Home Blog Page 4

ಜೀವನದಲ್ಲಿ ಪ್ರತಿಯೊಬ್ಬರೂ ಈ ವಿಷಯಗಳ ಬಗ್ಗೆ ಆದಷ್ಟು ಜಾಗರೂಕರಾಗಿರಬೇಕು!

0

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ ವಿಚಾರಗಳಷ್ಟೇ ಅಲ್ಲ, ಜೀವನದ ನಿತ್ಯದ ಅಂಶಗಳ ಕುರಿತು ಸಹ ಬಹಳ ಮುಖ್ಯವಾದ ಸಲಹೆಗಳನ್ನು ನೀಡಿದ್ದಾರೆ.

ಯಶಸ್ಸು, ಶ್ರೀಮಂತಿಕೆ, ದಾಂಪತ್ಯ ಜೀವನ ಸುಖಕರವಾಗಿರಲು ವ್ಯಕ್ತಿಗಳು ಹೇಗೆ ನಡೆದುಕೊಳ್ಳಬೇಕು ಎಂಬುದರ ಜೊತೆಗೆ, ಅವರು ಕೆಲವೊಂದು ಅಪಾಯಕರ ಪರಿಸ್ಥಿತಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಹೇಳಿದ್ದಾರೆ. ವಿಶೇಷವಾಗಿ ಹಾವು, ಬೆಂಕಿ ಮತ್ತು ನೀರು – ಈ ಮೂರು ಅಂಶಗಳನ್ನು ಅವಗಾಹಿಸದೆ ತಮಾಷೆ ಮಾಡಿದರೆ ಅಥವಾ ಅಜಾಗರೂಕತೆಯಿಂದ ಹತ್ತಿರ ಹೋದರೆ, ಅದರಿಂದ ಗಂಭೀರ ಅಪಾಯ ಸಂಭವಿಸಬಹುದು ಎಂದು ಚಾಣಕ್ಯರು ಎಚ್ಚರಿಸಿದ್ದಾರೆ.

ಹಾವುಗಳು ಕೆಲವೊಮ್ಮೆ ಸೇಹಪರವಾಗಿ ಕಂಡರೂ, ಯಾವಾಗ ಕಚ್ಚುವುದು ಎಂಬುದನ್ನು ಮುಂಚಿತವಾಗಿ ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಹಾವಿನ ಹತ್ತಿರ ತಮಾಷೆ ಮಾಡಬಾರದು ಮತ್ತು ಹಾವುಗಳಿಂದ ದೂರವಿರುವುದು ಸುರಕ್ಷಿತ. ಬೆಂಕಿಯ ವಿಚಾರದಲ್ಲಿಯೂ ಚಾಣಕ್ಯರು ಎಚ್ಚರಿಕೆ ನೀಡಿದ್ದಾರೆ. ಬೆಂಕಿಯೊಂದಿಗೆ ಆಟವಾಡುವುದು ಅಥವಾ ಅದರ ಹತ್ತಿರ ಅಜಾಗರೂಕತೆಯಿಂದ ನಡೆದುಕೊಳ್ಳುವುದು ಕ್ಷಣಗಳಲ್ಲಿ ಭೀಕರ ಹಾನಿಯನ್ನುಂಟುಮಾಡಬಹುದು. ಅದೇ ರೀತಿ, ನೀರಿನ ವಿಷಯವೂ ಹೀಗೆ – ನದಿ, ಸಮುದ್ರ ಅಥವಾ ನೀರಿನ ಇತರ ಹತ್ತಿರದ ಪ್ರದೇಶಗಳಲ್ಲಿ ನಿರ್ಲಕ್ಷ್ಯದಿಂದ ನಡೆದುಕೊಂಡರೆ ಜೀವಕ್ಕೆ ಅಪಾಯ ಬರುತ್ತದೆ.

ಚಾಣಕ್ಯರ ಪ್ರಕಾರ, ಈ ಮೂರು ಅಂಶಗಳಲ್ಲಿ ಸ್ವಲ್ಪವೂ ಅಜಾಗರೂಕತೆಯನ್ನು ತೋರಿದರೆ, ಅದು ನಿಮ್ಮ ಪ್ರಾಣಕ್ಕೆ ನೇರದ ಅಪಾಯವನ್ನುಂಟುಮಾಡಬಹುದು. ಹೀಗಾಗಿ ಹಾವು, ಬೆಂಕಿ, ನೀರು – ಈ ಮೂರು ಅಂಶಗಳ ಹತ್ತಿರ ಯಾವಾಗಲೂ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಮತ್ತು ತಮಾಷೆ ಮಾಡಬಾರದು. ಅವರ ನುಡಿಗಳಿಂದ ಜೀವನದಲ್ಲಿ ಜಾಗರೂಕತೆ, ದೃಢನಿರ್ಣಯ ಮತ್ತು ಸ್ವಯಂ ರಕ್ಷಣೆ ಮುಖ್ಯವಾಗಿದೆ ಎಂದು ನಮಗೆ ತಿಳಿದುಬರುತ್ತದೆ.

‘ಮನೆಯೂಟ ಬೇಕು’: ವಿಚಾರಣೆ ವೇಳೆ ಕೋರ್ಟ್ ಹಾಜರಿಗೆ ದರ್ಶನ್ ಮನವಿ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ವೇಳೆ ನಟ ದರ್ಶನ್ ನೇರವಾಗಿ ಕೋರ್ಟ್‌ಗೆ ಹಾಜರಾಗಲು ಮನವಿ ಮಾಡಿಕೊಂಡಿದ್ದಾರೆ.

ಪ್ರಕರಣವನ್ನು ತ್ವರಿತಗತಿಯಲ್ಲಿ ನಡೆಸುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯುವ ಸಂದರ್ಭದಲ್ಲಿ ಜೈಲಿನಲ್ಲಿ ಟಿವಿ ಸೌಲಭ್ಯ ನೀಡಿರುವುದಕ್ಕೆ ನ್ಯಾಯಾಧೀಶರಿಗೆ ದರ್ಶನ್ ಧನ್ಯವಾದ ಹೇಳಿದರು. ಆದರೆ ನ್ಯಾಯಾಧೀಶರು, “ನಾವು ಕರ್ತವ್ಯ ಮಾಡಿದ್ದೇವೆ, ಧನ್ಯವಾದ ಅಗತ್ಯವಿಲ್ಲ” ಎಂದು ಪ್ರತಿಕ್ರಿಯಿಸಿದರು.

ವಿಚಾರಣೆ ವೇಳೆ ದರ್ಶನ್ ಕುಟುಂಬದವರು ಭೇಟಿ ನೀಡುವಾಗ ಹೆಚ್ಚಿನ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ಜೊತೆಗೆ ಒಂದು ದಿನವಾದರೂ ಖುದ್ದಾಗಿ ಕೋರ್ಟ್‌ಗೆ ಹಾಜರಾಗಲು ಸೂಚನೆ ನೀಡಬೇಕು ಎಂದು ವಕೀಲರ ಮೂಲಕ ಅರ್ಜಿ ಮಂಡಿಸಲಾಯಿತು.

“ಜೈಲಿನ ಊಟ ಸಾಕಾಗುತ್ತಿಲ್ಲ. ಕೋರ್ಟ್‌ಗೆ ಹಾಜರಾದರೆ ಮನೆಯೂಟ ಸಿಗುತ್ತದೆ” ಎಂದು ದರ್ಶನ್ ನ್ಯಾಯಾಲಯಕ್ಕೆ ತಿಳಿಸಿದರು. ಆರೋಪಿಗಳಿಗೆ ಭೇಟಿ ಸಮಯವೂ ಕಡಿಮೆ ಸಿಗುತ್ತಿದೆ ಎಂದು ವಕೀಲರು ವಾದಿಸಿದರು.

ಮನವಿ ಆಲಿಸಿದ ನ್ಯಾಯಾಧೀಶರು, ಖುದ್ದು ಹಾಜರಾತಿಗೆ ಸಂಬಂಧಿಸಿದಂತೆ ನಿಯಮಾನುಸಾರ ಅರ್ಜಿ ಸಲ್ಲಿಸಲು ಸೂಚಿಸಿದರು. ಪ್ರಕರಣದ ಮುಂದಿನ ವಿಚಾರಣೆ ಕಾದುನೋಡಲಾಗುತ್ತಿದೆ.

ವೀಳ್ಯದೆಲೆ ತಿನ್ನುವುದರಿಂದ ಸಿಗುವ ಪ್ರಯೋಜನಗಳು: ಕೇಳಿದ್ರೆ ನೀವೇ ಶಾಕ್​ ಆಗ್ತೀರಿ!

0

ಭಾರತೀಯ ಸಂಸ್ಕೃತಿಯಲ್ಲಿ ವೀಳ್ಯದೆಲೆ ವಿಶೇಷ ಸ್ಥಾನ ಹೊಂದಿದೆ. ಪೂಜೆ, ವಿವಾಹ ಸಮಾರಂಭಗಳು ಸೇರಿದಂತೆ ಪ್ರತಿಯೊಂದು ಶುಭಕಾರ್ಯದಲ್ಲೂ ವೀಳ್ಯದ ಎಲೆ ಅನಿವಾರ್ಯವಾಗಿದೆ. ಧಾರ್ಮಿಕ ಮಹತ್ವದ ಜೊತೆಗೆ, ವೀಳ್ಯದೆಲೆ ಹಲವು ಆರೋಗ್ಯಕರ ಗುಣಗಳನ್ನು ಹೊಂದಿದೆ.

ಇದು ನೈಸರ್ಗಿಕವಾಗಿ ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿದೆ. ಜೀರ್ಣಕ್ರಿಯೆ ಸುಧಾರಿಸಲು, ಬಾಯಿಯ ದುರ್ವಾಸನೆ ನಿವಾರಿಸಲು ಮತ್ತು ದೇಹವನ್ನು ನಿರ್ವಿಷಗೊಳಿಸಲು ಸಹಕಾರಿ ಎಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿ ಹಿರಿಯರು ಊಟದ ಬಳಿಕ ವೀಳ್ಯದೆಲೆ ಅಡಿಕೆ ಜಗಿಯುವ ಪದ್ಧತಿ ಅನುಸರಿಸುತ್ತಿದ್ದರು.

ವೀಳ್ಯದೆಲೆ ತಿನ್ನುವುದರಿಂದ ಲಭಿಸುವ ಪ್ರಯೋಜನಗಳು

ಜೀರ್ಣಕ್ರಿಯೆ ಸುಧಾರಣೆ:
ವೀಳ್ಯದೆಲೆಯಲ್ಲಿ ಇರುವ ಪೋಷಕಾಂಶಗಳು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತವೆ. ಅಜೀರ್ಣ, ಗ್ಯಾಸ್, ಮಲಬದ್ಧತೆ, ಹೊಟ್ಟೆಯುಬ್ಬರ ಮತ್ತು ಆಮ್ಲೀಯತೆ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಒತ್ತಡ ನಿವಾರಣೆ:
ಊಟದ ಬಳಿಕ ವೀಳ್ಯದೆಲೆ ತಿನ್ನುವುದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯಕ.

ರಕ್ತದಲ್ಲಿನ ಸಕ್ಕರೆ ನಿಯಂತ್ರಣ:
ಊಟದ ನಂತರ ವೀಳ್ಯದ ಎಲೆ ಸೇವಿಸುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಕಾರಿ ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ. ಇದರಿಂದ ಮಧುಮೇಹದ ಅಪಾಯ ಕಡಿಮೆಯಾಗಬಹುದು.

ಬಾಯಿ ದುರ್ವಾಸನೆ ನಿವಾರಣೆ:
ವೀಳ್ಯದ ಎಲೆಗಳ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬಾಯಿಯಲ್ಲಿ ಬೆಳೆಯುವ ಹಾನಿಕಾರಕ ಜೀವಾಣುಗಳನ್ನು ಕಡಿಮೆ ಮಾಡುತ್ತವೆ. ಇದು ನೈಸರ್ಗಿಕ ಮೌತ್ ಫ್ರೆಶ್ನರ್‌ನಂತೆ ಕಾರ್ಯನಿರ್ವಹಿಸುತ್ತದೆ.

ದಂತ ಆರೋಗ್ಯ:
ಹಲ್ಲುನೋವು ಮತ್ತು ಒಸಡುಗಳಲ್ಲಿ ರಕ್ತಸ್ರಾವದಂತಹ ಸಮಸ್ಯೆಗಳಿಗೆ ವೀಳ್ಯದ ಎಲೆ ಉಪಕಾರಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಗಿಯುವುದರಿಂದ ಒಸಡುಗಳು ಬಲಗೊಳ್ಳಬಹುದು.

ದೇಹದ ನಿರ್ವಿಷೀಕರಣ:
ವೀಳ್ಯದೆಲೆಯಲ್ಲಿ ಇರುವ ಟ್ಯಾನಿನ್‌ಗಳು ದೇಹದಲ್ಲಿನ ವಿಷಪದಾರ್ಥಗಳನ್ನು ಹೊರಹಾಕಲು ಸಹಾಯ ಮಾಡುತ್ತವೆ.

ರೋಗನಿರೋಧಕ ಶಕ್ತಿ ಹೆಚ್ಚಳ:
ಕೆಲವು ಸಂಶೋಧನೆಗಳ ಪ್ರಕಾರ, ವೀಳ್ಯದೆಲೆಗಳು ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಹಾಗೂ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಶೀತ, ಕೆಮ್ಮು ಮತ್ತು ಗಂಟಲು ನೋವಿಗೆ ಆಯುರ್ವೇದದಲ್ಲಿ ಪರಂಪರೆಯಿಂದ ಬಳಸಲಾಗುತ್ತಿದೆ.

ಸಿಎಂ, ಡಿಸಿಎಂ ಜೊತೆ ಸುರ್ಜೇವಾಲಾ ಕ್ಲೋಸ್‌ ಡೋರ್‌ ಮೀಟಿಂಗ್‌- ಡಿಕೆಶಿ ಜೊತೆ ಒಂದು ಗಂಟೆ ಪ್ರತ್ಯೇಕ ಮಾತುಕತೆ

0

ಬೆಂಗಳೂರು: ಒಂದೇ ದಿನದ ಪ್ರವಾಸಕ್ಕಾಗಿ ರಾಜ್ಯಕ್ಕೆ ಆಗಮಿಸಿದ್ದ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಎರಡು ಮಹತ್ವದ ಕ್ಲೋಸ್ ಡೋರ್ ಸಭೆಗಳನ್ನು ನಡೆಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಆಯೋಜನೆಗೊಂಡಿದ್ದ ಮನರೇಗಾ ಬಚಾವೋ ಸಂಗ್ರಾಮ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಲು ಅವರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ದೆಹಲಿಗೆ ತೆರಳಲು ಜಕ್ಕೂರು ಏರೋಡ್ರೋಮ್‌ಗೆ ಆಗಮಿಸಿದರು.

ಈ ವೇಳೆ ವಿಮಾನ ನಿಲ್ದಾಣದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದರು.

ಅದಾದ ಬಳಿಕ ಡಿಕೆ ಶಿವಕುಮಾರ್ ಅವರೊಂದಿಗೆ ಪ್ರತ್ಯೇಕವಾಗಿ ಸುಮಾರು ಒಂದು ಗಂಟೆ ಕಾಲ ಕ್ಲೋಸ್ ಡೋರ್ ಸಭೆ ನಡೆಸಿ ನಂತರ ದೆಹಲಿಯತ್ತ ಪ್ರಯಾಣ ಬೆಳೆಸಿದರು.

ಸಭೆಯ ವಿಷಯಾವಳಿ ಬಹಿರಂಗವಾಗಿಲ್ಲದಿದ್ದರೂ, ರಾಜ್ಯ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಸಭೆಗಳು ಮಹತ್ವ ಪಡೆದುಕೊಂಡಿವೆ.

ರಾಂಚಿ ಬಳಿ ಏರ್ ಅಂಬುಲೆನ್ಸ್ ಪತನ: ಪೈಲೆಟ್ ಸೇರಿ 7 ಮಂದಿ ಸಾವಿನ ಶಂಕೆ

0

ರಾಂಚಿ: ಜಾರ್ಖಂಡ್ ರಾಜ್ಯದ ಛತ್ರಾ ಜಿಲ್ಲೆ ಸಮೀಪ ಏರ್ ಅಂಬುಲೆನ್ಸ್ ವಿಮಾನ ಪತನಗೊಂಡಿರುವ ದುರ್ಘಟನೆ ಸಂಭವಿಸಿದೆ. ರಾಂಚಿಯಿಂದ ದೆಹಲಿಯತ್ತ ಏಳು ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ರೆಡಾರ್ ಸಂಪರ್ಕ ಕಳೆದುಕೊಂಡು ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಜೆ 7:34ರ ಸುಮಾರಿಗೆ ಎಟಿಸಿಯೊಂದಿಗೆ ಸಂಪರ್ಕ ಕಡಿತಗೊಂಡಿದೆ. ವಿಮಾನದಲ್ಲಿ ಪೈಲೆಟ್ ಸೇರಿ ಒಟ್ಟು 7 ಮಂದಿ ಇದ್ದರು. ಇವರಲ್ಲಿ ರೋಗಿ, ವೈದ್ಯರು ಹಾಗೂ ನರ್ಸ್ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ ಎಲ್ಲರೂ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಈ ವಿಮಾನವು ರೆಡ್‌ಬರ್ಡ್ ಏರ್‌ವೇಸ್ ಪ್ರೈ.ಲಿ ಸಂಸ್ಥೆಗೆ ಸೇರಿದ ಬೀಚ್ ಕ್ರಾಫ್ಟ್ ಕಿಂಗ್ ಏರ್ BE9L ಚಾರ್ಟೆಡ್ ವಿಮಾನವಾಗಿದೆ.

ಪೊಲೀಸರು ಹಾಗೂ ರಕ್ಷಣಾ ಪಡೆಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ. ಅರಣ್ಯ ಪ್ರದೇಶದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.

ಲಕ್ನೋದಲ್ಲಿ ತಂದೆ ಹತ್ಯೆ: ಗುಂಡಿಕ್ಕಿ ಕೊಂದು ಶವ ತುಂಡರಿಸಿದ ಪುತ್ರ ಬಂಧನ

0

ಲಕ್ನೋ: ಹೃದಯ ಕಲುಕುವ ಘಟನೆಯೊಂದರಲ್ಲಿ ಯುವಕನೊಬ್ಬ ತನ್ನ ತಂದೆಯನ್ನು ಗುಂಡಿಕ್ಕಿ ಹತ್ಯೆ ಮಾಡಿ, ಶವವನ್ನು ತುಂಡರಿಸಿ ವಿಲೇವಾರಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.

ಔಷಧ ಮತ್ತು ಮದ್ಯ ವ್ಯವಹಾರ ನಡೆಸುತ್ತಿದ್ದ 49 ವರ್ಷದ ಮನ್ವೇಂದ್ರ ಸಿಂಗ್ ಶುಕ್ರವಾರದಿಂದ ನಾಪತ್ತೆಯಾಗಿದ್ದರು. ಮನೆಗೆ ಭೇಟಿ ನೀಡಿದ ಪೊಲೀಸರಿಗೆ ಬ್ಯಾರೆಲ್‌ನಲ್ಲಿ ವ್ಯಕ್ತಿಯ ದೇಹದ ಭಾಗಗಳು ಪತ್ತೆಯಾಗಿವೆ. ಅನುಮಾನಾಸ್ಪದ ಸ್ಥಿತಿಯಲ್ಲಿ ಪುತ್ರ ಅಕ್ಷತ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮನ್ವೇಂದ್ರ ಸಿಂಗ್ ತಮ್ಮ ಮಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿ ವೈದ್ಯಕೀಯ ವೃತ್ತಿ ಮುಂದುವರಿಸಬೇಕೆಂದು ಒತ್ತಾಯಿಸುತ್ತಿದ್ದರು. ಆದರೆ ಅಕ್ಷತ್ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದ. ಈ ವಿಷಯವಾಗಿ ತಂದೆ-ಮಗನ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು.

ಇತ್ತೀಚೆಗೆ ಮತ್ತೆ ಉಂಟಾದ ಜಗಳದ ವೇಳೆ ಅಕ್ಷತ್ ತನ್ನ ತಂದೆಗೆ ರೈಫಲ್‌ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ನಂತರ ಶವವನ್ನು ಮೂರನೇ ಮಹಡಿಯಿಂದ ಕೆಳಮಹಡಿಗೆ ಕೊಂಡೊಯ್ದು ಖಾಲಿ ಕೋಣೆಯಲ್ಲಿ ತುಂಡರಿಸಿದ್ದಾನೆ.

ಸಹೋದರಿಯ ಮುಂದೆಯೇ ತಂದೆಯ ದೇಹವನ್ನು ತುಂಡರಿಸಿದ್ದು, ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಬಳಿಕ ದೇಹದ ಭಾಗಗಳನ್ನು ಪ್ಲಾಸ್ಟಿಕ್‌ನಲ್ಲಿ ಪ್ಯಾಕ್ ಮಾಡಿ ವಿಲೇವಾರಿ ಮಾಡಿದ್ದಾನೆ. ಮುಂಡ ಸೇರಿದಂತೆ ಕೆಲವು ಅಂಗಾಂಗಗಳನ್ನು ಮನೆಯಲ್ಲಿ ಇಟ್ಟಿದ್ದ ನೀಲಿ ಡ್ರಮ್‌ನಲ್ಲಿ ಸಂಗ್ರಹಿಸಿದ್ದಾನೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರೆಸಿದ್ದಾರೆ.

ದಾವಣಗೆರೆ: 15 ವರ್ಷದ ಬಾಲಕ ಹೃದಯಾಘಾತದಿಂದ ಸಾವು

0

ದಾವಣಗೆರೆ:  ಜಗಳೂರು ತಾಲೂಕಿನ ಗೋಗುದ್ದು ಗ್ರಾಮದಲ್ಲಿ ಹೃದಯಾಘಾತದಿಂದ 15 ವರ್ಷದ ಮುಜಾಮಿಲ್ ಎಂಬ 9ನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ.

ಚಮನ್ ಸಾಬ್ ಮತ್ತು ಫಾತೀಮಾ ದಂಪತಿಯ ಪುತ್ರನಾಗಿದ್ದ ಮುಜಾಮಿಲ್, ಹನುಮಂತಪುರದ ರಾಜೀವ್ ಗಾಂಧಿ ವಸತಿ ಶಾಲೆಯಲ್ಲಿ ಓದುತ್ತಿದ್ದ. ರಜೆ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದ ಬಾಲಕ ಬೆಳಗಿನ ಜಾವ ಹೊರಗೆ ಹೋಗಿದ್ದಾಗ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಜೀವ ಕಳೆದುಕೊಂಡಿದ್ದಾರೆ.

ಪೋಷಕರಿಗೆ ಮಗನ ಮೃತ್ಯು ತುಂಬಾ ದುಃಖ ತಂದಿದ್ದು, ಸ್ಥಳೀಯ ಜಗಳೂರು ಪೊಲೀಸ್ ಠಾಣೆ ಪ್ರಕರಣದ ತನಿಖೆ ನಡೆಸುತ್ತಿದೆ.

ಸಿಲಿಕಾನ್ ಸಿಟಿ ಬೆಂಗಳೂರು ಸುತ್ತಲಿನ ಪ್ರದೇಶಗಳಲ್ಲಿ ಬೆಳೆಯೋ ತರಕಾರಿಯಲ್ಲಿ ವಿಷಕಾರಿ ಅಂಶ ಪತ್ತೆ; ಆರೋಗ್ಯಕ್ಕೆ ಅಪಾಯ

0

ಬೆಂಗಳೂರು: ನಗರದಲ್ಲಿ ಮಾರಾಟವಾಗುವ ತರಕಾರಿಗಳಲ್ಲಿ ಸೀಸಾ (ಲೆಡ್) ಮತ್ತು ಕೀಟನಾಶಕ ಅವಶೇಷಗಳು ಪತ್ತೆಯಾಗಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ತೋರಿಸಿದೆ. 72 ಮಾದರಿಗಳ ಪರಿಶೀಲನೆೆಯಲ್ಲಿ 10 ಮಾದರಿಗಳಲ್ಲಿ ಕೀಟನಾಶಕ ಅವಶೇಷಗಳು ಕಂಡುಬಂದಿದ್ದು, ಕೆಲ ತರಕಾರಿಗಳಲ್ಲಿ ಸೀಸದ ಪ್ರಮಾಣ ಮಿತಿಗಿಂತ ಹೆಚ್ಚು 1.75 ಎಂಜಿ/ಕೆಜಿ ತಲುಪಿದೆ.

ಮಣ್ಣು ಕೂಡ ಪರಿಶೀಲನೆಗೆ ಒಳಪಟ್ಟಿದ್ದು, ಕೋಲಾರ, ಚಿಕ್ಕಬಳ್ಳಾಪುರ, ನೆಲಮಂಗಲದ ಹೊಲಗಳಿಂದ ಸಂಗ್ರಹಿಸಿದ 23 ಮಾದರಿ ಮಣ್ಣು ಕಲುಷಿತವಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಜನರಿಂದ ದೂರು ಬಂದಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸ್ವಯಂ ಪ್ರೇರಿತವಾಗಿ ತನಿಖೆ ನಡೆಸಿತ್ತು.

ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಜಂಟಿ ಸಮಿತಿ ಸಲ್ಲಿಸಿದ ವರದಿ ಹೇಳಿದ್ದು, ನಗರದಲ್ಲಿ ಮಾರಾಟವಾಗುತ್ತಿರುವ ಕೆಲವು ತರಕಾರಿಗಳು ಜನರ ಆರೋಗ್ಯಕ್ಕೆ ಅಪಾಯಕಾರಿಯಾಗಿವೆ. ಸಾರ್ವಜನಿಕರು ಎಚ್ಚರಿಕೆಯಿಂದ ತರಕಾರಿ ಮತ್ತು ಹಣ್ಣುಗಳನ್ನು ಖರೀದಿಸುವಂತೆ ಸೂಚಿಸಲಾಗಿದೆ.

ನರೇಗಲ್ಲಿಗೆ ಬಂತು ವರ್ಷದ ಮೊದಲ ಮಳೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಈ ವರ್ಷದ ಮಳೆಗಾಲವಿನ್ನೂ ಪ್ರಾರಂಭವಾಗಿಲ್ಲ. ಆದರೂ ಸೋಮವಾರ ಸಂಜೆ ನರೇಗಲ್ಲದಲ್ಲಿ 15-20 ನಿಮಿಷಗಳ ಕಾಲ ಅಕಾಲಿಕ ಮಳೆ ಸುರಿದು ರೈತರಲ್ಲಿ ಆತಂಕ ಮೂಡಿಸಿತು. ಮಳೆ ಸ್ವಲ್ಪ ಬಿರುಸಾಗಿಯೆ ಸುರಿಯಿತು. ರಸ್ತೆಯ ಮೇಲೆಲ್ಲ ನೀರು ಹರಿಯಿತು. ಶಾಲೆಯಿಂದ ಮನೆಗೆ ಮರಳುತ್ತಿದ್ದ ಮಕ್ಕಳು ಮಳೆಯಿಂದ ತೊಂದರೆಗೊಳಗಾದರು.

ಚಳಿಗಾಲ ಸರಿದು ಈಗಿನ್ನೂ ಬೇಸಿಗೆ ಪ್ರಾರಂಭವಾಗುತ್ತಿದೆ. ಶಿವರಾತ್ರಿಯ ನಂತರ ಬಿಸಿಲಿಗೆ ಜನ ಶಿವಶಿವ ಎನ್ನುತ್ತಾರಂತೆ. ಆದರೆ ಶಿವರಾತ್ರಿ ಮುಗಿದು ಎಂಟು ದಿನಗಳು ಕಳೆದರೂ ಅಷ್ಟೊಂದು ಪರಿಯ ಬಿಸಿಲು ಜನರನ್ನು ಬಾಧಿಸಿಲ್ಲ. ಹೀಗಾಗಿ ಬೇಸಿಗೆ ಕಾಲದ ಪ್ರಾರಂಭವಿಲ್ಲದೆ ಸುರಿದ ಅಕಾಲಿಕ ಮಳೆ ಜನತೆಯಲ್ಲಿ ಸೋಜಿಗದ ಜೊತೆಗೆ ಆತಂಕವನ್ನುಂಟುಮಾಡಿತು.

ಜೋಳದ ಕಟಾವು ಆಗದೆ ಮಳೆಯಾದರೆ ಜೋಳದ ತೆನೆ ಕಪ್ಪಾಗುತ್ತದೆ. ಕಾಳುಗಳು ಕಪ್ಪಾಗುತ್ತವೆ. ಕುಶಿಬಿಯ ತೆನೆಯಲ್ಲಿ ನೀರು ಹೊಕ್ಕರೆ ಅದರ ಕಾಳೂ ಕಪ್ಪಾಗುತ್ತದೆ. ಹೊಲದಲ್ಲಿ ರಾಶಿ ಮಾಡಲು ಬಿಟ್ಟಿರುವ ಬೆಳೆಯೆಲ್ಲವೂ ಹಾಳಾಗುತ್ತದೆ. ನೀರಿನಿಂದ ತೊಯ್ದ ಹೊಟ್ಟನ್ನು ಒಯ್ಯಲು ಯಾರೂ ಇಚ್ಛೆ ಪಡುವುದಿಲ್ಲ. ಹೀಗೆ ರೈತರಿಗೆ ಅನೇಕ ತೊಂದರೆಗಳಾಗುತ್ತವೆ ಎಂದು ರೈತರಾದ ಬಾಳಪ್ಪ ಸೋಮಗೊಂಡ, ಕೆ.ಎಸ್. ಕಳಕಣ್ಣವರ, ಎಸ್.ಕೆ. ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಪೂರ್ಣ ರಾಮಾಯಣ’ದಲ್ಲಿ ಕಳೆದುಹೋದ ಪ್ರೇಕ್ಷಕ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಸಹಕಾರದಲ್ಲಿ ಭಾರತೀಯ ವಿದ್ಯಾಭವನ ಆಯೋಜಿಸಿರುವ ಪುಲಿಗೆರೆ ಉತ್ಸವದ 3ನೇ ದಿನದ ಕಾರ್ಯಕ್ರಮದಲ್ಲಿ ವಿದುಷಿ ಗಾಯತ್ರಿ ಚಂದ್ರಶೇಖರ ಅವರ ನೇತೃತ್ವದ ತಂಡ ಪ್ರಸ್ತುತಪಡಿಸಿದ ಭರತನಾಟ್ಯ ಪ್ರದರ್ಶನ ಸೇರಿದ್ದ ಸಾವಿರಾರು ಜನರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸಿದ ಈ ತಂಡದ ಕಲಾವಿದೆಯರು ಸಂಪೂರ್ಣ ರಾಮಾಯಣದ ಸನ್ನಿವೇಶಗಳನ್ನೇ ಪ್ರೇಕ್ಷಕರ ಕಣ್ತುಂಬಿಸಿದರು. ರಾಮ, ಸೀತೆ, ಲಕ್ಷ್ಮಣ, ರಾವಣ, ವಿಭೀಷಣ, ಶಬರಿ, ಜಟಾಯು, ಹನುಮಂತ ಇತ್ಯಾದಿ ಪಾತ್ರಗಳನ್ನು ಸೀತಾಪಹರಣ, ಶ್ರೀರಾಮಪಟ್ಟಾಭಿಷೇಕದಂತಹ ಪ್ರಸಂಗಗಳನ್ನು ಪರಕಾಯ ಪ್ರವೇಶ ಮಾಡಿದವರಂತೆ ಲೀಲಾಜಾಲವಾಗಿ ಅಭಿನಯಿಸಿದ್ದು ಪ್ರೇಕ್ಷಕರ ಆಕರ್ಷಣೆಗೆ ಕಾರಣವಾಗಿತ್ತು.

ನಂತರ ಬೆಂಗಳೂರಿನ ವಿದುಷಿ ಲತಾ ಲಕ್ಷ್ಮೀಶ್ ಮತ್ತು ತಂಡದವರು ಪ್ರಸ್ತುತಪಡಿಸಿದ ಭರತನಾಟ್ಯ ನೃತ್ಯ ವೈವಿಧ್ಯ ಗಮನ ಸೆಳೆಯುವಂತಿತ್ತು. ಈ ತಂಡದ ಕಲಾವಿದರು ಪುಷ್ಪಾಂಜಲಿ ನೃತ್ಯವನ್ನು ಪ್ರಸ್ತುತಪಡಿಸುವ ಮೂಲಕ ನೃತ್ಯ ಪ್ರದರ್ಶನವನ್ನು ಪ್ರಾರಂಭಿಸಿದರು. ಪ್ರಥಮ ಪೂಜಿತ ವಿಘ್ನನಿವಾರಕ ಗಣೇಶ ಪಂಚರತ್ನ, ಶುದ್ಧ ನೃತ್ಯ ಬಂಧವಾಗಿರುವ ಜತಿಸ್ವರದಲ್ಲಿ ಪ್ರಸ್ತುತಪಡಿಸಿದರು. ಅರ್ಧನಾರೀಶ್ವರನ ನೃತ್ಯ ವೈಭವ ಎಲ್ಲರ ಗಮನ ಸೆಳೆಯಿತು. ನಂತರದಲ್ಲಿ ಅಭಂಗಗಳು, ತರುವಾಯ ಮಹಿಷ ಮರ್ದಿನಿ ನೃತ್ಯ ರೂಪಕ ಅತ್ಯಂತ ಸುಂದರವಾಗಿ ಮೂಡಿ ಬಂದಿತು. ನಿರಂತರವಾಗಿ ನೃತ್ಯ ಪ್ರದರ್ಶಿಸಿದ ಈ ಕಲಾವಿದೆಯರು ಪ್ರೇಕ್ಷಕರ ಕರತಾಡನದಿಂದ ಪುಲಕಿತರಾದರು.

ತಂಡದ ಸದಸ್ಯರಾದ ಲಾಸ್ಯ, ಅಂಜನಾ, ಗೌತಮಿ, ತೇಜಸ್ವಿನಿ, ಪೂಜಿತಾ, ಸುಖದಾ ಭಟ್, ರಿಶಿತಾ, ತನ್ಮಯಿ, ಯಶಸ್ವಿನಿ ಅವರ ನೃತ್ಯಗಳು ಎಲ್ಲರ ಮೆಚ್ಚುಗೆ ಗಳಿಸಿದವು. ನಂತರ 3 ದಿನಗಳ ಸಂಗೀತ, ನೃತ್ಯ, ಚಿತ್ರ ಸಂಭ್ರಮಗಳ ಪುಲಿಗೆರೆ ಉತ್ಸವದ ವೈಭವಕ್ಕೆ ಸಹಕರಿಸಿದ ಹಿರಿಯರನ್ನು ಭಾರತೀಯ ವಿದ್ಯಾಭವನದ ವತಿಯಿಂದ ಅಭಿನಂದಿಸಲಾಯಿತು.

ಅಪರೂಪದ ಕಲಾ ಪ್ರತಿಭೆಯಾಗಿರುವ ವಿದುಷಿ ಗಾಯತ್ರಿ ಚಂದ್ರಶೇಖರ ಅವರ ಹಾವ-ಭಾವ, ರೌದ್ರಾವತಾರದ ಭಂಗಿ, ಯುದ್ಧದ ಸನ್ನಿವೇಶ, ಕೊನೆಗೆ ಪಟ್ಟಾಭಿಷೇಕದ ದೃಶ್ಯಗಳು ಸಂಪೂರ್ಣ ರಾಮಾಯಣದ ಚಿತ್ರಣವನ್ನು ತೆರೆದಿಟ್ಟಂತಿತ್ತು. ವಿಶೇಷವಾಗಿ ಶಬರಿಯು ರಾಮನಿಗಾಗಿ ಕಾಯುತ್ತಿರುವ ವೃದ್ಧೆಯ ಪಾತ್ರವಂತೂ ಅದ್ಭುತವಾಗಿ ಮೂಡಿಬಂದಿತು. ಸುಮಾರು ಒಂದುವರೆ ಗಂಟೆಗೂ ಅಧಿಕ ಕಾಲ ಭರತನಾಟ್ಯವನ್ನು ಪ್ರದರ್ಶಿಸಿದ ಈ ತಂಡ ಕೊನೆಗೆ ರಾಮನ ಪಟ್ಟಾಭಿಷೇಕ ನೆರವೇರಿಸಿದಾಗ ಇಡೀ ಆವರಣದಲ್ಲಿದ್ದ ಪ್ರೇಕ್ಷಕರೆಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದರು.

error: Content is protected !!