Home Blog

ತನಿಖಾಧಿಕಾರಿ ಗೈರು ಹಿನ್ನೆಲೆ: ವಚನಾನಂದ ಸ್ವಾಮೀಜಿ ವಿಚಾರಣೆ ಮುಂದೂಡಿದ ಹರಿಹರ ಪೊಲೀಸರು

ದಾವಣಗೆರೆ: ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಹರ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ ಅವರ ವಿಚಾರಣೆಯನ್ನು ಪೊಲೀಸರು ಮುಂದೂಡಿದ್ದಾರೆ.

ಸ್ವಾಮೀಜಿ ಅವರು ಸೋಮವಾರ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಜರಾಗಬೇಕಾಗಿತ್ತು. ಆದರೆ ಬೇರೆ ಪ್ರಕರಣದ ತನಿಖೆ ನಿಮಿತ್ತ ಹರಿಹರ ಗ್ರಾಮಾಂತರ ಠಾಣೆಯ ಪಿಐ ಸುರೇಶ್ ಸಗರಿ ಕೇಂದ್ರ ಸ್ಥಾನದಿಂದ ಹೊರಗಿದ್ದ ಹಿನ್ನೆಲೆ ವಿಚಾರಣೆ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.

ವಿಚಾರಣೆಗೆ ಸಹಕರಿಸುವಂತೆ ಇನ್‌ಸ್ಪೆಕ್ಟರ್ ಅವರಿಂದ ಸ್ವಾಮೀಜಿಗೆ ಲಿಖಿತ ನೋಟಿಸ್ ರವಾನಿಸಲಾಗಿತ್ತು. ಇಂದು ಬೆಳಗ್ಗೆ 10 ಗಂಟೆಗೆ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಮೂರನೇ ಬಾರಿ ವಿಚಾರಣೆಗೆ ವಚನಾನಂದ ಸ್ವಾಮೀಜಿ ಹಾಜರಾಗಬೇಕಿತ್ತು.

ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ವಿರುದ್ಧ ಮಠದ ಹಾಸ್ಟೆಲ್ ವಿದ್ಯಾರ್ಥಿಗಳ ಮೇಲೆ ದೈಹಿಕ ಹಿಂಸೆ ನೀಡಿದ ಆರೋಪದಡಿ ಪೋಷಕರು ದೂರು ದಾಖಲಿಸಿದ್ದರು. ಈ ಸಂಬಂಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಪ್ರಾರಂಭದಲ್ಲಿ ಗದಗ ಜಿಲ್ಲೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ನಂತರ ಹರಿಹರ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಸಿಪಿಐ ಸುರೇಶ್ ಸಗರಿ ಮಾರ್ಗದರ್ಶನದಲ್ಲಿ ಪಿಎಸ್‌ಐ ಜಯರತ್ನಮ್ಮ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.

ಇದೇ ವೇಳೆ, ಪೋಕ್ಸೋ ಪ್ರಕರಣ ದಾಖಲಾಗುವ ಮುನ್ನವೇ ವಚನಾನಂದ ಸ್ವಾಮೀಜಿ ನಿರೀಕ್ಷಣಾ ಜಾಮೀನು ಪಡೆದಿದ್ದರು. ಬಳಿಕ ಆ ಜಾಮೀನನ್ನು ರದ್ದುಗೊಳಿಸುವಂತೆ ಪೊಲೀಸರು ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಜಾಮೀನು ವಿಚಾರಣೆ ನಡುವೆಯೇ ಸ್ವಾಮೀಜಿಯನ್ನು ಈಗಾಗಲೇ ವಿಚಾರಣೆಗೆ ಕರೆದು ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಧಾನಿ ಮೋದಿಯವರು ಜನಸಾಮಾನ್ಯರನ್ನು ಲೂಟಿ ಮಾಡುತ್ತಿದ್ದಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಮೋದಿಯವರು ಪ್ರಧಾನಿ ಆದ ಬಳಿಕ ಸತತವಾಗಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಸುವುದನ್ನು ರೂಢಿ ಮಾಡಿಕೊಂಡಿದ್ದು ಈ ಬಾರಿ ಸತತ ನಾಲ್ಕನೇ ದಿನ ಇಂಧನ ದರ ಏರಿಕೆ ಮಾಡಿ ದೇಶವನ್ನು ಹಾಗೂ ಜನಸಾಮಾನ್ಯರನ್ನು ಲೂಟಿ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು. ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ದರಗಳ ಏರಿಸಿದ್ದು, ದೇಶದ ಇತಿಹಾಸದಲ್ಲಿ ಹೀಗೆ ಏರಿಕೆಯಾಗಿದ್ದಿಲ್ಲ. ಜನಸಾಮಾನ್ಯರು, ಮದ್ಯಮ ವರ್ಗದ ಜನರ ಜೀವನ ದುಸ್ತರವಾಗಿದೆ. ಬೆಲೆಯೇರಿಕೆಯಿಂದ ಜನ ತತ್ತರಿಸಿದ್ದಾರೆ ಎಂದರು.

’ಅಚ್ಛೇ ದಿನ್’ ಎಂದು ಜನರಿಗೆ ಟೋಪಿ ಹಾಕಲಾಗುತ್ತಿದೆ

ಬಿಜೆಪಿ ಅಧಿಕಾರಕ್ಕೆ ಬಂದರೆ ಗುಜರಾತ್ ಮಾದರಿ ಸರ್ಕಾರ ಬರುತ್ತದೆ, ಒಳ್ಳೆಯ ದಿನಗಳು ಬರುತ್ತವೆ ಎಂದು ಹೇಳಿ ಜನರಿಗೆ ಟೋಪಿ ಹಾಕಿದ್ದಾರೆ. ಕಳೆದ 11 ದಿನಗಳಿಂದ 4 ಬಾರಿ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ದರ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 110 .93 ರೂ.ಗಳಾಗಿವೆ. ಡೀಸೆಲ್ ದರ 98.89 ರೂ.ಗಳಾಗಿವೆ. 7. 52 ರೂ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಪ್ರಧಾನಿ ಮೋದಿಯವರು ದೇಶವನ್ನು ಲೂಟಿ ಮಾಡುತ್ತಿರುವುದು ರುಜುವಾತಾಗುತ್ತಿದೆ ಎಂದರು.

ಕಚ್ಚಾತೈಲ ದರ ಕಡಿಮೆಯಿದ್ದಾಗಿನ ಲಾಭ ಗ್ರಾಹಕರಿಗೆ ದೊರೆಯಲಿಲ್ಲ

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 2014ರ ಮೇ ತಿಂಗಳಲ್ಲಿ 71.41 ರೂ. ಪೆಟ್ರೋಲ್ ಲೀ. ಒಂದಕ್ಕೆ ಬೆಲೆಯಿದ್ದರೆ, ಡೀಸೆಲ್ 56.71 ಪೈಸೆಯಿತ್ತು. ಅಂದು 412 ರೂ. ಆಗಿದ್ದ ಗ್ಯಾಸ್ ಸಿಲಿಂಡರ್ ಬೆಲೆ , ಇಂದು 915 ರೂ. ಆಗಿದೆ , ಇದು ದುಪ್ಪಟ್ಟಿಗಿಂತ ಹೆಚ್ಚಾಗಿದೆ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಹೋಲಿಸಿದರೆ ಪ್ರಸ್ತುತ ಬೆಲೆ ಇಳಿದಿದ್ದರೂ ಕೂಡ,

ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚುತ್ತಿದೆ. 65 ರಿಂದ 75 ಡಾಲರ್ ಬೆಲೆ ಇದ್ದಾಗ, ಈ ಕಡಿಮೆ ಬೆಲೆಯ ಲಾಭ, ಗ್ರಾಹಕರಿಗೆ ದೊರೆಯಲಿಲ್ಲ. ಪ್ರಸ್ತುತ ಕಚ್ಚಾ ತೈಲದ ಬೆಲೆ 100 ಡಾಲರ್ ಮಿತಿಯೊಳಗಿದ್ದರೂ, ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಸತತ ನಾಲ್ಕು ಬಾರಿ ಏರಿಕೆ ಮಾಡಿದೆ. ಇದರಿಂದಾಗಿ ಗ್ರಾಹಕರಿಗೆ, ರೈತರಿಗೆ, ಜನಸಾಮಾನ್ಯರಿಗೆ ಈ ಬೆಲೆಏರಿಕೆಯ ಬಿಸಿ ತಟ್ಟಲಿದೆ. ಮೋದಿಯವರು ದೇಶವನ್ನು ಹಾಗೂ ಜನಸಾಮಾನ್ಯರನ್ನು ಲೂಟಿ ಮಾಡುತ್ತಿದ್ದಾರೆ ಎಂದರು.

ಎ.ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ದಿನೇಶ್ ಗುಂಡೂರಾವ್, ಅಭಿಷೇಕ್ ದತ್ತಾ ಮೊದಲಾದವರು ಉಪಸ್ಥಿತರಿದ್ದರು.

ಪರ ಪುರುಷನ ಜೊತೆ ಅಕ್ಕನ ಅಕ್ರಮ ಸಂಬಂಧ ಶಂಕೆ: ಕತ್ತು ಸೀಳಿ ಕೊಂದ ತಮ್ಮ

0

ಹಾವೇರಿ: ಸಂಬಂಧಗಳೇ ರಕ್ತಪಾತಕ್ಕೆ ಕಾರಣವಾಗುತ್ತಿರುವ ಘಟನೆಗಳು ರಾಜ್ಯದಲ್ಲಿ ಮರುಕಳಿಸುತ್ತಿರುವ ಬೆನ್ನಲ್ಲೇ, ಶಿಗ್ಗಾವಿಯಲ್ಲಿ ನಡೆದ ದಾರುಣ ಕೊಲೆ ಪ್ರಕರಣ ಸಂಚಲನ ಮೂಡಿಸಿದೆ. ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದ ಮೇಲೆ ತಮ್ಮನೇ ಸ್ವಂತ ಅಕ್ಕನ ಕತ್ತು ಸೀಳಿ ಕೊಲೆಗೈದಿರುವ ಆರೋಪ ಕೇಳಿಬಂದಿದೆ.

ಮೃತ ಮಹಿಳೆಯನ್ನು ಸುಮಾ ಶಿವಶಂಕರ್ ವನಹಳ್ಳಿ (29) ಎಂದು ಗುರುತಿಸಲಾಗಿದ್ದು, ಆಕೆ ಶಿಗ್ಗಾವಿಯ ಮೌಲಾಲಿ ಗುಡ್ಡ ಪ್ರದೇಶದ ಅಂಗನವಾಡಿ ಕೇಂದ್ರದಲ್ಲಿ ಆಯಾ ಕೆಲಸ ಮಾಡುತ್ತಿದ್ದಳು. ಸೋಮವಾರ ಬೆಳಗ್ಗೆ ಸುಮಾರು 10:15ರ ವೇಳೆಗೆ ಅಂಗನವಾಡಿಗೆ ಬಂದ ಆರೋಪಿ ಸಂಜು, ಅಕ್ಕನೊಂದಿಗೆ ವಾಗ್ವಾದ ಆರಂಭಿಸಿದ್ದಾನೆ.

ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ಹಿಂಸಾತ್ಮಕ ತಿರುವು ಪಡೆದುಕೊಂಡಿದ್ದು, ಸಂಜು ತನ್ನ ಬಳಿ ಇದ್ದ ಮಚ್ಚಿನಿಂದ ಸುಮಾಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಕುತ್ತಿಗೆ ಭಾಗಕ್ಕೆ ಬಿದ್ದ ಗಂಭೀರ ಏಟು ಹಾಗೂ ಕೈಗೆ ಉಂಟಾದ ಭಾರೀ ಗಾಯದಿಂದ ಸುಮಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನಾ ಸ್ಥಳದಲ್ಲಿ ರಕ್ತದ ಮಡುವು ಸೃಷ್ಟಿಯಾಗಿದ್ದು, ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಶಿಗ್ಗಾವಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಅಕ್ರಮ ಸಂಬಂಧದ ಅನುಮಾನವೇ ಕೊಲೆಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ. ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಬಂಧನ ಕಾರ್ಯಾಚರಣೆ ಮುಂದುವರಿದಿದೆ.

‘ಕಾಕ್ರೋಚ್ ಜನತಾ ಪಾರ್ಟಿ’ ವಿರುದ್ಧ ಸಿಬಿಐ ತನಿಖೆ ಬೇಡಿಕೆ: ತುರ್ತು ವಿಚಾರಣೆಗೆ ಸುಪ್ರೀಂ ನಿರಾಕರಣೆ

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನೇತೃತ್ವದ ಪೀಠವು ಸೋಮವಾರ ಅರ್ಜಿಯ ಪ್ರಾಥಮಿಕ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ವಾದ ಆಲಿಸಿದ ಸಿಜೆಐ, “ಈ ವಿಷಯದಲ್ಲಿ ಯಾವುದೇ ತುರ್ತು ಪರಿಸ್ಥಿತಿ ಕಾಣಿಸುತ್ತಿಲ್ಲ. ಇದನ್ನು ಅತಿಯಾಗಿ ಭಾವನಾತ್ಮಕವಾಗಿ ಪರಿಗಣಿಸುವ ಅಗತ್ಯವೂ ಇಲ್ಲ” ಎಂದು ಅಭಿಪ್ರಾಯಪಟ್ಟರು.

ಜೊತೆಗೆ, ಸಾಮಾನ್ಯ ನ್ಯಾಯಾಂಗ ಪ್ರಕ್ರಿಯೆಯಂತೆ ಸೂಕ್ತ ಸಮಯದಲ್ಲಿ ಅರ್ಜಿಯನ್ನು ಪರಿಶೀಲಿಸಲಾಗುವುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, ಈ ಹಿಂದೆ ನ್ಯಾಯಾಲಯದಲ್ಲಿ ಬಳಸಿದ್ದ ‘ಜಿರಳೆ’ ಎಂಬ ರೂಪಕದ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳು ಮತ್ತು ಕೆಲವು ಮಾಧ್ಯಮಗಳು ತಪ್ಪು ರೀತಿಯಲ್ಲಿ ಬಿಂಬಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ನನ್ನ ಹೇಳಿಕೆಯನ್ನು ಸಂಪೂರ್ಣವಾಗಿ ತಪ್ಪಾಗಿ ಅರ್ಥೈಸಲಾಗಿದೆ. ನಕಲಿ ಹಾಗೂ ಬೋಗಸ್ ಪದವಿಗಳನ್ನು ಬಳಸಿಕೊಂಡು ಕಾನೂನು ವೃತ್ತಿಗೆ ಪ್ರವೇಶಿಸುತ್ತಿರುವ ಅಕ್ರಮ ಜಾಲವನ್ನು ಟೀಕಿಸಲು ಮಾತ್ರ ಆ ಪದವನ್ನು ಬಳಸಿದ್ದೆ. ಅದು ದೇಶದ ನಿರುದ್ಯೋಗಿ ಯುವಕರನ್ನು ಉದ್ದೇಶಿಸಿ ಅಲ್ಲ,” ಎಂದು ಸಿಜೆಐ ಸ್ಪಷ್ಟನೆ ನೀಡಿದರು.

ವಕೀಲ ರಾಜಾ ಚೌಧರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಎರಡು ಪ್ರಮುಖ ಬೇಡಿಕೆಗಳನ್ನು ಮುಂದಿರಿಸಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿರುವ ‘ಕಾಕ್ರೋಚ್ ಜನತಾ ಪಾರ್ಟಿ’ಯ ರಹಸ್ಯ ಚಟುವಟಿಕೆಗಳು ಹಾಗೂ ದೇಶಾದ್ಯಂತ ಸಕ್ರಿಯವಾಗಿರುವ ನಕಲಿ ಪದವಿ ಕಾನೂನು ವೃತ್ತಿ ಜಾಲದ ವಿರುದ್ಧ ಸಿಬಿಐ ತನಿಖೆ ನಡೆಸಬೇಕು ಎಂದು ಮನವಿ ಮಾಡಲಾಗಿತ್ತು.

ಇದಲ್ಲದೆ, ನ್ಯಾಯಾಲಯದ ನೇರ ಪ್ರಸಾರದ ವಿಡಿಯೋ ಹಾಗೂ ಆಡಿಯೋ ತುಣುಕುಗಳನ್ನು ಕತ್ತರಿಸಿ ಮೀಮ್ಸ್ ರೂಪದಲ್ಲಿ ವಾಣಿಜ್ಯ ಮತ್ತು ವೈಯಕ್ತಿಕ ಪ್ರಚಾರಕ್ಕಾಗಿ ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ತಕ್ಷಣವೇ ಕಾನೂನು ರೂಪಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

‘ಟೀಸರ್ ನೋಡಿ ಸಿನಿಮಾ ಜಡ್ಜ್ ಮಾಡ್ಬೇಡಿ!’ ‘ಟಾಕ್ಸಿಕ್’ ವಿವಾದಕ್ಕೆ ಖಡಕ್ ಉತ್ತರ ಕೊಟ್ಟ ಯಶ್‌ ತಾಯಿ

‘ಟಾಕ್ಸಿಕ್’ ಟೀಸರ್ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಆರಂಭವಾಗಿತ್ತು. ಟೀಸರ್‌ನ ಬೋಲ್ಡ್ ದೃಶ್ಯಗಳನ್ನು ಕೆಲವರು ಟೀಕಿಸಿದ್ದರೆ, ಇನ್ನೂ ಕೆಲವರು ಯಶ್ ಅವರ ಹೊಸ ಪ್ರಯೋಗಕ್ಕೆ ಬೆಂಬಲ ಸೂಚಿಸಿದ್ದರು. ಇದೀಗ ಈ ವಿವಾದದ ಬಗ್ಗೆ ನಟಿ ಪುಷ್ಪಾ ನೇರ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಟೀಸರ್ ಅಂದ್ರೆ ಕೇವಲ ಆಕರ್ಷಣೆಗೆ ಮಾಡಿರುವ ಒಂದು ಚಿಕ್ಕ ಭಾಗ. ಅದನ್ನೇ ಆಧಾರ ಮಾಡಿಕೊಂಡು ಇಡೀ ಸಿನಿಮಾವನ್ನು ನಿರ್ಧರಿಸುವುದು ತಪ್ಪು. ಸಿನಿಮಾ ನೋಡಿದ ನಂತರ ಮಾತ್ರ ಅದರ ಕಥೆ, ಉದ್ದೇಶ ಅರ್ಥವಾಗುತ್ತದೆ” ಎಂದು ಹೇಳಿದರು.

ಕನ್ನಡ ಪ್ರೇಕ್ಷಕರಿಗೆ ಈ ರೀತಿಯ ಕಂಟೆಂಟ್ ಸರಿಯಲ್ಲ ಎಂಬ ಟೀಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಪ್ರೇಕ್ಷಕರು ಯಾವ ರೀತಿಯ ಸಿನಿಮಾಗಳನ್ನು ನೋಡಲು ಬಯಸುತ್ತಾರೋ ಅದನ್ನೇ ಸಿನಿಮಾ ಮಂದಿ ಕೊಡುತ್ತಾರೆ. ಇಂದಿನ ಯೂತ್ ಬದಲಾಗಿದ್ದಾರೆ. ಅವರ ರುಚಿಗೂ ಸಿನಿಮಾಗಳು ಬದಲಾಗುತ್ತಿವೆ” ಎಂದು ಹೇಳಿದರು.

ಇನ್ನೊಂದೆಡೆ, ಯಶ್ ಸೇರಿದಂತೆ ಸ್ಟಾರ್ ನಟರ ಸಿನಿಮಾಗಳು ವರ್ಷಗಟ್ಟಲೆ ತಡವಾಗುತ್ತಿರುವ ವಿಚಾರಕ್ಕೂ ಅವರು ಪ್ರತಿಕ್ರಿಯಿಸಿದರು. “ಕನ್ನಡ ಚಿತ್ರರಂಗ ಈಗ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುತ್ತಿದೆ. ದೊಡ್ಡ ಮಟ್ಟದ ಸಿನಿಮಾಗಳನ್ನು ಮಾಡಲು ಸಮಯ ಬೇಕು. ಅದು ನಮ್ಮ ಇಂಡಸ್ಟ್ರಿಯ ಸಾಧನೆ” ಎಂದು ಅಭಿಪ್ರಾಯಪಟ್ಟರು.

ಯಶ್ ಅಭಿನಯದ ‘ಟಾಕ್ಸಿಕ್’ ಈಗಾಗಲೇ ದೇಶಾದ್ಯಂತ ಕುತೂಹಲ ಮೂಡಿಸಿದ್ದು, ಸಿನಿಮಾ ಬಿಡುಗಡೆಯ ಮುನ್ನವೇ ಭಾರೀ ಹೈಪ್ ಪಡೆದುಕೊಂಡಿದೆ.

ಸಾಹಸ ಆಟವೇ ಸಾವಿನ ಬಲೆ! ಪೋಷಕರ ಕಣ್ಣೆದುರೇ ಜಿಪ್‌ಲೈನ್‌ನಿಂದ ಬಿದ್ದು ಬಾಲಕ ದಾರುಣ ಅಂತ್ಯ

ಆಗ್ರಾದ ಪ್ರಸಿದ್ಧ ಪ್ರವಾಸಿ ತಾಣ ‘ಆಗ್ರಾ ಚೌಪಟ್ಟಿ’ಯಲ್ಲಿ ನಡೆದ ಭೀಕರ ದುರಂತ ಒಂದು ಕುಟುಂಬದ ಬದುಕನ್ನೇ ಕತ್ತಲಲ್ಲಿ ತಳ್ಳಿದೆ. ಮನರಂಜನೆಗಾಗಿ ಜಿಪ್‌ಲೈನ್ ಸಾಹಸಕ್ಕೆ ತೆರಳಿದ್ದ 15 ವರ್ಷದ ಬಾಲಕ, ಗಾಳಿಯಲ್ಲೇ ನಿಯಂತ್ರಣ ಕಳೆದುಕೊಂಡು ಎತ್ತರದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.

ತಾಜ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಸ್ಥಳದಲ್ಲಿದ್ದ ಪ್ರವಾಸಿಗರನ್ನು ಬೆಚ್ಚಿಬೀಳಿಸಿದೆ. ಬಾಲಕ ತನ್ನ ಪೋಷಕರೊಂದಿಗೆ ಚೌಪಟ್ಟಿಗೆ ಬಂದಿದ್ದು, ಉತ್ಸಾಹದಿಂದ ಜಿಪ್‌ಲೈನಿಂಗ್ ಆರಂಭಿಸಿದ್ದ. ಆದರೆ ಮಧ್ಯದಲ್ಲೇ ತಾಂತ್ರಿಕ ದೋಷ ಅಥವಾ ಸುರಕ್ಷತಾ ಲೋಪ ಸಂಭವಿಸಿದ ಪರಿಣಾಮ ಆತ ನೇರವಾಗಿ ಕೆಳಗೆ ಬಿದ್ದಿದ್ದಾನೆ.

ದುರಂತದ ಕ್ಷಣವನ್ನು ಅಲ್ಲಿದ್ದ ವ್ಯಕ್ತಿಯೊಬ್ಬ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಗನನ್ನು ಕಣ್ಣೆದುರೇ ಕಳೆದುಕೊಂಡ ಪೋಷಕರ ಆಕ್ರಂದನ ಸ್ಥಳದಲ್ಲಿದ್ದವರ ಮನಕಲುಕುವಂತಿತ್ತು.

ಈ ಘಟನೆ ಬಳಿಕ ಜಿಪ್‌ಲೈನ್ ನಿರ್ವಹಣಾ ಕಂಪನಿಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಗತ್ಯ ಸುರಕ್ಷತಾ ಮಾನದಂಡಗಳನ್ನು ಪಾಲಿಸದೇ ನಿರ್ಲಕ್ಷ್ಯ ತೋರಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು, ಜಿಪ್‌ಲೈನಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ಕಂಪನಿಯ ಮ್ಯಾನೇಜರ್‌ನನ್ನು ಬಂಧಿಸಿದ್ದಾರೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಕಂಪನಿಯ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಸಿದ್ಧತೆ ನಡೆದಿದೆ.

ಕಾಂಗ್ರೆಸ್ ನಾಯಕತ್ವ ಗೊಂದಲ ಅಂತ್ಯವಾಗುತ್ತಾ? ಖರ್ಗೆ-ರಾಹುಲ್ ಜೊತೆ ನಾಳೆ ಸಿದ್ದರಾಮಯ್ಯ ಮಹತ್ವದ ಸಭೆ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಮೂಡಿಸಿರುವ ಕಾಂಗ್ರೆಸ್ ನಾಯಕತ್ವ ಬಿಕ್ಕಟ್ಟು ಹಾಗೂ ‘ಪವರ್ ಶೇರಿಂಗ್’ ರಾಜಕೀಯ ಇದೀಗ ಅಂತಿಮ ಹಂತ ತಲುಪಿದಂತೆ ಕಾಣುತ್ತಿದೆ. ಕಾಂಗ್ರೆಸ್ ಹೈಕಮಾಂಡ್‌ನಿಂದ ದೆಹಲಿಗೆ ತುರ್ತು ಬುಲಾವ್ ಬಂದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ರಾಜಕೀಯ ತಂತ್ರ ರೂಪಿಸಿದ್ದು, ತಮ್ಮ ಆಪ್ತ ಸಚಿವರೊಂದಿಗೆ ಇಂದು ರಾತ್ರಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ಚರ್ಚೆಗಳು ತೀವ್ರಗೊಂಡಿರುವ ಈ ಸಂದರ್ಭದಲ್ಲಿ ಹೈಕಮಾಂಡ್ ಕೇವಲ ಸಿದ್ದರಾಮಯ್ಯ ಅವರಿಗೆ ಮಾತ್ರ ದೆಹಲಿಗೆ ಬರುವಂತೆ ಸೂಚಿಸಿತ್ತು. ಆದರೆ ಸಿಎಂ ಸದ್ದಿಲ್ಲದೆ ತಮ್ಮ ಆಪ್ತ ಸಚಿವರಿಗೆ ಕೂಡ ದೆಹಲಿಗೆ ಆಗಮಿಸುವಂತೆ ಸಂದೇಶ ರವಾನಿಸಿರುವುದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಸಿಎಂ ಜೊತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸೇರಿದಂತೆ ಹಲವು ಪ್ರಮುಖ ನಾಯಕರು ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ.

ಹೈಕಮಾಂಡ್ ಎದುರು ತಮ್ಮ ಸಂಖ್ಯಾಬಲ ಹಾಗೂ ಬೆಂಬಲಿಗರ ಶಕ್ತಿಯನ್ನು ಪರೋಕ್ಷವಾಗಿ ಪ್ರದರ್ಶಿಸಲು ಸಿದ್ದರಾಮಯ್ಯ ಈ ರಾಜಕೀಯ ನಡೆ ಅನುಸರಿಸಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ.

ಸಿದ್ದರಾಮಯ್ಯ ಇಂದು ರಾತ್ರಿ ದೆಹಲಿ ತಲುಪಲಿದ್ದು, ನಾಳೆ (ಮೇ 26) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿ ಮಹತ್ವದ ಸಭೆ ನಡೆಯಲಿದೆ.

ಮೊದಲ ಹಂತದಲ್ಲಿ ರಾಹುಲ್ ಗಾಂಧಿ ಸಿದ್ದರಾಮಯ್ಯ ಅವರೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಲಿದ್ದು, ಬಳಿಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕರೆಸಿ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಈ ಸಭೆ ಸಿದ್ದರಾಮಯ್ಯ ಪಾಲಿಗೆ ರಾಜಕೀಯವಾಗಿ ಮಹತ್ವದ್ದಾಗಿದ್ದು, ಮುಂದಿನ ನಾಯಕತ್ವದ ಬಗ್ಗೆ ಸ್ಪಷ್ಟ ಸಂದೇಶ ಸಿಗುವ ನಿರೀಕ್ಷೆ ಇದೆ.

ರಾಜ್ಯಸಭೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸಿಎಂಗೆ ದೆಹಲಿ ಬುಲಾವ್ ನೀಡಲಾಗಿದೆ ಎಂದು ಅಧಿಕೃತವಾಗಿ ಹೇಳಲಾಗುತ್ತಿದ್ದರೂ, ಕಾಂಗ್ರೆಸ್ ಒಳಗಡೆ ಮೂರು ಪ್ರಮುಖ ರಾಜಕೀಯ ವಿಚಾರಗಳು ಚರ್ಚೆಗೆ ಗ್ರಾಸವಾಗಿವೆ.

ಸಿದ್ದರಾಮಯ್ಯ ಅವರನ್ನು ರಾಜ್ಯಸಭೆಗೆ ಕಳುಹಿಸಿ, ಕೇಂದ್ರ ರಾಜಕಾರಣಕ್ಕೆ ಆಹ್ವಾನಿಸುವ ಮೂಲಕ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ದಾರಿ ಮಾಡಿಕೊಡಲಾಗುತ್ತದೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಇನ್ನೊಂದು ಕಡೆ, ಸದ್ಯ ನಾಯಕತ್ವ ಬದಲಾವಣೆ ಬೇಡ, ಸರ್ಕಾರ ಮುಂದುವರಿಸಿ, ಅಗತ್ಯವಿದ್ದರೆ ಸಂಪುಟ ಪುನರ್‌ರಚನೆ ಮಾಡಿಕೊಳ್ಳಿ ಎಂಬ ಸಂದೇಶವನ್ನು ಹೈಕಮಾಂಡ್ ನೀಡುವ ಸಾಧ್ಯತೆಯೂ ಇದೆ.

ರಾಜ್ಯಸಭೆ ಚುನಾವಣೆ ಮುಗಿಯುವವರೆಗೆ ಯಾವುದೇ ಬದಲಾವಣೆ ಬೇಡ, ಮುಖ್ಯಮಂತ್ರಿ ಸ್ಥಾನ ವಿಚಾರವನ್ನು ನಂತರ ಪರಿಶೀಲಿಸೋಣ ಎಂಬ ತಾತ್ಕಾಲಿಕ ಸಮಾಧಾನದ ಸೂತ್ರಕ್ಕೂ ಹೈಕಮಾಂಡ್ ಮೊರೆ ಹೋಗಬಹುದು ಎನ್ನಲಾಗುತ್ತಿದೆ.

ಈ ಮೂರು ಪ್ರಮುಖ ರಾಜಕೀಯ ಸಾಧ್ಯತೆಗಳ ಪೈಕಿ ಒಂದಕ್ಕೆ ಈ ಬಾರಿ ಸ್ಪಷ್ಟತೆ ಸಿಗುವ ನಿರೀಕ್ಷೆ ರಾಜಕೀಯ ವಲಯದಲ್ಲಿ ಹೆಚ್ಚಾಗಿದೆ.

ಜಾಮೀನು ಬಾಗಿಲು ಬಂದ್! ಈಗ ದರ್ಶನ್ ಕೇಸ್ ಹೊಸ ಜಡ್ಜ್ ಕೈಗೆ; ಸುಪ್ರೀಂ ಆದೇಶದಿಂದ ವೇಗ ಪಡೆಯುತ್ತಾ ವಿಚಾರಣೆ?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಕಾನೂನು ಹೋರಾಟ ಮತ್ತಷ್ಟು ಕಠಿಣವಾಗುತ್ತಿದೆ. ಸುಪ್ರೀಂ ಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿದ ಬೆನ್ನಲ್ಲೇ, ಇದೀಗ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಕೋರ್ಟ್ ಮತ್ತು ನ್ಯಾಯಾಧೀಶರ ಬದಲಾವಣೆ ನಡೆದಿದೆ.

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಈ ಪ್ರಕರಣವನ್ನು ಸಿಸಿಹೆಚ್-57 ಕೋರ್ಟ್‌ನಿಂದ ಸಿಸಿಹೆಚ್-59ಕ್ಕೆ ವರ್ಗಾವಣೆ ಮಾಡಲಾಗಿದೆ. ಜೂನ್ 1ರಿಂದ ಈ ವರ್ಗಾವಣೆ ಜಾರಿಯಾಗಲಿದ್ದು, ನ್ಯಾಯಮೂರ್ತಿ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಮುಂದಿನ ವಿಚಾರಣೆ ಕೈಗೆತ್ತಿಕೊಳ್ಳಲಿದ್ದಾರೆ.

ಇದರ ಜೊತೆಗೆ ಸುಪ್ರೀಂ ಕೋರ್ಟ್ ನೀಡಿರುವ ಕಟ್ಟುನಿಟ್ಟಿನ ಸೂಚನೆ ಪ್ರಕರಣದ ಗಂಭೀರತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಒಂದು ವರ್ಷದೊಳಗೆ ಎಲ್ಲಾ ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸಬೇಕು ಎಂದು ಸೂಚಿಸಿರುವ ಕಾರಣ, ಸ್ಥಳೀಯ ಕೋರ್ಟ್ ನಿರಂತರ ವಿಚಾರಣೆಗೆ ಸಿದ್ಧವಾಗುತ್ತಿದೆ.

ದರ್ಶನ್ ಪರ ವಕೀಲರು ಸುಪ್ರೀಂ ಕೋರ್ಟ್ ಆದೇಶದ ಪ್ರತಿಯನ್ನು ಈಗಾಗಲೇ ಸೆಷನ್ಸ್ ಕೋರ್ಟ್‌ಗೆ ಸಲ್ಲಿಸಿದ್ದು, ವಾರಕ್ಕೆ ಹಲವು ದಿನಗಳ ಕಾಲ ವೇಗದ ವಿಚಾರಣೆ ನಡೆಯುವ ಸಾಧ್ಯತೆ ಇದೆ.

ಒಂದೆಡೆ ಜಾಮೀನು ದಾರಿ ಮುಚ್ಚಿಕೊಂಡಿದ್ದರೆ, ಮತ್ತೊಂದೆಡೆ ಪ್ರಕರಣದ ವಿಚಾರಣೆ ವೇಗ ಪಡೆಯುತ್ತಿರುವುದು ದರ್ಶನ್ ಶಿಬಿರದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ಕಾನ್ ರೆಡ್ ಕಾರ್ಪೆಟ್‌ನಲ್ಲಿ ಐಶ್ವರ್ಯಾ ಲುಕ್ ವೈರಲ್: ಟ್ರೋಲರ್‌ಗಳ ವಿರುದ್ಧ ಕಂಗನಾ ಫುಲ್ ಗರಂ

ವಿಶ್ವದ ಪ್ರತಿಷ್ಠಿತ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತೊಮ್ಮೆ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಮಗಳು ಆರಾಧ್ಯ ಬಚ್ಚನ್ ಜೊತೆ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡ ಐಶ್ವರ್ಯಾ, ಈ ಬಾರಿ ತಮ್ಮ ವಿಶಿಷ್ಟ ಫ್ಯಾಷನ್ ಆಯ್ಕೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣರಾದರು.

ನೀಲಿ ಬಣ್ಣದ ಅದ್ದೂರಿ ಗೌನ್‌ನಲ್ಲಿ ಮಿಂಚಿದ ಐಶ್ವರ್ಯಾ ಅವರ ಲುಕ್ ಕೆಲವರಿಗೆ ಮೆಚ್ಚುಗೆಯಾದರೆ, ಮತ್ತಷ್ಟು ಮಂದಿ ವಯಸ್ಸು ಮತ್ತು ಸ್ಟೈಲಿಂಗ್ ಕುರಿತು ಟೀಕೆ ಮಾಡಿದರು. ಈ ಟ್ರೋಲಿಂಗ್ ವಿರುದ್ಧ ಇದೀಗ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರನೌತ್ ನೇರವಾಗಿ ಕಿಡಿಕಾರಿದ್ದಾರೆ.

ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಐಶ್ವರ್ಯಾ ಫೋಟೋ ಹಂಚಿಕೊಂಡ ಕಂಗನಾ, “ಯಾವ ಮಹಿಳೆಯೂ ಇತರರನ್ನು ಮೆಚ್ಚಿಸಲು ಮಾತ್ರ ಬದುಕುವುದಿಲ್ಲ. ಐಶ್ವರ್ಯಾ ತಮ್ಮ ಆತ್ಮವಿಶ್ವಾಸ ಮತ್ತು ವೈಯಕ್ತಿಕ ಶೈಲಿಯಿಂದ ರೆಡ್ ಕಾರ್ಪೆಟ್‌ನಲ್ಲಿ ನಿಲ್ಲುತ್ತಾರೆ” ಎಂದು ಬರೆದಿದ್ದಾರೆ.

ಟ್ರೋಲರ್‌ಗಳಿಗೆ ಮತ್ತಷ್ಟು ತಿರುಗೇಟು ನೀಡಿದ ಕಂಗನಾ, “ರೆಡ್ ಕಾರ್ಪೆಟ್ ಮೇಲೆ ವಯಸ್ಸಾದ ಮಹಿಳೆಯರನ್ನು ನೋಡಲು ಅಭ್ಯಾಸವಿಲ್ಲದವರು ಈಗಲೇ ಅದಕ್ಕೆ ಹೊಂದಿಕೊಳ್ಳಬೇಕು” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಕಾನ್ 2026ರಲ್ಲಿ ಐಶ್ವರ್ಯಾ ಧರಿಸಿದ್ದ ವಿಶೇಷ ನೀಲಿ ಗೌನ್ ಅನ್ನು ಖ್ಯಾತ ಡಿಸೈನರ್ ಅಮಿತ್ ಅಗರ್ವಾಲ್ ವಿನ್ಯಾಸಗೊಳಿಸಿದ್ದು, ಅದನ್ನು ತಯಾರಿಸಲು ಸುಮಾರು 1500 ಗಂಟೆಗಳ ಶ್ರಮ ಬೇಕಾಗಿತ್ತು ಎಂದು ಹೇಳಲಾಗಿದೆ. ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಐಶ್ವರ್ಯಾ ಲುಕ್ ಈಗ ಜಾಗತಿಕ ಮಟ್ಟದಲ್ಲಿ ಟ್ರೆಂಡಿಂಗ್ ಆಗಿದೆ.

‘ಜಾರ್ಜ್‌ಕುಟ್ಟಿ ಮತ್ತೆ ಗೇಮ್ ಚೇಂಜರ್!’: 4 ದಿನದಲ್ಲಿ ₹141 ಕೋಟಿ ಬಾಚಿದ ಮೋಹನ್‌ಲಾಲ್ ಥ್ರಿಲ್ಲರ್

ಮಲಯಾಳಂ ಸಿನಿಮಾಗಳು ಕೇವಲ ಕಂಟೆಂಟ್ ಮಟ್ಟದಲ್ಲೇ ಗೆಲ್ಲುತ್ತವೆ, ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ದಾಖಲೆ ಮಾಡಲ್ಲ ಎಂಬ ಅಭಿಪ್ರಾಯವನ್ನು ‘ದೃಶ್ಯಂ 3’ ಸಂಪೂರ್ಣವಾಗಿ ಧೂಳಿಪಟ ಮಾಡಿದೆ. ಮೋಹನ್‌ಲಾಲ್ ಮತ್ತು ನಿರ್ದೇಶಕ ಜೀತು ಜೋಸೆಫ್ ಜೋಡಿಯ ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಇದೀಗ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ.

ಬಿಡುಗಡೆಯಾದ ಕೇವಲ ನಾಲ್ಕು ದಿನಗಳಲ್ಲಿ ಸಿನಿಮಾ ವಿಶ್ವದಾದ್ಯಂತ 141.34 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದು, 100 ಕೋಟಿ ಕ್ಲಬ್ ದಾಟಿ ಹೊಸ ಮೈಲಿಗಲ್ಲಿನತ್ತ ದಾಪುಗಾಲಿಟ್ಟಿದೆ.

ಭಾನುವಾರ ಭಾರತದಲ್ಲಿ ಮಾತ್ರವೇ 13.95 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದ ಚಿತ್ರ, ದೇಶೀಯ ಮಾರುಕಟ್ಟೆಯಲ್ಲಿ 63.34 ಕೋಟಿ ರೂಪಾಯಿ ಗ್ರಾಸ್ ಗಳಿಕೆ ದಾಖಲಿಸಿದೆ. ನೆಟ್ ಕಲೆಕ್ಷನ್ 54.55 ಕೋಟಿ ರೂಪಾಯಿ ಆಗಿದೆ.

ಅದರಲ್ಲೂ ವಿದೇಶಿ ಮಾರುಕಟ್ಟೆಯಲ್ಲಿ ಸಿನಿಮಾದ ಕ್ರೇಜ್ ಮತ್ತೊಂದು ಹಂತಕ್ಕೇರಿದೆ. ನಾಲ್ಕನೇ ದಿನ 13 ಕೋಟಿ ರೂಪಾಯಿ ಓವರ್‌ಸೀಸ್ ಕಲೆಕ್ಷನ್ ಮಾಡಿರುವ ‘ದೃಶ್ಯಂ 3’, ಒಟ್ಟು ವಿದೇಶಿ ಗಳಿಕೆಯನ್ನು 78 ಕೋಟಿ ರೂಪಾಯಿಗೆ ಏರಿಸಿದೆ.

ಜಾರ್ಜ್‌ಕುಟ್ಟಿ ಪಾತ್ರದಲ್ಲಿ ಮೋಹನ್‌ಲಾಲ್ ಮತ್ತೆ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ನಿಲ್ಲಿಸಿದ್ದು, ಜೀತು ಜೋಸೆಫ್ ಅವರ ಸ್ಕ್ರೀನ್‌ಪ್ಲೇ ಚಿತ್ರದ ಅತಿದೊಡ್ಡ ಶಕ್ತಿಯಾಗಿದೆ. ಭಾರಿ ಬಜೆಟ್, ಭರ್ಜರಿ ವಿಎಫ್‌ಎಕ್ಸ್ ಇಲ್ಲದಿದ್ದರೂ ಕೇವಲ ಕಥೆಯ ಬಲದಿಂದ ಸಿನಿಮಾ ಇಂಡಸ್ಟ್ರಿಯನ್ನು ಶೇಕ್ ಮಾಡಬಹುದು ಎಂಬುದನ್ನು ‘ದೃಶ್ಯಂ 3’ ಮತ್ತೊಮ್ಮೆ ಸಾಬೀತುಪಡಿಸಿದೆ.

error: Content is protected !!