Home Blog Page 4

ಯಶ್ ‘ಟಾಕ್ಸಿಕ್’ಗೆ ಎಂಟ್ರಿ ಕೊಟ್ಟ ಎಲಿಜಬೆತ್: ಹುಮಾ ಖುರೇಷಿ ಹೊಸ ಲುಕ್ ವೈರಲ್

ಕನ್ನಡದ ಬಹುನಿರೀಕ್ಷಿತ ಪ್ಯಾನ್ ವರ್ಲ್ಡ್ ಸಿನಿಮಾ ‘ಟಾಕ್ಸಿಕ್’ ಇದೀಗ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದೆ. ಯಶ್ ಅಭಿನಯದ ಈ ಚಿತ್ರದಲ್ಲಿ ನಟಿಸುತ್ತಿರುವ ಹುಮಾ ಖುರೇಷಿ ಅವರ ಹೊಸ ಪಾತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.

‘ಟಾಕ್ಸಿಕ್’ ಸಿನಿಮಾದಲ್ಲಿ ಹುಮಾ ಖುರೇಷಿ ‘ಎಲಿಜಬೆತ್’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜುಲೈ 28ರಂದು ಹುಮಾ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದ್ದು, ಅವರ ವಿಭಿನ್ನ ಲುಕ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಹೊಸ ಪೋಸ್ಟರ್‌ನಲ್ಲಿ ಹುಮಾ ಖುರೇಷಿ ಆಕರ್ಷಕ ಗೌನ್ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ಅವರ ಫಸ್ಟ್ ಲುಕ್‌ನಲ್ಲಿ ಕಪ್ಪು ವಿಂಟೇಜ್ ಕಾರಿನೊಂದಿಗೆ ರಾಯಲ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಎರಡೂ ಲುಕ್‌ಗಳು ಅವರ ಪಾತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿವೆ.

1950-60ರ ದಶಕದ ಕಥಾಹಂದರ ಹೊಂದಿರುವ ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ.

ಚಿತ್ರದ ಬಗ್ಗೆ ಮಾತನಾಡಿದ್ದ ಹುಮಾ ಖುರೇಷಿ, ಸಿನಿಮಾದ ಪ್ರತಿಯೊಂದು ಪ್ರಮುಖ ಪಾತ್ರಕ್ಕೂ ಸಮಾನ ಪ್ರಾಮುಖ್ಯತೆ ನೀಡಲಾಗಿದೆ ಎಂದು ಹೇಳಿದ್ದರು. ತಮ್ಮ ಪಾತ್ರದ ಬಗ್ಗೆ ಕೂಡ ಅವರು ಹೆಚ್ಚಿನ ನಿರೀಕ್ಷೆ ಹೊಂದಿದ್ದು, ಸಿನಿಮಾ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.

‘ಗ್ಯಾಂಗ್ಸ್ ಆಫ್ ವಸೇಪುರ್’ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಹುಮಾ ಖುರೇಷಿ, ತಮ್ಮ ವಿಭಿನ್ನ ಅಭಿನಯದ ಮೂಲಕ ಗುರುತಿಸಿಕೊಂಡಿದ್ದಾರೆ. ಹಲವು ಹಿಂದಿ ಸಿನಿಮಾಗಳ ಜೊತೆಗೆ ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲೂ ನಟಿಸಿರುವ ಅವರು, ಇದೀಗ ‘ಟಾಕ್ಸಿಕ್’ ಮೂಲಕ ಕನ್ನಡ ಚಿತ್ರರಂಗದ ಜಾಗತಿಕ ಮಟ್ಟದ ಸಿನಿಮಾದ ಭಾಗವಾಗಿದ್ದಾರೆ.

ಪೈರಸಿ ಮಾಫಿಯಾಗೆ ಶಾಕ್ ಕೊಟ್ಟ ಕೇಂದ್ರ: ಸಿನಿಮಾಗಳ ಅಕ್ರಮ ಲೀಕ್ ತಡೆಯಲು ಕಠಿಣ ಕಾನೂನು ಕ್ರಮ, ಸಾವಿರಾರು ಲಿಂಕ್‌ಗಳು ಬ್ಲಾಕ್

ಚಿತ್ರರಂಗದ ಬಹುದೊಡ್ಡ ಸಮಸ್ಯೆಯಾಗಿರುವ ಸಿನಿಮಾ ಪೈರಸಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಕನ್ನಡ, ಹಿಂದಿ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಲೀಕ್ ಆಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಪೈರಸಿ ವಿರುದ್ಧದ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಪೈರಸಿ ತಡೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದ್ದು, ಈಗಾಗಲೇ ಸಾವಿರಾರು ಅಕ್ರಮ ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಜಾಲತಾಣ ಚಾನೆಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಈವರೆಗೆ 7,393 ಪೈರಸಿ ಲಿಂಕ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದ್ದು, 1,263 ವೆಬ್‌ಸೈಟ್‌ಗಳು ಮತ್ತು 4,996 ಟೆಲಿಗ್ರಾಂ ಚಾನೆಲ್‌ಗಳಿಗೆ ಬೀಗ ಹಾಕಲಾಗಿದೆ. ಪೈರಸಿ ವಿರುದ್ಧ ದೂರು ಸಲ್ಲಿಕೆ ಮತ್ತು ಕ್ರಮ ಕೈಗೊಳ್ಳುವ ಪ್ರಕ್ರಿಯೆಯನ್ನು ಸರಳಗೊಳಿಸಲು ಕೇಂದ್ರ ಸರ್ಕಾರ ಹೊಸ ಆ್ಯಂಟಿ ಪೈರಸಿ ಪೋರ್ಟಲ್ ರೂಪಿಸುತ್ತಿದೆ.

ಈ ವ್ಯವಸ್ಥೆಯಿಂದ ನಿರ್ಮಾಪಕರು, ಸಿನಿಮಾ ಸಂಸ್ಥೆಗಳು ಹಾಗೂ ಹಕ್ಕುದಾರರು ಪೈರಸಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ. ಕಾನೂನು ಜಾರಿ ಸಂಸ್ಥೆಗಳ ಸಹಕಾರದೊಂದಿಗೆ ಪೈರಸಿ ಜಾಲವನ್ನು ನಿಯಂತ್ರಿಸುವ ಪ್ರಯತ್ನ ನಡೆಯುತ್ತಿದೆ.

ಇತ್ತೀಚಿನ ದಿನಗಳಲ್ಲಿ ಪೊಲೀಸರು ಕೂಡ ಪೈರಸಿ ಪ್ರಕರಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ‘ಐಬೊಮ್ಮ’ ಪೈರಸಿ ಜಾಲಕ್ಕೆ ಸಂಬಂಧಿಸಿದ ಬಂಧನ ಪ್ರಕರಣವು ಸರ್ಕಾರದ ಕಾರ್ಯಾಚರಣೆಯ ತೀವ್ರತೆಯನ್ನು ತೋರಿಸಿದೆ.

ವಿದೇಶಿ ಪ್ರದರ್ಶನಗಳಿಂದ ಸಿನಿಮಾ ಪ್ರಿಂಟ್‌ಗಳು ಸೋರಿಕೆಯಾಗುತ್ತಿವೆ ಎಂಬ ಆರೋಪಗಳು ಕೇಳಿಬಂದಿದ್ದು, ಇದರಿಂದ ನಿರ್ಮಾಪಕರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ. ಚಿತ್ರಮಂದಿರಗಳತ್ತ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಪೈರಸಿ ನಿಯಂತ್ರಣದ ಈ ಕ್ರಮಗಳು ಚಿತ್ರರಂಗಕ್ಕೆ ದೊಡ್ಡ ಬೆಂಬಲ ನೀಡುವ ನಿರೀಕ್ಷೆ ಮೂಡಿಸಿದೆ.

ಸಾಕ್ಷಿಗೆ ಬೆದರಿಕೆ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್: ರೇಣುಕಾಸ್ವಾಮಿ ಪ್ರಕರಣದ ಮೂವರು ಆರೋಪಿಗಳಿಗೆ ಜಾಮೀನು

ಬೆಂಗಳೂರು: ನಟ ದರ್ಶನ್‌ ಸಂಬಂಧಿತ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಜೈಲು ಸೇರಿದ್ದ ಮೂವರು ಆರೋಪಿಗಳಿಗೆ ಇದೀಗ ನ್ಯಾಯಾಲಯದಿಂದ ಜಾಮೀನು ದೊರೆತಿದೆ. ಸುಹಾಸ್, ವೈಭವ್ ಹಾಗೂ ಪುನೀತ್ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ 59ನೇ ಸಿಸಿಎಚ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ಸಂದೀಪ್ ಅವರಿಗೆ ಆರೋಪಿಗಳು ಬೆದರಿಕೆ ಹಾಕಿ, ನ್ಯಾಯಾಲಯದ ಮುಂದೆ ತಪ್ಪು ಮಾಹಿತಿ ನೀಡುವಂತೆ ಒತ್ತಡ ಹೇರಿದ್ದರು ಎಂಬ ಆರೋಪದಡಿ ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಸಾಕ್ಷಿ ಸಂದೀಪ್ ನ್ಯಾಯಾಲಯದಲ್ಲಿ ಹೇಳಿಕೆ ನೀಡುವ ವೇಳೆ ತಮಗೆ ಬೆದರಿಕೆ ಹಾಕಿರುವ ವಿಚಾರವನ್ನು ಬಹಿರಂಗಪಡಿಸಿದ್ದರು. ಇದರ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದರು.

ಆರೋಪಿಗಳ ಮೊಬೈಲ್‌ಗಳನ್ನು ವಶಕ್ಕೆ ಪಡೆದು ಪರಿಶೀಲನೆಗಾಗಿ ಫಾರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಪ್ರಕರಣದ ಹಿಂದೆ ಯಾರಾದರೂ ಪ್ರಭಾವಿಗಳ ಬೆಂಬಲ ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆದಿತ್ತು.

ಜಾಮೀನು ಪಡೆದಿರುವ ಮೂವರು ಆರೋಪಿಗಳು ದರ್ಶನ್ ಅಭಿಮಾನಿಗಳಾಗಿದ್ದು, ತುಮಕೂರು ಜಿಲ್ಲೆಯವರು ಎನ್ನಲಾಗಿದೆ. ಇವರ ಪೈಕಿ ಪುನೀತ್ ಸಾಮಾಜಿಕ ಜಾಲತಾಣದ ‘ಡಿ-ಕಮ್ಯುನಿಟಿ’ ಫೇಸ್‌ಬುಕ್‌ ಪೇಜ್ ನಿರ್ವಹಿಸುತ್ತಿದ್ದ ಎನ್ನಲಾಗಿದೆ.

ಈ ನಡುವೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಮುಂದುವರಿದಿದ್ದು, ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳ ವಿರುದ್ಧದ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ಪ್ರಕರಣದ ಸಾಕ್ಷಿಗಳ ವಿಚಾರಣೆಯನ್ನು ಕೆಳಹಂತದ ನ್ಯಾಯಾಲಯ ತ್ವರಿತವಾಗಿ ಕೈಗೆತ್ತಿಕೊಂಡಿದೆ.

ಮೋದಿ ವಿಡಿಯೋ ನಿರ್ಬಂಧ ವಿವಾದ: ಮೆಟಾಗೆ ಕೇಂದ್ರದ ಸಮನ್ಸ್, ತಾಂತ್ರಿಕ ದೋಷ ಎಂದ ಸಂಸ್ಥೆ

0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿದ್ದ ವಿಡಿಯೋವನ್ನು ಭಾರತದಲ್ಲಿ ವೀಕ್ಷಣೆಯಿಂದ ತಾತ್ಕಾಲಿಕವಾಗಿ ನಿರ್ಬಂಧಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮೆಟಾ ಸಂಸ್ಥೆಗೆ ಸಮನ್ಸ್ ಜಾರಿ ಮಾಡಿದ್ದು, ವಿಡಿಯೋ ನಿರ್ಬಂಧಕ್ಕೆ ಕಾರಣವೇನು ಎಂಬುದರ ಕುರಿತು ಸ್ಪಷ್ಟನೆ ಕೇಳಿದೆ.

ಪ್ರಧಾನಿ ಮೋದಿ ಅವರ ಪೋಸ್ಟ್‌ ಅನ್ನು ಫೇಸ್‌ಬುಕ್‌ನಲ್ಲಿ ಭಾರತೀಯ ಬಳಕೆದಾರರಿಗೆ ಮಾತ್ರ ಲಭ್ಯವಾಗದಂತೆ ಮಾಡಿದ್ದ ಹಿನ್ನೆಲೆಯಲ್ಲಿ ಮೆಟಾ ಸಂಸ್ಥೆಯ ಜಾಗತಿಕ ಸಾರ್ವಜನಿಕ ನೀತಿ ವಿಭಾಗದ ಪ್ರತಿನಿಧಿಗಳು ವಿಚಾರಣೆಗೆ ಹಾಜರಾಗಿ ವಿವರಣೆ ನೀಡುವಂತೆ ಸಚಿವಾಲಯ ಸೂಚಿಸಿದೆ.

ಈ ನಡುವೆ ಮೆಟಾ ಸಂಸ್ಥೆ ಈಗಾಗಲೇ ಪ್ರಧಾನಿ ಮೋದಿ ಅವರಿಗೆ ಕ್ಷಮೆಯಾಚಿಸಿದೆ. ವಿಡಿಯೋ ತೆಗೆದುಹಾಕಿರುವುದು ಉದ್ದೇಶಪೂರ್ವಕ ಕ್ರಮವಲ್ಲ, ಬದಲಾಗಿ ತಾಂತ್ರಿಕ ದೋಷದಿಂದ ಸಂಭವಿಸಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ತಪ್ಪಾಗಿ ವಿಡಿಯೋ ನಿರ್ಬಂಧವಾಗಿದ್ದು, ಬಳಿಕ ಅದನ್ನು ಮರುಸ್ಥಾಪಿಸಲಾಗಿದೆ ಎಂದು ಮೆಟಾ ವಕ್ತಾರರು ತಿಳಿಸಿದ್ದಾರೆ.

ಜುಲೈ 28ರಂದು ಮುಂಜಾನೆ ಪ್ರಧಾನಿ ಮೋದಿ ಅವರ ಈ ವಿಡಿಯೋ ಫೇಸ್‌ಬುಕ್‌ನಲ್ಲಿ ಭಾರತದಲ್ಲಿ ಮಾತ್ರ ಲಭ್ಯವಾಗಿರಲಿಲ್ಲ. ಬಳಕೆದಾರರ ಗಮನಕ್ಕೆ ಬಂದ ಬಳಿಕ ಈ ಘಟನೆ ವಿವಾದಕ್ಕೆ ಕಾರಣವಾಗಿತ್ತು. ಕೆಲವೇ ಗಂಟೆಗಳ ಬಳಿಕ ವಿಡಿಯೋವನ್ನು ಮತ್ತೆ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗಿತ್ತು.

ಮೆಟಾ ಸಂಸ್ಥೆಯ ಪ್ರಕಾರ, ವಿಡಿಯೋ ನಿರ್ಬಂಧಕ್ಕೆ ಯಾವುದೇ ಸರ್ಕಾರದ ನಿರ್ದೇಶನ ಅಥವಾ ವಿಷಯ ನೀತಿ ಉಲ್ಲಂಘನೆ ಕಾರಣವಾಗಿರಲಿಲ್ಲ. ತಾಂತ್ರಿಕ ಸಮಸ್ಯೆಯಿಂದಾಗಿ ಈ ಘಟನೆ ನಡೆದಿದೆ ಎಂದು ಸ್ಪಷ್ಟನೆ ನೀಡಿದೆ.

ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರು ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಮಾತನಾಡಿದ್ದರು. ಪರೀಕ್ಷಾ ಅಕ್ರಮ ತಡೆಯಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು ಹಾಗೂ ಕಠಿಣ ಕಾನೂನು ಜಾರಿಗೆ ಸಂಬಂಧಿಸಿದ ವಿಷಯಗಳನ್ನು ಅವರು ಪ್ರಸ್ತಾಪಿಸಿದ್ದರು.

ವಿದ್ಯಾರ್ಥಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಯುವ ಸಮುದಾಯವನ್ನು ಉದ್ದೇಶಿಸಿ ಪ್ರಧಾನಿ ನೀಡಿದ್ದ ಈ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಭಾರಿ ಗಮನ ಸೆಳೆದಿದ್ದು, ವಿಡಿಯೋ ಈಗಾಗಲೇ 300 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಕರ್ನಾಟಕಕ್ಕೆ ಮತ್ತೊಂದು ಶಾಕ್:‌ ತಮಿಳುನಾಡಿಗೆ ಮತ್ತೆ 3,500 ಕ್ಯೂಸೆಕ್ ಕಾವೇರಿ ನೀರು ಬಿಡಲು CWRC ಆದೇಶ!

ನವದೆಹಲಿ / ಬೆಂಗಳೂರು: ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಎದುರಾಗಿರುವ ಹಿನ್ನೆಲೆ ಕೆಆರ್‌ಎಸ್ ಸೇರಿದಂತೆ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದ್ದು, ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರು ಹಾಗೂ ನೀರಾವರಿ ಕುರಿತು ಆತಂಕ ಹೆಚ್ಚಿರುವ ನಡುವೆಯೇ,

ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ಕಾವೇರಿ ನೀರು ಬಿಡುಗಡೆ ಮಾಡುವಂತೆ ಶಿಫಾರಸು ಮಾಡಿದೆ.

ಮಂಗಳವಾರ ನವದೆಹಲಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳ ನೀರಿನ ಲಭ್ಯತೆ, ಮಳೆಯ ಪ್ರಮಾಣ ಹಾಗೂ ಎರಡೂ ರಾಜ್ಯಗಳ ಕುಡಿಯುವ ನೀರಿನ ಅಗತ್ಯತೆ ಕುರಿತು ಸಮಗ್ರ ಪರಿಶೀಲನೆ ನಡೆಸಲಾಯಿತು.

ಸಭೆಯ ಬಳಿಕ ತಮಿಳುನಾಡಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸಮಿತಿ ನಿರ್ದೇಶನ ನೀಡಿದೆ.

ಸಭೆಯಲ್ಲಿ ಕರ್ನಾಟಕದ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಹಾಗೂ ತಜ್ಞರ ತಂಡ ರಾಜ್ಯದಲ್ಲಿ ಉಂಟಾಗಿರುವ ತೀವ್ರ ಮಳೆ ಕೊರತೆ, ಜಲಾಶಯಗಳಲ್ಲಿನ ನೀರಿನ ಅಭಾವ ಮತ್ತು ಕುಡಿಯುವ ನೀರಿನ ಸಮಸ್ಯೆ ಕುರಿತು ಸಮಿತಿಯ ಗಮನ ಸೆಳೆದರು.

ಹಾರಂಗಿ ಜಲಾಶಯವನ್ನು ಹೊರತುಪಡಿಸಿ ಕೆಆರ್‌ಎಸ್, ಕಬಿನಿ ಹಾಗೂ ಹೇಮಾವತಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀವ್ರವಾಗಿ ಕುಸಿದಿದೆ. ಬೆಂಗಳೂರು ಸೇರಿದಂತೆ ಹಲವು ನಗರಗಳ ಕುಡಿಯುವ ನೀರಿನ ಅಗತ್ಯತೆ ಹಾಗೂ ರೈತರ ಬೆಳೆಗಳಿಗೆ ನೀರಿನ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಡದಂತೆ ಕರ್ನಾಟಕದ ಅಧಿಕಾರಿಗಳು ಬಲವಾದ ವಾದ ಮಂಡಿಸಿದ್ದರು.

ಆದಾಗ್ಯೂ, ಸಮಿತಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಶಿಫಾರಸು ಮಾಡಿರುವುದು ಕರ್ನಾಟಕದ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಆದೇಶದಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಅಭಾವ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.

ಕಾವೇರಿ ನೀರು ನಿಯಂತ್ರಣ ಸಮಿತಿಯ ಈ ಶಿಫಾರಸಿನ ವಿರುದ್ಧ ಕರ್ನಾಟಕ ಸರ್ಕಾರವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮುಂದೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ವಿಚ್ಛೇದಿತ ಮಹಿಳೆಯನ್ನೇ ಟಾರ್ಗೆಟ್ ಮಾಡಿದ ಸೈಬರ್ ಖದೀಮರು: ಫೇಸ್ ಬುಕ್ ಸ್ನೇಹದ ಹೆಸರಿನಲ್ಲಿ ₹1.7 ಕೋಟಿ ವಂಚನೆ!

ಬೆಂಗಳೂರು: ಸೈಬರ್ ವಂಚಕರು ದಿನದಿಂದ ದಿನಕ್ಕೆ ಹೊಸ ಹೊಸ ತಂತ್ರಗಳನ್ನು ಅನುಸರಿಸುತ್ತಿರುವ ನಡುವೆ, ವಿಚ್ಛೇದಿತ ಮಹಿಳೆಯರನ್ನು ಗುರಿಯಾಗಿಸಿಕೊಂಡು ವಂಚನೆ ನಡೆಸಿರುವ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯ ಮಾತು ನಂಬಿದ ಯಶವಂತಪುರದ ಮಹಿಳೆಯೊಬ್ಬರು ₹1.7 ಕೋಟಿ ಕಳೆದುಕೊಂಡಿದ್ದು, ಮೋಸವಾಗಿರುವುದು ಗೊತ್ತಾದ ಬಳಿಕ ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಗಂಡನಿಂದ ದೂರವಾಗಿದ್ದ ಮಹಿಳೆಗೆ ಫೇಸ್‌ಬುಕ್‌ನಲ್ಲಿ ವ್ಯಕ್ತಿಯೊಬ್ಬ ಪರಿಚಯವಾಗಿದ್ದು, ಆತ ತಾನು ಯುನೈಟೆಡ್ ಕಿಂಗ್‌ಡಮ್‌ (ಯುಕೆ)ನಲ್ಲಿ ಉದ್ಯೋಗಿಯಾಗಿರುವುದಾಗಿ ಪರಿಚಯಿಸಿಕೊಂಡಿದ್ದ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು ಮೊಬೈಲ್ ಸಂಖ್ಯೆಗಳ ವಿನಿಮಯವಾಗಿದ್ದು, ಸಂಭಾಷಣೆ ವಾಟ್ಸ್‌ಆ್ಯಪ್‌ ಮೂಲಕ ಮುಂದುವರಿದಿತ್ತು.

ಮಹಿಳೆಯ ವಿಶ್ವಾಸ ಗಳಿಸಿದ ಆರೋಪಿ, ಯುಕೆಯಿಂದ ಚಿನ್ನಾಭರಣ, ಡೈಮಂಡ್ ಸೀರೆ ಹಾಗೂ ದುಬಾರಿ ಉಡುಗೊರೆಗಳನ್ನು ಕಳುಹಿಸುವುದಾಗಿ ಹೇಳಿದ್ದ. ತನ್ನ ಮಾತನ್ನು ನಂಬಿಸುವ ಸಲುವಾಗಿ ಉಡುಗೊರೆಗಳ ಫೋಟೋಗಳ ಜೊತೆಗೆ ನಕಲಿ ಕೊರಿಯರ್ ರಸೀದಿಗಳನ್ನೂ ಕಳುಹಿಸಿದ್ದಾನೆ ಎಂದು ತಿಳಿದುಬಂದಿದೆ.

ಕೆಲ ದಿನಗಳ ಬಳಿಕ, ಉಡುಗೊರೆಗಳು ದೆಹಲಿಯ ಕಸ್ಟಮ್ಸ್ ಇಲಾಖೆಯಲ್ಲಿ ತಡೆಹಿಡಿಯಲ್ಪಟ್ಟಿದ್ದು, ಅವುಗಳನ್ನು ಬಿಡುಗಡೆಗೊಳಿಸಲು ಹಣ ಪಾವತಿಸಬೇಕಾಗಿದೆ. ತನ್ನ ಬಳಿ ಭಾರತೀಯ ಕರೆನ್ಸಿ ಇಲ್ಲದ ಕಾರಣ ಮೊದಲು ಮಹಿಳೆಯೇ ಹಣ ಪಾವತಿಸಬೇಕು. ಭಾರತಕ್ಕೆ ಬಂದ ಬಳಿಕ ಸಂಪೂರ್ಣ ಹಣವನ್ನು ಹಿಂದಿರುಗಿಸುತ್ತೇನೆ ಎಂದು ಆರೋಪಿ ನಂಬಿಸಿದ್ದಾನೆ.

ಇದಾದ ಬಳಿಕ ಕಸ್ಟಮ್ಸ್ ಅಧಿಕಾರಿಯ ಹೆಸರಿನಲ್ಲಿ ಮಹಿಳೆಗೆ ದೂರವಾಣಿ ಕರೆ ಬಂದಿದ್ದು, ಆರಂಭದಲ್ಲಿ ₹40 ಲಕ್ಷವನ್ನು ಆರ್‌ಟಿಜಿಎಸ್‌ (RTGS) ಮೂಲಕ ಪಾವತಿಸಲಾಗಿದೆ. ನಂತರ ವಿವಿಧ ಕಾರಣಗಳನ್ನು ನೀಡಿ ಹಂತ ಹಂತವಾಗಿ ಮತ್ತಷ್ಟು ಹಣವನ್ನು ವರ್ಗಾಯಿಸುವಂತೆ ಮಾಡಲಾಗಿದೆ. ಬ್ಯಾಂಕ್ ವರ್ಗಾವಣೆಯ ಜೊತೆಗೆ, ಕೆಲ ಸಂದರ್ಭಗಳಲ್ಲಿ ವಂಚಕರು ಖುದ್ದಾಗಿ ಬಂದು ನಗದು ಹಣವನ್ನೂ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪದೇ ಪದೇ ಹಣ ಕೇಳುತ್ತಿದ್ದರಿಂದ ಅನುಮಾನಗೊಂಡ ಮಹಿಳೆ ಯುಕೆ ನಿವಾಸಿ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿಯನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ ಆತನ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಆಗಿರುವುದು ಕಂಡುಬಂದಿದೆ. ಆಗ ತಾವು ಸೈಬರ್ ವಂಚಕರ ಜಾಲಕ್ಕೆ ಬಿದ್ದಿರುವುದು ಅರಿವಾಗಿ ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರ ಪತ್ತೆಗೆ ತನಿಖೆ ಆರಂಭಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ಹಣಕಾಸು ವ್ಯವಹಾರ ನಡೆಸುವಾಗ ಸಾರ್ವಜನಿಕರು ಅತ್ಯಂತ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ.

ವಾಹನ ಖರೀದಿ ದುಬಾರಿ, ಪ್ರಯಾಣವೂ ದುಬಾರಿ: ಆಗಸ್ಟ್ 1ರಿಂದ ಹೊಸ ವಾಹನಗಳ ಬೆಲೆ ಏರಿಕೆ! ಟ್ರಾವೆಲ್ಸ್ ಬಾಡಿಗೆ ಹೆಚ್ಚಳಕ್ಕೆ ಸಿದ್ಧತೆ

0

ನವದೆಹಲಿ: ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟ ಎದುರಿಸುತ್ತಿರುವ ನಡುವೆಯೇ, ಆಗಸ್ಟ್‌ 1ರಿಂದ ಹೊಸ ವಾಹನಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಟ್ರಾವೆಲ್ಸ್ ಮಾಲೀಕರ ಸಂಘಗಳೂ ಪ್ರಯಾಣ ದರ ಹೆಚ್ಚಳಕ್ಕೆ ಮುಂದಾಗಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಜಾಗತಿಕ ಮಟ್ಟದಲ್ಲಿ ಯುದ್ಧ ಪರಿಸ್ಥಿತಿ, ಹಣದುಬ್ಬರ ಹಾಗೂ ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಪರಿಣಾಮ ವಾಹನ ತಯಾರಿಕಾ ವೆಚ್ಚ ಹೆಚ್ಚಾಗಿದೆ. ಉಕ್ಕು, ಅಲ್ಯೂಮಿನಿಯಂ, ರಬ್ಬರ್, ಪ್ಲಾಸ್ಟಿಕ್, ಎಲೆಕ್ಟ್ರಾನಿಕ್ ಚಿಪ್‌ಗಳು, ಬ್ಯಾಟರಿಗಳು ಹಾಗೂ ವಿವಿಧ ಬಿಡಿಭಾಗಗಳ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಹಲವು ವಾಹನ ತಯಾರಕ ಕಂಪನಿಗಳು ವಾಹನಗಳ ಬೆಲೆ ಹೆಚ್ಚಿಸಲು ನಿರ್ಧರಿಸಿವೆ.

ಈ ದರ ಏರಿಕೆಯ ನೇರ ಹೊರೆ ಗ್ರಾಹಕರ ಮೇಲೆ ಬೀಳಲಿದ್ದು, ಹೊಸ ಕಾರು ಸೇರಿದಂತೆ ವಿವಿಧ ವಾಹನಗಳನ್ನು ಖರೀದಿಸುವುದು ಮತ್ತಷ್ಟು ದುಬಾರಿಯಾಗಲಿದೆ.

ವಾಹನಗಳ ಬೆಲೆ ಹೆಚ್ಚಳದಿಂದ ಟ್ರಾವೆಲ್ಸ್ ಉದ್ಯಮಕ್ಕೂ ಹೊಡೆತ ಬೀಳುವ ಸಾಧ್ಯತೆ ಇದೆ. ಕಾರು, ಟಿಟಿ ಹಾಗೂ ಇತರೆ ವಾಣಿಜ್ಯ ವಾಹನಗಳನ್ನು ಖರೀದಿಸುವ ವೆಚ್ಚ ಹೆಚ್ಚಾಗಲಿದ್ದು, ಈಗಾಗಲೇ ಪೆಟ್ರೋಲ್, ಡೀಸೆಲ್ ಮತ್ತು ಟೋಲ್ ದರ ಏರಿಕೆಯಿಂದ ಸಂಕಷ್ಟದಲ್ಲಿರುವ ಟ್ರಾವೆಲ್ಸ್ ಸಂಸ್ಥೆಗಳು ಪ್ರಯಾಣ ದರ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಿವೆ.

ಈ ಕುರಿತು ಕರ್ನಾಟಕ ಟ್ರಾವೆಲ್ಸ್ ಅಸೋಸಿಯೇಷನ್, ಪ್ರತಿ ಪ್ರಯಾಣದ ಮೇಲೂ ಬಾಡಿಗೆ ದರ ಹೆಚ್ಚಳ ಮಾಡುವ ಸಾಧ್ಯತೆ ಇರುವುದಾಗಿ ಮುನ್ಸೂಚನೆ ನೀಡಿದೆ.

ಈಗಾಗಲೇ ಕೆಲವು ಪ್ರಮುಖ ವಾಹನ ತಯಾರಕ ಕಂಪನಿಗಳು ಆಗಸ್ಟ್‌ 1ರಿಂದ ಜಾರಿಗೆ ಬರುವ ಹೊಸ ಬೆಲೆ ಪರಿಷ್ಕರಣೆಯ ಕುರಿತು ತಮ್ಮ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಮಾಹಿತಿ ಪ್ರಕಟಿಸಿವೆ. ವಾಹನ ದರ ಏರಿಕೆ ಮತ್ತು ಟ್ರಾವೆಲ್ಸ್ ಬಾಡಿಗೆ ಹೆಚ್ಚಳದಿಂದ ಸಾರ್ವಜನಿಕರ ಮೇಲಿನ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಕಾಮನ್ವೆಲ್ತ್ ಗೇಮ್ಸ್ʼನಲ್ಲಿ ಭಾರತದ ಮೊದಲ ಪ್ಯಾರಾ ಚಿನ್ನ ಗೆದ್ದು ಮಿಂಚಿದ ಶರ್ಮಿಳಾ ಧಂಕರ್!

0

ಗ್ಲಾಸ್ಗೋ: 2026ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದ್ದು, ಪ್ಯಾರಾ ಅಥ್ಲೀಟ್ ಶರ್ಮಿಳಾ ಧಂಕರ್ ದೇಶಕ್ಕೆ ಐತಿಹಾಸಿಕ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಮಹಿಳೆಯರ ಶಾಟ್‌ಪುಟ್ F57 ವಿಭಾಗದಲ್ಲಿ ಅಮೋಘ ಪ್ರದರ್ಶನ ನೀಡಿದ ಅವರು, ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪರ ಚಿನ್ನ ಗೆದ್ದ ಮೊದಲ ಪ್ಯಾರಾ ಅಥ್ಲೀಟ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.

40 ವರ್ಷದ ಶರ್ಮಿಳಾ ಧಂಕರ್ ಫೈನಲ್‌ನಲ್ಲಿ 9.81 ಮೀಟರ್ ದೂರ ಗುಂಡು ಎಸೆದು ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಘಾನಾದ ಜಿನಾಬು ಇಸ್ಸಾ 8.65 ಮೀಟರ್ ಸಾಧನೆಯೊಂದಿಗೆ ಬೆಳ್ಳಿ ಪದಕ ಪಡೆದರೆ, ಭಾರತದ ಶಿಲ್ಪಾ ಹಾಗೂ ನೈಜೀರಿಯಾದ ಯುಚಾರಿಯಾ ಇಯಾಜಿ ತಲಾ 8.19 ಮೀಟರ್ ಎಸೆದು ಜಂಟಿಯಾಗಿ ಕಂಚಿನ ಪದಕ ಗೆದ್ದರು.

ಶರ್ಮಿಳಾ ಅವರ ಚಿನ್ನದ ಪದಕದೊಂದಿಗೆ ಭಾರತ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಒಟ್ಟು 10 ಪದಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದೆ. ಇದರಲ್ಲಿ 2 ಚಿನ್ನ, 5 ಬೆಳ್ಳಿ ಹಾಗೂ 3 ಕಂಚಿನ ಪದಕಗಳಿವೆ.

ಆದರೆ ಈ ಚಿನ್ನದ ಹಿಂದೆ ನೋವು, ಅವಮಾನ ಮತ್ತು ಹೋರಾಟದ ಬದುಕಿನ ದೊಡ್ಡ ಕಥೆಯಿದೆ. ಹರಿಯಾಣದ ಚಿತ್ರೌಲಿ ಗ್ರಾಮದಲ್ಲಿ ಜನಿಸಿದ ಶರ್ಮಿಳಾ, ಕೇವಲ ಎರಡು ವರ್ಷದವರಾಗಿದ್ದಾಗಲೇ ಪೋಲಿಯೊಗೆ ತುತ್ತಾದರು. ದೈಹಿಕ ಅಂಗವೈಕಲ್ಯವಿದ್ದರೂ ಜೀವನದ ಹೋರಾಟವನ್ನು ಅವರು ಎಂದಿಗೂ ಕೈಬಿಡಲಿಲ್ಲ.

18ನೇ ವಯಸ್ಸಿನಲ್ಲಿ ವಿವಾಹವಾದ ಬಳಿಕ ಅವರು ಹಲವು ವರ್ಷಗಳ ಕಾಲ ವರದಕ್ಷಿಣೆ ಕಿರುಕುಳ, ದೈಹಿಕ ಹಾಗೂ ಮಾನಸಿಕ ಹಿಂಸೆ ಅನುಭವಿಸಿದರು. ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ನಂತರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಕೊನೆಗೆ 26ನೇ ವಯಸ್ಸಿನಲ್ಲಿ ಮಕ್ಕಳೊಂದಿಗೆ ಗಂಡನ ಮನೆಯಿಂದ ಹೊರಬಂದು ತವರಿಗೆ ಮರಳಿದರು. ಜೀವನದ ಮೇಲಿನ ಭರವಸೆಯನ್ನೇ ಕಳೆದುಕೊಂಡು ಆತ್ಮಹತ್ಯೆಯ ಯೋಚನೆಯವರೆಗೂ ಅವರು ತಲುಪಿದ್ದರು.

ಅವರ ಬದುಕಿಗೆ ಹೊಸ ತಿರುವು ನೀಡಿದ್ದು ಎರಡನೇ ಪತಿ ಅಜಿತ್ ಸಿಂಗ್. 28ನೇ ವಯಸ್ಸಿನಲ್ಲಿ ಮದುವೆಯಾದ ಬಳಿಕ ಅವರು ಶರ್ಮಿಳಾ ಅವರನ್ನು ಪ್ಯಾರಾ ಅಥ್ಲೆಟಿಕ್ಸ್‌ಗೆ ಪರಿಚಯಿಸಿದರು. ಅವರ ಪ್ರತಿಭೆಯ ಮೇಲೆ ನಂಬಿಕೆ ಇಟ್ಟು ನಿರಂತರ ಪ್ರೋತ್ಸಾಹ ನೀಡಿದರು. 2023ರಲ್ಲಿ ಶರ್ಮಿಳಾ ಅವರ ತರಬೇತಿ ಮತ್ತು ಸ್ಪರ್ಧೆಗಳ ವೆಚ್ಚ ಭರಿಸಲು ಅಜಿತ್ ಸಿಂಗ್ ತಮ್ಮ ಮನೆಯನ್ನೇ ಮಾರಾಟ ಮಾಡಿದ್ದು, ಅವರ ತ್ಯಾಗ ಇಂದು ಚಿನ್ನದ ಪದಕದ ರೂಪದಲ್ಲಿ ಫಲಿಸಿದೆ.

ಸಂಕಷ್ಟಗಳನ್ನು ಮೆಟ್ಟಿನಿಂತು ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟ ಶರ್ಮಿಳಾ ಧಂಕರ್ ಅವರ ಸಾಧನೆ ಇಂದು ಲಕ್ಷಾಂತರ ಮಂದಿಗೆ ಸ್ಫೂರ್ತಿಯ ಕಥೆಯಾಗಿದೆ.

ಅವಲಹಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಖತರ್ನಾಕ್ ಕಳ್ಳರ ಬಂಧನ

0

ಬೆಂಗಳೂರು: ಮನೆ ಕಳ್ಳತನ ನಡೆಸಿ ಕದ್ದ ಚಿನ್ನಾಭರಣಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಅವಲಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಾರ್ಯಾಚರಣೆ ವೇಳೆ ಸರಣಿ ಕಳ್ಳತನ ಪ್ರಕರಣಗಳ ಪ್ರಮುಖ ಆರೋಪಿ ಸೇರಿದಂತೆ ಮೂವರನ್ನು ಬಂಧಿಸಲಾಗಿದ್ದು, ಅವರಿಂದ 50 ಲಕ್ಷಕ್ಕೂ ಅಧಿಕ ಮೌಲ್ಯದ 475 ಗ್ರಾಂ ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಶ್ರೀನಿವಾಸ್ ಅಲಿಯಾಸ್ ಕರಾಟೆ ಶ್ರೀನಿವಾಸ್, ಶ್ರೀನಿವಾಸ್ ಜಿ ಹಾಗೂ ಪ್ರದೀಪ್ ಎಂದು ಗುರುತಿಸಲಾಗಿದೆ. ಪ್ರಮುಖ ಆರೋಪಿ ಕರಾಟೆ ಶ್ರೀನಿವಾಸ್ ವಿರುದ್ಧ ಈಗಾಗಲೇ 50ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಒಂಟಿ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ನಡೆಸುವುದು ಈತನ ಕೃತ್ಯವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕಳ್ಳತನದ ಬಳಿಕ ಚಿನ್ನಾಭರಣಗಳನ್ನು ಪ್ರದೀಪ್ ಹಾಗೂ ಆತನ ಸಹಚರರು ಖರೀದಿಸಿ ಮಾರಾಟ ಮಾಡುತ್ತಿದ್ದರು. ಚಿನ್ನ ಕಳ್ಳತನದ್ದೇ ಎಂಬ ಮಾಹಿತಿ ಇದ್ದರೂ ಆರೋಪಿಗಳು ಅದನ್ನು ಖರೀದಿಸುತ್ತಿದ್ದರೆಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಬಂಧಿತರೆಲ್ಲರೂ ನಗರದ ಯಶವಂತಪುರ ಭಾಗದ ನಿವಾಸಿಗಳಾಗಿದ್ದು, ಹೊಸಕೋಟೆ, ಸದಾಶಿವನಗರ ಹಾಗೂ ಅವಲಹಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಹಲವು ಮನೆ ಕಳ್ಳತನ ಪ್ರಕರಣಗಳಲ್ಲಿ ಇವರ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.

ಆರೋಪಿಗಳನ್ನು ಬಂಧಿಸಿರುವ ಅವಲಹಳ್ಳಿ ಪೊಲೀಸರು, ಕಳ್ಳತನ ಪ್ರಕರಣಗಳ ಸಂಪರ್ಕ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಬೆಂಗಳೂರಿನಲ್ಲಿ ಕ್ಯಾಬ್‌ʼಗೆ ಕಾಯುತ್ತಿದ್ದ ಯುವತಿಯ ‘ರೇಟ್‌’ ಕೇಳಿದ ಕಾಮುಕ ಅರೆಸ್ಟ್!

0

ಬೆಂಗಳೂರು: ರಸ್ತೆ ಬದಿಯಲ್ಲಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಗೆ ಅಸಭ್ಯವಾಗಿ ಮಾತನಾಡಿ, ‘ನಿನ್ನ ರೇಟ್ ಎಷ್ಟು?’ ಎಂದು ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ವಿಜಯ್ ರಾಘವ್ (42) ಎಂದು ಗುರುತಿಸಲಾಗಿದ್ದು, ಆತ ಹಣ್ಣಿನ ವ್ಯಾಪಾರಿಯಾಗಿದ್ದು, ನಗರದ ಎನ್‌ಆರ್‌ಐ ಲೇಔಟ್ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಯಾಬ್‌ಗಾಗಿ ರಸ್ತೆ ಬದಿಯಲ್ಲಿ ಕಾಯುತ್ತಿದ್ದ ಯುವತಿಯ ಬಳಿ ಸ್ಕೂಟರ್‌ನಲ್ಲಿ ಬಂದ ವಿಜಯ್ ರಾಘವ್ ಅಸಭ್ಯವಾಗಿ ಮಾತನಾಡಿ, ಲೈಂಗಿಕವಾಗಿ ನಿಂದಿಸುತ್ತಾ ‘ನಿನ್ನ ರೇಟ್ ಎಷ್ಟು?’ ಎಂದು ಪ್ರಶ್ನಿಸಿ ಕಿರುಕುಳ ನೀಡಿದ್ದಾನೆ.

ಘಟನೆಯ ವೇಳೆ ಧೈರ್ಯ ಕಳೆದುಕೊಳ್ಳದ ಯುವತಿ, ತನ್ನ ಮೊಬೈಲ್‌ನಲ್ಲಿ ಆರೋಪಿಯ ಕೃತ್ಯವನ್ನು ವಿಡಿಯೊ ರೂಪದಲ್ಲಿ ಸೆರೆಹಿಡಿದಿದ್ದಾಳೆ. ತನ್ನ ಮುಖ ಹಾಗೂ ವಾಹನದ ನೋಂದಣಿ ಸಂಖ್ಯೆ ಸಂಪೂರ್ಣವಾಗಿ ದಾಖಲಾಗುತ್ತಿರುವುದು ಗೊತ್ತಾಗುತ್ತಿದ್ದಂತೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಬಳಿಕ ಯುವತಿ ಆ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು, ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರು. ನಗರದಲ್ಲಿ ಮಹಿಳೆಯರು ಒಂಟಿಯಾಗಿ ನಿಲ್ಲುವುದಕ್ಕೂ ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆಯೇ ಎಂದು ಆತಂಕ ವ್ಯಕ್ತಪಡಿಸಿದ್ದ ಅವರು, ವಿಡಿಯೊ ಸಮೇತ ಬೆಂಗಳೂರು ನಗರ ಪೊಲೀಸರನ್ನು ಟ್ಯಾಗ್ ಮಾಡಿ ಆರೋಪಿಯ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಘಟನೆ ಸಂಬಂಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.