ಬೆಂಗಳೂರು: ಐಷಾರಾಮಿ ಕಾರಿನ ಮಾಸಿಕ ಕಂತು (ಇಎಂಐ) ಪಾವತಿಸಲು ಆರ್ಥಿಕ ಸಾಮರ್ಥ್ಯವಿರುವ ವ್ಯಕ್ತಿ, ಅನಾರೋಗ್ಯದಿಂದ ಬಳಲುತ್ತಿರುವ ಮಗುವಿನ ಪೋಷಣೆ ಹಾಗೂ ಪತ್ನಿಯ ಜೀವನಾಂಶ ಪಾವತಿಸಲು ಸಾಧ್ಯವಿಲ್ಲ ಎಂದು ಹೇಳಲು ಆಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಖಡಕ್ವಾಗಿ ಹೇಳಿದೆ.
ವಿಚ್ಛೇದನ ಪ್ರಕರಣವೊಂದರಲ್ಲಿ ಪತ್ನಿ ಹಾಗೂ ಆಟಿಸಂ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಮಾಸಿಕ 30 ಸಾವಿರ ರೂ. ಮಧ್ಯಂತರ ಜೀವನಾಂಶ ನೀಡುವಂತೆ ಕುಟುಂಬ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪತಿ ಸೈಯದ್ ಕಮ್ರಾನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಡಾ. ಚಿಲ್ಲಾಕೂರು ಸುಮಲತಾ ಅವರಿದ್ದ ನ್ಯಾಯಪೀಠ ವಜಾಗೊಳಿಸಿದೆ.
ಪ್ರಕರಣದ ವಿಚಾರಣೆ ವೇಳೆ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಪತಿಯ ವಾರ್ಷಿಕ ಆದಾಯ ಕಳೆದ ಕೆಲವು ವರ್ಷಗಳಲ್ಲಿ 14 ಲಕ್ಷ ರೂ.ಗಳಿಂದ 28 ಲಕ್ಷ ರೂ.ವರೆಗೆ ಇದ್ದು, ಅವರು ತಿಂಗಳಿಗೆ ಕನಿಷ್ಠ 2 ಲಕ್ಷ ರೂ. ಆದಾಯ ಗಳಿಸುತ್ತಿರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ ಎಂದು ತಿಳಿಸಿದೆ.
ಇದೇ ವೇಳೆ, ಹೊಸ ಐಷಾರಾಮಿ ಕಾರು ಖರೀದಿಸಿ ಅದಕ್ಕಾಗಿ ಪ್ರತಿ ತಿಂಗಳು 53 ಸಾವಿರ ರೂ. ಇಎಂಐ ಪಾವತಿಸುತ್ತಿರುವ ವ್ಯಕ್ತಿ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆ ಮತ್ತು ಪತ್ನಿಯ ನಿರ್ವಹಣೆಗೆ ತಿಂಗಳಿಗೆ 30 ಸಾವಿರ ರೂ. ನೀಡಲು ಸಾಧ್ಯವಿಲ್ಲ ಎಂದು ವಾದಿಸುವುದನ್ನು ಒಪ್ಪಲಾಗುವುದಿಲ್ಲ ಎಂದು ನ್ಯಾಯಪೀಠ ಕಟುವಾಗಿ ಹೇಳಿದೆ.
ಪತಿಯ ಪರ ವಕೀಲರು, ಪತ್ನಿಯೇ ಮಗುವಿನೊಂದಿಗೆ ಮನೆ ಬಿಟ್ಟು ಹೋಗಿದ್ದು, ಪತಿ ಸ್ವಯಂಪ್ರೇರಿತವಾಗಿ ತಿಂಗಳಿಗೆ 5 ಸಾವಿರ ರೂ. ನೀಡುತ್ತಿದ್ದರು. ಪತ್ನಿ ವಿದ್ಯಾವಂತರಾಗಿದ್ದು, ಉದ್ಯೋಗ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅಲ್ಲದೆ ವ್ಯಾಪಾರದಲ್ಲಿ ನಷ್ಟವಾಗಿರುವ ಕಾರಣ ಹೆಚ್ಚಿನ ಮೊತ್ತ ಪಾವತಿಸಲು ಸಾಧ್ಯವಿಲ್ಲ ಎಂದು ವಾದ ಮಂಡಿಸಿದ್ದರು.
ಇದಕ್ಕೆ ಪ್ರತಿಯಾಗಿ ಪತ್ನಿಯ ಪರ ವಕೀಲರು, ಪತಿ ಖಾಸಗಿ ಕಂಪನಿಯ ನಿರ್ದೇಶಕರಾಗಿದ್ದು, ತೆರಿಗೆ ದಾಖಲೆಗಳ ಪ್ರಕಾರ ತಿಂಗಳಿಗೆ 2 ಲಕ್ಷ ರೂ.ಗಿಂತ ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ಏಳು ವರ್ಷದ ಮಗು ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ನಿಂದ ಬಳಲುತ್ತಿದ್ದು, ಚಿಕಿತ್ಸೆ ಮತ್ತು ಆರೈಕೆಗೆ ಹೆಚ್ಚಿನ ವೆಚ್ಚವಾಗುತ್ತಿದೆ. ಪತ್ನಿಗೆ ಯಾವುದೇ ಆದಾಯದ ಮೂಲವಿಲ್ಲದ ಹಿನ್ನೆಲೆಯಲ್ಲಿ ಕುಟುಂಬ ನ್ಯಾಯಾಲಯದ ಆದೇಶ ಸಮಂಜಸವಾಗಿದೆ ಎಂದು ವಾದಿಸಿದರು.
ಉಭಯ ಪಕ್ಷಗಳ ವಾದ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ಹೈಕೋರ್ಟ್, ಕುಟುಂಬ ನ್ಯಾಯಾಲಯ ನೀಡಿದ್ದ ಮಾಸಿಕ 30 ಸಾವಿರ ರೂ. ಮಧ್ಯಂತರ ಜೀವನಾಂಶದ ಆದೇಶದಲ್ಲಿ ಯಾವುದೇ ದೋಷವಿಲ್ಲ ಎಂದು ಅಭಿಪ್ರಾಯಪಟ್ಟಿದ್ದು, ಪತಿಯ ಅರ್ಜಿಯನ್ನು ವಜಾಗೊಳಿಸಿದೆ.

