Home Blog Page 2185

ಸಂಪುಟ ಪುನಾರಚನೆಯೋ, ವಿಸ್ತರಣೆಯೋ? ರೇಸ್‌ನಲ್ಲಿ ಯಾರ‍್ಯಾರು?

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಇವತ್ತು ಶುಕ್ರವಾರ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರ ಭೇಟಿ ನಡೆಯಲಿದ್ದು, ಸಂಪುಟ ವಿಸ್ತರಣೆ ಮಾಡುವುದೋ ಅಥವಾ ಪುನಾರಚನೆ ಮಾಡುವುದೋ ಎಂಬುದು ನಿರ್ಧಾರವಾಗಲಿದೆ ಎನ್ನಲಾಗಿದೆ.

ಗುರುವಾರವೇ ದೆಹಲಿ ತಲುಪಿರುವ ಯಡಿಯೂರಪ್ಪ ಸಂಪುಟ ಪುನಾರಚನೆಗೆ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಕೆಲವರನ್ನು ಸಂಪುಟದಿಂದ ಕೈಬಿಟ್ಟು 8 ಜನರನ್ನು ಸೇರ್ಪಡೆ ಮಾಡಿಕೊಳ್ಳುವುದು ಅವರ ಉದ್ದೇಶ. ಇದಕ್ಕೆ ಹೈಕಮಾಂಡ್ ಒಪ್ಪದಿದ್ದರೆ ವಿಸ್ತರಣೆಗಾದರೂ ಅವಕಾಶ ಪಡೆಯುವುದು ಅವರ ಗುರಿ.
ಗುರುವಾರವಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಅಮಿತ್ ಶಾ ಭೇಟಿ ಕಷ್ಟವಿದೆ. ಈಗ ಚಡ್ಡಾ ಮತ್ತು ರಾಜನಾಥ್ ಸಿಂಗ್ ಮೂಲಕವೇ ಅಮಿತ್ ಶಾರನ್ನು ಒಪ್ಪಿಸುವ ಲೆಕ್ಕದಲ್ಲಿ ಯಡಿಯೂರಪ್ಪ ಇದ್ದಾರೆ.

ಈಗಾಗಲೇ ರೇಣುಕಾಚಾರ್ಯ, ಮುರುಗೇಶ್ ನಿರಾಣಿ ಮತ್ತು ಎಚ್. ವಿಶ್ವನಾಥ್ ದೆಹಲಿಯಲ್ಲಿದ್ದಾರೆ. ಸದ್ಯ ಪರಿಷತ್ತಿನಿಂದ ಎಂಟಿಬಿ ನಾಗರಾಜ್, ಆರ್ ಶಂಕರ್, ಎಚ್ ವಿಶ್ವನಾಥ್, ವಿಧಾನಸಭೆಯಿಂದ ಉಮೇಶ ಕತ್ತಿ, ಎಸ್. ಅಂಗಾರ, ಜಿಎಚ್ ತಿಪ್ಪಾರೆಡ್ಡಿ, ಅರವಿಂದ ಲಿಂಬಾವಳಿ, ಪೂರ್ಣಿಮಾ ಶ್ರೀನಿವಾಸ್, ರೇಣುಕಾಚಾರ್ಯ, ಮುರುಗೇಶ್ ನಿರಾಣಿ ಮುಂತಾದವರು ಸಚಿವ ಸ್ಥಾನದ ಆಕಾಂಕ್ಷಿಗಳು.

ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಆಕಾಂಕ್ಷಿಯೇ. ಅಂದಂತೆ ಖಾಲಿ ಇರುವುದು ಐದೇ ಸ್ಥಾನಗಳು. ಪುನಾರಚನೆಯಾದರಷ್ಟೇ ಆಕಾಂಕ್ಷಿಗಳಿಗೆ ಹೆಚ್ಚಿನ ಅವಕಾಶ.
ಈ ಎಲ್ಲದರ ನಡುವೆ ವಿಸ್ತರಣೆ ಮತ್ತು ಪುನಾರಚನೆ ಎರಡೂ ಸದ್ಯಕ್ಕೆ ಬೇಡ ಎಂದು ಹೈಕಮಾಂಡ್ ಹೇಳಿದರೂ ಹೇಳಬಹುದು!

ಕೊವಿಡ್ ಬಾಧಿತ ಬಿಜೆಪಿ ಎಂ.ಪಿ ಅಶೋಕ್ ಗಸ್ತಿ ನಿಧನ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು: ಮೊದಲ ಸಲ ರಾಜ್ಯಸಭಾ ಎಂಪಿಯಾಗಿದ್ದ ರಾಜ್ಯದ ಬಿಜೆಪಿಯ ಅಶೋಕ್ ಗಸ್ತಿ  ಗುರುವಾರ ರಾತ್ರಿ 10.31ಕ್ಕೆ ನಿಧನರಾದರು ಎಂದು ನಗರದ ಮಣಿಪಾಲ್ ಆಸ್ಪತ್ರೆಯ ನಿರ್ದೇಶಕ ಮನೀಶ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುರುವಾರ ಮಧ್ಯಾಹ್ನವೇ ಗಸ್ತಿ ನಿಧನರಾದರು ಎಂದು ಸುದ್ದಿ ಹರಿದಾಡಿತ್ತು. ಸಚಿವ ಶ್ರೀರಾಮುಲುಈ ಕುರಿತಾಗಿ ಟ್ವೀಟ್ ಮಾಡಿದ ನಂತರ ಸಚಿವ ಜಗದೀಶ ಶೆಟ್ಟರ್ ಸೇರಿ ಹಲವರು ಇದೇ ಸಂದೇಶ ಹಾಕಿದ್ದರು. ಆದರೆ ಸಾಯಂಕಾಲ ಇದು ತಪ್ಪು ಮಾಹಿತಿ ಎಂದು ರಾಜ್ಯ ಬಿಜೆಪಿ ಆಸ್ಪತ್ರೆಯ ಮೂಲ ಉಲ್ಲೇಖಿಸಿ ಪ್ರಕಟಣೆ ನೀಡಿತ್ತು.

ಆದರೆ ಚಿಕಿತ್ಸೆ ಫಲಿಸದೇ ಗಸ್ತಿ ರಾತ್ರಿ 10.31ಕ್ಕೆ ನಿಧನರಾದ ಸಂಗತಿ ಖಚಿತಪಟ್ಟಿದೆ. ಕೊವಿಡ್ ಮತ್ತು ನ್ಯೂಮೊನಿಯಾ ಕಾರಣದಿಂದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಹುಅಂಗಾಂಗ ವೈಫಲ್ಯದ ಕಾರಣದಿಂದ ಅವರ ಸ್ಥಿತಿ ಗಂಭೀರವಾಗಿತ್ತು. ಕೊವಿಡ್ ಸಾಂಕ್ರಾಮಿಕದ ಕಾರಣದಿಂದ ಕಲಾಪ ನಡೆಯದ ಕಾರಣ ಗಸ್ತಿ ಒಂದೂ ಕಲಾಪಕ್ಕೆ ಹಾಜರಾಗುವುದು ಸಾಧ್ಯವಾಗಲಿಲ್ಲ. ಈಗ ಕಲಾಪ ಆರಂಭಕ್ಕೂ ಮುನ್ನವೇ ಅವರು ಆಸ್ಪತ್ರೆ ಸೇರಿದ್ದರು.

ರಾಯಚೂರಿನ ಅಶೋಕ್ ಗಸ್ತಿಯವರು ಬಿಜೆಪಿ ಸಂಘಟನೆಯಲ್ಲಿ ಸಾಕಷ್ಟು ಕೆಲಸ ಮಾಡಿದ ಪರಿಣಾಮ ಅವರನ್ನು ರಾಜ್ಯಸಭೆಗೆ ಬಿಜೆಪಿ ಕಳಿಸಿತ್ತು. ಗಸ್ತಿ ಅವಿರೋಧವಾಗಿ ಆಯ್ಕೆಯಾಗಿದ್ದರು.
ಗಸ್ತಿ ನಿಧನಕ್ಕೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿ ಹಲವಾರು ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನದ ದರ; ಬೆಂಗಳೂರಿಗಿಂತ ಹುಬ್ಬಳ್ಳಿಯಲ್ಲಿ 240 ರೂ. ದುಬಾರಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ರಾಜ್ಯದ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಏಕರೂಪದ ದರವಿದೆ. ದೆಹಲಿ, ಜೈಪುರ, ಲಕ್ನೋಗಳಲ್ಲಿ ಗರಿಷ್ಠ  54,640 ರೂ. ಇದೆ. ಮುಂಬೈನಲ್ಲಿ ಕನಿಷ್ಠ 51,200 ರೂ. ಇದೆ.

ಬೆಂಗಳೂರು, ಮೈಸೂರು, ಮಂಗಳೂರು: 22 ಕ್ಯಾರಟ್: 48,750 ರೂ.,24 ಕ್ಯಾರಟ್: 53,180 ರೂ.
ಹುಬ್ಬಳ್ಳಿ: 22 ಕ್ಯಾರಟ್: 48,968 ರೂ., 24 ಕ್ಯಾರಟ್: 53,420 ರೂ.

ಈ ಐಪಿಎಲ್‌ನಲ್ಲಿ ಗದಗ ಹುಡುಗ ಅನಿರುದ್ಧ ಜೋಶಿ: ಬಿಗ್ ಶಾಟ್‌ಗಳಿಂದ ಗಮನ ಸೆಳೆದ ಯುವಕ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಈತ ಪಕ್ಕಾ ಟ್ಟೆಂಟಿ-20 ಪಂದ್ಯಗಳಿಗೆ ಹೇಳಿ ಮಾಡಿಸಿದ ಕ್ರಿಕೆಟರ್. ಬಲಗೈ ಬ್ಯಾಟ್ಸಮನ್ ಮತ್ತು ಎಡಗೈ ಆಫ್ ಬ್ರೇಕ್ ಬೌಲರ್ ಆಗಿರುವ ಈತ ಈಗಾಗಲೇ ಕೆಪಿಎಲ್‌ನಲ್ಲಿ, ಕರ್ನಾಟಕ ತಂಡದ ಒನ್‌ಡೇ ತಂಡದಲ್ಲಿ ತನ್ನ ಛಾಪು ಮೂಡಿಸಿದ್ದಾನೆ.
ಈತ  ಗದಗ ನಗರದ ಯುವಕ. ಅನಿರುದ್ಧ ಜೋಶಿ. ಈ ಸಲದ ಐಪಿಎಲ್‌ನಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಪರ ಆಡಲಿದ್ದಾನೆ. ಕಳೆದ ಸಲ ಬೆಂಗಳೂರು ರಾಯಲ್ಸ್ ತಂಡದಲ್ಲಿದ್ದನಾದರೂ ಆಡುವ 11ರಲ್ಲಿ ಸ್ಥಾನ ಸಿಕ್ಕಿರಲಿಲ್ಲ.

ಗದಗಿನ ಜಾನೋಪಂಥರ್ ಕ್ರಿಕೆಟ್ ಅಕಾಡೆಮಿಯಲ್ಲಿ ಬ್ಯಾಟಿಂಗ್, ಬೌಲಿಂಗ್ ಪಟ್ಟುಗಳನ್ನು ಕಲಿತ ಅನಿರುದ್ಧ, ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ನಲ್ಲಿ ಗದಗ ಹೆಸರನ್ನು ಕಂಗೊಳಿಸಿದ ಸುನೀಲ್ ಜೋಶಿಯವರ ಅಣ್ಣನ ಮಗ. ಐಪಿಎಲ್ ಬಿಡ್ಡಿಂಗ್‌ನಲ್ಲಿ ರಾಜಸ್ತಾನ್ ರಾಯಲ್ಸ್ ತಂಡ ಈತನನ್ನು 20 ಲಕ್ಷ ರೂ. ಮುಖಬೆಲೆಗೆ ಖರೀದಿಸಿದೆ.

ಸದ್ಯದ ಭಾರತ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥ ಸುನಿಲ್ ಜೋಶಿಯವರ ಹಿರಿಯ ಸಹೋದರ ದಿ. ಅಶೋಕ ಜೋಶಿಯವರ ಪುತ್ರನಾಗಿರುವ ಅನಿರುದ್ಧ, ಕ್ರಿಕೆಟ್ ಕುಟುಂಬದಿಂದ ಬಂದಂತಹ ಯುವಕ. ತಂದೆ ಸಹ ಕ್ಲಬ್ ಮಟ್ಟದ ಆಟಗಾರರಾಗಿದ್ದರು.

ಶಾಲಾ ದಿನಗಳಿಂದ ಕ್ರಿಕೆಟ್ ಅಭ್ಯಾಸ ಆರಂಭಿಸಿದ್ದ ಅನಿರುದ್ಧ ಜೋಶಿ, ತನ್ನ ತಂದೆಯೇ ನನ್ನ ಗುರು ಎಂದು ಹೇಳಿದ್ದಾರೆ. ಪ್ರಾರಂಭದಲ್ಲಿ ಕ್ರಿಕೆಟ್ ಅಭ್ಯಾಸ, ತರಬೇತಿ ಹಾಗೂ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದ್ದು ಗದುಗಿನ ಹಳೆಯ ಕ್ಲಬ್‌ಗಳಲ್ಲೊಂದಾದ ಗದಗ ಸಿಟಿ ಕ್ರಿಕೆಟ್‌ರ್ಸ ಮೂಲಕ (ಈಗಿನ ಜಾನೋಪಂತರ್ ಕ್ರಿಕೆಟ ಅಕಾಡೆಮಿ) ಕ್ರಿಕೆಟ್ ಆರಂಭಿಸಿದ್ದ.

ಹಿರಿಯ ಆಟಗಾರ ಹಾಗೂ ತರಬೇತಿದಾರ ವೀರಣ್ಣ ಜಾನೋಪಂತರರ ನೇತೃತ್ವದ ಈ ಕ್ಲಬ್‌ನಲ್ಲಿ ಅನಿರುದ್ಧ ಜೋಶಿ ಪಳಗಿದ ನಂತರ ಲೀಗ್ ಮಟ್ಟದಲ್ಲಿ, ರಾಜ್ಯ ಅಂಡರ್-19 ತಂಡದಲ್ಲಿ ಮಿಂಚಿದ್ದ. ನಂತರ ಕೆಪಿಎಲ್‌ನಲ್ಲಿ ಆಲ್‌ರೌಂಡ್ ಆಟದ ಮೂಲಕ ಗಮನ ಸೆಳೆದು ರಾಜ್ಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ಒನ್ ಡೇ ಮತ್ತು ಟೆಂಟಿ-20 ಪಂದ್ಯಗಳಲ್ಲಿ ಗಮನ ಸೆಳೆದಿದ್ದ.

ಸೆ. 19ರಿಂದ ಶುರುವಾಗಲಿರುವ ಐಪಿಎಲ್ ಪಂದ್ಯಾವಳಿಯಲ್ಲಿ ಈ ಯುವಕ ಯಶಸ್ಸು ಪಡೆದು ಗದಗಿನ ಕೀರ್ತಿ ಹೆಚ್ಚಿಸಲಿ ಎಂದು ಹಾರೈಸೋಣ. 

ಜಿಲ್ಲೆಯಲ್ಲಿ ಗುರುವಾರ 173 ಜನರಿಗೆ ಸೋಂಕು; 192 ಜನರು ಗುಣಮುಖ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯಲ್ಲಿ ಗುರಿವಾರ ದಿ 17 ರಂದು 173 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

173 ಜನರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 8055 ಕ್ಕೇರಿದೆ. ಗುರುವಾರ 192 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಇದುವರೆಗೂ 6958 ಜನ ಗುಣಮುಖರಾಗಿದ್ದಾರೆ. 982 ಜನ ಸಕ್ರಿಯ ಸೋಂಕಿತರಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಗುರುವಾರ ಜಿಲ್ಲಾಡಳಿತ ನೀಡಿದ ಮಾಹಿತಿಯಂತೆ ಇಬ್ಬರು ಮೃತಪಟ್ಟಿದ್ದು, ಮೃತರ ಸಂಖ್ಯೆ 115 ಕ್ಕೇರಿದೆ.

ಮೋದಿ ಜನ್ಮದಿನ; ರಕ್ತದಾನ ಶಿಬಿರಕ್ಕೆ ಸಚಿವ ಆರ್.ಅಶೋಕ್ ಚಾಲನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಇಂದು ನರೇಂದ್ರ ಮೋದಿ ಅವರು 70 ನೇ ಹುಟ್ಟು ಹಬ್ಬದ ಪ್ರಯುಕ್ತ ಜಿಲ್ಲಾ ಯುವ ಮೋರ್ಚಾದ ವತಿಯಿಂದ ರಕ್ತದಾನ ಶಿಬಿರದ ಕಾರ್ಯಕ್ರಮವನ್ನು ಸಚಿವರಾದ ಅಶೋಕ ಅವರು ಉದ್ಘಾಟನಾ ಮಾಡಿದರು.

ಈ ಸಂದರ್ಭದಲ್ಲಿ ಶಾಸಕರಾದ ಹಾಲಪ್ಪ ಆಚಾರ, ರಾಜ್ಯ ಕಾರ್ಯದರ್ಶಿಗಳಾದ ಹೇಮಲತಾ ನಾಯಕ್, ಬಿಜೆಪಿ ಮುಖಂಡರಾದ ಅಮರೇಶ ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಾಂತೇಶ್ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನವೀನ್ ಗುಳಗಣ್ಣನವರ್, ಜಿಲ್ಲಾ ಯುವ ಮೋರ್ಚದ ಅಧ್ಯಕ್ಷರಾದ ಯಮನೂರು ಚೌಡ್ಕಿ, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ರವಿಚಂದ್ರನ ಮಾಲಿಪಾಟೀಲ್, ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿಗಳಾದ ಪುಟ್ಟರಾಜ ಚಕ್ಕಿ, ಹಾಗೂ ಕೊಪ್ಪಳ, ಯಲಬುರ್ಗಾ, ಕುಷ್ಟಗಿ, ಮಂಡಲದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ , ಪದಾಧಿಕಾರಿಗಳು ಜಿಲ್ಲಾ ಮಾಧ್ಯಮ ವಕ್ತಾರ ಬಸಲಿಂಗಯ್ಯ ಗದಗಿಮಠ ಉಪಸ್ಥಿತರಿದ್ದರು.

ಭಾಗ್ಯನಗರದಲ್ಲಿ ಪ್ರಧಾನಿ ಮೋದಿ ಜನ್ಮದಿನ ಸಂಭ್ರಮಾಚರಣೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲೆಯ ಭಾಗ್ಯನಗರ ಪಟ್ಟಣದ ಒಂದನೇ ವಾರ್ಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 70ನೇ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಭಾಗ್ಯನಗರ ಪಟ್ಟಣ ಪಂಚಾಯಿತಿಯ ಒಂದನೇ ವಾರ್ಡಿನ ಸದಸ್ಯ ನೀಲಕಂಠಪ್ಪ ಮೈಲಿ ಹಾಗೂ ಬಿಜೆಪಿಯ ನಾಮನಿರ್ದೇಶನ ಸದಸ್ಯರಾದ ಶಿವರಾಂ ಮ್ಯಾಗಳಮನಿ ಹಾಗೂ ನಾಗರಾಜ್ ಹ್ಯಾಟಿ, ರುಕ್ಮಣ್ಣ ಶ್ಯಾವಿ ಹಾಗೂ ಲಕ್ಷ್ಮಣ ಚಳಮರದ ಮತ್ತು ವಾರ್ಡಿನ ಎಲ್ಲಾ ಗುರು ಹಿರಿಯರು ಮತ್ತು ಯುವಕರು, ಮಕ್ಕಳು ಸೇರಿ ಸಂತೋಷ ಸಂಭ್ರಮದಿಂದ ಹುಟ್ಟುಹಬ್ಬವನ್ನು ಆಚರಿಸಿದರು.

ಯಡಿಯೂರಪ್ಪ ರಾಜಾಹುಲಿ, ಕಬ್ಬಡ್ಡಿ ಕ್ಯಾಪ್ಟನ್: ಅಶೋಕ್

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮ್ಮ ರಾಜಾಹುಲಿ. ನಮ್ಮ ತಂಡದ ಕಬ್ಬಡ್ಡಿ ತಂಡದ ಕ್ಯಾಪ್ಟನ್. ಅವರಿಗೆ ರೈಟ್ ಮಾಡೋದು ಗೊತ್ತು, ಕ್ಯಾಚ್ ಹಾಕೋದು ಗೊತ್ತು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಕೊಪ್ಪಳದಲ್ಲಿ ಗುರುವಾರ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ಸಾಧ್ಯವೇ ಇಲ್ಲ, ಮುಂದೆಯೂ ಅವರೇ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಎಂದರು.

ಈಗಾಗಲೇ ರಾಯಚೂರು, ಬಳ್ಳಾರಿ ಜಿಲ್ಲೆಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ಮಾಡಲಾಗಿದ್ದು, ಗುರುವಾರ ಕೊಪ್ಪಳ ಮತ್ತು ಗದಗ ಜಿಲ್ಲೆಯಲ್ಲಿ ಪ್ರಗತಿ ಪರಿಶೀಲಿಸಲಾಗುವುದು. ಈಗಷ್ಟೇ ಕೊಪ್ಪಳದಲ್ಲಿ ಸಭೆ ಮುಗಿದಿದ್ದು, ಮಳೆಹಾನಿ ಮತ್ತು ಕೊವಿಡ್-19 ಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ಮಾಡಲಾಗಿದೆ ಎಂದು ತಿಳಿಸಿದರು.

ಕೊವಿಡ್-19 ಗೆ ಸಂಬಂಧಿಸಿದಂತೆ ಕೊಪ್ಪಳಕ್ಕೆ 9.83 ಕೋಟಿ ಸರ್ಕಾರ ಹಣ ನೀಡಿದೆ. 3 ಕೋಟಿ ರೂಪಾಯಿ ಹಣ ಜಿಲ್ಲಾಡಳಿತ ಬಳಿ ಇನ್ನೂ ಇದೆ. ವೆಂಟಿಲೇಟರ್ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪ್ರವಾಹದಿಂದಾಗಿ 38 ಜಾನುವಾರು ಸತ್ತಿವೆ, 465 ಮನೆ ಬಿದ್ದಿವೆ. ಕೊಪ್ಪಳ ಜಿಲ್ಲೆಯಲ್ಲಿ ಬಿದ್ದ ಅಕಾಲಿಕ ಮಳೆಗೆ 23 ಕೋಟಿ ಪರಿಹಾರ ನೀಡಲಾಗಿದೆ. 3 ಸಾವಿರ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಲಾಗಿದೆ ಎಂದು ವಿವರಿಸಿದರು.

ಡಿಸಿ ಅವರ ಪಿಡಿ ಖಾತೆಯಲ್ಲೂ ಸಾಕಷ್ಟು ಹಣ ಇದೆ. ಖಾತೆಯಲ್ಲಿ 5 ಕೋಟಿಗೂ ಕಡಿಮೆ ಹಣ ಇದ್ದರೆ ಕೂಡಲೇ ಹಣ ಹಾಕ್ತಿವಿ. 1 ಲಕ್ಷ 71 ಸಾವಿರಕ್ಕೂ ಹೆಚ್ಚು ಸಾಮಾಜಿಕ ಭದ್ರತೆಯ ಫಲಾನುಭವಿಗಳಿದ್ದಾರೆ. ಎಲ್ಲರಿಗೂ ಬ್ಯಾಂಕ್ ಮೂಲಕ ಹಣ ನೀಡಲು ಸೂಚಿಸಲಾಗಿದೆ. ಆಧಾರ ಲಿಂಕ್ ಮಾಡಲು ಹೇಳಲಾಗಿದೆ. ಇದರಿಂದ 5 ರಿಂದ 6 ಕೋಟಿ ಹಣ ಸರ್ಕಾರಕ್ಕೆ ಉಳಿಯಲಿದೆ.
ಅರಣ್ಯ ಮತ್ತು ರೆವಿನ್ಯೂ ಜಮೀನಿನ ಬಗ್ಗೆ ಸಮಸ್ಯೆ ಇದೆ. ಅರಣ್ಯ ಇಲಾಖೆಯ ಭೂಮಿ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದರು.

ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ 334 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ 8 ಸಾವಿರದ 71 ಕೋಟಿ ರೂಪಾಯಿ ಹಾನಿಯಾಗಿದೆ. ಸಿಎಂ ಯಡಿಯೂರಪ್ಪ ನಾಳೆ ದೆಹಲಿಗೆ ಹೋಗುತ್ತಿದ್ದಾರೆ. ರಾಜ್ಯಕ್ಕೆ ಸಿಗಬೇಕಾದ ಅನುದಾನ ಕೇಳಲು ದೆಹಲಿಗೆ ಹೋಗುತ್ತಿದ್ದಾರೆ. ಸಿಎಂ ಕೇಂದ್ರದ ನಾಯಕರನ್ನು ಭೇಟಿ ಮಾಡಿ, ಹೆಚ್ಚು ಅನುದಾನ ತರುವ ಕೆಲಸ ಮಾಡ್ತಿದ್ದಾರೆ ಎಂದರು.

ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ವಿಚಾರ

ಇದು ಕೇವಲ ರಾಜ್ಯದಲ್ಲಿ ಇದೆ.
ವಿದ್ಯಾವಂತ ‌ರೈತರು ಕೃಷಿ‌ ಕಡೆಗೆ ಬರಬೇಕು ಎಂಬುದು ನಮ್ಮ ಕಾಯ್ದೆ ತಿದ್ದುಪಡಿಯ ಉದ್ದೇಶ ಎಂದ ಆರ್.ಅಶೋಕ, ವೃದ್ಧಾಪ್ಯ ವೇತನಕ್ಕಾಗಿ ಇನ್ನು‌ ಮುಂದೆ ಅರ್ಜಿ ಹಾಕಬೇಕಿಲ್ಲ‌. ಅವರ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಆಧಾರದ ಮೇಲೆ ಫಲಾನುಭವಿಗಳೆಂದು ಆಯ್ಕೆ ಮಾಡಲಾಗುವುದು. ಅಧಿಕಾರಿಗಳು ಬೋಗಸ್ ಪಿಂಚಣಿ ತಡೆಯಲು ಇನ್ನೂ 15 ದಿನಗಳೊಳಗೆ ಫಲಾನುಭವಿಗಳ ಆಧಾರ್ ಲಿಂಕ್ ಮಾಡಿಸಬೇಕು. ಇಲ್ಲದಿದ್ದರೆ ಕ್ರಮ ಖಚಿತ ಎಂದು ಎಚ್ಚರಿಸಿದರು.

ಈ ವೇಳೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಪಂ ಸಿಇಓ ರಘುನಂದನ್ ಮೂರ್ತಿ ಇತರರು ಇದ್ದರು.

2016-18: 3,005 ಯುಎಪಿಎ ಕೇಸು, ಶೇ.27 ರಲ್ಲಿ ಮಾತ್ರ ಚಾರ್ಜ್ ಶೀಟ್!

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ(ಯುಎಪಿಎ) ಕುರಿತ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಕೇಂದ್ರ ನೀಡಿದ ಉತ್ತರದಿಂದ, ಒಂದಿಷ್ಟು ಅಂಶಗಳು ಸ್ಪಷ್ಟವಾಗುತ್ತವೆ. 2016ರಿಂಷ ವ್ಯಾಪಕವಾಗಿ ಈ ಕಾಯ್ದೆಯನ್ನು ಕೇಂದ್ರ ಸರ್ಕಾರ ಬಳಸುತ್ತಿದೆ. ಈ ಕೇಸುಗಳಲ್ಲಿ ತನಿಖೆ ಪೂರ್ಣಗೊಂಡಿರುವ ಕೇಸುಗಳು ತುಂಬ ವಿರಳ. ಇದರರ್ಥ ಆರೋಪಿಗಳಿಗೆ ಜಾಮೀನು ಸಿಗದೆ ಅವರು ಜೈಲಿನಲ್ಲೇ ಇರುವಂತೆ ಮಾಡುವ ತಂತ್ರವನ್ನು ಸರ್ಕಾರ ಅನುಸರಿಸುತ್ತಿದೆಯೇ ಎಂಬ ಅನುಮಾನ ಮೂಡುತ್ತದೆ.

ಸರ್ಕಾರವೇ ನೀಡಿದ ಮಾಹಿತಿ ಪ್ರಕಾರ, 2016-18ರ ಅವಧಿಯಲ್ಲಿ 3,005 ಯುಪಿಎ ಕೇಸು ದಾಖಲಾಗಿದ್ದು, ಅದರಲ್ಲಿ ಕೇವಲ 821 ಕೇಸುಗಳಲ್ಲಿ ಮಾತ್ರ ಚಾರ್ಜ್ ಶೀಟ್ ಸಲ್ಲಿಸಲು ಸಾಧ್ಯವಾಗಿದೆ. ಅಂದರೆ ಶೇ.27 ಪ್ರಕರಣಗಳಲ್ಲಿ ಮಾತ್ರ ತನಿಖೆ ಮುಗಿದಿದೆ!

ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿ, 2017-18ರಲ್ಲಿ 1,198 ಪ್ರಕರಣ ದಾಖಲಿಸಿದ್ದು 563 ಆರೋಪಿಗಳು ಇನ್ನೂ ಜೈಲಿನಲ್ಲಿದ್ದಾರೆ. ಅರ್ಧಕ್ಕೂ ಹೆಚ್ಚು ಜನ ಆರೋಪಮುಕ್ತರಾಗಿದ್ದಾರೆ ಎಂದರೆ ಆಧಾರರಹಿತ ಕೇಸುಗಳನ್ನು ಹಾಕಲಾಗಿತ್ತು ಎಂದೇ ಅರ್ಥ.

ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಅತಿ ಹೆಚ್ಚು ಎನ್‌ಎಸ್‌ಎ ಪ್ರಕರಣ ದಾಖಲಾಗಿವೆ. ಈ ಎರಡು ರಾಜ್ಯಗಳಲ್ಲಂತೂ ಸಾಮಾನ್ಯ ಪ್ರಕರಣಗಳಲ್ಲೂ ಭಯೋತ್ಪದನಾ ಚಟುವಟಿಕೆಗೆ ಸಂಬಂಧಿಸಿದ ಕಾಯ್ದೆ ಅಡಿ ಕೇಸು ದಾಖಲಿಸುವುದು ಸಾಮಾನ್ಯವಾಗಿ ಬಿಟ್ಟಿದೆ.

ಯುಎಪಿಎ, ಎನ್‌ಎಸ್‌ಎ ದುರುಪಯೋಗ?

ಸರ್ಕಾರ ನೀಡಿದ ಅಂಕಿಅಂಶಗಳು ಮತ್ತು ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ, ಈ ಎರಡೂ ಕಾಯ್ದೆಗಳನ್ನು ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿರುವುದು ಕಾಣುತ್ತದೆ. ಇವೆರಡೂ ಕಾಯ್ದೆಗಳು ಭಯೋತ್ಪಾದನೆ ಮತ್ತು ತೀರಾ ಗಂಭಿರ ಪ್ರಕರಣಗಳನ್ನು ಭೇದಿಸಲೆಂದು ರೂಪಿತವಾಗಿವೆ.
ಭಾಷಣವೊಂದರ ಆಧಾರದಲ್ಲಿ (ಅದನ್ನು ತಪ್ಪಾಗಿ ಉಲ್ಲೇಖಿಸಿ) ಡಾ. ಕಫೀಲ್ ಖಾನ್‌ರನ್ನು ಎನ್‌ಎಸ್‌ಎ ಅಡಿ ಬಂಧಿಸಲಾಗಿತ್ತು. ಕೊನೆಗೆ ಕೋರ್ಟ್ ಅವರನ್ನು ಬಿಡುಗಡೆ ಮಾಡುವಂತೆ ಆದೇಶ ನೀಡಬೇಕಾಯಿತು. ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ಪ್ರಭುತ್ವವನ್ನು ಟೀಕಿಸುವ ಪ್ರಗತಿಪರರ ಮೇಲೆ ಎನ್‌ಎಸ್‌ಎ ಕಾಯ್ದೆ ಮತ್ತು ದೆಹಲಿ ಗಲಭೆ ಪ್ರಕರಣದಲ್ಲಿ ಸಿಎಎ-ಎನ್‌ಆರ್‌ಸಿ ವಿರೋಧಿ ಹೋರಾಟಗಾರರ ಮೇಲೆ ಯುಎಪಿಎ ಅಡಿ ಪ್ರಕರಣ ದಾಖಲಿಸಲಾಗುತ್ತಿದೆ.

ಹ್ಯಾಪಿ ಬರ್ತಡೇ ಮೋದಿಜಿ: ರಾಹುಲ್ ಗಾಂಧಿ ಹಾರೈಕೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ 70ನೇ ಜನ್ಮದಿನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಭಾಶಯ ಕೋರಿದ್ದು, ಈ ಕುರಿತು ಟ್ವೀಟ್ ಮಾಡಿದ್ದಾರೆ. ನರೇಂದ್ರ ಮೋದಿಯವರಿಗೆ ಜನ್ಮದಿನದ ಶುಭಾಶಯಗಳು ಎಂದು ಸರಳ ಸಂದೇಶವನ್ನು ಅವರು ಟ್ವೀಟ್ ಮಾಡಿದ್ದಾರೆ.

ಕಳೆದ ಸಲ 69ನೇ ಜನ್ಮದಿನದಂದು ರಾಹುಲ್ ಮುಖತಃ ವಿಶ್ ಮಾಡಿದ್ದರು. ಈಗ ಅವರು ಸೋನಿಯಾರ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಿದ್ದಾರೆ.

ಇತ್ತೀಚಿನ ತಿಂಗಳುಗಳಲ್ಲಿ ಪ್ರತಿದಿನವೂ ಸರಣಿ ಟ್ವೀಟ್‌ಗಳ ಮೂಲಕ ಮೋದಿಯವರ ಕೊರೋನಾ ನಿರ್ವಹಣೆಯ ವಿಫಲತೆ, ಆರ್ಥಿಕತೆ ಹಿನ್ನಡೆ ವಿಷಯಗಳ ಕುರಿತು ರಾಹುಲ್ ಟೀಕೆ ಮಾಡುತ್ತಲೇ ಬಂದಿದ್ದಾರೆ.

error: Content is protected !!