Home Blog Page 3

ಪವಾಡ ಪುರುಷರ ನೆನೆಯೋಣ…

ಈ ನಾಡಿನಲ್ಲಿ ಧರ್ಮಕ್ಕೆ ಸಂಕಟ ಬಂದಾಗ ಧರ್ಮ ಸಂಸ್ಥಾಪನೆಗಾಗಿ ಧರ್ಮಾತ್ಮರು, ಶರಣ ಶರಣೆಯರು, ಯೋಗಿಗಳು, ಪುಣ್ಯ ಪುರುಷರು, ಸಾಧು-ಸಂತರು, ದಾರ್ಶನಿಕರು, ಮಹಾತ್ಮರು ಕಾಲಕಾಲಕ್ಕೆ ತಕ್ಕಂತೆ ಉದಯಿಸಿ ತಮ್ಮ ಆಚಾರ-ವಿಚಾರದಿಂದಲೋ ಅವತರಿಸಿ ಬಂದಿರುವುದರಿಂದ ಈ ನಾಡಿಗೆ ಧರ್ಮದ ನಾಡೆಂದು, ಮಹಾತ್ಮರ ಮಂಗಲದ ವಾಸಸ್ಥಾನವೆಂದು, ಭಕ್ತವಂತರ ನಾಡೆಂದೂ ಕರೆಯುವುದುಂಟು.

ಇಂತಹ ಪುಣ್ಯದ ಭೂಮಿಯಲ್ಲಿ ಅವತಾರಿ ಪುರುಷರಾಗಿ ಹಾಲಕೆರೆಯ ಪರಮಪೂಜ್ಯ ಮಹಾ ತಪಸ್ವಿ ಲಿಂಗೈಕ್ಯ ಗುರು ಅನ್ನದಾನ ಶಿವಯೋಗಿಗಳು, ಕೋಡಿಕೊಪ್ಪದ ಲಿಂಗೈಕ್ಯ ಹಠಯೋಗಿ ಹುಚ್ಚೀರಪ್ಪಜ್ಜನವರೂ, ಗದುಗಿನ ಗಾನಯೋಗಿ ಪಂಡಿತ ಲಿಂಗೈಕ್ಯ ಡಾ. ಪುಟ್ಟರಾಜ ಗವಾಯಿಗಳವರೂ ಜನಿಸಿ ಭಕ್ತರ ಬಾಳಿಗೆ ಬೆಳಕನ್ನು ಚೆಲ್ಲಿದರು.

ಇಂತಹ ಅನೇಕ ಮಹಿಮಾ ಪುರುಷರಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿಯ ಶ್ರೀ ಅಣ್ಣಯ್ಯ-ತಮ್ಮಯ್ಯನವರು ಶಿವಶರಣರಾಗಿ, ಭಕ್ತಿವಂತರಾಗಿ, ಗುರು-ಲಿಂಗ-ಜಂಗಮರ ಸೇವಾ ತತ್ಪರರಾಗಿ ದಾಸೋಹ ಮೂರ್ತಿಗಳಾಗಿ, ಮನು ಕುಲದ ಉದ್ಧಾರಕ್ಕೆ ಶ್ರಮಿಸಿದ ಮಹಿಮಾ ಪುರುಷರಾಗಿ ಮೆರೆದ ವಿಷಯ ಇಂದಿಗೂ ಚಿರಸ್ಮರಣೀಯ.

ಕಲಬುರ್ಗಿ ಜಿಲ್ಲೆಯ ವಾಗಿನಗಿರಿಯಿಂದ ಬಂದ ಕುದರಿ ಮನೆತನದ ಉಭಯ ಶಿವಶರಣರು 1811ರಲ್ಲಿ ಅಣ್ಣಯ್ಯನವರು ಹಾಗೂ 1814ರಲ್ಲಿ ತಮ್ಮಯ್ಯನವರು ವೀರಶೈವ ಸದಾಚಾರ ಸಂಪನ್ನರಾದ ಸಣ್ಣಬಸವಪ್ಪ ಶೆಟ್ಟರ ಹಾಗೂ ಚನ್ನಮ್ಮ ಎಂಬ ಪುಣ್ಯ ದಂಪತಿಗಳ ಉದರದಿಂದ ಸತ್ಪುತ್ರರಾಗಿ ಜನ್ಮವೆತ್ತಿ ಬಂದರು.

ಈ ಶರಣರು ಸಾಮಾನ್ಯರಾಗಿ ಹುಟ್ಟಿ ಅಸಾಮಾನ್ಯರಾಗಿ ಬದುಕಿಗೆ ವಿಶಿಷ್ಟವಾದ ಅರ್ಥ ಕೊಟ್ಟು ಜನರ ಬಾಳಿಗೆ ಬೆಳಕನ್ನು ನೀಡಿದರು. ತಮ್ಮಯ್ಯ ಶರಣರು ಬಾಲ್ಯಾವಸ್ಥೆಯಲ್ಲಿಯ ಅನೇಕ ಪವಾಡಗಳನ್ನು ತೋರಿಸಿದರು. ಕೋಡಿಕೊಪ್ಪದ ಹಠಯೋಗಿ ಹುಚ್ಚೀರಪ್ಪಜ್ಜನವರು ಇಡಿ ಜಗತ್ತಿಗೆ ನೀಡಿದ ಸಂದೇಶ “ಯಾವುದು ಹೌದು ಅದು ಅಲ್ಲ; ಯಾವುದು ಅಲ್ಲ ಅದು ಹೌದು” ಎನ್ನುವ ನುಡಿಯನ್ನು ಸಾರಿದ ಹಾಗೇ 137 ವರ್ಷಗಳ ಹಿಂದೆಯ ತಮ್ಮಯ್ಯ ಶರಣರು ಕಲಿಯುಗದಲ್ಲಿ ದುಷ್ಟರ ಹಾವಳಿ ಹೆಚ್ಚಾಗುವುದು “ಸತ್ಯ ಸುಳ್ಳಾಗುತ್ತದೆ, ಸುಳ್ಳು ಸತ್ಯವಾಗುತ್ತದೆ” ಎಂಬ ಭವಿಷ್ಯವಾಣಿ ನುಡಿದರು. ಅಂದು ಅವರು ಹೇಳಿರುವ ಮಾತು ಇಂದಿನ ದಿನಗಳಲ್ಲಿ ನಾವು ನಿತ್ಯ ಕಾಣುತ್ತಿದ್ದೇವೆ.

ಶರಣರು ಬಾಲ್ಯದಲ್ಲಿಯೇ ಮಹಾತೇಜಸ್ವಿಗಳಾಗಿ ಅವತಾರಿಕ ಪುರುಷರಾಗಿ ಅದ್ಭುತ ಪವಾಡ ರೂಪಗಳನ್ನು ತೋರಿಸಿ ಮಹಾ ಶಿವಶರಣರೆನಿಸಿಕೊಂಡು ಆಟಿಕೆಯ ಸಾಮಗ್ರಿ ಕಟ್ಟಿಗೆಯ ಬಸವಣ್ಣನಿಂದ ಓಂಕಾರ ನುಡಿಸಿದರು. ಅದೇ ಬಸವಣ್ಣನಿಂದ ಬಂದ ಅಪವಾದಕ್ಕೆ ಕಳ್ಳನಿಂದ ನಿಜವ ನುಡಿಸಿದರು. ಇಂತಹ ಪವಾಡ ಸನ್ನಿವೇಶವನ್ನು, ಪ್ರತ್ಯಕ್ಷವಾಗಿ ಕಂಡ ಭಕ್ತರು ಇವರು ಸಾಮಾನ್ಯರಲ್ಲವೆಂದು ಮಹಾ ಪವಾಡ ಪುರುಷರೆಂದು ಅರಿತು ಅಪಾರವಾದ ಭಕ್ತಿ, ಪ್ರೀತಿ, ವಿಶ್ವಾಸಗಳನ್ನಿಟ್ಟುಕೊಂಡು ನಡೆಯ ಹತ್ತಿದರು.

ಗುರುವಿನ ಆಜ್ಞೆಯಂತೆ ಇಲಕಲ್ಲ ಪಟ್ಟಣದ ರುದ್ರಪ್ಪ ಮಾಟೂರ ಇವರ ಪುತ್ರಿ ಗಂಗಮ್ಮನವರನ್ನು ಅಣ್ಣಯ್ಯ (ಮಲ್ಲಿರ್ಜುನಪ್ಪ)ನೊಂದಿಗೆ ಹಾಗೂ ಜಾಲಿಹಾಳ ಗ್ರಾಮದ ಪರಪ್ಪ ಕಡಗದ ಇವರ ಪುತ್ರಿ ಅಂದಾನಮ್ಮನವರನ್ನು ತಮ್ಮಯ್ಯ (ಬಸವಶ್ರೇಷ್ಠ)ನೊಂದಿಗೆ 1835ರಲ್ಲಿ ಮದುವೆಯಾದರು. ಉಭಯ ಶರಣರು ಸಂಸಾರವನ್ನು ದಾಸೋಹ ಮೂರ್ತಿಗಳಾಗಿ ಸಾಗಿಸುತ್ತಿದ್ದರು.

1884ರಲ್ಲಿ ತಮ್ಮಯ್ಯನವರು, 1889ರಲ್ಲಿ ಅಣ್ಣಯ್ಯನವರು ಲಿಂಗೈಕ್ಯರಾದರು. ತಮ್ಮಯ್ಯ ಶರಣರು ತಾವು ಲಿಂಗೈಕ್ಯರಾಗುವುದಕ್ಕಿಂತ ಒಂದು ವಾರ ಮೊದಲೇ ಲಿಂಗೈಕ್ಯರಾಗುವುದನ್ನು ಹಾಗೂ ಐದು ವರ್ಷಗಳ ನಂತರ ನಮ್ಮ ಅಣ್ಣಯ್ಯನವರು ಲಿಂಗೈಕ್ಯರಾಗುತ್ತಾರೆಂದು ಭಕ್ತರಲ್ಲಿ ಭವಿಷ್ಯ ನುಡಿದಿದ್ದರು. ಐಕ್ಯರಾದ ಎಂಟು ದಿನಗಳ ನಂತರ ಶರಣರು ಮುಷ್ಠಿಗೇರಿ, ನೆಲ್ಲೂರು ಗ್ರಾಮದ ಜಂಗಮರಿಗೆ ದರ್ಶನ ಕೊಟ್ಟರು.

ಶರಣರ ಪವಾಡಗಳು ಒಂದೆರಡಲ್ಲ. ತಂದೆಯ ಕಾಲದಲ್ಲಿ ಹೊಲಮನೆಗಳನ್ನು ಬರೆಯಿಸಿಕೊಂಡಿದ್ದ ಸಾಲಗಾರರನ್ನು ಕರೆಯಿಸಿ ಶರಣರು ನಿಮ್ಮ ಹೊಲ, ಮನೆಗಳನ್ನು ನೀವು ತೆಗೆದುಕೊಳ್ಳಿ, ನಿಮ್ಮ ಸಾಲವು ತೀರಿ ಹೋಯಿತು ಎಂದು ಹೇಳಿ ಸಾವಿರಾರು ಸಾಲದ ಕಾಗದಪತ್ರಗಳನ್ನು ಸುಟ್ಟು ಹಾಕಿದರು. ಸಾಲಿಗರ ಮನೆಯಲ್ಲಿ ಬರೀ ನೀರು ಕುಡಿದು ನಿಮ್ಮ ಸಾಲ ಮುಟ್ಟಿರುತ್ತದೆ ಎಂದು ಹೇಳಿದರು. ಇವರ ಹೊಲದಲ್ಲಿ ಕುಸುಬಿ ಕದ್ದ ಕಳ್ಳರಿಗೆ ಬುದ್ಧಿ ಬರುವಂತೆ ಮಾಡಿ ಸನ್ಮಾರ್ಗಕ್ಕೆ ಹಚ್ಚಿದರು. ಸುಳ್ಳು ಹೇಳಿದ ಜಂಗಮನಿಗೆ ಬುದ್ದಿ ಹೇಳಿದರು.

ಶರಣರ ಕಾಲಿಗೆ ಹುಣ್ಣು ಆಗಿತ್ತು. ಹುಳಗಳು ಬಿದ್ದಿರಲು ಅವುಗಳಿಗೆ ಸಕ್ಕರಿ ಹಾಕಿ ಜೋಪಾನ ಮಾಡುತ್ತಿದ್ದರು. ಸದ್ಭಕ್ತರಿಗೆ ಸಂತಾನ ಫಲವನ್ನು ಆಗ್ರಹಿಸಿದರು. ಮುಚ್ಚಿದ್ದ ಕದವನ್ನು ಕೂಡಲ ಸಂಗಮೇಶ್ವರನಿಂದ ತೆಗೆಯಿಸಿದರು. ಹಾವಿನ ಹೆಡೆಯಲ್ಲಿದ್ದ ರತ್ನದ ದೇವರ ಗರ್ಭ ಗುಡಿಯಲ್ಲಿಯ ಲಿಂಗಕ್ಕೆ ಬೆಳಕು ಮಾಡಿದರು. ಅಚ್ಚು ಮುರಿದ ಬಂಡಿಯನ್ನು ಹಾಲಕೆರೆಯಿಂದ ಜಕ್ಕಲಿಯವರೆಗೂ ನಡೆಯಿಸಿದರು. ಹೀಗೆ ಅನಂತಾ ಮಹಿಮೆಗಳಿಂದ ಜನರ ಮನ ಮಾಲಿನ್ಯವನ್ನು ಕಳೆದು ಅವರಿಗೆ ಸತ್ಯ, ಜ್ಞಾನದ ಬೆಳಕನ್ನು ತೋರಿಸಿದರು.

ಇಂತಹ ಪುಣ್ಯ ಪುರುಷರು ನಡೆದಾಡಿದ ಈ ನೆಲ ಪಾವನವಾಗಿದೆ.ಅವರ ಕಾಯಕದ ಬದುಕು, ನಮ್ಮ ಜೀವನದ ಸೂತ್ರವಾಗಿದೆ. ಪುಣ್ಯಾತ್ಮರು ತೋರಿದ ಮಾರ್ಗದಲ್ಲಿ ಭಕ್ತರೆಲ್ಲರೂ ಬದುಕು ಕಂಡುಕೊಂಡರೆ ಸಜ್ಜನ ಸಮಾಜ ನಿರ್ಮಾಣಗೊಂಡು ಸುಭಿಕ್ಷೆ ನೆಲೆಸಲು ಸಾಧ್ಯ. ಅವರ ದಾಸೋಹ ಕಾಯಕದ ಪ್ರೀತಿ, ಹಸಿವು ಮುಕ್ತ ಸಮಾಜ ನಿರ್ಮಾಣದ ಶರಣರ ಕಳಕಳಿ, ಸದೃಢ ಸಮಾಜದ ಪರಿಕಲ್ಪನೆ, ಇಂದಿನ ಪ್ರಜಾಪ್ರಭುತ್ವದ ಆಶಯ ಬಿಂಬಿಸುವ ಸದಾಶಯವಾಗಿದೆ.

– ಸಂಗಮೇಶ ಮೆಣಸಗಿ.

ಜಕ್ಕಲಿ.

ತೆರಿಗೆ ಹಣ ಸದ್ವಿನಿಯೋಗವಾಗುತ್ತಿಲ್ಲ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಖಾಲಿ ನಿವೇಶನ, ನಿವೇಶನ, ವಾಣಿಜ್ಯ ಮಳಿಗೆ ಇತರೆ ಎಲ್ಲಾ ಮೂಲಗಳಿಂದ ತೆರಿಗೆ ಸಂಗ್ರಹ ಮಾಡುತ್ತಿದ್ದು, ತೆರಿಗೆ ಹಣ ಸರಿಯಾದ ರೀತಿಯಲ್ಲಿ ಬಳಕೆ ಆಗದೇ ಇರುವುದರಿಂದ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳು ಮರೀಚಿಕೆಯಾಗಿವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣ ತಾಲೂಕಾಧ್ಯಕ್ಷ ಮಹೇಶ ಕಲಘಟಗಿ ಹೇಳಿದರು.

ಅವರು ಬುಧವಾರ ಪಟ್ಟಣದ ಪುರಸಭೆಯಲ್ಲಿ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಪಟ್ಟಣದಲ್ಲಿ ಪುರಸಭೆಯಿಂದ ತೆರಿಗೆ ಸಂಗ್ರಹ ಮಾಡುತ್ತಿದ್ದು, ಖಾಲಿ ನಿವೇಶನಕ್ಕೆ ತೆಗೆದುಕೊಂಡ ತೆರಿಗೆ ಹಣ ಉಪಯೋಗವಾಗುತ್ತಿಲ್ಲ. ಖಾಲಿ ನಿವೇಶನದಲ್ಲಿ ಗಿಡ-ಗಂಟಿಗಳು ಬೆಳಿದಿವೆ. ತೆರಿಗೆಯಲ್ಲಿ ಆರೋಗ್ಯ, ಗ್ರಂಥಾಲಯ, ಭಿಕ್ಷುಕರ, ಸಾರಿಗೆ, ಘನತ್ಯಾಜ್ಯ ಉಪಕರ, ನೀರಿನ ಕರಗಳನ್ನು ವಸೂಲಿ ಮಾಡುತ್ತಿದೆ. ಆದರೆ ಇದರ ಸದುಪಯೋಗವಾಗುತ್ತಿಲ್ಲ. ಘನತಾಜ್ಯ ವಿಲೇವಾರಿ ವಿಷಯದಲ್ಲಿ ಪುರಸಭೆ ಸರಿಯಾಗಿ ಕಾರ್ಯನಿರ್ವಸುತ್ತಿಲ್ಲ. ಪ್ರತಿ ಸಲ ನೀರಿನ ಕರ ಸಂಗ್ರಹಿಸುತ್ತಿದ್ದರೂ ತಿಂಗಳಿಗೊಮ್ಮೆ ನೀರು ಬಿಡುವದು ತಪ್ಪುತ್ತಿಲ್ಲ ಎಂದು ಆರೋಪಿಸಿದರು.

ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಕರ ದರ ಏರಿಕೆ ಸರಕಾರದ ಆದೇಶದಂತೆ ಮಾಡಲಾಗಿದೆ. ಮನವಿಯಲ್ಲಿ ನೀಡಲಾಗಿರುವ ಸಮಸ್ಯೆಗಳ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವದಾಗಿ ಹೇಳಿದರು.

ಈ ಸಂದರ್ಭದಲ್ಲಿ ಕಾರ್ತಿಕ ಹಿರೇಮಠ, ಅಂಬರೀಷ ಗಾಂಜಿ, ಪ್ರವೀಣ ದಶಮನಿ, ಇಶಾಕ ಬಿಜಾಪುರ, ವಾಸು ಗೋಸಾವಿ, ಈಶ್ವರಗೌಡ ಪಾಟೀಲ್, ಶಿದಪ್ಪ ಕರಿಗೆರ, ಪ್ರಶಾಂತ ಕರಮಣ್ಣವರ, ಅರ್ಜುನ ಬಾಂಡಗೆ, ಚಂದ್ರು ಮುಳಗುಂದ, ಬಸನಗೌಡ ಮನ್ನಂಗಿ ಮುಂತಾದವರಿದ್ದರು.

ಠೇವಣಿದಾರರ ಹಣವನ್ನು ಮರಳಿ ಕೊಡಿಸಿ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ 8 ವರ್ಷದ ಹಿಂದೆ ಪ್ರಾರಂಭವಾಗಿರುವ ಬೈಲಹೊಂಗಲದ ಕಿತ್ತೂರು ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಲಕ್ಷ್ಮೇಶ್ವರ ಶಾಖೆಯಲ್ಲಿ ಕೊಟ್ಯಾಂತರ ರೂಗಳ ಠೇವಣಿ ಹಣವನ್ನು ಠೇವಣಿದಾರರಿಗೆ ನೀಡದೆ ಸತಾಯಿಸುತ್ತಿದ್ದು, ಅದರ ಕೇಂದ್ರ ಕಚೇರಿಯ ಆಡಳಿತ ಮಂಡಳಿಯವರಿಗೆ ವಂಚನೆ ಆರೋಪದಡಿಯಲ್ಲಿ ತಕ್ಕ ಶಿಕ್ಷೆ ನೀಡಬೇಕು ಮತ್ತು ಠೇವಣಿದಾರರ ಹಣ ಮರಳಿ ದೊರೆಯುವಂತೆ ಮಾಡಬೇಕೆಂದು ಆಗ್ರಹಿಸಿ ಠೇವಣಿದಾರರು ಗೋಕಾಕದ ಜೈಹೋ ಜನತಾ ವೇದಿಕೆಯ ಸಹಯೋಗದಲ್ಲಿ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿ, ಸಹಕಾರಿ ಸಚಿವ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಶಿವಾನಂದ ಹಿರೇಮಠ ಮತ್ತು ಸಾಮಾಜಿಕ ಹೋರಾಟಗಾರ ರವಿ ಹೊನ್ನಿಕೊಳ್ಳ ಮಾತನಾಡಿ, ಪಟ್ಟಣದಲ್ಲಿ ಬೈಲಹೊಂಗಲದ ಕಿತ್ತೂರು ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವನ್ನು ಸ್ಥಾಪಿಸಿ ಅದರ ಮೂಲಕ ನೂರಾರು ಜನರಿಂದ ಠೇವಣಿ ಸಂಗ್ರಹಿಸಿ ಇದೀಗ ಜನರಿಗೆ ಹಣ ನೀಡದೇ ಸತಾಯಿಸುತ್ತಿದ್ದು, ಕೋಟ್ಯಾಂತರ ರೂ ಹಣವನ್ನು ವಂಚಿಸಿದ್ದಾರೆ. ಪಟ್ಟಣದ ಶಾಖೆಯಲ್ಲಿ ಸುಮಾರು 5.25 ಕೋಟಿಗೂ ಅಧಿಕ ಠೇವಣಿ ಹಣವಿದ್ದು, ಇದೀಗ ಹಣವನ್ನು ನೀಡದೆ ಬಡವರ ರಕ್ತ ಹೀರುತ್ತಿದ್ದಾರೆ ಎಂದು ಆರೋಪಿಸಿದರಲ್ಲದೆ, ಕೂಡಲೇ ಠೇವಣಿದಾರರ ಹಣವನ್ನು ಮರಳಿ ದೊರೆಯುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ ವಾಸುದೇವ ಸ್ವಾಮಿ, ಈ ಕುರಿತಂತೆ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಠೇವಣಿದಾರರಾದ ಅಪ್ಪಣ್ಣ ಸೊರಟೂರ, ಸಚಿನ್ ಕರ್ಜೆಕಣ್ಣವರ, ದಿನೇಶ ಗಾಂಜಿ, ವಿ.ಸಿ. ರಬಕವಿ, ಎಸ್.ಎಸ್. ವಸ್ತçದ, ಮೃತ್ಯುಂಜಯ ಹಾವೇರಿಮಠ, ಮಹಾಂತೇಶ ಕರ್ಜೆಕಣ್ಣವರ, ಶ್ರೀಪಾಲ ಗಾಂಧಿ, ಎಸ್.ಎನ್. ಮಲ್ಲಾಡದ, ಈರಣ್ಣ ದವಡಿ, ಬಸವರಾಜ ಚಕ್ರಸಾಲಿ, ಪ್ರಾಣೇಶ ವ್ಯಾಪಾರಿ, ಮಧು ಗಾಂಧಿ, ಖುಷಿ ಗಾಂಧಿ ಮುಂತಾದವರಿದ್ದರು.

ಭಾರತೀಯ ಸಂಸ್ಕೃತಿ ಜಗತ್ತಿನಲ್ಲಿಯೇ ಶ್ರೇಷ್ಠ

ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಸಂಸ್ಕೃತಿಯು ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠತೆ ಪಡೆದ ಸಂಸ್ಕೃತಿಯಾಗಿದೆ. ಇಂತಹ ಪವಿತ್ರ ಸಂಸ್ಕೃತಿ ಮತ್ತು ಸಂಸ್ಕಾರವನ್ನು ನಾವಿಂದು ನಮ್ಮ ಮಕ್ಕಳಿಗೆ ರೂಢಿಸಬೇಕಿದೆ ಎಂದು ಜಂಗಮವಾಡಿಮಠ ವಾರಣಾಸಿ ಕಾಶೀ ಮಹಾಪೀಠದ ಜ. ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ಹೇಳಿದರು.

ಅವರು ಮಂಗಳವಾರ ನಗರದ ಗಾಣಿಗ ಭವನದಲ್ಲಿ ಗದಗ-ಬೆಟಗೇರಿ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಸಮಿತಿ ಏರ್ಪಡಿಸಿರುವ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಮಾಲಿಕೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನರೇಗಲ್ ಹಿರೇಮಠದ ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಶ್ರೀ ಸಿದ್ಧಾಂತ ಶಿಖಾಮಣಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ನೇತೃತ್ವ ವಹಿಸಿದ್ದ ಮಲ್ಲಸಮುದ್ರಗಿರಿಯ ಓಂಕಾರೇಶ್ವರಮಠದ ಪೂಜ್ಯ ಫಕೀರೇಶ್ವರ ಶಿವಾಚಾರ್ಯ ಸ್ವಾಮಿಗಳು ಹಾಗೂ ಎಂ.ಜಿ. ಸಂತೋಜಿ ಮಾತನಾಡಿದರು. ಚಳಗೇರಿ ಹಿರೇಮಠ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಉಡನಕಲ್ಲ ಸರ್ಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕರಾದ ವೀರಭದ್ರಪ್ಪ ಹಿರೆಬೆನಕಲ್ ಅವರಿಗೆ `ದಿವ್ಯಾಂಗ ಪ್ರತಿಭಾ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಅಕ್ಕಮ್ಮ ಗುರುಸ್ವಾಮಿಮಠ ಅವರಿಂದ ಸಂಗೀತ ಪ್ರಾರ್ಥನೆ ಜರುಗಿತು. ಗುರುಸಿದ್ಧಯ್ಯ ಹಿರೇಮಠ ಸ್ವಾಗತಿಸಿದರು. ಸಮಿತಿಯ ಕಾರ್ಯಾಧ್ಯಕ್ಷ ವ್ಹಿ.ಕೆ. ಗುರುಮಠ ನಿರೂಪಿಸಿ ವಂದಿಸಿದರು.

ಎಸ್.ಐ. ಯಾಳಗಿ, ಮಹೇಶ್ಚಂದ್ರ ಕಬಾಡರ, ಡಾ. ಸಂತೋಷ ತೋಟಗಂಟಿಮಠ, ಎಂ.ಜಿ. ಸಂತೋಜಿ, ಗೂಳಯ್ಯ ಮಾಲಗಿತ್ತಿಮಠ, ವಿಜಯಕುಮಾರ ಗಡ್ಡಿ, ಈರಪ್ಪ ಬಲೂಚಗಿ, ಬಸವರಾಜ ಗಾಳಪ್ಪನವರ, ಎಂ.ಪಿ. ಪಾಟೀಲ, ಗೌರಮ್ಮ ಹಿರೇಮಠ, ಶರಣಪ್ಪ ಬಳಿಗಾರ ದಂಪತಿಗಳನ್ನು ಪೂಜ್ಯರು ಸನ್ಮಾನಿಸಿ ಆಶೀರ್ವದಿಸಿದರು.

ಸನಾತನ ಸಂಸ್ಕೃತಿ ಮತ್ತು ಪರಂಪರೆಗೆ ತನ್ನದೇ ಆದ ಹಿರಿಮೆ-ಗರಿಮೆ ಇದೆ. ಋಷಿ ಮುನಿಗಳು, ದಾರ್ಶನಿಕರು ಇದಕ್ಕೆ ಭದ್ರ ಬುನಾದಿ ಒದಗಿಸಿದ್ದಾರೆ. ಮನುಕುಲದ ಒಳತಿಗಾಗಿ ಇರುವ ಈ ಸಂಸ್ಕೃತಿ ಮತ್ತು ಸಂಸ್ಕಾರವನ್ನು ನಮ್ಮ ಬದುಕನ್ನು ಹಸನಾಗಿಸಿಕೊಳ್ಳಲು ಪರಿಪಾಲಿಸುವದು ಅವಶ್ಯ ಎಂದು ಕಾಶೀ ಶ್ರೀಗಳು ಪ್ರತಿಪಾದಿಸಿದರು.

ವಚನ ಸಾಹಿತ್ಯದ ತತ್ವಗಳನ್ನು ಮೈಗೂಡಿಸಿಕೊಳ್ಳಿ

ವಿಜಯಸಾಕ್ಷಿ ಸುದ್ದಿ, ಗದಗ: ಯುವಜನಾಂಗ ವಚನ ಸಾಹಿತ್ಯದ ತತ್ವಗಳನ್ನು ಅರಿತು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಕಾಯಕ, ದಾಸೋಹ ಸಿದ್ಧಾಂತಗಳಡಿ ನವ ಸಮಾಜ ನಿರ್ಮಾಣ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.

ನಗರದ ಶ್ರೀ ಜಗದ್ಗುರು ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಬುಧವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಹಯೋಗದಲ್ಲಿ ಡಾ. ಫ.ಗು. ಹಳಕಟ್ಟಿಯವರ ಜನ್ಮದಿನದ ನಿಮಿತ್ತ `ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ್ ಬಬರ್ಚಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಎಡೆಯೂರು ಶ್ರೀ ಜಗದ್ಗುರು ತೊಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಸಂಶೋಧಕ ಮತ್ತು ಸಾಹಿತ್ಯ ಪ್ರಚಾರಕರಾದ ಡಾ. ಫ.ಗು. ಹಳಕಟ್ಟಿಯವರು ವಕೀಲ ವೃತ್ತಿ ನಿರ್ವಹಿಸುತ್ತಿದ್ದರು. ಇಡೀ ರಾಜ್ಯಾದ್ಯಂತ ಅಲೆದಾಡಿ 12ನೇ ಶತಮಾನದ ಅನೇಕ ವಚನಗಳನ್ನು ಸಂಗ್ರಹಿಸಿ ವಚನ ಸಾಹಿತ್ಯವನ್ನು ಶಾಶ್ವತವಾಗಿ ಉಳಿಸುವಲ್ಲಿ ಶ್ರಮಿಸಿದರು. ಬ್ರಿಟಿಷ್‌ರ ಕಾಲದಲ್ಲಿ ಕನ್ನಡದ ಅತ್ಯಮೂಲ್ಯ ವಚನ ಸಾಹಿತ್ಯವನ್ನು ಪ್ರಕಟಿಸುವುದು ಸುಲಭ ಕಾರ್ಯವಾಗಿದ್ದಿಲ್ಲ. ಅವರಿಗೆ ಎದುರಾದ ಅಡೆ-ತಡೆಗಳನ್ನು ಎದುರಿಸಿ ಸಂಗ್ರಹಿಸಿದ ವಚನಗಳನ್ನು ಮುದ್ರಿಸಲು ತಮ್ಮ ಸ್ವಂತ ಮನೆಯನ್ನು ಮಾರಿರುವುದು ಅವರ ದೃಢವಾದ ಇಚ್ಛಾಶಕ್ತಿ ಎಂತಹದು ಎಂದು ತಿಳಿಯುತ್ತದೆ ಎಂದರು.

ವಿಶ್ರಾಂತ ಪ್ರಾಧ್ಯಾಪಕ ಡಾ. ಸಂಗಮನಾಥ ಲೋಕಾಪೂರ ಉಪನ್ಯಾಸ ನೀಡಿ ಮಾತನಾಡಿ, ಡಾ. ಫ.ಗು. ಹಳಕಟ್ಟಿಯವರು ಧಾರವಾಡದಲ್ಲಿ ಹುಟ್ಟಿ ವಿದ್ಯಾಭ್ಯಾಸ ಮುಗಿಸಿದ ನಂತರ ವಿಜಾಪುರದಲ್ಲಿ ತಮ್ಮ ವಕೀಲ ವೃತ್ತಿ ಪ್ರಾರಂಭಿಸಿದರು. ವಚನ ಸಾಹಿತ್ಯದ ಮೇಲಿನ ಅಪಾರ ಆಸಕ್ತಿಯಿಂದ ತಾಳೆಗರಿಯ ಪ್ರಾಚೀನ ಗ್ರಂಥಗಳನ್ನು ಸಂಪಾದಿಸಲು ಪ್ರಾಂಭಿಸಿ ವಚನ ಸಾಹಿತ್ಯವನ್ನು ಉಳಿಸಲು ಪಣತೊಟ್ಟರು. 1920ರ ಸಮಾರಿಗೆ ಸಾವಿರಾರು ಗ್ರಂಥಗಳ ಸಂಪಾದನೆ ಜೊತೆಗೆ ವಚನ ಸಂಗ್ರಹವನ್ನು ಮಾಡಿ ಸರಕಾರ, ಯುಜಿಸಿ, ಸಾರ್ವಜನಿಕ ಸಂಸ್ಥೆಗಳ ನೆರವಿಲ್ಲದೆ ಹಲವಾರು ವಚನಕಾರರನ್ನು ಬೆಳಕಿಗೆ ತರುವಲ್ಲಿ ಅವರು ಮಾಡಿದ ಮಹತ್ಕಾರ್ಯ ಇತಿಹಾಸ ನೆನಪಿಡುವಂತದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಾಷ್ಟçಪ್ರಶಸ್ತಿ ವಿಜೇತ ಶಿಕ್ಷಕ ಎಸ್.ಎನ್. ಬಳ್ಳಾರಿ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ವಾರ್ತಾಧಿಕಾರಿ ವಸಂತ ಮಡ್ಲೂರ ಸೇರಿದಂತೆ ಗಣ್ಯರು ಹಾಜರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ ಬಿ ಸ್ವಾಗತಿಸಿದರು. ಕಾರ್ಯಕ್ರದಲ್ಲಿ ಮೃತ್ಯುಂಜಯ ಹಿರೇಮಠ ಮತ್ತು ತಂಡದವರು ವಚನ ಸಂಗೀತ ಪ್ರಸ್ತುತಪಡಿಸಿದರು. ಪ್ರೊ. ಆರ್.ಬಿ. ಚಿನಿವಾಲರ ಕಾರ್ಯಕ್ರಮ ನಿರೂಪಿಸಿದರು.

ಕ್ರಿಶ್ಚಿಯನ್ ಮಿಷಿನರಿಯವರು ಇವರ ಗ್ರಂಥವನ್ನು ಮುದ್ರಿಸಲು ನಿರಾಕರಿಸಿದಾಗ ಮನೆಯನ್ನೇ ಮಾರಿ ಮುದ್ರಣಾಲಯನ್ನು ಸ್ಥಾಪಿಸಿ ಹಿತಚಿಂತಕ ಮುದ್ರಣಾಲಯ ಎಂದು ನಾಮಕರಣಗೊಳಿಸಿ ಮುದ್ರಣ ಕಾರ್ಯ ಆರಂಭ ಮಾಡಿದರು. ಶಿವಾನುಭವ ಪತ್ರಿಕೆ ಪ್ರಾರಂಭಿಸಿ ವಚನ ಸಾಹಿತ್ಯ ಶಾಶ್ವತವಾಗಿ ಉಳಿಯುವಂತೆ ಮಾಡಿದರು. 1926ರಲ್ಲಿ ಬಳ್ಳಾರಿಯಲ್ಲಿ ನಡೆದ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 1928ರ ಜೂನ್‌ನಲ್ಲಿ ನಡೆದ ಕರ್ನಾಟಕ ಏಕೀಕರಣ ಪರಿಷತ್ತಿನ 3ನೇ ಅಧ್ಯಕ್ಷ ಪದವಿ ಗೌರವ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಬ್ರಿಟಿಷ್ ಸರಕಾರದಿಂದ ರಾವ್ ಬಹದ್ದೂರ್ ಮತ್ತು ರಾವ್ ಸಾಹೇಬ ಪ್ರಶಸ್ತಿ, ವಚನ ಶಾಸ್ತ್ರ ಪ್ರವೀಣ, ವಚನ ಶಾಸ್ತ್ರ ಪಿತಾಮಹ ಮುಂತಾದ ಗೌರವಗಳಿಗೆ ಪಾತ್ರರಾದವರು ಎಂದು ಡಾ. ಸಂಗಮನಾಥ ಲೋಕಾಪೂರ ಉಪನ್ಯಾಸ ನೀಡಿದರು.

“ವಚನ ಸಾಹಿತ್ಯದ ಮೇಲಿನ ಕಾಳಜಿಯಿಂದ ಇಡೀ ರಾಜ್ಯಾದ್ಯಂತ ಅಲೆದಾಡಿ 12ನೇ ಶತಮಾನದ ಅನೇಕ ವಚನಗಳನ್ನು ಸಂಗ್ರಹಿಸಿ ವಚನ ಸಾಹಿತ್ಯವನ್ನು ಶಾಶ್ವತವಾಗಿ ಉಳಿಸುವಲ್ಲಿ ಹಳಕಟ್ಟಿಯವರ ಪಾತ್ರ ಮಹತ್ತರವಾಗಿದೆ. ಇಂತಹ ವಚನಗಳನ್ನು ಶ್ರಮವಹಿಸಿ ಸಂಗ್ರಹಿಸಿದ ಫ.ಗು. ಹಳಕಟ್ಟಿಯವರ ಕಾರ್ಯ ಶ್ಲಾಘನೀಯ. ಅರ್ಥಪೂರ್ಣ, ಅತ್ಯಮೂಲ್ಯ ವಚನಗಳನ್ನು ಉಳಿಸಿ-ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ”

– ಸಿ.ಎನ್ ಶ್ರೀಧರ್.

ಜಿಲ್ಲಾಧಿಕಾರಿಗಳು, ಗದಗ.

ಕೆ.ಎಂ.ಎಫ್ ಸಾಧನೆ ಜಾಗತಿಕ ಮಟ್ಟದಲ್ಲಿದೆ

ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಗದಗ ಕೆ.ಎಂ.ಎಫ್ ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ನರಗುಂದ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕರು ಹಾಗೂ ಹಾಲು ಪರೀಕ್ಷಕರುಗಳಿಗೆ ವಿಶೇಷ ತರಬೇತಿ ಕಾರ್ಯಕ್ರಮವನ್ನು ಜುಲೈ 2ರಂದು ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಆಯೋಜಿಸಲಾಗಿತ್ತು.

ಕರ್ನಾಟಕ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಂಡಳದ ನಿರ್ದೇಶಕ ಎಚ್.ಜಿ. ಹಿರೇಗೌಡ್ರ ಮಾತನಾಡಿ, ಜಾಗತಿಕ ಆಹಾರವಾಗಿರುವ ಹಾಲು ಉತ್ಪಾದನೆ, ಶೇಖರಣೆ, ಸಂಸ್ಕರಣೆ, ಮಾರಾಟ ವ್ಯವಸ್ಥೆಗಳನ್ನು ವೈಜ್ಞಾನಿಕವಾಗಿ ನಿರ್ವಹಿಸುತ್ತಿರುವ ಹೈನೋದ್ಯಮದ ಕಾರ್ಯಚಟುವಟಿಕೆಗಳೊಂದಿಗೆ ಅದರ ಸಾಧನೆಗಳನ್ನು ವಿಶ್ವಕ್ಕೆ ತೋರಿಸುವ ಕನ್ನಡಿಯಂತೆ ಕೆ.ಎಂ.ಎಫ್ ಕಾರ್ಯನಿರ್ವಹಿಸುತ್ತಿದೆ. ಸಹಕಾರ ಸಂಘಗಳಿಗೆ, ಕಟ್ಟಡಕ್ಕಾಗಿ ಬಡ್ಡಿರಹಿತ ಸಾಲ, ಆಕಳು ಸಾಲದ ಮೊತ್ತ ಹೆಚ್ಚಿಸಿರುವುದು ಪ್ರಶಂಸಾರ್ಹವಾಗಿದೆ ಎಂದು ಹೇಳಿದರು.

ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಟಿ. ಕಳಸದ ಮಾತನಾಡುತ್ತಾ, ಗ್ರಾಮೀಣ ಪ್ರದೇಶದಲ್ಲಿಯೂ ಇಂದು ಆಧುನಿಕ ತಂತ್ರಜ್ಞಾನವನ್ನು ಎಲ್ಲಾ ಹಂತಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದು, ತಳಿ ಅಭಿವೃದ್ಧಿ, ಹಸಿರು ಮೇವು ಮತ್ತು ಸಮತೋಲಿತ ಪಶು ಆಹಾರ ಉತ್ಪಾದನೆ, ಪಶು ವೈದ್ಯಕೀಯ ಸೇವೆ, ಹಾಲು ಶೇಖರಣೆ ಹೀಗೆ ಎಲ್ಲಾ ಹಂತಗಳಲ್ಲಿ ಆಧುನಿಕ ತಂತ್ರಜ್ಞಾನದ ಉಪಯೋಗವನ್ನು ವಿಸ್ತರಿಸಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ವಾಯ್.ಎಫ್. ಪಾಟೀಲ ಮಾತನಾಡಿ, ವಿಶ್ವವನ್ನು ಸುಲಲಿತ ಮತ್ತು ಸುಲಭ ಕಾರ್ಯನಿರ್ವಹಣೆಯತ್ತ ಕರೆದೊಯ್ಯುತ್ತಿರುವ ಡಿಜಿಟಲ್ ತಂತ್ರಜ್ಞಾನವು ಇತರೆ ಕ್ಷೇತ್ರಗಳಂತೆಯೇ ಹೈನೋದ್ಯಮ ಕ್ಷೇತ್ರಕ್ಕೂ ವರವಾಗಿ ಪರಿಣಮಿಸಿದೆ. ರೈತರು ಉತ್ಪಾದಿಸುವ ಹಾಲಿನ ಪರೀಕ್ಷೆ, ದಾಖಲೆ ಸಂಗ್ರಹದಿAದ ಆರಂಭವಾಗಿ ರೈತರಿಗೆ ಹಣ ಪಾವತಿ, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಅಂತಿಮ ಗ್ರಾಹಕರಿಗೆ ಮಾರಾಟ ಮಾಡುವ ಪ್ರಕ್ರಿಯೆವರೆಗೆ ಈ ಡಿಜಿಟಲ್ ತಂತ್ರಜ್ಞಾನದ ಕಾರ್ಯಚಟುವಟಿಕೆ ವಿಸ್ತರಿಸಿಕೊಂಡಿದೆ ಎಂದರು.

ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಎಸ್. ಕಬಾಡೆ, ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಪುಷ್ಪಾ ಕೆ.ಕಡಿವಾಳ, ನರಗುಂದ ತಾಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರಕಾಶ ನವಲಗುಂದ, ಧಾರವಾಡ ಹಾಲು ಒಕ್ಕೂಟದ ಜಿಲ್ಲಾ ಮುಖ್ಯಸ್ಥ ಪ್ರಸನ್ನ ಪಟ್ಟೇದ, ನರಗುಂದ ತಾಲೂಕಿನ ವಿಸ್ತರಣಾಧಿಕಾರಿ ದಿಲೀಪ್ ಆಯ್.ನದಾಫ್ ಉಪಸ್ಥಿತರಿದ್ದರು.

ಹುಣಸಿಕಟ್ಟಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಎಸ್.ಎಸ್. ಹುಚ್ಚನಗೌಡ್ರ ಪ್ರಾರ್ಥಿಸಿದರು. ಗದಗ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಸ್.ಕರಿಯಪ್ಪನವರ ಸ್ವಾಗತಿಸಿ ನಿರೂಪಿಸಿದರು. ವಿಸ್ತರಣಾಧಿಕಾರಿ ದಿಲೀಪ್ ಆಯ್.ನದಾಫ್ ವಂದಿಸಿದರು.

ತರಬೇತಿ ಕಾರ್ಯಾಗಾರದಲ್ಲಿ ಮಾರುಕಟ್ಟೆಯ ಮೇಲೆ ಹಾಲಿನ ಗುಣಮಟ್ಟ ಪ್ರಬಾವ ಕುರಿತು ಧಾರವಾಡ ಹಾಲು ಒಕ್ಕೂಟದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಡಾ. ವೀರೇಶ ತರಲಿ, ಶುದ್ಧ ಹಾಗೂ ಅಧಿಕ ಹಾಲು ಉತ್ಪಾದನೆ ಮತ್ತು ಅಗೋಚರ ಕೆಚ್ಚಲುಬಾವು ಕುರಿತು ಕ.ಹಾ.ಮ. ತರಬೇತಿ ಕೇಂದ್ರದ ನಿವೃತ್ತ ಜಂಟಿ ನಿರ್ದೇಶಕ ಡಾ. ಎಂ.ಬಿ. ಮಡಿವಾಳರ, ಸಹಕಾರ ಸಂಘಗಳಲ್ಲಿ ಲೆಕ್ಕಪತ್ರಗಳ ನಿರ್ವಹಣೆ ಕುರಿತು ಧಾರವಾಡ ಹಾಲು ಒಕ್ಕೂಟದ ನಿವೃತ್ತ ಸಹಾಯಕ ವ್ಯವಸ್ಥಾಪಕ ಎಂ.ಬಿ. ಪಾಟೀಲ ಉಪನ್ಯಾಸ ನಿಡಿದರು.

ವಿದ್ಯಾರ್ಥಿಗಳಿಗೆ ಶ್ರದ್ಧೆ, ಶಿಸ್ತು ಬೇಕು

ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳು ಕಲಿಕೆಯಲ್ಲಿ ಶ್ರದ್ಧೆ, ಶಿಸ್ತು, ಸಂಯಮ, ಬದ್ಧತೆಯನ್ನು ರೂಢಿಸಿಕೊಂಡು ಏಕಾಗ್ರತೆಯಿಂದ ಅಭ್ಯಾಸ ಮಾಡಿದಲ್ಲಿ ಜೀವನದಲ್ಲಿ ಉನ್ನತ ಹಂತವನ್ನು ತಲುಪಲು ಸಾಧ್ಯವಿದೆ ಎಂದು ಡಾ. ರೇಣುಕಾ ಬಿನ್ನಾಳ ಹೇಳಿದರು.

ಅವರು ಬುಧವಾರ ಗದಗ ತಾಲೂಕಿನ ಬೆಳಹೋಡ ಗ್ರಾಮದ ಪುರದಪ್ಪ ವೀರಪ್ಪ ಹೊಸಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ಎಸ್.ಎಸ್.ಎಲ್.ಸಿಯಲ್ಲಿ ಮೊದಲ 5 ಸ್ಥಾನಗಳನ್ನು ಪಡೆದುಕೊಂಡ ಗದಗ ತಾಲೂಕಿನ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳು ಹಿಂದೆ ಗುರು, ಮುಂದೆ ಗುರಿಯನ್ನು ಇಟ್ಟುಕೊಂಡು ಪರಿಶ್ರಮದೊಂದಿಗೆ ಮುನ್ನಡೆದಲ್ಲಿ ಆದರ್ಶ ವ್ಯಕ್ತಿಯಾಗಿ, ಸಾಧಕರಾಗಿ ಹೊರಹೊಮ್ಮಬಲ್ಲರು. ಇಂದು ನೀವು ಪ್ರತಿಷ್ಠಾನದಿಂದ ನಗದು ಪುರಸ್ಕಾರವನ್ನು ಪಡೆದುಕೊಂಡಿದ್ದೀರಿ ಮುಂದಿನ ದಿನಗಳಲ್ಲಿ ನೀವೂ ಪುರಸ್ಕಾರ ನೀಡುವಂತಾಗಬೇಕು ಎಂದರು.

ಮುಖ್ಯ ಅತಿಥಿ, ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ಪ್ರತಿಷ್ಠಾನದ ಧ್ಯೇಯೋದ್ದೇಶಗಳನ್ನು ವಿವರಿಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಶಾಲೆಯ ವಿದ್ಯಾರ್ಥಿಗಳಾದ ಸೌಭಾಗ್ಯ ಹೊಸಳ್ಳಿ, ದೇವಮ್ಮ ಹುಲಕೋಟಿ, ರಕ್ಷಿತಾ ಹುಬ್ಬಳ್ಳಿ, ರೋಶನ್ ನದಾಫ್, ಸಾಗರ್ ಹುಬ್ಬಳ್ಳಿ ಅವರಿಗೆ ನಗದು ಪುರಸ್ಕಾರದ ಚೆಕ್, ಪ್ರಮಾಣ ಪತ್ರ, ಕಾಲೇಜ್ ಬ್ಯಾಗ್ ನೀಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯ ಬಿ.ವ್ಹಿ. ಮಲ್ಲನಗೌಡ್ರ ವಹಿಸಿದ್ದರು. ಸಮಾರಂಭದಲ್ಲಿ ಜಿ.ಬಿ. ಕಮಡೊಳ್ಳಿ, ಎಸ್.ಬಿ. ಭಜಂತ್ರಿ, ಎಸ್.ಸಿ. ಲಮಾಣಿ ಸೇರಿದಂತೆ ಪ್ರತಿಷ್ಠಾನದ ಶಿವಾನಂದ ಕತ್ತಿ, ಸುಭಾಸ ಬೆಟದೂರ, ಭಾರತಿ ಪಾಟೀಲ, ರವಿ ದಂಡಿನ, ಸಿದ್ಧಣ್ಣ ಕವಲೂರ, ಎಸ್.ಜಿ. ಫಿರಂಗಿ, ನೇಹಾ ಖಟವಟೆ, ಸುಧಾರಾಣಿ, ಶಹಬಾಜ್ ಮುಂತಾದವರಿದ್ದರು.

 

ಶ್ಯಾಗೋಟಿಯಲ್ಲಿ: ಶ್ಯಾಗೋಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನಿರ್ಮಲಾ ನೀಲಿ, ಸುರೇಖಾ ಪೂಜಾರಿ, ಮೇಘಾ ನೀಲಿ, ಸುಧಾ ಆಡಕರ, ಭುವನೇಶ್ವರಿ ಹಳ್ಳಿ ಅವರಿಗೆ ಶಾಲೆಯಲ್ಲಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯೆ ಸುಧಾ ಮನ್ನಾಪೂರ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಶಂಕರಗೌಡ ಪಾಟೀಲ, ಡಾ.ರೇಣುಕಾ ಬಿನ್ನಾಳ, ಶಿಕ್ಷಕರಾದ ರಾಜು ಪವಾರ, ಸಿ.ಬಿ. ಪಾಟೀಲ, ನಿವೃತ್ತ ಶಿಕ್ಷಕ ಎಂ.ಎಚ್. ಮರಿಗೌಡ್ರ, ಪ್ರತಿಷ್ಠಾನದ ಪದಾಧಿಕಾರಿಗಳಿದ್ದರು.

ಹಿರೇಹಂದಿಗೋಳದಲ್ಲಿ

ಹಿರೇಹಂದಿಗೋಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕಲ್ಲನಗೌಡ ಹುಲ್ಲೂರ, ಕವಿತಾ ಕುರ್ತಕೋಟಿ, ಗೀತಾ ನವಲಗುಂದ, ಭಾಗ್ಯಶ್ರೀ ಹಲಗಿ, ಸಂಜನಾ ನರೆಣ್ಣವರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ವ್ಹಿ.ಎಚ್. ಗುಡ್ಲಾನೂರ ವಹಿಸಿದ್ದರು. ಶಾಲೆಯ ಶಿಕ್ಷಕರಾದ ವ್ಹಿ.ಎಲ್. ಪೂಜಾರ, ಯು.ವ್ಹಿ. ಮಟ್ಟಿ, ಎಸ್.ಎಸ್. ಪಾಟೀಲ ಹಾಗೂ ಪ್ರತಿಷ್ಠಾನದ ಪದಾಧಿಕಾರಿಗಳಿದ್ದರು.

ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ತಾಯಿ-ಮಗಳು- ಆಗಿದ್ದೇನು?

ಮಂಡ್ಯ:- ಮಂಡ್ಯದ ನೆಹರೂ ನಗರ ಬಡಾವಣೆಯಲ್ಲಿ ಡೆತ್‌ನೋಟ್ ಬರೆದಿಟ್ಟು ತಾಯಿ, ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಜರುಗಿದೆ.

ನೇಣಿಗೆ ಶರಣಾಗಿರುವ ತಾಯಿ, ಮಗಳನ್ನು 28 ವರ್ಷದ ರಶ್ಮಿ, 19 ವರ್ಷದ ದಿಶಾ ಎಂದು ಗುರುತಿಸಲಾಗಿದೆ. ಇವರು ಚನ್ನಪಟ್ಟಣ ಮೂಲದವರು ಎನ್ನಲಾಗಿದೆ. ಕಳೆದ 5 ವರ್ಷದಿಂದ ಗಂಡನಿಂದ ದೂರವಾಗಿದ್ದ ರಶ್ಮಿ ಮಂಡ್ಯದ ನೆಹರೂ ನಗರದ ಬಾಡಿಗೆ ಮನೆಯಲ್ಲಿ ಮಗಳ ಜೊತೆ ವಾಸವಿದ್ದರು. ಇದರಿಂದ ಮನನೊಂದಿದ್ದ ರಶ್ಮಿ, ಡೆತ್‌ನೋಟ್ ಬರೆದಿಟ್ಟು ಮಗಳೊಂದಿಗೆ ನೇಣಿಗೆ ಶರಣಾಗಿದ್ದಾರೆ.

ಸ್ಥಳಕ್ಕೆ ಮಂಡ್ಯ ಪೂರ್ವ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಶ್ಮಿ ಬರೆದಿಟ್ಟಿದ್ದ ಡೆತ್ ನೋಟ್ ನಲ್ಲೇನಿದೆ?

ನನಗೆ ಈ ಜೀವನ ಇಷ್ಟ ಇಲ್ಲ. ಮದುವೆಯಾಗಿಯೂ ಏನು ಸುಖವಿಲ್ಲ. ಒಂಟಿಯಾಗಿ ಐದು ವರ್ಷದಿಂದ ಜೀವನ ಮಾಡುತ್ತಿದ್ದೇನೆ. ಗಂಡನೂ ಬೇರೆ ಮದುವೆ ಆಗುತ್ತೇನೆ. ನನಗೂ ನಿನಗೂ ಸಂಬಂಧ ಇಲ್ಲ ಎಂದು ಬರೆದುಕೊಡು ಎಂದು ಒತ್ತಾಯಿಸುತ್ತಿದ್ದಾರೆ. ನನಗೆ ಈ ಜೀವನ ಸಾಕಾಗಿದೆ. ಅಮ್ಮನನ್ನು ಚೆನ್ನಾಗಿ ನೋಡಿಕೋ ಅಣ್ಣ ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಮಾಜೋಪಯೋಗಿ ಕಾರ್ಯದಿಂದ ಪುಣ್ಯ ಪ್ರಾಪ್ತಿ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಸುಲೇಮಾನಿಯಾ ಶಾದಿಮಹಲ್‌ನಲ್ಲಿ ಬುಧವಾರ ದೂದನಾನಾ ಮುಹಿಬ್ಬನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಅಂಬ್ಯುಲೆನ್ಸ್ ಲೋಕಾರ್ಪಣೆ, ಮಾದಕ ವಸ್ತು ವಿರೋಧಿ ಆಂದೋಲನ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜರುಗಿತು.

ಎನ್‌ಪಿಎಂ ಝೈನುದ್ ಅಭಿದ್ ತಂಬಳ್ ಅವರು ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠರಿಗೆ ಅಂಬ್ಯುಲೆನ್ಸ್ ಚಾವಿಯನ್ನು ಹಸ್ತಾಂತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಗಡ್ಡದೇವರಮಠ ಮಾತನಾಡಿ, ಉಚಿತ ಅಂಬ್ಯುಲೆನ್ಸ್ ಸೇವೆ ಆರಂಭಿಸಿದ್ದು ಸಮಾಜೋಪಯೋಗಿ ಕೆಲಸವಾಗಿದೆ. ತುರ್ತು ಸಮಯದಲ್ಲಿ ರೋಗಿಗಳನ್ನು ಸಾಗಿಸಲು ಅಂಬ್ಯುಲೆನ್ಸ್ ಉಪಯುಕ್ತವಾಗುತ್ತದೆ. ಕಷ್ಟಪಟ್ಟು ಗಳಿಸಿದ ಸಂಪತ್ತಿನಲ್ಲಿ ಕೆಲ ಭಾಗವನ್ನು ಸಮಾಜದ ಅಭಿವೃದ್ಧಿಗೆ ಖರ್ಚು ಮಾಡಿದರೆ ಪುಣ್ಯ ಲಭಿಸುತ್ತದೆ ಎಂದು ತಿಳಿಸಿದರು.

ಅಬ್ದುಲ್ ಖಾದರ್ ಮಾತನಾಡಿ, ರೋಗಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸಲು ಅಂಬ್ಯುಲೆನ್ಸ್ಗಳು ಬೇಕೇಬೇಕು. ಬಡ ಜನತೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಅಂಬ್ಯುಲೆನ್ಸ್‌ ಗಳ ಸೇವೆ ಆರಂಭಿಸಲಾಗಿದೆ ಎಂದು ಹೇಳಿದರು.

ಇಕ್ಬಾಲ್ ಬಾಳಿಲ್ಲ ಮಾತನಾಡಿ, ಯುವ ಜನತೆ ಸಮಾಜ ಸೇವೆ ಮಾಡಲು ಮುಂದಾಗಬೇಕು. ಯುವಕರು ಸಮಾಜದ ಶಕ್ತಿ. ಸುಂದರ ಸಮಾಜ ನಿರ್ಮಾಣಕ್ಕೆ ಅವರು ಶ್ರಮಿಸಬೇಕು. ವಿದ್ಯಾರ್ಥಿಗಳು ಮಾದಕ ಪದಾರ್ಥಗಳ ವ್ಯಸನಿಗಳಾಗುತ್ತಿದ್ದಾರೆ. ಜಾತಿ, ಮತ, ಪಂಥ ಮರೆತು ಸಮಾಜ ಸೇವೆ ಮಾಡಿದಾಗ ದೇವರು ಮೆಚ್ಚುತ್ತಾನೆ ಎಂದರು.

ಎನ್‌ಪಿಎಂ ಝೈನುದ್ ಅಭಿದ್ ತಂಬಳ್, ಇಸ್ಮಾಯಿಲ್ ಆಡೂರ, ಸೈಯದ್ ಜಲಾಲುದ್ದೀನ್ ತಂಬಳ್, ಯು.ಟಿ. ಝುಲ್ವಿಕಾರ್, ದೂದಪೀರಾಂ ದರ್ಗಾ ಸಮಿತಿ ಅಧ್ಯಕ್ಷ ಸುಲೇಮಾನಸಾಬ್ ಕಣಕೆ, ಅಂಜುಮನ್ ಇಸ್ಲಾಂ ಸಮಿತಿ ಅಧ್ಯಕ್ಷ ಎಂ.ಎಂ. ಗದಗ, ದಾದಾಪೀರ್ ಮುಚ್ಛಾಲೆ, ಫಿರ್ದೋಷ್ ಅಡೂರ, ಸಿಕಂದರಬಾಷಾ ಕಣಕೆ, ಕರವೇ ಸ್ವಾಭಿಮಾನಿ ಬಳಗದ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಗೋಡಿ, ಎಮ್.ಐ. ಮುಳಗುಂದ, ದುರ್ಗಣ್ಣವರ, ಮುಸ್ತಾಕ್ ಅಹಮ್ಮದ್ ಶಿರಹಟ್ಟಿ, ವಿಜಯ ಕರಡಿ, ಸರೋಜಕ್ಕ ಬನ್ನೂರ, ಶೈಲಾ ಆದಿ, ಮುನೀರ್‌ಅಹಮ್ಮದ ಸಿದ್ದಾಪೂರ ಮುಂತಾದವರು ಹಾಜರಿದ್ದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಸರು ಬದಲಾವಣೆಗೆ ಅಸ್ತು ಎಂದ ಸಚಿವ ಸಂಪುಟ!

ಚಿಕ್ಕಬಳ್ಳಾಪುರ:- ರಾಮನಗರವನ್ನು ಇತ್ತೀಚೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿದ್ದ ರಾಜ್ಯ ಸರ್ಕಾರ, ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರು ಬದಲಾವಣೆಗೆ ಮುಂದಾಗಿದೆ. ಇದಕ್ಕೆ ಸಚಿವ ಸಂಪುಟವು ಅನುಮೋದನೆ ನೀಡಿದೆ.

ಪ್ರತಿಪಕ್ಷಗಳ ವಿರೋಧದ ನಡುವೆಯೂ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಸರ್ಕಾರ ಬದಲಾವಣೆ ಮಾಡಿತ್ತು. ಇದರ ಬಳಿಕ ತುಮಕೂರು ಜಿಲ್ಲೆಗೆ ಬೆಂಗಳೂರು ಉತ್ತರ ಜಿಲ್ಲೆ ಎಂದು ಹೆಸರಿಸಬೇಕೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಸೇರಿ ಕೆಲವರು ಒತ್ತಾಯಿಸಿದ್ದರು. ಆದರೆ, ಸರ್ಕಾರ ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಹೆಸರು ಬದಲಾಯಿಸುವ ಸಂಬಂಧ ಇಂದಿನ ಸಚಿವ ಸಂಪುಟದಲ್ಲಿ ಚರ್ಚೆ ನಡೆದಿದ್ದು, ಅಂತಿಮವಾಗಿ ಹೆಸರು ಬದಲಾವಣೆಗೆ ಒಪ್ಪಿಗೆ ಸೂಚಿಸಿದೆ.

1986ರಲ್ಲಿ ಬೆಂಗಳೂರು ನಗರ ಜಿಲ್ಲೆಯಿಂದ ಪ್ರತ್ಯೇಕಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ರಚಿಸಲಾಗಿತ್ತು. ಈ ವೇಳೆ ರಾಮನಗರ ಜಿಲ್ಲೆಯ ತಾಲೂಕುಗಳು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿದ್ದವು. 2007ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ವಿಭಜಿಸಿ ಹೊಸದಾಗಿ ರಾಮನಗರ ಜಿಲ್ಲೆ ರಚಿಸಲಾಗಿತ್ತು. ಇದೀಗ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಮರುನಾಮಕರಣ ಮಾಡಲಾಗಿದೆ.

error: Content is protected !!