ತುಮಕೂರು: ಜಿಲ್ಲೆಯಲ್ಲಿ ಆತಂಕ ಮೂಡಿಸಿದ್ದ ನವಿಲುಗಳ ಸರಣಿ ಸಾವು ಪ್ರಕರಣದ ರಹಸ್ಯ ಬಯಲಾಗಿದೆ. FSL ವರದಿ H5N1 ಹಕ್ಕಿ ಜ್ವರ ಸೋಂಕನ್ನು ದೃಢಪಡಿಸಿದ್ದು, ಜಿಲ್ಲಾಡಳಿತ ತಕ್ಷಣ ಕಂಟೈನ್ಮೆಂಟ್ ಕ್ರಮಗಳಿಗೆ ಮುಂದಾಗಿದೆ.
11 ದಿನಗಳಲ್ಲಿ 44 ನವಿಲುಗಳ ಸಾವು ದಾಖಲಾದ ಈ ಪ್ರಕರಣ ಆರಂಭದಲ್ಲಿ ತಾಪಮಾನ ಏರಿಕೆ ಕಾರಣವೆಂದು ಭಾವಿಸಲಾಗಿತ್ತು. ಆದರೆ ವೈಜ್ಞಾನಿಕ ಪರೀಕ್ಷೆಗಳು ವೈರಸ್ ಹಾವಳಿಯನ್ನೇ ಕಾರಣವೆಂದು ಸಾಬೀತುಪಡಿಸಿವೆ.
ಊರ್ಡಿಗೆರೆ, ಗೂಳೂರು, ಬೊಮ್ಮನಹಳ್ಳಿ, ಟಿ.ಜಿ.ಪಾಳ್ಯ ಸೇರಿ 10 ಕಿಮೀ ವ್ಯಾಪ್ತಿಯ 33 ಹಳ್ಳಿಗಳನ್ನು ಸೂಕ್ಷ್ಮ ವಲಯವಾಗಿ ಗುರುತಿಸಿ, ಪ್ರತಿಯೊಂದು ಪ್ರದೇಶದಲ್ಲೂ ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ. ಡಿಸ್ಇನ್ಫೆಕ್ಟ್ ಸ್ಪ್ರೇ ಮತ್ತು ನಿಗಾ ಕ್ರಮಗಳು ತೀವ್ರಗೊಳಿಸಲಾಗಿದೆ.
ಸುತ್ತಮುತ್ತಲಿನ ಕೋಳಿ ಫಾರ್ಮ್ಗಳಲ್ಲಿ ನಾಟಿ ಕೋಳಿಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದ್ದು, ಅಪರಿಚಿತರ ಪ್ರವೇಶ ನಿಷೇಧಿಸಲಾಗಿದೆ. ಸೋಂಕು ನಿಯಂತ್ರಣವೇ ಈಗ ಜಿಲ್ಲಾಡಳಿತದ ಪ್ರಮುಖ ಸವಾಲಾಗಿದೆ.

