Home Blog

ದೇಶದ ಅತ್ಯಂತ ಹಿರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ: ಪಿಣರಾಯಿ ವಿಜಯನ್ ಬಳಿಕ ಅಗ್ರಸ್ಥಾನಕ್ಕೇರಿದ ಕರ್ನಾಟಕ ಸಿಎಂ

ನವದೆಹಲಿ/ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ದೇಶದ ಅತ್ಯಂತ ಹಿರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ 77 ವರ್ಷದ ಸಿದ್ದರಾಮಯ್ಯ ಹಿರಿಯ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಈ ಮೊದಲು 82 ವರ್ಷದ ಪಿಣರಾಯಿ ವಿಜಯನ್ ದೇಶದ ಅತ್ಯಂತ ಹಿರಿಯ ಸಿಎಂ ಆಗಿದ್ದರು. ಆದರೆ ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರಿಂದ ಸಿದ್ದರಾಮಯ್ಯ ದೇಶದ ಹಿರಿಯ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದಾರೆ.

ಸಿದ್ದರಾಮಯ್ಯ ಇತ್ತೀಚೆಗಷ್ಟೇ ಕರ್ನಾಟಕದ ಇತಿಹಾಸದಲ್ಲಿ ಸುದೀರ್ಘಾವಧಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನಾಯಕ ಎಂಬ ಮತ್ತೊಂದು ದಾಖಲೆ ನಿರ್ಮಿಸಿದ್ದರು.

ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿರುವ ಅವರು, 2026ರ ಜನವರಿ 6ರಂದು 2,792 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದ ದಿವಂಗತ ದೇವರಾಜ ಅರಸ್ ಅವರ ದಾಖಲೆಯನ್ನು ಸರಿಗಟ್ಟಿದ್ದರು. ಬಳಿಕ ಆ ದಾಖಲೆಯನ್ನು ಮೀರಿ ರಾಜ್ಯದಲ್ಲಿ ಅತಿ ಹೆಚ್ಚು ಅವಧಿ ಆಡಳಿತ ನಡೆಸಿದ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.

ದೇಶದ ಹಿರಿಯ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಸಿದ್ದರಾಮಯ್ಯನಂತರ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (75), ಮಿಜೋರಂ ಮುಖ್ಯಮಂತ್ರಿ ಲಾಲ್ ದುಹೋಮಾ (74), ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೋ (74) ಹಾಗೂ ಪುದುಚೇರಿಯ ಮುಖ್ಯಮಂತ್ರಿ ಎನ್. ರಂಗಸ್ವಾಮಿ (74) ಸ್ಥಾನ ಪಡೆದಿದ್ದಾರೆ.

ಇನ್ನೊಂದೆಡೆ, ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೇಮಾ ಖಂಡು (46) ದೇಶದ ಅತಿ ಕಿರಿಯ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ರಾಜ್ಯವನ್ನು ಅತಿ ಹಿರಿಯ ವಯಸ್ಸಿನಲ್ಲಿ ಆಳಿದ ನಾಯಕ ಎಂಬ ದಾಖಲೆಯು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಎಂ. ಕರುಣಾನಿಧಿ ಅವರ ಹೆಸರಿನಲ್ಲಿದ್ದು, ಅವರು 92ನೇ ವಯಸ್ಸಿನವರೆಗೂ ಆಡಳಿತ ನಡೆಸಿದ್ದರು.

ಬಳ್ಳಾರಿಯಲ್ಲಿ 7ನೇ ಶತಮಾನಕ್ಕೆ ಸೇರಿದ ಬಂಡೆಗಲ್ಲು ಶಾಸನ ಪತ್ತೆ!

ಬಳ್ಳಾರಿ: ಜಿಲ್ಲೆಯ ಸಿರಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಅಪರೂಪದ ಬಂಡೆಗಲ್ಲು ಶಾಸನವೊಂದು ಪತ್ತೆಯಾಗಿದ್ದು, ಇದು ಮೌರ್ಯರ ಆಳ್ವಿಕೆಯ ಇತಿಹಾಸ ಅಧ್ಯಯನಕ್ಕೆ ಮಹತ್ವದ ಸಾಕ್ಷ್ಯವಾಗಿ ಪರಿಣಮಿಸಿದೆ.

ನಿಟ್ಟೂರು ಗ್ರಾಮದ ಸುಕ್ರದಪ್ಪನ ಬೆಟ್ಟದ ಹೊಲದಲ್ಲಿ ಈ ಬಂಡೆಗಲ್ಲು ಶಾಸನ ಪತ್ತೆಯಾಗಿದ್ದು, ಧಾರವಾಡದ ಲಿಪಿತಜ್ಞ ಮಾರುತಿ ಭಜಂತ್ರಿ ಅವರ ನೇತೃತ್ವದ ಸಂಶೋಧನಾ ತಂಡ ಇದನ್ನು ಗುರುತಿಸಿದೆ.

ಇತಿಹಾಸ ಸಂಶೋಧಕ ಗಂಗಾವತಿಯ ಶರಣಬಸಪ್ಪ ಕೋಲ್ಕಾರ್ ಅವರ ಮಾರ್ಗದರ್ಶನದಲ್ಲಿ ಶಾಸನದ ಅಧ್ಯಯನ ನಡೆಸಲಾಗಿದ್ದು, ಬಂಡೆಯ ಮೇಲೆ ಪ್ರಾಚೀನ ಲಿಪಿಯಲ್ಲಿ ಏಳು ಸಾಲುಗಳ ಶಾಸನ ಕೆತ್ತಲಾಗಿದೆ.

ಪ್ರಾಥಮಿಕ ಅಧ್ಯಯನದ ಪ್ರಕಾರ, ಈ ಶಾಸನವು ಮೌರ್ಯರ ಆಳ್ವಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಒಳಗೊಂಡಿದ್ದು, 7ನೇ ಶತಮಾನದ ಬಾದಾಮಿ ಚಾಲುಕ್ಯರ ಕಾಲದಿಂದ ರಾಷ್ಟ್ರಕೂಟರ ಕಾಲಘಟ್ಟದ ನಡುವಿನ ಅವಧಿಗೆ ಸೇರಿರಬಹುದು ಎಂದು ಅಂದಾಜಿಸಲಾಗಿದೆ.

ಈ ಪತ್ತೆ ಇತಿಹಾಸಕಾರರಲ್ಲಿ ಕುತೂಹಲ ಮೂಡಿಸಿದ್ದು, ದಕ್ಷಿಣ ಭಾರತದಲ್ಲಿ ಮೌರ್ಯರ ಪ್ರಭಾವ ಮತ್ತು ನಂತರದ ರಾಜವಂಶಗಳ ಆಡಳಿತದ ಕುರಿತ ಅಧ್ಯಯನಕ್ಕೆ ಹೊಸ ಆಯಾಮ ನೀಡುವ ಸಾಧ್ಯತೆ ಇದೆ.

ವಿಶೇಷವೆಂದರೆ, ಇದೇ ನಿಟ್ಟೂರು ಪ್ರದೇಶದಲ್ಲಿ ಈ ಹಿಂದೆ ಅಶೋಕನ ಶಿಲಾಶಾಸನವೂ ಪತ್ತೆಯಾಗಿತ್ತು. ಈಗ ಪತ್ತೆಯಾದ ಈ ಹೊಸ ಬಂಡೆಗಲ್ಲು ಶಾಸನವು ಅಶೋಕ ಶಿಲಾಶಾಸನ ಪತ್ತೆಯಾದ ಸ್ಥಳದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವುದು ಮತ್ತಷ್ಟು ಮಹತ್ವ ಪಡೆದಿದೆ.

ತಮಿಳುನಾಡಲ್ಲಿ ಸರ್ಕಾರ ರಚನೆಗೆ ವಿಜಯ್ ಕಾಂಗ್ರೆಸ್ ಬೆಂಬಲ ಕೋರಿದ್ದಾರೆ: ಕೆ.ಸಿ.ವೇಣುಗೋಪಾಲ್

ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ರಾಜಕೀಯ ಚಟುವಟಿಕೆಗಳು ವೇಗ ಪಡೆದುಕೊಂಡಿದ್ದು, ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಕಾಂಗ್ರೆಸ್ ಬೆಂಬಲವನ್ನು ಕೋರಿದೆ ಎಂದು ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.

ಈ ಹಿನ್ನೆಲೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತಮಿಳುನಾಡು ಘಟಕ ನಾಳೆ ಬೆಳಗ್ಗೆ ಚೆನ್ನೈನಲ್ಲಿ ಸಭೆ ಸೇರಿ ಈ ವಿಷಯದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ರಾಜ್ಯದಲ್ಲಿ ಜಾತ್ಯತೀತ ಸರ್ಕಾರಕ್ಕೆ ಜನಾದೇಶ ದೊರೆತಿದೆ ಎಂದು ಹೇಳಿದ ಕಾಂಗ್ರೆಸ್, ಬಿಜೆಪಿ ಆಡಳಿತವನ್ನು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡುವ ಸಾಧ್ಯತೆ ಹೆಚ್ಚಿದ್ದು, ಈ ಬಗ್ಗೆ ರಾಜ್ಯ ಘಟಕಕ್ಕೆ ಕೇಂದ್ರ ನಾಯಕತ್ವ ಸಂಪೂರ್ಣ ಸ್ವಾಯತ್ತತೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ, ಇತರ ಪಕ್ಷಗಳೂ ಹೊಸ ಸರ್ಕಾರದ ಭಾಗವಾಗುವ ಸಾಧ್ಯತೆ ಇದ್ದರೂ, ಅವರ ವಿವರಗಳು ಇನ್ನೂ ಬಹಿರಂಗವಾಗಿಲ್ಲ.

ಇದಕ್ಕಾಗಿ ವಿಜಯ್ ಅವರು ಅಧಿಕೃತವಾಗಿ ಸರ್ಕಾರ ರಚಿಸಲು ಹಕ್ಕು ಮಂಡಿಸಬೇಕಿದ್ದು, ನಂತರವೇ ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆ ನಡೆಯಲಿದೆ. ಈ ನಡುವೆ, ಕಾಂಗ್ರೆಸ್ ಬೆಂಬಲ ಕೋರಿ ವಿಜಯ್ ಅವರು ಪತ್ರ ಬರೆದಿರುವುದನ್ನು ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ಗಿರೀಶ್ ಚೋಡಂಕರ್ ದೃಢಪಡಿಸಿದ್ದಾರೆ.

234 ಸದಸ್ಯರ ತಮಿಳುನಾಡು ವಿಧಾನಸಭೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಬಹುಮತಕ್ಕೆ ಅಗತ್ಯವಾದ 118 ಸ್ಥಾನಗಳು ಯಾರಿಗೂ ಲಭ್ಯವಾಗಿಲ್ಲ. ಇದರಿಂದ ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಗೆ ಮಾತುಕತೆಗಳು ಜೋರಾಗಿವೆ.

ಮಠದ ಹಾಸ್ಟೆಲ್ ಮಕ್ಕಳ ಮೇಲೆ ದೌರ್ಜನ್ಯ ಆರೋಪ: ವಚನಾನಂದ ಶ್ರೀಗೆ ಜಾಮೀನು ಮಂಜೂರು!

ದಾವಣಗೆರೆ: ಮಠದ ಹಾಸ್ಟೆಲ್ ಮಕ್ಕಳ ಮೇಲೆ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಯವರಿಗೆ ದಾವಣಗೆರೆ ವಿಶೇಷ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಹಾಸ್ಟೆಲ್‌ನಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆದಿದೆ ಎಂದು ಮಠದಲ್ಲಿದ್ದ ಮೂವರು ಮಕ್ಕಳು ಮಕ್ಕಳ ಕಲ್ಯಾಣ ಸಮಿತಿ (CWC) ಮುಂದೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಸ್ವಾಮೀಜಿ ಹಾಗೂ ಅವರ ಬೆಂಬಲಿಗರ ವಿರುದ್ಧ ದೌರ್ಜನ್ಯದ ಆರೋಪಗಳು ಕೇಳಿಬಂದಿದ್ದವು.

ಬಂಧನದ ಭೀತಿಯಲ್ಲಿದ್ದ ವಚನಾನಂದ ಶ್ರೀಗಳು ಏಪ್ರಿಲ್ 21ರಂದು ನಿರೀಕ್ಷಣಾ ಜಾಮೀನು ಕೋರಿ ವಿಶೇಷ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯವು ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಜಾಮೀನು ಮಂಜೂರು ಮಾಡುವ ವೇಳೆ ನ್ಯಾಯಾಲಯವು ಕೆಲ ಕಠಿಣ ಷರತ್ತುಗಳನ್ನು ವಿಧಿಸಿದೆ. ಪ್ರಕರಣದ ಸಾಕ್ಷಿಗಳಿಗೆ ಯಾವುದೇ ರೀತಿಯ ಬೆದರಿಕೆ ಹಾಕಬಾರದು ಹಾಗೂ ನ್ಯಾಯಾಲಯದ ಪೂರ್ವ ಅನುಮತಿ ಇಲ್ಲದೆ ವ್ಯಾಪ್ತಿಯನ್ನು ಬಿಟ್ಟು ತೆರಳಬಾರದು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.

ಈ ಪ್ರಕರಣ ಸಂಬಂಧ ಮುಂದಿನ ತನಿಖೆ ಮುಂದುವರಿದಿದ್ದು, ಕಾನೂನು ಕ್ರಮಗಳು ಮುಂದುವರಿಯಲಿವೆ ಎಂದು ತಿಳಿದುಬಂದಿದೆ.

ಪೂಜೆ ವೇಳೆ ಕರ್ಪೂರ ಆರಿಹೋದರೆ ಅಶುಭವೇ? ಜ್ಯೋತಿಷ್ಯ ತಜ್ಞರು ಹೇಳುವುದೇನು?

ಹಿಂದೂ ಧರ್ಮದ ಪ್ರತಿಯೊಂದು ಸಂಪ್ರದಾಯಕ್ಕೂ ತನ್ನದೇ ಆದ ಆಧ್ಯಾತ್ಮಿಕ ಅರ್ಥ ಹಾಗೂ ವೈಜ್ಞಾನಿಕ ಹಿನ್ನೆಲೆ ಇದೆ.

ಪೂಜೆಯ ಧೂಪ, ದೀಪ ಮತ್ತು ನೈವೇದ್ಯಗಳ ನಂತರ ಸಮರ್ಪಿಸಲಾಗುವ ಆರತಿ, ಭಕ್ತಿಯ ಪರಮ ಹಂತವಾಗಿ ಪರಿಗಣಿಸಲಾಗುತ್ತದೆ. ದೇವರ ಮುಂದೆ ಬೆಳಗುವ ಈ ದೀಪ ಕೇವಲ ಒಂದು ವಿಧಿವಿಧಾನವಲ್ಲ, ಅದು ಭಕ್ತರ ಜೀವನದಲ್ಲಿ ದೈವಿಕ ಸಾನ್ನಿಧ್ಯವನ್ನು ಪ್ರತಿನಿಧಿಸುವ ಪವಿತ್ರ ಕ್ಷಣವಾಗಿದೆ.

ಆಧ್ಯಾತ್ಮಿಕ ನಂಬಿಕೆಯ ಪ್ರಕಾರ, ಆರತಿಯ ಜ್ಯೋತಿ ಮಾನವನ ಮನಸ್ಸಿನ ಅಜ್ಞಾನವೆಂಬ ಕತ್ತಲೆಯನ್ನು ನಿವಾರಿಸಿ ಜ್ಞಾನದ ಬೆಳಕನ್ನು ಮೂಡಿಸುತ್ತದೆ. ಜೊತೆಗೆ, ಇದು ನಕಾರಾತ್ಮಕ ಆಲೋಚನೆಗಳನ್ನು ದೂರಮಾಡಿ ಮನಸ್ಸಿನಲ್ಲಿ ಶಾಂತಿ ಹಾಗೂ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗುತ್ತದೆ.

ಕರ್ಪೂರದ ವಿಶೇಷ ಮಹತ್ವ

ಆರತಿಯಲ್ಲಿ ಬಳಸುವ ಕರ್ಪೂರಕ್ಕೆ ವಿಶೇಷ ಸ್ಥಾನವಿದೆ. ಕರ್ಪೂರ ಉರಿದಾಗ ಸಂಪೂರ್ಣವಾಗಿ ಕರಗಿ ಹೋಗುವುದರಿಂದ ಯಾವುದೇ ಅವಶೇಷ ಉಳಿಯುವುದಿಲ್ಲ. ಇದು ಮನುಷ್ಯನ ಅಹಂಕಾರ ಮತ್ತು ಲೌಕಿಕ ಆಸೆಗಳ ನಾಶವನ್ನು ಸೂಚಿಸುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ಅಂದರೆ, ಭಕ್ತನು ತನ್ನ ಅಹಂಕಾರವನ್ನು ತ್ಯಜಿಸಿ ದೇವರಲ್ಲಿ ಲೀನವಾಗಬೇಕು ಎಂಬ ಸಂದೇಶವನ್ನು ಇದು ನೀಡುತ್ತದೆ.

ವೈಜ್ಞಾನಿಕ ದೃಷ್ಟಿಯಿಂದಲೂ ಕರ್ಪೂರದ ದಹನದಿಂದ ಉಂಟಾಗುವ ಸುಗಂಧ ವಾತಾವರಣವನ್ನು ಶುದ್ಧಗೊಳಿಸಿ ಕೆಲವು ಕ್ರಿಮಿಕೀಟಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಆರತಿ ಬೆಳಗುವ ಕ್ರಮ

ಆರತಿ ಮಾಡುವ ವಿಧಾನಕ್ಕೂ ಶಾಸ್ತ್ರೀಯ ಕ್ರಮವಿದೆ. ಶುದ್ಧ ಪಾತ್ರೆಯಲ್ಲಿ ಕರ್ಪೂರವನ್ನು ಬೆಳಗಿಸಿ ದೇವರ ಪಾದ, ಹೊಕ್ಕುಳ ಹಾಗೂ ಮುಖದ ಬಳಿ ಚಲಿಸುವ ಮೂಲಕ ಸಂಪೂರ್ಣ ವಿಗ್ರಹಕ್ಕೆ ಆರತಿ ಸಲ್ಲಿಸಲಾಗುತ್ತದೆ. ಕೆಲವೊಮ್ಮೆ ಮಧ್ಯದಲ್ಲಿ ಜ್ಯೋತಿ ಆರಿಹೋಗದಂತೆ ಹೆಚ್ಚುವರಿ ಕರ್ಪೂರವನ್ನು ಬಳಸುವುದು ರೂಢಿಯಾಗಿದೆ.

ಪೂಜೆಯ ಕೊನೆಯಲ್ಲಿ ಆರತಿಯ ಜ್ಯೋತಿಯನ್ನು ಕಣ್ಣುಗಳಿಗೆ ಹಚ್ಚಿಕೊಳ್ಳುವ ಮೂಲಕ ದೇವರ ಆಶೀರ್ವಾದವನ್ನು ಸ್ವೀಕರಿಸಲಾಗುತ್ತದೆ. ಸಂಪ್ರದಾಯಗಳಲ್ಲಿ ಏಕ ಆರತಿ ಮತ್ತು ಪಂಚ ಆರತಿ ಎಂಬ ವಿಧಗಳಿದ್ದು, ಪಂಚ ಆರತಿಯನ್ನು ಪಂಚಭೂತಗಳ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಕರ್ಪೂರ ಆರಿಹೋದರೆ ಅಶುಭವೇ?

ಆರತಿಯ ವೇಳೆ ಕರ್ಪೂರ ಮಧ್ಯದಲ್ಲೇ ಆರಿಹೋದರೆ ಅಥವಾ ಕೆಳಗೆ ಬಿದ್ದರೆ ಅದು ಅಶುಭವೆಂಬ ಭಯ ಕೆಲವರಲ್ಲಿ ಕಂಡುಬರುತ್ತದೆ. ಆದರೆ ವಾಸ್ತವದಲ್ಲಿ ಇದು ಗಾಳಿಯ ಚಲನೆ, ಕರ್ಪೂರದ ಗುಣಮಟ್ಟ ಅಥವಾ ತಾಂತ್ರಿಕ ಕಾರಣಗಳಿಂದ ಸಂಭವಿಸುವ ಸಹಜ ಘಟನೆ ಮಾತ್ರವಾಗಿದೆ.

ಇಂತಹ ಸಂದರ್ಭಗಳಲ್ಲಿ ಗಾಬರಿಗೊಳ್ಳದೇ ಮತ್ತೆ ಭಕ್ತಿಯಿಂದ ಆರತಿಯನ್ನು ಪೂರ್ಣಗೊಳಿಸುವುದು ಸೂಕ್ತ ಎಂದು ಧಾರ್ಮಿಕ ತಜ್ಞರು ಹೇಳುತ್ತಾರೆ. ದೇವರಿಗೆ ಮುಖ್ಯವಾದದ್ದು ಭಕ್ತಿ ಮಾತ್ರ; ವಿಧಿವಿಧಾನದ ಸಣ್ಣ ಅಸಮರ್ಪಕತೆಗಳಲ್ಲ ಎಂದು ಶ್ರದ್ಧೆಯಿಂದ ನಂಬಲಾಗಿದೆ.

ಜಾತಿ ನಿಂದನೆ ಪ್ರಕರಣ: ಶಾಸಕ ಬಿ.ಪಿ.ಹರೀಶ್‌ ಬಂಧನಕ್ಕೆ ವಾರೆಂಟ್‌!

ದಾವಣಗೆರೆ: ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಹರಿಹರ ಕ್ಷೇತ್ರದ ಶಾಸಕ ಬಿ.ಪಿ. ಹರೀಶ್ ಅವರ ಬಂಧನಕ್ಕೆ ವಾರೆಂಟ್ ಹೊರಡಿಸಿದೆ.

ಪ್ರಕರಣದ ವಿಚಾರಣೆಗೆ ಪದೇಪದೇ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು ಬಂಧನ ವಾರೆಂಟ್ ಜಾರಿಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ ಮೇ 7ರಂದು ಶಾಸಕರನ್ನು ಕೋರ್ಟ್‌ಗೆ ಹಾಜರುಪಡಿಸುವಂತೆ ಹರಿಹರ ನಗರ ಪೊಲೀಸ್ ಠಾಣಾಧಿಕಾರಿಗೆ ನ್ಯಾಯಾಲಯ ಆದೇಶ ನೀಡಿದೆ.

2023ರ ವಿಧಾನಸಭಾ ಚುನಾವಣಾ ಫಲಿತಾಂಶದ ಮರುದಿನ ದಲಿತ ಸಮುದಾಯದ ಬಗ್ಗೆ ಶಾಸಕ ಬಿ.ಪಿ. ಹರೀಶ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಹರಿಹರ ಬಿಎಸ್ಪಿ ಮುಖಂಡ ಹನುಮಂತಪ್ಪ ಅವರು ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣದಲ್ಲಿ ಹೈಕೋರ್ಟ್ ಆದೇಶದ ಬಳಿಕ ಪೊಲೀಸರು ಸಕ್ರಿಯವಾಗಿದ್ದು, ಮುಂದಿನ ಕ್ರಮಕ್ಕಾಗಿ ಪರಿಶೀಲನೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

ಇಸ್ರೋ ಐಸೈಟ್ ಬಳಿ ನಿಷೇಧಿತ ಪ್ರದೇಶದಲ್ಲಿ ಡ್ರೋನ್ ಹಾರಾಟ: ಭದ್ರತಾ ಆತಂಕ!

ಬೆಂಗಳೂರು: ದೇಶದ ಅತ್ಯಂತ ಸಂವೇದನಾಶೀಲ ಭದ್ರತಾ ವಲಯಗಳಲ್ಲಿ ಒಂದಾದ ಇಸ್ರೋ ಐಸೈಟ್ ಕ್ಯಾಂಪಸ್ ಬಳಿ ನಿಷೇಧಿತ ‘ನೋ ಡ್ರೋನ್ ಝೋನ್’ನಲ್ಲಿ ಅಪರಿಚಿತ ಡ್ರೋನ್ ಹಾರಾಟ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

ಮೇ 2ರಂದು ಬೆಳಿಗ್ಗೆ ಸುಮಾರು 8:16ರ ಸುಮಾರಿಗೆ ಕ್ಯಾಂಪಸ್ ಮೇಲ್ಭಾಗದಲ್ಲಿ 80 ರಿಂದ 100 ಅಡಿ ಎತ್ತರದಲ್ಲಿ ಡ್ರೋನ್ ಹಾರಾಟ ಕಂಡುಬಂದಿದ್ದು, ಸುಮಾರು 10 ರಿಂದ 12 ಸೆಕೆಂಡುಗಳ ಕಾಲ ಹಾರಾಟ ನಡೆಸಿದ ನಂತರ ಡ್ರೋನ್ ಕಣ್ಮರೆಯಾಗಿದೆ ಎಂದು ಸಿಐಎಸ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಸಿಐಎಸ್‌ಎಫ್‌ನ ಸಬ್ ಇನ್ಸ್‌ಪೆಕ್ಟರ್ ಅವರು ಎಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನಿಷೇಧಿತ ಪ್ರದೇಶದಲ್ಲಿ ಅನುಮತಿ ಇಲ್ಲದೆ ಡ್ರೋನ್ ಹಾರಾಟ ನಡೆಸಿರುವುದು ಭದ್ರತೆಗೆ ಗಂಭೀರ ಆತಂಕ ಉಂಟುಮಾಡಿದೆ ಎಂದು ತಿಳಿಸಿದ್ದಾರೆ.

ಇಸ್ರೋ ಐಸೈಟ್ ಕ್ಯಾಂಪಸ್ ಅತ್ಯಂತ ಸಂವೇದನಾಶೀಲ ಪ್ರದೇಶವಾಗಿದ್ದು, ಯಾವುದೇ ವೈಮಾನಿಕ ಚಟುವಟಿಕೆಗಳಿಗೆ ಸಂಪೂರ್ಣ ನಿರ್ಬಂಧವಿದೆ. ಇಂತಹ ಸ್ಥಳದಲ್ಲಿ ಡ್ರೋನ್ ಹಾರಾಟ ನಡೆದಿರುವುದು ಭದ್ರತಾ ವ್ಯವಸ್ಥೆಗೆ ಸವಾಲು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸದ್ಯ ಎಚ್‌ಎಎಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಡ್ರೋನ್ ಹಾರಿಸಿದವರ ಗುರುತು ಪತ್ತೆ ಹಚ್ಚಲು ತನಿಖೆ ಆರಂಭಿಸಿದ್ದಾರೆ.

BRT ಅರಣ್ಯದಲ್ಲಿ ಸಫಾರಿ ವೇಳೆ ರಸ್ತೆಗೆ ಬಂದ ಬೃಹತ್ ಗಾತ್ರದ ಹುಲಿ!

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಹುಲಿ ಸಂರಕ್ಷಿತ ಪ್ರದೇಶವಾದ ಬಿಳಿಗಿರಿರಂಗನ ಬೆಟ್ಟ (BRT) ಅರಣ್ಯದಲ್ಲಿ ಪ್ರವಾಸಿಗರಿಗೆ ರೋಮಾಂಚನಕಾರಿ ದೃಶ್ಯ ಕಂಡುಬಂದಿದೆ.

ಯಳಂದೂರು ತಾಲೂಕಿನ ಕೆ.ಗುಡಿ ಅರಣ್ಯ ವ್ಯಾಪ್ತಿಯಲ್ಲಿ ಬೆಳ್ಳಂಬೆಳಗ್ಗೆ ಸಫಾರಿ ವಾಹನ ಸಂಚರಿಸುತ್ತಿದ್ದ ವೇಳೆ ಬೃಹತ್ ಗಾತ್ರದ ಹೆಬ್ಬುಲಿಯೊಂದು ರಸ್ತೆಗೆ ಆಗಮಿಸಿ ಕೆಲಕಾಲ ವಿಹರಿಸಿದ ಘಟನೆ ನಡೆದಿದೆ.

ಪೊದೆಗಳ ನಡುವಿನಿಂದ ಹೊರಬಂದ ಹುಲಿ ನೇರವಾಗಿ ರಸ್ತೆಯಲ್ಲಿ ಗಾಂಭೀರ್ಯದಿಂದ ನಡೆದು ಹೋಗಿದ್ದು, ಸಫಾರಿ ವಾಹನದಲ್ಲಿದ್ದ ಪ್ರವಾಸಿಗರು ಅತಿ ಸಮೀಪದಿಂದ ದೃಶ್ಯವನ್ನು ಕಂಡು ಬೆರಗಾಗಿದ್ದಾರೆ. ಸಾಮಾನ್ಯವಾಗಿ ಹುಲಿಗಳು ವಾಹನದ ಶಬ್ದಕ್ಕೆ ಕಾಡಿನೊಳಗೆ ಮರೆಯಾಗುವವು. ಆದರೆ ಈ ಬಾರಿ ಹುಲಿ ಯಾವುದೇ ಆತಂಕವಿಲ್ಲದೆ ಕೆಲಕಾಲ ರಸ್ತೆಯಲ್ಲೇ ಇದ್ದು ಬಳಿಕ ನಿಧಾನವಾಗಿ ಕಾಡಿನೊಳಗೆ ಮರೆಯಾಗಿದೆ.

ಈ ಅಪರೂಪದ ಕ್ಷಣವನ್ನು ಕಂಡ ಪ್ರವಾಸಿಗರಲ್ಲಿ ಉತ್ಸಾಹ ಮತ್ತು ರೋಮಾಂಚನ ಮೂಡಿದ್ದು, ಫೋಟೋ ಹಾಗೂ ವಿಡಿಯೋಗಳನ್ನು ಸೆರೆಹಿಡಿದಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚಿನ ದಿನಗಳಲ್ಲಿ ಬಿಳಿಗಿರಿರಂಗನ ಬೆಟ್ಟ ಹಾಗೂ ಮಲೆ ಮಹದೇಶ್ವರ ವನ್ಯಧಾಮಗಳಲ್ಲಿ ಹುಲಿಗಳ ಸಂಚಾರ ಹೆಚ್ಚಾಗುತ್ತಿರುವುದು ಗಮನಕ್ಕೆ ಬಂದಿದ್ದು, ವನ್ಯಜೀವಿ ಪ್ರಿಯರಲ್ಲಿ ಸಂತಸ ವ್ಯಕ್ತವಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಮಹದೇವಪುರದಲ್ಲಿ ಅಮಾನವೀಯ ಘಟನೆ: ಸ್ನಾನ ಮಾಡುತ್ತಿದ್ದ ಯುವತಿಯ ವಿಡಿಯೋ ಚಿತ್ರೀಕರಣ ಆರೋಪ?

ಬೆಂಗಳೂರು: ಸಿಲಿಕಾನ್ ಸಿಟಿಯ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಮಾನವೀಯ ಘಟನೆ ನಡೆದಿದೆ.

ಬಾಡಿಗೆ ಮನೆಯಲ್ಲಿ ಸ್ನಾನ ಮಾಡುತ್ತಿದ್ದ 23 ವರ್ಷದ ಯುವ ಸಾಫ್ಟ್‌ವೇರ್ ಇಂಜಿನಿಯರ್ ಮೇಲೆ ಗುಪ್ತವಾಗಿ ವಿಡಿಯೋ ಚಿತ್ರೀಕರಣ ಮಾಡಿದ ಆರೋಪ ಕೇಳಿಬಂದಿದೆ.

ಗರುಡಾಚಾರ್ ಪಾಳ್ಯದಲ್ಲಿ ವಾಸವಿದ್ದ ಯುವತಿ ಬುಧವಾರ ಬೆಳಿಗ್ಗೆ ಸುಮಾರು 9.30ರ ವೇಳೆಗೆ ಸ್ನಾನ ಮಾಡುತ್ತಿದ್ದಾಗ, ಪಕ್ಕದ ಕಟ್ಟಡದಿಂದ ಅಪರಿಚಿತ ವ್ಯಕ್ತಿಯೊಬ್ಬ ಮೊಬೈಲ್ ಫೋನ್ ಮೂಲಕ ವಿಡಿಯೋ ಮಾಡುತ್ತಿರುವುದನ್ನು ಗಮನಿಸಿದ್ದಾರೆ. ಇದರಿಂದ ಬೆಚ್ಚಿಬಿದ್ದ ಯುವತಿ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆಯಿಂದ ತೀವ್ರ ಆತಂಕಗೊಂಡಿರುವ ಯುವತಿ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಡಬಹುದು ಎಂಬ ಭೀತಿಯಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.

ದೂರು ದಾಖಲಿಸಿಕೊಂಡಿರುವ ಮಹದೇವಪುರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಆರೋಪಿಯ ಗುರುತು ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ. ಪ್ರಕರಣ ಸಂಬಂಧ ಸಿಸಿಟಿವಿ ದೃಶ್ಯಗಳು ಹಾಗೂ ಪಕ್ಕದ ಕಟ್ಟಡದ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಮರ್ಷಿಯಲ್ ಸಿಲಿಂಡರ್ ದರ ಏರಿಕೆ: ಪಿಜಿ ಮಾಲೀಕರಿಂದ ಬಾಡಿಗೆ ಹೆಚ್ಚಳ ಚಿಂತನೆ?

ಬೆಂಗಳೂರು: ಕಮರ್ಷಿಯಲ್ ಸಿಲಿಂಡರ್ ದರದಲ್ಲಿ ಏಕಾಏಕಿ ಭಾರಿ ಏರಿಕೆ ಆಗಿರುವ ಬೆನ್ನಲ್ಲೇ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಪಿಜಿ ಉದ್ಯಮಕ್ಕೂ ಅದರ ಬಿಸಿ ತಟ್ಟಿದೆ.

ಕೇಂದ್ರ ಸರ್ಕಾರ ಸಿಲಿಂಡರ್ ಬೆಲೆಯನ್ನು ಸುಮಾರು ₹993ರವರೆಗೆ ಹೆಚ್ಚಿಸಿರುವ ಪರಿಣಾಮ ಹೋಟೆಲ್ ಉದ್ಯಮದ ಜೊತೆಗೆ ಪೇಯಿಂಗ್ ಗೆಸ್ಟ್ (PG) ಮಾಲೀಕರು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದರಿಂದಾಗಿ ಬೆಂಗಳೂರಿನ ಹಲವೆಡೆ ಪಿಜಿ ಬಾಡಿಗೆ ದರವನ್ನು ಶೇಕಡ 5 ರಿಂದ 10 ರಷ್ಟು ಹೆಚ್ಚಿಸಲು ಪಿಜಿ ಅಸೋಸಿಯೇಷನ್ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಈಗಾಗಲೇ ಹೆಚ್ಚುತ್ತಿರುವ ಜೀವನ ವೆಚ್ಚದ ನಡುವೆ ಮತ್ತೊಂದು ಬಾಡಿಗೆ ಏರಿಕೆಯ ಭೀತಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಲ್ಲಿ ಆತಂಕ ಮೂಡಿಸಿದೆ.

ಪಿಜಿ ಅಸೋಸಿಯೇಷನ್ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಗ್ಯಾಸ್ ದರ ಏರಿಕೆಯಿಂದ ಪಿಜಿ ನಿರ್ವಹಣೆ ಕಷ್ಟಕರವಾಗಿದ್ದು, ಆಹಾರ ತಯಾರಿಕೆ ವೆಚ್ಚ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. ಕೆಲವು ಪಿಜಿಗಳಲ್ಲಿ ಈಗಾಗಲೇ ಸೌದೆ ಒಲೆ ಬಳಸಿ ಅಡುಗೆ ಮಾಡಲಾಗುತ್ತಿದೆ ಮತ್ತು ಮೆನು ಕೂಡ ಕಡಿತಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಪೂರೈಕೆ ವ್ಯವಸ್ಥೆಯಲ್ಲಿಯೂ ವ್ಯತ್ಯಯ ಉಂಟಾಗಿದ್ದು, ಇದರ ನೇರ ಪರಿಣಾಮವಾಗಿ ದರ ಏರಿಕೆ ಸಂಭವಿಸಿದೆ ಎಂದು ಉದ್ಯಮ ವಲಯ ಹೇಳುತ್ತಿದೆ.

ಈ ನಡುವೆ ಆಟೋ ಎಲ್‌ಪಿಜಿ ಗ್ಯಾಸ್ ದರವೂ ಲೀಟರ್‌ಗೆ ₹5.73 ಪೈಸೆ ಏರಿಕೆಯಾಗಿರುವುದರಿಂದ ಆಟೋ ಚಾಲಕರೂ ಮೀಟರ್ ದರ ಹೆಚ್ಚಳಕ್ಕೆ ಆಗ್ರಹಿಸುತ್ತಿದ್ದಾರೆ. ಹೀಗಾಗಿ ಹೋಟೆಲ್, ಆಟೋ ಹಾಗೂ ಪಿಜಿ ಕ್ಷೇತ್ರಗಳು ಒಂದೇ ಸಮಯದಲ್ಲಿ ಬೆಲೆ ಏರಿಕೆಯ ಒತ್ತಡಕ್ಕೆ ಒಳಗಾಗಿರುವುದು ಸ್ಪಷ್ಟವಾಗಿದೆ.

ಸತತ ಮೂರು ತಿಂಗಳಲ್ಲಿ ಸಿಲಿಂಡರ್ ದರದಲ್ಲಿ ಸುಮಾರು ₹1200ರಷ್ಟು ಏರಿಕೆ ಕಂಡಿರುವುದರಿಂದ ಮಧ್ಯಮ ವರ್ಗದ ಜನರ ಜೀವನ ವೆಚ್ಚ ಮತ್ತಷ್ಟು ಹೆಚ್ಚಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

error: Content is protected !!