೂನು ಪ್ರಕ್ರಿಯೆ ಅನುಸರಿಸದೆ ಏಕಾಏಕಿ ವ್ಯಾಪಾರಸ್ಥರ ಜೀವನೋಪಾಯಕ್ಕೆ ಧಕ್ಕೆ ತರುವುದು ಸರಿಯಲ್ಲ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಇದರಿಂದ ಎಚ್ಚೆತ್ತ ಪುರಸಭೆ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್‌ನೊಂದಿಗೆ ವಾಣಿಜ್ಯ ಸಂಕೀರ್ಣಕ್ಕೆ ಆಗಮಿಸಿ, ಕಂದಾಯ ಅಧಿಕಾರಿ ಸುರೇಶ ಪೂಜಾರ ಹಾಗೂ ವ್ಯವಸ್ಥಾಪಕಿ ಮಂಜುಳಾ ಹೂಗಾರ ನೇತೃತ್ವದಲ್ಲಿ ಅಂಗಡಿಗಳ ಸೀಲ್ ತೆರವುಗೊಳಿಸಿದರು.

ಅಂಗಡಿಗಳು ಪುನರಾರಂಭಗೊಂಡ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಹರ್ಷ ವ್ಯಕ್ತಪಡಿಸಿದರು.

ಕ್ರೈಂ ವಿಭಾಗದ ಪಿಎಸ್‌ಐ ಟಿ.ಕೆ. ರಾಠೋಡ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಒದಗಿಸಿದ್ದರು. ಬಸವರಾಜ ಹೊಗೆಸೊಪ್ಪಿನ, ಅನೀಲ ಮುಳಗುಂದ, ಬಸವಣ್ಣೆಪ್ಪ ನಂದೆಣ್ಣವರ, ಶಿವು ಕರಡಿ ಸೇರಿದಂತೆ ಹಲವಾರು ವ್ಯಾಪಾರಸ್ಥರು ಈ ವೇಳೆ ಉಪಸ್ಥಿತರಿದ್ದರು.

“ಮೊದಲು ನ್ಯಾಯಾಲಯದ ತಡೆಯಾಜ್ಞೆ ರದ್ದುಪಡಿಸಿಕೊಂಡು ಬಳಿಕ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ”

ಮಹೇಶ ಕಲಘಟಗಿ

error: Content is protected !!