Home Blog

ಕಲಬುರಗಿಯಲ್ಲಿ ಭೀಕರ ಅಪಘಾತ; ಒಂದೇ ಕುಟುಂಬದ ಐವರು ಸಾವು!

ಕಲಬುರಗಿ: ಕ್ರೂಸರ್ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಕ್ರಾಸ್ ಬಳಿ ನಡೆದಿದೆ.

ಅಪಘಾತದಲ್ಲಿ ತೋಲುಸಾಬ್ ಕ್ಯಾಶ್ವಾರ್ (27), ಹುಸೇನ್ ಶಾ (48), ಮೈಬೂಬ್ ಅಲಿ (45), ರಸೂಲ್ ಬೀ (42) ಹಾಗೂ ಫಾತೀಮಾ ಅಲೀ (38) ಮೃತಪಟ್ಟಿದ್ದಾರೆ. ಮೃತರೆಲ್ಲರೂ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದ ನಿವಾಸಿಗಳಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಸಾಗುತ್ತಿದ್ದ ಕ್ರೂಸರ್ ವಾಹನಕ್ಕೆ ಲಾರಿ ಭಾರೀ ವೇಗದಲ್ಲಿ ಡಿಕ್ಕಿ ಹೊಡೆದ ಪರಿಣಾಮ ಕ್ರೂಸರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಡಿಕ್ಕಿಯ ತೀವ್ರತೆಗೆ ವಾಹನದಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತದ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಲಾರಿ ಚಾಲಕನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಟೈರ್ ಬ್ಲಾಸ್ಟ್ ಆಗಿ ಪಲ್ಟಿಯಾದ ಟಿಟಿ; 12 ಮಂದಿಗೆ ಗಾಯ, 2 ವರ್ಷದ ಮಗು ಸ್ಥಿತಿ ಗಂಭೀರ

ಕೊಪ್ಪಳ: ಜಿಲ್ಲೆಯ ಹೊರವಲಯದ ಚುಕ್ಕನಕಲ್ ಬಳಿ ಶುಕ್ರವಾರ ಬೆಳಗಿನ ಜಾವ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಚಲಿಸುತ್ತಿದ್ದ ಟಿಟಿ (ಟೆಂಪೋ ಟ್ರಾವೆಲರ್) ವಾಹನದ ಟೈರ್ ದಿಢೀರ್ ಬ್ಲಾಸ್ಟ್ ಆದ ಪರಿಣಾಮ ವಾಹನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ.

ಅಪಘಾತದಲ್ಲಿ ವಾಹನದಲ್ಲಿದ್ದ 12 ಪ್ರಯಾಣಿಕರು ಗಾಯಗೊಂಡಿದ್ದು, ಇವರಲ್ಲಿ 2 ವರ್ಷದ ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ತಕ್ಷಣವೇ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹೈದರಾಬಾದ್‌ನಿಂದ ಗೋವಾ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿ, ವಾಹನದಲ್ಲಿದ್ದವರನ್ನು ಹೊರತೆಗೆದರು.

ಘಟನಾ ಸ್ಥಳಕ್ಕೆ ಕೊಪ್ಪಳ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಮತ್ತೆ ಏರಿದ ಪೆಟ್ರೋಲ್-ಡೀಸೆಲ್ ದರ; ವಾಹನ ಸವಾರರಿಗೆ ಶಾಕ್!

ನವದೆಹಲಿ: ವಾಹನ ಸವಾರರಿಗೆ ಮತ್ತೆ ಇಂಧನ ಶಾಕ್ ಎದುರಾಗಿದೆ.

ಕಳೆದ 10 ದಿನಗಳಲ್ಲಿ ಮೂರನೇ ಬಾರಿ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗಿದೆ. ಶನಿವಾರ ಪೆಟ್ರೋಲ್ ದರ ಲೀಟರ್‌ಗೆ 87 ಪೈಸೆ ಹಾಗೂ ಡೀಸೆಲ್ ದರ 91 ಪೈಸೆ ಹೆಚ್ಚಳವಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 107.14 ರೂ. ಆಗಿದ್ದರೆ, ಡೀಸೆಲ್ ದರ 95.04 ರೂ. ತಲುಪಿದೆ. ದೆಹಲಿಯಲ್ಲಿ ಪೆಟ್ರೋಲ್ ದರ 99.51 ರೂ. ಹಾಗೂ ಡೀಸೆಲ್ ದರ 92.49 ರೂ. ಆಗಿದೆ.

ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಇದರ ಪರಿಣಾಮವಾಗಿ ದೇಶೀಯ ಇಂಧನ ದರದಲ್ಲೂ ಏರಿಕೆ ಕಂಡುಬಂದಿದೆ. ಮೇ 15ರಿಂದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಹಂತ ಹಂತವಾಗಿ ದರ ಹೆಚ್ಚಿಸುತ್ತಿವೆ.

ಮೇ 15ರಂದು ಲೀಟರ್‌ಗೆ 3 ರೂ. ಹೆಚ್ಚಳ ಮಾಡಲಾಗಿತ್ತು. ಬಳಿಕ ಮೇ 19ರಂದು ಸುಮಾರು 90 ಪೈಸೆ ಏರಿಕೆ ಮಾಡಲಾಗಿತ್ತು. ಇದೀಗ ಮತ್ತೆ ದರ ಏರಿಕೆಯಾಗಿ, ಒಟ್ಟು 10 ದಿನಗಳಲ್ಲಿ ಲೀಟರ್‌ಗೆ ಸುಮಾರು 5 ರೂ.ವರೆಗೆ ಹೆಚ್ಚಳವಾಗಿದೆ.

ಪ್ರಮುಖ ನಗರಗಳ ಪೆಟ್ರೋಲ್ ದರ

  • ದೆಹಲಿ – 99.51 ರೂ. (+0.87)
  • ಕೋಲ್ಕತ್ತಾ – 110.64 ರೂ. (+0.94)
  • ಮುಂಬೈ – 108.49 ರೂ. (+0.90)
  • ಚೆನ್ನೈ – 105.31 ರೂ. (+0.82)

ಪ್ರಮುಖ ನಗರಗಳ ಡೀಸೆಲ್ ದರ

  • ದೆಹಲಿ – 92.49 ರೂ. (+0.91)
  • ಕೋಲ್ಕತ್ತಾ – 97.02 ರೂ. (+0.95)
  • ಮುಂಬೈ – 95.02 ರೂ. (+0.94)
  • ಚೆನ್ನೈ – 96.98 ರೂ. (+0.87)

ಮಾಂಗಲ್ಯದಲ್ಲಿನ ಹವಳದಿಂದ ಕುಜದೋಷ ಕಡಿಮೆಯಾಗುತ್ತದೆಯಾ? ಜ್ಯೋತಿಷ್ಯ ಹೇಳುವುದೇನು?

ಮಾಂಗಲ್ಯ ಸರದಲ್ಲಿ ಧರಿಸುವ ಮುತ್ತು ಮತ್ತು ಹವಳಕ್ಕೆ ಹಿಂದೂ ಸಂಪ್ರದಾಯದಲ್ಲಿ ವಿಶೇಷ ಮಹತ್ವವಿದೆ ಎಂದು ಹೇಳಲಾಗುತ್ತದೆ. ಮಹಿಳೆಯರ ಜೀವನದಲ್ಲಿ ಶಕ್ತಿ, ಧೈರ್ಯ, ಆತ್ಮವಿಶ್ವಾಸ ಮತ್ತು ಮಾನಸಿಕ ಸಮತೋಲನ ಹೆಚ್ಚಿಸಲು ಈ ರತ್ನಗಳು ಸಹಕಾರಿ ಎನ್ನುವ ನಂಬಿಕೆ ಇದೆ.

ಮುತ್ತು ಚಂದ್ರ ಗ್ರಹದ ಪ್ರತೀಕವಾಗಿದ್ದರೆ, ಹವಳವು ಕುಜ ಗ್ರಹದ ಪ್ರತೀಕವಾಗಿದೆ ಎಂದು ಪರಿಗಣಿಸಲಾಗುತ್ತದೆ. ಈ ರತ್ನಗಳನ್ನು ಧರಿಸುವುದರಿಂದ ನಕಾರಾತ್ಮಕ ಆಲೋಚನೆಗಳು ಕಡಿಮೆಯಾಗಿ, ಧೈರ್ಯ, ಚೈತನ್ಯ, ತಾಳ್ಮೆ ಹಾಗೂ ಸಕಾರಾತ್ಮಕ ಮನೋಭಾವ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.

ಮಾಂಗಲ್ಯ ಸರದಲ್ಲಿ ಮುತ್ತು ಮತ್ತು ಹವಳ ಧರಿಸುವುದಕ್ಕೆ ಧಾರ್ಮಿಕ ಹಾಗೂ ವೈಜ್ಞಾನಿಕ ಕಾರಣಗಳಿವೆ ಎಂಬ ನಂಬಿಕೆಯೂ ಇದೆ. ಇದು ದುಷ್ಟ ಶಕ್ತಿಗಳಿಂದ ರಕ್ಷಣೆ ನೀಡುವುದರ ಜೊತೆಗೆ ಕುಟುಂಬದಲ್ಲಿ ನೆಮ್ಮದಿ ಮತ್ತು ಸಮತೋಲನ ಕಾಪಾಡಲು ಸಹಕಾರಿ ಎಂದು ಹೇಳಲಾಗುತ್ತದೆ. ಮಹಿಳೆ ಶಾಂತ ಹಾಗೂ ತಾಳ್ಮೆಯುತಳಾಗಿದ್ದರೆ, ಕುಟುಂಬದ ಎಲ್ಲರಿಗೂ ಆಕೆ ಚೈತನ್ಯದ ಮೂಲವಾಗುತ್ತಾಳೆ ಎಂಬ ಅಭಿಪ್ರಾಯವೂ ಇದೆ.

ಹವಳ ಧರಿಸುವುದರಿಂದ ಗರ್ಭಧಾರಣೆಯ ಸಮಸ್ಯೆಗಳು ಕಡಿಮೆಯಾಗುತ್ತವೆ ಎನ್ನುವ ನಂಬಿಕೆ ಇದೆ. ಕುಜ ಗ್ರಹದ ಪ್ರಭಾವದಿಂದ ಮಾನಸಿಕ ಧೈರ್ಯ ಹೆಚ್ಚಾಗಿ, ಸಂಸಾರ ನಿರ್ವಹಣೆಯಲ್ಲಿ ಆತ್ಮವಿಶ್ವಾಸ ಬರುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ, ಕುಜದೋಷದ ಪರಿಣಾಮವೂ ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ.

ಮುತ್ತು ಮತ್ತು ಹವಳವನ್ನು ಮಾಂಗಲ್ಯ ಸರದ ಎಡ ಹಾಗೂ ಬಲ ಭಾಗಗಳಲ್ಲಿ ಧರಿಸುವುದರಿಂದ ಆರೋಗ್ಯ ಹಾಗೂ ಮಾನಸಿಕ ಸಮತೋಲನ ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ನೈಸರ್ಗಿಕ ಹೆರಿಗೆ ಸಾಧ್ಯತೆ ಹೆಚ್ಚಲು ಸಹ ಇದು ನೆರವಾಗುತ್ತದೆ ಎಂಬ ಅಭಿಪ್ರಾಯವೂ ಇದೆ.

ರಾಜಕೀಯ, ವೈದ್ಯಕೀಯ, ಶಿಕ್ಷಣ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿರುವ ಮಹಿಳೆಯರಿಗೂ ಈ ರತ್ನಗಳು ಧೈರ್ಯ, ಚೈತನ್ಯ ಮತ್ತು ಆತ್ಮವಿಶ್ವಾಸ ನೀಡುತ್ತವೆ ಎಂದು ತಿಳಿಸಲಾಗಿದೆ.

ನೀರಿಲ್ಲದೆ ನರಳಿದ ಗ್ರಾಮ… ಸಿಡಿದ ಆಕ್ರೋಶ!

ವಿಜಯಸಾಕ್ಷಿ ಸುದ್ದಿ, ಗದಗ: ಕುಡಿಯುವ ನೀರಿಗಾಗಿ ಜನರು ಬೀದಿಗಿಳಿದು ಹೋರಾಟ ನಡೆಸುವ ದುಸ್ಥಿತಿ ಗದಗ ತಾಲೂಕಿನ ಕೊಟುಮಚಗಿ ಗ್ರಾಮದಲ್ಲಿ ನಿರ್ಮಾಣವಾಗಿದ್ದು, ಕಳೆದ ಮೂರು ತಿಂಗಳಿಂದ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಮಹಿಳೆಯರು, ಯುವಕರು ಹಾಗೂ ಗ್ರಾಮಸ್ಥರು ಗ್ರಾಮ ಪಂಚಾಯತ್ ಕಚೇರಿಗೆ ಬೀಗ ಹಾಕಿ ಉಗ್ರ ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯತ್ ಕಚೇರಿ ಮುಂದೆ ಮುಳ್ಳಿನ ಗಿಡಗಳು ಹಾಗೂ ಕಲ್ಲುಗಳನ್ನು ಹಾಕಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಅಲ್ಲಿಯೇ ಅಡುಗೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಸುಮಾರು 10 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಕೊಟುಮಚಗಿ ಗ್ರಾಮದಲ್ಲಿ ಹನಿ ಹನಿ ನೀರಿಗೂ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ನೀರಿಗಾಗಿ ಸಂಕಷ್ಟ ಅನುಭವಿಸುತ್ತಿದ್ದು, ಜಾನುವಾರುಗಳಿಗೂ ನೀರಿನ ಅಭಾವ ಎದುರಾಗಿದೆ.

ಗ್ರಾಮಕ್ಕೆ ಬೋರ್‌ವೆಲ್ ಹಾಗೂ ತುಂಗಭದ್ರಾ ನದಿಯಿಂದ ನೀರು ಪೂರೈಕೆ ಮಾಡಲಾಗುತ್ತಿದ್ರೂ, ಬೋರ್‌ವೆಲ್‌ಗಳ ಸಮರ್ಪಕ ನಿರ್ವಹಣೆ ಇಲ್ಲ. ಜೊತೆಗೆ ತುಂಗಭದ್ರಾ ನೀರು ಕೂಡ ನಿಯಮಿತವಾಗಿ ಬರುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಮಹಿಳೆಯರು ಮತ್ತು ಯುವಕರು ಪಂಚಾಯತ್ ಕಚೇರಿ ಎದುರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. “ನಮಗೆ ಕುಡಿಯುವ ನೀರು ಕೊಡಿ, ಇಲ್ಲವೇ ಅಧಿಕಾರಿಗಳು ಗ್ರಾಮಕ್ಕೆ ಬರಲಿ” ಎಂದು ಆಗ್ರಹಿಸಿದರು.

ಮೂರು ತಿಂಗಳಿಂದ ನೀರಿಲ್ಲದೆ ನರಳುತ್ತಿದ್ದೇವೆ. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ತಕ್ಷಣ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮದ ನೀರಿನ ಸಮಸ್ಯೆ ಕುರಿತು ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ಸಹ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಬೇಸಿಗೆಯ ತಾಪಮಾನ ಏರಿಕೆಯಾಗುತ್ತಿರುವ ನಡುವೆಯೇ ಜನರ ಮೂಲಭೂತ ಅಗತ್ಯವಾದ ಕುಡಿಯುವ ನೀರಿನ ಸಮಸ್ಯೆ ಗಂಭೀರ ರೂಪ ಪಡೆದಿದೆ. ಆದರೂ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಮೌನ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಈಗಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬಂದಿದೆ.

“ಮೂರು ತಿಂಗಳಿಂದ ನೀರಿಲ್ಲದೆ ನರಳುತ್ತಿದ್ದೇವೆ. ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದನೆ ಇಲ್ಲ. ನಮಗೆ ನೀರು ಬೇಕು… ಭರವಸೆ ಬೇಡ.”

ಉಮಾ ಪಾಟೀಲ್, ಗ್ರಾಮಸ್ಥೆ

“ಜನರ ಮೂಲಭೂತ ಹಕ್ಕಾದ ಕುಡಿಯುವ ನೀರೇ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಡಳಿತದ ಮೌನವೇ ಜನರ ಆಕ್ರೋಶಕ್ಕೆ ಕಾರಣ.”

ಶೇಖಪ್ಪ ದೇಸಾಯಿ, ಗ್ರಾಮಸ್ಥ

  • ಕೊಟುಮಚಗಿ ಗ್ರಾಮಸ್ಥರ ಆರೋಪಗಳು
  • ಮೂರು ತಿಂಗಳಿಂದ ಸಮರ್ಪಕ ನೀರು ಪೂರೈಕೆ ಇಲ್ಲ
  • ಬೋರ್‌ವೆಲ್ ನಿರ್ವಹಣೆಯಲ್ಲಿ ನಿರ್ಲಕ್ಷ್ಯ
  • ತುಂಗಭದ್ರಾ ನೀರು ನಿಯಮಿತವಾಗಿ ಬರುತ್ತಿಲ್ಲ
  • ಮಹಿಳೆಯರು, ಮಕ್ಕಳು ನೀರಿಗಾಗಿ ಪರದಾಟ
  • ಜಾನುವಾರುಗಳಿಗೂ ನೀರಿನ ಅಭಾವ
  • ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹ

ಮೇನ್ ಜಂಕ್ಷನ್‌ಗೆ ರೈಲು ನಿಲ್ಲಿಸಿ 

ವಿಜಯಸಾಕ್ಷಿ ಸುದ್ದಿ, ಗದಗ: ಯಶವಂತಪುರ–ವಿಜಯಪುರ ನಡುವಿನ ವಿಶೇಷ ರೈಲುಗಳಿಗೆ ಗದಗ ಬೈಪಾಸ್ ಬದಲು ಗದಗ ಮೇನ್ ಜಂಕ್ಷನ್‌ನಲ್ಲಿ ನಿಲುಗಡೆ ಕಲ್ಪಿಸಬೇಕು ಎಂದು ಗದಗ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ಆಗ್ರಹಿಸಿದ್ದಾರೆ.
ಈ ಕುರಿತು ನೈಋತ್ಯ ರೈಲ್ವೆ ಇಲಾಖೆ ಹಾಗೂ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿರುವ ಅವರು, ಟ್ರೇನ್ ನಂ. 06577 ಯಶವಂತಪುರ–ವಿಜಯಪುರ ಹಾಗೂ ಟ್ರೇನ್ ನಂ. 06578 ವಿಜಯಪುರ–ಯಶವಂತಪುರ ರೈಲುಗಳು ಗದಗ ಮೇನ್ ಜಂಕ್ಷನ್ ಮೂಲಕ ಸಂಚರಿಸಿ ನಿಲುಗಡೆ ಆದರೆ ಜಿಲ್ಲೆಯ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಮಧ್ಯರಾತ್ರಿ ವೇಳೆಯಲ್ಲಿ ಸಂಚರಿಸುವ ಈ ರೈಲುಗಳು ಗದಗ ಬೈಪಾಸ್‌ನಲ್ಲಿ ನಿಲ್ಲುತ್ತಿರುವುದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ನಗರದಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಬೈಪಾಸ್ ನಿಲ್ದಾಣದಲ್ಲಿ ಸಮರ್ಪಕ ಸಾರಿಗೆ ವ್ಯವಸ್ಥೆಯೂ ಇಲ್ಲ ಎಂದು ದೂರಿದ್ದಾರೆ.
ಕೇವಲ 20 ನಿಮಿಷಗಳ ವಿಳಂಬ ತಪ್ಪಿಸಲು ಪ್ರಯಾಣಿಕರನ್ನು ಸಂಕಷ್ಟಕ್ಕೆ ಸಿಲುಕಿಸುವುದು ಸರಿಯಲ್ಲ. ಗದಗ ಮೇನ್ ಜಂಕ್ಷನ್‌ನಲ್ಲಿ ನಿಲುಗಡೆ ನೀಡಿದರೆ ಹಾವೇರಿ, ದಾವಣಗೆರೆ, ತುಮಕೂರು, ಬೆಂಗಳೂರು ಕಡೆಗೆ ತೆರಳುವವರಿಗೆ ಹಾಗೂ ಬಾಗಲಕೋಟೆ, ಆಲಮಟ್ಟಿ, ವಿಜಯಪುರ ಕಡೆ ಸಂಚರಿಸುವವರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಗದಗ ಬೈಪಾಸ್ ಎಂಬ ಹೆಸರನ್ನು ಬದಲಿಸಿ “ಗಂಗಿಮಡಿ ರೈಲು ನಿಲ್ದಾಣ” ಎಂದು ಮರುನಾಮಕರಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಹಜರತ್ ನಿಜಾಮುದ್ದೀನ್ ರೈಲುಗೂ ಗದಗ ಹಾಗೂ ಬಾಗಲಕೋಟೆಯಲ್ಲಿ ನಿಲುಗಡೆ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಗದಗ–ಹರಪನಹಳ್ಳಿ ನೂತನ ರೈಲು ಮಾರ್ಗ ಕಾಮಗಾರಿಯನ್ನು ಶೀಘ್ರ ಆರಂಭಿಸಿದರೆ ಈ ಭಾಗದ ಜನರ ಪ್ರಯಾಣ ಸಮಸ್ಯೆ ಕಡಿಮೆಯಾಗಲಿದೆ ಎಂದು ತಿಳಿಸಿದ್ದಾರೆ.
 “ಗದಗ ಮೇನ್ ಜಂಕ್ಷನ್‌ನಲ್ಲಿ ರೈಲು ನಿಲುಗಡೆ ನೀಡಿದರೆ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಬೈಪಾಸ್‌ನಲ್ಲಿ ನಿಲುಗಡೆ ಮಾಡುವುದು ಜನರಿಗೆ ಸಂಕಷ್ಟ ತಂದೊಡ್ಡಿದೆ.”
ವಿಶ್ವನಾಥ ಖಾನಾಪೂರ
ಅಧ್ಯಕ್ಷರು, ಗದಗ ಜಿಲ್ಲಾ ವಿಕಾಸ ವೇದಿಕೆ

ಅಪಪ್ರಚಾರ ಬಿಟ್ಟು ಹಿಂದೂ ಸಮಾವೇಶಕ್ಕೆ ಬನ್ನಿ

ವಿಜಯಸಾಕ್ಷಿ ಸುದ್ದಿ, ಗದಗ: “ಹಿಂದೂ ಸಮಾವೇಶವನ್ನು ಹತ್ತಿಕ್ಕಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನಿಸುತ್ತಿವೆ. ಕನ್ಹೇರಿ ಶ್ರೀಗಳ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ. ಅಪಪ್ರಚಾರ ಬಿಟ್ಟು ಮೇ 31ರಂದು ನಡೆಯುವ ಹಿಂದೂ ಸಮಾವೇಶಕ್ಕೆ ಬನ್ನಿ” ಎಂದು ದಲಿತ ಮುಖಂಡ ಉಡಚಪ್ಪ ಹಳ್ಳಿಕೇರಿ ಕರೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಹಿಂದೆ ಶಿವಶರಣ ಮಾದರ ಚೆನ್ನಯ್ಯ ಶ್ರೀಗಳನ್ನು ಆರ್‌ಎಸ್‌ಎಸ್ ಸ್ವಾಮೀಜಿ ಎಂದು ನಿಂದಿಸಲಾಗಿತ್ತು. ನಾಡಿನ ಹಲವಾರು ಸ್ವಾಮೀಜಿಗಳ ಬಗ್ಗೆ ಹಗುರವಾಗಿ ಮಾತನಾಡಲಾಗಿದೆ. ಬೆಳಿಗ್ಗೆ ಮೂಢನಂಬಿಕೆ ವಿರೋಧದ ಮಾತು ಹೇಳುವವರು ರಾತ್ರಿ ಮನೆಗೆ ಹೋಗಿ ಪೂಜೆ–ಪುನಸ್ಕಾರ ಮಾಡುತ್ತಾರೆ. ಸಮಾಜದಲ್ಲಿ ಒಡಕು ಮೂಡಿಸುವ ಕೆಲಸ ನಡೆಯುತ್ತಿದೆ” ಎಂದು ಸಾಹಿತಿ ಬಸವರಾಜ ಸೂಳಿಭಾವಿ ಹಾಗೂ ಅವರ ತಂಡದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಜಿಲ್ಲೆಯ 68 ಸಂಘಟನೆಗಳ ಸಹಯೋಗದಲ್ಲಿ ಪಕ್ಷಾತೀತವಾಗಿ ಸಮಾವೇಶ ಆಯೋಜಿಸಲಾಗಿದೆ. ಜಿಲ್ಲೆಯ ಎಲ್ಲ ಸ್ವಾಮೀಜಿಗಳಿಗೂ ಆಹ್ವಾನ ನೀಡಲಾಗಿದೆ. ಕೆಲವರು ಜಾತಿ–ಜಾತಿಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಪ್ರಚೋದನಕಾರಿ ಹೇಳಿಕೆಗಳನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.
“ಬಸವಣ್ಣನವರ ಹೆಸರಿನಲ್ಲಿ ಹಿಂದೂ ಧರ್ಮ ಒಡೆಯುವ ಹುನ್ನಾರದ ವಿರುದ್ಧ ಈ ಸಮಾವೇಶ ನಡೆಯುತ್ತಿದೆ. ‘ನಾವೆಲ್ಲರೂ ಒಂದು, ನಾವೆಲ್ಲರೂ ಹಿಂದೂ’ ಎಂಬ ಸಂದೇಶದೊಂದಿಗೆ ಸಮಾವೇಶ ಆಯೋಜಿಸಲಾಗಿದೆ” ಎಂದು ಹೇಳಿದರು.
“ತೋಂಟದಾರ್ಯ ಮಠವನ್ನು ಜಾತಿಗೆ ಸೀಮಿತಗೊಳಿಸುವ ಯತ್ನ
ತೋಂಟದಾರ್ಯ ಮಠದ ಬಗ್ಗೆ ಅಪಾರ ಭಕ್ತಿ ಇದೆ. ಆದರೆ ಕೆಲವರು ಮಠವನ್ನು ಒಂದು ಜಾತಿಗೆ ಸೀಮಿತಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ತಮ್ಮನ್ನು ತಾವು ಚಿಂತಕರು ಎಂದು ಕರೆದುಕೊಳ್ಳುವವರು ಅನಗತ್ಯ ಟೀಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.
ಈ ವೇಳೆ ಮಂಜುನಾಥ ಕೊಟ್ನಿಕಲ್, ಕುಮಾರ ನಡಗೇರಿ, ಸತೀಶ್ ಕುಂಬಾರ, ರಾಘವೇಂದ್ರ ಪರಾಪೂರ, ಪಿ.ಎಸ್. ಕಾಳೆ, ಮೌನೇಶ್ ದಾಸರ, ಹುಲಗಪ್ಪ ವಾಲ್ಮೀಕಿ, ಅಶೋಕ ಭಜಂತ್ರಿ, ಈರಪ್ಪ ವಾಲ್ಮೀಕಿ, ಮಂಜುನಾಥ ಗುಡಿ, ಮಂಜುನಾಥ ಪೂಜಾರ, ಸ್ವರೂಪ ಹುಳ್ಳಿಕಾಶಿ, ವೆಂಕಟೇಶ್ ದೊಡ್ಡಮನಿ ಉಪಸ್ಥಿತರಿದ್ದರು.

20 ದಿನಕ್ಕೊಮ್ಮೆ ನೀರು… ಕೆಸರಿನಲ್ಲಿ ಬದುಕು!

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: “ನದಿ ನೀರಿನ ಪೈಪ್ ನಮ್ಮ ಬಡಾವಣೆಯಲ್ಲೇ ಹಾದು ಹೋಗುತ್ತದೆ… ಆದರೆ 20 ದಿನಕ್ಕೊಮ್ಮೆ ಮಾತ್ರ ನೀರು ಬರುತ್ತದೆ. ಮಳೆ ಬಂದರೆ ರಸ್ತೆ ಕೆರೆಯಾಗುತ್ತದೆ. ಮನೆ ಮುಂದೆ ಚರಂಡಿ ನೀರು ಹರಿಯುತ್ತದೆ…” — ಇಂತಹ ಗಂಭೀರ ಸಮಸ್ಯೆಗಳ ವಿರುದ್ಧ ಆಕ್ರೋಶಗೊಂಡ ಗಡ್ಡದೇವರಮಠ ಆಶ್ರಯ ಬಡಾವಣೆಯ ನಿವಾಸಿಗಳು ಬುಧವಾರ ಪುರಸಭೆಗೆ ದಿಡೀರ್ ದೌಡಾಯಿಸಿ ಅಸಮಾಧಾನ ಹೊರಹಾಕಿದರು.

ಪಟ್ಟಣದ ಗಡ್ಡದೇವರಮಠ ಆಶ್ರಯ ಬಡಾವಣೆಯಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ ಹಾಗೂ ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.

ಈ ವೇಳೆ ಮಾತನಾಡಿದ ನಿವಾಸಿಗಳು, “ನದಿ ನೀರು ಪೂರೈಕೆಯ ಪೈಪ್‌ಲೈನ್ ನಮ್ಮ ಭಾಗದಲ್ಲಿಯೇ ಹಾದು ಹೋಗಿದ್ದರೂ 20 ದಿನಗಳಿಗೊಮ್ಮೆ ಮಾತ್ರ ನೀರು ಪೂರೈಕೆಯಾಗುತ್ತಿದೆ. ಇರುವ ಬೋರ್‌ವೆಲ್‌ನಿಂದಲೂ ಸಮರ್ಪಕ ನೀರು ಸಿಗುತ್ತಿಲ್ಲ. ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಳೆ ಬಂದಾಗ ಬಡಾವಣೆಯಿಂದ ಪಟ್ಟಣಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಎದೆಯತ್ತರ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ರಸ್ತೆಗಳು ಕೆಸರುಮಯವಾಗುತ್ತಿದ್ದು, ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮನೆಗಳ ಮುಂದೆ ನೀರು ಹರಿದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ದೂರಿದರು.

ತಕ್ಷಣವೇ ರಸ್ತೆ ದುರಸ್ತಿ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸ್ವಚ್ಛತಾ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದರು.

ನಿವಾಸಿಗಳ ಅಹವಾಲು ಆಲಿಸಿದ ಪುರಸಭೆ ಅಧಿಕಾರಿಗಳು ಹಾಗೂ ನೀರು ಸರಬರಾಜು ಇಲಾಖೆ ಮೇಲ್ವಿಚಾರಕ ಪರಶುರಾಮ ಮುಳಗುಂದ, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ವಿರೂಪಾಕ್ಷಪ್ಪ ಹಡಪದ, ಮಂಜುನಾಥ ಬಳಗಾನೂರ, ಭಾಷಾಸಾಬ ಬೂದಿಹಾಳ, ಕಿರಣ ಬಳಗಾನೂರ, ಎಚ್.ಎ. ಬಹದ್ದೂರ, ವೈ.ಎಂ. ನಾಲಬಂದ, ಚನ್ನವ್ವ ಕಮತದ, ನಿರ್ಮಲ ಹೊಸಮನಿ, ದಾವಲಬಿ ಬಾಗಲಕೋಟ, ಸಾಹೇರಾ ಗುಡಗೇರಿ, ಮಲ್ಲವ್ವ ಗಡದವರ, ಜೈತುನಬಿ ದೊಡ್ಡಮನಿ, ನೀಲವ್ವ ಮಾವನೂರ, ವಿನೋದಾ ಬೋರೆ, ನಿಂಗವ್ವ ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“20 ದಿನಕ್ಕೊಮ್ಮೆ ನೀರು ಬರುತ್ತಿದೆ. ಮಳೆ ಬಂದರೆ ರಸ್ತೆ ಕೆರೆಯಾಗುತ್ತದೆ. ಮೂಲಭೂತ ಸೌಲಭ್ಯಕ್ಕಾಗಿ ಪುರಸಭೆಗೆ ಬರಬೇಕಾದ ಸ್ಥಿತಿ ಬಂದಿದೆ.”

ಗಡ್ಡದೇವರಮಠ ಆಶ್ರಯ ಬಡಾವಣೆಯ ನಿವಾಸಿಗಳು

“ವಲಸೆ ಬೇಡ… ಊರಲ್ಲೇ ಕೆಲಸ ಮಾಡಿ”

ವಿಜಯಸಾಕ್ಷಿ ಸುದ್ದಿ, ನರಗುಂದ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನರೇಗಾ ಯೋಜನೆಯಲ್ಲಿ ಭಾಗವಹಿಸಿ, ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಬನಹಟ್ಟಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ ಗಣಿ ಕರೆ ನೀಡಿದರು.

ಬನಹಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬನಹಟ್ಟಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಸಮುದಾಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬೇಸಿಗೆ ಅವಧಿಯಲ್ಲಿ ರೈತರ ಹೊಲಗಳಲ್ಲಿ ಬದು ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಎಸ್ಸಿ–ಎಸ್ಟಿ ಸಮುದಾಯದ ರೈತರು ಮತ್ತು ಕಾರ್ಮಿಕರು ತಮ್ಮ ಹೊಲಗಳಿಗೂ ಬದು ನಿರ್ಮಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.

ಮಳೆ ಇಲ್ಲದೆ ಕೂಲಿ ಕೆಲಸ ಸಿಗುತ್ತಿಲ್ಲ ಎಂದು ಆತಂಕಪಡುವ ಅಗತ್ಯವಿಲ್ಲ. ಮಳೆ ಆರಂಭವಾಗುವವರೆಗೂ ನರೇಗಾ ಯೋಜನೆಯಡಿ ಕೆಲಸ ನೀಡಲು ಗ್ರಾಮ ಪಂಚಾಯತ್ ಸಿದ್ಧವಿದ್ದು, ಬನಹಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲ ಗ್ರಾಮಗಳ ಕಾರ್ಮಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.

ನರೇಗಾ ಜಾಬ್ ಕಾರ್ಡ್‌ನ್ನು ಗ್ರಾಮ ಪಂಚಾಯತ್ ವತಿಯಿಂದ ಉಚಿತವಾಗಿ ನೀಡಲಾಗುತ್ತದೆ. ಕೆಲಸಕ್ಕೆ ಹಾಜರಾಗಲು ಉದ್ಯೋಗ ಚೀಟಿಯೊಂದಿಗೆ ಇ-ಕೆವೈಸಿ ಕಡ್ಡಾಯವಾಗಿ ಮಾಡಿಸಿರಬೇಕು ಎಂದು ತಿಳಿಸಿದರು.

ನರೇಗಾ ಯೋಜನೆಯಡಿ ಗಂಡು–ಹೆಣ್ಣು ಭೇದವಿಲ್ಲದೆ ದಿನಕ್ಕೆ ₹370 ಸಮಾನ ಕೂಲಿ ನೀಡಲಾಗುತ್ತಿದೆ. ಬೇಸಿಗೆ ಕಾರಣ ವಲಸೆ ಹೋಗದೇ, ತಮ್ಮ ಊರಲ್ಲೇ ಕೆಲಸ ಪಡೆದು ಆರೋಗ್ಯಕರ ಜೀವನ ನಡೆಸುವಂತೆ ಸಲಹೆ ನೀಡಿದರು.

ಪಿಡಿಓ ಮಂಜುನಾಥ ಗಣಿ ನೇತೃತ್ವದಲ್ಲಿ ನರೇಗಾ ಐಇಸಿ ಚಟುವಟಿಕೆಗಳ ಮೂಲಕ ಬನಹಟ್ಟಿ ಗ್ರಾಮದ ಎಸ್ಸಿ–ಎಸ್ಟಿ ಕಾಲೋನಿಗಳಲ್ಲಿ ವಿಶೇಷ ಜಾಗೃತಿ ಅಭಿಯಾನ ಕೈಗೊಳ್ಳಲಾಗಿತ್ತು. ಇದರ ಪರಿಣಾಮವಾಗಿ 60ಕ್ಕೂ ಹೆಚ್ಚು ಎಸ್ಸಿ–ಎಸ್ಟಿ ಸಮುದಾಯದ ಕಾರ್ಮಿಕರು ಶುಕ್ರವಾರ ನರೇಗಾ ಕೆಲಸಕ್ಕೆ ಹಾಜರಾಗಿದ್ದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮಾಳಪ್ಪ ಪೂಜಾರ, ಸಿಬ್ಬಂದಿ ಶಿವನಪ್ಪ ಕಲ್ಲಾಪೂರ, ನರೇಗಾ ಸಿಬ್ಬಂದಿಗಳಾದ ಸುನೀಲ ಶಿರೋಳ, ಮಂಜುನಾಥ ನಾಡಗೌಡ ಹಾಗೂ ಕಾಯಕಬಂಧು ತಳವಾರ ಉಪಸ್ಥಿತರಿದ್ದರು.

“ಮಳೆ ಇಲ್ಲದೆ ಕೆಲಸ ಸಿಗುತ್ತಿಲ್ಲ ಎಂದು ಚಿಂತಿಸಬೇಡಿ. ಮಳೆ ಆರಂಭವಾಗುವವರೆಗೂ ನರೇಗಾ ಯೋಜನೆಯಡಿ ಕೆಲಸ ನೀಡಲು ಗ್ರಾಮ ಪಂಚಾಯತ್ ಸಿದ್ಧವಿದೆ.”

ಮಂಜುನಾಥ ಗಣಿ

ಪಿಡಿಓ, ಬನಹಟ್ಟಿ ಗ್ರಾಮ ಪಂಚಾಯತ್

ರಾಜ್ಯ ಕಾರ್ಯದರ್ಶಿಯಾಗಿ ಪ್ರಭುರಾಜಗೌಡ ನೇಮಕ

ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡ ಜಾಗೃತಿ ವೇದಿಕೆಯ ರಾಜ್ಯ ಕಾರ್ಯದರ್ಶಿಯಾಗಿ ಗದಗ ಜಿಲ್ಲೆಯ ಯುವ ಮುಖಂಡ ಪ್ರಭುರಾಜಗೌಡ ವಿ. ಪಾಟೀಲ ಅವರನ್ನು ನೇಮಕ ಮಾಡಲಾಗಿದೆ.

ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟದಲ್ಲಿ ಕನ್ನಡ ಜಾಗೃತಿ ವೇದಿಕೆ ವತಿಯಿಂದ ಆಯೋಜಿಸಿದ್ದ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳ ಒಂದು ದಿನದ ಕಾರ್ಯಾಗಾರದಲ್ಲಿ ಈ ಘೋಷಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಕೆ. ಮಂಜುನಾಥ ದೇವ ಅವರು ನೇಮಕಾತಿ ಆದೇಶ ನೀಡಿ ಮಾತನಾಡಿ, “ಪ್ರಭುರಾಜಗೌಡ ಪಾಟೀಲ ಅವರು ಕಳೆದ ಎರಡು ದಶಕಗಳಿಂದ ಕನ್ನಡ ನಾಡು–ನುಡಿ, ರೈತಪರ ಹೋರಾಟ ಹಾಗೂ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ ರಾಜ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ” ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಕನ್ನಡ ಮುನ್ನಡೆ, ಕಾನೂನು ಅರಿವು, ಸಂಘಟನೆಯ ಉದ್ದೇಶಗಳು ಹಾಗೂ ಪದಾಧಿಕಾರಿಗಳ ಜವಾಬ್ದಾರಿಗಳ ಕುರಿತು ಚರ್ಚೆ ನಡೆಯಿತು.

ಈ ಸಂದರ್ಭದಲ್ಲಿ ರಾಜ್ಯ ಪದಾಧಿಕಾರಿಗಳು, ವಿವಿಧ ಜಿಲ್ಲೆ ಹಾಗೂ ತಾಲೂಕುಗಳ ಅಧ್ಯಕ್ಷರು, ಮಹಿಳಾ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!