Home Blog

ರಾಯಚೂರಿನಲ್ಲಿ ಹೃದಯ ವಿದ್ರಾವಕ ಘಟನೆ: ಆರೇಳು ಬೀದಿನಾಯಿಗಳ ದಾಳಿಗೆ ಪುಟ್ಟ ಬಾಲಕಿ ಸಾವು!

ರಾಯಚೂರು: ಮನೆ ಮುಂದೆ ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗುವಿನ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ್ದು, ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕೆ.ಹಂಚಿಕಾಳ ಕ್ಯಾಂಪ್‌ನಲ್ಲಿ ನಡೆದಿದೆ.

ಮೃತ ಮಗುವನ್ನು 18 ತಿಂಗಳ ಅನಂ ಎಂದು ಗುರುತಿಸಲಾಗಿದೆ. ಮಗು ನಿದ್ದೆಯಿಂದ ಎದ್ದು ಮನೆ ಮುಂದೆ ಆಟವಾಡುತ್ತಿದ್ದಾಗ ಏಕಾಏಕಿ ಆರೇಳು ಬೀದಿನಾಯಿಗಳು ದಾಳಿ ಮಾಡಿವೆ.

ಬೀದಿನಾಯಿಗಳು ಮಗುವನ್ನು ಎಳೆದಾಡಿ ಕಚ್ಚಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ವೈದ್ಯರು ಚಿಕಿತ್ಸೆ ನೀಡಿದರೂ ಮಗು ಬದುಕುಳಿಯಲಿಲ್ಲ.

ಘಟನೆ ಕುರಿತು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮದಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಅವುಗಳ ಹಾವಳಿ ತಡೆಯಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Teacher Recruitment 2026: ರಾಜ್ಯದಲ್ಲಿ 15,000 ಶಿಕ್ಷಕರ ಹುದ್ದೆ ಭರ್ತಿಗೆ ಸರ್ಕಾರದಿಂದ ಅಧಿಸೂಚನೆ!

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿಗೆ ಸರ್ಕಾರ ಮುಂದಾಗಿದೆ.

ಒಟ್ಟು 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಈ ಸಂಬಂಧ ಕರಡು ಗೆಜೆಟ್ ಅಧಿಸೂಚನೆಯನ್ನು ಸರ್ಕಾರ ಪ್ರಕಟಿಸಿದೆ.

ಅಧಿಸೂಚನೆ ಕುರಿತು ಆಕ್ಷೇಪಣೆ ಸಲ್ಲಿಸಲು ಸರ್ಕಾರವು 15 ದಿನಗಳ ಕಾಲಾವಕಾಶ ನೀಡಿದೆ. ಅಂತಿಮ ಅಧಿಸೂಚನೆ ಬಳಿಕ ನೇಮಕಾತಿ ಪ್ರಕ್ರಿಯೆ ಮುಂದುವರಿಯಲಿದೆ.

ಒಟ್ಟು 15 ಸಾವಿರ ಹುದ್ದೆಗಳಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 6,905 ಹುದ್ದೆಗಳು ಹಾಗೂ ಇತರೆ ಜಿಲ್ಲೆಗಳಿಗೆ 8,095 ಹುದ್ದೆಗಳು ಮೀಸಲಿಡಲಾಗಿದೆ.

ಇತರೆ ಜಿಲ್ಲೆಗಳ ಹುದ್ದೆಗಳ ವಿವರ:

  • ಜಿಪಿಟಿ: 5,272 ಹುದ್ದೆಗಳು
  • ಪ್ರೌಢಶಾಲಾ ಶಿಕ್ಷಕರು: 2,286 ಹುದ್ದೆಗಳು
  • PST: 100 ಹುದ್ದೆಗಳು
  • ಕಂಪ್ಯೂಟರ್ ಸೈನ್ಸ್ ಶಿಕ್ಷಕರು: 200 ಹುದ್ದೆಗಳು
  • PE ಗ್ರೇಡ್-1: 131 ಹುದ್ದೆಗಳು
  • PE ಗ್ರೇಡ್-2: 106 ಹುದ್ದೆಗಳು
  • ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳ ವಿವರ:
  • ಜಿಪಿಟಿ (GPT): 3,228 ಹುದ್ದೆಗಳು
  • ಪ್ರೌಢಶಾಲಾ ಶಿಕ್ಷಕರು: 2,214 ಹುದ್ದೆಗಳು
  • PST: 800 ಹುದ್ದೆಗಳು
  • ಕಂಪ್ಯೂಟರ್ ಸೈನ್ಸ್ ಶಿಕ್ಷಕರು: 300 ಹುದ್ದೆಗಳು
  • PE ಗ್ರೇಡ್-1: 319 ಹುದ್ದೆಗಳು
  • PE ಗ್ರೇಡ್-2: 44 ಹುದ್ದೆಗಳು

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸುವ ಉದ್ದೇಶದಿಂದ ಈ ಬೃಹತ್ ನೇಮಕಾತಿ ಕೈಗೊಳ್ಳಲಾಗಿದೆ. ಅಭ್ಯರ್ಥಿಗಳು ಅಂತಿಮ ಅಧಿಸೂಚನೆ ಹಾಗೂ ಅರ್ಜಿ ಪ್ರಕ್ರಿಯೆ ಕುರಿತು ಸರ್ಕಾರದ ಅಧಿಕೃತ ಮಾಹಿತಿಯನ್ನು ಗಮನಿಸುವಂತೆ ಸೂಚಿಸಲಾಗಿದೆ.

‘ಸತ್ಲುಜ್’ ವಿವಾದದ ಎಫೆಕ್ಟ್! OTT ಸಿನಿಮಾಗಳಿಗೂ CBFC ಸೆನ್ಸಾರ್ ಕಡ್ಡಾಯಕ್ಕೆ ಕೇಂದ್ರದ ಸಿದ್ಧತೆ

ನವದೆಹಲಿ: ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಿನಿಮಾಗಳಂತೆ ಒಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗುವ ಚಿತ್ರಗಳಿಗೂ ಸೆನ್ಸಾರ್ ಪ್ರಮಾಣಪತ್ರ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಡಲು ಸಜ್ಜಾಗಿದೆ. ದಿಲ್ಜಿತ್ ದೋಸಾಂಜ್ ಅಭಿನಯದ ‘ಸತ್ಲುಜ್’ ಚಿತ್ರದ ವಿವಾದದ ಬಳಿಕ ಈ ವಿಷಯ ಮತ್ತೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಬಂದಿದೆ.

ಮೂಲಗಳ ಮಾಹಿತಿ ಪ್ರಕಾರ, ಯಾವುದೇ CBFC ಅನುಮೋದನೆ ಇಲ್ಲದೇ ‘ಸತ್ಲುಜ್’ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಬಳಿಕ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಆತಂಕಗಳ ಹಿನ್ನೆಲೆಯಲ್ಲಿ ಚಿತ್ರವನ್ನು ಕೇವಲ 48 ಗಂಟೆಗಳೊಳಗೆ ಹಿಂಪಡೆಯಲಾಯಿತು. ಇದೇ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ಕೇಂದ್ರ ಸರ್ಕಾರ ಐಟಿ ನಿಯಮಗಳು-2021ಕ್ಕೆ ತಿದ್ದುಪಡಿ ತರಲು ಚಿಂತನೆ ನಡೆಸುತ್ತಿದೆ.

ಈ ಪ್ರಕರಣದಲ್ಲಿ ಜೀ5 ವಿರುದ್ಧವೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಕಾರಣ, ಸೆನ್ಸಾರ್ ಮಂಡಳಿ ಸೂಚಿಸಿದ್ದ 127 ಕಟ್‌ಗಳನ್ನು ಅನುಸರಿಸದೇ ಸಂಪೂರ್ಣ ಆವೃತ್ತಿಯನ್ನು ಪ್ರಸಾರ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಇದಲ್ಲದೆ, ಒಟಿಟಿಯಿಂದ ತೆಗೆದುಹಾಕಿದ ನಂತರವೂ ಪಂಜಾಬ್‌ನಲ್ಲಿ ಖಾಸಗಿ ಕಾರ್ಯಕ್ರಮಗಳು ಹಾಗೂ ಕೆಲವು ಗುರುದ್ವಾರಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿರುವ ಬಗ್ಗೆ ವರದಿಗಳು ಬಂದಿದ್ದು, ಇಂತಹ ಅನಧಿಕೃತ ಪ್ರದರ್ಶನಗಳ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಸದ್ಯ ಈ ಕುರಿತು ಕೇಂದ್ರ ಸರ್ಕಾರದಿಂದ ಅಧಿಕೃತ ಅಧಿಸೂಚನೆ ಹೊರಬಿದ್ದಿಲ್ಲ. ಆದರೆ, ಒಟಿಟಿ ಕಂಟೆಂಟ್ ಮೇಲಿನ ನಿಯಂತ್ರಣವನ್ನು ಮತ್ತಷ್ಟು ಬಿಗಿಗೊಳಿಸುವ ಉದ್ದೇಶದಿಂದ CBFC ಪ್ರಮಾಣೀಕರಣವನ್ನು ಕಡ್ಡಾಯಗೊಳಿಸುವ ಹೊಸ ನಿಯಮಗಳು ಶೀಘ್ರದಲ್ಲೇ ಜಾರಿಗೆ ಬರಬಹುದು ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

ವಿಧಾನಸೌಧದ ಬಳಿ ಭೀಕರ ಅಪಘಾತ: ಡಿವೈಡರ್‌ಗೆ ಡಿಕ್ಕಿಯಾಗಿ ಕಾರು ಜಖಂ!

ಬೆಂಗಳೂರು: ರಾಜಧಾನಿ ಬೆಂಗಳೂರಿನ ವಿಧಾನಸೌಧದ ಬಳಿ ಬೆಳಗಿನ ಜಾವ ಕಾರೊಂದು ಅಪಘಾತಕ್ಕೀಡಾಗಿದೆ.

ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬೆಳಗ್ಗೆ ಸುಮಾರು 7.30ರ ವೇಳೆಗೆ ವಿಧಾನಸೌಧ ಮೆಟ್ರೋ ನಿಲ್ದಾಣದಿಂದ ಇಂಡಿಯನ್ ಎಕ್ಸ್‌ಪ್ರೆಸ್ ಮಾರ್ಗದ ಮಧ್ಯೆ ಈ ಘಟನೆ ನಡೆದಿದೆ. ನಿಯಂತ್ರಣ ತಪ್ಪಿದ ಯುಎಸ್ ಪೋಲೊ ಕಾರು ರಸ್ತೆಯ ಪಕ್ಕದಲ್ಲಿದ್ದ ಡಿವೈಡರ್ ರೈಲಿಂಗ್ಸ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಚಾಲಕ ಸೇರಿದಂತೆ ಮೂವರಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಬೋರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಅಪಘಾತಕ್ಕೆ ನಿಖರ ಕಾರಣ ತಿಳಿದುಬರಬೇಕಿದೆ.

4 ನಿಮಿಷದ ‘ರಾಮಾಯಣ’ ಟ್ರೈಲರ್ ರೆಡಿ! ಥಿಯೇಟರ್‌ಗಳಲ್ಲಿ ಗ್ರ್ಯಾಂಡ್ ರಿಲೀಸ್‌ಗೆ ‘U’ ಸರ್ಟಿಫಿಕೇಟ್

ಮುಂಬೈ: ರಣಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ಅಭಿನಯದ ಭಾರತದ ಅತಿ ದೊಡ್ಡ ಸಿನಿಮಾಗಳಲ್ಲಿ ಒಂದಾದ ‘ರಾಮಾಯಣ’ ಚಿತ್ರದ ಟ್ರೈಲರ್‌ಗೆ ಸೆನ್ಸಾರ್ ಮಂಡಳಿಯಿಂದ ಅಧಿಕೃತ ಅನುಮೋದನೆ ದೊರೆತಿದೆ. ನಾಲ್ಕು ನಿಮಿಷಕ್ಕೂ ಅಧಿಕ ಅವಧಿಯ ಟ್ರೈಲರ್‌ಗೆ ‘U’ ಪ್ರಮಾಣಪತ್ರ ಸಿಕ್ಕಿದ್ದು, ಶೀಘ್ರದಲ್ಲೇ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗಲಿದೆ.

ಸಿಬಿಎಫ್‌ಸಿ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಮಾಹಿತಿಯಂತೆ, ಚಿತ್ರತಂಡ ಎರಡು ಟ್ರೈಲರ್‌ಗಳನ್ನು ಪ್ರಮಾಣೀಕರಣಕ್ಕೆ ಸಲ್ಲಿಸಿತ್ತು. ಮೊದಲ ಟ್ರೈಲರ್ 4 ನಿಮಿಷ 15 ಸೆಕೆಂಡು, ಎರಡನೇ ಥಿಯೇಟ್ರಿಕಲ್ ಟ್ರೈಲರ್ 4 ನಿಮಿಷಗಳ ಅವಧಿ ಹೊಂದಿದ್ದು, ಎರಡಕ್ಕೂ ‘U’ ಪ್ರಮಾಣಪತ್ರ ಲಭಿಸಿದೆ.

ಟ್ರೈಲರ್‌ಗೆ ಸೆನ್ಸಾರ್ ಮಾಡಿಸಿರುವುದರಿಂದ ಅದನ್ನು ಕೇವಲ ಆನ್‌ಲೈನ್‌ನಲ್ಲಿ ಮಾತ್ರವಲ್ಲ, ಪ್ರಮುಖ ಚಿತ್ರಮಂದಿರಗಳಲ್ಲೂ ಪ್ರದರ್ಶಿಸಲು ಚಿತ್ರತಂಡ ಸಜ್ಜಾಗಿದೆ ಎನ್ನುವುದು ಸ್ಪಷ್ಟವಾಗಿದೆ.

ಈ ಹಿಂದೆ ಬಿಡುಗಡೆಯಾಗಿದ್ದ ‘ರಾಮ’ ಟೀಸರ್ ಪ್ರೇಕ್ಷಕರಲ್ಲಿ ಅಪಾರ ಕುತೂಹಲ ಮೂಡಿಸಿತ್ತು. ಈಗ ಮೆಗಾ ಟ್ರೈಲರ್ ಮೂಲಕ ಚಿತ್ರದ ಭವ್ಯತೆ ಮತ್ತು ದೃಶ್ಯ ವೈಭವವನ್ನು ಅನಾವರಣಗೊಳಿಸಲು ಚಿತ್ರತಂಡ ಸಿದ್ಧವಾಗಿದೆ.

ನಿತೇಶ್ ತಿವಾರಿ ನಿರ್ದೇಶನದ ಈ ಮೆಗಾ ಪ್ರಾಜೆಕ್ಟ್‌ನಲ್ಲಿ ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್, ರವಿ ದುಬೆ ಸೇರಿದಂತೆ ತಾರಾಗಣವಿದೆ. ಎ.ಆರ್. ರೆಹಮಾನ್ ಮತ್ತು ಹ್ಯಾನ್ಸ್ ಝೀಮರ್ ಸಂಗೀತ ನೀಡಿರುವ ಈ ಎರಡು ಭಾಗಗಳ ಸಿನಿಮಾ ಕ್ರಮವಾಗಿ 2026 ಹಾಗೂ 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ.

ಶಂಕರ್​ ನಾಗ್ ಕನಸಿನ ಕೂಸು ‘ಮಾಲ್ಗುಡಿ ಡೇಸ್’ ಸರಣಿಗೆ 40 ವರ್ಷ: ಮಾಯಾಲೋಕ ಏಕೆ ಎವರ್‌ಗ್ರೀನ್?

ಬೆಂಗಳೂರು: ಭಾರತೀಯ ಟೆಲಿವಿಷನ್ ಇತಿಹಾಸದಲ್ಲಿ ಕಾಲಾತೀತ ಕ್ಲಾಸಿಕ್ ಆಗಿ ಉಳಿದಿರುವ ‘ಮಾಲ್ಗುಡಿ ಡೇಸ್’ ಧಾರಾವಾಹಿ ಬಿಡುಗಡೆಯಾಗಿ 40 ವರ್ಷಗಳು ಪೂರ್ಣಗೊಂಡಿವೆ. ಪೀಳಿಗೆಗಳನ್ನು ದಾಟಿ ಇಂದಿಗೂ ಅದೇ ಪ್ರೀತಿ, ಅದೇ ಗೌರವದೊಂದಿಗೆ ನೆನಪಾಗುವ ಈ ಸರಣಿ ಭಾರತೀಯರ ಭಾವನಾತ್ಮಕ ನೆನಪಿನ ಭಾಗವಾಗಿದೆ.

ಸಾಹಿತಿ ಆರ್.ಕೆ. ನಾರಾಯಣ್ ಅವರ ಅಮರ ಕಥೆಗಳಿಗೆ ನಿರ್ದೇಶಕ ಶಂಕರ್ ನಾಗ್ ನೀಡಿದ ದೃಶ್ಯರೂಪ ‘ಮಾಲ್ಗುಡಿ ಡೇಸ್’ಗೆ ಶಾಶ್ವತ ಸ್ಥಾನ ತಂದುಕೊಟ್ಟಿತು. ತಂತ್ರಜ್ಞಾನ, ಕ್ಯಾಮೆರಾ ಬಳಕೆ ಹಾಗೂ ಕಥೆ ಹೇಳುವ ಶೈಲಿಯಲ್ಲಿ ಶಂಕರ್ ನಾಗ್ ಮೂಡಿಸಿದ ಹೊಸತನ ಇಂದಿಗೂ ಅಚ್ಚರಿಯನ್ನೇ ಹುಟ್ಟಿಸುತ್ತದೆ.

ಶಿವಮೊಗ್ಗ ಜಿಲ್ಲೆಯ ಆಗುಂಬೆಯನ್ನೇ ಕಾಲ್ಪನಿಕ **‘ಮಾಲ್ಗುಡಿ’**ಯಾಗಿ ರೂಪಿಸಿ, ಅದರ ನೈಸರ್ಗಿಕ ಸೊಬಗನ್ನು ವಿಶ್ವದ ಮುಂದೆ ತೆರೆದಿಟ್ಟಿದ್ದರು. ಧಾರಾವಾಹಿಯ ಯಶಸ್ಸಿನ ನಂತರ ಆಗುಂಬೆ ಪ್ರವಾಸೋದ್ಯಮಕ್ಕೂ ಹೊಸ ಗುರುತು ಸಿಕ್ಕಿತ್ತು.

ಮಾಸ್ಟರ್ ಮಂಜುನಾಥ್ ಅವರ ‘ಸ್ವಾಮಿ’, ಅನಂತ್ ನಾಗ್, ಗಿರೀಶ್ ಕಾರ್ನಾಡ್, ವೈಶಾಲಿ ಕಾಸರವಳ್ಳಿ ಸೇರಿದಂತೆ ಕಲಾವಿದರ ಮನೋಜ್ಞ ಅಭಿನಯ ಧಾರಾವಾಹಿಗೆ ಜೀವ ತುಂಬಿತ್ತು. ಎಲ್. ವೈದ್ಯನಾಥನ್ ಅವರ ಅಮರ ಶೀರ್ಷಿಕೆ ಸಂಗೀತ ಇಂದಿಗೂ ಕೇಳುಗರನ್ನು ಬಾಲ್ಯದ ದಿನಗಳಿಗೆ ಕರೆದೊಯ್ಯುತ್ತದೆ.

‘ಮಾಲ್ಗುಡಿ ಡೇಸ್’ ಕೇವಲ ಒಂದು ಧಾರಾವಾಹಿಯಲ್ಲ; ಅದು ಭಾರತೀಯ ದೂರದರ್ಶನದ ಸುವರ್ಣ ಯುಗದ ಸಂಕೇತ, ಶಂಕರ್ ನಾಗ್ ಅವರ ಸೃಜನಶೀಲತೆಗೆ ಸಾಕ್ಷಿ ಮತ್ತು ಭಾರತೀಯ ಸಂಸ್ಕೃತಿಯ ಶಾಶ್ವತ ನೆನಪಾಗಿ ಇಂದಿಗೂ ಅಜರಾಮರವಾಗಿದೆ.

ಅಜಿತ್ ಸಿನಿಮಾದಿಂದ ಶ್ರೀಲೀಲಾ ಔಟ್! ಹ್ಯಾಟ್ರಿಕ್ ಅವಕಾಶ ಪಡೆದುಕೊಂಡ ಕನ್ನಡದ ನಟಿ

ಚೆನ್ನೈ: ಸ್ಟಾರ್ ನಟಿ ಶ್ರೀಲೀಲಾಗೆ ಮತ್ತೊಂದು ನಿರಾಸೆ ಎದುರಾಗಿದೆ. ತಮಿಳಿನ ಸೂಪರ್‌ಸ್ಟಾರ್ ಅಜಿತ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಕೊನೆಯ ಕ್ಷಣದಲ್ಲಿ ಕೈತಪ್ಪಿದ್ದು, ಆ ಪಾತ್ರಕ್ಕೆ ಇದೀಗ ಕನ್ನಡದ ಮೂಲದ ನಟಿ ಖಯಾದು ಲೋಹರ್ ಆಯ್ಕೆಯಾಗಿದ್ದಾರೆ.

ಚಿತ್ರದ ಕುರಿತು ಶ್ರೀಲೀಲಾ ಹಾಗೂ ಚಿತ್ರತಂಡದ ನಡುವೆ ಮಾತುಕತೆ ನಡೆದಿದ್ದರೂ, ಅಂತಿಮ ಹಂತದಲ್ಲಿ ನಾಯಕಿ ಬದಲಾವಣೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ಶ್ರೀಲೀಲಾಗೆ ಕೈತಪ್ಪಿದ ಪ್ರಮುಖ ಚಿತ್ರಗಳ ಸಂಖ್ಯೆ ಮೂರಕ್ಕೇರಿದೆ.

ಈ ಹಿಂದೆ ವಿಜಯ್ ದೇವರಕೊಂಡ ಅಭಿನಯದ ‘ಕಿಂಗ್ಡಮ್’ ಸಿನಿಮಾಕ್ಕೆ ಮೊದಲ ಆಯ್ಕೆಯಾಗಿದ್ದ ಶ್ರೀಲೀಲಾ ಬಳಿಕ ಆ ಪ್ರಾಜೆಕ್ಟ್‌ನಿಂದ ಹೊರಬಂದಿದ್ದರು. ನಂತರ ಅಖಿಲ್ ಅಕ್ಕಿನೇನಿ ಅಭಿನಯದ ‘ಲೆನಿನ್’ ಚಿತ್ರದಿಂದಲೂ ಹಿಂದೆ ಸರಿದಿದ್ದು, ಎರಡೂ ಚಿತ್ರಗಳಲ್ಲಿ ಭಾಗ್ಯಶ್ರೀ ಭೋರ್ಸೆ ಅವಕಾಶ ಪಡೆದಿದ್ದರು.

ಇದೀಗ ಅಜಿತ್ ಸಿನಿಮಾದಲ್ಲೂ ಶ್ರೀಲೀಲಾ ಬದಲಿಗೆ ಖಯಾದು ಲೋಹರ್ ಅವರನ್ನು ಚಿತ್ರತಂಡ ಅಂತಿಮಗೊಳಿಸಿದ್ದು, ತಮಿಳು ಚಿತ್ರರಂಗದಲ್ಲಿ ಅವರಿಗೆ ದೊಡ್ಡ ಬ್ರೇಕ್ ಸಿಕ್ಕಂತಾಗಿದೆ.

ಆದಾಗ್ಯೂ ಶ್ರೀಲೀಲಾ ಅವರ ವೃತ್ತಿಜೀವನ ವೇಗ ಕಡಿಮೆಯಾಗಿಲ್ಲ. ಧನುಷ್ ಜೊತೆಗಿನ ತಮಿಳು ಸಿನಿಮಾ, ತೆಲುಗಿನಲ್ಲಿ ಎರಡು ಹೊಸ ಪ್ರಾಜೆಕ್ಟ್‌ಗಳು ಹಾಗೂ ಬಾಲಿವುಡ್‌ನಲ್ಲಿ ಕಾರ್ತಿಕ್ ಆರ್ಯನ್ ಜೊತೆಗೆ ಬಿಗ್ ಬಜೆಟ್ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ನಿರಂತರವಾಗಿ ಬ್ಯುಸಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಶ್ರೀಲೀಲಾ ಇನ್ನೂ ಬೇಡಿಕೆಯ ನಟಿಯರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.

Bengaluru Crime News: ಅಣ್ಣನ ಪ್ರೀತಿ ತಿರಸ್ಕರಿಸಿದ ಯುವತಿಯನ್ನು ಕೊಂದ ತಮ್ಮ!

0

ಬೆಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಹೆಚ್‌ಎಎಲ್ ರಸ್ತೆ ಕೋಡಿಹಳ್ಳಿ ಬಳಿ ನಡೆದಿದೆ.

ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.

ಮೃತ ಯುವತಿಯನ್ನು ಅಮೃತ ಎಂದು ಗುರುತಿಸಲಾಗಿದೆ. ಜುಲೈ 13ರಂದು ಸಂಜೆ ಅಮೃತ ಮನೆ ಬಳಿ ಬಂದಿದ್ದ ಸೂರ್ಯ ಎಂಬಾತ ಆಕೆಯೊಂದಿಗೆ ಗಲಾಟೆ ನಡೆಸಿದ್ದಾನೆ. ಬಳಿಕ ಚಾಕುವಿನಿಂದ ಅಮೃತಳ ಬೆನ್ನು ಮತ್ತು ಎದೆ ಭಾಗಕ್ಕೆ ಇರಿದಿದ್ದಾನೆ ಎನ್ನಲಾಗಿದೆ.

ಗಾಯಗೊಂಡಿದ್ದ ಅಮೃತಳನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮೂರು ದಿನಗಳ ಕಾಲ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ ಜುಲೈ 15ರಂದು ಸಂಜೆ ಮೃತಪಟ್ಟಿದ್ದಾಳೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವನಭೀಮಾನಗರ ಠಾಣೆ ಪೊಲೀಸರು ಸೂರ್ಯ ಹಾಗೂ ಆತನ ಸಹೋದರ ಧನುಷ್‌ನನ್ನು ಬಂಧಿಸಿದ್ದಾರೆ. ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಅಮೃತ, ಧನುಷ್ ಹಾಗೂ ಸೂರ್ಯ ಒಂದೇ ಪ್ರದೇಶದವರಾಗಿದ್ದರು. ಪರಿಚಯದ ಬಳಿಕ ಧನುಷ್ ಮತ್ತು ಅಮೃತ ನಡುವೆ ಪ್ರೀತಿ ಬೆಳೆದಿತ್ತು. ಇಬ್ಬರೂ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಆದರೆ ಧನುಷ್‌ಗೆ ಈಗಾಗಲೇ ಮದುವೆಯಾಗಿದ್ದು, ಬಳಿಕ ವಿಚ್ಛೇದನ ಪಡೆದಿದ್ದ ವಿಚಾರ ಅಮೃತಳಿಗೆ ತಿಳಿದಿರಲಿಲ್ಲ ಎನ್ನಲಾಗಿದೆ. ಈ ವಿಷಯ ತಿಳಿದ ನಂತರ ಅಮೃತ ಧನುಷ್‌ನಿಂದ ದೂರವಾಗಿದ್ದಳು.

ಇದರಿಂದ ಕೋಪಗೊಂಡ ಸೂರ್ಯ, ತನ್ನ ಅಣ್ಣನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಅಮೃತಳ ಮೇಲೆ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಮೃತ ಅಮೃತ ಲಾ ವಿದ್ಯಾರ್ಥಿನಿಯಾಗಿದ್ದು, ಪಿಜ್ಜಾ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪ್ರಾಚೀನ ದೇವಾಲಯದ ಮೂರ್ತಿಗಳಿಗೆ ಭದ್ರತೆ ಕಲ್ಪಿಸಿ: ಸರ್ಕಾರಕ್ಕೆ ಹಿಂದೂ ಸಂಘಟನೆಗಳ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯಲ್ಲಿ ಹಿಂದೂ ದೇವಾಲಯಗಳ ವಿಗ್ರಹಗಳು ಹಾಗೂ ಮಹಾತ್ಮರ ಪ್ರತಿಮೆಗಳನ್ನು ಪದೇ ಪದೇ ವಿರೂಪಗೊಳಿಸಲಾಗುತ್ತಿದ್ದು, ದುಷ್ಕರ್ಮಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂದೂ ಸಂಘಟನೆಗಳ ಮುಖಂಡ ರಾಜೂ ಖಾನಪ್ಪನವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ರಾಜೂ ಖಾನಪ್ಪನವರ, ಜಿಲ್ಲೆಯಲ್ಲಿ ದೇವರ ಮೂರ್ತಿಗಳು ಹಾಗೂ ಮಹಾತ್ಮರ ಪ್ರತಿಮೆಗಳ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದ್ದರೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಮರ್ಪಕ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಗದಗದ ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನದ ಆವರಣದಲ್ಲಿರುವ ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಸುಪರ್ದಿಯಲ್ಲಿನ ಅಪರೂಪದ ಸರಸ್ವತಿ ದೇವಿಯ ಮೂರ್ತಿಯನ್ನು ಮತ್ತೆ ವಿರೂಪಗೊಳಿಸಿರುವುದು ಅತ್ಯಂತ ಖಂಡನೀಯ. ಈ ಮೂರ್ತಿಯ ಮೇಲೆ ಕಳೆದ ಮೂರು ವರ್ಷಗಳಲ್ಲಿ ಹಲವು ಬಾರಿ ದಾಳಿ ನಡೆದಿದ್ದರೂ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾರಾದರೂ ದೂರು ನೀಡಿದರೆ ಮಾತ್ರ ಪ್ರಕರಣ ದಾಖಲಿಸುತ್ತೇವೆ ಎಂಬ ಪೊಲೀಸ್ ಇಲಾಖೆಯ ನಿಲುವು ಸರಿಯಲ್ಲ. ರಾಷ್ಟ್ರೀಯ ಮಹತ್ವದ ಸ್ಮಾರಕಗಳು ಮತ್ತು ಪ್ರಾಚೀನ ದೇವಾಲಯಗಳಲ್ಲಿ ಇಂತಹ ಘಟನೆಗಳು ನಡೆದಾಗ ಪೊಲೀಸ್ ಇಲಾಖೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಲಕ್ಕುಂಡಿಯಲ್ಲೂ ಪ್ರಾಚೀನ ಶಿಲ್ಪಗಳು ಹಾನಿಗೊಳಗಾಗಿದ್ದು, ಹರ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮಹಾತ್ಮ ಗಾಂಧೀಜಿ ಹಾಗೂ ದಾನಿ ಸೋಮಶೇಖರಯ್ಯ ಹುಚ್ಚಯ್ಯ ಗಣಾಚಾರಿ ಅವರ ಪ್ರತಿಮೆಗಳನ್ನೂ ದುಷ್ಕರ್ಮಿಗಳು ವಿರೂಪಗೊಳಿಸಿದ್ದಾರೆ. ಘಟನೆ ನಡೆದ ಹಲವು ದಿನಗಳಾದರೂ ಸಂಬಂಧಪಟ್ಟ ಅಧಿಕಾರಿಗಳು ದೂರು ದಾಖಲಿಸದಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದರು.

ಜಿಲ್ಲೆಯ ಐತಿಹಾಸಿಕ ದೇವಾಲಯಗಳು, ಶಿಲ್ಪಕಲೆ ಹಾಗೂ ಮಹನೀಯರ ಪ್ರತಿಮೆಗಳು ಮುಂದಿನ ಪೀಳಿಗೆಗೆ ಉಳಿಯಬೇಕಾದರೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅವುಗಳ ರಕ್ಷಣೆಗೆ ಶಾಶ್ವತ ಕ್ರಮ ಕೈಗೊಳ್ಳಬೇಕು. ಎಲ್ಲ ಪ್ರಾಚೀನ ದೇವಾಲಯಗಳಲ್ಲಿ ಭದ್ರತೆ ಹಾಗೂ ಸಿಸಿ ಕ್ಯಾಮೆರಾ ವ್ಯವಸ್ಥೆ ಕಲ್ಪಿಸಿ, ವಿಗ್ರಹ ವಿರೂಪ ಪ್ರಕರಣಗಳ ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಡಾ. ಕೆ.ಆರ್. ದುರ್ಗೇಶ್, ಸರ್ಕಾರದ ಗಮನಕ್ಕೆ ವಿಷಯವನ್ನು ತಂದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಹೇಶ ರೋಖಡೆ, ಭರತ್ ಲದ್ದಿ, ಕುಮಾರ ನಡಗೇರಿ, ಕುಮಾರ ಮಿಟ್ಟಿಮಠ, ಆನಂದ ಅರಕೇರಿ, ಮಹೇಶ ಬಡಿಗೇರ, ಮಂಜು ಪೂಜಾರ, ವೀರಣ್ಣ ಹೆಬಸೂರ, ಬಸಯ್ಯ ಗಣಾಚಾರಿ, ಬಸವರಾಜ ಯಳವತ್ತಿ, ಮಹೇಶ ಕಂಬಾರ, ಪರಮೇಶ ಬೆಂತೂರ, ಬಸವರಾಜ ನವಲಿ, ಅಶೋಕ ಬಜಂತ್ರಿ, ಮುತ್ತಣ್ಣ ವಾಲ್ಮೀಕಿ, ಹುಲಿಗೆಪ್ಪ ವಾಲ್ಮೀಕಿ, ಶಿವಯೋಗಿ ಹಿರೇಮಠ ಹಾಗೂ ಸುನೀಲ ಮುಳ್ಳಾಳ ಉಪಸ್ಥಿತರಿದ್ದರು.

“ಪ್ರಾಚೀನ ದೇವಾಲಯಗಳ ವಿಗ್ರಹಗಳು ಮತ್ತು ಮಹಾತ್ಮರ ಪ್ರತಿಮೆಗಳ ಮೇಲಿನ ದಾಳಿಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ಬಂಧಿಸಿ ಶಾಶ್ವತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು.”

– ರಾಜೂ ಖಾನಪ್ಪನವರ

ಜುಲೈ 17ರಂದು ಬೃಹತ್ ಉಚಿತ ಆರೋಗ್ಯ ಶಿಬಿರ

0

ವಿಜಯಸಾಕ್ಷಿ ಸುದ್ದಿ, ಗದಗ: ಕೆ.ಎಲ್.ಇ. ಸಂಸ್ಥೆಯ ಆಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಜುಲೈ 17ರಂದು ಬೆಳಿಗ್ಗೆ 10.30ಕ್ಕೆ ನಗರದ ಕೆ.ಎಲ್.ಇ. ಜೆ.ಟಿ. ಕಾಲೇಜಿನ ಸಭಾಭವನದಲ್ಲಿ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಕರೆ ನೀಡಿದರು.

ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಎಲ್.ಇ. ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ, ಕಾಹೇರ ಬೆಳಗಾವಿ, ಕೆ.ಎಲ್.ಇ. ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ, ಹುಬ್ಬಳ್ಳಿ ಸೇರಿದಂತೆ ವಿವಿಧ ಆಸ್ಪತ್ರೆಗಳ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಗದಗ ತಾಲೂಕಿನ ಸುಮಾರು 50 ಗ್ರಾಮಗಳಿಂದ 10 ಸಾವಿರಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಈಗಾಗಲೇ 8 ಸಾವಿರಕ್ಕೂ ಹೆಚ್ಚು ಮಂದಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿಯೇ ನೋಂದಣಿಗೆ ಅವಕಾಶ ಕಲ್ಪಿಸಲಾಗಿದ್ದು, ಅದಕ್ಕಾಗಿ 20 ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿದೆ ಎಂದರು.

ಶಿಬಿರದಲ್ಲಿ ಹೃದಯ, ಮೂಳೆ-ಕೀಲು, ಮೂತ್ರಪಿಂಡ, ಸಾಮಾನ್ಯ ಶಸ್ತ್ರಚಿಕಿತ್ಸೆ, ಕಿವಿ-ಮೂಗು-ಗಂಟಲು, ಕಣ್ಣಿನ, ಸ್ತ್ರೀರೋಗ ಮತ್ತು ಪ್ರಸೂತಿ, ಮಕ್ಕಳ, ಚರ್ಮ, ನರರೋಗ, ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆ, ಕ್ಯಾನ್ಸರ್, ದಂತ, ಮನೋವೈದ್ಯಕೀಯ, ಭೌತಿಕ ಚಿಕಿತ್ಸೆ, ಆಯುರ್ವೇದ ಹಾಗೂ ಹೋಮಿಯೋಪತಿ ಸೇರಿದಂತೆ ವಿವಿಧ ವಿಭಾಗಗಳ ತಜ್ಞ ವೈದ್ಯರು ಉಚಿತ ತಪಾಸಣೆ ನಡೆಸಿ ಅಗತ್ಯ ಔಷಧ ವಿತರಿಸಲಿದ್ದಾರೆ. ಅಗತ್ಯವಿರುವ ರೋಗಿಗಳನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.

ಶಿಬಿರದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಲಿದ್ದು, ಕೆ.ಎಲ್.ಇ. ಸಂಸ್ಥೆಯ ಮಾಜಿ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಎಚ್.ಕೆ. ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ ಹಾಗೂ ಡಿ.ಆರ್. ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮತ್ತು ಡಾ. ಎಚ್.ಎಸ್. ನೀಲಗುಂದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಎಸ್.ಬಿ. ಸಂಶಿಮಠ, ಆರ್.ಟಿ. ಪವಾಡಶೆಟ್ಟರ್, ಅಶೋಕ ನಿಲೂಗಲ್, ಬಿ.ಜಿ. ಶೆಲ್ಲಿಕೇರಿ, ರಜನಿ ಪಾಟೀಲ ಹಾಗೂ ಡಾ. ಅಲ್ಲಮಪ್ರಭು ಕುಡಚಿ ಉಪಸ್ಥಿತರಿದ್ದರು.