Home Blog

ಜನರ ಸೇವೆಯೇ ಆಡಳಿತದ ಧರ್ಮ; ಕರ್ತವ್ಯ ಲೋಪ ಸಹಿಸುವುದಿಲ್ಲ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಳಗಾವಿ: ಸುವರ್ಣಸೌಧದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಆಡಳಿತದ ಕಾರ್ಯಕ್ಷಮತೆ, ಜನಸೇವೆ, ಅಭಿವೃದ್ಧಿ ಮತ್ತು ಅಧಿಕಾರಿಗಳ ಹೊಣೆಗಾರಿಕೆ ಕುರಿತು ಸ್ಪಷ್ಟ ಹಾಗೂ ಕಟ್ಟುನಿಟ್ಟಿನ ಸಂದೇಶ ನೀಡಿದರು.

“ನಾವು ರಾಜಕಾರಣಿಗಳು ಐದು ವರ್ಷಕ್ಕೊಮ್ಮೆ ಜನರ ಮುಂದೆ ಹೋಗಿ ಜನಾದೇಶ ಕೇಳುತ್ತೇವೆ. ಆದರೆ ಅಧಿಕಾರಿಗಳು ಪ್ರತಿದಿನ ಜನರ ವಿಶ್ವಾಸಕ್ಕೆ ಉತ್ತರದಾಯಕರಾಗಿರಬೇಕು. ಕರ್ತವ್ಯ ನಿರ್ವಹಿಸದಿರುವುದು ಕೇವಲ ಆಡಳಿತ ವೈಫಲ್ಯವಲ್ಲ, ಅದು ಜನತೆಗೆ ಮಾಡುವ ದ್ರೋಹ” ಎಂದು ಅವರು ಹೇಳಿದರು.

ಆಡಳಿತದಲ್ಲಿ ಶಿಸ್ತಿಗೆ ಯಾವುದೇ ರಾಜಿ ಇಲ್ಲ ಎಂದು ಎಚ್ಚರಿಸಿದ ಮುಖ್ಯಮಂತ್ರಿ, “ಸಭೆಯ ಮಧ್ಯೆ ಯಾವುದೇ ಅಧಿಕಾರಿ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದು ಕಂಡುಬಂದರೆ, ಸಭೆ ಮುಗಿಯುವ ವೇಳೆಗೆ ಅವರ ಅಮಾನತು ಆದೇಶ ಸಿದ್ಧವಾಗಿರುತ್ತದೆ. ಶಿಸ್ತು ಎನ್ನುವುದು ಆಡಳಿತದ ಮೊದಲ ನಿಯಮ” ಎಂದು ಹೇಳಿದರು.

ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದಲ್ಲೇ ನೆಲೆಸಬೇಕು ಎಂದು ಸೂಚಿಸಿದ ಅವರು, “ಜನರ ಸಮಸ್ಯೆಗಳನ್ನು ಕೇಳಲು ಅಧಿಕಾರಿಗಳು ಜನರ ಬಳಿಯೇ ಇರಬೇಕು. ಸಣ್ಣ ಕೆಲಸಗಳಿಗೂ ಜನರನ್ನು ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಅಲೆದಾಡಿಸುವ ಸಂಸ್ಕೃತಿ ಕೊನೆಗಾಣಬೇಕು. ಸಾಧ್ಯವಾದಷ್ಟು ಸಮಸ್ಯೆಗಳು ಸ್ಥಳೀಯ ಮಟ್ಟದಲ್ಲೇ ಇತ್ಯರ್ಥವಾಗಬೇಕು” ಎಂದರು.

ಪ್ರತಿ ಜಿಲ್ಲಾ ಮಟ್ಟದ ಅಧಿಕಾರಿಯೂ ತಮ್ಮ ಅಧೀನ ಅಧಿಕಾರಿಗಳ ಕಾರ್ಯಚಟುವಟಿಕೆಗಳ ಬಗ್ಗೆ ನಿತ್ಯ ಮಾಹಿತಿ ಹೊಂದಿರಬೇಕು ಎಂದು ಸೂಚಿಸಿದ ಅವರು, “ಯಾರು ಯಾವ ಗ್ರಾಮಕ್ಕೆ ಭೇಟಿ ನೀಡಿದರು, ಯಾವ ಸಮಸ್ಯೆ ಪರಿಹರಿಸಿದರು ಎಂಬುದರ ದಾಖಲೆ ಪ್ರತಿದಿನ ನವೀಕರಿಸಬೇಕು. ಫೀಲ್ಡ್ ಆಡಳಿತವೇ ಉತ್ತಮ ಆಡಳಿತದ ಅಳತೆ” ಎಂದು ಹೇಳಿದರು.

ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸಲು ಸರ್ಕಾರ ಸ್ಥಾಪಿಸಿರುವ *ಪ್ರಜಾಸೇವಾ ಇಲಾಖೆ*ಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸೂಚಿಸಿದ ಅವರು, “ಶಾಸಕರು, ಸಚಿವರು ಮತ್ತು ಅಧಿಕಾರಿಗಳು ಜನರ ಬಳಿಗೆ ತೆರಳಬೇಕು. ನಾನು ನಡೆಸುತ್ತಿರುವ ಜನಸ್ಪಂದನ ಮಾದರಿಯನ್ನೇ ಆಡಳಿತದ ಎಲ್ಲ ಹಂತಗಳಲ್ಲೂ ಅಳವಡಿಸಬೇಕು. ಕಾನೂನಿನ ವ್ಯಾಪ್ತಿಯಲ್ಲಿ ಸಾಧ್ಯವಿರುವ ಯಾವುದೇ ಸಮಸ್ಯೆಯನ್ನು ವಿಳಂಬ ಮಾಡದೆ ಪರಿಹರಿಸಬೇಕು” ಎಂದು ನಿರ್ದೇಶನ ನೀಡಿದರು.

ನಗರಾಭಿವೃದ್ಧಿಯಲ್ಲಿ ಯೋಜನಾಬದ್ಧತೆ ಅನಿವಾರ್ಯ ಎಂದು ಹೇಳಿದ ಮುಖ್ಯಮಂತ್ರಿ, “ಅವೈಜ್ಞಾನಿಕ ಬಡಾವಣೆಗಳಿಗೆ ಅವಕಾಶವಿಲ್ಲ. ನಗರಗಳು ಮತ್ತು ಪಟ್ಟಣಗಳು ಮುಂದಿನ ತಲೆಮಾರಿನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಯೋಜನಾಬದ್ಧವಾಗಿ ಬೆಳೆಯಬೇಕು. ಸರ್ಕಾರದ ನೀತಿ ತೀರ್ಮಾನಗಳನ್ನು ಅಧಿಕಾರಿಗಳು ಅಕ್ಷರಶಃ ಜಾರಿಗೆ ತರಬೇಕು” ಎಂದರು.

ಕಂದಾಯ ಇಲಾಖೆಯ *ಇ-ಖಾತೆ ಕ್ರಾಂತಿ*ಯನ್ನು ಉಲ್ಲೇಖಿಸಿದ ಅವರು, “ಒಂದು ರೂಪಾಯಿಯೂ ವೆಚ್ಚವಿಲ್ಲದೆ ಜನರ ಮನೆ ಬಾಗಿಲಿಗೆ ಇ-ಖಾತೆ ತಲುಪಿಸುವ ವ್ಯವಸ್ಥೆ ದೇಶದಲ್ಲೇ ಮಾದರಿಯಾಗಿದೆ. ಇದು ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ಪ್ರತಿಯೊಂದು ಜಿಲ್ಲೆಗೆ ವಿಸ್ತರಿಸಲಾಗುತ್ತಿದೆ” ಎಂದು ತಿಳಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪರಿವರ್ತನೆಯ ಘೋಷಣೆ ಮಾಡಿದ ಮುಖ್ಯಮಂತ್ರಿ, “ಕೆಪಿಎಸ್ ಶಾಲೆಗಳ ಯಶಸ್ವಿ ಮಾದರಿಯಂತೆ ಸಿಎಸ್‌ಆರ್ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಗ್ರಾಮೀಣ ಮಕ್ಕಳಿಗೂ ನಗರಮಟ್ಟದ ಶಿಕ್ಷಣ ದೊರೆಯಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ 10 ರಿಂದ 20 ಗುಣಮಟ್ಟದ ಶಾಲೆಗಳನ್ನು ನಿರ್ಮಿಸುವ ಗುರಿಯೊಂದಿಗೆ ಸರ್ಕಾರ ಮತ್ತು ಕೈಗಾರಿಕಾ ವಲಯ ಒಟ್ಟಾಗಿ ಕೆಲಸ ಮಾಡಲಿದೆ” ಎಂದರು.

ಮತದಾರರ ಪಟ್ಟಿ ಪರಿಷ್ಕರಣೆ (SIR) ಕುರಿತು ಮಾತನಾಡಿದ ಅವರು, “ಈ ವಿಷಯದಲ್ಲಿ ರಾಜಕಾರಣಕ್ಕೆ ಅವಕಾಶವಿಲ್ಲ. ಪ್ರತಿಯೊಬ್ಬ ಅರ್ಹ ನಾಗರಿಕನ ಮತದಾನದ ಹಕ್ಕು ರಕ್ಷಿಸುವುದು ನಮ್ಮ ಜವಾಬ್ದಾರಿ. ಬಿಎಲ್‌ಒಗಳು ಪ್ರತಿಯೊಂದು ಮನೆಗೆ ಕನಿಷ್ಠ ಮೂರು ಬಾರಿ ಭೇಟಿ ನೀಡಬೇಕು. ಅಗತ್ಯ ದಾಖಲೆಗಳನ್ನು ಸರ್ಕಾರವೇ ಒದಗಿಸುತ್ತದೆ. ಒಬ್ಬ ಅರ್ಹ ಮತದಾರನ ಹಕ್ಕೂ ಕಳೆದುಹೋಗಬಾರದು” ಎಂದು ಸೂಚಿಸಿದರು.

ಯುವಜನರ ಉದ್ಯೋಗಾವಕಾಶಗಳಿಗೆ ಹೊಸ ದಿಕ್ಕು ನೀಡುವ ಉದ್ದೇಶದಿಂದ ‘ಯುವ ಉದ್ಯೋಗ ಸೇತು’ ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ ಎಂದು ಘೋಷಿಸಿದ ಅವರು, ಖಾಸಗಿ ಕ್ಷೇತ್ರದ ಉದ್ಯೋಗಾವಕಾಶಗಳನ್ನು ವಿದ್ಯಾರ್ಥಿಗಳು ಮತ್ತು ಯುವಕರಿಗೆ ಸಂಪರ್ಕಿಸುವ ವ್ಯವಸ್ಥೆಯನ್ನು ಸರ್ಕಾರ ರೂಪಿಸುತ್ತಿದೆ ಎಂದು ಹೇಳಿದರು.

ಸಾಮಾಜಿಕ ಸಾಮರಸ್ಯ ಮತ್ತು ಸಂವಿಧಾನ ಮೌಲ್ಯಗಳ ಪ್ರಸಾರಕ್ಕಾಗಿ ರಾಜ್ಯಾದ್ಯಂತ 10,000 ‘ಭಾರತ್ ಜೋಡೋ ಯುವ ಸಂಘ’ಗಳನ್ನು ಸ್ಥಾಪಿಸಲಾಗುವುದು. ಪ್ರತಿಯೊಂದು ಸಂಘಕ್ಕೂ ₹10 ಲಕ್ಷ ಅನುದಾನ ನೀಡಲಾಗುವುದು. ಕುವೆಂಪು ಅವರ ವಿಶ್ವಮಾನವ ಸಂದೇಶ ಮತ್ತು ಸಂವಿಧಾನದ ಆದರ್ಶಗಳನ್ನು ಸಮಾಜದ ಮನೆಮನೆಗೆ ತಲುಪಿಸುವ ಸಾಂಸ್ಕೃತಿಕ ಚಳವಳಿಯಾಗಿ ಇದು ರೂಪುಗೊಳ್ಳಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಕೊನೆಗೆ ಕಂದಾಯ ಭೂಮಿಯ ಸಮಗ್ರ ಆಡಿಟ್‌ಗೆ ಸೂಚನೆ ನೀಡಿದ ಅವರು, “ರಾಜ್ಯದ ಪ್ರತಿಯೊಂದು ಇಂಚು ಸರ್ಕಾರಿ ಭೂಮಿಯ ನಿಖರ ಮಾಹಿತಿ ಸರ್ಕಾರದ ಬಳಿ ಇರಬೇಕು. ನಿವೇಶನ ರಹಿತ ಬಡ ಕುಟುಂಬಗಳಿಗೆ ನಿವೇಶನ ಒದಗಿಸುವ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ಶೀಘ್ರದಲ್ಲೇ ಜಾರಿಗೊಳಿಸಲಾಗುವುದು” ಎಂದು ತಿಳಿಸಿದರು.

ಹಿರಿಯೂರು ಉಪಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ: ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟನೆ

ಬೆಂಗಳೂರು: ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಜೆಪಿ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿರಿಯೂರು ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸಬೇಕು ಎಂಬ ಅಭಿಪ್ರಾಯವಿದೆ. ಆದರೆ ತಾವು ಅಭ್ಯರ್ಥಿಯಾಗುವುದಿಲ್ಲ ಎಂದು ಹೇಳಿದರು. “ಉಪಚುನಾವಣೆಯಲ್ಲಿ ಸ್ಪರ್ಧಿಸುವುದು ನನ್ನ ಕೆಲಸವಲ್ಲ.

ನಾನು ಕೇಂದ್ರ ಸಚಿವನಾಗಿದ್ದು, ನನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ. ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಯಲಿದೆ. ರಾಜ್ಯದಲ್ಲಿರುವ ಈ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡುತ್ತೇವೆ. ಈ ಸಂಬಂಧ ಈಗಾಗಲೇ ಬಿಜೆಪಿ ಹೈಕಮಾಂಡ್‌ಗೂ ಮನವಿ ಮಾಡಿದ್ದೇನೆ” ಎಂದು ತಿಳಿಸಿದರು.

ಮೈಸೂರಿನಲ್ಲಿ ನೀಡಿದ್ದ “ರಾಜ್ಯಕ್ಕೆ ವಾಪಸ್ ಬರುತ್ತೇನೆ” ಎಂಬ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ ಅವರು, “ಅದರ ಅರ್ಥ ತಕ್ಷಣವೇ ರಾಜ್ಯ ರಾಜಕೀಯಕ್ಕೆ ಮರಳುತ್ತೇನೆ ಎನ್ನುವುದಲ್ಲ. ಇನ್ನೂ ಎರಡು ವರ್ಷಗಳ ಅವಧಿ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ನನಗೆ ಜವಾಬ್ದಾರಿ ನೀಡಿದ್ದಾರೆ. ಇನ್ನೂ ಮೂರು ವರ್ಷ ಕೇಂದ್ರ ಸಚಿವನಾಗಿ ಕೆಲಸ ಮಾಡುತ್ತೇನೆ. ಜೊತೆಗೆ ರಾಜ್ಯದಲ್ಲಿ ಪಕ್ಷ ಸಂಘಟನೆಯ ಕೆಲಸವನ್ನೂ ಮುಂದುವರಿಸುತ್ತೇನೆ” ಎಂದರು.

ರಾಜ್ಯ ಸರ್ಕಾರ ಕೂಡಲೇ ವಿಧಾನಮಂಡಲ ಅಧಿವೇಶನವನ್ನು ಕರೆಯಬೇಕು ಎಂದು ಆಗ್ರಹಿಸಿದ ಕುಮಾರಸ್ವಾಮಿ, ಎಸ್‌ಐಆರ್ ವಿಚಾರಕ್ಕೂ ಅಧಿವೇಶನಕ್ಕೂ ಯಾವುದೇ ಸಂಬಂಧ ಇಲ್ಲ. ರಾಜ್ಯದಲ್ಲಿ ಅನೇಕ ಗಂಭೀರ ಸಮಸ್ಯೆಗಳಿದ್ದು, ಅವುಗಳ ಕುರಿತು ಸದನದಲ್ಲಿ ಚರ್ಚೆ ನಡೆಯಬೇಕು. ಆದ್ದರಿಂದ ಸರ್ಕಾರ ವಿಳಂಬ ಮಾಡದೆ ಅಧಿವೇಶನ ನಡೆಸಬೇಕು ಎಂದು ಒತ್ತಾಯಿಸಿದರು.

ರೈತರ ಸಮಸ್ಯೆಗಳ ಕುರಿತು ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಕಬ್ಬಿನ ಬೆಳೆ ನೀರಿನ ಕೊರತೆಯಿಂದ ಒಣಗುತ್ತಿದೆ. ರೈತರ ಬೆಳೆ ಉಳಿಸಲು ಸರ್ಕಾರ ತಕ್ಷಣವೇ ನೀರು ಹರಿಸಬೇಕು. ತಮಿಳುನಾಡಿಗೆ ನೀಡಬೇಕಿರುವ ನೀರನ್ನು ನಂತರ ಮಳೆ ಬಂದ ಬಳಿಕ ಬಿಡುಗಡೆ ಮಾಡಬಹುದು. ಮೊದಲ ಆದ್ಯತೆ ರಾಜ್ಯದ ರೈತರ ಬೆಳೆ ರಕ್ಷಣೆಗೆ ನೀಡಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಕೃಷಿ ಇಲಾಖೆಯ ಸಮಸ್ಯೆಗಳತ್ತ ಸರ್ಕಾರ ಗಂಭೀರವಾಗಿ ಗಮನ ಹರಿಸಬೇಕು ಎಂದು ಸಲಹೆ ನೀಡಿದ ಅವರು, “ರಾಜ್ಯದಲ್ಲಿ ಕೃಷಿ ಸಚಿವರಿಲ್ಲ. ಮುಖ್ಯಮಂತ್ರಿ ಅವರೇ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಬರ ಪರಿಸ್ಥಿತಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕೆಲವೆಡೆ ಮಳೆ ಕೊರತೆಯಿದ್ದರೆ, ಇನ್ನೂ ಕೆಲವು ಭಾಗಗಳಲ್ಲಿ ಅತಿವೃಷ್ಟಿಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ಎರಡೂ ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸಿ ರೈತರು ಹಾಗೂ ಜನರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು” ಎಂದು ಆಗ್ರಹಿಸಿದರು.

ಸರಳ ಮದುವೆ… ಆದರೆ ಕೋಟಿ ಕುತೂಹಲದ ಉಂಗುರ! ಗೌರಿಗೆ ಆಮಿರ್ ಖಾನ್ ನೀಡಿದ ರಿಂಗ್ ವಿಶೇಷವೇನು?

ಮುಂಬೈ: ಸರಳ ಮದುವೆ ಮಾಡಿಕೊಂಡರೂ, ಪತ್ನಿಗೆ ನೀಡಿದ ಉಂಗುರದ ಮೂಲಕ ಬಾಲಿವುಡ್ ನಟ ಆಮಿರ್ ಖಾನ್ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ತಮ್ಮ ಮೂರನೇ ಪತ್ನಿ ಗೌರಿ ಸ್ಪ್ರಾಟ್ ಅವರಿಗೆ ನೀಡಿರುವ ಮಡಗಾಸ್ಕರ್ ರೂಬಿ ಉಂಗುರದ ಅಂದಾಜು ಬೆಲೆ 25 ಲಕ್ಷ ರೂಪಾಯಿಗೂ ಹೆಚ್ಚು ಎನ್ನಲಾಗಿದ್ದು, ಈ ರಿಂಗ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಖಾಸಗಿ ಸಮಾರಂಭದಲ್ಲಿ ನಡೆದ ರಿಜಿಸ್ಟರ್ ಮ್ಯಾರೇಜ್ ಬಳಿಕ ಆಮಿರ್ ಮತ್ತು ಗೌರಿ ಉಂಗುರ ವಿನಿಮಯ ಮಾಡಿಕೊಂಡಿದ್ದರು. ರಾಜಮನೆತನದ ಆಭರಣಗಳ ಮಾದರಿಯಲ್ಲಿ ವಿನ್ಯಾಸಗೊಳಿಸಲಾದ ಈ ಉಂಗುರದಲ್ಲಿ ಅಪರೂಪದ ಮಡಗಾಸ್ಕರ್ ರೂಬಿ ಹಾಗೂ ಅದರ ಸುತ್ತ 40 ವಜ್ರದ ಹರಳುಗಳನ್ನು ಅಳವಡಿಸಲಾಗಿದೆ.

ಮಾಹಿತಿಯ ಪ್ರಕಾರ, ಈ ಉಂಗುರ ತಯಾರಿಸಲು 131 ಕುಶಲಕರ್ಮಿಗಳು ಸುಮಾರು 256 ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ. ಶುದ್ಧ ರೂಬಿ ಕಲ್ಲು ಸಂಗ್ರಹಿಸಲು ಮಾತ್ರ ಮೂರು ತಿಂಗಳು ಬೇಕಾಗಿದ್ದು, ಉಂಗುರದ ನಿರ್ಮಾಣ ವೆಚ್ಚವೇ ಮದುವೆಯ ಒಟ್ಟು ಖರ್ಚಿಗಿಂತ ಹೆಚ್ಚಾಗಿದೆ ಎನ್ನಲಾಗುತ್ತಿದೆ.

ಸರಳ ವಿವಾಹದ ಮೂಲಕ ಗಮನ ಸೆಳೆದಿದ್ದ ಆಮಿರ್ ಖಾನ್, ಇದೀಗ ಐಷಾರಾಮಿ ಉಂಗುರದ ಮೂಲಕ ಮತ್ತೆ ಸುದ್ದಿಯಾಗಿದ್ದು, ಗೌರಿಗೆ ನೀಡಿದ ಈ ವಿಶೇಷ ಉಡುಗೊರೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

2-3 ಪಂದ್ಯಗಳಿಂದ ನಾಯಕನ ಸಾಮರ್ಥ್ಯ ಅಳೆಯಬೇಡಿ: ಶ್ರೇಯಸ್ ಅಯ್ಯರ್ʼಗೆ ಎಬಿ ಡಿವಿಲಿಯರ್ಸ್ ಬೆಂಬಲ

ನವದೆಹಲಿ: ಭಾರತ ಟಿ20 ತಂಡದ ನೂತನ ನಾಯಕ ಶ್ರೇಯಸ್ ಅಯ್ಯರ್ ಸತತ ಸೋಲುಗಳ ಹಿನ್ನೆಲೆಯಲ್ಲಿ ಟೀಕೆಗೆ ಗುರಿಯಾಗಿರುವ ಬೆನ್ನಲ್ಲೇ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಕೇವಲ ಎರಡು ಅಥವಾ ಮೂರು ಪಂದ್ಯಗಳ ಫಲಿತಾಂಶವನ್ನು ಆಧರಿಸಿ ನಾಯಕನ ಸಾಮರ್ಥ್ಯವನ್ನು ಅಳೆಯುವುದು ಸರಿಯಲ್ಲ ಎಂದು ಎಬಿಡಿ ಅಭಿಪ್ರಾಯಪಟ್ಟಿದ್ದಾರೆ.

ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂಲಕ ಭಾರತ ತಂಡದ ನಾಯಕನಾಗಿ ಪದಾರ್ಪಣೆ ಮಾಡಿದ ಶ್ರೇಯಸ್ ಅಯ್ಯರ್, ಮೊದಲ ಸರಣಿಯಲ್ಲೇ 2-0 ಅಂತರದ ಸೋಲು ಅನುಭವಿಸಿದ್ದರು. ಬಳಿಕ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಮೊದಲ ಪಂದ್ಯ ಮಳೆಯಿಂದ ರದ್ದಾದರೆ, ಉಳಿದ ಎರಡು ಪಂದ್ಯಗಳಲ್ಲೂ ಭಾರತ ಸೋಲು ಕಂಡಿದೆ. ಇದರೊಂದಿಗೆ ಅಯ್ಯರ್ ನಾಯಕತ್ವದ ಬಗ್ಗೆ ಹಲವು ಪ್ರಶ್ನೆಗಳು ಕೇಳಿಬಂದಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಎಬಿ ಡಿವಿಲಿಯರ್ಸ್, ಐಪಿಎಲ್‌ನಲ್ಲಿ ಶ್ರೇಯಸ್ ಅಯ್ಯರ್ ತೋರಿದ ನಾಯಕತ್ವದ ಗುಣಗಳನ್ನು ನೆನಪಿಸಿಕೊಂಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳನ್ನು ಯಶಸ್ವಿಯಾಗಿ ಮುನ್ನಡೆಸಿದ ಅನುಭವ ಹೊಂದಿರುವ ಅಯ್ಯರ್, ಒತ್ತಡದ ಸಂದರ್ಭಗಳಲ್ಲೂ ಶಾಂತ ಹಾಗೂ ಸಂಯಮದಿಂದ ನಿರ್ಧಾರ ಕೈಗೊಳ್ಳುವ ನಾಯಕ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಠಿಣ ಪರಿಸ್ಥಿತಿಯಲ್ಲೂ ತಂಡವನ್ನು ಒಗ್ಗೂಡಿಸಿಕೊಂಡು ಸಾಗಿಸುವ ಸಾಮರ್ಥ್ಯ ಅಯ್ಯರ್ ಅವರ ದೊಡ್ಡ ಶಕ್ತಿಯಾಗಿದೆ. ಆದ್ದರಿಂದ ಆರಂಭಿಕ ವೈಫಲ್ಯಗಳನ್ನೇ ಆಧಾರವಾಗಿಟ್ಟುಕೊಂಡು ಅವರ ನಾಯಕತ್ವವನ್ನು ಟೀಕಿಸುವುದು ನ್ಯಾಯಸಮ್ಮತವಲ್ಲ ಎಂದು ಡಿವಿಲಿಯರ್ಸ್ ಹೇಳಿದ್ದಾರೆ.

“ಒಬ್ಬ ನಾಯಕನ ಸಾಮರ್ಥ್ಯವನ್ನು ಎರಡು ಅಥವಾ ಮೂರು ಪಂದ್ಯಗಳ ಫಲಿತಾಂಶದಿಂದ ನಿರ್ಧರಿಸಲು ಸಾಧ್ಯವಿಲ್ಲ. ಶ್ರೇಯಸ್ ಅಯ್ಯರ್ ಅವರಿಗೆ ಸಾಕಷ್ಟು ಸಮಯ ಮತ್ತು ಅವಕಾಶ ನೀಡಬೇಕು. ಆಗ ಮಾತ್ರ ಅವರ ನಾಯಕತ್ವದ ನಿಜವಾದ ಮೌಲ್ಯಮಾಪನ ಸಾಧ್ಯ” ಎಂದು ಎಬಿ ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ.

ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಅವರ ನಂತರ ಭಾರತ ಟಿ20 ತಂಡದ ನಾಯಕತ್ವ ವಹಿಸಿಕೊಂಡಿರುವ ಶ್ರೇಯಸ್ ಅಯ್ಯರ್ ಸದ್ಯ ಸವಾಲಿನ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟ್ರೆಂಟ್ ಬ್ರಿಡ್ಜ್ ಪಂದ್ಯದಲ್ಲಿ ಭಾರೀ ಸೋಲು ಕಂಡ ಬಳಿಕ ತಂಡದ ಮೇಲೆ ಒತ್ತಡ ಹೆಚ್ಚಾಗಿದ್ದರೂ, ಅಯ್ಯರ್ ಮೇಲೆ ವಿಶ್ವಾಸ ಕಳೆದುಕೊಳ್ಳುವ ಅಗತ್ಯವಿಲ್ಲ ಎಂದು ಎಬಿಡಿ ಹೇಳಿದ್ದಾರೆ.

ಅಯ್ಯರ್ ಉತ್ತಮ ನಾಯಕನಾಗುವ ಎಲ್ಲಾ ಗುಣಗಳನ್ನು ಹೊಂದಿದ್ದಾರೆ. ಅವರಿಗೆ ಸಮಯ ನೀಡಿದರೆ ತಮ್ಮ ಸಾಮರ್ಥ್ಯವನ್ನು ಖಂಡಿತ ಸಾಬೀತುಪಡಿಸಲಿದ್ದಾರೆ ಎಂದು ಎಬಿ ಡಿವಿಲಿಯರ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಖಮೇನಿ ಅಂತ್ಯಕ್ರಿಯೆಗೆ ಅಲೀಪುರದಿಂದ ಹಲವು ಗ್ರಾಮಸ್ಥರ ಪ್ರಯಾಣ: ಗ್ರಾಮದಲ್ಲಿ ನೇರ ಪ್ರಸಾರಕ್ಕೆ ಸಿದ್ಧತೆ

ಚಿಕ್ಕಬಳ್ಳಾಪುರ: ಇರಾನ್‌ನ ಪರಮೋಚ್ಚ ಧಾರ್ಮಿಕ ನಾಯಕ ಆಯತೊಲ್ಲಾ ಖಮೇನಿ ಅವರ ಅಂತಿಮ ವಿಧಿವಿಧಾನ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲೀಪುರ ಗ್ರಾಮದಲ್ಲಿ ವಿಶೇಷ ಧಾರ್ಮಿಕ ವಾತಾವರಣ ನಿರ್ಮಾಣವಾಗಿದೆ. ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಗ್ರಾಮದಿಂದ 20 ರಿಂದ 25 ಮಂದಿ ಈಗಾಗಲೇ ಇರಾನ್‌ಗೆ ತೆರಳಿದ್ದಾರೆ.

ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಶಿಯಾ ಮುಸ್ಲಿಂ ಸಮುದಾಯ ವಾಸಿಸುವ ಅಲೀಪುರದಲ್ಲಿ ನೂರಾರು ಜನರು ಅಂತ್ಯಕ್ರಿಯೆಯ ನೇರ ಪ್ರಸಾರ ವೀಕ್ಷಿಸಲು ಬೃಹತ್ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಮಧ್ಯಾಹ್ನ 3 ಗಂಟೆಯ ಬಳಿಕ ನಡೆಯಲಿರುವ ಕಾರ್ಯಕ್ರಮವನ್ನು ಸಾಮೂಹಿಕವಾಗಿ ವೀಕ್ಷಿಸಲು ಗ್ರಾಮಸ್ಥರು ಸಜ್ಜಾಗಿದ್ದಾರೆ.

ಇರಾನ್‌ನಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿದ್ದು, ವಿಶೇಷ ಪ್ರಾರ್ಥನೆ ಹಾಗೂ ನೇರ ಪ್ರಸಾರದ ವ್ಯವಸ್ಥೆಗಳನ್ನು ಸ್ಥಳೀಯರು ಕೈಗೊಂಡಿದ್ದಾರೆ. ಅಂತ್ಯಕ್ರಿಯೆಯ ನೇರ ಪ್ರಸಾರ ವೀಕ್ಷಿಸಲು ಗ್ರಾಮಸ್ಥರು ಕಾತರದಿಂದ ಕಾಯುತ್ತಿದ್ದಾರೆ.

ಬಿಜೆಪಿಯ ಒಬ್ಬ ನಾಯಕನ ಮಗನೂ RSSನಲ್ಲಿ ಪೂರ್ಣಕಾಲಿಕ ಪ್ರಚಾರಕನಾಗಿಲ್ಲ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ಬಿಜೆಪಿಯ ಯಾವುದೇ ಪ್ರಮುಖ ನಾಯಕರ ಮಗ ಕೂಡ ಆರ್‌ಎಸ್‌ಎಸ್‌ನ ಪೂರ್ಣಕಾಲಿಕ ಪ್ರಚಾರಕರಾಗಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಕೊಲೆ ಪ್ರಕರಣಗಳಲ್ಲಿ ಜೈಲು ಸೇರಿದವರಿಗೆ ಸಂಘ ಪರಿವಾರದಿಂದ ಯಾವುದೇ ನೆರವು ಸಿಗುತ್ತಿಲ್ಲ ಎಂಬ ಹಿಂದೂ ಸಂಘಟನೆಗಳ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, “ಇದೇ ವಿಚಾರವನ್ನು ನಾನು ಬಹಳ ಹಿಂದಿನಿಂದಲೂ ಹೇಳುತ್ತಿದ್ದೇನೆ. ಈಗ ಅದನ್ನೇ ಅವರೇ ಒಪ್ಪಿಕೊಳ್ಳುತ್ತಿರುವಂತಾಗಿದೆ” ಎಂದು ಹೇಳಿದರು.

“ಧರ್ಮ ರಕ್ಷಣೆ, ಗೋ ರಕ್ಷಣೆ, ಸಂಘಟನೆಗಳ ಚಟುವಟಿಕೆಗಳಿಗೆ ಬಡವರ ಮಕ್ಕಳನ್ನು ಕಳುಹಿಸಲಾಗುತ್ತದೆ. ಆದರೆ ಬಿಜೆಪಿ ನಾಯಕರ ಮಕ್ಕಳು ಏನು ಮಾಡುತ್ತಿದ್ದಾರೆ? ಬಿಜೆಪಿಯ ಒಬ್ಬ ನಾಯಕರ ಮಗನಾದರೂ ಆರ್‌ಎಸ್‌ಎಸ್‌ನ ಪೂರ್ಣಕಾಲಿಕ ಪ್ರಚಾರಕರಾಗಿದ್ದರೆ ತೋರಿಸಿ” ಎಂದು ಸವಾಲು ಹಾಕಿದರು.

“ವಿಜಯದಶಮಿ ದಿನ ಮಾತ್ರ ಗಣವೇಷ ಧರಿಸುವುದು ಬೇರೆ, ಪೂರ್ಣಕಾಲಿಕ ಪ್ರಚಾರಕರಾಗಿ ಕೆಲಸ ಮಾಡುವುದು ಬೇರೆ. ಕೋಮು ಗಲಭೆಗಳಲ್ಲಿ ಸಾವಿಗೀಡಾಗುವವರು ಸಾಮಾನ್ಯ ಕುಟುಂಬಗಳ ಯುವಕರೇ ಹೊರತು ನಾಯಕರ ಮಕ್ಕಳು ಅಲ್ಲ” ಎಂದು ಅವರು ಟೀಕಿಸಿದರು.

ಪರೇಶ್ ಮೆಸ್ತಾ ಪ್ರಕರಣವನ್ನು ಉಲ್ಲೇಖಿಸಿದ ಖರ್ಗೆ, “ಅವರ ಹೆಸರಿನಲ್ಲಿ ಚುನಾವಣೆ ಗೆದ್ದರು. ಆದರೆ ನಂತರ ಅವರ ಕುಟುಂಬದವರನ್ನು ಎಷ್ಟು ಬಾರಿ ಭೇಟಿ ಮಾಡಿದ್ದಾರೆ? ಅನೇಕ ಯುವಕರು ಸಾವನ್ನಪ್ಪಿದ್ದಾರೆ. ಆದರೆ ಅವರ ಕುಟುಂಬಗಳ ಕಷ್ಟಕ್ಕೆ ಸ್ಪಂದಿಸುವವರು ಯಾರು?” ಎಂದು ಪ್ರಶ್ನಿಸಿದರು.

ಯುವಕರಿಗೆ ಸಲಹೆ ನೀಡಿದ ಅವರು, “ಉದ್ಯೋಗ ಹುಡುಕಿ, ಕುಟುಂಬಕ್ಕೆ ಆಸರೆಯಾಗಿರಿ. ಕೋಮು ಗಲಭೆಗಳಲ್ಲಿ ಭಾಗಿಯಾಗಬೇಡಿ. ನಿಮ್ಮನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ. ದಲಿತರು ಮತ್ತು ಹಿಂದುಳಿದ ವರ್ಗದ ಯುವಕರನ್ನೇ ಹೆಚ್ಚಾಗಿ ಇಂತಹ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ” ಎಂದು ಹೇಳಿದರು.

“ರೈತರ ಸಮಸ್ಯೆ, ನಿರುದ್ಯೋಗ, ಬೆಲೆ ಏರಿಕೆ ಮೊದಲಾದ ಜನಸಾಮಾನ್ಯರ ವಿಚಾರಗಳಲ್ಲಿ ಸಂಘ ಪರಿವಾರ ಹೋರಾಟ ನಡೆಸಿದೆಯೇ? ಇಂತಹ ವಿಷಯಗಳ ಬದಲಿಗೆ ಬೇರೆ ವಿಚಾರಗಳಿಗೆ ಮಾತ್ರ ಪ್ರಚೋದನೆ ನೀಡಲಾಗುತ್ತಿದೆ” ಎಂದು ಆರೋಪಿಸಿದರು.

“ನನಗೆ ಬೆದರಿಕೆ ಹಾಕಿದ್ದ ಒಬ್ಬ ಯುವಕನಿಗೆ ಕೂಡ ಸಂಘಟನೆಗಳು ವಕೀಲರ ನೆರವು ನೀಡಲಿಲ್ಲ. ಆತನ ತಾಯಿ ಮನವಿ ಮಾಡಿದ ಕಾರಣ ನಾನು ಸಹಾಯ ಮಾಡಿದ್ದೆ. ಯುವಕರನ್ನು ಮುಂದೆ ತಳ್ಳಿದ ಬಳಿಕ ಅವರ ನೆರವಿಗೆ ಯಾರೂ ಬರುವುದಿಲ್ಲ. ಆದ್ದರಿಂದ ಯುವಕರು ಎಚ್ಚರಿಕೆಯಿಂದ ಇರಬೇಕು” ಎಂದು ಪ್ರಿಯಾಂಕ್ ಖರ್ಗೆ ಕರೆ ನೀಡಿದರು.

ಸರ್ಕಾರಿ ಉದ್ಯೋಗಕ್ಕಾಗಿ ತಾಯಿಯ ಹತ್ಯೆ: 7 ಲಕ್ಷ ರೂ. ಸುಪಾರಿ ಕೊಟ್ಟ ಮಗಳು ಸೇರಿ 7 ಮಂದಿ ಅರೆಸ್ಟ್!

ಜೈಪುರ: ಆಸ್ತಿ ಹಾಗೂ ಸರ್ಕಾರಿ ಉದ್ಯೋಗದ ಆಸೆಗೆ 7 ಲಕ್ಷ ರೂ. ಸುಪಾರಿ ನೀಡಿ ತಾಯಿಯನ್ನೇ ಹತ್ಯೆ ಮಾಡಿಸಿದ ಬೆಚ್ಚಿಬೀಳಿಸುವ ಘಟನೆ ರಾಜಸ್ಥಾನದ ಜೈಪುರದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತೆಯ ಪುತ್ರಿ ಸೇರಿದಂತೆ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮತ್ತೋರ್ವ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಬಂಧಿತೆ ಆಯುಷಿ ಶರ್ಮಾ (23) ತನ್ನ ಚಿಕ್ಕಪ್ಪ ಮೋಹನ್ ಸ್ವರೂಪ್ ಹಾಗೂ ಸಂಬಂಧಿ ಬಲರಾಮ್ ಅಲಿಯಾಸ್ ರವಿ ಜೊತೆ ಸೇರಿ ಕೊಲೆ ಸಂಚು ರೂಪಿಸಿದ್ದಳು. ಬಳಿಕ ಬಾಡಿಗೆ ಹಂತಕರಿಗೆ 7 ಲಕ್ಷ ರೂ. ಸುಪಾರಿ ನೀಡಿ, ತನ್ನ ತಾಯಿ ನೀರಜ್ ಶರ್ಮಾ ಅವರನ್ನು ಅಪಘಾತದಂತೆ ತೋರಿಸಿ ಹತ್ಯೆ ಮಾಡಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ನೀರಜ್ ಶರ್ಮಾ (45) ನ್ಯಾಯಾಲಯದಲ್ಲಿ ಕೆಳ ವಿಭಾಗದ ಗುಮಾಸ್ತರಾಗಿ (LDC) ಕರ್ತವ್ಯ ನಿರ್ವಹಿಸುತ್ತಿದ್ದರು. ಜುಲೈ 3ರಂದು ತಮ್ಮ ಮಗನನ್ನು ಟ್ಯೂಷನ್‌ಗೆ ಬಿಟ್ಟು ಮನೆಗೆ ಹಿಂದಿರುಗುತ್ತಿದ್ದ ವೇಳೆ ಪ್ರತಾಪ್ ನಗರ ಸಮೀಪ ಅತಿ ವೇಗದಲ್ಲಿ ಬಂದ ಸ್ಕಾರ್ಪಿಯೋ ಎಸ್‌ಯುವಿ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಅವರು ಸುಮಾರು 100 ಅಡಿ ದೂರಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದರು.

ಆರಂಭದಲ್ಲಿ ಇದನ್ನು ರಸ್ತೆ ಅಪಘಾತವೆಂದು ಭಾವಿಸಲಾಗಿತ್ತು. ಆದರೆ ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರಿಗೆ ಇದು ಪೂರ್ವನಿಯೋಜಿತ ಕೊಲೆ ಎಂಬುದು ಗೊತ್ತಾಗಿದೆ. ಬಳಿಕ ನಡೆಸಿದ ತನಿಖೆಯಲ್ಲಿ ಸಂಪೂರ್ಣ ಸಂಚು ಬಯಲಿಗೆ ಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ಮೊದಲಿಗೆ ಬಾಡಿಗೆಗೆ ಪಡೆದ ಥಾರ್ ಎಸ್‌ಯುವಿ ಮೂಲಕ ನೀರಜ್ ಅವರ ಚಲನವಲನಗಳ ಮೇಲೆ ನಿಗಾ ವಹಿಸಿದ್ದರು. ಆ ಯೋಜನೆ ವಿಫಲವಾದ ಬಳಿಕ ಸ್ಕಾರ್ಪಿಯೋ ವಾಹನ ಬಳಸಿಕೊಂಡು ಅಂತಿಮವಾಗಿ ದಾಳಿ ನಡೆಸಿದ್ದರು.

ಘಟನೆ ನಡೆದ ದಿನ ನೀರಜ್ ಅವರ ಸ್ಥಳದ ಮಾಹಿತಿಯನ್ನು ಒಬ್ಬ ಆರೋಪಿ ನೀಡುತ್ತಿದ್ದರೆ, ಮತ್ತೊಬ್ಬ ಬೈಕ್‌ನಲ್ಲಿ ಸಮೀಪದಲ್ಲೇ ಕಾದಿದ್ದ. ಸ್ಕಾರ್ಪಿಯೋ ಚಾಲನೆ ಮಾಡುತ್ತಿದ್ದ ಆರೋಪಿ ನೀರಜ್ ಅವರಿಗೆ ಡಿಕ್ಕಿ ಹೊಡೆದ ಬಳಿಕ, ಆರೋಪಿಗಳು ವಾಹನ ಬಿಟ್ಟು ಬೈಕ್‌ನಲ್ಲಿ ಪರಾರಿಯಾಗಿದ್ದರು.

ತನಿಖೆ ವೇಳೆ ನೀರಜ್ ಅವರ ಪತಿ ಸುಮಾರು ಒಂದು ವರ್ಷದ ಹಿಂದೆ ಮೃತಪಟ್ಟಿದ್ದು, ಬಳಿಕ ಅನುಕಂಪದ ಆಧಾರದ ಮೇಲೆ ಅವರಿಗೆ ಎಲ್‌ಡಿಸಿ ಹುದ್ದೆ ದೊರೆತಿತ್ತು ಎಂಬುದು ತಿಳಿದುಬಂದಿದೆ. ಆ ಉದ್ಯೋಗ ತನ್ನ ಪಾಲಾಗಬೇಕೆಂದು ಆಯುಷಿ ಬಯಸಿದ್ದಳು. ಅಲ್ಲದೆ ಕಳೆದ ಎರಡು-ಮೂರು ವರ್ಷಗಳಿಂದ ತಾಯಿ-ಮಗಳ ನಡುವೆ ಆಸ್ತಿ ವಿಚಾರದಲ್ಲೂ ಭಿನ್ನಾಭಿಪ್ರಾಯವಿತ್ತು. ಇದೇ ಕೊಲೆಗೆ ಪ್ರಮುಖ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಆಯುಷಿ ಶರ್ಮಾ, ಮೋಹನ್ ಸ್ವರೂಪ್, ಮೋಹಿತ್ ಶರ್ಮಾ, ಆಕಾಶ್ ಶರ್ಮಾ, ಅರವಿಂದ್ ಶರ್ಮಾ, ಹೇಮಂತ್ ಶರ್ಮಾ ಹಾಗೂ ರೋಹಿತ್ ಜಾತವ್ ಅವರನ್ನು ಬಂಧಿಸಲಾಗಿದೆ. ಪ್ರಮುಖ ಸಂಚುಕೋರ ಬಲರಾಮ್ ಅಲಿಯಾಸ್ ರವಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ: ಇಬ್ಬರು ಸಾವು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ

ಇಟಾನಗರ್: ಅರುಣಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮ ಲೋಹಿತ್ ಜಿಲ್ಲೆಯ ಶಿವಾಜಿ ನಗರದಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಇನ್ನೂ ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಬೆಟ್ಟದ ಇಳಿಜಾರು ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಿಂದ ಹಲವು ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಐವರು ಅವಶೇಷಗಳಡಿ ಸಿಲುಕಿದ್ದು, ಅವರಲ್ಲಿ ಒಬ್ಬರು ಸುರಕ್ಷಿತವಾಗಿ ಹೊರಬಂದಿದ್ದಾರೆ. ರಕ್ಷಣಾ ಸಿಬ್ಬಂದಿ ಇದುವರೆಗೆ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ದುರಂತದಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡವರು ಸ್ಥಳೀಯ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ವಲಸೆ ಕಾರ್ಮಿಕರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಹಾಗೂ ಅರುಣಾಚಲ ಪ್ರದೇಶ ಪೊಲೀಸ್ ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳೀಯ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯವೂ ಮುಂದುವರಿದಿದೆ.

ಇನ್ನೊಂದೆಡೆ, ನಿರಂತರ ಮಳೆಯಿಂದ ತಿರಪ್ ಜಿಲ್ಲೆಯ ಖೋನ್ಸಾ–ಲಾಜು ರಸ್ತೆಯ ಅಂಚೆ ಕಚೇರಿ ಸಮೀಪ ಸುಮಾರು 110 ಮೀಟರ್ ರಸ್ತೆ ಕುಸಿದಿದೆ. ಇದರ ಪರಿಣಾಮ ಜಿಲ್ಲೆಯ ಹಲವು ಗ್ರಾಮಗಳ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ.

ಭಾರೀ ಮಳೆ, ಹಠಾತ್ ಪ್ರವಾಹ ಹಾಗೂ ಭೂಕುಸಿತ ಸಂಭವಿಸುವ ಸಾಧ್ಯತೆ ಕುರಿತು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿತ್ತು. ಮುಂದಿನ ಕೆಲವು ದಿನಗಳಲ್ಲೂ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆಯಿಂದ ಇರಲು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಮೂವರು ಮಕ್ಕಳ ತಾಯಿಯೊಂದಿಗಿನ ಜಿಮ್ ಟ್ರೇನರ್‌ ಲಿವ್-ಇನ್ ಸಂಬಂಧ: ಸುಪಾರಿ ಕೊಲೆ ಎಂದು ಕುಟುಂಬಸ್ಥರ ಆರೋಪ

ಚಿಕ್ಕಬಳ್ಳಾಪುರ: ರಸ್ತೆ ಅಪಘಾತ ಎಂದು ದಾಖಲಾಗಿದ್ದ ಜಿಮ್ ಟ್ರೇನರ್ ದೇವಿಪ್ರಸಾದ್ ಸಾವಿನ ಪ್ರಕರಣ ಈಗ ಕೊಲೆ ಶಂಕೆಯತ್ತ ತಿರುಗಿದೆ. ಪೂರ್ವನಿಯೋಜಿತವಾಗಿ ಸುಪಾರಿ ನೀಡಿ ಹತ್ಯೆ ಮಾಡಲಾಗಿದೆ ಎಂದು ಮೃತನ ಕುಟುಂಬ ಆರೋಪಿಸಿದ್ದು, ಪ್ರಕರಣದ ಮರು ತನಿಖೆಗೆ ಚಿಕ್ಕಬಳ್ಳಾಪುರ ಎಸ್‌ಪಿಗೆ ದೂರು ನೀಡಿದೆ.

ನಾರಾಯಣಪುರ ನಿವಾಸಿ ದೇವಿಪ್ರಸಾದ್ ಮೇ 8ರಂದು ಸಂಬಂಧಿ ವಿಕ್ಕಿ ಹಾಗೂ ಸ್ನೇಹಿತ ಜೋಸ್ವಾ ಜೋಸೆಫ್ ಜೊತೆ ಬೈಕ್‌ನಲ್ಲಿ ಗುಡಿಬಂಡೆ ಕಡೆ ತೆರಳಿದ್ದ ವೇಳೆ ಸೆಟ್‌ದಿನ್ನೆ ಸಮೀಪ ಅಪಘಾತದಲ್ಲಿ ಮೃತಪಟ್ಟಿದ್ದರು. ಆದರೆ ಅವರೊಂದಿಗೆ ತೆರಳಿದ್ದ ಇಬ್ಬರ ಹೇಳಿಕೆಗಳು ಹಾಗೂ ಘಟನೆ ನಡೆದ ಸಂದರ್ಭ ಹಲವು ಅನುಮಾನಗಳಿಗೆ ಕಾರಣವಾಗಿವೆ ಎಂದು ಕುಟುಂಬ ಹೇಳಿದೆ.

ಕುಟುಂಬದ ಆರೋಪದಂತೆ, ದೇವಿಪ್ರಸಾದ್‌ಗೆ ಜಿಮ್‌ಗೆ ಬರುತ್ತಿದ್ದ ಉದ್ಯಮಿ ಹಾಗೂ ಮಾಡೆಲ್ ಆಗಿರುವ ವಿವಾಹಿತ ಮಹಿಳೆಯೊಂದಿಗೆ ಆಪ್ತ ಸಂಬಂಧವಿತ್ತು. ಇಬ್ಬರೂ ಲಿವ್-ಇನ್ ಸಂಬಂಧದಲ್ಲಿದ್ದು, ಖಾಸಗಿ ವಿಡಿಯೋಗಳು ದೇವಿಪ್ರಸಾದ್ ಮೊಬೈಲ್‌ನಲ್ಲಿ ಇದ್ದವು. ಇದೇ ವಿಚಾರಕ್ಕೆ ಆ ಮಹಿಳೆ ಸುಪಾರಿ ನೀಡಿ ಕೊಲೆ ಮಾಡಿಸಿರಬಹುದು ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಇದಲ್ಲದೆ, ಸಂಬಂಧಿ ವಿಕ್ಕಿ ದೇವಿಪ್ರಸಾದ್ ಮನೆಯಲ್ಲಿ ಇದ್ದ ಪ್ರಮುಖ ಸಾಕ್ಷ್ಯಗಳನ್ನು ನಾಶಪಡಿಸಿದ್ದಾನೆ ಎಂಬ ಆರೋಪವನ್ನೂ ಕುಟುಂಬ ಮಾಡಿದೆ. ಪ್ರಕರಣದ ಹಿಂದೆ ದೊಡ್ಡ ಸಂಚು ಇರಬಹುದೆಂಬ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಪೊಲೀಸರು ಅಪಘಾತ ಮತ್ತು ಕೊಲೆ ಎರಡೂ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಭಾವನ ಹತ್ಯೆ: ನಾದಿನಿ ಸೇರಿ ನಾಲ್ವರು ಅರೆಸ್ಟ್

ಚಿತ್ರದುರ್ಗ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಭಾವನನ್ನು ಕಾರು ಬಾಡಿಗೆ ನೆಪದಲ್ಲಿ ಕರೆಸಿ ಕತ್ತು ಕೊಯ್ದು ಹತ್ಯೆ ಮಾಡಿ, ಬಳಿಕ ಶವವನ್ನು ಸುಟ್ಟು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ ಭೀಕರ ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೋರ್ವನಿಗಾಗಿ ಬಲೆ ಬೀಸಲಾಗಿದೆ.

ಚಳ್ಳಕೆರೆ ತಾಲೂಕಿನ ಚೌಳೂರು ಗ್ರಾಮದ ನಿವಾಸಿ ಹಾಗೂ ಪಾವಗಡ ಸರ್ಕಾರಿ ಆರೋಗ್ಯ ಕೇಂದ್ರದ ಲ್ಯಾಬ್ ಟೆಕ್ನಿಷಿಯನ್ ಶಿವಮೂರ್ತಿ (49) ಅವರನ್ನು ಜೂನ್ 26ರಂದು ಚನ್ನಗಿರಿಗೆ ಕರೆಸಿಕೊಂಡ ಆರೋಪಿಗಳು, ಪೂರ್ವನಿಯೋಜಿತವಾಗಿ ಹತ್ಯೆಗೈದಿದ್ದರು. ನಂತರ ಶವವನ್ನು ಇಂಗಳದಾಳ್ ಗ್ರಾಮದ ಸಮೀಪಕ್ಕೆ ತಂದು ಬೆಂಕಿ ಹಚ್ಚಿ ಸುಟ್ಟು ಪರಾರಿಯಾಗಿದ್ದರು.

ಜುಲೈ 1ರಂದು ಸುಟ್ಟು ಕರಕಲಾದ ಶವ ಪತ್ತೆಯಾದ ಬಳಿಕ ತನಿಖೆ ಆರಂಭಿಸಿದ ಪೊಲೀಸರು, ಕೊಲೆಯ ಹಿಂದಿನ ಸಂಚನ್ನು ಬಯಲಿಗೆಳೆದಿದ್ದಾರೆ. ಮೃತನ ಸಹೋದರನ ಪತ್ನಿ ಸುಮತಿ ಹಾಗೂ ಆಕೆಯ ಪ್ರಿಯಕರ ನೂರ್ ಅಹ್ಮದ್ ನಡುವಿನ ಅಕ್ರಮ ಸಂಬಂಧಕ್ಕೆ ಶಿವಮೂರ್ತಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದ ಹಿನ್ನೆಲೆ ಅವರನ್ನು ದಾರಿ ಮುಳ್ಳಾಗಿಸಿ ಹತ್ಯೆ ಮಾಡಲಾಗಿದೆ ಎಂದು ತನಿಖೆಯಲ್ಲಿ ಗೊತ್ತಾಗಿದೆ.

ಪ್ರಕರಣದಲ್ಲಿ ಸುಮತಿ, ನೂರ್ ಅಹ್ಮದ್, ಅಕ್ಷಯ್ ಮತ್ತು ಜೇಂಕಾರ್ ಅವರನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಆರೋಪಿಯನ್ನು ಬಂಧಿಸಲು ಪೊಲೀಸರು ಶೋಧ ಮುಂದುವರಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಪ್ರಕರಣದ ತನಿಖೆ ಇನ್ನೂ ಮುಂದುವರಿದಿದೆ ಎಂದು ತಿಳಿಸಿದ್ದಾರೆ.