Home Blog

High BP: ಹೈ ಬಿಪಿ ಇರುವವರು ದಿನಕ್ಕೆ ಎಷ್ಟು ಉಪ್ಪು ಸೇವಿಸಬೇಕು? ಈ ಆಹಾರಗಳಲ್ಲಿ ಅಡಗಿದೆ ಹೆಚ್ಚು ಸೋಡಿಯಂ

0

ಅಧಿಕ ರಕ್ತದೊತ್ತಡ ಅಥವಾ ಹೈ ಬಿಪಿ ಇರುವವರು ಆಹಾರದಲ್ಲಿ ಉಪ್ಪಿನ ಪ್ರಮಾಣದ ಬಗ್ಗೆ ವಿಶೇಷ ಗಮನಹರಿಸುವುದು ಅಗತ್ಯ.

ಅಡುಗೆಯಲ್ಲಿ ಬಳಸುವ ಉಪ್ಪಿನ ಜೊತೆಗೆ ಪ್ಯಾಕೇಜ್ಡ್ ಫುಡ್ಸ್, ಚಿಪ್ಸ್, ಉಪ್ಪಿನಕಾಯಿ, ಸಾಸ್ ಹಾಗೂ ಇನ್‌ಸ್ಟಂಟ್ ನೂಡಲ್ಸ್‌ನಂತಹ ಆಹಾರಗಳಲ್ಲೂ ಹೆಚ್ಚಿನ ಪ್ರಮಾಣದ ಸೋಡಿಯಂ ಇರಬಹುದು. ಹೆಚ್ಚು ಸೋಡಿಯಂ ಸೇವನೆಯು ಕೆಲವರಲ್ಲಿ ರಕ್ತದೊತ್ತಡ ನಿಯಂತ್ರಣಕ್ಕೆ ಅಡ್ಡಿಯಾಗಬಹುದು.

ಹೈ ಬಿಪಿ ಇರುವವರು ಎಷ್ಟು ಉಪ್ಪು ಸೇವಿಸಬೇಕು?

ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ, ಹೈ ಬಿಪಿ ಇರುವ ಬಹುತೇಕ ವಯಸ್ಕರು ದಿನಕ್ಕೆ 1,500 ಮಿಲಿಗ್ರಾಂನಷ್ಟು ಸೋಡಿಯಂ ಅಥವಾ ಅದಕ್ಕಿಂತ ಕಡಿಮೆ ಸೇವಿಸುವ ಗುರಿಯನ್ನು ಹೊಂದಬಹುದು. ಇದು ಸರಿಸುಮಾರು 3.8 ಗ್ರಾಂ ಉಪ್ಪಿಗೆ ಸಮಾನವಾಗಿದೆ.

ಆದರೆ ಸೋಡಿಯಂ ಅಗತ್ಯ ಪ್ರತಿಯೊಬ್ಬರಿಗೂ ಒಂದೇ ಆಗಿರುವುದಿಲ್ಲ. ವಯಸ್ಸು, ಕಿಡ್ನಿ ಮತ್ತು ಹೃದಯದ ಆರೋಗ್ಯ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ ವೈದ್ಯರು ಸೂಕ್ತ ಪ್ರಮಾಣವನ್ನು ಸೂಚಿಸಬಹುದು. ಹೀಗಾಗಿ ವೈಯಕ್ತಿಕ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಹೆಚ್ಚು ಉಪ್ಪು ಸೇವಿಸಿದರೆ ಏನಾಗಬಹುದು?

ಉಪ್ಪಿನಲ್ಲಿರುವ ಸೋಡಿಯಂ ದೇಹದಲ್ಲಿ ನೀರು ಉಳಿಯುವಂತೆ ಮಾಡಬಹುದು. ಇದರಿಂದ ರಕ್ತದ ಪ್ರಮಾಣ ಹೆಚ್ಚಾಗಿ ರಕ್ತದೊತ್ತಡದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ದೀರ್ಘಕಾಲ ಹೆಚ್ಚಿನ ಪ್ರಮಾಣದಲ್ಲಿ ಸೋಡಿಯಂ ಸೇವಿಸುವುದರಿಂದ ಹೈ ಬಿಪಿಯನ್ನು ನಿಯಂತ್ರಿಸುವುದು ಕಷ್ಟವಾಗಬಹುದು. ಹೃದಯ ಮತ್ತು ಕಿಡ್ನಿಗಳ ಮೇಲೂ ಹೆಚ್ಚುವರಿ ಒತ್ತಡ ಉಂಟಾಗುವ ಸಾಧ್ಯತೆಯಿದೆ.

ಈ ಆಹಾರಗಳಲ್ಲಿ ಹೆಚ್ಚು ಸೋಡಿಯಂ ಇರಬಹುದು:

ಮನೆಯಲ್ಲಿ ಅಡುಗೆ ಮಾಡುವಾಗ ಬಳಸುವ ಉಪ್ಪಿಗಿಂತಲೂ ಕೆಲವು ಸಂದರ್ಭಗಳಲ್ಲಿ ಪ್ಯಾಕೇಜ್ಡ್ ಮತ್ತು ಪ್ರೊಸೆಸ್ಡ್ ಆಹಾರಗಳ ಮೂಲಕ ಹೆಚ್ಚಿನ ಸೋಡಿಯಂ ದೇಹಕ್ಕೆ ಸೇರುತ್ತದೆ.

  • ಚಿಪ್ಸ್ ಮತ್ತು ನಮ್ಕೀನ್
  • ಇನ್‌ಸ್ಟಂಟ್ ನೂಡಲ್ಸ್
  • ಪ್ಯಾಕೇಜ್ಡ್ ಸೂಪ್
  • ಸಾಸ್ ಮತ್ತು ಕೆಚಪ್
  • ಉಪ್ಪಿನಕಾಯಿ
  • ಪ್ರೊಸೆಸ್ಡ್ ಮೀಟ್
  • ಪ್ಯಾಕೇಜ್ಡ್ ಸ್ನ್ಯಾಕ್ಸ್
  • ರೆಡಿ-ಟು-ಈಟ್ ಆಹಾರಗಳು
  • ಫಾಸ್ಟ್ ಫುಡ್

ಆದ್ದರಿಂದ ಪ್ಯಾಕೆಟ್ ಆಹಾರ ಖರೀದಿಸುವಾಗ ಅದರ ಲೇಬಲ್‌ನಲ್ಲಿರುವ Sodium ಪ್ರಮಾಣವನ್ನು ಪರಿಶೀಲಿಸುವ ಅಭ್ಯಾಸ ಬೆಳೆಸಿಕೊಳ್ಳುವುದು ಉತ್ತಮ.

ಉಪ್ಪಿನ ಪ್ರಮಾಣ ಕಡಿಮೆ ಮಾಡುವುದು ಹೇಗೆ?

ಆಹಾರದಲ್ಲಿ ಉಪ್ಪನ್ನು ಒಂದೇ ಬಾರಿಗೆ ಸಂಪೂರ್ಣವಾಗಿ ಕಡಿಮೆ ಮಾಡುವ ಬದಲು ಕ್ರಮೇಣ ಪ್ರಮಾಣವನ್ನು ಇಳಿಸಬಹುದು. ರುಚಿಗಾಗಿ ನಿಂಬೆ, ಕೊತ್ತಂಬರಿ, ಕರಿಬೇವು ಹಾಗೂ ಸೂಕ್ತ ಪ್ರಮಾಣದ ಮಸಾಲೆಗಳನ್ನು ಬಳಸಬಹುದು.

ತಾಜಾ ಹಣ್ಣುಗಳು, ತರಕಾರಿಗಳು, ಬೇಳೆಕಾಳುಗಳು ಹಾಗೂ ಕಡಿಮೆ ಸಂಸ್ಕರಿಸಿದ ಆಹಾರಗಳಿಗೆ ಆದ್ಯತೆ ನೀಡುವುದು ಸಹಾಯಕವಾಗಬಹುದು. ಹೊರಗಡೆ ಸಿಗುವ ಹೆಚ್ಚು ಉಪ್ಪಿನ ಆಹಾರ ಮತ್ತು ಪ್ಯಾಕೇಜ್ಡ್ ಸ್ನ್ಯಾಕ್ಸ್ ಸೇವನೆಯನ್ನು ಕಡಿಮೆ ಮಾಡುವುದು ಕೂಡ ಮುಖ್ಯ.

ಆಹಾರ ರುಚಿಯಿಲ್ಲ ಎಂಬ ಕಾರಣಕ್ಕೆ ಹೆಚ್ಚುವರಿ ಉಪ್ಪು ಸೇರಿಸುವ ಅಭ್ಯಾಸವಿದ್ದರೆ ಅದನ್ನು ಮೊದಲು ನಿಲ್ಲಿಸುವುದು ಉತ್ತಮ. ನಾಲಿಗೆ ಕಡಿಮೆ ಉಪ್ಪಿನ ರುಚಿಗೆ ಕ್ರಮೇಣ ಹೊಂದಿಕೊಳ್ಳುತ್ತದೆ.

ಉಪ್ಪು ಕಡಿಮೆ ಮಾಡಿದರೆ ಮಾತ್ರ ಸಾಕೇ?

ಹೈ ಬಿಪಿಯನ್ನು ನಿಯಂತ್ರಿಸಲು ಉಪ್ಪು ಕಡಿಮೆ ಮಾಡುವುದರ ಜೊತೆಗೆ ನಿಯಮಿತ ದೈಹಿಕ ಚಟುವಟಿಕೆ, ಆರೋಗ್ಯಕರ ತೂಕ, ಸಮತೋಲಿತ ಆಹಾರ ಹಾಗೂ ಧೂಮಪಾನದಿಂದ ದೂರವಿರುವುದು ಮುಖ್ಯ. ವೈದ್ಯರು ಸೂಚಿಸಿರುವ ಬಿಪಿ ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು.

ರಕ್ತದೊತ್ತಡ ನಿರಂತರವಾಗಿ ಹೆಚ್ಚಾಗಿದ್ದರೆ ಅಥವಾ ಔಷಧಿ ತೆಗೆದುಕೊಂಡರೂ ನಿಯಂತ್ರಣಕ್ಕೆ ಬರುತ್ತಿಲ್ಲದಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರ ಸಲಹೆಯಿಲ್ಲದೆ ಬಿಪಿ ಔಷಧಿಯನ್ನು ನಿಲ್ಲಿಸುವುದು ಅಥವಾ ಬದಲಿಸುವುದು ಮಾಡಬಾರದು.

ಸೂಚನೆ: ಮೇಲಿನ ಮಾಹಿತಿಯು ಸಾಮಾನ್ಯ ಆರೋಗ್ಯ ಮಾಹಿತಿಗಾಗಿ ಮಾತ್ರ. ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾದ ಉಪ್ಪು ಮತ್ತು ಸೋಡಿಯಂ ಪ್ರಮಾಣಕ್ಕಾಗಿ ವೈದ್ಯರ ಸಲಹೆ ಪಡೆಯಿರಿ.

ಹಾವೇರಿಯಲ್ಲಿ ಅಪ್ರಾಪ್ತ ಬಾಲಕಿಯರ ಗರ್ಭಧಾರಣೆ ಪ್ರಕರಣ ಹೆಚ್ಚಳ; ಆತಂಕ ಮೂಡಿಸಿದ ಅಂಕಿಅಂಶ

ಹಾವೇರಿ: ಜಿಲ್ಲೆಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಗರ್ಭಧಾರಣೆ ಪ್ರಕರಣಗಳು ಆತಂಕ ಮೂಡಿಸಿವೆ.

2025-26ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 42 ಅಪ್ರಾಪ್ತ ಬಾಲಕಿಯರ ಗರ್ಭಧಾರಣೆ ಪ್ರಕರಣಗಳು ದಾಖಲಾಗಿದ್ದರೆ, 2026-27ನೇ ಸಾಲಿನ ಮೊದಲ ಮೂರು ತಿಂಗಳಲ್ಲಿ, ಅಂದರೆ ಜೂನ್ ಅಂತ್ಯದವರೆಗೆ 11 ಪ್ರಕರಣಗಳು ವರದಿಯಾಗಿವೆ.

ರಿಪ್ರೊಡಕ್ಟಿವ್ ಆ್ಯಂಡ್ ಚೈಲ್ಡ್ ಹೆಲ್ತ್ (RCH) ಪೋರ್ಟಲ್‌ನ ಅಂಕಿಅಂಶಗಳ ಪ್ರಕಾರ, 2025-26ನೇ ಸಾಲಿನಲ್ಲಿ ರಾಣೇಬೆನ್ನೂರು ತಾಲೂಕಿನಲ್ಲಿ ಅತಿ ಹೆಚ್ಚು 10 ಪ್ರಕರಣಗಳು ದಾಖಲಾಗಿವೆ. ಹಾವೇರಿ ಮತ್ತು ಹಾನಗಲ್ ತಾಲೂಕುಗಳಲ್ಲಿ ತಲಾ 8 ಪ್ರಕರಣಗಳು ವರದಿಯಾಗಿದ್ದರೆ, ಹಿರೇಕೆರೂರು ತಾಲೂಕಿನಲ್ಲಿ 6, ಬ್ಯಾಡಗಿ ಮತ್ತು ಸವಣೂರು ತಾಲೂಕುಗಳಲ್ಲಿ ತಲಾ 5 ಪ್ರಕರಣಗಳು ದಾಖಲಾಗಿವೆ.

ಪ್ರಸಕ್ತ 2026-27ನೇ ಸಾಲಿನಲ್ಲಿ ಜೂನ್ ಅಂತ್ಯದವರೆಗೆ ದಾಖಲಾಗಿರುವ 11 ಪ್ರಕರಣಗಳ ಪೈಕಿ ಹಾವೇರಿ ತಾಲೂಕೊಂದರಲ್ಲೇ 9 ಪ್ರಕರಣಗಳು ವರದಿಯಾಗಿರುವುದು ಗಮನಾರ್ಹವಾಗಿದೆ. ರಾಣೇಬೆನ್ನೂರು ಮತ್ತು ಸವಣೂರು ತಾಲೂಕುಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಾಲಾ ಬಾಲಕಿಯರು ಹಾಗೂ ಹಾಸ್ಟೆಲ್‌ಗಳಲ್ಲಿ ವಾಸಿಸುವ ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಹಾವೇರಿಯ ಅಂಕಿಅಂಶಗಳು ಕಳವಳಕ್ಕೆ ಕಾರಣವಾಗಿವೆ.

ಹಲವು ಕಾರಣಗಳಿಂದ ಸಮಸ್ಯೆ:

ಅಪ್ರಾಪ್ತ ಬಾಲಕಿಯರ ಗರ್ಭಧಾರಣೆಗೆ ಹದಿಹರೆಯದವರಲ್ಲಿ ಲೈಂಗಿಕ ಶಿಕ್ಷಣದ ಕೊರತೆ, ಬಾಲ್ಯವಿವಾಹ, ಬಡತನ, ಲೈಂಗಿಕ ದೌರ್ಜನ್ಯ ಹಾಗೂ ಶಾಲೆ ತೊರೆಯುವಿಕೆ ಸೇರಿದಂತೆ ಹಲವು ಕಾರಣಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹದಿಹರೆಯದವರ ಆರೋಗ್ಯ, ಸುರಕ್ಷತೆ ಹಾಗೂ ಹಕ್ಕುಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಪ್ರಾಪ್ತ ಬಾಲಕಿಯರ ಗರ್ಭಧಾರಣೆ ಕೇವಲ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಯಲ್ಲ. ಇದರ ಹಿಂದೆ ಬಾಲ್ಯವಿವಾಹ, ಲೈಂಗಿಕ ಶೋಷಣೆ, ಶಿಕ್ಷಣದಿಂದ ವಂಚಿತವಾಗುವಿಕೆ ಹಾಗೂ ಸಾಮಾಜಿಕ ಅಸಮಾನತೆಯಂತಹ ಗಂಭೀರ ಸಮಸ್ಯೆಗಳೂ ಇರಬಹುದಾಗಿದೆ. ಹೀಗಾಗಿ ಪ್ರತಿಯೊಂದು ಪ್ರಕರಣವನ್ನೂ ಸೂಕ್ಷ್ಮವಾಗಿ ಪರಿಶೀಲಿಸಿ, ಅಗತ್ಯವಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಿದೆ.

ಅಪ್ರಾಪ್ತರೊಂದಿಗೆ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಪೋಕ್ಸೋ ಕಾಯ್ದೆಯಡಿ ಕ್ರಮ ಕೈಗೊಳ್ಳುವ ಅವಕಾಶವಿರುವುದರಿಂದ, ಇಂತಹ ಪ್ರಕರಣಗಳ ಕುರಿತು ಸಂಬಂಧಪಟ್ಟ ಇಲಾಖೆಗಳು ಎಚ್ಚರಿಕೆಯಿಂದ ತನಿಖೆ ನಡೆಸಬೇಕಾಗಿದೆ.

ಹಲವು ಇಲಾಖೆಗಳ ಜಂಟಿ ಕಾರ್ಯಾಚರಣೆ ಅಗತ್ಯ:

ಬಾಲ್ಯವಿವಾಹ ತಡೆಗಟ್ಟುವುದು ಹಾಗೂ ಹದಿಹರೆಯದವರ ಆರೋಗ್ಯ ಮತ್ತು ಸುರಕ್ಷತೆ ಕಾಪಾಡುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ ಹಾಗೂ ಪೊಲೀಸ್ ಇಲಾಖೆಗಳು ಜಂಟಿಯಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿವೆ.

ಆದರೆ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸರ್ಕಾರಿ ಇಲಾಖೆಗಳ ಜತೆಗೆ ಕುಟುಂಬಗಳು, ಶಾಲೆಗಳು ಹಾಗೂ ಸಮುದಾಯಗಳು ಕೂಡ ನಿರಂತರವಾಗಿ ಕೈಜೋಡಿಸಬೇಕಿದೆ. ಬಾಲಕಿಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದು, ಶಿಕ್ಷಣ ಮುಂದುವರಿಸಲು ಪ್ರೋತ್ಸಾಹಿಸುವುದು ಹಾಗೂ ಅಗತ್ಯ ಆರೋಗ್ಯ ಮತ್ತು ಕಾನೂನು ಅರಿವು ಮೂಡಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

LPG Gas Cylinder: ಗ್ಯಾಸ್ ಸಿಲಿಂಡರ್ ಗ್ರಾಹಕರೇ ಗಮನಿಸಿ, ತಪ್ಪದೇ ಈ ಕೆಲಸ ಮಾಡಿ, ಇಲ್ಲದಿದ್ದರೆ ಸಮಸ್ಯೆ!

ಬೆಂಗಳೂರು: ಗೃಹ ಬಳಕೆಯ LPG ಸಂಪರ್ಕ ಹೊಂದಿರುವ ಗ್ರಾಹಕರು e-KYC ಪೂರ್ಣಗೊಳಿಸುವಂತೆ ಗ್ಯಾಸ್ ವಿತರಕರು ಸೂಚಿಸಿದ್ದಾರೆ.

ಗ್ರಾಹಕರ ಮಾಹಿತಿ ಪರಿಶೀಲನೆ, ದಾಖಲೆಗಳ ಅಪ್‌ಡೇಟ್ ಹಾಗೂ ನಿಜವಾದ ಫಲಾನುಭವಿಗಳನ್ನು ಗುರುತಿಸುವ ಉದ್ದೇಶದಿಂದ e-KYC ಪ್ರಕ್ರಿಯೆ ನಡೆಸಲಾಗುತ್ತಿದೆ.

ಗ್ಯಾಸ್ ಸಂಪರ್ಕ ನಿಮ್ಮ ಹೆಸರಿನಲ್ಲಿದ್ದರೆ, e-KYC ಪೂರ್ಣಗೊಂಡಿದೆಯೇ ಅಥವಾ ಇಲ್ಲವೇ ಎಂಬುದನ್ನು ಗ್ರಾಹಕರು ಪರಿಶೀಲಿಸಿಕೊಳ್ಳಬೇಕು. e-KYC ಅಗತ್ಯವಿದ್ದಲ್ಲಿ ಸಾಧ್ಯವಾದಷ್ಟು ಬೇಗ ಪ್ರಕ್ರಿಯೆ ಪೂರ್ಣಗೊಳಿಸುವಂತೆ ವಿತರಕರು ಮನವಿ ಮಾಡಿದ್ದಾರೆ.

ಕೆಲವು ಗ್ಯಾಸ್ ವಿತರಕರ ಪ್ರಕಾರ, ದೀರ್ಘಕಾಲ KYC ಪೂರ್ಣಗೊಳಿಸದ ಸಂಪರ್ಕಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ಅಥವಾ ನಿಷ್ಕ್ರಿಯಗೊಳಿಸುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ಗೃಹ ಬಳಕೆಯ LPG ಸಿಲಿಂಡರ್ ಪಡೆಯುವಲ್ಲಿ ತೊಂದರೆ ಎದುರಾಗಬಹುದು ಎಂದು ಅವರು ತಿಳಿಸಿದ್ದಾರೆ.

ಮನೆಯಲ್ಲೇ e-KYC ಮಾಡುವುದು ಹೇಗೆ?

ಗ್ರಾಹಕರು ತಮ್ಮ LPG ಕಂಪನಿಯ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕವೂ e-KYC ಪೂರ್ಣಗೊಳಿಸಬಹುದು. ಇಂಡೇನ್, ಭಾರತ್ ಗ್ಯಾಸ್ ಅಥವಾ HP ಗ್ಯಾಸ್‌ನ ಅಧಿಕೃತ ಆ್ಯಪ್‌ನ್ನು ಮೊಬೈಲ್‌ನಲ್ಲಿ ತೆರೆಯಬೇಕು.

ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಲಾಗಿನ್ ಮಾಡಿದ ಬಳಿಕ ‘e-KYC’ ಅಥವಾ ‘Aadhaar Verification’ ಆಯ್ಕೆಯನ್ನು ಆರಿಸಬೇಕು. ನಂತರ ಕೇಳಲಾಗುವ ವಿವರಗಳನ್ನು ನಮೂದಿಸಿ, ಮೊಬೈಲ್ ಕ್ಯಾಮೆರಾ ಮೂಲಕ ಮುಖ ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಬಳಿಕ ಅರ್ಜಿಯನ್ನು ಸಲ್ಲಿಸಿದರೆ e-KYC ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಆದರೆ, e-KYCಗೆ ಸಂಬಂಧಿಸಿದ ಗಡುವು ಹಾಗೂ ನಿಯಮಗಳ ಕುರಿತು ಗ್ರಾಹಕರು ಅಧಿಕೃತ ಮೂಲಗಳಿಂದಲೇ ಮಾಹಿತಿ ಪರಿಶೀಲಿಸಿಕೊಳ್ಳುವುದು ಸೂಕ್ತ. ಯಾವುದೇ ಅನಧಿಕೃತ ಲಿಂಕ್ ಅಥವಾ ಅಪ್ಲಿಕೇಶನ್ ಮೂಲಕ ವೈಯಕ್ತಿಕ ಹಾಗೂ ಆಧಾರ್ ಮಾಹಿತಿಯನ್ನು ಹಂಚಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು.

ಗ್ಯಾಸ್ ಸಂಪರ್ಕದ KYC ಸ್ಥಿತಿಯನ್ನು ಮುಂಚಿತವಾಗಿ ಪರಿಶೀಲಿಸಿಕೊಂಡು, ಅಗತ್ಯವಿದ್ದರೆ e-KYC ಪೂರ್ಣಗೊಳಿಸುವ ಮೂಲಕ ಮುಂದಿನ ದಿನಗಳಲ್ಲಿ ಸಿಲಿಂಡರ್ ಪಡೆಯುವಾಗ ಎದುರಾಗಬಹುದಾದ ತೊಂದರೆಗಳನ್ನು ತಪ್ಪಿಸಿಕೊಳ್ಳಬಹುದು.

ಹಾಸ್ಟೆಲ್ ಶೌಚಾಲಯದಲ್ಲಿ ಕುಸಿದು 8ನೇ ತರಗತಿ ವಿದ್ಯಾರ್ಥಿನಿ ಸಾವು: ಹೃದಯಾಘಾತ ಶಂಕೆ?

ತುಮಕೂರು: ತಾಲೂಕಿನ ರಂಗಸಮುದ್ರ ಗ್ರಾಮದ ಬಳಿಯ ಕಸ್ತೂರಿಬಾ ಗಾಂಧಿ ಬಾಲಕಿಯರ ಹಾಸ್ಟೆಲ್‌ನಲ್ಲಿ 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ದಿಢೀರ್ ಅಸ್ವಸ್ಥಗೊಂಡು ಮೃತಪಟ್ಟಿರುವ ಘಟನೆ ನಡೆದಿದೆ.

ಕಾರಗಾನಹಟ್ಟಿ ಗ್ರಾಮದ ನರಸಿಂಹಮೂರ್ತಿ ಮತ್ತು ಶಾರದಮ್ಮ ದಂಪತಿಯ 14 ವರ್ಷದ ಪುತ್ರಿ ಪ್ರಿಯಾಂಕಾ ಮೃತಪಟ್ಟ ವಿದ್ಯಾರ್ಥಿನಿ. ಈಕೆ ರಂಗಸಮುದ್ರದ ತ್ರಿಯಂಬಕೇಶ್ವರ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು.

ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಿಯಾಂಕಾ ಚಿಕಿತ್ಸೆಗಾಗಿ ಸ್ವಗ್ರಾಮಕ್ಕೆ ತೆರಳಿದ್ದಳು. ಆರೋಗ್ಯ ಸುಧಾರಿಸಿದ ಬಳಿಕ ಆಗಸ್ಟ್ 7ರಂದು ಮತ್ತೆ ಹಾಸ್ಟೆಲ್‌ಗೆ ಮರಳಿದ್ದಳು ಎನ್ನಲಾಗಿದೆ.

ಶನಿವಾರ ಮುಂಜಾನೆ ಹಾಸ್ಟೆಲ್‌ನ ಶೌಚಾಲಯಕ್ಕೆ ತೆರಳಿದ್ದ ವೇಳೆ ಪ್ರಿಯಾಂಕಾ ದಿಢೀರ್ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾಳೆ. ತಕ್ಷಣ ಹಾಸ್ಟೆಲ್ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಆಕೆ ಮೃತಪಟ್ಟಿದ್ದಾಳೆ.

ಬಾಲಕಿಗೆ ಹೃದಯಾಘಾತವಾಗಿರಬಹುದು ಎಂದು ಶಂಕಿಸಲಾಗಿದ್ದು, ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ವರದಿ ಬಳಿಕ ತಿಳಿದುಬರಬೇಕಿದೆ.

ಘಟನೆಯ ಬಳಿಕ ಹಾಸ್ಟೆಲ್‌ನಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ ಎಂದು ಪೋಷಕರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿದು ಪಾವಗಡ ತಹಶೀಲ್ದಾರ್ ವೈ. ರವಿ ಹಾಗೂ ಪಾವಗಡ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಬಾಲಕಿಯ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ. ಘಟನೆ ಸಂಬಂಧ ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಎರಡನೇ ದಿನವೂ ಬರ ಪರಿಸ್ಥಿತಿ ಅವಲೋಕನ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಗದಗ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಂಪುಟ ದರ್ಜೆ ಸಚಿವ ಬಸವರಾಜ ರಾಯರಡ್ಡಿ ಅವರು ಸತತ ಎರಡನೇ ದಿನವೂ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳಲ್ಲಿ ಪ್ರವಾಸ ಕೈಗೊಂಡು ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯನ್ನು ಪರಿಶೀಲಿಸಿದರು.

ಶನಿವಾರ ಶಿರಹಟ್ಟಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಎರಡೂ ತಾಲೂಕುಗಳ ಬರ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಮಳೆಯ ಪ್ರಮಾಣ, ಬಿತ್ತನೆ ಪ್ರದೇಶ, ಬೆಳೆಗಳ ಸ್ಥಿತಿ, ಬೆಳೆ ಹಾನಿ ಹಾಗೂ ರೈತರ ಸಮಸ್ಯೆಗಳ ಕುರಿತು ಸಮಗ್ರ ಮಾಹಿತಿ ಪಡೆದರು.

ಮಳೆ ಕೊರತೆಯಿಂದ ಉಂಟಾಗಿರುವ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ರೈತರಿಗೆ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬೆಳೆ ಹಾನಿಯ ವಾಸ್ತವಿಕ ಮಾಹಿತಿ ಸಂಗ್ರಹಿಸಿ ಸಮಗ್ರ ವರದಿ ಸಲ್ಲಿಸುವಂತೆಯೂ ನಿರ್ದೇಶನ ನೀಡಿದರು.

ಸಭೆಯ ಬಳಿಕ ಸಚಿವ ರಾಯರಡ್ಡಿ ಅವರು ಛಬ್ಬಿ ಗ್ರಾಮಕ್ಕೆ ತೆರಳಿ ಮೆಕ್ಕೆಜೋಳದ ಜಮೀನಿನಲ್ಲಿ ಬೆಳೆ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿದರು. ಮಳೆಯ ಕೊರತೆಯಿಂದ ಬೆಳೆಗಳ ಬೆಳವಣಿಗೆಗೆ ಉಂಟಾಗಿರುವ ಪರಿಣಾಮವನ್ನು ವೀಕ್ಷಿಸಿ, ರೈತರೊಂದಿಗೆ ನೇರವಾಗಿ ಸಂವಾದ ನಡೆಸಿದರು.

ಈ ವೇಳೆ ರೈತರು ಮಳೆ ಕೊರತೆ, ಬೆಳೆ ಹಾನಿ ಹಾಗೂ ಕೃಷಿ ಚಟುವಟಿಕೆಗಳಲ್ಲಿನ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು. ರೈತರ ಸಮಸ್ಯೆಗಳನ್ನು ಸ್ಥಳೀಯವಾಗಿ ಪರಿಶೀಲಿಸಿ ವಾಸ್ತವಿಕ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ರಾಯರಡ್ಡಿ, ಬರ ಪರಿಸ್ಥಿತಿಯಿಂದ ರೈತರಿಗೆ ತೊಂದರೆಯಾಗದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ಶಿರಹಟ್ಟಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವೀರಯ್ಯ ಮಠಪತಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಸಹಾಯಕ ಆಯುಕ್ತ ಗಂಗಪ್ಪ ಎಂ., ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ತೋಟಗಾರಿಕೆ ಜಂಟಿ ನಿರ್ದೇಶಕ ಚಿದಾನಂದ, ಶಿರಹಟ್ಟಿ ತಹಶೀಲ್ದಾರ್ ರಾಘವೇಂದ್ರ, ಲಕ್ಷ್ಮೇಶ್ವರ ತಹಶೀಲ್ದಾರ್ ಧನಂಜಯ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.

“ರೈತರ ಸಮಸ್ಯೆಗಳನ್ನು ಅಧಿಕಾರಿಗಳು ಸ್ಥಳೀಯವಾಗಿ ಪರಿಶೀಲಿಸಿ ವಾಸ್ತವಿಕ ವರದಿ ಸಲ್ಲಿಸಬೇಕು. ಬರ ಪರಿಸ್ಥಿತಿಯಿಂದ ರೈತರಿಗೆ ತೊಂದರೆಯಾಗದಂತೆ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು.”
ಬಸವರಾಜ ರಾಯರಡ್ಡಿ, ಸಂಪುಟ ದರ್ಜೆ ಸಚಿವ

ಗುಡ್ಡಗಾಡಿನಲ್ಲಿ ಗರ್ಜಿಸಿದ ಸೈಕ್ಲಿಸ್ಟ್‌ಗಳು

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪಟ್ಟಣದ ಯಲಿಶಿರುಂಜ ಗುಡ್ಡಗಾಡು ಪ್ರದೇಶದಲ್ಲಿ ನಡೆದ ೨೧ನೇ ರಾಜ್ಯ ಮಟ್ಟದ ಸೈಕ್ಲಿಂಗ್‌ ಸ್ಪರ್ಧೆ ಅತ್ಯಂತ ರೋಚಕವಾಗಿ ನಡೆಯಿತು. ಕರ್ನಾಟಕ ರಾಜ್ಯ ಹಾಗೂ ಗದಗ ಜಿಲ್ಲಾ ಅಮೇಚೂರ್ ಸೈಕ್ಲಿಂಗ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ರಾಜ್ಯದ ೧೬ ಜಿಲ್ಲೆಗಳಿಂದ ೧೮೦ ಸೈಕ್ಲಿಸ್ಟ್‌ಗಳು ಪಾಲ್ಗೊಂಡು ತಮ್ಮ ಕ್ರೀಡಾ ಸಾಮರ್ಥ್ಯ ಪ್ರದರ್ಶಿಸಿದರು.

ಸ್ಪರ್ಧೆ ಆರಂಭವಾಗುತ್ತಿದ್ದಂತೆ ಸೈಕ್ಲಿಸ್ಟ್‌ಗಳು ಬಿರುಗಾಳಿಯ ವೇಗದಲ್ಲಿ ಟ್ರ್ಯಾಕ್‌ನಲ್ಲಿ ಮುನ್ನುಗ್ಗಿದರು. ಗುಡ್ಡಗಾಡಿನ ಕಠಿಣ ಹಾದಿ, ತಿರುವುಗಳು ಹಾಗೂ ಏರಿಳಿತಗಳ ನಡುವೆ ಗೆಲುವಿಗಾಗಿ ಕ್ರೀಡಾಪಟುಗಳು ನಡೆಸಿದ ಪೈಪೋಟಿ ಪ್ರತಿ ಕ್ಷಣವೂ ಕುತೂಹಲ ಮೂಡಿಸಿತು.

ಯಾರು ಮುನ್ನಡೆ ಸಾಧಿಸಲಿದ್ದಾರೆ, ಕೊನೆಯ ಕ್ಷಣದಲ್ಲಿ ಗೆಲುವಿನ ಗುರಿ ಮುಟ್ಟುವವರು ಯಾರು ಎಂಬ ಕುತೂಹಲದ ನಡುವೆ ಸೈಕ್ಲಿಸ್ಟ್‌ಗಳು ಪ್ರದರ್ಶಿಸಿದ ಕೌಶಲ್ಯ ನೆರೆದಿದ್ದ ಸಹಸ್ರಾರು ಕ್ರೀಡಾಭಿಮಾನಿಗಳನ್ನು ರೋಮಾಂಚನಗೊಳಿಸಿತು.

ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ಗದಗ ಜಿಲ್ಲೆಯ ವಿವಿಧ ತಾಲೂಕುಗಳು ಹಾಗೂ ಮುಳಗುಂದ ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಆಗಮಿಸಿದ್ದರು.

ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳು ಹಾಗೂ ಯುವಕರು ಸೈಕ್ಲಿಂಗ್ ಸ್ಪರ್ಧೆಯನ್ನು ಕಣ್ತುಂಬಿಕೊಂಡು, ತಾವೂ ಮುಂದಿನ ದಿನಗಳಲ್ಲಿ ಈ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂಬ ಉತ್ಸಾಹ ಪಡೆದುಕೊಂಡರು. ಗುಡ್ಡಗಾಡಿನ ಪ್ರದೇಶದಲ್ಲಿ ನಡೆದ ಸ್ಪರ್ಧೆ ಕ್ರೀಡಾಪಟುಗಳ ಸಾಮರ್ಥ್ಯಕ್ಕೆ ಸವಾಲಾಗುವುದರ ಜೊತೆಗೆ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿತು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ‘ಅಭಿಪ್ರಾಯ’ ಸಂಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ನೇಮಕಾತಿಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ವತಿಯಿಂದ ಬ್ಲಾಕ್‌ ಮಟ್ಟದಲ್ಲಿ ಅಭಿಪ್ರಾಯ ಸಂಗ್ರಹಿಸುವ ಪ್ರಕ್ರಿಯೆ ಆರಂಭವಾಗಿದ್ದು, ಗದಗ ಜಿಲ್ಲೆಯ ವಿವಿಧ ಬ್ಲಾಕ್‌ಗಳಲ್ಲಿ ಆ.9ರಿಂದ 11ರವರೆಗೆ ಅಭಿಪ್ರಾಯ ಸಂಗ್ರಹಣಾ ಸಭೆಗಳು ನಡೆಯಲಿವೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್. ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗಾಗಿ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಂದ ನೇರವಾಗಿ ಅಭಿಪ್ರಾಯ ಪಡೆಯಲಾಗುವುದು. ಇದಕ್ಕಾಗಿ ಎಐಸಿಸಿ ಕಾರ್ಯದರ್ಶಿ ವಿವೇಕ ಬನ್ಸಾಲ ಅವರನ್ನು ವೀಕ್ಷಕರಾಗಿ ನೇಮಕ ಮಾಡಲಾಗಿದೆ. ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸತೀಶ ಮೆಹರವಾಡೆ ಹಾಗೂ ರಾಬರ್ಟ್ ದದ್ದಾಪೂರಿ ಸಹವೀಕ್ಷಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಆ.9ರಂದು ಮೂರು ಬ್ಲಾಕ್‌ಗಳಲ್ಲಿ ಸಭೆ

ಆ.9ರಂದು ಬೆಳಿಗ್ಗೆ 10ಕ್ಕೆ ಶಿರಹಟ್ಟಿ ಬ್ಲಾಕ್, ಮಧ್ಯಾಹ್ನ 1ಕ್ಕೆ ಲಕ್ಷ್ಮೇಶ್ವರ ಬ್ಲಾಕ್ ಹಾಗೂ ಸಂಜೆ 4ಕ್ಕೆ ಮುಂಡರಗಿ ಬ್ಲಾಕ್ ಕಾಂಗ್ರೆಸ್ ಕಚೇರಿಗಳಲ್ಲಿ ಅಭಿಪ್ರಾಯ ಸಂಗ್ರಹಣಾ ಸಭೆಗಳು ನಡೆಯಲಿವೆ.

ಆ.10ರಂದು ನಾಲ್ಕು ಬ್ಲಾಕ್‌ಗಳಲ್ಲಿ

ಆ.10ರಂದು ಬೆಳಿಗ್ಗೆ 10ಕ್ಕೆ ರೋಣ ಮತ್ತು ನರೇಗಲ್ ಬ್ಲಾಕ್‌, ಮಧ್ಯಾಹ್ನ 2ಕ್ಕೆ ಹೊಳೆಆಲೂರು ಬ್ಲಾಕ್ ಹಾಗೂ ಸಂಜೆ 4ಕ್ಕೆ ನರಗುಂದ ಬ್ಲಾಕ್‌ನಲ್ಲಿ ಸಭೆ ನಡೆಯಲಿದೆ.

ಆ.11ರಂದು ಗದಗ, ಮುಳಗುಂದ

ಆ.11ರಂದು ಬೆಳಿಗ್ಗೆ 11ಕ್ಕೆ ಗದಗ ಮತ್ತು ಮುಳಗುಂದ ಬ್ಲಾಕ್‌ ಹಂತದಲ್ಲಿ ಅಭಿಪ್ರಾಯ ಸಂಗ್ರಹಣಾ ಸಭೆ ನಡೆಯಲಿದೆ. ವೀಕ್ಷಕರು ಹಾಗೂ ಸಹವೀಕ್ಷಕರು ಪ್ರತಿಯೊಂದು ಬ್ಲಾಕ್‌ಗೆ ಭೇಟಿ ನೀಡಿ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಅಭಿಪ್ರಾಯಗಳನ್ನು ದಾಖಲಿಸಿಕೊಳ್ಳಲಿದ್ದಾರೆ.

ಜಿಲ್ಲೆಯ ಎಲ್ಲ ಕಾಂಗ್ರೆಸ್ ಮುಖಂಡರು, ಬ್ಲಾಕ್‌ ಕಾಂಗ್ರೆಸ್ ಸಮಿತಿ ವ್ಯಾಪ್ತಿಯ ಪದಾಧಿಕಾರಿಗಳು, ಮುಂಚೂಣಿ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಭೆಗಳಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ನೀಡಬೇಕು ಎಂದು ಜಿ.ಎಸ್. ಪಾಟೀಲ ಮನವಿ ಮಾಡಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆಸಕ್ತಿ ಹೊಂದಿರುವವರು ತಮ್ಮ ಅರ್ಜಿಗಳನ್ನು ಇದೇ ಸಂದರ್ಭದಲ್ಲಿ ಸಲ್ಲಿಸಬಹುದಾಗಿದೆ. ಪಕ್ಷದ ಸಂಘಟನೆಯ ಹಿತದೃಷ್ಟಿಯಿಂದ ಎಲ್ಲರೂ ಸಭೆಗಳಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ತಿಳಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗದಗದಲ್ಲಿ ಅಧಿಕಾರಿಗಳ ‘ಠಿಕಾಣಿ’ಗೆ ಬ್ರೇಕ್ ಹಾಕಿ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಕಳೆದ 10 ವರ್ಷಗಳಿಂದ ಒಂದೇ ಕಡೆ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು ಸೇರಿದಂತೆ ಹಲವು ಸಾರ್ವಜನಿಕ ಹಿತದ ಬೇಡಿಕೆಗಳನ್ನು ಈಡೇರಿಸುವಂತೆ ಗದಗ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ಅವರು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರಿಗೆ ಮನವಿ ಸಲ್ಲಿಸಿದರು.

ಗದಗ ನಗರಕ್ಕೆ ಭೇಟಿ ನೀಡಿದ್ದ ಉಪಲೋಕಾಯುಕ್ತರನ್ನು ಭೇಟಿಯಾದ ಅವರು, ಜಿಲ್ಲೆಯಿಂದ ವರ್ಗಾವಣೆಯಾಗಿರುವ ಅಧಿಕಾರಿಗಳು ಮತ್ತೆ ಇದೇ ಜಿಲ್ಲೆಗೆ ಅಥವಾ ಇಲಾಖೆಗೆ ಮರಳಿ ಬಂದು ಕಾರ್ಯನಿರ್ವಹಿಸುತ್ತಿರುವುದರಿಂದ ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಗಮನ ಸೆಳೆದರು.

ದೀರ್ಘಕಾಲದಿಂದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ವರ್ಗಾವಣೆ ಮಾಡುವುದರ ಜತೆಗೆ, ವರ್ಗಾವಣೆಯಾದವರು ಪುನಃ ಇದೇ ಜಿಲ್ಲೆಗೆ ಬಾರದಂತೆ ಸೂಕ್ತ ಕಾನೂನು ರೂಪಿಸಲು ಸರ್ಕಾರಕ್ಕೆ ಸಲಹೆ ನೀಡಬೇಕು ಎಂದು ಒತ್ತಾಯಿಸಿದರು.

ನಗರದ ಹೃದಯಭಾಗದಲ್ಲಿರುವ ಗಾಂಧಿ ವೃತ್ತದ ಬಳಿಯ ಹಳೆ ಜಿಲ್ಲಾ ಆಸ್ಪತ್ರೆ ಕಟ್ಟಡವನ್ನು ನವೀಕರಿಸಿ 50 ಹಾಸಿಗೆಗಳ ಆಸ್ಪತ್ರೆಯಾಗಿ ಅಭಿವೃದ್ಧಿಪಡಿಸಬೇಕು. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರು, ಹಿರಿಯ ನಾಗರಿಕರು ಹಾಗೂ ವೃದ್ಧರಿಗೆ ಹೆಚ್ಚಿನ ಆರೋಗ್ಯ ಸೌಲಭ್ಯ ದೊರೆಯಲಿದೆ ಎಂದು ಮನವಿಯಲ್ಲಿ ತಿಳಿಸಿದರು.

ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿಯೂ ಪೂರ್ಣ ಪ್ರಮಾಣದ ಚಿಕಿತ್ಸಾ ಸೌಲಭ್ಯ ಕಲ್ಪಿಸಬೇಕು. ಇದರಿಂದ ಗದಗ ನಗರ ಸೇರಿದಂತೆ ಸುತ್ತಮುತ್ತಲಿನ 25ಕ್ಕೂ ಹೆಚ್ಚು ಗ್ರಾಮಗಳ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಲಿದೆ. ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪೂರ್ಣ ಪ್ರಮಾಣದ ಚಿಕಿತ್ಸೆಗೆ ಅವಕಾಶ ಕಲ್ಪಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಮಹಾವಿದ್ಯಾಲಯದ ಅಧಿಕಾರಿಗಳು ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಅಗತ್ಯ ಸಿಬ್ಬಂದಿ ನೇಮಕ ಮಾಡಬೇಕು. ಅಂಗನವಾಡಿ ಕೇಂದ್ರಗಳ ದುರಸ್ತಿ ಹಾಗೂ ಮೂಲಸೌಕರ್ಯ ಕಲ್ಪಿಸಬೇಕು. ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ಹಿಂದೆ ಇದ್ದ ಗದಗ–ಬೆಟಗೇರಿ ಅವಳಿ ನಗರ ಸಾರಿಗೆ ಬಸ್‌ಗಳ ಸಂಚಾರವನ್ನು ಪುನರಾರಂಭಿಸಬೇಕು ಎಂದು ಸಂಬಂಧಿಸಿದ ಇಲಾಖೆಗೆ ನಿರ್ದೇಶನ ನೀಡುವಂತೆ ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು, ಸಾರ್ವಜನಿಕ ಹಿತಕ್ಕೆ ಸಂಬಂಧಿಸಿದ ಬೇಡಿಕೆಗಳನ್ನು ಸಂಬಂಧಿಸಿದ ಇಲಾಖೆಗೆ ರವಾನಿಸಿ ಅಗತ್ಯ ಕ್ರಮಕ್ಕೆ ಸೂಚಿಸಲಾಗುವುದು ಎಂದು ತಿಳಿಸಿದರು.

“ಜಿಲ್ಲೆಯ ಜನರ ಹಿತದೃಷ್ಟಿಯಿಂದ ಸಲ್ಲಿಸಿರುವ ಬೇಡಿಕೆಗಳ ಬಗ್ಗೆ ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು.”
— ಕೆ.ಎನ್. ಫಣೀಂದ್ರ, ಉಪಲೋಕಾಯುಕ್ತ ನ್ಯಾಯಮೂರ್ತಿ

ಆರೋಗ್ಯದ ಫಿಟ್‌ನೆಸ್‌ಗೆ ಸೈಕ್ಲಿಂಗ್ ಬೆಸ್ಟ್: ಕೃಷ್ಣಗೌಡ ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ದೇಹದ ಫಿಟ್‌ನೆಸ್ ಕಾಪಾಡಿಕೊಳ್ಳಲು ಸೈಕ್ಲಿಂಗ್‌ನಷ್ಟು ಉತ್ತಮ ವ್ಯಾಯಾಮ ಮತ್ತೊಂದಿಲ್ಲ. ಮಕ್ಕಳು ನಿತ್ಯ ಸೈಕ್ಲಿಂಗ್ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಹೇಳಿದರು.

ಪಟ್ಟಣದ ಯಲಿಶಿರುಂಜ ಗುಡ್ಡದಲ್ಲಿ ಕರ್ನಾಟಕ ರಾಜ್ಯ ಗದಗ ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಮೌಂಟನ್ ಸೈಕ್ಲಿಂಗ್ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಗದಗ ಜಿಲ್ಲೆ ಕ್ರೀಡಾಪಟುಗಳ ತೌರಾಗಿದ್ದು, ಕ್ರೀಡೆಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಹೊಂದಿದೆ. ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಂಗಣಗಳಿದ್ದು, ಕ್ರೀಡಾ ಚಟುವಟಿಕೆಗಳಿಗೆ ಮುಳಗುಂದ ಪಟ್ಟಣವೂ ಸಾಕಷ್ಟು ಸಹಕಾರ ನೀಡುತ್ತಿದೆ. ಇದರಿಂದ ಹಲವು ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ ಎಂದರು.

ಮೌಂಟನ್ ಸೈಕ್ಲಿಂಗ್ ರೋಚಕ ಕ್ರೀಡೆಯಾಗಿದ್ದು, ಇಂತಹ ಕ್ರೀಡೆಗಳಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ಮುಖ್ಯ. ಕ್ರೀಡೆಯ ಮೂಲಕ ಪ್ರತಿಭೆ ಹೊರಹೊಮ್ಮುವುದರ ಜತೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯವೂ ಉತ್ತಮವಾಗುತ್ತದೆ ಎಂದು ಹೇಳಿದರು.

ಮುಳಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಸುಂಕಾಪುರ ಮಾತನಾಡಿ, ಮುಳಗುಂದದಲ್ಲಿ ರಾಜ್ಯಮಟ್ಟದ ಸೈಕ್ಲಿಂಗ್ ಸ್ಪರ್ಧೆ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಅವರ ಭವಿಷ್ಯಕ್ಕೆ ಉತ್ತಮ ಅವಕಾಶಗಳು ದೊರೆಯಲಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದಗ ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ. ಕಣವಿ ವಹಿಸಿದ್ದರು. ಎಸ್.ಎಂ. ನೀಲಗುಂದ, ಎಂ.ಡಿ. ಬಟ್ಟೂರ, ಡಾ. ಎಸ್.ಸಿ. ಚವಡಿ, ಜಿ.ವಿ. ಪಾಟೀಲ, ಪೊಲೀಸ್ ಇನ್ಸ್‌ಪೆಕ್ಟರ್ ಜಿ.ಬಿ. ಸುಬ್ಬಾಪೂರಮಠ, ನಾಗರಾಜ ದೇಶಪಾಂಡೆ, ಕೆ.ಎಲ್. ಕರಿಗೌಡ್ರ, ಅಶೋಕ ಹುಣಸಿಮರದ, ಎಂ.ಕೆ. ಡಾಲಾಯತ, ವಿಲಾಸ ನೀಲಗುಂದ, ಎಸ್.ಎಂ. ಕುರಣಿ, ಐಶ್ವರ್ಯ ಕರಿಗಾರ, ಪವಿತ್ರಾ ಕುರ್ತಕೋಟಿ ಸೇರಿದಂತೆ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್‌ನ ಸದಸ್ಯರು ಉಪಸ್ಥಿತರಿದ್ದರು.

“ದೇಹದ ಫಿಟ್‌ನೆಸ್ ಕಾಯ್ದುಕೊಳ್ಳಲು ಸೈಕ್ಲಿಂಗ್‌ನಷ್ಟು ಉತ್ತಮ ವ್ಯಾಯಾಮ ಇನ್ನೊಂದಿಲ್ಲ. ಮಕ್ಕಳು ನಿತ್ಯ ಸೈಕ್ಲಿಂಗ್ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು.”
— ಕೃಷ್ಣಗೌಡ ಪಾಟೀಲ, ಅಧ್ಯಕ್ಷರು, ಗದಗ ಜಿಲ್ಲಾ ಯುವ ಕಾಂಗ್ರೆಸ್

ವೀರನಾರಾಯಣನ ದರ್ಶನ ಪಡೆದ ಉಪಲೋಕಾಯುಕ್ತರು

0

ವಿಜಯಸಾಕ್ಷಿ ಸುದ್ದಿ, ಗದಗ: ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಶುಕ್ರವಾರ ಗದಗ ನಗರದ ಐತಿಹಾಸಿಕ ವೀರನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿ ವೀರನಾರಾಯಣನ ದರ್ಶನ ಪಡೆದರು.

ದೇವಸ್ಥಾನಕ್ಕೆ ಆಗಮಿಸಿದ ನ್ಯಾಯಮೂರ್ತಿ ಫಣೀಂದ್ರ ಅವರು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು ವೀರನಾರಾಯಣ ದೇವಸ್ಥಾನದ ಇತಿಹಾಸ, ಪರಂಪರೆ ಹಾಗೂ ಧಾರ್ಮಿಕ ಮಹತ್ವದ ಕುರಿತು ಅವರಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ನ್ಯಾಯಾಧೀಶರು ಹಾಗೂ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ. ಪಾಟೀಲ್, ಸುನೀಲಕುಮಾರ್ ಆರ್., ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್., ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ, ಉಪಾಧೀಕ್ಷಕ ಲೋಕೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಎಂ.ಎಂ. ತುಂಬರಮಟ್ಟಿ, ನಗರಸಭೆ ಪೌರಾಯುಕ್ತ ರಾಜಾರಾಮ್ ಪವಾರ್ ಉಪಸ್ಥಿತರಿದ್ದರು.