ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕಿನ ಚಿಂತ್ರಪಳ್ಳಿ ಗ್ರಾಮದಲ್ಲಿ ಮೊಹರಂ ಹಬ್ಬದ ಕೊನೆಯ ದಿನದ ಆಚರಣೆ ಸಡಗರ, ಸಂಭ್ರಮ ಹಾಗೂ ಧಾರ್ಮಿಕ ಭಕ್ತಿಭಾವದೊಂದಿಗೆ ನೆರವೇರಿತು. ಗ್ರಾಮದ ಮಸೀದಿಯಿಂದ ಆರಂಭವಾದ ದೇವರ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭಕ್ತರ ಗಮನ ಸೆಳೆಯಿತು.
ಮೆರವಣಿಗೆಯಲ್ಲಿ ಹುಲಿವೇಷಧಾರಿಗಳು, ಅಚ್ಚಳ್ಳಿಗಳು ಹಾಗೂ ಹಿಡಿಂಬ ವೇಷಧಾರಿಗಳು ದೇವರ ಮುಂಭಾಗದಲ್ಲಿ ಕುಣಿದು ಕುಪ್ಪಳಿಸುವ ಮೂಲಕ ಭಕ್ತಿಭಾವ ಮೆರೆದರು. ಕಹಳೆ, ಹಲಗೆ ಸೇರಿದಂತೆ ಸಾಂಪ್ರದಾಯಿಕ ತಾಳವಾದ್ಯಗಳ ನಿನಾದದ ನಡುವೆ ಮೆರವಣಿಗೆ ಸಾಗಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಮಹಿಳೆಯರು ಹಾಗೂ ಮಕ್ಕಳು ದೇವರ ಮೆರವಣಿಗೆಯ ಹಾದಿಯಲ್ಲಿ ನೀರು ಹಾಕಿ ತಮ್ಮ ಹರಕೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸಿದರು. ಮೊಹರಂ ಆಚರಣೆಯಲ್ಲಿ ಹಿಂದೂ–ಮುಸ್ಲಿಂ ಬಾಂಧವರು ಒಂದಾಗಿ ಭಾಗವಹಿಸಿ ಸೌಹಾರ್ದತೆ ಮತ್ತು ಭಾವೈಕ್ಯತೆಯ ಸಂದೇಶ ಸಾರಿದರು.
ಈ ಸಂದರ್ಭದಲ್ಲಿ ಮಸೀದಿ ಮುಖ್ಯಸ್ಥರಾದ ಹುಸೇನ್ ಸಾಬ್, ಹಸನ್ ಸಾಬ್, ಜಮಾಲ್ ಸಾಬ್, ಪುರಸಭೆ ಸದಸ್ಯ ಬಣಕಾರ್ ಸುರೇಶ್, ಗ್ರಾಮದ ಮುಖಂಡರಾದ ತಳವಾರ ಹುಲುಗಪ್ಪ, ನೇಕಾರ್ ಸುರೇಶ್, ಶೀಲಿ ಚನ್ನಪ್ಪ, ಗಂಗಾಧರ ಕೆ.ಎಂ., ಮರುಳನಗೌಡ ವಿ., ಬಾರಿಕರ ಮಾರುತಿ, ಎಂ. ಚಂದ್ರಶೇಖರ, ಬಾರಿಕರ ಶ್ರೀನಿವಾಸ, ಮುನಾಫ್ ಸಾಬ್, ಪಿಂಜಾರ್ ಸಕ್ರಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

