Home Blog Page 3

ಖಾಲಿ ಹುದ್ದೆಗಳ ಭರ್ತಿಗೆ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ: ಪೊಲೀಸರೊಂದಿಗೆ ತೀವ್ರ ಮಾತುಕತೆ

0

ಧಾರವಾಡ: ರಾಜ್ಯದಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಒತ್ತಾಯಿಸಿ ಶ್ರೀನಗರ ವೃತ್ತದಲ್ಲಿ ಯುವಕರು ಬೃಹತ್ ಪ್ರತಿಭಟನೆ ನಡೆಸಿದರು. ಸರ್ಕಾರ ತಕ್ಷಣ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಘೋಷಣೆ ಕೂಗಿದರು.

ಪ್ರತಿಭಟನಾಕಾರರು ಕಾಂಗ್ರೆಸ್ ನಾಯಕರ ಫೋಟೋಗಳನ್ನು ಹಿಡಿದು ಸರ್ಕಾರದ ವಿರುದ್ಧ ಕಿಡಿಕಾರಿದರು. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಶ್ರೀನಗರ ವೃತ್ತದ ಬಳಿ ಯುವಕರನ್ನು ತಡೆದು ನಿಲ್ಲಿಸಿದರು.

ಇಂದು ಪ್ರತಿಭಟನೆ ನಡೆಸಲು ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಅನುಮತಿ ಕೇಳಿದ್ದರೂ, ಪೊಲೀಸರು ಅದನ್ನು ನಿರಾಕರಿಸಿದ್ದರು. ಬಳಿಕ ಸಂಘಟನೆ ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯವು ಪೊಲೀಸರೊಂದಿಗೆ ಚರ್ಚಿಸಿ ಎಂದು ಸೂಚಿಸಿ ವಿಚಾರಣೆಯನ್ನು ಮಾರ್ಚ್ 3ಕ್ಕೆ ಮುಂದೂಡಿತ್ತು.

ಇದರ ನಡುವೆಯೇ ಬಿಜೆಪಿ ಹೋರಾಟಕ್ಕೆ ಅನುಮತಿ ನೀಡಲಾಗಿದೆ ಎಂಬ ಸುದ್ದಿ ಹಿನ್ನೆಲೆ, ಅನುಮತಿ ಇಲ್ಲದಿದ್ದರೂ ಪ್ರತಿಭಟನಾಕಾರರು ಬೀದಿಗೆ ಇಳಿದಿದ್ದಾರೆ. ಧಾರವಾಡದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

‘ಅವನು ಇಷ್ಟಪಟ್ಟ ಹುಡುಗಿಯೇ ಸೊಸೆ’: ವಿಜಯ್ ತಂದೆಯ ಹೇಳಿಕೆ ವೈರಲ್, ‘ವಿರೋಷ್’ ಮದುವೆಗೆ ಕೌಂಟ್‌ಡೌನ್!

ಟಾಲಿವುಡ್‌ನ ಹಾಟ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆ ಸಂಭ್ರಮ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ. ಫೆಬ್ರವರಿ 26ರಂದು **ಉದಯಪುರ**ದಲ್ಲಿ ನಡೆಯಲಿರುವ ಈ ಅದ್ದೂರಿ ಮದುವೆಗೆ ‘ವಿರೋಷ್’ ಎಂದು ಹೆಸರು ಇಟ್ಟಿದ್ದಾರೆ.

ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ವಿವಾಹ ನಡೆಯಲಿದ್ದು, ಮಾರ್ಚ್ 04ರಂದು **ಹೈದರಾಬಾದ್**ನಲ್ಲಿ ಆರತಕ್ಷತೆ ನಡೆಯಲಿದೆ ಎಂಬ ವರದಿ ಇದೆ.

ಈ ನಡುವೆ ವಿಜಯ್ ಪಾಲಕರು ಭಾವಿ ಸೊಸೆ ಬಗ್ಗೆ ಹೇಳಿದ್ದ ಮಾತುಗಳು ಮತ್ತೆ ವೈರಲ್ ಆಗಿವೆ. ಸಕ್ಸಸ್ ಮೀಟ್‌ನಲ್ಲಿ ಮಾತನಾಡಿದ ವಿಜಯ್ ತಾಯಿ ಮಾಧವಿ, “ನಮ್ಮ ಮಗನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅವನನ್ನು ಬೇಷರತ್ತಾಗಿ ಪ್ರೀತಿಸಬೇಕು. ಚಿತ್ರರಂಗದ ಒತ್ತಡಗಳನ್ನು ಅರ್ಥಮಾಡಿಕೊಳ್ಳಬೇಕು” ಎಂದು ಷರತ್ತು ಹೊರಹಾಕಿದ್ದರು.

ವಿಜಯ್ ತಂದೆ ಗೋವರ್ಧನ್ ರಾವ್ ಮತ್ತಷ್ಟು ಸ್ಪಷ್ಟವಾಗಿ, “ಅವನು ಇಷ್ಟಪಟ್ಟ ಹುಡುಗಿಯೇ ಸರಿ. ಜಾತಿ-ಧರ್ಮ ಬೇಡ. ಭಾರತೀಯಳಾಗಿದ್ದು, ದಕ್ಷಿಣದ ಹುಡುಗಿಯಾಗಿದ್ದರೆ ನನಗೆ ಸಂತೋಷ” ಎಂದು ಹೇಳಿದ್ದರು.

ಈ ಹೇಳಿಕೆಗಳ ಬೆನ್ನಲ್ಲೇ ವಿಜಯ್-ರಶ್ಮಿಕಾ ವಿವಾಹದ ಸುದ್ದಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ‘ವಿರೋಷ್’ ಮದುವೆ ಇದೀಗ ಫ್ಯಾನ್ಸ್‌ಗೆ ಹಬ್ಬದ ಸಂಭ್ರಮವಾಗುತ್ತಿದೆ.

ಉದ್ಯೋಗಾಕಾಂಕ್ಷಿಗಳ ಕಿಚ್ಚು: ರಾಜ್ಯ ಸರ್ಕಾರ ದಿವಾಳಿ, ಸಂಬಳ ನೀಡಲೂ ಹಣವಿಲ್ಲ – ಆರ್. ಅಶೋಕ್ ಆರೋಪ

0

ಧಾರವಾಡ: ಸಾವಿರಾರು ವಿದ್ಯಾರ್ಥಿಗಳು ಮತ್ತು ಯುವಕರು ಉದ್ಯೋಗಾವಕಾಶಗಳನ್ನು ಒದಗಿಸುವಂತೆ ಆಗ್ರಹಿಸಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ನಿರುದ್ಯೋಗ ಸಮಸ್ಯೆ ತೀವ್ರಗೊಂಡಿರುವುದಾಗಿ ಆರೋಪಿಸಿದ ಪ್ರತಿಭಟನಾಕಾರರು, ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಳೆದ ಎರಡೂವರೆ ವರ್ಷಗಳಲ್ಲಿ ಒಬ್ಬ ನಿರುದ್ಯೋಗಿಗೂ ಉದ್ಯೋಗ ನೀಡಿಲ್ಲ ಎಂದು ಆರೋಪಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರದ ಕಚ್ಚಾಟದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.

ರಾಜ್ಯ ಸರ್ಕಾರ ದಿವಾಳಿಯ ಸ್ಥಿತಿಯಲ್ಲಿದ್ದು, ಸಂಬಳ ನೀಡಲು ಸಹ ಹಣದ ಕೊರತೆ ಎದುರಿಸುತ್ತಿದೆ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ಸುಮಾರು 2.5 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇದ್ದವೆಂದು ಹೇಳಿದರು.

ಹಣಕಾಸು ಇಲಾಖೆ 65,000 ಹುದ್ದೆಗಳನ್ನು ಭರ್ತಿ ಮಾಡಲು ಆದೇಶ ನೀಡಿದರೂ, ಆರು ತಿಂಗಳು ಕಳೆದರೂ ಒಂದೇ ಒಂದು ಸಂದರ್ಶನ ಕೂಡ ನಡೆಸಲಾಗಿಲ್ಲ ಎಂದು ದೂರಿದರು. ತಕ್ಷಣವೇ ನೇಮಕಾತಿ ಪ್ರಕ್ರಿಯೆಗಳನ್ನು ಆರಂಭಿಸದಿದ್ದರೆ ರಾಜ್ಯವ್ಯಾಪಿ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಆರ್. ಅಶೋಕ್ ಎಚ್ಚರಿಸಿದರು.

Gold Rate Today: ಬಂಗಾರದ ಬೆಲೆ ಏರಿಕೆ! ಬೆಳ್ಳಿ ದರ ಇಳಿಕೆ – ಹೀಗಿದೆ ಇಂದಿನ ಚಿನ್ನಾಭರಣಗಳ ರೇಟ್

0

ಚಿನ್ನದ ಬೆಲೆಯ ಸತತ ಏರಿಕೆ ಮುಂದುವರಿದಿದೆ. ಮೊನ್ನೆ 285 ರೂ ಹಾಗೂ ನಿನ್ನೆ 190 ರೂ ಏರಿಕೆಯಾದ ಚಿನ್ನದ ದರ, ಇಂದು ಮತ್ತಷ್ಟು 40 ರೂ ಹೆಚ್ಚಾಗಿದೆ. ಇನ್ನೊಂದೆಡೆ, ಬೆಳ್ಳಿ ದರದಲ್ಲಿ ಏರಿಕೆಯ ಓಟ ತಗ್ಗಿದ್ದು, ಮಂಗಳವಾರ 10ರಿಂದ 15 ರೂವರೆಗೆ ಇಳಿಕೆಯಾಗಿದೆ. ನಿನ್ನೆ ಮಾತ್ರ ಬೆಳ್ಳಿ ದರ 25 ರೂ ಏರಿಕೆಯಾಗಿತ್ತು.

ದೇಶಾದ್ಯಂತ ಚಿನ್ನ-ಬೆಳ್ಳಿ ದರ (ಫೆಬ್ರವರಿ 24)

  • 24 ಕ್ಯಾರಟ್ (1 ಗ್ರಾಂ) ಚಿನ್ನ: ₹16,178
  • 22 ಕ್ಯಾರಟ್ (1 ಗ್ರಾಂ) ಚಿನ್ನ: ₹14,830
  • 18 ಕ್ಯಾರಟ್ (1 ಗ್ರಾಂ) ಚಿನ್ನ: ₹12,134
  • ಬೆಳ್ಳಿ (1 ಗ್ರಾಂ): ₹285

ಪ್ರಸ್ತುತ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,48,300 ಆಗಿದ್ದು, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ₹1,61,780 ತಲುಪಿದೆ. 100 ಗ್ರಾಂ ಬೆಳ್ಳಿ ದರ ₹28,500 ಆಗಿದೆ.

ಬೆಂಗಳೂರು ದರ

ಬೆಂಗಳೂರುನಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,48,300 ಆಗಿದ್ದು, ಬೆಳ್ಳಿ (100 ಗ್ರಾಂ) ದರ ₹28,500 ಇದೆ.

ಇತರೆ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (1 ಗ್ರಾಂ)

  • ಚೆನ್ನೈ: ₹14,890
  • ಮುಂಬೈ: ₹14,830
  • ದೆಹಲಿ: ₹14,845
  • ಕೋಲ್ಕತಾ: ₹14,830
  • ಕೇರಳ: ₹14,830
  • ಅಹ್ಮದಾಬಾದ್: ₹14,835
  • ಜೈಪುರ್: ₹14,845
  • ಲಕ್ನೋ: ₹14,845
  • ಭುವನೇಶ್ವರ್: ₹14,830

ತಮಿಳುನಾಡು ಹಾಗೂ ಕೇರಳ ಸೇರಿದಂತೆ ಕೆಲವು ಭಾಗಗಳಲ್ಲಿ ಬೆಳ್ಳಿ ದರ ₹29,000ರವರೆಗೆ ತಲುಪಿದೆ. ಚಿನ್ನದ ಬೆಲೆ ಮುಂದಿನ ದಿನಗಳಲ್ಲೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರ ವಲಯ ಅಂದಾಜಿಸಿದೆ.

ಮೆಟ್ರೋ ಜನಸಂದಣಿ ಹೆಚ್ಚಳ: ಪರ್ಪಲ್ ಮತ್ತು ಗ್ರೀನ್ ಲೈನ್ʼಗೆ ಬರಲಿವೆ ಮೂರು ಹೊಸ ರೈಲುಗಳು!

0

ಬೆಂಗಳೂರು: ನಗರದ ಮೆಟ್ರೋ ಸಂಚಾರದಲ್ಲಿ ಉಂಟಾಗುತ್ತಿರುವ ತೀವ್ರ ಜನಸಂದಣಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿಶೇಷವಾಗಿ ಪರ್ಪಲ್ ಹಾಗೂ ಗ್ರೀನ್ ಮಾರ್ಗಗಳಲ್ಲಿ ಪ್ರಯಾಣಿಕರು ಹೆಚ್ಚಿನ ಅಸೌಕರ್ಯ ಅನುಭವಿಸುತ್ತಿದ್ದಾರೆ. ವಾರದಲ್ಲಿ ಸರಾಸರಿ ಪ್ರಯಾಣಿಕರ ಸಂಖ್ಯೆ 10 ಲಕ್ಷದ ಗಡಿಯನ್ನು ದಾಟಿರುವುದಾಗಿ ತಿಳಿದುಬಂದಿದೆ.

ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರವಾಗಿ ಮೇ–ಜೂನ್ ವೇಳೆಗೆ ಮೂರು ಹೊಸ ರೈಲುಗಳನ್ನು ಸೇವೆಗೆ ಸೇರಿಸುವ ಯೋಜನೆ ರೂಪಿಸಲಾಗಿದೆ. ಪಶ್ಚಿಮ ಬಂಗಾಳದ ಟೀಟಾಘರ್ ರೈಲು ಸಿಸ್ಟಮ್ಸ್ ಲಿಮಿಟೆಡ್ (ಟಿಆರ್‌ಎಸ್‌ಎಲ್) ಕಂಪನಿಯಿಂದ ಫೆಬ್ರವರಿ 18ರಂದು ಪರ್ಪಲ್ ಹಾಗೂ ಗ್ರೀನ್ ಮಾರ್ಗಗಳಿಗೆ ಮೀಸಲಾಗಿರುವ 20 ಡಿಟಿಜಿ (ಡಿಸ್ಟೆನ್ಸ್-ಟು-ಗೋ) ರೈಲುಗಳಲ್ಲಿ ಮೊದಲ ರೈಲನ್ನು ರವಾನಿಸಲಾಗಿದೆ.

ಈ ರೈಲು ಫೆಬ್ರವರಿ ಅಂತ್ಯದೊಳಗೆ ಪೀಣ್ಯ ಡಿಪೋಗೆ ತಲುಪಲಿದೆ. ಅಲ್ಲಿಗೆ ತಲುಪಿದ ನಂತರ ಆರು ಕೋಚ್‌ಗಳನ್ನು ಜೋಡಿಸಿ ಸಂಪೂರ್ಣ ರೈಲಾಗಿ ಸಿದ್ಧಪಡಿಸಲಾಗುತ್ತದೆ. ನಂತರ ಸ್ಥಿರ ಹಾಗೂ ವಿದ್ಯುತ್ ವಲಯ ಪರೀಕ್ಷೆಗಳು ನಡೆಯಲಿದ್ದು,

ಮುಖ್ಯ ಮಾರ್ಗದಲ್ಲಿ ರಾತ್ರಿ ವೇಳೆ ಸುಮಾರು 750 ಕಿಲೋಮೀಟರ್ ಪ್ರಯೋಗಾತ್ಮಕ ಸಂಚಾರ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. 2019ರಲ್ಲಿ ಚೀನಾದ ಸರ್ಕಾರಿ ಕಂಪನಿಯೊಂದಿಗೆ ರೂ. 1,578 ಕೋಟಿ ಮೌಲ್ಯದ ಒಪ್ಪಂದ ಮಾಡಲಾಗಿತ್ತು. ಒಟ್ಟು 36 ರೈಲುಗಳನ್ನು ಪೂರೈಕೆ ಮಾಡುವ ಜವಾಬ್ದಾರಿ ನೀಡಲಾಗಿತ್ತು.

ಇದರಲ್ಲಿ 15 ರೈಲುಗಳು ಯೆಲ್ಲೋ ಲೈನ್‌ಗೆ ಮತ್ತು 21 ರೈಲುಗಳು ಪರ್ಪಲ್ ಹಾಗೂ ಗ್ರೀನ್ ಮಾರ್ಗಗಳಿಗೆ ಮೀಸಲಾಗಿದ್ದವು. ಎರಡು ಪ್ರೋಟೋಟೈಪ್ ರೈಲುಗಳನ್ನು ಈಗಾಗಲೇ ಪೂರೈಸಲಾಗಿದ್ದು, ಉಳಿದ ರೈಲುಗಳನ್ನು ಟಿಆರ್‌ಎಸ್‌ಎಲ್ ನಿರ್ಮಿಸುತ್ತಿದೆ.

ಸಿ.ಜೆ.ರಾಯ್ ಆತ್ಮಹತ್ಯೆ ಕೇಸ್: ತನಿಖಾ ವರದಿಯಲ್ಲಿ ಸೂಸೈಡ್ʼಗೆ ಕಾರಣ ರಿವೀಲ್!

0

ಬೆಂಗಳೂರು: ಖ್ಯಾತ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆ ಬಹುತೇಕ ಅಂತಿಮ ಹಂತಕ್ಕೆ ತಲುಪಿದ್ದು, ವಿಶೇಷ ತನಿಖಾ ತಂಡ (ಎಸ್‌ಐಟಿ) ಅಧಿಕಾರಿಗಳ ಪ್ರಾಥಮಿಕ ಪರಿಶೀಲನೆಯಲ್ಲಿ ಆತ್ಮಹತ್ಯೆ ಹಿಂದಿನ ಹಲವು ಕಾರಣಗಳು ಮೇಲ್ನೋಟಕ್ಕೆ ಬಹಿರಂಗವಾಗಿವೆ.

ಸಿ.ಜೆ. ರಾಯ್ ಒಂದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿಲ್ಲ ಎನ್ನಲಾಗುತ್ತಿದೆ. ಬದಲಾಗಿ ವೈಭವಯುತ ಜೀವನ ಶೈಲಿ (ಲ್ಯಾವಿಷ್ ಲೈಫ್), ಮಾನಸಿಕ ಒತ್ತಡ, ವ್ಯವಹಾರ ಸಂಬಂಧಿತ ಸಮಸ್ಯೆಗಳು ಸೇರಿದಂತೆ ವಿವಿಧ ಕಾರಣಗಳಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.

ತನಿಖೆಯನ್ನು ಇನ್ನಷ್ಟು ಸಮಗ್ರಗೊಳಿಸಲು, ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದ ಕೊಠಡಿಯಿಂದ ವಶಪಡಿಸಿಕೊಂಡ ಡೈರಿ, ಬಳಸಿದ ಪಿಸ್ತೂಲ್, ಮೊಬೈಲ್ ಫೋನ್, ಕೊಠಡಿ ಬಾಗಿಲಿನ ಲಾಕರ್ ಸೇರಿದಂತೆ 30ಕ್ಕೂ ಹೆಚ್ಚು ವಸ್ತುಗಳನ್ನು ಫರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ (ಎಫ್‌ಎಸ್‌ಎಲ್)ಗೆ ಕಳುಹಿಸಲಾಗಿದೆ.

ಮುಂದಿನ ವಾರದೊಳಗೆ ಎಫ್‌ಎಸ್‌ಎಲ್ ವರದಿ ಎಸ್‌ಐಟಿ ಅಧಿಕಾರಿಗಳ ಕೈ ಸೇರಲಿದ್ದು, ವರದಿ ಆಧರಿಸಿ ಅಂತಿಮ ತನಿಖಾ ವರದಿ ಸಲ್ಲಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಸ್ಪಷ್ಟವಾಗಲಿದೆ.

ರಾಜ್ ಕಾರಣದಿಂದ ಡಿವೋರ್ಸ್ ಅಲ್ಲ: ‘ನನ್ನ ಜೀವನದ ಕತ್ತಲಲ್ಲಿ ಬೆಳಕು ತಂದವರು ರಾಜ್’ – ಸಮಂತಾ

ನಟಿ ಸಮಂತಾ ರುತ್ ಪ್ರಭು ತಮ್ಮ ವೈಯಕ್ತಿಕ ಜೀವನದ ಕುರಿತು ಮತ್ತೆ ಬಾಯ್ಬಿಟ್ಟಿದ್ದಾರೆ. ನಿರ್ದೇಶಕ ರಾಜ್ ನಿಧಿಮೋರು ಜೊತೆಗಿನ ಎರಡನೇ ಮದುವೆಯ ಬಳಿಕ ಹಬ್ಬಿದ ವದಂತಿಗಳಿಗೆ ಅವರು ಸ್ಪಷ್ಟನೆ ನೀಡಿದ್ದಾರೆ.

2021ರ ಅಕ್ಟೋಬರ್‌ನಲ್ಲಿ ನಾಗ ಚೈತನ್ಯ ಜೊತೆ ವಿಚ್ಛೇದನ ಪಡೆದ ಸಮಂತಾ, 2019ರಲ್ಲಿ ರಾಜ್ ಪರಿಚಯವಾಗಿದ್ದ ಕಾರಣದಿಂದಲೇ ಕೆಲವರು ತಪ್ಪು ಅರ್ಥೈಸಿಕೊಂಡಿದ್ದರು. ರಾಜ್ ಜೊತೆಗಿನ ಪ್ರೀತಿಯೇ ಡಿವೋರ್ಸ್‌ಗೆ ಕಾರಣ ಎನ್ನುವ ಊಹೆಗಳಿಗೆ ಸಮಂತಾ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

“ವಿಚ್ಛೇದನ ಸಮಯದಲ್ಲಿ ನಾನು ಸಂಪೂರ್ಣವಾಗಿ ಒಳಗೆ ಕುಸಿದು ಹೋಗಿದ್ದೆ. ಹೊರ ಜಗತ್ತಿನಿಂದ ದೂರ ಉಳಿದಿದ್ದೆ. ಆದರೆ ರಾಜ್ ನೀಡಿದ ಪ್ರೀತಿ ಮತ್ತು ಆಪ್ಯಾಯತೆ ನನ್ನನ್ನು ಮತ್ತೆ ಬದುಕಿನತ್ತ ಕರೆದುಕೊಂಡು ಬಂತು,” ಎಂದು ಹೇಳಿದ್ದಾರೆ.

“ಮತ್ತೆ ಪ್ರೀತಿಯಲ್ಲಿ ಬೀಳಬಹುದು ಎಂದು ನಾನು ಭಾವಿಸಿರಲಿಲ್ಲ. ಆದರೆ ಜೀವನದಲ್ಲಿ ಕೆಲವು ಸಂಬಂಧಗಳು ನಮ್ಮ ದೃಷ್ಟಿಕೋನವನ್ನು ಬದಲಿಸುತ್ತವೆ,” ಎಂದು ಸಮಂತಾ ತಿಳಿಸಿದ್ದಾರೆ.

ಈ ಹೇಳಿಕೆಯಿಂದ ನಾಗ ಚೈತನ್ಯ ಜೊತೆ ಸಂಬಂಧದಲ್ಲಿದ್ದ ಅವಧಿಯಲ್ಲಿ ರಾಜ್ ಜೊತೆ ಕೇವಲ ವೃತ್ತಿಪರ ಸಂಬಂಧವಷ್ಟೇ ಇತ್ತು ಎಂಬುದು ಸ್ಪಷ್ಟವಾಗಿದೆ. ಸಮಂತಾ ಸ್ಪಷ್ಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಆರೋಪಗಳು ಗಪ್ ಚುಪ್ ಆಗಿವೆ.

ಎಐ ಶೃಂಗಸಭೆಯಲ್ಲಿ ಶರ್ಟ್‌ಲೆಸ್ ಪ್ರತಿಭಟನೆ – ಯುವ ಕಾಂಗ್ರೆಸ್ ಮುಖ್ಯಸ್ಥಉದಯ್ ಭಾನು ಚಿಬ್ ಬಂಧನ

0

ನವದೆಹಲಿ‌: ನವದೆಹಲಿ‌ಯಲ್ಲಿ ನಡೆದ ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಶರ್ಟ್‌ಬಿಚ್ಚಿ ಪ್ರತಿಭಟನೆ ನಡೆಸಿದ ಪ್ರಕರಣದಲ್ಲಿ ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಅವರನ್ನು ತಿಲಕ್ ಮಾರ್ಗ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪ್ರತಿಭಟನೆಗೆ ಸಂಬಂಧಿಸಿದಂತೆ ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಸುಮಾರು 15 ಗಂಟೆಗಳ ವಿಚಾರಣೆಯ ನಂತರ ಚಿಬ್ ಅವರನ್ನು ಬಂಧಿಸಲಾಗಿದೆ. ಚಿಬ್ ವಿಚಾರಣೆಯ ಸಮಯದಲ್ಲಿ ಸಹಕರಿಸಲಿಲ್ಲ. ತನಿಖಾಧಿಕಾರಿಗಳನ್ನು ದಾರಿ ತಪ್ಪಿಸಲು ಪ್ರಯತ್ನಿಸಿದರು. ಅವರ ವಿರುದ್ಧ ಸಾಕಷ್ಟು ಪುರಾವೆಗಳಿವೆ.

ಪೊಲೀಸ್ ಠಾಣೆ ಹೊರಗೆ ಭಾರಿ ಭದ್ರತೆ ಕಲ್ಪಿಸಲಾಗಿದೆ. ಈ ಪ್ರಕರಣದಲ್ಲಿ ಇದು ಎಂಟನೇ ಬಂಧನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಶೇಷಾದ್ರಿಪುರಂ ಕೆನರಾ ಬ್ಯಾಂಕ್‌ನಲ್ಲಿ ಕಳ್ಳತನ ಯತ್ನ ವಿಫಲ!

0

ಬೆಂಗಳೂರು: ಶೇಷಾದ್ರಿಪುರಂ ಮುಖ್ಯ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ಭಾನುವಾರ ಮಧ್ಯರಾತ್ರಿ ಕಳ್ಳತನ ಯತ್ನ ವಿಫಲವಾಗಿದೆ.

ಕಳ್ಳರು ಬ್ಯಾಂಕಿನ ಎಡಭಾಗದ ಕಿಟಕಿ ಗ್ರಿಲ್ ಮುರಿದು ಒಳಗೆ ನುಗ್ಗಿದ್ದರು. ಅವರು ಸಿಸಿಟಿವಿ ವೈರ್‌ಗಳನ್ನು ಕತ್ತರಿಸಲು ಪ್ರಯತ್ನಿಸಿದಾಗ ಅಲಾರಂ ಮೊಳಗಿದ್ದು, ಕಳ್ಳರು ಭಯಗೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆಯ ಸಮಯದಲ್ಲಿ ಬ್ಯಾಂಕಿನ ಭದ್ರತಾ ಸಿಬ್ಬಂದಿ ಅಲಾರಂ ಶಬ್ದವನ್ನು ಪರಿಶೀಲಿಸಿದ್ದರೂ, ಕಿಟಕಿಯ ಬಳಿ ಹೋಗಿ ನೋಡದೇ ನಿರ್ಲಕ್ಷಿಸಿದರು. ಬೆಳಗ್ಗೆ ಬ್ಯಾಂಕ್ ಸಿಬ್ಬಂದಿ ಬಂದಾಗ ಕಳ್ಳತನ ಯತ್ನದ ಬಗ್ಗೆ ತಿಳಿದುಬಂದಿತು.

ಶೇಷಾದ್ರಿಪುರಂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಜೀವನದಲ್ಲಿ ಪ್ರತಿಯೊಬ್ಬರೂ ಈ ವಿಷಯಗಳ ಬಗ್ಗೆ ಆದಷ್ಟು ಜಾಗರೂಕರಾಗಿರಬೇಕು!

0

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ ವಿಚಾರಗಳಷ್ಟೇ ಅಲ್ಲ, ಜೀವನದ ನಿತ್ಯದ ಅಂಶಗಳ ಕುರಿತು ಸಹ ಬಹಳ ಮುಖ್ಯವಾದ ಸಲಹೆಗಳನ್ನು ನೀಡಿದ್ದಾರೆ.

ಯಶಸ್ಸು, ಶ್ರೀಮಂತಿಕೆ, ದಾಂಪತ್ಯ ಜೀವನ ಸುಖಕರವಾಗಿರಲು ವ್ಯಕ್ತಿಗಳು ಹೇಗೆ ನಡೆದುಕೊಳ್ಳಬೇಕು ಎಂಬುದರ ಜೊತೆಗೆ, ಅವರು ಕೆಲವೊಂದು ಅಪಾಯಕರ ಪರಿಸ್ಥಿತಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಹೇಳಿದ್ದಾರೆ. ವಿಶೇಷವಾಗಿ ಹಾವು, ಬೆಂಕಿ ಮತ್ತು ನೀರು – ಈ ಮೂರು ಅಂಶಗಳನ್ನು ಅವಗಾಹಿಸದೆ ತಮಾಷೆ ಮಾಡಿದರೆ ಅಥವಾ ಅಜಾಗರೂಕತೆಯಿಂದ ಹತ್ತಿರ ಹೋದರೆ, ಅದರಿಂದ ಗಂಭೀರ ಅಪಾಯ ಸಂಭವಿಸಬಹುದು ಎಂದು ಚಾಣಕ್ಯರು ಎಚ್ಚರಿಸಿದ್ದಾರೆ.

ಹಾವುಗಳು ಕೆಲವೊಮ್ಮೆ ಸೇಹಪರವಾಗಿ ಕಂಡರೂ, ಯಾವಾಗ ಕಚ್ಚುವುದು ಎಂಬುದನ್ನು ಮುಂಚಿತವಾಗಿ ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಹಾವಿನ ಹತ್ತಿರ ತಮಾಷೆ ಮಾಡಬಾರದು ಮತ್ತು ಹಾವುಗಳಿಂದ ದೂರವಿರುವುದು ಸುರಕ್ಷಿತ. ಬೆಂಕಿಯ ವಿಚಾರದಲ್ಲಿಯೂ ಚಾಣಕ್ಯರು ಎಚ್ಚರಿಕೆ ನೀಡಿದ್ದಾರೆ. ಬೆಂಕಿಯೊಂದಿಗೆ ಆಟವಾಡುವುದು ಅಥವಾ ಅದರ ಹತ್ತಿರ ಅಜಾಗರೂಕತೆಯಿಂದ ನಡೆದುಕೊಳ್ಳುವುದು ಕ್ಷಣಗಳಲ್ಲಿ ಭೀಕರ ಹಾನಿಯನ್ನುಂಟುಮಾಡಬಹುದು. ಅದೇ ರೀತಿ, ನೀರಿನ ವಿಷಯವೂ ಹೀಗೆ – ನದಿ, ಸಮುದ್ರ ಅಥವಾ ನೀರಿನ ಇತರ ಹತ್ತಿರದ ಪ್ರದೇಶಗಳಲ್ಲಿ ನಿರ್ಲಕ್ಷ್ಯದಿಂದ ನಡೆದುಕೊಂಡರೆ ಜೀವಕ್ಕೆ ಅಪಾಯ ಬರುತ್ತದೆ.

ಚಾಣಕ್ಯರ ಪ್ರಕಾರ, ಈ ಮೂರು ಅಂಶಗಳಲ್ಲಿ ಸ್ವಲ್ಪವೂ ಅಜಾಗರೂಕತೆಯನ್ನು ತೋರಿದರೆ, ಅದು ನಿಮ್ಮ ಪ್ರಾಣಕ್ಕೆ ನೇರದ ಅಪಾಯವನ್ನುಂಟುಮಾಡಬಹುದು. ಹೀಗಾಗಿ ಹಾವು, ಬೆಂಕಿ, ನೀರು – ಈ ಮೂರು ಅಂಶಗಳ ಹತ್ತಿರ ಯಾವಾಗಲೂ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಮತ್ತು ತಮಾಷೆ ಮಾಡಬಾರದು. ಅವರ ನುಡಿಗಳಿಂದ ಜೀವನದಲ್ಲಿ ಜಾಗರೂಕತೆ, ದೃಢನಿರ್ಣಯ ಮತ್ತು ಸ್ವಯಂ ರಕ್ಷಣೆ ಮುಖ್ಯವಾಗಿದೆ ಎಂದು ನಮಗೆ ತಿಳಿದುಬರುತ್ತದೆ.

error: Content is protected !!