ಕಾರವಾರ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಡಾಂಬರು ಕೊರತೆಯಿಂದ ರಸ್ತೆ ಕಾಮಗಾರಿಗಳು ನಿಂತು ಹೋಗಿದ್ದರೆ, ಕಾರವಾರದಲ್ಲಿ ಮಾತ್ರ ಗುತ್ತಿಗೆದಾರರ ಎಡವಟ್ಟಿಗೆ ಭದ್ರವಾಗಿದ್ದ ಕಾಂಕ್ರೀಟ್ ರಸ್ತೆಯನ್ನೇ ಹಾಳು ಮಾಡಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಕಾರವಾರ ಬಸ್ ನಿಲ್ದಾಣದಿಂದ ಕೈಗಾ ಅಣುಸ್ಥಾವರಕ್ಕೆ ಹೋಗುವ ಸುಸಜ್ಜಿತ ಕಾಂಕ್ರೀಟ್ ರಸ್ತೆಯ ಮೇಲೆ ಏಕಾಏಕಿ ಡಾಂಬರು ಹಾಕಲು ಆರಂಭಿಸಲಾಗಿತ್ತು. ರಸ್ತೆ ಈಗಾಗಲೇ ಉತ್ತಮ ಸ್ಥಿತಿಯಲ್ಲಿದ್ದರೂ ಅನಗತ್ಯ ಕಾಮಗಾರಿ ನಡೆಸುತ್ತಿರುವುದನ್ನು ಕಂಡ ಸಾರ್ವಜನಿಕರು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸ್ಥಳೀಯರ ಆಕ್ರೋಶ ಹೆಚ್ಚುತ್ತಿದ್ದಂತೆಯೇ ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿ ಅಲ್ಲಿಂದ ತೆರಳಿದ್ದಾರೆ. ಆದರೆ ಬಳಿಕ ಹಾಕಿದ್ದ ಡಾಂಬರನ್ನು ಜೆಸಿಬಿ ಮೂಲಕ ಕಿತ್ತು ಹಾಕುವ ವೇಳೆ ಕಾಂಕ್ರೀಟ್ ರಸ್ತೆಯ ಮೇಲ್ಭಾಗವೇ ಹಾನಿಗೊಳಗಾಗಿದೆ. ಇದರಿಂದ ಸಾರ್ವಜನಿಕರು ಇನ್ನಷ್ಟು ಕಿಡಿಕಾರಿದ್ದಾರೆ.
ಕೆಶಿಪ್ ಯೋಜನೆಯಡಿ ಮಂಜೂರಾದ ಕಾಮಗಾರಿಯಿದು ಎನ್ನಲಾಗುತ್ತಿದೆ. ಆದರೆ ಸ್ಥಳದ ವಾಸ್ತವ ಸ್ಥಿತಿ ತಿಳಿಯದೇ ಗುತ್ತಿಗೆದಾರರು ಕೆಲಸ ಆರಂಭಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸ್ಥಳೀಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೂ ಈ ಅವಾಂತರಕ್ಕೆ ಕಾರಣ ಎನ್ನಲಾಗುತ್ತಿದೆ.
ಒಟ್ಟಾರೆ ರಾಜ್ಯದ ಅನೇಕ ಕಡೆ ರಸ್ತೆ ಅಭಿವೃದ್ಧಿಗೆ ಹಣವಿಲ್ಲ ಎಂದು ಜನರು ಪರದಾಡುತ್ತಿದ್ದರೆ, ಕಾರವಾರದಲ್ಲಿ ಮಾತ್ರ ಚೆನ್ನಾಗಿದ್ದ ರಸ್ತೆಗೆ ಡಾಂಬರು ಹಾಕಿ ಮತ್ತೆ ಕಿತ್ತು ಹಾಳು ಮಾಡುತ್ತಿರುವುದು ಸಾರ್ವಜನಿಕ ಹಣದ ದುರ್ಬಳಕೆ ಅಲ್ಲವೇ ಎಂಬ ಪ್ರಶ್ನೆ ಕೇಳಿಬರುತ್ತಿದೆ.

