Home Blog

ನಡೆಯಿರಿ, ಮಾಲಿನ್ಯ ತಡೆಯಿರಿ: ಜೂನ್ ಪೂರ್ತಿ ಜಿಬಿಎ ವಿಶೇಷ ಅಭಿಯಾನ!

ಬೆಂಗಳೂರು: ವಾಹನ ದಟ್ಟಣೆ ಮತ್ತು ವಾಯು ಮಾಲಿನ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ ಹೊಸ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದೆ.

ಜೂನ್ ತಿಂಗಳ ಪೂರ್ತಿ ನಡೆಯಲಿರುವ ಈ ಅಭಿಯಾನಕ್ಕೆ #1KmChallenge ಎಂದು ಹೆಸರಿಡಲಾಗಿದ್ದು, ಒಂದು ಕಿಲೋಮೀಟರ್ ವ್ಯಾಪ್ತಿಯೊಳಗಿನ ಸಂಚಾರಕ್ಕೆ ವಾಹನ ಬಳಸದೇ ನಡೆದುಕೊಂಡು ಹೋಗುವಂತೆ ನಾಗರಿಕರಿಗೆ ಕರೆ ನೀಡಲಾಗಿದೆ.

ಜಿಬಿಎಯ ಕ್ಲೈಮೇಟ್ ಆಕ್ಷನ್ ಸೆಲ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಈ ಅಭಿಯಾನದ ಉದ್ದೇಶ, ನಗರದ ರಸ್ತೆಗಳಲ್ಲಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಿ ಮಾಲಿನ್ಯ ನಿಯಂತ್ರಿಸುವುದಾಗಿದೆ. ಸಣ್ಣ ದೂರಗಳಿಗೂ ಬೈಕ್ ಹಾಗೂ ಕಾರುಗಳನ್ನು ಬಳಸುವ ಪ್ರವೃತ್ತಿ ಹೆಚ್ಚುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಭಿಯಾನದ ಭಾಗವಾಗಿ, ಒಂದು ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸುವಂತೆ ಜನರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಇದರಿಂದ ಪರಿಸರ ಸಂರಕ್ಷಣೆಯ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಸಹಕಾರಿಯಾಗಲಿದೆ ಎಂಬುದು ಜಿಬಿಎ ಅಭಿಪ್ರಾಯವಾಗಿದೆ.

ಅಭಿಯಾನದ ಪ್ರಮುಖ ಉದ್ದೇಶಗಳು:

  • ವಾಹನ ಬಳಕೆ ಕಡಿಮೆ ಮಾಡಿ ವಾಯು ಮಾಲಿನ್ಯ ನಿಯಂತ್ರಿಸುವುದು.
  • ದೈನಂದಿನ ನಡಿಗೆಯನ್ನು ಉತ್ತೇಜಿಸಿ ಸಾರ್ವಜನಿಕರ ಆರೋಗ್ಯ ಸುಧಾರಿಸುವುದು.
  • ನಗರದ ರಸ್ತೆಗಳಲ್ಲಿ ವಾಹನ ದಟ್ಟಣೆಯನ್ನು ತಗ್ಗಿಸುವುದು.

ಅಭಿಯಾನ ಘೋಷಣೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಆರಂಭವಾಗಿದೆ. ಪರಿಸರ ಕಾಳಜಿಯ ದೃಷ್ಟಿಯಿಂದ ಈ ಯೋಜನೆಯನ್ನು ಹಲವರು ಮೆಚ್ಚಿಕೊಂಡಿದ್ದರೆ, ಮತ್ತೊಂದೆಡೆ ನಗರದ ಪಾದಚಾರಿ ವ್ಯವಸ್ಥೆಯ ದುಸ್ಥಿತಿಯನ್ನು ನೆನಪಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಅನೇಕ ಪ್ರದೇಶಗಳಲ್ಲಿ ಫುಟ್‌ಪಾತ್‌ಗಳು ಹಾಳಾಗಿದ್ದು, ಕಸದ ರಾಶಿಗಳು, ತೆರೆದ ಚರಂಡಿಗಳು ಹಾಗೂ ಗುಂಡಿ ಬಿದ್ದ ರಸ್ತೆಗಳ ನಡುವೆ ಸುರಕ್ಷಿತವಾಗಿ ನಡೆಯುವುದು ಕಷ್ಟಕರವಾಗಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಪಾದಚಾರಿಗಳಿಗೆ ಸುರಕ್ಷಿತ, ವಿಶಾಲ ಹಾಗೂ ನಿರಂತರ ಫುಟ್‌ಪಾತ್‌ಗಳನ್ನು ನಿರ್ಮಿಸಿದ ಬಳಿಕ ಇಂತಹ ಅಭಿಯಾನಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಜಿಬಿಎ ಹಾಗೂ ಬಿಬಿಎಂಪಿ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಒಟ್ಟಾರೆ, ಪರಿಸರ ಮತ್ತು ಆರೋಗ್ಯದ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿ ಕಂಡುಬರುತ್ತಿರುವ #1KmChallenge ಅಭಿಯಾನ, ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗಳ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.

ಡೀಪ್‌ಫೇಕ್ ಬಿಕಿನಿ ವಿಡಿಯೋ ವೈರಲ್: ಕಿಡಿಗೇಡಿಗಳ ವಿರುದ್ಧ ನಟಿ ರುಕ್ಮಿಣಿ ವಸಂತ್ ದೂರು!

0

ನಟಿ ರುಕ್ಮಿಣಿ ವಸಂತ್‌ ಅವರ ಹೆಸರಿನಲ್ಲಿ ಎಐ ಹಾಗೂ ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ನಕಲಿ ಬಿಕಿನಿ ವಿಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಪ್ರಕರಣ ಸಂಬಂಧ ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನಟಿ ರುಕ್ಮಿಣಿ ವಸಂತ್‌ ನೀಡಿದ ದೂರಿನ ಆಧಾರದ ಮೇಲೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಐಟಿ ಕಾಯ್ದೆ ಹಾಗೂ ಬಿಎನ್‌ಎಸ್‌ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ತನಿಖೆ ಆರಂಭಿಸಲಾಗಿದೆ.

ದೂರಿನಲ್ಲಿ ಅವರು, ತಮ್ಮ ಫೋಟೋಗಳನ್ನು ಅನಧಿಕೃತವಾಗಿ ಬಳಸಿ ಎಐ ತಂತ್ರಜ್ಞಾನದಿಂದ ಬೇರೆಯವರ ದೇಹಕ್ಕೆ ಮುಖವನ್ನು ಅಳವಡಿಸಿ ನಕಲಿ ವಿಡಿಯೋ ಮತ್ತು ಚಿತ್ರಗಳನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದಾರೆ. ಇದು ತಮ್ಮ ಗೌರವಕ್ಕೆ ಧಕ್ಕೆ ತರುವ ಹಾಗೂ ಮಾನಹಾನಿ ಮಾಡುವ ಕೃತ್ಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಪ್ರಕರಣದಲ್ಲಿ ಒಟ್ಟು 29 ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ದೂರು ನೀಡಲಾಗಿದ್ದು, ಅದರಲ್ಲಿ 9 ಇನ್‌ಸ್ಟಾಗ್ರಾಂ ಖಾತೆಗಳು, 14 ಎಕ್ಸ್ (X) ಖಾತೆಗಳು ಹಾಗೂ 6 ಫೇಸ್‌ಬುಕ್ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

ಸೈಬರ್ ಕ್ರೈಮ್ ಪೊಲೀಸರು ಸಂಬಂಧಿತ ಖಾತೆಗಳ ಮೂಲವನ್ನು ಪತ್ತೆಹಚ್ಚಿ ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕುರ್ಚಿ ಮೇಲೆ ಬಟ್ಟೆ ರಾಶಿ ಹಾಕುತ್ತಿದ್ದೀರಾ? ವಾಸ್ತು ಎಚ್ಚರಿಕೆ ಏನು ಹೇಳುತ್ತದೆ ನೋಡಿ

ದಿನನಿತ್ಯದ ಜೀವನದಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ಸಣ್ಣ ಅಭ್ಯಾಸವೇ ಮನೆಯ ವಾಸ್ತು ಮತ್ತು ಧನಾತ್ಮಕ ಶಕ್ತಿಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂದು ವಾಸ್ತು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಆಫೀಸ್ ಅಥವಾ ಹೊರಗಿನಿಂದ ಸುಸ್ತಾಗಿ ಮನೆಗೆ ಬಂದ ನಂತರ, ಬಟ್ಟೆಗಳನ್ನು ಬದಲಾಯಿಸಿ ಅವುಗಳನ್ನು ಸರಿಯಾದ ಜಾಗದಲ್ಲಿ ಇಡುವ ಬದಲು ಕುರ್ಚಿ ಅಥವಾ ಸೋಫಾದ ಮೇಲೆ ಎಸೆದುಬಿಡುವ ಅಭ್ಯಾಸ ಹಲವರಲ್ಲಿ ಕಂಡುಬರುತ್ತದೆ. ಆರಂಭದಲ್ಲಿ ಇದು ಸಾಮಾನ್ಯ ಸೋಮಾರಿತನವಾಗಿ ಕಂಡರೂ, ಕ್ರಮೇಣ ಇದು ಮನೆಯ ಶಾಂತಿ ಮತ್ತು ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ.

ವಾಸ್ತು ಶಾಸ್ತ್ರದ ಪ್ರಕಾರ, ಕುರ್ಚಿ ಮತ್ತು ಸೋಫಾಗಳನ್ನು ಸದಾ ಸ್ವಚ್ಛ ಮತ್ತು ಖಾಲಿಯಾಗಿ ಇಟ್ಟುಕೊಳ್ಳಬೇಕು. ಅವುಗಳ ಮೇಲೆ ಬಟ್ಟೆಗಳನ್ನು ರಾಶಿಯಾಗಿ ಇಡುವುದರಿಂದ ಆ ಸ್ಥಳದ ಶಕ್ತಿಯ ಹರಿವು ಅಡ್ಡಿಯಾಗುತ್ತದೆ ಎಂದು ವಾಸ್ತು ತಜ್ಞರು ಅಭಿಪ್ರಾಯಪಡುತ್ತಾರೆ. ಇದರ ಪರಿಣಾಮವಾಗಿ ಮನೆಯಲ್ಲಿ ಅಶಾಂತಿ, ಕಿರಿಕಿರಿ, ವಿನಾಕಾರಣ ಜಗಳಗಳು ಮತ್ತು ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದೇ ರೀತಿಯಾಗಿ, ಈ ಅಸ್ತವ್ಯಸ್ತತೆ ಮನೆಯ ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ. ಧನಾತ್ಮಕ ಶಕ್ತಿ ಕಡಿಮೆಯಾಗುವುದರಿಂದ ಅನಿರೀಕ್ಷಿತ ಖರ್ಚುಗಳು ಹೆಚ್ಚಾಗಿ ಹಣ ಉಳಿಸಿಕೊಳ್ಳುವುದು ಕಷ್ಟವಾಗಬಹುದು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.

ಮನೋವಿಜ್ಞಾನಿಗಳ ಪ್ರಕಾರವೂ, ಸುತ್ತಮುತ್ತಲಿನ ಅಸ್ತವ್ಯಸ್ತ ವಾತಾವರಣವು ಮನಸ್ಸಿನಲ್ಲಿ ಗೊಂದಲವನ್ನು ಉಂಟುಮಾಡಿ, ಗಮನ ಕೇಂದ್ರೀಕರಿಸಲು ಅಡಚಣೆ ತರಬಹುದು ಎಂದು ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ತಜ್ಞರು ಕೆಲವು ಸರಳ ಸಲಹೆಗಳನ್ನು ನೀಡುತ್ತಿದ್ದಾರೆ. ಕುಳಿತುಕೊಳ್ಳುವ ಜಾಗವನ್ನು ಸದಾ ಖಾಲಿ ಮತ್ತು ಸ್ವಚ್ಛವಾಗಿಡುವುದು, ಬಟ್ಟೆಗಳನ್ನು ತಕ್ಷಣ ಮಡಚಿ ಸರಿಯಾದ ಸ್ಥಳದಲ್ಲಿ ಇಡುವುದು ಹಾಗೂ ಕೊಳಕು ಬಟ್ಟೆಗಳಿಗೆ ಪ್ರತ್ಯೇಕ ಲಾಂಡ್ರಿ ಬಾಸ್ಕೆಟ್ ಬಳಸುವುದು ಸೇರಿದಂತೆ ದಿನಕ್ಕೆ ಕೆಲವೇ ನಿಮಿಷಗಳನ್ನು ಮನೆ ಸ್ವಚ್ಛತೆಗೆ ಮೀಸಲಿಡುವುದರಿಂದ ಪರಿಸರದಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ಸಲಹೆ ನೀಡಲಾಗಿದೆ.

ಹಿಂದಿ ಚಿತ್ರರಂಗದ ಸ್ವರಸಾಮ್ರಾಜ್ಞಿ ಸುಮನ್ ಕಲ್ಯಾಣ್‌ಪುರ್ ಇನ್ನಿಲ್ಲ

ಮುಂಬೈ: ಭಾರತೀಯ ಸಂಗೀತ ಲೋಕದ ಹಿರಿಯ ಗಾಯಕಿ ಸುಮನ್ ಕಲ್ಯಾಣ್‌ಪುರ್ ಅವರು 89ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮೇ 31ರಂದು ಮುಂಬೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದಿಂದ ಭಾರತೀಯ ಚಿತ್ರಸಂಗೀತದ ಸುವರ್ಣಯುಗದ ಮತ್ತೊಂದು ಅಧ್ಯಾಯ ಅಂತ್ಯಗೊಂಡಂತಾಗಿದೆ.

ಸುಮಾರು ಆರು ದಶಕಗಳ ಕಾಲ ಗಾಯನ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಸುಮನ್ ಕಲ್ಯಾಣ್‌ಪುರ್, ಹಿಂದಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಸಾವಿರಾರು ಹಾಡುಗಳಿಗೆ ಧ್ವನಿಯಾಗಿದ್ದರು. ಬಾಂಗ್ಲಾದೇಶದ ಢಾಕಾದಲ್ಲಿ ಜನಿಸಿದ್ದ ಅವರು ನಂತರ ಮುಂಬೈನಲ್ಲಿ ನೆಲೆಸಿ, ಭಾರತೀಯ ಚಿತ್ರರಂಗದ ಪ್ರಮುಖ ಹಿನ್ನೆಲೆ ಗಾಯಕಿಯಾಗಿ ಹೊರಹೊಮ್ಮಿದ್ದರು.

‘ಆಜ್‌ಕಲ್ ತೇರೆ ಮೇರೆ ಪ್ಯಾರ್ ಕೆ ಚರ್ಚೇ’, ‘ನಾ ನಾ ಕರ್ತೆ ಪ್ಯಾರ್ ತುಮ್ಹೀ ಸೆ’, ‘ತುಮ್ನೆ ಪುಕಾರಾ ಔರ್ ಹಮ್ ಚಲೆ ಆಯೇ’ ಮೊದಲಾದ ಹಾಡುಗಳ ಮೂಲಕ ಅವರು ಕೋಟ್ಯಂತರ ಸಂಗೀತ ಪ್ರೇಮಿಗಳ ಮನ ಗೆದ್ದಿದ್ದರು. ಶಾಸ್ತ್ರೀಯ ಸಂಗೀತದ ಗಾಢ ಜ್ಞಾನ ಮತ್ತು ಮಧುರ ಕಂಠ ಅವರ ಯಶಸ್ಸಿನ ಮೂಲವಾಗಿತ್ತು.

ಕನ್ನಡ ಚಿತ್ರರಂಗದಲ್ಲೂ ಅವರು ‘ಒಡನಾಡಿ ಬೇಕೆಂದು’, ‘ಹನಿ ಹನಿ ಹೀರಿ ತಣಿ ಹರೆಯ’ ಹಾಗೂ ‘ತಲ್ಲಣ ನೂರು ಬಗೆ’ ಹಾಡುಗಳ ಮೂಲಕ ವಿಶೇಷ ಗುರುತು ಮೂಡಿಸಿದ್ದರು. ಕನ್ನಡಿಗರ ಹೃದಯದಲ್ಲಿ ತಮ್ಮದೇ ಸ್ಥಾನ ನಿರ್ಮಿಸಿಕೊಂಡಿದ್ದ ಸುಮನ್, ಬಹುಭಾಷಾ ಗಾಯಕಿಯಾಗಿ ಅಪಾರ ಜನಪ್ರಿಯತೆ ಗಳಿಸಿದ್ದರು.

ಕೊನೆಯ ಕ್ಷಣಗಳವರೆಗೂ ಸಂಗೀತದೊಂದಿಗೆ ಬದುಕಿದ್ದ ಸುಮನ್ ಕಲ್ಯಾಣ್‌ಪುರ್ ಅವರ ನಿಧನಕ್ಕೆ ದೇಶದಾದ್ಯಂತ ಕಲಾವಿದರು, ರಾಜಕೀಯ ನಾಯಕರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಹಾಡುಗಳು ಮುಂದಿನ ಪೀಳಿಗೆಗಳಿಗೂ ಸ್ಫೂರ್ತಿಯಾಗಲಿವೆ.

ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಗುಡುಗು ಮಳೆಯ ನಿರೀಕ್ಷೆ! ಹವಾಮಾನ ಇಲಾಖೆ ಎಚ್ಚರಿಕೆ

ಬೆಂಗಳೂರು: ಕರ್ನಾಟಕದಾದ್ಯಂತ ಮುಂದಿನ ಕೆಲವು ದಿನಗಳ ಕಾಲ ವರುಣನ ಅಬ್ಬರ ಜೋರಾಗುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆ ಹಲವು ಜಿಲ್ಲೆಗಳಿಗೆ ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.

ಉತ್ತರ ಒಳನಾಡಿನಲ್ಲಿ ಭಾರಿ ಮಳೆ ಎಚ್ಚರಿಕೆ:

ಗದಗ, ಧಾರವಾಡ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳ ಕೆಲವೆಡೆ 40–50 ಕಿ.ಮೀ ವೇಗದ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನಲ್ಲಿ ಹಳದಿ ಅಲರ್ಟ್:

ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ 30–40 ಕಿ.ಮೀ ವೇಗದ ಬಿರುಗಾಳಿ ಸಹಿತ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದ್ದು, ಈ ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ:

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ಸಾಧಾರಣ ಮಳೆಯ ನಿರೀಕ್ಷೆಯಿದ್ದು, 30–40 ಕಿ.ಮೀ ವೇಗದ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ತಂಪಾದ ವಾತಾವರಣ ಮುಂದುವರಿಯಲಿದೆ.

ಇತರೆ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ:

ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಕೆಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಬಿರುಗಾಳಿಯ ವೇಗ 40–50 ಕಿ.ಮೀ ಇರಬಹುದು ಎಂದು ಅಂದಾಜಿಸಲಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ಸಾಧ್ಯತೆ ಇದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಜೆ ಅಥವಾ ರಾತ್ರಿ ವೇಳೆಗೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.

ಸಾರ್ವಜನಿಕರಿಗೆ ಎಚ್ಚರಿಕೆ:

ಮಳೆ ಮತ್ತು ಬಿರುಗಾಳಿ ಸಮಯದಲ್ಲಿ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು ಹಾಗೂ ಹಳೆಯ ಕಟ್ಟಡಗಳು ಮತ್ತು ಮರಗಳ ಕೆಳಗೆ ನಿಲ್ಲುವುದನ್ನು ತಪ್ಪಿಸಬೇಕು ಎಂದು ಹವಾಮಾನ ಇಲಾಖೆ ಸೂಚಿಸಿದೆ. ರೈತರು ತಮ್ಮ ಬೆಳೆ ಹಾಗೂ ಜಾನುವಾರುಗಳ ಸುರಕ್ಷತೆಗೆ ಅಗತ್ಯ ಮುಂಜಾಗ್ರತೆ ವಹಿಸುವಂತೆ ಸಲಹೆ ನೀಡಲಾಗಿದೆ.

ಗುಲಾಬಿ ಹೂವಿನ ಸ್ವಾಗತಕ್ಕೆ ಖುಷಿಯಾದ ಮಕ್ಕಳು

ವಿಜಯಸಾಕ್ಷಿ ಸುದ್ದಿ, ಗದಗ: ಎರಡು ತಿಂಗಳ ಬೇಸಿಗೆ ರಜೆಯ ನಂತರ ಸೋಮವಾರ ಜಿಲ್ಲೆಯಾದ್ಯಂತ ಶಾಲೆಗಳು ಪುನಃ ಆರಂಭಗೊಂಡಿದ್ದು, ವಿದ್ಯಾರ್ಥಿಗಳ ಆಗಮನದಿಂದ ಶಾಲಾ ಆವರಣಗಳು ಮತ್ತೆ ಕಲರವದಿಂದ ಜೀವಂತಗೊಂಡವು. ಹೊಸ ಶೈಕ್ಷಣಿಕ ವರ್ಷದ ಮೊದಲ ದಿನವಾದ ಶಾಲಾ ಪ್ರಾರಂಭೋತ್ಸವವನ್ನು ಜಿಲ್ಲೆಯ ವಿವಿಧ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಸಂಭ್ರಮ, ಸಡಗರ ಮತ್ತು ವಿಶೇಷ ಸ್ವಾಗತದೊಂದಿಗೆ ಆಚರಿಸಲಾಯಿತು.
ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಹಾಗೂ ಸಿಬ್ಬಂದಿ ಗುಲಾಬಿ ಹೂವು ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ಕೆಲವೆಡೆ ಸಿಹಿ ಹಂಚುವ ಮೂಲಕ ಮಕ್ಕಳಿಗೆ ಸ್ವಾಗತ ಕೋರಲಾಯಿತು. ಮೊದಲ ದಿನವೇ ಶಾಲಾ ವಾತಾವರಣ ಹಬ್ಬದ ಸಂಭ್ರಮದಂತೆ ಕಂಗೊಳಿಸಿತು.
ಹೊಸ ಪುಸ್ತಕ, ಹೊಸ ತರಗತಿ… ಮಕ್ಕಳ ಮುಖದಲ್ಲಿ ಸಂಭ್ರಮ
ಎಪ್ರಿಲ್ ಹಾಗೂ ಮೇ ತಿಂಗಳ ಬೇಸಿಗೆ ರಜೆಯನ್ನು ಖುಷಿಯಿಂದ ಕಳೆದ ವಿದ್ಯಾರ್ಥಿಗಳು ಹೊಸ ಉತ್ಸಾಹದೊಂದಿಗೆ ಶಾಲೆಯತ್ತ ಮುಖ ಮಾಡಿದರು. ಹೊಸ ಪುಸ್ತಕಗಳು, ಹೊಸ ತರಗತಿ ಕೊಠಡಿಗಳು ಹಾಗೂ ಸ್ನೇಹಿತರೊಂದಿಗೆ ಮತ್ತೆ ಕಲಿಕೆ ಆರಂಭಿಸುವ ಸಂತಸ ಮಕ್ಕಳ ಮುಖದಲ್ಲಿ ಎದ್ದು ಕಾಣುತ್ತಿತ್ತು.
ವಿಶೇಷವಾಗಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಂದಿನ ತರಗತಿಗೆ ಕಾಲಿಟ್ಟ ಖುಷಿ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಕಂಡುಬಂತು.
ನಗರದ ಗಂಗಾಪುರ ಪೇಟೆ, ಶಹಾಪುರ ಪೇಟೆ, ಗಂಗಿಮಡಿ ಸೇರಿದಂತೆ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವ ಅದ್ದೂರಿಯಾಗಿ ನಡೆಯಿತು. ಶಾಲಾ ಆವರಣಗಳನ್ನು ಸ್ವಚ್ಛಗೊಳಿಸಿ ವರ್ಣರಂಜಿತವಾಗಿ ಅಲಂಕರಿಸಲಾಗಿತ್ತು.
ಪುಟ್ಟ ಮಕ್ಕಳಿಗೆ ಶಿಕ್ಷಕರ ಆತ್ಮೀಯ ಸ್ಪರ್ಶ
ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಮಕ್ಕಳ ಸ್ನೇಹಿ ವಾತಾವರಣ ನಿರ್ಮಿಸಲು ಶಾಲೆಗಳು ವಿಶೇಷ ಗಮನ ಹರಿಸಿದ್ದವು. ಶಾಲೆಗೆ ಮೊದಲ ದಿನ ಬಂದ ಪುಟ್ಟ ಮಕ್ಕಳ ಆತಂಕ ದೂರವಾಗುವಂತೆ ಶಿಕ್ಷಕರು ಪ್ರೀತಿಯಿಂದ ಮಾತನಾಡಿ ಆತ್ಮವಿಶ್ವಾಸ ತುಂಬಿದರು.
ಮಕ್ಕಳನ್ನು ಸೆಳೆಯುವ ಉದ್ದೇಶದಿಂದ ವಿವಿಧ ಸ್ವಾಗತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಶಿಕ್ಷಕರ ಆತ್ಮೀಯತೆ ಹಾಗೂ ಮಕ್ಕಳ ಉತ್ಸಾಹದಿಂದ ಈ ಬಾರಿಯ ಶಾಲಾ ಪ್ರಾರಂಭೋತ್ಸವ ಗದಗ ಜಿಲ್ಲೆಯಲ್ಲಿ ವಿಶೇಷ ಮೆರುಗು ಪಡೆದಿದ್ದು, ಹೊಸ ಶೈಕ್ಷಣಿಕ ವರ್ಷಕ್ಕೆ ಭರವಸೆಯ ಆರಂಭ ದೊರೆತಂತಾಗಿದೆ.
ಮಾವಿನ ಶಿಕರಣಿ ಸವಿದು ಖುಷಿಯಾದ ಮಕ್ಕಳು
ನಗರದ ಸರ್ಕಾರಿ ಪ್ರಾಥಮಿಕ ಶಾಲೆ ನಂ. ೨ರಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದೊಂದಿಗೆ ವಿಶೇಷವಾಗಿ ಮಾವಿನ ಹಣ್ಣಿನ ಶಿಕರಣಿ ತಯಾರಿಸಿ ಬಡಿಸಲಾಯಿತು. ಈ ವಿಶೇಷ ಉಪಹಾರ ಮಕ್ಕಳ ಮನ ಗೆದ್ದಿತು.

ಎತ್ತಿನಗಾಡಿಯಲ್ಲಿ ಶಾಲೆಗೆ ಬಂದ ಮಕ್ಕಳು!

ವಿಜಯಸಾಕ್ಷಿ ಸುದ್ದಿ ಗದಗ: ಹೊಸ ಶೈಕ್ಷಣಿಕ ವರ್ಷದ ಮೊದಲ ದಿನವೇ ಮಕ್ಕಳಲ್ಲಿ ಶಾಲೆಯ ಬಗ್ಗೆ ಪ್ರೀತಿ, ಉತ್ಸಾಹ ಮತ್ತು ಆತ್ಮೀಯತೆ ಮೂಡಿಸುವ ಉದ್ದೇಶದಿಂದ ಗದಗ ತಾಲೂಕಿನ ಅಸುಂಡಿಯ ಕುವೆಂಪು ಶತಮಾನೋತ್ಸವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾರಂಭೋತ್ಸವವನ್ನು ಅದ್ದೂರಿಯಾಗಿ ಹಾಗೂ ವಿಶಿಷ್ಟವಾಗಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳ ಭವ್ಯ ಮೆರವಣಿಗೆ ನಡೆಯಿತು. ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ಮಕ್ಕಳನ್ನು ಕೂರಿಸಿಕೊಂಡು ಗ್ರಾಮದಲ್ಲಿ ಮೆರವಣಿಗೆ ನಡೆಸಿ ಶಾಲೆಗೆ ಕರೆತರಲಾಯಿತು. ಮೆರವಣಿಗೆಯುದ್ದಕ್ಕೂ ಗ್ರಾಮಸ್ಥರು ಹರ್ಷೋದ್ಗಾರಗಳೊಂದಿಗೆ ಮಕ್ಕಳನ್ನು ಸ್ವಾಗತಿಸಿದರು.
ಶಾಲೆಯ ಮುಖ್ಯ ದ್ವಾರದಲ್ಲಿ ಅತಿಥಿಗಳು ಹಾಗೂ ಶಿಕ್ಷಕರು ಮಕ್ಕಳ ಮೇಲೆ ಪುಷ್ಪವೃಷ್ಟಿ ಮಾಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ವಿಶೇಷವಾಗಿ ನಿರ್ಮಿಸಲಾಗಿದ್ದ ಸೆಲ್ಫಿ ಕಾರ್ನರ್ ವಿದ್ಯಾರ್ಥಿಗಳು ಮತ್ತು ಪಾಲಕರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಮಾತನಾಡಿ, “ಶಿಕ್ಷಣವು ಪ್ರತಿಯೊಬ್ಬ ಮಗುವಿನ ಮೂಲಭೂತ ಹಕ್ಕು. ಮಕ್ಕಳಿಗೆ ಸುರಕ್ಷಿತ, ಸಂತೋಷದಾಯಕ ಹಾಗೂ ಪ್ರೇರಣಾದಾಯಕ ವಾತಾವರಣದಲ್ಲಿ ಶಿಕ್ಷಣ ದೊರೆಯಬೇಕು” ಎಂದು ಹೇಳಿದರು.
“ಶಾಲೆಯ ಮೊದಲ ದಿನವೇ ಮಕ್ಕಳಲ್ಲಿ ಶಾಲೆಯ ಬಗ್ಗೆ ಪ್ರೀತಿ ಮತ್ತು ಆತ್ಮೀಯತೆ ಮೂಡಬೇಕು. ಅದಕ್ಕಾಗಿ ಶಿಕ್ಷಕರು, ಪಾಲಕರು ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು” ಎಂದು ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ಆಧುನಿಕ ಕಲಿಕಾ ಸೌಲಭ್ಯಗಳು, ಗುಣಮಟ್ಟದ ಶಿಕ್ಷಕರು, ಉಚಿತ ಪಠ್ಯಪುಸ್ತಕ, ಸಮವಸ್ತ್ರ ಹಾಗೂ ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ವಿದ್ಯಾರ್ಥಿ ಸ್ನೇಹಿ ವ್ಯವಸ್ಥೆಗಳು ಲಭ್ಯವಿವೆ. ಗ್ರಾಮೀಣ ವಿದ್ಯಾರ್ಥಿಗಳೂ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯ ಹೊಂದುವಂತೆ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು.
ಶಿಕ್ಷಣದ ಮಹತ್ವವನ್ನು ವಿಶಿಷ್ಟವಾಗಿ ವಿವರಿಸಿದ ಅವರು, “ಶಿಕ್ಷಣ ಕೊತ್ತಂಬರಿ ಸೊಪ್ಪಿನಂತಿದ್ದು, ಅದು ಎಲ್ಲೆ ಇದ್ದರೂ ತನ್ನ ಸುವಾಸನೆ ಹರಡುತ್ತದೆ. ಮಕ್ಕಳು ತಾವು ಓದುತ್ತಿರುವ ಶಾಲೆಯನ್ನು ಹೆಮ್ಮೆಯಿಂದ ಕಾಣಬೇಕು” ಎಂದು ಕರೆ ನೀಡಿದರು.
ನಿವೃತ್ತ ಉಪನಿರ್ದೇಶಕ ಎ.ಎನ್. ನಾಗರಳ್ಳಿ ಮಾತನಾಡಿ, “ಶಿಕ್ಷಕರು ಬದ್ಧತೆಯಿಂದ ಪಾಠ ಮಾಡಿದರೆ ಮಕ್ಕಳು ಖಂಡಿತ ಕಲಿಯುತ್ತಾರೆ. ಮಕ್ಕಳಲ್ಲಿ ಜ್ಞಾನ ಮತ್ತು ಮೌಲ್ಯಗಳನ್ನು ಬೆಳೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ” ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಎಚ್.ಕೆ. ಬೂಮ್ಮಕ್ಕನವರ ಮಾತನಾಡಿ, “ಖಾಸಗಿ ಶಾಲೆಗಳ ಹೆಚ್ಚಳದ ನಡುವೆಯೂ ಸರ್ಕಾರಿ ಶಾಲೆಗಳ ಅಸ್ತಿತ್ವ ಉಳಿಯಬೇಕು. ಪಾಲಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಸಮಾಜದ ಎಲ್ಲ ವರ್ಗದವರು ಕೈಜೋಡಿಸಬೇಕು” ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಅಭಿವೃದ್ಧಿ) ಕೆ.ಡಿ. ಬಡಿಗೇರ ಮಾತನಾಡಿ, “ಒಂದು ಮಗುವೂ ಸರ್ಕಾರಿ ಶಾಲೆಯಿಂದ ಖಾಸಗಿ ಶಾಲೆಗೆ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರ ಮೇಲಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೆ.ಎ. ಭಾವಿಕಟ್ಟಿ, ರವಿ ಪ್ರಕಾಶ, ಬಿ.ಎಫ್. ಪೂಜಾರ, ವಿ.ಎಂ. ಹಿರೇಮಠ, ರವಿರಾಜ ಪವಾರ, ಶ್ರೀಮತಿ ಗೀತಾ ಕುಲಕರ್ಣಿ, ಎಂ.ಡಿ. ಹೊಸಮನಿ, ವಿ.ಎಫ್. ಕಲಕುಂಬಿ, ಶಂಕರ ಹಡಗಲಿ, ಶ್ರೀಮತಿ ಶೈಲಜಾ ಮಟ್ಟಿ, ಡಾ. ಬಸವರಾಜ ವಿ.ಎಚ್. ಬಳ್ಳಾರಿ, ಎಚ್.ವೈ. ಹೊನ್ನಿನಾಯ್ಕರ, ಸೋಮರೆಡ್ಡಿ ರಾಮೇನಳ್ಳಿ, ಶಿವಾನಂದ ಕರಿಗಾರ, ಫಕಿರೆಡ್ಡಿ ಮಾಡಳ್ಳಿ, ತಾಜುದ್ದೀನ್ ಓಲೇಕಾರ, ಶ್ರೀಮತಿ ರೇಖಾ ತಿಮ್ಮನಗೌಡ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಎಪಿಸಿಒ ಶಿವಕುಮಾರ ಕುರಿ ಸ್ವಾಗತಿಸಿದರು. ವಿ.ವಿ. ನಡುವಿನಮನಿ ವಂದಿಸಿದರು. ಶಾಲೆಯ ಮುಖ್ಯೋಪಾಧ್ಯಾಯ ಡಿ.ಎಚ್. ಪರಂಗಿ ಕಾರ್ಯಕ್ರಮ ನಿರೂಪಿಸಿದರು.
 “ಶಾಲೆಯ ಮೊದಲ ದಿನ ಮಕ್ಕಳ ಮುಖದಲ್ಲಿ ಮೂಡುವ ಸಂತಸವೇ ವರ್ಷಪೂರ್ತಿ ಕಲಿಕೆಯ ಉತ್ಸಾಹಕ್ಕೆ ಅಡಿಪಾಯವಾಗುತ್ತದೆ.”
ಆರ್.ಎಸ್. ಬುರಡಿ, ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ
ಹೊಸ ಪುಸ್ತಕ-ಸಮವಸ್ತ್ರ ಪಡೆದು ಖುಷಿಯಾದ ಮಕ್ಕಳು
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳು ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು. ಹೊಸ ಪುಸ್ತಕ ಹಾಗೂ ಸಮವಸ್ತ್ರ ಪಡೆದ ಮಕ್ಕಳ ಮುಖದಲ್ಲಿ ಸಂತಸ ಮನೆ ಮಾಡಿತ್ತು.
ಅಸುಂಡಿ ಶಾಲಾ ಮಕ್ಕಳಿಂದ ನಾಡಗೀತೆ ಪ್ರಸ್ತುತಪಡಿಸಲಾಯಿತು. ಮಲ್ಲಸಮುದ್ರ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು.

ಅಂಪೈರ್‌ಗೆ ಐಸ್ ಪ್ಯಾಕ್ ಎಸೆತ: ಟಿಮ್ ಡೇವಿಡ್​ಗೆ ನಿಷೇಧದ ಶಿಕ್ಷೆ ವಿಧಿಸಿದ ಬಿಸಿಸಿಐ

ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿಗೆ ಬಿಸಿಸಿಐ ಶಾಕ್ ನೀಡಿದ್ದು, ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಟಿಮ್ ಡೇವಿಡ್‌ಗೆ ಒಂದು ಪಂದ್ಯ ನಿಷೇಧದ ಶಿಕ್ಷೆ ವಿಧಿಸಿದೆ.

ಫೈನಲ್ ಪಂದ್ಯದಲ್ಲಿ ಅಂಪೈರ್ ನಿತಿನ್ ಮೆನನ್ ಅವರತ್ತ ಐಸ್ ಪ್ಯಾಕ್ ಎಸೆದ ಕಾರಣ ಬಿಸಿಸಿಐ ಈ ಕಠಿಣ ಕ್ರಮ ಕೈಗೊಂಡಿದೆ. ಇದರೊಂದಿಗೆ ಟಿಮ್ ಡೇವಿಡ್ ಅವರ ಪಂದ್ಯ ಶುಲ್ಕದ 50 ಪ್ರತಿಶತ ದಂಡವಾಗಿ ಕಡಿತಗೊಳಿಸಲಾಗಿದ್ದು, ಎರಡು ಡಿಮೆರಿಟ್ ಅಂಕಗಳನ್ನು ಸಹ ನೀಡಲಾಗಿದೆ.

ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.9 ಉಲ್ಲಂಘನೆ ಮಾಡಿದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಪಂದ್ಯದ ವೇಳೆ ಆಟಗಾರರು ಅಂಪೈರ್ ಅಥವಾ ಯಾವುದೇ ಅಧಿಕೃತ ವ್ಯಕ್ತಿಯತ್ತ ಕ್ರಿಕೆಟ್ ಸಾಮಗ್ರಿ ಅಥವಾ ವಸ್ತುಗಳನ್ನು ಆಕ್ರಮಣಕಾರಿ ರೀತಿಯಲ್ಲಿ ಎಸೆಯುವುದು ಈ ನಿಯಮದ ಉಲ್ಲಂಘನೆ ಎಂದು ಸ್ಪಷ್ಟಪಡಿಸಲಾಗಿದೆ.

ವರದಿಗಳ ಪ್ರಕಾರ, ಟಿಮ್ ಡೇವಿಡ್ ಲೀಗ್ ಹಂತದಿಂದಲೇ ಈ ಸೀಸನ್‌ನಲ್ಲಿ ಮೂರನೇ ಬಾರಿ ಶಿಸ್ತು ಕ್ರಮಕ್ಕೆ ಒಳಗಾಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಎರಡು ಪಂದ್ಯಗಳಲ್ಲಿ ನಡೆದ ನಿಯಮ ಉಲ್ಲಂಘನೆಗೆ ಕ್ರಮವಾಗಿ ಒಂದು ಮತ್ತು ಎರಡು ಡಿಮೆರಿಟ್ ಅಂಕಗಳನ್ನು ನೀಡಲಾಗಿತ್ತು. ಒಟ್ಟಾರೆ ಐದು ಡಿಮೆರಿಟ್ ಅಂಕಗಳು ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಒಂದು ಪಂದ್ಯ ನಿಷೇಧ ವಿಧಿಸಲಾಗಿದೆ.

ಈ ನಿರ್ಧಾರದ ಪರಿಣಾಮವಾಗಿ ಟಿಮ್ ಡೇವಿಡ್ 2027ರ ಐಪಿಎಲ್ ಆರಂಭಿಕ ಪಂದ್ಯದಲ್ಲಿ ಆರ್‌ಸಿಬಿ ಪರ ಕಣಕ್ಕಿಳಿಯಲು ಸಾಧ್ಯವಾಗುವುದಿಲ್ಲ.

ಈ ಸೀಸನ್‌ನಲ್ಲಿ ಟಿಮ್ ಡೇವಿಡ್ 16 ಪಂದ್ಯಗಳಲ್ಲಿ 305 ರನ್ ಗಳಿಸಿದ್ದು, 33.88 ಸರಾಸರಿ ಹಾಗೂ 23 ಸಿಕ್ಸರ್‌ಗಳೊಂದಿಗೆ ಆರ್‌ಸಿಬಿ ಚಾಂಪಿಯನ್ ಸಾಧನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ರಸ್ತೆ-ಚರಂಡಿ ಇಲ್ಲದೆ ಕಂಗಾಲಾದ ಜನಜೀವನ!

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಕೌಡೇಶ್ವರಿ ನಗರದ ನಿವಾಸಿಗಳು ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿನಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಸೋಮವಾರ ಮಳೆಯ ನಡುವೆಯೇ ಪುರಸಭೆಗೆ ದೌಡಾಯಿಸಿ ಪ್ರತಿಭಟನೆ ನಡೆಸಿದರು.
ಪುರಸಭೆ ಎದುರು ಜಮಾಯಿಸಿದ ನಿವಾಸಿಗಳು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, “ಹಲವು ವರ್ಷಗಳಿಂದ ಮೂಲಸೌಕರ್ಯಗಳಿಲ್ಲದೆ ನರಕಯಾತನೆ ಅನುಭವಿಸುತ್ತಿದ್ದೇವೆ” ಎಂದು ದೂರಿದರು.
“ನಮ್ಮ ವಾರ್ಡಿನಲ್ಲಿ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ಬಂದಾಗ ರಸ್ತೆಗಳು ಸಂಪೂರ್ಣ ಕೆಸರಿನ ಗದ್ದೆಯಾಗುತ್ತವೆ. ಚರಂಡಿ ಇಲ್ಲದೆ ಮಳೆನೀರು ಮನೆಗಳ ಮುಂದೆ ನಿಂತುಕೊಳ್ಳುತ್ತದೆ. ಮಕ್ಕಳು ಹಾಗೂ ವೃದ್ಧರು ಸಂಚಾರ ನಡೆಸುವುದೇ ದುಸ್ತರವಾಗಿದೆ” ಎಂದು ನಿವಾಸಿಗಳು ಅಳಲು ತೋಡಿಕೊಂಡರು.
“ನಾವು ಪ್ರಥಮ ವಾರ್ಡಿನ ನಿವಾಸಿಗಳಾಗಿದ್ದರೂ ಮತದಾನ ಮಾತ್ರ ೮ನೇ ವಾರ್ಡಿಗೆ ಸೇರಿದೆ. ಈ ಕಾರಣದಿಂದ ಜನಪ್ರತಿನಿಧಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದು, ನಮ್ಮ ಪ್ರದೇಶದ ಅಭಿವೃದ್ಧಿ ಮರೀಚಿಕೆಯಾಗಿಬಿಟ್ಟಿದೆ” ಎಂದು ಆರೋಪಿಸಿದರು.
ಈ ಕುರಿತು ಹಲವು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ವೇಳೆ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ, ಪುರಸಭೆ ಮಾಜಿ ಅಧ್ಯಕ್ಷ ಎಂ.ಆರ್. ಪಾಟೀಲ ಹಾಗೂ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ ನಿವಾಸಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಆಲಿಸಿದರು.
“ರಸ್ತೆ, ಚರಂಡಿ ಹಾಗೂ ಇತರೆ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಮುಖ್ಯಾಧಿಕಾರಿ ಭರವಸೆ ನೀಡಿದರು.
ಮುಖ್ಯಾಧಿಕಾರಿಗಳ ಭರವಸೆಯ ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಂಡ ನಿವಾಸಿಗಳು, “ಶೀಘ್ರದಲ್ಲೇ ಕಾಮಗಾರಿ ಆರಂಭವಾಗದಿದ್ದರೆ ಮತ್ತೆ ಉಗ್ರ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಹನಮಂತಪ್ಪ ಬಾಲೆಹೊಸೂರ, ನಾಗಪ್ಪ ಪೂಜಾರ, ಲಕ್ಷ್ಮಣ ಮುಳಗುಂದ, ಮಂಜಪ್ಪ ಪಡಗೇರಿ, ಬೀರಪ್ಪ ಪೂಜಾರ, ಗಂಗಪ್ಪ ಗೊಜಗೊಜಿ, ಮಲ್ಲಪ್ಪ ಬನ್ನಿ, ಬಸಣ್ಣ ಉಳ್ಳಟ್ಟಿ, ರೇಣವ್ವ ಗೊರವರ, ಲಕ್ಷ್ಮವ್ವ ಕೋರಿ, ರೇಣವ್ವ ಪೂಜಾರ, ಗಂಗಮ್ಮ ಗೊಜಗೊಜಿ, ಸಂಕವ್ವ ಮುಳಗುಂದ, ಶಿವಲೀಲಾ ಬನ್ನಿ, ರೇಣವ್ವ ಕೋರಿ, ಜಯಮ್ಮ ಕುಷ್ಟಗಿ ಹಾಗೂ ಗೌರಮ್ಮ ತಹಶೀಲ್ದಾರ ಸೇರಿದಂತೆ ಕೌಡೇಶ್ವರಿ ನಗರದ ಅನೇಕ ನಿವಾಸಿಗಳು ಭಾಗವಹಿಸಿದ್ದರು.
“ಮೂಲಭೂತ ಸೌಲಭ್ಯಗಳಿಲ್ಲದೆ ಬದುಕು ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು.”
 ಕೌಡೇಶ್ವರಿ ನಗರ ನಿವಾಸಿಗಳು

ಮಕ್ಕಳ ಭವಿಷ್ಯಕ್ಕೆ ಶಿಕ್ಷಣವೇ ನಿಜವಾದ ಸಂಪತ್ತು

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ:  “ಪಾಲಕರಿಗೆ ಮಕ್ಕಳೇ ಸಂಪತ್ತಾದರೆ, ಮಕ್ಕಳಿಗೆ ವಿದ್ಯೆಯೇ ನಿಜವಾದ ಸಂಪತ್ತು. ಸುಂದರ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣವೇ ಪ್ರಮುಖ ಸಾಧನ” ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ಪಿಎಂಶ್ರೀ ಕೆಪಿಎಸ್ ಮಾದರಿ ಪ್ರಾಥಮಿಕ ಶಾಲೆ ನಂ. ೪ರಲ್ಲಿ ಸೋಮವಾರ ನಡೆದ ಶಾಲಾ ಪ್ರಾರಂಭೋತ್ಸವದಲ್ಲಿ ಮಕ್ಕಳಿಗೆ ಹೂವು ನೀಡಿ ಸ್ವಾಗತಿಸಿ, ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು.
“ನಮ್ಮ ಹಿರಿಯರು ಶಾಲೆಯನ್ನು ‘ಸಾಲಿಗುಡಿ’ ಎಂದು ಕರೆಯುತ್ತಿದ್ದರು. ಹೀಗಾಗಿ ಶಾಲೆಗೆ ದೇವಾಲಯದಷ್ಟೇ ಪಾವಿತ್ರ್ಯವಿದೆ. ಮಕ್ಕಳನ್ನು ದೇವರಂತೆ ಕಾಣುವ ಶಿಕ್ಷಕರು ಪ್ರೀತಿ ಮತ್ತು ಗೌರವದಿಂದ ಶಿಕ್ಷಣ ನೀಡುವುದರಿಂದ ಮಕ್ಕಳಿಗೆ ಶಿಕ್ಷಕರ ಮಾತೇ ವೇದವಾಕ್ಯವಾಗುತ್ತದೆ” ಎಂದು ಹೇಳಿದರು.
“ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕಾದರೆ ಪಾಲಕರು ಅವರನ್ನು ತಪ್ಪದೇ ಶಾಲೆಗೆ ಕಳುಹಿಸಬೇಕು. ಮಕ್ಕಳು ಆಡುತ್ತಾ, ಹಾಡುತ್ತಾ, ನಲಿಯುತ್ತಾ ಕಲಿಯಬೇಕು” ಎಂದು ಸಲಹೆ ನೀಡಿದರು.
“ಉತ್ತಮ ನಾಗರಿಕರಾಗಿ ಹೊರಹೊಮ್ಮುವಲ್ಲಿ ಪಾಲಕರು ಹಾಗೂ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಎಂಟನೇ ತರಗತಿಯ ನಂತರ ಸರ್ಕಾರಿ ಪ್ರೌಢಶಾಲೆಗಳಿಗೆ ಸೇರ್ಪಡೆಯಾಗಬೇಕು. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಲ್ಲಿ ಕಲಿಸಬೇಕು” ಎಂದು ಮನವಿ ಮಾಡಿದರು.
“ಪಬ್ಲಿಕ್ ಶಾಲೆಗಳ ಅಭಿವೃದ್ಧಿಯ ಜವಾಬ್ದಾರಿ ನಮ್ಮದೇ ಆಗಿದ್ದು, ಪ್ರತಿದಿನ ಶಾಲೆಯ ಪ್ರಾರ್ಥನಾ ಸಭೆಗೆ ಬರುವ ಪ್ರಯತ್ನ ಮಾಡುತ್ತೇನೆ” ಎಂದು ಶಾಸಕ ಡಾ. ಲಮಾಣಿ ಹೇಳಿದರು.
ಸರ್ಕಾರ ಆದಷ್ಟು ಬೇಗ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ಒದಗಿಸಬೇಕು. ಶಿಕ್ಷಕರ ವರ್ಗಾವಣೆ ಹಾಗೂ ನಿವೃತ್ತಿಯಿಂದ ಉಂಟಾಗಿರುವ ಕೊರತೆಯನ್ನು ನೀಗಿಸಲು ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆ ತ್ವರಿತಗೊಳಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಶಾಲೆಯಲ್ಲಿ ನಿರ್ಮಾಣಗೊಂಡ ಶೌಚಾಲಯವನ್ನು ಉದ್ಘಾಟಿಸಿದ ಅವರು, ಶೌಚಾಲಯ ಹಾಗೂ ದುರಸ್ತಿ ಕಾಮಗಾರಿಗಾಗಿ ₹೮ ಲಕ್ಷ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.
ಪಿಎಂಶ್ರೀ ಯೋಜನೆ ಹಾಗೂ ಪಬ್ಲಿಕ್ ಶಾಲೆಗಳ ಉನ್ನತೀಕರಣ ಯೋಜನೆಯಡಿ ಶಾಲೆಗೆ ಹೊಸ ಕಟ್ಟಡ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಶಿವಾನಂದ ಚಕ್ರಸಾಲಿ, ಪುರಸಭೆ ಮಾಜಿ ಸದಸ್ಯ ಪ್ರವೀಣ ಬಾಳಿಕಾಯಿ, ಗಂಗಾಧರ ಮೆಣಸಿನಕಾಯಿ, ವಿಜಯ ಕುಂಬಾರ, ಎಂ.ಎನ್. ಭರಮಗೌಡರ, ಗೀತಾ ಹಳ್ಯಾಳ, ಎಸ್.ಸಿ. ಹಿರೇಮಠ, ಮುತ್ತಣ್ಣ ಹುಬ್ಬಳ್ಳಿ, ಬಸವರಾಜ ಯರಗುಪ್ಪಿ, ಉಮೇಶ ನೇಕಾರ, ಶ್ರೀನಿವಾಸ ಮತ್ತೂರ, ಸೋಮು ಉಮಚಗಿ, ನಾಗರಾಜ ಅಗಡಿ, ಪ್ರದೀಪ ಬೋವಿ, ರವಿ ಸುತಾರ, ಸೋಮು ಹಡಪದ, ತೇಜಶ್ವಿನಿ ಬೆಳವಿಗಿ, ಲಕ್ಷ್ಮವ್ವ ಸಂಶಿ, ಚೈತ್ರಾ ಹೊಂಗಲ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಎಚ್.ಬಿ. ಸಣ್ಣಮನಿ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ರಾಘವೇಂದ್ರ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಬಿ. ಕುರಿ, ಜೆ.ಡಿ. ಹರಕೇರಿ ಹಾಗೂ ಉಮೇಶ ನೇಕಾರ ಕಾರ್ಯಕ್ರಮ ನಿರೂಪಿಸಿದರು.
ಹಬ್ಬದ ಸಂಭ್ರಮದಲ್ಲಿ ಶಾಲಾರಂಭೋತ್ಸವ*
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಶಾಲೆಗಳನ್ನು ಹೂವಿನ ಮಾಲೆ, ತೋರಣ, ಬಲೂನ್‌ಗಳಿಂದ ಅಲಂಕರಿಸಲಾಗಿತ್ತು. ಮಕ್ಕಳಿಗೆ ಹೂವು ಹಾಗೂ ಸಿಹಿ ನೀಡಿ ಸ್ವಾಗತಿಸಲಾಯಿತು. ಬಿಸಿಯೂಟದಲ್ಲಿ ವಿಶೇಷ ಸಿಹಿ ತಯಾರಿಸಲಾಗಿತ್ತು.
 “ಮಕ್ಕಳಿಗೆ ನೀಡುವ ಶಿಕ್ಷಣವೇ ಅವರ ಬದುಕಿನ ದೊಡ್ಡ ಆಸ್ತಿ ಮತ್ತು ಭವಿಷ್ಯದ ಬೆಳಕು.”
 ಡಾ. ಚಂದ್ರು ಲಮಾಣಿ, ಶಾಸಕ
error: Content is protected !!