Home Blog Page 3

ಉದಯಪುರದಲ್ಲಿ ವಿವಾಹವಾದ ರಶ್ಮಿಕಾ–ವಿಜಯ್: ಪ್ರಧಾನಿಯನ್ನು ಭೇಟಿ ಮಾಡಿದ ಜೋಡಿ!

0

ದೆಹಲಿ: ತೆಲುಗು ಚಿತ್ರರಂಗದ ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರನಲ್ಲಿ ಐಶಾರಾಮಿ ITC ರೆಸಾರ್ಟ್ನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ.

ವಿವಾಹವಾದ ಮರುದಿನವೇ ನವ ದಂಪತಿ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಮದುವೆಗೆ ಮುನ್ನವೇ ಮೋದಿ ಅವರು ಪತ್ರ ಮುಖೇನ ಶುಭಾಶಯ ಕೋರಿದ್ದರೆಂದು ತಿಳಿದುಬಂದಿದೆ. ವಿಜಯ್ ಅವರ ತಂದೆ ಕಳುಹಿಸಿದ್ದ ಆಹ್ವಾನ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ, ವಧು-ವರರಿಗೆ ಶುಭಹಾರೈಕೆಗಳನ್ನು ತಿಳಿಸಿದ್ದರು.

ಇದೀಗ ದೆಹಲಿಯಲ್ಲಿ ಪ್ರಧಾನಿಯನ್ನು ಭೇಟಿ ಮಾಡಿದ ರಶ್ಮಿಕಾ ಮತ್ತು ವಿಜಯ್, ಮಾರ್ಚ್ 4ರಂದು ಹೈದರಾಬಾದ್ನಲ್ಲಿ ನಡೆಯಲಿರುವ ಆರತಕ್ಷತೆ ಸಮಾರಂಭಕ್ಕೆ ಖುದ್ದಾಗಿ ಆಹ್ವಾನಿಸಿದ್ದಾರೆ.

ಮದುವೆ ಸಮಾರಂಭ ರಾಜಸ್ಥಾನದಲ್ಲಿ ನೆರವೇರಿದರೆ, ಆರತಕ್ಷತೆ ಕಾರ್ಯಕ್ರಮದಲ್ಲಿ ರಾಜಕೀಯ ಮತ್ತು ಚಿತ್ರರಂಗದ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.

ಲಿವ್-ಇನ್ ಸಂಬಂಧದ ಮಗು: ತಾಯಿಯ ವಂಶಾವಳಿ ಸೇರಿಸಲು ಹೈಕೋರ್ಟ್ ಆದೇಶ

0

ಬೆಂಗಳೂರು: ಲಿವ್-ಇನ್ ಸಂಬಂಧದಿಂದ ಜನಿಸಿದ ಎಂಟು ವರ್ಷದ ಬಾಲಕಿಯ ಉಪನಾಮದಲ್ಲಿ ತಾಯಿಯ ವಂಶಾವಳಿಯನ್ನು ಸೇರಿಸಲು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಜನನ ಪ್ರಮಾಣಪತ್ರದಲ್ಲಿ ಮಗಳ ಉಪನಾಮವನ್ನು ಬದಲಾಯಿಸಲು ಸಲ್ಲಿಸಿದ್ದ ಮನವಿಯನ್ನು ಕಾರಣವಿಲ್ಲದೆ ತಿರಸ್ಕರಿಸಿದ್ದ ಜನನ ಮತ್ತು ಮರಣ ನೋಂದಣಿ ಇಲಾಖೆಯ ಕ್ರಮವನ್ನು ನ್ಯಾಯಾಲಯ ಪ್ರಶ್ನಿಸಿದೆ.

ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ, ಬಾಲಕಿಯ ಹೆಸರನ್ನು ತಂದೆಯ ಬದಲಿಗೆ ತಾಯಿಯ ಕುಟುಂಬದ ಹೆಸರಿನೊಂದಿಗೆ ಸೇರಿಸಲು ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದೆ. ಆದರೆ, ಜನನ ಪ್ರಮಾಣಪತ್ರದಲ್ಲಿ ಜೈವಿಕ ತಂದೆಯ ಹೆಸರನ್ನು ಹಾಗೆಯೇ ಉಳಿಸಬಹುದಾಗಿದೆ ಎಂದು ಸ್ಪಷ್ಟಪಡಿಸಿದೆ.

ತಾಯಿ ಏಕೈಕ ಆರೈಕೆದಾರ ಮತ್ತು ನೈಸರ್ಗಿಕ ಪೋಷಕರಾಗಿದ್ದಲ್ಲಿ, ಮಗುವಿನ ಉಪನಾಮದಲ್ಲಿ ತಾಯಿಯ ವಂಶಾವಳಿಯನ್ನು ಗುರುತಿಸಲು ಯಾವುದೇ ಸಾಂವಿಧಾನಿಕ ಅಡಚಣೆ ಇಲ್ಲ ಎಂದು ಪೀಠ ಹೇಳಿದೆ. ತಾಯಿಯ ಗುರುತನ್ನು ಸೇರಿಸುವುದರಿಂದ ತಂದೆಯ ಸ್ಥಾನಮಾನ ಕಡಿಮೆಯಾಗುವುದಿಲ್ಲ; ಇದು ಸಮಾನತೆಯ ಸಂಕೇತವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಮಕ್ಕಳು ತಂದೆಯ ಉಪನಾಮವನ್ನೇ ಹೊಂದಿರಬೇಕು ಎಂಬುದು ಕೇವಲ ಸಾಮಾಜಿಕ ಸಂಪ್ರದಾಯವಾಗಿದ್ದು, ಸಾಂವಿಧಾನಿಕ ಕಡ್ಡಾಯವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಪೋಷಕತ್ವದ ಗುರುತಿನಲ್ಲಿ ಮಹಿಳೆಯರಿಗೂ ಸಮಾನ ಸ್ಥಾನಮಾನವಿದೆ ಎಂದು ಪೀಠ ಹೇಳಿದೆ.

1969ರ ಜನನ ಮತ್ತು ಮರಣ ನೋಂದಣಿ ಕಾಯ್ದೆಯ ಪ್ರಕಾರ ಹೆಸರಿನಲ್ಲಿ ಉಂಟಾಗುವ ಗೊಂದಲಗಳನ್ನು ಸರಿಪಡಿಸಲು ರಿಜಿಸ್ಟ್ರಾರ್‌ಗೆ ಅಧಿಕಾರವಿದೆ. ಹೆಸರಿನಲ್ಲಿನ ದೋಷ ಮಾತ್ರವಲ್ಲದೆ ವಿಷಯವಸ್ತುವನ್ನೂ ತಿದ್ದುಪಡಿ ಮಾಡಬಹುದಾಗಿದೆ ಎಂದು ಪೀಠ ತಿಳಿಸಿದೆ.

ಅರ್ಜಿದಾರರು ತಂದೆಯ ಹೆಸರನ್ನು ಅಳಿಸಲು ಮನವಿ ಮಾಡಿಲ್ಲ. ತಂದೆಯ ಹೆಸರನ್ನು ಹಾಗೆಯೇ ಉಳಿಸಿ, ಮಗುವಿನ ಉಪನಾಮಕ್ಕೆ ತಾಯಿಯ ಕುಟುಂಬದ ಹೆಸರನ್ನು ಸೇರಿಸಲು ಮಾತ್ರ ಕೋರಿದ್ದಾರೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ.

ನ್ಯಾಯಪೀಠವು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶದ 3ನೇ ವಿಧಿ ಹಾಗೂ ಭಾರತೀಯ ಸಂವಿಧಾನದ 21ನೇ ವಿಧಿಯಲ್ಲಿ ಉಲ್ಲೇಖಿಸಿರುವ “ಮಗುವಿನ ಹಿತಾಸಕ್ತಿ” ತತ್ವವನ್ನು ಉಲ್ಲೇಖಿಸಿದೆ. ಉಪನಾಮದಲ್ಲಿನ ಬದಲಾವಣೆ ಮಗುವಿನ ಗುರುತು, ಘನತೆ ಮತ್ತು ಯೋಗಕ್ಷೇಮವನ್ನು ಕಾಪಾಡುತ್ತದೆ ಎಂದು ಹೇಳಿದೆ.

ಅಲ್ಲದೆ, ಉಪನಾಮ ಬದಲಾವಣೆ ಮಾಡಿದರೂ ಜೈವಿಕ ತಂದೆಯಿಂದ ಮಗುವಿಗೆ ದೊರಕಬಹುದಾದ ಅನುವಂಶಿಕತೆ, ಉತ್ತರಾಧಿಕಾರ ಮತ್ತು ನಿರ್ವಹಣೆಯ ಹಕ್ಕುಗಳಿಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನೂತನ ಆವಿಷ್ಕಾರ, ಸಂಶೋಧನೆ, ಪ್ರತಿಭಾವಂತರ ಕಾಯಕ ಭೂಮಿ ಕರ್ನಾಟಕ: ಡಿ.ಕೆ. ಶಿವಕುಮಾರ್

0

ಬೆಂಗಳೂರು: ಕರ್ನಾಟಕ ರಾಜ್ಯ ಸಂಶೋಧನೆಗೆ, ನೂತನ ಆವಿಷ್ಕಾರಗಳಿಗೆ, ಉದ್ಯೋಗಗಳಿಗೆ ಹಾಗೂ ಪ್ರತಿಭಾವಂತರಿಗೆ ಕಾಯಕ ಭೂಮಿಯಾಗಿದೆ. ಕರ್ನಾಟಕವು 875 ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (ಜಿಸಿಸಿ) ಹೊಂದಿದೆ. ಡಿಜಿಟಲ್ ಮಾಧ್ಯಮ ಕಂಪನಿಗಳಿಗೆ ನೆಲೆಯಾಗಿ ನಮ್ಮ ರಾಜ್ಯ ರೂಪುಗೊಂಡಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಣ್ಣಿಸಿದರು.

ಲಲಿತ್ ಅಶೋಕದಲ್ಲಿ ಶುಕ್ರವಾರ ನಡೆದ ಬೆಂಗಳೂರು ಜಿಎಎಫ್ ಎಕ್ಸ್ ಸಮ್ಮಿಟ್ ನಲ್ಲಿ ಶಿವಕುಮಾರ್ ಅವರು ಮಾತನಾಡಿದರು.”ಆರೆಂಜ್ ಎಕಾನಮಿ ಬಗ್ಗೆ ಪ್ರಧಾನಮಂತ್ರಿಯವರು ಈಗ ಮಾತನಾಡಿದ್ದಾರೆ‌‌. ಆದರೆ ಇದರ ಬಗ್ಗೆ ನಾವು 2016 ರಲ್ಲಿಯೇ ನೀತಿ ರೂಪಿಸಿದ್ದೆವು.‌ ಈ ಕ್ಷೇತ್ರದ ಬೆಳವಣಿಗೆಗೆ ಪೂರವಾಗಿ ನಮ್ಮ ಸರ್ಕಾರ ಕೆಲಸ ಮಾಡಿದೆ” ಎಂದು ಹೇಳಿದರು.

ಪ್ರತಿವರ್ಷ 1.50 ಲಕ್ಷ ಯುವ ಹಾಗೂ ಪ್ರತಿಭಾವಂತ ಐಟಿ ಉದ್ಯೋಗಿಗಳು ಕರ್ನಾಟಕದಿಂದ ಹೊರಹೊಮ್ಮುತ್ತಿದ್ದಾರೆ. ಇಡೀ ಜಗತ್ತೇ ನಮ್ಮ‌ಕಡೆ ನೋಡುತ್ತಿದೆ. ನಮ್ಮ ರಾಜ್ಯವು ಈಗಾಗಲೇ ಏಷ್ಯಾದ ಅತ್ಯಂತ ಬಲಿಷ್ಠ ತಂತ್ರಜ್ಞಾನ ವ್ಯವಸ್ಥೆ ಹೊಂದಿರುವ ರಾಜ್ಯವಾಗಿದೆ” ಎಂದು ಹೇಳಿದರು.

2028 ರ ವೇಳೆಗೆ ಸುಮಾರು 50,000 ವಿದ್ಯಾರ್ಥಿಗಳಿಗೆ ಎವಿಜಿಸಿ- ಎಕ್ಸ್ ಆರ್ ತರಬೇತಿ ಗುರಿ

“ಕರ್ನಾಟಕ ಚಲನಚಿತ್ರ ಉದ್ದಿಮೆ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ. ಈಗಾಗಲೇ ನಮ್ಮ ಚಲನಚಿತ್ರಗಳು ಹಾಲಿವುಡ್ ಚಿತ್ರಗಳಿಗೆ ಪ್ರತಿಸ್ಪರ್ಧಿಯಾಗಿವೆ. ಎವಿಜಿಸಿ- ಎಕ್ಸ್ ಆರ್ ವಿಭಾಗದಲ್ಲಿ 2028 ರ ವೇಳೆಗೆ ಸುಮಾರು 50,000 ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಸುಮಾರು 70% ಉದ್ಯೋಗಿಗಳು ಸೃಜನಶೀಲ ವೃತ್ತಿಪರರಾಗಿದ್ದಾರೆ. ಈ ಮೂಲಕ, 2028 ರ ವೇಳೆಗೆ 30,000 ಕ್ಕೂ ಹೆಚ್ಚು ಉತ್ತಮ ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ” ಎಂದರು.

“ಭವಿಷ್ಯವನ್ನು ಗುರಿಯಲ್ಲಿಟ್ಟುಕೊಂಡು ಕರ್ನಾಟಕದಲ್ಲಿ 6,50,000 ಉದ್ಯೋಗಿಗಳಿಗೆ 2023-2024 ರಲ್ಲಿ ಎಐ ಕೌಶಲ್ಯಗಳ ಕುರಿತು ತರಬೇತಿ ನೀಡಲಾಗಿದೆ. 2022 ಕ್ಕೆ ಹೋಲಿಸಿ‌ ನೋಡಿದರೆ 2023 ರಲ್ಲಿ ಏಐ ಸಂಬಂಧಿತ ತರಭೇತಿ, ಚಟುವಟಿಗಳು ಶೇ.9ರಷ್ಟು ಹೆಚ್ಚಳವಾಗಿದೆ. ಈ ಏರಿಕೆಯಿಂದ ಭವಿಷ್ಯದ ತಂತ್ರಜ್ಞಾನ ಬೆಳವಣಿಗೆಯಲ್ಲಿ ಕರ್ನಾಟಕ ಅತ್ಯಂತ ಮುಂದುವರೆದ ಸ್ಥಾನದಲ್ಲಿ ಇರಲಿದೆ” ಎಂದು ಹೇಳಿದರು.

“ಕರ್ನಾಟಕವು ಈಗಾಗಲೇ ಈ ಕ್ಷೇತ್ರದ ಅಭಿವೃದ್ಧಿಗೆ ಬಲವಾದ ಅಡಿಪಾಯ ಹಾಕಿದೆ. ಪ್ರತಿಭಾನ್ವಿತ ನವೋದ್ಯಮಗಳನ್ನು ಬಲಪಡಿಸುವುದು, ಸೃಜನಶೀಲ ನವೋದ್ಯಮಗಳನ್ನು ಬೆಂಬಲಿಸುವುದು, ಮುಂಬರುವ AVGC-XR ಪಾರ್ಕ್‌ನಂತಹ ಮೂಲಸೌಕರ್ಯವನ್ನು ವಿಸ್ತರಿಸುವುದು ಮತ್ತು ಆರೆಂಜ್ ಎಕಾನಮಿಯ ಪ್ರಮುಖ ಕೇಂದ್ರವಾಗಿ ಮತ್ತು ಸೃಜನಶೀಲ ತಂತ್ರಜ್ಞಾನಕ್ಕೆ ಜಾಗತಿಕ ಕೇಂದ್ರವಾಗಿ ಬೆಳೆಸುವುದೇ ನಮ್ಮ ಗುರಿಯಾಗಿದೆ” ಎಂದರು.

“ಗೇಮಿಂಗ್, ನೈಜ-ಸಮಯದ ವಿಷಯ ರಚನೆ, ಕೃತಕ ಬುದ್ಧಿಮತ್ತೆ (AI) ಆಧಾರಿತ ಅನಿಮೇಷನ್ ಹೀಗೆ ಅನೇಕ ಸ್ಟಾರ್ಟ್‌ಅಪ್‌ಗಳು ಕರ್ನಾಟಕದಿಂದ ಹೊರಹೊಮ್ಮುತ್ತಿವೆ. ಹೂಡಿಕೆದಾರರು, ಜಾಗತಿಕ ಸ್ಟುಡಿಯೋಗಳು ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ಸ್ಟಾರ್ಟ್‌ಅಪ್‌ಗಳನ್ನು ಸಂಪರ್ಕಿಸುವ ಮೂಲಕ ಹೊಸ ನಾವೀನ್ಯತೆ ಮತ್ತು ಸಹಯೋಗವನ್ನು ವೃದ್ದಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ” ಎಂದರು‌.

“ನಾವು ಈ ವಲಯದ ಬೆಳವಣಿಗೆಗೆ ಪೂರವಾದ ವಾತಾವರಣ ನಿರ್ಮಿಸಲು ಬದ್ದವಾಗಿದ್ದೇವೆ‌. AVGC-XR ವಲಯ – ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ಎಕ್ಸ್ ಟೆಂಡ್ ರಿಯಾಲಿಟಿ – ವಿಶ್ವಾದ್ಯಂತ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕೆಗಳಲ್ಲಿ ಒಂದಾಗಿದೆ. ದೇಶದಾದ್ಯಂತ 20 ಸಾವಿರ ಕೋಟಿಯಷ್ಟು ವಹಿವಾಟನ್ನು ಈ ವಿಭಾಗ ಮಾಡುತ್ತಿದೆ” ಎಂದರು.

“ಜಿಎಎಫ್ ಎಕ್ಸ್ ಕ್ಷೇತ್ರ ವಾರ್ಷಿಕವಾಗಿ 25–30% ರಷ್ಟು ಬೆಳೆಯುತ್ತಿದ್ದು, ಮುಂಬರುವ ವರ್ಷಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೆ ಪ್ರಿಯಾಂಕ್ ಖರ್ಗೆ ಅವರು ಸಾರಥ್ಯ ವಹಿಸಿರುವುದು ಹೆಚ್ಚಿನ ಬಲ ತುಂಬಿದೆ” ಎಂದರು.

“42 ದೇಶಗಳ ಪ್ರತಿನಿಧಿಗಳನ್ನು ಈ ಕುರಿತಾಗಿ ಚರ್ಚೆ ನಡೆಸಲು ನಾವು ಆಹ್ವಾನಿಸಿದ್ದೇವೆ. ಏಕೆಂದರೆ ನಮ್ಮ ಕರ್ನಾಟಕ ಈ ವಿಭಾಗದಲ್ಲಿ ಮುಂಚೂಣಿಯಲ್ಲಿದೆ. ಮುಖ್ಯಮಂತ್ರಿಯವರು ದಿಕ್ಸೂಚಿ ಭಾಷಣದಲ್ಲಿ ಯುವ ಉದ್ಯಮಿಗಳ ಬೆಂಬಲವಾಗಿ ಮಾತನಾಡಿದ್ದಾರೆ. ನಾನು ಬೆಂಗಳೂರು ನಗರದ ಉಸ್ತುವಾರಿ ವಹಿಸಿರುವವನಾಗಿ ಈ ನಗರದ ಎಲ್ಲಾ ಜನರಿಗೂ ಪೂರಕವಾಗಿರಬೇಕು ಎನ್ನುವ ರೀತಿಯಲ್ಲಿ ರೂಪಿಸಲು ಅನೇಕ ಯೋಜನೆಗಳನ್ನು ಮಾಡುತ್ತಿದ್ದೇವೆ” ಎಂದು ಹೇಳಿದರು.

“ಬೆಂಗಳೂರಿನ ಮೂಲಕ ಭಾರತವನ್ನು ನೋಡಲಾಗುತ್ತಿದೆ. ಪ್ರತಿಯೊಂದು ಉದ್ದಿಮೆಗಳಿಗೂ ಇಲ್ಲಿ ಪೂರಕ ವಾತಾವರಣವಿದೆ. ಫೆಬ್ರವರಿ ಮುಗಿಯುತ್ತಾ ಬಂದರೂ ಇಲ್ಲಿನ ವಾತಾವರಣ ಆಹ್ಲಾದಕರವಾಗಿದೆ. ಮೇ ತಿಂಗಳು ಹೊರತುಪಡಿಸಿ ಪ್ರಪಂಚದ ಯಾವುದೇ ದೇಶದವರು ಇಲ್ಲಿ ಕೆಲಸ ಮಾಡುವ ವಾತಾವರಣವಿದೆ” ಎಂದು ಹೇಳಿದರು.

ಏಪ್ರಿಲ್ 1ರಂದು ವಿಶ್ವವಿಖ್ಯಾತ ಬೆಂಗಳೂರು ಕರಗ: 11 ದಿನಗಳ ಅದ್ಧೂರಿ ಉತ್ಸವಕ್ಕೆ ದಿನಾಂಕ ಫಿಕ್ಸ್!

0

ಬೆಂಗಳೂರು: ರಾಜಧಾನಿ ಬೆಂಗಳೂರಿನ ಐತಿಹಾಸಿಕ ಹಾಗೂ ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವಕ್ಕೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಏಪ್ರಿಲ್ 1ರಂದು ಕರಗ ಮಹೋತ್ಸವವನ್ನು ಆಚರಿಸಲು ಮುಜರಾಯಿ ಇಲಾಖೆ, ಧರ್ಮರಾಯ ಸ್ವಾಮಿ ದೇವಾಲಯದ ನೂತನ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಂಡಿದೆ.

11 ದಿನಗಳ ಕಾಲ ನಡೆಯುವ ಕರಗ ಉತ್ಸವಕ್ಕೆ ಮಾರ್ಚ್ 24ರಂದು ಧ್ವಜಾರೋಹಣದ ಮೂಲಕ ಚಾಲನೆ ಸಿಗಲಿದೆ. ಮಾರ್ಚ್ 30ರಂದು ಹಸಿ ಕರಗ ನಡೆಯಲಿದ್ದು, ಏಪ್ರಿಲ್ 1ರಂದು ಮುಖ್ಯ ಶಕ್ತ್ಯೋತ್ಸವ ಜರುಗಲಿದೆ.

ಈ ಬಾರಿಯ ಕರಗ ಮಹೋತ್ಸವವನ್ನು ಮೈಸೂರು ದಸರಾ ಮಾದರಿಯಲ್ಲಿ ಅದ್ಧೂರಿಯಾಗಿ ನಡೆಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಅನುದಾನ ಬಿಡುಗಡೆ ಹಾಗೂ ಟೆಂಡರ್ ಪ್ರಕ್ರಿಯೆಯ ಜವಾಬ್ದಾರಿಯನ್ನು ಜಿಬಿಎಗೆ ವಹಿಸಲಾಗುತ್ತಿದ್ದು, ದೇವಸ್ಥಾನದ ಒಳಾಂಗಣ ಸಿದ್ಧತೆಯನ್ನು ಮುಜರಾಯಿ ಇಲಾಖೆ ನೋಡಿಕೊಳ್ಳಲಿದೆ ಎಂದು ಹೇಳಿದ್ದಾರೆ.

ಇದರ ಜೊತೆಗೆ ದೇವಸ್ಥಾನಕ್ಕೆ ಹೊಸ ಅಧ್ಯಕ್ಷರ ನೇಮಕವೂ ನಡೆದಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೂ ಚಿಂತನೆ ನಡೆಯುತ್ತಿದೆ. ಈ ಬಾರಿ ವಿಶೇಷ ಕರಗ ಆಚರಣೆ ಮಾಡಲು ವ್ಯವಸ್ಥಾಪನಾ ಸಮಿತಿ ತೀರ್ಮಾನಿಸಿದೆ.

ಏಪ್ರಿಲ್ 1ರಂದು ನಡೆಯಲಿರುವ ಶಕ್ತ್ಯೋತ್ಸವದಲ್ಲಿ ಎ. ಜ್ಞಾನೇಂದ್ರ ಸ್ವಾಮಿ ಕರಗ ಹೊರಲಿದ್ದಾರೆ. ಕಳೆದ ವರ್ಷ 15ನೇ ಬಾರಿ ಯಶಸ್ವಿಯಾಗಿ ಕರಗ ಹೊತ್ತಿದ್ದ ಅವರು, ಈ ಬಾರಿ 16ನೇ ಬಾರಿ ಕರಗ ಹೊರುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಲಿದ್ದಾರೆ.

ಹಟ್ಟಿ ಚಿನ್ನದಗಣಿ ದ್ವಾರ ಬಳಿ ಸ್ಫೋಟಕ ಕಾಟ್ರಿಜ್‌ʼಗಳು ಪತ್ತೆ; ಆತಂಕದ ವಾತಾವರಣ!

0

ರಾಯಚೂರು: ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದಗಣಿ ಮುಖ್ಯ ದ್ವಾರ ಸಮೀಪ ಅಪಾಯಕಾರಿ ಸ್ಫೋಟಕ ವಸ್ತುಗಳು ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಇದರಿಂದ ಗಣಿಗಾರಿಕಾ ಕಾರ್ಮಿಕರು ಹಾಗೂ ಸ್ಥಳೀಯರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಚಿನ್ನದಗಣಿ ಕಂಪನಿ ಗೇಟ್ ಎದುರಿನ ಮುಖ್ಯರಸ್ತೆಯಲ್ಲಿ ಸ್ಫೋಟ ಕಾರ್ಯಗಳಿಗೆ ಬಳಸುವ 15ಕ್ಕೂ ಹೆಚ್ಚು ಮದ್ದುಗಳ ಕಾಟ್ರಿಜ್‌ಗಳು ಪತ್ತೆಯಾಗಿವೆ. ಮಾಹಿತಿ ತಿಳಿಯುತ್ತಿದ್ದಂತೆ ಗಣಿಯ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಸುದ್ದಿ ನೀಡಿದ್ದಾರೆ. ಸ್ಥಳಕ್ಕೆ ಹಟ್ಟಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಪಲ್ಸರ್ ಬೈಕ್‌ನಲ್ಲಿ ತೆರಳುತ್ತಿದ್ದ ಕೆಲವರು ಮದ್ದುಗಳ ಕಾಟ್ರಿಜ್‌ಗಳನ್ನು ಅನವಧಾನದಿಂದ ರಸ್ತೆಯಲ್ಲಿ ಬೀಳಿಸಿಕೊಂಡು ಹೋಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಅಪಾಯಕಾರಿ ಸ್ಫೋಟಕಗಳನ್ನು ಸಾಗಿಸಲಾಗುತ್ತಿತ್ತೇ ಎಂಬ ಅನುಮಾನ ವ್ಯಕ್ತವಾಗಿದೆ.

ಜಿಲ್ಲೆಯ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲ್ಪಡುವ ಹಟ್ಟಿ ಚಿನ್ನದಗಣಿ ದ್ವಾರ ಬಳಿ ಸ್ಫೋಟಕ ವಸ್ತುಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಮದ್ದುಗಳು ಗಣಿಗಾರಿಕೆಗೆ ಬಳಸುವ ಅಧಿಕೃತ ವಸ್ತುಗಳೋ ಅಥವಾ ಖಾಸಗಿ ಕಲ್ಲು ಕ್ವಾರೆಗಳಿಗೆ ಸಾಗಿಸಲಾಗುತ್ತಿದ್ದವೆಯೋ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ.ರೆಡ್ಡಿಯವರ ಆದರ್ಶಗಳು ನಮಗೆ ಸ್ಪೂರ್ತಿ: CM ಸಿದ್ದರಾಮಯ್ಯ

0

ಬೆಂಗಳೂರು: ರಾಜ್ಯದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ.ರೆಡ್ಡಿಯವರ ಆದರ್ಶಗಳು ನಮಗೆ ಸ್ಪೂರ್ತಿ ಹಾಗೂ ಮಾರ್ಗದರ್ಶನ ನೀಡಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಮಾಜಿ ಮುಖ್ಯಮಂತ್ರಿ ದಿವಂಗತ ಕೆ ಸಿ ರೆಡ್ಡಿ ಯವರ ಪುಣ್ಯ ತಿಥಿಯ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾಧ್ಯಮ ದವರೊಂದಿಗೆ ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ದಿವಂಗತ ಕೆ ಸಿ ರೆಡ್ಡಿ ಯವರಿಗೆ ಇಂದು ಗೌರವ ಅರ್ಪಿಸಲಾಗಿದೆ. ಅವರು ಸ್ವತಂತ್ರ ಭಾರತದ ರಾಜ್ಯದ ಮೊದಲ ಮುಖ್ಯಮಂತ್ರಿ. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ಅವರು ಅನೇಕ ಬಾರಿ ಜೈಲುವಾಸ ಅನುಭವಿಸಿದ್ದಾರೆ. ಮೈಸೂರು ಸಂಸ್ಥಾನವನ್ನು ಒಗ್ಗೂಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ರಾಜ್ಯಪಾಲರಾಗಿ ಜನಸೇವೆಯನ್ನು ಮಾಡಿದ್ದರು, ಕರ್ನಾಟಕದಲ್ಲಿ ಕಾರ್ಖಾನೆಗಳ ಸ್ಥಾಪನೆಗೆ ಶ್ರಮಿಸಿದ ಕೆ.ಸಿ.ರೆಡ್ಡಿಯವರು ರಾಜ್ಯ ಅಭಿವೃದ್ಧಿಗೆ ಮಹತ್ತರ ಕೊಡುಗೆ ಪ್ರಾಮಾಣಿಕ ರಾಜಕೀಯ ನಾಯಕರಾಗಿದ್ದರು. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ನೀಡಲಿ ಹಾಗೂ ಅವರ ಆದರ್ಶಗಳು ಸದಾ ನಮಗೆ ಮಾರ್ಗದರ್ಶನ ನೀಡಿದೆ ಎಂದು ತಿಳಿಸಿದರು.

ಬಾಲಕಿ ಜೊತೆ ಅನುಚಿತ ವರ್ತನೆ ಆರೋಪ: ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಮಲ್ಲಿಕಾರ್ಜುನ ಮುತ್ಯಾ!

0

ಕಲಬುರಗಿ: ಬಾಲಕಿಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಮಲ್ಲಿಕಾರ್ಜುನ ಮುತ್ಯಾ ಅವರು ಕರ್ನಾಟಕ ಹೈಕೋರ್ಟ್ ಕಲಬುರಗಿ ವಿಭಾಗೀಯ ಪೀಠದ ಮೆಟ್ಟಿಲೇರಿದ್ದಾರೆ.

ಮಲ್ಲಿಕಾರ್ಜುನ ಮುತ್ಯಾ ಬಾಲಕಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ದೂರು ದಾಖಲಿಸಿಕೊಂಡಿತ್ತು. ಈ ಕುರಿತು ಯಾದಗಿರಿ ಎಸ್‌ಪಿಗೆ ಪತ್ರ ಬರೆದ ಬಳಿಕ, ಗೋಗಿ ಪೊಲೀಸ್ ಠಾಣೆ ಯಲ್ಲಿ ಮುತ್ಯಾ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು.

ಇದೀಗ ಪ್ರಕರಣ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಮುತ್ಯಾ, ಬಾಲಕಿಯ ಪೋಷಕರು ಸ್ವತಃ ದೂರು ನೀಡಿಲ್ಲದಿದ್ದರೂ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ಎಫ್‌ಐಆರ್ ರದ್ದುಪಡಿಸುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಸೋಮವಾರ (ಮಾ.2) ಹೈಕೋರ್ಟ್ ವಿಚಾರಣೆ ನಡೆಸಲಿದೆ.

ಬಾಗೇಪಲ್ಲಿ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಆಯ್ಕೆ ಅಸಿಂಧು ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ!

0

ಬೆಂಗಳೂರು/ಚಿಕ್ಕಬಳ್ಳಾಪುರ: ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.

ನಾಮಪತ್ರ ಸಲ್ಲಿಕೆ ವೇಳೆ ಸಂಪೂರ್ಣ ಆಸ್ತಿ ವಿವರಗಳನ್ನು ಘೋಷಣೆ ಮಾಡಿಲ್ಲ ಹಾಗೂ ಕ್ರಿಮಿನಲ್ ಪ್ರಕರಣಗಳ ಮಾಹಿತಿಯನ್ನು ಮರೆಮಾಚಲಾಗಿದೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮುನಿರಾಜು ಅವರು 2023ರ ಜೂನ್ 24ರಂದು ಕರ್ನಾಟಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಆಸ್ತಿ ಮಾಹಿತಿಯನ್ನು ಸರಿಯಾಗಿ ಬಹಿರಂಗಪಡಿಸದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಹೈಕೋರ್ಟ್ ಎಸ್.ಎನ್. ಸುಬ್ಬಾರೆಡ್ಡಿ ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿ ಆದೇಶ ಹೊರಡಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ಎಸ್.ಎನ್. ಸುಬ್ಬಾರೆಡ್ಡಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇಂದು ವಿಚಾರಣೆ ನಡೆಸಿದ ಸಿಜೆಐ ಸೂರ್ಯಕಾಂತ್ ನೇತೃತ್ವದ ಪೀಠವು ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆ ನೀಡಿ, ಸೆಪ್ಟೆಂಬರ್ 7ಕ್ಕೆ ವಿಚಾರಣೆ ಮುಂದೂಡಿದೆ.

ಇದೇ ವೇಳೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಹೈಕೋರ್ಟ್ ಆದೇಶಕ್ಕೆ ತಡೆ ನೀಡಿರುವ ಹಿನ್ನೆಲೆ, ಮುಂದಿನ ವಿಚಾರಣೆವರೆಗೆ ಎಸ್.ಎನ್. ಸುಬ್ಬಾರೆಡ್ಡಿ ಅವರು ಬಾಗೇಪಲ್ಲಿ ಶಾಸಕರಾಗಿ ಮುಂದುವರಿಯಲಿದ್ದಾರೆ.

ಆರೋಗ್ಯಕರ ರಾಷ್ಟ್ರಕ್ಕೆ ಶಕ್ತಿಶಾಲಿಯಾದ ಭವಿಷ್ಯ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

0

ಬೆಂಗಳೂರು: ಆರೋಗ್ಯಕರ ಕುಟುಂಬಗಳು ಆರೋಗ್ಯಕರ ರಾಷ್ಟ್ರವನ್ನು ನಿರ್ಮಿಸುತ್ತವೆ. ಆರೋಗ್ಯಕರ ರಾಷ್ಟ್ರವು ಶಕ್ತಿಶಾಲಿ ಭವಿಷ್ಯವನ್ನು ನಿರ್ಮಿಸುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಶುಕ್ರವಾರ ನಡೆದ ಮಹಿಳಾ ಮಾನಸಿಕ ಆರೋಗ್ಯ ಶೃಂಗಸಭೆಯನ್ನು (Mpowering Minds 2026, women’s Mental health summit) ಉದ್ಘಾಟಿಸಿ ಮಾತನಾಡಿದ ಸಚಿವರು, ಆರೋಗ್ಯಕರ ಮಹಿಳೆಯರು ಆರೋಗ್ಯಕರ ಕುಟುಂಬಗಳನ್ನು ನಿರ್ಮಿಸುತ್ತಾರೆ ಎಂದರು.

ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಹತ್ತು ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ Mpower ಸಂಸ್ಥೆಗೆ ಹೃತ್ಪೂರ್ವಕ ಅಭಿನಂದನೆಗಳು. ನಾವು ಇಂದು ಇರುವ ಬೆಂಗಳೂರು, ಆಲೋಚನೆಗಳ, ಹೊಸತನದ ಮತ್ತು ವಿಭಿನ್ನವಾಗಿ ಯೋಚಿಸುವ ಧೈರ್ಯದ ನಗರ. ಮಹಿಳೆಯರ ಮಾನಸಿಕ ಆರೋಗ್ಯಕ್ಕೂ ಇಂದು ಇದೇ ಬೇಕಾಗಿದೆ, ಮಾತನಾಡುವ ಧೈರ್ಯ, ಕೇಳುವ ಧೈರ್ಯ ಮತ್ತು ಕಾರ್ಯಗತಗೊಳಿಸುವ ಧೈರ್ಯ.
ಮಾನಸಿಕ ಆರೋಗ್ಯ ನಿರ್ಲಕ್ಷಿಸುವ ವಿಷಯವಲ್ಲ, ಅದು ಜೀವನದ ವಿಷಯ ಎಂದು ಹೇಳಿದರು. ‌

ಮಹಿಳೆಯರು ಕುಟುಂಬಗಳ, ಸಮುದಾಯಗಳ ಮತ್ತು ಉದ್ಯೋಗ ಕ್ಷೇತ್ರಗಳ ಬೆನ್ನೆಲುಬು. ಆದರೆ ಅವರ ಬಲದ ಹಿಂದೆ ಒಂದು ಮೌನ ಭಾರ ಇರುತ್ತದೆ , ಭಾವನಾತ್ಮಕ ಹೊರೆ, ಜವಾಬ್ದಾರಿಗಳು, ನಿರೀಕ್ಷೆಗಳು, ತ್ಯಾಗಗಳು. ಹಲವಾರು ನಗುಮುಖಗಳ ಹಿಂದೆ ಒತ್ತಡ ಅಡಗಿರುತ್ತದೆ. ಹಲವಾರು ಬಲಿಷ್ಠ ಮಹಿಳೆಯರು ಕಾಣದ ಹೋರಾಟಗಳನ್ನು ಹೊರುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ವಿದ್ಯಾಭ್ಯಾಸದ ಒತ್ತಡ ಎದುರಿಸುವ ಬಾಲಕಿಯಿಂದ ಹಿಡಿದು ಕೆಲಸ ಮತ್ತು ಮನೆ ಎರಡನ್ನೂ ಸಮತೋಲನಗೊಳಿಸುವ ಮಹಿಳೆಯವರೆಗೆ ಜೀವನ ಬದಲಾವಣೆಗಳನ್ನು ಎದುರಿಸುವ ತಾಯಿಯಿಂದ…ಏಕಾಂತವನ್ನು ಅನುಭವಿಸುವ ವೃದ್ಧೆಯವರೆಗೆ ಪ್ರತಿ ಹಂತವೂ ಹೊಸ ಸವಾಲುಗಳನ್ನು ತರುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ನಮ್ಮ ರಾಜ್ಯದಲ್ಲಿ ಸಾವಿರಾರು ಮಹಿಳೆಯರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಅಧ್ಯಯನಗಳು ತಿಳಿಸುತ್ತವೆ. ಇವು ಕೇವಲ ಅಂಕಿ ಅಂಶಗಳಲ್ಲ… ಇವು ಜೀವಗಳು, ಕುಟುಂಬಗಳು, ಭವಿಷ್ಯಗಳು. ಇದನ್ನು ಒಂದೇ ಸಂಸ್ಥೆ ಪರಿಹರಿಸಲು ಸಾಧ್ಯವಿಲ್ಲ. ಒಂದು ಮನಸ್ಸನ್ನು ಬೆಂಬಲಿಸಲು ಒಂದು ಸಮಾಜ ಬೇಕು. ಸರ್ಕಾರಕ್ಕೆ ಜವಾಬ್ದಾರಿ ಇದೆ. ಸಂಸ್ಥೆಗಳಿಗೆ ಜವಾಬ್ದಾರಿ ಇದೆ. ಸಮುದಾಯಗಳಿಗೆ ಜವಾಬ್ದಾರಿ ಇದೆ ಎಂದರು.

ಗಂಡನ ಚಿಕಿತ್ಸೆಗಾಗಿ ಮಾಲೀಕರ ಮನೆಯಲ್ಲಿ ಬೆಳ್ಳಿ ಸಾಮಗ್ರಿ ಕದ್ದಿದ್ದ ಮಹಿಳೆ ಅರೆಸ್ಟ್

0

ಬೆಂಗಳೂರು: ಗಂಡನ ಕ್ಯಾನ್ಸರ್ ಚಿಕಿತ್ಸೆಗಾಗಿ ಕೆಲಸ ಮಾಡುತ್ತಿದ್ದ ಮನೆಯಿಂದ ಬೆಳ್ಳಿ ಸಾಮಗ್ರಿಗಳನ್ನು ಕಳವು ಮಾಡಿದ್ದ ಮಹಿಳೆಯನ್ನು ಜೀವನಭೀಮಾನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತಳನ್ನು ಚೈತ್ರಾ ಎಂದು ಗುರುತಿಸಲಾಗಿದೆ.

ಚೈತ್ರಾ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಸರ್ಜನ್ ಆಗಿರುವ ವೈದ್ಯರ ಮನೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದಳು. ಮನೆಯ ಮಹಡಿಯಲ್ಲಿ ಸಂಗ್ರಹಿಸಿ ಇಟ್ಟಿದ್ದ ಬೆಳ್ಳಿ ಪಾತ್ರೆಗಳು ಮತ್ತು ಪೂಜಾ ಸಾಮಗ್ರಿಗಳನ್ನು ಹಂತ ಹಂತವಾಗಿ ಕಳವು ಮಾಡುತ್ತಿದ್ದಳು ಎಂಬ ಆರೋಪ ಇದೆ.

ಹಬ್ಬದ ಸಂದರ್ಭಗಳಲ್ಲಿ ಮಾತ್ರ ಉಪಯೋಗಿಸುತ್ತಿದ್ದ ಬೆಳ್ಳಿ ಪಾತ್ರೆಗಳನ್ನು ಪ್ರತೀ ಬಾರಿ ಒಂದೊಂದೇ ಎಗರಿಸುತ್ತಿದ್ದಳು. ಕಳವು ಮಾಡಿದ ಪಾತ್ರೆಗಳನ್ನು ಅಡವಿಟ್ಟು ಹಣ ಪಡೆದು ಬಳಸುತ್ತಿದ್ದಳು. ಬಳಿಕ ಅನುಮಾನ ಬಾರದಂತೆ ಅದೇ ಮನೆಯಲ್ಲಿ ಕೆಲಸ ಮುಂದುವರಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟು 12.5 ಕೆಜಿ ತೂಕದ ಬೆಳ್ಳಿ ಪಾತ್ರೆಗಳು ಮತ್ತು ಪೂಜಾ ಸಾಮಗ್ರಿಗಳನ್ನು ಕಳವು ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ದೀಪಾವಳಿ ಹಬ್ಬದ ಕೆಲ ದಿನಗಳ ಮುನ್ನ ಚೈತ್ರಾ ಕೆಲಸ ಬಿಟ್ಟಿದ್ದಳು. ಹಬ್ಬದ ವೇಳೆ ಪಾತ್ರೆಗಳ ಚೀಲ ತೆರೆಯುತ್ತಿದ್ದ ಮನೆಯವರಿಗೆ ಬೆಳ್ಳಿ ಸಾಮಗ್ರಿಗಳು ಕಾಣೆಯಾಗಿರುವುದು ತಿಳಿದು ಶಾಕ್ ಆಗಿತ್ತು. ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡರು.

ಹಿಂದಿನ ಕೆಲಸದವರ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದ್ದ ಹಿನ್ನೆಲೆ ಚೈತ್ರಾಳನ್ನು ವಿಚಾರಣೆ ನಡೆಸಿದಾಗ ಕಳ್ಳತನ ಒಪ್ಪಿಕೊಂಡಿದ್ದಾಳೆ. ಬಂಧಿತಳಿಂದ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ 12.5 ಕೆಜಿ ಬೆಳ್ಳಿ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ಮುಂದಿನ ತನಿಖೆ ಮುಂದುವರಿದಿದೆ.

error: Content is protected !!