Home Blog

ಮದುವೆ ಆಮಂತ್ರಣದ ಹೆಸರಿನಲ್ಲಿ ಸೈಬರ್ ವಂಚನೆ; ವಾಟ್ಸಪ್ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಯ ಖಾತೆಯಿಂದ 9 ಲಕ್ಷ ರೂ. ಮಾಯ

ಬೆಂಗಳೂರು: ವಾಟ್ಸಾಪ್‌ಗೆ ಅಪರಿಚಿತ ಸಂಖ್ಯೆಯಿಂದ ಬರುವ ಸಂದೇಶಗಳು ಮತ್ತು APK ಫೈಲ್‌ಗಳನ್ನು ತೆರೆಯುವ ಮುನ್ನ ಎಚ್ಚರಿಕೆ ವಹಿಸುವಂತೆ ಸೈಬರ್ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಮದುವೆ ಆಹ್ವಾನ ಪತ್ರಿಕೆ ಎಂದು ನಂಬಿ APK ಫೈಲ್ ತೆರೆದ ಸರ್ಕಾರಿ ಅಧಿಕಾರಿಯೊಬ್ಬರು ಸುಮಾರು ₹9.96 ಲಕ್ಷ ಹಣವನ್ನು ಸೈಬರ್ ವಂಚಕರಿಗೆ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸೈಬರ್ ವಂಚಕರು ಜನರನ್ನು ಮೋಸಗೊಳಿಸಲು ಹೊಸ ಹೊಸ ತಂತ್ರಗಳನ್ನು ಬಳಸುತ್ತಿದ್ದು, ವಾಟ್ಸಾಪ್ ಮೂಲಕ APK ಫೈಲ್ ಕಳುಹಿಸಿ ಮೊಬೈಲ್ ಹ್ಯಾಕ್ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚಿನ ಪ್ರಕರಣದಲ್ಲಿ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಮೇಶ್ ಬಾಬು ಅವರು ವಂಚಕರ ಬಲೆಗೆ ಬಿದ್ದಿದ್ದಾರೆ.

ಜುಲೈ 14ರಂದು ಸಂಜೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ರಮೇಶ್ ಬಾಬು ಅವರಿಗೆ ವಾಟ್ಸಾಪ್‌ನಲ್ಲಿ ಮದುವೆ ಆಹ್ವಾನದ ಹೆಸರಿನಲ್ಲಿ ಸಂದೇಶ ಹಾಗೂ APK ಫೈಲ್ ಬಂದಿದೆ. ಅದು ಸ್ನೇಹಿತ ಅಥವಾ ಪರಿಚಿತರದ್ದಿರಬಹುದು ಎಂದು ಭಾವಿಸಿದ ಅವರು ಫೈಲ್ ಅನ್ನು ತೆರೆದಿದ್ದಾರೆ.

ಫೈಲ್ ಓಪನ್ ಮಾಡಿದ ಬಳಿಕ ಅದು APK ಫೈಲ್ ಎಂಬುದು ತಿಳಿದರೂ ಹೆಚ್ಚಿನ ಗಮನ ನೀಡಿಲ್ಲ. ಆದರೆ ಸುಮಾರು 15 ನಿಮಿಷಗಳಲ್ಲೇ ಅವರ ಮೊಬೈಲ್‌ಗೆ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗುತ್ತಿರುವ ಎಸ್‌ಎಂಎಸ್‌ಗಳು ಬರಲಾರಂಭಿಸಿವೆ.

ತಕ್ಷಣ ಬ್ಯಾಂಕ್ ಖಾತೆ ಪರಿಶೀಲಿಸಿದಾಗ, ವಿವಿಧ ಹಂತಗಳಲ್ಲಿ ಒಟ್ಟು ₹9.96 ಲಕ್ಷ ಹಣವನ್ನು ವಂಚಕರು ವರ್ಗಾವಣೆ ಮಾಡಿಕೊಂಡಿರುವುದು ಗೊತ್ತಾಗಿದೆ. ಬಳಿಕ ರಮೇಶ್ ಬಾಬು ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಸೈಬರ್ ತಜ್ಞರು, ಅಪರಿಚಿತ ಸಂಖ್ಯೆಯಿಂದ ಬರುವ APK ಫೈಲ್‌ಗಳು, ಲಿಂಕ್‌ಗಳು ಅಥವಾ ಮದುವೆ ಆಹ್ವಾನದಂತಹ ಸಂದೇಶಗಳನ್ನು ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ತಡೆಯುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ: ಅದು ರಾಷ್ಟ್ರದ ಸಮೂಹ ಜವಾಬ್ದಾರಿ ಎಂದ ಪ್ರಧಾನಿ ಮೋದಿ

0

ನವದೆಹಲಿ: ನೀಟ್ (NEET) ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಆಡಳಿತಾರೂಢ ಎನ್‌ಡಿಎ ಸಂಸದೀಯ ಪಕ್ಷದ ‘ಮಂಗಲ್ ಮಿಲನ್’ ಸಭೆಯಲ್ಲಿ ಮಾತನಾಡಿದ ಅವರು, ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಗಟ್ಟುವುದು ಸರ್ಕಾರದ ಕರ್ತವ್ಯ ಮಾತ್ರವಲ್ಲ, ಅದು ದೇಶದ ‘ರಾಷ್ಟ್ರೀಯ ಜವಾಬ್ದಾರಿ’ ಎಂದು ಹೇಳಿದ್ದಾರೆ.

ಸಭೆಯ ಬಳಿಕ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಪ್ರಧಾನಿಯವರ ಸಂದೇಶವನ್ನು ಮಾಧ್ಯಮಗಳಿಗೆ ವಿವರಿಸಿದರು.

ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗುವವರ ವಿರುದ್ಧ ಯಾವುದೇ ರೀತಿಯ ಸಡಿಲಿಕೆ ತೋರಬಾರದು ಎಂದು ಪ್ರಧಾನಿ ಮೋದಿ ಸೂಚಿಸಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವ ಆರೋಪಿಗಳಿಗೆ ಕಾನೂನಿನಡಿ ಸಾಧ್ಯವಾಗುವ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.

ಭವಿಷ್ಯದಲ್ಲಿ ಇಂತಹ ಅಕ್ರಮಗಳು ಮರುಕಳಿಸದಂತೆ ಪಾರದರ್ಶಕ, ವಿಶ್ವಾಸಾರ್ಹ ಹಾಗೂ ದೋಷರಹಿತ ಪರೀಕ್ಷಾ ವ್ಯವಸ್ಥೆಯನ್ನು ರೂಪಿಸಲು ಸರ್ಕಾರ ಮತ್ತು ಸಂಬಂಧಿತ ಸಂಸ್ಥೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನಿ ಕರೆ ನೀಡಿದ್ದಾರೆ.

ಇದೇ ವೇಳೆ ಸಂಸತ್ತಿನ ಮುಂಗಾರು ಅಧಿವೇಶನದ ಸುಗಮ ನಿರ್ವಹಣೆ ಕುರಿತೂ ಸಭೆಯಲ್ಲಿ ಚರ್ಚೆ ನಡೆದಿದ್ದು, ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ದೇಶದ ಭವಿಷ್ಯ ಮತ್ತು ಯುವಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಸಂಸದರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ಶಾಸಕಾಂಗ ಕಾರ್ಯಗಳಿಗೆ ಎನ್‌ಡಿಎ ಮೈತ್ರಿಕೂಟದ ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಬೆಂಬಲ ನೀಡಬೇಕು. ಜೊತೆಗೆ ವಿರೋಧ ಪಕ್ಷಗಳೂ ಗದ್ದಲಕ್ಕೆ ಅವಕಾಶ ನೀಡದೆ, ದೇಶದ ಹಿತದೃಷ್ಟಿಯಿಂದ ಸಂಸತ್ತಿನ ಚರ್ಚೆಗಳಲ್ಲಿ ರಚನಾತ್ಮಕವಾಗಿ ಭಾಗವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಆಶಿಸಿದ್ದಾರೆ.

ಉದ್ಯೋಗ ಇಲ್ಲವೆಂಬ ಕಾರಣಕ್ಕೆ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವಂತಿಲ್ಲ: ಪತ್ನಿ-ಮಕ್ಕಳಿಗೆ ಜೀವನಾಂಶ ಕಡ್ಡಾಯ ಎಂದ ಹೈಕೋರ್ಟ್

ಬೆಂಗಳೂರು: ಪತಿಗೆ ಉದ್ಯೋಗವಿಲ್ಲ ಅಥವಾ ಆದಾಯ ಕಡಿಮೆಯಿದೆ ಎಂಬ ಕಾರಣ ನೀಡಿ ಪತ್ನಿ ಹಾಗೂ ಮಗುವಿನ ನಿರ್ವಹಣೆಯ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಉದ್ಯೋಗವಿಲ್ಲದಿದ್ದರೆ ಕೆಲಸ ಹುಡುಕಬೇಕು, ಕಡಿಮೆ ಆದಾಯವಿದ್ದರೆ ಹೆಚ್ಚಿನ ಸಂಬಳದ ಉದ್ಯೋಗಕ್ಕಾಗಿ ಪ್ರಯತ್ನಿಸಬೇಕು. ಯಾವುದೇ ಪರಿಸ್ಥಿತಿಯಲ್ಲೂ ಪತ್ನಿ ಮತ್ತು ಮಗುವನ್ನು ಅತಂತ್ರ ಸ್ಥಿತಿಯಲ್ಲಿ ಬಿಡಲಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಮೈಸೂರು ತಾಲೂಕಿನ ಹಳೇ ಉಂಡವಾಡಿ ನಿವಾಸಿ ಹರೀಶ್ ಆರ್. ಅವರು ತಮ್ಮ ವಿರುದ್ಧ ಕೆಳ ನ್ಯಾಯಾಲಯಗಳು ನೀಡಿದ್ದ ಜೀವನಾಂಶ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನ ‘ಅಂಜು ಗಾರ್ಗ್’ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಸಿಆರ್‌ಪಿಸಿ ಸೆಕ್ಷನ್ 125 ಸಾಮಾಜಿಕ ನ್ಯಾಯದ ಪ್ರಮುಖ ಅಂಶವಾಗಿದ್ದು, ಪತ್ನಿ ಹಾಗೂ ಮಕ್ಕಳನ್ನು ನಿರ್ಗತಿಕರನ್ನಾಗಿ ಬಿಡುವಂತಿಲ್ಲ ಎಂದು ಹೇಳಿದೆ. ಕೆಲಸವಿಲ್ಲ ಎಂಬುದು ಜೀವನಾಂಶ ನೀಡದಿರಲು ಸಮರ್ಥನೆ ಆಗುವುದಿಲ್ಲ. ಅಗತ್ಯವಿದ್ದರೆ ದೈಹಿಕ ಶ್ರಮ ವಹಿಸಿಯಾದರೂ ಹಣ ಸಂಪಾದಿಸಿ ಕುಟುಂಬವನ್ನು ನಿರ್ವಹಿಸುವುದು ಪತಿಯ ಕರ್ತವ್ಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪತಿ ನ್ಯಾಯಾಲಯದ ಆದೇಶದಂತೆ ಜೀವನಾಂಶ ಪಾವತಿಸದೇ ಆದೇಶ ಉಲ್ಲಂಘಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಅರ್ಜಿಯಲ್ಲಿ ಯಾವುದೇ ನ್ಯಾಯಸಮ್ಮತ ಅಂಶ ಇಲ್ಲ ಎಂದು ಹೇಳಿ ಅದನ್ನು ವಜಾಗೊಳಿಸಿದೆ. ಜೊತೆಗೆ, ವಿಚಾರಣಾ ನ್ಯಾಯಾಲಯ ನೀಡಿದ್ದ ಪತ್ನಿ ಹಾಗೂ ಮಗನಿಗೆ ಒಟ್ಟು ₹16,000 ಮಾಸಿಕ ಜೀವನಾಂಶ ನೀಡುವ ಆದೇಶವನ್ನು ಎತ್ತಿಹಿಡಿದಿದೆ.

ಪ್ರಕರಣದ ಹಿನ್ನೆಲೆ

ಅರ್ಜಿದಾರ ಹರೀಶ್ ಅವರು 2003ರ ಜೂನ್ 16ರಂದು ಸೌಮ್ಯ ಅವರನ್ನು ವಿವಾಹವಾಗಿದ್ದರು. ಬಳಿಕ ವೈಮನಸ್ಸು ಉಂಟಾಗಿ ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದು, ಪರಸ್ಪರ ದೂರು-ಪ್ರತಿದೂರು ದಾಖಲಿಸಿದ್ದರು.

ನಂತರ 2022ರಲ್ಲಿ ಪಾಂಡವಪುರ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಪತ್ನಿ ಸೌಮ್ಯ ಹಾಗೂ ಪುತ್ರ ಮನಮೋಹನ್ ಅವರಿಗೆ ತಲಾ ₹8,000ರಂತೆ ಒಟ್ಟು ₹16,000 ಮಾಸಿಕ ಜೀವನಾಂಶ ನೀಡುವಂತೆ ಆದೇಶಿಸಿತ್ತು. ಈ ಆದೇಶವನ್ನು ಮಂಡ್ಯ ಸೆಷನ್ಸ್ ನ್ಯಾಯಾಲಯವೂ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಪತಿಯ ಪರ ವಕೀಲರು, ಅರ್ಜಿದಾರರು ಪ್ರಸ್ತುತ ನಿರುದ್ಯೋಗಿಯಾಗಿದ್ದು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ತಿಂಗಳಿಗೆ ₹16,000 ಜೀವನಾಂಶ ನೀಡುವ ಸ್ಥಿತಿಯಲ್ಲಿ ಇಲ್ಲ. ಪತ್ನಿ ಕಾನೂನು ಪದವೀಧರೆಯಾಗಿದ್ದು ವಕೀಲೆಯಾಗಿ ಹೆಚ್ಚು ಸಂಪಾದಿಸುವ ಸಾಮರ್ಥ್ಯ ಹೊಂದಿರುವುದರಿಂದ ಜೀವನಾಂಶ ನೀಡುವ ಆದೇಶ ರದ್ದುಗೊಳಿಸಬೇಕು ಎಂದು ವಾದಿಸಿದರು.

ಇದಕ್ಕೆ ಪ್ರತಿಯಾಗಿ ಪತ್ನಿಯ ಪರ ವಕೀಲರು, ಅನಾರೋಗ್ಯದ ಕಾರಣದಿಂದ ವಕೀಲ ವೃತ್ತಿಯನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೆಳ ನ್ಯಾಯಾಲಯಗಳ ಆದೇಶ ನ್ಯಾಯಸಮ್ಮತವಾಗಿದ್ದು, ಪತಿಯ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಮಗನ ಪರ ವಕೀಲರು, 2022ರ ಫೆಬ್ರವರಿ 3ರಂದು ಜೀವನಾಂಶ ನೀಡುವಂತೆ ನ್ಯಾಯಾಲಯ ಆದೇಶಿಸಿದ್ದರೂ ಈವರೆಗೆ ಯಾವುದೇ ಹಣ ಪಾವತಿಸಿಲ್ಲ. ಸುಮಾರು ₹21 ಲಕ್ಷ ಜೀವನಾಂಶ ಬಾಕಿ ಉಳಿದಿದ್ದು, ಅದನ್ನು ಪಾವತಿಸುವಂತೆ ನಿರ್ದೇಶನ ನೀಡಬೇಕು ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಬಸ್ ನಿಲ್ದಾಣದಿಂದ ಯುವತಿ ಕಿಡ್ನ್ಯಾಪ್: ಲಾಡ್ಜ್‌ನಲ್ಲಿ ಗ್ಯಾಂಗ್‌ರೇಪ್, 24 ಗಂಟೆಯಲ್ಲೇ ಮೂವರು ಅರೆಸ್ಟ್

0

ಮೈಸೂರು: ಖಾಸಗಿ ಬಸ್ ನಿಲ್ದಾಣದ ಬಳಿ ಯುವತಿಯನ್ನು ಅಪಹರಿಸಿ ಲಾಡ್ಜ್‌ಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಟಿ. ನರಸೀಪುರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ 24 ಗಂಟೆಗಳೊಳಗೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣ ಮೈಸೂರು ಜಿಲ್ಲೆಯಲ್ಲಷ್ಟೇ ಅಲ್ಲ, ರಾಜ್ಯಾದ್ಯಂತ ಆತಂಕ ಮೂಡಿಸಿದೆ.

ಪಶ್ಚಿಮ ಬಂಗಾಳ ಮೂಲದ ಕಲ್ಪನಾ ಮುಂಡಾ ಎಂಬ ಯುವತಿಯನ್ನು ಟಿ. ನರಸೀಪುರ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಸಮೀಪ ಆರೋಪಿಗಳು ಅಪಹರಿಸಿದ್ದಾರೆ ಎನ್ನಲಾಗಿದೆ. ಬಳಿಕ ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಬಳಿಯ ಲಾಡ್ಜ್‌ಗೆ ಕರೆದೊಯ್ದು ಕಿರಣ್, ಕಿಶೋರ್ ಹಾಗೂ ರಿಯಾನ್ ಎಂಬ ಮೂವರು ಆರೋಪಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪ್ರಕರಣದ ಮಾಹಿತಿ ಸಿಕ್ಕ ತಕ್ಷಣ ತನಿಖೆ ಆರಂಭಿಸಿದ ಟಿ. ನರಸೀಪುರ ಪೊಲೀಸರು ತಾಂತ್ರಿಕ ಮಾಹಿತಿ ಹಾಗೂ ಇತರೆ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಬಂಧಿತ ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಘಟನೆ ಸಂಬಂಧ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಪ್ರಕ್ರಿಯೆ ಮುಂದುವರಿದಿದೆ. ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.

ಸಿಸಿಟಿವಿಯೇ ಬಯಲು ಮಾಡಿತು ಸುಳ್ಳು ಕಳ್ಳತನ: 65.95 ಲಕ್ಷ ದೋಚಿದಂತೆ ದೂರು ಕೊಟ್ಟ ಮಾಲೀಕನ ಸಂಚು ಫೇಲ್!

0

ಬೆಳಗಾವಿ: 65.95 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಚಿನ್ನದಂಗಡಿ ಮಾಲೀಕನೇ ಪ್ರಕರಣದ ಮಾಸ್ಟರ್‌ಮೈಂಡ್ ಎಂಬ ಸತ್ಯ ಬೆಳಕಿಗೆ ಬಂದಿದೆ. ವಿಮೆ ಹಣ ಪಡೆಯುವುದು ಮತ್ತು ಅಡವಿಟ್ಟಿದ್ದ ಚಿನ್ನವನ್ನು ಅಕ್ರಮವಾಗಿ ವಶಕ್ಕೆ ಪಡೆಯುವ ಉದ್ದೇಶದಿಂದ ಕಳ್ಳತನದ ನಾಟಕ ರೂಪಿಸಿದ್ದ ಆರೋಪಿ ಕೊನೆಗೆ ಸಿಸಿಟಿವಿ ದೃಶ್ಯಗಳಲ್ಲೇ ಸಿಕ್ಕಿಬಿದ್ದಿದ್ದಾನೆ.

ರಾಮದೇವ ಗಲ್ಲಿಯಲ್ಲಿರುವ ವಿಪಿ ವೇರ್ಣೇಕರ ಆಂಡ್ ಸನ್ಸ್ ಚಿನ್ನದಂಗಡಿಯ ಮಾಲೀಕ ಕೃಷ್ಣಾನಂದ ವೇರ್ಣೇಕರ, ಅಂಗಡಿಯಿಂದ ಚಿನ್ನಾಭರಣ, ಬೆಳ್ಳಿ ಹಾಗೂ ನಗದು ಕಳುವಾಗಿದೆ ಎಂದು ಖಡೇಬಜಾರ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಸಿಸಿಟಿವಿ ದೃಶ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆರೋಪಿಯ ಸಂಚು ಬಯಲಾಗಿದೆ.

ಕಳ್ಳತನಕ್ಕೂ ಮುನ್ನ ಕ್ಯಾಮೆರಾ ವ್ಯವಸ್ಥೆಯನ್ನು ಬಂದ್ ಮಾಡಲು ಆರೋಪಿ ಯತ್ನಿಸಿದ್ದ. ಆದರೆ ಡಿಸ್‌ಪ್ಲೇ ಮಾತ್ರ ಸ್ಥಗಿತಗೊಂಡಿದ್ದು, ಕ್ಯಾಮೆರಾ ನಿರಂತರವಾಗಿ ರೆಕಾರ್ಡ್ ಮಾಡುತ್ತಿತ್ತು. ಪರಿಣಾಮ ಅಂಗಡಿಯೊಳಗಿಂದ ಚಿನ್ನಾಭರಣ ಹಾಗೂ ನಗದನ್ನು ತೆಗೆದು ಸ್ಕೂಟಿಯ ಡಿಕ್ಕಿಗೆ ಸಾಗಿಸುತ್ತಿರುವ ದೃಶ್ಯಗಳು ಪೊಲೀಸರ ಕೈಗೆ ಸಿಕ್ಕಿವೆ. ವಿಚಾರಣೆ ವೇಳೆ ಕೃಷ್ಣಾನಂದ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಆರೋಪಿಯಿಂದ 519.8 ಗ್ರಾಂ ಚಿನ್ನಾಭರಣ, 31 ಗ್ರಾಂ ಬೆಳ್ಳಿ ಆಭರಣ, 2.83 ಲಕ್ಷ ರೂ. ನಗದು ಹಾಗೂ ಸ್ಕೂಟಿ ಸೇರಿ ಒಟ್ಟು 65.95 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಳ್ಳತನದ ಸುಳ್ಳು ದೂರು, ವಿಮೆ ವಂಚನೆ ಹಾಗೂ ಇತರೆ ಕಾನೂನು ಉಲ್ಲಂಘನೆಗಳ ಕುರಿತು ಖಡೇಬಜಾರ್ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

40 ಮಿಲಿಯನ್ ಡೌನ್ ಲೋಡ್ ಮೈಲಿಗಲ್ಲು ದಾಟಿದ ಆಧಾರ್ ಆ್ಯಪ್! ಡಿಜಿಟಲ್ ಸೇವೆ ಮತ್ತಷ್ಟು ಸುಲಭ

0

ನವದೆಹಲಿ: ಸರ್ಕಾರಿ ಬೆಂಬಲಿತ ಆಧಾರ್ ಅಪ್ಲಿಕೇಶನ್ 4 ಕೋಟಿ ಡೌನ್‌ಲೋಡ್‌ಗಳ ಮೈಲಿಗಲ್ಲನ್ನು ದಾಟಿದೆ. ಈ ಸಾಧನೆಯು ದೇಶದಲ್ಲಿ ಡಿಜಿಟಲ್ ಗುರುತಿನ ಸೇವೆಗಳ ಬಳಕೆ ವೇಗವಾಗಿ ಹೆಚ್ಚುತ್ತಿರುವುದನ್ನು ತೋರಿಸುತ್ತದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.

ಲಕ್ಷಾಂತರ ಭಾರತೀಯ ನಿವಾಸಿಗಳು ತಮ್ಮ ಆಧಾರ್‌ಗೆ ಸಂಬಂಧಿಸಿದ ಮಾಹಿತಿಯನ್ನು ನವೀಕರಿಸಲು, ಭದ್ರತಾ ಸೆಟ್ಟಿಂಗ್‌ಗಳನ್ನು ನಿರ್ವಹಿಸಲು ಹಾಗೂ ವಿವಿಧ ಸೇವೆಗಳನ್ನು ಪಡೆಯಲು ಈ ಆ್ಯಪ್ ಬಳಸುತ್ತಿದ್ದಾರೆ. ಆಧಾರ್ ಸಂಬಂಧಿತ ಹಲವು ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ‘ಒನ್-ಸ್ಟಾಪ್ ಡಿಜಿಟಲ್ ಪ್ಲಾಟ್‌ಫಾರ್ಮ್’ ಆಗಿ ಆ್ಯಪ್ ಅಭಿವೃದ್ಧಿಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಆಧಾರ್ ಆ್ಯಪ್ ಮೂಲಕ ಬಳಕೆದಾರರು ತಮ್ಮ ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ಮನೆಯಿಂದಲೇ ಅಪ್‌ಡೇಟ್ ಮಾಡಬಹುದು. ಜೊತೆಗೆ ಬಯೋಮೆಟ್ರಿಕ್ ಮಾಹಿತಿಯನ್ನು ಲಾಕ್ ಅಥವಾ ಅನ್‌ಲಾಕ್ ಮಾಡುವುದು ಹಾಗೂ ಇ-ಆಧಾರ್ ಡೌನ್‌ಲೋಡ್ ಮಾಡುವಂತಹ ಸೌಲಭ್ಯಗಳೂ ಲಭ್ಯವಿವೆ.

ಆ್ಯಪ್ ಆರಂಭವಾದ ಬಳಿಕ ಇದುವರೆಗೆ 11.65 ಲಕ್ಷಕ್ಕೂ ಹೆಚ್ಚು ವಿಳಾಸ ಅಪ್‌ಡೇಟ್‌ಗಳನ್ನು ಪ್ರಕ್ರಿಯೆಗೊಳಿಸಲಾಗಿದೆ. ಇದರಿಂದಾಗಿ ಜನರು ಆಧಾರ್ ದಾಖಲಾತಿ ಅಥವಾ ಅಪ್‌ಡೇಟ್ ಕೇಂದ್ರಗಳಿಗೆ ಭೇಟಿ ನೀಡುವ ಅಗತ್ಯ ಕಡಿಮೆಯಾಗಿದೆ. ತಮ್ಮ ಮಾಹಿತಿಯನ್ನು ಮನೆಯಿಂದಲೇ ನವೀಕರಿಸಲು ಈ ಸೌಲಭ್ಯ ಅನುಕೂಲವಾಗಿದೆ.

ಇದೇ ವೇಳೆ, ಆ್ಯಪ್ ಮೂಲಕ ಇದುವರೆಗೆ ಸುಮಾರು 49 ಲಕ್ಷ ಮೊಬೈಲ್ ಸಂಖ್ಯೆಗಳನ್ನು ಅಪ್‌ಡೇಟ್ ಮಾಡಲಾಗಿದೆ. ಇದರಿಂದ ಬಳಕೆದಾರರು ತಮ್ಮ ಆಧಾರ್‌ಗೆ ಸಂಬಂಧಿಸಿದ ಸಂಪರ್ಕ ವಿವರಗಳನ್ನು ನಿಖರವಾಗಿ ಮತ್ತು ನವೀಕೃತವಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತಿದೆ.

ಜುಲೈ 1ರಂದು ಇ-ಮೇಲ್ ಅಪ್‌ಡೇಟ್ ಸೌಲಭ್ಯವನ್ನು ಆರಂಭಿಸಿದ ಬಳಿಕ ಸುಮಾರು 12.5 ಲಕ್ಷ ಇ-ಮೇಲ್ ಐಡಿಗಳನ್ನು ಸೇರಿಸಲಾಗಿದೆ ಅಥವಾ ನವೀಕರಿಸಲಾಗಿದೆ. ಈ ಸೇವೆಗೆ ಈ ಹಿಂದೆ ₹75 ಶುಲ್ಕ ವಿಧಿಸಲಾಗುತ್ತಿತ್ತು. ಆದರೆ, ಡಿಸೆಂಬರ್ 31ರವರೆಗೆ ಆಧಾರ್ ಆ್ಯಪ್ ಮೂಲಕ ಈ ಸೇವೆಯನ್ನು ಉಚಿತವಾಗಿ ಪಡೆಯಬಹುದು ಎಂದು ಸರ್ಕಾರ ತಿಳಿಸಿದೆ.

ಆ್ಯಪ್‌ನ ಗೌಪ್ಯತೆ ಮತ್ತು ಭದ್ರತಾ ವೈಶಿಷ್ಟ್ಯಗಳಿಗೂ ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಯೋಮೆಟ್ರಿಕ್ ಲಾಕ್/ಅನ್‌ಲಾಕ್ ಸೌಲಭ್ಯವನ್ನು ಇದುವರೆಗೆ 1.91 ಕೋಟಿ ಬಾರಿ ಬಳಸಲಾಗಿದೆ. ಈ ವೈಶಿಷ್ಟ್ಯದ ಮೂಲಕ ಆಧಾರ್ ಹೊಂದಿರುವವರು ತಮ್ಮ ಬಯೋಮೆಟ್ರಿಕ್ ಮಾಹಿತಿಯನ್ನು ತಕ್ಷಣವೇ ಲಾಕ್ ಅಥವಾ ಅನ್‌ಲಾಕ್ ಮಾಡಬಹುದು. ಇದರಿಂದ ವೈಯಕ್ತಿಕ ಮಾಹಿತಿಯ ದುರುಪಯೋಗದ ಅಪಾಯವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.

ಆಧಾರ್ ಸಂಖ್ಯೆ ಹೊಂದಿರುವವರು ತಮ್ಮ ಗುರುತನ್ನು ಸುಲಭವಾಗಿ, ಸುರಕ್ಷಿತವಾಗಿ ಮತ್ತು ಗೌಪ್ಯತೆಗೆ ಆದ್ಯತೆ ನೀಡುವ ರೀತಿಯಲ್ಲಿ ಪ್ರದರ್ಶಿಸಲು, ಹಂಚಿಕೊಳ್ಳಲು ಹಾಗೂ ಪರಿಶೀಲಿಸಲು ಅನುಕೂಲವಾಗುವಂತೆ ಆ್ಯಪ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಡಿಜಿಟಲ್ ಇಂಡಿಯಾ ಮಿಷನ್ ಅಡಿಯಲ್ಲಿ ‘ವಿಕ್ಷಿತ್ ಭಾರತ್’ ಗುರಿಯನ್ನು ಮುನ್ನಡೆಸುವಲ್ಲಿ ಮತ್ತು ಜನರ ದೈನಂದಿನ ಜೀವನವನ್ನು ಮತ್ತಷ್ಟು ಸುಲಭಗೊಳಿಸುವಲ್ಲಿ ಆಧಾರ್ ಆ್ಯಪ್ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಸರ್ಕಾರ ಹೇಳಿದೆ.

ಇದೇ ತಿಂಗಳ ಆರಂಭದಲ್ಲಿ ಆಧಾರ್ ಆ್ಯಪ್‌ನಲ್ಲಿ ಇ-ಮೇಲ್ ಐಡಿ ಅಪ್‌ಡೇಟ್ ಸೌಲಭ್ಯ ಆರಂಭಿಸಿದ ಕೇವಲ ಎರಡು ದಿನಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಆಧಾರ್ ದಾಖಲೆಗಳಲ್ಲಿ ಇ-ಮೇಲ್ ವಿಳಾಸವನ್ನು ನವೀಕರಿಸಿದ್ದರು.

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಇದೀಗ ಆಧಾರ್ ಹೊಂದಿರುವವರಿಗೆ ಆ್ಯಪ್ ಮೂಲಕ ನೇರವಾಗಿ ತಮ್ಮ ಇ-ಮೇಲ್ ಐಡಿಯನ್ನು ಸೇರಿಸಲು ಅಥವಾ ಅಪ್‌ಡೇಟ್ ಮಾಡಲು ಅವಕಾಶ ನೀಡಿದೆ. ಇದರಿಂದಾಗಿ ಈ ಸೌಲಭ್ಯಕ್ಕಾಗಿ ಆಧಾರ್ ದಾಖಲಾತಿ ಅಥವಾ ಅಪ್‌ಡೇಟ್ ಕೇಂದ್ರಕ್ಕೆ ಭೇಟಿ ನೀಡುವ ಅಗತ್ಯವಿಲ್ಲ.

Chitradurga News: ಬೀದಿ ನಾಯಿಗಳ ಅಟ್ಟಹಾಸ; ನಾಲ್ವರು ಪುಟ್ಟ ಮಕ್ಕಳ ಮೇಲೆ ದಾಳಿ! ನಗರಸಭೆ ವಿರುದ್ಧ ಪೋಷಕರ ಆಕ್ರೋಶ

ಚಿತ್ರದುರ್ಗ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮತ್ತೆ ಆತಂಕ ಮೂಡಿಸಿದೆ.

ಪ್ರತ್ಯೇಕ ಎರಡು ಘಟನೆಗಳಲ್ಲಿ ನಾಲ್ವರು ಪುಟ್ಟ ಮಕ್ಕಳು ಬೀದಿ ನಾಯಿಗಳ ದಾಳಿಗೆ ಒಳಗಾಗಿ ಗಾಯಗೊಂಡಿದ್ದಾರೆ.

ನಗರದ ಚೇಳಗುಡ್ಡ ಹಾಗೂ ನೆಹರು ನಗರ ಬಡಾವಣೆಯಲ್ಲಿ ಈ ಘಟನೆಗಳು ನಡೆದಿವೆ. ಮನೆ ಮುಂದೆ ಆಟವಾಡುತ್ತಿದ್ದ 5ರಿಂದ 6 ವರ್ಷದ ಮಕ್ಕಳ ಮೇಲೆ ಏಕಾಏಕಿ ಬೀದಿ ನಾಯಿಗಳು ದಾಳಿ ನಡೆಸಿವೆ.

ನಾಯಿಗಳ ದಾಳಿಯಿಂದ ಮಕ್ಕಳ ಮುಖ, ಕೈ, ಕಾಲು ಸೇರಿದಂತೆ ದೇಹದ ಹಲವು ಭಾಗಗಳಿಗೆ ಗಾಯಗಳಾಗಿವೆ. ಗಾಯಗೊಂಡ ಆಲೀನಾ, ಆದಿಲ್, ಮನ್ವಿತ್ ಹಾಗೂ ಮತ್ತೋರ್ವ ಬಾಲಕನಿಗೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.

ನಗರಸಭೆ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ಕರೆತಂದಾಗ ನಾಯಿ ಕಡಿತಕ್ಕೆ ನೀಡುವ ಅಗತ್ಯ ಇಂಜೆಕ್ಷನ್ ಕೂಡ ತಕ್ಷಣ ಲಭ್ಯವಾಗಲಿಲ್ಲ ಎಂದು ಪೋಷಕರು ದೂರಿದ್ದಾರೆ.

Vijayanagara News: ರೈತನಿಂದ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ!

ವಿಜಯನಗರ: ರೈತನಿಂದ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಮಹಿಳಾ ಗ್ರಾಮ ಲೆಕ್ಕಾಧಿಕಾರಿಯೊಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿರುವ ಘಟನೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ.

ಬಂಧಿತ ಮಹಿಳಾ ಅಧಿಕಾರಿಯನ್ನು ಹೊಳಗುಂದಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಶಹನಾಜ್ ಬೇಗಂ ಎಂದು ಗುರುತಿಸಲಾಗಿದೆ.

ಕೊಟ್ಟೂರು ಗ್ರಾಮದ ರೈತ ಸಿದ್ಧಲಿಂಗಸ್ವಾಮಿ ಅವರು ಪಹಣಿ ತಿದ್ದುಪಡಿ ಮಾಡಿಸಲು ಬಂದಾಗ, ಕೆಲಸ ಮಾಡಿಕೊಡಲು 10 ಸಾವಿರ ರೂಪಾಯಿ ಲಂಚ ನೀಡುವಂತೆ ಶಹನಾಜ್ ಬೇಗಂ ಕೇಳಿದ್ದರು ಎನ್ನಲಾಗಿದೆ.

ಈ ಕುರಿತು ರೈತರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಹಣ ಸ್ವೀಕರಿಸುತ್ತಿದ್ದ ವೇಳೆ ಶಹನಾಜ್ ಬೇಗಂ ಅವರನ್ನು ಸ್ಥಳದಲ್ಲೇ ಹಿಡಿದಿದ್ದಾರೆ.

ವಿಜಯನಗರ ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಸಚಿನ್ ಛಲವಾದಿ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ಗಳಾದ ರಾಜೇಶ್ ಲಮಾಣಿ ಹಾಗೂ ಅಮರೇಶ್ ಹುಬ್ಬಳ್ಳಿ ಅವರ ತಂಡ ದಾಳಿ ನಡೆಸಿದೆ.

ಸದ್ಯ ಮಹಿಳಾ ಅಧಿಕಾರಿಯನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.

ಜೈಲಿನಿಂದ ಸಿಎಂವರೆಗೆ ವಿಜಯ್ ಜರ್ನಿ: ‘ಜನ ನಾಯಗನ್’ ಟೀಸರ್ ವೈರಲ್

ಚೆನ್ನೈ: ದಳಪತಿ ವಿಜಯ್ ಅವರ ಸಿನಿ ಪಯಣದ ಕೊನೆಯ ಅಧ್ಯಾಯವೆಂದು ಬಣ್ಣಿಸಲಾಗುತ್ತಿರುವ ‘ಜನ ನಾಯಗನ್’ ಸಿನಿಮಾ ಬಿಡುಗಡೆಯ ಕ್ಷಣಗಣನೆ ಆರಂಭವಾಗಿದೆ. ಜುಲೈ 23ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿರುವ ಚಿತ್ರದ ಅನೌನ್ಸ್‌ಮೆಂಟ್ ಟೀಸರ್ ಬಿಡುಗಡೆಯಾಗುತ್ತಿದ್ದಂತೆಯೇ ಅಭಿಮಾನಿಗಳಲ್ಲಿ ಭಾರೀ ಸಂಭ್ರಮ ಮನೆ ಮಾಡಿದೆ.

ಕೆವಿಎನ್ ಪ್ರೊಡಕ್ಷನ್ಸ್ ಬಿಡುಗಡೆ ಮಾಡಿರುವ 18 ಸೆಕೆಂಡುಗಳ ಟೀಸರ್‌ನಲ್ಲಿ ವಿಜಯ್ ಆ್ಯಕ್ಷನ್ ಮೋಡ್‌ನಲ್ಲಿ ಮಿಂಚಿದ್ದು, ಗನ್ ಹಿಡಿದು ಖಳರ ವಿರುದ್ಧ ಹೋರಾಡುವ ದೃಶ್ಯಗಳು ಮತ್ತು ಪೊಲೀಸ್ ಪಡೆಯ ನಡುವೆ ಕಾಣಿಸಿಕೊಳ್ಳುವ ಸನ್ನಿವೇಶಗಳು ಗಮನ ಸೆಳೆಯುತ್ತವೆ. ಆದರೆ ಜೈಲು ಕೈದಿ ಉಡುಪಿನಿಂದ ನೇರವಾಗಿ ಮುಖ್ಯಮಂತ್ರಿಯ ಬಿಳಿ ಶರ್ಟ್–ಕಪ್ಪು ಜಾಕೆಟ್ ಲುಕ್‌ಗೆ ಬದಲಾಗುವ ದೃಶ್ಯವೇ ಟೀಸರ್‌ನ ಪ್ರಮುಖ ಆಕರ್ಷಣೆಯಾಗಿದೆ.

ತಮಿಳುನಾಡಿನ ಮುಖ್ಯಮಂತ್ರಿಯಾದ ಬಳಿಕ ಬಿಡುಗಡೆಯಾಗುತ್ತಿರುವ ವಿಜಯ್ ಅವರ ಮೊದಲ ಸಿನಿಮಾ ಎಂಬ ಕಾರಣಕ್ಕೆ ಚಿತ್ರದ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. “ಇದು ನಟ ವಿಜಯ್‌ಗೆ ಕೊನೆಯ ಸಲ್ಯೂಟ್”, “ಒನ್ ಲಾಸ್ಟ್ ಡ್ಯಾನ್ಸ್”, “ಬಾಕ್ಸ್ ಆಫೀಸ್ ದಾಖಲೆ ಮುರಿಯಲಿದೆ” ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ಹೆಚ್. ವಿನೋದ್ ನಿರ್ದೇಶನದ ಈ ಚಿತ್ರ ಹಲವು ಅಡೆತಡೆಗಳನ್ನು ದಾಟಿ ತೆರೆಗೆ ಬರುತ್ತಿದೆ. ಸಂಕ್ರಾಂತಿ ಬಿಡುಗಡೆ ಯೋಜನೆ ಸೆನ್ಸಾರ್ ಪ್ರಕ್ರಿಯೆಯಿಂದ ಮುಂದೂಡಲ್ಪಟ್ಟಿದ್ದು, ಬಳಿಕ ಕಾನೂನು ಹೋರಾಟದ ನಂತರ ‘ಎ’ ಪ್ರಮಾಣಪತ್ರ ಪಡೆದುಕೊಂಡಿದೆ. ಇದರ ಮಧ್ಯೆಯೇ ಚಿತ್ರದ ಎಚ್‌ಡಿ ಪ್ರಿಂಟ್ ಸೋರಿಕೆಯಾಗಿದ್ದ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

2023ರ ‘ಭಗವಂತ್ ಕೇಸರಿ’ ಚಿತ್ರದ ಭಾಗಶಃ ರಿಮೇಕ್ ಎನ್ನಲಾಗುತ್ತಿರುವ ‘ಜನ ನಾಯಗನ್’ ಚಿತ್ರದಲ್ಲಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್ ಮತ್ತು ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ವರ್ಷದ ಬಹು ನಿರೀಕ್ಷಿತ ಬಿಡುಗಡೆಯಾಗಿ ಗುರುತಿಸಿಕೊಂಡಿದೆ.

Bengaluru Metro Update: ಹಸಿರು ಮಾರ್ಗದಲ್ಲಿ ತಾಂತ್ರಿಕ ದೋಷ; 45 ನಿಮಿಷಗಳ ಬಳಿಕ ಮೆಟ್ರೋ ಸಂಚಾರ ಪುನರಾರಂಭ

ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ವಿದ್ಯುತ್ ಪೂರೈಕೆಯಲ್ಲಿನ ತಾಂತ್ರಿಕ ದೋಷದಿಂದಾಗಿ ಇಂದು ಬೆಳಗ್ಗೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.

ಬೆಳಗ್ಗೆ 8 ಗಂಟೆ ಸುಮಾರಿಗೆ ಸಮಸ್ಯೆ ಕಾಣಿಸಿಕೊಂಡಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.

ವಿದ್ಯುತ್ ಸಮಸ್ಯೆಯಿಂದಾಗಿ ಹಸಿರು ಮಾರ್ಗದ ಸಿಲ್ಕ್ ಇನ್‌ಸ್ಟಿಟ್ಯೂಟ್‌ನಿಂದ ಯಶವಂತಪುರದವರೆಗೆ ಮಾತ್ರ ಶಾರ್ಟ್-ಲೂಪ್ ಸೇವೆಯಲ್ಲಿ ರೈಲು ಸಂಚಾರ ನಡೆಸಲಾಗಿತ್ತು.

ಯಶವಂತಪುರದಿಂದ ಮಾದಾವರ (ನಾಗಸಂದ್ರ ವಿಸ್ತರಿತ ಮಾರ್ಗ) ನಡುವಿನ 10 ನಿಲ್ದಾಣಗಳಲ್ಲಿ ಮೆಟ್ರೋ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ತಾಂತ್ರಿಕ ದೋಷ ಸರಿಪಡಿಸಲು ಬಿಎಂಆರ್‌ಸಿಎಲ್  ತುರ್ತು ಕ್ರಮ ಕೈಗೊಂಡಿದ್ದು, ಇದೀಗ ಬೆಳಗ್ಗೆ 8.45ರ ವೇಳೆಗೆ ಮೆಟ್ರೋ ಸಂಚಾರ ಮತ್ತೆ ಆರಂಭಗೊಂಡಿದೆ.

ಈ ಕುರಿತು ಬಿಎಂಆರ್‌ಸಿಎಲ್, ತಾಂತ್ರಿಕ ದೋಷವನ್ನು ಸರಿಪಡಿಸಲು ಸಿಬ್ಬಂದಿ ತುರ್ತು ಕಾರ್ಯಾಚರಣೆ ನಡೆಸಿದ್ದು, ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದೆ.

ಹಸಿರು ಮಾರ್ಗವು ಒಟ್ಟು 33.46 ಕಿ.ಮೀ ಉದ್ದ ಹೊಂದಿದ್ದು, 32 ನಿಲ್ದಾಣಗಳ ಮೂಲಕ ನಗರದ ಉತ್ತರ ಮತ್ತು ದಕ್ಷಿಣ ಭಾಗಗಳನ್ನು ಸಂಪರ್ಕಿಸುತ್ತದೆ.

ಬೆಳಗಿನ ಪೀಕ್ ಅವರ್‌ನಲ್ಲಿ ಸಮಸ್ಯೆ ಎದುರಾದ ಕಾರಣ ಕಚೇರಿ, ಕಾಲೇಜು ಹಾಗೂ ಆಸ್ಪತ್ರೆಗಳಿಗೆ ತೆರಳುತ್ತಿದ್ದ ಸಾವಿರಾರು ಪ್ರಯಾಣಿಕರು ಯಶವಂತಪುರ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ಪರದಾಡುವಂತಾಗಿತ್ತು. ಇದೀಗ ಮೆಟ್ರೋ ಸೇವೆ ಸಹಜ ಸ್ಥಿತಿಗೆ ಮರಳಿದೆ.