Home Blog Page 2

ದೆಹಲಿಗೆ ಬರುವಂತೆ ಯಾವುದೇ ಕರೆ ಬಂದಿಲ್ಲ, ಇಲಾಖೆ ವಿಚಾರವಾಗಿ ಹೋಗಬೇಕಿದೆ: ಡಿ.ಕೆ. ಶಿವಕುಮಾರ್

0

ಬೆಂಗಳೂರು: ಮಹದೇವಪ್ಪ ಅವರು ಕೂಡ ನಮ್ಮ ಹೈಕಮಾಂಡ್ ಆಗಿರುವುದರಿಂದ ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡುತ್ತಾರೆ ಎಂಬ ವಿಚಾರ, ಮಾಹಿತಿ ಅವರಿಗೆ ತಿಳಿದಿರಬೇಕು. ಹೀಗಾಗಿ ಅವರು ದಲಿತ ಸಿಎಂ ವಿಚಾರ ಪ್ರಸ್ತಾಪ ಮಾಡಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಕುಮಾರಪಾರ್ಕ್ ಸರಕಾರಿ ನಿವಾಸ ಹಾಗೂ ಸುತ್ತೂರು ಸದನದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು. ರಾಜ್ಯ ರಾಜಕಾರಣದಲ್ಲಿ ಬದಲಾವಣೆ, ಅಧಿಕಾರ ಹಸ್ತಾಂತರ, ದಲಿತ ಸಿಎಂ ಬಗ್ಗೆ ಆಗುತ್ತಿರುವ ಚರ್ಚೆ ಕುರಿತು ಕೇಳಿದಾಗ, “ಮಹದೇವಪ್ಪ ಅವರ ಹೇಳಿಕೆ ನೋಡಿದೆ. ಅದರ ಹೊರತಾಗಿ ಬೇರೆ ಯಾವುದೇ ಚರ್ಚೆ ಇಲ್ಲ. ಅವರಿಗೆ ಸಿಎಂ ಬದಲಾವಣೆ ಮಾಹಿತಿ ಇರಬಹುದು, ಆದರೆ ಆ ವಿಚಾರವಾಗಿ ನನಗೆ ಯಾವುದೇ ಮಾಹಿತಿ ಇಲ್ಲ” ಎಂದರು.

ಇಲಾಖೆ ವಿಚಾರವಾಗಿ ದೆಹಲಿಗೆ ಹೋಗಬೇಕಿದೆ

ಹೈಕಮಾಂಡ್ ನಿಮ್ಮನ್ನು ಹಾಗೂ ಸಿಎಂ ಅವರನ್ನು ಕರೆದಿದ್ದಾರಾ ಎಂದು ಕೇಳಿದಾಗ, “ನನಗೆ ಯಾವುದೇ ಕರೆ ಬಂದಿಲ್ಲ. ನಾನು ನಮ್ಮ ಇಲಾಖೆಗೆ ಸಂಬಂಧಿಸಿದ ಕೆಲಸಗಳ ಮೇಲೆ ದೆಹಲಿಗೆ ಹೋಗಬೇಕಾಗಿದೆ. ನಗರಾಭಿವೃದ್ಧಿ ಇಲಾಖೆ ಯೋಜನೆಗೆ ಸಂಬಂಧಿಸಿದಂತೆ 1 ಲಕ್ಷ ಕೋಟಿ ರೂ. ನೀಡಲಾಗುತ್ತಿದ್ದು, ದೊಡ್ಡ ನಗರಗಳಿಗೆ ನೀಡುವುದಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ನಮ್ಮ ನಗರಾಭಿವೃದ್ಧಿ ಸಚಿವರ ಬಳಿ ಚರ್ಚೆ ಮಾಡಿ, 2 ಹಾಗೂ 3ನೇ ಹಂತದ ನಗರಗಳ ಅಭಿವೃದ್ಧಿಗೆ ಪ್ರಸ್ತಾವನೆ ಸಿದ್ಧಪಡಿಸಲು ಹೇಳುತ್ತೇನೆ” ಎಂದು ತಿಳಿಸಿದರು.

ಸಚಿವರು, ಶಾಸಕರನ್ನು ನಿಯಂತ್ರಿಸಬೇಕಿರುವುದು ಸಿಎಂ

ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಸಚಿವರ ಹೇಳಿಕೆಗಳ ಬಗ್ಗೆ ನೀವು ಮೌನವಾಗಿದ್ದೀರಿ ಎಂದು ಕೇಳಿದಾಗ, “ಸಚಿವರುಗಳನ್ನು ನಿಯಂತ್ರಣ ಮಾಡಬೇಕಿರುವುದು ಮುಖ್ಯಮಂತ್ರಿಗಳು. ಶಾಸಕರನ್ನು ಅವರೇ ನಿಯಂತ್ರಿಸಬೇಕು. ಪಕ್ಷದ ವಿಚಾರವಾಗಿ ದೆಹಲಿಗೆ ಮಾಹಿತಿ ನೀಡುವ ವಿಚಾರ ನಾನು ಮಾಡುತ್ತಿದ್ದೇನೆ” ಎಂದು ತಿಳಿಸಿದರು.

ಪರಮೇಶ್ವರ್ ಅವರಿಗೆ ಮೊದಲು ಕೂಲಿ ಕೊಡಲಿ ಎಂಬ ರಾಜಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ದೊಡ್ಡವರು” ಎಂದು ತಿಳಿಸಿದರು. ದೆಹಲಿಗೆ ಹೋಗುತ್ತೀರಾ, ಹೈಕಮಾಂಡ್ ನಾಯಕರು ಮೊದಲ ಬಾರಿಗೆ ನಿಮ್ಮನ್ನು ಕರೆಸಿ ಚರ್ಚೆ ಮಾಡುವುದಾಗಿ ಹೇಳಿದ್ದಾರೆ ಎಂದು ಕೇಳಿದಾಗ, “ಸಧ್ಯಕ್ಕೆ ನಾನು ಇಲ್ಲಿ ಕುಮಾರಕೃಪದಲ್ಲಿ ಇದ್ದೇನೆ” ಎಂದು ತಿಳಿಸಿದರು.

ದರ್ಶನ್ ಪ್ರಕರಣದಲ್ಲಿ ಪೊಲೀಸರ ತನಿಖೆ ಬಗ್ಗೆ ಅನುಮಾನ: ಸ್ಪಷ್ಟನೆ ನೀಡಿದ ಗೃಹ ಸಚಿವ ಜಿ. ಪರಮೇಶ್ವರ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪ್ರಮುಖ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ವಿಚಾರಣೆ ತೀವ್ರಗೊಳ್ಳುತ್ತಿದೆ.

ಈ ವೇಳೆ, ಇತರ ಆರೋಪಿಗಳ ಮೊಬೈಲ್‌ಗಳನ್ನು ವಶಪಡಿಸಿಕೊಂಡ ಪ್ರಕ್ರಿಯೆ ಕುರಿತು ಅನುಮಾನ ವ್ಯಕ್ತವಾಗಿದೆ. ಮಹಜರ್ ಪ್ರಕ್ರಿಯೆ ವಾಸ್ತವದಲ್ಲಿ ಬೇರೆಡೆ ನಡೆದಿದ್ದರೂ, ಅದನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ನಡೆಸಿದಂತೆ ದಾಖಲಿಸಲಾಗಿದೆ ಎಂಬುದು ಆರೋಪಿಗಳ ಪರ ವಕೀಲರ ವಾದವಾಗಿದೆ.

ಈ ವಿವಾದದ ನಡುವೆ ಗೃಹಸಚಿವ ಜಿ. ಪರಮೇಶ್ವರ್ ಹೇಳಿಕೆ ನೀಡಿ, “ವಕೀಲರು ತಮ್ಮ ವಾದ ಮಾಡಲಿ. ಪೊಲೀಸ್ ಇಲಾಖೆ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಿದೆ. ಅಗತ್ಯವಾದ ಉತ್ತರವನ್ನು ನ್ಯಾಯಾಲಯದಲ್ಲೇ ನೀಡಲಾಗುತ್ತದೆ” ಎಂದು ತಿಳಿಸಿದ್ದಾರೆ.

ಪ್ರಕರಣದ ಮುಂದಿನ ವಿಚಾರಣೆ ವೇಳೆ ಈ ವಿಷಯದಲ್ಲಿ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ.

ಬೇಡ್ತಿ–ಶರಾವತಿ ತಿರುವಿಗೆ ವಿರೋಧ: ಶಿರಸಿಯಲ್ಲಿ ಗಂಗಾರತಿ ಮೂಲಕ ನದಿ ರಕ್ಷಣೆ ಕೂಗು

0

ಶಿರಸಿ: ಉತ್ತರ ಕನ್ನಡ ಜಿಲ್ಲೆಗೆ ಪ್ರಸ್ತಾಪಿತ ನದಿ ತಿರುವು ಯೋಜನೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ವಿವಿಧ ನದಿ ಹಾಗೂ ಹಳ್ಳಗಳಿಗೆ ಡ್ಯಾಂ ಕಟ್ಟಿ ಉತ್ತರ ಕರ್ನಾಟಕದ ಕಡೆಗೆ ನೀರು ಹರಿಸುವ ಯೋಜನೆಗೆ ಸಾವಿರಾರು ಕೋಟಿ ವೆಚ್ಚ ಮಾಡುವ ಸರ್ಕಾರದ ನಿರ್ಧಾರಕ್ಕೆ ತಜ್ಞರು ಪಶ್ಚಿಮಘಟ್ಟದ ನಾಶ ಖಚಿತ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಹಿನ್ನೆಲೆಮುರೆಗಾರ್ ಜಲಪಾತದಲ್ಲಿ ನದಿ ಪೂಜೆ ‘ಗಂಗಾರತಿ’ ನಡೆಸಿ ಯೋಜನೆಗೆ ವಿರೋಧ ವ್ಯಕ್ತಪಡಿಸಲಾಗಿದೆ. ಇದು ಬೇಡ್ತಿ–ಶರಾವತಿ ನದಿ ತಿರುವು ಯೋಜನೆಯ ಭಾಗವಾಗಿದೆ.

**ಸ್ವರ್ಣವಲ್ಲಿ ಮಠ**ದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ, “ನದಿಗಳು ಭಗವಂತನ ಇಚ್ಛೆಯಂತೆ ಹರಿಯುತ್ತಿವೆ. ಅವುಗಳ ದಿಕ್ಕು ಬದಲಿಸುವುದು ಅಧರ್ಮ. ಧರ್ಮಪೀಠ ಇದನ್ನು ವಿರೋಧಿಸುತ್ತದೆ” ಎಂದು ಹೇಳಿದರು. ಈ ಪೂಜೆ ಅಹಿಂಸಾತ್ಮಕ ಸತ್ಯಾಗ್ರಹವಾಗಿದ್ದು, ಮುಂದೆಯೂ ಪುನರಾವರ್ತನೆ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಜನವರಿಯಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ 25 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಇದೀಗ ಸಹಿ ಸಂಗ್ರಹ ಚಳುವಳಿ ಆರಂಭಿಸಿ, ಸರ್ಕಾರಕ್ಕೆ ತಮ್ಮ ವಿರೋಧ ತಲುಪಿಸುವ ಪ್ರಯತ್ನ ನಡೆಯುತ್ತಿದೆ. ಅನಂತ್ ಹೆಗಡೆ ಅಶೀಸರ, ನೀರವಾರಿ ತಜ್ಞರೊಂದಿಗೆ ಅಧಿಕಾರಿಗಳನ್ನು ಭೇಟಿ ಮಾಡಿ ಯೋಜನೆ ಕುರಿತು ಚರ್ಚೆ ನಡೆಸುವ ಯೋಜನೆ ಇದೆ ಎಂದು ಹೇಳಿದ್ದಾರೆ.

ನದಿ ತಿರುವು ಯೋಜನೆ ವಿರುದ್ಧದ ಹೋರಾಟ ಇದೀಗ ಆಧ್ಯಾತ್ಮಿಕ ರೂಪ ಪಡೆದುಕೊಂಡಿದ್ದು, ಪರಿಸರ ರಕ್ಷಣೆ ಮತ್ತು ಜನಜಾಗೃತಿ ಎರಡನ್ನೂ ಒಟ್ಟಿಗೆ ಮುಂದುವರಿಸುವ ಸಂಕಲ್ಪ ವ್ಯಕ್ತವಾಗಿದೆ.

ಶಿವಮೊಗ್ಗದಲ್ಲಿ SSLC ವಿದ್ಯಾರ್ಥಿ ಕೊಲೆ ಪ್ರಕರಣ: ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ಘೋಷಿಸಿದ ರಾಜ್ಯ ಸರ್ಕಾರ!

0

ಶಿವಮೊಗ್ಗ: ಶಿವಮೊಗ್ಗದಲ್ಲಿ ಕೊಲೆಯಾದ ಬಾಲಕ ಸಂಕೇತ್ ಕುಟುಂಬಕ್ಕೆ ರಾಜ್ಯ ಸರ್ಕಾರವು ಒಟ್ಟು 15 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದೂರವಾಣಿ ಮೂಲಕ ಪರಿಹಾರ ನೀಡುವಂತೆ ಸೂಚನೆ ನೀಡಿದ್ದು, ಅದರಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮೂಲಕ ಅಧಿಕೃತ ಘೋಷಣೆ ಮಾಡಿಸಿದ್ದಾರೆ.

ಪರಿಹಾರ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು, “ಅಪ್ರಾಪ್ತ ಬಾಲಕನ ಸಾವಿಗೆ ಸರ್ಕಾರದಿಂದ ಒಟ್ಟು 15 ಲಕ್ಷ ರೂ. ಮಂಜೂರು ಮಾಡಲಾಗಿದೆ. ಇದರಲ್ಲಿ 10 ಲಕ್ಷ ರೂ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಾಗೂ 5 ಲಕ್ಷ ರೂ. ಶಿಕ್ಷಣ ಇಲಾಖೆಯಿಂದ ನೀಡಲಾಗುತ್ತದೆ” ಎಂದು ತಿಳಿಸಿದ್ದಾರೆ.

ಘಟನೆ ಬಳಿಕ ಜಿಲ್ಲೆಯಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಘಟನೆ ನಡೆದ ಬಡಾವಣೆಯಲ್ಲೂ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಜಾತ್ರೆ ಹಾಗೂ ಮುಂಬರುವ ಹಬ್ಬಗಳ ಹಿನ್ನೆಲೆ ಹೆಚ್ಚುವರಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಊರುಗಡೂರು ಭಾಗದಲ್ಲಿ ಔಟ್‌ಪೋಸ್ಟ್ ತೆರೆಯುವ ಮೂಲಕ ವಿಶೇಷ ಪೊಲೀಸ್ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪವನ್ ಹನ್ಸ್ ಹೆಲಿಕಾಪ್ಟರ್ ಅಂಡಮಾನ್ ಕರಾವಳಿಯಲ್ಲಿ ತುರ್ತು ಭೂಸ್ಪರ್ಶ!

0

ನವದೆಹಲಿ: ಇಬ್ಬರು ಸಿಬ್ಬಂದಿ ಸೇರಿ ಐದು ಮಂದಿಯನ್ನು ಹೊತ್ತೊಯ್ಯುತ್ತಿದ್ದ ಪವನ್ ಹನ್ಸ್ ಸಂಸ್ಥೆಯ ಹೆಲಿಕಾಪ್ಟರ್ ಅಂಡಮಾನ್ ಕರಾವಳಿಯ ಹಿಂದೂ ಮಹಾಸಾಗರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಪೋರ್ಟ್‌ಬ್ಲೇರ್‌ನಿಂದ ಮಾಯಾಬಂದರ್‌ಗೆ ತೆರಳುತ್ತಿದ್ದ ವೇಳೆ ತಾಂತ್ರಿಕ ದೋಷ ಉಂಟಾದ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಇಂದು ಬೆಳಿಗ್ಗೆ ಸುಮಾರು 9:30ರ ವೇಳೆಗೆ ಮಾಯಾಬಂದರ್ ಸಮೀಪ ಈ ಘಟನೆ ನಡೆದಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಹೆಲಿಕಾಪ್ಟರ್ ಪೋರ್ಟ್‌ಬ್ಲೇರ್‌ನಿಂದ ಇಬ್ಬರು ಸಿಬ್ಬಂದಿ ಹಾಗೂ ಐದು ಪ್ರಯಾಣಿಕರೊಂದಿಗೆ ಹೊರಟಿತ್ತು. ತುರ್ತು ಪರಿಸ್ಥಿತಿಯಲ್ಲಿ ಸಮುದ್ರದಲ್ಲಿ ಭೂಸ್ಪರ್ಶ ಮಾಡಿದ ಬಳಿಕ ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಲಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಅಮೆರಿಕದಲ್ಲಿ ಭಾರೀ ಹಿಮಪಾತ: 5,600ಕ್ಕೂ ಹೆಚ್ಚು ವಿಮಾನ ರದ್ದು, ಶಾಲೆಗಳಿಗೆ ರಜೆ ಘೋಷಣೆ

0

ನ್ಯೂಯಾರ್ಕ್: ಅಮೆರಿಕದ ಈಶಾನ್ಯ ಭಾಗದಲ್ಲಿ ಭಾರಿ ಹಿಮಬಿರುಗಾಳಿ ಅಪ್ಪಳಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮೇರಿಲ್ಯಾಂಡಿನಿಂದ ಮೈನೆವರೆಗೆ ವ್ಯಾಪಕ ಹಿಮಪಾತವಾಗಿದ್ದು, ತೀವ್ರ ಗಾಳಿ ಹಾಗೂ ಹಿಮದ ಪರಿಣಾಮ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದೆ.

ಹವಾಮಾನ ತಜ್ಞರ ಪ್ರಕಾರ, ಕಳೆದ ಒಂದು ದಶಕದಲ್ಲಿ ಕಂಡ ಅತ್ಯಂತ ಪ್ರಬಲ ಚಂಡಮಾರುತ ಇದಾಗಿದೆ. ಕೆಲವು ಪ್ರದೇಶಗಳಲ್ಲಿ 2 ಅಡಿ (60 ಸೆಂ.ಮೀ.) ಗಿಂತ ಹೆಚ್ಚು ಹಿಮ ಸುರಿದಿದೆ. ಪರಿಣಾಮವಾಗಿ ವ್ಯಾಪಾರ-ವಹಿವಾಟುಗಳಿಗೆ ಅಡ್ಡಿಯುಂಟಾಗಿ, ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಅಧಿಕಾರಿಗಳು ಹಲವೆಡೆ ತುರ್ತು ಪರಿಸ್ಥಿತಿ ಘೋಷಿಸಿದ್ದು, ಶಾಲೆಗಳನ್ನು ಮುಚ್ಚಲಾಗಿದೆ. ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿ, ಜನರು ಕತ್ತಲಲ್ಲಿ ದಿನ ಕಳೆಯುವಂತಾಗಿದೆ.

ವಿಮಾನ ಸಂಚಾರಕ್ಕೂ ಭಾರಿ ಹೊಡೆತ ಬಿದ್ದಿದೆ. ಸೋಮವಾರ ದೇಶಾದ್ಯಂತ 5,600ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಮಂಗಳವಾರ ನಿಗದಿಯಾಗಿದ್ದ ಇನ್ನೂ 2,000 ವಿಮಾನಗಳನ್ನು ರದ್ದುಪಡಿಸಲಾಗಿದೆ. ಸುಮಾರು 2,500 ವಿಮಾನಗಳ ಹಾರಾಟದಲ್ಲಿ ವಿಳಂಬ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹವಾಮಾನ ಪರಿಸ್ಥಿತಿ ಸಾಮಾನ್ಯವಾಗಲು ಇನ್ನೂ ಕೆಲವು ದಿನಗಳು ಬೇಕಾಗಬಹುದು ಎಂದು ಮುನ್ಸೂಚನೆ ನೀಡಲಾಗಿದೆ.

ಶರ್ಟ್ ಬಿಚ್ಚಿ ಘೋಷಣೆ: ಯೂತ್ ಕಾಂಗ್ರೆಸ್ ನಡೆಗೆ ಖರ್ಗೆ ಗ್ರೀನ್ ಸಿಗ್ನಲ್?

ಬೆಂಗಳೂರು: ದೆಹಲಿಯಲ್ಲಿ ನಡೆದ ನಡೆದ ಎಐ ಇಂಪ್ಯಾಕ್ಟ್‌ ಶೃಂಗಸಭೆಯ ವೇಳೆ ಸಭಾಂಗಣದೊಳಗೆ ಶರ್ಟ್ ಬಿಚ್ಚಿ ಘೋಷಣೆ ಕೂಗಿದ ಯೂತ್ ಕಾಂಗ್ರೆಸ್ ಕಾರ್ಯಕರ್ತರ ನಡೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಬಲ ಸೂಚಿಸಿದ್ದಾರೆ.

ಯೂತ್ ಕಾಂಗ್ರೆಸ್ ಮುಖಂಡರ ಬಂಧನವನ್ನು ಖಂಡಿಸಿದ ಖರ್ಗೆ, “ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಸಹಜ. ದೇಶದ ಹಿತಕ್ಕಾಗಿ ಇಂತಹ ಪ್ರೊಟೆಸ್ಟ್‌ಗಳು ನಡೆಯುತ್ತವೆ” ಎಂದು ಹೇಳಿದ್ದಾರೆ. ಕೆಲ ಕಾಂಗ್ರೆಸ್ ನಾಯಕರುಲೇ ಈ ನಡೆಯನ್ನು ಖಂಡಿಸಿದ್ದ ನಡುವೆಯೇ ಖರ್ಗೆ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

“ಕಾಮನ್‌ವೆಲ್ತ್ ಗೇಮ್ಸ್ ವೇಳೆ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿರಲಿಲ್ಲವಾ? ಯೂತ್ ಕಾಂಗ್ರೆಸ್ ಗಮನ ಸೆಳೆಯಲು ಪ್ರೊಟೆಸ್ಟ್ ನಡೆಸಿದೆ” ಎಂದು ಖರ್ಗೆ ಪ್ರಶ್ನಿಸಿದರು. ಪ್ರಧಾನಿ ನರೇಂದ್ರ ಮೋದಿ ಯೂತ್ ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಮಾತನಾಡಿರುವುದನ್ನು ಉಲ್ಲೇಖಿಸಿ, ಕಾರ್ಯಕರ್ತರ ಮೇಲಿನ ದೌರ್ಜನ್ಯವನ್ನು ಖಂಡಿಸುವುದಾಗಿ ಹೇಳಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗಳನ್ನು ಪ್ರಧಾನಿ ಮೋದಿ ಕೇಳುತ್ತಿದ್ದಾರೆ, ಅವರು ಸರೆಂಡರ್ ಆಗಿದ್ದಾರೆ ಎಂಬ ಗಂಭೀರ ಆರೋಪವನ್ನೂ ಖರ್ಗೆ ಮಾಡಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಹಿರಿಯ ನಾಯಕಿ ಮತ್ತು ಮಾಜಿ ಕೇಂದ್ರ ಸಚಿವೆ ಮಾರ್ಗರೇಟ್ ಆಳ್ವಾ ಯೂತ್ ಕಾಂಗ್ರೆಸ್ ಕಾರ್ಯಕರ್ತರ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಶಿಸ್ತು ಮತ್ತು ಸಭ್ಯತೆ ಮುಖ್ಯ ಎಂದು ಅವರು ಎಚ್ಚರಿಸಿದ್ದರು.

ಭಾರತ್ ಮಂಟಪಂನಲ್ಲಿ ನಡೆದ ಎಐ ಶೃಂಗಸಭೆ ವೇಳೆ 10 ಮಂದಿ ಯೂತ್ ಕಾಂಗ್ರೆಸ್ ನಾಯಕರು ಏಕಾಏಕಿ ಶರ್ಟ್ ಕಳಚಿ ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ‘ಪ್ರಧಾನಿ ಮೋದಿ ರಾಜಿ ಮಾಡಿಕೊಂಡಿದ್ದಾರೆ’ ಎಂಬ ಟಿ-ಶರ್ಟ್‌ಗಳನ್ನು ಪ್ರದರ್ಶಿಸಿ ಗಮನ ಸೆಳೆಯಲು ಯತ್ನಿಸಿದರು.

ಪೊಲೀಸ್ ತನಿಖೆಯಲ್ಲಿ, ನೇಪಾಳದ ಜೆನ್‌ ಝಿ ಪ್ರತಿಭಟನೆಯಿಂದ ಪ್ರೇರಿತವಾಗಿ ಗಲಭೆ ಸೃಷ್ಟಿಸಲು ಪಿತೂರಿ ನಡೆಸಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.

ಆಪರೇಷನ್ ವೈಲ್ಡ್‌ ಲೈಫ್! 144 ಸೆಕ್ಷನ್ ಜಾರಿ ಮಾಡಿ ಸೆರೆ ಕಾರ್ಯಾಚರಣೆ ನಡೆಸಲು ಸಚಿವ ಖಂಡ್ರೆ ಸೂಚನೆ

0

ಚಿಕ್ಕಮಗಳೂರು: ಅರಣ್ಯದಂಚಿನ ಜಮೀನುಗಳಲ್ಲಿ ವನ್ಯಜೀವಿಗಳ ಸಂಚಾರದ ಮಾಹಿತಿ ಕಮಾಂಡ್ ಸೆಂಟರ್‌ಗೆ ಬಂದ ತಕ್ಷಣವೇ ತೋಟದ ಬೆಳೆಗಾರರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಹಾಗೂ ಸ್ಥಳೀಯ ಮುಖಂಡರಿಗೆ ಮಾಹಿತಿ ರವಾನಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.

ಚಿಕ್ಕಮಗಳೂರು ತಾಲೂಕು ಹುಣಸೆಹಳ್ಳಿ ಬಳಿಯ ತೋಟದಲ್ಲಿ ಕಳೆದ ಏಳು ದಿನಗಳ ಅಂತರದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಸಚಿವರು ಉನ್ನತಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ನಡೆಸಿದರು.

ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಿರುವ ಪ್ರದೇಶಗಳಲ್ಲಿ ಸ್ಥಳೀಯ ಮುಖಂಡರು, ಗ್ರಾಮಗಳ ಜಮೀನು ಮಾಲೀಕರನ್ನು ಒಳಗೊಂಡ ವಾಟ್ಸಪ್ ಗುಂಪು ರಚಿಸಿ ತಕ್ಷಣ ಮಾಹಿತಿ ಹಂಚುವಂತೆ ನಿರ್ದೇಶನ ನೀಡಿದರು.

144 ಜಾರಿ ಮಾಡಿ ಕಾರ್ಯಾಚರಣೆ

“ಮಾನವ ಜೀವ ಅತ್ಯಮೂಲ್ಯ. ಒಂದು ಜೀವ ಹಾನಿಯಾದ ಬಳಿಕ ಮತ್ತೊಂದು ಸಾವು ಸಂಭವಿಸಿರುವುದು ದುಃಖದ ಸಂಗತಿ. ಇಂತಹ ಘಟನೆ ಮರುಕಳಿಸದಂತೆ 24×7 ನಿಗಾವಹಿಸಬೇಕು” ಎಂದು ಸಚಿವರು ತಿಳಿಸಿದರು. ಕಡ್ಡಾಯವಾಗಿ ಸೆಕ್ಷನ್ 144 ಜಾರಿ ಮಾಡಿ ವನ್ಯಜೀವಿ ಸೆರೆ ಕಾರ್ಯಾಚರಣೆ ನಡೆಸಬೇಕು. ಥರ್ಮಲ್ ಡ್ರೋನ್ ಸೇರಿದಂತೆ ಅತ್ಯಾಧುನಿಕ ಸಾಧನಗಳನ್ನು ಬಳಕೆ ಮಾಡಬೇಕು ಎಂದು ಸೂಚಿಸಿದರು.

ಕಳೆದ ವಾರ ಆನೆ ದಾಳಿಯಿಂದ ವ್ಯಕ್ತಿ ಮೃತಪಟ್ಟ ಬಳಿಕ ಆನೆ ಸೆರೆಗೆ ಕ್ರಮ ಕೈಗೊಳ್ಳಲಾಗಿತ್ತು. ಸ್ಥಳೀಯರಿಗೆ ತೋಟಗಳಿಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದ್ದರೂ, ಸೂಚನೆ ಉಲ್ಲಂಘಿಸಿ ತೋಟಕ್ಕೆ ಹೋದ ಕಾರಣ ಈ ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದ ಬಳಿಕವೂ ತೋಟದ ಮಾಲೀಕರು ಕಾರ್ಮಿಕರನ್ನು ಕೆಲಸಕ್ಕೆ ಕಳುಹಿಸಿದರೆ ಅಂತಹ ಮಾಲೀಕರಿಗೆ ಎಚ್ಚರಿಕೆ ನೀಡಬೇಕು. ನಿರ್ಲಕ್ಷ್ಯ ತೋರಿದರೆ ದೂರು ದಾಖಲಿಸಲು ಸೂಚನೆ ನೀಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಅರಣ್ಯದ ಹೊರಭಾಗದಲ್ಲಿ 35 ಆನೆಗಳು ಮೂರು ಗುಂಪುಗಳಲ್ಲಿ ಸಂಚರಿಸುತ್ತಿವೆ. ಬೇಸಿಗೆ ಕಾಲದಲ್ಲಿ ಕಾಡಿನಿಂದ ಹೊರಬರುವುದು ಸಾಮಾನ್ಯವಾದರೂ, ವನ್ಯಜೀವಿ-ಮಾನವ ಸಂಘರ್ಷ ತಪ್ಪಿಸಲು ಸಿಬ್ಬಂದಿ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಸಚಿವರು ಸೂಚಿಸಿದರು.

ಪ್ರತಿ ವರ್ಷ ವನ್ಯಜೀವಿ ದಾಳಿಯಲ್ಲಿ ಸಂಭವಿಸುವ ಸಾವಿನ ಸಂಖ್ಯೆ ಇಳಿಕೆಯಾಗಬೇಕೇ ಹೊರತು ಹೆಚ್ಚಳವಾಗಬಾರದು. ಈ ದಿಶೆಯಲ್ಲಿ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ತಿಳಿಸಿದರು.

ವಿಧಾನಸಭೆ ಚುನಾವಣೆಗೂ ಮುನ್ನ ‘ಕೇರಳ’ಗೆ ಹೊಸ ಹೆಸರು? ‘ಕೇರಳಂ’ ಮಸೂದೆಗೆ ಇಂದು ಕೇಂದ್ರ ಮುದ್ರೆ ಸಾಧ್ಯತೆ

0

ತಿರುವನಂತಪುರಂ: ವಿಧಾನಸಭಾ ಚುನಾವಣೆಗೆ ಮುನ್ನ ಕೇರಳ ರಾಜ್ಯದ ಹೆಸರೇ ಬದಲಾಗುವ ಸಾಧ್ಯತೆ ದಟ್ಟವಾಗಿದೆ. ಇನ್ನುಮುಂದೆ ರಾಜ್ಯವನ್ನು “ಕೇರಳಂ” ಎಂದು ಕರೆಯುವಂತೆ ಮಾಡುವ ಮಸೂದೆಗೆ ಇಂದು ನಡೆಯುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗುವ ನಿರೀಕ್ಷೆಯಿದೆ.

ರಾಜ್ಯದ ಭಾಷಾ ಗುರುತು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅಧಿಕೃತವಾಗಿ ಮಾನ್ಯಗೊಳಿಸುವ ಹೆಜ್ಜೆಯಾಗಿ ಈ ನಿರ್ಧಾರವನ್ನು ನೋಡಲಾಗುತ್ತಿದೆ. ಕೇರಳ ವಿಧಾನಸಭೆ ಈಗಾಗಲೇ ಸರ್ವಾನುಮತದಿಂದ ಹೆಸರನ್ನು “ಕೇರಳಂ” ಎಂದು ಬದಲಾಯಿಸುವ ನಿರ್ಣಯವನ್ನು ಅಂಗೀಕರಿಸಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು 2024ರಲ್ಲಿ ಈ ಪ್ರಸ್ತಾಪವನ್ನು ಮಂಡಿಸಿದ್ದರು. 2024ರ ಜೂನ್ 25ರಂದು ವಿಧಾನಸಭೆ ಎರಡನೇ ಬಾರಿ ನಿರ್ಣಯ ಅಂಗೀಕರಿಸಿತು. ಕೇಂದ್ರ ಗೃಹ ಸಚಿವಾಲಯವು ಮೊದಲ ನಿರ್ಣಯ ಪರಿಶೀಲಿಸಿ ಕೆಲವು ತಿದ್ದುಪಡಿಗಳನ್ನು ಸೂಚಿಸಿತ್ತು.

ಇಂದು ಸಚಿವ ಸಂಪುಟ ಅನುಮೋದನೆ ನೀಡಿದರೆ, ಸಂವಿಧಾನದ ಎಂಟನೇ ವೇಳಾಪಟ್ಟಿಗೆ ತಿದ್ದುಪಡಿ ಮಾಡಲು ಅಂತಿಮ ಶಿಫಾರಸು ಕಳುಹಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಈ ವಿಷಯ ಚರ್ಚೆಯಾಗಲಿದೆ. ಸಭೆ ಸೇವಾತೀರ್ಥದಲ್ಲಿ ನಡೆಯಲಿದೆ.

ಇದಕ್ಕೂ ಮುನ್ನ ಫೆಬ್ರವರಿ 13ರಂದು ಸೌತ್ ಬ್ಲಾಕ್‌ನಲ್ಲಿ ಸಭೆ ನಡೆದಿತ್ತು. ಇದೇ ವೇಳೆ, ಕೇರಳ ಸರ್ಕಾರ ರಾಜ್ಯಸಭೆಯಲ್ಲಿ ನೇಟಿವಿಟಿ ಕಾರ್ಡ್ ಮಸೂದೆ ಮಂಡಿಸಿದ್ದು, ಅದನ್ನು ಐತಿಹಾಸಿಕ ಶಾಸನ ಎಂದು ಕರೆದಿದೆ.

ಮೈಸೂರು ಜ್ಯುವೆಲರಿ ದರೋಡೆ ಕೇಸ್: ಹುಣಸೂರಿನಲ್ಲಿ ಕಳ್ಳತನ; ನೇಪಾಳದಲ್ಲಿ ಮಾರಾಟ – ಪೊಲೀಸರಿಗೆ ತಲೆನೋವು

0

ಮೈಸೂರು: ಹುಣಸೂರು ಪಟ್ಟಣದ ಚಿನ್ನದ ಅಂಗಡಿಯಲ್ಲಿ ನಡೆದ ಭಾರಿ ದರೋಡೆ ಪ್ರಕರಣದಲ್ಲಿ ಕದ್ದ ಸುಮಾರು 10 ಕೋಟಿ ರೂ. ಮೌಲ್ಯದ 8 ಕೆಜಿ ಚಿನ್ನವನ್ನು ಆರೋಪಿಗಳು ನೇಪಾಳದಲ್ಲಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.

ಪ್ರಕರಣ ಇದೀಗ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.ಪ್ರಕರಣದ ಮಾಸ್ಟರ್ ಮೈಂಡ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಮೈಸೂರು ಜಿಲ್ಲಾ ಪೊಲೀಸರು ಬಂಧಿಸಿರುವರೂ, ಕದ್ದ ಚಿನ್ನವನ್ನು ಇನ್ನೂ ವಶಕ್ಕೆ ಪಡೆಯಲು ಸಾಧ್ಯವಾಗಿಲ್ಲ. ಅಂತರರಾಜ್ಯ ಕಳ್ಳರ ಜಾಲದ ಮೂಲಕ ಕದ್ದ ಚಿನ್ನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಲೇವಾರಿ ಮಾಡಲಾಗಿದೆ ಎನ್ನಲಾಗಿದೆ.

ಹೈಟೆಕ್ ತಂತ್ರಜ್ಞಾನ ಬಳಸಿ ದರೋಡೆ ನಡೆಸಿದ್ದ ಆರೋಪಿಗಳು, ಕಳ್ಳತನದಷ್ಟೇ ಚಿನ್ನ ವಿಲೇವಾರಿಗೋ ಕೂಡ ಸೂಕ್ಷ್ಮ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದರು. ಹುಣಸೂರಿನಲ್ಲಿ ಕದ್ದ ಚಿನ್ನವನ್ನು ನೇಪಾಳದಲ್ಲಿ ಮಾರಾಟ ಮಾಡಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದರೂ, ವಿದೇಶಕ್ಕೆ ತೆರಳಿ ಚಿನ್ನವನ್ನು ವಶಪಡಿಸಿಕೊಳ್ಳುವಲ್ಲಿ ಕಾನೂನು ಹಾಗೂ ಪ್ರಕ್ರಿಯಾತ್ಮಕ ಅಡಚಣೆಗಳು ಎದುರಾಗಿವೆ.

ಹೀಗಾಗಿ ಸುಮಾರು 10 ಕೋಟಿ ರೂ. ಮೌಲ್ಯದ ಚಿನ್ನವನ್ನು ಮರುಪಡೆಯುವ ಸಾಧ್ಯತೆ ಕಡಿಮೆಯಾಗಿದ್ದು, ಈ ಪ್ರಕರಣವನ್ನು ಮುಕ್ತಾಯದ ಹಂತಕ್ಕೆ ತರುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ ಎನ್ನಲಾಗಿದೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.

 

error: Content is protected !!